ಶನಿವಾರ, ಜುಲೈ 4, 2026

ಊರ್ವಶಿ (ಪುಸ್ತಕ ಯಾನ - 464)


ಪುಸ್ತಕದ ಶೀರ್ಷಿಕೆ : ಊರ್ವಶಿ

ಲೇಖಕರು : ಗೊರೂರು ರಾಮಸ್ವಾಮಿ ಅಯ್ಯಂಗಾರ್ 

ಪ್ರಕಾಶಕರು : ಐಬಿಎಚ್ ಪ್ರಕಾಶನ

ಮರು ಮುದ್ರಣ : 2018

ಪುಟಗಳು : 280

ಬೆಲೆ : 225 ರೂ.


ಕೃತಿ ಕುರಿತು ಹೇಳುವಾಗ 

"ಅಹಲ್ಯೋದ್ಧಾರದ ಕಥೆಗಿಂತ ಸೀತಾಲಕ್ಷ್ಮಿಯ ಕಥೆ ಮಹತ್ವದಲ್ಲಿ ಕಡಿಮೆಯಾದದ್ದೇನಲ್ಲ. ಅದಕ್ಕೆ ಪ್ರತಿಯಾಗಿ ಇದು ಒಂದು ಕೈ ಮಿಗಿಲಾದುದೆಂದೇ ನನ್ನ ಎಣಿಕೆ" ಎನ್ನುತ್ತಾರೆ. 

ಇದಕ್ಕೆ ನಾನು ಸಹ ಸಹಮತಿ ಸೂಚಿಸುತ್ತೇನೆ. 


ಊರ್ವಶಿ ಎಂಬ ಶೀರ್ಷಿಕೆಯಿದ್ದರೂ ಈ ಹೆಸರಿನ ವ್ಯಕ್ತಿ ಈ ಕಾದಂಬರಿಯಲ್ಲಿಲ್ಲ. ಬದಲಾಗಿ ಇದೊಂದು ರೂಪಕದಂತೆ ಕೊಟ್ಟಿರುವ ಹೆಸರು. ಊರ್ವಶಿಯ ಸೌಂದರ್ಯ ಹಾಗೂ ಅದಕ್ಕೆ ಆಕರ್ಷಿತರಾಗುವ ಗಂಡುಗಳ ಹೋಲಿಕೆಯನ್ನು ನೀಡಿದ್ದಾರೆ. ಇದು ಸಾಮಾಜಿಕ ಕಾದಂಬರಿ.


ಈ ಕಾದಂಬರಿಯ ಕೇಂದ್ರಬಿಂದು ಸೀತಾಲಕ್ಷ್ಮಿ. ಬಾಲ್ಯದಿಂದಲೂ ಯೌವ್ವನದವರೆಗೂ ಮೋಹಕವಾಗಿ ಬೆಳೆಯುತ್ತಿದ್ದ ಅವಳ ಚೆಲುವು, ಬೆರಗು ಹಾಗೂ ಅವಳ ಕುರಿತು ಆರಾಧನೆ ಬೆಳೆಸಿಕೊಂಡಿದ್ದವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. 


ಸೀತಾಲಕ್ಷ್ಮಿ ಮಲ್ಲಿಗೆ ಹಳ್ಳಿಯ ಶಾನುಭೋಗ ರಾಮಣ್ಣನವರ ಮೂರನೆಯ ಮತ್ತು ಕೊನೆಯ ಮಗಳು. ರಾಮಣ್ಣನವರಿಗೆ ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳು. ಸೀತಾಲಕ್ಷ್ಮಿ ಹುಟ್ಟಿದ ಎರಡು ತಿಂಗಳಿಗೆ ಅವಳ ತಾಯಿ ತೀರಿಕೊಂಡಿದ್ದರು. ರಾಮಣ್ಣನವರು ಎರಡನೇ ವಿವಾಹವಾಗುವ ಗೋಜಿಗೆ ಹೋಗಿರಲಿಲ್ಲ. ತಾಯಿ ಇಲ್ಲದ ಸೀತಾಲಕ್ಷ್ಮಿ ಬೆಳೆಯುವ ಪಾಡು ಹೇಗಿತ್ತು ಎಂದು ಲೇಖಕರು ಕರುಳು ಕರಗುವಂತೆ ವರ್ಣಿಸಿದ್ದಾರೆ. 


ಸೀತಾಲಕ್ಷ್ಮಿಯ ಮೊದಲ ಅಣ್ಣ ರಾಮ ಎರಡನೆಯವನು ಶ್ರೀನಿವಾಸ. ಮೊದಲ ಅಕ್ಕ ಲಕ್ಷ್ಮಿಗೆ ವಿವಾಹವಾಗಿತ್ತು. ಜಲಜಾಕ್ಷಿ ಹಾಗೂ ಸೀತಾಲಕ್ಷ್ಮಿಯರ ವಿವಾಹಕ್ಕೂ ಮುನ್ನವೇ ತಂದೆ ತೀರಿ ಹೋಗಿದ್ದರಿಂದ ಅಣ್ಣಂದಿರೇ ಅವರಿಬ್ಬರಿಗೂ ವಿವಾಹ ಮಾಡಬೇಕಿತ್ತು . ಆದರೆ, ಗಟ್ಟಿಯಾದ ವರೋಪಚಾರ ಹಾಗೂ ಪಟ್ಟಿ ಹಿಡಿದು ಬರುವ ವರಗಳ ಬೇಡಿಕೆಗಳನ್ನು ಈಡೇರಿಸುವುದು ಹಣದ ಅಭಾವದಿಂದ ಇಬ್ಬರಿಗೂ ಕಷ್ಟವಿತ್ತು. 


ಜಲಜಾಕ್ಷಿ ಕುರೂಪಿಯಲ್ಲದಿದ್ದರೂ ಸುಂದರಿಯೂ ಅಲ್ಲ. ಅವಳನ್ನು ಮದುವೆಯಾದ ನರಸಿಂಹನ ಒರಟುತನ, ಕೊಳಕು, ನಿರ್ಲಕ್ಷ್ಯ ಇವುಗಳನ್ನು ಕಾಣಬಹುದು. ಕೆಲವೊಮ್ಮೆ ಅವನ ವರ್ತನೆಗಳು ಕೆಲವು ಪ್ರಾಣಿಗಳಿಗೂ ಹೋಲಿಕೆಯಾಗುತ್ತವೆ. 


ಸುಂದರಿಯಾಗಿದ್ದ ಸೀತಾಲಕ್ಷ್ಮಿಯ ವಿವಾಹಕ್ಕೂ ಕಷ್ಟವಿತ್ತು. ಮಲ್ಲಿಗೆಹಳ್ಳಿಯ ಬಾಲಿಕಾ ಪಾಠಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ ಕಮಲಮ್ಮನಿಗೂ ಸೀತಾಲಕ್ಷ್ಮಿಗೂ ಬೆಳೆದ ಬಾಂಧವ್ಯ ಆಪ್ತವಾಗಿ.. ಅವರ ದಯೆಯಿಂದ ಹಾಗೂ ಸಂಗೀತದ ಅಭಿರುಚಿಯಿಂದ ಪಿಟೀಲು ನುಡಿಸುವುದನ್ನು ಕಲಿತ ಸೀತಾಲಕ್ಷ್ಮಿ ಮುಂದೆ ಅದರಲ್ಲಿಯೇ ಪಳಗುತ್ತಾಳೆ. ಬಾಲ ವಿಧವೆ ಕಮಲಮ್ಮನವರಿಗೆ ಮಕ್ಕಳಿರಲಿಲ್ಲ. ಬಂಧುಗಳು ಯಾರೂ ಇರಲಿಲ್ಲ. ಹೀಗಾಗಿ ಸೀತಾಲಕ್ಷ್ಮಿಯ ಆಪ್ತ ನಂಟು ಹಾಗೂ ಸಂಗೀತದ ಪ್ರೇಮವೇ ಅವರನ್ನು ಉಳಿಸಿತು ಎಂದರೂ ತಪ್ಪಾಗಲಾರದು.


ಸುಂದರರಾಜ ಹಾಗೂ ಸೀತಾಲಕ್ಷ್ಮಿಯರ ವಿವಾಹವಾಗುತ್ತದೆ. ಅದು ಸುಂದರರಾಜನಿಗೆ ಪ್ರೇಮ ವಿವಾಹ. ಆತ ಸೀತಾಲಕ್ಷ್ಮಿಯನ್ನು ಇಷ್ಟಪಟ್ಟದ್ದು ಯಾವ ಸಂದರ್ಭದಲ್ಲಿ ಹಾಗೂ ಹೇಗೆ ಅವರಿಬ್ಬರ ನಂಟು ಅನುರೂಪದ ಜೋಡಿ ಎನ್ನಿಸುವಂತೆ ಮಾಡುತ್ತದೆನ್ನುವ ಸುಂದರ ಕ್ಷಣಗಳನ್ನು ಓದಿಯೇ ಸವಿಯಬೇಕು. ಸೀತಾಲಕ್ಷ್ಮಿ ತನ್ನ ಚಿಕ್ಕಮ್ಮನ ಪ್ರಾಣವಾಗಿದ್ದವಳು. ಚಿಕ್ಕಮ್ಮ ಅವಳಿಗಿಂದೇ ಬಿಟ್ಟು ಹೋಗಿದ್ದ ಉಡುಗೊರೆ ಏನಿತ್ತು..?


ಸುಂದರರಾಜ ಮಲ್ಲಿಗೆಹಳ್ಳಿಯಿಂದ 15 ಮೈಲಿ ದೂರದಲ್ಲಿದ್ದ ರಂಭಾಪುರಿಯವನು. ಅವರ ತಂದೆ ಗುಂಡಣ್ಣನವರು ಬಡ ಜಮೀನುದಾರರು. ಅವರಿಗೆ ಮೊದಲನೇ ಮದುವೆಯಲ್ಲಿ ಮೂವರು ಗಂಡು ಮಕ್ಕಳಿದ್ದರು. ಮೊದಲ ಪತ್ನಿ ತೀರಿ ಹೋಗಿದ್ದರಿಂದ ಕಲ್ಯಾಣಮ್ಮನವರನ್ನು ಎರಡನೇ ಮದುವೆಯಾಗಿದ್ದರು. ಅವರಿಬ್ಬರ ಏಕೈಕ ಮಗನೇ ಸುಂದರರಾಜ. ಅವಿದ್ಯಾವಂತನಾಗಿದ್ದರೂ ಸುಸಂಸ್ಕೃತ. ಆತನ ಸಂಗೀತ ಪ್ರೇಮ ಹಾಗೂ ಸೀತಾಲಕ್ಷ್ಮಿಯನ್ನು ಆತ ಆ ದರಿಸುವ ಗೌರವಿಸುವ, ಅವಳ ಪಿಟೀಲು ವಾದನವನ್ನು ಪ್ರೋತ್ಸಾಹಿಸುವ ಪರಿ ನಿಜಕ್ಕೂ ಆತನ ಮೇಲೆ ಗೌರವ ಹೆಚ್ಚಿಸುತ್ತದೆ. ಸುಂದರರಾಜನ ಮನೆಯಲ್ಲಿ ತಂದೆ ಎರಡನೇ ವಿವಾಹವಾದುದು ಮಕ್ಕಳಿಗೆ ಸಮ್ಮತಿ ಇರಲಿಲ್ಲ. ಸುಂದರರಾಜನ ಮೇಲೆ ಯಾರಿಗೂ ಅಷ್ಟೇನೂ ಪ್ರೀತಿ ಇರಲಿಲ್ಲ.


