ಭಾನುವಾರ, ಆಗಸ್ಟ್ 9, 2026

ಸಕ್ಕರೆ ನಿದ್ದೆಯ ದೇವರ ನಗು (ಬೆಳಕಿಂಡಿಯ ಕತೆಗಳು - 67)


 "ಅಮ್ಮನ ಅತಿ ಇಷ್ಟದ ನಗು ಯಾವುದು ಗೊತ್ತಾ..?" 

"ಯಾವುದು..?"

"ಕಂದಮ್ಮ ಸಕ್ಕರೆ ನಿದ್ದೆಯ ಸವಿಯಲ್ಲಿ ಮಂದಹಾಸ ಬೀರುವ ಅರೆ ಕ್ಷಣದ ನಗು, ದೃಷ್ಟಿಯಾಗುತ್ತದೆ ನೋಡಬೇಡ ಎಂದದ್ದನ್ನು ಬದಿಗೊತ್ತಿ ಕಾಯುತ್ತಿದ್ದ ಕಳೆದೇ ಹೋಗುವಂತೆ ಮಾಡುತ್ತಿದ್ದ ನಗು"


ಅವಳೇ ಕಟ್ಟಿ ಹಾಡುತ್ತಿದ್ದ ಲಾಲಿಯಲ್ಲಿ ಈ ಸಾಲುಗಳು ಇಂದಿಗೂ ಅತ್ಯಾಪ್ತ

ಜೋ ಜೋ ಲಾಲಿ ಕಂದಮ್ಮ..

ಅಮ್ಮನ ಕಣ್ಮಣಿ ನೀನಮ್ಮ..

ಸಕ್ಕರೆ ನಿದ್ದೆ ಮಾಡಮ್ಮಾ..

ಕನಸಿನ ಲೋಕಕೆ ಜಾರಮ್ಮಾ..


ಲಾಲಿ ಹಾಡು ಸಾಗುತ್ತಿತ್ತು..!

~ವಿಭಾ ವಿಶ್ವನಾಥ್

ಗೀಳಿಗೊಂದು ಬ್ರೇಕ್ (ಬೆಳಕಿಂಡಿಯ ಕತೆಗಳು - 66)

 


"ನಾನೂ ನಿನ್ನಂತೆ ಪುಸ್ತಕ ಓದಬೇಕು, ಏನಾದರೂ ಬರೆಯಬೇಕು. ಇದಕ್ಕೆಲ್ಲಾ ಹೇಗೆ ಸಮಯ ಹೊಂದಿಸುತ್ತೀಯ" ಎಂದು ಪ್ರಶ್ನೆ ಕೇಳಿದ ಗೆಳತಿಗೆ ಉತ್ತರ ಕೇಳುವ ಸಂಯಮವೂ ಇರದೆ ಮೊಬೈಲ್ ನಲ್ಲಿ ಸ್ಕ್ರೋಲ್ ಮಾಡುತ್ತಾ ಕಳೆದುಹೋಗಿದ್ದಳು. 

"ಮೊಬೈಲ್ ಬಿಟ್ಟರೆ ಎಲ್ಲಕ್ಕೂ ಸಮಯ ಹೊಂದಿಸಿಕೊಳ್ಳಬಹುದು" ಎಂದು ಅವಳ ಫೋನ್ ಕಿತ್ತು ತನ್ನ ಬ್ಯಾಗ್ ನಲ್ಲಿ ಹಾಕಿಕೊಂಡವಳು ಗೆಳತಿಯ ಅತಿಯಾದ ಮೊಬೈಲ್ ಗೀಳಿಗೆ ಬ್ರೇಕ್ ಹಾಕುವುದರಲಿದ್ದರೆ.. ಇನ್ನಾದರೂ ಸಂಯಮ ರೂಢಿಸಿಕೊಂಡು ಬದಲಾಗಬೇಕು ಎನ್ನುವ ಆಲೋಚನೆಯಲ್ಲಿದ್ದಳು ಗೆಳತಿ.

~ವಿಭಾ ವಿಶ್ವನಾಥ್

ಉಡುಗೊರೆಯ ಸಮಯ (ಬೆಳಕಿಂಡಿಯ ಕತೆಗಳು - 65)

 


"ನಾಳೆ ನಿನ್ನ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಬೇಕು ಕೇಳು ಕೊಡಿಸುತ್ತೇನೆ, ಅಷ್ಟು ಖರ್ಚಾದರೂ ಪರವಾಗಿಲ್ಲ" ಎಂದವನ ಮಾತು 'ಯಾವ ವರ ಕೇಳುವೆಯೋ ಕೇಳು. ತಥಾಸ್ತು' ಎಂಬಂತೆ ಭಾಸವಾಗಿತ್ತು.

ಬೆಲೆಬಾಳುವ ಉಡುಗೊರೆಗಿಂತ ಅವನ ಜೊತೆ ಸಮಯ ಕಳೆಯುವುದು ಮುಖ್ಯವಾಗಿತ್ತು ಅವಳಿಗೆ. ಆದರೆ, ಅವನ ಬ್ಯುಸಿ ಶೆಡ್ಯೂಲ್ ಅನ್ನು ಬ್ರೇಕ್ ಮಾಡುವ ಮನಸ್ಸಿರಲಿಲ್ಲ

"ಏನಿಲ್ಲ" ಎಂದು ಚುಟುಕಾಗಿ ಮಾತು ಮುಗಿಸಿದವಳಿಗೆ "ನಾಳೆ ಇಡೀ ದಿನ ನಿನ್ನದೇ" ಎಂದು ಕಣ್ಣು ಮಿಟುಕಿಸಿದವನನ್ನು ಕಂಡು ಇಚ್ಚೆಯನರಿತು ನಡೆವ ಪತಿ, ಅವನ ಜೊತೆಗಿನ ಸಮಯಕ್ಕಿಂತ ಮಿಗಿಲಾದ ಉಡುಗೊರೆ ಬೇರೇನು ಎನ್ನಿಸಿತ್ತು.

