ಭಾನುವಾರ, ಜುಲೈ 19, 2026

ಈ ಶಿಕ್ಷೆ ಸಾಲದು.. (ಬೆಳಕಿಂಡಿಯ ಕತೆಗಳು - 56)

 


ಆತ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವನು ಎಂಬ ಕಾರಣಕ್ಕೆ ಆತನಿಗೆ ಶಿಕ್ಷೆ ಕಡಿಮೆಯಾದರೆ ಆತ ಮಾಡಿದ್ದ ಪಾಪದ ಹೊರೆ ಕಡಿಮೆಯದ್ದಾ..?? ಜೀವಾವಧಿ ಶಿಕ್ಷೆಯಿಂದ, ಮರಣ ದಂಡನೆಯಿಂದ ತಪ್ಪಿಸಬೇಕಾದರೆ ಇದೊಂದು ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ತಪ್ಪಿಸುತ್ತಾರಲ್ಲಾ.. ಅವರ ಮನಸ್ಸಿನಲ್ಲಿ ದಯೆ, ಮಾನವೀಯತೆ ಎಲ್ಲವೂ ಸತ್ತು ಯಾವ ಕಾಲವಾಗಿ ಹೋಗಿದೆಯೋ.. ಹದಿನೆಂಟು ವರ್ಷ ಕಳೆದಂತೆ ಆತನಿಗೆ ಜೈಲಿನಿಂದ ಬಿಡುಗಡೆ. ಅಷ್ಟು ದೊಡ್ಡ ತಪ್ಪು ಮಾಡಿ ಆತ ಒಂದೇ ವರ್ಷಕ್ಕೆ ಹೊರಬರುತ್ತಾನೆ. ಅವನ ಮನಸ್ಸು ಸಹಾ ಪರಿವರ್ತನೆಯಾಗಿರಬಹುದು.. ಆದರೆ, ಆ ಮುಗ್ಧ ಹೆಣ್ಣು ಮಗು ಯಾವ ತಪ್ಪು ಮಾಡಿತ್ತು..??


ಈ ದುರುಳರ ಅಟ್ಟಹಾಸಕ್ಕೆ, ವಿಕೃತಿಗೆ ಸಿಲುಕಿ ಸತ್ತ ಆ ಮಗು ಯಾವ ತಪ್ಪು ಮಾಡಿತ್ತು..?? ಈತನ ವಯಸ್ಸು ಅಲ್ಲಿ ತಪ್ಪು ಮಾಡುವಾಗ ಮುಖ್ಯವೇ ಆಗಿರಲಿಲ್ಲವೇ..??


ಕಡೆಗೂ, ಕೋರ್ಟು ತನ್ನ ನಿರ್ಧಾರ ಬದಲಿಸಿ ಆತನಿಗೂ ಜೀವಾವಧಿ ಶಿಕ್ಷೆ ನೀಡಿತು. ಆದರೂ, ನನಗನ್ನಿಸಿದ್ದು ಆತ್ಯಾಚಾರಿಗಳಿಗೆ ಆ ಶಿಕ್ಷೆಯೂ ಸಾಲದು.


~ವಿಭಾ ವಿಶ್ವನಾಥ್

ನಾನು ಮಾಡಿದ್ದು ತಪ್ಪಾ..?? (ಬೆಳಕಿಂಡಿಯ ಕತೆಗಳು - 55)

 


ಮಕ್ಕಳಿಗೆ ಶಿಕ್ಷಣವನ್ನು ಬರೀ ಒಳ್ಳೆಯ ಮಾತಿನಲ್ಲಿ ಹೇಳಿದರೆ ಕೇಳಿ ಬಿಡುತ್ತಾರಾ..?? ತಪ್ಪು ಮಾಡಿದಾಗ ತಿದ್ದಬೇಕಾದರೆ ಕೆಲವೊಮ್ಮೆ ಶಿಕ್ಷಕಿಯಾಗಿ ನಾನು ಶಿಕ್ಷೆ ನೀಡಬೇಕಾಗುತ್ತದೆ. ನಾನು ಕೂಡಾ ಆ ಮಗುವಿನ ರಕ್ಷಕಿಯೇ ತಾನೇ..? ಒಂದು ಮಗುವನ್ನೇ ಸಂಭಾಳಿಸಲು ಅಮ್ಮ ಕಷ್ಟ ಪಡುವಾಗ ಇಲ್ಲಿ ನಾನು ಒಂದು ತರಗತಿಯಲ್ಲಿ ಕಡಿಮೆ ಎಂದರೂ 30 ಮಕ್ಕಳನ್ನು ಸಂಭಾಳಿಸಬೇಕು. ಹಾಗಿದ್ದಲ್ಲಿ, ಅವರನ್ನು ಒಳ್ಳೆ ಮಾತಿನಿಂದಲೇ ತಿದ್ದಬೇಕೆನ್ನುವ ಕಾನೂನು ಎಷ್ಟು ಪಾಲನೆಯಾಗಲು ಸಾಧ್ಯ..??


ಮಗು ಹೋಮ್ ವರ್ಕ್ ಮಾಡಿರಲಿಲ್ಲ ಎಂಬ ಕಾರಣಕ್ಕೆ ಕ್ಲಾಸ್ ನಿಂದ ಹೊರಗೆ ನಿಲ್ಲುವ ಶಿಕ್ಷೆ ನೀಡಿದ್ದೆ. ಆದರೆ, ಆತ ಹತ್ತು ನಿಮಿಷಕ್ಕೆಲ್ಲಾ ಬಿದ್ದು ಬಿಟ್ಟಿದ್ದನಂತೆ. ತಿಂಡಿ ತಿಂದು ಬಂದಿರಲಿಲ್ಲವಂತೆ. 

ಇದಕ್ಕೆಲ್ಲಾ ನಾನೇ ಕಾರಣ ಎಂಬಂತೆ ದೂಷಿಸುತ್ತಾರೆ. ಮಗುವನ್ನು ಸರಿ ದಾರಿಯಲ್ಲಿ ನಡೆಸುವ ಸಲುವಾಗಿ ನೀಡಿದ ಶಿಕ್ಷೆ ಈಗ ನನಗೇ ಶಿಕ್ಷೆಯಾಗಿದೆ. ಸಹೋದ್ಯೋಗಿಗಳು ಮಾತ್ರವಲ್ಲ.. ನನ್ನ ವಿದ್ಯಾರ್ಥಿಗಳು ಸಹಾ ನೋಡುವ ದೃಷ್ಟಿ ಬೇರೆಯಾಗಿದೆ. ನಾನು ಮಾಡಿದ್ದು ತಪ್ಪಾ..??


~ವಿಭಾ ವಿಶ್ವನಾಥ್

ಬದುಕು ನಿಲ್ಲಬಲ್ಲದೇ..? (ಬೆಳಕಿಂಡಿಯ ಕತೆಗಳು - 54)

 


"ಕರೋನಾ ಮಹಾಮಾರಿ ವಕ್ಕರಿಸಿರುವುದರಿಂದ ಎಲ್ಲರಿಗೂ ತೊಂದರೆಯೇ.. ಹಾಗೆಂದು ಮನೆಯಲ್ಲಿಯೇ ಸುಮ್ಮನೆ ಕುಳಿತುಕೊಳ್ಳಲಾಗುತ್ತದೆಯೇ..?? ಹಾಗೆ ಕುಳಿತರೆ ಬದುಕು ನಿಲ್ಲಬಲ್ಲದೇ..?? ಸಮಯ ಓಡುತ್ತಲೇ ಇದೆ. ನಾವು ನಿಂತ ಮಾತ್ರಕ್ಕೆ ಬದುಕು ಸಮಯ ನಿಲ್ಲುತ್ತದೆಯೇ..?? 


ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸಿಕೊಳ್ಳಬೇಕು, ಸ್ಯಾನಿಟೈಜರ್ ಹಾಕಿಕೊಳ್ಳಬೇಕು. ಮನೆಯಲ್ಲಿ ಕರೆದ ಹಾಲು ಮಾರುತ್ತಾ, ಮನೆಯಂಗಳದಲ್ಲಿಯೇ ಬೆಳೆದಿದ್ದ ಹೂಗಳನ್ನು ಕಟ್ಟುತ್ತಾ, ಅಲ್ಲೇ ಬೆಳೆದ ಸೊಪ್ಪು-ತರಕಾರಿಗಳನ್ನು ಮಾರುತ್ತಾ ಬದುಕು ಸಾಗಿಸಬೇಕು." ಎಂದರು ಅಜ್ಜಿ. 


"ಅಜ್ಜಿ ನೀವು ಈ ವಯಸಲ್ಲಿ, ಅದೂ ಕರೋನಾ ಕಾಲದಲ್ಲಿ ಹೀಗೆ ಬಂದಿದ್ದೀರಾ.. ಮನೆಯಲ್ಲಿಯೇ ಕುಳಿತುಕೊಳ್ಳುವುದಲ್ಲವೇ" ಎಂದು ಪ್ರಶ್ನಿಸಿದ್ದಕ್ಕೆ... 

ಅವರು ಹೇಳಿದ್ದರಲ್ಲಿ ತಪ್ಪೇನಿದೆ.. "ನಾವು ಸುಮ್ಮನೆ ಕುಳಿತ ಮಾತ್ರಕ್ಕೆ ಸಮಯ, ಬದುಕು ನಿಲ್ಲುವುದಿಲ್ಲ.. ಅಲ್ಲವೇ..??"


~ವಿಭಾ ವಿಶ್ವನಾಥ್

ಈಗಿಲ್ಲಿ ಎಲ್ಲವೂ ಮೆಸ್ಸಿ! (ಪುಸ್ತಕ ಯಾನ - 470)


ಪುಸ್ತಕದ ಶೀರ್ಷಿಕೆ : ಈಗಿಲ್ಲಿ ಎಲ್ಲವೂ ಮೆಸ್ಸಿ!

ಲೇಖಕರು : ಎಂ ಆರ್ ಕಮಲ

ಪ್ರಕಾಶಕರು : ಬಹುರೂಪಿ 

ಪ್ರಥಮ ಮುದ್ರಣ : ಡಿಸೆಂಬರ್ 2024

ಪುಟಗಳು : 104

ಬೆಲೆ : 150 ರೂ.


ನನಗೆ ಎಂ. ಆರ್ ಕಮಲ ಮೇಡಂ ಅವರ ಗದ್ಯಗಂಧಿ ಕವಿತೆಗಳು ಬಹಳ ಇಷ್ಟ. ಜೊತೆಗೆ ಅವರ ಸಕಾರಾತ್ಮಕ ನೋಟವೂ..


ಗದ್ಯಗಂಧಿ ಶೈಲಿಯ ಜೊತೆಗೆ ಲೇಖಕಿ 2015ರಲ್ಲಿ ಅರಬ್ ಹೆಣ್ಣು ಮಕ್ಕಳ ಕಾವ್ಯದ ಅನುವಾದದಲ್ಲಿ ತೊಡಗಿಕೊಂಡಿದ್ದಾಗ ಅವರ ಬರವಣಿಗೆಯ ಶೈಲಿಗಳು ಬದಲಾಗಿರುವುದಕ್ಕೆ ಕಾರಣ ಹಾಗೂ ಹೆಚ್ಚಿನ ಅರಬ್ ಮಹಿಳಾ ಕವಿಗಳ ಗದ್ಯಗಂಧಿ ಕವಿತೆಗಳ ಕುರಿತಾಗಿ ಪುಸ್ತಕದ ಪ್ರವೇಶಿಕೆಯಲ್ಲಿ ತೆರೆದಿಡುತ್ತಾರೆ. 


ಸಾಮಾನ್ಯವಾಗಿ ಇವರ ಗದ್ಯಗಂಧಿ ಕವಿತೆಗಳಲ್ಲಿ ಅವಳು ಎನ್ನುವುದನ್ನು ಕಾಣಬಹುದು. ಇದು ಹಲವಾರು ಹೆಣ್ಣುಮಕ್ಕಳಿಗೆ ಕನೆಕ್ಟ್ ಆಗುತ್ತದೆ ಸಹ. ಇಲ್ಲಿ ಅವಳ ಭಾವಗಳು ಕಾಣುತ್ತವೆ. ಜೊತೆಗೆ ವಲಸೆ, ವಿಸ್ಮೃತಿ, ಹೆಣ್ಣಿನ ಅಸ್ಮಿತೆ, ಮನುಷ್ಯನ ಸೋಗಲಾಡಿತನ, ಸಾಮಾಜಿಕ ಜಾಲತಾಣ ಹೀಗೆ ಹಲವಾರು ವಿಚಾರಗಳನ್ನು ನಾವಿಲ್ಲಿ ಕಾಣಬಹುದು. ಶೀರ್ಷಿಕೆಯೇ ಸೂಚಿಸುವಂತೆ ಮೆಸ್ಸಿ ಅಂದರೆ ಗೊಂದಲವಿರುವ ಭಾವಗಳು ಹಾಗೂ ಅವುಗಳ ಮೇಳ್ಳೆಸುವಿಕೆಯ ಜೊತೆಗೆ ಹೊಸದೊಂದು ಸಕಾರಾತ್ಮಕ ಹೊಳಹು ಸಹ ಸಿಗುತ್ತದೆ.


ಈ ಕವಿತೆಗಳ ಮಾಲೆಯ ಮೊದಲ ಪುಸ್ತಕಕ್ಕೆ ಗದ್ಯಗಂಧಿ ಎಂಬ ಚಂದದ ಹೆಸರಿಟ್ಟ ಡಾ. ಎಚ್. ಎಸ್ ಸತ್ಯನಾರಾಯಣ ಅವರಿಗೆ ಈ ಸಂಕಲನವನ್ನು ಅರ್ಪಿಸಿದ್ದಾರೆ. 


