ಸೋಮವಾರ, ಏಪ್ರಿಲ್ 20, 2026

ನಾಲ್ಕನೇ ಎಕರೆ (ಪುಸ್ತಕ ಯಾನ - 262)



ಪುಸ್ತಕದ ಶೀರ್ಷಿಕೆ : ನಾಲ್ಕನೇ ಎಕರೆ

ಮೂಲ ಕತೆಯ ಲೇಖಕರು : ಶ್ರೀರಮಣ

ತೆಲುಗಿನಿಂದ ಕನ್ನಡಾನುವಾದ : ಅಜಯ್ ವರ್ಮಾ ಅಲ್ಲೂರಿ

ಪ್ರಕಾಶಕರು : ಛಂದ ಪುಸ್ತಕ

ಪ್ರಥಮ ಮುದ್ರಣ : 2021

ಪುಟಗಳು : 112

ಬೆಲೆ : 100 ರೂ.

ಮುಖಪುಟ : ಶ್ವೇತಾ ಆಡುಕಳ


'ದಮಯಂತಿಯ ಮಗಳು' ಎನ್ನುವ ಅಜಯ್ ವರ್ಮಾ ಅಲ್ಲೂರಿಯವರ ನೀಳ್ಗತೆಯ ಅನುವಾದವೊಂದನ್ನು ಓದಿ ಈಗಾಗಲೇ ಪರಿಚಯಿಸಿದ್ದೇನೆ. ಇದು ಶ್ರೀ ರಮಣರ ತೆಲುಗು ನೀಳ್ಗತೆ "ನಾಲುಗೋ ಎಕರಂ"ನ ಕನ್ನಡಾನುವಾದ "ನಾಲ್ಕನೇ ಎಕರೆ". ಅಜಯ್ ವರ್ಮಾ ಅಲ್ಲೂರಿಯವರ ಕುರಿತ ಪರಿಚಯವನ್ನು ನಾನು ಈಗಾಗಲೇ ಮಾಡಿಕೊಟ್ಟಿರುವುದರಿಂದ ಶ್ರೀರಮಣರ ಕುರಿತ ಪರಿಚಯ ಮಾಡುತ್ತೇನೆ.


ಶ್ರೀರಮಣರು 1952ರಲ್ಲಿ ಸೀಮಾಂದ್ರದ ತೆನಾಲಿಯಲ್ಲಿ ಹುಟ್ಟಿ ತೆಲುಗಿನ 'ಆಂಧ್ರಜ್ಯೋತಿ'ಯ 'ನವ್ಯ' ವಾರಪತ್ರಿಕೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ದೃಶ್ಯ ಮಾಧ್ಯಮದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಜನಪ್ರಿಯ ಕಥೆ 'ಮಿಥುನಂ'. ಇದು ಕನ್ನಡಕ್ಕೂ ಅನುವಾದಗೊಂಡಿದೆ. ದೆಹಲಿಯ ಕಥಾ ಪುರಸ್ಕಾರವನ್ನು ಪಡೆದಿದೆ. 'ಶ್ರೀರಮಣ ಪೇರಡೀಲು', 'ವೆಂಕಟ ಸತ್ಯ ಸ್ಟಾಲಿನ್', 'ಸಿಂಹಚಲಂ ಸಂಪೆಂಗಲು' ಶ್ರೀರಂಗರ ಪ್ರಮುಖ ಕೃತಿಗಳು. 


'ನಾಲ್ಕನೇ ಎಕರೆ' ಎನ್ನುವ ಶೀರ್ಷಿಕೆ ಹಾಗೂ ಪುಸ್ತಕದ ಮುಖಪುಟ ಕಂಡಾಗಲೇ ಇದು ಕೃಷಿಗೆ ಸಂಬಂಧಿಸಿರದಬಹುದಾದ ಕಥೆ ಎಂದು ಊಹಿಸಬಹುದು. ಮುಖಪುಟ ಕಥೆಯ ಹೆಚ್ಚಿನಂಶವನ್ನು ಮಾರ್ಮಿಕವಾಗಿ ತೆರೆದಿಡುತ್ತದೆ. 

"ನೆಲದ ನಂಟು ಬಿಡದ ಎಲ್ಲ ನೇಗಿಲಯೋಗಿಗಳಿಗೆ" ಎಂದು ಅರ್ಪಣೆ ಮಾಡಿದ್ದಾರೆ ಲೇಖಕರು. ಲೇಖಕರು ನೀಳ್ಗತೆಯ ಕುರಿತಾಗಿ ಹೇಳುವ ಒಂದು ಮಾತು ಇಷ್ಟವಾಯಿತು. ಅದು ಜನಪ್ರಿಯ ಹೇಳಿಕೆ ಎಂದು ಅವರು ಉಲ್ಲೇಖಿಸಿದ್ದಾರೆ. "ನೀಳ್ಗತೆಯು ಕಾದಂಬರಿ ಎಂಬ ಒಂಟೆ ಹಾಕಿದ ಚಿಕ್ಕಮರಿಯಲ್ಲ, ಸಣ್ಣಕಥೆ ಎಂಬ ಹಸು ಹಾಕಿದ ದೊಡ್ಡ ಕರು."


ಹಾಗೆಯೇ.. ಅನುವಾದದ ಕುರಿತು ಹೇಳುತ್ತಲೇ ಎಡ್ವರ್ಡ್ ಫಿಟ್ ಜೆರಾಲ್ಡ್, ಪರ್ಷಿಯನ್ ಕವಿ ಉಮರ್ ಖಯ್ಯಾಮಿನ ರುಬಾಯಿಗಳನ್ನು ಇಂಗ್ಲೀಷಿಗೆ ಅನುವಾದಿಸಿ, ಅದಕ್ಕೆ ಬರೆದ ಪ್ರಸಿದ್ಧ ಮುನ್ನುಡಿಯಲ್ಲಿ ಉಲ್ಲೇಖಿಸುತ್ತಾರೆ. "ಸತ್ತ ಹದ್ದಿಗಿಂತಲೂ ಜೀವಂತ ಗುಬ್ಬಿ ಮೇಲು" ಎಂದು ಇದನ್ನು ಹೇಳುತ್ತಾಮ್ಮ್ ನನ್ನ ಅನುವಾದ ನಿಮಗೆ ಜೀವಂತ ಗುಬ್ಬಿಯಾಗಿ ತೋರಿದರೆ ಖುಷಿಯೇ. ಒಂದು ವೇಳೆ ಸತ್ತ ಹದ್ದಿನ ಹಾಗೆ ತೋರಿದರೆ ಅದಕ್ಕೆ ಮರಳಿ ಜೀವ ತುಂಬುವ ಕಲೆಯು ಈ ಅನುವಾದಕನ ಕೈಯಲ್ಲೇ ಇದೆ ಎನ್ನುತ್ತಾರೆ.


ಅನುವಾದಿತ ಕೃತಿಗಳನ್ನು ಓದುವಾಗ ಕೆಲವೊಮ್ಮೆ ಹಿಂಜರಿಕೆ ಕಾಡುತ್ತದೆ

 ಏಕೆಂದರೆ ಮೂಲ ಕೃತಿಯ ಭಾಷೆ, ಪ್ರಾಂತ್ಯ ಹಾಗೂ ಅಲ್ಲಿಯ ಪರಿಸರ ಕೆಲವೊಮ್ಮೆ ಕ್ಲಿಷ್ಟವೆಂದೆನಿಸುತ್ತದೆ. ಹಾಗಾದಾಗ, ಇದು ನಮ್ಮ ಕೃತಿ ಎಂದೆನಿಸಿಕೊಳ್ಳುವುದು ಕಷ್ಟ. ಹಾಗೆಂದು ಮೂಲ ಕೃತಿಯನ್ನು ಓದಲು ಸಾಧ್ಯವಿಲ್ಲದ ಓದುಗರಿಗೆ ಅಲ್ಲಿನ ಪರಿಸರವನ್ನು ಭಾವಾನುವಾದದ ಮೂಲಕ ಕೂಡಾ ಕೆಲವು ಲೇಖಕರು ಕಟ್ಟಿಕೊಡುತ್ತಾರೆ. ಅಂತಹಾ ಅನುವಾದಗಳು ಬೇಗ ಇಷ್ಟವಾಗುತ್ತದೆ. ಈ ಅನುವಾದ ಲೇಖಕರ ನೆಲದ ಭಾಷೆಯಾದ ರಾಯಚೂರು ಪ್ರಾಂತ್ಯದ ಆಡುಮಾತು. ಶ್ರೀರಮಣರು ಬಳಸಿದ ಭಾಷೆ ಗುಂಟೂರು ಸೀಮೆಯ ತೆನಾಲಿ ಪ್ರಾಂತ್ಯದ್ದು. ಈ ನೀಳ್ಗತೆಯುದ್ದಕ್ಕೂ 'ಪೆದಕಾಪು' ಎನ್ನುವ ಪದ ಕಂಡುಬರುತ್ತದೆ. ಪೆದಕಾಪು ಎಂದರೆ ಮತ್ತೇನಲ್ಲ.. ಅದನ್ನು ಪದವಾಗಿ ಅನುವಾದ ಮಾಡಿದರೆ ದೊಡ್ಡ ರೈತ ಎಂದಾಗುತ್ತದೆ. ಕನ್ನಡದಲ್ಲಿ 'ಹಿರೇಗೌಡ' ಎಂದು ಕರೆಯಬಹುದು. ಆದರೆ ಲೇಖಕರು ಈ ಒಂದು ಪದವನ್ನು ಮಾತ್ರ ಕಥೆಯುದ್ಧಕ್ಕೂ ಪೆದಕಾಪು ಹಾಗೂ ಅವರ ಪತ್ನಿಯನ್ನು ಪೆದಕಾಪಮ್ಮ ಎಂದೇ ಸಂಭೋಧಿಸುತ್ತಾರೆ. ಇಲ್ಲಿ ಕುಟುಂಬ ಸದಸ್ಯರ ಪರಿಚಯಕ್ಕಿಂತ ಹಳ್ಳಿಯ ಜೀವನದ ಅನುಭವಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ.


ಇಲ್ಲಿ ನಾಲ್ಕು ಪ್ರಮುಖ ಪಾತ್ರಗಳು ಬರುತ್ತವೆ. ಪೆದಕಾಪು ಎಂದರೆ ರಾಘವಯ್ಯ. ಆತನ ಮಗ ಸಾಂಬಶಿವರಾವು, ಶಿವುವಾಗಿ ಕಾಣಿಸುತ್ತಾನೆ. ಊರಿನ ಹಿರಿಯರಾದ ದೇವಸ್ಥಾನದ ಅರ್ಚಕರು ಕೃಷ್ಣಸ್ವಾಮಿ ಹಾಗೂ ಅವರ ಮಗ ಮಾಧವಸ್ವಾಮಿ. ಇಲ್ಲಿ ಹೆಚ್ಚಿನ ನಿರೂಪಣೆ ಮಾಧವಸ್ವಾಮಿಯದ್ದೇ. ಆತ ಕಾಲೇಜಿನ ಲೆಕ್ಚರರ್.


ಸಾಂಬಶಿವರಾವು ತನ್ನ ಓದನ್ನು ಅರ್ಧದಲ್ಲಿಯೇ ಬಿಟ್ಟು ಕೃಷಿ ಬದುಕಿನತ್ತ ಮುಖ ಮಾಡುತ್ತಾನೆ. ಆತ ಪೆದಕಾಪುವಿನ ಮಗನಾದರೂ.. ಪರಿಸ್ಥಿತಿ ಹಿಂದಿನಂತಿರಲಿಲ್ಲ. ಮನೆಯಲ್ಲಿ ಹಿಂದಿನ ವೈಭವ ಇರಲಿಲ್ಲ. ಅಳಿದುಳಿದ ಭೂಮಿಯಲ್ಲಿ ಈಗ 12 ಎಕರೆ ಮಾತ್ರ ಉಳಿದಿತ್ತು. ಆದರೆ, ಅದೂ ಈಗ ನಗರೀಕರಣದ ಭರಾಟೆಗೆ ಸಿಕ್ಕು ಮಾರಾಟವಾಗುವ ಸಂದರ್ಭ. ಪೆದಕಾಪು ಹಾಗೂ ಪೆದಕಾಪಮ್ಮ ಇಬ್ಬರೂ ಹಿಂದಿನ ದಿನದ ವೈಭವ, ಹಳ್ಳಿಯ ಬದುಕನ್ನು ಬದುಕಿದವರು. ಈ ಕಥೆಯುದ್ಧಕ್ಕೂ ದನದ ಕೊಟ್ಟಿಗೆ, ಹುಲ್ಲು ಭಣವೆ, ಎತ್ತಿನ ಗಾಡಿ, ಎತ್ತುಗಳು, ಹುರುಳಿಕಾಳು ಮದರಂಗಿ ಹೀಗೆ ಅಂದಿನ ಹಳ್ಳಿಯ ಸಂಭ್ರಮವೇ ಪೆದಾಕಾಪುವಿನ ಮಾತುಗಳಲ್ಲಿ ಅನುಭವಗಳಲ್ಲಿ ತುಂಬಿ ತುಳುಕುತ್ತವೆ. ಇದನ್ನು ಹೆಚ್ಚು ತನ್ನೊಳಗಿಳಿಸಿಕೊಳ್ಳುವುದು ಮಾಧವಸ್ವಾಮಿ. ಹಾಗೆಂದು, ಶಿವನಿಗೆ ಈ ಕುರಿತ ಆಸ್ಥೆ ಇಲ್ಲ ಎಂದಲ್ಲ. ಬದಲಾಗಿ, ವಾಸ್ತವಕ್ಕೆ ಹೊಂದಿಕೊಂಡು ಹೋಗುವ ಜೀವನ ಅವನದ್ದು. 


ಆತನಿಗಿದ್ದ 12 ಎಕರೆ ಹೊಲದಲ್ಲಿ, ಮೂರು ಎಕರೆಯನ್ನು ಈಗ ಅಟ್ಲಾಂಟಾದಲ್ಲಿ ನೆಲೆಸಿರುವ ಈತನ ಅಕ್ಕ ಚಿಟ್ಟೆಮ್ಮನ ಮದುವೆಯಾಗುವಾಗ ಬೀಗರಿಗೆಂದು ಬಿಟ್ಟುಕೊಟ್ಟದ್ದು. ಇದೀಗ ಭೂಮಿಗೆ ಕೋಟಿ-ಕೋಟಿ ರೂಪಾಯಿ ದುಡ್ಡು ಬರುವಾಗ ರಿಜಿಸ್ಟ್ರೇಷನ್ ಗೆಂದು ಅವರು ಅಲ್ಲಿಂದ ಬಂದವರು ತನ್ನ ಮಗಳು ಬುಜ್ಜಮ್ಮಳ ದಾವಣಿ ಸಮಾರಂಭವನ್ನು ಇಲ್ಲಿಯೇ ನಡೆಸುತ್ತಿದ್ದರು. ಆ ಸಮಾರಂಭದಲ್ಲಿ ಹಿಂದಿನ ವೈಭವವನ್ನು ತುಂಬಿಸುವ ಆಸೆ ಪೆದಕಾಪು ಹಾಗೂ ಪೆದಕಾಪಮ್ಮನಿಗೆ. 


ಚಿಟ್ಟೆಮ್ಮ ಪೆದಕಾಪುವಿಗೆ ಒಂದು ಮಾತು ನೆನಪಿಸುತ್ತಾಳೆ. ಅದು ತನಗೆ ಮತ್ತೊಂದು ಎಕರೆ ಬರಬೇಕೆಂದು ಹಿಂದೊಮ್ಮೆ ಹೇಳಿದ್ದ ವಿಚಾರ. ಆ ಸಂದರ್ಭದಲ್ಲಿ ಚಿಟ್ಟೆಮ್ಮ ಅದು ತನಗೆ ಬೇಡವೆಂದು ಆಡು ಮಾತಿನಲ್ಲಿ ಹೇಳಿದ್ದರೂ.. ಈಗ ಅವಳು ಮತ್ತೆ ಅದನ್ನು ನೆನೆಸಿಕೊಳ್ಳುವಾಗ ಮಗನ ಬಳಿ ಈ ವಿಷಯದ ಪ್ರಸ್ತಾಪ ಹೇಗೆ ಎಂದುಕೊಳ್ಳುತ್ತಿರುತ್ತಾರೆ ಪೆದಕಾಪು. ಈ ನಾಲ್ಕನೇ ಎಕರೆಯ ವಿಚಾರ ಏನಾಯ್ತು..? ಶಿವ ಇದನ್ನು ಯಾವ ರೀತಿ ಅರ್ಥ ಮಾಡಿಕೊಂಡ..? ನಿಜವಾಗಿಯೂ ಆ ನಾಲ್ಕನೇ ಎಕರೆ ಯಾರಿಗೆ ಸೇರಿದ್ದು..? ಪೆದಕಾಪು ಇದೇ ಆಲೋಚನೆಯಲ್ಲಿ ನಡೆದುಕೊಂಡ ಬಗೆ ಹೇಗೆ..? ಎಲ್ಲವನ್ನೂ ತಿಳಿಯಲು ಓದಿ ಈ ನೀಳ್ಗತೆಯನ್ನು. 


ಇಲ್ಲಿ ಪೆದಕಾಪು ರೈತಾಪಿ ವರ್ಗದ ಜನಜೀವನವನ್ನು, ಬದಲಾಗಿರುವ ಬಗೆಯನ್ನು ಪ್ರತಿನಿತ್ಯ ಕಂಡರೆ.. ಕೃಷ್ಣಸ್ವಾಮಿ ದೇವಾಲಯದಲ್ಲಿ ಬದಲಾದ ಬಗೆಯನ್ನು ಹೇಳುವ ಪರಿ ಕಾಣುತ್ತದೆ. 


"ನೀರಿಗಿಂತಲೂ ರಕುತ ಗಟ್ಟಿ, ಜೇನಿಗಿಂತಲೂ ಹಸಿರು ನೋಟಿನ ಬಣ್ಣ ಗಟ್ಟಿ" ಎನ್ನುವ ಮಾತು ಪೆದಕಾಪುವಿನ ಮೂಲಕ ಕಾಣುತ್ತಾ.. ಇಂದಿನ ಜೀವನದಲ್ಲಿ ಹಣದ ಸ್ಥಾನವನ್ನು ಹೇಳುತ್ತದೆ. ಇಲ್ಲಿ ದಲ್ಲಾಳಿಗಳು ಯಾವ ರೀತಿ ರೈತರಿಗೂ ಭಾವನಾತ್ಮಕವಾಗಿ ಆಮಿಷ ಒಡ್ಡುತ್ತಾರೆ ಎಂಬುದನ್ನು ಸಹಾ ಸೂಕ್ಷ್ಮವಾಗಿ ತೆರೆದಿಡುತ್ತಾರೆ.


ಪೆದಕಾಪುವಿನ ಮನೆಯಲ್ಲಿಯೂ.. ಮಾಧವಸ್ವಾಮಿಯ ಮನೆಯಲ್ಲಿಯೂ ಇರುವ ಆಚಾರ-ವಿಚಾರಗಳು ಬೇರೆಯಾದರೂ.. ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವ ಪರಿ, ಹಳ್ಳಿಯ ಬದುಕನ್ನು, ಅಲ್ಲಿಯ ಕೆರೆ, ಕಲ್ಯಾಣಿ, ದೇವಾಲಯಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಪೆದಕಾಪು ಎಂಬ ಒಂದು ಪದದ ಹೊರತಾಗಿ ಇಡೀ ಕಥೆ ನಮ್ಮ ಸುತ್ತಮುತ್ತಲಿನದ್ದೇನೋ.. ನಮ್ಮ ಹಳ್ಳಿಯ ಪರಿಸರದ್ದೇನೋ ಎಂದೆನಿಸುವಂತೆ ಮಾಡುತ್ತದೆ. ಸ್ವತಂತ್ರ ಕಥೆಯೆಂದೆನಿಸುವಷ್ಟು ಸಶಕ್ತವಾದ ಅನುವಾದ. 

~ವಿಭಾ ವಿಶ್ವನಾಥ್

ಬಳ್ಳಿ ಚಿಗುರಿತು (ಪುಸ್ತಕ ಯಾನ - 261)


ಪುಸ್ತಕದ ಶೀರ್ಷಿಕೆ : ಬಳ್ಳಿ ಚಿಗುರಿತು

ಲೇಖಕರು : ದೇವಕಿ ಮೂರ್ತಿ

ಪ್ರಕಾಶಕರು : ಕಾವ್ಯಾಲಯ ಪಬ್ಲಿಶರ್ಸ್

ಎರಡನೇ ಮುದ್ರಣ : 2004

ಪುಟಗಳು : 141

ಬೆಲೆ : 70 ರೂ.


'ಉಪಾಸನೆ' ಕಾದಂಬರಿ ಆಧಾರಿತ ಚಲನಚಿತ್ರ ನೋಡಿದ್ದವರಿಗೆ ಉಪಾಸನೆ ಕಾದಂಬರಿಯ ಲೇಖಕಿ ದೇವಕಿ ಮೂರ್ತಿಯವರ ಪರಿಚಯವಿರುತ್ತದೆ. ವಸಂತ ಗಣೇಶ್ ಮೇಡಂ ಅವರ ದೇವಕಿ ಮೂರ್ತಿಯವರ ಪರಿಚಯ ಲೇಖನವನ್ನು ನೋಡಿ ಈ ಲೇಖಕಿಯ ಯಾವುದಾದರೂ ಕೃತಿ ಸಿಕ್ಕರೆ ಓದಬೇಕು ಎಂದುಕೊಂಡಿದ್ದವಳಿಗೆ ಸಿಕಿದ್ದು 'ಬಳ್ಳಿ ಚಿಗುರಿತು' ಎಂಬ ಕಾದಂಬರಿ. ಇದು ನಾನು ಓದಿದ ಅವರ ಮೊದಲನೇ ಕಾದಂಬರಿ. 


'ಬಳ್ಳಿ ಚಿಗುರಿತು' ಕಾದಂಬರಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ. 1974ರಲ್ಲಿಯೇ ಈ ಕಾದಂಬರಿ ಸಾಹಿತ್ಯ ಜ್ಯೋತಿ ಪ್ರಕಾಶನದಿಂದ ಪುಸ್ತಕ ರೂಪದಲ್ಲಿ ಬೆಳಕು ಕಂಡಿತ್ತು. ಇದು ಎರಡನೇ ಮುದ್ರಣ.


ಚಿಕ್ಕಮಗಳೂರಿನ ಕಾಫಿ ತೋಟದ ಒಡೆಯರಲ್ಲಿ ರಘುರಾಮಯ್ಯನವರು ಗಣ್ಯರು. ಅವರಿಗೆ ಚಿತ್ರಕೂಟ ಎಸ್ಟೇಟು ವಂಶಪಾರಂಪರ್ಯವಾಗಿ ಬಂದಿತ್ತು. ಜಾನಕಮ್ಮನವರನ್ನು ಮದುವೆಯಾದ ಮೇಲೆ ರಘುರಾಮಯ್ಯ ನವನವೀನ ರೀತಿಯ ಭವ್ಯ ಮನೆಯನ್ನು ಕಟ್ಟಿಸಿದರೆ, ಜಾನಕಮ್ಮನವರು ಮನೆಯ ಸುತ್ತ ಅಂದವಾದ ಹೂದೋಟ ನಿರ್ಮಿಸಿದ್ದರು. ಪತಿ-ಪತ್ನಿಯರಿಬ್ಬರೂ ಸೇರಿ ಚಿತ್ರಕೂಟವನ್ನು ಎಲ್ಲಾ ತೋಟಗಳಿಗಿಂತ ನಯನಮನೋಹರವನ್ನಾಗಿಸಿದ್ದರು. ರಘುರಾಮಯ್ಯನವರು ಬೇರೆ ವಿಚಾರಗಳಿಗೆ ಅಷ್ಟು ತಲೆಕೆಡಿಸಿಕೊಳ್ಳುವವರಲ್ಲ. ತೋಟದ ಆರೈಕೆ ಮಾಡುತ್ತಾ, ತೋಟದ ಕೆಲಸ ನೋಡುತ್ತಾ.. ಆಳುಗಳ ಜೊತೆಗೂ ಸ್ನೇಹದ ಮಾತುಗಳನಾಡುತ್ತಾ ಅವರಿಂದ ಕೆಲಸ ತೆಗೆಯುತ್ತಿದ್ದರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳ ಕಷ್ಟ-ಸುಖಕ್ಕೆ ಆಗುತ್ತಿದ್ದವರು.


ಜಾನಕಮ್ಮ ಮದುವೆಯಾದ ಹೊಸದರಲ್ಲಿಯೇ ಆಕೆಯ ತಂದೆ-ತಾಯಿ ತೀರಿಕೊಂಡಿದ್ದರು. ತವರಿನಲ್ಲಿ ಈಗ ಅವರಿಗೆಂದು ಇದ್ದದ್ದು ತಮ್ಮ ಕೇಶವಮೂರ್ತಿ ಮಾತ್ರ. ಆತ ಈಗ ಬ್ಯುಸಿನೆಸ್ ಮಾಡಿಕೊಂಡು ಮುಂಬೈಯಲ್ಲಿ ನೆಲೆಸಿದ್ದ. ಮೊದಮೊದಲು ತಮ್ಮನ ಮನೆಗೆ ಹೋಗಿ ಬರುತ್ತಿದ್ದ ಜಾನಕಮ್ಮ ಇತ್ತ ಸಂಸಾರದ ಜವಾಬ್ದಾರಿ ಹೆಚ್ಚಿದ ಮೇಲೆ ಹೋಗುವುದು ಅಪರೂಪವಾಗಿತ್ತು.


 ಮದುವೆಯಾಗಿ 10 ವರ್ಷಗಳವರೆಗೂ ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಪೂರ್ವಿಕರ ಆಸ್ತಿ ಹಾಗೆಯೇ ಉಳಿದು ಹೋಗುವುದಲ್ಲಾ ಎಂದು ಮನಸ್ಸಿನಲ್ಲಿ ಇಬ್ಬರಿಗೂ ಆಲೋಚನೆ ಇದ್ದೇ ಇತ್ತು, ಅದೇ ಸಮಯಕ್ಕೆ ಜಾನಕಮ್ಮನವರ ಗೆಳತಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದು ಮದುವೆಯಾದ 15 ವರ್ಷಗಳ ಮೇಲೆ ಗಂಡುಮಗುವನ್ನು ಹಡೆದದ್ದು ಕಂಡು ಜಾನಕಮ್ಮನವರಿಗೂ ಧೈರ್ಯ ಬಂದಿತ್ತು. ರಘುರಾಮಯ್ಯನವರು ಹೆಂಡತಿಗಾಗಿ ಹಾಗೂ ಮಗುವಿನ ಹಂಬಲಕ್ಕಾಗಿ ಚಿಕಿತ್ಸೆ ಕೊಡಿಸಿದ್ದರು. ಅದಾದ ನಂತರ ಅವರ ಬಹುದಿನದ ಬಯಕೆ ಕೈಗೂಡಿತ್ತು. ತಮ್ಮನ ಮಾತಿನಂತೆ ಅಲ್ಲಿಗೆ ಬಾಣಂತನಕ್ಕೆ ಹೋಗಲು ಒಪ್ಪಲಿಲ್ಲ. ಆತನ ಪತ್ನಿ ರಾಧಾ ಇನ್ನೂ ಚಿಕ್ಕವಳು ಎಂಬ ಭಾವ.


 ಈ ಸಮಯದಲ್ಲಿ ಎಸ್ಟೇಟ್ ಗೆ ರೈಟರ್ ಅಗತ್ಯವಿತ್ತು. ಯಾರಾದರೂ ಸಂಸಾರಸ್ಥರು ಬಂದರೆ ತಮಗೂ ಅನುಕೂಲವಾಗುತ್ತದೆ ಎನ್ನುವ ಮಾತನ್ನು ಅನುಮೋದಿಸಿ ಗೋಪಿನಾಥಯ್ಯನನ್ನು ನೇಮಿಸಿಕೊಂಡರು. ಆತನಿಗೆ ಆಗಷ್ಟೇ ವಿವಾಹವಾಗಿತ್ತು. ಸುಶೀಲೆ ಆತನ ಪತ್ನಿ.. ಹೆಸರಿಗೆ ತಕ್ಕಂತೆ ಶಾಂತ, ಗಂಭೀರ ಹುಡುಗಿ ಸುಶೀಲೆ ಜಾನಕಮ್ಮನವರಿಗೆ ಇಷ್ಟವಾದಳು. 


