ಸೋಮವಾರ, ಡಿಸೆಂಬರ್ 25, 2017

ನೆನಪು-ನಿನಾದ

ಹೇಳದ ನೂರಾರು ನೆನಪುಗಳು
ಅಂತರಂಗದಲ್ಲಿ ಬೆರೆತು ನಾದವಾಗಿವೆ...
ನೆನಪಿನ ನಿನಾದವೀಗ ಹೆದೆಯಾಂತರಾಳದಲಿ,
ನೂರಾರು ಹೆಗ್ಗುರುತ ಮೂಡಿಸಿದೆ,
ಅಂತರಾತ್ಮದಲಿ ಅರಿತು ಬೆರೆತಿದೆ.
ನೆನಪಿನಾ ಅಲೆಗಳು ಮೂಡುತಾ ಮರೆಯಾಗಿವೆ
ಸುಸ್ಥಿರತೆಯ ಸುಗುಣಗಳೆಲ್ಲವೂ ಕೂಡಿವೆ
ದುಃಸ್ವಪ್ನಗಳೆಲ್ಲವೂ ಮೂಡಿ ಮರೆಯಾಗಿವೆ
ಎಲ್ಲವೂ ಅಳಿಯುತಾ ಉಳಿದಿರುವುದೀಗ,
ನಾದದೊಡಲ ಝೇಂಕಾರ,ಓಂಕಾರ...
ನೆನಪಿನ ಸರಿಗಮ ಹೊಮ್ಮುತಿರುವುದೀಗ..!
ರಾಗ-ದ್ವೇಷಗಳಳಿಯುತಾ ಮೂಡುತಿರುವುದೀಗ!!
ಮನದಾಳದಿ ನಡೆದಿದೆ ಇವುಗಳ ಸಂಗಮ..
ನೆನಪಿನ ನಿನಾದದಾ ಸರಿಗಮ...
                                                  -vಭಾ

ಬುಧವಾರ, ನವೆಂಬರ್ 29, 2017

ಬಿಂದುವಿನಲಿ ಬಂಧ

ಯಾವುದೋ ಬಿಂದುವಿನಲಿ ಕೂಡಿದಾ ಬಂಧವಿದು...
ದಿನ ಕಳೆದಂತೆ ಸಾಗುತಿದೆ, ಮಾಗುತಿದೆ
ಋತುಗಳುರುಳಿದಂತೆ ಮುಗಿಯಲೂಬಹುದು.
ಯಾರನೋ ಅರಸಿ ಹೊರಟಾಗ ಮತ್ತಾರೋ ಸಿಕ್ಕರು
ಯಾವ ಜನುಮದ ಪುಣ್ಯದ ಫಲವೋ?
ಏನನ್ನೋ ಬಯಸಿದರೆ, ಮತ್ತೇನೋ ಸಿಕ್ಕಿತು.
ಸಿಕ್ಕಿದ್ದು ಶಾಶ್ವತವೆಂಬ ಭ್ರಮೆಯು ಕಾಡುತ್ತಿತ್ತು
ಮಾಗಿದಾ ಬಂಧವೂ ಮುಗಿಯಲೇಬೇಕಲ್ಲವೇ?
ಮುಗಿದ ಮೇಲೆ ಮತ್ತೆ ಕಾಡಲೇಬೇಕಲ್ಲವೇ?
ಅಸ್ತಮಿಸುವ ಬಂಧಗಳಿಗೇ  ಬೆಲೆಕಟ್ಟುತಿರುವಾಗ,
ಮರುಕಳಿಸುವ ನನಸುಗಳಿಗೆಷ್ಟು ಬೆಲೆಯೋ?
ಸಿಕ್ಕಿರುವುದೆಲ್ಲವೂ ಮರೆಯಾಗುವುದೆಷ್ಟೊತ್ತು?
ಕಳೆದುಹೋಗುವ ಮುನ್ನವೇ ಅನುಭವಿಸಬೇಕೆಲ್ಲವನು,
ಸಿಕ್ಕವರನು ಹಿಡಿದು ನಿಲ್ಲಿಸಿ ಕೇಳಬೇಕಿದೆ
ಬಿಟ್ಟು ಹೋಗಿ ನೀ ನನ್ನನು, ಪಡೆಯುವೆಯೇನನು?
ಬಿಂದುವಿನಲಿ ಸಿಕ್ಕ ಬಂಧ ಹಾಗೇ ಇರಲಿ...
ಬಿಂದು ರೇಖೆಯಲ್ಲಡಗಿ ಮರೆಯಾಗದಿರಲಿ...
ಇರುವ ಬಂಧ ಗಟ್ಟಿಯಾಗಿ,
ಬಿಂದು ಸಿಂಧೂರವಾಗಲಿ...
                                                                            -vಭಾ

ಅರಳುವ ಹೂವೊಂದು...

