ಭಾನುವಾರ, ಜುಲೈ 26, 2020

ಚಲಿಸುತ್ತಿರಬೇಕು ಚಿತ್ರಗಳು

 

(ಚಿತ್ರ: ವ್ಯಾನ್ ಗೋ ಅವರ ಪ್ರಸಿದ್ಧ painting)

ಚಲಿಸುತ್ತಿರಬೇಕು ಚಿತ್ರಗಳು
ಯಾವ ಚೌಕಟ್ಟಿಗೂ ಸಿಗದಂತೆ

ಸೆಲ್ಫಿ, ಫೋಟೋಗಳ ಮಾಯೆಗೆ ಸಿಲುಕಿ
ನೆನಪಾಗಿ ಕೊಳೆಯುವುದಕ್ಕಿಂತ
ಸ್ವಚ್ಛಂದವಾಗಿ ಹಾರಿಕೊಂಡಿರಬೇಕು

ಕಾಲನ ಜೊತೆ ಜೊತೆಗೇ ಹೆಜ್ಜೆ ಹಾಕುತ್ತಾ
ಯಾವ ಸೆಳೆತಕ್ಕೂ ಒಳಗಾಗದಂತೆ
ಜಾತಿ-ಮತದ ಭೇಧವಿಲ್ಲದೆ ಚಲಿಸುತ್ತಿರಬೇಕು

ಮಮಕಾರದ ಮಾಯೆಯ ತೊರೆದು
ಕಾಲನ ಘಳಿಗೆಯ ಪಾಶಕ್ಕೆ ಸಿಗದೆ
ಅಲೆಯುತ್ತಾ ನೆಲೆಯಾಗದಂತೆ ಹಾರಾಡಿಕೊಂಡಿರಬೇಕು

ಚಲನೆಯೇ ಬದುಕಿನ ನಿರಂತರತೆ
ಅವಿಶ್ರಾಂತಿಯೇ ಶ್ರಮಜೀವಿಯ ವಿಶ್ರಾಂತಿ
ಹೀಗೆ ಸಾರಲು ಚಲಿಸುತ್ತಿರಬೇಕು ಚಿತ್ರಗಳು

ಕಣ್ಣಳತೆಗೆ ಆಗಾಗ ಕಾಣುತ್ತಾ
ಗುರಿಯೆಡೆಗೆ ಛಲ  ಹುಟ್ಟಿಸಲು
ಚಲಿಸುತ್ತಲೇ ಇರಬೇಕು ಬದುಕೆಂಬ ಮಾಯಾಚಿತ್ರ

~ವಿಭಾ ವಿಶ್ವನಾಥ್

ಭಾನುವಾರ, ಜುಲೈ 19, 2020

ನೀ ಬರೆದ ಸಾಲುಗಳು..

 

ಬದುಕು ಬರೆದ ಸಾಲುಗಳ ನೀನು ಒಪ್ಪಬೇಕಿತ್ತು. ನಿನ್ನದೇ ಹೊಸ ವ್ಯಾಖ್ಯಾನ ಬರೆಯಲು ಹೊರಟೆ ನೀನು. ಬದುಕು ಮಾತ್ರವಲ್ಲ, ಸಾವೂ ಸಹಾ ನಿನ್ನನ್ನು ಸ್ವೀಕರಿಸಿಲ್ಲ.

ಆ ಸಾಲುಗಳನ್ನು ನೀನು ಬರೆಯಲೇ ಬಾರದಿತ್ತು. ಬರೆದರೂ ಸಾರ್ವತ್ರಿಕವಾಗಿ ಪ್ರಕಟಿಸಬಾರದಿತ್ತು. ಸತ್ಯವನ್ನು ಬಿಚ್ಚಿಡಲು ಮಾತ್ರವಲ್ಲ ಹುಡುಗಿ ಸತ್ಯವನ್ನು ಒಪ್ಪಿಕೊಳ್ಳಲು ಸಹಾ ಧೈರ್ಯ ಬೇಕಿತ್ತು. ನಿನಗಿದ್ದ ಧೈರ್ಯ ಈ ಸಮಾಜಕ್ಕಿಲ್ಲ. ಅದರ ಅರಿವಿದ್ದರೂ ನೀನು ಆ ಸಾಲುಗಳನ್ನು ಬರೆದೆ.

