ಭಾನುವಾರ, ಜುಲೈ 12, 2026

ಮಗಳಿಗೋಸ್ಕರ ಮಾತ್ರವೇ..! (ಬೆಳಕಿಂಡಿಯ ಕತೆಗಳು - 53)


ಪರಿಚಯವಿದ್ದರೂ ಮುಗುಳ್ನಗೆ ಬೀರಿ ಸುಮ್ಮನಾಗುತ್ತಿದ್ದ ಅಮ್ಮ ಮಗಳ ಖುಷಿಗಾಗಿ ಈಗ ಅಪರಿಚಿತರನ್ನೂ ಪರಿಚಯವೆಂಬಂತೆ ಮಾತನಾಡಿಸುತ್ತಾಳೆ.. ಮುಗುಳ್ನಗುತ್ತಾಳೆ, ಸ್ನೇಹಿತರಾಗಿಸಿಕೊಳ್ಳಲು ಮುಂದಾಗುತ್ತಾಳೆ. 

ಮಗಳಿಗೆ ಹೊಸ ಜಗತ್ತನ್ನು ಪರಿಚಯಿಸಲು ತನ್ನ ಜಗತ್ತನ್ನು ಹಿಗ್ಗಿಸಿಕೊಳ್ಳುತ್ತಿದ್ದಾಳೆ. ಅಂತರ್ಮುಖಿ ಅಮ್ಮನೀಗ ಎಕ್ಸ್ಟ್ರೋವರ್ಟ್ ಆಗುತ್ತಿದ್ದಾಳೆ. ಮಗಳಂತೆಯೇ... ಮಗಳಿಗೋಸ್ಕರ ಮಾತ್ರವೇ..!

~ವಿಭಾ ವಿಶ್ವನಾಥ್ 

ಪ್ರೇರೇಪಣೆ (ಬೆಳಕಿಂಡಿಯ ಕತೆಗಳು - 52)


 "ಏನೋ ದೊಡ್ಡ ಸಾಹಸ ಮಾಡಿದಂತೆ ಬೀಗಬೇಡ. ಸ್ಟೇಜ್ ಮೇಲೆ ಹೋಗಿ ಮಾತನಾಡಲು ನೀನು ಅವಳಿಗೆ ಧೈರ್ಯ ನೀಡಿದ್ದಷ್ಟೇ.. ನೋಡೋಣ ಇದೆಷ್ಟು ವರ್ಕ್ ಆಗುತ್ತೆ ಅಂತಾ" ಎಂದವನಿಗೆ ಅಚ್ಚರಿಯಾಗುವಂತೆ ಕಿಕ್ಕಿರಿದ ಸಭಾಂಗಣದಲ್ಲಿ ಮಗಳು ನಿರರ್ಗಳವಾಗಿ ಆಶುಭಾಷಣ ಸ್ಪರ್ಧೆಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು.

"ಆತ್ಮವಿಶ್ವಾಸ ತುಂಬುವುದು ಅವಶ್ಯಕ ಕಣ್ರೀ. ಸಾಹಸ ಮಾಡಿದ್ದು ನಾನಲ್ಲ.. ನಮ್ಮ ಮಗಳು. 

ಪ್ರತಿಯೊಬ್ಬರಲ್ಲೂ.. ಅದರಲ್ಲೂ ಮಕ್ಕಳಲ್ಲಿ ಆಂಜನೇಯನಂತೆಯೇ ಬಲ ಇರುತ್ತದೆ. ಅವರನ್ನು ಪ್ರೇರೇಪಿಸೋ ಜಾಂಬವಂತ ನಾವಾಗಬೇಕು ಅಷ್ಟೇ.." ಎಂದವಳ ಧ್ವನಿಯಲ್ಲಿ ಹೆಮ್ಮೆ ತುಳುಕಾಡುತ್ತಿತ್ತು.

~ವಿಭಾ ವಿಶ್ವನಾಥ್ 

ಮಿತಿ ಮೀರಿದಾಗ.. (ಬೆಳಕಿಂಡಿಯ ಕತೆಗಳು - 51)


"ಅಮ್ಮ, ಕತೆಗಳಲ್ಲಿ ರಾಕ್ಷಸರ ಅಟ್ಟಹಾಸ ಮಿತಿ ಮೀರಿದ ನಂತರವೇ ದೇವರು ಬರೋದ್ಯಾಕೆ..? ಮೊದಲೇ ಬಂದು ಬುದ್ದಿ ಹೇಳಬಹುದಲ್ಲಾ..?!" ಎಂಬ ಪುಟ್ಟಿಯ ಆಲೋಚನೆ ಹಾಗೂ ಪ್ರಶ್ನೆಗಳೆರಡೂ ಒಟ್ಟಿಗೆ ಒಡಮೂಡಿದವು.

"ಯಾರೇ ಆಗಲಿ ತಪ್ಪು ಮಾಡುತ್ತಿದ್ದಾರೆ ಎನ್ನುವಾಗಲೇ ತಿದ್ದಿಕೊಳ್ಳುವ ಸೂಚನೆ ಸಿಗುತ್ತದೆ ಕಂದಾ. ಯಾವುದಕ್ಕೂ ಬಗ್ಗದೆ ಅವರ ವರ್ತನೆ ಮೇರೆ ಮೀರಿದಾಗಲಷ್ಟೇ ದೇವರು ಅವತಾರ ತಾಳುವುದು. 

ಈಗಿನ ದಿನಗಳನ್ನೇ ನೋಡು.. ಭೂಕುಸಿತ, ಜಲಪ್ರಳಯ, ಭೂಕಂಪ ಇನ್ನೂ ಮುಂತಾದವನ್ನು. ಮನುಷ್ಯರು ಪ್ರಕೃತಿಯನ್ನು ಹಾಳು ಮಾಡುವ ದುಷ್ಕೃತ್ಯಕ್ಕೆ ಕೈಹಾಕಿದಾಗಲೆಲ್ಲಾ ಎಚ್ಚರಿಸಿದ ಪ್ರಕೃತಿ ಇನ್ನು ತಡೆಯಲಾರೆನು ಎಂದಾಗಲೇ ನಾಶಕ್ಕೆ ನಿಂತಿದ್ದು ಅಲ್ಲವಾ..?!" ಎಂದಾಗ ಪುಟ್ಟಿಯ ಆಲೋಚನೆಗೆ ಮತ್ತಷ್ಟು ರೆಕ್ಕೆಗಳು ಮೂಡಿದವು.


~ವಿಭಾ ವಿಶ್ವನಾಥ್

ನಿಚ್ಚಳವೀ ಪಥ

 


ಪಥ ಕಂಡುಕೊಳ್ಳುವ ಭರದಿ

ಅನುಸರಣೆ ಬೇಕಿಲ್ಲ..

ಗಮ್ಯದೆಡೆ ಸಾಗುವ ಸಂಭ್ರಮಕೆ

ಸ್ವಯಂ ತೆರೆದುಕೊಳ್ಳುವುದು ಜಾಡು


ನದಿ ಹರಿವ ಪಥ ಬದಲಿಸಿದರೂ 

ತಡೆಯೆಲ್ಲವ ಸುತ್ತುವರಿದು.. 

ಇಲ್ಲವೇ ಕೊಚ್ಚಿ ಮುನ್ನುಗಿ

ತನ್ನ ಗಮ್ಯವನಂತೂ ಬದಲಿಸದು


ನಿರಂತರತೆಯ ಪಯಣದಿ

ಸಮಸ್ಯೆಯ ಎದುರಿಸಿ ನಿಂತು

ತನ್ನ ನವೀಕರಿಸಿಕೊಳ್ಳುವಾಗ

ಪಥದೊಡನೆ ನಾವೂ ನಿಚ್ಚಳವೇ..!


