ಕವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜುಲೈ 26, 2020

ಚಲಿಸುತ್ತಿರಬೇಕು ಚಿತ್ರಗಳು

 

(ಚಿತ್ರ: ವ್ಯಾನ್ ಗೋ ಅವರ ಪ್ರಸಿದ್ಧ painting)

ಚಲಿಸುತ್ತಿರಬೇಕು ಚಿತ್ರಗಳು
ಯಾವ ಚೌಕಟ್ಟಿಗೂ ಸಿಗದಂತೆ

ಸೆಲ್ಫಿ, ಫೋಟೋಗಳ ಮಾಯೆಗೆ ಸಿಲುಕಿ
ನೆನಪಾಗಿ ಕೊಳೆಯುವುದಕ್ಕಿಂತ
ಸ್ವಚ್ಛಂದವಾಗಿ ಹಾರಿಕೊಂಡಿರಬೇಕು

ಕಾಲನ ಜೊತೆ ಜೊತೆಗೇ ಹೆಜ್ಜೆ ಹಾಕುತ್ತಾ
ಯಾವ ಸೆಳೆತಕ್ಕೂ ಒಳಗಾಗದಂತೆ
ಜಾತಿ-ಮತದ ಭೇಧವಿಲ್ಲದೆ ಚಲಿಸುತ್ತಿರಬೇಕು

ಮಮಕಾರದ ಮಾಯೆಯ ತೊರೆದು
ಕಾಲನ ಘಳಿಗೆಯ ಪಾಶಕ್ಕೆ ಸಿಗದೆ
ಅಲೆಯುತ್ತಾ ನೆಲೆಯಾಗದಂತೆ ಹಾರಾಡಿಕೊಂಡಿರಬೇಕು

ಚಲನೆಯೇ ಬದುಕಿನ ನಿರಂತರತೆ
ಅವಿಶ್ರಾಂತಿಯೇ ಶ್ರಮಜೀವಿಯ ವಿಶ್ರಾಂತಿ
ಹೀಗೆ ಸಾರಲು ಚಲಿಸುತ್ತಿರಬೇಕು ಚಿತ್ರಗಳು

ಕಣ್ಣಳತೆಗೆ ಆಗಾಗ ಕಾಣುತ್ತಾ
ಗುರಿಯೆಡೆಗೆ ಛಲ  ಹುಟ್ಟಿಸಲು
ಚಲಿಸುತ್ತಲೇ ಇರಬೇಕು ಬದುಕೆಂಬ ಮಾಯಾಚಿತ್ರ

~ವಿಭಾ ವಿಶ್ವನಾಥ್

ಸೋಮವಾರ, ಜುಲೈ 13, 2020

ಚಹಾ-ಕಾಫಿ ಚೂರುಗಳು

1.ಸಕ್ಕರೆ ಖಾಲಿಯಾದಾಗ ಚಹಾಕ್ಕೆ
ಬೆಲ್ಲ, ಕಲ್ಲುಸಕ್ಕರೆಗಳೂ ಆಗಬಹುದು
ರುಚಿ ಬದಲಾಗಬಹುದು ಅಷ್ಟೇ..
ಹೊಂದಾಣಿಕೆ ಎಂದರೆ ಇದೆಯಾ..?

2. ಮೂಲೆಯ ಕಾಫಿ ಟೇಬಲ್ ಖಾಲಿಯಿಲ್ಲದಿದ್ದರೆ
ಮೊದಲು ಮೊದಲೆಲ್ಲಾ ಕಿರಿಕಿರಿಯೆನಿಸುತ್ತಿತ್ತು
ಈಗ ಯಾವುದೂ ಆಗುತ್ತದೆ.. ಕಾಫಿಯೊಂದಿದ್ದರೆ ಸಾಕು
ಅನಿವಾರ್ಯತೆ ಎಲ್ಲವನ್ನೂ ಕಲಿಸಿಬಿಡುತ್ತದೆ

3. ದಿನಾಲೂ ಕಾಫಿ ಇದ್ದರೂ ಆದೀತು
ಅಥವಾ ಚಹಾ ಕುಡಿದರೂ ಆದೀತು
ಅಥವಾ ಬಿಸಿನೀರು ಸಹಾ ಆದೀತು
ಬದಲಾವಣೆಗೆ ಒಗ್ಗಿಸಿಕೊಳ್ಳಲು ಕಲಿತಿರುವೆ

4. ಕಾಫಿ ಚೆನ್ನಾಗಿದೆಯೋ ಇಲ್ಲವೋ
ರುಚಿಯ ನಿರ್ಧಾರ ಕುಡಿಯುವವರದ್ದಲ್ಲವೇ..?
ಕೆಲವೊಮ್ಮೆ, ಮಾಡುವವರ ಮಾತಿಗೆ ಮರುಳಾಗಿ
ಸ್ವಂತ ನಿರ್ಧಾರವನ್ನೇ ಬದಲಿಸಿಕೊಂಡು ಬಿಡುತ್ತೇವೆ

5.ಪರಿಮಾಣ ಬದಲಾದಂತೆಲ್ಲಾ ರುಚಿ ಬದಲು
ಕಲಿತಷ್ಟೂ ಕಲಿಯುವುದು ಇದ್ದೇ ಇದೆ
ದಿನದಿನವೂ ಹೊಸ ರುಚಿ, ಹೊಸ ಪಾಠ
ನಾನಿನ್ನೂ ಬದುಕೆಂಬ ಪಾಕಶಾಲೆಯ ವಿದ್ಯಾರ್ಥಿ

6. ಸಿಹಿ ಕಾಫಿ ಏಕೋ ಸರಿಯಾಗುತ್ತಿಲ್ಲ
ನಾಲಿಗೆಗೆ ಹಿತವಾದರೂ ಏಕೋ ಕಸಿವಿಸಿ
ನಿತ್ಯದ ಕಹಿ ಕಾಫಿಯನ್ನೇ ಮನ ಬಯಸುತ್ತಿದೆ
ಹಠಾತ್ ಬದಲಾವಣೆಗೆ ಒಗ್ಗಿಕೊಳ್ಳುವುದೂ ಕಷ್ಟವೇ..

