ಭಾನುವಾರ, ಜೂನ್ 21, 2026

ಪುಸ್ತಕ ಪಯಣ (ಬೆಳಕಿಂಡಿಯ ಕತೆಗಳು - 42)

 


ಸದಾ ಒಂದಿಲ್ಲೊಂದು ಕೆಲಸ ಮಾಡುತ್ತಾ ಬ್ಯುಸಿಯಾಗಿ ತಿರುಗುತ್ತಿದ್ದ ಅವಳಿಗೆ ಕಾಲಿನ ಫ್ಯಾಕ್ಚರ್ ಎಲ್ಲವನ್ನೂ ಬಿಟ್ಟು ೩ ತಿಂಗಳು ಮನೆಯಲ್ಲಿಯೇ ಕೂರುವ ಸಂಧರ್ಭ ಒದಗಿಸಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದ್ದವಳು ಮನೆಗಷ್ಟೇ ಸೀಮಿತವಾದಾಗ ಖಿನ್ನತೆಗೆ ಜಾರುವಂತಾಗಿತ್ತು. ಆದರೆ, ಅಮ್ಮ ಕೈಗಿತ್ತ ಪ್ರವಾಸ ಕಥನ ಅವಳ ಪುಸ್ತಕ ಪಯಣವನ್ನು ಶುರು ಮಾಡಿಸುತ್ತಷ್ಟೇ ಅಲ್ಲದೆ ಓದಿನ ಪಯಣಕ್ಕೆ ಮುನ್ನುಡಿಯಾಯಿತು. ಮುಂದೆ ಟ್ರಾವೆಲಿಂಗ್ ನಲ್ಲಿಯೂ ಮೊಬೈಲ್ ಬದಲಿಗೆ ಪುಸ್ತಕ ಹಿಡಿಯುವ ವಿಭಿನ್ನ ಆಲೋಚನೆಯಲ್ಲಿದ್ದಾಳೆ.

~ವಿಭಾ ವಿಶ್ವನಾಥ್ 

ಬದಲಾಯಿತೇ ನಿಯತ್ತು (ಬೆಳಕಿಂಡಿಯ ಕತೆಗಳು - 41)


ಪ್ರತಿದಿನವೂ ಬೀದಿ ನಾಯಿಯೊಂದಕ್ಕೆ ತಪ್ಪದೇ ಅನ್ನ ಹಾಕುತ್ತಿದ್ದಳು ಅವಳು. ಹಾಗೆಂದು, ನಾಯಿಯೊಂದನ್ನು ತಂದು ಸಾಕಿ ಸಲಹುವ ಆಸೆಯಿದ್ದರೂ ಅದು ಅವಳಿಗೆ ಸಾಧ್ಯವಿರಲಿಲ್ಲ. ದೂರದೂರಿನಿಂದ ಕೆಲಸಕ್ಕಾಗಿಯೇ ಬಂದು ಇಲ್ಲಿ ಉಳಿದಿದ್ದಳು. ಆ ದೊಡ್ಡ ಜವಾಬ್ದಾರಿಯ ಜೊತೆಗೆ ಇದನ್ನೂ ಅಂಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೆಂದೇ ಪ್ರೀತಿಯಿಂದ ನಾಯಿಗೆ ಊಟ ಹಾಕುತ್ತಿದ್ದಳು. ರಾತ್ರಿ ಪಾಳಿಯ ಕೆಲಸ ಮುಗಿಸಿ ಬರುವಾಗ ಪಕ್ಕದ ಮನೆಯ ಪರಿಚಿತನೇ ಆಗಿದ್ದ ಅಂಕಲ್ ಅವಳ ಮೇಲೆರಗಲು ಕಾದಿದ್ದ. ಎಲ್ಲಿಂದಲೋ ಬಂದ ನಾಯಿ ಅವಳನ್ನು ಅಪಾಯದಿಂದ ಪಾರು ಮಾಡಿತ್ತು. 

ಮನುಷ್ಯನ ನಿಯತ್ತು ಯಾವತ್ತಾದರೂ ಬದಲಾಗಬಹುದು. ಆದರೆ, ಪ್ರಾಣಿಯದ್ದಲ್ಲ ಎಂಬುದು ಅವಳಿಗೆ ಮನದಟ್ಟಾಗಿತ್ತು. ಅದಾದ ನಂತರ ಆ ನಾಯಿಯ ಜೊತೆಗೆ ಮತ್ತೊಂದಿಷ್ಟು ಮೂಕ ಪ್ರಾಣಿಗಳಿಗೆ ಅನ್ನ ಹಾಕಲು ಶುರುವಿಟ್ಟಳು ಅವಳು.


~ವಿಭಾ ವಿಶ್ವನಾಥ್

ಕಡಲ ಸಾಂತ್ವನ (ಬೆಳಕಿಂಡಿಯ ಕತೆಗಳು - 40)

 


ಕಡಲ ತೀರದಲ್ಲಿ ಬಂದು ಅವಳೊಡನೆ ಕುಳಿತಾಗಲೆಲ್ಲಾ ಅವಳು, ಹೇಳದ ದುಃಖಕ್ಕೆ ಕಡಲು ಸಾಂತ್ವನ ನೀಡುತ್ತದೆಂದು ಹೇಳುತ್ತಿದ್ದಳು. ನನಗೆ ಕಡಲು ಆಗೆಲ್ಲಾ ಗೋಳಾಡುವಂತೆ ಭಾಸವಾಗುತ್ತಿತ್ತು. ಅವಳ ಸಖ್ಯ, ಸಾಂಗತ್ಯದೆದುರು ಉಳಿದೆಲ್ಲವೂ ಸಪ್ಪೆಯಾಗಿತ್ತು. 

ಈಗ ಅವಳಿಲ್ಲ. ಅವಳಿಲ್ಲದ ಖಾಲಿತನಕ್ಕೆ ಕಡಲಿನದ್ದೇ ಸಾಂತ್ವನ. ಗಾಳಿಯ ಮೊರೆತದಲ್ಲಿ ಅವಳ ದನಿ, ಕಾಲಿಗೆ ಮುತ್ತಿಕ್ಕುವ ಅಲೆಗಳಲ್ಲಿ ಅವಳದ್ದೇ ಸ್ಪರ್ಶದ ಛಾಯೆ. ಸಾಂತ್ವನಿಸುವ ಕಡಲಿಗೆ ನಾವು ಕಿವಿಯಾಗಬೇಕಿದೆ ಅಷ್ಟೇ..

~ವಿಭಾ ವಿಶ್ವನಾಥ್ 

ಅವಳ ಪ್ರಪಂಚ (ಬೆಳಕಿಂಡಿಯ ಕತೆಗಳು - 39)


 "ಇತ್ತೀಚೆಗೆ ನಿನ್ನ ಪ್ರಪಂಚವೇ ಬದಲಾಗಿದೆ. ಮಗಳೇ ನಿನ್ನ ಪ್ರಪಂಚವಾಗಿರುವ ಹಾಗಿದೆ" ಕಿಚಾಯಿಸುವ ಧ್ವನಿಯಲ್ಲಿ ಅವರೆಂದರು. 

"ನಿದ್ದೆಗಣ್ಣಿನಲ್ಲಿಯೂ ತಡಕುತ್ತಾ, ನಾನಿರದಿದ್ದರೆ ಹುಡುಕುವ, ಹಿಂದೆ ಹಿಂದೆಯೇ ಬರುವ, ಕಣ್ಣಿನಿಂದ ಮರೆಯಾದರೆ ಅಳುವ ಪುಟ್ಟ ಮಗಳಿಗೆ ನಾನೇ ಪ್ರಪಂಚವಾಗಿರುವಾಗ.. ಅವಳಿಗೆ ಪ್ರಪಂಚದ ಅರಿವನ್ನು ಮೂಡಿಸುವ ಜವಾಬ್ದಾರಿ ಇರುವಾಗ ಸದ್ಯಕ್ಕೆ ಅವಳೇ ನನ್ನ ಪ್ರಪಂಚ. ನನ್ನ ಪುಟ್ಟ ಪ್ರಪಂಚದಲ್ಲಿ ಸದ್ಯಕ್ಕೆ ಕಳೆದು ಹೋಗಿದ್ದೇನೆ" ಎಂದಳು. 


ಈಗವರು ಅಂತಹ ಪುಟ್ಟ ಪ್ರಪಂಚದಲ್ಲಿ ಕಳೆದು ಹೋಗಿದ್ದ ತಮ್ಮ ದಿನಗಳನ್ನು ಹುಡುಕುತ್ತಿದ್ದಾರೆ.

~ವಿಭಾ ವಿಶ್ವನಾಥ್ 

ಉತ್ಸಾಹ (ಬೆಳಕಿಂಡಿಯ ಕತೆಗಳು - 38)

 


"ಅಮ್ಮ, ಸೂರ್ಯೋದಯ ನೋಡಲು ದಿನಾ ಇಷ್ಟು ಬೇಗ ಎಬ್ಬಿಸೋದ್ಯಾಕೆ..?" ಎಂಬ ಪುಟ್ಟಿಯ ಪ್ರಶ್ನೆಗೆ 

"ಸೂರ್ಯೋದಯ ಬರೀ ಬೆಳಗಲ್ಲ ಪಾಪು.. ಇಡೀ ದಿನದ ನಮ್ಮ ಉತ್ಸಾಹ" ಎಂದ ಅಮ್ಮನಿಗೆ

"ಹಾಗಾದರೆ, ಸೂರ್ಯಾಸ್ತವೆಂದರೆ ಉತ್ಸಾಹ ಮುಗಿದಂತಾ..?" ಎಂದು ಕೇಳಿದಳು ಪುಟ್ಟಿ.

"ಇಲ್ಲ ಪಾಪು, ನಾವು ಮತ್ತಷ್ಟು ಕನಸು ಕಂಡು ಉತ್ಸಾಹ ಹೆಚ್ಚಿಸಿಕೊಳ್ಳುವ ಬ್ರೇಕ್ ಅದು." ಎಂದಾಗ ಪುಟ್ಟಿಗೆ ಸೂರ್ಯೋದಯದ ಜೊತೆಗೆ ಸೂರ್ಯಾಸ್ತವನ್ನೂ ಸವಿಯುವ ಉತ್ಸಾಹ ಅಂದು ಹೆಚ್ಚೇ ಆಗಿತ್ತು.

