ಭಾನುವಾರ, ಆಗಸ್ಟ್ 30, 2020

ಸಿರಿಗೌರಿಯ ಸದಾಶಿವ-೪

 


ಅಶುತೋಷ್ ನಿಗೆ ಕ್ಷಣ ಕ್ಷಣವೂ ಯುಗದಂತೆ ಭಾಸವಾಗತೊಡಗಿತು. ಕಾಯುವಿಕೆಯ ಮೇಲೆಯಷ್ಟೇ ಸಮಯದ ಪರಿವೆಯ ನಿರ್ಧಾರ ಸಾಧ್ಯ. ತಕ್ಷಣವೇ ನಂದನ್ ಗೆ ಡಯಲ್ ಮಾಡಿದ.ನಂದನ್ ಹೇಳಿದ ಮಾತು ಕೇಳಿ ಅವನಿಗೆ ಹೃದಯವೇ ಬಾಯಿಗೆ ಬಂದಂತಾಯಿತು. 


ಅಪರ್ಣಾ ಅಲ್ಲಿಂದ ಹೊರಟ ನಂತರ ನಂದನ್ ಕೂಡಾ ಅವಳನ್ನು ಹಿಂಬಾಲಿಸಿದ. ಅಲ್ಲೇ ಹೊರಗೆ ವಾಚ್ ಮ್ಯಾನ್ ಜೊತೆಗೆ ಆಡುತ್ತಿದ್ದ ಅಥರ್ವನನ್ನು ಕರೆದುಕೊಂಡು ಹೊರಟಳು. 

ಅಥರ್ವ ಇಲ್ಲಿಗೆ ಮೊದಲ ಬಾರಿಗೆ ಬಂದದ್ದೇನೂ ಅಲ್ಲ. ಅಥರ್ವ ಬಂದಾಗಲೆಲ್ಲಾ ಆಡುತ್ತಿದ್ದದ್ದು ವಾಚ್ ಮ್ಯಾನ್ ಶಾಂತಪ್ಪನ ಜೊತೆಗೆ. ಅಥರ್ವ ಎಲ್ಲರಂತೆ ಸಾಮಾನ್ಯ ಮಗುವಲ್ಲ, ಅವನು ವಿಕಲ ಚೇತನ ಮಗು. ಅಥರ್ವನಿಗೆ ಬಲಗಾಲು ಊನವಾಗಿತ್ತು. ಎಲ್ಲರಂತೆ ನಡೆದುಕೊಂಡು, ಓಡಾಡಿಕೊಂಡು ಇರುವ ಭಾಗ್ಯ ಅವನಿಗಿರಲಿಲ್ಲ. ಅವನು ನಡೆದಾಡಬೇಕಿದ್ದಲ್ಲಿ ಮತ್ತೊಬ್ಬರ ಸಹಾಯ ಪಡೆಯಬೇಕಿತ್ತು. ಈಗಷ್ಟೇ ಕೆಲ ದಿನಗಳ ಹಿಂದೆ ಅವನಿಗೆ ಆಪರೇಷನ್ ಕೂಡಾ ಆಗಿತ್ತು. ಅವನು ಸ್ವತಃ ನಡೆದಾಡಬಲ್ಲನಾದರು ಕೊಂಚ ಕುಂಟುವಿಕೆ ಇದ್ದೇ ಇತ್ತು. ಐದಾರು ವರ್ಷದ ಪುಟ್ಟ ಮಗುವನ್ನು ಆ ಸ್ಥಿತಿಯಲ್ಲಿ ನೋಡುವುದು ಎಲ್ಲರಿಗೂ ಮರುಕ ಹುಟ್ಟುವಂತಿತ್ತು. 

ಅಪರ್ಣ ಅಥರ್ವನನ್ನು ಕಂಡದ್ದು "ಕರುಣಾಳು" ಎಂಬ ಅನಾಥಾಶ್ರಮದಲ್ಲಿ. "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ನಡೆಸುತ್ತಿದ್ದ ಅನಾಥ ಮಕ್ಕಳ ಮತ್ತು ವೃದ್ದಾಶ್ರಮದ ಸಂಸ್ಥೆ ಅದು. "ಕರ್ಮಭೂಮಿ"ಯ ಹಲವಾರು ಸಾಮಾಜಿಕ ಕಳಕಳಿಯ ಸೇವೆಗಳಲ್ಲಿ ಅದು ಕೂಡಾ ಒಂದು. ಅಪರ್ಣಾ ಒಮ್ಮೆ "ಕರುಣಾಳು" ಆಶ್ರಮಕ್ಕೆ ಹೋದಾಗ ಅಲ್ಲಿ ಕಂಡದ್ದು ಅಥರ್ವನನ್ನು. ಅವಳು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿದಾಗ ಅಲ್ಲೊಂದು ಒಂದೂವರೆ-ಎರಡು ವರ್ಷದ ಪುಟ್ಟ ಕಂದ ತೆವಳುತ್ತಾ ಕೂತಿತ್ತು. ಅಲ್ಲಿ ಮೇಲೆ ತೂಗು ಹಾಕಿದ್ದ ಕನ್ನಡಿಯಲ್ಲಿ ಅವನ ಬಿಂಬವನ್ನು ಅವನೇ ಕಾಣುವಾಸೆ. ಆದರೆ ಎದ್ದು ನಿಲ್ಲಲಾಗದ್ದು, ಬಂದವರತ್ತ ದೈನ್ಯದಿಂದ ಎತ್ತಿಕೋ ಎಂದು ಕೈ ಚಾಚುತ್ತಿದ್ದ. ಅಪರ್ಣಾಳೊಳಗಿದ್ದ ಮಾತೃ ವಾತ್ಸಲ್ಯ ಜಾಗೃತವಾದ ಹೊತ್ತು. ಅಶುತೋಷ್ ನೊಡನೆ ಮದುವೆಯಾಗಿ ಕಳೆದದ್ದು ಆರು ತಿಂಗಳಷ್ಟೇ.. ಯಾಕೋ ಈ ಮಗುವನ್ನು ತನ್ನ ಮಗುವನ್ನಾಗಿ ಸಾಕಬೇಕು ಎನ್ನಿಸಿಬಿಟ್ಟಿತ್ತು. ಅವನ ತೊದಲು ನುಡಿ, ಮುಗ್ಧತೆ ಎಲ್ಲವೂ ಅವಳನ್ನು ಸೆಳೆದಿತ್ತು.

ಅವನು "ಕರುಣಾಳು"ವಿಗೆ ಬಂದು ಒಂದೂವರೆಯಿಂದ ಎರಡು ವರ್ಷ ಕಳೆದಿತ್ತು. ಪಕ್ಕದ ಬೀದಿಯ ಕಸದ ತೊಟ್ಟಿಯ ಪಕ್ಕದಲ್ಲಿ ಕಣ್ಣೇ ಬಿಟ್ಟಿರದ ಕಂದ ಅಳುತ್ತಿತ್ತು. ಅದರ ಧ್ವನಿ ಅತ್ತೂ ಅತ್ತೂ ಉಡುಗಿ ಹೋಗಿತ್ತು. ಯಾವ ಪಾಪಿಯ ಹೊಟ್ಟೆಯಲ್ಲಿ ಹುಟ್ಟಿತ್ತೋ ಆದರೆ ಪುಣ್ಯವಂತರ ಮನೆ ಸೇರುವ ಭಾಗ್ಯವಿತ್ತು ಎನ್ನಿಸುತ್ತದೆ. ಬೀದಿ ನಾಯಿಗಳ ಕಾಟ ಜೋರಾಗಿದ್ದ ಕಾಲ, ಆದರೆ ಮಗುವಿನ ಅದೃಷ್ಟವೋ ಏನೋ ಮಗುವಿಗೆ ಏನೂ ಆಗಿರಲಿಲ್ಲ. "ಕರುಣಾಳು" ಆಶ್ರಮದ ವೃದ್ದಾಶ್ರಮದಲ್ಲಿದ್ದ ವೃದ್ಧರೊಬ್ಬರಿಗೆ ಬೆಳ್ಳಂಬೆಳಗ್ಗೆ ವಾಕ್ ಹೋಗುವ ಅಭ್ಯಾಸವಿತ್ತು. ಅವರ ಕಣ್ಣಿಗೆ ಬಿದ್ದಿದ್ದ ಈ ಮಗು ಅನಾಥಾಶ್ರಮದಲ್ಲಿ ಬೆಳೆಯುತ್ತಿತ್ತು. ಅಕ್ರಮ ಸಂತಾನದ ಫಲವೋ, ತಾಯಿಗೆ ಯಾವ ಕಷ್ಟವೋ ತಾಯಿ ಮಡಿಲಿನಿಂದ ಹೊರ ದಬ್ಬಲ್ಪಟ್ಟಿದ್ದ. ಹೆಣ್ಣು ಮಕ್ಕಳು ಪೋಷಣೆಗೆ ಕಷ್ಟವಾಗಬಹುದೆಂದು ಹಲವರು ಹೆಣ್ಣು ಮಕ್ಕಳನ್ನು ಹೀಗೆ ಬೀದಿಗೆ ಬಿಸಾಡುವುದುಂಟು. ಆದರೆ, ಈ ಮಗು ಯಾವ ಕಾರಣಕ್ಕೆ ಹೀಗೆ ಬೀದಿಗೆ ಬಿದ್ದಿತ್ತೋ ಗೊತ್ತಿಲ್ಲ, ಕಾಲಿನ ಉನವೂ ಕಾರಣವಾಗಿರಬಹುದು. ಹಲವಾರು ಜನರು ಅಲ್ಲಿಂದ ಮಕ್ಕಳನ್ನು ದತ್ತು ಪಡೆಯಲು ಬಂದಿದ್ದರು. ಹಲವಾರು ಜನರು ಈಗೀಗ ಹೆಣ್ಣು ಮಕ್ಕಳನ್ನು ದತ್ತು ಪಡೆಯಲಿಚ್ಛಿಸುತ್ತಾರೆ. ಅವನ ಓರಗೆಯ ಮಕ್ಕಳೆಲ್ಲಾ ಒಂದು ನೆಲೆ ಕಂಡರೂ ಇವನು ಇಲ್ಲೇ ಉಳಿದು ಬಿಟ್ಟ. ಕಾಲಿನ ಊನ ಕೂಡಾ ಅದಕ್ಕೆ ಕಾರಣವಾಗಿತ್ತೋ ಏನೋ. ಕೆಲವೊಮ್ಮೆ ಅದೃಷ್ಟ ತಡವಾಗಿ ಬಾಗಿಲು ಬಡಿಯುತ್ತದೆ ಕಾಯುವ ತಾಳ್ಮೆ ಇರಬೇಕಷ್ಟೇ.. ಅವನ ಅದೃಷ್ಟ ಅಪರ್ಣಾಳ ರೂಪದಲ್ಲಿತ್ತು.

ನೋಡಿದವರಿಗೆ ಇದೆಂತಹಾ ಹುಚ್ಚು ಆಸೆ ಎನ್ನಿಸಬಹುದು, ತಮಗೆ ಮಕ್ಕಳಾಗುವ ಹೊತ್ತಲ್ಲಿ ಈ ಮಗು ಬೇಕಾ ? ಎಂಬ ಭಾವ ಮೂಡುವುದಂತೂ ಸುಳ್ಳಲ್ಲ. ಆದರೆ, ಅಪರ್ಣಾಳ ಅತ್ತೆ-ಮಾವ ಉದಾರ ಹೃದಯವರು. ಹಣದಲ್ಲಿ ಮಾತ್ರವಲ್ಲ ಗುಣದಲ್ಲಿಯೂ ಸಿರಿವಂತರೇ.. ಎಂಬುದನ್ನು ನಿರೂಪಿಸಿಬಿಟ್ಟರು. ಆದರೆ, ಅಶುತೋಷ್ ನಿಗೆ ಆಗಲೇ ಯಾಕೋ ಈ ವಿಚಾರದಲ್ಲಿ ಕೊಂಚ ವಿರೋಧವಿದ್ದಂತಿತ್ತು. ದತ್ತು ಮಗುವಿನ ಅವಶ್ಯಕತೆ ಇಲ್ಲ ಎಂಬ ಧಾಟಿಯಲ್ಲಿ ಅವನಿದ್ದ. ಬಾಯಿ ಬಿಟ್ಟು ಏನನ್ನೂ ಆಡದಿದ್ದರೂ, ಅವನ ಚರ್ಯೆಯಲ್ಲಿ ಅದೇಕೋ ಅಪಶೃತಿ ಇತ್ತು. ಪುಟ್ಟ ಕಂದ ಮನೆಗೆ ಬಂದ ನಂತರ ಮನೆಯ ವಾತಾವರಣ ಬದಲಾಗಿ ಹೋಯಿತು. ಅವನಿಗೆ "ಅಥರ್ವ" ಎಂಬ ನಾಮಕರಣ ನಡೆಯಿತು. ಅಶುವಿನ ಚರ್ಯೆಯೂ ಬದಲಾಯಿತು. ಪುಟ್ಟ ಅಥರ್ವನೊಂದಿಗೆ ಕಾಲ ಕಳೆಯುವಾಗಲೆಲ್ಲಾ  ಅವನ ಮುಖದಲ್ಲಿ ಯಾವುದೋ ಅವ್ಯಕ್ತ ನೋವಿನ ಛಾಯೆಯಿತ್ತು.