7. ನೋಡಲು ಚೆನ್ನಾಗಿಯೇ ಇದ್ದ ಕಾಫಿ
ಗುಟುಕರಿಸಿದ ನಂತರ ಕಹಿ ಕಹಿ
ಆಗೆಲ್ಲಾ ನನಗೆ ನೆನಪಾಗುವುದು
ಗೋಮುಖ ವ್ಯಾಘ್ರದಂತಹಾ ಹಿತಶತ್ರುಗಳೇ..

~ವಿಭಾ ವಿಶ್ವನಾಥ್

ಗುರುವಾರ, ಜುಲೈ 9, 2020

ಯಾವುದೊ ಭಾವ, ಯಾವುದೋ ಜೀವ


ಯಾವುದೊ ಭಾವ, ಯಾವುದೋ ಜೀವ
ಅರಿತು ಬೆರೆತು ಬಾಳುವುದಯ್ಯ

ಎಲೆಯ ಮರೆಯ ಪ್ರತಿಭೆಯು ಇಂದು 
ಕಾಣದೆ ಎಲ್ಲೋ ಅಡಗಿವುದಯ್ಯ

ನಗುವು,ಅಳುವು ಒಟ್ಟಿಗೆ ಬೆರೆತು
ಬಾಳನು ರಂಗು ಮಾಡಿವೆಯಯ್ಯ

ಬದುಕಿನ ಭಾವದ ತಂತಿಯ ಮೀಟಿ
ಒಳಗಿನ ತಿಳಿಯನು ಕಲಕುವೆವಯ್ಯ

ರಾಗ-ದ್ವೇಷದ ಭಾವದ ಪಥವ
ತೊರೆದು ಬಂದು ನಿಂತಿವೆಯಯ್ಯ

ಯಾರದೊ ಬದುಕು, ನನ್ನಯ ಹಾಡು
ಮರೆತೂ ಮರೆಯದಂತಾಗಿದೆಯಯ್ಯ

~ವಿಭಾ ವಿಶ್ವನಾಥ್

ಭಾನುವಾರ, ಜುಲೈ 5, 2020

ನನ್ನದಲ್ಲದ ಹಾಡು

ನನ್ನದಲ್ಲದ ಹಾಡ

ಹಾಡಬಲ್ಲೆನೆ ನಾನು?
ನನ್ನದಾಗದ ಬದುಕ
ಬದುಕಬಲ್ಲೆನೇ ನಾನು?

ಎದೆಯುಸಿರ ಸ್ವರ ಮೀಟಿ
ಭಾವವನೇ ಬಸಿದು
ನಾನಾಗದ ನನ್ನನ್ನು
ನಾನೇ ನಾನಾಗಿಸಿಕೊಂಡು

ಬದುಕಲಾಗದ ಬದುಕ
ಕನಸಿನಲಿ ಬದುಕುತಾ
ನನಸಾಗದ ಕನಸ
ಕನಸೇ ಬದುಕೆನ್ನುತಾ

ನನ್ನದಲ್ಲದ ಬದುಕು
ನನ್ನದಲ್ಲದ ಭಾವ
ಹೇಗೋ ಒಂದಾಗಿಸುತ
ನನ್ನದೇ ಎಂದೆನುತ

ಬದುಕ ಹಾಡಾಗಿಸುತ
ಹಾಡ ಬದುಕಿಸುತ
ಬದುಕಬಲ್ಲೆನು ನಾನು
ಹಾಡಬಲ್ಲೆನು ನಾನು

~ವಿಭಾ ವಿಶ್ವನಾಥ್

ಗುರುವಾರ, ಜುಲೈ 2, 2020

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ


ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಯಾರೊಬ್ಬರೂ ಇಲ್ಲದಿದ್ದಾಗಲೂ ಭರವಸೆ ನೀಡಿ ಬೆನ್ನಿಗೆ ನಿಲ್ಲುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಸೋತಾಗ ಹೆಗಲು ಕೊಡಲು ಯಾವಾಗಲೂ ಅವನಿರುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ನನ್ನ ನೆಚ್ಚಿನ ಹಾಡಿನ ಸಾಲುಗಳನ್ನು ಗುನುಗಲು ನೆನಪಿಸುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ತಪ್ಪಾದಾಗಲೆಲ್ಲಾ ತಿದ್ದಿ ನಡೆಸಲು ಅವನಿದ್ದಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಜಗತ್ತೇ ನನ್ನ ತಿರಸ್ಕರಿಸಿದರೂ, ತಿರಸ್ಕಾರ ತೋರದವನು ಅವನು

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ನೀನೇ ಉತ್ತಮವೆನ್ನುತ್ತಾನೆ, ನಾನು ಉತ್ತಮವೆಂಬ ಮಾತು ನಿಜವಲ್ಲದಿದ್ದರೂ

ನಿರಾಶೆಯ ಕತ್ತಲೆಯ ಕೂಪದಲ್ಲಿರುವಾಗಲೂ
ಭರವಸೆಯ ಬೆಳಕು ತೋರಿ ಜೀವಂತವಾಗಿರಿಸುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಬರೀ ಅಣ್ಣ ಎಂಬ ಪದಕ್ಕಿಂತ ಮಿಗಿಲಾದವನು

~Azubougu Chinwendu chukwudi
(ಭಾವಾನುವಾದ: ವಿಭಾ ವಿಶ್ವನಾಥ್)

ಮೂಲ ಕವಿತೆ:
A brother from another mother
-----------------------------------------------------
A brother from another mother
He got your back always when no one else did

A brother from another mother
He always there even when you are defeated

A brother from another mother
He reminded you of the lyrics to you favorite songs

A brother from another mother
He corrects you when you are wrong

A brother from another mother
He always there even when the world rejects you

A brother from another mother
Tells you that you are the best even when you are not

