ಭಾನುವಾರ, ಆಗಸ್ಟ್ 30, 2026

ತುತ್ತಿನ ಸವಿ (ಬೆಳಕಿಂಡಿಯ ಕತೆಗಳು - 77)

 


ಚಿಕ್ಕಂದಿನಲ್ಲಿ ಮುದ್ದೆಯನ್ನು ತುಪ್ಪದಲ್ಲಿ ಅದ್ದಿ ತಿನ್ನಿಸುವಾಗ, ಅನ್ನ ಉಪ್ಪು-ತುಪ್ಪ, ಸಾರನ್ನ, ಚಟ್ನಿ ಅನ್ನ, ಒಗ್ಗರಣೆ ಅನ್ನ, ಮೊಸರನ್ನ, ಹಾಲು ಅನ್ನ ಹೀಗೆ ಒಂದೊಂದು ದಿನ ಒಂದೊಂದು ರೀತಿ ತುತ್ತು ಬಾಯಿಗಿಡುತ್ತಾ ಮುದ್ದು ಮಾಡಿ ತಿನ್ನಿಸುತ್ತಾ, ಟಿ.ವಿ ಯ ಸಖ್ಯ ಬೆಳೆಸಲು ಬಿಡದೆ, ಚಂದಮಾಮನನ್ನು ತೋರಿಸುತ್ತಾ ಕತೆ ಹೇಳಿ ತಿನ್ನಿಸುವಾಗಿನ ನಿನ್ನ ಪಾತ್ರ ಈಗ ನನ್ನದಾಗಿದೆ ಅಮ್ಮ. 

ಮೊಬೈಲ್ ತೋರಿಸದೆ, ಕತೆಗಳನ್ನು ಹೇಳುತ್ತಾ ತುತ್ತು ಮಾಡಿ ತಿನ್ನಿಸುವಾಗಿನ ಆ ಸಂತೋಷದ ಸವಿ ಯಾವುದಕ್ಕೂ ಬೆಲೆಕಟ್ಟಲಾದದ್ದು. ಅದು ಸಂಸ್ಕೃತಿಯ ಸವಿಯೂ ಹೌದು.


~ವಿಭಾ ವಿಶ್ವನಾಥ್

ವಿಧಿಯ ಮಧುರ ಸಂಚು (ಬೆಳಕಿಂಡಿಯ ಕತೆಗಳು - 76)

 


ಆವತ್ತು ನೀನು ನನಗೆ ಸಿಗದಿದ್ದರೆ ಬಹುಶಃ ನಾನೂ, ನೀನೂ ಸತ್ತು ಯಾವ ಕಾಲವಾಗಿರುತ್ತಿತ್ತೋ.. 

ನಿನ್ನನ್ನು ನಿನ್ನಮ್ಮ ಅನಾಥಳನ್ನಾಗಿಸಿದ್ದರೆ, ನನ್ನನ್ನು ನಾನೇ ಅನಾಥಳನ್ನಾಗಿಕೊಂಡಿದ್ದೆ. ಬಹುಶಃ, ನಿನಗೆ ನಾನು ತಾಯಾಗಲು ಹಾಗೂ ನೀನು ನನ್ನ ಮಡಿಲ ಕೂಸಾಗಲು ವಿಧಿಯ ಬೆಸುಗೆಯೇ ಇದಾಗಿರಬಹುದಾ..?? ಅಂದು ನೀನು ನನಗೆ ಸಿಗದಿದ್ದರೆ, ನಮ್ಮಿಬ್ಬರ ಬಂಧ ಬೆಸೆಯದಿದ್ದರೆ ಈ 'ಮಡಿಲು' ಅನಾಥಾಲಯದ ಹುಟ್ಟಾದರೂ ಎಲ್ಲಿರುತ್ತಿತ್ತು ಹೇಳು..?? ನೀನು ಸಿಕ್ಕಿ 25 ವರ್ಷವಾಯಿತು. ಇಂದೂ ಮತ್ತಾವುದೋ ಕಂದ 'ಮಡಿಲು' ತುಂಬಲಿದೆ. ವಿಧಿಯ ಮಧುರ ಸಂಚು ಹೀಗೇ ನಮ್ಮೆಲ್ಲರನ್ನು ಬೆಸೆದುಬಿಡಲಿ.. 


~ವಿಭಾ ವಿಶ್ವನಾಥ್

ಸಿರಿತನಕ್ಕೆ ಸಡ್ಡು ಹೊಡೆದು...

 


"ಅಯ್ಯೋ ಅಮ್ಮ, ನಿಮಗೆಲ್ಲಾ ಏನಾಗಿದೆ. ಏನು ಅವರೇನು ಈ ದೇಶದ ರಾಷ್ಟ್ರಪತಿನಾ.. ಅವರು ಬಂದರೆ ಎದ್ದು ನಿಲ್ಲುವುದೇನು.. ಅತಿ ಗೌರವ ಕೊಡುವುದೇನು..

ಅವರೇನು ಆಕಾಶದಿಂದ ಇಳಿದು ಬಂದಿದ್ದಾರಾ ಹೇಗೆ.. ಅವರು ಕೂಡಾ ನಮ್ಮ ಹಾಗೆಯೇ ಮನುಷ್ಯರು. ಅಲ್ಲವಾ ? ಶ್ರೀಮಂತರಾದರೆ ಅದು ಅವರ ಮನೆಯಲ್ಲಿ ದರ್ಪ ತೋರಿಸಲಿಕ್ಕೆ. ಅಷ್ಟೇ... ನಿಮ್ಮಂತಹವರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಅವರು. ನಿಮಗೆಲ್ಲಾ ಎಷ್ಟು ಹೇಳಿದರೂ ಬುದ್ದಿ ಬರುವುದಿಲ್ಲ ಬಿಡಿ" ಎಂದ ಶ್ರೀಕಾಂತನ ಮಾತನ್ನು ಕೇಳಿ


"ನಾಲ್ಕು ಅಕ್ಷರ ಕಲಿತ ಮಾತ್ರಕ್ಕೆ ನೀನು ದೊಡ್ಡ ಮನುಷ್ಯ ಆಗುವುದಿಲ್ಲ. ಅಥವಾ ನೀನು ಹೇಳಿದ್ದೇ ಸರಿ ಅಂತಾ ಇಲ್ಲಿ ಯಾರೂ ಸಹಾ ಕುಣಿಯುವುದಿಲ್ಲ. ನೀನೇನೋ ಹೇಳುತ್ತಿಯ... ಕಳೆದ ಬಾರಿ ನಿನ್ನಂತಹಾ ಮಂದ ಬುದ್ಧಿಯವರು ಅದನ್ನೇ ನಂಬಿಕೊಂಡು ಕುಣಿದರು. ಧಣಿಗಳು ಅವರಿಗೆ ಕೆಲಸಕ್ಕೆ ಕರೆಯುವುದನ್ನೇ ಬಿಟ್ಟರು. ಕೊನೆಗೆ ಅವರೇ ಧಣಿಗಳ ಹತ್ತಿರ ಹೋಗಿ ಕಾಲು ಹಿಡಿದು ಬೇಡಿಕೊಂಡರು. ನೀವುಗಳು ಹಳ್ಳಿಗೆ ಬರುತ್ತೀರ. ನಾಲ್ಕು ದಿನ ಇರುತ್ತೀರಿ.. ಹೋಗಬೇಕಾದರೆ ಏನನ್ನೋ ಹೇಳಿ ಆಸೆ ಹುಟ್ಟಿಸಿ ಹೋಗುತ್ತೀರಿ. ಕೊನೆಗೆ ಅದನ್ನೆಲ್ಲಾ ಅನುಭವಿಸಬೇಕಾಗಿರುವುದು ಇಲ್ಲಿ ಇರುವವರೇ ತಾನೇ.." ಎಂದ ಅಮ್ಮನ ಮಾತಿಗೆ


"ಅಮ್ಮ, ನಾವೇನು ಏನನ್ನೋ ಹೇಳುತ್ತಿಲ್ಲ. ಇಲ್ಲಿನ ನಿಮ್ಮ ಧಣಿಗಳು ನಿಮ್ಮನ್ನು ದಿನಗೂಲಿ ಅಂತಾ ಕರೆಸಿಕೊಳ್ಳುತ್ತಾರೆ. ಆದರೆ , ಕಡಿಮೆ ಸಂಬಳ ಎಣಿಸುತ್ತಾರೆ. ಕೇಳಿದರೆ, ಮುಂದಿನ ಸಲ ಅದಕ್ಕಿಂತ ಕಮ್ಮಿ. ನಿಮಗೆ ಬಗ್ಗಿ ಬಗ್ಗಿ ರೂಢಿಯಾಗಿ ತಲೆ ಎತ್ತಿ ನಿಂತು ಮಾತನಾಡುವುದನ್ನೇ ಮರೆತಿದ್ದೀರಿ. ನಾವು ಕೇಳಿದ ತಕ್ಷಣ ಅವರು ಸಾಲ ಕೊಡುವುದಿಲ್ಲವಾ ಅಂತಾ ನಮಗೇ ಪ್ರಶ್ನೆ ಮಾಡುತ್ತೀರಿ.


