ಸೋಮವಾರ, ಆಗಸ್ಟ್ 27, 2018

ರಕ್ಷೆಯ ಸುರಕ್ಷಾ ಬಂಧನ

ಸೋದರ-ಸೋದರಿಯರ ಬಂಧದಲ್ಲಿ ಬಂಧಿಯಾಗಲು ಒಡಹುಟ್ಟಲೇ ಬೇಕು ಎಂದೇನಿಲ್ಲ. ಕೆಲವೊಮ್ಮೆ ಯಾವುದೋ ಋಣಾನುಬಂಧ ಕೂಡಾ ಈ ನಂಟನ್ನು ಬೆಸೆಯುತ್ತದೆ. ತಮ್ಮ ಕೂಡಾ ಕೆಲವೊಮ್ಮೆ ಅಣ್ಣನೆಂಬ ಭಾವದಲ್ಲಿ ರಕ್ಷಣೆಯ ಭಾರ ಹೊರುತ್ತಾನೆ. ಕೆಲವೊಮ್ಮೆ ಅಣ್ಣ ಅವನ ದುರ್ಬಲ ಪರಿಸ್ಥಿತಿಯಲ್ಲಿ ತಂಗಿಯ ಆಸರೆ ಬಯಸುತ್ತಾನೆ.

ಅನಿವಾರ್ಯದ ಪರಿಸ್ಥಿತಿಯಲ್ಲಿ ಅಣ್ಣ ಆಸರೆಯಾಗುತ್ತಾನೆ, ಕಷ್ಟದಲ್ಲಿ ಜೊತೆ ನಿಲ್ಲುತ್ತಾನೆ. ಜೊತೆಯಲ್ಲಿ ಅಣ್ಣನಿದ್ದಾನೆ ಎಂಬ ಭಾವವೇ ಸಾಕು ಧೈರ್ಯ ತುಂಬುವುದಕ್ಕೆ. ಅಷ್ಟಲ್ಲದೆ ಜನಪದರು ಹೇಳಿದ್ದಾರೆಯೇ "ಹೆಣ್ಣಿನ ಜನುಮಕ್ಕೆ ಅಣ್ಣ-ತಮ್ಮರು ಬೇಕು, ಬೆನ್ನು ಕಟ್ಟುವರು ಸಭೆಯೊಳಗೆ". ಇಷ್ಟೇ ಅಲ್ಲದೆ ಇನ್ನೂ ಮುಂದುವರಿದು ಹಾಡುತ್ತಾರೆ "ಹೊನ್ನು ಕಟ್ಟುವರು ಉಡಿಯೊಳಗೆ". ಖಂಡಿತಾ ಆ ನಿರೀಕ್ಷೆ ಇರುವುದಿಲ್ಲ. ಉಡುಗೊರೆ ಕೊಟ್ಟರೆ, ಆಸ್ತಿಯಲ್ಲಿ ನೀಡಿದರೆ ಮಾತ್ರ ಅಣ್ಣನ ಪ್ರೀತಿ ಎಂದು ಎಂದಿಗೂ ಅಲ್ಲ. ಕೇವಲ ಅಣ್ಣನ "ನಾನು ನಿನ್ನೊಡನೆ ಇದ್ದೇನೆ" ಎಂಬ ವಚನ ಸಾಕು ಪ್ರೀತಿ ಮತ್ತು ಆಪ್ತತೆಯ ಭಾವ ಮೂಡಿಸಲು.

ಅಣ್ಣನ ಕೈಯೊಳಗೆ ಕೈ ಇಟ್ಟು ಒಂದರೆಕ್ಷಣ ಕೂತರೆ ಸಾಕು ಅದೇನೋ ಸುರಕ್ಷತೆಯ ಭಾವ. ಈ ಘಳಿಗೆ ಹೀಗೇ ಇದ್ದು ಬಿಡಬಾರದೇ ಎಂದೆನಿಸಿಬಿಡುತ್ತದೆ. ಇಷ್ಟೆಲ್ಲದರ ನಡುವೆ ಗೋಳು ಹುಯ್ದುಕೊಳ್ಳುವುದು, ಕೋಳಿ ಜಗಳ ಮಾಡುವುದು ಇದೆಲ್ಲಾ ಇದ್ದೇ ಇದೆ. ಆದರೆ ಅಷ್ಟೆಲ್ಲಾ ಮೂಡಿಸುವ ಅಣ್ಣನೂ ಒಂದೊಮ್ಮೆ ಬದಲಾದರೆ..?

ಬದಲಾದರೂ ಚಿಂತೆಯಿಲ್ಲ.ಏಕೆಂದರೆ ನಾನಂತೂ ಬದಲಾಗುವುದಿಲ್ಲ. ಪ್ರೀತಿ, ಆಪ್ತತೆ ಎಂದಿಗೂ ಕೊಟ್ಟು ತೆಗೆದುಕೊಳ್ಳುವಂತದಲ್ಲವಲ್ಲ. ಹಾಗೊಂದು ವೇಳೆ ಹಾಗೇನಾದರೂ ಕೊಟ್ಟು ಪಡೆದರೆ ಅದು ವ್ಯಾಪಾರ ಎನ್ನಿಸುತ್ತದೆ.

