ಶುಕ್ರವಾರ, ಡಿಸೆಂಬರ್ 14, 2018

ಹಸನು

ಯಶಸ್ ತನಗೆ ಬೆಂಗಳೂರಲ್ಲಿ ಸಿಕ್ಕಿದ್ದ ಉತ್ತಮ ಸಂಬಳದ ಕೆಲಸವನ್ನು ಬಿಟ್ಟು ಮತ್ತೆ ತನ್ನ ಹಳ್ಳಿಗೆ ಬಂದಾಗ ಸುತ್ತಮುತ್ತಲಿನವರಿಂದ ಸಿಕ್ಕಿದ್ದು ಚುಚ್ಚು ಮಾತು, ವ್ಯಂಗ್ಯದ ನೋಟಗಳೇ. ಆದರೆ ಅಂದಿನ ಪರಿಸ್ಥಿತಿಗೆ ಹೆದೆಗುಂದದೆ ತನ್ನ ನಿಲುವಿಗೇ ಅಂಟಿಕೊಂಡು ಇಂದು ಯಶಸ್ಸು ಸಾಧಿಸಿದ್ದ ಯಶಸ್.

ಅದೇಕೋ ಯಶಸ್ ಗೆ ಹುಟ್ಟಿ ಬೆಳೆದ ಪರಿಸರದ ಮೇಲೆ ಅಪಾರ ವ್ಯಾಮೋಹ. "ಎಷ್ಟೇ ಓದಿದ್ದರೂ, ಹಳ್ಳಿಯಲ್ಲಿದ್ದರೆ ಹೆಣ್ಣು ಕೊಡುವುದಿಲ್ಲ ಆದರೆ ಪಟ್ಟಣದಲ್ಲಿ ಸಣ್ಣ ಕೆಲಸದಲ್ಲಿದ್ದರೂ ಹೆಣ್ಣು ಕೊಡಲು ನಾ ಮುಂದು, ತಾ ಮುಂದು" ಎಂದು ಬರುವ ಕನ್ಯಾಪಿತೃಗಳ ಮನಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡ ಯಶಸ್ ನ ತಂದೆ-ತಾಯಿ ಅವನನ್ನು ಇಂಜಿನಿಯರಿಂಗ್ ಗೆ ಸೇರಿಸಿದರು. ಯಶಸ್ ಮನೆಯಿಂದಲೇ ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದುದರಿಂದ ಅವನಿಗೆ ಆಗ ಸಮಸ್ಯೆ ಎನ್ನಿಸಿರಲಿಲ್ಲ. ಅದೂ ಅಲ್ಲದೆ ಅವನಿಗೆ ಇಂಜಿನಿಯರಿಂಗ್ ಗಿಂತಲೂ ಹೊಲ-ಗದ್ದೆ, ತೋಟ, ತೊರೆಗಳ ಮೇಲೆಯೇ ಅವನಿಗೆ ಹೆಚ್ಚು ಪ್ರೀತಿ. ಹಾಗೆಂದು ಓದಿನಲ್ಲೇನೂ ಹಿಂದುಳಿಯಲಿಲ್ಲ ಅವನು.

ನಾಲ್ಕು ವರ್ಷದ ಇಂಜಿನಿಯರಿಂಗ್ ನ ನಂತರ ಕೆಲಸ ಸಿಕ್ಕಿದ್ದು ದೂರದ ಬೆಂಗಳೂರಿನಲ್ಲಿ. ಅದೂ ಅಲ್ಲದೆ ಅಲ್ಲಿನ ಯಾಂತ್ರಿಕ ಜೀವನ ಮೂರೇ ದಿನದಲ್ಲಿ ಬೇಸರ ತರಿಸಿತ್ತು. ಅಷ್ಟೇ ಅಲ್ಲದೆ ಅವನಿಗೆ ಆಶ್ಚರ್ಯ ತರಿಸಿದ್ದು ಅಲ್ಲಿನ ವಿರೋಧಾಭಾಸಗಳ ಸಂಗತಿ. ಹಳ್ಳಿಯಲ್ಲಿರುವವರು ಕೆಲಸಕ್ಕೆಂದು ದೂರದ ಪಟ್ಟಣಗಳತ್ತ ಮುಖ ಮಾಡಿದ್ದರೆ, ಅಲ್ಲಿರುವವರು ಕಲುಷಿತ ವಾತಾವರಣಕ್ಕೆ ಬೇಸತ್ತು ಹಳ್ಳಿಯ ಸ್ವಚ್ಚಂದವಾದ ಹಳ್ಳಿಯ ಪರಿಸರಕ್ಕೆ ಮುಖ ಮಾಡಿದ್ದರು. ಇದೆಲ್ಲವನ್ನು ಕಂಡು ತಾನೂ ಧೃಡ ನಿರ್ಧಾರ ಮಾಡಿ ಭೂ ತಾಯಿಯ ಸೇವೆ ಮಾಡಲು ಹಳ್ಳಿಗೆ ಮರಳಿದ್ದ.

