ಭಾನುವಾರ, ಮೇ 24, 2026

ನಲಿಯುತಾ... (ಬೆಳಕಿಂಡಿಯ ಕತೆಗಳು - 22)

ನಲಿವನ್ನು ಹಂಚಲು ಶ್ರಮಿಸುತ್ತಿದ್ದವಳಿಗೆ ಹೆಚ್ಚಾಗಿ ಸಿಕ್ಕಿದ್ದು ನೋವುಣಿಸುವ ಕುಹಕವೇ..! 

"ಹಣ್ಣಿರುವ ಮರಕ್ಕೆ ಮಾತ್ರವೇ ಹೆಚ್ಚಿನ ಕಲ್ಲೇಟು ಬೀಳುವುದು" ಎನ್ನುವ ಅಪ್ಪನ ಮಾತು ಆಗಾಗ ನೆನಪಾಗುತ್ತದೆ. ತಾನು ನಡೆಯುವ ಹಾದಿ ಸರಿಯಾಗಿದೆಯೆಂಬ ನೆಮ್ಮದಿಯಾಗುತ್ತದೆ. ಸಣ್ಣ-ಪುಟ್ಟ ಸಂಭ್ರಮಕ್ಕೆ ನಲಿಯುತ್ತಾ.. ನಲಿವನ್ನಷ್ಟೇ ಹಂಚುತ್ತಾ ಮತ್ತಷ್ಟು ನಳನಳಿಸುತ್ತಾಳೆ.

~ವಿಭಾ ವಿಶ್ವನಾಥ್


ಅರ್ಥಹೀನ ಹತಾಶೆ (ಬೆಳಕಿಂಡಿಯ ಕತೆಗಳು - 21)

ಹಾಸ್ಟೆಲ್ ಗೆ ಹೋದ ಸುಮುಖನಿಗೆ ಮೊಬೈಲ್ ಇರದಿದ್ದಕ್ಕೆ ಹತಾಶೆಯಾಗಿತ್ತು. ಸೋಶಿಯಲ್ ಮೀಡಿಯಾ, ಚಾಟಿಂಗ್ ಎಲ್ಲವನ್ನೂ ಮಿಸ್ ಮಾಡಿಕೊಂಡನಾದರೂ.. ಕ್ರಮೇಣ ಓದಿನತ್ತ ಗಮನ ಹರಿಸಿದ. ಮೊದಲ ಸೆಮಿಸ್ಟರ್ ಪರೀಕ್ಷೆಯ ಅಂಕಗಳು ಆತನ ಸಾಮರ್ಥ್ಯವನ್ನು ಆತನಿಗೆ ಅರಿವಾಗಿಸಿ, ಪೋಷಕರಿಗೂ ಖುಷಿ ತಂದಿತ್ತು. ಎಲ್ಲರಿಂದ ಪಡೆದ ಪ್ರಶಂಸೆಯ ಮುಂದೆ ಮೊಬೈಲ್ ಸಿಗದ ತನ್ನ ಹತಾಶೆ ಎಷ್ಟು ಅರ್ಥಹೀನ ಎನ್ನಿಸಿತ್ತು. ಅಂದು ತನ್ನ ಮನಸನ್ನು ಬದಲಾಯಿಸಿದ ವಾರ್ಡನ್ ಗೆ ಧನ್ಯವಾದಗಳನ್ನು ಹೇಳಲು ಮರೆಯಲಿಲ್ಲ.

~ವಿಭಾ ವಿಶ್ವನಾಥ್


ಅವಳು ಹೇಳುತ್ತಲೇ ಇರುತ್ತಾಳೆ (ಅವಳ ಕವಿತೆಗಳು - 25)


 ಅವಳು ಹೇಳುತ್ತಲೇ ಇರುತ್ತಾಳೆ

ತನ್ನ ನಲಿವುಗಳನ್ನು, ನೋವುಗಳನ್ನು

ಅವಳು ಬಿದ್ದರೂ ಎದ್ದದ್ದನ್ನು

ಸುತ್ತಲಿನವರ ಸತ್ಯಗಳನ್ನು

ಅವಳಿಗಾದ ನಂಬಿಕೆ ದ್ರೋಹಗಳನ್ನು

ಅವಳು ಪಟ್ಟ ಪಾಡನ್ನು

ಪ್ರಾಮಾಣಿಕತೆಗೆ ಸಿಕ್ಕ ಬಹುಮಾನವನ್ನು

ಬಯಲಿಗೆಳೆದ ಅಸತ್ಯಗಳನ್ನು

ಹೀಗೆ ಪ್ರತಿಯೊಂದನ್ನೂ..


ಅವಳು ಹೇಳುತ್ತಲೇ ಇರುತ್ತಾಳೆ

ಪ್ರತಿಯೊಂದನ್ನೂ ಕತೆಯಾಗಿಸಿ

ಕೇಳುವವರ ಆಸಕ್ತಿಗೇನಲ್ಲ

ಓದುವವರ ತಾಳ್ಮೆ ಪರೀಕ್ಷಿಸಲಲ್ಲ

ತನ್ನನ್ನು ನಿರೂಪಿಸಿಕೊಳ್ಳುವುದಕ್ಕಲ್ಲ 

ತಾಳ್ಮೆ ಕಳೆದುಕೊಂಡದ್ದಕ್ಕೇನಲ್ಲ

ತನ್ನೊಳಗನ್ನು ಬರಿದಾಗಿಸಲೂ ಅಲ್ಲ

ಅದು ಕೇವಲ ಅವಳ ಕತೆ ಎಂದಲ್ಲ

ಅವಳಂತಹವರ ಕತೆಯಾಗಿರುವುದಕ್ಕೆ


ಅವಳು ಹೇಳುತ್ತಲೇ ಇರುತ್ತಾಳೆ

ತಾನು ಹೇಳಿದ ಮಾತ್ರಕ್ಕೆ

ಏನೋ ಸರಿಯಾಗುತ್ತದೆಂದಲ್ಲ

ಎಲ್ಲರ ಗಮನ ಸೆಳೆಯಲಲ್ಲ

ಕೇವಲ ಒಂದೆರಡು ದಿನವಲ್ಲ

ಯಾವುದೋ ಒಂದೆರಡು ಕತೆಯಲ್ಲ

ಉಸಿರು ನಿಂತು ಬದುಕು ಮುಗಿದರೂ

ಅವಳಿಗೆ ಹೇಳುವುದು ಉಳಿದಿದೆ

ಮತ್ತವಳು ಹೇಳುತ್ತಲೇ ಇರುತ್ತಾಳೆ


~ವಿಭಾ ವಿಶ್ವನಾಥ್

ಚದುರಿದ ಕತೆಗಳು (ಪುಸ್ತಕ ಯಾನ - 450)


ಪುಸ್ತಕದ ಶೀರ್ಷಿಕೆ : ಚದುರಿದ ಕತೆಗಳು

ಲೇಖಕರು : ಕೊಡಗು ಗಣೇಶ್

ಪ್ರಕಾಶಕರು : ಗಾಯತ್ರೀ ಪ್ರಕಾಶನ

ಪರಿಷ್ಕೃತ ಮರು ಮುದ್ರಣ : 2022

ಪುಟಗಳು : 96

ಬೆಲೆ : 100 ರೂ.


ಕೊಡಗು ಗಣೇಶ್ (ಎ. ಕೆ ಗಣೇಶ್) ಅವರು ಒಂದು ಕುಟುಂಬದ ಕಥೆ, ಒಡಹುಟ್ಟಿದವಳು, ಶೋಷಿತ ಹೆಣ್ಣು ಎಂಬ ಮೂರು ಕಾದಂಬರಿಗಳನ್ನು ಬರೆದಿದ್ದಾರೆ. ಕೊಡಗು ಭಾಷೆಯಲ್ಲಿ ಮಳೆ ನಿಕ್ಕಣೆ ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ನಾ ಕಂಡ ಅಮೆರಿಕಾ ಎಂಬ ಪ್ರವಾಸ ಕಥನ ಬರೆದಿದ್ದಾರೆ. ಮಿನುಗುತಾರೆ ಇವರ ಮೊದಲ ಕಥಾ ಸಂಕಲನ. 1998ರಲ್ಲಿ ಪ್ರಥಮ ಮುದ್ರಣವಾಗಿತ್ತು. ಅದೇ ಕಥಾ ಸಂಕಲನ ಈಗ ಕೆಲ ಬದಲಾವಣೆಗಳೊಂದಿಗೆ ಮತ್ತೆ ಮರುಮುದ್ರಣಗೊಂಡು ನಮ್ಮ ಓದಿಗೆ ಚದುರಿದ ಕತೆಗಳು ಎಂಬ ಹೆಸರಿನಿಂದ ಲಭ್ಯವಾಗಿದೆ. ಈ ಕಥಾ ಸಂಕಲನದಲ್ಲಿ ಒಟ್ಟು 6 ಕತೆಗಳಿವೆ. 


ಬಿಟ್ಟಿ ಕೂಳು : ಶೇಷಗಿರಿ ರಾವ್ ಅವರು ಖಾಸಗಿ ಶಾಲೆಯ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಅವರ ತಂದೆ ಇಂಗ್ಲೀಷರ ಕಾಲದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದವರು. ಇಂಗ್ಲಿಷ್ ಅಧಿಕಾರಿಗಳು ಸಹ ಗೌರವ ನೀಡುತ್ತಿದ್ದವರು. ಅಂತಹವರ ಮಗನಾಗಿ ಕನ್ನಡದ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು ಶೇಷಗಿರಿರಾಯರು ನ ಸಾಹಿತಿಗಳು ಆಗಿದ್ದವರು ನಾಲ್ಕೈದು ಕಥಾ ಸಂಕಲನ ಬರೆದು ಜನಪ್ರಿಯರೂ ಆಗಿದ್ದರು. ಕನ್ನಡದ ಮೇಲಿನ ಅಭಿಮಾನದಿಂದ ಮನೆಯೆಲ್ಲವೂ ಕನ್ನಡಮಯವಾಗಿಯೇ ಬೆಳಗಿತ್ತು. ಮಕ್ಕಳಿಗೂ ಇದೆ ಸ್ವಭಾವ ಬಂದಿತ್ತು. ಇಬ್ಬರು ಗಂಡು ಮಕ್ಕಳಿಗೆ ಶಿವರಾಜ್, ರಾಘವೇಂದ್ರ ಎಂದು ಹೆಸರಿಟ್ಟರು. ಹೆಣ್ಣು ಮಗುವಿಗೆ ಪಾರ್ವತಿ ಎಂದು ಹೆಸರಿಟ್ಟರು. ಇದೆಲ್ಲದಕ್ಕೂ ಮುಖ್ಯ ಕಾರಣ ಡಾ. ರಾಜ್‌ಕುಮಾರ್ ಅವರ ಮೇಲಿರುವ ಅಭಿಮಾನ. ಕಥೆಯುದ್ದಕ್ಕೂ ಇದು ಕಾಣುತ್ತದೆ. ಈ ಕಾಲಕ್ಕೆ ಸರಿಹೊಂದುವ ಕೆಲಸಕ್ಕೆ ಇಂಗ್ಲಿಷ್ ನ ಅಗತ್ಯವಿತ್ತು. ಆದರೆ, ಗಂಡು ಮಕ್ಕಳಿಬ್ಬರೂ ಕನ್ನಡದಲ್ಲಿಯೇ ಬಿ.ಎ ಹಾಗೂ ಎಂ .ಎ ಮಾಡಿದ್ದವರು. ಕೆಲಸ ಸಿಗದ ಕಾರಣಕ್ಕೆ ಅವರನ್ನು 'ಬಿಟ್ಟಿಕೂಳು' ಎಂದು ಹಂಗಿಸುತ್ತಿದ್ದ ಶೇಷಗಿರಿ ರಾವ್ ಅವರ ಮಕ್ಕಳ ಭವಿಷ್ಯ ಬದಲಾಗುವ ಸಂದರ್ಭ ಬರುತ್ತದೆ. ಅವರು ಹಂಗಿಸುತ್ತಿದ್ದ ಪದವೇ ಮುಂದೆ ಅವರನ್ನು ದೈತ್ಯಾಕಾರವಾಗಿ ಕಾಡುವ ಕಥೆ ಇಲ್ಲಿದೆ. ಮೂವರು ಮಕ್ಕಳ ಮೂರು ಭವಿಷ್ಯದ ಚಿತ್ರಣ ಇಲ್ಲಿದೆ.


