ಶುಕ್ರವಾರ, ಏಪ್ರಿಲ್ 17, 2026

ಮನ ಮೆಚ್ಚಿದವಳು (ಪುಸ್ತಕ ಯಾನ - 212)


ಪುಸ್ತಕದ ಶೀರ್ಷಿಕೆ : ಮನ ಮೆಚ್ಚಿದವಳು

ಲೇಖಕರು : ಪ್ರೇಮಾ ಭಟ್

ಪ್ರಕಾಶಕರು : ಹಂಸಧ್ವನಿ ಪ್ರಕಾಶನ

ಪ್ರಥಮ ಮುದ್ರಣ : 1965

ಪುಟಗಳು : 96


ಮನಮೆಚ್ಚಿದವಳು ಶ್ರೀಮತಿ ಪ್ರೇಮಾ ಭಟ್ ಅವರ ಕಥಾ ಸಂಕಲನ. ಇದರಲ್ಲಿ 11 ಚೆಂದದ ಕಥೆಗಳಿವೆ. ಇದಕ್ಕೆ ಅನುಪಮಾ ನಿರಂಜನ ಅವರ ಶುಭ ಹಾರೈಕೆಯೂ ಇದೆ.


ತುಂಬಿದ ಬಿಂದಿಗೆ : ಲಲಿತೆಯ ಮನೆಯಲ್ಲಿ ತಾಯಿ ಖಾಯಿಲೆ ಬಿದ್ದಿದ್ದರಿಂದ ಎಲ್ಲಾ ಕೆಲಸವೂ ಲಲಿತೆಯ ಮೇಲೆಯೇ ಬಿದ್ದಿತ್ತು. ಅದರಲ್ಲಿ ಅವಳಿಗೆ ಬಹಳ ಇಷ್ಟದ ಕೆಲಸವೆಂದರೆ.. ಅವರ ಮನೆಯಲ್ಲಿದ್ದ ಹಳೆಯ ಕಾಲದ ಬಿಂದಿಗೆಯನ್ನು ಫಳಫಳ ಎನ್ನುವಂತೆ ಬೆಳಗಿ ಅದರ ತುಂಬಾ ನೀರು ತುಂಬಿಸಿ, ಅದನ್ನು ದೇವರ ಮುಂದೆ ಪೂಜೆಗೆ ಇಡುವುದು. ಹಿರಿಯರೊಬ್ಬರ ಸಲಹೆ ಮೇರೆಗೆ ಹಾಗೆ ಮಾಡಿದರೆ ಮನೆಗೆ ಶ್ರೇಯಸ್ಸು ಎಂದು ಬಲವಾಗಿ ನಂಬಿದ್ದಳು.ಲಲಿತಳ ಸೋದರ ಮಾವನ ಮಗನಾದ ಸದಾಶಿವನನ್ನು ಮದುವೆಯಾದ ಆಕೆ ತನ್ನ ಗಂಡನ ಮನೆಗೂ ಬಿಂದಿಗೆಯನ್ನು ಕೊಂಡೊಯ್ದಳು. ಹರೆಯದ ಕನಸುಗಳ ಸದಾಶಿವ, ಮುಗ್ದೆ ಲಲಿತ ಹಾಗೂ ಆ ತುಂಬಿದ ಕುಟುಂಬದಲ್ಲಿ ಈ ಬಿಂದಿಗೆಯ ಕಾರಣಕ್ಕೆ ಶುರುವಾದ ಪ್ರಸಂಗ ಲಲಿತಾಳ ಸಾವಿನಲ್ಲಿ ಮುಕ್ತಾಯವಾಗಿದ್ದೇಕೆ..?? 


ಸಾಕು ಮಗ : ಶ್ರೀಧರನಿಗೆ ತಂದೆ ನರಸಿಂಗರಾಯರು ತನ್ನ ಬಗ್ಗೆ ತೋರುತ್ತಿದ್ದ ಅಸಡ್ಡೆಯನ್ನು ಕಂಡಾಗಲೂ ಆತನ ಮನಸ್ಸಿನಲ್ಲಿ ಇಂತಹದ್ದೊಂದು ಸಂದೇಹ ಮೂಡಿರಲಿಲ್ಲ. ಆದರೆ, ತಾನು ಅವರ ಸಾಕು ಮಗನೆಂದು.. ಆದರೆ, ತಾಯಿ ಸುಮಿತ್ರಮ್ಮ ಹೆತ್ತ ಮಗನಂತೆಯೇ ಅವನನ್ನು ಬೆಳೆಸುತ್ತಿದ್ದರು. ಹೆತ್ತ ಮಕ್ಕಳೇ ಆಗದ ಈ ಕಾಲದಲ್ಲಿ ಸಾಕು ಮಗ ಆಗುತ್ತಾನೆಯೇ..?! ಎಂಬ ಭಾವ ರಾಯರದ್ದು. ಇದೆಲ್ಲದಕ್ಕೂ ಶ್ರೀಧರನ ಪ್ರತಿಕ್ರಿಯೆಯೇನು ಹಾಗೂ ಆತನಿಗೆ ಸತ್ಯ ತಿಳಿದ ನಂತರ ಆತನ ನಡೆಯೇನು..?? 


ಮನಮೆಚ್ಚಿದವಳು : ಎಂ.ಬಿ.ಬಿ.ಎಸ್ ನಲ್ಲಿ ಮೊದಲ ಸ್ಥಾನ ಪಡೆದು ತೇರ್ಗಡೆಯಾಗಿದ್ದ ಹರಿಗೆ ಇದ್ದದ್ದು ಅಮ್ಮ ಮಾತ್ರ. ಅಪ್ಪ ಇರಲಿಲ್ಲ. ಅಮ್ಮ ಯಾವಾಗಲೂ ಆತನ ಮದುವೆಗೆ ಒತ್ತಾಯಪಡಿಸುತ್ತಿದ್ದಾಗ ಆತ ತನ್ನ ಮನ ಮೆಚ್ಚಿದವಳಿಗಾಗಿ ಕಾಯುತ್ತಿದ್ದ. ಆತನ ಮನಮೆಚ್ಚಿದವಳು ಸಿಗುವುದಕ್ಕೂ.. ಆತ ವೃತ್ತಿ ಜೀವನದಲ್ಲಿ ಮಾಡಿದ ಸಹಾಯ ಇಲ್ಲಿ ಕೊಂಡಿಯಂತಿದೆ. ತಾವು ಮಾಡಿದ ಪಾಪ-ಪುಣ್ಯಗಳ ಫಲವನ್ನು ತಾವು ಅನುಭವಿಸುವಂತೆ.. ಇಲ್ಲಿ ಒಳ್ಳೆಯದು ಮಾಡಿದಾಗ ಒಳ್ಳೆಯದ್ದೇ ತಿರುಗಿ ಬರುವ ನಿದರ್ಶನವಿದೆ.  


ಕುಲಪುತ್ರ : ಲತಾಳಿಗೆ ತನಗಿನ್ನು ಮಕ್ಕಳಾಗದು ಎಂದು ತಿಳಿದಾಗ ಆನಂದ ನೀಡಿದ ಬೇರೆ ಮಗು ಸಾಕುವ ಸಲಹೆಯನ್ನು ಒಪ್ಪದೇ ಮನೆಗೆ ತಮ್ಮದೇ ಮಗು ಬೇಕು ಎಂದು ಆನಂದನಿಗೆ ತನ್ನ ಸೋದರ ಮಾವನ ಮಗಳಾದ ಸುಕನ್ಯೆಯೊಂದಿಗೆ ಮದುವೆ ಮಾಡಿಸುತ್ತಾಳೆ. ಆತ ಬಡಪಟ್ಟಿಗೆ ಒಪ್ಪಿರಲಿಲ್ಲವಾದರೂ.. ಆಕೆಯ ಮನೋವೇದನೆಯನ್ನು ನೋಡಲಾಗದೆ, ಆಕೆ ಮತ್ತೆ ಅದರಿಂದಾಗಿ ಕಾಯಿಲೆ ಬೀಳಬಾರದೆಂಬ ಕಾಳಜಿಗೆ ಒಪ್ಪುತ್ತಾನೆ. ಸುಕನ್ಯೆ ಮನೆಗೆ ಬಂದ ಮೇಲೂ ಆಕೆಯ ಕುರಿತು ಅಷ್ಟು ಲಕ್ಷ್ಯ ವಹಿಸದೇ ಇದ್ದರೂ.. ನಂತರ ಎಲ್ಲರೂ ಹೊಂದಿಕೊಂಡು ಸುಖದಿಂದಲೇ ಇರುತ್ತಾರೆ. ಸುಕನ್ಯೆ ಗರ್ಭಿಣಿಯಾದ ಸಂದರ್ಭದಲ್ಲಿ ತಾಯಿ ಹಾಗೂ ಮಗುವಿನ ಆಯ್ಕೆ ಬಂದಾಗ ಆನಂದ ಹಾಗೂ ಲತಾರ ಆಯ್ಕೆ ಏನಾಗಿತ್ತು..??  


ತೊಟ್ಟಿಲು : ಸರಸ್ವತಮ್ಮನವರ ಹಿರಿಯ ಮಗಳು ಕುಮುದಾಳಿಗೆ ಮಗು ಸತ್ತದ್ದು ನೆನಪಿರಲಿಲ್ಲ. ಮಗು ಬದುಕಿದೆ ಎಂದು ತನ್ನ ಭ್ರಮಾಲೋಕದಲ್ಲಿಯೇ ಇದ್ದಳು. ಆಕೆಯ ತಂಗಿ ಹಾಗೂ ತಮ್ಮನಾದ ಭಾಗ್ಯ ಹಾಗೂ ಶಶಿಯೂ ಅರ್ಥ ಮಾಡಿಸಲು ಯತ್ನಿಸಿದರೂ ಆಕೆ ತನ್ನ ಭ್ರಮಾಲೋಕದಿಂದ ಹೊರಬಂದಿರಲಿಲ್ಲ. ಮದುವೆಯಾಗಿ ಐದು ವರ್ಷಗಳ ನಂತರ ಹುಟ್ಟಿದ್ದ ಮಗು ಸತ್ತಿತ್ತು. ಪತಿ ಶಂಕರ್ ನೊಂದಿಗೆ ಮತ್ತೆ ಗಂಡನ ಮನೆಗೆ ಮರಳಿದ ನಂತರ ನಾದಿನಿ ಕುಮದಾಳ ಉಪಸ್ಥಿತಿಯಲ್ಲಿ ಕೊಂಚ-ಕೊಂಚವಾಗಿ ಚೇತರಿಸಿಕೊಳ್ಳುತ್ತಿದ್ದಳು. ನಂತರ ಅವಳ ಬದುಕಿನಲ್ಲಿ ಮತ್ತೆ ತೊಟ್ಟಿಲು ಕಟ್ಟುವಂತಾಯಿತೇ..??


ಬದುಕಿನಡೆಗೆ : ಕುಮುದಾಳ ಮೊದಲ ಮಗಳಾದ ಸುಧಾಳಿಗೆ ಕಾಲು ಊನವಿತ್ತು. ಎರಡನೆಯ ಮಗು ವಂಶೋದ್ಧಾರಕನಾದ ಗೋಪಾಲ. ಮತ್ತೆರಡು ಹೆಣ್ಣುಮಕ್ಕಳು. ಆರು ಜನರ ಸಂಸಾರದ ನಿರ್ವಹಣೆ ನಾರಾಯಣನಿಗೆ ಕಷ್ಟವಾಗಿತ್ತು. ಸುಧಾ ತನ್ನ ನ್ಯೂನತೆಯನ್ನು ಮರೆಯಲೆಂಬಂತೆ ಹೆಚ್ಚು ಓದುತ್ತಿದ್ದಳು. ಆದರೆ, ಸಮಾಜದ ಚುಚ್ಚು ಮಾತುಗಳು ತಪ್ಪಿರಲಿಲ್ಲ. ತಂಗಿ ಜಯ ಕೂಡಾ ಕೆಲವೊಮ್ಮೆ ನೋಯಿಸುತ್ತಿದ್ದಳು. ತಂದೆ ಕಾಯಿಲೆ ಬಿದ್ದು ಸತ್ತಾಗ ಸುಧಾಳೇ ಉದ್ಯೋಗಕ್ಕೆ ಸೇರಿ ಶಿಕ್ಷಕಿಯಾಗಿ ಮನೆಯನ್ನು ನಿರ್ವಹಿಸಿ, ತಮ್ಮನನ್ನು ತಿದ್ದುತ್ತಿದ್ದಳು. ಅವಳ ಮದುವೆಯ ಕುರಿತ ನಿರಾಸೆ ಆಕೆಯನ್ನು ಸಾವಿನತ್ತ ಕೊಂಡೊಯ್ದಿತ್ತು. ಮತ್ತೆ ಬದುಕಿನೆಡೆಗೆ ಕರೆತಂದ ಪ್ರಸಂಗವೇನು..?? 


ಹೀಗೂ ಉಂಟೆ : ಸುಮಂಗಲ ಶ್ರೀಮಂತರ ಮನೆಯ ಮಗಳು. ಯಮುನಾ ಅವಳ ಸಹಪಾಠಿಯಾಗಿದ್ದಳು. ಬಡತನದಲ್ಲಿಯೇ ಬೆಳೆದ ಹುಡುಗಿ. ಬಡತನವನ್ನೂ ನಿರ್ಲಕ್ಷಿಸಿ ಸುಮಂಗಲಾಳೇ ಬಯಸಿ ಒಂದಾದ ಸ್ನೇಹ. ಎಷ್ಟೋ ಸಹಾಯ ಮಾಡಿದ ಸುಮಂಗಲಾ ಯಮುನಾಳನ್ನು ಸದಾ ತನ್ನ ಜೊತೆಗೇ ಇಟ್ಟುಕೊಂಡಿರುತ್ತಿದ್ದಳು. ಸುಮಂಗಲಾಳಿಗೆ ವಿವಾಹವಾದ ಸಂದರ್ಭದಲ್ಲಿ ಯಮುನಾ ಕೆಲಸಕ್ಕೆ ಸೇರಿ ದುಡಿಯುವಂತಾಗಿತ್ತು. ಆದರೆ, ಜೊತೆಗಿರಬೇಕೆಂಬ ಸುಮಂಗಲಾಳ ಆಸೆಗೆ ಆಕೆ ಮಾಡುತ್ತಿದ್ದ ತ್ಯಾಗವೂ ಅಷ್ಟೇ ದೊಡ್ಡದಿತ್ತು. 


ಆಸೆ ಫಲಿಸಿದಾಗ : ಪಾರ್ವತಿಗೆ ಗುಲಾಬಿ ಗಿಡವೆಂದರೆ ಬಹಳ ಅಕ್ಕರೆ. ತನ್ನ ಕೈಯಲ್ಲಿ ಹಾಕಿದ ಗಿಡ ಹುಟ್ಟದಾದಾಗ, ಅಮ್ಮನ ಕೈಯಲ್ಲಿ ಗಿಡ ನೆಡಿಸಿ ಅದನ್ನು ಪೋಷಿಸುತ್ತಿದ್ದಳು. ಅದನ್ನು ದಿನಾ ಮುಡಿಯುವುದೆಂದರೆ ಅವಳಿಗೆ ಬಹಳ ಪ್ರೀತಿ. ಮದುವೆಯಾಗಿ ಗಂಡನ ಮನೆಗೆ ಹೋದ ನಂತರವೂ ಅದೇ ಕನವರಿಕೆ. ಗರ್ಭಿಣಿಯಾಗಿ ಮತ್ತೆ ತವರಿಗೆ ಮರಳಿ ಬಂದು ಆ ಹೂವು ಮುಡಿಯಬೇಕೆಂಬ ಸಂದರ್ಭದಲ್ಲಿ ಆಘಾತಕಾರಿ ಸುದ್ದಿಯೊಂದು ಅವಳನ್ನು ಮುಟ್ಟಿತ್ತು. ಅವಳ ಆಸೆ ಫಲಿಸಿತೇ ಅಥವಾ ಮುರುಟಿತೇ..?? 


ಅವಳು ಹೆತ್ತಳು : ನಿರ್ಮಲ ಹೆತ್ತ ನಾಲ್ಕನೆಯ ಮಗುವೂ ಹೆಣ್ಣು ಎಂದಾದಾಗ ಎಲ್ಲರ ಕಣ್ಣಲ್ಲಿಯೂ ಒಂದು ರೀತಿಯ ತಾತ್ಸಾರ ಹಾಗೂ ಹೆಣ್ಣೇ ಎಂಬ ಭಾವ. ಆದರೆ ಐದನೆಯವನು ಮೋಹನ. ಗಂಡು ಎಂದು ತೀರಾ ಪ್ರೀತಿ, ಆಸ್ಥೆಯಲ್ಲಿ ಬೆಳೆದ ಮೋಹನ ನಂತರ ಹೆತ್ತತಾಯಿಗೆ ಹೇಗೆ ನಡೆದುಕೊಂಡ..?? ಗಂಡು-ಹೆಣ್ಣು ಎಂಬ ಭೇದ ಮಾಡುವವರಿಗೆ ತಕ್ಕ ಪಾಠ ಇಲ್ಲಿದೆ.


ತುಂತುರು ಮಳೆಯಲ್ಲಿ : ಪಾರ್ವತಮ್ಮನವರ ಏಕಮಾತ್ರ ಪುತ್ರಿ ಪಂಕಜ. ಆಕೆಯ ತಂದೆ ದೊಡ್ಡ ಶ್ರೀಮಂತರಾಗಿದ್ದು.. ನಂತರ ಗಳಿಸಿದ ಹಣವೆಲ್ಲಾ ಪೋಲು ಮಾಡಿದ್ದರು. ಈಗ ಅವರು ಕಾಲವಾಗಿದ್ದರು. ಇದೊಬ್ಬ ಮಗಳೆಂದರೆ ಪಾರ್ವತಮ್ಮನವರಿಗೆ ಎಲ್ಲಿಲ್ಲದ ಅಕ್ಕರೆ. ಆಕೆಯ ಓದು ಮುಗಿಯುತಿದ್ದ ಸಂದರ್ಭದಲ್ಲಿ ಆಕೆಗೆ ವರ ಒದಗಿ ಬಂದಿತ್ತು. ಕಾಲೇಜಿನಿಂದ ತುಂತುರು ಮಳೆಯಲ್ಲಿ ಬರಲೋ.. ಬೇಡವೋ.. ಎಂದು ಬರುತ್ತಿದ್ದ ಅವಳು ಒಬ್ಬರ ಮನೆಗೆ ಭೇಟಿ ನೀಡಬೇಕಾಯಿತು. ಆ ತುಂತುರು ಮಳೆಯಲ್ಲಿ ನಡೆದ ಘಟನೆಯೇನು..?? 


ಗಂಗಾ-ಗೌರಿ : ಗಂಗಾ ಹಾಗೂ ಗೌರಿಗೆ ವಯಸ್ಸಿನ ಅಂತರ ಬಹಳ. ನೋಡಿದವರು ಅವರನ್ನು ಅಕ್ಕ-ತಂಗಿ ಎನ್ನುವ ಬದಲು ಅಮ್ಮ-ಮಗಳು ಎಂದೇ ಭಾವಿಸುತ್ತಿದ್ದರು. ಗಂಗಾ ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾಗಿ ತವರು ಸೇರಿದವಳು ತಾಯಿಯಿಲ್ಲದ ತಂಗಿ ಗೌರಿಯನ್ನೇ ತನ್ನ ಮಗಳೆಂದು ವಿದ್ಯಾಭ್ಯಾಸ ಕೊಡಿಸಿ ಓದಿಸುತ್ತಿದ್ದಳು. ಆದರೆ, ಮದುವೆಯಾದ ನಂತರವೂ ಅವರಿಬ್ಬರ ಭಾಂದವ್ಯ ತಾಯಿ ಮಗಳಂತೆ ಇದ್ದರೂ.. ಗಂಗೆಯ ಉಪಸ್ಥಿತಿ ಗೌರಿಯ ಗಂಡ ಶ್ರೀಕಂಠನಿಗೆ ಮಗ್ಗುಲ ಮುಳ್ಳಾಗಿತ್ತು. ಈ ಸಮಸ್ಯೆಗೆ ಗೌರಿ ಕಂಡುಕೊಂಡ ಪರಿಹಾರವೇನು..??


1965 ರಲ್ಲಿ ಮುದ್ರಣ ಕಂಡಿರುವ ಈ ಕಥಾ ಸಂಕಲನ ಆ ಕಾಲಘಟ್ಟದ ಹೆಣ್ಣುಮಕ್ಕಳು ಎದುರಿಸುತ್ತಿದ್ದ ಎಷ್ಟೋ ಸಮಸ್ಯೆಗಳ ಮೇಲೆ ಹಾಗೂ ಕೌಟುಂಬಿಕ ಚಿತ್ರಣಗಳ ಮೇಲೆ ಬೆಳಕು ಹಾಯಿಸುತ್ತದೆ. ಇಂದು ಕಾಲ ಬದಲಾಗಿದ್ದರೂ.. ಸಂಪೂರ್ಣವಾಗಿ ಬದಲಾಗಿಲ್ಲ. ಇಲ್ಲಿನ ಸಮಸ್ಯೆಗಳಿಗೆ ಪರಿಹಾರಗಳು ಈ ಕಥೆಯಲ್ಲಿಯೇ ಇವೆ. ಒಂದೊಳ್ಳೆ ಕಥಾಸಂಕಲನದ ಓದು.


~ವಿಭಾ ವಿಶ್ವನಾಥ್

ಪ್ರೇಮದ ಷರತ್ತುಗಳು (ಪುಸ್ತಕ ಯಾನ - 211)


ಪುಸ್ತಕದ ಶೀರ್ಷಿಕೆ : ಪ್ರೇಮದ ಷರತ್ತುಗಳು

ತೆಲುಗು ಮೂಲ : ಯರ್ರಂಶೆಟ್ಟಿ ಶಾಯಿ

ಕನ್ನಡಕ್ಕೆ : ಕೆ. ವಿ. ರಾಜೇಶ್ವರಿ

ಪ್ರಕಾಶಕರು : ಸ್ನೇಹಾ ಪ್ರಿಂಟರ್ಸ್

ಪ್ರಥಮ ಮುದ್ರಣ : 1994

ದ್ವಿತೀಯ ಮುದ್ರಣ : 2011 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 214

ಬೆಲೆ : 120 ರೂ.


ತೆಲುಗು ಮೂಲದ ಹಲವು ಅನುವಾದಿತ ಕಾದಂಬರಿಗಳನ್ನು ಓದಿದ್ದೆನಾದರೂ.. ಈ ಕಾದಂಬರಿಯ ಶೀರ್ಷಿಕೆಯನ್ನು ಕಂಡಾಗ ಮೊದಲಿಗೆ ಇದು ಯಾವುದಾದರೂ ಪ್ರೀತಿ-ಪ್ರೇಮದ ಅಥವಾ ಕೌಟುಂಬಿಕ ಕಥೆ ಇರಬಹುದಾ ಎಂಬ ಊಹೆಯಿತ್ತು. ಆದರೆ, ಇದನ್ನು ಓದುತ್ತಾ ಹೋದಂತೆ ಅಲ್ಲಿನ ನವಿರಾದ ಹಾಸ್ಯ ಹಾಗೂ ವಿಡಂಬನೆಗಳು ಇದೊಂದು ಚೆಂದದ ಚಲನಚಿತ್ರವಾಗಬಹುದಾದ ಕಥೆ ಎಂದೆನಿಸಿತು. ಈ ಪುಸ್ತಕವನ್ನು ಓದುವಾಗ ಎಲ್ಲಿಯೂ ಇದು ಅನುವಾದಿತ ಕಾದಂಬರಿ ಎಂಬ ಭಾವ ಹುಟ್ಟಿಸಲಿಲ್ಲ.


ಸತ್ಯನಾರಾಯಣ, ನಾಗೇಶ್ವರ್ ಹಾಗೂ ಗೋಪಾಲ್ ನಡುವೆ ನಡೆದ ಮಾತುಕತೆಯಲ್ಲಿ ಪ್ರೇಮದ ನಿಯಮಗಳ ಕುರಿತು ಶುರುವಾದ ಮಾತುಕತೆ ನಂತರ ಮಾತಿನ ಚಕಮಕಿಗೆ ತಿರುಗಿ ನಂತರ ಎಲ್ಲರೂ ಆಸ್ಪತ್ರೆಗೆ ಸೇರಿದಾಗ.. ಅಮಲಿಳಿದ ನಂತರ ಸತ್ಯನಾರಾಯಣ ತನ್ನ ಗೆಳೆಯನ ಜೀವನದಲ್ಲಿ ನಡೆದ ಘಟನೆಯನ್ನು ಹೇಳುತ್ತಾನೆ. ಅವರ ದೃಷ್ಟಿಯಲ್ಲಿ ಪ್ರೇಮಕ್ಕೆ ಇರುವ ನಿಯಮಗಳು ಎರಡೇ ಎಸ್ ಆರ್ ನೋ ಅಷ್ಟೇ.. ಆದರೆ, ಸತ್ಯನಾರಾಯಣ ಹೇಳುವ ಘಟನೆಯಲ್ಲಿ ಬರುವ ಪ್ರೇಮದ ಷರತ್ತುಗಳು ಬೇರೆಯವೇ..


ರಘುನಾಥ ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದ. ಆತ ಈಗ ಸೋದರಮಾವನ ಮನೆಯಲ್ಲಿಯೇ ಬೆಳೆಯುತ್ತಿದ್ದದ್ದು.. ತಂದೆ-ತಾಯಿ ತೀರಿಕೊಂಡ ನಂತರ ಸೋದರಮಾವನೇ ರಘುನಾಥ್ ನನ್ನು ಸಾಕುತ್ತಿದ್ದದ್ದು. ಜೊತೆಗೆ, ಈಗ ಮೂರು ವರ್ಷದಿಂದ ವಾಲ್ಮೀಕಿ ಇದ್ದಾನೆ. ಶ್ರೀಮಂತ ಕುಟುಂಬದ ಮಕ್ಕಳಿಗೆ ಇರುವ ಎಲ್ಲಾ ಶೋಕಿಗಳೂ ಇದ್ದು ಅದರಲ್ಲಿ ಕುಡಿತವೇ ಹೆಚ್ಚಾಗಿತ್ತು ರಘುನಾಥನ ಬದುಕಲ್ಲಿ. ಅದಕ್ಕೆ ಕಾರಣ ಆತನ ಗೆಳೆಯ ನರಸಿಂಹ. ಇಬ್ಬರೂ ಸೇರಿ ಕುಡಿತದ ಅಮಲಿಗೇರುತ್ತಿದ್ದರು. 


ಹಾಗೆ ಒಂದು ದಿನ ಕುಡಿದ ರಘು ಹಾಗೂ ನರಸಿಂಹ ಬಾರ್ ನಲ್ಲಿ ಮಿಲಿಟರಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಡನೆ ಗದ್ದಲವೆಬ್ಬಿಸಿಕೊಂಡಿದ್ದರು. ಹಾಗೆ ಜಗಳವಾಡಿದ್ದು ಮೇಜರ್ ರಾಮಚಂದ್ರ ಅವರ ಬಳಿ. ಅವರ ಮಗಳು ಸ್ವರೂಪಳನ್ನು ರಘುನಾಥನಿಗೆ ವಿವಾಹ ಮಾಡುವ ಆಲೋಚನೆಯಿಂದ ಬಂದದ್ದು. ಆದರೆ, ಅವರೊಡನೆ ಮಾತನಾಡಲು ಹೋಗಿ ಮೂವರೂ ಕುಡಿಯುತ್ತಾ ಅಮಲಿನಲ್ಲಿ ಜಗಳವಾಡಿದರು.


ಈ ಘಟನೆಯ ನಂತರ ರಘುನಾಥನಿಗೆ ಡಾಕ್ಟರ್ ಚಂದ್ರಕಲಾ ಮೇಲೆ ಪ್ರೇಮವಾಗಿತ್ತು. ಆದರೆ, ಚಂದ್ರಕಲಾ ಈತನ ಪ್ರೇಮಕ್ಕೆ ಷರತ್ತು ಹಾಕಿದ್ದಳು. ಅವಳ ಪ್ರೇಮದ ಷರತ್ತುಗಳಲ್ಲಿ ಮುಖ್ಯವಾದದ್ದು.. ಮೊಟ್ಟ ಮೊದಲು ಪ್ರಪಂಚ ಎಂದರೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ತನ್ನ ಸ್ವಶಕ್ತಿ ಸಾಮರ್ಥ್ಯದಿಂದ ಒಂದು ಕೆಲಸ ಸಂಪಾದಿಸಿಕೊಂಡು ಆರು ತಿಂಗಳಾದರೂ ಆ ಕೆಲಸ ಮಾಡಬೇಕು. ನಿಮ್ಮ ಸಂಪಾದನೆಯಲ್ಲಿ ಜೀವನ ನಡೆಸಬೇಕು ನಿಮ್ಮ ಅತ್ತೆ ಅಥವಾ ಮಾವನ ರೆಕಮೆಂಡೇಶನ್ ನಿಂದ ಕೆಲಸ ತೆಗೆದುಕೊಳ್ಳಬಾರದು. ಅಲ್ಲದೇ, ಕನಿಷ್ಠ ಆರು ತಿಂಗಳು ಕೆಲಸ ಮಾಡಬೇಕು. ಸ್ನೇಹಿತರು ಅಥವಾ ಪರಿಚಯದವರ ಹತ್ತಿರವೂ ಒಂದು ಪೈಸೆಯೂ ಸಾಲ ಮಾಡಬಾರದು ಎಂಬುದಾಗಿ.


ರಘುನಾಥನ ಮಾವ ಶ್ರೀಮಂತ ಉದ್ಯಮಿ ಜನಾರ್ಧನ್ ಹಾಗೂ ಅತ್ತೆ ರಚನಾದೇವಿ ಲೇಖಕಿ. ತನ್ನ ಗಂಡನಿಗೆ ಡಾಕ್ಟರೇಟ್ ಕೊಡಿಸಬೇಕೆಂದು ಗವರ್ನರ್ ದೂರ್ವಾಸ್ ಬಳಿಯೂ ರಚನಾದೇವಿ ಮಾತನಾಡಿದ್ದರು. 

