ಪುಸ್ತಕದ ಶೀರ್ಷಿಕೆ : ಕಡೆಂಗೋಡ್ಲು ಶಂಕರ ಭಟ್ಟ
ಲೇಖಕರು : ಬಡೆಕ್ಕಿಲ ಕೃಷ್ಣ ಭಟ್ಟ
ಪ್ರಥಮ ಮುದ್ರಣ : 1959
ಎರಡನೇ ಮುದ್ರಣ : 1971 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 49
ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು, ಉಡುಪಿ ಇವರು ಪ್ರಕಟಿಸಿದ ನವೋದಯ ಪ್ರಚಾರ ಪುಸ್ತಕ ಮಾಲೆಯ ಪುಸ್ತಕ ಇದು.
ಕಡೆಂಗೋಡ್ಲು ಶಂಕರ ಭಟ್ಟರ ಕುರಿತು ತಿಳಿಯಬೇಕೆಂದು ಹೊರಟಾಗ ಅವರ ಕುರಿತ ಪ್ರಾಥಮಿಕ ಮಾಹಿತಿ ಜೊತೆಗೆ ಅವರ ಕಾವ್ಯದ ರುಚಿ ತೋರಿಸಿದ ಪುಸ್ತಕವೂ ಹೌದು.
ಎಲ್ಲವಳಿವುದು, ಲೋಕನೆಂಬುದಿದು ಬರಿಸುಳ್ಳು
ಆಳಿವುದನು, ಬಿಟ್ಟಳಿಯದಿರುವ ಹುರುಳನು ಹಿಡಿದು
ಬಾಳಬೇಕೆನ್ನುವರು; ಹುಟ್ಟು ಹರಿದಳಿಯದೇ?
ಅಳಿದರಳಿಯಲಿ, ಅಳಿವು ಜನ್ಮಗಳ ತರುತಿರಲಿ
ಆಳಿಯಾಗಿ, ಗಿಳಿಯಾಗಿ, ಹುಟ್ಟೂರ ನುತಿಸುವೆನು
ಎಲರಾಗಿ, ಅಲರಾಗಿ ಹುಟ್ಟೂರನರ್ಚಿಪೆನು
ಚಿಗುರಾಗಿ, ಲತೆಯಾಗಿ. ಹುಟ್ಟೂರ ತಳ್ಕೈಪೆ
ಜಗದೊಳೆನ್ನಯ ಬಾಳ್ಕೆ ಸಫಲವಾಯ್ತೆಂದೆಣಿಪೆ
ಈ ಸಾಲುಗಳನ್ನು ಕಡೆಂಗೋಡ್ಲು ಶಂಕರ ಭಟ್ಟರ 'ಹುಟ್ಟುನಾಡು' ಎಂಬ ಕವಿತೆಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕವಿತೆಯಲ್ಲಿ ತನ್ನ ತಾಯ್ನುಡಿ ಹಾಗೂ ತಾಯ್ನಾಡಿಗಾಗಿ ಬದುಕುವ ಬದುಕನ್ನು ಸವೆಸುವ ತನ್ನ ಮನೋಧರ್ಮವನ್ನು ಬಿಂಬಿಸಿದ್ದಾರೆ.
ಹರಿಯುತ್ತಿಹುದು ಎನ್ನ ಮನವು ಹಿಂದೆ ಕಳೆದ ದಿನದ
ಹಾದಿ ಹಿಡಿದು
ಪರಿಮಳಕ್ಕೆ ಹಾರುತ್ತಿರುವ ತುಂಬಿಯಂತೆ
ಸುಳಿದು ಸುಳಿದು
ಎಂಬ ಸಾಲುಗಳನ್ನು ಉಲ್ಲೇಖಿಸಿ
ಇವರ 'ಹಳೆಯ ನೆನಹು' ಕವಿತೆ ಪಠ್ಯಪುಸ್ತಕದಲ್ಲಿತ್ತು ಎಂದು ಲೇಖಕರು ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಅವರ ಬಾಂಧವ್ಯ ಹಾಗೂ ಸಂಬಂಧದ ಕುರಿತಾಗಿ ಹೇಳುತ್ತಾರೆ. ಈ ಕುರಿತು ಓದಿ ನೋಡಿ.
