ಪುಸ್ತಕದ ಶೀರ್ಷಿಕೆ : ತಿತ್ತಿಬ್ವಾಸನ ಟೈಟಾನ್ ವಾಚು
ಲೇಖಕರು : ದಿಲೀಪ್ ಎನ್ಕೆ
ಪ್ರಕಾಶಕರು : ಈಶ್ವರಿ ಪ್ರಕಾಶನ
ಪ್ರಥಮ ಮುದ್ರಣ : 2025
ಪುಟಗಳು : 148
ಬೆಲೆ : 178 ರೂ.
ತಿತ್ತಿಬ್ವಾಸನ ಟೈಟಾನ್ ವಾಚು ದಿಲೀಪ್ ಎನ್ಕೆ ಅವರ ನಾಲ್ಕನೇ ಕೃತಿ ಹಾಗೂ ಎರಡನೆಯ ಕಥಾ ಸಂಕಲನ. ಇವರ ಮೊದಲ ಕಥಾ ಸಂಕಲನ ಬಲಿಷ್ಠ. ಈ ಕಥಾ ಸಂಕಲನದ ಕೆಲವು ಕಥೆಗಳು ಕೆಂಡಸಂಪಿಗೆ ಬ್ಲಾಗ್ ನಲ್ಲಿ ಹಾಗೂ ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಈ ಕಥಾ ಸಂಕಲನದಲ್ಲಿ ಒಟ್ಟು ಒಂಬತ್ತು ಕಥೆಗಳಿವೆ.
ತಿತ್ತಿಬ್ವಾಸನ ಟೈಟಾನ್ ವಾಚು :
ಕೊಕ್ಕರಕ್ಕಿ ಹಾಗೂ ತಿತ್ತಿಬ್ವಾಸ ಎಂಬ ಎರಡು ಪಾತ್ರಗಳು ಓದುಗರನ್ನು ಕಥೆಯೊಳಗೆ ಸೆಳೆದುಕೊಂಡು ಹೋಗುತ್ತವೆ. ಇಲ್ಲಿ ಗೆಳೆಯ ಧನಂಜಯನೇ ಕೊಕ್ಕರಕ್ಕಿ. ಆತನ ಮೂಲಕವೇ ಇಲ್ಲಿ ಕಥೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಅಮ್ಮನಿಲ್ಲದೆ, ಮಲತಾಯಿ ಬಂದ ನಂತರ ತಿತ್ತಿಬ್ವಾಸನ ಬದುಕು ಹೇಗಿತ್ತು..? ತನ್ನ ಕೈಯಲ್ಲಿದ್ದ ಟೈಟಾನ್ ವಾಚು ಅಮ್ಮ ಕೊಟ್ಟಿದ್ದು ಅಮ್ಮನ ಪ್ರತಿರೂಪವೇ ಎಂದು ಭಾವಿಸುತ್ತಿದ್ದವನು ವಾಚ್ ಅನ್ನು ತೆಗೆಯುವ ಅನಿವಾರ್ಯ ಸಂದರ್ಭ ಬಂದದ್ದೇಕೆ..? ಬಳ್ಳಾರಿಯಲಿ ಪಿ.ಟಿ ಶಿಕ್ಷಕನ ಕೆಲಸ ಸಿಕ್ಕಿದರೂ ತಿತ್ತಿಬ್ವಾಸನಿಗೆ ಅಲ್ಲಿಗೆ ಹೋಗದಂತಹ ಸಂದರ್ಭ ಬಂದದ್ದಕ್ಕೆ ಕಾರಣವೇನು..? ಆತನ ಬದುಕಿನ ದಾರುಣ ಕಥೆ ಸಿಗುತ್ತದೆ. ಇಲ್ಲಿ ಕಥೆ ಹಾಗೂ ಕಾವ್ಯ ಎರಡರ ಮೂಲಕ ವಿಭಿನ್ನವಾಗಿ ಕಥೆಯನ್ನು ನಿರೂಪಿಸಿದ್ದಾರೆ.