 ಜಾನಕಮ್ಮನವರ ಆಸೆಯಂತೆ ಚಿತ್ರಕೂಟಕ್ಕೆ ಒಬ್ಬ ವಾರಸುದಾರ ಬಂದ. ಅವನೇ ಮಧುಕರ. ಆಸೆಯಿಂದ ಬಂದ ಜಾನಕಮ್ಮನವರ ತಮ್ಮ, ತಮ್ಮನ ಹೆಂಡತಿ ಮಗನನ್ನು ಮುದ್ದು ಮಾಡುತ್ತಿದ್ದುದ್ದನ್ನು ಕಂಡು ಇವನೇ ನಿನ್ನ ಅಳಿಯ ಎಂದು ಜಾನಕಮ್ಮನವರು ಹೇಳಿದರು. ಮುಂದೆ ಅವರಿಗೆ ವಿಮಲೆ ಎಂಬ ಮಗಳು ಹುಟ್ಟಿದಳು. ಜಾನಕಮ್ಮನವರ ಆಸೆಗೆ ಕೋಡು ಬಂದಂತಾಗಿತ್ತು.


 ಅದೇ ಸಮಯಕ್ಕೆ ಸುಶೀಲಮ್ಮನವರಿಗೆ ಒಬ್ಬಳು ಮಗಳು ಹುಟ್ಟಿದಳು. ಮಧುಕರನಿಗೆ ಅವಳೆಂದರೆ ಬಹಳ ಇಷ್ಟ. ಪುಟ್ಟ ರಾಗಿಣಿ ಹಾಗೂ ಮಧುಕರ ಇಬ್ಬರ ಸ್ನೇಹವೂ ಬೆಳೆಯತೊಡಗಿತ್ತು. ಎರಡು ಮನೆಗಳಲ್ಲಿ ಭೇದವಿಲ್ಲದೆ ಮಕ್ಕಳು ಆಡಿ ಬೆಳೆಯುತ್ತಿದ್ದರು. ಮಧುಕರನ ಮನೆಯ ಮುಂದೆ ಇದ್ದ ಕಬ್ಬಿಣ ಹಂದರದಲ್ಲಿ ಹಬ್ಬಿಸಿದ ಬಿಳಿಯ ಗುಲಾಬಿಯ ಬಳ್ಳಿಯನ್ನು ಕಂಡರೆ ರಾಗಿಣಿಗೆ ಬಹಳ ಇಷ್ಟ. ಅವಳಿಗೆ ಬಿಳಿ ಗುಲಾಬಿ ಕಂಡರೆ ಪ್ರೀತಿ. ನನ್ನ ಜೀವ ಇದರಲ್ಲಿಯೇ ಇದೆ ಎನ್ನುತ್ತಿದ್ದಳು. "ನೀನು ಗುಲಾಬಿ ಬಳ್ಳಿಯಾದರೆ ನಾನು..?" ಎಂಬ ಮಧುಕರನ ಪ್ರಶ್ನೆಗೆ ನೀನು ಈ ಬಳ್ಳಿಗಾಸರೆಯಾದ ಕಬ್ಬಿಣದ ಹಂದರ ಎನ್ನುತ್ತಿದ್ದಳು.


 ಚಿಕ್ಕ ವಯಸ್ಸಿನಲ್ಲಿ ವಿಮಲೆ ಬಂದಾಗ ಮಧುಕರ ಅವಳೊಟ್ಟಿಗೆ ಹೋದರೆ ರಾಗಿಣಿಗೆ ಕೋಪ. ಮಧುಕರ ಇಬ್ಬರನ್ನೂ ಸಂಭಾಳಿಸುತ್ತಿದ್ದರೂ ಆತನಿಗೆ ರಾಗಿಣಿಯ ಮೇಲೆ ಹೆಚ್ಚು ಪ್ರೀತಿ. ಇತ್ತ ಮಧುಕರ ವೈದ್ಯನಾಗಲು ಹೆಚ್ಚಿನ ಓದಿಗಾಗಿ ಮನೆಯಿಂದ ದೂರ ಉಳಿಯಬೇಕಾಗಿತ್ತು. ಆವನ ಪತ್ರಗಳು ಬರುತ್ತಿದ್ದಾಗ ರಾಗಿಣಿಯ ಪ್ರಸ್ತಾಪವಿಲ್ಲದೆ ಆತನ ಪತ್ರ ಅಪೂರ್ಣ. ಆಗೆಲ್ಲಾ ರಾಗಿಣಿ ಹರ್ಷಿಸುತ್ತಿದ್ದ ಸಂದರ್ಭದಲ್ಲಿ ಸುಶೀಲಮ್ಮ ಆಗಾಗ ರಾಗಿಣಿಗೆ ತಮ್ಮ ಅಂತಸ್ತನ್ನು ನೆನಪಿಸುತ್ತಿದ್ದರು. 


ರಾಗಿಣಿ ಹುಟ್ಟಿದ ಬಹಳ ವರ್ಷಗಳ ನಂತರ ಸುಶೀಲಮ್ಮ ಗರ್ಭ ಧರಿಸಿದರು. ಅಂತೂ ಅವರ ಹೆದರಿಕೆಯೇ ನಿಜವಾಗಿ ಆ ಪ್ರಸವದಲ್ಲಿಯೇ ಅವರು ಸಾವನ್ನಪ್ಪಿದ್ದರು. ರಾಗಿಣಿ ಈಗ ತಬ್ಬಲಿಯಾಗಿದ್ದಳು. ನಾನು ಅಪ್ಪನನ್ನು ಬಿಟ್ಟು ಎಲ್ಲೂ ಹೋಗಲಾರೆ ಎನ್ನುತ್ತಾ ಚಿತ್ರಕೂಟದಲ್ಲಿಯೇ ಉಳಿದು ಅಪ್ಪನಿಗೆ ನೆರವಾಗುತ್ತಿದ್ದಳು.


 ಕ್ರಮೇಣ ರಾಗಿಣಿ ಅಜ್ಜಿಯ ಮನೆಯಲ್ಲಿ ಉಳಿಯುವುದು ಹೆಚ್ಚಾಯಿತು. ಪತ್ನಿ ಸತ್ತಿದ್ದ ಸೋದರಮಾವ ರಂಗಣ್ಣನ ಜೊತೆ ಅವಳ ಮದುವೆ ಎಂದು ಮಧುಕರನ ಮುಂದೆ ಜಾನಕಮ್ಮನವರು ಹೇಳಿದಾಗ ಮಧುಕರ ಆಗ ಹೃದಯ ಬಾಡಿಹೋಗಿತ್ತು. ತಮ್ಮ ಮಾತಿನಲ್ಲಿ ಪ್ರೀತಿ, ಪ್ರೇಮ ಎಂಬ ಪದಗಳೇ ಇರಲಿಲ್ಲ ಎಂಬ ಯೋಚನೆ ಬಂದಾಗ ಆತನಿಗೆ ನೈಜತೆಯ ಅರಿವಾಗಿತ್ತು.


 ಜಾನಕಮ್ಮನವರ ಆಸೆಯಂತೆ ಅವರ ತಮ್ಮನ ಮಗಳು ವಿಮಲೆಯನ್ನು ಮದುವೆಯಾಗಲು ಮಧುಕರ ಒಪ್ಪಲಿಲ್ಲ. ಅವಳು ಕಪ್ಪಿರುವ ಕಾರಣಕ್ಕೆ ಹಾಗೆನ್ನುತ್ತಿರಬಹುದು ಎಂದುಕೊಂಡರು. ವಿಮಲೆಯನ್ನು ಹೊರತುಪಡಿಸಿ ಆಕೆಯ ತಂದೆ-ತಾಯಿ ಮಧುಕರ ಸುಖವಾಗಿರಲೆಂದು ಹಾರೈಸಿದರು. ಆತ ಯಾರನ್ನಾದರೂ ವಿವಾಹವಾಗಿ ಸುಖವಾಗಿರಲಿ ಎಂದು ಬಯಸಿದರು. ರೂಪವಂತೆಯಾಗಿರುವ ಶಾನುಭೋಗ ಶಾಮಣ್ಣನವರ ಮಗಳು ಸರಸ್ವತಿಯನ್ನು ಸಹಾ ಮಧುಕರ ಒಪ್ಪಲಿಲ್ಲ ಆಕೆ ಈತನಿಗೆ ಗರ್ವವೆಂದುಕೊಂಡು ತಪ್ಪು ತಿಳಿದಳು. ಆಕೆ ರಾಗಿಣಿಯ ಸ್ನೇಹಿತೆ.


 ರಾಗಿಣಿಯ ಮುಂದೆ ತನ್ನ ಮನದಾಸೆಯನ್ನು ಬಿಚ್ಚಿಟ್ಟ ಮಧುಕರ. ರಾಗಿಣಿ ತನ್ನ ಮಾವನಿಗೆ ಈ ವಿಚಾರವನ್ನು ತಿಳಿಸುತ್ತೇನೆ ಎಂದು ಹೇಳಿ ಹರ್ಷಗೊಂಡಳಾದರೂ.. ಜಾನಕಮ್ಮನವರು ಈ ಮದುವೆಗೆ ಒಪ್ಪದ ಕಾರಣ ಮಧುಕರ ಅವಳ ಹೃದಯವನ್ನು ಮುರಿಯಬೇಕಾಗಿ ಬಂತು. 


 ಜಾನಕಮ್ಮನವರು ರಾಗಿಣಿಯನ್ನು ಮಗಳಂತೆ ಪ್ರೀತಿಸಿದ್ದರೂ.. ಆಕೆಯನ್ನು ಸೊಸೆಯನ್ನಾಗಿಸಿಕೊಳ್ಳಲು ಏಕೆ ಒಪ್ಪಲಿಲ್ಲ..? ಅದು ರಾಗಿಣಿಯ ಕೊರತೆಯೋ ಅಥವಾ ಬೇರೆ ಏನಾದರೂ ಕಾರಣವಿತ್ತೇ..?


 ಮಧುಕರ ಅಮೆರಿಕಗೆ ಹೋಗಿ ಬರುವಷ್ಟರಲ್ಲಿ ಎಲ್ಲವೂ ಬದಲಾಗಿತ್ತು. ರಾಗಿಣಿ ಅವಿವಾಹಿತೆಯಾಗಿಯೇ ಉಳಿದಿದ್ದಳು. ತನ್ನನ್ನು ತಿರಸ್ಕರಿಸಿದ ಜಾನಕಮ್ಮನವರ ಕೊನೆಯ ದಿನಗಳಲ್ಲಿ ರಾಗಿಣಿಯೇ ನಿಷ್ಕಲ್ಮಶ ಮನಸ್ಸಿನಿಂದ ಅವರ ಸೇವೆ ಮಾಡಿದ್ದಳು. ಮಧುಕರನಿಗೆ ತಾಯಿ ತೀರಿಕೊಂಡ ವಿಷಯವೇ ತಿಳಿದಿರಲಿಲ್ಲ. ಜಾನಕಮ್ಮನವರ ಸಾವಿಗೆ ಕಾರಣವೇನು..?


 ರಂಗಣ್ಣ ರಾಗಿಣಿಯನ್ನು ವಿವಾಹವಾಗಲು ಒಪ್ಪಿದ್ದೇಕೆ..? ಮಧುಕರ ಆಕೆಯನ್ನು ವಿವಾಹವಾಗುತ್ತೇನೆಂದಾಗ ಆತ ವಿವಾಹವಾಗದಿದ್ದರೂ.. ನಿಜವಾಗಿಯೂ ಆತನ ಮನಸ್ಸಿನ ಭಾವಗಳೇನಿದ್ದವು..?


 ತನ್ನ ತಾಯಿಯು ತನ್ನ ನಿರ್ಧಾರದ ಕುರಿತು ಪಶ್ಚಾತ್ತಾಪ ಪಟ್ಟುಕೊಂಡಿದ್ದರು ಎಂದು ತಿಳಿದ ಮಧುಕರ ಮತ್ತೆ ರಾಗಿಣಿಯನ್ನು ವಿವಾಹವಾಗಲು ಕೇಳಿಕೊಂಡ. ರಘುರಾಮಯ್ಯನವರೂ ಇದಕ್ಕೆ ಒಪ್ಪಿದ್ದರು. ರಂಗಣ್ಣ ರಾಗಿಣಿಯನ್ನು ಒಪ್ಪಿಸಲು ಮನಃಪೂರ್ವಕವಾಗಿ ಪ್ರಯತ್ನಪಟ್ಟ. ಆದರೂ.. ರಾಗಿಣಿ ಈ ಮದುವೆಯಾಗಲು ಒಪ್ಪದೇ ಇದ್ದದ್ದೇಕೆ..?


'ಬಳ್ಳಿ ಚಿಗುರಿತು' ಎಂಬ ಶೀರ್ಷಿಕೆಯನ್ನು ಕಂಡಾಗ ಇದು ಸುಖಾಂತ್ಯದ ಕಥೆ ಊಹಿಸಬಹುದು. ಒಂದು ದೊಡ್ಡ ಬದಲಾವಣೆಯ ಮೂಲಕ ಹೊಸ ಆರಂಭವೊಂದಕ್ಕೆ ಒತ್ತು ನೀಡಿ, ತಮ್ಮ ಉದಾತ್ತ ಆಲೋಚನೆಯನ್ನು ಬಿಡಿಸಿಟ್ಟಿದ್ದಾರೆ ಲೇಖಕಿ.


 ಇಲ್ಲಿ ಮಧುಕರನ ಪಾತ್ರದಷ್ಟೇ ರಂಗಣ್ಣನ ಪಾತ್ರಕ್ಕೂ ತೂಕವಿದೆ. ತನ್ನ ಉದಾತ್ತ ಆಲೋಚನೆಗಳಿಂದ, ಗಟ್ಟಿ ನಿಲುವುಗಳಿಂದ ರಂಗಣ್ಣನೇ ಹೆಚ್ಚು ಆಪ್ತವಾದ ಪಾತ್ರವೆನ್ನಿಸಿತು. 


 ಈ ಕಾದಂಬರಿಯಲ್ಲಿ ಒಂದು ಸಂದೇಶವಿದೆ. ಅದು ಯಾವ ಪಾತ್ರ ಯಾವ ಪ್ರಸಂಗ ಎಂಬುದನ್ನು ನೀವೇ ಓದಬೇಕು. ಆ ಸಂದೇಶವನ್ನು ಕುರಿತು ಹೇಳದಿದ್ದರೆ ಈ ಕಾದಂಬರಿಯ ಕುರಿತು ಹೇಳುವುದು ಅಪೂರ್ಣವಾಗುತ್ತದೆ ಎನ್ನಿಸಿತು. ಹೆಣ್ಣಿನ ಶೀಲಕ್ಕೆ ಬಹಳ ಮಹತ್ವವಿದೆ ಎನ್ನುವುದು ಹೌದಾದರೂ.. ಅತ್ಯಾಚಾರವಾದ ಹೆಣ್ಣಿನ ಬದುಕು ಅಷ್ಟಕ್ಕೇ ನಿಲ್ಲುವುದಿಲ್ಲ ಬದಲಾಗಿ ಆಕೆಗೊಂದು ಒಳ್ಳೆಯ ಬದುಕು ಸಿಗುತ್ತದೆ. ಹಾಗೆ ಸಿಗುವುದು ಗಂಡಿನ ಧೀಮಂತ ನಡೆಯಿಂದ. ಅಂದಿನ ದಿನಗಳಲ್ಲಿಯೇ ಇಂತಹ ಒಂದು ಧೀಮಂತ ನಿಲುವಿನ ಮೂಲಕ ಕಾದಂಬರಿಯ ಮೂಲಕ ಒಳ್ಳೆಯ ಸಂದೇಶ ನೀಡಿದ್ದಾರೆ ಲೇಖಕಿ. ಒಂದೊಳ್ಳೆ ಕಾದಂಬರಿಯ ರಮ್ಯವಾದ ಓದು.


~ವಿಭಾ ವಿಶ್ವನಾಥ್

ಶನಿವಾರ, ಏಪ್ರಿಲ್ 18, 2026

ಅನ್ವೇಷಿಕಾ - ಲಾಂದ್ರದ ಬೆಳಕು (ಪುಸ್ತಕ ಯಾನ - 260)




ಪುಸ್ತಕದ ಶೀರ್ಷಿಕೆ : ಅನ್ವೇಷಿಕಾ - ಲಾಂದ್ರದ ಬೆಳಕು

ಲೇಖಕರು : ರಾಘವೇಂದ್ರ ಬಿ. ರಾವ್ ( ಅನು ಬೆಳ್ಳೆ )

ಪ್ರಕಾಶಕರು : ಅಪರಂಜಿ ಪ್ರಕಾಶನ

ಪ್ರಥಮ ಮುದ್ರಣ : 2010


'ಅನ್ವೇಷಿಕಾ' ಎಂಬುದು ಅನು ಬೆಳ್ಳೆಯವರ ಏಳು ಪತ್ತೇದಾರಿ ಕಾದಂಬರಿಗಳ ಸಂಯುಕ್ತ ಸಂಪುಟ. ಇದರಲ್ಲಿ ನಾನೀಗ ಪರಿಚಯಿಸುತ್ತಿರುವ ಪತ್ತೇದಾರಿ ಕಾದಂಬರಿ 'ಲಾಂದ್ರದ ಬೆಳಕು'. 


ಲೇಖಕರು ಕಾದಂಬರಿಯ ಮೊದಲಲ್ಲಿ ತಮ್ಮ ಮಾತುಗಳಲ್ಲಿ ಟಿ. ಕೆ ರಾಮರಾವ್ ಅವರ ಕಥನ ಶೈಲಿಯನ್ನು ನೆನೆಸಿಕೊಂಡು ಪತ್ತೇದಾರಿ ಸಾಹಿತ್ಯಕ್ಕೆ ಕ್ಲಾಸಿಕಲ್ ಮೆರಗು ನೀಡಿದವರು ಎಂದು ನೆನೆಯುತ್ತಾರೆ. ಅಲ್ಲದೇ, ಅತಿಯಾದ ಸೆಕ್ಸ್, ಅಸಂಗತಗಳನ್ನು ಬಳಸಿಕೊಂಡು ಬರೆಯುವುದಕ್ಕಿಂತಲೂ ನವಿರಾಗಿ ಕಥನವನ್ನು ಬಿಚ್ಚಿಡುವುದು ಒಂದು ರೀತಿಯಲ್ಲಿ ಆಕರ್ಷಕವೆಂದು ನನ್ನ ಅನಿಸಿಕೆ ಎಂದು ಹೇಳುತ್ತಾರೆ. ಇಡೀ ಕಾದಂಬರಿಯನ್ನು ಹಾಗೆಯೇ ಬರೆದಿದ್ದಾರೆ ಸಹಾ. ಇದು ಓದುಗರಲ್ಲಿಯೂ ಮುಜುಗರ ಉಂಟು ಮಾಡದು ಜೊತೆಗೆ ಓದುಗರಿಗೆ ಆಪ್ತವಾಗುವ ಬರಹದ ಶೈಲಿ ಇದು. ಇಲ್ಲಿಯ ಕಥೆಯಲ್ಲಿ ಮುಖ್ಯವಾಗಿ ಇಷ್ಟವಾದದ್ದು ಹೆಣ್ಣೊಬ್ಬಳು ಯೋಚಿಸುವ ರೀತಿ ಹಾಗೂ ತಾನು ಪತ್ತೇದಾರಿ ಅಲ್ಲದಿದ್ದರೂ.. ತಾನು ಆ ಸುಳಿವಿನಲ್ಲಿ ಸಿಕ್ಕಾಗ ಪತ್ತೇದಾರಿಕೆಗೆ ಹೊರಡುವ ಪರಿ, ಧೈರ್ಯ.


ಮಕ್ಕಳಿಲ್ಲದ ಪದ್ಮಾವತಿ ತನ್ನ ತಮ್ಮ ಶೇಖರನ ತಾಯಿ ಇಲ್ಲದ ಮಗಳು ತೃಷಾಳನ್ನು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ ಬೆಳೆಸಿದ್ದಳು. ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟು ಮಗಳ ಜೊತೆಗೆ ಅಕ್ಕನ ಮನೆ ಸೇರಿದ್ದ ಶೇಖರ. ಈಗ ತೃಷಾ ವೈದ್ಯಕೀಯ ವೃತ್ತಿ ಕಲಿಯಲೆಂದು ದೂರದ ಊರು ಸೇರಿದ್ದಳು. ತೃಷಾಳಿಗೆ ಮದುವೆ ಮಾಡುವವರೆಗೂ ಪದ್ಮಾವತಿಗೆ ನೆಮ್ಮದಿ ಇರಲಿಲ್ಲ. ಆದರೆ, ತೃಷಾ ತಾನು ಕಲಿತು ವೃತ್ತಿ ಸೇರಿ ಎರಡು ವರ್ಷದ ನಂತರ ವಿವಾಹ ಮಾಡಿಕೊಳ್ಳುವುದೆಂದಿದ್ದಳು. ಹದಿಹರೆಯದ ವಯಸ್ಸಿನ ಮಕ್ಕಳ ಹಲವು ಕಥೆಗಳನ್ನು ಕೇಳಿದ್ದ ಶೇಖರನಿಗೆ ಇತ್ತ ಭಯವಿತ್ತು.


ಕೆಲಸದಲ್ಲಿರುವ, ಚಂದದ ಹುಡುಗನ ಚುರುಕುತನವೂ ಇರುವಂತೆ ಕಾಣುವ ಫೋಟೋ ಹಾಗೂ ಜಾತಕ ವಿಳಾಸಕ್ಕೆ ಬಂದಾಗ ಶೇಖರ ಮಗಳ ಮದುವೆಗೆ ಮುಂದಾಗಿದ್ದ. ಪದ್ಮಾವತಿ ಬೆಳ್ಳಗಿರುವುದೆಲ್ಲಾ ಹಾಲಲ್ಲವೆಂದೇ ಎಚ್ಚರಿಸಿದ್ದಳು. ಆದರೂ.. ನೋಡೋಣವೆಂದು ಇಬ್ಬರೂ ಕಾರವಾರಕ್ಕೆ ಹೊರಟರು. ಆ ಹುಡುಗನೇ ಗಗನ್ ದೀಪ್. ಆದರೆ ,ಆತ ಕಥೆ ಬರೆಯುತ್ತಾನೆ ಎನ್ನುವುದು ತಿಳಿದದ್ದು ಅಲ್ಲಿ ಹೋದಾಗ, ಒಂದು ಪೇಪರಿನಲ್ಲಿ ಆತನ ಚಿತ್ರ ನೋಡಿದಾಗಲೇ.. ಆಟೋ ಚಾಲಕನ ಅಭಿಮಾನದ ಮಾತುಗಳನ್ನು ಕೇಳಿದರೂ.. ಶೇಖರನಿಗೆ ಮನಸ್ಸಿನಲ್ಲೊಂದು ಅಳುಕಿತ್ತು. ಆತ ಕೇವಲ ಕಥೆ ಬರೆಯುವವನು ಮಾತ್ರವಾಗಿದ್ದರೆ...! ಎಂದು. ಆದರೆ ವಿಚಾರ ಹಾಗಿರಲಿಲ್ಲ. ಆತ ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಬರಹಗಾರ. ಆದರೆ, ಅಂದು ಆತ ಭೇಟಿಗೆ ಸಿಗಲಿಲ್ಲ. ಆತ ಕಥೆ ಬರೆಯಲೆಂದು ದೂರದ ಊರಿಗೆ ಹೋಗಿದ್ದಾನೆಂದು.. ಆತನ ತಾಯಿ ತನ್ನ ಮಗನ ಕುರಿತು ಹೇಳಿ ಆತನನ್ನು ಮದುವೆಗೆ ಒಪ್ಪಿಸುತ್ತೇನೆಂದು ಹೇಳಿದಳು.


ಇತ್ತ ಗಗನ್ ಬಂದದ್ದು ಕುದ್ರು ಎಂಬಲ್ಲಿಯ ದ್ವೀಪದಂತಹಾ ಊರಿಗೆ. ಆದರೆ, ಆತ ಈ ಬಾರಿ ಬಂದದ್ದು ಪತ್ತೇದಾರಿ ಕಾದಂಬರಿ ಬರೆಯಲಿಕ್ಕಲ್ಲ. ಬದಲಾಗಿ, ಪ್ರೇಮ ಕಾದಂಬರಿಯೊಂದರ ರಚನೆಗೆ. ಆದರೆ, ಆತನಿಗೆ ರಾತ್ರಿಯಲ್ಲಿ ಹೆಣ್ಣಿನ ಧ್ವನಿ ಕೂಗಿದಂತೆ ಕೇಳಿಸುತ್ತಿತ್ತು. ಹೊರಬಂದು ನೋಡಿದರೆ ರಾತ್ರಿಯಲ್ಲಿ ಮೋಹಿನಿ ಲಾಂದ್ರವನ್ನು ಹಿಡಿದುಕೊಂಡು ಓಡಾಡುತ್ತಿರುವಂತೆ ಕಂಡಾಗ, ಆಕೆಯನ್ನು ಹಿಂಬಾಲಿಸಿ ಹೋದನಾದರೂ.. ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಲಾಂದ್ರದಿಂದ ಕಾಲಿಗೆ ಸುಟ್ಟ ಗಾಯವೂ ಆಗಿತ್ತು. 


ಊರಿಗೆ ಹೋಗಿ ಬಂದಿದ್ದ ತೃಷಾ ಆತನನ್ನು ಭೇಟಿ ಮಾಡಿ ಮಾತನಾಡಲು ಬಂದಿದ್ದಳು. ಆತನ ಗಾಯ ಕಂಡು ಆತನಿಗೆ ಉಪಚರಿಸಿದಳು ಸಹಾ. ಅವನ ಅಮ್ಮ ಸಣ್ಣಮ್ಮ ಈ ವಿಚಾರಕ್ಕೆ ಖುಷಿ ಪಟ್ಟರು.  


ಲಂದ್ರದ ಬೆಳಗಿನಿಂದ ಆ ರೀತಿಯ ಗಾಯವಾಗಲು ಸಾಧ್ಯವೇ..? ಎಂದು ಯೋಚಿಸುತ್ತಲೇ ಆಸ್ಪತ್ರೆಯ ಕಾರಿಡಾರ್ ನಲ್ಲಿ ತನ್ನ ಕೆಲಸಗಳನ್ನು ಮಾಡುತ್ತಿರುವಾಗ ತನ್ನದೇ ಡಿಪಾರ್ಟ್ಮೆಂಟ್ ನ ಹುಡುಗಿ ಹರ್ಷಿತಾ ಕೈಯ್ಯಲ್ಲಿ ಕೂಡ ಅಂತಹದ್ದೇ ಗಾಯ. ಬಲಗೈಯ ಉದ್ದಕ್ಕೂ ಹಸಿಗಾಯ ಮಾಡಿಕೊಂಡದ್ದು ಕಂಡಿತು. 


ಇದಕ್ಕೂ ಗಗನ್ ದೀಪ್ ಗೂ ಏನಾದರು ಸಂಬಂಧವಿರಬಹುದಾ ಅಥವಾ ಆತ ಹುಡುಗಿಯ ಜೊತೆಗೆ ಹೊರಗೆ ಹೋಗಿರಬಹುದಾ ಎಂಬ ಅನುಮಾನ ಕಾಡಿತು. ಹರ್ಷಿತಾಳ ಮಾತು ಕೇಳಿದಾಗ ಆಕೆಯ ದೂರದ ಸಂಬಂಧಿಯೊಬ್ಬರು ಸಹ ಅದೇ ಊರಿನಲ್ಲಿ ಇರುವುದು ತಿಳಿಯಿತು.


