ಭಾನುವಾರ, ಆಗಸ್ಟ್ 16, 2026

ಆಕೆ ಹೇಳಿದ್ದು ಒಂದೇ ಸುಳ್ಳು

 


"ಯಾವಾಗಲೂ ನನ್ನ ಮಗಳು ಸತ್ಯವನ್ನೇ ಹೇಳುತ್ತಾಳೆ ಅಂತಾ ಅಂದುಕೊಂಡಿದ್ದೆನಲ್ಲಮ್ಮ. ಈಗ ಏನು ಆಗಿ ಹೋಗಿದೆ ನೋಡು. ಯಾವಾಗಲೂ ನಿಜ ಹೇಳುತ್ತಾ ಇದ್ದವಳು ಇದೊಂದು ಸುಳ್ಳನ್ನು ಯಾಕೆ ಹೇಳಿದೆಯಮ್ಮಾ.. ಮಾತಾಡು ತಾಯಿ ಮಾತಾಡು..." ಎನ್ನುತ್ತಾ ಸರಸ್ವತಿಯ ಅಪ್ಪ ಮಾತನಾಡಿಸುತ್ತಿದ್ದರೆ ಮಾತನಾಡದೆ ಮಲಗಿದ್ದಳು ಮಗಳು.


"ಯಾವಾಗಲೂ ಕೇಳುತ್ತಾ ಇದ್ದೆಯಲ್ಲಮ್ಮ.. ಅಪ್ಪ, ಸುಳ್ಳು ಹೇಳಿದ್ರೆ ಪಾಪ ಬರುತ್ತೆ. ಆದರೆ, ಒಳ್ಳೆಯದಕ್ಕಾಗಿ ಮತ್ತೆ ಇನ್ನೊಬ್ಬರ ಸಂತೋಷಕ್ಕಾಗಿ ನಿಜ ಹೇಳಿದರೆ ಆ ಪಾಪ ಪುಣ್ಯದ ಲೆಕ್ಕದಲ್ಲಿ ತೊಳೆದು ಹೋಗುತ್ತಂತೆ. ಹೌದಾ..?? ಅಂತಾ


ನಾನು ಹೌದು ಅನ್ನಬಾರದಿತ್ತು. ಬಹುಶಃ, ನಾನವತ್ತು ಸುಳ್ಳು ಹೇಳಿದ ಪಾಪ ಪಾಪವೇ.. ಅಂತಾ ಅಂದಿದ್ದರೆ ನೀನು ಸುಳ್ಳು ಹೇಳುವ ಧೈರ್ಯ ಮಾಡುತ್ತಾ ಇರಲಿಲ್ಲ ಅನ್ನಿಸುತ್ತೇನೋ ಅಲ್ಲವಾ ಸರಸು. ನಾನೇ ನಿನಗೆ ಸುಳ್ಳು ಹೇಳುವಂತೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿಬಿಟ್ಟೆ ಅನ್ನಿಸುತ್ತೆ. ಅಲ್ವಾ.. ಈ ಪಾಪಿ ಅಪ್ಪನಿಗಾಗಿ, ಇಂದೋ ನಾಳೆಯೋ ಬಿದ್ದು ಹೋಗುವ ಮರಕ್ಕಾಗಿ ಯಾಕಮ್ಮಾ ನಿನ್ನ ಜೀವನವನ್ನು ನೀನು ಕೈಯ್ಯಾರೆ ಹಾಳು ಮಾಡಿಕೊಂಡೆ ? ಹೇಳು ಸರಸು ಹೇಳು.." ಎನ್ನುತ್ತಿದ್ದರೆ ಅಲ್ಲಿದ್ದ ಎಂಥಹವರಿಗಾದರೂ ಕರುಳು ಕಿತ್ತು ಬರುತ್ತಿತ್ತು.


"ನೀನು ಸುಳ್ಳು ಹೇಳಿದ್ದಿಯ.. ನೀನು ನನಗೆ ಮುಖ ತೋರಿಸಬೇಡ. ಇಲ್ಲಿಂದ ಎದ್ದು ಎಲ್ಲಿಗಾದರೂ ಹೋಗು.. ಹೋಗು.. ಬೇಡ ಬಿಡು.. ನಾನೇ ಹೋಗ್ತೀನಿ." ಎಂದು ಹುಚ್ಚು ಹಿಡಿದವನಂತೆ ಮಾತನಾಡುತ್ತಿದ್ದ ಪಾಪಯ್ಯ.


ಪಾಪಯ್ಯನ ಹೆಂಡತಿ ಸರಸ್ವತಿ ಜನ್ಮ ನೀಡಿ ತೀರಿ ಹೋಗಿದ್ದಳು. ಅದಾದ ನಂತರ ಪಾಪಯ್ಯನಿಗೆ ಸರಸ್ವತಿ.. ಸರಸ್ವತಿಗೆ ಪಾಪಯ್ಯ. ಇಷ್ಟೇ ಅವರ ಲೋಕ. ಮಗಳಿಗೆ ಕಷ್ಟವಾಗಬಾರದೆಂದು ಅವಳಿಗೆ ಮಲತಾಯಿಯನ್ನು ತಾರದೆ ತಾನೇ ತಂದೆ - ತಾಯಿ ಎರಡೂ ಆಗಿ ಅವಳನ್ನು ಸಾಕುತ್ತಿದ್ದ. ಸರಸ್ವತಿಗೂ ಅಷ್ಟೇ ಅಪ್ಪನೆಂದರೆ ಎಲ್ಲಿಲ್ಲದ ಮಮತೆ. ಅಪ್ಪನೆಂದರೆ ಸಾಕು ಜೀವ ಬಿಡಲೂ ಸಿದ್ದವಿದ್ದಳು. ಹೀಗಿದ್ದ ಇಬ್ಬರ ಬಾಂಧವ್ಯ ಇಡೀ ಹಳ್ಳಿಯೇ ಕೊಂಡಾಡುವಂತಿತ್ತು.


ಎಲ್ಲಾ ಮನೆಯ ಹೆಣ್ಣು ಮಕ್ಕಳೂ ತವರಿನಿಂದ ದೂರವಾಗುವ ಸಂಧರ್ಭ ಇರುವ ಹಾಗೆ ಸರಸ್ವತಿಗೂ ಆಗಿತ್ತು. ಪಾಪಯ್ಯನೇ ಮಗಳಿಗೆ ಒದಗಿ ಬಂದ ಪಟ್ಟಣದ ಗಂಡು ಒಪ್ಪಿದ್ದ. ಒಬ್ಬನೇ ಮಗ.. ಓದಿದ್ದ, ಒಳ್ಳೆಯ ಕೆಲಸದಲ್ಲಿದ್ದ. ಪಾಪಯ್ಯ ಹಿಂದೆ ಮುಂದೆ ನೋಡದೆ ಒಪ್ಪಿ ಮಗಳನ್ನು ಕೊಟ್ಟಿದ್ದ. ಸರಸ್ವತಿಯ ರೂಪ ಹಾಗೂ ಗುಣ ನೋಡಿದ್ದ ಅವರೂ ನಿರಾಕರಿಸಲಿಲ್ಲ.


ಮನಸ್ಸಿಲ್ಲದ ಮನಸ್ಸಲ್ಲಿ ಸರಸ್ವತಿ ಮದುವೆಯಾಗಿ ಹೊರಟಳು. ಆನಂತರ ತಿಳಿದು ಬಂದಿತ್ತು ಅವರ ಯೋಗ್ಯತೆ. ಮನೆಯಲ್ಲಿ ಅವಳು ಕೆಲಸದ ಆಳಿಗಿಂತಲೂ ಕಡೆ. ಕೂರಲು, ನಿಲ್ಲಲು ಮನೆಯಲ್ಲಿ ಮತ್ತೊಬ್ಬರ ಅನುಮತಿ ಪಡೆಯಬೇಕಿತ್ತು. ಗಂಡನೋ ಅನುಮಾನದ ಪಿಶಾಚಿ.


ಅಪ್ಪನ ಕರೆ ಬಂದಾಗಲೆಲ್ಲಾ ಸರಸ್ವತಿ "ನಾನಿಲ್ಲಿ ಸುಖವಾಗಿದ್ದೇನೆ ಅಪ್ಪ. "

"ಹೋ.. ಇಲ್ಲಿ ಇವರೆಲ್ಲಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ" ಎಂದು ಹೇಳುತ್ತಿದ್ದಳು.


ಪತ್ರದಲ್ಲಿಯೂ "ನಾನಿಲ್ಲಿ ಕ್ಷೇಮ. ನೀವು.. " ಅಷ್ಟೇ..


ಅಪ್ಪನ ಮನಸ್ಸಿಗೆ ನೋವಾಗಬಾರದೆಂದು ಒಂದೇ ಸುಳ್ಳನ್ನು ವಿಧವಿಧವಾಗಿ ಆಗಾಗ ಹೇಳುತ್ತಿದ್ದಳು.


ಹಳ್ಳಿಯವರಾರೋ ಒಂದೆರಡು ಬಾರಿ ಸರಸ್ವತಿಯ ನಿಜ ಬದುಕನ್ನು ನೋಡಿ ಪಾಪಯ್ಯನಿಗೆ ಹೇಳಿದಾಗ ಅವನು ನಂಬಿರಲಿಲ್ಲ. ಅವನು ಹೋದಾಗ ಅಲ್ಲಿ ಅಂತಹದ್ದೇನೂ ಕಂಡಿರಲಿಲ್ಲ. ಸರಸ್ವತಿ ಕೂಡಾ ಅದೇ ಸುಳ್ಳನ್ನು ಚರ್ವಿತ ಚರ್ವಣದಂತೆ ಹೇಳಿದ್ದಳು. ಇಳಿದು ಹೋದ ಮಗಳನ್ನು ಕಂಡಾಗಲೂ ಅವಳು ಹೇಳಿದ್ದನ್ನು ನಂಬಿ ನನ್ನ ಮಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ ಎಂದು ಬಂದಿದ್ದನು. ಆದರೆ.. ಮಗಳು ಮನೆಗೆ ಬಂದದ್ದು ಹೆಣವಾಗಿಯೇ.. ಬೆಂಕಿ ಹಚ್ಚಿ ಕೊಂದಿದ್ದರು. ಬಹುಶಃ , ಅರೆ ಜೀವವಾಗಿದ್ದರೂ ಆಕೆ ಅಪ್ಪನ ನೆಮ್ಮದಿಗೆ ಅದೇ ಸುಳ್ಳನ್ನೇ ಹೇಳುತ್ತಿದ್ದಳೋ ಏನೋ..


"ಅವಳು ಹೇಳಿದ್ದು ಒಂದೇ ಸುಳ್ಳು. ಸಾಯುವವರೆಗೂ ಆಕೆಯಾಡಿದ್ದು ಒಂದೇ ಸುಳ್ಳು" ಎನ್ನುತ್ತಾ ಮನೆಮನೆಗೂ ಹೋಗಿ ಹೇಳುತ್ತಾ ಸರಸ್ವತಿಯನ್ನು ನೆನೆದು ಕಣ್ಣೀರು ಹಾಕಿಕೊಂಡೇ ಹುಚ್ಚನಂತೆ ತಿರುಗುತ್ತಿದ್ದಾನೆ ಪಾಪಯ್ಯ.


~ವಿಭಾ ವಿಶ್ವನಾಥ್


ಶನಿವಾರ, ಆಗಸ್ಟ್ 15, 2026

ಕಥೆ ಹೇಳುವ ಮುನ್ನ..


"ಇಲ್ಲಿ ನೆರೆದಿರುವ ಎಷ್ಟು ಜನ ಕಥೆ ಕೇಳಲು ಸಿದ್ದರಾಗಿದ್ದೀರಿ..?" ಎಂಬ ಶಾರ್ವರಿಯ ಮಾತಿಗೆ ಸಭಾಂಗಣದಲ್ಲಿದ್ದ ಎಲ್ಲರೂ ಕೈ ಎತ್ತಿದ್ದರು. ಆದರೆ, ಒಬ್ಬನ ಹೊರತಾಗಿ. "ನೀವಿನ್ನೂ ಕತೆ ಕೇಳಲು ಸಿದ್ಧವಾಗಿಲ್ಲವಾ.. ಅಥವಾ ಕತೆ ಆಸಕ್ತಿಯೇ ಇಲ್ಲದೆ ಸುಮ್ಮನೆ ಟೈಮ್ ಪಾಸ್ ಗೆ ಎಂದು ಬಂದಿದ್ದೀರಾ..??" ಎಂದು ಆಕೆ ಪ್ರಶ್ನಿಸಿದಾಗ ಎಲ್ಲರೂ ಯಾರಿಗೆ ಎಂದು ಸುತ್ತ ಮುತ್ತ ಹುಡುಕುತ್ತಿದ್ದರು.