ಆ ಯಪ್ಪಾ ಏನು ಸುಮ್ಮನೆ ಸಾಲ ಕೊಡುತ್ತಾನಾ ಹೇಳು. ನೀವು ಅದಕ್ಕೆ ಬಡ್ಡಿ, ಚಕ್ರ ಬಡ್ಡಿ ಎಲ್ಲವನ್ನೂ ಕಟ್ಟುತ್ತೀರಿ. ಅಲ್ಲವಾ ? ಏನೂ ಆಧಾರವಾಗಿ ಇರಿಸಿಕೊಳ್ಳದೆ ಸುಮ್ಮನೆ ಸಾಲ ಕೊಟ್ಟು ಬಿಡುತ್ತಾರಾ ಹೇಳು. ಜಮೀನನ್ನೋ ಇಲ್ಲವೇ ಮನೆಯನ್ನೋ ಅಥವಾ ಪ್ರಾಣಿಗಳನ್ನೋ ಅಡ ಇರಿಸುತ್ತೀರಿ ತಾನೇ.. ನೀವು ಈ ಯಪ್ಪನ ಬಳಿ ಹೀಗೆ ಸಾಲ ತೆಗೆದುಕೊಳ್ಳುವುದರ ಬದಲಾಗಿ ಬ್ಯಾಂಕ್ ಗೆ ಹೋಗಿ ಸಾಲ ಕೇಳಿದರೆ ಸಾಲ ಕೊಡುತ್ತಾರೆ ತಾನೇ ? ನಿಮ್ಮ ಅನಕ್ಷರತೆಯನ್ನು, ಮುಗ್ಧತೆಯನ್ನು ಸರಿಯಾಗಿಯೇ ಉಪಯೋಗಿಸಿಕೊಳ್ಳುತ್ತಾ ಇದ್ದಾನೆ. ಸಿರಿತನ ಯಾವತ್ತಿಗೂ ಶಾಶ್ವತ ಅಲ್ಲ ತಾನೇ..?? " ಎಂದು ಒಂದೇ ಸಮನೆ ಮಾತನಾಡುತ್ತಿದ್ದವನನ್ನು ಕಂಡ ಶ್ರೀಕಾಂತನ ತಾಯಿ


"ನಿಮ್ಮಪ್ಪನೂ ಹೀಗೆ ಮಾಡುವುದಕ್ಕೆ ಹೋಗಿ ಸತ್ತಿದ್ದು. ನೀನೂ ಹಾಗೆ ಆಡಿ ನನ್ನ ಹೊಟ್ಟೆ ಉರಿಸುತ್ತಾ ಇದ್ದೀಯ.


ಅವರತ್ರ ದುಡ್ಡಿದೆ. ಆದರೆ, ನಮ್ಮ ಹತ್ತಿರ ಏನೂ ಇಲ್ಲ. ನಾವೂ ಒಬ್ಬರಿಗೆ ಸಮನಾಗಿ ನಿಂತು ವಿರೋಧಿಸಬೇಕು ಅಂತಾ ಅಂದರೆ ಜನಬಲ ಮತ್ತು ಹಣಬಲ ಇರಬೇಕು. ಜನಬಲವನ್ನು ಹಣದಿಂದ ಕೊಂಡುಕೊಳ್ಳಬಲ್ಲ ಆತ. ಹಣಬಲ ಬೇಕು ಅಂದರೆ ದುಡಿಯಬೇಕು. ಆದರೆ, ನೀನೂ ಅಡ್ಡ ದಾರಿ ಹಿಡಿದು ಸಿರಿವಂತ ಆಗುತ್ತೇನೆ ಅಂತಾ ಹೊರಟರೆ ಅವನಿಗೂ ನಿನಗೂ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ನೀನು ನ್ಯಾಯವಾಗಿ ಸಂಪಾದನೆ ಮಾಡಬೇಕು.


ಬಗ್ಗುವುದು ಅವನಿಗೆ ಅಥವಾ ಅವನ ಸಿರಿತನಕ್ಕೆ ಮಣಿದು ಅಲ್ಲ. ನಿಮ್ಮಂತಹಾ ಭವಿಷ್ಯದ ಪೀಳಿಗೆ ಎದ್ದು ನಿಲ್ಲಬೇಕು ಅಂತಾ ಅಂದರೆ ಅದು ನಮಗೆ ಅನಿವಾರ್ಯ. ನಿಮ್ಮ ರೀತಿ ಮಾತನಾಡುತ್ತಾ ಕಾಲಹರಣ ಮಾಡುತ್ತಾ ಕುಳಿತರೆ ಅವನು ಮತ್ತಷ್ಟು ಬೆಳೆಯುತ್ತಾ ಹೋಗುತ್ತಾನೆ. ಅದರ ಬದಲಾಗಿ ಹೋಗಿ ದುಡಿ. ಅದಕ್ಕಿಂತ ಹೆಚ್ಚು ಬಲಶಾಲಿಯಾಗಿ ಬಾ.. ಅದೂ ನ್ಯಾಯವಾದ ರೀತಿಯಲ್ಲಿ.


ಆಗ ಬಾ. ಸಿರಿತನಕ್ಕಲ್ಲ ಆ ಸಿರಿವಂತನ ದರ್ಪಕ್ಕೆ ಸಡ್ಡು ಹೊಡೆದು ನಿಲ್ಲಲು ಎಲ್ಲರೂ ಜೊತೆಯಾಗುತ್ತೇವೆ. " ಎಂದ ಅಮ್ಮನ ಮಾತು ಶ್ರೀಕಾಂತನಿಗೆ ಸಿರಿತನಕ್ಕೆ ಸಡ್ಡು ಹೊಡೆದು ನಿಲ್ಲಲು ಬೇರೆಯದ್ದೇ ಹಾದಿ ತೋರಿತ್ತು.


~ವಿಭಾ ವಿಶ್ವನಾಥ್

ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ


"ಈಗಲೇ ಇಷ್ಟು ಕಟು ವಾಸ್ತವವಾದಿಯಾಗಬೇಡ್ವೆ. ಬರಹದಲ್ಲಿ ಅಷ್ಟು ಕೋಮಲ ಭಾವನೆಗಳನ್ನು ತುಂಬುವ ನೀನೇ ಇಷ್ಟು ಕಟುವಾದರೆ ಹೇಗೆ..?" ಕೇಳಿದ್ದಕ್ಕೆ 


"ಮತ್ತೆ.. ಹೇಗಿರಬೇಕು ನೀನೇ ಹೇಳು..?

ಕಾಗೆ ಹಸಿರು ಬಣ್ಣ ಅಂದರೆ ಹೂಂ ಅನ್ನಬೇಕಾ..?

ವಾಸ್ತವದ ನುಡಿಗಳು, ಸತ್ಯ ಎಲ್ಲವೂ ಕಟುವೇ. ಕಹಿ ಔಷಧಿಯೇ ಅಲ್ಲವಾ ರೋಗವನ್ನು ಗುಣಪಡಿಸೋದು" ಎಂದಳು.


ಅವಳ ಮಾತಿನಲ್ಲಿ ತಪ್ಪು ಕಾಣಲಿಲ್ಲವಾದರೂ.. ಗುಂಪಿನಲ್ಲಿ ಗೋವಿಂದ ಎನ್ನುವವರಿಗಿಂತ ವಿಭಿನ್ನವಾಗಿ ಕಂಡ ಇವಳೇ ಎಲ್ಲರಿಗೂ ಮೊದಲ ಗುರಿಯಾಗುತ್ತಿದ್ದಳಲ್ಲಾ ಎನ್ನಿಸಿತು.


"ಗುಂಪಿನಲ್ಲಿ ಸ್ಥಾನ ಇಲ್ಲ ಎಂದರೆ ಅವರ ಸ್ಥಾನ ವೇದಿಕೆಯ ಮೇಲೆ" ಎನ್ನುವ ಮಾತು ಆ ಕ್ಷಣಕ್ಕೆ ಅವಳಿಗೆ ಹೊಂದುವಂತೆ ಕಂಡಿತು. 

"ನೇರವಾದ ಮರಗಳೇ ಅಲ್ಲವಾ ಮೊದಲು ಕೊಡಲಿಯ ಏಟಿಗೆ ಬಲಿಯಾಗುವುದು.." ಎಂಬ ಮಾತು ನೆನಪಾಗಿ ಆತಂಕವೂ ಆಯಿತು.


ಅವಳ ಬಿಸಿರಕ್ತದ ವಯಸ್ಸು ಹೀಗೆಲ್ಲಾ ಮಾಡಿಸುತ್ತಿದೆ. ಹಾರಾಟ, ಕಟು ವಾಸ್ತವಗಳು ಕಾಲ ಕಳೆದಂತೆ ಮಾಗುತ್ತವೆ. ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಅರಿವಾಗುವ ಸಮಯ ಬರುತ್ತದೆ. ಅದು ಅವಳಿಗೆ ತಾನಾಗಿಯೇ ಅರ್ಥವಾಗುತ್ತದೆ ಎಂದುಕೊಂಡೆನಾದರೂ.. ಕಾಲ ಬಲು ಕಠೋರ. ಯಾವತ್ತಿಗೂ ರಿವರ್ಸ್ ಪ್ರಕ್ರಿಯೆ ಅನ್ನೋದೇ ಅಲ್ಲಿಲ್ಲ. ಅವಳು ಮಾಗುವಷ್ಟರಲ್ಲಿ ಮನಸ್ಸು ಕಲ್ಲಾದರೆ..!


ಹೀಗೆ ಯೋಚನೆಗಳ ಪ್ರವಾಹ ಸಾಗುತ್ತಿತ್ತು. ಅದು ಅವಳ ಮಾತುಗಳಿಂದಲೇ ಕಡಿಯಿತು. 


"ಯೋಚನೆ ಬೇಡ್ವೆ. ಮನಸ್ಸಲ್ಲಿ ಇರೋದನ್ನ ಒದರಿ ಹಗುರಾಗುವೆ. ಕೆಲವೊಮ್ಮೆ ಜನಗಳ ಎದುರಲ್ಲಿ.. ಹಲವೊಮ್ಮೆ ನನ್ನ ಬರಹದಲ್ಲಿ..

'ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ' ಅನ್ನೋ ನುಡಿ ಕೇಳಿಲ್ವಾ ನೀನು..?!

ಸಂಧರ್ಭಕ್ಕೆ ತಕ್ಕಂತೆ ಕಠಿಣವೋ.. ಮೃದುವೋ ನಿರ್ಧರಿಸುತ್ತೇನೆ. 

ತೀರಾ ತಲೆಕೆಡಿಸಿಕೊಳ್ಳಬೇಡ್ವೆ"


ಅವಳು ಹೀಗೆಯೇ ಇರಲಿ ಬದಲಾಗದಿರಲಿ ಎಂದು ಮನ ಹಾರೈಸಿದರೂ.. ಬಾಯಲ್ಲಿ ಬಂದ ಮಾತು..?!


ಈ ಮಾತುಕಥೆ ಒಂದು ಕಾಲದ ನನ್ನನ್ನೇ ನೆನಪಿಸಿತು. ಅಂದ ಹಾಗೆ ಅವಳ ಜೊತೆ ಆದ ಸಂಭಾಷಣೆ..?!


~ವಿಭಾ ವಿಶ್ವನಾಥ್ 

ಶನಿವಾರ, ಆಗಸ್ಟ್ 29, 2026

ಮಂಜು ಮುಸುಕಿದ ಹಾದಿ (ಪುಸ್ತಕ ಯಾನ - 485)


ಪುಸ್ತಕದ ಶೀರ್ಷಿಕೆ : ಮಂಜು ಮುಸುಕಿದ ಹಾದಿ 

ಲೇಖಕರು : ಶೈಲಜಾ ಪ್ರಕಾಶ್ 

ಪ್ರಕಾಶಕರು : ಶ್ರೀ ಕೃಷ್ಣ ಪ್ರಕಾಶನ

ಪ್ರಥಮ ಮುದ್ರಣ : 2022


ಈ ಪುಸ್ತಕ ಮಂಜು ಮುಸುಕಿದ ಹಾದಿ, ಟೀಚರ್ ಹಾಗೂ ಚಿಂಪು ಎನ್ನುವ ಮೂರು ಕಿರುಕಾದಂಬರಿಗಳು ಸಂಪುಟ ಇದು.


ಇಂದು ಮಂಜು ಮುಸುಕಿದ ಹಾದಿ ಕಾದಂಬರಿಯನ್ನು ಮಾತ್ರ ಪರಿಚಯಿಸುತ್ತಿದ್ದೇನೆ.


ಮಂಜು ಮುಸುಕಿದ ಹಾದಿ ಸಾಮಾಜಿಕ ಶೈಲಿಯ ಕಾದಂಬರಿ. ಮುಖ್ಯವಾಗಿ ಕೌಟುಂಬಿಕ ಪರಿಸರವನ್ನು ಕಟ್ಟಿಕೊಡುತ್ತಾ.. ಮನುಷ್ಯನ ಜೀವನ ಸದಾ ಬೆಳಕಿನಲ್ಲಿರದೆ ಮಂಜು ಮುಸುಕಿದ ಹಾದಿಯಲ್ಲಿಯೂ ನಡೆಯಬೇಕಾದ ಸಂದರ್ಭಗಳನ್ನು ತೋರಿಸುತ್ತಾರೆ. ಅಂತಹ ಸಂದರ್ಭದಲ್ಲಿ ದಾರಿ ಸರಿಯಾಗಿ ಕಾಣದೆ.. ಕಲ್ಲು, ಮಣ್ಣು, ಮುಳ್ಳು, ಹಳ್ಳ-ಕೊಳ್ಳಗಳನ್ನು ದಾಟುವ ಸಂದರ್ಭ ಬಂದಾಗ ಅವೆಲ್ಲವನ್ನು ಎದುರಿಸಿ ಹೇಗೆ ಸಾಗುತ್ತಾರೆ ಹಾಗೂ ಅವೆಲ್ಲವೂ ಅವರ ಬದುಕಿನಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ದಾರಿದೀಪದಂತೆ ತೋರಿದ್ದಾರೆ.


ಕಾದಂಬರಿಯ ನಾಯಕ ವಿಶ್ವನಾಥ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು, ನಂತರ ತಾಯಿಯನ್ನು ಕಳೆದುಕೊಂಡವನು. ಎಸ್. ಎಸ್. ಎಲ್. ಸಿ ಗೆ ಬರುವ ಹೊತ್ತಿಗೆ ಅನಾಥನಾಗಿದ್ದ ಆತನ ಹೊಣೆ ಹೊತ್ತವರು ಅವನ ಸೋದರ ಮಾವ ಸದಾಶಿವರಾವ್. ಸದಾಶಿವರಾವ್ ಅವರ ಮನೆಯಲ್ಲಿಯೇ ತನ್ನ ಮುಂದಿನ ದಿನಗಳನ್ನು ಕಳೆವ ಅವನಿಗೆ ಅಲ್ಲಿ ಸಿಗುತ್ತಿದ್ದದ್ದು ಊಟ ಹಾಗೂ ಉಳಿದುಕೊಳ್ಳುವ ಜಾಗವಷ್ಟೇ ಎಂದರು ತಪ್ಪಾಗಲಾರದು. ಆತ ಅದೆಲ್ಲಾ ಕಷ್ಟಗಳನ್ನು ದಾಟಿ ನಿಂತ ಬಗ್ಗೆ ಸ್ಪೂರ್ತಿದಾಯಕ.


"ಸಾಧನೆಗಳಲ್ಲಿ ನೆಲೆ ನಿಂತವನ ಬುದ್ಧಿಯು ಒಂದೇ ಮುಖವಾಗಿರುವುದು. ನೆಲೆ ಇಲ್ಲದವನ ಬುದ್ಧಿಯು ಮರದ ಅನೇಕ ಕೊಂಬೆಗಳ ತರಹ ಬೇರೆ ಬೇರೆಯಾಗಿರುತ್ತೆ


ಬದುಕುವುದು ಒಂದು ಕಲೆ!"


ಮುಂದೆ ಥಿಯೇಟರ್ ಕೆಲಸಕ್ಕೆ ಸೇರಿದಾಗ ಅಲ್ಲಿನ ಓನರ್ ಮಂಜಯ್ಯನವರ ಪ್ರೋತ್ಸಾಹದಿಂದ ನೈಟ್ ಕಾಲೇಜಿಗೆ ಹೋಗಿ ಓದಿ ಡಿಗ್ರಿ ಮುಗಿಸಿ ಒಳ್ಳೆಯ ಕೆಲಸಕ್ಕೂ ಸೇರುತ್ತಾನೆ. 


ಇತ್ತ ಮತ್ತೊಂದು ಕುಟುಂಬದ ಪರಿಚಯ ಮಾಡಿಸುತ್ತಾರೆ. ಅದು ಅಡ್ವಕೇಟ್ ಆನಂದ ರಾವ್ ಅವರ ಕುಟುಂಬ. ಅವರ ಪತ್ನಿ ಮಂಗಳ. ಮದುವೆಯಾಗಿ 10 ವರ್ಷವಾದರೂ ಅವರಿಗೆ ಮಕ್ಕಳಿರಲಿಲ್ಲ. ಆನಂದರಾವ್ ಅವರ ಬುದ್ಧಿವಂತಿಕೆ ಹಾಗೂ ಗಳಿಸುವ ಕಲೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ.


ಆನಂದರಾಯರ ಏಕೈಕ ತಂಗಿ ಸರಸ್ವತಮ್ಮ. ಅವರ ಒಬ್ಬಳೇ ಮುದ್ದಿನ ಮಗಳು ಮಾಲತಿ. ಗಂಡನನ್ನು ಕಳೆದುಕೊಂಡಿದ್ದ ಸರಸ್ವತಮ್ಮನವರ ಆರೋಗ್ಯವು ಅಷ್ಟು ಸರಿ ಇರಲಿಲ್ಲ. ಆನಂದರಾಯರು ತಂಗಿಯ ಕಷ್ಟಕ್ಕಾಗುತ್ತಿದ್ದರು. ತಿಂಗಳಿಗೊಮ್ಮೆ ಬಂದು ಅವರ ಸಂಸಾರದ ನಿಗಾ ನೋಡುತ್ತಿದ್ದರು.


ಮುಂದೆ ವಿಶ್ವನಾಥ ಹಾಗೂ ಮಾಲತಿ ಇಬ್ಬರ ವಿವಾಹವಾಗುತ್ತದೆ. ಇದಕ್ಕೆ ಕಾರಣರು ಯಾರು..? ಅವರ ಬಂಧ ಕೂಡಿಬಂದದ್ದು ಹೇಗೆ..?


ಸೋದರಸೊಸೆ ಮಾಲತಿಯ ಬದುಕಿನಲ್ಲಿ ಮೊದಲಿನಿಂದಲೂ ಕಾಳಜಿ ಮಾಡುತ್ತಿದ್ದ ಆನಂದರಾಯರ ಮನಸ್ಸಿನಲ್ಲಿ ಏನಿತ್ತು ..?


ಆನಂದರಾಯರು ಅವರ ಸಂಸಾರಕ್ಕೆ ನೆರವಾಗುವಾಗ ಮಂಗಳಮ್ಮನವರ ಮನಸ್ಸಿನ ಭಾವಗಳೇನು..?


