ಶುಕ್ರವಾರ, ಫೆಬ್ರವರಿ 22, 2019

ಅವಳ ಪ್ರೀತಿ

ಅವಳ ಪ್ರೀತಿಯನು ತೀರಿಸ ಹೊರಟು
ಮತ್ತವಳದ್ದೇ ತೀರದ ಋಣದಲಿ ಬಂಧಿ

ನವಮಾಸ ಹೆತ್ತು, ಹೊತ್ತು, ತುತ್ತಿಟ್ಟಳು
ಬೆಚ್ಚಗೆ ಕಾಪಿಟ್ಟು, ನವೆಯದಂತೆ, ನೋಯದಂತೆ
ಕಷ್ಟಗಳಿಗೆಲ್ಲಾ ತಾನೇ ಗುರಾಣಿಯಂತಾದವಳು
ಒಳಗಿನ ಕತ್ತಿಯಿಂದ ಇಂಚಿಂಚೇ ತಿವಿಸಿಕೊಂಡಳು

ಅವಳ ನೆತ್ತರ ಹೀರುತ್ತಲೇ ನಿಂತವಗೆ
ಅವಳ ಕಸುವನೆಲ್ಲಾ ಬಸಿದ ಮೇಲೆ
ಅವಳ ಪ್ರೀತಿಯ ಅಗಾಧತೆ ಅರಿವಾಗಿತ್ತು
ಪ್ರೀತಿಯ ಸಾಲ ಆಗಲೇ ಆಗಸಕ್ಕೇರಿತ್ತು

ಪ್ರೀತಿಯ ಅಸಲು ತೀರಿಸುವೆನೆಂದು ಹೊರಟರೆ
ಅದಕ್ಕೀಗ ಬಡ್ಡಿ, ಚಕ್ರಬಡ್ಡಿಗಳೂ ಸೇರುತ್ತಿವೆ..
ಯಾವಾಗ ಇಷ್ಟೆಲ್ಲಾ ಪ್ರೀತಿಯ ಸಾಲವಾಯಿತೋ
ಅವಳ ಪ್ರೀತಿಯ ಸಾಲ ತೀರುವುದೇ ಎಂದಾದರೂ

ಅವಳ ಪ್ರೀತಿಯ ಅಳೆಯಲು ಹೊರಟರೆ
ಸಿಗುತ್ತಿಲ್ಲ ಯಾವುದೇ ಮಾಪಕಗಳೂ ಈಗ
ಆಳ, ಉದ್ದ, ಅಗಲ ಯಾವುದೂ ದಕ್ಕುತ್ತಿಲ್ಲ
ಅವಳ ಪ್ರೀತಿಯ ಅಳೆಯ ಹೊರಟ ಹುಚ್ಚ ನಾನು..

ಅವಳ ಪ್ರೀತಿಯ ದೊಡ್ಡ ಸಾಗರದೊಳಗೆ
ನನ್ನ ಪ್ರೀತಿಯು ಚಿಕ್ಕ ಹನಿಗೂ ಸಮವಿಲ್ಲವಲ್ಲ
ಹೀಗೇ ಹಪಾಹಪಿಸುವಾಗ ಅವಳಂದಳು
"ಅಯ್ಯೋ, ಹುಚ್ಚಪ್ಪಾ" ಪ್ರೀತಿಗೆ ಮಾಪನವುಂಟೇ?

ನಾನು ರಕ್ಕಸನಾದಾಗ ಮರುಗುತ್ತಲಿದ್ದವಳು
ಮನುಷ್ಯನಾದಾಗ ಅಂದದ್ದು ಒಂದೇ ಮಾತು
ನನ್ನ ಪ್ರೀತಿ ವಿಷಬೀಜ ಬಿತ್ತಿತೆಂದುಕೊಂಡಿದ್ದೆ
ಸದ್ಯ ಫಲವೀಯದಿದ್ದರೂ ವಿಷವಾಗಲಿಲ್ಲ

ಪ್ರೀತಿಯ ಋಣ ಎಂದೆಂದೂ ತೀರದೆಂದು
ಅರಿವು ಮೂಡುವಾಗ, ಪ್ರೀತಿಯಿಂದ ಮೈದಡವುತ್ತಲೇ
ಅವಳು ಕಣ್ಮುಚ್ಚಿದ್ದಳು, ನಾನು ಕಣ್ಬಿಟ್ಟಿದ್ದೆ
ಇತ್ತ ಅವಳ ಪ್ರೀತಿಯ ಸಾಲ ಅನಂತವಾಗುತಲಿತ್ತು

~ವಿಭಾ ವಿಶ್ವನಾಥ್

ಕ್ರಾಂತಿಯ ಕಿಚ್ಚು

ಧಗಧಗಿಸುತಲಿದೆ ಎಲ್ಲರೆದೆಯಲಿ
ದ್ರೋಹಿಗಳ ಸದೆಬಡಿಯುವ ಕಿಚ್ಚು

ನರರಾಕ್ಷಸರ ಕ್ರೂರ ಅಟ್ಟಹಾಸದ
ಕೇಕೆ ಕೆರಳಿಸಿತ್ತು ಇಡೀ ದೇಶವನೆ
ಬಾಂಬ್ ದಾಳಿಯ ಅಗ್ನಿಯ ರಾವು
ಕಮರಿಸಿತ್ತು ಮುಗ್ದರ ಆಸೆಗಳನು..