ಸುಟ್ಟಿರದೇ ಮೂರ್ ದ್ವಾಸ : ಅಣಕಿಸುವಂತೆಯೇ ಶುರುವಾಗುವ ಹಾಡಿನಲ್ಲಿರುವ ಸಾಲಿನಂತೆ ಇಲ್ಲಿ ಬಡತನ ಕಾಣಸಿಗುತ್ತದೆ. ತಾವು ಕಷ್ಟಪಟ್ಟರೂ ಮಕ್ಕಳು ಓದಿ ಮುಂದೆ ಬರಲೆಂದು ಆಶಿಸುವ ತಂದೆ ತಾಯಿ ಇಲ್ಲಿ ಕಾಣಿಸುತ್ತಾರೆ. ಬುದ್ಧಿ ಬಲಿಯದ ವಯಸ್ಸಿನ ಉಡಾಫೆಯ ಮಗ ಸಿದ್ದನಿದ್ದಾನೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು ಸಿದ್ದನ ಕಥೆ ಹೇಳಿದ್ದೇಕೆ.. ಬದುಕಿನ ಬದಲಾವಣೆ ಎಲ್ಲಿ ಶುರುವಾಗುತ್ತದೆ ಮತ್ತು ಹೇಗೆ ಎಂಬುದರ ಚೆಂದದ ಕಥೆ.
ದೊಡ್ಡ ಸಂಪಿಗೆಯ ತಿರುವು : ಹುಚ್ಚಾಲಮ್ಮನ ಒಕ್ಕಲಿಗೆ ಸೇರಿದ ಕಾರಣಕ್ಕೆ ಹುಚ್ಚಾಲಿ ಎಂದು ಹೆಸರು ಕರೆದಿರಬೇಕು ಎಂದುಕೊಂಡರೂ ಮೂಲ ಕಥೆ ಅವಳ ಹೆಸರ ಹಿಂದಿನ ಮರ್ಮವನ್ನು ಬೇರೆಯೇ ಹೇಳುತ್ತದೆ. ಜೊತೆಗೆ ಆಕೆಯ ತಂದೆಯ ನ್ಯಾಯ ನಿಷ್ಠುರತೆಯ ಪರಿಚಯವನ್ನು ಮಾಡಿಸುತ್ತದೆ. ಹುಚ್ಚಾಲಿಯ ಸಾಂಸಾರಿಕ ಬದುಕು ಹೇಗಿತ್ತು..? ಆಕೆಯ ಗಂಡ ಕಾಣೆಯಾದದಕ್ಕೂ.. ಅವಳ ಭ್ರಮೆಗೂ ಇರುವ ಸಂಬಂಧವೇನು..? ಕಣ್ಣಿಗೆ ಕಂಡದ್ದು ಅಥವಾ ಅಂದುಕೊಂಡದ್ದೇ ನಿಜ ಎನ್ನುವ ದೃಷ್ಟಿಕೋನವನ್ನು ಬದಲಿಸುವ ಕಥೆ ಇದು.
ಕಾಕ್ಟೇಲ್ : ವೀರೇಶ್ ಮಾಡುತ್ತಿದ್ದ ಕೆಲಸದ ಪರಿಚಯವನ್ನು ಮಾಡಿಸುತ್ತಲೇ ಆತನ ಕಥೆ, ಕಾದಂಬರಿಗಳನ್ನು ಓದುವ ಗೀಳು ಹಚ್ಚಿಕೊಂಡದ್ದು ಹಾಗೂ ಓದನ್ನು ಆಸ್ವಾದಿಸುತ್ತಿದ್ದ ಬಗೆಯ ಜೊತೆಗೆ ಅಚಾನಕ್ಕಾಗಿ ಸಿಕ್ಕ ಗೆಳೆತನಗಳಲ್ಲಿ ಸಾಹಿತ್ಯಕ್ಕೆ ಕನೆಕ್ಟ್ ಆದ ಗೆಳೆತನಗಳು ಕಾಣುತ್ತವೆ. ಆ ಗೆಳೆಯರ ಗುಂಪಿನಲ್ಲಿ ಪ್ರದೀಪ್ ಬರೆದ ಕಾಗದ ಒಂದು ಆತನ ಬದುಕಿಗೆ ಸಂಬಂಧಪಟ್ಟಿದ್ದೇ ಆದರೂ.. ವೀರುವಿನ ಒಂದು ನಿರ್ಲಕ್ಷ್ಯ ಪ್ರದೀಪ್ ಹಾಗೂ ವೀರುವಿನ ಬದುಕನ್ನೇ ಬುಡಮೇಲಾಗಿಸುವ ಬಗೆ ಇಲ್ಲಿದೆ.