~ವಿಭಾ ವಿಶ್ವನಾಥ್ 

ಮೋಹಕ ಯಶಸ್ಸು (ಬೆಳಕಿಂಡಿಯ ಕತೆಗಳು - 50)


"ಪ್ರತಿ ಬಾರಿಯೂ ಹೊಸದೇನೋ ಶುರು ಮಾಡಲು ಹೊರಟು ಸೋಲುತ್ತೀಯ, ಅರ್ಧಕ್ಕೆ ಕೈ ಬಿಡುತ್ತೀಯ.. ಇನ್ನೂ ಎಷ್ಟು ದಿನ ಹೀಗೆ ಪ್ರಯತ್ನಗಳನ್ನೇ ಮಾಡುತ್ತಾ ಬಂದ ಕೆಲಸದ ಆಫರ್ ಗಳನ್ನೆಲ್ಲ ಮೂಲೆಗೆಸೆಯುವುದು..?!" ಕೇಳಿದ ಅಮ್ಮನ ಪ್ರಶ್ನೆಗೆ "ಇನ್ನೊಂದು ಕೊನೆ ಪ್ರಯತ್ನ ಅಷ್ಟೇ..!" ಎಂದುತ್ತರಿಸಿದ್ದಳು.

ಇಂದು ಅವಳದ್ದೇ ಕಸ್ಟಮೈಸ್ಡ್ ಕೇಕ್, ಚಾಕೊಲೇಟ್ ಗಳನ್ನು ಹೊಸತನದೊಂದಿಗೆ ಗ್ರಾಹಕರ ಎದುರಿಗಿಡುತ್ತಾಳೆ. 


ಅಂದು ಕೊನೆಯ ಪ್ರಯತ್ನ ಎಂದುಕೊಂಡವಳು ಸೋತಾಗಲೆಲ್ಲಾ ಅರ್ಧಕ್ಕೆ ಕೈ ಬಿಟ್ಟಂತೆ ಈ ಪ್ರಯತ್ನವನ್ನು ಕೈಬಿಡಲಿಲ್ಲ. ಹೊಸ ಹೊಸ ಚಾಕೊಲೇಟ್ ಪ್ರಯತ್ನಿಸುವ ಚಾಕೊಲೇಟ್ ಮೋಹ ಅವಳಿಗೆ ಗುರುವಾಗಿತ್ತು. ತನಗಿಷ್ಟವಾಗದ ಚಾಕೊಲೇಟ್ ಅನ್ನು ಸಹ ಅರ್ಧಕ್ಕೆ ಬಿಡದವಳು ಜೊತೆಗೆ ಇದರ ರುಚಿ ಹೀಗಿದ್ದಿದ್ದರೆ..? ಇದರ ಕಲರ್, ಡಿಸೈನ್ ಎಂದುಕೊಳ್ಳುತ್ತಿದ್ದವಳು ತನ್ನದೇ ಆರ್ಡರ್ ಗಳನ್ನು ಪೂರೈಸಿಕೊಳ್ಳಲು ಹೊರಟು ಹೋಂ ಮೇಡ್ ಕೇಕ್, ಚಾಕೊಲೇಟ್ ಗಳ ತಯಾರಿಸಿ ಆನ್ಲೈನ್ ಪ್ರಚಾರದಿಂದ ಈಗ ಚಾಕೊಲೇಟ್ ನಷ್ಟೇ ಸವಿಯಾದ ಯಶಸ್ಸು ಕಂಡಿದ್ದಾಳೆ. ಈಗ ಕುನಾಫ ತಯಾರಿಕೆಯಲ್ಲಿಯೂ ಹೆಸರುವಾಸಿಯಾಗುತ್ತಿದ್ದಾಳೆ.


~ವಿಭಾ ವಿಶ್ವನಾಥ್

ಬರ್ಡ್ ಹೌಸ್ (ಬೆಳಕಿಂಡಿಯ ಕತೆಗಳು - 49)


 ಸಂಜೆ ಬಂದಾಗ ತನ್ನ ಗೂಡಿನ ಬದಲಾಗಿ ಮತ್ತಾವುದೋ ಗೂಡನ್ನು ಕಂಡು ಗಲಿಬಿಲಿಯಾಗಿ ಅದರ ಸುತ್ತಲೇ ಸುತ್ತುತ್ತಿರುವ ಹಕ್ಕಿಯನ್ನು ಕಂಡ ಪುಟ್ಟ ಮಗು "ನೋಡಿ ಅಪ್ಪ, ಆ ಹಕ್ಕಿಗೆ ನಾವು ತಂದಿಟ್ಟ ಬ್ಯೂಟಿಫುಲ್ ಬರ್ಡ್ ಹೌಸ್ ಇಷ್ಟವಾಗಿದೆ. ಕಾರ್ಟೂನ್ ನಲ್ಲಿಯೂ ಹೀಗೆಯೇ ಖುಷಿಯಾದಾಗ ಹಕ್ಕಿ ಗೂಡಿನ ಸುತ್ತ ಹಾರುತ್ತದೆ. ಗೊತ್ತಾ..?"  ಎಂದು ಹೇಳುತ್ತಿತ್ತು.

ಅನಿವಾರ್ಯವಾಗಿ ತನ್ನ ನೆಲೆಯನ್ನು ಬದಲಾಯಿಸಿಕೊಂಡಿದ್ದ ಅಜ್ಜನಿಗೆ ಮಾತ್ರ ಹಕ್ಕಿಯ ವೇದನೆ ವೇದ್ಯವಾಗುತ್ತಿತ್ತು.

~ವಿಭಾ ವಿಶ್ವನಾಥ್ 

ಮಡಿಲು (ಪುಸ್ತಕ ಯಾನ - 466)


ಪುಸ್ತಕದ ಶೀರ್ಷಿಕೆ : ಮಡಿಲು

ಲೇಖಕರು : ಬಸವರಾಜ ಹೊನಗೌಡರ 

ಪ್ರಕಾಶಕರು : ಕಲ್ಲಚ್ಚು ಪ್ರಕಾಶನ

ಪ್ರಥಮ ಮುದ್ರಣ : 2022

ಪುಟಗಳು : 128

ಬೆಲೆ : 130 ರೂ.


ಮಡಿಲು ಕಥಾ ಸಂಕಲನ 20 ಕಥೆಗಳ ವೈವಿಧ್ಯಮಯ ಕಥಾಗುಚ್ಚ. ಸಮಾಜದ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ ಹಲವು ಆಯಾಮಗಳನ್ನು ತಮ್ಮ ಕಥೆಗಳಲ್ಲಿ ತೆರೆದಿಟ್ಟಿದ್ದಾರೆ. ಮಡಿಲು ಇವರ ಮೊದಲ ಕಥಾ ಸಂಕಲನ. 


