ಭಾನುವಾರ, ಆಗಸ್ಟ್ 23, 2026

ಹುಚ್ಚಿ ಸತ್ತದಲ್ಲ..

 


"ಅವಳು ಅಡುಗೆಯ ತಯಾರಿಯ ಹಂತದಲ್ಲಿದ್ದಳು. ತನ್ನದೇ ಗುಂಗಿನಲ್ಲಿ ಮುಳುಗಿರುವಾಗ ಅದೇನೋ ಸದ್ದಾಯಿತು! ಅವಳು ಬೆಚ್ಚಿ ಬಿದ್ದಳು!" 


ತಟ್ಟನೆ "ಪಾಪು, ಪಾಪು.. ಪಾಪು, ಪಾಪು" ಎಂದು ಕರೆಯುತ್ತಾ ಇಡೀ ಮನೆ ಹುಡುಕಿದಳು. ಯಾಕೋ ಮನಸ್ಸು ಕೇಡನ್ನೇ ಶಂಕಿಸುತ್ತಿತ್ತು. ದೇವರ ಬಳಿ ಮನಸ್ಸಿನಲ್ಲಿಯೇ ಬೇಡುತ್ತಾ ಮನೆಯ ಮುಂದಿನ ತೊಟ್ಟಿಯ ಬಳಿ ಬಂದಳು. ತೊಟ್ಟಿಯ ಬಳಿ ಯಾರೂ ಕಾಣಲಿಲ್ಲ. ಅಲ್ಲೇ ಕೊಂಚ ಮುಂದೆ ಇದ್ದ ಬಾವಿಯ ಬಳಿ ಬಂದಳು. ಅಲ್ಲಿ ಬಗ್ಗಿ ನೋಡಿದರೆ ಜೀವ ಬಾಯಿಗೆ ಬಂದಿತ್ತು. ಪಾಪುವನ್ನು ಹಿಡಿದುಕೊಂಡು ಸರಳಾ ಬಾವಿಯಿಂದ ಹೊರ ಬರಲು ಸೆಣೆಸಾಡುತ್ತಿದ್ದಳು. ತಕ್ಷಣವೇ ಅಲ್ಲಿ ನಿಂತು ಜೋರು ಬೊಬ್ಬೆ ಹೊಡೆದು ಕೆಲಸದವರನ್ನೆಲ್ಲಾ ಕರೆದಳು. ಮಂಜ ಮಿಂಚಿನಂತೆ ಹಾರಿ ಇಬ್ಬರನ್ನೂ ಮೇಲೆ ತಂದಿದ್ದ. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು.


ಸುಮಿತ್ರಾ ಪ್ರಲಾಪಿಸುತ್ತಿದ್ದಳು. ಹಾಗೆಯೇ, ಅವಳ ಗಮನ ಹಿಂದಕ್ಕೆ ಓಡಿತು. ಪಾಪು ಮತ್ತು ಸರಳಾ ಇಬ್ಬರೂ ಮನೆಯಲ್ಲಿ ಒಂದು ರೀತಿ ಅಬ್ಬೇಪಾರಿಗಳೇ.. ಕೇಳುವವರೇ ದಿಕ್ಕಿಲ್ಲ.


ಸುಮಿತ್ರಾ ಪಾಪುವನ್ನು ಹೆತ್ತಾಗ ಗಂಡನ ಕಡೆಯಿಂದ ಬಂದು ನೋಡಿದ್ದವರು ಮೂಗು ಮುರಿದಿದ್ದರು. "ಹುಟ್ಟಿದ್ದು ಹೆಣ್ಣು" ಎಂದು.. ಮಗುವಿಗೆ ನಾಮಕರಣ ಮಾಡುವ ಸೌಜನ್ಯವನ್ನು ತೋರದೆ ಕಾಳಜಿಯನ್ನೂ ಮಾಡದೆ ಹಾಗೆಯೇ ಬಿಟ್ಟು ಬಿಟ್ಟಿದ್ದರು. ಅದಕ್ಕೆ ಅವಳು ಇನ್ನು "ಪಾಪು". ಜೊತೆಗೆ ದಿನ ಕಳೆದಂತೆ ಅರಿವಾಗಿದ್ದು ಅವಳು ಮೂಕಿ ಮತ್ತು ಕಿವುಡಿ. ಮೇಲೆ ಹೆಣ್ಣು ಬೇರೆ..


ಬಾಣಂತನ ಮುಗಿಯುವ ಮೊದಲೇ ಇಲ್ಲಿನ ಚಾಕರಿ ಕಾಯುತ್ತಿತ್ತು. ಮಗುವನ್ನು ಆಡಿಸಲು ಯಾರೂ ಮುಂದೆ ಬಾರದಿದ್ದಾಗ ಈ ಮನೆಯಲ್ಲಿ ಅವಳ ಜೊತೆಯಾಗಿದ್ದು ಸರಳಾ. ಮನೆಯವರ ಪಾಲಿಗೆ ಅವಳು "ಹುಚ್ಚಿ ಸರಳಾ". ಈ ಮನೆ ಮಗಳು. ಅವಳ ಮದುವೆಯ ದಿನ ಮದುವೆಯ ನಂತರ ಮಂಟಪದಿಂದ ಗಂಡನ ಮನೆಗೆ ಹೋಗುತ್ತಿರುವಾಗ ದೊಡ್ಡ ಅಪಘಾತವಾಗಿ ಗಂಡನನ್ನು ಕಳೆದುಕೊಂಡಳು. ಅದೇ ಆಘಾತಕ್ಕೆ ಹುಚ್ಚಿಯಾದಳು. ಅವಳನ್ನು ಸರಿಪಡಿಸುವ ಕೆಲಸವನ್ನು ಯಾರೂ ಮಾಡಲಿಲ್ಲ. ಗಂಡನ ಮನೆಯವರು ಅವಳನ್ನು ಕೂಡಲಿಲ್ಲವಾದ್ದರಿಂದ ಈ ಮನೆಯಲ್ಲಿ ಹುಟ್ಟಿದ ತಪ್ಪಿಗೆ ಇಲ್ಲಿಯೇ ಉಳಿದುಕೊಂಡಳು. ಅದೂ ಹುಚ್ಚಿಯಾಗಿ...


"ಅವಳಿಗೆ ಹುಚ್ಚು, ಮಗುವನ್ನು ಅವಳ ಬಳಿ ಬಿಡಬೇಡ" ಎಂದ ಅತ್ತೆಗೆ "ಆಯ್ತು ಅತ್ತೆ, ಹಾಗೇ ನೀವೇ ಸ್ವಲ್ಪ ಗಮನ ಕೊಡಿ" ಎಂದಾಗ "ದೇವಸ್ಥಾನಕ್ಕೆ ಹೊತ್ತಾಯ್ತು" ಎನ್ನುತ್ತಾ ನುಣುಚಿಕೊಂಡಿದ್ದರು. ಮಾವ, ಗಂಡ, ಮೈದುನರನ್ನಂತೂ ಮಾತನಾಡಿಸುವ ಹಾಗೆಯೇ ಇಲ್ಲ. ಇದೇ ಹುಚ್ಚಿ ಪಾಪುವನ್ನು ಎದೆಗವಚಿಕೊಂಡು ತನ್ನದೇ ಮಗು ಎಂಬಂತೆ ಬೆಳೆಸತೊಡಗಿದ್ದು.. ಮಗುವಿಗೆ ಇನ್ನೇನು ಒಂದು ವಾರದಲ್ಲಿ ಮೂರು ವರ್ಷ ತುಂಬುವುದರಲ್ಲಿತ್ತು.


ಎಲ್ಲಿದ್ದರೋ ಅತ್ತೆ ಲಬಲಬನೆ ಬಾಯಿ ಬಡಿದುಕೊಂಡು "ಅಯ್ಯೋ ಪಾಪಿ, ಮಗುವನ್ನು ಕೊಂದುಬಿಟ್ಟೆಯಲ್ಲೇ.." ಎನ್ನುತ್ತಾ ಓಡೋಡಿ ಬಂದರು. ಸರಳಾ ಕಾಣಲಿಲ್ಲವಾಗಿ "ಅತ್ತೆ, ಮಗುವಿನ ಮೇಲೆ ಹಾಗೇ ಕಣ್ಣಿಟ್ಟಿರಿ" ಎಂದಿದ್ದಕ್ಕೆ ಹೂಂಗುಟ್ಟಿದ್ದರು. ಆದರೆ, ಅದ್ಯಾವ ಮಾಯದಲ್ಲೋ ಮಾಯವಾಗಿದ್ದರು. ಅತ್ತೆ ಇರುತ್ತಾರೆ ಎಂಬ ಒಂದೇ ಭರವಸೆಯ ಮೇಲಲ್ಲವಾ ಅಡುಗೆ ತಯಾರಿಗೆ ನಿಂತದ್ದು. ಅಷ್ಟರಲ್ಲಿ...


"ಈ ಹುಚ್ಚಿನೇ ಮಗುವನ್ನು ಬಾವಿಗೆ ದೂಡಿದ್ದು.."

