ಶನಿವಾರ, ಮೇ 30, 2026

ಮನಸ್ಸಿನಂತೆ ಮಹಾದೇವ (ಬೆಳಕಿಂಡಿಯ ಕತೆಗಳು - 27)


 "ಶುಭ ಶುಕ್ರವಾರ ಎಂದು ಸ್ಪೆಷಲ್ ಏನಿಲ್ಲ, ಎಲ್ಲಾ ವಾರದಂತೆ ಇದೂ ಒಂದು ದಿನ ಅಷ್ಟೇ.. ಈ ಇಂಟರ್ವ್ಯೂ ಕೂಡಾ ಆಗಲಿಲ್ಲ ಅಮ್ಮ" ಎಂದು ಒಬ್ಬ ಮಗ ಬಂದರೆ


"ಶುಭ ಶುಕ್ರವಾರ ಎಂದುಕೊಂಡಿದ್ದೆ, ಶುಭವೇ ಆಗಿ ಇಂಟರ್ವ್ಯೂ ಪಾಸ್ ಆಯ್ತು. ಆಶೀರ್ವಾದ ಮಾಡಮ್ಮ" ಎಂದು ಬಂದ ಇನ್ನೊಬ್ಬ ಮಗ.


ಅವಳಿಗಳಾದರೂ ಯೋಚನೆಯಲ್ಲಿ ತದ್ವಿರುದ್ಧದ ಮಕ್ಕಳಿಗೆ

"ಶುಭ- ಅಶುಭ ವಾರದ ದಿನಗಳಲ್ಲಿಲ್ಲ. ನಿಮ್ಮ ಮನಸ್ಸಿನ ಆಲೋಚನೆಯಲ್ಲಿದೆ. ಮನಸ್ಸಿನಂತೆ ಮಹಾದೇವ. ಇಬ್ಬರಿಗೂ ಒಳ್ಳೆಯದಾಗಲಿ" ಎಂದು ಹರಸಿದರು. ಇಬ್ಬರೂ ಮತ್ತಷ್ಟು ಪಾಸಿಟಿವ್ ಆಲೋಚನೆ ಜೊತೆಗೆ ಮ್ಯಾನಿಫೆಸ್ಟೇಷನ್ ಕುರಿತು ಚರ್ಚಿಸುತ್ತಿದ್ದಾರೆ ಈಗ.

~ವಿಭಾ ವಿಶ್ವನಾಥ್

ಕಾಮನಬಿಲ್ಲಿನಂತಹ ದಿನ (ಬೆಳಕಿಂಡಿಯ ಕತೆಗಳು - 26)

 


ಅವಳ ಬದುಕಲ್ಲಿ ಅಂಥದೊಂದು ದಿನವಿತ್ತು. ಮತ್ತದು ಮೆಲುಕು ಹಾಕುವಂತಹ ಕಾಮನಬಿಲ್ಲಿನಂತಹ ದಿನ. ತಾನು ಸಾಕಷ್ಟು ನೋವುಂಡು ಅತ್ತ ದಿನ ಅಂತೆಯೇ ಸಾಕಷ್ಟು ಸಂಭ್ರಮಿಸಿದ ದಿನ. 

ತನ್ನಿಷ್ಟದಂತೆಯೇ ಮಗಳು ಮಡಿಲು ತುಂಬಿ ನೋವನ್ನು ಕ್ಷಣಮಾತ್ರದಲ್ಲಿ ಮರೆಸಿದ ದಿನ. ಅಮ್ಮನಾಗಿ ಅವಳು ಮರುಜನ್ಮ ಪಡೆದ ದಿನ.

~ವಿಭಾ ವಿಶ್ವನಾಥ್

ಗ್ರೋಥ್ (ಬೆಳಕಿಂಡಿಯ ಕತೆಗಳು - 25)


ಬೇಕು ಬೇಡಗಳ ನಡುವೆ ಹೈರಾಣಾಗಿದ್ದ ನನ್ನನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದು ಹಿಂದಿನಿಂದ ಬಳಸಿದ ಪುಟ್ಟ ಕೈಗಳ ಒಡತಿಯೇ..! ಸಂಬಳ, ಮಗುವಿನ ಖರ್ಚಿನ ಚಿಂತೆಯಿಲ್ಲದಿದ್ದರೂ.. ಕೆರಿಯರ್ ಗ್ರೋಥ್ ಬೇಕೋ ಬೇಡವೋ ಎಂದು ಪದೇ ಪದೇ ಎಚ್ಚರಿಸುತ್ತಿದ್ದ ಮೇಲ್, ಮೆಸೇಜ್ ಗಳನ್ನು ಮಂಕಾಗಿಸುವಂತೆ ಮಾಡಿದ್ದು ಮುದ್ದು ಮಗಳ ಮಂದಹಾಸಭರಿತ ನೆಮ್ಮದಿಯ ನಿದ್ರೆ. ಈಗ ಅವಳ ನೆಮ್ಮದಿಯನ್ನು ದುಪ್ಪಟ್ಟಾಗಿಸಿ ಮಗಳ ಗ್ರೋಥ್ ಜೊತೆಗೆ ಅಮ್ಮನ ಗ್ರೋಥ್ ಸಹ ಆಗುತ್ತಲಿದೆ. ಕೆರಿಯರ್ ಗ್ರೋಥ್ ತಡವಾಗಬಹುದು. ಆದರೆ, ಮಗಳ ಬಾಲಲೀಲೆಗಳು, ಬೆಳವಣಿಗೆ ಕಾಯುವುದಿಲ್ಲ. ಅಂತೆಯೇ ಕಾಲವೂ..!


~ವಿಭಾ ವಿಶ್ವನಾಥ್

ನಿಗೂಢ ನಡೆ (ಬೆಳಕಿಂಡಿಯ ಕತೆಗಳು - 24)


ವಾರದಿಂದ ಕೃತಿಗೆ ತನ್ನ ಗಂಡನ ನಡೆಯ ಮೇಲೆ ಅನುಮಾನ ಮೂಡಿತ್ತು. ತಾನು ಮಲಗಿದ ನಂತರ ಪಿಸುದನಿಯಲ್ಲಿ ಫೋನ್ ನಲ್ಲಿ ಮಾತನಾಡುವುದು, ತಾನು ಹೋದಾಗ ಸುಮ್ಮನಾಗುವುದು, ಆಫೀಸ್ ಅವಧಿಗಿಂತ ಮುನ್ನವೇ ಮನೆ ಬಿಡುವುದು, ಮನೆ ಸೇರುವುದು ಲೇಟಾದ ಸಂಧರ್ಭದಲ್ಲಿ ಮಾತು ತಪ್ಪಿಸುವುದು ಹೀಗೆ.. ತನ್ನ ಹುಟ್ಟುಹಬ್ಬದ ದಿನ ಹಾರೈಸುವುದಿರಲಿ.. ಮಾತೂ ಆಡದಂತೆ ಹೊರಟಾಗ ಅವನಿಗೆ ಗೊತ್ತಾಗದಂತೆ ಹಿಂಬಾಲಿಸಿ ಹೋಗಿ ನೋಡಿದಾಗ ತನ್ನ ಆಪ್ತ ಗೆಳತಿ ಪ್ರಿಯಾ ಜೊತೆಗೆ ಮಾತಿನಲ್ಲಿ ತೊಡಗಿದ್ದು ಕಂಡಿತು. ತನ್ನ ಅನುಮಾನಕ್ಕೆ ಪುಷ್ಠಿ ದೊರೆತಂತಾಗಿತ್ತು. ಬೇಡವೆಂದುಕೊಂಡರೂ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳ ಸರಮಾಲೆಯೇ..!


ತಂದೆ - ತಾಯಿ ನೋಡಿ ಮಾಡಿದ ವಿವಾಹಕ್ಕೆ ಆಯಸ್ಸು ಇಷ್ಟೆಯೇ..?! ಎಂದು ಆಲೋಚಿಸಿ ದುಃಖ ಪಟ್ಟಳಾದರೂ.. ಆತುರದಲ್ಲಿ ಹೋಗಿ ಪ್ರಶ್ನಿಸಲಿಲ್ಲ. ಯಾರ ಬಳಿಯೂ ಈ ವಿಚಾರ ಹಂಚಿಕೊಳ್ಳಲಿಲ್ಲ. ಅವನ ಒಳ್ಳೆಯತನ ನಾಟಕವೇ ಎಂದು ಯೋಚಿಸಿದಳಾದರೂ.. ಅಂತಹ ಯಾವುದೇ ಕಪ್ಪು ಚುಕ್ಕಿಯೂ ಕಾಣಲಿಲ್ಲ. ತಾನೇ ಮಾತನಾಡಿ ಬಗೆಹರಿಸಿಕೊಳ್ಳಲು ತೀರ್ಮಾನಿಸಿಕೊಂಡು ತಳಮಳದಿಂದಲೇ ಹೊರಟಳಾದರೂ.. ಅವಳಿಗೆ ಅಂತಹ ಪ್ರಮೇಯವೇ ಬರಲಿಲ್ಲ.


ಸಂಜೆ ಕುಟುಂಬ, ಸ್ನೇಹಿತರೊಂದಿಗೆ ಸಿಕ್ಕ ಹುಟ್ಟುಹಬ್ಬದ ವಿಶೇಷ ಪಾರ್ಟಿ ಅವನ ನಿಗೂಢ ನಡೆಗೆ ಉತ್ತರ ಕೊಟ್ಟಿತ್ತು. ಆತುರಪಟ್ಟು ಆತನ ಕಣ್ಣಲ್ಲಿ ಸಣ್ಣವಳಾಗಲಿಲ್ಲವಲ್ಲ ಎಂದು ಖುಷಿ ಪಟ್ಟಳು. ಅವನ ಮೇಲಿನ ಗೌರವ, ಪ್ರೀತಿಗಳು ದುಪ್ಪಟ್ಟಾಗಿದ್ದವು. ದಾಂಪತ್ಯದಲ್ಲಿ ನಂಬಿಕೆ, ತಾಳ್ಮೆಯ ಅಗತ್ಯ ಮನದಟ್ಟಾಗಿತ್ತು.


~ವಿಭಾ ವಿಶ್ವನಾಥ್

ಹೊಸದೊಂದು ಸಂಕಲ್ಪ (ಬೆಳಕಿಂಡಿಯ ಕತೆಗಳು - 23)


"ಇಂದಿನಿಂದ ನಾನು ನಿತ್ಯವೂ ತಪ್ಪದೇ ವಾಕಿಂಗ್ ಹೋಗುವ ಸಂಕಲ್ಪ ಮಾಡುತ್ತೇನೆ" ಎಂದವನ ಮಾತಿಗೆ

"ಈ ರೀತಿಯ ಸಂಕಲ್ಪ ವಾರಕ್ಕೊಂದಾದರೂ ಇರುತ್ತಲ್ಲಾ ನಿಮ್ಮದು" ಎಂದು ಛೇಡಿಸುತ್ತಾ ಬೊಟ್ಟು ಮಾಡಿದವಳಿಗೆ

"ನೀನು ಯಾವತ್ತಾದರೂ ಹೀಗೆ ಸಂಕಲ್ಪ ಮಾಡಿ ಏನಾದರೊಂದನ್ನು ಶುರು ಮಾಡು. ಆಗ ನಿನಗೆ ಇದರ ಕಷ್ಟದ ಅರಿವಾಗುತ್ತದೆ." ಎಂದ ಹುಸಿಮುನಿಸಿನಲ್ಲಿಯೇ..


"ಒಳ್ಳೆಯದನ್ನು ಆರಂಭಿಸಲು ಶುಭ ಕಾಲಕ್ಕಾಗಿ ಕಾಯುವವಳಲ್ಲ. ಸಂಕಲ್ಪ ಮಾಡಿಯೇ ಆರಂಭಿಸುವುದಿಲ್ಲ. ಶಿಸ್ತು, ಧೃಡ ನಿಶ್ಚಯ ಮಾತಿನಿಂದಲ್ಲ.. ಮನಸ್ಸಿನಿಂದ ಬರಬೇಕು." ಎಂದವಳ ಮಾತಿನ ಜೊತೆಗೆ ದಿನವೂ ಬಿಡದೆ ಕೆಲಸದ ಜೊತೆಗೆ ಮಾಡುವ ಎಷ್ಟೋ ಅಭ್ಯಾಸಗಳನ್ನು ನೆನಪಿಸಿಕೊಂಡ. ಮನೆಯ ಹೊರಗೆ ಹಾಗೂ ಒಳಗೆ ದುಡಿಯುವುದರ ಜೊತೆಗೆ ವ್ಯಾಯಾಮ, ವಾಕಿಂಗ್, ಪುಸ್ತಕ ಓದುವುದು, ಸಂಬಂಧಗಳನ್ನು ನಿಭಾಯಿಸುವ ಪರಿ ಎಲ್ಲವನ್ನೂ ಹೇಳದೆಯೇ ಅಚ್ಚುಕಟ್ಟಾಗಿ ಮಾಡುತ್ತಿರುವ ಅವಳ ದೈನಂದಿನ ಬದುಕಿನೆದುರಿಗೆ ತನ್ನ ಸೋಮಾರಿತನದ ಹಾಗೂ ಬಾಯಿ ಮಾತಿನ ಸಂಕಲ್ಪಕ್ಕೆ ನಾಚಿಕೆಯಾಯಿತು. ಹೆಚ್ಚಿನ ಮಾತು ಬೆಳೆಸದೆ ವಾಕಿಂಗ್ ಗೆ ತಯಾರಾದ.