ಅನಾಥ ಹೆಣ್ಣು : ವಸುಂಧರಾಳಿಗೆ ಬುದ್ಧಿ ಬಂದಾಗಿನಿಂದಲೂ ಪ್ರಪಂಚದಲ್ಲಿ ತನಗೆ ಯಾರೂ ಇಲ್ಲವೆಂಬುದು ಗೊತ್ತಿತ್ತು. ಹೇಗೆ ಬೆಳೆದೆ ? ಹೇಗೆ ದೊಡ್ಡವಳಾದೆ ? ಎಂಬ ಆಲೋಚನೆ ಮೂಡುವ ಹೊತ್ತಿಗೆ ಮನೆಯೂ ಇಲ್ಲದೆ, ತನ್ನವರೆನ್ನುವವರಿಲ್ಲದೆ ಬದುಕಿದ್ದಳು. ಈಗ ಅವಳ ಯೌವ್ವನದ ದಿನಗಳಲ್ಲಿ ತನ್ನ ಮಾನ ರಕ್ಷಿಸಿಕೊಳ್ಳಬೇಕು ಎಂಬುವ ಕನಿಷ್ಟ ಪ್ರಜ್ಞೆ ಮೂಡಿತ್ತು. ನಗರಕ್ಕೆ ಬಂದ ವಸುಂಧರಾಳ ಭವಿಷ್ಯ ಯಾವ ರೀತಿ ರೂಪುಗೊಂಡಿತು..? ಯಾರೂ ಇಲ್ಲದ ಅನಾಥ ಹೆಣ್ಣೊಬ್ಬಳು ಯಾವ ಹಾದಿ ಹಿಡಿದಳು..? ಅವಳ ಮಗಳು ಈಗ ದೊಡ್ಡವಳಾಗಿ ಅನಾಥೆಯಾಗಿ ಮತ್ತೆ ಅದೇ ಜಾಗದಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದ್ದೇಕೆ ಓದಿ ನೋಡಿ.


ಮಿನುಗು ತಾರೆ : ಹೆಸರಿಗೆ ತಕ್ಕ ಚೆಲುವೆಯಾಗಿದ್ದ ಶ್ವೇತ ಊರಿನ ಶ್ರೀಮಂತರ ಸಾಲಿನಲ್ಲಿ ನಿಲ್ಲುವ ಜಗಪತಿರಾಯರ ಒಬ್ಬಳೇ ಮುದ್ದಿನ ಮಗಳು. ಕಾಲೇಜಿನಲ್ಲಿ ಎಲ್ಲರ ಕನಸಿನ ಕನ್ಯೆ. ಹಾಗೆಂದು ದರ್ಪ ತೋರಿದವಳಲ್ಲ. ಸರಳ ನಡೆ, ಸ್ನೇಹ ಮನೋಭಾವದಿಂದ ಎಲ್ಲರ ಮನೆಗೆದ್ದವಳು. ಕರ್ನಾಟಕದ ಸೌಂದರ್ಯ ಸ್ಪರ್ಧೆ ಮಿನುಗು ತಾರೆ ಸ್ಪರ್ಧೆಗೆ ಕಾಲೇಜಿನಿಂದಲೇ ಆಯ್ಕೆಯಾಗಿದ್ದಳು. ತಂದೆ-ತಾಯಿಯರ ಸಂಭ್ರಮ ಮುಗಿಲ ಮುಟ್ಟಿತ್ತು. ಶ್ವೇತ ಆ ಸ್ಪರ್ಧೆಯಲ್ಲಿ ಗೆದ್ದ ಮೇಲಂತೂ ಅವರ ಸಂಭ್ರಮ ಹೇಳತೀರದು. ಅದಾದ ನಂತರ ಪರಿಸ್ಥಿತಿ ಬದಲಾಗಿತ್ತು. ಶ್ವೇತ ಕಾಲೇಜಿಗೆ ಹೋಗದೆ ಅವಳದೇ ನೋವಿನಲ್ಲಿ ಉಳಿದಾಗ ಅವಳ ಪಾಲಿನ ಪ್ರೇಮವಾಗಿ ಸಿಕ್ಕಿದ್ದು ಆಕಾಶ್. ಆಕಾಶ್ ವಿವಾಹದ ನಂತರ ಶ್ವೇತಳ ಪರಿಸ್ಥಿತಿ ಗೊತ್ತಾಯಿತಾದರೂ.. ಆಕಾಶ್ ಅವಳ ಹೃದಯವಂತಿಕೆಗೆ ಬೆಲೆ ಕೊಡುತ್ತಾನೆ. ಮುಂದೆ ಶ್ವೇತಳ ಮನಸ್ಥಿತಿ ಮಾತ್ರವಲ್ಲ ಅವಳ ಬದುಕು ಬದಲಾಗುತ್ತದೆ. ಶ್ವೇತಳ ಬದುಕು ಬದಲಾಗಿದ್ದಾದರೂ ಹೇಗೆ..? ಆಕಾಶನ ಬದುಕು ಏನಾಯ್ತು ಓದಿ ನೋಡಿ.


ನನ್ನ ಮದುವೆ : ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದ ತಂದೆಗೆ ಒಬ್ಬನೇ ಮಗನಾಗಿದ್ದವನಿಗೆ.. ಹಲವಾರು ಸಂಬಂಧಗಳು ಬರುತ್ತಿದ್ದಾದರೂ .. ಅವನಿಷ್ಟ ಪಟ್ಟ ರೂಪವಂತೆಯೇ ಒಪ್ಪಿದ್ದರ ಜೊತೆಗೆ ಮಗಳನ್ನೂ ಕೊಟ್ಟು ಪ್ರೈವೇಟ್ ಕಂಪನಿಯಲ್ಲಿ ಕೆಲಸವನ್ನು ಕೊಡಿಸಿದ್ದರು. ಅದಕ್ಕೆ ಕಾರಣವೂ ಇತ್ತು. ಮಗಳ ಐಬನ್ನು ಗಂಡಿನ ತಂದೆ-ತಾಯಿಯ ಬಳಿ ಹೇಳಿದ್ದರಾದರೂ ಹುಡುಗನಿಗೆ ಆ ವಿಚಾರ ತಿಳಿದದ್ದು ವಿವಾಹದ ನಂತರವೇ.. ಹಾಗೆಂದು, ಅವಳ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ. ಅವರ ವಿವಾಹದಿಂದ ಶುರುವಾದ ಕಥೆ ಅವಳಿ ಹೆಣ್ಣು ಮಕ್ಕಳ ವಿವಾಹದ ಆಲೋಚನೆಯವರೆಗೂ ಹೋದ ಸಂದರ್ಭವನ್ನು ಇಲ್ಲಿ ಕಾಣಬಹುದು.


ಮಾಲತಿ : ಇದು ಮಾಲತಿ ಎಂಬ ಹೆಣ್ಣಿನ ಬದುಕಿನ ಜೀವನಗಾಥೆ. ಸುಂದರಿಯಾಗಿದ್ದ ಮಾಲತಿ ಹಾಗೂ ಅವಳ ಚಾರಿತ್ರ್ಯದ ಕುರಿತ ವಿಚಾರಗಳನ್ನು ಕಥೆಯ ಶುರುವಿನಲ್ಲಿ ತೆರೆದಿಡುತ್ತಾರೆ. ಮುಂದೆ ಮಾಲತಿಗೆ ಮನೆಯ ಪರಿಸ್ಥಿತಿಯಿಂದ ಓದಲಾಗದೆ, ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ಸ್ ಕೆಲಸಕ್ಕೆ ಸೇರುವ ಅನಿವಾರ್ಯತೆ ಬರುತ್ತದೆ. ಕಾಲೇಜಿನ ಗೆಳೆಯನಾಗಿದ್ದ ಪ್ರಕಾಶ್ ನಿಂದ ಅವಳ ಬದುಕಿನ ಗತಿಯೇ ಬದಲಾಗುತ್ತದೆ. ತಂದೆ ತಾಯಿ ವಿವಾಹಕ್ಕೆ ವಯಸ್ಸಾಗಿದ್ದ ವರನನ್ನು ಗೊತ್ತು ಮಾಡಿದಾಗ ಪ್ರಕಾಶನ ಸಹಾಯದಿಂದ ಮದ್ರಾಸಿಗೆ ಹೊರಡುತ್ತಾಳಾದರೂ.. ಅಲ್ಲಿ ಪ್ರಕಾಶ ಹೇಳಿದಂತೆ ಕೇಳಲು ಒಪ್ಪುವುದಿಲ್ಲ. ಚಿತ್ರರಂಗಕ್ಕೆ ಸೇರಲು ಹೊರಟವಳಿಗೆ ಎದುರಾದ ತಪ್ಪು ದಾರಿ ಹಿಡಿಯುವ ಅನಿವಾರ್ಯತೆಯನ್ನು ನಿರಾಕರಿಸಿ ತನ್ನದೇ ಬದುಕು ಕಟ್ಟಿಕೊಳ್ಳುವ ಮಾಲತಿಯ ಕಥೆ ಇಲ್ಲಿದೆ. ಅಷ್ಟೆಲ್ಲಾ ಬವಣೆ ಅನುಭವಿಸಿದ ಮಾಲತಿಯ ಬದುಕಿನ ಅಂತ್ಯವನ್ನು ಬೇರೆ ರೀತಿಯಲ್ಲಿ ಮಾಡಿದರೆ ಈ ಕಥೆ ಸ್ಪೂರ್ತಿದಾಯಕವಾಗಿರುತ್ತಿತ್ತು ಎನ್ನುವುದು ನನ್ನ ಅನಿಸಿಕೆ.