ಈ ಕುರಿತು ಗಗನ್ ಬಳಿ ಕೇಳಲು ಮತ್ತೆ ಮನೆಗೆ ಹೋದಾಗ ಆತ ಬರೆದಿಟ್ಟಿದ್ದ 'ಲಾಂದ್ರದ ಬೆಳಕು' ಕಾದಂಬರಿಯ ಕೊನೆಯ ಸಾಲುಗಳನ್ನು ಓದಿ ಆತನ ಮೇಲೆ ಅಪಾರ್ಥ ಮಾಡಿಕೊಂಡಳು. ಆದರೆ, ನಂತರ ಆತನ ಮಾತುಗಳಿಂದ ಅಪಾರ್ಥ ಕಾಣದಂತಿದ್ದರೂ.. ಮನಸ್ಸಿನಲ್ಲಿ ಆಲೋಚನೆ ಹಾಗೆಯೇ ಇತ್ತು 


ಜೊತೆಗೆ.. ಹೊರಗಿನವರ ಒಡಕು ಮಾತುಗಳು ಅವಳ ಹಾಗೂ ಅವಳ ಮನೆಯವರ ಕಿವಿಗೆ ಬಿದ್ದಿದ್ದವು. ಗಗನ್ ದೀಪ್ ಯಾವುದೋ ಹುಡುಗಿಗೆ ಪ್ರೀತಿಸಿ ಮೋಸ ಮಾಡಿದ್ದಾನಂತೆ. ಈಗ ಆಕೆ ಹುಚ್ಚಿಯಾಗಿದ್ದಾಳೆ ಎನ್ನುವ ಮಾತುಗಳೂ ಕೇಳಿದ್ದವು. 


ಸಣ್ಣಮ್ಮ ಹಾಗೂ ಗಗನ್ ಇಬ್ಬರೂ ಹೇಳುವ ಪ್ರಕಾರ ಆತ ಸಾಯಲು ಹೊರಟಿದ್ದ ಹುಡುಗಿಯನ್ನು ರಕ್ಷಿಸಿದ. ಆಕೆ ಮಾತ್ರ.. ಆತನೇ ತನ್ನ ಪ್ರೇಮಿ ಎಂದು ಹೇಳುತ್ತಾ ಸಮಸ್ಯೆಯನ್ನು ತಂದೊಡ್ಡಿದಳು. ನಂತರ, ಪೊಲೀಸರ ಮಧ್ಯಸ್ಥಿಕೆಯಲ್ಲಿ ಅದು ಬಗೆಹರಿದಿದೆ ಎಂದು. 


ಗಗನ್ ದೀಪ್ ಮನೆಗೆ ಹೋಗಿ ಬಂದವಳು ಸಣ್ಣಮ್ಮ ಬರುವವರೆಗೂ ಇರದೇ ಹೊರಟು ಬಂದಳು. ಸಣ್ಣಮ್ಮ ಮಾತ್ರ ಅವಳ ಅನುಮಾನವನ್ನು ಬಗೆಹರಿಸಲು ಆಕೆಯನ್ನು ಕರೆತರಲು ಮಗನನ್ನು ಕಳುಹಿಸುವಷ್ಟರಲ್ಲಿ ಆಕೆ ಮಾಯವಾಗಿದ್ದಳು. ಇತ್ತ ಶೇಖರ ಹಾಗೂ ಪದ್ಮಾವತಿಗೂ ಆಕೆ ಸಿಗಲಿಲ್ಲ. ಹಾಸ್ಟೆಲ್ ನಲ್ಲಿಯೂ ಅವಳಿರಲಿಲ್ಲ. ಅಪ್ಪ, ಅತ್ತೆಗೂ ಹೇಳದೇ ಹೊರಟವಳನ್ನು ಹುಡುಕುತ್ತಾ ಹೊರಟರೆ ಆಕೆ ಹಾಗೂ ಹರ್ಷಿತ ಇಬ್ಬರೂ ಹೊರಟ ಸ್ಥಳ ಒಂದೇ ಎಂದು ಹಾಸ್ಟೆಲ್ ನ ಲೆಡ್ಜರ್ ನಿಂದ ತಿಳಿಯಿತು.


ಇವರಿಬ್ಬರಲ್ಲಿ ಒಬ್ಬರನ್ನೊಬ್ಬರು ಬೆನ್ನತ್ತಿ ಹೊರಟರಾ ಅಥವಾ ಇದು ಕಾಕತಾಳೀಯವಾ..? 


ತೃಷಾ ಯೋಚಿಸಿದಂತೆ ಗಗನ್ ಹಾಗೂ ಹರ್ಷಿತಾರ ನಡುವೆ ಏನಾದರೂ ಸಂಬಂಧವಿತ್ತೇ..?


ಅಷ್ಟಕ್ಕೂ ತೃಷಾ ಅಲ್ಲಿಗೆ ಹೋದದ್ದೇಕೆ.. ಆಕೆ ಗಗನ್ ದೀಪ್ ನನ್ನು ಪ್ರೇಮಿಸುತ್ತಿದ್ದಳೇ.. ಮದುವೆಗೆ ಒಪ್ಪದ ತೃಷಾ ಆತನೆಡೆಗೆ ಆಕರ್ಷಿತವಾದದ್ದೇಕೆ..?


ತೃಷಾ ತಾಯಿಯ ಸಾವು ಹೇಗಾಗಿತ್ತು.. ಶೇಖರ ಊರಿನಿಂದ ಉಟ್ಟ ಬಟ್ಟೆಯಲ್ಲಿಯೇ ಹೊರಟು ಬಂದದ್ದೇಕೆ..?


ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಕಾದಂಬರಿ 'ಲಾಂದ್ರದ ಬೆಳಕು'. ಅಂದ ಹಾಗೆ ಇದು ಗಗನ್ ದೀಪ್ ನ ಪ್ರೇಮ ಕಾದಂಬರಿಯೂ ಹೌದು. ಅನು ಬೆಳ್ಳೆಯವರ ಪತ್ತೇದಾರಿ ಕಾದಂಬರಿಯೂ ಹೌದು.

~ವಿಭಾ ವಿಶ್ವನಾಥ್

ಅಮೃತ ಬಿಂದು (ಪುಸ್ತಕ ಯಾನ - 259)




ಪುಸ್ತಕದ ಶೀರ್ಷಿಕೆ : ಅಮೃತ ಬಿಂದು

ಲೇಖಕರು : ಈಚನೂರು ಶಾಂತ

ಪ್ರಕಾಶಕರು : ಬೃಂದಾವನ ಪ್ರಕಾಶನ

ಪ್ರಥಮ ಮುದ್ರಣ : 1995

ಪುಟಗಳು : 200


ಈಚನೂರು ಶಾಂತ ಅವರ ಅಮೃತಬಿಂದು ಕಾದಂಬರಿ ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ಈ ಕಾದಂಬರಿ ಸಿನಿಮಾಗಾಗಿ ಬರೆದದ್ದಾಗಿರಬಹುದೇನೋ ಎಂದೆನಿಸಿತು. ಈ ಕಾದಂಬರಿಯಲ್ಲಿ ಕಂಡ ಶೈಲಿ ನನಗೆ ಸಿನಿಮೀಯ ಶೈಲಿ ಎಂದೆನಿಸಿತು. ನಾನು ಈ ಲೇಖಕಿಯ ಮೊದಲನೇ ಪುಸ್ತಕ ಓದುತ್ತಿರುವುದರಿಂದ ಇವರ ಕಥಾವಸ್ತು ಹಾಗೂ ಶೈಲಿಯ ಹೆಚ್ಚಿನ ಪರಿಚಯವಿರಲಿಲ್ಲ. ಇವರ ಬೇರೆಯ ಕಾದಂಬರಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪರಿಚಯಿಸುವೆ. 


ಬಲರಾಮ ತುಮಕೂರಿನಿಂದ ಬೆಂಗಳೂರಿಗೆ ಬರುವ ಪ್ರಯಾಣದಲ್ಲಿ ಜೊತೆಯಾದ ಪ್ರಯಾಣಿಕರೆಲ್ಲರೂ ಆತನಿಗೆ ಕಿರಿಕಿರಿ ಮಾಡಿದ್ದರು. ಅದೇ ಸಮಯಕ್ಕೆ ಕಾವೇರಿಯು ಆತನ ಸಹ ಪಯಣಿಗಳಾದಳು. ಕಾವೇರಿಯ ಪ್ರಯಾಣದ ಅಸ್ವಸ್ಥತೆ ಹಾಗೂ ನಿದ್ದೆಯೂ ಆತನಿಗೆ ಒಂದು ರೀತಿಯ ಕಿರಿಕಿರಿ ಉಂಟುಮಾಡಿತ್ತು.  ಹೆಣ್ಣು ಮಕ್ಕಳೆಂದರೆ ದೂರ ಸರಿಯುತ್ತಿದ್ದ ಆತನಿಗೆ, ಆಕೆ ಬೆಂಗಳೂರಿನಲ್ಲಿ ವಿಳಾಸ ಕೇಳಿದಾಗಲೂ.. ಒಂಟಿ ಹೆಣ್ಣಿಗೆ ಸಹಾಯ ಮಾಡುವ ಸೌಜನ್ಯವನ್ನು ತೋರಲಿಲ್ಲ. ಆದರೆ, ಅದು ನಿಜವಾಗಿಯೂ ಆತನ ಸ್ವಭಾವವವಲ್ಲ. ಆತ ವೃತ್ತಿಯಲ್ಲಿ ವಕೀಲನಾಗಿದ್ದವನು. ಹಣದ, ಕೀರ್ತಿಯ ಹಿಂದೆ ಹೋಗುವುದಕ್ಕಿಂತ ನ್ಯಾಯದ ಪರವಾಗಿ ನಿಂತು ಅಸಹಾಯಕರಿಗೆ, ಬಡವರಿಗೆ ಸಹಾಯ ಮಾಡುತ್ತಾ.. ನ್ಯಾಯಕ್ಕೆ ಬೆಲೆ ಕೊಡುತ್ತಾ ಕಾನೂನು ರೀತಿಯಲ್ಲಿ ಹೋರಾಡುತ್ತಿದ್ದವನು. ಹಾಗೆಂದು, ಆತ ಉಳ್ಳವರ ಮನೆಯಿಂದ ಬಂದವನಲ್ಲ. ಬದಲಾಗಿ ಆತನ ಹಿನ್ನೆಲೆಯನ್ನು ಕೇಳಿದವರು ಆತನ ಈಗಿನ ಪರಿಸ್ಥಿತಿಯನ್ನು ಅನುಮಾನಿಸುವಂತಿರುತ್ತಿತ್ತು. ಏಕೆಂದರೆ, ಆತ ಜೈಲಿನಲ್ಲಿದ್ದು ಬಂದವನು.


ಜನಪ್ರಿಯ ಕ್ರಿಮಿನಲ್ ಲಾಯರ್ ಆಗಿದ್ದ ಬಲರಾಮನನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳುವ ಮನಸ್ಸು ಮಾಡಿದ್ದು ಆ ಊರಿನ ಶ್ರೀಮಂತ ಉದ್ಯಮಿಯಾದ ಪೃಥ್ವಿರಾಜ್. ಆತನ ಪತ್ನಿ ತಾರಾದೇವಿ ಎಂ.ಎಲ್.ಎ ಆಗಿದ್ದವರು. ಬಡತನದಲ್ಲೇ ಬೆಳೆದು ಬಂದಿದ್ದ ತಾರಾದೇವಿ ಪತಿಯ ಮನೆಗೆ ಕಾಲಿರಿಸಿದ ಮೇಲೆ ಐಶ್ವರ್ಯ ಕಂಡವಳು. ಆದರೆ, ಅಂತಸ್ತಿಗೆ ತಕ್ಕಂತೆ ಬದಲಾಗುತ್ತಿದ್ದ ಅವಳು ಈಗ ಮಕ್ಕಳ ಕುರಿತು ಸಹಾ ಯೋಚಿಸದೆ ಸಂಪೂರ್ಣ ಬದಲಾಗಿದ್ದವಳು. 


ಆಕೆಯ ಮಗಳು ಕಲ್ಪನಾ ಮೆಡಿಕಲ್ ಓದುತ್ತಿದ್ದಳು. ಆದರೆ, ಆಕೆಯ ಹೆಸರು ಸುಧಾಕರನ ಜೊತೆ ಹೆಚ್ಚು ಕೇಳಿ ಬರುತ್ತಿದ್ದಾಗ ಪೃಥ್ವಿರಾಜ ಆಕೆಯ ಮದುವೆಯ ಕುರಿತು ಆಲೋಚಿಸಿ ಬಲರಾಮನೆ ತಕ್ಕವನೆಂದು ನಿರ್ಧರಿಸಿ ಅವರಿಬ್ಬರ ಸಲಗೆ ಬೆಳೆಯುವಂತೆ ನೋಡಿಕೊಳ್ಳುತ್ತಿದ್ದ. ಆದರೆ, ಕಲ್ಪನಾ ಸುಧಾಕರನೊಟ್ಟಿಗೆ ಹೆಚ್ಚು ಬೆರೆಯುತ್ತಿದ್ದಳು. ಬಲರಾಮ ಪ್ರೀತಿ-ಪ್ರೇಮ ಎಂದು ತೀರಾ ನಾಜೂಕಿನವನಲ್ಲದಿದ್ದರಿಂದ.. ಆತ ಸಭ್ಯತೆಯ ಮಿತಿಯಲ್ಲಿ ದೂರವೇ ಇದ್ದ. 


ಕಲ್ಪನಾಳ ಅಣ್ಣ ಅವಿನಾಶನದ್ದು ಮತ್ತೊಂದು ರೀತಿಯ ಸಮಸ್ಯೆ. ಇಂಜಿನಿಯರಿಂಗ್ ಓದುತ್ತಿದ್ದ. ಶ್ರೀಮಂತಿಕೆ ಜೊತೆಗೆ ಗೆಳೆಯರ ಸ್ನೇಹದಿಂದ ಕಾಲೇಜಿಗೂ ಸರಿಯಾಗಿ ಹೋಗಿರಲಿಲ್ಲ. ಅಲ್ಲದೆ, ಗಾಂಜಾ ಸೇವನೆಯಿಂದಾಗಿ ಆತನ ಪರಿಸ್ಥಿತಿ ಹದಗೆಟ್ಟಿತ್ತಾದರೂ.. ಪೃಥ್ವಿರಾಜನ ಪ್ರಭಾವದಿಂದ ವಿಷಯ ಮುಚ್ಚಿಹೋಗಿತ್ತು. 


ಸಂಬಂಧಿಕರಿಲ್ಲದ ಬಲರಾಮನನ್ನು ಮಗಳ ಬರ್ತಡೆ ಪಾರ್ಟಿ ಎಂದು ಆಹ್ವಾನಿಸಿ ಈ ವಿಚಾರವಾಗಿ ಮಾತನಾಡಬೇಕು ಎಂದುಕೊಂಡಿದ್ದರು ಪೃಥ್ವಿರಾಜ. ಕಲ್ಪನಾಳ ಆತ್ಮೀಯ ಗೆಳತಿ ಕಾವೇರಿ ಅಲ್ಲಿನ ಪಾರ್ಟಿಗೆ ಬಂದಿದ್ದಳು. ಕಲ್ಪನಾ ಹೇಳುತ್ತಿದ್ದ ವ್ಯಕ್ತಿ ಹಾಗೂ ಕಾವೇರಿ ಹೇಳುತ್ತಿದ್ದ ವ್ಯಕ್ತಿ ಬಲರಾಮನೇ ಎಂದು ಇಬ್ಬರಿಗೂ ಅರಿವಾಗಿತ್ತು. ತಾರಾದೇವಿಗೆ ತನ್ನ ಅಂತಸ್ತಿಗೆ ಸರಿಯಲ್ಲದ ಕಾವೇರಿ ಸರಿ ಹೋಗದೆ ಆಕೆಯನ್ನು ನೆಪ ಮಾಡಿ ಮೇಲೆ ಕಳುಹಿಸಿದಾಗ.. ಅವಿನಾಶನ ದೃಷ್ಟಿ ಆಕೆಯ ಸೌಂದರ್ಯದ ಮೇಲೆ ಬಿದ್ದು, ಅತ್ಯಾಚಾರಕ್ಕೆ ಪ್ರಯತ್ನಿಸುವಾಗ ಬಲರಾಮನೇ ಬಂದು ಕಾಪಾಡಿದ್ದ. ಅಂದಿನ ರಾದ್ಧಾಂತದಿಂದ ಎಲ್ಲರ ಮನಸ್ಸು ಕೆಟ್ಟು ಹೋಗಿತ್ತು. ಇಷ್ಟಾದರೂ.. ಬಲರಾಮನಿಗೆ ಕಾವೇರಿ ಕಲ್ಪನಾಳ ಸ್ನೇಹಿತೆ ಎಂಬುದರ ಹೊರತಾಗಿ ಉಳಿದ ವಿಚಾರಗಳೆಲ್ಲದರಲ್ಲಿಯೂ ಆಕೆ ಅಪರಿಚಿತಳೇ.


ಕಲ್ಪನಾಳ ಮನೆಯಲ್ಲಿ ಬಡತನ. ತಂದೆ-ತಾಯಿ ವಯಸ್ಸಾದ ಮುದುಕನಿಗೆ ಆಕೆಯನ್ನು ವಿವಾಹ ಮಾಡಿಕೊಡಲು ಪ್ರಯತ್ನಿಸಿದಾಗ ಮನೆ ಬಿಟ್ಟು ಬಂದು ಪೃಥ್ವಿರಾಜರ ಪ್ರಭಾವದಿಂದ ಅನಾಥಾಶ್ರಮದ ಕೆಲಸವೊಂದಕ್ಕೆ ಸೇರಿದ್ದಳು. ಆ ಅನಾಥಾಶ್ರಮಕ್ಕೆ ಬಲರಾಮನೂ ಸಹಾಯ ಮಾಡುತ್ತಿದ್ದ. ಅಲ್ಲದೇ, ಆತನ ಪ್ರಭಾವಳಿಯ ಪರಿಚಯವಿದ್ದ ಗುರುಬಸಪ್ಪಜ್ ಆತ ಬಂದಾಗ ಸರಿಯಾದ ಆಡಳಿತ ನಡೆಸುತ್ತಿದ್ದನು. ಉಳಿದಂತೆ ಅನಾಥಾಶ್ರಮವನ್ನು ಅಧ್ವಾನವಾಗಿಟ್ಟುಕೊಂಡಿದ್ದ. ಶಂಕರ ಎಂಬ ಹುಡುಗನಿಂದ ಕಾವೇರಿಗೆ ಸತ್ಯ ತಿಳಿದು, ಅದನ್ನು ತಿಳಿಸಲು ಯತ್ನಿಸಿದಾಗಲೂ.. ಗುರುಬಸಪ್ಪ ಅಡ್ಡವಾದರೂ.. ಬಲರಾಮನಿಗೆ ಅದರ ಸುಳಿವು ದೊರೆತು ಬಿಗಿ ಬಂದೋಬಸ್ತಾಯಿತು.


ಪೃಥ್ವಿರಾಜನ ಉಪಾಯದಂತೆ ಕಲ್ಪನಾ ಹಾಗೂ ಬಲರಾಮ ಇಬ್ಬರೂ ಹೋಗಬೇಕಾದ ನಂದಿ ಬೆಟ್ಟಕ್ಕೆ ಕಾವೇರಿ ಹಾಗೂ ಬಲರಾಮ ಹೋಗುವಂತಾಯಿತು. ಕಲ್ಪನಾ ಸುಧಾಕರನೊಟ್ಟಿಗೆ ಹೊರಟಳು. ಬಲರಾಮ ಹಾಗೂ ಕಾವೇರಿಯ ನಿಕಟ ಪರಿಚಯವಾಗಿ ಮೊದಲ ಭೇಟಿಯಲ್ಲಿ ಕಳೆದ ಸಮಯದಲ್ಲಿಯೇ ಪ್ರೇಮಾಂಕುರವಾಯಿತು. 

ಇತ್ತ ಕಲ್ಪನಾಳಿಗೆ ಸುಧಾಕರನ ಸ್ನೇಹ ಹೆಚ್ಚಾಗಿ ಆಕೆ ಗರ್ಭಿಣಿಯೂ ಆದಳು. ಸುಧಾಕರ ಮದುವೆಯಾಗಲು ಒಪ್ಪಲಿಲ್ಲ. ಕಲ್ಪನಾ, ಪೃಥ್ವಿರಾಜ್ ನನ್ನು ಬಿಟ್ಟರೆ ಬೇರೆ ಯಾರಿಗೂ ಈ ವಿಚಾರ ತಿಳಿದಿರಲಿಲ್ಲ.


ಈ ಮಧ್ಯದಲ್ಲಿ ಪೃಥ್ವಿರಾಜನ ಗೆಳೆಯರಾದ ಪೊಲೀಸ್ ಆಗಿದ್ದ ಭರಣಿಯವರು ಅವಿನಾಶನ ವಿಚಾರವನ್ನು ತಿಳಿಸಿ, ಆತನನ್ನು ಬದಲಾಯಿಸುವ ವಿಚಾರ ಮಾತನಾಡುತ್ತಿದ್ದಾಗ ಅದು ಸಾಧ್ಯವಾ ಎನ್ನುವಾಗ ಒಂದು ಉದಾಹರಣೆಯನ್ನು ನೀಡುತ್ತಾರೆ. ಜೈಲಿನಲ್ಲಿದ್ದು ಬಂದವನು, ಹಲವು ಕಷ್ಟಗಳನ್ನು ಅನುಭವಿಸಿದವನು ಇಂದು ತಿದ್ದಿಕೊಂಡು.. ಪ್ರಸಿದ್ಧ ಪ್ರಸಿದ್ಧ ವಕೀಲನಾಗಿಲ್ಲವೇ ಎಂದು ಪ್ರಶ್ನಿಸಿದಾಗ ಪೃಥ್ವಿರಾಜರವರಿಗೆ ಆತ ಬಲರಾಮನೇ ಎಂದು ಅರಿವಾಗುತ್ತದೆ. ಸಂಪೂರ್ಣ ವಿಚಾರವನ್ನು ತಿಳಿದುಕೊಳ್ಳದ ಅವರು ಆತನಿಗೆ ಮಗಳನ್ನು ಕೊಡಲು ಹಿಂಜರಿಯುತ್ತಾರೆ.


ಇದಾದ ನಂತರ ನಡೆದ ಘಟನೆ ಎಲ್ಲರ ಬದುಕಲ್ಲಿಯೂ ಅಲ್ಲೋಲಕಲ್ಲೋಲವನ್ನೇ ಎಬ್ಬಿಸುತ್ತದೆ. ಕಲ್ಪನಾ ತಾನು ಬಲರಾಮನನ್ನೇ ಮದುವೆಯಾಗುತ್ತೇನೆ. ಅಲ್ಲದೆ, ಮಗುವನ್ನು ಉಳಿಸಿಕೊಳ್ಳುತ್ತೇನೆ. ಅವಿನಾಶ, ಸುಧಾಕರನಿಗಿಂತ ಆತ ಎಷ್ಟೋ ಮೇಲು ಎಂದಾಗ ಪೃಥ್ವಿರಾಜರ ಮನಸ್ಸು ಹೊಯ್ದಾಡುತ್ತದೆ. ಅಷ್ಟರಲ್ಲಾಗಲೇ ಕಾವೇರಿ ಆತನ ಮನೆದೊಡತಿಯಾಗಲು ಒಪ್ಪಿರುತ್ತಾಳೆ.


ಕಾಲೇಜಿನಲ್ಲಿ ಹಾಡಹಗಲಿನಲ್ಲಿಯೇ ಸುಧಾಕರನ ಕೊಲೆಯಾಗುತ್ತದೆ. ಆ ಕೊಲೆ ಮಾಡಿದ್ದು ಮತ್ತಾರೂ ಅಲ್ಲ.  ಕಲ್ಪನಾಳ ಅಣ್ಣ ಅವಿನಾಶ್. ಸುಧಾಕರನನ್ನು ಅವಿನಾಶ್ ಕೊಲೆ ಮಾಡಿದ್ದು ಕಲ್ಪನಾಳ ವಿಚಾರಕ್ಕಲ್ಲ. ಅಸಲಿಗೆ ಆತನಿಗೆ ಈ ವಿಚಾರದ ಅರಿವೇ ಇರುವುದಿಲ್ಲ. ಹಾಗಾದರೆ ಈ ಕೊಲೆಯಾದದ್ದೇಕೆ..? 


ಅವಿನಾಶ್ ನನ್ನು ಬಿಡಿಸಲು ಭರಣಿ ಬಲರಾಮನ ಸಹಾಯ ಪಡೆಯಲು ಹೇಳಿದಾಗ.. ಪೃಥ್ವಿರಾಜರಿಗೂ ಹಾಗೂ ಬಲರಾಮನಿಗೂ ಆದ ಜಟಾಪಟಿಯೇನು..?


ಬಲರಾಮನ ಹಿಂದಿನ ಪ್ರಸಂಗ ಕಾವೇರಿಗೆ ತಿಳಿದಿತ್ತೇ ಅಥವಾ ಆತ ಅದೆಲ್ಲವನ್ನೂ ಆಕೆಯಿಂದ ಮುಚ್ಚಿಟ್ಟಿದ್ದನೇ..? ಅಷ್ಟಕ್ಕೂ ಬಲರಾಮ ಜೈಲಿನಲ್ಲಿದ್ದದ್ದೇಕೆ..? ಬಲರಾಮನ ಬದುಕಲ್ಲಿ ಭರಣಿ ಎಂಬ ಗಾಡ್ ಫಾದರ್ ಪಾತ್ರವೆಷ್ಟು..₹


ಕಾವೇರಿ, ಬಲರಾಮ ಹಾಗೂ ತಮ್ಮನಂತಿದ್ದ ಬಲರಾಮನ ಬಲಗೈ ಭಂಟ ರಾಜ ಕಾವೇರಿಯ ಊರಿಗೆ ಹೊರಟಾಗ ಅವರ ಮೇಲೆ ಅಟ್ಯಾಕ್ ನಡೆದದ್ದೇಕೆ.. ಅವರನ್ನು ರಕ್ಷಿಸಿದ ಬಾಬು ಯಾರು.. 


ಈ ಎಲ್ಲದರ ಉತ್ತರ ತಿಳಿಯಲು ಓದಿ 'ಅಮೃತ ಬಿಂದು' ಕಾದಂಬರಿಯನ್ನು. ಪ್ರತಿಯೊಬ್ಬರ ಬದುಕಿನಲ್ಲಿಯೂ ಕಷ್ಟದ ದಿನಗಳು ಇರುತ್ತವೆ. ವಿಷಮ ಘಳಿಗೆಗಳು ಬರುತ್ತವೆ. ಅದೆಲ್ಲದರಾಚೆಗೆ ಅಮೃತ ಸಿಕ್ಕು, ಬದುಕನ್ನು ಹಸನಾಗಿಸಿಕೊಳ್ಳುವ, ಪುನರುಜ್ಜೀವನಗೊಳಿಸಿಕೊಳ್ಳುವ ದಾರಿ ಎಲ್ಲರ ಬಳಿಯೂ ಇರುತ್ತದೆ. ಆದರೆ, ಮನುಷ್ಯ ಅದಕ್ಕೆ ಮನಸ್ಸು ಮಾಡಬೇಕು ಅಷ್ಟೇ..


