ಭಾನುವಾರ, ಜೂನ್ 7, 2026

ಅಭಯ (ಬೆಳಕಿಂಡಿಯ ಕತೆಗಳು - 31)

ಎಷ್ಟು ಕರೆ ಮಾಡಿದರೂ ತಲುಪದ ಕರೆ, ಜೊತೆಗೆ ಮಗನಿದ್ದ ಪ್ರದೇಶದಲ್ಲಿ ಯುದ್ಧದ ತೀವ್ರತೆ ಕಂಡು ಅವಳಿಗೆ ಭಯವಾಗುತ್ತಿದ್ದುದರ ಜೊತೆಗೆ.. ತನ್ನ ಗಂಡ ತನ್ನಿಂದ ಏನೋ ಮುಚ್ಚಿಡುತ್ತಿದ್ದಾರೆ ಎಂಬ ಗುಮಾನಿಯೂ ಸೇರಿ ಅವಳನ್ನು ತೀವ್ರ ಆತಂಕಕ್ಕೆ ತಳ್ಳಿತ್ತು. ದೇವರ ಮನೆಯಲ್ಲಿ ಕುಳಿತವಳಿಗೆ ಅಭಯ ಸಿಕ್ಕಂತಾಗಿ ಎದ್ದು ಹೊರಬಂದರೆ ಮಗ ಅಮ್ಮನಿಗೆ ಸರ್ಪ್ರೈಸ್ ಕೊಡಲು ತಂದೆಯ ಜೊತೆ ಪ್ಲಾನ್ ಮಾಡಿ ಹೊರಟು ಬಂದಿದ್ದ. ಅದಾದ ನಂತರ ಅಲ್ಲಿ ಯುದ್ಧ ಶುರುವಾಗಿತ್ತು. ಅಂತೂ ಅಮ್ಮನ ಆತಂಕ ಕಳೆದು, ನೆಮ್ಮದಿ ಮೂಡಿತ್ತು.

~ವಿಭಾ ವಿಶ್ವನಾಥ್


ಸಮಯ ಸಾಧಕರಿಗೆ ಸರಿಯುತ್ತರ (ಬೆಳಕಿಂಡಿಯ ಕತೆಗಳು - 30)


ಅವಳ ಬಳಿ ಬಂದು, ಮನಸ್ತಾಪ ಮಾಡಿಕೊಂಡಿದ್ದ ವ್ಯಕ್ತಿಯ ಬಗ್ಗೆ ಸಮಯಸಾಧಕರು ಹಗೆ ತುಂಬಲು ಯತ್ನಿಸಿದಾಗ ಅವಳು ಕಿವಿಗೊಡಲಿಲ್ಲ. ಮಾತ್ರವಲ್ಲ.. ಇನ್ನೊಬ್ಬರ ಕುರಿತು ಅವರ ಅನುಪಸ್ಥಿತಿಯಲ್ಲಿ ಚರ್ಚಿಸಲೂ ಇಚ್ಚಿಸಲಿಲ್ಲ. ಅವಳೂ ಹಿತ್ತಾಳೆ ಕಿವಿಯವಳಾಗಿ, ಸಂಚಿಗೆ ಬಲಿಯಾಗುವ ಬಲಿಪಶುವಾಗಲಿಲ್ಲ. ಅವಳದ್ದು ಎಂದಿಗೂ ನೇರಾನೇರ ಮಾತು.


ಅವಳು ಗಂಧದ ಜೊತೆ ಗುದ್ದಾಡುವವಳೇ ಹೊರತು, ಸಗಣಿಯ ಜೊತೆ ಸರಸವಾಡುವವಳಲ್ಲ ಎಂಬುದನ್ನು ಮನದಟ್ಟು ಮಾಡಿಸಿದ್ದಳು. ಇಲ್ಲಿ ಸಮಯಸಾಧಕರು ಮುಖಭಂಗ ಅನುಭವಿಸಿದ್ದರು.. ಅಲ್ಲಿ ಬಾಕಿ ಉಳಿದಿತ್ತು.

~ವಿಭಾ ವಿಶ್ವನಾಥ್

ಚೈತನ್ಯ (ಬೆಳಕಿಂಡಿಯ ಕತೆಗಳು - 29)

ಪುಟ್ಟ ಮಕ್ಕಳನ್ನು ಮೊದಲ ದಿನದ ಶಾಲೆಗೆ ಸ್ವಾಗತಿಸಿ, ಸಂತೈಸಿ, ಸಂಭಾಳಿಸಿ ಅರ್ಧ ದಿನ ಅವರೊಡನೆ ಕಳೆದು, ಆಯಾಸದಿಂದ ಬಂದು ಸ್ಟಾಫ್ ರೂಂನಲ್ಲಿ ಕುಳಿತರೆ.. ಮೊದಲ ಮಳೆಯ ಮಣ್ಣ ಕಂಪು ಆವರಿಸಿ ಮನಕ್ಕೆ ಚೈತನ್ಯ ತುಂಬಿತು. 


ಚಿಗುರಿಗೆ ಜೀವಜಲವಾದ ಮಳೆಗೂ.. ಪುಟ್ಟ ಮಕ್ಕಳಿಗೆ ಜೀವನೋತ್ಸಾಹಕ್ಕೆ ದಾರಿದೀಪವಾಗುತ್ತಿರುವ ತನ್ನ ಕಾಯಕಕ್ಕೂ ಸಾಮ್ಯತೆ ಕಂಡು ಹೆಮ್ಮೆಯೆನಿಸಿತು. ಮತ್ತರ್ಧ ದಿನದ ಕೆಲಸಕ್ಕೆ ಹುರುಪು ತಂದುಕೊಂಡು ಖುಷಿಯಿಂದ ಕ್ಲಾಸ್ ರೂಂ ಕಡೆಗೆ ಹೆಜ್ಜೆ ಹಾಕಿದಳು.

~ವಿಭಾ ವಿಶ್ವನಾಥ್

ಮುಗಿಲೆತ್ತರ... (ಬೆಳಕಿಂಡಿಯ ಕತೆಗಳು - 28)


 "ಮುಗಿಲಿಗೆ ಏಣಿ ಹಾಕುವ ಬದಲು ನೆಲದ ಮೇಲೆ ನಡೆಯುವುದನ್ನು ಕಲಿ" ಎಂದ ಅವರಿವರ ಮಾತಿಗೆ ಬದಲು ನುಡಿಯಲಿಲ್ಲ ಅವಳು.

"ಮುಗಿಲೆತ್ತರದ ಕನಸು ಕಂಡರೆ ಕೈಗೆಟುಕುವ ಕನಸುಗಳನ್ನು ಸಾಧಿಸುವುದು ಕಷ್ಟವಾಗದು" ಎಂಬ ಅಪ್ಪನ ಮಾತು ಸದಾ ಅವಳ ಕಿವಿಯಲ್ಲಿ ಗುನುಗುಣಿಸುತ್ತಿರುತ್ತದೆ. ಈಗ ಅವಳ ಚಿಕ್ಕ-ಪುಟ್ಟ ಸಾಧನೆಗಳು ಅವಳಿಗೆ ಅಹಂ ತರುವುದಿಲ್ಲ. ಕನಸು ಮುಗಿಲೆತ್ತರಕ್ಕೂ.. ಅಹಂ ಪಾತಾಳದಲ್ಲೂ ಇರಬೇಕೆಂದು ತನ್ನ ಮಗಳಿಗೆ ಹೇಳಿಕೊಡುತ್ತಿದ್ದಾಳೆ.

~ವಿಭಾ ವಿಶ್ವನಾಥ್


ಮನೋಗಮ (ಪುಸ್ತಕ ಯಾನ - 457)


ಪುಸ್ತಕದ ಶೀರ್ಷಿಕೆ : ಮನೋಗಮ

ಲೇಖಕರು : ಡಾ. ಕೆ. ಎನ್. ಗಣೇಶಯ್ಯ

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2025

ಪುಟಗಳು : 88

ಬೆಲೆ : 120 ರೂ. 


ಎಂದೋ ಓದಿದ ಅಥವಾ ಕೇಳಿದ ವಿಚಾರಗಳು ಅಥವಾ ಕಥೆಯ ಎಳೆಗಳು ಮತ್ತೆ ನನ್ನು ಯೋಚಿಸಲು ಪ್ರೇರೇಪಿಸುತ್ತವೆ. ಕೆ. ಎನ್. ಗಣೇಶಯ್ಯನವರಿಗೆ ಅವರು 'ಇಮ್ಮಡಿ ಮಡಿಲು' ಎಂಬ ಕಥಾಸಂಕಲನದಲ್ಲಿ ಬರೆದಿದ್ದ ಕಥೆ ಪರ್ಯಾಯದಲ್ಲಿ ಇಂದಿನ ಕಾಲದ ಹೆಣ್ಣುಗಳು ಅಕ್ಕಮಹಾದೇವಿ ಅನುಭವಿಸಿದ ಮಾನಸಿಕ ತಲ್ಲಣಕ್ಕೆ ತುತ್ತಾದರೆ ಆಕೆಯ ಸ್ಪಂದನೆ ಹೇಗಿರುತ್ತದೆ ಎಂದು ಬರೆಯುವಾಗ ಮನುಷ್ಯನ ಮನಸ್ಸಿನ ಬಗೆಯ ಚಿತ್ರಣವನ್ನು ಕಥೆಯ ಕೊನೆಯಲ್ಲಿ ಬರೆಯುತ್ತಾರೆ. ಅದಾದ ನಂತರ ಆ ಕಥೆ ಲೇಖನಗಳಿಗೆ ನಾಂದಿ ಹಾಡಿತು ಎನ್ನುತ್ತಾರೆ. ವಿಜಯ ಕರ್ನಾಟಕದಲ್ಲಿ 'ಮನೋಗಮ' ಶೀರ್ಷಿಕೆಯ ಅಡಿಯಲ್ಲಿ 20 ಲೇಖನಗಳು ಪ್ರಕಟಗೊಂಡಿತ್ತವೆ. ಅವುಗಳನ್ನು ಕೊಂಚ ಪರಿಷ್ಕರಿಸಿ, ನಂತರ ಬರೆದ ಕೆಲವು ಲೇಖನಗಳನ್ನು ಸೇರಿಸಿ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ 15 ವಿಚಾರ ಪ್ರಚೋದಕ ಲೇಖನಗಳಿವೆ. 


ಬೆಂಕಿಯಲ್ಲಿ ಅರಳಿದ ಮೆದುಳು... : ಮಾನವನ ಮೆದುಳು ಚಿಂಪಾಂಜಿಗಿಂತ ಐದು ಪಟ್ಟು ಹೆಚ್ಚು ಗಾತ್ರಕ್ಕೆ ಬೆಳೆದಿದ್ದಕ್ಕೆ ಕಾರಣ ಬೆಂಕಿ ಎಂದು ಹೇಳುತ್ತಾರೆ. ಮಾನವನ ಮೆದುಳಿನ ಗಾತ್ರ ಹೆಚ್ಚಾಗಿದ್ದರ ಕಾರಣವನ್ನು ಹುಡುಕಿ ಹೊರಟ ವಿಜ್ಞಾನಿಗಳೆಲ್ಲರೂ ಸಾಮಾನ್ಯವಾಗಿ ಒಪ್ಪುವ ವಿದ್ಯಮಾನ ಎಂದರೆ ಅದೇ ಕಾಲಘಟ್ಟದಲ್ಲಿ ಮಾನವನ ಬೆಂಕಿಯನ್ನು ಪಳಗಿಸತೊಡಗಿದ ಎನ್ನುವುದು. ಅದಕ್ಕೂ ಮೊದಲೇ ಬೆಂಕಿಯ ಉಪಯೋಗಗಳನ್ನು ಗಮನಿಸಿರಲೂ ಸಾಧ್ಯ. ಈ  ಸಾಧ್ಯಸಾಧ್ಯತೆಗಳನ್ನಿಟ್ಟುಕೊಂಡು ಬೆಂಕಿ ಹಾಗೂ ಮೆದುಳನ್ನು ಕನೆಕ್ಟ್ ಮಾಡಿರುವ ಈ 'ಪ್ರಜ್ಞಾಕೋಶ'ದ ಕುರಿತು ಓದಿನೋಡಿ.


ಹಿಗ್ಗಿದ ಮೆದುಳು ಕುಗ್ಗಿದ್ದೇಕೆ? : ಹಿಂದಿನ ಲೇಖನದಲ್ಲಿ ಚಿಂಪಾಂಜಿ ಎಂತಹ ಪ್ರಭೇದದಿಂದ ವಿಕಾಸಗೊಂಡ ಮಾನವನ ಮೆದುಳು ಗಾತ್ರದಲ್ಲಿ 5 ಪಟ್ಟು ದೊಡ್ಡದಾದ ಕುರಿತಾಗಿ ಹೇಳಿದರಾದರೂ ಅದಾದ 3000 ವರ್ಷಗಳಲ್ಲಿ ಮೆದುಳಿನ ಗಾತ್ರ ಗಣನೀಯವಾಗಿ ಕುಗ್ಗಿದೆ ಎನ್ನುವುದಕ್ಕೆ ವಿಕಾಸಗೊಳ್ಳುವ ಹಾದಿಯಲ್ಲಿ ಮತ್ತೆ ಹಿಂದಕ್ಕೆ ಬಂದಂತೆ ಅಂದರೆ ಅವಿಕಾಸವಾಗುವ ವಿಚಾರವನ್ನೂ ತೆರೆದಿಡುತ್ತಾರೆ. ಮಂಗನಿಂದ ವಿಕಾಸಗೊಂಡ ನಾವು ಬಾಲ ಕಳೆದುಕೊಂಡಿದ್ದೇವೆ. ಹಾಗಾದರೆ ನಾವು ಮತ್ತೆ ಬಾಲ ಉಳಿಸಿಕೊಳ್ಳುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೂ ಉತ್ತರ ಇಲ್ಲಿದೆ ಓದಿ ನೋಡಿ.