ಬಾರದ ಲೋಕದೆಡೆಗೆ ಪಯಣಿಸಿದರು
ಗಡಿಗಳ ರಕ್ಷಿಸಿದ್ದ ಹಲವಾರು ಯೋಧರು
ಕ್ರಾಂತಿವೀರರ ಮಾರಣ ಹೋಮಕೆ
ಪ್ರತೀಕಾರ ಸಲ್ಲುವುದೇ ತರವಲ್ಲವೇ?

ಯೋಧರ ಆತ್ಮಗಳೂ ಲೀನವಾಗದೆ
ಪಾಪಿಗಳ ಪ್ರಾಣ ಪಡೆಯಲು ಕಾದಿವೆ
ತಮ್ಮ ಬಲಿದಾನದ ನೆತ್ತರಿನೊಂದಿಗೆ
ನೂರಾರು ಮನಗಳಲಿ ಕಿಚ್ಚು ಹೊತ್ತಿಸಿವೆ

ಭಗ್ನ ದೇಹಗಳ ಕಂಡು ಸುಮ್ಮನಾದರೆ
ನಮ್ಮ ಜನ್ಮಕ್ಕೇ, ಮಾನವತೆಗೇ ಅವಮಾನ
ಇನ್ನಾದರೂ ಹಚ್ಚುವ ಕ್ರಾಂತಿಯ ಕಿಚ್ಚು
ಪಾಪಿಗಳ ಹತ್ಯೆಗೆ, ಪ್ರಾಣವನೇ ಪಣವಿಟ್ಟು..

