ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 6, 2020

'ಅ'ಲ್ಲಿಂದ Eಲ್ಲಿಯವರೆಗೂ ('ಅ' ಯಿಂದ E-learning ವರೆಗೂ)

 

ಇಂದು ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಹಾಗೆಯೇ ಶಿಕ್ಷಕರೂ ಸಹಾ ಬದಲಾಗಿದ್ದಾರೆ. ಆದರೆ, ಗುರುಗಳು ಎಂದರೆ ಇಂದಿಗೂ ನೆನಪಾಗುವಂತೆ ಹೆಜ್ಜೆ ಮೂಡಿಸಿದ ಹಲವಾರು ಮಹಾನ್ ವ್ಯಕ್ತಿಗಳಿದ್ದಾರೆ.


ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನವೆಂದು ಆಚರಿಸುವಂತೆ ಹೇಳಿದ ರಾಧಾಕೃಷ್ಣನ್ ರವರನ್ನು ನೆನೆಯುವುದು ಅಗತ್ಯ. 

ತಮ್ಮ ಹುಟ್ಟುಹಬ್ಬವನ್ನು ವಿದ್ಯಾರ್ಥಿಗಳಿಗಾಗಿ ಮುಡಿಪಿಟ್ಟ ಅಬ್ದುಲ್ ಕಲಾಂ ಸರ್ ಮತ್ತೊಬ್ಬರು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸುತ್ತಾ ಅವರ ಕುತೂಹಲಗಳತ್ತ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ ಗುರುಗಳು ಅವರು.

ಎಷ್ಟೋ ವಿರೋಧಗಳ ನಡುವೆಯೂ ಮಹಿಳಾ ಶಿಕ್ಷಕಿಯಾಗಿ ವಿದ್ಯೆಯ ಹಣತೆ ಹಚ್ಚಿದ ಸಾವಿತ್ರಿಬಾಯಿ ಫುಲೆ ಮತ್ತೋರ್ವ ಮಹಾನ್ ಗುರು

ಗುರು ಎಂದರೆ, ನೀತಿ ಎಂದರೆ ಇತಿಹಾಸದಲ್ಲಿ ನೆನಪಾಗುವುದು ಚಾಣಕ್ಯ. ಆತನ ತಂತ್ರಗಾರಿಕೆ, ಶಿಷ್ಯನ ಸಾಮ್ರಾಜ್ಯ ನಿರ್ಮಾಣದಲ್ಲಿ ಮಾಡಿದ ಉಪದೇಶ ಇಂದಿಗೂ ಆತನನ್ನು ಎತ್ತರದ ಸ್ಥಾನದಲ್ಲಿಟ್ಟಿವೆ.

ಎಲ್ಲಾ ಯುವಕರಿಗೂ ಗುರುವಾದ ವಿವೇಕಾನಂದರು, ಮತ್ತವರ ಗುರುಗಳಾದ ರಾಮಕೃಷ್ಣ ಪರಮಹಂಸರು ಇಬ್ಬರೂ ಇಂದಿಗೂ ಲೋಕಮಾನ್ಯರು. ಪರಮಹಂಸರಂತಹಾ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವವಾಗಿ ರೂಪುಗೊಂಡದ್ದು ವಿವೇಕಾನಂದರು.

ಮಹಾಭಾರತದ ದ್ರೋಣರು ಮತ್ತೊಬ್ಬ ಮಹಾನ್ ಗುರು. ಮಗ ಮತ್ತು ಶಿಷ್ಯರ ನಡುವೆ ಭೇಧ ಮಾಡದೆ ಶಿಷ್ಯರನ್ನೂ ಮಕ್ಕಳಂತೆ ಕಂಡವರು. ದ್ರೋಣರಂತಹಾ ಗುರುಗಳಿಂದ ರೂಪುಗೊಂಡ ಅರ್ಜುನ. ದ್ರೋಣರ ಪ್ರತಿಮೆಯಿಂದಲೇ ಸ್ಫೂರ್ತಿಗೊಂಡ ಏಕಲವ್ಯ.

ಸಾಂದೀಪನಿಯಂತಹಾ ಗುರುಗಳಿಂದ ಕಲಿತ ಶ್ರೀ ಕೃಷ್ಣ.

ಶಿಕ್ಷಕರು ವಿದ್ಯೆ ಕಲಿಸಿದಂತೆ, ಶಪಿಸಿದವರು ಸಹಾ ಇದ್ದಾರೆ.
ಹರ ಮುನಿದರೆ ಗುರು ಕಾಯ್ವನು
ಗುರು ಮುನಿದರೆ..??
ಪರಶುರಾಮ ಮತ್ತು ಕರ್ಣರ ಗುರು-ಶಿಷ್ಯರ ಸಂಬಂಧ ಇದಕ್ಕೆ ಸಾಕ್ಷಿ.

ಶಿಕ್ಷಣ ಬದಲಾಗಿದೆ. ಶಿಕ್ಷಕರು ಸಹಾ ಬದಲಾಗಿದ್ದಾರೆ. ಮೌಲ್ಯಗಳು ಸಹಾ ಬದಲಾಗುತ್ತಿವೆ. ವಿದ್ಯಾರ್ಥಿಗಳು ಬದಲಾಗಿದ್ದಾರೆ.
ಶಿಕ್ಷಣ ವ್ಯವಸ್ಥೆ ತಪ್ಪಿದ್ದೆಲ್ಲಿ ?
ಯಾವಾಗಲೂ ನನ್ನ ಪ್ರಿನ್ಸಿಪಾಲ್ ಸರ್ ಹೇಳುತ್ತಿದ್ದ ಮಾತು ನೆನಪಾಗುತ್ತಿದೆ

If Money is Lost , Nothing is Lost
If Health is Lost, Something is Lost
If Character is Lost, Everything is Lost

ಈಗ ಬದಲಾದ ದಿನಮಾನದಲ್ಲಿ ಈ ಮಾತು ಬದಲಾಗಿದೆ.

If Character is Lost , Nothing is Lost
If Health is Lost, Something is Lost
If Money is Lost, Everything is Lost

ಇದೇ ಬದಲಾವಣೆ ಯುವಜನತೆಯ ಹಾದಿ ತಪ್ಪಿಸಿ, ಮಾದಕ ವ್ಯಸನಕ್ಕೆ, ಸುಲಭ ರೀತಿಯಲ್ಲಿ ಹಣ ಸಂಪಾದಿಸಲು ಪ್ರಚೋದಿಸುತ್ತಿರುವುದು.

ಆಗ ಶಿಕ್ಷೆ ಇತ್ತು, ತಪ್ಪಿದಲ್ಲಿ ತಿದ್ದಿ ನಡೆಸುವ ಗುರುಗಳಿದ್ದರು. ಆದರೆ, ಈಗ ತಪ್ಪಿಗೆ ಶಿಕ್ಷೆ ನೀಡಲು
ವಿದ್ಯೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎನ್ನುವರು. ಆದರೆ, ಇವತ್ತು ವಿದ್ಯೆ ಕೆಲಸಕ್ಕಾಗಿ ಮಾತ್ರವೇ. ಓದಿಗೂ, ಮಾಡುವ ಕೆಲಸಕ್ಕೂ ಸಂಬಂಧವೇ ಇರದು. ಕೆಲಸಗಳು ಹಣಕ್ಕಾಗಿ ಮಾರಾಟವಾಗುತ್ತಿವೆ. ವಿದ್ಯೆಯೂ ಮಾರಾಟವಾಗುತ್ತಿದೆ.

ಶಾಲೆಯಲ್ಲಿ ಕಲಿಸದೆ ಟ್ಯೂಷನ್ ಗೆ ಬನ್ನಿ ಇಂದು ಹೇಳುವ ನೀತಿಗೆಟ್ಟ ಶಿಕ್ಷಕರಿದ್ದಾರೆ. ಪ್ರಾಜೆಕ್ಟ್ ಫೈನಲ್ ಗೆ, Thesis submission ಗೆ, ಪ್ರತಿಯೊಂದು ಸಹಿಗೂ ಹಣ ಕೇಳುವ ಶಿಕ್ಷಕರಿದ್ದಾರೆ. ಎಂಜಲು ಕಾಸಿಗೆ ಕೈಯೊಡ್ಡುವ ಶಿಕ್ಷಕರಿಂದ ಸ್ವಾಭಿಮಾನದ ಪಾಠವನ್ನು ವಿದ್ಯಾರ್ಥಿಗಳು ಕಲಿಯುವುದಾದರೂ ಹೇಗೆ ?

ವಿದ್ಯೆ ಕಲಿಸದಾ ತಂದೆ
ಬುದ್ದಿ ಹೇಳದಾ ಗುರುವು
ಬಿದ್ದಿರಲು ಬಂದು ನೋಡದಾ ತಾಯಿ
ಶುದ್ಧ ವೈರಿಗಳು ಸರ್ವಜ್ಞ

ಎಂಬ ಸರ್ವಜ್ಞನ ವಚನವೇ ಇದೆ.

ಇನ್ನೊಂದು ಬಗೆಯ ಶಿಕ್ಷಕ ವರ್ಗವಿದೆ. ತಮ್ಮ ಕೆಲಸದ ಶುರುವಿನಲ್ಲಿ ಪ್ರಾಮಾಣಿಕರಾಗಿಯೇ ಇರುತ್ತಾರೆ. ನಂತರದ ದಿನಗಳಲ್ಲಿ ತಮ್ಮ ಸಹೋದ್ಯೋಗಿಗಳನ್ನು ನೋಡಿಯೋ ಅಥವಾ ಮೇಲಿನ ಒತ್ತಡಕ್ಕೆ ಮಣಿದು ತಮ್ಮತನವನ್ನು ಬದಲಾಯಿಸಿಕೊಂಡವರಿದ್ದಾರೆ.

ಇವೆಲ್ಲದರ ನಡುವೆ ತಮ್ಮತನವನ್ನು ಉಳಿಸಿಕೊಂಡು, ಪ್ರಾಮಾಣಿಕತೆಯ ಪಾಠ ಮಾಡುತ್ತಿರುವ ಶಿಕ್ಷಕರು ಸಹಾ ಇದ್ದಾರೆ. ಅಂತಹವರಿಗೆ ಮಾತ್ರ "ಶಿಕ್ಷಕರ ದಿನದ ಶುಭಾಶಯಗಳು".

ವಿದ್ಯೆ ಕಲಿಸಿಯೂ ಶಿಕ್ಷಕರಾಗದವರು ಹಲವರಿದ್ದಾರೆ, ಅಕ್ಷರವೇ ಗೊತ್ತಿರದ ಜೀವನದ ಪಾಠ ಕಲಿಸಿದ ಹಲವಾರು ಶಿಕ್ಷಕರ ಸ್ಥಾನದಲ್ಲಿದ್ದಾರೆ. ತಾಯಿ, ತಂದೆ, ಕಿರಿಯರಿಂದ ಹಿರಿಯರವರೆಗೂ ಗುರುಗಳಾಗುತ್ತಾರೆ. ಆದರೆ, ಈಗ ಇದೆಲ್ಲದರ ಸ್ಥಾನವನ್ನು ಗೂಗಲ್ ತುಂಬುತ್ತಿದೆ. ಗೂಗಲ್ ಜ್ಞಾನವೇ ಶ್ರೇಷ್ಠ ಎಂಬ ಅಜ್ಞಾನಿಗಳೂ ಇದ್ದಾರೆ.  

ಈಗ ಮನೆ ಮನೆಗೂ ಮೊಬೈಲ್ ಮೂಲಕ "E-Learning" ಕಾಲಿಟ್ಟಿದೆ. ಶಿಕ್ಷಣ ನೇರವಾಗಿ ದೊರೆಯುತ್ತಿದೆ. ಲೈಂಗಿಕ ಕಿರುಕುಳವಿಲ್ಲ, ಪ್ರತಿಯೊಂದು ಚರ್ಯೆ, ಮಾತಿಗೂ ದಾಖಲೆ ಇದ್ದೇ ಇದೆ. ಆದರೆ, ವಿದ್ಯಾರ್ಥಿಗಳ ನಿಷ್ಠೆ ಕಾಣೆಯಾಗಿದೆ. ಆನ್ಲೈನ್ ಕ್ಲಾಸ್ ಆನ್ ಮಾಡಿ ಮತ್ತೇನೋ ಮಾಡುವುದು, ಆನ್ಲೈನ್ ಟೆಸ್ಟ್ ಗಳನ್ನು ಕಾನ್ಫರೆನ್ಸ್ ಕಾಲ್ ಮಾಡಿಕೊಂಡು ಉತ್ತರಿಸುವುದು. ಹೀಗೆ..
ತಿಳುವಳಿಕೆ ಹೆಚ್ಚಿದಂತೆಲ್ಲಾ, ಧೂರ್ತ ನಡವಳಿಕೆಗಳು ಹೆಚ್ಚುತ್ತಲೇ ಇವೆ

ಇಂತಹವರು ನೋಡಿ ಕಲಿಯಬೇಕಾದದ್ದು. ಸುಧಾಮೂರ್ತಿ ಮೇಡಂ ಅವರನ್ನು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಗುರುಗಳಿಗೆ ಗೌರವ ಸಲ್ಲಿಸುವ ಗುಣ ತೊರೆದಿಲ್ಲ. ಶಿಕ್ಷಕರಾಗಿ ಮಕ್ಕಳಿಗೆ ತಿಳುವಳಿಕೆ ಹೇಳುವುದನ್ನು ಸಹಾ ಬಿಟ್ಟಿಲ್ಲ. 

ಕಲಿಯಬೇಕೆಂದರೆ ಎಲ್ಲೆಲ್ಲೂ ಒಳ್ಳೆಯ ವಿಚಾರಗಳಿವೆ. ಅರಿವಿಗಿಂತ ದೊಡ್ಡ ಗುರುವಿಲ್ಲ. ಕಲಿಯುವ ಮನಸ್ಸು ನಮ್ಮಲ್ಲಿರಬೇಕು. ಗುರುವನ್ನು ಆಯ್ದುಕೊಳ್ಳುವ ನಮ್ಮ ಆಯ್ಕೆ ಸರಿಯಿದ್ದಲ್ಲಿ ಎಲ್ಲವೂ ಸುಸೂತ್ರ.

"ಅರಿವೆಂಬ ಗುರುವಿಗೆ ನಮಿಸುತ್ತಾ" ಜೀವನದ, ಅಕ್ಷರದ ತಿಳುವಳಿಕೆಯ ಎಲ್ಲಾ ಪಾಠ ಕಲಿಸಿದ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 'ಅ'ಲ್ಲಿಂದ 'E'ಲ್ಲಿಯವರೆಗೂ ಬದುಕಿನ ಹಾದಿಯ ಜೊತೆಗಿರುವ ಎಲ್ಲ ಶಿಕ್ಷಕರ ಆಶೀರ್ವಾದಗಳು ಸದಾ ಹೀಗೆಯೇ ಇರಲಿ.

ಸಾವಿರಾರು ಮುಖದ ಚೆಲುವ
ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ
ಕನ್ನಡಿಯ ಪಾಲಿಗೇ..?

ಎಂಬ ಸಾಲುಗಳು ಶಿಕ್ಷಕರ ಬದುಕಿನಲ್ಲಿ ಹೆಚ್ಚಿನಂಶ ಅನ್ವಯವಾಗುತ್ತದೆ. ಇದು ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗಿನ ಕೆಲಸ ಮಾತ್ರವಲ್ಲ. ಸದಾ ಕಲಿಯುತ್ತಲೇ ಇರಬೇಕು, ಕಲಿಸುತ್ತಲೇ ಇರಬೇಕು. ಸ್ಫೂರ್ತಿ ತುಂಬುತ್ತಿರುವ, ಕಲಿಕೆಯ ಮನಸ್ಸಿನ ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು


~ವಿಭಾ ವಿಶ್ವನಾಥ್

ಗುರುವಾರ, ಮಾರ್ಚ್ 26, 2020

ಅಂದಿನಿಂದ ಇಂದಿನವರೆಗೂ ಮಹಿಳಾ ಸಾಹಿತ್ಯ

ಸಾಹಿತ್ಯದ ಹಾದಿಯಲ್ಲಿ ಮಹಿಳಾ ಸಾಹಿತ್ಯ ಅಂದಿನಿಂದ ಇಂದಿನವರೆಗೂ ತನ್ನ ಕಂಪನ್ನು ಚೆಲ್ಲುತ್ತಾ ಹೊಚ್ಚ ಹೊಸ ರೀತಿಯಲ್ಲಿ ನವೀಕರಣಗೊಳ್ಳುತ್ತಾ ತನ್ನದೇ ಛಾಪನ್ನು ಮೂಡಿಸಿ ಓದುಗರನ್ನು ಹಿಡಿದಿಟ್ಟಿದೆ. ಸಾಹಿತ್ಯದಲ್ಲಿ ಮಹಿಳೆಯರು ಹಾಗೂ ಮಹಿಳೆಯರು ಬರೆದ ಸಾಹಿತ್ಯ ಎರಡೂ ಸಹಾ ವಿಭಿನ್ನ ಪಾತ್ರಗಳೆನಿಸಿದರೂ ಸಹಾ ಒಂದೇ ಆತ್ಮದ ಎರಡು ದೇಹಗಳಂತೆ ಭಾಸವಾಗುತ್ತದೆ.

ತ್ರಿವೇಣಿ, ಹೆಚ್.ಜಿ. ರಾಧಾದೇವಿ, ಸಾಯಿಸುತೆ, ಉಷಾನವರತ್ನರಾಮ್, ವಾಣಿ, ಅಶ್ವಿನಿ ಮುಂತಾದ ಘಟಾನುಘಟಿ ಲೇಖಕಿಯರು ಕನ್ನಡ ಸಾಹಿತ್ಯವನ್ನು ಕಥೆ ಹಾಗೂ ಕಾದಂಬರಿ ಲೋಕದಲ್ಲಿ ಎತ್ತಿ ಹಿಡಿದಿದ್ದಾರೆ. ಇವರ ಕಾದಂಬರಿ ಹಾಗೂ ಕಥೆಯ ಪಾತ್ರಗಳು ಹಾಗೂ ಕಥಾನಕ ಇಂದಿನ ದಿನಗಳಲ್ಲೂ ಪ್ರಸ್ತುತವೆನಿಸುತ್ತದೆ. ಹೆಣ್ಣಿನಲ್ಲಿ ಇರಬೇಕಾದ ದಯೆ, ಕರುಣೆಯ ಜೊತೆಜೊತೆಗೇ ಸಂಸ್ಕೃತಿಯ ಪಾಠಗಳನ್ನೂ ಸಾರುತ್ತಾ ಹೆಣ್ಣಿಗೆ ಬೇಕಾದ ಛಲವನ್ನೂ ಪ್ರತಿಬಿಂಬಿಸುತ್ತಾರೆ. ಸಮಸ್ಯೆಗಳ ಮೂಲವನ್ನು ಹಲವು ಮಗ್ಗುಲುಗಳಲ್ಲಿ ವಿಶ್ಲೇಷಿಸುವಂತೆ ಮಾಡುತ್ತಾ ಕಥಾನಾಯಕಿ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಮೊದಲೇ ನಮ್ಮಲ್ಲಿ ಮೂಡುವಂತೆ ಆಲೋಚಿಸುವ ಆಲೋಚನಾ ಶಕ್ತಿಯನ್ನು ತುಂಬುತ್ತಾ ಕುತೂಹಲಕ್ಕೀಡು ಮಾಡುತ್ತಾರೆ. ಕೆಲವು ಘಟನೆಗಳನ್ನು ಆಗಿನ ಕಾಲಘಟ್ಟದಲ್ಲಿ ನಿಂತು ವಿಶ್ಲೇಷಿಸುವುದಾದರೆ ಕೆಲವು ನಿರ್ಧಾರಗಳು ಹಾಗೂ ಘಟನೆಗಳು ಕ್ರಾಂತಿಕಾರಿಯಂತೆಯೇ ಭಾಸವಾಗುತ್ತವೆ. ಹಾಗೂ ಕೆಲವು ಮೂಢನಂಬಿಕೆಗಳನ್ನು ಹೊಡೆದೋಡಿಸಲೂ ಅದು ಸಹಕಾರಿಯೆನಿಸುತ್ತದೆ. ಕೆಲ ಕಾದಂಬರಿಗಳು ಚಲನಚಿತ್ರಗಳಾಗಿಯೂ ಬೆಳ್ಳಿತೆರೆಯ ಮೇಲೆ ತೆರೆ ಕಂಡು ಕಾದಂಬರಿ ಓದದವರನ್ನೂ ಸಾಹಿತ್ಯ ಓದುವಷ್ಟರ ಮಟ್ಟಿಗೆ ಪ್ರೇರೇಪಿಸಿವೆ. ಸರಳವಾದ ಬರವಣಿಗೆಯ ಶೈಲಿ ಓದುಗರ ಮೇಲೆ ಪ್ರಭಾವ ಬೀರಿ ಸಾಹಿತ್ಯದ ಓದಿಗೆ ಎಳೆ ತರುತ್ತದೆ.