"ಹುಚ್ಚು ನೆತ್ತಿಗೇರಿತ್ತೇನೋ.. ಮಗುವನ್ನು ತಳ್ಳಿಯೇ ಬಿಟ್ಟಿದ್ದಾಳೆ. "

"ಮಗುವನ್ನು ಹುಚ್ಚಿ ಜೊತೆ ಬಿಡುತ್ತಾರಾ.. ಇವರಿಗೆ ಸ್ವಲ್ಪವಾದರೂ ಜ್ಞಾನ ಬೇಡವಾ.."


ಆಳಿಗೊಂದೊಂದು ಕಲ್ಲು ಎಸೆಯುತ್ತಿದ್ದರು. ನನಗೇನೋ ನಂಬಲು ಆಗಲಿಲ್ಲ. ಸರಳಾ ಮಗುವನ್ನು ಕಾಪಾಡಿದ್ದು ಎಂದು ಸಾರಿ ಸಾರಿ ಹೇಳಬೇಕೆಂದುಕೊಂಡರೂ ಧ್ವನಿ ಈಚೆಯೇ ಬರಲಿಲ್ಲ. ಅವಳು ಮಗುವನ್ನು ಅವಚಿಕೊಂಡು ರಕ್ಷಿಸುತ್ತಿದ್ದ ಪರಿ ಕಂಡಿದ್ದೆನಲ್ಲಾ.. ಅಲ್ಲದೇ, ಅವಳ ಕಣ್ಣಲ್ಲಿ ಕಾಣುತ್ತಿದ್ದ ಮಾತೃಭಾವ ಸುಳ್ಳೇನು..??


ಪಾಪು ಎಚ್ಚರವಾಗಿದ್ದಳು. ಸರಳಾ ಬಾರದ ಲೋಕಕ್ಕೆ ಪಯಣಿಸಿದ್ದಳು. ಈಗ ಮಾತುಕತೆ ಬೇರೆಯೇ ಆಯಾಮ ಪಡೆದಿತ್ತು. "ಮಗುವಿನಿಂದ ಈ ಮನೆ ಮಗಳ ಪ್ರಾಣ ಹೋಯಿತು.. "


ಯಾರು ಏನು ಕಳೆದುಕೊಂಡರೋ ತಿಳಿಯಲಿಲ್ಲ. ಪಾಪು ಅವಳನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ಕಂಡು ಅಯ್ಯೋ ಎನ್ನಿಸುತ್ತಿತ್ತು.


ಹುಚ್ಚಿ ಸತ್ತದಲ್ಲ.. ಅಮ್ಮ ಸತ್ತಿದ್ಲು..

ಅತ್ತೆಯಂತಹಾ ಅಮ್ಮ ಪಾಪುವನ್ನು ಬದುಕಿಸಿ ತಾನು ಸತ್ತಿದ್ಲು.

ಮಾನವೀಯತೆ ಕಳೆದುಕೊಂಡ ನಾವೆಲ್ಲರೂ ಬದುಕಿದ್ದೂ ಹೆಣವಾಗಿದ್ವಿ.


~ ವಿಭಾ ವಿಶ್ವನಾಥ್

ಅವಳು ಮತ್ತು ಅಡುಗೆಮನೆ


 'ಇದೊಂದು ಕೆಲಸ ಮುಗಿಯೋದೇ ಇಲ್ಲ, ಸಾಕು, ನಾ ಇವತ್ತಿಂದ ಅಡುಗೆ ಮಾಡೋದೇ ಇಲ್ಲ, ನಂಗೂ ಸಾಕಾಗಿಹೋಗಿದೆ ಜೀವನ, ಅಡುಗೆ ಮಾಡಲು ಆಲಸ್ಯ ಇರೋ ಹೆಣ್ ಮಕ್ಕಳ ಸಂಘ ಕಟ್ಬೇಕು ನಾನು ' ಎಂದು ಅವಳು ಗೊಣಗಿದಳು. 


ಅವಳ ಈ ಗೊಣಗಾಟ ಮನೆಯಲ್ಲಿ ಯಾರಿಗೇನೂ ಹೊಸತಲ್ಲ.  ಆ ಮನೆಯಲ್ಲಿ ಇದ್ದ ಉಳಿದಿಬ್ಬರು ಗಂಡಸರು. ಆಕರ್ಷಳ ಗಂಡ ಪ್ರೇಕ್ಷಿತ್ ಹಾಗೂ ಮಾವ ಸುಂದರ್. ಹಾಗೆಂದು ಗೊಣಗುತ್ತಿದ್ದಾಗ ಮೊದಲೆಲ್ಲಾ ಇಬ್ಬರಲ್ಲಿ ಒಬ್ಬರು ಹೋಗಿ ತರಕಾರಿ ಹೆಚ್ಚುವುದು ಇಲ್ಲವೇ ಪಾತ್ರೆ ತೊಳೆಯುವ ಕೆಲಸಕ್ಕೆ ನಿಂತುಕೊಳ್ಳುತ್ತಿದ್ದರು. ಆದರೆ, ಅವಳನ್ನು ಮೆಚ್ಚಿಸಲು ಯಾರಿಂದಲೂ ಆಗುತ್ತಿರಲಿಲ್ಲ. 'ಇಲ್ಲೊಂಚೂರು ಸೋಪು ಹೋಗಿಲ್ಲ'.. 'ಈ ಜಿಡ್ಡು ಹಾಗೆಯೇ ಇದೆ' ಎಂದೋ ಏನಾದರೊಂದು ಹೇಳುತ್ತಾ ತಾನೇ ಮತ್ತೆ ಆ ಕೆಲಸಕ್ಕೆ ನಿಲ್ಲುತ್ತಿದ್ದಳು. ತರಕಾರಿ ಹೆಚ್ಚಲು ಹೋದರೆ ಉದ್ದ, ಅಡ್ಡ, ದಪ್ಪ, ಸಣ್ಣ ಎಂದು ಏನಾದರೊಂದು ಹೇಳಿ ತಾನೇ ಮಾಡುತ್ತಿದ್ದಳು. ಅವಳ ಈ ಪರಿ ಕಂಡು ಯಾರೂ ಅವಳ ತಂಟೆಗೆ ಹೋಗುತ್ತಿರಲಿಲ್ಲ. ಅಲ್ಲದೇ, ಕೆಲಸದವಳ ಕೆಲಸ ಕೂಡಾ ಮೆಚ್ಚುಗೆಯಾಗುತ್ತಿರಲಿಲ್ಲ. ಹಾಗೆಂದು, ಆಕರ್ಷ ರುಚಿಯಾಗಿ ಅಡುಗೆ ಮಾಡುತ್ತಿದ್ದಳು ಎಂದಲ್ಲ. ಅವಳ ದೃಷ್ಟಿಯಲ್ಲಿ ಶುಚಿಗೆ ಹೆಚ್ಚಿನ ಪ್ರಾಮುಖ್ಯತೆ. ಪ್ರೇಕ್ಷಿತ್ ಕೂಡಾ ಅಡುಗೆ ಮಾಡುತ್ತಿದ್ದ. ಅವಳಿಗಿಂತಲೂ ರುಚಿಯಾಗಿಯೇ ಅಡುಗೆ ಮಾಡುತ್ತಿದ್ದ. ಆದರೆ, ಅವನ ಶುಚಿಯಿಲ್ಲದ ಅಡುಗೆ ಕಂಡು ಅವಳೇ ಬೇಡವೆಂದಿದ್ದಳು.


ಇನ್ ಫ್ಯಾಕ್ಟ್ ಆಕರ್ಷ ಪ್ರೇಕ್ಷಿತ್ ನನ್ನು ಇಷ್ಟಪಟ್ಟದ್ದೇ ಆತನಿಗೆ ಅಡುಗೆ ಮಾಡಲು ಬರುತ್ತದೆ ಎಂದು. ನಂತರ ಅವನ ಕೈ ರುಚಿ ನೋಡಿ ಅದಕ್ಕೆ ಮನಸೋತಿದ್ದಳು. ಮದುವೆಯಾಗಿ ಬಂದ ನಂತರ ಅಡುಗೆ ಮನೆ ನೋಡಿ, ಪ್ರೇಕ್ಷಿತ್ ಮಾಡುವ ಕೊಳಕು ನೋಡಿ ತಲೆ ತಿರುಗಿ ಬೀಳದೆ ಇರುವುದು ಪುಣ್ಯ. ನಂತರ, ಅವಳೂ ಕೆಲಸಕ್ಕೆ ಹೋಗುವಾಗ ಏನೋ ಒಂದು ಬೇಯಿಸಿ ಹಾಕಿಕೊಂಡೋ ಇಲ್ಲವೇ ಏನಾದರೂ ಆರ್ಡರ್ ಮಾಡಿಕೊಂಡು ತಿಂದರೆ ಮುಗಿಯುತ್ತಿತ್ತು.


