ಶನಿವಾರ, ಜೂನ್ 20, 2026

ಕೂಡುಮನೆ (ಪುಸ್ತಕ ಯಾನ - 462)


ಪುಸ್ತಕದ ಶೀರ್ಷಿಕೆ : ಕೂಡುಮನೆ

ಲೇಖಕರು : ರಾಧಾಕೃಷ್ಣ ಕಲ್ಚಾರ್

ಪ್ರಕಾಶಕರು : ಗಾಯತ್ರೀ ಪ್ರಕಾಶನ

ಪ್ರಥಮ ಮುದ್ರಣ : 1994

ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 70

ಬೆಲೆ : 70 ರೂ. 


ಕೂಡುಮನೆ ಕಿರು ಕಾದಂಬರಿ ರಾಧಾಕೃಷ್ಣ ಕಲ್ಚಾರ್ ಅವರ ಪ್ರಾರಂಭಿಕ ಕೃತಿ. 28 ವರ್ಷಗಳ ಹಿಂದೆ ಅನಂತ ಪ್ರಕಾಶ ಸಂಸ್ಥೆ ರಾಜ್ಯ ಮಟ್ಟದಲ್ಲಿ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ. ಮೂರು ದಶಕಗಳ ಹಿಂದಿನ ಕಾದಂಬರಿ ಎಂಬ ವಿಚಾರವನ್ನು ಮನದಲ್ಲಿಟ್ಟುಕೊಂಡು ಓದಿದರೂ ಇಂದಿನ ಕಾಲಕ್ಕೂ ಪ್ರಸ್ತುತವಾದ ಕಾದಂಬರಿ ಇದು. ಹಣಕಾಸಿನ ವಿಚಾರಗಳಲ್ಲಿ ಮಾತ್ರ ಅಂದಿನ ದಿನಗಳಿಗೆ ಹೋಲಿಸಿಕೊಳ್ಳಬಹುದಷ್ಟೇ.!


ಕೃಷಿ ಕಾಲೇಜಿನಲ್ಲಿ ಅಭ್ಯಾಸ ಮುಗಿಸಿ ಮೂರು ವರ್ಷಗಳ ನಂತರ ಮತ್ತೆ ತನ್ನ ಅಜ್ಜನ ಮಡಿಲು ಸೇರಲು ಹೊರಟಿದ್ದ ಶ್ರೀಧರನಿಗೆ ಅವಿಭಜಿತ ಕೂಡು ಕುಟುಂಬ, ಪಿತ್ರಾರ್ಜಿತವಾಗಿ ಬಂದ ಆಸ್ತಿಯ ಜೊತೆಗೆ ಅಜ್ಜ ಬೆವರು ಸುರಿಸಿ ಮಾಡಿದ ಆಸ್ತಿಯಿತ್ತು. ಪರೋಪಕಾರಿಯಾಗಿ ಬೆಳೆದ ಅಜ್ಜನೇ ಅವನ ಸ್ಪೂರ್ತಿ. 


"ನೋಡು ಮಗು, ಪ್ರಕೃತಿ ತಾಯಿ ಎನ್ನುತ್ತಾರೆ. ಆದರೆ ಈ ತಾಯಿ ಎಲ್ಲ ತಾಯಂದಿರ ಹಾಗಲ್ಲ, ತಾಯಿ ಬಂದು ಹಾಲು ಕುಡಿಸಲಿ ಎಂದು ಕೈ ಕಾಲು ಚಾಚಿ ಮಲಗಿದ ಮಗುವನ್ನು ಅವಳು ಮೆಚ್ಚುವುದಿಲ್ಲ. ಮಗು ತಾನಾಗಿ ಏಳಬೇಕು. ಪರಿಶ್ರಮದಿಂದ ಈ ತಾಯಿ ಇದ್ದಲ್ಲಿಗೆ ಹೋಗಬೇಕು. ಆಡಿ, ಕುಣಿದು, ಹಾಡಿ ಅವಳನ್ನು ಒಲಿಸಿಕೊಳ್ಳಬೇಕು. ಆಗ ನೋಡು ಸಮೃದ್ಧ ಹಾಲು ಆ ಮಗುವಿನ ಪಾಲಿಗೆ" ಎಂದು ಶ್ರೀಧರನಿಗೆ ಅಜ್ಜ ಎಷ್ಟೋ ಬಾರಿ ಪ್ರಕೃತಿಯ ಪಾಠ ಮಾಡಿದ್ದಾರೆ.  ಆದರ್ಶವೇ ಆದ ತನ್ನ ಅಜ್ಜ ಹಾಗೂ ಕೃಷಿಯ ಆದರ್ಶ ಅವನನ್ನು ಪ್ರಬುದ್ಧ ಹಾಗೂ ಪ್ರಾಮಾಣಿಕ ಮನುಷ್ಯನನ್ನಾಗಿ ರೂಪಿಸಿತು. ಕೃಷಿ ಮಾಡಿ ಮಾದರಿಯಾಗಬೇಕು ಎನ್ನುವ ಕನಸಿತ್ತು. 


ಶ್ರೀಧರನು ಕನಸಿನಲ್ಲೂ ಯೋಚಿಸಿದ ವಿಷಯವೆಂದರೆ ಮನೆ ಪಾಲಾಗುವುದು. ಆತನ ನೆಚ್ಚಿನ ಅಧ್ಯಾಪಕರೇ ಕೃಷಿ ಇಲಾಖೆಯಲ್ಲಿಯೇ ಆಫೀಸರ್ ಪೋಸ್ಟ್ ಕೊಡಿಸುತ್ತೇನೆಂದಾಗ ನಿರಾಕರಿಸಿ ಹಳ್ಳಿಯ ಕಡೆ ಮುಖ ಮಾಡಿದ್ದ. ತಪ್ಪಿಯೂ ಪಾಲಾವವ ಸಂದರ್ಭ ಬರಲಾರದು ಎಂದು ಗಟ್ಟಿಯಾಗಿಯೇ ಹೇಳಿದ್ದೇಕೆ..?


ಕೂಡುಮನೆಗೆ ಬೆಂಗಳೂರಿನಿಂದ ಹೊರಟು ಬಂದವನಿಗೆ ಅಚ್ಚರಿ ಕಾದಿತ್ತು. ಶ್ರೀಧರನ ಅಜ್ಜ ಶಂಭಟ್ಟರು. ಅವರ ಹಿಂದಿನ ತಲೆಮಾರುಗಳಲ್ಲಿ ಪಾಲು ನಡೆದು ಅಡ್ಕ, ಕುಮೇರಿ, ಪೂಂಬೆಮನೆ ಎಂದು ಹಂಚಿಹೋಗಿತ್ತು. ಈಗ ಮೂಲ ಮನೆಯಾಗಿ ಕೂಡುಮನೆ ರೂಪ ತಾಳಿತ್ತು . ಶಂಭಟ್ಟರು ಕೃಷಿಭೂಮಿಯ ವಿಸ್ತರಣೆಗೆ ಶ್ರಮಿಸಿದ ಹಾಗೂ ಅವರ ಮಣ್ಣಿನ ಕಾಯಕದ ಕುರಿತು ಓದಿನೋಡಿ.


ಶಂಭಟ್ಟರಿಗೆ ಮೂವರು ಗಂಡುಮಕ್ಕಳು 6 ಮಂದಿ ಹೆಣ್ಣು ಮಕ್ಕಳು. 

ನಾರಾಯಣ, ಶಂಕರ ಹಾಗೂ ರಾಜರಾಮ ಅವರ ಹೆಂಡತಿ ಮಕ್ಕಳೊಡನೆ ಒಟ್ಟಾಗಿ ನೆಲೆಸಿದ್ದರು. ಹೆಣ್ಣುಮಕ್ಕಳಲ್ಲಿ ಗೌರಿಗೆ ಮದುವೆಯಾಗಿ ಮಗ ರಾಮಕೃಷ್ಣ ನಾಲ್ಕು ವರ್ಷವಿದ್ದಾಗ ಪತಿ ಅಪಘಾತದಲ್ಲಿ ತೀರಿಕೊಂಡಿದ್ದರಿಂದ ಈಗ ಗೌರಿ ಕೂಡುಮನೆಯಲ್ಲಿಯೇ ಮಗನೊಂದಿಗೆ ನೆಲೆಸಿದ್ದಳು.


ಶ್ರೀಧರನ ತಂದೆ ನಾರಾಯಣ. ಶ್ರೀಧರನ ತಾಯಿ ತೀರಿ ಹೋಗಿ ತಂದೆ ಎರಡನೆಯ ವಿವಾಹವಾಗಿದ್ದರು. ಅವರಿಗೆ ಮೂವರು ಮಕ್ಕಳು. ನಾರಾಯಣನಿಗೆ ಶ್ರೀಧರ ಕೃಷಿ ಕಾಲೇಜಿಗೆ ಸೇರುವುದು ಇಷ್ಟವಿರಲಿಲ್ಲ. ಮಗ ಲೆಕ್ಚರರ್ ಆಗುವ ಆಸೆ ಇಟ್ಟುಕೊಂಡಿದ್ದರಾದರೂ ಮಗ ಅದಕ್ಕೆ ಮನ ಕೊಟ್ಟಿರಲಿಲ್ಲ. ಮತ್ತೊಬ್ಬ ಮಗ ಶ್ರೀಹರಿ ಕುರಿತು ಅವರಿಗೆ ಭರವಸೆಯಿತ್ತು. ನಾರಾಯಣರ ಎರಡನೇ ಪತ್ನಿ ಶಾರದೆಯ ಅಣ್ಣ ಈಶ್ವರ ಭಟ್ಟರ ಕುಮಕ್ಕು ನಾರಾಯಣರಿಗೆ ಹೆಚ್ಚೇ ಇತ್ತು.