ಅದರ ಸಮಯ ಹತ್ತಿರ ಬರುತ್ತಿದ್ದಾಗಲೇ.. ರಘುನಾಥ ಬಾರ್ ನಲ್ಲಿ ಮಾಡಿಕೊಂಡು ಬಂದಿದ್ದ ಅವಾಂತರ ಪೇಪರ್ ನಲ್ಲಿ ಬಂದಿತ್ತು. ಅದೇ ವಿಚಾರವಾಗಿ ಇಬ್ಬರಲ್ಲಿಯೂ ಮಾತು ನಡೆದಿತ್ತು. ಚಂದ್ರಕಲಾಳ ಕಂಡೀಷನ್ ಒಪ್ಪಿಕೊಂಡ ರಘುನಾಥ್ ಇದನ್ನೇ ನೆಪವಾಗಿರಿಸಿಕೊಂಡು ಮನೆ ಬಿಟ್ಟು ಹೊರಟ.


ಒಬ್ಬ ನಿರುದ್ಯೋಗಿ ಉದ್ಯೋಗ ಸಂಪಾದಿಸುವುದು ಎಷ್ಟು ಕಷ್ಟ ಹಾಗೂ ತನ್ನ ಅನ್ನವನ್ನು ತಾನೇ ದುಡಿದುಕೊಳ್ಳುವುದಕ್ಕೆ ಎಷ್ಟು ಕಷ್ಟವಿದೆ ಎನ್ನುವುದನ್ನು ಲೇಖಕರು ಹೇಳುತ್ತಾರೆ. ಆದರೆ, ತನ್ನ ಸೋದರಳಿಯನ ಮೇಲಿನ ಪ್ರೀತಿಯಿಂದ ಜನಾರ್ಧನ್ ಪ್ರತಿ ಹೆಜ್ಜೆಯಲ್ಲೂ ಅವನಿಗೆ ತಿಳಿಯದಂತೆ ಆತನ ಅನುಕೂಲವನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಚಾಣಾಕ್ಷ ಚಂದ್ರಕಲಾ ಇದೆಲ್ಲದರ ಜಾಡು ಹಿಡಿದು ರಘುನಾಥನ ಎಲ್ಲಾ ಕೆಲಸಗಳಿಗೂ ನಿರಾಕರಿಸಿ ಎಲ್ಲಾ ಸತ್ಯವನ್ನು ಬಿಚ್ಚಿಡುತ್ತಿದ್ದಳು.


ಜನಾರ್ಧನ್ ತನ್ನ ಪತ್ನಿ ಎಲ್ಲದಕ್ಕೂ ಅಡ್ಡಿ ಮಾಡುತ್ತಿರುವುದನ್ನು ಕಂಡು ಬೇಸರವಾಗಿ ರಘುನಾಥನಿಗೆ ಜೊತೆಯಾಗಿ ಹೊರಬಂದರು. ಅದೇ ಸಮಯಕ್ಕೆ ಗವರ್ನರ್ ದೂರ್ವಾಸ್ ಕೊಟ್ಟ ಪೇಪರ್ ನ ಜಾಹೀರಾತು ಕೆಲಸಕ್ಕೆಂದು ರಘುನಾಥ್ ಹಾಕುತ್ತಿದ್ದ ನಿಯಮಕ್ಕೆ ಬದ್ಧವಾಗಿತ್ತು. ರಘುನಾಥ ಆ ಉದ್ಯೋಗಕ್ಕೆ ಸೇರಿದನೇ..??


ಇಲ್ಲಿ ಮೇಜರ್ ರಾಮಚಂದ್ರರ ಮಗಳು ಸ್ವರೂಪ ರಘುನಾಥನ ಗೆಳೆಯ ನರಸಿಂಹನನ್ನು ಪ್ರೀತಿಸುತ್ತಿದ್ದಳು. ಆಕೆಯನ್ನು ನೋಡಲು ಈಶ್ವರದತ್ ಎಂಬ ಹುಡುಗ ಬರಬೇಕಿತ್ತು. ಅದರ ಬದಲಾಗಿ ನರಸಿಂಹನಿಗೆ ಆ ವೇಷದಲ್ಲಿ ಬರಲು ತಿಳಿಸಿದಾಗ.. ಇಬ್ಬರಿಗೂ ಆಶ್ಚರ್ಯ ಆಗುವಂತೆ ಅಲ್ಲಿ ಬಂದದ್ದು ರಘುನಾಥ್. ಆತ ತನ್ನ ಗೆಳೆಯನಿಗೂ ಗೊತ್ತಾಗದಂತೆ ಅಲ್ಲಿಗೆ ಬಂದದ್ದೇಕೆ..?? 


ದೂರ್ವಾಸ್ ಹರಿತಾದೇವಿಗೆಂದು ಬರೆದ ಪತ್ರ ತಪ್ಪಿ ರತ್ನಾದೇವಿಗೆ ಹೋಗಿ ಸೇರುತ್ತದೆ. ಆಕೆ ಮತ್ತಾರು ಅಲ್ಲದೆ ಮೇಜರ್ ರಾಮಚಂದ್ರ ಅವರ ಪತ್ನಿ. ಪತ್ರವನ್ನೇ ಇಟ್ಟುಕೊಂಡು ರತ್ನದೇವಿ ದೂರ್ವಾಸ್ ನನ್ನು ಬ್ಲಾಕ್ಮೈಲ್ ಮಾಡಲು ಶುರು ಮಾಡುತ್ತಾರೆ. ಆ ಪತ್ರದಲ್ಲಿ ಅಂತಹದ್ದೇನಿತ್ತು..?? ಹರಿತಾದೇವಿ ಯಾರು..?? ಅಷ್ಟಕ್ಕೂ ಈ ಪತ್ರ ವ್ಯವಹಾರ ನಡೆದದ್ದೇಕೆ..??


ರಘುನಾಥನಿಗೆ ಉದ್ಯೋಗ ಸಿಕ್ಕಿತೇ..?? ಆತ ಎಷ್ಟು ದಿನ ಉದ್ಯೋಗ ಮಾಡಿದ..?? ಡಾಕ್ಟರ್ ಚಂದ್ರಕಲಾ ಪ್ರತಿ ಹೆಜ್ಜೆಗೂ ರಘುನಾಥನನ್ನು ಪರೀಕ್ಷಿಸುತ್ತಿದ್ದವಳು ಆತನಿಗೆ ಸಿಕ್ಕ ಉದ್ಯೋಗದ ಬಗ್ಗೆ ಅರಿತಳೇ..?? ರಘುನಾಥನಿಗೆ ಆಕೆ ಹಾಕಿದ್ದ ಉಳಿದ ಪ್ರೇಮದ ಷರತ್ತುಗಳು ಯಾವುವು..?? ಅವೆಲ್ಲವನ್ನೂ ಪೂರೈಸಿ ಆ ಪ್ರೇಮವನ್ನು ಗೆದ್ದರೇ?? ನರಸಿಂಹ ಹಾಗೂ ಸ್ವರೂಪರ ಪ್ರೇಮ ಏನಾಯ್ತು..?? ಅಲ್ಲಿಗೆ ರಘುನಾಥ ಪ್ರವೇಶಿಸಿದ್ದೇಕೆ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಾದಂಬರಿಯನ್ನು.

~ವಿಭಾ ವಿಶ್ವನಾಥ್

ಕಾನನದ ಸುಮವೊಂದು (ಪುಸ್ತಕ ಯಾನ - 210)



ಪುಸ್ತಕದ ಶೀರ್ಷಿಕೆ : ಕಾನನದ ಸುಮವೊಂದು

ಲೇಖಕರು : ವೇದ ಮಂಜುನಾಥನ್

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 2006


ಕಾನನದ ಸುಮವೊಂದು ಇದು ವೇದ ಮಂಜುನಾಥ್ ಅವರ ಕಿರು ಕಾದಂಬರಿ. ಕಾದಂಬರಿಯ ಶೀರ್ಷಿಕೆಯನ್ನು ಕಂಡಾಗ ಹಳ್ಳಿಯ ಅಥವಾ ಬೆಳಕಿಗೆ ಬಾರದ ಪ್ರತಿಭೆಯೊಂದು ಅರಳುವ ಬಗೆಯನ್ನು ಹೇಳಿರಬಹುದೇನೋ ಎಂದೆನಿಸಿತು. ಈ ಕಾದಂಬರಿಯಲ್ಲಿ ಸಿನಿಮಾ ನಟಿಯೊಬ್ಬಳು ಬದುಕಿನ ಚಿತ್ರಣವಿದೆ. ಅದರಲ್ಲಿಯೂ.. ಹಳ್ಳಿಯಲ್ಲಿ ಬೆಳೆದ ಕಾನನದ ಸುಮದಂತಿದ್ದು ಅರಳಿದ ಪ್ರತಿಭೆಯ ಪರಿ ಕಾಣಸಿಗುತ್ತದೆ.


'ಸೂರ್ಯೋದಯ' ಎಂಬ ದಿನಪತ್ರಿಕೆಯಿಂದ ಅವಳ ಸಂದರ್ಶನಕ್ಕಾಗಿ ಬಂದವರು ಕೇಳಿದ ಪ್ರಶ್ನೆಗಳು ಹಾಗೂ ಅದಕ್ಕೂ ಮುಂಚಿನ ಕೆಲ ನೆನಪುಗಳನ್ನು ಮೆಲುಕು ಹಾಕುತ್ತಿದ್ದಳು ಸುರಭಿ.


ಸುರಭಿಯ ಮೊದಲ ಹೆಸರು ತುಂಗಾ. ತುಂಗಾ ರಾಮಾಶಾಸ್ತ್ರಿಗಳು ಹಾಗೂ ಸೀತಮ್ಮನವರಿಗೆ ಮೂರನೆಯ ಮಗಳು. ಶಾಸ್ತ್ರಿಗಳ ಮೊದಲ ಮಗ ಶ್ರೀಧರ. ಎರಡನೆಯವಳು ಪಂಕಜ. ಮೂರನೇ ಮಗಳೇ ತುಂಗಾ. ಶಾಸ್ತ್ರಿಗಳು ಹಳ್ಳಿಯ ಪೌರೋಹಿತ್ಯ ಮಾಡಿಕೊಂಡು ಇದ್ದವರು. ಅದರಿಂದ ಬಂದ ಆದಾಯದಲ್ಲೇ ಅವರ ಪತ್ನಿ ತಮ್ಮ ಮನೆಯನ್ನು ನಡೆಸುತ್ತಿದ್ದರು. ಸ್ವಗ್ರಾಮ ಬೆಳಗೆರೆಯಲ್ಲಿ ಆಸ್ತಿ-ಪಾಸ್ತಿಗಳು ಭಾಗವಾಗಿ ವರ್ಷಗಳೇ ಕಳೆದಿದ್ದವು. ಅವರಿಗೆ ಬಂದಿದ್ದ ಹೊಲವನ್ನು ಬೇರೆಯವರಿಗೆ ಬಾಡಿಗೆಗೆಂದು ನೀಡಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇರೆಯ ಊರಿಗೆ ಬಂದಿದ್ದರು.


ಶ್ರೀಧರ ಕಾಲೇಜು ಓದುತ್ತಿದ್ದುದರ ಜೊತೆಗೆ ಪಾರ್ಟ್ ಟೈಮ್ ಕೆಲಸಕ್ಕೆ ಎಂದು ಮಂಡಿಯಲ್ಲಿ ಲೆಕ್ಕ ಬರೆಯುತ್ತಿದ್ದ. ಪಂಕಜ ಟಿ.ಸಿ.ಎಚ್ ಓದುತ್ತಾ ಮಕ್ಕಳಿಗೆ ಮನೆ ಪಾಠ ಹೇಳಿಕೊಡುತ್ತಿದ್ದಳು. ತುಂಗಾ ಮಾತ್ರ ಚಿಕ್ಕವಳೆಂದು ಅವಳಿಗೆ ಇದೆಲ್ಲದರಿಂದ ಸ್ವಲ್ಪ ಬಿಡುವಿತ್ತು.


ತುಂಗಾಳಿಗೆ ಅಚ್ಚುಮೆಚ್ಚಿನ ಅಣ್ಣನಾಗಿದ್ದು ಅವಳ ದೊಡ್ಡಪ್ಪನ ಮಗ ನರಹರಿ. ಅವನ ತಂದೆ ಶ್ರೀಕಂಠ ಶಾಸ್ತ್ರಿಗಳು ಹಾಗೂ ತಾಯಿ ಚಿಕ್ಕ ವಯಸ್ಸಿನಲ್ಲಿಯೇ ತೀರಿಹೋಗಿದ್ದರಿಂದ ಸೀತಮ್ಮನವರು ತಮ್ಮ ಮೂರು ಮಕ್ಕಳ ಜೊತೆಗೆ ಅವನನ್ನೂ ತನ್ನ ಮಗನೆಂದೇ ಭಾವಿಸಿ ಬೆಳೆಸಿದ್ದರು. ಆತನು ಶ್ರೀಧರನಿಗಿಂತ ಮೂರು ವರ್ಷ ದೊಡ್ಡವನು. ತನ್ನ ಚಿಕ್ಕಪ್ಪ-ಚಿಕ್ಕಮ್ಮನನ್ನೇ ಅಪ್ಪ-ಅಮ್ಮನೆಂದು ಭಾವಿಸಿದ್ದನು. ಆತ ಎಲ್.ಎಲ್.ಬಿ ಮುಗಿಸಿ ಲಾಯರ್ ಆಗಿದ್ದ. ನಿತ್ಯವೂ ಪಟ್ಟಣಕ್ಕೆ ಕೋರ್ಟಿಗೆ ಓಡಾಡುತ್ತಿದ್ದ. ಸೀತಮ್ಮನೇ ಮುಂದೆ ನಿಂತು ತಮ್ಮ ದೂರದ ಸಂಬಂಧಿಗಳ ಒಬ್ಬಳೇ ಮಗಳಾದ ವಸಂತಳನ್ನು ಮದುವೆ ಮಾಡಿದ್ದರು. ಎಲ್ಲರೊಂದಿಗೆ ಹೊಂದಿಕೊಂಡು ಬಾಳುತ್ತಿದ್ದರು ಎಲ್ಲರೂ. 


ತುಂಗಾಳಿಗೆ ಶಾಲೆಯಲ್ಲಿ ಹೊಸದಾಗಿ ಶುರುವಾಗಿದ್ದ ಮ್ಯೂಸಿಕ್ ಹಾಗೂ ಡ್ಯಾನ್ಸ್ ಕಲಿಯಲು ಆಸಕ್ತಿಯಿತ್ತು. ಆದರೆ, ಮನೆಯಲ್ಲಿ ತಂದೆಯ ಬಳಿ ಇದಕ್ಕೆ ಅವಕಾಶವಿರಲಿಲ್ಲ. ಅವಳ ಆಸಕ್ತಿ ಕಂಡು ಪ್ರೋತ್ಸಾಹಿಸಿದ್ದು ಅಣ್ಣ ನರಹರಿ. ಹೀಗೆ ಪ್ರೋತ್ಸಾಹಿಸುತ್ತಿದ್ದ ನರಹರಿಗೆ ಹಳ್ಳಿಯ ಜೀವನವನ್ನು ಬಿಟ್ಟು ಪಟ್ಟಣಕ್ಕೆ ಹೋಗುವ ಆಸೆ ಮೊಳೆತಿತ್ತು. ಹಾಗೆಂದು ಆತ ತಾನು ತನ್ನ ಹೆಂಡತಿ ಮಾತ್ರ ಎಂದು ಬೇರೆ ಹೋಗಲು ಸಿದ್ದನಿರಲಿಲ್ಲ. ತನ್ನ ಜೊತೆ ಇಡೀ ಕುಟುಂಬದವರನ್ನು ಕರೆದೊಯ್ಯಲು ಸಿದ್ದನಾಗಿದ್ದ. ಅದಕ್ಕೆ ಉಳಿದವರಾರೂ ಸಿದ್ಧವಿರಲಿಲ್ಲ. ಕೊನೆಗೂ ಆತನ ಆಸೆಯಂತೆ ಆತ ಹಾಗೂ ವಸಂತನ ಜೊತೆಗೆ ಓದಲು ತುಂಗಾಳನ್ನು ಪಟ್ಟಣಕ್ಕೆ ಕರೆದೊಯ್ದರು.


ತುಂಗಾ ಪಟ್ಟಣಕ್ಕೆ ಬಂದ ನಂತರ ಆಕೆಯ ಅದೃಷ್ಟ ಬದಲಾಗಿತ್ತು. ಕೇವಲ ಮ್ಯೂಸಿಕ್ ಹಾಗೂ ಡ್ಯಾನ್ಸ್ ನಲ್ಲಿ ಆಸಕ್ತಿಯಿದ್ದ ಅವಳು ಈಗ ಖ್ಯಾತ ನಟಿಯಾಗಿದ್ದಳು. ಆದರೆ, ಬೇರೆ ನಟಿಯರಂತಿರಲಿಲ್ಲ ಅವಳು. 


ಎಲ್ಲಾ ನಟಿಯರಂತೆ ತನ್ನ ಹುಟ್ಟುಹಬ್ಬವನ್ನು ಆಡಂಬರವಾಗಿ ಆಚರಿಸಿಕೊಳ್ಳದೆ, ಕೇವಲ ದೇವಸ್ಥಾನಕ್ಕೆ ಹೋಗಿ ಬಂದು ಮನೆಯಲ್ಲಿಯೇ ಸಿಹಿ ತಿಂಡಿ ಮಾಡಿಸುತ್ತಾಳೆ. ಅಭಿಮಾನಿಗಳಿಗೆ ಗೊತ್ತಾದರೆ ಅವಳ ಹುಟ್ಟುಹಬ್ಬವನ್ನು ಹಬ್ಬದಂತೆಯೇ ಮಾಡುತ್ತಿದ್ದವರು. ಆದರೆ, ಯಾರಿಗೂ ಇದರ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ ಸುರಭಿ.


ತುಂಗಾ ನಟಿಯಾಗುವುದು ಮನೆಯಲ್ಲಿ ಸುತಾರಾಂ ಇಷ್ಟವಿರಲಿಲ್ಲ. ಆದರೆ, ತುಂಗಾಳ ಹಠಕ್ಕೆ ಮಣಿದು ಒಪ್ಪುವ ಸಂದರ್ಭವೂ ಇರಲಿಲ್ಲ. ಶಾಸ್ತ್ರಿಗಳು ಅವಳನ್ನು ತಮ್ಮ ಮಗಳೆಂಬ ಸ್ಥಾನದಿಂದ ಕಿತ್ತುಹಾಕಿ ದೂರವಿದ್ದು ಬಿಟ್ಟಿದ್ದರು. ಸೀತಮ್ಮ ಮಗಳ ಮನ ಪರಿವರ್ತಿಸಲು ಮುಂದಾಗಿ ಸೋತಿದ್ದರು. ತುಂಗಾಳ ನಿರ್ಧಾರ ಅಚಲವಾಗಿದ್ದಾಗ ಇದಕ್ಕೆ ಕಾರಣ ನರಹರಿ ಎಂದು ಅವನನ್ನು ಸಂಬಂಧದಿಂದ ದೂರವಿರಿಸಿಬಿಟ್ಟಿದ್ದರು.


ಬಣ್ಣದ ಬದುಕಿನ ನಡುವೆ ಕಳೆದು ಹೋದ ಎಷ್ಟೋ ನಟಿಯರು ಮತ್ತೆ ತಮ್ಮ ಹಿಂದಿನ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಸುರಭಿ ಕೂಡಾ ತನ್ನ ಹಿಂದಿನ ಬದುಕಿಗೆ ಹಿಂದಿರುಗಲು, ಹಳ್ಳಿಯ ಮುಕ್ತ ಜೀವನದಲ್ಲಿ ಬದುಕಲು ಆಶಿಸುತ್ತಿದ್ದಳು. ಆದರೆ, ಅದು ಅಷ್ಟು ಸುಲಭವಾಗಿರಲಿಲ್ಲ. 

ತುಂಗಾ ಸುರಭಿಯಾಗಿ ಬದಲಾಗಲು ಕಾರಣವೇನು..?? ಅದರಲ್ಲಿ ನರಹರಿಯ ಪಾತ್ರವೆಷ್ಟಿತ್ತು..?? ಮೊದಲಿಗೆ ನರಹರಿ ಈಕೆಯನ್ನು ಪ್ರೋತ್ಸಾಹಿಸಿದರೂ.. ಆತನ ಕೆಲಸ,ಸಂಸಾರದ ನಡುವೆ ಅವನ ಪ್ರೋತ್ಸಾಹ ಮುಂದುವರಿಯಿತೇ.. ಆತನ ವೃತ್ತಿ ಜೀವನ ಹೇಗೆ ನಡೆಯುತ್ತಿತ್ತು..??


ತುಂಗಾ ಸುರಭಿಯಾಗಿ ಬದಲಾದ ನಂತರ ಅವಳ ಬದುಕಿನಲ್ಲಿ ನಡೆದ ಮಹತ್ತರವಾದ ಬದಲಾವಣೆಗಳೇನು..?? ತಂದೆ ಆಕೆಯನ್ನು ಕ್ಷಮಿಸಿದರೇ.. ತಾಯಿ ಯಾರ ಪರ ನಿಂತರು.?? ಅಣ್ಣ ಹಾಗೂ ಅಕ್ಕನ ಬದುಕಿನ ಸ್ಥಿತಿ ಈಗ ಹೇಗಿತ್ತು..?? ತನ್ನ ತವರಿಗೆ ಯಾವುದಾದರೂ ಸಹಾಯ ಮಾಡಿದ್ದಳೇ..??


ಬಣ್ಣದ ಬದುಕಿನ ನಂತರ ವೈವಾಹಿಕ ಬದುಕು ಸಹ ಜೀವನದಲ್ಲಿ ಅಷ್ಟೇ ಮುಖ್ಯವಾಗುತ್ತದೆ. ಯೌವ್ವನ ಕಳೆದ ನಂತರ ಬಣ್ಣದ ಬದುಕು ಮಾಸುತ್ತಾ ಬರುವ ಸಂದರ್ಭದಲ್ಲಿ ವೈವಾಹಿಕ ಬದುಕಿನ ಅವಶ್ಯಕತೆ ಇರುತ್ತದೆ. ಸುರಭಿ ಈ ಘಟ್ಟದಲ್ಲಿ ಯಾವ ನಿರ್ಧಾರವನ್ನು ಮಾಡುತ್ತಾಳೆ..?? 


ಸೂರ್ಯೋದಯ ಪತ್ರಿಕೆಗೆ ಆಕೆ ಕೊಟ್ಟ ಸಂದರ್ಶನದ ಜೊತೆಗೆ ಅಷ್ಟು ದಿನ ಯಾಕೆ ಗುಟ್ಟಾಗಿಟ್ಟಿದ್ದ ಅವಳ ಬದುಕಿನ ಮುಖ್ಯ ಘಟನೆಗಳು ಸಹಾ ತೆರೆದುಕೊಳ್ಳುತ್ತವೆ. ಅದಕ್ಕೆ ಕಾರಣರಾದವರು ಯಾರು..?? 

ಕಾನನದ ಸುಮವೊಂದು ಪಟ್ಟಣದ ಬದುಕಿನಲ್ಲಿ ಅರಳುವುದು ಹಾಗೂ ಗಂಧವನ್ನು ಪಸರಿಸುವುದು ಸುಲಭವಿಲ್ಲದ ಆ ಪಯಣದಲ್ಲಿ ಅದು ಬಳಲಿತೇ..? ಉತ್ತರ ತಿಳಿಯಲು ನೀವೇ ಓದಿ.


ತುಂಗಾ ಸುರಭಿಯಾಗಿರುವ ಘಟ್ಟದಲ್ಲಿ ಅವಳ ಬಣ್ಣದ ಬದುಕಿನ ಘಟ್ಟಗಳ ಜೊತೆಗೆ ಹೆಣ್ಣಿನ ಮನಸ್ಸಿನ ಸೂಕ್ಷ್ಮ ಭಾವನೆಗಳು ಹಾಗೂ ಮಾಗಿದ ಮನಸ್ಸಿನ ಭಾವನೆಗಳು ಸಹಾ ಕಾಣುತ್ತವೆ. ಚಿಕ್ಕ ಚೊಕ್ಕ ಕಾದಂಬರಿಯ ಚೆಂದದ ಓದು.


~ವಿಭಾ ವಿಶ್ವನಾಥ್

ಅಕ್ಷರದ ಕಥನ ಮತ್ತು ದೃಶ್ಯಕಥನಗಳ ಸಮ್ಮಿಲನ


ಪುಸ್ತಕದ ಶೀರ್ಷಿಕೆ : ಅನುರಾಗದ ಅಂತಃಪುರ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 152

ಬೆಲೆ : 120 ರೂ.


ಸಿನಿಮಾದ ಶೀರ್ಷಿಕೆ : ಅನುರಾಗ ಅರಳಿತು

ನಿರ್ದೇಶಕರು : ಎಂ. ಎಸ್. ರಾಜಶೇಖರ್

ಚಿತ್ರಕಥೆ : ಚಿ. ಉದಯಶಂಕರ್

ಬಿಡುಗಡೆ ದಿನಾಂಕ : 21 ಮೇ 1986


'ಅನುರಾಗದ ಅಂತಃಪುರ' ಎಂದರೆ ಹೆಚ್ಚಿನವರಿಗೆ ತಕ್ಷಣಕ್ಕೆ ತಿಳಿಯದಿದ್ದರೂ.. ಡಾ. ರಾಜಕುಮಾರ್, ಮಾಧವಿ ಹಾಗೂ ಗೀತಾರವರ ಅಭಿನಯದ 'ಅನುರಾಗ ಅರಳಿತು' ಎಂದರೆ ಬೇಗ ತಿಳಿಯುತ್ತದೆ. ದೃಶ್ಯ ರೂಪದಲ್ಲಿಯೂ ಸಮರ್ಥವಾಗಿ ಮೂಡಿಬಂದಿರುವ ಚಲನಚಿತ್ರ. 'ಅನುರಾಗ ಅರಳಿತು' ಕಾದಂಬರಿ ಆಧಾರಿತ ಚಲನಚಿತ್ರ. 1985ರಲ್ಲಿ ಗೆಳತಿ ಮಾಸ ಪತ್ರಿಕೆಯಲ್ಲಿ ಧಾರಾವಾಹಿಯಾಗಿಯೂ ಪ್ರಕಟಗೊಂಡಿತ್ತು. 


ಕನ್ನಡದಲ್ಲಿ 50 ವಾರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಓಡಿದ ಚಲನಚಿತ್ರ ಎಂಬ ಹೆಗ್ಗಳಿಕೆ ಹೊಂದಿದೆ. ಕನ್ನಡ ಮಾತ್ರವಲ್ಲದೇ, ಏಳು ಭಾಷೆಗಳಲ್ಲಿ - ತಮಿಳಿನಲ್ಲಿ 1992 ರಲ್ಲಿ ಮನ್ನನ್, ತೆಲುಗಿನಲ್ಲಿ 1992 ರಲ್ಲಿ ಘರಾನಾ ಮೊಗುಡು, ಹಿಂದಿಯಲ್ಲಿ 1994 ರಲ್ಲಿ ಲಾಡ್ಲಾ, ಸಿಂಹಳದಲ್ಲಿ 1996 ರಲ್ಲಿ ಮಲ್ ಹಥೈ, ಒಡಿಯಾದಲ್ಲಿ 2000 ರಲ್ಲಿ ಸಿಂದೂರಾ ನುಹೇನ್ ಖೇಲಾ, ಬಂಗಾಳಿಯಲ್ಲಿ 2001 ರಲ್ಲಿ ಜಮೈಬಾಬು ಜಿಂದಾಬಾದ್ ಮತ್ತು ಬಾಂಗ್ಲಾದಲ್ಲಿ 2002 ರಲ್ಲಿ ಶಮಿ ಸ್ಟ್ರಿರ್ ಜುದ್ದೋ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ.  


ಏಳು ಇತರ ಭಾಷೆಗಳಲ್ಲಿ ರಿಮೇಕ್ ಆದ ಮೊದಲ ಭಾರತೀಯ ಚಲನಚಿತ್ರವಾಗಿದೆ. ಒಡಿಯಾ, ಬೆಂಗಾಲಿ, ಸಿಂಹಳ ಭಾಷೆಗೆ ರಿಮೇಕ್ ಆದ ಮೊದಲ ಕನ್ನಡದ ಚಲನಚಿತ್ರ. ಇದು ಎರಡು ವಿದೇಶಿ ಭಾಷೆಗಳಲ್ಲಿ ರೀಮೇಕ್ ಆದ ಕನ್ನಡದ ಮೊದಲ ಚಲನಚಿತ್ರವೂ ಹೌದು. ಈ ಚಲನಚಿತ್ರದ ರೀಮೇಕ್‌ಗಳೊಂದಿಗೆ, ರಾಜ್‌ಕುಮಾರ್ ಅವರ ಚಲನಚಿತ್ರಗಳನ್ನು 50 ಕ್ಕೂ ಹೆಚ್ಚು ಬಾರಿ ರೀಮೇಕ್ ಮಾಡಿದ ಮೊದಲ ಭಾರತೀಯ ನಟರಾದರು ಮತ್ತು ಅವರ ಚಲನಚಿತ್ರಗಳನ್ನು ಇತರ ಒಂಬತ್ತು ಭಾಷೆಗಳಲ್ಲಿ ರೀಮೇಕ್ ಮಾಡಿದ ಮೊದಲ ಭಾರತೀಯ ನಟ. 


ಹೆಚ್.ಜಿ ರಾಧಾದೇವಿಯವರ ಕಾದಂಬರಿಗಳಲ್ಲಿ ಹೆಚ್ಚಿನವು ನಾಯಕಿ ಪ್ರಧಾನವಾದ ಕಾದಂಬರಿಗಳು. ಆದರೆ, ಬೆರಳೆಣಿಕೆಯಷ್ಟು ಮಾತ್ರವೇ ನಾಯಕ ಪ್ರಧಾನವಾದ ಕಾದಂಬರಿಗಳು. ಹಾಗೆ ನಾನು ಓದಿದ ಕಾದಂಬರಿಗಳಲ್ಲಿ 'ಪ್ರೇಮ ಸಾಮ್ರಾಜ್ಯ'ದ ನಂತರ ಓದಿದ ನಾಯಕ ಪ್ರಧಾನ ಕಾದಂಬರಿ 'ಅನುರಾಗದ ಅಂತಃಪುರ'.


