ಭಾನುವಾರ, ಸೆಪ್ಟೆಂಬರ್ 20, 2026

ಸಾವನ್ನು ಕಾದು ಕುಳಿತಿದ್ದವರು

 


"ಎಲ್ಲರೂ ಮಗುವಿನ ಜನನಕ್ಕಾಗಿ ಕಾದು ಕುಳಿತಿದ್ದರೆ.. ನಾನೂ ಇದ್ದೇನೆ ಮಗುವಿನ ಸಾವಿಗೆ ಕಾದು ಕುಳಿತಿರುವವಳು.


ಪ್ರಭು, ಯಾವತ್ತೂ ಯಾವ ಶತ್ರುವಿಗೂ ಇಂತಹಾ ಪರಿಸ್ಥಿತಿ ಬಾರದಿರಲಿ. ಮಕ್ಕಳ ಹಿತ ಬಯಸುವವಳು ಮಾತ್ರ ತಾಯಿ. ನಾನ್ಯಾವ ಸೀಮೆಯ ತಾಯಿ" ಎನ್ನುತ್ತಾ ಬೇಸರದಿಂದ ತನ್ನ ಕುರಿತು ತಾನೇ ಜಿಗುಪ್ಸೆಯ ಮಾತನ್ನಾಡಿಕೊಳ್ಳುತ್ತಿದ್ದಳು ಸಂಕೀರ್ತಿ.


"ಕೀರ್ತಿ, ಯಾಕಿಷ್ಟು ಬೇಸರ ಮಾಡಿಕೊಳ್ಳುತ್ತಿದ್ದೀಯ. ಈ ಮಗು ಹುಟ್ಟುವ ಮುನ್ನವೇ ನಾವು ಈ ದಿನಕ್ಕೆ ಮನಸ್ಸನ್ನು ಸಿದ್ದ ಮಾಡಿಕೊಳ್ಳುತ್ತಿದ್ದೆವು. ಅಲ್ಲವಾ ? ಮಗುವಿನ ಇಷ್ಟು ದಿನದ ಬೆಳವಣಿಗೆ ಕಂಡು ಹರ್ಷಿಸುತ್ತಿದ್ದೆವು. ಅಷ್ಟು ಸಾಕು ಅಲ್ಲವಾ ??  ನಾವು ಪಾಪುವಿಗೆ ಎಂದೂ ಯಾವುದನ್ನೂ ಕೊರತೆ ಮಾಡಲಿಲ್ಲ ಅಲ್ಲವಾ ?? ಮುಂದೆಯೂ ಅವನು ಬದುಕಿದ್ದರೆ ಅವನನ್ನು ಅಷ್ಟೇ ಜೋಪಾನವಾಗಿ ನೋಡಿಕೊಳ್ಳೋಣ. ಆದರೆ, ಅವನು ಬದುಕದಿರಲಿ ಎಂದೇ ಆಶಿಸೋಣ" ಎಂದನು ಪ್ರಭು.


"ಪ್ರಭು, ನಾನು ಪಾಪು ಹುಟ್ಟುವ ಮುನ್ನವೇ ಒಂದು ಮಾತು ಹೇಳುತ್ತಿದ್ದೆ. ಗೊತ್ತಾ..??

ನಾನು ಗರ್ಭಿಣಿಯಾಗಿದ್ದಾಗ ಪುರಾಣದ ಕತೆಗಳನ್ನು ಓದಿದರೆ ಒಳ್ಳೆಯದು ಎಂದು ಆ ಪುಸ್ತಕಗಳನ್ನು ತಂದು ಕೊಟ್ಟಾಗ ಮಾರ್ಕಾಂಡೇಯನ ಕತೆ ಓದಿದಾಗ ಹೆಚ್ಚು ಆಯುಷ್ಯ ಇರುವ ದಡ್ಡ ಮಗ ಬೇಕೋ ಅಥವಾ ಕಡಿಮೆ ಆಯುಷ್ಯ ಇರುವ ಬುದ್ಧಿವಂತ ಮಗ ಬೇಕೋ ಎಂಬ ಆಯ್ಕೆ ಎದುರಾದಾಗ ಆಕೆ ಕಡಿಮೆ ಆಯುಷ್ಯದ ಬುದ್ಧಿವಂತ ಮಗನನ್ನು ಬೇಡುತ್ತಾಳೆ.

ಆಗೆಲ್ಲಾ ನಾನಾಗಿದ್ದರೆ ಹೆಚ್ಚು ಆಯುಷ್ಯದ ದಡ್ಡ ಮಗನನ್ನೇ ಬೇಡುತ್ತಿದ್ದೆ ಎನ್ನುತ್ತಿದ್ದೆ.


ಬಹುಶಃ, ದೇವರೇ ಪರೀಕ್ಷೆ ಮಾಡಲು ನಮಗೆ ಅಂತಹಾ ಮಗನನ್ನು ಕರುಣಿಸಿದನೋ ಏನೋ.. ಮಕ್ಕಳ ಆರೋಗ್ಯ, ಬುದ್ಧಿವಂತಿಕೆ ಎಲ್ಲವೂ ಇದ್ದಾಗಲೇ ಅಲ್ಲವೇ ತಂದೆ-ತಾಯಿಯರಿಗೂ ಸಂತೃಪ್ತಿ. ಆದರೆ, ಇವನು ಹುಟ್ಟುವ ಮೊದಲೇ ನಮಗೆ ತಿಳಿದಿತ್ತಲ್ಲ. ಮಗು ಹೀಗಾಗುತ್ತದೆ ಎಂದು.


ನಾವೂ ಸಿದ್ದರಾಗಿಯೇ ಇದ್ದೆವು. ದೇವರ ಮಗು ಎನ್ನುತ್ತಲೇ ಆಟಿಸಂ ಇರುವ ಮಗುವನ್ನು ತೆಕ್ಕೆಗೆಳೆದುಕೊಂಡು ಸಾಕಿದೆವು ಸಹಾ. ಆದರೆ, ಅವನು ಹಿಂಸೆ ಪಡುವಾಗ.. ಅವನು ನರಳುವಾಗ ಅವನಿಗಿಂತ ಹೆಚ್ಚು ಹಿಂಸೆ ಪಟ್ಟದ್ದು ನಾವೇ ಅಲ್ಲವಾ..

ಆಗ ಅನ್ನಿಸುತ್ತಿತ್ತು. ಮಾರ್ಕಂಡೇಯನ ತಾಯಿ ಸರಿಯಾದ ವರವನ್ನೇ ಕೇಳಿದ್ದಾಳೆ ಎಂದು. ಅವಳು ಸರಿಯಾದ ಆಯ್ಕೆ ಮಾಡಿದ್ದು.. ಕೇವಲ ಅವಳ ದೃಷ್ಟಿಯಿಂದ ಮಾತ್ರವಲ್ಲ.. ಮಗುವಿನ ದೃಷ್ಟಿಯಿಂದ ಕೂಡಾ. ಅವಳು ಬುದ್ದಿವಂತಳು. ಹಾಗಾಗಿಯೇ.. ಬುದ್ಧಿವಂತ ಮಗನನ್ನೂ ಪಡೆದದ್ದು.


ನಾನು ದಡ್ಡಿ. ನನ್ನ ಆಯ್ಕೆ ಇಲ್ಲದಿದ್ದರೂ ನನ್ನ ಪಾಪದ ಫಲ ಎಂಬಂತೆ ಆ ಮಗು ದಕ್ಕಿತ್ತು.


ಛೇ, ಅದು ಪಾಪದ ಕೂಸು.. ಏನೂ ಅರಿಯದ ಕೂಸು. " ಎನ್ನುತ್ತಾ ಮಾತನಾಡುತ್ತಲೇ ಪ್ರಜ್ಞೆ ತಪ್ಪಿದ್ದಳು. ಏನೋ ಒಂದು ರೀತಿಯ ವಿಚಿತ್ರ ನಗುವಿನಲ್ಲಿ ಪ್ರಜ್ಞೆ ತಪ್ಪಿದ್ದನ್ನು ಕಂಡು ಪ್ರಭುವಿಗೆ ಭಯವಾಯಿತು.


ಪ್ರಜ್ಞೆ ತಿಳಿದು ಎದ್ದಾಗ "ನಾನಿನ್ನೂ ಬದುಕಿದ್ದೇನಾ..?? " ಎಂದು ಕೇಳಿದ ಸಂಕೀರ್ತಿಗೆ "ನಿನ್ನನ್ನು ಸಾಯಲು ಬಿಟ್ಟು ಬಿಡುತ್ತೇನಾ..?? ನೀನು ಯಾಕೆ ಸಾಯಲು ಹೊರಟೆ ? " ಎಂದನು ಪ್ರಭು.


"ಪಾಪುವನ್ನು ಸಾಯಿಸಿದ್ದು ನಾನೇ.. ನಾನೇ

ಅದಕ್ಕೆ ನನಗೆ ನಾನೇ ಶಿಕ್ಷೆ ಕೊಟ್ಟುಕೊಳ್ಳಬೇಕು. " ಎಂದವಳನ್ನು  ಕಂಡು ಅರ್ಥವಾಗದವನಂತೆ ನೋಡಿದ.


"ಬುದ್ಧಿ ಬೆಳೆಯದ ಮಗುವನ್ನು ನಾನು ಸರಿಯಾಗಿ ನೋಡಿಕೊಳ್ಳಬೇಕಿತ್ತು. ನನ್ನ ನಿರ್ಲಕ್ಷ್ಯದಿಂದ ತಾನೇ ಅವನು ಮಹಡಿಯಿಂದ ಬಿದ್ದದ್ದು. ಅವನು ಸತ್ತರೆ ಅವನ ಸಾವಿಗೆ ನಾನು ತಾನೇ ಹೊಣೆ. " ಎಂದವಳ ಮಾತಿಗೆ "ಅಲ್ಲಮ್ಮ, ಅವನ ಮೋಕ್ಷಕ್ಕೆ ನೀನು ಹೊಣೆ. ಅವನ ಮುಕ್ತಿಗೆ ನೀನು ಹೊಣೆ. ಇಷ್ಟು ದಿನ ನೀನು ಅವನನ್ನು ಪ್ರೀತಿಯಿಂದ ನೋಡಿಕೊಂಡಿದ್ದೀಯ. ಅವನು ಮುಂದೆ ನರಳಿ ನರಳಿ ಸಾಯುವುದನ್ನು ನೋಡುವುದಕ್ಕಿಂತ ಇದೇ ಮೇಲು ಬಿಡು" ಎಂದನು.


ಅವಳಿಗೂ ತಿಳಿಯದ ಸಂಗತಿ ಎಂದರೆ ಪಾಪುವಿನ ಕಷ್ಟ ಅರಿತಿದ್ದ ಪ್ರಭು ಮಗುವನ್ನು ತಡೆಯಬಹುದಾಗಿದ್ದರೂ ತಡೆದಿರಲಿಲ್ಲ.


"ಸ್ಸಾರಿ ಸರ್, ಸ್ಸಾರಿ ಮ್ಯಾಮ್ ಹೀ ಈಸ್ ನೋ ಮೋರ್" ಎಂದ ವೈದ್ಯರ ಕಡೆ ತಿರುಗಿದ ಇಬ್ಬರೂ ಕೈ ಮುಗಿದಿದ್ದರು.


ಪಾಪುವಿನ ಕಷ್ಟ, ನೋವು, ನರಳುವಿಕೆಗೆ ಕೊನೆ ಬಂದಿತ್ತು

ಸಾವು ಪಾಪುವಿಗೆ ಮುಕ್ತಿ ನೀಡಿತ್ತು.