ಶಂಕರನ ಪತ್ನಿ ಪಾರ್ವತಿ. ಇವರಿಗೆ ಮೂವರು ಮಕ್ಕಳು ಕಾದಂಬರಿಯಲ್ಲಿ ಇವರಿಗೆ ಹೆಚ್ಚೇನೂ ಮಹತ್ವವಿಲ್ಲ. ಕೆಲವು ಬಾರಿ ಪ್ರಸ್ತಾಪ ಬಂದು ಹೋಗುತ್ತದೆ.


ಮತ್ತೊಬ್ಬ ಮಗ ರಾಜಾರಾಮ ಹಾಗೂ ಜಾನಕಿ ಇಬ್ಬರು ಹಸುವಿನಂತಹ ಸ್ವಭಾವದವರು. ಪರೋಪಕಾರದಲ್ಲಿ ಎತ್ತಿದ ಕೈ ಎಂದರೂ ತಪ್ಪಾಗಲಾರದು. ತಾಯಿಯನ್ನು ಕಳೆದುಕೊಂಡಿದ್ದ ಶ್ರೀಧರನಿಗೆ ಜಾನಕಿ ಬಂದ ನಂತರ ತಾಯಿ ದೊರೆತಿದ್ದಳೆಂಬುದರಲ್ಲಿ ಅತಿಶಯೋಕ್ತಿಯಿಲ್ಲ. 


ಶಂಭಟ್ಟರ ಉಳಿದ ಹೆಣ್ಣು ಮಕ್ಕಳ ಪ್ರಸ್ತಾಪ ಸಾಂದರ್ಭಿಕವಾಗಿ ಆಗುತ್ತದೆಯಾದರೂ.. ಮೂರು ಗಂಡು ಮಕ್ಕಳಿಗಿಂತ ಹೆಚ್ಚೇನೂ ಮಹತ್ವ ನೀಡುವುದಿಲ್ಲ.


ಶಂಭಟ್ಟರ ಪತ್ನಿ ಲಕ್ಷ್ಮಿ ತೀರಿಕೊಂಡ ನಂತರ ಪ್ರತಿ ವರ್ಷವೂ ಅವರ ವರ್ಷದ ಕಾರ್ಯಕ್ಕೆ ಸಂಬಂಧಿಕರು ಹಾಗೂ ಮಕ್ಕಳ ಸಂಸಾರವೆಲ್ಲವೂ ಒಟ್ಟಾಗುತ್ತಿತ್ತು. ಕುಮೇರಿ ಕೃಷ್ಣಯ್ಯನವರು ಶಂಭಟ್ಟರ ಆಪ್ತರು. ಮೊಮ್ಮಕ್ಕಳ ಬಾಲ್ಯದ ಆಟಗಳನ್ನು ನೋಡುತ್ತಾ ಸಂತೃಪ್ತಿಯಿಂದ ಇದ್ದವರಿಗೆ ಹೆಚ್ಚೇನೂ ಆಸೆಗಳಿರಲಿಲ್ಲ. ಆದರೆ, ಮನಸ್ಸು ಬೇರೇನನ್ನೋ ಶಂಕಿಸುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಚಿಕ್ಕ-ಪುಟ್ಟ ಘಟನೆಗಳಿಗೆ ಅಂತಹ ಮಹತ್ವ ಕೊಡದಿದ್ದರೂ ಒಡಕು ಕಾಣುತ್ತಿತ್ತು.


ಶಂಭಟ್ಟರ ಪತ್ನಿ ಲಕ್ಷ್ಮಿಯವರ ವರ್ಷದ ಕಾರ್ಯದ ದಿನ ನಿರ್ದಾಕ್ಷಿಣ್ಯವಾಗಿ ಹಿರಿಯ ಮಗ ನಾರಾಯಣ ಹಾಗೂ ಎರಡನೇ ಮಗ ಶಂಕರ ಇಬ್ಬರೂ ಪಾಲು ಕೇಳಿದಾಗ ಇಂದಲ್ಲಾ ನಾಳೆ ಇವರು ಪಾಲಾಗುವವರೇ ಎಂದು ಗೊತ್ತಾಗಿದ್ದರಿಂದ, ಸ್ವಲ್ಪ ದಿನ ತಡೆಯುವವರೇ ಎಂದು ಕೇಳಿ ಮಳೆಗಾಲದ ಬಳಿಕ ಪಾಲಿಗೆ ಒಂದು ದಿನ ನಿಶ್ಚಯಿಸಿ, ಅಲ್ಲಿಯವರೆಗೂ ಹೇಗಾದರೂ ನಿಭಾಯಿಸಿ ಎಂದಿದ್ದರು. ಶ್ರೀಧರ ತನ್ನ ಪರೀಕ್ಷೆಯ ಕಾರಣ ಅಂದು ಅಲ್ಲಿ ಹಾಜರಿರಲಿಲ್ಲ.


ಮುಂದೆ ಗೌರಿ ಹಾಗೂ ರಾಮನ ಪರಿಸ್ಥಿತಿ ಏನು ಎಂಬುದನ್ನು ಅವರು ಮುಂದಾಲೋಚಿಸಿದ್ದರು. ರಾಜಾರಾಮ ಹಾಗೂ ಜಾನಕಿಯ ಮನಸ್ಸು ಎಷ್ಟು ನಿಷ್ಕಲ್ಮಶವೆಂದರೆ ತಮ್ಮೊಡನೆ ಅವರನ್ನು ಸಾಕಲು ತಮ್ಮಲ್ಲಿಯೇ ನಿಶ್ಚಯಿಸಿಕೊಂಡಿದ್ದರು. ಹೇಗೂ ನಾರಾಯಣ, ಶಂಕರರು ಅವರ ಕುರಿತು ಆಲೋಚಿಸಿರಲಾರರು ಎಂದುಕೊಂಡು.. 


ಕೂಡುಮನೆ ಪಾಲಾಗುವ ಗ ನಾರಾಯಣನಿಗೆ ಅವನ ಭಾವ ಈಶ್ವರ ಭಟ್ಟನ ಸಹಾಯ ಸಿಕ್ಕಿತು. ಶಂಕರ ಹಾಗೂ ನಾರಾಯಣರಿಗೆ ಅವರವರು ಬೇಕಾದದ್ದೇ ಸಿಕ್ಕಿತು. ರಾಜಾರಾಮನಿಗೆ ಇಷ್ಟವಿಲ್ಲದಿದ್ದರೂ ತನ್ನ ಪಾಲು ಪಡೆದುಕೊಳ್ಳಲೇ ಬೇಕಿತ್ತು. 


ಶ್ರೀಧರ ತನ್ನ ತಂದೆಯ ಬಳಿ ತನ್ನ ಪಾಲು ಕೇಳಿದ್ದು ನಾರಾಯಣನಿಗೆ ಸಿಟ್ಟು ತರಿಸಿತ್ತು. ತಾತನ ಜೊತೆ ಉಳಿಯುವ ನಿರ್ಧಾರ ತೆಗೆದುಕೊಂಡಾಗ.. ಆ ಆಸ್ತಿಯನ್ನು ಒಳಹಾಕಿಕೊಳ್ಳಲು ಉಳಿಯುತ್ತಿದ್ದಾನೆಂಬ ಚಿಕ್ಕಪ್ಪನ ಅನುಮಾನದ ಕಟು ಮಾತುಗಳನ್ನು ಕೇಳಬೇಕಾಯಿತು. ಕೂಡುಮನೆಯಲ್ಲಿ ಶಂಭಟ್ಟರು, ಶ್ರೀಧರ, ಗೌರಿ ಹಾಗೂ ರಾಮರು ಉಳಿದರು. ಸ್ವಯಾರ್ಜಿತ ಆಸ್ತಿ ಕೈಹಿಡಿಡಿತ್ತು.


ಮುಂದೆ ಶಂಕರ, ನಾರಾಯಣ ಹಾಗೂ ರಾಜಾರಾಮರ ಬದುಕು ಹೇಗೆ ಸಾಗಿತು..?


ಒಡೆದು ಹೋದ ಕೂಡುಮನೆಯಲ್ಲಿ ಹೆಣ್ಣುಮಕ್ಕಳು ಮುಂದೆ ಸಂಬಂಧವಿಟ್ಟುಕೊಂಡಾದರೂ ಹೇಗೆ..?


ಶಂಭಟ್ಟರು ದೀರ್ಘಕಾಲ ಉಳಿಯಲಿಲ್ಲ. ಶ್ರೀಧರನೇ ಯಜಮಾನನಾಗಿ ನಿಂತು ನಿಭಾಯಿಸುತ್ತಿದ್ದ. ಶಂಕರನಿಂದ ಆಗಾಗ ತೊಂದರೆಗಳು ಒದಗಿ ಬಂದಾಗ ಪರಿಹಾರ ಕಂಡುಕೊಂಡಿದ್ದೇಗೆ..? ಹಿತೈಷಿಯಂತೆ ಕುಮೇರಿ ಕೃಷ್ಣಪ್ಪನವರಿದ್ದರು. ಶಂಕರ ಆ ಜಾಗವನ್ನು ಮಾಡಿ ಬೇರೆಡೆಗೆ ಹೋದ ಸಂದರ್ಭದಲ್ಲಿ ಕೆದಿಲಾಯರು ಬಂದರು. ಅವರ ಒಡನಾಟ ಹೇಗಿತ್ತು..?