~ವಿಭಾ ವಿಶ್ವನಾಥ್

ಬಾಳ ಮುಂಜಾವು (ಪುಸ್ತಕ ಯಾನ - 454)



ಪುಸ್ತಕದ ಶೀರ್ಷಿಕೆ : ಬಾಳ ಮುಂಜಾವು 

ಲೇಖಕರು : ಎಂ. ಕೆ. ಜಯಲಕ್ಷ್ಮಿ 

ಪ್ರಕಾಶಕರು : ಓಂ ಶಕ್ತಿ ಪ್ರಕಾಶನ

ಪ್ರಥಮ ಮುದ್ರಣ : 1963

ನಾಲ್ಕನೇ ಮುದ್ರಣ : 2008

ಪುಟಗಳು : 144

ಬೆಲೆ : 60 ರೂ. 


ಇದು ಮನೋವೈಜ್ಞಾನಿಕ ಕಾದಂಬರಿಯ ಸಾಲಿಗೆ ಸೇರುವ ಕಾದಂಬರಿ. ಶಾಂತ ಹಾಗೂ ಶ್ರೀರಂಗ ಎಂಬ ಇಬ್ಬರು ಹೆಣ್ಣು ಮಕ್ಕಳ ವಯಸ್ಸು ಒಂದೇ ಆದರೂ ಮನೆಯಲ್ಲಿನ ವಾತಾವರಣ ಅವರನ್ನು ಯಾವ ರೀತಿ ರೂಪಿಸುತ್ತದೆ ಎಂಬುದನ್ನು ಕಾಣಬಹುದು. ಶ್ರೀಕಂಠ ಹಾಗೂ ವರದರಾಜರ ಪಾತ್ರಗಳಲ್ಲಿಯೂ ಅದನ್ನು ಕಾಣಬಹುದಾದರೂ ಹೆಣ್ಣು ಮಕ್ಕಳ ಸೂಕ್ಷ್ಮತೆಯನ್ನು ಹೆಚ್ಚಾಗಿ ಗಮನಿಸಬಹುದು.


ಪಾರ್ವತಮ್ಮ ಹಾಗೂ ಶ್ರೀಪಾದರಾಯರ ಮಗಳು ಶಾಂತ. ಏಳು ವರ್ಷದ ಶಾಂತಳಿಂದ ಕಥೆ ಶುರುವಾಗುತ್ತದೆ. ಲವಲವಿಕೆಯ ಶಾಂತ ಪ್ರತಿಯೊಂದರಲ್ಲೂ ಮುಂದು. ಪಾದರಸಮಂತಿರುವ ಅವನನ್ನು ಕಂಡರೆ ತಂದೆ ತಾಯಿಗೆ ಹೆಮ್ಮೆ. 


ಶಾಂತ, ಪದ್ಮಾ, ಜಾನಕಿ ಹಾಗೂ ಶ್ರೀರಂಗ ಕೂಡಿ ಆಟವಾಡುತ್ತಿದ್ದರು. ಇವರಿಷ್ಟೂ ಜನರ ಸ್ನೇಹಕ್ಕೆ ಭಂಗ ತಂದದ್ದು ಮೀನಾಕ್ಷಿ. ಶ್ರೀಮಂತಿಕೆಯ ಪ್ರದರ್ಶನ ಮಾಡಿಕೊಂಡು ಜಂಬ ಪಡುತ್ತಾ, ಶಾಂತಳ ಮೇಲೆ ಪೈಪೋಟಿ ಮಾಡುತ್ತಾ, ಶ್ರೀರಂಗಳನ್ನು ತನ್ನ ಜೊತೆಗೆ ಹಾಕಿಕೊಂಡು ಶಾಂತನನ್ನು ಕುಗ್ಗಿಸುವುದರಲ್ಲಿ ಮುಂದಾಗುವ ಮೀನಾಕ್ಷಿಗೆ ಶಿಕ್ಷಕಿ ಶಾರದಮ್ಮನವರಿಂದ ಒಳ್ಳೆಯ ಪಾಠವೇ ಸಿಗುತ್ತದೆ. ಶಾರದಮ್ಮನಂತಹ ಶಿಕ್ಷಕಿಯರಿದ್ದರೆ ಮಕ್ಕಳ ಮನಸ್ಸು ವೈಮನಸ್ಸಿನಿಂದ ಕೂಡಿರಲಾರದು. 


ಇಂತಹ ಯಾವ ಕೆಟ್ಟತನಗಳೂ ಶಾಂತ ಹಾಗೂ ಶ್ರೀರಂಗರನ್ನು ಬೇರ್ಪಡಿಸಲಾಗದಂತೆ ಅವರ ಸ್ನೇಹ ಸಾಗುತ್ತಿತ್ತು. ಆದರೆ, ಮೀನಾಕ್ಷಿ ಬದಲಾಗುವಂತಿರಲಿಲ್ಲ. 


ಶಾಂತಳ ಅಣ್ಣ ಶ್ರೀಕಂಠ. ಇವರಿಬ್ಬರ ಬಾಂಧವ್ಯವನ್ನು ಓದುತ್ತಿದ್ದರೆ ಆಹ್ಲಾದಮಯ. ಮನೆಯಲ್ಲಿ ಗಂಡು-ಹೆಣ್ಣು ಎಂದು ಭೇದ ಮಾಡದೆ, ಇಬ್ಬರಿಗೂ ಸಮಾನವಾದ ಪ್ರೀತಿ ಕೊಟ್ಟು ಮೇಲು-ಕೀಳುಗಳನ್ನು ತೊಡೆದು ಹಾಕಿದವರು ತಂದೆ-ತಾಯಿ. ಶಾಂತಳನ್ನು ಕಂಡರೆ ಒಂದು ಕೈ ಹೆಚ್ಚು ಪ್ರೀತಿಯೆಂದರೂ ತಪ್ಪಾಗಲಾರದು. ಶ್ರೀಕಂಠ ಹಾಗೂ ರಾಮಕೃಷ್ಣರ ಸ್ನೇಹವೂ ಸೊಗಸಾಗಿದೆ. 


ಆದರೆ, ಇಲ್ಲಿ ಶ್ರೀರಂಗಳ ಅಣ್ಣ ವರದರಾಜ್ ನ ಮುಂಗೋಪಿತನ, ಹೆಣ್ಣುಮಕ್ಕಳ ಕುರಿತ ಅಸಡ್ಡೆ, ಶ್ರೀರಂಗಳನ್ನು ಗೋಳು ಹುಯ್ದುಕೊಳ್ಳುವುದು ಎಲ್ಲವೂ ಅವನನ್ನು ಸೈಂಧವ ಎಂದು ಕರೆಸಿಕೊಳ್ಳುವಂತೆ ಮಾಡಿದ್ದವು. 


ವರದರಾಜನ ವರ್ತನೆ ಶ್ರೀರಂಗಳ ಮೇಲೆ ನೇರವಾಗಿ ಪರಿಣಾಮ ಬೀರಿತ್ತು. ಮನೆಯ ಪರಿಸರವೂ ಅದಕ್ಕೆ ಕಾರಣವಾಗಿತ್ತು. ಶ್ರೀರಂಗಳ ತಂದೆ ನಾರಾಯಣಾಚಾರ್ ಈಗಾಗಲೇ ಐದು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಹಣ್ಣಾಗಿದ್ದರು. ಶ್ರೀರಂಗಳ ನಂತರ ಇನ್ನೂ ಮೂರು ಹೆಣ್ಣಿದ್ದವು. ಮಗನಾದ್ದರಿಂದ ಅವನ ಮೇಲೆ ಅತಿ ಎನ್ನಿಸುವಷ್ಟೇ ಅಸ್ಥೆ. ಅವಳ ತಾಯಿ ಲಕ್ಷ್ಮಮ್ಮನವರು ಸಹ ಕಟುವಾಗಿ ನಡೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಈಕೆ ತನ್ನ ತಾಯಿಯೇ ಎಂದು ಅನುಮಾನ ಬರುತ್ತಿತ್ತು ಶ್ರೀರಂಗಳಿಗೆ. ಅದು ಅವಳ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತಿತ್ತು ಸಹ. 


ಸೂಕ್ಷ್ಮ ಮನಸ್ಸಿನ ಶ್ರೀರಂಗ ಮನೆಯಲ್ಲಿ ಅನಾದರ ಹೆಚ್ಚಾದಷ್ಟು ಮೊಂಡಿಯಾಗುತ್ತಾ, ಕಟುವಾಗುತ್ತಾ ಹೋಗುತ್ತಿದ್ದಳು. ಅವಳ ಮನಸ್ಸಿನ ಮೇಲೆ ಘಾಸಿಯಾಗುತ್ತಿದ್ದದ್ದು ಮನೆಯಲ್ಲಿ ಯಾರಿಗೂ ಅರಿವಾಗಲೇ ಇಲ್ಲ. ಅದರ ಬದಲಾಗಿ ಶ್ರೀರಂಗಳನ್ನು ದೂರವಿಟ್ಟು, ಶಿಕ್ಷೆ ಕೊಟ್ಟು ಸರಿ ಮಾಡಲು ನೋಡುತ್ತಿದ್ದದ್ದೇ ಹೆಚ್ಚು. 


ಶಾಂತಳ ತಾಯಿ ಶ್ರೀರಂಗಳನ್ನು ಪ್ರೀತಿಯಿಂದ ನೋಡಿ, ಆಕೆಯ ಕುರಿತು ಅಸ್ಥೆ ತೋರಿದ್ದೇ ತಪ್ಪಾಯ್ತು ಎನ್ನುವಂತೆ ಮಾಡಿಬಿಟ್ಟರು ಲಕ್ಷ್ಮಮ್ಮ. ಇದಕ್ಕೆ ಮೀನಾಕ್ಷಿಯ ಮನೆಯವರ ಪಾಲು ಸಹ ಇತ್ತು. ಆ ಪ್ರಸಂಗವಾದರೂ ಏನು..? ಓದಿ ನೋಡಿ. 


ಶ್ರೀರಂಗಳ ಹದಗೆಟ್ಟ ಮನಸ್ಥಿತಿಯ ಪರಿಣಾಮ ಆಕೆಯ ವರ್ತನೆಯ ಮೇಲಾಯಿತು. ಅದನ್ನು ಶಾಂತ ಗಮನಿಸಿದಳು ಸಹ. ಯಾರಿಗಾದರೂ ತೊಂದರೆಯಾದರೆ ಸಂತಸ ಪಡುವಷ್ಟು ಬದಲಾದಳೇ ಶ್ರೀರಂಗ..?


ಶ್ರೀರಂಗಳ ಚಿಕ್ಕಮ್ಮ ಬಂದಾಗ ಅವಳ ವರ್ತನೆ ಸೂಕ್ಷ್ಮವಾಗಿ ಅವರ ಗಮನಕ್ಕೆ ಬಂದಿತು. ಜೊತೆಗೆ ಲಕ್ಷ್ಮಮ್ಮನವರ ಬಳಿಯಲ್ಲಿ ಅವಳ ವರ್ತನೆಯನ್ನು ಹೇಳಿದರು ಸಹ, ಜೊತೆಗೆ ಸೂಕ್ಷ್ಮದ ಹುಡುಗಿಯನ್ನು ಕಾಡದಂತಿರಲು ಹೇಳಿ ಅವಳ ಮನಸ್ಸನ್ನು ಸಾಧ್ಯವಾದಷ್ಟು ಪರಿವರ್ತನೆ ಮಾಡಿ ಇನ್ನು ಮೂರು ತಿಂಗಳಲ್ಲಿ ತನ್ನ ಊರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದಳು. ಶ್ರೀರಂಗ ೪ ನಂತರದ ದಿನಗಳು ಹೇಗಿದ್ದವು..? ವರದ ಬದಲಾದನೇ..?


ಇತ್ತ ಶಾಂತಳ ಮನಸ್ಥಿತಿ ಈಗ ಪ್ರಬುದ್ಧವಾಗಿ ಬದಲಾಗುತ್ತಿತ್ತು. ಶಾಂತಳ ತಾಯಿ ಪಾರ್ವತಮ್ಮನವರು ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಊರಿನ ಶಾನುಭೋಗರಾಗಿದ್ದ ತಮ್ಮ ಅಣ್ಣ ಮಹಾಬಲಯ್ಯನವರ ಮನೆಗೆ ಹೊರಟರು. ಶಾಂತ ಅಲ್ಲಿ ಹೋದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತು..? ಶಾಂತಳ ಅತ್ತೆಗೆ ಶಾಂತಳನ್ನು ಕಂಡರೆ ಸಿಡಿಮಿಡಿಯಾಗುತ್ತಿದ್ದುದ್ದೇಕೆ..?