~ವಿಭಾ ವಿಶ್ವನಾಥ್

ಮಂಗಳವಾರ, ಫೆಬ್ರವರಿ 19, 2019

ಗಜಲ್-02

ಬಾಲ್ಯವಿವಾಹದ ಕುಣಿಕೆಗೆ ದೂಡದಿರಿ ಎಂದಿಗೂ
ಕಲಿಕೆಯ ತೊರೆಸಿ ಸೆರೆಯಾಳಾಗಿಸದಿರಿ ಎಂದಿಗೂ

ಪೆನ್ನು ಪುಸ್ತಕ ಹಿಡಿವ ಪುಟ್ಟ ಕೈಗಳನು
ಅನ್ಯಾಯವಾಗಿ ದೂರ ಸರಿಸದಿರಿ ಎಂದಿಗೂ

ಮುಗ್ದ ಮನಗಳು ಕಟ್ಟಿದ ಕಲಿಯುವ ಕನಸ
ಚಿವುಟಿ ಹಾಕಿ ಘಾಸಿಗೊಳಿಸದಿರಿ ಎಂದಿಗೂ

ಚಿನ್ನದ ಮಾಂಗಲ್ಯದ ಸಂಕೋಲೆ ತೊಡಿಸಿ
ಬಾಳನೇ ಹೊನ್ನ ಶೂಲಕ್ಕೇರಿಸದಿರಿ ಎಂದಿಗೂ

ಗೋರಂಟಿಯಿಂದ ಕೈ ಕೆಂಪು ಮಾಡಲು ಹೋಗಿ
ಬಾಲ್ಯಹರಣ ಮಾಡಿ ನರಳಿಸದಿರಿ ಎಂದಿಗೂ

ಓಡುವ-ಓದುವ ಮನದಾಸೆಯನು ಕಟ್ಟಿ ಹಾಕಿ
ಹೆಣ್ಣು ಮಕ್ಕಳ ಖೈದಿಗಳನಾಗಿಸದಿರಿ ಎಂದಿಗೂ

ಮಣ್ಣಲಿ ಆಡುವ ಮಗಳ ಹಸೆಮಣೆಗೇರಿಸಿ
ಶಿಕ್ಷಣದ ಬಾಳಿಗೆ ಮಣ್ಣು ಹಾಕದಿರಿ ಎಂದಿಗೂ

ವಿಭಾಳ ಈ ಮನವಿಗೆ ಬೆಂಬಲಿಸುವಿರಾದರೆ
ಬಾಲ್ಯವಿವಾಹಕೆ ಪ್ರೋತ್ಸಾಹಿಸದಿರಿ ಎಂದಿಗೂ

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 10, 2019

ಆತ್ಮಸಖ

"ಕೆಲವರು ದೂರದಲ್ಲಿದ್ದರೂ, ಮನಸ್ಸು ಅವರನ್ನು ಮಾತನಾಡಿಸಲೇಬೇಕು ಅಂತಾ ಬಯಸುತ್ತೆ. ಇನ್ನು ಹಲವರು ಮುಂದೆಯೇ ಇದ್ದರೂ ಮಾತನಾಡಬೇಕು ಅಂತಾ ಅನಿಸುವುದೇ ಇಲ್ಲ, ಅಂದ ಹಾಗೆ ಈ ಕೆಲವರು ಅಪರಿಚಿತರೇನೂ ಅಲ್ಲಾ ದೂರವಿದ್ದರೂ ಹತ್ತಿರವೇ ಇದ್ದಾರೆಂದೆನಿಸುವ ಪರಿಚಿತರೇ, ನನಗೆ ಹಾಗನ್ನಿಸುವುದು ಶಿವುವಿನ ಬಗ್ಗೆ ಮಾತ್ರ" ಎಂದು ತನ್ನ ಆಪ್ತ ಗೆಳತಿ ವಸುಧಾಳ ಬಳಿ ಹೇಳಿಕೊಳ್ಳುತ್ತಿದ್ದಾಳೆ ಅಪರ್ಣ, ಮತ್ತೆ ಹೋಗಿ ಮಾತಾಡೋದಲ್ವಾ ಎಂದು ಕೇಳಿದ ವಸುಧಾಳಿಗೆ "ನನಗೆ, ಅವರ ಜೊತೆ ನೃತ್ಯದ ಬಗ್ಗೆ ಬಿಟ್ಟು ಬೇರೇನನ್ನೂ ಮಾತನಾಡಲೂ ಸಾಧ್ಯವಾಗುತ್ತಿಲ್ಲ, ಪರಿಚಯವಾಗಿ ಒಂದು ವರ್ಷ ಕಳೆಯುತ್ತಾ ಬಂದರೂ ಸಹಾ ಅವರ ಊರು,ಗೆಳೆಯರು,ತಂದೆ-ತಾಯಿ ಯಾರ ಬಗ್ಗೆಯೂ ಗೊತ್ತಿಲ್ಲ, ಇವೆಲ್ಲದರ ಬಗ್ಗೆ ಕೇಳಬೇಕೆನಿಸಿದರೂ, ಕೇಳಿದರೆ ಹೇಗೆ ಪ್ರತಿಕ್ರಿಯೆ ನೀಡುತ್ತಾನೋ ಅಂತಾ ಹೆದರಿ ನನಗೆ ಕೇಳೋಕೆ ಭಯ ಆಗುತ್ತೆ. ಹಾಗಂತ ಗಂಟು ಮುಖ ಹಾಕಿಕೊಂಡು ಸಿಡಿಮಿಡಿ ಅಂತ ಆನ್ನೋದಿಲ್ಲ, ಕೋಪ ಮಾಡಿಕೊಳ್ಳುವುದಿಲ್ಲ ತುಂಬಾ ತಾಳ್ಮೆ ಇದೆ ಆದರೆ ಕೆಲವೊಮ್ಮೆ ಕ್ಷುಲ್ಲಕವೆನಿಸುವ ವಿಷಯಕ್ಕೂ ಕೂಗಾಡಿಬಿಡುತ್ತಾರೆ, ನಾನು ಕೊಟ್ಟ ಸಲಹೆಗಳನ್ನು ತೆಗೆದುಹಾಕುವುದಿಲ್ಲ, ತುಂಬಾ ಚರ್ಚೆ ಮಾಡಿದರೂ ವೈಯಕ್ತಿಕ ವಿಚಾರಗಳನ್ನು ಮಾತಡುವಷ್ಟು ಸಲುಗೆಯಿಲ್ಲ,ಏಕೋ ನಾವು ಹತ್ತಿರದಲ್ಲಿದ್ದರೂ ಅಂತರಂಗಗಳು ದೂರದಲ್ಲೇ ಉಳಿದವು." ಎಂದು ನಿಡುಸುಯ್ದು ಸುಮ್ಮನಾದಳು.