ಹೃದಯದ ಕಣ್ಗಳಿಂದ : ಬೀದಿ ಬದಿಯಲ್ಲಿ ವಾಸಿಸುತ್ತಿದ್ದವನು ಆದಾಯಕ್ಕಾಗಿ ನೆಚ್ಚಿದ್ದು ತನ್ನ ಹಾರ್ಮೋನಿಯಂ ಅನ್ನು. ರೈಲಿನಲ್ಲಿ ಪ್ರತಿದಿನ ಹಾಡುತ್ತಾ ಕಾಸು ಸಂಪಾದಿಸುತ್ತಿದ್ದನು. ದಷ್ಟಪುಷ್ಟವಾದ ದೇಹ, ಒಳ್ಳೆಯ ಕಂಠವಿದ್ದರೂ... ಚರ್ಮ ಕಾಣಿಸದಷ್ಟು ದೊಡ್ಡ ಗುಳ್ಳೆಯ ಗಂಟುಗಳಿದ್ದ ಮುಖ. ಆದರೆ, ಮಾನವೀಯತೆ ಎಲ್ಲರಿಗಿಂತಲೂ ಹೆಚ್ಚೇ ಇದ್ದಿತು. ಈಗ ಅವನಿಗೊಂದು ಸಂಸಾರವಿತ್ತು. ಗೂನು ಬೆನ್ನಿನ, ಮೂಕ ಹಾಗೂ ಕಿವುಡು ಹೆಣ್ಣೊಬ್ಬಳು ಮನೆಯ ಯಜಮಾನಿಯಂತೆ ಮನೆಯನ್ನು ನಿರ್ವಹಿಸುತ್ತಿದ್ದಳು. ಜ್ಯೋತಿ ಎಂಬ ಕಣ್ಣು ಕಾಣದ ಹುಡುಗಿಯ ದುರಂತಗಾಥೆ ಕೇಳಿ ಆಕೆಗೆ ಬೆಳಕಾಗಲು ಶ್ರಮಿಸುತ್ತಾನೆ. ಮಗಳಂತೆ ಸಲಹುತ್ತಾನೆ. ಈ ಮೂವರ ಬಾಂಧವ್ಯದ ಕಥೆಯನ್ನು ನಾವೂ ಹೃದಯದ ಕಣ್ಣುಗಳಿಂದ ನೋಡಿದಾಗ ಹೆಚ್ಚೇ ತಾಕುತ್ತದೆ.


ಕಥೆಯಲ್ಲಿ ಕಟ್ಟಿಕೊಟ್ಟಿರುವ ಚಿತ್ರಣಗಳು ವಾಸ್ತವವನ್ನು ಕಣ್ಮುಂದೆ ತರುತ್ತವೆ. ಎಲ್ಲಾ ಕಥೆಗಳಲ್ಲಿಯೂ ದುರಂತದ ಪ್ರಮಾಣ ಹೆಚ್ಚೇ ಇದೆ ಎನಿಸಿತು. ಕಥೆಗೆ ತಕ್ಕ ಭಾಷೆ, ಸಂಭಾಷಣೆ, ನಿರೂಪಣೆ ಆಸಕ್ತಿಯಿಂದ ಓದಿಸುತ್ತದೆ. 

~ವಿಭಾ ವಿಶ್ವನಾಥ್

ನಕ್ಷತ್ರ ಮಲ್ಲಿಗೆ (ಪುಸ್ತಕ ಯಾನ - 449)


ಪುಸ್ತಕದ ಶೀರ್ಷಿಕೆ : ನಕ್ಷತ್ರ ಮಲ್ಲಿಗೆ

ಲೇಖಕರು : ಹೆಚ್. ಜಿ. ರಾಧಾದೇವಿ 

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 1999

ಮರು ಮುದ್ರಣ: 2020


'ನಕ್ಷತ್ರ ಮಲ್ಲಿಗೆ' ಎಂಬ ಕಾದಂಬರಿಯ ಶೀರ್ಷಿಕೆ ಕುತೂಹಲ ಮೂಡಿಸಿತು. ನಿತ್ಯ ಮಲ್ಲಿಗೆ, ದುಂಡು ಮಲ್ಲಿಗೆಗಿಂತ ಸೊಬಗು ಜೊತೆಗೆ ಸುವಾಸನೆಯೂ ಅವಕ್ಕಿಂತ ಮಾದಕ. ಜೊತೆಗೆ ನಕ್ಷತ್ರಗಳಂತೆ ಎಂಟು ದಳ ಚಾಚಿದ್ದ ನಕ್ಷತ್ರ ಮಲ್ಲಿಗೆಯ ಕುರಿತು ಮೊದಲಿಗೆ ಪರಿಚಯ ಮಾಡಿಸುತ್ತಾರೆ. 


ರಂಗಣ್ಣನವರ ಮನೆಯಲ್ಲಿಯೇ ನಕ್ಷತ್ರ ಮಲ್ಲಿಗೆ ಗಿಡ ಬೆಳೆದಿದ್ದರೂ.. ಹೂಗಳು ಹಾರಿ ಪಕ್ಕದ ಮನೆಯ ಭೀಮರಾಯರ ಕಾಂಪೌಂಡ್ ನಲ್ಲಿ ಬೀಳುತ್ತಿತ್ತು. ಗಿಡ ಹಾಕಿ, ಪಾತಿ ಮಾಡಿ, ಗೊಬ್ಬರ ಹಾಕಿ, ಆರೈಕೆ ಮಾಡಿದವರಿಗಿಂತ ಹೆಚ್ಚಿನ ಹೂಗಳ ರಾಶಿ ಅವರಿಗೆ ಶ್ರಮವಿಲ್ಲದೆ ಸಿಗುತ್ತಿತ್ತು. ಇದಕ್ಕೆ ರಂಗಣ್ಣನವರದ್ದು ನಿರ್ಲಿಪ್ತತೆಯ ಉತ್ತರ. "ಯಾರ್ಯಾರಿಗೆ ಎಷ್ಟು ಪ್ರಾಪ್ತಿಯೋ ಅಷ್ಟೇ ಪ್ರಾಪ್ತಿ, ಪಾರಿಜಾತ ಆದರೆ ಗಿಡದ ಕೆಳಗೆ ಉದುರುತ್ತೆ. ಗಿಡ ಹಾಕಿದವರ ಮನೆಗೆ ಸಿಗುತ್ತೆ. ಈ ಹೂವು ಹಾಗಲ್ಲ ಹಾರಿ ಹಾರಿ ದೂರ ಬೀಳುತ್ತೆ" ಎನ್ನುವ ಮಾತು ಹೇಳುತ್ತಿದ್ದರು. ಹೀಗೆ ರಾಮಬಾಣ ಮಲ್ಲಿಗೆ, ಆಕಾಶ ಮಲ್ಲಿಗೆ, ನಕ್ಷತ್ರ ಮಲ್ಲಿಗೆ ಎಂಬ ಹೂವಿನ ಪರಿಚಯ ಮಾಡಿಸುತ್ತಲೇ ರಂಗಣ್ಣನವರ ಮನೆಯ ಪರಿಸ್ಥಿತಿಯನ್ನು ಪರಿಚಯಿಸುತ್ತಾರೆ. 


ರಂಗಣ್ಣನವರು ತಾವು ಕಷ್ಟಪಟ್ಟು ಬೆಳೆಸಿ, ಉನ್ನತ ವಿದ್ಯಾಭ್ಯಾಸ ಮಾಡಿಸಿದ ಮಗ ಒಳ್ಳೆ ಸಂಬಳ ತೆಗೆಯುವ ಅಧಿಕಾರಿಯಾದಾಗ ಶ್ರೀಮಂತ ಯುವತಿಯನ್ನು ವಿವಾಹವಾದ ನಂತರ ಹೆತ್ತ ತಂದೆ-ತಾಯಿಯ ಋಣ ತೀರಿಸುವ ಬದಲು ಮಾವನ ಮನೆಗೆ ನಿಷ್ಠೆಯಿಂದಿರುವ ಚಿತ್ರಣವಿದೆ. 


ನಕ್ಷತ್ರ ಮಲ್ಲಿಗೆಯ ಹಾಗಿದ್ದ ಮಗನನ್ನು ಸಹಿಸುತ್ತಿದ್ದ ರಂಗಣ್ಣನವರಿಗೆ ನಕ್ಷತ್ರ ಮಲ್ಲಿಗೆಯನ್ನು ಸಹಿಸುವುದರಲ್ಲೇನೂ ವಿಪರೀತವಿರಲಿಲ್ಲವೆಂದು ಅನ್ನಿಸುತ್ತದಾದರೂ ಆ ಮನಸ್ಥಿತಿ ಅಷ್ಟು ಸುಲಭವಾಗಿ ಬರಲಾರದು. ರಂಗಣ್ಣನವರು ಗಿಡಗಳಿಗೆ ಆರೈಕೆ ಮಾಡಲು ಎಂದಿಗೂ ಹಿಂದೇಟು ಹಾಕದೆ, ಅಷ್ಟೇ ಶ್ರಮಪಟ್ಟು ಅದನ್ನು ಬೆಳೆಸುತ್ತಿದ್ದರು. ಒಂದೆರಡು ಹಿಡಿ ಹೂ ಮಾತ್ರ ತಮಗೆ ಸಿಕ್ಕರೂ ಅಷ್ಟರಲ್ಲಿಯೇ ತೃಪ್ತಿ ಪಡುತ್ತಿದ್ದ ರಂಗಣ್ಣನವರಿಗೆ ಮಗನ ಕುರಿತು ಅಷ್ಟೇ ತೃಪ್ತಿಯಿತ್ತೇ..?


ರಂಗಣ್ಣ ಹಾಗೂ ಪಾರ್ವತಮ್ಮ ದಂಪತಿಗಳಿಗೆ ರಾಜೇಂದ್ರ ಮಗನಾದರೆ.. ಅವನ ನಂತರ ಮೂವರು ಹೆಣ್ಣುಮಕ್ಕಳಿದ್ದರು. ಮಗನನ್ನು ಚೆನ್ನಾಗಿಯೇ ಓದಿಸಿದರಾದರೂ.. ಅದೃಷ್ಟ ಇರದೇ ಸರಿಯಾದ ಕೆಲಸ ಸಿಕ್ಕಿರದ ಸಂದರ್ಭದಲ್ಲಿ ಇಂಜಿನಿಯರ್ ಶ್ರೀಪಾದರಾಯರ ಒಬ್ಬಳೇ ಪುತ್ರಿ ಮಾಲಿನಿ ಆತನನ್ನು ಪ್ರೀತಿಸಿದಳು. ಮಗಳನ್ನು ಕಷ್ಟಕ್ಕೆ ದೂಡಲು ಇಚ್ಛಿಸಿದ ತಂದೆ ರಾಜೇಂದ್ರನಿಗೆ ಹಲವಾರು ಶರತ್ತುಗಳನ್ನು ವಿಧಿಸಿ ತಮ್ಮ ಮಗಳನ್ನು ವಿವಾಹ ಮಾಡಿಕೊಡಲು ಒಪ್ಪಿದರು. 