ಇಲ್ಲಿನ ಪಾತ್ರಗಳನ್ನು ಕಾಣುವಾಗ ಇವರು ಸಂಪೂರ್ಣ ಒಳ್ಳೆಯವರು ಅಥವಾ ಸಂಪೂರ್ಣ ಕೆಟ್ಟವರು ಎಂಬ ಭಾವ ಬರುವುದಿಲ್ಲ. ಎರಡು ಶೇಡ್ ಗಳನ್ನು ಸಹಾ ಚಿತ್ರಸಿದ್ದಾರೆ. ಮೊದಲಿಗೆ ಒಳ್ಳೆಯವರಾಗಿ ಕಂಡವರು, ನಂತರ ಕೆಟ್ಟವರಾಗಿಯೂ ಕಾಣಬಹುದು ಅಥವಾ ವ್ಯತಿರಿಕ್ತವಾಗಿಯೂ ಇರಬಹುದು. ಬದುಕಿನ ಗತಿಯಲ್ಲಿ ನಡೆ-ನುಡಿ, ಸಹವಾಸ ಎಲ್ಲವೂ ಜೀವನದ ದಿಕ್ಕನ್ನು ಹೇಗೆ ಬದಲಿಸಬಲ್ಲದು ಎಂಬುದರ ಚಿತ್ರಣವಿದೆ. ಸರಿಯಾದ ಮಾರ್ಗದರ್ಶನ ದೊರೆತರೆ ಮನುಷ್ಯ ಎಷ್ಟು ಚೆಂದದ ಜೀವನ ಕಟ್ಟಿಕೊಳ್ಳಬಲ್ಲ ಎಂಬುದರ ಉದಾಹರಣೆ ಇರುವ, ಹಾಗೆಯೇ ಬದಲಾವಣೆ ಆತನ ಬದುಕಲ್ಲಿ ಬರದೇ ಇದ್ದರೆ, ಯಾರೂ ಆತನನ್ನು ತಿದ್ದದೇ ಹೋದರೆ ಆತ ಹೇಗೆ ಅಧಃಪತನಕ್ಕಿಳಿಯಬಲ್ಲ ಎಂಬುದರ ಉದಾಹರಣೆಯೂ ಇದೆ. ಕೆಟ್ಟವರಲ್ಲಿನ ಒಳ್ಳೆಯತನ ಹಾಗೂ ಒಳ್ಳೆಯವರಲ್ಲಿನ ಕೆಟ್ಟತನದ ಬಿಂಬ ಕಾಣುತ್ತದೆ. ಕುತೂಹಲದಿಂದ ಕೊನೆಯವರೆಗೂ ಓದಿಸಿಕೊಂಡು ಹೋದ ಕಾದಂಬರಿ ತನ್ನ ರಹಸ್ಯವನ್ನು ಬಿಟ್ಟುಕೊಡದೆ ಸಾಗುತ್ತಾ ಹೋಗುತ್ತದೆ. ಸಿನಿಮಾ ಶೈಲಿಯ ಕಥಾವಸ್ತುವಾದರೂ ನಮ್ಮ ಬದುಕಿಗೊಂದು ಪಾಠವಾಗಬಲ್ಲಂತಹಾ ಕಾದಂಬರಿ.


~ವಿಭಾ ವಿಶ್ವನಾಥ್

ಮಾಘದ ಮೋಡ (ಪುಸ್ತಕ ಯಾನ - 258)


ಪುಸ್ತಕದ ಶೀರ್ಷಿಕೆ : ಮಾಘದ ಮೋಡ

ಲೇಖಕರು : ಈಚನೂರು ಜಯಲಕ್ಷ್ಮಿ

ಪ್ರಕಾಶಕರು : ಸಾಹಿತ್ಯ ಸಂಗಮ

ಪುಟಗಳು : 226


ಇದು ನಾನು ಓದಿದ ಈಚನೂರು ಜಯಲಕ್ಷ್ಮಿಯವರ ಮೊದಲನೇ ಪುಸ್ತಕ. ಮಾಘದ ಮೋಡ ಎನ್ನುವ ಕಾದಂಬರಿಯ ಶೀರ್ಷಿಕೆ ಕಂಡು ಕಥಾವಸ್ತು ಏನಿರಬಹುದು ಎಂದುಕೊಂಡು ಓದುತ್ತಾ ಹೋಗುತ್ತಿದ್ದಂತೆ ಈ ಶೀರ್ಷಿಕೆಗೆ ಎರಡು ಅರ್ಥವಿದೆ ಎನ್ನಿಸಿತು. ಇದು ಇಚ್ಛೆಯನ್ನು ಮೀರಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ನಟಿಯಾದವಳೊಬ್ಬಳ ಬದುಕಿನ ಕಥೆ. ಆಕೆ ನಟಿಸಿದ್ದ ಕೊನೆಯ ಚಿತ್ರ 'ಮಾಘದ ಮೋಡ' ಎಂಬುದಾಗಿ. ಅದಷ್ಟೇ ಶೀರ್ಷಿಕೆಗೆ ಕಾರಣವಾಗಿರಲಾರದು ಎನ್ನಿಸಿತು. ಮಾಘ ನಕ್ಷತ್ರ ಸಾರ್ವಭೌಮತ್ವವನ್ನು ಸೂಚಿಸುತ್ತದೆ ಎನ್ನುತ್ತಾರೆ. ಮನೆಯಲ್ಲಿ ಮೋಡ ಕವಿದ ವಾತಾವರಣ ಹಾಗೂ ಸಾರ್ವಭೌಮತ್ವದ ಅಡಿಯಲ್ಲಿ ನಲುಗಿದ ಹೆಣ್ಣೊಬ್ಬಳ ಜೀವನಗಾಥೆ ಎಂದರೂ ತಪ್ಪಾಗಲಾರದೇನೋ..


ಶಿಸ್ತಿನ ತಾರೆ ಎಂದೇ ಹೆಸರಾಗಿದ್ದ ಪದ್ಮಿನಿ ಈಗ 'ಪಂಚವಟಿ'ಯಲ್ಲಿ ಅಶೋಕವನದ ಸೀತೆಯಂತೆ ಬದುಕುತಿದ್ದಳು. ತನ್ನ 29ನೆಯ ವಯಸ್ಸಿನಲ್ಲಿ ನಟನೆಗೆ ನಿವೃತ್ತಿ ಹೇಳಿ ತನ್ನದೇ ಆದ ಫಾರಂ ಒಂದರಲ್ಲಿ ಕೃಷಿ ಮಾಡುತ್ತಾ.. ಸನ್ಯಾಸಿನಿಯಂತೆ ಜೀವನ ನಡೆಸುತ್ತಿದ್ದಳು. ಆಕೆಯನ್ನು ಸಂದರ್ಶನ ಮಾಡಲು ಬಂದಿದ್ದ ಮಾನಸ ಪತ್ರಿಕೆಯ ಶ್ಯಾಮ್ ಜೊತೆಗೆ ಮಾತನಾಡುತ್ತಾ.. ಆಕೆಯ ಮನಸ್ಸಿನ ಮಾತುಗಳು ಪ್ರಶ್ನೆಗೆ ಉತ್ತರವಾಗಿ ಬರುತ್ತಿರುವಾಗ, ಆಕೆ ಎಷ್ಟು ನೇರಾನೇರ ಎಂಬುದನ್ನು ತೋರುತ್ತಾರೆ. ಹತ್ತು ವರ್ಷ ಚಿತ್ರರಂಗದಲ್ಲಿ ಬಲವಾಗಿ ಕಾಲೂರಿ ನಿಂತಿದ್ದವಳು ಹೀಗೆ ಎಲ್ಲರಿಂದ ದೂರವಾಗಿ, ಒಂಟಿಯಾಗಿ ನಿಂತಿದ್ದವಳ ಬದುಕಿನ ಕುರಿತು ಹಲವರಿಗೆ ಇದ್ದ ಪ್ರಶ್ನೆಯೇ ಶ್ಯಾಮ್ ನಿಗೂ ಇತ್ತು. ಆತ ಕೇಳಿದ್ದೇನು ? ತಾನು ಉತ್ತರಿಸಿದ್ದೇನು ? ಎಂಬುದೇ ಅರಿವಿರಲಿಲ್ಲ ಪದ್ಮಿನಿಗೆ. ಶ್ವೇತವರ್ಣದ ತನ್ನ ಸರಳ ಭಾವಚಿತ್ರವನ್ನು ತೆಗೆದುಕೊಳ್ಳಲು ಅನುಮತಿ ಇಟ್ಟವಳು ಅಷ್ಟು ಪ್ರಸಿದ್ಧದ ಉತ್ತುಂಗದಲ್ಲಿದ್ದ ನಟಿಯೆಂದು ಆತನಿಗೆ ನಂಬಲಾಗಲಿಲ್ಲ. ಆದರೆ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಮಾತು ಶ್ಯಾಮ್ ನಿಗೆ ಅರಿವಾಗಿತ್ತು. ತನ್ನ ಪತ್ನಿ ಶೋಭಾ ಕೂಡ ಪದ್ಮಿನಿಯ ಫ್ಯಾನ್ ಆಗಿದ್ದವಳು. ಆಕೆಯ ಕುರಿತು ಹೇಳುತ್ತಾ.. ಆಕೆಯನ್ನು ನಿಮ್ಮ ಭೇಟಿಗೆ ಕರೆತರಬಹುದಾ ಎಂದು ಕೇಳಿದಾಗ, ಪದ್ಮಿನಿ ಆತನ ಕುರಿತು ವಿಚಾರಿಸಿದ್ದಳು. ಆತನಿಗೆ ಇದ್ದದ್ದು ಒಬ್ಬನೇ ಮಗ ಆತನ ಹೆಸರು ಪ್ರದ್ಯುಮ್ನನೆಂದು ತಿಳಿದಾಗ ಮನಸ್ಸು ಮುದುಡಿತ್ತು. 


ಆಕೆಗೆ ತನ್ನ ತೀರಿ ಹೋದ ಎರಡು ವರ್ಷದ ಮಗು ಪ್ರದ್ಯುಮ್ನನ ನೆನಪಾಗಿತ್ತು. ಶ್ಯಾಮ್ ಹೋದ ತಕ್ಷಣ ಮನಸ್ಸು ಭಾರವಾದಂತಾಗಿ ಗುಂಡಪ್ಪ ಮಾಡಿದ್ದ ಅಡುಗೆಯನ್ನು ಬೇಡವೆಂದು ನೆನಪುಗಳಲ್ಲಿ ಕಳೆದು ಹೋಗಿದ್ದಳು. 


ರಾಮಾವಧಾನಿಗಳು ಹಾಗೂ ಸುಬ್ಬಮ್ಮನವರ ಕೊನೆಯ ಮಗಳು ಪದ್ಮಿನಿ. ನಾಲ್ಕು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳ ನಂತರ ಹುಟ್ಟಿದವಳು. ಮಗುವಿನ ಚೆಂದ ಕಂಡು ರಾಮಾವಧಾನಿಗಳು ಪದ್ಮಿನಿ ಜಾತಿಯ ಹೆಣ್ಣಾಗುತ್ತಾಳೆ ಎಂದು ಹೆಸರಿಟ್ಟಿದ್ದರು. ಆಕೆ ನಟನಾರಂಗಕ್ಕೆ ಕಾಲಿಟ್ಟು ಪ್ರಖ್ಯಾತ ನಟಿಯಾಗುತ್ತಾಳೆ ಎಂಬುದರ ಅರಿವು ಅಂದು ಯಾರಿಗೂ ಇರಲಿಲ್ಲ. 


ಪುಟ್ಟ ಪದ್ಮಿನಿ ಮನೆಯವರ ಮಾತಿಗೆ ಪದ್ದಿ-ಪೆದ್ದಿಯಾಗಿದ್ದಳು. ಆಕೆಗೆ ಅದರ ಅರಿವು ಮೂಡಿಸಿ, ಆಕೆಯನ್ನು ಪದ್ಮಿನಿಯನ್ನಾಗಿಸಿದ್ದು ಪಕ್ಕದ ಮನೆಯ ಪುಟ್ಟ ಗೆಳೆಯ ಕೇಶವ. ಕೇಶವನ ಮನಸ್ಸು ಪದ್ಮಿನಿಯತ್ತ ಸೆಳೆದಂತೆ, ತನ್ನೆಲ್ಲಾ ವಿಚಾರಗಳನ್ನು ಹಂಚಿಕೊಳ್ಳಲು ಕಾಯುತ್ತಿದ್ದಳು ಪದ್ಮಿನಿ. ಬೆಳೆಯುತ್ತಿದ್ದಂತೆ ಇಬ್ಬರ ನಡುವಿನ ಗೆಳೆತನ ಅವರಿಗೇ ಅರಿವಿಲ್ಲದಂತೆ ಪ್ರೀತಿಯಾಗುತ್ತಿತ್ತು. ಇತ್ತ ಕೇಶವನ ಅಮ್ಮ ಸೋನಾಬಾಯಿ ಆಗಾಗ ಎಚ್ಚರಿಸುತ್ತಿದ್ದರೆ.. ಅತ್ತ ಸುಬ್ಬಮ್ಮನವರಿಗೆ ಅದರ ಅರಿವಿರಲಿಲ್ಲ.


ವಯಸ್ಸು ಹೆಚ್ಚಿದಂತೆ ಇಬ್ಬರಲ್ಲೂ ಸಂಕೋಚ ಹೆಚ್ಚಾಗುತ್ತಿತ್ತು. ಕೇಶವನ ಪ್ರೀತಿ ಪದ್ಮಿನಿಗೆ ತಿಳಿದರೂ.. ಆಕೆ ಮುಂದುವರಿಯುವಷ್ಟು ಧೈರ್ಯವಂತೆಯಲ್ಲ. ಅಕ್ಕ ಮೀನಾಕ್ಷಿ ಹೊತ್ತು ತಂದ ಸಂಬಂಧವನ್ನು ನೋಡಲು ಹೊರಟರು. ಆತ ಮೀನಾಕ್ಷಿಯ ಗಂಡನ ಶಾಲೆಯಲ್ಲಿಯೇ ಶಿಕ್ಷಕನಾಗಿದ್ದ ನಟರಾಜ. 


ಶಕುಂತಲಮ್ಮ ಹಾಗೂ ಸುಬ್ಬರಾಯರ ಮಗ. ಅವರ ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಳು ಮಗಳ ಮದುವೆಯಾಗಿತ್ತು. ನಟರಾಜನ ನಂತರ ತಂಗಿ ಶಶಿಯ ಮದುವೆಯಾಗಬೇಕಿತ್ತು. ಮೊದಲ ನೋಟಕ್ಕೆ ನಟರಾಜ ಪದ್ಮಿನಿಯ ಚೆಲುವಿಗೆ ಮರುಳಾದರೆ.. ಅವನ ತಂದೆ-ತಾಯಿ ಅವರ ಮನೆಯವರ ಸೌಜನ್ಯ, ಸೌಶೀಲ್ಯಕ್ಕೆ ಬೆರಗಾದರು. ಹಳ್ಳಿಯ ಬೀಗತನ ಕಲ್ಪವೃಕ್ಷವೆಂದು ಅವರ ಭಾವನೆ. ಶಶಿ ಮಾತ್ರ ಮತ್ಸರದಿಂದ ಮೂಗು ಮುರಿದಳು. ನಟರಾಜ ಶಶಿಯನ್ನು ಪದ್ಮಿನಿಯ ಓದಿದ ಅಣ್ಣನಿಗೆ ಕೊಡಬೇಕೆಂಬ ಮಾತು ಹೇಳಿದರೂ ಸಿಟಿಯ, ಸಮುದ್ರದ ತುಡಿತಕ್ಕೆ ಶಶಿ ನಿರಾಕರಿಸಿದರೆ.. ಆಕೆಯ ತಾಯಿ ಕೊಟ್ಟು-ತೆಗೆದುಕೊಳ್ಳುವ ಸಂಬಂಧ ಬೇಡವೆಂದರು. 


ಸುಭದ್ರಮ್ಮನವರ ಸೂಕ್ಷ್ಮಕ್ಕೆ ಈ ಸಂಬಂಧ ಒಪ್ಪಿಗೆಯಿರಲಿಲ್ಲ. ತಾಯಿಯ ತಾಳಕ್ಕೆ ತಕ್ಕಂತೆ ಕುಣಿಯುವ ಮಗ, ಮನೆಯಲ್ಲಿ ಯಜಮಾನಿಯ ಆಳ್ವಿಕೆ ಆಕೆಗೆ ಸರಿ ಹೋಗಿರಲಿಲ್ಲ. ಆದರೆ, ಅವಧಾನಿಗಳು ಹಾಗೂ ಪದ್ಮಿನಿಯ ಒಪ್ಪಿಗೆ ಇದ್ದುದರಿಂದ ವಿವಾಹ ನಡೆಯಿತು. ಈ ವಿವಾಹಕ್ಕೆ ಮನಸ್ಫೂರ್ತಿ ಒಪ್ಪದಿದ್ದವರ ಪಟ್ಟಿಯಲ್ಲಿ ಕೇಶವನೂ ಇದ್ದ.


ವಿವಾಹದ ನಂತರವೂ ಅತ್ತೆ-ಸೊಸೆಯರ ನಡುವೆ ವಿರಸವಿರಲಿಲ್ಲ. ಇಬ್ಬರ ಹಿರಿಯ ಸೊಸೆಯಂದಿರಂತೆ ದೂರ ಹೋದರೆ ಎಂಬ ಭಯವಿತ್ತು ಶಕುಂತಲಮ್ಮನವರಿಗೆ. ಸಮಸ್ಯೆ ಎದುರಾದದ್ದು ಆಕೆ ನಟರಾಜನ ಜೊತೆಗೆ ಪಾರ್ಟಿಗೆ ಹೋಗಿ ಬಂದ ಮೇಲೆ. ಶಶಿಯೇ ಅಣ್ಣನ ಅಭಿರುಚಿಗೆ ತಕ್ಕಂತೆ ಪದ್ಮಿನಿಯನ್ನು ಅಲಂಕರಿಸಿದ್ದರಿಂದ.. ಮೊದಲೇ ಸುಂದರಿಯಾಗಿದ್ದ ಅವಳು ಮತ್ತಷ್ಟು ಸುಂದರಿಯಾಗಿ ಕಂಗೊಳಿಸಿದಳು. 


ಅಂದು ಆ ಸಮಾರಂಭದಲ್ಲಿ ದೂರದರ್ಶನದ ನಾಟಕ ವಿಭಾಗದಲ್ಲಿದ್ದವರು ನಟರಾಜ ದಂಪತಿಗಳನ್ನು ಪರಿಚಯ ಮಾಡಿಕೊಂಡು ಒಂದು ಆಫರ್ ಮಾಡುತ್ತಾರೆ. ದೂರದರ್ಶನ ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ನೀವೇಕೆ ಭಾಗವಹಿಸಬಾರದು ಎಂದಾಗ ನಟರಾಜನ ಬಹುಕಾಲದ ಆಸೆ ಈಡೇರಿದಂತಾಗುತ್ತದೆ. ಆದರೆ, ಅದು ಪದ್ಮಿನಿಯ ಆಸೆಯಾಗಿರುವುದಿಲ್ಲ. ಆಕೆ ಸಂಪ್ರದಾಯಬದ್ಧ ಕುಟುಂಬದಲ್ಲಿ ಬೆಳೆದವಳು. ಶಾಲಾ ನಾಟಕಕ್ಕೇ ಆಕೆಯ ತಂದೆ ಒಪ್ಪಿಗೆ ನೀಡಿರುವುದಿಲ್ಲ. ಇದು ಆಕೆಯ ಮನಸ್ಸಿನ ವಿರುದ್ಧವಾಗಿದ್ದು.. ಇದು ನಟರಾಜ ಇದಕ್ಕೆ ಒಪ್ಪಿಗೆ ನೀಡಿದಾಗ ಮನಸ್ಸು ಮುದುಡುತ್ತದೆ. ಅತ್ತೆ-ಮಾವನಾದರೂ ಇದಕ್ಕೆ ವಿರೋಧಿಸುತ್ತಾರೆ ಎಂದುಕೊಂಡರೆ, ನಟರಾಜನ ತಂದೆಯ ಮಾತು ನಡೆಯುವುದಿಲ್ಲ. ತಾಯಿ ಹಣದಾಸೆ ಹಾಗೂ ಪ್ರಸಿದ್ಧಿಯ ಆಸೆಗೆ ಒಪ್ಪುತ್ತಾರೆ. ಪದ್ಮಿನಿಯ ತವರಿನವರನ್ನು ನಟರಾಜ ಕಡೆಗಣಿಸಿ, ಅವರೆಲ್ಲರಿಂದ ಈ ವಿಚಾರವನ್ನು ಮುಚ್ಚಿಡುತ್ತಾನೆ. ಪದ್ಮಿನಿ ಅದೇ ನಗರದಲ್ಲಿದ್ದ ತನ್ನ ಅಕ್ಕ ಮೀನಾಕ್ಷಿಗೆ ವಿಚಾರ ಹೇಳಿದ್ದು ಸಹಾ ಆತನಿಗೆ ಹಿಡಿಸುವುದಿಲ್ಲ.


ಸೌಂದರ್ಯದ ಜೊತೆ ಪದ್ಮಿನಿಯ ನಟನೆಯೂ ಗೆದ್ದಿರುತ್ತದೆ. ಮೊದಲ ಪ್ರದರ್ಶನ ದೂರದರ್ಶನದಲ್ಲಿ ಬಂದಾಗ ನಟರಾಜನ ಮನಸ್ಸು ಕದಡುತ್ತದೆ. ತನಗಿಂತ ಪದ್ಮಿನಿಯನ್ನೇ ಎಲ್ಲರೂ ಹೊಗಳಿದಾಗ ಮನಸ್ಸು ಕೆಡಿಸಿಕೊಂಡರೂ.. ಹೆಂಡತಿಯಿಂದ ಬರುವ ಸಂಭಾವನೆಯ ಕಡೆಗಿದ್ದ ಕಣ್ಣು ಅದೆಲ್ಲವನ್ನೂ ಕಡೆಗಣಿಸುತ್ತದೆ. ನಟರಾಜ ಹೆಚ್ಚು-ಹೆಚ್ಚು ಹಣದತ್ತ ವಾಲುತ್ತಿದ್ದಂತೆ ಆತನ ತಾಯಿಯು ಕುಮ್ಮಕ್ಕು ಕೊಡುತ್ತಾಳೆ. ಈ ಮಧ್ಯೆ ಪದ್ಮಿನಿ ಗರ್ಭಿಣಿಯಾದಾಗಲೂ ನಟರಾಜ ತೆಗೆಸುವಂತೆ ಹೇಳುತ್ತಾನೆ. ಆದರೆ, ಪಟ್ಟು ಹಿಡಿದ ಪದ್ಮಿನಿ ಅದರಿಂದ ಹಿಂದೆ ಸರಿಯುವುದಿಲ್ಲ. ತವರಿಗೆ ಹೋದವಳಿಗೆ ಅಲ್ಲಿ ಅಷ್ಟರಲ್ಲಿ ವಿಚಾರ ತಿಳಿದಿರುವುದರಿಂದ ನೀನು ಗಂಡನನ್ನು ಧಿಕ್ಕರಿಸಿ ನಡೆಯಬೇಕಿತ್ತು ಎಂಬ ಮಾತು ಬಂದಾಗ ಕುಸಿದು ಹೋಗುತ್ತಾಳೆ. ಆದರೆ, ಅದು ಸಾಧ್ಯವಿರುವುದಿಲ್ಲ ಎಂದು ಅರ್ಥ ಮಾಡಿಸಲು ಸೋಲುತ್ತಾಳೆ. ಮಗ ಪ್ರದ್ಯುಮ್ನ ಹುಟ್ಟಿದ ನಂತರವೂ ಆಕೆಯ ಪ್ರತಿ ನಡೆಯನ್ನು ನಟರಾಜ ನಿರ್ದೇಶಿಸುತ್ತಾನೆ. 


ತವರಿನ ನಂಟು ಸರಿಯಾಗದೆ, ಇತ್ತ ಮಗನಿಗೆ ತಾಯಿಯ ಪ್ರೀತಿಯನ್ನೂ ಕೊಡಲಾಗದೆ ಒತ್ತಾಯಕ್ಕೆ ಸಿನಿಮಾರಂಗಕ್ಕೆ ಇಳಿಯುತ್ತಾಳೆ ಪದ್ಮಿನಿ. ದಿನೇದಿನೇ ಪ್ರಸಿದ್ಧಿಯ ಉತ್ತುಂಗಕ್ಕೆ ಏರುತ್ತಿದ್ದರೂ ಮನಸ್ಸಿನಲ್ಲಿ ನೆಮ್ಮದಿಯಿರುವುದಿಲ್ಲ. ಶಶಿಯ ವಿವಾಹವಾಗಿರುತ್ತದೆ. ಅಂತಸ್ತು ಏರಿರುತ್ತದೆ. ಗಂಡನ ಮನೆಯ ಕಡೆಯವರೆಲ್ಲರೂ ತನ್ನ ಹಣದಿಂದಲೇ ಮೆರೆಯುತ್ತಿರುವಾಗ, ತವರಿಗೆ ಹೋಗಲೂ ಸ್ವಾತಂತ್ರ್ಯವಿಲ್ಲದೆ, ತನ್ನವರಿಗೆ ಏನನ್ನೂ ಕೊಂಡೊಯ್ಯಲಾಗದ ಅಸಹಾಯಕತೆಯಲ್ಲಿ ತೊಳಲುತ್ತಾಳೆ.


ಪದ್ಮಿನಿ ಇಲ್ಲದ ವೇಳೆಯಲ್ಲಿ ಮಗ ಪ್ರದ್ಯುಮ್ನ ಸಾವನ್ನಪ್ಪಿದಾಗಲೂ ನಟರಾಜನ ಕಟು ಹೃದಯ, ಅತ್ತೆಯ ನಡೆಯಿಂದ ಮನಸ್ಸಿಗೆ ಹೇಳಲಾಗದ ಘಾಸಿಯಾಗುತ್ತದೆ. ಅಲ್ಲದೆ, ತವರಿನಿಂದಲೂ ಸಿಕ್ಕಿದ್ದು ತಿರಸ್ಕಾರ.


ಕಾಲ ಸಾಗುತ್ತಾ ಹೋಗುತ್ತದೆ. ಹತ್ತು ವರ್ಷ ಚಲನಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ಪದ್ಮಿನಿ ತನ್ನ ಕೊನೆಯ ಚಲನಚಿತ್ರ 'ಮಾಘದ ಮೋಡ'ವನ್ನು ಮುಗಿಸಿ 'ಪಂಚವಟಿ'ಯತ್ತ ತೆರಳುತ್ತಾಳೆ. ಅದಕ್ಕೆ ಕಾರಣವಾದ ಘಟನೆ ಏನು..? ಸಾರ್ವಭೌಮತ್ವದ ತನ್ನ ಗಂಡನಿಂದ ಆಕೆ ತಪ್ಪಿಸಿಕೊಂಡದ್ದೇಕೆ..? ಆತನ ಬಿಗಿ ಮುಷ್ಟಿಯಿಂದ ಪಾರಾದ ಬಗೆ ಹೇಗೆ..?? ಇಲ್ಲಿ ಆಕೆಯ ಮಾವನ ಅಸಹಾಯಕತೆ ಹಾಗೂ ಪದ್ಮಿನಿಯ ಪರಿಸ್ಥಿತಿ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. 


ಇದಿಷ್ಟು ಕಾದಂಬರಿಯ ಒಂದು ತೂಕವಾದರೆ.. ಇದರ ನಂತರದ್ದೇ ಮತ್ತೊಂದು ತೂಕ ಎನ್ನಿಸಿತು. ಏಕೆಂದರೆ, ಈ ಕಾದಂಬರಿಯ ಅಂತ್ಯ ಅಷ್ಟು ಮನೋಜ್ಞವಾಗಿದೆ. ಕೇವಲ ಚಿತ್ರನಟಿಯೊಬ್ಬಳ ಬದುಕಿನಲ್ಲಿ ಪ್ರೀತಿ ಸಿಗದ, ಕೇವಲ ಕೀರ್ತಿಯ ಉತ್ತುಂಗವಷ್ಟೇ ಚಿತ್ರಿತವಾಗಿದ್ದರೆ ಈ ಕಾದಂಬರಿ ಅಷ್ಟು ಪರಿಣಾಮಕಾರಿಯಾಗುತ್ತಿರಲಿಲ್ಲವೇನೋ.. ಆದರೆ, ಅದರ ನಂತರ ಆ ಒಂಟಿತನದಲ್ಲಿ, ಏಕಾಂಗಿತನದಲ್ಲಿ ಅರಸಿದ ಪ್ರೀತಿ ಸಿಗದಾದಾಗ.. ನಂತರ, ತನ್ನ ಹಣದಿಂದ ಹತ್ತಿರವಾದವರು ಆಕೆಯನ್ನು ನಡೆಸಿಕೊಳ್ಳುವ ರೀತಿ ಎಲ್ಲವನ್ನೂ ಕಂಡು ಆಕೆ ತೆಗೆದುಕೊಳ್ಳುವ ತೀರ್ಮಾನ ಮಾದರಿಯಾಗಿದೆ ಎನ್ನಿಸಿತು. ಅದೇನು ಎಂದು ತಿಳಿಯಲು ಈ ಕಾದಂಬರಿಯನ್ನು ನೀವೇ ಓದಿ. ಇಷ್ಟವಿಲ್ಲದ ಬದುಕನ್ನು ಬದುಕಿ, ನಂತರ ಅದನ್ನು ಮತ್ತೆ ನೋಡುವ ಪರಿ ವಿಭಿನ್ನವಾದದ್ದು. 