ಅತ್ತೆ ಅಚಾನಕ್ಕಾಗಿ ತೀರಿ ಹೋಗಿ ಮಾವ ಅಲ್ಲೇ ಬಂದು ಇರುವಂತಾದಾಗ ಅವಳೂ ಮನೆಯಿಂದ ಕೆಲಸ ಮಾಡಲು ಶುರು ಮಾಡಿದ್ದಳು. ಆಗಲೇ, ಅಷ್ಟೋ ಇಷ್ಟೋ ಅಡುಗೆ ಮಾಡಲು ಕಲಿತದ್ದು. ಯಾವ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡುವ ಅವಳಿಗೆ ಅದೇಕೋ ಅಡುಗೆ ಮನೆ ಕೆಲಸ, ಅಡುಗೆ ಎಂದರೆ ಮಾರು ದೂರ. ದಿನವಿಡೀ ಮನೆಯ ಧೂಳು ತೆಗೆದು ಸ್ವಚ್ಛ ಮಾಡಿ ಇಬ್ಬರಿಬ್ಬರ ಕಚೇರಿ ಕೆಲಸ ಒಬ್ಬಳೇ ನಿಭಾಹಿಸುವಳಾದರೂ ಅಡುಗೆ ಕೆಲಸವೆಂದರೆ ಆಲಸ್ಯ. ಮುಕ್ಕಾಲು ಗಂಟೆಗಿಂತ ಹೆಚ್ಚು ಅವಳು ಅಡುಗೆ ಮನೆಯಲ್ಲಿ ಕಾಲ ಕಳೆದದ್ದೇ ಕಡಿಮೆ.


ಮೊದಮೊದಲು ಸುಂದರ್ ಅವಳು ಗೊಣಗುತ್ತಿದುದ್ದನ್ನು ಕಂಡು ತಾನು ಬಂದದ್ದು ಅವಳಿಗೆ ತೊಂದರೆಯಾಯಿತೋ ಏನೋ ಎಂದುಕೊಂಡರೆ ಅವಳು ತನ್ನ ನಡವಳಿಕೆಯಿಂದ ಅದು ತೊಂದರೆಯೇ ಅಲ್ಲ ಎನ್ನುವಂತೆ ತೋರಿಸುತ್ತಿದ್ದಳು. ಹುಡುಕಿದರೂ ಒಂದೇ ಒಂದು ಕೊರತೆ ಕಂಡು ಬರುತ್ತಿರಲಿಲ್ಲ ಅವಳು ಆದರಿಸುವ ರೀತಿಯಲ್ಲಿ. ಕೊನೆಗೆ, ಸುಂದರ್ ರವರು ಇದಕ್ಕೆ ಕಾರಣವೇನೆಂದು ತಿಳಿಯಲು ವಿಚಾರಿಸಿದಾಗ ಅವರಿಗೆ ತಿಳಿದದ್ದು.. ಅವಳು ಬೆಳೆದದ್ದು ಅಜ್ಜಿ ಮನೆಯಲ್ಲಿ.. ಅಲ್ಲಿ ಅಡುಗೆ ಮನೆಯಲ್ಲಿ ತಯಾರಾಗುವ ಅಡುಗೆಗೆ ಶುಚಿ- ರುಚಿ ಎರಡೂ ಮುಖ್ಯವಾಗಿದ್ದವು. ಒಂದು ಚಿಟಿಕೆ ಉಪ್ಪು, ಒಂದು ಹರಳು ಸಕ್ಕರೆ ಆಚೀಚೆಯಾದರೂ ಅವಳ ಅಜ್ಜಿ ಬೈಗುಳ ತಿನ್ನುತ್ತಿದ್ದರು. ಹಾಗೆಯೇ ಅತ್ತೆಗೂ ಅದೇ ಸ್ಥಿತಿ. ಅವರಿಬ್ಬರ ಗೈರು ಹಾಜರಿಯಲ್ಲಿ ಒಮ್ಮೆ ಇವಳು ಬಾರದ ಅಡುಗೆಯನ್ನು ಮಾಡಿದಾಗ ಸಿಕ್ಕಿದ್ದು ಇದೇ ಕಟು ಮಾತುಗಳು. ಅವಳನ್ನು ಅಡುಗೆ ಮನೆಯಿಂದ, ಅಡುಗೆ ಕೆಲಸದಿಂದ ದೂರ ಇರುವಂತೆ, ವಿಮುಖ ಮಾಡುವಂತೆ ಮಾಡುತ್ತಿದ್ದವು. ಎಲ್ಲದರಲ್ಲಿಯೂ ಹೊಗಳಿಸಿಕೊಳ್ಳುವ ಅವಳಿಗೆ ಅಡುಗೆ ಮಾಡಿದರೆ ಎಲ್ಲಿ ಕೊಂಕು ಕೇಳಬೇಕಾದೀತೋ ಎಂಬ ಭಯ.


ಕೊನೆಗೆ, ಅಡುಗೆ ಮನೆಯಲ್ಲಿ ತೀರಾ ಕಡಿಮೆ ಸಮಯ ಇರುವುದು.. ತನಗೆ ಅದು ಆಗಿ ಬರುವುದಿಲ್ಲ ಎಂದು ಹೇಳುವುದನ್ನು ರೂಢಿಸಿಕೊಂಡಳು. ಅದರ ಪ್ರತಿಫಲವೇ ಇದು.


ಈಗ ಅವಳು ತನ್ನದೇ ಕೆಲಸಗಳಲ್ಲಿ, ಹವ್ಯಾಸಗಳಲ್ಲಿ ತೊಡಗಿಕೊಂಡಿದ್ದಾಳೆ. ಮಾವನ ಕೈರುಚಿ, ಶುಚಿ ಎರಡೂ ಹಿಡಿಸುತ್ತದೆ.

ಬಂದ ಹಾಗೆ ಮಾಡಿ ಹಾಕು ಎಂದೋ.. ಅಡುಗೆ ಮಾಡಲೇ ಬೇಕು ನೀನು ಎಂದೋ.. ಹೆಣ್ಣು ಹುಟ್ಟಿದ್ದೇ ಅಡುಗೆ ಕೆಲಸ ಮಾಡಲಿಕ್ಕೆ ಎಂದೋ.. ಭಾವಿಸುವ ಮಾವಂದಿರ ನಡುವೆ ಅಮ್ಮನಂತಹಾ ಮಾವ ದೊರೆತಿದ್ದಾರೆ. ಎಂದೂ ಸವಿಯದ ಅಮ್ಮನ ಕೈರುಚಿ ಹೀಗೆಯೇ ಇದ್ದಿರಬಹುದು ಎನ್ನಿಸುತ್ತದೆ ಅವಳಿಗೆ..


~ವಿಭಾ ವಿಶ್ವನಾಥ್

ಮುಂದಿನ ಹಾದಿ (ಬೆಳಕಿಂಡಿಯ ಕತೆಗಳು - 75)

 


ಇದು ನಾನಾಗೇ ನಾನು ಮಾಡಿಕೊಂಡ ಬಂಧನ ಎನ್ನಲೋ ಅಥವಾ ಮನೆಯವರ ಒತ್ತಡಕ್ಕೆ ಮಣಿದು ಬಂಧಿಸಿಕೊಂಡದ್ದು ಎನ್ನಲೋ.. ಏನೇ ಆದರೂ ವಿವಾಹವೆಂಬ ಬಂಧನದಲ್ಲಿ ಸಿಲುಕಿಕೊಂಡದ್ದಂತೂ ಆಗಿದೆ.


ಎಲ್ಲರಿಗೂ ವಿವಾಹದ ನಂತರದ ಬದುಕು ಸುಲಭದ ಹಾದಿಯಾಗಿರುವುದಿಲ್ಲ. ಅವತ್ತು ನನ್ನ ಮುಂದೆ ಇದ್ದದ್ದು ಎರಡೇ ಆಯ್ಕೆಗಳು ಸಾವು ಇಲ್ಲವೇ ಹೋರಾಟದ ಬದುಕು. ಓದಿದ ನಾನೇ ಹೇಡಿಯಾದರೆ.. ಇಲ್ಲ, ಮುಂದಿನ ದಾರಿ ನಿಚ್ಚಳವಾಗಿತ್ತು. ಬಂಧನದಿಂದ ಹೊರ ಬಂದು ಓದಿದೆ. ಈಗ ಮನಃಶಾಸ್ತ್ರಜ್ಞೆಯಾಗಿದ್ದೇನೆ. ಎಲ್ಲರಿಗೂ ಮುಂದಿನ ಹಾದಿಗೆ ಬೆಳಕು ಬೀರಲು..

ಮುಂದಿನ ಹಾದಿಗೆ ಬೆಳಕು ಬೀರಲು ದೀಪ ತನ್ನನ್ನೇ ಸುಟ್ಟುಕೊಳ್ಳುವ ಕುರಿತು ನನಗೆ ಬೇಸರವಿಲ್ಲ.. ಬದಲಿಗೆ ಸಮರ್ಪಣೆಯ ಸಂತಸವಿದೆ. 

~ವಿಭಾ ವಿಶ್ವನಾಥ್

ಪಾತರದವಳು (ಬೆಳಕಿಂಡಿಯ ಕತೆಗಳು - 74)

 


ಬದುಕಲ್ಲಿ ಬಣ್ಣ ಹಚ್ಚದೆ ಬಣ್ಣ-ಬಣ್ಣದ ನಾಟಕ ಮಾಡಿ ಹಣ ಸಂಪಾದಿಸುವ ಬದಲು ದುಡಿದು ತಿನ್ನುವ ಇರಾದೆಯಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲುವ ಆಸೆಯಿಂದ ಪಾತರದವಳಾಗಿ ಬಣ್ಣ ಹಚ್ಚಿ ನಿಂತಳು.