ಅತ್ಯಾಚಾರವಾದರೆ ಅತ್ಯಾಚಾರಿಗೆ ಶಿಕ್ಷೆ ಕೊಡುವುದರ ಬದಲಾಗಿ ಅವನ ಜೊತೆಗೆ ದಾಂಪತ್ಯ ಮಾಡು ಎಂದು ಸಂತ್ರಸ್ತೆಗೆ ತೀರ್ಪು ಕೊಡುವಾಗ, ಅವಳಿಗೆ ಬೇರೆ ಆಯ್ಕೆಗಳೇ ಇರುವುದಿಲ್ಲ. ಯಾಕೆಂದರೆ, ತಪ್ಪುಗಳನ್ನೂ ಸರಿ ಮಾಡುತ್ತೇವೆ ಎನ್ನುತ್ತಾ ಸಧೃಡ ಸಮಾಜವನ್ನು ಕಟ್ಟುತ್ತೇವೆ ಎಂದು ಹೊರಡುವ ಜನರು ತಪ್ಪುಗಳನ್ನು ತಾವೇ ಬೆಳೆಸುತ್ತಾರೆ. ಅತ್ಯಾಚಾರ ಮಾಡಿದವ ಸಮಾಜದ ದೃಷ್ಟಿಯಲ್ಲಿ ಸದ್ಗೃಹಸ್ಥ. ಹಾಗೇ, ಸಭ್ಯರು ಎನ್ನಿಸಿಕೊಂಡವರನ್ನು ಸಹಾ ಸಮಾಜ ಬೆಳೆಸಿದ್ದು ಹೀಗೆಯೇ.. ಸಭ್ಯರ ಸೋಗಿನಲ್ಲಿ ತಮ್ಮ ಅಕ್ರಮಗಳಿಗೂ ಸಭ್ಯತೆಯ ಹಣೆಪಟ್ಟಿ ಹಚ್ಚಿ ಬಿಡುತ್ತಾರೆ. 

ನೀನು ಧೈರ್ಯವಂತೆ. ಧೈರ್ಯ ಸತ್ಯವನ್ನು ತೆರೆದಿಡಲು ನಿನ್ನ ಧೈರ್ಯ ಮಾತ್ರ ಸಾಲದಾಗಿತ್ತು. ಸುತ್ತಮುತ್ತಲಿನವರ, ನಮ್ಮವರೆನಿಸಿಕೊಂಡವರ ಸಹಕಾರ ದೂರದರ್ಶಿತ್ವ ಕೊಂಚ ಬೇಕಿತ್ತು. ಹೆಣ್ಣು ಎಂಬ ಪದ ಸಾಕು ಸುತ್ತಮುತ್ತಲಿನವರ ಧೈರ್ಯವನ್ನು ದುರ್ಬಲಗೊಳಿಸಲು. ಎಲ್ಲರೂ ವೀರ ವನಿತೆಯರ ಕತೆಯನ್ನು ಹೇಳಲು, ಕೇಳಲು ಮಾತ್ರ ಸಿದ್ಧರಿರುತ್ತಾರೆ, ನಮ್ಮದೇ ಮನೆಯ ಹೆಣ್ಣು ಕೂಸು ಆ ಸ್ಥಾನದಲ್ಲಿರಲು ಕಲ್ಪನೆ ಕೂಡಾ ಮಾಡಿಕೊಳ್ಳಲಾರರು.