~ವಿಭಾ ವಿಶ್ವನಾಥ್

ಹರಡಿತು ಕಂಪು (ಬೆಳಕಿಂಡಿಯ ಕತೆಗಳು - 84)


 "ಮಲ್ಲಿಗೆ ಮಾಲೆ ಯಾರಿಗೋ..?? ಯಾಕೆ ತೆಗೆದುಕೊಂಡೆ..??" ಎಂದು ಕೇಳಿದ ಗೆಳೆಯನಿಗೆ

"ಮಲ್ಲಿಗೆ ಮುಡಿಯಲು ನನ್ನ ಹೆಂಡತಿ ಇಲ್ಲ. ಇನ್ನು ದೇವಾಲಯಕ್ಕೆ ಹೋಗುವುದಿಲ್ಲ. ಪರಮ ನಾಸ್ತಿಕ ನಾನು.. ಇನ್ನು ಯಾರ ಶವಕ್ಕೂ ಇದನ್ನು ಹಾಕುವುದಿಲ್ಲ.


ಇದನ್ನು ತೆಗೆದುಕೊಂಡದ್ದು ಆ ಪುಟ್ಟ ಹುಡುಗಿಗೋಸ್ಕರ.. ಆ ಹುಡುಗಿ ಆ ಮಲ್ಲಿಗೆ ಮಾರಿಯೇ ಇಲ್ಲಿಂದ ಹೋಗುವುದು. ಇಲ್ಲಿಂದ ಅವಳು ಲೇಟಾಗಿ ಹೊರಟರೆ ಅವಳು ಶಾಲೆಗೆ ಹೋಗುವುದು ಲೇಟಾಗುತ್ತದೆ. ಆ ಮಲ್ಲಿಗೆ ಮಾಲೆ ಮಾರಾಟವಾಗುವುದು ಲೇಟಾಗುವುದನ್ನು ಕಂಡಾಗ ಅದನ್ನು ಕೊಳ್ಳುತ್ತೇನೆ. " ಎಂದವರೇ ಕೊಂಡಿದ್ದ ಮಲ್ಲಿಗೆ ಮಾಲೆಯನ್ನು ಅಲ್ಲಿಯೇ ಸೊಪ್ಪು ಮಾರುತ್ತಿದ್ದ ಅಜ್ಜಿಯೊಬ್ಬರಿಗೆ "ತೆಗೆದುಕೊಳ್ಳಿ" ಎಂದು ಕೊಟ್ಟರು. ಮಲ್ಲಿಗೆ ತನ್ನ ಕಂಪನ್ನು ಬೀರುವಂತೆಯೇ.. ಈತನೂ ತನ್ನ ಪರೋಪಕಾರದ ಕಂಪನ್ನು ಹರಡುತ್ತಿದ್ದನು.


~ವಿಭಾ ವಿಶ್ವನಾಥ್

ಒಗ್ಗರಣೆಗೆ ಮಾತ್ರ (ಬೆಳಕಿಂಡಿಯ ಕತೆಗಳು - 83)

 


ಸರಿಯಾಗಿ ಒಗ್ಗರಣೆ ಹಾಕಲು ಬರುತ್ತದೆಯೇ..?? 

ಪಕ್ಕದ ಮನೆಯ ಆಂಟಿಯ ಈ ಪ್ರಶ್ನೆಗೆ

"ಹೌದು, ಅಡುಗೆಗೆ ಮಾತ್ರ...

ನಿಮ್ಮಂತೆ ಮತ್ತೊಬ್ಬರ ಜೀವನಕ್ಕಲ್ಲ" ಎಂದುತ್ತರಿಸಿದೆ.


ಬಹುಶಃ ಸಿಡಿಯುವ ಕಡೆ ಸರಿಯಾಗಿಯೇ ಸಿಡಿದಿತ್ತು


~ವಿಭಾ ವಿಶ್ವನಾಥ್

ಕವಲುದಾರಿ


ನಿಂತಿದ್ದೇವೆ ದಾರಿ ಕವಲೊಡೆಯುವಲ್ಲಿ

ಮುಂದೆರಡು ಮುಗಿಯದ ದಾರಿಗಳು

ಹಿಂದೊಂದು ದೊಡ್ಡ ಸವೆಸಿದ ಹಾದಿ

ಹಿಂದಿರುಗಿ ನಡೆಯಲಾಗದೆಂಬ ಷರತ್ತಿದೆ

ಕುಸಿದು ಕುಳಿತು ಯೋಚಿಸಿದರೆ

ಭವಿಷ್ಯದ ಕಾರ್ಮೋಡದ ದಿಗಿಲು

ಹಿಂದೆಯೇ.. ಬೆಳಕಿರಬಹುದೆಂಬ ಆಶಾಕಿರಣ

ಕವಲೊಡೆದ ದಾರಿಗಳು ಜೊತೆಯಾಗವು

ಹಾಗೆಯೇ.. ನಡೆಯುವ ಪಯಣಿಗರು..

ನಿನ್ನ ಹಾದಿಯ ನಾ ಕ್ರಮಿಸಲಾರೆ

ನೀನೂ ಅಷ್ಟೇ, ನನ್ನ ಹಾದಿಯ ಜೊತೆಗೂಡಲಾರೆ


ಬದುಕಿನ ಎರಡೂ ತೀರಗಳೂ

ಎಂದಾದರೊಮ್ಮೆ ಒಂದುಗೂಡಲೆಂದು ಆಶಿಸುತ್ತಾ

ಒಳಿತಾಗಲೆಂಬ ಶುಭಾಶಯ ಕೋರುತ್ತಾ

ಹೋರಾಡುವುದಷ್ಟೇ ಬಾಕಿ ಈಗ

ದಿಗಂತ ಕಾಯುತಲಿದೆ ನಮಗಾಗಿ

ಕವಲೊಡೆದ ದಾರಿ ಒಂದಾದರೂ

ಬೇರಾದರೂ ಆರಂಭ ಕವಲುದಾರಿಯೇ

ಸತ್ಯ ಜೀರ್ಣಿಸಿಕೊಳ್ಳಲೇಬೇಕಿದೆ

ಕವಲು ದಾರಿಯ ಯಾವುದೋ ಒಂದನು

ಆಯ್ಕೆ ಮಾಡಿಕೊಳ್ಳಲೇಬೇಕಿದೆ

ನಿರಂತರ ಪಯಣಕೆ


ಕವಲಾಗಿರುವುದು ಹಾದಿಯಷ್ಟೇ

ಬದುಕಿನ್ನೂ ಹಾಗೇ ಉಳಿದಿದೆ


~ವಿಭಾ ವಿಶ್ವನಾಥ್

ಸಾಕ್ಷಿ (ಪುಸ್ತಕ ಯಾನ - 488)


 ಕಿರು ಕಾದಂಬರಿಯ ಶೀರ್ಷಿಕೆ : ಸಾಕ್ಷಿ

ಲೇಖಕರು : ಗಂಗಾ ಪಾದೇಕಲ್

ಮುದ್ರಿತ ವರ್ಷ : 1995 ಏಪ್ರಿಲ್ 


ಕಾದಂಬರಿ ಆರಂಭವಾಗುವುದು ಕಮಲಮ್ಮನ ಅಂತ್ಯಸಂಸ್ಕಾರದೊಂದಿಗೆ. ಕಮಲಮ್ಮನಗಿದ್ದದ್ದು ಒಬ್ಬನೇ ಮಗ ಸುಧಾಕರ. ಆತನ ಓದು ಮುಗಿದು ಕೆಲಸಕ್ಕೆ ಸೇರಲು ಇನ್ನೂ ಒಂದು ವರ್ಷವಿತ್ತು. ತನ್ನ ಕಷ್ಟ ಕಳೆದು ಮಗ ಕೈಗೆ ಬರುವ ಹೊತ್ತಿಗೆ ಕಮಲಮ್ಮ ಹಠಾತ್ ಹೃದಯಾಘಾತದಿಂದ ಮರಣ ಹೊಂದಿದರು. ವಾಸ್ತೇವ ಅವರ ಮನೆಯಲ್ಲಿ ಖಾಯಂ ಅಡುಗೆಯವಳಾಗಿ ಕೆಲಸ ಮಾಡುತ್ತಿದ್ದರು ಕಮಲಮ್ಮ. 


ನಗರದಲ್ಲಿ ಓದುತ್ತಿದ್ದ ಸುಧಾಕರನಿಗೆ ತಂತಿ ನೀಡಿ ಕರಿಸಿದ್ದು ಜನ್ನಯ್ಯ. ಜನ್ನಯ್ಯನ ತಾಯಿ ಇದ್ದಾಗಲೇ ಆಕೆಯ ದೂರದ ಸಂಬಂಧಿಯಾಗಿದ್ದ ಕಮಲಮ್ಮ 15 ವರ್ಷಕ್ಕೂ ಮುನ್ನವೇ ಇಲ್ಲಿ ಬಂದು ಸೇರಿದ್ದಳು. ಆಗ ಸುಧಾಕರನಿಗಿನ್ನೂ ನಾಲ್ಕು ವರ್ಷ. ತಂದೆ-ತಾಯಿ ಇಲ್ಲದ ಕಮಲಮ್ಮನಿಗೆ ಅಪಾಪೋಲಿಯಾಗಿದ್ದ ಗಂಡನ ಆಸರೆಯೂ ಇರಲಿಲ್ಲ. ಜನ್ನಯ್ಯ ನ ತಾಯಿ ಮಾನವೀಯತೆಯ ದೃಷ್ಟಿಯಿಂದ ಕೊಟ್ಟಿಗೆಯಲ್ಲಿ ಸೌದೆ ಹಾಕುತ್ತಿದ್ದ ಕೋಣೆಯನ್ನು ಅವರಿಗೆ ನೀಡಿದ್ದರು. ಆದರೆ, ಅವರ ಅನ್ನವನ್ನು ಅವರೇ ದುಡಿದುಕೊಳ್ಳುವ ಷರತ್ತಿನೊಂದಿಗೆ. ಅಷ್ಟೇ ಸಾಕಾಗಿತ್ತು ಕಮಲಮ್ಮನಿಗೆ. ಮೊಟ್ಟಮೊದಲಿಗೆ ಅಡುಗೆ, ತಿಂಡಿ ಕೆಲಸ ಮಾಡಿಕೊಟ್ಟು ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಹಾಕುತ್ತಿದ್ದವಳು ವಾಸ್ತೇವ ಅವರ ಮನೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿದಳು. 


ಕಮಲಮ್ಮನ ಸಂಸ್ಕಾರದ ನಂತರ 11ನೇ ದಿನದ ಕರ್ಮಕ್ಕೆಂದು ಸುಧಾಕರ ಆಲೋಚಿಸುತ್ತಿದ್ದಾಗ ಜನ್ನಯ್ಯ ಕಮಲಮ್ಮ ತನ್ನ ಬಳಿ ಕೊಟ್ಟ ಹಣದ ವಿಚಾರ ಹೇಳಿದ್ದರು. ಪ್ರತಿಯೊಂದಕ್ಕೂ ಆಕೆ ಕೇಳಿದಿದ್ದರೂ ರಶೀತಿ ಇಟ್ಟು ಈಗ ಸುಧಾಕರನಿಗೆ ಒಂದು ರೂಪಾಯಿಯನ್ನೂ ಕಡಿಮೆ ಮಾಡದಂತೆ ಹಣ ಕೊಟ್ಟು.. ಮುಂದೆಯೂ ಕಷ್ಟಪಟ್ಟು ಓದುವಂತೆ ತಿಳಿಸಿದರು. ಕಮಲಮ್ಮ ಕೊಟ್ಟ ಮತ್ತೊಂದು ಗಂಟಿತ್ತು. ಆದರೆ, ಅದನ್ನು ಮಾತ್ರ ಜನ್ನಯ್ಯ ಕೊಡಲಿಲ್ಲ. ಅದರಲ್ಲೇನಿತ್ತು ..?