ನಿತ್ಯಾಳ ತಾಯಿ ಶಾಂತಿ ಅವಳನ್ನು ನನ್ನ ಕ್ಲಿನಿಕ್ ಗೆ ಕರೆತಂದಾಗ ಅದಾಗಲೇ ಸಮಯ 6.00 ನ್ನು ದಾಟಿತ್ತು. ಹಾಲುಗಲ್ಲದ ಹುಡುಗಿಯ ಮುಖದಲ್ಲಿ ಅದೇನೋ ಭೀತಿ. ಕರೆಗಟ್ಟಿದ ಕಣ್ಣೀರಿನ ಗುರುತು ಇನ್ನೂ ಕೆನ್ನೆಯಿಂದ ಮಾಸಿರಲಿಲ್ಲ.
ಸಕಲೇಶಪುರದ ಹತ್ತಿರದ ಪುಟ್ಟ ಹಳ್ಳಿಯಲ್ಲೇ ನನ್ನ ಪುಟ್ಟ ಕ್ಲಿನಿಕ್ ಇದ್ದದ್ದು. ಜನಸೇವೆ ಮಾಡಲೆಂದು ಆದರ್ಶವನ್ನು ಪಾಲಿಸಿಕೊಂಡು ನಾನು ನನ್ನ ಪುಟ್ಟ ಕ್ಲಿನಿಕ್ ನ್ನು ಅಲ್ಲಿ ತೆರೆದಿದ್ದಲ್ಲ. ನನ್ನ ತಂದೆ-ತಾಯಿಯ ಕೊನೆಯ ಆಸೆಯನ್ನು ಈಡೇರಿಸಲು ನಾನಲ್ಲಿ ಬಂದು ನೆಲೆಸಿದ್ದೆ. ಜನ ಮೊದಲಿಗೆ ನನ್ನನ್ನು ಲೇಡಿ ಡಾಕ್ಟರ್ ಎಂದು  ಉಪೇಕ್ಷೆ ಮಾಡಿದರೂ ನಂತರ ನನ್ನನ್ನು ಒಪ್ಪಿಕೊಂಡು ಡಾಕ್ಟ್ರಮ್ಮ ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ. ಆದರೆ ನಾನು ಬಂದ ಮೊದಲಿನಿಂದಲೂ ಅದೇ ಪ್ರೀತಿ-ವಿಶ್ವಾಸದಿಂದ ನೋಡಿಕೊಂಡ ಕುಟುಂಬ ನಿತ್ಯಾಳದ್ದು. ಹೆರಿಗೆ ಕಷ್ಟವಾಗಿ ಬದುಕಲು ಅಸಾಧ್ಯ ಎಂದೇ ಭಾವಿಸಿದ್ದ ಆ ಮಗುವನ್ನು ಉಳಿಸಿದ ಸಂತೃಪ್ತಿ ನನ್ನಲಿದೆ. ಚಿಕ್ಕಂದಿನಿಂದಲೂ ನಾನು ನೋಡಿದ ಮಗುವಿಗೆ ಈಗ 15 ವರ್ಷ.
ಆದರೂ ನಿತ್ಯಾಳನ್ನು ಈ ಸ್ಥಿತಿಯಲ್ಲಿ ನಾನು ನೋಡಿದ್ದು ಇದೇ ಮೊದಲು. ನಿತ್ಯಾ ಚಿಕ್ಕಂದಿನಿಂದಲೂ ಅಮ್ಮನಿಗಿಂತಲೂ ಅಪ್ಪನನ್ನೇ ಹೆಚ್ಚು ಹಚ್ಚಿಕೊಂಡಿದ್ದಳು. ಹೆಣ್ಣು ಮಕ್ಕಳೇ ಹಾಗಲ್ಲವೇ? ಅಪ್ಪನೆಂದರೆ ಅದೇನೋ ಮಮತೆ. ಅಪ್ಪನೆಂದರೆ ಅಷ್ಟು ಅಚ್ಚುಮೆಚ್ಚು. ನಿತ್ಯಾಳ ಅಪ್ಪ ಶ್ಯಾಮನೂ ಒಬ್ಬ ಆದರ್ಶ ತಂದೆ. ಆದರ್ಶ ತಂದೆಯಷ್ಟೇ ಅಲ್ಲ,ಆದರ್ಶ ನಾಗರೀಕನೂ ಹೌದು.
ಬೇರೆಯವರ ವಸ್ತುವಿಗೆ ಆಸೆ ಪಡದೇ,ಬೇರೆಯವರನ್ನು ಅವಲಂಬಿಸದೇ ತನ್ನ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯುತ್ತಾ ನಿತ್ಯಾ ಮತ್ತು ಶಾಂತಿಯಂದಿಗೆ ಸಂತೋಷದಿಂದ ಇರುವಾಗಲೇ ಊರಿನಲ್ಲಿ ನಕ್ಸಲರ ಛಾಯೆ ತೆಳುವಾಗಿ ಹರಡಿತ್ತು. ತೆಳುವಾಗಿ ಹರಡುತ್ತಿದ್ದ ಗುಂಪು ದಟ್ಟೈಸಿ, ಅವರು ಊರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳತೊಡಗಿದರು. ಅವರನ್ನುಡುಕಿಕೊಂಡು ಪೋಲೀಸರೂ ಬಂದರು. ಆದರ್ಶವೇ ಮೈದುಂಬಿಕೊಂಡಿದ್ದ ಶ್ಯಾಮ ಪೋಲೀಸರಿಗೆ ನಕ್ಸಲರ ಸುಳಿವು ನೀಡಿದ.
ಆಗಲೇ ನಿತ್ಯಾಳ ಕುಟುಂಬದಲ್ಲಿ ಶುರುವಾಯಿತು ಶನಿ ಕಾಟ. ಪೋಲೀಸರಿಗೆ ನಕ್ಸಲರು ಸಿಗಲಿಲ್ಲ. ಆದರೆ ನಕ್ಸಲರ ಕಣ್ಣು ಶ್ಯಾಮನ ಮೇಲೆ ಬಿದ್ದಿತು. ಅಂದು ರಾತ್ರಿ ಶ್ಯಾಮನ ಮನೆಗೆ ನುಗ್ಗಿದ ನಕ್ಸಲರ ಗುಂಡಿಗೆ ಆತ ಬಲಿಯಾದ. ಇದೆಲ್ಲಾ ನಡೆದಾಗ ನಿತ್ಯಾಳಿಗೆ 12 ವರ್ಷ. ಎಳೆ ಮನಸ್ಸಿನ ಮೇಲೆ ಅದೆಂಥಾ ಪರಿಣಾಮ ಬೀರಿತೆಂದು ನೀವೇ ಊಹಿಸಿಕೊಳ್ಳಿ!!. ನಮ್ಮ ಕಣ್ಮುಂದೆಯೇ ನಾವು ಅತ್ಯಂತ ಪ್ರೀತಿಸುವ ವ್ಯಕ್ತಿ ಹತ್ಯೆಯಾದಾಗ ಹೇಗಾಗಿರಬೇಡ?