~ವಿಭಾ ವಿಶ್ವನಾಥ್ 

ಐಶ್ವರ್ಯವಂತ (ಬೆಳಕಿಂಡಿಯ ಕತೆಗಳು - 37)


 "ನೀವು ಇಷ್ಟು ಐಶ್ವರ್ಯವಂತರಾಗಿದ್ದರೂ ನಿಮ್ಮ ಮಗನನ್ನು ಐಷಾರಾಮಿಯಾಗಿ ಬೆಳೆಯಲು ಬಿಡದೆ, ಮಿತಿಯಲ್ಲಿ ಕಟ್ಟುನಿಟ್ಟಾಗಿ ಬೆಳೆಸುತ್ತಿರುವುದಕ್ಕೆ ಎಲ್ಲರೂ ನಿಮ್ಮನ್ನು ಜಿಪುಣ ಎನ್ನುತ್ತಿದ್ದಾರೆ ಸರ್" ಎಂದು ಹೇಳಿದ ತನ್ನ ಸೆಕ್ರೆಟರಿಗೆ 

"ಹಣ, ಐಶ್ವರ್ಯ ಇಂದು ಬಂದು ನಾಳೆ ಹೋಗಬಹುದು. ಪ್ರಾಮಾಣಿಕತೆ, ನಿಷ್ಠೆ, ಬುದ್ಧಿವಂತಿಕೆ ಮಾತ್ರ ಅದನ್ನು ಉಳಿಸಿಕೊಳ್ಳುವಂತೆ ಮಾಡುತ್ತದೆ ಎನ್ನುವ ಅರಿವು ಅವನಿಗಾಗಬೇಕು. ಹಣದ ಅಹಂ ಇರದೆ ಎಲ್ಲರಲ್ಲೂ ಬೆಳೆಯುವ ಸರಳತನ, ಹೊಂದಾಣಿಕೆಯ ಮನೋಭಾವ ಬಂದರೆ ಆತ ಮುಂದೆ ತನ್ನ ಕೆಲಸಗಾರರ ಕಷ್ಟಗಳನ್ನು ಅರಿತು  ಮಾನವೀಯತೆಯಿಂದ ಸ್ಪಂದಿಸುತ್ತಾನೆ. ಆತ ಹಣದಿಂದಲ್ಲ.. ಗುಣದಿಂದ ಸಿರಿವಂತನಾಗಬೇಕು" ಎಂದ ತನ್ನ ಬಾಸ್ ನ ದೂರಾಲೋಚನೆಗೆ ತಲೆಬಾಗಿದ್ದಾನೆ ಅವನು.

~ವಿಭಾ ವಿಶ್ವನಾಥ್ 

ಅಜ್ಜಿ ಕರೆದ ಹಾಗಾಯಿತು (ಪುಸ್ತಕ ಯಾನ - 463)


ಪುಸ್ತಕದ ಶೀರ್ಷಿಕೆ : ಅಜ್ಜಿ ಕರೆದ ಹಾಗಾಯಿತು

ಲೇಖಕರು : ಸವಿತಾ ನಾಗಭೂಷಣ

ಪ್ರಕಾಶಕರು : ಅಕ್ಷರ ಪ್ರಕಾಶನ

ಪ್ರಥಮ ಮುದ್ರಣ : 2022

ಪುಟಗಳು : 56

ಬೆಲೆ : 75 ರೂ. 


ನಾನು ಸವಿತಾ ನಾಗಭೂಷಣ ಅವರ ಕವಿತೆಗಳನ್ನು ಮಾತ್ರ ಓದಿದ್ದೆ. ಇದು ಅವರ ಮೊದಲ ಕಥಾ ಸಂಕಲನ. ಇಲ್ಲಿನ ಕೆಲವು ಕಥೆಗಳು ಪ್ರಜಾವಾಣಿ, ಮಯೂರ, ಸುಧಾ, ಉದಯವಾಣಿ, ತುಷಾರ, ಹೊಸ ಮನುಷ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದು 30 ಕಿರು ಕಥೆಗಳ ಸಂಕಲನ. ನನಗೆ ಇಷ್ಟವಾದ ಕೆಲವು ಕಥೆಗಳ ಕುರಿತು ಪ್ರಸ್ತಾಪಿಸುವೆ.


ಬರವಣಿಗೆ : ಕಥಾ ಸಂಕಲನದ ಮೊದಲ ಕಥೆ ಹಾಗೂ ಚುಟುಕಾಗಿ ಚುರುಕು ಮುಟ್ಟಿಸುವ ಕಥೆಯೂ ಹೌದು. ಗಂಗಣ್ಣ ತನ್ನ ತಂದೆ ನಿಂಗಣ್ಣನಿಗೆ ಆಚೆ ಮನೆ ಚಿಕ್ಕಣ್ಣನ ಫೋಟೋ ಪೇಪರ್ ನಲ್ಲಿ ಬಂದಿರುವುದಾಗಿ ಹೇಳುತ್ತಾ.. ಅವನ ಪರಿಚಯವನ್ನು ಮಾಡುತ್ತಾನೆ. 'ಭಾಳ ಭಾಳ ಓದಿ ಬಾಳ ಬಾಳ ಬರೆದವನಂತೆ' ಎಂದು ಇನ್ನಷ್ಟು ಅವನ ಕೀರ್ತಿಯನ್ನು ಹೇಳುತ್ತಿರುವಾಗ ನಿಂಗಣ್ಣ 'ಅದೇನು ಭಾಳಾ ಭಾಳ ಅಂದ್ರೆ ರಾಮಾಯ್ಣ ಮಹಾಭಾರತಕ್ಕಿoತ ದೊಡ್ದ್ ಬರದಾನಾ?' ಎಂದು ಬೆರಗಿನಿಂದ ಹೇಳುವ ಕಥೆಯಲ್ಲಿ ಅಹಂಕಾರವನ್ನು ಮುಕ್ಕಾಗಿಸುವುದನ್ನು ಕಾಣಬಹುದು. ಹಳ್ಳಿಯ ಆಡು ಭಾಷೆಯ ಸಂಭಾಷಣೆಗಳು ಇಲ್ಲಿವೆ.


ರಾಜ ಮತ್ತು ಮುದುಕಿ : ದಾರಿ ತಪ್ಪಿ ಬಂದ ರಾಜ ಮುದುಕಿಯ ಸಾಮ್ರಾಜ್ಯಕ್ಕೆ ಬಂದಿದ್ದ. ಹಣ್ಣಿನ ಮರಗಳು ಹರಿಯುವ ಹಳ್ಳ-ಕೊಳ್ಳ, ಸಣ್ಣ ಗುಡಿಸಲು ಇಷ್ಟರಲ್ಲೇ ಬದುಕು ಸಾಗಿಸುತ್ತಿದ್ದ ಮುದುಕಿಗೆ ರಾಜನ ಠೀವಿ ಹಾಗೂ ಅವನ ಅಗಾಧ ಸಾಮ್ರಾಜ್ಯದ ಪರಿವೆಯೇ ಇರಲಿಲ್ಲ. ಅದು ಅವಳಿಗೆ ಬೆರಗು ಜೊತೆಗೆ ನಿರ್ಲಕ್ಷ್ಯವೂ... ರಾಜನ ಪರಿವಾರ ಮತ್ತೆ ಅವನನ್ನು ಸೇರಲು ಬಂದಿತಾದರೂ ಮುದುಕಿಗೆ ಉಪಯೋಗವಾಗಬಹುದಾದ ಯಾವ ವಸ್ತುವೂ ಅವನ ಬಳಿಯಲ್ಲಿರಲಿಲ್ಲ. ಮತ್ತೆ ಬರುತ್ತೇನೆ ಎಂದ ರಾಜನಿಗೆ ಮುದುಕಿ "ದಾರಿ ತಪ್ಪಬೇಡ, ಬರುವುದೂ ಬೇಡ" ಎಂದಿದ್ದೇಕೆ ಓದಿ ನೋಡಿ.


ಅಜ್ಜಿ ಕರೆದ ಹಾಗಾಯಿತು : ಕಥಾ ಸಂಕಲನದ ಶೀರ್ಷಿಕೆಯ ಕಥೆ. ಎಂದೋ ಮಾರಿಕೊಂಡ ತಮ್ಮ ಹಿರಿಯರಿದ್ದ ಮನೆಗೆ ಮತ್ತೆ ಬಂದಿದ್ದ ತಮ್ಮಣ್ಣನವರಿಗೆ ಈಗ ಹತ್ತಿರ 70 ವರ್ಷ. ಹಳೆ ಮನೆಯ ಬಾಗಿಲನ್ನು ತಟ್ಟಿದ್ದು ಸಹ ಅಜ್ಜಿ ಅಜ್ಜಿ ಎಂದೇ. ತಮ್ಮಣ್ಣನವರನ್ನು ಆ ಮನೆಯೊಡತಿ ಹೇಗೆ ಕಂಡಳು..? ತಮ್ಮಣ್ಣನವರು ಅಲ್ಲಿಗೆ ಬಂದಿದ್ದಾದರೂ ಏಕೆ..? ಅಜ್ಜಿಯ ಬಾಂಧವ್ಯ ಹಾಗೂ ನೆನಪುಗಳ ಜೊತೆಗೆ ಮತ್ತೊಂದು ಕಥೆಯನ್ನೂ ತೋರುತ್ತದೆ ಇದು.


ಸಂಬಂಧಗಳು : ಸಂಕೀರ್ಣವಾಗುತ್ತಿರುವ ಮನಸ್ಥಿತಿಗಳು ಹಾಗೂ ಕಡಿಮೆಯಾಗುತ್ತಿರುವ ತಾಳ್ಮೆಯ ಮನಸ್ಥಿತಿಯ ಯುವಜನಾಂಗ, ಅವರನ್ನು ನಿಭಾಯಿಸಬೇಕಾದ ಹೊಣೆ ಅಲ್ಲಲ್ಲ ಅನಿವಾರ್ಯತೆ ಇರುವ ಅವರ ತಂದೆ-ತಾಯಿ. ಸತೀಶ ಮತ್ತು ಸಂಜನಾರ ವಿವಾಹ ಸಂಬಂಧ, ಮನಸ್ಥಿತಿ, ಅವರ ಪೋಷಕರ ವರ್ತನೆ ಎಲ್ಲವೂ ಇಲ್ಲಿದೆ.


ಉಸಿರಿನ ಪರಿಮಳ : ಬೇರು, ಕಾಂಡ, ಎಲೆ, ದಳ, ಕೇಸರ ಎಂದು ಹೂವಿನ ಒಂದೊಂದೇ ಭಾಗಗಳನ್ನು ಬೇರೆ-ಬೇರೆಯಾಗಿ ಇಟ್ಟು ಮಕ್ಕಳಿಗೆ ತೋರಿಸುತ್ತಿದ್ದ ಟೀಚರ್ ಅನ್ನು ಒಬ್ಬಳು ವಿದ್ಯಾರ್ಥಿನಿ ಕುತೂಹಲದಿಂದ ಪರಿಮಳ ಎಂದು ಪ್ರಶ್ನಿಸಿದ್ದಳು. ಇಡಿಯಾಗಿ ಗಿಡ, ಹೂವು ನೋಡಿದವಳು ಬಿಡಿಬಿಡಿಯಾಗಿ ಕಂಡ ಹೂವಿಗೆ ನೀಡಿದ ಪ್ರತಿಕ್ರಿಯೆ ಏನು..? ಪರಿಸರದ ಕಾಳಜಿ, ಭಾವನಾತ್ಮಕತೆ, ವಿಜ್ಞಾನ ಇಷ್ಟರಲ್ಲಿ ಅವಳ ಮೇಲೆ ಹೆಚ್ಚಿನ ಪರಿಣಾಮ ಯಾವುದರದ್ದಿತ್ತು..?