ವಸುಧಾ ಎಂದೂ ಶಿವುವನ್ನು ನೇರವಾಗಿ ಭೇಟಿಯಾಗಿರಲಿಲ್ಲ, ಅವರಿಬ್ಬರ ನೃತ್ಯದ ಫೋಟೋ ನೋಡಿದ್ದಳು ಅಷ್ಟೇ.ಅಪರ್ಣ ಹೇಳುವುದನ್ನು ಕೇಳಿ ಅವನ ವ್ಯಕ್ತಿಚಿತ್ರವನ್ನು ರೂಪಿಸಿಕೊಂಡಿದ್ದಳು. ಶಿವುನ ಪೂರ್ತಿ ಹೆಸರು ಶಿವರಾಜ್, ನೋಡಲಿಕ್ಕೆ ಮನ್ಮಥನ ಹಾಗಿಲ್ಲದಿದ್ದರೂ, ಹೆಸರಿಗೆ ತಕ್ಕಂತೆ ಶಿವನ ರೀತಿ ಇದ್ದಾನೆ.ಶಾಂತ ಮುಖಭಾವ, ನೋಡಲು ತುಸು ಕಪ್ಪಾದರೂ, ಲಕ್ಷಣವಾಗಿದ್ದಾನೆ. ಅಂತಹಾ ಒಳ್ಳೆಯ ಭಾಷಣಕಾರನಲ್ಲದಿದ್ದರೂ , ಮುಗ್ಧ ಮಾತುಗಳಿಂದ ಎಲ್ಲರನ್ನೂ ಮೋಡಿ ಮಾಡುತ್ತಾನೆ ಎಂದಿದ್ದಳು ಅಪರ್ಣ.

ಅಪರ್ಣ ತುಂಬಾ ಸುಂದರಿಯಲ್ಲದಿದ್ದರೂ, ನೋಡಲು ಲಕ್ಷಣವಾಗಿದ್ದಾಳೆ. ಮುಗುಳ್ನಗೆಯೇ ಅವಳಿಗೊಂದು ಮೆರುಗು ನೀಡಿದೆ. ಭರತನಾಟ್ಯ ಅವಳ ಜೀವ, ಅದರಲ್ಲಿ ತುಸು ಹೊಸತನವನ್ನು ಬೆರೆಸುವ ಪ್ರಯೋಗಶೀಲೆ,ಅದರೊಂದಿಗೆ ಕೈಯಲ್ಲೊಂದು ಪುಸ್ತಕ ಹಿಡಿದು ಕೂತರೆ ಥೇಟ್ ತಪಸ್ಸಿಗೆ ಕೂತಂತೆಯೇ . ಊಟ,ನಿದ್ದೆ ಎಲ್ಲವನ್ನೂ ತೊರೆದು ಕೈಯಲ್ಲಿರುವ ಪುಸ್ತಕ ಮುಗಿಸುತ್ತಾಳೆ. ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಭಾವುಕಳು, ಹೆಚ್ಚಿನ ಸ್ನೇಹಿತರಿಲ್ಲ ಆದರೆ ಇರುವ ಕೆಲವರೇ ಇವಳ ಜೀವ. ತಂದೆ-ತಾಯಿಯರ ಮಾತಿಗೆ ಎದುರು ಮಾತಾಡುವವಳಲ್ಲ, ಅದಕ್ಕೋಸ್ಕರವಾಗಿ ತನಗಿಷ್ಟವಿಲ್ಲದಿದ್ದರೂ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದಳು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಾಸವಾಗಿದ್ದ ಇವಳಿಗೆ ತನ್ನ ಭರತನಾಟ್ಯ ಪ್ರದರ್ಶನಕ್ಕೆ ಒಂದು ಸದವಕಾಶ ಒದಗಿ ಬಂದಿತ್ತು. ದಸರಾ ಪ್ರಯುಕ್ತ ಯುವಜನತೆಗೆಂದೇ ಆಯೋಜಿತವಾಗಿದ್ದ ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಈಕೆ, ಅಂತಿಮ ಹಂತಕ್ಕೂ ಆಯ್ಕೆಯಾಗಿ ಜುಗಲ್ ಬಂಧಿ ಸುತ್ತಿನಲ್ಲಿ ಶಿವರಾಜ್ ನೊಂದಿಗೆ ಮುಖಾಮುಖಿಯಾದಳು. ಇಬ್ಬರೂ ಒಬ್ಬರಿಗೊಬ್ಬರು ಸೋಲದೆ, ಇಬ್ಬರೂ ಪ್ರಥಮ ಸ್ಥಾನವನ್ನು ಹಂಚಿಕೊಂಡರು. ಆಗ ಶಿವರಾಜ್ ನ ಮನಸ್ಸಿನಲ್ಲಿ ಈಕೆಯೂ ನನ್ನೊಡನೆ ಕಲಾಸೇವೆಯಲ್ಲಿ ಪಾಲ್ಗೊಂಡರೆ ನನ್ನ ನೃತ್ಯ ಪ್ರದರ್ಶನ ಮತ್ತು " ಕಲಾ ಶಾಲೆ"ಗೆ ಅರ್ಥ ಬರುವುದು ಎಂದುಕೊಂಡ. ಆದರೆ ಈ ಕಾಲದಲ್ಲಿ ಇದಕ್ಕೆಲ್ಲಾ ಬೆಲೆಕೊಟ್ಟು ನನ್ನೊಡನೆ ಆಕೆ ಸೇರುತ್ತಾಳಾ? ಎಂದೆಲ್ಲಾ ಆಲೋಚಿಸಿದರೂ,ಕೊನೆಗೆ ಆಕೆಯನ್ನು ಕೇಳಿದಾಗ ಅಪರ್ಣ ಸಂತೋಷದಿಂದ ತನಗೆ ಸಿಕ್ಕಿದ್ದ ಸಾಫ್ಟ್ ವೇರ್ ಕೆಲಸವನ್ನು ಬಿಟ್ಟು ಇದಕ್ಕೆ ಒಪ್ಪುತ್ತಾಳೆ.ಮನೆಯಲ್ಲಿ ಮೊದಲಿಗೆ ವಿರೋಧ ವ್ಯಕ್ತವಾದರೂ ನಂತರ ಮಗಳ ಸಂತೋಷಕ್ಕಾಗಿ ಅವಳ ತಾಯ್ತಂದೆಯರು ಇದಕ್ಕೆ ಒಪ್ಪಿ ಸುಮ್ಮನಾಗುತ್ತಾರೆ.