ಅತ್ತೆ ಹಾಗೂ ರಾಮನನ್ನು ಜೊತೆಗೆ ಅಜ್ಜನ ಕೃಷಿ ಭೂಮಿಯನ್ನು ಕಾಪಾಡುತ್ತಾ ಶ್ರೀಧರ ಬದುಕಿದ ಬದುಕು ನಿಜಕ್ಕೂ ಆದರ್ಶನೀಯ. ರಾಜಾರಾಮನಿಂದ ಸಿಗುತ್ತಿದ್ದ ಬೆಂಬಲವೂ ಇಲ್ಲಿ ನೆನಪಿರಬೇಕಾದಂತದ್ದು. ಶ್ರೀಹರಿಯ ಯಾವ ಕೆಲಸದಿಂದ ನಾರಾಯಣ ಮನಸ್ಸು ಕೆಡಿಸಿಕೊಂಡ..? ನಾರಾಯಣ ಹಾಗೂ ಶ್ರೀಧರನ ಸಂಬಂಧ ಹಲಸಲು ಶಾರದೆ ಎಷ್ಟರಮಟ್ಟಿಗೆ ಕಾರಣವಾಗುತ್ತಾಳೆ..? ಶ್ರೀಧರನ ವಿವಾಹಾನಂತರದ ಬದಲಾವಣೆಗಳು ಹೇಗಿದ್ದವು..? ಶ್ರೀಧರನ ಓದಿನ ಜ್ಞಾನ ಎಷ್ಟು ಸಹಕಾರಿಯಾಯಿತು..?


ಕಾಲ ಎಲ್ಲವನ್ನು ಬದಲಿಸುತ್ತದೆ ಅನ್ನುವ ಮಾತು ಕೆಲವು ಬಾರಿ ನಿಜವಾದರೂ.. ಒಂದು ತಲೆಮಾರಿನ ಬಳಿಕ ಮತ್ತೆ ಮನಸ್ಸುಗಳು ಕೂಡಿಕೊಂಡು ಮನೆ ಒಂದಾಗುತ್ತದೆಯೇ..? ಈ ಕಲ್ಪನೆ ಎಷ್ಟು ರಮ್ಯವಲ್ಲವೇ..!? ಅದು ನಿಜವಾಗಿಯೂ ಆದರೆ..? ಕೂಡುಮನೆ ಇಂತಹ ದಿನಗಳನ್ನು ಕಾಣುವುದರಲ್ಲಿತ್ತು. ಅದರ ಹಾದಿ ಹೇಗಿತ್ತು ಓದಿ ನೋಡಿ.


ಕಾದಂಬರಿಯ ಕೊನೆಯ ಮಾತಂತೂ ಶ್ರೀಧರ ಭವಿಷ್ಯದ ಕುರಿತು ಆಲೋಚಿಸಿರುವುದನ್ನು ಹಾಗೂ ಮನುಷ್ಯರ ಜೊತೆಗೆ ಕಾಲದ ಬದಲಾವಣೆಯನ್ನು ಸೂಚಿಸುತ್ತದೆ. ಇದು ಮತ್ತೊಂದು ಬದಲಾವಣೆಗೆ ನಾಂದಿಯೇ..? ಆ ಮಾತುಗಳೇನು ಓದಿ ನೋಡಿ.


ಆಪ್ತವಾದ ಓದು. ಒಳ್ಳೆಯ ಭರವಸೆಗಳು, ನಡೆಗಳು ಕಾದಂಬರಿಯಾಚೆಗೂ ಮನಸ್ಸಲ್ಲುಳಿಯುತ್ತವೆ. ಕಡಬ, ಪಂಜ, ಪುತ್ತೂರಿನ ಪರಿಸರ ಓದನ್ನು ಇನ್ನಷ್ಟು ಆಪ್ತವಾಗಿಸಿತು.

~ ವಿಭಾ ವಿಶ್ವನಾಥ್

ಗಾಳಿ ಗೂಡು (ಪುಸ್ತಕ ಯಾನ - 461)


ಪುಸ್ತಕದ ಶೀರ್ಷಿಕೆ : ಗಾಳಿ ಗೂಡು 

ಲೇಖಕರು : 'ಶ್ರೀ' ತಲಗೇರಿ

ಪ್ರಕಾಶಕರು : ಸಸಿ ಪ್ರಕಾಶನ 

ಪ್ರಥಮ ಮುದ್ರಣ : 2026

ಪುಟಗಳು : 80

ಬೆಲೆ : 120 ರೂ. 


'ಶ್ರೀ' ತಲಗೇರಿ ಅವರ ಮೊದಲ ಪುಸ್ತಕ ಒಂಟಿ ಟೊಂಗೆಯ ಲಾಂದ್ರ ಎಂಬ ಕವನ ಸಂಕಲನ ಇ-ಪುಸ್ತಕವಾಗಿ ಲಭ್ಯವಿದೆ. ಇದು ಅವರ ಮೊದಲ ಫಿಸಿಕಲ್ ಹೊತ್ತಿಗೆ ಹಾಗೂ ಕಥಾ ಸಂಕಲನ. ಛಾಯಾಚಿತ್ರಗಳೊಂದಿಗೆ ಚೆಂದದ ಸಾಲುಗಳೊಂದಿಗೆ ಸೆಳೆಯುತ್ತಿದ್ದ ಇವರ ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.


ನೆರಳು : ವಿಳಂಬನ ಪ್ರತಿದಿನದ ದಿನಚರಿಯ ಜೊತೆಗೆ ಅವನು ಸೂಕ್ಷ್ಮವಾಗಿ ಗಮನಿಸುತ್ತಲೇ.. ಏಕಾಂತವನ್ನು ಅನುಭವಿಸುವ, ತನ್ನೊಡನೆ ತಾನು ಕಳೆಯುವ ಕ್ಷಣಗಳನ್ನು ತೆರೆದಿಡುತ್ತಾ.. ಅವನ ಬಾಲ್ಯದ ಘಟನೆಯ ಜೊತೆಗೆ, ಈಗ ಅವನ ಕಣ್ಣಿಗೆ ಕಾಣುವ ಆದರೆ ಮಾತುಕತೆಯೇ ಇಲ್ಲದ ನೆರಳುಗಳ ಜೊತೆಗಿನ ಒಡನಾಟ ಇಲ್ಲಿದೆ. ವಿಳಂಬನ ಬದುಕಿನ ಆಸಕ್ತಿದಾಯಕ ಕಥೆಯನ್ನು ಇಲ್ಲಿ ಕಾಣಬಹುದು.


ಸೀತಾಳೆ ಹೂವು : ಅಮ್ಮನಿಗೆ ಸೀತಾಳೆ ಹೂವು ಎಂದರೆ ಭಯಂಕರ ಇಷ್ಟ ಎನ್ನುತ್ತಾ ಮಳೆಗಾಲದ ನೆನಪಿನೊಂದಿಗೆ ಪರ ಸೀತಾಳೆ ಹೂವಿನ ಪರಿಯನ್ನು ಕಟ್ಟಿಕೊಡುತ್ತಾನೆ. ಈ ಸೀತೆ ಹೂವಿನ ಜೊತೆಗೆ ಅಮ್ಮನ ಹಾಗೂ ಅಪ್ಪನ ಜೊತೆಗೆ ಅಪ್ಪನ ಮತ್ತೊಂದು ಸಂಸಾರದ ಚಿತ್ರಣ ತೆರೆದುಕೊಳ್ಳುತ್ತದೆ. ಚಿಕ್ಕಮ್ಮನ ಮಗ ಅಪರ ಅಂತ್ಯಸಂಸ್ಕಾರ ಮಾಡಿದನೋ ಅಥವಾ ಪರನೋ..? ಹೀಗೆ ಸಾಗುವ ಕಥನ ಮುಂದೆ ಪರ ಹಾಗೂ ಅಪರರಲ್ಲಿ ಅಮ್ಮ ಆಸೆಪಡುತ್ತಿದ್ದ ಸೀತಾಳೆ ಹೂವಿಗಾಗಿಯೇ ಜಗಳ ಶುರುವಾಗಿತ್ತು. ಹೀಗೆ ಶುರುವಾದ ಜಗಳ ಮತ್ತೊಂದು ಸತ್ಯವನ್ನು ಓದುಗರಿಗೆ ತೆರೆದಿಡುತ್ತದೆ


ಸತ್ತೆ : ಸಾಹಿತಿಯಾದವರು ಎಲ್ಲದಕ್ಕೂ ಅಭಿಪ್ರಾಯ ಹೇಳಲೇ ಬೇಕಾ..? ಇಂತಹದೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದ ಅಭಿಸಾರ, ಅಷ್ಟೇ ಅಲ್ಲದೆ ಪತ್ರಕರ್ತ ಗೆಳೆಯ ವಾರಂಗ ಯಾವುದಾದರೊಂದು ಸ್ಟೇಟ್ಮೆಂಟ್ ಕೊಡುವಂತೆ ಗೆಳೆಯನಿಗೆ ತಿಳಿ ಹೇಳಿ ಅವನ ಹೇಳಿಕೆಗಾಗಿ ಕಾಯುತ್ತಿದ್ದ. ಆದರೆ, ಅಭಿಸಾರನ ಗಮನವೆಲ್ಲವೂ ಇದ್ದದ್ದು ಬೇರೆಡೆಗೆ. ಸಾಮಾಜಿಕ ತಲ್ಲಣಕ್ಕೆ ಸಾಹಿತಿಗಳು ಸ್ಪಂದಿಸುವ ಬಗೆ ಹೇಗಿರುತ್ತದೆ..? ಅವರ ಬದುಕಿನ ನೈಜ ರೀತಿ ಹೇಗಿರುತ್ತದೆ ಎರಡಕ್ಕೂ ಉತ್ತರ ಇಲ್ಲಿದೆ. ಹಾಗೆಂದು ಮಾನವೀಯತೆಯನ್ನು ಬದಿಗಿಟ್ಟು ಬದುಕುವ ಮನುಷ್ಯನಲ್ಲ ಅಭಿಸಾರ, ಆತನ ಮಿಡಿತ ಯಾವ ಕಡೆಗಿತ್ತು ಓದಿ ನೋಡಿ.