ವಂಚನೆಯ ವಿಕಾಸ ಏಕೆ ಮತ್ತು ಹೇಗೆ? : ಕವಲುತೋಕೆ ಹಕ್ಕಿಯ ಗುಂಪಿಗೆ ಸೇರಿದ ಕೆಲವು ಪಕ್ಷಿಗಳು ಹಿಂಡುಹಿಂಡಾಗಿ ಗೂಡು ಕಟ್ಟಿಕೊಂಡು ಜೀವಿಸುತ್ತವೆ. ಒಂದು ಪಕ್ಷಿ ಯಾವುದಾದರೂ ಒಂದು ಆಹಾರದ ಜಾಡು ಹಿಡಿದು ಅಲ್ಲಿಂದ ಆಹಾರ ತರುತ್ತಿದ್ದರೆ.. ಇತರ ಪಕ್ಷಿಗಳು ಅದನ್ನು ಅನುಸರಿಸಿ ಹೋಗುತ್ತವೆ. ಈ ವಿಚಾರವನ್ನು ತೆರೆದಿಟ್ಟಾಗ ಬಂದ ಸಂದೇಹವೆಂದರೆ, ಮೊದಲು ಆಹಾರವನ್ನು ಕಂಡು ಹಿಡಿದ ಪಕ್ಷಿಗೆ ಇದರಿಂದ ಅತೀವ ಸ್ಪರ್ಧೆ ಉಂಟಾಗುತ್ತದೆ. ಅದು ಅದಕ್ಕೆ ನಷ್ಟವಲ್ಲವೇ..? ಆ ಹಕ್ಕಿ ವಂಚನೆಯ ಹಾದಿ ಹಿಡಿದರೆ..?! ವಂಚನೆಯ ವರ್ತನೆ ಈ ಪಕ್ಷಿಗಳಲಿಲ್ಲ. ಆದರೆ, ಮಾನವನಲ್ಲಿ ಹೆಚ್ಚಾಗಿರುವ ವಂಚನೆ ಮತ್ತು ಸುಳ್ಳು ಹೇಗೆ ವಿಕಾಸಗೊಂಡಿದೆ ಎನ್ನುವುದರ ಜೊತೆಗೆ ಪ್ರಾಣಿ ಪ್ರಪಂಚದಲ್ಲಿ ಕಟ್ಲರ್ ಫಿಶ್ ಗಂಡು ಮತ್ತು ಹೆಣ್ಣು ಮೀನುಗಳನ್ನು ಮೋಸಗೊಳಿಸುವ ಬಗೆಯನ್ನು ಹೇಳುತ್ತಾರೆ. ಆದರೆ ಊಸರವಳ್ಳಿಯ ಬಣ್ಣ ಬದಲಾವಣೆ ವಂಚನೆಯಲ್ಲ ಎನ್ನುವ ತರ್ಕವನ್ನು ಹೇಳುತ್ತಾರೆ. ಹಾಗಾದರೆ ಇನ್ನು ಯಾವ ಪ್ರಾಣಿಯಲ್ಲಿ ಇಂತಹ ವಿಚಿತ್ರವನ್ನು ಕಾಣಬಹುದು ಓದಿ ತಿಳಿಯಿರಿ. 


ನಾವೇಕೆ ದ್ವೇಷಿಸುತ್ತೇವೆ? : ಪ್ರೀತಿ-ಪ್ರೇಮಗಳಂತೆ ದ್ವೇಷವು ಕೂಡ ಮನುಷ್ಯನ ಉಳಿವಿಗೆ ಅವಶ್ಯಕ ಎನ್ನುತ್ತದೆ ವಿಜ್ಞಾನ. ಅಸೂಯೆ ಮತ್ತು ದ್ವೇಷ ನಮ್ಮನ್ನು ನಾವು ಹೋಲಿಸಿಕೊಳ್ಳಬಹುದಾದ ಸಮಾಜ ಅಥವಾ ಪ್ರಪಂಚಕ್ಕೆ ಮಾತ್ರವೇ ಸೀಮಿತವೇ..? ದ್ವೇಷ ಹರಡುವ ಬಗೆಯ ಜೊತೆಗೆ ದ್ವೇಷವು ಪ್ರೀತಿಯ ಇನ್ನೊಂದು ಮುಖವಾಗಿ ವಿಕಾಸಗೊಂಡಿರುವ ಪರಿಯನ್ನು ನಾವಿಲ್ಲಿ ಕಾಣಬಹುದು. ಪ್ರೀತಿಯೇ ದ್ವೇಷವಾಗಿ ವಿಕಾಸಗೊಂಡದ್ದು ಹೇಗೆ..? ಇದು ತಲೆಮಾರುಗಳಿಂದ ತಲೆಮಾರುಗಳಿಗೆ ಧಾತುಗಳ ಮೂಲಕ ಸಾಗುತ್ತದಾ..? ಅಚ್ಚರಿ ಹಾಗೂ ವಿಸ್ಮಿತಗೊಳಿಸುವ ವಿಶ್ಲೇಷಣೆ ಇಲ್ಲಿದೆ.


ಎಲ್ಲ ಮರೆತಿರುವಾಗ... ಮತ್ತೆ ಮರಳುವ ನೆನಪು : ನಮ್ಮ ಆತ್ಮೀಯರ ಸಾವು ನಮ್ಮನ್ನು ಕಾಡುತ್ತದೆ. ಆದರೆ, ಅವರ ನೆನಪು ಬೇಕು ಅವರಿಲ್ಲ ಎಂಬ ನೋವು ಬೇಡ ಎಂದು ನೆನಪುಗಳನ್ನು ಶೋಧಿಸಲು ಮನಸ್ಸಿಗೆ ಸಾಧ್ಯವಾಗದು. ನೋವು ಕೊಡುವ ನೆನಪುಗಳು ನಮಗೆ ಹಾಗೂ ನಮ್ಮ ಉಳಿವಿಗೆ ಬೇಕೇ..? ನೆನಪುಗಳು ವಿಕಾಸಗೊಂಡಿರುವುದು ನಮ್ಮ ಉಳಿವಿಗೆ ಹಾಗೂ ಕ್ಷೇಮಕ್ಕೆ ಎಂಬುದು ಎಷ್ಟು ಸರಿ. ನೆನಪು ಹಾಗೂ ಕಾಲದ ಊಹೆಯ ಪ್ರಯೋಗವನ್ನು ನಾಲ್ಕು ಗುಂಪಿನ ಮೂಲಕ ಮಾಡಿರುವ ಪ್ರಯೋಗವನ್ನು ಸಹ ಇಲ್ಲಿ ಕಾಣಬಹುದು.


ಪ್ರಜ್ಞೆ 'ನಿನ್ನ ಸೊತ್ತಲ್ಲ' ಎಂದ ಇರುವೆಗಳು : ಇಡೀ ಜೀವ ಜಗತ್ತಿನಲ್ಲಿ ಬುದ್ಧಿವಂತ ಪ್ರಜ್ಞಾವಂತ ಎನಿಸಿಕೊಂಡ ಮನುಷ್ಯ ಚಿಟ್ಟೆ, ದುಂಬಿ, ಇರುವೆ ಮುಂತಾದ ಕ್ಷುದ್ರ ಪ್ರಾಣಿಗಳನ್ನು ಅರಿವು ಮೂಡಲಾರದ ಜೀವಿಗಳಂತೆ ಕಂಡ. ಆದರೆ, ಆ ಪ್ರಾಣಿಪ್ರಜ್ಞೆ ಹೇಗಿರುತ್ತದೆ ಎನ್ನುವುದನ್ನು ನಾವಿಲ್ಲಿ ಇರುವೆಗಳು, ಅವುಗಳ ವಾಸನಾ ಗ್ರಹಿಕೆಯ ಹಾಗೂ ಸಂದೇಶ ತಿಳಿಸುವ ನಡೆಯ ಮೂಲಕ ಕಾಣಬಹುದು.


ಅರಮನೆಯೇ ಸೆರೆಮನೆಯಾಗುವ ಪರಿ : ನಮ್ಮ ಹವ್ಯಾಸ ಅಥವಾ ಆಸಕ್ತಿಯ ಕ್ಷೇತ್ರ ಅಥವಾ ಅದಮ್ಯ ಗುರಿಯ ಕಡೆಗೆ ನಡೆಯುತ್ತಾ.. ನಮ್ಮಗರಿವಿಲ್ಲದಂತೆಯೇ ನಾವೆಲ್ಲರೂ ನಮ್ಮದೇ ಅದೃಶ್ಯ ಸೆರೆಮನೆಗಳನ್ನು ಕಟ್ಟಿಕೊಂಡು ಹೊರ ಜಗತ್ತಿಗೆ ತೆರೆದುಕೊಳ್ಳದೆಯೇ ಮರೆಯಾಗಿ ಬಿಡುತ್ತೇವೆ ಎಂಬುದು ಲೇಖಕರ ವಾದ. ಅದನ್ನು ಸೆರೆಮನೆ ಎಂದು ಹೇಳುವ ಬದಲು ಧ್ಯೇಯದತ್ತ ಸಾಗುವ ಸಾಧಕ ಪಯಣ ಎಂದೇಕೆ ಪರಿಗಣಿಸಬಾರದು ಎನ್ನುವ ಅವರ ಮಗಳ ಪ್ರಶ್ನೆ ಚರ್ಚಾ ರೂಪದಲ್ಲಿ ಸಾಗುವ ಪರಿ ಇಲ್ಲಿದೆ.


ಹಸಿರು, ಮನೆ, ಮನ : ನಾವು ಪ್ರಕೃತಿಯ ಸಾಂಗತ್ಯದಿಂದ ದೂರವಾದಂತೆ ನಮಗರಿವಿಲ್ಲದೆಯೇ ಹಲವು ರೀತಿಯ ಅನಾರೋಗ್ಯಗಳಿಗೆ ತುತ್ತಾಗುವುದರ ಜೊತೆಗೆ ನೆಮ್ಮದಿಯನ್ನು ಕಳೆದುಕೊಳ್ಳುವ ಸಂಭವದ ಕುರಿತು ಎಚ್ಚರಿಸುತ್ತಿದ್ದಾರೆ. ಹಸಿರು ನಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿಯ ಪರಿಣಾಮವನ್ನುಂಟು ಮಾಡುತ್ತದೆ, ಆರೋಗ್ಯ, ಮನ-ಮನೆಗಳ ಕೊಂಡಿಯ ಜೊತೆಗೆ ಕುವೆಂಪು ಅವರ ರಾಮಾಯಣ ದರ್ಶನಂ ಹಾಗೂ ರಾಮಾಯಣ ಕಾಲದ ಉದಾಹರಣೆಗಳನ್ನು ಇಲ್ಲಿ ಕಾಣಬಹುದು.


ನಮ್ಮ ಬದುಕಿಗೆ ಕೃತಕತೆ ತಂದ ಸಮಾಜ 'ಪ್ರಜ್ಞೆ' : ಪ್ರಾಣಿಗಳಿಗೇಕೆ ಪ್ರತ್ಯೇಕವಾದ ಸ್ನಾನದ ಮನೆಗಳಿಲ್ಲ..? ಪ್ರಾಣಿಗಳಿಗೆ ಮೈ ಮುಚ್ಚಿಕೊಳ್ಳುವುದಿಲ್ಲ ಎಂಬ ಪ್ರಶ್ನೆಗಳು ನಮ್ಮಲ್ಲೂ ಒಂದು ಬಾರಿ ಮೂಡಿವೆಯಲ್ಲವೇ..?! ಇಂತಹ ಪ್ರಶ್ನೆಗಳ ಪಟ್ಟಿಯೇ ಮೂಡಿರಬಹುದು. ಮನುಷ್ಯ ವಿಕಾಸವಾಗುತ್ತಾ ಹೋದಂತೆ ನಗು, ಭಾವ ಪ್ರದರ್ಶನ, ನಾಚಿಕೆ, ಮರ್ಯಾದೆ ಹೀಗೆ ಒಂದೊಂದಾಗಿ ಜೊತೆಯಾಗುತ್ತಾ ಹೋದವು. ಇದು ಸಮಾಜಕಷ್ಟೇ ಸೀಮಿತವೇ..? ನಾವು ಒಬ್ಬರೇ ಇರುವಾಗಿನ ನಿರಾಳ ಸ್ಥಿತಿ, ಸಮಾಜ ಹಾಗೂ ಜನರೊಡನೆ ಬೆರೆಯುವಾಗ ಇರುವ ನಡೆಗೂ ವ್ಯತ್ಯಾಸವಿರುತ್ತದೆಯಲ್ಲವೇ..? ಇದರ ಆಧಾರಿತ ಲೇಖನವಿದು.