ಶ್ರೀಪಾದರಾಯರು ಮಹಾಬಲಯ್ಯನವರ ಟೆಲಿಗ್ರಾಂ ಅನ್ನು ಕಂಡು ಧಾವಿಸುವಷ್ಟರಲ್ಲಿ ಅವರಿಗಾಗಿ ಕಾಯುತ್ತಿದ್ದ ವಾರ್ತೆಯಾದರೂ ಏನು..?


ಶಾಂತ ಮತ್ತಷ್ಟು ತಾಳ್ಮೆ ಹಾಗೂ ಶಾಂತಿಯಿಂದ ವರ್ತಿಸಲು ಶುರು ಮಾಡಿದಕ್ಕೆ ಹಾಗೂ ಅವಳ ಬದುಕಿನ ದೊಡ್ಡ ಬದಲಾವಣೆಯಾದದಕ್ಕೆ ಅವಳ ಪ್ರತಿಕ್ರಿಯೆ ಹೇಗಿತ್ತು..?


"ಬಾಲ್ಯ ಮುಂಜಾವು, ಯೌವ್ವನ ಮಧ್ಯಾಹ್ನ, ಮುಪ್ಪು ಸಂಜೆ. 

ಎದ್ದೊಡನೆ ಒಳ್ಳೆಯ ವಿಷಯ ಕೇಳಿ, ಒಳ್ಳೆಯ ಭಾವನೆಗಳು ಮನಸ್ಸಿನಲ್ಲಿ ಉದ್ಭವಿಸಿದರೆ ಆ ದಿನವೆಲ್ಲ ಹಿತವಾಗಿರುತ್ತೆ. ದಿನಪೂರ್ತಿ ಹರ್ಷ ಉತ್ಸಾಹ ತುಂಬಿರುತ್ತೆ. ಎದ್ದ ಕೂಡಲೇ ಕಿರಿಕಿರಿ ಅಂತ ಮನಸ್ಸಿಗೆ ಅನ್ನಿಸಿದರೆ ಆ ದಿನವೆಲ್ಲ ಸಮಾಧಾನವಿರುವುದಿಲ್ಲ ಜೀವನದಲ್ಲೂ ಹಾಗೇನೆ. ಬಾಲ್ಯದಲ್ಲಿ ನಾವು ಮಕ್ಕಳಿಗೆ ಎಂತಹ ವಾತಾವರಣ ಕಲ್ಪಿಸಿ ಕೊಡುತ್ತೇವೋ ಹಾಗೆಯೇ ಅವರ ಜೀವನವೂ ರೂಪಿತವಾಗುತ್ತೆ."


ಮಕ್ಕಳ ಅನುಭವವನ್ನು ತಿದ್ದುವುದರ ಜೊತೆಗೆ ತಂದೆ ತಾಯಿಯರ ಸ್ವಭಾವ, ವರ್ತನೆಯಲ್ಲಿಯೂ ಬದಲಾವಣೆ ಬೇಕಿರುತ್ತದೆ. ಅಂತಹ ಬದಲಾವಣೆಗೆ ಅವರೂ ಸಿದ್ದರಿರಬೇಕು. ಇಲ್ಲವಾದಲ್ಲಿ ಯಾವುದೂ ಬದಲಾಗದು. 


ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಒಂದೊಂದು ನಡೆಯೂ ಅವರ ಮನಸ್ಸನ್ನು ಯಾವ ರೀತಿಯಲ್ಲಿ ಫಾಸಿಗೊಳಿಸಬಹುದು ಎಂಬ ಅರಿವು ಅತ್ಯಗತ್ಯ. ಇಲ್ಲಿನ ಪರಿಸ್ಥಿತಿಯಲ್ಲಿ ಇಬ್ಬರು ಮಕ್ಕಳು ಹಾಗೂ ಹತ್ತು ಮಕ್ಕಳ ದೊಡ್ಡ ಕುಟುಂಬದ ವ್ಯತ್ಯಾಸವಿದೆಯಾದರೂ... ಪ್ರತಿ ಮಕ್ಕಳೂ ವಿಭಿನ್ನ ಹಾಗೂ ಪ್ರತಿ ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮ ಎಂಬುದನ್ನು ಗಮನಿಸಬಹುದು. ವರ್ತಮಾನದ ದಿನಗಳಲ್ಲಂತೂ ಇದು ಮತ್ತಷ್ಟು ಸೂಕ್ಷ್ಮವಾಗಿದೆ ಎಂಬುದು ಗಮನೀಯ.


ಮಕ್ಕಳನ್ನು ತಿದ್ದಲು ಪ್ರತಿ ಸಂದರ್ಭದಲ್ಲಿಯೂ ಶಿಕ್ಷೆ ಅನಗತ್ಯ . ಎಷ್ಟೋ ಬಾರಿ ಶಿಕ್ಷೆ ಭಯ ಹುಟ್ಟಿಸುತ್ತದೆ. ಮಾತ್ರವಲ್ಲದೆ.. ಮೊಂಡುತನದ ವರ್ತನೆಗೂ ಕಾರಣವಾಗುತ್ತದೆ. ಅವರನ್ನು ತಿದ್ದುವ ನಾನಾ ವಿಧಗಳನ್ನು ನಾವು ಶಾಂತಳ ತಂದೆ-ತಾಯಿಯ ರೂಪದಲ್ಲಿ ಕಾಣಬಹುದು. ಮಕ್ಕಳಿಗೆ ಕಥೆ ಹೇಳುವ ಚಿತ್ರಣ  ಹಾಗೂ ಸ್ನೇಹಿತರೊಂದಿಗೆ ಬೆರೆತು ಆಟ ಆಡುವ ಚಿತ್ರಣಗಳು ಅವರ ಬೆಳವಣಿಗೆಗೆ ಎಷ್ಟು ಅಗತ್ಯ ಎಂಬುದನ್ನು ಮನಗಾಣಿಸುತ್ತವೆ.


1963 ರಲ್ಲಿ ಬರೆದ ಕಾದಂಬರಿಯಾದರೂ.. ಇಂದಿನ ಸಮಸ್ಯೆಗೂ ಪ್ರಸ್ತುತ.. ಪುಟ್ಟ ಮಕ್ಕಳ ತಂದೆ-ತಾಯಿಯಂದಿರು ಓದಿದರೆ ಅವರಿಗೆ ಮಾರ್ಗದರ್ಶಿಯಂತಿದೆ ಹಾಗೂ ಹೆಚ್ಚು ಕನೆಕ್ಟ್ ಆಗುತ್ತದೆ. 


~ ವಿಭಾ ವಿಶ್ವನಾಥ್

ಋಷ್ಯಶೃಂಗ (ಪುಸ್ತಕ ಯಾನ - 453)


ಪುಸ್ತಕದ ಶೀರ್ಷಿಕೆ : ಋಷ್ಯಶೃಂಗ

ಲೇಖಕರು : ಡಾ. ಲಕ್ಷ್ಮಣ ಕೌಂಟೆ 

ಪ್ರಕಾಶಕರು : ಭರತ್ ಬುಕ್ಸ್

ಪ್ರಥಮ ಮುದ್ರಣ : 2019

ಪುಟಗಳು : 326

ಬೆಲೆ : 325 ರೂ. 


ಋಷ್ಯಶೃಂಗ ಮುನಿಯ ಹೆಸರು ಮಳೆಯ ಮುನಿ ಎಂದೇ ಖ್ಯಾತಿಯಾಗಿರುವ ಹೆಸರು. ಇದು ವೇದಕಾಲಕ್ಕೆ ಸಂಬಂಧಿಸಿದ ಕಥಾವಸ್ತು. ಆದರೆ, ಪಾತ್ರಗಳು ಹಾಗೂ ಅದನ್ನು ಮರು ಸೃಷ್ಟಿಸಿರುವ ಬಗೆ ವಿಭಿನ್ನವಾಗಿದೆ. 


ಸಮಾಜದ ಜೀವನಾಡಿ ಮಳೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡರ ಸಂದರ್ಭದಲ್ಲಿಯೂ ಮಳೆಯ ಮಹತ್ವ ಹೆಚ್ಚು. ವೇದ ಕಾಲದಲ್ಲಿ ಎಲ್ಲದಕ್ಕೂ ಮಾರ್ಗ ತೋರಲು ಮಾರ್ಗದರ್ಶಕರಾಗಿ ಋಷಿ-ಮುನಿಗಳು ಕಾಣುತ್ತಾರೆ. ಇಲ್ಲಿಯೂ ಅಂತಹ ಮುನಿಗಳಿಂದಲೇ ಕಥೆಯ ಆರಂಭವಾಗುತ್ತದೆ. 


ಮಹಾಪಿತೃ ಕಶ್ಯಪನ ಸಂಸಾರವನ್ನು ಹಾಗೂ 13 ಜನ ವಿಭಿನ್ನ ಮನಸ್ಥಿತಿಯ ಹೆಂಡತಿಯರ, ಮಕ್ಕಳ ಪರಿಚಯ ಮಾಡಿಕೊಡುವುದು ಆತನ ಮಗ ವಿಭಾಂಡಕ. ಅಪ್ಪನ ಸಂಸಾರವನ್ನು ನೋಡಿ ಅಂತಹ ಸಹವಾಸವೇ ಬೇಡ ಎಂದು ತಪಸ್ಸಿನ ಋಜುಮಾರ್ಗವನ್ನು ಆಯ್ಕೆ ಮಾಡಿಕೊಂಡರೂ.. ಮೋಹ, ಕಾಮಗಳು ಬಿಡದೆ ಆತನಿಗೆ ಮಗ ಋಷ್ಯಶೃಂಗ ಜೊತೆಯಾಗುವಂತಾಯಿತು. ಅಪ್ಪ-ಮಗ ವಾಸಿಸುತ್ತಿದ್ದ ಈ ಕಾಡಿಗೆ ಯಾವ ನರಪಿಳ್ಳೆಯೂ ನುಸುಳುವ ಧೈರ್ಯ ಮಾಡಿರಲಿಲ್ಲ. ಮಗ ಬಂದ ಮೇಲಂತೂ ಅವರಿಬ್ಬರೂ ಕೌಶಿಕಿ ನದಿ ದಾಟಿ ಆಚೆ ದಡಕ್ಕೆ ಹೋದವರಲ್ಲ. ದುರ್ಗಮ ಕಾಡಿನಲ್ಲಿದ್ದ ಅವರ ಕುರಿತಾಗಿ ಹಲವು ದಂತಕಥೆಗಳಿದ್ದವು. ವಿಭಾಂಡಕನನ್ನು ತನ್ನ ಮೋಹಪಾಷಕ್ಕೆ ಸಿಲುಕಿಸಿದ ಹರಿಣ ಸುಂದರಿಯ ಆಲೋಚನೆ ಏನಿತ್ತು..? ಆ ಮಾಯಾಜಾಲಕ್ಕೆ ಆತ ಸಿಲುಕಿದ್ದೇಗೆ..? ಓದಿ ನೋಡಿ. 


ಈಗಿನ ಕಾಲದಲ್ಲಿಯಾದರೆ ಪೋಷಣೆಯ ಜವಾಬ್ದಾರಿ ಎಲ್ಲವೂ ತಾಯಿಯದ್ದೇ ಆಗಿರುತ್ತದೆ. ಆದರೆ, ಋಷ್ಯಶೃಂಗನ ಪೋಷಣೆಯ ಜವಾಬ್ದಾರಿ ವಿಭಾಂಡಕನ ಹೆಗಲೇರುತ್ತದೆ. ವಿಭಾಂಡಕ ಆತನನ್ನು ಹೇಗೆ ಬೆಳೆಸುತ್ತಾನೆಂದರೆ.. ಸ್ತ್ರೀ ಕುರಿತ ಆಲೋಚನೆಯೂ ಅವನಿಗೆ ಹುಟ್ಟದಂತೆ.. ತನ್ನನ್ನು ಹೆತ್ತವಳು ಸ್ತ್ರೀ ಎಂಬುದೂ ಆತನ ಅರಿವಿಗೆ ಬಾರದಂತೆ..! ಹಾಗೆಂದು, ಋಷ್ಯಶೃಂಗನೇನೂ ದಡ್ಡನಲ್ಲ. ತಪಸ್ಸು, ಜ್ಞಾನಸಿದ್ಧಿ, ಮಂತ್ರ ಎಲ್ಲದರಲ್ಲಿಯೂ ಕಠಿಣ ಪರಿಶ್ರಮ ತೋರಿ ಬುದ್ಧಿವಂತನಾದವನು. ಋಷ್ಯಶೃಂಗನಿಗೆ ಲೌಕಿಕದ ಆಲೋಚನೆಗಳು ಬಂದರೂ ಅದಕ್ಕೆ ಉತ್ತರ ವಿಭಾಂಡಕನಿಂದ ಸಿಗುವಂತಿರಲಿಲ್ಲ. ಅಪ್ಪನ ಅಣತಿಯನ್ನು ಮೀರದ ಮಗ, ಅಂತರ್ಮುಖಿಯಾದ ಋಷ್ಯಶೃಂಗನನ್ನು ಕಾಣಬಹುದು. 