~ವಿಭಾ ವಿಶ್ವನಾಥ್


ಪ್ರಾರ್ಥನೆ (ಬೆಳಕಿಂಡಿಯ ಕತೆಗಳು - 64)

 


ಯುದ್ದದ ಹೆಸರು ಮನದಲ್ಲಿ ತಲ್ಲಣ ಮೂಡಿಸುತ್ತಿತ್ತು. ಇತ್ತೀಚಿನ ಜಾಗತಿಕ ಬೆಳವಣಿಗೆಗಳ ವಾರ್ತೆ ನಿತ್ಯವೂ ಟಿ. ವಿ, ಪೇಪರ್, ಸೋಶಿಯಲ್ ಮೀಡಿಯಾಗಳಲ್ಲಿ ಕಂಡು ಅಗತ್ಯಕ್ಕಿಂತ ಹೆಚ್ಚೇ ಕಳವಳವಾಗುತ್ತಿತ್ತು.

ಇಂದು ಮಾತ್ರವಲ್ಲ ಎಂದಿಗೂ ಯುದ್ದದ ನೆನಪೆಂದರೆ ಅವಳಿಗೆ ಸದಾ ಆತಂಕವೇ.. ರಾಮಾಯಣ, ಮಹಾಭಾರತದ ಯುದ್ಧ, ಕಾರ್ಗಿಲ್ ಯುದ್ಧ, ಹಿರೋಶಿಮಾ, ನಾಗಾಸಾಕಿಯ ದಾಳಿಗಳು ಎಲ್ಲವೂ.. 

ಅಷ್ಟಕ್ಕೂ ಅವಳಿಗೆ ಕಳೆದುಕೊಳ್ಳುವಂತಹದ್ದು ಏನೂ ಇರಲಿಲ್ಲ. ಯಾರೂ ಇರಲಿಲ್ಲ. ಗಂಡ, ಮಗ ಇಬ್ಬರನ್ನೂ ದೇಶಕ್ಕಾಗಿ ಅರ್ಪಿಸಿದವಳು "ಎಲ್ಲ ತಾಯಂದಿರ ಮಕ್ಕಳೂ ಸುಖವಾಗಿರಲಿ, ಸೌಖ್ಯದಿಂದಿರಲಿ" ಎಂದಷ್ಟೇ ಪ್ರಾರ್ಥಿಸುತ್ತಾಳೆ.

~ವಿಭಾ ವಿಶ್ವನಾಥ್

ಭರವಸೆ (ಬೆಳಕಿಂಡಿಯ ಕತೆಗಳು - 63)


 ನಮ್ಮ ಆಚಾರ-ವಿಚಾರ ತಿಳಿಯದ ಫಾರಿನ್ ಹುಡುಗಿಯನ್ನು ಮನೆ ಸೊಸೆ ಎಂದು ಒಪ್ಪುವುದಾದರೂ ಹೇಗೆ ಎಂದು ಹಿಂಜರಿಯುತ್ತಿದ್ದ ಅಪ್ಪ-ಅಮ್ಮನಿಗೆ ಅಂದು ತಮ್ಮ ಪ್ರೀತಿಯ ಆಳ ಅರ್ಥ ಮಾಡಿಸಿದ್ದ ಮಗ. ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿದ್ದವರಿಗೆ ಇಂದು ಸೊಸೆಯ ಮೌಲ್ಯ ಅರ್ಥವಾಗಿತ್ತು.

ಗೊತ್ತಿಲ್ಲದಿದ್ದರೂ ಎಲ್ಲವನ್ನೂ ಕಲಿತು ತಮ್ಮ ಆಚಾರ-ವಿಚಾರವನ್ನು ಕಲಿತು ಪ್ರೀತಿಯಿಂದ ಒಪ್ಪಿ ಅಪ್ಪಿರುವ ಸೊಸೆ ಹೆಮ್ಮೆ ಮೂಡಿಸಿದ್ದಳು. ಬದಲಾಗುತ್ತಿರುವುದು ಯುವ ಜನತೆಯ ಮತ್ತೊಂದು ಮಜಲು ಭರವಸೆ ಮೂಡಿಸಿತ್ತು.

~ವಿಭಾ ವಿಶ್ವನಾಥ್

ತಿತ್ತಿಬ್ವಾಸನ ಟೈಟಾನ್ ವಾಚು (ಪುಸ್ತಕ ಯಾನ - 480)


ಪುಸ್ತಕದ ಶೀರ್ಷಿಕೆ : ತಿತ್ತಿಬ್ವಾಸನ ಟೈಟಾನ್ ವಾಚು

ಲೇಖಕರು : ದಿಲೀಪ್ ಎನ್ಕೆ

ಪ್ರಕಾಶಕರು : ಈಶ್ವರಿ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 148

ಬೆಲೆ : 178 ರೂ.