ರಾಧಾದೇವಿಯವರ ಕಾದಂಬರಿಗಳಲ್ಲಿ ಹೆಣ್ಣು ತೀರಾ ಮೃದು ಅಥವಾ ದುರ್ಬಲೆಯಲ್ಲ. ಬದಲಾಗಿ, ಆಕೆ ಸ್ವಾಭಿಮಾನಿ, ದಿಟ್ಟೆ ಹಾಗೂ ಧೈರ್ಯಶಾಲಿ. ಆದರೆ, ಹೆಣ್ಣು ಆ ಹಂತವನ್ನು ಮೀರಿ ಸ್ವಾತಂತ್ರ್ಯವನ್ನು ಸ್ವೇಚ್ಛೆಯನ್ನಾಗಿಸಿಕೊಂಡು ಮದ, ಅಹಂಕಾರದಿಂದ ವರ್ತಿಸಿದರೆ ಆಕೆಯ ವ್ಯಕ್ತಿತ್ವ ಹೇಗಿರುತ್ತದೆ ಎಂಬುದು ಈ ಕಾದಂಬರಿಯಲ್ಲಿ ಚಿತ್ರತವಾಗಿದೆ. ಹೆಣ್ಣು, ಗಂಡಿನ ದಬ್ಬಾಳಿಕೆಯನ್ನು ಮೆಟ್ಟಿನಿಲ್ಲಬೇಕು. ಹಾಗೆಂದು.. ಗಂಡು ಹೆಣ್ಣಿನ ಕಾಲ ಕೆಳಗೆ ಅವಳ ಅಹಂನಿಂದ ನಲುಗಬಾರದು. ಇಲ್ಲಿನ ದಿಟ್ಟ, ಧೈರ್ಯಶಾಲಿ, ಧೀಮಂತ ಹಾಗೂ ಸ್ವಾಭಿಮಾನಿ ನಾಯಕ ಶ್ರೀಮಂತಿಕೆಯ ಅಹಂ ಹಾಗೂ ಅವಳ ಅಹಂಕಾರಕ್ಕೆ ತಲೆಬಾಗದೆ.. ಸಡ್ಡು ಹೊಡೆದು ನಿಲ್ಲುತ್ತಾನಾದರೂ.. ಆಕೆಯನ್ನೇನೂ ತನ್ನ ಕಾಲಕಸದಂತೆಯೂ ನೋಡುವುದಿಲ್ಲ. ಆಕೆಗೆ ಕೊಡುವ ಗೌರವವನ್ನು ಕಡಿಮೆ ಮಾಡುವುದಿಲ್ಲ. ಇಲ್ಲಿನ ನಾಯಕ ಇಷ್ಟವಾಗಿದ್ದು ಅದೇ ಕಾರಣಕ್ಕೆ.


ಚಲನಚಿತ್ರವನ್ನು ಮೊದಲು ನೋಡಿ, ನಂತರ ಕಾದಂಬರಿ ಓದಿದ್ದರಿಂದ ನನಗೆ ನಾಯಕ ರಾಜೇಂದ್ರನ ಪಾತ್ರದಲ್ಲಿ ಚಲನಚಿತ್ರದ ನಾಯಕ ಶಂಕರ್ ಎಂದರೆ ಡಾ||ರಾಜ್ ಅವರೇ ಕಣ್ಮುಂದೆ ಬಂದಂತಾಗುತ್ತಿತ್ತು. ಇದು ಅವರ ಅಭಿನಯದ ಪ್ರಭಾವವೆಂದರೆ ತಪ್ಪಾಗಲಾರದು. 


ಮೋಹನರಾಯರ ಮುದ್ದಿನ ಮಗಳು ಆಶಾ ಪಾತ್ರದಲ್ಲಿ ಮಾಧವಿಯವರು ದಿಟ್ಟ, ಶ್ರೀಮಂತಿಕೆಯ, ಕಟ್ಟುನಿಟ್ಟಿನ, ದರ್ಪದ ಹೆಣ್ಣಾಗಿ ಕಾಣುತ್ತಾರೆ. ತಂದೆಯ ಫ್ಯಾಕ್ಟರಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಅಮೆರಿಕದಲ್ಲಿ ಎಂ.ಬಿ.ಎ ಮುಗಿಸಿ ಬಂದಿದ್ದಳು. ಕಾದಂಬರಿಯಲ್ಲಿ ಚಿತ್ರಿತವಾಗಿರುವ ಈ ದೃಶ್ಯ.. ಚಲನಚಿತ್ರದಲ್ಲಿ ಆಕೆಯ ಸಂದರ್ಶನದಿಂದ ಶುರುವಾಗುತ್ತವೆ.


ಕಾದಂಬರಿಯಲ್ಲಿ ರಾಯರ ಮನಸಿನಲ್ಲಿ ಹೆಚ್ಚಿನ ಚಿಂತೆ ಇದ್ದದ್ದು ಆಶಾ ತನ್ನ ಮದುವೆಗೆ ಯಾವ ವರನನ್ನು ಒಪ್ಪದೇ ಇರುವುದು. ಚಲನಚಿತ್ರದಲ್ಲಿ ಅದರ ದೃಷ್ಟಾಂತವನ್ನು ನ್ಯಾಯಾಧೀಶರ ಮಗನನ್ನು ತಿರಸ್ಕರಿಸುವ ಸನ್ನಿವೇಶದಲ್ಲಿ ಕಾಣಬಹುದು. 


ಕಥೆ, ಕಾದಂಬರಿ, ಸಿನಿಮಾಗಳನ್ನು ಓದಿ.. ನೋಡಿದರೂ.. ಆ ಸೆಂಟಿಮೆಂಟ್ ಗಳಿಗೆ ಒಳಗಾಗದವಳಿಗೆ ಅವಳದ್ದೇ ಆದ ಭಾವನೆಯೊಂದಿತ್ತು. "ನನ್ನ ಹೃದಯದ ಅರಮನೆಯಲ್ಲಿ ಒಂದು ಪುಟ್ಟ ಅನುರಾಗದ ಅಂತಃಪುರವಿದೆ. ಆದರೆ, ಆ ಅಂತಃಪುರ ಪ್ರವೇಶಿಸಲಿಕ್ಕೆ ಆತ ಬಹಳ ಯೋಗ್ಯವಾಗಿರಬೇಕು. ಬರೀ ರೂಪ, ಐಶ್ವರ್ಯ ಮೆಚ್ಚಿ ಬರುವ ವ್ಯಕ್ತಿ ನಿಜವಾದ ಸಂಗಾತಿಯಾಗಲಾರ" ಎನ್ನುವ ಅಭಿಪ್ರಾಯವಿತ್ತು. 


ಬಿಸಿರಕ್ತ, ಮುಂಗೋಪ, ಬಾಸಿಂಗ್ ನೇಚರ್ ನಿಂದ ಕಂಪನಿಯನ್ನು ಆಳಲು ಮುಂದೆ ನೋಡುತ್ತಿದ್ದಳು. ಅದರ ಫಲವಾಗಿ ಕಂಪನಿಯ ಮುಷ್ಕರ ನಿಲ್ಲಿಸಲು ಕಾರ್ಮಿಕರಲ್ಲಿ ಮುಖ್ಯಸ್ಥರಾಗಿದ್ದ ರಾಮಲಿಂಗಂ, ಮುನಿಸ್ವಾಮಿ ಹಾಗೂ ಚೆನ್ನವೀರಯ್ಯನವರನ್ನು ತನ್ನ ಚೇಂಬರಿಗೆ ಕರೆಸಿ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಕೆಲಸದಿಂದ ತೆಗೆದುಹಾಕಿ.. ಇದಾವುದೂ ತಿಳಿಯದ ಉಳಿದ ಕಾರ್ಮಿಕರನ್ನು ಸವಿ ಮಾತುಗಳಿಂದಲೇ ಓಲೈಸಿದ್ದಳು. ಇಲ್ಲಿ ಅವರಲ್ಲಿ ಇಬ್ಬರ ಪಾತ್ರ ಮಾತ್ರ ಇದೆ.


ಮೈಸೂರಿನ ಗೆಳೆಯ ಸೋಮನಾಥ್ ರವರ ಮನೆಗೆ ಹೋಗಲು ಹೊರಟಿದ್ದ ರಾಯರನ್ನು ರಾಮಲಿಂಗಂ ಮುಂತಾದವರು ಸೇರಿ ಹಲ್ಲೆ ಮಾಡಲು ಯತ್ನಿಸಿದಾಗ.. ಅವರೆಲ್ಲರನ್ನು ತಡೆದು ರಾಯರ ಪ್ರಾಣ ಉಳಿಸಿದ್ದು ರಾಜೇಂದ್ರಬಾಬು. ಚಲನಚಿತ್ರದಲ್ಲಿ ರಾಜೇಂದ್ರಬಾಬು ಶಂಕರ್ ಕಾಣುತ್ತಾರೆ.


ರಾಜೇಂದ್ರ/ಶಂಕರ್ ಮುಂಬೈಯಿಂದ ಕೆಲಸ ಬಿಡಲು ಕಾರಣ ಆತನ ತಾಯಿಯ ಅನಾರೋಗ್ಯ. ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಬಂದವನು ಪಾಪಣ್ಣನವರ ಕೆಲಸದ ಮೇಲೆ ದಾರಿಯಲ್ಲಿ ಹೋಗುತ್ತಿದ್ದಾಗ ರಾಯರನ್ನು ಅಡ್ಡಗಟ್ಟಿದವರನ್ನು ಉಪಾಯವಾಗಿ ಓಡಿಸಿ ಪ್ರಾಣ ಕಾಪಾಡಿದ್ದ.


ರಾಜೇಂದ್ರ/ಶಂಕರ್ ನಿಗೆ ಏನನ್ನಾದರೂ ಕೂಡಲೇ ಬೇಕೆಂಬ ರಾಯರ ಹಂಬಲಕ್ಕೆ.. ಆತ ಅವರ ಪರಿಚಿತರಾದ ಪಾಪಣ್ಣನವರಿಂದ ಪತ್ರ ತಂದು ಕಾರ್ಖಾನೆಯಲ್ಲಿ ಒಂದು ಕೆಲಸ ಕೇಳಿದ್ದ. ಮುಂಬೈಯ ಕಾರ್ಖಾನೆಯಲ್ಲಿ ಯಾಂತ್ರಿಕ ವಿಭಾಗದಲ್ಲಿ ಎಂಟು ವರ್ಷ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ದಕ್ಷ ಹಾಗೂ ಕರ್ತವ್ಯಶಾಲಿ ಎಂದು ರಾಯರು ಕೆಲಸಕ್ಕೆ ಕೊಟ್ಟಿದ್ದರು. ಕಾರ್ಖಾನೆಯಲ್ಲಿಯೂ ಆ ಹುದ್ದೆಗೆ ಯಾರಾದರೊಬ್ಬರು ಯೋಗ್ಯರ ಅವಶ್ಯಕತೆಯಿತ್ತು.


ತನ್ನನ್ನು ಕೇಳದೇ, ತಂದೆ ಆತನಿಗೆ ಕೆಲಸ ಕೊಟ್ಟದ್ದು ಆಶಾಳ ಅಹಂಗೆ ಪೆಟ್ಟು ಕೊಟ್ಟಿತ್ತು. ಅಲ್ಲದೆ, ಆತನ ಸ್ವಾಭಿಮಾನ ಹಾಗೂ ಮಾತುಗಳು ತೀರಾ ಅವಳನ್ನು ಮೆಚ್ಚಿಸುವಂತಿರುತ್ತಿರಲಿಲ್ಲ. ಇದು ಅವಳಿಗೆ ಎರಡನೇ ಪೆಟ್ಟು. ಹೀಗೆ ಆತ ಕೆಲಸಕ್ಕೆ ಸೇರಿದ ನಂತರ ತನ್ನ ಪ್ರಭಾವದಿಂದ ಕಾರ್ಮಿಕರ ಜೀವನ ಶೈಲಿಯಲ್ಲಿಯೂ ಬಹಳಷ್ಟು ಬದಲಾವಣೆಗಳನ್ನು ತಂದ. ಕಾರ್ಮಿಕರ ನಾಯಕನೆಂದು ಅಲ್ಪ ಕಾಲದಲ್ಲಿಯೇ ಹೆಸರು ಗಳಿಸಿಕೊಂಡ. ಕಾರ್ಖಾನೆಯ ಯಾವ ಮೇಲಾಧಿಕಾರಿಗೂ ಕೊಡದಷ್ಟು ಗೌರವವನ್ನು ಕಾರ್ಮಿಕರು ಆತನಿಗೆ ಕೊಡುತ್ತಿದ್ದರು. 


ಹೀಗೆ ಹಲವಾರು ಸಂದರ್ಭಗಳು ಘಟನೆಗಳು ಆಶಾಳಿಗೆ ಆತನ ಮಹತ್ವವನ್ನು ಸಾರಿ ಸಾರಿ ಹೇಳುತ್ತಿದ್ದರೂ ಆಕೆ ಆತನನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಆತನ ಕೆಲಸದಲ್ಲಿ ತಪ್ಪು ಕಂಡುಹಿಡಿಯಲೆಂದು ಹೋದಾಗ ನಡೆದ ಘಟನೆಯೊಂದು ಇಬ್ಬರ ಬದುಕಿನಲ್ಲಿಯೂ ದೊಡ್ಡ ಬದಲಾವಣೆಯನ್ನೇ ತಂದಿತ್ತು.


ಆತನಿಗೆ ಪಾಠ ಕಲಿಸುತ್ತೇನೆಂಬ ದುರುದ್ದೇಶದಿಂದ ಆಶಾ ತನ್ನ ತಂದೆಯ ಬಳಿ ಬಂದು ಆತನನ್ನೇ ವಿವಾಹವಾಗುತ್ತೇನೆಂದು ಹೇಳಿದಳು. ರಾಜೇಂದ್ರ ಮೊದಲಿಗೆ ಅದನ್ನು ಒಪ್ಪದಿದ್ದರೂ.. ರಾಯರ ಮಾತಿಗೆ ಬೆಲೆ ಕೊಟ್ಟು ಆಕೆಯನ್ನು ಮದುವೆಯಾಗುತ್ತಾನೆ. ಆದರೆ, ಮದುವೆಯಾದ ನಂತರವೂ ತಾನು ಕಾರ್ಮಿಕನಾಗಿ ಅದೇ ಸ್ಥಾನದಲ್ಲಿ ಮುಂದುವರೆಯುತ್ತಾನೆ. 


ಶಂಕರ್ ಮದುವೆಗೆ ಒಪ್ಪುವುದು ತನ್ನ ತಾಯಿಯ ಕಾರಣಕ್ಕೆ. ಮೋಹನರಾಯರ ಒಳ್ಳೆಯತನಕ್ಕೆ ರಾಜೇಂದ್ರ ಕಟ್ಟುಬಿದ್ದರೆ.. ಮೋಹನರಾಯರು ತಾಯಿಯ ಮೂಲಕ ಶಂಕರ್ ನನ್ನು ಕಟ್ಟಿ ಹಾಕುತ್ತಾರೆ.


ಆಶಾಳನ್ನು ನೋಡುವ ಆಸೆ ವ್ಯಕ್ತಪಡಿಸಿದ ತನ್ನ ತಾಯಿಯ ಮಾತಿಗೂ ಆಕೆ ಬೆಲೆಕೊಡದಾದಾಗ ರಾಜೇಂದ್ರನಿಗೆ ಅವಳ ಅಹಂಕಾರದ ಪರಮಾವಧಿಯ ಅರಿವಾಗುತ್ತದೆ. ಅಲ್ಲದೆ, ಆತನನ್ನು ಅವಳು ನಡೆಸಿಕೊಳ್ಳುವ ರೀತಿ ಪ್ರತಿಕ್ಷಣಕ್ಕೂ ಆತನ ಸಹನೆಯನ್ನು ಕೆಣಕುತ್ತಾ ಹೋಗುತ್ತದೆ. ಆದರೆ, ಆಶಾ ಆತನ ತಾಯಿಗೆ ನಮಸ್ಕರಿಸುವುದರ ಮೂಲಕ ತಾನು ಬದಲಾಗಿರುವ ಸೂಚನೆ ನೀಡುತ್ತಾಳೆ.


ಶಂಕರ್ ಎಲ್ಲದರ ಅರಿವಿದ್ದೂ.. ತನ್ನ ಪರಿಸ್ಥಿತಿಯನ್ನು ಮುಚ್ಚಿಟ್ಟು ತಾಯಿಗೆ ನೋವಾಗಬಾರದೆಂದು ಆಕೆಯ ಅಹಂಕಾರವನ್ನು ಸಹಿಸುತ್ತಿರುತ್ತಾನೆ. ಒಂದು ಜಗಳದ ಮೂಲಕ ಆಕೆಗೆ ನಿಜ ಅರಿವಾಗಿ ಆಕೆಯ ಸಾವಿನ ಮೂಲಕ ಶಂಕರ್ ಆಶಾಳಿಂದ ವಿಮಖನಾದ ಮೇಲೆ ಆಕೆಗೆ ಪಶ್ಚಾತ್ತಾಪವಾಗಿ ಬದಲಾಗುವ ಸಂಧರ್ಭ ಕಂಡುಬರುತ್ತದೆ.


ಕಾದಂಬರಿಯಲ್ಲಿಲ್ಲದ ಪ್ರಮುಖ ಪಾತ್ರವೊಂದು ಚಲನಚಿತ್ರದಲ್ಲಿದೆ. ಅದೇ ಆಶಾಳ ಆಪ್ತ ಕಾರ್ಯದರ್ಶಿ ಉಮಾ. ಇದನ್ನು ಗೀತಾ ಅವರು ಸೊಗಸಾಗಿ ನಿರ್ವಹಿಸಿದ್ದಾರೆ. ಆಶಾಳ ದರ್ಪದ ಅರಿವಿದ್ದೂ ಆಕೆಯ ಜೊತೆ ಕೆಲಸ ಮಾಡುತ್ತಿದ್ದರೂ.. ಶಂಕರ್ ಬಂದ ನಂತರ ಆತನ ಸ್ವಾಭಿಮಾನ ಹಾಗೂ ಒಳ್ಳೆಯ ಗುಣಕ್ಕೆ ಸೂಜಿಗಲ್ಲಿನಂತೆ ಸೆಳೆತ ಉಂಟಾದಾಗ ಆತನನ್ನು ಪ್ರೇಮಿಸುತ್ತಾರೆ. ಆಶಾಳ ಗುಣ ಕಂಡಾಗ ಶಂಕರ್ ಗೆ ಈಕೆಯ ಸರಿಯಾದ ಜೋಡಿ ಎನ್ನಿಸಿದರೂ.. ಆಕೆಯ ತನ್ನ ತಂದೆಯ ಜೊತೆಗೆ ಹೋಗಿ ಶಂಕರ್ ತಾಯಿಯಲ್ಲಿ ಈ ಸುದ್ದಿ ಪ್ರಸ್ತಾಪಿಸುವ ಸಂದರ್ಭದಲ್ಲಿಯೇ ಮೋಹನರಾಯರು ಅಲ್ಲಿಗೆ ಬಂದು ಆಶಾಳ ವಿಚಾರ ಪ್ರಸ್ತಾಪಿಸುತ್ತಾರೆ. ಆದರೆ, ಅದರಾಚೆಗೂ ಶಂಕರ್ ಹಾಗೂ ಉಮಾ ಸ್ನೇಹ ಆಪ್ತವಾಗುತ್ತದೆ. 


ಮೋಹನರಾಯರ ಪಾತ್ರದಲ್ಲಿ ಕೆ. ಎಸ್. ಅಶ್ವತ್ಥ್ ಹಾಗೂ ಶಂಕರ್ ತಾಯಿಯ ಪಾತ್ರದಲ್ಲಿ ಪಂಡರಿಬಾಯಿಯ ನಟನೆಯೂ ಸೊಗಸಾಗಿದೆ. 


ಗಂಡಾಗಲೀ.. ಹೆಣ್ಣಾಗಲೀ ತಮ್ಮ ಅಹಂ ಅನ್ನು ಬದಿಗಿಟ್ಟು ವರ್ತಿಸಿದಾಗಲೇ ಸಂಸಾರ ಅನುರಾಗದ ಅಂತಪುರವಾಗಲು ಸಾಧ್ಯ. ಅದಕ್ಕಾಗಿ ಮಾಡಿಕೊಳ್ಳಬೇಕಾದ ಬದಲಾವಣೆಗಳು ಈ ಕಾದಂಬರಿಯಲ್ಲಿ ಬಹಳ ಚೆಂದವಾಗಿ ಚಿತ್ರಿತವಾಗಿವೆ. 


ಅನುರಾಗವೇ ಇಲ್ಲದ ಇಬ್ಬರ ನಡುವೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಅನುರಾಗ ಅರಳುವ ಚಲನಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. 


ಕಾದಂಬರಿಯೊಂದು ದೃಶ್ಯರೂಪದಲ್ಲಿ ಇಷ್ಟು ಚೆಂದವಾಗಿ ಚಿತ್ರಿತವಾಗಿದ್ದು ಲೇಖಕಿಯ ಬರವಣಿಗೆಯ ಗೆಲುವೂ ಹೌದು. ನಿರ್ದೇಶಕರು ಹಾಗೂ ನಟರ ಗೆಲುವೂ ಹೌದು. ಎರಡೂ ಅಷ್ಟೇ ಇಷ್ಟವಾದವು.


~ವಿಭಾ ವಿಶ್ವನಾಥ್

ಇದೂ ಒಂದು ಪ್ರೇಮ ಕಥೆ (ಪುಸ್ತಕ ಯಾನ - 209)


ಪುಸ್ತಕದ ಶೀರ್ಷಿಕೆ : ಇದೂ ಒಂದು ಪ್ರೇಮ ಕಥೆ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸುಧಾ ಶಿಶುಸಾಹಿತ್ಯ ಮಾಲೆ

ಪ್ರಥಮ ಮುದ್ರಣ : 1994

ದ್ವಿತೀಯ ಮುದ್ರಣ : 2009 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 200

ಬೆಲೆ : 75 ರೂ.


ಮಾಧುರಿ ಹಾಗೂ ಹೇಮಂತ್ ಇಬ್ಬರ ಸಾಂಸಾರಿಕ ಜೀವನದಲ್ಲಿ ಸುಂದರ ಕನಸಿನಂತೆ ಕಾಣುತ್ತಿದ್ದ ಮಯೂರಿ ಅವರಿಬ್ಬರ ಬದುಕನ್ನು ಬೆಸೆಯಲು ಕೊಂಡಿಯಾಗಿದ್ದಳು ಎಂದರೂ ತಪ್ಪಾಗಲಾರದು. ಮಯೂರಿಯದ್ದು ಈಗ ಸುಂದರ ಕನಸು ಕಾಣುವ ವಯಸ್ಸು, ಬದುಕನ್ನು ಅಷ್ಟೇ ಜೀವನೋತ್ಸಾಹದಲ್ಲಿ ಕಾಣುತ್ತಿದ್ದಳು. ಅದಕ್ಕೆ ಕಾರಣ ತಾಯಿ ಎಂದರೂ ತಪ್ಪಾಗಲಾರದು. ಅಲಂಕರಿಸಿಕೊಳ್ಳುವ ಆಸಕ್ತಿಯೂ ತಾಯಿಯಿಂದಲೇ ವರ್ಗಾವಣೆಯಾಗಿತ್ತು.


ಮಾಧುರಿ ಹಾಗೂ ಹೇಮಂತ್ ಇಬ್ಬರೂ ಮದುವೆಯಾಗಿ 21 ವರ್ಷಗಳು ಕಳೆದಿದ್ದವು. ಮದುವೆಯಾದ ಮರುವರ್ಷವೇ ಮಯೂರಿ ಹುಟ್ಟಿದ್ದಳು. ಮನೆಯಲ್ಲಿ ನೋಡಿ ಆಯ್ಕೆ ಮಾಡಿದ ವರ ಹೇಮಂತ್. ಮಯೂರಿಗೆ 39 ವರ್ಷ ವಯಸ್ಸಾಗಿದ್ದರೂ ಇನ್ನೂ 30ರಂತೆಯೇ ಕಾಣುತ್ತಿದ್ದಳು. ಅವಳು ಅಲಂಕಾರಪ್ರಿಯೆಯಾದರೂ.. ಮಿತಿಮೀರಿ ಅಲಂಕರಿಸಿಕೊಂಡವಳಲ್ಲ. ಬದಲಾಗಿ ಮಾಧುರಿಗೆ ಪ್ರತಿಯೊಂದರಲ್ಲೂ ಕಲಾತ್ಮಕ ದೃಷ್ಟಿಯಿತ್ತು. ಆದರೆ, ಹೇಮಂತನಿಗೆ ಇದಕ್ಕೆ ವ್ಯತಿರಿಕ್ತವಾದ ಮನಸ್ಸು. ಆತ ಬದುಕನ್ನು ಕಲಾತ್ಮಕ ದೃಷ್ಟಿಯಿಂದ ಎಂದಿಗೂ ಅನುಭವಿಸಿದವನಲ್ಲ. ಒಂದು ರೀತಿಯ ಸಿಸ್ಟಮ್ಯಾಟಿಕ್ ಬದುಕಿನಂತೆ. ಆತನಿಗೆ ಅಲಂಕಾರದಲ್ಲಿಯೂ ಹೆಚ್ಚಿನ ಆಸಕ್ತಿ ಇರಲಿಲ್ಲ. ಹೇಗೂ ಇದ್ದರಾಯ್ತು ಎಂಬ ಭಾವ. 


ಜಾನಕಿ ರಾಮನ್ ಅವರ ಐದು ಜನ ಹೆಣ್ಣು ಮಕ್ಕಳು ಹಾಗೂ ಮೂರು ಜನ ಗಂಡು ಮಕ್ಕಳ ಕುಟುಂಬದಲ್ಲಿ ಮಾಧುರಿ ನಾಲ್ಕನೆಯ ಮಗಳು. ತಾಯಿ ಇಲ್ಲದಿದ್ದರೂ.. ತಂದೆಗೆ ಯಾವ ಚಿಂತೆ ದುಃಖವನ್ನು ಉಂಟು ಮಾಡದೆ, ಆಟ-ಪಾಠದ ಜೊತೆಗೆ ಕಲಾತ್ಮಕ ಮನಸ್ಸನ್ನು ಹೊಂದಿದ್ದವರು. ಅದರಲ್ಲಿಯೂ ಮಾಧುರಿಯದ್ದು ಒಂದು ಕೈ ಮೇಲೆಯೇ. ಕಲಾವಿದೆಯಾಗಲು ಬಯಸಿದರೂ.. ಕೆಲಸಕ್ಕೆ ಹೋಗಲು ಬಯಸಿದರೂ.. ತಂದೆ ಅದು ವಿವಾಹದ ನಂತರ ನಿನ್ನ ಗಂಡನ ಅನುಮತಿಯ ಮೇರೆಗೆ ಎಂದು ಅದಕ್ಕೆ ನಿರ್ಬಂಧಿಸಿದ್ದರು. ಅಕ್ಕಂದಿರ ಮದುವೆಯಾದ ನಂತರ ಅವಳು ಮನಸ್ಸಿನಲ್ಲಿ ತನ್ನ ಭಾವೀ ಪತಿಯ ಬಗ್ಗೆ ಕನಸು ಕಂಡಿದ್ದಳು. ಅಕ್ಕಂದಿರ ಬದುಕಿನ ಹಾಗೆ ತನ್ನ ಬದುಕು ಎಂದು ಕನಸು ಕಂಡಿದ್ದಳಾದರೂ.. ಆ ಕನಸು ಅವಳ ಪಾಲಿಗೆ ನಿಜವಾಗಿರಲಿಲ್ಲವೆಂದು ಅರಿವಾಗಿದ್ದು ಮದುವೆಯ ನಂತರವೇ.


ಹೇಮಂತ್ ಇಂಜಿನಿಯರ್ ಆಗಿದ್ದವನು. ಆದರೆ, ಮತ್ತೊಬ್ಬರ ಕೈ ಕೆಳಗೆ ದುಡಿಯಲು ಇಷ್ಟವಿಲ್ಲವೆಂದು ಸ್ವಂತವಾಗಿ ಗ್ಯಾರೇಜ್ ನಡೆಸುತ್ತಿದ್ದ. ತಂದೆ-ತಾಯಿಯರಿಗೆ ಒಬ್ಬನೇ ಮಗ. ಇದ್ದ ಇಬ್ಬಂದಿರು ಅಕ್ಕಂದಿರ ಮದುವೆಯಾಗಿತ್ತು. ತಂದೆ-ತಾಯಿ ಹಳ್ಳಿಯಲ್ಲಿದ್ದರು. ಅವರಿಗೆ ಪಟ್ಟಣದ ವಾಸ ಬೇಕಾಗಿರಲಿಲ್ಲ. ಮಾಧುರಿಯ ಜಾತಕವೂ ಹೊಂದಿಕೆಯಾಗಿ ಕನ್ಯೆ ನೋಡಲು ಬಂದಾಗಲೇ ಒಪ್ಪಿದ್ದ. ಮಿತಭಾಷಿಯಾಗಿ, ಸಾಧಾರಣ ಉಡುಪಿನಲ್ಲಿ ಬಂದಿದ್ದ ಹೇಮಂತ್ ರನ್ನು ಎಲ್ಲರೂ ಮೆಚ್ಚಿದ್ದರೂ ಮಾಧುರಿಗೇಕೋ ಅಷ್ಟು ಹಿತವೆನ್ನಿಸಿರಲಿಲ್ಲ. ವಾಚಾಳಿಯಾದ, ರಸಿಕಳಾದ ಆಕೆಗೆ ಈಕೆಗೆ ಹೊಂದಾಣಿಕೆಯಾಗುತ್ತಾನಾ ಎಂದು ತಿಳಿಯುವಷ್ಟರಲ್ಲಿಯೇ ವಿವಾಹ ನಡೆದುಹೋಗಿತ್ತು.