Even when you are in the mood of despondency
He gives u reason to keep your hopes alive

A brother from another mother
He is more than just a brother

~Azubuogu Chinwendu chukwudi

ಭಾನುವಾರ, ಜೂನ್ 7, 2020

ಪ್ರತಿಯೊಂದೂ ಬದಲಾಗುತ್ತದೆ

ಪ್ರತಿಯೊಂದೂ ಬದಲಾಗುವುದಿಲ್ಲಿ

ಕೊನೆಯುಸಿರಿನಿಂದಲೂ ಹೊಚ್ಚ ಹೊಸದಾಗಿ
ಪುನರಾರಂಭಿಸಬಹುದು
ಆದರೆ, ಆದದ್ದು ಆಗಿಹೋಗಿದೆ.. ಬದಲಾಗದಲ್ಲ
ಸುರೆಗೆ ಬೆರೆಸಿದ ನೀರು, ಒಮ್ಮೆ ಬೆರೆಸಿದ ನಂತರ..
ಹಿಂಗಿಸಿ ಹಿಂಪಡೆಯಲಾಗುವುದಿಲ್ಲ..

ಆದದ್ದೆಲ್ಲಾ ಆಗಿ ಹೋಗಿದೆ, ಬದಲಾಯಿಸಲಾಗದು
ಸುರೆಗೆ ಬೆರೆಸಿದ ನೀರು, ಒಮ್ಮೆ ಬೆರೆಸಿದ ನಂತರ..
ಹಿಂಗಿಸಿ ಹಿಂಪಡೆಯಲಾಗುವುದಿಲ್ಲ..
ಆದರೆ,
ಭವಿಷ್ಯದ ಪ್ರತಿಯೊಂದನ್ನೂ ಬದಲಾಯಿಸಬಹುದು
ಪ್ರತಿಯೊಂದೂ ಬದಲಾಗುತ್ತದೆ..
ನೀನು ಮತ್ತೊಮ್ಮೆ ಹೊಸದಾಗಿ ಪುನರಾರಂಭಿಸಬಹುದು
ನಿನ್ನ ಕೊನೆಯುಸಿರಿನಿಂದ..

-ಬ್ರೆಕ್ಟ್
(ಭಾವಾನುವಾದ : ವಿಭಾ ವಿಶ್ವನಾಥ್)

ಮೂಲ ಕವಿತೆ:
Everything Changes

Everything Changes, You can make
A fresh start with your final breath
But what has happened has happened, And the water
You once poured into the wine cannot be
Drained off again

What has happened has happened, The water
You once poured into the wine cannot be
Drained off again, but
Everything changes, You can make
A fresh start with your final breath

-Bertolt Brect

ಭಾನುವಾರ, ಮೇ 31, 2020

ನಿಮ್ಮೆಲ್ಲಾ ಚಿಂತೆಗಳ ತೊರೆದುಬಿಡಿ..

ಚಿಂತೆಗಳೆಲ್ಲವನ್ನೂ ತೊರೆದುಬಿಡಿ
ಸಂಪೂರ್ಣ ಪರಿಶುದ್ಧ ಮನಸ್ಸಿನವರಾಗಿ
ಕನ್ನಡಿಯ ಪ್ರತಿಫಲಿಸುವ ಮುಖದಂತೆ
ಅದು ಯಾರ ಚಿತ್ರವನ್ನೂ ಹಿಡಿದಿಟ್ಟಿಲ್ಲ

ಕನ್ನಡಿಯ ಪರಿಶುದ್ಧತೆ ನಿನಗೆ ಬೇಕಾದಲ್ಲಿ
ನಿನ್ನನ್ನು ನೀನೊಮ್ಮೆ ಅವಲೋಕಿಸಿಕೋ
ಅಂತರಾಳದಲ್ಲಿ ಹುದುಗಿಹುದು ನಿರ್ಲಜ್ಜ ಸತ್ಯ
ಕನ್ನಡಿಯಂತೆ ಅದು ಪ್ರತಿಫಲಿಸುತ್ತಲಿದೆ

ಲೋಹವನ್ನುಜ್ಜಿ ಹೊಳಪು ಕೊಟ್ಟರೆ
ಕನ್ನಡಿಯಂತೆ ಹೊಳೆಯಬಹುದು
ಹೃದಯದ ಕನ್ನಡಿಗೆ ಬೇಕಿರುವುದು
ಯಾವ ರೀತಿಯ ಹೊಳಪು..?

ಹೃದಯಕ್ಕೂ, ಕನ್ನಡಿಗೂ ನಡುವೆ
ಇರುವುದೊಂದೇ ವ್ಯತ್ಯಾಸ:
ಹೃದಯ ಗುಟ್ಟುಗಳನ್ನು ಮರೆಮಾಚುತ್ತದೆ
ಆದರೆ, ಕನ್ನಡಿ ಮರೆಮಾಚದಲ್ಲ

~ ರೂಮಿ
(ಭಾವಾನುವಾದ: ವಿಭಾ ವಿಶ್ವನಾಥ್)

(ಮೂಲ ಕವಿತೆ)
Let go of Your Worries
---------------------------------------
Let go of your worries
and be completely clear-hearted,
like the face of a mirror
that contains no images

If you want a clear mirror,
behold yourself
and see the shameless truth,
which the mirror reflects

If metal can be polished
to a mirror-like finish
what polishing might the mirror
of the heart require?

Between the mirror and the heart
is this single difference:
the heart conceals secrets,
while the mirror does not.