ಬಾಲಕನಿಂದ ಯುವಕನಾಗುವ ಹಂತದವರೆಗೂ ಋಷ್ಯಶೃಂಗ ಯಾವೆಲ್ಲ ರೀತಿಯ ಭಾವನೆಗಳನ್ನು, ಜೊತೆಗೆ ಶಿಕ್ಷೆಗಳನ್ನು ಅನುಭವಿಸಿದ ಓದಿ ನೋಡಿ. ಶ್ಲೋಕಗಳು ಜೊತೆಗೆ ವ್ಯಾಖ್ಯಾನಗಳ ಮೂಲಕ ಮಗನ ಸಂದೇಹಗಳಿಗೆ ಉತ್ತರಿಸುವ ತಂದೆಯ ಉತ್ತರಗಳು ತನಗೆ ಯಾವ ರೀತಿಯ ಉತ್ತರಗಳನ್ನು ನೀಡಬೇಕೋ ಅಂತಹ ಸಮರ್ಥನೆಗಳನ್ನು ನೀಡುವುದನ್ನು ಕಾಣಬಹುದು. ಹೊರಗಿನ ಲೋಕದ ಕುರಿತು ವಿಭಾಂಡಕ ಏನು ಹೇಳಿ ಋಷ್ಯಶೃಂಗನನ್ನು ತಡೆಹಿಡಿದಿದ್ದ ಓದಿ ನೋಡಿ.


ಚಂಪಾಪುರದ ಮಹಾರಾಜ ರೋಮಪಾದ ತನ್ನ ದೇಶದಲ್ಲಿ ದಶಕದಿಂದ ಮುನಿದ ವರುಣದೇವನ ನಡೆಗೆ ಉತ್ತರ ಹುಡುಕುತ್ತಿದ್ದ. ಮಳೆ ಕೇವಲ ಬೆಳೆಯ ಹಾಗೂ ಕುಡಿಯುವ ನೀರಿನ, ಆಹಾರದ ವಿಚಾರವಲ್ಲ. ಇದರಿಂದಾಗಿ ಉಂಟಾದ ಕಳ್ಳರ ಹಾವಳಿ, ಮೈಗಳ್ಳರು, ಹೆಚ್ಚುತ್ತಿರುವ ಅರಾಜಕತೆ.. ಇದರಿಂದ ರಾಜ್ಯದಲ್ಲಿ ಉಂಟಾಗುವ ಉತ್ಪಾತಗಳನ್ನು ಕಾಣಬಹುದು. ರೋಮಪಾದನ ಆಸ್ಥಾನದಲ್ಲಿ ಜ್ಞಾನವೃದ್ದ ಮತಿವಂತ, ಸುಹರ್ಷ, ಮಹತ್ತ, ಸುಚೇತನರ ಜೊತೆಗೆ ಸಭೆ ನಡೆದರೂ ತೃಪ್ತಿ ತರುವ ಉತ್ತರಗಳು ಸಿಗಲಿಲ್ಲ. 


ರೋಮಪಾದನ ಮಹಾರಾಣಿ ವರ್ಷಿಣಿ ಆತನ ಚಿಂತೆಯ ಕಾರಣ ತಿಳಿಯುತ್ತಾಳೆ. ಮಹಾರಾಣಿ ವರ್ಷಿಣಿ ಅಯೋಧ್ಯೆಯ ಮಹಾರಾಜ ದಶರಥನ ಮೊದಲ ಪತ್ನಿ ಕೌಸಲ್ಯಳ ತಂಗಿ. ಮಕ್ಕಳನ್ನು ಪಡೆಯುವ ಭಾಗ್ಯವಿಲ್ಲದಾದಾಗ ದಶರಥ ಹಾಗೂ ಕೌಸಲ್ಯರ ಏಕೈಕ ಸಂತಾನ ಶಾಂತೆಯನ್ನು ದತ್ತು ಪಡೆದಿದ್ದರು. ಅವರಿಗೂ ಮಕ್ಕಳಾದದ್ದು ಇವರಲ್ಲಿ ಚಿಂತೆಯನ್ನು ತಂದಿತ್ತು. ಶಾಂತೆಗೆ ಈಗ ವಿವಾಹದ ವಯಸ್ಸು. ಅಳಿಯನ ರೂಪದಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ದೊಡ್ಡ ಜವಾಬ್ದಾರಿ ಹೆಗಲೇರಿತ್ತು.


ಅಂಗ ದೇಶಕ್ಕೆ ಸಂಬಂಧಿಸಿದಂತೆ ಶಾಂತೆಯ ದಾಸಿಯರಾದ ವೃದ್ಧದಾಸಿ ಸುಪರ್ಣಿಕ ಒಂದು ಕಥೆ ಹೇಳಿದರೆ, ಮಾಗಿದ ಹರೆಯದ ದಾಸಿ ಅಂಗವತಿ ಪೂರಕವಾದ ಮತ್ತೊಂದು ಕಥೆಯನ್ನು ರಸವತ್ತಾಗಿ ಹೇಳುತ್ತಾಳೆ. ಅವರಿಬ್ಬರೂ ಹೇಳಿದ ಕಥೆಗಳಲ್ಲಿ ಶಾಂತೆ ಹಲವು ದೊರೆಗಳ ಕಥೆಯನ್ನು ಕಾಣುತ್ತಾಳೆ. ರಾಜಕುಮಾರನಿಗಿಂತ ಋಷಿಕುಮಾರನನ್ನು ವಿವಾಹವಾಗಲು ಇಚ್ಚಿಸುತ್ತಾಳೆ. ಇದಕ್ಕೆ ದಶರಥ ಮಹಾರಾಜ ಹಾಗೂ ರೋಮಪಾದರ ಬದುಕಿನ ರೀತಿಯೂ ಪರೋಕ್ಷವಾಗಿ ಪ್ರಭಾವಿಸಿರುತ್ತದೆ. ಋಷಿಕುಮಾರನನ್ನು ಮದುವೆಯಾಗುವುದಾದರೆ ಮಳೆಯ ದೇವತೆಯನ್ನು ವಶವರ್ತಿಯನ್ನಾಗಿಸಿಕೊಂಡಿರುವ ಋಷ್ಯಶೃಂಗನನ್ನೇ ವಿವಾಹವಾಗು ಇದರಿಂದ ರಾಜ್ಯದ ಬರವೂ ನೀಗುತ್ತದೆ. ನಿನ್ನ ಆಸೆಯೂ ಈಡೇರುತ್ತದೆ ಎಂದು ಹೇಳಿದ ಸುಪರ್ಣಿಕೆಯ ಮಾತುಗಳಿಗೆ ಆಕೆಯ ಮನಸ್ಸು ಕಟ್ಟುಬಿದ್ದಂತೆ.. ಕನಸಲ್ಲಿಯೂ ಋಷ್ಯಶೃಂಗನನ್ನೇ ಕೈಹಿಡಿದಂತೆ ರಾಜ್ಯದ ಸಮಸ್ಯೆಯನ್ನು ಬಗೆಹರಿಸಿದಂತೆ ಕನಸು ಕಾಣುತ್ತಾಳೆ ಶಾಂತೆ.


ಆದರೆ, ಅದು ಅಷ್ಟು ಸುಲಭವಿರಲಿಲ್ಲ. ಒಂದೊಮ್ಮೆ ಶಾಂತೆಯೇ ಅದಕ್ಕೆ ಒಪ್ಪಿದರೂ ಮಹಾರಾಣಿ ವರ್ಷಿಣಿ ಒಪ್ಪುವ ಪ್ರಮೇಯವೇ ಇರಲಿಲ್ಲ.


ತ್ರಿಕಾಲಜ್ಞಾನಿ ಎಂದು ಖ್ಯಾತಿ ಹೊಂದಿದ್ದ ಜ್ಯೋತಿಷ್ಯ ರತ್ನಾಕರ ವಿದ್ವಾನ್ ವಿಷ್ಣುಶರ್ಮ ಶಾಸ್ತ್ರಿಗಳಿಂದ ರಾಜ್ಯದ ಬರಗಾಲಕ್ಕೆ ಹಿನ್ನೆಲೆ ತಿಳಿಯುತ್ತದೆ. ಅದು ಅರಮನೆಯಿಂದ ಆದ ಅಪಚಾರ. ಅದಕ್ಕಿಂತಲೂ ಮುಖ್ಯವಾಗಿ ಸಿಕ್ಕಿದ್ದು ಪರಿಹಾರ. ಅದೇ ಋಷ್ಯಶೃಂಗರನ್ನು ಕರೆತರುವುದು. ರೋಮಪಾದನ ರಕ್ತದಿಂದ ಜನಿಸಿದ ಓರ್ವರನ್ನು, ರಾಜಕುಮಾರಿಯನ್ನು ಕಳುಹಿಸಿ ಋಷಿಕುಮಾರನನ್ನು ಮೋಹದ ಕಾಲದಲ್ಲಿ ಬೀಳಿಸಿ ಕರೆತರುವ ಉಪಾಯವನ್ನು ಹೇಳಿದರಾದರೂ ಆ ಉಪಾಯವನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಿತ್ತು. ವರ್ಷಿಣಿ ಶಾಂತೆಯನ್ನು ಕಳುಹಿಸಲು ಒಪ್ಪಲೇ ಇಲ್ಲ.


ಸುಮಾರು ವರ್ಷಗಳ ಹಿಂದೆ ಕೌಶಾಂಬಿಯ ವಣಿಕನನ್ನು ವಂಚನೆಯ ಆರೋಪದ ಮೇಲೆ ಬಂಧಿಸಿ ಅವನ ಸಮಸ್ತ ಆಸ್ತಿಯಲ್ಲಿ ಹತ್ತರಷ್ಟು ಮಾತ್ರ ಸಂಸಾರ ನಿರ್ವಹಣೆಗೆ ನೀಡಿ ಉಳಿದದ್ದೆಲ್ಲವನ್ನು ರಾಜ್ಯಶಾಸನ ವ್ಯಾಪ್ತಿಗೆ ಪಡೆದುಕೊಂಡಿದ್ದರು. ಬಂಧಮುಕ್ತನಾಗಿದ್ದ ಆತ, ಮುನಿವರ್ಯರೊಂದಿಗೆ ಬಂದಿದ್ದರು. ಮುನಿಯ ಮನವಿಯನ್ನು ತಿರಸ್ಕರಿಸಿ ಕಳುಹಿಸಿದಾಗ ಅವನು ಶಪಿಸುತ್ತಾ ಹೊರಟಿದ್ದ. ಅದೇ ಇದಕ್ಕೆ ಕಾರಣವೆಂದು ಅರಿವಾಗಿತ್ತು. ಈ ಎಲ್ಲಾ ನೆನಪಿನ ಜೊತೆಗೆ ತಾಮ್ರಲಿಪ್ತಿಯ ಅರ್ಥಗುಪ್ತನ ಮಗಳು ಹೇಮಪ್ರಭೆಯ ನೆನಪು ತಳುಕು ಹಾಕಿಕೊಂಡಿತು. ನೆನಪು ಮಾತ್ರವಲ್ಲ, ಪರೋಕ್ಷವಾಗಿ ಈ ಪ್ರಸಂಗ ಅವಳ ಸುತ್ತಲೇ ಸುತ್ತುತ್ತಾ ಸಾಗುತ್ತದೆ. ರೋಮಪಾದ ನಿಗೂ ಹೇಮಪ್ರಭೆಗೂ ಇದ್ದ ಸಂಬಂಧವೇನಿತ್ತು ..?


ಹೇಮಪ್ರಭೆಯ ಗುಣಲಕ್ಷಣಗಳನ್ನು ಅರಿಯಲೆಂದು ಕಳುಹಿಸಿದ ಬ್ರಾಹ್ಮಣರು ಅಂದು ಅಸತ್ಯವನ್ನು ನುಡಿದಿದ್ದರ ಪರಿಣಾಮ ಯಾವ ರೀತಿಯಾಗಿತ್ತು.?


