ಗುರುವಾರ, ಜನವರಿ 30, 2020

ದೃಷ್ಟಿ

ಪುಟ್ಟ ಇಂದು ತರಗತಿಯಲ್ಲಿ ದೃಷ್ಟಿಯನ್ನು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾಗ ತರಗತಿಯ ಶಿಕ್ಷಕರು ಒಳಗೆ ಬಂದು ಪುಟ್ಟನಿಗೆ ಏಕೆಂದು ಕೇಳಿದರು. ಅದಕ್ಕೆ ಅವನು "ಅವಳಿಗೆ ಕಣ್ಣು ಕಾಣಿಸದಿದ್ದರೆ, ಸುಮ್ಮನೆ ಮನೆಯಲ್ಲಿರಬೇಕು. ಅದನ್ನು ಬಿಟ್ಟು ಶಾಲೆಗೆ ಬಂದು ನಮಗೆ ತೊಂದರೆ ಕೊಡುವುದೇತಕೆ?" ಎಂದ.

ಅದಕ್ಕೆ ಶಿಕ್ಷಕರು "ಕಣ್ಣು ಕಾಣಿಸದಿದ್ದವರು ಶಾಲೆಗೆ ಬರಬಾರದೆಂದು ನಿನ್ನ ಅಭಿಪ್ರಾಯವೇ? ನಿಮ್ಮೆಲ್ಲರಿಗಿಂತಲೂ ಆಕೆಯೇ ಬುದ್ಧಿವಂತೆ, ಒಮ್ಮೆ ಹೇಳಿದರೆ ಗ್ರಹಿಸುತ್ತಾಳೆ.
ಅದೆಲ್ಲಾ ಸರಿ, ನೀನೇಕೆ ಅವಳನ್ನು ಬೈಯ್ಯುತ್ತಿದ್ದೀಯೇ? ನಿನಗೇನು ತೊಂದರೆಯಾಯಿತು? " ಎಂದರು.

"ಇವತ್ತು ನನ್ನ ಹುಟ್ಟಿದ ಹಬ್ಬ ಎಂದು ಹಾಕಿಕೊಂಡು ಬಂದಿದ್ದ ಹೊಸಾ ಬಿಳಿ ಶರ್ಟನ್ನು ತನ್ನ ಬೆವರು ತುಂಬಿದ ಕೈಗಳಿಂದ ಮುಟ್ಟಿ ಹಾಳು ಮಾಡಿದ್ದಾಳೆ. ಕೋಪ ಬರುವುದಿಲ್ಲವೇ?"ಎಂದ.

ಅದಕ್ಕೆ ದೃಷ್ಟಿ "ಸರ್ ನನಗೆ ಗೊತ್ತಾಗಲಿಲ್ಲ. ಅವನ ಹುಟ್ಟುಹಬ್ಬದ ದಿನ ಅವನು ಹೇಗೆ ಕಾಣುತ್ತಿದ್ದಾನೆ ಎಂದು ನೋಡಲು ಆಸೆಯಾಯಿತು, ಅದಕ್ಕೆ ಹಾಗೆ ಮಾಡಿದೆ" ಎನ್ನುತ್ತಾ ಅಳತೊಡಗಿದಳು.

ಅಷ್ಟರಲ್ಲಿ ಪುಟ್ಟ ಮತ್ತೆ "ಮಾಡುವುದನ್ನೆಲ್ಲಾ ಮಾಡಿ, ಅಳುವುದು ಬೇರೆ" ಎಂದು ಬೈದು ಅಲ್ಲಿಂದ ಹೊರಟ.

ಶಿಕ್ಷಕರಿಗೆ ಮಕ್ಕಳಿಗೆ ಬೈದು ಹೇಳಿ ಅವರ ತಪ್ಪನ್ನು ತಿದ್ದುವುದಕ್ಕಿಂತ ಅವರಿಗೆ ಅದರ ಅರಿವು ಮೂಡಿಸಬೇಕು ಎಂದುಕೊಂಡು, ಎಲ್ಲರನ್ನೂ ಕರೆದು "ಇಂದು ನಾವು ಒಂದು ಆಟ ಆಡೋಣ" ಎಂದರು. ಆಟ ಎಂದದ್ದಕ್ಕೆ ಎಲ್ಲರಿಗೂ ಹಿಗ್ಗು. ಎಲ್ಲರಿಗೂ ಹಿಗ್ಗು ಜೊತೆಗೆ ಯಾವ ಆಟ ಎಂಬ ಕುತೂಹಲ. "ಇಂದು ಪುಟ್ಟನ ಹುಟ್ಟುಹಬ್ಬವಾದುದರಿಂದ ಅವನೇ ಇಂದಿನ ಹೀರೋ, ಅವನಿಂದಲೇ ಶುರು ಮಾಡೋಣ" ಎನ್ನುತ್ತಾ ಆಟದ ನಿಯಮಗಳನ್ನು ವಿವರಿಸಿದರು."ಈಗ ಅವನ ಕಣ್ಣಿಗೆ ಬಟ್ಟೆ ಕಟ್ಟುತ್ತೇನೆ, ಅವನು ಎಲ್ಲರನ್ನೂ ಅವತರ್ ಧ್ವನಿ ಮತ್ತು ಸ್ಪರ್ಶದಿಂದಲೇ ಕಂಡುಹಿಡಿಯಬೇಕು" ಎಂದರು.

ಸರಿ, ಇದ್ಯಾವ ಮಹಾ ಆಟ ಎಂದು ಉಢಾಫೆಯಿಂದಲೇ ಶುರು ಮಾಡಿದ ಅವನಿಗೆ 2 ನಿಮಿಷದಲ್ಲೇ ಅದರ ಕಷ್ಟ ಅರಿವಾಯಿತು. ನಂತರ ದೃಷ್ಟಿಗೆ ಕ್ಷಮೆ ಕೇಳಿ, ಶಿಕ್ಷಕರಿಗೆ, "ಅಂಧರಿಗೆ ಮತ್ತೆ ನೋಡುವಂತೆ ಮಾಡುವುದು ಹೇಗೆ?" ಎಂದು ಕೇಳಿದ.

"ನಾವು ಸತ್ತ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡಿದರೆ, ಅವರನ್ನು ಮತ್ತೆ ನೋಡುವಂತೆ ಮಾಡಬಹುದು" ಎಂದರು. ಅದಕ್ಕೆ ಪುಟ್ಟ "ನಾನೂ ಸಹ ಹಾಗೇ ಮಾಡುತ್ತೇನೆ. ಅಲ್ಲದೇ ಮನೆಯಲ್ಲಿಯೂ ಹೇಳುತ್ತೇನೆ. ಜೊತೆಗೆ ಇನ್ನು ದೃಷ್ಟಿಯ ದೃಷ್ಟಿಯಾಗಿ ನಾನಿರುತ್ತೇನೆ." ಎಂದ ಪುಟ್ಟ. ಈ ಪರಿವರ್ತನೆ ಮತ್ತು ದೃಷ್ಟಿಕೋನ ಎಲ್ಲರಲ್ಲೂ ಸಂತಸ ತಂದಿತು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