ರಾಜೇಂದ್ರನ ಮನೆಯ ಪರಿಸ್ಥಿತಿಯನ್ನೆಲ್ಲ ಅವನಿಂದಲೇ ತಿಳಿದುಕೊಂಡವರು ಪಾಟ್ನಾದಲ್ಲಿ ಇಂಜಿನಿಯರ್ ಕೆಲಸ ಕೊಡಿಸಿ, ಮುಂದೆ ಕಾಂಟ್ರಾಕ್ಟರ್ ಆಗಿರುವ ತಮ್ಮನ ಜೊತೆಗೆ ವ್ಯವಹಾರ ಮಾಡಲು, ಅಂಗಡಿ ಮಾಲೀಕನಾಗಲು, ತಮ್ಮ ಹೊಸಮನೆಯ ರೂಪು-ರೇಷೆಗಳನ್ನೆಲ್ಲ ತಿಳಿಸಿ ಮಗಳ ಮುಂದಿನ ಭವಿಷ್ಯವನ್ನು ಗಟ್ಟಿಗೊಳಿಸಿದರು. 


ಸೋದರತ್ತೆಯ ಕುರೂಪಿ ಹಾಗೂ ಓದದ ಮಗಳನ್ನು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವಿವಾಹವಾಗುವ ಒತ್ತಡ ಮನೆಯಿಂದ ಬಂದಾಗ ರಾಜೇಂದ್ರ ಅದನ್ನು ನಿರಾಕರಿಸಿ ಮಾಲಿನಿಯನ್ನು ಮದುವೆಯಾಗುವ ವಿಚಾರ ತಿಳಿಸುತ್ತಾನೆ. ಪಾರ್ವತಮ್ಮನವರು ಒಪ್ಪಿದರೂ.. ರಂಗಣ್ಣನವರು ಬೀಗರ ಕಪಟ ನಾಟಕವನ್ನು ಕಂಡು ತಳಮಳಿಸುತ್ತಾರೆ. ಆದರೆ ಆ ಕಪಟ ನಾಟಕದ ಸಂಚಿನಲ್ಲಿ ಮಗನದ್ದೂ ಪಾಲಿದೆ ಎಂದು ಅವರಿಗೆ ಅರ್ಥವಾಗಿರಲಿಲ್ಲ. ಆ ಸಂಚೇನು..?


ಮಾಲಿನಿ ಈ ಮನೆಗೆ ಹೊಂದಿಕೊಳ್ಳಲಿಲ್ಲ ಜೊತೆಗೆ ರಾಜೇಂದ್ರ ತನ್ನ ತಂದೆ ತಾಯಿಗೆ ಮನೆಯ ರಿಪೇರಿಗಾಗಿ ಹಣ ಕಳುಹಿಸಲಿಲ್ಲ. ಜೊತೆಗೆ, ತಂದೆ ಹಣ ಕೇಳಿದಾಗಲೆಲ್ಲ ಅದನ್ನು ನೇರವಾಗಿ ನಿರಾಕರಿಸುತ್ತಿದ್ದ. ಮನೆಯಲ್ಲಿ ಹೆಣ್ಣುಮಕ್ಕಳ ವಿವಾಹವಾಗಿದ್ದು ಇಬ್ಬರ ಖರ್ಚಿಗೆ ಅಷ್ಟು ಅವಶ್ಯಕತೆ ಇಲ್ಲವೆಂದು ನಿಷ್ಕರುಣೆಯಿಂದಲೇ ಹೇಳುತ್ತಿದ್ದ. ಮಾಲಿನಿಯ ತವರಿಗೆ ಬಂದು ಹೋದದ್ದು ಮತ್ತೊಬ್ಬರ ಕಡೆಯಿಂದ ಗೊತ್ತಾಗುತ್ತಿತ್ತು. ಮಗ ಚಿಂಟು ಹುಟ್ಟಿದನ್ನು ಪತ್ರ ಬರೆದು ತಿಳಿಸಿದ್ದನಷ್ಟೇ.. ಆದರೆ, ಕೆಲವೊಮ್ಮೆ ರಂಗಣ್ಣನವರ ಹಣದ ಹಪಾಹಪಿ ವಿಪರೀತವೆಂದೂ ಭಾಸವಾಗುವಂತಹ ಸಂಧರ್ಭಗಳೂ ಇಲ್ಲದಿಲ್ಲ. 


ಅತ್ತೆ-ಮಾವನ ಮನೆಯ ಗೃಹಪ್ರವೇಶಕ್ಕೆಂದು ಕರೆಯಲು ರಾಜೇಂದ್ರ ಅವರಿಗೆ ತಕ್ಕದಾದ ಉಡುಗೊರೆಯನ್ನು ತಂದೆ-ತಾಯಿಗೆ ತಂದು ತಾವೇ ತಂದಂತೆ ಅವರಿಗೆ ಕೊಡಲು ಸೂಚಿಸಿದ್ದ. ಅಷ್ಟೇ ಅಲ್ಲದೆ ತಾವು ಇದೇ ಊರಿನಲ್ಲಿ ನೆಲೆಸಲು ಬಂದದ್ದನ್ನು ಆಗ ಹೇಳಿದನಷ್ಟೇ,.


ಬೀಗರ ಶ್ರೀಮಂತಿಕೆ, ಮಗನ ನಿರ್ಲಕ್ಷದ ನಡುವೆಯೂ ಮೊಮ್ಮಗನಿಗಾಗಿ ಹೋಗಿದ್ದರು. ಆಗ ಸಿಕ್ಕದ್ದು ರಾಜೇಂದ್ರನ ಗೆಳೆಯ ವಿಶ್ವನಾಥ. ವಿಶ್ವನಾಥನಿಂದ ರಾಜೇಂದ್ರನ ಪ್ರತಿಯೊಂದು ವಿಚಾರವೂ ಕೂಲಂಕಶವಾಗಿ ರಂಗಣ್ಣ ಹಾಗೂ ಪಾರ್ವತಮ್ಮನವರಿಗೆ ತಿಳಿದಿತ್ತು. ಮತ್ತೊಬ್ಬ ಮಗನಂತೆಯೇ ನಡೆದುಕೊಂಡು ರಾಜೇಂದ್ರನ ಹಣದಿಂದಲೇ ಅವನಿಗೆ ತಿಳಿಯದಂತೆ ಈ ದಂಪತಿಗಳಿಗೆ ಸಹಾಯ ಮಾಡಿದ್ದ ವಿಶ್ವನಾಥ. ಅಷ್ಟಕ್ಕೂ ವಿಶ್ವನಾಥ ಹಾಗೂ ರಂಗಣ್ಣ-ಪಾರ್ವತಮ್ಮ ದಂಪತಿಗಳಿಗೆ ಅಷ್ಟು ವಿಶ್ವಾಸ ಬೆಳೆದದ್ದು ಹೇಗೆ..?


ಈಗ ರಂಗಣ್ಣನವರು ಮಗನಿಗೆ ಕಟುವಾಗಿ ಹಾಗೂ ನಿಷ್ಠುರವಾಗಿ ಮಾತನಾಡುವಷ್ಟು ಸಿದ್ದರಾದರು. ಅದರಿಂದ ರಾಜೇಂದ್ರನಿಗೆ ರೋಷ, ಅಪಮಾನಗಳಾದರೂ ಸಹಿಸಿಕೊಳ್ಳಬೇಕಿತ್ತು. ಆದರೆ, ಅದು ವಿಶ್ವನಾಥನ ಕುಮ್ಮಕ್ಕು ಎಂದು ತಿಳಿಯದೆ ಆತ ತಪ್ಪು ತಿಳಿದನಾದರೂ.. ಅದು ಯಾರ ಮೇಲೆ..?


ರಂಗಣ್ಣನವರಿಗೆ ಸಹಾಯ ಮಾಡಿದ ವಿಶ್ವನಾಥ ಅವರಿಂದ ಪ್ರತಿಯಾಗಿ ಯಾವ ಸಹಾಯದ ನಿರೀಕ್ಷೆ ಇಟ್ಟಿದ್ದ..? ಅದು ಆತನಿಗೆ ದಕ್ಕಿತೇ..?


ರಂಗಣ್ಣನವರ ಮೂವರು ಹೆಣ್ಣುಮಕ್ಕಳಲ್ಲಿ ಯಾರು ಯಾರ ಸಂಸಾರ ಹೇಗಿದ್ದಿತ್ತು..? ಅದರಲ್ಲಿ ಸ್ವಲ್ಪ ಅತಿಯಾಸೆಯವಳು ಎನ್ನಬಹುದಾದ ಗಾಯತ್ರಿಯನ್ನು ಕೊಂಚ ಒಳಗೆ ಬಿಟ್ಟುಕೊಂಡರು. ಯಾವ ಮನಸ್ಥಿತಿ ಹಾಗೂ ಪರಿಸ್ಥಿತಿಯಿಂದ ಆಕೆಯನ್ನು ಹಾಗೂ ಆಕೆಯ ಕುಟುಂಬವನ್ನು ಸಲಹಲು ಒಪ್ಪಿದರು ರಂಗಣ್ಣ ದಂಪತಿಗಳು..?


ನಕ್ಷತ್ರ ಮಲ್ಲಿಗೆಯಂತಿದ್ದ ಮಗ ರಾಜೇಂದ್ರ ಸಂಪೂರ್ಣವಾಗಿ ಅಲ್ಲದಿದ್ದರೂ.. ಒಂದು ಸಹಾಯ ಕೋರಿ ತಂದೆ-ತಾಯಿಯ ಬಳಿಗೆ ಬರುವ ಸಂದರ್ಭ ಬಂದಾಗ ಆತನ ಮನಸ್ಥಿತಿ ಹೇಗಿತ್ತು..? ಮಾಲಿನಿ ಅದನ್ನು ಒಪ್ಪಿದಳೇ...? ತಂದೆ - ತಾಯಿ ಹೇಗೆ ನಡೆದುಕೊಂಡರು..?


ಮಕ್ಕಳೆದುರಿಗೆ ಪರಾಧೀನರಾಗದ ಜೊತೆಗೆ, ಮಕ್ಕಳೆದುರು ಅನ್ನಕ್ಕೆ ಅಂಗಲಾಚದಂತೆ ಬಾಳಿದ ದಂಪತಿಗಳ ಬದುಕು ತಹಬದಿಕೆ ಬಂದದ್ದಕ್ಕೆ ನಿಜವಾಗಿಯೂ ಕಾರಣವೇನು..? 


