ಭಾನುವಾರ, ಏಪ್ರಿಲ್ 12, 2026

ಕಳೆದುಕೊಂಡವಳು ಮತ್ತು ಇತರ ಕತೆಗಳು (ಪುಸ್ತಕ ಯಾನ - 144)


ಪುಸ್ತಕದ ಶೀರ್ಷಿಕೆ : ಕಳೆದುಕೊಂಡವಳು ಮತ್ತು ಇತರ ಕತೆಗಳು

ಲೇಖಕರು : ಬಿ. ಟಿ. ಜಾಹ್ನವಿ

ಪ್ರಕಾಶಕರು : ಪತ್ರಿಕೆ ಪ್ರಕಾಶನ

ಪ್ರಥಮ ಮುದ್ರಣ : 1996

ಪುಟಗಳು : 100


ಜಾಹ್ನವಿಯವರು ಬೆಂಗಳೂರಿನಲ್ಲಿ 1963ರಲ್ಲಿ ಜನಿಸಿದರು. ತಂದೆ ಡಾ.ಬಿ.ಎಂ.ತಿಪ್ಪೇಸ್ವಾಮಿ ಪ್ರಖ್ಯಾತ ನೇತ್ರತಜ್ಞರು. ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಜಾಹ್ನವಿ ಹಲವು ಕೃತಿಗಳನ್ನ ರಚಿಸಿದ್ದಾರೆ.  ಅವರ ಚೊಚ್ಚಲ ಕೃತಿಯಾದ ಕಳೆದು ಕೊಂಡವಳು ಮತ್ತು ಇತರ ಕತೆಗಳು ಎಂಬ ಕಥಾಸಂಕಲನ ಹೆಚ್ಚು ಜನಪ್ರಿಯವಾಗಿದೆ. ಕಳ್ಳುಬಳ್ಳಿ ಎಂಬ ಮತ್ತೊಂದು ಕಥಾಸಂಕಲನವನ್ನೂ ರಚಿಸಿದ್ದಾರೆ.


'ಕಳೆದುಕೊಂಡವಳು' ಕಥಾ ಸಂಕಲನದ ಹೆಚ್ಚಿನ ಕತೆಗಳು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇಲ್ಲಿನ ಕತೆಗಳು ಸೂಕ್ಷ್ಮವಾಗಿ ಹೆಣ್ಣಿನ ವಿವಿಧ ಸಮಸ್ಯೆಗಳನ್ನು ತೆರೆದಿಡುತ್ತವೆ. ಇಲ್ಲಿ ಅನೈತಿಕ ಹಾಗೂ ನೈತಿಕ ಎಂಬ ಜಾಡಿನಲ್ಲಿ ಕತೆಯನ್ನು ನೋಡುವುದಕ್ಕಿಂತ ಆಕೆ ಇದ್ದ ಪರಿಸ್ಥಿತಿ ಹಾಗೂ ತೊಳಲಾಟಗಳ ನಿಟ್ಟಿನಲ್ಲಿ ನೋಡುವುದು ಸೂಕ್ತವೆನಿಸುತ್ತದೆ. ಈ ಕತೆಗಳ ಕಥಾವಸ್ತು ಈಗಿನ ದಿನಕ್ಕೂ ಡೇರಿಂಗ್ ಎನ್ನಿಸುವಂತಹಾ ಕಥಾವಸ್ತು. ಇಂತಹಾ ಕಥಾವಸ್ತುಗಳನ್ನು ಆರಿಸಿಕೊಳ್ಳುವುದು ಸುಲಭವಲ್ಲ. ಇಲ್ಲಿನ ನಿಗಿನಿಗಿ ಕೆಂಡದಂತಹಾ ಸತ್ಯಗಳನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ. 


ವಿಮುಖ: 'ಭರತ್ ವಿಥ್ ಮೈತ್ರ' ಎನ್ನುವ ಕಾರ್ಡ್ ನೋಡಿದ್ದ ರಘುವಿಗೆ ಅಚ್ಚರಿ. ಎಲ್ಲವೂ ಸರಿ ಇದ್ದಿದ್ದರೆ ಮೈತ್ರ ಅವನವಳಾಗುತ್ತಿದ್ದಳು. ಆದರೆ, ತಾನೇ ಪರಿಚಯಿಸಿದ್ದ ತನ್ನ ಮಿತ್ರ.. ತಾನೇ ಮಾಡಿಕೊಟ್ಟ ಅವಕಾಶ ಎಲ್ಲವನ್ನೂ ತಲೆಕೆಳಗಾಗಿಸಿತ್ತು. 

ಕನ್ಯೆಯಲ್ಲದ ಮೈತ್ರ ದಿನಕ್ಕೊಂದು ಹುಡುಗಿಯನ್ನು ಬದಲಾಯಿಸುತ್ತಿದ್ದ ಭರತ್ ನನ್ನು ವಿವಾಹವಾಗುವ ಸಂಧರ್ಭವೇನಿತ್ತು..?? ಇಲ್ಲಿ ಮನುಷ್ಯನ ಬದಲಾಗುವ ಮನಸ್ಥಿತಿಗಳ ಜೊತೆಗೆ ಹೆಣ್ಣಿನ ಶೀಲದ ಕುರಿತ ಪ್ರಶ್ನೆಗಳು ನಮ್ಮನ್ನೂ ಚಿಂತಿಸುವಂತೆ ಮಾಡುತ್ತದೆ. ಇಲ್ಲಿ ವಿಮಖರಾಗಿದ್ದು ಯಾರು..??


ಕಳ್ಳುಬಳ್ಳಿ: ಇತ್ತ ಶಿವಣ್ಣ ಹಾಗೂ ಇಂದ್ರನ ಒಬ್ಬನೇ ಮಗನಾದ ರಾಜುವಿನ ಹನ್ನೆರಡನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅದೇ ಮನೆಯಲ್ಲಿ ಕೆಲಸದ ಆಳಾಗಿದ್ದ ತಿಪ್ಗನನ್ನು ನಡೆಸಿಕೊಂಡ, ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಆತನ ತಂದೆ ಕೆಂಚ ಗಮನಿಸಿದ. ಆತ ಹಾಗೂ ಆತನ ಹೆಂಡತಿ ಬಸ್ವಿ ಒಬ್ಬನೇ ಮಗನಾದ ಆತನನ್ನು ಸಾಕಿದ್ದ ರೀತಿಗೂ ಇಲ್ಲಿಗೂ ಬಹಳಷ್ಟು ವ್ಯತ್ಯಾಸವಿತ್ತು. ತಿಪ್ಗನನ್ನು ಅಲ್ಲಿ ಬಿಟ್ಟಿದ್ದಾದರೂ ಏಕೆ..? ಶಿವಣ್ಣನೇನೂ ಅಪರಿಚಿತನಲ್ಲವಾದರೂ ಅಸಹಾಯಕತೆ ಹೀಗೆಯೇ ಇರುತ್ತದಾ..?? ಕಳ್ಳುಬಳ್ಳಿಯ ಸೆಳೆತ, ಮಿಡಿತದಿಂದ ಕೆಂಚನ ಪ್ರತಿಕ್ರಿಯೆ ಏನು..??


ವ್ಯಭಿಚಾರ: ಮುತ್ತಣ್ಣನವರ ಹೆಂಡತಿ ಲೀಲಾವತಿ ನಡೆದುಕೊಂಡ ರೀತಿ ನೈತಿಕವಾಗಿ ಸರಿಯಿಲ್ಲವೆನ್ನುತ್ತಿದ್ದ ಸವಿಯ ಅಭಿಪ್ರಾಯ ಬದಲಾಗಿತ್ತು. ಮಾನಸಿಕ ವ್ಯಭಿಚಾರಕ್ಕಿಂತ ಹಾಗೆ ಬದುಕಲೂ ಧೈರ್ಯ ಬೇಕು ಎಂಬುದು ಹೌದಾದರೂ.. ಆ ರೀತಿಯ ಹೆಣ್ಣಿನ ಅಥವಾ ಗಂಡಿನ ನಡವಳಿಕೆಗಳಿಗೆ ಕಾರಣವೇನು..?? ಹೆಣ್ಣಿನ ಮಾನಸಿಕ ತುಮುಲಗಳು ಸಿಟ್ಟಾಗಿ ಪರಿವರ್ತನೆಯಾದಾಗಿನ ಪರಿಣಾಮಗಳಾ ಅಥವಾ ಹೆಣ್ಣು ತಾನು ಸೇಡು ತೀರಿಸಿಕೊಳ್ಳುವ ಬಗೆಯಾ ಎನ್ನಿಸಿತು. ಮೂರನೇ ವ್ಯಕ್ತಿಯಾದ ಸುಜಿಯ ಮೂಲಕ ನಿರೂಪಣೆಗೊಳ್ಳುವ ಕತೆ ಇದು.


ಅಜ್ಞಾತ: ಮಾಲಿಂಗನ ಅಜ್ಞಾತವಾಸ ಅಂತೂ ಒಂದು ರೀತಿಯಲ್ಲಿ ಕೊನೆಗೊಂಡಿತ್ತು. ಅಮ್ಮನಿಗೆ ತಾನು ತನ್ನ ಭಾವನೆಗಳನ್ನು ತೋರದೆ, ಆಕೆಗೆ ಗೊತ್ತಾದೀತು ಎಂದೇ ದೂರ ಉಳಿದರೂ ತನ್ನ ಹಾಗೂ ತನ್ನ ಹೆಂಡತಿ ಕಮಲಮ್ಮನ ನಡುವಿನ ಒಡನಾಟದಿಂದ ಆಕೆ ಗ್ರಹಿಸಿಕೊಂಡ ಸತ್ಯ ಹಾಗೂ ಮಾಲಿಂಗನ ಜೀವನದ ಏರುಪೇರುಗಳು ಅಜ್ಞಾತವಾಗಿಯೇ ಉಳಿದಿದ್ದವು. ಬದಲಾದ ಮಗನ ನಡವಳಿಕೆ ಎಲ್ಲದಕ್ಕೂ ಸಾಂತ್ವನ ಹೇಳಿದಂತೆ, ಅಮ್ಮನ ಮನಸ್ಸು ನಿರಾಳಗೊಳ್ಳುವ ಪರಿ ಇಲ್ಲಿದೆ. ಮಾಲಿಂಗನ ನಡೆಗೆ ಅಂತಹಾ ಕಾರಣವೇನು..??


ಕಳೆದುಕೊಂಡವಳು: ರಾಜಿಯ ಜೊತೆಗೆ ಬಂದ ಕೀರ್ತಿಗೆ ಸಿಕ್ಕಿದ್ದು ಮಹೇಶನ ಸಾವಿನ ಸುದ್ದಿ. ತನಗೆ ಇಷ್ಟವಿಲ್ಲದಿದ್ದರೂ ಮನೆಗೆ ಹೋದಾಗ  ಅಲ್ಲಿ ನಡೆದ ಸಾವಿನ ಮನೆಯ ಚಟುವಟಿಕೆಗಳು ತಂಗಿ ಸ್ವರ್ಣಳನ್ನು ನಲುಗಿಸಿದ ಪರಿಗೆ, ಮಹೇಶನ ತಂಗಿಯ ಕಟು ಮಾತಿಗೆ ಹೇಸಿದಳು. ಸ್ವರ್ಣಳ ಜಾಗದಲ್ಲಿ ಅವಳಿರಬೇಕಾದ ಸಂಧರ್ಭ ಬದಲಾದದ್ದು ಹೇಗೆ..?? ತನ್ನ ಗಂಡನಾಗಿದ್ದವನ ಕುರಿತು ಮೂಡಿದ್ದ ಭಾವನೆಗಳೇನು..?? ಸ್ವರ್ಣಳಿಗೆ ಕೀರ್ತಿಯ ಬಗ್ಗೆ ಮೂಡಿದ ಭಾವನೆಗಳೇನು..?? ಇಲ್ಲಿ ಕಳೆದುಕೊಂಡವಳು ನಿಜಕ್ಕೂ ಯಾರು..??


ಹೋರಾಟ: ಲಕ್ಷ್ಮಿ ಒಂದು ಅಸಹಾಯಕ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಬಲಿಯಾದಳು. ಆದರೆ, ಮುಂದಿನ ಘಟನೆಗಳು ಆ ಊರಿನಲ್ಲಿ ಹಾಗೂ ಅವಳ ಬದುಕಲ್ಲಿ ಸೃಷ್ಟಿಸಿದ ಸಂಚಲನವೇನು..?? ಆಕೆಯ ಮಾವನ ಮಗ ಧರಣೆಪ್ಪನ ಹೋರಾಟಕ್ಕೆ ಸಿಕ್ಕ ಫಲವೇನು..?? ಲಕ್ಷ್ಮಿಯನ್ನು ನಿರಾಕರಿಸಿದ್ದ ದೇವರಾಜು ಮತ್ತೆ ಆಕೆಯನ್ನು ಮದುವೆಯಾದದ್ದೇಕೆ..?? ಮನುಷ್ಯನ ನಿಸ್ವಾರ್ಥತೆಯ ಹೋರಾಟಕ್ಕೆ ಸಿಕ್ಕ ಫಲವೇನು..?? ಸ್ವಾರ್ಥವೇ ವಿಜೃಂಭಿಸಿದ ಕತೆಯ ಕೊನೆ ಏಕೋ ತಲ್ಲಣಕ್ಕೆ ದೂಡಿದರೂ ವಾಸ್ತವವೆನಿಸಿದ ಕತೆ ಇದು.


ಆಸರೆ: ಗಂಗ ಚೆಲುವರಾಜುವನ್ನು ನಿಷ್ಕಲ್ಮಶವಾಗಿ ಪ್ರೀತಿಸಿದ್ದರೂ.. ಮುಗ್ಧ ಗಂಗಾಳಿಗೆ ಆತನ ಸ್ವಾರ್ಥ ಅರಿವಾಗಿರಲಿಲ್ಲ. ಆಸರೆಯಾಗಿದ್ದ ಅಪ್ಪನೂ ಇಲ್ಲ.. ಇತ್ತ, ಸಂಚಿನಿಂದ ಆದ ಮದುವೆಯೂ ಊರ್ಜಿತವಾಗಲಿಲ್ಲ. ಆಸರೆಯಾಗಿದ್ದ ತೋಟವೂ ಇಲ್ಲದ ಬದುಕಿಗೆ ಗಂಗಾಳಿಗೆ ಆಸರೆಯಾದದ್ದೇಕೆ..?? ಸಿಡಿದು ನಿಂತ ಹೆಣ್ಣಿನ ಕೆಚ್ಚು ಇಷ್ಟವಾಯಿತು. 


ತಾಯ್ತನ: ತಾಯ್ತನ ಹೆಣ್ಣನ್ನು ಎಂತಹಾ ತ್ಯಾಗಮಯಿಯಾಗಿಸಬಲ್ಲದು ಎಂಬುದರ ನಿದರ್ಶನ ಇಲ್ಲಿದೆ. ಅಮ್ಮನನ್ನು ಹಿಂಸಿಸಿದ ಅಪ್ಪ.. ಅಪ್ಪನ ಪ್ರತಿರೂಪವಾಗಿದ್ದ ತಮ್ಮ, ಗಂಡಿನ ಅಹಂ ಅನ್ನು ಹೊತ್ತಿದ್ದ ಗಂಡ ಎಲ್ಲರೂ ಸೇರಿ ಪೃಥ್ವಿಯನ್ನು ಗಂಡಿನ ಕುಲವನ್ನೇ ದ್ವೇಷಿಸುವಂತೆ ಮಾಡಿದ್ದರು. ಗಂಡು ಮಗುವೇ ಬೇಡ ಎನ್ನುತ್ತಿದ್ದವಳು ಮಗನ ಮುಂದೆ ಕೇವಲ ತಾಯಿಯಾದ ಪರಿ ಇಲ್ಲಿದೆ. ಅಸಹಾಯಕ ಪರಿಸ್ಥಿತಿಯಲ್ಲಿ ಅಪ್ಪನನ್ನು ಕ್ಷಮಿಸಿದಳೇ..?? ಇಲ್ಲಿನ ತಾಯ್ತನಕ್ಕೆ ಮಿತಿ ಇದೆಯೇ..??


ಒಳಗುದಿ: ಹೆಣ್ಣಿನ ಒಳಗುದಿ ಹೀಗೂ ಇರಬಹುದಾ..?? ಎಲ್ಲವೂ ಇದ್ದರೂ ಮತ್ತೇನಕ್ಕೋ ಹಾತೊರೆಯುವ ಮನಸ್ಸಿಗೆ ಸಿಕ್ಕ ನೆಮ್ಮದಿ ಮರೀಚಿಕೆಯಾಯಿತಾ..?? ತನಗೆ ಸರಿಸಮವೇ ಅಲ್ಲ ಎಂದುಕೊಂಡಿದ್ದ ಗೌರಿಯನ್ನು ಕುರಿತು ಉಂಟಾದ ಈರ್ಷೆಗೆ ಅರ್ಥವಿದೆಯೇ..? ಹೆಣ್ಣುಮಕ್ಕಳ ಉದಾರತೆ ಹಾಗೂ ಸಣ್ಣತನ ಎರಡನ್ನೂ ಚಿತ್ರಿಸಿರುವ ಕತೆ ಇಲ್ಲಿದೆ.


ಬಸವಿ: ಮಗಳು ದೇವೀರಿಯನ್ನು ಬಸವಿ ಬಿಡಲು ಶಾಂತವ್ವನಿಗೆ ದಿಗಿಲಾಗಿತ್ತು. ಬಸವಿ ಬಿಡುವ ಪದ್ದತಿ ಇನ್ನೂ ಜೀವಂತವಾಗಿರುವ ಸಂಧರ್ಭದಲ್ಲಿ ಆಕೆಯನ್ನು ಪ್ರೀತಿಸಿದವನನ್ನು, ಆತನ ತಂದೆಯೇ ಸಂಚು ಮಾಡಲು ದೂರ ಹೋಗಿ ಮಗನನ್ನೇ ಕಳೆದುಕೊಂಡವನು ನಂತರವೂ ಬುದ್ದಿ ಕಲಿಯಲಿಲ್ಲ. ಒಂದು ಹೆಣ್ಣಿನ ಕಾರಣಕ್ಕೆ, ಅವಳ ನೋವಿಗೆ, ಸೇಡಿಗೆ ಊರಿನ ಗಣ್ಯರ ಹಾಗೂ ಊರಿನ ಪರಿಸರವೇ ಬದಲಾದ ಕತೆ ಇಲ್ಲಿದೆ. 


ಹೆಣ್ಣಿನ ನೋವು, ಸೇಡು, ಸಿಟ್ಟು, ಹತಾಶೆ ಎಲ್ಲವೂ ಹೆಣ್ಣನ್ನು ಹೀಗೂ ಪರಿವರ್ತಿಸಬಲ್ಲದು ಎಂಬುದರ ಚಿತ್ರಣ ಇಲ್ಲಿದೆ. ಹೆಣ್ಣೊಬ್ಬಳು ಹೇಳಿಕೊಳ್ಳಲಾಗದ ಪರಿಸ್ಥಿತಿಯನ್ನು ನಿಭಾಯಿಸುವ ಚಿತ್ರಣ ಇಲ್ಲಿದೆ. ಇಲ್ಲಿನ ಕತೆಗಳು ನೋವು ಅಥವಾ ನಿರಾಶೆಗಳಲ್ಲ. ಬದಲಾಗಿ ಧೈರ್ಯ ತೋರುವ ದಾರಿದೀಪಗಳು. ಆದರೂ.. ಹೆಣ್ಣಿನ ಕತೆಗಳು ನಿಜಕ್ಕೂ ನೈತಿಕ ದಾರಿದೀಪವಾ..?? ಓದಿ ನೀವೇ ಉತ್ತರ ತಿಳಿಯಿರಿ. 


~ವಿಭಾ ವಿಶ್ವನಾಥ್

ಕನಕದಾಸರು (ಪುಸ್ತಕ ಯಾನ - 143)


ಪುಸ್ತಕದ ಶೀರ್ಷಿಕೆ : ಕನಕದಾಸರು

ಲೇಖಕರು : ಡಾ|| ಎಂ.ಕೆ. ಭಾರತೀರಮಣಮಾಚಾರ್ಯ

ಪ್ರಕಾಶಕರು : ಶ್ರುತಿ ಪ್ರಕಾಶನ

ಪ್ರಥಮ ಮುದ್ರಣ : 1990

ಪುಟಗಳು : 168


ಡಾ|| ಎಂ.ಕೆ. ಭಾರತೀರಮಣಮಾಚಾರ್ಯ ಅವರು 1921 ಜುಲೈ 2ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದ ಇವರು ಬನರಾಸಿನಲ್ಲಿ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಟೀಚರ್‌ ಟ್ರೈನಿಂಗ್‌ ಸ್ಕೂಲಿನಲ್ಲಿ ಪ್ರಾಂಶುಪಾಲರಾಗಿದ್ದ ಇವರು ಡೈರೆಕ್ಟರ್‌ ಆಫ್‌ ಕೊಲಜಿಯೆಟ್‌ ಎಜುಕೇಷನ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯಾಸಕ್ತರು ಆಗಿದ್ದ ಇವರು ಪ್ರಜಾಮತದ ಅಂಕಣಕಾರರಾಗಿ ಹಬ್ಬಹರಿದಿನಗಳ ಬಗ್ಗೆ ಬರೆದಿದ್ದಾರೆ.