ನೀ ಬದಲಾದರೂ, ಬದಲಾಗದಿದ್ದರೂ ಅದೇ ಭಾವ, ಅದೇ ಆಪ್ತತೆ, ಅದೇ ಪ್ರೀತಿಯಿಂದ ನೀನು ಎಲ್ಲಿದರೂ, ಹೇಗಿದ್ದರೂ ನೀನು ಚೆನ್ನಾಗಿರಲೆಂದು ಸದಾ ಬೇಡುತ್ತಾ ರಕ್ಷೆಯ ಅಗೋಚರ ಸುರಕ್ಷಾ ಬಂಧನದಿಂದ ನಿನ್ನನ್ನು ಬಂಧಿಸುವೆ. ಕಾಲವೂ ಈ ಬಂಧನದ ಬೇಡಿಯನ್ನು ಗಟ್ಟಿಗೊಳಿಸಲಿ.
(ವಿಶೇಷ ಸೂಚನೆ: ಅಣ್ಣ ಎಂಬಲ್ಲಿ ತಮ್ಮ ಎಂದೂ ಸಹಾ ಓದಿಕೊಳ್ಳಬಹುದು)

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 26, 2018

ಗೂಗಲ್ ಗಂಗಾ

ಹೇಳುವುದು ಒಂದು
ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೇ
ಸುಮಿತ್ರಾಪತಿ ಶ್ರೀಪತಿ...

ಅಂತಾ ಎಲ್ಲರೂ ಅಂತ್ಯಾಕ್ಷರಿ ಹಾಡ್ತಾ ಶ್ರೀಪತಿ ಅಲಿಯಾಸ್ ಸುಮಿತ್ರಾಪತಿಯನ್ನ ರೇಗಿಸ್ತಾ ಇದ್ವಿ.
"ಯಾವ್ದಾದ್ರೂ ಲಾಂಗ್ ಟ್ರಿಪ್ ಹೋಗೋಣಾ ಕಣ್ರೋ, ನಂಗಂತೂ ಈ ಗಿಜಿ ಗಿಜಿ ಟ್ರಾಫಿಕ್ಕೂ,ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಆ ಸಿಡುಕು ಮೂತಿ ಸಿದ್ದಮ್ಮ,ಅದೇ ಕಂಪ್ಯೂಟರ್ ಸಿಸ್ಟಮ್ ನ ನೋಡೀ,ನೋಡೀ ತಲೆ ಕೆಟ್ಟು ಹೋಗಿಬಿಟ್ಟಿದೆ. ವೀಕೆಂಡ್ ಯಾವಾಗ ಬರುತ್ತೆ ಅಂತಾ ಕಾಯ್ತಾ ಇದ್ದೀನಿ..ಬೆಳಿಗ್ಗೆ ಆಫೀಸ್ ಗೆ ಹೋಗೋ ಅಷ್ಟೊತ್ತಿಗೇ ಮೂಡ್ ಕೆಟ್ಟು ಕೆರ ಹಿಡಿದಿರುತ್ತೆ ಅಂತಾದ್ರಲ್ಲಿ, ಅವಳು ಬೇರೆ ಅದು ಸರಿ ಇಲ್ಲ, ಕೆಲಸ ಮಾಡೋಕೆ ಇಷ್ಟ ಇಲ್ಲ ಅನ್ನುವವರು ಯಾಕ್ರೀ ಇಲ್ಲಿ ಬರ್ತಿರಾ ನಮ್ಮ ತಲೆ ತಿನ್ನೋಕೆ  ಅಂತಾ  ಕೇಳಿ ನನ್ನಕೆಲಸದ ಬಗ್ಗೆ ನನಗೇ ರೇಜಿಗೆ ಹುಟ್ಟೋ ಹಾಗೆ ಮಾಡ್ತಾಳೆ. ಬೆಳಿಗ್ಗೆ-ಬೆಳಿಗ್ಗೆನೇ ಮೂಡ್ ಆಗಿರುತ್ತೆ.. ಅಂತಾದ್ರಲ್ಲೂ 5 ದಿನ ವರ್ಕ್ ಮಾಡ್ತಿನಿ.. ನಮ್ಮ ಊರಲ್ಲಿ ಆಗಿದ್ರೆ ಟ್ರಕ್ಕಿಂಗ್ ಆದ್ರೂ ಹೋಗಿ ಕಾಲ ಕಳೀಬಹುದು. ಕಡೇಪಕ್ಷ ಪಿಕ್ ನಿಕ್ ಗಾದ್ರೂ ಹೋಗೋಣ ಅಂತಾ ಹೇಳೋ ಈ ಭೂಪನ್ನ ವೀಕೆಂಡ್ ಅಲ್ಲಿ ಎಲ್ಲಿಗಾದ್ರೂ ಕರಿಯೋಣಾ ಅಂದ್ರೆ ಅವನ ಗರ್ಲ್ ಫ್ರೆಂಡ್ ಸುಮಿತ್ರಾ ಅಲಿಯಾಸ್ ಸುಮಿ ಅಲಿಯಾಸ್ ಸಿಡುಕು ಮೂತಿ ಸಿದ್ದಮ್ಮನ ಜೊತೆ ಕಾಫಿ ಡೇ ಕೂತು "ನಾನು ತುಂಬಾ ಇಂಪಾರ್ಟೆಂಟ್ ಕೆಲಸದಲ್ಲಿ ಇದ್ದೀನಿ. ನೀವು ಹೋಗಿ ಬನ್ನಿ" ಅಂತಾ ಸಾಗ ಹಾಕಿಬಿಡುತ್ತಾನೆ.

ಅದಕ್ಕೆ ಎಲ್ಲರೂ ಅವನ ಬೆನ್ನು ಬಿದ್ದು ಪೀಡಿಸಿ ಅವನ ಊರಿಗೆ ಹೊರಟಿದ್ದೀವಿ. ನಮ್ಮ ಕಾಲ ಕಳಿಯೋಕೆ ಅವನ ಕಾಲು ಎಳೆದು ಹೀಗೆ ಕಾಟ ಕೊಡ್ತಾ ಇದ್ದೀವಿ ಅಷ್ಟೇ..