ಇಲ್ಲಿ ಪದ್ಮಿನಿಯಷ್ಟೇ ಕೇಶವನ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಪದ್ಮಿನಿ ವಿವಾಹವಾದ ನಂತರ ಆತನ ತೊಳಲಾಟ, ಅನ್ಯಮನಸ್ಕತೆ ಹಾಗೂ ಆತನ ಮನಸ್ಥಿತಿ, ಮನೆಯ ಪರಿಸ್ಥಿತಿ ಜೊತೆಗೆ ಹಂತ-ಹಂತವಾಗಿ ಆತ ಬದಲಾಗುತ್ತಿರುವ ಪರಿ ಎಲ್ಲವನ್ನೂ ಸೊಗಸಾಗಿ ಚಿತ್ರಿಸಿದ್ದಾರೆ ಲೇಖಕಿ. ಕೇಶವ ಹಾಗೂ ಪದ್ಮಿನಿಯರ ಮಾಗಿದ ಬದುಕು ಹೇಗಿತ್ತು ನೀವೇ ಓದಿ ತಿಳಿಯಿರಿ.


ಸಾರ್ವಭೌಮತ್ವ ಹಾಗೂ ಸ್ವಾರ್ಥದ ಪರಮಾವಧಿಗಳನ್ನು ಮೀರಿ ಕೆಲವು ಅಂತಃಕರಣದ ಪಾತ್ರಗಳು ಸಹಾ ಇಲ್ಲಿ ಕಾಣುತ್ತವೆ. ಅದರಲ್ಲಿ ಅಡುಗೆಯವರಾಗಿರುವ ಗುಂಡಪ್ಪನ ಪಾತ್ರವೂ ಒಂದು. ಆ ಪಾತ್ರ ಕಾಣಿಸಿಕೊಳ್ಳುವುದು ಕೆಲವೇ ಕಡೆಗಳಲ್ಲಾದರೂ.. ಪರಿಣಾಮಕಾರಿಯಾಗಿದೆ. 


ನಟಿಯೊಬ್ಬಳ ಕಥೆ ಇದು ಎಂದುಕೊಂಡಾಗ ಮನಸ್ಸಿಗೆ ಹಲವಾರು ಚಿತ್ರಣಗಳು ಬರಬಹುದು ಅಥವಾ ಹಲವು ನಟಿಯರ ಆತ್ಮಚರಿತ್ರೆಗಳು ನೆನಪಾಗಬಹುದು. ಆದರೆ, ಈ ಕಾದಂಬರಿಯನ್ನು ಕಟ್ಟಿಕೊಟ್ಟಿರುವ ರೀತಿ, ನಿರೂಪಣೆಯಲ್ಲಿನ ಕಲಾತ್ಮಕತೆ ಹಾಗೂ ವಾಸ್ತವತೆಯ ಚಿತ್ರಣ ಭಾವನೆಗಳು ಹಾಗೂ ಕಥಾವಸ್ತು ಎಲ್ಲವೂ ಬಹಳವೇ ಇಷ್ಟವಾಯಿತು. ಈಚನೂರು ಜಯಲಕ್ಷ್ಮಿಯವರ ಮತ್ತಷ್ಟು ಬೇರೆ ಪುಸ್ತಕಗಳನ್ನು ಓದಬೇಕಿದೆ. 

~ವಿಭಾ ವಿಶ್ವನಾಥ್

ದಿಗಂತದಾಚೆ (ಪುಸ್ತಕ ಯಾನ - 257)


ಪುಸ್ತಕದ ಶೀರ್ಷಿಕೆ : ದಿಗಂತದಾಚೆ

ಲೇಖಕರು : ಮೈತ್ರೇಯಿ

ಪ್ರಕಾಶಕರು : ವ್ಯಾಸ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2006


ಇದು ಎರಡು ಸಂಯುಕ್ತ ಸಂಪುಟದ ಕಾದಂಬರಿ. 'ದಿಗಂತದಾಚೆ' ಕಾದಂಬರಿ ನಾನು ಓದಿದ ಈ ಲೇಖಕಿಯ ಮೊದಲ ಪುಸ್ತಕ.


'ದಿಗಂತದಾಚೆ' ಎಂಬ ಶೀರ್ಷಿಕೆಯನ್ನು ಹೊತ್ತ ಈ ಸುಂದರ ಕಾದಂಬರಿ ಕುರಿತು ಸರಳವಾಗಿ ಹೇಳುವುದಾದರೆ ಎರಡು ಗಂಡುಗಳನ್ನು ಪ್ರೀತಿಸಿ ಅವರ ಪ್ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗದೆ ಒದ್ದಾಡುವ ಹೆಣ್ಣೊಬ್ಬಳ ಕಥೆ.


ಲೇಖಕಿ ಅವರ ಮುನ್ನುಡಿಯಲ್ಲಿ "ಇಬ್ಬರನ್ನು ಸರಿಸಮವಾಗಿ ಪ್ರೀತಿಸಿದ ಕಥಾನಾಯಕಿ ಕೊನೆಗೆ ಆರಿಸಿಕೊಂಡದ್ದು ಯಾರನ್ನು..?" ಎಂಬ ಉತ್ತರ ಕಾದಂಬರಿಯಲ್ಲಿದೆ" ಎಂದು ಹೇಳಿದ್ದಾರೆ. ಆದರೆ, ಇಬ್ಬರನ್ನು ಸರಿಸಮವಾಗಿ ಪ್ರೀತಿಸುತ್ತಾರೆ ಎಂಬ ಮಾತನ್ನು ಅಷ್ಟು ಸುಲಭವಾಗಿ ಒಪ್ಪಲಾಗಲಿಲ್ಲ. ಇಲ್ಲಿ ಆ ಪ್ರೀತಿಸಿದ ಕಾಲಘಟ್ಟ ಅಥವಾ ಸಮಯ ವಿಭಿನ್ನವಾಗಿದ್ದು.. ಪ್ರೀತಿ ಸರಿಸಮವಾಗಿಯೂ ಇರಬಹುದು ಎಂಬ ಅರ್ಥವೂ ಆಗಿರಬಹುದು ಎಂದು ಓದಲು ಶುರುಮಾಡಿದೆ. 


'ದರ್ಪಣ' ಪತ್ರಿಕೆಯ ದೀಕ್ಷಿತ್ ಎಂದರೆ ಜ್ಞಾನದ ಸಾಗರವಿದ್ದಂತೆ. ಅಲ್ಲದೇ, ರಾಜಕಾರಣಿಗಳ ಮೈಯಲ್ಲಿ ನಡುಕ ಹುಟ್ಟಿಸುವ ಸತ್ಯಾಸತ್ಯತೆಯನ್ನು ತೆರೆದಿಡುವ ಪತ್ರಿಕೆಯನ್ನು ನಡೆಸುತ್ತಿದ್ದ ವ್ಯಕ್ತಿ. ಅದಕ್ಕಾಗಿ ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ಟು ಪತ್ರಿಕೋದ್ಯಮಕ್ಕೆ ಇಳಿದಿದ್ದರು. ಭ್ರಷ್ಟಾಚಾರಿಗಳ ಪಾಲಿಗೆ ಸಿಂಹಸ್ವಪ್ನದಂತಿದ್ದವರು. ಲಾಭಾಂಶದ ಒಂದು ಭಾಗವನ್ನು ಚಾರಿಟಿಗಳಿಗೆ ಕೊಟ್ಟು ಬಿಡುತ್ತಿದ್ದರು. ಆ ಪತ್ರಿಕೆಯಲ್ಲಿ ಕೆಲಸ ಮಾಡುವುದೇ ಒಂದು ಹೆಮ್ಮೆ. ಇಂತಹಾ ಅಪರೂಪದ 'ದರ್ಪಣ' ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದವಳು ಶ್ರದ್ದಾ. ಇವಳೇ ನಮ್ಮ ಈ ಕಾದಂಬರಿಯ ನಾಯಕಿ. ರ‍್ಯಾಂಕ್‌ ವಿದ್ಯಾರ್ಥಿಯಾಗಿದ್ದವಳಿಗೆ ಹಲವಾರು ಕಡೆ ಕರೆ ಬಂದರೂ ಎಲ್ಲೂ ಹೋಗದೆ ದರ್ಪಣಕ್ಕೆ ಸೇರಿಕೊಂಡು ಕೆಲಸ ಮಾಡಿ ಭೇಷ್ ಎನ್ನಿಸಿಕೊಳ್ಳುತ್ತಿದ್ದಳು. ದೀಪಾವಳಿ ವಿಶೇಷಾಂಕಕ್ಕಾಗಿ ಭಾರತದ ಅಪರೂಪದ ಶಿಲ್ಪಿಗಳು ಎಂಬ ವಿಷಯದ ಮೇಲೆ ಅಪರೂಪದ ಲೇಖನವೊಂದನ್ನು ಸಿದ್ಧಪಡಿಸಿಟ್ಟಿದ್ದಳು. ಅದಕ್ಕಾಗಿ ಎಷ್ಟೋ ಕಷ್ಟಪಟ್ಟು ಅಪರೂಪದ ಫೋಟೋಗಳನ್ನು ಸಂಗ್ರಹಿಸಿದ್ದಳು. ಆದರೆ, ಅದಕ್ಕೆಂದೇ ಒಂದು ವಾರ ಕಷ್ಟಪಟ್ಟು ಹತ್ತಾರು ಲೈಬ್ರರಿಗೆ ಅಲೆದಿದ್ದವಳಿಗೆ ಕೋಪ ಬಂದದ್ದು ಮರುದಿನ ಅದೇ ಲೇಖನಕ್ಕೆ ಅವಳು ಕೊಟ್ಟಿದ್ದ ಹೆಡ್ಡಿಂಗ್ ಬದಲಾಗಿ, ಹಲವಾರು ಬದಲಾವಣೆಗಳನ್ನು ಮಾಡಲಾಗಿತ್ತು. ಯಾವತ್ತೂ ತನ್ನ ಲೇಖನವನ್ನು ತಿದ್ದಿಸಿಕೊಳ್ಳಲು ಇಷ್ಟಪಡದಿದ್ದವಳು ನಖಶಿಕಾಂತ ಉರಿದಿದ್ದಳು. 


ಕಾರಣ ತಿಳಿದದ್ದು ದೀಕ್ಷಿತ್ ರವರು ಪರಿಚಯಿಸಿದ ಆಕಾಶ್ ನನ್ನು ಕಂಡಾಗ. ಮೊದಲು ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ಈಗ ದರ್ಪಣ ಸೇರಿದ್ದರು. ಇನ್ನು ಮುಂದೆ ಶ್ರದ್ದಾ ಅವರೊಟ್ಟಿಗೆ ಕೆಲಸ ಮಾಡಬೇಕೆಂದು ಹೇಳಿದ್ದು ಅವಳಿಗೆ ಇನ್ನೂ ಕೋಪ ತರಿಸಿತ್ತು. ಆಕಾಶ್ ಮೇಲಿನ ದುಸಮುಸು ಹಾಗೆಯೇ ಇದ್ದರೂ.. ದೀಕ್ಷಿತ್ ರವರ ಮಾತಿಗೆ ಬೆಲೆ ಕೊಟ್ಟು ಆದಷ್ಟೂ ಆತನೊಟ್ಟಿಗೆ ಕೆಲಸ ಮಾಡಲು ಯತ್ನಿಸುತ್ತಿದ್ದಳು ಶ್ರದ್ದಾ. ಆಕಾಶ್ ಬುದ್ಧಿವಂತಿಕೆಯ ಅರಿವಾದರೂ.. ಕೋಪವಂತೂ ಇದ್ದೇ ಇತ್ತು.


ವೆಂಕಟೇಶ ಹಾಗೂ ಗಿರಿಜಾರವರ ಮುದ್ದಿನ ಮಗಳು ಶ್ರದ್ದಾ. ಅವಳು ಹಾಗೂ ದೀಪ್ತಿ ಅಕ್ಕ-ತಂಗಿಯರಾದರೂ.. ಸ್ವಭಾವದಲ್ಲಿ ತದ್ವಿರುದ್ಧವಾಗಿದ್ದವರು. ದೀಪ್ತಿ ಹಾಗೂ ಶ್ರದ್ದಾ ಇಬ್ಬರೂ ಶಾಪಿಂಗ್ ಗೆ ಹೋದಾಗ ನಡೆದ ಘಟನೆ ದೀಪ್ತಿಗೆ ಆಕಾಶ್ ಮೇಲಿನ ಗೌರವವನ್ನು ಹೆಚ್ಚಾಗಿಸಿತ್ತು.


ಪೃಥ್ವಿ ಶ್ರದ್ಧಾಳ ಬಾಲ್ಯದ ಗೆಳೆಯ. ಮಡಿಕೇರಿಗೆ ಅಜ್ಜಿ ಮನೆಗೆ ಹೋಗುತ್ತಿದ್ದಾಗ ಪರಿಚಯವಾಗಿದ್ದವನು. ವಯಸ್ಸಿನ ಭೇದವಿಲ್ಲದೆ, ಬೆರೆಯುತ್ತಿದ್ದ ಸಂದರ್ಭದಲ್ಲಿ ಪಕ್ಕದ ತೋಟದವರ ಮಗನಾದ ಪೃಥ್ವಿ ಶ್ರದ್ಧಾ ಜೊತೆಗೆ ಬರುತ್ತಿದ್ದನು. ಸ್ವಭಾವತಃ ಬಜಾರಿಯಾಗಿದ್ದ ಶ್ರದ್ದಾ ಯಾರ ಮಾತನ್ನೂ ಕೇಳದೆ, ಹುಡುಗರ ಸಮಕ್ಕೆ ನಿಂತು ಬಿಡುತ್ತಿದ್ದಳು. ಪೃಥ್ವಿಗೂ ಅವಳಿಗೂ ಸದಾ ಜಗಳ ನಡೆಯುತ್ತಿತ್ತು. ಆದರೆ, ಕ್ರಮೇಣ ಜಗಳ, ಮಾತು ಬಿಡುವುದು ಮತ್ತೆ ಸ್ನೇಹ ಮಾಡುವುದು ಎಲ್ಲವೂ ಮಾಮೂಲಾಗುತ್ತಾ ಜಗಳ ಕಾಯುತ್ತಲೇ.. ಬೆಳೆದು ದೊಡ್ಡವರಾಗುವಷ್ಟರಲ್ಲಿ, ಕಾಲೇಜಿಗೆ ಬರುವಷ್ಟರಲ್ಲಿ ಗೆಳೆತನ ಪ್ರೀತಿಯಾಗಿ ಮಾರ್ಪಟ್ಟಿತ್ತು. ಇಬ್ಬರ ಮನೆಯಲ್ಲಿಯೂ ಇದಕ್ಕೆ ವಿರೋಧವೇನಿರಲಿಲ್ಲ. ಪಿ.ಯು.ಸಿ ನಂತರ ಪೃಥ್ವಿ ಏರ್ಪೋರ್ಟ್ ಟ್ರೈನಿಂಗ್ ಗೆ ಸೇರಿದರೆ, ಶ್ರದ್ಧಾ ತನ್ನಿಷ್ಟದಂತೆ ಡಿಪ್ಲೋಮಾ ಎಂಜಿನಿಯರಿಂಗ್ ಗೆ ಸೇರಿದಳು. ಚಿಕ್ಕಂದಿನಿಂದಲೂ ಯಾರನ್ನೂ ಲೆಕ್ಕಿಸದೆ, ಧೈರ್ಯದಿಂದ ಬೆಳೆದಿದ್ದ ಶ್ರದ್ದಾಳಿಗೆ ಸಾಹಸಗಳೆಂದರೆ ಇಷ್ಟ. ಅದಕ್ಕಾಗಿ ಅವಳು ಆಯ್ದುಕೊಂಡ ಮಾರ್ಗ ಪತ್ರಿಕೋದ್ಯಮ. 


ಪೃಥ್ವಿಗೆ ಸಮಯ ಸಿಕ್ಕಾಗ, ಶ್ರದ್ಧಾಳಿಗೂ ಸಮಯವಿದ್ದಾಗಲೆಲ್ಲಾ ಅವರ ಮಾತುಕತೆಯ ವಿಚಾರಗಳ ವಿನಿಮಯ ನಡೆಯುತ್ತಲೇ ಇತ್ತು. ಹಾಗೆಂದು ಅವು ಬಾಲಿಶ ಪ್ರೇಮದ ಮಾತುಕತೆಗಳಲ್ಲ. ಬದಲಾಗಿ ಸಮಾಜಕ್ಕೆ ತಮ್ಮಿಂದಾಗುವ ಸೇವೆಯ ಕುರಿತಾದ ನಿಸ್ವಾರ್ಥದ ಮಾತುಕತೆಗಳೇ. ಇಬ್ಬರ ನಡುವೆ ರೇಗಿಸುವಿಕೆಯೂ ಇರುತ್ತಿತ್ತು. ಆಕಾಶನ ವಿಚಾರ ಹೇಳಿದಾಗಲೆಲ್ಲಾ.. ಪೃಥ್ವಿ ಜಗಳ, ಮುನಿಸು ಎಂದು ಪ್ರೇಮವಾದೀತು ರೇಗಿಸುತ್ತಿದ್ದದ್ದೂ ಇತ್ತು. 


ಈ ನಡುವೆ ಆಫೀಸಿನಿಂದ ಎಲ್ಲರೂ ಸೇರಿ ಆಕಾಶ್ ನೇತೃತ್ವದಲ್ಲಿ ಗೋವಾ ಟ್ರಿಪ್ ಗೆ ಹೊರಟಿದ್ದರು. ಆ ಸಮಯದಲ್ಲಿ ಆಕಾಶ್ ನನ್ನು ಕಳಿಸಲು ಬಂದ ಅವರ ಮನೆಯವರೊಬ್ಬರ ಪರಿಚಯವಾಗಿತ್ತು ಶ್ರದ್ಧಾಳಿಗೆ. ಅದಾದ ನಂತರ ಅವಳು ಆಕಾಶ್ ನನ್ನು ನೋಡುವ ರೀತಿಯೇ ಬದಲಾಗಿತ್ತು. ಈ ಟ್ರಿಪ್ ಮುಗಿದ ನಂತರ ಅವರ ಬಾಂಧವ್ಯ ಹೆಚ್ಚುತ್ತಿತ್ತು ಎಂದರೂ ತಪ್ಪಾಗಲಾರದು. ಅದಕ್ಕೆ ಒಂದು ಕಾರಣವೂ ಇತ್ತು. ತಲೆನೋವೆಂದು ಆಕೆ ಬಳಲುತ್ತಿದ್ದಾಗ.. ಇದ್ದಕ್ಕಿದ್ದಂತೆ ತಲೆಸುತ್ತು ಬಂದು, ಸಮುದ್ರದಲ್ಲಿ ಮುಳುಗುವ ಸಂದರ್ಭದಲ್ಲಿ ಆಕಾಶ್ ಅವಳನ್ನು ಕಾಪಾಡಿದ್ದ. ಆತನ ಮೇಲಿನ ಗೌರವ ಪ್ರೀತಿಯಾಗಿ ಬದಲಾಗುತ್ತದೆ. 


ಪೃಥ್ವಿಯ ಯಾವ ವಿಚಾರವೂ ಆಕಾಶ್ ಗೆ ತಿಳಿದಿರಲಿಲ್ಲ. ಇತ್ತ ಶ್ರದ್ಧಾ ತನ್ನ ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ. ಹಾಗೆಂದು, ಅದು ಅವಳು ಬೇಕೆಂದು ಮರೆಮಾಚಿದ್ದೇನಲ್ಲ. 


ಆಕಾಶ್ ಹಾಗೂ ಪೃಥ್ವಿ ಇಬ್ಬರ ಮೇಲಿನ ಪ್ರೇಮವೂ ಹೆಚ್ಚು-ಕಡಿಮೆಯ ಅಳತೆಗೋಲಿಗೆ ಸಿಗುವಂತಹದ್ದಾಗಿರಲಿಲ್ಲ. ಹಾಗಾದರೆ, ಯಾರ ಪಾಲಿಗೆ ಶ್ರದ್ಧಾ ದಿಗಂತದಂತೆ ಭಾಸವಾಗಿದ್ದು..?? ಏಕೆ ಎಂದು ತಿಳಿಯಲು ಮೈತ್ರೇಯಿ ಅವರ 'ದಿಗಂತದಾಚೆ' ಕಾದಂಬರಿ ಓದಿ ನೋಡಿ.


~ವಿಭಾ ವಿಶ್ವನಾಥ್

ಅಪ್ಪನೆಂಬ ಆಕಾಶ

'ಅಪ್ಪ' ಎಂಬ ಶಬ್ದಕ್ಕೆ ಅದೆಷ್ಟು ರೀತಿಯ ವ್ಯಾಖ್ಯಾನ ನೀಡಬಹುದು.. ವಿವಿಧ ಪುಸ್ತಕಗಳನ್ನು ಓದುವಾಗ ಅದೆಷ್ಟು ರೀತಿಯ ಅಪ್ಪಂದಿರನ್ನು ಕಾಣಬಹುದು. ಆದರೆ, ಮನಸ್ಸಿಗೆ ಹತ್ತಿರವಾಗುವ ಅಪ್ಪನ ಪಾತ್ರ ನಮ್ಮ ನಿಜಜೀವನದಲ್ಲಿಯೂ ಹತ್ತಿರವಾಗಿದ್ದಾಗಲಷ್ಟೇ ತೀರಾ ಆಪ್ತವೆಂದೆನ್ನಿಸುತ್ತದೆ. ನನ್ನ ಓದಿನ ಪರಿಮಿತಿಯಲ್ಲಿ 'ಅಪ್ಪ'ನ ಆಯಾಮಗಳನ್ನು ತಿಳಿದಂತೆ ಹೇಳುತ್ತಾ ಸಾಗುತ್ತೇನೆ.


'ಸಾಯಿಸುತೆ'ಯವರ ಮುಗಿಲ ತಾರೆ ಹಾಗೂ ಶರದೃತುವಿನ ಚಂದ್ರ ಕಾದಂಬರಿಯಲ್ಲಿ ಕಂಡುಬರುವ 'ಭಾಷ್ಯಂ' ತನ್ನ ಓದಿಗೆ ತಕ್ಕ ಹುಡುಗಿ ಸಿಗಲಿಲ್ಲವೆಂದು ಹೆಂಡತಿಯ ಮೇಲೆ ಕೆಲವೊಮ್ಮೆ ಕೋಪ ತೋರಿದರೂ.. ಮಕ್ಕಳ ಪಾಲಿಗೆ ಬಹಳ ಒಳ್ಳೆಯ ಅಪ್ಪ. ಚೈತ್ರ ಹಾಗೂ ಸ್ಮಿತಾ ಇಬ್ಬರಿಗೂ ದಕ್ಕಿದ ಅಪ್ಪ ವಿಭಿನ್ನವೇ. ಹಾಗೆಂದು ಮಕ್ಕಳ ತಪ್ಪನ್ನು ತಿಳಿಸದೇ ಬಿಟ್ಟವರಲ್ಲ. ಅಲ್ಲದೆ, ದೊಡ್ಡ ಮಗಳು ಚೈತ್ರಳಿಗೆ ಮಾನಸಿಕ ಬೆಂಬಲ ಬೇಕಾದಾಗ ಅದನ್ನು ಸಹಾ ನೀಡುತ್ತಾರೆ. ಸ್ಮಿತಾಳ ಗಂಡ ಸಂದೀಪ ಹಾಗೂ ಸ್ಮಿತಾ ಇಬ್ಬರೂ ಆ ಮನೆಯ ಜವಾಬ್ದಾರಿ ತೆಗೆದುಕೊಳ್ಳದೆ ಹುಡುಗಾಟಿಕೆಯಲ್ಲಿಯೇ ಜೀವನ ನಡೆಸುತ್ತಿದ್ದಾಗ ಕೂಡಾ ತಿದ್ದಿ ಬುದ್ದಿ ಮಾತು ಹೇಳುತ್ತಾರೆ. ಅಳಿಯನನ್ನು ಮಗನ ಸ್ಥಾನದಲ್ಲಿ ಕಂಡು ಬುದ್ದಿ ಹೇಳುವ ಪರಿ ಹಾಗೂ ಅದರಲ್ಲಿ ಅವರು ತೋರುವ ಪ್ರಬುದ್ಧತೆ ತಂದೆಯ ಗಾಂಭೀರ್ಯವನ್ನು ಬಿಡಿಸಿಡುತ್ತದೆ.


ಅಕ್ಷಯ್ ಪಂಡಿತ್ ಅವರ 'ಬಯಲಲಿ ತೇಲುತ ತಾನು' ಕಥಾ ಸಂಕಲನದಲ್ಲಿ ನೀಲಿ ನಕ್ಷತ್ರ ಕತೆಯಲ್ಲಿ ಕಂಡ ಅಪ್ಪನ ಪಾತ್ರ ವಾಸ್ತವಕ್ಕೆ ಬಹಳ ಹತ್ತಿರವೆನ್ನಿಸಿತು. ಕೆಲವು ತಂದೆಯರಿಗೆ ಮಕ್ಕಳು ತಮ್ಮಂತೆಯೇ ಆಗಿ ತಮ್ಮದೇ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಆಸೆಯಿದ್ದರೆ.. ಇನ್ನು ಕೆಲವು ಅಪ್ಪಂದಿರು, ಮಕ್ಕಳು ತಮ್ಮಂತಾಗದೆ.. ತಮಗಿಂತ ಇನ್ನೂ ದೊಡ್ಡ ಹುದ್ದೆಗೇರಿ ತಮಗೆ ಹೆಸರು ತರಲಿ ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಎಲ್ಲವೂ ಅವರವರ ವೃತ್ತಿಯ ಮೇಲೆ  ಹಾಗೂ ಅವರವರ ಆಲೋಚನೆಯ ಮೇಲೆ ಅವಲಂಬಿತ. ರಮಾಕಾಂತಗೌಡ ಎನ್ನುವ ಬ್ಲೂ ಸ್ಟಾರ್ ಸೆಕ್ಯೂರಿಟಿ ತನ್ನ ಮಗ ರಮೇಶ ತನ್ನಂತಾಗದೇ ಎತ್ತರಕ್ಕೇರಲಿ ಎಂದು ಆಶಿಸುವ ತಂದೆ. ಆದರೆ, ಮಗನ ಬದುಕಿನ ತಿರುವು ಬೇರೆಯೇ ಇತ್ತು. ಹಾಗಾದಾಗ, ತಂದೆಯ ಮನಸ್ಸಿನ ಭಾವಗಳು ಹೇಗಿರುತ್ತವೆ ಎಂದೂ ಆಲೋಚಿಸುವಂತೆ ಮಾಡಿತ್ತು.


ಜೋಗಿಯವರ 'ನಿರ್ಗಮನ' ಕಾದಂಬರಿ ಬೆಳೆಯುವುದೇ ಕಾಣೆಯಾದ ಅಪ್ಪನ ಹುಡುಕಾಟದಲ್ಲಿ. ಅನಿರುದ್ಧನ ತಂದೆ ಶಾರದಾಪ್ರಸಾದ್ ಕಾಣೆಯಾದಾಗ ಶುರುವಾಗುವ ಕತೆ ಬೆಳೆಯುವ ಪರಿ ವಿಭಿನ್ನ. ಇಲ್ಲಿ ಗಂಡು ಮಕ್ಕಳು ಹಾಗೂ ತಂದೆಯ ಒಡನಾಟಕ್ಕೆ ಹೆಚ್ಚಿನ ಆದ್ಯತೆ ಇದೆ ಎಂದೆನ್ನಿಸಿತು. ಇದು ಹೆಣ್ಣುಮಕ್ಕಳು ಹಾಗೂ ತಂದೆಯ ಒಡನಾಟಕ್ಕಿಂತ ವಿಭಿನ್ನ. ಬಹುಶಃ, ನಮ್ಮ ಜೀವನದಲ್ಲಿಯೂ ಇದನ್ನು ಕಾಣಬಹುದು. ಈ ವ್ಯತ್ಯಾಸವನ್ನು ಅರಿಯಬಹುದು. ತಂದೆ ಕಾಣೆಯಾದಾಗ ಅವರು ಬೇಕೆಂದು ಒಂಟಿಯಾಗಿರಲು ಆಯ್ದುಕೊಂಡ ಸಂಧರ್ಭ, ಅದಾದ ನಂತರ ಅವರು ಹಾಗೂ ಮಗನ ವಿಭಿನ್ನ ಪ್ರಪಂಚಗಳು ಎಲ್ಲವೂ ಚಿತ್ರಿತವಾಗಿ ಕತೆ ಬೇರೆಯದ್ದೇ ತಿರುವು ಪಡೆಯುತ್ತದೆ. ಸಂಗಾತಿಯ ಅನುಪಸ್ಥಿತಿಯಲ್ಲಿ ತಂದೆಯಾದವನು ಮಗನ ಜೊತೆಗೆ ಬೆಸೆದುಕೊಳ್ಳುವ ಕೊಂಡಿಯೇ ಮಾಯವಾಯಿತಾ ಎಂದು ಆಲೋಚಿಸುವಂತಾಗುತ್ತದೆ. 