ಇಲ್ಲಿ 76 ಸೊಗಸಾದ ಗದ್ಯಗಂಧಿ ಕವಿತೆಗಳಿವೆ. ನನಗಿಷ್ಟವಾದ ಕೆಲವನ್ನು ನನಗರ್ಥವಾದಂತೆ ಪ್ರಸ್ತಾಪಿಸುತ್ತೇನೆ.


**************


ಅವರು ಕೇಳುತ್ತಾರೆ :

ಅವರು ಕೇಳುತ್ತಾರೆ: ನಿನ್ನೊಳಗೆ ಕಹಿಯೇ ಇಲ್ಲವೇ?


ನಾನು ಹೇಳುತ್ತೇನೆ: ಇಲ್ಲಿ ಎಲ್ಲರೂ ಕಹಿ ತುಂಬಿದ

ಪಾತ್ರೆಯಾಗಿದ್ದಾರೆ. ಎಲ್ಲ ಕಡೆಯೂ ಅದನ್ನೇ ಹೀರುತ್ತ, ಉಗುಳುತ್ತ

ಹೊಳೆಯಂತೆ ಹರಿಯುತ್ತಿದ್ದಾರೆ. ಯಾವಾಗ ಕಹಿಯೊಂದು

ಕಡಲಾಗುವುದೋ? ಅದಕ್ಕೆಂದೇ ಜೇನುಹುಟ್ಟಿಯಾಗಿದ್ದೇನೆ. 


ಎಲ್ಲರೂ ಕಹಿ ತುಂಬಿಕೊಂಡು.. ಕಹಿಯನ್ನೇ ಕಕ್ಕುವಾಗ ಸಿಹಿಯಾಗಿರುವರು ಮಾದರಿಯಾಗಬೇಕಿದೆ. ಪ್ರತಿಯೊಂದಕ್ಕೂ ಏಕೆ, ಹೇಗೆ ಎಂದು ಪ್ರಶ್ನಿಸುವವರಿಗೆ ಇಲ್ಲಿ ಎಲ್ಲರಂತೆಯೇ ತಾನೂ ಆದರೆ ಹೇಗೆ..?! ಎಂಬ ವಿಭಿನ್ನತೆಯ ಜೊತೆಗೆ ಮನುಷ್ಯ ಏನಾಗಬೇಕಿದೆ ಎಂಬುದನ್ನು ಬೋಧಿಸದೆ ತಾನೇ ಮಾದರಿಯಾಗಿ ನಿಲ್ಲುವ ಬಗೆ ಕಾಣಸಿಗುತ್ತದೆ. 


**************


ಹೀಗಿಲ್ಲಿ ಎಲ್ಲವೂ ಮೆಸ್ಸಿ! :

ಇಲ್ಲಿ ಮೆಸ್ಸಿ ಎಂಬ ಪದ ಗೋಜಲು, ಗೊಂದಲ ಎಂಬರ್ಥ ನೀಡುತ್ತದೆ. 

ಬದಲಾದ ದಿನಗಳು ಬದಲಾದ ರೀತಿ-ನೀತಿಗಳು, ಬದುಕಿನ ರೀತಿಗಳು, ಅಪ್ಡೇಟ್ ಆಗುವ ನೆಪದಲ್ಲಿ ಬದಲಾಗಿರುವ ನಮಗೆ ಕನ್ನಡಿ ಹಿಡಿದಂತಿದೆ ಇದು. 


**************


ಉದುರಿದ ಪದಗಳನ್ನು ಅಂಟಿಸಲಾಗುವುದಿಲ್ಲ :


'ಪದಗಳೆಂದರೆ' ಮರದಿಂದ ಉದುರಿದ ಎಲೆಗಳು 

ಎಂಬ ಸಾಲು ಮರದಿಂದ ಉದುರಿದ ಎಲೆಗಳನ್ನು ಮತ್ತೆ ಹೇಗೆ ಮೊದಲಿನಂತಾಗಿಸುವುದಿಲ್ಲವೋ ಹಾಗೆಯೇ ಒಮ್ಮೆ ಆಡಿದ ಮಾತುಗಳು ಎಲ್ಲೆಲ್ಲಾ ಹಾರಿ, ಹೊತ್ತಿ ಉರಿಯಬಹುದು ಅಥವಾ ಹೇಗೆಲ್ಲಾ ವಿನ್ಯಾಸವಾಗಬಹುದು, ಯಾವ ರೀತಿಯಲ್ಲಿ ಬಳಕೆಯಾಗಬಹುದು ಎಂಬುದನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. 


ಉದುರಿದ ಪದಗಳನ್ನು ಹಿಂತೆಗೆದು ಅಂಟಿಸಲಾಗುವುದಿಲ್ಲವಲ್ಲ! 

ಎಂಬ ಸಾಲು ಅದೆಷ್ಟು ಅರ್ಥಪೂರ್ಣವಲ್ಲವೇ..!


**************


ತನ್ನದೇ ಸಾಲುಗಳನ್ನು ಮರೆಯುತ್ತಿದ್ದಾನೆ! :


ಫೇಸ್ಬುಕ್ ನ ಅನ್ ಫ್ರೆಂಡ್ ಆಗುವ ವಿಚಾರವನ್ನು ಪ್ರಸ್ತಾಪಿಸುತ್ತಲೇ.. ಚಿಕ್ಕವರಿದ್ದಾಗ ನೆಂಟರು ಬರುವ ಸಂದರ್ಭದ ಸಂಭ್ರಮ ಜೊತೆಗೆ ಅವರ ನಿರ್ಗಮನದ ನಂತರದ ಖಾಲಿತನ ಎರಡರ ಅನುಭವವನ್ನು ಪ್ರಸ್ತಾಪಿಸುತ್ತಾರೆ. ಅದಕ್ಕೂ.. ಇಂದಿನ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಗೂ ಲಿಂಕ್ ಆಗುತ್ತದೆ. ಬರುವವರ, ಹೋಗುವವರ, ಹೊಂದುವವರ ಕುರಿತು ಹೇಳುತ್ತಾರೆ.


ಬರುವವರ ಹೋಗುವವರ ಎಣಿಕೆಯಲ್ಲಿ ಕವಿಗೀಗ ವಿಸ್ಮೃತಿ.

ತನ್ನನ್ನು, ತನ್ನದೇ ಸಾಲುಗಳನ್ನು ಮರೆಯುತ್ತಿದ್ದಾನೆ! 


**************


ನಕ್ಷತ್ರಗಳನ್ನು ಹುಡುಕುವುದು! :

ಚಿಕ್ಕಂದಿನಿಂದ ಇದ್ದ ನಕ್ಷತ್ರಗಳ ಹುಚ್ಚಿನಲ್ಲಿ ಕೆಂಪು ಕಲ್ಲಿನ ನಕ್ಷತ್ರದ ಓಲೆ, ನಂತರ ಅದು ಕಳೆದು ಹೋಗಿದ್ದು, ನಕ್ಷತ್ರ ಕತ್ತಿನ ಫ್ರಾಕು ಹೀಗೆ ನಕ್ಷತ್ರದ ಆಸೆಗಳು ಹಲವಿದ್ದವು. ಆದರೆ ನಕ್ಷತ್ರಗಳು ಸಿಕ್ಕಿದ್ದೇ ಬೇರೆ ರೀತಿಯಲ್ಲಿ. ಇವು ಕಳೆದುಹೋಗದ ನಕ್ಷತ್ರಗಳು. ಅವು ಹೇಗಿವೆ ಎಂದರೆ ಹೀಗಿವೆ ನೋಡಿ.


ಪಾಠ ಮಾಡಿದರೆ ಮಕ್ಕಳ ಕಣ್ಣಲ್ಲಿ ನೂರಾರು ನಕ್ಷತ್ರ, ಅಡುಗೆ

ಮುಗಿಸಿದರೆ ಕೈಯಲ್ಲೊಂದು, ನೆಟ್ಟ ಮಲ್ಲಿಗೆಯ ಬಳ್ಳಿಯಲ್ಲಿ

ಲೆಕ್ಕವಿರದಷ್ಟು! ಕಾಲಿಟ್ಟಲ್ಲೆಲ್ಲ ನಕ್ಷತ್ರಗಳ ಬಳ್ಳಿ ತೊಡರಿಕೊಳ್ಳುತ್ತಿವೆ.

ಮನಸ್ಸಿಗೆ ಮಂಕು ಕವಿದಿದೆ ಎನ್ನಿಸಿದರೆ ಎದ್ದು ಕೆಲಸ ಹುಡುಕುತ್ತಾಳೆ.

ನಕ್ಷತ್ರಗಳು ದಳದಳ ಉದುರುತ್ತವೆ!


**************


ಮಾತನಾಡಿಸಬೇಕಾಗಿಯೇ ಇಲ್ಲ! :

"ಬೆಳಗಾದರೆ ಅದದೇ ಮನೆಯ ರಂಗೋಲಿ ನೋಡುತ್ತಾ ನಡೆಯುತ್ತಾಳೆ. ಕವಿ ನಿಸಾರರಿಗಿದ್ದ ಜಿಜ್ಞಾಸೆ, ಬೆರಗುಗಣ್ಣು ಯಾವುದೂ ಇಲ್ಲ. ಪ್ರಶ್ನೆಗಳು ಇಲ್ಲ ಹೆಚ್ಚಿನವು ಉತ್ತರಗಳೇ!"


ಹೆಣ್ಣುಮಕ್ಕಳ ಮನಸ್ಸು ರಂಗೋಲಿಯ ಮೂಲಕ ಚಿತ್ರಿತವಾಗಿರುವ ಪರಿಯನ್ನು ನಮಗೂ ಕಟ್ಟಿಕೊಡುತ್ತಾರೆ. ಕಾಟಾಚಾರಕ್ಕೆ ಎಳೆದ ರಂಗೋಲಿ, ಬಿಳಿಯ ರಂಗೋಲಿ ಜೊತೆಗೆ ಕೆಮ್ಮಣಿನ ಅಲಂಕಾರ, ಬಣ್ಣದ ರಂಗೋಲಿ, ಬಣ್ಣ ಬೇಡದ ಕಡೆ ಬಣ್ಣ ಸೇರಿಸಿ ಅಂದಗೆಟ್ಟ ರಂಗೋಲಿ, ಹೆಚ್ಚು ಎಳೆಗಳಿದ್ದ ರಂಗೋಲಿಯನ್ನು ಹಿಗ್ಗಿಸುತ್ತಾ ಸಾಗಿರುವ ಪರಿ, ಬದಲಾಗದ ಒಂದು ಮನೆಯ ರಂಗೋಲಿ, ಹೀಗೆ ವಿವಿಧ ರಂಗೋಲಿಗಳು ಅವರ ಮನಸ್ಸನ್ನೇ ಬಿಚ್ಚಿಡುವಂತೆ ಕಾಣುತ್ತವೆ. 

ಗದ್ಯಗಂಧಿ ಕೊನೆಯಲ್ಲಿನ ಈ ಸಾಲು ಎಲ್ಲವನ್ನೂ ಹೇಳುತ್ತದೆ.


ಈ ಹೆಣ್ಣು ಮಕ್ಕಳನ್ನು ಅರಿಯಲು ಮಾತನಾಡಿಸಬೇಕಾಗಿಯೇ ಇಲ್ಲ!


**************


ಸ್ವಯಂ ಸಂಭ್ರಮೆಗೆ ಯಾವ ಹಂಗಿಲ್ಲ! :

ಯಾತನೆಯ ಒರೆಸಿ ಹಾಕಿರುವ ನೂತನೆಯ ಕಣ್ಣ ಕಾಡಿಗೆ

ನೀರಾಗುವುದಿಲ್ಲ, ತುಟಿ ರಂಗು ಅಳಿಯುವುದಿಲ್ಲ, ಅಳಿಸುವುದೂ

ಇಲ್ಲ. ಬರುವನೋ, ಬಾರನೋ ಎಂಬ ಗೊಂದಲವೇ ಇಲ್ಲ.

ಸ್ವಯಂ ಸಂಭ್ರಮೆಗೆ ಯಾವುದರ ಹಂಗಿಲ್ಲ.


ಸ್ವಯಂ ಸಂಭ್ರಮೆಯರಾಗಿ ಮೊದಲಿಗೆ ತಮ್ಮನ್ನು ತಾವು ಪ್ರೀತಿಸಿಕೊಳ್ಳುವ ಹಾಗೂ ಯಾರಲ್ಲೂ ತಮ್ಮ ಸಂತೋಷವಿಲ್ಲ ಎಂಬ ಅರಿವನ್ನು ಮೂಡಿಸಿಕೊಳ್ಳುವ, ಸ್ವಯಂ ಸಂಭ್ರಮೆ ಇಲ್ಲಿ ಮಾದರಿಯಾಗುತ್ತಾಳೆ ಹಾಗೂ ಇಷ್ಟವಾಗುತ್ತಾಳೆ. ಇಲ್ಲಿ ಸ್ವಯಂ ಸಂಭ್ರಮೆಯ ಅರಳುವಿಕೆ ಹಾಗೂ ಅವಳ ಪರಿ ಆವರಿಸಿಕೊಳ್ಳುತ್ತದೆ.


**************


ವಿರುದ್ಧ ಪದಗಳ ಹುಡುಕುತ್ತ ! :


ಎಲ್ಲದಕ್ಕೂ ನಿಮ್ಮದು 'ಏರುದ್ಧ ಪದ'ದ ಹುಡುಕಾಟ. ಸಿಗದಿದ್ದರೆ ತತ್ತರಿಸಿ ಎಂಥದ್ದನ್ನೋ ಎದುರಿಗೆ ತಂದು ನಿಲ್ಲಿಸಿ ಕಾದಾಡಲೇಬೇಕು.

ಮಾಗಿಯ ಕೋಗಿಲೆಯಂತೆ ಯಾರೂ ಇಲ್ಲಿ ಮೂಗರಾಗಬಾರದು.

ಹುಲಿಯೋ, ನರಿಯೋ ಯಾವುದೋ ವೇಷ ತೊಟ್ಟು

ಕುಣಿಯುತ್ತಿರಬೇಕು.