ಅಥರ್ವ ಕೆಲ ಸಂಧರ್ಭದಲ್ಲಿ, ಕಾರ್ಯಕ್ರಮಗಳಲ್ಲಿ ಅಥವಾ ಅಶುತೋಷ್ ಅಪರ್ಣರೊಂದಿಗೆ "ಕರ್ಮಭೂಮಿ"ಗೆ ಬರುವುದಿತ್ತು. ಅವನಿಗೆ ಕಚೇರಿಯಲ್ಲಿ ಹಿಡಿದಿಟ್ಟ ವಾತಾವರಣ ಬೇಕಿರಲಿಲ್ಲ, ಬೆಳೆಯುವ ಮಕ್ಕಳು ಸ್ವಾತಂತ್ರ್ಯ ಬಯಸುತ್ತಾರೆ, ಅದರಲ್ಲೂ ಇತರರೊಂದಿಗೆ ಬೆರೆಯುವ, ಆಟವಾಡುವ ಇಚ್ಛೆ ಹೊಂದಿರುತ್ತಾರೆ. ಅಥರ್ವನಿಗೆ ಆ ಅನುಕಂಪದ ನೋಟ, ಸಿರಿವಂತಿಕೆಯ ಆವರಣದಿಂದ ಈಚೆ ಬರಬೇಕಿತ್ತು. ಆತ ಇಲ್ಲಿಗೆ ಬಂದಾಗಲೆಲ್ಲಾ ಆಡುತ್ತಿದ್ದದ್ದು ವಾಚ್ ಮ್ಯಾನ್ 'ಶಾಂತಪ್ಪ'ನೊಂದಿಗೆ. ಅಜ್ಜನ ಜೊತೆ ಮನೆಯಲ್ಲಿ ಆಟವಾಡಿ ರೂಢಿಯಾಗಿದ್ದ ಅವನು, ಅವರದೇ ವಯಸ್ಸಿನವರಾದ ಶಾಂತಪ್ಪನವರೊಟ್ಟಿಗೆ ಸುಲಭವಾಗಿ ಬೆರೆತು ಆಡುತ್ತಿದ್ದ. ಅವರೂ ಮಗುವಿನೊಟ್ಟಿಗೆ ಮಗುವಿನಂತಾಗಿ ಬಿಡುತ್ತಿದ್ದರು.

ಪ್ರತಿಬಾರಿಯಂತೆ ಈ ಬಾರಿಯೂ ಅಥರ್ವ ಅಪರ್ಣಾಳೊಟ್ಟಿಗೆ ಹೊರಟ. ಪ್ರತಿಬಾರಿಯಂತೆ ಈ ಬಾರಿ ಕಾರ್ ಇರಲಿಲ್ಲ. ಇಬ್ಬರೂ ನಡೆದೇ ಗೇಟ್ ದಾಟಿದರು. ಅಥರ್ವನಿಗೆ ಕುತೂಹಲ ಹೆಚ್ಚಾಗಿ "ಯಾಕಮ್ಮಾ, ಇವತ್ತು ಕಾರ್ ರಿಪೇರಿಗೆ ಹೋಗಿದೆಯಾ? ಆಟೋದಲ್ಲಿ ಮನೆಗೆ ಹೋಗೋದಾ?" ಎಂದದ್ದಕ್ಕೆ ಅವಳಿಗೆ ಏನು ಹೇಳಬೇಕೆಂದು ತೋಚದೆ "ನಿನಗೆ ಐಸ್ಕ್ರೀಂ ಅಂದರೆ ಇಷ್ಟ ಅಲ್ವಾ..? ಅದಕ್ಕೆ ಇಲ್ಲೇ ಹತ್ತಿರದಲ್ಲಿರೋ ಐಸ್ಕ್ರೀಂ ಪಾರ್ಲರ್ ನಲ್ಲಿ ಐಸ್ಕ್ರೀಂ ತಿನ್ನಿಸೋಣ" ಅಂತಾ ಹೇಳಿದಳು. ಖುಷಿಯಿಂದ ಅವಳೊಟ್ಟಿಗೆ ಹೆಜ್ಜೆ ಹಾಕುತ್ತಿದ್ದ ಅಥರ್ವ ಯಾವುದೋ ಮಾಯೆಯಲ್ಲಿ ಅವಳ ಕೈ ಬಿಡಿಸಿಕೊಂಡು ರಸ್ತೆಗಿಳಿದುಬಿಟ್ಟ. ಆಗಲೇ ಅಲ್ಲಿ ಬರುತ್ತಿದ್ದ ಕಾರಿಗೆ ಸಿಲುಕುವವನಿದ್ದ, ಅಷ್ಟರಲ್ಲಿ ಯಾರೋ ಅವನನ್ನು ದೂಡಿ ತಾನು ಕಾರಿಗೆ ಸಿಲುಕಿದ್ದ, ಆ ಪುಟ್ಟ ಹುಡುಗನೊಡನೆ ಮತ್ತೊಬ್ಬ ಹುಡುಗಿಯೂ ಇದ್ದಳು. ಆ ಕಾರು ಮೈನಾವತಿಯವರದ್ದು. ಎಲ್ಲವೂ ಕಣ್ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ನಡೆದು ಹೋಗಿತ್ತು. 

ಕಾರಿನಿಂದ ಇಳಿದ ಮೈನಾವತಿಯವರು ಅಪರ್ಣಾಳನ್ನು, ಅಥರ್ವನನ್ನು ನೋಡಿ ಗಾಬರಿಯಾದರು. ಅವರನ್ನು ಮತ್ತಷ್ಟು ಗಾಬರಿಗೊಳಪಡಿಸಿದ್ದು ಆ ಮಕ್ಕಳು.
"ಸ್ಕಂದ..... ಸುಕ್ಷಿತ..." ಎಂದು ಕೂಗಿಕೊಂಡವರೇ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟರು.

ಅಪರ್ಣಾಳಿಗೆ ಎಲ್ಲವೂ ಅಯೋಮಯ. ಮೈನಾವತಿ ಅಮ್ಮನನ್ನು ಅಲ್ಲಿ ನೋಡಿದವಳಿಗೆ ಆಶ್ಚರ್ಯವಾಗಿತ್ತು. ಆದರೆ, ಅದೆಲ್ಲವನ್ನು ಯೋಚಿಸುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಅಥರ್ವನಿಗೆ ತರಚು ಗಾಯಗಳಾಗಿದ್ದವು ಅಷ್ಟೇ.. ಆದರೆ, ಸ್ಕಂದ ರಕ್ತದ ಮಡುವಲ್ಲಿದ್ದ, ಸುಕ್ಷಿತ ಕೂಡಾ ಪ್ರಜ್ಞೆ ತಪ್ಪಿದ್ದಳು. ಯಾರನ್ನು ಸಂಭಾಳಿಸುವುದೋ ತಿಳಿಯದಿರುವಾಗ ಸಂಧರ್ಭವನ್ನು ಚಾಕಚಕ್ಯತೆಯಿಂದ ನಿಭಾಯಿಸಿದ್ದ ನಂದನ್. ತಕ್ಷಣವೇ ಆಸ್ಪತ್ರೆಗೆ ಕರೆ ಮಾಡಿ ambulance ಅನ್ನು ಕರೆಸಿದ್ದ. ಆವರದ್ದೇ ಆಸ್ಪತ್ರೆ "ಕಾರುಣ್ಯ"ದಲ್ಲಿ ಸ್ಕಂದನ ಚಿಕಿತ್ಸೆಗೆ ಎಲ್ಲವೂ ತಯಾರಾಗಿತ್ತು.

ತಕ್ಷಣವೇ ನಂದನ್ ಕರೆಮಾಡಿ ಎಲ್ಲವನ್ನೂ ಅಶುತೋಷ್ ಗೆ ತಿಳಿಸಿದ್ದ.

ಸ್ಕಂದ ಅಲ್ಲಿಗೆ ಯಾಕೆ ಬಂದ? ಹೇಗೆ ಬಂದ? ಅಪರ್ಣಾ ಮೈನಾ ಅಮ್ಮನನ್ನು ನೋಡಿದ್ದಾಳೆ. ಯಾವ ಸತ್ಯವನ್ನು ಅವಳಿಂದ ಇಷ್ಟು ದಿನ ಮುಚ್ಚಿಟ್ಟಿದ್ದೇನೋ ಅದು ತಾನಾಗಿಯೇ ಅವಳ ಮುಂದಿದೆ. ಈಗೇನು ಮಾಡುವುದು ? ತಲೆಬಿಸಿಯಲ್ಲಿದ್ದ ಅಶುತೋಷ್ ನ ಮೊಬೈಲ್ ಮತ್ತೆ ರಿಂಗಣಿಸತೊಡಗಿತು

(ಸಶೇಷ)

(ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪ್ರತಿಕ್ರಿಯೆಗಳೇ ಸ್ಫೂರ್ತಿ)

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 23, 2020

ಸಿರಿಗೌರಿಯ ಸದಾಶಿವ-೩


 ನಂದನ್ ಡೈರಿಯನ್ನು ಮುಚ್ಚಿಟ್ಟು ನಿರಾಳನಾದ. ಆದರೂ, ಏಕೋ ರೂಮ್ ನ ಒಳಗೆ ಇರಲಾಗದೆ, ರೂಮ್ ಹೊರಗೆ ಅಂಟಿಕೊಂಡಂತಿದ್ದ ಬಾಲ್ಕನಿಗೆ ಬಂದು ನಿಂತ. ಬಾಲ್ಕನಿಯಲ್ಲಿ ಪುಟ್ಟ ಪುಟ್ಟ ಹೂ ಕುಂಡದಲ್ಲಿ ಹೂಗಳು ಅರಳಿ ನಗುತ್ತಿದ್ದವು. ಅಲ್ಲಿ ಇದ್ದದ್ದು ಬೆತ್ತದ ತೂಗುಮಂಚ. ಅಪರ್ಣಾಳೆ ಅಲ್ಲಿ ಕುಳಿತಂತೆ ಭಾಸ. ಅಲ್ಲಿ ಕುಳಿತು ಪುಸ್ತಕ ಓದುವುದು ಅವಳ ಮೆಚ್ಚಿನ ಹವ್ಯಾಸದಲ್ಲಿ ಒಂದು. ಅವಳ ಬೇಜಾರನ್ನು ಹೋಗಲಾಡಿಸಿಕೊಳ್ಳುವ ಸ್ಥಳ ಕೂಡಾ ಅದೇ. ಅಲ್ಲಿಯೇ ಕುಳಿತು ಅವಳು ಅವಳ ಡೈರಿ ಬರೆಯುತ್ತಿದ್ದದ್ದು. ಒಂದು ದಿನವೂ ಅಶುತೋಷ್ ಅದನ್ನು ಓದಿರಲಿಲ್ಲ.ಅಷ್ಟಕ್ಕೂ, ಅಶುತೋಷ್ ಗೆ ಡೈರಿ ಬರೆಯುವ ಹವ್ಯಾಸವನ್ನು ರೂಢಿ ಮಾಡಿಸಿದ್ದು ಸಹಾ ಅವಳೇ. ಇಬ್ಬರೂ ಸಹಾ ಒಬ್ಬರ ಬದುಕಲ್ಲಿ ಮತ್ತೊಬ್ಬರು ಮೂಗು ತೂರಿಸುವ ರೂಢಿಯನ್ನಿಟ್ಟುಕೊಂಡಿರಲಿಲ್ಲ.