ಮೀನ್ ಗೌರಿಯ ದಂಡಯಾತ್ರೆ : ದಿನಾ ಮೀನು ಮಾರುವ ಗೌರಕ್ಕ ಕಾಣೆಯಾಗಿದ್ದರ ಹಿಂದೆಯೇ ಆಕೆಯ ಕುರಿತಾಗಿ ಹಲವಾರು ಸುದ್ದಿಗಳು ಊರಿನಲ್ಲಿ ಹಬ್ಬಿದ್ದವು. ಒಂದು ವಾರ ಕಳೆದು ಒಂದು ದಿನ ಗೌರಕ್ಕ ಬಂದಾಗ ಮೀನು ಬುಟ್ಟಿ ಇರಲಿಲ್ಲ. ಬದಲಾಗಿ ಇದ್ದದ್ದು ಕೋವಿ, ಗೌಡರ ಮನೆಯ ಕಳೆದು ಹೋಗಿದ್ದ ಕೋವಿ ಗೌರಕ್ಕನ ಕೈಗೆ ಬಂದದ್ದು ಹೇಗೆ..? ಗೌರಕ್ಕನ ದಂಡೆಯಾತ್ರೆಯ ಕಥೆ ಇಲ್ಲಿದೆ. 


ಸ್ತ್ರೀ ವೇಷ : ಸ್ತ್ರೀವೇಷ ಹಾಕುತ್ತಾ ಬಂದಿದ್ದ ಜಟ್ಟನಿಗೆ ಈ ಸಲ ಸ್ತ್ರೀ ವೇಷ ಹಾಕಬೇಡ ಎಂದದ್ದು "ಅದೆಷ್ಟೋ ವರ್ಷಗಳ ನೆರಳೊಂದು ಬಿಟ್ಟು ಹೋದಂತೆ, ಅದೆಷ್ಟೋ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಕನ್ನಡಿಯೊಂದು ಫಟಾರನೆ ಒಡೆದು ಹೋದಂತೆ" ಅನಿಸಿತು. ಮಾತ್ರವಲ್ಲದೇ ಅವನು ಕಳೆದುಕೊಂಡದ್ದು ಏನೆಂದು ಅವನ ಬಾಯಿಯಲ್ಲಿಯೇ ಕೇಳಬೇಕು. ವೇಷದ ಗುಂಗು ಶುರುವಾಗುವ ಮುನ್ನ ಜಟ್ಟ ನ ಚಿತ್ರಣವನ್ನು ಬಿಚ್ಚಿಡುತ್ತಾರೆ. ಹಿರಿ ಸುಗ್ಗಿ ಹಾಗೂ ಕಿರಿ ಸುಗ್ಗಿಯ ಸಂಭ್ರಮಗಳನ್ನು ತೋರುತ್ತಾ ಕಳೆದು ಹೋದ ದೇವರ ಬದಲಿಗೆ ಪೂಜಿಸಲು ಗುಡಿಭಟ್ಟರು ಕೊಟ್ಟ ಸಲಹೆ ಏನು..? ಇದಕ್ಕೂ ಜಟ್ಟನಿಗೂ ಇರುವ ಕೊಂಡಿ ಏನು..?


ಗುಲಾಬಿ ಬೊಂಬಾಯಿ ಮಿಠಾಯಿ : ಗೋಳಿಯ ಮಗ ಬೀರ ವಾಲಿಬಾಲ್ ಆಡಿ ಹೊರಟ ನಂತರ ಗಿಬ್ಬೆಲ್ಲ ಅವನ ಜೊತೆಯಾಗಿದ್ದ. ಬೀರನಿಗಿಂತ 15-16 ವರ್ಷ ದೊಡ್ಡವನಾಗಿದ್ದವನು. ಮಕ್ಕಳ ದೃಷ್ಟಿಯಲ್ಲಿ ಒಂದು ರೀತಿಯ ಹೀರೋ ಎಂದರೂ ತಪ್ಪಾಗಲಾರದು. ಬೀರ ಗಿಬ್ಬೆಲ್ಲನ ಕುರಿತು ಹೇಳಿದ ಒಂದು ಸತ್ಯದಿಂದ ಗೋಳಿ ಮರುದಿನ ಬಂದು ಕೂಗಾಡಿದ ಪರಿಣಾಮ ಎಲ್ಲರೆದುರು ಗಿಬ್ಬೆಲ್ಲನನ್ನು ಯಾವ ರೀತಿಯಲ್ಲಿ ತೋರಿತು..? ಇದರ ಸತ್ಯಾಸತ್ಯತೆ ಏನು? ಗಿಬ್ಬೆಲ್ಲನ ಮನದ ತಳಮಳಗಳ ಜೊತೆಗೆ ವಾಸ್ತವ ಇಲ್ಲಿದೆ.


ಬನ್ನಿ : ಮರವೆಂದರೆ ಆತ್ಮಬಂಧುವಂತೆ ಅವನ ಪಾಲಿಗೆ. ಕಷ್ಟಪಟ್ಟು ಬೆಳೆಸಿದ ಆ ಮರ ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನಾದರೂ ಮಾಡದಿದ್ದರೆ ಅಲ್ಲಿರುತ್ತಿರಲಿಲ್ಲ. ತುರಿಕೆಯ ಮಸಲತ್ತಿನಿಂದ ಆ ಮರ ಕಡಿಯಲ್ಪಡುತ್ತಿತ್ತು. ಅಂಚೆ ಕಛೇರಿಗೂ ಆ ಮರಕ್ಕೂ ಅವಿನಾಭಾವ ನಂಟು ಎಂಬಂತಿದ್ದ ಆ ಮರದ ಜೊತೆಗಿನ ಒಡನಾಟ, ಇವೆಲ್ಲದರ ಜೊತೆಗೆ ಪೂರ್ವಜರು ಮರಗಳಿಗಾಗಿ ಮಾಡಿದ ತ್ಯಾಗ ಎಲ್ಲವನ್ನು ತೆರೆದಿಟ್ಟಿದ್ದಾರೆ. ಶಮಿ ವೃಕ್ಷ ಏನಾಯ್ತು ತಿಳಿಯಲು ಕಥೆ ಓದಬೇಕು.


ಮುರುಕು ಸ್ವಪ್ನ ಬಿಂಬ : ಏಕನಾಥರು ಇಲ್ಲವಾಗುವ ಸಂದರ್ಭದಲ್ಲಿ ಪತ್ನಿ ಗಾರ್ಗಿ ಹಾಗೂ ಕೆಲಸದ ಭ್ರಮರಿಗೆ ಅವರು ಹಾಗೆ ಇಲ್ಲವಾಗುತ್ತಾರೆ ಎನ್ನುವ ಸೂಚನೆಯೂ ಕೊಟ್ಟಿರಲಿಲ್ಲ. ಮಗನ ಕುರಿತ ಅವರ ಕನವರಿಕೆ ಅವರ ಕೊನೆಯ ಕ್ಷಣಗಳು ಗಾರ್ಗಿಯಲ್ಲಿಯೂ ತಲ್ಲಣ ಹುಟ್ಟಿಸಿದ್ದವು. ಆದರೆ ಮಗ..? ಅಪ್ಪನ ಹೆಣ ನೋಡಲು ಬರಲು ಸಿದ್ಧವಿಲ್ಲದ ಅವನನ್ನು ಅಕ್ಕನ ಮಾವ ಕರೆಸಿದರು ಎಂದರೆ ಎಷ್ಟು ನಿಜವಾಗಬಹುದು " ಅಥವಾ ಎಷ್ಟು ಸುಳ್ಳಾಗಬಹುದು..? ಸಿದ್ದಾರ್ಥ ಬಂದಾಗ ಯಾವ ಭಾವದಲ್ಲಿದ್ದ..? ಅಷ್ಟಕ್ಕೂ ಆತನ ನಿರಾಕರಣೆಯ ಹಿಂದಿದ್ದ ಕಾರಣ ಎಷ್ಟು ಸರಿ..? ಸಿದ್ದಾರ್ಥ ಎಂಬ ಹೆಸರೇ ಇಲ್ಲಿ ಸಾಕಷ್ಟು ಹೇಳುತ್ತದೆ. ಸಿದ್ಧಾರ್ಥನನ್ನು ಕಟ್ಟಿ ಹಾಕಲು ಯಾರು ಯಾವೆಲ್ಲ ಪ್ರಯತ್ನಗಳನ್ನು ಮಾಡಿದರು ಹಾಗೂ ಯಾರು ಸಫಲರಾದರು..?


