ಭಾನುವಾರ, ಸೆಪ್ಟೆಂಬರ್ 6, 2026

ವಿಶೇಷ ಮುತ್ತು (ಬೆಳಕಿಂಡಿಯ ಕತೆಗಳು - 80)


 ಅವನು ಒರಟೊರಟಾಗಿ ಅವಳನ್ನು ಅಪ್ಪಿ ಹಿಡಿದು ಅವಳ ಕೆನ್ನೆಗೆ ಜೊಲ್ಲನ್ನು ಸಹಾ ಸೇರಿಸಿ ಮುತ್ತು ಕೊಡುತ್ತಿದ್ದರೆ ಅವಳ ಕಣ್ಣಲ್ಲಿ ನೂರು  ಸೂರ್ಯರ ಪ್ರಕಾಶ ಮಿನುಗುತ್ತಿತ್ತು.


ಅಮ್ಮನಿಗೆ ಅದು ತನ್ನ ವಿಶೇಷ ಚೇತನ ಮಗುವಿನ ಮೊದಲ ಮುತ್ತು. ಅದು ಅವಳ ಪಾಲಿನ ವಿಶೇಷ ಮುತ್ತು. 


~ವಿಭಾ ವಿಶ್ವನಾಥ್

ಹಂಬಲದ ತಕ್ಕಡಿಯಲ್ಲಿ... (ಬೆಳಕಿಂಡಿಯ ಕತೆಗಳು - 79)

 


ಅವಳು ಹಂಬಲಿಸಿದ್ದು ಅವನ ಹಣ, ಐಶ್ವರ್ಯಕ್ಕಲ್ಲ ಬದಲಾಗಿ ಅವನ ಹಿಡಿ ಪ್ರೀತಿಗೆ. ಆದರೆ, ಅವನು ಅವಳ ಅಂತರಂಗವನ್ನು ಅರ್ಥ ಮಾಡಿಕೊಳ್ಳದೇ ಚಿನ್ನ, ವಜ್ರಗಳನ್ನು ತಂದು ಅವಳ ಮುಂದೆ ಸುರಿದ. 

ಆದರೂ, ಅವಳ ಹಂಬಲದ ತಕ್ಕಡಿಯಲ್ಲಿ ಸಂಪತ್ತಿಗಿಂತಲೂ, ಪ್ರೀತಿಗೇ ಹೆಚ್ಚು ತೂಕ. 


~ವಿಭಾ ವಿಶ್ವನಾಥ್

ಅಮೃತ (ಬೆಳಕಿಂಡಿಯ ಕತೆಗಳು - 78)

 


ವಿಷದ ತುತ್ತನ್ನೇ ಉಣಿಸಿದರೂ ಅದು ಅಮೃತ ಸಮಾನವಾಗುವುದು ಕಯಾದುವಂತಹಾ ತಾಯಿಯಿಂದ.. ಪ್ರಹ್ಲಾದನಂತಹಾ ನಂಬಿಕೆಯುಳ್ಳ ಮಾತೃಭಕ್ತ ಮಗನಿಂದ. ಅಮ್ಮ ನೀಡಿದ್ದು ಎಂದಿಗೂ ಅಮೃತಸಮಾನವೇ..


~ವಿಭಾ ವಿಶ್ವನಾಥ್

ಸತ್ಯದ ಮುಸುಕು ಹೊದ್ದು

 


"ಏನೋ ಈಗ ನಿನ್ನ ಯೂಟ್ಯೂಬ್ ಚಾನೆಲ್ ತುಂಬಾ ಫೇಮಸ್ ಆಗಿ ಬಿಟ್ಟಿದೆಯಂತೆ" ಎಂದ ಗೆಳೆಯನ ಮಾತಿಗೆ "ಹೌದು ಕಣೋ ಮಚ್ಚಾ.. ಸ್ವಲ್ಪ ಫೇಮಸ್ ಆಗುವವರೆಗೂ ಅಷ್ಟೇ ಇವೆಲ್ಲಾ.. ನೋಡ್ತಾ ಇರು ಇನ್ನೂ ಹೇಗೆಲ್ಲಾ ಫೇಮಸ್ ಆಗುತ್ತೇನೆ ಅಂತಾ.. " ಎಂದನು ಮುರುಳಿ.


ಅಲ್ಲಿಯೇ ಇದ್ದ ಶಶಿಧರ "ಫೇಮಸ್ ಏನೋ ಆಗ್ತಿಯಪ್ಪ. ಆದರೆ, ಒಳ್ಳೆಯ ರೀತಿಯಲ್ಲಿ ಫೇಮಸ್ ಆಗೋ. ಈ ಟ್ರೋಲ್ ಮಾಡಿಸಿಕೊಂಡು ಫೇಮಸ್ ಆಗೋ ತರಹದಲ್ಲೆಲ್ಲಾ ಫೇಮಸ್ ಆಗಬೇಡ. ಸತ್ಯವಾದ ಹಾದಿಯಲ್ಲಿ ನಡೆಯೋ.. ಸತ್ಯವನ್ನು ಮಾತ್ರ ಹೇಳೋ. ಹೆಡ್ಡಿಂಗ್ ಒಂದು ಹಾಕಿರುತ್ತೀಯ. ಒಳಗಡೆ ಕಂಟೆಂಟ್ ಇನ್ನೊಂದು ಇಟ್ಟಿರುತ್ತೀಯ. ಹೀಗಾದ್ರೆ ಕಷ್ಟ ಕಣೋ.. ಇಂತದ್ದೆಲ್ಲಾ ಸ್ವಲ್ಪ ದಿನ ಅಷ್ಟೇ ವರ್ಕ್ ಆಗೋದು. ಇಂತಹಾ ಗಿಮಿಕ್ ಗಳಿಗೆಲ್ಲಾ ಹೆಚ್ಚು ಆಯುಷ್ಯ ಇರಲ್ಲಮ್ಮ. " ಎಂದಾಗ ಮುರಳಿ ರೇಗಿದನು.


"ನಾನು ಫೇಮಸ್ ಆಗುವುದನ್ನು ಸಹಿಸುವುದಿಲ್ಲ ನೀನು. ಅದಕ್ಕೇ ಹೀಗೆಲ್ಲಾ ಮಾತನಾಡುತ್ತಾ ಇದ್ದೀಯ. " ಎಂದವನಿಗೆ "ಬೈಯ್ಯುವವರೇ ಕಣೋ ಬದುಕುವುದಕ್ಕೆ ಹೇಳುವುದು. ಸುಮ್ಮನೆ ಎಲ್ಲರೂ ಹೊಗಳಿದ ಹಾಗೆ ನಾನೂ ಹೊಗಳಿಬಿಟ್ಟರೆ ನೀನು ಹೋಗುತ್ತಿರುವ ಹಾದಿಯೇ ಸರಿ ಅನ್ನೋ ಭ್ರಮಗೆ ಬಿದ್ದು ಬಿಡುತ್ತೀಯ. ಒಬ್ಬ ಒಳ್ಳೆಯ ಸ್ನೇಹಿತನಾಗಿ ನಿನಗೆ ಇದನ್ನ ಹೇಳಬಹುದು ನೋಡಪ್ಪ. " ಎಂದವನೇ ಅಲ್ಲಿಂದ ಹೊರಟನು ಶಶಿಧರ.


ಅಲ್ಲೇ ಇದ್ದ ಮತ್ತೊಬ್ಬ ಗೆಳೆಯ ಮುರಳಿಗೆ "ಇನ್ನೂ ಅವನು ಸತ್ಯ, ನ್ಯಾಯ, ಪ್ರಾಮಾಣಿಕತೆ ಅಂತಾ ಕೂತಿರುವುದಕ್ಕೆ ಅವನಿಗೆ ಟ್ಯಾಲೆಂಟ್ ಇದ್ದರೂ ಅವನು ಫೇಮಸ್ ಆಗದೇ ಇರುವುದು. ಈಗಿನ ಕಾಲಕ್ಕೆ ಯಾವುದು ಸರಿಯೋ ಹಾಗೆಯೇ ಇರಬೇಕು. ಅದು ಬಿಟ್ಟು ಸತ್ಯವನ್ನು ನೇರವಾಗಿಯೇ ಹೇಳ್ತೀನಿ. ನಾನು ನಿಷ್ಠುರವಾಗಿಯೇ ಇರುತ್ತೇನೆ ಅಂತಾ ಅಂದರೆ ಯಾರು ಕೇಳುತ್ತಾರೋ..


ಈಗಿನ ಕಾಲದಲ್ಲಿ ಅರ್ಧ ಸತ್ಯ ಹೇಳಿದರೂ ಅದನ್ನು ಸುಳ್ಳು ಅಂತಾ ಹೇಳುವುದಿಲ್ಲ. ಅದನ್ನೂ ಸತ್ಯ ಅಂತಲೇ ಪರಿಗಣಿಸುವುದು. ಅವನ ಮಾತನ್ನೆಲ್ಲಾ ನೀನು ಸೀರಿಯಸ್ ಆಗಿ ತೆಗೆದುಕೊಳ್ಳುವುದಕ್ಕೆ ಹೋಗಬೇಡ. ನಿನ್ನ ಪಾಡಿಗೆ ನೀನು ಹೇಗೆ ವಿಡಿಯೋ ಹಾಕ್ತಾ ಇದ್ದಿಯೋ ಹಾಗೇ ಹಾಕು. " ಎನ್ನುವ ಬಿಟ್ಟಿ ಸಲಹೆ ಕೊಟ್ಟನು.


ಅದಕ್ಕೆ ಮುರಳಿ " ನೋಡೋಣ ಬಿಡೋ.. ಏನೇನು ಆಗುತ್ತೋ ಏನೋ.. ಯಾಕೋ ಮನಸ್ಸು ಸರಿ ಇಲ್ಲ. ಮನೆಗೆ ಹೋಗುತ್ತೇನೆ" ಎಂದು ಮನೆಗೆ ಹೊರಟನು.


ಅಷ್ಟರಲ್ಲಿ ಅವನ ಮೊಬೈಲಿಗೆ ಅವನ ತಂಗಿಯ ಮೊಬೈಲ್ ನಿಂದ ಒಂದು ಮೆಸೇಜ್ ಬಂತು. "ಅಣ್ಣ, ಅಪ್ಪನಿಗೆ ಆಕ್ಸಿಡೆಂಟ್ ಆಗಿದೆ ಕಣೋ.. " ಎಂದು.