ಮದುವೆಯಾದ ನಂತರವೂ ಮಾಲತಿ ಓದಿನಲ್ಲಿ ಪ್ರಗತಿ ಸಾಧಿಸುವ ಬಗೆ ಸ್ಪೂರ್ತಿದಾಯಕವೆನಿಸಿತು. ಅಷ್ಟೇ ಅಲ್ಲದೆ ಮಾಲತಿಯ ಗಟ್ಟಿತನದ ವ್ಯಕ್ತಿತ್ವ ಇಲ್ಲಿದೆ. ಗಂಡನನ್ನು ವ್ಯರ್ಥವಾಗಿ ಕಾಲ ಕಳೆಯಲು ಬಿಡದೆ ಡಿಪಾರ್ಟ್ಮೆಂಟ್ ಎಕ್ಸಾಮ್ ಗಳನ್ನು ತೆಗೆದುಕೊಳ್ಳುವಂತೆ ಸ್ಪೂರ್ತಿ ತುಂಬಿ ಆತನ ವೃತ್ತಿ ಬದುಕಿನ ಮುನ್ನಡೆಗೆ ಕಾರಣವಾಗುತ್ತಾಳೆ. ವಿಶ್ವನಾಥ ಪತ್ನಿಯ ಬಗ್ಗೆ ಯಾವ ಭಾವವನ್ನು ಹೊಂದಿದ್ದ..?


ಮನುಷ್ಯನ ಬದುಕಿನಲ್ಲಿ ಸುಖ ಬಂದ ಹಾಗೆಯೇ ದುಃಖಗಳೂ ಹಿಂದೆಯೇ ಬರುತ್ತವೆ. ಸುಖಕ್ಕೆ ಅಣಿಯಾದಂತೆ ಕಷ್ಟಕ್ಕೂ ಅಣಿಯಾಗಿರಬೇಕು. 


ಹಲವು ಸುಖಗಳನ್ನು ಮಾನವನು ಬಯಸಿ, ಬೇಡಿ ಪಡೆದರು ಮುಂದೆ ಅವೇ ಮುಳುವಾಗುತ್ತವೆ. ಮಾಲತಿ ಹಾಗೂ ವಿಶ್ವನಾಥರ ಬದುಕಿನಲ್ಲಿಯೂ ಅಂತಹ ಪ್ರಸಂಗ ಬಂದಿತು. ಅವರ ಬದುಕಿನಲ್ಲಿ ಮೂರು ವರ್ಷದಲ್ಲಿ ಬಹಳ ಬದಲಾವಣೆಗಳಾಗಿದ್ದು.. ಅವರ ಬದುಕಿನಲ್ಲಿ ಮಗಳು ಮೀನಾ ಬಂದಿದ್ದರೆ, ಉಳಿದವರೆಲ್ಲರೂ ಇದ್ದು ಇರದಂತಾಗಿದ್ದೇಕೆ.?


ಇದಾದ ಆರು ವರ್ಷಗಳಲ್ಲಿ ಮತ್ತೆ ಗಂಭೀರವಾದ ಬದಲಾವಣೆಗಳಾದವು. ಸಂಸಾರದಲ್ಲಿ ನಂಬಿಕೆ ಎನ್ನುವುದು ಎಷ್ಟು ಮುಖ್ಯ ಎನ್ನುವುದರ ಅರಿವಾಗುತ್ತದೆ. ಎಷ್ಟೇ ನಂಬಿಕೆ ಇದ್ದರೂ ಅದರ ಬುಡವನ್ನು ಅಲುಗಾಡಿಸುವಂತಹ ಕೆಲವು ಘಟನೆಗಳು, ಬೇರೆಯ ಕೋನದ ನೋಟ ಸುಖ ಸಂಸಾರಕ್ಕೆ ಎರವಾಗಬಲ್ಲವು. ಇದೆಲ್ಲವನ್ನು ಮೀರಿ ವಿಶ್ವನಾಥ ಹಾಗೂ ಮಾಲತಿಯರು ಗಟ್ಟಿಯಾದರೇ..?


ಅಕಸ್ಮಾತ್ ಇದೆಲ್ಲವನ್ನು ಬಗೆಹರಿಸಿಕೊಂಡರೂ.. ವಿಧಿಯ ಆಟ ಬೇರೆಯೇ ಇದ್ದರೆ..?


ವ್ಯಕ್ತಿಗಳ ನಡೆ ಸಮಯ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಇಲ್ಲಿಯೂ ಯಾರೂ ಅದಕ್ಕೆ ಹೊರತಾದವರಲ್ಲ. ಮಾಲತಿಯ ವ್ಯಕ್ತಿತ್ವ ಮಾತ್ರ ಮೊದಲಿನಿಂದ ಕೊನೆಯವರೆಗೂ ಬದಲಾದದ್ದು ಕಂಡುಬರಲಿಲ್ಲ. ಯಾರ ಮನಸ್ಸಿನಲ್ಲಿ ಯಾವ ಭಾವವಿರುತ್ತದೆಯೋ ಯಾರೂ ಅರಿತವರಲ್ಲ. ಆದರೆ, ನಕಾರಾತ್ಮಕ ಗುಣವನ್ನು ಬೆಳೆಯಲು ಬಿಡದೆ ಸಕಾರಾತ್ಮಕವಾಗಿ ಆಲೋಚಿಸುವ ಹಾಗೂ ಅಂತೆಯೇ ನಡೆಯುವ ಗುಣವಷ್ಟೇ ಸಮಾಜದಲ್ಲಿ ಅವರ ವ್ಯಕ್ತಿತ್ವವನ್ನು ಉಳಿಸಿಕೊಡಬಲ್ಲದು.


ವಿಶ್ವನಾಥ ಮಾಲತಿಯರ ಬದುಕಿನ ಮಂಜು ಮುಸುಕಿದ ಹಾದಿಯ ಚಿತ್ರಣ ಇಲ್ಲಿದೆ. 


ಹಲವಾರು ನೋಟ್ ಮಾಡುವಂತಹ ಕೋಟ್ ಗಳಂತಹ ಮೌಲ್ಯಯುತ ಸಾಲುಗಳನ್ನು, ಗೂಡಾರ್ಥ ಉಳ್ಳ ನಿರೂಪಣೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಸೊಗಸಾದ ಕಾದಂಬರಿಯ ಓದು.

~ವಿಭಾ ವಿಶ್ವನಾಥ್

ಪುರುಷಸಿಂಹ (ಪುಸ್ತಕ ಯಾನ - 484)


ಪುಸ್ತಕದ ಶೀರ್ಷಿಕೆ : ಪುರುಷಸಿಂಹ

ಲೇಖಕರು : ಜಿ. ಪ್ರಕಾಶ್

ಪ್ರಕಾಶಕರು : ಕ್ರಿಯೇಟಿವ್ ಪುಸ್ತಕಮನೆ 

ಎರಡನೇ ಮುದ್ರಣ : 2026

ಪುಟಗಳು : 104

ಬೆಲೆ : 100 ರೂ. 


1980 ರಿಂದ ಸ್ಪೈ ನಾವೆಲ್ ಗಳನ್ನು ಬರೆಯಲು ಶುರು ಮಾಡಿರುವ ಜಿ. ಪ್ರಕಾಶ್ ಅವರ 100ನೇ ಕಾದಂಬರಿ ಇದು. ಈ ಕಾದಂಬರಿಯ ಮುಖ್ಯ ನಾಯಕ ಪ್ರದೀಪ. 


ಪುಸ್ತಕ ಮನೆ ಪ್ರಕಾಶನದವರ "ಅಪರಂಜಿ ಮಾಲೆ" ಮಾಲಿಕೆಯಡಿ ಈ ಕಾದಂಬರಿ ಮರುಮುದ್ರಣಗೊಂಡಿದೆ.


ಸ್ಪೈ ನಾವೆಲ್ ಆದ್ದರಿಂದ ಈ ಕಾದಂಬರಿಯ ಪೂರ್ಣ ಕಥೆಯನ್ನು, ರೋಚಕ ತಿರುವುಗಳನ್ನು ನಾನು ಬಿಚ್ಚಿಡಲಾರೆ. ಕಾದಂಬರಿಯ ಪ್ರವೇಶಿಕೆ ಹಾಗೂ ಕುತೂಹಲ ಮೂಡಿಸುವಂತಹ ವಿಚಾರಗಳನ್ನು ಹೇಳುವ ಪ್ರಯತ್ನ ಮಾಡುವೆ.


ಕಾದಂಬರಿ ಶುರುವಾಗುವುದು ಸಿ.ಬಿ.ಐ ಡೈರೆಕ್ಟರ್ ಡಿಸೋಜ ಹಾಗೂ 65 ವರ್ಷದ ದಿವಾಕರ್ ಅವರ ಮಾತುಕತೆಯಿಂದ. ದಿವಾಕರ್ ಅವರಿಗೆ ಸಹಾಯ ಬೇಕಿರುತ್ತದೆ. ವಿಜ್ಞಾನಿಯಾಗಿದ್ದವರು ಡಿಫೈನ್ಸ್ ಇನ್ಸ್ಟಿಟ್ಯೂಟ್ ನಲ್ಲಿ ಚೀಫ್ ಸೈಂಟಿಸ್ಟ್ ಆಗಿ ಎರಡು ವರ್ಷದ ಹಿಂದೆ ರಿಟೈರ್ಡ್ ಆಗಿದ್ದವರು. ಇಬ್ಬರೂ ಬಾಲ್ಯದ ಗೆಳೆಯರು. ರಾಷ್ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿಯನ್ನೂ ಪಡೆದಿದ್ದವರು. ಅವರ ಆವಿಷ್ಕಾರಗಳು, ಸಂಶೋಧನೆಗಳ ವಿಚಾರಗಳನ್ನು ತೆರೆದಿಡುತ್ತಲೇ.. ಬುದ್ಧಿವಂತಿಕೆಯೇ ಅವರ ಬದುಕಿನಲ್ಲಿ ಮುಳುವಾದ ಸಂದರ್ಭದಲ್ಲಿ ಈಗ ಡಿಸೋಜಾ ಅವರ ಸಹಾಯ ಕೋರಿ ಬಂದಿರುತ್ತಾರೆ.