ಒಂದು ತುಂಡು ಭೂಮಿಗಾಗಿ : ಒಂದು ತುಂಡು ಭೂಮಿಗಾಗಿ ಹುಟ್ಟಿದ ಜಗಳ ಅದು. ಅಣ್ಣ-ತಮ್ಮಂದಿರ ನಡುವೆ ಮೊದಲು ಹುಟ್ಟಿದ ಜಗಳ. ತಮ್ಮ ಕೋಪಗೊಂಡದ್ದಕ್ಕೆ ಅಣ್ಣನಿಗೆ ಕೋಪ. ಅಣ್ಣ ಹೊಡೆದ ಎಂದು ತಮ್ಮನಿಗೆ ಮತ್ತಷ್ಟು ತಾಪ. ಹೀಗೆ ಶುರುವಾದ ಜಗಳ ಮುಂದೆ ಏನಾಯಿತು ..? 


ಗೀಳು : ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ರಂಗಯ್ಯನವರು ಕೆಲಸದಿಂದ ನಿವೃತ್ತರಾಗಿ ಕೆಲವೇ ತಿಂಗಳುಗಳು ಕಳೆದಿತ್ತು. ಹದಿಹರೆಯದ ಒಬ್ಬಳೇ ಮಗಳು ನೀಲಾ ಚಿಕಿತ್ಸೆ ಫಲಕಾರಿಯಾಗದೆ, ಜ್ವರದಿಂದ ತೀರಿಕೊಂಡಾಗಿನಿಂದ ಗರಬಡಿದವರಂತಾಗಿದ್ದರು. ಅಷ್ಟೇ ಅಲ್ಲದೆ.. ಅವರಿಗೊಂದು ವಿಚಿತ್ರ ಗೀಳು ಶುರುವಾಗಿತ್ತು. ಅದು ಸಾವಿನ ಸುದ್ದಿ ಓದುವುದು, ಸಾವಿನ ಸುದ್ದಿ ಕಲೆ ಹಾಕಿಕೊಳ್ಳುವುದು ಜೊತೆಗೆ ಭಯಪಡುವುದು. ಹೀಗೆ ಶುರುವಾದ ಗೀಳು ಅತಿರೇಕಕ್ಕೆ ಸಾಗುತ್ತಾ ಹೋಯಿತು. ಮುಂದೆ ಏನಾಯಿತು ..? ಓದಿ ನೋಡಿ.


ಒಂದು ಹಳೆಯ ಕೊಡ : ಮುತ್ತಜ್ಜಿಯ, ಅಜ್ಜಿಯ, ಅಮ್ಮನ ಕೈಬದಲಾಯಿಸಿ ಬಂದ ಕಬ್ಬಿಣ, ಹಿತ್ತಾಳೆ, ತಾಮ್ರದ ವಸ್ತುಗಳನ್ನೆಲ್ಲ ಗುಡ್ಡೆ ಹಾಕಿಕೊಂಡಿದ್ದವಳು ನೆನಪಿನ ತಿಜೋರಿಯಿಂದ ನೆಗ್ಗಿದ ಪುಟ್ಟ ಕೊಡದತ್ತ ಕೈದೋರಿ ಅವಳು ಆ ಕುರಿತು ನೆನಪಿಸಿಕೊಂಡಳು. ಸಾಬಣ್ಣ ಎಲ್ಲವನ್ನು ಗುಡ್ಡೆಯಾಗಿಸಿ ಬೆಲೆ ಕಟ್ಟಿದನಾದರೂ.. ಕೊಡದ ಕಥೆ ಬೇರೆಯೇ ಇತ್ತು. ತಲೆಮಾರುಗಳಿಂದ ಬಂದ ಬಾಂಧವ್ಯ, ನಂಟು ಅಷ್ಟು ಬೇಗ ಬೇರೆಯಾಗಲು ಸಾಧ್ಯವೇ..?


ಅಂತ್ಯ : ಇಡೀ ಸೀಮೆಯೇ ನೆತ್ತರಿನಿಂದ ತೊಳೆದು ಹೋಗಿದ್ದ ಸಂದರ್ಭದಲ್ಲಿ ರಾಜ ತನ್ನ ಅರಮನೆಗೆ ಬರುತ್ತಾನೆ ಅವನು ಅರಮನೆಗೆ ಬಂದದ್ದೇಗೆ ಅವನ ಕಣ್ಣಿಗೆ ಅವನ ವೈಭೋಗವಲ್ಲ ಕಂಡದ್ದೇಕೆ ಹಾಗೂ ವಾಸ್ತವದ ಪರಿಸ್ಥಿತಿ ಏನಿತ್ತು ..? ಬದುಕಿನ ನಶ್ವರತೆಯ ಕಥೆ ಇಲ್ಲಿದೆ


ಬೆವರು : ಇದು ಕರೋನಾ ಕಾಲಘಟ್ಟದ ಕಥೆ. ಈ ಕಥಾ ಸಂಕಲನದಲ್ಲಿ ಕರೋನಾ ಸಂದರ್ಭದ ಇನ್ನೂ ಕೆಲ ಕಥೆಗಳಿವೆ. ಮನೆ ಮುಂದೆ ರಸ್ತೆ ಮಾಡುವವರು ಅಗೆದು, ಲಾಕ್ಡೌನ್ ಆಗಿ ಅದನ್ನು ಮಣ್ಣು ಮುಚ್ಚದೆ, ಮಟ್ಟ ಮಾಡದೆ ಹಾಗೆಯೇ ಬಿಟ್ಟಿದ್ದರು. ಯಾರಿಗೆ ಫೋನ್ ಮಾಡಿದರೂ ಕರೋನಾ ಎಂಬ ನೆಪ ಹೇಳಿ ಬರುತ್ತಿರಲಿಲ್ಲ. ತಾವೇ ಗುಂಡಿಗೆ ಮಣ್ಣು ತುಂಬಿ ಓಡಾಡಲು ಸಣ್ಣ ದಾರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಸಿಕ್ಕ ವ್ಯಕ್ತಿ ಹಾಗೂ ಬೆವರಿನ ಕಥೆ ಇದು.


ಮಹಿಳಾ ದಿನಾಚರಣೆ ಮನೆಮನೆ ಕತೆ : ಮಹಿಳಾ ದಿನಾಚರಣೆಯಂದು ಪೇಪರ್ ಓದಲು ಹೊರಟವರಿಗೆ ಪೇಪರ್ ತುಂಬಾ ಮಹಿಳೆಯರ ವಿಶೇಷ ಹಾಗೂ ಚೆಂದ ಚೆಂದದ ಲೇಖನ. ಆದರೆ, ಒಂದೊಂದಾಗಿ ಕಣ್ಣು ಹಾಯಿಸುವಷ್ಟರಲ್ಲಿಯೇ ಯಾವ್ಯಾವ ಅಡೆತಡೆಗಳು ಹಾಗೂ ಯಾರು ಯಾರು ಭೇಟಿಯಾದರು..? ನಾವು ವಿಶೇಷ ವ್ಯಕ್ತಿಗಳನ್ನು ಎಲ್ಲೆಲ್ಲೋ ಹುಡುಕಿ ಅಭಿಮಾನ ಪಡುತ್ತೇವೆ. ಆದರೆ, ನಮ್ಮ ಸುತ್ತಮುತ್ತಲೇ ಎಷ್ಟೋ ಜನ ಸಾಧಕಿಯರು ತಣ್ಣಗೆ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಿರುತ್ತಾರಲ್ಲಾ...! ಎಂಬ ಅರಿವು ಮಾಡಿಸುವ ಕಥೆ ಇದು.


ಇಲ್ಲಿನ ಕಥೆಗಳು ಅರ್ಧ, ಒಂದು, ಎರಡು ಪುಟಗಳಲ್ಲೆಲ್ಲ ಮುಗಿದು ಹೋಗುತ್ತವೆ. ಹಿರಿದರ್ಥವಿರುವ ಈ ಕಿರು ಕಥೆಗಳು ಆಲೋಚನೆ ಮೂಡಿಸುವ ಚೆಂದದ ಕಥೆಗಳು. ನಾನು ಪರಿಚಯಿಸಿರುವುದು ಕೆಲವನ್ನಷ್ಟೇ. ಸಂಪೂರ್ಣ ಓದಿನ ಸವಿಗೆ ಪುಸ್ತಕ ಓದಿ.


~ ವಿಭಾ ವಿಶ್ವನಾಥ್

ವನಮಾಲಿ - 15


ಕವಿ ರವೀಂದ್ರನಾಥ ಠಾಕೂರರು 'ವಿಶ್ವಾತ್ಮಕತೆ'ಯನ್ನು ಪ್ರತಿಪಾದಿಸಿ ವಿಶ್ವಕವಿ ಎಂದು ಕರೆಸಿಕೊಳ್ಳುತ್ತಾರೆ. 


ನಾನು ಆಯ್ಕೆ ಮಾಡಿಕೊಂಡಿರುವ ಅವರ ಕವನ ಸಂಕಲನ ವನಮಾಲಿ. ಇದು ಸಂಭಾಷಣಾ ರೂಪದ ಕಾವ್ಯಗುಚ್ಛ. ಇಲ್ಲಿನ ಹೆಚ್ಚಿನ ಕವಿತೆಗಳಲ್ಲಿ ಸ್ವಾತಂತ್ರ್ಯವನ್ನು ಬಯಸುವ, ಸುಂದರ, ಮುಕ್ತ ಜೀವನವನ್ನು ನಡೆಸಲು ತನ್ನ ಸಂಗಾತಿಗೆ ಆಹ್ವಾನ ನೀಡುವ ವ್ಯಕ್ತಿ ಒಂದೆಡೆಯಾದರೆ.. ಹೊಸ ಜೀವನವನ್ನು ಸಂಶಯದಿಂದ ನೋಡುವ ವ್ಯಕ್ತಿ ಮತ್ತೊಂದು ಕಡೆ. 