ಇದಾದ ನಂತರ ಜನ್ನಯ್ಯ ತನ್ನ ಒಬ್ಬಳೇ ಮಗಳು ಸರೋಜಳ ವಿವಾಹವನ್ನು ಅದ್ದೂರಿಯಾಗಿ ಮಾಡಿದರು. ಅವರಿಗೆ ಮೂವರು ಗಂಡು ಮಕ್ಕಳು. ಮೊದಲನೇ ಮಗ ಸೀತಾರಾಮನಿಗೆ ಜಲಜಳೊಂದಿಗೆ ವಿವಾಹವಾಗಿದ್ದು.. ಹೆಚ್ಚು ಓದದ ಆತನೇ ತಂದೆಯ ಬಲಗೈಯಂತೆ ತೋಟದ ಕೆಲಸ ನೋಡಿಕೊಳ್ಳುತ್ತಿದ್ದದ್ದು. ಎರಡನೇ ಮಗ ಶ್ರೀಧರ ಕಾಲೇಜು ಉದ್ಯೋಗಿಯಾಗಿ ಸಿಟಿಯಲ್ಲಿದ್ದ. ವೈದ್ಯಕೀಯ ಓದುತ್ತಿದ್ದ ಮೂರನೆಯವನ ಪ್ರಸ್ತಾಪ ಹೆಚ್ಚಿಲ್ಲ. 


ಕೆಲಸಕ್ಕಾಗಿ ಎಲ್ಲೆಡೆ ಪ್ರಯತ್ನಿಸಿ ನಿರಾಶನಾಗಿ ವಾಸ್ತವದ ಕಠೋರ ಸತ್ಯಗಳನ್ನು ಅರಗಿಸಿಕೊಂಡು ಸುಧಾಕರ ಜನ್ನಯ್ಯನವರ ಬಳಿ ದೂರದಾಸೆ ಹೊತ್ತು ಬಂದಿದ್ದ. 15 ಸಾವಿರ ಸಾಲಕ್ಕಾಗಿ ಬೇಡಿಕೆ ಇಟ್ಟಿದ್ದ. 


ಅಷ್ಟರಲ್ಲಾಗಲೇ ಜನ್ನಯ್ಯನ ಮನೆಯಲ್ಲಿ ಸೊಸೆ ಜಲಜಳಿಗೆ ತನ್ನ ವಿವಾಹಕ್ಕಿಂತಲೂ ಸರೋಜಳ ವಿವಾಹ ಅದ್ದೂರಿಯಾಗಿ ಆಗಿದ್ದು ಹಾಗೂ ಹೆಚ್ಚಿನ ಒಡವೆ ಹಾಕಿದ್ದು ಕಣ್ಣುಕುಕ್ಕಿ ಮನೆಯಲ್ಲಿ ಅತೃಪ್ತಿ ತಾಂಡವ ಮಾಡುತ್ತಿತ್ತು. ಅದು ಸೀತಾರಾಮನಿಂದ ಹೊರ ಬರುತ್ತಿತ್ತು. 


ಸುಧಾಕರ ಮಾಡಿದ ಪ್ರಸ್ತಾಪದಿಂದ ಜಲಜಳ ದುಸುಮುಸು ಹೆಚ್ಚಾಗಿ, ಸೀತಾರಾಮನ ನೇರ ಮಾತುಗಳ ನಿರಾಕರಣೆಯ ಜೊತೆಗೆ ಪಾರ್ವತಮ್ಮನವರ ಸಂತೈಸುವ ಮಾತುಗಳ ನಯವಾದ ನಿರಾಕರಣೆಯೂ ಸೇರಿತ್ತು. ಜನ್ನಯ್ಯನವರ ನಿರ್ಣಯ ಏನಿತ್ತು..?


ಇದಾದ ನಂತರ ಜನ್ನಯ್ಯನವರ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಯಿತು. ಮಗ-ಸೊಸೆಯರ ಅತೃಪ್ತಿ, ಅಸಮಾಧಾನಗಳ ಜೊತೆಗೆ ಜನ್ನಯ್ಯ ನವರ ವ್ಯಗ್ರತೆಯೂ ಹೆಚ್ಚಾಗುತ್ತಾ ಸಾಗಿತು. ಅಡಿಕೆ ತೋಟದ ಕೊಳೆರೋಗದಿಂದ ಉಂಟಾದ ನಷ್ಟದಿಂದ ಶುರುವಾದ ಸಮಸ್ಯೆಗಳು ಬೆಳೆಯುತ್ತಾ ಸಾಗಿದವು. 


ಇದೆಲ್ಲದರ ನಡುವಲ್ಲಿ ಸಂತಸದ ಸಂಗತಿ ಎಂದರೆ ಮಗಳು ಸರೋಜಳಿಗೆ ಹೆಣ್ಣು ಮಗುವಾಗಿತ್ತು. ಆಕೆಯದ್ದೇ ನೂ ತೊಂದರೆ ಇರಲಿಲ್ಲ. ಅಪ್ಪನ ಮೆಚ್ಚಿನ ಮಗಳು ಸಹ ಅಪ್ಪನ ಪ್ರತಿದಿನದ ಬದಲಾವಣೆಯನ್ನು ಗಮನಿಸುತ್ತಲೇ ಇದ್ದಳು. ಶ್ರೀಧರನಿಗೆ ಆತನ ತಾಯಿಯಿಂದ ತಂದೆಯ ಬದಲಾವಣೆಗಳೆಲ್ಲವೂ ತಿಳಿದಿತ್ತು.


ಒಮ್ಮೆ ಚೆನ್ನಯ್ಯನವರಿಗೆ ಹೋಟೆಲಿನಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದ ಸುಧಾಕರ ಕಂಡಾಗಿನಿಂದ ಮತ್ತಷ್ಟು ನವೆದಿದ್ದರು. ಜಲಜಳ ತಂದೆ ಬಂದಾಗ ಸುಧಾಕರ ಮೂರು ತಿಂಗಳಿನಲ್ಲಿಯೇ ನಾಲ್ಕು ಹೋಟೆಲ್ನಲ್ಲಿ ಕೆಲಸ ಬದಲಿಸಿದ್ದು ಹಾಗೂ ಯಾವುದರಲ್ಲಿಯೂ ಮನಸ್ಸಿಲ್ಲದಂತೆ ಇದ್ದದ್ದನ್ನು ಹೇಳಿದ್ದು ಕೇಳಿ ಜನ್ನಯ್ಯನವರಿಗೆ ಪಾಪಪ್ರಜ್ಞೆ ಹೆಚ್ಚಾಗಿದ್ದರ ಜೊತೆಗೆ ಮತ್ತಷ್ಟು ಬದಲಾಗುತ್ತಾ ಸಾಗಿದ್ದರು.


ಮನುಷ್ಯನ ಕೆಟ್ಟ ಕೆಲಸಕ್ಕೆ ಪ್ರತ್ಯಕ್ಷ ಸಾಕ್ಷಿ ಯಾರಿಲ್ಲದಿದ್ದರೂ.. ಅವನ ಮನಸ್ಸಿಗಿಂತ ಹೆಚ್ಚಿನ ಸಾಕ್ಷಿ ಬೇಕೇ..?


ಪಾರ್ವತಮ್ಮನವರು ಗಂಡನ ಮನಸ್ಥಿತಿಯ ಬದಲಾವಣೆಯನ್ನು ಗಮನಿಸಿದರೆ ಮನೆಯಲ್ಲಿ ಮಗುವನ್ನು ಸುಧಾರಿಸುತ್ತಾ.. ಮನೆವಾಳ್ತೆಯನ್ನು ಸುಧಾರಿಸುತ್ತಾ ತಾಳ್ಮೆಯಿಂದ ಅವರ ಮಾತು ಕೇಳುವಲ್ಲಿ ಸೋತರೇ..?


ಸೀತಾರಾಮ ಅಂದು ಸುಧಾಕರನ ವಿಷಯದಲ್ಲಿ ಮೂಗು ತೂರಿಸದಿದ್ದಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತೇ..?


ಜನ್ನಯ್ಯನವರನ್ನು ಅಷ್ಟು ಕಾಡಿದ ವಿಚಾರವಾದರೂ ಏನು..? ಅವರು ನಿಷ್ಠೆಯಿಂದ ಪ್ರತಿ ಪೈಸೆಯ ಲೆಕ್ಕವನ್ನು ಕೊಟ್ಟರೂ ಅವರಿಗೆ ಮುಳುವಾಗಿದ್ದೇನು..?


ಸ್ವಾಭಿಮಾನದಲ್ಲಿ ಅಮ್ಮನ ಮಗನೇ ಆಗಿದ್ದ ಸುಧಾಕರ ಯಾವ ದಾರಿ ಹಿಡಿದ..?


ವಾಸ್ತೇವರು ತಂದ ಯಾವ ಸುದ್ದಿ ಜನ್ನಯ್ಯನವರನ್ನು ಮತ್ತಷ್ಟು ಕುಗ್ಗಿಸಿತು..? ಅದು ಪಾರ್ವತಮ್ಮನವರ ಗಮನಕ್ಕೆ ಬರದೇ ಹೋಗಿದ್ದೇಕೆ..?


ಅಮ್ಮನ ಮುದ್ದಿನ ಮಗನಾಗಿ ತನ್ನನ್ನು ತಾನು ಸಂಬಾಳಿಸಿಕೊಳ್ಳುವಲ್ಲಿ ಸೋತನೇ ಸುಧಾಕರ..? ಕುಟುಂಬದ ಪ್ರೀತಿ ಇಲ್ಲದೆ ಬೆಳೆದುದ್ದಕ್ಕೋ ಅಥವಾ ತನ್ನವರೆಂದು ತಿದ್ದಿ ನಡೆಸುವವರಿಲ್ಲದೆ ಯೌವ್ವನದಲ್ಲಿನ ಡಿಪ್ರೆಶನ್ ಗೆ ಬಲಿಯಾದನೇ ಸುಧಾಕರ..?


ಕಥೆ ಸಾಗುತ್ತಾ ಹೋದಂತೆ ಊಹಿಸುತ್ತಾ ಹೋಗಬಹುದಾದರೂ ಕಥೆಯ ಜಾಡು ಮುಂದೆಂದಾದರೂ ಬದಲಾಗಬಹುದೇನೋ ಎಂಬ ನಿರೀಕ್ಷೆಯಲ್ಲಿಯೇ ಕೊನೆಯವರೆಗೂ ಓದಿಸಿಕೊಳ್ಳುತ್ತಲೇ ಹೋದ ಕಥಾಹಂದರ. 


ಸಾಮಾಜಿಕ ಪಾತ್ರ ಚಿತ್ರಣದ ಜೊತೆಗೆ ಮನೋವೈಜ್ಞಾನಿಕ ಕಾದಂಬರಿಯಂತೆ ಭಾಸವಾದ ಕಿರುಕಾದಂಬರಿಯಿದು. ಇಲ್ಲಿ ಮನಸ್ಸಿನ ಭಾವನೆಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ ಲೇಖಕಿ. ಕಾಡುವ ಕಿರುಕಾದಂಬರಿ 1995ರ ಏಪ್ರಿಲ್ ತಿಂಗಳ ಕಸ್ತೂರಿಯಲ್ಲಿ ಪ್ರಕಟಿತ.


~ ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 13, 2026

ಒಂದೊಮ್ಮೆ ಕರುಣಾಮಯಿಯಾಗಿದ್ದವಳು (ಬೆಳಕಿಂಡಿಯ ಕತೆಗಳು - 82)


 ಎಲ್ಲರ ಕಷ್ಟಕ್ಕೆ ಕರಗುವ ಕರುಣಾಮಯಿಯಾಗಿದ್ದವಳನ್ನು, ಸಹಾಯಕ್ಕೆ ನಿಂತು ಸುಧಾರಿಸುವವಳನ್ನು ಮೋಸದಿಂದ  ಯಾಮಾರಿಸಿದವರೇ ಹೆಚ್ಚು. ವಾಸ್ತವದ ಕಟುಸತ್ಯ ಅವಳನ್ನು ಬುದ್ಧಿವಂತೆಯಾಗಿಸಿತು. 

ಕರುಣಾಮಯಿಯನ್ನು ಕಟು ಹೃದಯಿಯಾಗಿಸಿದವರೇ ಈಗ ಅವಳು ಕಲ್ಲೆಂದು ದೂರುತ್ತಿರುವುದು ವಿಪರ್ಯಾಸ. 

~ವಿಭಾ ವಿಶ್ವನಾಥ್

ಪುಸ್ತಕಪ್ರೇಮಿಯ ಆಸೆಗಣ್ಣು (ಬೆಳಕಿಂಡಿಯ ಕತೆಗಳು - 81)


ಹಲವು ತಿಂಗಳುಗಳಿಂದ ಪುಸ್ತಕ ಕೊಳ್ಳಲು ಹೋದಾಗಲೆಲ್ಲಾ ಆಸೆಗಣ್ಣುಗಳಿಂದ ತನ್ನಿಷ್ಟದ ಪುಸ್ತಕವನ್ನು ನೋಡುತ್ತಿದ್ದರೂ.. ದುಬಾರಿಯಾದ ಆ ಬೃಹತ್ ಕಾದಂಬರಿಯ ಕೊಳ್ಳುವಿಕೆಯನ್ನು ಮುಂದೂಡುತ್ತಲೇ ಇದ್ದಳು. ಅವಳ ಪ್ರತಿಭೆಗೆ ಪ್ರತಿಫಲವೆಂಬಂತೆ.. ಮನದಾಸೆಯನ್ನು ಅರಿತಂತೆ ಅದೇ ಪುಸ್ತಕ ಬಹುಮಾನವಾಗಿ ಸಿಕ್ಕಾಗ ಅವಳ ಸಂತೋಷವಂತೂ ವರ್ಣಿಸಲಸದಳ.

~ವಿಭಾ ವಿಶ್ವನಾಥ್

ಎಲ್ಲಾ ಅಂತ್ಯವೂ ಅಂದುಕೊಂಡಂತೆಯೇ ಇರಬೇಕಿಲ್ಲ

 


"ತಗೊಳ್ಳಿ ನಿಮ್ಮ ಬ್ಯಾಗ್. ನೀವು ನಿಮ್ಮ ಅಪ್ಪ - ಅಮ್ಮ ಇಬ್ಬರನ್ನೂ ಕರೆದುಕೊಂಡು ಮನೆ ಬಿಟ್ಟು ಹೋಗಬಹುದು. ನಿಮಗೆ ಹೋಗುವುದಕ್ಕೆ ಇಷ್ಟ ಇಲ್ಲ ಅಂತಾ ಇದ್ದರೆ ನೀವು ಬೇಕಾದರೆ ಇಲ್ಲಿಯೇ ಉಳಿದುಕೊಳ್ಳಬಹುದು." ಎಂದು ಕಲ್ಲು ಮನಸ್ಸಿನಿಂದ ಹೇಳಿ ಅಲ್ಲೇ ಇದ್ದ ಸೋಫಾದ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕುಳಿತಳು ಸೀತಾ.


"ಏನೋ ರಾಮ್ ಇದು..

ಇವಳು ಹೀಗೆಲ್ಲಾ ಹೀನಾಯವಾಗಿ ನಮ್ಮನ್ನು ಮನೆಯಿಂದ ಹೊರಗಡೆ ಹಾಕಲು ನೋಡಿದರೂ ನೋಡಿಕೊಂಡು ಸುಮ್ಮನೆ ಇದ್ದೀಯಲ್ಲ. ನಾವೇನೂ ಏನೂ ಇಲ್ಲದವರಲ್ಲ. ಕೋಟಿ ರೂಪಾಯಿ ಆಸ್ತಿ ಇದೆ. ಗೊತ್ತಲ್ವಾ ಅವಳಿಗೆ.

ಅದೆಲ್ಲಾ ಸರಿ. ಇದು ನಿನ್ನ ಮನೆ ತಾನೇ ? ಅವಳು ಯಾಕೆ ನಿನ್ನನ್ನು, ನಮ್ಮನ್ನು ಎಲ್ಲರನ್ನೂ ಹೊರಗಡೆ ಹಾಕಬೇಕು ಅಂತಾ ಹೇಳುತ್ತಾ ಇದ್ದಾಳೆ ? " ಎಂದಾಗ ರಾಮ್


"ಅಪ್ಪಾ, ನೀವು ತಪ್ಪು ತಿಳಿದುಕೊಂಡಿದ್ದೀರಿ. ಇದು ನನ್ನ ಮನೆಯಲ್ಲ. ಅವಳ ಮನೆ. ಮನೆ ಇರುವುದು ಅವಳ ಹೆಸರಲ್ಲೇ.. ನನ್ನ ಸಂಬಳದ ಹಣ ಈ ಮನೆ ಲೋನ್ ಗೆ ಹೋಗುತ್ತಾ ಇದೆ. ಮನೆ ನಡೆಯುತ್ತಾ ಇರುವುದು ಅವಳ ಸಂಬಳದಲ್ಲೇ. ಒಂದು ವಾರದಿಂದ ನೀವು ಜೀವನ ಮಾಡುತ್ತಾ ಇದ್ದದ್ದು.. ನಾನು ಆವತ್ತಿನಿಂದ ಬದುಕುತ್ತಿರುವುದು ಅವಳ ಸಂಬಳದಲ್ಲೇ.. " ಎಂದನು ರಾಮ್.


"ಅಯ್ಯೋ.. ಅಯ್ಯೋ.. ಮನೆಹಾಳಿ.

ನನ್ನ ಮಗನ ಹತ್ತಿರ ಎಲ್ಲವನ್ನೂ ಕಿತ್ತುಕೊಂಡು ಅವನನ್ನೇ ಹೊರಗಡೆ ಹಾಕುವುದಕ್ಕೆ ನೋಡುತ್ತಿದ್ದೀಯಲ್ಲ. ನಿನಗೆ ಮನಸ್ಸಾದರೂ ಹೇಗೆ ಬಂತು ? " ಎಂದ ಅತ್ತೆಯ ಮಾತಿಗೆ ಸೀತಾ


"ಅತ್ತೆ, ಆ ಮಾತನ್ನು ನಿಮಗೆ ನೀವೇ ಕೇಳಿಕೊಳ್ಳಿ. ಬಹುಶಃ ಉತ್ತರ ಸಿಗಬಹುದು. ಇಲ್ಲಾ ಅಂದರೆ ಮನೆಹಾಳಿ ಯಾರು ಅಂತಲಾದರು ಗೊತ್ತಾಗಬಹುದು. " ಎಂದು ತಣ್ಣಗೆ ನುಡಿದಾಗ ಅವಳ ಅತ್ತೆಯ ಮೈ ಮೇಲೆ ಕಾದ ಬಿಸಿ ನೀರು ಹೊಯ್ದ ಹಾಗಾಯಿತು.


ಸೀತಾ ಮಾತು ಶುರು ಮಾಡಿದ್ದಳು. "ಅತ್ತೆ, ಮಾವ ಮತ್ತೆ ನೀವು ಎಲ್ಲರೂ ಸರಿಯಾಗಿ ಕೇಳಿಸಿಕೊಳ್ಳಿ. ಮನೆಹಾಳಿ ಅಂತಾ ಅಂದಿರಲ್ಲ.. ನನ್ನ ನೆಮ್ಮದಿ ಹಾಗೂ ನನ್ನ ಗಂಡನ ಒಳಿತಿಗಾಗಿ ನಾನು ಹಾಗೆಯೇ ಇರುವುದು.


ನಿಮ್ಮ ಕೋಟಿ ರೂಪಾಯಿ ಆಸ್ತಿ ಇದ್ದರೆ ಹೋಗಿ ಅಲ್ಲಿ ಮಾತನಾಡಿ. ಇದು ನನ್ನ ನೆಲ , ನನ್ನ ಮನೆ. ಇಲ್ಲಿ ನಾನು ಹೇಳಿದ ಹಾಗೆಯೇ ಕೇಳಬೇಕು. ನನ್ನ ಗಂಡನ ಸಂಬಳದ ಹಣವನ್ನೆಲ್ಲಾ ನಿಮ್ಮ ಆಸ್ತಿ ವೃದ್ಧಿಸಿಕೊಳ್ಳುವುದಕ್ಕೆ , ನಿಮ್ಮ ಮತ್ತೊಬ್ಬ ಮಗನ ಸಂಸಾರ ನೆಟ್ಟಗೆ ಮಾಡುವುದಕ್ಕೆ ಬಳಸಿ ಬಿಡಿಗಾಸು ಸಹಾ ಇಲ್ಲದಂತೆ ಕಿತ್ತುಕೊಂಡು ನಾಯಿ ಸಾಕಿದ ಹಾಗೆ.. ಬೇಕಾದಷ್ಟೇ ಊಟ ಕೊಡುತ್ತಾ ಇದ್ದಾಗ ಅದು ನಿಮಗೆ ಅನ್ಯಾಯ ಅಂತಾ ಅನ್ನಿಸಲಿಲ್ಲವಾ..


ಕೊನೆಗೆ ಇವರು ನನ್ನನ್ನು ಮದುವೆ ಮಾಡಿಕೊಂಡು ಬಂದಾಗ ಮನೆಗೂ ಸೇರಿಸದೆ ಉಟ್ಟ ಬಟ್ಟೆಯಲ್ಲೇ, ನಿಂತ ನೆಲೆಯಿಲ್ಲದ ಹಾಕಿ ಬೀದಿಗೆ ತಳ್ಳಿದ್ದಿರಿ. ಅಲ್ಲವಾ..?? ಆಗ ಅದು ನಿಮಗೆ ಅನ್ಯಾಯ ಅನ್ನಿಸಿರಲಿಲ್ಲ.


ಈಗ ಮತ್ತೊಬ್ಬ ಮಗ ನಿಮ್ಮ ಹತ್ತಿರ ಎಲ್ಲವನ್ನೂ ಕಿತ್ತುಕೊಂಡು ಕಳುಹಿಸಿರುವಾಗ ನಾವು ಕರೆದುಕೊಂಡು ಬಂದು ಆಶ್ರಯ ಕೊಟ್ಟೆವು. ಆದರೆ, ನೀವು ಮಾಡಿದ್ದೇನು ? ಈಗಲಾದರೂ ನನ್ನನ್ನು ಮತ್ತು ಇವರನ್ನು ಕಾಡಿಸಿದ್ದೇ ಆಯಿತು. ನಾನು ಹೊರಗಡೆ ಹೋಗಿ ಅಷ್ಟೆಲ್ಲಾ ದುಡಿದುಕೊಂಡು ಬಂದರೂ ಮನೆಯಲ್ಲಿ ಕೂತು ತಿಂದಿರಿ. ಕೇಳಿ ಕೇಳಿದ್ದನ್ನು ಮಾಡಿ ಹಾಕಿದೆ. ಮರ್ಯಾದೆ ನೀಡಿದೆ. ಆದರೆ, ನೀವುಗಳು ಹಂಗಿಸುವುದನ್ನು ಹಾಗೂ ಬೈಯ್ಯುವುದನ್ನು ಬಿಡಲೇ ಇಲ್ಲವಲ್ಲ. ನೆನ್ನೆಯಂತೂ ಅದು ಇನ್ನೂ ವಿಪರೀತಕ್ಕೆ ಹೋಯಿತಲ್ಲ. ಊಟಕ್ಕೆ ಉಪ್ಪು ಕಡಿಮೆ ಇತ್ತು. ಉಪ್ಪು ಹಾಕಿಕೊಂಡು ಊಟ ಮಾಡಬಹುದಾಗಿತ್ತು. ಅಲ್ಲವಾ..??


