ಶುಕ್ರವಾರ, ಏಪ್ರಿಲ್ 26, 2019

ಅರೆಬರೆದ ಕವಿತೆ



ಅರೆಬರೆದ ಕವಿತೆ ಕಾಯುತಲಿತ್ತು
ಜೀವ  ತಳೆಯುವುದಕ್ಕೆಂದು
ಜೀವ ತಳೆದು ಬದುಕುವುದಕ್ಕೆಂದು
ಬದುಕಿ ಬಾಳುತ್ತಾ ಮನೆಮಾತಾಗಲೆಂದು

ಅವನ ಜೋಳಿಗೆಯಲಿ ಅವಿತು
ಅವನಿಗರ್ಪಣೆಯಾಗಲೆಂದು
ಅವಳ ಹೊಗಳಿಕೆಯ ಸವಿಯಲೆಂದು
ಅವರಲ್ಲಿ ಭಾಂದವ್ಯವ ಬೆಸೆಯಲೆಂದು

ಪುಸ್ತಕದಿ ತಾನು ಪ್ರಕಟವಾಗುತಲಿ 
ತಾನು ಜನಜನಿತವಾಗಲೆಂದು
ಅವರಿವರ ವಾಚನದಿ ಬೆಳೆಯಲೆಂದು
ಅವರಿವರ ವಿಮರ್ಶೆಗೆ ಪಕ್ಕಾಗಲೆಂದು

ಅರೆಬರೆಸಿಕೊಂಡ ಕವಿತೆಗೆ ಅರಿವಿರಲಿಲ್ಲ
ತನಗೂ ಪ್ರತಿಸ್ಪರ್ಧಿಗಳಿರುವರೆಂದು
ಅವಳಿಂದ ತಾನು ತಿರಸ್ಕೃತವಾಗುವೆನೆಂದು
ಅವರಿವರಿಂದಲೇ ಮೂಲೆಗುಂಪಾಗುವೆನೆಂದು

ಕೊನೆಗೂ ಕವಿತೆಗೆ ಜೀವ ಕೊಡಲಿಲ್ಲ
ಅದು ಕಾಯುತ್ತಲೇ ಇರಲೆಂದು
ತಿರಸ್ಕಾರಕ್ಕಿಂತ ಕಾಯುವಿಕೆಯೇ ಲೇಸೆಂದು
ಸಮಯ ನೀಡಿದಷ್ಟೂ ಪ್ರಬುದ್ಧವಾಗುವುದೆಂದು

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