ಇಂದಿನ ಮಹಿಳಾ ಸಾಹಿತ್ಯದಲ್ಲಿ ಸಂಧ್ಯಾರಾಣಿ, ಭಾರತಿ ಬಿ.ವಿ, ವಸುಮತಿ ಉಡುಪ, ಪ್ರತಿಭಾ ನಂದಕುಮಾರ್, ಶಾಂತಾಕುಮಾರಿ, ಭುವನೇಶ್ವರಿ ಹೆಗಡೆ ಮುಂತಾದವರು ಕನ್ನಡ ಸಾಹಿತ್ಯ ಲೋಕದಲ್ಲಿ ವಿಭಿನ್ನ ರೀತಿಯ ಪ್ರಯೋಗಶೀಲತೆಗೆ ಮುಖ ಮಾಡುತ್ತಾ ಸಾಹಿತ್ಯದ ವಿಭಿನ್ನ ಪ್ರಕಾರಗಳನ್ನೂ ಪರಿಚಯಿಸುತ್ತಿದ್ದಾರೆ. ಅಂತರಂಗದ ತುಮುಲಗಳು, ತಮ್ಮದೇ ಬದುಕಿನ ಪುಟಗಳು, ಕ್ಯಾನ್ಸರ್ ನಂತಹಾ ಮಹಾಮಾರಿಯಿಂದ ಪಾರಾದ ಬಗೆ, ಜುಗಲ್ಬಂಧಿಯ ಕವಿತೆಗಳು, ಕವಿತೆಯಲ್ಲಿನ ವಿಶಿಷ್ಟ ರೂಪಕಗಳು ಇವೆಲ್ಲವೂ ಈಗಿನ ಸಾಹಿತ್ಯದ ಬೆಳವಣಿಗೆಯ ಅಂಶಗಳು. ಇವು ಸ್ತ್ರೀ ಕೇಂದ್ರಿತವಾಗಿ ಮಾತ್ರ ಇರದೆ ಸಮಾಜದ ವಿವಿಧ ಸಾಮಾಜಿಕ ಚಿತ್ರಣಗಳನ್ನೂ ನಮ್ಮ ಮುಂದಿಡುತ್ತವೆ. ಕೆಲ ದಶಕಗಳ ಹಿಂದೆ ಕೇವಲ ಪ್ರಾಸಂಗಿಕವಾಗಿ ಚುಟುಕಾಗಿ ಉಪಯೋಗವಾಗುತ್ತಿದ್ದ ಮುಟ್ಟು, ಮುಕ್ತ ಲೈಂಗಿಕತೆಗಳು, ಮೆನೋಪಾಸ್ ಮುಂತಾದವುಗಳು ಇಂದು ವಿಶ್ಲೇಷಣೆಯೊಂದಿಗೆ ತೆರೆದುಕೊಳ್ಳುತ್ತವೆ. ಕವಿತೆ, ಕಥೆ, ಕಾದಂಬರಿ, ಲಲಿತ ಪ್ರಬಂಧ ಎಲ್ಲವೂ ಹೊಸ ಹೊಳಹಿನೊಡನೆ ತೆರೆದುಕೊಳ್ಳುತ್ತಾ ಓದುಗರನ್ನು ತಲುಪುತ್ತಿದೆ.

ಸಾಹಿತ್ಯದಲ್ಲಿ ಮಹಿಳೆಯ ಉಲ್ಲೇಖಗಳನ್ನು ಗಮನಿಸಿದರೆ ಸಾರಾ ಅಬೂಬಕ್ಕರ್ ಅವರ ಕಥೆಗಳು ಇಂದಿಗೂ ಮುಸಲ್ಮಾನ ಸಮುದಾಯದ ಮಹಿಳೆಯರ ಸ್ಥಿತಿಗತಿಗಳನ್ನು ತೋರಿಸುತ್ತವೆ. ವಾರಿಸ್ ಡೇರಿಯ ಆತ್ಮಕಥೆ ಮರುಭೂಮಿಯ ಹೂ ಅವರ ಜನಾಂಗದಲ್ಲಿ ಇಂದಿಗೂ ಆಚರಣೆಯಲ್ಲಿರುವ ಯೋನಿ ಛೇದನ ಪ್ರಕ್ರಿಯೆಯ ಕ್ರೂರತೆಯನ್ನು ತೆರೆದಿಡುತ್ತದೆ. ಅತ್ಯಾಚಾರ ವಿರೋಧಿ ಸಾಹಿತ್ಯವೂ ಮಹಿಳೆಯನ್ನು ಸಾಹಿತ್ಯದಲ್ಲಿ ಬಂಧಿಸಿದೆ.

ಇಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಹಿತ್ಯ ಪಸರಿಸುತ್ತಿದೆ. ಮಹಿಳೆಯರು ಹೆಚ್ಚಾಗಿ ಇದರ ಉಪಯೋಗ ಪಡೆದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವುದೂ ಸಂತಸದ ವಿಷಯ.

ಅಂದಿನ ಮತ್ತು ಇಂದಿನ ಮಹಿಳಾ ಸಾಹಿತ್ಯವನ್ನು ತಕ್ಕಡಿಯಲ್ಲಿಟ್ಟರೆ ಎರಡೂ ಸಮಾನವಾಗಿಯೇ ತೂಗುತ್ತವೆ. ಮಹಿಳಾ ಸಾಹಿತ್ಯ ಎಂದಿಗೂ ಪುರುಷ ದ್ವೇಷಿಯಾಗಿದ್ದನ್ನು ನಾನು ಗಮನಿಸಿಲ್ಲ. ಅಂದು, ಇಂದು ಹಾಗೂ ಎಂದೆಂದಿಗೂ ಪ್ರಸ್ತುತವೆನಿಸುವ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ಹಿಂದಿನ ಮಹಿಳಾ ಸಾಹಿತ್ಯದ ಪಾತ್ರವೇ ಹೆಚ್ಚು. ವೈಯಕ್ತಿಕವಾಗಿಯೂ ನನಗೆ ಇಂದಿನ ಮಹಿಳಾ ಸಾಹಿತ್ಯಕ್ಕಿಂತ ಅಂದಿನ ಮಹಿಳಾ ಸಾಹಿತ್ಯವೇ ಅಪ್ಯಾಯಮಾನವೆನಿಸುತ್ತದೆ. ಪ್ರಸ್ತುತ ಸ್ಥಿತಿಗಳು ಕೆಲವೊಮ್ಮೆ ಮುಂದೆ ಅಪ್ರಸ್ತುತವೆನಿಸಬಹುದೇನೋ, ಆದರೆ ಮೌಲಿಕವಾದ ನೀತಿಯುತವಾದ ಅಂದಿನ ಮಹಿಳಾ ಸಾಹಿತ್ಯ ಎಂದೆಂದಿಗೂ ಅಜರಾಮರವೇ. ಬೇರು ಗಟ್ಟಿಯಾಗಿರುವಾಗ ಸತ್ವವೂ ಕೂಡಾ ಚೆನ್ನಾಗಿಯೇ ಇರುತ್ತದೆ. ಹಾಗೆಯೇ ಅದರ ಭಾಗವೇ ಆಗಿರುವ ಇಂದಿನ ಮಹಿಳಾ ಸಾಹಿತ್ಯ ಕೂಡಾ.. ಇಂದಿನ ಮಹಿಳಾ ಸಾಹಿತ್ಯದ ಹಾದಿಯೂ ಸುಗಮವಾಗಿ ಸಾಗಲಿ ಎಂದೇ ಆಶಿಸುತ್ತೇನೆ. 

~ವಿಭಾ ವಿಶ್ವನಾಥ್

ಗುರುವಾರ, ಮಾರ್ಚ್ 19, 2020

ತೇಜಸ್ವಿ ಎಂದೆಂದಿಗೂ ಅಚ್ಚಳಿಯದ ತೇಜಸ್ಸು

ಪೂಚಂತೇ ಎಂದೇ ಖ್ಯಾತರಾದ ಪೂರ್ಣಚಂದ್ರ ತೇಜಸ್ವಿಯವರು "ಹಾಗೆ ಬದುಕಿ, ಹೀಗೆ ಬದುಕಿ" ಎಂದಿಗೂ ಹೇಳದೆ "ಬದುಕನ್ನು ಬದುಕುವುದು ಹೀಗೆ" ಎಂದು ತೋರಿಸಿಕೊಟ್ಟವರು. ಬರೀ ಬರಹದಿಂದ ಅಷ್ಟೇ ಅಲ್ಲದ ಪರಿಸರ ಕಾಳಜಿ, ವ್ಯಕ್ತಿತ್ವ, ಛಾಯಾಗ್ರಹಣ, ಕಾಡಿನ ಬದುಕು, ಹೋರಾಟ ಇವೆಲ್ಲದರಿಂದಲೂ ಎಲ್ಲರಲ್ಲೂ ಸ್ಫೂರ್ತಿ ಮೂಡಿಸಿದ ಅದ್ಭುತ ಶಕ್ತಿ.

       "ಓದುಗರನ್ನು ಗೆಲ್ಲಬೇಕು,ಪ್ರಶಸ್ತಿಗಳನ್ನಲ್ಲ" ಎಂಬ ಧ್ಯೇಯಕ್ಕೆ ನಿಷ್ಠರಾಗಿ ಬರೆದ ತೇಜಸ್ವಿಯವರು ತಮ್ಮ ಬರಹಗಳಿಂದ ಕೋಟ್ಯಾಂತರ ಓದುಗರನ್ನು ಗೆದ್ದಿದ್ದಾರೆ, ಗೆಲ್ಲುತ್ತಲೂ ಇದ್ದಾರೆ. ಇವರ ಬರಹಗಳಲ್ಲಿ  ಅದ್ಭುತ ಕಲಾಸೃಷ್ಠಿ ಇದೆ, ಜೀವನದೃಷ್ಟಿ ಇದೆ, ತತ್ವ ಚಿಂತನೆಗಳಿವೆ. ತಮ್ಮದೇ ಬದುಕಿನ ಅಪೂರ್ವ ವ್ಯಾಖ್ಯಾನವಿದೆ, ದೂರದೃಷ್ಟಿತ್ವವಿದೆ. ಒಮ್ಮೆ ತೇಜಸ್ವಿಯವರ ಪುಸ್ತಕಗಳನ್ನು ಓದಲು ಶುರು ಮಾಡಿದರೆ, ಓದಿಸಿಕೊಂಡು ಹೋಗುವ ಓದಿನ ಓಘದ ಮಧ್ಯೆ ಓದುಗ ಕಳೆದು ಹೋಗುತ್ತಿದ್ದಾನೆ. "ಮುಖ್ಯ ವಿಚಾರವನ್ನು ಬಿಟ್ಟು ಅಡ್ಡದಾರಿ ಹಿಡಿಯಬೇಡಿ" ಎಂದು ಜನತೆಗೆ ಸಂದೇಶ ನೀಡುತ್ತಾ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಿಂದ ದೂರವಿದ್ದರೂ ತಮ್ಮ ಬರವಣಿಗೆಯ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

     ನಮ್ಮ ಸುತ್ತ-ಮುತ್ತಲಿನ ಜನರೇ ತಮ್ಮ ಜೀವನವನ್ನು ತೋರಿಸುವಂತೆ ತೇಜಸ್ವಿಯವರ ಕಥಾ ಪಾತ್ರಗಳು ಭಾಸವಾಗುತ್ತವೆ. ಇಂತಹ ಒಂದು ಪಾತ್ರವೇ ತಬರಸೆಟ್ಟಿ. ತಬರನ ಕಥೆಯಲ್ಲಿ ಬರುವ ತಬರ ಇಂದಿನ ಪರಿಸ್ಥಿತಿಗೂ ಹಿಡಿದ ಕೈಗನ್ನಡಿಯಾಗಿದ್ದಾನೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿಯೂ ಸೇವೆ ಸಲ್ಲಿಸಿದ್ದ ತಬರ  ಸ್ವಾತಂತ್ರ್ಯಾ ನಂತರ ಅನೇಕ ಕಡೆ ವರ್ಗಾವಣೆಯ ಕಷ್ಟಕ್ಕೆ ಸಿಲುಕಿ ಪಡುಗೆರೆಯ ಮುನಿಸಿಪಾಲಿಟಿ ನೌಕರನಾಗುವ ಹೊತ್ತಿಗೆ ನಿವೃತ್ತಿಯ ವಯಸ್ಸಿಗೆ ಬಂದಿದ್ದ. ತಬರನ ಮನಸ್ಸಿನ ಆತಂಕಗಳು ಉನ್ಮಾದ ಅಥವಾ ಅಸಂಬದ್ಧವಾಗಿರದೆ ಪಡುಗೆರೆಯ ಆಡಳಿತ ವೈಖರಿಯಿಂದ ಉದ್ಭವವಾದುದಾಗಿತ್ತು. ಒಂದೊಮ್ಮೆ ತಬರ ಬರೆದ ರಸೀತಿಗೆ ಇನ್ನೂ ವಸೂಲಾಗದೆ ಅವನ ಸಂಬಳಕ್ಕೆ ಕತ್ತರಿ ಬೀಳುವ ಪರಿಸ್ಥಿತಿಯಲ್ಲಿ ಪಡಿಪಾಟಲು ಪಡುತ್ತಿರುವಾಗಲೇ, "ದುರ್ಭಿಕ್ಷದಲ್ಲಿ ಅಧಿಕ ಮಾಸ" ಎಂಬಂತೆ ಅವನ ಹೆಂಡತಿಗೆ ಮಧುಮೇಹ ಆವರಿಸಿತ್ತು. ಈ ಮಧುಮೇಹದ ಚಿಕಿತ್ಸೆಗಾಗಿ ಹಣ ಹೊಂದಿಸಲು ತಬರ ಪಡಿಪಾಟಲು ಪಡುತ್ತಿದ್ದಾಗ, ಯಾರೋ ಹೇಳಿದಂತೆ ಫ್ರಾವಿಡೆಂಟ್ ಫಂಡನ್ನು ಪಡೆಯಲು ಕಛೇರಿಯಿಂದ,ಕಛೇರಿಗೆ ತಿರುಗಿ ಸಂಬಳವನ್ನಷ್ಟೇ ಅಲ್ಲದೆ, ಗ್ಯಾಂಗ್ರೀನ್ ಆದ ಹೆಂಡತಿಯನ್ನೂ ಕಳೆದುಕೊಂಡ. ತನ್ನ ಪೆನ್ಶನ್ ಹಣವನ್ನೂ ಪಡೆಯದ ತಬರ ಸ್ವಾತಂತ್ರ್ಯ ದಿನಾಚರಣೆಯ ಬೆಳ್ಳಿಹಬ್ಬದ ಆಚರಣೆಯಂದೇ ಹುಚ್ಚನೆಂಬ ಪಟ್ಟ ಹೊತ್ತು, ದುರಂತ ನಾಯಕನಾದ.ಎಲ್ಲೋ ಕೆಲವರಿಗೆ ಮಾತ್ರ ಅವನನ್ನು ಕಂಡಾಗ ನಮ್ಮ ಭೀಕರ ವ್ಯವಸ್ಥೆಯ ವಿರಾಡ್ರೂಪ ಮಿಂಚುತ್ತಿತ್ತು. ಯಾವುದೋ ಅರಿಯದ ಭೀತಿಯಲ್ಲಿ ಅವರು ನಡುಗುತ್ತಿದ್ದರು.

     ಅವರಂತೆಯೇ ಇಂದು ನಾವೂ ಸಹ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡು ಒದ್ದಾಡುತ್ತಿದ್ದೇವೆ. ತೇಜಸ್ವಿಯವರು ಅಂದಿನ ದಿನಗಳಲ್ಲಿಯೇ ಬಿಚ್ಚಿಟ್ಟಿರುವ ಈ ಲಂಚಾವತಾರಿ ಸಮಸ್ಯೆಗೆ ಇಂದಿನ ಜನಾಂಗದಲ್ಲಿಯಾದರೂ ಪರಿಹಾರ ನೀಡಬೇಕಾಗಿದೆ. ಇಂತಹ ದಿನಗಳಲ್ಲಿ ಪ್ರಜಾಕಾರಣ, ಪ್ರಜಾಕೀಯ ಪರಿಹಾರವನ್ನು ನೀಡಲು ಹೊರಟಿರುವ ಸಲಹೆಗೆ ಕೈ ಜೋಡಿಸಿದರೆ ಅಡ್ಡದಾರಿಯನ್ನು ಹಿಡಿಯದೆ, ರಾಜಮಾರ್ಗದಲ್ಲಿಯೇ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ. ನಮ್ಮ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಈ ನಿಟ್ಟಿನಲ್ಲಿ ದುಡಿದರೆ ತಬರನ ಕಥೆಯ ಅಂತ್ಯವನ್ನು ಬದಲಾಯಿಸಿ ತೇಜಸ್ವಿಯವರ ಅಚ್ಚಳಿಯದ ತೇಜಸ್ಸನ್ನು ಕಂಡುಕೊಳ್ಳಬಹುದಾಗಿದೆ.


-ವಿಭಾ ವಿಶ್ವನಾಥ್

ಗುರುವಾರ, ಫೆಬ್ರವರಿ 27, 2020

ದಾಸ್ಯ-ಸ್ವಾತಂತ್ರ್ಯ-ಸ್ವೇಚ್ಛೆ


ಮಳೆಯ ಪ್ರಮಾಣ ಹೆಚ್ಚು-ಕಡಿಮೆಯಾದರೆ ಅತಿವೃಷ್ಟಿ-ಅನಾವೃಷ್ಟಿಗಳು ಉಂಟಾಗುತ್ತವೆ. ಹಾಗೆಯೇ ಸ್ವತಂತ್ರ್ಯತೆಯ ಏರಿಳಿತವೂ ದಾಸ್ಯ ಮತ್ತು ಸ್ವೇಚ್ಛೆಯನ್ನು ಸೃಷ್ಟಿ ಮಾಡುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ನಿಜ, ಆದರೆ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸ್ವಾತಂತ್ರ್ಯ ಸಿಕ್ಕಿದೆಯೇ? ನಿಜವಾಗಿಯೂ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರನಾಗಿ ಬಾಳ್ವೆ ನಡೆಸುತ್ತಿದ್ದಾನೆ ಎಂದಾದಲ್ಲಿ ಜೀತ ಪದ್ಧತಿ, ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿರುವುದೇಕೆ?

ಮಹಾತ್ಮ ಗಾಂಧೀಜಿಯವರ ಹೇಳಿಕೆಯಂತೆ ನಡುರಾತ್ರಿ ಮಹಿಳೆಯೊಬ್ಬಳು ನಿರ್ಭೀತಿಯಿಂದ ನಡೆದಾಡುವಂತಾದರೆ ಅದೇ ಸ್ವಾತಂತ್ರ್ಯ. ಹಾಡುಹಗಲೇ ಪುಟ್ಟ ಬಾಲಕಿಯಿಂದ ಹಿಡಿದು ವೃದ್ಧೆಯವರೆಗೂ ಅತ್ಯಾಚಾರ ನಡೆಯುತ್ತಿರುವಾಗ ನಡುರಾತ್ರಿಯ ಮಾತೆಲ್ಲಿ? ಇದಕ್ಕೆ ಅಪವಾದ ಎಂಬಂತೆ ಸ್ವೇಚ್ಛೆಯಿಂದ ಬಾಳ್ವೆ ನಡೆಸುವವರೂ ಇದ್ದಾರೆ.

ತ್ಯಾಗ,ಶಾಂತಿ ಮತ್ತು ಸಮೃದ್ಧಿಯ ಕುರುಹಾಗಿ ಇರುವ ಕೇಸರಿ,ಬಿಳಿ,ಹಸಿರಿನ ಬಾವುಟ ಇಂದು ಹಿಂದು,ಕ್ರೈಸ್ತ ಮತ್ತು ಮುಸಲ್ಮಾನರ ಧರ್ಮಗಳ ಪ್ರತ್ಯೇಕ ಸಂಕೇತವೆಂಬಂತೆ ಆಯಾ ಧರ್ಮಗಳ ಮುಖಂಡರಿಂದ ಬಿಂಬಿತವಾಗುತ್ತಿದೆ.ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆ ಮೀರುತ್ತಿರುವಂತೆ ಭಾಸವಾಗುವುದಿಲ್ಲವೇ..?