ಕಾಲಚಕ್ರ ಬಹಳ ಮುಂದಕ್ಕೋಡಿತ್ತು. ಈಗ ಹೇಮಪ್ರಭೆ ತನ್ನ ವೃದ್ಧದಾಸಿ ಮಕರಂದಿಕೆ ಹಾಗೂ ಮಗಳು ಓಜಸ್ವತಿಯ ಜೊತೆಯಲ್ಲಿ ಅವಳದೇ ಸಂಸಾರದಲ್ಲಿ ಮುಳುಗಿದ್ದಳು. ತಾರುಣ್ಯದ ಹೇಮಪ್ರಭೆಯ ಪ್ರತಿರೂಪದಂತಿದ್ದಳು ಓಜಸ್ವತಿ. ಅಂಗ ದೇಶದ ರಾಜಧಾನಿ ಚಂಪಾಪುರದಲ್ಲಿ ಪ್ರತಿವರ್ಷದಂತೆ ನಡೆಯುತ್ತಿದ್ದ ನಗರೋತ್ಸವದಲ್ಲಿ ನೃತ್ಯ, ಶಾಸ್ತ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಹಾಗೂ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಓಜಸ್ವತಿ ನಾಡಸುಂದರಿ ಎಂದು ಆಯ್ಕೆಯಾದಳು. ರೋಮಪಾದರ ಕೃಪಾದೃಷ್ಟಿಗೆ ಬಿದ್ದಳು. ಜೊತೆಗೆ ಶಾಂತೆ ಆಕೆಯ ಗೆಳತಿಯಂತೆ ಮಾತ್ರವಲ್ಲದೆ, ಆಕೆಯನ್ನು ಅಕ್ಕನಂತೆ ಭಾವಿಸಿ ಬಾಂಧವ್ಯ ಹೆಚ್ಚು ಮಾಡಿಕೊಂಡಳು. ಆದರೆ, ಹೇಮಪ್ರಭೆ ಮಾತ್ರ ಮಹಾರಾಜರು ಎಷ್ಟೇ ಹೇಳಿದರೂ ಅವರ ಭೇಟಿಗೆ ಸಿದ್ಧವಿರಲಿಲ್ಲ.


ಈ ನಡುವೆ ಮಳೆಗಾಗಿ ವಿಶ್ವಾಮಿತ್ರರ ಉಸ್ತುವಾರಿಯಲ್ಲಿ ಯಾಗ ನಡೆದರೂ ಮಳೆ ಬರಲಿಲ್ಲ. ವಿಶ್ವಾಮಿತ್ರರು ಹಾಗೂ ವಿಭಾಂಡಕರ ಭೇಟಿಯಾದರೂ ಅದು ಫಲಿಸಲಿಲ್ಲ. ಉಳಿದ ದಾರಿ ಎಂದರೆ ಋಷ್ಯಶೃಂಗನನ್ನು ಕರೆತರುವುದು.


ಋಷ್ಯಶೃಂಗನನ್ನು ಕರೆತರಲು ನೇಮಕವಾದದ್ದು ಓಜಸ್ವತಿ, ಇದು ಸುಲಭದ ಹಾದಿಯಾಗಿರಲಿಲ್ಲ. ಇದಕ್ಕೆ ಮಹಾರಾಣಿ ವರ್ಷಿಣಿ ಒಪ್ಪಿಗೆ ಕೊಟ್ಟದ್ದೇಕೆ..? ಹೇಮಪ್ರಭೆ ಹಾಗೂ ರೋಮಪಾದರ ನಡುವಿನ ಸಂಬಂಧ ಹೇಗಿದ್ದಿತ್ತು..? ಓಜಸ್ವತಿಯ ಜೊತೆಗೆ ಹೇಮಪ್ರಭೆ ಹಾಗೂ ಮಕರಂದಿಕೆಯರು ಅವಳಿಗಿಂದೇ ಕಟ್ಟಿಸಲಾದ ದೋಣಿಮನೆಯಲ್ಲಿ ನೆಲೆಸಲು ಹೊರಟರು. ಅಲ್ಲಿಯ ಸ್ಥಳೀಯತೆಯ ಅರಿವಿದ್ದ ಮೃಗಾಂಕಲೇಖೆ ಜೊತೆಯಾಗಿದ್ದಳು. ವಾಚಾಳಿಯಾಗಿದ್ದ ಅವಳಿಂದ ಯಾವೆಲ್ಲ ವಿಚಾರಗಳು ಹೊರಬರುತ್ತವೆ. ವಾಚಾಳಿಯಾದ ಅವುಗಳಲ್ಲಿ ಸತ್ಯವೆಷ್ಟು.. ಸುಳ್ಳೆಷ್ಟು..? ಎಂಬುದನ್ನು ಸೋಸಿ ತೆಗೆದ ಬಗೆ ಹೇಗೆ..? ಓಜಸ್ವತಿಯ ಈ ಪ್ರಯತ್ನಕ್ಕೆ ಶಾಂತೆ ಒಪ್ಪಿದಳೇ..? ಓಜಸ್ವತಿ ಶಾಂತೆಗೆ ಕೊಟ್ಟ ಮಾತೇನು..? ಓಜಸ್ವತಿಯ ಈ ಪ್ರಯತ್ನದಲ್ಲಿ ಪ್ರಕೃತಿ ಎಷ್ಟು ಸಹಕರಿಸಿತು..? 


ಹೆಣ್ಣನ್ನೇ ಕಾಣದ, ಹೆಂಗಸು ಎಂದರೆ ನಕಾರಾತ್ಮಕ ಆಲೋಚನೆಗಳನ್ನೇ ತುಂಬಿಕೊಂಡಿದ್ದ ಋಷ್ಯಶೃಂಗನ ಮನಸ್ಸನ್ನು ಪರಿವರ್ತಿಸಲು ಓಜಸ್ವತಿ ಪೂರ್ವಜನ್ಮದ ಯಾವ ಕಥೆಯನ್ನು ಹೇಳಿದಳು..?  ಆತನನ್ನು ತನ್ನಡೆ ಸೆಳೆಯಲು ಯಾವೆಲ್ಲ ತಂತ್ರ ಹೂಡಿದಳು..? ವಿಭಾಂಡಕನ ಕಣ್ಣಿಗೆ ಮಣ್ಣೆರಚ್ಚುವ ಪ್ರಯತ್ನದಲ್ಲಿ ಯಾವೆಲ್ಲ ಅಡೆತಡೆಗಳನ್ನು ಮೀರಬೇಕಾಗಿ ಬಂದಿತು..?


ನಮಗೆಲ್ಲ ಗೊತ್ತಿರುವ ಪುರಾಣದ ಕಥೆಯಂತೆ ಶಾಂತೆ ಹಾಗೂ ಋಷ್ಯಶೃಂಗರ ವಿವಾಹವಾಗುತ್ತದೆ. ಹಾಗಿದ್ದರೆ ಓಜಸ್ವತಿಯ ಗತಿ ಏನು..? ಅರಮನೆಯ ಒಳ ರಾಜಕೀಯಗಳ ಹುನ್ನಾರವನ್ನು ಇಲ್ಲಿ ತೆರೆದಿಡುತ್ತಾರೆ. ಕೌಸಲ್ಯೆಯನ್ನು ಮಾತೃರೂಪಿಯನ್ನಾಗಿ ಮಾತ್ರ ಚಿತ್ರಿಸಿಕೊಂಡಿದ್ದ ನನಗೆ ಇಲ್ಲಿನ ಕೌಸಲ್ಯೆ ಬೇರೆಯದ್ದೇ ರೂಪವಾಗಿ ಕಂಡಳು. ರಾಣಿಯರ ರಾಜಕೀಯದಲ್ಲಿ ಯಾವೆಲ್ಲ ರೀತಿಯ ಕುಟಿಲತೆಗಳು ಹಾಗೂ ಹುನ್ನಾರಗಳು ಕಾಣಬಹುದು..? ಸ್ವಾರ್ಥದ ಚಿಂತನೆಗಿಂತಲೂ ರಾಜ್ಯದ ಹಿತಾಸಕ್ತಿಯನ್ನು ಇಲ್ಲಿ ನಿಜಕ್ಕೂ ಆಲೋಚಿಸಿದವರು ಯಾರು..?


ಹುಟ್ಟಿನಿಂದ ವಿಭಾಂಡಕನನ್ನು ಹೊರತುಪಡಿಸಿ ಬೇರೆಯ ಲೋಕವೇ ಗೊತ್ತಿರದ ಋಷ್ಯಶೃಂಗ ಶಾಂತೆಯನ್ನು ಒಪ್ಪುತ್ತಾನಾ..?


ಕೆದಕಿದರೆ ಹಲವಾರು ಕಥೆಗಳ ಹಲವು ಸ್ವರೂಪಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಸ್ವಹಿತಾಸಕ್ತಿ, ಕಾಮ.. ಆ ಕ್ಷಣಕ್ಕೆ ತಮ್ಮ ರೂಪವನ್ನು ತೋರದಿದ್ದರೂ ಮುಂದೆ ಯಾವೆಲ್ಲಾ ದೊಡ್ಡ ಬದಲಾವಣೆಗೆ ಮೂಲವಾಗಿರುತ್ತವೆ ಎಂಬುದನ್ನು ಇಲ್ಲಿ ಕಾಣಬಹುದು.


ಋಷ್ಯಶೃಂಗನಿಂದ ಮಳೆ ಬಂದಿತ್ತು. ಬದಲಾವಣೆ ಬಂದಿತು. ಅಂತಯೇ ಕೆಲವು ನಾಶವೂ ಉಂಟಾಯಿತು. ಕೆಲವು ಒಳ್ಳೆಯ ಬದಲಾವಣೆಗಾಗಿ ಅದರಿಂದ ಉಂಟಾಗುವ ಕೆಟ್ಟದ್ದನ್ನು ಸಹಿಸಿಕೊಳ್ಳಲು ಸಿದ್ಧವಿರಬೇಕು ಎನ್ನುವ ಅಂಶವನ್ನು ಇಲ್ಲಿ ಕಾಣಬಹುದು.


ಕಲ್ಪನೆ, ನಂಬಿಕೆ, ಪೌರಾಣಿಕತೆ ಎಲ್ಲವೂ ಹದವಾಗಿ ಬೆರೆತಿರುವ ಕಾದಂಬರಿಯ ಓದು ಇದು. 

~ವಿಭಾ ವಿಶ್ವನಾಥ್

ಮಿಂಚು ಮತ್ತು ಮಳೆ (ಪುಸ್ತಕ ಯಾನ - 452)


ಪುಸ್ತಕದ ಶೀರ್ಷಿಕೆ : ಮಿಂಚು ಮತ್ತು ಮಳೆ

ಲೇಖಕರು ಮತ್ತು ಪ್ರಕಾಶಕರು : ದಿವ್ಯಾ ಕಾರಂತ್ 

ಪ್ರಥಮ ಮುದ್ರಣ : 2021

ಪುಟಗಳು : 108

ಬೆಲೆ : 120 ರೂ. 


ಲೇಖಕಿ ದಿವ್ಯಾ ಕಾರಂತ್ ಅವರು ಮೂಲತಃ ಚಿಕ್ಕಮಗಳೂರು ಕೊಪ್ಪದ ಹತ್ತಿರದ ಬಸರೀಕಟ್ಟೆಯವರು. 'ಮಲೆನಾಡ ಗರ್ಭ ಹಾಗಾಗಿ ಮಿಂಚು ಮತ್ತು ಮಳೆ ಸ್ವಾಭಾವಿಕ' ಎನ್ನುತ್ತಾರೆ ಪ್ರೀತಿಯಿಂದ ಮುನ್ನುಡಿ ಬರೆದಿರುವ ಸೇತುರಾಮ್ ಅವರು. ಲೇಖಕಿಯವರ ಮಲೆನಾಡಿನ ಪರಿಸರವನ್ನು ಇಲ್ಲಿನ ಕಥೆಗಳುದ್ದಕ್ಕೂ ನಾವು ಕಾಣಬಹುದಾಗಿದೆ.


ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ. 


ವಿಜಯಲಕ್ಷ್ಮಿಯ ಜಡೆ : ಮಲೆನಾಡಿನ ಮಳೆಯ ಚಿತ್ರಣದ ದೃಶ್ಯಾವಳಿ ಕಾಣುತ್ತದೆ. ಆರು ದಿನಗಳ ನಿರಂತರ ಮಳೆಯಿಂದ ಅಸ್ತವ್ಯಸ್ತವಾದ ಅವರ ಬದುಕು, ಹಳ್ಳ-ಕೊಳ್ಳಗಳೆಲ್ಲ ತುಂಬಿ ಅವುಗಳನ್ನು ದಾಟಲು ಹಾಕಿರುವ ಸಂಕಗಳು ಮುಚ್ಚಿ ಹೋಗುವಂತೆ ಹರಿಯುತ್ತಿದ್ದ ಮಳೆ ನೀರು. ಇಂತಹ ದಿನಗಳಲ್ಲಿ ಮಳೆಯಲ್ಲಿಯೇ ಶಾಲೆಗೆ ಹೋಗುವ ಮಕ್ಕಳು. ಇಲ್ಲಿ ಮುಖ್ಯವಾಗಿ ಇಬ್ಬರು ಅಣ್ಣ-ತಂಗಿಯರ ಬಾಂಧವ್ಯ, ಕಿತ್ತಾಟ, ಕೋಳಿ ಜಗಳ ಎಲ್ಲವೂ ಆಪ್ತವಾಗುತ್ತದೆ. ಅಣ್ಣನ ತರಗತಿಯವಳೇ ಆದ ವಿಜಯಲಕ್ಷ್ಮಿಯಿಂದ ಅಣ್ಣನ ಕುರಿತು ತಿಳಿದುಕೊಳ್ಳುತ್ತಿದ್ದವಳಿಗೆ ವಿಜಯಲಕ್ಷ್ಮಿಯ ಜಡೆಯೂ ಅಷ್ಟೇ ಕಣ್ಣಿಗೆ ಕಟ್ಟಿದಂತಿತ್ತು. ಕಥೆಯ ಕೊನೆಯಲ್ಲಿ ಬರುವ ವಿಜಯಲಕ್ಷ್ಮಿಯ ಜಡೆ ಮಳೆಯ ಅಬ್ಬರದಲ್ಲಿ ಮರೆಯಲು ಆಗದಂತೆ ಮಾಡುವುದೇಕೆ ಓದಿ ನೋಡಿ.