ಬದುಕಿನ ಸತ್ಯ ಸಂಗತಿಗಳ ಅರಿವಾಗತೊಡಗಿದ್ದು ಮಾಧುರಿಗೆ ಆಗಲೇ.. ಗಂಭೀರ ಸ್ವಭಾವವೆನಿಸಿಕೊಂಡದ್ದು ಸಂಕುಚಿತ ಸ್ವಭಾವವೆಂದು ಅರ್ಥವಾಗಲು ಬಹಳ ಸಮಯ ಹಿಡಿದಿತ್ತು. ಮದುವೆಯ ಮುಂಚೆ ಸುತ್ತಾಟಕ್ಕೆ ಬರೆದಿದ್ದಾಗ ಮನಸ್ಸು ತಳಮಳಗೊಂಡಿದ್ದರೂ.. ಆಕೆ ಯಾರ ಬಳಿಯೂ ಅದನ್ನು ಹಂಚಿಕೊಳ್ಳುವಂತಿರಲಿಲ್ಲ. ಮೇಲ್ನೋಟಕ್ಕೆ ಸುಂದರವಾದ ಸಂಸಾರದಂತಿದ್ದರೂ ಒಳಗೊಳಗೆ ಅತೃಪ್ತಿಯ ಅಲೆಗಳು ಕಾಡುತ್ತಿತ್ತು. ಆಕೆಯ ಇಷ್ಟದಂತೆ ನಾವೀನ್ಯತೆಯಿಂದ ಅಲಂಕರಿಸಿಕೊಳ್ಳುವ ಅವಕಾಶವಿಲ್ಲ ಅದಕ್ಕೂ ಕೊಂಕು ಮಾತುಗಳು. ಸರಸವೂ ಆತನಿಗೆ ಬೇಕಾದಾಗಷ್ಟೇ.. ಆಕೆ ಬಯಸಿದರೆ ಅದಕ್ಕೂ ಆತನ ಕೊಂಕು ಮಾತುಗಳು ಕುಟುಕುತ್ತಿದ್ದವು. ತಂದೆ-ತಾಯಿ, ಅಕ್ಕಂದಿರು ಬಂದಾಗಲೆಲ್ಲಾ ಮಾಧುರಿ ಅವರ ಸೇವೆಗೆ ಸಿದ್ದಳಿರಬೇಕಾಗಿತ್ತು. 


ಮದುವೆಯಾದ ವರ್ಷದಲ್ಲಿಯೇ ಆಕೆ ಗರ್ಭಿಣಿಯಾಗಿ, ಮಯೂರಿಯೂ ಹುಟ್ಟಿದಳು. ಮಗಳು ಹುಟ್ಟಿದ ಮೇಲೆ ಆತ ಬದಲಾಗುತ್ತಾನೆ ಎಂದುಕೊಂಡದ್ದು ಸುಳ್ಳಾಗಿತ್ತು. ಆಕೆ ಮಯೂರಿಯ ಹೆಸರಿಡುವಾಗಲೂ.. ಆತ ಹೆಚ್ಚಿನ ಲವಲವಿಕೆ ತೋರಿಸಿರಲಿಲ್ಲ. ಯಾವುದೋ ಒಂದು ಎಂಬಂತಿತ್ತು ಆತನ ಭಾವ. ಹಾಗೆಂದು ಮಯೂರಿ ಎಂದರೆ ತೀರಾ ಅಸಡ್ಡೆ ಇರದಿದ್ದರೂ.. ಭಾವರಹಿತ ಬದುಕಿನಂತೆ ಅವನ ಜೀವನ. ಮಾಧುರಿಗೆ ಅದರ ನಂತರ ಮಕ್ಕಳ ಸೌಭಾಗ್ಯ ಸಿಕ್ಕಿದರೂ.. ಆಕೆ ತನ್ನ ಬದುಕಿಗೆ ಮಯೂರಿ ಒಬ್ಬಳೇ ಸಾಕು ಎಂದು ನಿರ್ಧರಿಸಿ, ಆರೋಗ್ಯದ ಕಾಳಜಿ ವಹಿಸಿ ಮಗಳನ್ನು ತನ್ನಂತೆಯೇ ಬೆಳೆಸುತ್ತಿದ್ದಳು.


ಹೀಗೆ ಸಾಗುತ್ತಿದ್ದ ಬದುಕಿನಲ್ಲಿ ಮಯೂರಿ ದೊಡ್ಡವಳಾದಾಗ.. ಮನೆಯಲ್ಲಿ ತನಗೆ ಬೇಜಾರು, ತನ್ನ ಒಂಟಿತನ ತಾಳಲಾಗದೆ ಕೆಲಸಕ್ಕೆ ಸೇರುತ್ತೇನೆಂದು ಸ್ವಲ್ಪ ಹಠ ಮಾಡಿ ಮೂರ್ನಾಲ್ಕು ವರ್ಷದಿಂದ 'ಸಿಂಧು ಎಕ್ಸ್ಪೋರ್ಟ್' ಕಂಪನಿಯಲ್ಲಿ ಅಂತರಂಗ ಕಾರ್ಯದರ್ಶಿಯಾಗಿ ಕೆಲಸಕ್ಕೆ ಸೇರಿದಳು. ಎಲ್ಲವೂ ಸುಗಮವಾಗಿಯೇ ಸಾಗುತ್ತಿದ್ದಾಗ ಎಂ.ಡಿ ವಿಶ್ವನಾಥ್ ಕರೆ ಮಾಡಿ, ತಮ್ಮ ಆಪ್ತ ಸ್ನೇಹಿತ ಸೂರ್ಯಕಾಂತ್ ಬಂದಾಗ ಸತ್ಕರಿಸಲು ಹೇಳಿದರು. ಅವನ ಸ್ನೇಹಪರತೆಯಿಂದ ಮಾಧುರಿಯ ಬದುಕು ಬದಲಾಗುವುದರಲ್ಲಿತ್ತು.


ಮಯೂರಿ ತನ್ನ ಸ್ನೇಹಿತೆಯರಾದ ಜೆನ್ನಿ, ಪಾರು, ಫರೀದಾ, ನಳಿನ ಜೊತೆಗೆ ಪ್ರವಾಸಕ್ಕೆ ಹೋಗಿದ್ದಾಗ ನಡೆದ ಘಟನೆಯಲ್ಲಿ ಪರಿಚಿತವಾಗಿದ್ದ ಪ್ರಶಾಂತ್ ಮುಂದೊಂದು ದಿನ ಆಕಸ್ಮಿಕವಾಗಿ ಸಿಕ್ಕಿ ಸ್ನೇಹದ ಸೆಳೆತ ಪ್ರೇಮಕ್ಕೆ ತಿರುಗಿತ್ತು.


ಸೂರ್ಯಕಾಂತ್ ಹಾಗೂ ಮಾಧುರಿಯ ಸ್ನೇಹವೂ ಗಾಢವಾಗಿದ್ದಾಗಲೇ ಸೂರ್ಯಕಾಂತ್ ಅವರಲ್ಲಿ ತನ್ನ ಹೆಂಡತಿ ಸೀಮಾಳ ಛಾಯೆಯನ್ನು ಗುರುತಿಸಿದ್ದರು. ಈಗ ಆಕೆ ಬದುಕಿರಲಿಲ್ಲ. ಎದುರು ಮನೆ ಹುಡುಗಿ ಸೀಮಾಳನ್ನು ಮದುವೆಯಾಗಿದ್ದ ಸೂರ್ಯಕಾಂತ್ ಆಕೆಯ ಸ್ಥಿತಿವಂತ ಕುಟುಂಬಕ್ಕೆ, ಬಡತನದ ಕಾರಣಕ್ಕಾಗಿ ಒಪ್ಪಿಗೆಯಾಗಿರಲಿಲ್ಲ. ಆದರೆ, ಧಿಕ್ಕರಿಸಿ ವಿವಾಹವಾದ ನಂತರ ಸೀಮಾ ಬದುಕಿನಲ್ಲಿ ಕಷ್ಟಪಟ್ಟರೂ.. ನಂತರ, 'ಸೀಮಾ ಇಂಡಸ್ಟ್ರಿ' ಶುರುವಾದ ಮೇಲೆ ಬದುಕಿನಲ್ಲಿ ಗೆಲುವಿನ ಮೆಟ್ಟಿಲನ್ನು ಏರುತ್ತಿದ್ದಾಗಲೇ ಪತ್ನಿ ಅವರನ್ನು ಕೈಬಿಟ್ಟು ಸಾವಿನತ್ತ ನಡೆದಿದ್ದರು. 


ತನ್ನ ಬದುಕಿನ ಸತ್ಯವನ್ನೆಲ್ಲಾ ಸೂರ್ಯಕಾಂತ್ ಮುಚ್ಚಿಡದೇ ಹೇಳಿದರೂ.. ಮಾಧುರಿ ಅವರ ಬಳಿಯಲ್ಲಿ ತನ್ನ ಸಂಸಾರದ ಕುರಿತು ಹೆಚ್ಚಿನದ್ದೇನನ್ನೂ ಹೇಳಿರಲಿಲ್ಲ.


ಇಂದಿನ ಯುವ ಪೀಳಿಗೆಯ ಆಧುನಿಕತೆಗೆ, ನಾಗರೀಕತೆಗೆ ಒಗ್ಗದ ಅಥವಾ ಒರಟಾದ, ವಿಚಿತ್ರ ಸ್ವಭಾವದ ವ್ಯಕ್ತಿಯನ್ನು ಕೈಹಿಡಿದ ಮಾಧುರಿ ತನ್ನನ್ನೇ ತಾನು ಬಂಧಿಸಿಕೊಂಡಿದ್ದಳೇ..?? ಅವಳ ಹಿಂಜರಿಕೆಗೆ ಕಾರಣವೇನಿತ್ತು..?? ಸೂರ್ಯಕಾಂತ್ ಹಾಗೂ ಮಾಧುರಿಯರ ಬದುಕು ತಮ್ಮ ಸ್ನೇಹದ ಪರಿಧಿಯನ್ನು ದಾಟಿ ಮುಂದುವರಿಯಿತೇ.. ಹಾಗಾದರೆ ಅದು ಸರಿಯೇ..??


ಮಾಧುರಿಯ ಬದುಕಿನ ಬೆಳಕಿನಂತಿದ್ದ ಮಯೂರಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಪ್ರಶಾಂತನ ಜೊತೆ ಹೊರಡಲು ಸಿದ್ದಳಿದ್ದರೂ.. ಅದು ಹೇಮಂತ್ ಗೆ ತಿಳಿದಾಗ, ಎಲ್ಲಾ ಸಿಟ್ಟು ಮಾಧುರಿಯ ಮೇಲೆ ಪ್ರತಿಫಲಿತವಾಗಿತ್ತು. ಮಾಧುರಿ ಕೈಗೊಂಡ ನಿರ್ಧಾರವೇನು..?? ಮಯೂರಿಯ ಪ್ರೇಮ ಸಫಲವಾಯಿತೇ..??


ಮಾಧುರಿ ಹಾಗೂ ಮಯೂರಿಯರ ಬದುಕು ಮತ್ತಾವುದೋ ವಿಚಿತ್ರ ಬಿಂದುವಿನಲ್ಲಿ ಬಂಧಿಸಿಕೊಂಡಿತ್ತು. ಆ ರಹಸ್ಯವೇನು..??


ಈ ಕಾದಂಬರಿ 'ಮಂಗಳ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಓದುಗರ ಮೆಚ್ಚುಗೆ ಪಡೆದಿತ್ತು. ಈ ಕಾದಂಬರಿಯನ್ನು ಓದಿದಾಗ ನನಗೆ ಇಲ್ಲಿ ನೈತಿಕತೆ ಹಾಗೂ ಅನೈತಿಕತೆಯ ಅಥವಾ ಸರಿ-ತಪ್ಪಿನ ತಕ್ಕಡಿಯಲ್ಲಿಟ್ಟು ತೂಗಲು ಹೋದದ್ದಕ್ಕಿಂತ, ಇದನ್ನು ಬದುಕಿನ ಪ್ರೇಮ ಕಥೆಯನ್ನಾಗಿ ನೋಡಬಹುದು. 


ಇಲ್ಲಿ ಪ್ರೇಮ ಕೇವಲ ಯುವ ಮನಸ್ಸಿನ ಪ್ರೇಮವೆಂದು ಅಳೆಯಲಾಗದು. ಇಲ್ಲಿ ಒಂದು ವಿಭಿನ್ನ ಪ್ರೇಮಕಥೆ ಸಿಗುತ್ತದೆ. ಒಂದು ಸುಖೀ ಕುಟುಂಬದ ಹಿಂದೆ ಹೀಗೂ ಇರಬಹುದಾ ಎನ್ನುವ ಸಂಶಯ ಬಂದರೂ.. ಹಲವಾರು ಹೆಣ್ಣುಮಕ್ಕಳು ಆಡಲೂ ಆಗದೆ, ಅನುಭವಿಸಲೂ ಆಗದೆ.. ಇಂತಹಾ ಸ್ಥಿತಿಯನ್ನು ಅನುಭವಿಸುತ್ತಿರಬಹುದು ಎಂಬ ಆಲೋಚನೆಯೂ ಮೂಡಿತು. ಸಮಾಜದಲ್ಲಿ ಬಿಡುಬೀಸಾಗಿ ತೆರೆದಿಡಲಾಗದ ವೈವಾಹಿಕ ಜೀವನದ ಸಮಸ್ಯೆಯೊಂದನ್ನು ಸೂಕ್ಷ್ಮವಾಗಿ ಬಿಚ್ಚಿಟ್ಟಿರುವ ಪರಿ ಇಷ್ಟವಾಯಿತು.

~ವಿಭಾ ವಿಶ್ವನಾಥ್

ಬೀಸಿ ಬಂತು ತಂಗಾಳಿ (ಪುಸ್ತಕ ಯಾನ - 208)


ಪುಸ್ತಕದ ಶೀರ್ಷಿಕೆ : ಬೀಸಿ ಬಂತು ತಂಗಾಳಿ

ಲೇಖಕರು : ವೇದ ಮಂಜುನಾಥನ್

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 2006


ಇದು ನಾನು ಓದಿದ ವೇದ ಮಂಜುನಾಥನ್ ಅವರ ಮೊದಲ ಪುಸ್ತಕ. ಸಣ್ಣ ಕಥೆ, ಕವನ, ಹಾಸ್ಯ ಲೇಖನಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಿದ್ದವರು ಖ್ಯಾತ ನಿರ್ದೇಶಕರಾದ ಟಿ. ಎನ್. ಸೀತಾರಾಮ್ ರವರ ಸಲಹೆಯ ಮೇರೆಗೆ ಬರವಣಿಗೆಯ ವ್ಯಾಪ್ತಿ ಅಧಿಕವಾಗಿರುವ ಕಾದಂಬರಿಯನ್ನು ಬರೆಯಲು ಶುರು ಮಾಡಿರುವುದರ ಕುರಿತು ಹೇಳಿಕೊಂಡಿದ್ದಾರೆ.


ಬೀಸಿ ಬಂತು ತಂಗಾಳಿ ಕಾದಂಬರಿಯಲ್ಲಿ ಬೇರೆ ಬೇರೆ ಹೆಣ್ಣುಗಳ, ಬೇರೆ ಬೇರೆ ರೀತಿಯ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ.


ಶಾರದಮ್ಮ ಹಾಗೂ ಭವಾನಿಶಂಕರ್ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯವಳು ಸಂಹಿತಾ ಹಾಗೂ ಎರಡನೆಯವಳು ಸ್ಮೃತಿ. ಸರ್ಕಾರಿ ಅಧಿಕಾರಿಯಾಗಿದ್ದ ಭವಾನಿಶಂಕರ್ ಅವರು ಪ್ರಾಮಾಣಿಕತೆಯಲ್ಲಿ ಬದುಕು ನಡೆಸುತ್ತಿದ್ದವರು. ಮಕ್ಕಳನ್ನೂ ಹಾಗೆಯೇ ಬೆಳೆಸಿದ್ದವರು. ತೀರಾ ಐಷಾರಾಮಿ, ವೈಭೋಗದ ಜೀವನಕ್ಕಿಂತ, ಇರುವದರಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದವರು. ಅವರಿಗೆ ತಕ್ಕ ಪತ್ನಿ ಶಾರದಮ್ಮ. ತುಂಬು ಕುಟುಂಬದಲ್ಲಿ ಹುಟ್ಟಿ, ಬೆಳೆದು 17ನೇ ವರ್ಷಕ್ಕೆ ಅತ್ತೆ ಇಲ್ಲದ ಮನೆಗೆ ತಾನೇ ಗೃಹಿಣಿಯಾಗಿದ್ದವರು. ಅವರ ಆಲೋಚನೆಯಲ್ಲಿಯೂ ಪ್ರೌಢತೆಯಿತ್ತು. ಇಂತಹಾ ದಂಪತಿಗಳ ಮಕ್ಕಳಾಗಿದ್ದವರೂ.. ಇಂತಹದ್ದೇ ಪ್ರೌಢತೆಯನ್ನು ಮೈಗೂಡಿಸಿಕೊಂಡಿದ್ದರು.


ಸಂಹಿತಾ ತಾಯಿಯ ಸ್ವಭಾವ ಹೊಂದಿದ್ದರು ತಂದೆಯಂತೆ ಸುಂದರ ರೂಪ. ಓದಿನಲ್ಲಿ ಮುಂದಿದ್ದಳು. ಅವಳಿಗೆ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇದ್ದುದರಿಂದ ಕನ್ನಡದಲ್ಲಿ ಬಿ.ಎ ಮಾಡಿ ನಂತರ ಲೆಕ್ಚರರ್ ಆಗಬೇಕೆಂದುಕೊಂಡಿದ್ದಳು. 


ಸ್ಮೃತಿ ಸಂಹಿತಾಳ ಹಾಗಲ್ಲ. ಅಕ್ಕನಿಗಿಂತಲೂ ಓದಿನಲ್ಲಿ 10 ಪಟ್ಟು ಹೆಚ್ಚು ಮುಂದೆ. ಸೌಂದರ್ಯದಲ್ಲಿ ಸಾಧಾರಣವಾಗಿದ್ದರೂ.. ದಿಟ್ಟತನ ಹಾಗೂ ಮಾತಿನ ತೀಕ್ಷ್ಣತೆಯಿಂದ ಎಲ್ಲರನ್ನು ಆಕರ್ಷಿಸುತ್ತಿದ್ದಳು. ಅವಳು ಡಾಕ್ಟರ್ ಆಗಬೇಕೆನ್ನುವ ಕನಸನ್ನು ಹೊಂದಿದ್ದವಳು. ಸಂಹಿತಾ ಉಡುಗೆಗೆ ಹಣ ಖರ್ಚು ಮಾಡಿದರೆ, ಸ್ಮೃತಿ ಪುಸ್ತಕಕ್ಕೆಂದು ಖರ್ಚು ಮಾಡುತ್ತಿದ್ದಳು. ಸಂಹಿತಾ ಕೊಂಚ ಆಸಕ್ತಿ ವಹಿಸಿ ಉಡುಗೆಗಳನ್ನು ಆಯ್ಕೆ ಮಾಡಿಕೊಂಡರೆ.. ಇವಳದ್ದು ಸರಳ ಹಾಗೂ ಮಿತಿಯಾದ ಅಲಂಕಾರ. ತನ್ನ ಆಸೆಯಂತೆಯೇ ಡಾಕ್ಟರ್ ಕೂಡಾ ಆಗುತ್ತಾಳೆ.


ಸಂಹಿತಾಳ ಆಪ್ತ ಗೆಳತಿ ಚಂದನಾ ಶಾರದಮ್ಮರ ಗೆಳತಿ ವಿಜಯಮ್ಮರ ಮಗಳು. ಚಂದನಾ ತನ್ನ ಹತ್ತನೆಯ ವರ್ಷದಲ್ಲಿಯೇ ತಂದೆಯನ್ನು ಅಪಘಾತವೊಂದರಲ್ಲಿ ಕಳೆದುಕೊಂಡಿದ್ದಳು. ತಾಯಿ ವಿಜಯಮ್ಮನವರಿಗೆ ಮೂವರು ಮಕ್ಕಳು. ಆಕೆ ಶಿಕ್ಷಕಿಯಾಗಿ ತನ್ನ ಮಕ್ಕಳನ್ನು ಪೋಷಿಸುತ್ತಿದ್ದರು. ತನ್ನ, ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ತಾಯಿಗೆ ಸದಾ ನೆರವಾಗುವ ವ್ಯಕ್ತಿತ್ವ ಚಂದನಾಳದ್ದು. ಬಹಳ ಕಷ್ಟಜೀವಿ ಭವಾನಿಶಂಕರ್ ಅವರೂ ಆಗಾಗ ಅವಳಿಗೆ ಸಹಾಯ ಮಾಡುತ್ತಿದ್ದರು. ತನಗೇನಾದರೂ ಮಗನಿದ್ದಿದ್ದರೆ.. ಚಂದನಾಳನ್ನೇ ಸೊಸೆ ಮಾಡಿಕೊಳ್ಳುತ್ತಿದೆ ಎನ್ನುತ್ತಿದ್ದರು.


ಈ ಮೂವರು ಹೆಣ್ಣುಮಕ್ಕಳ ಬದುಕು ಅವರವರ ಓದು ಮುಗಿದ ನಂತರ ಬದಲಾಗಿತ್ತು.


ವೆಂಕಟೇಶಯ್ಯ ಹಾಗೂ ಪದ್ಮಾವತಿಯರ ಒಬ್ಬನೇ ಮಗ ಉದಯ್ ಸಂಹಿತಾಳ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದವರು. ಅವನ ತಂದೆ-ತಾಯಿ ಚಿತ್ರದುರ್ಗದಲ್ಲಿ ನೆಲೆಸಿದ್ದರು. ಅಲ್ಲಿಯೇ ಹಳ್ಳಿಯಲ್ಲಿ ಅತಿ ದೊಡ್ಡ ಶ್ರೀಮಂತರು. ಮಗನನ್ನು ಕೆಲಸಕ್ಕೆ ಅಷ್ಟು ದೂರ ಕಳುಹಿಸಲು ಇಚ್ಛೆಯಿಲ್ಲದಿದ್ದರೂ ಬಿಟ್ಟಿದ್ದರು. ಆತನಿಗೆ ವಿವಾಹ ಮಾಡುವ ಇಚ್ಛೆ ಹೊಂದಿದ್ದರು. ಉದಯ್ ಗೆ ಒಮ್ಮೆ ಹುಷಾರಿಲ್ಲದಿದ್ದಾಗ ನೋಡಲು ಬಂದ ವಿದ್ಯಾರ್ಥಿನಿಯರಲ್ಲಿ ಸಂಹಿತಾಳ ರೂಪ ಹಾಗೂ ನಡೆ-ನುಡಿ, ಗಂಭೀರ ವ್ಯಕ್ತಿತ್ವ ಉದಯ್ ತಾಯಿಯನ್ನು ಸೆಳೆದಿತ್ತು. ಆಕೆಯ ಕುರಿತು ವಿಚಾರಿಸಲು ಹೇಳಿದ್ದರು. ನಂತರ ಋಣಾನುಬಂಧ ಎಂಬಂತೆ ಇವರಿಬ್ಬರ ವಿವಾಹ ನಡೆದಿತ್ತು. ಚಿಕ್ಕಂದಿನಿಂದ ಸುಖ ಜೀವಿಯಾಗಿ ಬೆಳೆದಿದ್ದ ಸಂಹಿತಾ ಮದುವೆಯಾಗಿ ಬಹಳ ಸುಖವಾಗಿದ್ದಳು. ಎರಡು ವರ್ಷವಾದರೂ ಮಕ್ಕಳಾಗದಿದ್ದಾಗ ಮನೆಯ ಹಿರಿಯರ ವರ್ತನೆ ಬೇರೆಯದ್ದೇ ಆಕೆಗೆ ಬದುಕಿನ ದರ್ಶನ ಮಾಡಿಸಿತ್ತು. ಇಲ್ಲಿನ ತೊಂದರೆಯೇನು..??


ಡಾ|| ಸತೀಶ್ ಕುಮಾರ್ ಅವರ ಪ್ರೀತಿಯ ಶಿಷ್ಯಳಾಗಿದ್ದ ಸ್ಮಿತಾ ಹೆಚ್ಚಿನ ಬಾರಿ ಅವರು ಪೇಷಂಟ್ ನೋಡುವಾಗ ಜೊತೆಗಿರುತ್ತಿದ್ದಳು. ಆ ಸಮಯದಲ್ಲಿ ರೋಗಿಯಾಗಿ ಬಂದು ಪರಿಚಿತವಾಗಿದ್ದ ಬೆಂಗಳೂರಿನ ಪ್ರತಿಷ್ಠಿತ ಶ್ರೀಮಂತ ಮನೆತನಕ್ಕೆ ಸೇರಿದ ಮದನ್ ಗೋಪಾಲ್. ಅವರ ಮಗ ಗಿರೀಶನೊಂದಿಗಿದ್ದ ಸ್ನೇಹ ಆತನನ್ನು ವಿವಾಹವಾಗುವವರೆಗೂ ಬಂದಿತ್ತು. ಅದೇ ಸಮಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಉನ್ನತ ಶಿಕ್ಷಣಕ್ಕಾಗಿ ಆಕೆ ಉಚಿತವಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಿತ್ತು . ಸ್ಮೃತಿಯ ನಿರ್ಧಾರವೇನು..??


ಚಂದನಾಳ ತಾಯಿ ವಿಜಯಮ್ಮ ಹೃದಯಾಘಾತದಿಂದ ತೀರಿಕೊಂಡಾಗ, ಅದಕ್ಕೆ ಆಘಾತಕಾರಿ ಸುದ್ದಿಯೊಂದು ಕಾರಣವಾಗಿತ್ತು. ಅದು ರಮೇಶನ ಕುರಿತಾದದ್ದು. ಅಂತಹಾ ಆಘಾತಕಾರಿ ಸುದ್ದಿಯೇನು..?? 


ಚಂದನಾ ತನ್ನ ತಂಗಿ ವಿನುತಾಳ ಜೊತೆ ಗಟ್ಟಿಯಾಗಿ ಬದುಕಿನಲ್ಲಿ ನೆಲೆ ನಿಲ್ಲುತ್ತಿರುವ ಸಂದರ್ಭದಲ್ಲಿಯೇ.. ತನ್ನ ಸ್ನೇಹಿತೆ ವೇದಾಳ ಅಣ್ಣ ಕಿರಣ್ ಪರಿಚಯವಾಗಿತ್ತು. ಆತ ಶ್ರಮಜೀವಿ ಹಾಗೂ ಕಷ್ಟಜೀವಿ. ಎಲ್ಲದರ ಅರಿವಿದ್ದವನು. ಧಾರಾವಾಹಿ ನಿರ್ದೇಶಕನೂ ಆಗಿದ್ದ ಅವನು ಮಾಡುತ್ತಿದ್ದ ಧಾರಾವಾಹಿಯೊಂದು ಥೇಟ್ ಚಂದನಾಳ ಬದುಕಿನ ಕಥೆಗೆ ಬಹಳ ಹೋಲಿಕೆಯಾಗುತ್ತಿತ್ತು. ಮುಂದೆ ಇದೇ ಪ್ರೇಮಕ್ಕೆ ತಿರುಗುತ್ತದೆ. ಕಿರಣ್ ಗೆ ಅಪಘಾತವಾಗುತ್ತದೆ. ಮುಂದೆ ಏನಾಯಿತು..?


ಬದುಕಿನಲ್ಲಿ ಕಷ್ಟವನ್ನೇ ಕಾಣದಿದ್ದವಳು ಕಷ್ಟವನ್ನು ಎದುರಿಸುವ ಪರಿ ಸಂಹಿತಾಳ ಬದುಕಿನಲ್ಲಿದ್ದರೆ.. ಬದುಕಿನಲ್ಲಿ ಕಷ್ಟವನ್ನೇ ಅನುಭವಿಸಿದವರಿಗೆ ಮುಂದೆ ಸುಖ ಸಿಗುತ್ತದೆ ಎನ್ನುವ ಮಾತು ಚಂದನಾಳ ಬದುಕಿನಲ್ಲಿ ನಿಜವಾಯಿತೇ..?? ಎಲ್ಲವನ್ನು ಸಮಚಿತ್ತದಲ್ಲಿಯೇ ನೋಡುತ್ತಿದ್ದ ಸ್ಮೃತಿಯ ಬದುಕು ಮತ್ತಷ್ಟು ವಿಭಿನ್ನ. 


"ಬೀಸಿ ಬಂತು ತಂಗಾಳಿ" ಎಂಬ ಶೀರ್ಷಿಕೆ ಕಂಡ ಮಾತ್ರಕ್ಕೆ ಇದು ಸಂಪೂರ್ಣ ಸುಖಾಂತ್ಯದ ಕಥೆಯಲ್ಲ.. ಹಾಗೆಂದು ಸಂಪೂರ್ಣ ದುಃಖಾಂತ್ಯ ಎಂದೂ ಹೇಳಲಾಗದು. ಬದಲಾಗಿ ಬದುಕನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎಂಬುದು ನಮ್ಮ ನಡವಳಿಕೆಯ ಮೇಲೆ ಅವಲಂಬಿತ ಎಂಬುದನ್ನು ಸೂಚಿಸುವ ಕಾದಂಬರಿ.

(ಈ ಕಾದಂಬರಿ ಓದುವ ಆಸಕ್ತರಿಗೆ.. ಇದು ಡಿಜಿಟಲ್ ರೂಪದಲ್ಲಿ ಪ್ರತಿಲಿಪಿ ಕನ್ನಡದಲ್ಲಿ ಲಭ್ಯವಿದೆ.)

~ವಿಭಾ ವಿಶ್ವನಾಥ್

ನಿನ್ನೆಯಿಂದ ದೇವರಿಲ್ಲ (ಪುಸ್ತಕ ಯಾನ - 207)


ಪುಸ್ತಕದ ಶೀರ್ಷಿಕೆ : ನಿನ್ನೆಯಿಂದ ದೇವರಿಲ್ಲ

ಲೇಖಕರು : ವಿಷ್ಣು ಭಟ್ ಹೊಸ್ಮನೆ 

ಪ್ರಕಾಶಕರು : ಗೋಮಿನಿ ಪ್ರಕಾಶನ

ಪ್ರಥಮ ಮುದ್ರಣ : 2023

ಪುಟಗಳು : 100

ಬೆಲೆ : 100 ರೂ.


ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಿಬೈಲಿನವರಾದ ವಿಷ್ಣು ಭಟ್ ಹೊಸ್ಮನೆಯವರು ಪ್ರಸ್ತುತ ಮಣಿಪಾಲ್ ಟೆಕ್ನಾಲಜಿ ಲಿಮಿಟೆಡ್ ನಲ್ಲಿ ಉದ್ಯೋಗಿ. ಪ್ರವೃತ್ತಿಯಲ್ಲಿ ಲೇಖಕರು. 'ಒಂದು ನಾಟಕದ ಕೊನೆಯ ಅಂಕ' ಇವರ ಮೊದಲ ಕಥಾಸಂಕಲನ. 'ನಿನ್ನೆಯಿಂದ ದೇವರಿಲ್ಲ' ಎಂಬ ವಿಭಿನ್ನ ಶೀರ್ಷಿಕೆಯಿಂದಲೇ ಸೆಳೆಯುವ ಈ ಕಥಾಸಂಕಲನ ಇವರ ಎರಡನೆಯ ಪ್ರಕಟಿತ ಪುಸ್ತಕ.

ಈ ಕಥಾ ಸಂಕಲನದಲ್ಲಿ 14 ಕಥೆಗಳಿವೆ.


ಸಾಮಾನ್ಯವಾಗಿ ಕಥೆಗಳನ್ನು ಓದಿದಾಗ ಕಂಡ ವಿಚಾರಗಳಾಗಿದ್ದರೆ.. ನಾವು ಅವುಗಳನ್ನು ಅನುಭವವೆಂದು ಗುರುತಿಸುತ್ತೇವೆ. ಆದರೆ, ಎಲ್ಲಾ ಕಥೆಗಳೂ ಅನುಭವವೇ ಆಗಿರಬೇಕಿಲ್ಲ. ಕಥೆ ಕಟ್ಟುವ ಶೈಲಿ ಆಯಾ ಕಥೆಗಾರನ ಮೇಲೆ ನಿರ್ಧಾರವಾಗುತ್ತದೆ. ನಿಜ ಜೀವನದಲ್ಲಿ ನಾವು ಕಾಣದ ಅಥವಾ ಗುರುತಿಸದ ಕೆಲವು ಸಂಗತಿಗಳು ಕಥೆಗಳಾಗಿ ಬಂದಾಗ..ಅವುಗಳನ್ನು ಓದಿದಾಗ ಆಗುವ ಅನುಭೂತಿ ವಿಭಿನ್ನ. ಅಂತಹಾ ವಿಶಿಷ್ಟ ಕಥಾನಕಗಳು ಕಾಣುತ್ತವೆ.


ಸುಳ್ಳು ನಿಜ ಮುಖ್ಯವಲ್ಲ 

ಕಥೆ ಮುಖ್ಯ 

ಎನ್ನುವ ಶರ್ವರ ಮಾತು ನೂರಕ್ಕೆ ನೂರು ಒಪ್ಪುವಂತಹದ್ದು. 


ಸರಳ ಲೆಕ್ಕಾಚಾರ: ಇದು ನೇರಾನೇರವಾಗಿ ಪರಿಸರವನ್ನು ಹಾಳು ಮಾಡುವುದರಿಂದ ಆಗುವ ದುಷ್ಪರಿಣಾಮವನ್ನು ಚಿತ್ರಿಸದೆ.. ಈಗಿನ ಕಾಲಕ್ಕೆ ಅಪ್ಡೇಟ್ ಆದಂತಹಾ ಕಥೆ. ಪರಮೇಶನಿಗೆ 10 ವರ್ಷಗಳಿಂದ ಕಸ ಗುಡಿಸುವ ಕೆಲಸ. ಆ ಮರದಿಂದ ಉಂಟಾಗುವ ಕಸವೇ ಬುಟ್ಟಿಗಟ್ಟಲೆ ಆಗುತ್ತಿತ್ತು. ಮೊದಮೊದಲು ಪ್ರೀತಿಯಿಂದ ಮಾಡುತ್ತಿದ್ದವನು, ನಂತರ ಅದನ್ನು ದ್ವೇಷಿಸತೊಡಗಿದಾಗ ಮರವನ್ನೇ ಕಡೆ ಎನ್ನುವ ಬೇಡಿಕೆ ಇಡುತ್ತಾನೆ. ಕಂಪನಿಯಲ್ಲಿಯೂ ಖರ್ಚು ಕಡಿಮೆ ಮಾಡುವ ಸಂದರ್ಭ ಬಂದಾಗ, ಅವರಿಗೂ ಈ ಸಲಹೆ ಒಪ್ಪಿಗೆಯಾಗಿ ಅಷ್ಟೂ ವರ್ಷದಿಂದ ಇದ್ದ ಮರ ನೆಲಸಮವಾಗಿತ್ತು. ಆದರೆ, ಅದರ ನಂತರದ ಪರಿಣಾಮಗಳು..?? ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವಂತಾಗುವುದರ ಜೊತೆಗೆ ಮನುಷ್ಯ ಅದನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಚಿತ್ರಣ ಇಲ್ಲಿದೆ. 


ಕಡುಮೋಹದ ಮೌನ: ಅಪ್ಪನ ಕಡುಮೌನ. ಸಂಸಾರಿಯಾಗಿಯೂ ಸನ್ಯಾಸಿಯಾಗಿ, ನಿರ್ಮೋಹಿಯಾಗಿ ಉಳಿದದ್ದೇಕೆ ಎನ್ನುವ ಯೋಚನೆ ಬಂದಾಗ ಅಮ್ಮನ ಮೌನವು ಆತನಿಗೆ ನೆನಪಾಗಿತ್ತು. ಅಮ್ಮನು ಮೌನದ ಕೆಂಡ ಎನ್ನುವಾಗ ಮೌನದ ತೀವ್ರತೆಯ ಅರಿವಾಗುತ್ತದೆ. ದೊಡ್ಡಪ್ಪನೇ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದುದರಿಂದ ಹೆಚ್ಚು ದೊಡ್ಡಪ್ಪನೆಡೆಗೆ ವಾಲಿದವನು, ಅಮ್ಮನನ್ನು ಬಿಟ್ಟು ಕೊಟ್ಟ ನಂತರ ಜೀವನದ ಒಂದು ಬದಲಾವಣೆಯಿಂದ ಅಪ್ಪನ ಹಾದಿಯನ್ನೇ ಹಿಡಿದಾಗ ಅಪ್ಪನ ಪ್ರತಿರೂಪವೇ ಅವನಾಗಿದ್ದು ಅವನಿಗೆ ಅರಿವಾಗಿತ್ತು. ಇದೆಲ್ಲದರ ಮರ್ಮವೇನು..? 


ನಿನ್ನೆಯಿಂದ ದೇವರಿಲ್ಲ: ಶೀರ್ಷಿಕೆಯಿಂದಲೇ ಸೆಳೆದ ಕಥೆ ಇದು. ಇಲ್ಲಿನ ಅಚ್ಯುತ ಮಠದಲ್ಲಿ ವಾಮನ ಭಟ್ಟರು ಹಾಗೂ ಸ್ಟಾಲ್ವಿನ್ ಇಬ್ಬರ ಬದುಕು ನಡೆಯುತ್ತಿದ್ದರೂ.. ದೇವರಿದ್ದಾನೆ ಎಂಬ ನಂಬಿಕೆ ನನ್ನನ್ನು ಹೀಗೆ ಜೀವಂತವಾಗಿಸಿದೆ ಎನ್ನುವ ನಂಬಿಕೆಯ ವಾಮನ ಭಟ್ಟರು.. ನಂಬುವವರಿಗೆ ಬೇರೆ ಕಸುಬಿಲ್ಲ ಎಂದು ಅಹಂಕಾರದಲ್ಲಿ ಮಾತನಾಡುತ್ತಿದ್ದ ಸ್ಟಾಲ್ವಿನ್ ನ ವ್ಯವಹಾರವೂ ಕಂಡುಬರುತ್ತದೆ. ಇಲ್ಲಿ ಗೆಲ್ಲುವುದು ಯಾವುದು..? ನಂಬಿಕೆಯೋ ವ್ಯವಹಾರವೋ.. ಅಷ್ಟಕ್ಕೂ ನಿನ್ನೆಯಿಂದ ದೇವರು ಇಲ್ಲವಾದದ್ದು ಹೇಗೆ ಹಾಗೂ ಯಾಕೆ..??


ಸರ್ವಾಂತರ್ಯಾಮಿ: ಕಾಲದ ಮಹಿಮೆಯಲ್ಲಿ ಸಾಗುವ ಹಾಗೂ ಯೋಜನೆಗಳು ಬದಲಾಗುವ ಚಿತ್ರಣವನ್ನು ಕಟ್ಟಿಕೊಟ್ಟಿರುವ ಕತೆ. ಅಚ್ಚುತ ಹಾಗೂ ಶಾಸ್ತ್ರಿಗಳ ನಡುವಿನ ಸಂಭಾಷಣೆ ಆ ಕ್ಷಣಕ್ಕೆ ಶಾಸ್ತ್ರಿಗಳಿಗೆ ಅರ್ಥವಾಗದಂತೆ ಕಂಡರೂ.. ಇಲ್ಲಿ ಅರ್ಥಪೂರ್ಣ ಘಟನೆಯೊಂದಿಗೆ, ಅಷ್ಟಕ್ಕೂ.. ಬದುಕಿನದ್ದೇ ಕನಸು ಕಾಣುವವರಿಗೆ ಸರ್ವಾಂತರ್ಯಾಮಿಯ ಅರಿವಾಗುವುದೇಗೆ ಎನ್ನುವ ಚಿತ್ರಣವಿದೆ. 


ಭುವನ ಸುಂದರಿ: ಅಪ್ಪ, ಅಮ್ಮ ಇಬ್ಬರ ಕುರಿತೂ ಚಿಕ್ಕಂದಿನಲ್ಲಿ ಕಂಡದ್ದು ಎಳೆಯ ಮನಸ್ಸಿನ ಮೇಲೆ ಅದ್ಯಾವ ಪರಿ ಅಚ್ಚೊತ್ತಿ ನಿಂತು ಬಿಡುತ್ತದೆಂದರೆ.. ಅಮ್ಮ ಕಾಣೆಯದದ್ದಕ್ಕೆ ಅಮ್ಮನ ಮೇಲೆ ತಪ್ಪು ತಿಳಿದುಕೊಂಡ ಮಗ.. ಕಾಲೇಜಿನಲ್ಲಿ ಮತ್ತ್ಯಾರೋ 'ಭುವನ ಸುಂದರಿ'ಯ ಮಗನೆಂದು ಕರೆದಾಗ ಆಗದ ಆಘಾತ ಮಗನಿಗಾದದ್ದು ಸತ್ಯ ತಿಳಿದಾಗ. ತಾನು ತಿಳಿದದ್ದು ತಪ್ಪು ಎಂದು ಅರಿವಾಯಿತಾದರೂ..  ಅದು ಸರಿಯಾಯಿತಾ..?? ಹೆತ್ತವರ ನಡವಳಿಕೆಗೆ, ತಪ್ಪಿಗೆ ಮಕ್ಕಳು ಅನುಭವಿಸುವ ಪರಿಸ್ಥಿತಿಯ ಕತೆ. 


ದೇವರ ಕಲ್ಲು: ಎಲ್ಲಾ ಕಲ್ಲುಗಳು ದೇವರಾಗುವುದಿಲ್ಲ ಎಂಬ ಸತ್ಯವನ್ನು ಅರಿವಾಗಿಸುತ್ತಲೇ ದೇವರಾಗುವ ಕಲ್ಲನ್ನು ಹುಡುಕುವ ಶಂಭುಭಟ್ಟರ ಹಿಂದೆ ಒಂದು ದೊಡ್ಡ ಕಥೆಯಿದೆ. ಅದು ನಿಮಿತ್ತವೆನಿಸಿದರೂ.. ಮಾದೇವಿಯ ಅಂಗಳದ ಪುಟ್ಟ ಚೌಡಿ ಗುಡಿಯ ಹಿಂದೆ ಮಹಿಮೆ ಕಾಣುತ್ತದೆ. ದೈವತ್ವವನ್ನು ಆರೋಪಿಸುವ ಮನುಷ್ಯ ಹಾಗೂ ಮನುಷ್ಯನ ನಂಬಿಕೆಯಿಂದ ಉಂಟಾದ ದೇವರು ಹೀಗೆ ಎರಡು ವಿಭಿನ್ನ ಚಿತ್ರಣಗಳು ಕಾಣುತ್ತವೆ.  


ಬೆನ್ನ ಹಿಂದಿನ ಬೆಂಕಿ: ನಾರಾಯಣ ಭಟ್ಟರಿಗೆ ಯಕ್ಷಗಾನವೆಂದರೆ ಪಂಚಪ್ರಾಣ ಜೊತೆಗೆ ಕತ್ತಲಿನ ಭಯವೂ ಇರುವುದರಿಂದ ಯಾರನ್ನಾದರೂ ಜೊತೆ ಮಾಡಿಕೊಂಡೇ ಹೊರಡುತ್ತಿದ್ದರು.  ಕುಡುಕ ದೇವಪ್ಪ ಅವರ ಜೊತೆ ಹೋಗುತ್ತಿದ್ದದ್ದು ಕುಡಿತದ ಆಸೆಗಾಗಿಯೇ.. ಅವರಿಗೂ ಅದು ಗೊತ್ತಿಲ್ಲದಿಲ್ಲ. ಆದರೂ ಗತ್ಯಂತರವಿರಲಿಲ್ಲ. ಅಂದು ಯಕ್ಷಗಾನವನ್ನು ಅರ್ಧಕ್ಕೆ ಬಿಟ್ಟು ಮನೆಗೆ ಬರಬೇಕಾದ ಪ್ರಸಂಗವಾದರೂ ಏನು ನಡೆಯಿತು..?? ಜೊತೆಗೆ ಆ ಬೆನ್ನ ಹಿಂದಿನ ಬೆಂಕಿಯ ಮರ್ಮವೇನು..??


ಸಂಭವ: ಊರವರೆಲ್ಲರೂ ಹುಚ್ಚ ಎಂದೇ ಭಾವಿಸಿದ ಸುಕುಮಾರ ಈಗ ಬಹಳ ಚೆನ್ನಾಗಿದ್ದ. ಆತನ ಭೇಟಿಯಾದ ದಿನ ಆತನ ಹೆಂಡತಿಯ ಜೊತೆ, ಆತನೊಟ್ಟಿಗೂ ಮಾತನಾಡಿದಾಗ ತಿಳಿದ ಸತ್ಯವೇ ಅಚ್ಚರಿ ಮೂಡಿಸುತ್ತದೆ. ಆಕೆ ಸುಕುಮಾರನ ಪ್ರೇಯಸಿ ರೇಣುಕೆ ಆಗಿರಲಿಲ್ಲ, ಅವಳು ರೇವತಿ. ಆತ ಆಕೆಯನ್ನು ರೇಣುಕೆ ಎಂದುಕೊಂಡಿದ್ದಾನೆಂದು ಅವಳ ಭಾವನೆ. ಆತನ ದೃಷ್ಟಿಯಲ್ಲಿ ಆತ ಅವಳ ಕುಮಾರ, ಸುಕುಮಾರನಲ್ಲ. ಅವರಿಬ್ಬರೂ ನಿಜಕ್ಕೂ ಯಾರು.. ಅವರಿಬ್ಬರ ಬದುಕಿನ ನಿಜರೂಪವೇನು..?


ಕಿಟಕಿಯಾಚಿಗಿನ ಕನಸಿನ ಪುಟ: ಕಿಟಕಿಯಾಚೆ ಕಂಡ ಮುಖವೊಂದು ಆಕೆಯಲ್ಲಿ ಪ್ರೇಮ ಭಾವನೆ ಉದಯಿಸಿದ್ದು ಹೌದಾದರೂ.. ಆತನಲ್ಲಿಯೂ ಅದೇ ಭಾವವಿತ್ತಾ ಎಂದು ತಿಳಿಯುವ ಮುನ್ನವೇ ಆಕೆ ಕನಸಿನೊಳಗೆ ಕಳೆದು ಹೋಗಿದ್ದಳು. ಹರೆಯದ ಪ್ರೇಮದ ಪುಳಕಗಳು ಚಿತ್ರಿತವಾಗಿರುವಂತೆಯೇ.. ಅಮ್ಮನ ದೃಷ್ಟಿಯಲ್ಲಿನ ಪ್ರೇಮವು ಹೀಗೆ ವ್ಯಕ್ತವಾಗುತ್ತದೆ. "ಕೇವಲ ನೀನು ಪ್ರೀತಿಸುವುದಲ್ಲ. ಅವನು ನಿನ್ನನ್ನು ನಿನಗಿಂತ ಬಲವಾಗಿ ಪ್ರೀತಿಸಬೇಕು. ಯಾವುದೇ ಚೌಕಟ್ಟು ಹಾಕಿಕೊಳ್ಳದೆ ನಂಬಬೇಕು" ಎನ್ನುವುದು ಅನುಭವದ ನಿರೀಕ್ಷೆಯಾಗಿ ಕಂಡರೆ, ಹರೆಯದ ಪ್ರೇಮವೂ ಕಡಿಮೆಯೇನಿಲ್ಲ. "ಪ್ರೀತಿಸುತ್ತೇನೆ ಎಂಬ ಹಂಬಲ ಜೀವಂತವಾಗಿರಬೇಕು. ಪ್ರೀತಿಯನ್ನು ಹೇಳಿಕೊಂಡ ಕೂಡಲೇ ಆ ಹಂಬಲ ಸತ್ತುಬಿಟ್ಟರೆ ಎಂಬ ಭಯ ನಿನ್ನನ್ನು ದೂರ ಮಾಡಿತು"ಎನ್ನುವ ಮಾತಿನಲ್ಲಿ ಮತ್ತೊಂದು ಪ್ರೀತಿಯ ವ್ಯಾಖ್ಯಾನ ಕಾಣುತ್ತದೆ. ಆ ಕನಸು ಏನಾಯಿತು ನೀವೇ ಓದಿ.


ಆ ಜನ್ಮ: ತನ್ನಮ್ಮನ ಕುರಿತಾಗಿ ಊರಿನವರು ಆಡಿಕೊಳ್ಳುತ್ತಿದ್ದ ಮಾತು ಜಯಂತನ ಕಿವಿಗೆ ಬೀಳುತ್ತಿದ್ದಾಗ ಆತನಿಗೆ ಒಂದು ರೀತಿಯ ರೋಷ ಬೆಳೆದಿತ್ತು. ಸಿಟ್ಟಿನಲ್ಲಿ ಊರು ಬಿಟ್ಟು ಹೊರಟವನು 10 ವರ್ಷದ ನಂತರ ಮನೆಗೆ ಬಂದಾಗ.. ಅಮ್ಮ ಮಂದಾಕಿನಿಯ ಮಾತು ಆತನಿಗೆ ಸತ್ಯದರ್ಶನ ಮಾಡಿಸಿತ್ತು. ಆ ಸತ್ಯವೇನು.. ಆತ ಮನೆಗೆ ವಾಪಸು ಬಂದದ್ದೇಕೆ..? ಅಮ್ಮನ ಮಾತು ಆತನನ್ನು ತಂದ ಬದಲಾವಣೆಗಳೇನು..? 


ಮೌನ ಮುದ್ರೆ: ಶಿವಪ್ಪ ತನ್ನ ಹೆಂಡತಿ ಸೀತೆಗೆ ಸಾಯುವ ಮುಂಚೆ ಕೊಟ್ಟಿದ್ದ ಮಾತಿನಂತೆ ಆಕೆಯನ್ನು ಒಳ್ಳೆಯ ಕಡೆಗೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾಗ ಶ್ರೀಮಂತ ಪರಮಪ್ಪ ತನ್ನ ಅಕ್ಕನ ಮಗ ಜಗನ್ನಾಥನಿಗೆ ಮದುವೆ ಮಾಡಿಸಿದ್ದ. ಅಳಿಯನ ಹಣದಿಂದ ಸಾಗುವಳಿ ಮಾಡಿ ಆರ್ಥಿಕ ಸಂಕಷ್ಟದಿಂದ ಆತ ಪಾರಾದರೂ.. ಮಗಳ ಜೀವನ ಸುಲಭವಾಗಿರಲಿಲ್ಲ. ಆಕೆ ಬಸುರಾಗಿದ್ದು ಮದುವೆಯಾಗಿ ಐದು ವರ್ಷ ಕಳೆದ ನಂತರ. ಹುಟ್ಟಿದ ಮಗುವನ್ನು ಸಂಶಯದಿಂದ ಕಂಡ ಜಗನ್ನಾಥ ಮತ್ತೆ ಬರಲಿಲ್ಲ, ಹಿಂದಕ್ಕೂ ಕರೆಯಲಿಲ್ಲ. ಲಕುಮಿ ಮಗುವಿನ ಮುಖದಲ್ಲಿಯೇ ಎಲ್ಲವನ್ನೂ ಕಾಣುತ್ತಾ ನೋವು ಮರೆಯುತ್ತಿರುವಾಗ ಗಂಡ ಸತ್ತಿದ್ದ ಮಗಳು ಮೂಕಿಯಾಗಿದ್ದು ಅರಿವಾಗಿತ್ತು. ಆ ಕಂದನಿಗೆ ಮಾತು ಬರುವಾಗ ಲಕುಮಿಗೆ ಮೌನ ಮುದ್ರೆ ಬಿದ್ದಾಗಿತ್ತು. ಅದು ಹೇಗೆ..?


ನನ್ನ ಎದೆಯ ಭಾರ: ಅಣ್ಣನಿಗೆ ಮದುವೆಯಾಗಿ ಏಳು ವರ್ಷ ದಾಟಿದರೂ ಮಕ್ಕಳಾಗಿಲ್ಲದಾಗ, ವಂಶಕ್ಕೊಂದು ಮಗು ಬೇಕು ಎನ್ನುವುದನ್ನು ಮುಂದಿಟ್ಟುಕೊಂಡು ಆತನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದರಾದರೂ.. ಬಹಳ ಒತ್ತಾಯದ ನಂತರ ಸರಳಳನ್ನು ವಿವಾಹವಾಗಿದ್ದ. ಆದರೆ, ಅವರಿಬ್ಬರಿಗೂ ಮಗುವಾಗದಿದ್ದಾಗ ಸರಳ ಕುಗ್ಗಿ ಹೋದಳು ಜೊತೆಗೆ ತಮ್ಮನ ವರ್ತನೆಯೂ ಕುಗ್ಗಿಸಿತ್ತು. ಅವರಿಬ್ಬರ ಎದೆಯ ಭಾರ ಇಳಿಯಿತೇ..? 


ಚಿತ್ರ ಪೂರ್ಣನ ಮದುವೆಯ ಪ್ರಸಂಗ: ಚಿತ್ರಪೂರ್ಣ ಯಾವುದೋ ಅನಾಥ ಮಗುವೊಂದನ್ನು ತಂದು ಸಾಕಿಕೊಂಡದ್ದು ಆತನ ಮದುವೆಗೆ ಕುತ್ತಾಗಿತ್ತು. ಮಗುವಿನ ವಿಚಾರ ಹೇಳುವುದು ಬೇಡವೆಂದು ಚಂದ್ರದೀಪ್ತಿಯನ್ನು ನೋಡಿ ಬಂದಾಗ ಅವರಿಬ್ಬರ ಮನೆಯಲ್ಲಿಯೂ ಇಷ್ಟವಾಗಿದ್ದರೂ.. ಆತನಿಗೆ ಮಗುವಿನ ಬಗ್ಗೆ ಹೇಳದೆ ಇರುವುದು ಸರಿ ಕಾಣಲಿಲ್ಲ. ಹಾಗೆಯೇ ಚಂದ್ರದೀಪ್ತಿಗೂ ಹೇಳುವುದೇನೋ ಇತ್ತು. ಆಕೆಗೂ ಅದನ್ನು ಮುಚ್ಚಿಟ್ಟು ಮದುವೆಯಾಗಲು ಇಷ್ಟವಿರಲಿಲ್ಲ. ಚಿತ್ರಪೂರ್ಣನ ಮದುವೆಯ ಪ್ರಸಂಗ ಸುಖಾಂತ್ಯವಾಯಿತೇ ಅಥವಾ ದುಃಖಾಂತ್ಯವಾಯಿತೇ..??


ವನವಾಸ: ಪದ್ಮನಾಭರಿಗೆ ತಿರುಪತಿಗೆ ಹೋಗುವ ಬಯಕೆ ದಿನೇದಿನೇ ಹೆಚ್ಚುತ್ತಿತ್ತಾದರೂ.. ಅದು ಈಡೇರುವುದು ಅಷ್ಟು ಸುಲಭವಿರಲಿಲ್ಲ. ಅವರು ತಮ್ಮ ಹಳೆಯ ಮಿತ್ರ ಗೋಪಿನಾಥರ ಜೊತೆ ತಿರುಪತಿಗೆ ಹೊರಟಾಗ ಸ್ವರ್ಗಕ್ಕೆ ಕಾಲಿಟ್ಟಷ್ಟು ಆನಂದವಾಗಿತ್ತು. ಅವರ ಬದುಕಿನ ಮಹದಾಸೆ ಈಡೇರಿತಾದರೂ.. ಅವರು ವನವಾಸವನ್ನು ಅನುಭವಿಸಬೇಕಾಗಿ ಬಂದಿತು. ಅದಕ್ಕೆ ಕಾರಣವೇನು..??


ಇಲ್ಲಿನ ಕಥೆಗಳಲ್ಲಿ ಕಥೆಗಾರರ ಸಿಗ್ನೇಚರ್ ಶೈಲಿಯಂತೆ ಕಂಡುಬರುವುದು ಕಥೆಗಳ ಅಂತ್ಯದಲ್ಲಿ ಬರುವ ಚಮತ್ಕಾರಗಳು. ಇದು ಕಥೆಗೆ ಹೊಸ ಆಯಾಮವನ್ನು ತಂದುಕೊಡಬಲ್ಲದು. ಚೆಂದದ ಕಥೆಗಳ ಸೊಗಸಾದ ಓದು. 

~ವಿಭಾ ವಿಶ್ವನಾಥ್

ಸುವರ್ಣ ಕೀಟ (ಪುಸ್ತಕ ಯಾನ - 206)


ಪುಸ್ತಕದ ಶೀರ್ಷಿಕೆ : ಸುವರ್ಣ ಕೀಟ

ಲೇಖಕರು : ಸಂಪಟೂರು ವಿಶ್ವನಾಥ್

ಪ್ರಕಾಶಕರು : ಉದಯ ಪ್ರಕಾಶನ

ಪ್ರಥಮ ಮುದ್ರಣ : 2004

ಪುಟಗಳು : 136

ಬೆಲೆ : 50 ರೂ. 


ಮಕ್ಕಳ ಸಾಹಿತ್ಯಕ್ಕೆ ಮತ್ತೊಂದು ಹೆಸರು ಎಂಬಂತೆ ತಮ್ಮನ್ನು ತಾವು ತೊಡಗಿಸಿಕೊಂಡ ಸಂಪಟೂರು ವಿಶ್ವನಾಥರವರು ವೃತ್ತಿಯಲ್ಲಿ ಶಿಕ್ಷಕರು. ಬೆಂಗಳೂರಿನ ಪ್ರೌಢಶಾಲೆಯೊಂದರಲ್ಲಿ 1960-1996 ರವರೆಗೆ ವಿಜ್ಞಾನ, ಇಂಗ್ಲಿಷ್, ನಾಟಕಶಾಸ್ತ್ರಗಳ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ರಾಜ್ಯ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದು ನಿವೃತ್ತರಾಗಿರುವವರು. 


ಪ್ರವೃತ್ತಿಯಲ್ಲಿ ಮಕ್ಕಳ ಸಾಹಿತ್ಯ ಲೇಖಕರಾದ ಇವರು ಮಕ್ಕಳಿಗಾಗಿ ಬರೆದ ಕಥೆ, ಕವನ, ಜೀವನಚಿತ್ರ ,ನಾಟಕ ಹೀಗೆ ನಾನಾ ವಿಷಯಗಳನ್ನು ಕುರಿತಾದ ಸುಮಾರು ಒಂದೂವರೆ ಸಾವಿರದಷ್ಟು ಲೇಖನಗಳು ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಸಾಹಸಿ ಸೋದರರು', 'ನೆಲದಡಿ ನಾಲ್ವರು', 'ಭಾರತದ ಪ್ರತಿಭಾನ್ವಿತರು', 'ಜೈವಿಕ ತಂತ್ರಜ್ಞಾನ', 'ಸರಳ ವಿಜ್ಞಾನ' ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.


ಕನ್ನಡಪ್ರಭದಲ್ಲಿಯೂ ದೈನಿಕ ಧಾರಾವಾಹಿಯಾಗಿ ಪ್ರಕಟವಾಗಿರುವ ಈ ಪುಸ್ತಕ ಮಕ್ಕಳ ಕಾದಂಬರಿಯ ಜೊತೆಗೆ ವೈಜ್ಞಾನಿಕ ಕಾದಂಬರಿ ಎಂದರೂ ತಪ್ಪಾಗಲಾರದು. ಇಲ್ಲಿ ಪತ್ತೇದಾರಿ ಶೈಲಿಯೂ ಇರುವುದರಿಂದ ನಮ್ಮ ಊಹಾಶಕ್ತಿ ಹಾಗೂ ಆಲೋಚನಾ ಶಕ್ತಿಯಿಂದ ಮೆದುಳಿಗೆ ಮೇವು ನೀಡುತ್ತದೆ. ವೈಜ್ಞಾನಿಕ ಸಂಗತಿಯ ಜೊತೆಗೆ ಪರಿಸರದ ವಿಚಾರವೂ ತಳುಕು ಹಾಕಿಕೊಂಡಿರುವುದರಿಂದ ಮಕ್ಕಳು ಇದನ್ನು ಓದಿದಾಗ ವೈಜ್ಞಾನಿಕ ವಿಚಾರಗಳು ಮಾತ್ರವಲ್ಲದೆ, ಪರಿಸರದ ಕುರಿತಾದ ಕಾಳಜಿಯೂ ಅವರಲ್ಲಿ ಮೂಡುತ್ತದೆ. ಪರಿಸರ ಮಾಲಿನ್ಯ, ರೇಡಿಯೋ ಆಕ್ಟಿವಿಟಿ ಮುಂತಾದವುಗಳ ದುಷ್ಪರಿಣಾಮದ ಜೊತೆಗೆ ಮ್ಯುಟೇಶನ್ ಕುರಿತ ವಿಚಾರಗಳೂ ಇದರಲ್ಲಿ ಮಿಳಿತವಾಗಿವೆ. ಒಂದೊಳ್ಳೆ ಸೈನ್ಸ್ ಫಿಕ್ಷನ್ ಎಂದರೂ ತಪ್ಪಾಗಲಾರದು.