ಸೀತಾಲಕ್ಷ್ಮಿಯ ವಿವಾಹ, ವಿವಾಹದ ನಂತರ ಅವರಿಬ್ಬರ ಒಡನಾಟ ಎಲ್ಲವೂ ಸುಖದಿಂದಲೇ ಕೂಡಿರುವಾಗಲೇ ಸೀತಾಲಕ್ಷ್ಮಿಯ ಅಕ್ಕ ಜಲಜಾಕ್ಷಿ ತನ್ನ ಗಂಡ ನರಸಿಂಹನಿಗೆ ಈ ಬಾಣಂತನಕ್ಕೆ ತನ್ನ ತಂಗಿಯನ್ನು ಕರೆತರಲು ಹೇಳುತ್ತಾಳೆ. ಮೊದಲನೇ ಹೆರಿಗೆ ಸುಸೂತ್ರವಾಗದೆ ಹೋಗಿದ್ದು, ಹುಟ್ಟಿದ ಮಗು ಮೂರು ತಿಂಗಳಿಗೆ ಸತ್ತು ಹೋಗಿದ್ದು ಅವಳಿಗೊಂದು ಚಿಂತೆ. ಅಲ್ಲದೆ, ಅಣ್ಣನ ಮನೆಗೆ ಬಾಣಂತನಕ್ಕೆ ಬರುವುದು ಇಷ್ಟವಿಲ್ಲದೆ ತಂಗಿಯನ್ನೇ ಅಲ್ಲಿಗೆ ಕರೆಸಿಕೊಂಡಿದ್ದಳು. ಮನಸ್ಸಿಲ್ಲದ ಮನಸ್ಸಿಲ್ಲದ ಮನಸ್ಸಿನಲ್ಲಿ ಸುಂದರರಾಜನೂ ಒಪ್ಪುತ್ತಾನೆ. 


ಪಾದರಸದಂತಿದ್ದ ಸೀತಾಲಕ್ಷ್ಮಿಯ ಕಾರ್ಯ, ಅಚ್ಚುಕಟ್ಟುತನ ಪ್ರತಿಯೊಂದಲ್ಲಿಯೂ ಅವಳ ಅಸ್ಥೆ ಎಲ್ಲವೂ ಜಲಜಾಕ್ಷಿಗೂ.. ಅವಳಿಗೂ ಇರುವ ವ್ಯತ್ಯಾಸವನ್ನು ತೋರುತ್ತದೆ. ನರಸಿಂಹ ಅವಳಿಗೆ ಹೆದರಿ ಸ್ವಲ್ಪ ಬದಲಾಗುತ್ತಾನೆ. ಜಲಜಾಕ್ಷಿಯ ಹೆರಿಗೆ ಸುಸೂತ್ರವಾಗಿ ಬಾಣಂತನದ ಸಂದರ್ಭದಲ್ಲಿ, ಸ್ವಾತಿ ಮಳೆಯ ಕಾಲದ ದಿನ ನಡೆದ ದುರ್ಘಟನೆಯೊಂದು ಸೀತಾಲಕ್ಷ್ಮಿಯ ಕೈಮೀರಿದ್ದು. ಅದರಿಂದ ಅವಳು ಬದುಕಿನಲ್ಲಿ ತೆತ್ತ ಬೆಲೆ ಅಪಾರ. ಇಲ್ಲಿಂದ ಮುಂದಕ್ಕೆ ಅವಳ ದುಃಖದ ಅಧ್ಯಾಯವೇ ತುಂಬಿಹೋಗಿದೆ.


ನರಸಿಂಹನಂತಹ ಪಿಶಾಚಿಯ ದಾಳಿಯ ನಂತರವೂ ಅವಳಿಗೆ ಸುಂದರರಾಜ ದೇವರಂತೆ ಹಾಗೂ ಆತನೇ ತನ್ನ ಪ್ರೇಮ ಮೂರ್ತಿ ಎಂಬ ಭಾವ ಹೋಗಿರಲಿಲ್ಲ. ಇವಳು ತನ್ನ ಸಂಸಾರವನ್ನು ಹಾಳು ಮಾಡಿದಳೆಂದು ಜಲಜಾಕ್ಷಿಯು ದ್ವೇಷಿಸಲು, ತವರಿನವರ ಸಹಾಯವು ಸಿಗದೇ ಬಂದು ಹೋಗುವ ಸೀತಾಲಕ್ಷ್ಮಿಯ ವಿಚಾರ ಅದಾಗಲೇ ರಂಭಾಪುರಿ ಹಾಗೂ ಮಲ್ಲಿಗೆಹಳ್ಳಿಯಲ್ಲಿ ಗುಸುಗುಸು ಎಂದಿದ್ದದ್ದು ದೊಡ್ಡದೇ ಆಗಿತ್ತು. 


ಸೀತಾಲಕ್ಷ್ಮಿ ಆಸ್ಪತ್ರೆ ಸೇರಿದ ನಂತರ ಅವಳು ಉಳಿದದ್ದೇ ತಪ್ಪಾಯಿತೇನೋ ಎಂಬಂತೆ ನರಕ ಅನುಭವಿಸುತ್ತಾಳೆ . ರಾಮನಿಗಿಂತ ಧೈರ್ಯಸ್ಥನಾದ ಹಾಗೂ ಅಂತಃಕರಣದ ಅಣ್ಣ ಶ್ರೀನಿವಾಸನ ಉಡಿಗೆ ಬೀಳುತ್ತಾಳೆ ಸೀತಾಲಕ್ಷ್ಮಿ. ಇದಾದ ನಂತರ ಅವಳ ಚಾರಿತ್ರ್ಯದ ಕುರಿತ ಒಡಕು ಮಾತುಗಳು ನೇರಾನೇರವಾಗಿಯೇ ತಾಕುತ್ತವೆ. ಅಷ್ಟೇ ಅಲ್ಲದೆ ಹಳ್ಳಿಯಲ್ಲಿ ಎಲ್ಲಿ ಹೋದರು ಇದೇ ವಿಚಾರವೇ.. ಹಳ್ಳಿಯ ಜೀವನ ಹಾಗೂ ಅವಳಿಗಾಗಿ ಹಂಬಲಿಸಿರುವ ಗಂಡುಗಳು ಎಲ್ಲರಿಂದ ಪಾರಾಗಿ ಸುಂದರರಾಜನನ್ನು ನೆನೆಸುತ್ತಾಳಾದರೂ ಆತ ಅವಳ ಪಾಲಿಗೆ ಸಿಗುವಂತಿರಲಿಲ್ಲ. 


ಸೀತಾಲಕ್ಷ್ಮಿಯ ಪಿಟೀಲು ವಾದನ, ಅವಳೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು.. ನಂತರ ರಾಮ, ಶ್ರೀನಿವಾಸರು ಬೇರೆಯಾದದ್ದು ಇವೆಲ್ಲದರ ಚಿತ್ರಣವಿದೆ.


ಮತ್ತೊಮ್ಮೆ ನರಸಿಂಹ ತನ್ನ ಪತ್ನಿಯ ಜೊತೆ ಊರ ಹಬ್ಬಕ್ಕೆ ಬಂದಾಗ ಯಾರೂ ಆತನ ಕುರಿತು ಚಕಾರವೆತ್ತದೆ, ಮೊದಲಿನಂತೆಯೇ ಗೌರವದಿಂದ ಕಂಡದ್ದು.. ಅದಕ್ಕೆ ಪರಿಹಾರವೆನ್ನುವ ರೀತಿಯಲ್ಲಿ ಸೀತಾಲಕ್ಷ್ಮಿಯನ್ನು ಅವನೊಡನೆ ಕಳಿಸುವ ವಿಚಾರ ಮಾಡಿದ್ದು ಈಗಿನ ಕಾಲಕ್ಕೆ ಸರಿ ಹೋಗುವುದಿಲ್ಲವಾದರೂ.. ಆ ಕಾಲಘಟ್ಟದ ಪರಿಸ್ಥಿತಿಯನ್ನು ತೋರುತ್ತವೆ. ಆದರೆ ಸೀತಾಲಕ್ಷ್ಮಿ ಅದಕ್ಕೆ ಒಪ್ಪುವುದಿಲ್ಲ.


ಒಂದು ಪ್ರಯತ್ನವೆಂಬಂತೆ ಸೀತಾ ನಲಕ್ಷ್ಮಿಯ ಮನಸ್ಸಿನಲ್ಲಿರುವುದು ಅದೇ ಆದರೆ ಅದು ಆಗಿ ಹೋಗಲಿ ಎಂದು ಮತ್ತೆ ಅವಳನ್ನು ರಂಭಾಪುರಿಗೆ ಕಳುಹಿಸಲು ಹೊರಟ ಶ್ರೀನಿವಾಸ ಅಲ್ಲಿ ಯಾವ ಸ್ವಾಗತವನ್ನು ಕಂಡ..?


ಅಲ್ಲಿ ಸೀತಾಲಕ್ಷ್ಮಿಗೆ ಸಿಕ್ಕಿದ್ದು ನಿತ್ಯ ನರಕ. ಬಡತನದ ಬದುಕು, ಜೊತೆಗೆ ಮನಸ್ಸು ಕೆಡಿಸಿಕೊಂಡು ಸಾಲ ಮಾಡಿಕೊಂಡು ಅಲ್ಲಿಯಲ್ಲಿ ಅಲೆಯುತ್ತಿದ್ದ ಸುಂದರರಾಜ. ಶಾಮ, ಕೃಷ್ಣ ಹಾಗೂ ರಂಗಸ್ವಾಮಿಯ ಹೆಂಡತಿಯರು ಈಕೆಯನ್ನು ಒಪ್ಪಲು ಸಿದ್ಧವಿರಲಿಲ್ಲ. ಜೊತೆಗೆ ಗುಂಡಣ್ಣನವರ ಶ್ರೀರಂಗಮ್ಮನವರ ಆರ್ಭಟವೇ ಮನೆಯಲ್ಲಿ ಹೆಚ್ಚಾಗಿತ್ತು. ಮಡಿ-ಮೈಲಿಗೆಯ ಹೆಸರಿನಲ್ಲಿ ಬೇಕಾಬಿಟ್ಟಿ ನಡೆಸಿಕೊಂಡ ಜನರಲ್ಲಿ ಕಲ್ಯಾಣಮ್ಮನವರು ಪಾಪದವರು. ಆದರೆ, ಅವರ ಮಾತು ಮನೆಯಲ್ಲಿ ನಡೆಯುವಂತಿರಲಿಲ್ಲ. ಗುಂಡಣ್ಣನವರು ಮನೆಯ ಯಜಮಾನರಾಗಿದ್ದರೂ ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿದ್ದರು. ಊರಿನವರನ್ನು ಎದುರಿ ಹಾಕಿಕೊಂಡು ಅವಳನ್ನು ಸೊಸೆ ಎಂದು ಒಪ್ಪಲು ಸಿದ್ಧವಿರಲಿಲ್ಲ. ಎಲ್ಲದಕ್ಕೂ ಉತ್ತರ ಕೊಡಬೇಕಾಗಿದ್ದ ಸುಂದರರಾಜ ಬೆಂಗಳೂರು ಬಿದ್ದಿದ್ದ. ಇದಲ್ಲದರ ಜೊತೆಗೆ ಕೃಷ್ಣನ ಕೆಟ್ಟದೃಷ್ಟಿ ಹಾಗೂ ಅವನ ಚಿತಾವಣೆಯಿಂದ ಸಂಕಷ್ಟಕ್ಕೆ ಸಿಲುಕುತ್ತಾಳೆ. ಎಷ್ಟೇ ಹೇಳಿದರೂ ಯಾರೂ ಒಪ್ಪದೆ, ಕೃಷ್ಣನ ಪತ್ನಿ ಮಹಾಲಕ್ಷ್ಮಿಯ ಒಡವೆ ಕಳುವಾಗಿದ್ದಕ್ಕೆ ಸೀತಾಲಕ್ಷ್ಮಿಯೇ ಕಾರಣ ಎಂದು ಮನೆಯಿಂದ ಹೊರ ಹಾಕುತ್ತಾರೆ, ನಿರ್ದೋಷಿಯಾಗಿದ್ದವಳು ಕಳ್ಳತನದ ಆಪಾದನೆಯ ಹೊತ್ತು, ಸಾಕಷ್ಟು ಅವಮಾನಗಳನ್ನು ಅನುಭವಿಸಿ ಮತ್ತೆ ಅಣ್ಣನ ಮನೆ ಸೇರುತ್ತಾಳೆ. ಮುಂದೆ ಕೃಷ್ಣನ ಕಳ್ಳತನ ಸಾಬೀತಾದದ್ದು ಹೇಗೆ..? ರಂಭಾಪುರಿಯ ನರಕದ ದಿನಗಳು ಹೇಗಿದ್ದವೆಂದನ್ನು ಓದುವಾಗ ಹೇವರಿಕೆ ಹುಟ್ಟಿಸುತ್ತದೆ.