ದಕ್ಷಿಣಕ್ಕೆ ಬಾಗಿಲು : ವಾಸ್ತು ತಜ್ಞರನ್ನು ಕೇಳಿ ವಾಸ್ತು ಪ್ರಕಾರ ಮನೆ ಕಟ್ಟಿಸಿದರೂ.. ಈಗ ಉಳಿದವರು ದಕ್ಷಿಣಕ್ಕೆ ಬಾಗಿಲು ಇರಬಾರದು. ವಾಸ್ತು ತಪ್ಪು ಎಂದು ಸಲಹೆ ಕೊಡಲು ಶುರು ಮಾಡಿದಾಗ ವಾಸ್ತುದೋಷಕ್ಕೆ ಪರಿಹಾರ ಮಾಡಿಸಿದರಾದರೂ ಜನರ ಬಾಯಿಗೆ ಪರಿಹಾರ ಮಾಡಿಸಲು ಸಾಧ್ಯವೇ..? ವೈಜ್ಞಾನಿಕ ಮನೋಭಾವ, ವೈಚಾರಿಕತೆ ಹಾಗೂ ಮೂಢನಂಬಿಕೆಗಳ ಕುರಿತ ಕಥೆ ಇಲ್ಲಿದೆ.


ಅದೃಷ್ಟ ನಕ್ಷತ್ರ : ಊರಿನಲ್ಲಿ ದೊಡ್ಡ ಕುಟುಂಬದ ಹಿರಿಯ ಮಗನಾಗಿದ್ದ ರಾಜೀವ ಪ್ರೇಮ ವಿವಾಹವಾಗಿದ್ದ. ಮಕ್ಕಳಾಗದ್ದರಿಂದ ಈಗ ಸುಜಾತರಿಗೆ ಕಿರುಕುಳ ಶುರುವಾದಾಗ ಪತಿ-ಪತ್ನಿಯರು ಮನೆ ಬಿಟ್ಟು ಹೊರಡುತ್ತಾರೆ. ರೈಲಿನಲ್ಲಿ ಅವರಿಗೆ ಸಿಕ್ಕ ಅದೃಷ್ಟ ನಕ್ಷತ್ರದ ಕತೆ ಇಲ್ಲಿದೆ.


ತಿರುಗುಬಾಣ : ಡಾಕ್ಟರ್ ವೃತ್ತಿಯಲ್ಲಿದ್ದ ವರನನ್ನೇ ಮಗಳ ಆಸೆಯಂತೆ ಅವಳಿಗೆ ವಿವಾಹ ಮಾಡಿಸಿದ ತಂದೆ ಮುಂದೆ ಮಗಳ ಕೌಟುಂಬಿಕ ಕಲಹದ ನಿವಾರಣೆಗೆಂದು ಹೋದಾಗ ಅವರಿಗೆ ಅದು ತಿರುಗುಬಾಣವಾಗಿದ್ದೇಗೆ..? ಓದಿ ನೋಡಿ.


ಕರುಣಾಶ್ರಮ : ತಾನೇ ಕಟ್ಟಿಸಿದ ಅರಮನೆಂತಹ ಮನೆಯಲ್ಲಿ ಸಿಗದ ಸುಖದ ಭಾವ ಈಗ ಕರುಣಾಳು ವೃದ್ಧಾಶ್ರಮದಲ್ಲಿ ಸಿಗುತ್ತಿತ್ತು. ತಾನೇ ಕಟ್ಟಿಸಿದ ಮನೆಯಿಂದ ಮಕ್ಕಳೇ ತನ್ನನ್ನು ಹೊರ ದಬ್ಬಿದಾಗ ಆದ ಜ್ಞಾನೋದಯ ಇಲ್ಲಿಯವರೆಗೂ ಕರೆತಂದಿತ್ತು. ಅಷ್ಟಕ್ಕೂ ಭಾಸ್ಕರನ ಕಥೆ ಏನು? ಕರುಣಾಶ್ರಮ ಹೇಗಿತ್ತು..? ಈಗ ಆತನ ಬದುಕು ಕಳೆಯುತ್ತಿರುವುದು ಯಾರೊಂದಿಗೆ ಓದಿ ನೋಡಿ.


ಕ್ಷಮಿಸಿ ಬಿಡು : ಶ್ರೇಷ್ಠ ಗಾಯಕಿ ಸರಸ್ವತಿ ಹುಟ್ಟು ಕುರುಡಿಯಾಗಿದ್ದವಳು. ಆದರೆ, ಸಾಧನೆಗೆ ಅಂಧತ್ವ ಅಡ್ಡಿಯಾಗಲಿಲ್ಲ. ಅವಳ ಸಂಗೀತ ಕಚೇರಿಗೆ ಹರಸಾಹಸ ಪಟ್ಟು ಟಿಕೆಟ್ ಪಡೆದಿದ್ದ ಭರತ-ಭಾಗ್ಯಶ್ರೀ ದಂಪತಿಗಳು ಅವಳನ್ನು ವೈಯಕ್ತಿಕವಾಗಿ ಭೇಟಿಯಾಗಲು ಹೋಗಿದ್ದರು. ಇತ್ತೀಚೆಗಷ್ಟೇ ಸಂಗೀತವೆಂದರೆ ಪಂಚಪ್ರಾಣ ಎನ್ನುವಷ್ಟು ಹವ್ಯಾಸವಾಗಿಸಿಕೊಂಡಿದ್ದವರ ಜೀವನಗಾಥೆ ಹಾಗೂ ಕ್ಷಮೆಗೂ ಯಾವ ಸಂಬಂಧವಿತ್ತು..? 


ಆಶೀರ್ವಾದ : ಗಿರೀಶ ದಂಪತಿಗಳು ಈಗ ಎಲ್ಲಾ ಸೌಕರ್ಯಗಳಿದ್ದ ವೃದ್ಧಾಶ್ರಮದಲ್ಲಿದ್ದರು. ತಮ್ಮ ತಪ್ಪಿನ ಅರಿವಾಗುತ್ತಿತ್ತು ಹಾಗೂ ಅದೇ ಕಾಡುತ್ತಿತ್ತು. ಮೊದಲ ಇಬ್ಬರು ಮಕ್ಕಳಿಗೆ ಹೆಚ್ಚು ಮನ್ನಣೆ ಕೊಟ್ಟದ್ದು ಹಾಗೂ ಮುಂದಿನ ಬದುಕು ಜೊತೆಗೆ ಕಿರಿಯ ಮಗ ಸಂತೋಷ ಹಾಗೂ ಸೊಸೆಯನ್ನು ಮನೆಯಿಂದ ಹೊರ ಹಾಕಿದ ವಿಚಾರವೆಲ್ಲವೂ ನೆನಪಾಗಿದ್ದು ಮಗ ಸಂತೋಷನ ಹುಟ್ಟುಹಬ್ಬದಂದು ಅಂದು ಸಂತೋಷನ ಭೇಟಿಯಾದ ಸಂದರ್ಭ ಹೇಗಿತ್ತು ಅವರ ಮುಂದಿನ ಬದುಕು ಏನಾಯ್ತು..?


ಧರ್ಮ : ದೇಶದ ಸ್ವಾತಂತ್ರ್ಯ ಬಂದ ನಂತರವೂ ಹಿಂದುಳಿದ ಹಳ್ಳಿಯಾಗಿದ್ದ ಭಾರತೀಪುರದಲ್ಲಿ ಬಡವರಿದ್ದರೂ.. ಎಲ್ಲಾ ಧರ್ಮ, ಜಾತಿಗಳ ಬೀಡಾಗಿ ಸಾಮರಸ್ಯದ ಬಾಳ್ವೆ ಮಾಡುತ್ತಿದ್ದರು. ಆದರೆ, ಈಗ ಕೋಮುದಳ್ಳುರಿಯ ದಿನಗಳು. ಹಿಂದಿನಿಂದ ಇಂದಿನವರೆಗಿನ ಕುಟುಂಬಗಳೆರಡರ ಚಿತ್ರಣವನ್ನು ಇಲ್ಲಿ ಕಾಣಬಹುದು.