ಸ್ವಾತಂತ್ರ್ಯ ಸಿಕ್ಕಿದೆ ಎಂಬುದಕ್ಕೆ ಆಡಂಭರದ ಅವಶ್ಯಕತೆ ಇಲ್ಲ. ಅದು ಸರಳವಾಗಿ, ಸಾಂಕೇತಿಕವಾಗಿ ದೇಶಭಕ್ತಿಯ ಪ್ರತೀಕವಾಗಿ ಬಿಂಬಿತವಾದರಷ್ಟೇ ಚೆನ್ನ. ಸ್ವಾತಂತ್ರ್ಯದ ಹಿಂದೆ ಹಲವಾರು ದೇಶಭಕ್ತರ ನೆತ್ತರ ತರ್ಪಣವಿದೆ. ಹೆಸರೇ ಹೇಳಲಿಚ್ಚಿಸದ ಅನಾಮಿಕ ಹೋರಾಟಗಾರರ ಮತ್ತು ಅವರ ಕುಟುಂಬದವರ ಅದ್ವಿತೀಯ ಛಲವಿದೆ, ಬಲವಿದೆ. ಶಾಂತಿ, ಅಹಿಂಸೆ, ಪ್ರತಿಭಟನೆ, ತ್ಯಾಗ, ಬಲಿದಾನ ಇವೆಲ್ಲದರ ಮಿಳಿತವಿದೆ. ಸ್ವಾತಂತ್ರ್ಯದ ಸದುಪಯೋಗಪಡಿಸಿಕೊಂಡು ಸ್ವತಂತ್ರವಾಗಿಯೇ ಬದುಕೋಣ. ದಾಸ್ಯದ ಸಂಕೋಲೆಯಲ್ಲಿ ಬಂಧಿಯಾಗಿಯೂ ಅಲ್ಲ, ಸ್ವೇಚ್ಛಾಚಾರಿಗಳಾಗಿಯೂ ಅಲ್ಲ.

~ವಿಭಾ ವಿಶ್ವನಾಥ್

ಮಂಗಳವಾರ, ನವೆಂಬರ್ 19, 2019

ಅವನ ಸಬಲತೆ-ದುರ್ಬಲತೆಯ ನಡುವಲ್ಲಿ..


ಹೆಚ್ಚಿನಂಶದ ಹೆಣ್ಣುಮಕ್ಕಳು ಒಂದಲ್ಲಾಒಂದು ಬಾರಿ "ನಾನು ಪುರುಷನಾಗಿ ಹುಟ್ಟಬೇಕಿತ್ತು" ಅಂತಾ ಅಂದುಕೊಂಡಿರುತ್ತಾರೆ. ಪುರುಷ ಪ್ರಪಂಚದ ಸ್ವಚ್ಛಂದತೆ ಅನುಭವಿಸಲು ಕನಸು ಕಂಡಿರುತ್ತಾರೆ. ಆದರೆ ಅದೇ ಮನಸ್ಸಲ್ಲಿ "ಪುರುಷ ದ್ವೇಷಿ" ನಿಲುವು ಕೂಡಾ ಬಂದೇ ಇರುತ್ತದೆ. ಯಾವುದೋ ಅತ್ಯಾಚಾರದ ಸುದ್ದಿ ಕೇಳಿದಾಗ ಪುರುಷರ ಮೇಲೆ ಅಸಹ್ಯ ಹುಟ್ಟುವಂತಹಾ ಭಾವನೆ ಕೂಡಾ ಬಂದಿರುತ್ತದೆ. ಹಾಗಾದರೆ ಉಳಿಯುವುದು ಯಾವ ಭಾವನೆ? ನಿಮಗೆ ಇದಕ್ಕೆ ಉತ್ತರ ಕೊನೆಯಲ್ಲಿ ಸಿಗುತ್ತದೆ.

ಮಾರ್ಚ್ 8 ಅಂದಾಕ್ಷಣ "ವುಮೆನ್ಸ್ ಡೇ" ಎಂದು ನೆನಪಾಗುವಷ್ಟು ಸುಲಭಕ್ಕೆ "ಮೆನ್ಸ್ ಡೇ" ನೆನಪಾಗುವುದಿಲ್ಲ. ಹಾಗೆಂದು ಪುರುಷರು ಮೂಲೆಗುಂಪಾಗಿದ್ದಾರೆಂದೇನಲ್ಲ. ಮನೆಯೊಳಗಿದ್ದ ಸ್ತ್ರೀಯರು ಮನೆಯಾಚೆ ಬಂದಾಗ, ಸಾಧನೆ ಮಾಡಿದಾಗ ಆಚರಣೆ ಮಹತ್ವ ಪಡೆಯಿತು. ಅದೇ, ಪುರುಷ ಪ್ರಪಂಚದಲ್ಲಿ ಅಂತಹಾ ಬದಲಾವಣೆಯೇನೂ ಗೋಚರಿಸಲಿಲ್ಲ. ಮೊದಲಿನಿಂದಲೂ ಹೊರಗೇ ಇದ್ದವನು, ಸಾಧನೆ ಮಾಡಿದವನ ಆಚರಣೆಗೆಂದೂ ಅಷ್ಟೇನೂ ಮಹತ್ವ ಬರಲಿಲ್ಲವೇನೋ. ಆದರೆ, ಕೆಲವರಂತೂ ವರಾತ ತೆಗೆಯುತ್ತಾರೆ. ಮಹಿಳಾ ದಿನಾಚರಣೆಗೆ ನಾವು ಶುಭಾಷಯ ಕೋರಿದ್ದೆವಲ್ಲಾ ಎಂದು, ಹಾಗಾಗಿ ಮೊದಲಿಗೇ ಹೇಳಿಬಿಡುತ್ತಿದ್ದೇನೆ "ಪುರುಷರ ದಿನಾಚರಣೆ ಶುಭಾಷಯಗಳು"

"ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಡ್ಯತೆಯ ಸೋಗು" ಎಂದಿರುವನು ಎಮರ್ಸನ್. ಹೊರ ಜಗತ್ತಿಗೆ ಕಾಣುವ ಅವನ ರೂಪಕ್ಕಿಂತ ಮನಸ್ಸು ಬೇರೆಯೇ ಆಗಿರುತ್ತದೆಯಲ್ಲವೇ?
'+' ಎಂದು ಬಯಾಲಜಿಯ ಸಂಕೇತದಲ್ಲಿ ಗುರುತಿಸಿಕೊಳ್ಳುವ ಗಂಡು ನಿಜಕ್ಕೂ ಸಕಾರಾತ್ಮಕನೇ..?
ದೈಹಿಕವಾಗಿ ಗಟ್ಟಿಯಾಗಿರುವ ಗಂಡು ಮಾನಸಿಕವಾಗಿಯೂ ಅಷ್ಟೇ ಬಲಿಷ್ಠನೇ..?
ಖಂಡಿತಾ ಇಲ್ಲ. ಸ್ವಚ್ಛಂದತೆಯ ಮುಖವಾಡದ ಅಡಿಯಲ್ಲಿ ಗಂಡಿನ ಕೆಲವು ಭಾವನೆಗಳ ತೋರ್ಪಡಿಕೆಗಳು ಮುಚ್ಚಿ ಹೋಗಿದೆ.
ಪುರುಷ ದಿನಾಚರಣೆಯ ಈ ವರ್ಷದ ಘೋಷ ವಾಕ್ಯವೇನು ಗೊತ್ತಾ?
"ಧನಾತ್ಮಕ ಪುರುಷ ಮಾದರಿ[Positive male role models]". ಪುರುಷರಲ್ಲಿನ ಆದರ್ಶಗಳನ್ನು ಹೊರಜಗತ್ತಿಗೆ ಪರಿಚಯಿಸಲು, ಪುರುಷರ ಮಾನಸಿಕ ಆರೋಗ್ಯ, ಆತ್ಮಹತ್ಯೆ ತಡೆ, ದೈಹಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಹಾಗೂ ಅದರ ಕುರಿತು ಜಾಗೃತಿ ಮೂಡಿಸುವ ದಿನ ಇದು. 

ಇಂದು ಸುಲಭವಾಗಿ ಡ್ರಗ್ಸ್, ಧೂಮಪಾನ, ಮದ್ಯಪಾನದ ಮೊರೆಹೋಗಿ ಮಾನಸಿಕ ಸಮಸ್ಯೆಗಳನ್ನು ಮರೆಯುತ್ತೇವೆ ಎನ್ನುವ ಕಾರಣ ನೀಡಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವವರು ಪುರುಷರೇ. ಹೆಣ್ಣಿನಂತೆ ಆರಾಮವಾಗಿ ಗಂಡು ತನ್ನ ಭಾವನೆಗಳನ್ನು ಬಿಚ್ಚಿಡಲಾರ. ಅದರಲ್ಲೂ ಅಹಂ ತೋರಿಸುತ್ತಾನೆ. ಹೆಣ್ಣಿನ ಹತ್ತಿರ ಪ್ರೀತಿಯನ್ನು ತೋರಿಸುವಷ್ಟು ಸುಲಭವಾಗಿ ಸಮಸ್ಯೆಗಳನ್ನು ತೆರೆದಿಡಲಾರ. ಕಾರಣ, ಕಾಳಜಿ. ತಮ್ಮ ಪ್ರೀತಿ ಪಾತ್ರರು ನೋಯಬಾರದು ಎಂಬ ಕಾಳಜಿ. ಕುಟುಂಬದ ಕುರಿತು ಕಾಳಜಿ ತೋರುವವ ತನ್ನ ಆರೋಗ್ಯದ ಕುರಿತು ಅಷ್ಟು ಅಸ್ಥೆ ವಹಿಸಲಾರ. ಹಾಗಾಗಿ, ಚಟಕ್ಕೆ ಬಲಿಪಶುವಾಗುತ್ತಾ ನಡೆಯುತ್ತಾನೆ.

ಪ್ರೀತಿ ಕೊಟ್ಟವನು ಮರು ಪ್ರೀತಿಯ ನಿರೀಕ್ಷೆಯಲ್ಲಿರುತ್ತಾನೆ. ಅಕಸ್ಮಾತ್, ಮರು ಪ್ರೀತಿ ಸಿಗದಿದ್ದರೆ ಮೃಗಕ್ಕಿಂತಲೂ ವ್ಯಗ್ರವಾಗಿ, ಕಠೋರವಾಗಿ ವರ್ತಿಸಬಲ್ಲ. (ಕೆಲವರು ಮಾತ್ರ ಇದಕ್ಕೆ ಅಪವಾದ ಎಂಬಂತಿರಬಹುದು) ಆದರೆ ಕಾರಣವನ್ನು ಮಾತ್ರ ಬಾಯಿ ಬಿಟ್ಟು ಹೇಳುವುದಿಲ್ಲ.

ಗಂಡಿಗೆ ಭಾವನೆಗಳು ಸುಲಭವಾಗಿ ಅರ್ಥವಾಗುವುದಿಲ್ಲ ಎನ್ನುತ್ತಾರೆ. ಶುದ್ಧ ಸುಳ್ಳು ಅದು. ಕೆಲವೊಮ್ಮೆ ಅದರ ಕುರಿತು ಅವನು ಗಮನ ನೀಡಿರುವುದಿಲ್ಲ ಇಲ್ಲವೇ ಅರ್ಥವಾದರೂ ಅರ್ಥವಾಗದಂತೆ ನಟಿಸುತ್ತಾನೆ.ಮಗಳು ಮಾಡಿದ ಅಡುಗೆಯಲ್ಲಿ ಅಥವಾ ಕೆಲಸದಲ್ಲಿ ಏನೇ ದೋಷವಿದ್ದರೂ ಒಪ್ಪಿಕೊಳ್ಳುವ ಅಪ್ಪ, ಹೆಂಡತಿಯ ಅದೇ ದೋಷವನ್ನು ಹೇಳುತ್ತಾನೆ. ಆದರೆ, ಅಮ್ಮನಿಗೆ ಅದನ್ನು ಎತ್ತಿ ಆಡುತ್ತಾನೆ. ಗಂಡಸಿನ ಪಾತ್ರ ಇಲ್ಲಿ ಬದಲಾಗುತ್ತಾ ಹೋಗುತ್ತದೆ. ಅವನು ಒಬ್ಬನೇ ಆದರೂ ಭಾವಗಳ ತೋರ್ಪಡಿಸುವುದರಲ್ಲಿ ವಿಭಿನ್ನ ಪಾತ್ರ ವಹಿಸುತ್ತಾನೆ. ವಯಸ್ಸು ಮತ್ತು ಅನುಭವ ಅದೆಷ್ಟೇ ಪರಿಪಕ್ವವಾದರೂ ಈ ನಡವಳಿಕೆ ಸರ್ವೇಸಾಮಾನ್ಯ. [ನಾನು ಗಮನಿಸಿದಂತೆ]

"ಕಮ್ಯೂನಿಕೇಷನ್ ಗ್ಯಾಪ್" ಎನ್ನುವುದು ಅಮ್ಮ-ಮಕ್ಕಳಲ್ಲಿ ಅದರಲ್ಲೂ ಅಮ್ಮ-ಮಗಳಲ್ಲಿ ಬರುವುದೇ ಇಲ್ಲ. ಆದರೆ ಅಪ್ಪ ಮಕ್ಕಳಲ್ಲಿ ಈ ಗ್ಯಾಪ್ ಕೊಂಚ ಹೆಚ್ಚು. ಅಪ್ಪ-ಮಗಳಲ್ಲಿ ಇರುವ ಸಂವಹನ ಅಪ್ಪ-ಮಗನಲ್ಲಿ ಇರುವುದು ತುಂಬಾ ಕಡಿಮೆ. ಇಲ್ಲಿ ಪ್ರೀತಿ ಇರುವುದಿಲ್ಲ ಎಂದಲ್ಲ, ಪ್ರೀತಿಯನ್ನು ತೋರ್ಪಡಿಸುವುದಿಲ್ಲ. ಕಾಳಜಿಯನ್ನು ಮಾತಿಗಿಂತ ಹೆಚ್ಚಾಗಿ ಕೃತಿಯಲ್ಲಿ ತೋರಿಸುತ್ತಾರೆ. ಆದರೆ, ಮಕ್ಕಳಿಗೆ ಇದು ಅರ್ಥವಾಗುವುದು ತುಂಬಾ ತಡವಾಗಿ. ಇದೇ ಕಾರಣದಿಂದಾಗಿ ಎಷ್ಟೋ ಮನಸ್ತಾಪಗಳಾಗಿ ಬಿಟ್ಟಿರುತ್ತವೆ. ಮನಬಿಚ್ಚಿ ಮಾತಾಡಿದಾಕ್ಷಣ ಎಲ್ಲವೂ ಸರಿಯಾಗಿಬಿಡುತ್ತದೆಂದೇನಲ್ಲ. ಆದರೆ, ಭಾಂದವ್ಯ ಗಟ್ಟಿಯಾಗುತ್ತದೆ. ಮಾನಸಿಕ ಕ್ಷೋಭೆಗೆ, ಚಿಂತೆಗೆ ಅಲ್ಲಿ ಜಾಗವೇ ಇರುವುದಿಲ್ಲ.   

ಇನ್ನು ಹದಿಹರೆಯದ ಗಂಡು ಮಕ್ಕಳು ಕೆಲಸ ಸಿಕ್ಕಿಲ್ಲದ್ದಕ್ಕೆ, ಪ್ರೀತಿಯಲ್ಲಿ ಮೋಸ ಹೋಗಿದ್ದಕ್ಕೆ, ಪರೀಕ್ಷೆಯಲ್ಲಿ ಸೋತದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯಾ ಪ್ರಕರಣಗಳಲ್ಲಿ ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ಗಂಡು ಮಕ್ಕಳದ್ದೇ ಮೇಲುಗೈ. ಕಾರಣ ಇಷ್ಟೇ, ಆ ಕ್ಷಣದಲ್ಲಿ ಅವರು ಮಾನಸಿಕ ದುರ್ಬಲರು. "ನೀನು ಸೋತಿರಬಹುದಷ್ಟೇ, ಸತ್ತಿಲ್ಲ", "ಸೋಲೆಂಬುದು ಅಲ್ಪವಿರಾಮ" ಎಂದು ಹೇಳಲು ಯಾರೂ ಇರುವುದಿಲ್ಲ.ಅಂದರೆ, ಇವರ ಈ ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿರುವುದಿಲ್ಲ. ಎಲ್ಲರ ಮುಂದೆ ಅತ್ತರೆ ಅಥವಾ ದುಗುಡವನ್ನು ಬಿಚ್ಚಿಟ್ಟರೆ ಹೀಯಾಳಿಸುತ್ತಾರೆ ಎಂಬ ಕಾರಣಕ್ಕೆ ಭಾವನೆಗಳನ್ನೆಲ್ಲಾ ಅದುಮಿ ಬದುಕಿಬಿಟ್ಟಿರುತ್ತಾರೆ.

ಗಂಡು ಎಲ್ಲಾ ಪಾತ್ರವನ್ನೂ ನಿರ್ವಹಿಸಬಲ್ಲ. ಆದರೆ, ಸಮರ್ಥವಾಗಿ ಎಂಬುದು ಮಾತ್ರ ಅನುಮಾನ. ಹಾಗಾಗಿಯೇ ಒಬ್ಬರಿಗೆ ಒಳ್ಳೆಯವನಾಗಿ ಕಂಡವರು ಮತ್ತೊಬ್ಬರ ದೃಷ್ಟಿಯಲ್ಲಿ ಕೆಟ್ಟವರು. ಈ ಕೆಟ್ಟ-ಒಳ್ಳೆಯತನ ಮತ್ತು ಸಬಲತೆ-ದುರ್ಬಲತೆಯನ್ನು ಅರಿತು ಬದಲಾಯಿಸಿಕೊಂಡು ಬದುಕುವುದು ಅವನಿಗೇ ಬಿಟ್ಟಿದ್ದು. ಯಾರೋ ಕೆಲವರು ಮಾಡುವ ತಪ್ಪಿಗೆ ಎಲ್ಲರನ್ನೂ ದ್ವೇಷಿಸುವುದು ಸರಿಯಲ್ಲ ಹಾಗೆಯೇ ಕಣ್ಣಿಗೆ ಕಂಡದೆಲ್ಲ ನಿಜವೂ ಅಲ್ಲ..

ಅಪ್ಪ, ಅಣ್ಣ, ತಮ್ಮ, ಸ್ನೇಹಿತ, ಗಂಡ, ಪ್ರಿಯಕರ, ಮಗ, ಅಜ್ಜ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಶಿಕ್ಷಕ ಎಲ್ಲವೂ ಆಗಿರುವ ಪುರುಷರಿಗೆ "ಅಂತಾರಾಷ್ಟ್ರೀಯ ಪುರುಷ ದಿನಾಚರಣೆ"ಯ ಶುಭಾಷಯಗಳು. ದೈಹಿಕವಾಗಿ ಸಬಲರಾಗಿರುವಷ್ಟೇ ಮಾನಸಿಕವಾಗಿಯೂ ಸಬಲರಾಗಿ ಎಂದು ಹಾರೈಸುವೆ.

~ವಿಭಾ ವಿಶ್ವನಾಥ್

ಗುರುವಾರ, ನವೆಂಬರ್ 14, 2019

ಮಾಸದ ದಾಸಸಾಹಿತ್ಯ


ಸುಮಾರು 12 ರಿಂದ 15 ನೆ ಶತಮಾನದಲ್ಲಿ, ನಡುಗನ್ನಡದಲ್ಲಿ ಪ್ರಸಾರವಾದ ಸಾಹಿತ್ಯಗಳು ವಚನ ಸಾಹಿತ್ಯ ಮತ್ತು ದಾಸಸಾಹಿತ್ಯ. ದಾಸಸಾಹಿತ್ಯವು ಭಕ್ತಿಯನ್ನು ಮೂಲವಾಗಿ ಧ್ವನಿಸುತ್ತಾ, ವೇದಗಳ ಮುಂದುವರಿದ ಭಾಗಗಳಂತೆ ಭಾಸವಾಗುತ್ತಾ ಜನಸಾಮಾನ್ಯರಿಗೂ ತಲುಪುತ್ತಿವೆ.

ಹರಿದಾಸರು, ಕನಕದಾಸರು, ಪುರಂದರದಾಸರು, ವಿಜಯದಾಸರು, ಗೋಪಾಲದಾಸರು, ಪ್ರಾಣೇಶರು ಮುಂತಾದವರಿಂದ ದಾಸಸಾಹಿತ್ಯ ರೂಪುಗೊಂಡಿಡ್ಡರೂ ಪುರಂದರದಾಸರು ಮತ್ತು ಕನಕದಾಸರು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದಾಸ ಸಾಹಿತ್ಯವು  ಸಾಂಗವಾಗಿ ಹಾಡುವಂತೆ ರೂಪಿತವಾಗಿರುವುದರಿಂದ ಜನಸಾಮಾನ್ಯರ ಬಾಯಲ್ಲಿ ಕೀರ್ತನೆಗಳ ರೂಪದಲ್ಲಿ ಇವು ಇಂದಿಗೂ ಪ್ರಸ್ತುತವಾಗಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ಇವುಗಳಿಗೆ ವಿಶಿಷ್ಟ ಸ್ಥಾನವಿದೆ. ಪುರಂದರದಾಸರು ಕರ್ನಾಟಕದ ಮೂಲಪುರುಷರೂ ಹೌದು. ಜೀವನದಿಂದ ತ್ಯಾಗದ ಪಾಠ ಕಲಿತ ಪುರಂದರದಾಸರು, ಅಹಿಂಸೆಯ ಪಾಠ ಕಲಿತ ಕನಕದಾಸರು ಇಬ್ಬರೂ ಜನರಿಗೆ ಮುಕ್ತಿ ಮಾರ್ಗವನ್ನು ಭೋಧಿಸುವ ಉತ್ತಮ ಸಾಹಿತ್ಯ ಮತ್ತು ಸಂಗೀತದ ಸಾಂಗತ್ಯವನ್ನು ನೀಡಿದ್ದಾರೆ.