ಎ. ಪಿ. ಮಾಲತಿಯವರ 'ವಸಂತದ ಹೂವುಗಳು' ಕಥಾಸಂಕಲನದ 'ಅವನು ಮತ್ತು ಮಗು' ಕತೆಯಲ್ಲಿ ಬರುವ ಅಪ್ಪನೂ ವಿಭಿನ್ನವಾಗಿ ಕಂಡನು. ಮಗು ಅಪ್ಪನಂತಿದೆಯಾ ಇಲ್ಲವೇ ಅಮ್ಮನಂತಿದೆಯಾ ಎಂದು ಜನರು ಸುಲಭವಾಗಿ ನಿರ್ಧರಿಸಿಬಿಡುತ್ತಾರೆ. ಅದರಲ್ಲಿಯೂ ಮಗು ಕೊಂಚ ಚೆನ್ನಾಗಿ ಕಂಡು, ಅಪ್ಪ ಅಥವಾ ಅಮ್ಮ ಅದಕ್ಕಿಂತ ಕಪ್ಪು ಅಥವಾ ಸಾಧಾರಣ ರೂಪಿನವರಾಗಿದ್ದರೆ ಇದು ಅವರದ್ದೇ ಮಗು ಎನ್ನುವ ಅನುಮಾನ ಮೂಡಿಬಿಡುತ್ತದೆ. ದಾದರ್ ರೈಲ್ವೆ ನಿಲ್ದಾಣದಲ್ಲಿ ಚೆಂದದ ಮಗುವನ್ನು ಎತ್ತಿಕೊಂಡ ಅವನು ಅದನ್ನು ಸಂಭಾಳಿಸದೆ ಒದ್ದಾಡುತ್ತಿರುವುದನ್ನು ಕಂಡು ಒಬ್ಬ ಯುವಕನಿಗೂ ಈ ಅನುಮಾನವೇ ಬಂದಿತು. ಅದು ಅವನದೇ ಮಗುವಾ ಅಥವಾ ಅವನು ಮಗುವನ್ನು ಕದ್ದುಕೊಂಡು ಬಂದು ಅದನ್ನು ಸಂಭಾಳಿಸಲಾಗದೆ ಒದ್ದಾಡುತ್ತಿರುವನಾ ಎಂದು. ಈ ಕಥೆ ನಮ್ಮ ನೋಡುವ ಕಣ್ಣಿಗೂ ಅಲೋಚಿಸುವ ಮನಸ್ಥಿತಿಗೂ ಹಿಡಿದ ಕನ್ನಡಿಯಂತಿದೆ. ಆದರೆ, ಆ ಮಗು ಆತನದ್ದೇ ಆಗಿತ್ತು. ಪತ್ನಿಯಿಲ್ಲದ ಪರಿಸ್ಥಿತಿಯಲ್ಲಿ ಮಗುವನ್ನು ಸಂಭಾಳಿಸಲು ಆತ ಪಡುತ್ತಿದ್ದ ಪಾಡು, ಮಗುವಿನ ಚೆಂದದ ಬಟ್ಟೆ ಹಾಗೂ ಆತನ ಮಾಸಿದ ಬಟ್ಟೆ ಅದೆಲ್ಲದಕ್ಕೂ ಕಾರಣವಾಗಿತ್ತು. ಅಪ್ಪನೇ ಹಾಗಲ್ಲವಾ..? ತಾನು ಹೇಗೆಯೇ ಇದ್ದರೂ.. ತನ್ನ ಮಗು ಚೆನ್ನಾಗಿರಬೇಕು ಎಂದು ಆಶಿಸುವಾತ. 


ಡಾ. ಅಜಿತ್ ಹರೀಶಿ, ವಿಠಲ್ ಶೆಣೈ ಅವರ 'ಕಥಾಭರಣ' ಕಥಾಸಂಕಲನದಲ್ಲಿ ವಾಣಿ ಕಾಮತ್ ಅವರು 'ಅಪ್ಪ' ಎಂಬ ಶೀರ್ಷಿಕೆಯಡಿಯಲ್ಲಿ ಅಪ್ಪನ ಕುರಿತ ಕತೆಯೊಂದನ್ನು ಕಟ್ಟಿಕೊಟ್ಟಿದ್ದಾರೆ. ಅಪ್ಪ ಎಂಬ ವ್ಯಕ್ತಿ ಒಂದು ರೀತಿಯಲ್ಲಿ ನಿಗೂಢತೆಯನ್ನೇ ಹೊದ್ದಂತೆ ಬದುಕುವವನು. ನಿಖಿಲ್ ನ ದೃಷ್ಟಿಯಲ್ಲಿ ನಿಕೃಷ್ಟನಾಗಿ ಕಾಣುವ ಅಪ್ಪ ಕೊನೆಯಲ್ಲಿ ಬದಲಾಗಿ ಬಿಡುತ್ತಾನೆ. ಅಪ್ಪನನ್ನು ನೋಡಿಯೋ.. ಊಹಿಸಿಯೋ.. ಒಂದು ರೀತಿಯಲ್ಲಿ ಅಂತರ್ಮುಖಿಯಾಗಿಯೇ ಬೆಳೆಯುವ ಮಗ, ಸದಾ ತನ್ನನ್ನು ಹೋಲಿಸುತ್ತಿದ್ದ ಅಣ್ಣನಿಂದಲೂ ದೂರ ಉಳಿದವನು ಬದಲಾದದ್ದಕ್ಕೆ ಕಾರಣ ಅಪ್ಪನಾ..

ಅಪ್ಪನೆಂಬ ನಿಲುಕಲಾರದ ವ್ಯಕ್ತಿತ್ವವನ್ನು ಬಿಡಿಸಿಡುವ ಕಥೆ ಇದು.


ಇವೆಲ್ಲದಕ್ಕಿಂತ ವಿಭಿನ್ನವಾಗಿ ಅಪ್ಪನನ್ನು ಕಟ್ಟಿಕೊಟ್ಟ ಪುಸ್ತಕ ಸಂತೋಷಕುಮಾರ ಮೆಹೆಂದಳೆಯವರ ಮನೋ-ವೈಜ್ಞಾನಿಕ ಕೃತಿ 'ಅವನು.. ಶಾಪಗ್ರಸ್ತ ಗಂಧರ್ವ'.


ಎಷ್ಟೋ ಜನರಿಗೆ ಅಪ್ಪ ಕೆಟ್ಟವನು.. ಎಷ್ಟೋ ಜನರಿಗೆ ತನ್ನ ಅಪ್ಪನ ಮುಖವನ್ನೇ ಕಂಡರೆ ಆಗುವುದಿಲ್ಲ, ಕೆಲವರ ಮನೆಯಲ್ಲಿ ಆತ ಅಸಹಾಯಕತನದ ಪರಮಾವಧಿಯಂತಿರುವ ಬೇಜವಾಬ್ದಾರಿಯ ಮನುಷ್ಯ. ಅಪ್ಪ ಅದನ್ನು ಮಾಡಲಿಲ್ಲ, ಅಪ್ಪ ಇದನ್ನು ಮಾಡಲಿಲ್ಲ ಎನ್ನುವವರೇ ಹೆಚ್ಚು. ಹೆಣ್ಣುಮಕ್ಕಳಿಗೆ ಹಿಡಿ ಪ್ರೀತಿ ಸಿಕ್ಕರೆ ಸಾಕು ಅಪ್ಪನಿಂದ.. ಅವನೇ ಅವಳ ಪಾಲಿನ ದೈವ. ಆದರೆ, ಎಷ್ಟೋ ಗಂಡುಮಕ್ಕಳಿಗೆ ಅಪ್ಪನ ಕುರಿತ ದೂರು ಇದ್ದದ್ದೇ.. ಅದರಲ್ಲೂ ಅಪ್ಪನೆನ್ನುವ, ಸಿಡುಕ, ಒರಟ ಮನುಷ್ಯನ ಕುರಿತು. 


ಅಪ್ಪ ಹೀಗ್ಯಾಕೆ..?? ಅಪ್ಪನನ್ನು ಆಕಾಶ ಮಾಡಿದ ಮೇಲೆ ಅವನು ಕೈಗೆ ಸಿಗದೆ ಹೋಗಿಬಿಟ್ಟನಾ..?? ಅಪ್ಪ ಯಾಕೆ ಯಾವುದಕ್ಕೂ ಬೇಡಿಕೆ ಇಡದೆ ಸುಮ್ಮನಾಗಿಬಿಟ್ಟ..?? ಎಲ್ಲದಕ್ಕೂ ಇಲ್ಲಿ ಉತ್ತರ ಸಿಗುತ್ತದೆ.


ಅಪ್ಪನನ್ನು ಯಾರಾದರೂ ದ್ವೇಷಿಸುವವರಿದ್ದರೆ ಅವರಿಗೂ ಈ ಪುಸ್ತಕ ಓದಲು ಸಜೆಸ್ಟ್ ಮಾಡುವೆ. ಯಾಕೆಂದರೆ, ದ್ವೇಷದ ಹಿಂದಿನ ಮನಸ್ಥಿತಿ ಹಾಗೂ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಲಿದೆ ಈ ಪುಸ್ತಕ.


ಇಂತಹಾ ಹಲವಾರು ಓದಿನ, ನಿಜ ಜೀವನದ ನೋಟಗಳು ಸಿಕ್ಕ ಮೇಲೂ.. ಅಪ್ಪ ಎಂದರೆ ಆಕಾಶವೇ.. ನಾವು ಕಂಡಷ್ಟು ಮಾತ್ರವೇ ನಮ್ಮ ನೋಟಕ್ಕೆ ಸಿಕ್ಕುವ ಅಪ್ಪ ಅರ್ಥವಾಗಿದ್ದಕ್ಕಿಂತ.. ಅರ್ಥವಾಗದೇ ಉಳಿದದ್ದೇ ಹೆಚ್ಚು ಎಂಬುದು ನನ್ನ ಅಭಿಪ್ರಾಯ. ಆದರೆ, ಅರ್ಥವಾದ, ದಕ್ಕಿದ ಅಪ್ಪನ ಸುಂದರ ಚಿತ್ರಣವಂತೂ ನಮ್ಮ ಮನಸ್ಸಲ್ಲಿ ಪಡಿಮೂಡಿರಲಿ.


~ವಿಭಾ ವಿಶ್ವನಾಥ್

ಸ್ತ್ರೀ ಎಂದರೆ ಅಷ್ಟೇ ಸಾಕೇ? (ಶಾಂತಲೆ )

"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ"


ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ, ಸನ್ಮಾನಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ನಂಬಿಕೆಯಿದೆ. ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಸೊಸೆಯಾಗಿ, ಅಕ್ಕ-ತಂಗಿ, ಅತ್ತಿಗೆ, ನಾದಿನಿ, ಸ್ನೇಹಿತೆ ಹೀಗೆ ಎಲ್ಲಾ ಸಂಬಂಧಗಳನ್ನು ಸಮರ್ಥವಾಗಿ ನಿಭಾಯಿಸುವ ಗಟ್ಟಿಗಿತ್ತಿ. ಇಷ್ಟೇ ಅಲ್ಲದೇ..


ಕಾರ್ಯೇಷು ದಾಸಿ, ಕರಣೇಷು ಮಂತ್ರಿ; 

ಭೋಜೇಷು ಮಾತಾ, ಶಯನೇಷು ರಂಭಾ;

ರೂಪೇಷು ಲಕ್ಷ್ಮೀ, ಕ್ಷಮಾಯೇಷು ಧರಿತ್ರೀ,


ಎನ್ನುವ ಶ್ಲೋಕದಂತೆ ಆರು ಸದ್ಗುಣಗಳನ್ನು ಅರಿತೋ, ಅರಿವಿಲ್ಲದೆಯೋ ರೂಢಿಸಿಕೊಂಡು ತನ್ನ ಸಂಸಾರವನ್ನು ನಿಭಾಯಿಸುತ್ತಾಳೆ. ಇದು ದೈನಂದಿನ ಬದುಕಿನಲ್ಲಿಯಾದರೆ, ಸಾಮಾಜಿಕವಾಗಿ.. ಅದರಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಮೊದಲಿಗರು ಹಲವರಿದ್ದಾರೆ. ನನ್ನ ಇಂದಿನ ಲೇಖನದಲ್ಲಿ ಪ್ರಸ್ತುತ ಮಹಿಳೆಯರಿಗಿಂತ ಆ ಕಾಲದಲ್ಲಿ ವೀರ ಸಾಮ್ರಾಟರ ನಡುವಲ್ಲಿಯೂ ತಮ್ಮತನವನ್ನು ಉಳಿಸಿಕೊಂಡ ಹೆಣ್ಣು, ಅದರಾಚೆಗೆ ಬೆಳೆದ ಹೆಣ್ಣಾಗಿ ಚಾರಿತ್ರಿಕ ಪಾತ್ರದ ಹೆಣ್ಣಾಗಿ ಶಾಂತಲೆ ಇಷ್ಟವಾಗುತ್ತಾಳೆ. 


ಆದರೆ, ನನ್ನಿಷ್ಟದ ಸ್ತ್ರೀಯಾಗಿ ನನಗೆ ಆಪ್ತವೆನ್ನಿಸುವ ಪಾತ್ರ ಶಾಂತಲೆಯದ್ದು. ಶಾಂತಲೆಯ ಕುರಿತು ತಿಳಿಯುವಾಗಲೆಲ್ಲಾ ಅದರಲ್ಲೇ ತಲ್ಲೀನಳಾಗುವ ಭಾವವಂತೂ ಇದ್ದೇ ಇದೆ. ಕೆ. ವಿ. ಅಯ್ಯರ್ ಅವರ ಶಾಂತಲೆಯಂತೂ ನನ್ನ ಚಿತ್ತಭಿತ್ತಿಯಲ್ಲಿ ಹಾಗೆಯೇ ನೆಲೆ ನಿಂತಿದ್ದಾಳೆ. ಮ.ನಾ ಮೂರ್ತಿಯವರ ಹಾಗೂ ಸಿ. ಕೆ. ನಾಗರಾಜರಾವ್ ಅವರ ರಚನೆಯ ಶಾಂತಲೆಯ ಕುರಿತು ನಾನಿನ್ನೂ ಓದಿಲ್ಲ. ಹಾಗಾಗಿ, ನನ್ನ ಓದಿನ ಪರಿಮಿತಿಯಲ್ಲಿ ಮಾತ್ರವೇ ಇದನ್ನು ಬರೆಯುತ್ತೇನೆ. 


ವಿಷ್ಣುವರ್ಧನನಿಗೆ ಮೊದಲಿಗೆ ವಿವಾಹದಲ್ಲಿ ಆಸಕ್ತಿ ಇಲ್ಲದಿದ್ದರೂ.. ಅಮ್ಮನ ಪ್ರೀತಿಯ ಒತ್ತಾಯಕ್ಕೆ ಮಣಿದು ಜೊತೆಗೆ ರಾಜ್ಯದ ಹಿತದೃಷ್ಟಿಯಿಂದ, ಸಂತಾನಾಭಿವೃದ್ಧಿಯ ಕಾರಣವೂ ಸೇರಿ ವಿವಾಹಕ್ಕೆ ಒಪ್ಪಿಗೆ ನೀಡಿದರು. ಹಾಗೆ ಒಪ್ಪಿಗೆ ಪಡೆಯುವ ಮುನ್ನ ಮಹಾರಾಣಿ ಮಹಾದೇವಿಗೆ ಕಣ್ಣಿಗೆ ಬಿದ್ದಿದ್ದ ಹೆಣ್ಣು ಶಾಂತಲೆ. 


ಕುವರ ವಿಷ್ಣುವಿನ ಬ್ರಹ್ಮೋಪದೇಶದ ಸಂಧರ್ಭದಲ್ಲಿ ವಿಷ್ಣುವರ್ಧನನಿಗೆ ಶಾಂತಲೆಯ ದರ್ಶನವಾಯಿತು. ಧರ್ಮೇಶ್ವರನ ವರಪ್ರಸಾದದಿಂದ ಡಣಾಯಕ ಮಾರಸಿಂಗಮಯ್ಯ ಹಾಗೂ ಮಾಚಿಕಬ್ಬೆಗೆ ಜನಿಸಿದ ಮಗುವೇ ಶಾಂತಲೆ. ವೀಣಾ ವಾದನದ ಕಾರಣವೊಡ್ಡಿ ಮಹಾರಾಜರ ಮನಸ್ಸಿಗೆ ಆಕೆಯನ್ನು ಹತ್ತಿರವಾಗಿಸಲು ಮಹಾರಾಣಿಯವರು ಪ್ರಯತ್ನಿಸಿದರು. ಆ ಸಮಯದಲ್ಲಿ ವಿಷ್ಣುವರ್ಧನರು ಮನಸೋತದ್ದು ಶಾಂತಲೆಯೆಂದು ತಿಳಿದುಕೊಂಡು ಶಾಂತಲೆಯ ಪಕ್ಕದಲ್ಲಿದ್ದ ಲಕ್ಷ್ಮಿಗೆ. ಅಕ್ಕ-ತಂಗಿಯಂತಿದ್ದವರ ಮನದಾಸೆಯಂತೆ ಒಬ್ಬರನ್ನೇ ವಿವಾಹವಾದರು ಇಬ್ಬರೂ. ಪಟ್ಟಕ್ಕೇರಿ ವಿಷ್ಣುವರ್ಧನನ ಪಟ್ಟದ ರಾಣಿಯಾಗಿದ್ದು ಶಾಂತಲೆ. ವಿವಾಹದ ನಂತರ ವಿಷ್ಣುವರ್ಧನರ ಹೃದಯ ಸಾಮ್ರಾಜ್ಞಿಯೇ ಆಗಿ ಹೋದಳು ಶಾಂತಲೆ. ಕೇವಲ ಅಂತಃಪುರಕ್ಕೆ ಮಾತ್ರ ಸೀಮಿತವಾಗದೆ, ರಾಜ್ಯದ ಆಗುಹೋಗುಗಳನ್ನೂ ತಿಳಿಯುತ್ತಾ ಅಭಿಪ್ರಾಯಗಳನ್ನೂ ನೀಡುತ್ತಿದ್ದ ಶಾಂತಲೆ ಮುಂಬರುವ ದಿನಗಳಲ್ಲಿ ಅತ್ಯಂತ ಪ್ರಮುಖ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಾಳೆ.


ಶಾಂತಲೆಯದ್ದು ಬಹುಮುಖ ಪ್ರತಿಭೆ. ವೀಣೆಯನ್ನು ಹಿಡಿಯುವ ಕೈ ಸುಟ್ಟುಗ (ಸೌಟು)ವನ್ನು ಹಿಡಿಯಲು ಸಾಧ್ಯವೇ ಎಂಬ ಮಹಾರಾಜರ ಮಾತನ್ನು ಸುಳ್ಳಾಗುವಂತೆ ಮಾಡಿದ ಸಂಧರ್ಭವೂ ಇದೆ. ವೇಲಾಪುರಿ ಎಂದರೆ ಈಗಿನ ಬೇಲೂರಿನ ದೇವಾಲಯದ ಸಮಾರಂಭದಲ್ಲಿ ಲಕ್ಷ್ಮಿಯ ವೀಣೆ ಹಾಗೂ ಶಾಂತಲೆಯ ನೃತ್ಯ ಎಲ್ಲರನ್ನೂ ಮೋಡಿಗೊಳಪಡಿಸಿತು. ಚಿಕ್ಕಂದಿನಲ್ಲಿ ಕಲಿತಿದ್ದ ಶಾಸ್ತ್ರ, ಅಧ್ಯಯನಗಳಿಂದ ಆಕೆ ತೀರ್ಪು ಕೊಡುವ ಸಂಧರ್ಭದಲ್ಲಿ ಸಹಾ ತಪ್ಪುತ್ತಿರಲಿಲ್ಲ. 


ಕುವರವಿಷ್ಣುವಿನ ಮೇಲೆ ಶಾಂತಲೆ, ಲಕ್ಷ್ಮಿ, ವಿಷ್ಣುವರ್ಧನರ ಪ್ರೇಮವೆಷ್ಟಿತ್ತು, ನಂಬಿಕೆ ಎಷ್ಟಿತ್ತೆಂದರೆ ತಮಗೆ ಮಕ್ಕಳಾಗದಾಗ ಆತನೇ ಮುಂದಿನ ಸಾಮ್ರಾಜ್ಯದ ಅಧಿಪತಿ ಎಂದೂ ತೀರ್ಮಾನಿಸಿರುತ್ತಾರೆ. ಅದಕ್ಕೆ ಇನ್ನೇನು ಸಿದ್ಧತೆಗಳಾಗಬೇಕು ಎನ್ನುವಷ್ಟರಲ್ಲಿ ಕುವರವಿಷ್ಣುವಿನ ತೀರ್ಮಾನ ತಿಳಿಯುತ್ತದೆ. ಎಲ್ಲರ ಬದುಕಿಗೆ ಬೇರೆಯದ್ದೇ ತಿರುವು ನೀಡುತ್ತದೆ.


ಶಾಂತಲೆಯ ಆತ್ಮಾರ್ಪಣೆ ದುಡುಕು ಎಂದು ಮೊದಲಿಗೆ ಅನ್ನಿಸಿದರೂ ಮಮತಾಮಯಿಯಾದ ಅವಳ ಜಾಗದಲ್ಲಿ , ಮಹಾರಾಣಿಯಾದ ಅವಳ ಸ್ಥಾನದಲ್ಲಿ ನಿಂತು ಆಲೋಚಿಸಿದರೆ ಅವಳಿಗೆ ಬೇರೆ ಆಯ್ಕೆಯಾದರೂ ಏನಿತ್ತು ಎಂದೂ ಅನ್ನಿಸದೇ ಇರಲಾರದು. ಆತ್ಮಹತ್ಯೆ ಮಾಡಿಕೊಳ್ಳುವ ನಿಮಿಷದ ಮುನ್ನವೂ ಕೆಲವರು ಗುಟ್ಟು ಬಿಟ್ಟುಕೊಡದೆ ಇರುತ್ತಾರೆ. ತಮ್ಮ ಜೀವದ ಇನ್ನೊಂದು ಭಾಗವೇ ಅವಳು ಎನ್ನುವಂತಿದ್ದ ಲಕ್ಷ್ಮಿ ಹಾಗೂ ವಿಷ್ಣುವರ್ಧನನಿಗೂ ಸುಳಿವು ನೀಡದೆ ಹೊರಡುವ ಅವಳ ಮನಸ್ಸಿನ ದುಃಖ, ಘಾಸಿಯಾದದ್ದು ಹಾಗೂ ದೃಢತೆ ಸಾಮಾನ್ಯರ ಅಳತೆಗೋಲಿಗೆ ಸಿಗುವಂತದ್ದಲ್ಲ. 


ಕೆ. ವಿ. ಅಯ್ಯರ್ ಅವರ 'ಶ್ರೀ ವಿಷ್ಣುಕಾಂತೆ ಶಾಂತಲಾ'ವನ್ನೇ ಆಧರಿಸಿ ಶ್ರೀವಿಜಯ ಹಾಸನ ಅವರು 'ಆತ್ಮಾರ್ಪಣೆ ಅಥವಾ ಅಮರ ಸತಿ ಶಾಂತಲೆ' ಎಂಬ ನಾಟಕವನ್ನು ರಚಿಸಿದ್ದಾರೆ. 


ಇದರಲ್ಲಿ ಆತ್ಮಾರ್ಪಣೆ ಅಥವಾ ಅಮರ ಸತಿ ಶಾಂತಲೆ ಎಂಬ ಶೀರ್ಷಿಕೆಯನ್ನು ಕಂಡಾಗಲೇ ಶಾಂತಲೆಯ ಅಂತ್ಯದ ಕುರಿತ ಸ್ಪಷ್ಟತೆ ಕಂಡು ಬರುತ್ತದೆ. ಇಲ್ಲಿ ಆತ್ಮಾಹುತಿ ಎಂದು ಅಥವಾ ಆತ್ಮಹತ್ಯೆ ಎಂದು ಉಲ್ಲೇಖಿಸದೆ ಆತ್ಮಾರ್ಪಣೆ ಎಂದು ಉಲ್ಲೇಖಿಸಿರುವುದು ಆಕೆ ಮಾಡಿದ ತ್ಯಾಗಕ್ಕೆ ನೀಡಿದ ಗೌರವಯುತ ಅರ್ಪಣೆ ಎಂದೆನಿಸಿತು. ಶಾಂತಲೆಯೇ ಪ್ರಧಾನ ಪಾತ್ರದಲ್ಲಿರುವ ಈ ನಾಟಕ ಕಾದಂಬರಿಗಿಂತ ವಿಭಿನ್ನವಾಗಿಯೇನೂ ಕಂಡು ಬರಲಿಲ್ಲ. ಕಾದಂಬರಿಯ ಕೆಲವು ವಿಚಾರಗಳನ್ನು ಈ ನಾಟಕದಲ್ಲಿ ಕೈ ಬಿಡಲಾಗಿದೆ.


ಸಾ.ಶಿ. ಮರುಳಯ್ಯನವರ 'ನಾಟ್ಯ ಮಯೂರಿ'ಯ ಶಾಂತಲೆ ಶುರುವಾಗುವುದೇ ಶಾಂತಲೆಯ ನೃತ್ಯದ ಸಂದರ್ಭದಲ್ಲಿ. ಯುದ್ಧದ ವಿಜಯಕ್ಕಾಗಿ ಹೊನ್ನಾದೇವಿಗೆ ವಿಶೇಷ ಪೂಜೆ ಹಾಗೂ ವಿಶೇಷ ನರ್ತನದ ಸಂದರ್ಭದಲ್ಲಿ ಆಕೆಯ ನೃತ್ಯವನ್ನು ತಂದೆಯ ಜೊತೆಗೆ ಭಾವಿ ಪ್ರಭುಗಳಾದ ವಿಷ್ಣುವರ್ಧನರೂ ನೋಡುತ್ತಾರೆ. ನಂತರ, ಆತ್ಮೀಯ ಗೆಳೆಯ ಬಪ್ಪರಸನಿಂದ 64 ವಿದ್ಯೆ ಬಲ್ಲ ಶಾಂತಲೆಯ ಕುರಿತು ತಿಳಿದು ಅನುರಾಗ ಇನ್ನಷ್ಟು ಹೆಚ್ಚಾಗುತ್ತದೆ.


 ತಾಯಿ ಏಚಲದೇವಿಗೂ ಮಗನ ಮನಸ್ಸು ತಿಳಿದು ಶಾಂತಲೆಯೂ ಇಷ್ಟವಾಗುತ್ತಾಳೆ. ವಿಷ್ಣುವರ್ಧನನ ಬಹುಪತ್ನಿತ್ವಕ್ಕೆ ಒಪ್ಪಿದ ಶಾಂತಲೆ 'ಸವತಿ ಗಂಧವಾರಣೆ'ಯಾಗುತ್ತಾಳೆ.