ಒಂದು ಹೆಲ್ಮೆಟ್ಟಿನ ಕತೆ : "ಹತಾಶೆಯಲ್ಲಿ ತೊಳಸು ಹೆಲ್ಮೆಟ್ ತೆಗೆದು ಬಿಸಾಡಿದ, ಅದು ಉರುಳುರುಳಿ ಸೊಣಕಿಗಿಂತಲೂ ಮುಂದೆ ಹೋಗಿ ರಸ್ತೆಗೆ ಬಂದು ಬಿದ್ದಿತ್ತು, ಹೆಲ್ಮೆಟ್ಟಿನ ತುಂಬಾ ಗೀರುಗಳು, ಮುಂದಿನ ಗಾಜು ಒಡೆದಿತ್ತು" ಈ ಸಾಲುಗಳ ಆಚೆಗೆ ಕಥೆಗೆ ಬಹಳಷ್ಟು ವಿಸ್ತಾರವಿದೆ ಹಾಗೂ ಮತ್ತೊಂದು ಆಯಾಮವೇ ಇದೆ. ಸೂಕ್ಷ್ಮವಾಗಿ ತೆರೆದುಕೊಳ್ಳುವ ತೊಳಸು ಹಾಗೂ ಸೊಣಕಿಯರ ಸಂಬಂಧವೂ ಇಲ್ಲಿದೆ.


ನಾಯಿ ಪಾಡು : ಮನುಷ್ಯರು ನಾಯಿ ಪಾಡು ಎಂಬುದನ್ನು ಯಾವೆಲ್ಲ ರೀತಿಯಲ್ಲಿ ಬಳಸುತ್ತಾರಲ್ಲವಾ..?! ಇಲ್ಲಿ ನಾಯಿಯೇ ತನ್ನ ಪಾಡನ್ನು ತೆರೆದಿಡುತ್ತಾ ಹೋಗುತ್ತದೆ. ನಿಯತ್ತಿಗೆ ಮತ್ತೊಂದು ಹೆಸರಾದ ನಾಯಿ ಸಾಕಿದವರ ಕುರಿತಾಗಿ ಬೆಳೆಸಿಕೊಳ್ಳುವ ನಿಷ್ಠೆ, ಅನ್ನ ತಿಂದ ಮನೆಯವರ ಕಡೆಗೆ ಸಹನೆಯಿಂದ ನೋಡುವ ಪರಿ ಅದರ ಪ್ರೀತಿಯ ಆಳವನ್ನು ತೋರುತ್ತದೆ. ಕೊನೆಯ ದಿನಗಳಲ್ಲಿ ಏನೂ ಇಲ್ಲದ ಮನುಷ್ಯನ ಪಾಡು ಇದಕ್ಕಿಂತ ವಿಭಿನ್ನವಾಗಿರಲಾರದೇನೋ ಎನ್ನಿಸಿತು.


ಕಥೆಗಳಲ್ಲಿ ವಿಭಿನ್ನ ಹಾಗೂ ವಿಚಿತ್ರವೆನಿಸುವ ಹೆಸರುಗಳು ಸಿಕ್ಕವು. ವಿಳಂಬ, ತೊಳಸು, ಸುಷುಮ್ನಾ, ಪರ - ಅಪರ, ಸಗಮಾ, ತುರಿಕೆ ಇತ್ಯಾದಿ.

ಈ ಕಥಾ ಸಂಕಲನದಲ್ಲಿ ಒಂದು ಹೆಲ್ಮೆಟ್ಟಿನ ಕಥೆ ಹಾಗೂ ಗುಲಾಬಿ ಬೊಂಬಾಯಿ ಮಿಠಾಯಿಗಳಲ್ಲಿ ಸೂಕ್ಷ್ಮವಾದ ಕಥಾವಸ್ತುವನ್ನು ಸೂಕ್ಷ್ಮವಾಗಿ ತೆರೆದಿಟಿದ್ದಾರೆ. 

ಒಂಟಿತನ, ಅನಾಥ ಭಾವದ ಕಥೆಗಳನ್ನು ಅಷ್ಟೇ ವಿವರವಾಗಿ ಅಂತೆಯೇ ತೀರಾ ನೇರಾನೇರವಲ್ಲದ ರೀತಿಯಲ್ಲಿ ಹೇಳುತ್ತಲೇ ನಮ್ಮೊಳಗೆ ಆ ಭಾವಗಳನ್ನು ಕಟ್ಟಿಕೊಡುತ್ತಾರೆ. ಸ್ತ್ರೀವೇಷ, ನೆರಳು, ಮುರುಕು ಸ್ವಪ್ನ ಬಿಂಬ, ಸೀತಾಳೆ ಹಾವು, ನಾಯಿ ಪಾಡು ಈ ಕಥೆಗಳಲ್ಲಿ ಈ ಭಾವಗಳನ್ನು ಕಾಣಬಹುದು. 

ಸತ್ತೆ, ಬನ್ನಿ, ಮೀನ್ ಗೌರಿಯ ದಂಡಯಾತ್ರೆ ಕಥೆಗಳಲ್ಲಿ ಅಭಿವ್ಯಕ್ತಿಯ ಜೊತೆಗೆ ಸೂಕ್ಷ್ಮ ಸಂದೇಶಗಳನ್ನು ಕಟ್ಟಿಕೊಟ್ಟಿದ್ದಾರೆ.

ಕಾವ್ಯಾತ್ಮಕ ಭಾಷೆಯ ಈ ಕಥೆಗಳು ಸೆಳೆಯುತ್ತವೆ. ಜೊತೆಗೆ ಇಷ್ಟು ಬೇಗ ಮುಗಿದು ಹೋದವಾ ಎನ್ನಿಸುತ್ತವೆ. ಸೊಗಸಾದ ಕತೆಗಳ ಚೆಂದದ ಓದು. 


~ವಿಭಾ ವಿಶ್ವನಾಥ್

ಭಾನುವಾರ, ಜೂನ್ 14, 2026

ರಾಜಿ


"ಮಗುವಿನ ಭವಿಷ್ಯಕ್ಕೆ ಶಿಕ್ಷಣ ಕೊಡಿಸಬೇಕಾದ ನಾನೇ ಅವಳನ್ನು ಮನೆಗೆಲಸಕ್ಕೆ ಕಳುಹಿಸುತ್ತಿದ್ದೇನಲ್ಲ..!" ಎಂದು ಬೇಸರದಿಂದ ನುಡಿದು ಬಾರ್ ಕಡೆಗೆ ಹೊರಟ ಮುನಿಯಪ್ಪ. ಕಾಲೋನಿಯಲ್ಲಿ ಬಡಾಯಿ ಮುನಿಯಪ್ಪನೆಂದೇ ಹೆಸರು ಅವನಿಗೆ. ಬಣ್ಣಬಣ್ಣದ ಮಾತುಗಳಿಂದ ಎಲ್ಲರನ್ನೂ ಮರುಳು ಮಾಡಿ ಹಣ ಕೀಳುತ್ತಿದ್ದ. ಆದರೆ, ಆ ಹಣದಿಂದ ಕುಡಿದು ತೂರಾಡುತ್ತಿದ್ದ.


ಮುನಿಯನ ಮಾತಿಗೆ ಮರುಳಾಗಿ ಮದುವೆಯಾಗಿದ್ದ ಗಿರಿಜ ಆತನ ಬಡಾಯಿಗೆ, ಕುಡಿತಕ್ಕೆ ಬೇಸತ್ತು ತಾನೇ ಮನೆಗೆಲಸ ಮಾಡುತ್ತಾ ದುಡಿದು ಗಂಡ, ಮಗಳನ್ನು ಸಾಕುತ್ತಿದ್ದಳು. ಎಂಟು ವರ್ಷದ ರಾಜಿ ಹುಟ್ಟಿದ ನಂತರ ಮೂರು ಗರ್ಭಪಾತವಾಗಿ ಈಗ ಗರ್ಭ ನಿಂತಿತ್ತು. ಅವಳಿಗೆ ವಂಶೋದ್ಧಾರಕನ ಆಸೆ ಬೆಟ್ಟದಷ್ಟಿತ್ತು. ಈ ಬಾರಿ ಗಂಡು ಮಗುವೇ ಹುಟ್ಟುತ್ತದೆಂದು ಆಸೆಯಿಂದ ಏಳನೇ ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು  ತನ್ನ ಹಾಗೂ ಮಗುವಿನ ಯೋಗಕ್ಷೇಮ ನೋಡಿಕೊಳ್ಳಲು ನಿರ್ಧರಿಸಿದಳು. ನಾಳೆಯಿಂದ ತಾನು ಹೋಗುತ್ತಿದ್ದ ಮನೆಗೆ ಮಗಳು ರಾಜಿಯನ್ನು ಕೆಲಸಕ್ಕೆ ಕಳುಹಿಸುತ್ತೇನೆಂದು ಒಪ್ಪಿಸಿ ಬಂದಿದ್ದಳು. ಚಿಕ್ಕಂದಿನಿಂದಲೂ ಚೂಟಿಯಾಗಿದ್ದ ರಾಜಿ ಅಮ್ಮನ ಜೊತೆಗೆ ಕೆಲಸಕ್ಕೆ ಹೋಗುತ್ತಾ ತಾನೂ ಕೆಲಸ ಕಲಿತಿದ್ದಳು. ಅವಳ ವಯಸ್ಸಿಗಿಂತಲೂ ಉದ್ದ-ದಪ್ಪವಾಗಿದ್ದ ರಾಜಿ ಕೆಲಸ, ಮಾತು ಎರಡರಲ್ಲಿಯೂ ಚೂಟಿ.