ಆಧ್ಯಾತ್ಮ, ತತ್ವ, ನೀತಿಗಳನ್ನು ಕ್ಲಿಷ್ಟವಿಲ್ಲದ ಪದಗಳಲ್ಲಿ ಹೇಳುತ್ತಾರೆ. ಅದರಲ್ಲಿ ಕೆಲವು ಪದ್ಯಗಳನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸಿದ್ದೇನೆ.

"ಅಡಿಗೆಯನ್ನು ಮಾಡಬೇಕಣ್ಣ, ನಾನೀಗ ಜ್ಙಾನದ ಅಡುಗೆಯನ್ನು ಮಾಡಬೇಕಣ್ಣ" ಎನ್ನುತ್ತಾ ಹಸಿವು, ಅಡುಗೆಯನ್ನು ಜ್ಙಾನಕ್ಕೆ ಹೋಲಿಸುತ್ತಾರೆ ಕನಕದಾಸರು. "ಹೃದಯ ಹೊಲವನು ಮಾಡಿ, ತನುವ ನೇಗಿಲ ಮಾಡಿ, ನಾಲಗೆಯ ಕೂರಿಗೆ ಮಾಡಿ ಬಿತ್ತಿರಯ್ಯ" ಎನ್ನುತ್ತಾ ಬದುಕನ್ನು ಕೃಷಿಗೆ ಹೋಲಿಸುತ್ತಾ ಸಂಬಂಧಗಳನ್ನುಉ ಒಗ್ಗೂಡಿಸ ಹೊರಡುತ್ತಾರೆ. "ಕುಲ ಕುಲ ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?" ಎಂದು ಪ್ರಶ್ನಿಸುತ್ತಾ ಧರ್ಮ, ಜಾತಿ, ಕುಲಗಳ ಪರಿಕಲ್ಪನೆಯನ್ನು ಅಲ್ಲಗಳೆಯುತ್ತಾ "ಆತ್ಮಕ್ಕೆ ಕುಲವಿಲ್ಲ" ಎಂದೆನ್ನುತ್ತಾರೆ. "ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ?" ಎನ್ನುತ್ತಾ ಆತ್ಮವಿಮರ್ಶೆ ಹಚ್ಚುತ್ತಾರೆ.

"ಏನು ಬೇಡಲೋ ದೇವ ನಿನ್ನ" ಎನ್ನುವ ವ್ಯಾಸರಾಯರು ಕೊಡುವವನೂ ನೀನೇ, ನಿನ್ನ ಹತ್ತಿರ ಬೇಡುವುದೇನಿದೆ ಎಂದು ಪ್ರಶ್ನಿಸುತ್ತಾರೆ. ಇವರ ಪುರಂದರದಾಸರು ಸಮಾಜದ ಓರೆಕೋರೆಗಳನ್ನು ತಿದ್ದುತ್ತಾ, ಎಲ್ಲರೊಳಗೊಂದಾಗಿ ಬದುಕುತ್ತಾ, ಜನಸಾಮಾನ್ಯರ ನಡುವೆಯೇ ಬದುಕಿದವರು. ಸುಳಾದಿ, ಉಗಾಭೋಗ,ಕೀರ್ತನೆಗಳ ಮೂಲಕ ತಮ್ಮ ಭೋಧನೆಯನ್ನು ಪಸರಿಸುತ್ತಾ ಜನಮಾನಸದಲ್ಲಿ ಶಾಶ್ವತವಾಗಿರುವವರು.

"ಈಸಬೇಕು ಇದ್ದು ಜೈಸಬೇಕು ಹೇಸಿಗೆ ಸಂಸಾರದಲ್ಲಿ, ಆಸೆ ಲೇಶ ಇಡದಾಂಗೆ ತಾಮರಸಜಲದಂತೆ" ಎನ್ನುತ್ತಾ ನೀರಿನ ಮೇಲೆ ಪದ್ಮಪತ್ರೆಯಂತೆ ಬದುಕು ಎನ್ನುತ್ತಾರೆ. "ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ" ಎನ್ನುತ್ತಾ ಮಾತು ಹೇಗಿರಬೇಕೆಂಬ ಸ್ಥೂಲ ಪರಿಚಯ ಮಾಡಿಕೊಡುತ್ತಾರೆ. "ಎಲ್ಲಾನು ಬಲ್ಲೆನೆಂಬುವಿರಲ್ಲ, ಅವಗುಣ ಬಿಡಲಿಲ್ಲ" ಎಂದೆನ್ನುತ್ತಾ ತಾವೇ ಮೇಧಾವಿಗಳೆಂದು ಮೆರೆಯುತ್ತಿರುವವರಿಗೆ ಚಾಟಿ ಏಟು ನೀಡುತ್ತಾರೆ. "ನಿಂದಕರಿರಬೇಕು.. ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಂಗೆ" ಎನ್ನುತ್ತಾ ಕೆಟ್ಟತನದಲ್ಲೂ ಒಳ್ಳೆಯತನವನ್ನು ಹುಡುಕಲು ಹೇಳಿಕೊಡುತ್ತಾರೆ. "ಬೇವು ಬೆಲ್ಲದೊಳಿಡಲೇನು ಫಲ, ಹಾವಿಗೆ ಹಾಲೆರೆದೇನು ಫಲ" ಎನ್ನುತ್ತಾ ಮೂಲಗುಣ ಸುಟ್ಟರೂ ಹೋಗದು, ಅಂತಹಾ ಬದಲಾವಣೆಗಳು ನಿರರ್ಥಕ ಎನ್ನುತ್ತಾರೆ. "ನೋಡದಿರು, ಪರಸ್ತ್ರೀಯರ ನೋಡಿದರೆ ಕೇಡಹುದು ತಪ್ಪದಿದಕೋ" ಎನ್ನುತ್ತಾ ಪುರಾಣ್ದ ವಾಲಿ, ರಾವಣ, ಇಂದ್ರರ ಜೀವನವನ್ನು ನೆನಪಿಸುತ್ತಾ ಬುದ್ದಿ ಹೇಳುತ್ತಾರೆ. ಪರ ಧನ ಮತ್ತು ಲೋಭಿಗಳಿಗೆ "ದುಗ್ಗಾಣಿ ಎಂಬುದು ಬಲು ಕೆಟ್ಟದಣ್ಣ" ಎನ್ನುತ್ತಾ ಹಣದ ವರ್ಜನೆಗೆ ಬುದ್ದಿ ಮಾತು ಹೇಳುತ್ತಾರೆ. "ಜಪವ ಮಾಡಿದರೇನು, ತಪವ ಮಾಡಿದರೇನು, ಕಪಟಗುಣ ವಿಪರೀತಕಲುಷವಿದ್ದವರು" ಎನ್ನುತ್ತಾ ಮೇಲಿನ ತೋರಿಕೆಯ ಶುದ್ದತೆಗಿಂತ, ಅಂತರಂಗದ ಶುದ್ದತೆ ಮುಖ್ಯ ಎನ್ನುತ್ತಾರೆ. "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ" ಎಂಬ ಜೀವನದ ಪರಮ ಸತ್ಯವನ್ನು ಬಿಚ್ಚಿಡುತ್ತಾರೆ.

ಈ ತತ್ವದ ನುಡಿಗಳು ಸಾರ್ವಕಾಲಿಕ ನುಡಿಗಳಂತೆ ಧ್ವನಿಸುತ್ತವೆ, ಇವುಗಳ ಮೂಲಕ ಅವರು ಜೀವನ ಮೌಲ್ಯವನ್ನು ತಿಳಿಸುತ್ತಾ, ಎಲ್ಲರಲ್ಲೂ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತಾರೆ. ಸಂಸಾರದ ವೈಯಕ್ತಿಕ ಬಂಧನವನ್ನು ತೊರೆದು, ಜಪ-ತಪಗಳಿಂದ ಮುಕ್ತಿ ಎನ್ನುತ್ತಾ ತಮ್ಮ ವೈಯಕ್ತಿಕ ಜೀವನಕ್ಕಷ್ಟೇ ಬದುಕನ್ನು ಮುಡಿಪಾಗಿರಿಸದೆ, ಸಮಾಜದ ಸಮಸ್ಯೆಗಳನ್ನು, ಮೂಡನಂಬಿಕೆಗಳನ್ನು ಹೊಡೆದೋಡಿಸುತ್ತಾ ಜೀವಂತ ಉದಾಹರಣೆಯಾದರು. ಆತ್ಮ ಶುದ್ದಿಗೆ ಮಾರ್ಗ ತೋರುತ್ತಾ ಸಮಾಜವನ್ನು ಸುಧಾರಿಸಿದರು.

ದಾಸಸಾಹಿತ್ಯದ ದಾಸರ ಪದಗಳು ದೇವರನಾಮಗಳೆಂದೂ ಪ್ರತೀತಿಯಾಗಿವೆ. ಈ ದಾಸರ ಪದಗಳನ್ನು ಇಂದಿಗೂ ತಮಿಳು ನಾಡಿನಲ್ಲಿ ಸಂಗೀತ ಕಛೇರಿಯ ಕೊನೆಯಲ್ಲಿ ಹಾಡಿಯೇ ಹಾಡುತ್ತಾರೆ. ಬರೀ ತತ್ವವಷ್ಟೇ ಅಲ್ಲ, ಸವಿನುಡಿಯಂತೆ ಭಾಸವಾಗುವ ಇವು ಕೆಲವೊಮ್ಮೆ ಛಾಟಿ ಏಟುಗಳಂತೆಯೂ ಅನ್ನಿಸುತ್ತವೆ. ಇನ್ನು ಕೆಲವು ಒಗಟಿನಂತೆ ಒಳಾರ್ಥವನ್ನು ಹೊಂದಿವೆ. ಪ್ರಸ್ತುತ ದಿನಗಳ ಸಾಮಾಜಿಕ ಪರಿಸ್ತಿತಿಗೂ ಇವು ಹೊಂದಿಕೆಯಾಗುವಂತಿವೆ. ಈಗಿನ ಪರಿಸ್ಥಿತಿ ಅಂದಿಗಿಂತ ಕೊಂಚ ಭಿನ್ನವಾಗಿರಬಹುದಷ್ಟೇ.. ಆದರೆ ಮೌಡ್ಯ, ಪರ ಸ್ತ್ರೀ ಮತ್ತು ಹೊನ್ನು-ಕಾಸಿಗೆ ಆಶಿಸುವುದು ಇನ್ನೂ ಕಡಿಮೆಯಾಗಿಲ್ಲ. ಕೇಳುವವರು ಇದನ್ನು ಅರಿತು ಆಚರಿಸಿದರೆ ಅವರ ಸಾಮಾಜಿಕ ಕಳಕಳಿಗೆ ಉತ್ತಮ ಪ್ರತಿಫಲ ಸಿಕ್ಕಂತಾಗುತ್ತದೆ. ಮತ್ತು ದಾಸಸಾಹಿತ್ಯ ಮತ್ತು ಅದರ ಹರಿಕಾರರು ಬದುಕಿನಲ್ಲಿ ಮಾಸದೆ ಉಳಿದುದರಲ್ಲಿ ಸಂಶಯವೇ ಇಲ್ಲ.

~ವಿಭಾ ವಿಶ್ವನಾಥ್

ಭಾನುವಾರ, ನವೆಂಬರ್ 3, 2019

ವಿಷಮುಕ್ತವಲ್ಲ ವಿಷಯುಕ್ತ


ಪಟಾಕಿಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಪಟಾಕಿ ಸಿಡಿಸಬೇಡಿ ಅಂತಾ ಯಾರೋ ಹೇಳಿದ್ದಕ್ಕೆ ಮತ್ಯಾರೋ ಕ್ರಿಸ್ ಮಸ್ ಬರುತ್ತಾ ಇದೆ, ಕ್ಯಾಂಡಲ್ ಹಚ್ಚಬೇಡಿ ಅದೂ ಸಹಾ ವಾಯುಮಾಲಿನ್ಯ ಮಾಡುತ್ತದೆ ಅಂತಾ ಒಬ್ಬರನೊಬ್ಬರು ಗುರಿ ಮಾಡಿಕೊಂಡು ಜಾತಿ, ಧರ್ಮ, ರಾಜಕೀಯವಾಗಿ ಕಿತ್ತಾಡುವುದು ಸಾಮಾನ್ಯವಾಗಿ ಹೋಗಿದೆ. ಪರಿಸರವನ್ನು ಇವತ್ತು ಮಲಿನ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ ಮನುಷ್ಯನ ಯೋಚನಾಲಹರಿ, ಬದಲಾಯಿಸಿಕೊಳ್ಳಲಾಗದಿರುವ ನಡವಳಿಕೆ ಮತ್ತು ಅಹಂ ಅಷ್ಟೇ.

ಕಳೆದ ಮೂರು ದಿನದಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಇವತ್ತು ಎಷ್ಟು ಜನಕ್ಕಿದೆ? ಯಾವುದೋ ಕೆಲಸಕ್ಕೆ ಬಾರದ ಮಾಹಿತಿಗಳನ್ನು ದಿನವಿಡೀ ತೋರಿಸುವ ನ್ಯೂಸ್ ಚಾನೆಲ್ ಗಳು ಇದನ್ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ? ಈ ಸಮಸ್ಯೆಯ ಮೂಲ ಏನು? ಸಮಸ್ಯೆ ಎಷ್ಟು ತೀವ್ರವಾಗಿದೆ? ಇದರ ಮುಂದಿನ ಪರಿಣಾಮಗಳೇನು? ಈ ಸಮಸ್ಯೆಯ ಪರಿಹಾರ ಹೇಗೆ? ನನಗೆ ದಕ್ಕಿದ ಮಟ್ಟಿಗೆ ನನ್ನ ವಿಶ್ಲೇಷಣೆ ಹೀಗಿದೆ ನೋಡಿ.
ದೆಹಲಿಯ ಶಾಲೆಗಳಿಗೆ ನವೆಂಬರ್ 5 ರ ವರೆಗೆ ರಜೆ ಘೋಷಿಸಲಾಗಿದೆ. ಇದು ಸಂತಸದ ಸಂಭ್ರಮಾಚರಣೆಗಲ್ಲ, ಕಳವಳಕಾರಿ ಬೆಳವಣಿಗೆಯೊಂದರ ಭಾಗವಾಗಿ.. ದೆಹಲಿಯಲ್ಲಿ ಮಾಲಿನ್ಯದ ಮಟ್ಟ 450ನ್ನೂ ದಾಟಿದೆ. ಸಾಮಾನ್ಯವಾಗಿ ಇರಬೇಕಾದುದಕ್ಕಿಂತ 4-5 ಪಟ್ಟು ಹೆಚ್ಚಾಗಿದೆ. ಇಂದು ಬೆಳಿಗ್ಗೆ ಮಳೆಯಾದ ನಂತರವಂತೂ ಅಲ್ಲಿನ ಪರಿಸ್ಥಿತಿ ಇನ್ನೂ ಕೆಟ್ಟಿದೆ. ಗಾಜಿಯಾಬಾದ್ ನಲ್ಲಿ 496, ನೋಯ್ಡಾದಲ್ಲಿ 499 ಮುಟ್ಟಿದೆ. ಈ ಮಾಲಿನ್ಯದ ಮಟ್ಟ ಅಳೆಯುವುದಾದರೂ ಹೇಗೆ ಗೊತ್ತಾ?

SAFAR[system of Air Quality and Weather Forecasting and Research] ಇದು ಎಲ್ಲಾ ನಗರಗಳ ಮಾಲಿನ್ಯದ ಮಟ್ಟವನ್ನೂ, ಗಾಳಿಯ ಗುಣಮಟ್ಟವನ್ನೂ ಅಳೆಯುವ ಸರ್ಕಾರದ ಸಂಸ್ಥೆ. ಪ್ರತಿ ಗಂಟೆಗೊಮ್ಮೆ ನಗರಗಳ ವಿವಿಧ ಭಾಗಗಳಲ್ಲಿ ಅಂದರೆ ಇಂಡಸ್ಟ್ರಿಯಲ್ ಏರಿಯಾ, ರಸ್ತೆಯ ಬದಿ, ಟ್ರಾಫಿಕ್ ಸಿಗ್ನಲ್, ಕೃಷಿ ಜಾಗ, ರೆಸಿಡೆನ್ಸಿಯಲ್ ಏರಿಯಾ ಹೀಗೇ ವಿವಿಧ ಪರಿಸರಗಳಿಂದ ಹವಾಮಾನವನ್ನು ಆಧರಿಸಿ ಮಾಲಿನ್ಯದ ಮಟ್ಟವನ್ನು ಪತ್ತೆ ಮಾಡುತ್ತದೆ. ಆ ಸಂಖ್ಯೆಯೇ AQI[Air Quality Index]. AQI ಮಟ್ಟ ಮತ್ತು ಪರಿಣಾಮ ಹೀಗಿದೆ.

0-50 ಇದ್ದರೆ Good
51-100 ಇದ್ದರೆ Satisfactory
101-200 ಇದ್ದರೆ Moderate
201-300 ಇದ್ದರೆ Poor
301-400 ಇದ್ದರೆ Very Poor
401-500 ಇದ್ದರೆ Severe plus / Emergency

ಈಗ ದೆಹಲಿಯಲ್ಲಿ ಅಥವಾ ಪರಿಸ್ಥಿತಿ ಜಾರಿಯಲ್ಲಿದೆ. ಇದಕ್ಕೆ ಕಾರಣ ಏನು ಗೊತ್ತಾ? ದೀಪಾವಳಿಯ ಪಟಾಕಿಗಳಲ್ಲ, ವಾಹನಗಳ ಅತಿ ಮಾಲಿನ್ಯವೂ ಅಲ್ಲ. ಅಸಲಿಗೆ ಇದರ ಕಾರಣ ಇರುವುದು ಪಕ್ಕದ ರಾಜ್ಯಗಳಲ್ಲಿ 50% ಕಾರಣೀಕರ್ತರು ಇವರುಗಳೇ.

ಪಂಜಾಬ್ ಮತ್ತು ಹರಿಯಾಣಗಳು ಪರೋಕ್ಷವಾಗಿ ದೆಹಲಿಯ ವಾಯುಮಾಲಿನ್ಯಕ್ಕೆ ಕಾರಣೀಕರ್ತರು. ಗಾಳಿ ಬೀಸುವ ದಿಕ್ಕು ಅಲ್ಲಿಂದ ಇಲ್ಲಿಗೆ ಮಾಲಿನ್ಯವನ್ನು ಇಲ್ಲಿಗೆ ಹೊತ್ತು ಹಾಕಿದೆ. ಕಾರಣ ಹೀಗಿದೆ ಕೇಳಿ.
ಕೃಷಿಯ ಕೊಯ್ಲಿನ ನಂತರ ಉಳಿಯುವ ಕಡ್ಡಿ ಅದರಲ್ಲೂ ಮುಖ್ಯವಾಗಿ ಭತ್ತ, ಗೋಧಿಯಂತಹಾ ಬೆಳೆಗಳ ಕಟಾವಿನ ನಂತರ ಕೂಳೆಯನ್ನು ಇಲ್ಲಿ ಸುಡುತ್ತಾರೆ. ಪ್ರತಿ ವರ್ಷ ಸೆಪ್ಟಂಬರ್ ಮತ್ತು ಅಕ್ಟೋಬರ್ ನಲ್ಲಿ ಈ ಭತ್ತದ ತ್ಯಾಜ್ಯ[Stubble] ವನ್ನು ಹೊಲದಿಂದ ತೆಗೆದು ಹಾಕುವುದಕ್ಕೆ ಇವರು ಬಳಸುವ ಮಾರ್ಗ ತಮ್ಮ ಹೊಲದಲ್ಲಿ ಬೆಂಕಿ ಹಾಕುವುದು. ಅವರ ದೃಷ್ಟಿಯಲ್ಲಿ ಇದು ಕಡಿಮೆ ಖರ್ಚಿನಲ್ಲಿ ಆಗುವ ವಿಧಾನ. ಜೊತೆಗೆ ಚಳಿಗಾಲದ ಕೊಯ್ಲಿಗೆ ತಮ್ಮ ಹೊಲಗಳನ್ನು ಮರು ಅಣಿಗೊಳಿಸುವ ವಿಧಾನ. ಆದರೆ ಇದರ ಅಡ್ಡ ಪರಿಣಾಮದಿಂದಾಗಿ "ವಿಷಯುಕ್ತ ಮೋಡ" ನಿರ್ಮಾಣವಾಗುತ್ತಿದೆ. ಗಾಳಿಗೆ ವಿಷ ಸೇರ್ಪಡೆಯಾಗುತ್ತಿದೆ. ಇದೆಲ್ಲದರ ಪರಿಣಾಮವೇ ಇಂದಿನ ದೆಹಲಿಯ ಪರಿಸ್ಥಿತಿ.