12 ವರ್ಷದ ನಿತ್ಯಾಳ ಮನಸಿನಲ್ಲಿ ಅದೇ ನೆನಪುಳಿದು ಅವಳು ದಿನೇ-ದಿನೇ ಕೊರಗುತ್ತಾ ಮನೋರೋಗಿಯಾಗುತ್ತಾ ಬಂದಳು. ಆಗ ಬಂದಾಗಲೂ ನಿತ್ಯಾ ಹೀಗಿರಲಿಲ್ಲ. ಹಂತ-ಹಂತವಾಗಿ ನಿತ್ಯಾ ಪರಿಸ್ಥಿತಿಗೆ ಒಗ್ಗಿಕೊಳ್ಳತೊಡಗಿದಳು. ಅಮ್ಮನ ಪ್ರೀತಿ, ತಾಳ್ಮೆಯು ಆಕೆಯನ್ನು ಸರಿಮಾಡುತ್ತಿತ್ತು. ಆದರೆ ನಕ್ಸಲರ ಮೇಲೆ ಮನಸ್ಸಿನ ಒಂದು ಮೂಲೆಯಲ್ಲಿ ದ್ವೇಷ ಹೊಗೆಯಾಡುತ್ತಿತ್ತು. ಶಾಲೆಗೆ ಹೋಗುತ್ತಾ ನಿತ್ಯಾ ಸರಿಯಾಗುತ್ತಿದ್ದಳು.ನಕ್ಸಲರ ದ್ವೇಷಿಗಳನ್ನು ಅವಳು ಹುಡುಕುತ್ತಿದ್ದಳು, ಆಗಲೇ ಅವಳ ಶಾಲೆಗೆ ಒಬ್ಬ ಹೊಸ ಮಾಸ್ತರರ ಆಗಮನವಾಯಿತು.
ಗೋಮುಖ ವ್ಯಾಘ್ರನಂತಿದ್ದ ಮಾಸ್ತರನ ಕಣ್ಣು ಅದಾಗಲೇ ಸಹಜಸುಂದರಿ ನಿತ್ಯಾಳ ಮೇಲೆ ಬಿದ್ದಿತ್ತು. ಪರಿಸ್ಥಿತಿಯ ಲಾಭ ಪಡೆದ ಆತ ನಕ್ಸಲರ ದ್ವೇಷಿಯೆಂದು ಬಿಂಬಿಸಿಕೊಳ್ಳುತ್ತಾ ಆಕೆಗೆ ಹತ್ತಿರವಾಗುತ್ತಾ ಹೋದ. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹತ್ತಿರವಿದ್ದ ದಿನಗಳಲ್ಲಿ ಆತ ಸ್ಪೆಷಲ್ ಕ್ಲಾಸ್ ನೆಪ ಹೇಳಿ ಹತ್ತನೇ ತರಗತಿಯ ಮಕ್ಕಳನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳುತ್ತಿದ್ದ. ಆದರೆ ದಿನ ನಡೆದದ್ದೇ ಬೇರೆ.
ಎಲ್ಲಾ ಮಕ್ಕಳನ್ನು ಕಳುಹಿಸಿ ನಿತ್ಯಾಳನ್ನು ಇರಲು ಹೇಳಿದ ಮಾಸ್ತರನ ಮೇಲೆ ಆಕೆಗೇನು ಅನುಮಾನ ಮೂಡಲಿಲ್ಲ. ಆದರೆ ಅಂದು ಆಕೆಯ ನಂಬಿಕೆ ಬುಡಮೇಲಾಯಿತು. ಅರಳುವ ಹೂವು ದುಷ್ಟನ ಆಕ್ರಮಣಕ್ಕೆ ನಲುಗಿ ಹೋಗಿತ್ತು. ಅಳುತ್ತಲೇ ಮನೆಗೆ ಬಂದ ನಿತ್ಯಾಳನ್ನು ನೋಡಿ ಶಾಂತಿಯ ಮನ ಅಶಾಂತಿಯ ಕಡಲಾಯಿತು. ಮನಸ್ಸು ಕೇಡನ್ನೇ ಶಂಕಿಸುತ್ತಿದ್ದರೂ ಅವಳು ಅದನ್ನು ಬಾಯ್ಬಿಟ್ಟಿರಲಿಲ್ಲ.ಅತ್ತು-ಅತ್ತು ನಿತ್ಯಾಳ ಕಣ್ಣೀರು ಬತ್ತಿ ಹೋಗಿತ್ತು. ಆಗಲೇ ಅವರು ಅವಳನ್ನು ಕರೆತಂದದ್ದು ನನ್ನ ಕ್ಲಿನಿಕ್ ಗೆ.
ಇನ್ನೇನು ಕ್ಲಿನಿಕ್ ನ್ನು ಮುಚ್ಚಿ ಮನೆಗೆ ಹೋಗುವ ಸನ್ನಾಹದಲ್ಲಿದ್ದ ನಾನು ಅವಳನ್ನು ಪರೀಕ್ಷಿಸಿದಾಗ ನಿಜಸಂಗತಿ ತಿಳಿಯಿತು. ಅದಾದ ನಂತರ ನಡೆದದ್ದು ಮತ್ತಷ್ಟು ಭಯಂಕರ. ಪೋಲೀಸರಿಗೆ ದೂರು ನೀಡಲು ಹೋದ ಶಾಂತಿ ಮತ್ತು ನಿತ್ಯಾಳ ಮೇಲೆಯೇ ಪೋಲೀಸರು ದೌರ್ಜನ್ಯ ತೋರಿದರು. ಇದರಿಂದ ಮನನೊಂದ ಶಾಂತಿ ನೇಣು ಹಾಕಿಕೊಂಡಳು. ನಕ್ಸಲರ ದ್ವೇಷಿಯಾಗಿದ್ದ ನಿತ್ಯಾ 15ನೇ ವರ್ಷಕ್ಕೇ ನಕ್ಸಲಳಾಗಿ ಬದಲಾದಳು.
ಕಾಮುಕರನ್ನು, ಗೋಮುಖ ವ್ಯಾಘ್ರರನ್ನೂ ಎಲ್ಲೆಂದರಲ್ಲಿ ಬೇಟೆಯಾಡುವಷ್ಟು ಉಗ್ರಳಾದ ನಿತ್ಯಾ ಇಂದು ಪೋಲೀಸರ ಗುಂಡಿಗೆ ಬಲಿಯಾದಳು. ಹೆರಿಗೆ ಮಾಡಿಸಿದ ಕೈಯಿಂದಲೇ ಇಂದು ನಾನವಳ ದೇಹದ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದೇನೆ.
“17 ನೇ ವರ್ಷಕ್ಕೆ ತನ್ನ ಬದುಕನ್ನು ಮುಗಿಸಿಕೊಂಡ ನಿತ್ಯಾಳ ಮನಸ್ಸು ಹೇಗಿರಬೇಕೆಂದು ನೀವೇ ಯೋಚಿಸಿ. ಆಕೆ ತನ್ನ ಮುಗ್ಧತೆಯನ್ನು 15ನೇ ವಯಸ್ಸಿನಲ್ಲಿಯೇ ಕಳೆದುಕೊಂಡಳೆಂದರೆ ಅದರಲ್ಲಿ ಸಮಾಜದ ಪಾಲೆಷ್ಟು?”