ಒಬ್ಬರ ಗುಟ್ಟುಗಳು ಮತ್ತೊಬ್ಬರಿಗೆ ಗೊತ್ತಿದ್ದರೂ ಸಹಾ ರಟ್ಟಾಗದಂತೆ ಗೌಪ್ಯ ವಹಿಸುತ್ತಾ ಕಾಪಾಡುವುದು ಡೈರಿ ಮಾತ್ರವೇ. ದಾಂಪತ್ಯದಲ್ಲಿ ಗುಟ್ಟುಗಳೇ ಇರಬಾರದೆನ್ನುತ್ತಾರೆ. ಗುಟ್ಟುಗಳೇ ಇಲ್ಲದ ಬದುಕಲ್ಲಿ ಸ್ವಾರಸ್ಯವಿರಲಾರದು. ದಾಂಪತ್ಯದಲ್ಲಿ ಗುಟ್ಟುಗಳಿದ್ದರೂ, ಅಂತರವಿರಬಾರದು. ಆಂತರ್ಯದ ಅಂತರಗಳು ಅನುರಾಗವನ್ನು ಕೊಲ್ಲುತ್ತವೆ. ಅಪರ್ಣಾ ಕೇಳಬೇಕೆಂದುಕೊಂಡ ಎಷ್ಟೋ ಪ್ರಶ್ನೆಗಳಿಗೆ ಅವಳು ಕೇಳುವ ಮೊದಲೇ ಉತ್ತರಿಸಿದ್ದೇನೆ. ನನ್ನ ಎಷ್ಟೋ ಗೊಂದಲಗಳಿಗೂ ಅವಳು ನನ್ನ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಂಡಂತೆ ಉತ್ತರಿಸಿದ್ದಾಳೆ. ಅನುರೂಪದ ದಾಂಪತ್ಯ ನಮ್ಮದು ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ಎಲ್ಲಾ ದಾಂಪತ್ಯದಲ್ಲಿಯೂ ಈ ಅನುರಾಗದ ಅಪಸ್ವರ ಮೂಡಿರಬಹುದೇ..? ಎಲ್ಲಾ ಅಪಸ್ವರವನ್ನು ಸುಸ್ವರ ಮಾಡಿಕೊಳ್ಳುವ ಕಲೆ ನಮಗೆ ತಿಳಿದಿರಬೇಕು. ಅಲ್ಲವೇ..? ಅಪರ್ಣಾಳನ್ನೇ ನೆನಪಿಸಿಕೊಂಡು ಬೆತ್ತದ ತೂಗುಯ್ಯಾಲೆಯಲ್ಲಿ ಕುಳಿತು ಮನಸ್ಸಿನಲ್ಲೇ ಮಂಥನ ಮಾಡಿಕೊಳ್ಳುತ್ತಿದ್ದ ಅಶುತೋಷ್. ಯಾವುದೋ ಆಲೋಚನೆಯಲ್ಲಿ ಪಕ್ಕದಲ್ಲೇ ಕೈಯಿಟ್ಟರೆ ಐದಾರು ಪುಸ್ತಕಗಳ ರಾಶಿ ಅಲ್ಲಿತ್ತು.

ಆ ಪುಸ್ತಕಗಳ ರಾಶಿಯಲ್ಲೇ ಬೆಚ್ಚಗೆ ಮಲಗಿತ್ತು ಅಪರ್ಣಾಳ ಡೈರಿ. ಒಮ್ಮೆ ಅಶುತೋಷ್ ಮನಸ್ಸಲ್ಲಿ ಸಂತೋಷದ ಅಲೆ ಎದ್ದಿತು. ಆದರೆ, ಮರುಕ್ಷಣವೇ ಮನಸ್ಸಿನಲ್ಲಿ ಗೊಂದಲದ ಭಾವ. ಮತ್ತೊಬ್ಬರ ಡೈರಿಯನ್ನು ಓದುವುದೋ, ಬೇಡವೋ ಎಂಬ ಸಂದಿಗ್ಧತೆ. ತನ್ನ ಕುರಿತು ಅವಳು ಏನು ಬರೆದಿರಬಹುದು ಎಂಬ ಕುತೂಹಲ. ಕುತೂಹಲ ಮತ್ತು ಸಂಧಿಗ್ಧತೆಯ ನಡುವಿನ ಯುದ್ಧದಲ್ಲಿ ಗೆದ್ದದ್ದು ಕುತೂಹಲ. ಮೊದಲ ಪುಟ ತೆರೆದ. ಮುದ್ದಾದ ಬರಹ

"ಬದುಕು ಮತ್ತು ಮನಸ್ಸಿನ ಪರಿಶುದ್ಧತೆ ಪಕ್ವವಾಗಿರುವುದು ಪರಿಸರದಲ್ಲಿ. ಪರಿಸರ ಎಂದರೆ ನನಗೆ ನೆನಪಾಗುವುದು ನನ್ನ "ವಸುಂಧರಾ ಎಸ್ಟೇಟ್". ವಸುಂಧರೆಯ ಮೋಹ ಬಿಡದೆ ಕಾಡುವುದು ಸೀತೆಯನ್ನು ಮಿಥಿಲೆಯ ಮಣ್ಣು ಕಾಡಿದಂತೆ... ಎಷ್ಟಾದರೂ ತವರು ಜಗತ್ತಿನ ಎಲ್ಲಾ ಸ್ಥಳಗಳಿಗಿಂತ ನೆಮ್ಮದಿ ನೀಡುತ್ತದೆ ಹಾಗೂ ಕಾಡುತ್ತದೆ. ಬೆಂಗಳೂರಿನ ಪರಿಸರಕ್ಕೆ ಹೊಂದಿಕೊಳ್ಳಲು ಆಗುತ್ತದೋ ಇಲ್ಲವೋ ಎಂಬ ಆಲೋಚನೆಯಲ್ಲಿಯೇ ಬಂದವಳನ್ನು ಬೆಂಗಳೂರು ತೆರೆದ ಮನಸ್ಸಿನಿಂದ ಸ್ವಾಗತಿಸಿತು. "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ಗೂ ಅಂತಹಾ ವ್ಯತ್ಯಾಸವೇನೂ ನನಗೆ ಕಾಣಲಿಲ್ಲ. ಸಾಫ್ಟ್ ವೇರ್ ಕಂಪನಿಯಲ್ಲಿ ವಸುಂಧರೆ ನಳನಳಿಸುತ್ತಿದ್ದಳು. "ಪ್ರಾಜೆಕ್ಟ್ ಗ್ರೀನ್(Project Green)" ಗಾಗಿ ನಾನು ಹಾಸನದ ಬ್ರಾಂಚ್ ನಿಂದ ಇಲ್ಲಿಗೆ ವರ್ಗಾಯಿಸಲ್ಪಟ್ಟಿದ್ದೆ. "ಪ್ರಾಜೆಕ್ಟ್ ಗ್ರೀನ್" ನನ್ನ ಕನಸಿನ ಕೂಸು. ಅದರ ಸಾಕಾರಕ್ಕೆ ಇದೇ ಸರಿಯಾದ ಸ್ಥಳ ಎಂದು ನಿರ್ಧರಿಸಿಬಿಟ್ಟೆ. ಅಲ್ಲಿ ಬಂದ ಮೊದಲ ದಿನ ನನಗೆ ಪರಿಚಯವಾದದ್ದು "ಕಾತ್ಯಾಯಿನಿ".

ಕಾತ್ಯಾಯಿನಿಯ ಹೆಸರನ್ನು ನೋಡಿದ ಮರುಕ್ಷಣವೇ ಅಶುತೋಷ್ ಗೆ ಮರೆತಂತಿದ್ದದ್ದೆಲ್ಲಾ ನೆನೆಪಾಯಿತು. ಸುಮ್ಮನೆ ಡೈರಿ ಮುಚ್ಚಿಟ್ಟು ಕುಳಿತ. ನಭದ ನಕ್ಷತ್ರವಾಗಿದ್ದ ಕಾತ್ಯಾಯಿನಿಯನ್ನು ಒಮ್ಮೆ ನಿಟ್ಟುಸಿರಿಟ್ಟು ನೆನೆದು ಆಗಸದತ್ತ ನೋಡಿದ. ಗಟ್ಟಿಯಾಗಿ ಒಮ್ಮೆ ಕಿರುಚಬೇಕೆನಿಸಿತ್ತು "ಕಾತ್ಯಾಯಿನಿ...." ಎಂದು. ಮನಸ್ಸಿನಲ್ಲಿ ಮತ್ತೆ ಮತ್ತೆ ಅವಳ ಹೆಸರನ್ನು ಕನವರಿಸಿದ. ಆಗಸದಲ್ಲಿನ ತಾರೆಯೊಂದು ಅವನ ಮನಸ್ಸಿನ ಕೂಗಿಗೆ ಸ್ಪಂದಿಸಿತೇನೋ ಎಂಬಂತೆ ಮಿನುಗಿತು. ಆಗ ಅಂದಿನ ತಾರೀಖನ್ನು ತಟ್ಟನೆ ನೆನಪಿಸಿಕೊಂಡ. "ಅಯ್ಯೋ, ಇಂದಿನ ದಿನವನ್ನು ನಾನು ಮರೆತದ್ದಾದರೂ ಹೇಗೆ..? ಅವಳು ನಮ್ಮನ್ನೆಲ್ಲಾ ಆಗಲಿ ಇಂದಿಗೆ ಐದು ವರ್ಷ. ಅಲ್ಲವೇ.. ?" ಎಂದು ಅವನ ಮೊಬೈಲ್ ಅನ್ನು ಹುಡುಕುತ್ತಾ ಒಳ ಬಂದ.

ಯಾಕೋ ಮನಸ್ಸಿನ್ನಲ್ಲಿ ದುಗುಡವನ್ನೆಲ್ಲಾ ಹೊತ್ತು ಒಳ ಬಂದವನಿಗೆ ಕಂಡದ್ದು ಗೋಡೆಯ ಮೇಲೆ ತೂಗು ಹಾಕಿದ್ದ "ಕಾತ್ಯಾಯಿನಿ"ಯ ದೊಡ್ಡ ಭಾವಚಿತ್ರ. ಅಪರ್ಣಾ ಹೋಗುವ ಮುನ್ನ ಹೊಸದೊಂದು ಹೂ ತಂದಿಟ್ಟಿದ್ದಳು. ಅಪರ್ಣಾ ಹಾಗೆಯೇ ಅಲ್ಲವೇ..? ಎಂತದ್ದೇ ಕೋಪವಿದ್ದರೂ, ಮುನಿಸಿದ್ದರೂ ತನ್ನ ಕೆಲಸವನ್ನು ಮರೆಯಲಾರಳು. ಯಾಕೋ ಕಾತ್ಯಾಯಿನಿ ಅಣಕಿಸಿ ನಕ್ಕಂತಾಯಿತು.

ಅವಳ ಭಾವಚಿತ್ರದ ಪಕ್ಕದಲ್ಲಿದ್ದ ಸಾಲುಗಳನ್ನೊಮ್ಮೆ ಓದಿದ. 
ದೇಹ ಮರೆಯಾಗಿರಬಹುದು
ಚೇತನವಿನ್ನೂ ಹಾಗೇ ಉಳಿದಿದೆ
ಭಾವಗಳ ಉಸಿರು ಅಲೆಅಲೆಯಾಗಿ
ಎದೆಯಂಗಳದ ಒಲವ ಸೇರಿದೆ
ಒಲವ ಲಾಲಿಯ ಹಾಡುತ್ತಲೇ ಇರುವೆ
ನಿನ್ನ ಎದೆಯ ಮಾತನ್ನೊಮ್ಮೆ ಆಲಿಸು
ಕಣ್ಮುಚ್ಚಿ ಮಲಗಿರಬಹುದು
ಭೂ ತಾಯಿಯ ಮಡಿಲಲ್ಲಿ
ಪ್ರತಿ ಕ್ಷಣವೂ ಜೀವದಂತಿರುವೆ
ನಿನ್ನೆದೆಯ ಒಲವಲ್ಲಿ, ಭಾವದೋಕುಳಿಯಲ್ಲಿ

ಅಪರ್ಣಾಳೇ ಬರೆದು, ಕಾತ್ಯಾಯಿನಿಯ ಭಾವಚಿತ್ರದ ಜೊತೆ ಅಚ್ಚು ಮಾಡಿಸಿದ್ದ ಸಾಲುಗಳು. ಒಬ್ಬಳು ಜೀವಂತ ಸ್ಫೂರ್ತಿ, ಮತ್ತೊಬ್ಬಳು ಒಲುಮೆಯ ಚಿಲುಮೆ. 