ಮೂಲ ಪುಸ್ತಕ The Gardener ಅನ್ನು 1913 ರಲ್ಲಿ Macmillan Co, London ಅವರು ಪ್ರಕಟಿಸಿದ್ದಾರೆ. ಅದರಲ್ಲಿ ಚಿಕ್ಕದಾಗಿ ಕಂಡ 84 ಪದ್ಯಗಳನ್ನು ಆರಿಸಿಕೊಂಡು ಬಾಗೇಪಲ್ಲಿ ಕೃಷ್ಣಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲದಲ್ಲಿ ಇರುವಂತೆ ಇಲ್ಲಿಯೂ ಪ್ರತ್ಯೇಕ ಶೀರ್ಷಿಕೆಗಳಿಲ್ಲ ಬದಲಾಗಿ ವನಮಾಲಿಗೆ ಸಂಖ್ಯೆಗಳನ್ನು ಕೊಡುತ್ತಾ ಹೋಗಿದ್ದಾರೆ ಅಷ್ಟೇ. 


ನನ್ನ ಆಯ್ಕೆಯ ಕವಿತೆ : ವನಮಾಲಿ - 15


ಕಸ್ತೂರೀ ಮೃಗ ತನ್ನ ಸುಗಂಧಕೆ ತಾನೇ ಹುಚ್ಚೆದ್ದು ಓಡಿದಂತೆ

ಆ ಕಾಡ ನೆಳಲಲ್ಲಿ ಓಡಿದೆನು ನಾನು


ಆ ಇರುಳು ನಡು ಬೇಸಿಗೆಯ ಇರುಳು

ಬೀಸುತಿದ್ದ ತಂಗಾಳಿ ದಕ್ಷಿಣ ದಿಕ್ಕಿನದು


ನಾನು ದಾರಿ ತಪ್ಪಿ ಅಲೆದೆ

ಪಡೆಯಲಾಗದ್ದನ್ನು ಬಯಸಿದೆ

ಬಯಸದ್ದನ್ನು ಪಡೆದೆ


ನನ್ನ ಆಕಾಂಕ್ಷೆಗಳ ಬಿಂಬ

ನನ್ನೆದೆಯಿಂದ ಹೊರಬಂದು

ಕುಣಿಯುತ್ತದೆ

ಹೊಳೆದ ದೃಷ್ಟಿ ಅತ್ತ ಹೊರಳುತ್ತದೆ


ನಾನದನು ಬಿಗಿಯಾಗಿ ಹಿಡಿಯಲೆತ್ನಿಸುತ್ತೇನೆ

ಅದು ನನಗೆ ಅಗ್ರಾಹ್ಯವಾಗಿ

ನನಗೆ ಕಣ್ತಪ್ಪಿಸಿ ಪಕ್ಕಕೊಯ್ಯುತ್ತದೆ


ನಾನು ಪಡೆಯಲಾಗದ್ದನ್ನು ಬಯಸಿದೆ 

ಬಯಸದ್ದನು ಪಡೆದೆ


ಮನುಷ್ಯ ತನಗೆ ಬೇಕಾದ ಶಾಂತಿ, ನೆಮ್ಮದಿಗಳನ್ನು ಹೊರಗೆ ಅರಸುತ್ತಾ.. ಲೌಕಿಕ ಸುಖಗಳ ಹಿಂದೆ ಬೀಳುತ್ತಾನೆ. ಆದರೆ, ಅವು ನಿಜಕ್ಕೂ ಮನುಷ್ಯನ ದೈನಂದಿನ ಬದುಕಿನಲ್ಲಿ ಹಾಗೂ ಆತ್ಮಜ್ಞಾನದಲ್ಲಿ ಆತನಿಗೆ ಅರಿವಾಗುತ್ತದೆ. ಆದರೆ, ಅದು ಅಷ್ಟು ಸುಲಭವಲ್ಲ.


ಕಸ್ತೂರಿ ಮೃಗಕ್ಕೆ ಕಸ್ತೂರಿಯ ಸುವಾಸನೆ ತನ್ನ ನಾಭಿಯಿಂದಲೇ ಬರುತ್ತಿದೆ ಎಂಬ ಅರಿವಿಲ್ಲದೆಯೇ.. ಸುವಾಸನೆಯನ್ನು ಹುಡುಕುತ್ತಾ ಎಲ್ಲೆಡೆ ಸುತ್ತುತ್ತದೆ. ಹಾಗೆಯೇ ಮನುಷ್ಯನು ತನ್ನ ಅಂತಃಸತ್ವದ ಅರಿವಿಲ್ಲದೆಯೇ, ತನ್ನ ಶಕ್ತಿ-ಸಾಮರ್ಥ್ಯದ ಅರಿವಿಲ್ಲದೆಯೇ ಅದನ್ನು ಮತ್ತೆ ಹುಡುಕುತ್ತಾ ಅಲೆಯುತ್ತಿರುತ್ತಾನೆ.


ನಡು ಬೇಸಿಗೆಯ ಇರುಳಿಗೆ ನಿಜಕ್ಕೂ ಬೇಕಿರುವುದು ತಂಪಾದ ತಂಗಾಳಿ. ಅಂತಹ ತಂಗಾಳಿ ಸುಳಿದಾಗ ಅದರತ್ತ ಆಕರ್ಷಿತನಾಗುತ್ತಾ ನಿದ್ದೆ ಮರೆತು ತಂಗಾಳಿಯನ್ನರಸಿ ಎಲ್ಲೆಲ್ಲಿಯೋ ಅಲೆಯುವಂತೆ, ಬದುಕಿನಲ್ಲಿ ಮೂಲ ಗುರಿಯನ್ನು ಮರೆತು ಕ್ಷಣಿಕ ಸೆಳೆತಕ್ಕೆ ಮೈಮರೆತು ಅದರ ಹಿಂದೆ ಬಿದ್ದಾಗ.. ಬದುಕಿನಲ್ಲಿ ಬಯಸಿದ್ದು ಸಿಗದ ಹಾಗೂ ಬಯಸದೆಯೂ ಸಿಗುವ  ವಿಚಾರವನ್ನು ಪ್ರಸ್ತಾಪಿಸುತ್ತಾರೆ. 


ತೊಳಲಿ, ಬಳಲಿರುವ ಮನುಷ್ಯನು ತಂಪಾದ ಸುಖಕ್ಕೆ ಹಾತರೆಯುತ್ತಾ.. ಸುಖವನ್ನರಸಿ ಹೊರಡುತ್ತಾನಾದರೂ ಆತ ಬಯಸಿದ ಸುಖ ಸಿಗದೇ ಕೆಲವೊಮ್ಮೆ ಆತ ಬಯಸದೆಯೂ ಇರುವ ಜೀವನ ಪಾಠವೂ ಸಿಗಬಹುದು. ಅದು ವಿಧಿಲಿಖಿತವೂ ಹೌದಲ್ಲವೇ..!


ಮನದ ಆಸೆ, ಆಕಾಂಕ್ಷೆಗಳು ಇನ್ನೂ ತೀರದೆ ಅವುಗಳದೇ ನೆನಪಿನಲ್ಲಿರುವ ಮನುಷ್ಯನಿಗೆ ಸಾಧನೆಯ ಬೆನ್ನು ಹತ್ತಿದ ಸಮಯದಲ್ಲಿಯೇ ದೃಷ್ಟಿ ಇತ್ತ ಹೊರಳುತ್ತದೆ. ಆಸೆಗಳನ್ನು, ಸುಖವನ್ನು ಕಟ್ಟಿಡಲು ಬಯಸಿದರೂ ಅದು ಅಷ್ಟು ಸುಲಭವಲ್ಲ. ಅದಕ್ಕೆ ಸಾಧನೆ ಬೇಕು. ಅಂತಹ ಸಾಧನೆಗೆ ಬಹಳಷ್ಟು ಶ್ರಮಿಸಬೇಕು. ಅದಕ್ಕೆ ಮನುಷ್ಯನ ತಾಳ್ಮೆ, ನಿರಂತರತೆ, ಪ್ರಯತ್ನ, ಅನುಭವ ಎಲ್ಲವೂ ಜೊತೆಯಾಗಬೇಕು. 


ಪಡೆಯಲಾಗದ್ದನ್ನು ಬಯಸಿದೆ 

ಬಯಸದ್ದನು ಪಡೆದೆ

ಎಂಬ ಈ ಎರಡು ಸಾಲುಗಳು ಹಿರಿದರ್ಥವನ್ನು ಹೇಳುತ್ತವೆ. ಮನುಷ್ಯ ಬಯಸಿದ್ದೆಲ್ಲವೂ ಕೈಗೆ ಸಿಗದು. ಯಾವುದು ಸಿಗಬೇಕೆಂದಿದೆಯೋ ಅದನ್ನು ಯಾರೂ ತಪ್ಪಿಸಲಾರರು ಎನ್ನುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಎಷ್ಟೋ ಬಾರಿ ಪಡೆಯಲಾಗದನ್ನು ಬಯಸಿ ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಂಡು, ದುಃಖವನ್ನು ತಂದುಕೊಂಡಿರುತ್ತೇವೆ. ಆದರೆ ಅದು ನಮ್ಮ ಬದುಕಿಗೆ ಒಳ್ಳೆಯದೇ ಆಗಿರುತ್ತದೆ. ಅದಕ್ಕಿಂತ ಚೆಂದದ ಹಾಗೂ ಸಮರ್ಪಕವಾದ ವಿಷಯವೇ ನಮ್ಮ ಬದುಕಿನಲ್ಲಿ ನಡೆದಿರುತ್ತದೆ. ಪಡೆಯಲಾಗದ್ದನ್ನು ಬಿಟ್ಟು, ಪಡೆದಿರುವುದನ್ನು ಉಳಿಸಿಕೊಂಡು ಹೋಗುವುದು ಅವಶ್ಯಕವಾಗಿದೆ. 


ನನ್ನ ಅರಿವಿಗೆ ದಕ್ಕಿದಂತೆ ಕವಿತೆಯ ಕುರಿತು ಅರ್ಥೈಸಿದ್ದೇನೆ. ವಿಶಿಷ್ಟ ಅಭಿಯಾನದ ಮೂಲಕ ರವೀಂದ್ರರ ಕಾವ್ಯಗಳ ಓದಿಗೆ ಕಾರಣರಾದವರೆಲ್ಲರಿಗೂ ಧನ್ಯವಾದಗಳು


~ ವಿಭಾ ವಿಶ್ವನಾಥ್

ಶನಿವಾರ, ಜೂನ್ 20, 2026

ಕೂಡುಮನೆ (ಪುಸ್ತಕ ಯಾನ - 462)


ಪುಸ್ತಕದ ಶೀರ್ಷಿಕೆ : ಕೂಡುಮನೆ

ಲೇಖಕರು : ರಾಧಾಕೃಷ್ಣ ಕಲ್ಚಾರ್

ಪ್ರಕಾಶಕರು : ಗಾಯತ್ರೀ ಪ್ರಕಾಶನ

ಪ್ರಥಮ ಮುದ್ರಣ : 1994

ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 70

ಬೆಲೆ : 70 ರೂ. 