~Rumi

ಭಾನುವಾರ, ಮೇ 17, 2020

ಬಡಬಡಿಕೆ

ಕೆಲವೊಮ್ಮೆ ಕುರುಡಾಗಬೇಕು
ಸತ್ಯದ ಪರದೆ ಹೊದ್ದ ಸುಳ್ಳುಗಳಿಗೆ

ಹಲವೊಮ್ಮೆ ಕಿವುಡಾಗಬೇಕು
ಬಣ್ಣ ಬಣ್ಣದ ಮಾತುಗಳಿಗೆ

ಆಗಾಗ ಬರಡಾಗಬೇಕು
ಅತಿ ಭಾವುಕತೆಗೆ ಸ್ಪಂದಿಸದಂತೆ

ಕೆಲವೊಮ್ಮೆ ಮೂಕವಾಗಬೇಕು
ಇಷ್ಟವಾಗದ ಮಾತುಗಳಿಗೆ

ಹಲವೊಮ್ಮೆ ಸುಮ್ಮನಾಗಬೇಕು
ನಮ್ಮ ತಪ್ಪಿಲ್ಲದಿದ್ದರೂ ಒಪ್ಪಿಗೆ ಎಂಬಂತೆ

ಕೊನೆಗೊಮ್ಮೆ ಕಲ್ಲಾಗಬೇಕು 
ರಾಮಾಯಣದ ಅಹಲ್ಯೆಯಂತೆ

ಶಾಶ್ವತವಾಗಿ ಮರೆಯಾಗಿಬಿಡಬೇಕು
ಮತ್ತೆಂದೂ ಮರಳಿ ಬಾರದಂತೆ

~ವಿಭಾ ವಿಶ್ವನಾಥ್

ಭಾನುವಾರ, ಏಪ್ರಿಲ್ 19, 2020

ನನ್ನ ಭಾವ ನನ್ನದಷ್ಟೇ

ಆಲೋಚನೆಯ ಒಳಸುಳಿಗೆ
ಕೈ ಹಾಕಿ ಕದಡದಿರಿ
ಭಾವನೆಗಳ ಚೌಕಟ್ಟಿನೊಳಗೆ
ಅಂಕೆ ಮೀರಿ ಬರದಿರಿ

ನನ್ನ ಭಾವ ನನ್ನದು, ನನ್ನದಷ್ಟೇ
ಅದಕ್ಕೆ ನಿಮ್ಮ ನೆರಳ ಸೋಕಿಸದಿರಿ
ಆ ಕ್ಷಣದ ಸವಿಯ ಸಿಹಿಯನೆಂದೂ
ಕಹಿ ಮಾಡುವ ಯತ್ನ ಮಾಡದಿರಿ

ಲಂಗು ಲಗಾಮಿಲ್ಲದ ನಾಲಿಗೆಯ
ಬಳಸಿ ಹರಿಹಾಯದಿರಿ
ಮೇರೆ ಮೀರಿದ ಮಾತನ್ನಾಡಿ
ನಿಮ್ಮ ಗೌರವ ಕಳೆದುಕೊಳ್ಳದಿರಿ

ಬರೆದ ಭಾವ, ಭಾಷ್ಯ ನನ್ನದು
ನೀವದರ ಗೇಲಿ ಮಾಡದಿರಿ
ಮೆಚ್ಚುಗೆಯ ಮಾತನಾಡದಿದ್ದರೂ
ಚುಚ್ಚು ಮಾತನ್ನಂತೂ ಆಡದಿರಿ

ಇಷ್ಟು ದಿನ ಆದದ್ದು ಆಗಿ ಹೋಯಿತು
ಇನ್ನಾದರೂ ಎಚ್ಚೆತ್ತುಕೊಳ್ಳಿರಿ
ಒಳ್ಳೆಯತನಕ್ಕೂ ಮಿತಿ ಇದೆ
ನಿಮ್ಮ ವರ್ತನೆಯಿಂದ ಕೆಟ್ಟವಳನ್ನಾಗಿಸದಿರಿ

~ವಿಭಾ ವಿಶ್ವನಾಥ್

ಭಾನುವಾರ, ಏಪ್ರಿಲ್ 12, 2020

ನನ್ನಪ್ಪ ನನ್ನ ವಿಶ್ವ

ನನ್ನಪ್ಪ ವಿಶ್ವಪ್ರಸಿದ್ದನಲ್ಲ
ಆದರೆ,ಅವನೇ ನನ್ನ ವಿಶ್ವ

ನನ್ನಪ್ಪ ದೂರ್ವಾಸನಲ್ಲ
ಆದರೆ, ಅವನ ಕೋಪಕೇಕೋ ಹೆದರಿಕೆ
ನನ್ನಪ್ಪ ಸಾಮ್ರಾಟನಲ್ಲ
ಆದರೂ ನಾನೇ ಅವನ ರಾಜಕುಮಾರಿ

ನನ್ನಪ್ಪ ಹಠಮಾರಿಯಲ್ಲ
ಆದರೆ, ಆತನ ನಿರ್ಧಾರಗಳು ಅಚಲ
ನನ್ನಪ್ಪ ಭಾಷಣಕಾರನಲ್ಲ
ಆದರೆ,ಆತನ ಮಾತುಗಳೇ ನನ್ನ ಸ್ಫೂರ್ತಿ

ನನ್ನಪ್ಪ ನ್ಯಾಯಾಧೀಶನಲ್ಲ
ಆದರೆ,ಆತನ ಮಾತ ಮೀರಿ ನಡೆಯುವುದಿಲ್ಲ
ನನ್ನಪ್ಪ ಅತಿ ಭಾವುಕನಲ್ಲ
ಆದರೆ, ಭಾವನೆಗಳಿಗೆ ಸ್ಪಂದಿಸುವವ

ನನ್ನಪ್ಪ ಶಿಲ್ಪಿಯಲ್ಲ
ಆದರೆ,ನನ್ನ ವ್ಯಕ್ತಿತ್ವವನ್ನು ರೂಪಿಸುವವ
ನನ್ನಪ್ಪನನ್ನು ನಾನು ಪೂಜಿಸುವುದಿಲ್ಲ
ಏಕೆಂದರೆ, ನಾನು ಅವನನ್ನು ಪ್ರೀತಿಸುವೆ

~ವಿಭಾ ವಿಶ್ವನಾಥ್

ಭಾನುವಾರ, ಮಾರ್ಚ್ 29, 2020

ಮತ್ತೆ ಹುಟ್ಟಿ ಬರುವನೇ ರಾಮ?