ಕನ್ನಡದಿಂದ ಹಿಂದಿಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಪ್ರಥಮ ಮಂತ್ರಿ ಮಂಡಲದ ಸದಸ್ಯರ ಪರಿಚಯ ಇವರ ಪ್ರಮುಖ ಕೃತಿ.  ಇವರು ರಚಿಸಿದ ಹಲವು ಕೃತಿಗಳೆಂದರೆ ಕರ್ಣಸಿಂಹ, ಭಾರತೇಯ ಹರಿಶ್ಚಂದ್ರ, ಕಬೀರದಾಸ, ಕನಕದಾಸರು, ಪ್ರೇಮಚಂದ್ರ ಇತ್ಯಾದಿ.


ತಿರುಪತಿ ದೇವಾಲಯದ ಆಡಳಿತ ಮಂಡಳಿ ರಚಿಸಿದ್ದ "ದಾಸ ಸಾಹಿತ್ಯ ಪ್ರಾಜೆಕ್ಟ್"ನ ಮುಖ್ಯ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಅಪ್ಪಣಾಚಾರ್ಯರ ಪ್ರೇರಣೆಯಿಂದ ತಾವು ಈ ಪುಸ್ತಕವನ್ನು ರಚಿಸಿರುವುದಾಗಿ ಲೇಖಕರು ಹೇಳುತ್ತಾರೆ.


"ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು

ದೋಷ ರಾಶಿ ನಾಶ ಮಾಡು ಶ್ರೀಶ ಕೇಶವ"

ಪರಮಾತ್ಮನ 24 ಹೆಸರುಗಳನ್ನು ಹೇಳುವ ಈ ದೇವರ ನಾಮವನ್ನು ಹಾಡುತ್ತಾ ಬಂದ ದಾಸರು ಹಾಗೂ ಆ ಹಳ್ಳಿಯ ಒಂದಿಷ್ಟು ಮಕ್ಕಳ ನಡುವೆ ನಡೆದ ಸಂಭಾಷಣೆಯನ್ನು ಜ್ಞಾನಾರ್ಜನೆಯ ರೀತಿಯಲ್ಲಿ ಸರಳವಾಗಿ ಕಟ್ಟಿಕೊಟ್ಟಿರುವ ಕೃತಿ ಇದು. ಮೊದಲ ಭಾಗದಲ್ಲಿ ಕನಕದಾಸರ ಕುರಿತಾದ ಸ್ಥೂಲ ಪರಿಚಯವನ್ನು ಮಕ್ಕಳಿಗೆ ಹೇಳುವಂತೆ ಹಾಗೂ ಮನಸ್ಸಿನಲ್ಲಿ ಉಂಟಾಗುವ ನಮ್ಮ ಹಲವಾರು ಸಂದೇಹಗಳಿಗೂ ಉತ್ತರ ನೀಡುವಂತೆ ರಚಿಸಲಾಗಿದೆ 


 ಕನಕದಾಸರ ಕುರಿತಾಗಿ ಇರುವಂತಹ ವದಂತಿಗಳು ಹಾಗೂ ಅವುಗಳ ಸತ್ಯಾಸತ್ಯತೆಯನ್ನು ದಾಸರು ಇದು ಸರಿ.. ಇದು ತಪ್ಪು.. ಎಂದು ವಿಶ್ಲೇಷಿಸದೇ.. ಆಯಾ ಸಂದರ್ಭವನ್ನೇ ಸಕಾರಣ ಸಮೇತ ವಿವರಿಸಿರುವುದು ನಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಬಹಳಷ್ಟು ಅನುಕೂಲಕರವಾಗಿದೆ.


ಕನಕದಾಸರು ಹುಟ್ಟಿದ ಕಾಲ 15ನೇ ಶತಮಾನದ ಕೊನೆ ಹಾಗೂ ಹದಿನಾರನೇ ಶತಮಾನದ ಬಹಳಷ್ಟು ದಿನಗಳು ಬದುಕಿದ್ದರು ಎಂದು ಹೇಳುತ್ತಾರೆ. ಮೋಹನ ತರಂಗಿಣಿಯಲ್ಲಿ ಅವರ ಹುಟ್ಟಿನ ಕುರಿತಾದ ಉಲ್ಲೇಖಕ್ಕೆ ಆಧಾರವಿದೆ ಎಂದು ಹೇಳಿದಾಗ ಆ ವಿಚಾರವಾಗಿ "ಅನಿರುದ್ಧನ ಜನ್ಮ ಆನಂದ ಸಂವತ್ಸರದ ಮಾಘಶುದ್ಧ ಪಂಚಮಿ" ಎಂದು ಬರುವ ಉಲ್ಲೇಖವಿದೆ. ಆದ್ದರಿಂದ, ಅಲ್ಲಿನ ಆನಂದ ಸಂವತ್ಸರವನ್ನು ಲೆಕ್ಕ ಹಾಕಿ 1486-87ರ ಸಮಯದಲ್ಲಿ ಹುಟ್ಟಿರಬಹುದು ಎಂದು ಕೆಲ ವಿದ್ವಾಂಸರು ಹೇಳುತ್ತಾರೆ. ಅಷ್ಟೇ ಅಲ್ಲದೆ, ವ್ಯಾಸರಾಜರ ಶಿಷ್ಯರಾಗಿದ್ದ ಪುರಂದರದಾಸರು ಹಾಗೂ ಕನಕದಾಸರು ಸಮಕಾಲೀನರು ಎಂಬ ಅಂಶವು ಇಲ್ಲಿ ಉಲ್ಲೇಖನೀಯ. ಇಷ್ಟೇ ಅಲ್ಲದೆ.. "ವ್ಯಾಸರಾಯರು ವಿಜಯನಗರದ ಕೃಷ್ಣದೇವರಾಯನನ್ನು ಕುಹು ಯೋಗದಿಂದ ರಕ್ಷಿಸಿದರು" ಎಂಬ ಇತಿಹಾಸದ ಘಟನೆಯ 1521ರಲ್ಲಿ ದಾಖಲಾಗಿದೆ. ಅದೇ ಸಮಯಕ್ಕೆ ವ್ಯಾಸರಾಯರು 'ದಾಸಕೂಟ'ವನ್ನು ಸ್ಥಾಪಿಸಿದರು. ಅಷ್ಟೇ ಅಲ್ಲದೆ.. ಪುರಂದರದಾಸರು ವೈಕುಂಠವಾಸಿಗಳಾದದ್ದು 1565ನೇ ಜನವರಿಯಲ್ಲಿ. ಅದಕ್ಕೂ 26 ವರ್ಷದ ಮುಂಚೆ ವ್ಯಾಸರಾಯರು ಕಾಲರಾಗಿದ್ದರು ಎಂಬ ಎಲ್ಲಾ ಅಂಶವನ್ನು ಪರಿಗಣಿಸಿ ಕನಕದಾಸರ ಕಾಲವನ್ನು ನಿರ್ಧರಿಸಲಾಗಿದೆ. 


ಕನಕದಾಸರು ಹುಟ್ಟಿದ್ದು ಕಾಗಿನೆಲೆಯಲ್ಲಿ ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಬಂಕಾಪುರದ ಸಮೀಪದಲ್ಲಿರುವ ಬಾಡ ಗ್ರಾಮದಲ್ಲಿ ಎನ್ನುತ್ತಾರೆ. ಈ ಎರಡೂ ಗ್ರಾಮಗಳು ಧಾರವಾಡ ಜಿಲ್ಲೆಯಲ್ಲಿದ್ದು.. ಕನಕದಾಸರು ತಮ್ಮ ಕೃತಿಯಲ್ಲಿ ಎರಡಕ್ಕೂ ಮಹತ್ವದ ಸ್ಥಾನ ನೀಡಿದ್ದಾರೆ. 14ನೇ ಶತಮಾನದ ನಂತರ ವಿಜಯನಗರದ ಆಳ್ವಿಕೆಯ ಸಮಯದಲ್ಲಿ ಬಾಡದಿಂದ ಆದಿಕೇಶವನನ್ನು ತಂದು ತಾವೇ ಕಟ್ಟಿಸಿದ ಮಂದಿರದಲ್ಲಿ ಸ್ಥಾಪಿಸುತ್ತಾರೆ. ತಮ್ಮ ಅಂಕಿತವನ್ನು 'ಕಾಗಿನೆಲೆ ಆದಿಕೇಶವ' ಎಂದಾಗಿಸಿಕೊಂಡಿದ್ದಾರೆ.


ಕನಕದಾಸರ ತಂದೆ ಬೀರಪ್ಪನಾಯಕ. ತಾಯಿ ಬಚ್ಚಮ್ಮ. ನಾಯಕ ಎಂದರೆ ಸಣ್ಣ ಸೈನ್ಯದ ಸೇನಾಧಿಕಾರಿ. ವಿಜಯನಗರ ಕಾಲದ ಆಳ್ವಿಕೆಯಲ್ಲಿ ಬಾಡ ಹಾಗೂ ಕಾಗಿನೆಲೆ ಗ್ರಾಮಗಳ ಶಾಸಕನಾಗಿದ್ದರು ಬೀರಪ್ಪನಾಯಕ. ಈ ದಂಪತಿಗಳು ಕುರುಬರೆಂದು ಕೆಲವರು ಹೇಳಿದರೆ.. ಹಾಲುಮತಸ್ಥರೆಂದು ಕೆಲವರು ಹೇಳುತ್ತಾರೆ. ಬೆಟಗೇರಿ ಕೃಷ್ಣಶರ್ಮ ಎಂಬ ವಿದ್ವಾಂಸರು ಇವರನ್ನು ಶ್ರೀವೈಷ್ಣವರ ಸಂಪ್ರದಾಯದ 'ಛತ್ರಿ' ಜಾತಿಯವರೆಂದು ಹೇಳುತ್ತಾರೆ. ಹುಟ್ಟಿನಿಂದ ಯಾವ ಜಾತಿ ಎನ್ನುವುದಕ್ಕಿಂತ ಅವರು 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಾತಿ-ಮತಗಳನ್ನು ಮೀರಿ ನಿಲ್ಲುವ ಬಗೆ ಕಾಣುತ್ತದೆ. 


 ಬಹಳ ಕಾಲ ಮಕ್ಕಳಿಲ್ಲದ ದಂಪತಿಗಳು ತಿರುಪತಿ ತಿಮ್ಮಪ್ಪನ ಮೊರೆ ಹೊಕ್ಕಾಗ ಹುಟ್ಟಿದ ಮಗುವಿಗೆ 'ತಿಮ್ಮಪ್ಪ' ಎಂದು ಕರೆದರು. ತಿಮ್ಮಪ್ಪ ಎನ್ನುವುದು ತಮಿಳಿನ ತಿರುಮಲೈಯಪ್ಪ ಎನ್ನುವುದರ ಕನ್ನಡ ರೂಪ ಎನ್ನುತ್ತಾರೆ. ವೆಂಕಟೇಶ, ಶ್ರೀನಿವಾಸ, ತಿಮ್ಮಪ್ಪ ಎಲ್ಲವೂ ಒಂದೇ ಅಲ್ಲವೇ..?? ಮಗ ಹುಟ್ಟಿದ ಮೇಲೆ ಬೀರಪ್ಪನಾಯಕರಿಗೆ ದೇವರ ಮೇಲಿನ ಭಕ್ತಿ ಹೆಚ್ಚಾಗಿ ಕಾಗಿನೆಲೆಯ ಸಮೀಪದ ಬೆಟ್ಟದ ಮೇಲೆ ದೇವರನ್ನು ಸ್ಥಾಪಿಸಿ ಪೂಜಿಸತೊಡಗಿದರು. ಇಂದಿಗೂ ಅವರ ವಂಶಸ್ಥರೇ ಪೂಜೆ ಮಾಡುತ್ತಾರೆ. ಅಲ್ಲದೇ, ಅವರನ್ನವರು ದೇವರ 'ದಾಸ' ಎಂದೇ ಗುರುತಿಸಿಕೊಳ್ಳುತ್ತಾರೆ. 


 ತಿಮ್ಮಪ್ಪದಾಸನಾಗಬೇಕಿದ್ದವರು ಕನಕದಾಸರಾದ ಬಗೆ ವಿಚಿತ್ರ. ಇವರು 8 ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಳ್ಳುತ್ತಾರೆ. ತಾಯಿಯೇ ಬಹಳ ದಕ್ಷತೆಯಿಂದ, ಅವರಿಲ್ಲದ ಕೊರಗನ್ನು ನೀಗಿಸಿ ಅವರಂತೆಯೇ ಆಡಳಿತ-ಆಳ್ವಿಕೆಯನ್ನು ನೋಡಿಕೊಂಡು ಮಗನಿಗೆ ಸರಿಯಾದ ಶಿಕ್ಷಣ ನೀಡಿ ಸಮರ್ಥರನ್ನಾಗಿಸುತ್ತಾರೆ. ಮೇಧಾವಿಯಾಗಿದ್ದ ತಿಮ್ಮಪ್ಪರಿಗೆ ಎಲ್ಲಾ ವಿದ್ಯೆಗಳೂ ಅನಾಯಾಸವಾಗಿ ಒಲಿಯುತ್ತವೆ. ಒಮ್ಮೆ ತಿಮ್ಮಪ್ಪ ನಾಯಕರಿಗೆ ಯಾರೋ ಹೂತಿಟ್ಟಿದ್ದ ಚಿನ್ನದ ಕೊಪ್ಪರಿಗೆ ಸಿಕ್ಕಾದಂದಿನಿಂದ ಕನಕ(ಚಿನ್ನ) ನಾಯಕರಾದರು. 


'ಕೊಟ್ಟರೆ ದೇವರು ಎಲ್ಲವನ್ನೂ ಕೊಡುತ್ತಾನೆ' ಎಂಬಂತೆ ಅಧಿಕಾರ, ಐಶ್ವರ್ಯ ಎಲ್ಲವೂ ಕನಕರ ವಶವಾಯಿತು. ರಾಜರ ಕೃಪಾದೃಷ್ಟಿಯೂ ಬಿದ್ದು ಕಾಗಿನೆಲೆಯ ಕಿಲ್ಲೇದಾರರಾದರು. ಬಂಕಾಪುರದ ಆಡಳಿತವೂ ಸಿಕ್ಕಿತು. ಆದರೂ, ಕನಕರಿಗೆ ಯಾವುದೇ ರೀತಿಯ ಅಧಿಕಾರದ ಮದ ಬರಲಿಲ್ಲ. ತಿರುಪತಿಗೆ ಜನರು ಹೋಗುವಂತೆ ಕಾಗಿನೆಲೆಯಲ್ಲಿಯೂ ಜನರು ಬಂದು ಬೇಡುವಂತೆ ಆದಿಕೇಶವನನ್ನು ಸ್ಥಾಪಿಸಿದರು. ಬಚ್ಚಮ್ಮ ಯೋಗ್ಯ ಹೆಣ್ಣನ್ನು ಆರಿಸಿ ಅವರಿಗೆ ವಿವಾಹವನ್ನು ಮಾಡಿದರು. 


 ಸಂಸಾರದ ಸುಖ ಕಂಡ ನಂತರ ಒಂದು ದಿನ ದೇವರು ಕನಸಿನಲ್ಲಿ ಬಂದು "ಕನಕ ನನ್ನ ದಾಸನಾಗೋ.. ಸಾಕು ಈ ಸಂಸಾರ" ಎಂದರಂತೆ. ಆದರೆ ಕನಕದಾಸರಿಗೆ ದೈವಭಕ್ತಿ ಇದ್ದರೂ.. 'ದಾಸ'ರಾಗುವ ಮನಸ್ಥಿತಿಯಿರಲಿಲ್ಲ. "ನಾನು ಬೇಡಿ ತಿನ್ನಲಾರೆ" ಎಂದು ನಿರಾಕರಿಸಿದರು. ಅದೇ ಸಂದರ್ಭದಲ್ಲಿ ತಾಯಿ, ಹೆಂಡತಿ ಇಬ್ಬರೂ ತೀರಿಹೋಗುತ್ತಾರೆ. ಆದರೂ.. ರಾಜಕಾರಣವನ್ನು ನಡೆಸಿಕೊಂಡೇ ಹೋಗುತ್ತಿರುತ್ತಾರೆ. ದೇವರ ಹೆಸರು ಹೇಳಿ ಶರಣಾಗುತ್ತಿದ್ದರೂ.. ದಾಸನಾಗಲು ಮಾತ್ರ ಸಿದ್ಧವಿರಲಿಲ್ಲ. ಇದೇ ಸಮಯದಲ್ಲಿ ವಿಜಯನಗರದ ಅರಸರ ಮೇಲೆ ಬಂಡೆದ್ದು ಬಂದ ಒಂದು ಸೈನ್ಯವನ್ನು ನಿಯಂತ್ರಿಸಲು ಹೋದಾಗ ಆ ಯುದ್ಧದಲ್ಲಿ ಉಂಟಾದ ಸಂದರ್ಭದಲ್ಲಿ ದೇವರ ದರ್ಶನ ಸಿಕ್ಕಿ "ಕೇಶವನೊಲುಮೆಯು ಆಗುವ ತನಕ ಹರಿ ದಾಸರೊಳಿರುತಿರು" ಎನ್ನುತ್ತಾ ಹೊರಾಡುತ್ತಾರೆ ಕನಕದಾಸರು.


ಗುರುಗಳಿಂದ ದೀಕ್ಷೆ ಪಡೆಯಲು ಕನಕದಾಸರು ವ್ಯಾಸರಾಜರಿದ್ದ ಮದನಪಲ್ಲಿಗೆ ಹೊರಟರು. ಅಷ್ಟರಲ್ಲಾಗಲೇ ಪುರಂದರದಾಸರು, ವಾದಿರಾಜರನ್ನು ಶಿಷ್ಯರನ್ನಾಗಿಸಿಕೊಂಡ ಅವರ ಕೀರ್ತಿ ಎಲ್ಲೆಡೆ ಹಬ್ಬಿತು. ಮದನಪಲ್ಲಿಯ ಕಂದಕೂರಿನಲ್ಲಿ ನಡೆಯುತ್ತಿದ್ದ ವ್ಯಾಸರಾಯರು ನಿರ್ಮಿಸುತ್ತಿದ್ದ ಜಲಾಶಯದ ನಿರ್ಮಾಣದಲ್ಲಿ ತೂಬು ಮಾಡಬೇಕಾದ ಕಡೆ ಬಂಡೆಯೊಂದಿತ್ತು. ಅದನ್ನು ಕನಕನ ಕೋಣ ಬಂದು ಎತ್ತಿ ಎಸೆದಿದ್ದರಿಂದ ಇಂದಿಗೂ ಅದನ್ನು 'ಕನಕನ ತೂಬು' ಎಂದೇ ಕರೆಯುತ್ತಾರೆ. ಎಲ್ಲಿಯ ಕನಕ..? ಎಲ್ಲಿಯ ಕೋಣ..? ಎಂದಿರಾ..! ಈ ಪವಾಡವನ್ನು ನೀವೇ ಸವಿಸ್ತಾರವಾಗಿ ಓದಿ.


 ಶ್ರೀ ವ್ಯಾಸ ತೀರ್ಥರಿಂದ ವೈಷ್ಣವ ದಾಸ ದೀಕ್ಷೆಯನ್ನು ಪಡೆದ ಕನಕರು ಆನಂದದಿಂದ 

"ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು 

ಪದುಮನಾಭನ ಪಾದದೊಲುಮೆ ಎನಗಾಯಿತು" ಎನ್ನುತ್ತಾ ಹಾಡುತ್ತಾರೆ.


ವ್ಯಾಸರಾಯದ ಸಾಮೀಪ್ಯದಲ್ಲಿ ಕಲಿತ, ಓದಿದ, ಕೇಳಿದ ಎಲ್ಲಾ ತತ್ವರಹಸ್ಯಗಳನ್ನು ತಮ್ಮ ಅನುಭವಕ್ಕೆ ತಂದುಕೊಂಡಿದ್ದ ಕನಕದಾಸರು ತತ್ವಜ್ಞಾನಿಗಳಾದರು.


 ವ್ಯಾಸರಾಯರ ಎಲ್ಲಾ ಸಭೆಗಳಲ್ಲಿ ಕನಕದಾಸರು ಇರುತ್ತಿದ್ದದ್ದು ಉಳಿದ ಪಂಡಿತರ ಅಸೂಯೆಗೂ ಕಾರಣವಾಗಿತ್ತು 

"ತನು ನಿನ್ನದು ಜೀವನ ನಿನ್ನದು" ಎಂದಿದ್ದ ಕನಕದಾಸರಿಗೆ ಈ ಅಸೂಯೆ, ಯಾವ ಲೆಕ್ಕ..?? ಆದರೆ, ವ್ಯಾಸರಾಯರು ಅವರೆಲ್ಲರ ಭ್ರಮೆ ಸರಿಸಲು ಒಂದು ಸಭೆಯಲ್ಲಿ ಮುಷ್ಟಿ ಕಟ್ಟಿ ಹಿಡಿದು "ಇದರಲ್ಲೇನಿದೆ..??" ಎಂದು ಕೇಳಿದಾಗ ಬೇರಾರೂ ಉತ್ತರಿಸದಿದ್ದಾಗ. ಕನಕದಾಸರೊಬ್ಬರೇ ಎದ್ದು ನಿಂತು "ಈತನೀಗ ವಾಸುದೇವನು" ಎಂದು ಹಾಡುತ್ತಾರೆ. ಅಲ್ಲಿದ್ದದ್ದು ವಾಸುದೇವ ಸಾಲಿಗ್ರಾಮ ಎಂದು ತೋರಿಸಿದಾಗ ಎಲ್ಲರಿಗೂ ದಿಗ್ಭ್ರಮೆಯಾಗುತ್ತದೆ.  