ಕುಂಟು ಸೇತುವೆ : ಇದೊಂದು ಪ್ರೇಮ ಕಥೆ. ಇಲ್ಲಿ ಪ್ರೇಮ ಯಶಸ್ವಿಯಾಯಿತೋ ಅಥವಾ ವಿಫಲವಾಯಿತೋ ಎಂಬುದನ್ನು ಓದಿ ನೋಡಿ. ಆದರೆ, ಈ ಕಥೆಯ ಕೊನೆಯಲ್ಲಿ ಬರುವ ಸಾಲು ಈ ಕಥೆಯನ್ನು ಬೇರೆಯದ್ದೇ ಆಯಾಮದಲ್ಲಿ ತೋರುವ ಸಾಮರ್ಥ್ಯ ಹೊಂದಿದೆ.
ಸಂದರ್ಭ : ಕುಂಟು ಸೇತುವೆಯ ಕೆಳಗೆ ಮೀನುಗಳಿಗೆ ಕಡಲೆಪುರಿ ಇಡುತ್ತಾ ಕುಳಿತಿದ್ದ ಆತ ಹಾಗೂ ಪಚ್ಚಿ.
"ನಾನು ನನ್ನದೇ ಆದ ರೀತಿಯಲ್ಲಿ ಹೇಳಿದ ಅವನ ಕಥೆಯನ್ನು ಕೇಳಿ ಅವನಿಗೆ ಹೇಗಾಯಿತು ಏನೋ?"
ಈ ಕಥೆಯ ಕುರಿತು ನೀವೇ ಓದಿ ನೋಡಿ.
ಅಂಬಾಸಿಡರ್ ಕಾರು : ಸುಹಾಸ್ ತಿಳಿದೋ ತಿಳಿಯದೆಯೋ ಸಣ್ಣ-ಪುಟ್ಟ ತಪ್ಪನ್ನೂ ಬೆಟ್ಟದಷ್ಟೆಂದು ಭಾವಿಸಿ ಭಯಭೀತನಾಗುತ್ತಿದ್ದ. ನಲುಗುತ್ತಿದ್ದ, ನರಳುತ್ತಿದ್ದ. ಆದರೆ, ಕ್ಷಮೆ ಕೇಳಿ ಮತ್ತೆ ಸರಿಪಡಿಸಿಕೊಂಡು ಸಂತಸವನ್ನು ಹಂಚಿಕೊಳ್ಳುವುದು ಸಹ ಅಷ್ಟೇ ಆಪ್ತವಾಗಿ ಹಾಗೂ ಗಾಢವಾಗಿ.
ಎಳ್ಳಮಾವಾಸ್ಯೆಯ ದಿನ ನಡೆದ ಒಂದು ಘಟನೆ ಅವನಿಗೆ ಗಾಢವಾಗಿ ಬಾಧಿಸುತ್ತಿತ್ತು. ತಪ್ಪು ಇವನದ್ದೇ.. ಅಪಘಾತವೆಂದರೆ ಅದು ಒಂದು ಕ್ಷಣದ ಮೈಮರೆಯುವಿಕೆ. ಈತ ಮಾಡಿದ ಅಪಘಾತಕ್ಕೆ ಬಲಿಯಾದ ವ್ಯಕ್ತಿ ಇವನನ್ನು ಸುಮ್ಮನೆ ಬಿಟ್ಟುಬಿಟ್ಟಿದ್ದ. ಆದರೆ, ಆತನ ಮಾತಿನಿಂದ ಪಶ್ಚಾತ್ತಾಪ ಪಡುತ್ತಾ ಆ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಲು ಅಪ್ಪ, ಅತ್ತೆ ಹಾಗೂ ಪುಟ್ಟಿಯ ಜೊತೆ ಹೊರಡುತ್ತಾನೆ. ಪುಟ್ಟಿ ಎಲ್ಲರಂತಲ್ಲ. ಅಂದು ಅಲ್ಲಿಗೆ ಹೋದಾಗ ಅಂಬಾಸಿಡರ್ ಕಾರು ಕಂಡ ಪುಟ್ಟಿ ಕೆರಳಿದ್ದೇಕೆ..?