ಹೀಗೆ ಶಿವರಾಜ್ ನ "ಕಲಾ ಶಾಲೆ" ಯಲ್ಲಿ ಪ್ರಾರಂಭವಾದ ನೃತ್ಯ ಸೇವೆ ಮತ್ತು ಇವರಿಬ್ಬರ "ಅರ್ಧನಾರೀಶ್ವರ" ನೃತ್ಯ ಈಗ ಎಲ್ಲೆಡೆ ಸುಪ್ರಸಿದ್ದವಾಗಿದೆ. ಜೊತೆಗೆ ಕಲಾಶಾಲೆಯ ವಿದ್ಯಾರ್ಥಿಗಳ ಕಣ್ಮಣಿಗಳಾಗಿ ಇಬ್ಬರೂ ಆ ಶಾಲೆಯ ಎರಡು ಕಣ್ಣುಗಳಂತಾಗಿದ್ದಾರೆ.

ಇಷ್ಟಾದರೂ, ಇಬ್ಬರಿಗೂ ನನ್ನಿಂದಲೇ ಇಷ್ಟೆಲ್ಲಾ ಆಗಿರುವುದು ಎಂಬ ಹಮ್ಮು-ಬಿಮ್ಮುಗಳಿಲ್ಲ. ಅವರು ಒಬ್ಬರನ್ನೊಬ್ಬರು ಆದರಿಸಿ, ಅಭಿಮಾನಿಸುತ್ತಾರಲ್ಲದೇ ಪರಸ್ಪರ ಗೌರವಿಸುತ್ತಾರೆ.ಅಪರ್ಣ ವಸುಧಾಳ ಜೊತೆ ಬಿಟ್ಟರೆ ಇನ್ನೆಲ್ಲೂ ಅವನನ್ನು "ಶಿವು" ಎಂದು ಕರೆಯದೆ, ಶಿವರಾಜ್ ಎಂದೇ ಸಂಭೋದಿಸುತ್ತಾಳೆ. "ಆತ್ಮಸಖ"ನ ಪರಿಕಲ್ಪನೆಯಲ್ಲಿ ಮುಳುಗಿರುವ ಅವಳು ಆತನನ್ನೇ ತನ್ನ "ಆತ್ಮಸಖ"ನೆಂದು ಭಾವಿಸುತ್ತಾಳೆ. ಆದರೆ ಪ್ರೀತಿಯೋ, ಆರಾಧನೆಯೋ ತಿಳಿಯದೇ ಹೋಗಿದ್ದಾಳೆ.ಇಬ್ಬರೂ ಏಕಾಂತದಿಂದ ಇರುವ ಸಮಯ ಬಹಳಷ್ಟಿದ್ದರೂ, ಎಂದಿಗೂ ಅನುಚಿತವಾಗಿ ವರ್ತಿಸಿಲ್ಲ,ಮಾತುಕತೆಗಳು ನೃತ್ಯದ, ಓದಿನ ವಿಷಯಗಳನ್ನು ಬಿಟ್ಟು ಆಚೀಚೆ ಹೊರಳಿಲ್ಲ. ಆದರೆ ನೋಡುಗರ ಕಣ್ಣಿಗೆ ಇದಾವುದೂ ಗೋಚರವಾಗುವುದಿಲ್ಲ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿಯೇ ಎಂದಾದಾಗ, ಅಪರ್ಣಳ ತಂದೆ-ತಾಯಿಅವಳಿಗೆ ಯೋಗ್ಯ ವರನನ್ನು ಹುಡುಕಲು ಶುರುವಿಟ್ಟಿದ್ದಾರೆ. ಆಕೆ ಈಗ "ಕಲಾ ಶಾಲೆ"ಗೆ ಹೋಗದೆ ತಿಂಗಳಾಗುತ್ತಾ ಬಂದಿದೆ. ವಸುಧಾ ಮಾತಿಗೆ ಸಿಕ್ಕಾಗಲೆಲ್ಲಾ ಈ ವಿಷಯವನ್ನೇ ಹೇಳುತ್ತಾ ಹಲುಬುತ್ತಾಳೆ ಅಷ್ಟೆ.