ಗಾಳಿ ಜೀವನದ ಜೀವನಾಡಿ, ಉಸಿರಾಟಕ್ಕೆ ತೊಂದರೆಯಾದರೆ ಬದುಕುವುದಾದರೂ ಹೇಗೆ? ಕಣ್ಣು, ಶ್ವಾಸಕೋಶ ಮತ್ತು ಚರ್ಮ ಸಂಬಂಧಿ ರೋಗಗಳು ಹೆಚ್ಚಾಗಿವೆ. ಅಸ್ತಮಾ, ಕೆಮ್ಮು ಮರುಕಳಿಸುತ್ತಲಿವೆ. ಶ್ವಾಸಕೋಶ ಮತ್ತು ಲುಕೇಮಿಯಾದಂತಹಾ ಖಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಿವೆ. ಗರ್ಭಿಣಿಯರಿಗೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಲಿದೆ. ಅವಧಿಪೂರ್ವ ಪ್ರಸವಗಳು ಹೆಚ್ಚಾಗಲಿವೆ. ಇನ್ನೂ ಕಣ್ಣೇ ಬಿಡದ ಹಸುಗೂಸುಗಳೂ ಸಹಾ ಇದರಿಂದಾಗಿ ನರಳಲಿವೆ. 

ಇಂದು ಇದು ದೆಹಲಿಗೆ ಹರಡಿದೆ. ನಾಳೆ ಎಲ್ಲೆಡೆಯೂ ಪಸರಿಸಬಹುದು. ಇದೊಂದೇ ಕಾರಣವಲ್ಲ. ಇದು ನಾಳಿನ ಕರಾಳ ಭವಿಷ್ಯದ ನಿಮಿತ್ತ ಮತ್ತು ಉದಾಹರಣೆಯಷ್ಟೇ. ಈಗಾಗಲೇ ಕೃಷಿಗೆ ಉಪಯೋಗಿಸುತ್ತಿರುವ ರಾಸಾಯನಿಕಗಳು ಗಾಳಿಯಲ್ಲಿ ಮತ್ತು ಆಹಾರದಲ್ಲಿ ಸೇರಿ ಕ್ಯಾನ್ಸರ್ ಮತ್ತು ವಿವಿಧ ಅಡ್ಡ ಪರಿಣಾಮಗಳುಂಟಾಗುತ್ತಿವೆ. ಯಾರೋ ಸೇದಿದ ಸಿಗರೇಟ್ ನಿಂದಾಗಿ ಮತ್ತಾರೋ ಪ್ಯಾಸೀವ್ ಸ್ಮೋಕರ್ ಎಫೆಕ್ಟ್ ಗೆ ಒಳಗಾಗಿ ಕ್ಯಾನ್ಸರ್ ಗೆ ಒಳಗಾಗುತ್ತಿದ್ದಾರೆ. ಇನ್ನಾದರೂ ಇದೆಲ್ಲದರಿಂದ ಎಚ್ಚೆತ್ತುಕೊಳ್ಳಬೇಕಿದೆ.

ಇವತ್ತು ಟೆಕ್ನಾಲಜಿಯಲ್ಲಿ ಅಷ್ಟೂ ಮುಂದಿದ್ದೇವೆ,ಇಂಟರ್ ನೆಟ್ ಆಫ್ ಥಿಂಗ್ಸ್[IoT]ನಿಂದಾಗಿ ಕುಳಿತಲ್ಲೇ ಡಿವೈಸ್ ಗಳನ್ನು ಕಂಟ್ರೋಲ್ ಮಾಡುತ್ತೇವೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್[AI]ನಿಂದ ಮಶೀನ್ ಲರ್ನಿಂಗ್[ML]ನಿಂದ ಬೇಕಾದ್ದನ್ನು ಬೇಕಾದ್ದನ್ನು ಬೇಕಾದಂತೆ ಸೃಷ್ಟಿಸ ಹೊರಡುತ್ತೇವೆ. ಆದರೆ, ಮನುಷ್ಯನ ಜೀವವನ್ನು, ಪರಿಸರವನ್ನೂ, ಇರುವುದನ್ನೇ ಉಳಿಸಿಕೊಳ್ಳದೇ ಹೋದರೆ ಇದೆಲ್ಲದರ ಫಲವೇನು? ಮಾನವೀಯತೆಯನ್ನು ಸಾಯಿಸಿಕೊಂಡು ಮತ್ತೊಬ್ಬರಿಗೆ ಹಾನಿ ಮಾಡುತ್ತಾ ಜಾತಿ, ಧರ್ಮ, ರಾಜಕೀಯ ದೃಷ್ಟಿಯಲ್ಲಿ ಯೋಚಿಸಿದರೆ ಫಲವಾದರೂ ಏನು? ಇನ್ನಾದರೂ ವಿಷಮುಕ್ತವಾಗಲು ಹೆಜ್ಜೆ ಹಾಕೋಣ. ಪರಿಸರದಲ್ಲಿಯೂ ಹಾಗೂ ದೃಷ್ಟಿಕೋನದಲ್ಲಿಯೂ..

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 22, 2019

ಮಗಳ ಮನೋಲಹರಿ

ಮಗಳು ಹುಟ್ಟಿದರೆ ಜವಾಬ್ದಾರಿ ಹೆಚ್ಚಿತು ಎಂದುಕೊಳ್ಳುವವರೇ ಹೆಚ್ಚು. ಇಂದಿನ ದಿನಗಳಲ್ಲಿ ಇದು ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಸಂಪೂರ್ಣವಾಗಿ ನಿಂತಿಲ್ಲ.

ಪೋಷಕರಲ್ಲಿ ಮಗಳ ಮೇಲಿನ ಕಾಳಜಿ ಸ್ವಲ್ಪ ಹೆಚ್ಚು, ಪ್ರೀತಿ ಕೂಡಾ ಹಾಗೆಯೇ ಆತಂಕ ಸಹಾ ಕೊಂಚ ಹೆಚ್ಚೇ.. ಆದರೆ ಅದೆಲ್ಲದಕ್ಕೂ ಕಾರಣ ಇದೆ ಎಂದು ತಿಳಿಯುವುದಕ್ಕೆ ಸ್ವಲ್ಪ ಜಾಸ್ತಿಯೇ ಸಮಯ ಬೇಕಾಗುತ್ತದೆ.

ಯಾಕಿಷ್ಟು ಬೇಗ ಬೆಳೆದು ದೊಡ್ಡವರಾಗುತ್ತೇವೆ ಅಂತಾ ಗೊತ್ತಿಲ್ಲ. ಕಾಲ ಸ್ವಲ್ಪ ನಿಧಾನವಾಗಿ ಸರಿಯಬಾರದಿತ್ತಾ ಅಂತಾ ಅನ್ನಿಸುತ್ತಾ ಇರುವುದೂ ಸುಳ್ಳಲ್ಲ. ಜವಾಬ್ದಾರಿಯನ್ನು ಹೊರುವುದಕ್ಕೆ ಹೆದರುವುದಿಲ್ಲ, ಹೊರ ಜಗತ್ತಿನಲ್ಲಿ ಧೈರ್ಯವಾಗಿರುವುದಕ್ಕೆ ಕಲಿತಿದ್ದೇವೆ. ನೂರಾರು ಹಸಿದ ಕಣ್ಣುಗಳಿಗೆ ಆಹಾರವಾದರೂ ಅದನ್ನು ನಿರ್ಲಕ್ಷಿಸಿ ಬದುಕುವುದನ್ನು ಕಲಿತಿದ್ದೇವೆ. ಆದರೂ ಎಲ್ಲೋ ಒಂದು ಕಡೆ, ಒಂದರೆಕ್ಷಣ ಭಯವಾಗುವುದು ಸುಳ್ಳಲ್ಲ. ಯಾವುದೋ ಬಾಲಕಿಯ ಮೇಲೆ ಅತ್ಯಾಚಾರವಾದ ಸುದ್ದಿ ಕೇಳಿ, ಮತ್ತಾವುದೋ ಮನೆಮಗಳನ್ನು ವರದಕ್ಷಿಣೆ ಕಿರುಕುಳಕ್ಕಾಗಿ ಚಿತ್ರಹಿಂಸೆ ನೀಡಿ ಅರೆಜೀವ ಮಾಡಿರುವುದನ್ನು ಕೇಳಿ, ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದವಳ ಜೀವನ ಕಂಡು ಭಯವಾಗುತ್ತೆ. ಆವಾಗೆಲ್ಲಾ ಧೈರ್ಯ ತುಂಬುವುದು ಯಾವುದು ಗೊತ್ತಾ..?

ಅಮ್ಮನ ಮಡಿಲಲ್ಲಿ ಮಲಗಿದಾಗ ಸಿಗುವ ನಿಶ್ಚಿಂತೆ, ಅಪ್ಪ ಕೈ ಹಿಡಿದು ನಡೆಸುವಾಗ ಸಿಕ್ಕ ಕೈ ಬಿಸುಪಿನ ಬೆಚ್ಚನೆ ಸ್ಪರ್ಶ, ಅಜ್ಜ-ಅಜ್ಜಿಯ ಪ್ರೀತಿ, ಚಿಕ್ಕಮ್ಮ-ದೊಡ್ಡಮ್ಮಂದಿರ ಕಾಳಜಿ, ಅಣ್ಣನ ಕಣ್ಗಾವಲು ಇವೆಲ್ಲಾ ಎಷ್ಟು ಆಪ್ತ ಎನ್ನಿಸಿಬಿಡುತ್ತದೆ ಗೊತ್ತಾ..? ಚಿಕ್ಕ-ಚಿಕ್ಕ ನಡೆಗಳು, ಸಂಬಂಧಗಳ ಆಪ್ತ ಬಂಧಗಳು ಎಷ್ಟೆಲ್ಲಾ ಧೈರ್ಯ ತುಂಬುತ್ತವೆ ಅಂದರೆ ಜಗತ್ತಿನಲ್ಲಿಯೇ ನಾನು ಅತ್ಯಂತ ಸುರಕ್ಷಿತಳು ಎನ್ನುವ ಭಾವನೆ ಬಂದು ಬಿಡುತ್ತದೆ.

ಎಷ್ಟೆಲ್ಲಾ ಕಾಳಜಿ, ಪ್ರೀತಿಯ ನಡುವೆಯೂ ಮನೆಯವರಿಗೆ ಮಗಳು ಜವಾಬ್ದಾರಿ, ಹೊರೆ ಎನ್ನಿಸುತ್ತಾಳೆ ಅಲ್ವಾ..? ಹೊರೆ ಅಂತಲ್ಲದಿದ್ದರೂ ನಿಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳಲು ನೀವೆಲ್ಲಾ ಸಿದ್ದರಾಗುತ್ತಾ ಇರುತ್ತೀರ. ವಿದ್ಯಾಭ್ಯಾಸ ಮುಗಿಯುವುದೇ ತಡ, ಅವಳನ್ನು ಸಾಗ ಹಾಕುವ ಸಿದ್ದತೆ ಮಾಡಿಕೊಳ್ಳುತ್ತಾ ಇರುತ್ತೀರ. ಖಂಡಿತಾ ಇದು ತಪ್ಪಲ್ಲ. ಆದರೆ, ಮಗಳ ಮನಸ್ಸಿನಲ್ಲಿ ಏನಿರುತ್ತದೆ? ಎಂಬುದು ಅಲ್ಲಿ ಮುಖ್ಯವಾಗುವುದೇ ಇಲ್ಲ..

ವಿದ್ಯಾಭ್ಯಾಸ ಮುಗಿದ ಮೇಲೆ ಕೆಲಸ ಸಿಕ್ಕು ಕೆಲ ಕಾಲ ತನ್ನದೇ ಕುಟುಂಬದಲ್ಲಿ, ತನ್ನದೇ ಪ್ರಪಂಚದಲ್ಲಿ ನೆಮ್ಮದಿಯಾಗಿರಬೇಕು ಎನ್ನುವ ಆಸೆ ಇರುತ್ತದೆ. ಯಾಕೆಂದರೆ, ಮುಂದಿನ ದಿನಗಳ ಜವಾಬ್ದಾರಿ, ಒತ್ತಡ, ಸಂಬಂಧಗಳ ಪಾಲನೆ-ಪೋಷಣೆಯ ಅರಿವು ಅವಳಿಗಿರುತ್ತದೆ. ವಿಪರ್ಯಾಸವೆಂದರೆ, ಇದ್ಯಾವುದೂ ಅವಳಿಷ್ಟದಂತೆ ನಡೆಯುವುದೇ ಇಲ್ಲ. ಕಾಲಚಕ್ರದಲ್ಲಿ ವಿವಾಹ ಬಂಧನದಲ್ಲಿ ಸಿಲುಕಿ ಅವಳು ತನ್ನ ಹವ್ಯಾಸ, ಇಷ್ಟಾನಿಷ್ಟಗಳನ್ನು ಕಟ್ಟಿಟ್ಟು ಸಂಪೂರ್ಣ ಬದಲಾಗುತ್ತಾಳೆ. ತನ್ನದಲ್ಲದ ಪ್ರಪಂಚವನ್ನು ತನ್ನದು ಎಂಬಂತೆ ಭಾವಿಸಿ ಬದುಕುತ್ತಾ ತ್ರಿಶಂಕು ಸ್ವರ್ಗವನ್ನು ಸೃಷ್ಟಿ ಮಾಡಿಕೊಳ್ಳುತ್ತಾಳೆ. ತನ್ನ ಮಗಳಲ್ಲಿ ತನ್ನ ಆಸೆ-ಕನಸುಗಳನ್ನು ಬಿತ್ತುತ್ತಾ ತನ್ನನ್ನು ಅವಳಲ್ಲಿ ಕಾಣಬಯಸುತ್ತಾಳೆ. ಮಗಳು ಬೆಳೆಯುತ್ತಾ ಹೋದಂತೆ ಕಾಲಚಕ್ರ ಮತ್ತೆ ಪುನರಾವರ್ತನೆಯಾಗುತ್ತಿರುತ್ತದೆ.

ಇದೆಲ್ಲವನ್ನೂ ನೋಡಿದಾಗ ಮತ್ತೆ ಪುನಃ ಮಗುವಾಗಿ, ಎಲ್ಲರ ನೆಚ್ಚಿನ ಮನೆಮಗಳಾಗಿಯೇ ಇರುವ ಆಸೆ ಹುಟ್ಟುವುದಂತೂ ಸುಳ್ಳಲ್ಲ. ಇವತ್ತು ಮಗಳ ದಿನವಂತೆ.. ಯಾಕೋ ಇವಿಷ್ಟನ್ನೂ ಹೇಳಬೇಕೆನಿಸಿತು. ಮಗಳ ಮನೋಲಹರಿಯಲ್ಲಿ ಬಹಳಷ್ಟು ಲಹರಿಗಳಿದ್ದರೂ ತೆರೆದಿಡಲಾಗುತ್ತಿಲ್ಲ. ಅತಿ ಹೆಚ್ಚು ಭಾವುಕತೆ ಇದ್ದಾಗ ಪದಗಳಲ್ಲಿ ಹಿಡಿದಿಡುವುದು ಕಷ್ಟವಾಗುತ್ತದೆ. ಮಗಳಾಗಿ ನನಗೆ ನನ್ನ ಜವಾಬ್ದಾರಿಯ ಅರಿವಿದೆ ಎಂದು ತಿಳಿಸಬಯಸುತ್ತೇನೆ. ಅಪ್ಪ-ಅಮ್ಮನಿಗೆ, ಮನೆಗೆ ಒಳ್ಳೆಯ ಮಗಳಾಗಿಯೇ ಇರುವ ಆಸೆ, ಇರುತ್ತೇನೆ ಎಂಬ ಭರವಸೆ ಇಷ್ಟೇ ನನ್ನಿಂದ ಹೇಳಲಾಗುವುದು.

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 15, 2019

ಇಂಜಿನಿಯರ್ ಗಳ ಹಿಂದಿನ ಕತೆ

ಪಿ.ಯು.ಸಿ ಮುಗಿದ ನಂತರ ಯಾವುದೋ ಕೋರ್ಸ್ ಆಗಬಹುದು ಎಂದೋ, ಅಥವಾ ಮತ್ತಾವ ಆಯ್ಕೆಯೂ ಲಭ್ಯವಿಲ್ಲ ಎಂದೋ ಅಥವಾ ಮತ್ತೊಬ್ಬರ ಮಾತಿಗೆ ಬೆಲೆಕೊಟ್ಟು ಅಥವಾ ಮನೆಯಲ್ಲಿ ಹೇಳಿದರೆಂದೋ, ನಮ್ಮ ಹವ್ಯಾಸಗಳನ್ನೆಲ್ಲಾ ಬಲಿಕೊಟ್ಟೋ ಒಂದು ಪ್ರೊಫೆಶನಲ್ ಕೋರ್ಸ್ ಗೆ ಸೇರುತ್ತೇವೆ. ಇಂಜಿನಿಯರಿಂಗ್ ಮುಗಿಸಿದ 80 ರಿಂದ 90% ಜನರ ಇಂಜಿನಿಯರಿಂಗ್ ಸೇರುವ ಮೊದಲಿನ ಕಥೆ ಇದು.

ಹುಡುಗಿಯರ ಇಂಜಿನಿಯರಿಂಗ್ ಸೇರುವಿಕೆಯ ಹಿಂದೆ ಇನ್ನೊಂದಿಷ್ಟು ಕಾರಣಗಳಿರುತ್ತವೆ. ಹುಡುಗಿ ಕೊಂಚ ಕಪ್ಪು, ಎತ್ತರ ಕೂಡಾ ಕಡಿಮೆಯೇ.. ಬಿ.ಎಸ್.ಸಿ ಸೇರಿದರೆ ಗಂಡು ಹುಡುಕುವುದು ಕಷ್ಟ ಆಗುತ್ತೆ. ಬಿ.ಇ ಅಥವಾ ಬಿ.ಟೆಕ್ ಮಾಡಿದರೆ ಅವಳ ಮದುವೆಗೆ ಸುಲಭವಾಗುತ್ತೆ. ಹೆಣ್ಣುಮಕ್ಕಳ ಮದುವೆಯ ಮಾರ್ಕೆಟ್ ಗೆ ಇದೊಂದು ಅಸ್ತ್ರವಾಗಿರುತ್ತದೆ ಅಷ್ಟೇ..

ಇಂಜಿನಿಯರಿಂಗ್ ಸೇರಿದವರೆಲ್ಲಾ ಇಂಜಿನಿಯರ್ ಗಳೇ ಆಗುತ್ತಾರಾ? ಖಂಡಿತ ಇಲ್ಲ. 4 ವರ್ಷದಲ್ಲಿ ಇಂಜಿನಿಯರಿಂಗ್ ಮುಗಿಸುವವರು ಕೂಡಾ ಇಂಜಿನಿಯರ್ ಗಳಾಗುತ್ತಾರೆ. 8 ವರ್ಷದಲ್ಲಿ ಇಂಜಿನಿಯರಿಂಗ್ ಮುಗಿಸುವವರು ಕೂಡಾ ಇಂಜಿನಿಯರ್ ಎಂಬ ಹಣೆಪಟ್ಟಿ ಹೊತ್ತುಕೊಳ್ಳುತ್ತಾರೆ. 4 ವರ್ಷದಲ್ಲಿ ಇಂಜಿನಿಯರಿಂಗ್ ಮುಗಿಸಿದರೂ ಮೊದಲನೇ ಅಟೆಂಪ್ಟ್ ಅಲ್ಲಿಯೇ ಎಲ್ಲಾ ಸಬ್ಜೆಕ್ಟ್ ಗಳನ್ನು ಪಾಸ್ ಮಾಡುವವರು ಕಡಿಮೆಯೇ.. 8 ಸೆಮಿಸ್ಟರ್ ಮುಗಿಸಿ, 64 ಸಬ್ಜೆಕ್ಟ್ ಗಳನ್ನು ಓದಿದ ಮಾತ್ರಕ್ಕೆ ಇಂಜಿನಿಯರ್ ಗಳಾಗಿ ಬಿಡುತ್ತಾರಾ? ಅಸಲಿಗೆ ಇಂಜಿನಿಯರ್ ಗಳೆಂದರೆ ಯಾರು?