ಏನೇ ಆದರೂ.. ಮಕ್ಕಳು ಎಷ್ಟೇ ಚೆನ್ನಾಗಿದ್ದರೂ ತಮ್ಮ ವೃದ್ಧಾಪ್ಯದ ದಿನಗಳಿಗೆ ಯಾರನ್ನೂ ಅಂಗಲಾಚುವ ಪರಿಸ್ಥಿತಿ ಬರಬಾರದೆಂದರೆ ತಮ್ಮದಾದ ಆಸ್ತಿ, ಹಣ ಹಾಗೂ ಸ್ವಾಭಿಮಾನ, ಧೈರ್ಯ ಎಷ್ಟು ಮುಖ್ಯ ಎಂಬುದನ್ನು ತೋರುವ ಕಥಾಹಂದರ ಇಲ್ಲಿದೆ. ಅಕಸ್ಮಾತ್ ವಿಶ್ವನಾಥ ಅವರ ಸಹಾಯಕ್ಕೆ ಬರದಿದ್ದರೆ ಅವರ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನೂ ಯೋಚಿಸಬೇಕಿದೆ.


ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಹಾಗೂ ಪರೋಪಕಾರದಿಂದ ಎಂದಿಗೂ ಕೇಡಾಗುವುದಿಲ್ಲ ಎಂಬ ಸಂದೇಶವನ್ನೂ ನೀಡುವ ಕಾದಂಬರಿಯ ಸುಲಲಿತ ಓದು.


~ ವಿಭಾ ವಿಶ್ವನಾಥ್

ಒಡೆಯಲಾರದ ಒಡಪು (ಪುಸ್ತಕ ಯಾನ -448)

ಪುಸ್ತಕದ ಶೀರ್ಷಿಕೆ : ಒಡೆಯಲಾರದ ಒಡಪು 

ಲೇಖಕರು : ಫಾತಿಮಾ ರಲಿಯಾ 

ಪ್ರಕಾಶಕರು : ಸಂಕಥನ

ಪ್ರಥಮ ಮುದ್ರಣ : 2023

ಪುಟಗಳು : 99

ಬೆಲೆ : 150 ರೂ. 


ಫಾತಿಮಾ ರಲಿಯಾ ಅವರ ಮೊದಲ ಕಥಾಸಂಕಲನ ಇದು. ಈ ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. ಸಾಮಾನ್ಯವಾಗಿ ಕಥಾ ಸಂಕಲನದ ಹೆಸರಿನ ಕಥೆಯೊಂದನ್ನು ಕಾಣುತ್ತೇವೆ. ಆದರೆ, ಈ ಕಥಾಸಂಕಲನದ ಶೀರ್ಷಿಕೆ ಈ ಎಲ್ಲಾ ಕಥೆಗಳಿಗೆ ಅನ್ವರ್ಥದಂತಿದೆ. 


ನವಿಲು ಬಣ್ಣದ ಸೀರೆ : ಅಜ್ಜಿ ಹೇಳಿದ ಮಾತೇ ಸುಚಿತ್ರಾ ತಲೆಯಲ್ಲಿ ಬಲವಾಗಿ ಬೇರೂರಿತ್ತು. 'ಅಪ್ಪ ದೇವರಂತಹ ಮನುಷ್ಯ. ಅವನ ಜೊತೆಗಿರುವ ಯೋಗ್ಯತೆ ಅಮ್ಮನಿಗಿಲ್ಲ' ಎನ್ನುವ ಮಾತು ಅವಳ ತಲೆಯಲ್ಲಿ ಗಟ್ಟಿಯಾಗಿ ಕೂತಿದ್ದರಿಂದಲೋ ಅಥವಾ ಅಮ್ಮನ ಚಾರಿತ್ರ್ಯದ ಕುರಿತ ಒಡಕು ಮಾತುಗಳಿಂದ ಅವಳು ಅವಮಾನ ಅನುಭವಿಸುತ್ತಿದ್ದರಿಂದಲೋ ಅಮ್ಮ ಹಾಗೂ ಅವಳ ನಡುವೆ ಕಂದಕವೇ ಸೃಷ್ಟಿಯಾಗುತ್ತಾ ಸಾಗಿತ್ತು. ಅಪ್ಪ ಕಣ್ಮರೆಯಾದ ದಿನದಿಂದ ಹುಟ್ಟಿದ ಪರಿಚಿತ ಮೌನ ಕಳಚುವ ಸಮಯ ಬಂದಿತೇ..? ಸುಚಿತ್ರಾಳಿಗೆ ಅಮ್ಮ ಮಾತ್ರವಲ್ಲದೆ ಅಪ್ಪನು ಬೇರೆಯದ್ದೆ ಬಗೆಯಲ್ಲಿ ಕಂಡ ಕಥೆ ಇದೆ. ಇಲ್ಲಿ ನವಿಲು ಬಣ್ಣದ ಸೀರೆಯ ನಂಟೇನು ಓದಿ ನೋಡಿ. ಸಮಾಜದ ನೋಟಕ್ಕೂ.. ಸತ್ಯಕ್ಕೂ.. ಎಷ್ಟು ಅಂತರವಲ್ಲವಾ..?


ಕವಿಶೈಲ : ತನ್ನ ಸಂಗಾತಿ ತನ್ನ ಹವ್ಯಾಸ, ಆಸಕ್ತಿಯನ್ನು ಪ್ರೋತ್ಸಾಹಿಸಲಿ ಹಾಗೂ ಸಮಾನ ಅಭಿರುಚಿಗಳಿರಲಿ ಎಂದೇ ಭಾವಿಸುವ ಹುಡುಗಿಗೆ ಸಿಕ್ಕ ಭಾವೀ ಪತಿ ತನ್ನ ಕವಿತೆಗಳ ಕುರಿತಾಗಿ ಆಸಕ್ತಿ ತೋರಿಸುತ್ತಿರುವುದಿಲ್ಲ. ಜೊತೆಗೆ ಪ್ರಾಕ್ಟಿಕಲ್ ಮನಸ್ಥಿತಿಯ ಅವನ ಭಾವಗಳು ಇಷ್ಟವಾಗದೆ ಅಪ್ಪನ ಬಳಿಯಲ್ಲಿಯೂ ಹಂಚಿಕೊಂಡಿದ್ದಳು. ಆದರೆ, ಕವಿಶೈಲದಲ್ಲಿ ನಡೆದ ಒಂದು ಘಟನೆ ಅವಳ ಆಲೋಚನೆಯ ದಿಕ್ಕನ್ನು ತಿರುಗಿಸಿದ ಕಥೆ ಇಲ್ಲಿದೆ.


ಸಂಕರನ ಹಸು ಕರು ಹಾಕಿತು : ಶಂಕರಣ್ಣನ ಮನೆಯ ಹಸು ಗೌರಿ ಕರು ಹಾಕಿದ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದ ಖತೀಜಮ್ಮ ಹಾಗೂ ಸರಸು ಗೌರಿಯ ಕರುವಿನ ದೇಖಿರೇಖಿ ನೋಡಿಕೊಂಡಿದ್ದರು. ಮೊದಲ ಬಾರಿಗೆ ಹಾಲು ಕರೆದು ಅದನ್ನು ಅರ್ಧರ್ಧ ಪಾಲು ಮಾಡಿ ಒಂದು ಪಾಲನ್ನು ಊರ ಭಜನಾ ಮಂದಿರಕ್ಕೂ, ಮತ್ತೊಂದು ಪಾಲನ್ನು ಮಸೀದಿಗೆಂದು ಇಟ್ಟಿದ್ದಾಗ ಸರಸು ಮಾಡಿದ್ದೇನು..? ಇದಕ್ಕೆ ಮೂಕ ಸಾಕ್ಷಿಯಾದ ಖತೀಜಮ್ಮ ಹೇಗೆ ಪ್ರತಿಕ್ರಿಯಿಸುತ್ತಾರೆ..? ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದ ಮೂರು ಕುಟುಂಬಗಳ ನಡುವಿನ ಭಾಂದವ್ಯದ ಕಥೆ ಇಲ್ಲಿದೆ. ಶಂಕರಣ್ಣ ಸಂಕರ ಆದ ಕಥೆ ಓದಿ ನೋಡಿ.


ತಾಯಿಬೇರು : ತಾನು ನೋಡಿದ ವರನಿಗಾಗಿ ತನ್ನ ದೇಹದಲ್ಲಿ ಒಂದು ಬದಲಾವಣೆ ಮಾಡಿಸಿಕೊಳ್ಳಲು ಹೊರಟಿದ್ದ ಸಮಿಯ್ಯಾ ಅದನ್ನು ನಿರೀಕ್ಷಿಸಿರಲಿಲ್ಲ. ಡಿಗ್ರಿ ಪರೀಕ್ಷೆ ರಿಸಲ್ಟ್ ಬಂದ ತಕ್ಷಣ ಶಿಕ್ಷಕಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿ ಬಂದಿದ್ದಳು. ಅದೇ ಸಮಯದಲ್ಲಿ ಬ್ರೋಕರ್ ಅಬ್ಬು ಕಾಕಾ ಒಂದು ಸಂಬಂಧವನ್ನು ತಂದಿದ್ದ . ಇದ್ದೊಬ್ಬ ಅಕ್ಕ ಸುರಯ್ಯಾಳ ಗಂಡ ತನ್ನ ದೊಡ್ಡಸ್ತಿಕೆ ತೋರಲು ಬಂದ ಸಂದರ್ಭದಲ್ಲಿ ಆತನನ್ನು ಎದುರಿಸಲು ಹೋದಾಗ ಆಗಿದ್ದೇನು..? ತಾಯಿಯ ಮುನ್ನೆಚ್ಚರಿಕೆಯ ಕ್ರಮ ಸಮಿಯ್ಯಾ, ಸುರಯ್ಯಾರ ಬದುಕನ್ನು ಯಾವ ದಿಕ್ಕಿಗೆ ಕರೆದೊಯ್ಯಿತು..? ಶಿಕ್ಷಣ ಹಾಗೂ ಸ್ವಾತಂತ್ರ್ಯ ಎಷ್ಟು ಮುಖ್ಯವಾಗುತ್ತದೆ ಎಂದು ಹೇಳುವ ಕತೆ.


ಬೇಲಿಯಾಚೆಗೂ ಬೆಳೆದ ನೆರಳು : ಶ್ರೀಧರನ ಅಮ್ಮ ಸಾವಿತ್ರಮ್ಮ ಹಾಗೂ ಪಾತುಞ ಯ ಗಳಸ್ಯ-ಕಂಠಸ್ಯದ ಸ್ನೇಹದೊಂದಿಗೆ ತೆರೆದುಕೊಳ್ಳುವ ಕಥೆ ಅವರಿಬ್ಬರ ಮಕ್ಕಳು ಶ್ರೀಧರ ಹಾಗೂ ಜೈನಬಾಳ ಬದುಕನ್ನು ತೆರೆದಿಡುತ್ತಾ ಎರಡು ದಿಕ್ಕಿನೆಡೆಗೆ ಸಾಗುತ್ತಾ ಅವರವರ ಸಂಸಾರ ಕಟ್ಟಿಕೊಂಡಿದ್ದರು. ಕೊರೊನಾ ಸಮಯದಲ್ಲಿ ಸಾವಿತ್ರಮ್ಮನ ಸಾವಿನ ನಂತರ ಯಾವ ರೀತಿ ಬದುಕಿದರು..? ಶ್ರೀಧರನ ಪತ್ನಿ ಯಮುನಾ ಪಾತುಞ ಮನೆಯವರನ್ನು ಯಾವ ರೀತಿ ಕಂಡಳು ಹಾಗೂ ಯಾರು ಯಾರ ಸಹಾಯಕ್ಕೊದಗಿದರು..? ಬೇಲಿಯಾಚೆಗೆ ಬೆಳೆದ ನೆರಳು ತಂಪು ಕೊಟ್ಟಿತೇ ಅಥವಾ ತಡೆಯಾಯಿತೇ..?