ಎಲೆ ಕಳಚಿ ನಿಂತ ಮರದ ಮೌನ, ವಿಷಾದ, ಚಿಗುರ ಭರವಸೆ

ಯಾವುದೂ ವಿರುದ್ಧ ಪದಗಳ' ಹುಡುಕಾಡುವವರಿಗೆ

ಅರ್ಥವಾಗುವುದಿಲ್ಲ.


ಪಕ್ಷಿಗಳಿಗೆ ಮರಗಳಿಗೆ ಹೀಗೆ ಪರಿಸರದಲ್ಲಿ ವಿರುದ್ಧ ಎಂಬುದಿಲ್ಲ. ಅವುಗಳಿಗೆ ನಿಯಮವೂ ಇಲ್ಲ. ತಮ್ಮ ಪಾಡಿಗೆ ಚಿಗುರಿ, ಅರಳಿ ನಳನಳಿಸುತ್ತವೆ. ಮನುಷ್ಯನಂತೆ ಹುನ್ನಾರಗಳಿಲ್ಲ ಎಂದು ಹೇಳುತ್ತಲೇ ಮನುಷ್ಯರ ವಿರುದ್ಧ ಪದದ ಹುಡುಕಾಟದ ಪ್ರಯತ್ನವನ್ನು ಬದಿಗಿರಿಸಿ, ಏನೋ ಒಂದು ಮಾಡುತ್ತಲಿದ್ದಾಗ ಹೇಗಿರುತ್ತದೆ ಎಂದು ಹೇಳಿದ್ದಾರೆ. 


**************


ಅರಳುವುದಷ್ಟೇ ತನ್ನ ಸಹಜ ಗುಣ! :

ತನ್ನೊಳಗೊಂದು ಭಾಷೆಯಿದೆಯೆಂದೇ ತಿಳಿದಿರಲಿಲ್ಲ ತನಗೆ

ತಾನೇ ಹೂವಂತೆ ಅರಳುವವರೆಗೂ! ಈಗವಳು ಹೊರಗಿನೆಲ್ಲ

ಭಾಷೆಯನ್ನು ಆಚೆಗಟ್ಟಿದ್ದಾಳೆ. ಅರಳುವುದಷ್ಟೇ ತನ್ನ ಸಹಜ ಗುಣ!


ಕೆಲವೊಮ್ಮೆ ಪರಿಸರದ ಅಥವಾ ಕುಟುಂಬದ ಯಾರದ್ದೋ ಭಾಷೆಯನ್ನೋ, ಭಾವವನ್ನೋ ನಮ್ಮೊಳಗೆ ಅಳವಡಿಸಿಕೊಳ್ಳುತ್ತಾ ಸಾಗುತ್ತೇವೆ. ಆದರೆ, ನಮ್ಮ ನೈಜತೆಯ ಅರಿವಾಗುವುದು ನಮ್ಮ ಭಾವ, ಭಾಷೆಯ ಅರಿವಾಗುವುದು ಸಹಜವಾದ ಪ್ರಕ್ರಿಯೆ. ಹೂವರಳುವಂತೆ.. ಜೊತೆಗೆ ಅದರ ನಂತರದ ಜ್ಞಾನೋದಯ, ಪರಿಪಕ್ವತೆ ಯಾವುದನ್ನು ಆಚೆಗಿಡಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಅಲ್ಲವೇ..?


**************


ಅರ್ಥಪೂರ್ಣವಾದ ಹಾಗೂ ಮನಸ್ಸಿಗೆ ಹತ್ತಿರವಾಗುವ ಹಲವು ಸಾಲುಗಳಿವೆ ಇಲ್ಲಿ. ಪ್ರಸ್ತಾಪಿಸಲು ಹೊರಟರೆ ಈ ಪುಸ್ತಕದ ಸಾಕಷ್ಟು ಸಾಲುಗಳನ್ನು ಪ್ರಸ್ತಾಪಿಸಬೇಕಾಗುತ್ತದೆ. ರೂಪಕಗಳನ್ನು ಇಷ್ಟಪಡುವ ಗದ್ಯದ ಪ್ರಿಯರು ಹಾಗೂ ಪದ್ಯದ ಪ್ರಿಯರು, ಕಾವ್ಯಾತ್ಮಕ ಭಾಷೆಯನ್ನು ಇಷ್ಟಪಡುವವರು ಹೀಗೆ ಎಲ್ಲರೂ ಓದಬಹುದಾದ ಗದ್ಯಗಂಧಿ ಕವಿತೆಗಳಿವೆ ಇಲ್ಲಿ. ಸೊಗಸಾದ ಓದು.


~ವಿಭಾ ವಿಶ್ವನಾಥ್

ಗಂಡು ಮುತ್ತೈದೆ (ಪುಸ್ತಕ ಯಾನ - 469)


ಪುಸ್ತಕದ ಶೀರ್ಷಿಕೆ : ಗಂಡು ಮುತ್ತೈದೆ 

ಲೇಖಕರು : ಮಂಜುಳಾ ಪ್ರಸಾದ್

ಪ್ರಕಾಶಕರು : ಅಕ್ಷರನಾದ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2025

ಪುಟಗಳು : 106

ಬೆಲೆ : 150 ರೂ. 


ಇದು ಮಂಜುಳಾ ಪ್ರಸಾದ್ ಅವರ ಮೂರನೇ ಪುಸ್ತಕ. 'ಮಂದಾರ' ಎಂಬ ಕಿರುಕಥೆಗಳ ಸಂಕಲನ ಹಾಗೂ 'ಬಿಡಿ ಹೂಗಳು' ಎಂಬ ಕವನ ಸಂಕಲನಗಳು ಪ್ರಕಟವಾಗಿವೆ. ಇದು ನಾನು ಓದುತ್ತಿರುವ ಇವರ ಮೊದಲ ಪುಸ್ತಕ. 


ಈ ಕಥಾಸಂಕಲನದಲ್ಲಿ ಮೂರು ಕಥೆಗಳಿವೆ. ಶೀರ್ಷಿಕೆಯಾಗಿರುವುದು ಇಲ್ಲಿರುವ ನೀಳ್ಗತೆ. ಅಪ್ಪನ ವಾಚು ಹಾಗೂ ದೊಡ್ಡತನ ಎಂಬ ಇನ್ನೆರಡು ಕಥೆಗಳು ಓದಿಗೆ ಸಿಗುತ್ತವೆ. ಡಿ. ಮಲ್ಲಾರೆಡ್ಡಿ ಸರ್ ಅವರ ಬೆನ್ನುಡಿ ಇದೆ. 


ಗಂಡು ಮುತ್ತೈದೆ : ಶೀರ್ಷಿಕೆ ವಿಭಿನ್ನವಾಗಿದೆ. ಆದರೆ, ಈ ಹೆಸರಿನಲ್ಲಿ ಕರೆಸಿಕೊಳ್ಳುವವರಿಗೆ ಇದು ಮುಜುಗರವನ್ನು ತಂದೊಡ್ಡುತ್ತದೆ. ಆದರೆ, ಸೃಷ್ಟಿಯಲ್ಲಿ ಕೆಲವೊಮ್ಮೆ ದೈಹಿಕ ಭಿನ್ನತೆಯಿಂದ ಹೀಗಾಗುವವರು ಯಾವೆಲ್ಲಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಕಟ್ಟಿರುವ ಕಥೆ ಇದು. 


ಸಾಮಾನ್ಯವಾಗಿ ಹೆಣ್ಣೆಂದರೆ ಹೀಗಿರಬೇಕು ಹಾಗೂ ಗಂಡೆಂದರೆ ಹೀಗಿರಬೇಕು ಎಂಬ ಅಲಿಖಿತ ನಿಯಮಗಳು ನಮ್ಮನ್ನು ಪ್ರಭಾವಿಸುವುದಿದೆ. ಆದರೆ, ಈ ಕಥೆ ಅಂತಹ ಮನಸ್ಥಿತಿಯನ್ನು ಬದಲಾಯಿಸಲು ಪರಿಣಾಮಕಾರಿಯಾಗಿದೆ. 


ಪೂಜೆ, ವ್ರತ, ಸಂಪ್ರದಾಯ ಎಲ್ಲವನ್ನು ಪಾಲಿಸುತ್ತಿದ್ದ ಅಮ್ಮನಿಗೆ ಪಾರ್ಶ್ವವಾಯು ಬಡಿದು ಎರಡು ಕಾಲುಗಳು ಹಾಗೂ ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದಾಗಲೂ.. ದೈಹಿಕ ಕೆಲಸಗಳು ಕಷ್ಟವಾಗುತ್ತಿದ್ದರೂ ಯಾವುದನ್ನೂ ಬಿಡಲೊಪ್ಪದ ಅಮ್ಮನಿಗೆ ಆಕೆಯ ಆರೋಗ್ಯ ಸುಧಾರಿಸಲು ಮರು ಮಾತಾಡದೆ ಸಹಾಯಕನಾಗಿದ್ದ ಸುಶೀಲ್. ಸುಶೀಲ್ ತಂದೆ ಸಹ ಆತನ ಸಹಾಯಕ್ಕೆ ಮೆಚ್ಚುತ್ತಿದ್ದರು. ಆದರೂ.. ಹಬ್ಬದ ದಿನ ಅವರ ಬಾಯಿಯಿಂದ ಬಂದ ಒಂದು ಶಬ್ದ ಆತನನ್ನು ಹೆಚ್ಚು ನೋಯಿಸಿತು.


ಮೂವರು ಹೆಣ್ಣುಮಕ್ಕಳ ನಂತರ ಎಂಟು ವರ್ಷ ಚಿಕ್ಕವನಾಗಿ ಹುಟ್ಟಿದ್ದ ಸುಶೀಲ್. ಅಕ್ಕಂದಿರ ಮಧ್ಯೆ ಅವರಿಗಿಂತಲೂ ಹೆಚ್ಚು ಜಾಗೃತಿ ವಹಿಸಿ ಬೆಳೆಸಿದ್ದಕ್ಕೋ ಏನೋ ಹೆಣ್ಣು ಮಕ್ಕಳಿಗೆ ಬರುತ್ತಿದ್ದ ಪ್ರತಿ ಕೆಲಸವೂ ಅವರಿಗಿಂತಲೂ ನಾಜೂಕಾಗಿ ಇವನಿಗೆ ಬರುತ್ತಿತ್ತು. ವಿದ್ಯೆಯಲ್ಲಿ ಮಾತ್ರವಲ್ಲದೆ.. ಅಡುಗೆ, ಮನೆ ಸುಧಾರಿಸುವಿಕೆ ಎಲ್ಲವನ್ನು ನಿಭಾಯಿಸುತ್ತಿದ್ದವನಿಗೆ ಬೇರೆಯದ್ದೇ ಹೆಸರು ಆಂಟಿದ್ದು ವಿಪರ್ಯಾಸ.


ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಬ್ಯಾಂಕಿನ ಕ್ಷೇತ್ರವನ್ನು ಆರಿಸಿಕೊಂಡು ಇನ್ನೇನು ಮದುವೆಯೂ ಆಗಿ ಸುಖವಾಗಿರಬೇಕು ಎನ್ನುವಾಗ ಅಕ್ಕನ ಮಗಳ ಸಂಬಂಧ ಕೂಡಿ ಬರಲಿಲ್ಲ. ಇದೇ ನೆಪವಾಗಿ, ಮದುವೆಯ ವಿಚಾರವಾಗಿ ಒಬ್ಬೊಬ್ಬರಾಗಿ ತವರಿನ ನೆಟನ್ನು ಹೆಚ್ಚು ಅಂಟಿಸಿಕೊಳ್ಳದೆ ದೂರವೇ ಉಳಿದರು ಅಕ್ಕಂದಿರು. ಅಷ್ಟಕ್ಕೂ ಅಕ್ಕನ ಮಗಳ ಜೊತೆಗಿನ ವಿವಾಹ ಹಾಗೂ ನಂತರದ ವಿವಾಹ ಸಂಬಂಧಗಳು ತಪ್ಪಿ ಹೋಗುತ್ತಿರುವುದಕ್ಕೆ ಕಾರಣವೇನಿತ್ತು..?


ಅದೇ ಸಂದರ್ಭದಲ್ಲಿ ಹೊಸ ಪ್ರಮೋಷನ್ ಸಿಕ್ಕಾಗ.. ಹೊಸ ಜಾಗ ಅದೃಷ್ಟವನ್ನು ಬದಲಾಯಿಸಬಹುದು ಎಂದು ದಾವಣಗೆರೆಗೆ ಹೋದವನಿಗೆ ಅಲ್ಲಿ ನಡೆದ ಘಟನೆಯೊಂದು ಆತನ ಬದುಕಿನಲ್ಲಿ ಕಪ್ಪುಚುಕ್ಕಿಯಾಗಿಬಿಡಬಹುದು ಎನ್ನುವ ಆಲೋಚನೆ ಕನಸಿನಲ್ಲಿಯೂ ಇರಲಿಲ್ಲ. ಹೆಣ್ಣುಮಕ್ಕಳ ನಡುವೆ ಬೆಳೆದಿದ್ದವನು, ಹೆಣ್ಣುಮಕ್ಕಳಿಗೆ ಗೌರವ ನೀಡುತ್ತಿದ್ದವನು ತಾನೇ ಸುಳ್ಳು ಹೇಳಿ ಪರಿಸ್ಥಿತಿಯನ್ನು ನಿಭಾಯಿಸಲು ಹೋಗಿ ಅದನ್ನೇ ಉರುಳಾಗಿಸಿಕೊಂಡಿದ್ದ. ಅಷ್ಟಕ್ಕೂ ಘಟನೆ ಹಾಗೂ ಸುಶೀಲ್ ಹೇಳಿದ ಸುಳ್ಳು ಏನಿತ್ತು ..?