ದಿವಾಕರ್ ಅವರ ಮೊಮ್ಮಗಳು ನಿ ತಿಷಾ ಕಾಣೆಯಾಗಿರುತ್ತಾಳೆ. ಅದು ಕೇವಲ ಕಾಣೆಯಾಗಿದ್ದಲ್ಲ. ಅಪಹರಣವಾಗಿರುವುದು. ಹಾಗೆಂದು ಇದು ಊಹಾಪೋಹವೂ ಅಲ್ಲ. ಖಚಿತವಾದ ಮಾಹಿತಿ. ಕಣ್ಮುಂದೆ ನಡೆದ ಘಟನೆಯೇ.. ಆದರೆ, ಅದನ್ನು ತಪ್ಪಿಸಲಾಗಿರಲಿಲ್ಲ.


ಭೈರನ್ ಸಿಂಗ್ ಭೈರಾಗಿ ಎನ್ನುವ ಕುಖ್ಯಾತ ಅಪರಾಧಿಯೊಬ್ಬ ನಿತಿಷಾಳನ್ನು ಅಪಹರಿಸುತ್ತಾನೆ. ಅದೂ.. ತಾತನ ಎದುರುನಲ್ಲಿಯೇ..!


ಗುರುದಾಸಪುರ್ ಜೈಲಿನಲ್ಲಿ ತಮ್ಮ ಹೆಂಡತಿಯ ಪುಣ್ಯತಿಥಿಯ ದಿನದಂದು ಅಲ್ಲಿನ ಖೈದಿಗಳಿಗೆ ಹಾಗೂ ರೋಗಿಗಳಿಗೆ ಹಣ್ಣು, ಔಷಧಿ, ಸಿಹಿ ಹಂಚಲು ಹೋಗಿರುತ್ತಾರೆ. ದಿವಾಕರ್ ಅವರು ಸಾಮಾನ್ಯವಾಗಿ ವಿಸಿಟರ್ಸ್ ಅನ್ನು ಬಿಡದಿದ್ದವರು ಇವರ ಮೇಧಾವಿತನದ ಅರಿವಿದ್ದು ಹಾಗೂ ವಿ.ಐ.ಪಿ ಆದ್ದರಿಂದ ಒಳಬಿಟ್ಟಿರುತ್ತಾರೆ. ಆದರೆ, ಅವರ ಅದೃಷ್ಟ ಕೆಟ್ಟು ಎಲ್ಲರ ಎದುರಿನಲ್ಲಿಯೇ ಬೈರನ್ ಸಿಂಗ್ ಭೈರಾಗಿ ನಿತಿಶಾಳೊಂದಿಗೆ ಮಾಯವಾಗಿರುತ್ತಾನೆ. ತೀವ್ರವಾದಿಗಳ ಪಾಲಾದ ಮೊಮ್ಮಗಳ ಪತ್ತೆ ಮಾಡಲು ಈಗ ದಿವಾಕರ್ ಸಹಾಯ ಕೋರಿ ಬಂದಿರುವುದು. ಅವರಿಗಿದ್ದ ಒಬ್ಬಳೇ ಮಗಳ ಮಗಳ ಮಗಳು ಅವಳ. ಇದು ಕೇವಲ ಸಂಬಂಧದಿಂದ ಮಾತ್ರ ಕನೆಕ್ಟ್ ಆಗುವ ಕಥೆಯಲ್ಲ. ಅವಳನ್ನೇ ಅಪಹರಿಸುವ ಉದ್ದೇಶವಿತ್ತೇ..?! ಅದರ ಹಿಂದಿನ ಮರ್ಮವೇನು..?


ಮುಂದೆ ಈ ಕಥೆ ದೇಶಪ್ರೇಮಕ್ಕೂ ಸಂಬಂಧಿಸಿದಂತೆ ಮುಂದುವರೆಯುತ್ತದೆ.


ದಿವಾಕರ್ ಅವರ ಕುಟುಂಬದ ಪರಿಚಯದ ಜೊತೆಗೆ ತೀವ್ರಗಾಮಿ ಭೈರನ್ ಸಿಂಗ್ ಭೈರಾಗಿ ಎಷ್ಟು ಅಪಾಯಕಾರಿ ಎನ್ನುವುದನ್ನು ಕಟ್ಟಿಕೊಡುತ್ತಾ ಹೋಗುತ್ತಾರೆ.


ಭಯೋತ್ಪಾದನೆ ಜೊತೆಗೆ ಪಾಕಿಸ್ತಾನ ಹಾಗೂ ಭೈರನ್ ಸಿಂಗ್ ಭೈರಾಗಿಗೆ ಆ ದೇಶದ ಜೊತೆಗಿದ್ದ ಸಂಬಂಧ ಎನ್ನುವುದನ್ನು ಹೇಳುತ್ತಲೇ ಆ ಕೃತ್ಯದ ದುಷ್ಪರಿಣಾಮ ಎಷ್ಟಿದೆ ಎಂಬುದರ ಅಂದಾಜನ್ನು ನಾವು ಮಾಡಿಕೊಳ್ಳಬಹುದು.


ಹಾಗೆಂದು.. ಇಲ್ಲಿ ಪ್ರದೀಪ್ ತೀವ್ರವಾದ ಹೊಡೆದಾಟದ ಅಥವಾ ಕಾರ್ಯಾಚರಣೆಯ ಹಾದಿಯ ಬದಲಾಗಿ ಬೇರೆಯ ಹಾದಿಯನ್ನೇ ಹಿಡಿಯಬೇಕಾಗಿ ಬರುತ್ತದೆ. ಅದು ಅವನ ಶೈಲಿಯಲ್ಲಿಯೇ ಎಂದುಕೊಂಡರೆ.. ಅಷ್ಟರೊಳಗೆ ಡಿಸೋಜಾ ಅವರು ಆತನ ಮುಂದಿನ ಹೆಜ್ಜೆಯನ್ನು ಪ್ಲಾನ್ ಮಾಡಿ ಅದರ ಪ್ರಕಾರವೇ ನಡೆಯಬೇಕೆಂದು ನಿರ್ದೇಶಿಸುತ್ತಾರೆ. ಹಾಗಿದ್ದಲ್ಲಿ, ಪ್ರದೀಪನ ಸಾಹಸ ಶುರುವಾಗುವುದು ಎಲ್ಲಿಂದ..?


ಅಲ್ಲಿಂದ ಶುರುವಾಗುವ ಪ್ರದೀಪನ ಸಾಹಸಗಾಥೆಯನ್ನು ನಾವಿಲ್ಲಿ ಕಂಡುಕೊಳ್ಳಬಹುದು.


ಕೆ.ವನ್ ವೇಷ ಮರೆಸಿಕೊಂಡು ಹೋಗುವುದರ ಜೊತೆಗೆ ಮಕನ್ ಸಿಂಗ್ ಎನ್ನುವ ತೀವ್ರಗಾಮಿಯ ನಂಬಿಕೆ ಗಳಿಸುವಲ್ಲಿಂದ ಶುರುವಾಗುವ ಕಥೆ ಹಲವಾರು ರೋಚಕ ತಿರುವುಗಳೊಂದಿಗೆ ನೌಗುತ್ತಾ ಹೋಗುತ್ತದೆ.


ಕ್ರಾಂತಿಕಾರಿಗಳು ಹಾಗೂ ತೀವ್ರಗಾಮಿಗಳು ಇಬ್ಬರಿಗೂ ಇರುವ ವ್ಯತ್ಯಾಸವನ್ನು ನಾವಿಲ್ಲಿ ಕಾಣಬಹುದು.


ಮಿಂಚಿನ ಕಾರ್ಯಚರಣೆಯಂತೆ.. ಮುಂದಿನ ಪ್ರತಿ ಹಂತವು ಸಾಗುತ್ತಾ ಹೋಗುವಂತೆ ಕಥೆಯನ್ನು ವೇಗವಾಗಿ ಹಾಗೂ ರೋಚಕವಾಗಿ ಕಟ್ಟಿಕೊಡುತ್ತಾರೆ.


ಮಕನ್ ಸಿಂಗ್, ಭೈರನ್ ಸಿಂಗ್ ಭೈರಾಗಿ ಹಾಗೂ ಸುಖಿಯಾ ಸಿಂಗ್ ಇವರೆಲ್ಲರಿಗೂ ಶೇರ್ ಸಿಂಗ್ ಮಣ್ಣುಮುಕ್ಕಿಸಿದ್ದು ಹೇಗೆ..?


ಕೆಲವು ಸಿನಿಮಾ ಶೈಲಿಯ ನಡೆಗಳ ಜೊತೆಗೆ ಮುಂದಿನ ಗುಟ್ಟು ಬಿಟ್ಟುಕೊಡದಂತೆ ಈ ಸ್ಟೈ ನಾವೆಲ್ ಸಾಗುತ್ತದೆ.


ಪಾಕಿಸ್ತಾನದ ವಾತಾವರಣ, ಅಲ್ಲಿಯ ಗೂಢಚಾರರು, ಕಾರ್ಯಾಚರಣೆ ಜೊತೆಗೆ ಪ್ರದೀಪನ ಸಾಹಸವನ್ನು ಕಾಣಬಹುದು.


ಉಗ್ರವಾದಿಗಳ ಬಂಧನದಲ್ಲಿದ್ದ ನಿತಿಷಾ ಬಿಡುಗಡೆಯಾಗಿದ್ದು ಯಾವಾಗ..? ಇದಕ್ಕೆ ಪ್ರದೀಪನ ಜೊತೆಯಾದವರು ಯಾರು ಹಾಗೂ ಯಾವೆಲ್ಲ ಸಾಹಸಗಳನ್ನು ಪ್ರದೀಪ ಮಾಡಿದ..? 