ಲೆಕ್ಕ ಪುಸ್ತಕ : ಮಸೀದಿಯ ಮಾಸಿಕ ವಂತಿಗೆಯನ್ನು ಕಡ್ಡಾಯವಾಗಿ ಹೆಚ್ಚಳ ಮಾಡುವ ಯೋಜನೆ ಅಧ್ಯಕ್ಷರಾದ ಅಬ್ಬೋನು ಹಾಜಿಯವರಿಗೆ ಇಷ್ಟವಾಗಿರಲಿಲ್ಲ. ಆದರೆ, ಊರಿಗೆ ಹೊಸ ಶ್ರೀಮಂತನಾಗಿದ್ದ ರಫೀಕ್ ನನ್ನು ಮೆಚ್ಚಿಸುವ ಉಮೇದಿನಲ್ಲಿದ್ದ ಹಲವರಿಗೆ ಅದು ಲೆಕ್ಕಕ್ಕಿರಲಿಲ್ಲ. ಹೀಗೆ ವಂತಿಗೆಯ ಲೆಕ್ಕಕ್ಕೊಂದು ಕಾನೂನು ಬಂದು ವಂತಿಕೆ ಬಾಕಿ ಇಟ್ಟು, ಕಾನೂನು ಮುರಿದವರಿಗೆ ಶಿಕ್ಷೆಯೊಂದು ಜಾರಿಯಾಗಿತ್ತು. ಆದರೆ, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದು ರಫೀಕನ ತಂದೆ ಅದ್ರಾಮ. ಹಾಜಿಯವರ ಲೆಕ್ಕ ಪುಸ್ತಕದ ಲೆಕ್ಕ ಯಾವ ರೀತಿ ಇತ್ತು..?


ಶಕುಂತಲೆ : ಕೆಲವೇ ತಿಂಗಳುಗಳ ಸ್ನೇಹ ಹುಟ್ಟಿಕೊಂಡ ಪ್ರೀತಿ ಇಬ್ಬರನ್ನೂ ಜೊತೆಯಾಗಿಸದೆ ಬೇರೆ-ಬೇರೆಯ ಸಂಸಾರವನ್ನೇ ಕಟ್ಟಿಕೊಟ್ಟಿತ್ತು. ಇಲ್ಲಿ ಯಾರು ಇಷ್ಟು ಸುಖಿ ಎನ್ನುವುದಕ್ಕಿಂತಲೂ.. ಅವನ ಮಗು ತೀರಿಕೊಂಡ ಸುದ್ದಿ ಕೇಳಿದಾಗ ಇವಳಲ್ಲಿ ಹುಟ್ಟಿದ ಭಾವಗಳೇನು..? ತೀರಿಕೊಂಡ ಮಗುವಿನ ಮನೆಗೆ ಹೋಗುವ ಮುನ್ನಿನ ಭಾವುಕತೆ, ಚರ್ಚೆ, ತುಮುಲ, ತೊಳಲಾಟಗಳು ಇದಲ್ಲದರ ಜೊತೆಗೆ ಕಥೆಯ ಕೊನೆಯಲ್ಲೊಂದು ತಿರುವಿದೆ.


ಉಮ್ಮನ ಆಲಿಕತ್ತ್ : ಯಾರ ಬಳಿಯೂ ಕೈಚಾಚದ ಖತೀಜಾ ತನ್ನ ದೊಡ್ಡ ಮಗಳು ಹಸೀನಾ ಹೈಸ್ಕೂಲ್ ಸೇರಲು 2,000 ದುಡ್ಡಿಗಾಗಿ ತನ್ನ ಮೈದುನನ ಬಳಿ ಕೈಯೊಡ್ಡಿದ್ದಳು. ಕುಡುಕ ಗಂಡ ಮನೆಯಲ್ಲಿದ್ದ ಹಣವನ್ನು ಬಿಡದವನು. ಉಮ್ಮನ ಆಲಿಕತ್ತ್ ಅವಳ ಹಣದ ನೆರವಿಗೆ ಬಂದಿತಾದರೂ ಊಹಿಸದ ಘಟನೆಯೊಂದು ನಡೆದು ಹಣ ಹಸೀನಾಳ ನೆರವಿಗೆ ಬಾರದೆ ಹೋಯಿತು. ಹಣದ ಅಸಹಾಯಕತೆ ಅವಳಿಂದ ಯಾವ ಕೆಲಸ ಮಾಡಿಸಿತು..? ಅವಳು ತನ್ನ ಪಾಪಪ್ರಜ್ಞೆಯನ್ನು ಕಳೆದುಕೊಂಡದ್ದು ಹೇಗೆ..? ಹಣಕ್ಕಾಗಿ ಮಾಡಿದ ತಪ್ಪು ಅವಳ ಕುರಿತ ಅಭಿಪ್ರಾಯವನ್ನು ಬದಲಾಯಿಸದೆ ಅವಳನ್ನು ಬೇರೆಯದ್ದೇ ರೂಪದಲ್ಲಿ ತೋರಿರುವ ಕಥೆ ಇಲ್ಲಿದೆ.


ನೆಳಲು-ಬೆಳಕು : ಅಪರ್ಣ ಕೊನೆಯ ಟ್ರೈನಿಗೆ ಹೊರಡುವ ಗಡಿಬಿಡಿ, ಧಾವಂತ. ನಂತರ ನಿದ್ದೆಯ ಮಂಪರಿನಲ್ಲಿ ಮುಂದಿನ ಸ್ಟಾಪ್ ನಲ್ಲಿ ಇಳಿದಾಗ ಮಧ್ಯರಾತ್ರಿಯ ಆ ರೈಲ್ವೆ ಸ್ಟೇಷನ್ ನಲ್ಲಿ ನಡೆದ ಘಟನೆ ಏನು..? ನಾವು ನೋಡುವವರು ಎಷ್ಟೋ ಬಾರಿ ನಾವಂದುಕೊಂಡಂತೆ ಒಳ್ಳೆಯವರೂ ಆಗಿರುವುದಿಲ್ಲ ಅಂದುಕೊಂಡಷ್ಟು ಕೆಟ್ಟವರಾಗಿರುವುದಿಲ್ಲ. ಮಾನವೀಯತೆ ಇನ್ನೂ ಇದೆ ಎಂಬುದನ್ನು ತೋರುವ ಕಥೆ ಇಲ್ಲಿದೆ.


ಅವನ ಬಿಟ್ಟು ಅವಳು ಯಾರು ? : ಮೊದಮೊದಲು ಹವ್ಯಾಸದಂತೆ, ಬಿಡುವು ಕಳೆಯುವ ಸಾಧನದಂತೆ ನಯನಾಳಿಗೆ ಅಂಟಿಕೊಂಡ ಕ್ಲಬ್ ಹೌಸ್ ನ ಸಾಂಗತ್ಯ ಇತ್ತೀಚೆಗೆ ಹೆಚ್ಚಾಗಿತ್ತು. ಅವಳು ಒಳ್ಳೆಯ ಮಾತುಗಾತಿಯಾಗಿದ್ದಳು. ಅದಕ್ಕಾಗಿಯೇ ಬಿಡುವು ಮಾಡಿಕೊಂಡಂತೆ ಅದರೊಳಗೆ ಕಳೆದು ಹೋದಂತಿದ್ದಳು. ಭ್ರಮರ ಎನ್ನುವ ಹೆಸರಲ್ಲಿ ಲಾಗಿನ್ ಆಗಿದ್ದವಳ ಚರ್ಚೆಗಳು ಹೇಗಿದ್ದವು..? ಸ್ಲಿಮ್ ಎಂಬ ಮೋಡಿಗಾರ ಕವಿಯ ಮೋಡಿಗೆ ಸಿಕ್ಕವಳು ಆತನನ್ನು ಭೇಟಿಯಾಗಲು ಹೊರಟ ಕ್ಷಣಗಳು ಭೇಟಿಯಾದ ಸಂದರ್ಭದ ಅವಳ ಅನಿರೀಕ್ಷಿತ ಬದುಕಿನ ತಿರುವು ಇಲ್ಲಿದೆ. ಶೀರ್ಷಿಕೆ ಅದನ್ನು ಸೂಚಿಸದಿದ್ದರೆ ಈ ಕಥೆಯ ಅಂತ್ಯ ಊಹಿಸುವುದು ಕಷ್ಟ. 


ಖಬರ್ ಸ್ತಾನ : ಖಾಸಿಮನ ಬದುಕಿನ 5 ದಶಕಗಳಲ್ಲಿ ಆತ ಮಾಡದೆ ಇರುವ, ಕಲಿಯದೆ ಇರುವ ಕೆಲಸಗಳೇ ಇಲ್ಲವೇನೋ ಎಂಬಂತಾಗಿತ್ತು. 30 ಚಿಲ್ಲರೆ ವರ್ಷಗಳಲ್ಲಿ ಖಬರಸ್ತಾನವೆಂದಾಗಲಿ, ಸ್ಮಶಾನವೆಂದಾಗಲಿ ಭೇದವೆಣಿಸದೆ ಗುಂಡಿ ತೋಡುತ್ತಿದ್ದವನು ಬ ತನ್ನ ಖಾಸ ಗೆಳೆಯನಂತಿದ್ದ ಬಸಯ್ಯನ ತಾತ ತೀರಿಕೊಂಡಿದ್ದಾಗ ಅಲ್ಲಿ ಗುಂಡಿ ತೆಗೆಯಲು ಹೋಗಿದ್ದವನ ಫೋನಿಗೆ ಬಂದ ಫೋನು ಆತನಿಗೆ ಮಸೀದಿಯಿಂದ ಪತ್ರವೊಂದು ಬರುವಂತೆ ಮಾಡಿತು. ಆ ನೋಟಿಸ್ ನಲ್ಲಿ ಇದ್ದದ್ದೇನು..? ಬಸಯ್ಯ ಆತನಿಗೆ ಹೇಳದ ಸತ್ಯವೂ ಮತ್ತೊಂದಿತ್ತು. ಆ ಸತ್ಯ ನೋಟಿಸಿನ ಮತ್ತೊಂದು ಮುಖದಂತಿದೆ.