ನೀವು ಮಾಡಿದ್ದೇನು ? ನನ್ನ ವಂಶಾವಳಿಯನ್ನೇ ಜಾಲಾಡಿದಿರಿ. ನಾನು ಮನಸ್ಸು ಮಾಡಿದ್ದರೆ ನೆನ್ನೆಯೇ ರಾತ್ರಿಯೇ ಮನೆಯಿಂದ ಹೊರಗೆ ಓಡಿಸುತ್ತಿದ್ದೆ. ಬೆಳಗಿನವರೆಗೂ ಇರಲಿ.. ವಯಸ್ಸಾದವರು ಎಂದು ಬಿಟ್ಟಿದ್ದೆ. ಅಷ್ಟೇ..


ಈಗಲೂ ನಿಮಗೆ ಈ ಮನೆ ಅಧಿಕಾರ, ಮಗನ ಹಣ, ಸೊಸೆಯ ಬಾಗುವಿಕೆ ಅಷ್ಟೇ ಬೇಕಾಗಿರುವುದು. ಅಲ್ಲವಾ..?? ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ.


ಇಲ್ಲೇ ಹತ್ತಿರದಲ್ಲಿ ಒಂದು ಮನೆ ಮಾಡಿದ್ದೇನೆ. ನೀವಿಬ್ಬರೂ ಅಲ್ಲೇ ಇರಿ. ಇವರ ಅಪ್ಪ- ಅಮ್ಮ ಅನ್ನುವ ಒಂದೇ ಕಾರಣಕ್ಕೆ ಬಾಡಿಗೆ ಕಟ್ಟಿ, ಸಾಮಾನು ತಂದು ಹಾಕುತ್ತೇನೆ. ಇವರು ಆಗಾಗ ಬಂದು ವಿಚಾರಿಸುತ್ತಾರೆ. ಅದಕ್ಕಿಂತ ಹೆಚ್ಚಿನ ಹಣ ಬೇಕಾದಲ್ಲಿ ನಿಮ್ಮ ಕೋಟ್ಯಾಂತರ ರೂಪಾಯಿ ಆಸ್ತಿಯಿಂದ ನೀವೇ ಉಪಯೋಗಿಸಿಕೊಳ್ಳಿ.


ಒಂದು ವಿಷಯ ನೆನಪಿಟ್ಟುಕೊಳ್ಳಿ. ಆಗ ರಾಮ ವಿಧೇಯನಾಗಿದ್ದ. ಸೀತೆ ಮುಗ್ಧೆಯಾಗಿದ್ದಳು.


ಆದರೆ, ಈಗ ರಾಮ ವಿಧೇಯ. ಆದರೆ, ಈ ಸೀತಾ ದಡ್ಡಿಯಲ್ಲ. ಕಣ್ಣು ಮುಚ್ಚಿ ಎಲ್ಲರನ್ನು ನಂಬುವುದೂ ಇಲ್ಲ. ಅಹಂಕಾರ, ಅಧಿಕಾರಕ್ಕೆ ಬಾಗುವುದೂ ಇಲ್ಲ. " ಎಂದು ನುಡಿದು ಒಳ ಹೋದಳು.


ಸೊಸೆಯನ್ನು ಮನೆಯ ಅಡಿಯಾಳಾಗಿರಿಸಿ ವೈಭವದಿಂದ ಮೆರೆಯಲು ಹವಣಿಸಿದ್ದ ಅತ್ತೆ - ಮಾವ ಈಗ ಇಂಗು ತಿಂದ ಮಂಗನಂತಾಗಿದ್ದರು.


ರಾಮ್ ಅಷ್ಟರವರೆಗೂ ಸುಮ್ಮನಿದ್ದವನು ಈಗ ಮಾತನಾಡಿದ್ದ. "ಎಲ್ಲಾ ಅಂತ್ಯವೂ ನೀವೆಂದುಕೊಂಡ ಹಾಗೆಯೇ ಇರುವುದಿಲ್ಲ. ಅಂತ್ಯಗಳು ಬದಲಾಗುತ್ತವೆ. ನಿಮಗಿಂತ ಬುದ್ಧಿವಂತರು ಕೊಡುವ ಅಂತ್ಯ ಬುದ್ಧಿವಂತಿಕೆಯಿಂದಲೇ ಇರಬೇಕಲ್ಲವಾ.." ಎಂದವನೇ ಒಳ ನಡೆದ.


~ವಿಭಾ ವಿಶ್ವನಾಥ್

ಬಡವರಾದರೆ ಏನು ಪ್ರಿಯೆ


 "ನಿನ್ನ ಮನೆಯಲ್ಲಿ ಅಷ್ಟೆಲ್ಲಾ ಇದ್ದರೂ ನೀನು ನನಗಾಗಿ, ನಮ್ಮ ಪ್ರೀತಿಗಾಗಿ ಎಷ್ಟೆಲ್ಲಾ ಮಾಡಿದೆ ಹೃದಯ್. ನೀನು ನಿನ್ನ ಅಪ್ಪ - ಅಮ್ಮ, ಆಸ್ತಿ - ಪಾಸ್ತಿ ಎಲ್ಲವನ್ನೂ ಬಿಟ್ಟು ಬಂದೆಯಲ್ಲಾ.. ಯೂ ಆರ್ ಗ್ರೇಟ್. ರಿಯಲಿ ಗ್ರೇಟ್" ಎಂದವಳನ್ನು ತೋಳಲ್ಲಿ ಬಳಸುತ್ತಾ


"ಬದುಕಲ್ಲಿ ಒಂದು ಮೌಲ್ಯಯುತವಾದದ್ದನ್ನು ಪಡೆದುಕೊಳ್ಳಬೇಕಿದ್ದರೆ ಮತ್ತೊಂದನ್ನು ಕಳೆದುಕೊಳ್ಳಬೇಕಂತೆ. ನೋಡು, ಆ ಆಸ್ತಿ ನನಗೆ ಸಿಗದಿರಬಹುದು. ಅದೇನೂ ನನ್ನ ಕಷ್ಟಾರ್ಜಿತವಲ್ಲ. ನೀನು ನನ್ನ ಅಮೂಲ್ಯ ಆಸ್ತಿ ಕಣೇ ಮಾ.


ಎಷ್ಟೋ ಜನ ಹುಡುಗಿಯರು ಪ್ರೀತಿಯನ್ನು ನಿವೇದಿಸಿಕೊಂಡರು. ಆದರೆ, ಅವರೆಲ್ಲರಿಗೂ ನಾನು ನಾನಾಗಿ ಇಷ್ಟವಾಗಲಿಲ್ಲ. ಅವರು ನನ್ನನ್ನು ಪ್ರೀತಿಸಲಿಲ್ಲ. ಅವರು ಪ್ರೀತಿಸಿದ್ದು ನನ್ನ ಆಸ್ತಿಯನ್ನು ಕಂಡು. ಅವರು ನನ್ನ ಆಸ್ತಿಯನ್ನು ಪ್ರೀತಿಸಿದರು ಅಷ್ಟೇ.. ಆಸ್ತಿಯನ್ನು ಬಿಟ್ಟು ಬಂದರೆ ಓಡಿ ಹೋಗಿ ಮದುವೆಯಾಗೋಣ ಎಂದರೆ ಹೆದರಿ ಓಡುತ್ತಿದ್ದರು. ಆದರೆ, ನೀನು ನೀನಾಗಿ ಬಂದು ನನ್ನನ್ನು ಪ್ರೀತಿಸಲಿಲ್ಲ. ನಾನೇ ಬಂದು ನಿನಗೆ ಮನಸೋತ ವಿಚಾರ ತಿಳಿಸಿದಾಗ ನಮ್ಮ ಶ್ರೀಮಂತಿಕೆ ಕಂಡು ನಿರಾಕರಿಸಿದ್ದೆಯಲ್ಲ. ಆಗಲೇ ಅನ್ನಿಸಿತ್ತು ನೀನೇ ನನ್ನ ಜೋಡಿ ಎಂದು. ಆಸ್ತಿ ಇವತ್ತು ಇರುತ್ತದೆ. ನಾಳೆ ಹೋಗುತ್ತದೆ. ಆದರೆ, ಪ್ರೀತಿ ಯಾವಾಗಲೂ ಇರಬೇಕು. ಅಲ್ಲವಾ..??


ಇನ್ನೊಂದು ವಿಚಾರ ಶಿವಾನಿ.. ನೀನು ನನ್ನನ್ನು ಮದುವೆಯಾಗಿದ್ದರೆ ನೀನು ನಿನ್ನ ತಂದೆ ತಾಯಿಯನ್ನು ಬಿಟ್ಟು ನನ್ನ ಬಳಿ ಬರಬೇಕಿತ್ತು. ಅಲ್ಲವಾ..?? ಐ ಮೀನ್ ಮದುವೆಯಾದ ನಂತರ ಹೆಣ್ಣು ಮಕ್ಕಳು ತವರನ್ನು ತೊರೆದು ಗಂಡನ ಬಳಿಗೆ ಬರುತ್ತಾರೆ. ಇಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ಅಷ್ಟೇ.. ಹಿಂದೆ ದಕ್ಷಿಣ ಕನ್ನಡದಲ್ಲಿ ಅಳಿಯ ಬಂದು ಅತ್ತೆಯ ಮನೆಯಲ್ಲಿ ಇರುವ ಪರಿಸ್ಥಿತಿ ಇತ್ತಂತೆ. ಇದೂ ಹಾಗೆಯೇ ಅಂದುಕೊಂಡರೆ ಆಯ್ತು.




ಇನ್ ಫ್ಯಾಕ್ಟ್.. ನನ್ನಿಂದ ನಿನ್ನ ಕೆಲಸ ಹೋಯ್ತು. ನನ್ನನ್ನು ಮದುವೆಯಾದೆ ಅಂತಾ ನನ್ನ ತಂದೆ ಫ್ಯಾಕ್ಟರಿಯಿಂದ ನಿನ್ನನ್ನು ತೆಗೆದು ಹಾಕಿದ್ದಾರೆ. ಅಲ್ಲದೆ, ನೀನು ಮದುವೆಯಾಗಿದ್ದರೆ ಇಂದಿನ ಈ ಪರಿಸ್ಥಿತಿಯಿಂದ ಸ್ವಲ್ಪ ಸುಖವಾಗಿರುತ್ತಿದ್ದೆ. ನಿನ್ನ ತಂದೆ-ತಾಯಿಗೂ ಕಷ್ಟ ಇರುತ್ತಿರಲಿಲ್ಲ. ಅಲ್ಲವಾ ? "ಎಂದಾಗ ಶಿವಾನಿ


"ಕಷ್ಟ ಯಾರಿಗೆ ಇರುವುದಿಲ್ಲ ಹೇಳಿ. ನಿಮ್ಮ ಕಷ್ಟ, ನೋವನ್ನು ಮರೆಮಾಚಿ ನನ್ನನ್ನು ನಮ್ಮ ಮನೆಯವರನ್ನು ಇಷ್ಟು ಚೆಂದ ನೋಡಿಕೊಳ್ಳುತ್ತಿದ್ದೀರಿ.