ಕೆಲವೊಮ್ಮೆ ಸಂತ್ರಸ್ತರು ಎಂದು ಭಾವಿಸುವವರು ನಿಜಕ್ಕೂ ಸಂತ್ರಸ್ತರೇ ಆಗಿರುತ್ತಾರೆಯೇ..?
ಭೈರೂಪ : ವಂದನಾ ಹಾಗೂ ಅಭಿಯ ಮನಸ್ತಾಪ ಹಾಗೂ ಅವರಿಬ್ಬರ ಮನದ ತುಮುಲಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ವಂದನಾ ಹಾಗೂ ಅಭಿ ಒಬ್ಬರಿಗೊಬ್ಬರು ಏನಾಗಬೇಕು ಎಂಬ ಸಂಬಂಧ ತೆರೆದುಕೊಂಡಾಗ ಅವರಿಬ್ಬರ ನಡುವಿನ ಮನದ ಮಾತುಗಳು ನಿಜಕ್ಕೂ ಸರಿಯೇ ಎಂಬ ಆಲೋಚನೆ ಮೂಡುತ್ತಿರುವಾಗಲೇ ವಂದನಾ ಅಭಿ ಎಂದು ಕರೆಯುತ್ತಿದ್ದದ್ದು ಅನಿತಾಳನ್ನು ಎಂದು ತಿಳಿದುಬರುವಷ್ಟರಲ್ಲಿ ಕಥೆ ಕೊನೆಯಾಗುತ್ತದಾದರೂ.. ಕಥೆ ಮತ್ತೊಂದು ಆಯಾಮದಲ್ಲಿ ಇನ್ನೊಮ್ಮೆ ಓದಿಸಿಕೊಳ್ಳುತ್ತದೆ.
ಕ್ವಲ್ಲನಂಜಿ : ಕ್ರಿಶ್ಚಿಯನ್ನರ ಸಮಾಧಿ ಹಾಗೂ ಅವರು ಅಂತ್ಯಸಂಸ್ಕಾರ ಕಾರ್ಯವನ್ನು ಮಾಡುವ ಕ್ಷಣದಿಂದ ತೆರೆದುಕೊಳ್ಳುವ ಕಥೆ ನಂಜಿಯ ಹಾಲುತುಪ್ಪದ ದಿನ ಸಮಾಧಿಯ ಮೇಲಿಟ್ಟ ತಿಂಡಿ-ತಿನಿಸನ್ನು ಕಾಗೆ ಮುಟ್ಟದೆ ಇರುವಾಗ ಅಯ್ಯನಿಗೆ ಗೊತ್ತಾಗದಂತೆ ನಂಜೆಯ ದೊಡ್ಡ ಮಗ ಮಾಡಿದ ಕೆಲಸವೇನು..? ಎನ್ನುವುದರಿಂದ ಶುರುವಾಗಿ, ಅಯ್ಯ ಹಾಗೂ ನಂಜಿಯ ಯೌವ್ವನದ ದಿನಗಳಿಂದ ಇಂದಿನ ಆಪ್ತತೆಯವರೆಗೂ ತೆರೆದುಕೊಳ್ಳುತ್ತದೆ. ಅಯ್ಯವನ್ನು ಸಮಾಧಾನಪಡಿಸಿದವರಾರು..? ನಂಜಿಯ ಕೊನೆಯ ಆಸೆ ಏನಿತ್ತು..?
ವಿಕಾರಿ : ಇಲ್ಲಿ ಪ್ರತಿ ಕಥೆಗೂ ಶೀರ್ಷಿಕೆ ಚಿತ್ರಗಳಿವೆ. ಆದರೆ, ಈ ಕಥೆಯ ಚಿತ್ರವಂತೂ ಅನ್ವರ್ಥದಂತಿದೆ.
ಎಲ್ಲಾ ಪತ್ರಗಳು ಸರಿಯಾಗಿ ಹೊಂದಿ ಕೆಲಸಕ್ಕೆಂದು ಹೋದ ಮುರುಗ ಬಂದಾಗ ಮೊದಲಿನಂತಿರಲಿಲ್ಲ. ಅಮ್ಮನ ಉತ್ಸಾಹಕ್ಕೂ ಅವನ ನಿರುತ್ಸಾಹಕ್ಕೂ ಬಹಳ ವೇ ಅಂತರ.
ಅದಕ್ಕೂ ಮೊದಲು ಆಕೆಯ ನೆನಪಿನಾಳದ ಮಾತುಗಳು ಇಂತಿವೆ.