“ಶಿಕ್ಷಣವನ್ನು ನೀಡಬೇಕಾದ ಶಿಕ್ಷಕನೇ ಭಕ್ಷಕನಾದರೆ ಮಕ್ಕಳ ಮನಸ್ಸು ಅರಳುವುದು ಹೇಗೆ? ಅಪ್ಪ-ಅಮ್ಮನ ನಂತರ ನಾವು ಪರಿಪೂರ್ಣವಾಗಿ ನಂಬುವ ವ್ಯಕ್ತಿ ಶಿಕ್ಷಕರು. ಎಲ್ಲರೂ ಹಾಗಿಲ್ಲದಿದ್ದರೂ ಕೆಲವರಿಂದ ನಂಬಿಕೆಗೆ ಕಪ್ಪುಚುಕ್ಕಿ. ಮಕ್ಕಳ ಮುಗ್ಧ ಮನಸ್ಸು ಒಮ್ಮೆ ಇಂತವರಿಂದ ಘಾಸಿಗೊಳಗಾದರೆ ಚೀತರಿಸಿಕೊಳ್ಳುವುದಾದರೂ ಹೇಗೇ?”

“ರಕ್ಷಣೆ ನೀಡಬೇಕಾದ ಆರಕ್ಷಕನೇ ಅರಕ್ಷಕನಾದಾಗ ಸಮಾಜದ ರಕ್ಷಣೆ ಹೇಗೆ?”

“ಉತ್ತಮ ತಾಯ್ತಂದೆಯರ ಪೋಷಣೆಯಿದ್ದೂ, ವಿಧಿಯಾಟಕ್ಕೆ ಬಲಿಯಾಗುವ ಮಕ್ಕಳೆಷ್ಟೋ?ಅವರ ರಕ್ಷಣೆಯ ಹೊಣೆ ಯಾರದು?”