ಕಾಡಮಲ್ಲಿಪುರ ಬೆಂಗಳೂರಿನ ಉತ್ತರ ದಿಕ್ಕಿನಲ್ಲಿದ್ದು ಹಳೆಯ ಬಡಾವಣೆ. ಅಲ್ಲಿಯ ಸೀನಿಯರ್ ಕ್ಲಾರ್ಕ್ ಶಿವಲಿಂಗಯ್ಯನವರ ತಾತನ ಮನೆಯಲ್ಲಿಯೇ ಅವರು ವಾಸವಾಗಿದ್ದದ್ದು. ಅವರ ಪತ್ನಿ ಜಯಮ್ಮ ಅಂದು ಹೊಡೆದ ಜಿರಲೆಯೊಂದು ವಿ ಜಿರಲೆಯಾಗಿತ್ತು. ವಿ ಜಿರಳೆ ಎಂದರೆ ವಿಲಕ್ಷಣವಾದ, ವಿಪರೀತ ಶಕ್ತಿಯ, ವಿಕಿರಣ ಸೂಸುವ, ವಿಚಿತ್ರವಾದ, ವಿಶೇಷವಾದ, ವಿಲಾಸಿ ಸ್ವಭಾವದ ಎಂದೂ ಅರ್ಥೈಸಿಕೊಳ್ಳಬಹುದು. ಆದರೆ, ಈ ಜಿರಲೆ ಆ ಪ್ರಭೇದಕ್ಕೆ ಸೇರಿದ್ದು ಎಂಬುದು ಅವರಿಗೆ ತಿಳಿದಿರಲಿಲ್ಲಎಂ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಅವರ ಮಗಳು ಬೇಬಿ ಅಪರ್ಣಾಳಿಕೆ ಜಿರಲೆ ಮಾಯವಾಗಿದ್ದು, ಜೊತೆಗೆ ಡಸ್ಟ್ ಬಿನ್ ನಲ್ಲಿ ಅದು ಹೊಳೆಯುವ ಹೊಂಬಣ್ಣದ ಪುಡಿಯಾಗಿದ್ದದ್ದು ಒಂದು ರೀತಿಯ ಕುತೂಹಲ ತಂದಿತ್ತು.


ಮಾರ್ಗರೇಟ್ ಹಾಗೂ ಸೈಮನ್ ರವರ ಮನೆಯಲ್ಲಿಯೂ ವಿಶೇಷವಾದ ಅನುಭವವಾಗಿತ್ತು. ಅದರ ಮೇಲೆ ಹೊಂಬಣ್ಣದ ಧೂಳು ಮೆತ್ತಿಕೊಂಡಿದ್ದು.. ಅದರ ಮೇಲೆ ಕೈ ಇಟ್ಟಾಗ ಅವಳಿಗೆ ಶಾಕ್ ಹೊಡೆದಂತೆಯೂ ಹಾಗೂ ಅಲ್ಲಿಯೇ ಹತ್ತಿರದಲ್ಲಿ ಒಂದು ಹೊಳೆಯುವ ಹುಳ ಓಡಾಡುತ್ತಿದ್ದದ್ದು ಕಂಡಿತ್ತು. ಸೈಮನ್ ರಾತ್ರಿ ಪಾಳಿ ಮುಗಿಸಿ ಬಂದಾಗ ಕಾಲಿಂಗ್ ಬೆಲ್ ಮುಟ್ಟಿ ಶಾಕ್ ಹೊಡೆಸಿಕೊಂಡಿದ್ದ. ಅಲ್ಲಿಯೂ ಹೊಂಬಣ್ಣದ ಪುಡಿ ತಳತಳನೆ ಹೊಳೆಯುತ್ತಿತ್ತು.


ಹೆಚ್ಚು-ಕಡಿಮೆ ಅದೇ ಸಮಯದಲ್ಲಿ ಅಗ್ರಹಾರದ ಈಶ್ವರ ದೇವಸ್ಥಾನದ ಅರ್ಚಕರು ಕೂಡಾ ಒಂದು ಅದ್ಭುತವನ್ನು ಕಂಡಿದ್ದರು. ಗರ್ಭಗುಡಿಯಲ್ಲಿರುವ ಶಿವಲಿಂಗದ ಹಿಂದೆ ಲಿಂಗದ ಆಕಾರದಲ್ಲಿಯೇ ಹಳದಿ ಮಿಶ್ರಿತ ಹಸಿರು ಬೆಳಕಿನ ಜೊತೆಗೆ ವಿಭಿನ್ನ ಶಬ್ದವೂ ಕೇಳಿ ಬಂದಿತ್ತು.ಆ ಶಬ್ದ ಮತ್ತು ಬೆಳಕಿನಿಂದ ದೀಕ್ಷಿತರ ಮೈಯಲ್ಲಿ ವಿದ್ಯುತ್ ಪ್ರವಹಿಸಿದಂತಾಗಿ ಎಚ್ಚರ ತಪ್ಪಿದ್ದರು. ಎಚ್ಚರವಾದಾಗ ಅಲ್ಲಿ ಮುಟ್ಟಿ ನೋಡಿದರೆ ಹೊಂಬಣ್ಣದ ಪುಡಿ.


ಅಲ್ಲಿಗೆ ಬಂದ ಪ್ರಕಾಶ ಹಾಗೂ ಫಣಿಗೆ ಈ ವಿಭಿನ್ನ ವಿಚಾರ ಕುತೂಹಲ ತಂದಿತ್ತು. ಪ್ರಕಾಶ್ ಐ.ಪಿ.ಎಸ್ ಪಾಸ್ ಮಾಡಿ ತರಬೇತಿಗೆಂದು ಹೋಗಿದ್ದವನು.. ತಂದೆ-ತಾಯಿ ಆಕಸ್ಮಿಕ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಹಠಾತ್ತನೆ ಹಿಂತಿರುಗಿದ್ದ. ಫಣಿ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಉತ್ತೀರ್ಣವಾಗಿ ಈಗ ಕೆಲಸ ಹುಡುಕುತ್ತಿದ್ದ ಇದು ಅಲೌಕಿಕ ಶಕ್ತಿ ಇರಬಹುದು ಎಂದು ಪ್ರಕಾಶನಿಗನ್ನಿಸಿದರೂ.. ಫಣಿ ಇದನ್ನು ಸುಲಭವಾಗಿ ನಂಬಲಿಲ್ಲ.


ಈ ವಿಚಿತ್ರದ ಬೆನ್ನು ಬಿದ್ದವರಿಗೆ ಮಾರ್ಗರೇಟ್ ಹಾಗೂ ಸೈಮನ್ ರವರ ಮನೆಯಲ್ಲಿ ನಡೆದ ಪ್ರಸಂಗವೂ.. ಬೇಬಿ ಅಪರ್ಣಾ ಕರೆ ಮಾಡಿದ್ದರಿಂದ ಅವರ ಮನೆಯ ಪ್ರಸಂಗವೂ ತಿಳಿದು ಅತ್ತ ಸಾಗಿದ್ದರು.


ಬೇಬಿ ಅಪರ್ಣಾಳ ಮನೆ ಮುಟ್ಟುವ ಹೊತ್ತಿಗೆ ಅವರ ಶಾಲೆಯಲ್ಲಿ ಅಂದು ನಡೆದಿದ್ದ ದುರಂತವೂ ಇವರಿಗೆ ತಿಳಿದಿತ್ತು. ಅದೇನೆಂದರೆ ಸಾವಿರಾರು ಹುಳುಗಳು, ಕಚ್ಚುವ ಕೀಟಗಳು ಗುಂಪು ಗುಂಪಾಗಿ ಬಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದು.


ಈ ಎಲ್ಲಾ ವಿಚಾರವನ್ನು ತಿಳಿಸಲು ಐ.ಜಿ.ಪಿ ಆಫೀಸಿಗೆ ಹೋದಾಗ ಅಲ್ಲಿನ ಪ್ರಸಂಗ ದಂಗುಬಡಿಸಿತ್ತು. ಸಾವಿರಾರು ಬಾವುಲಿಗಳು ಒಟ್ಟಾಗಿ ಬಂದು ಕಚೇರಿಯ ಮೇಲೆ ದಾಳಿ ಮಾಡಿ ಅಲ್ಲಿನ ಎಲ್ಲವನ್ನು ಅಸ್ತವ್ಯಸ್ತಗೊಳಿಸಿದ್ದವು.


ಬೇಬಿ ಅಪರ್ಣಾ ಮನೆಯಲ್ಲಿ ಅವರ ಮುತ್ತಾತ ಅಡವೀಶಯ್ಯನವರು ಹೇಳಿದ ವಿಚಾರಗಳು ಹಾಗೂ ಬೇಬಿ ಅಪರ್ಣ ನೀಡಿದ ಕೆಲವು ವಿಚಾರಗಳ ಹಿಂದೆ ಬೆನ್ನತ್ತಿದಾಗ ತಿಳಿದದ್ದು.. ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಹಿಂದೆ ಶಾಂತಿನಾಥ ಎಂಬ ಬುದ್ಧಿವಂತ ವಿಜ್ಞಾನಿಯೊಬ್ಬರ ಲ್ಯಾಬೋರೇಟರಿಯಿತ್ತು. ಅದರ ಹೆಸರು ಕಮಲ ಕೆಮಿಕಲ್ ಅಂಡ್ ಪೇಂಟಿಂಗ್ಸ್ ಎಂದು. ಕೀಟಗಳನ್ನು ಕೊಲ್ಲುವ ವಿಷ ವಸ್ತುಗಳು, ಕತ್ತಲಲ್ಲಿ ಹೊಳೆಯುವ ಪೇಯಿಂಟುಗಳು ಈ ರೀತಿಯ ವಸ್ತುಗಳನ್ನು ತಯಾರಿಸುತ್ತಿದ್ದೇವೆ ಎಂದು ಹೇಳಿದ್ದರು. ಕೆಲವರು ಆತ ಸಿಡಿಮದ್ದು ಮತ್ತು ಗುಂಡುಗಳನ್ನು ತಯಾರಿಸುತ್ತಿರಬಹುದು ಎಂಬ ಗುಮಾನಿ ಹೊಂದಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬರುವ ಎರಡು ವರ್ಷ ಮೊದಲು ಲ್ಯಾಬೋರೇಟರಿಯಲ್ಲಿ ದೊಡ್ಡ ಬೆಂಕಿ ಅಪಘಾತವಾಗಿ ಎಲ್ಲವೂ ಸುಟ್ಟು ಹೋಗಿದ್ದವು. ಮೂರು ದಿನ ಯಾರ ಕೈಯಲ್ಲಿಯೂ ಬೆಂಕಿ ಆರಿಸುವುದಕ್ಕೆ ಆಗಿರಲಿಲ್ಲ. ಈಗ ಅದು ಮಾಲಿನ್ಯ ತುಂಬಿದ ಜಾಗವಾಗಿ ಮುಖ್ಯರಸ್ತೆಯ ಪಕ್ಕದಲ್ಲಿದೆ. ಅಲ್ಲಿ ಗಿಡಗಂಟಿಗಳು, ಕ್ರಿಮಿಕೀಟಗಳು ಗಬ್ಬು ವಾಸನೆಗಳು ಬರುತ್ತದೆ. ಅಪರ್ಣ ಅಲ್ಲಿಯೇ ಹೊಳೆಯುವ ಕೀಟಗಳನ್ನು ನೋಡಿದ್ದಳು.


ಅದರ ಬೆನ್ನತ್ತಲು ಹೋದ ಅಪರ್ಣಾಳಿಗೆ ಅಲ್ಲಿನ ಕುಡುಕನೊಬ್ಬ ರೇಗಿದ್ದ. ಈ ಸಾಹಸಗಾಥೆಯಲ್ಲಿ ಆತನದ್ದು ಒಂದು ಪಾತ್ರವಿದೆ. ಆತ ಮತ್ತಾರೂ ಅಲ್ಲದೆ ಶಾಂತಿನಾಥ್ ಅವರ ಮಗ ಪದ್ಮರಾಜು.


ಅಲ್ಲಿ ಬಾರ್ ನಡೆಸುತ್ತಿದ್ದದ್ದು ಶಾಂತಿನಾಥ್ ಅವರ ಎರಡನೆಯ ಹೆಂಡತಿಯ ಮಗ ನಾಕುಮಾರಿ. ಅತಿ ಹೆಚ್ಚಿನ ಶ್ರೀಮಂತ ಹಾಗೂ ಪ್ರಭಾವಶಾಲಿ ವ್ಯಕ್ತಿಗಳಲ್ಲೊಬ್ಬ. ನೈಸ್ ಕಂಪನಿಯ ಮಾಲೀಕ.


ಇದರ ಜೊತೆಜೊತೆಗೆ ಪ್ರಕಾಶ್ ತನ್ನ ತಂದೆ ಪ್ರದೀಪ್ ಸಿಂಹರ ಕಾರು ಅಪಘಾತ ಆಕಸ್ಮಿಕವಲ್ಲವೆಂದು ಕಂಡುಕೊಂಡ. ಅದಕ್ಕೂ ಈ ಘಟನೆಗೂ ಕೊಂಡಿಯಿತ್ತು.


ಸೈನ್ಸ್ ಲ್ಯಾಬೋರೇಟರಿಯಲ್ಲಿ ಕೀಟಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಪರ್ಣಿಕಾ ಕೂಡ ಹೆಚ್ಚಿನ ಮಾಹಿತಿಗಳನ್ನು ನೀಡುತ್ತಾರೆ. ಇಲ್ಲಿ ಸುವರ್ಣ ಕೀಟಗಳ ಆತ್ಮಹತ್ಯೆ ಹಾಗೂ ಸಾವೂ ವಿಭಿನ್ನವಾಗಿ ತೋರುತ್ತದೆ.


ಆ ಎಲ್ಲಾ ಘಟನೆಗಳಿಗೂ.. ಸುವರ್ಣ ಕೀಟಗಳಿಗೂ ಇರುವ ಸಂಬಂಧವೇನು..?? ವಿಕಿರಣತೆ ಕೀಟಗಳ ಮೇಲೆ ಮ್ಯುಟೇಶನ್ ನಿಂದ ತಂದ ಪರಿಣಾಮವೆಂದು ಊಹಿಸಿದರೂ.. ಅದೆಲ್ಲವೂ ಅಷ್ಟು ಸುಲಭವಾ..?? ಜಿರಳೆ ಒಂದು ಯಕಶ್ಚಿತ್ ಹುಳು ಎಂದು ಭಾವಿಸುವವರು ಸಹಾ ಇಲ್ಲಿನ ಕಥೆಯನ್ನು ಓದಿದರೆ ಅದು ಸಮಾಜದ ಮೇಲೆ ಹೇಗೆ ಘಾತುಕ ಪರಿಣಾಮ ಬೀರಬಲ್ಲದು ಎಂಬುದರ ಅರಿವಾಗುತ್ತದೆ. ಶಾಂತಿನಾಥ್ ಆನಂತರ ಏನಾದರು..?? ನಾಕುಮಾರಿ ಹಾಗೂ ನೈಸ್ ಇಲ್ಲಿನ ಪ್ರಸಂಗದಲ್ಲಿ ಎಷ್ಟು ಪ್ರಮುಖ ಪಾತ್ರಗಳು.. ಪದ್ಮರಾಜು ಮೇಲ್ನೋಟಕ್ಕೆ ಕಂಡಂತೆ ಇದ್ದನೇ.. ಆತನ ವ್ಯಕ್ತಿತ್ವವೇನು..? ಸುವರ್ಣ ಕೀಟಗಳ ಕಥೆ ಮುಂದೇನಾಯ್ತು..?? ಎಲ್ಲವನ್ನು ತಿಳಿಯಲು ಓದಿ 'ಸುವರ್ಣ ಕೀಟ'.


ಇಲ್ಲಿ ಇದು ಕೇವಲ ವೈಜ್ಞಾನಿಕ ಕಥೆ ಮಾತ್ರವಲ್ಲದೇ.. ಒಳ್ಳೆಯವರು ಹಾಗೂ ಕೆಟ್ಟವರ ನಡುವಿನ ಸಂಘರ್ಷವೂ ಹೌದು. ವಿಜ್ಞಾನಿಗಳು, ಪತ್ತೇದಾರರ ಜೊತೆಗೆ ಮನುಷ್ಯನ ದುರಾಸೆ, ಗೆಳೆಯರ ಸಾಹಸ.. ಮಕ್ಕಳಲ್ಲಿ ಇರಬೇಕಾದ ಎಚ್ಚರಿಕೆ ಹಾಗೂ ಬುದ್ಧಿವಂತಿಕೆ ಸಾಹಸಪ್ರಜ್ಞೆ ಜೊತೆಗೆ ಕರ್ತವ್ಯ ಪ್ರಜ್ಞೆಗಳು ಕಂಡು, ಮಕ್ಕಳನ್ನು ಹೀಗಿರುವಂತೆ ಪ್ರೇರೇಪಿಸುತ್ತವೆ. 


~ವಿಭಾ ವಿಶ್ವನಾಥ್

ಕ್ಷಮಯಾ ಧರಿತ್ರಿ (ಪುಸ್ತಕ ಯಾನ - 205)

ಪುಸ್ತಕದ ಶೀರ್ಷಿಕೆ : ಕ್ಷಮಯಾ ಧರಿತ್ರಿ

ಲೇಖಕರು : ಗಂಗಾ ಪಾದೇಕಲ್

ಪ್ರಕಾಶಕರು : ಗೀತಾ ಪ್ರಕಾಶನ ಮಂದಿರ

ಪ್ರಥಮ ಮುದ್ರಣ : 2002

ಪುಟಗಳು : 160

ಬೆಲೆ : 90 ರೂ.

ಲಭ್ಯತೆ : ಹಳೆಯ ಪುಸ್ತಕದ ಅಂಗಡಿ


ಸಾಹಿತ್ಯಪ್ರಿಯರಿಗೆ ಗಂಗಾ ಪಾದೇಕಲ್ ಅವರ ಹೆಸರು ಚಿರಪರಿಚಿತ. ಇವರ 12 ಕಾದಂಬರಿಗಳು 180ಕ್ಕೂ ಮಿಕ್ಕಿ ಸಣ್ಣ ಕಥೆಗಳು ಪ್ರಕಟಿತವಾಗಿವೆ. ಇವರು ಬರೆದ ಮೂರು ನಾಟಕಗಳು ರಂಗದ ಮೇಲೆ ಪ್ರದರ್ಶನಗೊಂಡಿದೆ. ಇವರ ಬರಹಗಳ ಕುರಿತಾಗಿ ಬರೆದ ಮಹಾಪ್ರಬಂಧಕ್ಕೆ ಎಂ.ಫಿಲ್ ಪದವಿ ಸಿಕ್ಕಿದೆ. ಇವರ 'ಹೊಸ ಹೆಜ್ಜೆ' ಕಥಾ ಸಂಕಲನ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ತರಗತಿಗೆ ಅಭ್ಯಾಸದ ಪಠ್ಯಪುಸ್ತಕವಾಗಿತ್ತು.


ಗಂಗಾ ಪಾದೇಕಲ್ ಅವರ ಹೆಸರು ಕೇಳಿದ್ದನಾದರೂ.. ಅವರ ಪುಸ್ತಕಗಳ ಹುಡುಕಾಟದಲ್ಲಿದ್ದೆ. ಈ ಪುಸ್ತಕ ನಾನು ಓದಿದ ಅವರ ಮೊದಲ ಪುಸ್ತಕ. ಇಲ್ಲಿನ ಕಥೆಗಳು ತುಷಾರ, ತರಂಗ, ಸುಧಾ, ಮಯೂರ, ಕಸ್ತೂರಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕಥಾ ಸಂಕಲನದಲ್ಲಿ 18 ಚಂದದ ಕಥೆಗಳಿವೆ. ಇವರ ಬರಹದ ಶೈಲಿಯೂ ಬಹಳ ಇಷ್ಟವಾಯಿತು.


ಸುರುಳಿ ಹೂಗಳು :ಹೊನ್ನಳ್ಳಿಯ ಸಿರಿವಂತರಾದ ಅನಂತನ ಅಪ್ಪನಿಗೆ ಇಬ್ಬರೇ ಮಕ್ಕಳು. ಅನಂತ ಹಾಗೂ ಅವನಕ್ಕ ಜಾನಕಿ. ಅನಂತನನ್ನು ಮದುವೆಯಾದ ಸೀತೆಗೆ ನೆಮ್ಮದಿಯ ಬದುಕು ಸಿಕ್ಕಿರಲಿಲ್ಲ. ಜಾನಕಿ ಮದುವೆಯಾದ ವರ್ಷದೊಳಗೆ ಗಂಡನನ್ನು ಕಳೆದುಕೊಂಡು ತವರಲ್ಲಿ ಕೂತಿದ್ದಳು. ಅಮ್ಮ ಈ ಬೇಜಾರಿನಿಂದ ಕಣ್ಮುಚ್ಚಿದರೆ, ಅಪ್ಪ ಮಗಳ ಪರ. ಸೀತೆಗೆ ಅತ್ತೆ ಇಲ್ಲದ ಮನೆ ಸಿಕ್ಕಿದರೂ.. ಅತ್ತೆಗಿಂತಲೂ ಮಿಗಿಲಾಗಿ ಅತ್ತೆತನ ತೋರುವ ಅತ್ತಿಗೆ ಸಿಕ್ಕಿದ್ದಳು. ಜಾನಕಿಯ ಹಲವಾರು ಕಟ್ಟುನಿಟ್ಟಿನ ಕ್ರಮಗಳಲ್ಲಿ ಸುರುಳಿ ಹೂವಿನ ವಿಚಾರಕ್ಕೆ ಶುರುವಾದ ಜಗಳ, ಮುನಿಸು ಗಂಡ-ಹೆಂಡಿರಲಿ ತಂದ ಭಿನ್ನಾಭಿಪ್ರಾಯವೇನು..?? ಈ ಮುನಿಸು ಕರಗಿತೇ..?? ಇಲ್ಲಿ ಅಸಹಾಯಕ ಸೊಸೆಯ ಜೊತೆಗೆ ತನಗೆ ಸಿಗದ ಸೌಭಾಗ್ಯವನ್ನು ಮತ್ತೊಬ್ಬರಿಗೂ ಬೇಡವೆನ್ನುವ ಹೊಟ್ಟೆ ಕಿಚ್ಚಿನ ಹೆಣ್ಣು ಜಾನಕಿಯೂ ಕಾಣುತ್ತಾಳೆ. 


ಈ ಮಣ್ಣು ನಮ್ಮದು : ದೇಶ ಸೇವೆಗಾಗಿ ಮಗ ಶ್ರೀಕಾಂತನನ್ನು ಕಳುಹಿಸಿದ ಭಾಗಮ್ಮ ಹಾಗೂ ರಾಯರ ಆತಂಕಕ್ಕೆ ಕಾರಣವಿತ್ತು. ಜೊತೆಗೆ, ಮಗಳು ವಸುಧಾಳಿಗೆ ಎರಡು ಬಸುರು ಇಳಿದು ಮೂರನೇ ಬಸುರಿನ ಸಮಯ. ಈ ಸಮಯದಲ್ಲಿ ಶ್ರೀಕಾಂತನ ಕುರಿತಾದ ವಿಚಾರ ಬಂದು ತಲುಪಿದಾಗ ಭಾಗಮ್ಮ ಕುಸಿದೇ ಹೋಗಿದ್ದರು. ಆಘಾತದ ಈ ವಿಚಾರವಾಗಿ ರಾಯರ ಉನ್ನತ ಯೋಚನೆ ಮಾದರಿಯಾದದ್ದು. ಈ ಮಣ್ಣು ನಮ್ಮದು ಎನ್ನುತ್ತಾ ಶ್ರೀಕಾಂತನಂತಹ ಎಷ್ಟೋ ತರುಣರು ಯೋಧರಾಗಿ ದೇಶಕ್ಕೆ ಸೇವೆ ಸಲ್ಲಿಸುವ ಮನೆ-ಮನಗಳ ಕಥೆ ಇದು. 


ಹಣವೇ ನಿನ್ನಯ... : ಅಶೋಕ ಅಂದು ಬ್ಯಾಂಕಿನಿಂದ ಮನೆಗೆ ತಲುಪಿದಾಗ ಹೊಸ ಚಿಂತೆಯೊಂದು ಆತನ ಹೆಗಲೇರಿತ್ತು. ಮಧ್ಯಮ ವರ್ಗದ ಕುಟುಂಬದ ಅವನಿಗೆ ಹತ್ತು ಸಾವಿರ ಹಣ ಕಡಿಮೆ ಬಿದ್ದಿದ್ದು ಆತನೇ ಕಟ್ಟಿ ಕೊಡುವಂತಾಗಿತ್ತು. ಅಷ್ಟು ಹಣ ಆ ಕಾಲದಲ್ಲಿ ದೊಡ್ಡ ಮೊತ್ತವೇ. ಆ ಸಂದರ್ಭದಲ್ಲಿ ತಮ್ಮ ವಿಶ್ವನ ಪ್ರತಿಕ್ರಿಯೆ ವಿಭಿನ್ನವಾಗಿದ್ದರೂ.. ತಾಯಿ ಹಾಗೂ ತಂಗಿಯರ ಪ್ರತಿಕ್ರಿಯೆ ಆತನಲ್ಲಿ ಬೇಸರವನ್ನು ಮೂಡಿಸಿತ್ತು. ಹಣದ ಮಾಯೆ ತರುವ ಮಾರ್ಪಾಡು ಎಂತಹದ್ದು ಎನ್ನುವುದನ್ನು ಕಟ್ಟಿಕೊಡುವ ಕಥೆ. ಆ ಹತ್ತು ಸಾವಿರದ ಹೊಂದಿಕೆಯಾದದ್ದು ಹೇಗೆ..??


ಬೊಜ್ಜ: ಮುದ್ದ ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನನ್ನು ಕಳೆದುಕೊಂಡಿದ್ದ. ದೊಡ್ಡಪ್ಪನೇ ನಿಂತು ಎಲ್ಲವನ್ನೂ ಮಾಡುತ್ತಿದ್ದರಾದರೂ.. ಶೀನು ಮಾವನ ಆತಂಕ, ಅಮ್ಮನ ಕೊಳಕು ವೇಷ ಎಲ್ಲವೂ ಅವನನ್ನು ಕಸಿವಿಸಿಗೊಳಿಸಿತ್ತು. ಮಗುವಿನ ದೃಷ್ಟಿಯಲ್ಲಿ ಸಾವು ಹಾಗೂ ಬೊಜ್ಜದ ದಿನವನ್ನು ಕಟ್ಟಿಕೊಟ್ಟಿರುವರಾದರೂ.. ಎಲ್ಲವನ್ನು ಮೀರಿದ ಹಸಿವಿನ ಚಿತ್ರಣ ಢಾಳಾಗಿ ಕಾಣುತ್ತದೆ. 


ಮಾನವ ಜನ್ಮ ದೊಡ್ಡದು: ಕುಟುಂಬದೊಡನೆ ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಪ್ರವಾಸ ಹೊರಟಿದ್ದ ಜಲಜ ಅಪಘಾತದಲ್ಲಿ ಎಲ್ಲರನ್ನೂ ಕಳೆದುಕೊಂಡು ಒಂಟಿಯಾಗಿದ್ದಳು. ಈಗ ತನಗಾರೂ ಇಲ್ಲವೆಂದು ಸಾವಿನ ದಾರಿ ಹಿಡಿಯುತ್ತಿದ್ದಾಗ.. ತನ್ನಂತೆಯೇ ಎಲ್ಲರನ್ನು ಕಳೆದುಕೊಂಡಿದ್ದ ಎರಡು ಜೀವಗಳಾದ ಹಸುಗೂಸು ಮಧುರ ಹಾಗೂ ಮುದುಕಿ ಸಾವಿತ್ರಮ್ಮ ಆಕೆಯ ಬದುಕಿನ ಆಲೋಚನೆಯ ಗತಿಯನ್ನೇ ಬದಲಿಸಿದ ರೀತಿ ಇಲ್ಲಿದೆ. ಮಾನವ ಜನ್ಮ ದೊಡ್ಡದು ಎಂಬುದು ಆಕೆಗೆ ಮನವರಿಕೆಯಾದ ಪರಿ ಹೇಗೆ..??


ಸಮಿತ್ತು: ಸಾವಿತ್ರಮ್ಮನವರು ಈಗ ಹಿರಿಯ ಮಗನ ಮನೆಗೆ ಬಂದಿದ್ದರು. ಮೂರು ಮಕ್ಕಳ ಜೊತೆಯೂ ಮೂರು ಮೂರು ತಿಂಗಳು ಇರುವ ಅವರ ನಿರ್ಧಾರ ಈಗ ಇಲ್ಲಿಗೆ ಕರೆ ತಂದಿತ್ತು. ಸಿರಿವಂತ ಸೊಸೆಯರಾದ ಗೀತಾ ಹಾಗೂ ಕರುಣಾರಿಗಿಂತ ಹಿರಿಯ ಸೊಸೆ ಭಾರತೀ ಈಗ ಅವರ ಕಣ್ಣಿಗೆ ಬೇರೆಯದ್ದೇ ರೀತಿ ಕಂಡು ಅಸಮಾಧಾನ ಮೂಡಿತ್ತು. ಅವರ ಸಂಸಾರಕ್ಕೆ ಸಮಿತ್ತಾಗಿದ್ದ ಆಕೆಯನ್ನು ಅವರು ನಡೆಸಿಕೊಂಡ ಪರಿ ಹೀಗಿತ್ತು..?? ಮಗಳು ಸುಮಾ ಇವರ ನಡವಳಿಕೆಗೆ ಪ್ರತಿಕ್ರಿಯಿಸಿದ ಬಗೆ ಹೇಗೆ..?