ಇತ್ತ ಸುಂದರರಾಜನು ಅವಳನ್ನು ನೆನೆಸಿದ ರೂ ಹೋಗುವ ಧೈರ್ಯ ಮಾಡದೆ.. ಅವನ ಮನಸ್ಸಿನ ತುಮುಲಗಳಿಂದ ಅನುಭವಿಸಿದ ನೋವುಗಳು.. ಅವನು ಸಾಲ ಮಾಡಿ ಸಿಕ್ಕಿಕೊಂಡಾಗ ಕಮಲಮ್ಮನ ಸಹಾಯದಿಂದ ಸೀತಾಲಕ್ಷ್ಮಿ ಮಾಡಿದ ಸಹಾಯವೊಂದು ಆತನನ್ನು ಕಾಪಾಡಿದರೂ ಶ್ರೀನಿವಾಸನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅದಕ್ಕೆ ಕಾರಣ ಅವನ ಮಾತು ಮೀರಿ ನಡೆದಳು ಎಂಬುದು ಮಾತ್ರವಲ್ಲ.. ಬೇರೊಂದು ದೂರದಾಸೆಯೂ.... ಅದೇನು ಓದಿ ನೋಡಿ.


ಸೀತಾಲಕ್ಷ್ಮಿಯ ಸೋದರಮಾವ ಆಯುರ್ವೇದ ಆಚಾರ್ಯ ಪ್ರಾಣಾಚಾರ್ಯ ಪಂಡಿತರು ಮಲ್ಲಿಗೆಹಳ್ಳಿಗೆ ಬರುವುದು ಅವಳ ಜೀವನದ ಬಹುದೊಡ್ಡ ತಿರುವು. ಅವರು ಸುಧಾರಕರೂ ಹೌದು. ಸಮಾಜದ ಉದ್ದಾರಕ್ಕೆ, ಅವರ ಕಾರ್ಯಕ್ಕೆ ಸೀತಾಲಕ್ಷ್ಮಿ ನೆರವಾದ ಹಾಗೂ ಸೀತಾಲಕ್ಷ್ಮಿಯ ಬದುಕಿಗೆ ಅವರು ಬೆಳಕಾದ ದಿನಗಳು ಹೇಗಿದ್ದವು..? ಅಷ್ಟಕ್ಕೂ ಸೀತಾಲಕ್ಷ್ಮಿಯ ಕಷ್ಟಗಳ ಬದುಕು ಅವರಿಗೆ ತಿಳಿದದ್ದು ಅಲ್ಲಿಗೆ ಬಂದ ನಂತರವೇ.. ಆದರೆ, ತಮಗೆ ಬೇಕಾದ ಸಹಾಯಕ್ಕೆ ಸೀತಾಲಕ್ಷ್ಮಿಯನ್ನು ಕೇಳಿಕೊಳ್ಳಲು ಬಂದಿದ್ದ ಪ್ರಾಣಾಚಾರ್ಯರ ಬೇಡಿಕೆ ಏನಿತ್ತು..? ಅದು ನೆರವೇರಿತೇ..? 


ಸೀತಾಲಕ್ಷ್ಮಿಯ ಪಿಟೀಲು ವಾದನ, ಸಂಗೀತ ಸಾಧನೆ ಅವಳ ಪ್ರತಿಭೆ ನಮ್ಮನ್ನು ಆವರಿಸುತ್ತದೆ. ಮುಂದೆ ಸೀತಾಲಕ್ಷ್ಮಿ ಆಯುರ್ವೇದ ಕಲಿತು, ಅದರಲ್ಲಿ ಪರಿಣಿತಿ ಹೊಂದಿ ಹಳ್ಳಿಯ ಜನರ ಪಾಲಿಗೆ ಬೆಳಕಾಗಿ ಸೇವಾಕಾರ್ಯಕ್ಕೆ ನಿಲ್ಲುತ್ತಾಳೆ. 


ಅವಳ ಸೇವಾ ಜೀವನದ ಅಡ್ಡಿ-ಆತಂಕಗಳು, ಅದನ್ನು ನಿವಾರಿಸಿಕೊಂಡ ಬಗೆ.. ಸುಂದರರಾಜ ಮತ್ತು ಆಕೆಯ ಬದುಕು ಎಲ್ಲಿಂದ ಶುರುವಾಗಿ ಯಾವೆಲ್ಲ ತಿರುವು ಪಡೆದು ಹೇಗೆ ಸಾಗುತ್ತದೆ ಓದಿ ನೋಡಿ. 


ಕಾದಂಬರಿಯ ಕೊನೆಯ ಭಾಗ ಸಮಾಜ ಸುಧಾರಣೆಯ ಅಂಶದಿಂದಲೂ.. ಹೆಣ್ಣು ಮಕ್ಕಳ ಬದುಕು ಬದಲಾಗಬಹುದಾದ ಬಗೆಯಿಂದಲೂ.. ಸೀತಾಲಕ್ಷ್ಮಿಯ ಗಟ್ಟಿತನ, ಸೇವಾ ಮನೋಭಾವ, ಅತಿಶಯ ಪ್ರೇಮ ಎಲ್ಲದರಿಂದಲೂ ಇಷ್ಟವಾಯಿತು. ಕಾದಂಬರಿಯ ಅಂತ್ಯವಂತೂ ಊಹಿಸಲು ಸಾಧ್ಯವಾಗಲಿಲ್ಲ. 


ಮನಸ್ಸನ್ನು ಹದವಾಗಿಟ್ಟುಕೊಳ್ಳಲು ಸಂಗೀತ ಎಷ್ಟು ಸಹಕಾರಿ ಹಾಗೂ ಪರಿಣಾಮಕಾರಿ ಎಂಬುದನ್ನು ಚಿತ್ರಿಸಿದ್ದಾರೆ. ಸಂಗೀತದ ರಸಘಳಿಗೆಗಳು ಆವರಿಸಿಕೊಳ್ಳುತ್ತವೆ. 


ಅಂದಿನ ಕಾಲಘಟ್ಟದ ಹಳ್ಳಿ, ಮೂಢನಂಬಿಕೆ, ಸಂಕುಚಿತ ಮನೋಭಾವಗಳು, ಸುಧಾರಣೆಯ ಸೋಗು, ಬೆರಳೆಣಿಕೆಯಷ್ಟು ನೈಜ ಮನುಷತ್ವ ಹೊಂದಿದ ಜನರು, ಬಡತನ ಹೀಗೆ ಪ್ರತಿಯೊಂದು ಅಂಶವೂ ಸೊಗಸಾಗಿ ಚಿತ್ರಿತವಾಗಿದೆ. ಇದು ಅಂದಿನ ಕಾಲಘಟ್ಟವನ್ನು ಮನಸ್ಸಿನಲ್ಲಿಟ್ಟುಕೊಂಡು ಓದಬೇಕಾದ ಓದು. ಕಾಡುವ ಓದು. 

~ವಿಭಾ ವಿಶ್ವನಾಥ್ 

ಭಾನುವಾರ, ಜೂನ್ 28, 2026

ಯೋಧ ಮತ್ತು ಹೆಂಗಸು


ಕವಿತೆಯ ಶೀರ್ಷಿಕೆ : ಯೋಧ ಮತ್ತು ಹೆಂಗಸು

ರಚನೆ : ಸು. ರಂ. ಎಕ್ಕುಂಡಿ


ಈ ಕವಿತೆಯನ್ನು ನಾನು ಎಚ್. ಎಸ್ ವೆಂಕಟೇಶಮೂರ್ತಿ ಅವರ ಸಂಪಾದಕತ್ವದ ಶತಮಾನದ ಕಾವ್ಯ ಕವನ ಸಂಕಲನದಿಂದ ಆಯ್ದುಕೊಂಡಿದ್ದೇನೆ.


ಉರಿಬಿಸಿಲು ಕೆಂಪುಹುಡಿ, ಮೈತುಂಬ ಧೂಳಿಡಿಗಿ ಕುದುರೆಯಿಳಿದನು ಯೋಧ ಜನರ ಕಂಡು 

"ನೀರು ಹಣಿಸುವಿರ ತುಸು" ಅಂದಿರಲು ಹೆಂಗಸು 

ಬೇಗ ಬಂದಳು ಮಡಕೆ ತುಂಬಿಕೊಂಡು


"ಬಳಲಿದಿರಿ, ಪಾಪ, ಬನ್ನಿರಿ ಒಳಗೆ ವಿಶ್ರಮಿಸಿ."

ಚಾಪೆಯನು ಹಾಸಿದಳು ಕೂತುಕೊಳಲು 

"ಇರಲಿ ಬಿಡಿ. ಈ ಮರದ ನೆರಳಲ್ಲೆ ಕೂಡುವೆನು 

ತಂಪಾಗಿ ತಬ್ಬಿರುವವಿದರ ಹೆಳಲು”


"ಬಟ್ಟಲಿನ ತುಂಬ ಇದೆ ಜೇನು, ಈ ಚೊಂಬಿನಲಿ

ತಣ್ಣಗಿನ ನೀರು ಇದೆ, ತೆಗೆದುಕೊಳ್ಳಿ 

ಇಲ್ಲಿಹುದು ಬೀಸಣಿಕೆ, ಬಹಳ ಸೆಕೆ ಅಲ್ಲವೆ? 

ಇದರಿಂದ ಗಾಳಿಯನು ಬೀಸಿಕೊಳ್ಳಿ


ಆಗ ಒಮ್ಮೆಲೆ ಬೀಸಿ ಬಂತು ತೆಂಕಣ ಗಾಳಿ 

ದೂರವೆಲ್ಲೊ ಕೇಳಿಬಂತು ಹಾಡು 

ಮಾವಿನೆಳಚಿಗುರಿನಲಿ ಚಿಮ್ಮಿ, ಪಯಣಿಗನೆಂದ 

"ಇದಕೆ ಜೋಳದ ಪಾಳಿಯಿಲ್ಲ ನೋಡು" 


ಜೇನು ಸವಿದನು ನೀರು ಕುಡಿದು ಮೈಯೊಡ್ಡಿದನು. 