ಅದಾದ ನಂತರದ ವರ್ಗಾವಣೆ, ವಿವಾಹ ಸಂಬಂಧ, ವಿವಾಹ ನಂತರದ ಬದುಕು ಎಲ್ಲವೂ ಸುಶೀಲ್ ನ ಬವಣೆಯ ಜೊತೆಗೆ ಗಂಡು ದೈಹಿಕವಾಗಿ ಬದಲಾವಣೆ ತೋರಿದಾಗ ಸಮಾಜದಲ್ಲಿ ಯಾವ ದೃಷ್ಟಿಯಲ್ಲಿ ಕಾಣಿಸುತ್ತಾನೆ ಹಾಗೂ ಸುತ್ತಲಿನವರ ಪ್ರತಿಕ್ರಿಯೆ, ಮನಸ್ಥಿತಿ, ಪರಿಸ್ಥಿತಿ ಏನಿರುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. 


ಸುಶೀಲ್ ಹಾಗೂ ಆತನ ಪತ್ನಿ ಸುಮ ಇಬ್ಬರೂ ಮನೋವೈದ್ಯರನ್ನು ಸಂಪರ್ಕಿಸಿದ್ದೇಕೆ..? ಮುಂದೆ ಗಂಡು ಮುತ್ತೈದೆ ಎಂಬ ಪದ ಆತನಿಗೆ ಹೆಮ್ಮೆ ತಂದದ್ದೇಕೆ? ಓದಿ ನೋಡಿ.


ಅಪ್ಪನ ವಾಚು : 

"ಹೌದು! ಸಂಜೆಯ ಗೋಧೂಳಿ ಟೈಮ್... ಅದು ಪ್ರಕೃತಿಗೆ; ಆದರೆ ಈ ವಾಚ್ ನ ಅಂಗಡಿಯವನಿಗೆ ಪ್ರತಿಕ್ಷಣವೂ ಅವನ ಅಂಗಡಿಯ ತುಂಬ ನೇತು ಹಾಕಿರುವ ಆ ಗಡಿಯಾರಗಳ ನಿರಂತರ ಶಬ್ದಗಳಿಗೆ ಒಳ್ಳೆಯ ಸಮಯ ಯಾವುದು? ಕೆಟ್ಟ ಸಮಯ ಯಾವುದು? ಕಾಲಚಕ್ರ ಉರುಳುತ್ತಿರುವಾಗ!"


ಕಥೆಯ ಶೀರ್ಷಿಕೆ ಹಾಗೂ ಈ ಅರ್ಥಪೂರ್ಣ ಸಾಲುಗಳನ್ನು ಓದುವಾಗಲೇ ಕುರಿತಾಗಿ ನಮಗೊಂದು ಕಲ್ಪನೆ ಬರುತ್ತದೆ. ಅಪ್ಪ ಸಾಯುವ ಕೊನೆಯ ಗಳಿಗೆಯಲ್ಲಿ ದೃಷ್ಟಿ ನೆಟ್ಟದ್ದು ಹಾಗೂ ಬದುಕಿನುದ್ದಕ್ಕೂ ಅಪ್ಯಾಯತೆಯಿಂದ ಅಪ್ಪಿಕೊಂಡದ್ದು ವಾಚ್ ಅನ್ನು. ಅಪ್ಪನ ವರ್ಷಾಂತಕದ ಕಾರ್ಯಕ್ಕೆ ಬೇಕಾಗಿದ್ದು ಮಾಡುವುದರ ಜೊತೆಗೆ, ಅಂದೇ ವಾಚ್ ರಿಪೇರಿ ಕೆಲಸವನ್ನು ಅಂಟಿಸಿಕೊಂಡಿದ್ದೇಕೆ..?


ಅಪ್ಪನ ಬಾಲ್ಯದ ದಿನಗಳು, ಪೊಲೀಸ್ ಆದ ಸಂದರ್ಭ ಆ ಸಮಯದಲ್ಲಿಯೂ ವಾಚ್ ವ್ಯಾಮೋಹ, ಅಮ್ಮನೊಡನೆ ಜೊತೆಯಾದ ವಾಚ್.. ಹೀಗೆ ಜೀವನದ ಪ್ರತಿ ಪ್ರಮುಖ ಘಟ್ಟದಲ್ಲಿಯೂ ಜೊತೆಯಾಗಿದ್ದ ವಾಚ್ ನ ಚಿತ್ರಣ ನಮಗೆ ಸಿಗುತ್ತಾ ಹೋಗುತ್ತದೆ


"ವಾಚು ಸುಬ್ಬಣ್ಣನ ತಿಥಿಯಲ್ಲಿ ಅವರ ಮಗ ಎಲ್ಲರಿಗೂ ವಾಚುಗಳನ್ನು ದಾನವಾಗಿ ಕೊಡಲಿದ್ದಾನೆ" ಎಂಬ ಗಾಳಿಸುದ್ದಿಯ ಹಿಂದಿನ ಸತ್ಯಾಸತ್ಯತೆ ಏನಿತ್ತು ಹಾಗೂ ಅಪ್ಪನ ವಾಚು ಏನಾಯ್ತು..? ನೀವೇ ಓದಿ ನೋಡಿ.


ದೊಡ್ಡತನ : ತಾನು ಹುಟ್ಟಿ ಬೆಳೆದ ಊರಿಗೆ, ಬಾಲ್ಯವನ್ನು ಕಳೆದ ಊರಿಗೆ ಮತ್ತೆ ಮರಳಿ ಬರುತ್ತಿದ್ದ. ಅದಕ್ಕೆ ಕಾರಣವಿತ್ತು. ಹಾಗೆಂದು, ಆತ ಇಷ್ಟಪಟ್ಟು ಬರುತ್ತಿದ್ದ ಕಾರಣವಲ್ಲ. ಸಾಕಷ್ಟು ದ್ವೇಷ, ಹಗೆಯನ್ನು ಬೆಳೆಸಿಕೊಂಡು ಊರಿನಿಂದ ದೂರವೇ ಇದ್ದವನು ಅಮ್ಮನಿಗೆ ಕೊಟ್ಟ ಆ ಒಂದು ಮಾತಿಗೆ ಮತ್ತೆ ಅಲ್ಲಿ ಬಂದಿದ್ದ .


ಕೂಡು ಕುಟುಂಬದ ಮನೆಯ ನೆನಪಿನ ಜೊತೆಗೆ ಆ ಮನೆಯಲ್ಲಿದ್ದವರ ಸಣ್ಣತನಗಳು ಹಾಗೂ ಪರಿಸ್ಥಿತಿಗಳು ಜೊತೆಗೆ ಅಪ್ಪ ಎಲ್ಲರಿಂದ ದೂರಾದ ಪ್ರಸಂಗ ಎಲ್ಲವೂ ಕಾಣಿಸುತ್ತದೆ. ವಿಪರ್ಯಾಸವೆಂದರೆ ಚಿಕ್ಕಪ್ಪ ಹಾಗೂ ಮಕ್ಕಳಿಗೆ ತಾನು ಬಂದಿದ್ದ ಕೆಲಸಕ್ಕಿಂತ ಅವರವರ ಸಮಸ್ಯೆಯೇ ದೊಡ್ಡದಾಗಿ ಕಂಡದ್ದು. ಹಾಗೂ ಅದರ ಪರಿಹಾರವನ್ನು ಕಂಡುಕೊಳ್ಳಲು ಹೊರಟದ್ದು.


ಇಲ್ಲಿ ದೊಡ್ಡತನ ಮೆರೆದವರು ಯಾರು..? ಅಮ್ಮನ ಭಾಷೆ ಏನಿತ್ತು ಅವನ ಕಾರ್ಯ ಸಂಪೂರ್ಣವಾಯಿತೇ ಓದಿ ನೋಡಿ.


ನೀಳ್ಗತೆ ಹಾಗೂ ಉಳಿದೆರಡು ಕಥೆಗಳು ಕಥೆಯ ಅಂತ್ಯಗಳು ಅಷ್ಟು ಸುಲಭವಾಗಿ ಊಹಿಸಲಾಗದಂತಿವೆ. ಎಲ್ಲ ಕಥೆಗಳಲ್ಲಿಯೂ ಪ್ರಮುಖವಾಗಿ ಮನಸ್ಸಿನ ಭಾವನೆಗಳು ಅತ್ಯಂತ ಸ್ಪಷ್ಟವಾಗಿ ಹಾಗೂ ಆಪ್ತವಾಗುವಂತೆ ಚಿತ್ರಿತವಾಗಿವೆ. ವಾಸ್ತವಕ್ಕೆ ಹತ್ತಿರವಾದ ಕಥೆಗಳು ಇಲ್ಲಿವೆ. ಸೊಗಸಾದ ಕಥೆಗಳ ಓದು.


~ವಿಭಾ ವಿಶ್ವನಾಥ್

ದೇವರಿದ್ದಾನೆ (ಪುಸ್ತಕ ಯಾನ - 468)


ಪುಸ್ತಕದ ಶೀರ್ಷಿಕೆ : ದೇವರಿದ್ದಾನೆ

ಲೇಖಕರು : ಭಾರತಿ ಪ್ರಸಾದ್ ಕೊಡ್ವಕೆರೆ

ಪ್ರಕಾಶಕರು : ಸಾಹಿತ್ಯಸುಧೆ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 212

ಬೆಲೆ : 260 ರೂ.


ಕೌಟುಂಬಿಕ ಹಾಗೂ ಸಾಮಾಜಿಕ ಕಥೆಗಳನ್ನು ನೈತಿಕತೆಯ ಚೌಕಟ್ಟಿನಲ್ಲಿ ಹೆಣೆದಿರುವ 40 ಕಥೆಗಳ ಸಂಕಲನ ಭಾರತಿ ಪ್ರಸಾದ್ ಕೊಡ್ವಕೆರೆ ಅವರ ದೇವರಿದ್ದಾನೆ. ಶೀರ್ಷಿಕೆ ಆಶಾಭಾವ, ಭರವಸೆ ಹುಟ್ಟಿಸುವಂತಿದೆ. ಇದು ಅವರ ಎರಡನೇ ಕಥಾಸಂಕಲನ. 


ಅಮ್ಮ: ಅಮ್ಮನೇ ಇಷ್ಟಪಟ್ಟು ಮಗಳ ಜೊತೆ ಬೆಂಗಳೂರಿಗೆ ಬರಲು ಹೊರಟಿದ್ದು ಮೊದಲ ಬಾರಿ. ಆದರೆ, ಆ ಬಾರಿ ಅಮ್ಮನ ಆಸೆ ಈಡೇರುವಂತಿರಲಿಲ್ಲ. ಅದೇಕೆ..? ಕೆಲವೊಂದು ವಿಚಾರಗಳು ಕಾಲ ಮಿಂಚಿ ಹೋಯಿತೆನ್ನುವಂತೆ ಪಶ್ಚಾತ್ತಾಪ ಮೂಡಿಸುವುದೇಕೆ..?


ತರವಾಡು: ಅಪ್ಪನ ಕಾಲದಲ್ಲಿ, ಅಪ್ಪ ತೀರಿಹೋದ ನಂತರ ತಪ್ಪಿ ಹೋಗಿದ್ದ ಅಜ್ಜನ ಮನೆ ಲೇಖಳ ಪಾಲಿಗೆ ದಕ್ಕಿದ್ದರ ಹಿಂದಿನ ಕಥೆ ಇಲ್ಲಿದೆ.


ಸೋದರತ್ತೆ: ಅಮ್ಮನ ನಂತರದ ಅಮ್ಮನಂತಿದ್ದ ಸೋದರತ್ತೆಯ ಸಾವು, ಅವರ ಆಸೆ ಹಾಗೂ ಸಹನಾಗೆ ತನ್ನ ಸಾವಿನ ವಿಚಾರವನ್ನು ಹೇಗೆ ಹೇಳಬೇಕು ಎಂದು ಹೇಳಿದ ಅವರ ಆದೇಶ, ಎಲ್ಲದರ ಅಂತಃಕರಣದಿಂದ ಕಾಡುವ ಕಥೆ.


ಆದದ್ದೆಲ್ಲಾ ಒಳಿತೇ ಆಯಿತು: ಆದದ್ದೆಲ್ಲಾ ಒಳಿತೇ ಆಯಿತು ಎಂಬಂತೆ ಬಾಳುತ್ತಿರುವ ಸುಮಾ ಹಾಗೂ ಮಾಧವರ ದಾಂಪತ್ಯ ಜೀವನದ ಜೊತೆಗೆ ಪಶ್ಚಾತ್ತಾಪ ಪಡುತ್ತಿರುವ ಸೀತಮ್ಮನ ತಪ್ಪು ಏನಿತ್ತು..? ಕಾಲ ಕಲಿಸಿದ ಪಾಠ ಯಾವುದು..?


ಅಪಸ್ವರ: ಸಾಮಾನ್ಯವಾಗಿ ಹಿರಿಯರಿಂದ ದಾಂಪತ್ಯದಲ್ಲಿ ಅಪಸ್ವರ ಮೂಡುವ ಕಥೆಗಳನ್ನು ಓದಿದ್ದೆ. ಆದರೆ, ಇಲ್ಲಿ ಸುಶ್ಮಿತಾ ಹಾಗೂ ಸುಹಾಸ್ ದಂಪತಿಗಳ ನಡುವಿನ ಅಪಸ್ವರ ಸುಸ್ವರವಾದ ಹಿನ್ನೆಲೆಗೆ ಹಿರಿಯರ ಹಿರಿತನವಿರುವುದು ಖುಷಿ ತಂದಿತು.


ಹೊಸಹಾದಿ: ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದ ಇಬ್ಬರ ಗತ ಮುಂದೆ ವಿಭಿನ್ನ ಭವಿಷ್ಯ ಕಂಡುಕೊಂಡ ಕಥೆ ಇದು.