ತಿತ್ತಿಬ್ವಾಸನ ಟೈಟಾನ್ ವಾಚು ದಿಲೀಪ್ ಎನ್ಕೆ ಅವರ ನಾಲ್ಕನೇ ಕೃತಿ ಹಾಗೂ ಎರಡನೆಯ ಕಥಾ ಸಂಕಲನ. ಇವರ ಮೊದಲ ಕಥಾ ಸಂಕಲನ ಬಲಿಷ್ಠ. ಈ ಕಥಾ ಸಂಕಲನದ ಕೆಲವು ಕಥೆಗಳು ಕೆಂಡಸಂಪಿಗೆ ಬ್ಲಾಗ್ ನಲ್ಲಿ ಹಾಗೂ ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಈ ಕಥಾ ಸಂಕಲನದಲ್ಲಿ ಒಟ್ಟು ಒಂಬತ್ತು ಕಥೆಗಳಿವೆ.


ತಿತ್ತಿಬ್ವಾಸನ ಟೈಟಾನ್ ವಾಚು : 

ಕೊಕ್ಕರಕ್ಕಿ ಹಾಗೂ ತಿತ್ತಿಬ್ವಾಸ ಎಂಬ ಎರಡು ಪಾತ್ರಗಳು ಓದುಗರನ್ನು ಕಥೆಯೊಳಗೆ ಸೆಳೆದುಕೊಂಡು ಹೋಗುತ್ತವೆ. ಇಲ್ಲಿ ಗೆಳೆಯ ಧನಂಜಯನೇ ಕೊಕ್ಕರಕ್ಕಿ. ಆತನ ಮೂಲಕವೇ ಇಲ್ಲಿ ಕಥೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಅಮ್ಮನಿಲ್ಲದೆ, ಮಲತಾಯಿ ಬಂದ ನಂತರ ತಿತ್ತಿಬ್ವಾಸನ ಬದುಕು ಹೇಗಿತ್ತು..? ತನ್ನ ಕೈಯಲ್ಲಿದ್ದ ಟೈಟಾನ್ ವಾಚು ಅಮ್ಮ ಕೊಟ್ಟಿದ್ದು ಅಮ್ಮನ ಪ್ರತಿರೂಪವೇ ಎಂದು ಭಾವಿಸುತ್ತಿದ್ದವನು ವಾಚ್ ಅನ್ನು ತೆಗೆಯುವ ಅನಿವಾರ್ಯ ಸಂದರ್ಭ ಬಂದದ್ದೇಕೆ..? ಬಳ್ಳಾರಿಯಲಿ ಪಿ.ಟಿ ಶಿಕ್ಷಕನ ಕೆಲಸ ಸಿಕ್ಕಿದರೂ ತಿತ್ತಿಬ್ವಾಸನಿಗೆ ಅಲ್ಲಿಗೆ ಹೋಗದಂತಹ ಸಂದರ್ಭ ಬಂದದ್ದಕ್ಕೆ ಕಾರಣವೇನು..? ಆತನ ಬದುಕಿನ ದಾರುಣ ಕಥೆ ಸಿಗುತ್ತದೆ. ಇಲ್ಲಿ ಕಥೆ ಹಾಗೂ ಕಾವ್ಯ ಎರಡರ ಮೂಲಕ ವಿಭಿನ್ನವಾಗಿ ಕಥೆಯನ್ನು ನಿರೂಪಿಸಿದ್ದಾರೆ.


ಸುಟ್ಟಿರದೇ ಮೂರ್ ದ್ವಾಸ : ಅಣಕಿಸುವಂತೆಯೇ ಶುರುವಾಗುವ ಹಾಡಿನಲ್ಲಿರುವ ಸಾಲಿನಂತೆ ಇಲ್ಲಿ ಬಡತನ ಕಾಣಸಿಗುತ್ತದೆ. ತಾವು ಕಷ್ಟಪಟ್ಟರೂ ಮಕ್ಕಳು ಓದಿ ಮುಂದೆ ಬರಲೆಂದು ಆಶಿಸುವ ತಂದೆ ತಾಯಿ ಇಲ್ಲಿ ಕಾಣಿಸುತ್ತಾರೆ. ಬುದ್ಧಿ ಬಲಿಯದ ವಯಸ್ಸಿನ ಉಡಾಫೆಯ ಮಗ ಸಿದ್ದನಿದ್ದಾನೆ. 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು ಸಿದ್ದನ ಕಥೆ ಹೇಳಿದ್ದೇಕೆ.. ಬದುಕಿನ ಬದಲಾವಣೆ ಎಲ್ಲಿ ಶುರುವಾಗುತ್ತದೆ ಮತ್ತು ಹೇಗೆ ಎಂಬುದರ ಚೆಂದದ ಕಥೆ.


ದೊಡ್ಡ ಸಂಪಿಗೆಯ ತಿರುವು : ಹುಚ್ಚಾಲಮ್ಮನ ಒಕ್ಕಲಿಗೆ ಸೇರಿದ ಕಾರಣಕ್ಕೆ ಹುಚ್ಚಾಲಿ ಎಂದು ಹೆಸರು ಕರೆದಿರಬೇಕು ಎಂದುಕೊಂಡರೂ ಮೂಲ ಕಥೆ ಅವಳ ಹೆಸರ ಹಿಂದಿನ ಮರ್ಮವನ್ನು ಬೇರೆಯೇ ಹೇಳುತ್ತದೆ. ಜೊತೆಗೆ ಆಕೆಯ ತಂದೆಯ ನ್ಯಾಯ ನಿಷ್ಠುರತೆಯ ಪರಿಚಯವನ್ನು ಮಾಡಿಸುತ್ತದೆ. ಹುಚ್ಚಾಲಿಯ ಸಾಂಸಾರಿಕ ಬದುಕು ಹೇಗಿತ್ತು..? ಆಕೆಯ ಗಂಡ ಕಾಣೆಯಾದದಕ್ಕೂ.. ಅವಳ ಭ್ರಮೆಗೂ ಇರುವ ಸಂಬಂಧವೇನು..? ಕಣ್ಣಿಗೆ ಕಂಡದ್ದು ಅಥವಾ ಅಂದುಕೊಂಡದ್ದೇ ನಿಜ ಎನ್ನುವ ದೃಷ್ಟಿಕೋನವನ್ನು ಬದಲಿಸುವ ಕಥೆ ಇದು.