"ಇನ್ನೂ ನನ್ನ ರೇಗಿಸ್ತಾ ಇರ್ತಿರೋ ಅಥ್ವಾ ಮನೆ ಒಳಗೆ ಬರ್ತೀರೋ, ಬೆಳಿಗ್ಗೆ ಬೇಗ ಎದ್ದು ಹೊರಡಬೇಕು. ಟ್ರಕ್ಕಿಂಗ್ ಗೆ ಬರ್ತೀರೋ ಅಥ್ವಾ ಹೀಗೇ ಮಾತಾಡ್ತಾ ಬೆಳಿಗ್ಗೆ ಮಾಡ್ತೀರೋ" ಅಂದಾಗ ಸಮಯ ನೋಡಿದ್ರೆ 12 ಘಂಟೆ.

"ದೆವ್ವಗಳು ಓಡಾಡೋ ಹೊತ್ತಲ್ಲಿ, ಹೀಗೆ ಕೂತಿದಿರಲ್ಲ ಒಳಗಡೆ ಹೋಗಿ" ಅಂದ್ರು ಅಜ್ಜಯ್ಯ.. ನಿಮಗಿಂತಾ ಕಾಟ ಕೊಡೋ ದೆವ್ವ ಇನ್ನೆಲ್ಲಿರೋಕೆ ಸಾಧ್ಯ ಅಂತಾ ಅಂದುಕೊಂಡು ಎಲ್ಲರೂ ಒಲ್ಲದ ಮನಸ್ಸಿಂದ ಒಳಗಡೆ ಹೋದ್ವಿ.
ಬೆಳಿಗ್ಗೆ 5 ಘಂಟೆಗೇ ಹೊರಡಬೇಕಾಗಿದ್ದವರು ಹೊರಟಾಗ 8 ಘಂಟೆ. ಶ್ರೀಪತಿ ಅವರ ಅಮ್ಮ "ಕಾಫಿ ಕುಡ್ದು, ತಿಂಡಿ ತಿಂದುಕೊಂಡು ಹೋಗ್ರೋ.. ಇನ್ನೊಂದು ಅರ್ಧ ಘಂಟೆ" ಅಂದಾಗ, ನಾವೇನು ನೆಂಟರ ಮನೆಗೆ ಹೋಗ್ತಾ ಇಲ್ಲ, ಹೋಗ್ತಾ ಇರೋದು ಟ್ರಕ್ಕಿಂಗ್ ಗೆ ಅಂತಾ ಬಿಲ್ಡಪ್ ತಗೊಂಡು ಮನೆಲಿದ್ದಿದ್ದ ಕುರುಕು ತಿಂಡಿಗಳನ್ನೆಲ್ಲಾ ಬ್ಯಾಗಿಗೆ ತುಂಬಿಕೊಂಡು, ಹಿಮಾಲಯ ಹತ್ತೋಕೆ ಹೋಗುವವರ ತರ ಫೋಸು ಕೊಡ್ತಾ ಹೊರಟ್ವಿ. ಜೀಪ್ ಹತ್ತಿ ಕೂತುಕೊಂಡು ಇನ್ನೇನು ಹೊರಡುವಾಗ ಒಂದು ಬೆಕ್ಕು ಅಡ್ಡ ಬಂತು. ಅದಕ್ಕೆ ಸುಬ್ಬ ಅಲಿಯಾಸ್ ಸುಬ್ರಹ್ಮಣ್ಯ ಶಾಸ್ತ್ರಿ "ಒಳ್ಳೆ ಕೆಲಸಕ್ಕೆ ಹೊರಡುವಾಗ ಈ ಬೆಕ್ಕನ್ನು ದಾಟಿಕೊಂಡು ಹೋಗ್ತಾ ಇದ್ದೀನಿ, ಏನಾಗುತ್ತೋ" ಅಂದಾಗ , ನಾವೆಲ್ಲ "ಬೆಕ್ಕು ನಿನ್ನನ್ನು ದಾಟಿಕೊಂಡು ಹೋಗ್ತಾ ಇದೆ, ಅದಕ್ಕೇನು ಆಗುತ್ತೋ" ಅಂತಾ ಅಂದ್ವಿ.

ಅವನು ಅಂದಿದ್ದಕ್ಕೆ ಸರಿಯಾಗಿ ಆ ಡಕೋಟಾ ಜೀಪ್ ಅರ್ಧ ದಾರೀಲೇ ಕೆಟ್ಟು ನಿಂತುಕೊಳ್ತು. ಹಿಂದಕ್ಕೂ ಹೋಗೋ ಆಗಿಲ್ಲ, ಮುಂದಕ್ಕೂ ಬರೋ ಹಾಗಿಲ್ಲ, ಅಷ್ಟೊತ್ತಿಗೆ ಬಸ್ಯಾ ಅಲಿಯಾಸ್ ಬುಲೆಟ್ ಬಸ್ಯಾ ಇದ್ದವನು "ನಾನು ಹೇಳಿದೆ ಬುಲೆಟ್ ಅಲ್ಲಿ ಹೋಗೋಣಾ ಅಂತಾ,ನೀವೇ ಜೀಪ್ ಅಲ್ಲಿ ಹೋದ್ರೇ ಮಜಾ ಇರುತ್ತೆ ಅಂದಿದ್ದು, ಮಜಾ ಅಲ್ಲ ಇದು ಸಜಾ" ಅಂದ.

"ಹೇ ಸುಮ್ನಿರೋ,ಇವನೊಬ್ಬ .. ಕಟ್ಕೊಂಡ ಹೆಂಡತೀನೂ ಹಿಂಗೇ ನೋಡ್ಕೋತೀಯೋ ಇಲ್ವೋ, ಬುಲೆಟ್ ನ ಮಾತ್ರ ಬಿಡಲ್ಲ.. ಸೀಮೆಗಿಲ್ಲದೆ ಇರೋ ಬುಲೆಟ್ ಇವನದ್ದು" ಅಂತಾ ಸಿಡುಕಿದ್ಲು ಸಿಡುಕು ಮೂತಿ ಸಿದ್ದಮ್ಮ ಅಲಿಯಾಸ್ ಸುಮಿ.