ಮೊಬೈಲ್ ಸದ್ದಾದಂತಾಗಿ ನೋಡಿದರೆ, 20 ಮಿಸ್ ಕಾಲ್ ಗಳಿದ್ದವು. ಮೈನಾ ಅಮ್ಮನ ಕಾಲ್ ಗಳು 19. ಮತ್ತೊಂದು ನಂದನ್ ನದ್ದು. ಮೊದಲು ಯಾರಿಗೆ ಮಾಡಲಿ ಎಂದು ಆಲೋಚಿಸುತ್ತಿರುವಾಗಲೇ ಕಾತ್ಯಾಯಿನಿಯ ನೆನಪಾಗಿ ಮೈನಾ ಅಮ್ಮನ ಮೊಬೈಲ್ಗೆ ಕರೆ ಮಾಡಲು ನಿರ್ಧರಿಸಿ ಮೈನಾವತಿಯ ಮೊಬೈಲ್ ಗೆ ಕರೆ ಮಾಡಿದ. ಐದಾರು ಬಾರಿ ರಿಂಗಣಿಸಿದರೂ ಕರೆ ಸ್ವೀಕರಿಸದಿದ್ದಕ್ಕೆ ಲ್ಯಾಂಡ್ ಲೈನ್ ಗೆ ಕರೆ ಮಾಡಿದ. ಕರೆ ಸ್ವೀಕರಿಸಿದ್ದು ಕುಡಿದ ಮತ್ತಿನಲ್ಲಿದ್ದ "ವಿರಾಜ್". ಧ್ವನಿ ಕೇಳಿಯೇ ಅಶುತೋಷ್ ಗೆ ಮೈಯೆಲ್ಲಾ ನಖಶಿಕಾಂತ ಉರಿದಂತಾಯಿತು. ಕರೆ ತುಂಡರಿಸಿದವನಿಗೆ ನೆನಪಾದದ್ದು ಅದೇ ಮನೆಯಲ್ಲಿ ವಾಚ್ ಮ್ಯಾನ್ ಆಗಿದ್ದ "ಸುಂದ್ರಪ್ಪ". ತಕ್ಷಣವೇ ಡಯಲ್ ಮಾಡಿದ. ಸುಂದ್ರಪ್ಪ ಹೇಳಿದ ಮಾತು ಕೇಳಿ ಅಶುತೋಷ್ ಗೆ ಗಾಬರಿಯಾಯಿತು. "ಅಮ್ಮಾವ್ರು ನಿಮ್ಮ ಮನೆಗೇ ಹೋಗುತ್ತೇನೆ ಎಂದು ಹೊರಟು ಒಂದು ಗಂಟೆಯಾಯಿತು. ಇನ್ನೂ ಬಂದಿಲ್ಲವಾ..? ಇನ್ನೇನು ಬರಬಹುದು" ಎಂದೇಳಿ ಕರೆ ತುಂಡರಿಸಿದ. 


ಇತ್ತ ನಂದನ್ ನ ಕರೆ ಸತತವಾಗಿ ಬರುತ್ತಲೇ ಇತ್ತು. ತಕ್ಷಣವೇ ಸ್ವೀಕರಿಸಿದ. "ಹಲೋ ಅಶು, ಇಲ್ಲಿ accident.." ಎಂದು ಮಾತನಾಡುತ್ತಿರುವಾಗಲೇ ಕಾಲ್ ಕಟ್ ಆಗಿತ್ತು. ಅಶುತೋಷ್ ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಗಾಬರಿಯಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೊರಟ. ಅಪರ್ಣಾಳ ಮೇಲೆ ಅವನು ಎಷ್ಟು ಅವಲಂಬಿತನಾಗಿದ್ದ ಎಂದು ಅವನಿಗೆ ಅರಿವಾಗುತ್ತಲಿತ್ತು. ಅವಳಿದ್ದಾಗ ಮೊಬೈಲ್ ಚಾರ್ಜ್ ಹಾಕಲು ಕೂಡಾ ಅವಳೇ ನೆನಪಿಸುತ್ತಿದ್ದಳು. ಆದರೆ, ಈಗ...?

ಅಪ್ಪ, ಅಮ್ಮ ಮನೆಗೆ ಬಂದಿಲ್ಲ, ಅಪರ್ಣಾ, ಅಥರ್ವನಿಗೇನಾದರೂ ಆಯಿತೇ..? ಮೈನಾ ಅಮ್ಮ ಕೂಡಾ ಇನ್ನೂ ತಲುಪಿಲ್ಲ. ವಾಸ್ತವದ ಬಿಸಿ, ಕೆಟ್ಟ ಆಲೋಚನೆಗಳ ಮಧ್ಯೆ ಬಂಧಿಯಾಗಿದ್ದ ಅಶುತೋಷ್

*********

ಇತ್ತ ಮನೆಗೆ ಬಂದಾಗಲೇ ಹೊರ ಹೊರಟಿದ್ದ ಮೈನಾವತಿ, ಅಪರ್ಣಾಳ ಆಳೆತ್ತರದ ಫೋಟೋ, ಕೆಲಸದವರ ಅಸಡ್ಡೆ ಎಲ್ಲವೂ ವಿರಾಜ್ ನ ಕೋಪವನ್ನು ತಾರಕಕ್ಕೇರಿಸಿತ್ತು. ಮೊದಲೇ ಕುಡಿದಿದ್ದ, ಈಗ ಮತ್ತಷ್ಟು ವ್ಯಗ್ರನಾಗಿ ಕುಡಿಯಲು ಕುಳಿತಿದ್ದ. ಬಂದ ಫೋನ್ ಕಾಲ್ ನಲ್ಲಿಯೂ ಯಾರೂ ಮಾತನಾಡದಿರುವುದು ಮತ್ತಷ್ಟು ಸಿಟ್ಟು ತರಿಸಿ ರಂಪ ಮಾಡಲು ಆರಂಭಿಸಿದ್ದ. 

ಆಗಲೇ, ಅವನ ಮೊಬೈಲ್ ಗೆ ಬಂದ ಕರೆಯನ್ನು ಸ್ವೀಕರಿಸಿದವನಿಗೆ ಹೇಳಿದ ವಿಷಯ ಕೇಳಿ ಕುಡಿದ ಮತ್ತೆಲ್ಲಾ ಒಮ್ಮೆಲೇ ಇಳಿದಿತ್ತು.

(ಸಶೇಷ)

(ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಗಳನ್ನು ತಿಳಿಸಿ.ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹದ ಸ್ಫೂರ್ತಿ)


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 16, 2020

ಸಿರಿಗೌರಿಯ ಸದಾಶಿವ (ಅಧ್ಯಾಯ-೨)

 


ಬಂದ ಕರೆಯನ್ನು ಸ್ವೀಕರಿಸುವ ಮನಸ್ಸಿಲ್ಲದಿದ್ದರೂ ಸ್ವೀಕರಿಸಲೇಬೇಕಿತ್ತು. ಇದು ಅಪರ್ಣಾಳಿಂದ ಕಲಿತ ಪಾಠ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಚರ್ಯೆಗೂ ಕೆಲಸದ ಸಮಯವೆಂದೇ ಮೀಸಲಾಗಿ ಇಡಲಾಗದು. ಹಾಗೆಂದು, ನಮ್ಮ ವೈಯಕ್ತಿಕ ಬದುಕನ್ನು ಬಿಟ್ಟು ಕೆಲಸವೇ ಮುಖ್ಯ ಎಂದು ಕುಳಿತುಕೊಳ್ಳಲು ಸಹಾ ಆಗದು. ವೈಯಕ್ತಿಕ ಬದುಕು ಮತ್ತು ಕೆಲಸ ಎರಡನ್ನೂ ಸಮತೋಲನಗೊಳಿಸಲು ಕಲಿಯಬೇಕು. ಆಗಷ್ಟೇ, ಯಾವುದೂ ಹೊರೆ ಎನಿಸದು. ಅಕಸ್ಮಾತ್, ಆ ಕ್ಷಣಕ್ಕೆ ನಮಗೆ ಆ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಕರೆ ಸ್ವೀಕರಿಸಿ ಹೇಳಿದರೆ ಮತ್ತೊಬ್ಬರಿಗೂ ಅದರಿಂದ ತೊಂದರೆಯಾಗದು. ಇಲ್ಲವಾದಲ್ಲಿ ನಮ್ಮ ತೀರ್ಮಾನವನ್ನು ಕಾಯುತ್ತಾ ಕುಳಿತೋ ಅಥವಾ ಅವರದ್ದೇ ಸ್ವಂತ ನಿರ್ಧಾರವನ್ನು ತೆಗೆದುಕೊಂಡೋ ಕೆಲಸವನ್ನು ಎಡವಟ್ಟು ಮಾಡಿ ಬಿಡಬಹುದು.


ಒಂದೊಂದು ಕೆಲಸದ ಹಿಂದೆಯೂ ಅಶುತೋಷ್ ಗೆ ಅಪರ್ಣಾ ನೆನಪಾಗುತ್ತಿದ್ದಳು. ಕರೆ ಸ್ವೀಕರಿಸಿದ ಅಶುತೋಷ್. "ಸರ್, ಅಪರ್ಣಾ ಮೇಡಂ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ನಿಮಗಾಗಿ ಕಾಯುತ್ತಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಏನು ಮಾಡುವುದು?" ಕೇಳಿದರು ನಂದನ್. 

ನಂದನ್ ವರ್ಮಾ "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್. ಅಶುತೋಷ್ ಮುಖರ್ಜಿಯ ನಂತರದ ಸ್ಥಾನದಲ್ಲಿದ್ದದ್ದು ನಂದನ್ ವರ್ಮಾ. ನಂದನ್ ಬರೀ ಕಂಪನಿಯಲ್ಲಿ ಮಾತ್ರವಲ್ಲ ಅಶುತೋಷ್ ನ ಬದುಕಿನ ಬಹು ಮುಖ್ಯ ಸ್ನೇಹಿತ. ಅಪರ್ಣಾ ಅಶುತೋಷ್ ನ ಬದುಕಿನಲ್ಲಿ ಬಂದಾಗ ಎಲ್ಲರಿಗಿಂತ ಹೆಚ್ಚು ಸಂತಸಪಟ್ಟದ್ದು ನಂದನ್. 

"ನಂದಿ, ನನ್ನ ಮೇಲೆ ಕೋಪ ಬಂದಿರುವ ಹಾಗಿದೆ ನಿನಗೆ" ಎಂದು ಕೇಳಿದ ಅಶುತೋಷ್. "ಅಯ್ಯೋ ಸರ್, ನಿಮ್ಮ ಮೇಲೆ ಕೋಪ ಮಾಡಿಕೊಳ್ಳಲು ನಾನು ಯಾರು? ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಒಬ್ಬ ಸಾಮಾನ್ಯ ನೌಕರ ನಾನು. ಅದನ್ನೆಲ್ಲಾ ಬಿಡಿ ಸರ್. ಈಗ, ರಾಜೀನಾಮೆ ಪತ್ರವನ್ನು ಏನು ಮಾಡುವುದು ಹೇಳಿ" ಎಂದನು ನಂದನ್. "ಎಲ್ಲರೂ ಯಾಕೆ ಹೀಗೆ ಮಾತಲ್ಲೇ ನನ್ನನ್ನು ಕೊಲ್ಲುತ್ತಿದ್ದೀರಾ? ಇದಕ್ಕಿಂತ ಒಮ್ಮೆಲೆ ನಮ್ಮನ್ನು ಕೊಂದುಬಿಡಿ. ಅದೇ ಕ್ಷೇಮ" ಎಂದನು ಅಶುತೋಷ್. ನಂದನ್ ಅಶುತೋಷ್ ಮಾತಿಗೆ ಬೇಸರ ಪಟ್ಟುಕೊಂಡರೂ ತೋರ್ಪಡಿಸಿಕೊಳ್ಳದೆ, "ಸರ್,  ಆ ವಿಚಾರವಾಗಿ ಆಮೇಲೆ ಚರ್ಚೆ ಮಾಡಬಹುದು. ಹೆಣ್ಣು ಮಕ್ಕಳನ್ನು ಹೆಚ್ಚು ಹೊತ್ತು ಕಾಯಿಸುವುದು ಸರಿ ಇರುವುದಿಲ್ಲ. ಈಗ ನಾನು ಅವರಿಗೆ ಏನೆಂದು ಉತ್ತರಿಸಲಿ ? ಅದನ್ನು ಹೇಳಿ" ಎಂದನು ನಂದನ್.

