ಮಂಗಳವಾರ, ಏಪ್ರಿಲ್ 21, 2026

ಮಲೆನಾಡಿನ ರೋಚಕ ಕತೆಗಳು (ಪುಸ್ತಕ ಯಾನ - 294)


ಪುಸ್ತಕದ ಶೀರ್ಷಿಕೆ : ಮಲೆನಾಡಿನ ರೋಚಕ ಕತೆಗಳು

ಲೇಖಕರು : ಗಿರಿಮನೆ ಶ್ಯಾಮರಾವ್ 

ಪ್ರಕಾಶಕರು : ಗಿರಿಮನೆ ಪ್ರಕಾಶನ

ಪ್ರಥಮ ಮುದ್ರಣ : 2008

ನನ್ನ ಓದಿಗೆ ಸಿಕ್ಕಿದ್ದು : 2021ರ ಪರಿಷ್ಕೃತ ಮುದ್ರಣ

ಪುಟಗಳು : 184

ಬೆಲೆ : 160 ರೂ.


ಮಲೆನಾಡಿನ ರೋಚಕ ಕಥೆಗಳು ಸರಣಿಯ ಮೊದಲ ಪುಸ್ತಕ ಮಲೆನಾಡಿನ ರೋಚಕ ಕಥೆಗಳು. ಇದು ಸುಧಾದಲ್ಲಿ ಧಾರಾವಾಹಿಯಾಗಿ ಬಂದ 'ಕಾಫಿ ನಾಡಿನ ಕಿತ್ತಳೆ'ಯ ಪರಿಷ್ಕೃತ ಮುದ್ರಣ. ಗಿರಿಮನೆ ಶ್ಯಾಮರಾವ್ ಅವರ ಈ ಸರಣಿಯ ಎಲ್ಲಾ ಪುಸ್ತಕಗಳನ್ನು ಓದಿದ್ದರೂ ನಾನು ಪರಿಚಯಿಸುತ್ತಿರುವ ಸರಣಿಯ ಮೊದಲ ಪುಸ್ತಕ ಇದು. ಮಳೆಗಾಲದಲ್ಲಂತೂ ಈ ಪುಸ್ತಕ ಮತ್ತಷ್ಟು ಆಪ್ತವಾಗುತ್ತದೆ. ಹೊರಗಡೆಯಿಂದ ನಾವು ನೋಡುವ ಮಲೆನಾಡಿನ ಪ್ರಕೃತಿಯೇ ಬೇರೆ. ಅಲ್ಲಿ ಪ್ರತಿದಿನ ಅವರು ನೋಡುವ ಮಲೆನಾಡಿನ ಪ್ರಕೃತಿ ಹಾಗೂ ಎದುರಿಸುವ ಸಮಸ್ಯೆಗಳಿಗೆ ವಿಭಿನ್ನ ರೀತಿಯವು. ಸುಂದರವಾಗಿ ಕಂಡ ಮಲೆನಾಡು ತನ್ನೊಳಗೆ ಈ ನಿಗೂಢತೆಯನ್ನು ಇಟ್ಟುಕೊಂಡಿದೆ. ಈ ಪುಸ್ತಕದಲ್ಲಿ ಲೇಖಕರು ತಮ್ಮ ಬದುಕಿನ ರೋಚಕ ಘಟನೆಗಳ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ. ಇದು ಆಸಕ್ತಿಕರವಾಗಿದೆ. ಅಲ್ಲಲ್ಲಿ ತಿಳಿ ಹಾಸ್ಯದೊಂದಿಗೆ ಗಂಭೀರ ಸಮಸ್ಯೆಗಳನ್ನು ಹೇಳಿದ್ದಾರೆ. ಸಕಲೇಶಪುರದ ಸುತ್ತಮುತ್ತಲಿನವರಿಗೆ ಹಾಗೂ ಮಲೆನಾಡಿನಂತಹ ಪ್ರಕೃತಿಯನ್ನೇ ಹಳ್ಳಿಗಾಡಿನಲ್ಲಿ ಹೊಂದಿರುವವರಿಗೆ ಬಹಳ ಆಪ್ತವಾಗುವ ಸನ್ನಿವೇಶಗಳು ಇಲ್ಲಿವೆ.


ಮುಂಗಾರಿಗೂ ಮುನ್ನ : ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಹಾದಿಯಲ್ಲಿ ಹಾಸನದ ನಂತರ ಸಕಲೇಶಪುರದ ವೈಭವ ಕಣ್ತುಂಬುತ್ತದೆ. ಅಲ್ಲಿ ಲೇಖಕರ ಮನೆಯ ಸುತ್ತಮುತ್ತಲಿನ ವಾತಾವರಣದೊಂದಿಗೆ, ಅವರ ಮನೆಯ ಪ್ರಮುಖ ವ್ಯಕ್ತಿ ಮಂಜನನ್ನು ಪರಿಚಯಿಸಿದ್ದಾರೆ. ಚಿಕ್ಕಪ್ರಾಯದಲ್ಲಿ ದನ ಕಾಯಲು ಬಂದು ಸೇರಿದ ಮನೆಯಾಳು ಮಂಜ ಅವರಷ್ಟೇ ಪ್ರಮುಖನಾಗಿರುವುದನ್ನು ಹಾಗೂ ವಿದ್ಯೆ ಕಲಿಸಿ ಕೊಡಬೇಕೆಂಬ ಲೇಖಕರ ನಿರ್ಧಾರವನ್ನೇ ಬಿಡಿಸಿದ್ದ ಪ್ರಸಂಗವನ್ನು ಹೇಳುತ್ತಾರೆ. ಇದು ಕೇವಲ ಪ್ರವೇಶಿಕೆಯಷ್ಟೇ..


ಮೀನು ಬ್ಯಾರಿಯ ಹೋರಿ ವ್ಯಾಪಾರ: ಕಾಫಿ ಗಿಡಗಳ ಕೆಲಸದ ಜೊತೆಗೆ ಗದ್ದೆಯ ಕೆಲಸದ ಪರಿಯನ್ನು ಹೇಳುತ್ತಲೇ.. ಒಂದು ಎತ್ತು ಮುದಿಯಾಗಿ ಸತ್ತಿದ್ದರಿಂದ ಬೇಸಾಯಕ್ಕೆ ಅದಕ್ಕೊಂದು ಜೊತೆ ಹುಡುಕಬೇಕಿದ್ದರಿಂದ ಮಂಜನ ಜೊತೆ ಹೋರಿ ಹುಡುಕಲು ಹೋದಾಗ ಇದನ್ನು ತಿದ್ದಬಹುದೆಂದು ಧೈರ್ಯ ಕೊಟ್ಟ ಮಂಜ ಮುಂದೆ ಸೀನನಿಗೆ ಆದ ಅನಾಹುತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುತ್ತಾನೆ. ಅನುಭವಸ್ತನಾದ ಗೋಜನಿಗೂ ಮುಂದೆ ಮತ್ತೊಂದು ಇಂತದ್ದೇ ಅನುಭವವಾಗುತ್ತದೆ. ಇದರ ಜೊತೆಗೆ ಹೆಜ್ಜೇನಿನ ಕಡಿತದ ಪ್ರಸಂಗವಿದೆ. ಅದೆಲ್ಲದಕ್ಕೂ ಹೋರಿಯ ಕಾರಣವೇ..? ಅಲ್ಲೇ ಪಕ್ಕದಲ್ಲಿ ಕಾಫಿ ಫಸಲಿಗೆ ಮಳೆಯನ್ನೇ ನಂಬಿ ಕುಳಿತರೆ ಸಾಲುವುದಿಲ್ಲವೆಂದು ಕಟ್ಟಿಸಿದ ಕೆರೆಯಿತ್ತು. ಅದರಲ್ಲಿ ಮೀನು ಸಾಕಲು ಹೊರಟವರು ಅಲ್ಲಿ ಪಡೆದ ಅನುಭವವೇನು..? ಓದಿನೋಡಿ. 


ಚಿಂಟಿ : ಚಿಕ್ಕಮ್ಮನ ಇಬ್ಬರು ಮಕ್ಕಳು ಚಿನ್ಮಯಿ ಮತ್ತು ಅವಳ ಅಣ್ಣ ನಂದ ಮಳೆಗಾಲದ ಖುಷಿ ಅನುಭವಿಸಲೆಂದು ಮನೆಗೆ ಬಂದಿದ್ದಾಗ.. ಚೂಟಿಯಾದ ಚಿನ್ಮಯಿಗೆ ಚಿಂಟಿ ಎಂದು ಅಡ್ಡ ಹೆಸರಿಟ್ಟಿದ್ದರು. ಮಳೆಗಾಲದಲ್ಲಿ ಕಿತ್ತಲೆ ಹಣ್ಣುಗಳನ್ನು ನೋಡಲು ಹೊರಟ ಚಿಂಟಿ, ನಂತರ ಮಳೆಗಾಲದ ದಿನಗಳ ಅವಳ ಓಡಾಟ, ಕೆಸರಿನಲ್ಲಿ ಪರದಾಟ, ಮುಗ್ಧವಾದ ಅವಳ ಪ್ರಶ್ನೆಗಳು ಹಲಸಿನ ಹಣ್ಣನ್ನು ಬಿಡಿಸಲು ಹೊರಟಾಗ ಚಿಂಟಿಯ ಪರದಾಟ ಜೊತೆಗೆ ಹಾವಿನ ಪ್ರಸಂಗವೂ ಇಲ್ಲಿದೆ. ಹೀಗೆ ಚಿಂಟಿಯ ಜೊತೆಯ ಹಲವಾರು ಚೇತೋಹಾರಿ ಘಟನೆಗಳಿವೆ. 


ಕಾರ್ಗಾಲದ ವೈಭವ : ಮಳೆಗಾಲದ ದಿನಗಳಲ್ಲಿ ಮಳೆ ಅಳತೆ ಮಾಡುವ ಮಳೆ ಮಾಪಕ, ಚಿಂಟಿಯ ತುಂಟಾಟಗಳು, ಚಿಂಟಿ ದೊಡ್ಡ ಕೆರೆಯಲ್ಲಿ ಮುಳುಗಿ ಅವಳನ್ನು ಉಳಿಸಿದ ಪ್ರಸಂಗ ಹಾಗೂ ಅವಳಿಗೆ ಹುಷಾರು ತಪ್ಪಿ ಮಲಗಿದಾಗ ಅಲ್ಲಿನ ಪರದಾಟ ಎಲ್ಲವೂ ಚೇತೋಹಾರಿಯಾದ ವಾತಾವರಣದ ಮತ್ತೊಂದು ಮುಖವಾದ ವಾತಾವರಣದ ಅಪಾಯವನ್ನೂ ಬಿಚ್ಚಿಡುತ್ತದೆ. 


ಬೇಸ್ತು : ಮಂಜ, ಗೋಜರ ಪ್ರಸಂಗಗಳು ಅದೃಷ್ಟವನ್ನು ನೆನಪಿಸಿದರೂ ಅಲ್ಲಿನ ವಾತಾವರಣದ ಅಪಾಯ ಹಾಗೂ ಅಲ್ಲಿನವರ ಗಟ್ಟಿತನವನ್ನು ತೋರುತ್ತವೆ. ಏಲಕ್ಕಿ ಗಿಡಗಳನ್ನು ಹುಡುಕಿ ಹೊರಟಾಗ ಅಲ್ಲಿಂದ 16 ಕಿಲೋಮೀಟರ್ ದೂರದ ನಡಹಳ್ಳಿಯಲ್ಲಿ ಇರುವುದು ತಿಳಿದು ಅಲ್ಲಿಗೆ ಹೋಗಿ ಬರುವ ಸಂದರ್ಭದಲ್ಲಿ ಬಸವನಿಂದ ಕಲಿತ ಪಾಠವೇನು..?  ಕೆಲಸದ ಬುಡ್ಡ ಕಾಣೆಯಾದ ಸಂದರ್ಭದಲ್ಲಿಯೇ ದಾರಿಯ ಪಕ್ಕದ ಹೊಳೆಯೊಳಗೆ ಸೇರಿದ ಮೊಸಳೆಯ ಪುಕಾರು ಇದ್ದಾಗ ಆತ ಸತ್ತೇ ಹೋದನೆಂದು ಭಾವಿಸಿದವರು ಬೇಸ್ತು ಬಿದ್ದದ್ದೇಕೆ..?


ಜೀವಭಯ : "ಬದುಕಿನ ಗುರಿಯೇ ಬೊಗಳುವ ವೃತ್ತಿಯಾದ ನಾಯಿಗೆ ಬರುವ ಆವೇಶ ಮತ್ತು ಮನುಷ್ಯರಿಗೆ ಜೀವಭಯ ಏನನ್ನೂ ಮಾಡಿಸಬಹುದು." ಎನ್ನುವ ಲೇಖಕರ ಅಭಿಪ್ರಾಯದ ಹಿಂದಿನ ಅನುಭವವೇನು ಓದಿ ನೋಡಿ. 


ಮಂಗ ಚೇಷ್ಟೆ : ಮಲೆನಾಡಿನಲ್ಲಿ ಮಂಗ ಚೇಷ್ಟೆ ಶುರು ಮಾಡಿದರೆ ಫಸಲು ಉಳಿಯುವುದು ಕಡಿಮೆಯೇ.. ಹಾಗಾಗಿ ಅಲ್ಲಿ ಕೋವಿ ಪ್ರಯೋಗ ಮಾಡಲು ಹೊರಟಾಗ ಅದಕ್ಕೆಲ್ಲಾ ಅಭ್ಯಾಸವಿರುವ ಭಟ್ಟಿ ಈರನೇ ಸರಿ ಎಂದು ಅವನಿಗೆ ಹೇಳಿ ಕಳುಹಿಸಿದರೆ, ಆತನನ್ನು ಎಕ್ಸೈಸ್ ನವರು ಹಿಡಿದುಕೊಂಡು ಹೋಗಿದ್ದರು. ಅದೂ.. ಕೋವಿ ಸಮೇತ. ಕೋವಿಯಾದರೂ ಅವರದ್ದಲ್ಲ.. ಬದಲಾಗಿ, ಗೌಡರ ಮನೆಯದ್ದು. ಭಟ್ಟಿ ಈರನ ಕಥೆ ಏನು..? ಆತ ಇದಕ್ಕೂ ಮುಂಚೆ ಅವರ ಕುತ್ತಿಗೆಗೆ ತಂದ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾರೆ. 


ಪಂಚಕನ್ಯೆಯರ ಕೋಟೆ ಪ್ರವಾಸ : ಅಕ್ಕನ ಮಗಳ ಜೊತೆ ಬಂದ ನಾಲ್ಕು ಜನ ಗೆಳತಿಯರು ಸೇರಿ ಪಂಚಕನ್ಯೆಯರನ್ನು ನೆನಪಿಸಿಕೊಳ್ಳುತ್ತಾ.. ಅವರ ಪ್ರವಾಸದ ಅನುಭವವನ್ನು ಕಟ್ಟಿಕೊಡುತ್ತಾರೆ. ಅದರಲ್ಲಿಯೂ ಸ್ವಲ್ಪ ಎಚ್ಚರ ತಪ್ಪಿದರೂ ಮುಂಜರಾಬಾದ್ ಕೋಟೆಯಲ್ಲಿ ನಡೆಯುತ್ತಿದ್ದ ಪ್ರಸಂಗ ಹೆದರಿಕೆ ಹುಟ್ಟಿಸುತ್ತದಾದರೂ.. ಮುಂದಾಲೋಚನೆಗೆ ಹಾಗೂ ಬುದ್ಧಿವಂತಿಕೆಗೆ ಮೆಚ್ಚುಗೆಯೂ ಹುಟ್ಟುತ್ತದೆ.


ತಿಮ್ಮನ ಸೇಡು : ಯಾರಿಗೂ ತೊಂದರೆ ಕೊಡದ, ಯಾರನ್ನೂ ನೋಯಿಸದ, ಯಾರಿಗೂ ಮೋಸ ಮಾಡದ ಒಬ್ಬ ನಿರುಪದ್ರವ ಜೀವಿ ತಿಮ್ಮ ಎಂಬ ಕೆಲಸಗಾರನ ಬದುಕಿನ ಕಥೆ ಇಲ್ಲಿದೆ. ತಿಮ್ಮ ತೀರಿಕೊಂಡ ನಂತರ ಆತನ ಪತ್ನಿ ತಿಮ್ಮಿ ಚೇತರಿಸಿಕೊಳ್ಳಲಿಲ್ಲ. ಆತನ ಇಬ್ಬರು ಮಕ್ಕಳು ಅನಾಥರಾದರು. ಎರಡು ಅಸಹಜ ಸಾವುಗಳಾದ ನಂತರ ಭೈರ, ಮಲ್ಲ ಮತ್ತು ಸೋಮರನ್ನು ಜನ ನೋಡುವ ದೃಷ್ಟಿ ಬದಲಾಗಿದ್ದೇಕೆ..? ತಿಮ್ಮ ಸೇಡು ತೀರಿಸಿಕೊಂಡನೇ..? ಆ ರೀತಿಯ ಆಲೋಚನೆ ಹುಟ್ಟುವುದಕ್ಕೆ ಕಾರಣವೇನು..?


ಚಡ್ಡಿ ಮತ್ತು ಪ್ಯಾಂಟು : ಜೇನು ತೆಗೆಯುವ ಅವೈಜ್ಞಾನಿಕ ಪದ್ಧತಿಯಿಂದ ಲೇಖಕರಿಗೆ ಉಂಟಾದ ಬೇಸರ ಹಾಗೂ ಅದಕ್ಕಾಗಿ ಅವರು ಆಲೋಚಿಸಿದ ಪರಿ ಇಲ್ಲಿದೆ. ಸಣ್ಣಮಲ್ಲಪ್ಪ "ಇವರು ಪ್ಯಾಂಟು ಹಾಕಿದ್ದಾರೆ. ನಾನು ಚಡ್ಡಿ ಹಾಕಿದ್ದೀನಿ. ಇವರಿಗೂ ನಂಗೂ ಏನಿದೆ ವ್ಯತ್ಯಾಸ..? ಪ್ಯಾಂಟು ಹಾಕಿದ ಮಾತ್ರಕ್ಕೆ ಇವರೇನು ದೊಡ್ಡ ಮನುಷ್ಯರಾಗಿ ಬಿಡ್ತಾರಾ..? ಪ್ಯಾಂಟೀನ ಯೋಗ್ಯತೆ ನಂಗೊತ್ತಿಲ್ವಾ..!" ಎಂದು ಬೈದದ್ದೇಕೆ, ಅಷ್ಟಕ್ಕೂ ಆತನ ತಲೆಯಲ್ಲಿ ಏನಿತ್ತು, ಇದರ ಹಿನ್ನೆಲೆಯೇನು..? ವಿರಸದಿಂದ ಉಂಟಾಗುವ ಪ್ರಕ್ಷುಬ್ಧ ಮನಸ್ಥಿತಿಗೂ.. ಕ್ಷಮೆಯಿಂದ ಉಂಟಾಗುವ ನೆಮ್ಮದಿಗೂ ಅದೆಷ್ಟು ವ್ಯತ್ಯಾಸ ಎಂಬ ಚಿಂತನೆ ನಮಗೂ ಮೂಡದಿರುವುದಿಲ್ಲ. 


ಮರೆಯಾದ ಮಹಾಲಕ್ಷ್ಮಿ : ಮಂಜ ದನ ಕಾಯುತ್ತಿದ್ದ ಕಾಲದಲ್ಲಿ ಎಲ್ಲಿಂದಲೋ ಬಂದು ಸೇರಿದ ದನ ಲಕ್ಷ್ಮಿ. ಲಕ್ಷ್ಮಿ ಎಂದರೆ ಸಾಧು ಹಾಯುವುದು, ಒದೆಯುವುದು ಗೊತ್ತೇ ಇರಲಿಲ್ಲ. ಬಂದವರೆದುರಿಗೆಲ್ಲಾ ಲಕ್ಷ್ಮಿಯ ಗುಣಗಾನ ಮಾಡುತ್ತಿದ್ದವರಿಗೆ.. ಒಮ್ಮೊಮ್ಮೆ ಲಕ್ಷ್ಮಿ ತೋರುತ್ತಿದ್ದ ರೌದ್ರ ರೂಪದಿಂದ ತೊಂದರೆಯಾದರೆ..! ಎಂದು ಅವಳನ್ನು ಮಾರಿಯೇ ಬಿಟ್ಟರು. ಜೀವಕ್ಕೆ ಕುತ್ತು ಬಂದಾಗ ಅದು ಎಷ್ಟೇ ಪ್ರೀತಿಸುವ ಜೀವಿಯಾಗಿದ್ದರೂ ಅದನ್ನು ದೂರ ಮಾಡಿಕೊಳ್ಳಲೇ ಬೇಕಲ್ಲವಾ ಎಂಬ ಆಲೋಚನೆ ಬಂದರೂ.. ಅದಕ್ಕೆ ಕಾರಣದ ಮೂಲ ಹುಡುಕಿದ್ದರೆ ಅದು ಅಲ್ಲಿಯೇ ಇರುತ್ತಿತ್ತಲ್ಲವಾ ಎಂಬ ಆಲೋಚನೆ ಲೇಖಕರಿಗೂ ಬರುತ್ತದೆ. "ಮನುಷ್ಯ ತಪ್ಪುಗಳನ್ನು ಮಾಡಲು ಅವನ ಅಜ್ಞಾನವೇ ಕಾರಣ ತಾನೇ..?" ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವಾಗ ನಮಗೂ ಹಾಗೆಯೇ ಅನ್ನಿಸುತ್ತದೆ. ಲಕ್ಷ್ಮಿಯನ್ನು ಮತ್ತೆ ಕರೆತರಬೇಕೆನಿಸಿದರೂ ಅದು ಸಾಧ್ಯವಾಗದ್ದೇಕೆ..?


ಉಪ್ಪಿನಕಾಯಿ ಮತ್ತು ಮಂಜ : ಉಪ್ಪಿನಕಾಯಿ ಹಾಗೂ ಸಂಡಿಗೆಗಾಗಿ ಮಂಜ ತಂದ ಗಾಂಧಾರಿ ಮೆಣಸಿನಕಾಯಿ ತಂದಿದ್ದ. ಇದು ಮೊದಲಿನ ಹಾಗೆ ಖಾರವೇ ಇರುವುದಿಲ್ಲವೆಂದು ಮಸ್ಕಾ ಹೊಡೆಯುತ್ತಿರುವಾಗ ಅಮ್ಮ ತಮಾಷೆಗೆಂದು.. ಹಾಗಾದ್ರೆ ನೀನು ತಂದ ಮೆಣಸಿನಕಾಯಿಗಳನ್ನು ನೀನೇ ಅರೆದು ಕುಡಿ ಎಂಬ ಮಾತನ್ನು ಗಂಭೀರವಾಗಿ ತೆಗೆದುಕೊಂಡವನಿಗೆ ಉಂಟಾದ ಪರಿಸ್ಥಿತಿ ಮುಂದೇನಾಯ್ತು..?


ಬುದ್ಧಿಯ ಬಲ : ಮರ ಕಡಿಸುವ ಸಂದರ್ಭದಲ್ಲಿ, ಅದನ್ನು ಸಾಗಿಸಲು ಸಹಾಯಕವಾಗುವ ಆನೆಯ ವಿಚಾರವನ್ನು ಪ್ರಸ್ತಾಪಿಸುತ್ತಾ.. ಅದರ ದೇಹಬಲದ ಪ್ರದರ್ಶನವನ್ನು ಹೇಳುತ್ತಲೇ.. ಬುದ್ಧಿ ಬಲದ ಮುಂದೆ ದೇಹಬಲದ ದೌರ್ಬಲ್ಯವನ್ನು ವಿಶ್ಲೇಷಿಸುತ್ತಾರೆ. 


ಕಾಫಿ ನಾಡಿನಿಂದ ಕಾಂಕ್ರೀಟ್ ಕಾಡಿಗೆ.. : ಕಾಫಿ ನಾಡಿನಿಂದ ಕಾಂಕ್ರೀಟ್ ಕಾಡಿನತ್ತ ಸೆಳೆತ ಹುಟ್ಟಿಸಿಕೊಳ್ಳುತ್ತಿರುವವರಿಗೆ ಹುಟ್ಟುವ ಆಲೋಚನೆಗಳ ಮೂಲವೇನು ಹಾಗೂ ಇದೆಲ್ಲದಕ್ಕೂ ಅಲ್ಲಿನ ವಾತಾವರಣ ಹೇಗೆ ಬದಲಾದ ಪರಿಣಾಮ ತೋರುತ್ತಿದೆ ಎಂಬುದನ್ನು ಓದುವಾಗಲಂತೂ ಮನಸ್ಸು ಭಾರವಾಗುತ್ತದೆ. 


ಇಲ್ಲಿನ ರೋಚಕತೆ ಮಲೆನಾಡಿನತ್ತ ನಮ್ಮನ್ನು ಸೆಳೆದೊಯ್ಯುತ್ತದೆ. ಅಲ್ಲಿನ ವಾತಾವರಣವನ್ನು ಕಟ್ಟಿಕೊಡುತ್ತಲೇ.. ಅಲ್ಲಿನ ಸವಾಲುಗಳಿಗೂ ಸಾಕ್ಷಿಯಾಗಿಸುತ್ತದೆ. ಪ್ರಕೃತಿಯ ರೋಚಕತೆಯ ಜೊತೆಗೆ ಮನುಷ್ಯನ ಸೆಣೆಸಾಟ ಹೇಗಿದೆ ಎಂಬುದರ ಚಿತ್ರಣ ಇಲ್ಲಿದೆ. ಸರಾಗವಾಗಿ ಓದಿಸಿಕೊಳ್ಳುವ ಪುಸ್ತಕ. ಈ ಸರಣಿಯ ಪುಸ್ತಕಗಳನ್ನು ಒಂದೊಂದಾಗಿ ಮುಂದೆ ಪರಿಚಯಿಸುತ್ತಾ ಹೋಗುವೆ. 


~ವಿಭಾ ವಿಶ್ವನಾಥ್

ರಚನಾ (ಪುಸ್ತಕ ಯಾನ - 293)


ಪುಸ್ತಕದ ಶೀರ್ಷಿಕೆ : ರಚನಾ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸಾಹಿತ್ಯ ಸುಗ್ಗಿ ಪ್ರಕಾಶನ

ಪ್ರಥಮ ಮುದ್ರಣ : 1986

ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 180

ಬೆಲೆ : 200 ರೂ. 