'ಜೀವ'ಕ್ಕೇಕೆ ಈ ಸ್ಪಂದನ : ನಾವು ಮಾನವ ಜೀವಕ್ಕೆ ಮರುಗುವಷ್ಟು ತೀಕ್ಷ್ಣವಾಗಿ ಇತರೆ ಪ್ರಾಣಿಗಳ ಜೀವಗಳಿಗೆ ಮರುಗುವುದಿಲ್ಲವೇಕೆ..? ಬೇರೆ ಪ್ರಾಣಿಗಳಿಗೂ ಇದೇ ಭಾವವಿದೆಯಾ..? ಹಲವು ಆಯಾಮಗಳಿಂದ ಚರ್ಚಿತವಾಗಿದೆ.


ನಮ್ಮ ನಿಮ್ಮೊಳಗಿನ ರಾವಣ : ರಾಮಾಯಣ ದರ್ಶನಂನಲ್ಲಿ ರಾವಣನ ಆತ್ಮ ಶ್ರೀರಾಮನ ಆತ್ಮದೊಳಗೆ ಮೋಕ್ಷ ಪಡೆಯುವ ಪ್ರಸಂಗವನ್ನು ಹೇಳುತ್ತಾ.. ಸಂಶೋಧನಾ ಪ್ರಬಂಧವೊಂದರ ತಿರುಳನ್ನು ಹೇಳುತ್ತಾರೆ. ಲಕ್ಷಾಂತರ ವರ್ಷಗಳಿಂದ ಮಾನವನನ್ನು ರಾವಣನಂತೆ ಕಾಡಿದ ಸಾವಿರಾರು ವೈರಾಣುಗಳ ಪ್ರಮುಖ ಧಾತುಗಳು ವಿಕಾಸದ ಹಾದಿಯಲ್ಲಿ ನಮ್ಮದೇ ಧಾತುಗಳೊಂದಿಗೆ ಲೀನವಾಗಿ ನಮ್ಮೊಂದಿಗೆ ಬದುಕಿ ಬಾಳುತ್ತಿವೆ ಎಂಬ ಸತ್ಯವನ್ನು ತೆರೆದಿಡುತ್ತಾರೆ. ಸಂಶೋಧನೆಯ ಆಂತರ್ಯವನ್ನು ಕೋವಿಡ್ ಹಾಗೂ ಇತರ ವೈರಸ್ ಗಳ ಮೂಲಕ ಪ್ರಸ್ತುತಪಡಿಸಿದ್ದಾರೆ.


ಸುಖದ ಬೇಟೆ ಕೊಡುವ ದುಃಖ : ಸುಖ ಹುಡುಕುವುದರಲ್ಲಿ ಯಾವ ತಪ್ಪೂ ಇಲ್ಲ. ಒಂದೇ ತೊಂದರೆ. ಅದು ಸಿಕ್ಕಿದಾಗ ನಮ್ಮ ಗಮನಕ್ಕೆ ಬರುವುದಿಲ್ಲ. ಇದಕ್ಕೆ ಪರಿಹಾರವೇನು..? ಅದನ್ನು ಹೇಗೆ ತಿಳಿದುಕೊಳ್ಳಬಹುದು..? ಮಾನವನ ಮನಸ್ಸಿನ ಚಂಚಲತೆ ಹಾಗೂ ಸುಖದ ಸ್ಥಿತಿಯ ನಡುವಿನ ಸಂಬಂಧದ ಅಧ್ಯಯನವೂ ಇಲ್ಲಿದೆ.


ಡಾರ್ವಿನ್ ವಾದಕ್ಕೆ ಸವಾಲಾದ ಸಮ್ಮೋಹನ : ಯಾವುದೇ ವರ್ತನೆ ಪುನರಾಭಿವೃದ್ಧಿಗೆ ಸಹಕಾರಿಯಾಗಿದ್ದರೆ ಮಾತ್ರವೇ ವಿಕಾಸಗೊಳ್ಳುತ್ತದೆ ಎನ್ನುವುದು ಡಾರ್ವಿನ್ ಸಿದ್ದಾಂತದ ಪ್ರತಿಪಾದನೆ. ಸಲಿಂಗ ಕಾಮ ಸ್ವಾಭಾವಿಕವೇ..? ತಮ್ಮ ಪುನರಾಭಿವೃದ್ಧಿಯನ್ನೇ ತ್ಯಾಗ ಮಾಡಿ ಸೋದರಿಯನ್ನು ಸಾಕುವ ಬಂಜೆ ಜೇನುನೊಣಗಳಂತೆ ಸಲಿಂಗ ಕಾಮ ಸಮಾಜದ ಒಳಿತಿಗಾಗಿಯೇ ವಿಕಾಸಗೊಂಡಿರುವ ತ್ಯಾಗ ವರ್ತನೆ ಎನ್ನುವ ವಾದ ಎಷ್ಟು ಸಮಂಜಸ. ಈ ಕುರಿತ ವಾದ-ಪ್ರತಿವಾದಗಳು ಇಲ್ಲಿವೆ.


ನಾನು ಎಂಬ ನಂಬಿಕೆ : ನಾನು ಎಂಬುದಕ್ಕೆ ಅದೆಷ್ಟು ರೂಪಗಳು..! ಕೆಲವರಿಗೆ ಭಾವಚಿತ್ರ, ಕೆಲವರಿಗೆ ಬೆರಳಚ್ಚು, ಕೆಲವೊಮ್ಮೆ ನಮ್ಮ ಯೋಚನೆಗಳು. ಹಾಗಾದರೆ ನಾನು ಎಂಬ ಭಾವ ನಿಜಕ್ಕೂ ನಂಬಿಕೆ ಮಾತ್ರವಾ..? ಹಲವು ಆಯಾಮಗಳ ನೋಟ ಇಲ್ಲಿದೆ.


ರಣಮೇಘದ ಕಣ್ಣೀರು : ಇರಾನಿನ ಪರ್ವತ ಪ್ರದೇಶದ ಅಂತರಾಳದಲ್ಲಿ ಹುದುಗಿದ್ದ ಅಣುಸ್ಥಾವರಗಳ ಮೇಲೆ ನಡೆಯುತ್ತಿದ್ದ ಬಾಂಬ್ ದಾಳಿ ಇರಾನಿನಿಂದ ಸುಮಾರು 3000 ಕಿಲೋಮೀಟರ್ ದೂರದಲ್ಲಿರುವ ಜರ್ಮನಿಯ ಒಂದು ಸಣ್ಣ ಪಟ್ಟಣದ ವಿಜ್ಞಾನ ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿಯನ್ನು ಹೊಕ್ಕ.. ಆಲೋಚನೆಗೆ ಹಚ್ಚುವ ಪ್ರಸಂಗ ಇಲ್ಲಿದೆ. ಈ ಪ್ರಸಂಗದ ಕುರಿತು ಹೆಚ್ಚು ತೆರೆಡಿಡಲಾರೆ. ಲೇಖಕರಿಗೆ ಪಾಪಪ್ರಜ್ಞೆ ಕಾಡಿದ ಗಾಢವಾದ ಕ್ಷಣಗಳು ಇಲ್ಲಿವೆ. 


ಕಡಿವಾಣವಿಲ್ಲದ ಕುದುರೆಯಂತಹ ಮನಸ್ಸು ಹಾಗೂ ಅದರ ಆಲೋಚನೆಗಳು ವಿಸ್ತಾರ ಹಾಗೂ ವಿಭಿನ್ನ. ಇದನ್ನು ಜೀವ ವಿಕಾಸದ ಹಿನ್ನೆಲೆಯಲ್ಲಿ, ಸಂಶೋಧನೆಗಳು ಹಾಗೂ ತರ್ಕಗಳ ಮೂಲಕ ಕಟ್ಟಿಕೊಟ್ಟಿರುವ ಸತ್ವಯುತ ಲೇಖನಗಳ ಸಂಗ್ರಹ ಇಲ್ಲಿದೆ. ವಿಜ್ಞಾನ ಮತ್ತು ಮನೋವೈಜ್ಞಾನಿಕ ವಿಷಯದ ಆಸಕ್ತರು ತಪ್ಪದೇ ಓದಿ ನೋಡಿ.


~ ವಿಭಾ ವಿಶ್ವನಾಥ್

ಸೂಪರ್ ಗಾಡ್ ಸಣ್ಣಯ್ಯ (ಪುಸ್ತಕ ಯಾನ - 456)



ಪುಸ್ತಕದ ಶೀರ್ಷಿಕೆ : ಸೂಪರ್ ಗಾಡ್ ಸಣ್ಣಯ್ಯ

ಲೇಖಕರು : ಹೃದಯ ಶಿವ

ಪ್ರಕಾಶಕರು : ಹರಿವು ಬುಕ್ಸ್

ಪ್ರಥಮ ಮುದ್ರಣ : 2025

ಪುಟಗಳು : 128

ಬೆಲೆ : 165 ರೂ. 


ಹೃದಯ ಶಿವ ಇವರು ಸಿನಿಮಾ ಗೀತ ರಚನಕಾರರು, ನಿರ್ದೇಶಕರು ಹಾಗೂ ಹವ್ಯಾಸಿ ಪತ್ರಕರ್ತರು. ಹಲವಾರು ಕವನ ಸಂಕಲನ, ಗದ್ಯ ಬರಹಗಳು, ಸಿನಿಮಾ ಗೀತೆಗಳನ್ನೂ ಬರೆದಿದ್ದಾರೆ. ಇದು ಇವರ ಮೊದಲ ಕಥಾ ಸಂಕಲನ. ಇದಕ್ಕೆ ಸ್ವಾಮಿ ಪೊನ್ನಾಚಿ ಅವರ ಮುನ್ನುಡಿ ಇದೆ. ಅದರಲ್ಲಿ ..

"ಗೇದುಣ್ಣುವವರೇ ಬದುಕದ ಕಾಲದಲ್ಲಿ ಹುಟ್ಟುವ ಕಥೆಗಳಾದರೂ ಉಳಿಯುತ್ತವೆ" ಎಂಬ ಮಾತಿನಿಂದಲೇ ಕಥೆಯ ಸೋಜಿಗಗಳನ್ನೆಲ್ಲ ತೆರೆದಿಡುತ್ತಾರೆ.

ಈ ಕಥಾ ಸಂಕಲನದಲ್ಲಿ ಒಟ್ಟು 15 ಕಥೆಗಳಿವೆ. 


ಒಂದು ಫ್ರೆಂಡ್ ರಿಕ್ವೆಸ್ಟ್ : ಮೂರು ವರ್ಷಗಳ ಸುದೀರ್ಘ ಅಂತರದ ನಂತರ ಫೇಸ್ಬುಕ್ನಲ್ಲಿ ಅವಳು ಕಳುಹಿಸಿದ ಫ್ರೆಂಡ್ ರಿಕ್ವೆಸ್ಟ್ ಅವನಿಗೆ ಹುಟ್ಟಿಸಿದ್ದು ಅಚ್ಚರಿ ಮಾತ್ರವಲ್ಲ ಆತಂಕವನ್ನೂ.. ಈ ಮೂರು ವರ್ಷಗಳಲ್ಲಿ ಇಬ್ಬರೂ ಹೇಗಿದ್ದರು...? ಅವರ ಆ ಅಂತರಕ್ಕೆ ಕಾರಣವೇನು ಎಂಬುದರ ಜೊತೆಜೊತೆಗೆ ಅವರಿಬ್ಬರ ಚಾಟಿಂಗ್ ತೆರೆದುಕೊಳ್ಳುತ್ತಾ ಸಾಗುತ್ತದೆ. ಅವನ ಚಿತ್ರದ ಸೂಕ್ಷ್ಮವನ್ನು ಗಮನಿಸುವ ಅವಳು ಹಾಗೂ ಅವಳ ಪ್ರೊಫೈಲ್ ಪಿಚ್ಚರ್ ಇಂದ ಅವಳನ್ನು ಅಳೆಯುವ ಇವನು ಮತ್ತೆ ಎದುರಾಗಿದ್ದು ಸ್ಮಶಾನದಲ್ಲಿ. ಈ ವಿಚಿತ್ರ ಭೇಟಿ ಹೇಗಿದೆ ಓದಿ ನೋಡಿ.


ಸುಶೀಲಾ : ಅಪ್ರತಿಮ ಸುಂದರಿಯಾಗಿದ್ದ ಸುಶೀಲಾ ಶಾಲೆಯ ಶಿಕ್ಷಕರಿಗೆಲ್ಲರಿಗೂ ಮೆಚ್ಚಿನ ಶಿಷ್ಯಳಾಗಿದ್ದಳು. ಅವಳಿಗೆ ಆರಾಧಕರೂ ಇದ್ದರು. ಹುಷಾರಿನ ಹುಡುಗಿಯಾಗಿದ್ದವಳಿಗೆ ಡಿಸ್ಟಿಕ್ ಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಸಿಕ್ಕ ಕಾರಣಕ್ಕೆ ತಂದೆ ಮದುವೆ ಮಾಡಿಕೊಟ್ಟಿದ್ದರು. ಅವಳ ವಕೀಲೆಯಾಗುವ ಕನಸು ಅರ್ಧಕ್ಕೆ ನಿಂತು ಸಂಸಾರ ಸಾಗರದಲ್ಲಿ ಮುಳುಗಿದ್ದಾಗ.. ಹಳೆಯ ಗೆಳೆಯ ಮೋಹನ ಅವಳ ಬದುಕಿನಲ್ಲಿ ಅಲೆ ಎಬ್ಬಿಸಿದ್ದು ಹೇಗೆ..? ಟಿ.ವಿಯಲ್ಲಿ ಸೆಳೆಯುತ್ತಿದ್ದ, ಕಾಣುತ್ತಿದ್ದ ಮೋಹನನ ಭೇಟಿ ಸುಶೀಲಾಳ ಬದುಕನ್ನು ಹೇಗೆಲ್ಲಾ ಬದಲಾಯಿಸಿತು ಓದಿ ನೋಡಿ.