ಕ್ಷಣ ಕಾಲ ಯೋಚಿಸಿದ ಅಶುತೋಷ್ " ಅವರ ರಾಜೀನಾಮೆಯನ್ನು ಸ್ವೀಕರಿಸಬೇಕಾದವನು ನಾನು ಮಾತ್ರ. ಅವರು ಕೆಲಸಕ್ಕೆ ಸೇರುವಾಗ ಬರೆದುಕೊಟ್ಟಿರುವ ಪತ್ರದಲ್ಲಿ ಸಹಾ ಹಾಗೆಯೇ ನಮೂದಿಸಲಾಗಿದೆ. ಅವರಿಗೆ ತಿಳಿಸಿ ನಾಳೆ ನಾನು ಬಂದಾಗ ನನ್ನ ಬಳಿಯೇ ಬಂದು ಅವರ ರಾಜೀನಾಮೆಯನ್ನು ಸಲ್ಲಿಸಲು. ಹಾಗೆಯೇ, ಮತ್ತೊಂದು ವಿಷಯವನ್ನು ಸಹಾ ಸ್ಪಷ್ಟ ಪಡಿಸಿಬಿಡಿ ಅವರ ನೋಟಿಸ್ ಪಿರಿಯೆಡ್ ಮೂರು ತಿಂಗಳ ಕಾಲ. ಅದೂ ಸಹಾ ಆ ಪತ್ರದಲ್ಲಿಯೇ ಸ್ಪಷ್ಟವಾಗಿ ನಮೂದಾಗಿದೆ. ಆವರು ಕೆಲಸವನ್ನು ಸ್ವ ಇಚ್ಛೆಯಿಂದ ಬಿಡುವ ಹಾಗಿದ್ದರೆ ಮೂರು ತಿಂಗಳ ಮೊದಲೇ ತಿಳಿಸಿ ತಮ್ಮ ಎಲ್ಲಾ ಕೆಲಸವನ್ನೂ ಆ ಸಮಯದಲ್ಲಿ ಪೂರೈಸಬೇಕು. ಅದು, ಸಾಧ್ಯವಾಗದಿದ್ದಲ್ಲಿ 25 ಲಕ್ಷ ಹಣವನ್ನು ಪಾವತಿಸಿ ಆ ಕ್ಷಣವೇ ಕೆಲಸವನ್ನು ಬಿಡಬಹುದು." ಅಶುತೋಷ್ ನ ಮನದಲ್ಲಿ ಸ್ಪಷ್ಟ ತೀರ್ಮಾನವೊಂದು ರೂಪುಗೊಂಡಿತ್ತು. 


ನಂದನ್ ಗೆ ಅಶುತೋಷ್ ನ ನಿರ್ಧಾರ ಕೇಳಿ ಅವನ ಉಪಾಯದ ಸುಳಿವು ಹತ್ತಿತ್ತು. ಮುಖದಲ್ಲಿ ಕಿರುನಗೆಯೊಂದು ಮೂಡಿ ನೆಮ್ಮದಿಯ ಭಾವ ನೆಲೆಸಿತು. "ಹಾಗೇ ಹೇಳುವೆ ಸರ್, ನನ್ನ ಕೆಲಸವನ್ನೆಲ್ಲಾ ಮುಗಿಸಿ ನಂತರ ಕರೆ ಮಾಡುವೆ ಸರ್" ಎಂದ. "ಈಡಿಯೆಟ್, ಇನ್ನೂ ಕೋಪ ಹೋಗಿಲ್ವಾ? ಸರ್ ಅಂತಾನೇ ಕರೆಯುತ್ತಿದ್ದೀಯಲ್ಲಾ?" ಎಂಬ ಪ್ರಶ್ನೆಗೆ "ಅಪರ್ಣಾ ಮೇಡಂ ಇಲ್ಲೇ ಕುಳಿತ್ತಿದ್ದಾರೆ ಸರ್, ಅವರನ್ನು ಹೆಚ್ಚು ಕಾಯಿಸುವುದಿಲ್ಲ. ನೀವು ಹೇಳಿದ ಹಾಗೆಯೇ ಮಾಡುವೆ " ಎಂದು ಗಂಭೀರವಾಗಿ ಮಾತನಾಡುತ್ತಿದ್ದ ನಂದನ್ ನನ್ನು ನೋಡಿದ ಅಪರ್ಣಾ ನಿಟ್ಟುಸಿರಿಟ್ಟಳು.

"ಅಶು, ನಿನಗಾಗಿ ನಾನು ಬಹಳಷ್ಟು ಬದಲಾದೆ. ಆದರೆ, ನೀನು..? ಬದಲಾಗಿದ್ದೆ ಎಂದುಕೊಂದಿದ್ದೆ. ಇಲ್ಲ, ನಿನ್ನ ಬದುಕಿನಲ್ಲಿ ನಾನಿಲ್ಲ. ನಿನ್ನ ಬದುಕಿನ ಒಂದು ಭಾಗವಷ್ಟೇ ನಾನು. ನಾನಿಲ್ಲದೆಯೂ ನೀನು ಬದುಕಬಲ್ಲೆ. ಇಲ್ಲವಾದಲ್ಲಿ ನನ್ನನ್ನು ಇಷ್ಟು ಸುಲಭವಾಗಿ ಹೋಗಲು ಬಿಡುತ್ತಿದ್ದೆಯಾ ? ಹಿಮದಬಂಡೆ ಕರಗಿ ನೀರಾದರೆ ಕಲ್ಲು ಕರಗಿತು ಎಂಬ ಭ್ರಮೆಗೆ ಬಿದ್ದು ಬಿಡುತ್ತೇವೆ. ಆದರೆ, ವಾಸ್ತವವಾಗಿ ಕೂಡಾ ಯೋಚಿಸಬೇಕಲ್ಲವೇ..? ಕರಗಿದ ನೀರಿನ ಪ್ರತಿ ಬಿಂದುವು ಸಹಾ ಮತ್ತೆ ಹಿಮದ ಗಡ್ಡೆಯಾಗಿ ಮತ್ತಷ್ಟು ಕಾಠಿಣ್ಯವನ್ನೇ ನೆನಪಿಸುತ್ತದೆ. ಬದುಕಿನ ಯಾವುದಾದರೂ ಭಾಗಕ್ಕೆ ಹಾನಿಯಾದರೆ ಅದನ್ನು ಕತ್ತರಿಸಿ ಎಸೆದು ಬಿಡುತ್ತಾರೆ. ಅದಕ್ಕೆ ಪರ್ಯಾಯವಾಗಿ ಮತ್ತೊಂದು ಭಾಗವನ್ನು ಜೋಡಿಸುತ್ತಾರೆ. ಆದರೆ, ಉಸಿರಿಗೆ ಧಕ್ಕೆಯಾದರೆ..? ನನ್ನ ಉಸಿರು ನೀನು. ನಿನ್ನ ಸಂತೋಷ ನೆಮ್ಮದಿಗೆ ನಾನು ಏನನ್ನಾದರೂ ಮಾಡಬಲ್ಲೆ. ಈಗ ನನ್ನೊಡನೆ ಅಥರ್ವ ಇದ್ದಾನೆ. ಹೆರಲಿಲ್ಲ, ಹೊರಲಿಲ್ಲ ಆದರೂ ಅವನು ನನ್ನ ಮಗ, ನಾನು ಅವನಮ್ಮ. ಈ ಸತ್ಯ ಎಂದಿಗೂ ಬದಲಾಗದು. ಅವನಲ್ಲಿಯೇ ನಿನ್ನನ್ನು ಕಾಣುವೆ. ಅವನು ನಿನ್ನ ಮಗನೂ ಅಲ್ಲ, ಅವನು ನಿನ್ನ ಮಗನಾಗಿದ್ದರೆ ಇಷ್ಟು ಸುಲಭವಾಗಿ ನೀನು ಅವನನ್ನು ಬಿಟ್ಟು ಬಿಡುತ್ತಿದ್ದೆಯಾ ?" ಅಪರ್ಣಾಳ ಮನಸ್ಸಿನಲ್ಲಿ ಎಷ್ಟೋ ಪ್ರಶ್ನೆಗಳು ಮೂಡುತ್ತಿದ್ದವು. ಆದರೆ, ಅವಳ ಎಷ್ಟೋ ತಿಳುವಳಿಕೆಗಳು ತಪ್ಪಾಗಿದ್ದವು. ಕೆಲವೊಮ್ಮೆ ನಾವು ನಮ್ಮದೇ ಮೂಗಿನ ನೇರಕ್ಕೆ ಯೋಚಿಸುತ್ತೇವೆ. ಮತ್ತೊಬ್ಬರ ಸ್ಥಾನದಲ್ಲಿ ನಿಂತು ಒಂದು ಕ್ಷಣ ಯೋಚಿಸಿದ್ದರೂ ಎಷ್ಟೋ ತಪ್ಪು ತಿಳುವಳಿಕೆಗಳು ದೂರವಾಗುತ್ತವೆ. ಅಪರ್ಣಾಳ ಯೋಚನೆಯ ತಂತುವನ್ನು ಕಡಿದ್ದದ್ದು ನಂದನ್ ನ ಧ್ವನಿ.

"ಮೇಡಂ, ದಯವಿಟ್ಟು ಕ್ಷಮಿಸಿ. ಈ ರಾಜೀನಾಮೆ ಪತ್ರವನ್ನು ಸ್ವೀಕರಿಸುವ ಅಧಿಕಾರ ನನಗಿಲ್ಲ. ಅಶುತೋಷ್ ಸರ್ ಅಥವಾ ಮಹಾಂತೇಶ್ ಸರ್ ಗೆ ಮಾತ್ರ ಈ ಅಧಿಕಾರ ಇರುವುದು. ನಾಳೆ ಆಫೀಸ್ ಸಮಯದಲ್ಲಿ ಬಂದರೆ ಯಾರಾದರೂ ಒಬ್ಬರಿಗೆ ನಿಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು. ಈ ನಿಯಮಗಳು ನೀವು ಕೆಲಸಕ್ಕೆ ಸೇರಿದಾಗಿನ ಕರಾರು ಪತ್ರದಲ್ಲಿ ನಮುದಾಗಿವೆ" ಎಂದು ಹೇಳಿದ. ಬೇಕೆಂದೇ ನೋಟಿಸ್ ಪಿರಿಯೆಡ್ ವಿಚಾರವನ್ನು ತಿಳಿಸಲಿಲ್ಲ. ಅಪರ್ಣಾಳಿಗೆ ಮಿಶ್ರ ಭಾವ. "ಸರಿ ಸರ್, ಹಾಗಾದರೆ ನಾಳೆ ಬಂದು ಭೇಟಿಯಾಗುವೆ" ಎಂದು ಹೊರಟಳು. ನಂದನ್ ಗೆ ಅವಳ ಗಾಂಭೀರ್ಯ ಎಂದರೆ ಗೌರವ. ವೈಯಕ್ತಿಕ ವಿಚಾರವನ್ನು ಕೇಳುವ ಧೈರ್ಯವಾಗಲಿಲ್ಲ. "ಮೇಡಂ, ಮನೆಗೆ ಹೋಗುವ ವ್ಯವಸ್ಥೆ ಮಾಡಿಸಲೇ..? ಈಗಾಗಲೇ ಕತ್ತಲಾಗಿದೆ" ಎಂದು ಕೇಳಿದ್ದಕ್ಕೆ "ಬದುಕೇ ಕತ್ತಲಲ್ಲಿದ್ದೆ. ಅದರ ಎದುರು ಇದು ಏನೇನೂ ಅಲ್ಲ. ನಿಮ್ಮ ಕಾಳಜಿಗೆ ಥ್ಯಾಂಕ್ಯೂ ಸರ್" ಎಂದು ಹೇಳಿ ಅಲ್ಲಿಂದ ಹೊರಹೋದಳು ಅಪರ್ಣಾ.