ತುಸು ಹೊತ್ತು ತಂಬೆಲರ ನೆರಳಿಗೆಂದು

ಎದ್ದು ಕುದುರೆಗೆ ಥಡಿಯ ಹಾಕಿ ಅಣಿಗೊಳಿಸಿದನು 

ಮತ್ತೆ ದೂರದ ತನ್ನ ಪಯಣಕೆಂದು


"ಹೋಗಿ ಬರುವೆನು ತಾಯಿ" ಎಂದು ಕವಚವ ತೊಟ್ಟು ಖಡ್ಗವನು ಬಿಗಿದಿಟ್ಟ ಟೊಂಕದಲ್ಲಿ

ಹೆಂಗಸೆಂದಳು, "ಆಯ್ತು ಹೋಗಿ ಬನ್ನಿರಿ ಮತ್ತೆ

ಬಂದಾಗ ಬರಬೇಕು ನೀವು ಇಲ್ಲಿ"


“ಮರೆತುಬಿಟ್ಟೆನು ನಿಮ್ಮ ಹೆಸರು ಕೇಳಲು, ನೀವು 

ನಡೆದ ದಾರಿಗೆ ಇರಲಿ ಶುಭದ ನೆರಳು 

ಬಿರಿದ ಮಲ್ಲಿಗೆ ಕಂಡು, ಕೋಗಿಲೆಯ ದನಿ ಕೇಳಿ ತುಂಬಿಬಂದಿತ್ತೇಕೆ ಕಣ್ಣು, ಕೊರಳು ?"


ಯೋಧ ನುಡಿದನು "ತಾಯಿ ಮತ್ತೆ ನೆನಪಿಗೆ ಬಂತು 

ನನ್ನೂರು ಬನವಾಸಿ ನನಗೆ ಇಂದು

ಯೋಧ ನಡೆಯುವ ದಾರಿ ಕವಿಯ ದಾರಿಯು ಕೂಡ. 

ನನ್ನನ್ನು ಕರೆಯುವರು ಪಂಪನೆಂದು”


ಇಲ್ಲಿ ಕವಿ ಹಿಂದಿನ ಕಾಲದಲ್ಲಿ ಜನರಿಗೆ ಯೋಧರ ಬಗೆಗಿದ್ದ ಗೌರವಗಳು ಹಾಗೂ ಅವರಿಗೆ ನೀಡುತ್ತಿದ್ದ ಆತಿಥ್ಯದ ಕುರಿತು ಬೆಳಕು ಚೆಲ್ಲಿದ್ದಾರೆ. ಇದು ಕೇವಲ ಯೋಧರಿಗೆ ಸಿಗುತ್ತಿದ್ದ ಗೌರವ ಮಾತ್ರವಲ್ಲ. ಯಾರೇ ಅಪರಿಚಿತರು ಬಂದರೂ ಅವರನ್ನು ಅತಿಥಿಗಳಾಗಿ ಕಾಣುವ ಬಗೆ ಹೀಗಿತ್ತು. ಆದರೆ, ಯೋಧರಿಗೆ ಈ ಆತಿಥ್ಯ ತುಸು ಹೆಚ್ಚೇ ಇತ್ತು ಎಂಬುದನ್ನು ಅರಿಯಬಹುದು. 


ಉರಿ ಬಿಸಿಲಿನಲ್ಲಿ, ಧೂಳಿನ ದಾರಿಯಲ್ಲಿ ಬಾಯಾರಿಕೆಯಿಂದ ಬಳಲಿದ್ದ ಯೋಧ ಜನರಿದ್ದುದನ್ನು ಕಂಡು ತನ್ನ ಬಾಯಾರಿಕೆ ತಣಿಸಿಕೊಳ್ಳಲು ಬಂದಾಗ ಹೆಣ್ಣು ಮಗಳು ನೀರು ಕೊಟ್ಟದ್ದು ಮಾತ್ರವಲ್ಲದೆ.. ವಿಶ್ರಮಿಸಲು ಚಾಪೆ ಹಾಸುತ್ತಾಳೆ. ಆದರೆ, ಮರದ ನೆರಳಿನ ನೈಸರ್ಗಿಕ ತಂಗಾಳಿಯನ್ನು ಸವಿಯವ ನೆಪ ಹೇಳಿ ಆತ ಮರವನ್ನು ಬಣ್ಣಿಸುವ ಪರಿ ಯೋಧನ ಕವಿ ಮನವನ್ನು ತೋರುತ್ತದೆ.


ನೀರು, ವಿಶ್ರಾಂತಿಯ ಜೊತೆಗೆ ಸೆಕೆಗಾಲಕ್ಕೆ ಬೀಸಣಿಗೆ ಹಾಗೂ ಜೇನನ್ನು ಸವಿಯಲು ಅತಿಥಿಗೆ ಹೇಳುವ ಹೆಣ್ಣು ಮಗಳನ್ನು ಕಾಣಬಹುದು. ಆಗ ಯೋಧ ದೂರದಿಂದ ಕೇಳಿ ಬಂದ ಹಾಡು ಹಾಗೂ ತೆಂಕಣ ದಿಕ್ಕಿನಿಂದ ಬೀಸಿ ಬಂದ ಗಾಳಿಯನ್ನು ಆಸ್ವಾದಿಸುತ್ತಾ.. "ಇದಕ್ಕೆ ಜೋಳದ ಪಾಳಿ ಇಲ್ಲ ನೋಡು" ಎನ್ನುತ್ತಾರೆ. ಸಾಮಾನ್ಯವಾಗಿ ಜೋಳಗಳನ್ನು ಬೆಳೆಯುವ ಹೊಲಗಳ ಸಾಲುಗಳು ಮಾನವ ನಿರ್ಮಿತವಾಗಿರುತ್ತವೆ. ಆದರೆ, ಇಲ್ಲಿ ಅಂತಹ ಸುಖವು ನೈಸರ್ಗಿಕವಾಗಿಯೇ ರೂಪುಗೊಂಡಿದೆ ಎಂಬರ್ಥ. 


ನೆರಳಲ್ಲಿ ಕ್ಷಣ ಕಾಲ ವಿಶ್ರಮಿಸಿ, ಜೇನು ಸವಿದು, ನೀರು ಕುಡಿದು, ಕುದುರೆಗೆ ಜೀನು ಹಾಕಿ ತನ್ನ ದೂರದ ಪ್ರಯಾಣಕ್ಕೆ ತಯಾರು ಮಾಡಿ.. ಕವಚ ತೊಟ್ಟು, ಸೊಂಟಕ್ಕೆ ಖಡ್ಗ ಬಿಗಿದು "ಹೋಗಿ ಬರುವೆನು ತಾಯಿ" ಎಂದು ಆಕೆಗೆ ಗೌರವದಿಂದ ಹೇಳುತ್ತಾನೆ. 


"ಹೋಗಿ ಬನ್ನಿ" ಎಂದು ಹಾರೈಸುತ್ತಲೇ "ಮತ್ತೆ ಬಂದಾಗ ಬನ್ನಿ" ಎಂಬ ಆತ್ಮೀಯ ಕರೆಯೋಲೆಯನ್ನು ನೀಡುತ್ತಾಳೆ. ಅದರ ಜೊತೆಗೆ ಸೌಜನ್ಯದಿಂದ ನಿಮ್ಮ ಹೆಸರು ಕೇಳಲು ಮರೆತೆನೆಂದೂ ಜೊತೆಗೆ ನಿಮ್ಮ ಹಾದಿಯಲ್ಲಿ ಶುಭದ ನೆರಳಿರಲಿ ಎಂದು ಹಾರೈಸುತ್ತಾಳೆ.

ಹಾಗೂ ಅರಳಿರುವ ಮಲ್ಲಿಗೆ ಹಾಗೂ ಕೋಗಿಲೆಯ ದನಿ ಕೇಳಿ ಭಾವುಕನಾಗಿದ್ದನು ಗಮನಿಸಿದ ಹೆಣ್ಣು ಮಗಳು ಅದೇಕೆ ಎಂದು ಕೇಳುತ್ತಾಳೆ. ಹೆಣ್ಣು ಮಗಳ ಗಮನಿಸುವಿಕೆ ಎಷ್ಟು ಸೂಕ್ಷ್ಮ ಎಂಬುದನ್ನು ಇಲ್ಲಿ ಕಾಣಬಹುದು. 


ಕೊನೆಯ ನಾಲ್ಕು ಸಾಲುಗಳಲ್ಲಿ ಎಲ್ಲದಕ್ಕೂ ಉತ್ತರ ಕಾಣುತ್ತದೆ. ಆ ಯೋಧ ಮತ್ತಾರೂ ಅಲ್ಲ.. ಕವಿ ಪಂಪ. ಆತ ಕೇವಲ ಕವಿಯಲ್ಲ. ಯೋಧನೂ ಆಗಿದ್ದವನು. ರಾಜ್ಯದ ರಾಜಕೀಯದಲ್ಲಿ, ಯುದ್ಧ ತಂತ್ರದಲ್ಲಿ ಪರಿಣಿತಿ ಹೊಂದಿದ್ದವನು. 

"ಯೋಧ ನಡೆಯುವ ದಾರಿ ಕವಿಯ ದಾರಿಯೂ ಕೂಡ"

ಎಂಬ ಮಾತು ಅದೆಷ್ಟೋ ಹಿರಿದರ್ಥವನ್ನು ಮೂಡಿಸಿದೆ. 

ಕವಿ ಮನದಿಂದ ಅದೆಲ್ಲವನ್ನು ನೋಡಿದ್ದು ಮಾತ್ರವಲ್ಲದೆ ತನ್ನ ಹುಟ್ಟೂರು ಬನವಾಸಿಯನ್ನು ನೆನೆದು ಭಾವುಕನಾಗಿದ್ದನ್ನು ಹಂಚಿಕೊಳ್ಳುತ್ತಾನೆ. "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂಬ ಪಂಪನ ಸಾಲು ಅಕಾರಣವಾಗಿ ನೆನಪಾಯಿತು ನನಗೆ. 


ಮನುಷ್ಯನ ಸೂಕ್ಷ್ಮ ದೃಷ್ಟಿ, ಪ್ರಕೃತಿಯ ವರ್ಣನೆ, ಕವಿ ಮನ, ಹೆಣ್ಣು ಮಗಳ ಆತಿಥ್ಯ, ಸೌಜನ್ಯ, ಕಾಳಜಿ ಹಾಗೂ ಮಾನವೀಯ ದೃಷ್ಟಿ, ಪಂಪನ ಹಿರಿಮೆ ಎಲ್ಲವನ್ನು ಬಹಳ ಸೊಗಸಾಗಿ ಈ ಕವಿತೆಯಲ್ಲಿ ಸು. ರಂ ಎಕ್ಕುಂಡಿಯವರು ಕಟ್ಟಿಕೊಟ್ಟಿದ್ದಾರೆ. 


~ ವಿಭಾ ವಿಶ್ವನಾಥ್

ಬೇಲಿಯ ಮೇಲಿನ ನೀಲಿಯ ಹೂಗಳು



ಕವಿತೆಯ ಶೀರ್ಷಿಕೆ : ಬೇಲಿಯ ಮೇಲಿನ ನೀಲಿಯ ಹೂಗಳು

ರಚನೆ : ಚೆನ್ನವೀರ ಕಣವಿ

ಈ ಕವಿತೆಯನ್ನು ನಾನು ಎಚ್. ಎಸ್ ವೆಂಕಟೇಶಮೂರ್ತಿ ಅವರ ಸಂಪಾದಕತ್ವದ ಶತಮಾನದ ಕಾವ್ಯ ಕವನ ಸಂಕಲನದಿಂದ ಆಯ್ದುಕೊಂಡಿದ್ದೇನೆ.