ಕೊನೆಗೆ ಹರಸಾಹಸ ಮಾಡಿ ಇವರಿಬ್ಬರನ್ನು ಸಮಾಧಾನ ಮಾಡಿ ಮೆಕ್ಯಾನಿಕ್ ನ ಕರೆದುಕೊಂಡು ಬರೋ ಹೊತ್ತಿಗೆ ಸೂರ್ಯ ನಡು ನೆತ್ತಿಗೆ ಬಂದಿದ್ದ. ಅವನು ಇದನ್ನ ರೆಡಿ ಮಾಡೋಕೆ 1 ರಿಂದ 2 ಘಂಟೆ ಆಗುತ್ತೆ ಅಂದ. ಟ್ರಕ್ಕಿಂಗ್ ಪ್ಲಾನ್ ಕ್ಯಾನ್ಸಲ್ ಅಂದಾಗ ಆ ಕಡೆಯಿಂದ ಒಂದು ಐಡಿಯಾ ಬಂತು. ಅದನ್ನು ಕೊಟ್ಟಿದ್ದು ಗಂಗಾ ಅಲಿಯಾಸ್ ಗೂಗಲ್ ಗಂಗಾ.
ಇಲ್ಲೇ ಪಕ್ಕದಲ್ಲೇ ಒಂದು ಫಾಲ್ಸ್ ಇದೆ, ನಾನು ಗೂಗಲ್ ಅಲ್ಲಿ ನೋಡಿದೆ. ಬೇಕಾದ್ರೆ ಚೆಕ್ ಮಾಡಿ ,ಬರಿ ಎರಡು ಕಿಲೋಮೀಟರ್ ಅಷ್ಟೇ ಇರೋದು ಅಂತಾ ಹೇಳಿದ್ಲು. ಅಂದ ಹಾಗೆ ಈ ಗೂಗಲ್ ಗಂಗಾ ಏನು ಹೇಳಿದ್ರೂ ಅವಳು ಗೂಗಲ್ ಅಲ್ಲಿ ಅದನ್ನು ಚೆಕ್ ಮಾಡಿನೇ ಹೇಳೋದು.

ಅವಳೇ ನಮ್ಮ ಗ್ಯಾಂಗ್ ನ ಲೀಡರ್ ಆಗಿದ್ದರಿಂದ ಅವಳ ಮಾತನ್ನು ಮೀರದೆ ಗೂಗಲ್ ಗಂಗಾಳ ಮಾತು ಕೇಳಿ "ಗಂಗಾ ಮಾತೆ"ಯನ್ನು ಅರಸಿಕೊಂಡು ಹೊರಟೆವು. ಹೊರಡುವುದಕ್ಕಿಂತ ಮುಂಚೆ ಅಲ್ಲೇ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಆ ಫಾಲ್ಸ್ ಬಗ್ಗೆ ವಿಚಾರಿಸಿದೆವು. ಅವರು ಹೇಳಿದ ಪ್ರಕಾರ ಅಲ್ಲಿ ಸುತ್ತಮುತ್ತಲಿನ ಎರಡು ಕಿಲೋಮೀಟರ್ ಅಲ್ಲಿ ಫಾಲ್ಸ್ ಯಾವುದೂ ಇಲ್ಲ. ನಿಮಗ್ಯಾರೋ 'ಫಾಲ್ಸ್'(ತಪ್ಪು) ಆಗಿ ಹೇಳಿರಬೇಕು ಅಂತಾ ಹೇಳಿ ಗಹಗಹಿಸಿ ನಕ್ಕರು.

ಅವರ ಆ ಕಂಗ್ಲೀಷು,ಕೆಂಪು ಹಲ್ಲು, ಬಾಯಲ್ಲಿದ್ದ ಎಲೆ-ಅಡಿಕೆ,ತಲೆಗೆ ಮೆತ್ತಿದ್ದ ಎಣ್ಣೆ ಎಲ್ಲವನ್ನೂ ನೋಡಿದ ಗಂಗಾ ಥೇಟ್ ಆಪ್ತಮಿತ್ರದ "ಗಂಗಾ"ಳಂತೆಯೇ ಭುಸುಗುಡುತ್ತಾ "ಬನ್ರೋ, ಆ ಗೂಗಲ್ ಗಿಂತಾ ಗೊತ್ತಾ ಇವ್ನಿಗೆ" ಅಂತಾ ದಂಡಿನ ಸಮೇತ ಹೊರಟೇ ಬಿಟ್ಳು.