ಶಂಕರ ಭಟ್ಟರು ಉಜ್ವಲ ದೇಶಾಭಿಮಾನಿಗಳಾಗಿದ್ದವರು. ಗಾಂಧೀಜಿಯ ಕರೆಗೆ ಓಗೊಟ್ಟು ಕಾಲೇಜನ್ನು ಬಿಟ್ಟು ಹೋರಾಟಕ್ಕಿಳಿದವರು. ಕೆಲ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ದಿವಂಗತ ಮುಳಿಯ ತಿಮ್ಮಪ್ಪಯ್ಯನವರು ಶ್ರೀ ಕಡೆಂಗೋಡ್ಲುರವರ ಆಪ್ತ ಬಂಧುಗಳು. ನುರಿತ ವಿದ್ವಾಂಸರಾಗಿದ್ದ ತಿಮ್ಮಪ್ಪಯ್ಯನವರ ಶಿಷ್ಯತ್ವವನ್ನು ಸ್ವೀಕರಿಸಿ ಕನ್ನಡ ಅಧ್ಯಯನವನ್ನು ನಡೆಸುತ್ತಾರೆ ಶಂಕರ ಭಟ್ಟರು . ಆಗ ವಿಶೇಷ ಪ್ರಚಾರದಲ್ಲಿದ ಮದರಾಸು ವಿಶ್ವವಿದ್ಯಾಲಯ ಏರ್ಪಡಿಸುತ್ತಿದ್ದ ವಿದ್ವಾನ್ ಪರೀಕ್ಷೆಗೆ ಕುಳಿತು ತೇರ್ಗಡೆಯಾದರು. ಸೈಂಟ್ ಆಗ್ನಿಸ್ ಕಾಲೇಜಿನಲ್ಲಿ ಕನ್ನಡ ಹೇಳಿಕೊಡುವ ಕೆಲಸ ಸಿಕ್ಕಿತು. ಅದು ಅವರ ಸೌಭಾಗ್ಯವೋ ದೌರ್ಭಾಗ್ಯವೋ ಎಂದು ಕಡೆಂಗೋಡ್ಲುರವರೇ ಹೇಳಿರುವ ಪ್ರಸಂಗ ಇಲ್ಲಿದೆ.
ಅವರದ್ದು ಮೇಲೆ ಬಿದ್ದು ಮಾತನಾಡಿಸುವ ಪ್ರವೃತ್ತಿಯಲ್ಲ. ಬದಲಾಗಿ ಅಂತರ್ಮುಖಿ. ಅಧ್ಯಯನ, ಅಭ್ಯಾಸಗಳನ್ನು ಒಪ್ಪ- ಓರಣವಾಗಿ ನಡೆಸಿಕೊಂಡು ಬರುವ ಸರಳ ಜೀವಿಯಾಗಿದ್ದವರು.
"ಬೆದರುವೆನು ಹುಸಿ ನಗೆಗೆ, ನಾಚುವೆನು ಘೋಷಣೆಗೆ"
ಎನ್ನುವ ಸಾಲು ಅವರ ಮನೋಧರ್ಮವನ್ನು ತೋರುವಂತಿದೆ ಎಂದು ಉಲ್ಲೇಕಿಸಿದ್ದಾರೆ.
'ರಾಷ್ಟ್ರ ಬಂಧು'ವಿನ ಸ್ಥಿರ ಶೀರ್ಷಿಕೆ 'ಅಲ್ಲಲ್ಲಿ ಇಷ್ಟಿಷ್ಟು' ಭಾಗಕ್ಕೆ ಕುತರ್ಕ ವಾಚಸ್ಪತಿ ಎಂಬ ಗುಪ್ತನಾಮ ಇಟ್ಟುಕೊಂಡು ಬರೆದ ಅವರು ಹಾಗೂ ತಮ್ಮ ಅಭಿಪ್ರಾಯ ಸ್ವಾತಂತ್ರ್ಯ ಹಾಗೂ ಧ್ಯೇಯ ಕಾಪಾಡಿಕೊಂಡ ಬಗೆಯನ್ನು ಹೇಳುತ್ತಾರೆ. ರಾಷ್ಟ್ರ ಬಂಧುವಿನಿಂದ ಹೊರಬಂದು ಸಂಸ್ಥೆ ಕಟ್ಟಿ, ಪತ್ರಿಕೋದ್ಯಮದಲ್ಲಿ ಮುಂದುವರಿಯಲು ಆಯ್ಕೆ ಮಾಡಿಕೊಂಡ 'ರಾಷ್ಟ್ರಮತ'ದ ದಿನಗಳೂ ಇಲ್ಲಿವೆ.