ಸಾಲಾಗಿ ನವಿಲು ಗರಿಗೆದರಿ ನರ್ತಿಸಿದಂತೆ 

ಮುಂಜಾವದಲಿ ಬೇಲಿ ತುಂಬ ನೀಲಿಯ ಹೂ 

ಜೀವನೋತ್ಸಾಹದಲ್ಲಿ ಎದೆ ತುಂಬಿಸುವ ರೂಹೂ!

ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ

ಎಲ್ಲಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿ

ತೆರೆದಿಹುದು ನೂರು ಸಾವಿರ ನೀಲ ಬಗೆಗಣ್ಣು!

(ನೇಸರನಿಗೂ ಜಗಕೂ ಇನ್ನೂ ನಿದ್ದೆಗಣ್ಣು)

ಎಲ್ಲ ಒಂದೇ ಅದಕೆ - ತೋಟ ಬೇಲಿಯಕಳ್ಳಿ

ಬಿಸಿಲು ಬಲಿಯುವ ಮುನ್ನ ಬಗೆಗೊಂಡ ಸೌಜನ್ಯ

ಮುಖವ ಸಣ್ಣದು ಮಾಡಿ ಮುದುಡಿಕೊಂಡಿರೆ ಜೀವ

ಬರಿಯ ನೆನಪಿಗೆ ಉಳಿದ ದೇಟಿಗಂಟಿದ ಹೂವ

ಬದಿಬದಿಗೆ ನಾಳೆಯರಳುವ ಮೊಗ್ಗೆ ಮೂರ್ಧನ್ಯ!

ವಿಮಲ ಕೋಮಲ ಕಾಂತಿಯೊಗುಮಿಗುವ ಚೈತ್ಯಾಕ್ಷಿ

ಅದೊ ಅಲ್ಲಿ, ಇದೊ ಇಲ್ಲಿ ಪ್ರತ್ಯಕ್ಷ ಸುಮ ಸಾಕ್ಷಿ!


ಇಲ್ಲಿ ಬೇಲಿಯ ಮೇಲಿನ ನೀಲಿ ಹೂಗಳ ಸೌಂದರ್ಯದ ಸೊಗಸನ್ನು ಮೊದಲಿಗೆ ಸವಿಯೋಣ.


ಮುಂಜಾನೆಯೇ ಅರಳುವ ಹೂವುಗಳು ಮನಕ್ಕೆ ಮುದ ನೀಡುತ್ತವೆ. ಅದರಲ್ಲಿಯೂ ಬೇಲಿಯ ತುಂಬಾ ಹಬ್ಬಿರುವ ನೀಲಿಯ ಹೂಗಳಂತೂ ಜೀವನೋತ್ಸಾಹದಲ್ಲಿ ಮನದುಂಬುವ (ರೂಹು)ಆತ್ಮದಂತೆ ಎನ್ನುತ್ತಾರೆ. ಜೊತೆಗೆ ಸಾಲಾಗಿ ನವಿಲುಗಳು ಗರಿಗಿದರೆ ನರ್ತಿಸಿದಾಗ ನೋಡಲು ಕಣ್ಣಿಗೆ ಎಷ್ಟು ಹಬ್ಬವೋ ಇವೂ ಅಂತೆಯೇ ಕಣ್ಣಿಗೆ ಹಬ್ಬ. ಬಣ್ಣದಲ್ಲಿ ಮಾತ್ರವಲ್ಲದೇ ಅರಳಿ ನಿಂತ ದಳಗಳ ಸೌಂದರ್ಯವೂ ನವಿಲನ್ನೇ ನೆನಪಿಸುತ್ತದೆ.


ಬೇಲಿಯ ಮೇಲಿನ ಹೂಗಳನ್ನು ಯಾರೂ ಬೆಳೆದಿಲ್ಲ. ಭೂಮಿಯೇ ಭಾವ ತುಂಬಿ ತನ್ನ ಚೈತನ್ಯವನ್ನೆಲ್ಲ ಹೊರ ಹಾಕಿದಂತೆ ಮನಸೋ ಇಚ್ಛೆ ಬೆಳೆದ ಬಳ್ಳಿಗಳು.. ಅದರಲ್ಲಿ ಹರಡಿರುವ ಈ ಹೂವುಗಳು ನೂರು ಸಾವಿರ ನೀಲಿಯ ಕಣ್ಣುಗಳಂತೆ ಎಂದು ಹೂಗಳನ್ನು ಹರಡಿ ನಿಂತಿರುವ ಪರಿಯನ್ನು ಹೇಳುತ್ತಾರೆ.


ಸೂರ್ಯನಿಗೂ.. ಜಗತ್ತಿಗೂ ಇನ್ನೂ ನಿದ್ದೆಗಣ್ಣಿರುವಾಗಲೇ ಅರಳುವ ಹೂವುಗಳು ಬಿಸಿಲು ಬಲಿಯುತ್ತಾ ಹೋದಂತೆ ತಮ್ಮ ಮೃದುತ್ವವನ್ನು ಕಡಿಮೆ ಮಾಡಿಕೊಳ್ಳುತ್ತಾ.. ಮುಖ ಸಣ್ಣದು ಮಾಡಿ, ಮುದುಡಿಕೊಳ್ಳುತ್ತಾ ಹೋಗುತ್ತವೆ. ಬಿಸಿಲು ಮೇಲೇರಿದಂತೆ ದಂಟಿಗೆ ಅಂಟಿದ ಹೂಗಳ ಕುರುಹುಗಳನ್ನಷ್ಟೇ ನಾವು ಕಾಣಬಹುದು. ಆದರೆ, ಇಲ್ಲಿಗೆ ಆ ಸೌಂದರ್ಯ ಮುಗಿಯುವುದಿಲ್ಲ. ಏಕೆಂದರೆ, ಅವುಗಳ ಪಕ್ಕದಲ್ಲಿ ನಾಳೆ ಅರಳುವ ಮೊಗ್ಗುಗಳು ಅದಾಗಲೇ ಜೀವ ತಳೆದಿರುತ್ತವೆ. ಕೋಮಲತೆ, ಕಾಂತಿ ಚೈತನ್ಯದ ಕಣ್ಣುಗಳಂತೆ ಎನ್ನುತ್ತಾರೆ.


ಈ ಬೇಲಿ ಮೇಲಿನ ನೀಲಿಯ ಹೂಗಳು ನಮಗೆ ಕೇವಲ ಸೌಂದರ್ಯವನ್ನು ಮಾತ್ರ ತೋರದೆ.. ಬದುಕಿನ ಪಾಠವನ್ನು ತೋರುತ್ತವೆ. ಕೆಲವೇ ಕಾಲ ಬದುಕಿದ್ದರೂ ವೈಭವದಿಂದ ಬದುಕುತ್ತವೆ. ಅಷ್ಟೇ ಅಲ್ಲದೆ.. ನೋಡುಗರ ಕಣ್ಣಿಗೆ, ಮನಸ್ಸಿಗೆ ಚೈತನ್ಯವನ್ನು ತುಂಬುತ್ತವೆ. ಅವುಗಳ ಜೀವಿತಾವಧಿ ಹೆಚ್ಚಲ್ಲವಾದರೂ ತಾವು ಅರಳಿರುವ ಸಂದರ್ಭದಲ್ಲಿ ತೋರುವ ಸೌಂದರ್ಯ ಹಾಗೂ ಉತ್ಸಾಹ ಶಾಶ್ವತವಾದದ್ದು. ಆ ಹೂಗಳು ತಮ್ಮ ಬದುಕನ್ನು ಮುಗಿಸುತ್ತವಾದರೂ ಹಾಗೂ ಹೇಳುವ ಪಾಠ ಅಲ್ಲಿಗೆ ನಿಲ್ಲುವುದಿಲ್ಲ. ಏಕೆಂದರೆ, ಮೊಗ್ಗುಗಳು ಮರುದಿನಕ್ಕೆ ನಮಗೆ ಮತ್ತಷ್ಟು ಚೈತನ್ಯವನ್ನು ಹಾಗೂ ಮತ್ತದೇ ಸೌಂದರ್ಯವನ್ನು ತೋರುತ್ತವೆ. ಪ್ರಕೃತಿ ಕಲಿಸುವ ಪಾಠವೆಷ್ಟು ಸುಂದರ ಅಲ್ಲವೇ..?! 


ದೃಶ್ಯ ವೈಭವವನ್ನು ಕವಿತೆಯ ಶುರುವಿನಲ್ಲಿ ತೋರುವ ಕವಿ ಬದುಕಿನ ಬಹು ದೊಡ್ಡ ಪಾಠವನ್ನು ತಾವಾಗಿಯೇ ಬೆಳೆಸದ.. ಆದರೆ ನೈಸರ್ಗಿಕವಾಗಿ ಅರಳುವ ಹೂಗಳ ಮೂಲಕ ತೋರಿದ್ದಾರೆ. ಯಾರು ಗುರುತಿಸಲಿ, ಬಿಡಲಿ ತಮ್ಮ ಬದುಕನ್ನು ಸಾರ್ಥಕವಾಗಿಯೇ ಬದುಕಿಯೇ ಹೋಗುವ ಈ ಹೂಗಳು ಶಾಶ್ವತವಾಗಿ ಕವಿತೆಯ ಮೂಲಕ ಚೈತನ್ಯದಾಯಕವಾಗಿವೆ. 


ಚೆನ್ನವೀರ ಕಣವಿ ಅವರ ಈ ಕವಿತೆ ನನಗೆ ಚೈತನ್ಯದಾಯಕವಾಗಿಯೂ, ಪದಲಾಲಿತ್ಯದಿಂದಲೂ ಸೆಳೆಯಿತು. 


~ವಿಭಾ ವಿಶ್ವನಾಥ್

ಬಾಳು ಬೆಳಕಾಯಿತು


"ಆ ಬನ್ನಿ ಮರ ಹೋಗಿದ್ದೇ ಹೋಗಿದ್ದು, ನನ್ನ ದೃಷ್ಟಿ ಕೂಡಾ ಹಿಂಗಿ ಹೋಯಿತು. ಹೇಳಿದೆ ನಿಮಗೆ ಆ ಬನ್ನಿ ಮರ ಕಡಿಸಿದರೆ ಒಳ್ಳೆಯದಾಗಲ್ಲಾ ಅಂತಾ. ನೀವು ನನ್ನ ಮಾತನ್ನು ಕೇಳಲೇ ಇಲ್ಲ. ಈಗ, ನಮ್ಮ ಪಾಪದ ಫಲ ನಾವು ಅನುಭವಿಸಬೇಕಾಗಿದೆ. " ಎನ್ನುತ್ತಾ ಗತವನ್ನು ನೆನಪಿಸಿಕೊಂಡರು ತಾರಿಣಿ.


" ಎಲ್ಲಿಂದ ಎಲ್ಲಿಗೋ ವಿಷಯ ತೆಗೆದುಕೊಂಡು ಹೋಗಬೇಡ ಕಣೇ. ಅವತ್ತು ಅಪಘಾತದಲ್ಲಿ ನಿನ್ನ ಕಣ್ಣು ಹೋಯ್ತು.. ಅದಕ್ಕೆ, ಬನ್ನಿ ಮರ ಕಡಿದದ್ದನ್ನು ನೆಪ ಮಾಡಿಕೊಂಡು ದೂರಬೇಡ.


ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸಮನಾಯ್ತು. ಅಂತಾರಲ್ಲಾ.. ಹಾಗಾಯ್ತು ಇದು. ಅದಕ್ಕೂ, ಇದಕ್ಕೂ ಸಂಬಂಧವೇನು ಹೇಳು" ಎಂದರು ಪ್ರಕಾಶ್.