ಆ ಕಾಡಿನ ಮದ್ಯೆ ಕಿಲೋಮೀಟರ್ ಗೋ, ಎರಡು ಕಿಲೋ ಮೀಟರ್ ಗೋ ಒಂದು ಮನೆ. ಅದರಲ್ಲಿ ಅಪರೂಪವಾಗಿ ಕಾಣಿಸೋ ಜನಗಳು ಅಂತಾದ್ರಲ್ಲಿ ಸಿಕ್ಕಿದ ಆ ಟೀ ಅಂಗಡಿಯವನನ್ನೂ ಬೈಕೊಂಡು ದಾರಿ ಕೇಳದೆ ಬಂದೆವಲ್ಲಾ, ನಮ್ಮ ಆಪ್ತರಕ್ಷಕ ಯಾರಪ್ಪಾ? ಅಂತಾ ಪೇಚಾಡ್ತಾ ಇರುವಾಗ, ಗಂಗಾ ಗೂಗಲ್ ಗುರುವಿನ ಬ್ರಹ್ಮಾಂಡ ರೂಪದ ಮತ್ತೊಂದು ಸ್ವರೂಪ 'ಗೂಗಲ್ ಮ್ಯಾಪ್' ನ ದರ್ಶನ ಮಾಡಿಸಿದಳು. ಪುಣ್ಯಕ್ಕೆ ಇಂಟರ್ನೆಟ್ ಇತ್ತು. ಸುತ್ತ-ಮುತ್ತಲಿನ ಕಾಡು, ಆ ಮರಗಳನ್ನು ನೋಡಿದ್ರೆ '6-5=2' ನೆನಪಾಗ್ತಾ ಇತ್ತು. ಬಂದಿದ್ದ ಆ ಜೀಪ್ ಕೂಡಾ ಇಂಥಾ ರಾಜರಸ್ತೆಯಲ್ಲಿ ನನಗೆ ಬರೋದಕ್ಕೆ ಯೋಗ ಇಲ್ಲ, ಅಲ್ಲಿ ರಾಜರ ಹಾಗೆ ಒಬ್ಬೊಬ್ಬರೇ ನಡ್ಕೊಂಡು ಹೋಗಿ ಅಂತಾ ಹೇಳಿ ಕಳುಹಿಸಿ ಬಿಟ್ಟಿತ್ತು.

ಟ್ರಕ್ಕಿಂಗ್ ಗೆ ಅಂತಾನೇ ಬಂದದ್ದಲ್ವಾ,ನಡೆಯೋದ್ರಲ್ಲಿ ಏನಿದೆ ಅಂತಾ ನಡ್ಕೊಂಡು ಹೊರಟ್ವಿ.ಹಾಗೆ ನಡೀತಾ,ನಡೀತಾ ಬ್ಯಾಗ್ ನಲ್ಲಿದ್ದ ಚಕ್ಕುಲಿ,ಕೋಡುಬಳೆ,ರವೆ ಉಂಡೆ ಇವುಗಳ ಜೊತೆಗೆ ಕಸಿನ್ಸ್ ಲೇಸ್, ಕುರ್-ಕುರೆ, ಚಿಪ್ಸ್ ಎಲ್ಲಾ ಜೊತೆಯಾದ್ದರಿಂದ ಕೈ-ಕಾಲಿಗಿಂತ ಬಾಯಿ-ಹೊಟ್ಟೆಗೇ ಕೆಲಸ ಹೆಚ್ಚಾಗಿತ್ತು.

ಅಷ್ಟರಲ್ಲೇ ರಮೇಶ ಕಿರುಚಿಕೊಂಡ, "ನೋವು-ನೋವು ನಂಗೆ ನಡೆಯೋದಕ್ಕೆ ಆಗ್ತಾ ಇಲ್ಲ" ಅಂತಾ, ಇಷ್ಟೊತ್ತು ಚೆನ್ನಾಗಿದ್ದ ಇವಾಗ ಏನಾಯ್ತಪ್ಪ ಅಂತಾ ನೋಡಿದ್ರೆ, ಜಿಗಣೆ ಆರಾಮಾಗಿ ಅವನ ಕಾಲಿಂದ ರಕ್ತ ಹೀರುತ್ತಾ ಇತ್ತು. ಇವನು ನೋವು-ನೋವು ಅಂತಾ ನಮ್ಮ ಜೀವ ಹೀರುತ್ತಾ ಇದ್ದ.ಪ್ಯಾಂಟ್ ಹಾಕೋ ಅಂದ್ರೇ ಪ್ಯಾಷನ್ ಅಂತಾ ಚಡ್ಡಿ ಹಾಕ್ಕೊಂಡು ಬಂದ್ಯಲ್ಲಾ ನಿಂಗೆ ಹಿಂಗೇ ಆಗಬೇಕು ಅಂತಾ ಮನಸಲ್ಲೇ ಅಂದ್ಕೊಂಡು  "ಇಷ್ಟಕ್ಕೇ ಹಿಂಗಾಡ್ತಾರೇನೋ, ಬಾರೋ" ಅಂತಾ ಆ ಜಿಗಣೆಯನ್ನ ಅಲ್ಲೆ ಬಿಟ್ಟು ಇವನನ್ನು ಎಳ್ಕೊಂಡು ಹೊರಟ್ವಿ.
"ಲಾಸ್ಟ್ ಟರ್ನ್,ಟೇಕ್ ಲೆಫ್ಟ್" ಅಂತಾ ಇತ್ತು. ಅಲ್ಲಿ ಹೋಗಿ ನೋಡ್ತೀವಿ..
ಅಬ್ಬಬ್ಬಾ! ಎಂತಾ ನೀರು ಅಂತೀರಾ..? ಜೀವಮಾನದಲ್ಲೇ ಇನ್ಯಾವತ್ತೂ ಅಂಥಾ ಫಾಲ್ಸ್ ನೋಡೋಕೆ ಸಾಧ್ಯಾನೇ ಇಲ್ಲ. ಎಲ್ಲಾ ಗೂಗಲ್ ಮಹಾತ್ಮೆ..