"ರೀ, ಮಿಸ್ಟರ್ ನಿಮ್ಮನ್ನೇ.. ಕೈ ಎತ್ತದ ನಿಮ್ಮನ್ನೇ ನಾನು ಕೇಳುತ್ತಾ ಇರುವುದು" ಎಂದಾಗ ಪ್ರದ್ಯುಮ್ನ ಎದ್ದು ನಿಂತು ಖ್ಯಾತ ಕಥೆಗಾರ್ತಿ ಶಾರ್ವರಿಗೆ ಕೇಳಿದ ಮೊದಲ ಪ್ರಶ್ನೆ "ನಾನ್ಯಾಕೆ ನಿಮ್ಮ ಕಥೆ ಕೇಳಬೇಕು ? ಅಷ್ಟಕ್ಕೂ ಕಥೆ ಕೇಳಲು ಆಸಕ್ತಿ ಇದೆಯಾ ಎಂದು ಪ್ರಶ್ನಿಸುವ ಬದಲಾಗಿ, ಕಥೆ ಹೇಳುತ್ತಾ ಕೇಳುಗರಲ್ಲಿ ಆಸಕ್ತಿ ಹುಟ್ಟಿಸಬೇಕೇ ಹೊರತು ಆಸಕ್ತಿ ಇರುವವರಿಗೆ ಮಾತ್ರ ಕತೆ ಹೇಳುವುದಲ್ಲ.. ಹಾಗಾದಲ್ಲಿ ನೀವು ಹೇಳುವ ಕತೆ ಎಷ್ಟು ಜನರಿಗೆ ತಲುಪಲು ಸಾಧ್ಯ..?" ಎಂದು ಪ್ರಶ್ನೆಯ ಸರಮಾಲೆಯನ್ನೇ ಶಾರ್ವರಿಯ ಎದುರಿಗಿಟ್ಟನು. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಆತನ ತಾಯಿ ಆತನ ಕೈ ಜಗ್ಗಿಸಿ ನಿಲ್ಲಿಸು.. ನಿಲ್ಲಿಸು ಎಂಬಂತೆ ಸನ್ನೆ ಮಾಡುತ್ತಿದ್ದರೂ ಆತ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ತನ್ನ ಪ್ರಶ್ನೆಗಳನ್ನೇ ಮುಂದುವರಿಸುತ್ತಿದ್ದುದನ್ನು ಕಂಡು ಕೊನೆಗೆ ಅವರೇ ಎದ್ದು ನಿಂತು ಆತನನ್ನು ತಡೆದರು.


"ಸ್ಸಾರಿ, ಅವನು ಸ್ವಲ್ಪ ಹೀಗೆಯೇ.. ಎಲ್ಲಿ ಹೋದರೂ ಹೀಗೆಯೇ ಅಧಿಕ ಪ್ರಸಂಗ ಮಾಡಿ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಾನೆ. ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ 100 ನೇ ಪುಸ್ತಕದ ಬಿಡುಗಡೆಗೆ ನಿಮ್ಮನ್ನು ನೋಡಿ ಮಾತನಾಡಿಸಲು ಬಹಳ ಕಾತುರಳಾಗಿದ್ದೆ. ಒಬ್ಬಳನ್ನೇ ಕಳುಹಿಸಲು ಇಷ್ಟ ಪಡದ ಅವನೂ ನನ್ನೊಡನೆ ಬಂದಿದ್ದಾನೆ. ಅವನಿಗೆ ಕತೆಗಳೆಂದರೆ ಅಷ್ಟಕ್ಕಷ್ಟೇ.. " ಎಂದು ಅವನಮ್ಮ ಹೇಳಿದಾಗ ಶಾರ್ವರಿಯವರು ನಗುತ್ತಾ "ತೊಂದರೆಯಿಲ್ಲ.. ನನ್ನ ಬದುಕಿನ ಅನುಭವದಷ್ಟು ಅವನಿಗೆ ವಯಸ್ಸಾಗಿಲ್ಲ. ಆದರೆ, ಹಾಗೆಂದು ಅವನ ಪ್ರಶ್ನೆಯನ್ನು ಸುಮ್ಮನೆ ನಿರಾಕರಿಸಲು ಅಥವಾ ಪಕ್ಕಕ್ಕಿಡಲು ಸಾಧ್ಯವಿಲ್ಲ. ಅವನ ಮಾತಿನಲ್ಲಿ ತಪ್ಪು ಕಾಣುತ್ತಿಲ್ಲ. ಬದಲಾಗಿ ಅವನ ಕುತೂಹಲ ಕಾಣುತ್ತಿದೆ. ಅದಕ್ಕೆ ಉತ್ತರಿಸುವೆ" ಎನ್ನುತ್ತಾ ತಮ್ಮ ಆಲೋಚನೆ ಹಾಗೂ ವಯಸ್ಸಿನ ಪ್ರಬುದ್ಧತೆಯನ್ನು ತಮ್ಮ ಮಾತುಗಳ ಮೂಲಕ ತೋರಿದರು.




ಅದಾದ ನಂತರ ತಮ್ಮ ಮಾತುಗಳನ್ನು ಶುರು ಮಾಡಿದರು. " ಕತೆ ಬದುಕಿನಲ್ಲಿ ಯಾಕಷ್ಟು ಮುಖ್ಯವಾಗುತ್ತದೆ ಎನ್ನುವುದಕ್ಕಿಂತ ನಮಗೆ ಕತೆಗಳೆಂದರೆ ಏಕೆ ಆಸಕ್ತಿ ಗೊತ್ತೇ..??


ನಮ್ಮದೇ ಬದುಕನ್ನು ಬೇರೆಯವರ ಕನ್ನಡಕದಲ್ಲಿ ಕಂಡರೆ ಅಥವಾ ನಾವು ನಮ್ಮ ಕಣ್ಣಿನ ಮೂಲಕ ಬೇರೆಯವರ ಬದುಕನ್ನು ಕಂಡರೆ ಕೆಲವು ಬಣ್ಣ ಬಣ್ಣದ ಬದುಕುಗಳು ಕಾಣುತ್ತವೆ. ಬೇರೆಯವರ ಬದುಕುಗಳು ಕತೆಗಳಾದಾಗ ಅವು ರುಚಿಕಟ್ಟಾದ ಭೋಜನದಂತೆ ಭಾಸವಾಗುತ್ತವೆ. ದಿನಾ ಅದೇ ಅನ್ನ, ಸಾರು ತಿನ್ನುವವರಿಗೆ ಮಸಾಲೆ ದೋಸೆ ಕಂಡಾಗ ಹೇಗೆ ಮನಸ್ಸು ಅದನ್ನೇ ಬಯಸುವುದೋ.. ಹಾಗೆ ನಮ್ಮ ಬದುಕಿನಲ್ಲಿ ಇಲ್ಲದ್ದನ್ನು ಹಾಗೆಯೇ ನಾವು ಬದುಕಬೇಕು ಎನ್ನಿಸಿದ್ದನ್ನು ಕತೆಯಲ್ಲಿ ಕಂಡು ಅಲ್ಲಿ ನಮ್ಮನ್ನೇ ನಾವು ಕಲ್ಪಿಸಿಕೊಳ್ಳುತ್ತಾ ಹೋಗುತ್ತೇವೆ. ಆಗ ಕತೆಗಳು ನಮ್ಮ ಕನಸಿನ ಬದುಕಾಗುತ್ತವೆ. ವಾಸ್ತವಕ್ಕಿಂತ ಕಲ್ಪನೆಗಳು, ಕತೆಗಳು ವರ್ಣರಂಜಿತವಾಗಿ ತೋರುತ್ತವೆ. ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ. ಕೆಲವರು ತಮ್ಮ ಕಲ್ಪನೆಗಳಿಗೆ ಗರಿ ಹಚ್ಚಿ ಕತೆಗಳನ್ನು ಕಟ್ಟುತ್ತಾ.. ಹೇಳುತ್ತಾ.. ಬರೆಯುತ್ತಾ ಹೋದರೆ, ಹಲವರು ಅವುಗಳನ್ನು ಕಂಡು, ಕೇಳಿ, ಓದಿ ಕಲ್ಪನೆಗಳನ್ನು ಗರಿಗೆದರಿಸಿಕೊಳ್ಳುತ್ತಾರೆ.


ಪ್ರತಿಯೊಬ್ಬನೊಳಗೂ ಒಂದು ಕತೆ ಇರುತ್ತದೆ. ಆ ಕತೆ ಅವರಿಂದ ಬಿಡುಗಡೆ ಪಡೆಯುವುದು ಅಥವಾ ಅವಿತು ಕುಳಿತುಕೊಳ್ಳುವುದು ಎರಡಕ್ಕೂ ಅವರವರೇ ಕಾರಣ.


ಇನ್ನು ಕತೆ ಕೇಳುವ ಆಸಕ್ತರಿಗೆ ಮಾತ್ರ ಕತೆ ಹೇಳಬೇಕು ಎಂಬುದು ನನ್ನ ಉದ್ದೇಶವಷ್ಟೇ.. ಏಕೆಂದರೆ, ಆಸಕ್ತಿ ಎಂಬುದು ಇಂದಿಗೂ ಹೊರಗಿನಿಂದ ಹುಟ್ಟುವುದಲ್ಲ. ತಮ್ಮ ಮನಸ್ಸಿನಿಂದ ಮುಡಿಸಿಕೊಳ್ಳದ ಹೊರತು ಯಾವ ಆಸಕ್ತಿಯೂ ತನ್ನಿಂದ ತಾನೇ ಉದ್ಭವಿಸಲಾರದು. ನೀನು ಕತೆ ಕೇಳಲು ಆಸಕ್ತಿ ಇಲ್ಲವೆಂದು ತೋರಿಸಿಕೊಂಡರೂ ನಿನ್ನ ಸುಪ್ತ ಮನಸ್ಸಿನಲ್ಲಿ ಕತೆ ಎಂದರೆ ಹೇಗಿರಬಹುದು.. ಕತೆ ಎಂದರೆ.. ಈ ಕತೆ ಯಾರನ್ನು ನೆನಪಿಸಬಹುದು ಎಂಬುದನ್ನು ಆಲೋಚಿಸುತ್ತಲೇ ಒಲ್ಲದ ಮನಸ್ಸಿನಿಂದ ಕತೆ ಕೇಳಲು ಆರಂಭಿಸಿರುತ್ತೀಯ. ಕತೆ ಓದುವವರಿಗೆ, ಕಥೆ ಕೇಳುವುದು ರುಚಿಸದೇ ಇರಬಹುದು. ಕತೆ ಎಂಬುದು ಎಲ್ಲೆಡೆಯೂ ಇದೆ. ಅದನ್ನು ಕಾಣುವ, ಕೇಳುವ ಮನಸ್ಸಿರಬೇಕಷ್ಟೇ..


ನನ್ನ ಕತೆಗಳು ಎಷ್ಟು ಜನರಿಗೆ ತಲುಪಬಹುದು ಎಂಬುದಕ್ಕಿಂತ ನನಗೆ ಒಂದು ಕತೆ ಒಬ್ಬರ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದನ್ನು ಆಲೋಚಿಸುತ್ತೇನೆ. 100 ಜನ ಕತೆ ಕೇಳಿ, 90 ಜನ ಅದನ್ನು ಮರೆತು ಮುಂದಕ್ಕೆ ಸಾಗುವುದಕ್ಕಿಂತಲೂ.. 10 ಜನ ಕತೆ ಕೇಳಿ 10 ಜನರೂ ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಳ್ಳುವುದೋ ಅಥವಾ ಸಾರ್ಥಕವಾಗಿ ಉಪಯೋಗಿಸುವುದೋ ಮಾಡಿದಾಗ ಅದಕ್ಕೊಂದು ಸಾರ್ಥಕ ಭಾವ ಬರುತ್ತದೆ.


ಕತೆ ಹೊಡೆದಿದ್ದು ಸಾಕು ಇನ್ನು ಕತೆ ಹೇಳಿ ಎಂದು ಬಹಳ ಜನ ಬೈದುಕೊಳ್ಳುತ್ತಿರಬಹುದು. ಕತೆ ಶುರು ಮಾಡೋಣ್ವಾ..? ಎಷ್ಟು ಜನ ಕಥೆ ಕೇಳಲು ಸಿದ್ದರಾಗಿದ್ದೀರಿ..?" ಎಂದಾಗ ಎಲ್ಲರೂ ತಮ್ಮ ಕೈಯೆತ್ತಿದ್ದರು. ಪ್ರದ್ಯುಮ್ನನಂತೂ ತನ್ನ ಎರಡೂ ಕೈಗಳನ್ನು ಮೇಲೆತ್ತಿದ್ದ.


~ವಿಭಾ ವಿಶ್ವನಾಥ್


ನನ್ನ ಮೆಚ್ಚಿನ ಸಾಧಕಿ (ಬೆಳಕಿಂಡಿಯ ಕತೆಗಳು - 71)

 


ಮಹಿಳಾ ದಿನಾಚರಣೆ ಪ್ರಯುಕ್ತ 'ನಿಮ್ಮ ನೆಚ್ಚಿನ ಸಾಧಕಿ' ಯಾರು ಎಂಬ ಪ್ರಶ್ನೆಗೆ ಎಲ್ಲರೂ ಶಾಲೆಯಲ್ಲಿ ವಿವಿಧ ಹೆಸರನ್ನು ಹೇಳತೊಡಗಿದರು ಸರೋಜಿನಿ ನಾಯ್ಡು, ಮಿಶೆಲ್ ಒಬಾಮಾ, ಸೈನಾ ನೆಹ್ವಾಲ್, ಸುಧಾ ಮೂರ್ತಿ, ಹಿಮಾ ದಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಹೆಸರು ಹೇಳಿದರು.