ಕೆಸರಿನಲ್ಲಿ ಒಂದು ಕಮಲ :ರಾಜಪ್ಪನವರ ಅರಮನೆಯಂತಹಾ ಬಂಗಲೆಯಲ್ಲಿ ಸಾವಿತ್ರಮ್ಮನ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಚೆನ್ನಿಯ ಮನೆಯಲ್ಲಿ ಬಡತನವಿದ್ದರೂ.. ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತಿದ್ದರೂ.. ಮಗಳು ಕಮಲಿ ಆಕೆಗೆ ಆಸರೆಯಾಗಿದ್ದಳು. ಸಾವಿತ್ರಮ್ಮನವರಿಗೆ ಹೆಣ್ಣುಮಕ್ಕಳೆಂದರೆ ಆಸೆ. ತನಗೊಂದು ಹೆಣ್ಣು ಮಗು ಬೇಕೆಂದು ಆಶಿಸಿದ್ದರೂ ಅವರಿಗೆ ಹೆಣ್ಣು ಮಗುವಾಗಿರಲಿಲ್ಲ. ಚೆನ್ನಿಯ ಮಗುವನ್ನು ಸಾಕಲು ಕೇಳುತ್ತಿದ್ದರಾದರೂ ಅದು ಈಡೇರುವಂತಿರಲಿಲ್ಲ. ಅಂತಹಾ ಸಂದರ್ಭದಲ್ಲಿ ತೊಟ್ಟಿಯಲ್ಲಿ ಬಿದ್ದಿದ್ದ ಅನಾಥ ಹೆಣ್ಣುಮಗುವೊಂದು ಯಾರ ಮಡಿಲಿಗೆ ಸೇರಿತು..?? ಇಲ್ಲಿ ದೊಡ್ಡವರೆನಿಸಿಕೊಂಡವರ ಸಣ್ಣತನ ಹಾಗೂ ಅಂತಸ್ತಿನಲ್ಲಿ ಸಣ್ಣವರಾಗಿರುವವರ ದೊಡ್ಡತನವೂ ಕಾಣುತ್ತದೆ. 


ಮೂರಾಬಟ್ಟೆ: ಗೌರಿ ದೊಡ್ಡ ಸಾಹೇಬರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಪುಟ್ಟಿಯ ವಯಸ್ಸಿನವಳೇ ಆದ ಅವರ ಮಗು ವಸಂತಳ ಹುಟ್ಟು ಹಬ್ಬದಂದು ನಡೆದ ಘಟನೆಯೊಂದು ಅವಳ ಬದುಕನ್ನೇ ಮೂರಾಬಟ್ಟೆಯಾಗಿಸಿದ ಕಥೆ ಇಲ್ಲಿದೆ. ಹೆಣ್ಣಿನ ಬಡತನದ ಬದುಕನ್ನು ಅಸಹಾಯಕತೆಯ ಅಡಕತ್ತರಿಗೆ ಸಿಲುಕಿಸಿದ ದುರಂತ ಕಥೆ ಕಾಣುತ್ತದೆ. 


ಕ್ಷಮಯಾ ಧರಿತ್ರಿ: ಮದುವೆಯಾದ ನಂತರ ಮಗ ಬದಲಾದನೆಂದು ಸೊಸೆಯನ್ನು ದೂಷಿಸುತ್ತಾ ಅವಳನ್ನು ಕೀಳಾಗಿ ನಡೆಸಿಕೊಳ್ಳುವ ಅತ್ತೆ ಹಾಗೂ ಅವರ ಇಬ್ಬರು ಅವಿವಾಹಿತ  ಹೆಣ್ಣುಮಕ್ಕಳು ಅವಳಿಗೆ ಪ್ರತಿನಿತ್ಯ ಕೊಡುವ ಕಾಟದ ಜೊತೆಗೆ ಗಂಡನ ಅಸಹಾಯಕತೆಯೂ ಸೇರಿ ಆಕೆ ಮಸಣಕ್ಕೆ ಹೋಗುವವಳಿದ್ದಳು. ಆದರೆ ಆಕೆ ಕ್ಷಮಯಾಧರಿತ್ರಿ ಎನ್ನುವುದಕ್ಕೆ ಅದಕ್ಕಿಂತಲೂ ದೊಡ್ಡ ಉದಾಹರಣೆ ಸಿಗಲಾರದೇನೋ. ಕೂಡು ಕುಟುಂಬಗಳಲ್ಲಿನ ವೈವಾಹಿಕ ಜೀವನದ ನಂತರ ಕಿರುಕುಳದ ಮತ್ತೊಂದು ಮುಖವನ್ನು ಇಲ್ಲಿ ಪರಿಚಯಿಸಿದ್ದಾರೆ.


ಹಕ್ಕು: ಕಮಲಮ್ಮ ತಂಗಿಯ ಮಗಳಾದ ಕಿರಣಗಳನ್ನು ತನಗೆ ಮಗನಿದ್ದರೂ.. ಸಾಕಿ ಬೆಳೆಸಿಕೊಂಡಿದ್ದರು. ತಂಗಿ ಹಾಗೂ ಆಕೆಯ ಗಂಡನ ನಡವಳಿಕೆಯಿಂದ ಮನಸ್ಸು ಕೆಟ್ಟರೂ.. ಕಿರಣಳ ಮೇಲಿಟ್ಟಿದ್ದ ಪ್ರೀತಿಗೆ ಹಲ್ಲು ಕಚ್ಚಿ ಸುಮ್ಮನಾದರು. ತನಗೆ ಅವಳ ಮೇಲೆ ಹಕ್ಕಿಲ್ಲವೆಂದಾದಾಗ ಅವರು ಅನುಭವಿಸಿದ ಮಾನಸಿಕ ಯಾತನೆಗಳಿವೆ. ಮತ್ತೆ ಕಿರಣಳನ್ನು ಅವರ ಬಳಿಗೆ ಸೇರಿಸಲು ಮುಂದಾದಾಗ ಕಮಲಮ್ಮನವರ ತೀರ್ಮಾನವೇನು..? 


ಎತ್ತಣ ಮಾಮರ: ವನಜಮ್ಮನವರ ಮನೆಯಲ್ಲಿ ಅಂದು ಸರಸಮ್ಮನ ಮೇಲಿನ ಆಪಾದನೆಯಿಂದ ದೊಡ್ಡ ಹಗರಣವೇ ನಡೆದಿತ್ತು. ಸ್ಮಿತಾ ಮಾಡಿದ ತಪ್ಪಿನಿಂದ ಸರಸಮ್ಮ ಅಪರಾಧಿಯಾಗುವವರಿದ್ದರು. ಆದರೆ, ಅದರ ನಂತರವೂ ಸರಸಮ್ಮ ಅಲ್ಲಿ ಉಳಿಯಲಾರೆ ಎಂದುಕೊಂಡರೂ.. ಅವರನ್ನು ಮತ್ತೆ ಅಲ್ಲಿ ಸೆಳೆದು ನಿಲ್ಲಿಸಿದ ಮಮತೆ ಯಾವುದು..?? ಸ್ವಪ್ನಳಿಗೂ ಸರಸಮ್ಮನವರಿಗೂ ಇದ್ದ ಬಾಂಧವ್ಯ ಇಂತಹದ್ದು..??


ಒಂದು ಸಂಜೆಯಲ್ಲಿ: ಕೋಲಾರದ ಮೇಷ್ಟ್ರು ಶಾಮಯ್ಯನವರ ಮಗಳು ರುಕ್ಮಿಣಿಗೆ ಅನಂತನೊಟ್ಟಿಗೆ ವಿವಾಹವಾಗಿತ್ತು. ಅಪ್ಪ ತೀರಿಕೊಂಡ ನಂತರ, ಬದಲಾದ ಗಂಡನೊಂದಿಗಿನ ಬಡತನದಲ್ಲಿಯೂ ಭರವಸೆಯಾಗಿದ್ದ ಮಗಳು ವಿಮಲ ತೀರಿಕೊಂಡಾಗ ಅವಳ ಬದುಕು ಸಾಗಿದ್ದೆತ್ತ..?? ಕಾಲು ಜಾರಿ ಬದುಕಬಹುದಾಗಿದ್ದರೂ.. ತನ್ನ ಬದುಕಿನ ರೀತಿಯನ್ನು ಬದಲಾಯಿಸದ ರುಕ್ಕುವಿಗೆ ಸಿಕ್ಕ ಪಟ್ಟವೇನು.. ಆ ಸಂಜೆಯಲ್ಲಿ ನಡೆದ ಆ ಘಟನೆ ಯಾವುದು..??


ಗುರಿ :ತನ್ನ ಪ್ರವಾಸಕ್ಕೆ ಹಣ ಕೊಡಲಿಲ್ಲವೆಂದು ವಿನುತ ಮನೆಯಲ್ಲಿ ಊಟವನ್ನೂ ಮಾಡದೆ, ಪ್ರತಿಭಟಿಸಿ ಮನೆ ಬಿಟ್ಟು ತಂದೆ-ತಾಯಿಗೆ ಕಷ್ಟ ಕೊಡಬೇಕೆನ್ನುವ ಅವಳ ವಿಚಾರಧಾರೆ ಬದಲಾಗಿ ತನ್ನ ಬದುಕಿನಲ್ಲಿಯೂ ಒಂದು ಗುರಿ ಇಟ್ಟುಕೊಳ್ಳಬೇಕು ಎಂಬ ನಿರ್ಧಾರ ತಳೆಯಲು ಕಾರಣವಾದ ಆ ಘಟನೆ ಯಾವುದು..??


ಅಂತರ್ ದೃಷ್ಟಿ: ತಮ್ಮನ ಮಾತಿನಂತೆ ಮನೆ ಕಟ್ಟಲು ಸುಮತಿ ಒಪ್ಪಿಕೊಂಡಳಾದರೂ.. ಅವಳ ಮನಸ್ಸಿನಲ್ಲಿ ಬೇರೆಯದ್ದೇ ಆಲೋಚನೆ ಓಡುತ್ತಿತ್ತು. ಅದಕ್ಕೆ ಗೆಳತಿಯ ಮಾತುಗಳೂ ಸೇರಿತ್ತು. ತಮ್ಮನ ಹೆಂಡತಿ ಸರಳಳ ಕುರಿತು ಮೇಲ್ನೋಟಕ್ಕೆ ಕಂಡದ್ದಕ್ಕೂ.. ಅಂತರ್ ದೃಷ್ಟಿಗೆ ಕಂಡಿದ್ದಕ್ಕೂ ಇದ್ದ ವ್ಯತ್ಯಾಸವೇನು..?? ಸುಮತಿಗೆ ಅರಿವಾದ ಸತ್ಯವೇನು..?? 


ಉಡುಗೊರೆ: ಶಾಂತ ಗೆಳತಿ ಗೌತಮಿಯ ಮನೆಯ ಮದುವೆಗೆ ಹೋದಾಗ ಉಡುಗೊರೆಯೊಂದನ್ನು ಜತನದಿಂದ ಆಯ್ಕೆ ಮಾಡಿದ್ದಳು. ಆ ಉಡುಗೊರೆ ಅವಳಿಗೆ ಸತ್ಯದರ್ಶನ ಮಾಡಿಸಿತ್ತು. ಅಷ್ಟಕ್ಕೂ ಆ ಉಡುಗೊರೆ ಯಾವುದು ಹಾಗೂ ಅದರಿಂದ ತಿಳಿದ ಸತ್ಯವೇನು..?? 


ಜೀರ್ಣೋದ್ಧಾರ: ಸುಬ್ಬಾಭಟ್ಟರು ಪ್ರೀತಿಯಿಂದ ಆರಾಧಿಸುತ್ತಿದ್ದ ಬಾಲಕೃಷ್ಣನ ದೇವಾಲಯ ಶಿಥಿಲವಾಗಿತ್ತು. ಅದರ ಜೀರ್ಣೋದರಕ್ಕಾಗಿ ಪ್ರಯತ್ನಿಸುತ್ತಿದ್ದರು. ಆದರೆ, ಅದೇ ವಿಚಾರವಾಗಿ ಮತ್ತೊಬ್ಬರು ಅವರ ಜೊತೆಗೂಡಿದಾಗ ದೇವಾಲಯ ಜೀರ್ಣೋದ್ಧಾರವಾಗಿ ತನ್ನ ಕೃಷ್ಣನಿಗೆ ನೆಲೆ ಸಿಗುತ್ತದೆ ಎಂದುಕೊಂಡವರು ನಂತರ ಹುಚ್ಚರಾಗಿ ಬೀದಿ ಬೀದಿ ಅಲೆದದ್ದೇಕೆ..??


ನೆನೆಸದೇ ಇದ್ದದ್ದು : ಹುಡುಗಿ ಕಪ್ಪು ಎಂದು ಸರಳ ವಿವಾಹ ಕಷ್ಟವಾಗಿದ್ದಾಗ ಆಕೆಗೆ ಪರಿಚಿತನಾದ ಶ್ರೀ ಅವಳಲ್ಲಿ ಆಸೆ ಹುಟ್ಟಿಸಿ ಮನೆಯಿಂದ ಓಡಿ ಹೋಗಿ ವಿವಾಹವಾಗಲು ನಿಶ್ಚಯಿಸಿದ್ದನಾದರೂ.. ಸರಳಳೂ ಅದಕ್ಕೆ ಒಪ್ಪಿದ್ದಳಾದರೂ.. ಅವರಿಬ್ಬರೂ ನೆನೆಸದೇ ಇದ್ದ ಪ್ರಸಂಗವನ್ನು ನಡೆದು ಇಬ್ಬರ ಬದುಕೂ ಬದಲಾಗಿತ್ತು. ಅವರು ನೆನೆಸದೇ ಇದ್ದದ್ದೇನು ಹಾಗೂ ಆ ಘಟನೆ ಯಾವುದು..?? ಅದಕ್ಕೆ ಕಾರಣಳಾದ ಮಾಲತಿ ಏನು ಮಾಡಿದ್ದಳು..??


ಅಮ್ಮಾ: ದೀಪಿಕಾ ಹಾಗೂ ಪ್ರಕಾಶರಲ್ಲಿ ಪ್ರಕಾಶ ತನ್ನ ಅಮ್ಮನ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದನಾದರೂ.. ದೀಪಿಕಾಳಿಗೆ ಅಪ್ಪನಿಲ್ಲದೆ ಸಾಕುತ್ತಿರುವ ಅಮ್ಮನ ಬೆಲೆ ಗೊತ್ತಾದ ದಿನ ಹೇಗಿತ್ತು..?? ಅಮ್ಮನಿಗಾಗಿ ಹಂಬಲಿಸಿದ ದೀಪಿಕಾ ಅಮ್ಮನ ಮಹತ್ವವನ್ನು ಅರಿತದ್ದು ಹೇಗೆ..?? ಮಕ್ಕಳ ಆಲೋಚನಾ ದೃಷ್ಟಿಯಿಂದ ರೂಪಿತವಾಗಿರುವ ಕಥೆ. 


ಇಲ್ಲಿನ ಕಥೆಗಳಲ್ಲಿ ಭಾವನೆಗಳಿಗೆ ಹೆಚ್ಚಿನ ಮಹತ್ವ ಕಾಣುತ್ತದೆ. ತಾಳ್ಮೆ ಹಾಗೂ ಕ್ಷಮೆಗೆ ಹೆಚ್ಚಿನ ತೂಕದ ಜೊತೆಗೆ ಮಹಿಳೆಯರು ಅನುಭವಿಸುವ ನೋವುಗಳು ಹಾಗೂ ಕಷ್ಟಗಳ ಮತ್ತೊಂದು ಮುಖವನ್ನು ತೆರೆದಿಡುತ್ತಾರೆ. ಅದೆಲ್ಲದರಿಂದ ಆಗುವ ಪರಿಣಾಮಗಳ ಚಿತ್ರಣವೂ ಇದ್ದು, ಅದಕ್ಕೆ ತಾಳ್ಮೆ ಹಾಗೂ ಕ್ಷಮೆ ಸೇರಿದಾಗ ಆಗುವ ಬದಲಾವಣೆ ನೀತಿ ಪಾಠದಂತಿದೆ. ಸೊಗಸಾದ ಕಥೆಗಳ ಚೆಂದದ ಓದು.


~ವಿಭಾ ವಿಶ್ವನಾಥ್

ಪುಸ್ತಕದ ಶೀರ್ಷಿಕೆ : ಕ್ಷಮಯಾ ಧರಿತ್ರಿ

ಲೇಖಕರು : ಗಂಗಾ ಪಾದೇಕಲ್

ಪ್ರಕಾಶಕರು : ಗೀತಾ ಪ್ರಕಾಶನ ಮಂದಿರ

ಪ್ರಥಮ ಮುದ್ರಣ : 2002

ಪುಟಗಳು : 160

ಬೆಲೆ : 90 ರೂ.

ಲಭ್ಯತೆ : ಹಳೆಯ ಪುಸ್ತಕದ ಅಂಗಡಿ


ಸಾಹಿತ್ಯಪ್ರಿಯರಿಗೆ ಗಂಗಾ ಪಾದೇಕಲ್ ಅವರ ಹೆಸರು ಚಿರಪರಿಚಿತ. ಇವರ 12 ಕಾದಂಬರಿಗಳು 180ಕ್ಕೂ ಮಿಕ್ಕಿ ಸಣ್ಣ ಕಥೆಗಳು ಪ್ರಕಟಿತವಾಗಿವೆ. ಇವರು ಬರೆದ ಮೂರು ನಾಟಕಗಳು ರಂಗದ ಮೇಲೆ ಪ್ರದರ್ಶನಗೊಂಡಿದೆ. ಇವರ ಬರಹಗಳ ಕುರಿತಾಗಿ ಬರೆದ ಮಹಾಪ್ರಬಂಧಕ್ಕೆ ಎಂ.ಫಿಲ್ ಪದವಿ ಸಿಕ್ಕಿದೆ. ಇವರ 'ಹೊಸ ಹೆಜ್ಜೆ' ಕಥಾ ಸಂಕಲನ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ತರಗತಿಗೆ ಅಭ್ಯಾಸದ ಪಠ್ಯಪುಸ್ತಕವಾಗಿತ್ತು.


ಗಂಗಾ ಪಾದೇಕಲ್ ಅವರ ಹೆಸರು ಕೇಳಿದ್ದನಾದರೂ.. ಅವರ ಪುಸ್ತಕಗಳ ಹುಡುಕಾಟದಲ್ಲಿದ್ದೆ. ಈ ಪುಸ್ತಕ ನಾನು ಓದಿದ ಅವರ ಮೊದಲ ಪುಸ್ತಕ. ಇಲ್ಲಿನ ಕಥೆಗಳು ತುಷಾರ, ತರಂಗ, ಸುಧಾ, ಮಯೂರ, ಕಸ್ತೂರಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕಥಾ ಸಂಕಲನದಲ್ಲಿ 18 ಚಂದದ ಕಥೆಗಳಿವೆ. ಇವರ ಬರಹದ ಶೈಲಿಯೂ ಬಹಳ ಇಷ್ಟವಾಯಿತು.


ಸುರುಳಿ ಹೂಗಳು :ಹೊನ್ನಳ್ಳಿಯ ಸಿರಿವಂತರಾದ ಅನಂತನ ಅಪ್ಪನಿಗೆ ಇಬ್ಬರೇ ಮಕ್ಕಳು. ಅನಂತ ಹಾಗೂ ಅವನಕ್ಕ ಜಾನಕಿ. ಅನಂತನನ್ನು ಮದುವೆಯಾದ ಸೀತೆಗೆ ನೆಮ್ಮದಿಯ ಬದುಕು ಸಿಕ್ಕಿರಲಿಲ್ಲ. ಜಾನಕಿ ಮದುವೆಯಾದ ವರ್ಷದೊಳಗೆ ಗಂಡನನ್ನು ಕಳೆದುಕೊಂಡು ತವರಲ್ಲಿ ಕೂತಿದ್ದಳು. ಅಮ್ಮ ಈ ಬೇಜಾರಿನಿಂದ ಕಣ್ಮುಚ್ಚಿದರೆ, ಅಪ್ಪ ಮಗಳ ಪರ. ಸೀತೆಗೆ ಅತ್ತೆ ಇಲ್ಲದ ಮನೆ ಸಿಕ್ಕಿದರೂ.. ಅತ್ತೆಗಿಂತಲೂ ಮಿಗಿಲಾಗಿ ಅತ್ತೆತನ ತೋರುವ ಅತ್ತಿಗೆ ಸಿಕ್ಕಿದ್ದಳು. ಜಾನಕಿಯ ಹಲವಾರು ಕಟ್ಟುನಿಟ್ಟಿನ ಕ್ರಮಗಳಲ್ಲಿ ಸುರುಳಿ ಹೂವಿನ ವಿಚಾರಕ್ಕೆ ಶುರುವಾದ ಜಗಳ, ಮುನಿಸು ಗಂಡ-ಹೆಂಡಿರಲಿ ತಂದ ಭಿನ್ನಾಭಿಪ್ರಾಯವೇನು..?? ಈ ಮುನಿಸು ಕರಗಿತೇ..?? ಇಲ್ಲಿ ಅಸಹಾಯಕ ಸೊಸೆಯ ಜೊತೆಗೆ ತನಗೆ ಸಿಗದ ಸೌಭಾಗ್ಯವನ್ನು ಮತ್ತೊಬ್ಬರಿಗೂ ಬೇಡವೆನ್ನುವ ಹೊಟ್ಟೆ ಕಿಚ್ಚಿನ ಹೆಣ್ಣು ಜಾನಕಿಯೂ ಕಾಣುತ್ತಾಳೆ. 


ಈ ಮಣ್ಣು ನಮ್ಮದು : ದೇಶ ಸೇವೆಗಾಗಿ ಮಗ ಶ್ರೀಕಾಂತನನ್ನು ಕಳುಹಿಸಿದ ಭಾಗಮ್ಮ ಹಾಗೂ ರಾಯರ ಆತಂಕಕ್ಕೆ ಕಾರಣವಿತ್ತು. ಜೊತೆಗೆ, ಮಗಳು ವಸುಧಾಳಿಗೆ ಎರಡು ಬಸುರು ಇಳಿದು ಮೂರನೇ ಬಸುರಿನ ಸಮಯ. ಈ ಸಮಯದಲ್ಲಿ ಶ್ರೀಕಾಂತನ ಕುರಿತಾದ ವಿಚಾರ ಬಂದು ತಲುಪಿದಾಗ ಭಾಗಮ್ಮ ಕುಸಿದೇ ಹೋಗಿದ್ದರು. ಆಘಾತದ ಈ ವಿಚಾರವಾಗಿ ರಾಯರ ಉನ್ನತ ಯೋಚನೆ ಮಾದರಿಯಾದದ್ದು. ಈ ಮಣ್ಣು ನಮ್ಮದು ಎನ್ನುತ್ತಾ ಶ್ರೀಕಾಂತನಂತಹ ಎಷ್ಟೋ ತರುಣರು ಯೋಧರಾಗಿ ದೇಶಕ್ಕೆ ಸೇವೆ ಸಲ್ಲಿಸುವ ಮನೆ-ಮನಗಳ ಕಥೆ ಇದು. 


ಹಣವೇ ನಿನ್ನಯ... : ಅಶೋಕ ಅಂದು ಬ್ಯಾಂಕಿನಿಂದ ಮನೆಗೆ ತಲುಪಿದಾಗ ಹೊಸ ಚಿಂತೆಯೊಂದು ಆತನ ಹೆಗಲೇರಿತ್ತು. ಮಧ್ಯಮ ವರ್ಗದ ಕುಟುಂಬದ ಅವನಿಗೆ ಹತ್ತು ಸಾವಿರ ಹಣ ಕಡಿಮೆ ಬಿದ್ದಿದ್ದು ಆತನೇ ಕಟ್ಟಿ ಕೊಡುವಂತಾಗಿತ್ತು. ಅಷ್ಟು ಹಣ ಆ ಕಾಲದಲ್ಲಿ ದೊಡ್ಡ ಮೊತ್ತವೇ. ಆ ಸಂದರ್ಭದಲ್ಲಿ ತಮ್ಮ ವಿಶ್ವನ ಪ್ರತಿಕ್ರಿಯೆ ವಿಭಿನ್ನವಾಗಿದ್ದರೂ.. ತಾಯಿ ಹಾಗೂ ತಂಗಿಯರ ಪ್ರತಿಕ್ರಿಯೆ ಆತನಲ್ಲಿ ಬೇಸರವನ್ನು ಮೂಡಿಸಿತ್ತು. ಹಣದ ಮಾಯೆ ತರುವ ಮಾರ್ಪಾಡು ಎಂತಹದ್ದು ಎನ್ನುವುದನ್ನು ಕಟ್ಟಿಕೊಡುವ ಕಥೆ. ಆ ಹತ್ತು ಸಾವಿರದ ಹೊಂದಿಕೆಯಾದದ್ದು ಹೇಗೆ..??


ಬೊಜ್ಜ: ಮುದ್ದ ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನನ್ನು ಕಳೆದುಕೊಂಡಿದ್ದ. ದೊಡ್ಡಪ್ಪನೇ ನಿಂತು ಎಲ್ಲವನ್ನೂ ಮಾಡುತ್ತಿದ್ದರಾದರೂ.. ಶೀನು ಮಾವನ ಆತಂಕ, ಅಮ್ಮನ ಕೊಳಕು ವೇಷ ಎಲ್ಲವೂ ಅವನನ್ನು ಕಸಿವಿಸಿಗೊಳಿಸಿತ್ತು. ಮಗುವಿನ ದೃಷ್ಟಿಯಲ್ಲಿ ಸಾವು ಹಾಗೂ ಬೊಜ್ಜದ ದಿನವನ್ನು ಕಟ್ಟಿಕೊಟ್ಟಿರುವರಾದರೂ.. ಎಲ್ಲವನ್ನು ಮೀರಿದ ಹಸಿವಿನ ಚಿತ್ರಣ ಢಾಳಾಗಿ ಕಾಣುತ್ತದೆ. 


ಮಾನವ ಜನ್ಮ ದೊಡ್ಡದು: ಕುಟುಂಬದೊಡನೆ ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಪ್ರವಾಸ ಹೊರಟಿದ್ದ ಜಲಜ ಅಪಘಾತದಲ್ಲಿ ಎಲ್ಲರನ್ನೂ ಕಳೆದುಕೊಂಡು ಒಂಟಿಯಾಗಿದ್ದಳು. ಈಗ ತನಗಾರೂ ಇಲ್ಲವೆಂದು ಸಾವಿನ ದಾರಿ ಹಿಡಿಯುತ್ತಿದ್ದಾಗ.. ತನ್ನಂತೆಯೇ ಎಲ್ಲರನ್ನು ಕಳೆದುಕೊಂಡಿದ್ದ ಎರಡು ಜೀವಗಳಾದ ಹಸುಗೂಸು ಮಧುರ ಹಾಗೂ ಮುದುಕಿ ಸಾವಿತ್ರಮ್ಮ ಆಕೆಯ ಬದುಕಿನ ಆಲೋಚನೆಯ ಗತಿಯನ್ನೇ ಬದಲಿಸಿದ ರೀತಿ ಇಲ್ಲಿದೆ. ಮಾನವ ಜನ್ಮ ದೊಡ್ಡದು ಎಂಬುದು ಆಕೆಗೆ ಮನವರಿಕೆಯಾದ ಪರಿ ಹೇಗೆ..??


ಸಮಿತ್ತು: ಸಾವಿತ್ರಮ್ಮನವರು ಈಗ ಹಿರಿಯ ಮಗನ ಮನೆಗೆ ಬಂದಿದ್ದರು. ಮೂರು ಮಕ್ಕಳ ಜೊತೆಯೂ ಮೂರು ಮೂರು ತಿಂಗಳು ಇರುವ ಅವರ ನಿರ್ಧಾರ ಈಗ ಇಲ್ಲಿಗೆ ಕರೆ ತಂದಿತ್ತು. ಸಿರಿವಂತ ಸೊಸೆಯರಾದ ಗೀತಾ ಹಾಗೂ ಕರುಣಾರಿಗಿಂತ ಹಿರಿಯ ಸೊಸೆ ಭಾರತೀ ಈಗ ಅವರ ಕಣ್ಣಿಗೆ ಬೇರೆಯದ್ದೇ ರೀತಿ ಕಂಡು ಅಸಮಾಧಾನ ಮೂಡಿತ್ತು. ಅವರ ಸಂಸಾರಕ್ಕೆ ಸಮಿತ್ತಾಗಿದ್ದ ಆಕೆಯನ್ನು ಅವರು ನಡೆಸಿಕೊಂಡ ಪರಿ ಹೀಗಿತ್ತು..?? ಮಗಳು ಸುಮಾ ಇವರ ನಡವಳಿಕೆಗೆ ಪ್ರತಿಕ್ರಿಯಿಸಿದ ಬಗೆ ಹೇಗೆ..?


ಕೆಸರಿನಲ್ಲಿ ಒಂದು ಕಮಲ :ರಾಜಪ್ಪನವರ ಅರಮನೆಯಂತಹಾ ಬಂಗಲೆಯಲ್ಲಿ ಸಾವಿತ್ರಮ್ಮನ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಚೆನ್ನಿಯ ಮನೆಯಲ್ಲಿ ಬಡತನವಿದ್ದರೂ.. ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತಿದ್ದರೂ.. ಮಗಳು ಕಮಲಿ ಆಕೆಗೆ ಆಸರೆಯಾಗಿದ್ದಳು. ಸಾವಿತ್ರಮ್ಮನವರಿಗೆ ಹೆಣ್ಣುಮಕ್ಕಳೆಂದರೆ ಆಸೆ. ತನಗೊಂದು ಹೆಣ್ಣು ಮಗು ಬೇಕೆಂದು ಆಶಿಸಿದ್ದರೂ ಅವರಿಗೆ ಹೆಣ್ಣು ಮಗುವಾಗಿರಲಿಲ್ಲ. ಚೆನ್ನಿಯ ಮಗುವನ್ನು ಸಾಕಲು ಕೇಳುತ್ತಿದ್ದರಾದರೂ ಅದು ಈಡೇರುವಂತಿರಲಿಲ್ಲ. ಅಂತಹಾ ಸಂದರ್ಭದಲ್ಲಿ ತೊಟ್ಟಿಯಲ್ಲಿ ಬಿದ್ದಿದ್ದ ಅನಾಥ ಹೆಣ್ಣುಮಗುವೊಂದು ಯಾರ ಮಡಿಲಿಗೆ ಸೇರಿತು..?? ಇಲ್ಲಿ ದೊಡ್ಡವರೆನಿಸಿಕೊಂಡವರ ಸಣ್ಣತನ ಹಾಗೂ ಅಂತಸ್ತಿನಲ್ಲಿ ಸಣ್ಣವರಾಗಿರುವವರ ದೊಡ್ಡತನವೂ ಕಾಣುತ್ತದೆ. 