ಸಿರಿ: ಅಪ್ಪ-ಅಮ್ಮನ ದಾಂಪತ್ಯದ ದಿನಗಳನ್ನು ಕಂಡಿದ್ದ ಸಿರಿಗೆ ಸಂಸಾರದ ಕುರಿತು ಹುಟ್ಟಿದ ಹೇವರಿಕೆಯ ಭಾವ ಹಾಗೂ ಅಪ್ಪನನ್ನು ದ್ವೇಷಿಸುತ್ತಿದ್ದ ಸಿರಿ ತನ್ನ ವೈವಾಹಿಕ ಜೀವನವನ್ನು ಕಟ್ಟಿಕೊಂಡದ್ದು ಹೇಗೆ..?


ಆರಂಭ-ಅಂತ್ಯ: ಒಂದು ಸಂಬಂಧದ ಅಂತ್ಯ ಮತ್ತೊಂದರ ಆರಂಭವೂ ಆಗಿರಬಹುದು. ಒಂದೇ ದೋಣಿಯ ಪಯಣಿಗರಂತಿದ್ದ ಇಬ್ಬರು ತಮ್ಮ ಮುಂದಿನ ಜೀವನದ ಆರಂಭದ ನಾಂದಿ ಹಾಡಿದ ಕಥೆ.


ಆತ್ಮತೃಪ್ತಿ: ಇಳಿ ವಯಸ್ಸಿನ ಸಂಬಂಧಗಳ ಸವಿ ಇರುವುದು ಅವರ ಸಿಹಿ-ಸವಿ ಮಾತುಕತೆಯಲ್ಲಿ. ಕದ್ದು ಸಿಹಿತಿಂದ ವಿಚಾರ ಸಂಗಾತಿಗೆ ತಿಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು..?


ಋಣಾನುಬಂಧ ರೂಪೇಣ: ಋಣಾನುಬಂಧ ಇಲ್ಲದೆ ತಪ್ಪಿ ಹೋದ ಸಂಬಂಧದ ಹೆಣ್ಣುಮಗಳು ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಾಗ.. ತಪ್ಪಿತಸ್ಥ ಭಾವದಲ್ಲಿ ಬೇಯುತ್ತಿದ್ದವರು ಅವಳ ಪ್ರಬುದ್ಧ ಆಲೋಚನೆಗೆ ಮನಸೋತದ್ದೇಗೆ..?


ಕಾಕನ ಹೋಟೆಲ್: ಮದುವೆಗೂ ಮುನ್ನ ಕೆಲಸದಲ್ಲಿದ್ದ ಅಂಗಡಿಯ ಪಕ್ಕದಲ್ಲಿ ಪರಿಚಿತರಾಗಿದ್ದ ಆಪ್ತಜೀವ ಕಾಕಾರಿಗೆ ಈಗ ಇಳಿವಯಸ್ಸು ಹಾಗೂ ಆಪ್ತಬಂಧ ಮನಸ್ಸಿಗೆ ಹತ್ತಿರವಾಗುವ ಕಥೆಯಿದು.


ದೇವರಿದ್ದಾನೆ: ಕಥಾಸಂಕಲನದ ಶೀರ್ಷಿಕೆಯ ಕಥೆ. ಅಮ್ಮನ ಪ್ರೇರಣೆ ಇದ್ದರೂ.. ಅಮ್ಮ, ಸದಾ ದೇವರಿದ್ದಾನೆ ಎಂದು ಯಶಸ್ಸನ್ನು ದೇವರಿಗೆ ಸಮರ್ಪಿಸುತ್ತಿದ್ದರು. "ನಿಜಕ್ಕೂ ಅಮ್ಮ ಹೇಳುವ ಆ ದೇವರಿದ್ದಾನಾ..?" ಎಂದು ಲೇಖಕಿ ಕೇಳುವುದೇಕೆ..?


ನನ್ನ ಪ್ರೀತಿಯ ಹುಡುಗಿ: ಈತನಿಗೆ ತಾನು ಪ್ರೀತಿಸಿದ ಹುಡುಗಿ ತನ್ನವಳಾಗಲಿ ಎನ್ನುವ ಆಸೆ. ಆದರೆ, ಪ್ರೀತಿಸಿದ ಹುಡುಗಿಯ ಮನಸ್ಸಿನಲ್ಲಿದ್ದ ಮಾತೇನು..?


ಅಪ್ಪ: ಅಮ್ಮನಿಲ್ಲದ ದಿನಗಳಲ್ಲಿ ಅಪ್ಪನಿದ್ದ ಬಗೆ, ಅಮ್ಮನಿದ್ದ ದಿನಗಳಲ್ಲಿ ಅಪ್ಪನಿದ್ದ ಬಗೆ.. ಎರಡೂ ಮಗಳ ನೋಟಕ್ಕೆ ಕಂಡದ್ದೇಗೆ.? 


ನಿರ್ಧಾರ: ತಂದೆ ತಾಯಿ ನೋಡಿ ಅನುರೂಪ ಎಂದು ಸಹನಾಳಿಗೆ ಜೋಡಿ ಮಾಡಿದ ಹುಡುಗ ಶ್ರೀಕಾಂತ್. ಅನುರೂಪ ದಾಂಪತ್ಯದಂತೆ ಸಾಗುತ್ತಿದ್ದವರ ಬದುಕಲ್ಲಿ ಈಗ ಬದಲಾವಣೆ ನಿಚ್ಚಳವಾಗಿತ್ತು. ಅದು ಮೊದಲು ಕಾಡಿದ್ದು ಸಹನಾಳಿಗೆ ಬ ಅವಳ ನಿರ್ಧಾರವೇನು..? ಅದು ಖಂಡಿತವಾಗಿಯೂ ವಿಚ್ಛೇದನವಲ್ಲ. ಹಾಗಾದರೆ ಮತ್ತೇನು..?


ತುಮುಲ(ನೀಳ್ಗತೆ): ಅರವಿಂದ ಅಚಾನಕ್ಕಾಗಿ ಕಂಡ, ಭೇಟಿಯಾದ ಹುಡುಗಿಯನ್ನು ಮೆಚ್ಚಿದ್ದ. ಅವಳ ಜೊತೆಯಲ್ಲಿ ಮಗುವೂ ಇತ್ತು. ಕಾಕತಾಳೀಯವೆಂಬಂತೆ ಆಕೆಯ ಮನೆಗೆ ವಧುಪರೀಕ್ಷೆಗೆ ಹೋಗುವ ಸಂದರ್ಭವೂ ಬಂದಿತು. ಆದರೆ, ಅಲ್ಲಿ ನಡೆದ ಪ್ರಸಂಗವೊಂದು ಅವನ ಮನದ ತುಮುಲವನ್ನು ಹೆಚ್ಚಾಗಿಸಿದ ನವಿರಾದ ಪ್ರೇಮ ಕಥೆ ಇಲ್ಲಿದೆ.


ಕೃತಜ್ಞಳೋ, ಕೃತಘ್ನಳೋ: 23 ವರ್ಷಗಳ ಹಿಂದಿನ ಸ್ನೇಹ ಮತ್ತೆ ಬೆಸೆದದ್ದು ಒಂದು ಕರೆಯ ಮೂಲಕ. ಹಾಗೆ ಕರೆ ಬಂದದ್ದು ಸಹಾಯಕ್ಕೋಸ್ಕರ. ಹೇಗೋ ಬೇಡಿಕೆ ಈಡೇರಿತ್ತು. ಅದಕ್ಕೆ ಸಹಾಯ ಮಾಡಿದವರಿಗೂ.. ಈಕೆಗೂ ಕೃತಜ್ಞತೆಯನ್ನು ಸಲ್ಲಿಸಿದ್ದವಳು ಮುಂದಿನ ದಿನಗಳಲ್ಲಿ ಹೇಗಿದ್ದಳು..? ಆಕೆ ಕೃತಜ್ಞಳೋ, ಕೃತಘ್ನಳೋ..?


ಜೇಡರಬಲೆ: ಯಾರು ಏನೇ ಅಂದರೂ ತನ್ನಿಷ್ಟದ ಬದುಕು ಕಟ್ಟಿಕೊಳ್ಳಬೇಕು. ಅಲ್ಪ ಸ್ವಾತಂತ್ರ್ಯವಾದರೂ ತನ್ನದಾಗಬೇಕು ಎಂದು ಮಹತ್ವಾಕಾಂಕ್ಷೆಯಿಂದ ನಿರ್ಧರಿಸಿ ಹೊರಟವಳ ಆಸೆಗೆ ಅಡ್ಡಿಯಾದದ್ದೇನು..? ಸಂಸಾರವೆಂಬ ಜೇಡರಬಲೆಯಲ್ಲಿ ಸಿಕ್ಕಿದವಳ ಪರಿಸ್ಥಿತಿ ಏನಿತ್ತು..?


ಉಡುಗೊರೆ: ವ್ಯಾಸ ಹಾಗೂ ಸುನಂದ ತಮ್ಮ ಅನ್ಯೋನ್ಯ ದಾಂಪತ್ಯದಲ್ಲಿ ಇಚ್ಛೆಯನ್ನರಿತು ಬಾಳುವ ಸತಿಪತಿಗಳಂತಿದ್ದವರು. ವ್ಯಾಸನ ಒಂದು ದುಡುಕು ಮಾತಿನಿಂದ ಸುನಂದಾ ಮನಸ್ಸು ಘಾಸಿಯಾದದ್ದು ಹೇಗೆ..? ವ್ಯಾಸ ಅದನ್ನು ಸರಿಪಡಿಸಿದನೇ..? ಒಂದು ಆದರ್ಶ ದಾಂಪತ್ಯದ ಕಥೆ ಇದು.


ಆಸ್ತಿ: ತನ್ನ ಪಾಲಿನ ಆಸ್ತಿ ಕೇಳಲು ಹೊರಟಾಗ ಹೆಂಡತಿ ಬೇಡವೆಂದು ತಡೆದರೂ ಅವಳ ಮಾತಿಗೆ ಬೆಲೆ ಕೊಡದವನು ಬದಲಾದದ್ದೇಗೆ..?


ಹೆತ್ತವರು: ಹೆತ್ತವರು ತಮ್ಮ ಕಷ್ಟವನ್ನು ಮಕ್ಕಳಿಗೆ ತಿಳಿಸುವುದಿಲ್ಲ. ಮಕ್ಕಳು ಅದರ ಅರಿವಿರದೆ ದುಂದು ವೆಚ್ಚ ಮಾಡಲು ಹೊರಟಾಗ ಅಚಾನಕ್ಕಾಗಿ ತನ್ನ ಹೆತ್ತವರ ಕಷ್ಟದ ಸ್ಥಿತಿ ಕಣ್ಮುಂದೆ ನಿಂತರೆ..? 


ನೈತಿಕತೆ: ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ 14 ವರ್ಷಗಳ ನಂತರ ತವರೂರಿಗೆ ವರ್ಗಾವಣೆಯಾಗಿತ್ತು. ತಾನು ಓದಿದ ಶಾಲೆಗೆಯನ್ನು ಹೋಗಿ ನೋಡಬೇಕೆಂಬ ಆಸೆ ಇದ್ದಾಗಲೇ ಅದೇ ಶಾಲೆಯಿಂದ ಕಾರ್ಯಕ್ರಮದ ಅತಿಥಿಯಾಗಿ ಆಹ್ವಾನವೂ ಸಿಕ್ಕಿತ್ತು. ಹೋಗುವಾಗ ಇದ್ದ ಉತ್ಸಾಹ, ಖುಷಿ ಬರುವಾಗ ಹೇಗಿತ್ತು..?


ನಿನ್ನ ನೆರಳಿನಾಸರೆ: ಪತಿ ಸುಹಾಸ್ ನದ್ದು ಹೇಳುವಂತಹ ತಕರಾರಿಲ್ಲದಿದ್ದರೂ.. ಅಖಿಲಾಳಿಗೆ ಅವನ ಒಂದು ನಡೆ ಸರಿ ಕಂಡಿರಲಿಲ್ಲ. ಆದರೆ, ಅದು ಸರಿ ಎಂದು ಸಾಬೀತಾದ ಗಳಿಗೆ ಮತ್ತೆ ಅವನ ಒಲವಿನಾಸರೆಗೆ ದಾರಿಯಾಯಿತೇ..?


ನೀನಿಲ್ಲದ ಈ ಬಾಳು: ಹೊರಗೆ ದುಡಿದು, ಮನೆಯಲ್ಲಿಯೂ ಕೆಲಸ ಮಾಡುವ ಗೃಹಿಣಿ ಸಾಮಾನ್ಯವಾಗಿ ಗಂಡ-ಮಕ್ಕಳ ಸ್ವಲ್ಪ ಸಹಾಯವನ್ನು ಬಯಸುತ್ತಾಳೆ. ಅದು ಅವರ ಕರ್ತವ್ಯವೂ ಹೌದು. ಪ್ರಶಾಂತಿಯೂ ಇದಕ್ಕೆ ಹೊರತಾಗಿರಲಿಲ್ಲ. ಆಕೆಯ ಗಂಡ-ಮಕ್ಕಳಿಗೆ ಅವಳಿಲ್ಲದ ಸಂದರ್ಭ ಹೇಗನ್ನಿಸಿತು..?


ಶಿಕ್ಷೆ: ಮದುವೆ, ಸಂಸಾರ, ಮಕ್ಕಳು ಎಂದು ಕಷ್ಟದ ಬದುಕು ಬದುಕುತ್ತಿದ್ದ ಗೆಳತಿ ಪದ್ಮಿನಿಗೆ ಸಿಕ್ಕಿದ್ದು ಇನ್ನೂ ಮದುವೆಯಾಗದ ಭಾವನಾ. ಅಚಾನಕ್ಕಾಗಿ ಆದ ಇವರಿಬ್ಬರ ಭೇಟಿ ಯಾರಿಗೆ ಯಾವ ಭಾವ ಹುಟ್ಟಿಸಿತು. ಭಾವನಾಳ ಬದುಕಲ್ಲಿ.. ಯಾರ ತಪ್ಪಿಗೆ ಅವಳಿಗೆ ಶಿಕ್ಷೆಯಾಗಿತ್ತು..?