ಇಷ್ಟಲ್ಲದೆ ಕೃಷಿ ಅಲ್ಲಿ ವ್ಯಾಪಾರೀಕರಣದ ಭಾಗವೇ ಆದಂತೆ ಭಾಸವಾಗುತ್ತಿತ್ತು. ಆರ್ಗಾನಿಕ್ ಫಾರ್ಮಿಂಗ್ ಇದಕ್ಕೊಂದು ಉದಾಹರಣೆ. ಆರ್ಗಾನಿಕ್ ಫಾರ್ಮಿಂಗ್ ನಲ್ಲಿ ಒಂದಿಷ್ಟು ಜಾಗವನ್ನು ಇಂತಿಷ್ಟು ಹಣ ಎಂದು ನೀಡಿ ಇಂತಿಷ್ಟು ದಿನಕ್ಕೆ ಎಂದು ಕೊಂಡುಕೊಂಡು ಅದರಲ್ಲಿ ನಮ್ಮಿಷ್ಟದ ತರಕಾರಿ, ಸೊಪ್ಪುಗಳನ್ನು ರಾಸಾಯನಿಕಗಳನ್ನು ಬಳಸದೆ ಬೆಳೆಯಬೇಕಿತ್ತು. ಈ ಪದ್ದತಿಯಿಂದ ಹೆಚ್ಚು ಖುಷಿ ಪಟ್ಟವರು ಮಕ್ಕಳು. ಮಕ್ಕಳು ಇದರಿಂದ ಪುಳಕಿತರಾಗಿ ಕೃಷಿಯತ್ತ ಒಲವು ತೋರುತ್ತಿದ್ದರು. ಕೃಷಿ ಹೊಸ ರೀತಿಯ ಪ್ರಯೋಗದಿಂದ ಮತ್ತೆ ಬೆಳಕಿಗೆ ಬರುತ್ತಿದ್ದುದು ಖುಷಿಯ ವಿಚಾರವಾದರೆ, ವ್ಯಾಪಾರೀಕರಣವಾಗುತ್ತಿರುವುದು ವಿಪರ್ಯಾಸ.

ಇಂತಹ ಸಂದರ್ಭದಲ್ಲಿ ಕವಿತಾ ಮಿಶ್ರ ಎಂಬ ಮಹಿಳೆಯ ಸಾಧನೆ ಯಶಸ್ ಅನ್ನು ಅಚ್ಚರಿಗೊಳಿಸಿತ್ತು. ಸೈಕಾಲಜಿ, ಕಂಪ್ಯೂಟರ್ ಸೈನ್ಸ್ ಓದಿದ್ದರೂ ಕೃಷಿಯ ಕಡೆ ಮುಖ ಮಾಡಿದ್ದ ಮಹಿಳೆ ಕವಿತಾ. ರಾಯಚೂರಿನಂತಹಾ ಬರಡು ಭೂಮಿಯಲ್ಲಿ ಬಂಗಾರದಂತಹಾ ಬೆಳೆ ತೆಗೆದವರು ಆಕೆ. ಆಕೆ ಬಳಸಿದ್ದ ಹನಿ ನೀರಾವರಿ ಮತ್ತು ಸಾವಯವ ಕೃಷಿ ಪದ್ದತಿ ಯಶಸ್ ನ ಮನಸೆಳೆಯಿತು. ಇದಿಷ್ಟೇ ಅಲ್ಲದೆ ಕಡಿಮೆ ಜಾಗದಲ್ಲಿ ಹೆಚ್ಚಿನ ಬೆಳೆ ಬೆಳೆಯಬಹುದಾದ ವರ್ಟಿಕಲ್ ಗಾರ್ಡನಿಂಗ್, ಅತಿ ಕಡಿಮೆ ನೀರು ಬಳಸಿ ಬೆಳೆಯುವ ಹೈಡ್ರೋಫೋನಿಕ್ ಕೃಷಿ ವಿಧಾನ ಇವುಗಳನ್ನು ಅರಿತು ಅಳವಡಿಸಿಕೊಂಡ ಯಶಸ್.