ಲೋಕದ ಕಟು ನುಡಿಗೆ ಕೆಂದದೇ, ತನ್ನ ಆತ್ಮಾಭಿಮಾನವನ್ನು ಮಾಡಿಕೊಳ್ಳದೇ ತನ್ನ ಹೊಟ್ಟೆ ಹೊರೆದುಕೊಂಡು, ಕುಟುಂಬವನ್ನೂ ಸಾಕಿ ಸ್ವಾಭಿಮಾನದಿಂದ ಬೆಳೆದು ನಿಂತಳು. ಈಗ ಅವಳು ಬರೀ 'ಪಾತರದವಳಲ್ಲ' ಬದಲಾಗಿ 'ಅಭಿನೇತ್ರಿ'.

~ವಿಭಾ ವಿಶ್ವನಾಥ್

ಮುಂದಿನ ನಿಲ್ದಾಣ (ಬೆಳಕಿಂಡಿಯ ಕತೆಗಳು - 73)


ಈ ನಿಲ್ದಾಣದಲ್ಲಿ ಬಾಗಿಲು ಎಡಕ್ಕೆ ತೆರೆಯುತ್ತದೆ ಎಂದೋ ಬಲಕ್ಕೆ ತೆರೆಯುತ್ತದೆ ಎಂದೋ ಪ್ರಯಾಣಿಕರಿಗೆ ತಿಳಿಯುವಂತೆ ಹೇಳುತ್ತಾ ಇರುವ ಮೆಟ್ರೋ ಮುಂದಿನ ನಿಲ್ದಾಣವನ್ನೂ ತಿಳಿಸುತ್ತಿತ್ತು. ಇನ್ನೇನು ಆರು ನಿಮಿಷದಲ್ಲಿ ನಾನು ಇಳಿಯುವ ನಿಲ್ದಾಣ ಬರುತ್ತದೆನ್ನುವಷ್ಟರಲ್ಲೇ ಆ ಬೋಗಿಗೇ ಹತ್ತಿದ್ದಳು ಅವಳು. ಒಂದು ಚೂರೂ ಬದಲಾಗಿಲ್ಲದ ಅವಳು.. ಅದೇ ಕಪ್ಪು ಕಂಗಳಿಗೆ ಕನ್ನಡಕ, ಅದೇ ಕಾಟನ್ ಸೀರೆ, ಅದೇ ಸರಳತೆ. ಥೇಟ್ ಆಗಿನಂತೆಯೇ.. ಬಂದವಳೇ ಕೈಯಲ್ಲಿ ಒಂದು ಪುಸ್ತಕ ಹಿಡಿದು ಕುಳಿತವಳೇ ಅದರೊಳಗೆ ಕಣ್ಣು ಕೀಲಿಸಿ ಇಹವನ್ನೇ ಮರೆತುಬಿಟ್ಟಳು. ನನ್ನನ್ನು ಮರೆತಂತೆ.. ನಾನು ಇಳಿಯುವ ನಿಲ್ದಾಣ ಬರುವಷ್ಟರಲ್ಲಿ ಅವಳನ್ನೊಮ್ಮೆ ಮಾತನಾಡಿಸೋಣ ಎಂದುಕೊಂಡರೆ ಕಾಲೇ ಬರುತ್ತಿಲ್ಲ. ಹಾಗೆಯೇ.. ಮಾತು..!


ಆ ನಿಲ್ದಾಣದಲ್ಲಿ ಅವಳೇ ಮೊದಲು ಇಳಿದಳು. ಜನಜಂಗುಳಿಯೊಳಗೆ ಕಳೆದು ಹೋದದ್ದು ನಾನೋ ಅವಳೋ ತಿಳಿಯಲಿಲ್ಲ. ತೆರೆದ ಮೆಟ್ರೋ ಬಾಗಿಲಿನ ಒಳಗೆ ಮುಂದಿನ ನಿಲ್ದಾಣಕ್ಕಾಗಿ ಕಾಯುತ್ತಿದ್ದವರು ಕಾಣುತ್ತಿದ್ದರು. ಯಾರ ಪಯಣ ಎಲ್ಲಿಗೋ.. ಎಂತೋ.. ಹೇಗೋ.. ನಮ್ಮ ನಮ್ಮ ನಿಲ್ದಾಣವೇ ನಿರ್ಧರಿಸಬೇಕಷ್ಟೇ..


~ವಿಭಾ ವಿಶ್ವನಾಥ್

ಲಕ್ಷ್ಮೀ ಕಟಾಕ್ಷ (ಬೆಳಕಿಂಡಿಯ ಕತೆಗಳು - 72)


ಹಾಗೆಲ್ಲಾ ಸುಮ್ಮನೆ ಲಕ್ಷ್ಮಿ ಒಲಿಯುವುದಿಲ್ಲ. ಸರಸ್ವತಿಯ ದಯೆಯಿಂದ ಲೆಕ್ಕ ಒಲಿದಾಗ, ಹಸಿವಿನ ದಾರಿದ್ರ್ಯ ನಿವಾರಿಸುವ ಅನ್ನಪೂರ್ಣೆಯ ದಯೆಯಿಂದ ಹಸಿದವರಿಗೆ ಎರಡು ತುತ್ತು ಅನ್ನ ಹಾಕುವ ಮನಸ್ಸಿದ್ದಾಗ, ಕಷ್ಟದಲ್ಲಿರುವವರೇ ದೇವರೆಂದು ತಿಳಿದು ಮಾನವೀಯತೆಯಿಂದ ಕೈಲಾದಷ್ಟು ಸಹಾಯಕ್ಕೆ ನಿಲ್ಲುವಾಗ ಲಕ್ಷ್ಮೀ ಕಟಾಕ್ಷ ತಾನಾಗಿಯೇ ಬರುತ್ತದೆ. 

ಅಂಗಡಿಯಲ್ಲಿ ಕೇವಲ ಹಣ ಸಂಪಾದನೆಯ ಗುರಿಯ ಬದಲಾಗಿ.. ಮನುಷ್ಯತ್ವ, ದಯೆ, ಬುದ್ಧಿವಂತಿಕೆ ರೂಢಿಸಿಕೊಂಡ. ಅಪ್ಪನ ಮಾತು ಹುಸಿಯಾಗಲಿಲ್ಲ.

~ವಿಭಾ ವಿಶ್ವನಾಥ್

ವರಮಹಾಲಕ್ಷ್ಮಿ ವರವ ಕೊಡಮ್ಮ


ತಾಯಿ ವರಮಹಾಲಕ್ಷ್ಮಿ ವರವ ಕೊಡಮ್ಮ 

ಸದಾ ಭಕ್ತಿಯು ನೆಲೆಸಿರಲೆಂದು ಬೇಡುವೆನಮ್ಮ


ನಕಾರಾತ್ಮಕ ಯೋಚನೆಗಳು ಬರದಿರಲಮ್ಮ

ಕೆಡುಕನು ನೀನು ದೂರವಿಡಮ್ಮ

ಮನೆಯಲಿ ಶಾಂತಿಯು ನೆಲೆಸಿರಲಮ್ಮ 

ಕಷ್ಟ ಕಳೆಯುವ ಶಕ್ತಿ ನನಗಿರಲಮ್ಮ


ಚಿತ್ತದಿ ಅನುಮಾನದ ಹುತ್ತ ಬೆಳೆಯದಿರಲಮ್ಮ

ಚಿಂತೆಯ ರಾಶಿ ಸುಟ್ಟು ಬಿಡಮ್ಮ

ಭವಸಾಗರ ದಾಟಲು ಧೈರ್ಯ ಕೊಡಮ್ಮ

ಎಲ್ಲರ ರಕ್ಷಿಸೋ ತಾಯಿಯಾಗಿ ಪೊರೆಯಮ್ಮ


ಬಾಂಧವ್ಯಗಳ ಗಟ್ಟಿಯಾಗಿ ರಕ್ಷಿಸಮ್ಮ

ಬರುವ ದಿನಗಳು ನೆಮ್ಮದಿ ತರಲಮ್ಮ

ನಿನ್ನ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಮ್ಮ

ಜಗನ್ಮಾತೆ ನಿನ್ನ ಬಿಡದೆ ಆರಾಧಿಸುವೆನಮ್ಮ 


~ವಿಭಾ ವಿಶ್ವನಾಥ್

ಜೊತೆಗಾರ (ಪುಸ್ತಕ ಯಾನ - 483)


ಪುಸ್ತಕದ ಶೀರ್ಷಿಕೆ : ಜೊತೆಗಾರ

ಲೇಖಕರು : ಜಯಶ್ರೀ ಇಡ್ಕಿದು

ಪ್ರಕಾಶಕರು : ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ

ಪ್ರಥಮ ಮುದ್ರಣ : ಜನವರಿ 2012

ಪುಟಗಳು : 32

ಬೆಲೆ : 15 ರೂ.