ನಂದನ್ ನ ಕರೆ ಬಂದ ನಂತರ ಕೊಂಚ ನಿರಾಳನಾಗಿದ್ದ ಅಶುತೋಷ್. ಮತ್ತೆ ಡೈರಿಯನ್ನು ಬರೆಯಲು ಮುಂದುವರಿಸಿದ.
"ಮರಳಿ ಬಂದುಬಿಡೆ ನನ್ನ ಸಿರಿಗೌರಿ
ಎನ್ನ ಎದೆಯಂಗಳದ ದೇವಿ ನೀನು
ಮೌನದ ಕಿಡಿ ಹೊತ್ತಿಸದೆ
ಮಾತಿನ ಸಿಡಿಗುಂಡ ಸಿಡಿಸದೆ
ನನ್ನ ಅರ್ಧವನ್ನೇ ನೀಡಿಬಿಡುವೆ"
ಡೈರಿಯಲ್ಲಿ ಈ ಸಾಲುಗಳನ್ನು ಬರೆದು ಮುಚ್ಚಿಟ್ಟು ಬಿಟ್ಟ. ಕನಸಿನಂಗಳಕ್ಕೆ ಜಾರಿಹೋದ. ಮುಂಬರುವ ಅಪಾಯದ ಸೂಚನೆ ಅವನಿಗೆ ಕೊಂಚವಾದರೂ ಇದ್ದಿದ್ದರೆ ಅವನು ನೆಮ್ಮದಿಯಿಂದಿರಲು ಸಾಧ್ಯವೇ ಇರುತ್ತಿರಲಿಲ್ಲ

****************

"ವಸುಂಧರಾ ನಿವಾಸದಲ್ಲಿ" ಮೈನಾವತಿ ಶತಪಥ ಹೆಜ್ಜೆ ಹಾಕುತ್ತಾ ತಿರುಗುತ್ತಿದ್ದರು. ಯಾಕೋ ಎದೆಯಲ್ಲಿ ಹೇಳಲಾರದ ತಳಮಳ. ನಾಳೆಗೆ ಅವಳು ನನ್ನಿಂದ ದೂರವಾಗಿ ಐದು ವರ್ಷ. ಯಾಕೋ ಆ ದಿನ ತಳಮಳವಾಗುತ್ತಿದ್ದಂತೆ ಈ ದಿನವೂ ನನ್ನೆದೆಯಲ್ಲಿ ತಳಮಳ. ಅವನೊಡನೆ ಮಾತನಾಡಿದರೆ ಕೊಂಚವಾದರೂ ನನ್ನ ತಳಮಳ ಕಡಿಮೆಯಾಗಬಹುದು ಎಂದು ಅವನಿಗೆ ಕರೆ ಮಾಡಿದರು. ಫೋನ್ ನ ಪ್ರತಿಯೊಂದು ರಿಂಗ್ ಗೂ ತಳಮಳ ಹೆಚ್ಚಾಗುತ್ತಿತ್ತು. ಸೆಕೆಂಡ್ ಗಳು   ಗಂಟೆಗಳಂತೆ ಭಾಸವಾಗತೊಡಗಿದವು.

(ಸಶೇಷ)

(ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪ್ರತಿಕ್ರಿಯೆಗಳೇ ಸ್ಫೂರ್ತಿ)

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 9, 2020

ಸಿರಿಗೌರಿಯ ಸದಾಶಿವ (ಅಧ್ಯಾಯ-೧)

"ಒಲುಮೆಯನ್ನು ಬೆಳೆಸುವುದರಲ್ಲಿ ಅಥವಾ ಕತ್ತರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುವುದು ಮೌನ. ಮಾತು ಆಡಿ ಮನಸ್ಸನ್ನು ಛಿದ್ರ-ಛಿದ್ರ ಮಾಡಿದರೆ, ಮೌನ ಏನನ್ನೂ ಮಾಡದೆ ಮನಷ್ಯನ ಮನಸ್ಸನ್ನೇ ಕೊಂದು ಬಿಡುತ್ತದೆ. ನನ್ನ ಮೇಲೆ ನಿಮಗೆ ಯಾಕೆ ಈ ಉಪೇಕ್ಷೆ ? ನಿಮ್ಮ ಸಿಟ್ಟಿನಿಂದ ಮನಸ್ಸು ಘಾಸಿಯಾಗಿಲ್ಲ, ನಿರ್ಲಕ್ಷ್ಯ, ಮೌನ ನನ್ನನ್ನು ಇಂಚು ಇಂಚಾಗಿ ಕೊಲ್ಲುತ್ತಿದೆ. ಒಮ್ಮೆಯಾದರೂ ನನ್ನ ಈ ಒಂದು ಪ್ರಶ್ನೆಗೆ ಉತ್ತರ ನೀಡಿ. "
ಅಶುತೋಷ್ ನನ್ನು ಎಲ್ಲಾ ರೀತಿಯಲ್ಲಿಯೂ ಕಾಡಿ ಬೇಡಿದರೂ ಅವನು ಅಪರ್ಣಾಳ ಆ ಒಂದು ಪ್ರಶ್ನೆಗೆ ಉತ್ತರ ನೀಡಲೊಲ್ಲ.

"ನನ್ನನ್ನು ನೋಯಿಸುವುದೇ ನಿಮ್ಮ ಉದ್ದೇಶವೇ ? ನನ್ನ ಬದುಕನ್ನೇ ನಿಮಗಾಗಿ ಮೀಸಲಿಟ್ಟಿದ್ದೇನೆ. ನನ್ನ ಮೇಲೆ ಇನ್ನೂ ಕರುಣೆ ಬಾರದೇ..?  ನಿಮ್ಮ ಉದ್ದೇಶ ಏನು ಎಂಬುದನ್ನು ಬಾಯಿ ಬಿಟ್ಟು ತಿಳಿಸಿಬಿಡಿ. ಆಗಲಾದರು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಸಿದರೆಯಾದರೂ ಮುಂದೆ ಎಂದೂ ನಿಮ್ಮನ್ನು ಪ್ರಶ್ನಿಸಲಾರೆ. ನನ್ನ ಎಷ್ಟೋ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರೆತಿಲ್ಲ, ಈ ಪ್ರಶ್ನೆಯೂ ಅದೇ ಪಟ್ಟಿಗೆ ಸೇರಿ ಬಿಡಲಿ." 
ಅಪರ್ಣಾಳ ಪ್ರತಿ ಮಾತೂ ಸಿಡಿಗುಂಡಿನಂತೆ ಅವನ ಎದೆ ಸೀಳುತ್ತಿದ್ದರೂ ಅವನು ಅವನ ನಿರ್ಧಾರದಲ್ಲಿ ಅಚಲ. ಕಲ್ಲು ಕೂಡಾ ಕರಾಗಿಬಿಡುತ್ತಿತ್ತೇನೋ ಅಪರ್ಣಾಳ ಕಣ್ಣೀರಿಗೆ, ಅವಳ ಮನದ ನೋವಿಗೆ.. ಆದರೆ, ಹಿಮದ ಬಂಡೆಯಂತೆ ತಣ್ಣಗೆ ನಿಂತಿದ್ದ ಅಶುತೋಷ್ ಮುಖರ್ಜಿ. 

ಆಚಲತೆ ಮುಖದಲ್ಲಿ ಮನೆ ಮಾಡಿತ್ತು, ಕರಗದಂತಹಾ ಕಲ್ಲೆದೆಯ ಹಿಂದೆ ಮನಸ್ಸು ಮಮ್ಮಲ ಮರುಗುತ್ತಿತ್ತು, "ಇದೊಂದು ವಾರ ಸುಮ್ಮನಿದ್ದರೆ ಎಲ್ಲವನ್ನೂ ಸರಿ ಮಾಡಿಬಿಡುವೆ, ಕ್ಷಮಿಸಿಬಿಡು ಅಪ್ಪು" ಎಂದು ಮನಸ್ಸಿನಲ್ಲಿಯೇ ಅವಳ ಕ್ಷಮೆ ಕೇಳಿ ತಿರುಗಿಯೂ ನೋಡದಂತೆ ಮನೆಯಿಂದ ಹೊರ ನಡೆದುಬಿಟ್ಟ.

ಸಣ್ಣ ಉಪೇಕ್ಷೆ ಕೂಡಾ ಕೆಲವೊಮ್ಮೆ ಬದುಕಿನ ದೊಡ್ಡ ದುರಂತಗಳಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಆದರೆ, ಅದು ಆ ಕ್ಷಣಕ್ಕೆ ಅರಿವಿಗೆ ಬರುವುದಿಲ್ಲ ಅಷ್ಟೇ. 

ಅಶುತೋಷ್ ಮತ್ತೆ ತಿರುಗಿ ಮನೆಗೆ ಬಂದಾಗ ನಿತ್ಯದಂತೆ ಸ್ವಾಗತಿಸಲು, ಸಂತೈಸಲು ಅವಳು ಬರಲಿಲ್ಲ. ಅವನ ಮನಸ್ಸಿನಲ್ಲಿ ಕಸಿವಿಸಿ ಮೂಡುತ್ತಿತ್ತು. ಅಷ್ಟು ದೊಡ್ಡ ಮನೆಯಲ್ಲಿ ತಾನು ಒಂಟಿ ಎಂಬ ಭಾವನೆ ಬಹಳಷ್ಟು ವರ್ಷಗಳ ನಂತರ ಮೂಡಿತು. 

ಆಮೆ ತನ್ನ ಚಿಪ್ಪಿನಲ್ಲಿ ಹುದುಗುವಂತೆ ತನ್ನ ಕೆಲಸ, ಗಾಂಭೀರ್ಯ, ಸಿಟ್ಟಿನಿಂದ ತನ್ನನ್ನು ತನ್ನೊಳಗೇ ಬಚ್ಚಿಟ್ಟುಕೊಂಡಿದ್ದರ ಫಲ ಎದ್ದು ಕಾಣುತ್ತಿತ್ತು. ಅಪರ್ಣಾ ತನ್ನ ಜೊತೆಯಿರುವಾಗ ಎಲ್ಲರೂ, ಎಲ್ಲವೂ ಸಹಜವಾಗಿಯೇ ಕಾಣುತ್ತಿತ್ತು ಆದರೆ ಈಗ ಅವಳ ಅನುಪಸ್ಥಿತಿಯಲ್ಲಿ ಎಲ್ಲವೂ ಶೂನ್ಯವಾಗಿಯೇ ಕಾಣುತ್ತಲಿದೆ. ಸುಮ್ಮನೆ ತನ್ನಷ್ಟಕ್ಕೆ ನಡೆದು ರೂಮಿನ ಒಳ ಸೇರಿ ಬಿಟ್ಟ ಅಶುತೋಷ್. ಮತ್ತೆ, ಕೆಲಕ್ಷಣದಲ್ಲಿಯೇ ಅವನ ಎದೆ ನಡುಗಿಸುವ ಸತ್ಯ ಅವನಿಗೆ ತಿಳಿಯಲಿತ್ತು. 

ಯಾರ ಮೇಲೆ ಎಷ್ಟೇ ಕೋಪವಿದ್ದರೂ, ತಾನೆಷ್ಟೇ ಕೂಗಾಟ, ಹಾರಾಟ ನಡೆಸಿದ್ದರೂ ಮತ್ತೆ ಅವರ ಕ್ಷಮೆ ಕೇಳಲು ಅವರ ಮುಂದೆ ತನ್ನೆಲ್ಲಾ ದೊಡ್ಡಸ್ತಿಕೆಯನ್ನೂ ಮೂಟೆಕಟ್ಟಿ ಪಕ್ಕಕ್ಕಿಟ್ಟು ಸಣ್ಣ ಮಗುವಿನಂತಾಗಿ ಬಿಡುತ್ತಿದ್ದ. ಅವನ ಈ ಗುಣವೇ ಅಪರ್ಣಾಳಿಗೆ ಅಚ್ಚುಮೆಚ್ಚು. ಆದರೆ, ಅವಳ ವಿಚಾರದಲ್ಲಿ ಮಾತ್ರ ಅಶುತೋಷ್ ಕಲ್ಲಿನಂತಾಗಿದ್ದ. 