ಆ ಫಾಲ್ಸ್ ಹೇಗಿತ್ತು ಅಂದ್ರೆ 5 ಅಡಿ ಆಳದ ಚಿಕ್ಕ ಗುಂಡೀಲಿ 2 ಅಡಿ ನೀರಿತ್ತು, ನಕ್ಕು-ನಕ್ಕು ನಮ್ಮ ಕಣ್ಣಲ್ಲೂ ನೀರಿತ್ತು. ನಾವೇ ಅದಕ್ಕೊಂದು ಹೊಸ ನಾಮಕರಣ ಮಾಡಿದ್ವಿ 'ಗೂಗಲ್ ಗಂಗಾ' ಅಂತಾ. ವಾಪಸ್ ಬರ್ತಾ ಒಂದಷ್ಟು ಸೆಲ್ಫಿ ತೆಕ್ಕೊಂಡು, ತುಂಬಾ ಅದ್ಭುತ ಪ್ರಯಾಣ, ದಾರಿ ಸುಗಮವಾಗಿದೆ ಅಂತಾ ಗೂಗಲ್ ಮ್ಯಾಪ್ ಅಲ್ಲಿ ರಿವ್ಯೂ ಮಾಡಿ,ನಮ್ಮಂತೆ ಇನ್ನೊಂದಷ್ಟು ಜನ 'ಗೂಗಲ್ ಗಂಗಾ'ನ ದರ್ಶನ ಮಾಡಿ ಪಾವನವಾಗಲಿ ಅಂದ್ಕೊಂಡು ಬಂದ ದಾರಿಗೆ ಸುಂಕ ಇಲ್ಲ ಅನ್ನೋ ಹಾಗೆ 'ಗೂಗಲ್ ಗಂಗಾ'ನ ಹಿಂಬಾಲಿಸಿದ್ವಿ..

~ವಿಭಾ ವಿಶ್ವನಾಥ್

ನಿನ್ನೊಡನೆ ನಾ..

ನಿನ್ನಯ ನೂರಾರು ಮಾತುಗಳಿಗೆ
ನಾ ಸಾಂದ್ರಗೊಂಡಿರುವೆ..
ನೀ ಹೇಳುವ ಪ್ರತಿ ಉಕ್ತಿಗೂ
ನಾ ಲಯಗೊಂಡಿರುವೆ..

ನೀನಾಡಿದ ಎಲ್ಲಾ ನುಡಿಗಳಿಗೂ
ನಾ ಕಿವಿಗೊಟ್ಟಿರುವೆ..
ನೀ ಮಾಡಿದ ಕರೆಗಳಿಗೆಲ್ಲಾ
ನಾ ತಡಮಾಡದೆ ಓಗೊಟ್ಟಿರುವೆ..

ನಿನ್ನ ಪ್ರೀತಿ-ಪ್ರೇಮದ ಭಾಷ್ಯಗಳಿಗೆಲ್ಲಾ
ನಾ ಮನ ಮಿಡಿದಿರುವೆ..
ನಿನ್ನ ದುಃಖ-ದುಮ್ಮಾನಗಳಿಗೆಲ್ಲಾ
ನಾ ಕಂಬನಿಯಾಗಿರುವೆ..

ಲಯ ತಪ್ಪಿದ ನಿನ್ನ ಬಡಿತಕೆ
ನಾ ಉಸಿರ ಬೆಸೆದಿರುವೆ..
ಇಷ್ಟೆಲ್ಲಾ ಮಾಡಿದ ಬಳಿಕವೂ
ನಾ ನನ್ನತನವ ಬಿಡದಾಗಿರುವೆ..

ಅದೇಕೋ ನಿನ್ನ ಚುಚ್ಚುಮಾತಿಗೆ
ನಾ ಮನಪೂರ್ತಿ ಅತ್ತಿರುವೆ..
ನಿನ್ನ ಜರ್ಜರಿತಗೊಳಿಸುವ ವಾಕ್ಯಗಳಿಗೆಲ್ಲಾ
ನಾ ಇಂಚಿಂಚೂ ಸೊರಗುತ್ತಿರುವೆ..

ಬಿಟ್ಟೂ ಬಿಡದೆ ಕಾಡುತಿರುವ ಗೊಂದಲಕ್ಕೆಲ್ಲಾ
ನಾ ಅಕಾರಣವಾಗಿ ಭಯ ಪಡುತ್ತಿರುವೆ..
ನಿನ್ನ ಬಿಟ್ಟು ಹೊರಡಬೇಕೆಂಬ ಆಲೋಚನೆಗೇ
ನಾ ದಿನಪೂರ್ತಿ ದಿಗಿಲಾಗಿರುವೆ..

ಎಷ್ಟಾದರೂ ನೀ ಲೇಖನಿ
ನಾ ಕಾಗದ ಅಲ್ಲವೇ..?
ನೀ ಅಕ್ಷರಗಳ ಸೃಷ್ಠಿಕರ್ತನಾದರೆ
ನಾನು ನಿಮಿತ್ತ ಮಾತ್ರ ಅಲ್ಲವೇ..?

~ವಿಭಾ ವಿಶ್ವನಾಥ್

ಮಂಗಳವಾರ, ಆಗಸ್ಟ್ 21, 2018

ಎಲ್ಲಾ ಇದ್ದರೂ ಏನೋ ಇಲ್ಲದಂತೆ..

ಹೌದು, ಅಲ್ಲಿನ ಪರಿಸ್ಥಿತಿಯೇ ಹಾಗಿತ್ತು. ಅಲ್ಲಿ ಸುಖ ಮತ್ತು ಆರೋಗ್ಯಕರ ಜೀವನಕ್ಕೆ ಬೇಕಾದ ಎಲ್ಲಾ ಪರಿಸ್ಥಿತಿಯೂ ಇತ್ತು. ಆದರೂ ಏನೋ ಒಂದು ರೀತಿಯ ಕೊರತೆ, ಆ ಕೊರತೆಯೇ ಪ್ರೀತಿ.