ರಾವಣನಂತಹ ನರರಾಕ್ಷಸರ ವಧಿಸಲು

ಮತ್ತೆ ಹುಟ್ಟಿ ಬರುವನೇ ರಾಮ?

ತಂದೆ-ತಾಯಿಯರ ಕಣ್ಮಣಿಯಾಗಿ
ಸತ್ಯಪಾಲಕ, ನರೋತ್ತಮನಾಗಿ
ಎಲ್ಲರಿಗೂ ಮಾದರಿಯಾಗಿ ಬದುಕಲು
ಮತ್ತೆ ಹುಟ್ಟಿ ಬರುವನೇ ರಾಮ?

ಸಿಂಹಾಸನದ ವೈಭೋಗವನೆಲ್ಲ ತೊರೆದು
ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು
ಸತ್ಯ-ನಿಷ್ಠನಾಗಿ ಜನರ ಮನವ ಗೆಲ್ಲಲು
ಮತ್ತೆ ಹುಟ್ಟಿ ಬರುವನೇ ರಾಮ?

ಕಲಿಗಾಲದ ಜನರ ನಡುವಲೊಬ್ಬನಾಗಿ
ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗಿ ಪೋಷಿಸಿ
ಮನದ ಅಂಧಕಾರಕ್ಕೆ ಮುಕ್ತಿ ನೀಡಲು
ಮತ್ತೆ ಹುಟ್ಟಿ ಬರುವನೇ ರಾಮ?

~ವಿಭಾ ವಿಶ್ವನಾಥ್

ಭಾನುವಾರ, ಮಾರ್ಚ್ 22, 2020

ಅವನು ಬರಲೇ ಇಲ್ಲ

ಸೆರೆಯಿಂದ ಮುಕ್ತಿ ನೀಡು ಎಂದು
ಬೇಡಿಕೆಯ ತೀವ್ರತೆಯಲಿ ಬೇಡಿದರೂ
ಭಕ್ತಿಗೆ ಸರಿಯಾದ ಫಲ ದೊರೆಯಲಿಲ್ಲ
ಕಡೆಗೂ ಅವನು ಬರಲೇ ಇಲ್ಲ..

ಕಾಯುತ್ತಾ ಕುಳಿತು ಸೋತುಹೋದೆ
ನೋಡುತ್ತಾ ನಿಂತು ಸೊರಗಿಹೋದೆ
ಯಾವ ಪ್ರಾರ್ಥನೆಗಳೂ ತಲುಪಲಿಲ್ಲ
ಕಡೆಗೂ ಅವನು ಬರಲೇ ಇಲ್ಲ..

ಕನ್ಯಾಸೆರೆ ಬಿಡಿಸಲು ಬಂದವರಲ್ಲಿ
ರಾಜಕುಮಾರನೂ ಇದ್ದ, ರಾಕ್ಷಸನೂ ಇದ್ದ
ನಿರ್ಧಾರ ಮಾಡುವ ಮೊದಲು ಕಾಯುತಲಿದ್ದೆ
ಆಗಲೂ ಅವನು ಬರಲೇ ಇಲ್ಲ..

ರಾಜಕುಮಾರನದ್ದು ಹಂಗಿನ ಅರಮನೆ
ರಾಕ್ಷಸನದ್ದು ಸೊಬಗಿನ ಸೆರೆಮನೆ
ಬಯಲೊಳಗೆ ಬದುಕುವ ಆಸೆ ಸಾಯುವಾಗಲೂ
ಬದುಕಿಸಲು ಅವನು ಬರಲೇ ಇಲ್ಲ..

ಬದುಕಿನ ಭ್ರಮೆಗಳಲ್ಲೇ ತೃಪ್ತಿ ಪಡುತ್ತಾ
ಬದುಕಿನ ಕುಲುಮೆಯೊಳಗೆ ಬೇಯುತ್ತಿರುವಾಗಲೂ
ತಂಪಾದ ಮಡಿಲಿನ ಆಸೆಯಿಟ್ಟುಕೊಂಡಾಗಲೂ
ಅದೇಕೋ ಅವನು ಬರಲೇ ಇಲ್ಲ..

ಜೀವ, ಆತ್ಮಗಳ ಸೆರೆಯಿಂದ ಬಿಡಿಸಿ
ಬಯಲು-ಆಲಯಗಳ ಪರಿಚಯಿಸಿ
ಮುಕ್ತಿ ನೀಡುವನೆಂದು ಕಾಯುತಲಿದ್ದರೂ
ಜವರಾಯನೆಂಬ ಅವನು ಬರಲೇ ಇಲ್ಲ..

~ವಿಭಾ ವಿಶ್ವನಾಥ್

ಗುರುವಾರ, ಮಾರ್ಚ್ 12, 2020

ಮರಳಿ ಬಂದಿತು ಯುಗಾದಿ


ವಸಂತನ ಆಗಮನವ ಸಾರುತ
ಇಳೆಯಲಿ ಹರುಷವ ತುಂಬುತ
ಸಿಹಿ-ಕಹಿಯ ಹಂಚುತಲಿ ...
ಮರಳಿ ಬಂದಿತು ಯುಗಾದಿ

ಕಷ್ಟ-ಸುಖಗಳ ತಕ್ಕಡಿಯನು
ಸಮನಾಗಿ ತೂಗಿ ಎಂದೇಳುತ
ಸಮಚಿತ್ತವನು ಕಲಿಸಲು ನಮಗೆ
ಮರಳಿ ಬಂದಿತು ಯುಗಾದಿ

ಮಾವಿನ ಚಿಗುರಿನ ಛಾಯೆಯಲಿ
ಕೋಗಿಲೆ ಹಾಡಿನ ಮಾಯೆಗಾಗಿ
ಹರುಷದ ಹೊನಲಿನ ಸೊಗಸಿನಲಿ 
ಮರಳಿ ಬಂದಿತು ಯುಗಾದಿ