ಅತ್ತ ಶಿವರಾಜ್ ಕೂಡಾ ಮೊದಲಿನ ಉತ್ಸಾಹದಲಿಲ್ಲ. ಈ ಹಾಡಿನ ಸಾಲುಗಳನ್ನು ಇತ್ತ ಶಿವರಾಜ್, ಅತ್ತ ಅಪರ್ಣ ಗುನುಗುತ್ತಿದ್ದಾರೆ.

"ಪಾರ್ವತಿ ಸ್ಪಂದನ, ಪರಶಿವ ನರ್ತನ

ಪರಶಿವ ಸನ್ನಿಧಿ, ಪಾರ್ವತಿ ಚೇತನ"

ಸುಪ್ತವಾಗಿ ಹುಟ್ಟಿದ ಈ ಪ್ರೀತಿ,ದೂರದಲ್ಲಿದ್ದಾಗ ಹೆಚ್ಚೆಚ್ಚು ಅರಿವಾಗುತ್ತಿದೆ ಶಿವರಾಜ್ ನಿಗೆ. ಆತ ಕೆಲವೊಮ್ಮೆ ಅಪರ್ಣಳೊಂದಿಗೆ ಇದರ ಕುರಿತು ಚರ್ಚಿಸಬೇಕೆಂದುಕೊಂಡಾಗ ಅವಳ ಗಂಭೀರತೆ, ಸಂಕೋಚದ ಸ್ವಭಾವ ಕಂಡು ಮತ್ತು ಆಕೆ ತಪ್ಪು ತಿಳಿದು ನನ್ನಿಂದ ದೂರಾದರೆ ಎಂದು ಸುಮ್ಮನಾಗಿದ್ದ. ಕಳೆದುಕೊಂಡ ಮೇಲೆಯೇ ಅದರ ಬೆಲೆ ಅರಿವಾಗುವುದು ಎಂಬಂತೆ ಆಕೆಯ ಅನುಪಸ್ಥಿತಿ ಈಗೀಗ ಅವನನ್ನು ಹೆಚ್ಚು ಕಾಡಲಾರಂಭಿಸಿದೆ. ಆಕೆಯ ಗೆಜ್ಜೆಯ ದನಿಯಿಲ್ಲದೆ ಕಿವಿಗೆ ಇಂಪೆನಿಸುತ್ತಿಲ್ಲ, ಆಕೆಯಿಲ್ಲದೆ ಗೆಜ್ಜೆ ಕಟ್ಟಲು ಮನಸಿಲ್ಲ. ಪ್ರೀತಿಯೆಂದರೆ ಇದೇನಾ ಎಂಬ ಪ್ರಶ್ನೆ ಅವನನ್ನು ಕಾಡುತ್ತಿದೆ.

ಇದೇ ಸಮಯಕ್ಕೆ ಆತನ ತಂದೆ-ತಾಯಿಗಳು ಇದಾವುದರ ಅರಿವಿಲ್ಲದೆ ವಧುವಿನ ಅನ್ವೇಷಣೆಯಲ್ಲಿದ್ದಾರೆ. ಈತನೂ ಏನೂ ಮಾಡಲು ತೋಚದೆ, ಅವರ ಜೊತೆಗೆ ಕನ್ಯಾ ಪರೀಕ್ಷೆಗೆ ಹೊರಟಿದ್ದಾನೆ.


*****

ಇಂದು ವಸುಧಾ ಶಿವರಾಜ್-ಅಪರ್ಣರ ಮದುವೆಯಲ್ಲಿ ಸಡಗರ-ಸಂಭ್ರಮದಿಂದ ಓಡಾಡುತ್ತಿದ್ದಾಳೆ.

ಅಂದು ನಡೆದದ್ದಿಷ್ಟು....