ಈ ಕಾದಂಬರಿ ಸಿನಿಮಾ ತಾರೆ ಒಬ್ಬಳ ಕಥೆಯಾದರೂ ಕೊಂಚ ವಿಭಿನ್ನವಾಗಿದೆ. ಇದು ಕಾಲ್ಪನಿಕ ಕಥೆ ಎಂದು ಲೇಖಕಿ ಉಲ್ಲೇಖಿಸಿದ್ದಾರೆ. "ಆ ದಿನಗಳಲ್ಲಿ ಅನೇಕ ವಿವಾಹಿತ, ಅವಿವಾಹಿತ ತರುಣಿಯರು ನನ್ನನ್ನು ಅರಸಿ ಬರುತ್ತಿದ್ದರು. ತಮ್ಮ ಸಮಸ್ಯೆಗೆ ಸಮಾಧಾನ ಮತ್ತು ಪರಿಹಾರಕ್ಕಾಗಿ ಹುಡುಕಿ ಬರುತ್ತಿದ್ದರು. ಹೀಗೆ ಬರುತ್ತಿದ್ದವರು ಅವರ ಬಾಳಿಗೆ ಮಾತ್ರ ನಾಯಕಿಯರಾಗಿರದೆ, ನನ್ನ ಕಥೆ ಕಾದಂಬರಿಗಳಲ್ಲಿಯೂ ನಾಯಕರಾಗಿ ಮಿಂಚುತ್ತಿದ್ದರು. ಆದರೆ, ನನ್ನ ಕಲ್ಪನಾ ಪಾತ್ರವಾಗಿ ರಚನಾ ಸಹ ಅಂತಹ ಓರ್ವ ಸತ್ಯ. ಆದರೆ, ಕಲ್ಪಿತ ಕಥಾ ಪಾತ್ರ" ಎಂದು ಹೇಳಿದ್ದಾರೆ. 


ಈ ಕಾದಂಬರಿಯಲ್ಲಿ ಕೇವಲ ಸಿನಿಮಾ ತಾರೆಯ ಬದುಕಿನ ಕಥೆ ಮಾತ್ರವಲ್ಲದೆ, ಬದಲಾಗುವ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳು ಹಾಗೂ ಅದನ್ನು ಕಾಣುವ ಪರಿಯೂ ವ್ಯಕ್ತವಾಗಿದೆ. 


ಪ್ರಕಾಶ್ ಹಾಗೂ ವಿನುತಾರಿಗೆ ಮೂವರು ಮಕ್ಕಳು. ಕ್ರಮವಾಗಿ ರಚನಾ ಅರ್ಚನಾ ಹಾಗೂ ದೀಪಕ್. ಆದರೆ, ಮನೆಯಲ್ಲಿ ಪಿಂಕು, ಗುಡ್ಡಿ, ಡಿಂಪುಗಳೆಂದು ಅವರ ಹೆಸರು. ವಿನುತಾಳ ತವರಿನವರು ಉತ್ತರದ ಕಡೆಯವರು. ಹಾಗಾಗಿ, ಕನ್ನಡ ಮಾತೃಭಾಷೆಯಾದರೂ ಹಿಂದಿ ವ್ಯಾಮೋಹ ಅವರಲ್ಲಿ ಹೆಚ್ಚಾಗಿಯೇ ಇತ್ತು. ಮನೆಯಲ್ಲಿ ಎಲ್ಲರ ಮುದ್ದಿನ ಕೂಸಾಗಿ ಬೆಳೆಯುತ್ತಿದ್ದ ರಚನಾ ಮಾತನಾಡಲು ಮುನ್ನುಗ್ಗಿ ಹೋಗುತ್ತಿರಲಿಲ್ಲ. ಸ್ವಭಾವತಃ ವಾಚಾಳಿಯಾದವಳಲ್ಲ. ಯಾವುದೇ ವಿಚಾರಕ್ಕೂ ತಾನೇ ಮುಂದು ಎಂದು ಹೋಗುತ್ತಿರಲಿಲ್ಲ. ಆದರೆ, ಎಲ್ಲರ ಸಹಕಾರದಿಂದ ವುಮೆನ್ಸ್ ಕಾಲೇಜಿನಲ್ಲಿ ವರ್ಷದ ವೈಸ್ ಪ್ರೆಸಿಡೆಂಟ್ ಆಗಿ ಆಯ್ಕೆಯಾದವಳು. ಸ್ಟೇಜಿನ ಮೇಲೆ ಅತಿಥಿಗಳ ಜೊತೆ ಕೂರುವುದಷ್ಟೇ ಆಕೆಯ ಪಾಲಿಗೆ ಹೆಮ್ಮೆಯಾಗಿತ್ತು. ಗೆಳತಿಯರೆಲ್ಲರೂ ಆಕೆಗೆ ಶ್ರಮ ಕೊಡದಂತೆ ಯೂನಿಯನ್ ಕೆಲಸಗಳನ್ನು ತಾವೇ ನಿರ್ವಹಿಸುತ್ತಿದ್ದರು. ಕಾಲೇಜ್ ಡೇ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಚನಾ ಅಂದಿನ ಮುಖ್ಯ ಅತಿಥಿಯಾಗಿದ್ದ ಸುಪ್ರಸಿದ್ಧ ನಿರ್ಮಾಪಕ ಹಾಗೂ ನಿರ್ದೇಶಕರಾದ ಮೋಹನ್ ರಾಮ್ ಅವರ ಕಣ್ಣಿಗೆ ಬೀಳುತ್ತಾಳೆ. 


ಅದಾದ ನಂತರ ಮೋಹನ್ ರಾಮ್ ಅವರು ಕಾಲೇಜಿನ ಪ್ರಿನ್ಸಿಪಲ್ ಬೇಗಂ ಅವರ ಮೂಲಕ ಆಕೆಯನ್ನು ತನ್ನ ಚಿತ್ರದ ನಾಯಕಿಯನ್ನಾಗಿಸಿಕೊಳ್ಳುವ ಪ್ರಸ್ತಾಪವನ್ನು ಆಕೆಯ ಮನೆಯಲ್ಲಿ ಆಕೆಯ ತಂದೆ-ತಾಯಿಯ ಎದುರಿಗಿರುತ್ತಾರೆ. ನಾಟಕ, ನೃತ್ಯ, ಹಾಡು, ಅಭಿನಯ ಯಾವುದರ ಗಂಧಗಾಳಿಯೂ ಇಲ್ಲದ ಅವಳನ್ನು ನಾಯಕಿಯನ್ನಾಗಿಸಿಕೊಳ್ಳುವ ಪ್ರಸ್ತಾಪಕ್ಕೆ ತಂದೆಯಿಂದಲೇ ಮೊದಲಿಗೆ ಇದು ಸಾಧ್ಯವೇ..? ಎನ್ನುವ ಪ್ರಶ್ನೆ ಬರುತ್ತದೆ. ಆದರೆ, ರಚನಾಳ ತಾಯಿಗೆ ಮಾತ್ರ ತನ್ನ ಮಗಳು ಸಿನಿಮಾರಂಗಕ್ಕೆ ಸೇರುವುದೆಂದರೆ ಬಹಳ ಆಸಕ್ತಿ. ವಿನುತಾರ ಕನಸಿನಗೋಪುರ ಎತ್ತರಕ್ಕೆ ಬೆಳೆಯುತ್ತಿದ್ದಂತೆ.. ಪ್ರಕಾಶ್ ಅವರು ಮೌನವಾಗಿ ಕೇಳಿಸಿಕೊಳ್ಳುತ್ತಿರುತ್ತಾರೆ. ಅಷ್ಟೇ.. ಕೊನೆಗೆ ಎಲ್ಲರ ಒಪ್ಪಿಗೆ ಸಿಕ್ಕಿ ರಚನಾ ಸಿನಿಮಾ ನಟಿಯಾದಳು. 


'ಅರಳು ಮಲ್ಲಿಗೆ' ಚಿತ್ರದ ನಾಯಕಿ ರಚನಾ ಆದರೆ, ಖ್ಯಾತ ನಟ ಸಂದೀಪ್ ಆ ಚಿತ್ರದ ನಾಯಕ. ಎಲ್ಲರಿಗೂ ಈ ವಿಷಯ ತಿಳಿದು ಹುಬ್ಬೇರುತ್ತದೆ. ಅಂತಹಾ ಖ್ಯಾತ ನಟನೊಂದಿಗೆ ರಚನಾ ನಾಯಕಿಯಾಗುತ್ತಾಳೆ ಎಂದು ನಂಬಲೇ ಸಿದ್ಧರಿರಲಿಲ್ಲ ಕೆಲವರು. ರಚನಾಳ ಗೆಳತಿಯರಿಗಂತೂ ಆತನೆಂದರೆ ಎಲ್ಲಿಲ್ಲದ ಹುರುಪು. ಸಂದೀಪ್ ಸ್ನೇಹಮಯಿಯಾಗಿ ರಚನಾಳಿಗೆ ಅಭಿನಯದ ಕೆಲವು ಟಿಪ್ಸ್ ಗಳನ್ನು ನೀಡಿ ನೆರವಾಗುತ್ತಿದ್ದ. ಆಕೆಯ ಅಭಿನಯವನ್ನು ದಾರಿಗೆ ತರಲು ಮುಖ್ಯವಾಗಿ ಶ್ರಮಿಸಿದ್ದು ಮೋಹನ್ ರಾಮ್. ಯಾವಾಗಲೂ ರಚನಾ ತಾಯಿ ಅವಳೊಡನೆ ಇದ್ದೇ ಇರುತ್ತಿದ್ದರು. 


ರಚನಾಳ ಮುಗ್ಧತೆ ಹೇಗಿತ್ತೆಂದರೆ.. ಆಕೆ ತನ್ನ ಮುಂದಿನ ಭವಿಷ್ಯವನ್ನು ಹಾಗೂ ಸಿನಿಮಾದ ಯಶಸ್ಸನ್ನು ಸಹಾ ನಿರೀಕ್ಷಿಸಿರಲಿಲ್ಲ. ಮುಂದೇನು ಎಂಬ ಆಲೋಚನೆಯೂ ಅವಳಲ್ಲಿರಲಿಲ್ಲ. ಆದರೆ, ಅಚಾನಕ್ಕಾಗಿ ಒಂದು ದಿನ ಕಾಲೇಜಿನಿಂದ ಸಂದೀಪ್ ಕರೆ ಕಳುಹಿಸಿದ್ದನೆಂದು... ಡ್ರೈವರ್ ಜೊತೆ ಆತನನ್ನು ಭೇಟಿಯಾಗಲು ಹೊರಟಳು. ತನಗೆ ಆತನಿಂದ ಮತ್ತೊಂದು ಸಿನಿಮಾ ಚಾನ್ಸ್ ಸಿಗಬಹುದೇ..? ಅದಕ್ಕಾಗಿ ಕರೆಸಿರಬಹುದು ಎಂಬ ಆಸೆ ಅವಳಲ್ಲಿತ್ತು. ಮತ್ತೆ ಗೆಳತಿಯರ ಅಪೇಕ್ಷೆಯಂತೆ ಆತನನ್ನು ಭೇಟಿಯಾಗಲು ಅವನ ಅನುಮತಿ ಪಡೆದು ಗೆಳತಿಯರೊಂದಿಗೆ ಹೋಗಿದ್ದಳು. 


ಸಂದೀಪ್ ಬಂಗಲೆಯ ಹೆಸರು 'ಕರುಣ'. ಆತನ ಮಡಿದ ಪತ್ನಿಯ ಹೆಸರು. ಆತನಿಗೆ ಇಬ್ಬರು ಮಕ್ಕಳಿದ್ದರು. ಎಂಟು ವರ್ಷದ ಪೃಥ್ವಿ ಹಾಗೂ ನಾಲ್ಕು ವರ್ಷದ ಧರಣಿ. ಆದರೆ, ಆತನ ವೈಯಕ್ತಿಕ ಜೀವನ ಹೊರಗಡೆ ಎಲ್ಲಿಯೂ ಹೆಚ್ಚು ಜನರಿಗೆ ತಿಳಿದಿರಲಿಲ್ಲ. ಆತನ ವಯಸ್ಸು ಕಾಣುವಂತಿರಲಿಲ್ಲ. ಜೊತೆಗೆ ಆತ ಎಲ್ಲರೊಡನೆ ವರ್ತಿಸುವ ರೀತಿ ಸ್ನೇಹಮಯವಾಗಿದ್ದರಿಂದ.. ಸ್ಟಾರ್ಡಂ ಪ್ರಶ್ನೆಯೇ ಇರಲಿಲ್ಲ. ಹಾಗಾಗಿ, ಸಂದೀಪ್ ಎಲ್ಲರಿಗೂ ಅಚ್ಚುಮೆಚ್ಚು. ಗಾಸಿಪ್ ಗಳಿರಲಿಲ್ಲ. 


ರಚನಾ ಮುಂದೆ ನಟಿಯಾದರೆ ಆಕೆ ವೃತ್ತಿ ಬದುಕಿನಲ್ಲಿ ಸೋಲುತ್ತಾಳೆ ಎಂಬ ಆಲೋಚನೆಯನ್ನು ಮಾತಿನಲ್ಲಿ ಸಂದೀಪ್ ಪ್ರಕಟಿಸಿದ್ದೇಕೆ..? ತಂದೆ-ತಾಯಿಯ ವಿರೋಧವನ್ನು ಮೀರಿ ಸಂದೀಪ್ ನನ್ನು ರಚನಾ ವಿವಾಹವಾಗಲು ಕಾರಣವಾದರೂ ಏನು..?


ವಿವಾಹದ ನಂತರ ರಚನಾ ಕಂಡ ಸಂದೀಪ್ ಬೇರೆಯೇ.. ಹಾಗೆಂದು ಆತನೇನೂ ಖಳನಾಯಕನಲ್ಲ. ಆದರೆ, ಮಧ್ಯಮ ವರ್ಗದಿಂದ ಬಂದಿದ್ದ ರಚನಾಳಿಗೂ ಆತನ ಬದುಕಿನ ರೀತಿ-ನೀತಿಗೂ ಅಜಗಜಾಂತರ ವ್ಯತ್ಯಾಸ. ಅದಕ್ಕೆ ಹೊಂದಿಕೊಳ್ಳುವ ಮನಸ್ಸು ಮಾಡಿದಳಾದರೂ ಅದಷ್ಟು ಸುಲಭವಾಗಿರಲಿಲ್ಲ. ಅದಕ್ಕೆ ಕಾರಣಳಾದವಳು ಅರುಣ. 


ಮಕ್ಕಳ ಹಾಗೂ ಮನೆಯ ನಿರ್ವಹಣೆ ಮಾಡುತ್ತಾ ಸಂದೀಪ್ ಗೆ ಪ್ರತಿಯೊಂದರಲ್ಲಿಯೂ ತನ್ನ ಛಾಯೆ ಮೂಡಿಸುತ್ತಿದ್ದವಳು ಅರುಣ. ಅವಳು ಸಂದೀಪ್ ನ ಮೊದಲ ಮಡದಿ ಕರುಣಾಳ ತಂಗಿ. 


ಕರುಣಾಳ ನೆನಪಿನಿಂದ ತನ್ನ ವೈವಾಹಿಕ ಜೀವನಕ್ಕೆ ಕೊಂಚ ತೊಂದರೆ ಆಗಬಹುದೆಂದು ರಚನಾ ಊಹಿಸಿದ್ದರೂ.. ಅವಳೆಂದುಕೊಂಡಂತೆ ಆಗಲಿಲ್ಲ. ಅವಳ ಪಾಲಿಗೆ ಮುಳ್ಳಾಗಿದ್ದು ಅರುಣ. 


ಎಲ್ಲದರಲ್ಲಿಯೂ ಡಾಮಿನೇಟ್ ಆಗಿ ಪ್ರತಿಯೊಂದಕ್ಕೂ ಸಂದೀಪ್ ಗೆ ಹತ್ತಿರವಾಗಿದ್ದ ಅರುಣಳನ್ನು ಬಿಟ್ಟು ಸಂದೀಪ್, ರಚನಾಳನ್ನು ಮದುವೆಯಾಗಿದ್ದರೂ ಏಕೆ..?


ರಚನಾಳ ಮುಂದಿನ ಬದುಕು ಹೇಗಿತ್ತು ಹಾಗೂ ಅವಳ ಸಿನಿಮಾ ಭವಿಷ್ಯ ಏನಾಯ್ತು..?


ಅತ್ತ ತಂದೆ-ತಾಯಿಯರ ರಕ್ಷಣಾಕವಚವಿಲ್ಲದೆ, ಇತ್ತ ಗಂಡನ ಸಂಪೂರ್ಣ ಭದ್ರತೆಯೂ ಇಲ್ಲದೆ ಬಂಗಾರದ ಪಂಜರದಲ್ಲಿ ಸಿಲುಕಿದ ರಚನಾಳ ಪಾಡು ಏನಾಯಿತು..? 


ಲೇಖಕಿ ಈ ಕಾದಂಬರಿಯನ್ನು ಕೊಂಡೊಯ್ದಿರುವ ಬಗೆ ಬಹಳ ಇಷ್ಟವಾಯಿತು. ರಚನಾ ಹೇಡಿಯಂತೆ ಹೆದರಿ ಓಡಲಿಲ್ಲ ಅಥವಾ ತನ್ನ ಬದುಕಿನ ನಿರ್ಧಾರಕ್ಕಾಗಿ ಪರಿತಪಿಸಲಿಲ್ಲ. ಆಕೆಯ ನೋವು ಮನದಾಳದಲ್ಲಿದ್ದರೂ.. ಆಕೆ ಮತ್ತೆ ತನ್ನ ಜೀವನದಲ್ಲಿ ತೆಗೆದುಕೊಂಡ ನಿರ್ಧಾರ ಹೆಣ್ಣುಮಕ್ಕಳಿಗೆ ಮಾದರಿಯಾಗುವಂತಿದೆ. ಸಿನಿಮಾ ನೋಡಿ ಅದರ ವಿಮರ್ಶೆಯನ್ನೇ ಮಾಡಲು ಹಿಂಜರಿಯುತ್ತಿದ್ದ ರಚನಾ ಮುಂದೆ ತನ್ನ ಬದುಕಿನ ನಿರ್ಧಾರವನ್ನು ತಾನೇ ತೆಗೆದುಕೊಳ್ಳುವಷ್ಟು ಗಟ್ಟಿಯಾಗುತ್ತಾಳೆ. ಪ್ರಬುದ್ಧವಾಗುತ್ತಾಳೆ. ಇದೆಲ್ಲದಕ್ಕೂ ಸಮಯ-ಸಂದರ್ಭ ಕಾರಣವಾದರೂ ಇದು ಒಂದು ದಿನದ ಅಥವಾ ಯಾರೋ ಕೊಟ್ಟ ಧೈರ್ಯದ ಕಾರಣದಿಂದಲ್ಲ. ಬದಲಾಗಿ, ಆಂತರಿಕ ಶಕ್ತಿಯಿಂದ. ಪ್ರತಿ ಹೆಣ್ಣಿನಲ್ಲಿಯೂ ಇಂತಹಾ ಶಕ್ತಿಯಿರುತ್ತದೆ. ಅವರ ಬದುಕಿನ ಹಾಗೂ ಭವಿಷ್ಯದ ರಕ್ಷಣೆಯನ್ನು ಅವರೇ ಮಾಡಿಕೊಳ್ಳಬೇಕು. ಅಂತಹಾ ಗಟ್ಟಿತನದ ಪಾತ್ರದ ಮೂಲಕ ಸ್ಪೂರ್ತಿ ತುಂಬುತ್ತಾರೆ ಲೇಖಕಿ. 


ಇದು ಮುಖ್ಯವಾಗಿ ಸಿನಿಮಾ ತಾರೆಯೊಬ್ಬಳ ಕಥೆಯಾದರೂ.. ಉದ್ಯೋಗಕ್ಕೆ ಹೋಗುವ ಪ್ರತಿಯೊಂದು ಹೆಣ್ಣು ಸಹಾ ಇಂತಹ ಸಂದರ್ಭವನ್ನು ಅನುಭವಿಸಿರಬಹುದು ಅಥವಾ ಅವಳ ಮುಂದೆ ಎರಡು ಆಯ್ಕೆಗಳಿರಬಹುದು. ಆಗ ಅವಳು ಆಯ್ದುಕೊಳ್ಳುವ ದಾರಿ ಹೇಗಿರಬೇಕು ಎಂಬುದರ ದಾರಿದೀಪದಂತೆಯೂ ಇರುವ ಕಾದಂಬರಿ ಇಷ್ಟವಾಯಿತು. 

~ವಿಭಾ ವಿಶ್ವನಾಥ್

ಮಿಂಚಿದ್ದಕ್ಕೆ ಚಿಂತಿಸಿ.... (ಪುಸ್ತಕ ಯಾನ - 292)


ಪುಸ್ತಕದ ಶೀರ್ಷಿಕೆ : ಮಿಂಚಿದ್ದಕ್ಕೆ ಚಿಂತಿಸಿ....

ಲೇಖಕರು : ತನುಜ

ಪ್ರಕಾಶಕರು : ವಿಶ್ವಾಸ್ ಗ್ರಂಥಮಾಲೆ, ಶಿವಮೊಗ್ಗ

ಪ್ರಥಮ ಮುದ್ರಣ : 1990

ಪುಟಗಳು : 171


ಇದು ನಾನು ಓದಿದ ತನುಜ ಅವರ ಮೊದಲ ಪುಸ್ತಕ. ಮಿಂಚಿದ್ದಕ್ಕೆ ಚಿಂತಿಸಿ.. ಎಂಬ ಸಾಮಾಜಿಕ ಕಾದಂಬರಿಯಲ್ಲಿ ಮನುಷ್ಯನಲ್ಲಿರುವ ಗ್ರೇ ಶೇಡ್ ಗಳನ್ನು ಅವರು ಬಹಳ ಚಂದವಾಗಿ ಚಿತ್ರಿಸಿದ್ದಾರೆ. ಒಬ್ಬರು ಒಳ್ಳೆಯವರಾ ಅಥವಾ ಕೆಟ್ಟವರಾ ಎಂಬುದನ್ನು ತೀರ್ಮಾನಿಸುವುದು, ನಾವು ನೋಡುವ ಗುಣ ಜೊತೆಗೆ ಆ ಸಮಯ ಹಾಗೂ ಸಂದರ್ಭದಲ್ಲಿ ಅವರವರ ವರ್ತನೆಗಳು ಹೇಗಿರುತ್ತವೆ ಎಂಬುದು ಆಯಾ ಸಂದರ್ಭ ಹಾಗೂ ಸಮಯದ ಮೇಲೆ ನಿರ್ಧರಿತ. ಕೆಲವರು ಎಷ್ಟೇ ಒಳ್ಳೆಯವರಾಗಿದ್ದರೂ.. ಕೆಲ ಸಂದರ್ಭದಲ್ಲಿ ಅವರು ವರ್ತಿಸುವ ರೀತಿ ಅವರನ್ನು ಕೆಟ್ಟವರನ್ನಾಗಿಸಬಹುದು ಅಥವಾ ಕೆಟ್ಟವರನ್ನಾಗಿ ಪರಿವರ್ತಿಸಬಹುದು. ಸಂಬಂಧಗಳಲ್ಲಿ ತಾಳ್ಮೆ ಹಾಗೂ ಸಹನೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಡುತ್ತದೆ ಈ ಕಾದಂಬರಿ. ಇಷ್ಟೇ ಅಲ್ಲದೆ, ಬಿರುಕು ಬಿಟ್ಟ ಸಂಬಂಧಗಳಲ್ಲಿ ಒಬ್ಬರನ್ನೊಬ್ಬರು ನೋಡುವ ದೃಷ್ಟಿ ಸಮಯ ಕಳೆದರೆ ಹೇಗೆ ಬದಲಾಗಬಹುದು ಎಂಬುದರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. 


ನಾನು ಈ ಕಾದಂಬರಿಯಲ್ಲಿ ಗಮನಿಸಿದಂತೆ ಹೆಚ್ಚಿನ ಪಾತ್ರಗಳಿಲ್ಲ. ನೇರವಾಗಿ ಹಾಗೂ ಸರಾಗವಾಗಿ ಸಾಗುವ ಕಥೆಯಲ್ಲಿ ಪಾತ್ರಗಳು ಬಂದರೂ.. ಅದನ್ನು ಮುಖ್ಯಪಾತ್ರದ ತಂದೆ, ತಾಯಿ ಅಥವಾ ಅಕ್ಕ-ತಂಗಿ ಈ ರೀತಿಯಲ್ಲಿ ಪರಿಚಯಿಸುತ್ತಾರೆಯೇ ಹೊರತು ಅವರ ಹೆಸರುಗಳನ್ನು ನಮೂದಿಸಿಲ್ಲ. ಇದು ಲೇಖಕಿಯ ಶೈಲಿಯಾ ಅಥವಾ ಅವರ ಆರಂಭಿಕ ದಿನಗಳ ಕಾದಂಬರಿ ಇರಬಹುದಾ ತಿಳಿದಿಲ್ಲ. ಅವರ ಬೇರೆ ಪುಸ್ತಕಗಳನ್ನು ಓದಿದ ನಂತರ ಶೈಲಿಯನ್ನು ಅರಿಯಬಹುದು.  


ದೀಪ್ತಿ ತನ್ನ ಮಗ ಎರಡು ವರ್ಷದ ಅಭಿನಂದನ್ ನನ್ನು ಸುಧಾರಿಸುವಷ್ಟರಲ್ಲಿ ಸಾಕಾಗಿ ಹೋಗಿರುತ್ತಿದ್ದಳು. ಅವನ ಎಲ್ಲವನ್ನು ತಿಳಿಯುವ ದೃಷ್ಟಿ ಹಾಗೂ ಗಮನಿಸಿ ಕೇಳುವ ಪ್ರಶ್ನೆಗಳಿಗೆ ಆತನಿಗೆ ಸಮಾಧಾನವಾಗುವಂತೆ ಉತ್ತರ ನೀಡಬೇಕಿತ್ತು. ಆದರೆ, ಅವನದ್ದು ಇನ್ನೂ ಬಾಲ ಭಾಷೆಯಾದ್ದರಿಂದ ಮಾತನಾಡಲು ಬರುತ್ತಿರಲಿಲ್ಲವಾದ್ದರಿಂದ.. ಅದನ್ನು ಅರ್ಥೈಸಿಕೊಳ್ಳುವುದೇ ಒಂದು ಸವಾಲಾಗುತ್ತಿತ್ತು. ದೀಪ್ತಿ ದಂಪತಿಗಳು ಮಗನನ್ನು ಮುದ್ದಿನಿಂದ ನಂದು ಎಂದು ಕೂಗುತ್ತಿದ್ದರು. ಉಜ್ವಲ್ ಹಾಗೂ ದೀಪ್ತಿಯರ ಮುದ್ದಿನ ಕೂಸಾಗಿ ಬೆಳೆಯುತ್ತಿದ್ದ.


ಇತ್ತ ಉಜ್ವಲ್ ಗೆ ನಂದುವನ್ನು ನೋಡಿದಾಗಲೆಲ್ಲಾ.. ನಂದುವಿನ ಬಾಲ್ಯದ ದಿನಗಳು ಹಾಗೂ ತುಂಟಾಟವನ್ನು ಕಂಡಾಗಲೆಲ್ಲಾ ಮೊದಲಿಗೆ ನೆನಪಾಗುತ್ತಿದ್ದದ್ದು ಸಂಭ್ರಮ್.