ಆವರ್ತ : ಆತ ಕಳಕಳಿಯ ಗೆಳೆಯ ಅಭಿ. ನೋಡಿದವರೆಲ್ಲರೂ ಅಸೂಯೆ ಪಡುವಂತಹ ಸ್ನೇಹ ಅವಳು ಮತ್ತು ಅಭಿಯದ್ದು. ಅವಳ ಪ್ರೇಮಿಯಾಗಿ ಬಂದ ಆಕಾಶ್ ಅವಳಿಗೆ ತಕ್ಕವನಲ್ಲವೆಂದು ಹೇಳಲು ಹೊರಟ ಅಭಿಗೆ ಅವಳಿಂದ ಸಿಕ್ಕ ಉತ್ತರ ಅವರಿಬ್ಬರ ಸ್ನೇಹವನ್ನು ಬಹಳ ಕಾಲ ದೂರವಿರಿಸಿತ್ತು. ಸ್ನೇಹ ಮಾತ್ರವಲ್ಲ.. ಪ್ರೀತಿಯೂ ದೂರವಾದ ದಿನಗಳನ್ನು ಎದುರಿಸಿದವಳಿಗೆ ಸ್ನೇಹ ಹಾಗೂ ಪ್ರೀತಿ ಎರಡೂ ಎದುರಿನಲ್ಲಿದ್ದವು. ಒಂದು ಆವರ್ತದ ಘಟನಾವಳಿಗಳ ಕತೆ ಇದು.


ಈ ಕಥಾ ಸಂಕಲನದಲ್ಲಿ ತರಹೇವಾರಿ ಸೂಕ್ಷ್ಮ ಸಂಬಂಧಗಳನ್ನು ಕಾಣಬಹುದು. ಅದು ಅಮ್ಮ-ಮಗಳದ್ದಾಗಿರಬಹುದು. ವಿವಾಹದ ಆಚೆಗಿನ ಸಂಬಂಧ, ಸಂಗಾತಿಯ ಆಯ್ಕೆ, ಮದುವೆ, ಪ್ರೀತಿ ಗೆಳೆತನ ಹೀಗೆ.. ಅದನ್ನು ನವಿರಾಗಿಯೇ ಪ್ರಬುದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ಚೆಂದದ ಕಥೆಗಳ ಓದು.

~ ವಿಭಾ ವಿಶ್ವನಾಥ್

ತಿರುಗಿ ನಿಂತ ಪ್ರಶ್ನೆ


ಕವಿತೆಯ ಶೀರ್ಷಿಕೆ : ತಿರುಗಿ ನಿಂತ ಪ್ರಶ್ನೆ 

ಲೇಖಕರು : ಡಾ|| ವಿಜಯಾ ದಬ್ಬೆ


ಅಪ್ಪ, ಜನಕ ಕಲಿಸಿದ ಅಕ್ಷರವಿತ್ತು 

ಸಾಕವ್ವೆಯರು ಹೇಳಿಕೊಟ್ಟ ಹಾಡುಮಟ್ಟಿತ್ತು

ಸುತ್ತಮುತ್ತ ತಾಡಪತ್ರ ಚೆಲ್ಲಿತ್ತು 

ಯಾಕೆ ಸುಮ್ಮನೆ ಕುಳಿತ ಸೀತೆ ನೀನು ?


ಅಶೋಕದ ನೆರಳಿತ್ತು 

ನಿನ್ನ ತುಂಬಾ ಶೋಕವಿತ್ತು 

ಕೈತುಂಬ ಬಿಡುವಿತ್ತು 

ಇನ್ನೇನು ಬೇಕಿತ್ತು ?

ಯಾಕೆ ಸುಮ್ಮನೆ ಕುಳಿತ ಸೀತೆ ನೀನು ?


ಆಮೇಲೂ ಬಿಡುವಿತ್ತು 

ಲವಕುಶರು ಬೆಳೆದು 

ಆಶ್ರಮ ಪ್ರಶಾಂತವಿತ್ತು 

ನಿನ್ನೆದುರು ಹರಿದು ಹೋದ 

ಇಡೀ ಜೀವನವಿತ್ತು 

ಯಾಕೆ ಸುಮ್ಮನೆ ಕುಳಿತ ಸೀತೆ ನೀನು ?


ನನ್ನ ಪ್ರಶ್ನೆಗಳಿಗೆಲ್ಲ 

ಅವಳ ಭೂಮಿ ತೂಕದ ಮೌನ 

ಕತ್ತತ್ತಿ ನೋಡಿದರೂ 

ಅವಳ ಕಣ್ಣ ಭಾವಗಳು 

ಶಬ್ದವಾಗದೆ ನನ್ನ ಕಣ್ಣಿಗಿಳಿದು 

ತಿರುಗಿ ನಿಂತವು ಕೇಳಿದ್ದ ಪ್ರಶ್ನೆಗಳು


ಸೀತೆಯನ್ನು ಪ್ರಶ್ನಿಸುವ ಹಾಗೂ ಅವಳ ಆಂತರ್ಯವನ್ನು ಕೆದಕುವ ಪ್ರಯತ್ನದಲ್ಲಿ ಸಿಕ್ಕ ಉತ್ತರ ಅವಳ ಭೂಮಿ ತೂಕದ ಮೌನ ಎನ್ನುತ್ತಾರೆ. 

ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಇರಬೇಕಿಲ್ಲ. ಉತ್ತರ ನೀಡಬೇಕಿಲ್ಲ. ಮೌನ ಎಲ್ಲಕ್ಕಿಂತಲೂ ಪ್ರಬಲವಾದ ಉತ್ತರ. ಅದರಲ್ಲೂ ಕಣ್ಣ ಭಾವನೆಗಳು ಕೊಡುವ ಉತ್ತರ, ಶಬ್ದದ ಮೂಲಕ ಕೊಡುವ ಉತ್ತರಕ್ಕಿಂತಲೂ ಹೆಚ್ಚಿನ ಅರ್ಥದ ಉತ್ತರವನ್ನು ದೊರಕಿಸಿಕೊಡುತ್ತದೆ.


ಜನಕ ಮಹಾರಾಜನ ಮಗಳಾದ ಸೀತೆಗೆ ವಿದ್ಯೆಯಿತ್ತು. ಹಾಡುವುದು ಗೊತ್ತಿತ್ತು. ಹಾಡು ಕಟ್ಟುವ ಸಾಮರ್ಥ್ಯವೂ ಇತ್ತು. ಹಾಗೂ ಓಲೆಗರಿಗಳೂ ಬೇಕಾದಷ್ಟಿದ್ದವು. ಆದರೂ.. ಯಾವುದರಲ್ಲಿಯೂ ತೊಡಗಿಸಿಕೊಳ್ಳದ ಸೀತೆಯ ಆಂತರ್ಯ ಏನಿರಬಹುದು..?


ಇನ್ನು ರಾವಣನ ಸೆರೆಯಲ್ಲಿದ್ದಾಗ ಸಮಯವಿತ್ತು. ಶೋಕವೂ ಇತ್ತು. ಮನಸ್ಸಿನ ನೋವನ್ನು ಹೊರಹಾಕಲು ಬಹಳಷ್ಟು ಅವಕಾಶ, ಸಮಯವಿತ್ತಾದರೂ .. ಸೀತೆ ಸುಮ್ಮನೆ ಕುಳಿತದ್ದೇಕಿರಬಹುದು..?


ಮಕ್ಕಳಾದ ಲವ-ಕುಶರು ಬೆಳೆದು ದೊಡ್ಡವರಾದ ನಂತರ ಕೈತುಂಬ ಬಿಡುವಿದ್ದರೂ.. ಪ್ರಶಾಂತವಾದ ವಾತಾವರಣವಿದ್ದರೂ.. ಸೀತೆ ಸುಮ್ಮನೆ ಕುಳಿತದ್ದೇಕೆ..? ಅದರಲ್ಲಿಯೂ ಅವಳ ಇಡೀ ಜೀವನಗಾಥೆ ಬೇರೊಂದು ರೂಪ ತಡೆಯಬಹುದಾದ ಸಾಧ್ಯತೆ ಇದ್ದಾಗಲೂ ಸೀತೆ ಸುಮ್ಮನಿದ್ದದ್ದೇಕೆ..?


ಇಂದಿನ ದಿನಮಾನಗಳಲ್ಲಿ ಇರುವ ವಿದ್ಯೆ ಹಾಗೂ ಹವ್ಯಾಸವನ್ನು.. ಬರಹ, ಹಾಡು, ಕಸೂತಿ ಕಲೆಯ ರೂಪ ಹೀಗೆ ಯಾವುದಾದರೂ ಒಂದರ ಮೂಲಕ ವ್ಯಕ್ತಪಡಿಸಲು ತೊಡಗುತ್ತಾರೆ. ಶೋಕ, ಮನದ ನೋವುಗಳು.. ಬಿಡುವಿನ ಸಮಯದಲ್ಲಿ ಕಥೆ, ಕಾವ್ಯದ ರೂಪ ತಳೆಯುತ್ತವೆ. ಮಕ್ಕಳು ಬೆಳೆದು ದೊಡ್ಡವರಾದರಂತೂ ಮನೆಯಲ್ಲಿ ಹೆಚ್ಚಿನ ಜವಾಬ್ದಾರಿಗಳಿಲ್ಲದಿದ್ದಾಗ ತಮ್ಮನ್ನು ತಾವು ಪುನರ್ ಅವಲೋಕಿಸಿಕೊಳ್ಳಲು ಹಾಗೂ ಯಾವುದಾದರೂ ಒಂದು ರೂಪದಲ್ಲಿ ಕಂಡುಕೊಳ್ಳಲು ಬಯಸುತ್ತಾರೆ. ಇಂದಿನ ಹೆಚ್ಚಿನ ಮಹಿಳೆಯರು ಹೀಗೆ ಯಾವುದೋ ಒಂದು ಘಟ್ಟದಲ್ಲಿ ತಮ್ಮ ಬದುಕಿನ ತಿರುವನ್ನು ಕಂಡುಕೊಳ್ಳುತ್ತಾರೆ. ಸಿಕ್ಕ ಅವಕಾಶವನ್ನು ಬಿಡದೆ ತಮ್ಮ ಸಾಮರ್ಥ್ಯವನ್ನು ಒರೆ ಹಚ್ಚುತ್ತಾರೆ. ನೋವನ್ನು, ಕಷ್ಟವನ್ನು ದಾಟಿಸದಿದ್ದರೂ ಅನುಭವವನ್ನಾದರೂ ದಾಟಿಸುವವರಿರುತ್ತಾರೆ.


ಇಂತಹ ಆಧುನಿಕ ದಿನಮಾನಗಳಲ್ಲಿ ಆಲೋಚನೆಗಳಲ್ಲಿ ಸೀತೆಯ ಈ ನಡೆ ಪ್ರಶ್ನಿಸುವಂತೆ ಮಾಡುತ್ತದೆ. ಆದರೆ, ಸೀತೆಯ ಮೌನವೇ ಎಲ್ಲಕ್ಕೂ ಉತ್ತರವಾದಾಗ.. ಅದು ಪೂರ್ಣವಿರಾಮವಾಗದೆ ತಿರುಗಿ ನಿಂತ ಪ್ರಶ್ನೆಗಳು ನಮ್ಮಲ್ಲಿ ಇನ್ನೂ ಹಲವು ಆಲೋಚನೆಗಳನ್ನು ಮೂಡಿಸುವುದಂತು ಹೌದು.