ಮಡಿಲು : ಈ ಕಥಾ ಸಂಕಲನದ ಶೀರ್ಷಿಕೆಯೂ ಆಗಿರುವ ಈ ಕಥೆಯಲ್ಲಿ ಮಡಿಲು ತುಂಬುವ ಮಗು ಮನೆಯ ಬೆಳಕಾಗಿ ಬಂದಿತ್ತು. ಬರಿದಾಗಿದ್ದ ಮಡಿಲಿಗೆ ಕಾರಣರು ಯಾರು..? ಪ್ರಕೃತಿಯ ಮಡಿಲಲ್ಲಿ ಮಕ್ಕಳ ಕನಸಿಗೆ ನೀರೆರೆಯುತ್ತಿದ್ದ ಮಡಿಲು ಆಶ್ರಮ ಎಷ್ಟೋ ಮಕ್ಕಳ ಪಾಲಿಗೆ ಬೆಳಕಾಗಿತ್ತು. ಜೊತೆಗೆ ಮಕ್ಕಳು ಹಲವರ ಬರಿದಾದ ಮಡಿಲು ಸೇರಿ ಅವರ ಬದುಕನ್ನು ಬೆಳಕಾಗಿಸುತ್ತಿದ್ದರು. ಹಿತವಾದ ಭಾವ ನೀಡುವ ಕಥೆ.


ಮಿಡಿದ ಹೃದಯ : ಮನಸ್ಸಿನ ನೋವಿಗೆ ಮುಲಾಮು ನೀಡುವ ಸಂಗೀತದ ಸವಿಭಾವವಿದ್ದರೂ.. ಅದರ ಜೊತೆಗೊಂದು ಪುಟ್ಟ ನೋವಿತ್ತು. ಆದರೆ, ಸಂಗೀತ ಹಾಗೂ ಸಂಗಾತಿಯ ಸಾಂಗತ್ಯ ಎರಡೂ ಆ ನೋವೆಲ್ಲವನ್ನೂ ಮರೆಸುವಷ್ಟು ಹಿತವಾಗಿತ್ತು. ತಂದೆಯ ಆಸೆಯಂತೆಯೇ ಪರಿಣಿತಿ ಸಾಧಿಸಿದರೂ ಆ ಕ್ಷೇತ್ರದಲ್ಲಿ ಮುನ್ನಡೆಯಲಾಗದೆ ಸಂಗೀತ ಲೋಕಕ್ಕೆ ಕಾಲಿಟ್ಟಿದ್ದ ಸಂಗೀತಾಳ ಜೀವನದ ಕಥೆ ಇಲ್ಲಿದೆ.


ವಿದ್ಯಾರೇಖೆ : ಈ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಕಥೆ ಇದು. ಚಿಕ್ಕಂದಿನಲ್ಲಿ ಹಳ್ಳಿಗೆ ಬಂದಿದ್ದ ಒಬ್ಬನಿಂದ ಗೌಡರು ತಮ್ಮ ಮಕ್ಕಳ ಹಸ್ತ ಭವಿಷ್ಯ ಹೇಳಿದಾಗ ಮಗನಿಗೆ ಹಸ್ತದಲ್ಲಿ ಸರಸ್ವತಿ ನೆಲೆಸಿದ್ದಾಳೆಂದೂ.. ಮಗಳಿಗೆ ವಿದ್ಯಾರೇಖೆಯೇ ಇಲ್ಲವೆಂದು ಹೇಳಿದ್ದ ಭವಿಷ್ಯ ಸುಳ್ಳಾಗಿ ಎರಡೂ ಅದಲು-ಬದಲಾದಂತಿರುವ ಈ ಕಥೆ ಚಂದದ ಸಂದೇಶವನ್ನು ನೀಡುತ್ತಿದೆ.


ಅರಮನೆಗಿಂತ ನೆರೆಮನೆ ಲೇಸು : ಗಂಡನನ್ನು ಕಳೆದುಕೊಂಡು ಇಡೀ ವಠಾರವೇ ತನ್ನ ಸಂಸಾರ ಎಂಬಂತೆ ಬದುಕುತ್ತಿದ್ದ ಸೀತಜ್ಜಿ ಅನುಭವದ ಖನಿ, ಜ್ಞಾನದ ಭಂಡಾರ ಹಾಗೂ ತಾಳ್ಮೆಯ ಮೂರ್ತಿ. ಎಲ್ಲರೂ ಗೌರವಿಸುವಂತಹ ಉನ್ನತ ವ್ಯಕ್ತಿತ್ವದ ಸೀತಜ್ಜಿ ಈ ಕಥೆಯಲ್ಲಿ ಸೆಳೆಯುತ್ತಾಳೆ.  ಸಿದ್ಧನಿಗೆ ಹಣದ ಮದ ಏರಿದಾಗಿನ ಸಂದರ್ಭ ಹಾಗೂ ಎಲ್ಲರೆದುರು ಮುಖಭಂಗವಾಗಿದ್ದ ಸಂದರ್ಭದಲ್ಲಿ ಅಜ್ಜಿ ಅದನ್ನು ನಿಭಾಯಿಸಿ, ಪ್ರೀತಿಯಿಂದ ಮತ್ತೊಂದು ಬದುಕಿನತ್ತ ಆಶಾಕಿರಣವನ್ನು ತೋರಿದ ಕಥೆ ಇಲ್ಲಿದೆ. ಸೀತಜ್ಜಿಯಂತಹ ನೆರೆಯವರಿದ್ದರೆ ಎಷ್ಟು ಚಂದವಲ್ಲವೇ ಎನಿಸುತ್ತದೆ.


ಸಂಬಂಧಗಳು : ಯುವ ಉದ್ಯಮಿಯಾಗಿದ್ದ ಭರತನ ಸನ್ಮಾನದ ಸಂದರ್ಭದಲ್ಲಿ ಆತನ ಚಿಕ್ಕಪ್ಪ ಹಾಗೂ ಸಂಬಂಧಿಗಳೆಲ್ಲ ಆತನ ಗುಣಗಾನ ಮಾಡಿ ಆತನಿಗೆ ತಾವು ಬಹಳಷ್ಟು ಸಹಕರಿಸಿದ್ದೇವೆ ಎಂದು ಹೇಳಿದ್ದರು. ಅದರ ಸತ್ಯಾಸತ್ಯತೆ ಹಾಗೂ ಭರತನ ಯಶಸ್ಸಿನ ಕಥೆ ಇಲ್ಲಿದೆ.


ಕೀರ್ತಿಗೊಬ್ಬಳು ಮಗಳು : ಕೀರ್ತಿ ಎತ್ತರಕ್ಕೇರಿದರೂ ಅದು ಅವಳಿಗೆ ತನ್ನ ತಂದೆಯ ಪರಿಶ್ರಮದ ಫಲವೆಂಬ ಗೌರವ ಯಾವಾಗಲೂ ಇತ್ತು. ಅವಳ ತಂದೆಯೇ ಅವಳ ಹೀರೋ. ಅವಳ ತಾಯಿಯ ನೆನಪಿನ ಜೊತೆಗೆ ಕಹಿ ಅನುಭವ ಅವಳಿಗಿದ್ದರೂ ಬದುಕಿನಲ್ಲಿ ಪ್ರಬುದ್ಧಳಾಗಿ ನಡೆಯುವ ಅವಳ ನಡುವೆ ಕೀರ್ತಿಯ ತಂದೆ ಕೊಟ್ಟ ಸಂಸ್ಕಾರ ಹಾಗೂ ಕೀರ್ತಿ ಇಬ್ಬರನ್ನೂ ಇಷ್ಟವಾಗುವಂತೆ ಮಾಡುತ್ತದೆ.