ಐಶ್ವರ್ಯ ಹಾಗೂ ಉಜ್ವಲ್ ರ ಮಗ ಸಂಭ್ರಮ್. ಈಗ ಅವರಿಬ್ಬರ ದಾಂಪತ್ಯ ಬದುಕಿಗೆ ವಿಚ್ಛೇದನ ಸಿಕ್ಕಿತ್ತು. ಸಂಭ್ರಮ್ ಐಶ್ವರ್ಯಳ ಬಳಿ ಬೆಳೆಯುತ್ತಿದ್ದ. ಭೇಟಿ ಮಾಡುವ ಆಸೆ ಇದ್ದರೂ.. ಐಶ್ವರ್ಯಳ ಶಿಸ್ತು, ಕೋಪ ಹಾಗೂ ಮಗನಿಗೆ ನೀಡುತ್ತಿದ್ದ ಶಿಕ್ಷೆಯನ್ನು ಕಂಡು ಹೆದರುತ್ತಿದ್ದ ಉಜ್ವಲ್. ಆದರೂ ಕದ್ದುಮುಚ್ಚಿ ಭೇಟಿಯಾಗುವುದು ತಪ್ಪಿರಲಿಲ್ಲ. ತನ್ನ ಮಗ ತಂದೆಯೆಡೆಗೆ ಹೆಚ್ಚೆಚ್ಚು ಆಕರ್ಷಿತನಾಗುತ್ತಿದ್ದಾಗಲೆಲ್ಲಾ ಐಶ್ವರ್ಯಾಳಿಗೆ ಅಭದ್ರತೆ ಕಾಡಿ, ಎಲ್ಲಿಲ್ಲದ ಕೋಪ ಬರುತ್ತಿತ್ತು. ಶೀಘ್ರ ಕೋಪಿತನವನ್ನು ಹೊರತುಪಡಿಸಿ ಆಕೆ ಉತ್ತಮ ತಾಯಿ, ಧೈರ್ಯವಂತ ಹೆಣ್ಣು. 


ಶ್ರೀಮಂತರ ಮನೆಯ ಮಗಳಾಗಿದ್ದ ಅವಳು ಉಜ್ವಲ್ ನ ಪತ್ನಿಯಾಗಿ ಮನೆ ತುಂಬಿದ್ದಳು. ಉಜ್ವಲ್ ಮನೆಯಲ್ಲಿದ್ದ ತುಂಬು ಕುಟುಂಬದಲ್ಲಿ ಎಷ್ಟೇ ಹೊಂದಿಕೊಂಡರೂ ಸಹಕಾರ ಸಿಗಲಿಲ್ಲ. ಅದು ಪ್ರೇಮ ವಿವಾಹವೂ ಅಲ್ಲವಾದ್ದರಿಂದ ತನ್ನ ಸ್ವಾಭಿಮಾನವನ್ನು ಬದಿಗೊತ್ತಿ, ತೀರಾ ತಗ್ಗಿ-ಬಗ್ಗಿ ನಡೆಯಲಾಗದಾದಾಗ ತನ್ನ ಆತ್ಮಾಭಿಮಾನಕ್ಕೆ ಪೆಟ್ಟು ಬಿದ್ದಾಗ ಮಗನೊಡನೆ ಬೇರಾಗಿದ್ದಳು. ಐಶ್ವರ್ಯ ತನ್ನ ತಂದೆ-ತಾಯಿ ತೀರಿಕೊಂಡ ನಂತರ, ಅಣ್ಣಂದಿರು ಆಸ್ತಿಯನ್ನು ಪಾಲು ಮಾಡಿಕೊಂಡ ನಂತರ, ಕೆಲಸಕ್ಕೆ ಸೇರಿ ಸ್ವತಂತ್ರವಾಗಿ ಜೀವನ ಕಟ್ಟಿಕೊಂಡಿದ್ದಳು. ರಾಮು ಅವಳಿಲ್ಲದಾಗ ಸಂಭ್ರಮ್ ನ ಕೇರ್ ಟೇಕರ್ ಆಗಿದ್ದ. ಮನೆಯಲ್ಲಿ ಅಡುಗೆ ಮಾಡಿಕೊಂಡು ಮನೆಯನ್ನು ನಿಭಾಯಿಸುತ್ತಿದ್ದ. ಉಜ್ವಲ್ ಹಾಗೂ ಸಂಭ್ರಮ್ ನ ಭೇಟಿ ಆತನಿಗೆ ತಿಳಿಯದ ವಿಷಯವೇನಲ್ಲ. ಇದು ಐಶ್ವರ್ಯಾಳಿಗೆ ತಿಳಿದು ಪರಿಸ್ಥಿತಿ ವಿಕೋಪಕ್ಕೆ ಹೋದಾಗಲೆಲ್ಲಾ ಆಕೆಯನ್ನು ಸಂತೈಸುತ್ತಿದ್ದನು.


ಕೋಪದಿಂದ ಹೆಚ್ಚು ಪೆಟ್ಟುಗಳನ್ನು ತಿಂದ ಸಂಭ್ರಮ್ ಗೆ ಜ್ವರ ಬಂದದ್ದೇ ನೆಪವಾಗಿ, ತೀವ್ರವಾಗಿ ನರಳಿ ಕಣ್ಣನ್ನು ಬಿಡಲಾಗದೇ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಇತ್ತ ನಂದುವನ್ನು, ಅವನ ಹಠವನ್ನು ಸಂಭಾಳಿಸಲು ಹೊರ ಕರೆದುಕೊಂಡು ಹೋಗಿದ್ದ ಉಜ್ವಲ್ ಗೆ ಅಪಘಾತವಾಗಿ ಆತ ಆಸ್ಪತ್ರೆ ಸೇರುವಂತಾಗಿತ್ತು. 


ದೀಪ್ತಿ ಉಜ್ವಲನ ಪತ್ನಿಯಾಗುವಷ್ಟರಲ್ಲಿ ಉಜ್ವಲ್ ಒಡಹುಟ್ಟಿದವರಿಗೆಲ್ಲಾ ವಿವಾಹವಾಗಿ ತಮ್ಮ-ತಮ್ಮ ಕುಟುಂಬಕ್ಕೆ ಸೇರಿ ಹೋಗಿದ್ದರು. ಆತನ ತಂದೆ-ತಾಯಿಯೂ ತೀರಿಕೊಂಡದ್ದರಿಂದ ಆತನ ಹಿಂದಿನ ವಿಚಾರಗಳಾವುವೂ ದೀಪ್ತಿಗೆ ತಿಳಿದಿರಲಿಲ್ಲ. ಅಪರಿಮಿತವಾಗಿ ಅವನನ್ನು ಪ್ರೀತಿಸುತ್ತಿದ್ದವಳು. ಆತನು ತನ್ನಿಂದ ಏನನ್ನು ಮರೆಮಾಚಬಾರದೆಂದು ಅಪೇಕ್ಷಿಸುತ್ತಿದ್ದಳು. ಸಂಭ್ರಮ್ ಪೋಷಣೆಯ ಜವಾಬ್ದಾರಿ ಉಜ್ವಲನದ್ದೇ ಆದರೂ ಈಗ ಮಗು ತಾಯಿಯ ಬಳಿ ಬೆಳೆಯಬೇಕೆಂದು ಕೋರ್ಟ್ ಹೇಳಿತ್ತು. ಮುಂದಾದರೂ ದೀಪ್ತಿಗೆ ಈ ವಿಚಾರ ತಿಳಿಯಲೇಬೇಕಿತ್ತು. 


ಅಪಘಾತವಾಗಿ ಆಸ್ಪತ್ರೆ ಸೇರಿದ ಉಜ್ವಲ್ ಪರಿಸ್ಥಿತಿ ತಿಳಿದ ರಾಮು ಇದನ್ನು ಹೇಗೆ ನಿಭಾಯಿಸಿದ..? ಉಜ್ವಲ್ ಹಾಗೂ ಸಂಭ್ರಮ್ ಪರಿಸ್ಥಿತಿಗಳು ಹೇಗೆ ಸುಧಾರಿಸಿದವು..? 


ದೀಪ್ತಿ ಹಾಗೂ ಐಶ್ವರ್ಯ ಅಪರಿಚಿತರೇನೂ ಆಗಿರಲಿಲ್ಲ. ಆದರೆ, ಒಬ್ಬರಿಗೊಬ್ಬರ ಬದುಕಿನ ಅರಿವಿರಲಿಲ್ಲ ಅಷ್ಟೇ.. ಅಚಾನಕ್ಕಾಗಿ ಆಸ್ಪತ್ರೆಯಲ್ಲಿ ಭೇಟಿಯಾದ ದೀಪ್ತಿ ಹಾಗೂ ಐಶ್ವರ್ಯರಿಗೆ ಮತ್ತೆ ಆತ್ಮೀಯರಾಗುವ ಸಂದರ್ಭ ಒದಗಿ ಬಂದಿತ್ತು. ಅವರಿಬ್ಬರೂ ಹೇಗೆ ಪರಸ್ಪರ ಪರಿಚಿತರು ಹಾಗೂ ಅಪರಿಚಿತರಾಗಿದ್ದ ಸಂದರ್ಭವಾದರೂ ಏನಿತ್ತು..?


ಐಶ್ವರ್ಯ ದೀಪ್ತಿಯ ಬಳಿ ತನ್ನ ವಿಚಾರವನ್ನೆಲ್ಲ ಹೇಳಿಕೊಂಡರೂ ಉಜ್ವಲ್ ನ ಹೆಸರನ್ನು ಬಳಸಲಿಲ್ಲ. ದೀಪ್ತಿಯೂ ತನ್ನ ಅಸಹಾಯಕತೆಯನ್ನು ತೋಡಿಕೊಂಡರೂ ಉಜ್ವಲ್ ನ ಪತ್ನಿ ಅವಳೆಂದು ಐಶ್ವರ್ಯಗಳಿಗೆ ತಿಳಿಯಲಿಲ್ಲ. ಅದು ಬೇಕೆಂದು ಮರೆಮಾಚಿದ್ದಲ್ಲ. ಆದರೆ, ಸಂದರ್ಭ ಆಗಿತ್ತು. 


ಸಂಭ್ರಮ್ ನ ದೃಷ್ಟಿಯಲ್ಲಿ ಕಾಣುವ ತಾಯಿ ಐಶ್ವರ್ಯ, ಉಜ್ವಲನ ಪತ್ನಿಯಾಗಿ ಕಾಣುವ ಐಶ್ವರ್ಯಳಿಗೂ ಕೊಂಚ ಹೊಂದುತ್ತಿದ್ದರೂ.. ದೀಪ್ತಿ ಕಂಡಿದ್ದ ಐಶ್ವರ್ಯಾಳಿಗೂ ಹಾಗೂ ತನ್ನ ಬದುಕನ್ನು ಬಿಚ್ಚಿಡುವ ಐಶ್ವರ್ಯಳಿಗೂ ಅಜಗಜಾಂತರ ವ್ಯತ್ಯಾಸ. ಉಜ್ವಲ್ ವಿಷಯದಲ್ಲಿಯೂ ಹೀಗೆಯೇ.. ಐಶ್ವರ್ಯ ಹೇಳುತ್ತಿದ್ದಾಗಿನ ಉಜ್ವಲ್ ಗೂ.. ದೀಪ್ತಿಯ ಪತಿ ಉಜ್ವಲ್ ಗೂ ಅಜಗಜಾಂತರ ವ್ಯತ್ಯಾಸ.


ಎಲ್ಲರಿಗೂ ಪರಸ್ಪರ ವಿಚಾರಗಳು ಅರಿವಾಗಿತೇ..? ಇಲ್ಲಿ ಯಾರ ನೋಟ ಸರಿ ಹಾಗೂ ಯಾರದ್ದು ತಪ್ಪು ಎನ್ನುವುದಕ್ಕಿಂತ ಪರಿಸ್ಥಿತಿ ಹಾಗೂ ಸಂದರ್ಭದಲ್ಲಿ ಅವರ ಮುಂದಿನ ಬದುಕು ಏನಾಯ್ತು ಎಂಬುದನ್ನು ಕುತೂಹಲವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕಿ. 


ಮಿಂಚಿದ್ದಕ್ಕೆ ಚಿಂತಿಸಿ.. ಫಲವಿಲ್ಲವೆಂದು ಬದುಕು ಕಟ್ಟಿಕೊಂಡರೇ ಅಥವಾ ಮಿಂಚಿದ್ದಕ್ಕೆ ಚಿಂತಿಸಿ.. ತಮ್ಮ ಈಗಿನ ಹಾಗೂ ಮುಂದಿನ ಬದುಕಿನ ನೆಮ್ಮದಿಯನ್ನು ಹಾಳು ಮಾಡಿಕೊಂಡರೇ..? ತಿಳಿಯಲು ಓದಿ ಮಿಂಚಿದ್ದಕ್ಕೆ ಚಿಂತಿಸಿ.. ಕಾದಂಬರಿಯನ್ನು.

~ವಿಭಾ ವಿಶ್ವನಾಥ್

ಹೇಮಂತದ ಸೊಗಸು (ಪುಸ್ತಕ ಯಾನ - 291)

ಪುಸ್ತಕದ ಶೀರ್ಷಿಕೆ : ಹೇಮಂತದ ಸೊಗಸು

ಲೇಖಕರು : ಸಾಯಿಸುತೆ

ಪ್ರಕಾಶಕರು : ಕರ್ನಾಟಕ ಸಾಹಿತ್ಯ ಪ್ರಕಾಶನ

ಪ್ರಥಮ ಮುದ್ರಣ : 1992

ಪುಟಗಳು : 161


ಹೇಮಂತದ ಸೊಗಸು ಕಾದಂಬರಿಯನ್ನು ಓದಿದಾಗ ಇಲ್ಲಿ ವಾಸ್ತವತೆಗೆ ಹೆಚ್ಚಿನ ಒತ್ತು ಕೊಟ್ಟಿರುವ ಲೇಖಕಿಯವರ ನಿಲುವನ್ನು ನಾನು ಸಮರ್ಥಿಸುತ್ತೇನೆ. 


ಪ್ರಕೃತಿಯ ಸೌಂದರ್ಯವನ್ನು ಅದರಲ್ಲಿಯೂ ಸೇತುವೆಯ ಮೇಲೆ ನಿಂತು ಕೆಳಗೆ ಹರಿಯುವ ನೀರನ್ನು ನೋಡುವುದು ಪ್ರಭುವಿನ ಅಭ್ಯಾಸ. ಈ ಸ್ಥಳ ಕಾದಂಬರಿಯಲ್ಲಿ ಆಗಾಗ ಕಾಣಿಸುತ್ತದೆ. "ನೋಟ ಒಂದಿಷ್ಟು ವಿಶಾಲವಾದರೆ ನಿಸರ್ಗ ಅತ್ಯಂತ ರಮಣೀಯ" ಎನ್ನುವ ಮಾತಂತೂ ಬಹಳವೇ ಸತ್ಯ. 


ಚಿದಂಬರಯ್ಯ ಹಾಗೂ ಸೌಭಾಗ್ಯ ಅವರ ಏಕೈಕ ಪುತ್ರ ಪ್ರಭುಪ್ರಸಾದ್ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದವನು. ವಿದ್ಯಾರ್ಥಿಗಳೆಲ್ಲರಿಗೂ ಅಚ್ಚುಮೆಚ್ಚು. ಕಾಲೇಜಿನಲ್ಲಿಯೂ ಬಹಳ ಒಳ್ಳೆಯ ಹೆಸರಿತ್ತು. ಪಾಠ ಹೇಳುವ ರೀತಿಯಲ್ಲಿ ಮೋಡಿ ಇದ್ದಂತೆ, ಅಷ್ಟೇ ಶಿಸ್ತಿನ ಅಧ್ಯಾಪಕ ಕೂಡಾ. ಆತನಿಗೆ ಅಷ್ಟೇ ಹೆದರುತ್ತಿದ್ದರು ವಿದ್ಯಾರ್ಥಿಗಳು. ಅಂತಹಾ ವಿದ್ಯಾರ್ಥಿಗಳ ನಡುವಲ್ಲಿ ವಿಭಿನ್ನ ನಡೆಯಿಂದ ಪ್ರಭುವನ್ನು ಚಿಂತೆಗೊಳಪಡಿಸಿದವಳು ಸವಿತಾ.


ಹೆಸರಾಂತ ಉದ್ಯಮಿಗಳಾದ ಹರಿಹರನ್ ಅವರ ಮಗಳು. ನೇರವಾಗಿ ಪ್ರಭುವಿನ ಬಳಿಯಲ್ಲಿ ಪತ್ರದ ಮೂಲಕ ಪ್ರೇಮ ಪ್ರಸ್ತಾಪ ಮಾಡಿದ್ದಳು. ಆದರೆ, ಪ್ರಭು ಅದನ್ನು ಮೊದಲಿಗೆ ಹುಡುಗಾಟಿಕೆ ಎಂದು ನಿರ್ಲಕ್ಷಕ್ಕೆ ಅದರ ಕುರಿತಾಗಿ ಎಚ್ಚರಿಕೆ ನೀಡಿದ್ದರೂ ಅದು ತಪ್ಪಿರಲಿಲ್ಲ. ಅದಾದ ನಂತರದ ಘಟನೆಗಳು ಆತನ ಬದುಕಿನಲ್ಲಿ ನೆಮ್ಮದಿ ತಂದುಕೊಟ್ಟಿದ್ದವು. ಅದಕ್ಕೆ ಕಾರಣ ಸವಿತಾ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೊರಟದ್ದು. ಎರಡು ವರ್ಷಗಳ ನಂತರ ಬಂದ ಸವಿತಾ ಮತ್ತೆ ಧುತ್ತೆಂದು ಅವನ ಎದುರಲ್ಲಿ ನಿಂತಳು. ಆಗಲೂ ಮತ್ತದೇ ಪ್ರೇಮ ಪ್ರಸ್ತಾವನೆಯೇ.. 


ಪ್ರಭುವಿನ ಪಕ್ಕದ ಮನೆಯಲ್ಲಿದ್ದದ್ದು ಶಾಂತಿ ಹಾಗೂ ಮಾಧವರ ಪುಟ್ಟ ಸುಂದರ ಸಂಸಾರ. ಗಂಡ-ಹೆಂಡತಿ ಇಬ್ಬರೂ ಅತಿಥಿಸತ್ಕಾರ ಮಾಡುವುದರಲ್ಲಿ ಎತ್ತಿದ ಕೈ. ಅದರಲ್ಲೂ ಚಿಕ್ಕಂದಿನಿಂದ ಸ್ನೇಹಿತರಂತೆಯೇ ಬೆಳೆದಿದ್ದ ಶಾಂತಿಗೆ ಪ್ರಭುವಿನಲ್ಲಿ ಸಲುಗೆ ಹೆಚ್ಚು. ಪ್ರಭುವಿಗೂ ಅಷ್ಟೇ ಶಾಂತಿ ಎಂದರೆ ಒಂದು ರೀತಿಯ ಸಲುಗೆ ಹಾಗೂ ಗೌರವ. ಇವರ ಸ್ನೇಹಕ್ಕೆ ಹಾಗೂ ನಿಷ್ಕಲ್ಮಶವಾದ ಬಂಧಕ್ಕೆ ಎಂದಿಗೂ ಅಡ್ಡ ಬಂದವನಲ್ಲ ಮಾಧವ. ಅವರಿಗೆ ಪ್ರೀತಿಯ ಪುಟ್ಟ ಮಗಳು ಸ್ವಪ್ನ ಇದ್ದಳು. ಶಾಂತಿ ಹಾಗೂ ಮಾಧವರ ಅನ್ಯೋನ್ಯ ದಾಂಪತ್ಯವನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ ಲೇಖಕಿ.


ಪ್ರಭುವಿನ ತಾಯಿ ಇಲ್ಲದಾಗ ಅಥವಾ ತನ್ನ ಮನೆಯಲ್ಲಿ ಏನೇ ವಿಶೇಷವಾದ ತಿಂಡಿ ಮಾಡಿದರೂ ಅದು ಪ್ರಭುವಿಗೆ ಸಿಗುತ್ತಿತ್ತು. ಅವನೆಂದರೆ, ಒಂದು ರೀತಿಯ ಆರಾಧನೆಯ ಭಾವವೂ ಹೌದು. ನಿಷ್ಕಲ್ಮಶ ಬಂಧವೊಂದು ರೂಪುಗೊಂಡ ಬಗೆಯೇ ವಿಶೇಷ.


ಹರಿಹರನ್ ಪೇಪರ್ ಮಿಲ್ ಮತ್ತು ಹರಿಹರನ್ ಸಿಮೆಂಟ್ ಮಾಲೀಕರಾದ ಹರಿಹರನ್ ಅವರಿಗೆ ತಮ್ಮ ಮಗಳು ಸವಿತಾ ತೀರಾ ಮಧ್ಯಮ ವರ್ಗದ ಅಧ್ಯಾಪಕ ಪ್ರಭುವನ್ನು ಪ್ರೀತಿಸಿದ್ದು ಇಷ್ಟವಾಗಲಿಲ್ಲವಾದರೂ.. ಪ್ರಭುವನ್ನು ಕಂಡಾಗ ಆತನ ಪ್ರಾಮಾಣಿಕ ವ್ಯಕ್ತಿತ್ವ ಹಾಗೂ ನೇರ ಗುಣ ಸೆಳೆದಿತ್ತು.  ಪ್ರಭುವಿನ ವ್ಯಕ್ತಿತ್ವದ ಮತ್ತೊಂದು ವಿಚಾರ ಹೇಳುತ್ತಾರೆ. ಶ್ರೀಮಂತರನ್ನು ಕಂಡಾಗ ಅವನಲ್ಲಿ ಇನ್ಫಿರಿಯಾರಿಟಿ ಕಾಂಪ್ಲೆಕ್ಸ್ ಬಾಧಿಸದು ಎಂದು. ಮನುಷ್ಯನಲ್ಲಿ ಇನ್ಫಿರಿಯಾರಿಟಿ ಹಾಗೂ ಸುಪೀರಿಯಾರಿಟಿ ಕಾಂಪ್ಲೆಕ್ಸ್ ಗಳು ಒಳ್ಳೆಯವಲ್ಲ ಎಂಬುದನ್ನು ಲೇಖಕಿ ತಮ್ಮ ಕಾದಂಬರಿಗಳಲ್ಲಿ ಧೀಮಂತ ವ್ಯಕ್ತಿತ್ವಗಳ ಮೂಲಕ ಓದುಗರಿಗೆ ಸೊಗಸಾಗಿ ಕಟ್ಟಿಕೊಡುತ್ತಾರೆ. ಸವಿತಾಳಲ್ಲಿಯೂ ಪ್ರೇಮ ನಿವೇದನೆ ಮಾಡುವಾಗ ಹಾಗೂ ಪ್ರಭುವಿನ ಬಳಿಯಲ್ಲಿ ಇರುವ ನಡೆ, ಆಕೆ ಬ್ಯುಸಿನೆಸ್ ನೋಡಿಕೊಳ್ಳುವಾಗಿನ ಗಾಂಭೀರ್ಯತೆಗಿನ್ನ ವಿಭಿನ್ನವಾಗಿದೆ. ಕೌಟುಂಬಿಕವಾಗಿ ಮೃದುವಾಗಿರುವವಳು, ವ್ಯಾವಹಾರಿಕವಾಗಿ ಎಷ್ಟು ಗಂಭೀರ ಎಂದು ತೋರುತ್ತಾರೆ.


ಮಗಳು ಎಲ್ಲಾ ವರಗಳನ್ನು ತಿರಸ್ಕರಿಸಿ ಮದುವೆಯಾದರೆ ಪ್ರಭುವನ್ನೇ ಎಂದು ಗಟ್ಟಿಯಾಗಿ ನಿರ್ಧರಿಸಿದಾಗ ಇಂತಹ ಅಪರೂಪದ ಪ್ರಭು ಅವರಿಗೆ ಮೆಚ್ಚುಗೆಯಾದರೂ.. ಮುಂದೆ ಎದುರಾಗುವ ಸಮಸ್ಯೆಗಳು ಅವರನ್ನು ಕಾಡುತ್ತಲೇ ಇತ್ತು. ಅದಕ್ಕೆ ತಾನೇ ಪರಿಹಾರ ಸೂಚಿಸುವಂತೆ ಪ್ರಭು, ತನ್ನ ಮನೆಯನ್ನು, ಅಲ್ಲಿನ ಪರಿಸ್ಥಿತಿಯನ್ನು ಕಂಡಾಗ ತನ್ನ ಶ್ರೀಮಂತಿಕೆ ಎದುರು ಇದು ಸಪ್ಪೆಯಾಗಿ ಕಂಡು ಅವಳೇ ಇದರಿಂದ ಹಿಂದೆ ಸರಿಯಬಹುದೆಂದು ಯೋಚಿಸಿದ. ಹಾಗಾಗಿ, ಅವಳನ್ನು ತನ್ನ ಮನೆಗೆ ಕರೆದೊಯುತ್ತಾನಾದರೂ ಯಾವುದಕ್ಕೂ ಜಗ್ಗದ ಸವಿತಾ ಚಿದಂಬರಯ್ಯನವರು, ಸೌಭಾಗ್ಯಮ್ಮ ಹಾಗೂ ಶಾಂತಿಗೆ ಬಹಳ ಹತ್ತಿರವಾಗುತ್ತಾಳೆ.


ವಿವಾಹವಾದ ನಂತರ ಪ್ರಭು ತನ್ನ ಕೆಲಸವನ್ನಾಗಲಿ, ಧೀಮಂತಿಕೆಯನ್ನಾಗಲಿ ನಿಲುವನ್ನಾಗಲಿ ಬದಲಿಸಿಕೊಳ್ಳುವುದಿಲ್ಲ. ಸವಿತಾ ತನ್ನ ತಂದೆಯ ಬ್ಯುಸಿನೆಸ್ ಅನ್ನು ನೋಡಿಕೊಳ್ಳುತ್ತಲೇ ಈ ಮನೆಗೆ ಹೊಂದಿಕೊಂಡು ಹೋಗುತ್ತಿರುತ್ತಾಳೆ. ಅತ್ತ ತಂದೆಯ ಮನೆಯಲ್ಲಿ ಹಾಗೂ ಇತ್ತ ಗಂಡನ ಮನೆಯಲ್ಲಿ ಎಲ್ಲರನ್ನೂ ಹೊಂದಿಕೊಂಡು ನಡೆಯುತ್ತಿರುತ್ತಾಳೆ. ತನ್ನ ಶ್ರೀಮಂತಿಕೆಯನ್ನು ಬದಿಗೊತ್ತಿ ಎಲ್ಲರ ಮನಗೆಲ್ಲುತ್ತಾಳೆ. ಆದರೆ, ಪ್ರಭುವಿನ ಒಂದು ನಡೆ ಮಾತ್ರ ಆಗಾಗ ಅವಳ ಮನಸ್ಸಿನಲ್ಲಿ ಕಹಿ ಮೂಡಿಸುತ್ತಿರುತ್ತದೆ. ಮುಂದೆ ಅದೇ ಅವಳ ಸಂಶಯಕೂ ಕಾರಣವಾಗುತ್ತದೆ. ಆ ಕಹಿ ಏನು..?