"ಕನಕದಾಸನ ಮೇಲೆ ದಯೆ ಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬುವರೊ" ಎಂಬ ದೇವರನಾಮದಲ್ಲಿ ಸಾಲಿಗ್ರಾಮದ ಸನ್ನಿವೇಶದ ಉಲ್ಲೇಖವಿದೆ. 


ಕನಕರು ದೇವರನ್ನು ಕಾಣುತ್ತಾರೆ ಎಂದರಿತವರು ನಮಗೂ ದೇವರನ್ನು ತೋರಿಸು ಎಂದು ದುಂಬಾಲು ಬಿದ್ದಾಗ ಎಲ್ಲರನ್ನು ಒಂದೆಡೆ ಸೇರಿಸುತ್ತಾರೆ. ಅಂದು ನಾಯಿ ಅಲ್ಲಿಗೆ ಬರುತ್ತದೆ. ಜನರೆಲ್ಲರೂ ಅದನ್ನು ಓಡಿಸುತ್ತಾರೆ. ಆದರೆ, ಪುರಂದರದಾಸರು ಮಾತ್ರ ಆ ನಾಯಿಯನ್ನು ಕನಕರನ್ನೊಮ್ಮೆ ನೋಡುತ್ತಾರಂತೆ. ಆಗ ಕನಕದಾಸರು "ಡೊಂಕು ಬಾಲದ ನಾಯಕರೆ" ಎಂದು ಹಾಡುತ್ತಾರೆ. ನೀನು ನಮಗೆ ಮೋಸ ಮಾಡಿದೆ ಎಂದು ದೂಷಿಸಿದ ಜನರಿಗೆ ನಾಳೆ ಮತ್ತೆ ಬರುವಂತೆ ಹೇಳುತ್ತಾರೆ. ಮರುದಿನ ಅಲ್ಲಿಗೆ ಹಾವು ಬಂದಾಗ ಜನರು ಅಲ್ಲಿಂದ ಓಡುತ್ತಾರೆ. ಆಗ ಕನಕರು ಒಂದು ದಿನ ನೀವು ಅವರನ್ನೇ ಓಡಿಸಿದರೆ.. ಇನ್ನೊಂದು ದಿನ ನೀವೇ ಓಡಿ ಹೋಗುತ್ತಿದ್ದೀರಿ ಎನ್ನುತ್ತಾರೆ. 


ಚಿನ್ನಕ್ಕೆ ಒರೆಹಚ್ಚಿ ನೋಡಿದರೂ.. ಅದು ಮತ್ತಷ್ಟು ಪುಟವಿಟ್ಟ ಚಿನ್ನವಾಗುವಂತೆ ಕನಕದಾಸರನ್ನು ಪರೀಕ್ಷಿಸಿ ಅವರ ಶ್ರೇಷ್ಠತೆಯನ್ನು ಎಲ್ಲರಿಗೂ ತಿಳಿಸುತ್ತಾರೆ ವ್ಯಾಸರಾಜರು. 


ಯಾರೂ ಇಲ್ಲದ ಜಾಗದಲ್ಲಿ ಬಾಳೆಹಣ್ಣನ್ನು ತಿಂದು ಬರಲು ಹೇಳಿದಾಗ ಕನಕರೊಬ್ಬರು ದೇವರು ಸರ್ವವ್ಯಾಪಿ ಎಂದು ತಿನ್ನಲಿಲ್ಲ. ಮತ್ತೊಮ್ಮೆ "ಯಾರು ಮುಕ್ತಿಗೆ ಹೋಗುತ್ತಾರೆ" ಎಂಬ ಪ್ರಶ್ನೆಗೆ "ನಾನು ಹೋದರೆ ಹೋದೇನು" ಎನ್ನುವ ಅರ್ಥಗರ್ಭಿತ ಮಾತೊಂದನ್ನು ಹೇಳಿ ಅದನ್ನು ವಿವರಿಸಿದಾಗ ಅವರ ಹಿರಿಮೆ ಎಲ್ಲರಿಗೂ ತಿಳಿಯುತ್ತದೆ.

"ಮುಂಡಿಗೆ ಹೊರುವುದು ಕಷ್ಟ, ಕನಕನ ಮಾತನ್ನು ಬಿಡಿಸುವುದು ಕಷ್ಟ" ಎನ್ನುತ್ತಾರೆ ಗುರುಗಳು. 


ಮತ್ತೊಮ್ಮೆ ವ್ಯಾಸರಾಯರು ತಮ್ಮ ಸ್ನಾನ ಮುಗಿಸಿ ತುಳಸಿ ಪೂಜೆಯನ್ನು ಮಾಡಲು ಬಂದಾಗ ಅದು ಬಾಡಿದಂತಾಗಿರುವುದನ್ನು ಕಂಡು ಬೇರೆ ತುಳಸಿಯನ್ನು ತರುವಂತೆ ಹೇಳುತ್ತಾರೆ. ಆದರೆ, ಎಲ್ಲಿ ನೋಡಿದರೂ.. ತುಳಸಿ ಬಾಡಿದೆ ಎಂಬ ಉತ್ತರವೇ ಬಂದಾಗ "ಕನಕ ಆಗಲೇ ತನ್ನ ಮಾನಸಪೂಜೆಯಿಂದ ಗಿಡದಿಂದಲೇ ಆ ತುಳಸಿಯನ್ನು ದೇವರಿಗೆ ಏರಿಸಿಬಿಟ್ಟಿದ್ದಾನೆ" ಎಂದು ಹೇಳಿ ಎಲ್ಲರನ್ನೂ ಚಕಿತಗೊಳಿಸುತ್ತಾರೆ. 


'ಬ್ರಾಹ್ಮಣರ ಸಭೆಯಲ್ಲಿ ಬ್ರಾಹ್ಮಣರಲ್ಲದವರನ್ನು ಸೇರಿಸಿಕೊಳ್ಳುವುದು ನ್ಯಾಯವೇ..??' ಎಂಬ ಪ್ರಶ್ನೆಗೆ ವ್ಯಾಸರಾಯರು "ವಜ್ರ ಸಿಗುವುದು ಕಲ್ಲಿದ್ದಲಿನ ಗಣಿಯಲ್ಲಿ. ಹಾಗೆಂದು, ಅದನ್ನು ಎಸೆಯಲಾದೀತೇ..?? ಅಂತಹಾ ಅಪರೂಪದ ವಜ್ರ ಕನಕ" ಎನ್ನುತ್ತಾರೆ. 


 ಉಡುಪಿಯ ಕನಕನ ಕಿಂಡಿಯ ಪ್ರಸಂಗವಂತೂ ನಮಗೆ ಗೊತ್ತಿದೆ. ಮತ್ತೊಂದು ಪ್ರಸಂಗವೆಂದರೆ.. ಉಡುಪಿಯಲ್ಲಿ ಪ್ರತಿನಿತ್ಯ ಎಂಟು ಬಾರಿ ಪೂಜೆಯಾಗುತ್ತದೆ. ಎಂಟು ಬಾರಿಯೂ ನೈವೇದ್ಯವಾಗುತ್ತದೆ. ಆ ನೈವೇದ್ಯದ ಪ್ರಸಾದವನ್ನು ಭಕ್ತರಿಗೆಲ್ಲರಿಗೂ ಹಂಚುತ್ತಾರೆ. ಅಂತಹಾ ಕ್ಷೇತ್ರದಲ್ಲಿಯೂ ಕನಕರು ಹಸಿದುಕೊಂಡು ಇದ್ದ ಪ್ರಸಂಗವಿದೆ. ಕನಕದಾಸರು ಅಲ್ಲಿ  ತಾನಾಗಿಯೇ ಊಟಕ್ಕೆ ಹೋಗದೆ.. 

"ಕಾಡಿದರೆ ನಿನ್ನ ಕಾಡುವೆ 

ಬೇಡಿದರೆ ನಿನ್ನ ಬೇಡುವೆ" ಎಂಬ ದೇವರ ನಾಮ ಹಾಡುತ್ತಾರೆ. ಆದರೂ.. ಹಸಿವೆ ಮೇರೆ ಮೀರಿದಾಗ "ತಲ್ಲಣಿಸದಿರು ಕಂಡ್ಯ" ಎಂದು ಸಮಾಧಾನಪಡಿಸಿಕೊಳ್ಳಲು ಮುಂದಾಗುತ್ತಾರೆ. ಅದೂ ಮೀರಿದಾಗ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವನು" ಎನ್ನುತ್ತಾರೆ. ಅದಾದ ನಂತರ ದೇವರೇ ಬಂದು ಕಂಠಿಹಾರವನ್ನು ಕೊಟ್ಟು ಅದನ್ನು ಅಡವಿಟ್ಟು ಊಟ ಸಂಪಾದಿಸಿಕೊಂಡಾಗ, ವಿಚಾರ ವಾದಿರಾಜರಿಗೆ ತಿಳಿದಾಗ ಅವರು ಬಂದು ಕನಕದಾಸರನ್ನು ಗೌರವದಿಂದ ನಡೆಸಿಕೊಂಡರು ಎಂಬ ಪ್ರಸಂಗವಿದೆ.


ಕನಕದಾಸರು ಆಶು ಕವಿಗಳು. ದೇವರ ನಾಮಗಳನ್ನು ಸ್ವತಃ ಕಟ್ಟಿ ಹಾಡುತ್ತಾ ದೇವರನ್ನು ಎಲ್ಲೆಡೆ ಸ್ತುತಿಸುತ್ತಾರೆ. ಭಕ್ತರು ಹೆಚ್ಚಾದ ಸಂದರ್ಭದಲ್ಲಿ ಹೇಳದೇ-ಕೇಳದೇ ಅಲ್ಲಿಂದ ಹೊರಟು ಬಿಡುತ್ತಿದ್ದರಂತೆ. ಅವರಿಗೆ ಬೇಕಾದದ್ದು ಪ್ರಸಿದ್ಧಿಯಲ್ಲ. ಬದಲಾಗಿ ದೇವರ ನಾಮವನ್ನು ಎಲ್ಲೆಡೆ ಹಂಚುವುದು. ಅಷ್ಟೇ..

 

ಹಾಗೆಯೇ ಬೇಲೂರಿಗೆ ಬಂದವರು ಅಲ್ಲಿರುವಾಗ 'ಹರಿಭಕ್ತಿಸಾರ'ವನ್ನು ರಚಿಸಿದ್ದಾರೆ ಎನ್ನುತ್ತಾರೆ. ಆದರೆ, ಅದರಲ್ಲಿನ ಅಂಕಿತ 'ಕಾಗಿನೆಲೆ ಆದಿಕೇಶವ' ಅಲ್ಲ. ಬದಲಾಗಿ, ಸುರಪುರ ನಿಲಯ ಚೆನ್ನಿಗರಾಯ ಎಂದು.

'ಕಾಗಿನೆಲೆ ಆದಿಕೇಶವ' ಎಂಬುದು ನರಸಿಂಹಸ್ತವ ಹಾಗೂ ಮೋಹನ ತರಂಗಿಣಿಯಲ್ಲಿ ಮಾತ್ರ. ಸುರಪುರ ಅಥವಾ ವರಪುರ ಚೆನ್ನಿಗರಾಯಬೆಂಬ ಅಂಕಿತನಾಮದ ಪ್ರಸ್ತುತಿ ಹರಿಭಕ್ತಿಸಾರ, ನಳ ಚರಿತ್ರೆ ಹಾಗೂ ರಾಮಧಾನ್ಯಚರಿತೆಯಲ್ಲಿದೆ. ಕನಕದಾಸರು ಸ್ತುತಿಸಿರುವುದು ಕಾಗಿನೆಲೆಯ ಬಳಿಯಲ್ಲಿರುವ ಇಂಗುಳಗುಂದಿಯ ಚನ್ನಕೇಶವನನ್ನು ಇರಬೇಕು ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಸುರಪುರ ಹಾಗೂ ವರಪುರ ಇದು ಬೇಲೂರಿಗೆ ಸಂಬಂಧಿಸಿದ ಚನ್ನಕೇಶವನೇ ಎಂದೂ ಹೇಳುತ್ತಾರೆ. ಈ ಎರಡಕ್ಕೂ ಇದೇ ಸರಿಯೆನ್ನಲು ಆಧಾರಗಳೇನೂ ಇಲ್ಲ. 


 ಹರಿಭಕ್ತಿಸಾರದಲ್ಲಿ ಕಥೆ ಇಲ್ಲ. ಬದಲಾಗಿ ದೇವರ ಹಾಗೂ ಜೀವನ ಸಂಬಂಧಗಳನ್ನು ಚಿತ್ರಿಸಿದ್ದಾರೆ. "ರಕ್ಷಿಸು ನಮ್ಮನವರತ" ಎನ್ನುವುದೆಲ್ಲವೂ ಹರಿಭಕ್ತಿಸಾರದಲ್ಲಿ ಬರುವ ಪದ್ಯಗಳು. ಇಂತಹಾ 110 ಪದ್ಯಗಳಿವೆ. ಇದು ಹಾಗೂ 'ನಳ ಚರಿತ್ರೆ' ಎರಡೂ ಭಾಮಿನಿ ಷಟ್ಪದಿಯಲ್ಲಿ ರಚಿತವಾದವು. 


ನಳ ಚರಿತ್ರೆ ಒಂದು ಪ್ರೇಮ ಕಾವ್ಯ. ವ್ಯಾಸರು ವನಪರ್ವದಲ್ಲಿ ಹೇಳಿರುವ ಕಥೆಯನ್ನು ಬಳಸಿಕೊಂಡು ಸಂಸ್ಕ್ರತದಲ್ಲಿ ಶ್ರೀಹರ್ಷ ಎಂಬುವವರು ನೈಷದ ಕಾವ್ಯವನ್ನು ಬರೆದಿದ್ದಾರೆ. ಕನಕದಾಸರು ಕತೆಯಲ್ಲಿ ಹೆಚ್ಚೇನೂ ಬದಲಾವಣೆ ಮಾಡದೇ ಕುಮಾರವ್ಯಾಸ ಭಾರತದಲ್ಲಿ ಐದೇ ಪದ್ಯಗಳಿರುವ ಇದು ನಳಚರಿತ್ರೆಯಲ್ಲಿ 480 ವಿಸ್ತಾರವಾಗಿದೆ. ನಳ-ದಮಯಂತಿಯರ ನಿಷ್ಕಲ್ಮಶ ಪ್ರೇಮದ ಪರಿಚಯವಾಗುತ್ತದೆ.


ಮೋಹನ ತರಂಗಿಣಿ ಒಂದು ದೊಡ್ಡ ಕಾವ್ಯ. 1800 ನುಡಿಗಳನ್ನು ಸಾಂಗತ್ಯ ಎಂಬ ಛಂದಸ್ಸಿನಲ್ಲಿ ಸೊಗಸಾಗಿ ಹೇಳಿದ್ದಾರೆ. ಇದರಲ್ಲಿ ಪ್ರದ್ಯುಮ್ನನ ಹಾಗೂ ಉಷಾ-ಅನಿರುದ್ಧರ ಕತೆಯಿದೆ.


ಅಪೂರ್ವವಾದ 'ರಾಮಧಾನ್ಯ ಚರಿತೆ'ಯಲ್ಲಿ 'ನೆರದಗಲ' ಎಂದರೆ ರಾಗಿ ಹಾಗೂ 'ವ್ರೀಹಿ' ಎಂದರೆ ಅಕ್ಕಿಯ ಮೇಲು-ಕೀಳಿನ ಜಗಳದಲ್ಲಿ ರಾಮನಿಂದ ಪುರಸ್ಕರಿಸಲ್ಪಟ್ಟು ರಾಮಧಾನ್ಯವಾದುದರ ಪ್ರಸಂಗವಿದೆ.


ದಾಸಸಾಹಿತ್ಯದ ಜೊತೆಗೆ, ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿರುವ ನಾಲ್ಕು ಕಾವ್ಯಗಳ ವಿಸ್ಕೃತ ರೂಪ ಹಾಗೂ ಕನಕರ ಮಹಿಮೆಯ ಮತ್ತಷ್ಟು ಪ್ರಸಂಗವಿದೆ. ಕೆಲವು ಘಟನೆಗಳು ನಿಜವಾಗಿ ನಡೆದಿರಬಹುದಾ ಎಂದು ಅನುಮಾನವನ್ನು ಹುಟ್ಟಿಸಿದರೂ.. ಕನಕದಾಸರ ಮಹಿಮೆಯನ್ನು ಅರಿಯಲು, ದಾಸಶ್ರೇಷ್ಠರ ಹಿರಿಮೆಯನ್ನು ಅರಿಯಲು ಇದು ಅತ್ಯವಶ್ಯಕ.  ಮಕ್ಕಳು ಮಾತ್ರವಲ್ಲದೆ, ದೊಡ್ಡವರು ಸುಲಭವಾಗಿ ಅರ್ಥೈಸಿಕೊಳ್ಳುವಂತಿದೆ ಜ್ಞಾನಾರ್ಜನೆಗೆ ಅತ್ಯವಶ್ಯಕವಾಗಿ ಓದಬೇಕಾದ ಪುಸ್ತಕ ಇದು.


~ವಿಭಾ ವಿಶ್ವನಾಥ್

ಮೋಡ ಸರಿದ ಸೂರ್ಯ (ಪುಸ್ತಕ ಯಾನ - 142)


ಪುಸ್ತಕದ ಶೀರ್ಷಿಕೆ : ಮೋಡ ಸರಿದ ಸೂರ್ಯ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)


ಬದುಕಿನ ಯಾವುದೇ ಕಷ್ಟಗಳು ಸಹಾ ಶಾಶ್ವತವಲ್ಲ. ಸೂರ್ಯನಿಗೆ ಕವಿದ ಮೋಡ ಎಂದಿಗೂ ಸರಿದೇ ಸರಿಯುತ್ತದೆ. ಹಾಗೆಯೇ ಪ್ರತಿಭೆಗೆ ತಕ್ಕ ಮನ್ನಣೆ ಅಂದು ದೊರೆಯದಿದ್ದರೂ.. ಸರಿಯಾದ ಕಾಲ ಸನ್ನಿಹಿತವಾದಾಗ ಅದು ಸಿಕ್ಕೇ ಸಿಗುತ್ತದೆ. ಇಲ್ಲಿ ಹಾಗೆಯೇ ಮೋಡ ಕವಿದ ಸೂರ್ಯನಂತಾಗಿದ್ದವಳು ನಮ್ಮ ಕಥಾನಾಯಕಿ ಸರಿತಾ. 


ಕೋಲಾರದಲ್ಲಿ ವಾಸವಾಗಿದ್ದ ನಿವೃತ್ತ ಹೈಸ್ಕೂಲು ಹೆಡ್ ಮಾಸ್ಟರ್ ರಾಮರಾಯರು ಹಾಗೂ ಲಲಿತಮ್ಮ ದಂಪತಿಗಳಿಗೆ ಐದು ಮಕ್ಕಳು ಕಾಲೇಜು ಲೆಕ್ಚರರ್ ಆಗಿದ್ದ ಮೊದಲನೆಯ ಮಗ ಶಂಕರ ಸಂಸಾರದ ಚುಕ್ಕಾಣಿ ಹಿಡಿದಿದ್ದ. ವೆಂಕಟೇಶ ಸೆಕೆಂಡ್ ಪಿ.ಯು.ಸಿಗೆ ಓದು ಮುಕ್ತಾಯ ಮಾಡಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ. ನಂತರದವಳು ಸರಿತಾ. ಪಿ.ಯು.ಸಿ ಫೇಲ್ ಆಗಿ ಓದುಬಿಟ್ಟಿದ್ದರೂ.. ಆಕೆಯ ರೂಪಿನಿಂದ ಅತ್ಯಾಕರ್ಷಕವಾಗಿದ್ದವಳು. ಆಕೆಯ ತಂಗಿ ವಿಜೇತ ಓದಿನಲ್ಲಿಯೂ ಮುಂದಿರಲಿಲ್ಲ. ರೂಪವಂತೆಯೂ ಅಲ್ಲ. ಆದರೆ, ಕೊನೆಯ ಮಗಳಾಗಿದ್ದ ವನಿತಾ ಓದಿನಲ್ಲಿ ಚುರುಕಾಗಿದ್ದು ಬಿ.ಎಸ್ಸಿ ಫಸ್ಟ್ ಕ್ಲಾಸ್ ಬಂದಿದ್ದಳು. 