ನೇರಾನೇರ ಮಾತುಗಳು ಹಾಗೂ ನಿಷ್ಠುರ, ಬಿಚ್ಚು ಮನಸ್ಸಿನ ಅಭಿಪ್ರಾಯ ಮುಂದಿಟ್ಟು ಸರಿದಾರಿ ತೋರುವ ಅವರ ಮನಸ್ಸು ಹಾಗೂ ತೀಕ್ಷ್ಣ ಮಾತುಗಳ ಕುರಿತು ತೆರೆದಿಟ್ಟಿದ್ದಾರೆ.
ಕನ್ನಡಕ್ಕಾಗಿ, ಕನ್ನಡದ ಏಳಿಗೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ದುಡಿದ ಹಿರಿಯರಲ್ಲಿ ಪ್ರಮುಖರು. ಮುಕ್ಕಣ್ಣ, ತ್ರಿಶೂಲಿ, ಭುಕುಂಡ ಗುಪ್ತನಾಮಗಳಲ್ಲಿ ಕಥೆ ಹಾಗೂ ಪ್ರಬಂಧಗಳನ್ನು ಬರೆದಿದ್ದಾರೆ. ತಮ್ಮ ಕುತರ್ಕಗಳಿಂದ ನಗಿಸಿದ್ದಾರೆ. ತೀಕ್ಷ್ಣ ವಿಮರ್ಶೆ ಮಾಡಿದ್ದಾರೆ. ಹಣ್ಣು-ಕಾಯಿ, ಕಾಣಿಕೆ, ನಲ್ಮೆ ಮೊದಲಾದ ಕಾವ್ಯಗಳನ್ನು ಬರೆದವರು.
ಕಾವ್ಯಕ್ಕೆ ಪ್ರಸಿದ್ಧಿಯಾಗಿರುವ ಕಡೆಂಗೋಡ್ಲು ಅವರ ಶೈಲಿ, ರಸಗಳೆರಡು ಕಾವ್ಯದಲ್ಲಿ ಅನ್ಯೋನ್ಯವಾಗಿ ಬೆರೆತು ಉತ್ಕೃಷ್ಟವಾದ ಕಾವ್ಯ ರೂಪುಗೊಂಡಿರುವ ಬಗೆಯನ್ನು ಹೇಳುತ್ತಲೇ.. ಅವರ ಕೆಲ ಚಂದದ ಕವಿತೆಗಳನ್ನು ಪರಿಚಯಿಸುತ್ತಾರೆ.
"ಗುಣಗಳಿರಬಹುದು, ಅವಗುಣಗಳೇ ಇರಬಹುದು, ಗುಣದೋಷಗಳು ಸುಟ್ಟು ಹೋದುವೈ ಚಿತೆಯೊಳಗೆ
ಹೆಣವಾದ ಮೇಲೆ ತನು ತುಲನೆ ಮಾಡುವೆಯೇಕೆ?
ಹೆಸರೊಂದೆ ವಿವಿಧತೆ ಬಹುದು ಜೀವನಕೆ"
ಸತ್ತವನ ಗುಣದೋಷದ ವಿಮರ್ಶೆ ಸಲ್ಲದು ಎಂಬಂತ ಅರ್ಥ ಬರುವ ಈ ಸಾಲುಗಳು ಅರ್ಥಪೂರ್ಣವಾಗಿದೆ.
ಕಡೆಂಗೋಡ್ಲು ಅವರು ಹೊಸತಿಗೆ ಕೈಚಾಚಿ, ಹೊಸತಿಗೆ ಹಂಬಲಿಸಿದರೂ ಹೊಸತಿನ ಹೆಸರಲ್ಲಿ ಭಾಷೆಯ ಬಿಗಿ ಸಡಿಲಿಸುವಿಕೆ ಹಾಗೂ ಪರಿಶುದ್ಧತೆಯನ್ನು ಬಿಡುವುದನ್ನು ಸಹಿಸದವರು.
ಇವರ ಪ್ರಸಿದ್ಧ ಕವಿತೆ ಮಾದ್ರಿಯ ಚಿತೆಯ ಕುರಿತು ವ್ಯಾಖ್ಯಾನ ಮಾ ಇಲ್ಲಿದೆ.
"ನಲಿವಿಗಿಂತಲೂ.. ನೋವನ್ನು ನಿವೇದಿಸಿಕೊಳ್ಳುವುದರಲ್ಲಿ ಇವರು ಎತ್ತಿದ ಕೈ" ಎನ್ನುತ್ತಾ ಅವರ ಹೊನ್ನಿಯ ಮದುವೆ, ಮಾದರಿಯ ಚಿತೆ, ಮಸಣ, ಹಳೆಯ ನೆನಹುಗಳು ಕವಿತೆಗಳನ್ನು ಉಲ್ಲೇಖಿಸುತ್ತಾರೆ. ದೊಡ್ಡಣ್ಣ, ಅದ್ದಿಟ್ಟು, ಹೊಡೆಯುವ ಗಡಿಯಾರ ಕಥೆಗಳನ್ನು ಉದಾಹರಣೆಯಾಗಿಸುತ್ತಾರೆ.