ಮುಮ್ತಾಜ್ ಮಾಡಿದ್ದು ಸರಿಯೋ ತಪ್ಪೋ..? ನೀವೇ ಓದಿ ಅರಿಯಿರಿ.


ಇದು ನಾನು ಓದಿದ ಜಿ. ಪ್ರಕಾಶ್ ಅವರ ಮೊದಲ ಕಾದಂಬರಿ. ವಿಭಿನ್ನ ಓದಿನ ಅನುಭವ ಕಟ್ಟಿಕೊಟ್ಟಿತು. 


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 23, 2026

ಹುಚ್ಚಿ ಸತ್ತದಲ್ಲ..

 


"ಅವಳು ಅಡುಗೆಯ ತಯಾರಿಯ ಹಂತದಲ್ಲಿದ್ದಳು. ತನ್ನದೇ ಗುಂಗಿನಲ್ಲಿ ಮುಳುಗಿರುವಾಗ ಅದೇನೋ ಸದ್ದಾಯಿತು! ಅವಳು ಬೆಚ್ಚಿ ಬಿದ್ದಳು!" 


ತಟ್ಟನೆ "ಪಾಪು, ಪಾಪು.. ಪಾಪು, ಪಾಪು" ಎಂದು ಕರೆಯುತ್ತಾ ಇಡೀ ಮನೆ ಹುಡುಕಿದಳು. ಯಾಕೋ ಮನಸ್ಸು ಕೇಡನ್ನೇ ಶಂಕಿಸುತ್ತಿತ್ತು. ದೇವರ ಬಳಿ ಮನಸ್ಸಿನಲ್ಲಿಯೇ ಬೇಡುತ್ತಾ ಮನೆಯ ಮುಂದಿನ ತೊಟ್ಟಿಯ ಬಳಿ ಬಂದಳು. ತೊಟ್ಟಿಯ ಬಳಿ ಯಾರೂ ಕಾಣಲಿಲ್ಲ. ಅಲ್ಲೇ ಕೊಂಚ ಮುಂದೆ ಇದ್ದ ಬಾವಿಯ ಬಳಿ ಬಂದಳು. ಅಲ್ಲಿ ಬಗ್ಗಿ ನೋಡಿದರೆ ಜೀವ ಬಾಯಿಗೆ ಬಂದಿತ್ತು. ಪಾಪುವನ್ನು ಹಿಡಿದುಕೊಂಡು ಸರಳಾ ಬಾವಿಯಿಂದ ಹೊರ ಬರಲು ಸೆಣೆಸಾಡುತ್ತಿದ್ದಳು. ತಕ್ಷಣವೇ ಅಲ್ಲಿ ನಿಂತು ಜೋರು ಬೊಬ್ಬೆ ಹೊಡೆದು ಕೆಲಸದವರನ್ನೆಲ್ಲಾ ಕರೆದಳು. ಮಂಜ ಮಿಂಚಿನಂತೆ ಹಾರಿ ಇಬ್ಬರನ್ನೂ ಮೇಲೆ ತಂದಿದ್ದ. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು.


ಸುಮಿತ್ರಾ ಪ್ರಲಾಪಿಸುತ್ತಿದ್ದಳು. ಹಾಗೆಯೇ, ಅವಳ ಗಮನ ಹಿಂದಕ್ಕೆ ಓಡಿತು. ಪಾಪು ಮತ್ತು ಸರಳಾ ಇಬ್ಬರೂ ಮನೆಯಲ್ಲಿ ಒಂದು ರೀತಿ ಅಬ್ಬೇಪಾರಿಗಳೇ.. ಕೇಳುವವರೇ ದಿಕ್ಕಿಲ್ಲ.


ಸುಮಿತ್ರಾ ಪಾಪುವನ್ನು ಹೆತ್ತಾಗ ಗಂಡನ ಕಡೆಯಿಂದ ಬಂದು ನೋಡಿದ್ದವರು ಮೂಗು ಮುರಿದಿದ್ದರು. "ಹುಟ್ಟಿದ್ದು ಹೆಣ್ಣು" ಎಂದು.. ಮಗುವಿಗೆ ನಾಮಕರಣ ಮಾಡುವ ಸೌಜನ್ಯವನ್ನು ತೋರದೆ ಕಾಳಜಿಯನ್ನೂ ಮಾಡದೆ ಹಾಗೆಯೇ ಬಿಟ್ಟು ಬಿಟ್ಟಿದ್ದರು. ಅದಕ್ಕೆ ಅವಳು ಇನ್ನು "ಪಾಪು". ಜೊತೆಗೆ ದಿನ ಕಳೆದಂತೆ ಅರಿವಾಗಿದ್ದು ಅವಳು ಮೂಕಿ ಮತ್ತು ಕಿವುಡಿ. ಮೇಲೆ ಹೆಣ್ಣು ಬೇರೆ..


ಬಾಣಂತನ ಮುಗಿಯುವ ಮೊದಲೇ ಇಲ್ಲಿನ ಚಾಕರಿ ಕಾಯುತ್ತಿತ್ತು. ಮಗುವನ್ನು ಆಡಿಸಲು ಯಾರೂ ಮುಂದೆ ಬಾರದಿದ್ದಾಗ ಈ ಮನೆಯಲ್ಲಿ ಅವಳ ಜೊತೆಯಾಗಿದ್ದು ಸರಳಾ. ಮನೆಯವರ ಪಾಲಿಗೆ ಅವಳು "ಹುಚ್ಚಿ ಸರಳಾ". ಈ ಮನೆ ಮಗಳು. ಅವಳ ಮದುವೆಯ ದಿನ ಮದುವೆಯ ನಂತರ ಮಂಟಪದಿಂದ ಗಂಡನ ಮನೆಗೆ ಹೋಗುತ್ತಿರುವಾಗ ದೊಡ್ಡ ಅಪಘಾತವಾಗಿ ಗಂಡನನ್ನು ಕಳೆದುಕೊಂಡಳು. ಅದೇ ಆಘಾತಕ್ಕೆ ಹುಚ್ಚಿಯಾದಳು. ಅವಳನ್ನು ಸರಿಪಡಿಸುವ ಕೆಲಸವನ್ನು ಯಾರೂ ಮಾಡಲಿಲ್ಲ. ಗಂಡನ ಮನೆಯವರು ಅವಳನ್ನು ಕೂಡಲಿಲ್ಲವಾದ್ದರಿಂದ ಈ ಮನೆಯಲ್ಲಿ ಹುಟ್ಟಿದ ತಪ್ಪಿಗೆ ಇಲ್ಲಿಯೇ ಉಳಿದುಕೊಂಡಳು. ಅದೂ ಹುಚ್ಚಿಯಾಗಿ...


"ಅವಳಿಗೆ ಹುಚ್ಚು, ಮಗುವನ್ನು ಅವಳ ಬಳಿ ಬಿಡಬೇಡ" ಎಂದ ಅತ್ತೆಗೆ "ಆಯ್ತು ಅತ್ತೆ, ಹಾಗೇ ನೀವೇ ಸ್ವಲ್ಪ ಗಮನ ಕೊಡಿ" ಎಂದಾಗ "ದೇವಸ್ಥಾನಕ್ಕೆ ಹೊತ್ತಾಯ್ತು" ಎನ್ನುತ್ತಾ ನುಣುಚಿಕೊಂಡಿದ್ದರು. ಮಾವ, ಗಂಡ, ಮೈದುನರನ್ನಂತೂ ಮಾತನಾಡಿಸುವ ಹಾಗೆಯೇ ಇಲ್ಲ. ಇದೇ ಹುಚ್ಚಿ ಪಾಪುವನ್ನು ಎದೆಗವಚಿಕೊಂಡು ತನ್ನದೇ ಮಗು ಎಂಬಂತೆ ಬೆಳೆಸತೊಡಗಿದ್ದು.. ಮಗುವಿಗೆ ಇನ್ನೇನು ಒಂದು ವಾರದಲ್ಲಿ ಮೂರು ವರ್ಷ ತುಂಬುವುದರಲ್ಲಿತ್ತು.


ಎಲ್ಲಿದ್ದರೋ ಅತ್ತೆ ಲಬಲಬನೆ ಬಾಯಿ ಬಡಿದುಕೊಂಡು "ಅಯ್ಯೋ ಪಾಪಿ, ಮಗುವನ್ನು ಕೊಂದುಬಿಟ್ಟೆಯಲ್ಲೇ.." ಎನ್ನುತ್ತಾ ಓಡೋಡಿ ಬಂದರು. ಸರಳಾ ಕಾಣಲಿಲ್ಲವಾಗಿ "ಅತ್ತೆ, ಮಗುವಿನ ಮೇಲೆ ಹಾಗೇ ಕಣ್ಣಿಟ್ಟಿರಿ" ಎಂದಿದ್ದಕ್ಕೆ ಹೂಂಗುಟ್ಟಿದ್ದರು. ಆದರೆ, ಅದ್ಯಾವ ಮಾಯದಲ್ಲೋ ಮಾಯವಾಗಿದ್ದರು. ಅತ್ತೆ ಇರುತ್ತಾರೆ ಎಂಬ ಒಂದೇ ಭರವಸೆಯ ಮೇಲಲ್ಲವಾ ಅಡುಗೆ ತಯಾರಿಗೆ ನಿಂತದ್ದು. ಅಷ್ಟರಲ್ಲಿ...


"ಈ ಹುಚ್ಚಿನೇ ಮಗುವನ್ನು ಬಾವಿಗೆ ದೂಡಿದ್ದು.."