ನನಗೆ ದಕ್ಕಿದಂತೆ ಕವಿತೆಯ ಆಂತರ್ಯವನ್ನು ತೆರೆದಿರುವ ಪ್ರಯತ್ನ ಮಾಡಿದ್ದೇನೆ. 


ಡಾ|| ವಿಜಯಾ ದಬ್ಬೆಯವರ ಈ ಕವಿತೆ 1996ರ ಜನವರಿ-ಮಾರ್ಚ್ ಅಚಲ ದಶಮಾನೋತ್ಸವ ಸಂಚಿಕೆಯಲ್ಲಿ ಪ್ರಕಟಿತ.


~ವಿಭಾ ವಿಶ್ವನಾಥ್

ಶನಿವಾರ, ಮೇ 16, 2026

ಗೆಲುವಿನ ಮುನ್ನಡೆ (ಬೆಳಕಿಂಡಿಯ ಕತೆಗಳು - 20)


"ಕಂದಾ, ನೀನು ಆಡುವಾಗ ನಿನ್ನ ಆಟದ ಮೇಲೆ ಮಾತ್ರ ಗಮನ ಹರಿಸು. ಆಗಷ್ಟೇ ನೀನು ಗೆಲುವಿನ ಹಾದಿಯತ್ತ ಸಾಗಬಹುದು. " ಎಂದು ಹೇಳಿದ್ದ ತಾಯಿಯ ಮಾತು ನವೋದಯ ಬಾಲ್ ಬ್ಯಾಡ್ಮಿಂಟನ್ ತಾರೆ ಶಿಖಾಳಿಗೆ ನೆನಪಾಗತೊಡಗಿತು. 


ಆದರೂ, ಅವಳ ಮುಂದಿದ್ದದ್ದು ಈಗಾಗಲೇ ಗೆಲುವು ಸಾಧಿಸಿ ಗೆಲುವಿನ ಉತ್ತುಂಗದಲ್ಲಿ ತೇಲುತ್ತಿದ್ದ ಬ್ಯಾಡ್ಮಿಂಟನ್ ತಾರೆ ದಿಯಾ. ಇಬ್ಬರ ಆಟವೂ ಶುರುವಾಯಿತು. ಶಿಖಾ ಮೊದಲು ನರ್ವಸ್ ಆದುದರಿಂದ ದಿಯಾ ಆ ಸೆಟ್ ನಲ್ಲಿ ಮುನ್ನಡೆದಳು. ದಿಯಾಳಿಗೆ ಆ ಸೆಟ್ ಸರಾಗವಾದರೂ ಮುಂದಿನ ಸೆಟ್ ನಲ್ಲಿ ಗೆದ್ದದ್ದು ಶಿಖಾ. 3-7 ರಿಂದ ಮುನ್ನಡೆ ಸಾಧಿಸಿದ್ದಳು. ಕಡೆಯ ಸೆಟ್ ನಲ್ಲಿಯೂ ಕೂದಲೆಳೆಯ ಅಂತರದಲ್ಲಿ 5-6 ರಿಂದ ಗೆಲುವು ಸಾಧಿಸಿ ಗೆದ್ದಿದ್ದಳು ಶಿಖಾ.


ಅವಳ ಈ ಗೆಲುವಿನ ಗುಟ್ಟಿನ ಕುರಿತು ಎಲ್ಲರಿಗೂ ಹೇಳುವಾಗ ಹೇಳಿದ್ದು "ಎದುರಾಳಿಯ ಕುರಿತು ಗಮನ ನೀಡುವುದಕ್ಕಿಂತ ನಮ್ಮ ಕುರಿತು ಗಮನ ನೀಡಿದರೆ ಗೆಲುವಿನತ್ತ ಮುನ್ನಡೆಯಬಹುದು. ಆಟದಲ್ಲಿಯೂ.. ಬದುಕಲ್ಲಿಯೂ" ಎಂದಾಗ ಸಿಕ್ಕ ಚಪ್ಪಾಳೆ ಮುಗಿಲು ಮುಟ್ಟಿತ್ತು.


~ವಿಭಾ ವಿಶ್ವನಾಥ್

ಹೊಸ ಪ್ರಪಂಚ (ಬೆಳಕಿಂಡಿಯ ಕತೆಗಳು - 19)


ಶಾಲೆ ಎಂಬುದು ವಿದ್ಯಾಲಯವಾದರೂ ಸರಸ್ವತಿ ಕೊಠಡಿಗಳಲ್ಲಿ ಮಾತ್ರ ನೆಲೆಸಿರುವುದಿಲ್ಲ. ವಿದ್ಯೆ ಕೂಡಾ ಬರೀ ನಾಲ್ಕು ಕೊಠಡಿಗಳ ಮಧ್ಯದಲ್ಲಿ ಮಾತ್ರ ದೊರೆಯುವುದಿಲ್ಲ ಎಂಬುದು ಅರಿವಾಗಲು ಆ ದಿನವೇ ಬರಬೇಕಾಯ್ತು.


ಅವತ್ತು ಬಂಗಾರಿ ಶಾಲೆಗೆ ಹೊರಟ ಮೊದಲ ದಿನ. ಆಕೆಯನ್ನು ಬಿಡಲು ಹೊರಡುವ ಹಿಂದಿನ ದಿನದಿಂದಲೇ ತಳಮಳ. ಹೇಗೋ ಏನೋ ಎಂಬ ಅಳುಕು.. ಹೊಂದಿಕೊಳ್ಳುವಳೋ ಇಲ್ಲವೋ ಎಂಬ ಆತಂಕ. ಅದನ್ನೆಲ್ಲಾ ಸುಳ್ಳು ಮಾಡುವ ಹಾಗೆ ಅವಳು ಶಾಲೆಗೆ ಹೋಗತೊಡಗಿದಳು. ಒಂದೆರಡು ದಿನ ಮೊದಮೊದಲಿಗೆ ಅತ್ತರೂ ನಂತರದಲ್ಲಿ ಇಷ್ಟಪಟ್ಟೆ ಹೋಗತೊಡಗಿದಳು.


ನಾನೇ ಪ್ರಪಂಚವಾಗಿದ್ದ ಅವಳಿಗೆ ಹೊಸ ಪ್ರಪಂಚ ದೊರೆತಿತ್ತು. ನನ್ನ ಕೈ ಬಿಡಿಸಿಕೊಂಡು ಸ್ನೇಹಿತರೊಡನೆ ಸೇರಲು ತವಕದಿಂದ ತಿರುಗಿಯೂ ನೋಡದೆ ಆಕೆ ಅತ್ತ ಹೋಗುತ್ತಿದ್ದರೆ ನನಗೆ ಜ್ಞಾನೋದಯವಾಗತೊಡಗಿತ್ತು. ಮಕ್ಕಳಿಗೆ ಪೋಷಕರೇ ಪ್ರಪಂಚವಲ್ಲ.. ಹೊಸ ಪ್ರಪಂಚವೇ ಅವರಿಗಾಗಿ ಕಾಯುತ್ತಿದೆ. ಅವರೂ ಅದನ್ನು ಸೃಷ್ಟಿಸಿಕೊಳ್ಳಲು ಕಾತುರರಾಗಿದ್ದಾರೆ ಎಂದು.


~ವಿಭಾ ವಿಶ್ವನಾಥ್

ಆತ್ಮಹತ್ಯೆ ಅನಿವಾರ್ಯವಾಗಬಾರದು (ಬೆಳಕಿಂಡಿಯ ಕತೆಗಳು - 18)


ಆ ದಾರಿಯಲ್ಲೆಲ್ಲಾ ನಾನು ಓಡಾಡುವಾಗ ಅದ್ಯಾಕೋ ಅಪ್ರಯತ್ನವಾಗಿ ಕಣ್ಣು ಆ ಕಡೆ ಸೆಳೆದುಬಿಡುತ್ತದೆ. ಅದು ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳ. ಅದೇ ಸೇತುವೆಯ ಮೇಲೆ ನಿಂತಿದ್ದನ್ನು ಕಂಡಿದ್ದವರು ಯಾರೋ ಹೇಳಿದ್ದರು.. ಮಾಣಿ ಅಲ್ಲಿ ನಿಂತಿದ್ದ ಎಂದು. ಸಾಕ್ಷಿಗಾಗಿ ಅವನ ಚಪ್ಪಲಿ, ಮೊಬೈಲ್ , ಪತ್ರ ಎಲ್ಲವೂ ಸಿಕ್ಕಿದ್ದವು. 


ಅವನ ಬಿಸಿನೆಸ್ ಅವನ ಕೈ ಹಿಡಿಯದೆ ನಷ್ಟವಾಗಿತ್ತಂತೆ. ಸಾಲ ಕೂಡಾ ಮಾಡಿದ್ದ. ಅಪ್ಪನೂ ಬದಲಿ ಹೇಳದೆ ಧೈರ್ಯ ತುಂಬಿದ್ದರು. ಎಲ್ಲರಿಗೂ ಕಾಲ ಬರುತ್ತದೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಎಂದಿದ್ದರು. ಇದ್ದಕ್ಕಿದ್ದ ಹಾಗೆ ಆ ವಾರದ ಕೊನೆಯಲ್ಲಿ ಬಂದು ಎಲ್ಲರೊಡನೆ ಖುಷಿಯಾಗಿದ್ದವನನ್ನು ಕಂಡು ಎಲ್ಲವೂ ಸರಿಯಾಯಿತೆಂದುಕೊಳ್ಳುವಷ್ಟರಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ.


ಪ್ರತಿ ಸೋಲಿಗೂ ಉತ್ತರವಾಗಿ ಗೆಲ್ಲುವ ಛಲ ಅನಿವಾರ್ಯವಾಗಬೇಕೋ ಬದಲಿಗೆ ಹೇಡಿತನವಲ್ಲ. ಬದುಕಿಗೆ ಸವಾಲಾಗಿ ನಿಲ್ಲುವುದು ಅನಿವಾರ್ಯವಾಗಬೇಕೋ ಹೊರತು ಬೆನ್ನು ತೋರಿಸಿ ಓಡುವುದಲ್ಲ. ಸಾಧನೆ ಅನಿವಾರ್ಯವಾಗಬೇಕೋ ಹೊರತು ಆತ್ಮಹತ್ಯೆಯಲ್ಲ. ಇದನ್ನು ಪ್ರತಿ ಬಾರಿ ನಿಂತು ಸಾರಿ ಸಾರಿ ಹೇಳಬೇಕೆನ್ನಿಸುತ್ತದೆ.


~ವಿಭಾ ವಿಶ್ವನಾಥ್