ನಿಂಬೆಹಣ್ಣಿನ ಪವಾಡ : ಮಂಜುನಾಥನ ನಾಸ್ತಿಕತೆ ಆರ್ಥಿಕತೆಯಾದ ಕಥೆ ಇಲ್ಲಿದ್ದರೂ ಅದಕ್ಕೆ ಕಾರಣವಾದ ನಿಂಬೆಹಣ್ಣಿನ ಪವಾಡ ಹಾಗೂ ರಾಘವೇಂದ್ರ ಮಾಮಾರ ಕೈವಾಡವೂ ಇಲ್ಲಿದೆ. ರಾಘವೇಂದ್ರ ಮಾಮಾ ರ ಮಹಿಮೆ ಏನಿದೆ ಓದಿ ನೋಡಿ.


ಬಾಲ್ಯ ವಿವಾಹ : 14 ವರ್ಷದ ತನ್ನ ಇದು ಮಗಳಿಗೆ ಮದುವೆ ಮಾಡಲು ಹೊರಟಿದ್ದ ಶಿವಾನಂದನ ಮದುವೆಯ ಸಂಭ್ರಮ ನಿಂತಿದ್ದಕ್ಕೆ ಕಾರಣರು ಯಾರು..? ಆತ ಮಗಳ ಬಾಲ್ಯ ವಿವಾಹವನ್ನು ನೆರವೇರಿಸಲು ಹೊರಟಿದ್ದರ ಹಿಂದಿನ ಕಥೆ ಏನು..? ಬಾಲ್ಯ ವಿವಾಹದಿಂದ ತಪ್ಪಿಸಿಕೊಂಡ ಹುಡುಗಿ ರಾಣಿಯ ಬದುಕು ಮುಂದೆ ಏನಾಯಿತು ..?


ವಸಂತನಾಗಮನ : ಸಾನ್ವಿಕ ಹಾಗೂ ಸಾಗರ್ ಇಬ್ಬರೂ ಪ್ರೇಮ ವಿವಾಹವಾಗಿದ್ದರು. ಮಗುವಿನ ನಂತರ ಇಬ್ಬರ ಬದುಕಲ್ಲಿಯೂ ಬಂದ ಭಿನ್ನಾಭಿಪ್ರಾಯಗಳು, ಇಬ್ಬರನ್ನೂ ದೂರ ಮಾಡಿದ ಬಗೆ ಅವರಿಗೆ ಕಲಿಸಿದ ಪಾಠ ಯಾವುದು..? ಮತ್ತೆ ಅವರ ಬದುಕಲ್ಲಿ ವಸಂತನ ಆಗಮನ ಹೇಗಾಯಿತು..?


ತನ್ನರಿವು : 25 ವರ್ಷದ ಗಿರೀಶ ಒಂದು ಟಿವಿ ಶೋ ನೋಡಿದ ನಂತರ ಉದ್ಯೋಗವಿಲ್ಲದ, ಆತ್ಮವಿಶ್ವಾಸವಿಲ್ಲದ, ಧೈರ್ಯವಿಲ್ಲದ ತನ್ನ ಬದುಕನ್ನು ಬದಲಿಸಿಕೊಂಡ ಅರಿವಿನ ಕಥೆ ಇದು. ಪ್ರೇರಣೆಯ ಕಥೆಯೂ ಹೌದು. ಜೊತೆಗೆ ಮಕ್ಕಳಲ್ಲಿ ತಂದೆ-ತಾಯಿಗಳು ಆತ್ಮವಿಶ್ವಾಸವನ್ನು ಮೂಡಿಸಬೇಕಾದ ಅಗತ್ಯತೆಯನ್ನು ಹೇಳುತ್ತದೆ. ತಂದೆ-ತಾಯಿಗಳಿಗೂ ಇಲ್ಲೊಂದು ಪಾಠವಿದೆ.


ಬ್ರೇಕಿಂಗ್ ನ್ಯೂಸ್ : ಈಗ ಬ್ರೇಕಿಂಗ್ ನ್ಯೂಸ್ ಗಳ ಕಾಲ. ಸತ್ಯಾಸತ್ಯತೆಗಿಂತಲೂ ವಿಚಾರ ಹರಡುವುದು ಹೆಚ್ಚು. ಮೇಲಧಿಕಾರಿಯಿಂದ ಮಹಿಳಾ ಸಿಬ್ಬಂದಿಯ ಮೇಲೆ ಅತ್ಯಾಚಾರ ಎಂಬ ಬ್ರೇಕಿಂಗ್ ನ್ಯೂಸ್ ಹರಡಿದುದರ ಹಿಂದಿನ ಸತ್ಯಾಸತ್ಯತೆ ಏನಿತ್ತು..? ಪ್ರಾಮಾಣಿಕರಾದ ಈ ಇಬ್ಬರು ನೌಕರರು ಯಾರೋ ಹೆಣೆದ ಜಾಲದಲ್ಲಿ ಬಿದ್ದುದೇಕೆ..? ಇಬ್ಬರಲ್ಲಿ ಒಬ್ಬರಾದರೂ ಅಪ್ರಾಮಾಣಿಕರಾಗಿದ್ದರೆ ಪರಿಸ್ಥಿತಿ ಎಷ್ಟು ಬದಲಾಗುತ್ತಿತ್ತಲ್ಲವಾ ಎನ್ನಿಸಿತು.


ಮೋಸ : ರಾಮಸಿದ್ದ ತನ್ನ ಅನಾರೋಗ್ಯದ ನಂತರ ತಾನು ಮೋಸ ಹೋದ ಒಂದು ಕಥೆಯನ್ನು ತನ್ನ ಹೋಟೆಲಿಗೆ ಬಂದ ಗಿರಾಕಿಗಳಿಗೆ ಹೇಳುತ್ತಿದ್ದ. ಅದಕ್ಕೆ ಕಾರಣ ಮತ್ತೊಬ್ಬರು ಮೋಸ ಹೋಗಬಾರದೆಂದು. ಅವನ ಈ ಕಾಳಜಿ, ಒಳ್ಳೆಯ ಮನಸ್ಸು ಇಷ್ಟವಾಗುತ್ತದೆ. ಆತನಿಗೆ ಮೋಸವಾಗಿದ್ದು ಹೇಗೆ ಓದಿ ನೋಡಿ.


ಪ್ರೇಮಕಾವ್ಯ : ನಿಷ್ಠಾವಂತ, ಆದರ್ಶ ಶಿಕ್ಷಕರಾದ ಅಜ್ಜ-ಅಜ್ಜಿಯ ಪ್ರೇಮ ಕಾವ್ಯ ಮೊಮ್ಮಗಳಲ್ಲಿ ಅಚ್ಚಾಗುವ ಪರಿ ಹಾಗೂ ನವಿರಾದ ಈ ಪ್ರೇಮಗಾಥೆ ಓದುಗರಿಗೂ ಇಷ್ಟವಾಗುವಂತಿದೆ. 