“ನಿತ್ಯಾಳ ತಾಯಿ ಶಾಂತಿ ದುರ್ಬಲ ಮನಸ್ಸಿನಿಂದ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಬಹುಶಃ ಪರಿಸ್ಥಿತಿ ಬೇರೆಯಾಗುತ್ತಿತ್ತೇನೋ?”

ಇದಕ್ಕೇ ಇರಬಹುದು ಕುವೆಂಪುರವರು ಹೇಳಿರುವುದು "ಮಕ್ಕಳು ಹುಟ್ಟುತ್ತಲೇ ವಿಶ್ವಮಾನವರ ಆದರೆ ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ."

“ನಿತ್ಯಾಳ  ಸಾವಿಗೆ ಕಾರಣ ಏನೇ ಇದ್ದರೂ, ಸತ್ತ ಮಗು ಮರಳಿ ಬರುವುದಿಲ್ಲ. ನಿತ್ಯಾಳಂತಾ ಎಷ್ಟೋ ಮಕ್ಕಳು ಲೈಂಗಿಕ ದೌರ್ಜನ್ಯದಿಂದ ನಲುಗಿ ಹೋಗುತ್ತಿವೆ. ಆತ್ಮಹತ್ಯೆ ಮಾಡಿಕೊಂಡವರೆಷ್ಟೋ? ಬದುಕುಳಿದು ಜೀವಚ್ಚವಗಳಾಗಿರುವವರೆಷ್ಟೋ? ನಕ್ಸಲರಾಗಿ ಪೋಲೀಸರ ಗುಂಡೇಟಿಗೆ ಬಲಿಯಾದವರೆಷ್ಟೋ?”

ಅರಳುವ ಹೂವೊಂದು ಜಗತ್ತನ್ನು ಸವಿಯುವ ಮೊದಲೇ ನಲುಗಿ ಹೋಗಿದೆ. ದೌರ್ಜನ್ಯಕ್ಕೆ ಬಲಿಯಾಗಿದೆ. ಕ್ರೌರ್ಯಕ್ಕೆ ಸಿಲುಕಿ ಶಾಶ್ವತವಾಗಿ ಲೋಕವನ್ನೇ ತ್ಯಜಿಸಿದೆ. ಆದರೆ ಅರಳುವ ಹೂವೊಂದು ಬದುಕಿ ತನ್ನ ಸುತ್ತಲ ಸೌಂದರ್ಯವನ್ನು ಸವಿದು ಪರಿಪೂರ್ಣವಾದರೆ ಎಷ್ಟು ಚಂದ!!!”

" ಅರಳುವ ಹೂವೊಂದು..."  ಏನಾಗಬೇಕೆಂಬುದು ಸಮಾಜಕ್ಕೆ ಬಿಟ್ಟದ್ದು

                                                                                                                                             -Vಭಾ 

ಗುರುವಾರ, ಅಕ್ಟೋಬರ್ 19, 2017

ಅವರವರು ಕಂಡಂತೆ…!!

