ಭಾನುವಾರ, ಸೆಪ್ಟೆಂಬರ್ 27, 2020

ಸಿರಿಗೌರಿಯ ಸದಾಶಿವ- ೫

 


"ಕಾರುಣ್ಯ"ದಲ್ಲಿ ಚಿಕಿತ್ಸೆಗೆ ಬೇಕಿದ್ದ ಎಲ್ಲವೂ ಸಿದ್ಧವಾಗಿತ್ತು. ನಂದನ್ ನ ಪ್ರಭಾವ ಕೂಡಾ ಅಷ್ಟರಮಟ್ಟಿಗೆ ಇದ್ದಿತು. ಅಲ್ಲಿದ್ದ ವೈದ್ಯರು, ಕೆಲಸಗಾರರು ಸಹಾ ಅಷ್ಟೇ ನಿಷ್ಠೆ ಉಳ್ಳವರು. ಪ್ರತಿಯೊಬ್ಬ ಕೆಲಸಗಾರರನ್ನು ಸಹಾ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಕೂಡಾ ಹಾಗೆಯೇ ಇತ್ತು. ಹಣ, ವಶೀಲಿ ಎರಡೂ ಸಹಾ ಇಲ್ಲಿ ನಡೆಯುತ್ತಿರಲಿಲ್ಲ. ಸೇವಾ ಮನೋಭಾವಕ್ಕಷ್ಟೇ ಅಲ್ಲಿ ಪ್ರಾಮುಖ್ಯತೆ.  ambulance ಬಂದದ್ದೇ ತಡ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಅಥರ್ವನಿಗೆ ಸಣ್ಣ-ಪುಟ್ಟ ತರಚು ಗಾಯಗಳಾಗಿದ್ದವು ಅಷ್ಟೇ. ಅಪರ್ಣಾ ಕೂಡಾ ಹುಷಾರಾಗಿದ್ದಳು. ಮೈನಾವತಿಯವರಿಗೆ ಶಾಕ್ ನಿಂದಾಗಿ ಪ್ರಜ್ಞೆ ತಪ್ಪಿತ್ತು. ಸುಕ್ಷಿತಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ಸ್ಕಂದನಿಗೂ ಬಲವಾದ ಪೆಟ್ಟು ಬಿದ್ದು ತಲೆಯಿಂದ ರಕ್ತ ಸುರಿಯುತ್ತಿತ್ತು. ಇಬ್ಬರನ್ನೂ ಐ.ಸಿ.ಯು ಗೆ ಕರೆದೊಯ್ಯಲಾಯಿತು.