ಕೂಡುಮನೆ ಕಿರು ಕಾದಂಬರಿ ರಾಧಾಕೃಷ್ಣ ಕಲ್ಚಾರ್ ಅವರ ಪ್ರಾರಂಭಿಕ ಕೃತಿ. 28 ವರ್ಷಗಳ ಹಿಂದೆ ಅನಂತ ಪ್ರಕಾಶ ಸಂಸ್ಥೆ ರಾಜ್ಯ ಮಟ್ಟದಲ್ಲಿ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ. ಮೂರು ದಶಕಗಳ ಹಿಂದಿನ ಕಾದಂಬರಿ ಎಂಬ ವಿಚಾರವನ್ನು ಮನದಲ್ಲಿಟ್ಟುಕೊಂಡು ಓದಿದರೂ ಇಂದಿನ ಕಾಲಕ್ಕೂ ಪ್ರಸ್ತುತವಾದ ಕಾದಂಬರಿ ಇದು. ಹಣಕಾಸಿನ ವಿಚಾರಗಳಲ್ಲಿ ಮಾತ್ರ ಅಂದಿನ ದಿನಗಳಿಗೆ ಹೋಲಿಸಿಕೊಳ್ಳಬಹುದಷ್ಟೇ.!


ಕೃಷಿ ಕಾಲೇಜಿನಲ್ಲಿ ಅಭ್ಯಾಸ ಮುಗಿಸಿ ಮೂರು ವರ್ಷಗಳ ನಂತರ ಮತ್ತೆ ತನ್ನ ಅಜ್ಜನ ಮಡಿಲು ಸೇರಲು ಹೊರಟಿದ್ದ ಶ್ರೀಧರನಿಗೆ ಅವಿಭಜಿತ ಕೂಡು ಕುಟುಂಬ, ಪಿತ್ರಾರ್ಜಿತವಾಗಿ ಬಂದ ಆಸ್ತಿಯ ಜೊತೆಗೆ ಅಜ್ಜ ಬೆವರು ಸುರಿಸಿ ಮಾಡಿದ ಆಸ್ತಿಯಿತ್ತು. ಪರೋಪಕಾರಿಯಾಗಿ ಬೆಳೆದ ಅಜ್ಜನೇ ಅವನ ಸ್ಪೂರ್ತಿ. 


"ನೋಡು ಮಗು, ಪ್ರಕೃತಿ ತಾಯಿ ಎನ್ನುತ್ತಾರೆ. ಆದರೆ ಈ ತಾಯಿ ಎಲ್ಲ ತಾಯಂದಿರ ಹಾಗಲ್ಲ, ತಾಯಿ ಬಂದು ಹಾಲು ಕುಡಿಸಲಿ ಎಂದು ಕೈ ಕಾಲು ಚಾಚಿ ಮಲಗಿದ ಮಗುವನ್ನು ಅವಳು ಮೆಚ್ಚುವುದಿಲ್ಲ. ಮಗು ತಾನಾಗಿ ಏಳಬೇಕು. ಪರಿಶ್ರಮದಿಂದ ಈ ತಾಯಿ ಇದ್ದಲ್ಲಿಗೆ ಹೋಗಬೇಕು. ಆಡಿ, ಕುಣಿದು, ಹಾಡಿ ಅವಳನ್ನು ಒಲಿಸಿಕೊಳ್ಳಬೇಕು. ಆಗ ನೋಡು ಸಮೃದ್ಧ ಹಾಲು ಆ ಮಗುವಿನ ಪಾಲಿಗೆ" ಎಂದು ಶ್ರೀಧರನಿಗೆ ಅಜ್ಜ ಎಷ್ಟೋ ಬಾರಿ ಪ್ರಕೃತಿಯ ಪಾಠ ಮಾಡಿದ್ದಾರೆ.  ಆದರ್ಶವೇ ಆದ ತನ್ನ ಅಜ್ಜ ಹಾಗೂ ಕೃಷಿಯ ಆದರ್ಶ ಅವನನ್ನು ಪ್ರಬುದ್ಧ ಹಾಗೂ ಪ್ರಾಮಾಣಿಕ ಮನುಷ್ಯನನ್ನಾಗಿ ರೂಪಿಸಿತು. ಕೃಷಿ ಮಾಡಿ ಮಾದರಿಯಾಗಬೇಕು ಎನ್ನುವ ಕನಸಿತ್ತು. 


ಶ್ರೀಧರನು ಕನಸಿನಲ್ಲೂ ಯೋಚಿಸಿದ ವಿಷಯವೆಂದರೆ ಮನೆ ಪಾಲಾಗುವುದು. ಆತನ ನೆಚ್ಚಿನ ಅಧ್ಯಾಪಕರೇ ಕೃಷಿ ಇಲಾಖೆಯಲ್ಲಿಯೇ ಆಫೀಸರ್ ಪೋಸ್ಟ್ ಕೊಡಿಸುತ್ತೇನೆಂದಾಗ ನಿರಾಕರಿಸಿ ಹಳ್ಳಿಯ ಕಡೆ ಮುಖ ಮಾಡಿದ್ದ. ತಪ್ಪಿಯೂ ಪಾಲಾವವ ಸಂದರ್ಭ ಬರಲಾರದು ಎಂದು ಗಟ್ಟಿಯಾಗಿಯೇ ಹೇಳಿದ್ದೇಕೆ..?


ಕೂಡುಮನೆಗೆ ಬೆಂಗಳೂರಿನಿಂದ ಹೊರಟು ಬಂದವನಿಗೆ ಅಚ್ಚರಿ ಕಾದಿತ್ತು. ಶ್ರೀಧರನ ಅಜ್ಜ ಶಂಭಟ್ಟರು. ಅವರ ಹಿಂದಿನ ತಲೆಮಾರುಗಳಲ್ಲಿ ಪಾಲು ನಡೆದು ಅಡ್ಕ, ಕುಮೇರಿ, ಪೂಂಬೆಮನೆ ಎಂದು ಹಂಚಿಹೋಗಿತ್ತು. ಈಗ ಮೂಲ ಮನೆಯಾಗಿ ಕೂಡುಮನೆ ರೂಪ ತಾಳಿತ್ತು . ಶಂಭಟ್ಟರು ಕೃಷಿಭೂಮಿಯ ವಿಸ್ತರಣೆಗೆ ಶ್ರಮಿಸಿದ ಹಾಗೂ ಅವರ ಮಣ್ಣಿನ ಕಾಯಕದ ಕುರಿತು ಓದಿನೋಡಿ.


ಶಂಭಟ್ಟರಿಗೆ ಮೂವರು ಗಂಡುಮಕ್ಕಳು 6 ಮಂದಿ ಹೆಣ್ಣು ಮಕ್ಕಳು. 

ನಾರಾಯಣ, ಶಂಕರ ಹಾಗೂ ರಾಜರಾಮ ಅವರ ಹೆಂಡತಿ ಮಕ್ಕಳೊಡನೆ ಒಟ್ಟಾಗಿ ನೆಲೆಸಿದ್ದರು. ಹೆಣ್ಣುಮಕ್ಕಳಲ್ಲಿ ಗೌರಿಗೆ ಮದುವೆಯಾಗಿ ಮಗ ರಾಮಕೃಷ್ಣ ನಾಲ್ಕು ವರ್ಷವಿದ್ದಾಗ ಪತಿ ಅಪಘಾತದಲ್ಲಿ ತೀರಿಕೊಂಡಿದ್ದರಿಂದ ಈಗ ಗೌರಿ ಕೂಡುಮನೆಯಲ್ಲಿಯೇ ಮಗನೊಂದಿಗೆ ನೆಲೆಸಿದ್ದಳು.


ಶ್ರೀಧರನ ತಂದೆ ನಾರಾಯಣ. ಶ್ರೀಧರನ ತಾಯಿ ತೀರಿ ಹೋಗಿ ತಂದೆ ಎರಡನೆಯ ವಿವಾಹವಾಗಿದ್ದರು. ಅವರಿಗೆ ಮೂವರು ಮಕ್ಕಳು. ನಾರಾಯಣನಿಗೆ ಶ್ರೀಧರ ಕೃಷಿ ಕಾಲೇಜಿಗೆ ಸೇರುವುದು ಇಷ್ಟವಿರಲಿಲ್ಲ. ಮಗ ಲೆಕ್ಚರರ್ ಆಗುವ ಆಸೆ ಇಟ್ಟುಕೊಂಡಿದ್ದರಾದರೂ ಮಗ ಅದಕ್ಕೆ ಮನ ಕೊಟ್ಟಿರಲಿಲ್ಲ. ಮತ್ತೊಬ್ಬ ಮಗ ಶ್ರೀಹರಿ ಕುರಿತು ಅವರಿಗೆ ಭರವಸೆಯಿತ್ತು. ನಾರಾಯಣರ ಎರಡನೇ ಪತ್ನಿ ಶಾರದೆಯ ಅಣ್ಣ ಈಶ್ವರ ಭಟ್ಟರ ಕುಮಕ್ಕು ನಾರಾಯಣರಿಗೆ ಹೆಚ್ಚೇ ಇತ್ತು.


ಶಂಕರನ ಪತ್ನಿ ಪಾರ್ವತಿ. ಇವರಿಗೆ ಮೂವರು ಮಕ್ಕಳು ಕಾದಂಬರಿಯಲ್ಲಿ ಇವರಿಗೆ ಹೆಚ್ಚೇನೂ ಮಹತ್ವವಿಲ್ಲ. ಕೆಲವು ಬಾರಿ ಪ್ರಸ್ತಾಪ ಬಂದು ಹೋಗುತ್ತದೆ.


ಮತ್ತೊಬ್ಬ ಮಗ ರಾಜಾರಾಮ ಹಾಗೂ ಜಾನಕಿ ಇಬ್ಬರು ಹಸುವಿನಂತಹ ಸ್ವಭಾವದವರು. ಪರೋಪಕಾರದಲ್ಲಿ ಎತ್ತಿದ ಕೈ ಎಂದರೂ ತಪ್ಪಾಗಲಾರದು. ತಾಯಿಯನ್ನು ಕಳೆದುಕೊಂಡಿದ್ದ ಶ್ರೀಧರನಿಗೆ ಜಾನಕಿ ಬಂದ ನಂತರ ತಾಯಿ ದೊರೆತಿದ್ದಳೆಂಬುದರಲ್ಲಿ ಅತಿಶಯೋಕ್ತಿಯಿಲ್ಲ. 