ಸರಳ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಈ ಕಥೆಗಳು ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಹಾಗೂ ಸ್ಪೂರ್ತಿ, ಪ್ರೇರಣೆಯನ್ನು ನೀಡುವಂತಿವೆ. ಭಾಷಾ ಬಳಕೆ ಇಷ್ಟವಾಯಿತು. ಸಮಾಜದ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರೂ.. ನೀಡಬೇಕಾದ ಸಂದೇಶ ಸ್ಪಷ್ಟವಾಗಿ ಸಕಾರಾತ್ಮಕವಾಗಿದೆ. ಪರಿವರ್ತನೆಯ ಹಾದಿಗೆ ಬೆಳಕು ಚೆಲ್ಲಿರುವ ಹಲವಾರು ವೈವಿಧ್ಯಮಯ ಕಥಾವಸ್ತುಗಳನ್ನೊಳಗೊಂಡ ಕಥಾ ಸಂಕಲನದ ಚೆಂದದ ಓದು. 


~ವಿಭಾ ವಿಶ್ವನಾಥ್

ಮಂಗಳವಾರ, ಜುಲೈ 7, 2026

ಕಡೆಂಗೋಡ್ಲು ಶಂಕರ ಭಟ್ಟ (ಪುಸ್ತಕ ಯಾನ - 465)

 



ಪುಸ್ತಕದ ಶೀರ್ಷಿಕೆ : ಕಡೆಂಗೋಡ್ಲು ಶಂಕರ ಭಟ್ಟ

ಲೇಖಕರು : ಬಡೆಕ್ಕಿಲ ಕೃಷ್ಣ ಭಟ್ಟ

ಪ್ರಥಮ ಮುದ್ರಣ : 1959

ಎರಡನೇ ಮುದ್ರಣ : 1971 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 49


ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು, ಉಡುಪಿ ಇವರು ಪ್ರಕಟಿಸಿದ ನವೋದಯ ಪ್ರಚಾರ ಪುಸ್ತಕ ಮಾಲೆಯ ಪುಸ್ತಕ ಇದು. 


ಕಡೆಂಗೋಡ್ಲು ಶಂಕರ ಭಟ್ಟರ ಕುರಿತು ತಿಳಿಯಬೇಕೆಂದು ಹೊರಟಾಗ ಅವರ ಕುರಿತ ಪ್ರಾಥಮಿಕ ಮಾಹಿತಿ ಜೊತೆಗೆ ಅವರ ಕಾವ್ಯದ ರುಚಿ ತೋರಿಸಿದ ಪುಸ್ತಕವೂ ಹೌದು.


ಎಲ್ಲವಳಿವುದು, ಲೋಕನೆಂಬುದಿದು ಬರಿಸುಳ್ಳು

ಆಳಿವುದನು, ಬಿಟ್ಟಳಿಯದಿರುವ ಹುರುಳನು ಹಿಡಿದು

ಬಾಳಬೇಕೆನ್ನುವರು; ಹುಟ್ಟು ಹರಿದಳಿಯದೇ?

ಅಳಿದರಳಿಯಲಿ, ಅಳಿವು ಜನ್ಮಗಳ ತರುತಿರಲಿ

ಆಳಿಯಾಗಿ, ಗಿಳಿಯಾಗಿ, ಹುಟ್ಟೂರ ನುತಿಸುವೆನು

ಎಲರಾಗಿ, ಅಲರಾಗಿ ಹುಟ್ಟೂರನರ್ಚಿಪೆನು

ಚಿಗುರಾಗಿ, ಲತೆಯಾಗಿ. ಹುಟ್ಟೂರ ತಳ್ಕೈಪೆ 

ಜಗದೊಳೆನ್ನಯ ಬಾಳ್ಕೆ ಸಫಲವಾಯ್ತೆಂದೆಣಿಪೆ 


ಈ ಸಾಲುಗಳನ್ನು ಕಡೆಂಗೋಡ್ಲು ಶಂಕರ ಭಟ್ಟರ 'ಹುಟ್ಟುನಾಡು' ಎಂಬ ಕವಿತೆಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕವಿತೆಯಲ್ಲಿ ತನ್ನ ತಾಯ್ನುಡಿ ಹಾಗೂ ತಾಯ್ನಾಡಿಗಾಗಿ ಬದುಕುವ ಬದುಕನ್ನು ಸವೆಸುವ ತನ್ನ ಮನೋಧರ್ಮವನ್ನು ಬಿಂಬಿಸಿದ್ದಾರೆ.


ಹರಿಯುತ್ತಿಹುದು ಎನ್ನ ಮನವು ಹಿಂದೆ ಕಳೆದ ದಿನದ 

ಹಾದಿ ಹಿಡಿದು

ಪರಿಮಳಕ್ಕೆ ಹಾರುತ್ತಿರುವ ತುಂಬಿಯಂತೆ 

ಸುಳಿದು ಸುಳಿದು


ಎಂಬ ಸಾಲುಗಳನ್ನು ಉಲ್ಲೇಖಿಸಿ

ಇವರ 'ಹಳೆಯ ನೆನಹು' ಕವಿತೆ ಪಠ್ಯಪುಸ್ತಕದಲ್ಲಿತ್ತು ಎಂದು ಲೇಖಕರು ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಅವರ ಬಾಂಧವ್ಯ ಹಾಗೂ ಸಂಬಂಧದ ಕುರಿತಾಗಿ ಹೇಳುತ್ತಾರೆ. ಈ ಕುರಿತು ಓದಿ ನೋಡಿ.


ಶಂಕರ ಭಟ್ಟರು ಉಜ್ವಲ ದೇಶಾಭಿಮಾನಿಗಳಾಗಿದ್ದವರು. ಗಾಂಧೀಜಿಯ ಕರೆಗೆ ಓಗೊಟ್ಟು ಕಾಲೇಜನ್ನು ಬಿಟ್ಟು ಹೋರಾಟಕ್ಕಿಳಿದವರು. ಕೆಲ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ದಿವಂಗತ ಮುಳಿಯ ತಿಮ್ಮಪ್ಪಯ್ಯನವರು ಶ್ರೀ ಕಡೆಂಗೋಡ್ಲುರವರ ಆಪ್ತ ಬಂಧುಗಳು. ನುರಿತ ವಿದ್ವಾಂಸರಾಗಿದ್ದ ತಿಮ್ಮಪ್ಪಯ್ಯನವರ ಶಿಷ್ಯತ್ವವನ್ನು ಸ್ವೀಕರಿಸಿ ಕನ್ನಡ ಅಧ್ಯಯನವನ್ನು ನಡೆಸುತ್ತಾರೆ ಶಂಕರ ಭಟ್ಟರು . ಆಗ ವಿಶೇಷ ಪ್ರಚಾರದಲ್ಲಿದ ಮದರಾಸು ವಿಶ್ವವಿದ್ಯಾಲಯ ಏರ್ಪಡಿಸುತ್ತಿದ್ದ ವಿದ್ವಾನ್ ಪರೀಕ್ಷೆಗೆ ಕುಳಿತು ತೇರ್ಗಡೆಯಾದರು. ಸೈಂಟ್ ಆಗ್ನಿಸ್ ಕಾಲೇಜಿನಲ್ಲಿ ಕನ್ನಡ ಹೇಳಿಕೊಡುವ ಕೆಲಸ ಸಿಕ್ಕಿತು. ಅದು ಅವರ ಸೌಭಾಗ್ಯವೋ ದೌರ್ಭಾಗ್ಯವೋ ಎಂದು ಕಡೆಂಗೋಡ್ಲುರವರೇ ಹೇಳಿರುವ ಪ್ರಸಂಗ ಇಲ್ಲಿದೆ.