ಇತ್ತ ಅಶುತೋಷ್ ನಿಗೆ ಬಂದ ಕಾಲ್ ವಿರಾಜ್ ನದ್ದು. ಅಶುತೋಷ್ ಕೋಪವಿದ್ದರೂ ಬಂದ ಕಾಲ್ ಅನ್ನು ನಿರಾಕರಿಸಲಾರ. ಅವನಿಗೆ ಸಿಟ್ಟು ತೀರಿಸಿಕೊಳ್ಳಲು ಮಾರ್ಗವೊಂದು ಬೇಕಿತ್ತು. ಸಿಟ್ಟು ಎಂಬುದು ಹಾಗೆಯೇ.. ಹೊರ ಹಾಕಿದರೆ ಕಡಿಮೆಯಾಗುತ್ತದೆ. ಒಳ ತುಂಬಿಸಿಕೊಂಡಷ್ಟೂ ಮನುಷ್ಯನನ್ನು ಕೆರಳಿಸುತ್ತದೆ. ಬೆಳೆದು ಹೆಮ್ಮರವಾಗಿ ದ್ವೇಷಕ್ಕೆ ಎಡೆ ಮಾಡಿಕೊಡುತ್ತದೆ. ಬಂದ ಕರೆಯನ್ನು ರಿಸೀವ್ ಮಾಡಿದ ನಂತರ ವಿರಾಜ್ ನನ್ನು ಮಾತನಾಡಲು ಸಹಾ ಬಿಡದೆ "ಕಾತ್ಯಾಯಿನಿಯನ್ನು ನನ್ನಿಂದ ಬೇರೆ ಮಾಡಿದ್ದು ಸಾಲಲಿಲ್ಲವೇ..? ಈಗ ಸ್ಕಂದನನ್ನು ಸಹಾ ನನ್ನಿಂದ ದೂರ ಮಾಡುತ್ತಿರುವೆ. ನನ್ನ ಮೇಲೆ ನಿನಗೆ ದ್ವೇಷವಿದ್ದರೆ ನೇರಾನೇರ ಬಂದು ಮಾತನಾಡು, ಇಲ್ಲವೇ ನೇರವಾಗಿಯೇ ಕೊಂದುಬಿಡು. ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆಯಬೇಡ" ಎಂದು ಹೇಳಿದ. ಅದಕ್ಕೆ ವಿರಾಜ್ "ಅಶು, ಸ್ವಲ್ಪ ನನ್ನ ಮಾತು ಕೇಳು, ತಪ್ಪು ಮಾಡಿದ್ದೆ ನಿಜ. ಅದೇ ತಪ್ಪನ್ನು ಮತ್ತೆ ಮತ್ತೆ ಮಾಡುವಷ್ಟು ಮೂರ್ಖ ನಾನಲ್ಲ. ಸ್ಕಂದನನ್ನು ನಾನೇಕೆ ಕೊಲ್ಲಲಿ ? ಅವನ ಹೆತ್ತ ತಂದೆ ನೀನೇ ಆದರೂ ಸ್ವಂತ ಮಗನಿಗಿಂತ ಹೆಚ್ಚಾಗಿ ನಾನು ಅವನನ್ನು ಸಾಕಿದ್ದೇನೆ. ನನ್ನ ತಪ್ಪಿನ ಪ್ರಾಯಶ್ಚಿತ್ತ ಎಂದಲ್ಲ. ಕರುಳ ಬಳ್ಳಿಯ ಸಂಬಂಧ ನನ್ನನ್ನು ಹಾಗೆ ಮಾಡುವಂತೆ ಪ್ರೇರೇಪಿಸುತ್ತದೆ. ಸ್ಕಂದ ಮಾತ್ರವಲ್ಲ, ನನ್ನ ಮಗಳು ಸುಕ್ಷಿತ ಕೂಡಾ ಈಗ ಪ್ರಾಣಾಪಾಯದಲ್ಲಿದ್ದಾಳೆ. ಅವರನ್ನು ಉಳಿಸು ಎಂದು ಕೇಳಿಕೊಳ್ಳಲು ನಾನು ನಿನಗೆ ಕರೆ ಮಾಡಿದೆ. ನಾನೇ ನನ್ನ ಮಕ್ಕಳನ್ನು ಉಳಿಸಿಕೊಳ್ಳುವೆ, ನನ್ನ ಪ್ರಾಣ ಹೋದರೂ ಸರಿ.." ಎನ್ನುತ್ತಾ ಕರೆಯನ್ನು ಕೊನೆಗೊಳಿಸಿದನು. 

ಅಶುತೋಷ್ ತಕ್ಷಣವೇ ಆಸ್ಪತ್ರೆಗೆ ಹೊರಟನು. ಮನಸ್ಸಿನ ಆಲೋಚನಾ ಲಹರಿ ವಿವಿಧ ದಿಕ್ಕಿನಲ್ಲಿ ಸಾಗುತ್ತಿತ್ತು. ಕೆಲವೊಮ್ಮೆ ಅತ್ಯಂತ ತಾಳ್ಮೆಯ ಕಾರಣ ಬದುಕಲ್ಲಿ ಹಲವರನ್ನು ಕಳೆದುಕೊಳ್ಳುತ್ತೇವೆ. ಆದರೆ, ಹಲವು ಬಾರಿ ಕೋಪದಿಂದ. ನಾನು ಇಷ್ಟು ದಿನ ವಿರಾಜ್ ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆನೇ? ಅವನನ್ನು ಮಾತ್ರವಲ್ಲ, ಬದುಕಲ್ಲಿ ನಾನು ಯಾರನ್ನೂ ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ.