ಶಂಭಟ್ಟರ ಉಳಿದ ಹೆಣ್ಣು ಮಕ್ಕಳ ಪ್ರಸ್ತಾಪ ಸಾಂದರ್ಭಿಕವಾಗಿ ಆಗುತ್ತದೆಯಾದರೂ.. ಮೂರು ಗಂಡು ಮಕ್ಕಳಿಗಿಂತ ಹೆಚ್ಚೇನೂ ಮಹತ್ವ ನೀಡುವುದಿಲ್ಲ.


ಶಂಭಟ್ಟರ ಪತ್ನಿ ಲಕ್ಷ್ಮಿ ತೀರಿಕೊಂಡ ನಂತರ ಪ್ರತಿ ವರ್ಷವೂ ಅವರ ವರ್ಷದ ಕಾರ್ಯಕ್ಕೆ ಸಂಬಂಧಿಕರು ಹಾಗೂ ಮಕ್ಕಳ ಸಂಸಾರವೆಲ್ಲವೂ ಒಟ್ಟಾಗುತ್ತಿತ್ತು. ಕುಮೇರಿ ಕೃಷ್ಣಯ್ಯನವರು ಶಂಭಟ್ಟರ ಆಪ್ತರು. ಮೊಮ್ಮಕ್ಕಳ ಬಾಲ್ಯದ ಆಟಗಳನ್ನು ನೋಡುತ್ತಾ ಸಂತೃಪ್ತಿಯಿಂದ ಇದ್ದವರಿಗೆ ಹೆಚ್ಚೇನೂ ಆಸೆಗಳಿರಲಿಲ್ಲ. ಆದರೆ, ಮನಸ್ಸು ಬೇರೇನನ್ನೋ ಶಂಕಿಸುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಚಿಕ್ಕ-ಪುಟ್ಟ ಘಟನೆಗಳಿಗೆ ಅಂತಹ ಮಹತ್ವ ಕೊಡದಿದ್ದರೂ ಒಡಕು ಕಾಣುತ್ತಿತ್ತು.


ಶಂಭಟ್ಟರ ಪತ್ನಿ ಲಕ್ಷ್ಮಿಯವರ ವರ್ಷದ ಕಾರ್ಯದ ದಿನ ನಿರ್ದಾಕ್ಷಿಣ್ಯವಾಗಿ ಹಿರಿಯ ಮಗ ನಾರಾಯಣ ಹಾಗೂ ಎರಡನೇ ಮಗ ಶಂಕರ ಇಬ್ಬರೂ ಪಾಲು ಕೇಳಿದಾಗ ಇಂದಲ್ಲಾ ನಾಳೆ ಇವರು ಪಾಲಾಗುವವರೇ ಎಂದು ಗೊತ್ತಾಗಿದ್ದರಿಂದ, ಸ್ವಲ್ಪ ದಿನ ತಡೆಯುವವರೇ ಎಂದು ಕೇಳಿ ಮಳೆಗಾಲದ ಬಳಿಕ ಪಾಲಿಗೆ ಒಂದು ದಿನ ನಿಶ್ಚಯಿಸಿ, ಅಲ್ಲಿಯವರೆಗೂ ಹೇಗಾದರೂ ನಿಭಾಯಿಸಿ ಎಂದಿದ್ದರು. ಶ್ರೀಧರ ತನ್ನ ಪರೀಕ್ಷೆಯ ಕಾರಣ ಅಂದು ಅಲ್ಲಿ ಹಾಜರಿರಲಿಲ್ಲ.


ಮುಂದೆ ಗೌರಿ ಹಾಗೂ ರಾಮನ ಪರಿಸ್ಥಿತಿ ಏನು ಎಂಬುದನ್ನು ಅವರು ಮುಂದಾಲೋಚಿಸಿದ್ದರು. ರಾಜಾರಾಮ ಹಾಗೂ ಜಾನಕಿಯ ಮನಸ್ಸು ಎಷ್ಟು ನಿಷ್ಕಲ್ಮಶವೆಂದರೆ ತಮ್ಮೊಡನೆ ಅವರನ್ನು ಸಾಕಲು ತಮ್ಮಲ್ಲಿಯೇ ನಿಶ್ಚಯಿಸಿಕೊಂಡಿದ್ದರು. ಹೇಗೂ ನಾರಾಯಣ, ಶಂಕರರು ಅವರ ಕುರಿತು ಆಲೋಚಿಸಿರಲಾರರು ಎಂದುಕೊಂಡು.. 


ಕೂಡುಮನೆ ಪಾಲಾಗುವ ಗ ನಾರಾಯಣನಿಗೆ ಅವನ ಭಾವ ಈಶ್ವರ ಭಟ್ಟನ ಸಹಾಯ ಸಿಕ್ಕಿತು. ಶಂಕರ ಹಾಗೂ ನಾರಾಯಣರಿಗೆ ಅವರವರು ಬೇಕಾದದ್ದೇ ಸಿಕ್ಕಿತು. ರಾಜಾರಾಮನಿಗೆ ಇಷ್ಟವಿಲ್ಲದಿದ್ದರೂ ತನ್ನ ಪಾಲು ಪಡೆದುಕೊಳ್ಳಲೇ ಬೇಕಿತ್ತು. 


ಶ್ರೀಧರ ತನ್ನ ತಂದೆಯ ಬಳಿ ತನ್ನ ಪಾಲು ಕೇಳಿದ್ದು ನಾರಾಯಣನಿಗೆ ಸಿಟ್ಟು ತರಿಸಿತ್ತು. ತಾತನ ಜೊತೆ ಉಳಿಯುವ ನಿರ್ಧಾರ ತೆಗೆದುಕೊಂಡಾಗ.. ಆ ಆಸ್ತಿಯನ್ನು ಒಳಹಾಕಿಕೊಳ್ಳಲು ಉಳಿಯುತ್ತಿದ್ದಾನೆಂಬ ಚಿಕ್ಕಪ್ಪನ ಅನುಮಾನದ ಕಟು ಮಾತುಗಳನ್ನು ಕೇಳಬೇಕಾಯಿತು. ಕೂಡುಮನೆಯಲ್ಲಿ ಶಂಭಟ್ಟರು, ಶ್ರೀಧರ, ಗೌರಿ ಹಾಗೂ ರಾಮರು ಉಳಿದರು. ಸ್ವಯಾರ್ಜಿತ ಆಸ್ತಿ ಕೈಹಿಡಿಡಿತ್ತು.


ಮುಂದೆ ಶಂಕರ, ನಾರಾಯಣ ಹಾಗೂ ರಾಜಾರಾಮರ ಬದುಕು ಹೇಗೆ ಸಾಗಿತು..?


ಒಡೆದು ಹೋದ ಕೂಡುಮನೆಯಲ್ಲಿ ಹೆಣ್ಣುಮಕ್ಕಳು ಮುಂದೆ ಸಂಬಂಧವಿಟ್ಟುಕೊಂಡಾದರೂ ಹೇಗೆ..?


ಶಂಭಟ್ಟರು ದೀರ್ಘಕಾಲ ಉಳಿಯಲಿಲ್ಲ. ಶ್ರೀಧರನೇ ಯಜಮಾನನಾಗಿ ನಿಂತು ನಿಭಾಯಿಸುತ್ತಿದ್ದ. ಶಂಕರನಿಂದ ಆಗಾಗ ತೊಂದರೆಗಳು ಒದಗಿ ಬಂದಾಗ ಪರಿಹಾರ ಕಂಡುಕೊಂಡಿದ್ದೇಗೆ..? ಹಿತೈಷಿಯಂತೆ ಕುಮೇರಿ ಕೃಷ್ಣಪ್ಪನವರಿದ್ದರು. ಶಂಕರ ಆ ಜಾಗವನ್ನು ಮಾಡಿ ಬೇರೆಡೆಗೆ ಹೋದ ಸಂದರ್ಭದಲ್ಲಿ ಕೆದಿಲಾಯರು ಬಂದರು. ಅವರ ಒಡನಾಟ ಹೇಗಿತ್ತು..?


ಅತ್ತೆ ಹಾಗೂ ರಾಮನನ್ನು ಜೊತೆಗೆ ಅಜ್ಜನ ಕೃಷಿ ಭೂಮಿಯನ್ನು ಕಾಪಾಡುತ್ತಾ ಶ್ರೀಧರ ಬದುಕಿದ ಬದುಕು ನಿಜಕ್ಕೂ ಆದರ್ಶನೀಯ. ರಾಜಾರಾಮನಿಂದ ಸಿಗುತ್ತಿದ್ದ ಬೆಂಬಲವೂ ಇಲ್ಲಿ ನೆನಪಿರಬೇಕಾದಂತದ್ದು. ಶ್ರೀಹರಿಯ ಯಾವ ಕೆಲಸದಿಂದ ನಾರಾಯಣ ಮನಸ್ಸು ಕೆಡಿಸಿಕೊಂಡ..? ನಾರಾಯಣ ಹಾಗೂ ಶ್ರೀಧರನ ಸಂಬಂಧ ಹಲಸಲು ಶಾರದೆ ಎಷ್ಟರಮಟ್ಟಿಗೆ ಕಾರಣವಾಗುತ್ತಾಳೆ..? ಶ್ರೀಧರನ ವಿವಾಹಾನಂತರದ ಬದಲಾವಣೆಗಳು ಹೇಗಿದ್ದವು..? ಶ್ರೀಧರನ ಓದಿನ ಜ್ಞಾನ ಎಷ್ಟು ಸಹಕಾರಿಯಾಯಿತು..?


ಕಾಲ ಎಲ್ಲವನ್ನು ಬದಲಿಸುತ್ತದೆ ಅನ್ನುವ ಮಾತು ಕೆಲವು ಬಾರಿ ನಿಜವಾದರೂ.. ಒಂದು ತಲೆಮಾರಿನ ಬಳಿಕ ಮತ್ತೆ ಮನಸ್ಸುಗಳು ಕೂಡಿಕೊಂಡು ಮನೆ ಒಂದಾಗುತ್ತದೆಯೇ..? ಈ ಕಲ್ಪನೆ ಎಷ್ಟು ರಮ್ಯವಲ್ಲವೇ..!? ಅದು ನಿಜವಾಗಿಯೂ ಆದರೆ..? ಕೂಡುಮನೆ ಇಂತಹ ದಿನಗಳನ್ನು ಕಾಣುವುದರಲ್ಲಿತ್ತು. ಅದರ ಹಾದಿ ಹೇಗಿತ್ತು ಓದಿ ನೋಡಿ.


ಕಾದಂಬರಿಯ ಕೊನೆಯ ಮಾತಂತೂ ಶ್ರೀಧರ ಭವಿಷ್ಯದ ಕುರಿತು ಆಲೋಚಿಸಿರುವುದನ್ನು ಹಾಗೂ ಮನುಷ್ಯರ ಜೊತೆಗೆ ಕಾಲದ ಬದಲಾವಣೆಯನ್ನು ಸೂಚಿಸುತ್ತದೆ. ಇದು ಮತ್ತೊಂದು ಬದಲಾವಣೆಗೆ ನಾಂದಿಯೇ..? ಆ ಮಾತುಗಳೇನು ಓದಿ ನೋಡಿ.