ಕೆಲವೊಮ್ಮೆ ಅತಿ ಸ್ವಾತಂತ್ರ್ಯ, ಕೆಲವೊಮ್ಮೆ ಅತಿ ಮಡಿವಂತಿಕೆ ಕೂಡಾ ಸಿಡಿದು ನಿಂತು ವಿರುದ್ಧವಾದ ನಡವಳಿಕೆಯಾಗಿ ನಡೆದುಕೊಳ್ಳಲು ಕಾರಣವಾಗುತ್ತದೆ. ಆದರೆ, ನಿನ್ನ ಬದುಕು ಇವೆರಡಕ್ಕೂ ಸೇರಿಲ್ಲ. ನಿನ್ನ ಬದುಕಲ್ಲಿ ಆದರ್ಶವಿತ್ತು. ಹುಚ್ಚು ಆದರ್ಶಗಳೆಂದು ಹಂಗಿಸುವ ಈ ಕಾಲಘಟ್ಟದಲ್ಲಿ ಆದರ್ಶಗಳನ್ನೇ ಉಸಿರೆನಿಸಿಕೊಂಡಿದ್ದ ನಿನಗೆ ಅದೇ ಮುಳುವಾಯಿತೇ. ಬೆಳೆದದ್ದು ಅನಾಥಾಶ್ರಮದಲ್ಲಿ.. ಅಲ್ಲಿನ ಗುರುಗಳು ಹಾಕಿಕೊಟ್ಟಿದ್ದ ಉತ್ತಮ ಹಾದಿಯಲ್ಲಿ ಬೆಳೆದಿದ್ದೆ. 

ಸತ್ಯದ ಬೆಳಕನ್ನು ಚೆಲ್ಲುವ ಆಶಯದಲ್ಲಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುವ ಆಶಯ ನಿನ್ನದಾಗಿದ್ದರೆ, ವೈದ್ಯಕೀಯ ನನ್ನ ಆಯ್ಕೆಯಾಗಿತ್ತು. ನಮ್ಮಿಬ್ಬರ ಹಾದಿ ಬೇರೆಯೇ ಆಗಿ ಹೋಗಿತ್ತು. ವಿಧಿ ಲಿಖಿತದ ಎದುರು ನಿಲ್ಲುವರಾರು ?

ನಿನ್ನ ಬರವಣಿಗೆಯ ಮೊನಚನ್ನು ತಾಳಿಕೊಳ್ಳುವ ಶಕ್ತಿ ಸಭ್ಯತೆಯ ಸೋಗಿನಲ್ಲಿರುವವರಿಗೆ ಇಲ್ಲ ಕಣೆ ಹುಡುಗಿ.. ರಾಜಕೀಯ ವ್ಯಕ್ತಿಯ ಅಕ್ರಮ ವಿಚಾರಗಳನ್ನು ಬಯಲಿಗೆಳೆಯತೊಡಗಿದ್ದೆಯಲ್ಲಾ, ಅದೂ ರಾಜ್ಯದ ಪ್ರಮುಖ ರಾಜಕೀಯ ಮುತ್ಸದಿ ಎಂದೆನಿಸಿಕೊಂಡಿದ್ದವರು. ಯಾವ ಕೆಚ್ಚೆದೆಯ ಗಂಡೂ ಮಾಡದ ಧೈರ್ಯ ನೀನು ಮಾಡಿದ್ದೆ. ಕಾರಣ, ನಿನ್ನ ಜನ್ಮದ ನಂಟು ಕೂಡಾ ಅವನಿಂದಲೇ ಬೆಸೆದಿತ್ತು. ಅಪ್ಪ-ಮಕ್ಕಳ ಬಂಧದಲ್ಲಿ ಬಂಧಿಯಾಗಬೇಕಿದ್ದವರು ರಾಜಕೀಯ- ಪತ್ರಿಕೋದ್ಯಮದ ರಣಭೂಮಿಯಲ್ಲಿ ಕಾದಾಡುತ್ತಿದ್ದಿರಿ. 