ಲಲಿತಮ್ಮನ ತಮ್ಮ ರಾಜೀವ ಶಂಕರನ ಕಾಲೇಜಿನಲ್ಲಿಯೇ ಲೆಕ್ಚರರ್ ಆಗಿದ್ದವನು. ಅಕ್ಕನ ಮನೆಯಲ್ಲಿಯೇ ಪೇಯಿಂಗ್ ಗೆಸ್ಟ್ ಆಗಿದ್ದವನು. ಸರಿತಾಳನ್ನು ಆತನಿಗೆ ಮದುವೆ ಮಾಡಿಕೊಡಬೇಕು ಎಂಬ ಆಸೆ ಇದ್ದರೂ.. ಇನ್ನೂ ಆತನ ತಂಗಿಯ ಮದುವೆಯಾಗಬೇಕಿದ್ದರಿಂದ ಹಣ ಕಳುಹಿಸುತ್ತಿದ್ದ. ಹಾಗಾಗಿ ಮದುವೆಯ ಮಾತನ್ನು ಮುಂದೂಡುತ್ತಲೇ ಬಂದಿದ್ದ. 


ಹೀಗೆ.. ಮದುವೆ ಮುಂದೆ ಹೋಗುತ್ತಿದ್ದ ಸಂದರ್ಭದಲ್ಲಿಯೇ ಒಮ್ಮೆ ಲಲಿತಮ್ಮನ ತಂಗಿಯ ಮಗಳು ಹಾಗೂ ಸರಿತಾಳ ಆಪ್ತ ಗೆಳತಿ ಸುನಿತಾ ತನ್ನ ಮಗನ ಹುಟ್ಟುಹಬ್ಬಕ್ಕೆಂದು ಬೆಂಗಳೂರಿನ ತನ್ನ ಮನೆಗೆ ಕರೆದುಕೊಂಡು ಹೋದಾಗ ಸರಿತಾಳ ಅದೃಷ್ಟ ಬದಲಾಯಿತು. ಸುನಿತಾಳ ಗಂಡ ಕೆಲಸ ಮಾಡುತ್ತಿದ್ದ ಜಾಹೀರಾತು ಕಂಪನಿಯ ಪಾಲುದಾರನಾಗಿದ್ದ ವಸಂತರಾಜ್ ಕಣ್ಣಿಗೆ ಬಿದ್ದವಳಿಗೆ 5000 ಸಂಭಾವನೆ ನೀಡುತ್ತೇನೆಂದು ತನ್ನ 13 ಕಂತುಗಳ ಟಿವಿ ಧಾರವಾಹಿಗೆ ನಾಯಕಿಯಾಗಿಸಿದರು. 


ಅಲ್ಲಿ ಸುಮ್ಮನಿರುವ ಬದಲು ಇಲ್ಲಿ ತನ್ನ ಪ್ರತಿಭೆಗೆ ಅವಕಾಶ ಸಿಗುತ್ತದೆ ಎಂದು ಒಪ್ಪಿ ಬೆಂಗಳೂರಿಗೆ ಬಂದಾಗ.. ಆಕೆಯ ತಂಗಿ ವನಿತಾ ಕೂಡ ಶಾಲಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದಳು. ಅಣ್ಣ ವೆಂಕಟೇಶನೂ ಇವರೊಂದಿಗೆ ಬಂದು ಉಳಿದ. ಈಕೆ ಟಿ.ವಿ ಧಾರಾವಾಹಿಯಲ್ಲಿ ಬಂದದ್ದೇ ನೆಪವಾಗಿಸಿಕೊಂಡ ರಾಜೀವ ವಿಜೇತಳನ್ನು ಮದುವೆಯಾಗಿದ್ದ. 


ಇದೆಲ್ಲಾ ಆಗಿ ಈಗ ಸರಿತಾ ಖ್ಯಾತ ಚಿತ್ರತಾರೆಯಾಗಿದ್ದಳು. ವಸಂತರಾಜ್ ತನ್ನ ಮೊದಲ ಧಾರವಾಹಿಯಲ್ಲಿ ಆಕೆಯನ್ನು ನಾಯಕಿಯಾಗಿಸಿದರೂ.. ಆಕೆಗೆ ಸಲ್ಲಬೇಕಾದ ಸಂಭಾವನೆಯನ್ನು ನೀಡಿರಲಿಲ್ಲ. ಅದಕ್ಕಾಗಿ ಹಿಡಿಯಬೇಕಾದ ಅಡ್ಡಮಾರ್ಗವನ್ನು ಸೂಚಿಸಿದ. ನೈತಿಕ ಹಾದಿಯನ್ನು ಬಿಟ್ಟು ಆ ಹಾದಿಯಲ್ಲಿ ನಡೆಯಲು ಒಪ್ಪಲಿಲ್ಲ ಸರಿತಾ.


ಹಾಗೆ ನಡೆಯದ್ದು ಒಳ್ಳೆಯದೇ ಆಯಿತು. ಆಕೆ ನಂಬಿದ ಒಳ್ಳೆಯ ಮಾರ್ಗದಿಂದಲೇ ಆಕೆ ಮುಂಚೂಣಿಗೆ ಬಂದಳು. ವಿಜಯೇಶ್ವರಿ ವಿಷನ್ ಸಂಸ್ಥೆಯ ವಿಜಯಮ್ಮ ಹಿಂದೊಮ್ಮೆ ಖ್ಯಾತ ಚಿತ್ರನಟಿಯಾಗಿದ್ದವಳು. ಈಗ ನಿರ್ಮಾಪಕಿಯಾಗಿದ್ದರು. ಆಕೆಯ ಗರಡಿಯಲ್ಲಿ ಪಳಗುತ್ತಾ ಆಕೆಯ ಮಗ ಅರುಣನ ನಾಯಕ ನಟಿಯಾಗಿ ಮುಂದುವರೆಯುತ್ತಿದ್ದಳು ಸರಿತಾ. 


ಹೀಗಿದ್ದಾಗಲೇ.. ಅಚಾನಕ್ಕಾಗಿ ಮನೆಗೆ ಬಂದ ವಸಂತರಾಜ್ ಆಕೆಯನ್ನು ತನ್ನ ನಿರ್ದೇಶನದ ಸಿನಿಮಾದಲ್ಲಿ ನಟಿಸುವಂತೆ ಹೇಳಿದರು. ಅದನ್ನು ಒಪ್ಪದ ಆಕೆಗೆ ಸಂಕಷ್ಟ ಎದುರಾಗಿತ್ತು. ಟಿ.ವಿ ರಾಜಕೀಯದ ದೆಸೆಯಿಂದ ಆಕೆಗೆ ಅವಕಾಶಗಳು ದೊರೆಯದೆ ಆಕೆ ಅಜ್ಞಾತಳಾಗಿಯೇ ಉಳಿದಳು. ಇದಿಷ್ಟರ ನಡುವೆ ಆಕೆಯ ತಂಗಿ ವನಿತ ಮತ್ತು ವೆಂಕಟೇಶನ ವಿವಾಹವಾಗಿತ್ತು. ಈಕೆಯ ಹಣದಿಂದಲೇ ಅಂಗಡಿ ಹಾಗೂ ಮನೆಯಾದರೂ ವೆಂಕಟೇಶನ ಹೆಂಡತಿ ಗೋಡಾ ಬಂದ ನಂತರ ಸರಿತಾಳ ಸ್ಥಾನ ಬದಲಾಯಿತು.  


ಎರಡು ವರ್ಷಗಳ ಅಜ್ಞಾತವಾಸದ ನಂತರ ವಿಜಯಮ್ಮನವರಿಂದಲೇ ಆಕೆಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಅರುಣ ಮುಂಬೈನಲ್ಲಿದ್ದ ವಿಜಯ್ ಮೆಹ್ತಾ ಬಳಿಯಲ್ಲಿ ಸಹಾಯಕನಾಗಿ ಸೇರಿ ನಾಯಕನಾಗಿ ಬೆಳಕಿಗೆ ಬಂದ. ಸರಿತಾಳ ಪ್ರತಿಭೆಗೂ ಹಿಂದಿ ಟೆಲಿಫಿಲಂ ಮೂಲಕ ಅವಕಾಶವಾಯಿತು. ಎಲ್ಲವೂ ಸರಿಯಾದ ಮಾರ್ಗದಲ್ಲಿಯೇ ನಡೆಯುತ್ತಿದ್ದಾಗ ಮೆಹ್ತಾ ಮದುವೆಯಾಗಿದ್ದ ನೀತುಶ್ರೀ ಸರಿತಾ ಕುರಿತು ಅನುಮಾನದಿಂದಲೇ ನೋಡುತ್ತಿದ್ದಳು.


ವಿಜಯಮ್ಮನವರು ನಿಸ್ವಾರ್ಥವಾಗಿಯೇ ಈಕೆಯನ್ನು ಮುಂದೆ ತಂದರು. ಈಕೆಯ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಇಂತಹಾ ಸಂದರ್ಭದಲ್ಲಿ ಮೇಕಪ್ ಮ್ಯಾನ್ ಆಗಿದ್ದ ಜಗದೀಶನನ್ನು ಮದುವೆಯಾಗಲು ಸೂಚಿಸಿದರು. ಆದರೆ, ಹಣ ಇಲ್ಲದ ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು ಸರಿತ. ಹಾಗೆಂದು, ಆಕೆಯನ್ನು ದೂಷಿಸದೇ.. ಹಿಂದಿನಂತೆಯೇ ಸಹಕರಿಸುತ್ತಿದ್ದರು ವಿಜಯಮ್ಮ. 


ವಿಜೇತಳನ್ನು ಮದುವೆಯಾಗಿದ್ದ ರಾಜೀವನಿಗಿನ್ನೂ ಸರಿತಾ ಮೇಲೆ ಮನಸ್ಸಿತ್ತು.  ವಿಜೇತ ಕುಟುಂಬದ ಪರಿಸ್ಥಿತಿ ಏನಿತ್ತು..?? 


ಈಕೆಯಿಂದಲೇ ಮುಂದೆ ಬಂದಿದ್ದ ವನಿತಾ ಹಾಗೂ ವೆಂಕಟೇಶ ಸಹ ಇವಳಿಗೆ ಮೋಸ ಮಾಡಿ ಹಣ ಮನೆ ಹಾಗೂ ಅಂಗಡಿಯನ್ನು ಅವರದ್ದನ್ನಾಗಿಸಿಕೊಳ್ಳಲು ನೋಡಿದರೂ.. 'ಹಾಲಿನದ್ದು ಹಾಲಿಗೆ, ನೀರಿನದ್ದು ನೀರಿಗೆ' ಎಂಬಂತೆ ಅವು ಅವರಿಗೆ ದಕ್ಕಿರಲಿಲ್ಲ.


'ಹೆಣ್ಣಿಗೊಂದು ಗಂಡು, ಗಂಡಿಗೊಂದು ಹೆಣ್ಣು' ಎಂದು ಇದ್ದೇ ಇರುತ್ತಾರೆ. ಹಾಗೆ ಸರಿತಾಳಿಗೆ ಜೊತೆಯಾದದ್ದು ಖ್ಯಾತ ಉದ್ಯಮಿಯಾಗಿದ್ದ ಸುಂದರ್ ರಾಜ್ ಮೋಹನ್ ರಾಜ್. ಪರಸ್ಪರರ ನಡುವೆ ಇದ್ದ ಸ್ನೇಹ ಪ್ರೇಮಕ್ಕೆ ತಿರುಗಿತು. ಆತನಿಗೆ ಮಧ್ಯಮ ವರ್ಗದ ಜೀವನ ನಡೆಸುವ ಪರಿಸ್ಥಿತಿ ಬಂದಾಗಲೂ.. ಆತನ ಕೈಬಿಡದೆ ಮದುವೆಯಾದಳು ಸರಿತಾ. ಅಷ್ಟರಲ್ಲಾಗಲೇ ಆಕೆಯ ನಾಯಕಿಯ ಗ್ಲಾಮರ್ ಕುಂದಿ ಬೇರೆಯ ಪಾತ್ರಗಳನ್ನು ಮಾಡಲು ಕರೆ ಬರುತ್ತಿತ್ತು. ಆಕೆಯು ವೈವಾಹಿಕ ಜೀವನದಿಂದ ತನ್ನ ಇಬ್ಬರು ಮಕ್ಕಳನ್ನು ಪಡೆದರು.


ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಎನ್ನುವಾಗಲೇ ವಿಜಯಮ್ಮನವರಿಗೆ ಕೊಟ್ಟ ಹಣ ಹೆಚ್ಚಿ ತನ್ನ ಪಾಲಿಗೆ ಬರಬೇಕಾದದ್ದು ನೆನಪಾಗಿತ್ತು. ತನ್ನ ಪತಿ ಮೋಹನ್ ರಾಜ್ ಹೇಳಿದ ಮಾತಿನಿಂದಾಗಿ ವಿಜಯಮ್ಮನವರ ಬಳಿ ಹೋದ ಸರಿತಾಳಿಗೆ ತನ್ನ ಬದುಕಿನಲ್ಲಿ ನಡೆದಿದ್ದ ಘಟನೆಯೊಂದು ಸತ್ಯ ಅರಿವಾಗಿತ್ತು. ಆ ಘಟನೆಯಿಂದ ಅವಳು ಬದಲಾದಳೇ..?? ಅಥವಾ ಅವಳ ಬದುಕೇ ಬದಲಾಯಿತೇ..?? ವಿಜಯಮ್ಮ ಅವಳ ಜೀವನದಲ್ಲಿ ತೆಗೆದುಕೊಂಡಿದ್ದ ಅಂತಹಾ ನಿರ್ಧಾರವಾದರೂ ಏನು..?? ಅದರ ಅರಿವಿದ್ದ ಮೋಹನ್ ರಾಜ್ ಅಷ್ಟು ವರ್ಷ ಸತ್ಯವನ್ನು ಅವಳಿಂದ ಮುಚ್ಚಿಟ್ಟದ್ದೇಕೆ..?? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ತಿಳಿಯಲು ಓದಿ ಹೆಚ್.ಜಿ. ರಾಧಾದೇವಿಯವರ 'ಮೋಡ ಸರಿದ ಸೂರ್ಯ'. 


ಮೋಡ ಸರಿದ ಸೂರ್ಯ ಎಂಬ ಕಾದಂಬರಿ ಶೀರ್ಷಿಕೆಯೇ ಹೇಳುವಂತೆ ತನ್ನ ಪ್ರತಿಭೆಗೆ ಅಂಟಿದ್ದ ಕಳಂಕದಿಂದ ಹೊರ ಬಂದಿದ್ದಳು ಸರಿತಾ. ನಿಜವಾದ ಪ್ರತಿಭೆ ಎಲ್ಲೆಡೆ ಮಿನುಗುತ್ತದೆ ಎಂಬುದು ಸತ್ಯವಾದರೂ.. ಟಿ.ವಿ ಹಾಗೂ ದೃಶ್ಯ ಮಾಧ್ಯಮಗಳ ಪ್ರಪಂಚದಲ್ಲಿ ಹೆಣ್ಣು ಮಕ್ಕಳು ಇರಬೇಕಾದ ರೀತಿ ಹಾಗೂ ಅಲ್ಲಿ ನಡೆಯುವ ಒಳ ಹೋರಾಟಗಳು, ರಾಜಕೀಯ ಅಲ್ಲಿನ ನೈತಿಕತೆ-ಅನೈತಿಕತೆ, ನೈತಿಕತೆಯಿಂದಲೇ ನಡೆಯುವ ಹೆಣ್ಣುಗಳ ಸ್ಥಿತಿ ಇದೆಲ್ಲವನ್ನೂ ಬಿಡಿಸಿಟ್ಟಿದ್ದಾರೆ.


ನನಗೆ ವಿಜಯಮ್ಮನವರ ಪಾತ್ರ ಬಹಳ ಇಷ್ಟವಾಯಿತು. ಉದಾತ್ತ ಚಿಂತನೆಯ ಹೆಣ್ಣುಮಗಳೊಬ್ಬಳ ಪಾತ್ರವಿದು. ತಾನಾಯಿತು ತನ್ನ ಕಾರ್ಯವಾಯಿತು, ತನ್ನ ಮಕ್ಕಳಾಯಿತು ಎಂದು ಸ್ವಾರ್ಥವನ್ನೇ ನೋಡಿಕೊಂಡಿರಬಹುದಾಗಿದ್ದ ಕಾಲದಲ್ಲಿಯೂ.. ತನ್ನ ಜೀವನಕ್ಕೂ ಹಾಗೂ ಸರಿತಾಳ ಜೀವನಕ್ಕೂ ಇರುವ 'ನಟಿ' ಎಂಬ ಸಾಮ್ಯತೆಯನ್ನು ಮನದಲ್ಲಿಟ್ಟುಕೊಂಡು ಆಕೆಯನ್ನು ಭವಿಷ್ಯವನ್ನು ರೂಪಿಸಿದ ಪರಿ ಇಷ್ಟವಾಯಿತು.


ವನಿತಾ ಹಾಗೂ ವೆಂಕಟೇಶರ ಪಾತ್ರಗಳು ಎರಡು ಶೇಡ್ ಳಿಂದ ಕೂಡಿವೆ. ಪಶ್ಚಾತಾಪದಿಂದ ಅವರು ಮತ್ತೆ ಆಕೆಯ ಮುಂದೆ ಸತ್ಯವನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ಪರಿ ಸಂಬಂಧಗಳನ್ನು ಉಳಿಸಿಕೊಳ್ಳುವ ಸಾಧ್ಯತೆಗಳನ್ನು ತೋರುತ್ತದೆ. ಹಣ ಎಂತಹಾ ಮನುಷ್ಯನನ್ನೂ ಬದಲಿಸಬಲ್ಲದು ಎಂಬುದಕ್ಕೆ ಉತ್ತಮ ಉದಾಹರಣೆ ಇದು.  


ಎಲ್ಲವನ್ನು ಕ್ಷಮಿಸಿ, ಒಪ್ಪಿ-ಅಪ್ಪುವ ಸರಿತಾಳ ಗುಣ, ಅವಳು ಕೇವಲ ದೃಶ್ಯಮಾಧ್ಯಮದಲ್ಲಿ ಮಾತ್ರ ನಾಯಕಿಯಲ್ಲದೇ, ಬದುಕಿನಲ್ಲಿಯೂ ಉದಾತ್ತ ಚಿಂತನೆಗಳನ್ನು ಅಳವಡಿಸಿಕೊಂಡ ನಾಯಕಿ ಎಂಬುದನ್ನು ಸೂಚಿಸುತ್ತದೆ. 


ಹೆಣ್ಣು ತಾನು ಜೀವನದಲ್ಲಿ ಏನೇ ಸಾಧನೆ ಮಾಡಿದರೂ... ಆಕೆಗೆ ಸಂಗಾತಿಯ ಅವಶ್ಯಕತೆ ಇರುತ್ತದೆ ಹಾಗೂ ಅಂತಹಾ ಸಾಂಗತ್ಯವಷ್ಟೇ ಅವಳ ಬದುಕಿನಲ್ಲಿ ನೆಮ್ಮದಿ ತರಬಲ್ಲದು ಎನ್ನುವ ಅಂಶವನ್ನು ತೋರುತ್ತಲೇ.. ಹೆಣ್ಣು ಸಾಮಾಜಿಕವಾಗಿ ಹಾಗೂ ಕೌಟುಂಬಿಕವಾಗಿ ನೆಲೆಯೂರಬೇಕಾದ ಹಾಗೂ ನೆಲೆಯೂರಬಹುದಾದ ಸಾಧ್ಯಾಸಾಧ್ಯತೆಗಳ ತೋರಿಸುತ್ತಲೇ ಬದುಕು ಹೀಗಿದ್ದರೆ ಚೆನ್ನ ಎನ್ನುತ್ತಾರೆ ಲೇಖಕಿ. 


ಚೆಂದದ ಶೀರ್ಷಿಕೆಯ ಈ ಕಾದಂಬರಿ ಸರಾಗವಾಗಿ ಓದಿಸಿಕೊಳ್ಳುತ್ತಾ.. ಗಾತ್ರದಲ್ಲಿ ಪುಟ್ಟದಾದರೂ ದೊಡ್ಡ ಪಾಠವೊಂದನ್ನು ಹೇಳುತ್ತದೆ.


~ವಿಭಾ ವಿಶ್ವನಾಥ್

#ಕ್ವಾರಂಟೈನ್ (ಪುಸ್ತಕ ಯಾನ - 141)


ಪುಸ್ತಕದ ಶೀರ್ಷಿಕೆ : #ಕ್ವಾರಂಟೈನ್

ಲೇಖಕರು : ಎಂ. ಆರ್. ಕಮಲ

ಪ್ರಕಾಶಕರು : ಕಥನ ಪ್ರಕಾಶನ

ಪ್ರಥಮ ಮುದ್ರಣ : 2020

ಪುಟಗಳು : 96

ಬೆಲೆ : 85 ರೂ.