ಅದಷ್ಟೇ ಕಾರಣವಾಗದೆ.. ಆಗಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಇರುಸು-ಮುರಿಸುಗಳು ಸಹ ತಲೆದೋರುತ್ತಿರುತ್ತವೆ. ಇದೇ ಸಮಯದಲ್ಲಿ ಸವಿತಾಳ ಚಿಕ್ಕಪ್ಪ ಪಾರ್ಥಸಾರಥಿಯವರ ಆಗಮನವಾದಾಗ ಪ್ರಭುವಿನ ವ್ಯಕ್ತಿತ್ವಕ್ಕೆ, ಸ್ವಾಭಿಮಾನಕ್ಕೆ ಪೆಟ್ಟು ಬೀಳುವಂತಹಾ ಕೆಲ ಘಟನೆಗಳು ಸಹಾ ನಡೆಯುತ್ತವೆ. ಆದರೆ, ಪ್ರಭು ಆದಷ್ಟು ಸಹಜವಾಗಿಯೇ ನಡೆದುಕೊಳ್ಳಲು ಪ್ರಯತ್ನಿಸಿದರೂ ಕೆಲವೊಮ್ಮೆ ಸಂದರ್ಭ ಹಾಗೂ ಸನ್ನಿವೇಶಗಳು ಸವಿತಾ ಹಾಗೂ ಅವನ ಸಂಬಂಧದ ಮೇಲೆ ಪರಿಣಾಮ ಬೀರುತ್ತಿರುತ್ತವೆ. 


ಶಾಂತಿಯ ಪುಟ್ಟ ಮಗಳು ಸ್ವಪ್ನಳಿಗೆ ಚಾಕಲೇಟ್ ಗೆ ಎಂದು ಹತ್ತರ ನೋಟನ್ನು ಕೊಟ್ಟ ಸವಿತಾ ಮುಂದೆ ಪರಿತಪಿಸುವಂತಾಗುತ್ತದೆ. ಆ ಹಣ ಹಿಡಿದು ಓಡುತ್ತಿದ್ದ ಸ್ವಪ್ನ ಕಾರಿಗೆ ಸಿಕ್ಕಳು ಎಂಬ ಸುದ್ದಿ ತಿಳಿದಾಗ ಭಯಂಕರ ಪ್ರಳಯವಾದಂತೆ ಬಿಚ್ಚಿಬಿದ್ದ ಪ್ರಭು. ಪ್ರಭೂವಿಗೆ ಇಷ್ಟು ಆಘಾತ ತಂದ ವಿಷಯ ಶಾಂತಿ ಹಾಗೂ ಮಾಧವರನ್ನು ಯಾವ ರೀತಿ ಬಾಧಿಸಿತು..?


ಅರಿಯದೆಯೇ ಹಣಕೊಟ್ಟು ತಪ್ಪು ಮಾಡಿದ ಸವಿತಾ ಅಪರಾಧಿ ಭಾವವನ್ನು ಅನುಭವಿಸುತ್ತಿದ್ದಾಗ ಅವಳು ವರ್ತಿಸಿದ ಪರಿ ಹೇಗಿತ್ತು.. ಈ ಸಂದರ್ಭದಲ್ಲಿ ಪ್ರಭು ಹಾಗೂ ಸವಿತಾ ಸಂಬಂಧ ಏನಾಯ್ತು..? ಸ್ವಪ್ನ ಹುಷಾರಾದಳೇ..? ಶಾಂತಿ ಹಾಗೂ ಪ್ರಭುವಿನ ಸ್ನೇಹಕ್ಕೇನಾದರೂ ಧಕ್ಕೆ ಬಂದಿತಾ..? 


ಹೇಮಂತದ ಸೊಬಗಿನಲ್ಲಿ ಎಲ್ಲಿ ನೋಡಿದರೂ ರಾಶಿಗಟ್ಟಲೇ ಹಿಮದ ಬಿಂದುಗಳು. ಅಲ್ಪ ಕಾಲ ಮಿನುಗಿ ಬಿಸಿಲು ಏರಿದಂತೆ ಮಾಯವಾಗುವಂತೆ, ಅವರ ಬದುಕಿನ ಕಷ್ಟಗಳು ಮಾಯವಾದವೇ.. ಅಥವಾ ಭಾಂದವ್ಯವೇ ಮಾಯವಾಯಿತೇ..? ಉತ್ತರ ತಿಳಿಯಲು ಓದಿ ಸಾಯಿಸುತೆಯವರ "ಹೇಮಂತದ ಸೊಗಸು" ಕಾದಂಬರಿಯನ್ನು.


~ವಿಭಾ ವಿಶ್ವನಾಥ್

ಹೂವು ದೇವರ ಸೇವೆಗೆ (ಪುಸ್ತಕ ಯಾನ - 290)


ಪುಸ್ತಕದ ಶೀರ್ಷಿಕೆ : ಹೂವು ದೇವರ ಸೇವೆಗೆ

ಲೇಖಕರು : ನವರತ್ನರಾಮ್

ಪ್ರಕಾಶಕರು : ಹೇಮಂತ ಸಾಹಿತ್ಯ

ಪ್ರಥಮ ಮುದ್ರಣ : 1990

ಎರಡನೇ ಮುದ್ರಣ : 2013 (ನನ್ನ ಓದಿಗೆ ಸಿಕ್ಕಿದ್ದು)


"ಹೂವು ದೇವರ ಸೇವೆಗೆ" ಇದು ಎರಡು ಸಂಯುಕ್ತ ಕಾದಂಬರಿಗಳ ಸಂಪುಟ. ಹೂವು ದೇವರ ಸೇವೆಗೆ ಗಂಭೀರ ಶೈಲಿಯದ್ದಾದರೆ.. ನಂ. ೬೭ ಹ್ಯಾರಿಸ್ ರಸ್ತೆ ಹಾಸ್ಯ ಪ್ರಧಾನ ಶೈಲಿಯಲ್ಲಿದೆ. ಇದೀಗ ನಾನು ಪರಿಚಯಿಸುತ್ತಿರುವುದು "ಹೂವು ದೇವರ ಸೇವೆಗೆ" ಕಾದಂಬರಿಯನ್ನು. ಇದು ನಾನು ಓದಿದ ನವರತ್ನರಾಮ್ ಅವರ ಮೊದಲ ಪುಸ್ತಕ. 


ಗೊತ್ತಿಲ್ಲದ ಹೂವನ್ನು ಕಂಡಾಗ.."ಯಾವ ಜಾತಿ ಹೂವು ಇದು..?" ಎಂದು ಕೇಳಿರುತ್ತೇವೆ. ಸಾಮಾನ್ಯವಾಗಿ ನಾವಾದರೂ ಒಂದು ಬಾರಿ ಹೀಗೆ ಯೋಚಿಸಿರುತ್ತೇವೆ. ಆದರೆ, ಇಲ್ಲಿನ ಕಾದಂಬರಿ ಓದಿದಾಗ "ಎಲ್ಲಾ ಹೂವಿನ ಜಾತಿನೇ" ಎನ್ನುವ ನಿರ್ಮಲ ನಮ್ಮ ಕಣ್ತೆರೆಸುತ್ತಾಳೆ. 


"ಎಲ್ಲಾ ಹೂವು ದೇವರಿಗೆ ಅರ್ಪಿತವಾಗಬಹುದೆಂದು, ಎಲ್ಲಾ ಹೂವು ತಂದಿದ್ದೇನೆ. ಹೂವಿಗೆ ಯಾವುದೇ ಜಾತಿ, ಭೇದ ತಿಳಿಯದು. ಅದು ಹೇಗಿದ್ದರೂ ಸುಂದರವಾದದ್ದು" ಎನ್ನುವ ನಿರ್ಮಲಾ ಹೂ ಬಿಡಿಸುವುದು ಸಹ ವಿಭಿನ್ನವಾಗಿಯೇ..


"ಹೂವನ್ನ ಕೀಳಬಾರದು... ಬಿಡಿಸಬೇಕು. ಅಗಲಿಕೆಯನ್ನು ಗಿಡಕ್ಕೆ ತಿಳಿಯದ ಹಾಗೆ ಬಿಡಿಸಬೇಕು. ಕೀಳೋದು ಕಟುಕರ ಕೆಲಸ." ಎನ್ನುವ ನಿರ್ಮಲ ಹೂ ಬಿಡಿಸುವ ಪರಿಯನ್ನು ಸಹಾ ಹೇಳಿಕೊಡುತ್ತಾಳೆ. ಹಾಗಾದರೆ, ಈ ಕಾದಂಬರಿಯ ಮುಖ್ಯ ಪಾತ್ರವಾದ ನಿರ್ಮಲ ಯಾರು ಎಂಬುದನ್ನು ತಿಳಿಯುವುದಕ್ಕೂ ಮುನ್ನ ಮತ್ತೆ ಹಲವರ ಪರಿಚಯ ಮಾಡಿಕೊಂಡು ಬರೋಣ.


ಶಂಕರ ಶಾಸ್ತ್ರಿಗಳು ಹಾಗೂ ಕಮಲಮ್ಮನವರ ಮಕ್ಕಳು ವಾರಿಣಿ ಹಾಗೂ ರವಿಶಂಕರ. ಶಾಸ್ತ್ರಿಗಳು ನಿಷ್ಠಾವಂತರು ಹಾಗೂ ಸಂಪ್ರದಾಯಸ್ಥರು. ಆಡಂಬರವಿಲ್ಲದ ಜೀವನ, ಅಚ್ಚುಕಟ್ಟಾಗಿ ಸಂಸಾರ ಸಾಗಿಸುತ್ತಿದ್ದರು. ಮನೆಯ ನೀತಿ-ನಿಯಮಗಳು, ಸಂಪ್ರದಾಯದ ಚೌಕಟ್ಟಿನಲ್ಲಿ ಬೆಳೆದಿದ್ದ ವಾರಿಣಿ ಹಾಗೂ ರವಿಯ ಭಾವಗಳು, ಯೋಚನೆಗಳು ಅದೇ ರೀತಿಯಲ್ಲಿತ್ತು. ಮನೆಯ ಸುತ್ತಮುತ್ತ ಹೂವಿನ ತೋಟ ಬೆಳೆಯುವುದೆಂದರೆ ಶಾಸ್ತ್ರಿಗಳಿಗೆ ಅಚ್ಚುಮೆಚ್ಚಿನ ಕೆಲಸ. ಅವರ ಪ್ರತಿ ದಿನದ ಪೂಜೆಗೆ ಅವರೇ ಹೂ ಬಿಡಿಸುತ್ತಿದ್ದರು. ಅದಕ್ಕೂ ರೀತಿ-ರಿವಾಜಿತ್ತು. ನಂತರ ಹೂವು ಬಿಡಿಸಿ ಕೊಡುತ್ತಿದ್ದದ್ದು ವಾರಿಣಿ.


ಕಮಲಮ್ಮನವರಿಗೆ ಇದ್ದದ್ದು ಒಬ್ಬನೇ ಅಣ್ಣ ಶಿವರಾಮಯ್ಯ. ಸಕಲೇಶಪುರದ ಭಾರಿ ಪ್ಲಾಂಟರ್ ಸಚ್ಚಿದಾನಂದರ ಏಕಮಾತ್ರ ಪುತ್ರಿ ಮೀನಾಕ್ಷಿಯನ್ನು ಕೈ ಹಿಡಿಯುವ ಮೂಲಕ ಮನೆಯ ಅಳಿಯನಾಗಿ ಅಲ್ಲಿಯೇ ನೆಲೆಸಿದ್ದರು. ಅವರಿಗೆ ಇದ್ದದ್ದು ಒಬ್ಬಳೇ ಮಗಳು ಕಾಮಿನಿ. ಶಾಸ್ತ್ರಿಯವರು "ಮಾವಯ್ಯನ ಅಳಿಯಂದಿರು" ಎಂದೇ ಶಿವರಾಮಯ್ಯನವರಿಗೆ ಕರೆಯುತ್ತಿದ್ದದ್ದು. ಶಿವರಾಮಯ್ಯನವರಿಗೆ ಗೌರವವಿದ್ದರೂ.. ಹಣದ ವಿಚಾರದಲ್ಲಿ ಸ್ವಾತಂತ್ರ್ಯವಿರಲಿಲ್ಲ. ಮೀನಾಕ್ಷಿ ಎಲ್ಲಾ ವಿಚಾರದಲ್ಲಿಯೂ ತನ್ನ ತಾಯಿಯಂತೆ ಹಣಕ್ಕೆ, ಆಡಂಬರಕ್ಕೆ ಮಹತ್ವ ಕೊಡುತ್ತಿದ್ದಳು. ಆದರೆ, ಪ್ರತಿಬಾರಿಯೂ ಶಿವರಾಮಯ್ಯನವರೊಂದಿಗೆ ಬಂದಾಗ ಶಾಸ್ತ್ರಿಗಳು ಹಾಗೂ ಕಮಲಮ್ಮನವರ ಮನೆಯಲ್ಲಿ ವಾರಿಣಿ ಹಾಗೂ ರವಿಯರೊಂದಿಗೆ ಬೆರೆಯುತ್ತಾ ಇರುತ್ತಿದ್ದಳು. ಕಾಮಿನಿಯ ಪ್ರತಿ ಸ್ವಭಾವವೂ ಅಲ್ಲಿಯವರಿಗಿಂತ ವ್ಯತಿರಿಕ್ತವಾಗಿಯೇ ಇತ್ತು.


ಕಾಮಿನಿ ಬಿ.ಎ ಪದವಿ ಮುಗಿಸಿದಾಗ, ರವಿಶಂಕರನದ್ದು ಇಂಜಿನಿಯರಿಂಗ್ ಮುಗಿಸಿ ಅಂಚೆ ಹಾಗೂ ತಂತಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ. ಸಚ್ಚಿನಂದಯ್ಯರವರು ಹಾಗೂ ಮೀನಾಕ್ಷಿಯವರೆಗೂ ರವಿಯ ಸ್ವಭಾವ, ಗಾಂಭೀರ್ಯ ಎಲ್ಲವೂ ಇಷ್ಟವಾಗಿ ಕಾಮಿನಿ ಅನ್ನು ವಿವಾಹ ಮಾಡಿಕೊಡುವ ಇರಾದೆ ಹೊಂದಿದ್ದರು. ಆದರೆ, ಶ್ರೀಮಂತನಲ್ಲವೆಂಬ ವಿಚಾರ ಬಂದಾಗ ತಮ್ಮ ಆಸ್ತಿಯನ್ನೇ ನೀಡಿ, ಆತನನ್ನು ಇಲ್ಲಿಯೇ ಇರುವಂತೆ ಮಾಡೋಣ ಎಂಬ ಕನಸು ಕಾಣುತ್ತಿದ್ದರು. 


ರಜಾ ದಿನಗಳಿಗೆಂದು ಅಲ್ಲಿ ಹೋದಾಗಲೇ ರವಿಗೆ ಕಾಮಿನಿಯ ವಿಭಿನ್ನ ಸ್ವಭಾವದ ಅರಿವಾಗಿದ್ದು. ಆಕೆ ತನ್ನ ತಾಯಿ ಇದ್ದಾಗಲೇ ಒಂದು ರೀತಿ, ಇಲ್ಲದಾಗಲೇ ಒಂದು ರೀತಿಯ ಸ್ವಭಾವ ತೋರುತ್ತಿದ್ದದ್ದು ಅರಿವಾದವನು ಬಂಗಾರದ ಪಂಜರದಿಂದ ತಾನು ಹಾರಿ ಹೋದರೆ ಸಾಕೆಂದು ಆಶಿಸುತ್ತಿದ್ದ. 


ಮೀನಾಕ್ಷಿ ಎಂದಿಗೂ ಕಮಲಮ್ಮನವರ ಮನೆಗೆ ಬಂದ ಪ್ರಸಂಗವೇ ಇರಲಿಲ್ಲ. ವಾರಿಣಿಯ ಮದುವೆಗೂ ಸಹಾ ಭಾರೀ ಉಡುಗೊರೆ ಕೊಟ್ಟು, ಗಂಡ ಹಾಗೂ ಮಗಳನ್ನು ಕಳುಹಿಸಿದ್ದರು. ಅದರಲ್ಲಿ ಭಾವೀ ಬೀಗರಾಗುವವರು ಎನ್ನುವ ವರ್ತನೆ ಹಾಗೂ ಆಡಂಬರವೇ ಹೆಚ್ಚಾಗಿತ್ತು. ವಾರಿಣಿಗೆ ಸುಧೀಂದ್ರನ ಜೊತೆಗೆ ಮದುವೆಯಾಯಿತು.


ವಾರಿಣಿ ಹೋಗುವಾಗ ಕಾಮಿನಿಗೆ ತನ್ನ ಹೂ ಬಿಡಿಸುವ ಕೆಲಸವನ್ನು ಒಪ್ಪಿಸಿದ್ದಳಾದರೂ.. ಕಾಮಿನಿಗೆ ಅದು ಕಷ್ಟವೇ ಆಗಿತ್ತು. ವಾರಿಣಿಯ ಮದುವೆಯಾದ ನಂತರ ರವಿಗೆ ವಿದೇಶಕ್ಕೆ ಹೆಚ್ಚಿನ ವ್ಯಾಸಂಗಕ್ಕೆ ಹೋಗುವ ಅವಕಾಶ ಲಭಿಸಿತ್ತು. ಸರ್ಕಾರದಿಂದಲೇ ಸಂಬಳ ಹಾಗೂ ಓದಿನ ಸವಲತ್ತುಗಳು ದೊರೆತಿದ್ದವು. ಆದರೆ, ಇದೆಲ್ಲವೂ ಇಷ್ಟವಾದದ್ದು ಕಾಮಿನಿ ಹಾಗೂ ಅವರ ಮನೆಯವರಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು. ಅಷ್ಟು ದಿನ ತನ್ನ ಮಗಳು ಕಾಯಬೇಕೆಂದು ಯೋಚಿಸಿ ಕಾಮಿನಿಯನ್ನು ಮದುವೆ ಮಾಡಿಕೊಂಡೇ ಕರೆದುಕೊಂಡು ಹೋಗಲಿ ಎನ್ನುವ ಯೋಚನೆ ಇತ್ತು ಮೀನಾಕ್ಷಿಗೆ. ಆದರೆ, ರವಿ ಅದಕ್ಕೆ ಅವಕಾಶವಿಲ್ಲದರಿಂದ ಒಪ್ಪಲಿಲ್ಲ. ಕಾಮಿನಿಯ ಮಾತಿಗೆ ಒಪ್ಪದೇ ಹೊರಟು ನಿಂತಾಗ ಕಾಮಿನಿ ಆತನ ಜೊತೆಗೆ ಸಂಬಂಧವನ್ನೇ ಕಡಿದುಕೊಳ್ಳುವವಳಂತೆ ಕಟುವಾಗಿ ವರ್ತಿಸಿದ್ದಳು. ಅಂತಹಾ ನಡೆ ರವಿಯನ್ನು ಅವಳಿಂದ ವಿಮುಖವಾಗಿಸಿತು.


"ಪ್ಯಾರಿಸ್ ಇಸ್ ದ ಸಿಟಿ ಆಫ್ ಲವರ್ಸ್ ಅಂಡ್ ಪೊಯೆಟ್ಸ್" ಎನ್ನುವ ಮಾತನ್ನು ಆಗಾಗ ನೆನಪಿಸುತ್ತಲೇ ಪ್ಯಾರಿಸ್ ಹಾಗೂ ಸುತ್ತಲಿನ ಪರಿಸರವನ್ನೆಲ್ಲಾ ವರ್ಣಿಸುತ್ತಾರೆ ಲೇಖಕರು. ಅಲ್ಲಿನ ನಗರ ಸೌಂದರ್ಯದ ಸವಿಯನ್ನು ನೀವು ಓದಿಯೇ ಸವಿಯಬೇಕು. ಅಲ್ಲಿ ಫ್ರೆಂಚ್ ಕಲಿಯುವ ಸಲುವಾಗಿ ಮತ್ತೊಂದು ಸ್ಥಳಕ್ಕೆ ಕಳುಹಿಸಿದರು ರವಿಯನ್ನು. ತಾನು ಪ್ರಯಾಣದ ಸಂದರ್ಭದಲ್ಲಿಯೇ ಕಂಡ.. ನೋಡಲು ಕಾಮಿನಿಯಂತೆಯೇ ಇದ್ದ.. ಆದರೆ, ಅದಕ್ಕಿಂತಲೂ ಸೌಮ್ಯವಾದ ಹಾಗೂ ವಿನಯವಾದ, ಸ್ನೇಹಮಯಿ ಹುಡುಗಿ ಬುದ್ಧಿವಂತೆ ನಿರ್ಮಲ ಜೊತೆಯಾದಳು. ಕನ್ನಡಿಗರು ಎಂಬ ಸಲುಗೆಯಿಂದ ಬೆಳೆದ ಸ್ನೇಹ, ಪ್ರೀತಿಯವರೆಗೂ ಹೋಯಿತು.


ಕಮಲಮ್ಮನವರ ಕಡೆಯಿಂದ ಆಗಾಗ ಕಾಮಿನಿಯ ಕುರಿತ ಪ್ರಸ್ತಾಪ ಬರುತ್ತಿದ್ದರೆ.. ಶಾಸ್ತ್ರಿಗಳು ಮೌನವಹಿಸಿದ್ದರು. ತನ್ನ ಪ್ರೇಮದ ವಿಚಾರವನ್ನು ಮನೆಗೆ ತಿಳಿಸುತ್ತಾನಾ ರವಿ..? ರವಿ ಹಾಗೂ ನಿರ್ಮಲಾರ ಸಂಬಂಧವನ್ನು ಉಳಿದವರು ಯಾವ ದೃಷ್ಟಿಯಿಂದ ನೋಡಿದರು ಹಾಗೂ ಹೇಗೆ ಸ್ವೀಕರಿಸಿದರು.. ಇದಕ್ಕೆ ಕಾಮಿನಿ ಹಾಗೂ ಮನೆಯವರ ಪ್ರತಿಕ್ರಿಯೆ ಹೇಗಿತ್ತು..? ಇದೆಲ್ಲದಕ್ಕೂ ಶಿವರಾಮಯ್ಯನವರ ಪ್ರತಿಕ್ರಿಯೆ ಏನಿತ್ತು, ಶಾಸ್ತ್ರಿಗಳು ತಟಸ್ಥರಾಗಿ ಉಳಿಯಲು ಕಾರಣವೇನ..? ಈ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ "ಹೂವು ದೇವರ ಸೇವೆಗೆ" ಕಾದಂಬರಿಯನ್ನು.


ಇಲ್ಲಿ ಇರುವ ಮತ್ತೊಂದು ಸಮಸ್ಯೆ ಎಂದರೆ ನಿರ್ಮಲಳ ಜಾತಿಯ ಕುರಿತಾದದ್ದು.. ಹೂವಿನ ಜಾತಿಯನ್ನೇ ಒಪ್ಪದ ನಿರ್ಮಲ ಜಾತಿ ವ್ಯವಸ್ಥೆಯನ್ನು ಹೇಗೆ ಕಂಡಳು..? ರವಿ ಇದನ್ನು ಹೇಗೆ ಸ್ವೀಕರಿಸಿದ..?


ಸಮಾಜದ ಮುಖ್ಯ ಸಮಸ್ಯೆಯೊಂದನ್ನು ತೆರೆದಿಟ್ಟ ಕಾದಂಬರಿ ಇದು. ರವಿಯ ಮನೆಯ ವಾತಾವರಣ, ಕಾಮಿನಿಯ ಮನೆಯ ವಾತಾವರಣ, ಪ್ಯಾರಿಸ್ ನ ದಿನಗಳು, ಸ್ಥಳಗಳು ಅಲ್ಲಿಯ ಹವಾಮಾನ ಅಲ್ಲಿನ ಜನರು, ಸ್ವಭಾವ ಹೀಗೆ ಪ್ರತಿಯೊಂದನ್ನೂ ಸಮರ್ಥವಾಗಿ ಚಿತ್ರಿಸಿದ್ದಾರೆ ಲೇಖಕರು. ಶೀರ್ಷಿಕೆಗೂ ಇಲ್ಲಿನ ಕಥಾವಸ್ತುವಿಗೂ ಸಂಬಂಧ ಕಲ್ಪಿಸಿರುವ ಪರಿ ಇಷ್ಟವಾಯಿತು.


~ವಿಭಾ ವಿಶ್ವನಾಥ್

ಹೊಸ ಬೆಳಕು (ಪುಸ್ತಕ ಯಾನ - 289)


ಪುಸ್ತಕದ ಶೀರ್ಷಿಕೆ : ಹೊಸ ಬೆಳಕು

ಲೇಖಕರು : ಇಂದಿರಾ ಹಾಲಂಬಿ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು

ಪ್ರಥಮ ಮುದ್ರಣ : 2004

ಪುಟಗಳು : 28

ಬೆಲೆ : 15 ರೂ.


ಇಂದಿರಾ ಹಾಲಂಬಿಯವರ ಕುರಿತು ಕೇಳಿದ್ದನಾದರೂ.. ನನ್ನ ಓದಿಗೆ ಸಿಕ್ಕ ಅವರ ಮೊದಲ ಪುಸ್ತಕ ಇದು. ಎರಡು ನೀಳ್ಗತೆಗಳನ್ನು ಹೊಂದಿದೆ.  ಹೊಸ ಬೆಳಕು ಹಾಗೂ ಕತ್ತಲು ಕಳೆದಾಗ ಎಂಬ ಎರಡು ಕಥೆಗಳಿವೆ. ಕಥೆಗಳೊಳಗಿನ ಚೆಂದದ ಕವಿತೆಗಳು ಅರ್ಥಪೂರ್ಣವಾಗಿವೆ.


ಹೊಸ ಬೆಳಕು : ಶಿವಪುರದ ಅನಂತಯ್ಯನವರಿಗೆ ಇಬ್ಬರು ಗಂಡುಮಕ್ಕಳು. ಹಿರಿಯವನು ಕೇಶವ, ಎರಡನೆಯವನು ಮಾಧವ. ಮಾಧವನೇ ಚಿಕ್ಕವನಾಗಿದ್ದು ತಾಯಿಯ ಅತಿ ಮುದ್ದಿನಿಂದ ಓದಿನಲ್ಲಿ ಹಿಂದೆ ಬಿದ್ದು.. ತಾಯಿ ತೀರಿಕೊಂಡ ನಂತರ ಕೈಲಾಗದವನೆಂಬ ಹೀಯಾಳಿಸುವಿಕೆಯನ್ನು ಕೇಳಿಕೊಂಡೇ ಬಂದಿದ್ದರಿಂದ ಕಷ್ಟದಲ್ಲಿಯೇ ದಿನದೂಡುತ್ತಿದ್ದನು. ಜೊತೆಗೆ, ತಂದೆ ತೀರಿಕೊಂಡ ನಂತರ ವ್ಯವಹಾರ ಚತುರನಾಗಿದ್ದ ಅಣ್ಣ ಆಸ್ತಿಯನ್ನು ಕೊಡದೆ ಮೋಸ ಮಾಡಿದ್ದು ಎಲ್ಲರಿಗೂ ಗೊತ್ತಿದ್ದರೂ.. ಯಾರೂ ಇದರ ವಿಚಾರಕ್ಕೆ ತಲೆ ಹಾಕಿರಲಿಲ್ಲ. ಕೇಶವನಿಗೆ ಒಂದು ಹೆಣ್ಣು, ಒಂದು ಗಂಡುಮಗು.