ಕಷ್ಟ ಪಟ್ಟವರಿಗೆ ಫಲ ಸಿಕ್ಕೇ ಸಿಗುತ್ತದೆ, ಆದರೆ ತುಸು ಕಾಯಬೇಕಾಗುತ್ತದೆ. ಯಶಸ್ ನ ವಿಷಯದಲ್ಲೂ ಹೀಗೇ ಆಯಿತು. ಮೊದಲೆರಡು ವರ್ಷ ಮಳೆಯ ಅಭಾವ, ಅತಿ ಮಳೆ ಬಂದು ಹಾಳು ಮಾಡಿದರೆ ನಂತರದಲ್ಲಿ ಕಾಡು ಪ್ರಾಣಿಗಳ ಕಾಟ, ಕಲಬೆರಕೆ ಗೊಬ್ಬರ, ಮಧ್ಯವರ್ತಿಗಳಿಂದ ಬೆಳೆಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸಬೇಕಾಯಿತು.

ನಂತರ ತಾನು ಕಲಿತ ಇಂಜಿನಿಯರಿಂಗ್ ಅನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಕೃಷಿ ಇಳುವರಿಯನ್ನು ಅತ್ಯುತ್ತಮಗೊಳಿಸಿದ, ಕಾಡು ಪ್ರಾಣಿಗಳ ಕಾಟದಿಂದ ಮುಕ್ತನಾದ. ಕಲಬೆರಕೆ ಗೊಬ್ಬರದ ಬದಲಿಗೆ ಸಗಣಿಯನ್ನು ಉಪಯೋಗಿಸಿ ತಯಾರಿಸಿದ ಸಾವಯವ ಗೊಬ್ಬರವನ್ನು ಬಳಸಿದ. ಮಳೆನೀರಿಗಾಗಿ ಇಂಗು ಗುಂಡಿಗಳನ್ನು ತೆಗೆಸಿದ. ಹೈನುಗಾರಿಕೆಯ ಜೊತೆ ಮೀನು ಸಾಕಾಣಿಕೆಯನ್ನೂ ಶುರು ಮಾಡಿದ. ಇದರ ಜೊತೆಗೆ ವಿವಿಧ ಹಣ್ಣಿನ ಮರಗಳು, ತೇಗ, ಗಂಧ, ಹೊನ್ನೆಯಂತಹ ಮರಗಳನ್ನು ನೆಟ್ಟ. ಇವುಗಳ ಜೊತೆಗೆ ತನ್ನೂರಿನಲ್ಲಿ ಸಿಗುವ ವಿಶಿಷ್ಟ ಹೂ ಮತ್ತು ಹಣ್ಣಿನ ಗಿಡಗಳನ್ನು ಬೋನ್ಸಾಯ್ ಪದ್ದತಿಗೆ ಅಳವಡಿಸಿದ.

ಈಗ ಯಶಸ್ ಜಿಲ್ಲೆಯ ಮಾದರಿ ರೈತ ಎನ್ನಿಸಿಕೊಂಡಿದ್ದಾನೆ. ಈ ಕುರಿತಂತೆ ತನ್ನ ಅಭಿಪ್ರಾಯ ಕೇಳಿದ ವರದಿಗಾರನಿಗೆ ಯಶಸ್ ಹೇಳಿದ್ದಿಷ್ಟು, "ಭೂಮಿಯಲ್ಲಿ ಉತ್ತಮವಾಗಿ ಬಿತ್ತನೆ ಮಾಡಿದ್ದರೂ, ಕಲುಷಿತ ವಾತಾವರಣವಿದ್ದರೆ ಬೆಳೆ ಸರಿಯಾಗಿ ಬಾರದು., ಹಾಗೆಯೇ ಭೂಮಿಯೇ ಕಲುಷಿತವಾದರೆ ಅಥವಾ ಬಿತ್ತನೆಯ ಬೀಜದ ಗುಣಮಟ್ಟ ಸರಿಯಾಗಿರದಿದ್ದರೆ, ವಾತಾವರಣ ಚೆನ್ನಾಗಿದ್ದರೂ ಫಲ ಸರಿಯಾಗಿ ಬಾರದು. ಜೀವನವೂ ಹಾಗೆಯೇ.. ನಾವು ಹದಗೊಳಿಸಿಕೊಂಡಂತೆ ಜೀವನ, ಹಸನುಗೊಳಿಸಿಕೊಂಡಂತೆ ಬದುಕು. ರೈತನ ಜಾಣ್ಮೆ,ಶ್ರಮ, ಭೂಮಿಯ ಫಲವತ್ತತೆ, ಉತ್ತಮ ವಾತಾವರಣ ಇಳುವರಿಯ ಮೇಲೆ ಪ್ರಭಾವ ಬೀರಿದಂತೆ.. ಒಂದು ಸರಿಯಾದ ನಿರ್ಧಾರ, ಸಹಕಾರ ತುಂಬಿದ ವಾತಾವರಣ, ಅಚಲ ನಂಬಿಕೆ, ಪರಿಶ್ರಮಗಳು ಬದುಕನ್ನು ಹಸನು ಮಾಡುತ್ತವೆ."

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