ಅಪರ್ಣಾ ಯಾವಾಗಲೂ ಹೇಳುತ್ತಿದ್ದಳು "ಅಶು, ಯಾವಾಗಲೂ ಸತ್ಯ ನಾವು ನೋಡುವುದಕ್ಕಿಂತ ವಿಭಿನ್ನವಾಗಿರುತ್ತದೆ. ಅದನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ನಾವು ಬದುಕನ್ನು ಬದುಕಬೇಕಾಗುತ್ತದೆ. ತಪ್ಪು ಎಂಬುದು ಕೂಡಾ ಮನಸ್ಸಿನ ಆಲೋಚನಾ ಲಹರಿಗೆ ಸಂಬಂಧಿಸಿದಂತೆ. ಕೆಲವೊಮ್ಮೆ 6 ಎಂಬುದು ಎದುರು ದಿಕ್ಕಿನಿಂದ ನೋಡಿದರೆ 9 ಎಂಬಂತೆ ಭಾಸವಾಗುತ್ತದೆ. ಇದು ತಪ್ಪು-ಒಪ್ಪುಗಳ ಸಮರ್ಥನೆಯಲ್ಲ. ಆದರೆ, ಬದುಕಿನ ಸರಿ-ತಪ್ಪುಗಳ ವಿಮರ್ಶೆ. ಕೆಲವೊಂದು ಅಮೃತದ ಹಿಂದೆ ಹಾಲಾಹಲವಿರುತ್ತದೆ. ಅಮೃತ ಬೇಕೆಂದರೆ ಹಾಲಾಹಲವನ್ನು ಸಹಾ ಕುಡಿದು ದಕ್ಕಿಸಿಕೊಳ್ಳುವ ಛಾತಿ ಇರಬೇಕು. ಪಳಗಿಸಲು ಬಂದರೆ ವಿಷ ಸರ್ಪವನ್ನು ಸಹಾ ಪಳಗಿಸಬಹುದು, ಇದೆಲ್ಲದಕ್ಕೂ ಸಾಕ್ಷಿ ಮಹಾದೇವ ಸದಾಶಿವ. ನಿನಗೆ ಕಷ್ಟ ಬಂದಾಗ ಅವನನ್ನು ಸ್ಮರಿಸಿದರೆ ಯಾವುದೋ ಬಲ ಬಂದಂತಾಗುತ್ತದೆ". ಅಶುತೋಷ್ ಅವಳ ಮಾತನ್ನು ನೆನಪಿಸಿಕೊಂಡು ಒಮ್ಮೆ ಮನಸ್ಸಿನಲ್ಲಿ ಶಿವನ ಧ್ಯಾನ ಮಾಡಿದ. ಒಮ್ಮೆಯೂ ದೇವರನ್ನು ನಂಬದವನು ಅಪರ್ಣಾ ಬಂದ ಮೇಲೆ ನಂಬತೊಡಗಿದ್ದು ಅವಳ ಆರಾಧ್ಯ ದೈವ ಸದಾಶಿವನನ್ನು. ಅಷ್ಟಕ್ಕೂ ಇಷ್ಟದೈವ ಅಥವಾ ಇಷ್ಟಪಟ್ಟದ್ದು ಯಾವುದೇ ಆದರೂ ಅದರ ಹಿಂದೆ ನಾವು ಇಷ್ಟಪಟ್ಟವರ ಪ್ರಭಾವ ಇರುತ್ತದೆ. ಅಯ್ಯೋ, ಸ್ಕಂದನ ಆಲೋಚನೆಯಲ್ಲಿ ನಾನು ಅಪರ್ಣಾ, ಮೈನಾ ಅಮ್ಮ ಮತ್ತು ಅಥರ್ವನ ಪರಿಸ್ಥಿತಿಯನ್ನು ಕೇಳುವುದನ್ನೇ ಮರೆತು ಹೋದೆ. ಕರುಳ ಸಂಬಂಧವೆಂದರೆ ಹೀಗೆಯೇ..? ಮನುಷ್ಯನನ್ನು ಬೇರೆಲ್ಲಾ ಆಲೋಚನೆಯಿಂದ ದೂರವಿಡಲು, ಕ್ಷಣ ಕಾಲ ದುರ್ಬಲವನ್ನಾಗಿ ಮಾಡಲು  ಬಹುಶಃ ಮಕ್ಕಳಿಗೆ ಮಾತ್ರ ಸಾಧ್ಯವೇನೋ..? ಅಥರ್ವನ ಜೊತೆಗೆ ಕಳೆದ ಕ್ಷಣಗಳು ಸಹಾ ಸವಿ ಕ್ಷಣಗಳು. ಅಥವಾ ನಾನು ಸ್ಕಂದನನ್ನು ಅವನಲ್ಲಿ ಕಾಣುತ್ತಿದ್ದೇನೆ.. ? ಏನೇ ಇದ್ದರೂ ಮಕ್ಕಳೆಂಬ ಮಮತೆ, ಅವರ ಮುಗ್ಧತೆ ಅವರತ್ತ ನಮ್ಮನ್ನು ಸ್ವಾಭಾವಿಕವಾಗಿ ಸೆಳೆದು ಬಿಡುತ್ತವೆ. ಸ್ಕಂದನನ್ನು ನಾನು ನನ್ನ ಮನೆಗೆ ಕರೆದೊಯ್ಯಬೇಕು. ಆನಂತರ ಸ್ಕಂದ ಮತ್ತು ಅಥರ್ವ ಇಬ್ಬರೂ ಸಹಾ ನನ್ನ ಜೊತೆಯೇ ಉಳಿಯುತ್ತಾರೆ.. ಹೀಗೆಯೇ ಆಲೋಚನಾ ಲಹರಿ ಮುಂದುವರಿಯುತ್ತಿತ್ತು. 

ಮುಂದಿನಿಂದ ಅಡ್ಡಾದಿಡ್ಡಿ ಬಂದ ಲಾರಿಯೊಂದು ಅಶುತೋಷ್ ಕಾರಿಗೆ ಗುದ್ದಿತು. ಭವಿಷ್ಯದ ಬಣ್ಣ ಬಣ್ಣದ ಕನಸುಗಳಲ್ಲಿ ಮುಳುಗಿದ್ದ ಅಶುತೋಷ್ ನ ಬದುಕು ಇನ್ನೇನು ಮುಗಿಯುವುದರಲ್ಲಿತ್ತು. 