ನನ್ನನ್ನು ಕೇಳಿದಾಗ ನಾನು ಹೇಳಿದ್ದು "ನನ್ನ ಮೆಚ್ಚಿನ ಸಾಧಕಿ ಅಮ್ಮ". ತಮ್ಮ ಮೆಚ್ಚಿನ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಸಾಧಕರು. ಆದರೆ, ಅಂತಹಾ ಸಾಧನೆ ಮಾಡಲು ಪ್ರೇರೇಪಿಸುವವಳು, ಅಂತಹಾ ಹಾದಿಯಲ್ಲಿ ಸಹಕಾರ ನೀಡಿ ಬೆನ್ನೆಲುಬಾಗುವವಳು, ತನ್ನ ಆಸೆಯನ್ನೆಲ್ಲಾ ಬದಿಗೊತ್ತಿ ತಪಸ್ಸಿನಂತೆ ಮಕ್ಕಳ ಒಳಿತಿಗಾಗಿ ಎದುರು ನೋಡುವವಳೂ ಸಾಧಕಿಯೇ.. ಮಕ್ಕಳ ಸಾಧನೆಯ ತಪಸ್ಸಿನ ಸಲುವಾಗಿ ತಾನೇ ಹವಿಸ್ಸಾಗಿ ಸಮರ್ಪಿತವಾಗುವ ಅಮ್ಮನೇ ನಿಜವಾದ ಸಾಧಕಿ. ಈಗ ತರಗತಿಯಲ್ಲಿ ಚಪ್ಪಾಳೆಯ ದನಿ ಮುಗಿಲು ಮುಟ್ಟಿತ್ತು.


~ವಿಭಾ ವಿಶ್ವನಾಥ್

ಮರಳಿ ಮಣ್ಣಿಗೆ.. (ಬೆಳಕಿಂಡಿಯ ಕತೆಗಳು - 70)

 


ಹಳ್ಳಿಯ ಈ ಜೀವನ ನಿನಗೆ ಬೇಡಪ್ಪಾ.. ನಮ್ಮ ತಲೆಮಾರಿಗೇ ಇದು ಸಾಕು ಎನ್ನುತ್ತಾ ಹಳ್ಳಿಯಿಂದ ದೂರವಿಟ್ಟು ಮಗನನ್ನು ಓದಿಸಿದ ರಾಜೀವ. ಈ ಬೆಲೆ ಇಳಿಕೆ, ಹಕ್ಕಿಗಳ ಕಾಟ, ಬೆಳೆದ ಬೆಳೆಗೆ ಸರಿಯಾಗಿ ಸಿಗದ ಮಾರ್ಕೆಟ್ ಇದೆಲ್ಲವೂ ಅವನನ್ನು ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತ್ತು. 


ಆದರೆ, ಅವನ ಮಗ ಜಗದೀಶನಿಗೆ ಯಾವಾಗಲೂ ಮಣ್ಣಿನ ಸೆಳೆತ. ಹಳ್ಳಿಯಲ್ಲಿ ನಾವು ಕಷ್ಟಪಟ್ಟು ದುಡಿದರೆ ಮಾತ್ರ ಎಲ್ಲರೂ ದಿಲ್ಲಿಯಲ್ಲಿ ದರ್ಬಾರ್ ನಡೆಸಲಿಕ್ಕಾಗುವುದು ಎನ್ನುತ್ತಾ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ತಂತ್ರಜ್ಞಾನವನ್ನು ಉಪಯೋಗಿಸಿ ಹಳ್ಳಿಯಲ್ಲಿನ ಎಲ್ಲರಿಗೂ ಕೆಲಸವನ್ನು ಸುಲಭ ಮಾಡಿ ಕೊಟ್ಟ. ಈಗ ರೈತರಿಂದ ನೇರವಾಗಿಯೇ ಬಳಕೆದಾರನಿಗೆ ದೊರೆಯುತ್ತಿದ್ದ ಫಸಲು ದಲ್ಲಾಳಿ ಹಾಗೂ ಬೆಲೆ ಇಳಿಕೆ ಸಮಸ್ಯೆಯನ್ನು ಪರಿಹರಿಸಿತ್ತು. ಸಾವಯವ ಕೃಷಿ ಕೂಡಾ ಲಾಭ ಕಾಣುವಂತೆ ಮಾಡಿತ್ತು. ಮಣ್ಣಿನಿಂದಲೇ ಎಲ್ಲರ ಬೆಳವಣಿಗೆ.. ನಾವೇನೇ ಪಡೆದರೂ ಮರಳಿ ಮಣ್ಣಿಗೇ ಅದನ್ನು ಅರ್ಪಿಸಿದರೆ ಅಭ್ಯುದಯ ಕಾಣಬಹುದು ಎಂದವನ ಮಾತು ಎಲ್ಲರ ಕಣ್ತೆರೆಸಿತ್ತು. ಅಂತೂ ಮರಳಿ ಮಣ್ಣಿಗೆ ಬಂದಿದ್ದ


~ವಿಭಾ ವಿಶ್ವನಾಥ್

ಆಕರ್ಷಕ ಬೆಳವಣಿಗೆ (ಬೆಳಕಿಂಡಿಯ ಕತೆಗಳು - 69)


 ಆಶಾ ಬೇಸಿಗೆ ರಜೆ, ದಸರಾ ರಜೆ ಸಿಕ್ಕಾಗಲೆಲ್ಲಾ ಸಿಟಿಯಲ್ಲಿ ದೊಡ್ಡಮ್ಮನ ಮನೆಗೆ ಹೋಗಿಬಿಡುತ್ತಿದ್ದಳು. ಅಲ್ಲಿನ ಸಮ್ಮರ್ ಕ್ಯಾಂಪ್ ಗೆ ಸೇರಿಕೊಂಡು ಅಲ್ಲಿನ ಮಲ್ಟಿಪ್ಲೆಕ್ಸ್, ಪಿಜ್ಜಾ, ಮಾಲ್ ಗಳಲ್ಲಿ ಸುತ್ತುತ್ತಾ ಅಲ್ಲಿನ ಜನಜೀವನಕ್ಕೆ ಹೊಂದಿಕೊಂಡು ಆಕರ್ಷಿತಳಾಗುತ್ತಿದ್ದರೆ ಆಕೆಯ ದೊಡ್ಡಮ್ಮನ ಮಗಳು ಉಷಾ ಸಿಟಿಯಿಂದ ಹಳ್ಳಿಗೆ ಬಂದು ಅಲ್ಲಿನ ಕೃಷಿ, ಹಸಿರಿನ ಪರಿಸರ, ತೊರೆಯಲ್ಲಿ ಆಟ, ಬೆಟ್ಟ-ಗುಡ್ಡ ಸುತ್ತುತ್ತಾ ರಾಗಿ ಮುದ್ದೆ, ಹಸಿಕಾಳು ಸಾರು, ನೊರೆ ಹಾಲು ಇವುಗಳಲ್ಲಿ ಆಕರ್ಷಣೆ ಕಂಡುಕೊಂಡಿದ್ದಳು.


ಇಬ್ಬರೂ ವಿರುದ್ಧ ಧೃವಗಳತ್ತ ಆಕರ್ಷಣೆ ಹೊಂದುತ್ತಾ ಆಶಾ ಹಳ್ಳಿಯಲ್ಲಿ ಸಿಟಿಯ ಬದುಕನ್ನು ಬದುಕುವ ಕೃತಕ ಪರಿಸರವನ್ನು ರೂಪಿಸಿಕೊಂಡಳು. ಆದರೆ, ಉಷಾ ಸಿಟಿಯಿಂದ ಕೊಂಚ ದೂರದಲ್ಲಿ ಆರ್ಗಾನಿಕ್ ಫಾರ್ಮಿಂಗ್ ಮಾಡುತ್ತಾ ಸಿಟಿ ಮಕ್ಕಳಿಗೆ ಹಳ್ಳಿಯ ವಾತಾವರಣದ ಆಕರ್ಷಣೆ ಮಾಡುತ್ತಾ ಅವರಿಗೆ ಕೃಷಿಯ ಅರಿವು ಮೂಡಿಸುತ್ತಿದ್ದಳು. 


~ವಿಭಾ ವಿಶ್ವನಾಥ್

ನೆಮ್ಮದಿ (ಬೆಳಕಿಂಡಿಯ ಕತೆಗಳು - 68)

 


ಭೂಮಿಕಾ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು, ಹಳ್ಳಿಯ ಪರಿಸರದ ಅರಿವೂ ಇರಲಿಲ್ಲ. ತಂದೆ-ತಾಯಿ ಕೆಲಸ, ಹಣ ಎಂದು ಹೊರಗಡೆಯೇ ಕಾಲ ಕಳೆಯುತ್ತಿರುವಾಗ ಅಜ್ಜಿ ಅವಳಿಗೆ ಅವಳಿಗೆ ಹಳ್ಳಿಯ ಪರಿಸರ ಮತ್ತು ಅನ್ಯೋನ್ಯತೆಯ ಬಗ್ಗೆ ತಿಳಿಸಿ ಅಲ್ಲಿಗೆ ಹೋಗುವ ಆಸೆ ಹುಟ್ಟಿಸಿದ್ದಳು. ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ದುಡಿಯುತ್ತಿದ್ದವಳಿಗೆ ಪ್ರಾಜೆಕ್ಟ್ ಒಂದರ ಮೇಲೆ ಹಳ್ಳಿಗೆ ಹೋಗುವ ಅವಕಾಶ ದೊರೆಯುತ್ತದೆ.

ಹಳ್ಳಿಗೆ ಹೋದವಳಿಗೆ ಅಲ್ಲಿನ ನೀರಿನ ಅಭಾವ, ಶೌಚಾಲಯದ ಕೊರತೆ, ಶಿಕ್ಷಣದ ಪರಿಸ್ಥಿತಿ ಮತ್ತು ಬಡತನದೊಂದಿಗೆ ಅವರ ಹಂಚಿ ತಿನ್ನುವ ಮತ್ತು ಹೊಂದಿ ಬಾಳುವ ಅನ್ಯೋನ್ಯತೆ ಮತ್ತು ಪ್ರೀತಿಯ ಅರಿವೂ ಆಗುತ್ತದೆ. ಪಟ್ಟಣದಲ್ಲಿ ಎಲ್ಲವೂ ಕೊರಗುವ ಮತ್ತು ಹಣದ ಹಿಂದೆ ಬಿದ್ದು ಪ್ರೀತಿಯ ಅರಿವೇ ಇಲ್ಲದ ಬಾಳುತ್ತಿರುವುದರ ಅರಿವಾಗುತ್ತದೆ. ಆದ್ದರಿಂದ ಹಳ್ಳಿಯಲ್ಲೇ ನೆಲೆಸಿ ಅವರ ಸಹಕಾರದೊಂದಿಗೆ ಮೂಲಭೂತ ಸೌಕರ್ಯಗಳನ್ನೆಲ್ಲಾ ಒದಗಿಸಿ ನೆಮ್ಮದಿಯಲ್ಲಿ ಅಲ್ಲೇ ನೆಲೆಸುತ್ತಾಳೆ. ಪಟ್ಟಣದಲ್ಲಿನ ಹಣಕ್ಕಿಂತ, ಹಳ್ಳಿಯಲ್ಲಿನ ಸಹಕಾರ, ಪ್ರೀತಿಯಲ್ಲಿ ನೆಮ್ಮದಿಯಿದೆ ಎಂಬುದನ್ನು ಅರಿಯುತ್ತಾಳೆ.


~ವಿಭಾ ವಿಶ್ವನಾಥ್

ಕೋಗನೂರ ಸ್ವಾತಂತ್ರ್ಯ ಯೋಧರು (ಪುಸ್ತಕ ಯಾನ - 482)


ಮೂಲ ಆಕರದ ಶೀರ್ಷಿಕೆ : ಕೋಗನೂರ ಸ್ವಾತಂತ್ರ್ಯ ಯೋಧರು

ಲೇಖಕರು (ಮೂಲ) : ನಲವಡಿ ಶ್ರೀಕಂಠಶಾಸ್ತ್ರಿಗಳು

ಸಂಪಾದಕರು : ಎಚ್. ಎಸ್. ಕೆಂಗುಡ್ಡಪ್ಪನವರ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು 


ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ದಿಸೆಯಲ್ಲಿ ಹೆಸರೇ ಕೇಳದ ಹಳ್ಳಿಗಳು, ಪುಟ್ಟ ಗ್ರಾಮಗಳ ವೀರರು ತಮ್ಮ ಕೈಲಾದಂತೆ ಸೇವೆ ಸಲ್ಲಿಸಿದ್ದಾರೆ. ದೇಶದಲ್ಲೆಡೆ ಸ್ವಾತಂತ್ರ್ಯದ ಕಿಚ್ಚು ಹರಡಿರುವ ಸಂದರ್ಭದಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೋಗನೂರು ತನ್ನದೇ ವಿಶೇಷ ಛಾಪು ಮೂಡಿಸಿತು. ಪ್ರಮುಖವಾಗಿ ಮೈಲಾರ ಮಹದೇವಪ್ಪನವರು ಹಾಗೂ ಸಹಚರರ ಸಾಹಸಗಾಥೆಯನ್ನು ಹೇಳಬಯಸುವೆ. ಮೈಲಾರ ಮಹದೇವಪ್ಪನವರ ಸಹಚರರಾಗಿ ಅವರೊಡನೆ ಹುತಾತ್ಮರಾದ ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಕೋಗನೂರಿನವರು.


ಕೋಗನೂರಿನ ಗೋಣೆಪ್ಪ ಕಮತ, ಯಲ್ಲವ್ವ ಕಮತ, ಚನ್ನಪ್ಪ ಕೊರಗುಂದ, ನಿಂಗಪ್ಪ ಕೊರಗುಂದ, ನಿಶೀಮಪ್ಪ ಚನ್ನೂರ, ವೀರಭದ್ರಪ್ಪ ಪಾಟೀಲ, ವೀರಭದ್ರಪ್ಪ ಅಂಗಡಿ, ಗುಡ್ಡಪ್ಪ ದೇವಪ್ಪನವರ, ಭಗವಂತಪ್ಪ ಬೂದನೂರ ನೇರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಮಹದೇವಪ್ಪನವರ ನಾಯಕತ್ವದಲ್ಲಿ ಕೋಗನೂರಿನ 18 ಜನರು ಭಾಗವಹಿಸಿ ದೇಶಪ್ರೇಮ ತೋರಿದ ಇತಿಹಾಸ ಸ್ಮರಣೀಯ. 


ಗೋಣೆಪ್ಪ ಕಮತ, ಯಲ್ಲವ್ವ ಕಮತ ಪತಿ-ಪತ್ನಿಯರು. ಬ್ರಿಟಿಷರು ಇವರಿಬ್ಬರನ್ನು ಜೈಲಿಗೆ ಹಾಕಿದ್ದಾಗ ಯಲ್ಲಮ್ಮ ಕಮತನವರು ಜೈಲಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದು ವೀರಯೋಧರ ದೇಶಪ್ರೇಮ ಹೇಗಿತ್ತು ಎಂಬುದರ ಸಾಕ್ಷಿಯಾಗಿದೆ. ಜೊತೆಗೆ ಹೆಣ್ಣು ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದ ಬಗೆ, ಗರ್ಭಿಣಿ ಹೆಣ್ಣು ಮಕ್ಕಳು ಹಿಂಜರಿಯದೆ ಹೋರಾಟದಲ್ಲಿ ಮುನ್ನುಗ್ಗುತ್ತಿದ್ದ ದಿನಗಳು ಭವಿಷ್ಯಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯ ಎಂಬುದರ ಪ್ರತಿಫಲನದಂತಿದೆ.


"ಭಾರತ ದೇಶದ ಬಂಧವಿಮೋಚನೆಗೆ ಭಾರೀ ಕಷ್ಟವ ಸೋಸಿದರು

ತಾರುಣ್ಯವೆಲ್ಲವ ತುರಂಗದಲ್ಲಿ ಕಳೆದು ಮಡಿದ ಮಹಾಶೂರ ಮೈಲಾರರು

ತುಂಟರ ತುಂಟನು, ಭಂಟರ ಭಂಟನು, ಸಾತ್ವಿಕರೊಳಗೆ ಸರದಾರ! 

ದಿಟ್ಟನ ಹೆಸರನ್ನು ಹುಟ್ಟಿದ ಕೂಸಿಗೆ ಇಟ್ಟರೂ ತೀರದು ಉಪಕಾರ!"



1930ರಲ್ಲಿ ನಡೆದ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ ಮೈಲಾರಪ್ಪನವರು ಎಂಬುದು ಹೆಮ್ಮೆಯ ವಿಷಯ. 


ಆಗಿನ ಅವಿಭಾಜಿತ ಧಾರವಾಡ ಜಿಲ್ಲೆ, ಈಗಿನ ಹಾವೇರಿ ಶಿರಹಟ್ಟಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಮಾರ್ತಂಡಪ್ಪ ಮತ್ತು ಬಸಮ್ಮ ದೇಶಪ್ರೇಮಿ ದಂಪತಿಗಳ ಪುತ್ರನೇ ಮಹದೇವಪ್ಪ ಮೈಲಾರ. 1920ರಲ್ಲಿ ಗಾಂಧೀಜಿಯವರು ಧಾರವಾಡಕ್ಕೆ ಆಗಮಿಸಿದಾಗ ಅವರ ಭಾಷಣ ಕೇಳಿ ಪ್ರಭಾವಿತರಾಗಿ ಅಹಿಂಸಾ ತತ್ವವನ್ನು ಅಳವಡಿಸಿಕೊಂಡು 16ನೇ ವರ್ಷದಿಂದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ನಡೆದವರು. 


ಬಿಜಾಪುರ ಜಿಲ್ಲೆಯ ಕಲಾದಗಿ ಗ್ರಾಮದ ಇದಕ್ಕೆ ಹೋಗಿ ಖಾದಿ ಬಟ್ಟೆ ತಯಾರಿಸುವುದು ಹೇಗೆಂದು ತಿಳಿದು ತಾನು ತಯಾರಿಸಿದ ಖಾದಿಯನ್ನು ಊರು ತಿರುಗಿ ಮಾರಾಟ ಮಾಡಿ ಅದರ ಪ್ರಚಾರ ಮಾಡುತ್ತಾರೆ. ಮುಂದೆ ತಮ್ಮ ಪತ್ನಿ ಸಿದ್ದಮ್ಮನವರ ಸಹಾಯದಿಂದ 1936ರಲ್ಲಿ ವರದಾ ನದಿತೀರದ ಕೊರಡೂರ ಗ್ರಾಮದಲ್ಲಿ ಸೇವಾಶ್ರಮವನ್ನು ಪ್ರಾರಂಭಿಸಿ ಅದರ ಸಂಚಾಲಕರಾಗಿ, ಪ್ರಕೃತಿ ಚಿಕಿತ್ಸೆ, ವ್ಯಾಯಾಮದ ಜೊತೆಗೆ ಖಾದಿ ತಯಾರಿಸುತ್ತಾರೆ. ಇದು 'ಮಹಾದೇವನ ಖಾದಿ' ಎಂದೇ ಪ್ರಸಿದ್ಧವಾಗುತ್ತದೆ.


ದಂಡಿ ಉಪ್ಪಿನ ಚಳುವಳಿಯಲ್ಲಿ ಸ್ವತಃ ಗಾಂಧೀಜಿಯವರೇ ನೀನಿನ್ನು ಚಿಕ್ಕವನಿದ್ದೀಯ ಜೊತೆಗೆ ಹುಷಾರಿಲ್ಲದ ಸಂದರ್ಭದಲ್ಲಿ ನಿನ್ನಿಂದ ಆಗುವುದಿಲ್ಲ ಎಂದು ಹೇಳಿ ಹಿಂದೆ ಕಳುಹಿಸಿದರೂ... ಅವರ ಮಾತು ಕೇಳದೆ ಉತ್ಸಾಹದಿಂದ ಭಾಗಿಯಾಗಿ ಗಾಂಧೀಜಿಯವರಿಗೆ ತನ್ನ ಧೈರ್ಯ, ಆತ್ಮಸ್ಥೈರ್ಯ ಎಂತಹದು ಎನ್ನುವುದನ್ನು ತೋರಿದರು. ಆಗಿನ್ನೂ ಅವರಿಗೆ 19 ವರ್ಷ.  ಈ ಸತ್ಯಾಗ್ರಹದಲ್ಲಿ ಬ್ರಿಟಿಷ್ ಅಧಿಕಾರಿಗಳು ಒಂದು ಗೆರೆ ಹಾಕಿ ಯಾರೂ ದಾಟದಂತೆ ಸೂಚನೆ ನೀಡಿದ್ದರಾದರೂ.. ಅದನ್ನು ದಾಟಿ ಅವರ ಕಟ್ಟಳೆಯನ್ನು ಮುರಿದು 6 ತಿಂಗಳ ಜೈಲುವಾಸ ಅನುಭವಿಸಿದ್ದರು.


'ಚಲೇ ಜಾವ್' ಚಳುವಳಿಯ ಅಂಗವಾಗಿ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ನಡೆದು ಚಾವಡಿ ರೈಲ್ವೇ ಸ್ಟೇಷನ್ ಸುಟ್ಟರು. ವಸೂಲಿಯಾದ ಹಫ್ತೆ ಲೂಟಿ ಮಾಡುವುದು ಮಾಡುತ್ತಾರೆ. ಇವರ ನೇತೃತ್ವದಲ್ಲಿ ಮುಂದೆ ಬ್ರಿಟಿಷರ ನೆಲೆಗಳನ್ನು ನಾಶ ಮಾಡುವುದು, ಬ್ರಿಟಿಷರಿಗೆ ಸಂಬಂಧಿಸಿದ ಟಪಾಲುಗಳನ್ನು ಬಸ್ ನಲ್ಲಿ ಸಾಗಿಸುವಾಗ ಅಪಹರಿಸುವುದು ಮಾಡಿ ಬ್ರಿಟಿಷರನ್ನು ಹೈರಾಣಾಗಿಸಿದ್ದರು. ಗಾಂಧಿ ಮಾರ್ಗದ ತಾತ್ವಿಕತೆಯನ್ನೂ.. ಯಾರಿಗೂ ತಲೆಬಾಗದ ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ ಆಜಾದರಂತಹ ದಿಟ್ಟ ಸಂಘರ್ಷದ ಹೋರಾಟವನ್ನು ಜೊತೆಜೊತೆಯಾಗಿಯೇ ನಿರ್ವಹಿಸಿದರು.


1943 ಏಪ್ರಿಲ್ 1ರಂದು ಹೊಸರಿತ್ತಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿಟ್ಟಿದ್ದ, ವಸೂಲಿಯಾದ ಹಣವನ್ನು ಅಪಹರಿಸಲು ಹೋದಾಗ ಪೊಲೀಸರ ಗುಂಡಿಗೆ, ಬ್ರಿಟಿಷರ ಗಾಳಕ್ಕೆ ಬಲಿಯಾದ ಸ್ವಾತಂತ್ರ್ಯ ಹೋರಾಟದ ಹುತಾತ್ಮರಿವರು. ಕೆಲವೆಡೆ ಬ್ರಿಟಿಷರೇ ಹಫ್ತಾ ವಸೂಲಿ ಮಾಡಿದ ಹಣವನ್ನು ಸಂಗ್ರಹಿಸಿಟ್ಟು ನಿಜವಾದ ಅಚ್ಚ ಕನ್ನಡಿಗರಾದರೆ ಆ ಹಣವನ್ನು ಅಪಹರಣ ಮಾಡಿ ಎಂದು ಸವಾಲು ಹಾಕಿದ್ದು ಎಂಬ ಉಲ್ಲೇಖಗಳೂ ಕಾಣಸಿಗುತ್ತವೆ. ಈ ಸವಾಲನ್ನು ಸ್ವೀಕರಿಸಿ ತಂಡವಾಗಿ ಕೆಲಸವನ್ನು ವಿಭಾಗಿಸಿ ತಮ್ಮಲ್ಲಿ ಯಾರು ಸತ್ತರೂ ಈ ಕಾರ್ಯ ನಿಲ್ಲುವಂತಿಲ್ಲ ಎಂದು ಹೇಳಿ ಮುನ್ನಡೆದ ವೀರ ಸೇನಾನಿ ಇವರು. 


ಸಕಾರಾತ್ಮಕ ಅಂಶವೆಂದರೆ ಈ ಮೂವರು ಹುತಾತ್ಮರಾದ ನಂತರವೂ ಹೋರಾಟ ಮುಂದುವರಿಯಿತು. ಮಹಾತ್ಮ ಗಾಂಧೀಜಿಯವರ 75ನೇ ಹುಟ್ಟು ಹಬ್ಬದ ಅಂಗವಾಗಿ 75 ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರ ತಂಡದ 75 ನೇ ಕಾರ್ಯಕ್ರಮ ಇದಾಗಿತ್ತು. 


ಕೋಗನೂರು ಸ್ವಾತಂತ್ರ್ಯ ಯೋಧರು ನಾಟಕದ ರೂಪದಲ್ಲಿದೆ. ಈ ಎಲ್ಲಾ ಅಂಶಗಳ ಜೊತೆಗೆ ಇನ್ನೂ ಹಲವು ವಿಶೇಷ ಅಂಶಗಳನ್ನು ಈ ಪುಸ್ತಕದಲ್ಲಿ ನಾವು ಕಾಣಬಹುದಾಗಿದೆ. ಇಲ್ಲಿ ಸ್ವಾತಂತ್ರ್ಯ ಪ್ರೇಮ, ಜಾತೀಯತೆ ನಿರ್ಮೂಲನೆ, ಕರ್ನಾಟಕ ಏಕೀಕರಣ ಜೊತೆಗೆ ಕೋಮು ಸಾಮರಸ್ಯವನ್ನು ಬಿಂಬಿಸಿದ್ದಾರೆ.