ಸಣ್ಣ-ಪುಟ್ಟ ಖುಷಿಯ ವಿಚಾರಗಳನ್ನು ಹಂಚಿಕೊಂಡಾಗ ಖುಷಿಪಡುವವರಿರಬೇಕು. ಸೋಲಿನಿಂದ ಮೇಲೆತ್ತಲು, ಆತ್ಮಸ್ಥೈರ್ಯ ತುಂಬಲು ನಮ್ಮವರೆನಿಸಿಕೊಂಡವರಿರಬೇಕು. ಸಣ್ಣ ಗೆಲುವನ್ನೂ ಸಂಭ್ರಮಿಸಲು ಹೇಳಿಕೊಟ್ಟ ನಿನಗೇ ಮೊದಲು ನಾನು ಈ ನನ್ನ ದೊಡ್ಡ ಗೆಲುವಿನ ವಿಚಾರವನ್ನು ತಿಳಿಸಬೇಕು, ಅದಕ್ಕೂ ಮೊದಲು ನಾನು ನಿನ್ನ ಕ್ಷಮೆ ಕೇಳಬೇಕು, ಇದೊಂದು ವಾರ ಸುಮ್ಮನಿರಲು ಹೇಳಬೇಕು ಎಂದು ಮನಸ್ಸಿನಲ್ಲಿಯೇ ತಿಳಿಸಬೇಕು ಎಂದು ಅಪರ್ಣಾಳನ್ನು ಹುಡುಕಿ ಮತ್ತೆ ರೂಮಿನಿಂದ ಹೊರ ನಡೆದ.

ಅವಳ ಮೆಚ್ಚಿನ ಸ್ಥಳ, ಮನೆಯ ಪುಟ್ಟ ಲೈಬ್ರರಿಯಲ್ಲಿ ಅವಳು ಕಾಣಲಿಲ್ಲ, ಬಾಲ್ಕನಿಯ ಪುಟ್ಟ ತೂಗುಮಂಚದಲ್ಲಿಯೂ ಅವಳ ಅನುಪಸ್ಥಿತಿ. ಅಪ್ಪ-ಅಮ್ಮನ ಕೋಣೆಯಲ್ಲಿರಬಹುದು ಎಂದುಕೊಂಡು ನಡೆದರೆ ಅಲ್ಲಿಯೂ ಶೂನ್ಯ. ಅವಳಿಗೆ ನನ್ನ ಮೇಲೆ ಅದೆಷ್ಟೇ ಕೋಪವಿದ್ದರೂ ನನ್ನ ಊಟ-ತಿಂಡಿಯ ವ್ಯವಸ್ಥೆಯನ್ನು ತಪ್ಪಿಸಲಾರಳು, ಅಡುಗೆ ಕೋಣೆಯಲ್ಲಿ ಇರಬಹುದು ಎಂದುಕೊಂಡರೆ ಅಲ್ಲಿಯೂ ಅವಳಿಲ್ಲ, ಅಥರ್ವನ ರೂಮ್ ಅನ್ನು ಹೇಗೆ ಮರೆತೆ? ಎಂದುಕೊಂಡು ಅವನ ರೂಮ್ ತೆರೆದರೆ ಅಲ್ಲಿಯೂ ಅವಳಿಲ್ಲ, ಅವಳು ಮಾತ್ರವಲ್ಲ ಅಥರ್ವ ಕೂಡಾ ಇಲ್ಲ. 
ಬೇಸರ ಕಳೆಯಲು ಇಬ್ಬರೂ ಎಲ್ಲಿಗೋ ಹೊರಗೆ ಹೋಗಿರಬಹುದು ಎಂದುಕೊಂಡು ತನ್ನಗೆ ತಾನೇ ಸಮಜಾಯಿಷಿ ಕೊಟ್ಟುಕೊಂಡು ಸುಮ್ಮನಾದ. 

ಅವನು ಶತಪತ ತಿರುಗುವುದನ್ನು ನೋಡಲೂ ಆಗದೆ, ಸುಮ್ಮನಿರಲೂ ಆಗದೆ, ಏನು ಮಾಡಬೇಕೆಂದು ತಿಳಿಯದೆ ಸುಮ್ಮನಿದ್ದ ಗಿರಿಜಮ್ಮ ಈಗ ಬಾಯ್ಬಿಟ್ಟರು. "ಅಮ್ಮವ್ರು ಮತ್ತೆ ಅಥರ್ವ ಬ್ಯಾಗ್ ತಗೊಂಡು ಎಲ್ಲೋ ಹೋದ್ರು. ಅವರು ನಿಮ್ಮ ಜೊತೆಗೇ ಎಲ್ಲೋ ಹೊರಟಿರಬೇಕು ಅಂತಾ ಸುಮ್ಮನಾದೆ." ಎಂದು ಹೇಳಿ ಸುಮ್ಮನೆ ಒಳ ಹೋದರು ಗಿರಿಜಮ್ಮ.

ಅಶುತೋಷ್ ನಿಗೆ ಏನು ಮಾಡಬೇಕು, ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ಸುಮ್ಮನೆ ಕುಸಿದು ಕುಳಿತ. ಮನಸ್ಸಿನಲ್ಲಿ ಏನೇನೋ ಬೇಡದ ಆಲೋಚನೆಗಳು ಸುಳಿದು ಮರೆಯಾಗುತ್ತಿದ್ದವು. ಹಾಗೆಲ್ಲಾ ಏನೂ ಆಗಿರಲಾರದು ಎಂಬ ಸಣ್ಣ ಭರವಸೆಯ ಕಿಡಿ ಹೊತ್ತಿಸಿಕೊಂಡು ಡೈರಿ ತೆರೆದು ಕುಳಿತ.

ಮನಸ್ಸಿನ ಆಲೋಚನೆಗಳು ಮಾತಾಗುತ್ತಿದ್ದದ್ದು ಡೈರಿಯ ಪುಟಗಳಲ್ಲಿ. ಅವನ ಬದುಕಿನ ಮಹಾರಹಸ್ಯಗಳು, ಅಳು-ನಗು, ಸೋಲು-ಗೆಲುವು, ಕಷ್ಟ-ಸುಖ ಎಲ್ಲದಕ್ಕೂ ಸಾಕ್ಷಿಯಾಗಿದ್ದು, ಅವನ ಮೆಚ್ಚಿನ ಗೆಳೆಯ ಅವನ ಡೈರಿ. 

"ಮಹಾ ಕೋಪದ ಉರಿಯನ್ನು
ತಡೆದುಕೊಂಡವಳಿಗೆ 
ಶೀತಲತೆ ಕಷ್ಟವಾಯಿತೇ..?
ಬಂದುಬಿಡೆ ಸಿರಿಗೌರಿ
ನನ್ನ ಬದುಕಿನ 
ಪ್ರತಿ ಉಸಿರಿನ ಸ್ವರವಾಗಿ
ಸಿರಿಗೌರಿಯಿಲ್ಲದ ಶಿವ
ಆತ್ಮವಿಲ್ಲದ ಪ್ರಾಣದಂತೆ"

ಏನಾದರೂ ಕಳೆದು ಹೋದರೆ ಅದರ ಹಿಂದೆ ಒಂದು ಮಹತ್ತರ ಕಾರಣ ಇರುವುದಂತೆ ಅಥವಾ ಅದಕ್ಕಿಂತ ಬೆಲೆ ಬಾಳುವುದು ನಮಗಾಗಿ ಕಾಯುತ್ತಿರುವುದಂತೆ. ನನ್ನನ್ನು ಹುರಿದುಂಬಿಸಲು ನೀನು ನನಗೆ ಆಗಾಗ ಹೇಳುತ್ತಿದ್ದ ಮಾತು ಇದು. ಆದರೆ, ನಾವಾಗಿಯೇ ಕಳೆದುಕೊಂಡರೆ.. ? ಕೈಯಲ್ಲಿ ರತ್ನವಿದ್ದಾಗ ಅದರ ಬೆಲೆ ತಿಳಿಯದೆ ಹಲವರು ನಂತರ ಅದನ್ನು ಕಳೆದುಕೊಂಡ ಮೇಲೆ ಹುಡುಕುತ್ತಾರೆ. ನನಗೆ ನಿನ್ನ ಬೆಲೆ ತಿಳಿದಿತ್ತು, ಉಳಿಸಿಕೊಳ್ಳಲಾಗದ ಅನಿವಾರ್ಯತೆ ನನ್ನನ್ನು ಕಾಡುತ್ತಿತ್ತು. ನನ್ನ ಮನದ ಮಾತುಗಳನ್ನು ಹೇಳದೆಯೇ ಅರ್ಥೈಸಿಕೊಳ್ಳುತ್ತಿದ್ದೆ, ನನ್ನ ಆಲೋಚನಾ ಲಹರಿಯಲ್ಲಿಯೇ ನಿನ್ನ ಆಲೋಚನಾ ಲಹರಿ ಸಾಗುತ್ತಲಿತ್ತು, ನನ್ನ ಬಲಗೈ, ಬಲ ಮೆದುಳು, ನನ್ನ ಬದುಕಿನರ್ಧವೇ ನೀನಾಗಿದ್ದೆ. ಇದೊಂದು ವಿಚಾರದಲ್ಲಿ ಯಾಕೆ ನನ್ನ ಮನದ ಮಾತನ್ನು ಕೇಳಿಸಿಕೊಳ್ಳದೆ ಹೋದೆ ? 

ಒಮ್ಮೆ ಅನುಭವಿಸಿದ ನೋವನ್ನು ನಾನು ಮತ್ತೊಮ್ಮೆ ಅನುಭವಿಸಲು ಸಿದ್ಧನಿಲ್ಲ, ಯಾಕೆಂದರೆ, ಆಗ ನೋವಿನಿಂದ ಹೊರಬರಲು ನನ್ನೊಡನೆ ನೀನಿದ್ದೆ. ಆದರೆ ಈಗ..?

ನನ್ನ ಗತದ ಅರಿವಿದ್ದೂ ನೀನು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದೆ. ಆದರೆ, ನೀನು ನನ್ನನ್ನು ಅರ್ಥವೇ ಮಾಡಿಕೊಳ್ಳಲಿಲ್ಲವೇ..?

ಅಶುತೋಷ್ ನ ಬರಹ ಹೀಗೇ ಮುಂದುವರಿಯುತ್ತಿತ್ತು. ಅವನ ಬರಹಕ್ಕೆ, ಭಾವದ ಅಣೆಕಟ್ಟಿಗೆ, ಆಲೋಚನಾ ಲಹರಿಗೆ ತಡೆಯೊಡ್ಡಿದ್ದು ಆ ಫೋನ್ ಕಾಲ್.

(ಸಶೇಷ)

(ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪತಿಕ್ರಿಯೆಗಳೇ ಸ್ಫೂರ್ತಿ)

~ವಿಭಾ ವಿಶ್ವನಾಥ್


 

ಭಾನುವಾರ, ಆಗಸ್ಟ್ 2, 2020

ಸಖಿ- ಪರಿಚಯ

 


ಎಷ್ಟೇ ಆಪ್ತರಿದ್ದರೂ ಹೇಳಿಕೊಳ್ಳದ್ದು ಏನೋ ಒಂದು ಉಳಿದೇ ಇರುತ್ತದೆ. ನಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರೊಡನೆ ಹಂಚಿಕೊಳ್ಳಲು ಅಥವಾ ಅವರಿಂದ ಸಲಹೆ ಪಡೆದುಕೊಳ್ಳಲು ಕಾತುರದಿಂದ ಕಾಯುತ್ತೇವೆ. ಪರಿಚಿತರೊಡನೆ ಹಂಚಿಕೊಂಡಷ್ಟೂ ಅದು ಮತ್ತೆಲ್ಲೋ, ಮತ್ತಾರಿಗೋ, ಮತ್ತೆ ಎಂದಾದರೂ ಯಾವುದೋ ರೂಪದಲ್ಲಿ ತೊಡಕಾದರೆ ಎಂಬ ಅಳುಕು ಮನಸ್ಸಲ್ಲಿ ಇದ್ದೇ ಇರುತ್ತದೆ. ಹಲವು ವಿಚಾರಗಳನ್ನು ಹೇಳಿಕೊಳ್ಳದಿದ್ದಾಗಲೂ ಮತ್ತೆ ಯಾರದ್ದೋ ಸಮಸ್ಯೆಯೋ, ಮತ್ತೆ ಯಾರಿಗೋ ನೀಡಿದ ಸಲಹೆಯೋ ನಮ್ಮಲ್ಲಿ ಭರವಸೆ ಹೊತ್ತಿಸುತ್ತದೆ.