ಎಂ.ಆರ್ ಕಮಲ ಮೇಡಂ ಬರಹಗಳನ್ನು, ಕವಿತೆಗಳು ಅಥವಾ ಅನುವಾದಿತ ಕವಿತೆಗಳನ್ನು ಓದುತ್ತಾ ಸಾಗಿದಂತೆ ಹಲವಾರು ಹೊಸ ಹೊಳವುಗಳು ಕಾಣಿಸುತ್ತವೆ. ಅದರಲ್ಲಿಯೂ.. ಇವರ ಪುಸ್ತಕಗಳನ್ನು ಓದಿದಾಗ ಮೊಟ್ಟಮೊದಲಿಗೆ ಅನ್ನಿಸುವುದು ಎಂತಹಾ ನಿರಾಶಾದಾಯಕ ಸಂದರ್ಭವನ್ನು ಸಹಾ ಆಶಾದಾಯಕವಾಗಿ ನೋಡುವ ಶೈಲಿ. ಈ ಪುಸ್ತಕ ನನಗೆ ಇಷ್ಟವಾದದ್ದು ಇದೇ ಕಾರಣಕ್ಕೆ. ಏಕೆಂದರೆ, ಇದು ಕ್ವಾರಂಟೈನ್ ಜೀವನ, ದುರಿತಕಾಲದ ಬರಹಗಳೇ ಆದರೂ.. ಇಲ್ಲಿ ಎಲ್ಲಿಯೂ ನಿರಾಸೆ ಕಾಣುವುದಿಲ್ಲ. ಬದಲಿಗೆ, ಅದರಿಂದ ಹೊರಬರುವ ರೀತಿ, ಮಾಡಬೇಕಾದ ಕೆಲಸಗಳು ಕಂಡುಬರುತ್ತವೆ. ಫೇಸ್ಬುಕ್ ನಲ್ಲಿ ಬಿಡಿ ಬರಹಗಳ ರೂಪದಲ್ಲಿ ಕೆಲವನ್ನು ಓದಿದ್ದರೂ.. ಎಲ್ಲವನ್ನೂ ಓದಿರಲಿಲ್ಲ. ಮತ್ತೊಮ್ಮೆ ಈ ಪುಸ್ತಕವನ್ನು ತೆರೆದಾಗ ಆ ದಿನಗಳನ್ನು ಮೆಲುಕು ಹಾಕಿದ ಭಾವ ಮೂಡಿತು. 


ಕೊರೊನಾ ಕಾಲದ ತನ್ನ ಭಾವನೆಗಳನ್ನು, ಅನುಭವವನ್ನು ಎಷ್ಟು ದಿನಗಳು ಸಾಧ್ಯವೋ ಅಷ್ಟು ದಿನಗಳು ಬರವಣಿಗೆಯಲ್ಲಿ ಹಿಡಿದಿಡುವ ಸವಾಲನ್ನು ಅವರಿಗೆ ಒಡ್ಡಿಕೊಂಡು ಈ ಬರಹಗಳನ್ನು ಬರೆದಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಕೊರೊನಾ ಕಾಲವನ್ನು ಬಹುಬೇಗ ದಾಟಿ ನಿತ್ಯದ ಬದುಕಿಗೆ ಮರಳುತ್ತೇವೆ ಎನ್ನುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಪುಸ್ತಕ. ಬರಹದ ಮೂಲಕ ಓದುಗರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವನ್ನು ಮಾಡಿದ್ದಾರೆ.


"ವಿಕಾರಿ ಸಂವತ್ಸರ ತಮ್ಮೆಲ್ಲ ವಿಕಾರಗಳನ್ನು ಪ್ರಕಟಿಸಿಯೇ ಹೋದಳು. ಶಾರ್ವರಿಯಾದರು ಈ ಭೀತಿ ಕಳೆವಳೇ" ಎಂದು ಯೋಚಿಸುತ್ತಲೇ "ಯಾವುದೋ ಸಂವತ್ಸರದ ಮೇಲೆ ತಪ್ಪು ಹೊರಿಸಿ ಕೈ ತೊಳೆದುಕೊಳ್ಳುವುದು ಎಷ್ಟು ಸರಿ ?" ಎಂದು ಪ್ರಶ್ನಿಸುತ್ತಾ.. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಹಾಗೂ ಹೆಚ್ಚಿಸಲು ಅಲ್ಲಲ್ಲಿ ಕವಿತೆಗಳನ್ನು ಬರೆಯುತ್ತಾರೆ. 


ಕ್ವಾರಂಟೈನ್ ದಿನಗಳಲ್ಲಿ ಹೊರಗೆಲ್ಲೂ ಓಡಾಡಬಾರದು ಎನ್ನುವ ನಿಯಮ ವಿಧಿಸಿದಾಗ ಅವರೊಂದಿಗೆ ಇಲ್ಲದ ಅಮ್ಮನೊಂದಿಗೆ ಕಾಲ್ಪನಿಕ ಮಾತುಕತೆಯನ್ನು ಆರಂಭಿಸುವ ರೀತಿಯಲ್ಲಿ ಬರೆದಿರುವ ಮಾತುಗಳು, ಆಗಿನ ಕಾಲದ ಅಮ್ಮ ಇದ್ದದ್ದಕ್ಕೂ.. ಈಗಿನ ಕಾಲದ ಮಕ್ಕಳು ಇರುವುದಕ್ಕೂ ಇರುವ ವ್ಯತ್ಯಾಸ ತೋರುತ್ತಾರೆ. 

ನನ್ನದು ಕೂಡಾ ತೋಟದ ಮನೆಯಾಗಿದ್ದರಿಂದ ಕ್ವಾರಂಟೈನ್ ದಿನಗಳು ನಮಗೆ ಹೆಚ್ಚೇನೂ ತ್ರಾಸದಾಯಕವಾಗಿರಲಿಲ್ಲ. ಏಕೆಂದರೆ, ಮಾಮೂಲು ದಿನಗಳಲ್ಲೂ ನಾವು ಕಳೆದಿದ್ದಕ್ಕಿಂತ ತೀರಾ ವಿಭಿನ್ನವಾಗೇನಿರಲಿಲ್ಲ. 

ಇಲ್ಲಿ ಸ್ತ್ರೀ ಸ್ವಾತಂತ್ರದ ಕುರಿತಾಗಿಯೂ ಮಾತು ಬಂದಾಗ ಅಮ್ಮನ ಮೂಲಕ ಹೇಳುವ ಮಾತು ಹೀಗಿದೆ. "ಹೆಣ್ಣುಮಕ್ಕಳು ಕ್ವಾರಂಟೈನ್ ಆಗಿದ್ದು ಈಗಲೇನೆ? ಎಷ್ಟು ಸಾವಿರ ವರ್ಷಗಳಾಯ್ತು ಕೊರೊನಾ ವೈರಸ್ ಹೆಣ್ಣುಮಕ್ಕಳಿಗೆ ಬಂದು, ಈಗ ಜನ ಮಾತಾಡ್ತಿದ್ದಾರೆ ಕಣೆ." ಎನ್ನುವ ಮಾತು ಎಷ್ಟು ನಿಜವಲ್ಲವಾ ಎನಿಸುತ್ತದೆ. 


ಸುತ್ತಮುತ್ತಲಿನ ಕ್ವಾರಂಟೈನ್ ದಿನಗಳ ದಿನಚರಿಗಳನ್ನು ಸುಮ್ಮನೆ ನಮ್ಮ ಮುಂದಿಡುತ್ತಾರೆ ಹೊರತು ಅಲ್ಲೆಲ್ಲೂ ನನಗೆ ನಿರಾಸೆಯ ಪಸೆ ಕಾಣಿಸಲಿಲ್ಲ. ಬದಲಾಗಿ ಅಂತರಾಳದಲ್ಲೆಲ್ಲೋ ಇರುವ ಅವರ ಒಳಮಾತುಗಳ ಆತ್ಮವಿಶ್ವಾಸವು ವ್ಯಕ್ತವಾದಂತೆನಿಸಿತು.


"ಎರಡು ಪಾವು ಅನ್ನ ಬೇಯಿಸುತ್ತಿದ್ದವಳು ಮೂರು ಪಾವು ಹಾಕುತ್ತಿದ್ದಾಳೆ. ಬೆಕ್ಕು, ನಾಯಿಗಳ ಕೂಗು ಅವಳಿಗೀಗ ಕೇಳುತ್ತಿದೆ." ಎನ್ನುವ ಮಾತು ಕೊರೊನ ಕಾಲದಲ್ಲಿ ಮನುಷ್ಯರು ರೂಡಿಸಿಕೊಂಡ ಮಾನವೀಯತೆಯ ಮುಖದರ್ಶನ ಮಾಡಿಸಿತು. ಈ ಸಾಲು ಕೇವಲ ಉದಾಹರಣೆಯಷ್ಟೇ.


ಏಪ್ರಿಲ್ ತಿಂಗಳೆಂದರೆ ಪರೀಕ್ಷೆಗಳೆಂದು ಓಡಾಡುತ್ತಿದ್ದ ವಿದ್ಯಾರ್ಥಿಗಳು, ಪರೀಕ್ಷೆ ಇಲ್ಲವೆಂದು ಸಂತಸ ಪಡುತ್ತಿದ್ದ ದಿನಗಳನ್ನು ಗಮನಿಸಿ, ಇಟಲಿಯ ಕಾರ್ಲೊ ಕೋಲೋಡಿ ಎಂಬುವನು ಬರೆದಿರುವ ಪಿನಾಕಿಯೋ ಕತೆಯ ಎಲ್ಲ ದಿನಗಳು ಭಾನುವಾರಗಳೇ ಆದರೆ ಹೇಗಿರುತ್ತದೆ ಎನ್ನುತ್ತಾ ವಿದ್ಯಾರ್ಥಿಗಳಿಗೆ ಪಾಠ ಹೇಳುವಂತಿದೆ. 


ಲೇಖಕಿ ತಾವು ಸಂತೆಯಲ್ಲಿ ಹುಟ್ಟಿ ಸಂತೆಯಲ್ಲೇ ಬೆಳೆದವಳು ಎಂದು ತಾವು ಗಲಗಲನೆ ಇದ್ದ ದಿನಚರಿಯಿಂದ ಅಚಾನಕ್ಕಾಗಿ ಮೌನಕ್ಕೆ ಶರಣಾದ ದಿನಗಳ ಕುರಿತು ಹೇಳುತ್ತಾರೆ. 'ಸ್ಮಶಾನ ಮೌನ' ಎನ್ನುವ ಪದವನ್ನು ಹೇಳುತ್ತಿದ್ದವಳು ಈಗ ಅರ್ಥ ಮಾಡಿಕೊಳ್ಳುತ್ತಿದ್ದುದರ ಬಗೆಗೆ ಹೇಳುತ್ತಾರೆ. ಅದನ್ನು ಬಹಳ ಮನಮುಟ್ಟುವಂತೆ "ಧ್ಯಾನದ ಹಂಗಿಲ್ಲದೆ ಬದುಕಿದವಳಿಗೆ ಧ್ಯಾನ ಬದುಕಿನ ಭಾಗವಾಗಿ ಹೋಗಿದೆ" ಎನ್ನುತ್ತಾರೆ. 


ಸಾವಿನ ಅಂಕಿ-ಅಂಶಗಳತ್ತ ಆಸಕ್ತಿ ವಹಿಸುತ್ತಿದ್ದವರು.. ಆಸಕ್ತಿ ಕಳೆದುಕೊಂಡು, ನಂತರದಲ್ಲಿ ಕ್ವಾರಂಟೈನ್ ದಿನಗಳನ್ನು ಹಿಂದಿನ ಪ್ಲೇಗ್ ದಿನಗಳಿಗೆ ಹೋಲಿಸುತ್ತಲೇ.. ತಾನು ಪ್ಲೇಗ್ ಕುರಿತು ಕೇಳಿದಂತೆ ಕ್ವಾರಂಟೈನ್ ಕುರಿತು ಕೇಳುವವರು ಮುಂದೊಂದು ದಿನ ಇರಬಹುದು ಎನ್ನುತ್ತಾ ಕೊರೊನಾ ಕಾಲದ ಸಂಗತಿಗಳನ್ನು ಬರೆಯುತ್ತಿರುವ ಸಂಗತಿ ಬಿಚ್ಚಿಡುತ್ತಾರೆ. 


"ಅವಳೆಂದೂ ತನ್ನ ಬದುಕನ್ನು ನೋವಿನ ಕೂಪ ಮಾಡಿಕೊಂಡಿಲ್ಲ. ತಲ್ಲಣ, ತಳಮಳಗಳನ್ನು ಕ್ರಿಯಾಶೀಲವಾಗಿ ನಿಭಾಯಿಸುವುದನ್ನು ಹುಟ್ಟಿನಿಂದಲೇ ಕಲಿತಿದ್ದಾಳೆ" ಎನ್ನುತ್ತಾ ಅವಳ/ತನ್ನದೇ ಮೂಲಕ ಇಂದಿನ ಜನತೆಯು ಇರಬೇಕಾದ ದಾರಿ ತೋರುತ್ತಾರೆ. 


ಶಿಶುನಾಳ ಶರೀಫರ ತತ್ವಪದಗಳಲ್ಲಿನ "ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ"ಯನ್ನು ನೆನಪಾಗಿಸಿ ವಿದ್ಯಾರ್ಥಿಗಳು ಕೇಳುತ್ತಿದ್ದ ಪ್ರಶ್ನೆ "ಸಣ್ಣದು ದೊಡ್ಡದನ್ನು ಹೇಗೆ ನುಂಗುತ್ತದೆ?" ಎಂಬುದನ್ನು ಸಾಂದರ್ಭಿಕವಾಗಿ ನೆನೆಸಿಕೊಂಡು, ಹೊಸ ಅರ್ಥ ಹೊಳೆಸುವ ಬರಿಗಣ್ಣಿಗೂ ಕಾಣದ ಕ್ರಿಮಿ ಜಗತ್ತಿನ ಜನರನ್ನೆಲ್ಲ ನುಂಗಿ ಹಾಕುತ್ತಿರುವ ಸತ್ಯದ ದರ್ಶನ ಮಾಡಿಸುತ್ತಾರೆ. 


ಮಂಕು ಬಡಿದ ದಿನಗಳಲ್ಲಿ ಹಿಂದಿನ ನೆನಪುಗಳನ್ನೆಲ್ಲಾ ಮೆಲುಕು ಹಾಕಿಕೊಂಡು.. ತಾವು ಕವಿತೆಗಳನ್ನು ಕಂಠಪಾಠ ಮಾಡಿದ ದಿನಗಳು, ತಮ್ಮ ಬಳಿ ಇರುವ ಸೀರೆಗಳ ಕುರಿತು ಬಿಚ್ಚಿಡುತ್ತಾರೆ. ಯಾರ ನೆರವಿಲ್ಲದೆಯೂ ತನ್ನ ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವ ಹಲವು ದಾರಿಗಳನ್ನು ಅವರ ಅನುಭವಗಳ ಮೂಲಕ ಓದುಗರಿಗೆ ತಿಳಿಸುತ್ತಾರೆ. ವಿದ್ಯಾರ್ಥಿಗಳೊಳಗಿನ ಸಂವಾದವನ್ನು ನೆನೆಸಿಕೊಳ್ಳುತ್ತಾರೆ. ಪಾಶ್ಚಾತ್ಯ ಸಾಹಿತ್ಯದ ಹಲವು ಕವಿತೆಗಳನ್ನು, ಕಥೆಗಳನ್ನು ಅನುವಾದಿಸಿ ಪರಿಚಯಿಸುತ್ತಾರೆ. ಚಿಂತನೆಗಳನ್ನು ದಾಟಿಸುತ್ತಾರೆ. ಅವರು ವೃತ್ತಿಯಲ್ಲಿದ್ದ ದಿನಗಳಿಗೂ.. ಈಗ ನಿವೃತ್ತರಾಗಿರುವ ದಿನಗಳಿಗೂ ಇರುವ ವ್ಯತ್ಯಾಸವು ತಿಳಿಯುತ್ತದೆ. ಸೀರೆಯ ಕುರಿತ ಸವಾಲು ಅವರಿಗೆ ಸವಾಲೇ ಆಗದ ಬಗೆ ಹೇಗೆ ಎಂದು ತಿಳಿಸುತ್ತಾರೆ. ಚಟುವಟಿಕೆಯಿಂದ ಇದ್ದ ದಿನಗಳಿಗೂ.. ಚಟುವಟಿಕೆ ಇಲ್ಲದ ದಿನಗಳಿಗೂ ಇರುವ ಜೀವಂತಿಕೆಯ ವ್ಯತ್ಯಾಸ ಒಂದು ಸ್ವ ಅನುಭವದಿಂದ ಅವರಿಗೆ ಹೊಳೆದ ಬಗೆ ತಿಳಿಸುತ್ತಾರೆ. 


ಹಸಿವಿನ ಸಂಕಟದಿಂದ ವಲಸೆ ಹೋಗುತ್ತಿದ್ದ ಕಾರ್ಮಿಕರ ಮನಸ್ಸಿನ ಬೇಗುದಿ ಹೀಗಿರಬಹುದಾ..?? ಎನ್ನುವ ಬೇರೆಯ ತೆರನಾದ ಆಲೋಚನೆಯನ್ನು ತೋರುತ್ತಾರೆ.  ಕ್ವಾರಂಟೈನ್ ದಿನಗಳಲ್ಲಿ ಸಾಮರಸ್ಯದ ಬದಲಾಗಿ, ಗೃಹ ಕಲಹಗಳು ಶುರುವಾದ ಬಗೆಯನ್ನು ಹೇಳುತ್ತಾರೆ. 


ಇಲ್ಲಿ ಕೇವಲ ಕ್ವಾರಂಟೈನ್ ಕುರಿತ ಚಿತ್ರಣಗಳಿಲ್ಲ. ಅದನ್ನು ಮೀರಿದ ಆಲೋಚನೆಗಳಿವೆ. ಅದನ್ನು ಮೀರಬಹುದಾದ ಚೈತನ್ಯ ತುಂಬುವ ಹಲವು ಕವಿತೆಗಳು, ಘಟನೆಗಳು ನಮ್ಮವೇ ಎನಿಸುವಂತೆ ಕಾಣುತ್ತಾ ಹೋಗುತ್ತವೆ. ನಮ್ಮೊಳಗಿನ ನೋವುಗಳೆಲ್ಲವನ್ನೂ ಮೀರಿ ನಮಗೆ ನಾವೇ ಚೈತನ್ಯ ತುಂಬಿಕೊಳ್ಳುವ ಬಗೆ ಸಿಗುತ್ತದೆ. ನನಗಿದು ಕೇವಲ ಕೊರೊನಾ ಕಾಲದ ಕ್ವಾರಂಟೈನ್ ನ ಚಿತ್ರಣದಂತೆ ಕಾಣಲಿಲ್ಲ. ಬದಲಾಗಿ ನಮ್ಮನ್ನು ನಾವೇ ಯಾವುದೋ ನೋವಿನ ಕೂಪದೊಳಗೆ ಬಂಧಿಸಿಕೊಂಡು, ಕ್ವಾರಂಟೈನ್ ಮಾಡಿಕೊಂಡಾಗ.. ಮಾಡಿಕೊಳ್ಳಬೇಕಾಗಿ ಬಂದಾಗ ಅದೆಲ್ಲವನ್ನು ಮೀರಿ ನಿಲ್ಲುವ ಬಗೆ ಸಿಕ್ಕಿತು. 


ಹಲವು ಕಾವ್ಯಗಳು, ವಚನಗಳು, ಹಲವು ರೂಪಕಗಳು, ಹಲವು ಅನುಭವಗಳು, ಹಲವಾರು ಒಳ ಮನಸ್ಸಿನ ಚಿಂತನೆಗಳು.. ಸೃಜನಾತ್ಮಕ ಶೈಲಿಯಲ್ಲಿ ಮೂಡಿಬಂದು ನೋವು, ತಳಮಳ, ಒಂಟಿತನ ಇವೆಲ್ಲವೂ ಸೃಜನಾತ್ಮಕವಾಗಿ ಬದಲಾಗಬಹುದಾದ ಸಂದರ್ಭಗಳ ಚಿತ್ರಣವನ್ನು ಕಣ್ಣಮುಂದಿಡುತ್ತದೆ.


ಅಂದಿನ ಕ್ವಾರಂಟೈನ್ ಕಾಲ ಮುಗಿದಿದೆ. ಇನ್ನು ನಾವು ನಮ್ಮನ್ನು ಕ್ವಾರಂಟೈನ್ ಮಾಡಿಕೊಂಡಾಗ ಹೊರಬರಲೇಬೇಕು. ನೋವುಗಳನ್ನು ಮೆಟ್ಟಿ ನಿಲ್ಲಲೇಬೇಕು. ಸಹಜ ಸ್ಥಿತಿಗೆ ಬರಲು ನಮ್ಮನ್ನು ಬೇರೆಯವರು ಒಪ್ಪಿಸಲಾಗದು. ಬದಲಾಗಿ ನಾವೇ ಒಗ್ಗಿಕೊಳ್ಳಬೇಕು ಎಂಬ ವಾಸ್ತವವನ್ನು ಹೇಳುವ ಪುಸ್ತಕ. ಜೀವಂತಿಕೆಯನ್ನು ತುಂಬಲು ಇಂತಹಾ ಪುಸ್ತಕವೊಂದು ಬೇಕಿತ್ತು. ಅಂತಹಾ ಪುಸ್ತಕದ ಓದು ಇದು. 


~ವಿಭಾ ವಿಶ್ವನಾಥ್

ಕಾಲಾಯ ತಸ್ಮೈ ನಮಃ (ಪುಸ್ತಕ ಯಾನ - 140)


ಪುಸ್ತಕದ ಶೀರ್ಷಿಕೆ : ಕಾಲಾಯ ತಸ್ಮೈ ನಮಃ

ಲೇಖಕರು : ಕೌಶಿಕ್ ಕೂಡುರಸ್ತೆ

ಪ್ರಕಾಶಕರು : ಸ್ನೇಹ ಬುಕ್ ಹೌಸ್

ಪ್ರಥಮ ಮುದ್ರಣ : 2020

ಪುಟಗಳು : 96

ಬೆಲೆ : 100 ರೂ.