1954ರಲ್ಲಿ ಮೂರು ತಿಂಗಳು ನಲವಡಿ ಶ್ರೀಕಂಠಶಾಸ್ತ್ರಿಗಳು ಕೋಗನೂರಿನಲ್ಲಿ ತಂಗಿದ್ದರು. ಇದಕ್ಕೆ ಕಾರಣ ಕೋಗನೂರಿನ ಗೋಣೆಪ್ಪ ಕಮತ ಹಾಗೂ ಅವರ ಆತ್ಮೀಯರಾದ ಗುಡ್ಡೆಪ್ಪ ಡಿಳ್ಳೆಪ್ಪ. ಗೋಣೆಪ್ಪನವರು ಮಹದೇವರ ಆತ್ಮೀಯರು ಹಾಗೂ ಹೊಸರಿತ್ತಿಯ ಗೋಲಿಬಾರ್ ನಲ್ಲಿ ತಮ್ಮ ಮೂವರು ಆತ್ಮೀಯರ ಜೊತೆಗೆ ಬಲಗೈ ನಡುವಿನ ಮೂರು ಬೆರಳನ್ನು ಕಳೆದುಕೊಂಡಿದ್ದವರು. ತಮ್ಮ ಹಾಗೂ ಸಹಚರರ ಹೋರಾಟವನ್ನು ರಂಗಕ್ಕೆ ಅಳವಡಿಸುವ ಆಶಯದಿಂದ ಸ್ವಾತಂತ್ರ್ಯ ಪ್ರೇಮಿಗಳು ಹಾಗೂ ಖ್ಯಾತ ನಾಟಕಕಾರರೂ ಆಗಿದ್ದ ಶ್ರೀ ನಲವಡಿ ಶ್ರೀಕಂಠಶಾಸ್ತ್ರಿಗಳನ್ನು ಸಂಪರ್ಕಿಸಿ ಕೋಗನೂರಿನಲ್ಲಿ ತಂಗಲು ಅನುವು ಮಾಡಿಕೊಟ್ಟಿದ್ದರು. 


ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದವರ ನೈಜ ಅನುಭವಗಳು, ಸನ್ನಿವೇಶಗಳು ಎದುರಿಸಿದ್ದ ಬಿಕ್ಕಟ್ಟು, ಮಹದೇವರ ಕಾರ್ಯನಿರ್ವಹಣೆ, ಕಾರ್ಯತಂತ್ರ, ಅಪ್ರತಿಮ ದೇಶಪ್ರೇಮ, ಗಾಂಧೀಜಿಯ ಬಗೆಗಿನ ಅಭಿಮಾನ, ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಪಣತೊಟ್ಟ ಬಗ್ಗೆ, ಸಂಘಟನಾ ಶಕ್ತಿ, ಸಾಮೂಹಿಕ ಚಟುವಟಿಕೆಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದ ರೀತಿ ಎಲ್ಲವನ್ನೂ ಟಿಪ್ಪಣಿ ರೂಪದಲ್ಲಿ ಬರೆದುಕೊಂಡು ನಾಟಕ ರಚಿಸುತ್ತಾರೆ.


1980 ಏಪ್ರಿಲ್ 1ರಂದು ಕೋಗನೂರಿನಲ್ಲಿ ಕಾರಣಾಂತರದಿಂದ ಈ ನಾಟಕದ ಹಸ್ತಪ್ರತಿ ನಾಶವಾಗಿದ್ದರಿಂದ ಹೆಚ್ಚು ಕೆಂಗುಡಪ್ಪನವರು ನಾಟಕದಲ್ಲಿ ಪಾತ್ರ ಮಾಡಿದ್ದವರ ಬಾಯಿಂದ ಬಾಯಿಗೆ ಕಂಠಪಾಠವಾಗಿದ್ದ ಸಂಭಾಷಣೆಯನ್ನು ಹೇಳಿಸಿ, ಬರೆದುಕೊಂಡು, ಸಂಗ್ರಹಿಸಿರುವುದು ಈಗ ನಮಗೆ ಪುಸ್ತಕ ರೂಪದಲ್ಲಿ ಲಭ್ಯವಾಗಿದೆ. 


ಮುಂದಿನ ಪೀಳಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಪಟ್ಟ ಕಷ್ಟಗಳನ್ನು ತಿಳಿದಾಗ ಮಾತ್ರವೇ ಸ್ವಾತಂತ್ರ್ಯಎಷ್ಟೆಲ್ಲಾ ಕಷ್ಟದ ಹೋರಾಟದಿಂದ ದೊರೆತ ಫಲ, ಅದನ್ನು ಕಾಪಾಡಿಕೊಳ್ಳುವ ಹಾಗೂ ಗೌರವಿಸುವ ಕುರಿತ ಅರಿವು ಮೂಡಿಸಿಕೊಳ್ಳಲು ಸಾಧ್ಯ. 


"ನಮ್ಮ ಆಡಳಿತ ಪರಕೀಯರ ಕೈಯಲ್ಲಿದೆ ಎಂದು ಹೇಳುವುದು ಹೇಳಿತನದ ಲಕ್ಷಣವಲ್ಲವೇ..?"

"ಆಲಸ್ಯವೇ ಎಲ್ಲರನ್ನೂ ಅದೋಗತಿಗೆ ಒಯ್ಯುವ ವೈರಿ. ನಾವೀಗ ಜಾಗೃತ ಜನಾಂಗವನ್ನು ನೋಡಿ ಎಚ್ಚರಾಗಬೇಕಿದೆ."

ಇಂತಹ ಮಿಂಚಿನ ಮಾತುಗಳಿಂದ ಭಾರತ ಬಂಧನಮುಕ್ತವಾಗಬೇಕು, ದಾಸ್ಯ ಹರಿದು ಹೋಗಬೇಕು ಎನ್ನುವ ಯುವ ಉತ್ಸಾಹಿ ಮೈಲಾರ ಮಹದೇವಪ್ಪ  ತಮ್ಮ ಸ್ನೇಹಿತರನ್ನು ಸ್ವಾತಂತ್ರ್ಯಕ್ಕೆ ಹುರಿದುಂಬಿಸುವ ಬಗೆ ಇಲ್ಲಿದೆ.


ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಸಹೋದರರಿಗೆ ನೆರವಾಗಬೇಕು. ಸಂಗ್ರಾಮದ ಕರೆ ಬಂದಾಗ ಗುಂಪು ಗುಂಪಾಗಿ ಹೋರಾಡಬೇಕು. ಜೀವದಾನ ಮಾಡುವ ಪ್ರಸಂಗ ಬಂದರೂ ಸಾವಿಗಂಜದೆ ಮುನ್ನುಗ್ಗಬೇಕು ಎನ್ನುತ್ತಾ ಗತಕಾಲದ ವೀರನಾರಿಯರ ನೆನಪು ಮಾಡಿ ಹೆಣ್ಣು ಮಕ್ಕಳನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿ ಮಾಡುತ್ತಿದ್ದ ದಿನಗಳಿವೆ.


ಅಸ್ಪೃಶ್ಯ ನೀತಿಯನ್ನು ತಡೆಗಟ್ಟಿ, ಖಾದಿ ತೊಡುವ ಗಾಂಧೀಜಿಯವರ ನಿಲುವನ್ನು ಎತ್ತಿ ಹಿಡಿಯುವ ಯುವ ಜನರು ಕಾಣುತ್ತಾರೆ.


ಮೈಲಾರ ಮಹದೇವಪ್ಪನವರು ಹರ್ಡೇಕರ್ ಮಂಜಪ್ಪನವರಿಂದಲೂ ಪ್ರೇರಿತವಾಗಿದ್ದಾರೆ. ಅವರ ಕೆಲ ಮಾತುಗಳನ್ನು ತಮ್ಮ ಜೊತೆಗಾರರಿಗೆ ಹೇಳುವಾಗ ಉಲ್ಲೇಖಿಸುತ್ತಾರೆ ಸಹ.

"ಸಾವಿಗಂಚದವರು ಸತ್ಯಾಗ್ರಹಿಗಳಂತೆ. ಸತ್ಯಾಗ್ರಹದಿಂದಲೇ ಸ್ವರಾಜ್ಯ ಸಿದ್ದಿಯಂತೆ. ಸತ್ಯಾಗ್ರಹಿಗಳು ಸ್ವದೇಶಿ ವ್ರತವನ್ನು ಆಚರಿಸಬೇಕಂತೆ. ಹಿಂದೂಸ್ಥಾನದ ಬಡತನ ಕಳೆಯುವುದು ರಾಟೆ, ಖಾದಿ, ಸ್ವಉದ್ಯೋಗದಿಂದ." ಇದೇ ಮೊದಲಾಗಿ ಭಾರತವನ್ನು ಸ್ವತಂತ್ರಗೊಳಿಸುವ ಸರಳ ಮಾರ್ಗದ ಸ್ಪಷ್ಟ ನಿರೂಪಣೆಯಿದೆ.


1918ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಅನಾಚಾರವು ಜನರನ್ನು ರೊಚ್ಚಿಗೆಬ್ಬಿಸಿತ್ತು. ಇದಾದ ನಂತರ ಧಾರವಾಡದ ಬೀದಿಗಳಲ್ಲಿ ಸವಿನಯ ಕಾಯ್ದೆ ಭಂಗ, ಬ್ರಿಟಿಷ್ ಸರ್ಕಾರದಿಂದ ದೊರೆತ ವಿಧಾನ ಮಂಡಲಗಳ ಚುನಾವಣೆಗಳ ಬಹಿಷ್ಕಾರ, ಪರದೇಶಿ ಬಟ್ಟೆ, ಶಿಕ್ಷಣ ಸಂಸ್ಥೆಗಳ ಬಹಿಷ್ಕಾರ, ಶಾಸನಭಂಗಗಳು ನಡೆದವು.


ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಆತಂಕ, ನಿರ್ಬಂಧಗಳನ್ನು ಲಕ್ಷಿಸದೆ ಉಪ್ಪಿನ ಪಾರತಂತ್ರವನ್ನು ಕಿತ್ತೊಗೆದ ಮಹಾದೇವರ ಶೌರ್ಯ ನಂತರ ಜೈಲುವಾಸದ ಕುರಿತ ಚಿತ್ರಣಗಳಿವೆ.


1942ಕ್ಕೆ ಸ್ಟಾಫೋರ್ಡ್ ಕ್ರಿಪ್ಸ್ ಅವರು ರಾಜಕೀಯ ಕೊಡುಗೆ ನೀಡುವುದಾಗಿ ಭಾರತಕ್ಕೆ ಬಂದಾಗ ಅವರ ಅನಿಶ್ಚಿತ ಹೇಳಿಕೆಯನ್ನು ನಿರಾಕರಿಸಿ ಕಮಿಟಿಯಲ್ಲಾದ ತೀರ್ಮಾನ ಮುಂದಕ್ಕೆ ಕ್ವಿಟ್ ಇಂಡಿಯಾ, ಭಾರತ ಬಿಟ್ಟು ತೊಲಗಿ ಎಂದು ಮಹಾತ್ಮರು ನೀಡಿದ ಕರೆಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಕೋಗನೂರ ವೀರಯ್ಯನವರ ಸಂಘಟನೆ ಹಾಗೂ ಮೈಲಾರ ಮಹದೇವಪ್ಪನವರ ನಾಯಕತ್ವ ಶುರುವಾಗುತ್ತದೆ. ಧಾರವಾಡದಿಂದ ಬುರ್ಲಿ ಬಿಂದುಮಾಧವರಾಯರ ಪತ್ರ ತಲುಪಿ ಮುಂದೆ ಗುಂಪಿನ ಚಟುವಟಿಕೆಗಳು ನಿರ್ಧರಿಸಿದಂತೆ ಸಾಗುತ್ತವೆ. ಗುಪ್ತಚರ ಕಾರ್ಯ ಮಾಡುವವರು, ಹಳ್ಳಿ ಹಳ್ಳಿಗಳಲ್ಲಿಯೂ ತಮ್ಮ ಕೈಲಾದ ಸೇವೆ ಮಾಡುವವರು ಸ್ವಾತಂತ್ರ್ಯಕ್ಕೆ ನೆರವಾದ ಬಗೆ ಇಲ್ಲಿದೆ. 


ಮೈಲಾರ ಮಹಾದೇವರು ತಮ್ಮ ಪತ್ನಿಗೂ ಧೈರ್ಯ ತುಂಬಿ ಅವರನ್ನು ಉಳಿದ ಹೆಣ್ಣು ಮಕ್ಕಳೊಡನೆ ದೇಶ ಸೇವೆಗಾಗಿ ಬರಲು ಪ್ರೇರೇಪಿಸುತ್ತಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರಿಗೆ ಜಯ ಹಾರೈಸುವುದರ ಜೊತೆಗೆ ಅವರ ಪತ್ನಿಯ ದಿಟ್ಟತನ ಕಾಣುತ್ತದೆ. ಪೊಲೀಸರು ಅವರನ್ನು ಹಿಡಿದುಕೊಂಡು ಹೋಗಲು ವಾರೆಂಟ್ ತಂದಿರುವಾಗ ಕೊಡುವ ದಿಟ್ಟ ಉತ್ತರ ಇಲ್ಲಿ ಕಾಣುತ್ತದೆ. ಮಹದೇವಪ್ಪನವರು ಬೇರೆಲ್ಲಿಯೂ ಸಿಗದಿದ್ದಾಗ ಪ್ರತಿ ಊರಿನಲ್ಲಿಯೂ ಅವರು ಬಂದಿದ್ದಾರೆಯೇ ಎಂದು ವಿಚಾರಿಸುವ ಸಂದರ್ಭದಲ್ಲಿ ಕುರಿಗಾಹಿಗಳು ಸಹ ಅವರು ಹೋದ ಜಾಗದ ಸುಳಿವನ್ನು ನೀಡುವುದಿಲ್ಲ. 