ನಿನ್ನ ಜನ್ಮ ರಹಸ್ಯ ಅವನಿಗೆ ತಿಳಿದದ್ದು ತಡವಾಗಿ.. ಅಷ್ಟರಲ್ಲಾಗಲೇ ನಿನ್ನ ಮೇಲೆ ಅವನ ಕಡೆಯವರಿಂದಲೇ ಅತ್ಯಾಚಾರವಾಗಿತ್ತು. ಇತ್ತ ನೀನು ಸಾವು-ಬದುಕಿನ ನಡುವಿನಲ್ಲಿ ಹೋರಾಡುತ್ತಿರುವಾಗಲೇ ಅವನಿಗೆ ಸತ್ಯ ತಿಳಿದಿತ್ತು. ಕಾಲ ಮಿಂಚಿತ್ತು. ಕಾಲವನ್ನು ತಿರುಗಿಸಲಾಗದು, ನಿಲ್ಲಿಸಲಾಗದು. ನಿನ್ನನ್ನು ಬದುಕಿಸಿಕೊಳ್ಳಬೇಕೆಂಬ ಅವನ ಪ್ರಯತ್ನ ನಿನ್ನನ್ನು ಸಾಯಲೂ ಬಿಡದೆ, ಬದುಕಿಸಲೂ ಆಗದೇ ನಿನ್ನ ಜೀವವನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ.

ಮಗಳೆಂಬ ಮಮಕಾರ, ತನ್ನ ತಪ್ಪಿನ ಪ್ರಾಯಶ್ಚಿತ್ತ ಎಲ್ಲವೂ ಅವನನ್ನು ಕೊಂದುಹಾಕುತ್ತವೆ. ರಣ ಭೀಕರ ಅತ್ಯಾಚಾರ ಮಾಡಿಸಿದ ಪಾಪ ಅವನನ್ನು ಕಿಂಚಿತ್ತು ಬಿಡದೆ ಕಾಡುತ್ತವೆ. ನೀನು ಬರೆದ ಸಾಲುಗಳು, ಅವನ ಪ್ರತೀಕಾರ ಅವನನ್ನು ಇತ್ತ ಬದುಕಲೂ ಬಿಡದೆ, ಸಾಯಲೂ ಬಿಡದೆ ನರಳಿಸುತ್ತವೆ. ಅದಕ್ಕಿಂತಾ ದೊಡ್ಡ ಶಿಕ್ಷೆ ಅವನಿಗೆ ಬೇರಾವುದು ಸಹಾ ಸಿಗಲಾರದು. ನರಕ ಕೂಡಾ ಇದಕ್ಕಿಂತ ಎಷ್ಟೋ ಮೇಲೆನಿಸಿಬಿಡುತ್ತದೆ ಅವನಿಗೆ. ಪ್ರಾಯಶ್ಚಿತ್ತಕ್ಕೂ ಆಯ್ಕೆ ಸಿಗದು ಅವನಿಗೆ. ಆತ್ಮಸಾಕ್ಷಿ ಎಂಬುದು ಅವನಲ್ಲಿ ಇನ್ನೂ ಜೀವಂತವಾಗಿದ್ದರೆ ಅವನು ಬದುಕಿನ ಪ್ರತಿ ನಿಮಿಷದಲ್ಲಿಯೂ ನರಕ ಕಾಣುತ್ತಾನೆ. ನೀ ಅಂದು ಬರೆದಿದ್ದ ಸಾಲುಗಳು ಹುಸಿಯಾಗಲಿಲ್ಲ.