ಹರುಷವ ಎಲ್ಲೆಡೆ ಹಂಚಿರೆಂದು
ಭಾವೈಕ್ಯತೆಯ ಸಿಹಿಯ ಪಸರಿಸಿ
ಮನದ ಕಹಿಯ ಮರೆಸಲೆಂದು
ಮರಳಿ ಬಂದಿತು ಯುಗಾದಿ

-ವಿಭಾ ವಿಶ್ವನಾಥ್

ಭಾನುವಾರ, ಮಾರ್ಚ್ 1, 2020

ಹವ್ಯಾಸ

ಮೌನವೀಣೆಯ ತೊರೆದು
ನುಡಿಸು ಮುಂದಿರುವುದನು
ಬೇಸರವೆಲ್ಲವ ಮರೆತು
ನೀಡು ಎಲ್ಲರ ಮನಕೆ ತಂಪನು
ಒಳ ಬೇಗುದಿಯ ತಣಿಸಿ
ಚಿಮ್ಮು ಸಂತಸದ ಬುಗ್ಗೆಯನು
ತಲ್ಲಣವ ಮೂಲೆಗಿರಿಸಿ
ರೂಡಿಸಿಕೋ ಮೆಚ್ಚಿನ ಹವ್ಯಾಸವನು

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 23, 2020

ಸೌಹಾರ್ದ ಭಾರತ

ಸೌಹಾರ್ದತೆಯಲಿ ಬದುಕಿ ಬಾಳಲು
ಅವಕಾಶ ನೀಡಿದೆ ತಾಯ್ನೆಲ ಭಾರತ

ಗಿರಿ-ಸಿರಿ, ತೊರೆಗಳ ಭವ್ಯ ನಾಡಲಿ
ಜಾತೀಯತೆಯನು ಮೆಟ್ಟಿ ನಿಲ್ಲುತ
ಒಂದಾಗಿ ಬಾಳಲು ಅವಕಾಶವಾಗಿದೆ
ಸ್ವತಂತ್ರ ಭಾರತದ ಭವ್ಯತೆಯಿಂದ

ಹಲವರ ತ್ಯಾಗ-ಬಲಿದಾನಗಳ ಕುರುಹಾಗಿ
ಶಾಂತಿಯತೆ-ಶೌರ್ಯಗಳ ಮಿಲನದಿಂದ
ಅಡಿಯಾಳಾಗಿ ಬಾಳುವುದರ ಬದಲಿಗೆ
ಸಿಕ್ಕಿದೆ ಬಹುತ್ವ ಭಾರತಕೆ ಸ್ವಾತಂತ್ರ್ಯ

ತ್ಯಾಗ-ಶಾಂತಿ-ಸಮೃದ್ಧತೆಯ ಕುರುಹಾಗಿ
ಹಾರುತಿಹ ಬಾವುಟ ಸಾರುತಲಿದೆ
ಬದುಕಿನ ಮಹತ್ವದ ಪಾಠವೊಂದನು
ಅದುವೇ ಮನುಜನ ಬಾಳಿನ ಸಮಾನತೆಯನು

ವಿವಿಧತೆಯಲ್ಲಿ ಏಕತೆಯ ಸಾರುತ
ಜನ-ಮನದಲ್ಲಿ ಸ್ಥಿರವಾಗಿ ನೆಲೆ ನಿಂತಿರುವ
ದೇಶದ ಕೀರ್ತಿಪತಾಕೆಯ ಎತ್ತಿ ಹಿಡಿಯಲು
ಸ್ವಾತಂತ್ರ್ಯ-ಸೌಹಾರ್ದತೆಯಲಿ ಬಾಳ್ವೆ ಮಾಡುವ

~ವಿಭಾ ವಿಶ್ವನಾಥ್

ಗುರುವಾರ, ಫೆಬ್ರವರಿ 20, 2020

ನೇತ್ರದಾನ

ಇಂದೇ ನಿಮ್ಮ ಒಳಗಣ್ಣ ತೆರೆದು ನಿರ್ಧರಿಸಿ
ನೇತ್ರದಾನವ ಮಾಡಲೇ ಬೇಕೆಂದು

ಸ್ವಾರ್ಥವ ತೋರದೆ ನಿಸ್ವಾರ್ಥಿಯಾಗಿ
ಲೋಕವ ಕಾಣದ ಅಂಧರಿಗೆ
ಬಾಳನು ತೋರಲು ನಿರ್ಧರಿಸಿ
ಸತ್ತ ನಂತರ ನೇತ್ರದಾನವ ಮಾಡಿ


ಬದುಕಿರುವಾಗ ನಾವು ಮಾಡುವ
ಹಣದ ದಾನ-ಧರ್ಮಗಳಿಗಿಂತ
ಶನ್ತ ಮೇಲೆಯೂ ಉಪಕಾರಿಯಾಗುವ
ನೇತ್ರದಾನದ ಕುರಿತು ಯೋಚಿಸಿ

ಭವಿಷ್ಯದ ಜೀವಗಳ ನೆನೆದು
ಅಂಧಕಾರವ ನೀಗಿಸುವ ಪಣತೊಟ್ಟು
ಅವರ ಬಾಳಲಿ ಬೆಳಕಾಗುವ
ಅವಕಾಶವ ಉಪಯೋಗಿಸಿಕೊಳ್ಳಿ

ಮಣ್ಣ ಸೇರುವ ದೇಹದಭಿಮಾನಕೆ
ಮರುಳಾಗಿ ಬಾಳದೆ, ಎಲ್ಲರೂ
ನೇತ್ರದಾನ ಮಹಾದಾನವೆಂದರಿತು
ಎಚ್ಚೆತ್ತು ಎಲ್ಲರಲೂ ಅರಿವು ಮೂಡಿಸೋಣ

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 9, 2020

ಒಂದಿಷ್ಟು ಸಮಯ ಬೇಕಿದೆ


ಒಂದಿಷ್ಟು ಸಮಯ ಬೇಕಿದೆ
ನನ್ನದೇ ಆದ ಬದುಕ ಬದುಕಲು

ಮರಳಿ ಬಾರದ ಗತದ ನೆನಪಲ್ಲಿ
ಮುಚ್ಚಿ ಹೋದ ಹವ್ಯಾಸಗಳ ರೂಢಿಸಿಕೊಳ್ಳಲು
ಒತ್ತಡಗಳಿಂದ ಕೊಂಚ ನಿರಾಳವಾಗಲು
ಒಂದಿಷ್ಟು ಸಮಯ ಬೇಕಿದೆ..