ಅವರದ್ದು ಮೇಲೆ ಬಿದ್ದು ಮಾತನಾಡಿಸುವ ಪ್ರವೃತ್ತಿಯಲ್ಲ. ಬದಲಾಗಿ ಅಂತರ್ಮುಖಿ. ಅಧ್ಯಯನ, ಅಭ್ಯಾಸಗಳನ್ನು ಒಪ್ಪ- ಓರಣವಾಗಿ ನಡೆಸಿಕೊಂಡು ಬರುವ ಸರಳ ಜೀವಿಯಾಗಿದ್ದವರು.

"ಬೆದರುವೆನು ಹುಸಿ ನಗೆಗೆ, ನಾಚುವೆನು ಘೋಷಣೆಗೆ"

ಎನ್ನುವ ಸಾಲು ಅವರ ಮನೋಧರ್ಮವನ್ನು ತೋರುವಂತಿದೆ ಎಂದು ಉಲ್ಲೇಕಿಸಿದ್ದಾರೆ.


'ರಾಷ್ಟ್ರ ಬಂಧು'ವಿನ ಸ್ಥಿರ ಶೀರ್ಷಿಕೆ 'ಅಲ್ಲಲ್ಲಿ ಇಷ್ಟಿಷ್ಟು' ಭಾಗಕ್ಕೆ ಕುತರ್ಕ ವಾಚಸ್ಪತಿ ಎಂಬ ಗುಪ್ತನಾಮ ಇಟ್ಟುಕೊಂಡು ಬರೆದ ಅವರು ಹಾಗೂ ತಮ್ಮ ಅಭಿಪ್ರಾಯ ಸ್ವಾತಂತ್ರ್ಯ ಹಾಗೂ ಧ್ಯೇಯ ಕಾಪಾಡಿಕೊಂಡ ಬಗೆಯನ್ನು ಹೇಳುತ್ತಾರೆ. ರಾಷ್ಟ್ರ ಬಂಧುವಿನಿಂದ ಹೊರಬಂದು ಸಂಸ್ಥೆ ಕಟ್ಟಿ, ಪತ್ರಿಕೋದ್ಯಮದಲ್ಲಿ ಮುಂದುವರಿಯಲು ಆಯ್ಕೆ ಮಾಡಿಕೊಂಡ 'ರಾಷ್ಟ್ರಮತ'ದ ದಿನಗಳೂ ಇಲ್ಲಿವೆ.


ನೇರಾನೇರ ಮಾತುಗಳು ಹಾಗೂ ನಿಷ್ಠುರ, ಬಿಚ್ಚು ಮನಸ್ಸಿನ ಅಭಿಪ್ರಾಯ ಮುಂದಿಟ್ಟು ಸರಿದಾರಿ ತೋರುವ ಅವರ ಮನಸ್ಸು ಹಾಗೂ ತೀಕ್ಷ್ಣ ಮಾತುಗಳ ಕುರಿತು ತೆರೆದಿಟ್ಟಿದ್ದಾರೆ.


ಕನ್ನಡಕ್ಕಾಗಿ, ಕನ್ನಡದ ಏಳಿಗೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ದುಡಿದ ಹಿರಿಯರಲ್ಲಿ ಪ್ರಮುಖರು. ಮುಕ್ಕಣ್ಣ, ತ್ರಿಶೂಲಿ, ಭುಕುಂಡ ಗುಪ್ತನಾಮಗಳಲ್ಲಿ ಕಥೆ ಹಾಗೂ ಪ್ರಬಂಧಗಳನ್ನು ಬರೆದಿದ್ದಾರೆ. ತಮ್ಮ ಕುತರ್ಕಗಳಿಂದ ನಗಿಸಿದ್ದಾರೆ. ತೀಕ್ಷ್ಣ ವಿಮರ್ಶೆ ಮಾಡಿದ್ದಾರೆ. ಹಣ್ಣು-ಕಾಯಿ, ಕಾಣಿಕೆ, ನಲ್ಮೆ ಮೊದಲಾದ ಕಾವ್ಯಗಳನ್ನು ಬರೆದವರು. 


ಕಾವ್ಯಕ್ಕೆ ಪ್ರಸಿದ್ಧಿಯಾಗಿರುವ ಕಡೆಂಗೋಡ್ಲು ಅವರ ಶೈಲಿ, ರಸಗಳೆರಡು ಕಾವ್ಯದಲ್ಲಿ ಅನ್ಯೋನ್ಯವಾಗಿ ಬೆರೆತು ಉತ್ಕೃಷ್ಟವಾದ ಕಾವ್ಯ ರೂಪುಗೊಂಡಿರುವ ಬಗೆಯನ್ನು ಹೇಳುತ್ತಲೇ.. ಅವರ ಕೆಲ ಚಂದದ ಕವಿತೆಗಳನ್ನು ಪರಿಚಯಿಸುತ್ತಾರೆ.


"ಗುಣಗಳಿರಬಹುದು, ಅವಗುಣಗಳೇ ಇರಬಹುದು, ಗುಣದೋಷಗಳು ಸುಟ್ಟು ಹೋದುವೈ ಚಿತೆಯೊಳಗೆ

ಹೆಣವಾದ ಮೇಲೆ ತನು ತುಲನೆ ಮಾಡುವೆಯೇಕೆ?

ಹೆಸರೊಂದೆ ವಿವಿಧತೆ ಬಹುದು ಜೀವನಕೆ"

ಸತ್ತವನ ಗುಣದೋಷದ ವಿಮರ್ಶೆ ಸಲ್ಲದು ಎಂಬಂತ ಅರ್ಥ ಬರುವ ಈ ಸಾಲುಗಳು ಅರ್ಥಪೂರ್ಣವಾಗಿದೆ.


ಕಡೆಂಗೋಡ್ಲು ಅವರು ಹೊಸತಿಗೆ ಕೈಚಾಚಿ, ಹೊಸತಿಗೆ ಹಂಬಲಿಸಿದರೂ ಹೊಸತಿನ ಹೆಸರಲ್ಲಿ ಭಾಷೆಯ ಬಿಗಿ  ಸಡಿಲಿಸುವಿಕೆ ಹಾಗೂ ಪರಿಶುದ್ಧತೆಯನ್ನು ಬಿಡುವುದನ್ನು ಸಹಿಸದವರು.


ಇವರ ಪ್ರಸಿದ್ಧ ಕವಿತೆ ಮಾದ್ರಿಯ ಚಿತೆಯ ಕುರಿತು ವ್ಯಾಖ್ಯಾನ ಮಾ ಇಲ್ಲಿದೆ.


"ನಲಿವಿಗಿಂತಲೂ.. ನೋವನ್ನು ನಿವೇದಿಸಿಕೊಳ್ಳುವುದರಲ್ಲಿ ಇವರು ಎತ್ತಿದ ಕೈ" ಎನ್ನುತ್ತಾ ಅವರ ಹೊನ್ನಿಯ ಮದುವೆ, ಮಾದರಿಯ ಚಿತೆ, ಮಸಣ, ಹಳೆಯ ನೆನಹುಗಳು ಕವಿತೆಗಳನ್ನು ಉಲ್ಲೇಖಿಸುತ್ತಾರೆ. ದೊಡ್ಡಣ್ಣ, ಅದ್ದಿಟ್ಟು, ಹೊಡೆಯುವ ಗಡಿಯಾರ ಕಥೆಗಳನ್ನು ಉದಾಹರಣೆಯಾಗಿಸುತ್ತಾರೆ.