ನೀನು ಮಾತ್ರ ಜೀವಚ್ಛವವಾಗಿ ನರಳುವುದನ್ನು ನಾನು ನೋಡಲಾರೆ. ಜೊತೆಯಲ್ಲಿ ಆಡಿದ ಇದೇ ಕೈಗಳು ನಿನಗಿಂದು ಮುಕ್ತಿ ನೀಡಲಿವೆ. ಮತ್ತೊಬ್ಬ "ಅರುಣಾ ಶಾನುಭೋಗ" ಆಗಿ ನಿನ್ನನ್ನು ನಾನು ನೋಡಲಾರೆ. ದಯಾಮರಣದ ಆಯ್ಕೆ ನೀಡಲಾರೆ. ಬದುಕಿದರೂ ಮೊದಲಿನ ಸ್ಥಿತಿಯಲ್ಲಿ ನೀನಿರಲಾರೆ ಹುಡುಗಿ. ನನ್ನ ಕಾರ್ಯ ತಪ್ಪಾಗಿರಬಹುದು, ನೀ ಬರೆಯದ ಸಾಲುಗಳನ್ನು ನಾನು ಬರೆಯಲಿರುವೆ.

ಆದರೂ, ವಿಧಿ ಬರೆದ ಸಾಲುಗಳ ಬದಲಿಸಿ ನೀನು ನಿನ್ನ ಸಾಲುಗಳ ಬರೆಯಬಾರದಿತ್ತು. ಕಡೆಗೂ, ನಿನ್ನ ಬರಹವೇ ನಿನ್ನ ಮುಕ್ತಿಯಾಯಿತೇ..
ಆದರೂ, ನೀ ಬರೆದ ಸಾಲುಗಳು ಎಂದೆಂದಿಗೂ ಅಜರಾಮರ. ನಿನಗೆ ಮತ್ತೊಂದು ಜನ್ಮವಿದ್ದರೆ ನನ್ನ ಮಗಳಾಗಿ ಜನಿಸು. ಕೆಚ್ಚೆದೆಯ ಕಿಚ್ಚಿನ ಹೆಮ್ಮೆಯ ಮಗಳಾಗಿ ಹುಟ್ಟಿ ಬಾ.
ನೀ ಬರೆದ ಸಾಲುಗಳ ಮರೆಸಲಾರದಂತೆ ಮಾಡಲು, ನಿನ್ನನ್ನು ಬೆಚ್ಚಗೆ ಕಾಪಿಡಲು ನಾನು ಸಿದ್ಧಳಿದ್ದೇನೆ.

~ವಿಭಾ ವಿಶ್ವನಾಥ್

ಸೋಮವಾರ, ಜುಲೈ 13, 2020

ಚಹಾ-ಕಾಫಿ ಚೂರುಗಳು

1.ಸಕ್ಕರೆ ಖಾಲಿಯಾದಾಗ ಚಹಾಕ್ಕೆ
ಬೆಲ್ಲ, ಕಲ್ಲುಸಕ್ಕರೆಗಳೂ ಆಗಬಹುದು
ರುಚಿ ಬದಲಾಗಬಹುದು ಅಷ್ಟೇ..
ಹೊಂದಾಣಿಕೆ ಎಂದರೆ ಇದೆಯಾ..?

2. ಮೂಲೆಯ ಕಾಫಿ ಟೇಬಲ್ ಖಾಲಿಯಿಲ್ಲದಿದ್ದರೆ
ಮೊದಲು ಮೊದಲೆಲ್ಲಾ ಕಿರಿಕಿರಿಯೆನಿಸುತ್ತಿತ್ತು
ಈಗ ಯಾವುದೂ ಆಗುತ್ತದೆ.. ಕಾಫಿಯೊಂದಿದ್ದರೆ ಸಾಕು
ಅನಿವಾರ್ಯತೆ ಎಲ್ಲವನ್ನೂ ಕಲಿಸಿಬಿಡುತ್ತದೆ

3. ದಿನಾಲೂ ಕಾಫಿ ಇದ್ದರೂ ಆದೀತು
ಅಥವಾ ಚಹಾ ಕುಡಿದರೂ ಆದೀತು
ಅಥವಾ ಬಿಸಿನೀರು ಸಹಾ ಆದೀತು
ಬದಲಾವಣೆಗೆ ಒಗ್ಗಿಸಿಕೊಳ್ಳಲು ಕಲಿತಿರುವೆ