ಕೌಶಿಕ್ ಕೂಡುರಸ್ತೆ ಇವರು ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿದ್ದು ಪ್ರವೃತ್ತಿಯಿಂದ ಲೇಖಕರು. ನಮ್ಮ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೂಡುರಸ್ತೆಯವರು. ಇವರ 'ಇಂತಿ ನಿಮ್ಮ ಆತ್ಮೀಯ' ಎಂಬ ಕಾದಂಬರಿಯನ್ನು ಓದಿದ್ದೆನಾದರೂ ..ಇವರ ಹೆಸರು ಪತ್ತೇದಾರಿ ಕಾದಂಬರಿಗಳಲ್ಲಿ ಮುಂಚೂಣಿಯಲ್ಲಿದ್ದರೂ.. ನಾನು ಓದಿದ ಇವರ ಮೊದಲ ಪತ್ತೇದಾರಿ ಕಾದಂಬರಿ "ಕಾಲಾಯ ತಸ್ಮೈ ನಮಃ". ಇದು ಇವರ ಎರಡನೇ ಕಾದಂಬರಿ ಹಾಗೂ ಮೊದಲ ಪತ್ತೇದಾರಿ ಕಾದಂಬರಿ.


ಪತ್ತೇದಾರಿ ಕಾದಂಬರಿಗಳನ್ನು ರಚಿಸುವುದಂದರೆ ಅಷ್ಟು ಸುಲಭವಲ್ಲ. ಏಕೆಂದರೆ, ಈಗಾಗಲೇ ನಾವು ಸಾಕಷ್ಟು ವೆಬ್ ಸೀರೀಸ್ ಹಾಗೂ ಸಿನಿಮಾಗಳಲ್ಲಿ ಪತ್ತೇದಾರಿ ಕಥೆಗಳನ್ನು ಕಂಡಿರುವುದರಿಂದ, ಕೇಳುತ್ತಿರುವುದರಿಂದ, ಪತ್ತೇದಾರಿ ಕತೆಗಳನ್ನು ಓದಿರುವುದರಿಂದ ನಮ್ಮ ಮೆದುಳಿಗೆ ಕಸರತ್ತು ನೀಡುವಂತಹಾ ವಿಭಿನ್ನ ಶೈಲಿಯ ಪತ್ತೇದಾರಿ ಕಥೆಗಳನ್ನು ಹೊಸ ರೀತಿಯಲ್ಲಿ ನೀಡಬೇಕಾಗಿ ಬರುತ್ತದೆ. ಹಾಗಾಗಿ, ಓದುಗನ ಆಲೋಚನಾ ಶೈಲಿಗಿಂತ ಬಹಳ ವಿಭಿನ್ನವಾಗಿ ಆಲೋಚಿಸಿ ಪತ್ತೇದಾರಿ ಕಥೆಗಳನ್ನು ರಚಿಸಬೇಕು. ಇಲ್ಲವಾದರೆ ಅತ್ಯಂತ ಸಾದಾ ಕತೆ ಎನ್ನಿಸಿ.. ಆದಷ್ಟು ಬೇಗ ಪತ್ತೆ ಮಾಡುವಂತಿದ್ದರೆ.. ಮುಂದಕ್ಕೆ ಆಸಕ್ತಿ ಮೂಡುವುದಿಲ್ಲ. ಆದರೆ, ಇಲ್ಲಿ ಹೀಗಾಗದೇ ಅಂದುಕೊಂಡದ್ದಕ್ಕಿಂತ ವಿಭಿನ್ನವಾದ ಕಥಾ ಹಂದರ ದೊರಕಿತು. ಈ ಪತ್ತೇದಾರಿ ಕಾದಂಬರಿಯನ್ನು ಓದುತ್ತಾ.. ಓದುತ್ತಲೇ ಇದೊಂದು ಸಿನಿಮಾವಾದರೆ ಎಷ್ಟು ಚೆಂದವೆನಿಸಿತು.


ಇನ್ಸ್ಪೆಕ್ಟರ್ ವಿಕ್ರಂ ಹಾಗೂ ಕಾನ್ಸ್ಟೇಬಲ್ ರಾಮಪ್ಪನವರಿಗೆ ಬಂದ ಕೇಸ್ ಒಂದು ವಿಭಿನ್ನ ರೀತಿಯ ಕೇಸ್ ಆಗಿದ್ದಿತ್ತು. ಡಾಕ್ಟರ್ ರಾಧಾಕೃಷ್ಣ ಹಾಗೂ ಪ್ರೊಫೆಸರ್ ರಾಮೇಶ್ವರ ಇಬ್ಬರ ಕೇಸು ನೋಡುವುದಕ್ಕೆ ಸಾದಾ ಕೇಸು ಎನಿಸಿದರೂ.. ಇದನ್ನು ಸುಲಭವಾಗಿ ಬಗೆಹರಿಸಬಹುದು ಎನಿಸಿದರೂ ಸಹಾ ಅದೊಂದು ಸಾದಾ ಕೇಸಂತೂ ಖಂಡಿತವಾಗಿಯೂ ಆಗಿರಲಿಲ್ಲ. 


ಪ್ರೊಫೆಸರ್ ರಾಮೇಶ್ವರ ಅವರು ಮೂರು ತಿಂಗಳಿನ ಹಿಂದೆ "ಬೆಕ್ಕಿನ ಕಣ್ಣು" ಎಂಬ ಸಸ್ಪೆನ್ಸ್ ಥ್ರಿಲ್ಲರ್ ಪುಸ್ತಕವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರೂ.. ಅದು ಅವರ ಡ್ರೀಮ್ ಪ್ರಾಜೆಕ್ಟ್ ಕೂಡಾ ಹೌದು. ಆದರೆ, ಅದಾದ ನಂತರ ಅವರ ಸ್ನೇಹಿತರೊಬ್ಬರು ಫೋನ್ ಮಾಡಿ ತಿಳಿಸಿದ್ದರಿಂದ ಇನ್ನೊಂದು ಪುಸ್ತಕವನ್ನು ತಂದು ಓದಿದ್ದರು. ಅದೇ "ನೀಲಿ ಕಣ್ಣು". ಅದನ್ನು ಬರೆದವರು ಡಾಕ್ಟರ್ ರಾಧಾಕೃಷ್ಣ ಆಗಿದ್ದರು.


ಆದರೆ ಡಾಕ್ಟರ್ ರಾಧಾಕೃಷ್ಣ ಅವರು ಅದನ್ನು ಸಾರಾಸಗಟಾಗಿ ತಳ್ಳಿಹಾಕಿ.. ಅದು ತಮಗೂ ಹೊಳೆದ ಕಥೆ ಎಂದು, ತಾವು ಅದನ್ನು ಶಿವಮೊಗ್ಗದ ಹೋಂ ಸ್ಟೇಯಲ್ಲಿ ಒಬ್ಬರೇ ಕೂತು ಬರೆದದ್ದು ಎಂದು ಹೇಳಿದರು. ಅಲ್ಲಿಯೂ ವಿಚಾರಿಸಲಾಗಿ ಅದು ನಿಜವಾಗಿದ್ದಿತು. ಆದರೆ, ಬರೆದ ನಂತರ ಬಹಳಷ್ಟು ಲೇಟ್ ಆಗಿ ಮುದ್ರಣ ಮಾಡಿದ್ದರ ಕಾರಣವನ್ನು ವಿಚಾರಿಸಲಾಗಿ ಅಲ್ಲಿಯೂ ಸಹಾ ಡಾಕ್ಟರ್ ಹೇಳಿದ ಕಾರಣ ನಿಜವಾಗಿತ್ತು.


ಕಥೆಯನ್ನು ಮೊದಲು ಬರೆದವರು ಯಾರು..?? ಎನ್ನುವ ಸಂದೇಹಕ್ಕೆ ಉತ್ತರ ಅವರ ಕಥೆಯ ಹಸ್ತ ಪ್ರತಿಯಲ್ಲಿ ಸಿಗಬಹುದು ಎನ್ನುವ ರಾಮಪ್ಪನ ಉತ್ಸಾಹ ಮರುದಿನದ ಬೆಳಿಗ್ಗೆಯವರೆಗೂ ಅಷ್ಟೇ ಇದ್ದದ್ದು.. ಏಕೆಂದರೆ, ಪ್ರೊಫೆಸರ್ ಗೆ ದಿನಾಂಕ ಬರೆಯುವ ಅಭ್ಯಾಸವಿದ್ದರೂ ಡಾಕ್ಟರ್ ಆ ಅಭ್ಯಾಸವಿಟ್ಟಿರಲಿಲ್ಲ. ಆದರೆ, "ಇಂಕ್ ಏಜ್ ಡಿಟೆಕ್ಷನ್ ಟೆಸ್ಟ್" ನಿಂದಾಗಿ ಹಸ್ತ ಪ್ರತಿಯಲ್ಲಿ ಆಂಟಿದ ಇಂಕಿನ ಆಯಸ್ಸನ್ನು ತಿಳಿಯಬಹುದೆಂದು ಲ್ಯಾಬಿಗೆ ಪರೀಕ್ಷೆಗೆ ಕಳುಹಿಸಿದರು. ಸಂಜೆವರೆಗೂ ಸಮಯವಿದ್ದುದರಿಂದ ಹಾಗೂ ಪೋಲಿಸ್ ಸ್ಟೇಷನ್ ನಲ್ಲಿ ಬೇರೆ ಕೇಸು ಇಲ್ಲದ್ದರಿಂದ.. ಪ್ರೊಫೆಸರ್ ಬಾಯಲ್ಲಿ ಅವರ "ಬೆಕ್ಕಿನ ಕಣ್ಣು" ಕಥೆ ಕೇಳಲು ಶುರು ಮಾಡಿದರು ವಿಕ್ರಂ ಹಾಗೂ ರಾಮಪ್ಪ.


ಮೇರಿಯ ಮಗಳಾದ ಜೆಸ್ಸಿಕಾ ಫಿಲಂ ಸಿಟಿಗೆ ಸ್ನೇಹಿತರೊಂದಿಗೆ ಹೋಗಿದ್ದವಳು ನಾಪತ್ತೆಯಾಗಿದ್ದವಳು ಪತ್ತೆಯಾಗಿದ್ದು.. ಬೀಚ್ ಬಳಿಯ ಲೈಟ್ ಹೌಸ್ ಪಕ್ಕದಲ್ಲಿ ಆಕೆಯ ಶವದ ಜೊತೆಗೆ ಶವದಿಂದ ತೆಗೆದ ನೀಲಿ ಕಣ್ಣುಗಳು ಪತ್ತೆಯಾಗಿದ್ದವು. ಇನ್ಸ್ಪೆಕ್ಟರ್ ಅರ್ಜುನ್ ವಿಚಾರಣೆ ನಡೆಸಿದ್ದರೂ.. ಆಕೆಯ ಸಾವಿನ ಕಾರಣ ಸಿಕ್ಕಿರಲಿಲ್ಲ. ಅಲ್ಲದೇ.. ಜೆಸ್ಸಿಕಾ ಕೊಲೆಯಾಗಿ ಒಂದು ವರ್ಷವಾಗುತ್ತಾ ಬಂದರೂ ಕೊಲೆಗಾರನು ಇನ್ನೂ ಸಿಕ್ಕಿಲ್ಲದಿದ್ದರಿಂದ ಪ್ರೈವೇಟ್ ಡಿಟೆಕ್ಟಿವ್ ಹಿಮವಂತ್ ಮೊರೆ ಹೋಗಿದ್ದರು. 


ಹಿಮವಂತ್ ಕೊಲೆಯ ಹಿಂದಿನ ಕಾರಣವನ್ನು ತಿಳಿಯಲು ಹೊರಟಾಗ ಆತ ಬಂದು ನಿಂತದ್ದು ಫಿಲಂ ಸಿಟಿ ಬಳಿಗೆ. ಕೊಲೆಯಾದ ದಿನಾನಕಗಳ ಹಿಂದಿನ ಎರಡು ವರ್ಷಗಳ ದಿನಾಂಕದ ಪ್ಯಾಟ್ರನ್ ಹಾಗೂ ಕೊಲೆಗೆ ಏನಾದರೂ ಸಂಬಂಧವಿರಬಹುದಾ ಎಂದು ಯೋಚಿಸುತ್ತಾ.. ಗೆಳೆಯ ಆಹ್ವಾನಿಸಿದ್ದ ಡಿನ್ನರ್ ಪಾರ್ಟಿಗೆ ಹೋದಾಗ ಅಚಾನಕ್ಕಾಗಿ ಸಿಕ್ಕ ಒಂದು ಸುಳಿವನ್ನು ಹಿಡಿದು ಮರೆವಿನ ಕಾಯಿಲೆಯಾದ ಡಿಮೆನ್ಶಿಯಾ ಇರುವವರು ಕೆಲಸ ಮಾಡುವ 'ರೆಸ್ಟೋರೆಂಟ್ ಆಫ್ ಆರ್ಡರ್ ಮಿಸ್ಟೇಕ್' ಎನ್ನುವ ರೆಸ್ಟೋರೆಂಟ್ ಗೆ ಪಯಣ ಬೆಳೆಸುತ್ತಾನೆ.


ಅಲ್ಲಿ ಸುಳ್ಳು ಮಾಹಿತಿ ಕೊಟ್ಟು.. ಆ ಕಾಯಿಲೆ ಇಲ್ಲದಿದ್ದರೂ ಕೆಲಸಕ್ಕೆ ಸೇರಿದ ವೈಟರ್ ಫೋಟೋಗಳನ್ನು ನೋಡಿ ಬೆದರಿದಾಗ, ಆತನ ಬೆನ್ನು ಹತ್ತಿ ಕೊಲೆಗಾರನ ಕೈಯಲ್ಲಿದ್ದ ಹಚ್ಚೆಯ ಸುಳಿವು ಪಡೆಯುತ್ತಾನೆ. ಅದನ್ನರಸಿ ಫಿಲಂ ಸಿಟಿಯ ಜಾದುಗಾರರ ಸುಳಿವನ್ನು ಪಡೆದಾಗ ಸಿಕ್ಕವನೇ ಕ್ರಿಸ್ಟೋಫರ್ ಅಲಿಯಾಸ್ ವಿಪುಲ್ ಚಂದ್.


ಕೊಲೆಗಾರ ಆ ರೀತಿಯ ಕೊಲೆಗಳನ್ನು ಮಾಡಲು ಅವನಿಗೂ ಒಂದು ಮಾನಸಿಕ ಹಿಂಸೆಯ ಕಾರಣವಿದೆ ಎನ್ನುವ ಅಂಶವನ್ನು ಇಟ್ಟು ಕ್ರಿಸ್ಟೋಫರ್ ಹಿಂದಿನ ಪ್ರೀತಿಯ ನೋವಿನ ಕಥೆಯೊಂದನ್ನು ಬಿಚ್ಚಿಡುತ್ತಾರೆ. ವೇಶ್ಯೆಯಾಗಿದ್ದ ಕಾಜಲ್ ಳನ್ನು ಪ್ರೀತಿಸಲು ಹೊರಟವನಿಗೆ ಸಿಕ್ಕದ್ದು ನೋವು. ಹಾಗೆ ಸಿಕ್ಕ ನೋವು ಆತನನ್ನು ಕೊಲೆಗಾರನನ್ನಾಗಿ ಮಾಡಿತು. ಆಕೆಯಂತೆ ಬೆಕ್ಕಿನ ಕಣ್ಣಿನ ಹುಡುಗಿಯರನ್ನು ಪ್ರೀತಿಸಿ ಕೊಲ್ಲುತ್ತಾ ಹೋಗುತ್ತಾನೆ. 


ಇದು ಈ ಪತ್ತೆದಾರಿ ಕತೆಯ ಅರ್ಧ ಭಾಗ. ಇಷ್ಟು ಕಥೆಯನ್ನು ಓದಿದಾಗ ಕಥೆ ಇನ್ನು ಸಾದಾ ಟ್ರ್ಯಾಕ್ ನಲ್ಲಿ ಹೋಗುತ್ತಿದೆಯಲ್ಲಾ ಎಂದುಕೊಳ್ಳುವಷ್ಟರಲ್ಲಿ ಲೇಖಕರು ನಮ್ಮ ಆಲೋಚನೆಯನ್ನು ಮೀರಿ ಕತೆಯನ್ನು ಕೊಂಡೊಯ್ಯುತ್ತಾರೆ.


ಮೇರಿ "ಕೊಲೆಗಾರನನ್ನು ಕಂಡುಹಿಡಿದರೆ ಲಕ್ಷ, ಸಾಯಿಸಿದರೆ ಕೋಟಿ" ಎನ್ನುವ ಮಾತು ನೆನಪಾಗಿ ಆತನನ್ನು ಸಾಯಿಸಲು ಪ್ರಯತ್ನಿಸಿ ಹಿಂಬಾಲಿಸುತ್ತಾನೆ. ಆದರೆ, ಹಾಗೆ ಹಿಂಬಾಲಿಸಿ ಹೊರಟಾಗ ಅಂದು ರಸ್ತೆಯಲ್ಲಿ ಅಘೋರಿಯೊಬ್ಬನ ನಡವಳಿಕೆಗೂ.. ವಿಪುಲ್ ಚಂದ್ ನಡವಳಿಕೆಗೂ ಸಾಮ್ಯತೆಗಳು ಕಂಡುಬರುತ್ತವೆ. ಆ ಸಾಮ್ಯತೆಗಳು ಏನಿರಬಹುದು..?? ವಿಪುಲ್ ಚಂದ್ ನನ್ನು ಅಘೋರಿ ಬಳಸಿಕೊಂಡಿದ್ದಾನೆ. ಅಥವಾ ಆತನಿಗೂ ಈತನಿಗೂ ಏನಾದರೂ ಸಂಬಂಧವಿತ್ತಾ..?? ಅಘೋರಿಯ ಹಿಂದೆ ಹೊರಟು ಯನಗಳ್ಳಿಗೆ ಸೇರುತ್ತಾನೆ ಹಿಮವಂತ್. ಆಘೋರಿಯ ಹಿಂದಿನ ರಹಸ್ಯವೇನಿತ್ತು..?? ಆ ಕೊಲೆಯಾಗುತ್ತಿದ್ದ ದಿನಾಂಕಗಳ ಪ್ಯಾಟರ್ನ್ ರಹಸ್ಯ ಕಂಡುಹಿಡಿದನೇ..?? ಮುಂದೆ ಕೊಲೆಯಾಗಲಿರುವ ಬೆಕ್ಕಿನ ಕಣ್ಣಿನ ಹುಡುಗಿಯನ್ನು ರಕ್ಷಿಸಿದನೇ..?? ನೀಲಿ ಕಣ್ಣಿಗೂ ಒಂದು ಲಿಂಕ್ ಇದೆ. ಆ ಲಿಂಕ್ ಏನು..?? 


ಡಿಟೆಕ್ಟಿವ್ ಹಿಮವಂತ್ ನ ಸಾಹಸಗಾಥೆಗಳ ಮೂಲಕ ಚಾಣಾಕ್ಷತೆಯನ್ನು ನಮ್ಮ ಮುಂದಿಡುತ್ತಾ.. ಪತ್ತೇದಾರಿ ಕತೆಯನ್ನು ರೋಚಕವಾಗಿಸಿದ್ದಾರೆ.


ಇದಿಷ್ಟೇ ಅಲ್ಲ. ಇಲ್ಲಿ ಸಿಗುವ ಕಾರಣಕ್ಕೂ.. ಕೃತಿಚೌರ್ಯದ ಆರೋಪ ಹೊರಿಸಿದ್ದ ಡಾಕ್ಟರ್ ಹಾಗೂ ಪ್ರೊಫೆಸರ್ ಇಬ್ಬರ ಸಮಸ್ಯೆಗೂ ಇಲ್ಲಿಯೇ ಪರಿಹಾರವೂ ಇದೆ. ಎರಡು ಪ್ರಶ್ನೆಗೆ ಒಂದೇ ಉತ್ತರ ಎನ್ನುತ್ತಾರಲ್ಲ.. ಅಂತಹಾ ಒಗಟಿನ ರೀತಿಯ ಉತ್ತರವೇ ಇಲ್ಲಿಯೂ ಇದೆ.


ಪುಸ್ತಕದ ಮುಖಪುಟವನ್ನು ನೋಡಿದಾಗ, ಪೂರ್ಣ ಕಥೆಯನ್ನು ಓದಿ ಮುಗಿಸಿದ ನಂತರ ಬಹಳ ಅರ್ಥಪೂರ್ಣವಾದ ಮುಖಪುಟ ಎನಿಸಿತು. ಇಡೀ ಘಟನೆ ಹಾಗೂ ಪತ್ತೇದಾರಿ ಕಥೆಯನ್ನು ಎಲ್ಲಿಯೂ ಗುಟ್ಟು ಬಿಟ್ಟುಕೊಡದಂತೆ, ಮುನ್ನಡೆಸುತ್ತಾ.. "ಕಾಲಾಯ ತಸ್ಮೈ ನಮಃ" ಎನ್ನುತ್ತಾರೆ ಲೇಖಕರು.