ಬಸ್ಸಿನಲ್ಲಿದ್ದ ಟಪಾಲು ಕದಿಯುವುದಕ್ಕೆ ಡ್ರೈವರ್ ಕಂಡಕ್ಟರ್ರಿಗೆ ಬ್ಯಾಡಗಿ ಬಾಂಬ್ ಹಾಕುವ ಸಂದರ್ಭವಿದೆ. ಬ್ಯಾಡಗಿ ಬಾಂಬ್ ಎಂದರೆ ಮತ್ತೇನಲ್ಲ ಬ್ಯಾಡಗಿ ಮೆಣಸಿನಕಾಯಿ ಕಾರದಪುಡಿಯನ್ನು ಅವರ ಕಣ್ಣಿಗೆ ಎರಚುವುದು. ಬಸ್ಸಿನಲ್ಲಿರುವ ಬೇರೆ ಯಾರಿಗೂ ಯಾವುದೇ ತೊಂದರೆ ಮಾಡದೆ, ಯಾರಿಗೂ ಪ್ರಾಣ ಹಾನಿ ಮಾಡದೆ, ತಮಗೆ ಬೇಕಾದ ಟಪಾಲು ಕಸಿದುಕೊಂಡು ಹೋಗುತ್ತಾರೆ.


ಹತ್ತಿಮತ್ತೂರು ಸ್ಟೇಷನ್ ಸುಡುವ ಕಾರ್ಯಕ್ರಮವಿದ್ದಾಗ ಅಲ್ಲಿರುವ ಪೊಲೀಸರನ್ನು ದಿಕ್ಕು ತಪ್ಪಿಸಲು ಮಾರುವೇಷದಲ್ಲಿ ಕಬ್ಬು ಮಾರುವವರಂತೆ ಹೋಗಿ ಅವರಿಗೆ ಆಸೆ ತೋರಿಸಿ, ಪೊಲೀಸರ ಬಂದೂಕು ಕೆಳಗಿಡುವಂತೆ ಮಾಡಿ ಉಪಾಯದಿಂದ ಅವರನ್ನು ಕಟ್ಟಿ ಹಾಕಿ ಬಂದೂಕು ಅಪಹರಿಸಿ ಸ್ಟೇಷನ್ ಸುಡುತ್ತಾರೆ.


ಕಚವಿ ಸರ್ದಾರ ವೀರನಗೌಡರ ಪತ್ನಿ ನಾಗಮ್ಮ ಮತ್ತು ಹೊಸರಿತ್ತಿ, ಹಾಲಗಿಯ 15 ಜನ ಯುವತಿಯರು, ಕೋಗನೂರಿನ ಗೋಣೆಪ್ಪನವರ ಪತ್ನಿ ಯಲ್ಲಮ್ಮ, ಹುಬ್ಬಳ್ಳಿಯ ಹರಿಜನ ಆಶ್ರಮದಿಂದ ಯಶೋದ, ಕೃಷ್ಣೆ, ಇಂದಿರಾಬಾಯಿ, ಲಕ್ಷ್ಮಿದೇವಿ ಹೀಗೆ ಮೂರು ನಾಲ್ಕು ತಿಂಗಳಿನ ಕೂಸಿನ ತಾಯಂದಿರು ಪುಟ್ಟ ಮಕ್ಕಳಿರುವವರು ಪ್ರಭಾತ ಪೇರಿಯಲ್ಲಿ ಹಾವೇರಿಯಲ್ಲಿ ಬುಲೆಟಿನ್ ಹಂಚುವಾಗ ಹಾಗೂ ಸ್ವರಾಜ್ಯ ಸಾಧನೆಗೆ ಹೋರಾಡಿ ಎಂದು ಸಾಹೇಬರಿಗೆ ಹೇಳಿ, ಅವರಿಗೆ ಗಾಂಧಿ ಟೋಪಿ ಕೊಡುವಾಗ... ಕೋರ್ಟಿನಲ್ಲಿರುವ ಮುನಸೂಫ್ ಸಾಹೇಬರು, ಮಜೀದ, ಪೌಜದಾರರಿಗೂ, ಮಾಮಲೆದಾರರಿಗೂ ಬುದ್ಧಿ ಬರುವಂತೆ ಪತ್ರ ಓದುವಾಗ ಬಂಧಿಯಾಗಿ ಜೈಲಿಗೆ ಹೋಗುತ್ತಾರೆ


ನೆಗಳೂರ ಚಾವಡಿ, ಕೋಗನೂರ ಚಾವಡಿ, ಹೆಬ್ಬಾಳ ಚಾವಡಿ ಇಲ್ಲೆಲ್ಲ ಹಪ್ತೆ ವಸೂಲಿ ಮಾಡುವ ಒಂದೊಂದು ಸಂದರ್ಭಗಳೂ ರೋಮಾಂಚನಗೊಳಿಸುತ್ತವೆ.


ಸ್ವಾತಂತ್ರ್ಯ ಹೋರಾಟದಲ್ಲಿ ಲಾವಣಿಗಳು, ಸ್ವಾತಂತ್ರ್ಯದ ಕುರಿತ ಹಾಡುಗಳು ಇದ್ದ ಬಗೆಯನ್ನು ನಾವು ಕೇಳಿರುತ್ತೇವೆ. ಹೆಣ್ಣು ಮಕ್ಕಳ ಗುಂಪು ಪ್ರಭಾತ ಪೇರಿಯಲ್ಲಿ ಆಳುವ ಈ ಪದಗಳು ಅರ್ಥಪೂರ್ಣವಾಗಿದೆ. ಇಂತಹ ಕೆಲ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ


ಸಾಗಿರಿ ಮುಂದೆ ಸಾಗಿರಿ ಮುಂದೆ

ನಾರಿಯರೆಲ್ಲಾ ಒಂದಾಗಿ ಸಾಗಿರಿ ಮುಂದೆ

ಲಕ್ಷಿಬಾಯಿ ಚನ್ನಮ್ಮರಂತೆ

ಸುಭಾಶ್ಚಂದ್ರ ಭೋಸರಂತೆ

ವಿಜಯದ ಕಹಳೆ ಊದುತ ಮುಂದೆ

ಸಾಗಿರಿ ಮುಂದೆ ಸಾಗಿರಿ ಮುಂದೆ

ಜೈ ಹಿಂದ್‌... ಜೈ ಹಿಂದ್‌.... ಜೈ ಹಿಂದ್‌

ಸಿಂಧೂರ ಲಕ್ಷ್ಮಣ ರಾಯಣ್ಣನಂತೆ

ಸಾಗುವ ಮುಂದೆ ಸಾಗುವ ಮುಂದೆ


ಹೊಸರಿತ್ತಿಯ ಘಟನೆಯ ನಂತರವೂ ಸ್ವಾತಂತ್ರ್ಯ ಹೋರಾಟ ನಡೆಯುವ ಘಟನೆಗಳೊಂದಿಗೆ ನಾಟಕ ಮುಕ್ತಾಯವಾಗುತ್ತದೆ. 


ಮಹಾದೇವರ ತಂಡದ ಹಲವು ಸದಸ್ಯರು 'ಹೋರಾಟವೇ ಉಸಿರು' ಎಂದು ಬದುಕಿದವರು. ಚಳುವಳಿಯ ಕೆಚ್ಚು, ಪ್ರಾಮಾಣಿಕತೆ, ಬಡವರಿಗೆ ಮಿಡಿಯುವ ಹೃದಯದ ಕೆಲವರು ಭೂಮಾಲೀಕರ ಕುತಂತ್ರಕ್ಕೆ ಬಲಿಯಾದರೆ.. ಇನ್ನು ಕೆಲವರು ಸ್ವಾತಂತ್ರ್ಯ ಚಳುವಳಿಯ ಪಿಂಚಣಿಯನ್ನು ಪಡೆದು ಗೌರವಕ್ಕೂ ಪಾತ್ರರಾದರು.


2001 ಏಪ್ರಿಲ್ ಒಂದರಂದು ಕೋಗನೂರು ಗ್ರಾಮದಲ್ಲಿ ಹೊಸ ರೀತಿಯಲ್ಲಿ  ಮಾಡಿದ ಮೂವರಿಗೆ ಹುತಾತ್ಮತ್ರಯರ ಸ್ಮಾರಕ ಕಟ್ಟಿಸಿ ಅಂದೆ ಹುತಾತ್ಮರ ದಿನವನ್ನು ಆಚರಿಸುತ್ತಾರೆ. 


2015 ರ ಪರಿಷ್ಕೃತ ಮುದ್ರಣದಲ್ಲಿ 7 ನೇ ತರಗತಿಗೆ ಮೈಲಾರ ಮಹಾದೇವ ಅವರ ಕುರಿತ ಪಾಠವಿದೆ. 


ಗ್ರಂಥಋಣಿ: 

ವೃತ್ತ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ಸಿರಿಗನ್ನಡ ಪಠ್ಯ, ಇಂದಿರಾ ಕೃಷ್ಣಪ್ಪನವರ ಸಂಪಾದಿತ ಕವನಗಳಲ್ಲಿ ಮೂಡಿದ ಗಾಂಧಿ, ಪ್ರೊ. ಬಿ. ಪೊಲೀಸ್ ಪಾಟೀಲ ಅವರ ನಾನೆಂಬುದು ನಾನಲ್ಲ, ಹುತಾತ್ಮ ತಿಮ್ಮನ ಗೌಡ ಪಾಟೀಲ (ಮೆಣಸಿನಹಾಳ) ಇವುಗಳಿಂದಲೂ ಆಯ್ದ ಮಾಹಿತಿಗಳನ್ನು ಉಲ್ಲೇಖಿಸಿರುವೆ. 


~ವಿಭಾ ವಿಶ್ವನಾಥ್

ಅಪ್ಪನ ಅಂಗಡಿ (ಪುಸ್ತಕ ಯಾನ - 481)


ಪುಸ್ತಕದ ಶೀರ್ಷಿಕೆ : ಅಪ್ಪನ ಅಂಗಡಿ

ಸಂಪಾದಕರು : ಮನು ಗುರುಸ್ವಾಮಿ

ಪ್ರಕಾಶಕರು : ಕ್ರಿಯೇಟಿವ್ ಪುಸ್ತಕಮನೆ

ಪ್ರಥಮ ಮುದ್ರಣ : 2026

ಪುಟಗಳು : 84

ಬೆಲೆ : 100 ರೂ. 


ಮನು ಗುರುಸ್ವಾಮಿಯವರು ಕನ್ನಡ ಆಧ್ಯಾಪಕರು ಹಾಗೂ ಬರಹಗಾರರು. ಇವರ ಬರಹ ಸೇರಿದಂತೆ ಇಲ್ಲಿ 16 ಅಪ್ಪನ ಕುರಿತ ಬರಹಗಳನ್ನು ಕಾಣಬಹುದು. ವಿವಿಧ ಊರುಗಳ, ವಿವಿಧ ಕಾಲಘಟ್ಟಗಳ, ವಿವಿಧ ಶೈಲಿಯ ಕನ್ನಡದ, ಆಡು ಭಾಷೆಯ ಲೇಖನಗಳಿವೆ. ಅಪ್ಪಂದಿರು ಬದುಕಿದ ರೀತಿ ಮಕ್ಕಳ ಕಣ್ಣಲ್ಲಿ ಕಂಡ ಬಗೆ ವಿವಿಧ ರೂಪಗಳಲ್ಲಿ ಇಲ್ಲಿದೆ. 


ಅಪ್ಪನನ್ನು ಹೀಗೆಯೇ ಎಂಬ ರೂಪದಲ್ಲಿ ಕಂಡುಕೊಳ್ಳಲಾಗದು. ಅವನ ಸ್ವರೂಪ ವಿಭಿನ್ನ. ಆತನ ವ್ಯಕ್ತಿತ್ವವಿಲ್ಲದೆ ನಾವಿಲ್ಲ. ಅಪ್ಪ ಹಾಸುಹೊಕ್ಕಾಗಿ ನಮ್ಮೊಳಗಿರುತ್ತಾನೆ. ಬಾಲ್ಯದ ನೆನಪುಗಳಿಂದ, ನಂತರ ಬದಲಾದ ಅಪ್ಪನ ರೂಪ, ನೆನಪುಗಳು ಅಪ್ಪನ ಕುರಿತ ದೃಷ್ಟಿಕೋನ ಎಲ್ಲವೂ ಇಲ್ಲಿವೆ. ಇಲ್ಲಿ ಎಲ್ಲಿಯೂ ಹೊಡೆದು ಬುದ್ದಿ ಕಲಿಸಿದ ಅಪ್ಪಂದಿರು ಕಾಣಲಿಲ್ಲ. ಹೀಗಾಗಿ ಅಪ್ಪ ಅಷ್ಟು ಆಳಕ್ಕಿಳಿದರಾ..?! ಎಲ್ಲಿಯೂ ಅತಿರಂಜಿತ ವರ್ಣನೆಗಳಿಲ್ಲ. ವಾಸ್ತವದ ದೃಷ್ಟಿಕೋನಗಳಿವೆ. ಸುಮ್ಮನೆ ಅಪ್ಪನನ್ನು ಕಣ್ತುಂಬಿಕೊಳ್ಳಬೇಕಿದೆ. ಎಲ್ಲಾ ಅಪ್ಪಂದಿರಲ್ಲಿಯೂ ಒಂದಲ್ಲಾ ಒಂದು ಬಗೆಯಲ್ಲಿ ನಾನು ನನ್ನಪ್ಪನನ್ನು ಕಂಡ ಕೌತುಕವೂ ಇದೆ.


