ಪುಸ್ತಕದ ಶೀರ್ಷಿಕೆ : ನಾಲ್ಕನೇ ಎಕರೆ
ಮೂಲ ಕತೆಯ ಲೇಖಕರು : ಶ್ರೀರಮಣ
ತೆಲುಗಿನಿಂದ ಕನ್ನಡಾನುವಾದ : ಅಜಯ್ ವರ್ಮಾ ಅಲ್ಲೂರಿ
ಪ್ರಕಾಶಕರು : ಛಂದ ಪುಸ್ತಕ
ಪ್ರಥಮ ಮುದ್ರಣ : 2021
ಪುಟಗಳು : 112
ಬೆಲೆ : 100 ರೂ.
ಮುಖಪುಟ : ಶ್ವೇತಾ ಆಡುಕಳ
'ದಮಯಂತಿಯ ಮಗಳು' ಎನ್ನುವ ಅಜಯ್ ವರ್ಮಾ ಅಲ್ಲೂರಿಯವರ ನೀಳ್ಗತೆಯ ಅನುವಾದವೊಂದನ್ನು ಓದಿ ಈಗಾಗಲೇ ಪರಿಚಯಿಸಿದ್ದೇನೆ. ಇದು ಶ್ರೀ ರಮಣರ ತೆಲುಗು ನೀಳ್ಗತೆ "ನಾಲುಗೋ ಎಕರಂ"ನ ಕನ್ನಡಾನುವಾದ "ನಾಲ್ಕನೇ ಎಕರೆ". ಅಜಯ್ ವರ್ಮಾ ಅಲ್ಲೂರಿಯವರ ಕುರಿತ ಪರಿಚಯವನ್ನು ನಾನು ಈಗಾಗಲೇ ಮಾಡಿಕೊಟ್ಟಿರುವುದರಿಂದ ಶ್ರೀರಮಣರ ಕುರಿತ ಪರಿಚಯ ಮಾಡುತ್ತೇನೆ.
ಶ್ರೀರಮಣರು 1952ರಲ್ಲಿ ಸೀಮಾಂದ್ರದ ತೆನಾಲಿಯಲ್ಲಿ ಹುಟ್ಟಿ ತೆಲುಗಿನ 'ಆಂಧ್ರಜ್ಯೋತಿ'ಯ 'ನವ್ಯ' ವಾರಪತ್ರಿಕೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ದೃಶ್ಯ ಮಾಧ್ಯಮದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಜನಪ್ರಿಯ ಕಥೆ 'ಮಿಥುನಂ'. ಇದು ಕನ್ನಡಕ್ಕೂ ಅನುವಾದಗೊಂಡಿದೆ. ದೆಹಲಿಯ ಕಥಾ ಪುರಸ್ಕಾರವನ್ನು ಪಡೆದಿದೆ. 'ಶ್ರೀರಮಣ ಪೇರಡೀಲು', 'ವೆಂಕಟ ಸತ್ಯ ಸ್ಟಾಲಿನ್', 'ಸಿಂಹಚಲಂ ಸಂಪೆಂಗಲು' ಶ್ರೀರಂಗರ ಪ್ರಮುಖ ಕೃತಿಗಳು.
'ನಾಲ್ಕನೇ ಎಕರೆ' ಎನ್ನುವ ಶೀರ್ಷಿಕೆ ಹಾಗೂ ಪುಸ್ತಕದ ಮುಖಪುಟ ಕಂಡಾಗಲೇ ಇದು ಕೃಷಿಗೆ ಸಂಬಂಧಿಸಿರದಬಹುದಾದ ಕಥೆ ಎಂದು ಊಹಿಸಬಹುದು. ಮುಖಪುಟ ಕಥೆಯ ಹೆಚ್ಚಿನಂಶವನ್ನು ಮಾರ್ಮಿಕವಾಗಿ ತೆರೆದಿಡುತ್ತದೆ.