ಧೂಮಕೇತು, ದೇವತಾ ಮನುಷ್ಯ, ಲೋಕದ ಕಣ್ಣು ಎಂಬ ಮೂರು ಕಾದಂಬರಿಗಳನ್ನು ಬರೆದಿರುವ ಕುರಿತು ಹೇಳಿ ಕಾದಂಬರಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಿಚ್ಚಿಡುತ್ತಲೇ ಕಾದಂಬರಿಗಳಲ್ಲಿ ಅವರು ಬಳಸಿರುವ ಮನೋಜ್ಞ ಭಾಷೆಯ ಅನುಭವಕ್ಕಾದರೂ ಅದನ್ನು ಓದಬೇಕು ಎಂದರೂ.. ಕಾದಂಬರಿಗಳಿಗಿಂತಲೂ ಕಾವ್ಯಕ್ಕೆ ಹೆಚ್ಚಿನ ಅಸ್ಥೆ ನೀಡುತ್ತಾರೆ.
ಹಿಡಿಂಬೆ, ಯಜ್ಞಕುಂಡ, ಗುರುದಕ್ಷಿಣೆ ನಾಟಕಗಳ ಕುರಿತು ಸಹ ಹೇಳುತ್ತಾರೆ. ಅದರಲ್ಲಿನ ಸರಸ ಮಾತುಗಾರಿಕೆಗಳು ನಾಟಕಗಳ ಕುರಿತ ಇಷ್ಟದ ಅಂಶಗಳನ್ನು ಹೇಳುತ್ತದೆ.
ಹಿಂದಿನ ಕತೆಗಳು, ಗಾಜಿನ ಬಳೆ ಮತ್ತು ಇತರ ಕಥೆಗಳು ದುಡಿಯುವ ಮಕ್ಕಳು ಅವರ ಕಥಾಗುಚ್ಚಗಳು. ಅವರ ಎಲ್ಲ ಕಥೆಗಳ ಆರಂಭ ಮತ್ತು ಅಂತ್ಯದಲ್ಲಿ ಒಂದು ವಿಶಿಷ್ಟತೆ ಇದೆ ಎನ್ನುತ್ತಾರೆ. ಆ ವೈಶಿಷ್ಟ್ಯವೇನು ಓದಿನೋಡಿ. ಅವರ ಕಲಾತ್ಮಕ ಕಥೆಗಳನ್ನು ಮೆಚ್ಚುತ್ತಾರೆ.
"ನಮ್ಮಲ್ಲಿ ಕಡೆಂಗೋಡ್ಲು ಶಂಕರ ಭಟ್ಟರಂತಹ ದೊಡ್ಡ ಬದುಕನ್ನು ನಡೆಸುವ ದೃಷ್ಟಿ ಬರಬೇಕು ಅಂತಹ ಬದುಕನ್ನು ನಡೆಸುವವರಿಗೆ ಶಾರದೆ ಒಲಿಯುತ್ತಾಳೆ, ಅವರ ನಾಲಿಗೆಯಲ್ಲಿ ನಲಿಯುತ್ತಾಳೆ. ಅವರ ಅಂತರಂಗದಲ್ಲಿ ಭಾವತರಂಗಗಳನ್ನು ಉಕ್ಕಿಸುತ್ತಾಳೆ. ಶಂಕರ ಭಟ್ಟರ ಬದುಕು ಬರಹಗಳು ನಮಗೆ ಸ್ಪೂರ್ತಿಯ ಕೇಂದ್ರವಾಗಲಿ. ಈ ಪೀಳಿಗೆಯವರಾದ ನಮಗೆ ಅದು ಅಂತ ಹ ಸ್ಪೂರ್ತಿಯನ್ನು ಕೊಡಲಿ" ಎನ್ನುವ ಮಾತುಗಳನ್ನು ಉಲ್ಲೇಖಿಸುತ್ತಾರೆ ಲೇಖಕರು.
ಮುಂದಿನ ದಿನಗಳಲ್ಲಿ ಕಡೆಂಗೋಡ್ಲು ಶಂಕರ ಭಟ್ಟರ ಸಾಹಿತ್ಯವನ್ನು ಸವಿಯಬೇಕಿದೆ.
~ವಿಭಾ ವಿಶ್ವನಾಥ್