ಭಾಗೀರಥಿ : ಅಜ್ಜಿ ಮನೆಗೆ ಹೋದಾಗಲೆಲ್ಲ ಅಜ್ಜಿಯೊಡನೆ ಜಗಳವಾಡಿ, ಅಪ್ಪ-ಅಮ್ಮನಿಂದ ಬಯ್ಯಿಸಿಕೊಳ್ಳದಿದ್ದರೆ ಬೇಸಿಗೆ ರಜೆ ಪರಿಪೂರ್ಣವಾಗುತ್ತಿರಲಿಲ್ಲವಂತೆ. ಹೀಗಿದ್ದ ಅಜ್ಜಿಯ ಹೆಸರು ಭಾಗೀರಥಿ. ಅಜ್ಜಿಗೆ ಗಂಡು ಮಕ್ಕಳ ಮೇಲೆ ಪ್ರೀತಿ ಜಾಸ್ತಿ. ಅದನ್ನು ಪ್ರಶ್ನಿಸಿ ಅವರಿಗೆ ಕೋಪ ತರಿಸಿ ಜಗಳವಾಡುತ್ತಿದ್ದರ ಜೊತೆಗೆ ಅಜ್ಜಿಯ ರಾಜ್ಯಭಾರ ಹಾಗೂ ಆ ರಾಜ್ಯಭಾರದಲ್ಲಿ ಇಡೀ ಮನೆಯ ಚಿತ್ರಣ ಕಾಣುತ್ತದೆ.

'ಗಟ್ಟಿ ಇರಬೇಕು, ಒಳಗೂ ಹೊರಗೂ, ಯಾರೇ ಬಂದ್ರೂ, ಬಾರಿಸಿ ವಾಪಸ್ ಕಳಿಸೋ ಹಂಗಿರ್ಬೇಕ್' ಎನ್ನುವ ಅಜ್ಜಿಯ ಮಾತಿನ ಹಿಂದಿದ್ದ ಮರ್ಮವೇನು..?

'ಇಷ್ಟೊತ್ತು ದೇವಿಯಾಗಿದ್ದ ಅಜ್ಜಿ, ಮತ್ತೆ ಮಾಮೂಲಿನಂತೆ ಚೌಡಿಯಾಗುವ ಲಕ್ಷಣಗಳು ಕಾಣಿಸತೊಡಗಿದವು' ಎಂಬ ಈ ಮಾತುಗಳೇ ಕಥೆಯ ಸಾರವನ್ನು ಹಿಡಿದಿಟ್ಟಿವೆ.


ಭೋಜರಾಜ : ಪ್ರೀತಿಯ ಕರು ಭೋಜರಾಜನ ಲೀಲೆಗಳು ಮಾತ್ರ ಸಾಲದು ಎಂಬಂತೆ... ಅದು ಕಲಾತ್ಮಕವಾಗಿ ಕಟ್ಟಿಸಿದ 12 ಅಡಿ ಆಳದ ಟ್ಯಾಂಕಿನ ಒಳಗೆ ಬಿದ್ದು ನೀರಿನಲ್ಲಿ ತೇಲುತ್ತಿರುವಾಗ ಭೋಜನನ್ನು ಎತ್ತಲು ಬಂದ ನಾಗೇಂದ್ರನ ಕಥೆ, ಅಲ್ಲಲ್ಲ ಅವರಿಬ್ಬರ ದೊಂಬರಾಟದ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ.


ಗಣಿತ ಸುಲಭ! : ಮೇರಿ ಟೀಚರ್ ಬಹಳ ಶಿಸ್ತಿನ, ಬಹಳ ಕೋಪದ ಟೀಚರ್. ಎಂತಹ ದಡ್ಡರ ತಲೆಗೂ ಪಾಠ ತೂರಿಸುತ್ತಾರೆಂದು ಪ್ರಸಿದ್ಧಿ ಪಡೆದಿದ್ದವರು. ಗಣಿತದ ಟೀಚರ್ ಆಗಿದ್ದವರ ಕುರಿತು ಅಣ್ಣ ಹೇಳಿದ ಮೇಲಂತೂ ಇನ್ನೂ ಭಯ ಆವರಿಸಿತ್ತು. ಹೀಗಾಗಿ ಗಣಿತದ ಪಲಾಯನ ಆರಂಭವಾಗಿತ್ತು. ಪ್ರೀತಿಯಿಂದ ಹೇಳಿಕೊಟ್ಟಾಗ ಏನನ್ನು ಬೇಕಾದರೂ ವಿದ್ಯಾರ್ಥಿಗಳು ಕಲಿಯುತ್ತಾರೆ. ಹಾಗೆ ಮೇರಿ ಟೀಚರ್ ಹೇಳಿಕೊಟ್ಟ ಮಂತ್ರ ಒಂದು ಗಣಿತವನ್ನು ಸುಲಭವಾಗಿಸಿತೇ..? ಮಂತ್ರಕ್ಕೆ ಧನ್ಯವಾದ ಅರ್ಪಿಸಲು ಹೋದವಳಿಗೆ ಮೇರಿ ಟೀಚರ್ ಏನೆಂದರು..?


ರಾವಣಾಯಣ : ಅಪ್ಪನ ಹಳೆಯ ವಿದ್ಯಾರ್ಥಿಗಳು ಖುದ್ದಾಗಿ ಬಂದು, ತಾವೇ ರಾಮಾಯಣ ಪ್ರದರ್ಶಿಸುತ್ತಿರುವುದರಿಂದ ಜೊತೆಗೆ ಬಹಳ ತಾಲೀಮು ಮಾಡಿಕೊಂಡಿರುವುದರಿಂದ ತಪ್ಪದೇ ಬರಬೇಕೆಂದು ಕೇಳಿಕೊಂಡಿದ್ದಕ್ಕೆ ಮನೆಯವರೆಲ್ಲರೂ ದೇವಸ್ಥಾನದ ರಂಗಮಂದಿರಕ್ಕೆ ಹೋದರು. ರಾಮಾಯಣವನ್ನು ತಲೆಕೆಳಕು ಮಾಡಿದವರ ಆಟಕ್ಕೆ ಯಾರ್ಯಾರ ಪ್ರತಿಕ್ರಿಯೆ ಹೇಗಿತ್ತು..? ಅಮ್ಮಿಗೆ ರಾವಣ ಗೆದ್ದಿದ್ದರಲ್ಲಿ ಯಾವ ತಪ್ಪೂ ಕಾಣಲಿಲ್ಲವೇಕೆ..? ರಾಮಾಯಣ ಹೋಗಿ ರಾವಣಾಯಣ ಆದದ್ದನ್ನು ಓದಿ ನೋಡಿ.


ಕೆರೆಯ ನೀರನು ಕೆರೆಗೆ ಚೆಲ್ಲಿ : ಅಮ್ಮನ ಪ್ರಾಣಿ ಪ್ರೀತಿಯ ಜೊತೆಗೆ ಪ್ರತಿಯೊಂದಕ್ಕೂ ಪ್ರೀತಿಯಿಂದ ಹೆಸರಿಟ್ಟು ಮನೆಯವರಂತೆಯೇ ಅವುಗಳನ್ನು ಮಾತನಾಡಿಸುವ ಅಮ್ಮನ ಪರಿ ಹಾಗೂ ಕೆರೆ ಹಾವು ಬಂದಾಗ ಅಮ್ಮನ ಶಾಂತತೆ ಜೊತೆಗೆ ಇವರಿಗೆ ಹಾವಿನ ಭಯ.. ರಸವತ್ತಾಗಿ ಸಾಗುವ ಪ್ರಸಂಗವಿದು. ಅಣ್ಣ-ತಂಗಿಯ ಮಾತುಕತೆಗಳು ನೈಜವಾಗಿವೆ.


ಪೊರಕೆ ಪ್ರೀತಿ : ಪೊರಕೆ ಪ್ರೀತಿ ಎಂದ ಕ್ಷಣ ಕಸಗುಡಿಸುವ ಪೊರಕೆಯ ಕುರಿತ ಪ್ರೀತಿ ಇದಿರಬಹುದೇ ಎಂದೆನಿಸಿದರೂ ಇದು ಹಾಗಲ್ಲ. ಇದ್ದ ಬೆರಳೆಣಿಕೆಯ ಗೆಳತಿಯರ ನಡುವಲ್ಲಿ ಆಪ್ತವಾಗಿದ್ದ, ಪ್ರೀತಿಯ ಮನೆಗೆ ಹೋದ ಪ್ರಸಂಗ ಜೊತೆಗೆ ಅಲ್ಲಿ ಎಲ್ಲರೊಡನೆ ಬೆರೆತಾಗ ಪ್ರೀತಿಯನ್ನು ಛೇಡಿಸುವ ಪರಿ.. ಹಾಸ್ಯದಿಂದ ಗಂಭೀರತೆಗೆ ಹೊರಳುವ ಪ್ರಸಂಗಕ್ಕೆ ಪ್ರೀತಿಯ ತಂದೆಯಿಂದ ಸಿಕ್ಕ ಉತ್ತರವೇನು..? ಅಷ್ಟಕ್ಕೂ ಪ್ರೀತಿ ಪೊರಕೆ ಪ್ರೀತಿ ಆದದ್ದು ಏಕೆ..?


ವಾಂಛೆ! : ಆ ಮನೆ ಬಗ್ಗೆ ಇದ್ದ ವಾಂಛೆಯ ಜೊತೆಗೆ ಆ ಹೆಂಗಸಿನ ಬಗ್ಗೆಯೂ ಕುತೂಹಲ. ಯಾರೆಂಬುದೇ ಗೊತ್ತಿಲ್ಲದಿದ್ದರೂ.. ಶಾಲೆಯಲ್ಲಿ ಸ್ನೇಹಿತರು, ನೆಂಟರು ಮಾತಾಡಿದ್ದನ್ನು ಕೇಳಿ ಕುತೂಹಲವಂತೂ ಇತ್ತು. ಕುತೂಹಲಗಳೇನು ಎಂಬುದನ್ನು ಆಕೆಯನ್ನು ವರ್ಣಿಸುವುದರ ಜೊತೆಗೆ ಆ ಮನೆಯನ್ನು ವರ್ಣಿಸುತ್ತಾ ಸಾಗುತ್ತಾರೆ. ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತದೆ. ಹಾಗೆ ಆ ಮನೆಯ ಆಕರ್ಷಣೆಯೂ ಬದಲಾಗಿತ್ತು. ಬಾಲ್ಯ ಕರಗಿತಲ್ಲ ಅನ್ನೋ ಸಾಕ್ಷಾತ್ಕಾರ ಆದ ಘಳಿಗೆಗಳ ಚಿತ್ರಣವಿಲ್ಲಿದೆ.


ಆಶಾ : ಮೂವರು ಗೆಳತಿಯರ ಆಪ್ತತೆಯ ಚಿತ್ರಣದಲ್ಲಿ ಇವರು ಝೀಮಾ ಮತ್ತು ಆಶಾ ಕಾಣಿಸಿತ್ತಾರೆ. ಅಂಗನವಾಡಿಯಿಂದ ಗೆಳತಿಯರಾಗಿದ್ದವರ ಸ್ನೇಹ ಗಾಢವಾದ ಬಗೆ, ಮೂವರ ವಿಭಿನ್ನ ಸ್ವಭಾವಗಳು ಹೊಂದಿಕೊಂಡು ಒಬ್ಬರಿಗೊಬ್ಬರು ಹೆಗಲಾಗುವ ಪರಿ ಕಾಣುತ್ತದೆ. ಇವರಿಬ್ಬರ ಕುರಿತಾಗಿ ಆಶಾ ತೋರಿಸುತ್ತಿದ್ದ ಅವ್ಯಕ್ತವಾದ ಒಲವು.. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯ ದಿನಗಳು, ಕಾಲೇಜಿನ ಸಂದರ್ಭದಲ್ಲಿ ಮೂವರು ಮೂರು ದಿಕ್ಕಾದ ನಂತರ ಆಶಾಳ ಮನೆಯಲ್ಲಿ ದೂರವಾಣಿ ವ್ಯವಸ್ಥೆ ಇಲ್ಲದ್ದರಿಂದ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದ್ದು... ಆಶಾ ಕಾಲೇಜಿಗೆ ಹೋಗದೆ ಕೆಲಸಕ್ಕೆ ಸೇರಿದ್ದು, ಇದೆಲ್ಲವೂ ಮಾಮೂಲು ಎಂದುಕೊಳ್ಳುವಷ್ಟರಲ್ಲಿ ಆಶಾಳ ಕುರಿತು ತಿಳಿಯುವ ಸತ್ಯ ಬೆಚ್ಚಿ ಬೀಳಿಸಿ, ನಮ್ಮಲ್ಲೂ ಆಶಾಳನ್ನು ಪಡಿಮೂಡಿಸುತ್ತದೆ.