ನೀವು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದ್ದವರು. ಈಗ ಬೀದಿ ಬದಿಯ ಅಂಗಡಿಯಲ್ಲಿ ತಟ್ಟೆ ತೊಳೆಯುತ್ತೀರಿ. ರಸ್ತೆ ಬದಿಯಲ್ಲಿ ಪೇಪರ್ ಮಾರುತ್ತೀರಿ. ದಿನಗೂಲಿಯನ್ನು ಸಹಾ ಮಾಡುತ್ತೀರಿ. ನಿಮಗೆ ಓದು, ಯೋಗ್ಯತೆ ಎಲ್ಲವೂ ಇದ್ದರೂ ನಿಮ್ಮಪ್ಪನ ಹಠ ಮತ್ತು ದ್ವೇಷದಿಂದ ನಿಮಗೊಂದು ಸರಿಯಾದ ಕೆಲಸವೂ ಇಲ್ಲ. ಜೊತೆಗೆ ನಮ್ಮನ್ನೆಲ್ಲಾ ನೋಡಿಕೊಳ್ಳಬೇಕು" ಎಂದಾಗ


"ನೋಡು ಶಿವಾನಿ..

ಶ್ರೀಮಂತ ಆಗಿದ್ದಾಗ ನನಗೊಂದು ಆಸೆ ಇತ್ತು. ಹೀಗೆ, ಬೀದಿ ಬದಿ ಹೋಟೆಲ್ ಅಲ್ಲಿ ತಿನ್ನಬೇಕು. ಚಹಾ ಕುಡಿಯಬೇಕು. ದುಡಿದು ಬಂದು ನೆಮ್ಮದಿಯ ನಿದ್ದೆ ಮಾಡಬೇಕು. ಮನೆಯಲ್ಲಿ ಕಾಯುವ ಹೆಂಡತಿಯನ್ನು ಸಾಧ್ಯವಾದಷ್ಟು ಪ್ರೀತಿ ಮಾಡಬೇಕು ಅಂತಾ.


ನಿಜಕ್ಕೂ ಮೊದಲಿದ್ದ ಜೀವನದಲ್ಲಿ ಅದು ಯಾವುದು ಸಹಾ ಸಾಧ್ಯವಾಗುತ್ತಾ ಇರಲಿಲ್ಲ. ಈಗ ನೋಡು.. ಎಲ್ಲವೂ ಸಾಧ್ಯ.


ಯಾಕೋ ಬೇಂದ್ರೆಯವರು ಹೇಳಿದ್ದು ನೆನಪಾಗುತ್ತಿದೆ ನೋಡು


ಬಡವನಾದರೆ ಏನು ಪ್ರಿಯೆ

ಕೈ ತುತ್ತು ತಿನಿಸುವೆ

ಎದೆಯ ತುಂಬಾ ಒತ್ತಿಕೊಂಡು

ಮುತ್ತು ಮಳೆಯಾ ಸುರಿಸುವೆ  "


ಎನ್ನುತ್ತಾ ಹಾಡತೊಡಗಿದ್ದನು ಹೃದಯ್. ಅವನ ಅಪ್ಪುಗೆಯ ಸುಖದಲ್ಲಿ ಮೈಮರೆತು ತನ್ನನ್ನು ತಾನೇ ಕಳೆದುಕೊಂಡಿದ್ದಳು ಶಿವಾನಿ. ಬಡತನದಲ್ಲಿಯೂ ಸುಖವಿದೆ ಎಂಬುದನ್ನು ಇಬ್ಬರೂ ಒಪ್ಪಿ ಅಪ್ಪಿ ನಡೆಯುತ್ತಿದ್ದರು


~ವಿಭಾ ವಿಶ್ವನಾಥ್

ರಾಜ ಕಲಾವಿದ ರವಿವರ್ಮ (ಪುಸ್ತಕ ಯಾನ - 487)


ಪುಸ್ತಕದ ಶೀರ್ಷಿಕೆ : ರಾಜ ಕಲಾವಿದ ರವಿವರ್ಮ

ಲೇಖಕರು : ಡಾ. ಗೀತಾ ಸೀತಾರಾಮ್

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಷನ್ಸ್

ಪ್ರಥಮ ಮುದ್ರಣ : 2022

ಪುಟಗಳು : 152

ಬೆಲೆ : 200 ರೂ.


ರಾಜಾ ರವಿವರ್ಮರ ಚಿತ್ರವೆಂದು ತಿಳುವಳಿಕೆಯಿಲ್ಲದ ಹಲವಾರು ಜನ ಅವರ ಕಲೆಯನ್ನು ಮೆಚ್ಚಿ ಆರಾಧಿಸುತ್ತಿದ್ದಾರೆ. ಮೈಸೂರು ಅರಸರ ಆಶ್ರಯದಲ್ಲಿಯೂ ಇವರ ಕಲೆ ಪ್ರವರ್ಧಮಾನಕ್ಕೆ ಬಂದದ್ದನ್ನು ನೋಡಬಹುದು. ಇವರ ಚಿತ್ರಗಳು ಮೈಸೂರಿನ ಅರಮನೆಯಲ್ಲಿ ಹಾಗೂ ಜಗನ್ಮೋಹನ ಆರ್ಟ್ ಗ್ಯಾಲರಿಯಲ್ಲಿವೆ. ಈ ಕಾದಂಬರಿಯ ಕೊನೆಯಲ್ಲಿ 40 ವರ್ಣ ಚಿತ್ರಗಳು ಮನಸೆಳೆಯುವಂತಿವೆ. ಈ ಕಾದಂಬರಿ ಸುಧಾದಲ್ಲಿ ಪ್ರಕಟವಾಗಿತ್ತು.


ಚಿತ್ರಕಲೆಯನ್ನೇ ತನ್ನ ಉಸಿರಾಗಿಸಿಕೊಂಡ ರವಿವರ್ಮರು ಕೇರಳ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬದುಕಿದರೂ.. ಹುಟ್ಟಿದ್ದು ಕೇರಳದ ಕಿಳಿಮಾನೂರಿನಲ್ಲಿ. ಒಡೆಯರಾದ ರಾಜರಾಜವರ್ಮರಿಗೆ ಮನೆಯಾಳು ಪಾಚನ್ ಹೆದರುತ್ತಲೇ ಮನೆತನದ ಗುಡಿಯ ಗೋಡೆಗಳು, ಮನೆಯೊಳಗಿನ ಬಿಳಿ ಗೋಡೆಗಳ ಮೇಲೆ ಬರೆಯಲಾಗಿದ್ದ ಇದ್ದಲಿನ ಚಿತ್ರಗಳನ್ನು ತೋರಿಸುವುದರಿಂದ ಕಾದಂಬರಿ ಆರಂಭವಾಗುತ್ತದೆ. 


ಆ ಘಟನೆ ನಡೆದಾಗ ರವಿಗಿನ್ನೂ ಏಳು ವರ್ಷ. ಅವರ ಸೋದರಮಾವ ರಾಜರಾಜವರ್ಮರು ಅಳಗಿರಿ ನಾಯ್ಡು ಆಸ್ಥಾನದಲ್ಲಿ ನೀರಿನ ಬಣ್ಣಗಳ ಚಿತ್ರಕಲೆಯನ್ನು ಅಭ್ಯಸಿಸಿದ್ದರು. ವಂಶಪಾರಂಪರ್ಯವಾಗಿ ಅದು ರವಿಗೂ ಬಂದಿರಬಹುದು. ರವಿಯ ತಾಯಿ ಉಮಾಂಬ ನೃತ್ಯ ಹಾಗೂ ಚಿತ್ರ ಕಲಾವಿದೆ, ತಂದೆ ಏಳುಮಾವಿಲ್ ಸಂಸ್ಕೃತ ಪಂಡಿತರು.


ಎಲ್ಲರೂ ರಾಜರಾಜವರ್ಮರ ಕೋಪಕ್ಕೆ ಹೆದರಿದ್ದರು. ಆದರೆ, ವ್ಯತಿರಿಕ್ತವೆಂಬಂತೆ ಅವರು ರವಿಯ ಪ್ರತಿಭೆಯನ್ನು ಗುರುತಿಸಿ, ಪರಿಷ್ಕರಿಸಿ, ಉತ್ತೇಜಿಸಿದರು. ರವಿಗೆ ಮಾವನ ಚಿತ್ರಕಲಾ ಕೊಠಡಿಗೆ ಪ್ರವೇಶ ದೊರೆಯಿತು.


ಅಳಿಲಿನ ಬಾಲದಿಂದ ತಯಾರಿಸಿದ ಅನೇಕ ರೀತಿಯ ಕುಂಚಗಳು, ಮಣ್ಣಿನ ಕುಡಿಕೆಯಲ್ಲಿನ ಬಣ್ಣಗಳು, ಮಾವನ ಹಳೆಯ ಕ್ಯಾನ್ವಾಸ್ಗಳು ಆತನದ್ದಾಯಿತು. 

"ಪ್ರತಿಯೊಬ್ಬ ಚಿತ್ರಕಾರನು ತನ್ನದೇ ಬಣ್ಣಗಳನ್ನು ಸೃಷ್ಟಿಸಬೇಕು ಅವನಿಗೆ ಕಣ್ಣುಗಳಿದ್ದರೆ ಮಾತ್ರ ಸಾಲದು. ಅಂತರ್ ದೃಷ್ಟಿ ಇರಬೇಕು ನೋಡಿದ್ದು ಗ್ರಹಿಸುವ ಶಕ್ತಿ ಇರಬೇಕು" ಎನ್ನುವ ಮಾವನ ಮಾತಿನ ಜೊತೆಗೆ ಬಣ್ಣಗಳನ್ನು ಎಲೆ, ಹೂವು, ಬೇರು, ಮಣ್ಣು ಮತ್ತು ರಾಸಾಯನಿಕ ವಸ್ತುಗಳಿಂದ ತಯಾರಿಸುವ ಪ್ರಾಥಮಿಕ ಪಾಠದಲ್ಲಿ ನಾಲ್ಕು ವರ್ಷಗಳ ಅಭ್ಯಾಸವಾಯಿತು.


ಅಧಿಕೃತವಾಗಿ ರವಿವರ್ಮ ಚಿತ್ರಿಸಿದ ಮೊದಲ ಚಿತ್ರ ಯಾವುದು ಗೊತ್ತೇ..?!

ಕೇಸರಿ ಬಣ್ಣದ ಎಲೆ.


ಆತನ ಪ್ರತಿಭೆಗೆ ಮತ್ತಷ್ಟು ಮೆರುಗು ನೀಡಲು ಎಲ್ಲರನ್ನೊಪ್ಪಿಸಿ ರಾಜರಾಜವರ್ಮರು ತನ್ನ ಪ್ರೀತಿಯ ಕೊಚ್ಚ್(ಕಂದಾ)ನನ್ನು ತಿರುವನಂತಪುರದ ಮಹಾರಾಜ ಆಯಿಲ್ಯ ತಿರುನಾಳರ ಆಶ್ರಯಕ್ಕೆ ಬಿಡುತ್ತಾರೆ. ಇವರು ರವಿವರ್ಮರ ಚಿತ್ರಕಲಾ ಹಾಗೂ ವೈಯಕ್ತಿಕ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.


ಮೊದಲಿಗೆ ಆತನನ್ನು ಮದುವೆಯ ಪ್ರಸ್ತಾಪಕ್ಕೆಂದು ಭಾವಿಸಿದ್ದರಾದರೂ.. ಕಲೆಯ ವಿಚಾರ ತಿಳಿದು, ಅವನ ಮೂರು ವರ್ಣಚಿತ್ರಗಳನ್ನು ನೋಡಿ ಆಸ್ಥಾನ ಚಿತ್ರಕಾರರಾದ ರಾಮಸ್ವಾಮಿ ನಾಯಕರ್ ರಿಂದ ಪಾಠ ಹೇಳಿಸಲು ಒಪ್ಪುತ್ತಾರೆ. 