ಕಾಕ್ಟೇಲ್ : ವೀರೇಶ್ ಮಾಡುತ್ತಿದ್ದ ಕೆಲಸದ ಪರಿಚಯವನ್ನು ಮಾಡಿಸುತ್ತಲೇ ಆತನ ಕಥೆ, ಕಾದಂಬರಿಗಳನ್ನು ಓದುವ ಗೀಳು ಹಚ್ಚಿಕೊಂಡದ್ದು ಹಾಗೂ ಓದನ್ನು ಆಸ್ವಾದಿಸುತ್ತಿದ್ದ ಬಗೆಯ ಜೊತೆಗೆ ಅಚಾನಕ್ಕಾಗಿ ಸಿಕ್ಕ ಗೆಳೆತನಗಳಲ್ಲಿ ಸಾಹಿತ್ಯಕ್ಕೆ ಕನೆಕ್ಟ್ ಆದ ಗೆಳೆತನಗಳು ಕಾಣುತ್ತವೆ. ಆ ಗೆಳೆಯರ ಗುಂಪಿನಲ್ಲಿ ಪ್ರದೀಪ್ ಬರೆದ ಕಾಗದ ಒಂದು ಆತನ ಬದುಕಿಗೆ ಸಂಬಂಧಪಟ್ಟಿದ್ದೇ ಆದರೂ.. ವೀರುವಿನ ಒಂದು ನಿರ್ಲಕ್ಷ್ಯ ಪ್ರದೀಪ್ ಹಾಗೂ ವೀರುವಿನ ಬದುಕನ್ನೇ ಬುಡಮೇಲಾಗಿಸುವ ಬಗೆ ಇಲ್ಲಿದೆ. 


ಕುಂಟು ಸೇತುವೆ : ಇದೊಂದು ಪ್ರೇಮ ಕಥೆ. ಇಲ್ಲಿ ಪ್ರೇಮ ಯಶಸ್ವಿಯಾಯಿತೋ ಅಥವಾ ವಿಫಲವಾಯಿತೋ ಎಂಬುದನ್ನು ಓದಿ ನೋಡಿ. ಆದರೆ, ಈ ಕಥೆಯ ಕೊನೆಯಲ್ಲಿ ಬರುವ ಸಾಲು ಈ ಕಥೆಯನ್ನು ಬೇರೆಯದ್ದೇ ಆಯಾಮದಲ್ಲಿ ತೋರುವ ಸಾಮರ್ಥ್ಯ ಹೊಂದಿದೆ. 

ಸಂದರ್ಭ : ಕುಂಟು ಸೇತುವೆಯ ಕೆಳಗೆ ಮೀನುಗಳಿಗೆ ಕಡಲೆಪುರಿ ಇಡುತ್ತಾ ಕುಳಿತಿದ್ದ ಆತ ಹಾಗೂ ಪಚ್ಚಿ.

"ನಾನು ನನ್ನದೇ ಆದ ರೀತಿಯಲ್ಲಿ ಹೇಳಿದ ಅವನ ಕಥೆಯನ್ನು ಕೇಳಿ ಅವನಿಗೆ ಹೇಗಾಯಿತು ಏನೋ?"

ಈ ಕಥೆಯ ಕುರಿತು ನೀವೇ ಓದಿ ನೋಡಿ.


ಅಂಬಾಸಿಡರ್ ಕಾರು : ಸುಹಾಸ್ ತಿಳಿದೋ ತಿಳಿಯದೆಯೋ ಸಣ್ಣ-ಪುಟ್ಟ ತಪ್ಪನ್ನೂ ಬೆಟ್ಟದಷ್ಟೆಂದು ಭಾವಿಸಿ ಭಯಭೀತನಾಗುತ್ತಿದ್ದ. ನಲುಗುತ್ತಿದ್ದ, ನರಳುತ್ತಿದ್ದ. ಆದರೆ, ಕ್ಷಮೆ ಕೇಳಿ ಮತ್ತೆ ಸರಿಪಡಿಸಿಕೊಂಡು ಸಂತಸವನ್ನು ಹಂಚಿಕೊಳ್ಳುವುದು ಸಹ ಅಷ್ಟೇ ಆಪ್ತವಾಗಿ ಹಾಗೂ ಗಾಢವಾಗಿ. 