ಆದರೆ, ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುವ ಅಮ್ಮನ ಮಾತಿಗೆ ಎದುರಾಡದ ಪರಿಸ್ಥಿತಿ ಇದ್ದುದರಿಂದ ಅರೆ ಮನಸ್ಸಿನಿಂದಲೇ ಒಪ್ಪಿದಳು. ಹೇಗೂ ಈಗ ಬೇಸಿಗೆ ರಜೆ. ಶಾಲೆ ಶುರುವಾಗುವಷ್ಟರಲ್ಲಿ ಏನೋ ಒಂದು ದಾರಿ ಸಿಕ್ಕರೆ ಸಾಕು ಎಂದುಕೊಂಡಿದ್ದವಳ ಶಾಲೆ ಶುರುವಾಗಿ ಒಂದು ತಿಂಗಳಾಗಿತ್ತು. ಅಷ್ಟರಲ್ಲಿ ಅವಳ ಮೆಚ್ಚಿನ ಸುಗಂಧಿ ಟೀಚರ್ ಅವಳನ್ನು ಶಾಲೆಗೆ ಕಳುಹಿಸಲು ಕೇಳಿಕೊಂಡು ಮೂರು ಬಾರಿ ಬಂದು ಹೋಗಿದ್ದರು. 


"ಇಂತಹ ಕುಡುಕ ಗಂಡನನ್ನು ನೆಚ್ಚಿ ನಾನೇನೂ ಮಾಡುವ ಹಾಗಿಲ್ಲ. ಹಾಗೆಂದು, ಮಗಳ ಮದುವೆಗೆ ಒಂದು ದಾರಿ ಮಾಡಬೇಕಾದರೆ ಅವಳನ್ನು ಶಾಲೆಗೆ ಕಳುಹಿಸುವ ಬದಲು ಮನೆಗೆಲಸಕ್ಕೆ ಕಳುಹಿಸಬೇಕು. ಇಷ್ಟರವರೆಗೆ ಓದಿದ್ದು ಸಾಕು. ಟೀಚರಮ್ಮ ಏನೂ ಹಣ ಕೊಡುತ್ತಾಳಾ..?" ಎಂದು ಗಿರಿಜ ತನ್ನಷ್ಟಕ್ಕೆ ತಾನೇ ಸಮಜಾಯಿಷಿ ಕೊಟ್ಟುಕೊಂಡು ಸಮಾಧಾನ ಮಾಡಿಕೊಂಡಳು. 


ಮೂರು ವರ್ಷಗಳಲ್ಲಿ ರಾಜಿಯ ಬದುಕಲ್ಲಿ ಸಾಕಷ್ಟು ಬದಲಾವಣೆಗಳಾದವು. ಗಿರಿಜ ಗಂಡು ಮಗುವನ್ನು ಹೆತ್ತಳಾದರೂ.. ಅದು ಬುದ್ಧಿಮಾಂದ್ಯ ಮಗು. ಮುನಿಯಪ್ಪ ಅಪಘಾತದಲ್ಲಿ ತನ್ನ ಕಾಲನ್ನು ಕಳೆದುಕೊಂಡಿದ್ದ. ಈಗ ರಾಜಿ ಮನೆ ಮನೆಗೂ ಹೋಗಿ ದುಡಿಯುತ್ತಿದ್ದಾಳಾದರೂ ಅದು ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ರಾಜಿಯನ್ನು ಒಂದು ಮನೆಯಲ್ಲಿ ಕೆಲಸಕ್ಕೆ ಬಿಡಲು ತೀರ್ಮಾನಿಸಿದರು ಗಿರಿಜ ಮತ್ತು ಮುನಿಯಪ್ಪ. ಇಷ್ಟು ದಿನ ಅಪ್ಪ-ಅಮ್ಮನಿಗಾಗಿ ಅವರ ಮುಖ ನೋಡಿಕೊಂಡು ಇದ್ದ ರಾಜಿಗೆ ಈಗ ಆ ಅವಕಾಶವು ತಪ್ಪಿ ಹೋಗುತ್ತಿತ್ತು. ಅಲ್ಲೇ ಇದ್ದ ಗೆಳತಿಯಿಂದ ಪಡೆದು ಓದುತ್ತಿದ್ದ ಪುಸ್ತಕ ಹಾಗೂ ಕಲಿಕೆಯ ಅವಕಾಶವೂ ತಪ್ಪಿ ಹೋಗುತ್ತಿತ್ತು. 


ರಾಜಿ ದೊಡ್ಡ ಮನೆಗೆ ಕೆಲಸಕ್ಕೆ ಹೋದಳಾದರೂ.. ದಿನವಿಡೀ ಕತ್ತೆಯ ದುಡಿತ ಇದ್ದೇ ಇರುತ್ತಿತ್ತು. ಕನಿಕರ, ಪ್ರೀತಿ ಎಂಬುದು ಅವಳ ಪಾಲಿಗೆ ಕೈಗೆಟುಕದು. ಇಂತಹ ಸಂದರ್ಭದಲ್ಲಿ ಸುಮ್ಮನೆ ಅತ್ತು ತನ್ನ ನೋವು ಮರೆಯುವುದರ ಜೊತೆಗೆ ಪುಟ್ಟ ಪುಸ್ತಕದಲ್ಲಿ ತನ್ನೆಲ್ಲ ಭಾವನೆಗಳನ್ನು ತೆರೆದಿಡುತ್ತಿದ್ದಳು. 


ರಾಜಿಯ ಬದುಕಲ್ಲಿಯೂ ಬದಲಾವಣೆ ಬರಲಿತ್ತು. ದೊಡ್ಡ ಮನೆಯ ಮಗಳು ಕೃಪಾ ವಿದೇಶದಿಂದ ಬಂದವಳು ಇಲ್ಲಿ ಎನ್.ಜಿ.ಓ ಸ್ಥಾಪಿಸುವ ತಯಾರಿಯಲ್ಲಿದ್ದಳು. ಅವಳ ಸಂದರ್ಶನಕ್ಕೆಂದು ಬಂದಿದ್ದ ಟಿ.ವಿ ನಿರೂಪಕಿಯೊಬ್ಬಳಿಗೆ ರಾಜಿ ಕಣ್ಣಿಗೆ ಬಿದ್ದಿದ್ದಳು. ಅನಾಥಾಶ್ರಮ ಹಾಗೂ ವೃದ್ಧಾಶ್ರಮವನ್ನು ನಡೆಸಿಕೊಂಡು ಹೋಗುವ ಮನೆಯಲ್ಲಿಯೇ ಪುಟ್ಟ ಹುಡುಗಿ ಒಬ್ಬಳು ಜೀತದಾಳಿನಂತೆ ದುಡಿಯುವುದು ಸಹನೀಯವಾಗಿರಲಿಲ್ಲ ಅದು ನ್ಯಾಯವೂ ಆಗಿರಲಿಲ್ಲ. ಇದನ್ನು ನೇರವಾಗಿ ಪ್ರಶ್ನಿಸಿ, ಸಂದರ್ಶನದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ಬೈಸಿಕೊಳ್ಳುವಂತೆ ಮಾಡಬಹುದಾಗಿದ್ದರೂ ಹಾಗೆ ಮಾಡದೆ, ಸಂದರ್ಶನ ಮುಗಿದ ನಂತರ ಈ ಕುರಿತು ಪ್ರಸ್ತಾಪಿಸಿದಳು. 


"ಪ್ರಶ್ನಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳುವುದಕ್ಕಿಂತಲೂ ಅವರಿಗೆ ತಪ್ಪಿನ ಅರಿವಾಗಿಸಿ, ಕಷ್ಟಪಡುತ್ತಿರುವವರಿಗೆ ಮುಕ್ತಿ ಕೊಡಿಸುವುದೇ ಉದ್ದೇಶವಾಗಿರುತ್ತದೆ. ಅಲ್ಲವೇ..? ಅದರ ಹಾದಿ ಎಂದಿಗೂ ಉಪಕಾರ ಮಾಡುವುದಾಗಿರಬೇಕೇ ಹೊರತು ಯಾರಿಗೂ ಅಪಕಾರ ಮಾಡುವುದಲ್ಲ."