ಸಮಾಜದ ಸಮಸ್ಯೆಗಳಿಗೆ ಎಲ್ಲರಿಗೂ ಸರಿ ಹೊಂದುವಂತೆ ಉತ್ತರ ಸೂಚಿಸುವವನೇ ಇಂಜಿನಿಯರ್. ಕಲ್ಲಿನಿಂದ ಬೆಂಕಿ ಉತ್ಪಾದಿಸುವುದನ್ನು ಕಂಡು ಹಿಡಿದವನು, ಮರದ ಗಾಲಿ ಕಂಡು ಹಿಡಿದವನು, ಮನೆ ಕಟ್ಟುವುದನ್ನು ಶುರು ಮಾಡಿದವನು ಎಲ್ಲರೂ ಒಂದರ್ಥದಲ್ಲಿ ಇಂಜಿನಿಯರ್ ಗಳೇ.. ಇಂದಿನ ಇಂಜಿನಿಯರ್ ಗಳ ಕುರಿತು ಒಂದು ಮಾತಿದೆ. ಬೆಂಗಳೂರಿನಲ್ಲಿ ಒಂದು ಬೀದಿಯಲ್ಲಿ ನಿಂತು ಕಲ್ಲು ಎಸೆದರೆ ಅದು ಒಂದು ನಾಯಿಗೆ ತಾಕುತ್ತದೆ ಅಥವಾ ಒಬ್ಬ ಇಂಜಿನಿಯರ್ ಗೆ ತಾಕುತ್ತದೆ ಎಂದು. ಇಂಜಿನಿಯರ್ ಗಳ ಸಂಖ್ಯೆ ಇಂದು ಕ್ರಮೇಣ ಹೆಚ್ಚಾಗುತ್ತಲೇ ಹೋಗುತ್ತಿದೆ. ಇಂದಿನ ಇಂಜಿನಿಯರಿಂಗ್ ಕಾಲೇಜುಗಳು ಇಂಜಿನಿಯರ್ ಗಳನ್ನು ತಯಾರು ಮಾಡುವ ಕಾರ್ಖಾನೆಗಳಂತೆ ಭಾಸವಾಗುತ್ತಿವೆ. ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಬದಲಿಗೆ ಸಂಖ್ಯೆಗಳಲ್ಲಿ ಹೆಚ್ಚಳ ಮಾಡುತ್ತಿವೆ ಅಷ್ಟೇ..

ಇಂದಿನ ಇಂಜಿನಿಯರಿಂಗ್ ಕಾಲೇಜುಗಳ ಪಠ್ಯದಲ್ಲಿರುವುದು 10 ರಿಂದ 15 ವರ್ಷ ಹಿಂದಿನ ಟೆಕ್ನಾಲಜಿಯ ಕುರಿತ ವಿಚಾರಗಳು. ಇಂದಿನ ಪೀಳಿಗೆಗೆ ಅದು ಔಟ್ ಡೇಟೆಡ್. ಅಲ್ಲದೇ ಇಂದಿನ ಇಂಜಿನಿಯರ್ ಗಳಿಗೆ ಬೇಕಾದ ಪ್ರಾಕ್ಟಿಕಲ್ ನಾಲೆಡ್ಜ್ ಕೂಡಾ ಅದರಿಂದ ದೊರೆಯುತ್ತಿಲ್ಲ. ಬರಿ ಪುಸ್ತಕಕ್ಕಷ್ಟೇ, ಅಂಕಕ್ಕಷ್ಟೇ ಓದು ಸೀಮಿತವಾಗಿಬಿಟ್ಟಿದೆ. ಅದಕ್ಕಾಗಿಯೇ ಇಂಜಿನಿಯರಿಂಗ್ ಮುಗಿದ ಮೇಲೂ ಕೆಲಸಕ್ಕೋಸ್ಕರ ಮತ್ತೊಂದು ಕೋರ್ಸ್ ಮಾಡಬೇಕಾಗುತ್ತದೆ. ಅಲ್ಲದೇ, ಇಂಜಿನಿಯರಿಂಗ್ ನ ಕೊನೆಯ ವರ್ಷದ ಪ್ರಾಜೆಕ್ಟ್ ಎಷ್ಟು ಜನರ ಸ್ವಂತ ಆಲೋಚನೆ..? ಬಹುಶಃ 10% ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಗಳನ್ನು ತಾವೇ ಮಾಡಬಹುದೇನೋ ಅಷ್ಟೇ. ಇಂಜಿನಿಯರಿಂಗ್ ಪ್ರಾಜೆಕ್ಟ್ ಮಾಡಿಕೊಡುವ ಕನ್ಸಲ್ಟೆನ್ಸಿ ಗಳು ಇಂದು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಲ್ಲಿಂದ ಪ್ರಾಜೆಕ್ಟ್ ಕೊಂಡು ತರುತ್ತಾರೆ ಆದರೆ ಅದನ್ನು ಸರಿಯಾಗಿ ವಿವರಿಸಲು ಸಹಾ ಅವರಿಂದ ಆಗುತ್ತಿರುವುದಿಲ್ಲ. ಇಂದಿನ ದಿನಗಳಲ್ಲಿ ಅವರ ಪ್ರಾಜೆಕ್ಟ್ ಗಳನ್ನು ಅವರೇ ಮಾಡಿದಾಗಲೂ ಅವರ ಗೈಡ್ ಗಳು ನಂಬಲು ತಯಾರಿರುವುದಿಲ್ಲ. ಗೈಡ್ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಗೈಡೆನ್ಸ್ ನೀಡದವರಿಗೂ ಅಲ್ಲಿ ಗೈಡ್ ಎಂಬ ಹಣೆಪಟ್ಟಿ.

ಇಷ್ಟೆಲ್ಲಾ ಮುಗಿಸಿ ಹೊರಬಂದರೆ ಕೆಲಸ ಎಂಬ ಪ್ರಶ್ನೆ ಎದುರಾಗುತ್ತದೆ. ಕಾಲೇಜ್ ನಲ್ಲಿಯೇ ಪ್ಲೇಸ್ ಮೆಂಟ್ ಆದವರದ್ದೊಂದು ಕತೆಯಾದರೆ, ಆಗದವರದ್ದೊಂದು ಕತೆ. ಕಾಲೇಜ್ ನ ಪ್ಲೇಸ್ ಮೆಂಟ್ ಟ್ರೈನಿಂಗ್ ನ ಮರುದಿನ ಅಲ್ಲಿನ ಸ್ಥಳೀಯ ಪತ್ರಿಕೆಗಳಲ್ಲಿ, ಕಾಲೇಜಿನ ಹೊರಗಡೆ ಕೆಲಸ ಸಿಕ್ಕಿದವರ ಫೋಟೋ ರಾರಾಜಿಸುತ್ತಿರುತ್ತದೆ. ಆದರೆ, ಕೆಲಸಕ್ಕೆ ಸೇರಲು ಹೋದಾಗ ಅಲ್ಲಿನ ನೈಜ ಸ್ಥಿತಿ ಅರಿವಾಗುವುದು.ಇಂತಹದ್ದೇ ಒಂದಷ್ಟು ಕಾಲೇಜುಗಳಿಂದ ಆಯ್ಕೆ ಮಾಡಿದ ವಿದ್ಯಾರ್ಥಿಗಳು ಅಲ್ಲಿರುತ್ತಾರೆ. ಅಲ್ಲಿರುವ 10-20 ಸ್ಥಾನಗಳಿಗೆ ಮತ್ತೆ ಅಲ್ಲಿ ಪೈಪೋಟಿ ನಡೆಯುತ್ತದೆ. ಇತ್ತ ಕೆಲಸವಿಲ್ಲ, ಅತ್ತ ಕಾಲೇಜಿನಿಂದ ಕೆಲಸ ಸಿಕ್ಕಿದೆ ಎಂಬ ಮುದ್ರೆ. ಇಲ್ಲಿಯೂ ಇರದೆ, ಅಲ್ಲಿಯೂ ಹೋಗದೆ ಅಬ್ಬೇಪಾರಿಗಳಂತಾಗಿ ಬಿಡುತ್ತಾರೆ. ಕಾಲೇಜಿನವರು ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಕೈ ತೊಳೆದುಕೊಂಡು ಬಿಡುತ್ತಾರೆ. ನಂತರ ಪ್ಲೇಸ್ ಮೆಂಟ್ ಆಗದವರ ಸಾಲಿಗೇ ಸೇರಿಕೊಂಡು ರೆಸ್ಯೂಮ್ ಹಿಡಿದುಕೊಂಡು ಅಲೆಯುತ್ತಾ ಮತ್ತಾವುದೋ ಕೋರ್ಸ್ ಗೆ ಸೇರಿಕೊಂಡು ಸಿಕ್ಕ ಕೆಲಸ ಮಾಡಿಕೊಂಡು, ಸಿಕ್ಕಷ್ಟೇ ಸಂಬಳವನ್ನು ಒಪ್ಪಿಕೊಂಡು ಸುಮ್ಮನಾಗುವ ಹೊತ್ತಿಗೆ ಇಂತಹದ್ದೇ ಪರಿಸ್ಥಿತಿಯ ಮತ್ತೊಂದು ಬ್ಯಾಚ್ ಇಂಜಿನಿಯರ್ ಗಳು ಎಂಬ ಕಿರೀಟ ಹೊತ್ತುಕೊಂಡು ಹೊರಬಂದಿರುತ್ತಾರೆ.

ಇಂತಹದ್ದೇ ಪರಿಸ್ಥಿತಿ ಮರುಕಳಿಸುತ್ತಲೇ ಇದೆ. ವಿದ್ಯಾರ್ಥಿಗಳ ಕೆಲವು ಕೊರತೆಯಿಂದ ಇಂಜಿನಿಯರಿಂಗ್ ಕಾಲೇಜುಗಳು ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬರುತ್ತಿದ್ದರೆ ಮತ್ತೆ ಕೆಲವು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಶುರುವಾಗುತ್ತಿವೆ.

ಇನ್ನು ಮುಂದಾದರೂ ಗುಣಮಟ್ಟದ ಶಿಕ್ಷಣ ಕೊಡುವ ಇಂಜಿನಿಯರಿಂಗ್ ಕಾಲೇಜುಗಳಾಗಿ ಕಾಲೇಜುಗಳು ಮತ್ತು ಅಧ್ಯಾಪಕರು ಬದಲಾಗಲಿ. ಇವತ್ತು ಕೀಳಿರಿಮೆಯಿಂದ "ನಾನೂ ಒಬ್ಬ ಇಂಜಿನಿಯರ್" ಎಂದು ಹೇಳಿಕೊಳ್ಳುವವರು ಗರ್ವದಿಂದ ಸಮಾಜಕ್ಕೆ ನಾನು ನೀಡಿರುವ ಕೊಡುಗೆ ಇದು.. "ನಾನೋರ್ವ ಇಂಜಿನಿಯರ್" ಎಂದು ಹೆಮ್ಮೆಯಿಂದ ಹೇಳುವಂತಾಗಲಿ. ಯಾವುದೂ ಸಿಗದೆ ಇಂಜಿನಿಯರಿಂಗ್ ಸೇರಿಕೊಂಡೆ ಎನ್ನುವುದಕ್ಕಿಂತ "ಇಂಜಿನಿಯರಿಂಗ್" ಅನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದೇ ಇಂಜಿನಿಯರಿಂಗ್ ಅನ್ನು ಆಯ್ಕೆ ಮಾಡಿಕೊಳ್ಳುವಂತಾಗಲಿ ಎಂದು ಆಶಿಸುವೆ.

ಇಂಜಿನಿಯರಿಂಗ್ ಹಿಂದಿನ ಕತೆ ಏನೇ ಇದ್ದರೂ ಇಂಜಿನಿಯರಿಂಗ್ ಮುಗಿಸಿರುವ ಎಲ್ಲಾ ಇಂಜಿನಿಯರ್ ಗಳಿಗೂ, ಭಾವೀ ಇಂಜಿನಿಯರ್ ಗಳಿಗೂ, ಇಂಜಿನಿಯರಿಂಗ್ ಓದಿ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೂ ಹ್ಯಾಪಿ ಇಂಜಿನಿಯರ್ಸ್ ಡೇ.

~ವಿಭಾ ವಿಶ್ವನಾಥ್

ಗುರುವಾರ, ಸೆಪ್ಟೆಂಬರ್ 5, 2019

ಗುರುವಿನಿಂದ ಅರಿವಿನತ್ತ..

"ಅರಿವೇ ಗುರು" ಎನ್ನುತ್ತಾರೆ. ಅರಿವು ಮೂಡಿಸುವ ಹಾದಿಯಲ್ಲಿ ದಾರಿದೀಪವಾಗುವವರೆಲ್ಲರೂ ಗುರುಗಳೇ.. "ವರ್ಣಮಾತ್ರಂ ಕಲಿಸಿದಾತಂ ಗುರು" ಎಂಬ ಸೂಕ್ತಿ ಇದೆ. ಒಂದಕ್ಷರ ಕಲಿಸಿದವನು ಕೂಡಾ ಗುರುವೇ ಎಂಬುದು ಇದರರ್ಥ. ಆದರೆ, ಏಕಲವ್ಯ ಮತ್ತು ದ್ರೋಣರ ಸಂಬಂಧ ಇದಕ್ಕೆ ಅಪವಾದ ಎನ್ನಿಸಿದಂತೆ ಭಾಸವಾದರೂ.. ಸ್ಪೂರ್ತಿ ನೀಡಿ ದಾರಿದೀಪವಾದವರೂ ಗುರುಗಳೇ ಅಲ್ಲವೇ..?

ಮೊದಲಿಗೆ ಹಿಂದಿನ ಗುರು-ಶಿಷ್ಯರ ಕುರಿತು ಹೇಳುವೆ. ಹಿಂದಿನ ಗುರು-ಶಿಷ್ಯ ಜೋಡಿಗಳು ವಿಶಿಷ್ಟವಾಗಿವೆ. ಸಾಂದೀಪನಿ-ಕೃಷ್ಣ, ಶುಕ್ರಾಚಾರ್ಯ-ದಾನವರು, ಬೃಹಸ್ಪತಿ-ದೇವಗಣ, ಬಲರಾಮ-ದುರ್ಯೋಧನ ಹೀಗೇ ಬರೆಯುತ್ತಾ ಹೋದಷ್ಟೂ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತವೆ. ಆದರೆ, ದ್ರೋಣ-ಏಕಲವ್ಯ ಮತ್ತು ಅರ್ಜುನರ ಗುರು-ಶಿಷ್ಯ ಸಂಬಂಧಗಳು ವಿರೋಧಾಭಾಸದ ನೆಲೆಗಟ್ಟಿನಲ್ಲಿ ನಿಂತುಬಿಡುತ್ತವೆ. ದ್ರೋಣರು ಏಕಲವ್ಯನಿಗೆ ಮುಖತಃ ವಿದ್ಯೆ ಭೋಧಿಸಲಿಲ್ಲ ಆದರೆ ಏಕಲವ್ಯನ ಶ್ರದ್ಧೆ, ಗುರು ಭಕ್ತಿ ಅವನ ಅಭ್ಯಾಸವನ್ನು ತಪ್ಪಿಸದಂತೆ ಮುಂದುವರಿಸಲು ಪ್ರೇರೇಪಿಸಿತು. ಅರ್ಜುನನಿಗೆ ಕೊಟ್ಟ ಮಾತಿನಿಂದಾಗಿ, ಅರ್ಜುನನ ಮೇಲಿನ ವ್ಯಾಮೋಹದಿಂದಾಗಿ ಏಕಲವ್ಯ ಎಂಬ ಅಪ್ರತಿಭ ಪ್ರತಿಭಾವಂತನ ಪ್ರತಿಭೆ ನಾಮಾವಶೇಷವಾಯಿತು. ಅಷ್ಟಕ್ಕೂ ದ್ರೋಣರಿಗೆ ಅರ್ಜುನನ ಮೇಲೆ ಕೊಂಚ ಪ್ರೀತಿ ಹೆಚ್ಚು ಎಂದರೆ ಅತಿಶಯೋಕ್ತಿಯಾಗಲಾರದು. ಯಾಕೆ ಹೀಗೆ?
ದ್ರೋಣಾಚಾರ್ಯರು ಜಾತಿಯ ಕಾರಣಕ್ಕಾಗಿ ಏಕಲವ್ಯ ಮತ್ತು ಕರ್ಣರಿಗೆ ವಿದ್ಯೆ ಕಲಿಸಲಿಲ್ಲ. ಆದರೆ, ತಮ್ಮ ಮಗ ಅಶ್ವತ್ಥಾಮನಿದ್ದ. ಬಲಶಾಲಿಯಾದ ಭೀಮನಿದ್ದ, ಮಹತ್ವಾಕಾಂಕ್ಷೆಯ ರಾಜಕುಮಾರ ದುರ್ಯೋಧನನಿದ್ದ, ಸತ್ಯವಂತ ಧರ್ಮರಾಯನಿದ್ದ. ಇವರೆಲ್ಲರನ್ನೂ ಬಿಟ್ಟು ಅರ್ಜುನನ್ನೇ ಮಹಾಬಿಲ್ವಿದ್ಯೆಗಾರನನ್ನಾಗಿ ರೂಪಿಸಿದ್ದೇತಕೆ? ಇಂದಿನ ದಿನಗಳಲ್ಲೂ ನೂರಾರು ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ಕೃಪಾಕಟಾಕ್ಷಕ್ಕೆ ಕೆಲವೇ ವಿದ್ಯಾರ್ಥಿಗಳು ಪಾತ್ರವಾಗುವುದ್ದೇತಕೆ..?

ಇದೆಲ್ಲದಕ್ಕೂ ದಂತಕತೆಗಳು ನೂರಾರಿದ್ದರೂ, ಕಾರಣ ಮಾತ್ರ ಒಂದೇ. ಅದು 'ಏಕಾಗ್ರತೆ'.
ಒಮ್ಮೆ ಗುರು ದ್ರೋಣರು ಮರದ ಮೇಲೆ ಒಂದು ಹಕ್ಕಿಯನ್ನಿಟ್ಟು ಎಲ್ಲಾ ಶಿಷ್ಯರನ್ನೂ ಕರೆದು ಒಬ್ಬೊಬ್ಬರಾಗಿ ಬಂದು ಹಕ್ಕಿಯ ಕಣ್ಣಿಗೆ ಬಾಣ ಹೊಡೆಯುವಂತೆ ಸೂಚಿಸುತ್ತಾರೆ. ಒಬ್ಬೊಬ್ಬರೇ ಬಂದು ಹಕ್ಕಿಯ ಕಡೆ ಬಾಣವನ್ನು ಗುರಿ ಮಾಡಿದಾಗ ದ್ರೋಣರು ಕೇಳುವುದು ಒಂದೇ ಪ್ರಶ್ನೆ. "ನಿನಗೆ ಈಗ ಕಾಣುತ್ತಿರುವುದೇನು..?" ಅರ್ಜುನನೊಬ್ಬನ ಹೊರತು ಎಲ್ಲರೂ "ನನಗೆ ಆಕಾಶ, ಮರ, ಹಕ್ಕಿ, ರೆಂಬೆ ಎಲ್ಲವೂ ಕಾಣುತ್ತಿದೆ. ಪಕ್ಕದಲ್ಲಿ ನಿಂತಿರುವ ನೀವು, ಮುಂದೆ ನಿಂತಿರುವ ಉಳಿದವರೆಲ್ಲರೂ ಕಾಣುತ್ತಿದ್ದಾರೆ" ಎನ್ನುವ ಅಥವಾ ಇದೇ ರೀತಿ ಅರ್ಥ ಬರುವಂತೆ ಇರುವ ಉತ್ತರಗಳನ್ನು ನೀಡಿದರು. ಅರ್ಜುನ ಮಾತ್ರ "ಆ ಹಕ್ಕಿಯ ಕಣ್ಣು ಬಿಟ್ಟು ನನಗೆ ಬೇರೇನೂ ಕಾಣುತ್ತಿಲ್ಲ" ಎಂದನು. ಆಗ ದ್ರೋಣರು ಅವನನ್ನು ಮೆಚ್ಚಿ ಅಭಿನಂದಿಸಿ ಬಾಣ ಹೂಡಲು ಹೇಳುತ್ತಾರೆ. ಶಿಷ್ಯನ ಏಕಾಗ್ರತೆ ಮಾತ್ರ ಅವನನ್ನು ಕಲಿಕೆಯ ಹಾದಿಯಲ್ಲಿ ಉತ್ತುಂಗಕ್ಕೇರುವಂತೆ ಮಾಡುತ್ತದೆ. ಸತ್ಯ, ಬಲ, ಸ್ವಜಾತಿಯ ಮೋಹ, ಕರುಳಬಳ್ಳಿ, ಹಣ, ಮನ್ನಣೆ ಇವ್ಯಾವ ಅಂಶಗಳೂ ದ್ರೋಣರನ್ನು ಕಾಡಲಿಲ್ಲ. ಅವರು ಪರಿಗಣಿಸಿದ್ದು ಏಕಾಗ್ರತೆಯನ್ನು ಮಾತ್ರ. ಒಬ್ಬ ಶಿಷ್ಯನ ಮೇಲಿನ ವ್ಯಾಮೋಹ ಮತ್ತೊಬ್ಬ ಶಿಷ್ಯನ ಬದುಕನ್ನು ಬಲಿತೆಗೆದುಕೊಂಡದ್ದು ಮಾತ್ರ ವಿಪರ್ಯಾಸ.