ಧೂಮಕೇತು, ದೇವತಾ ಮನುಷ್ಯ, ಲೋಕದ ಕಣ್ಣು ಎಂಬ ಮೂರು ಕಾದಂಬರಿಗಳನ್ನು ಬರೆದಿರುವ ಕುರಿತು ಹೇಳಿ ಕಾದಂಬರಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಿಚ್ಚಿಡುತ್ತಲೇ ಕಾದಂಬರಿಗಳಲ್ಲಿ ಅವರು ಬಳಸಿರುವ ಮನೋಜ್ಞ ಭಾಷೆಯ ಅನುಭವಕ್ಕಾದರೂ ಅದನ್ನು ಓದಬೇಕು ಎಂದರೂ.. ಕಾದಂಬರಿಗಳಿಗಿಂತಲೂ ಕಾವ್ಯಕ್ಕೆ ಹೆಚ್ಚಿನ ಅಸ್ಥೆ ನೀಡುತ್ತಾರೆ.


ಹಿಡಿಂಬೆ, ಯಜ್ಞಕುಂಡ, ಗುರುದಕ್ಷಿಣೆ ನಾಟಕಗಳ ಕುರಿತು ಸಹ ಹೇಳುತ್ತಾರೆ. ಅದರಲ್ಲಿನ ಸರಸ ಮಾತುಗಾರಿಕೆಗಳು ನಾಟಕಗಳ ಕುರಿತ ಇಷ್ಟದ ಅಂಶಗಳನ್ನು ಹೇಳುತ್ತದೆ.


ಹಿಂದಿನ ಕತೆಗಳು, ಗಾಜಿನ ಬಳೆ ಮತ್ತು ಇತರ ಕಥೆಗಳು ದುಡಿಯುವ ಮಕ್ಕಳು ಅವರ ಕಥಾಗುಚ್ಚಗಳು. ಅವರ ಎಲ್ಲ ಕಥೆಗಳ ಆರಂಭ ಮತ್ತು ಅಂತ್ಯದಲ್ಲಿ ಒಂದು ವಿಶಿಷ್ಟತೆ ಇದೆ ಎನ್ನುತ್ತಾರೆ. ಆ ವೈಶಿಷ್ಟ್ಯವೇನು ಓದಿನೋಡಿ. ಅವರ ಕಲಾತ್ಮಕ ಕಥೆಗಳನ್ನು ಮೆಚ್ಚುತ್ತಾರೆ.


"ನಮ್ಮಲ್ಲಿ ಕಡೆಂಗೋಡ್ಲು ಶಂಕರ ಭಟ್ಟರಂತಹ ದೊಡ್ಡ ಬದುಕನ್ನು ನಡೆಸುವ ದೃಷ್ಟಿ ಬರಬೇಕು ಅಂತಹ ಬದುಕನ್ನು ನಡೆಸುವವರಿಗೆ ಶಾರದೆ ಒಲಿಯುತ್ತಾಳೆ, ಅವರ ನಾಲಿಗೆಯಲ್ಲಿ ನಲಿಯುತ್ತಾಳೆ. ಅವರ ಅಂತರಂಗದಲ್ಲಿ ಭಾವತರಂಗಗಳನ್ನು ಉಕ್ಕಿಸುತ್ತಾಳೆ. ಶಂಕರ ಭಟ್ಟರ ಬದುಕು ಬರಹಗಳು ನಮಗೆ ಸ್ಪೂರ್ತಿಯ ಕೇಂದ್ರವಾಗಲಿ. ಈ ಪೀಳಿಗೆಯವರಾದ ನಮಗೆ ಅದು ಅಂತ ಹ ಸ್ಪೂರ್ತಿಯನ್ನು ಕೊಡಲಿ" ಎನ್ನುವ ಮಾತುಗಳನ್ನು ಉಲ್ಲೇಖಿಸುತ್ತಾರೆ ಲೇಖಕರು. 


ಮುಂದಿನ ದಿನಗಳಲ್ಲಿ ಕಡೆಂಗೋಡ್ಲು ಶಂಕರ ಭಟ್ಟರ ಸಾಹಿತ್ಯವನ್ನು ಸವಿಯಬೇಕಿದೆ.


~ವಿಭಾ ವಿಶ್ವನಾಥ್

ಭಾನುವಾರ, ಜುಲೈ 5, 2026

ಹೆಚ್ಚಿನ ಅಂಕ (ಬೆಳಕಿಂಡಿಯ ಕತೆಗಳು - 48)

 


ಮೌಖಿಕ ಪರೀಕ್ಷೆಯಲ್ಲಿ ಗೊತ್ತಿಲ್ಲದ ಉತ್ತರಕ್ಕೆ ಗೊತ್ತಿಲ್ಲವೆಂದೇ ನೇರವಾಗಿ ಹೇಳಿದ ವಿದ್ಯಾರ್ಥಿಯನ್ನು ಕಂಡ ಶಿಕ್ಷಕಿಗೆ ಮೊದಲು ಸಿಟ್ಟು ಬಂತಾದರೂ.. "ಪ್ರಯತ್ನವಾದರೂ ಮಾಡಬಾರದೇ..? ಅದನ್ನು ಬಿಟ್ಟು ಏಕಾಏಕಿ ಗೊತ್ತಿಲ್ಲ ಎಂದು ಹೇಳುವುದೇಕೆ..?" ಎಂದು ಪ್ರಶ್ನಿಸಿದರು.

"ಸುಳ್ಳು ಹೇಳಬಾರದು. ಗೊತ್ತಿಲ್ಲದಿದ್ದರೆ ನೇರವಾಗಿ ಹೇಳಬೇಕು. ಮತ್ತೊಬ್ಬರ ಸಮಯ ವ್ಯರ್ಥ ಮಾಡಬಾರದು." ಎಂದು ಮತ್ತೊಬ್ಬರು ಟೀಚರ್ ಹೇಳಿದ್ದ ಮಾತನ್ನೇ ಪುನರುಚ್ಚರಿಸಿದ ಮಗುವನ್ನು ಕಂಡು..

 ತಡಬಡಾಯಿಸುತ್ತಾ ತನಗೆ ಗೊತ್ತಿದೆ. ಆದರೆ, ಮರೆತಿದ್ದೇನೆ ಎಂಬ ಭಾವ ಮೂಡಿಸುವ ವಿದ್ಯಾರ್ಥಿಗಳಿಗಿಂತ ಈ ಮಗು ಉತ್ತಮವೆನ್ನಿಸಿ ಉಳಿದವರಿಗಿಂತ ಒಂದು ಅಂಕ ಹೆಚ್ಚೇ ನೀಡಿದರು. ಅದು ಪ್ರಾಮಾಣಿಕತೆಗೆ ದೊರೆತ ಅಂಕವಾಗಿತ್ತು.

~ವಿಭಾ ವಿಶ್ವನಾಥ್

ಹೀಗೂ ಒಂದ್ ಕಥೆ (ಬೆಳಕಿಂಡಿಯ ಕತೆಗಳು - 47)


"ಒಂದ್ ಕಥೆ ಹೇಳಿ ಅಪ್ಪ" ಎಂದು ಪೀಡಿಸುತ್ತಿದ್ದ ಮಗಳಿಗೆ ತುಂಬಾ ಓದಿಕೊಂಡಿದ್ದ ಅಪ್ಪ ಯಾವ ಕಥೆ ಹೇಳಲಿ ಎಂದು ಬಹಳಷ್ಟು ಯೋಚಿಸಿ ನಿರ್ಧರಿಸುವಷ್ಟರಲ್ಲಿ ಮಗಳು ಮೊಬೈಲ್ ಹಿಡಿದಾಗಿತ್ತು. 


~ವಿಭಾ ವಿಶ್ವನಾಥ್