ಜಯಶ್ರೀ ಇಡ್ಕಿದು ಅವರು ಹತ್ತನೇ ತರಗತಿಯಲ್ಲಿರುವಾಗಲೇ ಪ್ರಕಟಿಸಿರುವ ಕವನ ಸಂಕಲನ ಇದು. 2012ರಲ್ಲಿ ಪ್ರಕಟವಾಗಿದೆ. ಸಾಮಾನ್ಯವಾಗಿ ಆ ವಯಸ್ಸಿನಲ್ಲಿ ಕವಿತೆಗಳನ್ನು ಪ್ರಕಟಿಸಬೇಕಿದ್ದರೆ ಪ್ರಬುದ್ಧ ಆಲೋಚನೆಗಳು ಜೊತೆಗೆ ಕವಿ ಮನಸ್ಸು, ವಿಭಿನ್ನ ಆಲೋಚನಾ ಶೈಲಿ ಇರಬೇಕು. ಇಲ್ಲಿ ನಾವು ಅದನ್ನು ಸ್ಪಷ್ಟವಾಗಿ ಕಾಣಬಹುದು. ಇವು ರಾಗ ಹಾಕಿ ಹಾಡಬಹುದಾದ ಕವಿತೆಗಳು ಹೌದು 


ಇವರ ತಂದೆ ಜನಾರ್ಧನ ಕುಲಾಲ್ ಹಾಗೂ ತಾಯಿ ಲಲಿತಾರವರು. 10ನೇ ತರಗತಿಯಲ್ಲಿರುವಾಗ ಈ ಪುಸ್ತಕ ಪ್ರಕಟವಾದರೂ.. ಐದಾರು ವರ್ಷಗಳಿಂದಲೂ ಬರೆಯುತ್ತಿದ್ದವರು. ಎಂಟನೇ ತರಗತಿಯಲ್ಲಿದ್ದಾಗ ಬಂಟ್ವಾಳದ ಐದನೇ ಮಕ್ಕಳ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದಾಗ ಸಿಕ್ಕ ಪ್ರೋತ್ಸಾಹ ಇವರ ಸಾಹಿತ್ಯ ಹಾದಿಯಲ್ಲಿ ಪ್ರಮುಖ ಹೆಜ್ಜೆ. 

ಭಾಷಣ ಇವರಿಗೆ ಇಷ್ಟವಾದ ವಿಚಾರ. ಭಾಷಣ ಮಾಡುವಾಗಲೆಲ್ಲ ಇವರದ್ದೇ ದಾಟಿಯಲ್ಲಿ ಬರೆಯಲು ತೊಡಗಿದ್ದರಂತೆ. ಅದನ್ನು ಮಾತಿನ ಮೂಲಕ ಅಭಿವ್ಯಕ್ತಗೊಳಿಸುವಾಗ ಇರುತ್ತಿದ್ದ ವಿಭಿನ್ನ ಶೈಲಿಯೇ ಬಹುಮಾನಗಳನ್ನು ತಂದುಕೊಟ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದ ಬಗೆಯನ್ನು ನೆನಪಿಸಿಕೊಂಡಿದ್ದಾರೆ.


ಈ ಕವನ ಸಂಕಲನದಲ್ಲಿ 18 ಚಂದದ ಕವನಗಳಿವೆ 


ತಾಯಿಯನ್ನು ಹಲವಾರು ರೂಪಗಳಲ್ಲಿ 'ತಾಯಿ' ಕವನದಲ್ಲಿ ನೆನೆಯುತ್ತಾರೆ. ಒಂದೆರಡು ಸಾಲನ್ನು ನೋಡುವುದಾದರೆ..

ಕಂದನ ಸೋಲಲಿ ಒಬ್ಬಳಾದಳು 

ಗೆಲುವು ಬರಲು ದೂರದಿ ನಗುವಳು 

ಸೋಲು ಗೆಲುವಲು ಜೊತೆಯಾಗಿರುವಳು

ಅವಳು ಧೈರ್ಯ ನೀಡಿದ ತಾಯಿ 

ಆಕೆ ಸ್ನೇಹಮಯಿ 


ಒಲವಿನ ಜೀವ ಕವಿತೆಯನ್ನು ಶುರು ಮಾಡುವಾಗ ಒಲವಿನ ಜೀವ ಯಾವುದಿರಬಹುದು ಎಂದು ಆಸಕ್ತಿಯಿಂದಲೇ ಓದುತ್ತಾ ಹೋದೆ. ಇಲ್ಲಿ ಅಪ್ಪನನ್ನು ಚೆಂದವಾಗಿ ಚಿತ್ರಿಸಿದ್ದಾರೆ. 

ದೂರ ಮಾಡಿದಿರಿ ನನ್ನ 

ಮನದ ನೂರು ಭಯ 

ಅಂದಿನಿಂದಲೇ ಅಪ್ಪ 

ನೀವೇ ನನ್ನ ನೆಚ್ಚಿನ ಗೆಳೆಯ 


ಮಳೆಗಾಲದ ಒಂದು ದಿನ ಎಂಬ ಕವಿತೆಯಲ್ಲಿ ಮಳೆಯ ರಭಸ, ಮಳೆ ಬಂದಾಗ ಸಿಗುವ ಹರುಷ, ರೈತನ ಬದುಕನ್ನು ಸ್ಮರಣೀಯವಾಗಿಸುತ್ತಾರೆ.

ಮಳೆರಾಯ ನೀನೊಮ್ಮೆ ಸುರಿದು ಹೋಗು 

ಮತ್ತೆ ಬರುವಾಗ ಶಾಂತನಾಗು 

ರೈತರದೆಯಲ್ಲಿ ತಾ ಹರುಷ

ನೋವು ಬೇಡ ಸಾವಿರ ವರುಷ 

ಈ ಅರ್ಥಪೂರ್ಣ ಸಾಲುಗಳಲ್ಲಿ ಮಳೆರಾಯ ವಿದ್ವಾಂಸಕನಾಗಿ ಬರದೆ, ರೈತರಿಗೆ ಹರುಷ ತರುವಂತೆ ಶಾಂತನಾಗಿ ಬಾ ಎನ್ನುತ್ತಾ ಹೇಳುವ ಮಾತು ನನಗೆ ಬಹಳ ಇಷ್ಟವಾಯಿತು. 


'ಎಲ್ಲವೂ ಅವನದೇ'ಎನ್ನುವ ಕವಿತೆಯಲ್ಲಿ ಸಮಾಜದ ಹಾಗೂ ಹಲವಾರು ಸಾಮಾಜಿಕ ಅಂಶಗಳ ಜೊತೆ ಜೊತೆಗೆ ಆಧ್ಯಾತ್ಮದ ಶೈಲಿಯ ಆಲೋಚನೆಯ ಕವಿತೆಯಾಗಿ ಅರ್ಥೈಸಿಕೊಂಡೆ. 

ಕನ್ನಡಿಯೆದುರು ನಿಂತರೆ 

ಬಿಂಬವೊಂದು ಮೂಡುವುದು

ಆ ಬಿಂಬ ನನ್ನದು

ಆದರೆ ಆ ಬಿಂಬವೇ ನಾನಲ್ಲ


ಹೀಗೆ ಶುರುವಾಗುವ ಕವಿತೆಯಲ್ಲಿ ಈ ಸಾಲುಗಳನ್ನೂ ಕಾಣಬಹುದು.


ನಾ ಮಾತನಾಡಿದೆ

ಕೇಳುವವರು ಸಿಕ್ಕಿದರು

ಅದು ಮಾತು ಹೌದು

ಆದರೆ ಆ ಮಾತು ನನ್ನದಲ್ಲ

ಯಾವುದು ನನ್ನದು, ಯಾವುದು ನನ್ನದಲ್ಲ ಎನ್ನುತ್ತಲೇ.. ಯಾವುದೂ ನನ್ನದಲ್ಲ.. ಅವನ ಚಿತ್ತ, ಅವನಾಡಿಸಿದಂತೆ ಎಂದು ದೇವರ ಆಟವನ್ನು ಹಾಗೂ ನಮ್ಮ ನಿಮಿತ್ತವನ್ನು ಸೊಗಸಾಗಿ ತೋರುತ್ತಾರೆ.


ಈ ಪುಸ್ತಕದ ಶೀರ್ಷಿಕೆಯೂ ಆಗಿರುವ ಕವಿತೆ 'ಜೊತೆಗಾರ' ಯಾರೆಂಬುದನ್ನು ಚಂದವಾಗಿ ಹೇಳುತ್ತದೆ. ಈ ಕವನ ಸಂಕಲನದ ಮುಖಪುಟದ ಚಿತ್ರವೂ ಸಹ ಸೂಕ್ಷವಾಗಿ ಅದನ್ನೇ ತೋರುತ್ತದೆ. ಸಾಮಾನ್ಯವಾಗಿ ಜೊತೆಗಾರ ಎಂದಾಕ್ಷಣ ಸ್ನೇಹಿತನನ್ನೋ ಅಥವಾ ಒಲವಿನ ಇನಿಯನ ನ್ನೋ ನಾವಿಲ್ಲಿ ನೆನೆಯುವಂತಿಲ್ಲ. ಇಲ್ಲಿನ ಜೊತೆಗಾರನೇ ಬೇರೆ. ಈ ವಿಭಿನ್ನ ಜೊತೆಗಾರ ಯಾರೆಂಬುದನ್ನು ಊಹಿಸಬಲ್ಲಿರಾ..?


ಹೀಗೆ ಶೀರ್ಷಿಕೆ ಗುಟ್ಟು ಬಿಟ್ಟುಕೊಡದಂತೆ ಕವಿತೆ ಬೇರೊಬ್ಬರನ್ನೇ ಪರಿಚಯಿಸುವ ಮತ್ತೊಂದು ಕವಿತೆ "ಕ್ಷಮಿಸಲಾರೆಯಾ ನನ್ನ ಓ ಜೀವ". ಮನೆಯ ನಿಯತ್ತಿನ ಜೀವವೊಂದನ್ನು ನೆನಪಿಸಿಕೊಂಡಿರುವ ಪರಿ ಚೆನ್ನಾಗಿದೆ.