ಎಳ್ಳಮಾವಾಸ್ಯೆಯ ದಿನ ನಡೆದ ಒಂದು ಘಟನೆ ಅವನಿಗೆ ಗಾಢವಾಗಿ ಬಾಧಿಸುತ್ತಿತ್ತು. ತಪ್ಪು ಇವನದ್ದೇ.. ಅಪಘಾತವೆಂದರೆ ಅದು ಒಂದು ಕ್ಷಣದ ಮೈಮರೆಯುವಿಕೆ. ಈತ ಮಾಡಿದ ಅಪಘಾತಕ್ಕೆ ಬಲಿಯಾದ ವ್ಯಕ್ತಿ ಇವನನ್ನು ಸುಮ್ಮನೆ ಬಿಟ್ಟುಬಿಟ್ಟಿದ್ದ. ಆದರೆ, ಆತನ ಮಾತಿನಿಂದ ಪಶ್ಚಾತ್ತಾಪ ಪಡುತ್ತಾ ಆ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಲು ಅಪ್ಪ, ಅತ್ತೆ ಹಾಗೂ ಪುಟ್ಟಿಯ ಜೊತೆ ಹೊರಡುತ್ತಾನೆ. ಪುಟ್ಟಿ ಎಲ್ಲರಂತಲ್ಲ. ಅಂದು ಅಲ್ಲಿಗೆ ಹೋದಾಗ ಅಂಬಾಸಿಡರ್ ಕಾರು ಕಂಡ ಪುಟ್ಟಿ ಕೆರಳಿದ್ದೇಕೆ..? 

ಕೆಲವೊಮ್ಮೆ ಸಂತ್ರಸ್ತರು ಎಂದು ಭಾವಿಸುವವರು ನಿಜಕ್ಕೂ ಸಂತ್ರಸ್ತರೇ ಆಗಿರುತ್ತಾರೆಯೇ..?


ಭೈರೂಪ : ವಂದನಾ ಹಾಗೂ ಅಭಿಯ ಮನಸ್ತಾಪ ಹಾಗೂ ಅವರಿಬ್ಬರ ಮನದ ತುಮುಲಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ವಂದನಾ ಹಾಗೂ ಅಭಿ ಒಬ್ಬರಿಗೊಬ್ಬರು ಏನಾಗಬೇಕು ಎಂಬ ಸಂಬಂಧ ತೆರೆದುಕೊಂಡಾಗ ಅವರಿಬ್ಬರ ನಡುವಿನ ಮನದ ಮಾತುಗಳು ನಿಜಕ್ಕೂ ಸರಿಯೇ ಎಂಬ ಆಲೋಚನೆ ಮೂಡುತ್ತಿರುವಾಗಲೇ ವಂದನಾ ಅಭಿ ಎಂದು ಕರೆಯುತ್ತಿದ್ದದ್ದು ಅನಿತಾಳನ್ನು ಎಂದು ತಿಳಿದುಬರುವಷ್ಟರಲ್ಲಿ ಕಥೆ ಕೊನೆಯಾಗುತ್ತದಾದರೂ.. ಕಥೆ ಮತ್ತೊಂದು ಆಯಾಮದಲ್ಲಿ ಇನ್ನೊಮ್ಮೆ ಓದಿಸಿಕೊಳ್ಳುತ್ತದೆ.


ಕ್ವಲ್ಲನಂಜಿ : ಕ್ರಿಶ್ಚಿಯನ್ನರ ಸಮಾಧಿ ಹಾಗೂ ಅವರು ಅಂತ್ಯಸಂಸ್ಕಾರ ಕಾರ್ಯವನ್ನು ಮಾಡುವ ಕ್ಷಣದಿಂದ ತೆರೆದುಕೊಳ್ಳುವ ಕಥೆ ನಂಜಿಯ ಹಾಲುತುಪ್ಪದ ದಿನ ಸಮಾಧಿಯ ಮೇಲಿಟ್ಟ ತಿಂಡಿ-ತಿನಿಸನ್ನು ಕಾಗೆ ಮುಟ್ಟದೆ ಇರುವಾಗ ಅಯ್ಯನಿಗೆ ಗೊತ್ತಾಗದಂತೆ ನಂಜೆಯ ದೊಡ್ಡ ಮಗ ಮಾಡಿದ ಕೆಲಸವೇನು..? ಎನ್ನುವುದರಿಂದ ಶುರುವಾಗಿ, ಅಯ್ಯ ಹಾಗೂ ನಂಜಿಯ ಯೌವ್ವನದ ದಿನಗಳಿಂದ ಇಂದಿನ ಆಪ್ತತೆಯವರೆಗೂ ತೆರೆದುಕೊಳ್ಳುತ್ತದೆ. ಅಯ್ಯವನ್ನು ಸಮಾಧಾನಪಡಿಸಿದವರಾರು..? ನಂಜಿಯ ಕೊನೆಯ ಆಸೆ ಏನಿತ್ತು..? 


ವಿಕಾರಿ : ಇಲ್ಲಿ ಪ್ರತಿ ಕಥೆಗೂ ಶೀರ್ಷಿಕೆ ಚಿತ್ರಗಳಿವೆ. ಆದರೆ, ಈ ಕಥೆಯ ಚಿತ್ರವಂತೂ ಅನ್ವರ್ಥದಂತಿದೆ. 

ಎಲ್ಲಾ ಪತ್ರಗಳು ಸರಿಯಾಗಿ ಹೊಂದಿ ಕೆಲಸಕ್ಕೆಂದು ಹೋದ ಮುರುಗ ಬಂದಾಗ ಮೊದಲಿನಂತಿರಲಿಲ್ಲ. ಅಮ್ಮನ ಉತ್ಸಾಹಕ್ಕೂ ಅವನ ನಿರುತ್ಸಾಹಕ್ಕೂ ಬಹಳ ವೇ ಅಂತರ. 

ಅದಕ್ಕೂ ಮೊದಲು ಆಕೆಯ ನೆನಪಿನಾಳದ ಮಾತುಗಳು ಇಂತಿವೆ.