'ಯಾವ ಹಾಸ್ಪಿಟಲ್, ಹೇಗೆ, ಯಾವಾಗ , ಏನಾಗಿದೆ, ಎಲ್ಲಿದ್ದೀರ' ಎಂದೆಲ್ಲಾ ಒಂದರ ಮೇಲೆ ಒಂದು ಮೆಸೇಜ್ ಕಳುಹಿಸಿದನು. ಒಂದಕ್ಕೂ ರಿಪ್ಲೈ ಇಲ್ಲ. ಅವಳ ಮೊಬೈಲ್ ಗೆ ಕರೆ ಮಾಡಿದರೆ ಅದು ಸ್ವಿಚ್ಡ್ ಆಫ್. ಅಪ್ಪ ಹಾಗೂ ಅಮ್ಮನ ಮೊಬೈಲ್ ಕೂಡಾ ಕನೆಕ್ಟ್ ಆಗದಿದ್ದಾಗ ಗಾಬರಿಯಿಂದ ಹುಚ್ಚನಂತೆ ಮನೆಗೆ ಓಡಿದ ಮುರುಳಿ.


ಅಲ್ಲಿ ನೋಡಿದರೆ ಮನೆಯಲ್ಲಿ ಎಲ್ಲರೂ ಸಂತೋಷದಿಂದ ಹರಟೆ ಹೊಡೆಯುತ್ತಾ ಕೂತಿದ್ದರು. ಬಂದವನೇ ತಂಗಿಯ ಕೆನ್ನೆಗೆ ಬಾರಿಸಿ "ಇನ್ನೊಂದು ಸಾರಿ ಸುಳ್ಳು ಹೇಳಿದ್ರೆ ಸರಿ ಇರುವುದಿಲ್ಲ ನೋಡು.." ಎಂದು ವಾರ್ನಿಂಗ್ ಕೊಟ್ಟನು.


"ನಾನೆಲ್ಲಿ ಸುಳ್ಳು ಹೇಳಿದೆ. ಕಳೆದ ವರ್ಷ ಅಪ್ಪನಿಗೆ ಆಕ್ಸಿಡೆಂಟ್ ಆಗಿತ್ತು ತಾನೇ ? " ಎಂದಳು.


"ಅದು ಕಳೆದ ವರ್ಷ ತಾನೇ..?? ಈಗ ಯಾಕೆ ಹೇಳಿದೆ ? ಈಗ ಏನೂ ಆಗಿರಲಿಲ್ಲ ತಾನೇ.. ಪೂರ್ತಿ ಮಾಹಿತಿ ಹೇಳದೆ ಫೋನ್ ಬೇರೆ ಆಫ್ ಮಾಡಿದ್ದೀಯ" ಎಂದ ಮುರಳಿಗೆ


"ನೀನು ನಿನ್ನ ಯೂಟ್ಯೂಬ್ ಗಳಲ್ಲಿ ಈ ರೀತಿ ಯಾವತ್ತೋ ಆಗಿದ್ದಕ್ಕೆ ಬಣ್ಣ ಹಚ್ಚಿ, ಅರ್ಧಂಬರ್ಧ ಮಾಹಿತಿ ನೀಡಿದರೆ ತಪ್ಪಲ್ಲ. ಅದು ಸುಳ್ಳು ಸಹಾ ಅಲ್ಲ. ಆದರೆ , ನಿನ್ನ ತಂಗಿ ಮಾಡಿದ್ದು ತಪ್ಪು ಅಲ್ವಾ..


ಅವರ ಮನೆಯವರಿಗೂ ಹೀಗೆಯೇ ಆಗಿರುತ್ತೆ ಅಲ್ವಾ.. ಎಲ್ಲರ ಬುಡಕ್ಕೆ ಬೆಂಕಿ ಬಿದ್ದಾಗಲೇ ಅವರಿಗೂ ಅರ್ಥ ಆಗುವುದು" ಎಂದ ಶಶಿಧರನನ್ನು ಕಂಡಾಗ ಅದು ಅವನ ಉಪಾಯವೆಂಬುದು ಅರಿವಾಗಿತ್ತು. ಅಲ್ಲದೇ.. ಅವನು ಹೇಳಿದ್ದು ಸಹಾ ಸರಿಯಾಗಿ ಅರ್ಥವಾಗಿ ಜ್ಞಾನೋದಯವಾಗಿತ್ತು.


"ಖ್ಯಾತಿ ನಿಧಾನಕ್ಕೇ ಬರಲಿ ಬಿಡೋ.. ತೊಂದರೆಯಿಲ್ಲ. ಆದರೆ, ಕುಖ್ಯಾತಿ ಅಂತೂ ಬೇಡ. ಇನ್ನು ಮುಂದೆ ಡೈರೆಕ್ಟ್ ಆಗಿರುವ ಹೆಡ್ಡಿಂಗ್ ಹಾಕಿ ಪೂರ್ಣ ಸತ್ಯವನ್ನು ಮಾತ್ರ ತಲುಪಿಸುತ್ತೇನೆ" ಎಂದ ಮುರಳಿಯ ಮಾತು ಕೇಳಿ ಎಲ್ಲರಿಗೂ ಸಂತಸವಾಗಿತ್ತು.


~ವಿಭಾ ವಿಶ್ವನಾಥ್

ನನ್ನ ಬದುಕಿನ ಗುರುಗಳು ಹಾಗೂ ಗುರು ಸಮಾನರಿವರು..


ಜೀವನದ ಹಾದಿಯಲ್ಲಿ ಪ್ರತಿಯೊಬ್ಬರಿಂದಲೂ ಕಲಿಯುವುದು ಇದ್ದೇ ಇದೆ. ಆ ನಿಟ್ಟಿನಲ್ಲಿ ಹಲವಾರು ಬಳಗಗಳು ಮಾಮ್ಸ್ಪ್ರೆಸೊ, ಸಾಹಿತ್ಯ ಸೃಷ್ಟಿ ಬಳಗ, ಎಲ್ಲಕ್ಕಿಂತ ಹೆಚ್ಚಾಗಿ ಪುಸ್ತಕ ಅವಲೋಕನ ಬಳಗದಿಂದ ಕಲಿತದ್ದು ಬಹಳವಿದೆ. ಹಾಗೆಯೇ, ಇಲ್ಲಿ ದಿನನಿತ್ಯವೂ ಕಲಿಯುವಿಕೆ ಇದ್ದೇ ಇದೆ. ಗುರು ಮುಖೇನ ಕಲಿಯುವುದು ಹೆಚ್ಚು ಪರಿಣಾಮಕಾರಿ ಎಂಬುದು ಹೌದಾದರೂ.. ಏಕಲವ್ಯನಿಗೆ ದ್ರೋಣಾಚಾರ್ಯರಿದ್ದಂತೆ, ಪರೋಕ್ಷವಾಗಿಯೂ ಗುರುವಾಗುವ ಪರಿಣಾಮಕಾರಿಯಾಗಿ ನೆನಪಿಸಿಕೊಳ್ಳುವುದು ಹಾಗೂ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವುದು ಸಹಾ ಅವರಿಗೆ ನೀಡುವ ಗೌರವವೆಂಬುದು ನನ್ನ ಅಭಿಪ್ರಾಯ.


ಹಾಗೆ ನಾನು ಇದುವರೆಗೂ ಪ್ರತ್ಯಕ್ಷವಾಗಿ ನೋಡದೆ ಬಹಳ ಗೌರವಿಸುವ  ಹಾಗೂ ಗುರು ಸಮಾನರೆಂದು ಭಾವಿಸುವುದು ವೀಣಾ ನಾಯಕ್ ಮೇಡಂ ಅವರನ್ನು. ಅವರ ಶಿಸ್ತು, ಸಮಯಪಾಲನೆ, ಸಾಹಿತ್ಯಸೇವೆ, ಕನ್ನಡದ ಕುರಿತ ಕಾಳಜಿ, ಪುಸ್ತಕದ ಓದು ಹಾಗೂ ಪುಸ್ತಕವನ್ನು ಬಹುಮಾನವಾಗಿ ಕಳುಹಿಸುವ ನಿಸ್ವಾರ್ಥತೆ ಎಲ್ಲವೂ ಆದರಣೀಯ. 'ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ' ಎಂಬಂತೆ ಅವರ ನಡೆ ಎಲ್ಲವೂ ಗೌರವಪೂರ್ಣವಾಗಿದ್ದು, ಅವರ ನಿಯಮಗಳನ್ನು ನಮಗೇ ಅರಿವಿಲ್ಲದಂತೆ ಪಾಲಿಸುವಂತೆ ಮಾಡುತ್ತದೆ. 


ನಮ್ಮ ಈ ಬಳಗದಲ್ಲಿ ಇರುವ ಹಲವರಿಂದ ಅವರ ಬರಹದಿಂದ ಬಹಳಷ್ಟು ಕಲಿಯುತ್ತಿದ್ದೇನೆ. ಈ ಸಂಧರ್ಭದಲ್ಲಿ ಅಂತಹಾ ಎಲ್ಲರನ್ನೂ ಸ್ಮರಿಸುತ್ತೇನೆ.


ನಾನು ಕನ್ನಡದ ಕುರಿತು, ಸಾಹಿತ್ಯದ ಕುರಿತು, ಓದಿನ ಕುರಿತು ಇಷ್ಟು ಆಸಕ್ತಿ ಬೆಳೆಸಿಕೊಂಡಿರುವುದಕ್ಕೆ ಮುಖ್ಯವಾಗಿ ನನ್ನ ಇಬ್ಬರು ಕನ್ನಡ ಗುರುಗಳು ಕಾರಣ. 