                ಇವತ್ತು ನಾನು ನಿಮಗೆ ಹೇಳಹೊರಟಿರುವ ವಿಷಯ ನನ್ನ ಗೆಳಯ ರಂಗನಾಥನದ್ದು. ಚಿಕ್ಕಂದಿನಿದಲೂ ಒಟ್ಟಿಗೆ ಆಡಿ ಬೆಳೆದ ನನ್ನ ಬಾಲ್ಯ ಗೆಳೆಯ ಅವನು. ಅಕ್ಕ-ಪಕ್ಕದ ಮನೆ ಅಲ್ಲದಿದ್ದರೂ ಸಮಾನ ಅಭಿರುಚಿ ಹೊಂದಿದ್ದವರು ನಾವು. ಆದರೆ ಬರುಬರುತ್ತ, ಆತ ಆಟದ ಕಡೆಗೆ ಹೆಚ್ಚು ಒಲವು ತೋರಿಸಿ ಕ್ರೀಡಾ ಚಾಂಪಿಯನ್ ಆಗುತ್ತಾ ಬಂದರೆ , ನನ್ನ ಒಲವು ಸಾಹಿತ್ಯದ ಕಡೆಗೆ ವಾಲಿತು. ಎಷ್ಟಾದರೂ “ಲೋಕೋ ಭಿನ್ನ ರುಚಿ ಅಲ್ಲವೇ?”
                ಆದರೆ ನಮ್ಮಲ್ಲಿ ಸಮಾನವಾದ ವಿಚಾರ ಒಂದಿತ್ತು. ಅದು ನಮ್ಮ ಹುಟ್ಟುಹಬ್ಬ. ಏಳನೇ ತರಗತಿಯವರೆಗೂ ಒಂದೇ ಶಾಲೆಯಲ್ಲಿ ಕಲಿತ ನಾವು ಪ್ರೌಢಶಾಲಾ ಓದಿಗೆ ಬೇರೆ ಶಾಲೆಗೆ ಸೇರಿಕೊಂಡೆವು. ಆದರೆ ಪ್ರತಿ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸುವುದನ್ನು ಮಾತ್ರ ಬಿಟ್ಟಿರಲಿಲ್ಲ, ನಂತರ ಪಿ.ಯು ಶಿಕ್ಷಣಕ್ಕೆ ಒಂದೇ ಕಾಲೇಜಿನಲ್ಲಿ ಸೇರಿದೆವು. ಅದುವರೆಗೂ ಕನ್ನಡ ಮಾದ್ಯಮದಲ್ಲಿಯೇ ಓದಿದ್ದರೂ, ಅಪ್ಪ-ಅಮ್ಮನ ಆಸೆಯಂತೆ, ನಾನು ಪಿ.ಯು.ಸಿ ಶಿಕ್ಷಣವನ್ನು ಆಂಗ್ಲ ಮಾಧ್ಯಮದ ವಿಜ್ಞಾನ ವಿಭಾಗದಲ್ಲಿ ಮುಂದುವರೆಸಿದೆ. ರಂಗನಾಥನನ ಅಣ್ಣ ಈಗಾಗಲೇ  ಎಂ.ಬಿ.ಬಿ.ಎಸ್ ಮಾಡುತ್ತಿದ್ದರಿಂದ ಮನೆಯಲ್ಲಿ ಆತನಿಗೆ ಪಿ.ಸಿ.ಎಂ.ಬಿಗೆ ಸೇರಿಸಬೇಕೆನ್ನುವ ಒತ್ತಡ ಉಂಟಾಗಿತ್ತು. ಹಾಗೂ,ಹೀಗೂ ಪಿ.ಸಿ.ಎಂ.ಬಿಯನ್ನೇ ಆರಿಸಿಕೊಂಡ ಇಬ್ಬರೂ, ಒಂದು ವರ್ಷವನ್ನು ಮುಗಿಸಿ ಎರಡನೇ ವರ್ಷಕ್ಕೆ ಕೊನೆಯ ಹಂತ ತಲುಪಿದೆವು. ಅಷ್ಟರಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ಕ್ರೀಡಾಕೂಟವು ಶುರುವಾದ್ದರಿಂದ ರಂಗನಾಥನೂ, ಅವನನ್ನು ಬೆಂಬಲಿಸಲು ಹೋಗಿ ನಾನು ಇಬ್ಬರೂ ಎರಡನೇ ಪಿ.ಯು. ಸಿಯ ತಲಾ ಎರಡೆರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದೆವು. ನಮ್ಮ ಮನೆಯಲ್ಲಿ ಇದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದರೂ, ರಂಗನಾಥನ ಮನೆಯಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆ ನಡೆಯಿತು.ಈಗಾಗಲೇ ಎಂ.ಬಿ.ಬಿ.ಎಸ್ ಮಾಡುತ್ತಿದ್ದರಿಂದ ಮನೆಯಲ್ಲಿ ಆತನಿಗೆ ಪಿ.ಸಿ.ಎಂ.ಬಿಗೆ ಸೇರಿಸಬೇಕೆನ್ನುವ ಒತ್ತಡ ಉಂಟಾಗಿತ್ತು. ಹಾಗೂ,ಹೀಗೂ ಪಿ.ಸಿ.ಎಂ.ಬಿಯನ್ನೇ ಆರಿಸಿಕೊಂಡ ಇಬ್ಬರೂ, ಒಂದು ವರ್ಷವನ್ನು ಮುಗಿಸಿ ಎರಡನೇ ವರ್ಷಕ್ಕೆ ಕೊನೆಯ ಹಂತ ತಲುಪಿದೆವು. ಅಷ್ಟರಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ಕ್ರೀಡಾಕೂಟವು ಶುರುವಾದ್ದರಿಂದ ರಂಗನಾಥನೂ, ಅವನನ್ನು ಬೆಂಬಲಿಸಲು ಹೋಗಿ ನಾನು ಇಬ್ಬರೂ ಎರಡನೇ ಪಿ.ಯು. ಸಿಯ ತಲಾ ಎರಡೆರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದೆವು. ನಮ್ಮ ಮನೆಯಲ್ಲಿ ಇದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದರೂ, ರಂಗನಾಥನ ಮನೆಯಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆ ನಡೆಯಿತು.
          “ಒಂದು ಪರೀಕ್ಷೆ ನಮ್ಮ ಜೀವನವನ್ನು ನಿರ್ಧಾರ ಮಾಡುವುದಿಲ್ಲ”ವೆಂದು ನಾವು ವಾದ ಮಾಡಿದರೂ, ಕ್ರಮೇಣ ನಾವು ನಮ್ಮ ನಿರ್ಧಾರ ಬದಲಿಸಿ, ಇಬ್ಬರೂ ಆ ವರ್ಷದ ಸಪ್ಲಿಮೆಂಟ್ ಪರೀಕ್ಷೆ ತೆಗೆದುಕೊಳ್ಳುತ್ತೇವೆಂದು ಟ್ಯೂಷನ್ ಗೆ ಹೋಗಲು ತೀರ್ಮಾನ ಮಾಡಿ ಮನೆಯವರ ಒಪ್ಪಿಗೆ ಪಡೆದುಕೊಂಡೆವು.