"ಹೆಣ್ಣ ತ್ತಾಣ ನೂರ್ಮಡಿಗೊಳ್ಳುವುದಕ್ಕೆ ತಾಯ್ತನವೇ ವೇದಿಕೆ. ಹೆಣ್ಣ ಹುಟ್ಟು, ಹೆಣ್ಣ ಬದುಕು ಸಾರ್ಥಕ್ಯದ ಗುರಿ ಮುಟ್ಟಿ ತೇಲಾಡುವಂಥದ್ದು ಆಗಲೇ. ಯಾರೇ, ಏನೇ ಎದುರಾದರೂ ಈಸುವ ಛಲ ಹೆಣ್ಣಿನೊಳಗೆ ಪುಟಿದೇಳುವಂತದ್ದು ಅಲ್ಲಿಂದೀಚೆಗೇ. ಇಂತಹ ಮಧುರ ಸುಮಧುರ ಪ್ರಕೃತಿಯಲ್ಲಿ ನನ್ನೊಳಗೊಬ್ಬ ವಿಕಾರಿ ಮೈದಾಳುವುದೇ..?!"

ಪಲ್ಲಮ್ಮನ ಮನಸ್ಸಿನ ಈ ಮಾತುಗಳು ಯಾವ ನೆನಪಿನಿಂದ ವಾಸ್ತವಕ್ಕೆ ಕರೆತರುತ್ತವೆ..? ಇದರ ಹಿನ್ನೆಲೆ ಏನು..?

ಕೆಲವು ವೃತ್ತಿಗಳು ವಂಶಪಾರಂಪರ್ಯವಾಗಿ ಮುಂದುವರಿಯುವುದಿಲ್ಲ. ಅದಕ್ಕೆ ಹಲವು ಕಾರಣಗಳು. ಇಲ್ಲಿ ಅಂತಹದ್ದೇ ಒಂದು ವೃತ್ತಿ ಇದೆ. ಆ ವೃತ್ತಿ ಸಮಾಜ ಎಷ್ಟೇ ಆಧುನಿಕತೆ ಕಂಡರೂ ಬದಲಾಗದ ವಾಸ್ತವತೆಗೆ ಹಿಡಿದ ಕನ್ನಡಿಯಂತಿದೆ. 

ನನಗೇಕೋ ಈ ಕಥೆಯ ಅಂತ್ಯ ಬದಲಾವಣೆಯನ್ನು ಬಿಂಬಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿದರೂ.. ಆ ಬದಲಾವಣೆ ಅಷ್ಟು ಸುಲಭವಲ್ಲ ಎನ್ನುವ ವಾಸ್ತವತೆ ತೋರಿರುವ ಕಥೆಗಾರರೇ ಸರಿಯೇನೋ ಎಂದೂ ಅನ್ನಿಸಿತು.


ಈ ಕಥಾ ಸಂಕಲನದಲ್ಲಿ ಭಾಷೆ ಚಾಮರಾಜನಗರ, ಕೊಳ್ಳೇಗಾಲ ಭಾಗದ ಪ್ರಾಂತೀಯ ಕನ್ನಡ. ಅಲ್ಲಿನ ಆಡು ನುಡಿ, ಬೈಗುಳ ಹಾಗೂ ಮಂಟೇಸ್ವಾಮಿ ಪದಗಳು ವಿಭಿನ್ನ ಓದಿನ ಅನುಭವ ನೀಡುತ್ತವೆ. ಆಡುಭಾಷೆಯಿಂದಾಗಿ ಓದು ನಿಧಾನವಾದರೂ.. ಆಸಕ್ತಿಕರವಾಗಿ ಓದಿಸಿಕೊಂಡು ಹೋಗುವ ಕಥೆಗಳು ಇಲ್ಲಿವೆ. ಭಾಷೆ ಕಾವ್ಯಾತ್ಮಕವಾಗಿ ಹಾಗೂ ಸೆಳೆಯುವಂತಿದೆ. ಇನ್ನಷ್ಟು ವೈವಿಧ್ಯಮಯ ಬರಹಗಳು ಮೂಡಿ ಬರಲಿ ಎಂದು ಹಾರೈಸುವೆ. 


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 2, 2026

ಒಂದೇ ನೋವಿಗೆ ಎಷ್ಟೆಂದು ಘಾಸಿಗೊಳ್ಳುವುದು..?


ನನಗಂತೂ ಆಗಾಗ ಬಹಳಷ್ಟು ಜ್ಞಾನೋದಯಗಳಾಗುತ್ತಿರುತ್ತವೆ. ಕೆಲವೊಂದು ಅಷ್ಟೇ ಬೇಗ ಅದರ ತೀವ್ರತೆಯನ್ನು ಕಳೆದುಕೊಳ್ಳಬಹುದಾದರೂ ಹೊಳೆಯುವ ಹೊಳವುಗಳು ಆ ಕ್ಷಣಕ್ಕೆ ಸಾಂತ್ವನ ನೀಡುತ್ತವೆ. ಅದರಲ್ಲೂ ಈಗೀಗ ಮಗಳ ನಡೆಗಳನ್ನೂ ಮೆಲುಕು ಹಾಕುವಾಗ, ಆಟೋಟಗಳನ್ನು ಗಮನಿಸಿ ಯಾವಾಗಲೋ ನನ್ನದೇ ಲಹರಿಯಲ್ಲಿರುವಾಗ ಯೋಚನಾಲಹರಿ ಮತ್ತೊಂದು ಕಡೆ ಹೊರಳುತ್ತದೆ. ಇದು ಹಾಗೆ ಹೊಳೆದದ್ದೇ..