"ಅದು ದೇವರ ಮರ ಕಣ್ರೀ, ಅದನ್ನು ಕಡಿದದ್ದು ಅಪಶಕುನ. ಅದರ ಪಾಪದ ಫಲ ಇವತ್ತು ನಾವು ಅನುಭವಿಸುತ್ತಾ ಇಲ್ಲವಾ..?? " ಎಂದರು ತಾರಿಣಿ.


"ಸದ್ಯಕ್ಕೆ ನಿನಗೀಗ ಕಣ್ಣು ಕಾಣೋದಿಲ್ಲ. ಹಾಗಂತ ಕಣ್ಣು ಬರೋದೇ ಇಲ್ಲ ಅಂತಲೂ ಇಲ್ಲವಲ್ಲ. ಸರಿಯಾದ ದಾನಿಗಳು ಸಿಗಬೇಕಷ್ಟೇ.. ಕಣ್ಣು ಹೋದ ಅತ್ತೆಯನ್ನು ನೋಡಿಕೊಳ್ಳುವ ಇಚ್ಛೆಯಿಲ್ಲದ ಸೊಸೆ ಮದುವೆಯಾಗುವುದಕ್ಕೂ ಮುನ್ನವೇ ದೂರವಾಗಿದ್ದು ಒಳ್ಳೆಯದೇ ಆಯ್ತು. 

 ನಿನ್ನ ಸಹಾಯಕ್ಕೆ ಅಂತಾನೇ ಈ ಹಳ್ಳಿ ಮನೆಯಲ್ಲಿಯೂ ನನ್ನ ತಂಗಿ ನೆಲೆಯಾದಳು. ಕಣ್ಣು ಚೆನ್ನಾಗೇ ಇದ್ದಿದ್ರೆ ಕತ್ತೆ ಚಾಕರಿ ಮಾಡಿ ನಿನ್ನ ಸೊಂಟ ಬಿದ್ದು ಹೋಗ್ತಾ ಇತ್ತು ಅಷ್ಟೇ.. ಈಗ , ಇನ್ನೂ ಸುಖವಾಗೇ ಇದ್ದೀಯ ಅಂದುಕೋ. ಯಾವತ್ತೂ ನಾವಂದುಕೊಂಡದ್ದೇ ಸುಖ. ಪ್ರತಿ ಕಷ್ಟದಲ್ಲಿಯೂ ಸಕಾರಾತ್ಮಕತೆ ಕಾಣಬೇಕು. ಒಳ್ಳೆಯದನ್ನೇ ಆಲೋಚಿಸಬೇಕು. ತಿಳಿಯಿತಾ..?" ಎಂದು ಹೇಳಿದರು ಪ್ರಕಾಶ್.


"ಈ ಹಾಳಾದ ಕಣ್ಣಿನ ಬದಲಿಗೆ ಜೀವ ಹೋಗಿದ್ರೆ ಎಷ್ಟೋ ಚೆನ್ನಾಗಿರುತ್ತಿತ್ತು. ಇನ್ನೊಬ್ಬರು ನನ್ನ ಸಹಾಯ ಮಾಡುತ್ತಾ ಇದ್ದರೆ, ಅವರು ಸ್ನಾನ ಮಾಡಿಸಿ ಬಟ್ಟೆ ಹಾಕುವಾಗೆಲ್ಲಾ ಜೀವ ಹಿಡಿಯಷ್ಟಾಗುತ್ತೆ. ಮಗಳಾದರೂ ಇರಬಾರದಿತ್ತಾ ಅನ್ನಿಸುತ್ತೆ. ಈ ಸೂಕ್ಷ್ಮಗಳು ಇವರಿಗೆಲ್ಲಿ ಅರ್ಥವಾಗುತ್ತೆ..?" ಎನ್ನುತ್ತಾ ತಮ್ಮಷ್ಟಕ್ಕೆ ತಾವು ಮಾತನಾಡಿಕೊಳ್ಳುವಾಗ ಅವಳ ಸಹಾಯಕ್ಕಿದ್ದ ನಾದಿನಿ "ಹಾಗ್ಯಾಕೆ ಮಾತಾಡ್ತೀರಿ ಅತ್ತಿಗೆ. ನಾನೇನೂ ಬೇರೆಯವಳಾ ಹೇಳಿ. ಈ ಮನೆ ಮಹಾಲಕ್ಷ್ಮಿ ನೀವು. ನಿಮಗೆ ಮತ್ತೆ ಕಣ್ಣು ಬಂದೇ ಬರುತ್ತೆ. ನೀವು ಮನೆ ತುಂಬಾ ಗಲಗಲ ಅಂತಾ ಓಡಾಡುತ್ತೀರಿ. ನೋಡ್ತಿರಿ" ಎಂದಳು.


ನಾಲಿಗೆ ಕಚ್ಚಿ, ಪೇಲವ ನಗು ನಕ್ಕು "ಕನಸು ಚೆನ್ನಾಗೇ ಕಾಣುತ್ತೀಯ ಬಿಡೇ ಸುಧಾ. ನನಗೆ ಕಣ್ಣು ಬರಬೇಕು ಅಂದರೆ ನನಗೆ ಹೊಂದಿಕೆಯಾಗುವ ಕಣ್ಣು ಸಿಗಬೇಕು. 


ಕಣ್ಣು ಸಿಗೋ ವಿಷಯ ಹಾಗಿರಲಿ. ಕರ್ಮ ಕಳಿಬೇಕು ಕಣೇ, ಈ ಜನ್ಮಕ್ಕೆ ಅಂಟಿರುವ ಕರ್ಮ ಕಳೆಯಬೇಕು. ಎಲ್ಲಾ ಬನ್ನಿ ಮರ ಕಡಿದಿದ್ದರ ಫಲ ಕಣೇ" ಎಂದಳು ತಾರಿಣಿ.


"ಸುಮಾರು ಸಾರಿ ನೀವು ಈ ಬನ್ನಿ ಮರದ ಬಗ್ಗೆ ಹೇಳ್ತಾ ಇರುತ್ತೀರಿ.. ಕೇಳಿದ್ರೂ ಪೂರ್ತಿ ನೆನಪಿಲ್ಲ." ಎಂದವಳಿಗೆ ನೆನಪಿದ್ದರೂ.. ಅತ್ತಿಗೆಯ ಮನಸ್ಸನ್ನು ಮಾತಿನತ್ತ ತಿರುಗಿಸಲೆತ್ನಿಸಿದಳು.


"ನೀನು ಎಷ್ಟು ಸಾರಿ ಕೇಳಿದ್ರೂ ಹೇಳೋಕೆ ನನಗೆ ಬೇಸರ ಇಲ್ಲ ಬಿಡು. ಏನೂ ನೋಡೋಕಾಗದೆ ಸುಮ್ಮನೆ ಕತ್ತಲೆಯಲ್ಲೇ   ಕೂರುವುದರ ಬದಲಿಗೆ ಅದನ್ನಾದರೂ ಹೇಳುತ್ತೇನೆ." ಎನ್ನುತ್ತಾ ಅಂದಿನ ಘಟನೆಯನ್ನು ನೆನಪಿಸಿಕೊಂಡು ಹೇಳಿದ್ದಿಷ್ಟು.


"ಯಾವಾಗಲೋ.. ಯಾರದ್ದೋ ಸಾಲಕ್ಕೆ ಶ್ಯೂರಿಟಿ ಕೊಟ್ಟು ನಂಬಿಕೆಯೇ ಉರುಳಾಗಿ, ಅನಿವಾರ್ಯವಾಗಿ ಊರಾಚೆಯಿದ್ದ ಹಳೆಯ ತೋಟದ ಮನೆ, ತೋಟ ಮತ್ತು ಹೊಲ ಮಾರಿಯಾಗಿತ್ತು. ಆದರೆ, ಅಲ್ಲಿದ್ದ ಸಮಾಧಿ ಮತ್ತು ಹಳೆಯ ಬನ್ನಿ ಮರವನ್ನು ಮುಟ್ಟುವ ಧೈರ್ಯ ತೆಗೆದುಕೊಂಡವರಿಗೆ ಇರಲಿಲ್ಲ. ತೋಟದಲ್ಲಿದ್ದ ಮರಗಳನ್ನೆಲ್ಲಾ ಕಡಿಸಿ ಅದಾಗಲೇ ಅಲ್ಲಿ ಫ್ಯಾಕ್ಟರಿ ಕಟ್ಟುವುದಕ್ಕೆ ಅಡಿಪಾಯ ಹಾಕಿದ್ದರು. ಆದರೆ, ಅಲ್ಲಿದ್ದ ಸಮಾಧಿ ಹಾಗೂ ಬನ್ನಿ ಮರವನ್ನು ಕಡಿದರೆ ಏನಾದರೂ ಅಪಾಯ ಆಗುತ್ತೆ ಅಂತಾ ಯಾರೋ ಹೇಳಿದ್ದರು ಅಂತಾ ಆ ಕುಟುಂಬದವರನ್ನೇ ಕರೆಸಿ ಶಾಂತಿ ಪೂಜೆ ಮಾಡಿಸಿ ತೆಗೆದುಬಿಡಿ ಎಂದಿದ್ದಕ್ಕೆ ಇವರು ನನ್ನನ್ನು, ಇರುವ ಒಬ್ಬ ಮಗ ಉದಯ್ ನನ್ನು ಕರೆದುಕೊಂಡು ಹೊರಟಿದ್ದರು. 


ಅದಾಗಲೇ ನೆಲಸಮವಾಗಿದ್ದ ತೋಟ ನೋಡಿಯೇ ನನಗೆ ಕರುಳು ಕಿವುಚಿದಂತಾಗಿತ್ತು. ಅದು ಎಷ್ಟೋ ಕಾಲದ ಪೂರ್ವಿಕರ ಸಮಾಧಿ ಅದನ್ನು ಇವರು ಸ್ಥಳಾಂತರ ಮಾಡುತ್ತೇನೆ ಅಂತಾ ಒಪ್ಪಿಕೊಂಡು ಅದರ ಕಾರ್ಯವನ್ನು ಮಾಡಲು ವ್ಯವಸ್ಥೆ ಮಾಡಿದರು. ಆದರೆ, ಆ ಬನ್ನಿ ಮರದ ಬಗ್ಗೆ ಇವರಿಗೆ ಕಾಳಜಿಯೇ ಇರಲಿಲ್ಲ. ಎಲ್ಲಾ ಮರಗಳಂತೆ ಅದೂ ಒಂದು ಮರ ಅಂತಾ ಉಡಾಫೆ ಮಾಡಿ ಪೂಜೆ ಮುಗಿದ ನಂತರ, ಆ ಸಮಾಧಿ ಸ್ಥಳಾಂತರಿಸುವ ಕಡೆ ಹೊರಟರು. 