ಒಡೆದು ಬಿದ್ದ ಕನಸುಗಳ ಕಟ್ಟಲು
ಪುನಃ ಒಡೆಯದಂತೆ ಎಚ್ಚರಿಕೆ ವಹಿಸಲು
ಆತ್ಮಶಕ್ತಿಯ ಗಟ್ಟಿಗೊಳಿಸಿಕೊಳ್ಳಲು
ಒಂದಿಷ್ಟು ಸಮಯ ಬೇಕಿದೆ..

ಮತ್ತೊಬ್ಬರ ಸಂಚಿಗೆ ಬಲಿಯಾಗದಂತೆ
ಅವರಿವರ ಚುಚ್ಚುಮಾತಿಗೆ ತಲೆಕೆಡಿಸಿಕೊಳ್ಳದಂತೆ
ನನ್ನದೇ ನಿರ್ಧಾರಗಳಂತೆ ನಡೆದುಕೊಳ್ಳಲು
ಒಂದಿಷ್ಟು ಸಮಯ ಬೇಕಿದೆ..

ಆಗದಿರುವುದಕ್ಕೆ ಕೊರಗುತ್ತಾ ಕೂರದೆ
ಮುಂದಾಗುವುದಕ್ಕೆ ಮಾತ್ರ ಗಮನ ನೀಡುತ್ತಾ
ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದುಕೊಳ್ಳಲು
ಒಂದಿಷ್ಟು ಸಮಯ ಬೇಕಿದೆ..

ಅವರಿವರೊಂದಿಗೆ ಹೋಲಿಸಿಕೊಳ್ಳದೆಯೇ
ನಮ್ಮತನವನ್ನು ತೊರೆಯದೆ ಬದುಕಲು
ಬದುಕ ಬಯಲಿನ ಅಲೆಮಾರಿಯಂತಾಗಲು
ಒಂದಿಷ್ಟು ಸಮಯ ಬೇಕಿದೆ..

ಬಯಸಿದ್ದೆಲ್ಲಾ ಆ ಕ್ಷಣಕ್ಕೇ ನೆರವೇರಲು
ನಮ್ಮ ಬಳಿ ಮಂತ್ರದಂಡವೂ ಇಲ್ಲ
ಬದುಕು ಮಾಯಾಜಾಲವೂ ಅಲ್ಲ
ಎಲ್ಲದಕ್ಕೂ ಒಂದಿಷ್ಟು ಸಮಯ ಬೇಕಿದೆ
~ವಿಭಾ ವಿಶ್ವನಾಥ್


ಗುರುವಾರ, ಡಿಸೆಂಬರ್ 5, 2019

ಅಪರಿಚಿತಳಾಗಿಯೇ ಉಳಿದಿದ್ದರೆ...

ಅಪರಿಚಿತಳಾಗಿಯೇ ಉಳಿದಿದ್ದರೆ 
ಎಷ್ಟೋ ಚೆನ್ನಾಗಿರುತ್ತಿತ್ತಾದರೂ..
ಪರಿಚಿತತೆಯ ನೆನಪುಗಳ ಸವಿ
ಸಿಗುತ್ತಲೇ ಇರಲಿಲ್ಲವೋ ಏನೋ..

ಪರಿಚಿತತೆಯ ಆಳಕ್ಕಿಳಿದಷ್ಟೂ
ಸಂಬಂಧಕ್ಕೊಂದು ಹೆಸರು ಹುಡುಕಬೇಕು
ಅದರೊಳಗಿನ ಬಂಧದೊಳಗೇ
ಬಂಧಿಯಾಗಿ ಬದುಕು ಸವೆಸಬೇಕು

ಅವರ ನೋವಿಗೆ ಮುಲಾಮಾಗಬೇಕು
ಕೆರಲಿದಾಗಳೆಲ್ಲಾ ಸಂತೈಸುತ್ತಿರಬೇಕು
ಅಸಹಾಯಕರೆನಿಸಿದಾಗ ಸಹಾಯಕ್ಕೊದಗಬೇಕು
ಸಿಟ್ಟಿಗೆ ಬಲಿಪಶುವೂ ಆಗಬೇಕು

ಮೊದಲಿಗೆ ಪರಿಚಿತಳಾಗಿದ್ದಾದರೂ ಏಕೆ..?
ಅದರ ನಂತರದ ಅಪರಿಚಿತತೆಯ ಕಹಿ
ಪರಿಚಿತತೆಯ ಸಿಹಿಯ ಮರೆಸಬಹುದೇನೋ..
ಸಿಹಿಯ ನಂತರದ ಕಹಿ ಹೆಚ್ಚೇ ಅಲ್ಲವೇ..?

ಬದುಕಿನ ಮತ್ತೊಂದು ಮಗ್ಗುಲಿಗೆ
ಅರಿವಾಗದಂತೆ ದಾಟುತ್ತಿರಬೇಕು
ಅಂಟಿಯೂ ಅಂಟದಂತೆ ನಡೆಯುತ್ತಾ
ಇದ್ದೂ ಇಲ್ಲದಂತೆ ಸಾಗುತ್ತಿರಬೇಕು

ಪರಿಚಿತಳಾಗದಿದ್ದರೇ ಚೆನ್ನಾಗಿರುತ್ತಿತ್ತು
ಎಂದೆನ್ನುವ ಎಳೆ ಇಡಿದೇ ಮಾತಾಡುತ್ತಾ
ಈಗ ಪರಿಚಿತತೆಯ ಮಗ್ಗುಲಿಗೆ ಹೊರಳುತ್ತಿದ್ದೇವೆ
ಅಪರಿಚಿತತೆಯ ದೂರವ ಹತ್ತಿರಾಗಿಸುತ್ತಾ..