ತುಡಿತ: ಇಚ್ಛೆಯನರಿತು ನಡೆವ ಪತಿರಲು ಎನ್ನುವ ಆಸೆಯೇ ಎಲ್ಲರಲ್ಲೂ ಕಾಣುತ್ತದೆ. ಇಲ್ಲಿ ಚೇತನಾಳಿಗೆ ಇಚ್ಛೆಯನ್ನರಿತು ನಡೆದ ಪತಿಯ ಅಮ್ಮ ಸಿಕ್ಕಿದರು. ಅವರು ತಮ್ಮ ಮಗನಿಗೆ ಹೇಳಿದ ಬುದ್ಧಿಮಾತೇನು..? ಚೇತನ ಹಾಗೂ ಯಶೋಧಾರ ಹೂವಿನ ಮನಸ್ಸುಗಳು ಇಷ್ಟವಾದವು.


ಅವನಿಕಾ: 33 ನಾಯಿಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡುತ್ತಿದ್ದ ಅವನಿ ಕಾಳಿಗೆ ಅವಳು ಕೊಟ್ಟ ಪ್ರೀತಿಯ ಎರಡರಷ್ಟು ಪ್ರೀತಿ ಅವುಗಳಿಂದ ಸಿಗುತ್ತಿತ್ತು. ಅವನಿಕಾಳ ಬದುಕಿನ ಬದಲಾದ ರೀತಿ ಮಧುವಿನ ಕಣ್ಣಲ್ಲಿ ಕಂಡ ಕಥೆ ಇದು.


ಮುನಿಸು: ದಂಪತಿಗಳು ಪುಟ್ಟ ಕಾರಣವೊಂದಕ್ಕೆ ಮುನಿಸಿಕೊಂಡಿದ್ದ ಮನಸ್ಸುಗಳೆರಡು ಒಂದಾಗಬೇಕಾದರೆ, ಅವರು ಪಡುವ ಪಶ್ಚಾತ್ತಾಪ, ಬದಲಾವಣೆಯನ್ನು ತೋರಿದ ಹಾದಿ ಮಾದರಿಯಂತಿದೆ.


ಪಶ್ಚಾತ್ತಾಪ: ಕೆಲವೊಮ್ಮೆ ಅವಸರ ಅಥವಾ ಸಮಯ ಎರಡೂ ಹೇಳಬೇಕಾದ ವಿಚಾರವನ್ನು ಹಾಗೂ ಕೇಳಬೇಕಾದ ವಿಚಾರವನ್ನು ತಪ್ಪಿಸುವುದಿದೆ. ಮಗನನ್ನು ಅಮ್ಮನಂತೆಯೇ ಸಾಕಿದ ಪಾಪಮ್ಮನ ಸಾವಿನ ಸುದ್ದಿ ಐದು ದಿನದ ನಂತರ ತಿಳಿದಾಗ ಪಟ್ಟ ಪಶ್ಚಾತ್ತಾಪ ನಮ್ಮನ್ನೂ ಕಾಡುತ್ತದೆ.


ಜವಾಬ್ದಾರಿ: ಸುರೇಶ ತನ್ನ ಅಪ್ಪ-ಅಮ್ಮನ ತಪ್ಪನ್ನು ತನ್ನ ಅಕ್ಕನಿಗೆ ಹಾಗೂ ಅವಳ ದುಡುಕಿನ ತೀರ್ಮಾನವನ್ನು ಮನದಟ್ಟು ಮಾಡಿಸಿ, ಜವಾಬ್ದಾರಿಯನ್ನು ಹಂಚಿದ ಕಥೆ ನಿಜಕ್ಕೂ ಮಾದರಿಯಂತಿದೆ. ಇಂತಹ ಸಹಕಾರ ಎಲ್ಲರಿಗೂ ಸಿಕ್ಕರೆ ಸಂಸಾರಗಳೆಷ್ಟು ಸುಮಧುರ..!


ಸಂಚು(ನೀಳ್ಗತೆ): ನಕ್ಸಲರಾಗಿ ಬದುಕುತ್ತಿದ್ದವರ ಗುಂಪನ್ನು ಚಾಕಚಕ್ಯತೆಯಿಂದ ಹಿಡಿದ ಕಥೆ ಇದು. ಅಷ್ಟೇ ಅಲ್ಲದೆ ಅವರ ಗುಂಪಿನಲ್ಲಿ ಹುಚ್ಚಿಯಂತೆ ವರ್ತಿಸುತ್ತಿದ್ದ ಹುಡುಗಿಯೊಬ್ಬಳಿದ್ದಳು. ಆದರೆ, ಅವಳು ಅವರೊಡನೆ ಮೊದಲಿನಿಂದಲೂ ಇರಲಿಲ್ಲ. ಕಥೆಯ ತಿರುವಿರುವುದು ಇಲ್ಲಿ ನ ಅವರಿಗಿಂತ ಕ್ರೂರಿಯಾಗಿದ್ದ ಅವಳ ಸಂಚು ಬಯಲಾದದ್ದು ಹೇಗೆ..? ಒಂದೊಳ್ಳೆ ರೋಚಕ ಕಥೆ.


ಮುನಿಸು: "ನಾಳೆ ಹುಟ್ಟುವ ಮಗು ನಿಮ್ಮ ಹಾದಿ ಹಿಡಿದರೆ.." ಎನ್ನುವ ಸಾಕ್ಷಿಯ ಮಾತಿನಲ್ಲಿ ಇದ್ದ ಎರಡರ್ಥವನ್ನು ಆತ ಗಮನಿಸದೆ ಮುನಿಸಿಕೊಂಡು ಹೊರಟಿದ್ದವನಿಗೆ ವಿರುದ್ಧ ದಂಪತಿಗಳು ಅರ್ಥ ಮಾಡಿಸಿದ ಸತ್ಯ ಏನಿತ್ತು..?


ಗಂಗಾ ಕೌಸಲ್ಯ: ತವರಿನಿಂದ ಬಂದಿದ್ದ ಹಸು ಗಂಗೆ ಹಾಗೂ ಕೌಸಲ್ಯಳ ಅನುಬಂಧದ ಅನುಭೂತಿಯ ವಿಭಿನ್ನ ಕಥೆ. ಈ ಕಥಾ ಸಂಕಲನದಲ್ಲಿ ನನಗೆ ಅಚ್ಚುಮೆಚ್ಚಿನ ಕಥೆ ಇದು.


ಮಾಡಿದ್ದುಣ್ಣೋ ಮಹಾರಾಯ: ಪಲ್ಲವಿ ಊರಿಗೆ ಬಂದಿದ್ದ ಸಮಯದಲ್ಲಿ ನಡೆದ ಘಟನೆಯೊಂದು ಅವಳಿಗೆ ಅವನ ಹಿಂದಿನ ಬದುಕನ್ನು ನೆನಪಿಸಿತ್ತು ಜೊತೆಗೆ ಈಗಿನ ಗತಿಯನ್ನೂ .. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ತನ್ನ ಕೆಟ್ಟ ಕರ್ಮಗಳ ಫಲ ತಾನೇ ಅನುಭವಿಸುವಂತಾದ ಘಟನೆ ಇದು.


ಇಷ್ಟು ಕಾಲ ಒಟ್ಟಿಗಿದ್ದು: ಎಷ್ಟು ಕಾಲ ಒಟ್ಟಿಗಿದ್ದವರೇ ಆರಿಯದ ವಿಚಾರಗಳನ್ನು ಆರು ತಿಂಗಳ ದಾಂಪತ್ಯದಲ್ಲಿದ್ದವರು ಎಷ್ಟು ಅರಿತಿದ್ದರು..?


ಓ ಮೌನ ಮಾತಾಡು: ಸಾವಿತ್ರಿ ಅಷ್ಟು ದಿನವೂ ಒಳಗೊಳಗೆ ಮನಸ್ಸಿನಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿನಗಳು ಮುಗಿದ ಸಂದರ್ಭದಲ್ಲಿ, ನಾನು ಅತ್ತರೆ ಇನ್ನೂ ಆನಂದಭಾಷ್ಪವೇ ಎಂದುಕೊಂಡಿದ್ದವಳು ಜೀವಕ್ಕೆ ಕೊಟ್ಟ ಬೆಲೆ ಏನಿತ್ತು ..?


ತಪ್ಪಿದ್ದೆಲ್ಲಿ?: ಪ್ರೀತಿ-ಪ್ರೇಮದ ಹೆಸರಿನಲ್ಲಿ ತಪ್ಪಿ ನಡೆಯುವ ಯುವಜನತೆ ತಮ್ಮ ತಪ್ಪಿಗೆ ತಾವೇ ಅನುಭವಿಸಬೇಕಾದ ಶಿಕ್ಷೆಯ ವಾಸ್ತವದ ಕಥೆ ಇಲ್ಲಿದೆ.


ಸಪ್ತಸಾಗರದಾಚೆ: ಕಲಿಯಬೇಕು ಎಂದಿದ್ದ ವಳನ್ನು ಮಗು ನೋಡಿಕೊಳ್ಳಲು ಸಪ್ತಸಾಗರದ ಆಚೆಗೆ ಕಳುಹಿಸಿದ್ದ ತಾಯಿಯ ಕೊರಗು ಮಗಳನ್ನು ನೋಡಿದಾಗ ಏನಾಗಿತ್ತು..? ಎಲ್ಲವನ್ನು ಮೀರುವಂತೆ ಬೆಳೆದಿದ್ದ ಮಗಳು ಅಲ್ಲಿಗೆ ಬಂದದ್ದೇಗೆ..?


ಮಳೆಗಾಲದ ಒಂದು ಮುಂಜಾನೆ: ಮಳೆಗಾಲದ ಒಂದು ಮುಂಜಾನೆಯಲ್ಲಿ ಆಕೆ ಕಾಯುತ್ತಿದ್ದವರು ಬಂದಾಗಿನ ಅವಳ ಭಾವ ತುಂಬಿದ ಸ್ವಗತ ಇಲ್ಲಿದೆ.


ಆದರ್ಶವಾದಿ: ಕಾಲೇಜಿನಲ್ಲಿದ್ದಾಗ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲನಾಗಿದ್ದ ವರುಣ್ ಆದರ್ಶವಾದಿಯೂ ಆಗಿದ್ದ. ಓದುವಾಗ ಇದ್ದ ಆದರ್ಶ ಮುಂದುವರೆಯುವುದು ಕಡಿಮೆ. ಆದರೆ, ವರುಣ್ ಅಂತಹವನಲ್ಲ ಎಂದು ಅರಿವಾದ ಗಳಿಗೆ ಯಾವುದು..?


ಸಣ್ಣ ಕಥೆಗಳನ್ನು ಅದರಲ್ಲಿಯೂ ಕೌಟುಂಬಿಕ ಇಷ್ಟಪಟ್ಟು ಓದುವ ನನಗೆ ಇದು ಭರ್ಜರಿ ಓದು. ಹಲವಾರು ಕಥೆಗಳಲ್ಲಿ ನೀಡಿರುವ ಮುಕ್ತಾಯ ಭಾವ, ಯುನಿಕ್ ಟಚ್ ಎರಡನ್ನು ಮೇಳೈಸಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ, ಆದರ್ಶಗಳು ಅಡಗಿರುವ ಕಥೆಗಳ ಓದು ಇಷ್ಟವಾಯಿತು.

~ ವಿಭಾ ವಿಶ್ವನಾಥ್

ಗತ್ಯಂತರ (ಪುಸ್ತಕ ಯಾನ - 467)


ಪುಸ್ತಕದ ಶೀರ್ಷಿಕೆ : ಗತ್ಯಂತರ

ಲೇಖಕರು : ಶ್ರೀಮತಿ ಮಾಲತಿ ರಾಮಕೃಷ್ಣ ಭಟ್

ಪ್ರಕಾಶಕರು : ರೇಖಾ ಪ್ರಕಾಶನ

ಪ್ರಥಮ ಮುದ್ರಣ : 2024

ಪುಟಗಳು : 156

ಬೆಲೆ : 195 ರೂ.


ಇದು ನಾನು ಓದುತ್ತಿರುವ ಇವರ ಎರಡನೇ ಕೃತಿ. ಲೇಖಕಿಯ ಮೂರನೇ ಕಾದಂಬರಿ.


ಮೊದಲಿಗೆ ನನಗೆ ಈ ಕೃತಿಯ ಅರ್ಪಣೆ ಬಹಳ ಇಷ್ಟವಾಯಿತು. "ಆತ್ಮವಿಶ್ವಾಸ ಬದುಕಿನ ಪಥವನ್ನು ಹಿಗ್ಗಿಸುತ್ತದೆ ಎಂದು ನಂಬಿದ ಲೋಕದ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಕೃತಿಯನ್ನು ಅರ್ಪಿಸುತ್ತಿದ್ದೇನೆ" ಎನ್ನುತ್ತಾರೆ ಲೇಖಕಿ.


"ಎಲ್ಲರ ಜೀವನದಲ್ಲೂ ಏಳು ಬೀಳುಗಳು ಸರ್ವೇಸಾಮಾನ್ಯ. ಬಿದ್ದು ಎದ್ದೇಳಬೇಕೇ ಹೊರತು ಎದ್ದು ಬೀಳಬಾರದು." ಎಂಬ ಲೇಖಕಿಯ ನುಡಿ ಎಚ್ಚರಿಕೆಯಂತೆಯೂ, ಬುದ್ಧಿ ಮಾತಿನಂತೆಯೂ ಸೂಕ್ತವಾಗಿದೆ.