ಎಷ್ಟೋ ಜನ ಮುತ್ತೈದೆಯರು ಪೂಜೆ ಮಾಡಿದ್ದ ಮರ ಅದು. ಚಪ್ಪಲಿ ಹಾಕಿಕೊಂಡು ಹತ್ತಿರ ಹೋಗುವುದಾಗಲಿ ಮಾಡದೆ, ಮಡಿಯಲ್ಲಿಯೇ ಹತ್ತಿರಕ್ಕೆ ಹೋಗುತ್ತಿದ್ದ ಮರ ಅದು. ಅದನ್ನು ಪೂಜೆ ಮಾಡಿದ ಎಷ್ಟೋ ಮಕ್ಕಳಿಲ್ಲದ ಹೆಣ್ಣು ಮಕ್ಕಳಿಗೆ ಮಕ್ಕಳಾಗಿತ್ತು. ಎಷ್ಟೋ ಜನರ ಬೇಡಿಕೆ ನೆರವೇರಿತ್ತು ಅನ್ನುವ ಪ್ರತೀತಿ ಇತ್ತು. ಹಿಂಜರಿಯುತ್ತಾ.. ಭಯದಿಂದಲೇ ಪೂಜೆಗೆ ಮಾಡಿದ್ದೆ. ಆ ಬನ್ನಿ ಮರ ಕಡಿದರೂ ಅದರ ಬದಲಿಗೆ ಮತ್ತೆ ಐದು ಬನ್ನಿ ಮರ ನೆಡುವ ಸಂಕಲ್ಪ ಮಾಡಿದೆ. ಅವತ್ತು ವಾಪಾಸ್ ಬರುವಾಗ ನಾನು ಮತ್ತು ಉದಯ್ ಮಾತ್ರ ಇದ್ದದ್ದು. ಡ್ರೈವರ್, ಇವರು ಸಮಾಧಿ ಸ್ಥಳಾಂತರಿಸುವ ಕೆಲಸಕ್ಕೆ ಹೋಗಿದ್ದರು. ಅವತ್ತು ಪೂಜೆ ಎಲ್ಲಾ ಮುಗಿದು ನಾವು ಮನೆಗೆ ಬರುವಾಗ ಮನಸ್ಸಲ್ಲಿ ಯಾಕೋ ಆ ಪೂಜ್ಯವಾದ ಮರ ಕಡಿದದ್ದೇ ಭಯ. ಮನಸ್ಸು ಕೇಡನ್ನು ಶಂಕಿಸುತ್ತಲೇ ಇತ್ತು. ಅಪಘಾತವೂ ಆಯಿತು. ಮದುವೆ ನಿಶ್ಚಯವಾಗಿದ್ದ ಉದಯ್ ಪ್ರೀತಿಸಿದವಳು ದೂರವಾದರೆ.. ನನ್ನ ಕಣ್ಣಿನ ದೃಷ್ಟಿ ಹೋಯಿತು.


ನಾನು ಎಷ್ಟೋ ತಾಯಂದಿರ ಭಾಗ್ಯವಾದ ಬನ್ನಿ ಮರವನ್ನು ದೂರ ಮಾಡಿದ್ದರ ಪಾಪದ ಫಲ ಮಗನಿಗೆ ಕಾಡಬಾರದೆಂದು ಉದಯ್ ನನ್ನು ಕೆಲಸಕ್ಕೆ ಬೆಂಗಳೂರಿಗೆ ಕಳುಹಿಸಿದೆ. ಪ್ರೀತಿ ಕಳೆದುಕೊಂಡ ನೋವನ್ನು ಅಲ್ಲಿಯಾದರೂ ಮರೆಯಬಹುದೇನೋ ಎಂದು." ಎಂದು ನಿಟ್ಟುಸಿರಿಟ್ಟರು ತಾರಿಣಿ. ಆಗಷ್ಟೇ ಬಂದಿದ್ದ ಉದಯ್ ಗೆ ಅಮ್ಮನ ಮನದ ತುಮುಲ ಅರ್ಥವಾಗಿತ್ತು.


*******

ಪುಣ್ಯಕ್ಕೆ ಸುಧಾ ಸಮಯಕ್ಕೊದಗಿದ್ದಳು. ಇವರ ಚಿಕ್ಕಪ್ಪನ ಮಗಳೇ ಆದರೂ ಸ್ವಂತ ತಂಗಿಯಂತಿದ್ದವಳು. ಪುಟ್ಟ ಮಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು, ಗಂಡನನ್ನು ಕಳೆದುಕೊಂಡಾಗ ಮಾಡಿದ ಸಹಾಯವನ್ನು ನೆನೆಸಿಕೊಂಡು, ಊರಿನ ಗೊಡವೆಯೇ ಬೇಡವೆಂದು ಸಿಟಿಯಲ್ಲಿದ್ದವಳು ಇಲ್ಲಿ ನಿಂತಳು. ಅಷ್ಟು ಓದಿದ ಮಗಳನ್ನು ಒಪ್ಪಿಸಿ ನಮ್ಮ ಚಾಕರಿ ಮಾಡಿಕೊಂಡಿದ್ದಾಳೆ. ಇದೆಲ್ಲವೂ ದಿನವೂ ಕಾಡುತ್ತೆ. 

********


"ಅಮ್ಮ ಇನ್ನು ಗುಣವಾಗುತ್ತಾರೆ. ಅವರಿಗೆ ಬೇಕಾದ ವ್ಯವಸ್ಥೆ ನಾನು ಮಾಡಿಸುತ್ತೇನೆ" ಎಂದುಕೊಂಡ ಉದಯ್ ಸುಧಾ ಅತ್ತೆಯ ಮಗಳು ಕಿರಣಳನ್ನು ಕಾಣಬೇಕೆಂದುಕೊಂಡ.


ಉದಯ್ ಗೆ ಅಮ್ಮನ ಮಾನಸಿಕ ನೋವು ಅರಿವಾಗಿತ್ತು. ಮನೋವೈದ್ಯೆ ಕಿರಣ ತಾರಿಣಿಯವರಿಗೆ ಅರಿವಾಗದಂತೆ ಕೌನ್ಸೆಲಿಂಗ್ ಮಾಡುತ್ತಾ ಬಂದಳು. ಲೆಕ್ಚರರ್ ಉದಯ್ ಈಗ ಊರಲ್ಲೇ ನೆಲೆ ನಿಂತು, ಮನೆಯಿಂದಲೇ ಹೋಗಿ ಬರುವಂತೆ ಕೆಲಸಕ್ಕೆ ಸೇರಿಕೊಂಡು ಅಮ್ಮನ ಜೊತೆ ಹೆಚ್ಚಿನ ಸಮಯ ಕಳೆಯುತ್ತಾನಲ್ಲದೆ, ಮನೆಯ ಸುತ್ತಮುತ್ತಲೂ ಗಿಡಗಳನ್ನು ನೆಡಿಸಿ, ಹಸಿರನ್ನು ಸೃಷ್ಟಿಸಿದ. ಆಕೆ ಅಂದುಕೊಂಡಿದ್ದಂತೆಯೇ ಅವಳ ಕೈಯಿಂದ ಬನ್ನಿ ಮರಗಳನ್ನು ಸಹ ನೆಡಿಸಿದ. 


ತಾರಿಣಿ ಸಂತೃಪ್ತಿಯಿಂದ ಸುಧಾರಿಸಿಕೊಳ್ಳುತ್ತಿರುವಾಗಲೇ ಅನಿರೀಕ್ಷಿತ ಸಂಗತಿ ನಡೆಯಿತು. ತಾರಿಣಿಯವರಿಗೆ ಹೊಂದಿಕೆಯಾಗುವ ಕಣ್ಣಿನ ದಾನಿಗಳ ಹಠಾತ್ ಮರಣ ಅವಳ ದೃಷ್ಟಿಯ ಭರವಸೆ ತಂದಿತ್ತು.


ಆಪರೇಷನ್ ಯಶಸ್ವಿಯಾಗಿ ಮನೆಯ ಸುತ್ತಮುತ್ತಲಿನ ಹಸಿರನ್ನು ಮತ್ತೆ ಕಾಣುತ್ತಿದ್ದರು ತಾರಿಣಿ. ಸತ್ತರೂ ತನ್ನ ಜೀವದ ಒಂದು ಭಾಗವೇ ಆಗಿದ್ದ ಕಂಗಳನ್ನು ಜೀವಂತವಾಗಿರಿಸಿ ಸಂತೃಪ್ತಳಾಗಿದ್ದರು ಅಜ್ಞಾತ ದಾನಿ. ತಾರಿಣಿಯವರ ಮುಖ ಹಸಿರಿನ ಸೊಬಗಿನ ಮಡಿಲಲ್ಲಿ ಮತ್ತಷ್ಟು ಸಂತೃಪ್ತಿಯಿಂದ ಹೊಳೆಯುತ್ತಿದ್ದವು. ಅದಕ್ಕೆ ಕಾರಣ ಉದಯ್ ಹಾಗೂ ಕಿರಣರಲ್ಲಿ ಚಿಗುರಿದ್ದ ಪ್ರೀತಿಗೆ ಇನ್ನೇನು ವಿವಾಹದ ಮುದ್ರೆ ಬೀಳುವ ದಿನ ಹತ್ತಿರದಲ್ಲಿತ್ತು.


ಉದಯ-ಕಿರಣರ ವಿವಾಹದ ನಂತರ ಸುಧಾ ಅಲ್ಲಿಯೇ ನೆಲೆಸುವುದು ತಾರಿಣಿ-ಪ್ರಕಾಶ್ ರಿಗೆ ಹೇಳಲಾರದಷ್ಟು ಸಂಭ್ರಮ ತಂದಿತ್ತು. ಅಂದು ಮನೆಯವರೆಲ್ಲರೂ ನೇತ್ರದಾನದ ಸಂಕಲ್ಪವನ್ನು ಅಧಿಕೃತವಾಗಿ ರಿಜಿಸ್ಟರ್ ಮಾಡಿಸಿ ಮತ್ತೊಬ್ಬರ/ ಇಬ್ಬರ ಬಾಳು ಬೆಳಗುವ ಅವಕಾಶವನ್ನು ತಮ್ಮದಾಗಿಸಿಕೊಂಡರು. ವಿವಾಹದಿಂದ ಮರಳುವಾಗ ಎಲ್ಲರ ಕೈಯಲ್ಲಿಯೂ ರಿಟರ್ನ್ ಗಿಫ್ಟ್ ಆಗಿ ಗಿಡಗಳು ನಳನಳಿಸುತ್ತಿದ್ದವು.


ಕಿರಣಳ ಕೈಹಿಡಿದು, ಅಮ್ಮನ ಸಂತಸವನ್ನು ಕಣ್ತುಂಬಿಕೊಂಡ ಉದಯ್ ಕಣ್ಣುಗಳು ಮತ್ತಷ್ಟು ಸಂತೃಪ್ತವಾಗಿದ್ದವು. ಮಗಳಿಲ್ಲವೆಂಬ ಚಿಂತೆ ಈಗ ತಾರಿಣಿಯವರಿಂದ ದೂರವಾಗಿತ್ತು. ಚಿಕ್ಕಂದಿನಲ್ಲಿ ದೊರೆಯದ ಅಪ್ಪನ ಪ್ರೀತಿ ಪ್ರಕಾಶ್ ರಿಂದ ಕಿರಣಳಿಗೆ ದೊರೆತರೆ.. ಅಜ್ಜಿಯಾಗಿ ಮುಂದಿನ ಹೊಣೆ ಹೊರಲು ತಯಾರಾಗುತ್ತಿದ್ದರು ಸುಧಾ. ಎಲ್ಲರ ಬಾಳು ಬೆಳಗುವ ಮತ್ತೊಂದು ಪುಟ್ಟ ಜೀವದ ಆಗಮನದ ಮುನ್ಸೂಚನೆ ಮನೆಗೆ ಹೊಸ ಬೆಳಕನ್ನೇ ತರುತ್ತಿತ್ತು.


~ ವಿಭಾ ವಿಶ್ವನಾಥ್

ಸದ್ಯಕ್ಕೆ ಹಗುರಾಗೋಣ

 


ಜಂಜಾಟಗಳನೆಲ್ಲ ಕ್ಷಣಕಾಲ ಮರೆಯೋಣ

ನಮ್ಮಿಷ್ಟದ ಹಾಡ ಗುನುಗುತಲಿ..