ಲೋಕದ ನೋವುಗಳ ತೊಡೆಯುವಲ್ಲಿ

ಒಬ್ಬರಾಗಿ ಬಾಳೋಣ ಪ್ರೀತಿ ಸ್ನೇಹದಲ್ಲಿ

ಲೋಕದ ನಗುವೊಳು ನಗುತಿರೆಂದು ಖುಷಿಯಲ್ಲಿ

ಎನ್ನುತ್ತಾ ಮನುಷ್ಯ ಬದುಕಬೇಕಾದ ರೀತಿ ಹಾಗೂ ಎಲ್ಲರೊಳಗೊಂದಾಗುವ ಬಗೆಯನ್ನು 'ಅನಾಥರಲ್ಲ ಯಾರೂ ಇಲ್ಲಿ' ಎಂಬ ಕವಿತೆಯಲ್ಲಿ ಹೇಳುತ್ತಾರೆ.


ಇಂತಹ ಹಲವಾರು ಸೊಗಸಾದ ಸಾಲುಗಳ ಇನ್ನಷ್ಟು ಕವಿತೆಗಳು ಇಲ್ಲಿವೆ. ಪರಿಸರ ಪ್ರೇಮ, ದೇವರನ್ನು ನೆನಪಿಸಿಕೊಳ್ಳುವ, ಭಗವಂತನಿಗೆ ವಂದಿಸುವ, ಕಿರಿಮೆಯನ್ನು ಸಾರುವ ಪರಿ ಕಾಣುತ್ತದೆ. ತಂದೆ-ತಾಯಿಯ ಮೇಲಿನ ಅಕ್ಕರೆ, ಗೆಳತಿ ಹಾಗೂ ಜೊತೆಗಾರರು, ಸುತ್ತಮುತ್ತಲಿನ ಪರಿಸರದ ಚಿತ್ರಣಗಳ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪರಿ ಇಲ್ಲಿದೆ. 


ನಿಜಕ್ಕೂ ನನಗೆ ಈ ಕವನಗಳ ಓದು ಅಚ್ಚರಿ ಹಾಗೂ ಆಪ್ತತೆಯನ್ನು ಕಟ್ಟಿಕೊಟ್ಟವು.

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 16, 2026

ಆಕೆ ಹೇಳಿದ್ದು ಒಂದೇ ಸುಳ್ಳು

 


"ಯಾವಾಗಲೂ ನನ್ನ ಮಗಳು ಸತ್ಯವನ್ನೇ ಹೇಳುತ್ತಾಳೆ ಅಂತಾ ಅಂದುಕೊಂಡಿದ್ದೆನಲ್ಲಮ್ಮ. ಈಗ ಏನು ಆಗಿ ಹೋಗಿದೆ ನೋಡು. ಯಾವಾಗಲೂ ನಿಜ ಹೇಳುತ್ತಾ ಇದ್ದವಳು ಇದೊಂದು ಸುಳ್ಳನ್ನು ಯಾಕೆ ಹೇಳಿದೆಯಮ್ಮಾ.. ಮಾತಾಡು ತಾಯಿ ಮಾತಾಡು..." ಎನ್ನುತ್ತಾ ಸರಸ್ವತಿಯ ಅಪ್ಪ ಮಾತನಾಡಿಸುತ್ತಿದ್ದರೆ ಮಾತನಾಡದೆ ಮಲಗಿದ್ದಳು ಮಗಳು.


"ಯಾವಾಗಲೂ ಕೇಳುತ್ತಾ ಇದ್ದೆಯಲ್ಲಮ್ಮ.. ಅಪ್ಪ, ಸುಳ್ಳು ಹೇಳಿದ್ರೆ ಪಾಪ ಬರುತ್ತೆ. ಆದರೆ, ಒಳ್ಳೆಯದಕ್ಕಾಗಿ ಮತ್ತೆ ಇನ್ನೊಬ್ಬರ ಸಂತೋಷಕ್ಕಾಗಿ ನಿಜ ಹೇಳಿದರೆ ಆ ಪಾಪ ಪುಣ್ಯದ ಲೆಕ್ಕದಲ್ಲಿ ತೊಳೆದು ಹೋಗುತ್ತಂತೆ. ಹೌದಾ..?? ಅಂತಾ


ನಾನು ಹೌದು ಅನ್ನಬಾರದಿತ್ತು. ಬಹುಶಃ, ನಾನವತ್ತು ಸುಳ್ಳು ಹೇಳಿದ ಪಾಪ ಪಾಪವೇ.. ಅಂತಾ ಅಂದಿದ್ದರೆ ನೀನು ಸುಳ್ಳು ಹೇಳುವ ಧೈರ್ಯ ಮಾಡುತ್ತಾ ಇರಲಿಲ್ಲ ಅನ್ನಿಸುತ್ತೇನೋ ಅಲ್ಲವಾ ಸರಸು. ನಾನೇ ನಿನಗೆ ಸುಳ್ಳು ಹೇಳುವಂತೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿಬಿಟ್ಟೆ ಅನ್ನಿಸುತ್ತೆ. ಅಲ್ವಾ.. ಈ ಪಾಪಿ ಅಪ್ಪನಿಗಾಗಿ, ಇಂದೋ ನಾಳೆಯೋ ಬಿದ್ದು ಹೋಗುವ ಮರಕ್ಕಾಗಿ ಯಾಕಮ್ಮಾ ನಿನ್ನ ಜೀವನವನ್ನು ನೀನು ಕೈಯ್ಯಾರೆ ಹಾಳು ಮಾಡಿಕೊಂಡೆ ? ಹೇಳು ಸರಸು ಹೇಳು.." ಎನ್ನುತ್ತಿದ್ದರೆ ಅಲ್ಲಿದ್ದ ಎಂಥಹವರಿಗಾದರೂ ಕರುಳು ಕಿತ್ತು ಬರುತ್ತಿತ್ತು.


"ನೀನು ಸುಳ್ಳು ಹೇಳಿದ್ದಿಯ.. ನೀನು ನನಗೆ ಮುಖ ತೋರಿಸಬೇಡ. ಇಲ್ಲಿಂದ ಎದ್ದು ಎಲ್ಲಿಗಾದರೂ ಹೋಗು.. ಹೋಗು.. ಬೇಡ ಬಿಡು.. ನಾನೇ ಹೋಗ್ತೀನಿ." ಎಂದು ಹುಚ್ಚು ಹಿಡಿದವನಂತೆ ಮಾತನಾಡುತ್ತಿದ್ದ ಪಾಪಯ್ಯ.


ಪಾಪಯ್ಯನ ಹೆಂಡತಿ ಸರಸ್ವತಿ ಜನ್ಮ ನೀಡಿ ತೀರಿ ಹೋಗಿದ್ದಳು. ಅದಾದ ನಂತರ ಪಾಪಯ್ಯನಿಗೆ ಸರಸ್ವತಿ.. ಸರಸ್ವತಿಗೆ ಪಾಪಯ್ಯ. ಇಷ್ಟೇ ಅವರ ಲೋಕ. ಮಗಳಿಗೆ ಕಷ್ಟವಾಗಬಾರದೆಂದು ಅವಳಿಗೆ ಮಲತಾಯಿಯನ್ನು ತಾರದೆ ತಾನೇ ತಂದೆ - ತಾಯಿ ಎರಡೂ ಆಗಿ ಅವಳನ್ನು ಸಾಕುತ್ತಿದ್ದ. ಸರಸ್ವತಿಗೂ ಅಷ್ಟೇ ಅಪ್ಪನೆಂದರೆ ಎಲ್ಲಿಲ್ಲದ ಮಮತೆ. ಅಪ್ಪನೆಂದರೆ ಸಾಕು ಜೀವ ಬಿಡಲೂ ಸಿದ್ದವಿದ್ದಳು. ಹೀಗಿದ್ದ ಇಬ್ಬರ ಬಾಂಧವ್ಯ ಇಡೀ ಹಳ್ಳಿಯೇ ಕೊಂಡಾಡುವಂತಿತ್ತು.


ಎಲ್ಲಾ ಮನೆಯ ಹೆಣ್ಣು ಮಕ್ಕಳೂ ತವರಿನಿಂದ ದೂರವಾಗುವ ಸಂಧರ್ಭ ಇರುವ ಹಾಗೆ ಸರಸ್ವತಿಗೂ ಆಗಿತ್ತು. ಪಾಪಯ್ಯನೇ ಮಗಳಿಗೆ ಒದಗಿ ಬಂದ ಪಟ್ಟಣದ ಗಂಡು ಒಪ್ಪಿದ್ದ. ಒಬ್ಬನೇ ಮಗ.. ಓದಿದ್ದ, ಒಳ್ಳೆಯ ಕೆಲಸದಲ್ಲಿದ್ದ. ಪಾಪಯ್ಯ ಹಿಂದೆ ಮುಂದೆ ನೋಡದೆ ಒಪ್ಪಿ ಮಗಳನ್ನು ಕೊಟ್ಟಿದ್ದ. ಸರಸ್ವತಿಯ ರೂಪ ಹಾಗೂ ಗುಣ ನೋಡಿದ್ದ ಅವರೂ ನಿರಾಕರಿಸಲಿಲ್ಲ.