4. ಕಾಫಿ ಚೆನ್ನಾಗಿದೆಯೋ ಇಲ್ಲವೋ
ರುಚಿಯ ನಿರ್ಧಾರ ಕುಡಿಯುವವರದ್ದಲ್ಲವೇ..?
ಕೆಲವೊಮ್ಮೆ, ಮಾಡುವವರ ಮಾತಿಗೆ ಮರುಳಾಗಿ
ಸ್ವಂತ ನಿರ್ಧಾರವನ್ನೇ ಬದಲಿಸಿಕೊಂಡು ಬಿಡುತ್ತೇವೆ

5.ಪರಿಮಾಣ ಬದಲಾದಂತೆಲ್ಲಾ ರುಚಿ ಬದಲು
ಕಲಿತಷ್ಟೂ ಕಲಿಯುವುದು ಇದ್ದೇ ಇದೆ
ದಿನದಿನವೂ ಹೊಸ ರುಚಿ, ಹೊಸ ಪಾಠ
ನಾನಿನ್ನೂ ಬದುಕೆಂಬ ಪಾಕಶಾಲೆಯ ವಿದ್ಯಾರ್ಥಿ

6. ಸಿಹಿ ಕಾಫಿ ಏಕೋ ಸರಿಯಾಗುತ್ತಿಲ್ಲ
ನಾಲಿಗೆಗೆ ಹಿತವಾದರೂ ಏಕೋ ಕಸಿವಿಸಿ
ನಿತ್ಯದ ಕಹಿ ಕಾಫಿಯನ್ನೇ ಮನ ಬಯಸುತ್ತಿದೆ
ಹಠಾತ್ ಬದಲಾವಣೆಗೆ ಒಗ್ಗಿಕೊಳ್ಳುವುದೂ ಕಷ್ಟವೇ..

7. ನೋಡಲು ಚೆನ್ನಾಗಿಯೇ ಇದ್ದ ಕಾಫಿ
ಗುಟುಕರಿಸಿದ ನಂತರ ಕಹಿ ಕಹಿ
ಆಗೆಲ್ಲಾ ನನಗೆ ನೆನಪಾಗುವುದು
ಗೋಮುಖ ವ್ಯಾಘ್ರದಂತಹಾ ಹಿತಶತ್ರುಗಳೇ..

~ವಿಭಾ ವಿಶ್ವನಾಥ್

ಗುರುವಾರ, ಜುಲೈ 9, 2020

ಯಾವುದೊ ಭಾವ, ಯಾವುದೋ ಜೀವ


ಯಾವುದೊ ಭಾವ, ಯಾವುದೋ ಜೀವ
ಅರಿತು ಬೆರೆತು ಬಾಳುವುದಯ್ಯ

ಎಲೆಯ ಮರೆಯ ಪ್ರತಿಭೆಯು ಇಂದು 
ಕಾಣದೆ ಎಲ್ಲೋ ಅಡಗಿವುದಯ್ಯ

ನಗುವು,ಅಳುವು ಒಟ್ಟಿಗೆ ಬೆರೆತು
ಬಾಳನು ರಂಗು ಮಾಡಿವೆಯಯ್ಯ

ಬದುಕಿನ ಭಾವದ ತಂತಿಯ ಮೀಟಿ
ಒಳಗಿನ ತಿಳಿಯನು ಕಲಕುವೆವಯ್ಯ

ರಾಗ-ದ್ವೇಷದ ಭಾವದ ಪಥವ
ತೊರೆದು ಬಂದು ನಿಂತಿವೆಯಯ್ಯ

ಯಾರದೊ ಬದುಕು, ನನ್ನಯ ಹಾಡು
ಮರೆತೂ ಮರೆಯದಂತಾಗಿದೆಯಯ್ಯ

~ವಿಭಾ ವಿಶ್ವನಾಥ್

ಭಾನುವಾರ, ಜುಲೈ 5, 2020

ನನ್ನದಲ್ಲದ ಹಾಡು

ನನ್ನದಲ್ಲದ ಹಾಡ

ಹಾಡಬಲ್ಲೆನೆ ನಾನು?
ನನ್ನದಾಗದ ಬದುಕ
ಬದುಕಬಲ್ಲೆನೇ ನಾನು?