ಮಾಧವ ಹಾಗೂ ಜಾನಕಿ ದಂಪತಿಗಳಿಗೆ ಮೂವರು ಹೆಣ್ಣುಮಕ್ಕಳು. ಜ್ಯೋತಿ, ಸ್ವಾತಿ ಹಾಗೂ ಸೌಮ್ಯ. ಕೇಶವ ಹಾಗೂ ಗಂಗಮ್ಮರು ಮಾಧವನ ಸಂಸಾರವನ್ನು ಮನೆಯಿಂದ ಹೊರಗಟ್ಟಿದ ನಂತರ ಮಾಧವ ಊರಲ್ಲೇ ಇದ್ದ ಹೆಂಚಿನ ಕಾರ್ಖಾನೆಯಲ್ಲಿ ನೌಕರನಾಗಿ ಸೇರಿ ವಾರದ ಸಂಬಳದಿಂದ ಜೀವನ ನಡೆಸುತ್ತಿದ್ದ. ಕೇಶವ ಹೊಸ ರೀತಿಯ ಕಾಯಿಲೆಯಿಂದ ಕಣ್ಣುಮುಚ್ಚಿದರೆ, ಗಂಗಮ್ಮ ಚಿಂತೆ ಹಚ್ಚಿಕೊಳ್ಳದೆ ಮಕ್ಕಳ ಭವಿಷ್ಯವನ್ನು ರೂಪಿಸಲು ಹಣ ವ್ಯಯಿಸುತ್ತಿದ್ದಳು. ಕೇಶವನ ಮಕ್ಕಳು ತಾಯಿಯಂತೆ ಉತ್ತಮ ಗುಣ-ನಡತೆಯನ್ನು ರೂಪಿಸಿಕೊಂಡರು. 


ಮಾಧವನ ಮನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದಕ್ಕೆ ಕಾರಣ ಸವಿತಾ. ಊರಿಗೆ ಹೊಸ ಬೆಳಕನ್ನು ತೋರುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದವರು. ಗಂಡ ಕೃಷಿ ಇಲಾಖೆಯಲ್ಲಿ ದೊಡ್ಡ ಅಧಿಕಾರಿಯಾಗಿದ್ದವರು. ಗಂಡನ ವರ್ಗಾವಣೆಯ ಕಾರಣದಿಂದ, ಮಗನ ವಿದ್ಯಾಭ್ಯಾಸಕ್ಕಾಗಿ ಶಿವಪುರದಲ್ಲಿಯೇ ನೆಲೆಸಿದರು. ಊರ ಶಾಲೆಯಲ್ಲಿ, ಮಹಿಳಾ ಮಂಡಳಿಯಲ್ಲಿ, ಶಿಶುವಿಹಾರದಲ್ಲಿ ಬದಲಾವಣೆ ತಂದರು. ಸಾಕ್ಷರತೆಯ ಪ್ರಸಾರವಾಗುತ್ತಿತ್ತು. ಹೊಲಿಗೆ ಯಂತ್ರದಲ್ಲಿ ಕೆಲಸ ಮಾಡಲು, ಕಸೂತಿ ಬಿಡಿಸಲು, ಹೈಸ್ಕೂಲಿನಲ್ಲಿ ಶಾಲೆ ಬಿಟ್ಟವರಿಗೆ ಪುಸ್ತಕದ ಓದಲು ದಾರಿದೀಪವಾದರು. ಮೂಢನಂಬಿಕೆಗಳ ಬದಲಾಗಿ ಸಾಕ್ಷರತೆಯನ್ನು ತುಂಬುತ್ತಿದ್ದರು. 


ಮಾಧವ ಕುಡಿದು ಮನೆಗೆ ಬಂದ ಸಂದರ್ಭದಲ್ಲಿ ಹೆಂಡತಿ ಮಕ್ಕಳು ಮನೆಯಲ್ಲಿರಲಿಲ್ಲ. ಸಿಟ್ಟು ನೆತ್ತಿಗೇರಿದವನಿಗೆ ಮತ್ತು ಇಳಿದ ಮೇಲೆ ಅರಿವಾಗಿದ್ದೇನು..?


ಗಂಗಮ್ಮ ಮೂಢನಂಬಿಕೆಯಿಂದ ಸವಿತಾಳ ಪ್ರತಿ ನಡೆಯನ್ನು ವಿರೋಧಿಸಿ, ದ್ವೇಷಿಸುತ್ತಿದ್ದರು. ಅವರ ಬದುಕಲ್ಲಿ ಹೊಸ ಬೆಳಕು ಕಂಡಿತೇ..?


ಕತ್ತಲು ಕಳೆದಾಗ : ಮುದ್ದೂರಿನ ಜಮೀನ್ದಾರರಾದ ಸಂಕಪ್ಪನವರ ಮನೆಯಲ್ಲಿ ಅಂದು ಭೂತಕ್ಕೆ ಬಲಿ ಕೊಡುವ ಹಬ್ಬ. ಅದೇ ದಿನ ಅಂದಿನ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿದೆ ಎನ್ನುವಾಗಲೇ ಮನೆಯಾಳು ಸುಬ್ಬ ಬಂದು ತನ್ನ ತಮ್ಮ ಸೂರಿಗೆ ಹಾವು ಕಚ್ಚಿದ ವಿಚಾರವನ್ನು ತಿಳಿಸುತ್ತಾನೆ. 


ಅದೇ ದಿನ ಮನೆಯಲ್ಲಿ ನಡೆದ ಬೇರೆ ಘಟನೆಗಳೂ ಸಂಕಪ್ಪಯ್ಯನವರಿಗೆ ಗತದ ನೆನಪು ತಂದವು. ಅವರ ಪತ್ನಿ ತೀರಿ ಹೋಗಿದ್ದರು. ಗಂಡನ ಮನೆಯಲ್ಲಿ ಕಷ್ಟ ಅನುಭವಿಸಿ ನೊಂದ ಮಗಳ ನೆನಪು, ಬಾರದೇ ಇದ್ದ ಮಗ ಅರುಣನ ನೆನಪು ಹಾಗೂ ಪೋಲಿಯೋದಿಂದ ಹೊರಗೆಲ್ಲೂ ಹೋಗಲಾಗದೆ ಮನೆಯಲ್ಲೇ ಇರುವ ಕಿರಿಮಗ ಕಿರಣನ ಯೋಚನೆ ಹೀಗೆ..


ಬೆಳಗಾಗುವಷ್ಟರಲ್ಲಿ ಅರುಣ ಬಂದವನೇ ಸೂರಿಯನ್ನು ಆಸ್ಪತ್ರೆಗೆ ಕರೆದೊಯ್ಯದಿರುವುದಕ್ಕೆ ಆಕ್ಷೇಪಿಸಿದ. ಅರುಣನದ್ದು ತಂದೆಗೆ ವ್ಯತಿರಿಕ್ತವಾದ ಯೋಚನೆಗಳು. ಅವರು ಹಿಂದಿನ ನಂಬಿಕೆ ಹಾಗೂ ಕೃಷಿಯಿಂದ ಹಣ ಮಾಡುವ ಆಲೋಚನೆಯಲ್ಲಿದ್ದರೆ.. ಈತ ಓದಿನಂದ ಪ್ರಪಂಚಜ್ಞಾನ ಪಡೆದುಕೊಂಡು ಎಲ್ಲರೊಡನೆಯೂ ಬೆರೆಯುತ್ತಿದ್ದ, ಪರಿಸರದ ಕಾಳಜಿ ತೋರುತ್ತಿದ್ದ.  


ನೆರೆಹಾವಳಿಯಿಂದ ಉಂಟಾದ ಅನಾಹುತ ಸಂಕಪ್ಪಯ್ಯನವರನ್ನು ಮತ್ತಷ್ಟು ಗಾಬರಿಗೊಳಿಸಿತು. ಅದಕ್ಕೆ ಅವರ ಅಜ್ಞಾನ ಹಾಗೂ ಮೂಢನಂಬಿಕೆಗಳು ಸೇರಿ ವಿಪರೀತ ಜ್ವರ ವಿಪರೀತವಾಯಿತು. ನೆರೆಯಿಂದ ಮಾತ್ರವಲ್ಲದೆ.. ಮರಕಡಿದಿದ್ದ ಸಂಬಂಧ ಕೇಸು ದಾಖಲಾಗಿ ಮರಗಳನ್ನು ಮುಟ್ಟುಗೋಲು ಹಾಕಲಾಗಿತ್ತು . ತನ್ನ ಆಫೀಸಿಗೆ ರಜೆ ಪಡೆದ ಬಂದ ಅರುಣ ತಂದೆಯನ್ನು, ಮನೆಯನ್ನು, ಊರನ್ನು ಉಳಿಸುವ ಪ್ರಯತ್ನ ಮಾಡುತ್ತಾನೆ. ಅವನ ಪ್ರಯತ್ನದಲ್ಲಿ ಸಂಕಪ್ಪಯ್ಯ ಬದಲಾದರೇ..? ಆತನ ಅಕ್ಕನ ಹಾಗೂ ತಮ್ಮನ ಬದುಕಿನಲ್ಲಿ ಕತ್ತಲು ಕಳೆದು ಬೆಳಕು ಹೊಳೆಯಿತೇ..? ಓದಿ ನೋಡಿ. 


ಅಜ್ಞಾನ, ಅನಕ್ಷರತೆಯಿಂದ ಉಂಟಾದ ಮೂಢನಂಬಿಕೆಗಳನ್ನು ದೂರ ಮಾಡುವಂತಹಾ ಪ್ರಯತ್ನಗಳು ಹಾಗೂ ಅಂತಹಾ ಪ್ರಯತ್ನ ಮಾಡುವಾಗ ಎದುರಾಗುವ ಸಂಕಷ್ಟಗಳು, ಅಡೆ-ತಡೆಗಳು, ಅವೆಲ್ಲವನ್ನು ಮೀರಿ ನಿಲ್ಲುವ ಬಗೆ.. ಎಲ್ಲದರ ನಂತರ ಅವುಗಳ ಪರಿಣಾಮ ಹಾಗೂ ಬದಲಾವಣೆಗಳ ಚಿತ್ರಣ ಸಮಾಜಕ್ಕೆ ಸಂದೇಶ ನೀಡುವಂತಿದೆ.


~ವಿಭಾ ವಿಶ್ವನಾಥ್ 

ನಿಯುಕ್ತಿ ಪುರಾಣ (ಪುಸ್ತಕ ಯಾನ - 288)


ಪುಸ್ತಕದ ಶೀರ್ಷಿಕೆ : ನಿಯುಕ್ತಿ ಪುರಾಣ

ಲೇಖಕರು : ನಾಗರಾಜ ವಸ್ತಾರೆ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2024

ಪುಟಗಳು : 448

ಬೆಲೆ : 530 ರೂ.


ನಿಯುಕ್ತಿಪುರಾಣ ಸಾಹಿತ್ಯಲೋಕ ಪಬ್ಲಿಕೇಶನ್ಸ್ 100ನೇ ಕೃತಿ. ಐತಿಹಾಸಿಕ ಕಾದಂಬರಿ ಎಂಬ ಅಡಿಬರಹವಿದ್ದರೂ.. ಪುರಾಣ ಹಾಗೂ ಇತಿಹಾಸಗಳೆರಡೂ ವಿಭಿನ್ನವೇ.. ಇಲ್ಲಿ ಇತಿಹಾಸವಿದೆ, ಪುರಾಣವಿದೆ, ಜನಪದೀಯ ಕಥೆಗಳಿವೆ. ಇದೆಲ್ಲವೂ ಸಂಯುಕ್ತವಾಗಿ ರೂಪುಗೊಂಡಿರುವುದೇ "ನಿಯುಕ್ತಿ ಪುರಾಣ". ಲೇಖಕರೇ ಹೇಳಿರುವಂತೆ ಇದು ಮೊದಲ ಭಾಗವಷ್ಟೇ.. ಇದರ ನಂತರ ಪ್ರಯುಕ್ತಿ ಪುರಾಣ ಹಾಗೂ ಸಂಯುಕ್ತಿ ಪುರಾಣವೆಂಬ ಮತ್ತೆರಡು ಪುಸ್ತಕಗಳನ್ನು ತರುವ ಇರಾದೆಯಿದೆ ಎನ್ನುತ್ತಾರೆ. ಇದೇ ಕಾದಂಬರಿಯಲ್ಲಿ ರಾಯ ಪ್ರಯುಕ್ತ ಎಂಬ ವಿಚಾರ ಬರುತ್ತದೆ. ಇದು ಮುಂದಿನ ಪುಸ್ತಕಕ್ಕೆ ಕೊಡುತ್ತಿರುವ ಸುಳಿವು ಹವುದಾ..? ಮುಂದಿನ ಭಾಗಕ್ಕೂ.. ಇದಕ್ಕೂ ಕೊಂಡಿಯಾಗಬಹುದಾದ ವಿಚಾರವಂತೂ ಇದ್ದೇ ಇದೆ. 


ಪುಸ್ತಕವನ್ನು ಅರ್ಪಿಸಿರುವುದು 

ತನ್ನತ್ತ ನೋಡೆಂದು 

ಕೂಗಿ ಕರೆಕರೆದು ಈ ಪಾಟಿ ಬರೆಸಿದ 

ಶ್ರೀರಂಗಪಟ್ಟಣದ 

ಬಂಗಾರದೊಡ್ಡಿ ನಾಲೆಗೆ 


ಮಲೆಯೂರು ಗುರುಸ್ವಾಮಿಗಳ ಬಂಗಾರದೊಡ್ಡಿ ಕಾದಂಬರಿ ಓದಿದ್ದರೂ.. ಈ ಲೇಖಕರ ಬಂಗಾರದೊಡ್ಡಿ ನಾಲೆ ಹಾಗೂ ಅದರ ಕುರಿತ ವಿಸ್ಕೃತ ವಿಚಾರವನ್ನು ಓದಲು ನಾನಂತೂ ಕಾದಿದ್ದೇನೆ.


ಮೊದಲಿಗೆ ನಿಯುಕ್ತಿ ಎಂದರೆ ಏನೆಂದು ತಿಳಿಯುವುದಾದರೆ.. ಅದಕ್ಕೆ ವಿಭಿನ್ನ ರೀತಿಯ ಅರ್ಥೈಸುವಿಕೆ ಇದ್ದರೂ.. ಮುಖ್ಯವಾಗಿ "ಯಾವುದೇ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಒಬ್ಬರನ್ನೂ ಆಯ್ಕೆ ಮಾಡುವ ನೇಮಕಾತಿ ಪ್ರಕ್ರಿಯೆ" ಎನ್ನಬಹುದು. ಇದು ಮೈಸೂರಿನ ರಾಜವಂಶದ ಕಥೆ ಎಂದಾದರೂ ಇದರಲ್ಲಿ "ನಿಯುಕ್ತಿ" ಎಂಬುದು ಸಹಾ ಮುಖ್ಯವಾಗುತ್ತದೆ. ಎಲ್ಲಾ ರಾಜವಂಶದಲ್ಲಿಯೂ ವಂಶಪಾರಂಪರ್ಯವಾಗಿ ಅಧಿಕಾರ ಹಸ್ತಾಂತರವಾಗುವುದಾದರೂ.. ಆ ಅಧಿಕಾರಕ್ಕೆ ಹುದ್ದೆಗೆ ಅವರು ಸಮರ್ಥರೋ.. ಇಲ್ಲವೋ ಎಂಬುದು ಸಹಾ ಅಷ್ಟೇ ಮುಖ್ಯವಾಗುತ್ತದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಬೇರೆಯದ್ದೇ ಪರಿಸ್ಥಿತಿಯೂ ಎದುರಾಗಬಹುದು. ಇಲ್ಲಿ ರಾಜರಷ್ಟೇ ಮುಖ್ಯವಾಗಿ 'ಹಳೆ ಪೈಕರು' ಬರುತ್ತಾರೆ. ರಾಜನೇ ಒಂದು ರಾಜ್ಯ ಆಡಳಿತದ ಮುಖ್ಯಸ್ಥನಾದರೂ.. ಆತನಿಗೆ ತಿಳುವಳಿಕೆ ಕೊಡಲು ಆತನದ್ದೇ ಸಚಿವಾಲಯ ಹಾಗೂ ರಾಜಗುರುಗಳು, ಹಿರಿಯರು ಇದ್ದೇ ಇರುತ್ತಾರೆ. ಆದರೆ, ಇಲ್ಲಿ ಕಾಣುವ ಹಳೆ ಪೈಕರಿಗೆ ವಿಭಿನ್ನ ಹಿನ್ನೆಲೆಯಿದೆ. ಅವರಿಗೆ ಸಿಗುವ ಗೌರವದ ಜೊತೆಗೆ ದೈವೀಕ ಪ್ರೇರಣೆಯೂ ಕಾಣುತ್ತದೆ. 12 ಅಥವಾ 18 ಜನರ ಇವರ ಗುಂಪಿನಲ್ಲಿ ಮುಖ್ಯಸ್ಥರಾದ 'ಪರಿಪೂರ್ಣ'ರ ಮಾತಿನಲ್ಲಿ ಎಲ್ಲರಿಗೂ ನಂಬಿಕೆ. ಇವರ ಆಯ್ಕೆ, ಅಸ್ತಿತ್ವ  ಎಲ್ಲದಕ್ಕೂ ನಿಗೂಢತೆಯ ಸ್ಪರ್ಶವನ್ನೂ ಗಮನಿಸಬಹುದು.


ಇಲ್ಲಿನ ಘಟನೆಯ ಕಾಲಘಟ್ಟ 1576 - 1617. ಇದು ಮೇಲ್ನೋಟಕ್ಕೆ ಮೈಸೂರಿನ ರಾಜವಂಶದ ಕಥೆಯಾಗಿ ಕಂಡರೂ.. ಸುತ್ತಮುತ್ತಲಿನ ಸ್ಥಳಪುರಾಣಗಳಿವೆ. ಅಲ್ಲದೆ, ಸ್ವಾತಂತ್ರ್ಯಕ್ಕೂ ಮುಂದಿನ ದಿನಗಳ ವಿದೇಶಿಯರ ಪ್ರವೇಶದ ಕಥೆಯಿದೆ. ಅಕ್ಕ-ಪಕ್ಕದ ರಾಜ್ಯಗಳ ಸಂಸ್ಕೃತಿ, ಭಾಷೆ ಹಾಗೂ ಬದುಕಿನ ರೀತಿಯೂ ಕಾಣುತ್ತದೆ. ನನಗೆ ಮೈಸೂರು ಎಂದಾಗ ಮೂರು ವಿಚಾರಗಳು ನೆನಪಾಗುತ್ತವೆ. ಅದರಲ್ಲಿ ಮೊದಲನೆಯದು ಮೈಸೂರಿನ ದಸರಾ ಉತ್ಸವ. ಅದರಲ್ಲಿಯೂ ತಾಯಿ ಚಾಮುಂಡಿಯ ಆರಾಧನೆ. ಎರಡನೆಯದ್ದು ಮನೆಮನೆಯಲ್ಲಿಯೂ ಕೂರಿಸುವ ನವರಾತ್ರಿಯ ಗೊಂಬೆಗಳು ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ನೆನಪಾಗುವುದು ಮೈಸೂರು ರಾಜವಂಶದೊಡನೆ ತಳುಕು ಹಾಕಿಕೊಂಡ ತಲಕಾಡು, ಮಾಲಂಗಿ ಜೊತೆಗೆ ಅಲಮೇಲಮ್ಮನ ಶಾಪ. ಕೆ. ಎನ್ ಗಣೇಶಯ್ಯ ಅವರ ಪದ್ಮಪಾಣಿ ಕಥಾಸಂಕಲನದಲ್ಲಿ "ಮರಳು ತೆರೆಯೊಳಗೆ" ಎಂಬ ಕಥೆ ಬೇರೆಯದ್ದೇ ನೋಟವನ್ನು ಕಟ್ಟಿಕೊಟ್ಟಿತ್ತು. ಇಲ್ಲಿಯೂ ಈ ಪ್ರಸಂಗ ವಿಭಿನ್ನವಾಗಿದೆ.


ಮಾಲಿಂಗಿ ತಾಯೇ ಆಲಂಗಿಸೆನ್ನ 

ನವಿಲಂತೆ ತೆರೆದು ಗರಿ ಸವರಿಸೆನ್ನ...


ಕಾವೇರಿ ಸೀಮೆಯಲ್ಲಿ ಚಾಲ್ತಿಯಲ್ಲಿರುವ ಈ ಜಾನಪದ ಹಾಡು ಸೂಚಿಸುವ ಮಾಲಿಂಗಿಯೇ ಮಾಲಂಗಿ ಹಾಗೂ ಇಲ್ಲಿ ನವಿಲು ಎಂಬ ಶಬ್ದಕ್ಕೂ ಒಂದು ವಿಭಿನ್ನ ಕೊಂಡಿಯಿದೆ. ಕಾವೇರಿಯ ಉತ್ತರ ತಟದಲ್ಲಿ ಐದು ಲಿಂಗಗಳಾಗಿ ಹೊಂದಿರುವ ಶಿವನದ್ದು ಒಂದು ಕಥೆಯಾದರೆ.. ತಲಕಾಡಿನಲ್ಲಿ ಸುರಿದ ಮರಳಿನ ಮಳೆಯದ್ದೇ ಮತ್ತೊಂದು ಕಥೆ. ತಲಕಾಡು, ಮಾಲಿಂಗಿಗಳ ಸಂಗತಿಯನ್ನು ಹೇಳುವಂತೆ ಮೈಸೂರು ಹಾಗೂ ಶ್ರೀರಂಗಪಟ್ಟಣದ ಕಥೆಯನ್ನು ಕೇವಲ ಪೌರಾಣಿಕ ಅಥವಾ ಜಾನಪದ ಮೇಲೆ ಹೇಳುವುದಿಲ್ಲ ಲೇಖಕರು. ಇತಿಹಾಸ ಎಂದರೆ ಹೀಗೆ ಇತ್ತು ಎಂಬ ಅರ್ಥ. ಇತಿಹಾಸವೂ ಜನರ ಹೇಳಿಕೆಯ ಮೇಲೆ ಹಾಗೂ ಸಂಶೋಧನೆಗಳ ಮೇಲೆಯೇ ರೂಪಿತವಾಗಿದ್ದಲ್ಲವಾ ಎಂದೆನ್ನಿಸುತ್ತದೆ.


ಬೆಂಗಳೂರಿನ ಕಥೆಯ ಕುರಿತು ಕೇಳುವಾಗ ಅಲ್ಲಿ ಕೋಟೆಯ ಬಾಗಿಲು ನಿಲ್ಲಲು ಗರ್ಭಿಣಿಯೊಬ್ಬಳ ಆತ್ಮಾರ್ಪಣೆಯಾದ ಕಥೆ ಹಾಗೂ ಕೆರೆಗೆ ಹಾರವಾದ ಭಾಗೀರಥಿಯ ಕಥೆ ಅಚಾನಕ್ಕಾಗಿ ನೆನಪಾಗುವುದು ಇಲ್ಲಿನ ರಾಯಬಲಿಯನ್ನು ಕಂಡಾಗ. ಇಲ್ಲಿನ ಕಥೆ ಬರುವುದು ಬೆಟ್ಟದ ಚವುಡಿ ಅಂದರೆ ಚಾಮುಂಡಿ, ಆಕೆಯ ತಪ್ಪಲಿನಲ್ಲಿರುವ ತಂಗಿ ಉರಿಮಸಣಿಯರ ಹಿನ್ನೆಲೆಯಲ್ಲಾದರೂ.. ಇದಕ್ಕೆ ಮಲೆಯೊಡೆಯ ಮಾದಪ್ಪನೂ ಸೇರ್ಪಡೆಯಾಗುತ್ತಾನೆ. ಈ ಕಥಾ ಹಿನ್ನೆಲೆಯನ್ನು ಓದುವಾಗ ನನಗೆ ನಿಜಕ್ಕೂ ಅಚ್ಚರಿಯೆನ್ನಿಸಿದ್ದು ಚಾಮುಂಡಿಗೂ ಸಿಕ್ಕ ಶಾಪದ ಕುರಿತು ತಿಳಿದಾಗ. ಹಾಗಾದರೆ, ಏನಿದರ ಹಿನ್ನೆಲೆ ಹಾಗೂ ಶಾಪ ಎಂಬುದನ್ನು ನೀವೇ ಓದಿ ನೋಡಿ. ಅಷ್ಟಕ್ಕೂ ರಾಯಬಲಿಯಾದವರು ಯಾರು ಎಂಬುದು ಕೂಡಾ ತಿಳಿಯುತ್ತದೆ. 


ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ದಸರಾ ಹಂಪಿಯಲ್ಲಿ ನಡೆಯುತ್ತಿದ್ದರ ಮುಂದುವರಿಕೆಯೇ.. ಅಲ್ಲಿನಷ್ಟು ವೈಭೋಗ ಇಲ್ಲಿದ್ದಿದ್ದರೂ ಶಾಸ್ತ್ರ-ಸಂಪ್ರದಾಯವೆಲ್ಲವೂ ಅಲ್ಲಿಯಂತೆಯೇ. ಮುನ್ನೊಡೆಯ ಎಂದು ಕರೆಸಿಕೊಳ್ಳುವ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ಗೆದ್ದು ತಿರುಮಲರಾಯರಿಂದ ಶ್ರೀರಂಗಪಟ್ಟಣವನ್ನು ಪಡೆದಾಗ ತಿರುಮಲರಾಯರು ತಮ್ಮ ಸಂಸಾರದೊಡನೆ ಶ್ರೀರಂಗಪಟ್ಟಣವನ್ನು ತೊರೆಯುತ್ತಾರೆ. ಈ ಸಂಧರ್ಭಕ್ಕೂ ಉತ್ಸವಕ್ಕೂ ನಂಟೊಂದಿದೆ. 


ವೆಂಕಟಪತಿರಾಯರು ಮುನ್ನೊಡೆಯನೆದುರು ರತ್ನಸಿಂಹಾಸನದ ಮಹಿಮೆಯನ್ನು ಹೇಳುವಾಗ ಭುವನೇಶ್ವರಿದೇವಿಯ ಪ್ರಸಂಗ ಬರುತ್ತದೆ. ದೇವರಲ್ಲೂ ಭೇದವೇ..! ಚಾಮುಂಡಿ ಹಾಗೂ ಭುವನೇಶ್ವರಿಯರಲ್ಲಿ ಮುನ್ನೊಡೆಯ ಭೇದವೆಣಿಸದಿದ್ದರೂ.. ಇಲ್ಲಿ ಅದು ರಾಯಬಲಿಗೆ ಮುನ್ನುಡಿಯಾಗಿದ್ದೇಕೆ..