"ನೆಲದ ನಂಟು ಬಿಡದ ಎಲ್ಲ ನೇಗಿಲಯೋಗಿಗಳಿಗೆ" ಎಂದು ಅರ್ಪಣೆ ಮಾಡಿದ್ದಾರೆ ಲೇಖಕರು. ಲೇಖಕರು ನೀಳ್ಗತೆಯ ಕುರಿತಾಗಿ ಹೇಳುವ ಒಂದು ಮಾತು ಇಷ್ಟವಾಯಿತು. ಅದು ಜನಪ್ರಿಯ ಹೇಳಿಕೆ ಎಂದು ಅವರು ಉಲ್ಲೇಖಿಸಿದ್ದಾರೆ. "ನೀಳ್ಗತೆಯು ಕಾದಂಬರಿ ಎಂಬ ಒಂಟೆ ಹಾಕಿದ ಚಿಕ್ಕಮರಿಯಲ್ಲ, ಸಣ್ಣಕಥೆ ಎಂಬ ಹಸು ಹಾಕಿದ ದೊಡ್ಡ ಕರು."
ಹಾಗೆಯೇ.. ಅನುವಾದದ ಕುರಿತು ಹೇಳುತ್ತಲೇ ಎಡ್ವರ್ಡ್ ಫಿಟ್ ಜೆರಾಲ್ಡ್, ಪರ್ಷಿಯನ್ ಕವಿ ಉಮರ್ ಖಯ್ಯಾಮಿನ ರುಬಾಯಿಗಳನ್ನು ಇಂಗ್ಲೀಷಿಗೆ ಅನುವಾದಿಸಿ, ಅದಕ್ಕೆ ಬರೆದ ಪ್ರಸಿದ್ಧ ಮುನ್ನುಡಿಯಲ್ಲಿ ಉಲ್ಲೇಖಿಸುತ್ತಾರೆ. "ಸತ್ತ ಹದ್ದಿಗಿಂತಲೂ ಜೀವಂತ ಗುಬ್ಬಿ ಮೇಲು" ಎಂದು ಇದನ್ನು ಹೇಳುತ್ತಾಮ್ಮ್ ನನ್ನ ಅನುವಾದ ನಿಮಗೆ ಜೀವಂತ ಗುಬ್ಬಿಯಾಗಿ ತೋರಿದರೆ ಖುಷಿಯೇ. ಒಂದು ವೇಳೆ ಸತ್ತ ಹದ್ದಿನ ಹಾಗೆ ತೋರಿದರೆ ಅದಕ್ಕೆ ಮರಳಿ ಜೀವ ತುಂಬುವ ಕಲೆಯು ಈ ಅನುವಾದಕನ ಕೈಯಲ್ಲೇ ಇದೆ ಎನ್ನುತ್ತಾರೆ.
ಅನುವಾದಿತ ಕೃತಿಗಳನ್ನು ಓದುವಾಗ ಕೆಲವೊಮ್ಮೆ ಹಿಂಜರಿಕೆ ಕಾಡುತ್ತದೆ
ಏಕೆಂದರೆ ಮೂಲ ಕೃತಿಯ ಭಾಷೆ, ಪ್ರಾಂತ್ಯ ಹಾಗೂ ಅಲ್ಲಿಯ ಪರಿಸರ ಕೆಲವೊಮ್ಮೆ ಕ್ಲಿಷ್ಟವೆಂದೆನಿಸುತ್ತದೆ. ಹಾಗಾದಾಗ, ಇದು ನಮ್ಮ ಕೃತಿ ಎಂದೆನಿಸಿಕೊಳ್ಳುವುದು ಕಷ್ಟ. ಹಾಗೆಂದು ಮೂಲ ಕೃತಿಯನ್ನು ಓದಲು