ಆಪ್ತವಾದ ಓದು. ಒಳ್ಳೆಯ ಭರವಸೆಗಳು, ನಡೆಗಳು ಕಾದಂಬರಿಯಾಚೆಗೂ ಮನಸ್ಸಲ್ಲುಳಿಯುತ್ತವೆ. ಕಡಬ, ಪಂಜ, ಪುತ್ತೂರಿನ ಪರಿಸರ ಓದನ್ನು ಇನ್ನಷ್ಟು ಆಪ್ತವಾಗಿಸಿತು.

~ ವಿಭಾ ವಿಶ್ವನಾಥ್

ಗಾಳಿ ಗೂಡು (ಪುಸ್ತಕ ಯಾನ - 461)


ಪುಸ್ತಕದ ಶೀರ್ಷಿಕೆ : ಗಾಳಿ ಗೂಡು 

ಲೇಖಕರು : 'ಶ್ರೀ' ತಲಗೇರಿ

ಪ್ರಕಾಶಕರು : ಸಸಿ ಪ್ರಕಾಶನ 

ಪ್ರಥಮ ಮುದ್ರಣ : 2026

ಪುಟಗಳು : 80

ಬೆಲೆ : 120 ರೂ. 


'ಶ್ರೀ' ತಲಗೇರಿ ಅವರ ಮೊದಲ ಪುಸ್ತಕ ಒಂಟಿ ಟೊಂಗೆಯ ಲಾಂದ್ರ ಎಂಬ ಕವನ ಸಂಕಲನ ಇ-ಪುಸ್ತಕವಾಗಿ ಲಭ್ಯವಿದೆ. ಇದು ಅವರ ಮೊದಲ ಫಿಸಿಕಲ್ ಹೊತ್ತಿಗೆ ಹಾಗೂ ಕಥಾ ಸಂಕಲನ. ಛಾಯಾಚಿತ್ರಗಳೊಂದಿಗೆ ಚೆಂದದ ಸಾಲುಗಳೊಂದಿಗೆ ಸೆಳೆಯುತ್ತಿದ್ದ ಇವರ ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.


ನೆರಳು : ವಿಳಂಬನ ಪ್ರತಿದಿನದ ದಿನಚರಿಯ ಜೊತೆಗೆ ಅವನು ಸೂಕ್ಷ್ಮವಾಗಿ ಗಮನಿಸುತ್ತಲೇ.. ಏಕಾಂತವನ್ನು ಅನುಭವಿಸುವ, ತನ್ನೊಡನೆ ತಾನು ಕಳೆಯುವ ಕ್ಷಣಗಳನ್ನು ತೆರೆದಿಡುತ್ತಾ.. ಅವನ ಬಾಲ್ಯದ ಘಟನೆಯ ಜೊತೆಗೆ, ಈಗ ಅವನ ಕಣ್ಣಿಗೆ ಕಾಣುವ ಆದರೆ ಮಾತುಕತೆಯೇ ಇಲ್ಲದ ನೆರಳುಗಳ ಜೊತೆಗಿನ ಒಡನಾಟ ಇಲ್ಲಿದೆ. ವಿಳಂಬನ ಬದುಕಿನ ಆಸಕ್ತಿದಾಯಕ ಕಥೆಯನ್ನು ಇಲ್ಲಿ ಕಾಣಬಹುದು.


ಸೀತಾಳೆ ಹೂವು : ಅಮ್ಮನಿಗೆ ಸೀತಾಳೆ ಹೂವು ಎಂದರೆ ಭಯಂಕರ ಇಷ್ಟ ಎನ್ನುತ್ತಾ ಮಳೆಗಾಲದ ನೆನಪಿನೊಂದಿಗೆ ಪರ ಸೀತಾಳೆ ಹೂವಿನ ಪರಿಯನ್ನು ಕಟ್ಟಿಕೊಡುತ್ತಾನೆ. ಈ ಸೀತೆ ಹೂವಿನ ಜೊತೆಗೆ ಅಮ್ಮನ ಹಾಗೂ ಅಪ್ಪನ ಜೊತೆಗೆ ಅಪ್ಪನ ಮತ್ತೊಂದು ಸಂಸಾರದ ಚಿತ್ರಣ ತೆರೆದುಕೊಳ್ಳುತ್ತದೆ. ಚಿಕ್ಕಮ್ಮನ ಮಗ ಅಪರ ಅಂತ್ಯಸಂಸ್ಕಾರ ಮಾಡಿದನೋ ಅಥವಾ ಪರನೋ..? ಹೀಗೆ ಸಾಗುವ ಕಥನ ಮುಂದೆ ಪರ ಹಾಗೂ ಅಪರರಲ್ಲಿ ಅಮ್ಮ ಆಸೆಪಡುತ್ತಿದ್ದ ಸೀತಾಳೆ ಹೂವಿಗಾಗಿಯೇ ಜಗಳ ಶುರುವಾಗಿತ್ತು. ಹೀಗೆ ಶುರುವಾದ ಜಗಳ ಮತ್ತೊಂದು ಸತ್ಯವನ್ನು ಓದುಗರಿಗೆ ತೆರೆದಿಡುತ್ತದೆ


ಸತ್ತೆ : ಸಾಹಿತಿಯಾದವರು ಎಲ್ಲದಕ್ಕೂ ಅಭಿಪ್ರಾಯ ಹೇಳಲೇ ಬೇಕಾ..? ಇಂತಹದೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದ ಅಭಿಸಾರ, ಅಷ್ಟೇ ಅಲ್ಲದೆ ಪತ್ರಕರ್ತ ಗೆಳೆಯ ವಾರಂಗ ಯಾವುದಾದರೊಂದು ಸ್ಟೇಟ್ಮೆಂಟ್ ಕೊಡುವಂತೆ ಗೆಳೆಯನಿಗೆ ತಿಳಿ ಹೇಳಿ ಅವನ ಹೇಳಿಕೆಗಾಗಿ ಕಾಯುತ್ತಿದ್ದ. ಆದರೆ, ಅಭಿಸಾರನ ಗಮನವೆಲ್ಲವೂ ಇದ್ದದ್ದು ಬೇರೆಡೆಗೆ. ಸಾಮಾಜಿಕ ತಲ್ಲಣಕ್ಕೆ ಸಾಹಿತಿಗಳು ಸ್ಪಂದಿಸುವ ಬಗೆ ಹೇಗಿರುತ್ತದೆ..? ಅವರ ಬದುಕಿನ ನೈಜ ರೀತಿ ಹೇಗಿರುತ್ತದೆ ಎರಡಕ್ಕೂ ಉತ್ತರ ಇಲ್ಲಿದೆ. ಹಾಗೆಂದು ಮಾನವೀಯತೆಯನ್ನು ಬದಿಗಿಟ್ಟು ಬದುಕುವ ಮನುಷ್ಯನಲ್ಲ ಅಭಿಸಾರ, ಆತನ ಮಿಡಿತ ಯಾವ ಕಡೆಗಿತ್ತು ಓದಿ ನೋಡಿ.


ಮೀನ್ ಗೌರಿಯ ದಂಡಯಾತ್ರೆ : ದಿನಾ ಮೀನು ಮಾರುವ ಗೌರಕ್ಕ ಕಾಣೆಯಾಗಿದ್ದರ ಹಿಂದೆಯೇ ಆಕೆಯ ಕುರಿತಾಗಿ ಹಲವಾರು ಸುದ್ದಿಗಳು ಊರಿನಲ್ಲಿ ಹಬ್ಬಿದ್ದವು. ಒಂದು ವಾರ ಕಳೆದು ಒಂದು ದಿನ ಗೌರಕ್ಕ ಬಂದಾಗ ಮೀನು ಬುಟ್ಟಿ ಇರಲಿಲ್ಲ. ಬದಲಾಗಿ ಇದ್ದದ್ದು ಕೋವಿ, ಗೌಡರ ಮನೆಯ ಕಳೆದು ಹೋಗಿದ್ದ ಕೋವಿ ಗೌರಕ್ಕನ ಕೈಗೆ ಬಂದದ್ದು ಹೇಗೆ..? ಗೌರಕ್ಕನ ದಂಡೆಯಾತ್ರೆಯ ಕಥೆ ಇಲ್ಲಿದೆ. 


ಸ್ತ್ರೀ ವೇಷ : ಸ್ತ್ರೀವೇಷ ಹಾಕುತ್ತಾ ಬಂದಿದ್ದ ಜಟ್ಟನಿಗೆ ಈ ಸಲ ಸ್ತ್ರೀ ವೇಷ ಹಾಕಬೇಡ ಎಂದದ್ದು "ಅದೆಷ್ಟೋ ವರ್ಷಗಳ ನೆರಳೊಂದು ಬಿಟ್ಟು ಹೋದಂತೆ, ಅದೆಷ್ಟೋ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಕನ್ನಡಿಯೊಂದು ಫಟಾರನೆ ಒಡೆದು ಹೋದಂತೆ" ಅನಿಸಿತು. ಮಾತ್ರವಲ್ಲದೇ ಅವನು ಕಳೆದುಕೊಂಡದ್ದು ಏನೆಂದು ಅವನ ಬಾಯಿಯಲ್ಲಿಯೇ ಕೇಳಬೇಕು. ವೇಷದ ಗುಂಗು ಶುರುವಾಗುವ ಮುನ್ನ ಜಟ್ಟ ನ ಚಿತ್ರಣವನ್ನು ಬಿಚ್ಚಿಡುತ್ತಾರೆ. ಹಿರಿ ಸುಗ್ಗಿ ಹಾಗೂ ಕಿರಿ ಸುಗ್ಗಿಯ ಸಂಭ್ರಮಗಳನ್ನು ತೋರುತ್ತಾ ಕಳೆದು ಹೋದ ದೇವರ ಬದಲಿಗೆ ಪೂಜಿಸಲು ಗುಡಿಭಟ್ಟರು ಕೊಟ್ಟ ಸಲಹೆ ಏನು..? ಇದಕ್ಕೂ ಜಟ್ಟನಿಗೂ ಇರುವ ಕೊಂಡಿ ಏನು..?