ಮೂರಾಬಟ್ಟೆ: ಗೌರಿ ದೊಡ್ಡ ಸಾಹೇಬರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಪುಟ್ಟಿಯ ವಯಸ್ಸಿನವಳೇ ಆದ ಅವರ ಮಗು ವಸಂತಳ ಹುಟ್ಟು ಹಬ್ಬದಂದು ನಡೆದ ಘಟನೆಯೊಂದು ಅವಳ ಬದುಕನ್ನೇ ಮೂರಾಬಟ್ಟೆಯಾಗಿಸಿದ ಕಥೆ ಇಲ್ಲಿದೆ. ಹೆಣ್ಣಿನ ಬಡತನದ ಬದುಕನ್ನು ಅಸಹಾಯಕತೆಯ ಅಡಕತ್ತರಿಗೆ ಸಿಲುಕಿಸಿದ ದುರಂತ ಕಥೆ ಕಾಣುತ್ತದೆ. 


ಕ್ಷಮಯಾ ಧರಿತ್ರಿ: ಮದುವೆಯಾದ ನಂತರ ಮಗ ಬದಲಾದನೆಂದು ಸೊಸೆಯನ್ನು ದೂಷಿಸುತ್ತಾ ಅವಳನ್ನು ಕೀಳಾಗಿ ನಡೆಸಿಕೊಳ್ಳುವ ಅತ್ತೆ ಹಾಗೂ ಅವರ ಇಬ್ಬರು ಅವಿವಾಹಿತ  ಹೆಣ್ಣುಮಕ್ಕಳು ಅವಳಿಗೆ ಪ್ರತಿನಿತ್ಯ ಕೊಡುವ ಕಾಟದ ಜೊತೆಗೆ ಗಂಡನ ಅಸಹಾಯಕತೆಯೂ ಸೇರಿ ಆಕೆ ಮಸಣಕ್ಕೆ ಹೋಗುವವಳಿದ್ದಳು. ಆದರೆ ಆಕೆ ಕ್ಷಮಯಾಧರಿತ್ರಿ ಎನ್ನುವುದಕ್ಕೆ ಅದಕ್ಕಿಂತಲೂ ದೊಡ್ಡ ಉದಾಹರಣೆ ಸಿಗಲಾರದೇನೋ. ಕೂಡು ಕುಟುಂಬಗಳಲ್ಲಿನ ವೈವಾಹಿಕ ಜೀವನದ ನಂತರ ಕಿರುಕುಳದ ಮತ್ತೊಂದು ಮುಖವನ್ನು ಇಲ್ಲಿ ಪರಿಚಯಿಸಿದ್ದಾರೆ.


ಹಕ್ಕು: ಕಮಲಮ್ಮ ತಂಗಿಯ ಮಗಳಾದ ಕಿರಣಗಳನ್ನು ತನಗೆ ಮಗನಿದ್ದರೂ.. ಸಾಕಿ ಬೆಳೆಸಿಕೊಂಡಿದ್ದರು. ತಂಗಿ ಹಾಗೂ ಆಕೆಯ ಗಂಡನ ನಡವಳಿಕೆಯಿಂದ ಮನಸ್ಸು ಕೆಟ್ಟರೂ.. ಕಿರಣಳ ಮೇಲಿಟ್ಟಿದ್ದ ಪ್ರೀತಿಗೆ ಹಲ್ಲು ಕಚ್ಚಿ ಸುಮ್ಮನಾದರು. ತನಗೆ ಅವಳ ಮೇಲೆ ಹಕ್ಕಿಲ್ಲವೆಂದಾದಾಗ ಅವರು ಅನುಭವಿಸಿದ ಮಾನಸಿಕ ಯಾತನೆಗಳಿವೆ. ಮತ್ತೆ ಕಿರಣಳನ್ನು ಅವರ ಬಳಿಗೆ ಸೇರಿಸಲು ಮುಂದಾದಾಗ ಕಮಲಮ್ಮನವರ ತೀರ್ಮಾನವೇನು..? 


ಎತ್ತಣ ಮಾಮರ: ವನಜಮ್ಮನವರ ಮನೆಯಲ್ಲಿ ಅಂದು ಸರಸಮ್ಮನ ಮೇಲಿನ ಆಪಾದನೆಯಿಂದ ದೊಡ್ಡ ಹಗರಣವೇ ನಡೆದಿತ್ತು. ಸ್ಮಿತಾ ಮಾಡಿದ ತಪ್ಪಿನಿಂದ ಸರಸಮ್ಮ ಅಪರಾಧಿಯಾಗುವವರಿದ್ದರು. ಆದರೆ, ಅದರ ನಂತರವೂ ಸರಸಮ್ಮ ಅಲ್ಲಿ ಉಳಿಯಲಾರೆ ಎಂದುಕೊಂಡರೂ.. ಅವರನ್ನು ಮತ್ತೆ ಅಲ್ಲಿ ಸೆಳೆದು ನಿಲ್ಲಿಸಿದ ಮಮತೆ ಯಾವುದು..?? ಸ್ವಪ್ನಳಿಗೂ ಸರಸಮ್ಮನವರಿಗೂ ಇದ್ದ ಬಾಂಧವ್ಯ ಇಂತಹದ್ದು..??


ಒಂದು ಸಂಜೆಯಲ್ಲಿ: ಕೋಲಾರದ ಮೇಷ್ಟ್ರು ಶಾಮಯ್ಯನವರ ಮಗಳು ರುಕ್ಮಿಣಿಗೆ ಅನಂತನೊಟ್ಟಿಗೆ ವಿವಾಹವಾಗಿತ್ತು. ಅಪ್ಪ ತೀರಿಕೊಂಡ ನಂತರ, ಬದಲಾದ ಗಂಡನೊಂದಿಗಿನ ಬಡತನದಲ್ಲಿಯೂ ಭರವಸೆಯಾಗಿದ್ದ ಮಗಳು ವಿಮಲ ತೀರಿಕೊಂಡಾಗ ಅವಳ ಬದುಕು ಸಾಗಿದ್ದೆತ್ತ..?? ಕಾಲು ಜಾರಿ ಬದುಕಬಹುದಾಗಿದ್ದರೂ.. ತನ್ನ ಬದುಕಿನ ರೀತಿಯನ್ನು ಬದಲಾಯಿಸದ ರುಕ್ಕುವಿಗೆ ಸಿಕ್ಕ ಪಟ್ಟವೇನು.. ಆ ಸಂಜೆಯಲ್ಲಿ ನಡೆದ ಆ ಘಟನೆ ಯಾವುದು..??


ಗುರಿ :ತನ್ನ ಪ್ರವಾಸಕ್ಕೆ ಹಣ ಕೊಡಲಿಲ್ಲವೆಂದು ವಿನುತ ಮನೆಯಲ್ಲಿ ಊಟವನ್ನೂ ಮಾಡದೆ, ಪ್ರತಿಭಟಿಸಿ ಮನೆ ಬಿಟ್ಟು ತಂದೆ-ತಾಯಿಗೆ ಕಷ್ಟ ಕೊಡಬೇಕೆನ್ನುವ ಅವಳ ವಿಚಾರಧಾರೆ ಬದಲಾಗಿ ತನ್ನ ಬದುಕಿನಲ್ಲಿಯೂ ಒಂದು ಗುರಿ ಇಟ್ಟುಕೊಳ್ಳಬೇಕು ಎಂಬ ನಿರ್ಧಾರ ತಳೆಯಲು ಕಾರಣವಾದ ಆ ಘಟನೆ ಯಾವುದು..??


ಅಂತರ್ ದೃಷ್ಟಿ: ತಮ್ಮನ ಮಾತಿನಂತೆ ಮನೆ ಕಟ್ಟಲು ಸುಮತಿ ಒಪ್ಪಿಕೊಂಡಳಾದರೂ.. ಅವಳ ಮನಸ್ಸಿನಲ್ಲಿ ಬೇರೆಯದ್ದೇ ಆಲೋಚನೆ ಓಡುತ್ತಿತ್ತು. ಅದಕ್ಕೆ ಗೆಳತಿಯ ಮಾತುಗಳೂ ಸೇರಿತ್ತು. ತಮ್ಮನ ಹೆಂಡತಿ ಸರಳಳ ಕುರಿತು ಮೇಲ್ನೋಟಕ್ಕೆ ಕಂಡದ್ದಕ್ಕೂ.. ಅಂತರ್ ದೃಷ್ಟಿಗೆ ಕಂಡಿದ್ದಕ್ಕೂ ಇದ್ದ ವ್ಯತ್ಯಾಸವೇನು..?? ಸುಮತಿಗೆ ಅರಿವಾದ ಸತ್ಯವೇನು..?? 


ಉಡುಗೊರೆ: ಶಾಂತ ಗೆಳತಿ ಗೌತಮಿಯ ಮನೆಯ ಮದುವೆಗೆ ಹೋದಾಗ ಉಡುಗೊರೆಯೊಂದನ್ನು ಜತನದಿಂದ ಆಯ್ಕೆ ಮಾಡಿದ್ದಳು. ಆ ಉಡುಗೊರೆ ಅವಳಿಗೆ ಸತ್ಯದರ್ಶನ ಮಾಡಿಸಿತ್ತು. ಅಷ್ಟಕ್ಕೂ ಆ ಉಡುಗೊರೆ ಯಾವುದು ಹಾಗೂ ಅದರಿಂದ ತಿಳಿದ ಸತ್ಯವೇನು..?? 


ಜೀರ್ಣೋದ್ಧಾರ: ಸುಬ್ಬಾಭಟ್ಟರು ಪ್ರೀತಿಯಿಂದ ಆರಾಧಿಸುತ್ತಿದ್ದ ಬಾಲಕೃಷ್ಣನ ದೇವಾಲಯ ಶಿಥಿಲವಾಗಿತ್ತು. ಅದರ ಜೀರ್ಣೋದರಕ್ಕಾಗಿ ಪ್ರಯತ್ನಿಸುತ್ತಿದ್ದರು. ಆದರೆ, ಅದೇ ವಿಚಾರವಾಗಿ ಮತ್ತೊಬ್ಬರು ಅವರ ಜೊತೆಗೂಡಿದಾಗ ದೇವಾಲಯ ಜೀರ್ಣೋದ್ಧಾರವಾಗಿ ತನ್ನ ಕೃಷ್ಣನಿಗೆ ನೆಲೆ ಸಿಗುತ್ತದೆ ಎಂದುಕೊಂಡವರು ನಂತರ ಹುಚ್ಚರಾಗಿ ಬೀದಿ ಬೀದಿ ಅಲೆದದ್ದೇಕೆ..??


ನೆನೆಸದೇ ಇದ್ದದ್ದು : ಹುಡುಗಿ ಕಪ್ಪು ಎಂದು ಸರಳ ವಿವಾಹ ಕಷ್ಟವಾಗಿದ್ದಾಗ ಆಕೆಗೆ ಪರಿಚಿತನಾದ ಶ್ರೀ ಅವಳಲ್ಲಿ ಆಸೆ ಹುಟ್ಟಿಸಿ ಮನೆಯಿಂದ ಓಡಿ ಹೋಗಿ ವಿವಾಹವಾಗಲು ನಿಶ್ಚಯಿಸಿದ್ದನಾದರೂ.. ಸರಳಳೂ ಅದಕ್ಕೆ ಒಪ್ಪಿದ್ದಳಾದರೂ.. ಅವರಿಬ್ಬರೂ ನೆನೆಸದೇ ಇದ್ದ ಪ್ರಸಂಗವನ್ನು ನಡೆದು ಇಬ್ಬರ ಬದುಕೂ ಬದಲಾಗಿತ್ತು. ಅವರು ನೆನೆಸದೇ ಇದ್ದದ್ದೇನು ಹಾಗೂ ಆ ಘಟನೆ ಯಾವುದು..?? ಅದಕ್ಕೆ ಕಾರಣಳಾದ ಮಾಲತಿ ಏನು ಮಾಡಿದ್ದಳು..??


ಅಮ್ಮಾ: ದೀಪಿಕಾ ಹಾಗೂ ಪ್ರಕಾಶರಲ್ಲಿ ಪ್ರಕಾಶ ತನ್ನ ಅಮ್ಮನ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದನಾದರೂ.. ದೀಪಿಕಾಳಿಗೆ ಅಪ್ಪನಿಲ್ಲದೆ ಸಾಕುತ್ತಿರುವ ಅಮ್ಮನ ಬೆಲೆ ಗೊತ್ತಾದ ದಿನ ಹೇಗಿತ್ತು..?? ಅಮ್ಮನಿಗಾಗಿ ಹಂಬಲಿಸಿದ ದೀಪಿಕಾ ಅಮ್ಮನ ಮಹತ್ವವನ್ನು ಅರಿತದ್ದು ಹೇಗೆ..?? ಮಕ್ಕಳ ಆಲೋಚನಾ ದೃಷ್ಟಿಯಿಂದ ರೂಪಿತವಾಗಿರುವ ಕಥೆ. 


ಇಲ್ಲಿನ ಕಥೆಗಳಲ್ಲಿ ಭಾವನೆಗಳಿಗೆ ಹೆಚ್ಚಿನ ಮಹತ್ವ ಕಾಣುತ್ತದೆ. ತಾಳ್ಮೆ ಹಾಗೂ ಕ್ಷಮೆಗೆ ಹೆಚ್ಚಿನ ತೂಕದ ಜೊತೆಗೆ ಮಹಿಳೆಯರು ಅನುಭವಿಸುವ ನೋವುಗಳು ಹಾಗೂ ಕಷ್ಟಗಳ ಮತ್ತೊಂದು ಮುಖವನ್ನು ತೆರೆದಿಡುತ್ತಾರೆ. ಅದೆಲ್ಲದರಿಂದ ಆಗುವ ಪರಿಣಾಮಗಳ ಚಿತ್ರಣವೂ ಇದ್ದು, ಅದಕ್ಕೆ ತಾಳ್ಮೆ ಹಾಗೂ ಕ್ಷಮೆ ಸೇರಿದಾಗ ಆಗುವ ಬದಲಾವಣೆ ನೀತಿ ಪಾಠದಂತಿದೆ. ಸೊಗಸಾದ ಕಥೆಗಳ ಚೆಂದದ ಓದು.


~ವಿಭಾ ವಿಶ್ವನಾಥ್

ಮುದ್ದಿನ ಮನದನ್ನೆ (ಪುಸ್ತಕ ಯಾನ - 204)


ಪುಸ್ತಕದ ಶೀರ್ಷಿಕೆ : ಮುದ್ದಿನ ಮನದನ್ನೆ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 1999

ಎರಡನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)


ಮುದ್ದಿನ ಮನದನ್ನೆ ಎನ್ನುವ ಕಾದಂಬರಿಯ ಶೀರ್ಷಿಕೆ ಕಂಡಾಗ ಮೊದಲಿಗೆ ಇದೊಂದು ಪ್ರೇಮ ಕಥೆ ಆಗಿರಬಹುದಾ ಎನ್ನಿಸಿ ಓದಲು ಶುರು ಮಾಡಿದೆ. ಆದರೆ, ಇದು ಸಾಂಸಾರಿಕ ಕಥೆಯಾದರೂ.

 ಗಂಡ-ಹೆಂಡತಿಯ ನಡೆ ಹೇಗಿದ್ದಾಗ ಆಕೆ ಮುದ್ದಿನ ಮನದನ್ನೆಯಾಗಿರಬಲ್ಲಳು ಎನ್ನುವುದನ್ನು ತೋರಿಸುವುದರ ಜೊತೆಗೆ ಸಂಸಾರದಲ್ಲಿ ಪ್ರೇಮ ಹಾಗೂ ತಾಳ್ಮೆಯ ಪಾತ್ರವನ್ನು ಹೇಳುತ್ತದೆ. 


ರಾಘವೇಂದ್ರರಾಯರಿಗೆ ಎರಡನೇ ಹೆಂಡತಿಯಾಗಿ ಬಂದದ್ದು ವಿಶಾಲು. ವಿಶಾಲಿಗೆ ಅವರು ಸೋದರ ಮಾವನೇ ಆಗಬೇಕು. ಮೊದಲೇ ಈ ಮದುವೆಯ ಪ್ರಸ್ತಾಪ ಬಂದಾಗ ಖಾಸಗಿ ಹೈಸ್ಕೂಲಿನಲ್ಲಿ ಕೆಲಸದಲ್ಲಿದ್ದ ಅವರನ್ನು ವಿವಾಹವಾಗಲು ವಿಶಾಲು ಒಪ್ಪಿರಲಿಲ್ಲ. ಆದರೆ, ರಾಯರು ವಿವಾಹವಾಗಿ ಅವರ ಪತ್ನಿ ಮಗು ಶೀಲಾ ಹುಟ್ಟಿದಾಗ ತೀರಿಕೊಂಡ ಸಂದರ್ಭದಲ್ಲಿ.. ವಿಶಾಲಿಗೂ ಯಾವ ವರನೂ ಅವಳ ನಿರೀಕ್ಷೆಗೆ ತಕ್ಕಂತೆ ಸಿಕ್ಕಿರದಿದ್ದಾಗ ತಾಯಿಯ ಮಾತಿನಂತೆ ರಾಯರನ್ನೇ ವಿವಾಹವಾಗಿದ್ದಳು. ಆಕೆಗೆ ವಾರಿಜಾ ಎಂಬ ಮಗಳು ಹಾಗೂ ರಾಜು, ರಾಮು ಎಂಬ ಅವಳಿ ಗಂಡು ಮಕ್ಕಳು ಇದ್ದರು.


ಎರಡನೆಯ ವರನಾಗಿ ಒಂದು ಮಗುವಿನ ತಂದೆಯೂ ಆಗಿದ್ದವನನ್ನು ಮದುವೆಯಾದರೂ.. ಆಕೆಯು ಶಿಕ್ಷಕಿಯಾಗಿ ಕೆಲಸದಲ್ಲಿದುದರಿಂದ ಆರ್ಥಿಕವಾಗಿ ಸಬಲಳಾಗಿಯೇ ಇದ್ದಳು. ತನ್ನ ಮಕ್ಕಳ ಹೆಸರಿನಲ್ಲಿ ದುಡ್ಡಿಟ್ಟಿದ್ದಳು. ಶೀಲಾಳ ಹೆಸರಿನಲ್ಲಿ ಯಾವ ಹಣವೂ ಇರಲಿಲ್ಲ. ಶೀಲಾಳಿಗೆ ಚಿಕ್ಕಮ್ಮನಿಂದ ಅನ್ಯಾಯವಾಗುತ್ತಿಲ್ಲ ಎಂದು ರಾಯರು ಭಾವಿಸಿದ್ದರು. ಮಲತಾಯಿ ಕಾಟವೇನೂ ಇರಲಿಲ್ಲ. ರಾಯರ ಅಕ್ಕ ಮೀನಾಕ್ಷಮ್ಮ ತನ್ನ ಮಗಳ ಮಕ್ಕಳು ಹಾಗೂ ಈ ಹುಡುಗಿ ಬೇರೆ ಎಂದು ಭೇದ ಮಾಡದೆ ಎಲ್ಲರನ್ನೂ ಪ್ರೀತಿಸುತ್ತಿದ್ದಳು. ಆದರೆ ಶೀಲಾ ಎಸ್‌.ಎಸ್.‌ಎಲ್.‌ಸಿ ಮುಗಿಸಿದ ಸಂದರ್ಭದಲ್ಲಿ ಮೀನಾಕ್ಷಮ್ಮನವರೂ ತೀರಿಕೊಂಡು, ಚಿಕ್ಕಮ್ಮನ ಮತ್ಸರದಿಂದ ಮನೆಯ ಕೆಲಸ ಹಾಗೂ ಅಡುಗೆ ಕೆಲಸ ಶೀಲಾಳ ಮೇಲೆಯೇ ಬಿದ್ದಿತ್ತು.


ಶೀಲಾ ವಾರಿಜಾಳಂತೆ ಕೊಬ್ಬು ತೋರಿಸದಿದ್ದರೂ.. ಆಕೆಗಿಂತ ಬಹಳ ರೂಪವತಿ. ತಮ್ಮಂದಿರಿಬ್ಬರಿಗೂ ವಾರಿಜಾಳಿಗಿಂತಲೂ ಶೀಲಾಳ ಮೇಲೆ ಹೆಚ್ಚು ಪ್ರೀತಿ. ಶೀಲಾಳ ತಾಯಿಯ ಮನೆಯಲ್ಲಿ ಆಕೆಯ ಮಾವಂದಿರು ಆಕೆಯ ತಾಯಿಯ ಆಭರಣಗಳು ಹಾಗೂ ದುಡ್ಡನ್ನು ಸಹಾ ಕೊಟ್ಟಿರಲಿಲ್ಲ.


ಇದನ್ನೇ ನೆಪವಾಗಿರಿಸಿಕೊಂಡ ವಿಶಾಲು ಗೊತ್ತಿದ್ದೂ ಗೊತ್ತಿದ್ದೂ.. ತಾನೇ ಹತ್ತು ಸಾವಿರ ವರದಕ್ಷಿಣೆ ಕೊಡುತ್ತೇನೆಂದು ಆಕೆಗೆ ಒಂದು ವಿವಾಹದ ಪ್ರಸ್ತಾಪ ತಂದು ವಿವಾಹ ಮಾಡಿಬಿಟ್ಟರು. ಪ್ರಸಾದನಿಗೆ ಕೆಲಸದಲ್ಲಿರುವ ಹುಡುಗಿ ಬೇಕಿಲ್ಲ, ಮನೆ ಕೆಲಸ ನೋಡಿಕೊಂಡರೆ ಸಾಕು ಎಂದು ಬಣ್ಣಬಣ್ಣದ ಮಾತನಾಡಿ ಶ್ರೀಮಂತಿಕೆ ತೋರಿಸಿ ವಿವಾಹ ಮಾಡಿಕೊಂಡಿದ್ದರು. ಆದರೆ, ಅಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳಿಗೂ ಶೀಲಾಳ ಗಂಡ ದಾಸನಿದ್ದ ಹಾಗೆ. ಏನನ್ನೂ ಕೇಳದ ಮೂಗಬಸವನಂತೆ ದುಡಿಯುತ್ತಿದ್ದ. ಜೊತೆಗೆ ತಾಯಿ ಸುಭದ್ರಮ್ಮ ಮಹಾ ಕಟುಕಳು. ತಮ್ಮಂದಿರಿಗೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟು ಜೊತೆಗೆ ಇರಿಸಿಕೊಂಡಿದ್ದರು. ಆದಾಯದ ಲಾಭದಲ್ಲಿ ಪಾಲು ಬಂದರೂ ಮಗನ ಸಂಬಳವನ್ನೂ ತಾವೇ ಇರಿಸಿಕೊಳ್ಳುತ್ತಿದ್ದರು. ವರದಕ್ಷಿಣೆಯಾಗಿ ಹತ್ತು ಸಾವಿರ ನೀಡುತ್ತೇನೆ ಎಂಬ ಭರವಸೆ ನೀಡಿ ಅದನ್ನು ಕೊಡದೆ, ಆಕೆಗೆ ಮತ್ತಷ್ಟು ಚಿತ್ರ ಹಿಂಸೆಯಾಗಲಿ ಎಂದೇ ಬಯಸಿದ್ದಳು ವಿಶಾಲಿ. ಅತ್ತೆ ಮನೆಯ ಹಿಂಸೆ ತಾಳಲಾಗದೆ, ವಿದ್ಯೆ ಇಲ್ಲದೆ, ಆರ್ಥಿಕ ಬಲವೂ ಇಲ್ಲದೇ ತನ್ನ ಮನೆಗಾದರೂ ಬಂದು ಇಲ್ಲಿನ ಕೆಲಸ ಮಾಡಿಕೊಂಡು ಬಿದ್ದಿರುತ್ತಾಳೆ ಎಂಬ ಕೀಳು ಆಲೋಚನೆ.


ಈಗ ಶೀಲಾ ಮನೆಗೆ ಬರುವ ಸಂದರ್ಭದಲ್ಲಿ ಆಕೆ ಸೋತು ಬರುತ್ತಾಳೆ ಎಂದು ನಿರೀಕ್ಷಿಸಿದ ತಾಯಿ-ಮಕ್ಕಳಿಗೆ ಅಚ್ಚರಿಯಾಗಿತ್ತು. ಬೆಲೆಬಾಳುವ ಸೀರೆಗಳು, ಒಡವೆ ಜೊತೆಗೆ ಮೈ-ಕೈ ತುಂಬಿಕೊಂಡ ಅವಳನ್ನು ಕಂಡು ಹೊಟ್ಟೆಕಿಚ್ಚಾಗಿತ್ತು. ತನ್ನ ತಂದೆ ಬಂದು ತನ್ನ ಗಂಡನಿಗೆ ಬುದ್ಧಿ ಹೇಳಿದ ನಂತರ ತನ್ನ ಅದೃಷ್ಟವೇ ಬದಲಾಯಿತು ಎಂದು ಹೇಳಿ ಆಕೆ ತನ್ನ ವೈಭವವನ್ನು ತೋರಿಸಿದಳು. 


ವಾರಿಜಾಳಿಗೂ ಇನ್ನೂ ಮೂರು ತಿಂಗಳಲ್ಲಿ ಮದುವೆ ಮಾಡಿಕೊಡಲಿದ್ದಳು. ಆತ ಎಂ.ಎಸ್ಸಿ ಓದಿ ಕೆಲಸದಲ್ಲಿದ್ದ ಗಿರೀಶ ಎಲ್ಲಿ ನನ್ನ ಮುದ್ದು ಮನದನ್ನೆ.. ಎನ್ನುತ್ತಾ ಅವಳನ್ನೇ ಹಂಬಲಿಸುತ್ತಾನೆ. ಇವಳೇ ಜೋರು ಮಾಡಿದರೂ ನನ್ನ ಮುದ್ದು ಮನದನ್ನೆ ಏನೆಂದರೂ ನನಗೆ ಆನಂದ ಎನ್ನುತ್ತಾನೆ ಎನ್ನುತ್ತಾ ತನ್ನ ಮಗಳನ್ನು ಪ್ರೀತಿಸಿದ್ದ ಪರಿಯನ್ನು ಹೇಳಿದ್ದರು. 


ಆದರೆ ಶೀಲಾಳ ನಿಜರೂಪವೂ ಹಾಗೂ ವಾರಿಜಾಳ ನಿಜ ಬದುಕು ಬೇರೆಯೇ ಇತ್ತು. ಬೇರೆಯವರಿಗೆ ಕೆಟ್ಟದ್ದು ಬಯಸಿದರೆ ತಮಗೂ ಕೆಟ್ಟದ್ದೇ ಆಗುತ್ತದೆ ಎನ್ನುವ ಕರ್ಮಫಲದ ಅರಿವಿರದ ವಿಶಾಲುವಿಗೆ ತಕ್ಕ ಶಾಸ್ತಿಯೇ ಆಗಿತ್ತು.


ಶೀಲಾ ತನ್ನ ಅತ್ತೆ ಮನೆಯವರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಚಂದದ ಬದುಕು ಬದುಕಲು ಕಷ್ಟ ಪಟ್ಟಳಾದರೂ.. ನಂತರ ಅವಳ ಬದುಕು ಸುಖ ಸಂಸಾರವಾಗಿಯೇ ಇತ್ತು. ಅದೆಲ್ಲದಕ್ಕೂ ರಾಯರು ಕಾರಣವಾಗಿರಲಿಲ್ಲ. ಆದರೆ, ಶೀಲಾಳಿಗೆ ಅವರ ಸಹಾಯ ಚೆನ್ನಾಗಿಯೇ ಇತ್ತು. ಅವಳ ಸಂಸಾರ ಹಾಗೂ ಬದುಕು ನೇರವಾದ ಬಗೆ ಹೇಗೆ..??


ಮುದ್ದಿನ ಮನದನ್ನೆ ಎಂದು ಮಾತಲ್ಲಿಯೇ ಸ್ವರ್ಗ ತೋರಿಸುತ್ತಿದ್ದ ಗಿರೀಶನ ನಿಜಸ್ವರೂಪ ಏನು..?? ಆತ ಅಷ್ಟು ಕಡು ಕುರೂಪಿ ವಾರಿಜಾಳನ್ನು ಮೆಚ್ಚಲು ಹಾಗೂ ಆಕೆಯನ್ನು ವಿವಾಹವಾಗಲು ಹೂಡಿದ್ದ ನಾಟಕವೇನು ಕಡಿಮೆಯದಾಗಿರಲಿಲ್ಲ. ಆದರೆ, ವಿವಾಹವಾದ ನಂತರ ಅಮ್ಮ-ಮಗಳಿಗೆ ಆತ ಕಲಿಸಿದ ಪಾಠವು ಅಂತಿಂಥದೇನಲ್ಲ.


ಮಾತಿನಲ್ಲಿ ಮುದ್ದಿನ ಮನದನ್ನೆ ಎನ್ನುತ್ತಿದ್ದ ಗಿರೀಶನಿಗೂ ಹಾಗೂ ಮುದ್ದಿನ ಮನದನ್ನೆ ಎಂದು ಎಲ್ಲಿಯೂ ಆಡದಿದ್ದರೂ.. ಆಕೆಯನ್ನು ಸುಪ್ಪತ್ತಿಗೆಯಲ್ಲಿಟ್ಟು ನೋಡಿಕೊಂಡ ಪ್ರಸಾದನಿಗೂ ಅಜಗಜಾಂತರ ವ್ಯತ್ಯಾಸವಿದೆ. ತೋರಿಕೆಯ ಬದುಕಿಗೂ ಹಾಗೂ ನಿಜವಾಗಿ ಹಾಗೆಯೇ ಬಾಳ್ವೆ ಮಾಡುವವರೆಗೂ ಇರುವ ವ್ಯತ್ಯಾಸ ಕಂಡು ಬರುತ್ತದೆ.


ಕೇಡು ಬಯಸಿದ ಸ್ವಾರ್ಥಿಗಳಿಗೆ ಸಿಕ್ಕ ಪ್ರತಿಫಲದ ಜೊತೆಗೆ ಒಳ್ಳೆಯದನ್ನು ಮಾಡಲು ಹೊರಡುವವರ.. ತಾಳ್ಮೆಯ ಪ್ರತಿಫಲವೂ ಸಿಕ್ಕ ಪರಿ ಕಾಣುತ್ತದೆ. ಚೆಂದದ ನೀತಿಯುಳ್ಳ ಸುಂದರ ಕಾದಂಬರಿ.


~ವಿಭಾ ವಿಶ್ವನಾಥ್