ಬೆಟ್ಟದ ಚಾಮರಾಜರಿಂದ ಶುರುವಾಗುವ ಚರಿತ್ರೆ ಮುನ್ನೊಡೆಯನಿಂದ ಮುಂದುವರಿಯುತ್ತದೆ. ಶ್ರೀಮನ್ಮಹಿಷೂರು ಸಂಸ್ಥಾನವೆಂದು ಹೆಸರು ಪಡೆಯುತ್ತದೆ. ಬೆಟ್ಟದ ಚಾಮರಾಜರು ಮೈಸೂರಿನ ಎಂಟನೇ ಒಡೆಯರು. ಮುಂದೆ ಇವರೇ ಬೆಟ್ಟಯ್ಯನಾಗುತ್ತಾರೆ. ಚಿನ್ನಾರಿ-ರನ್ನಾರಿಯರ ಜೊತೆ ಗಾಂಧರ್ವ ವಿವಾಹ ವಾಗುವ ಇವರು ಅವಳಿ ಮಕ್ಕಳ ಜನ್ಮಕ್ಕೂ ಕಾರಣರಾಗುತ್ತಾರೆ. ಮುಂದೆ ಅವರು ಮಹಿಷೂರಿನ ಚರಿತ್ರೆಯ ಹಾದಿಯನ್ನು ಬದಲಿಸುವುದು ಬೇರೆಯದ್ದೇ ಕತೆ. ಪಟ್ಟದರಸು ಗಾಂಧರ್ವ ವಿವಾಹವಾದರೂ.. ರಾಣಿಯಾಗುವವಳು ಅರಸುಕುಲದಿಂದಲೇ ಬಂದಿರಬೇಕು. ಹಾಗೆ ಪಟ್ಟದರಸಿಯಾಗಿದ್ದು ಗೌರಾಜಮ್ಮಣ್ಣಿ. ಮುಂದೆ ಬೆಟ್ಟದರಸು ಇದೆಲ್ಲದರಿಂದ ವಿಮುಖನಾದಾಗ ಪಟ್ಟಕ್ಕೆ ಬಂದದ್ದೇ ರಾಜ ಒಡೆಯ ಅಂದರೆ ಮುನ್ನೊಡೆಯ. ಬೆಟ್ಟದೊಡೆಯನಿಗೆ ವ್ಯತಿರಿಕ್ತವೆನಿಸುವಷ್ಟು ರಾಜಕೀಯದಲ್ಲಿ ತೊಡಗಿ ಮಹಿಷೂರಿನ ರಾಜ್ಯಾಡಳಿತ ಮಾಡಿ ರಾಜ್ಯ ವಿಸ್ತರಿಸುತ್ತಾನೆ.  


ಮುನ್ನೊಡೆಯನಿಗೆ 7 ರಾಣಿಯರು. ಇದರಲ್ಲಿ ಹೆಚ್ಚಿನ ಪ್ರಸ್ತಾಪ ಬರುವುದು ಎಡವನಹಳ್ಳಿಯ ತಿಮ್ಮಾಜಮಣಿಯದ್ದು. ಹಾಗೆಂದು, ಈಕೆ ಪಟ್ಟದರಸಿಯೇನಲ್ಲ.. ಬದಲಾಗಿ, ಮುನ್ನೊಡೆಯನ ನಾಲ್ಕನೇ ರಾಣಿ. ಅಮ್ಮಣ್ಣಿ ಎಂಬ ಪದಕ್ಕೂ ಇಲ್ಲಿ ವಿಭಿನ್ನ ಅರ್ಥವಿದೆ. ಈಕೆಗೆ ಅಂತಪುರದಾಚೆಗಿನ ವಿದ್ಯಮಾನಗಳಲ್ಲಿ, ಅದರಲ್ಲಿಯೂ.. ರಾಜ್ಯದ ಆಡಳಿತದಲ್ಲಿ, ಅಲ್ಲಿನ ಸ್ಥಿತಿ-ಗತಿಯಲ್ಲಿ, ಎಲ್ಲವನ್ನೂ ತಿಳಿದುಕೊಂಡು ಆಲೋಚಿಸುವಲ್ಲಿ ವಿಭಿನ್ನವಾದ ಆಸಕ್ತಿ. ನೇರಾನೇರವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳದಿದ್ದರೂ.. ಈಕೆಯ ಕೊಡುಗೆಯೂ ಮಹಿಷೂರಿನ ಮೇಲೆ ಇದ್ದೇ ಇದೆ. ಈಕೆಯ ದೃಷ್ಟಿಯಿಂದ ಯಾವುದೂ ಸುಲಭದಲ್ಲಿ ತಪ್ಪಿಸಿಕೊಳ್ಳುತ್ತಿರಲಿಲ್ಲ. ಈಕೆಗೆ 'ಕಟಾಕ್ಷಗಿತ್ತಿ' ಎಂದು ಬಿರುದಿತ್ತು. ಬೇಹಿನ ಸೂರಣ ಹಾಗೂ ರಾಣಿಯ ಸಂಭಾಷಣೆಗಳು ಮಹಿಷೂರಿನ ಹಾಗೂ ಸುತ್ತಮುತ್ತಲಿನ ವಿಚಾರವನ್ನು ನಮಗೆ ತಿಳಿಸುವುದಲ್ಲದೆ, ರಾಣಿಯ ಆಸಕ್ತಿಯನ್ನು ಜೊತೆಗೆ ಸೂರಣನಂತಹಾ ಬೇಹುಗಾರ ಕಾರ್ಯ ನಿರ್ವಹಿಸುವ ಪರಿಯನ್ನು ತಿಳಿಸುತ್ತದೆ.


ಶೆರಗಣಾಂಬು, ಸೆರಾಗಣಾಂಬು ಹಾಗೂ ತೆರಕಣಾಂಬಿ ಈ ಮೂರು ಪದಗಳು ಇನ್ನಿಲ್ಲದಷ್ಟು ಕುತೂಹಲವನ್ನು ಮೂಡಿಸುತ್ತವೆ. ತೆರಕಣಾಂಬಿಗೂ ಈ ಪದಗಳಿಗೂ ಪರಸ್ಪರ ಸಂಬಂಧವಿದೆಯಾ ಎನ್ನುವುದನ್ನು ಹುಡುಕಿ ಹೊರಟಾಗ ಸಿಗುವುದು ಶೇರುಮಾನ ಬಾಬಾ. ಕೇರಳ ಹಾಗೂ ಮಲಬಾರಿನ ತೀರದ ಕಥೆಗಳನ್ನು ಹಾಗೂ ಫಿರಂಗಿಯವರ ಕುರಿತ ವಿಚಾರಗಳನ್ನು ಶೇರಮಾನ ಬಾಬಾನಿಂದ ತಿಳಿದುಕೊಳ್ಳುವಾಗ ಸ್ವಾತಂತ್ರ್ಯಪೂರ್ವದ ದಿನಗಳ ಚಿತ್ರಣ ಕಂಡುಬರುತ್ತದೆ. ಅಲ್ಲಾಹು ಹಾಗೂ ಕರುಂಬ ಭಗವತಿಗೂ, ಜನಮಾನಸದಲ್ಲಿ ನೆಲೆಸಿದ್ದ ದೇವತೆಗಳಿಗೂ ಇರುವ ನಂಬಿಕೆಗಳು ಹಾಗೂ ವಿವಿಧ ಪ್ರಸಂಗಗಳು ಕಾಣುತ್ತವೆ. ಎಲ್ಲಿಯ ಈದುಚಂದೆ, ಎಲ್ಲಿಯ ಜೇನುದ್ದೀನನ ಮಗ ಶೇರಮಾನ ತಾಜುದ್ದೀನ ಹಾಗೂ ಎಲ್ಲಿಯ ಶೇರುಮಾನ ಬಾಬಾ..! ಕಾದಂಬರಿಯುದ್ದಕ್ಕೂ ಆವರಿಸಿಕೊಳ್ಳುವ ಶೇರುಮಾನನ ಹಿನ್ನೆಲೆಯಲ್ಲಿ ದೈವೀಕತೆ ಇದೆ. ಪವಾಡವಿದೆ ಹಾಗೂ ಶೆರಗಣಾಂಬು ಎಂದು ಆತ ಪದೇಪದೇ ಉಚ್ಛರಿಸುವ ಪದಕ್ಕೂ ಕುತೂಹಲವಿದೆ. 


ರಾಜ್ಯಾಡಳಿತವನ್ನು ತೊರೆದು ಹೊರಟ ಬೆಟ್ಟದೊಡೆಯ ನೆಲೆಸಿದ್ದಾದರೂ ಎಲ್ಲಿ..? ಆತನನ್ನು ಹಿಂಬಾಲಿಸಿ ಹೊರಟ ಗೌರಮ್ಮ ಹಾಗೂ ಆತನ ಮಿಲನ ಮುಂದೆ ಯಾವ ಘಟನೆಗೆ ಕಾರಣವಾಯಿತು..? ಅವರಿಬ್ಬರ ತಾಳ್ಮೆ, ಕಠಿಣವಾದ ಬದುಕು, ದೈವ ನಿಷ್ಠೆ ಎಲ್ಲವೂ ಮತ್ತೆ ಮಹಿಷೂರಿಗೆ ಕೊಂಡಿಯಾದ ಬಗೆ ಹೇಗೆ...?


ಚನ್ನಪಟ್ಟಣದ ಗೊಂಬೆಗಳದ್ದು ಹಾಗೂ ನಕ್ಷೆಯದ್ದು ವಿಭಿನ್ನವಾದ ಚಿತ್ರಣ. ಲೋಹದ ಗುಂಡಿನ ಕುರಿತಾದ ಒಗಟು ತಿಮ್ಮಾಜಮ್ಮಣ್ಣಿಯ ದೃಷ್ಟಿಗೆ ಬಿದ್ದು ಅದು ತಿಳಿಯಿತಾದರೂ.. ಚನ್ನಪಟ್ಟಣದ ಗೊಂಬೆಗಳು ಮತ್ತೊಂದು ಕಥೆಗೆ ಮುನ್ನುಡಿಯಾಗುತ್ತವೆ. ಎಲ್ಲಿಯ ಚನ್ನಪಟ್ಟಣದ ಗೊಂಬೆಗಳು ಹಾಗೂ ಎಲ್ಲಿಯ ಪರ್ಷಿಯಾದ ಕಂಜೀಪೆಗಳು..!


ಶ್ರೀರಂಗಪಟ್ಟಣದ ತಿರುಮಲ ರಾಯರಿಗೆ ಇಬ್ಬರು ಹೆಂಡತಿಯರು ಅಲಮೇಲು ಹಾಗೂ ರಂಗನಾಯಕಿ. ಇವರಿಬ್ಬರ ತಾಯಂದಿರು ಸತಿ ಹೋಗುವಾಗ ತಮ್ಮ ಮೂಗಿನಲ್ಲಿದ್ದ ಗಿಣಿ ಹಾಗೂ ನವಿಲಿನ ಮೂಗುತಿಗಳನ್ನು ಹೆಣ್ಣುಮಕ್ಕಳಿಗೆ ಕೊಟ್ಟು ಎಂದಿಗೂ ಇವುಗಳನ್ನು ಕಳಚಬಾರದೆಂದು ಹೇಳಿದ್ದರು. ಆದರೆ ಮೂಗುತಿ ಸೇವೆಗಾಗಿ ಅದನ್ನು ರಂಗನಾಯಕಿ ಕೊಡಲು ಒಪ್ಪಿದ ಸಂದರ್ಭದಲ್ಲಿ ನಡೆದ ಘಟನೆಯೇನು..? ಈ ಮೂಗುತಿಗಳೇ ಬರೆದ ದುರಂತದ ಘಟನೆಯೇನು..? 


ಇಬ್ಬರು ರಾಣಿಯರ ಮೂಗುತಿಗಳು ಒಂದೇ ರೀತಿ ಕಂಡರೂ ಅಲ್ಲೊಂದು ಸೂಕ್ಷ್ಮವಿತ್ತು. ಆ ಸೂಕ್ಷ್ಮತೆಯಾದರೂ ಏನು..? ಈ ಮೂಗುತಿಗಳ ಕುರಿತ ಪ್ರಸ್ತಾಪ, ವರ್ಣನೆ ಹಾಗೂ ಅದನ್ನು ತೊಟ್ಟವರು ಪಡೆದ ಕಲೆ, ದೈವೀಕವಾದ ಮೂಗುತಿ ಸೇವೆ ಇದೆಲ್ಲವನ್ನು ನೋಡುವಾಗ ನಮಗೆ ಪುಸ್ತಕದ ಮುಖಪುಟದಲ್ಲಿನ ಚಿತ್ರದ ಅರ್ಥ ದಕ್ಕುತ್ತದೆ. ಅಲ್ಲಿರುವ ಗಿಣಿ ಹಾಗೂ ನವಿಲಿನ ಮೂಗುತಿಗಳು ನನ್ನನ್ನು ಎಷ್ಟು ಗಾಢವಾಗಿ ಸೆಳೆಯುತ್ತವೆ. ಓದಿನ ವರ್ಣನೆಗೇ ಹೀಗೆ ಸಿಗುವಾಗ ಆ ಮೂಗುತಿಗಳು ನೋಡಿದವರ ಮನಸ್ಸಿನಲ್ಲಿ ಉಂಟು ಮಾಡಿರಬಹುದಾದ ಭಾವ ಅತಿಶಯೋಕ್ತಿಯಲ್ಲವೆಂದೆನ್ನಿಸಿತು. ಮೂಗುತಿ ಸೇವೆಗೆ ತನ್ನ ಮೂಗುತಿ ಕೊಟ್ಟದ್ದು ರಂಗನಾಯಕಿಯಾದರೂ.. ಅಲಮೇಲಮ್ಮನ ಶಾಪ ಎಂದು ಜನಪದದಲ್ಲಿ ನೆಲೆಯಾಗಿರುವ ಬಗೆಯಾದರೂ ಏಕೆ ನೀವೇ ಓದಿ ನೋಡಿ.


ಮಾಲಿಂಗಿ ಮಡುವಾಗುವ ವಿಚಾರ ಕೇಳಿರುವ ನಮಗೆ ಇಲ್ಲಿ ಮಾಲಂಗಿ ಮಡು ಎಂದೇ ಹೆಸರಿದ್ದರೂ.. ಅಲ್ಲಿ ನಡೆದ ಪವಾಡ ಮೃತ್ಯು ಕೂಪವಾಗದ ಮಾಲಂಗಿಯ ವೈಶಿಷ್ಟ್ಯವನ್ನು ಸಾರುತ್ತದೆ. ಆ ಪವಾಡ ಹಾಗೂ ವೈಶಿಷ್ಟ್ಯವನ್ನು ನೀವೇ ಓದಿ. 


ತಿರುಮಲರಾಯರು ಹಾಗೂ ಅವರ ಇಬ್ಬರು ಪತ್ನಿಯರ ಕೊನೆಯ ಕ್ಷಣಗಳ ಭೀಕರ ಚಿತ್ರಣವಂತೂ ತಲ್ಲಣಿಸುವಂತೆ ಮಾಡುತ್ತದೆ. ಅದಕ್ಕೆ ಕಾರಣವಾಗಿದ್ದು ಬೆಟ್ಟದೊಡೆಯನ ಅವಳಿ ಮಕ್ಕಳಲ್ಲಿ ಒಬ್ಬರು ಎಂಬುದು ದುರಂತಗಾಥೆ. ಬೆಟ್ಟದರಸು ಹಾಗೂ ವಿಕ್ರಮರಿಗೆ ನೇರಂಬಟ್ಟ ಹಾಗೂ ಸೊಟ್ಟಂಬಟ್ಟರೆಂಬ ಹೆಸರು. ಅಸಲಿಗೆ ಬೆಟ್ಟದರಸು ಹಾಗೂ ವಿಕ್ರಮ ಎಂಬುದಕ್ಕಿಂತ.. ನೇರುಗ, ಸೊಟ್ಟುಗ ಅಥವಾ ನೇರಂಬಟ್ಟ ಸೊಟ್ಟಂಬಟ್ಟರೆಂಬ ಹೆಸರುಗಳೇ ಹೆಚ್ಚು ಓದಿಸಿಕೊಳ್ಳುವುದರಿಂದ ಮನಸ್ಸಿನಲ್ಲಿ ಅವೇ ನೆಲೆ ನಿಂತಿವೆ. 


ದುರಂತ ಇಷ್ಟಕ್ಕೇ ಮುಗಿಯುವುದಿಲ್ಲ. ತಿರುಮಲರಾಯರ ಸಂಸಾರ ಕೊನೆಗೊಂಡ ಸಂದರ್ಭದಲ್ಲಿ ಗಮನಿಸದ ವಿಚಾರವೊಂದು ಬಯಲಿಗೆ ಬರುವುದು ಮಾಚವ್ವನ ಸಾವಿನಿಂದ. ಮಾಚವ್ವ ಧರಿಸಿದ್ದ ಗಿಣಿ, ನವಿಲಿನ ಮೂಗುತಿಗಳಿಂದ..! 


ಮಾಚವ್ವನಿಗೂ ಹಾಗೂ ಮಹಿಷೂರಿನ ರಾಜವಂಶದ ಮುನ್ನೊಡೆಯರ ಮೊದಲ ಸೊಸೆ ಹೊನ್ನಾಜಮ್ಮನಿಗೂ ಸಂಬಂಧವಿದ್ದರೂ.. ಅಷ್ಟೇ ಸಂಬಂಧ ಒಡೆಯರ ವಂಶಕ್ಕೆ ದೊರೆತ ಶಾಪಕ್ಕೂ ಇದೆ. ಅಷ್ಟಕ್ಕೂ.. ಮಾಚವ್ವನ ಹಿನ್ನೆಲೆಯೇನು ಹಾಗೂ ಆಕೆ ಶಾಪವಿತ್ತದ್ದಾದರೂ ಏಕೆ..?


ಮುನ್ನೊಡೆಯನ ಮೂವರು ಮಕ್ಕಳ ಸಾವಿನ ನಂತರ ಸಾಲು ಸಾವುಗಳು ಸಂಭವಿಸಿದವು. ಮೊಮ್ಮಗನಾದ ಚಾಮರಾಜನನ್ನು ಸಿಂಹಾಸನಕ್ಕೆ ನಿಯೋಜಿಸುವ ವಿಚಾರವಿದ್ದರೂ.. ಮುನ್ನೊಡೆಯನಿಗೆ ಅದು ಸಮಾಧಾನ ತರಲಿಲ್ಲ. ತಿಮ್ಮಾಜಮ್ಮಣಿಯ ಸೂಚನೆಯ ಮೇರೆಗೆ 'ಕಂಠೀರವ ನರಸರಾಜ'ನು ಸಿಂಹಾಸನದ ವಾರಸುದಾರನಾಗುತ್ತಾನೆ. ಕಂಠೀರವ ನರಸರಾಜರ ಸಂಬಂಧದ ಕುರಿತು ಓದಿ ತಿಳಿಯಿರಿ. ಬೆಟ್ಟದರಸು ಹಾಗೂ ವಿಕ್ರಮರಸ್ಸು ಸಂಸ್ಥಾನದ ದಳವಾಯಿ ಹಾಗೂ ದಂಡೊಡೆಯರಾದರು. ಮೇಲುಕೋಟೆಯ ವೈಯಿರಮುಡಿ ಹಾಗೂ ರಾಜಮುಡಿಯ ವಿಚಾರಗಳನ್ನು ಇಲ್ಲಿ ಕಾಣಬಹುದು. 


ಮುನ್ನೊಡೆಯನ ಮುಂದಿನ ದಿನಗಳು ಹೇಗಿದ್ದವು..? ತಿಮ್ಮಾಜಮ್ಮ ದೂರ ನಿಲ್ಲಬೇಕೆಂದುಕೊಂಡರೂ ಅದು ಸಾಧ್ಯವಾಗದೆ, ಅವಳ ಬದುಕಿನಲ್ಲಿ ನಡೆದ ವಿಧಿಯ ಕೈವಾಡವೇನು ಓದಿ ನೋಡಿ.


1. ಕಥನ ಕ್ರಮ, ಘಟನೆಗಳನ್ನು ಒಂದಕ್ಕೊಂದು ಬೆಸೆದಿರುವ ಪರಿ, ಕಥೆಯೊಳಗಿನ ಕಥೆಯಂತೆ ಅಥವಾ ಒಟ್ಟಾರೆ ಚಿತ್ರಣವನ್ನು ಕುತೂಹಲದಿಂದಲೇ ಒಂದಕ್ಕೊಂದು ಬೆಸೆದಿರುವ ಪರಿ ಇಷ್ಟವಾಯಿತು. ಫಜಲ್ (Puzzle) ಅನ್ನು ಕೂಡಿಸಿದಾಗ ಒಟ್ಟಿಗೆ ಕಾಣುವ ಸುಂದರ ಚಿತ್ರಣದಂತಿದೆ.


2. ಬೃಹತ್ ಕಾದಂಬರಿಯಾದ್ದರಿಂದ ಕೊನೆಗೆ ಕೊಟ್ಟಿರುವ ಕಾಲಸೂಚಿ, ಒಡೆಯರ ಕಾಲಮಾನ, ಟಿಪ್ಪಣಿಗಳು ಹಾಗೂ ನಕ್ಷೆಗಳು ಮೆಲುಕು ಹಾಕಿಕೊಳ್ಳಲು ಬಹಳ ಸಹಾಯಕವಾಗಿದೆ.


3. ಕಾದಂಬರಿಯಲ್ಲಿ ಕುತೂಹಲದಿಂದ ಓದಿಸಿಕೊಳ್ಳುವ ಕೆಲವು ಪಾತ್ರಗಳು ಕಾಲ್ಪನಿಕವೋ, ಪೌರಾಣಿಕವೋ ಅಥವಾ ಐತಿಹಾಸಿಕವೋ ಎಂಬ ಆಲೋಚನೆಯಲ್ಲಿ ನಂಬಲು ಹಾಗೂ ನಂಬದಿರಲು ಆಗದಂತಹಾ ಸಂದರ್ಭವನ್ನು ನಿವಾರಿಸುವಂತೆ.. ಪಾತ್ರ ಕಾಲ್ಪನಿಕವೋ, ಪೌರಾಣಿಕವೋ, ಐತಿಹಾಸಿಕವೋ ಎಂಬುದನ್ನು ಕೊನೆಯಲ್ಲಿ ಸೂಚಿಸಿ ಸಂವೇಹವನ್ನು ಪರಿಹರಿಸಿದ್ದಾರೆ. 


4. ರಾಜರ ಬಹುಪತ್ನಿತ್ವ ಕಂಡಂತೆಯೇ ಇಲ್ಲಿ ಸತಿ ಪದ್ಧತಿಯೂ ಕಾಣುತ್ತದೆ. ಸತಿ ಪದ್ಧತಿಗೆ ಹೊರತಾಗಿರುವ ಕೆಲವು ಸಂದರ್ಭಗಳೂ ಇವೆ. ಮಕ್ಕಳ ಕಾರಣಕ್ಕೆ ಸತಿಗೆ ಒಳಗಾಗದೆ ಉಳಿಯುತ್ತಾರೆ ಎಂಬುದು ಹೌದಾದರೂ.. ಮಾಚವ್ವನ ಸತಿಯಿಂದ ಪಾರಾದ ಪ್ರಸಂಗ ವಿಭಿನ್ನವಾದ ಕತೆ ಹೇಳುತ್ತದೆ. 


5. ಕಾದಂಬರಿ ಸಂಪೂರ್ಣ ಗ್ರಂಥಸ್ಥ ಭಾಷೆಯಲ್ಲಿಲ್ಲದ್ದರಿಂದ ಓದು ನಿಧಾನಗತಿಯಲ್ಲಿ ಸಾಗುತ್ತದೆ ಎಂಬುದು ಹೌದಾದರೂ.. ಪದಗಳ ವೈಶಿಷ್ಟ್ಯತೆಯೊಂದಿಗೆ ಹಾಗೂ ಈ ರಾಣಿಯನ್ನು ಸಂಬೋಧಿಸುವ ಪರಿ, ನೀಡುವ ಗೌರವ ಹೀಗೆ ಸಣ್ಣಪುಟ್ಟ ವಿಚಾರಗಳನ್ನು ಕಟ್ಟಿಕೊಟ್ಟಿದ್ದಾರೆ. ಮೈಸೂರಿನ ಪ್ರಾಂತ್ಯದ ಕನ್ನಡದ ಪದಗಳು ಭಾಷಾ ಲಾಲಿತ್ಯದೊಂದಿಗೆ ಮಿಳಿತಗೊಂಡಿದೆ. ಉಚ್ಚಾರಣೆಗಳು ಆಡುಮಾತಿದಂತೆಯೇ ದಾಖಲಾಗಿವೆ. (ಉದಾ : ಹವುದು, ಯಾತಕು, ಯಿಸ್ಟೇಯಾ, ಯಿಲ್ಲವಲ್ಲೋ )


6. ರಾಜವಂಶಗಳಲ್ಲಿ ಗದ್ದುಗೆಗಾಗಿ ನಡೆಸುವ ಸಂಚುಗಳು ಹಾಗೂ ಕುಕೃತ್ಯಗಳು ದಾಯಾದಿಗಳಿಂದ ಮಾತ್ರವಲ್ಲದೆ.. ಪಟ್ಟದ ರಾಣಿಯವರ ಮನೆಯವರ ಕಡೆಯಿಂದ, ದಳವಾಯಿಗಳಿಂದಲೂ ರೂಪಿತವಾದ ಚಿತ್ರಣಗಳಿವೆ. 


7. ಬಿರುದುಗಳಿಗೆ ಹಿನ್ನೆಲೆ ಇರುವುದು ಹೌದಾದರೂ.. ಅದಕ್ಕೆ ಬೇಕಾದ ಜ್ಞಾನ ಆಸ್ಥಾನದಲ್ಲಿ ಕಾಣದಿದ್ದಾಗ ತಿಳುವಳಿಕಯ್ಯನ ಹಾಗೂ ಬಾಲಸರಸ್ವತಿಯ ಮೂಲಕ ಕಟ್ಟಿಕೊಟ್ಟಿರುವ ಪರಿ ಅನುಭವದಿಂದ ಸಿಗುವ ಅರಿವನ್ನು ತೋರುತ್ತದೆ. 


8. ಯುದ್ಧದ ಚಿತ್ರಣಗಳಲ್ಲಿ ಮುಖ್ಯವಾಗಿ ಬೇಕಾಗುವ ಪ್ಲಾನಿಂಗ್, ಅದರಲ್ಲಿಯೂ ಸುತ್ತಮುತ್ತಲಿನ ವಿಚಾರವನ್ನು ತಿಳಿದುಕೊಳ್ಳುವ ಬಗ್ಗೆ, ಬೇಹುಗಾರಿಕೆ, ಛದ್ಮನಾಮ, ಫಿರಂಗಿ, ಅಶ್ವಪಡೆ ಸುತ್ತಮುತ್ತಲಿನ ಕಂದಕ, ನದಿ ಉಳಿದ ವಿಚಾರಗಳ ಜೊತೆಗೆ ಗೋಳವೆಂಬ ಲೋಹದ ಚೆಂಡಿನ ಕುರಿತು ಪ್ರಸ್ತಾಪಿಸಿರುವ ಬಗೆ ಇಷ್ಟವಾಯಿತು.