"ಹುಚ್ಚು ನೆತ್ತಿಗೇರಿತ್ತೇನೋ.. ಮಗುವನ್ನು ತಳ್ಳಿಯೇ ಬಿಟ್ಟಿದ್ದಾಳೆ. "

"ಮಗುವನ್ನು ಹುಚ್ಚಿ ಜೊತೆ ಬಿಡುತ್ತಾರಾ.. ಇವರಿಗೆ ಸ್ವಲ್ಪವಾದರೂ ಜ್ಞಾನ ಬೇಡವಾ.."


ಆಳಿಗೊಂದೊಂದು ಕಲ್ಲು ಎಸೆಯುತ್ತಿದ್ದರು. ನನಗೇನೋ ನಂಬಲು ಆಗಲಿಲ್ಲ. ಸರಳಾ ಮಗುವನ್ನು ಕಾಪಾಡಿದ್ದು ಎಂದು ಸಾರಿ ಸಾರಿ ಹೇಳಬೇಕೆಂದುಕೊಂಡರೂ ಧ್ವನಿ ಈಚೆಯೇ ಬರಲಿಲ್ಲ. ಅವಳು ಮಗುವನ್ನು ಅವಚಿಕೊಂಡು ರಕ್ಷಿಸುತ್ತಿದ್ದ ಪರಿ ಕಂಡಿದ್ದೆನಲ್ಲಾ.. ಅಲ್ಲದೇ, ಅವಳ ಕಣ್ಣಲ್ಲಿ ಕಾಣುತ್ತಿದ್ದ ಮಾತೃಭಾವ ಸುಳ್ಳೇನು..??


ಪಾಪು ಎಚ್ಚರವಾಗಿದ್ದಳು. ಸರಳಾ ಬಾರದ ಲೋಕಕ್ಕೆ ಪಯಣಿಸಿದ್ದಳು. ಈಗ ಮಾತುಕತೆ ಬೇರೆಯೇ ಆಯಾಮ ಪಡೆದಿತ್ತು. "ಮಗುವಿನಿಂದ ಈ ಮನೆ ಮಗಳ ಪ್ರಾಣ ಹೋಯಿತು.. "


ಯಾರು ಏನು ಕಳೆದುಕೊಂಡರೋ ತಿಳಿಯಲಿಲ್ಲ. ಪಾಪು ಅವಳನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ಕಂಡು ಅಯ್ಯೋ ಎನ್ನಿಸುತ್ತಿತ್ತು.


ಹುಚ್ಚಿ ಸತ್ತದಲ್ಲ.. ಅಮ್ಮ ಸತ್ತಿದ್ಲು..

ಅತ್ತೆಯಂತಹಾ ಅಮ್ಮ ಪಾಪುವನ್ನು ಬದುಕಿಸಿ ತಾನು ಸತ್ತಿದ್ಲು.

ಮಾನವೀಯತೆ ಕಳೆದುಕೊಂಡ ನಾವೆಲ್ಲರೂ ಬದುಕಿದ್ದೂ ಹೆಣವಾಗಿದ್ವಿ.


~ ವಿಭಾ ವಿಶ್ವನಾಥ್

ಅವಳು ಮತ್ತು ಅಡುಗೆಮನೆ


 'ಇದೊಂದು ಕೆಲಸ ಮುಗಿಯೋದೇ ಇಲ್ಲ, ಸಾಕು, ನಾ ಇವತ್ತಿಂದ ಅಡುಗೆ ಮಾಡೋದೇ ಇಲ್ಲ, ನಂಗೂ ಸಾಕಾಗಿಹೋಗಿದೆ ಜೀವನ, ಅಡುಗೆ ಮಾಡಲು ಆಲಸ್ಯ ಇರೋ ಹೆಣ್ ಮಕ್ಕಳ ಸಂಘ ಕಟ್ಬೇಕು ನಾನು ' ಎಂದು ಅವಳು ಗೊಣಗಿದಳು. 


ಅವಳ ಈ ಗೊಣಗಾಟ ಮನೆಯಲ್ಲಿ ಯಾರಿಗೇನೂ ಹೊಸತಲ್ಲ.  ಆ ಮನೆಯಲ್ಲಿ ಇದ್ದ ಉಳಿದಿಬ್ಬರು ಗಂಡಸರು. ಆಕರ್ಷಳ ಗಂಡ ಪ್ರೇಕ್ಷಿತ್ ಹಾಗೂ ಮಾವ ಸುಂದರ್. ಹಾಗೆಂದು ಗೊಣಗುತ್ತಿದ್ದಾಗ ಮೊದಲೆಲ್ಲಾ ಇಬ್ಬರಲ್ಲಿ ಒಬ್ಬರು ಹೋಗಿ ತರಕಾರಿ ಹೆಚ್ಚುವುದು ಇಲ್ಲವೇ ಪಾತ್ರೆ ತೊಳೆಯುವ ಕೆಲಸಕ್ಕೆ ನಿಂತುಕೊಳ್ಳುತ್ತಿದ್ದರು. ಆದರೆ, ಅವಳನ್ನು ಮೆಚ್ಚಿಸಲು ಯಾರಿಂದಲೂ ಆಗುತ್ತಿರಲಿಲ್ಲ. 'ಇಲ್ಲೊಂಚೂರು ಸೋಪು ಹೋಗಿಲ್ಲ'.. 'ಈ ಜಿಡ್ಡು ಹಾಗೆಯೇ ಇದೆ' ಎಂದೋ ಏನಾದರೊಂದು ಹೇಳುತ್ತಾ ತಾನೇ ಮತ್ತೆ ಆ ಕೆಲಸಕ್ಕೆ ನಿಲ್ಲುತ್ತಿದ್ದಳು. ತರಕಾರಿ ಹೆಚ್ಚಲು ಹೋದರೆ ಉದ್ದ, ಅಡ್ಡ, ದಪ್ಪ, ಸಣ್ಣ ಎಂದು ಏನಾದರೊಂದು ಹೇಳಿ ತಾನೇ ಮಾಡುತ್ತಿದ್ದಳು. ಅವಳ ಈ ಪರಿ ಕಂಡು ಯಾರೂ ಅವಳ ತಂಟೆಗೆ ಹೋಗುತ್ತಿರಲಿಲ್ಲ. ಅಲ್ಲದೇ, ಕೆಲಸದವಳ ಕೆಲಸ ಕೂಡಾ ಮೆಚ್ಚುಗೆಯಾಗುತ್ತಿರಲಿಲ್ಲ. ಹಾಗೆಂದು, ಆಕರ್ಷ ರುಚಿಯಾಗಿ ಅಡುಗೆ ಮಾಡುತ್ತಿದ್ದಳು ಎಂದಲ್ಲ. ಅವಳ ದೃಷ್ಟಿಯಲ್ಲಿ ಶುಚಿಗೆ ಹೆಚ್ಚಿನ ಪ್ರಾಮುಖ್ಯತೆ. ಪ್ರೇಕ್ಷಿತ್ ಕೂಡಾ ಅಡುಗೆ ಮಾಡುತ್ತಿದ್ದ. ಅವಳಿಗಿಂತಲೂ ರುಚಿಯಾಗಿಯೇ ಅಡುಗೆ ಮಾಡುತ್ತಿದ್ದ. ಆದರೆ, ಅವನ ಶುಚಿಯಿಲ್ಲದ ಅಡುಗೆ ಕಂಡು ಅವಳೇ ಬೇಡವೆಂದಿದ್ದಳು.


ಇನ್ ಫ್ಯಾಕ್ಟ್ ಆಕರ್ಷ ಪ್ರೇಕ್ಷಿತ್ ನನ್ನು ಇಷ್ಟಪಟ್ಟದ್ದೇ ಆತನಿಗೆ ಅಡುಗೆ ಮಾಡಲು ಬರುತ್ತದೆ ಎಂದು. ನಂತರ ಅವನ ಕೈ ರುಚಿ ನೋಡಿ ಅದಕ್ಕೆ ಮನಸೋತಿದ್ದಳು. ಮದುವೆಯಾಗಿ ಬಂದ ನಂತರ ಅಡುಗೆ ಮನೆ ನೋಡಿ, ಪ್ರೇಕ್ಷಿತ್ ಮಾಡುವ ಕೊಳಕು ನೋಡಿ ತಲೆ ತಿರುಗಿ ಬೀಳದೆ ಇರುವುದು ಪುಣ್ಯ. ನಂತರ, ಅವಳೂ ಕೆಲಸಕ್ಕೆ ಹೋಗುವಾಗ ಏನೋ ಒಂದು ಬೇಯಿಸಿ ಹಾಕಿಕೊಂಡೋ ಇಲ್ಲವೇ ಏನಾದರೂ ಆರ್ಡರ್ ಮಾಡಿಕೊಂಡು ತಿಂದರೆ ಮುಗಿಯುತ್ತಿತ್ತು.


ಅತ್ತೆ ಅಚಾನಕ್ಕಾಗಿ ತೀರಿ ಹೋಗಿ ಮಾವ ಅಲ್ಲೇ ಬಂದು ಇರುವಂತಾದಾಗ ಅವಳೂ ಮನೆಯಿಂದ ಕೆಲಸ ಮಾಡಲು ಶುರು ಮಾಡಿದ್ದಳು. ಆಗಲೇ, ಅಷ್ಟೋ ಇಷ್ಟೋ ಅಡುಗೆ ಮಾಡಲು ಕಲಿತದ್ದು. ಯಾವ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡುವ ಅವಳಿಗೆ ಅದೇಕೋ ಅಡುಗೆ ಮನೆ ಕೆಲಸ, ಅಡುಗೆ ಎಂದರೆ ಮಾರು ದೂರ. ದಿನವಿಡೀ ಮನೆಯ ಧೂಳು ತೆಗೆದು ಸ್ವಚ್ಛ ಮಾಡಿ ಇಬ್ಬರಿಬ್ಬರ ಕಚೇರಿ ಕೆಲಸ ಒಬ್ಬಳೇ ನಿಭಾಹಿಸುವಳಾದರೂ ಅಡುಗೆ ಕೆಲಸವೆಂದರೆ ಆಲಸ್ಯ. ಮುಕ್ಕಾಲು ಗಂಟೆಗಿಂತ ಹೆಚ್ಚು ಅವಳು ಅಡುಗೆ ಮನೆಯಲ್ಲಿ ಕಾಲ ಕಳೆದದ್ದೇ ಕಡಿಮೆ.