ಅದೊಂದು ವೃದ್ದಾಶ್ರಮ, ಗಲಾಟೆ-ಗದ್ಧಲಗಳಿಲ್ಲದ ಸ್ಥಳದಲ್ಲಿದೆ. ಸುತ್ತ-ಮುತ್ತಲೆಲ್ಲಾ ವಿಶಾಲವಾದ ಹಸಿರು ಪ್ರದೇಶ, ಗೋಶಾಲೆ ಕೂಡಾ ಇದೆ ಜೊತೆಗೆ ದೇವಾಲಯವೂ ಇದೆ. ಆದರೆ ಅದರ ಸುತ್ತ ಎತ್ತರದ ಕಾಂಪೌಂಡ್ ಕೂಡಾ ಇದೆ. ಗೇಟಿಗೆ ಸದಾ ಬೀಗ ಜೊತೆಗೊಬ್ಬ ಕಾವಲುಗಾರ. ಅಲ್ಲಿಂದ ಹೊರ ಹೋಗಲು ಮತ್ತು ಒಳಬರಲು ಅಲ್ಲಿನವರ ಅನುಮತಿ ಪಡೆದು ಅದನ್ನು ಪುಸ್ತಕದಲ್ಲಿ ನಮೂದಿಸಿಯೇ ಹೋಗಬೇಕು.ಅದೊಂದು ಚಿನ್ನದ ಪಂಜರದ ತರಹ..

ಒಳ ಹೊಕ್ಕರೆ ಆ ಚಿನ್ನದ ಪಂಜರದಲ್ಲಿ ಮತ್ತೆರಡು ವಿಭಾಗ. ಬಡ ಮತ್ತು ಮಧ್ಯಮ ವರ್ಗದವರಿಗೆ ಒಂದು ರೀತಿಯ ವಸತಿ ಸೌಲಭ್ಯವಾದರೆ, ಶ್ರೀಮಂತ ವರ್ಗದವರಿಗೇ ಮತ್ತೊಂದು ರೀತಿಯ ವಸತಿ ಸೌಲಭ್ಯ. ಆದರೆ ಊಟ-ತಿಂಡಿಯ ವ್ಯವಸ್ಥೆ ಎಲ್ಲರಿಗೂ ಒಂದೇ. ಆದರೆ ವಸತಿ ವ್ಯವಸ್ಥೆಯಿಂದ ಅಗೋಚರ ಹೆರೆ ಎಳೆದಂತೆ ಭಾಸವಾಗುವ ವೃದ್ಧಾಶ್ರಮ. ಅವರು ಇವರ ಜೊತೆ ಬೆರೆಯರು, ಇವರು ಅವರ ಜೊತೆ ಬೆರೆಯರು..

ತಮ್ಮಷ್ಟಕ್ಕೆ ಸುಮ್ಮನೆ ಕುಳಿತವರು ಕೆಲವರಾದರೆ, ಮತ್ತೆ ಕೆಲವರು ದೇವಾಲಯದಲ್ಲಿ, ಮತ್ತಷ್ಟು ಮಂದಿ ಆಕಾಶ ನೋಡುತ್ತಾ, ಇನ್ನು ಕೆಲವರು ಕಸೂತಿ ಹಾಕುತ್ತಾ, ಮತ್ತಷ್ಟು ಜನ ಟಿ.ವಿ ಯ ಮುಂದೆ, ಮತ್ತೆ ಕೆಲವರು ಮಾತನಾಡುತ್ತಾ ಕೂತಿದ್ದರೆ, ಮತ್ತೆ ಕೆಲವರು ಬಟ್ಟೆ ಒಗೆಯುತ್ತಾ, ಮತ್ತೆ ಕೆಲವರದು ನಿದ್ರೆ. ಹೀಗೇ ಅವರವರ ಲೋಕಕ್ಕೆ ಅವರವರು ಹೊಂದಿಕೊಂಡು ಬಿಟ್ಟಿದ್ದರು. ಕೆಲವರಿಗೆ ಮಾತನಾಡುವ ಅಸ್ಥೆಯಿದ್ದರೆ ಮತ್ತೆ ಕೆಲವರಿಗೆ ಸಂಕೋಚ.

ಕೆಲವರು ವೃದ್ಧಾಶ್ರಮ ಶುರುವಾದಾಗಿನಿಂದ ಅಲ್ಲಿಯೇ ಇದ್ದರೆ ಮತ್ತೆ ಹಲವರು ಇತ್ತೀಚೆಗೆ ಬಂದವರು. ಹೀಗೇ ಒಬ್ಬರು ಅಜ್ಜಿಯನ್ನು ಮಾತನಾಡಿಸಿದಾಗ "ಇಲ್ಲಿಗೆ ಹೊಂದಾಣಿಕೆ ಆಗಿದ್ದೀರಾ..?" ಎಂದೆ. ಅದಕ್ಕೆ ಅವರು ಕಣ್ಣು ತುಂಬಾ ನೀರು ತುಂಬಿಕೊಂಡು "ವಿಧಿ ಇಲ್ಲವಲ್ಲಾ, ಮತ್ತೇನು ಮಾಡುವುದು ? ಮಗ ತಂದು ಸೇರಿಸಿ ಹೋಗಿದ್ದಾನೆ" ಎಂದರು. ಕೆಲವರು ಇಷ್ಟಪಟ್ಟು ಅಲ್ಲಿದ್ದರೆ ಕೆಲವರದು ಅನಿವಾರ್ಯತೆ.