ಮೊದಲ ಪತ್ತೇದಾರಿ ಕಥೆಯಲ್ಲಿ ಇಷ್ಟರ ಮಟ್ಟಿಗಿನ ಚಾಣಾಕ್ಷತೆಯಿಂದ ಕಥೆ ಹೇಳಿರುವ ಇವರು ತೀರ ಕ್ಲಿಷ್ಟವಲ್ಲದ ಸರಳ ನಿರೂಪಣೆಯಿಂದ ಮುಂದಿನ ಪುಸ್ತಕಗಳ ಕಡೆಗೂ ಭರವಸೆ ಮೂಡಿಸುತ್ತಾರೆ. ಇಂದಿನ ಪತ್ತೇದಾರಿ ಕಥೆಗಳಲ್ಲಿ ಇವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತದೆ. ಇವರ ಇನ್ನುಳಿದ ಪತ್ತೇದಾರಿ ಕಾದಂಬರಿಗಳನ್ನು ಓದಬೇಕಿದೆ.


~ವಿಭಾ ವಿಶ್ವನಾಥ್

ನಗೆ ನವಿಲು (ಪುಸ್ತಕ ಯಾನ - 139)


ಪುಸ್ತಕದ ಶೀರ್ಷಿಕೆ : ನಗೆ ನವಿಲು

ಲೇಖಕರು : ಡಾ|| ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್

ಪ್ರಕಾಶಕರು : ನವಕರ್ನಾಟಕ ಪ್ರಕಾಶನ

ಪ್ರಥಮ ಮುದ್ರಣ : 2013

ಪುಟಗಳು : 88

ಬೆಲೆ : 55 ರೂ. 


ನಗೆ ನವಿಲು ಇದು ಶ್ರೀಮತಿ ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ರ ಲಘು ಲೇಖನ, ಹರಟೆ, ನಗೆಬರಹಗಳ ಸಂಕಲನ. ಹಾಸ್ಯಕ್ಕೂ.. ವ್ಯಂಗ್ಯಕ್ಕೂ.. ಇರುವುದು ಬಹಳ ತೆಳುವಾದ ಗೆರೆ. ಕೆಲವೊಮ್ಮೆ ಮತ್ತೊಬ್ಬರ ಕುರಿತು ಮಾಡುವ ಹಾಸ್ಯ ಅವರಿಗೆ ವ್ಯಂಗ್ಯವೆಂದು ಅನಿಸಬಹುದು. ಆದರೆ, ನಿಜವಾದ ಹಾಸ್ಯವೆಂದರೆ ವ್ಯಂಗ್ಯದ ಸುಳಿವಿರದೆ ಕೇವಲ ಲಘುವಾದ ಛೇಡಿಸುವಿಕೆ ಮಾತ್ರ ಆಗಿರುತ್ತದೆ. ದಂಪತಿಗಳ ಮಾತುಕತೆಗಳಲ್ಲಿ ಬರುವ ಇಂತಹ ನವಿರಾದ ಹಾಸ್ಯ, ಹಿತವಾದ ಜೀವನಕ್ಕೆ ಬಹಳ ಅವಶ್ಯಕ. ಇವರ ಪತಿ ಕೃಷ್ಣಾನಂದ ಕಾಮತ್ ಅವರು ಕೂಡ ಲೇಖಕರು ನಾನು ಇತ್ತೀಚಿಗಷ್ಟೇ ಓದಿದ 'ಕಾಗೆಯ ಕಾಯಕ' ಎನ್ನುವ ವೈಜ್ಞಾನಿಕ ಬರಹದಲ್ಲಿಯೂ ಸಹ ಎಲ್ಲಿಯೂ ಬೋರ್ ಆಗದಂತೆ ನವಿರಾದ ಹಾಸ್ಯ ಅಲ್ಲಲ್ಲಿ ಸುಳಿಯುವಂತೆ ಬರೆದಿದ್ದಾರೆ. ಮನೆಯಲ್ಲಿನ ವಾತಾವರಣ ಹಾಗೂ ಮಾತುಕತೆಗಳು ಕೂಡಾ ಬರವಣಿಗೆಯಲ್ಲಿ ಬಿಂಬಿಸುತ್ತದೆ ಎನ್ನುವುದಕ್ಕೆ ಈ ದಂಪತಿಗಳ ಪುಸ್ತಕಗಳು ಉತ್ತಮ ಉದಾಹರಣೆ.


ಈ ಪುಸ್ತಕ ಓದಿ ಲೇಖಕಿಯ ಕುರಿತು ಒಂದಿಷ್ಟು ಮಾಹಿತಿ ತಿಳಿಯಬೇಕು ಎಂದುಕೊಂಡಾಗ ನನಗೆ ಸಿಕ್ಕ ಮಾಹಿತಿ ಇವರ ಬೇರೆ ಪುಸ್ತಕಗಳನ್ನು ಓದುವ ಆಸಕ್ತಿ ಮೂಡಿಸಿದೆ.


ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದ ಜ್ಯೋತ್ಸ್ನಾ ಅವರು ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ನಂತರ, ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಸೇರಿದರು. ನಂತರ ಕೋಲ್ಕೊತ್ತ, ಜೈಪುರ, ಮುಂಬೈ, ಮೈಸೂರು ಮತ್ತು ಬೆಂಗಳೂರು ನಗರಗಳ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ, ಕೊನೆಗೆ ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿ, 1994ರಲ್ಲಿ ನಿವೃತ್ತಿ ಹೊಂದಿದ್ದರು. ‘ಸಂಸಾರದಲ್ಲಿಸ್ವಾರಸ್ಯ’, ‘ಕರ್ನಾಟಕ ಶಿಕ್ಷಣ ಪರಂಪರೆ’, ‘ಹೀಗಿದ್ದೇವೆ ನಾವು’, ‘ನೆನಪಿನಲ್ಲಿನಿಂತವರು’, ‘ನಗೆ ಕೇದಿಗೆ’ ಹಾಗೂ ‘ನಗೆ ನವಿಲು’, 'ಕಲಕತ್ತಾ ದಿನಗಳು' ಅವರ ಪ್ರಮುಖ ಕೃತಿಗಳು. ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪುರಸ್ಕಾರ, ಕನ್ನಡ ಸಾಹಿತ್ಯ ಸಂಶೋಧನೆಗಾಗಿ ಕಿಟೆಲ್‌ ಪುರಸ್ಕಾರ ಸೇರಿ ಹಲವು ಪುರಸ್ಕಾರಗಳು ಲಭಿಸಿವೆ. 2022 ಆಗಸ್ಟ್ 24ರಂದು ಕ್ಯಾನ್ಸರ್ ನಿಂದ ಬಳಲುತ್ತಿದ್ದವರು ನಿಧನ ಹೊಂದಿದರು. Kamat.com ಎಂಬುದು ಇವರ ಕುಟುಂಬದ ವೆಬ್ ಪುಟ. 


ನಗೆ ನವಿಲು ನವಿರಾದ ಹಾಸ್ಯದ ಮೂಲಕ ಅವರ ಜೀವನದ ಪುಟಗಳನ್ನು ತೆರೆದಿಡುತ್ತದೆ. ಇಲ್ಲಿನದ್ದು ಕಾಲ್ಪನಿಕ ಹಾಸ್ಯದ ಘಟನೆಗಳಲ್ಲ. ಬದಲಾಗಿ ಲೇಖಕಿ ಬದುಕನ್ನು ಕಂಡ ಬಗೆ ಚಿತ್ರಿತವಾಗಿದೆ. 


ಅವರು ಇಲ್ಲಿನ ಕಥಾ ನಾಯಕನ ಕುರಿತೂ ಹೇಳುತ್ತಾರೆ. 

'ಹಾಸ್ಯ ಬರಹಗಳಿಗೊಬ್ಬ ನಾಯಕ ಬೇಕು. ಹಾಸ, ಪರಿಹಾಸ, ವಾಗ್ಬಾಣಗಳ ಚುಚ್ಚಾಟಗಳನ್ನೆಲ್ಲಾ ಮುದ್ರಿತ ರೂಪದಲ್ಲಿ ಸಹಿಸಿಕೊಳ್ಳಲು ಒಬ್ಬ ಗಂಡುಗಲಿ ಬೇಕು ! ಸಿಟ್ಟು, ಸೆಡವು, ನೋವು ಮಾಡಿಕೊಳ್ಳದೆ ಸಹಿಸಿ, ನಕ್ಕುಬಿಡುವ ಸರಸವಿನೋದಿ ಬೇಕು. ಸುದೈವದಿಂದಲೇ ನನ್ನ ಮನೆಯಲ್ಲೇ ಅಂತಹವರು ಇದ್ದರು! ನನ್ನ ಪತಿಯನ್ನೇ ಬರಹದ ನಾಯಕರನ್ನಾದ 'ರಾಯ'ನ್ನಾಗಿಸಿ ಬರೆಯುತ್ತಿದ್ದೆ. ಅವರು ಸ್ವತಃ ಸಹಜವಾದ ತಿಳಿಹಾಸ್ಯವನ್ನು ರೂಢಿಸಿಕೊಂಡವರು' ಎಂಬ ಮಾತುಗಳನ್ನು ಓದಿದಾಗ ದಂಪತಿಗಳ ನಡುವಿನ ಹೊಂದಾಣಿಕೆ ಹಾಗೂ ಹಾಸ್ಯಪ್ರಜ್ಞೆಯ ದರ್ಶನವಾಯಿತು. 


ಕನಸಿನ ಮನೆ ಹಾಗೂ ವಿಶ್ರಾಂತಿ ಧಾಮ : ಈ ಎರಡೂ ಬರಹಗಳಲ್ಲಿ ವಿಷಯದ ಸಾಮ್ಯತೆ ಕಂಡರೂ ಹಾಸ್ಯದ ಮೂಲಕದ ಪ್ರಸ್ತುತಿ ವಿಭಿನ್ನವಾಗಿದೆ. ಅಮೆರಿಕಾದಲ್ಲಿದ್ದ ತಮ್ಮ ಮಗನಿಗೆ ಕನಸಿನ ಮನೆ ಕಟ್ಟಲು ಬೇರೆಯವರು ಜಾಗ ನೋಡಿ ವರ್ಣಿಸಿದ್ದರೂ ಅದನ್ನು ನೋಡಿ ಬಂದ ರಾಯರ ನಿಜ ವರ್ಣನೆ ಕೇಳಿದ ದಿಗ್ಭ್ರಮೆಯೂ ಆಯಿತು. ಅಂತಹದ್ದೇ ಸಂಧರ್ಭ ಎದುರಾಗಿದ್ದು ಮಗ ಸ್ವತಃ ವಿಶ್ರಾಂತಿಧಾಮಕ್ಕಾಗಿ ಸ್ಥಳ ಹುಡುಕಲು ಊರಿಗೆ ಬಂದಾಗ. ಸ್ಮಶಾನ, ಕೆರೆ ಪಕ್ಕದ , ಗುಡ್ಡ ಕಾಣುವ ಜಾಗಗಳನ್ನು ನಿಶ್ಶಬ್ಧ, ಪ್ರಕೃತಿ ಸೌಂದರ್ಯದ ಜಾಗಗಳೆಂದು ವರ್ಣಿಸಿ ಬೇಸ್ತು ಬೀಳಿಸುವ ಪರಿ ಹಾಸ್ಯವಾಗಿ ಮೂಡಿಬಂದಿದೆ. 


ಕ್ಯಾಮೆರಾ ಜೋಗಿ ! : ಮಕ್ಕಳ ಕಳ್ಳರ ವರ್ಣನೆ ಕಂಡ ಲೇಖಕಿ ಅದು ತಮ್ಮ ಪತಿಗೆ ಹೋಲಿಕೆಯಾದಾಗ ಅವರನ್ನೇ ಕೇಳುತ್ತಾರೆ. ಅದೇ ಸಮಯಕ್ಕೆ ಮನೆಗೆ ಬಂದ ಪೋಲೀಸರು ಬಂದಾಗ ತಿಳಿದದ್ದು ಮಕ್ಕಳ ಫೋಟೋ ತೆಗೆಯಲು ಹೋಗಿ ಅಲ್ಲಿನ ಮುಖಂಡನೊಬ್ಬನ ಕೆಂಗಣ್ಣಿಗೆ ಗುರಿಯಾಗಿ ನಂತರ ಮನೆ ಬಿಟ್ಟು ಹೋದ ಮಕ್ಕಳ ಪತ್ತೆಯೂ ಆಯಿತು.


ಪರೋಪಕಾರಿ: ಎಲ್ಲರಿಗೂ ಪರೋಪಕಾರ ಮಾಡುವ ರಾಯರ ಗುಣದ ಬಗ್ಗೆ ಅವರ ಪತ್ನಿ ಹಾಸ್ಯವಾಗಿ ಸಂದರ್ಶಕರಿಗೆ ಹೇಳಿದ್ದು.. ಜೊತೆಗೆ ಅವರ ಮನೆಯನ್ನು ಹಾಗೂ ಅವರನ್ನೂ ಕುರಿತಾಗಿ ತಿಳಿಯುವ ಸಲುವಾಗಿ ರಾಯರನ್ನೇ ಸಾಕಷ್ಟು ಕೇಳಿ ಪೇಚಿಗೆ ಸಿಲುಕಿದ್ದು. 


ರಾಯರ ಹೊಸ ತಾರೀಫು : ಹೊಸ ಪೀಳಿಗೆಗೆ ಸಾಕಷ್ಟು ಕೊಡುಗೆ ನೋಡುವ ಸಲುವಾಗಿ ಹಣ್ಣು-ತರಕಾರಿ ಮಾರುವವರನ್ನು ಕ್ಲಿಕ್ಕಿಸಿದ ರಾಯರು ಪೋಲೀಸ್ ಠಾಣೆ ಅಲೆದ ಪ್ರಸಂಗ ಇಲ್ಲಿದೆ. 


ಅಜ್ಞಾತರು : ಅಜ್ಞಾತರಾಗಿ ರಂಗಮಂದಿರದಲ್ಲಿ ಫೋಟೋ ತೆಗೆದಾಗ ಅವರನ್ನು ಕಂಡುಹಿಡಿಯಲು ವಿಫಲರಾಗಿ ಅವರನ್ನೇ ಅಪರಾಧಿಯನ್ನಾಗಿಸಿದ ಕ್ಷಣಗಳು. ಪತ್ನಿಯೇ ಪತಿಯನ್ನು ಗುರುತಿಸುವ ಸಂಧರ್ಭ ಎದುರಾದ ಕ್ಷಣಗಳ ಚಿತ್ರಣ ಇಲ್ಲಿದೆ. 


ರಾಯರ ವಾಕ್ ವೈಖರಿ: ರಾಯರ ಮಾತಿನ ಚಾತುರ್ಯದಲ್ಲೇ ನಿಸರ್ಗವನ್ನು ಪತ್ನಿಗೆ ವಿವರಿಸುವ ಪರಿ ಮುಗುಳ್ನಗೆ ಮೂಡಿಸುತ್ತದೆ.


ಎಲ್ಲೆಲ್ಲೂ ಲಭ್ಯ: ಒಮ್ಮೆ ಲೇಖಕಿ ಹುಷಾರು ತಪ್ಪಿ ಮಲಗಿದಾಗ ಬಿಸ್ಕೆಟ್ ತರಲು ಹೊರಟವರು ಪತ್ನಿ ಹೇಳಿದ ಎಲ್ಲೆಲ್ಲೂ ಲಭ್ಯವಿರುವ 'ಟೈಗರ್' ಬಿಸ್ಕೆಟ್ ಹೆಸರನ್ನು ಮರೆತು ಅದನ್ನು ನೆನಪಿಸಿಕೊಂಡು ತರಲು ಊರೆಲ್ಲಾ ಅಲೆದ ಪ್ರಸಂಗವಂತೂ ನಗೆಯುಕ್ಕಿಸುತ್ತದೆ.


ಚಟ್ನಿಪುಡಿ ಪುರಾಣ : ಇನ್ನೇನು ಹಾಳಾಗಲಿದ್ದ ತೆಂಗಿನಕಾಯಿ ಉಪಯೋಗಿಸಿ ಮಾಡಿದ ಚಟ್ನಿಪುಡಿ ಪ್ರಸಿದ್ದವಾಗಿ.. ಅದರ ರೆಸಿಪಿ ಪ್ರಕಟವಾದ ನಂತರವಂತೂ ಅವರಿಗೆ ಎದುರಾದ ಪ್ರಸಂಗಗಳು, ಅದರಿಂದ ತಪ್ಪಿಸಿಕೊಂಡ ಬಗೆ ನಗೆಯುಕ್ಕಿಸುತ್ತದೆ.


ಜವಳಿ ವ್ಯಾಪಾರಿಯ ಸೊಸೆಯಾಗಿ..: ಮದುವೆಯ ಮುಂಚೆ ತಮ್ಮ ಹಾಗೂ ಮನೆಯವರೆಲ್ಲರ ಬಟ್ಟೆಗಳ ಡಿಸೈನ್ ಮಾಡುತ್ತಿದ್ದವರು.. ಮದುವೆಯ ನಂತರ ಗಂಡನ ಆಯ್ಕೆಗಳನ್ನು ಒಪ್ಪಿದರಾದರೂ.. ತಮಗೆ ಸಿಕ್ಕ ಒಂದು ಅವಕಾಶದಲ್ಲಿ ಸೀರೆಗಳನ್ನು ತಂದಾಗ ಮತ್ತೆ ಅಂಗಡಿಗೆ ಕರೆದುಕೊಂಡು ಹೋಗಿ ತಾವು ಜವಳಿ ವ್ಯಾಪಾರಿಯ ಮಗನೆಂದು ನಿರೂಪಿಸುವ ಬಗೆ ನಮ್ಮನ್ನೂ ಕಣ್ತೆರೆಸುವಂತಿದೆ.


ನಾಮಾವಾಂತರ: ದಿವ್ಯಕಾಂತಿ, ಪೀಯೂಷ್ ಕಾಂತಿ ಎಂಬ ಬಂಗಾಲಿಯ ಕಾಂತರು, ಜ್ಯೋತ್ಸ್ನಾ ಬೇರೆಯವರ ಬಾಯಲ್ಲಿ ಬೇರೆಯ ರೀತಿಯಲ್ಲಿ ಉಚ್ಚಾರಣೆಯಾದದ್ದು.. ಗಂಡು-ಹೆಣ್ಣಿನ ಹೆಸರುಗಳಲ್ಲಿನ ತರಹೇವಾರಿ ಅನುಮಾನಗಳು.. ಪ್ರದೇಶವಾರು ವಿಭಿನ್ನತೆ ತಿಳಿಹಾಸ್ಯದಲ್ಲಿಯೇ ವ್ಯಕ್ತವಾಗಿದೆ.


ರೊಮ್ಯಾನ್ಟಿಕ್ ರವಕೆ : ರೂಪ ಬದಲಾದರೂ ರವಿಕೆಗೆ ಸಾವಿಲ್ಲವೆನ್ನುತ್ತಾ ಬದಲಾದ ರವಿಕೆಯ ರೂಪಗಳನ್ನು ವರ್ಣಿಸಿದ್ದಾರೆ. 


ನೋ ಟೀ ಎಟ್ ಆಲ್ಟಿನೋ..! : ಚಹಾ ಪ್ರೇಮಿಯಾಗಿದ್ದವರು ಗೋವಾದ ಆಲ್ಟಿನೋ ಎಸ್ಟೇಟ್ ನಲ್ಲಿ ತಂಗಿದ್ದಾಗ ಅಲ್ಲಿ ಚಹಾಕ್ಕಾಗಿ ಪರದಾಡಿದ ಪ್ರಸಂಗದ ಜೊತೆಗೆ ಗೋವಾದವರ ಸೂರ್ಯೋದಯದ ದರ್ಶನವನ್ನೂ ಮಾಡಿಸುತ್ತಾರೆ. 


ಡ್ರೆಸ್ ಕೋಡ್! : ಅಮೆರಿಕಾಗೆ ಹೋದಾಗ ಅಲ್ಲಿ ಸೊಸೆಯ ಒತ್ತಾಯಕ್ಕೆ ಸೀರೆಯಿಂದ ವಿವಿಧ ಧಿರಿಸಿಗೆ ಬದಲಾದದ್ದು... ಅಲ್ಲಿನ ನಾಯಿ ಆಗ ಗುರುತಿಸದ್ದು ಹೀಗೆ ತಮ್ಮ ಉಡುಗೆಯ ಬಗ್ಗೆ ತಾವೇ ಹಾಸ್ಯ ಮಾಡಿಕೊಳ್ಳುತ್ತಾರೆ. 


ಟ್ರ್ಯಾನ್ಸ್ಫರ್ ಅವಾಂತರ : ಸತತ ಟ್ರಾನ್ಸ್ಫರ್ ಗಳಿಂದ ರಿಟೈರ್ ಮೆಂಟ್ ನಲ್ಲಿಯೂ ಕಣ್ಣೀರು ಬರದಿದ್ದ ಬಗೆಯನ್ನು ಹೇಳುತ್ತಲೇ ಟ್ರಾನ್ಸ್ಫರ್ ನಲ್ಲಿ ವಿವಿಧೆಡೆ ಹೋದಾಗ ಅಲ್ಲಿನ ರೀತಿ-ರಿವಾಜುಗಳು ಪೇಚಿಗೆ ಸಿಲುಕಿಸಿದ ಬಗೆಯನ್ನೂ ಹೇಳುತ್ತಾರೆ.