ಸಾಧ್ಯವಿಲ್ಲದ ಓದುಗರಿಗೆ ಅಲ್ಲಿನ ಪರಿಸರವನ್ನು ಭಾವಾನುವಾದದ ಮೂಲಕ ಕೂಡಾ ಕೆಲವು ಲೇಖಕರು ಕಟ್ಟಿಕೊಡುತ್ತಾರೆ. ಅಂತಹಾ ಅನುವಾದಗಳು ಬೇಗ ಇಷ್ಟವಾಗುತ್ತದೆ. ಈ ಅನುವಾದ ಲೇಖಕರ ನೆಲದ ಭಾಷೆಯಾದ ರಾಯಚೂರು ಪ್ರಾಂತ್ಯದ ಆಡುಮಾತು. ಶ್ರೀರಮಣರು ಬಳಸಿದ ಭಾಷೆ ಗುಂಟೂರು ಸೀಮೆಯ ತೆನಾಲಿ ಪ್ರಾಂತ್ಯದ್ದು. ಈ ನೀಳ್ಗತೆಯುದ್ದಕ್ಕೂ 'ಪೆದಕಾಪು' ಎನ್ನುವ ಪದ ಕಂಡುಬರುತ್ತದೆ. ಪೆದಕಾಪು ಎಂದರೆ ಮತ್ತೇನಲ್ಲ.. ಅದನ್ನು ಪದವಾಗಿ ಅನುವಾದ ಮಾಡಿದರೆ ದೊಡ್ಡ ರೈತ ಎಂದಾಗುತ್ತದೆ. ಕನ್ನಡದಲ್ಲಿ 'ಹಿರೇಗೌಡ' ಎಂದು ಕರೆಯಬಹುದು. ಆದರೆ ಲೇಖಕರು ಈ ಒಂದು ಪದವನ್ನು ಮಾತ್ರ ಕಥೆಯುದ್ಧಕ್ಕೂ ಪೆದಕಾಪು ಹಾಗೂ ಅವರ ಪತ್ನಿಯನ್ನು ಪೆದಕಾಪಮ್ಮ ಎಂದೇ ಸಂಭೋಧಿಸುತ್ತಾರೆ. ಇಲ್ಲಿ ಕುಟುಂಬ ಸದಸ್ಯರ ಪರಿಚಯಕ್ಕಿಂತ ಹಳ್ಳಿಯ ಜೀವನದ ಅನುಭವಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ.
ಇಲ್ಲಿ ನಾಲ್ಕು ಪ್ರಮುಖ ಪಾತ್ರಗಳು ಬರುತ್ತವೆ. ಪೆದಕಾಪು ಎಂದರೆ ರಾಘವಯ್ಯ. ಆತನ ಮಗ ಸಾಂಬಶಿವರಾವು, ಶಿವುವಾಗಿ ಕಾಣಿಸುತ್ತಾನೆ. ಊರಿನ ಹಿರಿಯರಾದ ದೇವಸ್ಥಾನದ ಅರ್ಚಕರು ಕೃಷ್ಣಸ್ವಾಮಿ ಹಾಗೂ ಅವರ ಮಗ ಮಾಧವಸ್ವಾಮಿ. ಇಲ್ಲಿ ಹೆಚ್ಚಿನ ನಿರೂಪಣೆ ಮಾಧವಸ್ವಾಮಿಯದ್ದೇ. ಆತ ಕಾಲೇಜಿನ ಲೆಕ್ಚರರ್.