ಶಿವರಾಜ್ ಅಂದು ನೋಡಲು ಹೋಗಿದ್ದ ಹುಡುಗಿ ವಸುಧಾ, ಆದರೆ ಆತ ಅಪರ್ಣಳ ಶಿವು ಎಂದು ಗೊತ್ತಾದ ತಕ್ಷಣವೇ ಅವನನ್ನು ನಿರಾಕರಿಸಿ ಇಬ್ಬರ ಮನೆಯವರಿಗೂ ವಿಷಯ ತಿಳಿಸಿದಳು.ಇಬ್ಬರ ಮನೆಯಲ್ಲೂ ಇವರ ಮುಗ್ಧ ಪ್ರೇಮಕ್ಕೆ ಮತ್ತು ತಮ್ಮ ತಮ್ಮ ಸಂತೋಷವನ್ನು ಬದಿಗಿರಿಸಿ ತಮ್ಮ ಮಾತಿಗೆ ಬೆಲೆ ನೀಡಿದಕ್ಕೆ ಹರ್ಷಿಸಿ, ಶಿವ-ಪಾರ್ವತಿಯರ ಮಿಲನಕ್ಕೆ ದೈವಿಕ ಪ್ರೇರಣೆಯೆಂಬಂತೆ ಅಂತರಂಗಗಳ ಪ್ರೀತಿ ಒಂದಾಗಲು ಎಲ್ಲರೂ ಒಮ್ಮನಸಿನಿಂದ ಒಪ್ಪಿದರು.

ಅಪರ್ಣಳಿಗಂತೂ ವಸುಧಾಳನ್ನು ಎಷ್ಟು ಕೊಂಡಾಡಿದರೂ ಸಾಲದು. ಆದರೆ ವಸುಧಾ ಅದಕ್ಕೊಪ್ಪದೆ ನಾನು ನಿಮಿತ್ತ ಮಾತ್ರ. ಕಾಲವೇ ನಿಮ್ಮ ನಿಷ್ಕಲ್ಮಶ ಪ್ರೀತಿಯನ್ನು ಒಂದಾಗಿಸಿದೆ.ಅರ್ಧನಾರೀಶ್ವರರನ್ನು ಯಾರಿಂದಲೂ ದೂರ ಮಾಡಲಾಗದು.

"ಆತ್ಮದೊಲುಮೆಗೆ ಕಾಲವೇ ಸಹಕಾರಿ
ಆತ್ಮಸಖನ ಕೂಡಿದಳು ಪ್ರೇಮದರಸಿ"

ಎಂದು ನಗುತ್ತಾ ಇಬ್ಬರಿಗೂ ಶುಭ ಕೋರಿದಳು ವಸುಧಾ.

~ವಿಭಾ ವಿಶ್ವನಾಥ್

ಬುಧವಾರ, ಫೆಬ್ರವರಿ 6, 2019

ಮನಸ್ಸಿನ ಪ್ರವೇಶದ್ವಾರ

ಕಲ್ಲಿನ ಕೋಟೆಯ ದಾಟಬಹುದಂತೆ
ಮನದ ಗೋಡೆಯ ಹಾರಬಹುದೇ?

ಮರ್ಕಟದಂತಹಾ ಮನಸ್ಸಾದರೂ
ಮನದ ರಕ್ಷಣೆಯಲ್ಲಿ ಬಹು ಹುಶಾರು..!
ಅಪರಿಚಿತರೆಲ್ಲರೂ ಮನದೊಳಗಿರಲಾರರು
ಅದಕ್ಕೊಂದು ಪರಿಮಿತಿ ಇದೆಯಲ್ಲವೇ?

ಪರಿಚಯ ಎಂದಾಕ್ಷಣ ಮಾತ್ರಕ್ಕೆ
ಮನದೊಳಗೆ ನೆಲೆ ನಿಂತುಬಿಡಲು
ಇದೇನು ಅತಿಥಿ ಗೃಹವಲ್ಲವಲ್ಲಾ..!
ನಮ್ಮಯ ರಹಸ್ಯ ಅಭೇದ ಕೋಟೆ

ರಕ್ಷಣೆಗೆ ಮತ್ತೊಬ್ಬರನು ನೆಚ್ಚಲಿಲ್ಲ
ಆಳಿನ ಕೆಲಸವು ಹಾಳು ಅಲ್ಲವೇ..?
ನಿಕಟವರ್ತಿಗಳ ಭಾಂದವ್ಯ ಭವನಕ್ಕೆ
ಇಷ್ಟಾದರೂ ಎಚ್ಚರಿಕೆ ಒಳಿತಲ್ಲವೇ..?

ಮನಸ್ಸು ಕಲ್ಲೆನಿಸುವುದಿಲ್ಲ ಆಪ್ತರಿಗೆ
ಮನಸ್ಸಿನ ಕೋಟೆಗೆ ನಿಷೇಧವುಂಟು
ಅಪರಿಚಿತರಿಗೆ, ಕೆಲ ಪರಿಚಿತರಿಗೂ..!
ನಮ್ಮ ಮನಸ್ಸಿನ ವಾಸಿಗಳ ಹೊಣೆ ನಮ್ಮದೇ..