ಮೊದಮೊದಲು ಸುಂದರ್ ಅವಳು ಗೊಣಗುತ್ತಿದುದ್ದನ್ನು ಕಂಡು ತಾನು ಬಂದದ್ದು ಅವಳಿಗೆ ತೊಂದರೆಯಾಯಿತೋ ಏನೋ ಎಂದುಕೊಂಡರೆ ಅವಳು ತನ್ನ ನಡವಳಿಕೆಯಿಂದ ಅದು ತೊಂದರೆಯೇ ಅಲ್ಲ ಎನ್ನುವಂತೆ ತೋರಿಸುತ್ತಿದ್ದಳು. ಹುಡುಕಿದರೂ ಒಂದೇ ಒಂದು ಕೊರತೆ ಕಂಡು ಬರುತ್ತಿರಲಿಲ್ಲ ಅವಳು ಆದರಿಸುವ ರೀತಿಯಲ್ಲಿ. ಕೊನೆಗೆ, ಸುಂದರ್ ರವರು ಇದಕ್ಕೆ ಕಾರಣವೇನೆಂದು ತಿಳಿಯಲು ವಿಚಾರಿಸಿದಾಗ ಅವರಿಗೆ ತಿಳಿದದ್ದು.. ಅವಳು ಬೆಳೆದದ್ದು ಅಜ್ಜಿ ಮನೆಯಲ್ಲಿ.. ಅಲ್ಲಿ ಅಡುಗೆ ಮನೆಯಲ್ಲಿ ತಯಾರಾಗುವ ಅಡುಗೆಗೆ ಶುಚಿ- ರುಚಿ ಎರಡೂ ಮುಖ್ಯವಾಗಿದ್ದವು. ಒಂದು ಚಿಟಿಕೆ ಉಪ್ಪು, ಒಂದು ಹರಳು ಸಕ್ಕರೆ ಆಚೀಚೆಯಾದರೂ ಅವಳ ಅಜ್ಜಿ ಬೈಗುಳ ತಿನ್ನುತ್ತಿದ್ದರು. ಹಾಗೆಯೇ ಅತ್ತೆಗೂ ಅದೇ ಸ್ಥಿತಿ. ಅವರಿಬ್ಬರ ಗೈರು ಹಾಜರಿಯಲ್ಲಿ ಒಮ್ಮೆ ಇವಳು ಬಾರದ ಅಡುಗೆಯನ್ನು ಮಾಡಿದಾಗ ಸಿಕ್ಕಿದ್ದು ಇದೇ ಕಟು ಮಾತುಗಳು. ಅವಳನ್ನು ಅಡುಗೆ ಮನೆಯಿಂದ, ಅಡುಗೆ ಕೆಲಸದಿಂದ ದೂರ ಇರುವಂತೆ, ವಿಮುಖ ಮಾಡುವಂತೆ ಮಾಡುತ್ತಿದ್ದವು. ಎಲ್ಲದರಲ್ಲಿಯೂ ಹೊಗಳಿಸಿಕೊಳ್ಳುವ ಅವಳಿಗೆ ಅಡುಗೆ ಮಾಡಿದರೆ ಎಲ್ಲಿ ಕೊಂಕು ಕೇಳಬೇಕಾದೀತೋ ಎಂಬ ಭಯ.


ಕೊನೆಗೆ, ಅಡುಗೆ ಮನೆಯಲ್ಲಿ ತೀರಾ ಕಡಿಮೆ ಸಮಯ ಇರುವುದು.. ತನಗೆ ಅದು ಆಗಿ ಬರುವುದಿಲ್ಲ ಎಂದು ಹೇಳುವುದನ್ನು ರೂಢಿಸಿಕೊಂಡಳು. ಅದರ ಪ್ರತಿಫಲವೇ ಇದು.


ಈಗ ಅವಳು ತನ್ನದೇ ಕೆಲಸಗಳಲ್ಲಿ, ಹವ್ಯಾಸಗಳಲ್ಲಿ ತೊಡಗಿಕೊಂಡಿದ್ದಾಳೆ. ಮಾವನ ಕೈರುಚಿ, ಶುಚಿ ಎರಡೂ ಹಿಡಿಸುತ್ತದೆ.

ಬಂದ ಹಾಗೆ ಮಾಡಿ ಹಾಕು ಎಂದೋ.. ಅಡುಗೆ ಮಾಡಲೇ ಬೇಕು ನೀನು ಎಂದೋ.. ಹೆಣ್ಣು ಹುಟ್ಟಿದ್ದೇ ಅಡುಗೆ ಕೆಲಸ ಮಾಡಲಿಕ್ಕೆ ಎಂದೋ.. ಭಾವಿಸುವ ಮಾವಂದಿರ ನಡುವೆ ಅಮ್ಮನಂತಹಾ ಮಾವ ದೊರೆತಿದ್ದಾರೆ. ಎಂದೂ ಸವಿಯದ ಅಮ್ಮನ ಕೈರುಚಿ ಹೀಗೆಯೇ ಇದ್ದಿರಬಹುದು ಎನ್ನಿಸುತ್ತದೆ ಅವಳಿಗೆ..


~ವಿಭಾ ವಿಶ್ವನಾಥ್

ಮುಂದಿನ ಹಾದಿ (ಬೆಳಕಿಂಡಿಯ ಕತೆಗಳು - 75)

 


ಇದು ನಾನಾಗೇ ನಾನು ಮಾಡಿಕೊಂಡ ಬಂಧನ ಎನ್ನಲೋ ಅಥವಾ ಮನೆಯವರ ಒತ್ತಡಕ್ಕೆ ಮಣಿದು ಬಂಧಿಸಿಕೊಂಡದ್ದು ಎನ್ನಲೋ.. ಏನೇ ಆದರೂ ವಿವಾಹವೆಂಬ ಬಂಧನದಲ್ಲಿ ಸಿಲುಕಿಕೊಂಡದ್ದಂತೂ ಆಗಿದೆ.


ಎಲ್ಲರಿಗೂ ವಿವಾಹದ ನಂತರದ ಬದುಕು ಸುಲಭದ ಹಾದಿಯಾಗಿರುವುದಿಲ್ಲ. ಅವತ್ತು ನನ್ನ ಮುಂದೆ ಇದ್ದದ್ದು ಎರಡೇ ಆಯ್ಕೆಗಳು ಸಾವು ಇಲ್ಲವೇ ಹೋರಾಟದ ಬದುಕು. ಓದಿದ ನಾನೇ ಹೇಡಿಯಾದರೆ.. ಇಲ್ಲ, ಮುಂದಿನ ದಾರಿ ನಿಚ್ಚಳವಾಗಿತ್ತು. ಬಂಧನದಿಂದ ಹೊರ ಬಂದು ಓದಿದೆ. ಈಗ ಮನಃಶಾಸ್ತ್ರಜ್ಞೆಯಾಗಿದ್ದೇನೆ. ಎಲ್ಲರಿಗೂ ಮುಂದಿನ ಹಾದಿಗೆ ಬೆಳಕು ಬೀರಲು..

ಮುಂದಿನ ಹಾದಿಗೆ ಬೆಳಕು ಬೀರಲು ದೀಪ ತನ್ನನ್ನೇ ಸುಟ್ಟುಕೊಳ್ಳುವ ಕುರಿತು ನನಗೆ ಬೇಸರವಿಲ್ಲ.. ಬದಲಿಗೆ ಸಮರ್ಪಣೆಯ ಸಂತಸವಿದೆ. 

~ವಿಭಾ ವಿಶ್ವನಾಥ್

ಪಾತರದವಳು (ಬೆಳಕಿಂಡಿಯ ಕತೆಗಳು - 74)

 


ಬದುಕಲ್ಲಿ ಬಣ್ಣ ಹಚ್ಚದೆ ಬಣ್ಣ-ಬಣ್ಣದ ನಾಟಕ ಮಾಡಿ ಹಣ ಸಂಪಾದಿಸುವ ಬದಲು ದುಡಿದು ತಿನ್ನುವ ಇರಾದೆಯಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲುವ ಆಸೆಯಿಂದ ಪಾತರದವಳಾಗಿ ಬಣ್ಣ ಹಚ್ಚಿ ನಿಂತಳು.

ಲೋಕದ ಕಟು ನುಡಿಗೆ ಕೆಂದದೇ, ತನ್ನ ಆತ್ಮಾಭಿಮಾನವನ್ನು ಮಾಡಿಕೊಳ್ಳದೇ ತನ್ನ ಹೊಟ್ಟೆ ಹೊರೆದುಕೊಂಡು, ಕುಟುಂಬವನ್ನೂ ಸಾಕಿ ಸ್ವಾಭಿಮಾನದಿಂದ ಬೆಳೆದು ನಿಂತಳು. ಈಗ ಅವಳು ಬರೀ 'ಪಾತರದವಳಲ್ಲ' ಬದಲಾಗಿ 'ಅಭಿನೇತ್ರಿ'.

~ವಿಭಾ ವಿಶ್ವನಾಥ್