ಸಾಂಬಶಿವರಾವು ತನ್ನ ಓದನ್ನು ಅರ್ಧದಲ್ಲಿಯೇ ಬಿಟ್ಟು ಕೃಷಿ ಬದುಕಿನತ್ತ ಮುಖ ಮಾಡುತ್ತಾನೆ. ಆತ ಪೆದಕಾಪುವಿನ ಮಗನಾದರೂ.. ಪರಿಸ್ಥಿತಿ ಹಿಂದಿನಂತಿರಲಿಲ್ಲ. ಮನೆಯಲ್ಲಿ ಹಿಂದಿನ ವೈಭವ ಇರಲಿಲ್ಲ. ಅಳಿದುಳಿದ ಭೂಮಿಯಲ್ಲಿ ಈಗ 12 ಎಕರೆ ಮಾತ್ರ ಉಳಿದಿತ್ತು. ಆದರೆ, ಅದೂ ಈಗ ನಗರೀಕರಣದ ಭರಾಟೆಗೆ ಸಿಕ್ಕು ಮಾರಾಟವಾಗುವ ಸಂದರ್ಭ. ಪೆದಕಾಪು ಹಾಗೂ ಪೆದಕಾಪಮ್ಮ ಇಬ್ಬರೂ ಹಿಂದಿನ ದಿನದ ವೈಭವ, ಹಳ್ಳಿಯ ಬದುಕನ್ನು ಬದುಕಿದವರು. ಈ ಕಥೆಯುದ್ಧಕ್ಕೂ ದನದ ಕೊಟ್ಟಿಗೆ, ಹುಲ್ಲು ಭಣವೆ, ಎತ್ತಿನ ಗಾಡಿ, ಎತ್ತುಗಳು, ಹುರುಳಿಕಾಳು ಮದರಂಗಿ ಹೀಗೆ ಅಂದಿನ ಹಳ್ಳಿಯ ಸಂಭ್ರಮವೇ ಪೆದಾಕಾಪುವಿನ ಮಾತುಗಳಲ್ಲಿ ಅನುಭವಗಳಲ್ಲಿ ತುಂಬಿ ತುಳುಕುತ್ತವೆ. ಇದನ್ನು ಹೆಚ್ಚು ತನ್ನೊಳಗಿಳಿಸಿಕೊಳ್ಳುವುದು ಮಾಧವಸ್ವಾಮಿ. ಹಾಗೆಂದು, ಶಿವನಿಗೆ ಈ ಕುರಿತ ಆಸ್ಥೆ ಇಲ್ಲ ಎಂದಲ್ಲ. ಬದಲಾಗಿ, ವಾಸ್ತವಕ್ಕೆ ಹೊಂದಿಕೊಂಡು ಹೋಗುವ ಜೀವನ ಅವನದ್ದು.
ಆತನಿಗಿದ್ದ 12 ಎಕರೆ ಹೊಲದಲ್ಲಿ, ಮೂರು ಎಕರೆಯನ್ನು ಈಗ ಅಟ್ಲಾಂಟಾದಲ್ಲಿ ನೆಲೆಸಿರುವ ಈತನ ಅಕ್ಕ ಚಿಟ್ಟೆಮ್ಮನ ಮದುವೆಯಾಗುವಾಗ ಬೀಗರಿಗೆಂದು ಬಿಟ್ಟುಕೊಟ್ಟದ್ದು. ಇದೀಗ ಭೂಮಿಗೆ ಕೋಟಿ-ಕೋಟಿ ರೂಪಾಯಿ ದುಡ್ಡು ಬರುವಾಗ ರಿಜಿಸ್ಟ್ರೇಷನ್ ಗೆಂದು ಅವರು ಅಲ್ಲಿಂದ ಬಂದವರು ತನ್ನ ಮಗಳು ಬುಜ್ಜಮ್ಮಳ ದಾವಣಿ ಸಮಾರಂಭವನ್ನು ಇಲ್ಲಿಯೇ ನಡೆಸುತ್ತಿದ್ದರು. ಆ ಸಮಾರಂಭದಲ್ಲಿ ಹಿಂದಿನ ವೈಭವವನ್ನು ತುಂಬಿಸುವ ಆಸೆ ಪೆದಕಾಪು ಹಾಗೂ ಪೆದಕಾಪಮ್ಮನಿಗೆ.