ಅಪರ್ಣಳ ಬದಲಾದ ಬದುಕು ತೆರೆದುಕೊಳ್ಳುವಂತೆಯೇ ಅವಳ ಗತ ಜೀವನವು ತೆರೆದುಕೊಳ್ಳುತ್ತದೆ. ಹಳ್ಳಿಯಲ್ಲಿ ಹೈನುಗಾರಿಕೆಯಿಂದ ಹಾಲು ಹಂಚುತ್ತಾ ನ್ಯಾಯಯುತವಾಗಿ ಬದುಕುತ್ತಿದ್ದ ಕನ್ನೇಶಗೌಡರ ಕುಟುಂಬದ ಪರಿಚಯವಾಗುತ್ತದೆ. ಅದು ಅವರ ಅಮ್ಮನ ತಂದೆಯ ಮನೆ ನ


ಅಪರ್ಣಳ ಬಾಲ್ಯ ಕಳೆದದ್ದು ಅಜ್ಜನ ಊರು ಪಿರಿಯಾಪಟ್ಟಣದಲ್ಲಿಯೇ. ಕನ್ನೇಶಗೌಡರಿಗೆ ಮೂವರು ಮಕ್ಕಳು ಶಿವಪ್ಪ, ಸೋಮು ಹಾಗೂ ಮಗಳು ಲಕ್ಷ್ಮಿ.


ಹಿರಿಯ ಮಗ ಶಿವಪ್ಪನಿಗೆ ರವೀಂದ್ರ, ಸುಧೀಂದ್ರ ಎಂಬ ಗಂಡು ಮಕ್ಕಳು. ಕಿರಿಯ ಮಾವ ಸೋಮುವಿಗೆ ರಂಜನ ಎಂಬ ಮಗಳು. ಅಪರ್ಣಳನ್ನು ಯಾರೂ ಬೇರೆ ಎಂಬಂತೆ ನೋಡದೆ ಮಮತೆ, ವಾತ್ಸಲ್ಯದಿಂದ ಕಾಣುತ್ತಿದ್ದರು. ಅಪರ್ಣ ಎಲ್ಲರ ಬಾಯಲ್ಲೂ ಅಪ್ಪಿಯಾಗಿ ಮನಸ್ಸಿಗೆ ಹತ್ತಿರವಾಗಿದ್ದಳು.


ಅಜ್ಜ-ಅಜ್ಜಿ ಇಳಿಯ ವಯಸ್ಸಿನಲ್ಲಿಯೂ ತಮ್ಮ ಗಂಡು ಮಕ್ಕಳಿಗೆ ಮಗಳನ್ನು ಯಾವುದಕ್ಕೂ ಕೊರತೆ ಮಾಡುವಂತೆ ನೋಡಿಕೊಳ್ಳಿರೆಂದು ಪದೇಪದೇ ಹೇಳುತ್ತಿದ್ದರು. ಅಷ್ಟಕ್ಕೂ ಲಕ್ಷ್ಮಿಯ ಬಾಳಿನ ಕಥೆ ಏನಿತ್ತು ..?


ಅತ್ತೆ-ಮಾವನಿಗೆ ತಮ್ಮ ಹಿರಿಯ ಮಗ ರವೀಂದ್ರ ಹಾಗೂ ಅಪ್ಪುವನ್ನು ಜೋಡಿಯಾಗಿ ಕಾಣುವಾಸೆ. ಆದರೆ ಅಪರ್ಣಳ ಮನಸ್ಸಿಗೆ ಇದು ಹಿಡಿಸುತ್ತಿರಲಿಲ್ಲ.ಕಷ್ಟದಲ್ಲಿ ಆಸರೆಯಾಗಿದ್ದ ಅಣ್ಣನ ಮಾತನ್ನು ತೆಗೆದು ಹಾಕದ ಅಮ್ಮನ ಅಸಹಾಯಕತೆ, ಜೊತೆಗೆ ತಾನು ಮುಂದಕ್ಕೆ ಓದಬೇಕು ಎನ್ನುವ ಅವಳ ಆಸೆ ಅಮ್ಮನ ಬಳಿ ಮನಬಿಚ್ಚಿ ಮಾತನಾಡುವಂತೆ ಮಾಡಿತು. ರವೀಂದ್ರ ಹಾಗೂ ಸುಧೀಂದ್ರ ಹರೆಯದ ಅಪರ್ಣ ಕಣ್ಣಲ್ಲಿ ಕಾಣುತ್ತಿದ್ದದ್ದು ಹೇಗೆ..?


ಅಮ್ಮ ತನ್ನ ಓದಿನ ಕುರಿತಾಗಿ ಮಾವನ ಬಳಿ ಮಾತನಾಡುವುದಾಗಿ ಹೇಳಿದವರು ಸೋಮು ಮಾವ ಕಮಲತ್ತೆಯ ಜೊತೆಗೆ ಪುಣ್ಯಕ್ಷೇತ್ರದ ಯಾತ್ರೆಗೆಂದು ಹೊರಟು, ಅವರೊಡನೆ ಹೋಗಿ ಬಂದು ಮಾತನಾಡುತ್ತೇನೆಂದು ಹೇಳಿದ್ದರು. ಆದರೆ ಅಲ್ಲಿಂದ ವಾಪಾಸ್ ಬಂದದ್ದು ಕಮಲತ್ತೆ ಮಾತ್ರವೇ..!


ಮನೆಯ ಇಬ್ಬರು ಸದಸ್ಯರನ್ನು ಕಳೆದುಕೊಂಡ ಮನೆಗೆ ಹೇಗಿತ್ತು..? ಶಿವಪ್ಪ ಮಾವ ಮತ್ತು ದೊಡ್ಡತ್ತೆ ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಿದ ಪರಿ ಹೇಗೆ..?


ಅಮ್ಮನನ್ನು ಕಳೆದುಕೊಂಡ ದುಃಖದಿಂದ ಹೊರಬರಲೆಂದು ತಾತ್ಕಾಲಿಕವಾಗಿ ಅಪರ್ಣ ಓದಲು ಒಪ್ಪಿದರೂ.. ನಂತರ ರವೀಂದ್ರ ಹಾಗೂ ಆಕೆಯ ವಿವಾಹದ ಪ್ರಸ್ತಾಪವನ್ನು ಮಾಡಿದಾಗ ಗಟ್ಟಿಯಾಗಿ ನಿರಾಕರಿಸಿದ ಅಪರ್ಣಳಿಗೆ ಧೈರ್ಯ ತುಂಬಿದ್ದು ಯಾವುದು..? ಒಲ್ಲದ ಮದುವೆ ಬೇಡವೆಂದು ಶಿವಪ್ಪನವರು ತಳೆದ ಪ್ರಬುದ್ಧ ನಿರ್ಧಾರವೂ ಇಲ್ಲಿದೆ.


ರವೀಂದ್ರನಿಗೇನೋ ಅಹಲ್ಯಾ ಎಂಬ ದೂರದ ಸಂಬಂಧಿಕರ ಮಗಳೊಡನೆ ಮದುವೆಯಾಯಿತು. ಆದರೆ, ಅಪರ್ಣಳನ್ನು ಮನೆಯಲ್ಲಿ ಕಾಣುವ ಬಗೆ ಹೇಗಿತ್ತು..?


ಮುಂದೆ ರಂಜನಿಯ ಮದುವೆಯೂ ದೂರವೇನಿರಲಿಲ್ಲ. ರಾಘವ ಎನ್ನುವ ಗುಣವಂತ ಹುಡುಗ ಮನೆಯ ಅಳಿಯನಾಗಿ ಬಂದಿದ್ದ. ದೊಡ್ಡಪ್ಪನ ನೆರಳಿನಲ್ಲಿ ಬೆಳೆದ ರಂಜನಿ ಮನೆಯ ಜವಾಬ್ದಾರಿ ಹೊರದಿದ್ದರೂ.. ತನ್ನದೇ ಪುಟ್ಟ ಆದಾಯದ ದಾರಿ ಕಂಡುಕೊಂಡಿದ್ದ ಬಗೆ ಹೇಗಿತ್ತು..? ಕೇವಲ ವಿದ್ಯೆಯಿಂದ ಮಾತ್ರವೇ ಕೆಲಸ ಎನ್ನುವವರಿಗೆ ಹೆಚ್ಚು ಓದದ, ತನ್ನದೇ ದುಡಿಮೆಯ ದಾರಿ ಹಿಡಿದ ರಂಜನಿ ಮಾದರಿಯಾಗುತ್ತಾಳೆ. ಸದ್ಯಕ್ಕೆ ಆ ಮನೆಯಲ್ಲಿ ಅಪ್ಪನ ಆಪ್ತ ಜೀವವೆಂಬಂತಿದ್ದ ರಂಜನಿಯಿಂದಲೇ ಮನೆಯ ವಿದ್ಯಾಮಾನಗಳು ಅರಿವಾಗುತ್ತವೆ. 


ಮದುವೆ ಮುಗಿಸಿ ಹೊರಟುವಷ್ಟರಲ್ಲಿ ರವೀಂದ್ರ ಅಲ್ಲದಿದ್ದರೆ ಸುರೇಂದ್ರನನ್ನಾದರೂ ಮದುವೆಯಾಗು ಎನ್ನುವ ಪ್ರಸ್ತಾಪವನ್ನು ನಿರಾಕರಿಸಿ ದಿಟ್ಟವಾಗಿ ತನ್ನ ಪ್ರೀತಿಯ ವಿಚಾರವನ್ನು ಹೇಳಿಯೇ ಹೊರಡುತ್ತಾಳೆ. ಅದರ ಪರಿಣಾಮವೇನಿತ್ತು..? 


ಮುಂದೆ ಆ ಮನೆಯ ನಂಟು ಕಡಿದೇ ಹೋಯಿತು ಎನ್ನುವಂತೆ ಬದುಕುವ ಅಪರ್ಣಳ ಬದುಕಿನಲ್ಲಿ ವೇಣುವಿನ ಅಧ್ಯಾಯ. ಆತನ ಮನೆಯಲ್ಲಿ ಒಪ್ಪಲಿಲ್ಲವಾದ ಕಾರಣ ದೇವಸ್ಥಾನವೊಂದರಲ್ಲಿ ವಿವಾಹವಾಗುತ್ತಾರೆ. ಸರ್ಕಾರಿ ಸ್ವಾಮ್ಯದ ಕೃಷಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯ ಕೆಲಸವೂ ಸಿಗುತ್ತದೆ. ತಾಯಿಯಾಗುವ ಸೂಚನೆಯೂ ಸಿಗುವ ಅಪರ್ಣಳ ಬಾಳು ಪರಿಪೂರ್ಣವಾಯಿತು ಎನ್ನುವಷ್ಟರಲ್ಲಿ ಎಲ್ಲವೂ ತಲೆಕೆಳಗಾಗುತ್ತದೆ.


ವೇಣು ಅಪರ್ಣಳಿಂದ ದೂರವಾದ ಸಂದರ್ಭ ಯಾವುದು..? ಹೇಗೆ..? ಅನುರಾಧಳೊಡನೆ ಅಪರ್ಣ ಬರುಕು ಕಟ್ಟಿಕೊಂಡ ಬಗೆ ಹೇಗಿತ್ತು..? ಎಲ್ಲಿಯೂ ಅಡ್ಡದಾರಿ ಹಿಡಿಯದೆ, ಕೆಟ್ಟ ವಿಚಾರವನ್ನು ಮಾಡದೆ ಬದುಕುವ ಅಪರ್ಣಳ ಸಂಸ್ಕಾರವನ್ನು ತೋರುತ್ತದೆ ಬದುಕಿನ ರೀತಿ. ಹಳಿ ತಪ್ಪಿದ ತನ್ನ ಬದುಕು ತನ್ನವರಿಗೆ ಗೊತ್ತಾಗದಂತೆ ದೂರದಲ್ಲಿಯೇ ಬದುಕುತ್ತಿದ್ದಳು ಅಪರ್ಣ. ಎಲ್ಲರ ಕಣ್ಮಣಿಯಂತಿದ್ದ ಅಪರ್ಣಳನ್ನು ಮನೆಯವರು ಹುಡುಕಲಿಲ್ಲವೇ..?


ಎಷ್ಟೋ ಬಾರಿ ರಕ್ತ ಸಂಬಂಧಗಳಲ್ಲದ ಬಂಧಗಳು ಬೆಸೆದುಕೊಳ್ಳುತ್ತವೆ. ಹಾಗೆ ಬೆಸೆದುಕೊಂಡ ಬಂಧ ಕುಮುದಾಳದ್ದು. ಸ್ವಂತ ಸೋದರಿ ಎನ್ನುವಷ್ಟು ಅಕ್ಕರೆ ತೋರುವ, ಹಿಂದಿನ ವಿಚಾರವನ್ನು ಕೆದಕದ ಕುಮುದಾ ಆಸರೆಯಾದಳು ಎಂದರೂ ತಪ್ಪಾಗಲಾರದು. ಮುಂದೆ ಕುಮುದಾಳ ಓತ್ತಾಯದಿಂದ ಮನೆಯಲ್ಲಿ ದೇವರನಾಮ, ಭಾವಗೀತೆ ಎಂದು ಲಘುಸಂಗೀತದ ತರಗತಿ ಮಾಡಿ ತನ್ನ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳುತ್ತಿದ್ದಳು. ಸಂಗೀತ ಅವಳ ಮನದ ಮದ್ದಾಯಿತು ಸಹ.


ಅಚಾನಕ್ಕಾಗಿ ಎದುರಾದ ಸಂದರ್ಭದಲ್ಲಿ ರಂಜನಿ ಹಾಗೂ ಸುರೇಂದ್ರರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡುತ್ತಾಳೆ. ಆ ಸಂದರ್ಭ ಯಾವುದು..?