ಕಳೆದ ವಾರ ಮಗಳಿಗೆ ವ್ಯಾಕ್ಸಿನ್ ಹಾಕಿಸಿದಾಗ ಆಸ್ಪತ್ರೆಯಲ್ಲಿ ನೋವಿನ ತೀವ್ರತೆಯಲ್ಲಿ ಒಂದೆರಡು ನಿಮಿಷ ಅತ್ತದಷ್ಟೇ. ಅವಳಿಗೆ ಮತ್ತೆ ಅದರ ಕಡೆ ಗಮನವಿರಲಿಲ್ಲ. ಮನೆಗೆ ಬಂದು ಆ ಬ್ಯಾಂಡೆಡ್ ನೋಡಿದಾಗ, ಎಲ್ಲಿ ಚುಚ್ಚಿ ಮಾಡಿದ್ದಾರೆ ಎಂದು ನಾವೇ ಬೇಕೆಂದು ಪ್ರಶ್ನಿಸಿದಾಗಲೆಲ್ಲಾ ಅವಳು ಅದನ್ನು ನೋಡಿಕೊಂಡಂತೆಲ್ಲಾ ಅಳು. ಅದೂ ಒಂದರ್ಧ ಗಂಟೆಯಷ್ಟೇ.. ನಂತರದ ಒಂದು ಗಂಟೆಯಲ್ಲಿ ಆಟದ ಸಂಭ್ರಮದಲ್ಲಿ ಅದನ್ನು ನೋಡಿಕೊಂಡು ಅವಳೇ ನಗುತ್ತಾ ತೋರುತ್ತಿದ್ದಳು. ನಾನು ಗಟ್ಟಿಗಿತ್ತಿ ನೋಡು ಎಂಬ ಹೆಮ್ಮೆ ಇರುವಂತೆ..! ಇನ್ನೊಂದಷ್ಟು ಕ್ಷಣಕ್ಕೆ ಹಾಗೂ ನಂತರ ಅದು ಲೆಕ್ಕವೇ ಇಲ್ಲವೆಂಬಂತೆ..!


ಇದನ್ನು ಮೆಲುಕು ಹಾಕಿದಾಗ ನನಗೆ ಹೀಗೆಲ್ಲಾ ಆಲೋಚನೆ ಮೂಡಿತು. ಯಾರಿಂದಲೋ ಯಾವುದೋ ಒಂದು ಸಂದರ್ಭದಲ್ಲಿ ನೋವಾದಾಗ, ಆಘಾತ, ದ್ರೋಹ, ವಂಚನೆ, ಅವಮಾನವಾದಾಗ.. ಹೀಗೆ ಯಾವುದೋ ಒಂದು ವಿಚಾರಕ್ಕೆ ಮನಸ್ಸು ಕೆಡಿಸಿಕೊಂಡು ಆ ಕ್ಷಣದಲ್ಲಿ ರಿಯಾಕ್ಟ್ ಮಾಡುತ್ತೇವೆ. ಹಲವಾರು ಬಾರಿ ಮತ್ತದು ನಮಗೆ ಮರೆತೇ ಹೋಗಿರುತ್ತದೆ. ಸಾಮಾನ್ಯವಾಗಿ ಕೋಪ ತೋರಿಸಿಕೊಂಡ ನಂತರ ಮತ್ತದೇ ವಿಚಾರಕ್ಕೆ ಕೋಪ ಬರುವ ಸಾಧ್ಯತೆ ತೀರಾ ಕಡಿಮೆ. 


ಆ ವ್ಯಕ್ತಿಯನ್ನೋ, ವಸ್ತುವನ್ನೋ ಅಥವಾ ಆ ಕ್ಷಣವನ್ನೋ ಯಾರೋ ನೆನಪಿಸಿದಾಗ ಅಥವಾ ಅಚಾನಕ್ಕಾಗಿ ನೆನಪಾದಾಗ ನೋವಿನ ತೀವ್ರತೆ ಹೆಚ್ಚಾಗುತ್ತದೆ. ಜೊತೆಗೆ ಮನಸ್ಸು ಘಾಸಿಯಾಗುತ್ತದೆ. ಅದನ್ನು ನೆನಪಿಸಿದವರ ಮೇಲೆಯೇ ಹರಿಹಾಯುವಂತಾಗುತ್ತದೆ. ಅವರಾದರೂ ಗೊತ್ತಿದ್ದೂ ಕೆಣಕುವುದೇಕೆ..?! ಗೊತ್ತಿದ್ದೂ.. ಬೇಡವೆಂದರೂ ಮತ್ತೊಬ್ಬರ ನೋವನ್ನು ಹೆಚ್ಚಿಸುವುದೇ ಅವರ ಗುರಿಯಿರಬಹುದೇನೋ..


ಅದೂ ಒಂದಷ್ಟು ದಿನಗಳಷ್ಟೇ.. ಮತ್ತೆ ಅವರನ್ನು ನೋಡಿದಾಗ ಬರುತ್ತಿದ್ದ ಕೋಪ-ತಾಪ, ಅಸಹನೆ ಎಲ್ಲವೂ ಮರೆತಂತೆ ಮರೆಗೆ ಸರಿಯುತ್ತದೆ. ಅದೂ ಒಂದಷ್ಟು ದಿನಗಳಷ್ಟೇ.. ಮತ್ತೆ ನಾವು ಅವರ ಇರುವಿಕೆಯನ್ನೇ ನಿರ್ಲಕ್ಷಿಸಿ ನಿರ್ಲಿಪ್ತಿಗೆ ಜಾರಿ ಬಿಡುತ್ತೇವೆ ಅಥವಾ ಅವರು ಎದುರಾದರೂ ಮತ್ತೆ ಮೊದಲಿನಷ್ಟಂತೂ ಮನಸ್ಸು ಕೆಡಿಸಿಕೊಳ್ಳುವುದಿಲ್ಲ.