9. ಕುಟುಂಬದ ಹಿರಿತನ, ವಿವಾಹ ಮೊದಲ ಮಗನಿಗೆ. ಉಳಿದ ಗಂಡುಮಕ್ಕಳು ವಿವಾಹವಿಲ್ಲದೆ ಎಷ್ಟಾದರೂ ಕೂಡಿಕೆ ಮಾಡಿಕೊಳ್ಳಬಹುದೆನ್ನುವ ವಿಚಾರ ಅಚ್ಚರಿ ತರಿಸಿತು. (ಒಂದು ಸಂಧರ್ಭದಲ್ಲಿ ಮಾತ್ರ ಇದರ ಉಲ್ಲೇಖವಿದೆ. ಇದು ಹಳೆಯ ಕಾಲಮಾನದ ವಿಚಾರ). ಮಾತುಳ, ಪೈತೃಕರ ವಿಚಾರವನ್ನೂ ಗಮನಿಸಬಹುದು.


10. ಸಾಮಾನ್ಯವಾಗಿ ಒಡವೆಗಳು ಒಬ್ಬರಿಂದ ಮತ್ತೊಬ್ಬರಿಗೆ ಪಾರಂಪರಿಕವಾಗಿ ದಾಟಿ ಬರುವುದು ಹೌದಾದರೂ.. ನಮ್ಮ ಕಡೆಯಲ್ಲಿ ಮೂಗುತಿ ಮಾತ್ರ ದೇಹದೊಡನೆ ಮಣ್ಣಿಗೆ ಸೇರುವ ಚಿನ್ನ, ಅದನ್ನು ಯಾರೂ ತೆಗೆಯಲಾರರು. ಆದರೆ, ಇಲ್ಲಿ ಇದಕ್ಕೆ ವ್ಯತಿರಿಕ್ತವಾದ ಸನ್ನಿವೇಶ ಕಂಡದ್ದು ತಾಯಂದಿರಿಂದ ಮೂಗುತಿ ಪಡೆದ ಅಲಮೇಲು ಹಾಗೂ ರಂಗನಾಯಕಿಯರ ವಿಚಾರದಲ್ಲಿ. ಇದು ಮೂಗುತಿಯ ವಿಚಾರಕ್ಕೆ ಬಂದ ಹಿನ್ನೆಲೆಯೋ ಅಥವಾ ಅಲ್ಲಿ ಈ ರೀತಿಯ ಆಚರಣೆ ಇರಲಿಲ್ಲವೋ ತಿಳಿಯಲಿಲ್ಲ. ಹೆಣ್ಣಿನ ಆಭರಣ, ಅದರಲ್ಲೂ ಮೂಗುತಿಯ ಮಹತ್ವ, ಪುರಾಣದಲ್ಲಿಯ ಕಥೆಯನ್ನು ಉಲ್ಲೇಖಿಸಿ ಮೂಗುತಿಗೆ ಕೊಟ್ಟಿರುವ ಮಾನ್ಯತೆ ಎಲ್ಲಕ್ಕಿಂತಲೂ ಮಿಗಿಲಾದದ್ದು.


"ಭಾಷೆ ಅನ್ನೋದು ತಾನು ತನ್ನ ಕಣ್ಣಾರೆ ನೋಡಿ ಕಂಡುಕೊಂಡಿರೋ ಜಗತ್ತನ್ನಷ್ಟೇ ತನ್ನೊಳಗೆ ಇಟ್ಟುಕೊಂಡಿವುದು. ಅಷ್ಟೇ ಕಟ್ಟಿಕೊಂಡಿರುವುದು." ಎಂಬುದನ್ನು ಪಾತ್ರವೊಂದರ ಮೂಲಕ ಹೇಳಿಸಿರುವ ಲೇಖಕರು ಭಾಷೆ, ಪದಲಾಲಿತ್ಯದ ಜೊತೆಗೆ ಕಥಾನಕವನ್ನು ಕಟ್ಟಿಕೊಟ್ಟಿರುವ ಬಗೆ, ಪವಾಡ, ದೈವಿಕತೆ, ಜಾನಪದ ಪುರಾಣ, ಇತಿಹಾಸ ಎಲ್ಲವನ್ನೂ ಮುಖ್ಯವಾಗಿಸಿ ನಾವು ಕಾಣದ ಜಗತ್ತೊಂದನ್ನು ಕಟ್ಟಿಕೊಟ್ಟಿದ್ದಾರೆ. ಈ ಜಗತ್ತಿಗೆ ಒಳ ಸೇರಿದಷ್ಟು ಸುಲಭವಲ್ಲ ಇದರಿಂದ ಹೊರಬರುವುದು. 


~ವಿಭಾ ವಿಶ್ವನಾಥ್

ಏಕಲವ್ಯ (ಪುಸ್ತಕ ಯಾನ - 287)


ಪುಸ್ತಕದ ಶೀರ್ಷಿಕೆ : ಏಕಲವ್ಯ

ಲೇಖಕರು : ಡಾ|| ಸಿದ್ದಲಿಂಗಯ್ಯ

ಪ್ರಕಾಶಕರು : ಅಂಕಿತ ಪುಸ್ತಕ

ಮರು ಮುದ್ರಣ : 2003

ಪುಟಗಳು : 64

ಬೆಲೆ : 25 ರೂ. 


ಏಕಲವ್ಯನ ಕಥೆಯನ್ನು ಸಾಮಾನ್ಯವಾಗಿ ನಾವು ಆತ ತನ್ನ ಗುರುವಿಗೆ ಹೆಬ್ಬೆರಳನ್ನು ಅರ್ಪಿಸುವ ಸಂದರ್ಭದವರೆಗೆ ಮಾತ್ರ ಕೇಳಿರುತ್ತೇವೆ. ಏಕಲವ್ಯ ಮುಂದೆ ಹೇಗೆ ಬದುಕಿದ, ಆತನ ಬದುಕು ಹೇಗಿತ್ತು ಎಂಬುದರ ಕುರಿತು ಕುತೂಹಲವಂತೂ ಉಳಿದಿರುತ್ತದೆ. ಏಕಲವ್ಯನ ಕುರಿತಾದ ನಾಟಕಗಳು ಬಂದಿವೆ. ಇಂದು ನಾನು ಪರಿಚಯಿಸುತ್ತಿರುವ ಪುಸ್ತಕ ಡಾ|| ಸಿದ್ದಲಿಂಗಯ್ಯನವರ ಏಕಲವ್ಯ ನಾಟಕ. ಏಕಲವ್ಯನ ಕುರಿತಾಗಿ ಗೋವಿಂದ ಪೈ ಅವರ ಹೆಬ್ಬೆರಳು ಹಾಗೂ ಕುವೆಂಪು ಅವರ ಬೆರಳ್ಗೆ ಕೊರಳ್ ಓದಬೇಕಿದೆ. ಡಾ|| ಸಿದ್ದಲಿಂಗಯ್ಯನವರ 'ಏಕಲವ್ಯ' ನಾಟಕ ನಮಗೆ ಪಿ.ಯು.ಸಿಯಲ್ಲಿ ಕನ್ನಡದ ಪಠ್ಯದ ಭಾಗವೂ ಆಗಿತ್ತು. 


ಒಟ್ಟು 11 ದೃಶ್ಯಗಳ ನಾಟಕ. ಇದು ಕೇವಲ ಏಕಲವ್ಯ, ದ್ರೋಣ ಅಥವಾ ಅರ್ಜುನ ಅಥವಾ ಲೇಖಕರ ನೋಟದಿಂದ ಗ್ರಹಿಕೆಯಾಗಿ ಬರೆಸಿಕೊಂಡದ್ದಲ್ಲ.. ಬದಲಾಗಿ, ಅಲ್ಲಲ್ಲಿ ಹಲವಾರು ಪಾತ್ರಗಳಿವೆ. ನಾಟಕ ಶುರುವಾಗುವುದೇ ಕುರುಕ್ಷೇತ್ರ ಯುದ್ಧದ ದೃಶ್ಯದಿಂದ.

ಕುರುಕ್ಷೇತ್ರ ರಂಗದಲ್ಲಿ ಸೈನಿಕರು ಹೋರಾಟದಲ್ಲಿ ಮಗ್ನರಾಗಿದ್ದಾಗ ಹೋರಾಟ ತಾರಕಕ್ಕೆ ಮುಟ್ಟಿದಾಗ ಏಕಲವ್ಯ ಬಂದು ನಿಲ್ಲಿಸಿ ಎನ್ನುವ ಸಂಧರ್ಭ. 


ಆ ಸಂದರ್ಭದಲ್ಲಿ ಬರುವ ಹಾಡು ಕಾಡಿನ ಹೂವೊಂದು ಊರಿನ ಗುಡಿಯಲ್ಲಿ ಪೂಜೆ ಸಲ್ಲದೆ ಹೋಗುವ ಕತೆಯನ್ನು ಹೇಳುತ್ತದೆ.


ಗಿಳಿಯೊಂದು ಹಾಡಲು ಉಳಿದಂಥ ಮೃಗಗಳು 

ದನಿ ಕಿತ್ತುಕೊಂಡಂಥ ಕಥೆಯ ಕೇಳಿ 


ಎನ್ನುತ್ತಾ ಸೂಚ್ಯವಾಗಿ ಏಕಲವ್ಯನ ಕುರಿತಾದ ಪರಿಚಯ ಮಾಡಿಕೊಡುತ್ತಾರೆ. ಮೇಳದವರು, ಸೈನಿಕರು ಹಾಗೂ ಬೇಡರ ಮಾತುಕತೆಯಲ್ಲಿ ಕಾಡಿನ ನಾಶದ ಕಾಡಿನ ಮರಗಳನ್ನು ಕುಡಿಯುವ ಕಡಿಯುವ ಕುರಿತಾಗಿ.. ಬೇಡರು ಇದಕ್ಕೆಲ್ಲ ಉತ್ತರವಾಗಿ ಏಕಲವ್ಯನಿದ್ದಾನೆ ಎನ್ನುವ ಮಾತು ಹೇಳುತ್ತಾರೆ. ಏಕಲವ್ಯನ ಪೌರುಷದ ವರ್ಣನೆಯೊಂದಿಗೆ ಮೊದಲನೇ ದೃಶ್ಯ ಮುಕ್ತಾಯವಾಗುತ್ತದೆ


ದೃಶ್ಯ ಎರಡರಲ್ಲಿ ಕಾಡಿನ ಜನರು ಏಕಲವ್ಯನ ಬಳಿ ಬಂದು ಸೈನಿಕರ ದಾಂಧಲೆಗಳನ್ನು ಹೇಳುತ್ತಾರೆ. ನಂತರ, ಏಕಲವ್ಯ ತಾನು ಕಂಡ ಕನಸು ನಿಜವಾಯಿತು ಎಂದು ತನ್ನ ಶಕ್ತಿಯ ಮಿತಿಯನ್ನು ಅರಿತವನಂತೆ.. ತಾನು ಬಿಲ್ವಿದೆ ಕಲಿಯುವ ಆಸೆಯನ್ನು ತಾಯಿ ಹಾಗೂ ಮಾವನೊಡನೆ ಹೇಳಿಕೊಳ್ಳುವಾಗ ತಾಯಿ ಅದಕ್ಕೆ ಪುಷ್ಠಿ ಕೊಟ್ಟರೂ.. ಮಾವ "ಬಿಲ್ವಿದ್ಯೆ ಬೇಡರ ಹುಟ್ಟುಗುಣ. ಅರಸು ಮಕ್ಕಳಿಗೆ ಅದು ಕಲಿಕೆ. ಅರಸು ಮಕ್ಕಳಿಗೆ ಅದು ತೊಟ್ಟಬಟ್ಟೆ, ಬೇಡರಿಗೆ ಅದು ಮೈಗಂಟಿದ ಚರ್ಮ." ಅವರನ್ನು ಬೇಡುವುದು ಬೇಡವೆಂಬ ಮನದ ಮಾತನ್ನು ಹೊರ ಹಾಕುತ್ತಾರೆ. ಆದರೆ, ಏಕಲವ್ಯನ ಆಸೆ ಹಾಗೂ ಮಹತ್ವಾಕಾಂಕ್ಷೆಯೇ ಗೆದ್ದು ಬಿಲ್ವಿದ್ಯೆ ಕಲಿಯಲು ಹೊರಡುತ್ತಾನೆ. 


ದೃಶ್ಯ ಮೂರರಲ್ಲಿ ದ್ರೋಣಾಚಾರ್ಯರು ಬಿಲ್ವಿದ್ಯೆ ಬೋಧಿಸುವ ಸಂದರ್ಭದಲ್ಲಿ ಏಕಲವ್ಯ ಅಲ್ಲಿಗೆ ಹೋಗಿ ತಾನು ಕಂಡ ಕನಸಿನಲ್ಲಿ ಸುಳಿದ ಅವರಿಗೆ ನಮಸ್ಕರಿಸಲು ಹೋದಾಗ ಭೀಮ, ಅರ್ಜುನ, ದುರ್ಯೋಧನ ಹಾಗೂ ದ್ರೋಣರ ಮಾತುಕತೆ ಸಾಗುತ್ತದೆ. ಇಲ್ಲಿ ಏಕಲವ್ಯ ತಾನು ಬಿಲ್ಲು ವಿದ್ಯೆ ಕಲಿಯಲು ಶಾಸ್ತ್ರಸಮ್ಮತವಿಲ್ಲವೆಂದು ತಿಳಿದಾಗ ಧಿಕ್ಕಾರ ಹಾಕುವುದಾದರೂ ಯಾರಿಗೆ..? ಓದಿ ನೋಡಿ. 


ದೃಶ್ಯ ನಾಲ್ಕರಲ್ಲಿ.. ಅಪ್ಪನಿಗೆ ಬೇಡವಾದ ಏಕಲವ್ಯ ಮಗನಿಗೆ ಒಡನಾಡಿಯಾಗುವ ದೃಶ್ಯವಿದೆ. ಹೀಗೆ ಅವರಿಬ್ಬರ ಒಡನಾಟ ಯಾವುದಕ್ಕೆ ಮುನ್ನುಡಿಯಾಯಿತು ಹಾಗೂ ದ್ರೋಣರು ಅದಕ್ಕೆ ಪ್ರತಿಕ್ರಿಯಿಸಿದ ಬಗೆ ಹೇಗೆ ಎಂಬುದನ್ನು ಓದಿ ನೋಡಿ


ದೃಶ್ಯ ಐದರಲ್ಲಿ ದ್ರೋಣ ಹಾಗೂ ಭೀಷ್ಮರ ಮಾತುಕತೆ ಇದೆ. ಭೀಷ್ಮರು ತಮ್ಮ ಮೊಮ್ಮಕ್ಕಳು ಅನುಭವಿಸಲಿರುವ ದುರಂತವನ್ನು ಊಹಿಸಿರುವ ಚಿತ್ರಣ ಕಾಣುತ್ತದೆ. "ಲೋಕಕಲ್ಯಾಣಕ್ಕೆ ಅನಿವಾರ್ಯವಾದ ದುರಂತವೊಂದರ ಸಂಭವಕ್ಕಾಗಿ ನಾವೆಲ್ಲ ದುಡಿಯುತ್ತಿದ್ದೇವೆ" ಎನ್ನುವ ಭೀಷ್ಮರು ಹಾಗೂ "ಲೋಕದ ಅಪಮಾನ, ನಿಂದೆ ಅನ್ನದ ಹಂಗು, ಅಹಂಕಾರಗಳ ಜೊತೆಗೆ ಶ್ರದ್ಧೆ, ವಿನಯ, ನಿಷ್ಠೆ, ವಿಧೇಯತೆಗಳ ಸಂಘರ್ಷವನ್ನು ಹೆಚ್ಚಿಸುವ ಲೋಕಕಲ್ಯಾಣ ಅರ್ಥಹೀನವಲ್ಲವೇ..?" ಎನ್ನುವ ದ್ರೋಣರು ಕಾಣುತ್ತಾರೆ. ತಪ್ಪಿತಸ್ಥ ಭಾವದಲ್ಲಿ ತೊಳಲುತ್ತಿರುವ ದ್ರೋಣರು ಹಾಗೂ ಇದೆಲ್ಲವೂ ದಿವ್ಯನಿಯಾಮಕವೆನ್ನುವ ಭೀಷ್ಮರು.. ಇವರಿಬ್ಬರ ಮಾತುಕತೆಯ ಸೂಕ್ಷ್ಮವನ್ನು ಕಟ್ಟಿಕೊಟ್ಟಿದ್ದಾರೆ. 


ಆರನೇ ದೃಶ್ಯದಲ್ಲಿ ದ್ರೋಣರ ಪ್ರತಿಮೆಯನ್ನು ಏಕಲವ್ಯ ಪ್ರತಿಷ್ಠಾಪಿಸುವ ದೃಶ್ಯವಿದೆ ಹಾಗೂ ಹಾಡಿನ ಮೂಲಕ ಆತನ ಅಭ್ಯಾಸವಿದೆ. 


ಏಳನೇ ದೃಶ್ಯದಲ್ಲಿ ಗುರು ದ್ರೋಣರು ಏಕಲಕೆನ ಬಳಿ ಆತನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳುವ ಸನ್ನಿವೇಶ. ಇದಕ್ಕೆ ಮೂಲವಾದ ಘಟನೆ ಯಾವುದು..? ಅರ್ಜುನ ಹಾಗೂ ಏಕಲವ್ಯನ ತಾಯಿಯ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಚಿತ್ರಿಸಿದ್ದಾರೆ.  


ಎಂಟನೇ ದೃಶ್ಯದಲ್ಲಿ ಸೈನಿಕರು ಕುರುಕ್ಷೇತ್ರ ಯುದ್ಧಕ್ಕೆ ತಯಾರಿ ನಡೆಸುತ್ತಿರುವ ಸಂದರ್ಭವಿದೆ. ಸೈನಿಕರ ನಡುವಿನ ಮಾತುಕತೆಯಲ್ಲಿ ಅವರು ಯುದ್ಧವನ್ನು ಕಾಣುವ ಪರಿಯ ಚಿತ್ರಣವಿದೆ.


ಒಂಬತ್ತನೇ ದೃಶ್ಯದಲ್ಲಿ ದುರ್ಯೋಧನ ಹಾಗೂ ಕರ್ಣರ ಮಾತುಕತೆ. ಅರ್ಜುನನ ಮೇಲೆ ಏಕಲವ್ಯನಿಗೆ ಅಗಾಧವಾದ ಸಿಟ್ಟಿರುವುದರಿಂದ ಆತ ಪಾಂಡವನನ್ನು ಬೆಂಬಲಿಸಲಾರ ಎನ್ನುವ ದುರ್ಯೋಧನ ಹಾಗೂ ನಮ್ಮ ಪಕ್ಷಕ್ಕೆ ಬರಲು.. ಗುರು ದ್ರೋಣರದ್ದೂ ಅದರಲ್ಲಿ ಪಾಲಿದೆಯಲ್ಲವಾ ಎನ್ನುವ ಕರ್ಣ. ಏಕಲವ್ಯನನ್ನು ಕೌರವರ ಪಕ್ಷಕ್ಕೆ ಬರಮಾಡಿಕೊಳ್ಳಲು ಆತನ ಜೊತೆಗೆ ಮಾತುಕತೆಗೆ ಹೋದವರು ಯಾರು..?


ದೃಶ್ಯ ಹತ್ತರಲ್ಲಿ ಯುಧಿಷ್ಠಿರ, ಕೃಷ್ಣ, ಅರ್ಜುನ ಹಾಗೂ ಭೀಮರ ಮಾತುಕತೆ. ಕುರುಕ್ಷೇತ್ರವನ್ನು ಕೃಷ್ಣ ತಪ್ಪಿಸಬಹುದಾಗಿತ್ತು ಎನ್ನುವ ಯುಧಿಷ್ಠಿರನಿಗೆ "ವಿನಾಶವಿಲ್ಲದೆ ಸೃಷ್ಟಿಯಿಲ್ಲ" ಎನ್ನುವ ಕೃಷ್ಣನ ನಿಲುವು ಹೇಗನ್ನಿಸುತ್ತದೆ..? ಭೀಮಾರ್ಜುನರು ಏಕಲವ್ಯನ ವಿಚಾರಕ್ಕೆ ಭಯಪಡುವ ಅಗತ್ಯವಿಲ್ಲ ಎನ್ನುವಾಗ.. ಯುಧಿಷ್ಠಿರ ಏಕಲವ್ಯನ ವೀರತನವನ್ನು ಹೊಗಳಿ ಆತನ ಮುಗ್ಧತೆಯನ್ನು ಮೆಚ್ಚುತ್ತಾನೆ. ಅದನ್ನು ಕೌರವರು ದುರುಪಯೋಗಪಡಿಸಿಕೊಳ್ಳುವುದು ಸಲ್ಲದು ಎನ್ನುವಾಗ ಕೃಷ್ಣ ಯಾರನ್ನು ಬೆಂಬಲಿಸುತ್ತಾನೆ ಹಾಗೂ ಕೃಷ್ಣನ ಮನಸ್ಸಿನಲ್ಲಿದ್ದ ನಿಲುವೇನು..?


ದೃಶ್ಯ 11 ಈ ನಾಟಕದ ಕೊನೆಯ ದೃಶ್ಯ ಹಾಗೂ ನಿರ್ಣಾಯಕ ದೃಶ್ಯ. ಏಕಲವ್ಯನನ್ನು ಪಾಂಡವರ ವತಿಯಿಂದ ಭೇಟಿ ಮಾಡಲು ಹೊರಟವರು ಹಾಗೂ ಕೌರವರ ಕಡೆಯಿಂದ ಭೇಟಿ ಮಾಡಲು ಹೊರಟವರು ಆತನೊಡನಾಡುವ ಮಾತುಕತೆಗಳು ಹಾಗೂ ಏಕಲವ್ಯನ ತೀರ್ಮಾನ ಇದರಲ್ಲಿದೆ.


ಏಕಲವ್ಯನ ಅಚಲ ನಿರ್ಧಾರ, ತಾಳ್ಮೆ ಹಾಗೂ ಆತನಲ್ಲಿ ಮಹತ್ವಾಕಾಂಕ್ಷೆಯ ಬದಲು ರಕ್ಷಣಾ ಮನೋಭಾವ ಹೆಚ್ಚು ಇಷ್ಟವಾಯಿತು. 


~ವಿಭಾ ವಿಶ್ವನಾಥ್

ಸ್ವಾತಂತ್ರ್ಯೋತ್ತರ ಭಾರತ

ಸ್ವಾತಂತ್ರ್ಯಪೂರ್ವ ಭಾರತಕ್ಕೂ ಸ್ವಾತಂತ್ರ್ಯೋತ್ತರ ಭಾರತಕ್ಕೂ ಬಹಳಷ್ಟು ಬದಲಾವಣೆಗಳು ನಡೆದಿವೆ. ಧಾರ್ಮಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹೀಗೆ ಎಲ್ಲಾ ರೀತಿಯಲ್ಲಿಯೂ ಬಹಳಷ್ಟು ಮಹತ್ತರ ಬದಲಾವಣೆಗಳಾಗಿವೆ. ಮುಖ್ಯವಾಗಿ, ಸಂವಿಧಾನ ಚಾಲ್ತಿಗೆ ಬಂದಿತು. ರಾಜರ ಆಳ್ವಿಕೆ ಕೊನೆಗೊಂಡು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವೇ ಗಣರಾಜ್ಯವಾದ ಭಾರತ ಪ್ರತಿಯೊಂದು ರಂಗದಲ್ಲಿಯೂ ಮುನ್ನಡೆ ಸಾಧಿಸುತ್ತಾ ಬಂದಿದೆ. ಹಾಗೆಂದು, ಸ್ವಾತಂತ್ರ್ಯ ಪೂರ್ವದ ಸಮಸ್ಯೆಗಳು ನಿವಾರಣೆಯಾಗಿ ಎಲ್ಲವೂ ಸರಾಗವಾಯಿತು ಎಂದಲ್ಲ.. ಬದಲಾಗಿ, ಸಮಸ್ಯೆಗಳಿಗೂ ಹಲವಾರು ಹೊಸ ರೂಪವೇ ಬಂದಿತು. ಹಾಗೆಂದು, ಯಾರೂ ಸುಮ್ಮನೆ ಕೂರದಿದ್ದರೂ ಆಯಾ ಕಾಲಘಟ್ಟಕ್ಕೆ ತಕ್ಕ ಸಮಸ್ಯೆಗಳಿದ್ದೇ ಇದೆ. ಆದರೆ, ಇದು ಹೊರಗಿನಿಂದ ಬಂದಂತಹಾ ಸಮಸ್ಯೆಗಳಲ್ಲ.. ಬದಲಾಗಿ, ದೇಶದ ಆಂತರಿಕ ಸಮಸ್ಯೆಗಳು. ಆದರೆ, ಈ ಸಮಸ್ಯೆಗಳನ್ನು ನಗಣ್ಯವೆನ್ನಿಸುವಂತೆ ಮಾಡಿರುವುದು ದೇಶದ ಪ್ರಗತಿಯ ಹಾದಿ. 


ಸ್ವಾತಂತ್ರ್ಯದ ಕನಸು ಕಾಣುತ್ತಿದ್ದವರೆಲ್ಲರೂ ಜೈಲಿಗೆ ಹೋಗಿ ಬಂದು ಅಥವಾ ತೀವ್ರವಾದ ಹೋರಾಟದ ಹಾದಿಗೆ ಇಳಿದವರಲ್ಲ.. ಬದಲಾಗಿ, ತಮ್ಮ ಬರಹದ ಮೂಲಕವೂ ದೇಶಭಕ್ತಿ ಬಿತ್ತಿದವರು. ಕುವೆಂಪುರವರು ಆಗಸ್ಟ್ 15 ರ ಮಧ್ಯರಾತ್ರಿಯ ವೀಕ್ಷಕ ವಿವರಣೆ ಕೇಳುತ್ತಲೇ 'ಶ್ರೀ ಸ್ವಾತಂತ್ರ್ಯೋದಯ ಮಹಾ ಪ್ರಗಾಥಾ' ಎನ್ನುವ ಕವಿತೆಯನ್ನು ಸ್ವಾತಂತ್ರ್ಯೋತ್ತರದ ಭಾರತವನ್ನು ಕಲ್ಪಿಸಿಕೊಂಡು ಬರೆಯುತ್ತಾರೆ. ಅವರು ಸ್ವಾತಂತ್ರ್ಯ ಹಾಗೂ ಗಣರಾಜ್ಯದ ಪರಿಕಲ್ಪನೆಯಿಂದ ಜನರನ್ನು "ಶ್ರೀಸಾಮಾನ್ಯ" ಎಂಬ ಹೆಸರಿನಿಂದ ಕರೆಯುತ್ತಾರೆ. ಶ್ರೀಸಾಮಾನ್ಯರ ಶಕ್ತಿ ಈಗ ಮತ ಚಲಾವಣೆಯ ಮೂಲಕ ಪ್ರಕಟವಾಗುವುದನ್ನೂ ನಾವು ಕಾಣಬಹುದು.