ಬರಹದ ಗೆಳತಿ 'ಸಖಿ' ನಿಮ್ಮೆಲ್ಲಾ ಸಂಧರ್ಭದಲ್ಲಿ ಆಸರೆಯಾಗುತ್ತಾಳೆ. ಹೇಳಿಕೊಳ್ಳದ ನಿಮ್ಮ ಎಷ್ಟೋ ಭಾವನೆಗಳಿಗೆ ಕಿವಿಯಾಗುತ್ತಾಳೆ. ನಿಮ್ಮ ಅಮ್ಮನ, ಮಗಳ, ಗೆಳತಿಯ, ಸೋದರಿಯ, ಪ್ರೇಯಸಿಯ, ಹೆಂಡತಿಯ ಹೀಗೆ ಹಲವಾರು ಮನಸ್ಸಿನ ಮಾತನ್ನು ತೆರೆದಿಡುತ್ತಾಳೆ. ಭರವಸೆ ತುಂಬುತ್ತಾಳೆ. ಮನಸ್ಸಿನ ಭಾರವನ್ನು ಕಡಿಮೆ ಮಾಡುತ್ತಾಳೆ. ಸಲಹೆ ನೀಡುತ್ತಾಳೆ. ಇದು ಯಾರೋ ಒಬ್ಬರ ಮನದ ಭಾವವಲ್ಲ, ಇದೇ ಭಾವಗಳು ರಂಗನ್ನು ಹೊತ್ತು ಹಲವಾರು ವಿಧದಲ್ಲಿ ಸುಳಿದಾಡುತ್ತಿರುತ್ತವೆ. ಆದರೆ, ನಾವು ಅದಕ್ಕೆ ಹೆಚ್ಚಿನ ಗಮನ ನೀಡಿರುವುದಿಲ್ಲ. ಆದರೆ, ಸಮಸ್ಯೆ ನಮಗೆ ಬಂದಾಗ .. ? 

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತದೆ. ಮತ್ತೊಬ್ಬರ ಸಮಸ್ಯೆಯೂ ಚಿಕ್ಕದಾಗಿಯೇ ಕಾಣುವುದಲ್ಲವೇ.. ? ಮತ್ತೊಬ್ಬರಿಗೆ ಪ್ರೇರಣೆ ನೀಡುವುದು ಬಹು ಸುಲಭ. ಆದರೆ, ನಮಗೆ ನಾವೇ ಪ್ರೇರಣೆಯಾಗಬೇಕು. ಆ ನಿಟ್ಟಿನಲ್ಲಿ ಸಖಿ ನಿಮ್ಮ ಜೊತೆ ನಿಲ್ಲುತ್ತಾಳೆ. ನಗುವಾಗ ಊರೆಲ್ಲಾ ನೆಂಟರು, ಸಮಸ್ಯೆ ಬಂದಾಗಲೇ ಅಲ್ಲವೇ ನಮ್ಮವರು ಯಾರು ಎಂಬ ಅರಿವಾಗುವುದು.

ಸಖಿಯ ಮಾತುಗಳು ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ ಎಂದೆ. ಅದನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡು ಹೋಗುವುದು ನಿಮಗೆ ಬಿಟ್ಟದ್ದು.

ನಿಮಗೊಂದು ಪುಟ್ಟ ಕಥೆ ಹೇಳುವೆ. ಕೇಳಿ..

ಪುಟ್ಟದೊಂದು ತೋಟದ ಮನೆಯಲ್ಲಿ ನೆಮ್ಮದಿಯಿಂದ ರೈತಪ್ಪ, ರೈತಮ್ಮ ವಾಸವಾಗಿರುತ್ತಾರೆ. ನೆಮ್ಮದಿಯಾಗಿರುವಾಗ ನೆಮ್ಮದಿ ಕೆಡಿಸಲು ಯಾರೋ ಒಬ್ಬರು ಇದ್ದೇ ಇರುತ್ತಾರೆ. ಅಲ್ಲವೇ..? ಎಲ್ಲವೂ ಸರಿಯಿದ್ದರೆ ಕಥೆಗೆ ಬೆಲೆಯೆಲ್ಲಿ ? ಇಲ್ಲಿ ಇವರ ನೆಮ್ಮದಿ ಕೆಡಿಸಿದ್ದು ಒಂದು ಸುಂಡಿಲಿ. ಈ ಇಲಿ ಕಾಟ ತಡೆಯುವುದಕ್ಕಾಗದೆ ರೈತಪ್ಪ, ರೈತಮ್ಮ ಎಷ್ಟೋ ಉಪಾಯ ಮಾಡಿದರೂ ಇಲಿ ಸಿಗದೆ ನುಣಿಚಿಕೊಂಡು ಹೋಗುತ್ತಲೇ ಇತ್ತು.. ಕಡೆಗೆ ರೈತಮ್ಮನ ತಲೆಗೊಂದು ಉಪಾಯ ಹೊಳೆದೇ ಬಿಟ್ಟಿತು. ಅದನ್ನು ರೈತಪ್ಪನಿಗೆ ಹೇಳುವಾಗ ಈ ಇಲಿ ಕೂಡಾ ಅದನ್ನು ಕೇಳಿಸಿಕೊಂಡಿತು. ಈ ಇಲಿಗೆ ಆಹಾರದಲ್ಲಿ ವಿಷ ಬೆರೆಸಿ ಇಟ್ಟು ಅದನ್ನು ಸಾಯಿಸಿ ಬಿಡೋಣ ಎಂದು.

ಈ ಉಪಾಯ ಕೇಳಿಸಿಕೊಂಡ ಇಲಿಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಪ್ರಾಣಭಯ ಎಲ್ಲರಿಗೂ ಇರುವುದೇ ಅಲ್ಲವಾ? ಅದು ಇಲಿಯಾದರೂ ಅಷ್ಟೇ, ಹುಲಿಯಾದರೂ ಅಷ್ಟೇ.. ಬೆಳಿಗ್ಗೆಯಾಗುತ್ತಿದ್ದಂತೆ ಕೋಳಿ ಕೂಗುವ ಧ್ವನಿ ಕೇಳಿಸಿತು. ಕೋಳಿ ಹತ್ತಿರ ಕೇಳಿದರೆ ಇದಕ್ಕೇನಾದರೂ ಸಲಹೆ ದೊರೆಯಬಹುದು ಎಂದು ಕೋಳಿಯ ಬಳಿ ಕೇಳಿದರೆ "ನಿನಗೆ ತೊಂದರೆ ಬಂದರೆ ನಾನ್ಯಾಕೆ ಉಪಾಯ ಯೋಚಿಸಬೇಕು? ನನಗಂತೂ ಏನೂ ತೊಂದರೆ ಇಲ್ಲಪ್ಪಾ" ಎನ್ನುತ್ತಾ ಇಲಿಯನ್ನು ನಿರ್ಲಕ್ಷಿಸಿ ಆಹಾರ ಹುಡುಕುತ್ತಾ ಹೊರಟಿತು. 

ಇಲಿಗೆ ಬೇಜಾರಾಗಿ ಅದು ಹಾಗೇ ಮುಂದುವರಿಯುತ್ತಿರುವಾಗ ಕುರಿ ಕಾಣಿಸಿತು. "ಕುರಿಯಣ್ಣಾ, ನನ್ನನ್ನು ಕಾಪಾಡು. ನನ್ನ ತೊಂದರೆಗೆ ಸಲಹೆ ನೀಡು" ಎನ್ನುತ್ತಾ ತನ್ನ ತೊಂದರೆಯನ್ನು ವಿವರವಾಗಿ ಹೇಳಿದರೆ, ದಿವ್ಯ ನಿರ್ಲಕ್ಷ್ಯದಿಂದ ಕುರಿ "ನಿನ್ನ ತೊಂದರೆ ನಿನ್ನದು, ನಾನಂತೂ ಆರಾಮವಾಗಿ ಇದ್ದೇನೆ. ರೈತಪ್ಪ ನನ್ನನ್ನಂತೂ ಏನೂ ಮಾಡಲ್ಲ, ನನಗಷ್ಟು ಸಾಕು" ಎನ್ನುತ್ತಾ ಮೇವು ಮೆಲುಕು ಹಾಕುವ ಕಾರ್ಯವನ್ನು ಮುಂದುವರಿಸಿತು.

ಇಲಿಗೆ ಆ ತೋಟದ ಮನೆಯಲ್ಲಿ ಇದ್ದದ್ದು ಮೂರೇ ಗೆಳೆಯರು. ಇಬ್ಬರಂತೂ ಆಗಲೇ ಕೈ ಕೊಟ್ಟು ಆಗಿತ್ತು. ಉಳಿದದ್ದು ಹಂದಿರಾಯ ಮಾತ್ರ. ಕೊನೆಯ ಭರವಸೆಯ ಆಶಾ ಕಿರಣದೊಂದಿಗೆ ಅಲ್ಲಿಗೆ ಹೋದರೆ ಹಂದಿರಾಯ ಕೂಡಾ ಏನೂ ಸಹಾಯ ಮಾಡದೆ. ತೊಂದರೆ ನನಗಲ್ಲ ಎಂದು ಕಳುಹಿಸಿ ಬಿಟ್ಟ.

ಎಲ್ಲರೂ ಕೈ ಚೆಲ್ಲಿ ಕುಳಿತಾಗ ಇಲಿ ತನ್ನ ಹುಷಾರಲ್ಲಿ ತಾನಿರಬೇಕು ಎಂದು ತೀರ್ಮಾನ ಮಾಡಿಕೊಂಡು ರೈತಮ್ಮ ಇಟ್ಟ ಊಟವನ್ನು ಮಾಡದೆ ಸುಮ್ಮನಿರಬೇಕೆಂದು ತೀರ್ಮಾನಿಸಿತು. ಇತ್ತ ರೈತಮ್ಮ ಇಲಿಗೆ ವಿಷ ಹಾಕಿ ಕೈಯನ್ನು ಸರಿಯಾಗಿ ತೊಳೆದುಕೊಳ್ಳದೆ ಊಟ ಮಾಡಿದ್ದರಿಂದ ವಿಷ ಅವಳ ಹೊಟ್ಟೆ ಸೇರಿತು. ರೈತಪ್ಪ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಅವಳಿಗೆ ಚಿಕಿತ್ಸೆ ನೀಡಿಸಿ ಮನೆಗೆ ಕರೆದುಕೊಂಡು ಬಂದ.

ಅವಳು ಮನೆಗೆ ಬಂದ ಮೇಲೆ ಅವಳನ್ನು ನೋಡಲು ಅವಳ ತಂದೆ-ತಾಯಿ ಬರದಿದ್ದರೆ ಹೇಗೆ? ಅವರು ಬಂದ ಮೇಲೆ ಕೋಳಿ ಕೊಯ್ದು ಔತಣ ನೀಡದಿದ್ದರೆ ಹೇಗೆ ? ಹಾಗಾಗಿ ಮನೆಯಲ್ಲಿದ್ದ ಕೋಳಿ ಬಲಿಯಾಯ್ತು.

ಆನಂತರ ಬಹಳ ಹತ್ತಿರದ ಸಂಬಂಧಿಕರು ಬಂದರು ಅವರ ಊಟಕ್ಕೆ ಕುರಿ ಬಲಿಯಾಯ್ತು. ಬಾಯಿಂದ ಬಾಯಿಗೆ ರೈತಮ್ಮನ ಕತೆ ಹಬ್ಬಿ ಉರವರೆಲ್ಲಾ ನೋಡಲು ಬಂದರು. ಅವರ ಊಟಕ್ಕೆ ಹಂದಿಯೂ ಬಲಿಯಾಯ್ತು.

ಇಷ್ಟೆಲ್ಲಕ್ಕೂ ಕಾರಣವಾದ ಇಲಿ ಇದನ್ನೆಲ್ಲಾ ನೋಡುತ್ತಾ ನಿಟ್ಟುಸಿರು ಬಿಟ್ಟು ಸುಮ್ಮನಾಯಿತು.

ಸಮಸ್ಯೆ ನಮ್ಮದಲ್ಲಾ ಎಂದುಕೊಂಡವರೆಲ್ಲಾ ಸಮಸ್ಯೆಗೆ ಬಲಿಯಾದರು. ಸಮಸ್ಯೆ ಬಂದಾಗ ಕೊಂಚ ಜಾಗರೂಕತೆಯಿಂದ ನಡೆದುಕೊಂಡವರು ಬಚಾವಾದರು.

ಎಲ್ಲವೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. 

ಸಖಿಯ ಮೂಲಕ ಇನ್ನು ಮುಂದೆ ಈ ರೀತಿಯ ಬರಹಗಳನ್ನು ನಿರೀಕ್ಷಿಸಬಹುದು. 
(ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ.)

~ವಿಭಾ ವಿಶ್ವನಾಥ್