ಮನಸ್ಸಿಲ್ಲದ ಮನಸ್ಸಲ್ಲಿ ಸರಸ್ವತಿ ಮದುವೆಯಾಗಿ ಹೊರಟಳು. ಆನಂತರ ತಿಳಿದು ಬಂದಿತ್ತು ಅವರ ಯೋಗ್ಯತೆ. ಮನೆಯಲ್ಲಿ ಅವಳು ಕೆಲಸದ ಆಳಿಗಿಂತಲೂ ಕಡೆ. ಕೂರಲು, ನಿಲ್ಲಲು ಮನೆಯಲ್ಲಿ ಮತ್ತೊಬ್ಬರ ಅನುಮತಿ ಪಡೆಯಬೇಕಿತ್ತು. ಗಂಡನೋ ಅನುಮಾನದ ಪಿಶಾಚಿ.


ಅಪ್ಪನ ಕರೆ ಬಂದಾಗಲೆಲ್ಲಾ ಸರಸ್ವತಿ "ನಾನಿಲ್ಲಿ ಸುಖವಾಗಿದ್ದೇನೆ ಅಪ್ಪ. "

"ಹೋ.. ಇಲ್ಲಿ ಇವರೆಲ್ಲಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ" ಎಂದು ಹೇಳುತ್ತಿದ್ದಳು.


ಪತ್ರದಲ್ಲಿಯೂ "ನಾನಿಲ್ಲಿ ಕ್ಷೇಮ. ನೀವು.. " ಅಷ್ಟೇ..


ಅಪ್ಪನ ಮನಸ್ಸಿಗೆ ನೋವಾಗಬಾರದೆಂದು ಒಂದೇ ಸುಳ್ಳನ್ನು ವಿಧವಿಧವಾಗಿ ಆಗಾಗ ಹೇಳುತ್ತಿದ್ದಳು.


ಹಳ್ಳಿಯವರಾರೋ ಒಂದೆರಡು ಬಾರಿ ಸರಸ್ವತಿಯ ನಿಜ ಬದುಕನ್ನು ನೋಡಿ ಪಾಪಯ್ಯನಿಗೆ ಹೇಳಿದಾಗ ಅವನು ನಂಬಿರಲಿಲ್ಲ. ಅವನು ಹೋದಾಗ ಅಲ್ಲಿ ಅಂತಹದ್ದೇನೂ ಕಂಡಿರಲಿಲ್ಲ. ಸರಸ್ವತಿ ಕೂಡಾ ಅದೇ ಸುಳ್ಳನ್ನು ಚರ್ವಿತ ಚರ್ವಣದಂತೆ ಹೇಳಿದ್ದಳು. ಇಳಿದು ಹೋದ ಮಗಳನ್ನು ಕಂಡಾಗಲೂ ಅವಳು ಹೇಳಿದ್ದನ್ನು ನಂಬಿ ನನ್ನ ಮಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ ಎಂದು ಬಂದಿದ್ದನು. ಆದರೆ.. ಮಗಳು ಮನೆಗೆ ಬಂದದ್ದು ಹೆಣವಾಗಿಯೇ.. ಬೆಂಕಿ ಹಚ್ಚಿ ಕೊಂದಿದ್ದರು. ಬಹುಶಃ , ಅರೆ ಜೀವವಾಗಿದ್ದರೂ ಆಕೆ ಅಪ್ಪನ ನೆಮ್ಮದಿಗೆ ಅದೇ ಸುಳ್ಳನ್ನೇ ಹೇಳುತ್ತಿದ್ದಳೋ ಏನೋ..


"ಅವಳು ಹೇಳಿದ್ದು ಒಂದೇ ಸುಳ್ಳು. ಸಾಯುವವರೆಗೂ ಆಕೆಯಾಡಿದ್ದು ಒಂದೇ ಸುಳ್ಳು" ಎನ್ನುತ್ತಾ ಮನೆಮನೆಗೂ ಹೋಗಿ ಹೇಳುತ್ತಾ ಸರಸ್ವತಿಯನ್ನು ನೆನೆದು ಕಣ್ಣೀರು ಹಾಕಿಕೊಂಡೇ ಹುಚ್ಚನಂತೆ ತಿರುಗುತ್ತಿದ್ದಾನೆ ಪಾಪಯ್ಯ.


~ವಿಭಾ ವಿಶ್ವನಾಥ್


ಶನಿವಾರ, ಆಗಸ್ಟ್ 15, 2026

ಕತೆ ಹೇಳುವ ಮುನ್ನ


"ಇಲ್ಲಿ ನೆರೆದಿರುವ ಎಷ್ಟು ಜನ ಕಥೆ ಕೇಳಲು ಸಿದ್ದರಾಗಿದ್ದೀರಿ..?" ಎಂಬ ಶಾರ್ವರಿಯ ಮಾತಿಗೆ ಸಭಾಂಗಣದಲ್ಲಿದ್ದ ಎಲ್ಲರೂ ಕೈ ಎತ್ತಿದ್ದರು. ಆದರೆ, ಒಬ್ಬನ ಹೊರತಾಗಿ. "ನೀವಿನ್ನೂ ಕತೆ ಕೇಳಲು ಸಿದ್ಧವಾಗಿಲ್ಲವಾ.. ಅಥವಾ ಕತೆ ಆಸಕ್ತಿಯೇ ಇಲ್ಲದೆ ಸುಮ್ಮನೆ ಟೈಮ್ ಪಾಸ್ ಗೆ ಎಂದು ಬಂದಿದ್ದೀರಾ..??" ಎಂದು ಆಕೆ ಪ್ರಶ್ನಿಸಿದಾಗ ಎಲ್ಲರೂ ಯಾರಿಗೆ ಎಂದು ಸುತ್ತ ಮುತ್ತ ಹುಡುಕುತ್ತಿದ್ದರು.

"ರೀ, ಮಿಸ್ಟರ್ ನಿಮ್ಮನ್ನೇ.. ಕೈ ಎತ್ತದ ನಿಮ್ಮನ್ನೇ ನಾನು ಕೇಳುತ್ತಾ ಇರುವುದು" ಎಂದಾಗ ಪ್ರದ್ಯುಮ್ನ ಎದ್ದು ನಿಂತು ಖ್ಯಾತ ಕಥೆಗಾರ್ತಿ ಶಾರ್ವರಿಗೆ ಕೇಳಿದ ಮೊದಲ ಪ್ರಶ್ನೆ "ನಾನ್ಯಾಕೆ ನಿಮ್ಮ ಕಥೆ ಕೇಳಬೇಕು ? ಅಷ್ಟಕ್ಕೂ ಕಥೆ ಕೇಳಲು ಆಸಕ್ತಿ ಇದೆಯಾ ಎಂದು ಪ್ರಶ್ನಿಸುವ ಬದಲಾಗಿ, ಕಥೆ ಹೇಳುತ್ತಾ ಕೇಳುಗರಲ್ಲಿ ಆಸಕ್ತಿ ಹುಟ್ಟಿಸಬೇಕೇ ಹೊರತು ಆಸಕ್ತಿ ಇರುವವರಿಗೆ ಮಾತ್ರ ಕತೆ ಹೇಳುವುದಲ್ಲ.. ಹಾಗಾದಲ್ಲಿ ನೀವು ಹೇಳುವ ಕತೆ ಎಷ್ಟು ಜನರಿಗೆ ತಲುಪಲು ಸಾಧ್ಯ..?" ಎಂದು ಪ್ರಶ್ನೆಯ ಸರಮಾಲೆಯನ್ನೇ ಶಾರ್ವರಿಯ ಎದುರಿಗಿಟ್ಟನು. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಆತನ ತಾಯಿ ಆತನ ಕೈ ಜಗ್ಗಿಸಿ ನಿಲ್ಲಿಸು.. ನಿಲ್ಲಿಸು ಎಂಬಂತೆ ಸನ್ನೆ ಮಾಡುತ್ತಿದ್ದರೂ ಆತ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ತನ್ನ ಪ್ರಶ್ನೆಗಳನ್ನೇ ಮುಂದುವರಿಸುತ್ತಿದ್ದುದನ್ನು ಕಂಡು ಕೊನೆಗೆ ಅವರೇ ಎದ್ದು ನಿಂತು ಆತನನ್ನು ತಡೆದರು.