ರಾಮಸ್ವಾಮಿ ನಾಯಕರ್ ಪಾಠವನ್ನು ಆರಂಭಿಸಿದರಾದರೂ.. ಬಣ್ಣವನ್ನು ಕಲಸುವಾಗ ಕೋಣೆಯೊಳಗೆ ಬಿಡುತ್ತಿರಲಿಲ್ಲ. ಆದರೆ, ರವಿವರ್ಮ ತಾನೇ ಮಿಶ್ರ ಮಾಡಿದ ಬಣ್ಣಗಳನ್ನು ತೆಗೆದುಕೊಂಡು ಹೋದಾಗ ಅವರಿಗೆ ಸಿಟ್ಟು ಬಂದು ಪ್ಯಾಲೆಟ್ ಅನ್ನು ಎಸೆದು ರಾದ್ದಾಂತವಾದಾಗ.. ಅದು ಶಮನವಾದುದೇಗೆ..?


ಪಾಶ್ಚಾತ್ಯ ಕಲಾವಿದರಾದ ಬ್ರೂಕ್ಸ್ ಅವರನ್ನು ನೇಮಿಸಲು ಮಹಾರಾಜರು ಒಪ್ಪುತ್ತಾರಾದರೂ.. ಆತನೇ ಇವರಿಗೆ ಪಾಠ ಹೇಳಲು ಒಪ್ಪುವುದಿಲ್ಲ ಮದರಾಸಿನಿಂದ ತೈಲವರ್ಣಗಳನ್ನು ತರಿಸಿಕೊಡುತ್ತಾರೆ. 15-16 ವಯೋಮಾನದಲ್ಲಿದ್ದಾಗ ಬ್ರೂಕ್ಸ್ ಬಣ್ಣ ಮಿಶ್ರ ಮಾಡುವುದನ್ನು ಗಮನಿಸುತ್ತಿರುತ್ತಾರೆ. ಆತನಿಗೆ ಅದು ತಿಳಿದು ಕೋಣೆಗೆ ಅನುಮತಿಸುವುದಿಲ್ಲ. ಗ್ರಂಥಾಲಯದ ಸಹಾಯದಿಂದಲೇ ಚಿತ್ರಕಲೆ ಅಭ್ಯಾಸಿಸಿ ರಾಜಮಾತೆಯ ಚಿತ್ರವನ್ನು ಅವರದ್ದೇ ತದ್ರೂಪಿನಂತೆ ಬರೆದು ಎಲ್ಲರ ಮನ ಸೆಳೆದರು.


ಕಲೆಗೆ ಮೆಚ್ಚಿ ಮಹಾರಾಣಿಯ ತಂಗಿ ಪುರತಾರ್ಥಿಯೊಡನೆ ವಿವಾಹವಾಗುತ್ತದೆ. ಮಾತೃಪ್ರಧಾನ ಸಮಾಜದ ನಡೆಯಂತೆ ಪತ್ನಿಯ ಊರು ಮಾನೆಲ್ಲಿಕರಾಗೆ ಹೋಗಿ ನೆಲೆಸಬೇಕಾಗುತ್ತದೆ. ಪತ್ನಿಯಿಂದ ಕಲೆಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತದೆ ಹಾಗೂ ಅವರ ಸಾಂಸಾರಿಕ ಬದುಕು ಹೇಗಿತ್ತು ಓದಿ ನೋಡಿ.


ರವಿವರ್ಮ ನಾಯರ್ ಸ್ತ್ರೀ ಕಾಮಿನಿ ಅನ್ನು ರೂಪದರ್ಶಿಯನ್ನಾಗಿಸಿಕೊಂಡು ಬರೆದ ಚಿತ್ರ ಸಾಕಷ್ಟು ಪ್ರಶಂಸೆ, ಬಹುಮಾನಗಳಿಗೆ ಪಾತ್ರವಾಗುತ್ತದಾದರೂ.. ತನ್ನವರಿಂದ ದೂರಾಗಿಸುತ್ತದೇಕೆ..?


ರವಿವರ್ಮನಷ್ಟೇ ಅವರ ತಂಗಿ ಮಂಗಳ ಸಹ ಪ್ರತಿಭಾವಂತ ಳು. ನೈಜವೆಂಬಂತ ಸುಂದರ ಪುಷ್ಪವೊಂದನ್ನು ರವಿವರ್ಮ ಚಿತ್ರಿಸಿರುತ್ತಾರೆ. ಊಟಕ್ಕೆ ಕರೆಯಲು ಬಂದ ಮಂಗಳ ಅದನ್ನು ನೋಡಿ ತನ್ಮಯಳಾಗುತ್ತಾಳೆ. ಊಟ ಮುಗಿಸಿ ಬರುವಷ್ಟರಲ್ಲಿ ಚಿತ್ರದ ಮೇಲಿದ್ದ ದುಂಬಿಯನ್ನು ಓಡಿಸಲು ಹೋದವರು ಬೇಸ್ತು ಬೀಳುತ್ತಾರೆ. ಏಕೆಂದರೆ, ಅದು ಮಂಗಳ ಚಿತ್ರಿಸಿದ್ದು. ಇದು ಇಬ್ಬರ ಕಲಾ ಪ್ರತಿಭೆಗೂ ಸಾಕ್ಷಿಯಾಗಿದೆ.


"ರಾಜಕುಮಾರ ರಾಜ ಮನೆತನದಲ್ಲಿ ಹುಟ್ಟುವುದರಿಂದ ರಾಜನಾಗಬಲ್ಲ. ಆದರೆ, ಜನರ ಮನಸ್ಸನ್ನು ಗೆದ್ದು ರಾಜಕಲಾವಿದನಾಗುವುದು ಸಣ್ಣ ಮಾತಲ್ಲ." ಎನ್ನುವ ಮಾವನ ಮಾತು ರವಿವರ್ಮನ ಮನಸ್ಸಿನಲ್ಲಿ ಅಚ್ಚಳಿಯದಂತಿತ್ತು. ಮುಂದೆ ಆಯಿಲ್ಯ ತಿರುನಾಳರಿಂದ 'ರಾಜ ರವಿವರ್ಮ' ಎಂಬ ಬಿರುದು ದೊರೆಯುತ್ತದೆ. ಗೌರವ ಬಿರುದು ದಯಪಾಲಿಸಲೆಂದೇ ದರ್ಬಾರ್ ಏರ್ಪಡಿಸಲಾಗಿರುತ್ತದೆ. 

ಮುಂದೆ ಅವರ ತಮ್ಮ ವಿಶಾಖಂ ತಿರುನಾಳ್ ರಾಜರಾದಾಗ ಬಿರುದನ್ನು ಹಿಂಪಡೆಯಲಾಗುತ್ತದೆ. ಮತ್ತೆ ಮುಂದಿನ ರಾಜರಾದ ಗುಲಂತಿರುನಾಳ್ ರು ಗೌರವದಿಂದ ಅದೇ ಬಿರುದನ್ನು ಹಿಂತಿರುಗಿಸುತ್ತಾರೆ.


"ಬಣ್ಣಗಳನ್ನು, ಕುಂಚಗಳನ್ನು ಹಿಡಿದು ಬಿಟ್ಟರೆ ಶ್ರೇಷ್ಠ ಕಲಾವಿದನಾಗುವುದಿಲ್ಲ. ಭಗವಂತನೆಂಬ ದೊಡ್ಡ ಚಿತ್ರ ಕಲಾವಿದ ಪ್ರತಿ ಹೃದಯದಲ್ಲಿಯೂ ದೈವತ್ವವನ್ನು ತುಂಬುತ್ತಾನೆ. ಅದನ್ನು ಕೆಲವರು ಮಾತ್ರ ಕಂಡುಕೊಳ್ಳುತ್ತಾರೆ." ಎನ್ನುವ ಮಾವನ ಮಾತು ಸತ್ಯ. ಅದರಲ್ಲಿ ರವಿವರ್ಮ ಮುಂಚೂಣಿಯಲ್ಲಿದ್ದರು.


ತಮ್ಮ ಚಿತ್ರಕಲೆಯ ಸ್ಪೂರ್ತಿಗಾಗಿ ದೇವಾಲಯದ ಶಿಲ್ಪ ಸೌಂದರ್ಯ, ನೈಜ ಸೌಂದರ್ಯವನ್ನು ಅರಸುತ್ತಾ ನೃತ್ಯ ಹಾಗೂ ಸಂಗೀತ ಕಚೇರಿಗೆ ಹೋಗುವುದನ್ನು ಇಲ್ಲಿ ಗಮನಿಸಬಹುದು.


ಮದರಾಸಿನಲ್ಲಿ ದಿವಾನ್ ರಘುರಾಯರಿಂದ ಏರ್ಪಾಡಾದ ಚಿತ್ರ ಪ್ರದರ್ಶನಕ್ಕೆ ಹೋದಾಗ ಪಾಶ್ಚಾತ್ಯರ ಬಣ್ಣದ ಛಾಯೆಗಳನ್ನು ಗಮನಿಸುವುದನ್ನು ಇಲ್ಲಿ ಹೇಳಿದ್ದಾರೆ.

ಕಂದು ಬಣ್ಣವೆಂದರೆ ಬ್ರೌನ್, ಟೊಬಾಕೊ ಬ್ರೌನ್, ಮಮ್ಮಿ ಬ್ರೌನ್ ಹೀಗೆ.. ಬಣ್ಣದ ಹಲವಾರು ಶೇಡ್ ಗಳ ಕುರಿತು ತಿಳಿಯುತ್ತಾರೆ. ಅಲ್ಲಿ ಹೆಚ್ಚು ಕಲಿಯುವ ಸಲುವಾಗಿ ಪ್ರವಾಸಕ್ಕೂ ಹೋಗುವುದಿಲ್ಲ. ಹಲವಾರು ಪಾಶ್ಚಾತ್ಯ ಕಲಾವಿದರನ್ನು ಭೇಟಿಯಾದರೂ ಇವರ ಚಿತ್ರವನ್ನು ಹೊಗಳಿದರೇ ವಿನಃ ಅವರ ಚಿತ್ರಕಲೆಯ ಗುಟ್ಟು ಬಿಟ್ಟುಕೊಡುವುದಿಲ್ಲ.


ಶಕುಂತಲೆಯ ಪತ್ರಲೇಖನ ಚಿತ್ರಕ್ಕೆ ಮದರಾಸಿನ ಮತ್ತೊಂದು ಪ್ರದರ್ಶನದಲ್ಲಿ ಪದಕವು ದೊರೆಯುತ್ತದೆ. ಅದಕ್ಕೆ ಅಗತ್ಯವಾಗಿದ್ದ ರೂಪದರ್ಶಿಗಳನ್ನು ಆಯಿಲ್ಯಂ ತಿರುನಾಳರೇ ಒದಗಿಸುತ್ತಿದ್ದರು. 


ರವಿವರ್ಮನ ಚಿತ್ರಕಲೆಯಲ್ಲಿ ಅವರ ತಮ್ಮ ರಾಜವರ್ಮನದ್ದೂ ಪಾಲಿತ್ತು. ಆತನು ಒಳ್ಳೆಯ ಚಿತ್ರಕಾರ. ಹೆಚ್ಚಿನ ಚಿತ್ರಗಳನ್ನು ಎರಡು ಕಾಪಿ ಮಾಡುತ್ತಿದ್ದರು. ರಾಜಕುಟುಂಬದವರ ವರ್ಣಚಿತ್ರಗಳಲ್ಲಿ ಮುಖ್ಯವ್ಯಕ್ತಿಯ ಚಿತ್ರವನ್ನು ರವಿವರ್ಮ ರಚಿಸಿದರೆ ಹಿನ್ನೆಲೆಯ ಬಣ್ಣವನ್ನು ರಾಜವರ್ಮ ತುಂಬುತ್ತಿದ್ದ ಉಲ್ಲೇಖವಿದೆ.