"ಹೆಣ್ಣ ತ್ತಾಣ ನೂರ್ಮಡಿಗೊಳ್ಳುವುದಕ್ಕೆ ತಾಯ್ತನವೇ ವೇದಿಕೆ. ಹೆಣ್ಣ ಹುಟ್ಟು, ಹೆಣ್ಣ ಬದುಕು ಸಾರ್ಥಕ್ಯದ ಗುರಿ ಮುಟ್ಟಿ ತೇಲಾಡುವಂಥದ್ದು ಆಗಲೇ. ಯಾರೇ, ಏನೇ ಎದುರಾದರೂ ಈಸುವ ಛಲ ಹೆಣ್ಣಿನೊಳಗೆ ಪುಟಿದೇಳುವಂತದ್ದು ಅಲ್ಲಿಂದೀಚೆಗೇ. ಇಂತಹ ಮಧುರ ಸುಮಧುರ ಪ್ರಕೃತಿಯಲ್ಲಿ ನನ್ನೊಳಗೊಬ್ಬ ವಿಕಾರಿ ಮೈದಾಳುವುದೇ..?!"
ಪಲ್ಲಮ್ಮನ ಮನಸ್ಸಿನ ಈ ಮಾತುಗಳು ಯಾವ ನೆನಪಿನಿಂದ ವಾಸ್ತವಕ್ಕೆ ಕರೆತರುತ್ತವೆ..? ಇದರ ಹಿನ್ನೆಲೆ ಏನು..?
ಕೆಲವು ವೃತ್ತಿಗಳು ವಂಶಪಾರಂಪರ್ಯವಾಗಿ ಮುಂದುವರಿಯುವುದಿಲ್ಲ. ಅದಕ್ಕೆ ಹಲವು ಕಾರಣಗಳು. ಇಲ್ಲಿ ಅಂತಹದ್ದೇ ಒಂದು ವೃತ್ತಿ ಇದೆ. ಆ ವೃತ್ತಿ ಸಮಾಜ ಎಷ್ಟೇ ಆಧುನಿಕತೆ ಕಂಡರೂ ಬದಲಾಗದ ವಾಸ್ತವತೆಗೆ ಹಿಡಿದ ಕನ್ನಡಿಯಂತಿದೆ.
ನನಗೇಕೋ ಈ ಕಥೆಯ ಅಂತ್ಯ ಬದಲಾವಣೆಯನ್ನು ಬಿಂಬಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿದರೂ.. ಆ ಬದಲಾವಣೆ ಅಷ್ಟು ಸುಲಭವಲ್ಲ ಎನ್ನುವ ವಾಸ್ತವತೆ ತೋರಿರುವ ಕಥೆಗಾರರೇ ಸರಿಯೇನೋ ಎಂದೂ ಅನ್ನಿಸಿತು.
ಈ ಕಥಾ ಸಂಕಲನದಲ್ಲಿ ಭಾಷೆ ಚಾಮರಾಜನಗರ, ಕೊಳ್ಳೇಗಾಲ ಭಾಗದ ಪ್ರಾಂತೀಯ ಕನ್ನಡ. ಅಲ್ಲಿನ ಆಡು ನುಡಿ, ಬೈಗುಳ ಹಾಗೂ ಮಂಟೇಸ್ವಾಮಿ ಪದಗಳು ವಿಭಿನ್ನ ಓದಿನ ಅನುಭವ ನೀಡುತ್ತವೆ. ಆಡುಭಾಷೆಯಿಂದಾಗಿ ಓದು ನಿಧಾನವಾದರೂ.. ಆಸಕ್ತಿಕರವಾಗಿ ಓದಿಸಿಕೊಂಡು ಹೋಗುವ ಕಥೆಗಳು ಇಲ್ಲಿವೆ. ಭಾಷೆ ಕಾವ್ಯಾತ್ಮಕವಾಗಿ ಹಾಗೂ ಸೆಳೆಯುವಂತಿದೆ. ಇನ್ನಷ್ಟು ವೈವಿಧ್ಯಮಯ ಬರಹಗಳು ಮೂಡಿ ಬರಲಿ ಎಂದು ಹಾರೈಸುವೆ.
~ವಿಭಾ ವಿಶ್ವನಾಥ್