ಶಾಂತಲೆಯ ಕುರಿತ ಕಾದಂಬರಿಗಳಲ್ಲಿ ಆಕೆಯ ಅಂತ್ಯದ ಕುರಿತು ವಿಭಿನ್ನ ಚಿತ್ರಣಗಳಿರುತ್ತವೆ. ಇಲ್ಲಿ ಶಾಂತಲೆ ಆ ತೀರ್ಮಾನಗಳನ್ನು ಕೈಗೊಳ್ಳುವುದಕ್ಕೂ ಮುನ್ನ ಹಲವಾರು ಘಟನೆಗಳು ಹಿನ್ನೆಲೆಯಾಗುತ್ತವೆ. ಉದಯಾದಿತ್ಯನ ಮಗನ ಎರೆಯಂಗ ಮರಣ, ರಾಜಮಾತೆಯವರ ಮರಣ, ತನ್ನ ಗಂಡು ಮಗು ಬಲ್ಲಾಳನ ಮರಣ, ತಾಯಿ ಮಾಚಿಕಬ್ಬೆ ಮುತ್ತೈದೆಯಾಗಿಯೇ ಸತ್ತ ನಂತರ.. ಶಾಂತಲೆಯ ಅಚ್ಚುಮೆಚ್ಚಿನ ಗೆಳತಿ ಸೋಮಲೆ ವಿವಾಹವಾದ ಮೂರು ತಿಂಗಳಲ್ಲಿಯೇ ವಿಧವೆಯಾಗಿ ಶಿವಗಂಗೆಯನ್ನು ಸೇರಿದಳು. ಹತ್ತು ವರ್ಷದ ಬಾಲಕ ಎರೆಯಂಗ ಕುದುರೆಯ ಕಾಲಿಗೆ ಸಿಕ್ಕಿ ಚಿಂದಿಚಿಂದಿಯಾಗಿದ್ದ. ವಿಪರ್ಯಾಸವೆಂದರೆ ವಿದ್ಯಾಪೀಠದಲ್ಲಿ ಅಭ್ಯಾಸ ಮಾಡುತ್ತಿದ್ದ ಆ ಮಗುವನ್ನು ಹುಟ್ಟುಹಬ್ಬದ ಸಲುವಾಗಿ ದ್ವಾರಸಮುದ್ರಕ್ಕೆ ಕರೆಸಿಕೊಳ್ಳಲಾಗಿತ್ತು. ಹುಟ್ಟು ಹಬ್ಬದ ದಿನವೇ ಆತ ಸಾವನ್ನು ಆಚರಿಸುವಂತಾಗಿತ್ತು. ಸಾವಿನ ಸರಣಿಗಳಿಂದ ನೊಂದು ಬದುಕನ್ನು ನಶ್ವರವೆಂದು ಭಾವಿಸುತ್ತಿದ್ದಳು ಶಾಂತಲೆ. ಕ್ಷಣಿಕವಾದ ಈ ಬದುಕಿನಿಂದ ಬಿಡುಗಡೆಬೇಕೆಂದು ಬಯಸುತ್ತಿರುವಾಗ ಪಟ್ಟದರಸಿಯ ಪಟ್ಟದಿಂದಲೂ ಬಿಡುಗಡೆ ಬೇಕೆಂದು ಕೇಳಿದಳು. ಆದರೆ, ನೀನು ಬದುಕಿರುವವರೆಗೂ ಅದು ಸಾಧ್ಯವಿಲ್ಲವೆಂದಾಗ.. ತನಗೆ ಮಕ್ಕಳಿಲ್ಲವೆಂದೂ.. ಜೊತೆಗೆ ತಾನು ಇರುವಾಗ ಬೇರೆ ಯಾವ ರಾಣಿಯರಿಗೂ ಆ ಪಟ್ಟದ ಮೇಲೆ ಕೂರಲಾಗದೆಂದು ತಿಳಿದು ತನ್ನ ತವರಿಗೆ ಹೋಗಿ ಬರಲು ಅನುಮತಿ ಕೇಳಿದವಳು ಶಿವಗಂಗೆಗೆ ಹೊರಟಳು.


ರಾಜಕಾರಣದ ನಿಮಿತ್ತ ಮಾರಸಿಂಗಮಯ್ಯನವರು ರಾಜ್ಯದ ಗಡಿ ಪ್ರದೇಶದಲ್ಲಿಯೇ ಸಂಚರಿಸುತ್ತಿದ್ದುದರಿಂದ, ವಿಷ್ಣುವರ್ಧನರು ಉತ್ತರದ ಗಡಿಯನ್ನು ಭದ್ರಪಡಿಸಿ ಬರುವ ಹೊತ್ತಿಗೆ ಶಾಂತಲೆ ಕಠಿಣ ಮನೋನಿರ್ಧಾರ ಮಾಡಿ 21 ದಿನಗಳಾಗಿದ್ದವು. ಶಿವಗಂಗೆಯ ಹೊನ್ನಾದೇವಿಯ ಗುಡಿಯ ಮುಂಭಾಗದ ಬಂಡೆಯ ಮೇಲೆ ಅನ್ನ ,ಆಹಾರಾದಿಗಳನ್ನು ತೊರೆದು ಹಗಲಿರುಳೆಲ್ಲದೆ, ಮಳೆಬಿಸಿಲೆನ್ನದೆ ಘೋರ ವ್ರತವನ್ನಾಚರಿಸುತ್ತಾ ಜೀವವನ್ನು ಅರ್ಪಿಸುತ್ತಾಳೆ.


ಇಲ್ಲಿ ರಾಣಿ ನಾಟ್ಯಮಯೂರಿಯಾಗಿ ಮೊದಲಿಗೆ ಕಂಡರೂ.. ನಂತರ ಅವಳ ನೃತ್ಯಕ್ಕಿಂತ ಶಿಲ್ಪಕಲೆಗೆ ಹೆಚ್ಚಿನ ಒತ್ತು ನೀಡಲಾಗಿದೆ. 


ಶಾಂತಲೆಯ ಕುರಿತು ಕೆ. ಎನ್. ಗಣೇಶನಯ್ಯನವರ ಕನಕ ಮುಸುಕುವಿನಲ್ಲಿ ಆಕೆ ಸಲ್ಲೇಖನ ಆ ವ್ರತ ಕೈಗೊಂಡಿದ್ದರ ಹಾಗೂ ವಿಷ್ಣುವರ್ಧನ ಹಾಗೂ ಶಾಂತಲೆಯರ ನಡುವಿದ್ದ ಭಿನ್ನಾಭಿಪ್ರಾಯಗಳ ಕುರಿತು ಓದಿದಾಗ ಈ ಕುರಿತ ಪುಸ್ತಕವಿದ್ದರೆ ಓದಬೇಕು ಎಂದುಕೊಂಡಿದ್ದೆ. ಆ ನಿರೀಕ್ಷೆ ಸಾಕಾರವಾದದ್ದು ವೈ. ಕೆ. ಸಂಧ್ಯಾ ಶರ್ಮ ಅವರ ಐತಿಹಾಸಿಕ ಕಾದಂಬರಿ "ನೃತ್ಯ ಸರಸ್ವತಿ"ಯನ್ನು ಓದಿದಾಗ. 


ವೈ. ಕೆ. ಸಂಧ್ಯಾಶರ್ಮ ಅವರ 'ನೃತ್ಯ ಸರಸ್ವತಿ'ಯಲ್ಲಿ ಭೋಕಿಮಯ್ಯನ ಪಾತ್ರಕ್ಕೆ ವಿಶೇಷ ತೂಕವಿದೆ. ಅಂದಿನ ಹೊಯ್ಸಳ ರಾಜ್ಯದ ಅಧಿಕೃತ ದಾಖಲೆ ಬರೆದಿಟ್ಟಿರುವ ಶಾಸನಕಾರ ಮತ್ತು ಕವಿ ಬೋಕಿಮಯ್ಯ ರಾಣಿ ಶಾಂತಲೆಯನ್ನು ಆರಾಧಿಸಿರುವ ಪರಿ ಹಾಗೂ ಕಂಡ ನೋಟ ಕಥೆಯಲ್ಲಿ ಬರುತ್ತಲೇ.. ಆಕೆಯ ಹೊಗಳಿಕೆ, ಬಿರುದುಗಳು ಅಲ್ಲಲ್ಲಿ ಕಣ್ಸೆಳೆಯುತ್ತವೆ. 


ಕೇವಲ ರಾಜ ವಂಶದವರು ರಾಜವಂಶದ ಯುವತಿಯರನ್ನೇ ವಿವಾಹವಾಗುವ ಸಂದರ್ಭಕ್ಕಿಂತಲೂ ವಿಭಿನ್ನವಾಗಿ ಚಿತ್ರಿತವಾಗಿದೆ. ಅಲ್ಲದೇ, ಇದು ಅಲ್ಲಲ್ಲಿ ಎದ್ದ ಅಪಸ್ವರ ಹಾಗೂ ಅದನ್ನು ನಿವಾರಿಸಿಕೊಂಡದ್ದರ ಜೊತೆಗೆ ಮತ್ತೆ ಶಾಂತಲೆಯೇ ಅಪವಾದವನ್ನು ತಾಳಲಾರದೆ ಅದನ್ನು ಬೇರೆಯದೇ ರೀತಿಯಲ್ಲಿ ನಿವಾರಿಸಿಕೊಂಡದ್ದು ಕಾಣುತ್ತದೆ.


ಇಲ್ಲಿ ವಿಷ್ಣುವರ್ಧನನ ಜೊತೆಯಾದ ಶಾಂತಲೆ ತನ್ನ ತೀರ್ಮಾನಗಳನ್ನು ತಿಳಿಸುವಾಗ ಆಕೆಯ ಉನ್ನತ ವ್ಯಕ್ತಿತ್ವ ಹಾಗೂ ಆಕೆಯ ನಡೆಗಳು ಆಕೆ ಎಷ್ಟು ಪ್ರಬುದ್ಧವಾಗಿ ಆಲೋಚನೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೇ.. ನೃತ್ಯ, ಭಕ್ತಿ, ಕಲೆ ಎಲ್ಲದರಲ್ಲಿಯೂ ಮೇಲುಗೈಯಾಗಿದ್ದ ಆಕೆ ರಾಜನಿಗೆ ಅಷ್ಟು ಪ್ರಿಯವಾದದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಪ್ರಜೆಗಳಿಗೂ ಹತ್ತಿರವಾಗುವುದು ಅಷ್ಟು ಸುಲಭವಲ್ಲ. ವಿವಾಹವಾದ ಹೊಸತರಲ್ಲಿ, ಸಿಂಹಾಸನವನ್ನೇರಿ ಪಟ್ಟಗಟ್ಟಿಸಿಕೊಳ್ಳಲು ನಿರಾಕರಿಸಿದ ಸಂದರ್ಭ ರಾಜನ ಕಣ್ಣಲ್ಲಿ, ಪ್ರಜೆಗಳ ದೃಷ್ಟಿಯಿಂದ ಹಾಗೂ ಆಕೆಯ ಆಲೋಚನೆ ಮೂರೂ ಕಂಡುಬರುತ್ತದೆ.


ತಾನೇ ಮಹಾರಾಜರಿಗೆ ಬಮ್ಮಲೆಯನ್ನು ತಂದು ವಿವಾಹ ಮಾಡಿಸುವ ಸಂದರ್ಭದಲ್ಲಿ ಹಾಗೂ ಅದೇ ದಿನ ತಾನು ಗರ್ಭಿಣಿಯಂದು ತಿಳಿದಾಗ ಆಕೆಯಲ್ಲಿ ಉಂಟಾಗುವ ಭಾವಗಳಲ್ಲಿ ಹಾಗೂ ಆಕೆಯ ಪ್ರೌಢ ನಡೆಯಲ್ಲಿ ಆಕೆಯ ಔನತ್ಯ ಎದ್ದು ಕಾಣುತ್ತದೆ.  


ಬಮ್ಮಲೆ ಪತ್ನಿಯಾಗಿ ಬಂದ ನಂತರ ಕ್ಷಣ-ಕ್ಷಣಕ್ಕೂ ಆಕೆ ರಾಜನ ಮೇಲೆ ತನ್ನ ಹಿಡಿತ ಸಾಧಿಸಲ,  ತನ್ನವನನ್ನಾಗಿ ಮಾಡಿಕೊಳ್ಳಲು ಒದ್ದಾಡುವ ಪರಿ ಹಾಗೂ ಇರ್ಷ್ಯೆ ಕಾಣುತ್ತಾ ಹೋದರೂ.. ಶಾಂತಲೆಯ ವ್ಯಕ್ತಿತ್ವ ಆಕೆಯನ್ನು ತಣ್ಣಗಾಗಿಸುವ ಪರಿಯೂ ಕಾಣುತ್ತದೆ. ಬಮ್ಮಲೆಯ ಮಗಳಾದ ಪದ್ಮಲೆ ಹಾಗೂ ಮಗ ಬಲ್ಲಾಳನ ಆಗಮನ ರಾಜನಿಗೆ, ಬಮ್ಮಲೆಗೆ ಮಾತ್ರವಲ್ಲದೇ ಶಾಂತಲೆಗೂ ಇಬ್ಬರಿಗೂ ಖುಷಿ ತಂದದ್ದು ನಿಷ್ಕಲ್ಮಶ ಅಂತಃಕರಣವನ್ನು ತೋರುತ್ತದೆ.


ಪದ್ಮಲೆ ಹಾಗೂ ಬಲ್ಲಾಳರು ದೊಡ್ಡಬ್ಬೆ ಶಾಂತಲೆಯ ಕುರಿತು ತೋರುವ ಪ್ರೀತಿ ಹಾಗೂ ಆದರಗಳು ಯಾವುದೇ ಪ್ರೀತಿ, ಗೌರವವನ್ನು ಒತ್ತಾಯವಾಗಿ ಹೇರುವುದಕ್ಕೂ.. ತಾನಾಗಿ ಮೂಡುವುದಕ್ಕೂ ಇರುವ ವ್ಯತ್ಯಾಸವನ್ನು ತೋರುತ್ತವೆ. ಮಕ್ಕಳ ಮೇಲೆ ಅಷ್ಟು ಛಾಪು ಏರಿದ್ದ ಶಾಂತಲೆಯ ವ್ಯಕ್ತಿತ್ವ ಎಷ್ಟರಮಟ್ಟಿಗಿತ್ತು ಎಂಬುದರ ಅರಿವಾಗುತ್ತದೆ.


ಮಗ ಬಿಟ್ಟಿಯಣ್ಣನನ್ನು ಗರುಡನನ್ನಾಗಿಸುವಾಗ ತಾಳ್ಮೆಯ ಖನಿಯಂತಿದ್ದ ಶಾಂತಲೆ ದುಡುಕುವುದು ಹಾಗೂ ಅವಳ ನಿರ್ಧಾರಗಳು ರೂಪಿತವಾದಾಗ ಅವಳ ಮನಸ್ಸಿನ ಮೇಲೆ ಆಗುವ ಒತ್ತಡ ಹಾಗೂ ಆ ಕ್ಷಣದಲ್ಲಿ ಆಕೆ ತೆಗೆದುಕೊಳ್ಳುವ ನಿರ್ಧಾರಗಳು ಬಹುಶಃ ವಯಸ್ಸಿನ ಪ್ರಭಾವವೂ ಇರಬಹುದು ಎಂದೆನಿಸಿತು. ಹೇಗಿದ್ದ ಶಾಂತಲೆ ಹೇಗಾದಳು ಎನ್ನುತ್ತಾ ಶಾಂತಲೆಯ ಕುರಿತು ಪರಿತಪಿಸುವಂತಾಗುತ್ತದೆ. ಪದೇ ಪದೇ ಅಂತಹಾ ಘಟನೆಗಳು ನಡೆದರೆ ಅವಳು ತಾನೇ ಏನು ಮಾಡುತ್ತಾಳೆ..! ಮಗನನ್ನೇ ಕಳೆದುಕೊಳ್ಳುವ ತಾಯಿಯಾಗಿ, ಪಿತೂರಿಯ ವಿರುದ್ಧ ರಾಜನನ್ನು ಎಚ್ಚರಿಸಲಾಗದ ಅಸಹಾಯಕಳಾಗಿ, ಕೆಲವೊಮ್ಮೆ ರಾಜ್ಯದ ಒಳಿತಿನಿಂದ ತೆಗೆದುಕೊಂಡ ನಿರ್ಧಾರಗಳು ಸ್ವಂತಕ್ಕೆ ಮುಳ್ಳಾದ ಸಂಗತಿಗಳು ಕಣ್ಣಲ್ಲಿ ನೀರು ತರಿಸುತ್ತವೆ. 


ಶಿವಗಂಗೆಗೆ ಹೊರಡುವ ಆಕೆಯ ನಿರ್ಧಾರವನ್ನು ನೀನೇಕೆ ಹೋಗುತ್ತೀಯೆ ಎಂದು ಕೇಳಿ ಆಕ್ಷೇಪಿಸಿಯಾನು ಎಂಬ ಭ್ರಮೆ ಕೇವಲ ಶಾಂತಲೆಗಲ್ಲದೆ ನಮ್ಮ ಮನಸ್ಸಿನಲ್ಲಿಯೂ ಮೂಡುತ್ತದೆ. ಆಕೆಯ ಶೂನ್ಯ ನೋಟ, ವಿರಾಗಿಣಿಯಂತಹಾ ನಿರ್ಗಮನ ನಮ್ಮಲ್ಲೂ ಶೂನ್ಯ ಹುಟ್ಟಿಸುತ್ತದೆ.


ಬೋಕಿಮಯ್ಯನ ಮಾತು "ಆಕೆ ಇಲ್ಲದ ಈ ನಾಡು ದೇವರಿಲ್ಲದ ಗುಡಿ, ದೀಪವಿಲ್ಲದ ಗೃಹ... ಮಹಾರಾಣಿಯವರಿಲ್ಲದ ಈ ನಾಡು ಇನ್ನೂ ಹೊಸತನದ ಕಲೆಯ ಮಿಂಚು ಕಳೆದುಕೊಳ್ಳುವುದು. ಇನ್ನು ಮೇಲೆ ಇದು ದೋರಸಮುದ್ರವಲ್ಲ... ಹಳೆಯ ಬೀಡು... ಹಾಳಾಳು ಬೀಡು..." ಎಂದು ಹೇಳುವ ಮಾತು ಎಷ್ಟೊಂದು ಸತ್ಯ..! 


ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎಂಬ ಮಾತಿನಂತೆ ಇಲ್ಲಿ ಶಾಂತಲೆಯೇ ಎದ್ದು ಕಾಣುತ್ತಾಳೆ. ಇಲ್ಲಿ ಆಕೆಯಿಂದ ಪ್ರೇರೇಪಿತರಾದ ಪ್ರಜೆಗಳು, ಬಮ್ಮಲೆ ನೃತ್ಯದ ಕುರಿತ ತಾತ್ಸಾರದ ಮಾತುಗಳು, ಪದಕದ ಕುರಿತ ಸಂಗತಿಗಳು.. ಹೀಗೆ ಸಣ್ಣ-ಸಣ್ಣ ಸಂಗತಿಗಳೂ ಮನಸ್ಸಿಗೆ ಮುಟ್ಟುತ್ತವೆ.


ಶಾಂತವಾಗಿದ್ದ ಶಾಂತಲೆ ದಿನೇ ದಿನೇ ಬಳಲುವಾಗ, ಆಕೆಯ ದುಃಖ-ನೋವುಗಳು ನಮ್ಮವೇ ಎಂದೆನ್ನಿಸುವ ಭಾವ ಕಾಡುವಾಗ ಆಕೆ ಇಷ್ಟಾದರೂ ಆವರಿಸಿಕೊಳ್ಳದಿದ್ದರೆ ಹೇಗೆ..? 


~ವಿಭಾ ವಿಶ್ವನಾಥ್

ಗಾದಿ (ಪುಸ್ತಕ ಯಾನ - 256)


ಪುಸ್ತಕದ ಶೀರ್ಷಿಕೆ : ಗಾದಿ

ಲೇಖಕರು : ಪ್ರೇಮಾ ಭಟ್

ಪ್ರಕಾಶಕರು : ಪ್ರೇಮಸಾಯಿ ಪ್ರಕಾಶನ

ಪ್ರಥಮ ಮುದ್ರಣ : 2002

ಪುಟಗಳು : 136


ಗ್ರಂಥಾಲಯದಲ್ಲಿ ನಾವೆಲ್ಲರೂ ಕಾದಂಬರಿಗಳನ್ನು ಓದುವುದು ಸರ್ವೇಸಾಮಾನ್ಯ. ಆದರೆ, ಇಲ್ಲಿ ಕಾದಂಬರಿಯೇ ಗ್ರಂಥಾಲಯದ ಕುರಿತ ಕಥಾವಸ್ತುವುಳ್ಳದ್ದು. ಕನ್ನಡಿಗರ ಗ್ರಂಥಾಲಯದ ಕುರಿತ ಆಸಕ್ತಿ ತಿಳಿವನ್ನು ಹೆಚ್ಚಿಸುವ ಪ್ರಚೋದಿಸುವ ಯೋಚನೆ ರಾಮಕ್ಕ ಪದ್ಮಕ್ಕ ಸೇವಾ ನಿಧಿಗೆ ಬಂದು ಅದರ ಫಲವಾಗಿ ತರಂಗ ವಾರಪತ್ರಿಕೆಯ ಸಹಕಾರದಿಂದ 1997ರಲ್ಲಿ ಗ್ರಂಥಾಲಯ ಬೆಳವಣಿಗೆಗೆ ಪೂರಕವಾದ ಕಥಾವಸ್ತುವುಳ್ಳ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಇಂತಹದ್ದು ಕರ್ನಾಟಕದಲ್ಲಿಯೇ ಮೊಟ್ಟ ಮೊದಲನೆಯ ಸ್ಪರ್ಧೆ. ಈ ಕಥಾ ಸ್ಪರ್ಧೆಯ ಬಹುಮಾನ ಮೂರು ಜನ ಲೇಖಕರಿಗೆ ಸಮನಾಗಿ ಹಂಚಿಕೆಯಾಯಿತು. ಅದರಲ್ಲಿ ಲೇಖಕಿ ಪ್ರೇಮಾ ಭಟ್ ಅವರು ಕೂಡಾ ಒಬ್ಬರು. ಅವರ ಈ ಗಾದಿ ಕಾದಂಬರಿ ಗ್ರಂಥಾಲಯದ ಕುರಿತಾದ ಕಥಾವಸ್ತುವನ್ನು ಹೊಂದಿದೆಯಾದರೂ.. ಕಥೆಯ ಶೀರ್ಷಿಕೆ 'ಗಾದಿ' ಎಂದಿರುವುದು ಮತ್ತಷ್ಟುಕುತೂಹಲ ಮೂಡಿಸುತ್ತದೆ. 


ಕರಿಬಸಪ್ಪನವರಿಗೆ ಜಿಲ್ಲಾ ಗ್ರಂಥಾಲಯ ತುಮಕೂರಿಗೆ ವರ್ಗಾವಣೆಯಾದ್ದರಿಂದ ಅವರ ಜಾಗಕ್ಕೆ ಅಪ್ಸರಾ ಬಂದಿದ್ದಳು. ಗ್ರಂಥಾಲಯ ವಸಂತ ಮಹಲಿನ ಪೋರ್ಟಿಕೋದಿಂದ ನಿಂತು ನೋಡಿದರೆ ಬೆಂಗಳೂರಿನ ದೃಶ್ಯಾವಳಿಗಳು ಸೊಗಸಾಗಿ ಕಾಣುತ್ತಿದ್ದವು. ಗ್ರಂಥಾಲಯವೆಂದರೆ ಅಲ್ಲಿ ಶಿಸ್ತುಬದ್ಧವಾದ ಜೀವನ, ಕನ್ನಡದ ಬಳಕೆ ಹಾಗೂ ಕಟ್ಟುನಿಟ್ಟಾದ ಸಮಯ ಪಾಲನೆ ಇರಬೇಕು ಎಂದು ಆಶಿಸುತ್ತಿದ್ದ ಅಪ್ಸರಾಳಿಗೆ ಇಲ್ಲಿ ಅದಾವುದೂ ಕಂಡು ಬರಲಿಲ್ಲ. 


ಅಪ್ಸರಾ ತಂದೆಯ ಮಾತಿನಂತೆ ಓದಿನಿಂದಲೇ ಉದ್ಯೋಗ ಹುಡುಕಿಕೊಳ್ಳಬೇಕೆಂದು ತನ್ನ ಜೀವನವನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದ ಕಷ್ಟ ಜೀವಿ. ಅಣ್ಣ ಸರಿಯಾಗಿದ್ದಿದ್ದರೆ ಪರವಾಗಿರಲಿಲ್ಲ.. ಆದರೆ, ಮನೆಯ ಜವಾಬ್ದಾರಿಯೂ ಈಗ ಈಕೆಯ ಮೇಲೆಯೇ ಇದ್ದುದರಿಂದ ದೂರದ ಬಂಧು ಒಬ್ಬರ ಮನೆಯಲ್ಲಿದ್ದು, ಅವರ ಮನೆಯ ಸಹಾಯಕಳಾಗಿ.. ಬರುತ್ತಿದ್ದ ಸಂಬಳವನ್ನು ಅಮ್ಮನಿಗೆ ಕಳುಹಿಸುತ್ತಲೇ ಆ ಮನೆಯವರ ಸಲಹೆಯಂತೆ ಬಿ.ಲಿಬ್ ಮಾಡಿಕೊಂಡು ಸಹಾಯಕ ಗ್ರಂಥಪಾಲಕರ ಹುದ್ದೆ ಸಿಕ್ಕಿ ಜೀವನ ಕಟ್ಟಿಕೊಂಡಿದ್ದಳು. 


ಅಲ್ಲಿನ ಸಹಾಯಕ ಗ್ರಂಥಾಧಿಕಾರಿ ಲಿಂಗರಾಜು ಮಂಡ್ಯ ಜಿಲ್ಲೆಯಲ್ಲಿದ್ದ. 'ಯಶವಂತ ಈಗ ಮೈಸೂರಲ್ಲಿ ಗ್ರಂಥಾಲಯದಲ್ಲಿದ್ದಾನೆ. ಅವನು ನಿಮ್ಮ ಹಸ್ಬೆಂಡ್ ಎಂದು ಕೇಳಿದೆ. ನಿಜವೇ..?!' ಎಂದಾಗ ವೈಯಕ್ತಿಕ ವಿಚಾರವನ್ನು ಚರ್ಚಿಸಲು ಇಷ್ಟವಿದ್ದವಿಲ್ಲದಿದ್ದರೂ.. ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಳು. 


ಮನೆಯ ಪಕ್ಕದಲ್ಲಿದ್ದ ಹುಡುಗಿ ಪುಟ್ಟ ಪ್ರಿಯಾಂಕಾಳ ಮಾತು ಸಹಾ ಅವಳ ವೈಯಕ್ತಿಕ ಬದುಕಿನ ಸೋಲಿನಂತೆ ಕಂಡಿತ್ತು. ದೂರದಲ್ಲಿದ್ದ ಅಣ್ಣ, ಅಮ್ಮ ತೀರಿಕೊಂಡ ಮೇಲೆ ಒಬ್ಬಂಟಿಯಾಗಿದ್ದ ಆಕೆಗೆ ಸಮಾಜ ಆಗಾಗ ಗಂಡ ಬಿಟ್ಟವಳು ಎಂದು ಹಂಗಿಸುವುದಿತ್ತು. ಮಗುವಾದರೂ ಇದ್ದಿದ್ದರೆ ಎಂಬ ದೂರದ ಆಸೆಯೂ ಇತ್ತು. ಆದರೆ, ಅದೂ ಇರಲಿಲ್ಲ. 