ರವಿವರ್ಮರ ಹೆಚ್ಚಿನ ಚಿತ್ರಗಳಿಗೆ ರೂಪದರ್ಶಿಯಾದ ಸುಗಂಧಳ ಅಧ್ಯಾಯ ಶುರುವಾದದ್ದು ಹೇಗೆ..? 

ಉಷಾಳ ಸ್ವಪ್ನದಲ್ಲಿ ಅನಿರುದ್ಧ ಬರುವ ಚಿತ್ರವನ್ನು ಬರೆಯುವ ಸಂದರ್ಭದಲ್ಲಿ ಹಾಡು ಕೇಳಿ ಸ್ಪೂರ್ತಿಗೊಳ್ಳಲು ತಮ್ಮ ಗೋದವರ್ಮರನ್ನು ವೀಣೆಯೊಂದಿಗೆ ಬರಲು ಹೇಳುತ್ತಾರೆ.


ಬರೋಡಾದ ರಾಜಮನೆತನದ, ಭಾವನಗರ್ ಸಂಸ್ಥಾನದ ರಾಜ ಕುಟುಂಬದ ತೈಲಚಿತ್ರಗಳನ್ನು ರಚಿಸುತ್ತಾರೆ. ಹಲವಾರು ಪುರಾಣ ಪ್ರಸಂಗಗಳ ಪ್ರಸಿದ್ಧ ಚಿತ್ರಣಗಳನ್ನು ರಚಿಸುತ್ತಾರೆ. ಅದಕ್ಕೆ ಸುಗಂಧ ಹಾಗೂ ಆಕೆಯ ತಂಗಿ ಕಮಲ ರೂಪದರ್ಶಿಗಳು.


ಪುರೂರವ ಹಾಗೂ ಊರ್ವಶಿಯರ ಚಿತ್ರಕ್ಕೆ.. ಅರೆನಗ್ನ ಚಿತ್ರದ ರೂಪದರ್ಶಿಯಾಗಿದ್ದು ಸುಗಂಧ.

"ರವಿವರ್ಮರ ಪಾಲಿಗೆ ಜಡವಸ್ತುವಾಗಿದ್ದ ಸುಗಂಧ..!

ಬರಿಯ ಭಾವನೆಗಳಿಲ್ಲದ ರೂಪದರ್ಶಿಯಂತೆ.. ಒಂದು ಹೂವನ್ನು, ಹಣ್ಣನ್ನು ಚಿತ್ರಿಸುವಂತೆ ನನ್ನನ್ನು ಚಿತ್ರಿಸಿದ" ಎನ್ನುವ ಆತನ ನಿರ್ಲಿಪ್ತ ಮನಸ್ಥಿತಿಯನ್ನು ಕಲಾಲೋಕದ ಔನ್ನತ್ಯಕ್ಕೆ ಸಾಕ್ಷಿಯಂತೆ ಕಾಣಬಹುದು.


ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಆಹ್ವಾನದ ಮೇಲೆ ರಾಜಮನೆತನದವರ ಚಿತ್ರಗಳನ್ನು ಬಿಡಿಸುತ್ತಾರೆ.


"ನಿನ್ನ ಬಣ್ಣದ ತಟ್ಟೆಯ ತುಂಬಾ ಅನೇಕ ಬಣ್ಣಗಳಿವೆ. ಅವೆಲ್ಲ ನೀನೇ ಸೃಷ್ಟಿಸಿರುವ ಬಣ್ಣಗಳು. ಒಬ್ಬ ಕಲಾಕಾರನಿಗೆ ಯಾವ ಬಣ್ಣಗಳನ್ನು ಉಪಯೋಗಿಸಬಾರದು ಎಂದು ತಿಳಿದಿರಬೇಕು. 

ಚಿತ್ರದ ಕಣ್ಗಳಲ್ಲಿ ಜೀವಕಳೆ ಮೂಡಿಸುವುದು ತುಂಬಾ ಕ್ಲಿಷ್ಟ. ಅದರಲ್ಲಿ ನೀನು ಪರಿಣಿತ. ಕಲೆಯನ್ನು ಹಣಕ್ಕಾಗಿ ಮಾರಬೇಡ" ಎಂಬ ಕಿವಿಮಾತನ್ನು ಮಾವ ಹೇಳುತ್ತಾರೆ.


ಮಹಾರಾಜ ಸಯ್ಯಾಜಿ ರಾವ್ ಅವರ ಲಕ್ಷ್ಮಿವಿಲಾಸ ಅರಮನೆಗೆ ಸಂಸ್ಕೃತಿ, ಪುರಾಣ, ಇತಿಹಾಸಗಳ ಕಥೆಯನ್ನು ಬಣ್ಣಿಸುವ ಚಿತ್ರಗಳು ಬೇಕಾದಾಗ ಅವರ ಏಕೈಕ ಹಾಗೂ ಉತ್ಕೃಷ್ಟ ಆಯ್ಕೆಯಾಗಿದ್ದು ರವಿವರ್ಮರೇ. ಇದಕ್ಕಾಗಿ ಅವರು ಉತ್ತರ ಭಾರತದ ಪ್ರವಾಸವನ್ನು ಮಾಡಿ ಬರುತ್ತಾರೆ.


ರವಿವರ್ಮರ ಚಿತ್ರಕಲೆಯ ಹಿರಿಮೆಯ ಕುರಿತು ಹೇಳುತ್ತಾ ಸಾಗಿದಷ್ಟೂ ಇದೆ.


ಮುಂದೆ ಚಿತ್ರಗಳನ್ನು ಮುದ್ರಿಸಲು ನಿರ್ಧರಿಸಿ ಜರ್ಮನಿಯಿಂದ ಮುದ್ರಣ ಯಂತ್ರಗಳನ್ನು ತರಿಸಿ ಕ್ಯಾಲೆಂಡರ್ ಆರ್ಟ್ ಶುರು ಮಾಡುತ್ತಾರೆ. ಆದರೆ ಅಲ್ಲಿಂದ ಬಂದ ಯಂತ್ರಜ್ಞರು ಚಿತ್ರಗಳನ್ನು ಪ್ರಶಂಸಿಸುತ್ತಾರಾದರೂ.. ಮುದ್ರಣದ ದೃಷ್ಟಿಯಿಂದ ಕಡಿಮೆ ಬಣ್ಣಗಳನ್ನು ಉಪಯೋಗಿಸಿ ರಚಿಸುವ ಸಲಹೆ ನೀಡುತ್ತಾರೆ. ಲಿತೋಗ್ರಾಫ್ ತಟ್ಟೆಗಳ ಮೇಲೆ ಅಂತಹ ಚಿತ್ರವನ್ನು ರಚಿಸಿಯೇ ಬಿಡುತ್ತಾರೆ ರವಿವರ್ಮ. ಹಾಗೆ ರಚಿಸಿದ ಮೊದಲ ಚಿತ್ರ ಶಕುಂತಲೆಯ ಜನನ.


ಹಿಂದೂ ದೇವಕೆಗಳ ಚಿತ್ರಗಳನ್ನು ಮನೆಮನೆಗಳಲ್ಲೂ, ಬೀದಿಬೀದಿಗಳಲ್ಲೂ ಹರಡಿ ಪವಿತ್ರತೆಗೆ ಕುಂದು ತಂದಿರುವ ಕುರಿತಾಗಿಯೂ ಹಾಗೂ ಅವರನ್ನು ಅರೆನನ್ನವಾಗಿ ಚಿತ್ರಿಸಿ ಆಗೌರವಿಸಿರುವ ಕುರಿತಾಗಿಯೂ ಕೋರ್ಟ್ ನಿಂದ ಸಮನ್ಸ್ ಬರುತ್ತದೆ. ಅಲ್ಲಿ ವಾದ ಮಾಡಿ ಎಲ್ಲರಿಗೂ ಸ್ಪಷ್ಟನೆ ನೀಡಿ ಮನಸ್ಸು ಹಾಗೂ ಕೇಸ್ ಎರಡನ್ನೂ ಗೆಲ್ಲುವ ರವಿವರ್ಮರ ವಾದದ ವೈಖರಿ ಓದಿಯೇ ತಿಳಿಯಬೇಕು.


ಚಿತ್ರಕಲೆ ಹಾಗೂ ಸಂಗೀತ ಎರಡರಲ್ಲೂ ಸಾಮ್ಯತೆಯಂತೆ ಉದಾಹರಿಸುತ್ತಾರೆ. ಒಂದು ರಾಗದ ಸಂಪೂರ್ಣ ಸ್ವರೂಪಕ್ಕೆ ಆರೋಹಣ ಹಾಗೂ ಅವರೋಹಣ ಮುಖ್ಯವಿರುವಂತೆ.. ಪೂರ್ಣ ಸ್ವರೂಪದ ಚಿತ್ರವನ್ನರಿಯಲು ಒಳಗಣ್ಣು ತೆರೆಯುವ ಪರಿಯನ್ನು ಉದಾಹರಿಸುತ್ತಾರೆ.


ಅಂಜನೀಬಾಯಿ ಎಂಬ ರೂಪದರ್ಶಿಯ ಕುರಿತು ಪ್ರಸ್ತಾಪವಿದೆ.


ಪ್ರಖ್ಯಾತರೊಬ್ಬರು ಇವರಿಗೆ ಹೀಗನ್ನುತ್ತಾರೆ. 

"ಮನುಷ್ಯನಿಗೆ ಸಾವು ಬಂದಂತೆ ನಿನಗೂ ಬಂದು ನೀನು ಸ್ವರ್ಗಕ್ಕೆ ಹೋದರೆ ಅಲ್ಲಿ ರಂಬೆ, ಊರ್ವಶಿ, ಮೇನಕೆ, ತಿಲೋತ್ತಮಯರನ್ನು ನೋಡಿ ನಿನಗೆ ನಿರಾಸೆಯಾಗುವುದು ಖಂಡಿತ. ಏಕೆಂದರೆ, ನೀನು ರಚಿಸಿರುವ ಸ್ತ್ರೀಯರಷ್ಟು ಸುಂದರಿಯಾಗಿರಲು ಸಾಧ್ಯವಿಲ್ಲ"ವೆನ್ನುತ್ತಾರೆ.

ರವಿವರ್ಮರ ಕಲ್ಪನೆ ಹಾಗೂ ಕಲಾ ಸೃಷ್ಟಿಗೆ ಕನ್ನಡಿ ಹಿಡಿದ ಪ್ರಖ್ಯಾತರಾರು ಓದಿ ನೋಡಿ.


ರವಿವರ್ಮರು ತಾವು ಚಿತ್ರರಚನೆ ನಿಲ್ಲಿಸಬೇಕೆಂದು ಸೂಚನೆ ಬಂದಿತು ಎಂದು ಹೇಳುವ ಪ್ರಸಂಗ ಯಾವುದು..? ಅವರ ಮುಂದಿನ ಪೀಳಿಗೆ, ಅವರ ಬದುಕಿನಲ್ಲಿನ ಏಳು-ಬೀಳುಗಳು, ಸಾಂಸಾರಿಕ ಚಿತ್ರಣ, ಕೌಟುಂಬಿಕ ಚಿತ್ರಣ ಎಲ್ಲದರ ಕುರಿತು ನೀವೇ ಓದಿ.


ಕಲೆಯ, ಕಲಾವಿದನ ಅದರಲ್ಲಿಯೂ ಚಿತ್ರಕಲಾಕಾರನ ಸಮಗ್ರ ಬದುಕಿನ ಚಿತ್ರಣವಿದು. ಬಹಳಷ್ಟು ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಪುಸ್ತಕವನ್ನು ಒಮ್ಮೆಯಾದರೂ ಓದಲೇಬೇಕು.


~ವಿಭಾ ವಿಶ್ವನಾಥ್