ಹಿಂದಿನ ವಿಚಾರ ಬಿಟ್ಟು ಇಂದಿನ ವಿಚಾರವನ್ನು ನೋಡೋಣ. ಶಿಕ್ಷಕರು ಎಲ್ಲಾ ಶಿಷ್ಯರನ್ನೂ ಸಮಾನವಾಗಿ ಭಾವಿಸುತ್ತೇವೆ ಎಂದುಕೊಂಡರೂ ಸಹಾ ಕೆಲವರ ವಿಷಯದಲ್ಲಿ ಪಕ್ಷಪಾತ ಮಾಡುತ್ತಾರೆ ಎಂಬ ಆಪಾದನೆಯಂತೂ ಇದ್ದೇ ಇದೆ. ಆ ಆಪಾದನೆ ಮಾಡುವವರಲ್ಲಿ ನನ್ನದೊಂದು ಪ್ರಶ್ನೆ. "ನೀವು ನಿಮ್ಮ ಎಲ್ಲಾ ಶಿಕ್ಷಕರನ್ನೂ ಸಮಾನವಾಗಿಯೇ ಭಾವಿಸುತ್ತೀರಾ..?" ಖಂಡಿತವಾಗಿಯೂ ಇಲ್ಲ. ಅಲ್ಲವೇ..? ನಿಮ್ಮ "ಫೇವರೇಟ್ ಟೀಚರ್" ಎನ್ನುವ ಪಟ್ಟ ಯಾರೋ ಒಬ್ಬರಿಗೆ ಮೀಸಲಾಗಿದೆ ಅಲ್ಲವೇ? ಶಿಷ್ಯರಿಗೆ ಒಂದು ನ್ಯಾಯ, ಗುರುಗಳಿಗೆ ಮತ್ತೊಂದು ನ್ಯಾಯ ಎಂದರೆ ಎಷ್ಟು ಸರಿ?

ಚಿಕ್ಕಂದಿನಿಂದ ಇಲ್ಲಿಯವರೆಗೂ ಕಲಿಸಿದ ಎಲ್ಲಾ ಶಿಕ್ಷಕರೂ ನೆನಪಿರುವುದು ಅಶಕ್ಯ. ಆದರೆ, ಕೆಲವರು ತಮ್ಮ ವಿಶಿಷ್ಟವಾದ ಗುಣದಿಂದ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡುಬಿಟ್ಟಿರುತ್ತಾರೆ. ಗೋವಿನ ಹಾಡನ್ನು ರಾಗವಾಗಿ ಹಾಡ್ತಾ ಇದ್ದ ಕನ್ನಡ ಟೀಚರ್, ಇಂಗ್ಲೀಷ್ ರೈಮ್ಸ್ ಅನ್ನು ಅಭಿನಯದ ಸಮೇತ ಹೇಳಿಕೊಡ್ತಾ ಇದ್ದ ಇಂಗ್ಲೀಷ್ ಟೀಚರ್, ಬೆತ್ತದ ಪ್ರಯೋಗವಿಲ್ಲದೆಯೇ ಆಟದ ಮೂಲಕ ಗಣಿತವನ್ನು ಕಲಿಸುತ್ತಿದ್ದ ಗಣಿತದ ಟೀಚರ್, ಪೀರಿಯಾಡಿಕ್ ಟೇಬಲ್ ಅನ್ನು ನೆನಪಿಟ್ಟುಕೊಳ್ಳಲು ಸುಲಭ ಸೂತ್ರ ಹೇಳಿಕೊಟ್ಟ ವಿಜ್ಞಾನದ ಟೀಚರ್, ಗ್ಲೋಬ್ ನ ಕತೆಯೊಂದಿಗೆ ಭೂಗೋಳ ಪರಿಚಯಿಸಿದ ಸಮಾಜದ ಟೀಚರ್ ಹೀಗೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬೇಕಾದರೆ ಒಮ್ಮೆ ಕಣ್ಮುಚ್ಚಿಕೊಂಡು ನೆನಪು ಮಾಡಿಕೊಳ್ಳಿ. ಬರೀ ಪಾಠವೇ ಅಲ್ಲದೇ, ನೀತಿಕತೆಯನ್ನೂ ಹೇಳಿ ನೈತಿಕತೆಯ ಪಾಠವನ್ನೂ ಕಲಿಸಿದ ಟೀಚರ್ ನೆನಪಾಗಲ್ವಾ.. ನಿಮಗೆ?

ಇವರೆಲ್ಲರೂ ಪುಸ್ತಕದಲ್ಲಿ ಇದ್ದದ್ದನ್ನು, ಇದ್ದಂತೆಯೇ ಓದಿ, ಸಂಬಳಕ್ಕಷ್ಟೇ ನನ್ನ ಕೆಲಸ ಅಂತಾ ಹೋಗಿಬಿಟ್ಟಿರುತ್ತಾ ಇದ್ದಿದ್ದರೆ ಖಂಡಿತಾ ಇವರುಗಳು ನೆನಪಿನಿಂದ ಯಾವತ್ತೋ ಅಳಿಸಿಹೋಗಿಬಿಟ್ಟಿರುತ್ತಾ ಇದ್ದರು. ನಿಮ್ಮ ನೆನಪಲಿಲ್ಲದ ಶಿಕ್ಷಕರು ಬಹುಶಃ ಮಾಡಿರುವುದೇ ಹೀಗೆ. ಅಲ್ವಾ? ಆ ಸಂಧರ್ಭದಲ್ಲಿ ನಮಗೆ ಒಂದು ಸಬ್ಜೆಕ್ಟ್ ಇಷ್ಟ ಆಗಬೇಕು ಎಂದರೆ ಆ ಶಿಕ್ಷಕರಿಂದ ಮಾತ್ರವೇ ಆಗಿತ್ತು. ಅವರ ಭೋಧನೆಯ ಪರಿಣಾಮದಿಂದಾಗಿ ಆ ವಿಷಯದತ್ತಲೂ ಒಲವು ಹೆಚ್ಚಾಗುತ್ತಾ ಇತ್ತು.

ಡಾ|| ಗುರುರಾಜ ಕರ್ಜಗಿ ಅವರು ಸಂದರ್ಶನದಲ್ಲಿ ಒಮ್ಮೆ ಹೇಳುತ್ತಾರೆ. "ಗುರು-ಶಿಷ್ಯರ ಸಂಬಂಧ ಹೇಗಿರಬೇಕು ಎಂದರೆ ಗುರು ತನ್ನ ಶಿಷ್ಯರನ್ನು ತನ್ನ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸಬೇಕು." ಎಂದು. ಇವತ್ತು ಗುರುಕುಲ ಶಿಕ್ಷಣ ಪದ್ಧತಿ ಇಲ್ಲ ನಿಜ. ಆದರೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಭಾಂಧವ್ಯ ಕೂಡಾ ಗುರುಕುಲ ಪದ್ದತಿಯಂತೆಯೇ ಮಾಯವಾಗುತ್ತಿದೆ. ಹೆಚ್ಚಿನವರು ಸಂಬಳಕ್ಕಾಗಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆಯೇ ಹೊರತು ವೃತ್ತಿಪ್ರೀತಿಯಿಂದಲ್ಲ. ಅಲ್ಲದೇ, ಇಂದಿನ ಶಿಕ್ಷಣದ ನಿಯಮಗಳು ಹೇಗಿವೆಯೆಂದರೆ ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಕ್ಷಿಸಿದರೆ ಅದು ಅಪರಾಧವಾಗುತ್ತದೆ. ಶಿಕ್ಷೆಯೇ ಇಲ್ಲದೇ ಜೀವನದಲ್ಲಿ ಶಿಸ್ತು ಮೂಡಿಸಲು ಸಾಧ್ಯವೇ..?

ಅಲ್ಲದೇ, ಶಿಕ್ಷಕರ ಪಾಠ ಕೇಳಿ ಪ್ರಭಾವಿತರಾಗುವುದಕ್ಕಿಂತಲೂ ಅವರ ನಡವಳಿಕೆ ನೋಡಿ ಮಕ್ಕಳು ಅವರಂತಾಗಲು ಬಯಸಿ ಶಿಕ್ಷಕರನ್ನು ಅನುಕರಿಸುತ್ತಾರೆ. ಉದಾಹರಣೆಗೆ, ಶಾಲೆಯ ಹೊರಾಂಗಣದಲ್ಲಿ ಧೂಮಪಾನ ಮಾಡಿ ಬಂದು ಶಾಲೆಯಲ್ಲಿ "ಧೂಮಪಾನ ಆರೋಗ್ಯಕ್ಕೆ ಹಾನಿಕರ" ಎಂದು ಭೋಧಿಸುತ್ತಾನೆ. ವಿದ್ಯಾರ್ಥಿಗಳಿಗೆ ಇದು ಗಿಣಿಪಾಠದಂತಾಗುತ್ತದೆ ಅಷ್ಟೇ. ನೋಟ್ ಬುಕ್ ನಲ್ಲಿ ಆ ವಾಕ್ಯವನ್ನು ಗೀಚಿಕೊಂಡು ನಂತರ ಅವರೂ ಸಹಾ ಧೂಮಪಾನದ ಚಟಕ್ಕೆ ಒಳಗಾಗುತ್ತಾರೆ. ಧೂಮಪಾನ ಬಹಳ ಹಿಂದಿನ ಉದಾಹರಣೆಯಾಯಿತು ಎನ್ನಿಸಿದರೆ ಪ್ರಸ್ತುತ ಭ್ರಷ್ಟಾಚಾರ, ಲಂಚದ ವಿಚಾರವನ್ನು ಪರಿಗಣಿಸಿಕೊಳ್ಳಿ ಅಷ್ಟೇ.

ಹೀಗಾಗಲೇ ಟೆಕ್ನಾಲಜಿ ಮನುಷ್ಯನ ಬದುಕನ್ನು ಆವರಿಸಿಕೊಳ್ಳುತ್ತಿದೆ. ಮುಂದೆ ಶಿಕ್ಷಕರ ಬದಲಿಗೆ ಟ್ಯಾಬ್, ರೋಬೋಟ್ ಗಳು ಬಂದರೂ ಅಚ್ಚರಿಪಡಬೇಕಾದುದೇನಿಲ್ಲ. ಯಾಕೆಂದರೆ, ಮನುಷ್ಯನ ಕುತೂಹಲವನ್ನೆಲ್ಲಾ ನುಂಗಿ ಹಾಕಿ ಗೂಗಲ್ ಅದರ ಸ್ಥಾನಕ್ಕೆ ಬರುತ್ತಿದೆ. ಏನೇ ಆದರೂ ವಿದ್ಯಾರ್ಥಿಗಳ ಮನೋಭಾವವನ್ನು, ಮನಸ್ಥಿತಿಯನ್ನೂ ಅರ್ಥೈಸಿಕೊಂಡು ಬದುಕಿನ ಗಮ್ಯಕ್ಕೆ ತಲುಪಿಸುವ ದಾರಿದೀಪಗಳಾಗಲು ಶಿಕ್ಷಕರೇ ಸರಿ.

ಅರಿವು ಮೂಡಿಸಿಕೊಂಡು, ಅರಿವಿನತ್ತ ಕರೆದುಕೊಂಡು ಹೋಗುವವನು ಮಾತ್ರವೇ ಗುರು ಎನ್ನಿಸಿಕೊಳ್ಳಬಲ್ಲ. ನನ್ನ ಈ ಲೇಖನಕ್ಕೆ ಮೂಲ ಪ್ರೇರಣೆ ಕೂಡಾ ನನ್ನ ಗುರುಗಳೇ. ಈ ಲೇಖನವನ್ನು ಬರೆಯುವ ಇರಾದೆಯೇ ನನಗಿರಲಿಲ್ಲ. ಕಳೆದ ವಾರ ಅವರು ಹೇಳಿದ ಕೆಲವು ಸಂಗತಿಗಳನ್ನು ಕೇಳಿದ ನಂತರ ಅದನ್ನು ಒರೆ ಹಚ್ಚದೆ, ವಿಶ್ಲೇಷಿಸದೆ, ಬರೆಯದೇ ಸುಮ್ಮನಿರಲಾಗಲಿಲ್ಲ. ಅವರಿಗೆ ನನ್ನ ವಿಶೇಷ ಧನ್ಯವಾದಗಳು. ನಿಮಿತ್ತ ಅವರಾಗಿರಬಹುದು.. ಆದರೆ, ನನಗೆ ಅಕ್ಷರ ಕಲಿಸಿದ, ಬುದ್ಧಿ ಹೇಳಿದ, ವಿದ್ಯೆ ಕಲಿಸಿದ, ತಿದ್ದಿ ನಡೆಸಿದ, ಓದಿನ ಹವ್ಯಾಸ ಬೆಳೆಸಿದ, ಜೀವನದ ಪಾಠ ಕಲಿಸಿದ, ಮಾರ್ಗದರ್ಶನ ಮಾಡಿದ, ಪ್ರೋತ್ಸಾಹಿಸುತ್ತಿರುವ, ಆಲೋಚನಾ ಶಕ್ತಿ ವೃದ್ಧಿಸುವಂತೆ ಮಗದೊಂದು ನಿಟ್ಟಿನಲ್ಲಿ ಯೋಚಿಸುವಂತೆ ಚರ್ಚೆ ಮಾಡುವ ಭೂತ-ವರ್ತಮಾನದ ಎಲ್ಲಾ ಶಿಕ್ಷಕರಿಗೂ ತುಂಬು ಹೃದಯದ ಧನ್ಯವಾದಗಳು. ಎಲ್ಲರಿಗೂ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು.

~ವಿಭಾ ವಿಶ್ವನಾಥ್

ಭಾನುವಾರ, ಮೇ 12, 2019

ಅಮ್ಮ 'ಅಮ್ಮ'ನಾಗಿಯೇ ಉಳಿಯಬೇಕೇ?

ಹೌದು, ಕಡೆಯ ಕ್ಷಣದವರೆಗೂ ಅಮ್ಮ ಅಮ್ಮನಾಗಿಯೇ ಉಳಿಯಬೇಕೇ? ನಾವು ಬದಲಾಗ್ತೀವಿ. ಖಂಡಿತಾ, ನಾವೆಲ್ಲರೂ ಕೊನೆಯ ಕ್ಷಣದವರೆಗೂ ಬದಲಾಗ್ತಾನೇ ಹೋಗ್ತೀವಿ. ಆದರೆ 'ಅಮ್ಮ' ಮಾತ್ರ ಬದಲಾಗಬಾರದು. ಯಾಕೆ?

ಹೆಣ್ಣಿಗೆ ತಾಯ್ತನ ಅನ್ನುವುದು ಒಂದು ವರ. ಹೀಗಂದುಕೊಂಡೇ ಎಲ್ಲಾ ಅಮ್ಮಂದಿರು ತಮ್ಮ ತಾಯ್ತನದೊಳಗೆ ಬಂಧಿಯಾಗಿ ಬಿಡುತ್ತಾರಾ? ಹೆಣ್ಣು ಮಗಳು, ಸೊಸೆ, ಹೆಂಡತಿ, ಸ್ನೇಹಿತೆ, ಸಹೋದರಿ ಎಲ್ಲವೂ ಆಗ್ತಾಳೆ. ಆದರೆ ಅವಳು ಹೆಚ್ಚು ಜವಾಬ್ದಾರಿ ಹೊಂದಿರುವ, ಹೆಚ್ಚು ಕಾಲ ನಿರ್ವಹಿಸುವ ಪಾತ್ರ ಅಮ್ಮನಾಗಿ ಮಾತ್ರ.. ಮದುವೆಯಾಗಿ ಬಂದ ಮೇಲೆ ಎಲ್ಲರ ಮನ ಮತ್ತು ಮನೆ ತುಂಬಿರುವ ಅವಳಿಗೆ ತನ್ನ ಮಡಿಲು ತುಂಬುವ ಸೂಚನೆ ಸಿಕ್ತಾ ಇದ್ದಂತೆ ಅವಳಲ್ಲೊಂದು ಜಾಗೃತ ಪ್ರಜ್ಞೆ ಮೂಡಿಬಿಡುತ್ತೆ. ಇಷ್ಟು ದಿನ ತನಗಾಗಿ, ತನ್ನ ಗಂಡ ಮತ್ತು ತನ್ನ ಮನೆಯವರಿಗಾಗಿ ಎನ್ನುವಂತೆ ಇದ್ದವಳು, ಮಗುವಿಗಾಗಿ ಎಂಬಂತೆ ಬದುಕುವುದಕ್ಕೆ ಶುರು ಮಾಡುತ್ತಾಳೆ. ಬಹುಶಃ ಕಾಣದಿದ್ದರೂ ಕಾಡುವ ಪ್ರೀತಿ ಅಂದರೆ ಇದೇ ಇರಬೇಕು. 

ಕೂಸು ಹುಟ್ಟುವ ಮುಂಚೆಯೇ ತನ್ನ ಎಲ್ಲಾ ಜವಾಬ್ದಾರಿ ನಿರ್ವಹಿಸುವುದಕ್ಕೆ ಸಿದ್ದವಾಗಿ ಬಿಟ್ಟಿರುತ್ತಾಳೆ. ಮಗು ಹುಟ್ಟಿದ ಕ್ಷಣದಿಂದ ಪೊಸೆಸ್ಸಿವ್ ಆಗುವುದಕ್ಕೆ ಶುರು ಮಾಡ್ತಾಳೆ. ಮಗುವಿಗೆ ಶೀತ ಆದರೆ ಅಮ್ಮನಿಗೆ ಚಡಪಡಿಕೆ, ಮಗು ಅತ್ತರೆ ಅವಳ ಕಣ್ಣಲ್ಲಿ ನೀರು ಹೀಗೇ ಪಟ್ಟಿ ಮಾಡುತ್ತಾ ಹೋದರೆ ನಿಲ್ಲುವುದೇ ಇಲ್ಲ ಅನ್ನಿಸುತ್ತೆ. ಅಮ್ಮನ ಪ್ರಪಂಚದಲ್ಲಿ ಮಕ್ಕಳು ಎಷ್ಟೇ ದೊಡ್ಡವರಾದರೂ ಇನ್ನೂ ಚಿಕ್ಕವರೇ. ಆದರೆ ಮಕ್ಕಳ ಪ್ರಪಂಚದಲ್ಲಿ..??

ಮಕ್ಕಳ ಪ್ರಪಂಚದಲ್ಲಿ ಅಮ್ಮ ಅನ್ನುವವಳ ಪಾತ್ರ ತಾವು ಸ್ವಾವಲಂಭಿಗಳಾಗುವವರೆಗೆ ಮಾತ್ರ. ಆಮೇಲೆ ಅವಳೆಡೆಗೆ ದಿವ್ಯ ನಿರ್ಲಕ್ಷ್ಯ, ಆದರೂ ಅಮ್ಮನ ಕಾಳಜಿ ತಮ್ಮ ಮೇಲೆ ಹಾಗೇ ಇರಬೇಕು ಅನ್ನುವ ಧಿಮಾಕು ಬೇರೆ.

ಗಂಡು ಮಕ್ಕಳಿಗೆ ಹೆಂಡತಿ ಬಂದ ನಂತರ ಅಮ್ಮನ ಮೇಲಿನ ಲಕ್ಷ್ಯ ಸ್ವಲ್ಪ ಕಡಿಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇಬ್ಬರಿಗೂ ಮನಸ್ತಾಪ ಬಂದರೆ "ಅಮ್ಮಾ, ಸ್ವಲ್ಪ ಅನುಸರಿಸಿಕೊಂಡು ಹೋಗೋಕಾಗಲ್ವಾ..?" ಅನ್ನೋ ದರ್ಪದ ಮಾತು. ಇಷ್ಟು ವರ್ಷವೂ ಸಹಿಸಿಕೊಂಡು ಬಂದ ಅಮ್ಮ ಹಾಗೇ ಮಾತನಾಡಿರಬಹುದಾ? ಎಂಬ ಸಣ್ಣ ಯೋಚನೆಯೂ ಬರುವುದಿಲ್ಲ. ಅಕಸ್ಮಾತ್ ಮಾತನಾಡಿದರೂ ಅವತ್ತೆಲ್ಲೋ ಕೊಂಚ ಸಹನೆ ಮೀರಿ ಮಾತನಾಡಿರಬಹುದು ಅನ್ನೋ ಕನಿಷ್ಠ ಯೋಚನೆ ಕೂಡಾ ಬರಲ್ಲ. ಆದರೂ, ಅಮ್ಮ ಅನುಸರಿಸಿಕೊಂಡು, ಸಹಿಸಿಕೊಂಡು ಹೋಗುವ ಅಮ್ಮನಾಗಿಯೇ ಉಳಿದುಬಿಡಬೇಕೇ?