ಪ್ರಾಥಮಿಕ ಶಾಲೆಯಲ್ಲಿ ನಾಗರತ್ನ ಮಿಸ್ ರಾಗವಾಗಿ ಹಾಡುತ್ತಿದ್ದ ಕನ್ನಡದ ಪದ್ಯಗಳು ಹಾಗೂ ಹೇಳಿಕೊಟ್ಟ ವ್ಯಾಕರಣ, ಕೊಡುತ್ತಿದ್ದ ಉಕ್ತಲೇಖನ ಜೊತೆಗೆ ಮಾತಿನಲ್ಲಿಯೇ ನಯವಾಗಿ ತಿದ್ದುತ್ತಿದ್ದ ಪರಿ, ಹೇಳಿಕೊಟ್ಟ ಪಾಠ ಎಲ್ಲವೂ ಮರೆಯಲಾಗದಂತಹದ್ದು. ಇವರು ಸಮಾಜ ವಿಜ್ಞಾನದ ಶಿಕ್ಷಕರೂ ಹೌದು. ಅವರ ಇತಿಹಾಸ, ಭೂಗೋಳವನ್ನು ಭೋಧಿಸುತ್ತಿದ್ದ ಪರಿ ಅಚ್ಚಳಿಯದೇ ನೆನಪಿನಲ್ಲಿರುವಂತಹದ್ದು. ಬಹುಶಃ, ಇದ್ದ ಒಬ್ಬನೇ ಮಗನನ್ನು ದುರಂತದಲ್ಲಿ ಕಳೆದುಕೊಳ್ಳದೇ ಇದ್ದಿದ್ದರೆ ನನ್ನಂತಹಾ ಎಷ್ಟೋ ವಿದ್ಯಾರ್ಥಿಗಳು ಅವರ ಗರಡಿಯಲ್ಲಿ ಪಳಗುತ್ತಿದ್ದರು. ಆದರೆ, ಬಂದದ್ದನ್ನು ಸ್ವೀಕರಿಸಿ ಬದುಕನ್ನು ಸ್ವೀಕರಿಸಿದ ಪರಿಯೂ ಅಚ್ಚರಿಯೇ.. ನಾನು ಅಪ್ಪನನ್ನು ಕಳೆದುಕೊಂಡ ದಿನ ಬೆಂಬಲಕ್ಕೆ ನಿಂತು ಸಾಂತ್ವನಿಸಿದ ಪರಿ, ಇಂದಿಗೂ ನನ್ನನ್ನು ತಮ್ಮ ಮಗಳಂತೆಯೇ ಭಾವಿಸುವ, ಮಾರ್ಗದರ್ಶನ ನೀಡುವ ಅವರ ಪ್ರೀತಿಗೆ ನಾನು ಆಭಾರಿ.


ಮತ್ತೊಬ್ಬರು ಧರ್ಮೇಂದ್ರ ಕುದ್ರೋಳಿ ಸರ್. ಪಿ. ಯು. ಸಿ ಯಲ್ಲಿ ಎರಡು ವರ್ಷ ಕನ್ನಡವನ್ನು ಭೋಧಿಸಿದವರು. ಮುಖ್ಯವಾಗಿ ಕಾವ್ಯದ ಕುರಿತು ಪ್ರೀತಿ ಹುಟ್ಟಿಸಿದವರು. ಅವರ ಕವಿತಾ ವಾಚನ ಹಾಗೂ ಪದ್ಯಗಳನ್ನು ಬಿಡಿಸಿ ಹೇಳಿಕೊಡುತ್ತಿದ್ದ ಪರಿ, ಪಠ್ಯದ ಜೊತೆಗೆ ಪೂರಕ ಸಾಹಿತ್ಯವನ್ನು ತಿಳಿಸಿ ಹೇಳಿಕೊಡುತ್ತಿದ್ದ ರೀತಿ, ಪೌರಾಣಿಕ ಭಾಗಗಳನ್ನು ರಸವತ್ತಾಗಿ ಹೇಳುತ್ತಿದ್ದ ರೀತಿ, ಆಗಾಗ ಆರೋಗ್ಯಕರ ಹಾಸ್ಯ ಎಂಥಹವರಲ್ಲಿಯೂ ಕನ್ನಡ ಪಾಠವನ್ನು ಕೇಳುವ ಆಸಕ್ತಿ ಮೂಡಿಸುತ್ತಿತ್ತು. ಇಷ್ಟೆಲ್ಲಾ ಕನ್ನಡ ಪ್ರೀತಿಯ ಅವರ ಮನೆಭಾಷೆ ಮಲೆಯಾಳಂ ಎಂದರೆ ನೀವು ನಂಬಲಾರಿರಿ. ಅವರ ಮಗಳು ರಚನಾ ಹಾಗೂ ನಾನೂ ಒಂದೇ ತರಗತಿ. ಆದರೆ, ತರಗತಿಯಲ್ಲಿ ಎಂದಿಗೂ ಭೇಧ-ಭಾವ ಮಾಡಿದವರಲ್ಲ. ಪಿ.ಯು.ಸಿ ಯಲ್ಲಿ ನಾನಿದ್ದದ್ದು ಹಾಸ್ಟೆಲ್ ನಲ್ಲಿ. ಆ ಸಂಧರ್ಭದಲ್ಲಿ ಮನೆಗೆ ವಾರಕ್ಕೆರಡು ಬಾರಿಯಷ್ಟೇ ಕರೆ ಮಾಡಲು ಅವಕಾಶ. ಆದರೆ, ಪರೀಕ್ಷೆ ಸಮಯದಲ್ಲಿ ನನ್ನ ಆತಂಕವನ್ನು ಕಡಿಮೆ ಮಾಡಲು ಅಪ್ಪನ ಜೊತೆಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿದ್ದವರು. ಅಪ್ಪನ ಸಾವಿನ ವಿಚಾರ ತಿಳಿದು ನಾನು ನನ್ನ ಸಹೋದರನನ್ನೇ ಕಳೆದುಕೊಂಡೆ ಎಂದು ಬೇಸರಿಸಿಕೊಂಡು ಸಮಾಧಾನಪಡಿಸಿದವರು. ಬಹುಶಃ, ಗುರುವಾದವರು ಮನೆಯವರಂತೆ ಭಾಸವಾಗುವುದು ಬಹಳ ಕಡಿಮೆ. ಮೇಲೆ ಉಲ್ಲೇಖಿಸಿರುವುದು ಒಂದೆರಡು ಸಂಧರ್ಭಗಳಷ್ಟೇ.. ಆದರೆ, ಈ ಅಪರೂಪದ ಗುರುವನ್ನು ನಾನೆಂದಿಗೂ ಮರೆಯಲಾರೆ.


ಈ ಸಂಧರ್ಭದಲ್ಲಿ ನಾನು ನೆನಪಿಸಿಕೊಳ್ಳಲು ಇಚ್ಛಿಸುವ ಮತ್ತೊಬ್ಬರು ಗುರುಗಳು ಕವಿತಾ ಮೇಡಂ. ಬಯಾಲಜಿ ಲೆಕ್ಚರರ್. ಶಿಕ್ಷಕರು ಸ್ಟ್ರಿಕ್ಟ್ ಆಗಿದ್ದಷ್ಟು ವಿದ್ಯಾರ್ಥಿಗಳಿಗೆ ಕನೆಕ್ಟ್ ಆಗುವುದು ಕಡಿಮೆಯೇ ಎಂಬುದು ನನ್ನ ಭಾವನೆ. ಆದರೆ, ಇದನ್ನು ಸುಳ್ಳಾಗಿಸಿದವರು ನನ್ನ ಕವಿತಾ ಮೇಡಂ. ಚುರುಕು ಮಾತು, ಬೇಕಾದಷ್ಟನ್ನು ಕರಾರುವಕ್ಕಾಗಿ ಹೇಳುವವರು. ಪಾಠಕ್ಕೂ.. ಜೀವನಪಾಠಕ್ಕೂ.. 


ಸರಳತೆ, ಸೌಜನ್ಯತೆಯ ಪಾಠವನ್ನು ಕೃತಿಯ ಮೂಲಕ ತೋರಿಸಿಕೊಟ್ಟದ್ದು ನನ್ನ ಪಿ.ಯು.ಸಿ ಪ್ರಿನ್ಸಿಪಾಲ್ ಆಗಿದ್ದ ಸದಾನಂದ ರೈ ಕೂವೆಂಜ ಸರ್. ಇಂಗ್ಲೀಷ್ ಲೆಕ್ಚರರ್ ಸಹಾ ಆಗಿದ್ದವರು. ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ಹಾಗೆ ಕಾಳಜಿ ಮಾಡುತ್ತಿದ್ದವರು. ಶ್ರಮದಾನಗಳಲ್ಲಿ ನಮ್ಮೊಡನೆ ಭಾಗಿಯಾಗಿ ನಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರು. ಅದೂ ಕೇವಲ ಸ್ವಲ್ಪ ಸಮಯವಲ್ಲ.. ವಿದ್ಯಾರ್ಥಿಗಳು ಶ್ರಮದಾನ ಮಾಡುತ್ತಿದ್ದ ಅಷ್ಟೂ ಹೊತ್ತು. ಅದನ್ನು ನೋಡಿ ಬೇರೆ ಲೆಕ್ಚರರ್ ಗಳು ಬರುವುದಿತ್ತು. ಪ್ರತಿದಿನವೂ ಅವರು ಬರುತ್ತಿದ್ದದ್ದು ಬಸ್ ನಲ್ಲಿಯೇ.. ಆದರೆ, ಸಮಯಪಾಲನೆಯನ್ನು ಅವರನ್ನು ನೋಡಿ ಕಲಿಯಬೇಕಿತ್ತು. ಹಾಸ್ಟೆಲ್ ಗೆ ಪಾರ್ಥನೆಯ ಸಮಯದಲ್ಲಿ ಬಂದಾಗ ಚಕ್ಕಳಮಕ್ಕಳ ಹಾಕಿ ನಮ್ಮೊಡನೆ ಕುಳಿತು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಹೋಗುತ್ತಿದ್ದರು. ನಾನಂತೂ ಇಂತಹಾ ಅಪರೂಪದ ವ್ಯಕ್ತಿತ್ವವನ್ನು ಮತ್ತೆಲ್ಲೂ ಕಾಣಲಿಲ್ಲ. ಅವರ ಪುಸ್ತಕ ಸಂಗ್ರಹದ ಓದಿನ ಪ್ರೀತಿಯನ್ನು ಕಂಡಿದ್ದೇನಾದರೂ.. ಅವರ ಬಳಿ ಕೇಳುವ ಪುಸ್ತಕ ಧೈರ್ಯ ಮಾಡಿರಲಿಲ್ಲ. ಎಷ್ಟು ಸರಳ ಹಾಗೂ ಸ್ನೇಹಮಯಿಯೋ.. ಅಷ್ಟೇ ಶಿಸ್ತಿನ ಪರಿಪಾಲಕರು. ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ತಿದ್ದುವ ಪರಿ, ಅಗತ್ಯಬಿದ್ದಲ್ಲಿ ಮಾತ್ರ ಶಿಕ್ಷೆ. ಓದಿನ ಜೊತೆಗೆ ದೈಹಿಕ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡುತ್ತಿದ್ದವರು.