          ನಾನು ಟ್ಯೂಷನ್ ಗೆ ಹೋಗುತ್ತಿದ್ದರೂ ರಂಗನಾಥ ಬರುತ್ತಲೇ ಇರಲಿಲ್ಲ. ಅವನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಎರಡು-ಮೂರು ದಿನ ಕಳೆದರೂ ಅವನ ಪತ್ತೆಯೇ ಇಲ್ಲ. ಕೊನೆಗೆ ನಾನು ಅವರ ಮನೆಗೆ ಹೋಗಿ ಅವನನ್ನು ಬೈದು, ಟ್ಯೂಷನ್ ಗೆ ಕರೆದುಕೊಂಡು ಹೋಗಲು ತೀರ್ಮಾನಿಸಿ ಬೆಳಗ್ಗೆಯೇ ಅವನ ಮನೆಗೆ ಹೋದೆ. ಅಲ್ಲಿ ನನಗೆ ಕಂಡ ದೃಶ್ಯ ನನಗೆ ಜೀವನವಿಡೀ ಮರೆಯಲು ಸಾಧ್ಯವಿಲ್ಲ. ಅವನ ಫೋಟೋಗೆ ಹಾಕಿದ ಹಾರ ದಂಗುಬಡಿಸಿತು. ಹೌದು ನನ್ನ ಗೆಳೆಯ ಎಂದು ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದ.
          ನನಗೆ ಅದಕ್ಕಿಂತ ಹೆಚ್ಚಿನ ಆಶ್ಚರ್ಯ ತಂದದ್ದು ಅವನ ಸಾವಿನ ಕಾರಣ. ಅಂದು ಬೆಳಿಗ್ಗೆಯೇ ಮನೆಗೆ ಹಬ್ಬದ ಸಾಮಾನು ತರಲು ಹೊರಟ ರಂಗನಾಥ ಅವತ್ತು ತನ್ನ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟಿದ್ದ. ಆಗಲೇ ಅವನ ಮೊಬೈಲ್ ಗೆ ಒಂದು ಕರೆ ಬಂದಿತ್ತು. ಆ ಕರೆಯನ್ನು ಅವನ ಅಣ್ಣ ಸ್ವೀಕರಿಸಿದ.ಆ ಕರೆಯ ಸಾರಾಂಶ ಇಷ್ಟು: “ನಿಮ್ಮ ಮಗ ನಮ್ಮ ಮೊಬೈಲ್ ಅಂಗಡಿಯಿಂದ ಮೊಬೈಲ್ ಕದ್ದಿದ್ದಾನೆ. ಆದ್ದರಿಂದ ನಾವು ಪೊಲೀಸರಿಗೆ ದೂರು ನೀಡಿದ್ದೇವೆ, ಇನ್ನಾದರೂ ನಿಮ್ಮ ಮಗನಿಗೆ ಒಳ್ಳೆಯ ಬುದ್ದಿ ಕಲಿಸಿ”. ಇದಾದ ನಂತರ ಅವನ ಅಣ್ಣ ಮೊಬೈಲ್ ಸ್ವಿಚ್ ಆಫ್ ಮಾಡಿಬಿಟ್ಟ. ಅಪ್ಪ-ಅಮ್ಮನಿಗೂ ವಿಷಯ ತಿಳಿಸಿದಾಗ, ಅವನ ತಾಯಿ “ನಮ್ಮ ಮನೆಯ ಮರ್ಯಾದೆ ತೆಗೆದ,ಇಷ್ಟು ದಿನದಿಂದ ಕಾಪಾಡಿಕೊಂಡು ಬಂದಿದ್ದ ಮರ್ಯಾದೆಯನ್ನೆಲ್ಲ ಬೀದಿ ಪಾಲು ಮಾಡಿದೆ.”ಎಂದು ರಂಗನಾಥನನ್ನು ಹೊಡೆದರು. ಅವನು ಎಷ್ಟು ಹೇಳಿದರೂ ಕೇಳದೆ ಅವನನ್ನು ನಿಂದಿಸಿದರು.
                 ಇಷ್ಟೆಲ್ಲಾ ನಡೆದ ನಂತರ, ರಾತ್ರಿ ರಂಗನಾಥ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಹಬ್ಬದ ಮನೆ ಅಂದು ಮಸಣವಾಯಿತು.
                       ಆ ಸಾವಿನ ನಂತರ ತಿಳಿದುಬಂದದ್ದೇನೆಂದರೆ, ಆ ಕರೆ ಆತನ ಗೆಳೆಯರು ಮಾಡಿದ ಫ್ರಾಂಕ್ ಕಾಲ್ ಆಗಿತ್ತು. ಇಷ್ಟಕ್ಕೂ “ಪಿ.ಯು.ಸಿ ಪರೀಕ್ಷೆಯ ಫಲಿತಾಂಶಕ್ಕೇ ತಲೆಕೆಡಿಸಿಕೊಳ್ಳದ ಆತ ಇದಕ್ಕೆ ಮನನೊಂದನೆ,,,? ಆತ್ಮ ಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವನಾದನೆ?”
“ಕ್ರೀಡೆಯಲ್ಲಿ ಚಾಂಪಿಯನ್ ಆಗಿದ್ದಾತ ನಿಜ ಜೀವನದಲ್ಲಿ ಸೋತನೆ? ತನ್ನ ಸಾವಿಗೆ ತಾನೇ ಕಾರಣನೇ ? ”
“ತಮಾಷೆ ಹೋಗಿ ಅಮಾಸೆಯಾಯಿತೆ? ಐದು ನಿಮಿಷ ತಮಾಷೆ ಮಾಡಲು ಹೋಗಿ ಆತನ ಗೆಳೆಯರೇ ಆತನ ಪಾಲಿಗೆ ಮೃತ್ಯುವಾದರೇ?”
“ಮನೆಯವರು ಮಗ ತಪ್ಪು ಮಾಡಿದ್ದನೆಂದು ಬೈದದ್ದು ತಪ್ಪೇ? ಅಥವಾ ಮಗನನ್ನೇ ನಂಬದೇ ತಪ್ಪು ಮಾಡಿದರೆ? ತಾಯ್ತಂದೆಯರೆ ಅವನ ಪಾಲಿನ ಯಮದೂತರಾದರೇ? ”
“ಆತನ ಅಣ್ಣ ಮೊಬೈಲನ್ನು ಆ ಕ್ಷಣಕ್ಕೆ ಸ್ವಿಚ್ ಆಫ್ ಮಾಡದೆ ಇಟ್ಟಿದ್ದರೆ ನಿಜ ತಿಳಿಯುತ್ತಿತ್ತೇ? ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡದೆ ಆತ ತಪ್ಪು ಮಾಡಿದನೇ?ಆತನ ಅಣ್ಣನೆ ಆತನ ಸಾವಿನ ಪಾಶವಾದನೇ?”
ಕಾರಣ ಹುಡುಕುತ್ತ ಹೊರಟರೆ ನೂರೆಂಟು ಸಿಗುತ್ತವೆ ಎಲ್ಲಾ “ಅವರವರು ಕಂಡಂತೆ…” ಆದರೆ ಸತ್ತವರು ಮರಳಿ ಬರುವರೆ…?
ಯುವ ಜನತೆ ದುರ್ಬಲ ಮನಸ್ಸಿನವರಗದೆ, ತಾಯ್ತಂದೆ ತಮ್ಮ ಮಕ್ಕಳನ್ನು ನಂಬಿದರೆ, ಫ್ರಾಂಕ್ ಕಾಲ್ ಮಾಡದೆ, ಬೇರೆಯವರನ್ನು ಸಾವಿನ ದವಡೆಗೆ ತರುವಷ್ಟು ತಮಾಷೆ ಮಾಡದೆ, ಕ್ಷಣಕಾಲ ತಾಳ್ಮೆಯಿಂದ ಯೋಚಿಸಿದರೆ ಇನ್ನಾದರೂ ಎಷ್ಟೋ ರಂಗನಾಥನ ಸಾವು ತಪ್ಪುತ್ತದೆ
                                                                                                                   -vಭಾ