ಅಪ್ಪನ ಅಂಗಡಿ - ಮಂಜಯ್ಯ ದೇವರಮನಿ :

ಓದಿಲ್ಲದಿದ್ದರೂ ವ್ಯವಹಾರದ ಕಲೆ ಕಲಿತಿದ್ದ ಅಪ್ಪ ವ್ಯವಹಾರದಲ್ಲಿ ಎಷ್ಟು ನಿಪುಣ ಎನ್ನುವುದಕ್ಕೆ ಸಾಕ್ಷಿಯಾಗಿ ಅಪ್ಪನ ಅಂಗಡಿಯ ಕುರಿತು ಹೇಳುತ್ತಾ ಸಾಗುತ್ತಾರೆ. ಕಡು ಬೇಸಿಗೆಯ ಬರಗಾಲದಲ್ಲಿ ಬ್ಯಾಂಕಿನಲ್ಲಿದ್ದ ತನ್ನಲ್ಲ ದುಡ್ಡನ್ನು ಬಿಡಿಸಿಕೊಂಡು ಅಂಗಡಿಗೆ ಬೇಕಾದ ಸಾಮಾನುಗಳನ್ನು ತಂದು, ಉದ್ರಿ ಕೊಟ್ಟ ಅಪ್ಪ ಬೇರೆಯವರ ಕಣ್ಣಿಗೆ ಕಂಡ ಬಗೆಗೂ ಮಗನಿಗೆ ಕಂಡದ್ದಕ್ಕೂ ವ್ಯತ್ಯಾಸವಿದೆ. ಅಪ್ಪ ಯಾವ ನಂಬಿಕೆಯ ಮೇಲೆ ಉದ್ರಿ ಕೊಟ್ಟಿದ್ದ ಎಂದು ಮನವರಿಕೆಯಾದ ಸಂದರ್ಭ ಊರವರ ಒಳ್ಳೆಯತನಕ್ಕೂ.. ಅಪ್ಪನ ಉದಾತ್ತತೆಗೂ ಸಾಕ್ಷಿಯಂತಿದೆ. ಇಡೀ ಬರಹಗಳ ಗುಚ್ಛದಲ್ಲಿ ಇದು ಬಹಳ ಆಪ್ತವಾದ ಬರಹ.


ಹೀಗೊಂದು 'ನೀಚ ಅಪ್ಪ'ನ ನೆನಪು - ಈರಪ್ಪ ಎಂ ಕಂಬಳಿ :

ನಕಾರಾತ್ಮಕ ಶೀರ್ಷಿಕೆಯಾಗಿ ಕಂಡರೂ.. ಇಲ್ಲಿ ಸಕಾರಾತ್ಮಕವಾಗಿ ಅಪ್ಪನನ್ನು ಕಾಣುವ ಬಗೆಯಿದೆ. 

"ಯಮಕಾಲನ ತೆಕ್ಕೆಯಲ್ಲಿ ಅಳಿದು ಹೋದವರು ಎಲ್ಲಿಯೂ ಹೋಗುವುದಿಲ್ಲ. ಹೀಗೆ ಜೀವಂತವಾಗಿರುತ್ತಾರೆ. ಬದುಕಿ ಇದ್ದ ನಮ್ಮ ನಿಮ್ಮಂತವರ ಮನಗಳಲ್ಲಿ. ಅವರಿಗೆ ಕಾಡುವ ಗುಣವಿದ್ದರಂತೂ ತೀರಿತು. ಅಂಥವರು ಬೆಂಬಿಡದೆ ಸತಾಯಿಸುತ್ತಿರುತ್ತಾರೆ." 

ದೊಡ್ಡಾಟದ ಹಾರ್ಮೋನಿಯಂ ಮಾಸ್ತರಾಗಿದ್ದ ಅಪ್ಪ ಹಂಪಿಯ ಸಣ್ಣ ಕಂಬಗಳಲ್ಲಿ ರಾಗಗಳನ್ನು ನುಡಿಸಿದ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ. ಅಪ್ಪ ಮಗನನ್ನು ತನ್ನಂತಾಗಿಸದೆ ಬೇರೆ ದಾರಿ ಹಿಡಿಸಿದ್ದೇಕೆ..? ಓದಿ ನೋಡಿ. 


ಅಪ್ಪ ಎಂಬ ಕಾಡುವ ಭಾವಗೀತೆ - ವಾಸುದೇವ ನಾಡಿಗ್‌ :

ಕಟು ಶತ್ರುವಾಗಿ, ಕಟು ಗುರುವಾಗಿ ಕಂಡವ ಈ ಅಪ್ಪ ಎನ್ನುತ್ತಲೇ ಶುರುವಾದ ಲೇಖನ ಅಪ್ಪನ ಹಿರಿದಾದ ಕನಸುಗಳು ನನಸಾಗದ ಸಂದರ್ಭದಲ್ಲಿ ನಡೆಸಿಕೊಳ್ಳುತ್ತಿದ್ದ ಕಟು ಸ್ವಭಾವ ಮಗನಲ್ಲಿ ಕೆಚ್ಚು ಮೂಡಿಸಿದ ಬಗೆ, ನಂತರ ಅಪ್ಪ ಕಾಡುವ ಬಗೆ ಆರ್ದ್ರವಾಗಿ ಚಿತ್ರಿತವಾಗಿದೆ.


ಅಪ್ಪಾ - ನಾನು ನಿಮ್ಮ ಮಗ ಮತ್ತು ಮಗಳು - ಸಹನಾ ರವೀಂದ್ರ : 

ಅಪ್ಪನ ಪ್ರೀತಿಯಲ್ಲಿ ಭಾವನೆಗಳ ಕಾಮನಬಿಲ್ಲಿದ್ದರೂ.. ಗಂಡು ಮಗನಾಗಲಿಲ್ಲ ಎಂಬ ಅಸಮಾಧಾನವನ್ನು ಮಗಳಾಗಿ ಹೋಗಲಾಡಿಸಿದ ಇವರ ಸೂಕ್ಷ್ಮ ಹಾಗೂ ಪ್ರೀತಿಯ ಒಡನಾಟ ಚೆಂದವಾಗಿ ಅಭಿವ್ಯಕ್ತವಾಗಿದೆ. ಅಪ್ಪನ ಮಾರಣಾಂತಿಕ ಖಾಯಿಲೆಯ ಸಂದರ್ಭದಲ್ಲಿ ಮಗ ಮಾಡುವ ಕೆಲಸಗಳನ್ನು ಮಾಡಿದರೂ.. ಸ್ವೀಕರಿಸಲು ಅಪ್ಪನಿಗಿದ್ದ ಹಿಂಜರಿಕೆ, ಮುಜುಗರ ಅಸಮಾಧಾನಗಳಾಚೆಗೂ ಅಪ್ಪ ಮಾಡುವ ಮಗಳ ರಕ್ಷಣೆ, ಅಗತ್ಯಗಳ ಪೂರೈಕೆ, ಪ್ರಶಂಸೆ ಎಲ್ಲಕ್ಕಿಂತ ಹೆಚ್ಚಾಗಿ ಉಪಸ್ಥಿತಿಯಿಂದ ಕಾಡುತ್ತಾರೆ.


ಅಪ್ಪ ನನಗೇಕೆ ನಿನ್ನ ಪ್ರೀತಿ ತಿಳಿಯುತ್ತಿಲ್ಲ? - ಎಸ್‌. ಎಮ್‌. ಪುಷ್ಕರ :

ಶಿಸ್ತಿನ ಅಪ್ಪನ ಮುಖವನ್ನು ತೆರೆದಿಡುತ್ತಲೇ.. ಅಪ್ಪನ ಇಚ್ಛೆಯಂತೆಯೇ ಓದಿ ಕೆಲಸ ಹಿಡಿದ ನಂತರ ಮನೆಗೆ ಹೋದಾನ ಕಂಡ ಅಪ್ಪನ ಕಣ್ಣುಗಳು ಅಷ್ಟು ವರ್ಷ ಹೇಳದ ಮಾತುಗಳನ್ನು, ಪ್ರೀತಿಯನ್ನು ತೋರಿದ ಬಗೆ ಸೊಗಸಾಗಿದೆ.


ಅಪ್ಪ ಅಪ್ರಯೋಜಕನಲ್ಲ - ಪುಟ್ಟಸ್ವಾಮಿ ನೇರಲೇಕೆರೆ :

ಮಾಜಿಯ ತಾತನನ್ನು ತೋರುತ್ತಲೇ ಮಾಜಿಯ ತಂದೆಯನ್ನು ಪರಿಚಯಿಸುತ್ತಾರೆ. ಕುಡುಕ, ಬೇಜವಾಬ್ದಾರಿತನ, ಅಕ್ಕ-ಪಕ್ಕದವರ ಕೋಪಕ್ಕೆ ತುತ್ತಾಗಿದ್ದವನು ಮಗನ ಬಗೆಗೆ ತೋರುತ್ತಿದ್ದ ಕಾಳಜಿ, ಮಕ್ಕಳಿಗೆ ಜಮೀನನ್ನು ಹಿಂದಿರುಗುವಂತೆ ಮಾಡಲು ಹವಣಿಸಿದ್ದು, ಮಕ್ಕಳ ಬದುಕಿನ ದಾರಿ ರೂಪಿಸಿದ್ದು ಅಪ್ಪನ ಮತ್ತೊಂದು ರೂಪವನ್ನೇ ಬಯಲು ಮಾಡುತ್ತದೆ.


ಅಪ್ಪನಿಗ್‌ ಹೇಳ್ತೀನಿ - ವಾಣಿ ಭಟ್ಟ : 

ಈ ಲೇಖನ ವಿಭಿನ್ನವೆನಿಸಿತು. ಇಲ್ಲಿ ಲೇಖಕಿ ತಂದೆ ಹಾಗೂ ತನ್ನ ಮಗುವಿನ ತಂದೆ ಎರಡು ತಂದೆಯ ರೂಪವನ್ನು ತೋರುತ್ತಾರೆ. ಅಮ್ಮನ ಜೊತೆಗಿನ ಸಲುಗೆ ಅಪ್ಪನ ಜೊತೆಗಿಲ್ಲದಿದ್ದರೂ.. ಅಪ್ಪನ ಒಂದು ಮಾತಿಗೆ ಭಯ ಬೀಳುವ ದಿನಗಳು.. 

ಮಕ್ಕಳು ಪಾಲಕರನ್ನು ನೋಡುವ ದೃಷ್ಟಿಕೋನ ರೂಪಿಸುವ ತಂದೆ-ತಾಯಿಯ ಜವಾಬ್ದಾರಿಯ ವಿಚಾರ ಹೇಳುತ್ತಾರೆ. ಬದಲಾದ ದಿನಗಳಲ್ಲಿ ಮಕ್ಕಳ ಜೊತೆಗೆ ಮಗುವಾಗಿ ಆಡುವ ಅಪ್ಪನನ್ನು ತೋರುತ್ತಾರೆ. ಇಂದಿನ ತಂದೆಯಂದಿರ ಜವಾಬ್ದಾರಿ ಹಾಗೂ ಪ್ರೀತಿಯಿಂದ ಕೈಜೋಡಿಸುವ ಗುಣಗಳ ತಂದೆಯಂದಿರ ಮೇಲೆ ಬೆಳಕು ಚೆಲ್ಲುತ್ತಾರೆ. ಹಿಂದಿಗಿಂತ ಇಂದಿನ ಸ್ಥಿತಿ ಸುಧಾರಿಸಿದೆ. ಮಗುವಿನ ದೈನಂದಿನ ಜೀವನದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವ ತಂದೆಯಂದಿರ ಸಂಖ್ಯೆ ಮತ್ತಷ್ಟು ಹೆಚ್ಚಲಿ ಎನ್ನುವ ಆಶಯ ಬಹಳ ಇಷ್ಟವಾಯಿತು.


ವಾಮಣ್ಣ-ಅಣ್ಣ ಅಲ್ಲ ಅಪ್ಪ - ಮಾಧುರಿ ಭಾವೆ : 

ತಂಗಿಯಂದಿರು ಕರೆದ ಹಾಗೆ ಮಕ್ಕಳು ತಂದೆಯನ್ನು ವಾಮಣ್ಣನೆಂದೇ ಕರೆದ ಬಗೆ.. ಬರೀ ಓದು ಎಂದು ಒತ್ತಡ ಹೇರದೆ, ಯಾವುದು ಒಳ್ಳೆಯದು-ಕೆಟ್ಟದ್ದು ಎಂಬುದನ್ನು ತಿಳಿಹೇಳಿದ, ಅಪರಿಮಿತ ವಿಶ್ವಾಸದಿಂದ ಮಗಳನ್ನು ನಂಬಿದ ತಂದೆ, ತಂದೆ-ತಾಯಿಯರ ಪ್ರೀತಿ ಅನ್ಯೋನ್ಯತೆಯ ದಾಂಪತ್ಯ ಇರುವ ಬಹಳ ಲವಲವಿಕೆಯ ಚಿತ್ರಣ ಇದು.