ಹಿತವಾದ ಸಂಗೀತ ಕೇಳುತಲಿ..

ಯಾವುದೋ ಹೊಸ ಖಾದ್ಯದ ತಯಾರಿಯಲಿ..

ಒಂದಿಷ್ಟು ದೂರ ಸುಮ್ಮನೆ ಸಾಗುತಲಿ..

ಹಿತೈಷಿಯೊಡನೆ ತುಸು ಹರಟಿ ಹಗುರಾಗುತಲಿ..

ಮನದ ಮಾತುಗಳ ಡೈರಿಯಲಿ ಬರೆಯುತಲಿ..

ಸವಿ ನೆನಪೊಂದ ಮೆಲುಕು ಹಾಕುತಲಿ..

ಮಗುವಿನೊಡನೆ ಮಗುವಾಗಿ ಬೆರೆಯುತಲಿ..

ಸುಮ್ಮನಿರದೆ ಏನೋ ಒಂದು ಮಾಡುತಲಿ..!

ಕೊನೆಗೊಮ್ಮೆ

ಎಲ್ಲವನು ಕೊಡವಿ ಎದ್ದು ನಡೆಯುವುದು

ಇದ್ದೇ ಇರುವುದಲ್ಲ..!

ಸದ್ಯಕ್ಕೆ ಹಗುರಾಗೋಣ


~ವಿಭಾ ವಿಶ್ವನಾಥ್ 

ಎಲ್ಲಕ್ಕೂ ಸಹಮತವೇ..?! (ಬೆಳಕಿಂಡಿಯ ಕತೆಗಳು - 46)


ಪ್ರತಿ ಬಾರಿಯೂ ಮ್ಯಾನೇಜರ್ ನ ಮಾತಿಗೆ, ನಿರ್ಧಾರಕ್ಕೆ ಸಹಮತ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದವನಿಗೆ ಪ್ರಮೋಷನ್ ಸಿಗುತ್ತದೆ ಎಂದುಕೊಂಡಿದ್ದವರೆಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದಂತೆ ಮ್ಯಾನೇಜರ್ ನ ಹೆಚ್ಚಿನ ನಿರ್ಧಾರಗಳಿಗೆ ನಕಾರ ಸೂಚಿಸಿ, ವಾದ ಮಾಡಿ ಅವರ ವಿರುದ್ಧವೆಂಬಂತೆ ಕಾಣುತ್ತಿದ್ದವನಿಗೆ ಸಿಕ್ಕ ಪ್ರಮೋಷನ್ ಅಚ್ಚರಿ ತರಿಸಿತ್ತು. 

ಅದನ್ನು ಕಂಡು ಹೇಳಿದ್ದಿಷ್ಟು.. "ಪ್ರತಿ ನಿರ್ಧಾರಕ್ಕೂ ಸಹಮತ ಸೂಚಿಸಿದವರಿಗಿಂತ, ಅದನ್ನು ಒರೆ ಹಚ್ಚಿ ನೋಡಿ ಮತ್ತೊಮ್ಮೆ ಆಲೋಚಿಸುವಂತೆ ಮಾಡಿದವರಿಂದ ಹೆಚ್ಚು ಕಲಿತಿದ್ದೇನೆ. ಹಾಗಾಗಿ ಅವರ ಕೌಶಲ್ಯಕ್ಕೆ ಈ ಪ್ರಮೋಷನ್." ಎಂದಾಗ ತಾವು ಎಲ್ಲಿ ಎಷ್ಟು ಮಾತನಾಡುವುದು ಅವಶ್ಯಕವೆಂದು ಅರಿತ ಹಲವರು ಒಪ್ಪಿಗೆಯಾದುದಕ್ಕೆ ಮಾತ್ರವೇ ಸಹಮತ ಸೂಚಿಸುವುದನ್ನು, ಉಳಿದುದನ್ನು ತಮ್ಮ ರೀತಿಯಲ್ಲಿ ಪ್ರಸ್ತುತಪಡಿಸುವುದನ್ನೂ ರೂಢಿಸಿಕೊಳ್ಳುತ್ತಿದ್ದಾರೆ.

~ವಿಭಾ ವಿಶ್ವನಾಥ್ 

ಸಹಾಯ ಹಸ್ತ (ಬೆಳಕಿಂಡಿಯ ಕತೆಗಳು - 45)


 ಉಪಕಾರ ಸ್ಮರಣೆ ಮಾಡದೆ, ಅಗೌರವದಿಂದ ಬೆನ್ನ ಹಿಂದೆ ಆಡಿದ ಮಾತುಗಳು ಅವಳಿಗೆ ಬೇಸರ ತರಿಸಿದ್ದು ಮಾತ್ರವಲ್ಲದೆ ಅಪಾತ್ರ ದಾನ ಮಾಡಿದೆ ಎಂಬ ಭಾವವನ್ನೂ ಹುಟ್ಟಿಸಿತ್ತು. ಇನ್ನು ಮತ್ತಾರಿಗೂ ಉಪಕಾರವನ್ನೇ ಮಾಡಬಾರದು ಎಂದುಕೊಳ್ಳುವಷ್ಟರಲ್ಲಿ ಮತ್ತಾರೋ ಸಹಾಯ ಬಯಸಿ ಬಂದಾಗ ಇಲ್ಲವೆನ್ನಲಾರಳು. ಅಪನಂಬಿಕೆ, ಮೋಸ, ದ್ರೋಹದಾಚೆಗೂ ಇವರು ಅವರಂತಲ್ಲವೆಂಬ ನಂಬಿಕೆ ಮೂಡಿಸಿಕೊಳ್ಳುತ್ತಾಳೆ. ನಿಜವಾದ ಸಹಾಯ ಬೇಕಾದವರಿಗೆ ತನ್ನಿಂದ ತೊಂದರೆಯಾಗಬಾರದೆಂಬ ಕಾಳಜಿಯ ಮೃದು ಮನಸ್ಸು ಕರಗುತ್ತಲೇ ಇರುತ್ತದೆ.

~ವಿಭಾ ವಿಶ್ವನಾಥ್ 

ಅನಿವಾರ್ಯತೆ (ಬೆಳಕಿಂಡಿಯ ಕತೆಗಳು - 44)


 "ನಾನು ನಿನಗೆ ಅಷ್ಟೆಲ್ಲಾ ಸಹಾಯ ಮಾಡಿದ್ದೇನೆ. ಸಣ್ಣ-ಪುಟ್ಟ ಸಹಾಯ ಮಾಡಲು ನಿನಗೆ ಆಗುವುದಿಲ್ಲವಾ..?" ಎಂಬ ಮಾತು ಎಷ್ಟೇ ಮಾಡಿದರೂ ಹಂಗಿಗೆ ಬಿದ್ದವರು ಕೇಳಲೇಬೇಕಾದ ಅನಿವಾರ್ಯತೆ ಸೃಷ್ಟಿಸುತ್ತದೆ. ಸ್ವಾಭಿಮಾನವನ್ನು ಅಡವಿಡಲೇಬೇಕಾಗುತ್ತದೆ. ಜೊತೆಗೆ ಸಮಯಕ್ಕೊದಗಿದವರ 'ನಾನು' ಎಂಬ ಅಹಂ ಅನ್ನು ಮತ್ತಷ್ಟು ಬಲಿಷ್ಠವಾಗಿಸುತ್ತಲೇ ಇರುತ್ತದೆ.

~ವಿಭಾ ವಿಶ್ವನಾಥ್ 

ಗೆಲುವು ನನ್ನದಲ್ಲ (ಬೆಳಕಿಂಡಿಯ ಕತೆಗಳು - 43)


ಗುರಿ ಮಾತ್ರವೇ ಅವಳ ಕಣ್ಣಲ್ಲಿದ್ದದ್ದು. ಒಲಂಪಿಕ್ ನಲ್ಲಿ ಗೆದ್ದು ಪದಕ ಪಡೆದವಳ ಕಣ್ಣು, ಮನಸ್ಸುಗಳೆರಡೂ ತುಂಬಿ ಬಂದಿದ್ದವು. ಈ ಗೆಲುವು ಪಡೆದುಕೊಳ್ಳಲು ತಾನೆಷ್ಟು ಕಳೆದುಕೊಂಡಿದ್ದೆ ಎಂಬುದು ಗೆಲುವಿನ ಮುಂದೆ ಗೌಣವಾಗಿತ್ತು. ಅದು ಕೇವಲ  ಒಬ್ಬಳ ಗೆಲುವಾಗಿರಲಿಲ್ಲ. ಅದು ಕುಟುಂಬ, ಸ್ನೇಹಿತರು, ತರಬೇತುದಾರರ ಗೆಲುವಾಗಿತ್ತು. ಅದು ಅಷ್ಟಕ್ಕೆ ಸೀಮಿತವಾಗಲಿಲ್ಲ ಊರು, ಜಿಲ್ಲೆ, ರಾಜ್ಯದ ಗೆಲುವಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ದೇಶದ ಗೆಲುವಾಗಿತ್ತು. ಗೆಲುವಿನ ಸಂಭ್ರಮ ಎಲ್ಲರದ್ದೂ ಆದಾಗ ಗೆಲುವು ಮತ್ತಷ್ಟು ಆಪ್ತವಾಗಿತ್ತು. ಮುಂದಿನ ಗುರಿ ಅವಳ ಕಣ್ಣಲ್ಲಿ ನಿಚ್ಚಳವಾಗಿತ್ತು.


~ವಿಭಾ ವಿಶ್ವನಾಥ್

ಭಾನುವಾರ, ಜೂನ್ 21, 2026

ಪುಸ್ತಕ ಪಯಣ (ಬೆಳಕಿಂಡಿಯ ಕತೆಗಳು - 42)

 


ಸದಾ ಒಂದಿಲ್ಲೊಂದು ಕೆಲಸ ಮಾಡುತ್ತಾ ಬ್ಯುಸಿಯಾಗಿ ತಿರುಗುತ್ತಿದ್ದ ಅವಳಿಗೆ ಕಾಲಿನ ಫ್ಯಾಕ್ಚರ್ ಎಲ್ಲವನ್ನೂ ಬಿಟ್ಟು ೩ ತಿಂಗಳು ಮನೆಯಲ್ಲಿಯೇ ಕೂರುವ ಸಂಧರ್ಭ ಒದಗಿಸಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದ್ದವಳು ಮನೆಗಷ್ಟೇ ಸೀಮಿತವಾದಾಗ ಖಿನ್ನತೆಗೆ ಜಾರುವಂತಾಗಿತ್ತು. ಆದರೆ, ಅಮ್ಮ ಕೈಗಿತ್ತ ಪ್ರವಾಸ ಕಥನ ಅವಳ ಪುಸ್ತಕ ಪಯಣವನ್ನು ಶುರು ಮಾಡಿಸುತ್ತಷ್ಟೇ ಅಲ್ಲದೆ ಓದಿನ ಪಯಣಕ್ಕೆ ಮುನ್ನುಡಿಯಾಯಿತು. ಮುಂದೆ ಟ್ರಾವೆಲಿಂಗ್ ನಲ್ಲಿಯೂ ಮೊಬೈಲ್ ಬದಲಿಗೆ ಪುಸ್ತಕ ಹಿಡಿಯುವ ವಿಭಿನ್ನ ಆಲೋಚನೆಯಲ್ಲಿದ್ದಾಳೆ.

~ವಿಭಾ ವಿಶ್ವನಾಥ್