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 3, 2019

ನಾಜೂಕಿನ ಹಸಿರು ಬಳೆಗಳು

ಗಾಜಿನ ಬಳೆಗಳು ಚೆಂದವೇ
ಆದರೆ ಈಗೀಗ ಪಟ್ಟಣದ
ಮಾಲ್ ಗಳಲ್ಲಿ ಇವು ದೊರಕುವುದಿಲ್ಲ

ಬಣ್ಣ ಬಣ್ಣದ ಪ್ಲಾಸ್ಟಿಕ್ ಬಳೆಗಳು
ಡಬ್ಬಿಯಲ್ಲಿ ರಾಶಿ ಬಿದ್ದಿವೆ ಜೀವವಿಲ್ಲದಂತೆ
ಆದರೆ ನನಗವು ಇಷ್ಟವೇ ಆಗುವುದಿಲ್ಲ

ಕಿಣಿ ಕಿಣಿ ಎಂದು ಸದ್ದು ಮಾಡುವ
ನನ್ನ ಓಡಾಟಕೆ ಜೀವ ತುಂಬುವ
ಗಾಜಿನ ಬಳೆಗಳು ಬಹಳವೇ ಇಷ್ಟ

ಆಡುವಾಗ ಒಡೆಯಬಹುದೆಂದು
ಗೆಳತಿಯರಂತೂ ಇದರಿಂದ ಬಹು ದೂರ
ಗಾಜು ಒಡೆಯದಿರಲು ಸಾಧ್ಯವೇ..?

ಇದು ಹಳೆಯ ಪ್ಯಾಷನ್ ಎನ್ನುತ್ತಾ
ಅಕ್ಕ ಗಾಜಿನ ಬಳೆಗಳಿಂದ ದೂರ..
ಹಿಂದಿನ ತಲೆಮಾರುಗಳಿಂದಲೂ ಸಹಾ..!

ಕೆಲಸಕ್ಕೆಂದು ಬಸ್ ನಲ್ಲಿ ಹೋಗುವಾಗ
ನೂಕುನುಗ್ಗಲಲ್ಲಿ ನುಜ್ಜುಗ್ಗುಜ್ಜಾಗುವುದೆಂದು
ಅಮ್ಮನೂ ಗಾಜಿನ ಬಳೆ ತೊಡುವುದಿಲ್ಲ..

ಆದರೆ ಅಜ್ಜಿಯ ಕೈ ತುಂಬೆಲ್ಲಾ
ಗಲಗಲಿಸುವ ಹಚ್ಚ ಹಸಿರು ಬಳೆಗಳು
ಹೆಣ್ತನಕೆ ಶೋಭಿಸುವ ಶುಭ ಕಳೆಗಳು

ಪಟ್ಟಣದಿಂದ ಬಂದಿಯೆ ಹಳ್ಳಿಗೆ
ಸಂಪ್ರದಾಯದ ಸೌಧದ ಮಡಿಲಿಗೆ
ಅಪರೂಪದ ಬಳೆಗಾರನೂ ಬಂದಿಹನು

ತರಹೇವಾರಿ ಬಳೆಗಳೆಲ್ಲವ ತಂದಿಹನು
ನನಗಂತೂ ಚುಕ್ಕಿಯ ಹಸಿರು ಬಳೆಗಳು
ಪುಟ್ಟಗೌರಿಗೆ ಪುಟ್ಟ ಬಳೆಯ ಅಲಂಕಾರ

ಒಡೆಯದ,ಸವೆಯದ ಬಳೆ ಏನು ಚೆಂದ?
ಒಡೆದರೆ ಸುಂದರ ಕಲಾಕೃತಿ ಮಾಡುವೆ
ಗಾಜಿನ ಬಳೆಗಳ ತೊಡದೆ ಬಿಡೆನು

ಅಜ್ಜಿಯಂದಳು ನಾಜೂಕಿನ ಬದುಕಿನಂತೆಯೇ
ಈ ಗಾಜಿನ ನಾಜೂಕಿನ ಬಳೆಗಳೂ..
ಸಂಭಾಳಿಸುವುದರ ಮೇಲೆ ನಿಂತಿದೆ ಬದುಕು

ಇಂದು ನಾನೂ ಬಳೆ ತೊಟ್ಟಿರುವೆ
ಅಜ್ಜಿಗೆ ಭಾಷೆಯನ್ನೂ ಕೊಟ್ಟಿರುವೆ
ಸಂಪ್ರದಾಯವ ಬಲಿ ನೀಡೆನೆಂದು

~ವಿಭಾ ವಿಶ್ವನಾಥ್
(ಚಿತ್ರ ಕೃಪೆ: ಶ್ರೀಮತಿ ಲತಾ ಜೋಷಿ)