ಮೊರೆವ ಕಡಲ ಧ್ಯಾನ : ಹಿಂದಿನ ದಿನವಷ್ಟೇ ಅಪ್ಪನ ಶವಪೆಟ್ಟಿಗೆಯನ್ನು ಚರ್ಚಿನಲ್ಲಿ ಹೂತು ಬಂದಿದ್ದ ನಿಕೊಲಸ್ ಹಾಗೂ ಗೇಬ್ರಿಯಲ್ ಒಂದೇ ತಂದೆಯ ಮಕ್ಕಳಾದರೂ .. ಒಂದೇ ತಾಯಿಯ ಮಕ್ಕಳಲ್ಲ. ಇಬ್ಬರೂ ತಮ್ಮ ಬದುಕನ್ನು ಪರಸ್ಪರ ತೆರೆದಿಟ್ಟುಕೊಳ್ಳುತ್ತಾ ಸಾಗುತ್ತಿದ್ದಾಗ ಎದುರಲ್ಲಿ ಕಡಲಿತ್ತು. ಅಪ್ಪನಿಲ್ಲದ ಹೊತ್ತಿನಲ್ಲಿ ಇಬ್ಬರ ಮನದಾಳ ಹೇಗಿತ್ತು...? ಕಡಲು ಯಾವುದಕ್ಕೆಲ್ಲ ಸಾಕ್ಷಿಯಾಯಿತು..?


ಬುಂಡೆದಾಸನೆಂಬ ಹುಚ್ಚಯ್ಯ : ಮುದುಕ ಬುಂಡೆದಾಸ ಆನೆ ತುಳಿದು ಸತ್ತಿದ್ದನು. ಬಾಲ್ಯದಿಂದಲೇ ಭಟ್ಟಿ ಸರಾಪು ಕುಡಿಯುತ್ತಿದ್ದವನಿಗೆ ಆ ಹೆಸರು ಬಂದಿತ್ತು. ಆತನ ಅಣ್ಣಂದಿರು, ಅತ್ತಿಗೆಯರಿಗೆ ಈತ ಯಾವತ್ತೋ ಸತ್ತು ಹೋಗಿದ್ದ. ಆದರೆ, ಆತನನ್ನು ಪ್ರೀತಿಸುತ್ತಿದ್ದ ಜನ ಬಹಳ ಇದ್ದರು. ಅವನ ಸಾವಿನ ಹೊತ್ತಿನಲ್ಲಿ ಅವನನ್ನು ಜ್ಞಾಪಿಸಿಕೊಂಡ ಪರಿಯೇ  ಈ ಕಥೆ. ನಿಯತ್ತಿನ ನಾಯಿ ಬೈರನ ಜೊತೆಗಿದ್ದವನ ಸಂಸಾರ ಹೇಗಿತ್ತು..? ಪ್ರಕೃತಿಯಲ್ಲಿ ಲೀನವಾದ ಬುಂಡೆದಾಸ ಹೇಗಿದ್ದ ಓದಿ ನೋಡಿ.


ವೈಷ್ಣವಿ ಎಂಬ ಸುಂದರಿ : ಕೇರಳದಿಂದ ಬೆಂಗಳೂರಿಗೆ ಬಂದು ಪಿ.ಜಿಯಲ್ಲಿ ನೆಲೆಸಿ ಚೆನ್ನಾಗಿ ಓದಿ ನರ್ಸ್ ಆಗುವ ಆಸೆ ಇಟ್ಟುಕೊಂಡಿದ್ದ ವೈಷ್ಣವಿ ಹಾಗೂ ಅವಳ ತಂದೆಯ ಕನಸಿನ ಜೊತೆಗೆ ಅವಳ ರೂಮ್ ಮೇಟ್ ಚೈತ್ರ ತುಂಬಿದ ಕನಸು ಚಿತ್ರನಟಿಯಾಗುವುದು. ಸ್ಟಾಫ್ ನರ್ಸ್ ಆಗಲಿ ಎಂಬ  ವಾಸ್ತವದ ಕನಸು ಕಾಣುತ್ತಿದ್ದ ತಂದೆ, ಬಾಲ್ಯದ ಗೆಳತಿ ವೈಷ್ಣವಿಯನ್ನೇ ಮನಸಾರ ಪ್ರೀತಿಸಿ ಅವಳೇ ತನ್ನ ಮಡದಿಯಾಗಲಿ ಎಂದು ಆಶಿಸುತ್ತಿದ್ದ ಮುರಳೀಧರನ್, ಚಿತ್ರನಟಿಯಾಗಲು ಅದಕ್ಕೆ ಬೇಕಾದ ಕಾಂಟಾಕ್ಟ್ ಮಾಡಿಕೊಟ್ಟಿದ್ದ ಚೈತ್ರ ಈ ಮೂವರ ಪ್ರಯತ್ನಗಳಲ್ಲಿ ವೈಷ್ಣವಿ ಯಾವುದರ ಹಿಂದೆ ಹೋಗುತ್ತಾಳೆ..? 


ಪ್ರಾಯಶ್ಚಿತ್ತ : ರಮಾಕಾಂತ್ ನನ್ನು ಹುಡುಕಿಕೊಂಡು ಬಂದಿದ್ದವಳು ಆತನ ಬಳಿ ಹೇಳ ಬಯಸಿದಾಗ ಸತ್ಯ ಆಕೆ ಗರ್ಭಿಣಿ ಎಂದೂ ಹಾಗೂ ಆಕೆಗೆ ಬೇರೊಬ್ಬರ ಜೊತೆ ಸಂಬಂಧವಿದೆ ಎಂದು. ಅಷ್ಟಕ್ಕೂ ವಕೀಲ ರಮಾಕಾಂತ್ ನನ್ನು ಆಕೆ ಹುಡುಕಿಕೊಂಡು ಬಂದದ್ದೇಕೆ..? ಮಟನ್ ಸ್ಟಾಲ್ ನ ಆ ವ್ಯಕ್ತಿ ಅವರಿಬ್ಬರ ಸಂಬಂಧವನ್ನು ತಿಳಿದು ನಿಬ್ಬೆರಗಾದ ಪ್ರಸಂಗ ಇಲ್ಲಿದೆ.


ಹೊನ್ನಮ್ಮನ ಕುರಿಗಳು : ಮುದುಕಿ ಹೊನ್ನಮ್ಮನನ್ನು ಮಣ್ಣಿನಲ್ಲಿರಿಸಿ ಎಲ್ಲರೂ ಹೊರಟರಾದರೂ ಬೀರಯ್ಯನಿಗೆ ಪಾಪಪ್ರಜ್ಞೆ ಕಾಡುತ್ತಿತ್ತು. ಆಕೆ ಒಳ್ಳೆಯ ಅಮ್ಮನಾದಳು, ತಾನೇ ಒಳ್ಳೆಯ ಮಗನಾಗಲಿಲ್ಲ ಎಂಬ ಭಾವ ಕಾಡುತ್ತಿತ್ತು. ತನ್ನ ತಾಯಿಯ ಸಾವಿಗೆ ಕಾರಣಕರ್ತಳಾದ ತನ್ನ ಹೆಂಡತಿಯ ಕ್ರೂರತೆ ಕಂಡು ಆಕ್ರೋಶವೂ ಹುಟ್ಟಿ ಈಗ ದಿಕ್ಕು ತೋಚದಂತಾಗಿತ್ತು. ಈ ಎಲ್ಲದರ ಹಿನ್ನೆಲೆ ಹಾಗೂ ಸತ್ಯಾಸತ್ಯತೆ ಏನಿತ್ತು ಓದಿ ನೋಡಿ.


ಬಂಧ : ಆತ ಎರಡನೇ ಮದುವೆಯಾಗಿದ್ದರೂ ಈಗ ಮೊದಲ ಪತ್ನಿ ಮತ್ತೆ ಆತನ ಬದುಕಲ್ಲಿ ಬರುವ ಸುಳಿವು ಸಿಕ್ಕಿತ್ತು . ಎರಡನೆಯ ಹೆಂಡತಿಗೆ ಅವಳ ಫೋಟೋ ಕಂಡರೆ ಸಿಡಿಮಿಡಿ. ಇನ್ನು ಈಗಿನ ವಿಚಾರ ತಿಳಿದರೆ ಹೇಗಿರಬಹುದು..? ಮೊಮ್ಮಗಳಿಗೆ ಹೇಳುವ ಕಥೆ ಜೊತೆಗೆ ಅವರ ಬದುಕಿನ ವಾಸ್ತವ ಎರಡನ್ನು ಮಿಳಿತಗೊಳಿಸಿದಂತಿರುವ ಕಥೆ ಇದು. ಕಥಾತಂತ್ರ ಇಷ್ಟವಾಯಿತು.


ಒಂದು ರಾತ್ರಿ ಏನಾಯಿತೆಂದರೆ... : "ಮದುವೆ ಅನ್ನೋದು ಒಂದು ಸಂಬಂಧ ಬೆಸೆಯೋದ್ರ ಜೊತೆಗೆ ಒಂದಿಷ್ಟು ನಂಟುಗಳ ಬೇರುಗಳನ್ನು ಕತ್ತರಿಸಿ ಹಾಕುತ್ತೆ" ಎಂದವನ ವಿಚಾರಗಳು ಯಾವು ದಿಕ್ಕಿನಲ್ಲಿ ಓಡುತ್ತಿದ್ದವು..? ಲಿಸಾ ಹಾಗೂ ಅವನ ಸಂಬಂಧಕ್ಕೆ ಅರ್ಥವೇನು..? ಆ ಸಂಬಂಧದ ರೂಪುರೇಷೆ ಆ ರಾತ್ರಿ ಬದಲಾಯಿತೇ ಓದಿ ನೋಡಿ.


ಕಲ್ಗುಡಿ ಮಠ : ಜವರಪ್ಪ ಹಾಗೂ ಸಾಧುವಿನ ನಡುವೆ ನಡೆಯುವ ಸಂಭಾಷಣೆಗಳು ಅವರ ಬದುಕು ಮಾತ್ರವಲ್ಲದೆ ಬದುಕಿನ ಆಧ್ಯಾತ್ಮವನ್ನು, ಲೋಕದ ವ್ಯವಹಾರಗಳನ್ನು ತಮ್ಮದೇ ಪ್ರೀತಿಯಲ್ಲಿ ವಿಶ್ಲೇಷಿಸಿದ ಬಗೆ ಇಲ್ಲಿದೆ. ಹಳ್ಳಿಯ ಆಡುಮಾತಿನಲ್ಲಿರುವ ಈ ಕಥೆಯಲ್ಲಿ ಹಲವಾರು ತತ್ವಗಳು ಮಿಳಿತವಾಗಿವೆ.


ಸೂಪರ್ ಗಾಡ್ ಸಣ್ಣಯ್ಯ : ಮೈಮೇಲೆ ಬಸಪ್ಪ ದೇವರು ಬಂದಿದ್ದ ಸಣ್ಣಯ್ಯ ಹೇಳಿದಾಗ ರಾಗಿದೊಡ್ಡಿಯ ಜನ ಮರುಮಾತಾಡದೆ ಒಪ್ಪುತ್ತಿದ್ದರು. ಇಡೀ ಊರಿನಲ್ಲಿಯೇ ಅವನೊಬ್ಬನಿಗೆ ಮಾತ್ರ ದೇವರು ಬರುತ್ತಿತ್ತು. ಊರದೇವರಾದ ಬಸಪ್ಪನ ಅರ್ಚಕ ಕಟ್ಟಾ ಬ್ರಹ್ಮಚಾರಿ ಎನ್ನುವ ಬಿರುದು ಪಡೆದಿದ್ದ. ಜನರ ಕಷ್ಟ-ಸುಖ, ಹಣ-ಚಿನ್ನ, ರೋಗ-ರುಜಿನ, ಮನೆಯ ಕಾರ್ಯಕ್ರಮಗಳು, ವ್ಯವಹಾರ ಎಲ್ಲದರ ಕುರಿತೂ ನಿಯಂತ್ರಿಸುತ್ತಿದ್ದ ಎಂದರೂ ತಪ್ಪಾಗುವುದಿಲ್ಲ. ಆತನನ್ನು ಜನ ನಂಬಿದಕ್ಕೂ.. ಆತ ನಡೆದುಕೊಳ್ಳುತ್ತಿದ್ದಕ್ಕೂ ವ್ಯತ್ಯಾಸವಿತ್ತೇ..? ಜನ ಎಷ್ಟೆಲ್ಲಾ ಮರ್ಯಾದೆ ಕೊಟ್ಟರೂ ಆತ "ಸಿಸುಮಗನೆ" ಎಂದು ಎಲ್ಲರನ್ನು ಸಂಬೋಧಿಸುತ್ತಿದ್ದ ಪರಿ ಒಪ್ಪುವಂತಿತ್ತೇ..? ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿಗಳ ಬದುಕನ್ನು ಬುಡಮೇಲು ಮಾಡುವಂತಹ ಘಟನೆಗಳು ನಡೆದ ಸರಣಿ ಇಲ್ಲಿದೆ.