  


ಎರಡು ದಿನದ ಹಿಂದಷ್ಟೇ ಬಂದಿದ್ದ ಕೃಪಾಳಿಗೆ ನಿಜಕ್ಕೂ ತನ್ನ ಮನೆಯಲ್ಲಿ ದುಡಿಯುತ್ತಿರುವ ಹುಡುಗಿಯ ಪರಿವೆ ಇರಲಿಲ್ಲ. ತನ್ನ ಮನೆಯಲ್ಲಿಯೇ ನಡೆಯುತ್ತಿದ್ದ ಈ ಶೋಷಣೆಗೆ ಅಂತ್ಯ ಹಾಡಬೇಕೆಂದು ರಾಜಿಯನ್ನು ಮತ್ತೆ ಅವಳ ಮನೆಗೆ ಕಳುಹಿಸುವ ನಿರ್ಧಾರ ಮಾಡಿದರೂ ರಾಜಿಯೇ ಹೋಗಲು ಒಪ್ಪಲಿಲ್ಲ. ಎಷ್ಟೋ ಅನಾಥ ಮಕ್ಕಳು ಹಾಗೂ ವೃದ್ಧರಿಗೆ ಆಶ್ರಯ ಕೊಡುವ ಅವಳು ರಾಜಿಯ ಬದುಕಿನ ಕುರಿತು ತಿಳಿದು ಅವಳಿಗೆ ಶಿಕ್ಷಣ ಹಾಗೂ ವಸತಿಯ ವ್ಯವಸ್ಥೆ ಮಾಡಿಕೊಟ್ಟು, ಅಕ್ಕನ ಸ್ಥಾನದಲ್ಲಿ ನಿಂತು ಪೋಷಿಸಿದಳು. ಅತ್ತ ಅವಳ ಸಂಬಳದ ಹಣ ಕಳುಹಿಸುವುದಕ್ಕೆ ಅಡ್ಡಿ ಮಾಡದೆ ಅಲ್ಲಿಗೂ ಸಹಾಯ ಮಾಡಿದಳು. 


ರಾಜಿ ತನ್ನ ವಿದ್ಯಾಭ್ಯಾಸದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದೆ ಚೆನ್ನಾಗಿ ಕಲಿತಳು. ಶಾಲೆಗೆ ಹೋಗದಿದ್ದರೂ ಅಭ್ಯಾಸವನ್ನಂತೂ ಅವಳು ಕೈಬಿಟ್ಟಿರಲಿಲ್ಲ. ಬಾಲ ಕಾರ್ಮಿಕಳಾಗಿ ಇಡೀ ಜೀವನವನ್ನು ಕೆಲಸದವಳಾಗಿ ಕಳೆಯಬೇಕಾಗಿದ್ದವಳಿಗೆ ಯಾರದ್ದೋ ಧೈರ್ಯ ಹಾಗೂ ಮತ್ತಾರದ್ದೋ ಆಶ್ರಯ ಹೊಸ ಬದುಕನ್ನೇ ತೆರೆದಿಟ್ಟಿತ್ತು. ಈಗ ರಾಜಿ ಯಾರೊಡನೆಯೂ, ಯಾವುದರೊಡನೆಯೂ ರಾಜಿ ಮಾಡಿಕೊಳ್ಳದೆ ವಿದ್ಯಾರ್ಥಿ ವೇತನದಿಂದ ತನ್ನ ಓದು ಹಾಗೂ ಬದುಕನ್ನು ಕಂಡುಕೊಳ್ಳುತ್ತಿದ್ದಾಳೆ. ಇಷ್ಟೇ ಅಲ್ಲದೆ, ಬಾಲಕಾರ್ಮಿಕರ ನಿರ್ಮೂಲನೆಗೆ ಶ್ರಮಿಸುವ ತಂಡದಲ್ಲಿ ತಾನು ಒಬ್ಬಳಾಗಿದ್ದಾಳೆ. 


~ವಿಭಾ ವಿಶ್ವನಾಥ್

ಸಂಗಮ (ಬೆಳಕಿಂಡಿಯ ಕತೆಗಳು - 36)


ಅಜ್ಜಿಯ ಹಳೆಯ ಅಚ್ಚ ಬಿಳುಪಿನ ರೇಷ್ಮೆ ಸೀರೆಯನ್ನು ಕೊಟ್ಟು ಹೊಸತು ತರುತ್ತೇನೆ ಎಂದು ಹೊರಟ ಅಮ್ಮನನ್ನು ತಡೆದು.. ಆ ಖಾಲಿ ಒಡಲಿನ ರೇಷ್ಮೆ ಸೀರೆಗೆ ಹೊಂದುವಂತೆ ನವಿಲನ್ನು ಅಚ್ಚು ಹಾಕಿಸಿ ತಂದು ಅಮ್ಮನ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಳು ಮಗಳು. ಅಮ್ಮನೇ ಅಪ್ಪಿದಂತಿದ್ದ ಆ ಪುಳಕವನ್ನು ಅನುಭವಿಸಿದವರಿಗೆ ಅದು ಅಂದಿನ ಬೆಸ್ಟ್ ಗಿಫ್ಟ್ ಆಗಿತ್ತು


ಸಂಪ್ರದಾಯ, ಅಕ್ಕರೆ ಜೊತೆಗೆ ಹೊಸತನದ ಸಂಗಮ ಎಲ್ಲರ ಮನಸೆಳೆದಿತ್ತು.

~ವಿಭಾ ವಿಶ್ವನಾಥ್ 


ಒಲವ ಕುಡಿನೋಟ (ಬೆಳಕಿಂಡಿಯ ಕತೆಗಳು - 35)


"ಆ ಕುಡಿನೋಟಕ್ಕೆ ತಾನೇ ನಾನು ಮನಸೋತು ಅವಳನ್ನು ಪ್ರೀತಿಸಿದ್ದು. ಆದರೆ, ಈಗ ಅವಳು ಅಪಘಾತದಲ್ಲಿ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ. ನಾನು ಅವಳ ಕಳ್ಳ ನೋಟದ, ತುಂಟತನದ ನಗುವನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ.. ಆದರೆ, ಅದೊಂದೇ ಕಾರಣಕ್ಕೆ ಅವಳನ್ನು ನನ್ನಿಂದ ದೂರ ಮಾಡಲಾಗುವುದೇ..?! 


ಕುಡಿ ನೋಟದಿಂದ ಹುಟ್ಟಿದ ಪ್ರೀತಿ ಚಿಗುರಿ, ಹೆಮ್ಮರವಾಗಿದೆ. ಎಷ್ಟೇ ನ್ಯೂನ್ಯತೆ ಇದ್ದರೂ ಅದೆಲ್ಲವನ್ನೂ ಕಡೆಗಣಿಸುವಷ್ಟು ನನ್ನ ಪ್ರೀತಿಯಂತೂ ಶಕ್ತವಾಗಿದೆ. ಅವಳು ಕುಡಿ ನೋಟ ಬೀರದಿದ್ದರೂ.. ನಾನು ಅವಳನ್ನು ಹಾಗೆಯೇ ಪ್ರೀತಿಸಬಹುದಲ್ಲ..! ಇನ್ನು ಅವಳನ್ನು ಮನದಣಿಯುವಷ್ಟು ನೋಟದಲ್ಲಿಯೇ ಮುದ್ದಿಸಬಹುದು."


 ಹೀಗೆಂದುಕೊಂಡು ಅವಳನ್ನು ಮದುವೆಯಾಗಿ ಹತ್ತು ವರ್ಷವೇ ಕಳೆಯಿತು. ಇಂದು ಯಾರೋ ದೃಷ್ಟಿದಾನಕ್ಕೆ ನೋಂದಾಯಿಸಿಕೊಂಡಿದ್ದ ದಾನಿಗಳು ತೀರಿ ಹೋಗಿ ನಮ್ಮ ಸರದಿ ಬಂದು ಎಲ್ಲವೂ ಹೊಂದಿಕೆಯಾಗಿ ಅವಳಿಗೆ ದೃಷ್ಟಿ ಬರುವ ಹೊತ್ತು.


ಮತ್ತೆ ಕಣ್ ಕಣ್ಣ ಸಲಿಗೆ ಎಂದು ಮೊದಲಿನಿಂದ ಪ್ರೀತಿಸುವ ಸಮಯ ಹೆಚ್ಚು ದೂರವಿಲ್ಲ ಎಂದುಕೊಂಡು ಅವಳ ಕುಡಿನೋಟಕ್ಕೆ ಕಾಯುತ್ತಿದ್ದಾನೆ.


~ವಿಭಾ ವಿಶ್ವನಾಥ್

ಜಾಗೃತಿ (ಬೆಳಕಿಂಡಿಯ ಕತೆಗಳು - 34)

 


ಪರಿಸರ ರಕ್ಷಣೆಯ ಜಾಗೃತಿಗಾಗಿ ಜಿಲ್ಲೆಯಾದ್ಯಂತ ಜಾಥಾ ಹೊರಟಿದ್ದೇನೆ ಎಂದು ಘೋಷಿಸುತ್ತಿದ್ದ ನಾಯಕರ ಹಿಂಬಾಲಕರು ಧ್ವನಿವರ್ಧಕದ ಮೂಲಕ ಶಬ್ಧ ಮಾಲಿನ್ಯವನ್ನು, ಕರಪತ್ರಗಳನ್ನು ಹಂಚಲು ಹೋಗಿ ಕಸವನ್ನು, ಪ್ರಚಾರಕ್ಕಾಗಿ ಹೆಚ್ಚಿನ ವಾಹನಗಳನ್ನು ಬಳಸಿ ವಾಯು ಮಾಲಿನ್ಯವನ್ನು, ನಾಯಕನ ಜೊತೆ ಹೊರಟವರಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಲು ಹೋಗಿ ಪ್ಲಾಸ್ಟಿಕ್ ಕಸವನ್ನು ಹೆಚ್ಚು ಮಾಡುತ್ತಲೇ ಸಾಗುತ್ತಿದ್ದರು. ತಮ್ಮ ಪ್ರಚಾರದ ಭರಾಟೆಯಲ್ಲಿ ಸೆಲ್ಪಿ, ವಿಡಿಯೋಗೆ, ಭಾಷಣಕ್ಕೆ ಸೀಮಿತವಾದ ಜಾಥಾ ಕುರಿತು, ಅವರು ಮೂಡಿಸಿದ ಜಾಗೃತಿ ಕುರಿತು ಎಲ್ಲೆಡೆಯೂ ಚರ್ಚೆಯಾಗುತ್ತಿತ್ತು.