ಹೇಳಲು ಹೊರಟರೆ ಹಲವಾರು ಗುರುಗಳು, ಗುರು ಸಮಾನರು ಸಿಗುತ್ತಾರೆ. ಗಣಿತದ ಕುರಿತು ಆಸಕ್ತಿ ಮೂಡಿಸಿದ ಶೋಭಾ ಮಿಸ್, ಅದನ್ನು ದಿನನಿತ್ಯದ ಬದುಕಲ್ಲಿ ಅಳವಡಿಸಿಕೊಳ್ಳಲು ಹೇಳಿಕೊಟ್ಟ ಮಾರುತಿ ಸರ್, ಪ್ರತಿಯೊಂದು ವಿಚಾರಕ್ಕೂ ಪ್ರೋತ್ಸಾಹ ನೀಡುತ್ತಿದ್ದ ಕೃಷ್ಣಮೂರ್ತಿ ಸರ್, ಧರ್ಮರಾಜ್ ಸರ್ ಹಾಗೂ ಸೀತಾ ಮಿಸ್ ದಂಪತಿಗಳು, ಹಿಂದಿಯ ಪಠ್ಯದ ಜೊತೆಗೆ ಅಚ್ಚರಿಯ ಹಲವು ವಿಚಾರಗಳನ್ನು ಹೇಳುತ್ತಾ ಕುತೂಹಲ ಮೂಡಿಸುತ್ತಿದ್ದ ಸುಧಾ ಮಿಸ್, ಇಂಜಿನಿಯರಿಂಗ್ ನಲ್ಲಿ ಸರಳವಾಗಿ ವಿಚಾರಗಳನ್ನು ಕಲಿಸಿಕೊಟ್ಟ ಹಾಗೂ ಆಸಕ್ತಿಕರವಾದ ಸಂಗತಿಗಳನ್ನು ಹೇಳಿಕೊಡುತ್ತಿದ್ದ ಭರತ್ ಸರ್, ಪ್ರೋಗ್ರಾಮಿಂಗ್ ಬರೆಯಲು ಆಸಕ್ತಿ ಮೂಡಿಸಿದ ಸತೀಶ್ ಸರ್, ಪ್ರಾಜೆಕ್ಟ್ ಗೈಡೆನ್ಸ್ ಮಾಡಿದ, ಸಾಫ್ಟ್ವೇರ್ ಕಂಪೆನಿ ಸ್ಥಾಪಿಸಿ ಮಾದರಿಯಾದ, ಬೋಧಿಸಲು ಅವಕಾಶ ಕೊಟ್ಟ ನನ್ನ ಸೀನಿಯರ್ ಗಳಾದ ತೇಜೇಜ್ ಹಾಗೂ ಫಣೀಷ್ ರವರು, ಕಾಂಪಿಟೇಟಿವ್ ಎಕ್ಸಾಮ್ ಗಳಿಗೆ ಗೈಡ್ ಆಗಿದ್ದ ನರೇಶ್ ಸರ್ ಹಾಗೂ ಸ್ನೇಹಿತೆ ಪ್ರೀತಿಯ ಧನಲಕ್ಷ್ಮಿ, ನನ್ನ ಬರಹಗಳ ಮೊದಲ ಓದುಗಳಾಗಿ ತಿದ್ದುವ ಗೆಳತಿ ರಂಜಿತ, ತಮಿಳು ಕಲಿಯಲು ಮಾರ್ಗದರ್ಶನ ನೀಡಿದ ವಸಂತಕುಮಾರಿ ಅಜ್ಜಿ, ಗೋವಿಂದನ್ ಕುಟ್ಟಿ ತಾತ.... ಹೀಗೆ ಪಟ್ಟಿ ಸಾಗುತ್ತಾ ಹೋಗುತ್ತದೆ. ಸದ್ಯಕ್ಕೆ ತಾಜಾ ನೆನಪಿನಲ್ಲಿ, ಈ ಕ್ಷಣದ ನೆನಪಿಗೆ ಸಿಕ್ಕಿದವರಿವರು.


ಇದಿಷ್ಟೂ ಹೊರಗಿನವರಾದರೆ.. ನನಗೆ ಮನೆಯೇ ಮೊದಲ ಪಾಠಶಾಲೆ. ಕೂಡು ಕುಟುಂಬದಲ್ಲಿ ಬೆಳೆದವಳು ನಾನು. ಆದರೆ, ಕ್ರಮೇಣ ಅದು ಕರಗಿದೆ. ನನ್ನ ಕುಟುಂಬದಿಂದ ನಾನು ಕಲಿತ ಪಾಠವೆಂದರೆ.. "ಕಷ್ಟದ ದಿನಗಳಲ್ಲಿ ಏನೇ ಪರಿಸ್ಥಿತಿ ಇದ್ದರೂ ಮರೆತು ಒಂದಾಗುವುದು." ಕೆಲವೊಮ್ಮೆ ಚೆನ್ನಾಗಿದ್ದಾಗ ಮುನಿಸಿದ್ದರೂ.. ಯಾರಿಗಾದರೂ ನೋವು, ದುಃಖ ಎಂದಾಗ ಕಷ್ಟ ಎಂದಾಗ ಬಂದು ನಿಲ್ಲುವ ನಡೆಯೇ ನಾನು ಕಲಿತ ಅತಿ ದೊಡ್ಡ ಪಾಠ. ಅದರಲ್ಲೂ ನನ್ನ ಅಣ್ಣಂದಿರ ಶ್ರೀರಕ್ಷೆ, ಮಾರ್ಗದರ್ಶನ ಮರೆಯಲಾಗದ್ದು.


ಈ ಕುಟುಂಬ ನನ್ನದಾಗಲು ಕಾರಣ ಪಪ್ಪ-ಅಮ್ಮ. ಸರಳತೆ, ಶಿಸ್ತು ಪಪ್ಪ ಕಲಿಸಿಕೊಟ್ಟರೆ, ಅಮ್ಮ ಗೆಳತಿಯಂತೆ ಎಲ್ಲದಕ್ಕೂ ಮಾರ್ಗದರ್ಶಿಯಾಗಿದ್ದಾರೆ. ಅಮ್ಮ, ಚಿಕ್ಕಮ್ಮನ ಮಾರ್ಗದರ್ಶನವಿಲ್ಲದೇ ಕೆಲವು ನಡೆಗಳು ಬಹಳವೇ ಕಷ್ಟ.


ನನ್ನ ಬದುಕಿನಲ್ಲಿ ಬಂದ ಸಾವಿರಾರು ಜನದಲ್ಲಿ ಇಂದಿಗೂ ಅಥವಾ ಆಗಾಗ ನೆನಪಿಸಿಕೊಳ್ಳುವುದು ಕೆಲವರನ್ನು ಮಾತ್ರವೇ.. ಇದ್ದರೆ ಹೀಗೆ ಮತ್ತೊಬ್ಬರ ಬದುಕಲ್ಲಿ ನಾವೂ ಇಂತಹಾ ನೆನಪೇ ಆಗಬೇಕು. ಪಾಸಿಟಿವ್ ಎನರ್ಜಿ ತುಂಬಿಕೊಳ್ಳುವ ಕ್ಷಣಗಳು, ಕಲಿತ ಪಾಠಗಳನ್ನು ಮೆಲುಕು ಹಾಕಿಕೊಳ್ಳುವ ಪರಿಯನ್ನು ಸಾಧ್ಯವಾಗಿಸಿದ ಎಲ್ಲಾ ಗುರುಗಳಿಗೂ.. ಗುರು ಸಮಾನರಿಗೂ ಹೃತ್ಪೂರ್ವಕ ನಮನಗಳು.


~ವಿಭಾ ವಿಶ್ವನಾಥ್

ಹಲೋ ಟೀಚರ್ (ಪುಸ್ತಕ ಯಾನ - 486)


ಪುಸ್ತಕದ ಶೀರ್ಷಿಕೆ : ಹಲೋ ಟೀಚರ್

ಲೇಖಕರು : ಅನುಸೂಯ ಯತೀಶ್ 

ಪ್ರಕಾಶಕರು : ಅವ್ವ ಪುಸ್ತಕಾಲಯ 

ಪ್ರಥಮ ಮುದ್ರಣ : 2025 ಜನವರಿ

ದ್ವಿತೀಯ ಮುದ್ರಣ : 2025 ಫೆಬ್ರವರಿ (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 164

ಬೆಲೆ : 200 ರೂ. 


ಅನಸೂಯ ಯತೀಶ್ ಅವರು ಮಮತಾಮಯಿ ಶಿಕ್ಷಕಿ ಹಾಗೂ ಬಹುಮುಖ ಪ್ರತಿಭೆ. ಕಥೆ, ಕವನ, ಪ್ರಬಂಧ, ಲೇಖನ, ಹೈಕು ಹೀಗೆ ಹಲವಾರು ವಿಭಿನ್ನ ಪ್ರಕಾರದಲ್ಲಿ ಬರೆಯುತ್ತಾರೆ. ವಿಮರ್ಶೆ ಇವರ ಆದ್ಯತೆಯ ಪ್ರಕಾರ. ಹಾಗೆಂದು, ಈ ಪುಸ್ತಕದಲ್ಲಿನ ಅನುಭವ ಕಥನದಲ್ಲಿ ಯಾರನ್ನೂ ಒರೆಗೆ ಹಚ್ಚಿ ನೋಡದೆ.. ತಾಯಿಯಂತೆ, ಶಿಕ್ಷಕಿ-ಮಕ್ಕಳ ಒಡನಾಟದ ಬುತ್ತಿಯನ್ನು ಹಂಚಿಕೊಂಡಿದ್ದಾರೆ. 


25 ವರ್ಷಗಳ ಶಿಕ್ಷಣ ಇಲಾಖೆಯಲ್ಲಿನ ವೃತ್ತಿ ಬದುಕನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಲೇಖನಗಳು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿಯೂ ಪ್ರಕಟವಾಗಿವೆ.


ಶಿಕ್ಷಕರೆಂದರೆ ಕೇವಲ ಶಿಕ್ಷೆ ಕೊಡುವವರಲ್ಲ ಅಥವಾ ಕೇವಲ ಕಲಿಸುವವರೂ ಅಲ್ಲ. ಅವರ ವಿಭಿನ್ನ ವ್ಯಕ್ತಿತ್ವ, ಮಕ್ಕಳೊಡನೆಯ ಒಡನಾಟ, ಅವರೊಡನೆ ತೋರುವ ಪ್ರೀತಿ, ಕಾಳಜಿ ಅವರನ್ನು ರೂಪಿಸುವಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಸರ್ಕಾರ ಇದಕ್ಕಾಗಿ ಹಲವಾರು ತರಬೇತಿಗಳನ್ನು ನೀಡಿದರೂ.. ಅದನ್ನು ಕಲಿಸುವಲ್ಲಿ ಅಳವಡಿಸಿಕೊಳ್ಳುವ ಪರಿ ಶಿಕ್ಷಕರ ಮೇಲೆ ಅವಲಂಬಿತ. ತಾವು ಕಲಿತು, ಮಕ್ಕಳಿಗೂ ಹೊಂದಿಸುವ ಪರಿ ಅನುಸೂಯಾ ಮಿಸ್ ಅವರಿಂದಲೇ ಕಲಿಯಬೇಕು.