ನೆನಪಿನ ಹಿಂಜೋಲ : ನೆಮ್ಮದಿಯ ಸಂಸಾರದಲ್ಲಿ ಈಗ ಮೊಮ್ಮಗನಿಗೆ ಕಥೆ ಹೇಳುತ್ತಾ.. ಅದೂ ತನ್ನ ಯಜಮಾನನ ಕಥೆಯನ್ನೇ ಹೇಳುತ್ತಾ ಕೆಂಪಮ್ಮ ನೆನಪಿಗೆ ಜಾರಿದ್ದಳು. ತನ್ನಷ್ಟು ಸುಖಿ ಬೇರೊಂದು ಹೆಣ್ಣಿಲ್ಲವೆಂದು ಭಾವಿಸಿ ನೆಮ್ಮದಿಯಿಂದಿದ್ದ ಅವಳ ಬದುಕನ್ನು ಮೊಮ್ಮಗನಿಗೆ ಕಥೆ ಹಾಗೂ ಹಾಡಿನ ರೂಪದಲ್ಲಿ ತೆರೆದಿಟ್ಟ ಚಿತ್ರಣ ಇಲ್ಲಿದೆ. ಹಾಡಿನ ಒಂದೆರಡು ಸಾಲುಗಳನ್ನು ನೋಡುವುದಾದರೆ ಹೀಗಿವೆ.

"ಯಾವ ಕುದುರೆಯನೇರಿ ಯಾವ ರಾಜ್ಯವ ಸುತ್ತಿ

ಯಾವ ಕಷ್ಟಕೆ ನೀ ನೆರವಾದೋ

ಯಾರ ಕಂಬನಿಯೊರೆಸಿ ಯಾರ ದುಃಖವ ಸರಿಸಿ

ಯಾರ ಮುಖದಲ್ಲಿ ನಗುವಾದೋ"


ಹಕ್ಕಿಗೂಡು : ಮಾಧವ್ ಸಂದರ್ಶನ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸ್ಪೆಷಲ್ ಗೆಸ್ಟ್ ಬೇರಾರೂ ಆಗಿರಲಿಲ್ಲ.. ಆತನ ತಾಯಿ ಯಶೋದಾ. ಜಗತ್ತಿನಲ್ಲಿರುವ ಪ್ರತಿ ಜೀವಿಯನ್ನು ಪ್ರೀತಿಸಬೇಕು ಅಂತ ಹೇಳುವ ಅವನ ಆಶಯ ಹಾಗೂ ಅಂತಹದ್ದೇ ಕ್ಲಿಪಿಂಗ್ ಅನ್ನು ತೋರಿಸಿದ ಸಂದರ್ಶಕಿ ಈಗ ವೃದ್ಧಾಪ್ಯದಲ್ಲಿ ಆತ ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವಷ್ಟು ಕಟುಕರಾಗಿದ್ದೇಕೆ ಎಂದು ಕೇಳಿದಾಗ ಅವನ ಉತ್ತರವೇನಿತ್ತು..? ಅದಕ್ಕೆ ಅವನ ಮಗ ಹಾಗೂ ತಾಯಿಯ ಪ್ರತಿಕ್ರಿಯೆಯೇನು..? ಯಶೋಧಾಳ ನೋಟ ಹಾಗೂ ಬದುಕಿನ ಸಾಕ್ಷಿಯಾಗಿ ಹಕ್ಕಿ ಗೂಡೊಂದು ಕಾಣುತ್ತದೆ.


ಪೂರ್ಣಿಮಾಳ ಭರವಸೆ : ಚಿಕ್ಕವಳಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡ ಹಾಗೂ ಈಗ ತಂದೆ ಸಾವಿಗೀಡಾದ ಪರಿಣಾಮವಾಗಿ ಕಾಲೇಜನ್ನು ಅರ್ಧಕ್ಕೆ ಬಿಟ್ಟು ಜವಾಬ್ದಾರಿ ವಹಿಸಿಕೊಂಡ ಪೂರ್ಣಿಮಾಳಿಗೆ ಇಬ್ಬರು ತಂಗಿಯರಿದ್ದರು. ಮೊದಲನೇ ತಂಗಿ ಮುಂಗೋಪಿ, ಅಹಂಕಾರಿ, ಉದ್ದಟ ಹಾಗೂ ತನ್ನ ಸ್ವಾರ್ಥವನ್ನು, ಸುಖ-ಸಂತೋಷವನ್ನು ಯೋಚಿಸುವ ಸ್ವಭಾವದವಳಾದರೆ.. ಎರಡನೆಯ ತಂಗಿ ಬುದ್ಧಿಮಾಂದ್ಯೆ. ಇಬ್ಬರನ್ನು ತಾಯಿಯಂತೆ ಸಲಹಲು ಹೊರಡುವ ಪೂರ್ಣಿಮಾಳಿಗೆ ಯಾವ ಸವಾಲುಗಳು ಎದುರಾಗಿದ್ದವು ಹಾಗೂ ಅವೆಲ್ಲವನ್ನು ದಾಟಿ ತನ್ನ ಬದುಕಿನ ಕುರಿತು ಮಾತ್ರವಲ್ಲದೆ, ತನ್ನ ತಂದೆಯಂತೆಯೇ ದೊಡ್ಡ ಉದ್ಯಮಿಯಾಗಿ ನೂರಾರು ಜನಕ್ಕೆ ಉದ್ಯೋಗ ಕೊಡುವ ವಿಶ್ವಾಸ ಬೆಳೆಸಿಕೊಂಡದ್ದು ಹೇಗೆ..?


ಕತ್ತಲ ವಂಶದವನು : "ಬೆಳಕೆಂಬುದು ಕೇವಲ ಸೂರ್ಯನಿಗೆ ಸಂಬಂಧಿಸಿದ ವಿಷಯವಲ್ಲ ಬಿಡಿ."

"ಕತ್ತಲೆ ಎಂಬುದು ಕಪ್ಪಗಿರುತ್ತದೆಂದೂ ನಾನು ನಂಬಿದವನಲ್ಲ." 

"ನನಗೆ ರಾತ್ರಿಗಳೆಂದರೆ ಇಷ್ಟ. ಈ ರಾತ್ರಿಯಲ್ಲಿ ಹುಟ್ಟುವ ಒಂದೊಂದು ವಾಕ್ಯವೂ ನನ್ನ ನಲ್ಮೆಯ ಸಂತಾನ." 

ಹೀಗೆ ಕತ್ತಲು, ಬೆಳಕು ಜಿಜ್ಞಾಸೆಯ ಕಾವ್ಯಾತ್ಮಕ ಭಾಷೆಯ ಕಥನವಿದು.


ಹಳ್ಳಿಗೆ ತಕ್ಕ ಹಿನ್ನೆಲೆ ಹಾಗೂ ಆಡು ಮಾತುಗಳು, ವಯಸ್ಸಿಗೆ ತಕ್ಕ ನೋಟಗಳು ಹಾಗೂ ಅನುಭವಗಳು, ಸಿಟಿಯ ಪರಿಸರಕ್ಕೆ ತಕ್ಕಂತೆ ಅಪ್ಡೇಟ್ ಸಂಭಾಷಣೆಗಳು ಎಲ್ಲವನ್ನು ಹೊಂದಿರುವ ಕಥಾ ಸಂಕಲನ. ಕಥೆಯ ಮತ್ತು ಹಾಗೂ ಕಥಾತಂತ್ರಕ್ಕಿಂತಲೂ ಸಂಭಾಷಣೆಗಳು, ಕಥೆಯನ್ನು ಕನೆಕ್ಟ್ ಮಾಡಲು ಬಳಸುವ ರೂಪಕಗಳು ಹೆಚ್ಚು ಇಷ್ಟವಾದವು. ಕೆಲವು ಕತೆಗಳಲ್ಲಿ ಸಿನಿಮೀಯ ಟಚ್ ಕಾಣುತ್ತದೆ. ಚೆಂದದ ಕಥಾ ಸಂಕಲನದ ಸುಂದರ ಓದು.


~ವಿಭಾ ವಿಶ್ವನಾಥ್

ಆರ್ಯಾವರ್ತ (ಪುಸ್ತಕ ಯಾನ - 455)


ಪುಸ್ತಕದ ಶೀರ್ಷಿಕೆ : ಆರ್ಯಾವರ್ತ

ಲೇಖಕರು : ಉಷಾ ನರಸಿಂಹನ್

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2025

ಪುಟಗಳು : 360

ಬೆಲೆ : 450 ರೂ.


ಆರ್ಯಾವರ್ತ ಎಂಬುದು ಉತ್ತರ ಸೀಮೆಗಳನ್ನು ಒಳಗೊಂಡಿತ್ತು ಎಂಬ ಅರ್ಥವಿರುವಂತೆ ಶ್ರೇಷ್ಠರು ಓಡಾಡಿದ ಸ್ಥಳ ಎಂಬ ಅರ್ಥವೂ ಇದೆ. ಬುದ್ಧನ ಹಾದಿಯಲ್ಲಿ ನಡೆಯಲು ಹೊರಟ ಹರ್ಷವರ್ಧನನ ಕಥೆ ಇಲ್ಲಿದೆ. ಚೀನಿ ಪ್ರವಾಸಿಗ ಹ್ಯೂಯಾನ್ ತ್ಸಾಂಗ್ ಬಂದ ಸಂದರ್ಭದಲ್ಲಿ ಆತ ನೋಡಿದ ಹರ್ಷವರ್ಧನನ ಆಳ್ವಿಕೆ ಹಾಗೂ ಆತನ ವ್ಯಕ್ತಿತ್ವವೂ ಇಲ್ಲಿದೆ. ಈ ಕಾದಂಬರಿಯಲ್ಲಿ ಐತಿಹಾಸಿಕ, ಧಾರ್ಮಿಕ, ರಾಜಕೀಯದ ಎಲ್ಲಾ ನೋಟಗಳು ಕಾಣುತ್ತವೆ. ಹರ್ಷವರ್ಧನನನ್ನು ಕುರಿತ ಮೊದಲ ಕಾದಂಬರಿ ಎಂಬ ವಿಶೇಷತೆಯು ಇದರದ್ದು.


ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಯವರೆಗೆ, ಹಿಮಾಚಲದಿಂದ, ವಿಂಧ್ಯಾಚಲದವರೆಗಿನ ಭೂಪ್ರದೇಶ, ಗೌಡ, ಮಾಳವ, ಕಾಮರೂಪ, ಸಿಂಧೂ ದೇಶ, ಗುರ್ಜರ, ಗಾಂಧಾರ, ಕಳಿಂಗ, ಕಶ್ಮೀರ ಈ ಎಲ್ಲವನ್ನೂ ಒಳಗೊಂಡ ವಿಶಾಲ ಭೂಪ್ರದೇಶವೇ ಇಲ್ಲಿನ ಆರ್ಯಾವರ್ತ. 'ಸಕಲೋತ್ತರ ಪಥನಾಥ' ಎಂದು ಕರೆಸಿಕೊಂಡ ಹರ್ಷವರ್ಧನನ ಬದುಕಿನ ಚರಿತೆ ಅವನ ಆಸ್ಥಾನ ಕವಿ ಬಾಣಭಟ್ಟನ 'ಹರ್ಷ ಚರಿತ'ದಲ್ಲಿರುವುದೂ.. ಹ್ಯೂಯನ್ ತ್ಸಾಂಗ್ ನ ಆತ್ಮಕಥೆ 'ಸಿಯುಕಿ'ಯಲ್ಲಿಯೂ ಅದು ತಾಳೆಯಾಗುವುದೂ ವಿಶೇಷ. ಪಾಲಿ ಭಾಷೆಯ ನಾಲ್ಕು ಶೀರ್ಷಿಕೆಗಳಿಂದ ಕಾದಂಬರಿಯ ನಾಲ್ಕು ಘಟ್ಟಗಳನ್ನು ಕಾಣಬಹುದು. 


ಸಂವಟ್ಟ (ಲೋಕದವಿಲಯ) :

ಪ್ರಭಾಕರವರ್ಧನ ಮತ್ತು ಯಶೋಮತಿ ದಂಪತಿಗಳ ಮೂವರು ಮಕ್ಕಳೇ ರಾಜ್ಯವರ್ಧನ, ಹರ್ಷವರ್ಧನ ಹಾಗೂ ರಾಜ್ಯಶ್ರೀ. ಇವರು ಪುಷ್ಯಭೂತಿ ವಂಶಸ್ಥರು. ಮಾಳವದಿಂದ ಯಶೋಮತಿ ವಿವಾಹವಾಗಿ ಬಂದಿದ್ದಾಗ ಆಕೆಯ ಗೆಳತಿಯಾಗಿದ್ದ ಗಿರಿಜೆಯೂ ಸ್ಥಾನೇಶ್ವರಕ್ಕೆ ಸೊಸೆಯಾಗಿ ಬಂದು.. ಅವರ ಸ್ನೇಹ ಇಲ್ಲಿಯೂ ಮುಂದುವರೆದಿತ್ತು. ಅಂತಸ್ತುಗಳು ಕಡಿಮೆಯಿದ್ದರೂ ಅರಮನೆಯ ಪೂಜೆ, ಪುನಸ್ಕಾರಗಳಲ್ಲಿ ಅವರಿಗೆ ಯಾವತ್ತಿಗೂ ಹಿರಿಯ ಸ್ಥಾನವೇ. ರಾಜ್ಯಶ್ರೀಯ ಪ್ರೀತಿಯ ಗಿರಿಜತ್ತೆ ಆಪ್ತವಾಗುತ್ತಾಳೆ. ಆಂತೆಯೇ ಗಿರಿಜತ್ತೆಯ ಮಗ ವಿಶ್ವಂಬರ ಹಾಗೂ ರಾಜ್ಯಶ್ರೀಯ ನವಿರಾದ ಭಾವಗಳು ಕಾಣುತ್ತವೆ. ಈಗ ಕನ್ಯಾಕುಬ್ಜದ ಅರಸು ಗೃಹವರ್ಮನ ಮನದನ್ನೆಯಾಗಿ ಹೋಗುತ್ತಿದ್ದಳು ರಾಜ್ಯಶ್ರೀ. ವಿವಾಹದ ಕುರಿತು ಅವಳಿಗಿದ್ದ ಭಯ, ಅದನ್ನು ಹೋಗಲಾಡಿಸುವ ಪರಿ ಎರಡು ಕುಟುಂಬಗಳ ಹಿನ್ನೆಲೆ, ನಿರ್ವಿಘ್ನವಾಗಿ ಸಾಗುವ ವಿವಾಹ ಎಲ್ಲವೂ ಮಧುರವಾದ ಓದು. ಈ ಶುಭ ಸಂದರ್ಭದಲ್ಲಿಯೂ ನೋವಿನ ಮುಳ್ಳಿತ್ತು. 


ಮಾಳವದಿಂದ ಯಾರೂ ಬರದಿದ್ದು ಕಾಡುತ್ತಲೇ ಇತ್ತು. ಅದಕ್ಕೆ ಕಾರಣವೂ ಇತ್ತು. ಮಾಳಗದ ಯುವರಾಜ ಭಂಡಿ ಚಿಕ್ಕ ಹುಡುಗನಾಗಿದ್ದಾಗಲೇ ಸ್ಥಾನೇಶ್ವರದಲ್ಲಿ ರಾಜಕೀಯ ಬಂಧಿಯಾಗಿದ್ದ. ಆದರೆ, ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ಬೆಳೆಸಿದ್ದರು ವರ್ಧನ ದಂಪತಿಗಳು. ಈಗ ಆತ ಅಮಾತ್ಯನೂ ಹೌದು. ಯಶೋಮತಿಯ ತವರು ಮಾಳವಕ್ಕೂ ಪ್ರಭಾಕರವರ್ಧನನಿಗೂ ಉಂಟಾದ ವೈಮನಸ್ಯಕ್ಕೆ ಕಾರಣವೇನು? ಓದಿ ನೋಡಿ.


ಪುಷ್ಯಭೂತಿ ಹಾಗೂ ಮೌಖಾರಿ ವಂಶದ ನಂಟು ಬೆಳೆದಿದ್ದಕ್ಕೆ ರಾಜಕೀಯ ಹಿನ್ನೆಲೆಯೂ ಇತ್ತು. ಹಾಗಿಲ್ಲದಿದ್ದರೆ ರಾಜಶ್ರೀ ಹಾಗೂ ಭಂಡಿಯ ವಿವಾಹವಾಗುತ್ತಿತ್ತೇ..? ಹಾಗಿದ್ದರೆ ಆ ಹಿನ್ನೆಲೆಯೇನು..? ಅದನ್ನು ಪ್ರಭಾಕರವರ್ಧನ ಭಂಡಿಯೊಡನೆ ಚರ್ಚಿಸಿದ ರೀತಿ ಹೇಗಿತ್ತು..?

ಪ್ರಭಾಕರವರ್ಧನನ ಸಾವು, ಯಶೋಮತಿ ಸತಿಯಾಗುವುದರ ನಂತರದಲ್ಲಿಯೇ ರಾಜ್ಯವರ್ಧನ ಹಾಗೂ ಗೃಹವರ್ಮನ ಅನಿರೀಕ್ಷಿತ ಸಾವುಗಳು, ರಾಜ್ಯಶ್ರೀಯ ಬದುಕಿನಲ್ಲಿ ಕಡುಕಷ್ಟದ ದಿನಗಳನ್ನು ತರುತ್ತವೆ. ಭಂಡಿ ತನ್ನ ಅತ್ತೆಗೆ ಕೊಟ್ಟ ಮಾತಿನಂತೆ ನಡೆಯುತ್ತಾನಾ..? ಎಳೆಯ ಹರ್ಷವರ್ಧನ ಎಲ್ಲ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾನೆ..? ಸಾಯಲು ಹೊರಟಿದ್ದ ರಾಜ್ಯಶ್ರೀಯನ್ನು ತಡೆದ ದಿವಾಕರಮಿತ್ರರ ಹಿರಿಮೆಯನ್ನು ಇಲ್ಲಿ ಕಾಣಬಹುದು.


ಪಸಾರೋ (ಪ್ರಸರಣ, ವಿಸ್ತಾರ) :

ಪತಿಯಿಲ್ಲದ ರಾಜ್ಯಶ್ರೀ ಕನ್ಯಾಕುಬ್ಜದ ಅರಮನೆಗೆ ಸೇರಿದಾಗ ವಂಶ ಮುನ್ನಡೆಯವ ಸಾಧ್ಯತೆಯೂ ಇಲ್ಲ ಎನ್ನುವುದು ಮನದಟ್ಟಾಗಿತ್ತು. ಗೃಹವರ್ಮನನ್ನು ಕೊಂದ ದೇವಗುಪ್ತನನ್ನು ರಾಜ್ಯವರ್ಧನ ನರಕಕ್ಕೆ ಕಳುಹಿಸಿದ್ದನಾದರೂ.. ಗೌಡ ದೇಶದ ಶಶಾಂಕನ ಆಟ ಇನ್ನೂ ನಿಂತಿರಲಿಲ್ಲ. ಮುೌಖಾರಿ ವಂಶಕ್ಕೆ ರಾಜ್ಯಶ್ರೀ ರಾಣಿಯಾಗಿ ಪಟ್ಟವೇರುತ್ತಾಳೆ. ಹರ್ಷವರ್ಧನ ಎರಡೂ ಕಡೆ ನಿಭಾಯಿಸುತ್ತಾ.. ಅಣ್ಣನಿಗೆ ತಂಗಿ, ತಂಗಿಗೆ ಅಣ್ಣ ಎಂಬಂತೆ ಬದುಕುತ್ತಾರೆ. ಸಾಮ್ರಾಜ್ಯದ ಹೊರೆಯನ್ನು ಹೊತ್ತ ಹರ್ಷನಿಗೆ ಭಂಡಿ ಕಾವಲಾಗುತ್ತಾನೆ.


ಧವಳ ಭವನದಲ್ಲಿ ಬದುಕದ ಅಲಕೆಯ ಮಗಳು ಕುಮುದಿನಿ ಹರ್ಷ ನ ಮತ್ತೊಬ್ಬ ತಂಗಿ. ಭಂಡಿಗೆ ಆಕೆಯ ವಿವಾಹದ ಪ್ರಸ್ತಾಪ ಮಾಡಿದಾಗ ನಿರಾಕರಿಸುವ ಭಂಡಿ ಜೀವನಪೂರ್ತಿ ಅವಿವಾಹಿತನಾಗಿಯೇ ಉಳಿಯುವುದು ವಿಪರ್ಯಾಸ.


ಕುಮುದಿನಿಯ ವಿವಾಹ, ದಿವಾಕರಮಿತ್ರರು ಹರ್ಷನ ಅರಮನೆಗೆ ಆಗಮಿಸುವುದು, ಅವರ ಶಿಷ್ಯ ಮೈತ್ರಕ ತಾವು ಹೊರಟ ನಳಂದ ವಿಹಾರದ ಕುರಿತಾಗಿ ಹೇಳುವುದು, ಜ್ಞಾನ ಪ್ರಸರಣ ಕೇಂದ್ರವಾದ ನಳಂದದ ಹಿರಿಮೆ ಅಲ್ಲಿನ ಕುಲಪತಿಗಳಾದ ಶಿಲಾಭದ್ರರು (ಈಶಾನ್ಯದ ಸಮತಾತದ ಅವರು ಸುಪುತ್ರ ಹಾಗೂ ಬ್ರಾಹ್ಮಣರು ಈಗ ಬುದ್ಧ ಧಮ್ಮವನ್ನು ಒಪ್ಪಿಕೊಂಡು ಬಿಕ್ಕುವಾಗಿ ದೀಕ್ಷೆ ಪಡೆದಿದ್ದವರು), ವಿದ್ಯಾರ್ಥಿಗಳಿಂದ ಒಂದು ಚಿಕ್ಕಾಸೂ ಪಡೆಯದೆ ನಿರ್ವಂಚನೆಯಿಂದ ವಿದ್ಯೆ ಕಲಿಸುತ್ತಿರುವ ನಳಂದ ಹಾಗೂ ಅಲ್ಲಿಗೆ ದೇಣಿಗೆ ಕೊಟ್ಟ ದೊರೆಗಳು, ಧರ್ಮಗಂಜ ಎನ್ನುವ ಸುಸಜ್ಜಿತ ಸಂಕೀರ್ಣ ಗ್ರಂಥಾಲಯ ಇವೆಲ್ಲವನ್ನೂ ಕಾಣಬಹುದು.


 ಹರ್ಷ ಅಲ್ಲಿಗೆ ಹೋಗಿ ಬಂದ ನಂತರ ರಾಜ್ಯಶ್ರೀ ಅಲ್ಲಿಗೆ ಹೋಗಿ ಬರುತ್ತಾಳೆ. ವಿಶ್ವಂಬರನಿಗೆ ಆತ ಆಶಿಸಿದಂತೆ ನಳಂದದಲ್ಲಿ ಚಿಕಿತ್ಸಾ ವಿದ್ಯೆ ಕಲಿಯಲು ಅವಕಾಶ ಸಿಗುತ್ತದ..? ಅಲ್ಲಿನ ದ್ವಾರ ಪಂಡಿತರು ಕೇಳುವ ಬುದ್ಧ ಸೂತ್ರಗಳು, ವಿನಯ ಪಿಟಕಗಳ ದಮ್ಮದ ಕುರಿತ ಪ್ರಶ್ನೆಗಳು ಇವೆಲ್ಲವನ್ನು ಗೆದ್ದು ಮುನ್ನಡೆದರೆ ಮುಂದೆ ನಡೆಯುವ ಸಂದರ್ಶನ ಎಲ್ಲವೂ ಹೇಗಿರುತ್ತದೆ..?


ಮುಂದೆ ಹರ್ಷವರ್ಧನ ಹಾಗೂ ದುರ್ಗಾವತಿಯರ ವಿವಾಹ, ಪ್ರಾಗ್ಯವರ್ಧನ ಹಾಗೂ ಕಲ್ಯಾಣವರ್ಧನ, ಯಶೋಮತಿಯರ ಜನನ.. ರಾಜ್ಯಶ್ರೀ ತನ್ನ ಮಕ್ಕಳಂತೆಯೇ ಭಾವಿಸುವ ಪರಿ..

 

ಆ ವಂಶದಲ್ಲಿ ಕುಮುದಿನಿ ಇದ್ದಂತೆ ಈ ವಂಶದಲ್ಲಿ ರಾಜಶ್ರೀಯ ಮಾವ ಆವಂತಿವರ್ಮರ ಮತ್ತೊಬ್ಬ ಪುತ್ರನೂ ಇರುತ್ತಾನೆ. ಆದರೆ, ಎರಡೂ ವಂಶಗಳು ಅವರನ್ನು ನಡೆಸಿಕೊಂಡ ರೀತಿ ಮಾತ್ರ ವಿಭಿನ್ನ.. ಹರ್ಷನ ಆಡಳಿತಕ್ಕೆ ಇಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ..? ಮೌಖಾರಿ ವಂಶದ ಮಹಾಮಾತ್ಯ ಅರ್ಜುನಾಶ್ವನ ಪ್ರತಿಕ್ರಿಯೆ ಹೇಗಿರುತ್ತದೆ..?


ಹರ್ಷನ ದಂಡಯಾತ್ರೆ, ರಾಜ್ಯವನ್ನು ವಿಸ್ತರಿಸುವ ಹಾಗೂ ಸಾಮಂತರನ್ನಾಗಿಸಿಕೊಳ್ಳುವ, ಸೈನ್ಯವನ್ನು ಬಲಪಡಿಸಿಕೊಳ್ಳುವ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿವೆ. 

ಗಜಪಡೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾಡಿನ ಆನೆಯನ್ನು ಪಳಗಿಸುವ ಹಾಗೂ ಶಬರರೇ ಕಾವಾಡಿಗಳಾಗಿ ಕನ್ಯಾಕುಬ್ಜಕ್ಕೆ ಬಂದು ಮಾವುತರಾಗುವ ಕಾರ್ಯಕ್ಕೆ ದಿವಾಕರಮಿತ್ರರು ಅಸಮಾಧಾನ ವ್ಯಕ್ತಪಡಿಸಿದ್ದೇಕೆ..? ಇಂದಿನ ದಿನಗಳಿಗೂ ಹೊಂದುವ ಸಮಸ್ಯೆ ಇದು. ಇದಕ್ಕೆ ಸಿಕ್ಕ ಪರಿಹಾರವೇನು..?


ವಿಶ್ವನ ನಳಂದದ ಪ್ರವೇಶ, ಅಲ್ಲಿನ ರೀತಿ-ನೀತಿಗಳು, ವಿದ್ಯೆ ಕಲಿಸುವ ಶಿಸ್ತು ಜೊತೆಗೆ ಬೌದ್ಧ ಧಮ್ಮದ ಹಲವಾರು ವಿಚಾರಗಳಿವೆ. ವಿಶ್ವ ರಾಜ್ಯಶ್ರೀಯನ್ನು ವಿವಾಹವಾಗುವ ಅಪೇಕ್ಷೆ ವ್ಯಕ್ತಪಡಿಸಿದ್ದಕ್ಕೆ ಅಡ್ಡಿಯಾದವರಾರು..?

ಗಿರಿಜೆಯ ಒತ್ತಾಯದ ಮೇರೆಗೆ ವಿಶ್ವ ಮದುವೆಯಾದ ಕಾತ್ಯಾಯಿನಿಯ ಸಾವಿನ ನಂತರ ವಿಶ್ವನ ಪರಿಸ್ಥಿತಿಯೇನಾಯಿತು ..?


ವಿರಾಗೋ (ಆಸಕ್ತಿರಹಿತ ಸ್ಥಿತಿ) :

ವಿಶ್ವನಿಗೆ ಅರಮನೆಯ ಬಾಗಿಲು ಮುಚ್ಚಿದ್ದು, ಪತ್ನಿಯ ಸಾವು ಆತನನ್ನು ಮಾತ್ರವಲ್ಲ.. ರಾಜ್ಯಶ್ರೀ, ಗಿರಿಜೆಯರನ್ನೂ ಬಾಧಿಸಿತು. ರಾಜ್ಯಶ್ರೀ ತನ್ನ ಸಖಿ ರಾಧಿಕೆಯೊಂದಿಗೆ ಬಿಕ್ಕುಣಿಯರಿದ್ದ ಸಂಘಾರಾಮಕ್ಕೆ ಹೋದಾಗ ಅಲ್ಲಿನ ರೀತಿ-ನೀತಿಗಳು, ಶಾಂತಿದೇವಿ ಎಂಬ ಅಧ್ಯಕ್ಷೆ, ತನ್ನೆಲ್ಲ ದುಗುಡಗಳನ್ನು ಅವರೊಡನೆ ಹಂಚಿಕೊಂಡಾಗ ಆಕೆಗೆ ಸಿಕ್ಕ ಸಮಾಧಾನದ ಮಾರ್ಗವೇನು..? 


ವಲ್ಲಭಿಯ ದೊರೆ ಧ್ರುವಸೇನನೊಂದಿಗೆ ಯಶೋಮತಿಯ ವಿವಾಹದಲ್ಲಿ ಬಾಣಭಟ್ಟನ ಪಾತ್ರವೇನಿತ್ತು..? ಹೆಣ್ಣುಮಗಳೊಬ್ಬಳ ಭವಿಷ್ಯದ ಹಾದಿಯನ್ನು ಎಷ್ಟೆಲ್ಲಾ ಎಚ್ಚರಿಕೆಯಿಂದ ರೂಪಿಸುತ್ತಾರೆ ಎನ್ನುವ ನಿದರ್ಶನವಿದು.


ಚೀನೀ ಯಾತ್ರಿಕ ಹ್ಯೂಯನ್ ತ್ಸಾಂಗ್ ಆಗಮನ ಹಾಗೂ ಆತನ ಹಿರಿಮೆಗಳಿವೆ.


ದಕ್ಷಿಣ ಪಥೇಶ್ವರ ಎಂದು ಕರೆಸಿಕೊಂಡಿದ್ದ ಇಮ್ಮಡಿ ಪುಲಕೇಶಿಯ ಮೇಲೆ ಯುದ್ಧಕ್ಕೆ ಹೋಗುವ ಹರ್ಷನ ನಿರ್ಧಾರಕ್ಕೆ ಕಾರಣವೇನು..? ಅಳಿಯ ಧ್ರುವಸೇನ ಯುದ್ಧದ ಸಹಾಯದಲ್ಲಿ ನಿರಾಕರಿಸಿದ್ದು ಮಾತ್ರವಲ್ಲದೆ, ತಟಸ್ಥವಾಗಿ ಉಳಿಯಲು ನಿರಾಕರಿಸಿದ್ದು ಸಂಬಂಧಕ್ಕೆ ಏನಾದರೂ ಚ್ಯುತಿ ತಂದಿತೇ..?

ಹರ್ಷನ ಒಂದು ಸೋಲು ಅವನನ್ನು ಯಾವ ಮಟ್ಟಕ್ಕೆ ಕುಗ್ಗಿಸಿತು..? ಎಲ್ಲದರ ಹಿಂದಿನ ಚಿತಾವಣೆಯ ಸುಳಿವು ಭಂಡಿಗೆ ಸಿಗದೆ ಹೋದದ್ದು ವಿಪರ್ಯಾಸ.


ತ್ಸಾಂಗ್ ಹರ್ಷ ನ ಬಗ್ಗೆ ತಿಳಿದುಕೊಳ್ಳುವುದು, ಬುದ್ಧನ ಕುರಿತು ಬುದ್ಧ ಸೂತ್ರಗಳ ಕುರಿತು ಆತನ ಆಸಕ್ತಿ, ನಳಂದದಲ್ಲಿ ಆತನ ದಿನಗಳು, ಆತನಿಗೆ ಸಹಾಯಕನಾಗುವ ರವಿತೇಜ, ಶಿಲಾಭದ್ರರ ಜೊತೆಯಲ್ಲಿ ಆಸಕ್ತಿಯ ಮಾತುಕತೆಗಳು, ತ್ಸಾಂಗ್ ಬುದ್ಧನ ಸೂತ್ರಗಳನ್ನು.. ಭಾರತೀಯ ವಿದ್ಯೆಯ ಗ್ರಂಥಗಳನ್ನು ತನ್ನ ದೇಶಕ್ಕೆ ಒಯ್ಯಲು ಮಾಡಿಕೊಂಡ ಸಿದ್ಧತೆಗಳು ಎಲ್ಲವೂ ಇಲ್ಲಿವೆ


ನಿಬ್ಬಾಣ (ಜನನ-ಮರಣ ಚಕ್ರದ ಅಂತ್ಯ) :

ಹರ್ಷ ದಿವಾಕರಮಿತ್ರರ ಬಳಿ ಬಂದಾಗ ಅಷ್ಟರಲ್ಲಾಗಲೇ ಅವರಿಗೆ ಆತನ ಸೋಲಿನ ಸುದ್ದಿ ತಿಳಿದಿತ್ತು. ಹರ್ಷನ ಸೋಲಿನ ಕುಗ್ಗುವಿಕೆಗೆ ಅವರು ಕೊಟ್ಟ ಕಾರಣಗಳೇನು..? ತಥಾಗತನಂತೆ ಹರ್ಷನೂ ರಾಜ್ಯ-ಕೋಶವನ್ನು ತೊರೆದು ಮುನ್ನಡೆಯಲು ಹೊರಟಾಗ ಅದರಿಂದ ಉಂಟಾಗುವ ಅನರ್ಥಗಳನ್ನು ಹೇಳಿ ತಡೆದದ್ದೇಕೆ..? ಹಾಗಾದರೆ, ಬುದ್ಧ ಮಾಡಿದ್ದು ಸರಿಯೇ..?


ಹರ್ಷನ ಆಸ್ಥಾನವನ್ನು ನೋಡುವ ತ್ಸಾಂಗ್ ಮುಂದೆ ಹರ್ಷನ ವ್ಯಕ್ತಿತ್ವವನ್ನು ಅರಿಯುತ್ತಾನೆ ಜೊತೆಗೆ ಸರ್ವ ಧರ್ಮ ಸಮ್ಮೇಳನದಲ್ಲಿ ಮಹಾಯಾನ ಸಿದ್ದಾಂತಗಳನ್ನು ಪ್ರತಿಪಾದಿಸುವ ಸಂದರ್ಭದ ಭವ್ಯ ಕಾರ್ಯಕ್ರಮವೂ ಇಲ್ಲಿದೆ. ಆದರೆ, ಇಲ್ಲಿ ನಡೆದ ಆಘಾತ ಹರ್ಷನ ವಿರುದ್ಧ ನಡೆದ ಷಡ್ಯಂತ್ರಗಳನ್ನು ತೆರೆದಿಡುತ್ತದೆ. ನಿಧಾನ ವಿಷಪ್ರಾಶನದಿಂದ ಜರ್ಜರಿತನಾಗಿದ್ದ ಅವನನ್ನು ಉಳಿಸಲು ಮತ್ತೆ ವಿಶ್ವ ಬರುತ್ತಾನೆ. ಆತನಿಗೆ ವಿಷಪ್ರಾಶನ ಮಾಡಿಸಿದ್ದು ಯಾರು..? ತಮ್ಮ ಧರ್ಮಕ್ಕಿಂತಲೂ ಬೌದ್ಧಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಆತನಿಗೆ ಮುಳುವಾಯಿತೇ..?


ವಿಶ್ವನನ್ನು ಕಂಡು ರಾಜ್ಯಶ್ರೀಯಲ್ಲಿ ಉಂಟಾದ ಭಾವಗಳು ಇನ್ನೂ ಮೋಹವನ್ನು ಮೀರದ ಅವಳನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಶಾಂತಿದೇವಿಯ ಭೇಟಿಯ ಜೊತೆಗೆ ಥೇರಿಗಾಥಾದ ಕೆಲವು ಪದ್ಯಗಳು, ಬುದ್ಧನ ಕಾಲದಲ್ಲಿ ಸಂಸಾರವನ್ನು ತೊರೆದು ಬಂದ ಹೆಣ್ಣು ಮಕ್ಕಳ ಪರಿಸ್ಥಿತಿ, ಅವರ ರಕ್ಷಣೆಗಾಗಿ ಬುದ್ಧ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳು, ಜೀವನಶೈಲಿ ಎಲ್ಲವನ್ನು ಕಾಣಬಹುದು.


ಹರ್ಷನ ಕುಲಪುತ್ರರಿಬ್ಬರ ಮರಣ, ತ್ಸಾಂಗ್ ಮತ್ತೆ ತನ್ನ ದೇಶಕ್ಕೆ ಮರಳುವುದು ಎಲ್ಲದರೊಂದಿಗೆ ಕಾದಂಬರಿ ಮುಕ್ತಾಯದ ಹಂತಕ್ಕೆ ಬರುತ್ತದೆ. ಹರ್ಷನ ಕೊನೆ ಹೇಗಾಗುತ್ತದೆ..? ಅದಕ್ಕೆ ಕಾರಣವಾದವರು ಯಾರು..?

ಶಾಂತಿಯನ್ನು ಅರಸಿ ಹೊರಟ ಹರ್ಷನ ಆ ಅಂತ್ಯಕ್ಕೆ ರಾಜ್ಯಶ್ರೀ ಪರಿತಪಿಸಿ ಎಲ್ಲಿಗೆ ಹೋಗುತ್ತಾಳೆ..! ಭಂಡಿಗೂ ಸಿಗದ ಅವಳು ವಿಶ್ವನಿಗೆ ಸಿಕ್ಕದ್ದು ಹೇಗೆ..?

ವಿಶ್ವ ಹರ್ಷನಿಗೆ ರಾಜ್ಯಶ್ರೀಯ ಕುರಿತ ಕೊಟ್ಟ ಮಾತೇನು.. ಅದನ್ನು ಆತ ನೆರವೇರಿಸುತ್ತಾನಾ..?


ಬುದ್ಧನೆಂದರೆ ಅಪಾರ ಭಕ್ತಿಯಿದ್ದರೂ.. ಧಮ್ಮವನ್ನು ಅದರ ಮೂಲಸೆಲೆಯಲ್ಲಿ ಅನುಸರಿಸಿ ಆಚರಿಸುತ್ತಿದ್ದರೂ ವಿಶ್ವನಿಗೆ ಭಿಕ್ಕುವಾಗುವ ಮನಸ್ಸಿಲ್ಲದ್ದು ಏಕೆ..? ಬುದ್ಧನ ದಯೆ, ಕರುಣೆ, ಧರ್ಮಗಳು ಜೀವಪರ ಎಂದು ಒಪ್ಪಿಕೊಂಡು ಯಾವುದೇ ಪಂಥಕ್ಕೆ ಸೇರದೆಯೂ ಮಾನವ ಸೇವೆಯಲ್ಲಿ ತೊಡಗಿಕೊಳ್ಳುವ ವಿಶ್ವ .. ಹರ್ಷ ಹಾಗೂ ರಾಜಶ್ರೀಯಿಂದ ದೂರವಾಗಿ ನೆಲೆಸಿದ್ದು ಎಲ್ಲಿ..?