ಮಿಂಚು ಮತ್ತು ಮಳೆ : ಮನವನ್ನು ಹಚ್ಚ ಹಸುರಾಗಿಸುವ ಪ್ರೇಮ ಕಥೆಯೊಂದು ಇಲ್ಲಿದೆ. ಮೌನವೇ ಪ್ರೇಮವೇ ಅಥವಾ ಪ್ರೇಮವೇ ಅಷ್ಟು ಮೌನವಾಗಿತ್ತೇ...? ಹೇಳದೆಯೇ ಕೇವಲ ಮನದ ಮಾತುಗಳ ವಿನಿಮಯವಾಗಿ ಪ್ರೇಮ ಇಷ್ಟು ಗಾಢವಾಗಬಹುದಾ..? ಮಳೆಯ ಆಪ್ತತೆಯಲ್ಲಿ ಮನಸ್ಸಿನ ಭಾವಗಳು ಹಾಗೂ ಮನಸ್ಸಿನ ಮಾತುಗಳನ್ನು ತೆರೆಯುತ್ತಾ ಹೋಗುವ ಪರಿ ಪ್ರೇಮ ಕಥೆಯೊಂದನ್ನು ನಮ್ಮ ಮನದಲ್ಲಿ ಬಿತ್ತಿ ಹೋಗುತ್ತದೆ. ಮಳೆ ಹಾಗೂ ಮಳೆಯ ಸಂಕೇತಗಳಿಂದಲೇ ಪ್ರೇಮ ಕಥೆಯೊಂದನ್ನು ಹೀಗೂ ಹೆಣೆಯಬಹುದಾ ಎನ್ನಿಸಿತು.


ಈ ಕಥಾ ಸಂಕಲನದ ಅರ್ಪಣೆಯನ್ನು ಬಾಲ್ಯದ ಅವಿನಾಭಾವ ಭಾಗವಾದ ನನ್ನ ಅಣ್ಣ ರಾಕೇಶನಿಗೆ ಎಂದು ಅರ್ಪಿಸಿದ್ದಾರೆ. ಇಲ್ಲಿನ ಕತೆಗಳಲ್ಲಿ ಅಣ್ಣ-ತಂಗಿಯರ ಆಪ್ತತೆ, ಗಾಢ ಬಾಂಧವ್ಯ, ಕೋಳಿ ಜಗಳ, ಒಂದಾಗುವಿಕೆ ಎಲ್ಲವೂ ಬಹಳ ನೈಜವಾಗಿ ಮೂಡಿಬಂದಿದೆ.


ಇಲ್ಲಿ ಬರುವ ಪಾತ್ರ ಮತ್ತು ಸನ್ನಿವೇಶಗಳು ಕಾಲ್ಪನಿಕ ಎಂದಿದ್ದಾರಾದರೂ.. ಮುಖ್ಯ ಪಾತ್ರಗಳಿಗೆ ಹೆಸರನ್ನು ನೀಡಿದೆ ಬಾಂಧವ್ಯಗಳ ಕರೆಯನ್ನು ಬಳಸಿರುವುದು ನೈಜ ಘಟನೆ ಎನ್ನುವಂತೆಯೂ.. ಇದು ನಮ್ಮದೇ ಕತೆ ಎನ್ನುವಂತೆಯೂ ಅನ್ನಿಸುವಂತೆ ಮಾಡುತ್ತದೆ. ಗೆಳೆತನದ, ಬಾಲ್ಯದ, ಮಲೆನಾಡಿನ ಪರಿಸರದ ಚಿತ್ರಣಗಳು ಯಾವುದೋ ಸಹಜವಾದ ಘಟನೆಯ ತುಣುಕನ್ನು ಕಣ್ಮುಚ್ಚಿ ಆಸ್ವಾದಿಸುವಂತೆ ಮಾಡುತ್ತದೆ. ಸಹಜವಾದ ಹಾಗೂ ನೈಜವಾದ ಸನ್ನಿವೇಶಗಳು ಈ ಓದನ್ನು ಬಹಳ ಆಪ್ತವಾಗಿಸಿತು. ವಿಭಿನ್ನ ಓದಿನ ಹುಡುಕಾಟದಲ್ಲಿರುವವರು ಓದಿ ನೋಡಿ.


~ ವಿಭಾ ವಿಶ್ವನಾಥ್

ನಭದ ನಕ್ಷತ್ರ (ಪುಸ್ತಕ ಯಾನ - 451)



ಪುಸ್ತಕದ ಶೀರ್ಷಿಕೆ : ನಭದ ನಕ್ಷತ್ರ

ಲೇಖಕರು : ಹೆಚ್. ಕೆ ಅನುಸೂಯ ಸಂಪತ್

ಪ್ರಕಾಶಕರು : ವಿಕ್ರಂ ಪ್ರಕಾಶನ

ಪ್ರಥಮ ಮುದ್ರಣ : 1994


ಇದು ವಸಂತದ ಚಿಗುರು ಮತ್ತು ನಭದ ನಕ್ಷತ್ರ ಎಂಬ ಎರಡು ಕಾದಂಬರಿಗಳ ಸಂಯುಕ್ತ ಸಂಪುಟ. ನಾನೀಗ ಆಯ್ಕೆ ಮಾಡಿಕೊಂಡಿರುವ ಕಾದಂಬರಿ ನಭದ ನಕ್ಷತ್ರ.


ಇಂದಿರಾ ರಾವ್ ಅವರು 'ವಿವಾಹ ಸದನ' ಸ್ಥಾಪಿಸಿದಾಗಿನಿಂದ ಹಲವಾರು ಯುವಕ ಯುವತಿಯರನ್ನು ನೋಡಿದ್ದರೂ.. "ವಿಧವೆಯನ್ನು ಮದುವೆಯಾಗಲು ಇಚ್ಚಿಸುತ್ತೇನೆ" ಎಂದು ಬರೆದಿದ್ದ ವಿಭಿನ್ನ ವ್ಯಕ್ತಿಯನ್ನು ಭೇಟಿಯಾಗಿ ಅವನ ಮನದ ಮಾತನ್ನು ತಿಳಿದುಕೊಳ್ಳುತ್ತಿದ್ದರು. ಹಾಗೆ ಆಶಿಸಿದ್ದ ವ್ಯಕ್ತಿ ಪ್ರಸಾದ್. ತಂದೆ-ತಾಯಿ ಇಲ್ಲದ, 35 ವರ್ಷ ವಯಸ್ಸಿನ ಪದವೀಧರನಾಗಿದ್ದ ಆತನಿಗೆ ಆಸ್ತಿಯೂ ಇರಲಿಲ್ಲ. ಖಾಸಗಿ ಕಂಪನಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. 


ಇಂದಿರಾ ರಾವ್ ಅವರಿಗೆ ಪ್ರಸಾದ್ ನೋಡಲು ಸ್ಪುರದ್ರೂಪಿಯಾಗಿ ಹಾಗೂ ಸದ್ಗುಣವಂತನಾಗಿ ಕಂಡು ಅವರ ಮನಸ್ಸಿನಲ್ಲಿ ಆತನಿಗೆ ತಕ್ಕ ಹುಡುಗಿ ಪ್ರಭಾ ಎಂದೆನಿಸಿತು. ಅವರ ನೆರೆಮನೆಯವರೇ ಆಗಿದ್ದ ಪ್ರಭಾಳನ್ನು 10 ವರ್ಷದವಳಾಗಿದ್ದಾಗಿನಿಂದಲೂ ಕಂಡಿದ್ದರು. ವಿದ್ಯಾವಂತ, ಶ್ರೀಮಂತ, ಸ್ಫುರದ್ರೂಪಿ ಗಂಡನನ್ನು ಪಡೆದ ಪ್ರಭಾಳ ಪುಣ್ಯ ಅವಳ ಬಾಳಿನಲ್ಲಿ ಉಳಿದದ್ದು ಕೇವಲ ಐದು ವರ್ಷವಷ್ಟೇ.. ಎರಡು ವರ್ಷದ ಗಂಡು ಮಗು ನವೀನ್ ತಾಯಿಯಾಗಿದ್ದ ಅವಳು ಈಗ ನೋವನ್ನು ನುಂಗಿ ಮಗನಿಗಾಗಿ ಬದುಕುತ್ತಿದ್ದಳು. ಅವಳ ಬದಲಾದ ಬದುಕನ್ನು ನೋಡಿ ಮರುಗುತ್ತಿದ್ದವರಲ್ಲಿ ಇವರೂ ಒಬ್ಬರು. 


ಈಗ ಪ್ರಸಾದನ ಮಾತಿನಿಂದ, ಪ್ರಭಾಳ ಮರು ವಿವಾಹವಾದರೆ ಎಂಬ ಆಶಾಕಿರಣದಿಂದ ಅವಳ ಜೊತೆ ಮಾತನಾಡಿದರು. ಆದರೆ, ಅವಳು ಆಸಕ್ತಿ ತೋರಲಿಲ್ಲ. ಬಿ.ಎಸ್ಸಿ ಆಗಿದೆ. ಹೇಗಾದರೂ ಕೆಲಸ ಹುಡುಕಿಕೊಂಡು ಜೀವನ ರೂಪಿಸಿಕೊಳ್ಳುವೆ ಎಂದೇ ಹೇಳಿದ್ದಳು. ಮೊದಲ ಪತಿ ರಾಜುವನ್ನು ಮರೆಯಲು ಅವಳಿಗೆ ಸಾಧ್ಯವಾಗಿರಲಿಲ್ಲ. ಅಲ್ಲದೆ, ಅಪಾರ ಪ್ರೇಮ ಕೊಟ್ಟಿದ್ದ ಗಂಡನ ಜಾಗದಲ್ಲಿ ಹಾಗೂ ಮಗನ ತಂದೆಯಾಗಿ ಬೇರೆಯವರನ್ನು ಊಹಿಸಿಕೊಳ್ಳಲು ಅವಳಿಗೆ ಇಷ್ಟವಿರಲಿಲ್ಲ. 


ಆದರೆ, ಪ್ರಭಾಳ ತಂದೆ ಅವಳ ಮರು ವಿವಾಹಕ್ಕೆ ಒಪ್ಪಿಗೆ ಕೊಡುತ್ತಾರೆ. ಈಗ ವಾತ್ಸಲ್ಯ ತೋರುವ ಅಣ್ಣ-ಅತ್ತಿಗೆಯರು ಈಗಿನಂತೆಯೇ ಮುಂದೆಯೂ ನೋಡಿಕೊಳ್ಳುತ್ತಾರಾ..? ತಂದೆ ಹೋದ ನಂತರ ಭವಿಷ್ಯ ಯಾವ ರೀತಿ ಇರುತ್ತದೆ ಎಂಬೆಲ್ಲಾ ಆಲೋಚನೆಗಳು ಬಂದರೂ ಕೊನೆಗೆ ಅಳೆದು ತೂಗಿ ಪ್ರಸಾದ್ ನನ್ನು ಭೇಟಿಯಾಗಲು ಒಪ್ಪಿದ್ದಳು. ಮಾತುಕತೆಯ ನಂತರ ತನ್ನ ನಿರ್ಧಾರವನ್ನು ತಂದೆಗೆ ಬಿಟ್ಟಾಗ ಪ್ರಭಾಳ ತಂದೆ ಮತ್ತು ಅಣ್ಣ ಈ ವಿವಾಹಕ್ಕೆ ಒಪ್ಪಿಗೆ ಕೊಟ್ಟರು. 


ಇಂತಹ ಮರು ವಿವಾಹಗಳು ನಡೆದಾಗ ಭೂತದ ನೆನಪುಗಳನ್ನು ಇಷ್ಟವಿಲ್ಲದಿದ್ದರೂ ಮರೆಯಬೇಕಾಗಿ ಬರುತ್ತದೆ. ಭವಿಷ್ಯದ ಸುಖ ಕಾಣುವ ಆಸೆಯಿಂದ.. ಧೈರ್ಯ ಮಾಡಿ ಹೊಸ ಬದುಕಿಗೆ ಹೆಜ್ಜೆ ಇರಿಸಿದ್ದ ಪ್ರಭಾ ಈಗ ಇಬ್ಬಂದಿತನದಲ್ಲಿ ನಲುಗಬೇಕಾಗಿತ್ತು. 