ಚಿಟ್ಟೆಮ್ಮ ಪೆದಕಾಪುವಿಗೆ ಒಂದು ಮಾತು ನೆನಪಿಸುತ್ತಾಳೆ. ಅದು ತನಗೆ ಮತ್ತೊಂದು ಎಕರೆ ಬರಬೇಕೆಂದು ಹಿಂದೊಮ್ಮೆ ಹೇಳಿದ್ದ ವಿಚಾರ. ಆ ಸಂದರ್ಭದಲ್ಲಿ ಚಿಟ್ಟೆಮ್ಮ ಅದು ತನಗೆ ಬೇಡವೆಂದು ಆಡು ಮಾತಿನಲ್ಲಿ ಹೇಳಿದ್ದರೂ.. ಈಗ ಅವಳು ಮತ್ತೆ ಅದನ್ನು ನೆನೆಸಿಕೊಳ್ಳುವಾಗ ಮಗನ ಬಳಿ ಈ ವಿಷಯದ ಪ್ರಸ್ತಾಪ ಹೇಗೆ ಎಂದುಕೊಳ್ಳುತ್ತಿರುತ್ತಾರೆ ಪೆದಕಾಪು. ಈ ನಾಲ್ಕನೇ ಎಕರೆಯ ವಿಚಾರ ಏನಾಯ್ತು..? ಶಿವ ಇದನ್ನು ಯಾವ ರೀತಿ ಅರ್ಥ ಮಾಡಿಕೊಂಡ..? ನಿಜವಾಗಿಯೂ ಆ ನಾಲ್ಕನೇ ಎಕರೆ ಯಾರಿಗೆ ಸೇರಿದ್ದು..? ಪೆದಕಾಪು ಇದೇ ಆಲೋಚನೆಯಲ್ಲಿ ನಡೆದುಕೊಂಡ ಬಗೆ ಹೇಗೆ..? ಎಲ್ಲವನ್ನೂ ತಿಳಿಯಲು ಓದಿ ಈ ನೀಳ್ಗತೆಯನ್ನು.
ಇಲ್ಲಿ ಪೆದಕಾಪು ರೈತಾಪಿ ವರ್ಗದ ಜನಜೀವನವನ್ನು, ಬದಲಾಗಿರುವ ಬಗೆಯನ್ನು ಪ್ರತಿನಿತ್ಯ ಕಂಡರೆ.. ಕೃಷ್ಣಸ್ವಾಮಿ ದೇವಾಲಯದಲ್ಲಿ ಬದಲಾದ ಬಗೆಯನ್ನು ಹೇಳುವ ಪರಿ ಕಾಣುತ್ತದೆ.
"ನೀರಿಗಿಂತಲೂ ರಕುತ ಗಟ್ಟಿ, ಜೇನಿಗಿಂತಲೂ ಹಸಿರು ನೋಟಿನ ಬಣ್ಣ ಗಟ್ಟಿ" ಎನ್ನುವ ಮಾತು ಪೆದಕಾಪುವಿನ ಮೂಲಕ ಕಾಣುತ್ತಾ.. ಇಂದಿನ ಜೀವನದಲ್ಲಿ ಹಣದ ಸ್ಥಾನವನ್ನು ಹೇಳುತ್ತದೆ. ಇಲ್ಲಿ ದಲ್ಲಾಳಿಗಳು ಯಾವ ರೀತಿ ರೈತರಿಗೂ ಭಾವನಾತ್ಮಕವಾಗಿ ಆಮಿಷ ಒಡ್ಡುತ್ತಾರೆ ಎಂಬುದನ್ನು ಸಹಾ ಸೂಕ್ಷ್ಮವಾಗಿ ತೆರೆದಿಡುತ್ತಾರೆ.
ಪೆದಕಾಪುವಿನ ಮನೆಯಲ್ಲಿಯೂ.. ಮಾಧವಸ್ವಾಮಿಯ ಮನೆಯಲ್ಲಿಯೂ ಇರುವ ಆಚಾರ-ವಿಚಾರಗಳು ಬೇರೆಯಾದರೂ.. ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವ ಪರಿ, ಹಳ್ಳಿಯ ಬದುಕನ್ನು, ಅಲ್ಲಿಯ ಕೆರೆ, ಕಲ್ಯಾಣಿ, ದೇವಾಲಯಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಪೆದಕಾಪು ಎಂಬ ಒಂದು ಪದದ ಹೊರತಾಗಿ ಇಡೀ ಕಥೆ ನಮ್ಮ ಸುತ್ತಮುತ್ತಲಿನದ್ದೇನೋ.. ನಮ್ಮ ಹಳ್ಳಿಯ ಪರಿಸರದ್ದೇನೋ ಎಂದೆನಿಸುವಂತೆ ಮಾಡುತ್ತದೆ. ಸ್ವತಂತ್ರ ಕಥೆಯೆಂದೆನಿಸುವಷ್ಟು ಸಶಕ್ತವಾದ ಅನುವಾದ.
~ವಿಭಾ ವಿಶ್ವನಾಥ್