ಚಿಕ್ಕವಯಸ್ಸಿನಲ್ಲಿಯೇ, ಹೆಚ್ಚಿನ ಮಾರ್ಗದರ್ಶನ ವಿಲ್ಲದೆ ಸಕಲೋತ್ತರ ಪಥನಾಥನಾದ ಹರ್ಷನ ಧೈರ್ಯ, ಸಾಹಸ, ತಂಗಿಗಾಗಿ ತನ್ನ ಬದುಕನ್ನು ಮುಡುಪಾಗಿಸಿಕೊಂಡು, ರಾಜ್ಯಕ್ಕಾಗಿ ಜೀವ ಸವೆಸಿದ ಹರ್ಷ ಮನದಲ್ಲುಳಿಯುತ್ತಾನೆ. ನಳಂದಕ್ಕೆ ಕೊಡುಗೈ ದಾನಿಯಾಗಿ, ಗ್ರಾಮಗಳ ಉಂಬಳಿ, ಸ್ತೂಪಗಳ ನಿರ್ಮಿತಿ, ದೇಣಿಗೆ ಕೊಟ್ಟವನು ನಡೆಸಿದ ಕನ್ಯಾಕುಬ್ಜದ ಗಂಗಾ ತಟಾಕದ ಸರ್ವಧರ್ಮ ಸಮ್ಮೇಳನ, ಕರ್ಣನಿಗೂ ಮಿಗಿಲಾಗಿ ಮಾಡುವ ದಾನ.. ಕೌಪೀನವನ್ನೊಂದುಳಿದು ಎಲ್ಲವನ್ನೂ ದಾನ ಮಾಡಿದ ಪರಿ, ಎಲ್ಲದರಾಚೆಗೂ ಆತನ ಅಂತ್ಯ ಕಾಡುತ್ತದೆ. ವಿರಾಗಿಯಾಗಿ ನಡೆಯಲು ಹೊರಟವನ ಹಾದಿಯನ್ನು ಆಗಲೇ ಒಪ್ಪಿದ್ದರೆ.. ಹರ್ಷ ಉಳಿಯುತ್ತಿದ್ದನೇನೋ..! ಸಾಮ್ರಾಜ್ಯದ ಪರಿಸ್ಥಿತಿಯೇನೂ ವಿಭಿನ್ನವಾಗುತ್ತಿರಲಿಲ್ಲ ಎನ್ನಿಸುತ್ತದೆ. ಹರ್ಷ ತನ್ನ ದುರಂತ ಅಂತ್ಯದಿಂದ ಮನದಲ್ಲುಳಿಯುತ್ತಾನೆ.


ಸುಕೋಮಲ ರಾಜಕುಮಾರಿಯಂತೆ ಕಾದಂಬರಿಯ ಆರಂಭದಲ್ಲಿ ಕಾಣುವ ರಾಜ್ಯಶ್ರೀ ಮುಂದೆ ಪಡುವ ಕಷ್ಟಗಳು ಒಂದೆರಡಲ್ಲ. ಸಾಮಾನ್ಯ ಮನುಷ್ಯಳಂತೆ ತನ್ನಿಷ್ಟದಂತೆ ಬದುಕಲಾಗದ ರಾಜಕುಮಾರಿಯಾಗಿ, ಬುದ್ಧಿವಂತೆಯಾದರೂ.. ದಿನೇ ದಿನೇ ಪ್ರೌಢಳಾಗಿ ಆಧ್ಯಾತ್ಮದತ್ತ ಹೆಚ್ಚು ವಾಲುತ್ತಾ ಸಾಗುವ ರಾಜ್ಯಶ್ರೀ ಇಲ್ಲಿ ಹರ್ಷನಿಗಿಂತಲೂ ಹೆಚ್ಚೇ ಕಾಡುತ್ತಾಳೆ. ತ್ಸಾಂಗನ ಪತ್ರವೂ ಇದನ್ನು ಪುಷ್ಟೀಕರಿಸುತ್ತದೆ.


ತನ್ನ ರಾಜ್ಯದಿಂದ ಕರೆತಂದು ಬಾಲ್ಯದಲ್ಲೇ ತಂದೆ-ತಾಯಿಯಿಂದ ದೂರ ಮಾಡಿದ ಮಾವನ ಮೇಲೆ, ರಾಜ್ಯಶ್ರೀಯನ್ನು ಪಡೆಯಲಾಗದ್ದಕ್ಕೆ ಸೇಡು ತೀರಿಸಿಕೊಳ್ಳಬಹುದಾದ ಎಲ್ಲಾ ಅವಕಾಶವಿದ್ದರೂ.. ತಾನೇ ಆಡಳಿತದ ಚುಕ್ಕಾಣಿ ಹಿಡಿಯಬಹುದಾದ ಸಾಮರ್ಥ್ಯ ಹಾಗೂ ಅವಕಾಶವಿದ್ದರೂ.. ಅದಾವುದನ್ನು ಮಾಡದೆ ಪರಿಸ್ಥಿತಿಯನ್ನು ಪ್ರೌಢವಾಗಿ, ಪ್ರಾಮಾಣಿಕವಾಗಿ ಅರ್ಥೈಸಿಕೊಂಡು ಅತ್ತೆಗೆ ಕೊಟ್ಟ ಮಾತಿನಂತೆ, ಜೊತೆಗೆ ಅವರನ್ನೇ ತಂದೆ-ತಾಯಿಯಂತೆ ಪೂಜಿಸುತ್ತಾ .. ತನ್ನ ತಂದೆಯ ಹೀನ ಕಾರ್ಯಕ್ಕೆ ಆತನಿಗೆ ಛೀಮಾರಿ ಹಾಕುವ ಭಂಡಿಯ ಧೈರ್ಯ,ಅಜೀವ ಬ್ರಹ್ಮಚಾರಿಯಾಗಿ ಉಳಿಯುವ ಆತನ ಬದುಕು ಹರ್ಷ ಹಾಗೂ ರಾಜಶ್ರೀಯಷ್ಟೇ ಉನ್ನತವಾಗಿ ನಿಲ್ಲುತ್ತದೆ. 


ಕಾದಂಬರಿ ಕೇವಲ ಐತಿಹಾಸಿಕ ಕಾರಣದಿಂದ ಮಾತ್ರವಲ್ಲದೆ.. ಕಥೆಯ ನಿರೂಪಣೆ, ವಿಶಾಲವಾದ ಹರವು, ಭಕ್ತಿ, ವೈರಾಗ್ಯ, ಇತಿಹಾಸ ಪುಟದಲ್ಲಿ ಬುದ್ಧನಲ್ಲಿದ್ದ ಪ್ರೇಮ, ರಾಜ್ಯವೊಂದರ ಚುಕ್ಕಾಣಿ ಹಿಡಿದವರ ಬದುಕಿನ ಒಳನೋಟಗಳು ಹೀಗೆ ಆರ್ಯಾವರ್ತದಂತೆಯೇ ವಿಶಾಲವಾದ ಓದು ಇಲ್ಲಿದೆ. ಒಮ್ಮೆ ಓದಲು ಶುರು ಮಾಡಿದರೆ ಕಾದಂಬರಿಯನ್ನು ಪೂರ್ತಿ ಮುಗಿಸುವವರೆಗೂ ಕೆಳಗಿಡುವುದು ಕಷ್ಟ. ಮುಗಿದ ನಂತರವೂ ಕಾಡುವ ಓದು ಇದು. 


~ ವಿಭಾ ವಿಶ್ವನಾಥ್

ಶನಿವಾರ, ಮೇ 30, 2026

ಮನಸ್ಸಿನಂತೆ ಮಹಾದೇವ (ಬೆಳಕಿಂಡಿಯ ಕತೆಗಳು - 27)


 "ಶುಭ ಶುಕ್ರವಾರ ಎಂದು ಸ್ಪೆಷಲ್ ಏನಿಲ್ಲ, ಎಲ್ಲಾ ವಾರದಂತೆ ಇದೂ ಒಂದು ದಿನ ಅಷ್ಟೇ.. ಈ ಇಂಟರ್ವ್ಯೂ ಕೂಡಾ ಆಗಲಿಲ್ಲ ಅಮ್ಮ" ಎಂದು ಒಬ್ಬ ಮಗ ಬಂದರೆ


"ಶುಭ ಶುಕ್ರವಾರ ಎಂದುಕೊಂಡಿದ್ದೆ, ಶುಭವೇ ಆಗಿ ಇಂಟರ್ವ್ಯೂ ಪಾಸ್ ಆಯ್ತು. ಆಶೀರ್ವಾದ ಮಾಡಮ್ಮ" ಎಂದು ಬಂದ ಇನ್ನೊಬ್ಬ ಮಗ.


ಅವಳಿಗಳಾದರೂ ಯೋಚನೆಯಲ್ಲಿ ತದ್ವಿರುದ್ಧದ ಮಕ್ಕಳಿಗೆ

"ಶುಭ- ಅಶುಭ ವಾರದ ದಿನಗಳಲ್ಲಿಲ್ಲ. ನಿಮ್ಮ ಮನಸ್ಸಿನ ಆಲೋಚನೆಯಲ್ಲಿದೆ. ಮನಸ್ಸಿನಂತೆ ಮಹಾದೇವ. ಇಬ್ಬರಿಗೂ ಒಳ್ಳೆಯದಾಗಲಿ" ಎಂದು ಹರಸಿದರು. ಇಬ್ಬರೂ ಮತ್ತಷ್ಟು ಪಾಸಿಟಿವ್ ಆಲೋಚನೆ ಜೊತೆಗೆ ಮ್ಯಾನಿಫೆಸ್ಟೇಷನ್ ಕುರಿತು ಚರ್ಚಿಸುತ್ತಿದ್ದಾರೆ ಈಗ.

~ವಿಭಾ ವಿಶ್ವನಾಥ್

ಕಾಮನಬಿಲ್ಲಿನಂತಹ ದಿನ (ಬೆಳಕಿಂಡಿಯ ಕತೆಗಳು - 26)

 


ಅವಳ ಬದುಕಲ್ಲಿ ಅಂಥದೊಂದು ದಿನವಿತ್ತು. ಮತ್ತದು ಮೆಲುಕು ಹಾಕುವಂತಹ ಕಾಮನಬಿಲ್ಲಿನಂತಹ ದಿನ. ತಾನು ಸಾಕಷ್ಟು ನೋವುಂಡು ಅತ್ತ ದಿನ ಅಂತೆಯೇ ಸಾಕಷ್ಟು ಸಂಭ್ರಮಿಸಿದ ದಿನ. 

ತನ್ನಿಷ್ಟದಂತೆಯೇ ಮಗಳು ಮಡಿಲು ತುಂಬಿ ನೋವನ್ನು ಕ್ಷಣಮಾತ್ರದಲ್ಲಿ ಮರೆಸಿದ ದಿನ. ಅಮ್ಮನಾಗಿ ಅವಳು ಮರುಜನ್ಮ ಪಡೆದ ದಿನ.

~ವಿಭಾ ವಿಶ್ವನಾಥ್

ಗ್ರೋಥ್ (ಬೆಳಕಿಂಡಿಯ ಕತೆಗಳು - 25)


ಬೇಕು ಬೇಡಗಳ ನಡುವೆ ಹೈರಾಣಾಗಿದ್ದ ನನ್ನನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದು ಹಿಂದಿನಿಂದ ಬಳಸಿದ ಪುಟ್ಟ ಕೈಗಳ ಒಡತಿಯೇ..! ಸಂಬಳ, ಮಗುವಿನ ಖರ್ಚಿನ ಚಿಂತೆಯಿಲ್ಲದಿದ್ದರೂ.. ಕೆರಿಯರ್ ಗ್ರೋಥ್ ಬೇಕೋ ಬೇಡವೋ ಎಂದು ಪದೇ ಪದೇ ಎಚ್ಚರಿಸುತ್ತಿದ್ದ ಮೇಲ್, ಮೆಸೇಜ್ ಗಳನ್ನು ಮಂಕಾಗಿಸುವಂತೆ ಮಾಡಿದ್ದು ಮುದ್ದು ಮಗಳ ಮಂದಹಾಸಭರಿತ ನೆಮ್ಮದಿಯ ನಿದ್ರೆ. ಈಗ ಅವಳ ನೆಮ್ಮದಿಯನ್ನು ದುಪ್ಪಟ್ಟಾಗಿಸಿ ಮಗಳ ಗ್ರೋಥ್ ಜೊತೆಗೆ ಅಮ್ಮನ ಗ್ರೋಥ್ ಸಹ ಆಗುತ್ತಲಿದೆ. ಕೆರಿಯರ್ ಗ್ರೋಥ್ ತಡವಾಗಬಹುದು. ಆದರೆ, ಮಗಳ ಬಾಲಲೀಲೆಗಳು, ಬೆಳವಣಿಗೆ ಕಾಯುವುದಿಲ್ಲ. ಅಂತೆಯೇ ಕಾಲವೂ..!


~ವಿಭಾ ವಿಶ್ವನಾಥ್