ಬದುಕು ಎಂಬುದು ಕೆಲವೊಂದು ಸಂಧರ್ಭಗಳನ್ನು ಮತ್ತೊಬ್ಬರ ಬದುಕಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಗಂಟು ಹಾಕಿರುತ್ತಾನೆ. ಕಾಕತಾಳೀಯವೋ ಅಥವಾ ವಿಧಿ ನಿಯಾಮಕವೋ ವಿರಾಜ್ ಕೂಡಾ ಅದೇ ದಾರಿಯಲ್ಲಿ ಹಾದು ಹೋಗುತ್ತಿದ್ದ. ತನ್ನ ಮಗಳು ಸುಕ್ಷಿತ ಮಾತ್ರ ಮನಸ್ಸಿನಲ್ಲಿ ತುಂಬಿದ್ದಳು. ಆದರೆ, ಯಾವುದೋ ಅಪಘಾತ ಎಂದು ನಿರ್ಲಕ್ಷಿಸಿ ಸಾಗಲಿದ್ದವನ ಮನಸ್ಸಿನಲ್ಲಿ ಕಾತ್ಯಾಯಿನಿ ಹೇಳುತ್ತಿದ್ದ ಮಾತು ನೆನಪಾಯಿತು. "ಮತ್ತೊಬ್ಬರು ನಮ್ಮನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ ಎಂಬುದು ಅವರ ವ್ಯಕ್ತಿತ್ವವನ್ನು ತೋರಿಸಿದರೆ ನಾವು ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ." ಇವತ್ತು ಸುಕ್ಷಿತ ಮತ್ತು ಸ್ಕಂದನಿಗೆ ಅಪಘಾತವಾದಾಗ ಬೇರೆಯವರು ಸಹಾ ಹೀಗೆಯೇ ನಿರ್ಲಕ್ಷಿಸಿ ನಡೆದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಯೊಂದು ಮನಸ್ಸಿನಲ್ಲಿ ಎದ್ದಿತು. ವಿರಾಜ್ ನಂತಹಾ ಒಳ್ಳೆಯ ಮನಸ್ಸು ಕುಡಿತದ ಕಾರಣದಿಂದ ಸಮಾಜಕ್ಕೆ ಕಂಡಿರಲಿಲ್ಲ. ವಿರಾಜ್ ನ ಆತ್ಮಸಾಕ್ಷಿ ಯಾಕೋ ಈ ಅಪಘಾತವನ್ನು ನಿರ್ಲಕ್ಷಿಸಿ ಮುಂದೆ ಹೋಗಲು ಬಿಡಲಿಲ್ಲ. ಕಾರನ್ನು ಯೂ ಟರ್ನ್ ಮಾಡಿ ಬಂದವನಿಗೆ ಆಘಾತ ಕಾದಿತ್ತು. ತಕ್ಷಣವೇ ambulance ಗೆ ಕರೆ ಮಾಡಿದ ಮತ್ತು ಪೊಲೀಸರಿಗೆ ಸಹಾ. ಯಾಕೋ ಮನಸ್ಸು ಶಂಕಿಸುತ್ತಿತ್ತು, ಆದರೆ ಆಧಾರವಿರಲಿಲ್ಲ..

ಲಾರಿಯಲ್ಲಿ ಬಂದು ಅಪಘಾತ ಮಾಡಿದ ವ್ಯಕ್ತಿ ಯಾರಿಗೋ ಫೋನ್ ನಲ್ಲಿ "ಬಾಸ್, ಇವತ್ತಿಗೆ ಅವನ ಕತೆ ಮುಗಿಯಿತು" ಎಂದು ಹೇಳಿದ.


ಕತೆ ಬರೆಯುವವರಾರೋ, ಮುಂದುವರಿಸುವರಾರೋ.. ಅಂತ್ಯ ಮಾಡಿದೆವು ಎಂದು ಬೀಗುತ್ತಾರೆ. ಆದಿ, ಅಂತ್ಯ ಎಲ್ಲವೂ ನೀನೇ ಅಲ್ಲವೇ ಮಹಾದೇವ. ಎಲ್ಲವೂ ನಿನ್ನಿಚ್ಚೆ ಎಂದು ಶಿವನನ್ನು ಮನದಲ್ಲೇ ಸ್ಮರಿಸಿದರು ಆಗಷ್ಟೇ ಎಚ್ಚರವಾದ ಮೈನಾವತಿಯವರು

(ಎಂದಿನಂತೆ ಈ ಬಾರಿಯೂ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹಕ್ಕೆ ಸ್ಫೂರ್ತಿ. ಓದಿದವರು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ)

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