~ವಿಭಾ ವಿಶ್ವನಾಥ್

ಗುರುವಾರ, ನವೆಂಬರ್ 7, 2019

ಶಚಿ ತೀರ್ಥದಾಳದಲ್ಲಿ..

ನಮ್ಮೆಲ್ಲಾ ನೆನಪ ಹುಗಿದಿಟ್ಟುಬಿಡಲೇ
ಶಚಿ ತೀರ್ಥದ ಆಳದಲ್ಲಿ..

ಅದಾವ ಮೀನೂ ನುಂಗದಂತೆ
ಯಾವ ಮೀನುಗಾರನಿಗೂ ಸಿಕ್ಕದಲೇ..
ಯಾವ ಈಜುಗಾರನಿಗೂ ದಕ್ಕದಂತೆ
ಶಚಿ ತೀರ್ಥದ ಆಳದಲ್ಲಿಟ್ಟು ಬಿಡಲೇ..?

ಮರೆತ ನೆನಪೂ ನಿನಗಾಗದಿರಲಿ
ನೆನಪಿನಿಂದೊದಗುವ ಖುಷಿಯೂ ದಕ್ಕದಿರಲಿ
ಹುಗಿದಿಟ್ಟ ನೆನಪ ನೆನಪೂ ನನಗಾಗದೆ
ಶಚಿ ತೀರ್ಥದಲ್ಲೇ ಮುಳುಗಿಹೋಗಲಿ..

ಶಾಪವೂ ವರವಾಗುವಂತೆ ಭಾಸವಾಗಿ
ವರವೂ ಶಾಪದಂತೆ ಭ್ರಮೆಯಾಗಿ
ಅವೆಲ್ಲವನೂ ತೊಳೆದು ಬಿಡಲೇ
ಶಚಿ ತೀರ್ಥದ ತೀರ್ಥಧಾರಿಣಿಯಾಗಿ

ಕಾಲಾಂತರಾಳದ ಸುಳಿಗೆ ಸಿಲುಕುತ್ತಾ
ಅವ ದುಷ್ಯಂತನಾಗದೇ, ನಾ ಶಾಕುಂತಲೆಯಾಗದೆ
ಉಳಿದು ಹೋಗುವೆವು ನಾವು ನಮ್ಮಂತೆಯೇ
ಶಚಿ ತೀರ್ಥದಾಳದ ದಯೆಯಲಿ ಬದುಕಿ

ಮರೆವಿನ ಲೋಕದಲಿ ಅವನಂತೆ ಅವನೂ
ವಾಸ್ತವತೆಯ ಲೋಕದಲ್ಲಿ ನನ್ನಂತೆ ನಾನೂ
ಬದುಕ ದೋಣಿಯನು ನಡೆಸುವೆವು
ಶಚಿ ತೀರ್ಥದ ಮೇಲೆಯೇ ಹುಟ್ಟು ಹಾಕಿ..

~ವಿಭಾ ವಿಶ್ವನಾಥ್

ಗುರುವಾರ, ಅಕ್ಟೋಬರ್ 10, 2019

ಕಾಲಾಂತರದ ಹೆಜ್ಜೆಗಳು

ಬಿರುಬಿಸಿಲಲಿ ಬೆಂದು-ಬೆಂದು
ಬಸವಳಿದು ಬೇಗೆ ಅನುಭವಿಸುತ್ತಿವೆ
ಕಲ್ಲುಗಳಾದರೂ,ಪಾದಗಳಾದರೂ
ಭಿತ್ತಿಯಲಿ ಮೂಡುವ ಭಾವವೊಂದೇ
ಇವೆಷ್ಟು ಕಾಲದಿಂದ ಬಳಲಿವೆಯೋ?

ತಾವು ಜೊತೆಯಿದ್ದರೂ ಇಲ್ಲದಂತೆ
ಜೊತೆಗಿರುವ ಭಾವ ಮೂಡಿಸುವಂತೆ
ಜೊತೆಗಿಲ್ಲದಾಗಿರುವ ಸ್ವಾತಂತ್ರ್ಯದಂತೆ
ತಂದೆ-ತಾಯಿ-ಮಗುವಿನಂತಿದ್ದರೂ..
ಅಂಟಿಯೂ ಅಂಟದಂತೆ ಬಿಗಿಯಾಗಿವೆ

ಹೂ ಪಕಳೆಗಳಂತೆ ಅರಳಿ ನಿಂತು
ಬಿರಿದಿದ್ದರೂ ಬಾಡದವಾಗಿವೆ
ನಿಚ್ಚಳವಾಗಿ ಇಲ್ಲೇ ಬೀಡು ಬಿಟ್ಟು
ನಾವೆಲ್ಲಿಗೂ ಹೋಗೆವೆನುತ..
ಮ್ಲಾನವಾಗಿ ಇಲ್ಲೇ ಉಳಿದು ಬಿಟ್ಟಿವೆ

ಬಿಸಿಲಿಗೆ ಬೆನ್ನೊಡ್ಡಿ ಹಿಗ್ಗದೆ
ಮಳೆ-ಗಾಳಿಗೆ ಮೈಯೊಡ್ಡಿ ಕುಗ್ಗದೆ
ಮೋಕ್ಷಕ್ಕಾಗಿಯೇ ಕಾದಿರುವಂತೆ
ವರ್ಷಾನುಗಟ್ಟಲೆಯಿಂದ ಬದುಕಿವೆ
ಕಾಲಾಂತರದ ಹೆಜ್ಜೆಗಳಾಗಿ ಉಳಿದಿವೆ..

-ವಿಭಾ ವಿಶ್ವನಾಥ್