ಗಂಡು ಮಕ್ಕಳದ್ದು ಹೀಗಾದರೆ ಹೆಣ್ಣು ಮಕ್ಕಳದ್ದು ಬೇರೆಯದ್ದೇ ಕಥೆ. ಮದುವೆಗೆ ಮುಂಚೆ ಅಮ್ಮ-ಅಮ್ಮ ಅಂತಾ ಅವಳ ಹಿಂದೆಯೇ ಸುತ್ತುತ್ತಾ ಇದ್ದವಳು, ಗಂಡ ಬಂದ ನಂತರ ಅಮ್ಮನನ್ನು ನಿರ್ಲಕ್ಷ್ಯ ಮಾಡುವುದೇನೂ ಸುಳ್ಳಲ್ಲ. ಆದರೆ ತಾನು ತವರು ಮನೆಗೆ ಬಂದಾಗ ಅಮ್ಮ ತನ್ನಿಷ್ಟದ ಅಡುಗೆ ಮಾಡಬೇಕು, ಚಟ್ನಿಪುಡಿ, ಸಾಂಬಾರು ಪುಡಿ, ತುಪ್ಪ, ಹಾಲು ಹೀಗೇ ಮುಂತಾದವುಗಳನ್ನೆಲ್ಲಾ ಕಟ್ಟಿಕೊಡಬೇಕು ಅನ್ನೋ ಒಂದು ಸಣ್ಣ ನಿರೀಕ್ಷೆಯನ್ನಾದರೂ ಇಟ್ಟುಕೊಂಡಿರುತ್ತಾಳೆ. ಆದರೆ, ಈ ನಿರೀಕ್ಷೆ ಹುಸಿಯಾದರೆ ಸಿಡಿಮಿಡಿ. ತನ್ನ ಮನೆಗೆ ಅಮ್ಮ ಬಂದು ಹೋಗುವಾಗ ತಾನು ಆಕೆಗೆ ಕೊಟ್ಟು ಕಳಿಸುವುದೆಷ್ಟು?(ಕೆಲವರು ಇದಕ್ಕೆ ಹೊರತು). ಯಾವಾಗಲೂ ತನಗೆ ಏನನ್ನೂ ಮಾಡಿಕೊಳ್ಳದೆ, ಮಕ್ಕಳಿಗಾಗಿಯೇ ಮಾಡುವ ಅಮ್ಮ ಆ ರೀತಿಯ ಅಮ್ಮ ಆ ರೀತಿಯ ಅಮ್ಮನಾಗಿಯೇ ಉಳಿಯಬೇಕೇ ?

ತಾನು ಹೊರಗೆ ಹೋದರೆ ಮನೆಯವರಿಗೆ, ಮಕ್ಕಳಿಗೆ ತೊಂದರೆಯಾಗುತ್ತೆ ಎನ್ನುವ ಕಾರಣಕ್ಕೆ ತನ್ನ ತಿರುಗಾಟವನ್ನೆಲ್ಲಾ ತ್ಯಜಿಸುವ ಅಮ್ಮ, ಇತರರ ಖುಷಿಗಾಗಿಯೇ ಬದುಕುವ ಅಮ್ಮನಾಗಿಯೇ ಉಳಿಯಬೇಕೇ?

ದೀಪಾವಳಿ, ಯುಗಾದಿ ಬಂದರೆ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸಿ ತಾನು ಖುಷಿ ಪಡುವ ಅಮ್ಮ ದೀಪಾವಳಿ, ಯುಗಾದಿಗೆ ತನಗೆ ಎಣ್ಣೆ ಸ್ನಾನ ಮಾಡು ಎಂದು ಹೇಳುವವರೂ ಇಲ್ಲದಂತೆ ಬದುಕುವ ಅಮ್ಮನಾಗಿಯೇ ಉಳಿಯಬೇಕಾ?

ಮಕ್ಕಳಿಗೆ ತೊಂದರೆಯಾಗಬಾರದು ಅಂತಾ ಬೆಳ್ಳಂಬೆಳಗ್ಗೆಯಿಂದಲೇ ಪುರುಸೊತ್ತಿಲ್ಲದೆ ಕೆಲಸ ಮಾಡಿ, ರುಚಿ-ರುಚಿಯಾಗಿ ಅಡುಗೆ ಮಾಡುವ ಅಮ್ಮ ದುಡಿಯುವ ಯಂತ್ರದಂತೆಯೇ ಬದುಕುವ ಅಮ್ಮನಾಗಿಯೇ ಉಳಿಯಬೇಕಾ?

ತನ್ನ ಜ್ವರವನ್ನೂ ಲೆಕ್ಕಿಸದೆ, ಮಗುವಿನ ಶೀತಕ್ಕೆ ಔಷಧಿ ಮಾಡಿ ಹುಷಾರು ಮಾಡುವ ಅಮ್ಮ, ತನ್ನ ಅನಾರೋಗ್ಯವನ್ನೂ ಹಳಿಯದ ಅಮ್ಮನಾಗಿಯೇ ಉಳಿಯಬೇಕೇ?

ಮಕ್ಕಳ ವಿದ್ಯಾಭ್ಯಾಸದ ಭರಾಟೆಯಲ್ಲಿ ತನ್ನ ಹವ್ಯಾಸಗಳಾದ ಹಾಡು, ನೃತ್ಯ, ಕ್ರಾಫ್ಟ್, ಕಸೂತಿ, ರಂಗೋಲಿ ಎಲ್ಲವನ್ನೂ ಬಿಟ್ಟು ಬದುಕುವ ಅಮ್ಮನಾಗಿಯೇ ಉಳಿಯಬೇಕೇ?

ಅಮ್ಮ ಮತ್ತೊಂದು ಮಗುವನ್ನು ಪ್ರೀತಿಯಿಂದ ಮಾತನಾಡಿಸಿದರೇ ವಿನಾಕಾರಣ ಪೊಸೆಸ್ಸೀವ್ ಆಗುವ ನಾವು ಅಮ್ಮನ ಬಗ್ಗೆ ಗಮನ ಕೊಟ್ರೆ, ನಾವು ಬಟ್ಟೆ ತೆಗೆದುಕೊಂಡಾಗ ಅವಳಿಗೂ ಒಂದು ಜೊತೆ ಕೊಡಿಸಿದ್ರೆ, ಅಮ್ಮನ ಆರೋಗ್ಯಕ್ಕೆ ಕಾಳಜಿ ತೋರಿಸಿದ್ರೆ, ಅಮ್ಮನ ಹವ್ಯಾಸಗಳಿಗೆ ಪ್ರೋತ್ಸಾಹಿಸುತ್ತಾ, ಅವಳ ಕೆಲಸಗಳಲ್ಲೊಂದಿಷ್ಟು ಭಾಗಿಯಾಗಿ ಅವಳ ಸುತ್ತಾಟಗಳಿಗೂ ಅನುವು ಮಾಡಿಕೊಟ್ಟು ಪ್ರೀತಿಯಿಂದ ಕಾಲ ಕಳೆದರೆ ಅಮ್ಮನಂತಾ ಅಮ್ಮನೂ ಒಂದರೆಕ್ಷಣ ಮಗುವಾಗ್ತಾಳೆ. ಅಮ್ಮ ಅಮ್ಮನಾಗಿಯೇ ಉಳಿಯಬೇಕು ಆದರೆ ಅವಳ ಸ್ವಂತ ಮತ್ತು ಸ್ವತಂತ್ರ್ಯ ವ್ಯಕ್ತಿತ್ವದ ಜೊತೆಗೆ.. ಇನ್ನಾದರೂ ಅಮ್ಮ ಕೊಂಚ ರಿಲೀಫ್ ಆಗಿ ಅವಳ ಬದುಕನ್ನು ಎಂಜಾಯ್ ಮಾಡುವ ಅಮ್ಮನಾಗಲಿ..

~ವಿಭಾ ವಿಶ್ವನಾಥ್

ಭಾನುವಾರ, ಜನವರಿ 13, 2019

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದುತ್ತಾ..

ಭಯ ಜೀವನದಲ್ಲಿ ಮುಖ್ಯವಾದ ಒಂದು ಭಾವನೆಯೇ. ಆದರೆ ಅದರ ಪ್ರಮಾಣ ಎಷ್ಟಿರಬೇಕು ಎಂಬುದು ಸಹಾ ಅಷ್ಟೇ ಮುಖ್ಯ. ಒಂದರೆಕ್ಷಣ ಅನ್ನಿಸುವುದೂ ಉಂಟು ಭಯವೇ ಇಲ್ಲದಿದ್ದರೆ..!? 

ಹಿರಿಯರ ಭಯವಿಲ್ಲದಿದ್ದರೆ ಗೌರವ ಕೊಡಬೇಕೆನ್ನುವ ಪಾಠ ತಪ್ಪಿಹೋಗುತ್ತಿತ್ತು. ಗುರುಗಳ, ತಾಯಿ-ತಂದೆಯರ ಭಯವಿರದಿದ್ದರೆ ಒಳ್ಳೆಯ ಸಂಸ್ಕಾರ ಕಲಿಯುವುದು ತಪ್ಪಿಹೋಗುತ್ತಿತ್ತು. ಪರೀಕ್ಷೆಯ ಭಯವಿಲ್ಲದಿದ್ದರೆ ಓದುವ, ಅಭ್ಯಾಸ ಮಾಡುವುದೇ ತಪ್ಪಿ ಹೋಗುತ್ತಿತ್ತು, ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಾಗಿ ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ. ದೇವರ ಮತ್ತು ಅವನು ನೀಡುವ ಶಿಕ್ಷೆಗಳ ಕುರಿತ ಭಯವಿಲ್ಲದಿದ್ದರೆ ಒಳ್ಳೆಯ ನಡತೆಗಳೇ ಕಡಿಮೆಯಾಗುತ್ತಿದ್ದವೇನೋ ಆದರೆ ಭಯ ಈ ರೀತಿಯಲ್ಲಿ ಇರುವುದು ಒಳ್ಳೆಯದು ಆದರೆ ಕೆಲವು ಅವ್ಯಕ್ತ ಭಯಗಳೂ ಇವೆ ಹೇಗೆಂದರೆ ಅವುಗಳು ಬದುಕಿನಲ್ಲಿ ಭವಿಷ್ಯಕ್ಕೇ ಮಾರಕವಾಗಿಬಿಡುತ್ತವೆ. ಆದರಿಂದ ಇಂಗ್ಲೀಷ್ ನಲ್ಲಿರುವ ಒಂದು ಮಾತು "ಲೈಫ್ ಬಿಗಿನ್ಸ್ ವ್ಹೇರ್ ಫಿಯರ್ ಎಂಡ್ಸ್" ಎಂಬ ಮಾತನ್ನು ನಂಬಲಾರದೇ ನಂಬುತ್ತೇನೆ.

ಆದರೆ ಕೆಲವೊಮ್ಮೆ ಪೋಷಕರೇ ಮಕ್ಕಳ ಧೈರ್ಯವನ್ನು ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದಿಬಿಡುತ್ತಾರೆ.

"ಆಟ ಆದುವಾಗ ಹುಷಾರು, ಬಿದ್ದು ಬಿಟ್ಟೀಯಾ" ಎನ್ನುತ್ತಾರೆ, ಬೀಳದೆ, ಏಳದೆ ಆಟ ಆಡುವುದುಂಟೇ..? ತಾಯಿಯ ಮಮತೆಯ ಮನಸ್ಸಿನಲ್ಲಿ ಅಮ್ಮನ ಪ್ರೀತಿ ತುಂಬಿಕೊಂಡೇ ಈ ಮಾತನ್ನು ಆಡಿಸಿರುತ್ತದೆ ಆದರೆ ಹುಷಾರು ಎನ್ನುವ ಆ ಪದ ಮಕ್ಕಳ ಮನದ ಮೂಲೆಯಲ್ಲಿ ಅಲ್ಲೆಲ್ಲೋ ಅವಿತು ಕುಳಿತು ಮತ್ತೆಲ್ಲೋ ಪರಿಣಾಮ ಬೀರಬಹುದು.

"ಅಮ್ಮಾ ಪರೀಕ್ಷೆಯಲ್ಲಿ ನನ್ನ ಪಕ್ಕದಲ್ಲಿದ್ದವನು ಕಾಪಿ ಚೀಟಿ ನೋಡಿಕೊಂಡು ಬರೆಯುತ್ತಿದ್ದ ಅದಕ್ಕೆ ನಾನು ಮಿಸ್ ಗೆ ಹೇಳಿದಕ್ಕೆ ಅವನನ್ನು ಹೊಡದು ನನ್ನ ಧೈರ್ಯವನ್ನು ಹೊಗಳಿದರು ಗೊತ್ತಾ?" ಎಂದು ಮನೆಯಲ್ಲಿ ಬಂದು ಹೇಳಿದ ಮರುಕ್ಷಣವೇ ಅವನ ಧೈರ್ಯದ ಬಲೂನು ಠುಸ್ ಎಂದು ಹೊಡೆದಿರುತ್ತದೆ ಕಾರಣ ಇಷ್ಟೇ.. "ಯಾಕೋ ಹಾಗೆ ಮಾಡಿದೆ? ಅವನು ಸೇಡು ಇಟ್ಟುಕೊಂಡು ನಾಳೆ ನಿನಗೆ ಏನಾದರೂ ಮಾಡಿದರೆ..? ನಿನಗೆ ಯಾಕೆ ಬೇಕಿತ್ತು ಊರಿನವರೆಲ್ಲರ ಉಸಾಬರಿ..? ಯಾರಾದರೂ ಏನಾದರೂ ಮಾಡಿಕೊಳ್ಳಲಿ ನಿನಗೇನು..? ಇನ್ನೊಂದು ಸಲ ಹಾಗೆಲ್ಲಾ ಮಾಡೋದಕ್ಕೆ ಹೋಗಬೇಡ". ಅದರಲ್ಲೂ ಹೆಣ್ಣು ಮಕ್ಕಳು ಏನಾದರೂ ಹೇಳಿದರು ಅಂದರೆ ಅವರು ಮಾಡಿ ಬಂದದ್ದು ದೊಡ್ಡ ತಪ್ಪೇನೋ ಎಂಬಂತೆ ಬಿಂಬಿಸಲಾಗಿತ್ತಿರುತ್ತದೆ. ಇದರ ಪರಿಣಾಮವೇ ಇಂದಿನ ದಿನಗಳಲ್ಲಿ ನಾವು ನಮ್ಮ ಮನೆಯಲ್ಲಿ ಏನಾದರೂ ಸಂಭವಿಸದೆ ಇದ್ದರೆ ಇತರರ ಸಮಸ್ಯೆಗಳಿಗೆ ಪ್ರತಿಕ್ರಿಯಿಸದೇ ಇರುವುದು.. ಅರ್ಥಾತ್ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಆಕ್ಸಿಡೆಂಟ್ ಇವೆಲ್ಲವುಗಳಿಗೂ ಮೂಕ ಪ್ರೇಕ್ಷಕರಾಗಿರುವುದು.

ಇದು ಮನೆಯಲ್ಲಿ ಸಂಭವಿಸುವ ಒಂದೆರಡು ಅವ್ಯಕ್ತ ಭಯಗಳಿಂದ ಉಂಟಾಗುವ ಪರಿಣಾಮವಾದರೆ ಶಾಲೆಗಳ, ಕಾಲೇಜುಗಳ ಕಥೆ ಕೇಳಿ..

ಅಂಕಗಳ ವಿಚಾರದಲ್ಲಿ ಪಕ್ಷಪಾತ ಮಾಡುವ ಶಿಕ್ಷಕರ ವಿಷಯವನ್ನು ಖಂಡಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಶಿಕ್ಷಕರ ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಒಂದಲ್ಲಾ ಒಂದು ರೀತಿಯಲ್ಲಿ ಶಿಕ್ಷೆ ಆಗಿರುತ್ತದೆ. ಮನೆಯಲ್ಲಿ ಬಂದು ಹೇಳಿದರೆ ನಮ್ಮ ಧೈರ್ಯದ ವರ್ತನೆಯೇ ಇದಕ್ಕೆಲ್ಲಾ ಕಾರಣ ಎಂಬಂತೆ ಬಿಂಬಿತವಾಗುತ್ತದೆ. ಸರಿ, ಮೇಲಿನ ಮಟ್ಟದ ಶಿಕ್ಷಕರೊಂದಿಗೆ ನಾನೇ ಮಾತನಾಡುತ್ತೇನೆ ಎಂದರೂ ಇದಕ್ಕೆಲ್ಲಾ ತಡೆಗೋಡೆ.

ಅವ್ಯಕ್ತ ಭಯವನ್ನು ನಮ್ಮಲ್ಲಿ ತುಂಬುವ ಕೆಲಸ ಎಲ್ಲೆಡೆಯಿಂದಲೂ ಸಾಗುತ್ತಲೇ ಇರುತ್ತದೆ. ಈ ರೀತಿಯ ಭಯದ ಮೂಸೆಯಲ್ಲಿ ನಮ್ಮನ್ನು ಅದ್ದದ್ದಿದ್ದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಲು ಅಷ್ಟು ವರ್ಷ ಬೇಕಾಗುತ್ತಿರಲಿಲ್ಲ. ಅಲ್ಲದೇ ಗರ್ಭದಲ್ಲಿರುವಾಗ ಮಗುವಿಗೆ ಧೈರ್ಯ ತುಂಬಲು ಗರ್ಭಿಣಿಯರಿಗೆ ಅಭಿಮನ್ಯುವಿನ ಪೌರುಷದ ಕಥೆ ಹೇಳುತ್ತಾರೆಯೇ ಹೊರತು ಉತ್ತರಕುಮಾರ ಹೆದರಿ ಯುದ್ದರಂಗದಿಂದ ಓಡಿದ ಕಥೆಯನ್ನು ಹೇಳುವುದಿಲ್ಲ. ಆದರೆ ಬೆಳೆಯುತ್ತಾ ಎಲ್ಲರೂ ಅವ್ಯಕ್ತ ಭಯವನ್ನು ಬಿತ್ತಿ ಬೆಳೆಸಿಬಿಡುತ್ತಾರೆ. "ಭಗತ್ ಸಿಂಗ್ ಅಂತಹವರು ಇರಬೇಕು ಆದರೆ ನಮ್ಮ ಮನೆಯಲ್ಲಲ್ಲ ಪಕ್ಕದ ಮನೆಯಲ್ಲಿ" ಎನ್ನುವ ಮನಸ್ಥಿತಿಯನ್ನು ತಲುಪಿರುವುದು ವಿಪರ್ಯಾಸ.

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದಿದರೂ ಆ ಭಾವನೆಯನ್ನು ಹೀರದೆ ಬದುಕಬಹುದು. ಅಂಟಿಯೂ ಅಂಟದಂತಹಾ ಭಯವನ್ನು ಮನಸ್ಸಿನಲ್ಲಿಟ್ಟುಕೊಂಡು ಬದುಕುವ, ಇದರಿಂದ ಬೇರೆಯವರೂ ಹೀಗೆ ಬದಲಾಗಬಹುದೇನೋ..
ಬರಹದಿಂದ ಬದುಕು ಬದಲಾಗುತ್ತದಾ? ಗೊತ್ತಿಲ್ಲ..??! ಆದರೆ ಪ್ರೇರಣೆಯಾಗಬಹುದು ಎಂಬ ನಂಬುಗೆಯಂತೂ ಇದೆ. ಅದೇ ಧೈರ್ಯದಿಂದ ಬರೆದಿದ್ದೇನೆ. ನೀನೇನು ಬರೀತೀಯಾ? ನಿಜವಾಗಲೂ ಇದನ್ನು ಓದ್ತಾರಾ? ಎಂಬೆಲ್ಲಾ ಅವ್ಯಕ್ತ ಭಯ ಬಿತ್ತಲು ಹವಣಿಸಿದ ಪ್ರಶ್ನೆಗಳನ್ನು ಒತ್ತರಿಸಿ ಬರೆದಿದ್ದೇನೆ.
ಓದಿ ಸಾಧ್ಯವಾದರೆ ಮರುತ್ತರ ನೀಡಿ ಪ್ರತಿಕ್ರಿಯಿಸಿ.

~ವಿಭಾ ವಿಶ್ವನಾಥ್