ಗುರುವಾರ, ಅಕ್ಟೋಬರ್ 11, 2018

ಬಂಧಗಳ ಬದುಕು

ಬಾಡಿಯೇ ಹೋದಂತಿದ್ದ ಸಂಬಂಧಗಳು
ಮತ್ತೆ ಚಿಗುರಲು ಹವಣಿಸುತ್ತಿರುವಾಗ
ಚಿಗುರನ್ನು ಚಿವುಟುವುದೋ..?
ಹೂವನ್ನು ಕಿತ್ತೆಸೆಯುವುದೋ..?
ಕಾಯಾಗುವ ಮುನ್ನ ಹೀಚಲ್ಲೇ ಹಿಸುಕುವುದೋ.?
ಹಣ್ಣಾಗಿ ಫಲ ಕೊಡಲೆಂದು ನಿರೀಕ್ಷಿಸುವುದೋ..?
ಮತ್ತದೇ ವಿಷ ಬೀಜ ಚಿಗುರಿದರೆ..!
ಆ ಮರವೇ ವಿಷವೃಕ್ಷವಾದರೆ..?!
ಮುಂದೊಮ್ಮೆ ಮರುಗಿ ಕೊರಗುವ ಬದಲು
ಚಿಗುರುವಾಗಲೇ ಮುರುಟಿ ಹಾಕಿದರೆ..!
ಕೆಡುಕು ಸಂಭವಿಸದೆ ಒಳಿತೇ ಆಗಲಿ ಎಂಬ
ಆಶಾಭಾವನೆಯಿಂದ ಸಂಬಂಧಗಳ ಸಾಕಿ
ಪ್ರೀತಿ,ವಾತ್ಸಲ್ಯದ ನೀರುಣಿಸಿ ಬೆಳೆಸುವ..
ತ್ಯಾಗವೆಂಬ ಪೋಷಕಾಂಶವ ನೀಡಿ
ಹಸನಾದ ಫಲ ಸಿಗಲೆಂದು ಆಶಿಸುವ..
ಆದರೆ ವಿಷವೃಕ್ಷವಾಗ ಹೊರಟರೆ
ಕೊಡಲಿ ಕಾವಿಗೆ ಕೆಲಸ ಕೊಡುವ..
ಕೈಗೆ ಕೊಡಲಿ ನೀಡುವ ಬದಲು
ನೀರುಣಿಸುವ ಕೆಲಸವೇ ಸಿಗಲಿ..
ತಾವೂ ಉತ್ತಮರಂತೆ ಬದುಕಲೆತ್ನಿಸಲಿ
ನಮ್ಮನ್ನೂ ಬದುಕಲಿ ಬಿಡಲೆಂದೇ ಹಾರೈಸುವ..

~ವಿಭಾ ವಿಶ್ವನಾಥ್

2 ಕಾಮೆಂಟ್‌ಗಳು: