ಬುಧವಾರ, ಏಪ್ರಿಲ್ 22, 2026

ಶರದೃತುವಿನ ಚಂದ್ರ (ಪುಸ್ತಕ ಯಾನ - 312)


ಪುಸ್ತಕದ ಶೀರ್ಷಿಕೆ : ಶರದೃತುವಿನ ಚಂದ್ರ

ಲೇಖಕರು : ಸಾಯಿಸುತೆ

ಪ್ರಕಾಶಕರು : ಸುಧಾ ಎಂಟರ್ಪ್ರೈಸಸ್

ಪ್ರಥಮ ಮುದ್ರಣ : 1985

ಐದನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 116

ಬೆಲೆ : 105 ರೂ.


'ಮುಗಿಲತಾರೆ' ಕಾದಂಬರಿಯ ಮುಂದುವರಿದ ಭಾಗವೇ ಸಾಯಿಸುತೆಯವರ ಶರದೃತುವಿನ ಚಂದ್ರ. ಈಗಾಗಲೇ 'ಮುಗಿಲತಾರೆ' ಕಾದಂಬರಿಯ ಪರಿಚಯ ಮಾಡಿದ್ದೇನೆ. ಲೇಖಕಿಯೇ ಹೇಳುವಂತೆ ಮುಗಿಲತಾರೆ ಬರೆದ ಮೇಲೆ ಅದನ್ನು ಮುಂದುವರಿಸುವ ಇಚ್ಛೆ ಅವರಿಗಿರಲಿಲ್ಲವಂತೆ. ಆದರೆ, ಹಲವಾರು ಮಹಿಳೆಯರು ಕಾದಂಬರಿಯ ವಸ್ತುವಿನ ಬಗ್ಗೆ ಚರ್ಚೆ ಮಾಡಿದಾಗ ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಒದಗಿ ಬಂದಿತ್ತು. ಅವರ ಕೆಲವು ಪ್ರಶ್ನೆಗಳಿಗೆ ಉತ್ತರ ಎನ್ನುವಂತೆ ಈ ಮುಂದುವರಿದ ಭಾಗ ಪ್ರಕಟವಾಯಿತು ಎನ್ನುತ್ತಾರೆ. 


ಭಾಷ್ಯಂರವರ ಇಬ್ಬರು ಹೆಣ್ಣುಮಕ್ಕಳು ಚೈತ್ರ ಹಾಗೂ ಸ್ಮಿತಾ. ಸ್ಮಿತಾಳಿಗೆ ಸಂದೀಪನೊಡನೆ ವಿವಾಹವಾಗಿತ್ತು. ಅದಾಗಲೇ ಸ್ಮಿತಾ ಗರ್ಭಿಣಿ. ಚೈತ್ರ ತನ್ನ ಗಂಡನ ಒಲ್ಲದ ನಡೆಯಿಂದ ಸಿಡಿದು ಬಂದಿದ್ದವಳು ಮತ್ತೆ ಅತ್ತ ತಿರುಗಿಯೂ ನೋಡಿರಲಿಲ್ಲ. ಈ ಕೊರಗೇ ಆಕೆಯ ತಾಯಿಯ ಸಾವಿಗೂ ಕಾರಣವಾಗಿತ್ತು. ಅದಾದ ನಂತರ ಮನೆಯವರೆಲ್ಲರೂ ಕುಗ್ಗಿಹೋಗಿದ್ದರು. ಅದರಲ್ಲಿಯೂ ಚೈತ್ರಾಳಿಗೆ ತನ್ನ ನಡೆ ಸರಿ ಇದ್ದರೂ.. ಮನೆಯವರೆಲ್ಲ ತನ್ನಿಂದ ನೋಯುತ್ತಿರುವುದಕ್ಕೆ ಬಹಳವೇ ಕೊರಗು. ಸದ್ಯಕ್ಕೆ ಆಕೆಯ ಗೆಳತಿ ಸುಚಿತ್ರಾ ಒಬ್ಬಳೇ ಆಕೆಯ ಪಾಲಿನ ಬಂಧು. 


ಸಿನಿಮಾ, ಸ್ನೇಹಿತರು ಎಂದು ಓಡಾಡಿಕೊಂಡಿದ್ದ ಸ್ಮಿತಾ ಹಾಗೂ ಸಂದೀಪರಿಗೆ ಈಗ ಸಾಮಾನ್ಯವಾಗಿ ಪುಟ್ಟ ಜವಾಬ್ದಾರಿಯನ್ನು ಹೊರಲು ಕಷ್ಟವೇ..! ಆದರೆ, ಈಗ ಸಂದೀಪನಿಗೆ ಮಡದಿಯ ಚಿಂತೆ. ಮೂರು ಹೊತ್ತೂ ಅವಳ ಮುಂದೆ ಕೂರಲಾಗದು. ಹಾಗೆಂದು, ಕುಗ್ಗಿ ಹೋದ ಮನಸ್ಥಿತಿಯಲ್ಲಿ ಗರ್ಭಿಣಿ ಹೆಂಡತಿಯನ್ನು ಬಿಡಲಾಗದು. ಹಾಗಾಗಿಯೇ ಅವಳನ್ನು ಇಲ್ಲಿಯೇ ತಂದು ಬಿಡಬಹುದಾ ಎಂಬ ಆಲೋಚನೆ. 


ಚೈತ್ರಳ ಗಂಡ ದಿವಾಕರ ಹೇಗೆ ನೋಡಿದರೂ.. ಸ್ವಾರ್ಥದ ಪರಾಕಾಷ್ಟೆಯಾಗಿ ಹಾಗೂ ಮಹಾತ್ವಾಕಾಂಕ್ಷೆಯ ವ್ಯಕ್ತಿಯಾಗಿ ಮಾತ್ರವೇ ಕಾಣುತ್ತಿದ್ದನೇ ಹೊರತು ಪ್ರೇಮಮಯಿ ಜೀವಿಯಾಗಲ್ಲ. ಈಗ ಸತೀಶ್ ಚಂದ್ರರ ಎದುರು ಚೈತ್ರದ ನಡೆಯಿಂದ ಸೋತಂತಾಗಿತ್ತು. 


ಎಂದೂ ದಿವಾಕರನೊಂದಿಗೆ ಬಾಳುವ ಪ್ರಸಕ್ತಿಯೇ ಬರುವುದಿಲ್ಲವೆಂದು ದೃಢವಾಗಿ ಚೈತ್ರ ಹೇಳಿದ್ದ ಮಾತುಗಳು ಸತೀಶ್ ಚಂದ್ರನಿಗೆ ನೆನಪಾಗಿತ್ತು. ಈ ವಿಚಾರ ಗೊತ್ತಿಲ್ಲದ ದಿವಾಕರ ನಟಿಸಲು ಪ್ರಯತ್ನಿಸಿ ಸೋತ. ಆದರೂ.. ಮನೆಯಲ್ಲಿ ತಂದೆ ಶ್ರೀಕಂಠಯ್ಯನವರ ಎದುರಲ್ಲಿ ಅವನ ಪ್ರತಾಪ ಇದ್ದೇ ಇತ್ತು, ಅವಳನ್ನು ಜೊತೆಯಲ್ಲಿ ಅಮೆರಿಕಾಗೆ ಕರೆದುಕೊಂಡು ಹೋಗುವ ಹೊಸ ಪ್ರಸ್ತಾಪವನ್ನಿಟ್ಟ. ಅಣ್ಣನ ಆರೋಗ್ಯಸ್ಥಿತಿ ಹದಗೆಟ್ಟಿದ್ದನ್ನು ಕಂಡು ಗಿರಿಜಮ್ಮನವರು ಸಹಾ ಪತಿ ಹಾಗೂ ಮಗನ ಮುಂದೆ ಕಣ್ಣೀರಿಟ್ಟರು. 


ದಿವಾಕರನಿಗೆ ಒಮ್ಮೆ ಚೈತ್ರ ಅವನ ಕೈಗೆ ಸಿಕ್ಕಿಬಿದ್ದರೆ ಅವಳಲ್ಲಿನ ಸ್ವಾಭಿಮಾನ, ಕೆಚ್ಚು ಆತ್ಮವಿಶ್ವಾಸ ಎಲ್ಲವನ್ನೂ ಹಾಳು ಮಾಡಿ ತನ್ನ ಕೈಯಲ್ಲಿ ಕುಣಿಯುವ ಕೀಲುಗೊಂಬೆ ಮಾಡಿಕೊಂಡು ಬಿಡುವ ಛಲ ಇನ್ನೂ ಹೆಚ್ಚಾಗುತ್ತಿತ್ತೇ ಹೊರತು ಕಡಿಮೆಯಾಗುತ್ತಲೇ ಇರಲಿಲ್ಲ. ತನ್ನ ಭವ್ಯ ಭವಿಷ್ಯದ ನಿರ್ಮಾಣದ ಹಂತದಲ್ಲಿ ತಾನೇ ಒಂದೆಜ್ಜೆ ಸೋತು ಮುಂದೆ ಹೋಗಲು ತೀರ್ಮಾನಿಸಿದರೂ.. ಅದು ಆತನಿಗೆ ಸೋಲಲ್ಲ ಗೆಲುವಿನ ಮೊದಲ ಹೆಜ್ಜೆ ಎಂದೆನಿಸುತ್ತಿತ್ತು.


ಅತ್ತೆಯಂತೂ ಹೋಗಿಯಾಗಿದೆ. ಈಗ ಮಾವನೂ ಅದೇ ಹಾದಿ ಹಿಡಿಯಬೇಕೇ ಎಂದವನ ಮಾತು ಕೇಳಿದವಳಿಗೆ ಅಂದಿನ ಘಟನೆಗಳೆಲ್ಲಾ ನೆನಪಾಗಿ ಮತ್ತಷ್ಟು ಕುಗ್ಗಿದಳು. ತಾನು ಬರದಿದ್ದರೆ ತಾಯಿ ಬದುಕಿರುತ್ತಿದ್ದರೇನೋ.. ತಂಗಿಯೂ ನೆಮ್ಮದಿಯಾಗಿ ಅವರ ಮಡಿಲಿನಲ್ಲಿರುತ್ತಿದ್ದಳು ಎಂಬ ಆಲೋಚನೆ ಚೈತ್ರಳಿಗೆ. 


ತನ್ನ ವಿದ್ಯಾಭ್ಯಾಸದ ಮುಂದುವರೆಸಲು ಸರ್ಟಿಫಿಕೇಟ್ ಗಳ ಅವಶ್ಯಕತೆ ಇರುವುದರಿಂದ ಮುಂಬೈಗೆ ಒಬ್ಬಳೇ ಫ್ಲೈಟ್ ನಲ್ಲಿ ಹೋಗಿದ್ದಳು. ಆದರೆ, ದಿವಾಕರ ದೆಹಲಿಗೆ ಹೋಗಿದ್ದ. ಅಲ್ಲದೇ ಆತನಿಗೆ ಕೀಲಿ ಕೊಡುವ ಮನಸ್ಥಿತಿಯೂ ಇರಲಿಲ್ಲ. ಆತನ ವಿಚಿತ್ರ ನಡವಳಿಕೆಯಿಂದ ಮತ್ತಷ್ಟು ಕುಗ್ಗಿದವಳ ಸಹಾಯಕ್ಕೆ ಬಂದ ಸತೀಶ್ ಚಂದ್ರ ಮನುಷ್ಯನಂತೆ ನಡೆದುಕೊಂಡದ್ದು ಇದ್ದುದರಲ್ಲಿ ಸಮಾಧಾನ ತಂದಿತ್ತು. ಆದರೂ.. ದಿವಾಕರನ ನಡೆಯಿಂದ ಸತೀಶ್ ಚಂದ್ರರ ಮನಸ್ಥಿತಿಯನ್ನು ಬೇರೆಯ ರೀತಿಯಲ್ಲಿ ಊಹಿಸಲಾಗುತ್ತಿರಲಿಲ್ಲ ಅವಳಿಗೆ.


ಮುಂದೆ ಭಾಷ್ಯಂರವರ ಸಲಹೆಯ ಮೇರೆಗೆ ಓದು ಮುಂದುವರಿಸಲು ಹಾಗೂ ಬಂಧನವನ್ನು ಕಡಿದುಕೊಳ್ಳಲು ಲಾಯರ್ ಬಳಿ, ಓಡಾಡುತ್ತಿದ್ದ ಸಂದರ್ಭದಲ್ಲಿ ಸ್ಮಿತಾಳಿಗೆ ಅದಾಗಲೇ ಏಳು ತಿಂಗಳು. ಆಕೆಯನ್ನು ತವರಿಗೆ ಕರೆತರಬೇಕಿತ್ತು. ಇದೆಲ್ಲದರ ನಡುವೆ ಮಗನ ವಿಚಾರ ಗೊತ್ತಿದ್ದರೂ ಶ್ರೀಕಂಠಯ್ಯ ಹಾಗೂ ಗಿರಿಜಮ್ಮನವರಿಗೆ ಮಗ-ಸೊಸೆಯ ಸಂಸಾರ ಹಾಳಾಗುವುದು ಬೇಡವಾಗಿತ್ತು. 


ಹೃದಯ, ಮನಸ್ಸು, ಕೌಟುಂಬಿಕಕ್ಕೆ ಸಂಬಂಧಿಸಿದ ಸಮಸ್ಯೆಗಳು ಅತ್ಯಂತ ಸೂಕ್ಷ್ಮ. ಒಂದು ಎಳೆ ತುಂಡಾಗಬೇಕಾದರೂ.. ಹತ್ತಾರು ಜನ ನೋಯಬೇಕು. ಆದರೆ, ಇದರ ನಡುವೆ ಚೈತ್ರ ಮತ್ತಷ್ಟು ಧೃಡಳಾಗುತ್ತಿದ್ದಳು. ಸತೀಶ್ ಚಂದ್ರ ಚೈತ್ರಳ ಸಹಾಯಕ್ಕೆ ನಿಂತದ್ದನ್ನು ಬೇರೆಯದ್ದೇ ರೀತಿಯಲ್ಲಿ ಅರ್ಥೈಸಿಕೊಂಡ ದಿವಾಕರನಿಗೆ ಹೇಳಿಕೊಳ್ಳಲಾಗದ ಭಾವಗಳು ಹಾಗೂ ಕೋಪ. 


ಈಗ ದಿವಾಕರನಿಗೆ ಆಶಾರಾಣಿಯ ಪರಿಚಯ ಮತ್ತಷ್ಟು ಹತ್ತಿರವಾಗಿತ್ತು ಅದೆಲ್ಲ ಪ್ರೇಮ, ಪ್ರೀತಿಯಲ್ಲ. ಹೊಂದಾಣಿಕೆ, ಸೇರುವಿಕೆ, ತಮ್ಮತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವಂತಹಾ ಸಂಬಂಧಗಳ ಒಪ್ಪಿಕೊಂಡಿದ್ದ ಕ್ಷಣಗಳು.


ದೃಢವಾದ ಚೈತ್ರ.. ಸ್ಮಿತಾಳ ಆರೈಕೆಗೆ ನಿಂತಳು. ಮತ್ತದು ಅಗತ್ಯವೂ ಇತ್ತು. ಗೆಲುವಾಗಿ ಓಡಾಡಿಕೊಂಡಿರುತ್ತಿದ್ದ ಸ್ಮಿತಾ ಕೆಲವೊಮ್ಮೆ ಮಂಕಾಗಿ ಬಿಡುತ್ತಿದ್ದಳು. ಸಂದೀಪನ ಮುಖದಲ್ಲಿಯೂ ಇತ್ತೀಚೆಗೆ ಅಶಾಂತತೆ. ದ್ವಾರಕಾನಾಥ್ ಮಗನ  ಭವಿಷ್ಯದ ವ್ಯವಸ್ಥೆ ಮಾಡಿಬಿಡಬೇಕೆಂದು ಹೊರಟಿದ್ದರು. ಆಗೆಲ್ಲಾ.. ಅಣ್ಣಂದಿರ ತೋರಿಕೆ, ಪ್ರೀತಿ-ವಿಶ್ವಾಸ ವ್ಯಂಗ್ಯದಂತೆನಿಸುತ್ತಿತ್ತು.


ಸಂಧಾನಗಳ ನಡುವೆಯೂ ಚೈತ್ರ ತನ್ನ ಮನಸ್ಸು ಬದಲಿಸಲಿಲ್ಲ. ಪ್ರೀತಿ-ವಿಶ್ವಾಸ, ಗೌರವ, ಅಭಿಮಾನ ಕಳೆದುಕೊಂಡ ವ್ಯಕ್ತಿಯೊಡನೆ ಸಂಸಾರಕ್ಕಿಂತ ಆತ್ಮಹತ್ಯೆಯೇ ಮೇಲು ಎಂಬ ಆಲೋಚನೆ ಅವಳಿಗಿತ್ತು. ಆದರೆ, ವಿಚ್ಛೇದನ ಪಡೆಯಬೇಕಾದರೆ ಸತ್ಯ ಸಂಗತಿಯನ್ನು ಕೋರ್ಟ್ ಮುಂದೆ ಇಡಬೇಕಾಗುತ್ತದೆ ಎಂದು ತಂದೆ ಹೇಳಿದಾಗ ಅವಳಿಗೆ ಶ್ರೀಕಂಠಯ್ಯ ಹಾಗೂ ಗಿರಿಜಮ್ಮನವಾರ ಸೌಮ್ಯಮುಖ ನೆನಪಿಗೆ ಬಂತು. ಪ್ರೀತಿಯ ಹಿರಿಯರನ್ನು ಹಾಗೂ ಮುದ್ದಿನ ತಂಗಿ ಸ್ಮಿತಾಳನ್ನು ತಾನೇ ಅಂಧಕಾರಕ್ಕೆ ನೂಕುತ್ತಿರುವೆನೇನೋ ಎಂಬ ಭಾವವೂ ಕಾಡಿತು.


ಕೆಲ ದಿನಗಳು ಕಳೆದ ನಂತರ ಭಾಷ್ಯಂರವರೇ "ದಿವಾಕರ ಪಶ್ಚಾತಾಪಪಟ್ಟರೆ ನೀನು ಹೋಗಲು ಸಿದ್ಧವೇ..?" ಎಂದು ದಿಢೀರ್ ಪ್ರಶ್ನೆ ಹಾಕಿದ್ದರು. ಚೈತ್ರಳಿಗೆ ಆತನ ಸಂಪೂರ್ಣ ಮನಸ್ಥಿತಿ ಹಾಗೂ ನಡವಳಿಕೆಯ ಅರಿವಿತ್ತು. ಅದಕ್ಕೆ ಆಕೆ ಸಿದ್ಧವಿರಲಿಲ್ಲವಾದರೂ.. ಪರಿಸ್ಥಿತಿಗಳು ಅವಳನ್ನು ಮತ್ತೆ ಅಲುಗಾಡಿಸುತ್ತಿತ್ತು. ತಂದೆಯ ದೃಢತೆಯನ್ನೇ ಸೋಲಕುವಂತೆ ಮಾಡಿದ್ದು ಯಾವುದು ಎಂದು ಅಚ್ಚರಿಯಾಯಿತು. 


ಸಮಾಜ, ಬಂದು-ಬಾಂಧವರು, ಸಂಪ್ರದಾಯ, ಹಕ್ಕು ಎಲ್ಲವೂ ಇದ್ದ ದಿವಾಕರನ ಬಳಿಯಲ್ಲಿ ಮಾನವೀಯತೆ ಇರಲಿಲ್ಲ. ಸ್ವಾರ್ಥವಿತ್ತು. ಚೈತ್ರಳಿಗೆ ಅದಾವುದೂ ಇರದಿದ್ದರೂ ಸ್ವಾಭಿಮಾನವಿತ್ತು . ಚೈತ್ರ ತನ್ನ ಮುಂದಿನ ಬದುಕಿನ ನಿರ್ಧಾರವನ್ನು ಹೇಗೆ ಮಾಡಿದಳು .?


ಭಾರತೀಯ ಹೆಣ್ಣು ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿಯಾದಾಗ ಅವಳಿಂದ ತೆಗೆದುಕೊಳ್ಳಲ್ಪಡುವ ತೀರ್ಮಾನ ಹೇಗಿರುತ್ತದೆ..?


ದಿವಾಕರನ ಈ ಸ್ವಭಾವ ಮತ್ತು ಮುಂದುವರಿಯಿತು. ಯಾವುದರ ವಿರುದ್ಧ ಚೈತ್ರ ಸೆಟೆದು ನಿಂತಿದ್ದಳು ನೈತಿಕತೆ ಹಾಳಾಗುವವರೆಗೂ ಅದನ್ನು ಬಿಡುವವನಲ್ಲ ಅವನು. ಅವನ ಮುಂದಿನ ಯೋಜನೆ ಹೇಗಿತ್ತು..?


ಭಾಷ್ಯಂರವರ ತೀವ್ರ ಅನಾರೋಗ್ಯದ ನಂತರ, ಹದಗೆಟ್ಟ ಪರಿಸ್ಥಿತಿಯಲ್ಲಿ ಚೈತ್ರ ಏನು ಮಾಡಿದಳು..? ಸ್ಮಿತಾ ಹಾಗೂ ಸಂದೀಪನ ಸಂಬಂಧ ಹೇಗಿತ್ತು..? ಎಲ್ಲದಕ್ಕೂ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಸುಚಿತ್ರ ಇಲ್ಲಿಯೂ ಹಾಗೆಯೇ ಅನಿಸಿದರೆ.. ಸುಚಿತ್ರಾ ಬದುಕು ಸಹ ಕಾಡುತ್ತದೆ. ಹೆಣ್ಣಿನ ಸ್ವಾಭಿಮಾನ ಹಾಗೂ ದೃಢನಿರ್ಧಾರಕ್ಕೆ ಸಮಾಜದಿಂದ ಬರುವ ಪ್ರತಿಕ್ರಿಯೆ ಹಾಗೂ ಅವಳ ಮನದ ತಲ್ಲಣಗಳೇ ಹೆಚ್ಚು ಕಾಡುತ್ತವೆ. ಕಾದಂಬರಿಯುದ್ದಕ್ಕೂ ತಲ್ಲಣವನ್ನು ಹುಟ್ಟಿಸುವ ಕಥಾವಸ್ತು ಹಾಗೂ ಭಾವಪೂರ್ಣತೆ ಕಥೆಯ ಅಂತ್ಯಕ್ಕೆ ಸ್ವಲ್ಪ ಸಮಾಧಾನ ತರುತ್ತದೆ. 


~ವಿಭಾ ವಿಶ್ವನಾಥ್

ನಂ. ೬೭ ಹ್ಯಾರಿಸ್ ರಸ್ತೆ (ಪುಸ್ತಕ ಯಾನ - 311)



ಪುಸ್ತಕದ ಶೀರ್ಷಿಕೆ : ನಂ. ೬೭ ಹ್ಯಾರಿಸ್ ರಸ್ತೆ

ಲೇಖಕರು : ನವರತ್ನರಾಮ್

ಪ್ರಕಾಶಕರು :  ಹೇಮಂತ ಸಾಹಿತ್ಯ

ಪ್ರಥಮ ಮುದ್ರಣ : 1990

ಎರಡನೇ ಮುದ್ರಣ : 2013 (ನನ್ನ ಓದಿಗೆ ಸಿಕ್ಕಿದ್ದು)


ಡಿಸೆಂಬರ್ 3 ನವರತ್ನರಾಮ್ ಅವರ ಜನ್ಮದಿನ. 

ನಂ. ೬೭ ಹ್ಯಾರಿಸ್ ರಸ್ತೆ ಇದು ನವರತ್ನರಾಮ್ ಅವರು ಬರೆದಿರುವ ಹಾಸ್ಯ ಶೈಲಿಯ ಕಾದಂಬರಿ. ಹಾಗೆಂದು, ಇದು ಸಂಪೂರ್ಣ ಹಾಸ್ಯಮಯ ಕಾದಂಬರಿಯಲ್ಲ. ಇಲ್ಲಿನ ಸಂಭಾಷಣೆಗಳು ಮುದ ನೀಡುವಂತೆ ಹಾಸ್ಯ ಶೈಲಿಯಲ್ಲಿ ರಚಿತವಾಗಿವೆ. ಹೂವು ದೇವರ ಸೇವೆಗೆ  ಪುಸ್ತಕದಲ್ಲಿರುವ ಮತ್ತೊಂದು ಕಾದಂಬರಿ ಇದು. (ಈಗಾಗಲೇ ಹೂವು ದೇವರ ಸೇವೆಗೆ ಕಾದಂಬರಿಯನ್ನು ಪರಿಚಯಿಸಿದ್ದೇನೆ)


ರಾಜೇಶನ ತಂದೆ ಕೋದಂಡರಾಮಯ್ಯನವರು ಶ್ರೀರಂಗಪಟ್ಟಣದ ಬಳಿಯ ಹಳ್ಳಿಯಲ್ಲಿ 60 ಎಕರೆ ಗದ್ದೆಯ ಒಡೆಯರಾಗಿ, ಬಂಗಾರದ ಬೆಳೆಯನ್ನೇ ಬೆಳೆಯುತ್ತಿದ್ದರೂ.. ಅವರು ತೃಪ್ತರಲ್ಲ. ಬೇರೆ ರೈತರ ಗದ್ದೆಗಳಲ್ಲಿ ಬೆಳೆಯುವುದಕ್ಕಿಂತ ಹೆಚ್ಚಾಗಿ ಕಾಳು ಬಂದರೂ.. ಅವರ ಕೊರಗು ತಪ್ಪುತ್ತಿರಲಿಲ್ಲ. ಆಸೆಯೆಂಬುದು ಅವರ ಜೀವನದಲ್ಲಿ ತಪ್ಪಿಯೇ ಇರಲಿಲ್ಲ. ಎಷ್ಟು ಬಂದರೂ ಸಾಲದು. ಆದರೆ, ಭೂಮಿತಾಯಿಯ ಬಗ್ಗೆ ಮಾತ್ರ ಬಹಳ ಅಭಿಮಾನ. ಬ್ಯಾಂಕಿಗಿಂತ ಭೂಮಿಯೇ ವಾಸಿ ಎಂಬ ಅವರ ಆಲೋಚನಾಲಹರಿ ಅಚ್ಚರಿ ಹುಟ್ಟಿಸುತ್ತದೆ. ಇದಷ್ಟೇ ಅಲ್ಲದೆ.. ಬಡ್ಡಿಗೆ ಹಣವನ್ನು ಸಾಲವಾಗಿ ಕೊಡುವ ವ್ಯವಹಾರವನ್ನೂ ಪ್ರಾರಂಭಿಸಿದರು. ಅದೂ ತಮ್ಮದೇ ಭೂಮಿಯನ್ನು ಉಳುವ ಬಡರೈತರಿಗೆ ವಿಪರೀತ ಬಡ್ಡಿಯ ದರದಲ್ಲಿ ಸಾಲ ಕೊಡುತ್ತಿದ್ದರು. 


ಗಂಡನ ಈ ಅತಿಯಾಸೆ ಹಾಗೂ ಜಿಪುಣಬುದ್ಧಿ ಪಾರ್ವತಮ್ಮನವರಿಗೆ ಹಿಡಿಸುತ್ತಿರಲಿಲ್ಲ. ಅವರು ಬುದ್ಧಿ ಹೇಳುತ್ತಿದ್ದರೂ ಕೋದಂಡರಾಮಯ್ಯನವರು ಮಾತ್ರ ಬದಲಾಗುವಂತಿರಲಿಲ್ಲ.


ಕೋದಂಡರಾಮಯ್ಯ ಹಾಗೂ ಪಾರ್ವತಮ್ಮ ದಂಪತಿಗಳಿಗೆ ಇರುವುದು ಒಬ್ಬನೇ ಮಗ ರಾಜೇಶ. ಆತನಿಗೆ ಕೊಡುವ ಹಣದ ವಿಚಾರದಲ್ಲಿಯೂ ಬಹಳ ಬಿಗಿಯಾಗಿದ್ದರು ಕೋದಂಡರಾಮಯ್ಯನವರು. ಹಣದ ಮೇಲೆ ಅತಿಯಾಸೆ ಇದ್ದವರು ಅದನ್ನು ಡಬಲ್ ಮಾಡಿಕೊಳ್ಳುವ ವ್ಯವಹಾರ ಮಾಡುತ್ತಿದ್ದ ಒಬ್ಬನ ಮೋಸದ ಜಾಲಕ್ಕೂ ಸಿಲುಕಿದರು. ಅದಾದ ನಂತರವಂತೂ ಅವರ ಲೇವಾದೇವಿಯ ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸಿ, ಬಡ್ಡಿಯನ್ನು ನಿಷ್ಕರುಣೆಯಿಂದ ವಸೂಲಿ ಮಾಡುವುದರಲ್ಲಿ ನಿಸ್ಸೀಮರಾದರು. 


ರಾಜೇಶ ಬಿ.ಎಸ್ಸಿ ಫೈನಲ್ ಓದುವಷ್ಟರಲ್ಲಿ ಸಾಹುಕಾರ್ ಕೋದಂಡಯ್ಯನವರಾಗಿದ್ದರು. ಸಾಹುಕಾರರೆಂದ ಮೇಲೆ ಬಸ್ಸು, ಲಾರಿಯಲ್ಲಿ ಓಡಾಡುವುದು ಸಾಧ್ಯವೇ..? ಹಾಗಾಗಿ ಅವರಿವರ ಮಾತು ಕೇಳಿ ಕಾರು ಮನೆಗೆ ಬಂದಿತು. ಫಿಯೆಟ್ ಕಾರು ಬಂದಮೇಲೆ ಹೊಸ ಸಮಸ್ಯೆಯಾದದ್ದು ಡ್ರೈವರ್ ನದ್ದು. ಆದರೆ, ಅದಕ್ಕೆಂದು ಯಾರನ್ನಾದರೂ ನೇಮಿಸಿಕೊಂಡರೆ ಸಂಬಳ ನೀಡಬೇಕಿತ್ತು. ಹಾಗಾಗಿ, ಅವರೇ ಕಲಿಯುವ ಆಲೋಚನೆ ಮಾಡಿದರೂ ಅದು ಸಾಧ್ಯವಿರಲಿಲ್ಲವಾದ್ದರಿಂದ.. ರಾಜೇಶನ ನೆನಪಾಗಿ ರಾಜೇಶನೇ ಕಾರು ಕಲಿತ. ಮುಂದೆ ಪೆಟ್ರೋಲ್ ಹೊರೆಯೆನ್ನಿಸಿತು. ಇದಾವುದರ ಲೆಕ್ಕಾಚಾರವೂ ಗೊತ್ತಿಲ್ಲದ ಸಾಹುಕಾರರಿಗೆ ಇದೆಲ್ಲವೂ ಹೊರೆಯಾಗತೊಡಗಿತ್ತು. ಆದರೂ ಕಾರು ಮಾರುವಂತಿರಲಿಲ್ಲ. ಇದು ಸಾಹುಕಾರರ ಆಲೋಚನಾ ಶಕ್ತಿ ಹಾಗೂ ನಡೆಯ ಒಂದು ಉದಾಹರಣೆಯಷ್ಟೇ..


ರಾಜೇಶನಿಗೆ ಮುಂದೆ ಇಂಜಿನಿಯರ್ ಆಗುವ ಆಸೆಯಿತ್ತು. ಆದರೆ, ಕೋದಂಡಯ್ಯನವರು ಡೊನೇಷನ್ ಕೊಡುವ ಮಾತೆತ್ತಿದರೆ ಹೌಹಾರುತಿದ್ದರು. ಆದರೆ, ಮೆರಿಟ್ ಸೀಟು ಗಳಿಸಿದ ರಾಜೇಶ ಬೆಂಗಳೂರಿಗೆ ಹೊರಟು ನಿಂತ. ಆದರೆ, ಕಾಲೇಜು ಹಾಸ್ಟೆಲ್ ಭರ್ತಿಯಾಗಿತ್ತು. ಈಗ ಉಳಿಯುವ ವ್ಯವಸ್ಥೆಗೆ ಅಷ್ಟು ಹಣ ಖರ್ಚು ಮಾಡಲು ಸಿದ್ದರಿರದ ಕೋದಂಡಯ್ಯನವರು ನಾಜೂಕಾಗಿಯೇ ಹೋಟೆಲ್ ನಲ್ಲಿ ಇರಬೇಡವೆಂದು.. ರೂಮು ಮಾಡಿಕೋ ಎಂದು ಬುದ್ಧಿವಾದವನ್ನು ಧಾರಾಳವಾಗಿ ಕೊಟ್ಟರು. ತಾಯಿ ಮಾತ್ರ ಯಾವುದಕ್ಕೂ ತಾಪತ್ರಯ ಮಾಡಿಕೊಳ್ಳಬೇಡ, ದುಡ್ಡು ಸಾಲದಾದಾಗ ನನಗೆ ಬರೆ ಎಂದು ಮುಚ್ಚಟ್ಟೆಯಿಂದ ಗುಟ್ಟಾಗಿ ಹಣ ಕೊಟ್ಟಿದ್ದರು. ತಾಯಿಯ ಮನಸೇ ಹಾಗಲ್ಲವೇ..?! 


ಇನ್ನು ಮುಂದೆ ರಾಜೇಶನ ವಿವರಗಳೇ ಹೆಚ್ಚು ಕಾದಂಬರಿಯಲ್ಲಿ. ರಾಜೇಶನಿಗೆ ಅದಾಗಲೇ ಕಿಚ್ಚಿಯೊಡನೆ ಸ್ನೇಹವಾಗಿತ್ತು. ಹುಡುಗಿಯರು ಸಹಾ ಕಿಚ್ಚಿಯೊಡನೆ ಯಾವ ಸಂಕೋಚವೂ ಇಲ್ಲದೆ ಸಲುಗೆಯಿಂದ ಬೆರೆಯುತ್ತಿದ್ದರು. ಇದೆಲ್ಲದಕ್ಕೂ ಅವನ ಸ್ನೇಹಮಯಿ ಹಾಗೂ ನಿಷ್ಕಲ್ಮಶವಾದ ಸ್ವಭಾವವೇ ಕಾರಣವಾಗಿತ್ತು. ಕಿಚ್ಚಿಯ ತಂದೆ ಚೆನ್ನಗಿರಿಯಲ್ಲಿ ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದವರು. ಸರ್ವಿಸಿನಲ್ಲಿದ್ದಾಗಲೇ ತೀರಿಕೊಂಡಿದ್ದರು. ತಾಯಿಗೆ ಪೆನ್ಷನ್ ಬರುತ್ತಿದ್ದರೂ.. ಕಿಚ್ಚಿಯ ಓದಿಗೆ ಆ ಹಣ ಸಾಕಾಗುತ್ತಿತ್ತು. ಇರುವ ಒಂದೆಕರೆ ಗದ್ದೆಯಿಂದ ತಾಯಿ ಬದುಕುತ್ತಿದ್ದರು. ಬಡತನದಲ್ಲಿದ್ದರೂ ಆತನ ತಾಯಿ ಆತನಿಗೆ ತೋರುತ್ತಿದ್ದ ಮಮತೆಯಂತೂ ಹೃದಯ ತುಂಬಿ ಬರುವಂತೆ ಮಾಡುತ್ತದೆ. 


ದೀಪಾ, ಕಿಚ್ಚಿ ಹಾಗೂ ರಾಜೇಶ ಆತನ ರೂಮಿಗೆ ಭೇಟಿ ನೀಡಿ, ಆತನ ಮನೆಯ ಬಗ್ಗೆ ತಿಳಿದುಕೊಂಡರು. ಕಿಚ್ಚಿಯ ಗೂಡು ಅರ್ಥಾತ್ ರೂಮು ಇದ್ದದ್ದು ವಿಜಯನಗರ ಬಡಾವಣೆಯಲ್ಲಿ. ಮತ್ತೆ ಅಲ್ಲಿಂದ ಹೊರಟ ರಾಜೇಶ ಮೆಜೆಸ್ಟಿಕ್ ಗೆ ಹೋಗುವ ಬಸ್ಸಿಗಾಗಿ ಕಾಯುತ್ತಿರುತ್ತಾನೆ. ಆಗ ಕಿಚ್ಚಿಯ ಮಾತು, ನಿಷ್ಕಪಟ ಸ್ವಭಾವ, ಹಾಸ್ಯಪ್ರಿಯತೆ, ಆದರಿಸಿದ ರೀತಿ, ತಾಯಿಯ ಕುರಿತ ಗೌರವ ಎಲ್ಲದರಲ್ಲೂ ಎಂತಹಾ ಶ್ರೀಮಂತಿಕೆ ಎಂದು ತನ್ನೊಡನೆ ಬೇಡವೆಂದರೂ ಹೋಲಿಕೆ ಮಾಡಿಕೊಂಡ. ಆದರೆ, ಅದೇ ಯೋಚನೆಯ ಅನ್ಯಮನಸ್ಕತೆಯಿಂದ ಹೊರಬರುವಷ್ಟರಲ್ಲಿ ಆತನಿಗಾದ ಅನುಭವ ವಿಲಕ್ಷಣವೆನಿಸಿತ್ತು. 


ಅಂತಹಾ ವಿಲಕ್ಷಣ ವ್ಯಕ್ತಿ ಈಗಲೂ ಬೆಂಗಳೂರಿನಂತಹಾ ನಗರದಲ್ಲಿ ಇದ್ದಾರೆಯೇ ಅಥವಾ ಹಿಂದಿನ ಶತಮಾನದವರು ಯಾರಾದರೂ ಬಂದಿದ್ದಾರಾ ಅಥವಾ ಅದು ಪ್ರೇತವೇ..? ಎಂದು ಅನುಮಾನಗೊಂಡ. ಆರಡಿ ಎತ್ತರವಿದ್ದ.. 60ಕ್ಕೂ ಹೆಚ್ಚು ವಯಸ್ಸಾಗಿದ್ದ ಅವರು ಹ್ಯಾಟ್ ಅನ್ನೂ ತೆಗೆಯದೆ, ಆಟೋದೊಳಗೆ ಕೂರಲು ತಡವರಿಸುವವರೆಗೂ ಆತನಿಗಾದ ಅನುಭವ ಆತನನ್ನು ಭಯಪಡಿಸಿತ್ತು. ಆತನ ಕಲ್ಪನೆಗಳಂತೂ ನಗೆ ತರಿಸುತ್ತವೆ. ಆದರೆ, ಆ ಮುದುಕರು ಕುಳಿತಿದ್ದ ಜಾಗದಲ್ಲಿ ಮಂದ ಬೆಳಕಿನಲ್ಲೂ ಹೊಳೆಯುವ ಚಿನ್ನದ ಪ್ರೇಮಿನ ಕನ್ನಡಕ, ಅದರ ಪಕ್ಕದಲ್ಲಿ ತೀರಾ ಹಳೆಯ ಕಾಲದ ದೊಡ್ಡ ಪರ್ಸು ಕಂಡವನು.. ಬಸ್ಸು ಬರುವ ಸದ್ದು ಕೇಳಿ ಜೀವ ಬಂದಂತಾಗಿ ಅವೆರಡನನ್ನೂ ತೆಗೆದು ಆತುರದಿಂದಲೇ ಜೇಬಿಗಿಟ್ಟುಕೊಂಡ. 


ನಂತರ, ಆತನ ಕುತೂಹಲ ಇನ್ನೂ ಹೆಚ್ಚಾಗಿ ಆ ಪರ್ಸನ್ನು ತೆಗೆದು ನೋಡಿದಾಗ ಅಲ್ಲಿ ಆತನಿಗೊಂದು ವಿಸಿಟಿಂಗ್ ಕಾರ್ಡ್ ಸಿಕ್ಕಿತ್ತು. ಅದರ ಮೇಲೆ 

ಆರ್‌. ಎಸ್. ಎಸ್‌ ರಾವ್ ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ (ಲಂಡನ್) 67 ಹ್ಯಾರಿಸ್ ರೋಡು, ಬೆಂಗಳೂರು ಕಂಟೋನ್ಮೆಂಟ್ ಎಂಬ ವಿಳಾಸವಿತ್ತು.


ಇದು ಅವರದ್ದೇ ಹೆಸರಾಗಿರಬಹುದಾ..? ಫಾರಿನ್ ರಿಟರ್ನ್ ಹಾಗೂ ವಿದ್ಯಾವಂತರಾಗಿ ಕಾಣುವ ಇವರು ಈಗಲೂ ಕಂಟೋನ್ಮೆಂಟಿನ ಹ್ಯಾರಿಸ್ ರಸ್ತೆಯಲ್ಲಿ ಇನ್ನೂ ಜೀವಂತವಾಗಿದ್ದಾರೋ ಇಲ್ಲ ದಿವಂಗತರೆಂಬ ಪಟ್ಟ ಪಡೆದು ಗೋರಿಯಲ್ಲಿದ್ದಾರೋ ಎಂಬ ಆಲೋಚನೆ. ಬ್ರಿಟಿಷರ ಕಾಲದಲ್ಲಿದ್ದ ಹ್ಯಾರಿಸ್ ರಸ್ತೆ ಈಗಲೂ ಬೆಂಗಳೂರು ದಂಡಿನ ಪ್ರದೇಶದಲ್ಲಿರಲು ಸಾಧ್ಯವೇ..? ಅಂತೂ ಈ ಆಲೋಚನೆಗಳನ್ನೇ ಹೊತ್ತವನಿಗೆ ಅರೆನಿದಿರೆಯಲ್ಲಿಯೂ ಅದೇ ಯೋಚನೆ. 


ಮಾರನೇ ದಿನ ಹಿಂದಿನ ದಿನದ ವಿಚಾರಗಳನ್ನೆಲ್ಲಾ ಕಿಚ್ಚಿಯ ಜೊತೆ ಹಂಚಿಕೊಳ್ಳುವಾಗ ಇದನ್ನೂ ಹಂಚಿಕೊಂಡ. ಅವರ ಕಲ್ಪನೆಗಳು ರೆಕ್ಕೆ-ಪುಕ್ಕ ಪಡೆಯತೊಡಗಿದವು. ಸಹಪಾಠಿಯಾಗಿದ್ದ ಗ್ರೇಸಿ ಈ ಹ್ಯಾರಿಸ್ ರಸ್ತೆ ಇದೆ ಎಂದಾಗ ಅಲ್ಲಿಗೆ ಹೋಗುವ ಮನಸ್ಸಾಗಿ ಆಟೋರಿಕ್ಷದಲ್ಲಿ ಹೊರಟವನಿಗೆ.. ಆಟೋರಿಕ್ಷಾದವನೇ ಎಲ್ಲಿದೆ ಆ ರೋಡು ಎಂದು ಅನುಮಾನಿಸಿದ. 


ಹಾಗಾದರೆ ನಂ. ೬೭ ಹ್ಯಾರಿಸ್ ರಸ್ತೆ ನಿಜಕ್ಕೂ ಇತ್ತೇ..? ಆ ಮುದುಕರ ಹಿನ್ನೆಲೆಯೇನು..? ರಾಜೇಶ ಹಾಗೂ ಕಿಚ್ಚಿಗೆ ಆದ ವಿಭಿನ್ನ ಅನುಭವಗಳೇನು..? ರಾಜೇಶನ ತಂದೆ ಬದಲಾದರೇ..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಾದಂಬರಿಯನ್ನು.


~ವಿಭಾ ವಿಶ್ವನಾಥ್

ಹುಣಸೇ ಚಿಗುರು ಮತ್ತು ಇತರ ಕತೆಗಳು (ಪುಸ್ತಕ ಯಾನ - 310)


ಪುಸ್ತಕದ ಶೀರ್ಷಿಕೆ : ಹುಣಸೇ ಚಿಗುರು ಮತ್ತು ಇತರ ಕತೆಗಳು

ಲೇಖಕರು : ದೀಪದ ಮಲ್ಲಿ

ಪ್ರಕಾಶಕರು : ಕಾವ್ಯಮನೆ ಪ್ರಕಾಶನ

ಪ್ರಥಮ ಮುದ್ರಣ : ಜುಲೈ 2024

ಪುಟಗಳು : 88

ಬೆಲೆ : 100 ರೂ.


ಇದು ದೀಪದ ಮಲ್ಲಿಯವರ ಚೊಚ್ಚಲ ಕಥಾ ಸಂಕಲನ. ಆದರೆ, ಮೊದಲ ಕಥಾ ಸಂಕಲನವೆಂದೆನಿಸುವುದಿಲ್ಲ. ನಿರೂಪಣೆ, ಭಾಷಾ ಶೈಲಿ ಹಾಗೂ ಕಥಾವಸ್ತುಗಳು ಓದುಗರನ್ನು ಹಿಡಿದಿಡುವುದನ್ನು ಸತ್ಯ. ಈ ಕಥಾಸಂಕನದಲ್ಲಿ 10 ಕಥೆಗಳಿವೆ. ಈ ಕಥೆಗಳ ಕಥಾವಸ್ತುಗಳ ಕುರಿತಾಗಿ ಕುತೂಹಲ ಮೂಡವಂತೆ ಪರಿಚಯಿಸಬಲ್ಲೆನಷ್ಟೇ.. ಏಕೆಂದರೆ ಈ ಕಥೆಗಳೊಳಗಿನ ಭಾವಗಳು ಪದಗಳಿಗೆ ನಿಲುಕದ್ದು. 


ಆಧಾರ್ :  ಪುಟ್ಟ ಪರ್ಸ್ ನಲ್ಲಿ ಒಂದಿಷ್ಟು ದುಡ್ಡು ಜೊತೆಗೆ ಆಧಾರ್ ಕಾರ್ಡ್. ಒಂದು ಕ್ಷಣ ಮೈಮರೆತು ತನುಜಾ ಹೆಸರ ಮೇಲೆ ಬೆರಳಾಡಿಸಿದಳು. ಐಡೆಂಟಿಟಿ ಇಲ್ಲದವಳ ಐಡಿ ಕಾರ್ಡ್.. ಆಧಾರವೇ ಇಲ್ಲದವಳ ಆಧಾರ್ ಕಾರ್ಡ್.. ತನ್ನ ದೇಹವನ್ನು ಇನ್ನಿಲ್ಲದಂತೆ ಪ್ರಯೋಗಶಾಲೆಯಾಗಿಸಿಕೊಂಡವಳ ಹೆಸರು ತನುಜಾ. ತನುಜಾಳಂತಹಾ ಎಷ್ಟೋ ಅಸಹಾಯಕ ಹೆಣ್ಣುಮಕ್ಕಳ ಕಥೆಯನ್ನು ತೆರೆದಿಡುತ್ತಿದೆ ಇದು. ಆಧಾರ್ ಕಾರ್ಡ್ ಕೇವಲ ಐಡೆಂಟಿಟಿ ಮಾತ್ರವಲ್ಲ ಅಸ್ತಿತ್ವ. ಹಾಗೆಂದು ಅಸ್ತಿತ್ವವೇ ಇಲ್ಲದವರ ಅಸಹಾಯಕತೆಯ ಇಕ್ಕಟ್ಟಿನ ಪರಿಸ್ಥಿತಿಯನ್ನು ಬಾಡಿಗೆ ತಾಯಿಯಾಗಲು ಪ್ರೇರೇಪಿಸುವಂತಹ ಕಥಾವಸ್ತು. ಆದರೆ, ಆ ಹೆಣ್ಣುಮಕ್ಕಳ ಮನದ ಭಾವನೆ, ತಲ್ಲಣ ಬಾಡಿಗೆ ತಾಯಿಯಂದಿರ ಹಿಂದಿನ ಬದುಕು ಹಾಗೂ ಮುಂದಿನ ಪರಿಣಾಮ ಎಲ್ಲವೂ ಶಕ್ತವಾಗಿ ಚಿತ್ರಿತವಾಗಿದೆ.


ಜಾಕ್ಸನ್ ತಿಪ್ಪೇಸ್ವಾಮಿ : ಜಾಕ್ಸನ್ ಗೆ ಕಸದೊಡನೆ ಅವಿನಾಭಾವ ನೆಂಟಸ್ತಿಕೆ. ಅವನ ಜಗತ್ತೇ ಕಸಮಯ. ಅವನ ಕನಸಲ್ಲೂ ಕಸ.. ಮನಸ್ಸೂ ಕಸದೆಡೆಗೆ. ಕಸ ಒಂದೇ ಅವನ ಆಸ್ತಿ ಎಂಬಂತಿದ್ದ ಜಾಕ್ಸನ್.  ಬದುಕು ಇದ್ದದ್ದೇ ಹಾಗೆ ಎಂದು ಬದುಕುತ್ತಿದ್ದವನಿಗೆ 500, 1000 ನೋಟುಗಳ ಕಂತೆ ಹಣ ದೊರೆತಿತ್ತು. ಅದೂ ಬರೋಬ್ಬರಿ ನಾಲ್ಕು ಲಕ್ಷ. ಆದರೆ ಎಲ್ಲಾ ನೋಟು ಬರೀ ಕಾಗದ ಬರೀ ಕಸವಾಗಿದ್ದು ಹಾಗೂ ಪ್ರಪಂಚದ ಕಣ್ಣಿಗೆ ಅದು ಕಂಡದ್ದು ಹಾಗೆ.. ಎಂದೂ ಅವನತ್ತ ತಿರುಗಿಯೂ ನೋಡದವರು ಸಹಾ ಇದೀಗ ಮಾತಿಗೆ ಮಾತು ಪೋಣಿಸುತ್ತಿದ್ದರು. ಜಾಕ್ಸನ್ ಜೊತೆಗೆ ಇಲ್ಲಿ ಗುರುಮೂರ್ತಿಯೊ ಕಾಣಸಿಗುತ್ತಾರೆ.


ಹುಣಸೇ ಚಿಗುರು : ಅವಳ ನೆನಪು ಶುರುವಾಗಿದ್ದೇ ಅಪ್ಪನ ಜೊತೆ ಸಂತೆಗೆಂದು ಹೊರಟಾಗ ಅಂದು ಬಿದ್ದ ಹುಣಸೇ ಚಿಗುರಿನ ಬೆತ್ತದ ಏಟಿನಿಂದ. ಅಲ್ಲಿಂದ ಅವಳ ತಂದೆ-ತಾಯಿ ಹಾಗೂ ಯೌವ್ವನದ ದಿನಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಗೌಡರ ಮನೆಯೇ ಆಸರೆ ಎಂಬಂತಿದ್ದವಳಿಗೆ ಅದು ತಪ್ಪಿ ಹೋಗುವ ಪರಿಸ್ಥಿತಿ ಜೊತೆಗೆ ಮೇಲೊಂದು ಅಪವಾದ. ಅದಲ್ಲದರ ಮೂಲ ಎಲ್ಲಿತ್ತು ಅಥವಾ ತಿಳಿಯದ ವಯಸ್ಸಿನ ತಪ್ಪಿಗೆ ಕಾರಣರು ಯಾರು..?


ಮೌನಂ ನ ಸಮ್ಮತಿ ಲಕ್ಷಣಂ : ಮನೆಯ ಮೊದಲ ಮಗಳು ಅವಳು. ಯೂನಿವರ್ಸಿಟಿ ಟಾಪರ್ ಆಗಿ ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದವಳಿಗೆ.. ಅಪ್ಪ ಅಳೆದು ತೂಗಿ ಡಾಕ್ಟರ್ ಓದಿದ ಹುಡುಗನಿಗೆ ಕೊಟ್ಟು ವಿವಾಹ ಮಾಡಿದ್ದರು. ಆದರೆ, ನಾಲ್ಕು ತಿಂಗಳ ಗರ್ಭಿಣಿಯನ್ನು ದುಡ್ಡಿಗಾಗಿ ಪೀಡಿಸಿ, ಕಾಡಿಸಿ ಹೊಟ್ಟೆಗೆ ಒದ್ದು ಮನೆಯಿಂದ ಆಚೆಗಟ್ಟಿದ್ದ. ಎರಡು ವರ್ಷ ಕಾಡಿಸಿ, ಸತಾಯಿಸಿ ಅಂತು ಡೈವೋರ್ಸ್ ಕೊಟ್ಟ. ಮಗು ಅಂದೇ ತೀರಿಕೊಂಡಿತ್ತು. ಇತ್ತ ಗಂಡನೂ ಇರಲಿಲ್ಲ. ವರದಕ್ಷಿಣೆ ಕಿರುಕುಳ ಅನುಭವಿಸಿದ ಎಷ್ಟೋ ಹೆಣ್ಣುಮಕ್ಕಳ ಕಥೆಯಂತೆ ಕಂಡರೂ.. ಅದಾದ ನಂತರದ ಕಥೆ ಇಲ್ಲಿನ ಪ್ಲಸ್ ಪಾಯಿಂಟ್. ಅವಳ ಹಿಂದೆ ಇದ್ದ ಇನ್ನೊಬ್ಬಳು ಹೆಣ್ಣುಮಗಳಿಗೆ ಮದುವೆಯಲ್ಲಿ ನಂಬಿಕೆಯೇ ಹೊರಟು ಹೋಗಿತ್ತು. ದೊಡ್ಡಮಗಳಿಗೆ ಮತ್ತೊಂದು ಮದುವೆ ಮಾಡಬೇಕೆನ್ನುವ ಅಮ್ಮ. ಆದರೆ, ಅಪ್ಪನ ಮನಸ್ಥಿತಿಯೇ ಬೇರೆ ಇತ್ತು. ತಂಗಿಗೆ ಅಪ್ಪನನ್ನು ಬಿಟ್ಟು ಉಳಿದ ಗಂಡಸರ ಬಗ್ಗೆ ಅಕ್ಕನ ಗಂಡನ ಬಗೆಗಿದ್ದ ತಾತ್ಸಾರವೇ.. ಅಪ್ಪನೂ ಹೊರಟ ನಂತರ ಮೌನಿಯಾಗುತ್ತಾ ಹೊರಟ ಅಕ್ಕನ ಮನದಲ್ಲೇನಿತ್ತು..? ಅಮ್ಮ ಹಾಗೂ ತಂಗಿಯರು ಅವಳನ್ನು ಅರಿತದ್ದು ಹೇಗೆ..?


ಮುಳ್ಕಟ್ಟಮ್ಮನ ಆಶೀರ್ವಾದ : ಕಾಳೇಗೌಡರ ಮನೆತನಕ್ಕೆ ಕಳಂಕವೆನಿಸಿದ್ದ ಮಗ ಲೋಕೇಶನನ್ನು ಕರೆದುಕೊಂಡು ಮುಳ್ಕಟ್ಟಮ್ಮನಿಗೆ ಉಡಿ ತುಂಬಲು ಹೋದರು ಗೌಡರ ಹೆಂಡತಿ ಲಕ್ಷ್ಮಮ್ಮ.

ಅಂದು ಬಂದಿದ್ದ ಒಂದು ಹೆಂಗಸರ ಗುಂಪಿನಲ್ಲಿ ಒಬ್ಬ ಹೆಣ್ಣು ಮಗಳಿಗೆ ತೊಂದರೆಯಾದಾಗ ಲೋಕೇಶನೇ ಹೋಗಿ ಬಾವಿಯಲ್ಲಿ ನೀರು ಸೇದಿ ತಂದ. ಆ ತಾಯಿ ನಿನ್ನ ಚೆನ್ನಾಗಿಟ್ಟಿರಲಿ ಕಂದ ಎಂದು ಹರಸಿ ಕೈ ಮುಗಿದಳು. ಲೋಕೇಶನ ತಾಯಿಗಂತೂ ಆ ಕ್ಷಣದಲ್ಲಿ ದೇವರೇ ಕಲ್ಲಿನಂತೆ ಅನಿಸಿ ಆಕೆಯೇ ನಿಜವಾದ ತಾಯಿ ಅನ್ನಿಸಿತ್ತು. 

ಅಷ್ಟಕ್ಕೂ ಲೋಕೇಶನಿಗೆ ಅಂಟಿದ್ದ ಕಳಂಕವೇನು..? ಮುಳ್ಕಟ್ಟಮ್ಮನ ಆಶೀರ್ವಾದ ದೊರೆಯಿತೇ..? ಓದಿ ನೋಡಿ. 


ಓಡಿ ಹೋದವಳು: ಇಂತಹಾ ಹಣೆಪಟ್ಟಿ ಹಚ್ಚಿಕೊಂಡ ಹೆಣ್ಣುಮಕ್ಕಳು ಅಲ್ಲಲ್ಲಿ ಕಾಣಬಹುದೇನೋ.. ಊರು ಬದಲಾದರೂ.. ಬದುಕು ಬದಲಾದರೂ.. ಹತ್ತಿರದವರ ಆಡುಮಾತಿನಲ್ಲಿ ಅದೇ ಅನ್ವರ್ಥನಾಮ ಉಳಿದು ಹೋಗಿ ಬಿಡುವುದು ವಿಪರ್ಯಾಸ. ಅಂತಹಾ ಹಣೆಪಟ್ಟಿ ಹಚ್ಚುವ ಹಿಂದಿನ ಕಥೆ ವ್ಯಥೆಯಾಗಿ ಬಿಚ್ಚಿಕೊಳ್ಳುತ್ತದೆ. 


ಒಂದು ಥ್ರೆಡ್ಡಿನ ಕಥೆ : ಉಷಾ ಮದುವೆಯಾಗಿ ಎರಡು ವರ್ಷವಾಗುತ್ತಲೇ ಮಕ್ಕಳಾಗಲಿಲ್ಲವೆಂದು ಬಾವಿಕಟ್ಟೆಗೆ ಹಾರಲು ಹೋಗಿದ್ದಳು. ತನ್ನನ್ನು ಬದುಕಿಸಿ ತಂದ ಗಂಡನ ಉದಾತ್ತತೆಗೆ ಪ್ರತಿಯಾಗಿ ತಾನೇ ನಿಂತು ಮತ್ತೊಂದು ಮದುವೆ ಮಾಡಿದಳು. ಮಗು ಹುಟ್ಟಿದಾಗಲೂ ಸಡಗರದಿಂದ ತಾನೇ ಬಾಣಂತನ ಮಾಡಿದಳು. ಸಂಬಳದ ದಿನ ಮಗುವಿಗೆ ತಂದ ಕಾಲಂದಿಗೆಯನ್ನೇ ಅವಳ ಗಂಡ ಬಿಚ್ಚಿಕೊಂಡು ಹೋಗಿದ್ದನು. ಕುಡಿದು ಬಂದವನಿಗೆ ಬೈದು ಮುಟ್ಟುವುದಕ್ಕೂ.. ಅವನ ಕೈ ಸ್ವಾಧೀನ ಹೋಗುವುದಕ್ಕೂ ಸರಿಯಾಗಿತ್ತು. ಮುಂದಿನದ್ದು ಬೇರೆಯದ್ದೇ ರೀತಿಯ ಆರೋಪ. ಒಂಟಿ ಎತ್ತಿನಂತೆ ದುಡಿಯುತ್ತಿದ್ದವಳ ಮನದ ಮಾತುಗಳು ನೆನಪುಗಳು ಥ್ರೆಡ್ಡಿನೊಂದಿಗೆ ತಳುಕಿ ಹಾಕಿಕೊಂಡದ್ದು ಹೇಗೆ..? ಏಕೆ..?


ಮಿಸೆಸ್. ರೀನಾ ರವೀಶ್: ರೀನಾ ಬದುಕನ್ನು ಎಂದು ಈಸಿಯಾಗಿ ತೆಗೆದುಕೊಂಡವಳಲ್ಲ. ಚ್ಯೂಸಿಯಾಗಿ ತೆಗೆದುಕೊಂಡವಳು. ಅವಳನ್ನು ಇಂಪ್ರೆಸ್ ಮಾಡುವುದು ಸುಲಭದ ಮಾತಾಗಿರಲಿಲ್ಲ. ಅಂತಹವಳ ಸಂಗಾತಿಯೇ ರವೀಶ್. ಅವರಿಬ್ಬರ ಸಾಂಗತ್ಯ ತೆರೆದುಕೊಂಡಂತೆಯೇ ಅವರಿಬ್ಬರ ಮೌನವೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಒಂದು ದೀರ್ಘ ಮೌನ ಹಾಗೂ ದೊಡ್ಡ ಕಂದಕ ಒಂದು ಉಳಿದು ಹೋದದ್ದಾದರೂ ಏಕೆ..? ಇಂದಿನ ಜನರೇಶನ್ ಗೆ ಬಹಳ ಹೊಂದಿಕೆಯಾಗುವಂತಹ ಕಥೆ ಇದು ಎಂದೆನಿಸಿತು. 


ವೆಲ್ವೆಟ್ ಪರ್ಸು :  ನಿಮ್ಮಮ್ಮ ತಲೆ ಸುತ್ತಿ ಬಿದ್ದಿದ್ದಾರೆ ಎಂದು ಅಮ್ಮ ಕೆಲಸ ಮಾಡುತ್ತಿದ್ದ ಮನೆಯಿಂದ ಬಂದ ಫೋನಿಗೆ ಸಿಗರೇಟ್ ಸೇದುತ್ತಿದ್ದ ಶ್ರೀಧರನಿಗೆ ಒಂದು ಕ್ಷಣ ಭಯವೇ ಆಗಿತ್ತು. ಅಮ್ಮ ಇಲ್ಲದ ಅವನ ಬದುಕನ್ನು ಅವನೆಂದಿಗೂ ಊಹಿಸಿಕೊಂಡಿರಲಿಲ್ಲ. ಅಮ್ಮ ಕೆಲಸ ಮಾಡುವ ಮನೆಗಳು ಎಲ್ಲಿದ್ದಾವೆಂದೂ ಅವನಿಗೆ ಗೊತ್ತಿರಲಿಲ್ಲ. ಅದೇ ನಂಬರಿಗೆ ಕರೆ ಮಾಡಿ ಅಡ್ರೆಸ್ ಪಡೆದವನು ಹೋಗಿ ನಿಂತದ್ದು ಪೊಲೀಸ್ ಸ್ಟೇಷನ್ ಗೆ. ಮುಂದಿನ ಕಥೆಯೇ ವಿಭಿನ್ನ. ಅಷ್ಟಕ್ಕೂ ಈ ವೆಲ್ವೆಟ್ ಪರ್ಸು ರಾಶಿ ನೋವಿನ ಸಂತೆಯ ಕೆಳಗೆ ಅಡಗಿತ್ತು. ಏನಿದರ ಮರ್ಮ..? ಓದಿ ನೋಡಿ.


ಡಿಯರ್ ಸರ್ : ಡೌನ್ ಸಿಂಡ್ರೋಮ್ ಇದ್ದ ತಮ್ಮ ಮಧುಸೂದನೊಟ್ಟಿಗೆ ಬದುಕುತ್ತಾ.. ತಮ್ಮನ್ನು ತಾವು ತಮ್ಮೊಳಗೇ ಕಳೆದುಕೊಂಡಿದ್ದ ಶೇಷಾದ್ರಿಯವರು ನಿವೃತ್ತಿಯಾಗಿ ಅದಾಗಲೇ ಆರು ವರ್ಷಗಳಾಗಿದ್ದವು. ಯೌವ್ವನದಲ್ಲಿಯೂ ಜೊತೆಗಾತಿ ಬೇಕು ಎಂದೇ ಅನ್ನಿಸಿರದ ದಿನಗಳು. ಇದೀಗ ತಮ್ಮ ಮನೆಯ ಟೆರೇಸಿಗೆ ಬಂದಿದ್ದ ಹುಡುಗಿಯ ಕಾಳಜಿಗೆ ಅವರ ಮನಸ್ಸು ಗೊಂದಲದಲ್ಲಿತ್ತು. ಅಲ್ಲದೇ ಅವರು ತಮ್ಮೊಳಗೆ ತಾವು ಕಳೆದು ಹೋಗಿದ್ದ ಬದುಕು ಬದಲಾಗಿತ್ತು. ಹಾಗಾದರೆ ಇಲ್ಲಿ ಮೂಡಿದ ಭಾವಗಳೇನು..?


ಹೆಚ್ಚಿನ ಕಥೆಗಳ ಭಾವ ನಮ್ಮೊಳಗೆ ಮೂಡುತ್ತಾ.. ಆಲೋಚನೆಗೆ ಹಚ್ಚುತ್ತವೆ. ಅದರಲ್ಲಿಯೂ ಹೆಣ್ಮನದ ಭಾವಗಳಂತೂ ಹೆಚ್ಚೇ ಕಾಡುತ್ತವೆ. ಪ್ರತಿ ಕಥೆಯೂ ವಾಸ್ತವದ ನೆಲೆಗಟ್ಟಿನಲ್ಲಿ ಚಿತ್ರಿತವಾಗಿದ್ದರೂ.. ಭಾವ ಪ್ರಧಾನವಾದವು ಎಂದು ನನಗನ್ನಿಸಿತು. ಚೆಂದದ ಕಥೆಗಳನ್ನು ನಿಮ್ಮದಾಗಿಸಿಕೊಳ್ಳಲು ಓದಿ ನೋಡಿ "ಹುಣಸೇ ಚಿಗುರು ಮತ್ತು ಇತರ ಕತೆಗಳು" 


~ವಿಭಾ ವಿಶ್ವನಾಥ್

ಅರಮನೆ ಗುಡ್ಡದ ಕರಾಳ ರಾತ್ರಿಗಳು (ಪುಸ್ತಕ ಯಾನ - 309)


ಪುಸ್ತಕದ ಶೀರ್ಷಿಕೆ : ಅರಮನೆ ಗುಡ್ಡದ ಕರಾಳ ರಾತ್ರಿಗಳು

ಲೇಖಕರು : ಗಿರಿಮನೆ ಶ್ಯಾಮರಾವ್ 

ಪ್ರಕಾಶಕರು : ಗಿರಿಮನೆ ಪ್ರಕಾಶನ

ಪ್ರಥಮ ಮುದ್ರಣ : 2016

ನಾನು ಓದಿಗೆ ಸಿಕ್ಕಿದ್ದು : 2021 ರ ಮುದ್ರಣ

ಪುಟಗಳು : 184

ಬೆಲೆ : 160 ರೂ. 


ಮಲೆನಾಡು ಎಂದರೆ ನೋಡಿದಷ್ಟೂ ಹಾಗೂ ಕೇಳಿದಷ್ಟೂ ಅದರ ಬಗೆಗೆ ಕುತೂಹಲ. ನಾವು ಮಲೆನಾಡಿನಲ್ಲಿ ವಾಸಿಸಬೇಕು ಎಂಬ ಆಸೆಯಂತೂ ಮೂಡದೆ ಹೋಗುವುದಿಲ್ಲ. ಆದರೆ, ಅಲ್ಲಿರುವವರಿಗೆ ಮಾತ್ರ ಪ್ರಕೃತಿಯ ರಹಸ್ಯಗಳು, ಪ್ರಕೃತಿಯ ಅಗಾಧತೆ ಅರಿವಾಗಿರುತ್ತದೆ. ಆದರೆ, ಅಲ್ಲಿ ಬದುಕುವುದು ನಾವು ಮೇಲ್ನೋಟಕ್ಕೆ ಕಂಡಷ್ಟು ಸುಲಭವಲ್ಲ. ಅದರಲ್ಲಿಯೂ ಪಶ್ಚಿಮಘಟ್ಟದ ಒಳನೋಟಗಳನ್ನು ತೆರೆದಿಡುವ ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕಥೆಗಳು ಸೀರೀಸ್ ನ ಒಂದೊಂದು ಪುಸ್ತಕಗಳೂ ವಿಭಿನ್ನವಾದ ನೋಟವನ್ನೇ ತೋರುತ್ತವೆ. ಇದು ಮಲೆನಾಡಿನ ರೋಚಕ ಕಥೆಗಳು ಸರಣಿಯ ಎರಡನೇ ಕೃತಿ. ಕರ್ಮವೀರ ವಾರಪತ್ರಿಕೆಯಲ್ಲಿಯೂ ಧಾರಾವಾಹಿಯಾಗಿ ಮೂಡಿಬಂದಿತ್ತು.


ಸಕಲೇಶಪುರದ ಕಡೆಗೆ ಅಲ್ಲಿನ ನೋಟ ದಕ್ಕಿಸಿಕೊಳ್ಳಲು ಹೊರಟವರಲ್ಲಿ ಕಾಡುಮನೆ ಎಂಬ ಹೆಸರು ಕೇಳಿದರೆ ಅಲ್ಲಿನ ಸೊಬಗು ಸೆಳೆಯುತ್ತದೆ. ನಾನು ಸಹ ಇಂಡಸ್ಟ್ರಿಯಲ್ ವಿಸಿಟ್ ನೆಪದಲ್ಲಿ ಅಲ್ಲಿನ ಟೀ ಎಸ್ಟೇಟ್, ಫ್ಯಾಕ್ಟರಿ ಹಾಗೂ ಗುಡ್ಡಕ್ಕೆ ಭೇಟಿ ನೀಡಿದ ಹಾಗೂ ಅಲ್ಲಿನ ಪ್ರಕೃತಿಯೊಡನೆ ಒಡನಾಡಿದ ನೆನಪುಗಳು ಇನ್ನೂ ಹಚ್ಚಹಸಿರು. ಆದರೆ, ಆ ರೋಮಾಂಚನವನ್ನು ದಾಟಿ ಪ್ರಕೃತಿಯ ಕರಾಳತೆಯನ್ನು ತೆರೆದಿಡುವ ಅರಮನೆ ಗುಡ್ದಕ್ಕೆ ಚಾರಣದ ನೆಪದಲ್ಲಿ, ಅದರ ಕರಾಳತೆಯ ಅರಿವಿಲ್ಲದೇ, ಪ್ರಕೃತಿಯ ನಿಗೂಢತೆಯ ಪರಿಚಯವೂ ಇಲ್ಲದೆ, ಅಲ್ಲಿ ಸ್ಥಳೀಯರ ಸಹಾಯವೂ ಇಲ್ಲದೆ, ತಾವೇ ಒಂದು ಕೈ ನೋಡಿಯೇ ಬರುತ್ತೇವೆ ಎಂದು ಹೊರಟವರಿಗೆ ಪ್ರಕೃತಿಯೇ ಪಾಠ ಹೇಳಿದ ಕಥೆ ಇಲ್ಲಿದೆ.


ಹೊಸದಾಗಿ ಮದುವೆಯಾದ ನವದಂಪತಿಗಳ ಎರಡು ಜೋಡಿ ಟ್ರಕಿಂಗ್ ನೆಪದಲ್ಲಿ ಇಲ್ಲಿಗೆ ಬಂದಿದ್ದರು. ಅಷ್ಟಕ್ಕೂ ಅರಮನೆಗುಡ್ಡಕ್ಕೆ ಭೇಟಿ ನೀಡುವುದು ಮೊದಲಿಗೆ ಅವರ ಪ್ಲಾನ್ ನಲ್ಲಿಯೇ ಇರಲಿಲ್ಲ. ಹಾಗೆಂದು.. ಇವರು ಸಣ್ಣ ಮಕ್ಕಳೇನಲ್ಲ. ಎರಡೆರಡು ಡಿಗ್ರಿ ಮಾಡಿಕೊಂಡಿದ್ದು ಜವಾಬ್ದಾರಿ ಇರುವವರು. ಕೀರ್ತಿ ಹಾಗೂ ಮಾಯ ದಂಪತಿಗಳಾದರೆ, ಶ್ರೀಕರ ಹಾಗೂ ದೀಪ್ತಿ ಮತ್ತೊಂದು ಜೋಡಿ. ಕೀರ್ತಿ ಒಂದು ಸಂಸ್ಥೆ ನಡೆಸುವ ಇಂಜಿನಿಯರ್, ಶ್ರೀಕರ 80000 ಸಂಬಳ ಪಡೆಯುತ್ತಿದ್ದ ಸ್ಥಿತಿವಂತ. ಮಾಯ ಸೈಕಾಲಜಿ ಎಂ.ಎಸ್ಸಿ ಓದಿದ್ದರೆ, ದೀಪ್ತಿಯದ್ದು ಎಂ.ಬಿ.ಎ ಆಗಿತ್ತು.


ಇವರ್ಯಾರಿಗೂ ಟ್ರಕ್ಕಿಂಗ್ ಹೊಸದಲ್ಲ. ಆದರೆ, ವಿವಾಹದ ಬಿಸಿಯಲ್ಲಿಯೇ ಮತ್ತೆ ಟ್ರಕ್ಕಿಂಗ್ ಹೊರಟಾಗ ಮೊದಲಿಗೆ ಅಪಸ್ವರವೆದ್ದಿದ್ದು ಮಾಯಾಳ ತಾಯಿ ಸುದೇವಿಯವರದ್ದು. ಮದುವೆಯಾದ ಮೇಲೆ ಇದನ್ನೆಲ್ಲಾ ನಿಲ್ಲಿಸಿ ಬಿಡಬೇಕೆಂದು ನಾಲ್ವರಿಗೂ ಅನ್ನಿಸಿತ್ತಾದರೂ.. ಸಾಹಸ ಪ್ರವೃತ್ತಿಗೆ ಒಗ್ಗಿದ್ದ ಮನಸ್ಸು ಅದೆಲ್ಲವನ್ನೂ ನಿಲ್ಲಿಸಲು ಸಿದ್ಧವಿರಲಿಲ್ಲ. ಮಕ್ಕಳಾದ ನಂತರ ಮತ್ತೆ ಹೋಗಲು ಕಷ್ಟವೆಂದೂ.. ಈಗಲೇ ಒಮ್ಮೆ ಹೋಗಿ ಬಂದುಬಿಡೋಣವೆಂದು.. ಯಾವಾಗಲೂ ಹತ್ತುವ ಬಯಲುಸೀಮೆಯ ಬೋಳು ಬೆಟ್ಟಗಳಿಗಿಂತ, ಮಲೆನಾಡಿನ ಬೆಟ್ಟ ಹತ್ತಿ ಅಲ್ಲಿನ ಮಳೆಯ ಅನುಭವ ಪಡೆಯೋಣವೆಂಬ ಆಲೋಚನೆಯಲ್ಲಿ ಎಲ್ಲರೂ ಜೊತೆಯಾಗಿದ್ದವರು. 


ಮಾಯಾಳ ತಂದೆ ಇದೆಕ್ಕೆಲ್ಲಾ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಮಾಯಾಳ ತಾಯಿ ಸುಧೇವಿಯವರಿಗೆ ಆತಂಕ. 

ವಿದ್ಯಾವಂತೆ, ರೂಪವತಿಯಾದ ಮಾಯ ಹಾಗೂ ಕೀರ್ತಿಯ ಪರಿಚಯ ಮಾಡಿಕೊಂಡದ್ದು ಹೀಗೆ ಟ್ರಕ್ಕಿಂಗ್ ನ ಹವ್ಯಾಸದಿಂದಲೇ.. ಅವರ ಮನೆಯಲ್ಲಿ ಏನಾದರೂ ತಿಳಿಯುತ್ತಾರೆನೋ ಎಂಬ ಆತಂಕ ಸುದೇವಿಯವರದ್ದು. ಆದರೆ, ಅಲ್ಲಿ ಹಾಗೇನಿಲ್ಲ. ಇದೇ ರೀತಿಯಲ್ಲಿ ದೀಪ್ತಿ ಹಾಗೂ ಶ್ರೀಕರರ ಮದುವೆಯೂ ನಡೆದಿತ್ತು. ಶ್ರೀಕರ ಕೀರ್ತಿಗೆ ಬಹಳ ಒಳ್ಳೆಯ ಸ್ನೇಹಿತ. ಆದರೆ, ಕೀರ್ತಿಯಷ್ಟು ತಾಳ್ಮೆಯಿರಲಿಲ್ಲ. ಆದರೆ, ಸ್ನೇಹಪರ. ಜೊತೆಗೆ ಮಾತಿನ ಕಲೆಯೂ ಸಿದ್ಧಿಸಿತ್ತು. ಅಷ್ಟಕ್ಕೂ, ಶಿರಾಡಿ ಘಾಟಿಯ ಭಾಗವನ್ನು ಆಯ್ಕೆ ಮಾಡಿಕೊಂಡದ್ದು ಕೀರ್ತಿಯಾದರೂ ಯೋಜನೆಯ ರೂವಾರಿ ಶ್ರೀಕರನೇ ಆಗಿದ್ದ. 


ಜೂನ್ ತಿಂಗಳ ಕೊನೆಯಲ್ಲಿ ಹೊರಟಾಗ ಬೆಂಗಳೂರಿನಲ್ಲಿ ಮಳೆಯ ಕುರುಹು ಇರಲಿಲ್ಲವಾದರೂ.. ಹಾಸನ ದಾಟುತ್ತಿದ್ದಂತೆಯೇ ಮಳೆಹನಿಗಳು ಮಲೆನಾಡಿಗೆ ಸ್ವಾಗತ ಕೋರಿದವು. ಹಾಸನ ಹಾಗೂ ಸಕಲೇಶಪುರ ಮಾರ್ಗದ ಚಿತ್ರಣವನ್ನು ಸವಿಯುತ್ತಾ ಹೋಗಬಹುದು. 


ಬೆಟ್ಟಗಳ ಸಾಲೇ ಕಂಡುಬಂದಾಗ ಯಾವ ಬೆಟ್ಟ ಹತ್ತುವುದೆಂದು ಎಲ್ಲರಿಗೂ ಆಯ್ಕೆ ಕಷ್ಟವಾಗಿತ್ತು. ಹೋಟೆಲ್ ಮ್ಯಾನೇಜರ್ ಬಳಿಯೇ ಶ್ರೀಕರ ಈ ವಿಷಯ ಪ್ರಸ್ತಾಪಿಸಿದಾಗ "ಈ ಮಳೆಗಾಲದಲ್ಲಿ ಟ್ರಕ್ಕಿಂಗ್ ಹೋಗುವುದು ಸರಿಯಲ್ಲ. ಅಲ್ಲದೇ ಅಂತಹಾ ಗುಡ್ಡಕ್ಕೆ ಕಾಡಿನ ಒಳಗೆಲ್ಲಾ ಹೋಗಬೇಕು. ಜೊತೆಯಲ್ಲಿ ಹುಡುಗಿಯರು" ಎಂದು ಆತಂಕ ಪಡಿಸಿದರಾದರೂ.. ಅವರ ಮನಸ್ಸು ಅರಿತಂತೆ ತೀರಾ ದೊಡ್ಡ ಅಥವಾ ಕ್ಲಿಷ್ಟವಾದ ಜಾಗವನ್ನು ಹೇಳದೆ ಕೊನೆಗೆ ಕಾಡುಮನೆ ಟೀ ಎಸ್ಟೇಟ್ ಹಾಗೂ ಅಲ್ಲೇ ಪಕ್ಕದಲ್ಲಿರುವ ದೊಡ್ಡ ಗುಡ್ಡವನ್ನು ಸೂಚಿಸಿದರು.


ಮಳೆ ಇದ್ದರೂ ಕಾಡುಮನೆ ಎಸ್ಟೇಟ್ ಗೆ ಬಂದವರು ಅಲ್ಲಿ ಗುಡ್ಡದ ಮೇಲೆ ಹತ್ತಿ ಪರಿಸರದಿಂದ ಆಕರ್ಷಿತರಾಗಿ ಅಲ್ಲೇ ನೇರದಲ್ಲಿ ಕಾಣುತ್ತಿದ್ದ ಮತ್ತೊಂದು ಬೆಟ್ಟಕ್ಕೆ ಹೋಗಲು ಅಣಿಯಾದರು. ಆದರೆ, ಅವರಿಗೆ ತಿಳಿದಿರದ ವಿಷಯ ಮಲೆನಾಡಿನಲ್ಲಿ ಕಾಣುವ ಬೆಟ್ಟಗಳು ಅಷ್ಟು ನೇರವೂ ಇರುವುದಿಲ್ಲ, ಹತ್ತಿರವೂ ಇರುವುದಿಲ್ಲ. ಅನುಭವಸ್ಥರಾದ ಚಾರಣಿಗರನ್ನೇ ಅರಣ್ಯ ದಾರಿ ತಪ್ಪಿಸುವಾಗ.. ಸಿದ್ಧತೆಯೇ ಇಲ್ಲದೆ ಇವರು ಹೊರಟಿದ್ದು ಅರಮನೆ ಗುಡ್ಡ ಎಂಬ ಮೃತ್ಯುದೇವತೆಯ ಮಡಿಲೊಳಗೆ. ಆ ಕುರಿತು ಮೊದಲೇ ಪೇಪರ್ ನಲ್ಲಿ ಬಂದಿದ್ದ ವಿಷಯವನ್ನು ಓದಿದ್ದರಾದರೂ.. ಅದು ಅರಮನೆ ಗುಡ್ಡವೇ ಎಂಬ ಚಿಕ್ಕ ಯೋಚನೆಯೂ ಇಲ್ಲದೆ ಕಬ್ಬಿನಾಲೆ ಅರಣ್ಯದೊಳಗೆ ಕಾಲಿಟ್ಟಿದ್ದರು.


ಕಾಡುಮನೆಯ ಗುಡ್ಡದ ಮೇಲೆ ಮಾಯಳೇನೋ ಸಿಗ್ನಲ್ ಸಿಗುತ್ತಿದ್ದಂತೆ ತನ್ನ ತಾಯಿಗೆ ಕರೆ ಮಾಡಿದ್ದಳು. ದೀಪ್ತಿ ಆ ಗುಡ್ಡಕ್ಕೆ ಹೋದ ನಂತರ ಮಾಡೋಣ ಎಂದು ನಿರ್ಲಕ್ಷಿಸಿದ್ದಳು. ಆದರೆ, ದೀಪ್ತಿಯ ತಾಯಿ ಭವತಾರಿಣಿಯವರಿಗೆ ಮಗಳು ಕರೆ ಮಾಡದೆ ಹೋದದ್ದು ಆತಂಕ ತಂದಿತ್ತು. ಶ್ರೀಕರನ ತಾಯಿಗೆ ಕರೆ ಮಾಡಿದರೂ ಅವರು ಗತ್ತಿನಲ್ಲಿ ಅದನ್ನು ದೊಡ್ಡ ವಿಷಯವೆಂಬಂತೆ ತೆಗೆದುಕೊಳ್ಳಲೇ ಇಲ್ಲ. ಅಷ್ಟಕ್ಕೂ... ಅವರಿದ್ದದ್ದೇ ಹಾಗೆ. ಆದರೆ, ಆ ಸಮಯಾದಲ್ಲಿ ಈ ಸಮಸ್ಯೆ ಭವತಾರಿಣಿಯವರು ಅಂದುಕೊಂಡಷ್ಟು ದೊಡ್ಡದಾಗಿರಲಿಲ್ಲವೆಂಬುದು ಮಾಯಾಳ ತಾಯಿ ಸುದೇವಿಯವರಿಗೆ ಮಾಡಿದ ಕರೆಯಿಂದ ಅವರಿಗೆ ಅನ್ನಿಸಿದರೂ.. ನಂತರ ಅವರ ಆತಂಕವೇ ನಿಜವಾದದ್ದು ವಿಪರ್ಯಾಸ. 


ಮಧ್ಯಾಹ್ನದೊಳಗೆಲ್ಲಾ ಆ ಗುಡ್ಡವನ್ನು ಮುಟ್ಟಿ ಹೊರಡೋಣವೆಂದು ಹೊರಟವರಿಗೆ ಪ್ರಕೃತಿ ಸವಾಲಾಗತೊಡಗಿತ್ತು. ಶ್ರೀಕರ ಹೊಳೆಯಲ್ಲಿ ಆಳ ನೋಡಿ ದಾಟಲು ಇಳಿದವನು ದಿಕ್ಸೂಚಿಯನ್ನು ಕಳೆದುಕೊಂಡಿದ್ದ. ಮೊಬೈಲ್ ನೆಟ್ವರ್ಕ್ ಅಂತೂ ಅಲ್ಲಿ ಕನಸಿನ ಮಾತಾಗಿತ್ತು ಇನ್ನು ಹೋಗುವ ಹಾದಿಯ ಪರಿಚಯವಿಲ್ಲದೆ, ಬರುವ ಹಾದಿಯನ್ನು ಗುರುತಿಸಿಕೊಳ್ಳದೆ, ಮತ್ತಷ್ಟು ಸಮಸ್ಯೆಯನ್ನು ಮೈಮೇಲೆಳೆದುಕೊಂಡಿದ್ದರು. ರಾತ್ರಿ ಉಳಿಯಲು ಜಾಗದ ಸಮಸ್ಯೆ. ಊಟವಿಲ್ಲದೆ, ಶೀತಕ್ಕೆ ಮಳೆಗೆ ಅದಾಗಲೇ ಒದ್ದಾಡುತ್ತಿದ್ದರು. ಹಿಂದಿರುಗಿ ಬರಲು ಸಹಾ ಯಾರೂ ನೆರವಿಗಿಲ್ಲದೆ ಮತ್ತಷ್ಟು ಸಾಹಸ ಮಾಡುತ್ತಾ ದಾರಿ ತಪ್ಪಿದ್ದರು. ಕಾಡುಪ್ರಾಣಿಗಳ ಹಾಗೂ ನಿಸರ್ಗದ ಸವಾಲುಗಳನ್ನು ನೀವೇ ಓದಿ ಅರಿಯಿರಿ. ಹಾಗೆ ಅವರು ಹೋಗಿ ಸೇರಿದ್ದು ಅರಮನೆ ಗುಡ್ಡದ ತಪ್ಪಲಿನ ಮಣಿ ಬೀಗತಿ ದೇವಾಲಯವನ್ನು. 


ಶ್ರೀಕರನ ತಂದೆ ಚಂದ್ರಶೇಖರ್ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದವರು. ಮಕ್ಕಳಿಂದ ಎರಡನೇ ದಿನಕ್ಕೂ ಕರೆ ಬಾರದಾಗ ಗಾಬರಿಗೊಂಡ ಮಾಯ ಹಾಗೂ ದೀಪ್ತಿಯ ತಂದೆ ಶ್ರೀಕರನ ತಂದೆಯನ್ನು ಸಂಪರ್ಕಿಸಿದರು. ಅತ್ತಲಿನಿಂದ ಬಂದ ತಣ್ಣಗಿನ ಪ್ರತಿಕ್ರಿಯೆ ನಂತರ ಅವರನ್ನೇ ಪರಿತಪಿಸುವಂತೆ ಮಾಡಿತ್ತು. ಆದರೆ, ಅವರಿಗಿದ್ದ ಸಂಪರ್ಕದಿಂದ ಸಕಲೇಶಪುರದ ರೇಂಜರ್ ಕರಿಯಪ್ಪನವರ ಸಂಪರ್ಕ ಹಾಗೂ ಸಹಾಯ ದೊರೆತಿತ್ತು. 


ಶ್ರೀಕರ, ದೀಪ್ತಿ, ಕೀರ್ತಿ ಹಾಗೂ ಮಾಯರ ಪರಿಸ್ಥಿತಿ ಹೇಗಿತ್ತು..? ಮನೆಯವರನ್ನು ತಲುಪಲು ಅವರು ಮಾಡಿದ ಪ್ರಯತ್ನಗಳೇನು..? ಕಾಡಿನಲ್ಲಿ ದಾರಿ ಹುಡುಕಲು ಅವರು ಮಾಡುತ್ತಿದ್ದ ಪ್ರಯತ್ನಗಳು ಹೇಗಿದ್ದವು..? ಕರಿಯಪ್ಪನವರ ಮೂರು ತಂಡಗಳಲ್ಲಿ ಯಾವ ಯಾವ ತಂಡದ ಕಾರ್ಯಾಚರಣೆ ಯಾವ ಯಾವ ಬಗೆಯದ್ದಾಗಿತ್ತು..? ಸ್ಥಳೀಯರ ಸಹಾಯ ಒದಗಿ ಬಂದದ್ದು ಹೇಗೆ..? ಅರಮನೆ ಗುಡ್ಡದ ಪರಿಸರದಿಂದ ಅವರೆಲ್ಲರೂ ಪಾರಾಗಿ ಬಂದರೇ ಅಥವಾ ಅಪಾಯಕ್ಕೆ ಒಳಗಾದರೇ..? ಹೆಣ್ಣುಮಕ್ಕಳ ಮನೆಯಲ್ಲಿ ಅವರು ಒಬ್ಬೊಬ್ಬರೇ ಮಕ್ಕಳು. ಅವರ ತಾಯಂದಿರ ತಲ್ಲಣಗಳು ಹೇಗಿದ್ದವು..? ಬೇಡವೆಂದರೂ ಎಲ್ಲರನ್ನೂ ಕರೆತಂದು ಮುಂದಾಳುವಾದ ಶ್ರೀಕರನ ಮನಸ್ಸಿನ ಭಾವಗಳು ಹೇಗಿದ್ದವು.. ಕೀರ್ತಿಯದ್ದೇನೂ ತೀರಾ ವಿಭಿನ್ನವಾಗಿರಲಿಲ್ಲವಾದರೂ.. ಇದ್ದುದರಲ್ಲಿ ಕಾಯ್ದುಕೊಂಡ ತಾಳ್ಮೆ ಹಾಗೂ ತೆಗೆದುಕೊಳ್ಳುವ ನಿರ್ಧಾರಗಳು ಸಮಯೋಚಿತ ಎನಿಸುತ್ತವೆ. ಮಾಯಾಳ ಮನಶಾಸ್ತ್ರ ಇಲ್ಲಿ ಯಾವ ಉಪಯೋಗವಾಯಿತು..? ಎಲ್ಲವನ್ನೂ ತಿಳಿಯಲು ಓದಿ ಗಿರಿಮನೆ ಶ್ಯಾಮರಾವ್ ಅವರ "ಅರಮನೆ ಗುಡ್ಡದ ಕರಾಳ ರಾತ್ರಿಗಳು" ಕೃತಿಯನ್ನು. 


ಈ ಕಥೆ ಪ್ರಕೃತಿಯ ಪಾಠವನ್ನು ತೆರೆದಿಡುತ್ತದೆ. ವಿವಿಧ ಪ್ರಾಣಿಗಳನ್ನೇ ಭಯಂಕರವೆಂದುಕೊಂಡಿರುವ ನಮಗೆ ಸೀಳು ನಾಯಿಗಳ ವಿವರವ ಮೈನಡುಕ ಹುಟ್ಟಿಸುತ್ತದೆ. ಬೆಟ್ಟ-ಗುಡ್ಡಗಳ ಪ್ರಕೃತಿ ಚಿತ್ರಣ, ಊರು, ಪರಿಸರ ಎಲ್ಲವೂ ನೈಜವಾಗಿದೆ.  


~ವಿಭಾ ವಿಶ್ವನಾಥ್

ಮೂರು ನೀಳ್ಗತೆ (ಪುಸ್ತಕ ಯಾನ - 308)


ಪುಸ್ತಕದ ಶೀರ್ಷಿಕೆ : ಮೂರು ನೀಳ್ಗತೆ

ಲೇಖಕರು : ಉದಯ್ ಜಾದೂಗಾರ್, ಗಾಯತ್ರಿ ರಾಜ್, ಉಷಾ ನರಸಿಂಹನ್

ಪ್ರಕಾಶಕರು : ರಾಜ್ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2020

ಪುಟಗಳು : 104

ಬೆಲೆ : 100 ರೂ.


ಮೂರು ನೀಳ್ಗತೆ ಕಥಾ ಸಂಕಲನವು ಮೂವರು ವಿವಿಧ ಲೇಖಕರು ಬರೆದಿರುವ ಮೂರು ನೀಳ್ಗತೆಗಳ ಸಂಕಲನ. ಈ ಕಥಾ ಸಂಕಲನದ ಶೀರ್ಷಿಕೆ ಬೇರೆಯದಿದ್ದರೆ ಇನ್ನೂ ಆಕರ್ಷಕವಾಗಿರುತ್ತಿತ್ತು ಎಂದೆನಿಸಿತು.


ಕಥೆಯ ಶೀರ್ಷಿಕೆ : ದಗಲ್ಬಾಜಿ 

ಲೇಖಕರು : ಉದಯ್ ಜಾದುಗಾರ್


ಅಮೆರಿಕಾದಲ್ಲಿಯೇ ಕುಟುಂಬ ಸಮೇತ ನೆಲೆಸಿದ್ದ ಶಾಮು ಅಲ್ಲಿಯೇ ಇದ್ದ ಕಂಪನಿಯೊಂದರ ಮುಖ್ಯ ಅಧಿಕಾರಿಯಾಗಿದ್ದು.. ಈಗ ಅವನ ಬಳಿ ಹಣ ದಂಡಿಯಾಗಿತ್ತು. ಅರಮನೆಯಂತಹಾ ಮನೆ. 10 ತಲೆಮಾರು ಕೂತು ತಿಂದರೂ ಕರಗದಂತಹಾ ಸಂಪತ್ತು. ಆದರೂ.. ಅವನ ಮನಸ್ಸಲ್ಲೊಂದು ಚಿಂತೆ ಕಾಡುತ್ತಲೇ ಇತ್ತು. ಅದು ಸದಾನಂದನದ್ದು.. 

ಇತ್ತೀಚೆಗಂತೂ ಆತ ಕನಸಲ್ಲಿ ಬಂದು ನೆನಪಾಗುತ್ತಿದ್ದ. ಸದಾನಂದ ಆತನಿಗಿಂತ ವಯಸ್ಸಲ್ಲಿ ಮೂರು ವರ್ಷ ದೊಡ್ಡವನಾದರೂ.. ಸ್ನೇಹ ಹಾಗೂ ಸಲುಗೆಯಿಂದ ಜೊತೆಗಾರನಾಗಿದ್ದ. ಅಕ್ಕಂದಿರು, ತಾಯಿ- ತಂದೆಯನ್ನು ಚಿಕ್ಕಂದಿನಲ್ಲಿಯೇ ಕಳೆದುಕೊಂಡಿದ್ದ ಶಾಮುವನ್ನು ಸದಾನಂದನ ತಾಯಿ ಗಿರಿಜಮ್ಮನವರೇ ತಾಯಿಯಂತೆ ನೋಡಿಕೊಂಡಿದ್ದರು. 


ಗಿರಿಜಮ್ಮನವರ ಗಂಡ.. ಹೆಂಡತಿ, ಮಗನನ್ನು ಬಿಟ್ಟು ಬೇರೆಯವರ ಜೊತೆ ಓಡಿ ಹೋಗಿದ್ದ. ಕೂಲಿ ಮಾಡಿ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರೂ.. ತಬ್ಬಲಿಯಾದವನನ್ನು ತಂದು ಮನೆಯಲ್ಲಿ ಸಾಕಿಕೊಂಡಿದ್ದರು. ಸದಾ ಆಗಿನಿಂದಲೂ ಸ್ವಲ್ಪ ಪೋಕರಿ. ಆದರೆ, ಶಾಮುವಿನ ವಿಚಾರಕ್ಕೆ ಬಂದರೆ ಥೇಟ್ ಅಣ್ಣನಂತೆಯೇ ರಕ್ಷಣೆಗೆ ನಿಲ್ಲುತ್ತಿದ್ದ. ಚೆನ್ನಾಗಿ ಓದುತ್ತಿದ್ದ ಶಾಮು ಸ್ಕಾಲರ್ಶಿಪ್ ಸಹಾಯದಿಂದ ಮುಂದುವರಿದು ಕನಸುಗಳ ಬೆನ್ನೇರಿ, ಸವಾಲುಗಳನ್ನು ಸ್ವೆಕರಿಸಿ ಅಮೆರಿಕಕ್ಕೆ ಹಾರಿದ. ಹೈಸ್ಕೂಲು ಬಿಟ್ಟವನ್ನು ಇದುವರೆಗೂ ಹಳ್ಳಿಗೆ ಹೋಗಿರಲೇ ಇಲ್ಲ. ಸದಾನ ಕುರಿತು ಗಿರಿಜಮ್ಮನವರ ಕುರಿತು ಯಾವ ಮಾಹಿತಿಯೂ ಆತನ ಬಳಿ ಇರಲಿಲ್ಲ. ಈಗ ತನ್ನ ಬೇರನ್ನು ಹುಡುಕಿಕೊಂಡು.. ಹೆಂಡತಿಯೊಡನೆ, ಕೈತುಂಬಾ ಉಡುಗೊರೆಗಳನ್ನು ತೆಗೆದುಕೊಂಡು ಮತ್ತೆ ತನ್ನ ಊರಿಗೆ ಧಾವಿಸಿದವನಿಗೆ ತಿಳಿದದ್ದು ಈಗ ಸದಾ ಅಲ್ಲಿರಲಿಲ್ಲ. ಗಿರಿಜಮ್ಮ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಮೊದಲೇ ಅಂದಾಜಾಗಿದ್ದಾದರೂ.. ಸದಾನಂದನನ್ನು ನೋಡಿ ಆತನಿಗೆ ಬದುಕಿಗೆ ದಾರಿ ಮಾಡಿಕೊಡಬೇಕಿದ್ದರೆ ಅದನ್ನು ಮಾಡೋಣವೆಂದು ಹೋದವನಿಗೆ ಸಿಕ್ಕದ್ದು ಒಂದರಿಂದ ಮತ್ತೊಂದೆಡೆಗೆ ಬೇರು ಕಿತ್ತಿದ್ದ ಸದಾನಂದನ ಜಾಡುಗಳಷ್ಟೇ..


ಈಗಾಗಲೇ ದಗಲ್ಬಾಜಿ ಎಂದು ಎಲ್ಲೆಡೆ ಮೋಸ ಮಾಡುತ್ತಾ.. ಒಂದೂರಿನಿಂದ ಮತ್ತೊಂದು ಊರಿಗೆ ಹೋಗುತ್ತಿದ್ದವನ ಜಾಡು ವಹಾಲೆ ಎಂಬಲ್ಲಿ ಸಿಕ್ಕಿ, ಅಲ್ಲಿನ ಕಾಲುದಾರಿಯಲ್ಲಿಯೂ ಹೋಗುವ ಸಾಹಸ ಮಾಡಿದ್ದ ಶಾಮು. ಆದರೆ, ಸಂಧರ್ಭವಶಾತ್, ಶಾಮು ಹಾಗೂ ಸದಾನಂದ ಇಬ್ಬರೂ ಎದುರು-ಬದುರಾದ ನಂತರ ಶಾಮುವಿನ ಮನಸ್ಸಿನ ಭಾವನೆಗಳು ಬದಲಾಗಿದ್ದವು. ಅದಕ್ಕೆ ಕಾರಣವಾದರೂ ಏನು .? ಸದಾನಂದನಿಗೆ ಶಾಮುವಿನ ಗುರುತು ಸಿಕ್ಕಿತೇ..? ಶಾಮು ಕೇವಲ ಸ್ನೇಹದ ಕಾರಣಕ್ಕಾಗಿ ಮಾತ್ರ ಸದಾನಂದನನ್ನು ಹುಡುಕಿಕೊಂಡು ಹೊರಟಿದ್ದನೇ ಅಥವಾ ಅದರ ಹಿಂದೆ ಬೇರೆ ಏನಾದರೂ ಹುನ್ನಾರವಿತ್ತೇ..? ಕಥೆ ಓದಿ ನೋಡಿ. 


ಕತೆಯ ಶೀರ್ಷಿಕೆ : ಸೆಕೆಂಡ್ ಚಾನ್ಸ್ 

ಲೇಖಕರು : ಗಾಯತ್ರಿ ರಾಜ್ 


ಮಡಿಕೇರಿಗೆ ವರ್ಗವಾಗಿ ಬಂದಿದ್ದ ರಾಜ್ ಗೆ ಅಂದು ಆಕಸ್ಮಿಕವಾಗಿ ಚಂದ್ರು ಸಿಗದೆ ಹೋಗಿದ್ದರೆ.. ಮತ್ತೆ ಆಶಾ ಎದುರಾಗುವ ಪ್ರಮೇಯವೇ ಇರುತ್ತಿರಲಿಲ್ಲ. ಆಕಸ್ಮಿಕವಾಗಿ ಸಿಕ್ಕ ಚಂದ್ರು ನೋಡಿದರೂ ನೋಡದಂತೆ ಓಡುತ್ತಿದ್ದ. ಆದರೆ, ರಾಜ್ ಆತನನ್ನು ಮಾತನಾಡಿಸಿ ಆಶಾ ಬಗ್ಗೆ ವಿಚಾರಿಸಿದ. ಮನಸ್ಸು ತಡೆಯದೆ, ದುಂಬಾಲು ಬಿದ್ದು ಮನೆಗೆ ಕರೆದುಕೊಂಡು ಹೋಗುವಂತೆ ಕೇಳಿದ್ದ. ಕಾಕತಾಳೀಯವೆಂದರೆ ಅಲ್ಲಿಂದ 5 ನಿಮಿಷದ ಹಾದಿಯಲ್ಲಿ ರಾಜ್ ನ ಮನೆ. ರಾಜ್ ಗೆ ಚಂದ್ರು ಕಾಲೇಜಿನಲ್ಲಿ ಆತನಿಗಿಂತ ಮೂರು ವರ್ಷ ಸೀನಿಯರ್ ಆಗಿದ್ದವನು. ಆಶಾಳನ್ನು ಭೇಟಿ ಮಾಡಿದರೂ.. ಅವಳ ಸತ್ಕಾರದಲ್ಲಿ ಮೊದಲಿನ ಉತ್ಸಾಹವಿರಲಿಲ್ಲ. ಅಲ್ಲದೆ, ನಡವಳಿಕೆಯಲ್ಲಿಯೂ ಬೇರೇನೋ ಗೋಚರಿಸಿತ್ತು ರಾಜ್ ಗೆ.


ಚಂದ್ರು ಬೇಕೆಂದೇ ಅವರಿಬ್ಬರ ಮುಖಾಮುಖಿಯನ್ನು ತಪ್ಪಿಸಿ ಮನೆಯನ್ನೆಲ್ಲಾ ತೋರಿಸಿ ಹೊರಗೆ ಕರೆದೊಯ್ದಿದ್ದ. ಆದರೆ, ಆಶಾಳೇ ರಾಜ್ ಮನೆಗೆ ಬಂದು ಮನಬಿಚ್ಚಿ ಮಾತನಾಡಿದಾಗಲೇ ಅವಳ ನಿಜ ಪರಿಸ್ಥಿತಿಯ ಅರಿವಾಗಿತ್ತು. 


ಓದಿನಲ್ಲೂ ಮುಂದಿದ್ದ, ಗಂಭೀರಸ್ಥ ಹಾಗೂ ಮೌನಿಯೂ ಆಗಿದ್ದ ರಾಜ್ ನಿಗೆ ಸೋತಿದ್ದಳು ಆಶಾ. ಇಬ್ಬರ ನಡುವೆ ಸ್ನೇಹ ಪ್ರೇಮವಾಗಿತ್ತು. ಆದರೆ, ಆಕೆ ರಾಜ್ ನನ್ನು ತಿರಸ್ಕರಿಸಿ ಚಂದ್ರು ವನ್ನು ವಿವಾಹವಾದಳು. ಅದಕ್ಕೆ ಕಾರಣವೇನು..? 


ಹಿಂದಿನ ಕಹಿಯೇ ಅವಳ ಈ ನಡವಳಿಕೆಗೆ ಕಾರಣವೇ ಅಥವಾ ಚಂದ್ರುವಿನ ನಡವಳಿಕೆ ಬೇರೆಯೇ ಕಥೆ ಹೇಳುತ್ತಿತ್ತೇ..? ಇಲ್ಲಿ ಬದುಕಿನ ಸೆಕೆಂಡ್ ಚಾನ್ಸ್ ಸಿಕ್ಕದ್ದು ಯಾರಿಗೆ..? ಜೀವನದ ಹಲವು ಮಜಲುಗಳು ಬಿಚ್ಚಿಟ್ಟ ಕಥೆಯೇ ಬೇರೆ. ಕಣ್ಣಿಗೆ ಕಂಡ ವ್ಯಥೆಯೇ ಬೇರೆ. ಬದುಕು ಹಲವು ರೂಪದಲ್ಲಿ ಹಲವರಿಗೆ ಸೆಕೆಂಡ್ ಚಾನ್ಸ್ ಕೊಡುತ್ತದೆ. ಆದರೆ, ಅದನ್ನು ಯಾರು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ಬದುಕಿನ ಸುಖ-ದುಃಖದ ತೀರ್ಮಾನವಾಗುತ್ತದೆ.


ಕತೆಯ ಶೀರ್ಷಿಕೆ : ಪ್ರೇಮ ಪರಿಣಯ 

ಲೇಖಕರು : ಉಷಾ ನರಸಿಂಹನ್


ಈ ನೀಳ್ಗತೆ ತರಂಗ ಪತ್ರಿಕೆಯಲ್ಲಿ ಪ್ರಕಟಿತವಾಗಿತ್ತು. ಸುಜಾತ ದುದ್ದ ಜ್ಞಾನಸುರಭಿ ವಿಶ್ವವಿದ್ಯಾಲಯದ ಒಂದು ವಿಭಾಗದ ಮುಖ್ಯಸ್ಥೆಯಾಗಿದ್ದವರು. ಒಂದು ಅಪಘಾತದ ನಂತರ ತನ್ನದೆಲ್ಲವನ್ನೂ ಕಳೆದುಕೊಂಡು ಎಲ್ಲದರಿಂದ ದೂರ ಉಳಿದಿದ್ದವರು. ಶಂಕರೇಗೌಡನ ಪ್ರೀತಿಪೂರ್ವಕ ಒತ್ತಾಯಕ್ಕೆ ಮಣಿದು ಮತ್ತೆ ಆ ಕಾಲೇಜಿಗೆ ಮುಖ್ಯ ಭಾಷಣಕಾರರಾಗಿ ಬಂದಿದ್ದರು. 


ಈಗ ಸುಜಾತ ಮತ್ತೊಬ್ಬರ ಮೇಲೆ ಅವಲಂಬಿತವಾಗಬೇಕಾದ ಸಂದರ್ಭದಲ್ಲಿ ಅಕ್ಕ ಗೀತಾ ಜೊತೆಯಾಗಿದ್ದರು. ಜೊತೆಗೆ ಮನೆಕೆಲಸಕ್ಕೆಂದು ರತ್ನ ಜೊತೆಗಿದ್ದುದರಿಂದ ತ್ರಾಸದಾಯಕವಾಗಿರಲಿಲ್ಲವಾದರೂ.. ಬದುಕಿನಲ್ಲಿ ಅವರು ಹಿಂದೆ ಬಯಸಿದ್ದೆಲ್ಲವೂ ದಕ್ಕಿರಲಿಲ್ಲ.


ಹಿಂದೆಸ್ಯಾಮ್ಯುಯಲ್ ಪೀಟರ್ ಆಕ್ಸ್ಫಡ್ ನಿಂದ ಬಂದಿದ್ದವರು ಸುಜಾತರನ್ನು ಭೇಟಿಯಾಗಿ.. ಇಬ್ಬರೂ ಸಮ್ಮತದಿಂದ ಸಹಬಾಳ್ವೆ ನಡೆಸುತ್ತಿದ್ದರು. ಸುಜಾತಾರಿಗೆ ಸಂಗಾತಿಗಳಾದಾಗ ಗಂಡು-ಹೆಣ್ಣು ಇಬ್ಬರ ಸಮಾನತೆಯ ಮೇಲೆ ಬಹಳಷ್ಟು ನಂಬಿಕೆ. ತಮ್ಮ ಸಂಗಾತಿಯಾಗುವವರು ಹಾಗೆಯೇ ಇರಬೇಕೆಂದು ಭಾವಿಸುತ್ತಿದ್ದರು. ಎಲ್ಲರೂ ವಿರೋಧಿಸಿದರೂ.. ಜೊತೆಗೆ ಸಹಬಾಳ್ವೆ ನಡೆಸುತ್ತಲೇ ಮಗಳು ಸೋಫಿಯಾಗೂ ಜನ್ಮವಿತ್ತಿದ್ದರು.


ಆದರೆ, ಆದ ಒಂದು ಅಪಘಾತ ಅವರ ಇಡೀ ಬದುಕಿನ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿತು. ಪತಿಯಾಗಿದ್ದರೆ ಜೊತೆಯಲ್ಲಿಯೇ ಇದ್ದು ನೋಡಿಕೊಳ್ಳುತ್ತಿದ್ದನೇನೋ.. ಆದರೆ, ಯಾವ ಬಂಧನವೂ ಇರಲಿಲ್ಲವಾದ ಪೀಟರ್ ಮಗಳೊಂದಿಗೆ ವಿದೇಶಕ್ಕೆ ಹಾರಿದ್ದ. 


ಮಗಳ ಜೊತೆಗಿನ ಭೇಟಿ ಮಾತ್ರವಲ್ಲ.. ಮಾತುಕತೆಯೂ ಸುಜಾತರ ಪಾಲಿಗೆ ದಕ್ಕಿರಲಿಲ್ಲ. ಆದರೆ, ಅದು ಬಂದೊದಗುವ ಸುಯೋಗ ಬಂದದ್ದು ಶಂಕರೇಗೌಡರಿಂದ. ಅಷ್ಟಕ್ಕೂ ಶಂಕರೇಗೌಡ ಸುಜಾತಾರಿಗೆ ಏನಾಗಬೇಕು..? ತಂದೆಯನ್ನೂ ಎದುರಿಸಿ ಬಂದ ಸೋಫಿಯಾ ತಾಯಿಯನ್ನು ನೋಡಿಕೊಂಡು ಹೋಗುವಾಗ ಮಾಡಿದ್ದ ತೀರ್ಮಾನವೇನು..? ಗೀತಾ ಹಾಗೂ ರತ್ನರ ಬದುಕು ಏನಾಯ್ತು..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಥಾಸಂಕಲನವನ್ನು .


ಮೂರು ಕಥೆಗಳೂ ಮನುಷ್ಯ ಸಂದರ್ಭನುಸಾರ ನಡೆದುಕೊಳ್ಳುವ ರೀತಿ, ತೆಗೆದುಕೊಳ್ಳುವ ತೀರ್ಮಾನ, ಅವುಗಳಿಗೆ ದೊರಕುವ ಪರಿಹಾರ ಹಾಗೂ ಸ್ವೀಕರಿಸುವ ರೀತಿಯನ್ನು ವಿಭಿನ್ನವಾಗಿ ತೆರೆದಿಡುತ್ತವೆ.


~ವಿಭಾ ವಿಶ್ವನಾಥ್

ಹಣ್ಣೆಲೆಗೂ ಬಣ್ಣ ತುಂಬೋಣ

"ಹಣ್ಣೆಲೆ ಉದುರುವಾಗ ಚಿಗುರಿಲೆ ನಕ್ಕಿತಂತೆ" ಎನ್ನುವ ಮಾತನ್ನು ವೃದ್ಯಾಪ್ಯವನ್ನು ನೋಡಿ ಆಡಿಕೊಳ್ಳುವವರ ಅಥವಾ ಅಪಹಾಸ್ಯ ಮಾಡುವವರ ಕುರಿತಾಗಿ ಹೇಳುತ್ತಾರೆ. ಆದರೆ, ಒಂದಲ್ಲಾ ಒಂದು ದಿನ ಆ ಚಿಗುರೆಲೆ ಕೂಡಾ ಹಣ್ಣೆಲೆ ಆಗಬೇಕಲ್ಲವೇ..?? ಅದು ಸಾರ್ವಕಾಲಿಕ ಸತ್ಯವೂ ಹೌದು. ಅದನ್ನು ಅರ್ಥ ಮಾಡಿಕೊಂಡಾಗ ಹಣ್ಣೆಲೆಯನ್ನು ನೋಡಿ ಚಿಗುರೆಲೆ ಮಾಡುವ ಅಪಹಾಸ್ಯ ಮಾತ್ರವೇ ಅಲ್ಲ.. ಅದರ ಅಹಂಕಾರವೇ ಅಳಿದು ಹೋಗುತ್ತದೆ. ಅಷ್ಟಕ್ಕೂ "ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು" ಎನ್ನುವ ಮಾತೇ ಇಲ್ಲವಾ..? ಹಿರಿಯರ ಅನುಭವ ಹಾಗೂ ಕಿರಿಯರ ಉತ್ಸಾಹ ಸೇರಿದರೆ ಎಂತಹಾ ಕೆಲಸವೂ ಮೇಲುಗೈ ಸಾಧಿಸಿದಂತೆಯೇ..


ಆದರೆ ಈಗ ಕಾಲ ಬದಲಾಗುತ್ತಿದೆ. "ದೊಡ್ಡವರೆಲ್ಲಾ ಜಾಣರಲ್ಲ" ಎನ್ನುವ ಮಾತನ್ನು ಕೇಳಿರುತ್ತೇವೆ. ಕೆಲವರಿಗೆ ಅನುಭವವೂ ಇಲ್ಲದೆ, ಯೋಚಿಸುವ.. ತಿಳುವಳಿಕೆಯೂ ಇಲ್ಲದೆ ಕೇವಲ ವಯಸ್ಸಿನಿಂದ ಮಾತ್ರ ವೃದ್ಧರೆಂದು ಗುರುತಿಸಿಕೊಳ್ಳಬಹುದು. ಅಂತಹವರ ಹಿರಿತನವನ್ನು ಒಪ್ಪುವುದು ಸಹಾ ಕಷ್ಟವೇ. ಹಿರಿಯರು ಅಥವಾ ವೃದ್ಧರು ಎನ್ನುವುದಕ್ಕಿಂತಲೂ ಅನುಭವಿಗಳು ಎನ್ನುವುದೇ ಸಮಂಜಸವೆಂಬುದು ನನ್ನ ಅನಿಸಿಕೆ. 


ಮನೆಯ ಮುಖ್ಯಸ್ಥ ಅಥವಾ ಕುಟುಂಬದ ಹಿರಿಯ ಎನ್ನುವ ಗೌರವವನ್ನು ಎಲ್ಲರೂ ನೀಡಿ ಅವರ ಹಿರಿಮೆಯನ್ನು ಒಪ್ಪಿಕೊಂಡಿದ್ದಾಗ.. ಅನುಭವವಿಲ್ಲದ ಕಿರಿಯರು ಅವರಿಗೆ ಒಂದು ಮಾತನ್ನೂ ಹೇಳದೆ, ಕೇಳದೆ ತಮ್ಮದೇ ನಿರ್ಧಾರವನ್ನು ಬೇಕೆಂದಾಗ, ಬೇಕಾದ ಕಡೆ ತೆಗೆದುಕೊಂಡರೆ ಅದರ ಪ್ರತಿಫಲವನ್ನು ಮನೆಯವರೆಲ್ಲರೂ ಅನುಭವಿಸಬೇಕಾಗುತ್ತದೆ. ಅದು ಹಿರಿಯರೂ ಸೇರಿದಂತೆ..! ಅದು ಅವರ ಆರೋಗ್ಯದ ಮೇಲೆಯೂ ದುಷ್ಪರಿಣಾಮವನ್ನು ಬೀರಬಹುದು ಹಾಗೂ ಚಿಂತೆಗೂ ಕಾರಣವಾಗುತ್ತದೆ. ಇದಕ್ಕೆ ಉದಾಹರಣೆ ನೀಡುವುದಾದರೆ ಮನೆಯವರ ನಿರ್ಧಾರದ ವಿರುದ್ಧ ಅವರಿಗೆ ಇಷ್ಟವಿಲ್ಲದ ಹುಡುಗಿಯನ್ನು ವಿವಾಹವಾಗುವ ಪ್ರೇಮ ವಿವಾಹವಾಗುವ ಕಿರಿಯನನ್ನು ಕಾಣಬಹುದು. ಮುಂದೆ ಅವರ ಬಾಳಸಂಗಾತಿ ಕುಟುಂಬದೊಡನೆ ಹೊಂದಾಣಿಕೆಯಾಗದಿದ್ದಲ್ಲಿ ಅದರ ಪರಿಣಾಮ ಕೇವಲ ಒಬ್ಬರ ಮೇಲಲ್ಲ.. ಇಡೀ ಮನೆಯ ಮೇಲೆ. ಹಾಗೆಂದ ಮಾತ್ರಕ್ಕೆ ಕಿರಿಯರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರವೂ ತಪ್ಪು ಎಂದಲ್ಲ. ಆದರೆ, ಚರ್ಚಿಸಿ ತೆಗೆದುಕೊಂಡ ನಿರ್ಧಾರ, ಹಿರಿಯರ ಮಾರ್ಗದರ್ಶನದಲ್ಲಿ ತೆಗೆದುಕೊಂಡ ನಿರ್ಧಾರ ಹೆಚ್ಚು ಸೂಕ್ತ ಎನ್ನಿಸುತ್ತದೆ. ಇದು ನನ್ನ ಬದುಕು, ನನ್ನ ನಿರ್ಧಾರಕ್ಕೆ ಬಂದ ಫಲವನ್ನು ನಾನೇ ಅನುಭವಿಸುತ್ತೇನೆ ಎನ್ನುವುದು ಉದ್ದಟತನವೂ ಆಗುತ್ತದೆ. ಏಕೆಂದರೆ, ಕಿರಿಯರ ಒಂದು ನಿರ್ಧಾರ ಕೇವಲ ಅವರ ಭವಿಷ್ಯದ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೆ.. ಅದು ಈಡೀ ಕುಟುಂಬದ ಮೇಲೆಯೂ ಪರಿಣಾಮ ಬೀರುತ್ತದೆ. ಅಂತೆಯೇ ಹಿರಿಯರ ನಿರ್ಧಾರವೂ..


ಇಂತಹಾ ಹೋಲಿಕೆಯ ಕಥಾಹಂದರವಿರುವ ಹಾಗೂ ಹಿರಿಯರ ಮಹತ್ವವನ್ನು ಹೇಳುವಂತಹಾ ಕಾದಂಬರಿ ಹೆಚ್. ಜಿ. ರಾಧಾದೇವಿಯವರ "ಒಲಿದು ಬಂದ ಸಿರಿ". ರಾಮಾಚಾರ್ಯರು ತಮ್ಮ ಹಿರಿಯರ ಕಾಲದಿಂದಲೂ ರೂಢಿಸಿದ್ದ ಪೌರೋಹಿತ್ಯ ಹಾಗೂ ಅರ್ಚಕ ವೃತ್ತಿಯನ್ನೇ ಮುಂದುವರಿಸಿದ್ದವರು. ಅವರಿಗೆ ತಕ್ಕ ಪತ್ನಿ ಸಾವಿತ್ರಮ್ಮನವರು. ತಂದೆಯ ಬಲಗೈಯಂತೆಯೇ ಇದ್ದ ಶ್ರೀಧರ ಲೈಬ್ರರಿಯನ್ ಆಗಿಯೂ ಕೆಲಸ ಮಾಡುತ್ತಿದ್ದ. ಆದರೆ, ಆತನಿಗೆ ವಿವಾಹ ಮಾಡಲು ಕನ್ನೆಯದ್ದೇ ಸಮಸ್ಯೆ. ಕಷ್ಟಗಳ ಅರಿವಿರುವ ಹುಡುಗಿ ಪದ್ಮಿನಿ ಸೊಸೆಯಾಗಿ ಬಂದದ್ದು ಸಾವಿತ್ರಮ್ಮನವರ ಅದೃಷ್ಟವೆಂಬಂತೆ ಮಗ-ಸೊಸೆಯ ಅನ್ಯೋನ್ಯ ಜೀವನ ಸಾಗುತ್ತಿತ್ತು.


 ಅವರಿಗೊಂದು ಮಗುವಾದ ನಂತರ ಸಾವಿತ್ರಮ್ಮನವರಿಗೆ ಎಲ್ಲಾ ಅಡುಗೆ ಹಾಗೂ ನೈವೇದ್ಯದ ಕೆಲಸವೂ ಹೊರೆಯಾಗಿದ್ದು.. ಜೊತೆಗೆ ವೃದ್ಧಾಪ್ಯವೂ ಸೇರಿದ್ದು ಮತ್ತಷ್ಟು ಕಷ್ಟವಾಗಿತ್ತು. ಇನ್ನು ತಾವು ಮೊಮ್ಮಗನ ಜವಾಬ್ದಾರಿಯನ್ನು ತೆಗೆದುಕೊಂಡು, ಸೊಸೆಗೆ ತಮ್ಮ ಜವಾಬ್ದಾರಿಯನ್ನು ನೀಡಿದರಾದರೂ.. ಪದ್ಮಿನಿ ಅರ್ಥೈಸಿಕೊಳ್ಳದೇ ಲಲಿತಮ್ಮನವರ ದುರ್ಬೋಧನೆಯಂತೆ.. ತಾನು ಮೊದಲಿದ್ದ ಪರಿಸ್ಥಿತಿಯನ್ನೆಲ್ಲಾ ಮರೆತು ಅತ್ತೆ ಹೊರೆಸಿದ್ದ ಜವಾಬ್ದಾರಿಯನ್ನು ಹೊರೆ ಎಂದು ಗಂಡ ಹಾಗೂ ಮಗುವಿನ ಜೊತೆ ಪಟ್ಟಣ ಸೇರಿದಳು. ಇತ್ತ ವೃದ್ಧ ದಂಪತಿಗಳಿಗೆ ಕಷ್ಟವಾಗುತ್ತಿದ್ದರೂ.. ದೇವರ ಕೈಂಕರ್ಯ ಬಿಡದಂತೆ ನಿರ್ವಹಿಸುತ್ತಿದ್ದರು. ಆಗ ಅವರ ಕಷ್ಟಕ್ಕಾದವರು ಸಂದರ್ಭವನ್ನು ಉಪಯೋಗಿಸಿಕೊಂಡು ಲಾಭ ಮಾಡಿಕೊಂಡರು. 


ಹಿರಿಯರ ನೆರಳಿಲ್ಲದೆ, ಪಟ್ಟಣದ ಬಿಸಿಯೂ ತಾಗಿ ಪದ್ಮಿನಿ ಗಂಡ, ಮಗುವಿನ ಜೊತೆ ಮತ್ತೆ ಅತ್ತೆ-ಮಾವರನ್ನು ಸೇರಿದಳು. ಶ್ರೀಧರ ಇಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುವ ಯುವ ಪೀಳಿಗೆಯನ್ನು ಪ್ರತಿನಿಧಿಸುತ್ತಾನೆ. ತಂದೆ-ತಾಯಂದಿರು ವೃದ್ಧಾಪ್ಯದಲ್ಲಿ ತಮ್ಮ ಮಕ್ಕಳು ಜೊತೆಯಲ್ಲಿಯೇ ಇರಲಿ ಎಂದು ಬಯಸುತ್ತಾರೆ. ಹಾಗೆಂದು, ರಾಮಾಚಾರ್ಯರು ಹಾಗೂ ಸಾವಿತ್ರಮ್ಮ ಒತ್ತಾಯದಿಂದ ತಮ್ಮ ಮಕ್ಕಳನ್ನು ತಮ್ಮ ವೃದ್ಧಾಪ್ಯಕ್ಕಾಗಲೆಂದು ನಿಲ್ಲಿಸಿಕೊಳ್ಳಲಿಲ್ಲ. ಬದಲಾಗಿ, ಅವರಿಗೆ ಒಳ್ಳೆಯದಾಗಲಿಂದ ಹರಸಿದರು. ಇಂತಹಾ ಅರ್ಥ ಮಾಡಿಕೊಂಡ ಅನುಭವಿ ಹಿರಿಯರು ಅಪರೂಪವೇ ಸರಿ. ಮಕ್ಕಳ ಒಳಿತನ್ನೇ ಬಯಸುವ ಹಿರಿಯರ ಬದುಕಿಗೆ ಮತ್ತೆ ಬೆಳಕಾಗಿದ್ದು "ಒಳಿತು ಮಾಡುವವರಿಗೆ ಒಳಿತೇ ಆಗುತ್ತದೆ" ಎಂಬ ಸಂದೇಶ ನೀಡಿತು.


ಜೋಗಿ ಅವರ 'ನಿರ್ಗಮನ' ಕಾದಂಬರಿ ವೃದ್ಧರ ಬದುಕಿನ ಬೇರೆ ರೀತಿಯ ಆಲೋಚನೆಯ ಮೇಲೆ ಬೆಳಕು ಚೆಲ್ಲುತ್ತದೆ. ಮುಖಪುಟದ ಮೇಲೆ "ನೋ ಕಂಟ್ರಿ ಫಾರ್ ಓಲ್ಡ್ ಮ್ಯಾನ್" ಎಂಬ ಮಾತಿದೆ. ಆದರೆ, ಒಳಗಿನ ಕಥೆ ಬೇರೆಯದನ್ನೇ ಹೇಳುತ್ತಾ ಸಾಗುತ್ತದೆ. 


ಶಾರದಾಪ್ರಸಾದ್ ರವರು ತಮ್ಮ ಇಳಿ ಬದುಕಿನ ಸಂಜೆಯಲ್ಲಿ ಒಬ್ಬರೇ ಇರಬೇಕೆಂದು ಇದ್ದೊಬ್ಬ ಮಗ ಹಾಗೂ ಮಗಳಿಂದ ದೂರದಲ್ಲಿದ್ದು ತಮ್ಮ ಕೆಲಸದಲ್ಲಿ ತಾವು ತೊಡಗಿಕೊಂಡಿದ್ದರು. ಅವರು ಕಾಣೆಯಾಗಿದ್ದಾರೆ ಎಂಬ ವಿಚಾರ ತಿಳಿದದ್ದೇ ಕೆಲಸದವಳಿಂದ. ವಿದೇಶದಲ್ಲಿದ್ದ ಮಗಳು ಪ್ರತಿಕ್ರಿಯಿಸಿದ ರೀತಿಯಂತೂ ಅಚ್ಚರಿ ಹುಟ್ಟಿಸಿತು. ಪತ್ರಿಕೋದ್ಯಮ ವೃತ್ತಿಯಲ್ಲಿದ್ದ ಅನಿರುದ್ಧ ತನ್ನ ತಂದೆ ಕಾಣೆಯಾದ ಕುರಿತು ಯೋಚಿಸುತ್ತಾ ಹೋದಂತೆ ಅವನಿಗೆ ಅನೇಕ ಆಲೋಚನೆಗಳು ಬಂದವು. "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಎನ್ನುವ ಸಿನಿಮಾದ ಕಥೆಯನ್ನು ಕೂಡಾ ನಾವು ಇಲ್ಲಿ, ಈ ಘಟ್ಟದಲ್ಲಿ ನೆನಪಿಸಿಕೊಳ್ಳಬಹುದು. ಆದರೆ, ಕಥೆ ಬೇರೆಯದ್ದೇ ಜಾಡಿನಲ್ಲಿ ಸಾಗುತ್ತದೆ. 


ಇಲ್ಲಿ ಆ ವೃದ್ಧರು ಕಾಣೆಯಾದದ್ದಕ್ಕೆ ಕಾರಣವೇನು ಎಂಬುದಕ್ಕಿಂತಲೂ ನನ್ನನ್ನು ಹೆಚ್ಚು ಕಾಡಿದ್ದು ಅವರು ಒಂಟಿಯಾಗಿರಲು ಬಯಸಿದ್ದೇಕೆ ಎನ್ನುವುದು. ಹಾಗೆ ಎಷ್ಟು ಜನ ಹಿರಿಯರು ಒಂಟಿಯಾಗಿರಲು ಬಯಸುತ್ತಾರೆ..? ವಯಸ್ಸು ಮಾಗುತ್ತಾ ಹೋದಂತೆ ಜೊತೆಗೊಬ್ಬ ಸಂಗಾತಿಯ ಅವಶ್ಯಕತೆಯೇ ಹೆಚ್ಚು ಕಾಣುತ್ತಾ ಹೋಗುತ್ತದೆ. ಯೌವ್ವನದಲ್ಲಿ ಶರಂಪರ ಕಿತ್ತಾಡುತ್ತಿದ್ದ ದಂಪತಿಗಳು ವೃದ್ಧಾಪ್ಯದಲ್ಲಿ ಒಬ್ಬರಿಗೊಬ್ಬರು ಆಸರೆಯಾಗುವುದನ್ನು ನೆನಪಿಸಿಕೊಳ್ಳಬಹುದು. ಅನಿರುದ್ಧನಿಗೆ ತನ್ನ ತಂದೆಯ ಬಗ್ಗೆ ತಿಳಿದದ್ದು ಅಷ್ಟೆಯಾ..? ಎಂದು ಆತ ತೆರೆದಿಡುವ ಪ್ರಸಂಗಗಳು ಹಾಗೂ ಅವನಿಗೆ ಎದುರಾಗುವ ಸಂದರ್ಭಗಳು ಬಿಚ್ಚಿಡುತ್ತಾ ಸಾಗುತ್ತವೆ.


ಈ ಘಟನೆಗಳನ್ನೆಲ್ಲಾ ಕಂಡಾಗ ವಿದೇಶದಲ್ಲಿ ನೆಲೆಸಬೇಕಾದ ಅನಿವಾರ್ಯತೆ ಇರುವ ಮಕ್ಕಳು ತಮ್ಮ ತಾಯಿ-ತಂದೆಯರಿಗೆ ಮಾಡುವ ವ್ಯವಸ್ಥೆಯ ಕುರಿತು ಆಲೋಚನೆ ಹುಟ್ಟುತ್ತದೆ. ಇಲ್ಲಿಯ ನೆಲವನ್ನು ಬಿಟ್ಟು ಹೊರಡಲಾಗದ ಹಿರಿಯರ ಅಸಹಾಯಕತೆ, ಅಲ್ಲಿಯ ಸೆಳೆತ, ಕೆಲಸ ಅಥವಾ ಅಗತ್ಯತೆಗಳನ್ನು ಬಿಟ್ಟು ಇಲ್ಲಿಗೆ ಬರಲಾಗದ ಮಕ್ಕಳ ಪರಿಸ್ಥಿತಿ. ಇಂತಹಾ ಸಮಯದಲ್ಲಿ ಹಲವಾರು 'ಓಲ್ಡ್ ಏಜ್ ಹೋಮ್'ಗಳು ಹಲವರಿಗೆ ಆಸರೆಯಾದಂತೆ ಕಾಣುತ್ತವೆ. ಇದನ್ನು ಎರಡು ದೃಷ್ಟಿಯಲ್ಲಿಯೂ ವಿಶ್ಲೇಷಿಸಬಹುದು. ಕೆಲವರಿಗೆ ಇದು ಅನಿವಾರ್ಯತೆಯಾದರೆ, ಕೆಲವರಿಗೆ ಅಗತ್ಯತೆ. ಆದರೆ, ಕ್ರಮೇಣ ಮಕ್ಕಳ ಕಾಂಟ್ಯಾಕ್ಟ್ ತಪ್ಪಿ ಹೋಗಿ ಮತ್ತಷ್ಟು ಒಂಟಿಯಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕಲಾಗುವುದಿಲ್ಲ. ಆದರೆ, ಅವರು ತೆರೆದ ಮನಸ್ಸಿನಿಂದ ಅಲ್ಲಿರುವ ತಮ್ಮಂತಹಾ ಜೀವಗಳ ಜೊತೆ ಬೆರೆತಾಗ, ಸ್ನೇಹಮಯಿಯಾದಾಗ ಅವರಿಗೆ ಅದೇ ಬದುಕು ಒಗ್ಗಿ ಹೋಗಬಹುದೇನೋ.. ಪುನೀತ್ ರಾಜಕುಮಾರ್ ಅಭಿನಯದ 'ರಾಜಕುಮಾರ' ಚಲನಚಿತ್ರದ ಸನ್ನಿವೇಶಗಳು ಕೂಡಾ ನೆನಪಾಗುತ್ತವೆ. 


ಈಗಲಾದರೂ.. ಓಲ್ಡ್ ಏಜ್ ಹೋಮ್ ಗಳು ಕಾಣುತ್ತವೆ. ಆದರೆ, ಹಿಂದಿನ ಕಾಲದಲ್ಲಿ ಹಿರಿಯರ ಅದರಲ್ಲಿಯೂ ಗಂಡ ಸತ್ತ ಹೆಣ್ಣು ಮಕ್ಕಳು ಮತ್ತೊಬ್ಬರ ಹಂಗಿನಲ್ಲಿಯೇ ಬದುಕುವ ಸನ್ನಿವೇಶ ಅವರ ಅಸಹಾಯಕತೆ ನೆನಪಾದರೆ ಇಂದಿನ ಕಷ್ಟಗಳು ಅಂದಿನ ಕಷ್ಟದ ಮುಂದೆ ಏನೇನೂ ಅಲ್ಲವೆಂಬ ಭಾವ ಹುಟ್ಟುತ್ತದೆ. ಇಂತಹಾ ಸನ್ನಿವೇಶದ ದರ್ಶನ ಮಾಡಿಸುವುದು ಎಂ. ಕೆ ಇಂದಿರಾ ಅವರ 'ಫಣಿಯಮ್ಮ' ಕಾದಂಬರಿ. ಇದು ಕಾದಂಬರಿಯ ರೂಪದಲ್ಲಿರುವ ಅವರ ಅಜ್ಜನ ತಂಗಿ ಫಣಿಯಮ್ಮನವರ ಬದುಕಿನಗಾಥೆ. 112 ವರ್ಷ ಬದುಕಿದ್ದ ಹಿರಿಜೀವವನ್ನು ಎಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ.. ಕಾದಂಬರಿಯ ರೂಪ ಕೊಟ್ಟಿರುವ ಜೀವನ ಚರಿತ್ರೆ. ಇದು ಮಡಿ ಹೆಂಗಸರ ವೃದ್ಧಾಪ್ಯದ ದಿನಗಳ ಚಿತ್ರವನ್ನು ನಿಚ್ಚಳವಾಗಿ ತೆರೆದಿಡುತ್ತದೆ. ಫಣಿಯಮ್ಮನವರ ಒಂದೊಂದು ಆಲೋಚನೆ ಹಾಗೂ ಪ್ರತಿಕ್ರಿಯೆಗಳನ್ನು ಕಂಡಾಗಲೂ ಅವರು ಬದುಕನ್ನು ಕಂಡ ಬಗೆಗೂ.. ಪಡೆದ ಅನುಭವಕ್ಕೂ ಹಿರಿಮೆಯಂತೆ ಕಾಣುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು, ಸಂಸಾರದ ಸುಖವನ್ನೇ ಕಾಣದೆ, ವೃದ್ಧಾಪ್ಯದಲ್ಲಿ ಎಲ್ಲರಿಗೂ ಬೇಕಾದವರಾಗಿ.. ಆಲೋಚನೆ ಹಾಗೂ ಹಿರಿತನದಿಂದ ಗೆದ್ದ ಫಣಿಯಮ್ಮನನ್ನು ನೆನದರೆ ಈಗಲೂ ಮನಸ್ಸು ಆರ್ದ್ರ. 


ಹಿರಿಯರಿಂದ ದೂರವಿರಬೇಕಾದ ಸಂದರ್ಭ ಅನಿವಾರ್ಯತೆ ಇದ್ದರೆ ಕನೆಕ್ಟ್ ಆಗಿ ಇರಲು ಹಾಗೂ ಕ್ವಾಲಿಟಿ ಸಮಯವನ್ನು ಕಳೆಯಲು ಯಾವುದಾದರೂ ದಾರಿಗಳನ್ನು ಹುಡುಕಿಕೊಳ್ಳಲೇಬೇಕು. ಕಿರಿಯರು ಅವರ ಬದುಕಿನ ಕಷ್ಟದ ಸಂದರ್ಭದಲ್ಲಿ ಜೊತೆಯಾದಾಗ ಮಾತ್ರವೇ ಹಣ್ಣೆಲೆಗೂ ಬಣ್ಣ ತುಂಬಲು ಸಾಧ್ಯ.


~ವಿಭಾ ವಿಶ್ವನಾಥ್

ಶರಪಂಜರ (ಪುಸ್ತಕ ಯಾನ - 307)


ಪುಸ್ತಕದ ಶೀರ್ಷಿಕೆ : ಶರಪಂಜರ

ಲೇಖಕರು : ತ್ರಿವೇಣಿ

ಪ್ರಕಾಶಕರು : ರವಿ ಪಬ್ಲಿಕೇಶನ್ಸ್

ಮರು ಮುದ್ರಣ : 2011

ಪುಟಗಳು : 214

ಬೆಲೆ : 110 ರೂ.


ಮನೋವೈಜ್ಞಾನಿಕ ಕಾದಂಬರಿಗಳ ಪಟ್ಟಿಯಲ್ಲಿ ಇಂದಿಗೂ ಮೊಟ್ಟ ಮೊದಲು ನೆನಪಾಗುವುದೆಂದರೆ ಲೇಖಕಿ ತ್ರಿವೇಣಿಯವರ ಅತ್ಯಂತ ಪ್ರಸಿದ್ಧ ಕಾದಂಬರಿ ಶರಪಂಜರ  ಶರಪಂಜರ ಕಾದಂಬರಿಯನ್ನು ಓದುವ ಮೊದಲೇ ನಾನು ಸಿನಿಮಾ ನೋಡಿದ್ದರಿಂದ ಕಾದಂಬರಿ ಓದುವಾಗಲೂ ಕಾವೇರಿಯ ಪಾತ್ರದಲ್ಲಿ ನನ್ನ ಕಲ್ಪನೆಯಲ್ಲಿ ಇದ್ದಿದ್ದು ಮಿನುಗುತಾರೆ ಕಲ್ಪನಾರೇ.. ಇದು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನ ಹಾಗೂ ಕಲ್ಪನಾರ ನಟನಾಶಕ್ತಿ ಎಂದರೂ ತಪ್ಪಾಗಲಾರದು. ಆದರೆ, ಆ ನಟನೆ ಹಾಗೂ ಚಿತ್ರಕಥೆಯಷ್ಟೇ ಕಾದಂಬರಿ ಕೂಡ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ. ಅಲ್ಲದೇ, ಈ ಕಾದಂಬರಿ ಓದಿ ಮುಗಿಸಿದಾಗ ದಟ್ಟವಾದ ವಿಷಾದ ಛಾಯೆಯ ಜೊತೆಯಲ್ಲಿ ಆಲೋಚನೆಗೆ ಹಚ್ಚುವಂತಹಾ ವಿಚಾರಗಳು ಮನಸ್ಸಿನಲ್ಲಿ ಓಡುತ್ತಲೇ ಇರುತ್ತವೆ. ಈ ಕಾದಂಬರಿಯನ್ನು ಓದಿದ ನಂತರ ಈ ಕಾದಂಬರಿಯ ಗುಂಗು ಕಾಡುತ್ತದೆ. ಈ ಪುಸ್ತಕವನ್ನು ಓದಿದ ನಂತರ ಒಂದೆರಡು ದಿನ ನಾನು ಯಾವ ಪುಸ್ತಕವನ್ನು ಓದಲಾಗಿರಲಿಲ್ಲ. ಕಾವೇರಿಯ ಮನಸ್ಥಿತಿ ಅಷ್ಟು ಕಲಕುವುದು ಆಕೆಯನ್ನು ಲೇಖಕಿ ಕಟ್ಟಿಕೊಟ್ಟಿರುವ ಬಗೆಯಿಂದ ಎಂದರೆ ತಪ್ಪಾಗಲಾರದು.


ಕಾದಂಬರಿ ಶುರುವಾಗುವುದು ಕಾವೇರಿ ತನ್ನ ಆಸ್ಪತ್ರೆಯ ವಾಸ ಮುಗಿಸಿ ಮತ್ತೆ ಮನೆಗೆ ಬರುವಾಗ. ಕಾವೇರಿಯ ಮನಸ್ಸಿನ ಭಾವಗಳು ಮೊದಲಿನಂತೆಯೇ ಓಡುತ್ತಿದ್ದವು. ಗಂಡ ತನ್ನ ಕಡೆ ಗಮನಹರಿಸಲಿ.. ತನ್ನ ಜೊತೆ ಮಾತನಾಡಲಿ, ಅಲಂಕಾರವನ್ನು ಗಮನಿಸಲಿ ಎನ್ನುತ್ತಾ ಸಹಜ ಆಸೆಗಳಿಂದ ಅಪೇಕ್ಷಿಸುತ್ತಿದ್ದರೆ ಅದಕ್ಕೆ ಪತಿ ಸತೀಶನ ಪ್ರತಿಕ್ರಿಯೆಗಳು ಮಾತ್ರ ವ್ಯತಿರಿಕ್ತವಾಗಿಯೇ ಕಾಣುತ್ತಿದ್ದವು. ಕಾವೇರಿ ಸಹಜ ಸುಂದರಿ. ಅಲ್ಲದೇ ಅಲಂಕಾರ ಅವಳ ಸೌಂದರ್ಯವನ್ನು ಮತ್ತಷ್ಟು ಮೆರಗುಗೊಳಿಸಿತ್ತು. ಮೊದಲಿನಿಂದಲೂ ಆಕೆ ತನ್ನ ಸೌಂದರ್ಯ ಪ್ರಜ್ಞೆಯಿಂದ ಆತನನ್ನು ಸೆಳೆಯುತ್ತಿದ್ದಳು. ಈಗಲೂ ಅದೇ ಅಪೇಕ್ಷೆ ಹಾಗೂ ಮನಸ್ಸು ಅದೇ  ಪ್ರೀತಿಯನ್ನು ಬಯಸುವುದು ತಪ್ಪಲ್ಲವಾದರೂ.. ಹೃದಯದಲ್ಲಿದ್ದ ಭಾವನೆಗಳು ಕರಗಲು ಸತೀಶನ ನಿರ್ಲಿಪ್ತ ಮನಸ್ಸು ಹಾಗೂ ಅನ್ಯ ಮನಸ್ಕತೆಯೇ ಸಾಕಿತ್ತು.


ಕಾವೇರಿ ಎಷ್ಟು ಸೂಕ್ಷ್ಮತೆಯಿಂದ ಪ್ರತಿಯೊಂದನ್ನೂ ಗಮನಿಸುತ್ತಿದ್ದಳು ಎಂದರೆ.. ಬದುಕಿನ ಬಗ್ಗೆ ಇದ್ದ ಆಸಕ್ತಿಯೂ ಅಷ್ಟೇ ಸೂಕ್ಷ್ಮವಾಗಿತ್ತು. ಆಕೆಯ ಆಸಕ್ತಿಯ ಆಳವೇ ವಿಭಿನ್ನ. ಪ್ರತಿಯೊಂದೂ ಉತ್ತಮವಾದದ್ದೇ ಬೇಕಿತ್ತು. ತನ್ನ ಮನೆ 'ಚಂದ್ರಹಾಸ'ವನ್ನು ಅವಳು ರೂಪಿಸಿದ್ದ ರೀತಿಯೇ ಹಾಗಿತ್ತು. ಸತೀಶ ಹಾಗೂ ಕಾವೇರಿಯ ದಾಂಪತ್ಯವೂ ಅರ್ಥೈಸಿಕೊಳ್ಳುವಿಕೆಯ ಮೇಲೆ ಅಷ್ಟು ಚೆಂದವಾಗಿ ನಿಂತಿತ್ತು. ಜೊತೆಗೆ ಅಶೋಕ ಹುಟ್ಟಿದ ಮೇಲಂತೂ ಅವರ ಬದುಕಿನಲ್ಲಿ ತಗ್ಗದ ಉತ್ಸಾಹ. ಅತ್ತೆ ಸುಂದರಮ್ಮನವರ ವಿಚಾರದಲ್ಲಿಯೂ ಕಾವೇರಿ ಅತ್ಯಂತ ಆಸಕ್ತಿ ವಹಿಸಿದ್ದಳು. ಆಕೆಗೂ ಸೊಸೆಯ ಮೇಲೆ ಅಷ್ಟೇ ಮಮತೆ.  


ಪ್ರೀತಿಸುವ ಚೆಲುವಾದ ಪತಿ, ಮುದ್ದಾದ ಮಕ್ಕಳು, ನಡೆದರೆ ಸವೆದಾಳೆಂದು ನೋಡಿಕೊಳ್ಳುತ್ತಿದ್ದ ಅತ್ತೆ, ಅಕ್ಕರೆಯಿಂದ ಕಾಣುತ್ತಿದ್ದ ತಂದೆ-ತಾಯಿ, ಬಂಧು-ಬಳಗ, ಶ್ರೀಮಂತ ಜೀವನ, ವಿದ್ಯೆ, ರೂಪ ಹೀಗೆ ಕೊರತೆಯೇ ಇಲ್ಲದ ಬದುಕು ಅವಳದ್ದು.


ಹೀಗಿದ್ದ ಬದುಕು ಎರಡು ವರ್ಷಗಳ ಹಿಂದೆ ತಲೆಕೆಳಗಾಗಿ ಹೋಗಿತ್ತು. ಎರಡು ಮನೆತನಗಳಲ್ಲಿಯೂ ತಲೆತಲಾಂತರಗಳಿಂದ ಇಲ್ಲದ, ಕಂಡು-ಕೇಳಿರದ ರೋಗ ಕಾವೇರಿಯನ್ನು ಆಕ್ರಮಿಸಿತ್ತು. ಅಶೋಕ ಪುಟ್ಟ ಮಗುವಾದರೆ.. ಅರವಿಂದ ಇನ್ನೂ ಕೈಗೂಸು. ಕಾವೇರಿ ಆ ಇಬ್ಬರು ಮಕ್ಕಳನ್ನು ಬಿಟ್ಟು ಆಸ್ಪತ್ರೆಗೆ ನಡೆಯಬೇಕಾಗಿ ಬಂದದ್ದು ದುರಂತ. 


ಈಗ ಆ ದುರಂತವೆಲ್ಲಾ ಮರೆಯಾಗಿ ಹೊಸಬಾಳು ಪ್ರಾರಂಭಿಸಬೇಕಾಗಿತ್ತು ಕಾವೇರಿ. ಬದುಕನ್ನು ನಿತ್ಯನೂತನವನ್ನಾಗಿಸುತ್ತಿದ್ದ ಅವಳ ಆಸಕ್ತಿ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ. ಈಗ ಅವಳು ಮತ್ತದೇ ಉತ್ಸಾಹದಿಂದ ಹೊಸ ಬದುಕು ಆರಂಭಿಸಲು ಹೊರಟಿದ್ದಳು. 


ಸತೀಶ ಒಬ್ಬನೇ ಮಗನಾದ್ದರಿಂದ ಎಲ್ಲ ರೀತಿಯಿಂದಲೂ ಅನುರೂಪನಾದ ಸೊಸೆಯನ್ನು ತರಬೇಕೆಂದು ಸುಂದರಮ್ಮ ಹಂಬಲಿಸುತ್ತಿದ್ದರು. ವಿದ್ಯೆ, ರೂಪ, ಶ್ರೀಮಂತಿಕೆ ಯಾವುದರಲ್ಲಿಯೂ ಆತನನ್ನು ತೆಗೆದುಹಾಕುವಂತಿರಲಿಲ್ಲ. ಗೆಳೆಯನೊಬ್ಬನ ಮದುವೆಯಲ್ಲಿ ಭಾಗವಹಿಸುವ ಸಲುವಾಗಿ ಸತೀಶ ಮಡಿಕೇರಿಗೆ ಹೋಗಿದ್ದಾಗ ಅಲ್ಲಿ ಆತನ ಪ್ರೇಮಯುತ ದೃಷ್ಟಿ ಬಿದ್ದದು ಕಾವೇರಿಯ ಮೇಲೆ. ನಂತರ ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕು ಮದುವೆಯು ಸುಸೂತ್ರವಾಗಿ ಸಾಗಿತ್ತು. ಕಾವೇರಿಯ ವಿಚಾರದಲ್ಲಿ ಕೆಲವೊಂದು ಒಡಕು ಮಾತು ಬಂದಿದ್ದರೂ ಸತೀಶ ಅದನ್ನು ನಿರ್ಲಕ್ಷಿಸಿದ್ದ. 


ಪ್ರೇಮಮಯ ಬದುಕಿನಲ್ಲಿ ಅಶೋಕನ ನಂತರ ಹೆಣ್ಣುಮಗು ಬೇಕೆಂದು ಹಂಬಲಿಸಿದ್ದ ಕಾವೇರಿಗೆ ಅರವಿಂದ ಹುಟ್ಟಿದ್ದ. ಆದರೆ, ನಂತರ ಆಕೆಯ ಮನಸ್ಸು ಸೂಕ್ಷ್ಮ ಸ್ಥಿತಿಗೆ ತಲುಪಿ ಆಸ್ಪತ್ರೆ ಸೇರುವಂತಾಗಿತ್ತು.


ಆಸ್ಪತ್ರೆಯಲ್ಲಿ ಹಳೆ ಕಾವೇರಿ ಸತ್ತು ಹೊಸ ಕಾವೇರಿ ಹುಟ್ಟಿದ್ದರೂ.. ಕಹಿ ನೆನಪುಗಳನ್ನೆಲ್ಲಾ ಮರೆತು ಬಿಡಬೇಕೆಂದು ಆಕೆಯೂ ಅಂದುಕೊಂಡಿದ್ದರೂ ಮನೆಯಲ್ಲಿ ಮೌನ ಸಾಮ್ರಾಜ್ಯ. ಮಕ್ಕಳು ತಾಯಿಯಿಂದ ದೂರವಿದ್ದುದರಿಂದ ತಾಯಿ ಅವರಿಗೆ ಅಪರಿಚಿತಳೇ.. ಮನೆಯ ಯಜಮಾನಿಕೆ ಈಗ ಸತೀಶನ ಅಕ್ಕ ವಿಜಯಮ್ಮನ ಬಳಿ ಇತ್ತು. ಹಾಗೆಂದು, ಆಕೆ ದರ್ಪ ತೋರಿದವರಲ್ಲ ಬದಲಾಗಿ ಕಾವೇರಿಯ ಅನುಪಸ್ಥಿತಿಯಲ್ಲಿ ಮನೆ, ಮಕ್ಕಳು ತಾಯಿಯನ್ನು ನಿಭಾಯಿಸಿದವರು. ಆದರೆ, ಕಾವೇರಿಗೆ ಈ ಎಲ್ಲದರ ಅನುಭವ ಆಕೆಯನ್ನು ತಾನು ನೆಂಟರ ಮನೆಯಲ್ಲಿದ್ದೇನೇನೋ ಎಂಬ ಭಾವ ಹುಟ್ಟುವಂತೆ ಮಾಡಿತ್ತು. 


ಸುಂದರಮ್ಮನವರು ಕಾವೇರಿಗೆ ಬದಲು ನುಡಿಯುತ್ತಿರಲಿಲ್ಲವಾದರೂ ಆತಂಕವಂತೂ ಇದ್ದೇ ಇತ್ತು. ಸೊಸೆಯ ಹಿಂದಿನ ಪರಿಸ್ಥಿತಿಯನ್ನು ಸಹಾ ಅವಲೋಕಿಸಿದ್ದವರು ಮತ್ತೆಗೆ ಆಕೆಗೆ ಹೆಚ್ಚಿನ ಕಷ್ಟ ಕೊಡಬಾರದೆಂದುಕೊಂಡಿದ್ದರು. ಮಗನ ಬದುಕು ಮದುವೆಯಾಗಿದ್ದರೂ ಆಗಿಲ್ಲದಂತಿದ್ದುದನ್ನು ಕಂಡು ಬೇಸರದಲ್ಲಿದ್ದರು. ಸತೀಶನಂತೂ ಆಕೆಯ ಕುರಿತು ತಾತ್ಸಾರ ಭಾವ ತಳೆದಿದ್ದ  ಆಕೆಯನ್ನು ರೋಗಿಯಂತೆ ಕಂಡವನಿಗೆ ಮತ್ತೆ ಪತ್ನಿಯಂತೆ ಸ್ವೀಕರಿಸಲಾಗಿರಲಿಲ್ಲ. ಮಕ್ಕಳಿಂದ ಪತಿಯಿಂದ ದೂರವಿದ್ದೇನೆ ಎಂದುಕೊಂಡಿದ್ದವಳಿಗೆ ಕೊಂಚವಾದರೂ ಅಮೃತಧಾರೆ ಎರೆದವರು ಆಕೆಯ ತಾಯಿ. ಎಷ್ಟಾದರೂ ತಾಯಿಯ ಮಮತೆ ಮಗಳನ್ನು ಬಿಟ್ಟು ಕೊಡುವುದೇ..?


ಆದರೆ, ತನ್ನದಲ್ಲದ ತಪ್ಪಿನಿಂದ.. ತನ್ನದೇ ಕಾರಣದಿಂದ ತಂಗಿಯ ವಿವಾಹವೂ ನಿಂತಾಗ ಕಾವೇರಿಗೆ ಆದ ಆಘಾತ ಇನ್ನೂ ಹೆಚ್ಚಿನದು. ಎಲ್ಲವನ್ನು ತಾನೇ ಸರಿಪಡಿಸಿಕೊಳ್ಳುತ್ತೇನೆ. ತಾನೇ ಮುಂದಡಿ ಇಡುತ್ತೇನೆ ಎಂದು ಹೊರಟವಳಿಗೆ ಎಲ್ಲಾ ಕಡೆ ಸಿಕ್ಕಿದ್ದು ಸೋಲು. ಜೊತೆಗೆ ಅವಳ ಮಾನಸಿಕ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ ಎಂಬ ಕುಹಕನುಡಿ. ಅಲ್ಲದೇ ಅನುಮಾನಗಳು  ಚಂದ್ರಹಾಸದ ಅನಭಿಷಿಕ್ತ ರಾಣಿಯಾಗಿದ್ದವಳು ಈಗ ಯಾರಿಗೂ ಬೇಡವಾಗಿ ಬದುಕುವ ರೀತಿ ಅವಳನ್ನು ಕ್ಷಣಕ್ಷಣಕ್ಕೂ ಕುಗ್ಗಿಸುತ್ತಾ ಹೋಯಿತು. ಅದರಲ್ಲಿಯೂ ಸತೀಶ ಹಾಗೂ ವಿಮಲರ ಸಂಬಂಧ ತಿಳಿದಾಗಲಂತೂ ಹಾಕಿ ಭೂಮಿಗಿಳಿದಳು. ಇದೆಲ್ಲದರ ಪರಿಣಾಮ ಮತ್ತೆ ಕಾವೇರಿ ತಾನೇ  ಗೊಣಗುಟ್ಟಿಕೊಂಡದ್ದು. "Veni vedi veci ನಾನು ಬಂದೆ ನಾನು ನೋಡಿದೆ ನಾನು ಗೆದ್ದೆ"


ಲೇಖಕಿ ಹೇಳುತ್ತಾರೆ ಗೆದ್ದವಳು ಮಾತ್ರ ಕಾವೇರಿಯಾಗಿರಲಿಲ್ಲವೆಂದು. ಆದರೆ, ಸುತ್ತಲಿನ ಸಮಾಜವೂ ಗೆಲ್ಲಲಿಲ್ಲ. ಸೋತವರ ಪಟ್ಟಿಯಲ್ಲಿ ಸಮಾಜ, ಕುಟುಂಬ ಹಾಗೂ ಪ್ರತಿಯೊಬ್ಬರೂ ಸೇರುತ್ತಾರೆ. 


ಕಾವೇರಿಯ ಕುರಿತು ಕೇಳಿದ್ದ ಒಡಕು ಮಾತುಗಳೇನು..? ಶ್ರೀರಂಗಪಟ್ಟಣದ ಪ್ರಸಂಗ ಕಾವೇರಿಯ ಮನಸ್ಸಿನ ಮೇಲೆ ಬೀರಿದ ಪರಿಣಾಮವೇ ಇದೆಲ್ಲದಕ್ಕೆ ಕಾರಣವೇ..? ಕಾವೇರಿಯ ಬದುಕಿನಲ್ಲಿ ಹಿಂದೆ ಎಂದಾದರು ದುರಂತ ನಡೆದಿತ್ತೇ..? ಆಸ್ಪತ್ರೆಯ ಅವಳ ವಾಸದ ದಿನಗಳು ಹಾಗೂ ವೈದ್ಯರ ಅಭಿಪ್ರಾಯಗಳು ಏನಿದ್ದವು ಎಲ್ಲವನ್ನೂ ತಿಳಿಯಲು ಓದಿ ಶರಪಂಜರ ಕಾದಂಬರಿಯನ್ನು.


ಬದುಕಿನ ಮಹತ್ತರ ಆಸೆಗಳು ಹಾಗೂ ಆಕಾಂಕ್ಷೆಗಳು ನೆರವೇರದಿದ್ದಾಗ ಮನಸ್ಸು ಸೂಕ್ಷ್ಮತೆಯತ್ತ ಜಾರುತ್ತಾ ಹೋಗುತ್ತದೆ  ಸೂಕ್ಷ್ಮ ಮನಸ್ಸಿಗೆ ಬೇಕಾದದ್ದು ಆರೈಕೆ. ಒಂದಿಷ್ಟು ಪ್ರೀತಿ. ಅನುಕಂಪ, ಸಹಾನುಭೂತಿಗಳಲ್ಲ. ಬಹುಶಃ ಇಂದಿಗೂ ಈ ವಿಚಾರದಲ್ಲಿ ಸಮಾಜ ಹೆಚ್ಚು ಬದಲಾಗಿಲ್ಲವೆಂದೇ ಅನ್ನಿಸುತ್ತದೆ. ಕಾವೇರಿಯ ಪರಿಸ್ಥಿತಿಯಂತೆ ಮತ್ತಾವ ಹೆಣ್ಣಿಗೂ ಇಂತಹ ಪರಿಸ್ಥಿತಿ ಬಾರದಿರಲಿ ಎಂದೇ ಪ್ರಾರ್ಥಿಸುವೆ. ಸುತ್ತಮುತ್ತಲಿನ ಶರಪಂಜರಕ್ಕೆ ಆಘಾತಗೊಂಡ ಕಾವೇರಿಯ ಕುರಿತು ನೆನೆದಾಗಲೆಲ್ಲ ತಲ್ಲಣ, ಸಂಕಟಗಳೇ. 


ಬಹುಶಃ ಚಲನಚಿತ್ರದಲ್ಲಿಯಾದರೂ ಇದು ದುರಂತ ಅಂತ್ಯ ಕಾಣದೆ ಇದ್ದಿದ್ದರಾದರೂ ಸ್ವಲ್ಪವಾದರೂ ಸಮಾಧಾನ ಸಿಗುತ್ತಿತ್ತೇನೋ.. ಮನಕಲಕಿದ ಕಾದಂಬರಿಯ ಓದು. 


~ವಿಭಾ ವಿಶ್ವನಾಥ್

ಮಾರ್ಜಾಲ ಮೋಹಿನಿಯರು (ಪುಸ್ತಕ ಯಾನ - 306)



ಪುಸ್ತಕದ ಶೀರ್ಷಿಕೆ : ಮಾರ್ಜಾಲ ಮೋಹಿನಿಯರು

ಲೇಖಕರು : ಸುಕನ್ಯಾ ಕಳಸ

ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2024

ಪುಟಗಳು : 96

ಬೆಲೆ : 125 ರೂ.


ಸುಕನ್ಯಾ ಕಳಸಾ ಅವರು ಎಂ.ಎ ಪದವೀಧರೆ. ಇವರು ಭಾರತೀಯ ಅಂಚೆ ಇಲಾಖೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಪಡೆದಿದ್ದಾರೆ. ಹಾಸ್ಯ ಬರಹಗಾರ್ತಿ ಹಾಗೂ ಕವಯತ್ರಿಯೂ ಹೌದು. ಇವರ ಮೊದಲನೆಯ ಹಾಸ್ಯ ಸಂಕಲನ 'ಕಂಪ್ಯೂಟರ್ ಕುಟ್ಟಿ'. ಎರಡನೇ ಹಾಸ್ಯ ಸಂಕಲನವೇ 'ಮಾರ್ಜಾಲ ಮೋಹಿನಿಯರು'. ಇವರು ಕವಯತ್ರಿಯೂ ಆಗಿರುವುದರಿಂದ ಪದಗಳ ಲಾಸ್ಯವನ್ನು ಶೀರ್ಷಿಕೆಯಲ್ಲಿಯೂ ಹಾಗೂ ಹಾಸ್ಯಬರಹದಲ್ಲಿಯೂ ಚೆಂದವಾಗಿ ಕಾಣಬಹುದು. ಈ ಸಂಕಲನದಲ್ಲಿರುವ 'ನಮ್ಮ ಕಾರು ಸತ್ತುಹೋಗಿದ್ದು' ಮಂಗಳೂರು ಆಕಾಶವಾಣಿಯಲ್ಲಿ ಬಿತ್ತರಗೊಂಡಿದೆ. ಪ್ರಜಾವಾಣಿಯ ಭೂಮಿಕಾ, ಸಂಕ್ರಾಂತಿ ಹಾಸ್ಯಲೇಖನಗಳ ಸ್ಪರ್ಧೆಯಲ್ಲಿಯೂ ಬಹುಮಾನಗಳಿಸಿದೆ. ಮಾರ್ಜಾಲ ಮೋಹಿನಿಯರು ಸಹಾ ಆಕಾಶವಾಣಿ ಮಂಗಳೂರಿನಿಂದ ಬಿತ್ತರಗೊಂಡಿದೆ. ಇಲ್ಲಿನ ಹಲವು ಹಾಸ್ಯಲೇಖನಗಳು ಆಕಾಶವಾಣಿ ಮಂಗಳೂರು ಹಾಗೂ ಭದ್ರಾವತಿಯಿಂದ ಬಿತ್ತರವಾಗಿವೆ. 


ಲೇಖಕಿಯ ಅಂಚೆ ಇಲಾಖೆಯ ಅನುಭವಗಳು ಹಾಸ್ಯ ಬರಹಗಳಲ್ಲಿಯೂ ಕಂಡು ಬಂದು ಅವರ ವೃತ್ತಿ ಬದುಕು ಹಾಗೂ ಹಾಸ್ಯ ಪ್ರವೃತ್ತಿ ಎರಡನ್ನೂ ಮಿಳಿತಗೊಳಿಸಿ ಓದುಗರಿಗೆ ಕಚಗುಳಿ ನೀಡುತ್ತವೆ. ಅಲ್ಲದೇ ತಮ್ಮ ಕುರಿತು ತಾವೇ ಹಾಸ್ಯ ಮಾಡಿಕೊಳ್ಳುವ ಪರಿ ಆರೋಗ್ಯಕರ ಹಾಸ್ಯವನ್ನು ನೆನಪಿಸುತ್ತದೆ. ಅಲ್ಲಲ್ಲಿ ಪನ್ ಗಳು ಹಾಗೂ ಲಾಸ್ಯವಿರುವ ಕನ್ನಡ ಪದಗಳು ಸೇರಿ ಹಾಸ್ಯವನ್ನು ಮತ್ತಷ್ಟು ಚೆಂದವಾಗಿಸಿದೆ. ಇವು ಬಹಳ ದೀರ್ಘ ಬರಹಗಳೇನೂ ಅಲ್ಲ. ಚೆಂದವಾಗಿ ಮನಸ್ಪೂರ್ತಿ ನಗಿಸುವ ಅನುಭವದ ತುಣುಕುಗಳಾಗಿ ಕಾಣುತ್ತವೆ. 


'ನಮ್ಮ ಕಾರು ಸತ್ತು ಹೋಗಿದ್ದು' ಎನ್ನುತ್ತಲೇ "ಕಾರು ಎಲ್ಲಾದ್ರೂ ಸಾಯುತ್ತಾ..? ಸಾಯೋಕೆ ಅದೇನು ಕಾರೇ ಅಥವಾ ಎಮ್ಮೆ ಕರುವೇ ಅಂತ ಗಂಟುಮುಖ ಮಾಡಿಕೊಳ್ಳಬೇಡಿ ಮಾರಾಯ್ರೆ" ಎಂದೇ ಶುರು ಮಾಡುತ್ತಾರೆ. ಗಂಟು ಮುಖ ಆರೋಗ್ಯಕರ ಜೀವನ ಶೈಲಿಗೆ ಹಾಗೂ ಆರ್ಥಿಕ ಪರಿಸ್ಥಿತಿಗೂ ಮಾರಕವೆನ್ನುವ ಎಚ್ಚರಿಕೆ ಕೊಡುತ್ತಲೇ ಅವರ ಮನೆಯ ಕಾರಿನ ವಿಚಾರವನ್ನು ಹೇಳುತ್ತಾರೆ. 


ಮನೆಯಲ್ಲಿ ಬೆಕ್ಕು, ನಾಯಿಗಳನ್ನು ಸಾಕುವಾಗ ಅವುಗಳ ಮೇಲೆ ಹುಟ್ಟುವ ಮೋಹದಂತೆ ಹಾಗೂ ಅಲ್ಲಲ್ಲಿ ಪಡುವ ಪಡಿಪಾಟಲನ್ನು 'ಮಾರ್ಜಾಲ ಮೋಹಿನಿಯರು' ಎನ್ನುತ್ತಾ ಅವುಗಳ ಬಾಲದ ರೋಮಗಳಿಗಿಂತಲೂ ಜಾಸ್ತಿ ಇರುವ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ.


'ಹೆಬ್ಬಲಸು ಪುರಾಣ'ದಲ್ಲಿ ಹಲಸಿನ ಹಣ್ಣಿನ ಕಾಲದಲ್ಲಿ ಬರುವ ಮಂಗಗಳ ಮಂಗಾಟ ಹಾಗೂ ಹಣ್ಣುದಕ್ಕುವ ಪರಿಯನ್ನು ಹೇಳುತ್ತಲೇ ಬಾಲ್ಯದ ನೆನಪುಗಳೊಂದಿಗೆ ಸವಿಯಾಗಿಸಿದ್ದಾರೆ. 


ಹೆಣ್ಣು ಮಕ್ಕಳು ತೆಳ್ಳಗಿದ್ದರೂ ದಪ್ಪಗಿದ್ದರೂ ಅದರ ಕುರಿತು ಮಾತನಾಡುವವರು ಇದ್ದೇ ಇರುತ್ತಾರೆ. ಆದರೆ ಲೇಖಕಿ ಹೊಂದಿದ 'ರೂಪಾಂತರ'ಕ್ಕೆ ಅವರ ಕುರಿತು ಅವರೇ ಹೇಳುತ್ತಾ ತೆಳ್ಳಗಿದ್ದಾಗಲೂ.. ದಪ್ಪವಾದಾಗಲೂ ತಮಗಾದ ಅನುಭವಗಳನ್ನು, ಅದಕ್ಕೆ ಸಿಕ್ಕ ಸಲಹೆಗಳು ಅದಕ್ಕೆ ಇವರು ಮಾಡಿದ ಪ್ರಯತ್ನ ಫಲಗಳನ್ನು.. ಬಸ್ಸಿನಲ್ಲಿ, ಕೆಲಸದ ಕಡೆ ಎಲ್ಲೆಡೆ ಅವರಿಗಾದ ಅನುಭವಗಳನ್ನು ತೆರೆದಿಟ್ಟಿದ್ದಾರೆ. 


'ಗೊಣಗುಟುರು ಪ್ರಿಯರು' ಎಂಬ ಶಬ್ದ ಕೇಳಿ ಏನಿದು ಎನ್ನುವ ಅಚ್ಚರಿಯಾಗುತ್ತಿದೆಯೇ..!

ಲೇಖಕಿಯೇ ಹೇಳುವಂತೆ ಅವರು ನಿಜಕ್ಕೂ "ಅಪ್ಪಟ ತಾಜಾ ಬೆಣ್ಣೆ ಹಾಕಿದ ಹೊಸ ಶಬ್ದಲಭ್ಧೆ!" ಈ ಕುರಿತು ನೀವೇ ಓದಿ ನೋಡಿ.


'ಕಂಪ್ಯೂಟರ್ ಕುಟ್ಟಿ'ಯು 'ಆಮೆ ನಡಿಗೆಯ ಅಂಚೆ', 'ಓಬಿರಾಯನ ಕಾಲ'ದ್ದು ಅಂತೆಲ್ಲಾ ಬಿರುದಾಂಕಿತವಾಗಿದ್ದ ಇವರು ಕೆಲಸ ಮಾಡುತ್ತಿದ್ದ ಅಂಚೆ ಇಲಾಖೆಗೆ ಬಂದಾಗ ಲೇಖಕಿಗೆ ನೆನಪಾದದ್ದೇ ಅಕ್ಟೋಪಸ್. "ಕಂಪ್ಯೂಟರ್ ಫೋಬಿಯಾ ಬಿಟ್ಟುಬಿಡಿ" ಎಂದು ಹೇಳುತ್ತಿದ್ದ ಕಾರ್ಯಪಡೆಗೆ ಓಗೊಟ್ಟು ಅದರ ಎದುರು ಕುಳಿತಾಗ ಕಂಪ್ಯೂಟರ್ ಕುಟ್ಟಿಯ ಹಾಗೆ ಅಂದರೆ ಮಗುವಿನ ಹಾಗೆ ವರ್ತಿಸತೊಡಗಿದ್ದನ್ನು ಹಾಗೂ ಅದರಿಂದ ಉಂಟಾದ ಸಿಹಿ ಸವಿ ಅಪಘಾತಗಳನ್ನು ಓದಿ ತೆರೆದಿಟ್ಟಿದ್ದಾರೆ. 


'ಏಪ್ರಿಲ್ ಫೂಲ್'ಗೆ ಎಲ್ಲರೂ ವಿವಿಧ ಉಪಾಯಗಳನ್ನು ಮಾಡಿದರೆ.. ಇವರು ಮಾಡಿದ ಉಪಾಯ ಪಿಯರ್ಸ್ ಸೋಪಿನದ್ದು. ರಾತ್ರಿಯೆಲ್ಲಾ ಪ್ಲಾನ್ ಮಾಡಿ ಹೊಸ ಪಿಯರ್ ಸೋಪಿನ ಡಬ್ಬಕ್ಕೆ ಜಾಗ್ರತೆಯಿಂದ ಸಗಣಿ ತುಂಬಿ ಇಟ್ಟಿದ್ದರು. ಅಷ್ಟಕ್ಕೂ ಫೂಲ್ ಆದವರು ಯಾರೆಂದು ನೀವೇ ಓದಿ ತಿಳಿಯಿರಿ. 


'ಇದ್ದದ್ದನ್ನು ಇದ್ದ ಹಾಗೆ' ಹೇಳಿದರೆ ಆಗುವ ಅವಾಂತರಗಳೆಷ್ಟು ಅಲ್ಲವೇ..?! ಅಂತಹಾ ಅವಾಂತರಗಳನ್ನು ಹಾಸ್ಯದ ಮೂಲಕ ಹೀಗಾದರೆ ಎನ್ನುವ ಕಲ್ಪನೆಯಲ್ಲಿಯೇ ಕಟ್ಟಿ ಕೊಟ್ಟಿದ್ದಾರೆ. 


'ಬಸ್ ಪ್ರಯಾಣ ಮತ್ತು ಚಿರಯೌವ್ವನ' ಎನ್ನುತ್ತಾ ಪ್ರಯಾಣಕ್ಕೆ ಐಹೀಲ್ಡ್ ಶೂಗಳಿಗಿಂತ ಶೋಲಾಪುರಿ ಚಪ್ಪಲಿಗಳೇ ಆರೋಗ್ಯಕರ ಎನ್ನುತ್ತಾರೆ. ಅದರ ಜೊತೆ ಹಲವಾರು ಸಲಹೆಗಳನ್ನು ಆ ಬಸ್ ಪ್ರಯಾಣದ ರಕ್ಷಣೆಯಿಂದ ಪಾರಾಗಲು ಕೊಡುತ್ತಾರೆ. ಕೊಡುವ ಒಂದೊಂದು ಸಲಹೆಗಳೂ ನಗೆಯುಕ್ಕಿಸುತ್ತವೆ. 


ಬಸ್ ಓಡಾಟದ ದಿನನಿತ್ಯದ ಬಳಕೆಗೆ ಎಂದು ಕೊಟ್ಟ ಸಲಹೆಗಳನ್ನೇ ನವೀಕರಿಸಿ 'ಸಿಟಿ ಬಸ್ಸಿನಲ್ಲಿ ಒಂದು ಸರ್ಕಸ್ಸು' ಎನ್ನುತ್ತಾ ಪ್ರಯಾಣದ ಪರಿಯನ್ನು ಕಟ್ಟಿಕೊಡುತ್ತಾರೆ. ಬಸ್ಸಿನೊಳಗಿನಷ್ಟೇ ಅಲ್ಲದೆ.. ಅಲ್ಲಿಯ ಜನರ ಪರದಾಟಗಳು ಹಾಗೂ ಚೀಟಿಗಾಗಿ ಪರದಾಡುವ ಪರಿ ಎಲ್ಲೋ ಇಳಿಯುವ ಸ್ಟಾಪುಗಳು ಹೀಗೆ ಹಲವಾರು ವಿಚಾರಗಳನ್ನು ತೆರೆದಿಡುತ್ತಾರೆ.


'ಬಾಲ್ಯಕಾಲದ ನೆನಪೆಂದರೆ..' ಸುಂದರ ಉದ್ಯಾನವನದಲ್ಲಿ ಚಿಟ್ಟೆಯಂತೆ ವಿಹಾರಿಸುವುದು ಎನ್ನುತ್ತಾ ಶಾಲೆಯ ಚೇತೋಹಾರಿ ನೆನಪುಗಳನ್ನು ಆಕಾಶದಲ್ಲಿ ಎಷ್ಟು ನಕ್ಷತ್ರಗಳೋ ಅಷ್ಟು ಬಾಲ್ಯದ ನೆನಪುಗಳು ಎಂದು ತೆರೆದಿಡುತ್ತಾರೆ.


ನಮ್ಮ ನೆರೆಯವರು ಹೊರೆಯಾಗುವುದು ಒಂದೋ ಅವರು ಸಾಲಕೋರರಾಗಿರುವಾಗ ಅಥವಾ ಜಗಳಗಂಟರಾಗಿದ್ದಾಗ ಎನ್ನುವ ಅನುಭವಕ್ಕಿಂತಲೂ ವಿಭಿನ್ನವಾದ ಅನುಭವ ಅವರಿಗೆ ಸಿಕ್ಕಿದ್ದು 'ಸಂಗೀತ ಪ್ರೇಮಿ ನೆರೆಹೊರೆಯವರು'ಸಿಕ್ಕಾಗ. ಹಾಗೆ ಸಿಕ್ಕ ಇಬ್ಬರೂ ನೆರೆಹೊರೆಯವರು ಬಿಟ್ಟಿ ಮನರಂಜನೆ ಕೊಟ್ಟದ್ದನ್ನು ಹಾಗೂ ಸಂಗೀತ ಪ್ರೇಮಿಗಳಿಗೂ ನೆರೆಮನೆಯಲ್ಲಿಯೇ ಇರುವ ಸಂಗೀತ ಪ್ರೇಮಿಗಳಿಗೂ ಇರುವ ಅಜಗಜಾಂತರ ವ್ಯತ್ಯಾಸವಿರುವ ಅನುಭವವನ್ನು ಹಂಚಿಕೊಳ್ಳುತ್ತಾರೆ. 


ಪ್ರಯೋಗಶೀಲರಾಗಿರುವವರಿಗಂತೂ 'ಸಂಡೇ ಸ್ಪೆಷಲ್' ಎಂದರೆ ಆ ಪದಗಳ ಜೋಡಿಯೇ ಮೋಡಿ ಮಾಡುತ್ತದೆ. ಅದರಲ್ಲಿಯೂ ಸಂಡೇ ಸ್ಪೆಷಲ್ ತಿಂಡಿಗಳನ್ನು ನೆನೆದರೆ ಬಾಯಲ್ಲಿ ನೀರೂರುತ್ತದೆ. ಆದರೆ ಲೇಖಕಿಗೆ ಒಮ್ಮೆ ಮಾತ್ರ ಅವರ ಪತಿ ಸಂಡೇ ಸ್ಪೆಷಲ್ ಕೇಳಿದ್ದು. ಅದಾದ ನಂತರ ಕೇಳಲೇ ಇಲ್ಲವಂತೆ..! ಅವರ ಪಾಕಪ್ರಯೋಗದ ಸ್ಪೆಷಲ್ ಅನುಭವ ಇಲ್ಲಿದೆ. 


'ಮಹಿಳಾ ಮಡದಿಯರು' ಎಂಬ ಶೀರ್ಷಿಕೆ ಕಂಡಾಗ ನಮ್ಮ ಮನಸ್ಸಿನಲ್ಲಿರುವುದೇ ಅವರೂ ಹೇಳಿಬಿಡುತ್ತಾರೆ. "ಮಹಿಳಾ ಮಡದಿ ಅಂದ್ರೆ ಅದೆಂತದ್ದು ಮಾರಾಯರೇ.. ಪುರುಷ ಮಡದಿ ಬೇರೆ ಇರೋದು ಸಾಧ್ಯವಾ..? ಅಂತ ಹುಬ್ಬಾರೋಹಣ ಮಾಡಿರುವುದು ನನ್ನ ದಿವ್ಯದೃಷ್ಟಿಗೆ ಕಾಣುತ್ತಿದೆ." ಎನ್ನುತ್ತಲೇ ಮಹಿಳಾ ಮಡದಿಯ ಕುರಿತು ತೆರೆದಿಡುತ್ತಾರೆ. 


ಇವರ ಅಂಚೆ ಕಚೇರಿಯ ಅನುಭವವನ್ನಿಲ್ಲಿ 'ಕೌಂಟರ್ ಕಣ್ಣಲ್ಲಿ' ಕಾಣಬಹುದು. ಅವರು ಕೌಂಟರ್ ನಲ್ಲಿ ಪಾರ್ಸೆಲ್ಗಳು ಹಾಗೂ ಇತರ ವಿಚಾರಗಳಿಗಾಗಿ ಗ್ರಾಹಕರ ಜೊತೆ ಒಡನಾಡುವ ಪೇಚಾಟದ ಸಂದರ್ಭಗಳು ಹಾಸ್ಯವಾಗಿ ಇಲ್ಲಿದೆ. 


'ಪಬ್ಲಿಕಾಲಾಫೀಸು' ಎಂದರೆ ಅಯೋಮಯವಾಯಿತಲ್ಲವೇ..?! ಪಬ್ಲಿಕ್ ಕಾಲ್ ಆಫೀಸ್ ಅಂದರೆ ಸ್ವಂತ ಟೆಲಿಫೋನ್ ಮತ್ತು ಟೆಲಿಫೋನ್ ಬೂತುಗಳು ಎಲ್ಲೆಡೆ ಇರದೆ, ಪೋಸ್ಟ್ ಆಫೀಸಿನ ಪಬ್ಲಿಕ್ ಕಾಲ್ ಆಫೀಸಿನ ಟೆಲಿಫೋನ್ ಅನ್ನು ಸಾರ್ವಜನಿಕರು ಹೆಚ್ಚಾಗಿ ಬಳಸುತ್ತಿದ್ದಾಗಿನ ಕಾಲದ ಕಥೆ ಹಾಗೂ ಅವಾಂತರಗಳು ಇಲ್ಲಿವೆ.


ಲೆಕ್ಕ ಬರೆದವರು ಚಪ್ಪಲಿ ತಯಾರಕರಾಗಲು ಲಾಯಕ್ ಆಗುತ್ತಾರೆ ಎಂಬ ಲೇಖಕಿಯ ಎಣಿಕೆಗೆ ಕಾರಣವಾದದ್ದು.. ಚಪ್ಪಲಿಯ ಮೇಲಿದ್ದ ಬೆಲೆ 250 ರೂ. 95 ಪೈಸೆ. ಹತ್ತು ರೂಪಾಯಿಗಳಿಗೇ ಚಿಲ್ಲರೆ ಸಿಕ್ಕದ ಕಾಲದಲ್ಲಿ 95 ಪೈಸೆ ಸಿಕ್ಕಲು ಹೇಗೆ ಸಾಧ್ಯವೆನ್ನುವ ಲೇಖಕಿಯ ವಾದಕ್ಕೆ ಅಂಗಡಿಯವರೇ ಸೋತರೇ ಅಥವಾ 95 ಪೈಸೆಗಿಂತ ಹೆಚ್ಚುಕೊಟ್ಟು ಇವರೇ ಸೋತರೋ 'ಒಂದು ಪಾದುಕಾ ಪ್ರಕರಣಂ'ನಲ್ಲಿ ಓದಿನೋಡಿ. 


'ಅತಿಥಿ ದೇವೋಭವ' ಎನ್ನುವ ಮನೆಗೆ ಅತಿಥಿಗಳ ಹಿಂಡೇ ಬಂದಾಗ ಅದು ಹೇಗಿರಬಹುದು..?! ಅದರಲ್ಲಿಯೂ ಅವರ ಪತಿ ಸರ್ಪಸುತ್ತಿನಿಂದ ಬಳಲುತ್ತಿರುವ ಸಂದರ್ಭದಲ್ಲಿ ನೋಡಲು ಬಂದವರ ಮಾತುಗಳು ಅದಕ್ಕೆ ಅವರ ಪತಿಯ ಪ್ರತಿಕ್ರಿಯೆ ಜೊತೆಗೆ ಅಡಿಗೆ ಮನೆಯಲ್ಲಿ ಇವರು ಇಡೀ ಅತಿಥಿ ದೇವೋಭವ ಪ್ರಸಂಗ ಸಾಗುತ್ತಿದ್ದದ್ದು ಹೇಗೆ ಎನ್ನುತ್ತಾ.. ಸೀರಿಯಸ್ ಸಂದರ್ಭವನ್ನೂ ಹಾಸ್ಯಮಯವಾಗಿಯೇ  ಬಿಚ್ಚಿಡುತ್ತಾರೆ.


'ಮಾರ್ಜಾಲ ಮೋಹಿನಿ'ಯರನ್ನು ಕಂಡಂತೆ ಇಲ್ಲಿ ಇವರ 'ಶ್ವಾನ ಪ್ರೇಮ'ವನ್ನು ಕಾಣಬಹುದು. ಶಿವ ಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಎಂಬ ಗಾದೆಗೆ ಬದಲಾಗಿ ಶಿವ ಪೂಜೆಯಲ್ಲಿ ನಾಯಿ ಬಿಟ್ಟಹಾಗೆ ಎನ್ನುವ ಹೊಸ ಗಾದೆ ಹೊಳೆದು ಲೇಖಕಿ ನಕ್ಕದ್ದೇಕೆ..? ಓದಿ ನೀವೂ ನಕ್ಕುಬಿಡಿ.


ಅಂಚೆ ಕಚೇರಿಯಲ್ಲಿ ಇವರು ಡಿಸ್ಪ್ಯಾಚ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾಗ.. ಕಚೇರಿ ಎಂದರೆ ಕಜ್ಜಾಯಗಳ ಪಾಂಡೋರಾಳ ಪೆಟ್ಟಿಗೆಯೇ ಸರಿ ಎನಿಸುತ್ತಿದ್ದದ್ದು ಹಾಗೂ ಆ ಪತ್ರಗಳ ಘಮಲುಗಳನ್ನು 'ಕಚೇರಿ ಕಜ್ಜಾಯಗಳು' ಎನ್ನುತ್ತಾ ಸಿಹಿಯಾಗಿಯೇ ಹೇಳಿದ್ದಾರೆ.


ರೆಡಿ ಮೇಡ್ ಬಟ್ಟೆಗಳಿರದ ಕಾಲದಲ್ಲಿ 'ದರ್ಜಿಯ ಮರ್ಜಿ'ಯಲ್ಲಿಯೇ ಫ್ಯಾಷನ್ ರೂಪುಗೊಳ್ಳಬೇಕಿತ್ತು. ಅವರು ಹೊಲೆದದ್ದೇ ಫ್ಯಾಶನ್. ಆಗ ಒಬ್ಬರ ಅಳತೆಗೆ ಮತ್ತೊಬ್ಬರ ಬಟ್ಟೆ ಹೊಲಿದದ್ದು.. ಪ್ರತಿ ಬಾರಿಯೂ ಬಟ್ಟೆಗೆ ಸರಿಯಾದ ಅಳತೆ ಕೊಟ್ಟರೂ.. ಬಟ್ಟೆ ಸರಿಯಾಗದಿದ್ದದ್ದು.. ಇದು ಅವರು ಸಣ್ಣವರಿದ್ದಾಗ ಅನುಭವಿಸಿದ ಪಡಿಪಾಠಲಾದರೆ.. ಇನ್ನು ಅವರೇ ಸ್ವಯಂ ದರ್ಜಿಯ ಕೆಲಸ ಮಾಡಲು ಹೋದಾಗಿನ ಅನುಭವಗಳೂ ಮೇಳೈಸಿವೆ. 


ಇಲ್ಲಿನ ಎಷ್ಟೋ ಸಂದರ್ಭಗಳು ನಮ್ಮದೇ ಅನುಭವಗಳಂತೆ ಕಾಣುತ್ತವೆ. ಮಾರ್ಜಾಲ ಮೋಹಿನಿಯರು, ಶ್ವಾನ ಪ್ರೇಮ, ಬಸ್ಸಿನ ಪುರಾಣಗಳು, ದರ್ಜಿ ಹಾಗೂ ಬಟ್ಟೆಯ ಅವಾಂತರಗಳು ಇವೆಲ್ಲವೂ ನಮ್ಮದೇ ಅನುಭವಗಳ ರೂಪಾಂತರಗಳಂತೆಯೇ ಕಾಣಸಿಗುತ್ತವೆ. ಆದರೆ, ಲೇಖಕಿ ಇದನ್ನು ಪ್ರಸ್ತುತಪಡಿಸಿರುವ ರೀತಿ ಹಾಸ್ಯಮಯ ಶೈಲಿ ಓದುಗರನ್ನು ನಗೆಗಡಲಿನಲ್ಲಿ ತೇಲಿಸುವುದರಲ್ಲಿ ಅನುಮಾನವಿಲ್ಲ. ಎಂತಹಾ ಗಂಟು ಮುಖವು ಸಡಿಲಗೊಳ್ಳುವ ಹಾಸ್ಯಲೇಖನಗಳು ಇಲ್ಲಿವೆ.

~ವಿಭಾ ವಿಶ್ವನಾಥ್

ಏ ಬೀಳ್ತೀಯಾ ಹುಷಾರು ! (ಪುಸ್ತಕ ಯಾನ - 305)

 

ಪುಸ್ತಕದ ಶೀರ್ಷಿಕೆ : ಏ ಬೀಳ್ತೀಯಾ ಹುಷಾರು !

ಲೇಖಕರು : ನಡಹಳ್ಳಿ ವಸಂತ್ 

ಪ್ರಕಾಶಕರು : ಭೂಮಿ ಬುಕ್ಸ್

ಪ್ರಥಮ ಮುದ್ರಣ : 2011

ಪುಟಗಳು : 130

ಬೆಲೆ : 95 ರೂ.


ನಡಹಳ್ಳಿ ವಸಂತ್ ಅವರು 'ಆಪ್ತ ಸಲಹಾ ಮನೋವಿಜ್ಞಾನ'ದಲ್ಲಿ ಕೌನ್ಸಿಲಿಂಗ್ ನಲ್ಲಿ ಎಂ.ಎಸ್ ಡಿಗ್ರಿ ಪಡೆದವರು. ಮಕ್ಕಳ ಮನೋಗುಣ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಆಂಥೋನಿ ರಾಬಿನ್ಸ್, ಸ್ಟೀಫನ್ ಕೋವೇ ಹಾಗೂ ಡಾಕ್ಟರ್ ಮೀನಗುಂಡಿ ಸುಬ್ರಮಣ್ಯ ಮುಂತಾದವರ ಬರಹಗಳನ್ನು ಆಧರಿಸಿ ಆಪ್ತ ಸಲಹೆಯಲ್ಲಿ ತೊಡಗಿಕೊಂಡಿರುವವರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಜನಪ್ರಿಯ ಲೇಖನಗಳನ್ನು ಬರೆದವರು. ಅಂತಹಾ ಕೆಲವು ಲೇಖನಗಳ ವಿಸ್ಕೃತ ರೂಪವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು. 


ಮಕ್ಕಳ ಲಾಲನೆ, ಪಾಲನೆ ಪಾಠಗಳು ಎಂದ ಮಾತ್ರಕ್ಕೆ ಇದು ಕೇವಲ ಮಕ್ಕಳ ಪೋಷಕರಿಗೆ ಮಾತ್ರ ಅನ್ವಯಿಸಬೇಕಿಲ್ಲ. ಇದು ನಮ್ಮೆಲ್ಲರ ಜೀವನಕ್ಕೂ ಅನ್ವಯಿಸುವಂತಹದ್ದು. ಇಲ್ಲಿನ ಎಷ್ಟೋ ಸಂದರ್ಭದಲ್ಲಿ ನಮ್ಮ ಬದುಕಿನಲ್ಲಿ ಆದ ಘಟನೆಗಳು ಅಥವಾ ನಾವು ಆ ಘಟನೆಗೆ ನೀಡಿದ ಪ್ರತಿಕ್ರಿಯೆಯನ್ನು ನೆನಪಿಸಿಕೊಳ್ಳಬಹುದು. ಅದನ್ನು ಬದಲಾಯಿಸಿಕೊಳ್ಳುವ ರೀತಿ ಅಥವಾ ಆ ಪ್ರತಿಕ್ರಿಯೆಯ ಹಿಂದೆ ಇರುವ ಆಲೋಚನೆಯ ಪರಿಯನ್ನು ಸಹಾ ಕಾಣಬಹುದು. ಇದು ನಮ್ಮ ಜೀವನಘಟ್ಟದ ಪಾಲನೆಯ ಕಥೆಯೂ ಆಗಿರಬಹುದು ಅಥವಾ ಲಾಲನೆಯ ಕತೆಯೂ ಆಗಿರಬಹುದು. 


'ಬೀಳ್ತೀಯಾ ಹುಷಾರು' ಎನ್ನುತ್ತಾ ಮಗುವಿನ ಪ್ರತಿ ಹೆಜ್ಜೆಯಲ್ಲೂ ಅತಿ ಎಚ್ಚರಿಕೆ ವಹಿಸಿದರೆ ಏನಾಗುತ್ತೆ ಗೊತ್ತಾ ಎನ್ನುವ ಪ್ರಶ್ನೆಯೊಂದಿಗೇ ನಾವು ಪುಸ್ತಕವನ್ನು  ತೆರೆಯುತ್ತೇವೆ. ಸಾಮಾನ್ಯವಾಗಿ ನಾವೂ ಹೀಗೆಯೇ ಅಲ್ಲವೇ..? ಎಚ್ಚರಿಕೆಯ ಕರೆಘಂಟೆಯನ್ನು ಕಂಡಾಗ ಯೋಚಿಸುವುದು. ಮನಸ್ಸು ಅದರತ್ತಲೇ ಹೆಚ್ಚು ವಾಲುತ್ತದೆ. ಅತಿ ಎಚ್ಚರಿಕೆ ಕೆಲವೊಮ್ಮೆ ಸಾಮಾನ್ಯ ಪ್ರತಿಕ್ರಿಯೆಗಳನ್ನು ಬದಲಾಯಿಸಿದರೆ, ಇನ್ನು ಕೆಲವೊಮ್ಮೆ ಅಂತಹಾ ಎಚ್ಚರಿಕೆ ಎಲ್ಲಿ ಬರಬಹುದು ಎನ್ನುತ್ತಾ ಭಯದಿಂದ ಅಂತಹ ಕೆಲಸವನ್ನು ಮಾಡದಂತೆಯೇ ಹಿಂಜರಿಯುತ್ತಾ ಉಳಿಯುವಂತೆ ಮಾಡಿಬಿಡಬಹುದು. 


ಈ ಪುಸ್ತಕ ಓದಿದ ನಂತರ ನಮ್ಮೆಲ್ಲಾ ನಡವಳಿಕೆಗಳು ಬದಲಾಗಿ ಮಕ್ಕಳನ್ನು ತಿದ್ದಿ ಬಿಡುತ್ತೇವೆ ಎಂದರ್ಥವಲ್ಲ. ಬದಲಾಗಿ ಮಕ್ಕಳನ್ನು ತಿದ್ದುವುದು, ಉಪದೇಶ, ಬುದ್ಧಿವಾದ, ಶಿಕ್ಷೆಗಳನ್ನು ನೀಡುವ ಬದಲಾಗಿ ನಮ್ಮ ನಡವಳಿಕೆಗಳನ್ನು ಬದಲಾಯಿಸಿಕೊಂಡಲ್ಲಿ ಪೇರೆಂಟಿಂಗ್ ನಲ್ಲಿ ಒಂದು ದೊಡ್ಡ ಹೆಜ್ಜೆ ಮುಂದಿಡಬಹುದು. ಈ ಪುಸ್ತಕದಲ್ಲಿ ಮಕ್ಕಳ ಇಂಟಲಿಜೆಂಟ್ ಕೋಶೆಂಟ್ ಅಂದರೆ ಬುದ್ಧಿವಂತಿಕೆಯ ಮಟ್ಟವನ್ನು ಹೆಚ್ಚಿಸಬೇಕು ಎನ್ನುವ ಮಾಹಿತಿಗಳಿಗಿಂತ ಮಕ್ಕಳ ಎಮೋಷನಲ್ ಕೋಶೆಂಟ್ ಅಂದರೆ ಭಾವನಾತ್ಮಕ ಸ್ಥಿರತೆಯ ಮಟ್ಟವನ್ನು ಹೆಚ್ಚಿಸುವುದರ ಕುರಿತಾಗಿ ಹೆಚ್ಚಿನ ಲೇಖನಗಳಿವೆ. 


ಮಕ್ಕಳ ಕಲಿಕೆಯಲ್ಲಿ ಮಕ್ಕಳು ಹೇಳಿದ್ದನ್ನು ಕೇಳಿ ಅಥವಾ ತಮ್ಮ ಪಾಠದ ಮೂಲಕ ಕಲಿಯುವುದಕ್ಕಿಂತಲೂ ತಮ್ಮ ಸುತ್ತಮುತ್ತಲಿನದ್ದು ಹಾಗೂ ಸುತ್ತಮುತ್ತಲಿನವರನ್ನು ನೋಡಿ ಕಲಿಯುವುದೇ ಹೆಚ್ಚು. ಇತರರು ಮಾಡಿದ್ದನ್ನು ನೋಡಿ ಕಲಿಯುವ ಈ ವಿಧಾನಕ್ಕೆ ಮಾಡೆಲಿಂಗ್ ಮೂಲಕ ಕಲಿಕೆ ಎನ್ನುತ್ತಾರೆ. ಮಕ್ಕಳ ಕಲಿಕೆಯಲ್ಲಂತೂ ಇದರ ಪಾತ್ರ ಮಹತ್ತರ ಎನ್ನುತ್ತಾರೆ. ಇದಕ್ಕೆ ಉದಾಹರಣೆ ನೀಡುವುದಾದರೆ ದೊಡ್ಡವರಂತೆ ತುಟಿ ಚಲನೆ ಮಾಡುತ್ತಾ ಮಾತು ಕಲಿಯುವುದು, ಬರೆದಂತೆ ಬರೆಯುತ್ತಾ ಅಕ್ಷರ ಕಲಿಯುವುದು, ಹೆಣ್ಣು ಮಗು ಸೀರೆ ಉಡಲು ಪ್ರಯತ್ನಿಸುವುದು, ಸೈಕಲ್ ಕಲಿಕೆ, ಹಾಡು ಹಾಗೂ ಮತ್ತಿತರ ಕಲಿಕೆ, ತಮ್ಮ ನೆಚ್ಚಿನ ಹೀರೋನ ಹಾವಭಾವ, ಉಡುಗೆ-ತೊಡುಗೆ, ಕೇಶಾಲಂಕಾರವನ್ನು ಅನುಸರಿಸುವ ಬಗ್ಗೆ, ಗುರುವಿನಂತೆ ಹಾಡುವ ಶಿಷ್ಯ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಗಾಗಿ ನನ್ನ ಮಗ ಅಥವಾ ಮಗಳು ಪುಸ್ತಕ ಓದಲ್ಲ ಎನ್ನುವ ಬದಲಾಗಿ ಮೊದಲು ಮನೆಯಲ್ಲಿ ದೊಡ್ಡವರು ಪುಸ್ತಕ ಓದುವುದನ್ನು ಕಂಡಾಗ ಸಾಮಾನ್ಯವಾಗಿ ಮಕ್ಕಳು ಸಹಾ ಅದನ್ನೇ ಅನುಸರಿಸುವ ರೀತಿಯನ್ನು ಹಾಗೂ ಅದರ ಮಹತ್ವವನ್ನು ಹೇಳುತ್ತಾರೆ. 


ಸಾಮಾನ್ಯವಾಗಿ ಪೋಷಕರು ಹೇಳುವ ಮತ್ತೊಂದು ದೂರು ಎಂದರೆ ಮಕ್ಕಳು ಟಿವಿ ಹೆಚ್ಚಾಗಿ ನೋಡುತ್ತಾರೆ ಎಂಬುದಾಗಿ. ಅದಕ್ಕೆ ಕಾರಣವನ್ನು ತಿಳಿಯಹೊರಟರೆ ಪೋಷಕರೇ ಪ್ರಮುಖವಾಗಿ ಕಾಣಸಿಗುತ್ತಾರೆ. ಒಂದೆರಡು ವರ್ಷದ ಮಗು ಊಟ ಮಾಡುವುದಕ್ಕೆ ತರಲೆ ಮಾಡುತ್ತಿರುವಾಗ ಹಿಂದೆಲ್ಲಾ ಆಕರ್ಷಕವಾಗಿ ಕಥೆ ಹೇಳುತ್ತಾ ಊಟ ಮಾಡಿಸುವ ಹಿರಿಯರು ಇರುತ್ತಿದ್ದರು. ಆದರೆ, ಈಗ ಅದರ ಬದಲಾಗಿ ಟಿ.ವಿ ಹಾಗೂ ಮೊಬೈಲ್ ಗಳು ಆ ಸ್ಥಾನವನ್ನು ಆಕ್ರಮಿಸಿವೆ. ಮಕ್ಕಳ ತುಂಟಾಟಗಳನ್ನು ತಪ್ಪಿಸಲು ಟಿ.ವಿ ಮುಂದೆ ಕೂರಿಸಿಬಿಟ್ಟರೆ ಸುಲಭವೆನ್ನುವ  ಪೋಷಕರ ಆ ಒಂದು ಕ್ಷಣಿಕ ನಿರ್ಧಾರ ಮಕ್ಕಳನ್ನು ಟಿ.ವಿಗೆ ಅಡಿಕ್ಟ್ ಮಾಡಿಬಿಡುತ್ತದೆ. ಆದರೆ, ಇದನ್ನು ತಿದ್ದಿಕೊಳ್ಳಬಹುದಾದ ಬಹಳಷ್ಟು ಸಂದರ್ಭಗಳನ್ನು ಸಹಾ ಲೇಖಕರು ಹೇಳಿದ್ದಾರೆ.


ಸಾಮಾನ್ಯವಾಗಿ ನಮ್ಮ ಚಿಕ್ಕಂದಿನಲ್ಲಿಯೂ ಈ ಅನುಭವಗಳಾಗಿರಬಹುದು. ಅವನನ್ನು / ಅವಳನ್ನು ನೋಡು ಎಂದು ಮಗುವನ್ನು ಮತ್ತೊಂದು ಮಗುವಿಗೆ ಹೋಲಿಸುವ ಮಾತುಗಳನ್ನು ಕೇಳಿರುತ್ತೇವೆ. ಕ್ರಮೇಣ ಮಕ್ಕಳಿಗೇ ಗೊತ್ತಿಲ್ಲದಂತೆ ಆ ಮಗುವನ್ನು ದ್ವೇಷಿಸಲು ಶುರುಮಾಡುವ ಸಾಧ್ಯತೆಗಳಿರಬಹುದು ಅಥವಾ ಆ ಮಕ್ಕಳಿಗೆ ಕೀಳಿರಿಮೆಯೂ ಕಾಡಬಹುದು. ಅಂತಹಾ ಹೋಲಿಸುವ ಮಗು ಮನೆಯಲ್ಲಿಯೇ ಇದ್ದರಂತೂ ಸಿಬ್ಲಿಂಗ್ ರೈವರ್ಲಿ ಶುರುವಾಗಬಹುದು. ಹಾಗಾಗಿ ಪ್ರತಿ ಮಗುವೂ ಭಿನ್ನ ಹಾಗೂ ಅನನ್ಯ ಎಂದು ಹೇಳುತ್ತಾ ಅವರ ಸ್ವಂತಿಕೆಯನ್ನು ಉಳಿಸಿ ಬೆಳೆಸುವ ಮಾತುಗಳನ್ನು ತೆರೆದಿಡುತ್ತಾರೆ. 


ಮಕ್ಕಳು ಬೆಳೆಯುತ್ತಾ ಹೋದಂತೆ ಅವರಲ್ಲಿ ಅನುಮಾನಗಳ ಅಥವಾ ಕುತೂಹಲದ ಪ್ರಶ್ನೆಗಳ ಸರಮಾಲೆಯೇ ಉಂಟಾಗಬಹುದು. ಆದರೆ, ನಾವು ಅವರ ಕುತೂಹಲಗಳಿಗೆ ಉತ್ತರಿಸಲಾಗದೆ ಕೆಲವೊಮ್ಮೆ ಮಕ್ಕಳ ಬಾಯಿ ಮುಚ್ಚಿಸಿ ಆ ಕ್ಷಣಕ್ಕೆ ಪಾರಾಗಿಬಿಡಬಹುದು. ಆದರೆ, ಅದರ ಮುಂದಿನ ಪರಿಣಾಮಗಳು ಏನಾಗಬಹುದು ಎನ್ನುವುದನ್ನು ಹೇಳುತ್ತಾರೆ. ಮಕ್ಕಳ ಕುತೂಹಲಕ್ಕೆ ತಕ್ಕ ಉತ್ತರವನ್ನು ಅವರಿಗೆ ಅರ್ಥವಾಗುವಂತೆ ಅರ್ಥೈಸಿ ಹೇಳಿಕೊಟ್ಟರೆ ಅವರ ಮುಂದಿನ ನಡೆಗಳು ಅದೆಷ್ಟು ಜ್ಞಾನ ಸಂಪಾದನೆಗೆ ಅವಕಾಶ ಮಾಡಿಕೊಡಬಹುದಲ್ಲವಾ..!


"ತಪ್ಪು ಮಾಡಲು ಅವಕಾಶ ಕೊಡಿ" ಎನ್ನುತ್ತಾರೆ ಲೇಖಕರು "ವಿವೇಕವಂತರಾದ ತಂದೆ-ತಾಯಿಗಳು ಮಕ್ಕಳು ತಪ್ಪು ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ" ಎಂದಿದ್ದಾರೆ ಗಾಂಧೀಜಿ. ದೊಡ್ಡವರ ನಿರ್ಧಾರಗಳೇನೂ ಯಾವಾಗಲೂ ಸರಿಯಾಗಿರುತ್ತವೆ ಎನ್ನುವ ಆಧಾರವಿಲ್ಲ. ದೊಡ್ಡವರೆಲ್ಲಾ ಜಾಣರಲ್ಲ ಎನ್ನುವ ಹಾಡು ನೆನಪಾಗಿಬಿಡುತ್ತದೆ. ಅಷ್ಟಕ್ಕೂ ಮಕ್ಕಳಿಗೆ ತಪ್ಪು ಮಾಡಲು ಅವಕಾಶ ಮಾಡಿಕೊಡಬೇಕಾಗುವುದಾದರೂ ಏಕೆ..? 