ಇಂದಿಗೂ ನಾವು ಹಲವಾರು ಶಿಕ್ಷಕರ ಮೂಲಕ ಶಿಕ್ಷಣವನ್ನು ಪಡೆದಿದ್ದರೂ.. ವಿದ್ಯೆ ಕಲಿತಿದ್ದರೂ.. ಬೆರಳೆಣಿಕೆಯಷ್ಟು ಶಿಕ್ಷಕರನ್ನು ಮಾತ್ರವೇ ನೆನಪಿಟ್ಟುಕೊಂಡಿದ್ದೇವೆ ಹಾಗೂ ಸ್ಮರಿಸುತ್ತೇವೆ. ಅನುಸೂಯ ಟೀಚರ್ ಅವರ ವಿದ್ಯಾರ್ಥಿಗಳು ಅವರನ್ನು ಎಷ್ಟೆಲ್ಲಾ ನೆನಪಿಸಿಕೊಂಡಿರಬಹುದು ಎಂದು ವಿಸ್ಮಯವಾಗುತ್ತದೆ. ಅಲ್ಲದೆ, ಅವರ ವೃತ್ತಿ ಬದುಕಿನಲ್ಲಿ ಹಲವಾರು ವಿದ್ಯಾರ್ಥಿಗಳನ್ನು ನೋಡಿದ್ದರೂ.. ಸ್ಪೆಷಲ್ ಎನ್ನಿಸುವಂತಹ ಕೆಲ ವಿದ್ಯಾರ್ಥಿಗಳನ್ನು ನಮಗೂ ಪರಿಚಯಿಸುತ್ತಾರೆ. ಇಲ್ಲಿನ 20 ಅನುಭವದ ಬುತ್ತಿಗಳು ಅಪ್ಯಾಯಮಾನವಾಗಿಸುತ್ತದೆ. 


ಕಾಲೇಜ್ ಸೇರಿದಾಗ ಅವರ ಗುರುಗಳಾದ ಶ್ರೀ ಮಾಗಡಿ ರಂಗಯ್ಯನವರು ನೀನು ಶಿಕ್ಷಕ ವೃತ್ತಿಗೆ ಹೇಳಿ ಮಾಡಿಸಿದಂತಿರುವೆ ಎಂದು ಹೇಳಿದ್ದೇಕೆ..? 

ಅವರ ನೋಟ ನೂರಕ್ಕೆ ನೂರು ಸರಿಯಾಗಿತ್ತು ಎಂದು ಮುಂದೆ ನಮಗೆ ಅರಿವಾಗುತ್ತಾ ಹೋಗುತ್ತದೆ. ವೃತ್ತಿ ಬದುಕಿನ ಮೊದಲ ದಿನ ಹಾಗೂ ಮುಗ್ಧ ಜೀವಗಳನ್ನು ಪರಿಚಯಿಸುತ್ತಲೇ ಲಕ್ಷಕ್ಕೆ ಎಷ್ಟು ಸೊನ್ನೆ ಬರೆಯಬೇಕು ಎನ್ನುವುದೇ ಗೊತ್ತಿಲ್ಲದ ಹುಡುಗಿಯೊಬ್ಬಳ ಉತ್ಸಾಹಕ್ಕೆ ಭಂಗವಾಗದಂತೆ ಹ್ಯಾಂಡಲ್ ಮಾಡಿದ ರೀತಿ ಇಷ್ಟವಾಗುತ್ತದೆ. 


ವಿಶೇಷ ಚೇತನ ಮಗು ಮಂಜನ ಮಂಜಿನಂತಹ ಪ್ರೀತಿಗೆ ಕರಗಿ ಹೋಗುವ ಅವರು ಇತರ ಮಕ್ಕಳನ್ನು ಹಾಗೂ ಸುತ್ತಲಿನ ಪರಿಸರವನ್ನು ತಿದ್ದುವ ರೀತಿಗೆ, ವಿಶೇಷ ವಿದ್ಯಾರ್ಥಿಗಳನ್ನು ವಿಶೇಷವಾಗಿ ಕಾಣುವ ಬಗೆಗೂ ಗೌರವ ಮೂಡುತ್ತದೆ.


ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸದಲ್ಲಿ ಮಕ್ಕಳ ಉತ್ಸಾಹದ ಜೊತೆಗೆ ಶಿಕ್ಷಕರ ಜವಾಬ್ದಾರಿ ಎಷ್ಟಿರುತ್ತದೆ ಎಂಬುದನ್ನು ಹಾಗೂ ಪೋಷಕರು ಅವರಿಗೆ ನೀಡಿರುವ ಜವಾಬ್ದಾರಿಯ ಜೊತೆಗೆ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ನಿರ್ಧಾರ, ಅಲ್ಲಿ ಮಕ್ಕಳನ್ನು ಜಾಗೃತೆಯಿಂದ ಹಾಗೂ ಸೂಕ್ಷ್ಮವಾಗಿ ಪೋಷಿಸುವ ಬಗ್ಗೆ ಇಲ್ಲಿದೆ. ಶೈಕ್ಷಣಿಕ ಪ್ರವಾಸ ಹೋಗಿದ್ದಾಗ ಬೇಸ್ತು ಬಿದ್ದ ಬಗೆ, ಅದು ಗೊತ್ತಾದಾಗ ಪ್ರತಿಕ್ರಿಯಿಸಿದ ರೀತಿ, ತಮ್ಮದಲ್ಲದ ತಪ್ಪಿಗೆ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾದ ಬಗೆಯನ್ನೂ ಇಲ್ಲಿ ಹೇಳಿದ್ದಾರೆ. 


2012-13ನೇ ಸಾಲಿನಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯದ ಅರಿವು, ಲೈಂಗಿಕ ಶೋಷಣೆ ವಿರುದ್ಧ ಜಾಗೃತಿ ಮೂಡಿಸಲು ಕಿಶೋರಿ ತರಬೇತಿಯನ್ನು ಪಡೆದು ಬಂದು ಸಂಪನ್ಮೂಲ ವ್ಯಕ್ತಿಯಾಗಿ ಹೋಗಿದ್ದಾಗ ಅವರು ತಮ್ಮ ವಿದ್ಯಾರ್ಥಿನಿಯರಿಗೆ ಹೇಳಿದ ವಿಚಾರಕ್ಕೆ ಅವರ ತಾಯಂದಿರು ಇವರ ಮೇಲೆ ಕೋಪಗೊಂಡದ್ದೇಕೆ..? ಪೋಷಕರಿಗೆ ಮನದಟ್ಟು ಮಾಡಿಕೊಡುವಾಗ ಶಿಕ್ಷಕರು ತಾಳ್ಮೆ ಕಳೆದುಕೊಳ್ಳಬಾರದು ಎಂಬ ಅಂಶವೂ ಇಲ್ಲಿದೆ.


ಸಮಾಜದಲ್ಲಿ, ಶಾಲೆಯಲ್ಲಿ ಮನೆಯಲ್ಲಿ ಹೆಣ್ಣುಮಕ್ಕಳು ಅತಿ ಹೆಚ್ಚು ಲಿಂಗ ತಾರತಮ್ಯಕ್ಕೆ ಒಳಗುತ್ತಿದ್ದಾಗ ಅದನ್ನು ತಡೆಯಲು ಹಾಗೂ ಜಾಗೃತಿ ಮೂಡಿಸಲು ಯೋಜಿಸಿದ ಯೋಜನೆ.. ಪೋಷಕರಿಗೂ, ವಿದ್ಯಾರ್ಥಿಗಳಿಗೂ ಅರ್ಥ ಮಾಡಿಸಿದ ಬಗೆ ಇಲ್ಲಿದೆ.


ವಿದ್ಯಾರ್ಥಿಗಳು ಸಹಪಾಠಿಗಳಿಗೆ ಮಾತ್ರವಲ್ಲದೆ, ಶಿಕ್ಷಕರಿಗೂ ಅಡ್ಡ ಹೆಸರಿಟ್ಟು ಕರೆದಾಗ ಆ ವಿಚಾರ ಶಿಕ್ಷಕರಿಗೆ ತಿಳಿದು ಮಕ್ಕಳಿಗೆ ಯಾವ ರೀತಿ ಪ್ರತಿಕ್ರಿಯಿಸಿದರು..? ಅಡ್ಡ ಹೆಸರಿನ ಅವಾಂತರಗಳನ್ನು ಹೇಳುತ್ತಲೇ ಯಾರನ್ನೂ ಟಾರ್ಗೆಟ್ ಮಾಡದೆ ಮಕ್ಕಳನ್ನು ತಿದ್ದಿದ ಬಗೆಯನ್ನು ಹೇಳುತ್ತಾರೆ. ಈ ಬುದ್ದಿಯನ್ನು ಮಕ್ಕಳು ಸಕಾರಾತ್ಮಕವಾಗಿ ಬಳಸಿಕೊಂಡರೆ ಎಷ್ಟು ಚೆನ್ನ ಅಲ್ಲವೇ ಎಂದು ನಮಗೂ ಅನ್ನಿಸುವಂತೆ ಮಾಡುತ್ತಾರೆ. 


ಶಾಲೆಯಲ್ಲಿ ಹಲವಾರು ಮಕ್ಕಳನ್ನು ನೋಡುತ್ತಾರೆ. ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿ ಬೆಳೆಸಿದ ಪೋಷಕರು ತಮ್ಮದೇ ತಪ್ಪಿಗೆ ಪರಿತಪಿಸುವ ಪ್ರಸಂಗ ಹಾಗೂ ಸವಾಲನ್ನು ಮೆಟ್ಟಿ ನಿಲ್ಲಲು ನೆರವಾದ ಘಟನೆ ಇಲ್ಲಿದೆ.


ಮಕ್ಕಳ ವಿದ್ಯಾಭ್ಯಾಸದಲ್ಲಿ ಕೇವಲ ಶಿಕ್ಷಕರ ಪಾತ್ರವಿರುವುದಿಲ್ಲ. ಅವರ ಕುಟುಂಬದ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಹಳ್ಳಿಗಳಲ್ಲಿ ಅಂದಿನ ದಿನಗಳಲ್ಲಿ ಅದನ್ನು ಅರ್ಥ ಮಾಡಿಸುವುದೇನೂ ಸುಲಭವಲ್ಲ. ಪೋಷಕರು ಜಾಗೃತಿ ವಹಿಸಬೇಕಾದ ವಿಚಾರಗಳನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ.


ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಹ ಪಠ್ಯಗಳ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದು ಮಕ್ಕಳ ವರ್ತನೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಎಷ್ಟು ದೊಡ್ಡಮಟ್ಟದ ಪಾತ್ರ ವಹಿಸುತ್ತದೆ ಎನ್ನುವುದನ್ನು ಹೇಳುತ್ತಲೇ.. ಅದಕ್ಕೆ ತಾವು ಮಾಡಿದ ಪ್ರಯೋಗಗಳು ಹಾಗೂ ಸಿ.ಸಿ.ಇ ಎನ್ನುವ ಶಿಕ್ಷಣ ಕ್ಷೇತ್ರದ ಮಹತ್ವದ ಯೋಜನೆಯ ಕುರಿತು ತಿಳಿಸುತ್ತಾರೆ. 


ಮಕ್ಕಳ ಮನಸ್ಸು ಸೂಕ್ಷ್ಮ ನ ಅವುಗಳಿಗೆ ಘಾಸಿಯಾಗದಂತೆ ಸಹವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಡೆದುಕೊಳ್ಳುವುದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧಗಳು ಹಾಗೂ ಬಾಂಧವ್ಯಕ್ಕೆ ಸಂಬಂಧಿಸಿದ ಪಾಠಗಳನ್ನು ಮಾಡುವಾಗ ಅಥವಾ ಅವರನ್ನು ತಿದ್ದುವಾಗ ಅವೆಲ್ಲವನ್ನು ಗಮನಿಸಿ ಬ್ಯಾಲೆನ್ಸ್ ಮಾಡುವ ಶಿಕ್ಷಕರ ಕುರಿತು ತಿಳಿದು ಹೆಮ್ಮೆ ಎನಿಸುತ್ತದೆ. 


ಮಕ್ಕಳಿಗೆ ಬೈದಾಗ ಆ ಕುರಿತು ಭಯ ಮೂಡುತ್ತದೆ. ಆದರೆ, ಮೆಚ್ಚುಗೆಯ ಮಾನದಂಡ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುವ ಬಗೆ ಹಾಗೂ ಅವರಿಗೆ ಆ ಕುರಿತು ಹೆಮ್ಮೆ ಮೂಡುವ ಬಗೆ ಅವರನ್ನು ಯಾವೆಲ್ಲಾ ಬಗೆಯಲ್ಲಿ ತಿದ್ದಬಲ್ಲದು ಹಾಗೂ ಬದಲಾಯಿಸಬಲ್ಲದು ಎನ್ನುವ ವಿಚಾರಗಳಿಲ್ಲಿವೆ. ಶಿಕ್ಷೆ ಇಲ್ಲದೆ ಶಿಕ್ಷಣ ಕೊಡಲು ಸರಳ ಹಾಗೂ ಜಾಣತನದ ತಂತ್ರಗಳನ್ನು ಸೊಗಸಾಗಿ ಹೇಳಿದ್ದಾರೆ. 


ಮಕ್ಕಳು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅದರಲ್ಲಿಯೂ ಶಿಕ್ಷಕರನ್ನು ಹೆಚ್ಚು ಗಮನಿಸುತ್ತಿರುತ್ತಾರೆ. ಕಾರಣಾಂತರದಿಂದ ತಡವಾಗಿ ಶಾಲೆಗೆ ಬಂದ ಸಂದರ್ಭದಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಗಮನಿಸುವಾಗ ಮಕ್ಕಳೇ ಶಿಕ್ಷಕರಾದ ಸುಸಂದರ್ಭ ಅವರಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ಹೆಮ್ಮೆ ಮೂಡಿಸುತ್ತದೆ. 


ಬಯ್ಯದೆ, ಹೊಡೆಯದೆಯೇ ನಸುನಗುತ್ತ ತಾಳ್ಮೆಯಿಂದ ತಿದ್ದಿದ ಅನುಸೂಯ ಟೀಚರ್ ಅವರ ಅನುಭವದ ಜೊತೆಗೆ ಶಿಕ್ಷೆ ರಹಿತ ಶಿಕ್ಷಣವನ್ನು ಬೆಂಬಲಿಸುವ ಅವರ ನಿಲುವು ನನಗಂತೂ ಇಷ್ಟವಾಯಿತು. 


ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವಾಗ ಶಿಕ್ಷಕರಿಗೆ ಅದೇ ಊರಿನ ವಿದ್ಯಾರ್ಥಿಗಳಿಂದ ಅವರ ಪೋಷಕರಿಂದ ಸವಾಲುಗಳು ಎದುರಾಗಬಹುದು. ಮಕ್ಕಳೊಡನೆ ಸಾಕುಪ್ರಾಣಿಗಳು ಶಾಲೆಗೆ ಬಂದರೆ..?! ಆ ಸಂದರ್ಭ ನಿಭಾಯಿಸಿದ ಜಾಣತನದ ಪ್ರಸಂಗ ಇಲ್ಲಿದೆ. 


ತಮ್ಮ ಪ್ರೀತಿಯ ಶಿಕ್ಷಕರನ್ನು ಬೆಂಬಲಿಸುವ ಹೊಗಳುವ ಹಾಗೂ ಓಲೈಸುವ ಪ್ರೀತಿಯ ವಿದ್ಯಾರ್ಥಿಗಳನ್ನು ನಾವಿಲ್ಲಿ ಕಾಣಬಹುದು. ಅದೆಲ್ಲವೂ ಆಯಾ ಟೀಚರ್ ಗಳ ಗುಣ-ಸ್ವಭಾವಗಳಿಂದ ಪ್ರೇರಿತವಾಗುತ್ತದೆ ಎಂಬುದಂತೂ ಅಕ್ಷರಶಃ ಸತ್ಯ. 


ಶಿಕ್ಷಣವೆಂದರೆ ಕೇವಲ ಪಠ್ಯದಲ್ಲಿನ ಪಾಠವಲ್ಲ. ನಡೆ-ನುಡಿಗಳನ್ನು ತಿದ್ದುವ ಹಾಗೂ ಬದಲಾಯಿಸುವ, ಮಾನವೀಯತೆಯನ್ನು ಮೂಡಿಸುವ ನಡೆ.. ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ ಎಷ್ಟು ಎಂಬುದರ ಅರಿವಾಗುತ್ತದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಇದು ಅತ್ಯವಶ್ಯಕವೂ ಹೌದು. 


ಸಮುದಾಯದತ್ತ ಶಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಶೈಕ್ಷಣಿಕ ಸಾಧನೆಗಳನ್ನು ಶಿಕ್ಷಕರ ಬಾಯಿಂದಲೇ ಕೇಳಿ ತಿಳಿಯುವ ಉತ್ಸಾಹ, ಖುಷಿ. ಇದರ ಜೊತೆಗೆ ಬೇರೆ ಮಕ್ಕಳ ಅಂಕಗಳ ಕುರಿತು ಕೇಳುವ ಕುತೂಹಲವೂ.. ಮಕ್ಕಳ ಬುದ್ಧಿಮತ್ತೆಗನುಗುಣವಾಗಿ ಅವರು ಓದುತ್ತಾರೆ ಎಂಬ ಅರಿವು ಪೋಷಕರಿಗಿರುವುದು ಅತ್ಯಗತ್ಯ ಎಂಬ ಕಿವಿಮಾತನ್ನು ಹೇಳುತ್ತಲೇ ಮಕ್ಕಳಲ್ಲಿ ಪ್ರಾಮಾಣಿಕತೆಯನ್ನು ಉದ್ದೀಪಿಸುವ ಇವರ ಅನುಭವಗಳೂ ಇಲ್ಲಿವೆ.


ಹೋಂವರ್ಕ್ ಎನ್ನುವ ಮಕ್ಕಳ ಕಲಿಕಾ ಅಂಗಳಕ್ಕೆ ಪೋಷಕರು ಹಾಗೂ ಶಿಕ್ಷಕರು ಇಬ್ಬರ ಪ್ರತಿಕ್ರಿಯೆ ಹಾಗೂ ಬದಲಾದ ದಿನಗಳಲ್ಲಿ.. ಈಗ ಶನಿವಾರದಂದು ಪುಸ್ತಕದ ಹೊರೆ ಇರದ 'ಬ್ಯಾಗ್ ಲೆಸ್ ಡೇ' ದಿನಗಳು ಇಲ್ಲಿವೆ.


ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ ಮಾಡುವುದರ ಹಿಂದಿನ ಉದ್ದೇಶ ಜೊತೆಗೆ ಮಕ್ಕಳಲ್ಲಿ ಉತ್ತಮ ನಾಯಕತ್ವದ ಗುಣಗಳನ್ನು ಮೂಡಿಸುತ್ತ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾ.. ಸವಾಲುಗಳನ್ನು ನಿಭಾಯಿಸುವುದನ್ನು ಕಲಿಯುವುದು, ಧೈರ್ಯ, ಸಾಹಸ ಹೆಚ್ಚಿಸುವ ಸಲುವಾಗಿ ಮಾಡಿರುವ ಈ ಜವಾಬ್ದಾರಿಯ ಕುರಿತು ಮಾತನಾಡಿದ್ದಾರೆ.


ಅತಿ ಹೆಚ್ಚಿನ ಬುದ್ಧಿಮತ್ತೆ ಇರುವ ಮಕ್ಕಳ ಜೊತೆಜೊತೆಗೆ ಹಿಂದುಳಿದ ಮಕ್ಕಳನ್ನು ಕರೆದುಕೊಂಡು ಸಾಗುವ ಶಿಕ್ಷಕರಿಗೆ ಬುದ್ದಿವಂತ ಮಕ್ಕಳಿಂದ ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ಭಾವನೆಯನ್ನು ತೆಗೆದು ಹಾಕುವ ಜವಾಬ್ದಾರಿಯೂ ಇರುತ್ತದೆ. ಯಾವುದೂ ಅಥವಾ ಯಾರು ಮೇಲಲ್ಲ, ಕೀಳಲ್ಲ ಎನ್ನುವುದನ್ನು ಅರಿವಾಗಿಸಿರುವ ಶಿಕ್ಷಕಿಯ ಪ್ರಯತ್ನ ಇಲ್ಲಿ ಸಮರ್ಥವಾಗಿ ಕಾಣುತ್ತದೆ.


ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಮಕ್ಕಳ ಮನಸನ್ನು ಅರ್ಥ ಮಾಡಿಕೊಂಡು ದಿನದಿನದ ಹೊಸಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲವ ಇಂತಹ ಶಿಕ್ಷಕರು ನಿಜಕ್ಕೂ ಆದರ್ಶ.