ಎದೆಯುಸಿರ ಸ್ವರ ಮೀಟಿ
ಭಾವವನೇ ಬಸಿದು
ನಾನಾಗದ ನನ್ನನ್ನು
ನಾನೇ ನಾನಾಗಿಸಿಕೊಂಡು

ಬದುಕಲಾಗದ ಬದುಕ
ಕನಸಿನಲಿ ಬದುಕುತಾ
ನನಸಾಗದ ಕನಸ
ಕನಸೇ ಬದುಕೆನ್ನುತಾ

ನನ್ನದಲ್ಲದ ಬದುಕು
ನನ್ನದಲ್ಲದ ಭಾವ
ಹೇಗೋ ಒಂದಾಗಿಸುತ
ನನ್ನದೇ ಎಂದೆನುತ

ಬದುಕ ಹಾಡಾಗಿಸುತ
ಹಾಡ ಬದುಕಿಸುತ
ಬದುಕಬಲ್ಲೆನು ನಾನು
ಹಾಡಬಲ್ಲೆನು ನಾನು

~ವಿಭಾ ವಿಶ್ವನಾಥ್

ಗುರುವಾರ, ಜುಲೈ 2, 2020

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ


ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಯಾರೊಬ್ಬರೂ ಇಲ್ಲದಿದ್ದಾಗಲೂ ಭರವಸೆ ನೀಡಿ ಬೆನ್ನಿಗೆ ನಿಲ್ಲುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಸೋತಾಗ ಹೆಗಲು ಕೊಡಲು ಯಾವಾಗಲೂ ಅವನಿರುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ನನ್ನ ನೆಚ್ಚಿನ ಹಾಡಿನ ಸಾಲುಗಳನ್ನು ಗುನುಗಲು ನೆನಪಿಸುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ತಪ್ಪಾದಾಗಲೆಲ್ಲಾ ತಿದ್ದಿ ನಡೆಸಲು ಅವನಿದ್ದಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಜಗತ್ತೇ ನನ್ನ ತಿರಸ್ಕರಿಸಿದರೂ, ತಿರಸ್ಕಾರ ತೋರದವನು ಅವನು

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ನೀನೇ ಉತ್ತಮವೆನ್ನುತ್ತಾನೆ, ನಾನು ಉತ್ತಮವೆಂಬ ಮಾತು ನಿಜವಲ್ಲದಿದ್ದರೂ

ನಿರಾಶೆಯ ಕತ್ತಲೆಯ ಕೂಪದಲ್ಲಿರುವಾಗಲೂ
ಭರವಸೆಯ ಬೆಳಕು ತೋರಿ ಜೀವಂತವಾಗಿರಿಸುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಬರೀ ಅಣ್ಣ ಎಂಬ ಪದಕ್ಕಿಂತ ಮಿಗಿಲಾದವನು

~Azubougu Chinwendu chukwudi
(ಭಾವಾನುವಾದ: ವಿಭಾ ವಿಶ್ವನಾಥ್)

ಮೂಲ ಕವಿತೆ:
A brother from another mother
-----------------------------------------------------
A brother from another mother
He got your back always when no one else did

A brother from another mother
He always there even when you are defeated

A brother from another mother
He reminded you of the lyrics to you favorite songs

A brother from another mother
He corrects you when you are wrong

A brother from another mother
He always there even when the world rejects you

A brother from another mother
Tells you that you are the best even when you are not

Even when you are in the mood of despondency
He gives u reason to keep your hopes alive

A brother from another mother
He is more than just a brother

~Azubuogu Chinwendu chukwudi