ತಂದೆಯ ಪ್ರೀತಿಯನ್ನೇ ಅರಿಯದ ನವೀನ್ ಪಾಲಿಗೆ ಈಗ ಪ್ರಸಾದ್ ಬಂದದ್ದು ಹೆಚ್ಚಿನ ಖುಷಿ ಕೊಟ್ಟಿತ್ತು. ಹಾಗಾಗಿ ಆತನ ಬೇಡಿಕೆಗಳು ಪ್ರಸಾದ್ ಬಳಿಯಲ್ಲಿ ಹೆಚ್ಚೇ ಇದ್ದವೋ. ಆದರೆ, ಪ್ರಸಾದ್ ನ ಸ್ವಭಾವ ವಿಭಿನ್ನವಾಗಿತ್ತು. ತಾನು ಹೇಳಿದ ಹಾಗೆ ಕೇಳಿಕೊಂಡು ವಿಧೇಯತೆಯಿಂದ ಇರಬೇಕಾಗಿತ್ತು. ಇಲ್ಲದಿದ್ದರೆ ರೌದ್ರಾವತಾರ ತೋರುತ್ತಿದ್ದ. ಮಗುವಿನ ಹಠ ಹಾಗೂ ಗಂಡನ ಮುನಿಸು ಇವೆರಡನ್ನು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದಳು ಪ್ರಭಾ.


ಚಿಕ್ಕ ಮಗುವಾದ್ದರಿಂದ ಹಾಗೂ ಪ್ರಭಾಳ ಪೂರ್ತಿ ಗಮನ ಇಷ್ಟು ದಿನವೂ ತನ್ನದೇ ಇದ್ದುದರಿಂದ ನವೀನ್ ಅವಳನ್ನು ಹೆಚ್ಚಾಗಿ ಅಂಟಿಕೊಳ್ಳುತ್ತಿದ್ದ. ಪ್ರಸಾದ್ ಅರ್ಥಮಾಡಿಕೊಳ್ಳದೆ, ಬೇರೆಯದ್ದೇ ರೀತಿಯ ವ್ಯಂಗ್ಯದ ಚಾವಟಿಗಳನ್ನು ಪ್ರಭಾಳಗೆ ಬೀಸುತ್ತಿದ್ದ. 


ಪ್ರಸಾದ್ ಪ್ರೀತಿ ಬೇರೆಯದ್ದೇ ತರಹ. ಚೆನ್ನಾಗಿದ್ದರೆ ಅತಿ ಪ್ರೀತಿ. ಇಲ್ಲವಾದಲ್ಲಿ ಕೊಂಕು ಮಾತುಗಳಿಂದಲೇ ಹಿಂಸಿಸುತ್ತಿದ್ದ. ಮೊದಮೊದಲಿಗೆ ಚೆನ್ನಾಗಿಯೇ ಸಾಗುತ್ತಿದ್ದ ಸಂಸಾರವನ್ನು ಕಂಡು ಪ್ರಭಾಳ ತಂದೆ ಹಾಗೂ ಇಂದಿರಾ ರಾವ್ ಅವರಿಗೆ ತಮ್ಮ ನಿರ್ಧಾರ ಕಂಡು ಸಮಾಧಾನವಾಗಿತ್ತು. ಮೊದಲ  ಶ್ರೀಮಂತಿಕೆಯನ್ನೇನೂ ಅಪೇಕ್ಷಿಸದೆ.. ಇದ್ದುದರಲ್ಲಿಯೇ ಎಲ್ಲವನ್ನೂ ಅಣಿ ಮಾಡಿಕೊಂಡು, ಬರುವ ಸಂಬಳದಲ್ಲಿಯೇ ಮನೆ ತೂಗಿಸಲು ಪ್ರಭಾ ಹೊಂದಿಕೊಂಡಳು. 


ನವೀನ್ ಖರ್ಚನ್ನು ಪ್ರಸಾದ್ ನಿಭಾಯಿಸಿದ ಅವಶ್ಯಕತೆ ಇರಲಿಲ್ಲ. ಆತನಿಗೆ ಅವನ ತಂದೆ ಭವಿಷ್ಯಕ್ಕೆ ಬೇಕಾದಷ್ಟು ಹಣವನ್ನು ಬಿಟ್ಟು ಹೋಗಿದ್ದರು. ಹೀಗಾಗಿ ಮಗುವಿಗೆ ಖರ್ಚುಗಳಿಗೆ ಪ್ರಸಾದನನ್ನು ಅವಲಂಬಿಸುವಂತಿರಲಿಲ್ಲ. ಪ್ರಭಾ ಆ ಕುರಿತು ಆತನಿಗೆ ಸ್ಪಷ್ಟಪಡಿಸಿದ್ದಳು ಸಹ. ಕೆಲವು ದಿನ ಸುಮ್ಮನಿದ್ದ ಪ್ರಸಾದ್ ತಾನೊಂದು ಸೈಟ್ ಕೊಳ್ಳಲು ರಾಜು ಇಟ್ಟಿದ್ದ ಹಣದಲ್ಲಿ 10,000 ರೂ. ಸಾಲದಂತೆ ಕೊಟ್ಟರೆ, ಬಡ್ಡಿ ಸಮೇತ ವಾಪಸ್ ಮಾಡುತ್ತೇನೆ ಎನ್ನುವ ಬೇಡಿಕೆ ಇಟ್ಟಾಗ ಪ್ರಭಾಳ ಮನಸ್ಸು ಡೋಲಾಯಮಾನವಾಗಿತ್ತು. 


ಆಸೆ ಸಂಧರ್ಭದಲ್ಲಿ ಪ್ರಭಾ ರಾಜುವಿನ ತಮ್ಮನ ಕುರಿತು ಹೇಳುತ್ತಾಳೆ. ಆಗ ಪ್ರಸಾದನ ಪ್ರತಿಕ್ರಿಯೆ ಹೇಗಿತ್ತು..?


ಹಣದ ಅವಶ್ಯಕತೆ ಮನುಷ್ಯನನ್ನು ಯಾವ ರೀತಿ ಬೇಕಾದರೂ ಬದಲಾಯಿಸಬಲ್ಲದು. ಹಣ ಕೊಡಲು ಸ್ಪಷ್ಟವಾಗಿ ನಿರಾಕರಿಸಿದ ಪ್ರಭಾಳ ನಡೆಯಿಂದಾಗಿ ಪ್ರಸಾದ್ ಸಂಪೂರ್ಣವಾಗಿ ಬದಲಾದ. ತನ್ನ ಸ್ವಾರ್ಥವನ್ನು ತ್ಯಾಗ ಮಾಡಿ ವಿಧವೆಯನ್ನು ಕಟ್ಟಿಕೊಂಡು ಈಕೆಯನ್ನು ಉದ್ದಾರ ಮಾಡಲು ಹೊರಟರೆ, ಇವಳು ಕೊಡುವ ಬೆಲೆ ಇಷ್ಟೆಯಾ..? ಎಂದೆಲ್ಲಾ ಮಾತನಾಡಿದ. ಅಷ್ಟಕ್ಕೂ ಆತ ವಿಧವಾ ವಿವಾಹಕ್ಕೆ ಬೇಡಿಕೆ ಇಟ್ಟದ್ದರ ಹಿನ್ನೆಲೆ ಏನಿತ್ತು..?


ಪ್ರಭಾ ತನ್ನ ಖರ್ಚಿಗಾಗಿ ಪ್ರಸಾದನ ಬಳಿ ಬೇಡುವುದನ್ನು ಬಿಟ್ಟಿದ್ದಳು. ರಾಜುವಿನ ಹಣದಲ್ಲಿಯೂ ಆಕೆ ಸ್ವಂತಕ್ಕಾಗಿ ಖರ್ಚು ಮಾಡಿಕೊಳ್ಳುತ್ತಿರಲಿಲ್ಲ. ಇನ್ನು ತಂದೆಯ ಬಳಿಯೂ ಕೇಳುತ್ತಿರಲಿಲ್ಲ. ಹೀಗಿದ್ದಾಗ ಪ್ರಭಾ ತನ್ನ ಖರ್ಚಿಗೆ ಯಾವ ದಾರಿಯನ್ನು ಆಯ್ದುಕೊಂಡಿದ್ದಳು..?


ಮನೆಯಲ್ಲಿ ಮಾತಿನ ಚಕಮಕಿ ಮಾತ್ರವಲ್ಲದೆ, ಈಗ ದ್ವೇಷವು ಮೊಳೆಯಲು ಶುರುವಾಗಿತ್ತು. ಮನೆಯ ಖರ್ಚಿನಿಂದ ಸಂಪೂರ್ಣವಾಗಿ ವಿಮುಖನಾದ ಪ್ರಸಾದ್..


ಪ್ರಭಾಳ ಅಣ್ಣ-ಅತ್ತಿಗೆ ಮನೆಗೆ ಬಂದಾಗ ಹಾಗೂ ಪ್ರಸಾದ್ ತನ್ನ ಸ್ನೇಹಿತರನ್ನು ಮನೆಗೆ ಕರೆ ತಂದಾಗ ಅವನ ಎರಡು ರೀತಿಯ ವರ್ತನೆಗಳು ಹೇಗಿದ್ದವು..?


ದಿನ ದಿನವೂ ಚಿತ್ರ-ವಿಚಿತ್ರ ಹಿಂಸೆ, ನೋವುಗಳಿಂದ ಪ್ರಭಾ ಮಾತ್ರ ಬಳಲಲಿಲ್ಲ. ನವೀನನ ಪುಟ್ಟ ಮನಸ್ಸು ಸಹ ಘಾಸಿಗೊಳಾಗುತ್ತಾ ಹೋಯಿತು. 


ಪ್ರಭಾ ತಾನಾಗಿಯೇ ಏನನ್ನೂ ಹೇಳದಿದ್ದರೂ.. ಇಂದಿರಾ ಅವರಿಗೆ ಪ್ರಭಾಳ ಸಂಸಾರದ ಗುಟ್ಟು ತಿಳಿದದ್ದು ಹೇಗೆ..? ಪ್ರಸಾದ್ ಬಳಿ ಇಂದಿರಾ ಅವರು ಈ ಕುರಿತು ಚರ್ಚಿಸಿದರೇ..?


ಪ್ರಸಾದ್ ಪ್ರಭಾಳ ಗರ್ಭಪಾತ ಮಾಡಿಸಿದ್ದು ನೋಡುವವರ ಕಣ್ಣಿಗೆ ನವೀನ ನ ಮೇಲಿನ ಪ್ರೀತಿ ಕಡಿಮೆಯಾಗಬಾರದು ಎಂಬಂತೆ ತೋರುತ್ತಿದ್ದಾದರೂ.. ನಿಜವಾದ ಕಾರಣ ಏನಿತ್ತು..? 


ಪ್ರಭಾಳ ಪಾಲಿಗೆ ಸುಖ ಎನ್ನುವುದು ನಭದ ನಕ್ಷತ್ರವಾಯಿತೇ..? ಪ್ರಭಾ ಕಾದಂಬರಿಯ ಅಂತ್ಯಕ್ಕೆ ಆಯ್ದುಕೊಂಡ ದಾರಿ ಯಾವುದು..?


ಮಗುವಿದ್ದಾಗ ತಾಯೊಬ್ಬಳು ಮರುವಿವಾಹವಾಗಲು ಏನೆಲ್ಲಾ ಅಡಚಣೆಗಳು..! ಅವೆಲ್ಲವನ್ನು ಮೀರಿ ಒಳ್ಳೆಯ ಭವಿಷ್ಯ ಸಿಕ್ಕಿತು ಎನ್ನುವಾಗ ಸಿಕ್ಕ ಸುಖವು ಮರೀಚಿಕೆಯಾದರೆ..? ಹೆಣ್ಣು ಮಕ್ಕಳ ಸಾಂಸಾರಿಕ ಬದುಕಿನ ಕಷ್ಟದ ಮತ್ತೊಂದು ರೂಪವನ್ನು ಈ ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಹೆಚ್. ಕೆ ಅನುಸೂಯ ಸಂಪತ್ ಅವರು.


~ವಿಭಾ ವಿಶ್ವನಾಥ್

ಭಾನುವಾರ, ಮೇ 24, 2026

ನಲಿಯುತಾ... (ಬೆಳಕಿಂಡಿಯ ಕತೆಗಳು - 22)

ನಲಿವನ್ನು ಹಂಚಲು ಶ್ರಮಿಸುತ್ತಿದ್ದವಳಿಗೆ ಹೆಚ್ಚಾಗಿ ಸಿಕ್ಕಿದ್ದು ನೋವುಣಿಸುವ ಕುಹಕವೇ..! 

"ಹಣ್ಣಿರುವ ಮರಕ್ಕೆ ಮಾತ್ರವೇ ಹೆಚ್ಚಿನ ಕಲ್ಲೇಟು ಬೀಳುವುದು" ಎನ್ನುವ ಅಪ್ಪನ ಮಾತು ಆಗಾಗ ನೆನಪಾಗುತ್ತದೆ. ತಾನು ನಡೆಯುವ ಹಾದಿ ಸರಿಯಾಗಿದೆಯೆಂಬ ನೆಮ್ಮದಿಯಾಗುತ್ತದೆ. ಸಣ್ಣ-ಪುಟ್ಟ ಸಂಭ್ರಮಕ್ಕೆ ನಲಿಯುತ್ತಾ.. ನಲಿವನ್ನಷ್ಟೇ ಹಂಚುತ್ತಾ ಮತ್ತಷ್ಟು ನಳನಳಿಸುತ್ತಾಳೆ.

~ವಿಭಾ ವಿಶ್ವನಾಥ್