ಹೊಸದಾಗಿ ಶಿಕ್ಷಕ ವೃತ್ತಿಗೆ ಸೇರಿದವರು, ಶಿಕ್ಷಕರ ಅನುಭವದ ಬುತ್ತಿಯನ್ನು ಸವಿಯಲಿಚ್ಚಿಸುವವರು, ಎಲ್ಲಾ ವಯೋಮಾನದ ಮಕ್ಕಳ ಪೋಷಕರು, ಅದರಲ್ಲಿಯೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಎಲ್ಲರೂ ಓದಲೇಬೇಕಾದ ಪುಸ್ತಕ ಎಂದೇ ಹೇಳುವೆ. ಈ ವರ್ಷದ ಓದಿನಲ್ಲಿ ಖಂಡಿತವಾಗಿಯೂ ಮನದಲ್ಲಿ ನಿಲ್ಲುವ ಪುಸ್ತಕ ಇದು. ಒಂದೊಳ್ಳೆ ಓದಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು.


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 30, 2026

ತುತ್ತಿನ ಸವಿ (ಬೆಳಕಿಂಡಿಯ ಕತೆಗಳು - 77)

 


ಚಿಕ್ಕಂದಿನಲ್ಲಿ ಮುದ್ದೆಯನ್ನು ತುಪ್ಪದಲ್ಲಿ ಅದ್ದಿ ತಿನ್ನಿಸುವಾಗ, ಅನ್ನ ಉಪ್ಪು-ತುಪ್ಪ, ಸಾರನ್ನ, ಚಟ್ನಿ ಅನ್ನ, ಒಗ್ಗರಣೆ ಅನ್ನ, ಮೊಸರನ್ನ, ಹಾಲು ಅನ್ನ ಹೀಗೆ ಒಂದೊಂದು ದಿನ ಒಂದೊಂದು ರೀತಿ ತುತ್ತು ಬಾಯಿಗಿಡುತ್ತಾ ಮುದ್ದು ಮಾಡಿ ತಿನ್ನಿಸುತ್ತಾ, ಟಿ.ವಿ ಯ ಸಖ್ಯ ಬೆಳೆಸಲು ಬಿಡದೆ, ಚಂದಮಾಮನನ್ನು ತೋರಿಸುತ್ತಾ ಕತೆ ಹೇಳಿ ತಿನ್ನಿಸುವಾಗಿನ ನಿನ್ನ ಪಾತ್ರ ಈಗ ನನ್ನದಾಗಿದೆ ಅಮ್ಮ. 

ಮೊಬೈಲ್ ತೋರಿಸದೆ, ಕತೆಗಳನ್ನು ಹೇಳುತ್ತಾ ತುತ್ತು ಮಾಡಿ ತಿನ್ನಿಸುವಾಗಿನ ಆ ಸಂತೋಷದ ಸವಿ ಯಾವುದಕ್ಕೂ ಬೆಲೆಕಟ್ಟಲಾದದ್ದು. ಅದು ಸಂಸ್ಕೃತಿಯ ಸವಿಯೂ ಹೌದು.


~ವಿಭಾ ವಿಶ್ವನಾಥ್

ವಿಧಿಯ ಮಧುರ ಸಂಚು (ಬೆಳಕಿಂಡಿಯ ಕತೆಗಳು - 76)

 


ಆವತ್ತು ನೀನು ನನಗೆ ಸಿಗದಿದ್ದರೆ ಬಹುಶಃ ನಾನೂ, ನೀನೂ ಸತ್ತು ಯಾವ ಕಾಲವಾಗಿರುತ್ತಿತ್ತೋ.. 

ನಿನ್ನನ್ನು ನಿನ್ನಮ್ಮ ಅನಾಥಳನ್ನಾಗಿಸಿದ್ದರೆ, ನನ್ನನ್ನು ನಾನೇ ಅನಾಥಳನ್ನಾಗಿಕೊಂಡಿದ್ದೆ. ಬಹುಶಃ, ನಿನಗೆ ನಾನು ತಾಯಾಗಲು ಹಾಗೂ ನೀನು ನನ್ನ ಮಡಿಲ ಕೂಸಾಗಲು ವಿಧಿಯ ಬೆಸುಗೆಯೇ ಇದಾಗಿರಬಹುದಾ..?? ಅಂದು ನೀನು ನನಗೆ ಸಿಗದಿದ್ದರೆ, ನಮ್ಮಿಬ್ಬರ ಬಂಧ ಬೆಸೆಯದಿದ್ದರೆ ಈ 'ಮಡಿಲು' ಅನಾಥಾಲಯದ ಹುಟ್ಟಾದರೂ ಎಲ್ಲಿರುತ್ತಿತ್ತು ಹೇಳು..?? ನೀನು ಸಿಕ್ಕಿ 25 ವರ್ಷವಾಯಿತು. ಇಂದೂ ಮತ್ತಾವುದೋ ಕಂದ 'ಮಡಿಲು' ತುಂಬಲಿದೆ. ವಿಧಿಯ ಮಧುರ ಸಂಚು ಹೀಗೇ ನಮ್ಮೆಲ್ಲರನ್ನು ಬೆಸೆದುಬಿಡಲಿ.. 


~ವಿಭಾ ವಿಶ್ವನಾಥ್

ಸಿರಿತನಕ್ಕೆ ಸಡ್ಡು ಹೊಡೆದು...

 


"ಅಯ್ಯೋ ಅಮ್ಮ, ನಿಮಗೆಲ್ಲಾ ಏನಾಗಿದೆ. ಏನು ಅವರೇನು ಈ ದೇಶದ ರಾಷ್ಟ್ರಪತಿನಾ.. ಅವರು ಬಂದರೆ ಎದ್ದು ನಿಲ್ಲುವುದೇನು.. ಅತಿ ಗೌರವ ಕೊಡುವುದೇನು..

ಅವರೇನು ಆಕಾಶದಿಂದ ಇಳಿದು ಬಂದಿದ್ದಾರಾ ಹೇಗೆ.. ಅವರು ಕೂಡಾ ನಮ್ಮ ಹಾಗೆಯೇ ಮನುಷ್ಯರು. ಅಲ್ಲವಾ ? ಶ್ರೀಮಂತರಾದರೆ ಅದು ಅವರ ಮನೆಯಲ್ಲಿ ದರ್ಪ ತೋರಿಸಲಿಕ್ಕೆ. ಅಷ್ಟೇ... ನಿಮ್ಮಂತಹವರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಅವರು. ನಿಮಗೆಲ್ಲಾ ಎಷ್ಟು ಹೇಳಿದರೂ ಬುದ್ದಿ ಬರುವುದಿಲ್ಲ ಬಿಡಿ" ಎಂದ ಶ್ರೀಕಾಂತನ ಮಾತನ್ನು ಕೇಳಿ


"ನಾಲ್ಕು ಅಕ್ಷರ ಕಲಿತ ಮಾತ್ರಕ್ಕೆ ನೀನು ದೊಡ್ಡ ಮನುಷ್ಯ ಆಗುವುದಿಲ್ಲ. ಅಥವಾ ನೀನು ಹೇಳಿದ್ದೇ ಸರಿ ಅಂತಾ ಇಲ್ಲಿ ಯಾರೂ ಸಹಾ ಕುಣಿಯುವುದಿಲ್ಲ. ನೀನೇನೋ ಹೇಳುತ್ತಿಯ... ಕಳೆದ ಬಾರಿ ನಿನ್ನಂತಹಾ ಮಂದ ಬುದ್ಧಿಯವರು ಅದನ್ನೇ ನಂಬಿಕೊಂಡು ಕುಣಿದರು. ಧಣಿಗಳು ಅವರಿಗೆ ಕೆಲಸಕ್ಕೆ ಕರೆಯುವುದನ್ನೇ ಬಿಟ್ಟರು. ಕೊನೆಗೆ ಅವರೇ ಧಣಿಗಳ ಹತ್ತಿರ ಹೋಗಿ ಕಾಲು ಹಿಡಿದು ಬೇಡಿಕೊಂಡರು. ನೀವುಗಳು ಹಳ್ಳಿಗೆ ಬರುತ್ತೀರ. ನಾಲ್ಕು ದಿನ ಇರುತ್ತೀರಿ.. ಹೋಗಬೇಕಾದರೆ ಏನನ್ನೋ ಹೇಳಿ ಆಸೆ ಹುಟ್ಟಿಸಿ ಹೋಗುತ್ತೀರಿ. ಕೊನೆಗೆ ಅದನ್ನೆಲ್ಲಾ ಅನುಭವಿಸಬೇಕಾಗಿರುವುದು ಇಲ್ಲಿ ಇರುವವರೇ ತಾನೇ.." ಎಂದ ಅಮ್ಮನ ಮಾತಿಗೆ


"ಅಮ್ಮ, ನಾವೇನು ಏನನ್ನೋ ಹೇಳುತ್ತಿಲ್ಲ. ಇಲ್ಲಿನ ನಿಮ್ಮ ಧಣಿಗಳು ನಿಮ್ಮನ್ನು ದಿನಗೂಲಿ ಅಂತಾ ಕರೆಸಿಕೊಳ್ಳುತ್ತಾರೆ. ಆದರೆ , ಕಡಿಮೆ ಸಂಬಳ ಎಣಿಸುತ್ತಾರೆ. ಕೇಳಿದರೆ, ಮುಂದಿನ ಸಲ ಅದಕ್ಕಿಂತ ಕಮ್ಮಿ. ನಿಮಗೆ ಬಗ್ಗಿ ಬಗ್ಗಿ ರೂಢಿಯಾಗಿ ತಲೆ ಎತ್ತಿ ನಿಂತು ಮಾತನಾಡುವುದನ್ನೇ ಮರೆತಿದ್ದೀರಿ. ನಾವು ಕೇಳಿದ ತಕ್ಷಣ ಅವರು ಸಾಲ ಕೊಡುವುದಿಲ್ಲವಾ ಅಂತಾ ನಮಗೇ ಪ್ರಶ್ನೆ ಮಾಡುತ್ತೀರಿ.