ತವರಿನಲ್ಲಿ ಜನಗಳು ಬದಲಾಗಿದ್ದರು. ಅವರ ವಾತ್ಸಲ್ಯವಂತೂ ಬದಲಾಗಿರಲಿಲ್ಲ ಎಂದು ಅರಿವಾಗಲು ರಂಜನಿ ಸೇತುವೆಯಾದಳು. ಮುರಿದಿದ್ದ ಮನಗಳು ಬೆಸೆದವು ಎನ್ನುವಂತೆ ಅಪರ್ಣ ತನ್ನ ಮಗಳೊಂದಿಗೆ ಅಲ್ಲಿಗೂ ಹೋಗಿ ಬಂದಳು. ಎಲ್ಲರಿಗೂ ಅವಳ ಬದುಕಿನ ವಿಚಾರ ತಿಳಿದಿದ್ದರೂ.. ತೀರಾ ನೋಯಿಸಲು ಮುಂದಾಗುತ್ತಿರಲಿಲ್ಲ. 


ರವೀಂದ್ರನಾಥ್ ಇಬ್ಬರು ಹೆಣ್ಣುಮಕ್ಕಳು, ರಂಜನಿಯ ಗಂಡು ಮಗುವಿನ ಜೊತೆಗೆ ಅನುರಾಧ ಚೆನ್ನಾಗಿ ಹೊಂದಿಕೊಂಡಳು. 


ಸುರೇಂದ್ರ ಇನ್ನು ಅವಿವಾಯಿತನಾಗಿದ್ದ. ಕೃಷಿ ಕುಟುಂಬದ ಬದುಕು ಹೇಗಿರುತ್ತದೆ ಎಂಬುದನ್ನು ರವೀಂದ್ರ ಹಾಗೂ ರಾಘವರ ಮೂಲಕ ತಿಳಿಯಬಹುದು. ಅಲ್ಲದೆ, ಸುರೇಂದ್ರನ ವಿವಾಹ ಇನ್ನು ಕೂಡಿ ಬರದ್ದಕ್ಕೆ ಕಾರಣವೇನು..? ಅವನ ನೆಚ್ಚಿನ ಹವ್ಯಾಸಕ್ಕೆ ಮನೆಯವರ ಸಹಕಾರ ಹೇಗಿತ್ತು..?


ಈಗಲೂ ಮನೆಯವರ ಮನಸ್ಸಿನಲ್ಲಿ ಅಪರ್ಣ ಹಾಗೂ ಸುರೇಂದ್ರರ ಜೋಡಿಯ ಕನಸಿದ್ದರೂ ಪ್ರಸ್ತಾಪಿಸಲು ಹಿಂದೆಗೆದಿದ್ದರು. ಮುಂದೇನಾಯಿತು ..?


ಮಾಗಿದ ಮನಸ್ಥಿತಿ ಬಹಳವೇ ಪಾಠ ಕಲಿಸಿತ್ತು. ಅವಿಭಕ್ತ ಕುಟುಂಬದ ಮೂಲಮಂತ್ರವಾದ ಒಗ್ಗಟ್ಟು ಇಲ್ಲಿ ಎದ್ದು ಕಾಣುತ್ತಿತ್ತು. ಹಿರಿಯ ಸೊಸೆಯಾಗಿ ಅಹಲ್ಯಾಳ ಗಂಭೀರ ನಡೆ ಅಪರ್ಣಳನ್ನು ಆಕರ್ಷಿಸಿತ್ತು. ಆಕೆಯೇ ಸರಿಯಾದ ಸೊಸೆ ಎಂದೆನಿಸಿತ್ತು. ಅಲ್ಲಿ ಹೊಟ್ಟೆಕಿಚ್ಚು, ಸೋಮಾರಿತನಕ್ಕೆ ಆಸ್ಪದವಿರಲಿಲ್ಲ.


ಎಲ್ಲರ ಬದುಕಿನ ಮುಂದಿನ ಹದಿನೈದು ವರ್ಷಗಳ ಬದುಕನ್ನು, ಪ್ರಬುದ್ಧ ನಡೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಹೊಂದಾಣಿಕೆ, ಸುಧಾರಣೆಗಳು ಕೆಲವೊಮ್ಮೆ ಹಿರಿಯರಿಗೂ.. ಕಿರಿಯರಿಗೂ.. ಇರುಸುಮುರಿಸಾದರೂ ಹೊಂದಿಬಾಳುವ ಗುಣ ಎಲ್ಲರಲ್ಲಿಯೂ ಇತ್ತು.


ಎಷ್ಟೋ ಹೆಣ್ಣುಮಕ್ಕಳು ಅಪರ್ಣಾಳ ಹಾದಿಯನ್ನೇ ಹಿಡಿದು ಬಿದ್ದಿರಬಹುದು. ಆದರೆ, ಮೇಲೆದ್ದು.. ಮತ್ತೆ ಬೀಳದಂತೆ ಬದುಕಲು ಅಪರ್ಣ ಆದರ್ಶವಾಗಿದ್ದಾಳೆ.


ಈ ಕಾದಂಬರಿ ಕೌಟುಂಬಿಕ ಮೌಲ್ಯಗಳನ್ನು, ಬದುಕಿನ ರೀತಿ ನೀತಿಗಳನ್ನು ತೆರೆದಿಟ್ಟಂತೆಯೇ.. ಕೃಷಿ ಕುಟುಂಬದ ಗಂಡು ಮಕ್ಕಳ ಮದುವೆಯ ಸಮಸ್ಯೆಯನ್ನೂ ಓದುಗರಿಗೆ ತೋರುತ್ತದೆ. ಕೂಡು ಕುಟುಂಬದ ಮೌಲ್ಯವನ್ನು ಅರಿವಾಗಿಸುತ್ತದೆ. ಅಲ್ಲಿಯ ಸಂಸ್ಕೃತಿ ನೀಡುವ ಸಾಂಸ್ಕೃತಿಕ ಮೌಲ್ಯಗಳು ಹೊಂದಾಣಿಕೆ, ಹೊಂದಿ ಬಾಳುವಿಕೆ ಎಲ್ಲವೂ ಇಷ್ಟವಾಯಿತು. ಇಲ್ಲಿ ಯಾರೂ ಕೆಟ್ಟವರಂತೆ ಬಿಂಬಿತವಾಗಿಲ್ಲ. ಬದಲಾಗಿ, ಬದಲಾದ ಬದುಕಿನಲ್ಲಿ ಸಮಯವೇ ಅವರನ್ನು ಬದಲಾಯಿಸುತ್ತದೆ. ಮನುಷ್ಯ ನೋಡುವ ನೋಟ ಕಾಲದೊಡನೆ ಬದಲಾಗುತ್ತದೆ. ಅಂತೆಯೇ .. ಕೆಲವೊಮ್ಮೆ ಸಂದರ್ಭ ಮನುಷ್ಯನನ್ನು ಕೆಟ್ಟವನನ್ನಾಗಿ ತೋರಬಹುದೇನೋ.. ಆದರೆ ಸ್ವಭಾವತಃ ಕೆಟ್ಟವರಿರಲಾರರು ಎನ್ನುವ ಸಾತ್ವಿಕ ನೋಟ ಬಹಳವೇ ಹಿಡಿಸಿತು. ಸುಂದರ ಕಾದಂಬರಿಯ ಚೆಂದದ ಓದು. ಲೇಖಕಿಯ ನುಡಿಯ ಸಾಲುಗಳನ್ನು, ಆಶಯವನ್ನು ಸಮರ್ಥವಾಗಿ ಬಿಂಬಿಸಿದೆ.


ಫೀಲ್ ಗುಡ್, ರಿಫ್ರೆಶಿಂಗ್ ಎನಿಸುವ ಹಾಗೂ ಮನಸ್ಸಿಗೆ ಬಹಳ ಮುದ ನೀಡುವ ಕಾದಂಬರಿಯ ಓದು. 


~ವಿಭಾ ವಿಶ್ವನಾಥ್

ಭಾನುವಾರ, ಜುಲೈ 12, 2026

ಮಗಳಿಗೋಸ್ಕರ ಮಾತ್ರವೇ..! (ಬೆಳಕಿಂಡಿಯ ಕತೆಗಳು - 53)


ಪರಿಚಯವಿದ್ದರೂ ಮುಗುಳ್ನಗೆ ಬೀರಿ ಸುಮ್ಮನಾಗುತ್ತಿದ್ದ ಅಮ್ಮ ಮಗಳ ಖುಷಿಗಾಗಿ ಈಗ ಅಪರಿಚಿತರನ್ನೂ ಪರಿಚಯವೆಂಬಂತೆ ಮಾತನಾಡಿಸುತ್ತಾಳೆ.. ಮುಗುಳ್ನಗುತ್ತಾಳೆ, ಸ್ನೇಹಿತರಾಗಿಸಿಕೊಳ್ಳಲು ಮುಂದಾಗುತ್ತಾಳೆ. 

ಮಗಳಿಗೆ ಹೊಸ ಜಗತ್ತನ್ನು ಪರಿಚಯಿಸಲು ತನ್ನ ಜಗತ್ತನ್ನು ಹಿಗ್ಗಿಸಿಕೊಳ್ಳುತ್ತಿದ್ದಾಳೆ. ಅಂತರ್ಮುಖಿ ಅಮ್ಮನೀಗ ಎಕ್ಸ್ಟ್ರೋವರ್ಟ್ ಆಗುತ್ತಿದ್ದಾಳೆ. ಮಗಳಂತೆಯೇ... ಮಗಳಿಗೋಸ್ಕರ ಮಾತ್ರವೇ..!

~ವಿಭಾ ವಿಶ್ವನಾಥ್ 

ಪ್ರೇರೇಪಣೆ (ಬೆಳಕಿಂಡಿಯ ಕತೆಗಳು - 52)


 "ಏನೋ ದೊಡ್ಡ ಸಾಹಸ ಮಾಡಿದಂತೆ ಬೀಗಬೇಡ. ಸ್ಟೇಜ್ ಮೇಲೆ ಹೋಗಿ ಮಾತನಾಡಲು ನೀನು ಅವಳಿಗೆ ಧೈರ್ಯ ನೀಡಿದ್ದಷ್ಟೇ.. ನೋಡೋಣ ಇದೆಷ್ಟು ವರ್ಕ್ ಆಗುತ್ತೆ ಅಂತಾ" ಎಂದವನಿಗೆ ಅಚ್ಚರಿಯಾಗುವಂತೆ ಕಿಕ್ಕಿರಿದ ಸಭಾಂಗಣದಲ್ಲಿ ಮಗಳು ನಿರರ್ಗಳವಾಗಿ ಆಶುಭಾಷಣ ಸ್ಪರ್ಧೆಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು.

"ಆತ್ಮವಿಶ್ವಾಸ ತುಂಬುವುದು ಅವಶ್ಯಕ ಕಣ್ರೀ. ಸಾಹಸ ಮಾಡಿದ್ದು ನಾನಲ್ಲ.. ನಮ್ಮ ಮಗಳು. 

ಪ್ರತಿಯೊಬ್ಬರಲ್ಲೂ.. ಅದರಲ್ಲೂ ಮಕ್ಕಳಲ್ಲಿ ಆಂಜನೇಯನಂತೆಯೇ ಬಲ ಇರುತ್ತದೆ. ಅವರನ್ನು ಪ್ರೇರೇಪಿಸೋ ಜಾಂಬವಂತ ನಾವಾಗಬೇಕು ಅಷ್ಟೇ.." ಎಂದವಳ ಧ್ವನಿಯಲ್ಲಿ ಹೆಮ್ಮೆ ತುಳುಕಾಡುತ್ತಿತ್ತು.

~ವಿಭಾ ವಿಶ್ವನಾಥ್ 

ಮಿತಿ ಮೀರಿದಾಗ.. (ಬೆಳಕಿಂಡಿಯ ಕತೆಗಳು - 51)


"ಅಮ್ಮ, ಕತೆಗಳಲ್ಲಿ ರಾಕ್ಷಸರ ಅಟ್ಟಹಾಸ ಮಿತಿ ಮೀರಿದ ನಂತರವೇ ದೇವರು ಬರೋದ್ಯಾಕೆ..? ಮೊದಲೇ ಬಂದು ಬುದ್ದಿ ಹೇಳಬಹುದಲ್ಲಾ..?!" ಎಂಬ ಪುಟ್ಟಿಯ ಆಲೋಚನೆ ಹಾಗೂ ಪ್ರಶ್ನೆಗಳೆರಡೂ ಒಟ್ಟಿಗೆ ಒಡಮೂಡಿದವು.

"ಯಾರೇ ಆಗಲಿ ತಪ್ಪು ಮಾಡುತ್ತಿದ್ದಾರೆ ಎನ್ನುವಾಗಲೇ ತಿದ್ದಿಕೊಳ್ಳುವ ಸೂಚನೆ ಸಿಗುತ್ತದೆ ಕಂದಾ. ಯಾವುದಕ್ಕೂ ಬಗ್ಗದೆ ಅವರ ವರ್ತನೆ ಮೇರೆ ಮೀರಿದಾಗಲಷ್ಟೇ ದೇವರು ಅವತಾರ ತಾಳುವುದು. 

ಈಗಿನ ದಿನಗಳನ್ನೇ ನೋಡು.. ಭೂಕುಸಿತ, ಜಲಪ್ರಳಯ, ಭೂಕಂಪ ಇನ್ನೂ ಮುಂತಾದವನ್ನು. ಮನುಷ್ಯರು ಪ್ರಕೃತಿಯನ್ನು ಹಾಳು ಮಾಡುವ ದುಷ್ಕೃತ್ಯಕ್ಕೆ ಕೈಹಾಕಿದಾಗಲೆಲ್ಲಾ ಎಚ್ಚರಿಸಿದ ಪ್ರಕೃತಿ ಇನ್ನು ತಡೆಯಲಾರೆನು ಎಂದಾಗಲೇ ನಾಶಕ್ಕೆ ನಿಂತಿದ್ದು ಅಲ್ಲವಾ..?!" ಎಂದಾಗ ಪುಟ್ಟಿಯ ಆಲೋಚನೆಗೆ ಮತ್ತಷ್ಟು ರೆಕ್ಕೆಗಳು ಮೂಡಿದವು.


~ವಿಭಾ ವಿಶ್ವನಾಥ್