ಇದಾವುದೂ ಅರಿವಿಲ್ಲದ ಹಳ್ಳಿಯ ರೈತನೊಬ್ಬ ರಸ್ತೆ ಬದಿಯಲ್ಲಿ ಗಿಡ ನೆಟ್ಟು, ನೀರುಣಿಸಿ, ಕಾಲ್ನಡಿಗೆ, ಸೈಕಲ್ ಸವಾರಿಯ ಮೂಲಕ ಪರಿಸರವನ್ನು ರಕ್ಷಿಸುವ ಮೌನ ಕಾಯಕ ಮಾಡುತ್ತಿದ್ದ.

~ವಿಭಾ ವಿಶ್ವನಾಥ್ 

ಸಮಾಧಾನದ ಪರಿಹಾರ (ಬೆಳಕಿಂಡಿಯ ಕತೆಗಳು - 33)


ಮಗಳ ಮಾರ್ಕ್ಸ್ ಕಾರ್ಡ್ ನೋಡಿ, ಕಡಿಮೆ ಅಂಕ ತೆಗೆದಿದ್ದಕ್ಕೆ ಇಬ್ಬರಿಗೂ ಅಸಮಾಧಾನವಾದರೂ ಮಗಳನ್ನು ಬೈಯ್ಯಲಿಲ್ಲ. ಎಂದೂ ಅಷ್ಟು ಕಡಿಮೆ ಅಂಕ ತೆಗೆಯದವಳ ಸಮಸ್ಯೆಯ ಮೂಲ ಹುಡುಕಲು ಅವಳನ್ನು ಪ್ರಶ್ನಿಸಿದರು. ಕಾಲೇಜಿನ ಪಾಠ, ಅರ್ಥೈಸಿಕೊಳ್ಳುವಿಕೆ ಯಾವುದರಲ್ಲಿಯೂ ಸಮಸ್ಯೆ ಇರಲಿಲ್ಲ. ಆದರೆ, ಪರೀಕ್ಷೆಯ ಸಮಯದಲ್ಲಿ ಮಾತ್ರ ಕಾಡುವ ತಲೆನೋವು ಅವಳ ಏಕಾಗ್ರತೆಯನ್ನು ಕುಂದಿಸಿತ್ತು.


ಮನೋವೈದ್ಯರ ಬಳಿ ಸಮಾಲೋಚನೆ ನಡೆಸಿ ಮಗಳ ಪರೀಕ್ಷಾ ಭಯಕ್ಕೆ ಪರಿಹಾರ ದೊರಕಿಸಿದ ನಂತರ ಅವಳ ಅಂಕಗಳು ಗಮನೀಯವಾಗಿ ವೃದ್ಧಿಸಿದ್ದವು.

ಕಡಿಮೆ ಅಂಕ ಬಂದರೂ ಬೈಯ್ಯದೆ, ಅಂಕ ಗಳಿಕೆಯೇ ಮುಖ್ಯ ಎನ್ನದೆ, ಕ್ಷಣಿಕ ಅಸಮಾಧಾನವಾದರೂ ತಾಳ್ಮೆಯಿಂದ ಸಮಸ್ಯೆಗೆ ಸಮಾಧಾನವಾಗಿ ಪರಿಹಾರ ಕಂಡುಕೊಟ್ಟ ಪೋಷಕರೆಂದರೆ ಅವಳಿಗೆ ಹೆಮ್ಮೆ.

~ವಿಭಾ ವಿಶ್ವನಾಥ್ 


ಶನಿವಾರ, ಜೂನ್ 13, 2026

ಒಂದೇ ಒಂದು ಕಥೆ


"ಈಗಾಗಲೇ ಸಮಯ 10 ಗಂಟೆ. ಮಲಗಲು ನಿನಗೆ ಇನ್ನೆಷ್ಟು ಹೊತ್ತು ಬೇಕು ಕಂದಾ..?" ಎಂದ ಅಪ್ಪನಿಗೆ "ಒಂದೇ ಒಂದು ಲಾಸ್ಟ್ ಕಥೆ ಹೇಳಪ್ಪಾ.." ಎಂದು ಪೀಡಿಸುತ್ತಲೇ ಇದ್ದ ಮಗುವಿಗೆ ಕತೆ ಹೇಳುತ್ತಲೇ ನಿದ್ರೆ ಹೋದ ಅಪ್ಪ, ಇನ್ನೂ ಎಚ್ಚರವಿರುವ ಮಗು ಇಬ್ಬರನ್ನೂ ನೋಡಿ ಸುಸ್ತಾಗಿದ್ದಾಳೆ ಅಮ್ಮ.

~ವಿಭಾ ವಿಶ್ವನಾಥ್ 


ಸ್ಥಾಯಿ (ಬೆಳಕಿಂಡಿಯ ಕತೆಗಳು - 32)

ಸಾಗರದ ದಡದಲ್ಲಿ ನಿಂತು ತನ್ನ ಪುಟ್ಟ ಬೆರಳುಗಳಿಂದ ತನ್ನ ಹೆಸರು ಬರೆಯುತ್ತಿದ್ದ ಅವಳ ಹೆಸರು ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗುತ್ತಿತ್ತು. ಎಷ್ಟೇ ಪ್ರಯತ್ನಿಸಿದರೂ ಸಫಲಳಾಗದೆ ಅಳಲು ಶುರುವಿಟ್ಟಳು ಎನ್ನುವಾಗ ಅಪ್ಪ ಅಪ್ಪಿ ಸಮಾಧಾನಿಸಿದ್ದರು. ತೀರಾ ಚಿಕ್ಕವಳಲ್ಲವಾದರೂ ತನ್ನ ಛಲ ಕೈಗೂಡದ ದುಃಖ ಅವಳಿಗೆ. 

"ಮರಳ ಮೇಲಿನ ಹೆಸರು ಶಾಶ್ವತವಲ್ಲ. ಸಾಗರ ಎಲ್ಲವನ್ನೂ ತನ್ನೊಡಲಿಗೆ ಸೇರಿಸಿಕೊಳ್ಳುವಂತೆ ನೀನು ಒಳ್ಳೆಯ ಗುಣಗಳನ್ನು ನಿನ್ನೊಳಗೆ ಸೇರಿಸಿಕೊಂಡು ಯಾರೂ ಅಳಿಸಲಾಗದಂತೆ ನಿನ್ನೆಸರನ್ನು ಸ್ಥಾಪಿಸಿಕೊಂಡು ಸ್ಥಾಯಿಯಾಗು" ಎಂಬ ಬುದ್ಧಿವಾದ ಅವಳನ್ನು ಇಂದು ಸಾಗರದ ಸ್ವಿಮ್ಮಿಂಗ್ ನಲ್ಲಿ ಗಿನ್ನಿಸ್ ದಾಖಲೆಯಾಗಿಸಿತ್ತು.

~ವಿಭಾ ವಿಶ್ವನಾಥ್ 

ಸುದ್ದಿ ಕಾಲ

 


ಸುದ್ದಿ ಮಾಡುವ ಹಪಾಹಪಿಗೆ

ಸುಳ್ಳು ಸುದ್ದಿಯ ಸತ್ಯದಂತೆ ಬಿಂಬಿಸಿ

ನೈಜತೆಯ ಮರೆಮಾಚಿ ನಡೆವಾಗ

ಗಾಳಿಸುದ್ದಿ ಹರಡುತ್ತಿತ್ತು

ಚಾರಿತ್ರ್ಯ ಹರಣವಾಗುತ್ತಿತ್ತು

ಸುಳ್ಳು ಮೆರವಣಿಗೆ ಬರುತಿತ್ತು

ಅರ್ಧ ಸತ್ಯವಷ್ಟೇ ತೆರೆದಿತ್ತು

ನಾಳೆಗೆ ನೇಪಥ್ಯಕ್ಕೆ ಸರಿದಿತ್ತು


ಸುದ್ದಿ ಮಾಗುವ ಕಾಲದಲ್ಲಿ

ಸುದ್ದಿ ಮಾಡಿದವರೇ ಮರೆಯಾದರು

ಶುದ್ಧಿಯಾಗಬೇಕಿದೆ ಅಂತರಂಗ

ಸತ್ಯ ಮುನ್ನೆಲೆಗೆ ಬರಬೇಕಿದೆ

ಸುಳ್ಳು ಬೆತ್ತಲಾಗಬೇಕಿದೆ

ಗಾಳಿಸುದ್ದಿ ನಿಲ್ಲಬೇಕಿದೆ

ಬ್ರೇಕಿಂಗ್ ಗೆ ಬ್ರೇಕ್ ಹಾಕಬೇಕಿದೆ

ನವ ಯುಗ ಬರಬೇಕಿದೆ


~ವಿಭಾ ವಿಶ್ವನಾಥ್