ಅಪ್ಪಾ ಲವ್‌ ಯೂ ಪಾ - ಗೀತಾ ನಾಗರಾಜ್‌ :

ಹಾಡನ್ನು ನೆನಪಿಸಿಕೊಳ್ಳುತ್ತಲೇ ಮಕ್ಕಳೊಡನೆ ಮಗುವಾಗಿ ನಲಿಯುತ್ತಾ.. "ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮೇಲೆ ಗುಲಗಂಜಿಗಿಂತ ರವಷ್ಟು ಹೆಚ್ಚು ಪ್ರೀತಿ ತೋರಿಸುವ", ಮುದ್ದು ಹೆಸರುಗಳಿಂದ ಕರೆದು ರೇಗಿಸುವ ಅಪ್ಪ ಕಾಣುತ್ತಾರೆ.

"ನಮ್ಮ ಬಾಲ್ಯ ಹುಡುಗಾಟಕೆಯ ದಿನಗಳು ಅಪ್ಪನ ನೆನಪುಗಳೊಂದಿಗೆ ಸಮೃದ್ಧವಾಗಿದೆ. ದಿನಗಳಂತೆ ನಮಗೆ ವಯಸ್ಸಾಗುತ್ತಾ ಹೋದಂತೆ ಅಪ್ಪ ಮತ್ತಷ್ಟು ಮಗದಷ್ಟು ನಮ್ಮೊಳಗೆ ಜೀವಂತವಾಗಿದ್ದಾರೆ" ಎನ್ನುತ್ತಾರೆ.


ತಂದೀಯ ನೆನೆದರೆ ತಂಗಳು ಬಿಸಿಯಾಯಿತು - ಯಶೋದ ಗಾಣಿಗ :

ಜನಪದದ ಚಂದದ ಸಾಲೊಂದನ್ನು ನೆನೆಯುತ್ತಾ.. ಹೆಚ್ಚು ಕಾಲ ಅಪ್ಪನೊಡನೆ ಇಲ್ಲದ, ಮಲತಾಯಿ ಬಂದ ನಂತರ ಅಪ್ಪನ ಚಿಕ್ಕಮ್ಮನ ಮನೆಯಲ್ಲಿ ಬೆಳೆದ ಮಗಳ ಕಣ್ಣಲ್ಲಿ ಅಪ್ಪ ಎತ್ತರದಲ್ಲಿರುವ ಮನ ಮಿಡಿಯುವ ಚಿತ್ರಣವಿದು.


ಅಪ್ಪ ಎಂದರೆ - ದ್ವಾರನಕುಂಟೆ ಪಿ ಚಿತ್ತಣ್ಣ :

ಅಪ್ಪ ಪಾಂಡುರಂಗಪ್ಪನ ಪ್ರಪಂಚ, ಹೊಲ-ಮನೆ, ಎತ್ತುಗಳ ಒಡನಾಟವಿದ್ದರೂ.. ಕಡುಬಡತನದಲ್ಲಿಯೂ ಮಕ್ಕಳನ್ನು ತನ್ನ ಪ್ರಪಂಚವೆಂಬಂತೆ ಸಾಕಿದ, ಅಮ್ಮನನ್ನು ಕಷ್ಟಪಟ್ಟು ಉಳಿಸಿಕೊಳ್ಳುವ ದಿನಗಳಲ್ಲಿ ಅಮ್ಮನ ಸ್ಥಾನದಲ್ಲಿ ನಿಂತು ಮುತುವರ್ಜಿವಹಿಸಿ ಕಾಳಗೆ ಮಾಡುವ ಇಂತಹ ಅಪ್ಪಂದಿರು ಬಹಳ ಅಪರೂಪ. 


ಅಪ್ಪ - ರೇಣುಕಾ ಗೌಳಿ :

ಮಹಾನ್ ದೇಶಾಭಿಮಾನಿ ಅಪ್ಪನ ಮಗಳು ಊರಿಗೆ, ಪರರಿಗೆ ಮಹೋಪಕಾರಿಯಾದ ದಿನಗಳನ್ನು ಹೇಳುತ್ತಾರೆ. ಸ್ವಾತಂತ್ರ್ಯ ಪೂರ್ವದ ದಿನಗಳ ಅಪ್ಪನ 50 ವರ್ಷದ ಬದುಕಿನ ಬಗೆ ಇಲ್ಲಿದೆ. ದೇಶಭಕ್ತಿ, ಶರಣರ ವಾಣಿ, ಧೈರ್ಯದ ಬದುಕು ಎಲ್ಲವನ್ನೂ ಕಲಿಸಿದ ಚೇತನ ಅಪ್ಪ ಕೇವಲ ಮನೆಯವರು ಮಾತ್ರವಲ್ಲ ಹೆ, ಪ್ರತಿಯೊಬ್ಬರೂ ಗೌರವಿಸುವ ವ್ಯಕ್ತಿತ್ವವಾಗಿರುವುದರ ಚಿತ್ರಣವಿಲ್ಲಿದೆ.


ನಾ ಕಂಡ ಅಪ್ಪ - ಪದ್ಮಲತಾ ಮೈಸೂರು :

ಅಪ್ಪನ ಸಕಾರಾತ್ಮಕ ನಿಲುವು, ಜ್ಞಾನ ಸಂಪಾದನೆ, ಶ್ರದ್ಧೆ, ಮಕ್ಕಳಿಗೆ ನೀಡುತ್ತಿದ್ದ ಪ್ರೋತ್ಸಾಹ ಹೀಗೆ ಸಕಾರಾತ್ಮಕವಾಗಿ ಅಪ್ಪನನ್ನು ತೆರೆದಿಟ್ಟರೂ.. ಎರಡು ನಕಾರಾತ್ಮಕ ಗುಣಗಳನ್ನು ಉಲ್ಲೇಖಿಸಿ ಅವುಗಳನ್ನು ಸುಧಾರಿಸಿಕೊಂಡ, ತಿದ್ದಿಕೊಂಡ ಹಾಗೂ ಮಾದರಿಯಾದ ಬಗೆ ಇಲ್ಲಿದೆ.


ಎಲ್ಲರಂತಲ್ಲ ನನ್ನಪ್ಪ - ಗಾಯತ್ರಿ ಅನಂತ್‌ :

ಓದು ಮಾತ್ರವಲ್ಲದೆ.. ಕಲೆ, ಸಾಹಿತ್ಯ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ನೆರವಾದ ಅಪ್ಪನಿದ್ದಿದ್ದರೆ.. ಕರಕುಶಲ ಕಲೆಗಾಗಿ ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ನ್ಯಾಷನಲ್ ರೆಕಾರ್ಡ್ ಸಿಕ್ಕಾಗ ಅದೆಷ್ಟು ಹರುಷಪಡುತ್ತಿದ್ದರು ಎನ್ನುವ ನೆನಪುಗಳ ತೆರೆದಿಡುವಿಕೆ ಇಲ್ಲಿದೆ.


ಅಪ್ಪ ಎಂದರೆ ಅಸ್ತಿತ್ವ - ಚೈತ್ರ ವಿ ಮಂಡ್ಯ :

ಅಪ್ಪ ಎಂದರೆ ನನ್ನ ಅಸ್ತಿತ್ವ ಎನ್ನುವ ಇವರ ತಂದೆ ಕೇಳುವ ಶಕ್ತಿಯನ್ನು ಒಂದು ಸಂದರ್ಭದಲ್ಲಿ ಕಳೆದುಕೊಂಡಿದ್ದರು. ಬದುಕಲು ಬೇಕಿರುವ ಅದಮ್ಯ ಚೈತನ್ಯವನ್ನು ಕಳೆದುಕೊಳ್ಳದೆ ಬದುಕಿದ ಕ್ರಿಯಾಶೀಲ ವ್ಯಕ್ತಿ. ಇವರೂ ಶ್ರವಣಶಕ್ತಿ ಕಳೆದುಕೊಂಡಾಗ ನನಗಿಂತಲೂ ಹೆಚ್ಚು ಕನಲಿ,ಬೆಂದದ್ದು ನನ್ನಪ್ಪನೇ ಎನ್ನುತ್ತಾ ಮಕ್ಕಳನ್ನೇ ಆಸ್ತಿ ಮಾಡುವ ಯೋಚನೆಯ ಅಪ್ಪ ಇಲ್ಲಿದ್ದಾರೆ. ಬರೆದಷ್ಟು ಮುಗಿಯದ ಅಕ್ಷಯ ಪಾತ್ರೆಯನ್ನು ನಮಗೆ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.


ಅಣ್ಣನಿಗೆ ನಾನಿನ್ನೂ ಪುಟ್ಟ ಮಗು - ಮನು ಗುರುಸ್ವಾಮಿ :

ಎತ್ತರದಲ್ಲಿ ಮಾತ್ರವಲ್ಲದೆ, ವ್ಯಕ್ತಿತ್ವದಲ್ಲಿಯೂ ಅಷ್ಟೇ ಎತ್ತರವಿರುವ ತಂದೆ ಗುರುಸ್ವಾಮಿಯವರ ಕುರಿತು ಹೇಳುತ್ತಲೇ ಈಗಲೂ ಪುಟ್ಟ ಮಗುವಂತೆ ಕಾಳಜಿ ಮಾಡುವ ತಂದೆಯನ್ನು ತೋರುತ್ತಾರೆ.


ಅಪ್ಪನೆಂಬ ಮುಗಿಯದ ಅದ್ಭುತಗಳ ಕಥನ ಇಲ್ಲಿದೆ. ಕೆಲ ಅಕ್ಷರ ದೋಷಗಳಿವೆ. ಆದರೆ, ಅಪ್ಪನೆಂಬ ಅದ್ಭುತ ಭಾವವಷ್ಟೇ ಮನದಲ್ಲುಳಿಯಿತು. 


~ ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 9, 2026

ಸಕ್ಕರೆ ನಿದ್ದೆಯ ದೇವರ ನಗು (ಬೆಳಕಿಂಡಿಯ ಕತೆಗಳು - 67)


 "ಅಮ್ಮನ ಅತಿ ಇಷ್ಟದ ನಗು ಯಾವುದು ಗೊತ್ತಾ..?" 

"ಯಾವುದು..?"

"ಕಂದಮ್ಮ ಸಕ್ಕರೆ ನಿದ್ದೆಯ ಸವಿಯಲ್ಲಿ ಮಂದಹಾಸ ಬೀರುವ ಅರೆ ಕ್ಷಣದ ನಗು, ದೃಷ್ಟಿಯಾಗುತ್ತದೆ ನೋಡಬೇಡ ಎಂದದ್ದನ್ನು ಬದಿಗೊತ್ತಿ ಕಾಯುತ್ತಿದ್ದ ಕಳೆದೇ ಹೋಗುವಂತೆ ಮಾಡುತ್ತಿದ್ದ ನಗು"


ಅವಳೇ ಕಟ್ಟಿ ಹಾಡುತ್ತಿದ್ದ ಲಾಲಿಯಲ್ಲಿ ಈ ಸಾಲುಗಳು ಇಂದಿಗೂ ಅತ್ಯಾಪ್ತ

ಜೋ ಜೋ ಲಾಲಿ ಕಂದಮ್ಮ..

ಅಮ್ಮನ ಕಣ್ಮಣಿ ನೀನಮ್ಮ..

ಸಕ್ಕರೆ ನಿದ್ದೆ ಮಾಡಮ್ಮಾ..

ಕನಸಿನ ಲೋಕಕೆ ಜಾರಮ್ಮಾ..


ಲಾಲಿ ಹಾಡು ಸಾಗುತ್ತಿತ್ತು..!

~ವಿಭಾ ವಿಶ್ವನಾಥ್

ಗೀಳಿಗೊಂದು ಬ್ರೇಕ್ (ಬೆಳಕಿಂಡಿಯ ಕತೆಗಳು - 66)

 


"ನಾನೂ ನಿನ್ನಂತೆ ಪುಸ್ತಕ ಓದಬೇಕು, ಏನಾದರೂ ಬರೆಯಬೇಕು. ಇದಕ್ಕೆಲ್ಲಾ ಹೇಗೆ ಸಮಯ ಹೊಂದಿಸುತ್ತೀಯ" ಎಂದು ಪ್ರಶ್ನೆ ಕೇಳಿದ ಗೆಳತಿಗೆ ಉತ್ತರ ಕೇಳುವ ಸಂಯಮವೂ ಇರದೆ ಮೊಬೈಲ್ ನಲ್ಲಿ ಸ್ಕ್ರೋಲ್ ಮಾಡುತ್ತಾ ಕಳೆದುಹೋಗಿದ್ದಳು. 

"ಮೊಬೈಲ್ ಬಿಟ್ಟರೆ ಎಲ್ಲಕ್ಕೂ ಸಮಯ ಹೊಂದಿಸಿಕೊಳ್ಳಬಹುದು" ಎಂದು ಅವಳ ಫೋನ್ ಕಿತ್ತು ತನ್ನ ಬ್ಯಾಗ್ ನಲ್ಲಿ ಹಾಕಿಕೊಂಡವಳು ಗೆಳತಿಯ ಅತಿಯಾದ ಮೊಬೈಲ್ ಗೀಳಿಗೆ ಬ್ರೇಕ್ ಹಾಕುವುದರಲಿದ್ದರೆ.. ಇನ್ನಾದರೂ ಸಂಯಮ ರೂಢಿಸಿಕೊಂಡು ಬದಲಾಗಬೇಕು ಎನ್ನುವ ಆಲೋಚನೆಯಲ್ಲಿದ್ದಳು ಗೆಳತಿ.

~ವಿಭಾ ವಿಶ್ವನಾಥ್