ಅಲ್ಲಿನ ಆಡಳಿತ ವರ್ಗದವರು ಎಲ್ಲಾ ಸೌಕರ್ಯಗಳನ್ನೂ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲಿ ಮೇಲ್ನೋಟಕ್ಕೆ ಎಲ್ಲವೂ ಇದೆ ಎಂದೆನಿಸಿದರೂ, ಪ್ರೀತಿಯ ಕೊರತೆ ಇದೆ ಎಂದು ನನಗನ್ನಿಸಿತು. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಅಲ್ಲಿ ಅನಾಥ ಮಕ್ಕಳು ಸಹಾ ಕೆಲವರಿದ್ದಾರೆ. ಆದರೆ ಈ ವೃದ್ಧರು ಯಾರೂ ಅಲ್ಲಿಗೆ ಸುಳಿಯುವುದಿಲ್ಲ. ಅದು ಅಲ್ಲಿನ ರೀತಿ-ನೀತಿಯೋ ಅಥವಾ ತಮ್ಮ ಪ್ರೀತಿಯನ್ನು ಹಂಚಲು ಅವರಿಗೆ ಇಷ್ಟವಿಲ್ಲವೋ ಗೊತ್ತಿಲ್ಲ.

ಗೇಟಿಗೆ ಹಾಕಿದ ಬೀಗದ ಕುರಿತು ಕೇಳಿದಾಗ ತಿಳಿದು ಬಂದದ್ದಿಷ್ಟು. ಇಲ್ಲಿನ ಕೆಲವರು ತಪ್ಪಿಸಿಕೊಂಡು ಹೋಗುತ್ತಾರೆ, ಹಾಗಾಗಿ ಈ ಬೀಗ ಎಂದರು. ಸ್ವಚ್ಛಂದ ಪರಿಸರದಲ್ಲಿ ಬೆಳೆದಿದ್ದವರನ್ನು ತಂದು ಬಂಧಿಸಿದ ಪರಿಸ್ಥಿತಿಯಲ್ಲಿ ಅವರಾದರೂ ಏನು ಮಾಡಲು ಸಾಧ್ಯ? ಮತ್ತೆ ಕೆಲವರು ಮನೆಯಲ್ಲಿ ಜಗಳವಾಡಿಕೊಂಡು ಇಲ್ಲಿಗೆ ಬಂದು ಬಿಡುತ್ತಾರೆ. ಹಾಗಾಗಿ ಇಲ್ಲಿಗೆ ಸೇರಲು ಮಕ್ಕಳ ಅಥವಾ ಸಂಬಂಧಿಕರ ಒಪ್ಪಿಗೆಯೂ ಬೇಕು. ಮನೆಯಲ್ಲಿ ಬೈಗುಳ ಕೇಳಿಕೊಂಡು, ಸರಿಯಾಗಿ ಊಟ-ತಿಂಡಿ ಇಲ್ಲದೆ ಬದುಕುವುದಕ್ಕಿಂತ ಇದು ಲೇಸು ಎನ್ನುವವರೂ ಇದ್ದರು. 

ಹುಷಾರಿಲ್ಲದಿರುವಾಗ ಅಥವಾ ವೃದ್ಧರು ತೀರಿಕೊಂಡಾಗ ಹೇಳಿದರೂ ಬಾರದ ಮಕ್ಕಳು ಹಣ, ಒಡವೆಗಳಿಗಾಗಿ ಆನಂತರ ಬಂದದ್ದೂ ಇದೆ ಎಂದಾಗ ನಿಜಕ್ಕೂ ಆಶ್ಚರ್ಯವಾಯಿತು. ಯಾವುದೋ ಸಿನಿಮಾದಲ್ಲಿ ನೋಡಿದ್ದ ಸ್ಥಳ ಭೇಟಿ ನೀಡಿದಾಗ ಬೇರೆಯದೇ ಅನುಭವ ನೀಡಿತು. ಎಲ್ಲಾ ವೃದ್ಧಾಶ್ರಮಗಳೂ 'ರಾಜಕುಮಾರ'ದ 'ಕಸ್ತೂರಿ ನಿವಾಸ'ಗಳಾಗಲು ಸಾಧ್ಯವಿಲ್ಲವಲ್ಲಾ.

ವೃದ್ಧಾಶ್ರಮಗಳು ಅನಿವಾರ್ಯವಲ್ಲ, ಬದುಕಿನ ಅವಶ್ಯಕತೆಗೆ ಪ್ರೀತಿ, ಅನುಬಂಧಗಳು ಮುಖ್ಯ.ಮಕ್ಕಳು ತಮ್ಮ ತಂದೆ-ತಾಯಂದಿರನ್ನು ವೃದ್ಧಾಶ್ರಮಗಳಿಗೆ ಸೇರಿಸದಿದ್ದರೇ ಒಳಿತು. ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಇಂದಿನ ಚಿಗುರೆಲೆಗಳೇ ನಾಳಿನ ಹಣ್ಣೆಲೆಗಳು. ಅಲ್ಲವೇ? ಮಕ್ಕಳ ಹಟ, ಕೋಪ, ತುಂಟಾಟಗಳನ್ನೆಲ್ಲಾ ಸಹಿಸಿಕೊಂಡು ತಿದ್ದಿ-ತೀಡಿ ಬುದ್ದಿ ಹೇಳಿ ಕಾಡುಕಲ್ಲನ್ನು ಮೂರ್ತಿಗಳನ್ನಾಗಿಸಿದ ಶಿಲ್ಪಿಗಳನ್ನು ಸ್ವಲ್ಪ ಸಹಿಸಿಕೊಳ್ಳಬಹುದಲ್ಲವೇ? ಕಳೆದು ಹೋದ ಕಾಲವಂತೂ ಮತ್ತೆ ಬಾರದು. ಇನ್ನಾದರೂ ಎಲ್ಲರೂ ಎಚ್ಚೆತ್ತು ವೃದ್ಧಾಶ್ರಮಗಳ ಸಂಖ್ಯೆಯನ್ನು ಇಳಿಮುಖಗೊಳಿಸಿದರೆ ಒಳಿತು.

~ವಿಭಾ ವಿಶ್ವನಾಥ್