ಒಂದೇ ನೋವಿಗೆ ಎಷ್ಟೆಂದು ಘಾಸಿಗೊಳ್ಳುವುದು..? 

ದೈಹಿಕ ಹಾಗೂ ಮಾನಸಿಕ ನೋವು ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗದು. ಆದರೆ, ಮನಸ್ಸಿನ ನೆಮ್ಮದಿಗೆ, ನಿರಾಳತೆಗೆ ನಿರ್ಲಕ್ಷಿಸುವುದೋ ಇಲ್ಲವೇ ಕ್ಷಮಿಸಿಬಿಡುವುದೋ ಮಾಡುತ್ತೇವೆ. ಇದೆಲ್ಲದರಾಚೆಗೆ ನಮಗೆ ನೆನಪಿರಬೇಕಾಗುವುದು ಪದೇಪದೇ ಅಂತಹ ಮೋಸ, ಘಾಸಿಗೆ ಒಳಗಾಗದಂತೆ ನಮ್ಮನ್ನು ರಕ್ಷಿಸಿಕೊಳ್ಳುವುದು. ಕೆಲವೊಮ್ಮೆ ಕ್ಷಮಿಸುವುದು ಅನಿವಾರ್ಯವಾಗುತ್ತದೆ. ಆದರೆ, ಮರೆಯುವುದಿಲ್ಲ. ಹಾಗೆಂದು ಅದನ್ನೇ ಸಾಧಿಸುವುದೂ ಅಲ್ಲ. ಮರೆಯುವಷ್ಟೇ ಮರೆಯದಿರುವುದೂ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ, ಅದೇ ಪಾಠವನ್ನು ಬದುಕು ನಾವು ಕಲಿಯುವವರೆಗೂ ಬೇರೊಂದು ರೂಪದಲ್ಲಿ ಕಲಿಸುತ್ತಲೇ ಇರುತ್ತದೆ. ಅಲ್ಲವೇ..?!


~ವಿಭಾ ವಿಶ್ವನಾಥ್ 

ಆತಂಕ ಕರಗಿ

 


ಪ್ರತಿ ಆತಂಕವೂ ಸೃಷ್ಟಿಯಾಗಿದ್ದು

ಭವಿಷ್ಯದ ಮುಂದಾಲೋಚನೆಯಲ್ಲಿ

ದೂರಾಲೋಚನೆಯಲ್ಲಿ


ಪ್ರತಿ ಆತಂಕವೂ ಕರಗಿದ್ದು

ಆ ಕ್ಷಣ ಕಳೆದಾಗ 

ವಾಸ್ತವದ ನಿಜ ಹಿತವಾದಾಗ


ನಿರಾತಂಕದ ಹಿಂದೆ

ಭವಿಷ್ಯದ ಭಯವಿರಲಿಲ್ಲ

ವಾಸ್ತವ ಹೆದರಿಸಲಿಲ್ಲ


~ವಿಭಾ ವಿಶ್ವನಾಥ್

ಬಂಧ

 


ನಿಷ್ಠುರವಾದ ನಿರಾಕರಣೆ

ವಾದ - ಪ್ರತಿವಾದಗಳು

ಒಮ್ಮೆ ಘಾಸಿಗೊಳಿಸಿದರೂ

ಒಳ್ಳೆಯದಕ್ಕೆಂದು ಅರಿವಾದಾಗ

ಬಂಧ ಗಟ್ಟಿಯಾಗಿತ್ತು


ನಾಟಕದ ಪ್ರೀತಿ ತೋರಿ

ಬೆನ್ನಿಗೆ ಇರಿದದ್ದು

ಜೀವನವಿಡೀ ನೆನಪಲ್ಲುಳಿಯಿತು

ಬಂಧ ಮಾತ್ರ ಕಳಚಲಿಲ್ಲ

ಅಳಿದದ್ದು ನಂಬಿಕೆಯೂ..!


~ವಿಭಾ ವಿಶ್ವನಾಥ್

ಮಾನದಂಡ

 


ಬುದ್ಧಿವಂತಿಕೆಯ ಮಾನದಂಡ 

ಅಂಕ, ಜ್ಞಾನಾರ್ಜನೆ ಮಾತ್ರವಲ್ಲ..!

ಓದಿದ್ದನ್ನು ಉಪಯೋಗಿಸುವುದು

ಕಲಿತಿದ್ದನ್ನು ಹಂಚಿಕೊಳ್ಳುವುದು

ಅಷ್ಟೇ ಅಲ್ಲ..!

ಕಲಿತದ್ದು ಸಾಸಿವೆಯಷ್ಟಿದ್ದರೆ

ಕಲಿಯುವುದು ಸಾಗರದಷ್ಟಿದೆ 

ಎಂಬುದ ಮರೆಯದಿರುವುದು

ಹಾಗೆಯೇ.. ಯಶಸ್ಸಿನ ಮಾನದಂಡ

ಕೇವಲ ಗೆಲುವಲ್ಲ

ಎಲ್ಲ ಸಿಕ್ಕ ನಂತರವೂ

ವಿನಯತೆಯನ್ನು ಮರೆಯದಿರುವುದು

ಮೆರೆಯದಿರುವುದು..!


~ವಿಭಾ ವಿಶ್ವನಾಥ್