ಸೋಮವಾರ, ಸೆಪ್ಟೆಂಬರ್ 18, 2017

ಜೀವನಯಾನ

ಒಂದೇ ದೋಣಿಯ ಪಯಣಿಗರು ನಾವು
ದೂರ ತೀರವ ಸೇರಲು ಹೊರಟಿರುವವು
ಹತ್ತಿರವಾದಷ್ಟು ದೂರವೆಂದೆನಿಸುತ್ತಾ,
ದೂರ ಹೋಗಲು ಹತ್ತಿರವಾಗಿರಬೇಕೆಂದೆಣಿಸುತ್ತಾ,
ಸಾಗುತಿಹೆವು ಜೀವನ ಕಡಲಿನಲಿ...
ನಾ ನಿನಗಾದರೆ ನೀ ನನಗೆಂದು,
ನಮ್ಮಲ್ಲೇ ಅಡ್ಡ-ಗೋಡೆಯ ನಿರ್ಮಾಣ ಮಾಡುತ್ತಾ,
ದೂರ ದಿಗಂತದ ಕನಸ  ಕಾಣುತ್ತಾ,
ಯಾವುದೇ ಚಂಡಮಾರುತ ಬರದಿರಲೆಂದು ಪ್ರಾರ್ಥಿಸುತ್ತಾ,
ನೂರಾಸೆಗಳಿದ್ದರೂ ನುಚ್ಚುನೂರಾಗಿಸುತ್ತಾ,
ನಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರವೆವೇ?
ಆಸೆಗಳು ಭಿತ್ತಿಯಲಿ ಮೂಡಿ ಮರೆಯಾಗಿರಲು,
ಚಿತ್ತ ವಿಕ್ಷಿಪ್ತಿಯ ಭ್ರಾಂತಿಯ ತೊರೆಯುತ್ತಾ,
ತಲುಪಿರುವೆವು ನಮ್ಮಯ ತೀರಕೆ,
ತೀರ ತಲುಪಿದ ಮೇಲೆ  ಹೊಸದಾದ ಬದುಕು.
ಹೊಸ ಬದುಕಿನೊಂದಿಗೆಹೊಸ ಕನಸು.
ಹೊಸ ಕನಸ ಕಾಣುತ್ತಾಹಳೆಯದನ್ನು ನೆನೆಯುತ್ತಾ,
ಸಾಗುತಲಿದೆ ನಮ್ಮಯ ಜೀವನಯಾನ...
                                       -vಭಾ