ಗುಲಾಬಿ ಬೊಂಬಾಯಿ ಮಿಠಾಯಿ : ಗೋಳಿಯ ಮಗ ಬೀರ ವಾಲಿಬಾಲ್ ಆಡಿ ಹೊರಟ ನಂತರ ಗಿಬ್ಬೆಲ್ಲ ಅವನ ಜೊತೆಯಾಗಿದ್ದ. ಬೀರನಿಗಿಂತ 15-16 ವರ್ಷ ದೊಡ್ಡವನಾಗಿದ್ದವನು. ಮಕ್ಕಳ ದೃಷ್ಟಿಯಲ್ಲಿ ಒಂದು ರೀತಿಯ ಹೀರೋ ಎಂದರೂ ತಪ್ಪಾಗಲಾರದು. ಬೀರ ಗಿಬ್ಬೆಲ್ಲನ ಕುರಿತು ಹೇಳಿದ ಒಂದು ಸತ್ಯದಿಂದ ಗೋಳಿ ಮರುದಿನ ಬಂದು ಕೂಗಾಡಿದ ಪರಿಣಾಮ ಎಲ್ಲರೆದುರು ಗಿಬ್ಬೆಲ್ಲನನ್ನು ಯಾವ ರೀತಿಯಲ್ಲಿ ತೋರಿತು..? ಇದರ ಸತ್ಯಾಸತ್ಯತೆ ಏನು? ಗಿಬ್ಬೆಲ್ಲನ ಮನದ ತಳಮಳಗಳ ಜೊತೆಗೆ ವಾಸ್ತವ ಇಲ್ಲಿದೆ.


ಬನ್ನಿ : ಮರವೆಂದರೆ ಆತ್ಮಬಂಧುವಂತೆ ಅವನ ಪಾಲಿಗೆ. ಕಷ್ಟಪಟ್ಟು ಬೆಳೆಸಿದ ಆ ಮರ ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನಾದರೂ ಮಾಡದಿದ್ದರೆ ಅಲ್ಲಿರುತ್ತಿರಲಿಲ್ಲ. ತುರಿಕೆಯ ಮಸಲತ್ತಿನಿಂದ ಆ ಮರ ಕಡಿಯಲ್ಪಡುತ್ತಿತ್ತು. ಅಂಚೆ ಕಛೇರಿಗೂ ಆ ಮರಕ್ಕೂ ಅವಿನಾಭಾವ ನಂಟು ಎಂಬಂತಿದ್ದ ಆ ಮರದ ಜೊತೆಗಿನ ಒಡನಾಟ, ಇವೆಲ್ಲದರ ಜೊತೆಗೆ ಪೂರ್ವಜರು ಮರಗಳಿಗಾಗಿ ಮಾಡಿದ ತ್ಯಾಗ ಎಲ್ಲವನ್ನು ತೆರೆದಿಟ್ಟಿದ್ದಾರೆ. ಶಮಿ ವೃಕ್ಷ ಏನಾಯ್ತು ತಿಳಿಯಲು ಕಥೆ ಓದಬೇಕು.


ಮುರುಕು ಸ್ವಪ್ನ ಬಿಂಬ : ಏಕನಾಥರು ಇಲ್ಲವಾಗುವ ಸಂದರ್ಭದಲ್ಲಿ ಪತ್ನಿ ಗಾರ್ಗಿ ಹಾಗೂ ಕೆಲಸದ ಭ್ರಮರಿಗೆ ಅವರು ಹಾಗೆ ಇಲ್ಲವಾಗುತ್ತಾರೆ ಎನ್ನುವ ಸೂಚನೆಯೂ ಕೊಟ್ಟಿರಲಿಲ್ಲ. ಮಗನ ಕುರಿತ ಅವರ ಕನವರಿಕೆ ಅವರ ಕೊನೆಯ ಕ್ಷಣಗಳು ಗಾರ್ಗಿಯಲ್ಲಿಯೂ ತಲ್ಲಣ ಹುಟ್ಟಿಸಿದ್ದವು. ಆದರೆ ಮಗ..? ಅಪ್ಪನ ಹೆಣ ನೋಡಲು ಬರಲು ಸಿದ್ಧವಿಲ್ಲದ ಅವನನ್ನು ಅಕ್ಕನ ಮಾವ ಕರೆಸಿದರು ಎಂದರೆ ಎಷ್ಟು ನಿಜವಾಗಬಹುದು " ಅಥವಾ ಎಷ್ಟು ಸುಳ್ಳಾಗಬಹುದು..? ಸಿದ್ದಾರ್ಥ ಬಂದಾಗ ಯಾವ ಭಾವದಲ್ಲಿದ್ದ..? ಅಷ್ಟಕ್ಕೂ ಆತನ ನಿರಾಕರಣೆಯ ಹಿಂದಿದ್ದ ಕಾರಣ ಎಷ್ಟು ಸರಿ..? ಸಿದ್ದಾರ್ಥ ಎಂಬ ಹೆಸರೇ ಇಲ್ಲಿ ಸಾಕಷ್ಟು ಹೇಳುತ್ತದೆ. ಸಿದ್ಧಾರ್ಥನನ್ನು ಕಟ್ಟಿ ಹಾಕಲು ಯಾರು ಯಾವೆಲ್ಲ ಪ್ರಯತ್ನಗಳನ್ನು ಮಾಡಿದರು ಹಾಗೂ ಯಾರು ಸಫಲರಾದರು..?


ಒಂದು ಹೆಲ್ಮೆಟ್ಟಿನ ಕತೆ : "ಹತಾಶೆಯಲ್ಲಿ ತೊಳಸು ಹೆಲ್ಮೆಟ್ ತೆಗೆದು ಬಿಸಾಡಿದ, ಅದು ಉರುಳುರುಳಿ ಸೊಣಕಿಗಿಂತಲೂ ಮುಂದೆ ಹೋಗಿ ರಸ್ತೆಗೆ ಬಂದು ಬಿದ್ದಿತ್ತು, ಹೆಲ್ಮೆಟ್ಟಿನ ತುಂಬಾ ಗೀರುಗಳು, ಮುಂದಿನ ಗಾಜು ಒಡೆದಿತ್ತು" ಈ ಸಾಲುಗಳ ಆಚೆಗೆ ಕಥೆಗೆ ಬಹಳಷ್ಟು ವಿಸ್ತಾರವಿದೆ ಹಾಗೂ ಮತ್ತೊಂದು ಆಯಾಮವೇ ಇದೆ. ಸೂಕ್ಷ್ಮವಾಗಿ ತೆರೆದುಕೊಳ್ಳುವ ತೊಳಸು ಹಾಗೂ ಸೊಣಕಿಯರ ಸಂಬಂಧವೂ ಇಲ್ಲಿದೆ.


ನಾಯಿ ಪಾಡು : ಮನುಷ್ಯರು ನಾಯಿ ಪಾಡು ಎಂಬುದನ್ನು ಯಾವೆಲ್ಲ ರೀತಿಯಲ್ಲಿ ಬಳಸುತ್ತಾರಲ್ಲವಾ..?! ಇಲ್ಲಿ ನಾಯಿಯೇ ತನ್ನ ಪಾಡನ್ನು ತೆರೆದಿಡುತ್ತಾ ಹೋಗುತ್ತದೆ. ನಿಯತ್ತಿಗೆ ಮತ್ತೊಂದು ಹೆಸರಾದ ನಾಯಿ ಸಾಕಿದವರ ಕುರಿತಾಗಿ ಬೆಳೆಸಿಕೊಳ್ಳುವ ನಿಷ್ಠೆ, ಅನ್ನ ತಿಂದ ಮನೆಯವರ ಕಡೆಗೆ ಸಹನೆಯಿಂದ ನೋಡುವ ಪರಿ ಅದರ ಪ್ರೀತಿಯ ಆಳವನ್ನು ತೋರುತ್ತದೆ. ಕೊನೆಯ ದಿನಗಳಲ್ಲಿ ಏನೂ ಇಲ್ಲದ ಮನುಷ್ಯನ ಪಾಡು ಇದಕ್ಕಿಂತ ವಿಭಿನ್ನವಾಗಿರಲಾರದೇನೋ ಎನ್ನಿಸಿತು.


ಕಥೆಗಳಲ್ಲಿ ವಿಭಿನ್ನ ಹಾಗೂ ವಿಚಿತ್ರವೆನಿಸುವ ಹೆಸರುಗಳು ಸಿಕ್ಕವು. ವಿಳಂಬ, ತೊಳಸು, ಸುಷುಮ್ನಾ, ಪರ - ಅಪರ, ಸಗಮಾ, ತುರಿಕೆ ಇತ್ಯಾದಿ.

ಈ ಕಥಾ ಸಂಕಲನದಲ್ಲಿ ಒಂದು ಹೆಲ್ಮೆಟ್ಟಿನ ಕಥೆ ಹಾಗೂ ಗುಲಾಬಿ ಬೊಂಬಾಯಿ ಮಿಠಾಯಿಗಳಲ್ಲಿ ಸೂಕ್ಷ್ಮವಾದ ಕಥಾವಸ್ತುವನ್ನು ಸೂಕ್ಷ್ಮವಾಗಿ ತೆರೆದಿಟಿದ್ದಾರೆ. 

ಒಂಟಿತನ, ಅನಾಥ ಭಾವದ ಕಥೆಗಳನ್ನು ಅಷ್ಟೇ ವಿವರವಾಗಿ ಅಂತೆಯೇ ತೀರಾ ನೇರಾನೇರವಲ್ಲದ ರೀತಿಯಲ್ಲಿ ಹೇಳುತ್ತಲೇ ನಮ್ಮೊಳಗೆ ಆ ಭಾವಗಳನ್ನು ಕಟ್ಟಿಕೊಡುತ್ತಾರೆ. ಸ್ತ್ರೀವೇಷ, ನೆರಳು, ಮುರುಕು ಸ್ವಪ್ನ ಬಿಂಬ, ಸೀತಾಳೆ ಹಾವು, ನಾಯಿ ಪಾಡು ಈ ಕಥೆಗಳಲ್ಲಿ ಈ ಭಾವಗಳನ್ನು ಕಾಣಬಹುದು. 

ಸತ್ತೆ, ಬನ್ನಿ, ಮೀನ್ ಗೌರಿಯ ದಂಡಯಾತ್ರೆ ಕಥೆಗಳಲ್ಲಿ ಅಭಿವ್ಯಕ್ತಿಯ ಜೊತೆಗೆ ಸೂಕ್ಷ್ಮ ಸಂದೇಶಗಳನ್ನು ಕಟ್ಟಿಕೊಟ್ಟಿದ್ದಾರೆ.

ಕಾವ್ಯಾತ್ಮಕ ಭಾಷೆಯ ಈ ಕಥೆಗಳು ಸೆಳೆಯುತ್ತವೆ. ಜೊತೆಗೆ ಇಷ್ಟು ಬೇಗ ಮುಗಿದು ಹೋದವಾ ಎನ್ನಿಸುತ್ತವೆ. ಸೊಗಸಾದ ಕತೆಗಳ ಚೆಂದದ ಓದು. 


~ವಿಭಾ ವಿಶ್ವನಾಥ್