"ಸ್ಸಾರಿ, ಅವನು ಸ್ವಲ್ಪ ಹೀಗೆಯೇ.. ಎಲ್ಲಿ ಹೋದರೂ ಹೀಗೆಯೇ ಅಧಿಕ ಪ್ರಸಂಗ ಮಾಡಿ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಾನೆ. ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ 100 ನೇ ಪುಸ್ತಕದ ಬಿಡುಗಡೆಗೆ ನಿಮ್ಮನ್ನು ನೋಡಿ ಮಾತನಾಡಿಸಲು ಬಹಳ ಕಾತುರಳಾಗಿದ್ದೆ. ಒಬ್ಬಳನ್ನೇ ಕಳುಹಿಸಲು ಇಷ್ಟ ಪಡದ ಅವನೂ ನನ್ನೊಡನೆ ಬಂದಿದ್ದಾನೆ. ಅವನಿಗೆ ಕತೆಗಳೆಂದರೆ ಅಷ್ಟಕ್ಕಷ್ಟೇ.. " ಎಂದು ಅವನಮ್ಮ ಹೇಳಿದಾಗ ಶಾರ್ವರಿಯವರು ನಗುತ್ತಾ "ತೊಂದರೆಯಿಲ್ಲ.. ನನ್ನ ಬದುಕಿನ ಅನುಭವದಷ್ಟು ಅವನಿಗೆ ವಯಸ್ಸಾಗಿಲ್ಲ. ಆದರೆ, ಹಾಗೆಂದು ಅವನ ಪ್ರಶ್ನೆಯನ್ನು ಸುಮ್ಮನೆ ನಿರಾಕರಿಸಲು ಅಥವಾ ಪಕ್ಕಕ್ಕಿಡಲು ಸಾಧ್ಯವಿಲ್ಲ. ಅವನ ಮಾತಿನಲ್ಲಿ ತಪ್ಪು ಕಾಣುತ್ತಿಲ್ಲ. ಬದಲಾಗಿ ಅವನ ಕುತೂಹಲ ಕಾಣುತ್ತಿದೆ. ಅದಕ್ಕೆ ಉತ್ತರಿಸುವೆ" ಎನ್ನುತ್ತಾ ತಮ್ಮ ಆಲೋಚನೆ ಹಾಗೂ ವಯಸ್ಸಿನ ಪ್ರಬುದ್ಧತೆಯನ್ನು ತಮ್ಮ ಮಾತುಗಳ ಮೂಲಕ ತೋರಿದರು.



ಅದಾದ ನಂತರ ತಮ್ಮ ಮಾತುಗಳನ್ನು ಶುರು ಮಾಡಿದರು. " ಕತೆ ಬದುಕಿನಲ್ಲಿ ಯಾಕಷ್ಟು ಮುಖ್ಯವಾಗುತ್ತದೆ ಎನ್ನುವುದಕ್ಕಿಂತ ನಮಗೆ ಕತೆಗಳೆಂದರೆ ಏಕೆ ಆಸಕ್ತಿ ಗೊತ್ತೇ..??

ನಮ್ಮದೇ ಬದುಕನ್ನು ಬೇರೆಯವರ ಕನ್ನಡಕದಲ್ಲಿ ಕಂಡರೆ ಅಥವಾ ನಾವು ನಮ್ಮ ಕಣ್ಣಿನ ಮೂಲಕ ಬೇರೆಯವರ ಬದುಕನ್ನು ಕಂಡರೆ ಕೆಲವು ಬಣ್ಣ ಬಣ್ಣದ ಬದುಕುಗಳು ಕಾಣುತ್ತವೆ. ಬೇರೆಯವರ ಬದುಕುಗಳು ಕತೆಗಳಾದಾಗ ಅವು ರುಚಿಕಟ್ಟಾದ ಭೋಜನದಂತೆ ಭಾಸವಾಗುತ್ತವೆ. ದಿನಾ ಅದೇ ಅನ್ನ, ಸಾರು ತಿನ್ನುವವರಿಗೆ ಮಸಾಲೆ ದೋಸೆ ಕಂಡಾಗ ಹೇಗೆ ಮನಸ್ಸು ಅದನ್ನೇ ಬಯಸುವುದೋ.. ಹಾಗೆ ನಮ್ಮ ಬದುಕಿನಲ್ಲಿ ಇಲ್ಲದ್ದನ್ನು ಹಾಗೆಯೇ ನಾವು ಬದುಕಬೇಕು ಎನ್ನಿಸಿದ್ದನ್ನು ಕತೆಯಲ್ಲಿ ಕಂಡು ಅಲ್ಲಿ ನಮ್ಮನ್ನೇ ನಾವು ಕಲ್ಪಿಸಿಕೊಳ್ಳುತ್ತಾ ಹೋಗುತ್ತೇವೆ. ಆಗ ಕತೆಗಳು ನಮ್ಮ ಕನಸಿನ ಬದುಕಾಗುತ್ತವೆ. ವಾಸ್ತವಕ್ಕಿಂತ ಕಲ್ಪನೆಗಳು, ಕತೆಗಳು ವರ್ಣರಂಜಿತವಾಗಿ ತೋರುತ್ತವೆ. ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ. ಕೆಲವರು ತಮ್ಮ ಕಲ್ಪನೆಗಳಿಗೆ ಗರಿ ಹಚ್ಚಿ ಕತೆಗಳನ್ನು ಕಟ್ಟುತ್ತಾ.. ಹೇಳುತ್ತಾ.. ಬರೆಯುತ್ತಾ ಹೋದರೆ, ಹಲವರು ಅವುಗಳನ್ನು ಕಂಡು, ಕೇಳಿ, ಓದಿ ಕಲ್ಪನೆಗಳನ್ನು ಗರಿಗೆದರಿಸಿಕೊಳ್ಳುತ್ತಾರೆ.

ಪ್ರತಿಯೊಬ್ಬನೊಳಗೂ ಒಂದು ಕತೆ ಇರುತ್ತದೆ. ಆ ಕತೆ ಅವರಿಂದ ಬಿಡುಗಡೆ ಪಡೆಯುವುದು ಅಥವಾ ಅವಿತು ಕುಳಿತುಕೊಳ್ಳುವುದು ಎರಡಕ್ಕೂ ಅವರವರೇ ಕಾರಣ.

ಇನ್ನು ಕತೆ ಕೇಳುವ ಆಸಕ್ತರಿಗೆ ಮಾತ್ರ ಕತೆ ಹೇಳಬೇಕು ಎಂಬುದು ನನ್ನ ಉದ್ದೇಶವಷ್ಟೇ.. ಏಕೆಂದರೆ, ಆಸಕ್ತಿ ಎಂಬುದು ಇಂದಿಗೂ ಹೊರಗಿನಿಂದ ಹುಟ್ಟುವುದಲ್ಲ. ತಮ್ಮ ಮನಸ್ಸಿನಿಂದ ಮುಡಿಸಿಕೊಳ್ಳದ ಹೊರತು ಯಾವ ಆಸಕ್ತಿಯೂ ತನ್ನಿಂದ ತಾನೇ ಉದ್ಭವಿಸಲಾರದು. ನೀನು ಕತೆ ಕೇಳಲು ಆಸಕ್ತಿ ಇಲ್ಲವೆಂದು ತೋರಿಸಿಕೊಂಡರೂ ನಿನ್ನ ಸುಪ್ತ ಮನಸ್ಸಿನಲ್ಲಿ ಕತೆ ಎಂದರೆ ಹೇಗಿರಬಹುದು.. ಕತೆ ಎಂದರೆ.. ಈ ಕತೆ ಯಾರನ್ನು ನೆನಪಿಸಬಹುದು ಎಂಬುದನ್ನು ಆಲೋಚಿಸುತ್ತಲೇ ಒಲ್ಲದ ಮನಸ್ಸಿನಿಂದ ಕತೆ ಕೇಳಲು ಆರಂಭಿಸಿರುತ್ತೀಯ. ಕತೆ ಓದುವವರಿಗೆ, ಕಥೆ ಕೇಳುವುದು ರುಚಿಸದೇ ಇರಬಹುದು. ಕತೆ ಎಂಬುದು ಎಲ್ಲೆಡೆಯೂ ಇದೆ. ಅದನ್ನು ಕಾಣುವ, ಕೇಳುವ ಮನಸ್ಸಿರಬೇಕಷ್ಟೇ..

ನನ್ನ ಕತೆಗಳು ಎಷ್ಟು ಜನರಿಗೆ ತಲುಪಬಹುದು ಎಂಬುದಕ್ಕಿಂತ ನನಗೆ ಒಂದು ಕತೆ ಒಬ್ಬರ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದನ್ನು ಆಲೋಚಿಸುತ್ತೇನೆ. 100 ಜನ ಕತೆ ಕೇಳಿ, 90 ಜನ ಅದನ್ನು ಮರೆತು ಮುಂದಕ್ಕೆ ಸಾಗುವುದಕ್ಕಿಂತಲೂ.. 10 ಜನ ಕತೆ ಕೇಳಿ 10 ಜನರೂ ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಳ್ಳುವುದೋ ಅಥವಾ ಸಾರ್ಥಕವಾಗಿ ಉಪಯೋಗಿಸುವುದೋ ಮಾಡಿದಾಗ ಅದಕ್ಕೊಂದು ಸಾರ್ಥಕ ಭಾವ ಬರುತ್ತದೆ.

ಕತೆ ಹೊಡೆದಿದ್ದು ಸಾಕು ಇನ್ನು ಕತೆ ಹೇಳಿ ಎಂದು ಬಹಳ ಜನ ಬೈದುಕೊಳ್ಳುತ್ತಿರಬಹುದು. ಕತೆ ಶುರು ಮಾಡೋಣ್ವಾ..? ಎಷ್ಟು ಜನ ಕಥೆ ಕೇಳಲು ಸಿದ್ದರಾಗಿದ್ದೀರಿ..?" ಎಂದಾಗ ಎಲ್ಲರೂ ತಮ್ಮ ಕೈಯೆತ್ತಿದ್ದರು. ಪ್ರದ್ಯುಮ್ನನಂತೂ ತನ್ನ ಎರಡೂ ಕೈಗಳನ್ನು ಮೇಲೆತ್ತಿದ್ದ.

~ವಿಭಾ ವಿಶ್ವನಾಥ್