ಕನ್ನಡದ ಸಾಹಿತ್ಯದಲ್ಲಿಯೂ ಇಂತಹಾ ಬದಲಾವಣೆಗಳನ್ನು ಕಾಣಬಹುದು. ಸ್ವಾತಂತ್ರ್ಯ ತಾವಂದುಕೊಂಡ ಹಾಗೆ ಇರದಿದ್ದಾಗ ಆ ಕೂಗು ವಿಷಾದದ ಛಾಯೆ ತಾಳಿದ್ದನ್ನೂ ಕಾಣಬಹುದು. ಪತ್ರಿಕೆಗಳ ಸುದ್ದಿ ಸಾರುವ ಹಾಗೂ ಜನರಿಗೆ ತಲುಪುವ, ತಲುಪಿಸುವ ಕ್ರಮವೂ ಬದಲಾದದ್ದನ್ನು ಕಾಣಬಹುದು. ಉದಾಹರಣೆಗೆ, ಕಲ್ಯಾಣಮ್ಮನವರು 'ಸರಸ್ವತಿ' ಪತ್ರಿಕೆಯನ್ನು ಮಹಿಳೆಯರಿಗಾಗಿಯೇ ಶುರು ಮಾಡಿದ್ದನ್ನು ಗಮನಿಸಬಹುದು. ಮತ್ತೊಂದು ವಿಚಾರವೆಂದರೆ ಇದರಲ್ಲಿ ಜಾಹೀರಾತು ಹಾಗೂ ಸಿನಿಮಾ ವಿಭಾಗಗಳಿರಲಿಲ್ಲ. ಹಣದ ಅಡಚಣೆಯುಂಟಾದಾಗಲೂ ಮತ್ತೆ ಸಾವರಿಸಿಕೊಂಡು ಎಲ್ಲರಿಗೂ ತಲುಪಿದ್ದು ಅದ್ಭುತ. ಅಲ್ಲಿಂದ ಇಂದಿನ ದಿನಮಾನಗಳನ್ನು ಕಂಡಾಗ ಟಿ. ಆರ್. ಪಿ ಗಾಗಿ ತಲುಪುತ್ತಿರುವ, ಅದಕ್ಕಾಗಿಯೇ ನೀಡುವ ಸುದ್ದಿಗಳನ್ನೂ ಕಾಣಬಹುದು. ಬದಲಾವಣೆ ಕೇವಲ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಮಾತ್ರವಲ್ಲದೇ, ಸ್ವಾತಂತ್ರ್ಯ ಸಿಕ್ಕ ಆರಂಭಿಕ ದಿನಗಳಿಗೂ ಪ್ರಸ್ತುತ ಬದುಕಿಗೂ ಬದಲಾದ ಪರಿಯನ್ನೂ ಗಮನಿಸಬಹುದು. ಹೊಸತು ದಕ್ಕದೆ, ಹಳತು ಉಳಿಯದೇ ನಿಂತ ಪತ್ರಿಕೆಗಳನ್ನು ಸಹಾ ಗಮನಿಸಬಹುದು. 


1971 ರ ಕಸ್ತೂರಿಯಲ್ಲಿ ಮಾರುತಿ ರಾವ್ ಅವರು ಸ್ವಾತಂತ್ರೋತ್ತರ ಭಾರತ ಸಾಧಿಸಿದ್ದದರೂ ಏನು ? ಎಂಬ ಪ್ರಶ್ನೆ ಎತ್ತಿ ಬಡತನ, ಲಂಚ, ರೋಗ-ರುಜಿನಗಳ ಕುರಿತು ಪ್ರಸ್ತಾಪಿಸುತ್ತಾರೆ. ಇಂದಿಗೂ ಈ ಬರಹ ಪ್ರಸ್ತುತವೆಂದೇ ಎನ್ನಿಸಿತು. ತಂತ್ರಜ್ಞಾನದಲ್ಲಿ ಮುಂದುವರಿದರೂ ಕರೋನಾ ದಿನಗಳು ಸೃಷ್ಟಿಸಿದ ಬಿಕ್ಕಟ್ಟುಗಳನ್ನು ನೆನಪಿಸಿಕೊಳ್ಳಬಹುದು. ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಅಂಗೈಯಲ್ಲಿ ಇಟ್ಟುಕೊಂಡಿದ್ದೇವಾದರೂ.. ವ್ಯಕ್ತಿ ಸ್ವಾತಂತ್ರ್ಯ ಇದೆಯಾದರೂ ಅದನ್ನು ದುರುಪಯೋಗಗೊಳಿಸಿಕೊಳ್ಳುವ ಆಲೋಚನೆಗಿಳಿಯಬಾರದು. ನಮ್ಮ ಸ್ವಾತಂತ್ರ್ಯ ಎಂದಿಗೂ ಸ್ವೇಚ್ಛೆಯಾಗಬಾರದು ಎನ್ನುವ ಕನಿಷ್ಠಪ್ರಜ್ಞೆಯಿಂದ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸದುಪಯೋಗವಾಗುವಂತೆ ಬಾಳೋಣ.

ಆಕರಗಳು :

ಕುವೆಂಪು ಸಾಹಿತ್ಯ ದರ್ಶನ - ಡಿ. ಎಸ್ ನಾಗಭೂಷಣ 


ಕನ್ನಡ ಪತ್ರಿಕಾಸೂಚಿ - ಡಾ. ಶ್ರೀನಿವಾಸ ಹಾವನೂರ (ಸಂಪಾದಕರು)

1971 ಮೇ ತಿಂಗಳ ಕಸ್ತೂರಿ



~ವಿಭಾ ವಿಶ್ವನಾಥ್

ಮೋಹನ ಮಾಲೆ (ಪುಸ್ತಕ ಯಾನ - 286)


ಪುಸ್ತಕದ ಶೀರ್ಷಿಕೆ : ಮೋಹನ ಮಾಲೆ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 2003

ಎರಡನೇ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)


ಮೋಹನ ಮಾಲೆ ಕಾದಂಬರಿಯ ಉಷಾ ಯಾರ ಸಹಾಯವೂ ಇಲ್ಲದೆ, ಕೇವಲ ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ತನ್ನ ಎಚ್ಚರಿಕೆಯಲ್ಲಿ ತಾನಿದ್ದು.. ಅದರಿಂದ ದೊರೆತ ಬಲದಿಂದ ಹಾಗೂ ಅದೃಷ್ಟವೂ ಜೊತೆಗೂಡಿದಾಗ ಬದುಕಿನಲ್ಲಿ ಗೆದ್ದ ಕಥೆ. ಮೋಹನ ಮಾಲೆ ಕಾದಂಬರಿಯಲ್ಲಿ ಯಾವ ಕೆಲಸವೂ ನಿಕೃಷ್ಟವಲ್ಲ ಎಂಬ ಚೆಂದದ ಆಶಯ ಬಹಳ ಇಷ್ಟವಾಯಿತು.


ಸುಶೀಲಾಬಾಯಿಯವರ ಜೊತೆಗೆ ಕೇಶವರಾಯರ ಬಂಗಲೆಗೆ ಕೆಲಸಕ್ಕೆಂದು ಬಂದಿದ್ದಳು ಉಷಾ. ಉಷಾ ಎಸ್. ಎಸ್. ಎಲ್. ಸಿ ಫೇಲ್ ಆಗಿದ್ದಳಾದರೂ.. ಕೆಲಸದಲ್ಲಿ ಬಹಳ ಚುರುಕಾಗಿದ್ದಳು. ಸುಶೀಲಾಬಾಯಿಯವರ ಮಾವನವರು ಕಾಯಿಲೆ ಬಿದ್ದು ಮಲಗಿದ್ದಾಗ ಈಕೆ ಅವರ ಸೇವೆ ಮಾಡಿ ನೋಡಿಕೊಂಡಿದ್ದಳು. ಆಸ್ಪತ್ರೆಯಲ್ಲಿ ನರ್ಸ್ ಜೊತೆಯಲ್ಲಿದ್ದು ಇಂಜೆಕ್ಷನ್ ಕೊಡುವುದನ್ನು ಸಹಾ ಕಲಿತುಕೊಂಡಿದ್ದಳು. ಇದಿಷ್ಟನ್ನು ಕೇಶವರಾಯರಿಗೆ ಹೇಳಿದಾಗಲೂ ಅವರಿಗೆ ಚಿಂತೆಯಿತ್ತು. ಏಕೆಂದರೆ, ಅವರ ತಾಯಿ 80 ವರ್ಷದವರು. ಅವರು ಮೇಲೇಳಲಿಕ್ಕೂ ಆಗುತ್ತಿರಲಿಲ್ಲ. ಉಚ್ಚ, ನೀಚ ಎಂಬ ಭಾವನೆ ಇಲ್ಲದೆಯೇ ಅವರ ಸೇವೆ ಮಾಡುವವರು ಬೇಕಾಗಿತ್ತು. ಬೆಡ್ ಪಾನ್ ಕೊಟ್ಟು, ಸ್ನಾನ ಮಾಡಿಸಿ, ಮಾತ್ರೆಗಳನ್ನು ನೀಡಿ ಅವರ ಊಟ-ತಿಂಡಿ ಎಲ್ಲದರ ಮೇಲ್ವಿಚಾರಣೆ ನೋಡಿಕೊಂಡು ವಾರದುದ್ದಕ್ಕೂ ಅವರನ್ನು ಗಮನಿಸಿ ಚೆಕಪ್ ಗೆ ಬಂದಾಗ ಅವರ ಆರೋಗ್ಯದ ಸ್ಥಿತಿಗತಿ ಹೇಳಬೇಕಿತ್ತು. ಹಿಂದೆ ಬಂದವರು ಒಂದೆರಡು ತಿಂಗಳಿದ್ದು ಹೋಗಿದ್ದರು. ಹಾಗಾಗಿ, ಉಷಾಳನ್ನು ಎಲ್ಲವನ್ನು ಹೇಳಿಯೇ ಸೇರಿಸಿಕೊಂಡಿದ್ದರು. 


ಕೇಶವರಾಯರ ಹೆಂಡತಿ ಬೃಂದಾ ಹಾಗೂ ಮೂವರು ಹೆಣ್ಣುಮಕ್ಕಳು ಯಾರೂ ಅವರ ಸೇವೆ ಮಾಡಲು ಸಿದ್ಧವಿರಲಿಲ್ಲ. 


ಉಷಾಳೇನೂ ತೀರಾ ಬಡತನದ ಕುಟುಂಬದಿಂದ ಬಂದವಳಲ್ಲ. ಅವಳ ತಂದೆ ಶ್ರೀನಿವಾಸಪ್ಪನವರಿಗೆ ಹತ್ತು ಎಕರೆ ಜಮೀನಿತು. ಉಷಾ ಎರಡು ವರ್ಷದ ಮಗುವಿದ್ದಾಗ ಅವಳ ತಾಯಿ ತುಂಗಮ್ಮ ಕಾಯಿಲೆ ಬಿದ್ದು ಕಣ್ಮುಚ್ಚಿದ್ದರು. ಆ ಸಂದರ್ಭದಲ್ಲಿ ಮಾಡುತ್ತಿದ್ದ ಬೋರಪ್ಪನ ಹೆಂಡತಿ ಬೀರಿ ಹಾಗೂ ಅವರ ಮಗಳು ತುಳಸಿ ಕಾಯಿಲೆ ಬಿದ್ದ ತುಂಗಮ್ಮ ಹಾಗೂ ಮಗುವನ್ನು ನೋಡಿಕೊಳ್ಳುತ್ತಿದ್ದರು. ತುಂಗಮ್ಮ ತೀರಿಕೊಂಡ ನಂತರ ಆಕೆಯ ಜಾಗವನ್ನು ತುಳಸಿಯೇ ಆಕ್ರಮಿಸಿದ್ದಳು. ತುಳಸಿಯ ಲಗ್ನದ ವಿಚಾರ ಬಂದಾಗ ಆಕೆ ಕುಡುಕನಾದ ಬೀರಮ್ಮನ ತಮ್ಮನನ್ನು ವಿವಾಹವಾಗಲು ನಿರಾಕರಿಸಿದಳು. ಶ್ರೀನಿವಾಸಪ್ಪ ತಾನೇ ಆಕೆಯನ್ನು ವಿವಾಹವಾದರು. ಅಂತರ್ಜಾತಿಯ ವಿವಾಹವಾದರೂ ಎಲ್ಲವನ್ನು ಅಣಿ ಮಾಡಿಕೊಟ್ಟಿದ್ದರು. ಅವರಿಗೂ ಇಬ್ಬರು ಹೆಣ್ಣುಮಕ್ಕಳು. ರೂಪ ಹಾಗೂ ಪ್ರೀತಿ. ಇಬ್ಬರೂ ಓದಿ ಉದ್ಯೋಗಕ್ಕೆ ಸೇರಿ ವಿವಾಹವಾಗಿದ್ದರು. ಶ್ರೀನಿವಾಸಪ್ಪ ಬಚ್ಚಲಲ್ಲಿ ಜಾರಿ ಹಾಸಿಗೆ ಹಿಡಿದಾಗ ಚಿಕಿತ್ಸೆಗೆಂದು ತುಳಸಿ ಉಪಾಯವಾಗಿ ಅಲ್ಲಿದ್ದ ಹೊಲ ಮಾರಿ, ಸ್ವಲ್ಪವನ್ನು ಚಿಕಿತ್ಸೆಗೆ ಬಳಸಿಕೊಂಡು ಹೆಣ್ಣುಮಕ್ಕಳ ಮನೆ ಸೇರಿದಳು. ಈಗ ಉಷಾ ಹಳ್ಳಿಯಲ್ಲಿ ಒಬ್ಬಂಟಿ. ತುಳಸಿ ಬೀರಿಗೆ ತಮ್ಮದೇ ಜಾತಿಯ ಯಾವುದಾದರೂ ಹುಡುಗನನ್ನು ನೋಡಿ ವಿವಾಹವಾದ ಮಾಡಲು ಕಿವಿಮಾತು ಹೇಳಿದ್ದಳು. ಮುಂದೆ ಅಲ್ಲಿ ಬಹಳವೇ ತೊಂದರೆಯಾದಾಗ ತನ್ನ ತಾಯಿಯ ತಂಗಿ ಪಾರ್ವತಿಯ ಮನೆಗೆ ಹೋಗಿ ದುಃಖ ಹೇಳಿಕೊಂಡಳು.


ಪಾರ್ವತಿಯವರು ತನ್ನ ವಾರಗಿತ್ತಿ ಸುಶೀಲಾಬಾಯಿಯ ಮನೆಗೆ ಕಳುಹಿಸಿದ್ದರು. ನಂತರ ಸುಶೀಲಾಬಾಯಿಯಿಂದ ಇಲ್ಲಿ ಈಗ ಕೇಶವರಾಯರ ತಾಯಿ ರಾಜಮ್ಮನವರನ್ನು ನೋಡಿಕೊಳ್ಳುವ ಕೆಲಸ ಸಿಕ್ಕಿತ್ತು. ಆಧುನಿಕ ಉಪಕರಣಗಳಿದ್ದರೂ.. ಶರೀರ ಜೀರ್ಣವಾಗಿದ್ದ ಅವರಿಗಾಗಿ ಅದೆಲ್ಲವನ್ನೂ ಬಳಸುವಂತಿರಲಿಲ್ಲ. ಅದೆಲ್ಲವೂ ಬಂದವರಿಗೆ ತೋರಿಕೆಗಷ್ಟೇ.. ಯಾವುದೇ ಅಸಹ್ಯವಿಲ್ಲದೆ ಎಲ್ಲ ಕೆಲಸವನ್ನು ಮಾಡುತ್ತಿದ್ದಳು ಉಷಾ. ಬಟ್ಟೆ ತೊಳೆಯಲು ಓಬಮ್ಮ ಇದ್ದಳು. ಅವರ ಜೊತೆ ಆ ಮನೆಯಲ್ಲಿದ್ದದ್ದು ಅಂಬಮ್ಮ ಹಾಗೂ ಅವರ ಮೂವರು ಹೆಣ್ಣುಮಕ್ಕಳು ಸರೋಜಾ, ನೀರಜಾ, ವಾರಿಜಾ ಹಾಗೂ ಅವರ ಮಗ ಅನಿರುದ್ಧ. ಅನಿರುದ್ಧ ಹೋಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. 


ಉಷಾ ಕೇಶವರಾಯರ ಬಳಿ ಹೇಳಿ ನಾಟಿ ವೈದ್ಯರನ್ನು ಕರೆತಂದು ರಾಜಮ್ಮನವರಿಗೆ ಮಾಡಿಸಿದ ಚಿಕಿತ್ಸೆ ಫಲ ಕೊಟ್ಟಿತ್ತು. ಅದಕ್ಕೆ ಕಾರಣವಾಗಿದ್ದು ಅಂಬಮ್ಮನವರ ಮಾತು. ಅಂಬಮ್ಮನವರ ಪ್ರಕಾರ ಅವರ ಸೊಸೆ ಅಂದರೆ ಕೇಶವರಾಯರ ಹೆಂಡತಿ ಬೃಂದಾಳೇ ಅವರಿಗೆ ನಿಧಾನವಾದ ವಿಷ ನೀಡಿದ್ದಳೆಂದು.. ಚೆನ್ನಾಗಿಯೇ ಇದ್ದ ಅವರು ಹಾಸಿಗೆ ಹಿಡಿದದ್ದು, ಚೇತರಿಸಿಕೊಳ್ಳದಿದ್ದದ್ದು ಅದಕ್ಕೇ ಎಂಬ ಗುಮಾನಿ. ಅದು ಸತ್ಯವೇ.. ಅಥವಾ ರಾಜಮ್ಮನವರು ಚೇತರಿಸಿಕೊಂಡದ್ದು ಚಿಕಿತ್ಸೆಯ ಫಲವೇ..??


ರಾಜಮ್ಮನವರ ಹಿಂದಿನ ಬದುಕು ಹೇಗಿತ್ತು ಎಂಬುದನ್ನು ನೀವೇ ಓದಿ ನೋಡಿ. ಕಷ್ಟ ಪಟ್ಟದ್ದಕ್ಕೆ ಸಿಕ್ಕ ಫಲ ಅವರದ್ದಾದರೂ.. ಇದ್ದ ಒಬ್ಬ ಕೇಶವರಾಯರಿಗೆ ತಮ್ಮ ಕಂಪನಿಗೆ ಕೆಲಸಕ್ಕೆ ಬಂದಿದ್ದ ಚುರುಕಾಗಿದ್ದ ಹುಡುಗಿ ಬೃಂದಾಳನ್ನು ಇಷ್ಟಪಟ್ಟು ವಿವಾಹ ಮಾಡಿದ್ದರು. ಆದರೆ, ಆಕೆ ನಿಧಾನವಾಗಿ ತನ್ನದೇ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು ಇವರನ್ನು ಮೂಲೆಗುಂಪು ಮಾಡಿದ್ದಳು. 


ರಾಜಮ್ಮನವರು ಚೇತರಿಸಿಕೊಂಡ ನಂತರ ಮೂವರು ಮೊಮ್ಮಕ್ಕಳು ಬಂದು ರಾಜಮ್ಮನವರ ಬಳಿಯಲ್ಲಿ ಬಂಗಾರದ ಉಡುಗೊರೆಯನ್ನು ಅಪೇಕ್ಷಿಸಿದ್ದರು. ಅದು ತಾಯಿಯ ಮಾತು ಕೇಳಿ.. ಆದರೆ, ರಾಜಮ್ಮನವರು ತಮ್ಮ ಒಡವೆಗಳನ್ನು ಹಂಚಿಕೊಡುವಾಗ ಮೋಹನಮಾಲೆಯನ್ನು ಉಷಾಳಿಗೆ ಕೊಟ್ಟರು. ಬೃಂದಾ ಅದನ್ನು ಅದೃಷ್ಟದ ಸರವೆಂದು ಭಾವಿಸಿದ್ದಳು. ಆದರೆ, ರಾಜಮ್ಮನವರು ಅದನ್ನು ಆಕೆಗೆ ಕೊಡದೆ ಉಷಾಳಿಗೆ ನೀಡಿದ್ದೇಕೆ..? ಬೃಂದಾ ಮೋಹನ ಮಾಲೇ4ಗೆ ಅಷ್ಟು ಹಾತೊರೆಯುತ್ತಿದ್ದದ್ದೇಕೆ..? ಅವಳಿಗೂ ಆ ಸರಕ್ಕೂ ಯಾವ ರೀತಿಯ ಅವಿನಾಭಾವ ಸಂಬಂಧವಿತ್ತು..?


ಉಷಾಳಿಗೆ ಎರಡು ವಿವಿಧ ವರಗಳ ಸಂಬಂಧ ಬಂದಾಗಲೂ.. ಆಕೆ ಅವರಿಬ್ಬರನ್ನು ಉಪಾಯವಾಗಿಯೇ ನಿವಾರಿಸಿಕೊಂಡಳು. ಹಾಗೆ ನಿವಾರಿಸಿಕೊಳ್ಳುವಾಗ ಹೇಳಿದ ಕಾರಣವೆಂದರೆ.. ಆಕೆ ತಾನು ರಾಜಮ್ಮನವರ ಸೇವೆ ಮಾಡಬೇಕೆಂದು. ರಾಜಮ್ಮ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರಾದರೂ ಉಷಾ ಅವರ ಬಳಿಯಲ್ಲಿಯೇ ಉಳಿಯಲು ಕಾರಣವೇನಿತ್ತು..? ಉಷಾಳಿಗೆ ಆ ಇಬ್ಬರು ವರನನ್ನು ಸೂಚಿಸಿದ್ದಾದರೂ ಯಾರು..?


ಮುಂದೆ ಉಷಾ ಅಂಬಮ್ಮನವರ ಮಗ ಅನಿರುದ್ದನನ್ನು ವಿವಾಹವಾಗುತ್ತಾಳೆ. ಅವರಿಬ್ಬರ ವಿವಾಹಕ್ಕೆ ಕಾರಣವಾಗಿದ್ದೇನು.. ಅಂಬಮ್ಮನ ಹೆಣ್ಣುಮಕ್ಕಳಿಗೂ ತಾನೇ ಹಣ ನೀಡಿ ವಿವಾಹವಾಗಲು ಕಾರಣವಾಗುತ್ತಾಳೆ. ಮುಂದೆ ಅನಿರುದ್ಧ ನಡೆಸುತ್ತಿದ್ದ ಹೋಟೆಲ್ ಸಹ ಅವರ ಸ್ವಂತದ್ದೇ ಆಗುತ್ತದೆ. ಆ ಸಂದರ್ಭದಲ್ಲಿ ರಾಜಮ್ಮನವರು ನೀಡಿದ ಎಚ್ಚರಿಕೆಯೇನು..? ಕೇಶವರಾವ್ ಅವರು ಸಹಾ ತಮ್ಮ ತಾಯಿಯ ವಿರುದ್ಧ ತಿರುಗಿ ಬೀಳಲು ಕಾರಣವೇನು..?


ಅದೃಷ್ಟದ ಒಡವೆ ಎನ್ನಲಾದ ಮೋಹನಮಾಲೆಯ ಸುತ್ತವೇ ತಿರುಗುವ ಕಥೆ ಹಣ ಹಾಗೂ ಮನುಷ್ಯ ಸಂಬಂಧವನ್ನು ಸಹ ಹೆಣೆಯುತ್ತದೆ. ನಿಜಕ್ಕೂ, ಹಾಗೆ ಅದೃಷ್ಟ-ದುರಾದೃಷ್ಟ, ಪಾಪ-ಪುಣ್ಯ ಎಲ್ಲವನ್ನೂ ನಂಬಬಹುದಾ ಎಂಬ ರಾಜಮ್ಮನ ಪ್ರಶ್ನೆಗೆ ಉಷಾ, ಕೃಷ್ಣನಿಗೆ ಪಾಂಚಜನ್ಯ ಸಿಕ್ಕಿದ ಸನ್ನಿವೇಶವನ್ನು ಉದಾಹರಣೆಯಾಗಿ ನೀಡಿದ್ದೇಕೆ..? ಅದಕ್ಕೂ ಇದಕ್ಕೂ ಇರುವ ಸಂಬಂಧವೇನು..?


ಉಷಾ ಹಾಗೂ ಅನಿರುದ್ಧರ ಮದುವೆಯಲ್ಲಿ ಊಟದಲ್ಲಿ ಅಸ್ತವ್ಯಸ್ತವಾಗಿ ಅವರಿಬ್ಬರೂ ಸಾವಿನ ದವಡೆಯಿಂದ ಪಾರಾಗಿ ಬಂದರು. ಅದಕ್ಕೆ ಕಾರಣವೇನು.. ಮೋಹನ ಮಾಲೆ ಕಳುವಾದುದರ ಹಿಂದಿನ ರಹಸ್ಯವೇನು.. ಕೊನೆಯಲ್ಲಿ ಮೋಹನ ಮಾಲೆ ಯಾರ ಕೈಸೇರಿತು..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಹೆಚ್. ಜಿ. ರಾಧಾದೇವಿಯವರ 'ಮೋಹನ ಮಾಲೆ' ಕಾದಂಬರಿಯನ್ನು. 


ನಾವು ಮಾಡಿದ ಕರ್ಮದ ಫಲ ನಮಗೆ ವಾಪಸ್ ಬರುತ್ತದೆ ಎನ್ನುವ ತತ್ವ ಈ ಕಾದಂಬರಿಯಲ್ಲಿದೆ. ಪ್ರಾಮಾಣಿಕವಾಗಿ, ಕಷ್ಟಪಟ್ಟು ಬದುಕಿದವರಿಗೆ ಅವರ ಪಾಲಿನ ಪ್ರಾಪ್ತಿ ದೊರಕಿತು. ಹಾಗೆಯೇ ಅನ್ಯಾಯ ಮಾಡಿ ಬದುಕಿದವರಿಗೆ ಅವರ ಪಾಲಿನ ಶಿಕ್ಷೆಯಂತಹಾ ಬದುಕು ಸಹ ದೊರಕಿತು. ಈ ಕಾದಂಬರಿ ಅದೃಷ್ಟ ಹಾಗೂ ಪ್ರಾಮಾಣಿಕತೆ ಎರಡರ ಮಿಳಿತವೂ ಆಗಿದೆ. ಕಷ್ಟಪಟ್ಟು ಮೇಲೇರುವವರಿಗೆ ಎಂದಿಗೂ ಒಳಿತೇ ಆಗುತ್ತದೆ. 'ಒಳಿತಿಗೇ ಜಯ' ಎನ್ನುವ ಸಂದೇಶ ಸಾರುವ ಕಾದಂಬರಿ ಇಷ್ಟವಾಯಿತು.


~ವಿಭಾ ವಿಶ್ವನಾಥ್