ಆ ಯಪ್ಪಾ ಏನು ಸುಮ್ಮನೆ ಸಾಲ ಕೊಡುತ್ತಾನಾ ಹೇಳು. ನೀವು ಅದಕ್ಕೆ ಬಡ್ಡಿ, ಚಕ್ರ ಬಡ್ಡಿ ಎಲ್ಲವನ್ನೂ ಕಟ್ಟುತ್ತೀರಿ. ಅಲ್ಲವಾ ? ಏನೂ ಆಧಾರವಾಗಿ ಇರಿಸಿಕೊಳ್ಳದೆ ಸುಮ್ಮನೆ ಸಾಲ ಕೊಟ್ಟು ಬಿಡುತ್ತಾರಾ ಹೇಳು. ಜಮೀನನ್ನೋ ಇಲ್ಲವೇ ಮನೆಯನ್ನೋ ಅಥವಾ ಪ್ರಾಣಿಗಳನ್ನೋ ಅಡ ಇರಿಸುತ್ತೀರಿ ತಾನೇ.. ನೀವು ಈ ಯಪ್ಪನ ಬಳಿ ಹೀಗೆ ಸಾಲ ತೆಗೆದುಕೊಳ್ಳುವುದರ ಬದಲಾಗಿ ಬ್ಯಾಂಕ್ ಗೆ ಹೋಗಿ ಸಾಲ ಕೇಳಿದರೆ ಸಾಲ ಕೊಡುತ್ತಾರೆ ತಾನೇ ? ನಿಮ್ಮ ಅನಕ್ಷರತೆಯನ್ನು, ಮುಗ್ಧತೆಯನ್ನು ಸರಿಯಾಗಿಯೇ ಉಪಯೋಗಿಸಿಕೊಳ್ಳುತ್ತಾ ಇದ್ದಾನೆ. ಸಿರಿತನ ಯಾವತ್ತಿಗೂ ಶಾಶ್ವತ ಅಲ್ಲ ತಾನೇ..?? " ಎಂದು ಒಂದೇ ಸಮನೆ ಮಾತನಾಡುತ್ತಿದ್ದವನನ್ನು ಕಂಡ ಶ್ರೀಕಾಂತನ ತಾಯಿ


"ನಿಮ್ಮಪ್ಪನೂ ಹೀಗೆ ಮಾಡುವುದಕ್ಕೆ ಹೋಗಿ ಸತ್ತಿದ್ದು. ನೀನೂ ಹಾಗೆ ಆಡಿ ನನ್ನ ಹೊಟ್ಟೆ ಉರಿಸುತ್ತಾ ಇದ್ದೀಯ.


ಅವರತ್ರ ದುಡ್ಡಿದೆ. ಆದರೆ, ನಮ್ಮ ಹತ್ತಿರ ಏನೂ ಇಲ್ಲ. ನಾವೂ ಒಬ್ಬರಿಗೆ ಸಮನಾಗಿ ನಿಂತು ವಿರೋಧಿಸಬೇಕು ಅಂತಾ ಅಂದರೆ ಜನಬಲ ಮತ್ತು ಹಣಬಲ ಇರಬೇಕು. ಜನಬಲವನ್ನು ಹಣದಿಂದ ಕೊಂಡುಕೊಳ್ಳಬಲ್ಲ ಆತ. ಹಣಬಲ ಬೇಕು ಅಂದರೆ ದುಡಿಯಬೇಕು. ಆದರೆ, ನೀನೂ ಅಡ್ಡ ದಾರಿ ಹಿಡಿದು ಸಿರಿವಂತ ಆಗುತ್ತೇನೆ ಅಂತಾ ಹೊರಟರೆ ಅವನಿಗೂ ನಿನಗೂ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ನೀನು ನ್ಯಾಯವಾಗಿ ಸಂಪಾದನೆ ಮಾಡಬೇಕು.


ಬಗ್ಗುವುದು ಅವನಿಗೆ ಅಥವಾ ಅವನ ಸಿರಿತನಕ್ಕೆ ಮಣಿದು ಅಲ್ಲ. ನಿಮ್ಮಂತಹಾ ಭವಿಷ್ಯದ ಪೀಳಿಗೆ ಎದ್ದು ನಿಲ್ಲಬೇಕು ಅಂತಾ ಅಂದರೆ ಅದು ನಮಗೆ ಅನಿವಾರ್ಯ. ನಿಮ್ಮ ರೀತಿ ಮಾತನಾಡುತ್ತಾ ಕಾಲಹರಣ ಮಾಡುತ್ತಾ ಕುಳಿತರೆ ಅವನು ಮತ್ತಷ್ಟು ಬೆಳೆಯುತ್ತಾ ಹೋಗುತ್ತಾನೆ. ಅದರ ಬದಲಾಗಿ ಹೋಗಿ ದುಡಿ. ಅದಕ್ಕಿಂತ ಹೆಚ್ಚು ಬಲಶಾಲಿಯಾಗಿ ಬಾ.. ಅದೂ ನ್ಯಾಯವಾದ ರೀತಿಯಲ್ಲಿ.


ಆಗ ಬಾ. ಸಿರಿತನಕ್ಕಲ್ಲ ಆ ಸಿರಿವಂತನ ದರ್ಪಕ್ಕೆ ಸಡ್ಡು ಹೊಡೆದು ನಿಲ್ಲಲು ಎಲ್ಲರೂ ಜೊತೆಯಾಗುತ್ತೇವೆ. " ಎಂದ ಅಮ್ಮನ ಮಾತು ಶ್ರೀಕಾಂತನಿಗೆ ಸಿರಿತನಕ್ಕೆ ಸಡ್ಡು ಹೊಡೆದು ನಿಲ್ಲಲು ಬೇರೆಯದ್ದೇ ಹಾದಿ ತೋರಿತ್ತು.


~ವಿಭಾ ವಿಶ್ವನಾಥ್

ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ


"ಈಗಲೇ ಇಷ್ಟು ಕಟು ವಾಸ್ತವವಾದಿಯಾಗಬೇಡ್ವೆ. ಬರಹದಲ್ಲಿ ಅಷ್ಟು ಕೋಮಲ ಭಾವನೆಗಳನ್ನು ತುಂಬುವ ನೀನೇ ಇಷ್ಟು ಕಟುವಾದರೆ ಹೇಗೆ..?" ಕೇಳಿದ್ದಕ್ಕೆ 


"ಮತ್ತೆ.. ಹೇಗಿರಬೇಕು ನೀನೇ ಹೇಳು..?

ಕಾಗೆ ಹಸಿರು ಬಣ್ಣ ಅಂದರೆ ಹೂಂ ಅನ್ನಬೇಕಾ..?

ವಾಸ್ತವದ ನುಡಿಗಳು, ಸತ್ಯ ಎಲ್ಲವೂ ಕಟುವೇ. ಕಹಿ ಔಷಧಿಯೇ ಅಲ್ಲವಾ ರೋಗವನ್ನು ಗುಣಪಡಿಸೋದು" ಎಂದಳು.


ಅವಳ ಮಾತಿನಲ್ಲಿ ತಪ್ಪು ಕಾಣಲಿಲ್ಲವಾದರೂ.. ಗುಂಪಿನಲ್ಲಿ ಗೋವಿಂದ ಎನ್ನುವವರಿಗಿಂತ ವಿಭಿನ್ನವಾಗಿ ಕಂಡ ಇವಳೇ ಎಲ್ಲರಿಗೂ ಮೊದಲ ಗುರಿಯಾಗುತ್ತಿದ್ದಳಲ್ಲಾ ಎನ್ನಿಸಿತು.


"ಗುಂಪಿನಲ್ಲಿ ಸ್ಥಾನ ಇಲ್ಲ ಎಂದರೆ ಅವರ ಸ್ಥಾನ ವೇದಿಕೆಯ ಮೇಲೆ" ಎನ್ನುವ ಮಾತು ಆ ಕ್ಷಣಕ್ಕೆ ಅವಳಿಗೆ ಹೊಂದುವಂತೆ ಕಂಡಿತು. 

"ನೇರವಾದ ಮರಗಳೇ ಅಲ್ಲವಾ ಮೊದಲು ಕೊಡಲಿಯ ಏಟಿಗೆ ಬಲಿಯಾಗುವುದು.." ಎಂಬ ಮಾತು ನೆನಪಾಗಿ ಆತಂಕವೂ ಆಯಿತು.


ಅವಳ ಬಿಸಿರಕ್ತದ ವಯಸ್ಸು ಹೀಗೆಲ್ಲಾ ಮಾಡಿಸುತ್ತಿದೆ. ಹಾರಾಟ, ಕಟು ವಾಸ್ತವಗಳು ಕಾಲ ಕಳೆದಂತೆ ಮಾಗುತ್ತವೆ. ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಅರಿವಾಗುವ ಸಮಯ ಬರುತ್ತದೆ. ಅದು ಅವಳಿಗೆ ತಾನಾಗಿಯೇ ಅರ್ಥವಾಗುತ್ತದೆ ಎಂದುಕೊಂಡೆನಾದರೂ.. ಕಾಲ ಬಲು ಕಠೋರ. ಯಾವತ್ತಿಗೂ ರಿವರ್ಸ್ ಪ್ರಕ್ರಿಯೆ ಅನ್ನೋದೇ ಅಲ್ಲಿಲ್ಲ. ಅವಳು ಮಾಗುವಷ್ಟರಲ್ಲಿ ಮನಸ್ಸು ಕಲ್ಲಾದರೆ..!


ಹೀಗೆ ಯೋಚನೆಗಳ ಪ್ರವಾಹ ಸಾಗುತ್ತಿತ್ತು. ಅದು ಅವಳ ಮಾತುಗಳಿಂದಲೇ ಕಡಿಯಿತು. 


"ಯೋಚನೆ ಬೇಡ್ವೆ. ಮನಸ್ಸಲ್ಲಿ ಇರೋದನ್ನ ಒದರಿ ಹಗುರಾಗುವೆ. ಕೆಲವೊಮ್ಮೆ ಜನಗಳ ಎದುರಲ್ಲಿ.. ಹಲವೊಮ್ಮೆ ನನ್ನ ಬರಹದಲ್ಲಿ..

'ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ' ಅನ್ನೋ ನುಡಿ ಕೇಳಿಲ್ವಾ ನೀನು..?!

ಸಂಧರ್ಭಕ್ಕೆ ತಕ್ಕಂತೆ ಕಠಿಣವೋ.. ಮೃದುವೋ ನಿರ್ಧರಿಸುತ್ತೇನೆ. 

ತೀರಾ ತಲೆಕೆಡಿಸಿಕೊಳ್ಳಬೇಡ್ವೆ"


ಅವಳು ಹೀಗೆಯೇ ಇರಲಿ ಬದಲಾಗದಿರಲಿ ಎಂದು ಮನ ಹಾರೈಸಿದರೂ.. ಬಾಯಲ್ಲಿ ಬಂದ ಮಾತು..?!


ಈ ಮಾತುಕಥೆ ಒಂದು ಕಾಲದ ನನ್ನನ್ನೇ ನೆನಪಿಸಿತು. ಅಂದ ಹಾಗೆ ಅವಳ ಜೊತೆ ಆದ ಸಂಭಾಷಣೆ..?!


~ವಿಭಾ ವಿಶ್ವನಾಥ್