ದಿನೇ ದಿನೇ ಲಿಂಗರಾಜುವಿನೊಡನೆ ಸ್ನೇಹ ಹೆಚ್ಚುತ್ತಿತ್ತು. ಪುಸ್ತಕ ವಿನಿಮಯ, ಚರ್ಚೆ ಮನೆಯವರಿಗೂ ಬಂದಿತ್ತು. ಕಚೇರಿಯಲ್ಲಿ ಬೇರೆಲ್ಲರೂ ಅಪ್ಸರಾಳನ್ನು, ಆಕೆಯ ಕರ್ತವ್ಯ ಪಾಲನೆಯನ್ನು ಖಂಡಿಸುತ್ತಿದ್ದರೂ.. ಲಿಂಗರಾಜು ಮಾತ್ರ ಅದೆಲ್ಲದರ ಜೊತೆಗೆ ಆಕೆಗೆ ಆಪ್ತವಾಗಿದ್ದ. ಉಳಿದವರು ತಮ್ಮ ನಡೆಯನ್ನು ತಿದ್ದಿಕೊಳ್ಳುವ ಬದಲಾಗಿ  ಆಕೆಯನ್ನು ಅಲ್ಲಿಂದ ತೊಲಗಿಸಿ ತಮ್ಮ ಮೊದಲಿನ ಸ್ವೇಚ್ಛೆಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ತಂತ್ರಗಾರಿಕೆ ನಡೆಸಿದರು. ಅದೆಲ್ಲದಕ್ಕೂ ಬಲಿಪಶುವಾದಳು ಅಪ್ಸರಾ. ಲಿಂಗರಾಜುವಿಗೆ ಈ ಯಾವ ಕುತಂತ್ರದ ವಾಸನೆಯೂ ಹತ್ತಿರಲಿಲ್ಲ. ಅದಾದ ನಂತರವೂ ಆ ಗುರುತರ ಆಪಾದನೆಯಿಂದ ಆಕೆಯನ್ನು ಪಾರು ಮಾಡಲಾಗಲಿಲ್ಲ. ಅಂತಹಾ ಆಪಾದನೆ ಕುರಿತು ನೀವೇ ಓದಿ ತಿಳಿಯಿರಿ.


ಆಕೆಗೆ ತನ್ನ ಪ್ರಾಮಾಣಿಕತೆಯ ಫಲವಾಗಿ ಸಿಕ್ಕಿದ್ದು ಮೈಸೂರಿನ ಗ್ರಂಥಾಲಯಕ್ಕೆ ವರ್ಗಾವಣೆ. ಆದರೆ, ಇಲ್ಲಿಂದ ಅಲ್ಲಿಗೆ ಹೋಗುವ ಮುನ್ನ ಲಿಂಗರಾಜುವಿನ ಸ್ನೇಹದಿಂದ ಆತನ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ್ದಳು. ಅಲ್ಲಿ ಆತನ ತಾಯಿ ಹಾಗೂ ತಂಗಿಯರ ಪರಿಚಯವಾಗಿತ್ತು. 


ಮುಂದೆ ಇವರ ಓಡನಾಟವೇನೂ ನಿಲ್ಲಲಿಲ್ಲ. ಲಿಂಗರಾಜು ತಾನೇ ಮುಂದಾಗಿ ಆಕೆಯ ಜೊತೆಗೆ ತನ್ನ ವಿವಾಹದ ಕುರಿತು ಪ್ರಸ್ತಾಪಿಸಿದಾಗ ಆಕೆ ಒಪ್ಪಿದಳು. ಆಕೆ ಲಿಂಗರಾಜುವಿನ ಕುಟುಂಬದ ಜವಾಬ್ದಾರಿಯನ್ನು ಹೊರಬೇಕಾಗಿ ಬಂದಾಗ ವಿಚಲಿತಳಾಗಲಿಲ್ಲ. ಬದಲಾಗಿ, ಅದನ್ನು ಪ್ರೀತಿಯಿಂದಲೇ ಸ್ವೀಕರಿಸಿದ್ದಳು. ಲಿಂಗರಾಜುವಿನ ತಂಗಿಯ ವಿವಾಹದ ಸಂಧರ್ಭದಲ್ಲಿ ತಾನು ಪ್ರೀತಿಯಿಂದ ಕೊಂಡಿದ್ದ ಏಕೈಕ ಕಾರನ್ನು ಮಾರಬೇಕಾಗಿ ಬಂದಾಗಲೂ ಆಕೆ ಯಾವುದೇ ಕಹಿ ಭಾವನೆ, ಅಸಹನೆ ಇಟ್ಟುಕೊಳ್ಳದೆ ಆತನಿಗೆ ಸಹಕರಿಸುತ್ತಾಳೆ. ದುಡಿದು, ದುಡಿದು ಹಣ್ಣಾಗುತ್ತಿರುವಾಗಲೇ ಯಶವಂತನ ಕಾಕದೃಷ್ಟಿಯೂ ಬಿದ್ದು.. ಆಕೆ ಕೆಲಸವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಪ್ರಾಮಾಣಿಕತೆಗೆ ಬೆಲೆಯಿಲ್ಲವಾದರೂ.. ಹುಷಾರಾಗಿಯೇ ತನ್ನ ಕಾರ್ಯಗಳನ್ನು ನಿಭಾಯಿಸುತ್ತಿದ್ದ ಅಪ್ಸರಾ ಮೋಸ ಹೋದದ್ದಾದರೂ ಹೇಗೆ..?? ಅದು ತನ್ನ ವಿರುದ್ದದ ಕುತಂತ್ರವಾಗಿತ್ತು ಎಂದು ತಿಳಿದಾಗ ಆಕೆಯ ಪ್ರತಿಕ್ರಿಯೆ ಏನಿತ್ತು..??


ಅಪ್ಸರಾಳಿಗೆ ಮನೆಯಲ್ಲಿ ಮೊದಲಿದ್ದ ಬೆಲೆ ಸಿಗುತ್ತಿರಲಿಲ್ಲ. ಆದರೆ, ಹಣ ಬೇಕಾದಾಗ ಎಲ್ಲರಿಗೂ ಇವಳೇ ದಿಕ್ಕು. ತಂಗಿಯ ಬಾಣಂತನ, ತಂಗಿಯ ಗಂಡನ ಅಪಘಾತದ ಚಿಕಿತ್ಸೆಗೂ ಇವಳೇ ಹಣ ತೆರಬೇಕಾಗಿ ಬಂದಾಗ ಕುಟುಂಬದ ಹಿತದೃಷ್ಟಿಯಿಂದ ನೋಡುವ ಅಪ್ಸರಾ ಅದಕ್ಕೂ ಹಿಂದೆ-ಮುಂದೆ ಆಲೋಚಿಸುವುದಿಲ್ಲ.


ಆದರೆ, ಅವಳ ಭಾವನೆಗಳಿಗೆ ದೊಡ್ಡ ಹೊಡೆತ ಬಿದ್ದಾಗ ಮನಸ್ಸು ಘಾಸಿಗೊಳ್ಳುತ್ತದೆ. ಲಿಂಗರಾಜು ಅವಳನ್ನು ಮದುವೆಯಾದದ್ದು ಅವಳ ಮೇಲಿನ ಪ್ರೀತಿಯಿಂದಲ್ಲ.. ಬದಲಾಗಿ, ಅವಳ ಹಣಕ್ಕಾಗಿ ಎಂದು ತಿಳಿದಾಗಲೂ ಆಕೆ ಸಾವರಿಸಿಕೊಂಡು ಸಾಗುತ್ತಿದ್ದಳು. ಆಕೆ ವೃತ್ತಿಯ ಸಹೋದ್ಯೋಗಿ, ಸ್ನೇಹಿತನಾಗಿ ನೋಡಿದ್ದ ಲಿಂಗರಾಜುವಿಗೂ.. ವಿವಾಹವಾದ ನಂತರ ನೋಡುತ್ತಿದ್ದ ಲಿಂಗರಾಜುವಿಗೂ ಬಹಳ ವ್ಯತ್ಯಾಸವಿತ್ತು. ತಾನು ಆಸೆಪಡುತ್ತಿದ್ದ ಮಗು ತನ್ನ ಒಡಲಲ್ಲಿ ಪಡಿಮೂಡುತ್ತಿದೆ ಎಂದು ತಿಳಿದಾಗ ಆಕೆ ಸಂಭ್ರಮಿಸಿದ್ದಳು. ಆದರೆ, ಲಿಂಗರಾಜು ಆ ಮಗುವನ್ನು ತೆಗೆಸಲು ಹೇಳಿದ್ದ. ಆದರೆ, ಅನಿರೀಕ್ಷಿತ ಸಂಧರ್ಭದಲ್ಲಿ ಮಗು ಅವಳಿಂದ ಜಾರಿಯಾಗಿತ್ತು.


ಇದರ ನಂತರ ಅಪ್ಸರಾ ಒಂದು ನಿರ್ಧಾರಕ್ಕೆ ಬರುತ್ತಾಳೆ. ಅದಕ್ಕೂ ಅವಳ ಕನಸಿಗೂ.. ಈ ಕಾದಂಬರಿಯ ಶೀರ್ಷಿಕೆಗೂ ಒಂದು ಸಂಬಂಧವಿದೆ. ಆ ಸಂಬಂಧವೇನು...?


ಒಬ್ಬ ಮಹಿಳೆ ಮಠಾಧಿಪತಿಯಾಗಿ 'ಗಾದಿ'ಯನ್ನು ಅಲಂಕರಿಸಿದುದರ ಹಿಂದಿನ ಘಟನೆಗಳ ಸರಮಾಲೆ ಇಲ್ಲಿ ಕಂಡು ಬರುತ್ತದೆ.


ಲಿಂಗರಾಜುವಿಗೆ ತನ್ನ ಬದುಕಿನ ಘೋರ ಸತ್ಯವೊಂದು ತಿಳಿದು ಬರುತ್ತದೆ. ಅದೆಂದರೆ, ಆತನ ತಾಯಿ ಸ್ವಂತ ತಾಯಿಯಲ್ಲ. ತನ್ನ ತಂಗಿಯರು, ಬಳಗ ಎಂದುಕೊಂಡಿದ್ದವರು ತನ್ನವರೇ ಅಲ್ಲವೆಂದು. ಅದನ್ನು ತಿಳಿದ ನಂತರ ಬದಲಾದ ಆತನ ಬದುಕಿನ ಗತಿಯೇನು..?


ಇಲ್ಲಿ ಹೆಣ್ಣಾಗಿ ಅಪ್ಸರಾ ಭಾವುಕತೆಯ ಬದಲಾಗಿ ನಿರ್ಲಿಪ್ತತೆ, ಸಮಚಿತ್ತತೆಯತ್ತ ಸಾಗುತ್ತಾ ಹೋದರೆ.. ಲಿಂಗರಾಜು ತಾನು ಗಂಡಾಗಿ ಭಾವುಕತೆಯ ಕೈಗೆ ಬುದ್ದಿ ಕೊಟ್ಟನೆಂದೆನಿಸಿತು.


ಅಂತ್ಯವಂತೂ ಊಹಿಸಲು ಸಾಧ್ಯವೇ ಆಗುವುದಿಲ್ಲ. ಹಾಗೂ ಆ ತಿರುವು ಒಂದು ಪಥದಲ್ಲಿ ಸಾಗುತ್ತಿದ್ದವರನ್ನು ಬೇರೆಯದ್ದೇ ಲೋಕಕ್ಕೆ ಎತ್ತಿ ಎಸೆದಂತೆನ್ನಿಸಿತು. 


ಇಲ್ಲಿ ಗ್ರಂಥಾಲಯದ ಹಲವು ಅಕ್ರಮಗಳನ್ನು ತೆರೆದಿಟ್ಟಿದ್ದಾರೆ. ಅದನ್ನು ಓದಿದಾಗ ಹೀಗೆಲ್ಲಾ ಇರುತ್ತದಾ ಎಂದು ಅಚ್ಚರಿಯಾಗಿದ್ದಂತೂ ಹೌದು. ಸಂಚಾರಿ ಗ್ರಂಥಾಲಯದ ಕುರಿತ ವಿಚಾರವೂ ಇಷ್ಟವಾಯಿತು. ಒಳ್ಳೆಯ ಹಾಗೂ ವಿಭಿನ್ನ ಕಥಾವಸ್ತುವಿನಿಂದ ಈ ಕಾದಂಬರಿ ಪ್ರೇಮಾಭಟ್ ಮೇಡಂ ಅವರ ಉಳಿದ ಪುಸ್ತಕಗಳಿಗಿಂತ ತುಸು ಹೆಚ್ಚೇ ಇಷ್ಟವಾಯಿತು.


~ವಿಭಾ ವಿಶ್ವನಾಥ್

ಕಿಚನ್ ಕವಿತೆಗಳು (ಪುಸ್ತಕ ಯಾನ - 255)


ಪುಸ್ತಕದ ಶೀರ್ಷಿಕೆ : ಕಿಚನ್ ಕವಿತೆಗಳು

ಲೇಖಕರು : ಭಾರತಿ ಬಿ. ವಿ

ಪ್ರಕಾಶಕರು : ಬಹುರೂಪಿ

ಪುಟಗಳು : 40

ಬೆಲೆ : 30 ರೂ.


'ಕಿಚನ್ ಕವಿತೆ'ಗಳು ಎಂದಾಗ ಅಡಿಗೆ ಮನೆಗೆ ಸಂಬಂಧಿಸಿದ ಕವಿತೆಗಳಿರಬಹುದು ಎಂಬ ನಿರೀಕ್ಷೆ ಇದ್ದರೂ.. ಜೀವನದ ಸರಳ ವಿಚಾರಗಳನ್ನು ಅಡುಗೆ ಮನೆಗೆ ತಳುಕು ಹಾಕುವ ಚಂದದ ಪ್ರಯತ್ನ ಮನಸ್ಸಿನಲ್ಲಿಯುತ್ತದೆ. 'ಇಂಗು-ತೆಂಗು ಇದ್ದರೆ ಮಂಗನೂ ಅಡುಗೆ ಮಾಡಬಲ್ಲದು' ಎಂಬ ಗಾದೆ ಮಾತಿದೆ. ಆದರೆ, ಅದಷ್ಟೇ ಇದ್ದರೆ ಸಾಲದು. ಸರಿಯಾದ ಅಳತೆಯ ಒಂದಿಷ್ಟು ಪ್ರೀತಿಯ ಹದಪಾಕ ಇರಬೇಕು ಎನ್ನುವ ಪುಟ್ಟ ಸಂದೇಶವನ್ನು ಶೀರ್ಷಿಕೆಯ ಅಡಿ ಬರಹದಲ್ಲಿಯೇ ನೀಡುತ್ತಾರೆ ಲೇಖಕಿ ಬಿ. ವಿ ಭಾರತಿಯವರು. ಹಾಗಾಗಿ, ಈ ಕಿಚನ್ ಕವಿತೆಗಳಿಗೆ ಒಂದಿಷ್ಟು ಒಗ್ಗರಣೆ ಹಾಗೂ ಒಂದಿಷ್ಟು ಪ್ರೀತಿಯ ಹದ ಪಾಕ ಸೇರಿಯಾಗಿದೆ. 


ಲೇಖಕಿ ಕವಿತೆಗಳು ಹುಟ್ಟಿದ ಕುರಿತಾಗಿ ಹೇಳುವಾಗ ಹೀಗನ್ನುತ್ತಾರೆ. ಒಂದಿಷ್ಟು ವರ್ಷಗಳ ನಂತರ ಬೇಯಿಸುವುದು ಏಕತಾನತೆ ಅನ್ನಿಸಿ, ಆಗ ಅಂತಹಾ ಏಕತಾನತೆಯಿಂದ ಬಿಡುಗಡೆ ಹೊಂದಲು ಅಡುಗೆ ಮನೆಯಲ್ಲಿನ ವಸ್ತುಗಳು, ಪಾತ್ರೆಗಳು, ತರಕಾರಿ ಎಲ್ಲವಕ್ಕೂ ಮನುಷ್ಯ ತನ್ನ ಆರೋಪಿಸಲು ಶುರು ಮಾಡಿದ್ದಂತೆ. ಹಾಗಾಗಿ, ಈ ಕವಿತೆಗಳು ಹುಟ್ಟಿದ್ದಾದರೂ.. ಅಂತಹಾ ಹಲವಾರು ಕವಿತೆಗಳನ್ನು ಬರೆಯಲು ಈ ಆಲೋಚನೆಯಷ್ಟೇ ಸಾಲದು. ಹಾಗಾಗಿ, ಅದಕ್ಕೂ ಕಾರಣವನ್ನು ಹೇಳಿದ್ದಾರೆ. ಅದರ ಕುರಿತಾಗಿ ನೀವೇ ಓದಿ ನೋಡಿ. 


ನಾನು ಈ ಮೊದಲು 'ಕೋಶಿಸ್ ಕವಿತೆಗಳು' ಎನ್ನುವ ಪುಸ್ತಕ ಪರಿಚಯ ಮಾಡುವಾಗ ನಾನು ಈ ಪುಸ್ತಕದ ಕುರಿತಾಗಿ ಉಲ್ಲೇಖಿಸಿದ್ದೆ. ಈಗ ನನಗೆ ಬಹಳ ಇಷ್ಟವಾದ ಕೆಲವು ಕವಿತೆಗಳ ಕುರಿತು ಇಲ್ಲಿ ಹೇಳುತ್ತೇನೆ.


ಯಾವತ್ತೂ ಒಬ್ಬರು ಇನ್ನೊಬ್ಬರಾಗಲಾರರು. ಅಂತಹಾ ನಡವಳಿಕೆಗಳನ್ನು ಅಳವಡಿಸಿಕೊಂಡರೂ ಸಹಾ.. ಎಷ್ಟೋ ನಡವಳಿಕೆಗಳು ಅವರಾಗಿಯೇ ಇರುವಂತೆ ಮಾಡುತ್ತದೆ. ಕೆಲವು ಅಡುಗೆಗಳು ಹೀಗೆ ಎನ್ನುತ್ತಾ ಆ ಕುರಿತು ಹೀಗೆ ಹೇಳುತ್ತಾರೆ..


ನನಗೆ ಯಾವುದರದ್ದೋ 

ರೂಪ ಬದಲಿಸಿ ಮತ್ತೇನೋ ತಿನಿಸಾಗಿಸಿದರೆ 

ಇಷ್ಟವಾಗುವುದೇ ಇಲ್ಲ

ಒಬ್ಬರು ಇನ್ನೊಬ್ಬರಾದರೆ ಅದೇನು ಸ್ವಾರಸ್ಯ !


ಎಷ್ಟೋ ವ್ಯಕ್ತಿಗಳನ್ನು ಕೆಲವೊಮ್ಮೆ ದೂರದಿಂದಲೇ ನೋಡಿರುತ್ತೇವೆ ಅಥವಾ ಅವರ ಕುರಿತು ಅವರ ಕಂಡ ವ್ಯಕ್ತಿತ್ವವನ್ನು ಅಭಿಮಾನಿಸುತ್ತಿರುತ್ತೇವೆ. ಆದರೆ, ಕೆಲವೊಮ್ಮೆ ಅವರ ಭಾವ, ಆಲೋಚನೆಗಳಿಗೂ ಮಾಡುವ ಕೆಲಸಕ್ಕೂ ಅಥವಾ ಬರವಣಿಗೆಗೆ ವ್ಯತಿರಿಕ್ತವಾದ ಪರಿಸ್ಥಿತಿ ಇದ್ದರೆ.. ಅವರು ಇಷ್ಟವಾಗುವುದೇ ಇಲ್ಲ. ಹಾಗಾಗಿ, ಅವರನ್ನು ದೂರದಿಂದಲೇ ಅಭಿಮಾನಿಸುವುದೊಳಿತು ಎನ್ನುವ ಭಾವ ನನಗೆ ಆಗಾಗ ಹುಟ್ಟುತ್ತಿರುತ್ತದೆ. ಹಾಗಾಗ,  ತೀರಾ ಅಭಿಮಾನಿಸುವ ಅಥವಾ ಇಷ್ಟಪಡುವವರನ್ನು ಎಷ್ಟು ಬೇಕೋ ಅಷ್ಟೇ ರೂಢಿಸಿಕೊಂಡರೆ ಒಳ್ಳೆಯದಲ್ಲವಾ..


ನನಗೆ ಶುಂಠಿ ಬಾಯಿಗೆ ಸಿಕ್ಕಿ ಬಿಟ್ಟರೆ 

ಅದೇನು ಅಸಹ್ಯ, ತುರಿದು ಹಾಕಿದರೆ ಘಮ 

ಕೆಲವು ವ್ಯಕ್ತಿಗಳು ಹಾಗೇ, ಇಡಿಯಾಗಿ ಸಿಕ್ಕದೆ 

ಸಣ್ಣ ಪ್ರಮಾಣದಲ್ಲಿ ಸಿಕ್ಕರೇ ಒಳ್ಳೆಯದು 


ಕೆಲವೊಮ್ಮೆ ಮನುಷ್ಯರನ್ನು ಟೇಕನ್ ಫಾರ್ ಗ್ರಾಂಟೆಡ್ ಎಂಬಂತೆ, ತಮ್ಮಿಚ್ಛೆಗೆ ಬಂದಂತೆ.. ಅಥವಾ ಆಗಾಗ ತಮಗೆ ಬೇಕಾದಂತೆ ಬಳಸಿಕೊಳ್ಳುವ ವ್ಯಕ್ತಿತ್ವದವರೂ ಇಲ್ಲದಿಲ್ಲ. ಆದರೆ, ಅವರು ಅರ್ಥ ಮಾಡಿಕೊಳ್ಳಬೇಕಿದೆ ಮನುಷ್ಯ ಬಗ್ಗುವವರೆಗೆ ಬಗ್ಗಬಲ್ಲನಷ್ಟೇ.. ಅದಕ್ಕಿಂತ ಬಗ್ಗಿಸಲು ಹೊರಟಾಗ ಸಂಬಂಧದ ಎಳೆ ತುಂಡಾಗಬಹುದು. 


ಗಾಜು ಮೈಕ್ರೋವೇವ್ ನಿರೋಧಕವಾದರೂ 

ಕೆಲವು ಬಿರು ಬಿಸಿಗೆ ಬಿರುಕು ಬಿಡುತ್ತವೆ 

ಹೇಗೂ ಹೊಂದಿಕೊಳ್ಳುತ್ತವೆ ಎಂದು 

ಬೇಕಾಬಿಟ್ಟಿ ಬಳಸುವಂತಿಲ್ಲ, ಅರ್ಥವಾಯಿತೇ!


ಐದು ಬೆರಳುಗಳೂ ಒಂದೇ ಸಮವಾಗಿರುವುದಿಲ್ಲ. ನಮ್ಮಂತೆ ನೀನೇಕಿಲ್ಲ ಎಂದು ಕೇಳುವ ಮುನ್ನ ಜನರು ಅದನ್ನು ಅರ್ಥಮಾಡಿಕೊಳ್ಳಬೇಕು. ಲೇಖಕಿಗೂ ಅಂತಹ ಪ್ರಶ್ನೆಗಳು ನೆನಪಾಗಿ ಇಂತಹ ಚಂದದ ಕವಿತೆಯೊಂದು ಹುಟ್ಟಿದೆ ನೋಡಿ. 


ಚಹಾ ಪುಡಿ ನೀರಿಗೆ ಹಾಕಿ ಕುದಿಸಬಹುದು 

ಕಾಫಿ ಪುಡಿ ಹಾಗೆ ಕುದಿಸಿದರೆ ರುಚಿಗೆಡುತ್ತದೆ

ನಮ್ಮಂತೆ ನೀನೇಕಿಲ್ಲ, ಯಾಕಷ್ಟು ಸೂಕ್ಷ್ಮ ಅನ್ನುವವರಿಗೆಲ್ಲ

ಇದೇ ನನ್ನ ಉತ್ತರ ಅಷ್ಟೇ !


ಮೇಲೆ ಕಾಣುವ ಮನುಷ್ಯರಿಗೂ ಒಳಗಿನ ಅವರ ಮನಸ್ಥಿತಿಗಳಿಗೂ ಕನ್ನಡ ಹಿಡಿಯುವುದು ಕಷ್ಟವೇ.. ಮುಖ ನೋಡಿ ಮಣೆ ಹಾಕುವವರಿದ್ದಾರೆ. ಆದರೆ, ಮನಸ್ಸು ಓದುವವರು ಎಷ್ಟಿರಬಹುದು..? ಅದರಲ್ಲೂ>> ಸಾಮಾನ್ಯ ಮನುಷ್ಯರಿಗಂತೂ ಇನ್ನೊಬ್ಬರ ಮನಸ್ಥಿತಿಯನ್ನು ಅಳೆಯುವುದು ಬಹಳವೇ ಕಷ್ಟ. ಅದು ಸಂಪೂರ್ಣ ಅಸಾಧ್ಯವೂ ಹೌದು. 


ಉಪ್ಪಿನಕಾಯಿಯೇ ವಾಸಿ 

ಕೆಟ್ಟಾಗ ಮೇಲೆ ಬೂಸ್ಟ್ ಬೆಳೆಯುತ್ತದೆ,

ಮನುಷ್ಯರದ್ದೆ ಸಮಸ್ಯೆ!

ಒಳಗೆ ಕೊಳೆತರೆ ಹೊರಗೆ ತಿಳಿಯುವುದೇ ಇಲ್ಲ 


"ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ" ಎಂಬ ಪರಿಸ್ಥಿತಿ ಕೆಲವರ ಬದುಕಲ್ಲಿ ಬಂದಿರಬಹುದು. ನಮಗೆ ಬದುಕಿನಲ್ಲಿ ಬಯಸಿದ್ದು ಸಿಕ್ಕಾಗ.. ಆ ಬಯಕೆ ಮುರುಟಿಯೇ ಹೋಗಿರಬಹುದು. ಅಂತಹಾ ಸಂದರ್ಭವನ್ನು ಹೀಗೆ ಹೇಳಿದರೆ..?! 


ಬಯಸಿದಂಥ ಅಡುಗೆ ಮನೆ ನನ್ನದಾಯಿತು 

ಅಷ್ಟರಲ್ಲಿ ಬೇಯಿಸುವುದೇ ಬೋರಾಗಿದೆ;

ಬದುಕಿನಲ್ಲಿ ಬಯಸಿದ್ದು ಸಿಗುವುದು ಮುಖ್ಯ, 

ಆದರೆ 'ಯಾವಾಗಾ' ಎನ್ನುವುದಿನ್ನೂ ಮುಖ್ಯ 


ಇಂತಹ ಹಲವಾರು ಸರಳ, ಸುಂದರ ಸಾಲುಗಳು ಮನಸೂರೆಗೊಳ್ಳುತ್ತವೆ. ಅಲ್ಲದೇ.. ಬದುಕಿನ ಕಹಿ ಸತ್ಯವನ್ನು ಹದವಾಗಿ ಹೇಳುತ್ತಾ ಹೋಗುತ್ತವೆ. 


ಇಂತಹ ನಾಲ್ಕೇ ಸಾಲುಗಳ ಹಲವಾರು ಕವಿತೆಗಳ ಜೊತೆಗೆ ಇನ್ನು ನಾಲ್ಕು ಚೆಂದದ ಕವಿತೆಗಳನ್ನು ಹೇಳಿದ್ದಾರೆ.


ನನಗೆ ಇದರಲ್ಲಿ ಕಿಚನ್ ಕವಿತೆಗಳು ಕಂಡವು. ಅಡುಗೆ ಮನೆಯ ಕವಿತೆಗಳು ಕಾಣಲಿಲ್ಲ. ಇದರರ್ಥ, ಇಲ್ಲಿ ಪಟ್ಟಣದ ಅಡುಗೆ ಮನೆಯ ಪರಿಸರದ ಚಿತ್ರಣ, ಫ್ರಿಡ್ಜ್, ಮೈಕ್ರೋವೇವ್ ಇಂತಹಾ ಪರಿಸರಗಳು ಕಂಡವು. ಅಡುಗೆಮನೆಯ ಒಲೆ, ಮಸಿ ಪಾತ್ರೆ, ಹಸಿ ಸೌದೆ, ಕಪ್ಪು ಹೊಗೆ ಹೀಗೆ ಹಳ್ಳಿಯ ಪರಿಸರದ ಅಡುಗೆ ಮನೆ ಕಾಣಲಿಲ್ಲ. ಇದಕ್ಕೆ ಕಾರಣ ಈಗೀಗ ಹಳ್ಳಿಯ ಬದಲಾವಣೆಯ ಪ್ರಭಾವವೂ ಇದ್ದಿರಬಹುದು ಅಥವಾ ಇದಕ್ಕೆ ಲೇಖಕಿಯ ಅನುಭವವೂ ಕಾರಣವೆನ್ನಬಹುದು. ಇಲ್ಲಿನ ಕಿಚನ್ ಕವಿತೆಗಳು ಬದುಕಿನ ಸಂಭ್ರಮಕ್ಕೆ ಪ್ರೀತಿಯ ಹದಪಾಕವಾಗಿಯೂ... ಒಗ್ಗರಣೆಯ ಘಮಲಾಗಿಯೂ ಇನ್ನಷ್ಟು ರುಚಿಸುವಂತೆ ಮಾಡುತ್ತವೆ.


~ವಿಭಾ ವಿಶ್ವನಾಥ್