ದ್ವೇಷ, ಅಸೂಯೆ ಬೆಳೆಯದಂತೆ ಸ್ನೇಹಮಯಿಯಾಗಿ.. ಸ್ನೇಹ ಬಳಗವನ್ನು ಹೆಚ್ಚಿಸಿಕೊಳ್ಳುವುದು, ದ್ವೇಷರಹಿತವಾದ ಜೀವನವನ್ನು ಬದುಕುವಂತೆ ಮಾಡುವುದು,ತಮ್ಮಲ್ಲಿರುವ ಪ್ರೀತಿಯನ್ನು ಹಂಚಿಕೊಳ್ಳುವುದು, ಧನಾತ್ಮಕ ಚಿಂತನೆಯನ್ನು ಪ್ರಚೋದಿಸುವುದು, ಅವರ ಜೀವನವನ್ನು ಸ್ವಂತ ನಿರ್ಧಾರವನ್ನು ತೆಗೆದುಕೊಂಡು ಸ್ವಂತ ಕಾಲುಗಳ ಮೇಲೆ ನಿಲ್ಲುವಂತೆ ಮಾಡುವುದರ ಹಿಂದೆ ಪೋಷಕರ ಪಾತ್ರ, ಭಾವನೆ ಹಾಗೂ ಬುದ್ಧಿ ಜೊತೆಗೆ ಶಿಕ್ಷೆ ಮತ್ತು ಶಿಕ್ಷಣದ ಮಹತ್ವ, ಮಕ್ಕಳು ಹಣವನ್ನು ನಿಭಾಯಿಸುವ ರೀತಿ, ಪೋಷಕರು ಶಿಸ್ತಿನ ಸಿಪಾಯಿಗಳಾಗದೆ ಮಕ್ಕಳಲ್ಲಿ ಹಾಸ್ಯ ಪ್ರಜ್ಞೆಯನ್ನು ಮೂಡಿಸಬೇಕಾದ ಅವಶ್ಯಕತೆ.. ಹೀಗೆ ಹಲವಾರು ವಿಷಯಗಳ ಕುರಿತು ಪೋಷಕರಿಗೆ ಚಂದದ ಕಿವಿಮಾತುಗಳನ್ನು ತಮ್ಮ ಕೆಲವು ಅನುಭವಗಳು ಹಾಗೂ ಕೆಲ ಘಟನೆಗಳ ಮೂಲಕ ತೆರೆದಿಟ್ಟಿದ್ದಾರೆ ಲೇಖಕರು.


ಇದೆಲ್ಲದರ ಜೊತೆಗೆ ಸತ್ಯಕಥೆ, ನೀತಿಕಥೆಗಳ ಸಾರ್ಥಕತೆ ಹಾಗೂ ಆಪ್ತ ಸಲಹೆಯ ಕುರಿತಾದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮನೋವೈಜ್ಞಾನಿಕ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಇರುವವರು ಓದಬೇಕಾದ ಪುಸ್ತಕ.

~ವಿಭಾ ವಿಶ್ವನಾಥ್

ವ್ಯತಿರಿಕ್ತ (ಪುಸ್ತಕ ಯಾನ - 304)


ಪುಸ್ತಕದ ಶೀರ್ಷಿಕೆ : ವ್ಯತಿರಿಕ್ತ

ಲೇಖಕರು : ವಿವೇಕಾನಂದ ಕಾಮತ್ 

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2024

ಪುಟಗಳು : 240

ಬೆಲೆ : 285 ರೂ.


ಈ ಕಾದಂಬರಿಯನ್ನು ನಾನು ಸಸ್ಪೆನ್ಸ್ ಕಾದಂಬರಿ ಮಾತ್ರ ಎನ್ನಲಾರೆ. ಏಕೆಂದರೆ, ಸಸ್ಪೆನ್ಸ್ ಮೇಲೆ ಸಸ್ಪೆನ್ಸ್. ನಿಜಕ್ಕೂ ಕೆಲ ಕಾದಂಬರಿಗಳನ್ನು ಓದುವಾಗ ಕಥೆಯ ಮುಂದಿನ ಭಾಗ ಅಥವಾ ಅಂತ್ಯವನ್ನು ಊಹಿಸಬಹುದು. ಆದರೆ, ಇದು ಊಹೆಗೆ ಮೀರಿದ ಕಥಾಹಂದರ. ಅರೆ..! ಇದು ಹೀಗೂ ಆಗಬಹುದಾ ಎಂದೆನಿಸುವಂತೆ ಮಾಡುವಂತಹಾ ರೋಚಕ ತಿರುವುಗಳು. ಹಾಗೆಂದು, ಇದರಲ್ಲಿ ಕೇವಲ ರೋಚಕತೆ ಮಾತ್ರವಾ ಎಂದರೆ ಖಂಡಿತ ಇಲ್ಲ. ಬದಲಾಗಿ ಇದರಲ್ಲಿ ಬದುಕಿನ ದೊಡ್ಡ ಪಾಠವನ್ನೇ ಹೇಳಿದ್ದಾರೆ ಲೇಖಕರು. ಅದರಲ್ಲಿ ಪ್ರೀತಿಯ ಕುರಿತಾದ, ಅದರಲ್ಲಿಯೂ ಜೀವಂತಿಕೆಯ ಹಾಗೂ ನಿಷ್ಕಲ್ಮಶ ಪ್ರೀತಿಯ ಮಜಲನ್ನು ತೆರೆದಿಟ್ಟಿದ್ದಾರೆ. ಒಂದೊಳ್ಳೆ ರೋಚಕ ಕಾದಂಬರಿಯ ಓದನ್ನು ಅರಸುತ್ತಿರುವವರಿಗೆ ಇದು ಹೇಳಿ ಮಾಡಿಸಿದ ಪುಸ್ತಕ. ಏಕೆಂದರೆ ತಿರುವನ್ನು ಊಹಿಸುವುದು ಖಂಡಿತವಾಗಿಯೂ ಅಸಾಧ್ಯ.


'ವ್ಯತಿರಿಕ್ತ' ಎನ್ನುವ ಶೀರ್ಷಿಕೆಗೆ ಬದ್ಧವಾದ ಕಥಾಹಂದರ. ಎಲ್ಲರೂ ಸಾವನ್ನು ದೂರ ತಳ್ಳುವ ಪ್ರಯತ್ನದಲ್ಲಿದ್ದರೆ ಹಾಗೂ ಸಾವಿನಿಂದ ಪಾರಾಗುವ ಯೋಚನೆಯಲ್ಲಿ ಬದುಕನ್ನು ವಿಸ್ತರಿಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದರೆ.. ಇಲ್ಲಿ ತನ್ನ ಸಾವಿಗೆ ತಾನೇ ಆಹ್ವಾನ ಕೊಟ್ಟುಕೊಳ್ಳುವ ವ್ಯಕ್ತಿ ಕಾಣಿಸುತ್ತಾನೆ. ಹಾಗೆಂದು, ಆತ ಆಯ್ಕೆ ಮಾಡಿಕೊಳ್ಳುವುದು ಆತ್ಮಹತ್ಯೆಯನ್ನಲ್ಲ. 


ಎಷ್ಟೋ ಬಾರಿ ಸಾವಿಗಿಂತ ಬದುಕಲು ಹೆಚ್ಚು ಧೈರ್ಯಬೇಕೆಂನಿಸಿದರೆ, ಕೆಲವೊಮ್ಮೆ ಬದುಕಿಗಿಂತ ಸಾವನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚು ಧೈರ್ಯ ಬೇಕು ಎಂದು ಅನ್ನಿಸುವುದೂ ಇದೆ. ಆದರೆ, ಯಾರಾದರೂ ತಮಗೆ ತಾವೇ ಸಾವನ್ನು ಆಹ್ವಾನಿಸಿಕೊಳ್ಳುವುದಾದರೆ.. ಅದು ಕೇವಲ ಒಂದು ದಿನದ ಅಥವಾ ಆ ಕ್ಷಣದ ಕ್ಷಣಿಕ ನಿರ್ಧಾರ ಮಾತ್ರವಾಗಿರುವುದಿಲ್ಲ. ಏಕೆಂದರೆ, ಅವರ ಬದುಕಿನ ಸಂಗತಿಗಳು ಹಾಗೂ ಘಟನೆಗಳು ಅವರ ಆ ತೀರ್ಮಾನದ ಮೇಲೆ ಪರಿಣಾಮ ಬೀರಿರುತ್ತವೆ. ಹಾಗೆ ಸಾವನ್ನು ಬಯಸುವವರ ಜೊತೆ ಒಂದು ಆಪ್ತಸಮಾಲೋಚನೆ ಅಥವಾ ಆತ್ಮೀಯವಾದ ಜೀವವಿದ್ದರೆ ಸುಖ-ದುಃಖಗಳನ್ನು ಹಂಚಿಕೊಳ್ಳುತ್ತಾ.. ನೋವು-ನಲಿವನ್ನು ತೆರೆದುಕೊಳ್ಳುತ್ತಾ.. ಆ ಆಲೋಚನೆಯಿಂದ ಅವರು ಪಾರಾಗಬಲ್ಲರು. ಆದರೆ ಈ ಕಾದಂಬರಿಯಲ್ಲಿ ಆಪ್ತ ಸಮಾಲೋಚನೆಯ ನಂತರವೂ ನಾಯಕ ಸಾವನ್ನು ಆಹ್ವಾನ ಮಾಡುತ್ತಾನೆ. ಅದಕ್ಕೆ ಕಾರಣವೇನೆಂದು ನೀವೇ ಓದಿ ತಿಳಿಯಿರಿ.


ಈ ಕಾದಂಬರಿಯ ನಾಯಕ ಸಂತೋಷ. ಸಂತೋಷವೆಂಬುದು ಕೇವಲ ಆತನ ಹೆಸರಿನಲ್ಲಿತ್ತು. ಅಲ್ಲದೇ, ಆತನ ಬದುಕಿನಲ್ಲಿರಲಿಲ್ಲ. ಕಛೇರಿಯ ಕೆಲಸ ಹಾಗೂ ಯಾಂತ್ರಿಕ ಜೀವನದಂತೆ ಆತನ ಬದುಕು ಸಾಗುತ್ತಲೇ ಹೋಗುತ್ತಿತ್ತು. ಆತನ ಸಹೋದ್ಯೋಗಿಗಳು ವಾರಾಂತ್ಯದಲ್ಲಿ ಬದಲಾವಣೆಗೆಂದು ಕಂಡುಕೊಂಡ ಮಾರ್ಗಗಳು ಆತನಿಗೆ ತಾತ್ಕಾಲಿಕ ಮಾರ್ಗಗಳೆಂದೇ ಭಾಸವಾಗುತ್ತಿತ್ತು. ಬದುಕಿನ ಆನಂದಕ್ಕೆ ಯಾವುದಾದರೂ ಶಾಶ್ವತವಾದ ದಾರಿ ಬೇಕೆಂದು ಆತನ ಮನಸ್ಸು ಚಡಪಡಿಸುತ್ತಿದ್ದ ಸಂದರ್ಭದಲ್ಲಿಯೇ ಹಿರಿಯ ಅಧಿಕಾರಿಗಳ ಜೊತೆಗೆ ಸಣ್ಣ ಘರ್ಷಣೆಯಾಗಿದ್ದೊಂದೇ ಕಾರಣವಾಗಿ ಮೊದಲೇ ಬೇಸತ್ತಿದ್ದವನು ರಾಜೀನಾಮೆ ನೀಡಿ ಅಲ್ಲಿಂದ ಹೊರಬಂದಿದ್ದ. ಈ ರೀತಿಯ ನಿರ್ಧಾರವನ್ನು ಮಾಡುವಾಗ ಸಾಮಾನ್ಯವಾಗಿ ಅವರ ಸಾಂಸಾರಿಕ ಬಂಧನಗಳು ಅಥವಾ ಅವರನ್ನು ನಂಬಿಕೊಂಡಿರುವವರ ವಿಚಾರವನ್ನು ಯೋಚಿಸಬೇಕಾಗುತ್ತದೆ. ಆದರೆ, ಸಂತೋಷನ ಬದುಕಿನಲ್ಲಿ ಹಾಗೆ ಯಾರೂ ಇರಲಿಲ್ಲ. 


ಹೆತ್ತವರನ್ನು ಅದಾಗಲೇ ಕಳೆದುಕೊಂಡಿದ್ದ. ಬೆಳೆದದ್ದು ಹಾಸ್ಟೆಲ್ ನಲ್ಲಿ. ಹಿರಿಯಣ್ಣ ಹಿರಿಯರು ಬದುಕಿದ್ದ ಮನೆಯಲ್ಲಿ ವಾಸವಾಗಿದ್ದರೆ.. ಎರಡನೇ ಅಣ್ಣ ಉತ್ತರ ಕರ್ನಾಟಕದ ಸಾಗರದಲ್ಲಿ ತನ್ನ ಪತ್ನಿಯ ಜೊತೆಗೆ ವಾಸವಾಗಿದ್ದ. ಮೊದಮೊದಲು ಮದುವೆಯಾಗೆಂದು ಸೋದರರು, ಅತ್ತಿಗೆಯರು ಹೇಳುತ್ತಿದ್ದರಾದರೂ.. ಸಂತೋಷನೇ ನಿರ್ಲಕ್ಷಿಸಿದ ಮೇಲೆ ಅವರೂ ಸುಮ್ಮನಾಗಿದ್ದರು. ಸಂತೋಷ ಮದುವೆಯ ಕುರಿತು ಒಲವು ತೋರದಿರುವುದಕ್ಕೆ ಕಾರಣವೂ ಇಲ್ಲದಿಲ್ಲ.


ಮದುವೆಯ ಬಂಧನಕ್ಕೆ ಸಿಲುಕಲು ಆತನಿಗೆ ಇಷ್ಟವಿಲ್ಲದಿದ್ದರೂ ಪರಿಚಯವಾದ ಹುಡುಗಿಯ ಜೊತೆ ಒಂದು ವರ್ಷ ಲಿವ್ ಇನ್ ಸಂಬಂಧದಲ್ಲಿದ್ದ. ಒಂದು ವರ್ಷದಲ್ಲಿಯೇ ಆ ಸಂಬಂಧದ ಕರಾರು ಮುಗಿದು, ತಾತ್ಕಾಲಿಕ ಬಂಧನದಿಂದಲೂ ಬಿಡುಗಡೆಯಾಗಿತ್ತು

ಹಾಗಿದ್ದರೆ ಆತನಿಗೆ ಸಂತೋಷ ನೀಡುತ್ತಿದ್ದಾದರೂ ಏನು..? ಎನ್ನುವ ಕುತೂಹಲದ ಜೊತೆಗೆ ನಮ್ಮ ಬದುಕಿನಲ್ಲಿ ನಮ್ಮ ಸಂತೋಷ ತಾತ್ಕಾಲಿಕವೋ.. ಕ್ಷಣಿಕವೋ.. ಎಂಬ ಆಲೋಚನೆಯನ್ನು ಮೂಡಿಸುತ್ತದೆ ಕಾದಂಬರಿಯ ಆರಂಭ. 


ಕೆಲವರಿಗೆ ಏಕಾಂತದಲ್ಲಿಯೇ ಸಂತಸ ಸಿಗುತ್ತದೆ. ಆದರೆ, ಸಂತೋಷನಿಗೆ ನಾಲ್ಕೇ ದಿನಕ್ಕೆ ಏಕಾಂತವೂ ಏಕತಾನತೆಯಾಗಿತ್ತು. ಆದರೆ ಮತ್ತೆ ಯಾಂತ್ರಿಕ ಬದುಕಿಗೆ ಹೋಗುವುದು ಬೇಡವಿತ್ತು.


"ಮನಸ್ಸು ತುಂಬಾ ಸಂಕೀರ್ಣವಾದರೂ ಅದು ಶಾಪವೇ. ಏಕೆಂದರೆ ಆತನ ಮುಗ್ಧತೆಯನೆಲ್ಲಾ ಕಬಳಿಸಿ ಮಾನಸಿಕವಾಗಿ ಬಲು ಬೇಗ ಮುಪ್ಪಾಗುತ್ತಾನೆ. ಕೆಲವು ಸಲ ಈ ರೀತಿಯ ಅತಿಯಾದ ಆಲೋಚನೆಯಿಂದ ಅವನ ಕ್ರಿಯಾಶೀಲತೆಯ ಮೇಲೂ ಅದು ಮಾರಕವಾಗುತ್ತದೆ...! ಕೈಲಿದ್ದ ಸಂತೋಷದ ಕ್ಷಣಗಳ ಬೆಲೆ ಅರಿವಾಗುವುದೇ ಇಲ್ಲ."


ಸಂತೋಷನ ಬದುಕಿನ ಪರಿಸ್ಥಿತಿ ಹಾಗೂ ಮನಸ್ಥಿತಿ ಇದ್ದದ್ದೇ ಹಾಗೆ. ಸಂತೋಷನೇ ಆಯ್ಕೆ ಮಾಡಿಕೊಂಡ ಆಪ್ತ ಸಮಾಲೋಚಕಿ ನಮಿತಾ ಶಿವಪ್ರಸಾದ್ ಜೊತೆಗಿನ ಭೇಟಿಯಲ್ಲಿ ಅವರು ಮಾತನಾಡಿದ್ದು ಅವನಿಗೆ ಗೊತ್ತಿಲ್ಲದ್ದೇನೂ ಇರಲಿಲ್ಲ. ಅದೆಲ್ಲವೂ ಅವನಿಗೆ ಗೂಗಲ್ ನಲ್ಲಿಯೇ ಸಿಕ್ಕಿತ್ತಾದರೂ.. ಅಂತಹಾ ಸಂದರ್ಶನದಲ್ಲಿ ಭಾಗವಹಿಸಬೇಕೆನ್ನುವ ಅವನ ಅನುಭವಕ್ಕೆ ಅವನ ಆಯ್ಕೆ ಆದಾಗಿತ್ತು. ಅಂತರಂಗದಲ್ಲಿ ಬಹಳಷ್ಟಿದ್ದರೂ ಆಕೆಯ ಮುಂದೆ ಹೇಳಿಕೊಳ್ಳಬೇಕೆನಿಸಲಿಲ್ಲ. ಸಂತೋಷನಿಗೆ ಆ ಭೇಟಿ ಅಷ್ಟು ಸಮಾಧಾನಕರವಾಗಿರಲಿಲ್ಲ.


ಮುಂದೆ ಆತನ ಆಯ್ಕೆ ಸುಮ್ಮನೆ ಮಾಲ್ ಗೆ ಹೋಗಿ ಅಲೆದಾಡುವುದಾಗಿತ್ತು. ಆಗ ಬಂದ ಆಲೋಚನೆ ಸಿನಿಮಾ ನೋಡುವುದು. ಕೆಲವೊಮ್ಮೆ ಹೀಗೆ ಸುಮ್ಮನೆ ಮಾಡಿಕೊಂಡ ಆಯ್ಕೆಗಳು ಬದುಕಿನ ದಿಕ್ಕನ್ನೇ ಬದಲಾಯಿಸಬಹುದು. ಪೂರ್ವನಿರ್ಧರಿತವಾಗಿ ತೆಗೆದುಕೊಂಡ ನಿರ್ಧಾರಗಳು ಅಥವಾ ಮಾಡಿಕೊಂಡ ಆಯ್ಕೆಗಳು ಬದುಕಲ್ಲಿ ಏನನ್ನೂ ಬದಲಿಸದೆಯೂ ಇರಬಹುದು. ಹೊತ್ತು ಕಳೆಯಲೆಂದು ಆತ ನೋಡಿದ ಆಂಗ್ಲ ಸಿನಿಮಾದಲ್ಲಿ ಇಷ್ಟವಾದ ರೋಚಕತೆ ಆತನ ಮನಸ್ಸನ್ನು ಕೆಲವು ಗಂಟೆಗಳಿಗೆ ಸಂತೃಪ್ತಗೊಳಿಸುವಲ್ಲಿ ಸಾರ್ಥಕವಾಯಿತು. ಮನೆಗೆ ಬಂದ ನಂತರವೂ ಅಂತಹಾ ರೋಚಕತೆಯ ಛಾಯೆ ಇರುವ ಥ್ರಿಲ್ಲರ್ ಸಿನಿಮಾಗಳನ್ನು ನೋಡತೊಡಗಿದ. ವಾಸ್ತವಕ್ಕೆ ದೂರ ಎನ್ನಿಸಿದರೂ ಅವುಗಳು ಕಟ್ಟಿಕೊಟ್ಟ ಲೋಕ ಅವನಲ್ಲಿ ಹೊಸ ಆಲೋಚನೆಯನ್ನು ಮೂಡಿಸುತ್ತದೆ. ಅದರಲ್ಲಿ ಆತನಿಗೆ ತೀರಾ ಕುತೂಹಲ ಮೂಡಿಸಿದ ಒಂದು ಅಂಶ 'ಕಿಲ್ಲರ್ ಕಾಂಟ್ರಾಕ್ಟ್'.


ಸಂತೋಷನಿಗೆ ಕುತೂಹಲ ಜೊತೆಗೆ ಐ.ಟಿ ಉದ್ಯೋಗಿಯಾಗಿದ್ದವನು. ಆ ಕುರಿತು ಹುಡುಕಾಟ ಶುರು ಮಾಡಿಯೇ ಬಿಟ್ಟ. ಆದರೆ, ಹುಡುಕಾಟದ ನಂತರ ಬರುತ್ತಿದ್ದ ಪದೇಪದೇ ಕಾಣುತ್ತಿದ್ದ ಜಾಹೀರಾತು ಹಾಗೂ ತೀವ್ರ ಕುತೂಹಲ ಸಂತೋಷನ ಮನಸ್ಸಿನ ಮೇಲೆ ಪರಿಣಾಮ ಬೀರಿಯೇ ಬಿಟ್ಟಿತು. ಆನ್ಲೈನ್ ವ್ಯವಹಾರ ನಡೆಸುತ್ತಿದ್ದವನಿಗೆ ಬಿಟ್ ಕಾಯಿನ್ ಖರೀದಿಸುವುದೇನು ಕಷ್ಟವಾಗಲಿಲ್ಲ. ಬೇಡದ ಸಾಹಸಕ್ಕೆ ತಾನಾಗಿಯೇ ಕೈ ಹಾಕಿದ್ದ. ತನ್ನ ಕಿಲ್ಲರ್ ಕಾಂಟ್ರಾಕ್ಟ್ ಅನ್ನು ತಾನೇ ನೀಡಿಯಾಗಿತ್ತು.


ತನ್ನ ಸಾವಿನ ಆಹ್ವಾನವನ್ನು ನೀಡಿದವನು ಎಲ್ಲಾ ದಾಖಲೆಗಳನ್ನು ಒದಗಿಸಿದ್ದ. ಸ್ವೀಕರಿಸಿದ ಖಾತೆ ಅದಾಗಲೇ ನಿಷ್ಕ್ರಿಯವಾಗಿತ್ತು ಅದು ಇತ್ತು ಎನ್ನುವ ಯಾವ ಕೊಂಡಿ ಅಥವಾ ಮೇಲ್ ದಾಖಲೆಯೂ ಉಳಿಯಲಿಲ್ಲ. ವಾಲೆಟ್ ನಿಂದ ಬಿಟ್ ಕಾಯಿನ್ಗಳ ವರ್ಗಾವಣೆಯಾಗಿತ್ತು. ಇನ್ನು ಕೆಲಸ ಮುಗಿದ ನಂತರವಷ್ಟೇ ಮೇಲೆ ಮೂಲಕ ಆತನಿಗೆ ಒಂದು ಕನ್ಫಮೇಷನ್ ಬಂದು ತಲುಪಲಿತ್ತು.


ನಿಜಕ್ಕೂ ಸಂತೋಷ ಕೊಟ್ಟ ಈ ಕಿಲ್ಲರ್ ಕಾಂಟ್ರಾಕ್ಟ್ ನಿಂದ ತನ್ನದೇ ಸಾವಿಗೆ ಆಹ್ವಾನ ನೀಡಿದ್ದನೇ ಅಥವಾ ಈ ರೀತಿಯ ಆಲೋಚನೆ ಮಾಡುವವರ ಹಣ ದೋಚುವ ಹೊಸ ವಿಧಾನವಾಗಿತ್ತೇ ಇದು..? ಹೀಗೆ ಹುಚ್ಚುಸಾಹಸಕ್ಕಿಳಿದು ಅವರಿಗೆ ಮಾಡುವ ಮೋಸವೇ ಅಥವಾ ನಿಜವೇ..?


ಈ ರೀತಿ ಆಲೋಚಿಸುತ್ತಿದ್ದವನಿಗೆ ಆದ ಅನುಭವಗಳು ಸಾಯುವ ಭಯ ಹುಟ್ಟಿಸಿದ್ದರಿಂದ ಮತ್ತೆ ತಾನು ಬದುಕಬೇಕೆಂಬ ಆಲೋಚನೆ ಮೂಡಿ ಸಾವಿನಿಂದ ದೂರ ಉಳಿಯಲು ತನ್ನದೇ ಆಲೋಚನೆಯ ವ್ಯತಿರಿಕ್ತವಾಗಿ ಮತ್ತೆ ಯೋಚಿಸಲು ಶುರುವಿಟ್ಟ. ಹಾಗೆ ಹೊರಟವನು ತನ್ನ ಅಣ್ಣಂದಿರನ್ನು ಭೇಟಿ ಮಾಡಿದ. ನಂತರ ನಡೆದ ಘಟನೆಯೊಂದು ಸಂತೋಷ ಸತ್ತನೆಂದೇ ದೃಢೀಕರಿಸಿತು. ಆಗ ಮನೆಯವರಿಗೆ ಅದು ಹುಟ್ಟಿಸಿದ ಭಾವಗಳೇನು..? ಕಳೆದುಕೊಂಡ ಬಂಧಗಳು ಮತ್ತೆ ಚಿಗುರಿದವೇ..?


ತಮಿಳುನಾಡಿನಲ್ಲಿ ಈತನನ್ನೇ ಹೋಲುವಂತಿದ್ದ ವ್ಯಕ್ತಿಯೊಬ್ಬನ ಪತ್ತೆಯಾಗಿತ್ತು. ಅದನ್ನು ಪತ್ತೆ ಮಾಡಿದ್ದು ಮತ್ತಾರೂ ಅಲ್ಲ. ಆತನ ಜೊತೆ ಲಿವ್ ಇನ್ ನಲ್ಲಿದ್ದ ಪ್ರಿಯಂವದಾ. ಆದರೆ ಆ ವ್ಯಕ್ತಿ ತಾನು ಆನಂದನೆಂದೂ.. ಸಂತೋಷ ಅಲ್ಲವೆಂದು ತಿಳಿಸಿದರೂ ಆಕೆ ನಂಬುವ ಸ್ಥಿತಿಯಲ್ಲಿರಲಿಲ್ಲ. 


ಅದು ನಿಜಕ್ಕೂ ಆನಂದನೇ ಅಥವಾ ಸಂತೋಷನೇ..? ಕಿಲ್ಲರ್ ಕಾಂಟ್ರಾಕ್ಟ್ ನಲ್ಲಿದ್ದಂತೆ ಆತನ ಸಾವಿನ ನಂತರ ಕನ್ಫರ್ಮೇಶನ್ ಬಂದಿತೇ..? ತಾತ್ಕಾಲಿಕ ಸಂಬಂಧವನ್ನು ಮತ್ತೆ ಚಿಗುರಿಸಿಕೊಳ್ಳುವ ಹವಣಿಕೆಯಲ್ಲಿದ್ದ ಪ್ರಿಯಾಂವದಾಳ ಮುಂದಿನ ನಡೆ ಏನಿತ್ತು..? ಸಂತೋಷ ಹಾಗೂ ಆನಂದರ ನಡುವಿನಲ್ಲಿ ಕಂಡ ವ್ಯತ್ಯಾಸಗಳೇನು..? ಇದೆಲ್ಲದರ ಜೊತೆಗೆ ಊಹಿಸಲಾಗದ ತಿರುವುಗಳು ಸೇರಿ ಕಾದಂಬರಿಯನ್ನು ಬೇರೆಯದ್ದೇ ಕಥಾಲೋಕಕ್ಕೆ ಕೊಂಡೊಯ್ಯುತ್ತವೆ. 


ಈ ಕಥಾಂದರದ ಪರಿಚಯ ಕಾದಂಬರಿಯ ಆರಂಭಿಕ ಭಾಗದ ಪರಿಚಯವಷ್ಟೇ.. ಕಥೆ ಇನ್ನೂ ಬಾಕಿಯಿದೆ. ಆ ರೋಚಕ ಕಥೆಯನ್ನು ನೀವೇ ಓದಿ ನೋಡಿ. ಸರಳ ಸುಂದರ ಭಾಷೆಯಲ್ಲಿ ಕಟ್ಟಿಕೊಟ್ಟಿರುವ ಘನವಾದ ಕಥಾವಸ್ತು ಬಹಳಷ್ಟು ಆಲೋಚನೆಗೆ ಹಚ್ಚಿದ್ದಂತೂ ನಿಜ.

~ವಿಭಾ ವಿಶ್ವನಾಥ್