ಅಧಿಕಾರಿಯ ಅಡಾವುಡಿ : ಆಕಾಶವಾಣಿಯಲ್ಲಿ ಅಧಿಕಾರಿಗಳ ಪಡನಾಮೆಯಿಂದಾಗಿ ಉಂಟಾದ ಗೊಂದಲ, ಅಧಿಕಾರಿಗಳಿಂದ ಗೊಂದಲಕ್ಕೆ ಸಿಲುಕಿದ ಬಗೆ. ತಪ್ಪೆಂದು ತಿಳಿಯದೇ ಮಾಡಿದ ತಪ್ಪುಗಳು ಅರಿವಾದ ನಂತರದ ಉಂಟಾದ ವಿಚಾರಗಳು ವ್ಯಕ್ತವಾಗಿವೆ. 


ಮಿಸ್ ಮಾಡದ ಬಸ್ : ಬಸ್ ಮಿಸ್ ಮಾಡಿದರೆ ಎನ್ನುವ ರೂಪಕವನ್ನು ಬಳಸಿ ಬದುಕಿನಲ್ಲಿ ಮಿಸ್ ಆದ ಅವಕಾಶಗಳ ಪರಿಣಾಮಗಳ ಕುರಿತು ಹೇಳುತ್ತಾ ಬದುಕಿನ ಕೊನೆಯ ದರ್ಶನವನ್ನೂ ಮಾಡಿಸುತ್ತಾರೆ.


ಹಾಗೆ, ಓದುತ್ತಾ ಓದುತ್ತಾ ಸಮಯ ಹೋಗಿದ್ದೇ ತಿಳಿಯದೇ ಪುಸ್ತಕದ ಕೊನೆಯೂ ಬಂದಿತ್ತು. ಜೊತೆಗೆ ಅಲ್ಲಲ್ಲಿ ಬರಹಕ್ಕೆ ಸಂಬಂಧಪಟ್ಟ ರೇಖಾಚಿತ್ರಗಳೂ ಅರ್ಥಪೂರ್ಣವಾಗಿ ಮನಸೆಳೆದವು. 


ಬದುಕಿನಲ್ಲಿ ನವಿರಾದ ಹಾಸ್ಯದ ಅವಶ್ಯಕತೆ ಇದೆ. ಹಾಗೆ ಸವಿಯುತ್ತಾ ಬದುಕಿನ ಕ್ಷಣಗಳನ್ನು ಸಾರ್ಥಕಗೊಳಿಸಿಕೊಳ್ಳುತ್ತೇವೆ. ನಮ್ಮ ಬದುಕಿನ ಅಂತಹಾ ಕ್ಷಣಗಳನ್ನೂ ಮೆಲುಕು ಹಾಕುತ್ತೇವೆ. ಚೆಂದದ ಓದಿನ ರಿಫ್ರೆಶ್ ಮೆಂಟ್ ಗೆ ಇಂತಹಾ ಪುಸ್ತಕಗಳ ಓದು ಆಗಾಗ ಅವಶ್ಯಕ.


ಹಾಸ್ಯ ಸಾಹಿತ್ಯವನ್ನು ಬಹಳ ಕಡಿಮೆ ಓದುವ ನಾನು ಹಾಸ್ಯ ಸಾಹಿತ್ಯ ಅಭಿಯಾನಕ್ಕಾಗಿ ಈ ಪುಸ್ತಕ ಓದಿದೆ. ಮನಸ್ಸನ್ನು ಹಗುರಾಗಿಸಿದ ಪುಸ್ತಕವಾಗಿ ಬಹಳ ಇಷ್ಟವಾಯಿತು.


~ವಿಭಾ ವಿಶ್ವನಾಥ್ 

ಹೃದಯ ರಥದಲ್ಲಿ (ಪುಸ್ತಕ ಯಾನ - 138)


ಪುಸ್ತಕದ ಶೀರ್ಷಿಕೆ : ಹೃದಯ ರಥದಲ್ಲಿ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 106


ದಾಂಪತ್ಯ "ಎತ್ತು ಏರಿಗೆ, ಕೋಣ ನೀರಿಗೆ ಎಳೆದರೆ" ಎಂಬಂತಿದ್ದರೆ ಬಹಳವೇ ಕಷ್ಟ. ದಾಂಪತ್ಯದಲ್ಲಿ ಪತಿಯೇ ಪರದೈವ ಎನ್ನುವ ಕಾಲ ಬದಲಾಗಿ ಜೊತೆಗಿರುವ ಸಂಗಾತಿ ಎಂದು ಪರಸ್ಪರರ ಮೇಲೆ ಅವಲಂಬನೆಯಾಗದೇ ಬದುಕುವ ಕಾಲಘಟ್ಟದಲ್ಲಿದ್ದೇವೆ. ಆದರೆ, ಹೃದಯ ರಥದಲ್ಲಿ ಸ್ಥಾಪನೆಯಾಗುವವರ ಮೇಲೆ ಬದುಕಿನ ಸಾರ್ಥಕತೆ ಹಾಗೂ ದಾಂಪತ್ಯದ ಖುಷಿ ಅವಲಂಬಿತ. ಹೃದಯ ರಥದಲ್ಲಿ ಮಧುರ ಭಾವಗಳು ಹುಟ್ಟಿದರೆ ಆ ಆನಂದಲಹರಿ ಬದುಕಿಡೀ ವ್ಯಾಪಿಸಿ ಬದುಕು ಹಸನಾಗುತ್ತದೆ. 


ಮೋಹನ ಹಾಗೂ ಚಂದ್ರಿಕಾಳ ವಿವಾಹ ಹಿರಿಯರ ಸಂತಸದ ನಿರ್ಧಾರವಂತೂ ಆಗಿರಲಿಲ್ಲ. ಹಾಗೆಂದು ಅದು ಪ್ರೇಮ ವಿವಾಹವೂ ಆಗಿರಲಿಲ್ಲ.


ಗೇರು ಬೀಜದ ಫ್ಯಾಆಕ್ಟರಿಯೊಂದರಲ್ಲಿ ದುಡಿಯುತ್ತಿದ್ದ ಶ್ಯಾಮ ಉಡುಪ ಹಾಗೂ ಸೀತಮ್ಮನವರ ಬಡತನದ ದಾಂಪತ್ಯಕ್ಕೆ ನಾಲ್ಕು ಜನ ಹೆಣ್ಣು ಮಕ್ಕಳು. ಚಂದ್ರಿಕಾ ಮೂರನೇ ಮಗಳು. ಅವಳಿಗೆ ಮದುವೆಯಾದಾಗ ಇಪ್ಪತ್ನಾಲ್ಕು ವರ್ಷ. ಮೊದಲನೆಯವಳು ಚಾರುಮತಿ, ನಂತರ ವಸುಮತಿ, ನಾಲ್ಕನೆಯವಳು ರಾಧಿಕಾ. ರಾಧಿಕಾ ಇದ್ದುದರಲ್ಲಿ ಬುದ್ಧಿವಂತೆ. ಬ್ಯಾಂಕ್ ನಲ್ಲಿ ಕೆಲಸಕ್ಕೆ ಸೇರಿದ್ದ ಅವಳು ಸಹೋದ್ಯೋಗಿ ಮಾಧವನನ್ನೇ ಪ್ರೀತಿಸಿದ್ದರೂ.. ವಿವಾಹವಾಗಲು ಮಾಧವನ ತಂದೆ-ತಾಯಿ ಹಣ ಹಾಗೂ ಚಿನ್ನದ ಬೇಡಿಕೆ ಇಟ್ಟಿದ್ದರಿಂದ ಅದನ್ನು ಕೂಡಿಸುವುದರಲ್ಲಿ ಮಗ್ನಳಾಗಿದ್ದಳು. ಚಾರುಮತಿಯ ವಿವಾಹವೂ ಹೇಗೋ ಕೃಷ್ಣಪ್ಪನೊಡನೆ ನೆರವೇರಿತು. ಆ ವಿವಾಹದಲ್ಲಿ ಹೋಟೆಲ್ ಮಾಲೀಕರ ಪತ್ನಿ ರಮಾಬಾಯಿಯವರ ಕಣ್ಣಿಗೆ ಬಿದ್ದವಳೇ ಚಂದ್ರಿಕಾ.


ರಮಾಬಾಯಿಯವರು ಒಂದು ವಿವಾಹದ ಪ್ರಸ್ತಾಪ ತಂದರು. ಮೊದಲು ಅವರ ಹೋಟೆಲ್ ನಲ್ಲಿಯೇ ಕೆಲಸ ಮಾಡುತ್ತಿದ್ದ ತಮ್ಮ ತಂಗಿಯ ಮಗನಾದ ಮೋಹನ ಈಗ ಅರಬ್ಬೀ ಕಲಿತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಸಂಬಳ ಚೆನ್ನಾಗಿತ್ತಾದರೂ ಹತ್ತು ವರ್ಷದ ನಂತರವಷ್ಟೇ ಅವನು ಅಲ್ಲಿಂದ ಬರಬಹುದಾಗಿತ್ತು. ಎರಡು ವರ್ಷಕ್ಕೊಮ್ಮೆ ಬರುತ್ತಿದ್ದ ಆತ ಮೊದಲ ಸಲ ಬಂದಾಗ ಇಬ್ಬರು ತಂಗಿಯರ ವಿವಾಹ ಮಾಡಿದ್ದ. ಎರಡನೇ ಬಾರಿ ಬಂದಿದ್ದ. ಉಳಿದ ಇನ್ನೊಬ್ಬಳು ತಂಗಿಯನ್ನೂ ವಿವಾಹ ಮಾಡಲಿದ್ದ. ಅದೇ ಹಸೆಯ ಮೇಲೆ ಬಡ ಹುಡುಗಿಯೊಬ್ಬಳನ್ನು ವಿವಾಹವಾಗಲು ಸಿದ್ಧನಿದ್ದ. ಆದರೆ, ಆಕೆ ರೂಪವತಿಯಾಗಿರಬೇಕು ಎಂಬುದಷ್ಟೇ ಆತನ ಕಂಡೀಷನ್. ಅದಕ್ಕೆ ಒಪ್ಪುವಂತಿದ್ದಳು ಚಂದ್ರಿಕಾ.


ಮೋಹನನ ತಂದೆ ಕೃಷ್ಣಮೂರ್ತಿರಾಯರು ಹಾಗೂ ರತ್ನಮ್ಮನವರಿಗೆ ತಮ್ಮನ್ನು ಕೇಳದೆ ಮಗ ರಮಾಬಾಯಿಯವರ ರಾಯಭಾರದಿಂದ ಬಡ ಹುಡುಗಿಯನ್ನು ಒಪ್ಪಿದ್ದು ಇಷ್ಟವಾಗಲಿಲ್ಲ. ಅಲ್ಲದೆ, ಆತ ದುಡಿಯುವ ಹಣದಿಂದ ತಾವು ಉದ್ದಾರವಾಗಬಹುದು ಹಾಗೂ ವರದಕ್ಷಿಣೆ ತರುವ ಹೆಣ್ಣನ್ನು ತರುವ ದುರಾಲೋಚನೆ ಹಾಗೂ ಹೆಣ್ಣುಮಕ್ಕಳ ಉದ್ದಾರದ ಆಲೋಚನೆಗಳು ಸಹಾ ತಲೆಯಲ್ಲಿದ್ದವು. ಆತನ ಓದು ಬಿಡಿಸಿ ಹೋಟೆಲ್ ಕೆಲಸಕ್ಕೆ ಹಚ್ಚಿದ್ದರು. ಹೇಗೋ ಮುಂದುವರಿದು ರಮಾಬಾಯಿ ಹಾಗೂ ಮುಂಬೈನಲ್ಲಿದ್ದ ಚಿಕ್ಕಮ್ಮ ಹೇಮಾವತಿಯ ಪ್ರೋತ್ಸಾಹದಿಂದ ದುಬೈ ಸೇರಿದ್ದ. 


ಆರು ವರ್ಷ ಗಂಡನಿಂದ ದೂರವಿರಬೇಕಾದ ಸಂಧರ್ಭವನ್ನು ಒಪ್ಪಿಕೊಂಡಿದ್ದಳು ಚಂದ್ರಿಕಾ. ಕಾರಣ, ಬಡತನ ಹಾಗೂ ಅಕ್ಕನ ವಿವಾಹ.. ತಂಗಿಯ ವಿವಾಹದ ಪರದಾಟದ ಪರಿಸ್ಥಿತಿ. ಗಂಡಿನ ಮನೆಯವರ ವಿರೋಧದಲ್ಲಿ ಆಕೆ ಬಾಳಲಾರಳು. ಮತ್ತೆ ತವರಿಗೆ ಬಂದು ಸೇರಿದರೆ ಆಕೆಯನ್ನು ತಾವೇ ಸಾಕಬೇಕಾದೀತು ಎಂಬ ಯೋಚನೆಯಿಂದ ಸೀತಮ್ಮನವರು ನೆಪ ಹೇಳಿ ಆಕೆಯ ವಿವಾಹದಿಂದಲೂ ದೂರ ಉಳಿದರು. ಅಕ್ಕ-ಭಾವನೇ ಹಸೆಯ ಮೇಲೆ ಕುಳಿತು ಧಾರೆ ಎರೆದರು.


ಎಲ್ಲರೂ ಇಲ್ಲಿ ತಮ್ಮ ತಮ್ಮ ಭವಿಷ್ಯವನ್ನು ಭದ್ರ ಮಾಡಿಕೊಳ್ಳುವ ಹವಣಿಕೆಯಲ್ಲಿದ್ದರು. 

ಮೋಹನ ಹಾಗೂ ಚಂದ್ರಿಕಾ ವಿವಾಹಕ್ಕೂ ಮುನ್ನ ಮೋಹನ ಆಕೆಗೆ ತಿಂಗಳಿಗೆ ಮೂರು ಸಾವಿರ ಕಳಿಸುತ್ತೇನೆ ಎಂಬ ಭರವಸೆ ನೀಡಿ ಒಂದಿಷ್ಟು ಚಿನ್ನದ ಒಡವೆ ತೆಗೆದುಕೊಟ್ಟಿದ್ದ. ಚಾಲಾಕಿ ಚಂದ್ರಿಕಾ ಅಮ್ಮ ಹಾಗೂ ಅತ್ತೆಯ ಚಾಲಾಕುತನದಿಂದ ಅವೆಲ್ಲವನ್ನೂ ಕಳೆದುಕೊಳ್ಳಬೇಕಾದ ಸಂಧರ್ಭ ಬರಬಹುದೆಂದು ಗೆಳತಿ ಸಂಧ್ಯಾಳ ಸಹಾಯದಿಂದ ಅಂತಹದ್ದೇ ನಕಲಿ ಒಡವೆ ಮಾಡಿಸಿಕೊಂಡು, ಅಸಲಿ ಒಡವೆಯನ್ನು ಮಾರಿ ಸಂಧ್ಯಾಳ ಮನೆ ಪಾರ್ಟಿಷನ್ ಮಾಡಿಸಿಕೊಂಡು ಅಲ್ಲಿ ವಾಸವಾಗುವ ಆಲೋಚನೆ ಮಾಡಿದಳು.


ಅತ್ತೆ ಒಳ್ಳೆಯತನದ ಸೋಗು ಹಾಕಿ ಬಂದಾಗ ತಾನೂ ಚಾಲಾಕಿನಿಂದಲೇ ನಿಭಾಯಿಸುತ್ತಾ.. ಅಮ್ಮ ಹಾಗೂ ಅವಿವಾಹಿತೆ ಅಕ್ಕ ಮೂರು ಸಾವಿರದ ಹಣದಾಸೆಗೆ ಅಲ್ಲಿಯೇ ಇರಲು ಕೇಳಿಕೊಂಡರೂ ಇರದೇ.. ವಿವಾಹದ ನಂತರ ಕೊಂಚ ದಿನ ಮೋಹನನೊಡನೆ ಚಿಕ್ಕಮ್ಮ ಹೇಮಾವತಿಯ ಮನೆ ಸೇರಿದಳು. ಹೇಮಾವತಿ ಆಕೆಯನ್ನು ನಯವಾಗಿ ಮಾತನಾಡಿಸುತ್ತಲೇ ಮನೆ ಕೆಲಸದವಳನ್ನಾಗಿ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾಗಲೇ ಮೋಹನ ದುಬೈಗೆ ಹಾರಿದ್ದ. ಚಂದ್ರಿಕಾ ಅತ್ತೆಯೊಡನೆ ಅತ್ತೆ ಮನೆಗೆ ಸೇರಲು ಹೊರಟಳು. ರೈಲಿನಲ್ಲಿ ಬರುವಾಗ ಉಪಾಯ ಮಾಡಿ ಒಡವೆಗಳನ್ನು ಅತ್ತೆಯೇ ಲಪಟಾಯಿಸಿದರೆನ್ನುವ ನೆಪ ಒಡ್ಡಿ ಜಗಳ ಮಾಡಿಕೊಂಡು ಅಮ್ಮನ ಮನೆಗೂ ಬಾರದೇ ಸಂಧ್ಯಾಳ ಮನೆಯ ಬಾಡಿಗೆಗೆ ಹೋದಳು. ಅಮ್ಮನಿಗೆ ತಾನು ಮುಂಬೈನಲ್ಲಿರುವಂತೆ ಬಿಂಬಿಸಿಕೊಂಡಳು.


ಸಂಧ್ಯಾಳ ಜೊತೆಗೂಡಿ ಹೊಲಿಗೆ ಮೆಷಿನ್ ನಲ್ಲಿ ಕೆಲಸ ಮಾಡುತ್ತಾ.. ಒಂಟಿತನವನ್ನು ದೂರವಿಡಲು ಹಾಗೂ ಆರ್ಥಿಕವಾಗಿ ಸಬಲಳಾಗಳು ದುಡಿಮೆಯ ಮಾರ್ಗವನ್ನು ಕಂಡುಕೊಂಡಿದ್ದರು. ಅದು ಸಫಲವಾಗಿ ಒಳ್ಳೆಯ ಗಳಿಗೆಯ ಹಾದಿಯೂ ಆಯಿತು. ಈ ನಡುವೆ ಚಿಕ್ಕಮ್ಮನ ಬಳಿ ಇರುವಂತೆ ಹಾಗೂ ಚಿನ್ನವನ್ನು ಠೇವಣಿ ಇಡುವಂತೆ ಗಂಡನಿಂದ ಬರುತ್ತಿದ್ದ ಬೆದರಿಕೆ ಪತ್ರಗಳನ್ನು ನಿರ್ಲಕ್ಷಿಸಿದಳು. ಮೋಹನ ಹಾಗೂ ಚಂದ್ರಿಕಾರ ಪತ್ರ ಸಂಬಂಧ ನಿಂತಿತ್ತು. ತಮ್ಮ ಬಳಿಗೆ ಬಾರದ ಮಗಳನ್ನು ಅರಸಿಬಂದ ತಾಯಿ ಸಂಧ್ಯಾಳ ಪತಿ ಹಾಗೂ ಚಂದ್ರಿಕಾ ಕುರಿತು ಒಡಕು ನುಡಿಗಳ ಭವಿಷ್ಯವನ್ನು ಆಡಿದಾಗ.. ಗೆಳತಿ ಸಂಧ್ಯಾ ಅಕ್ಕನಂತೆ ಜೊತೆ ನಿಂತು ಧೈರ್ಯ ತುಂಬಿದಳು.


ಚಂದ್ರಿಕಾ ಹಾಗೂ ಮೋಹನರ ವಿವಾಹದ ಫಲವಾಗಿ ರಾಮು ಬಂದಿದ್ದ. ಗಂಡ ಹಿಂದಿರುಗಿ ಬಂದಾಗ ಅವನನ್ನು ಭೇಟಿಯಾಗಿ ಸಂಬಂಧ ಸರಿಪಡಿಸಿಕೊಳ್ಳುವ ಆಸೆಯಲ್ಲಿದ್ದವಳಿಗೆ ಆಘಾತ ಕಾದಿತ್ತು. ಹೇಮಾವತಿಯ ಕುತಂತ್ರದಿಂದ ಮೋಹನ ಲಲಿತಾಳನ್ನು ಮದುವೆಯಾಗಿದ್ದ.


ಹೇಮಾವತಿಯ ಮಗ ಗೋಪಾಲನೊಡಗೂಡಿ ವ್ಯಾಪಾರ ಶುರು ಮಾಡಿದಾಗ ಅವರ ಮೋಸ ಅರಿವಾಯಿತು. ಅಳಿದುಳಿದ ಹಣದಿಂದ ಲಲಿತಾಳ ಚಿಕ್ಕಮ್ಮನ ಸಲಹೆಯಂತೆ ಹೋಟೆಲ್ ಉದ್ಯಮಕ್ಕಿಳಿಯಲು ಹೊರಟವನಿಗೆ ಎದುರಾದದ್ದು ನಷ್ಟ, ಕಷ್ಟಗಳ ಪರಂಪರೆ. ಲಲಿತಾ ಕೂಡಾ ಆತನಿಗೆ ಮೋಸ ಮಾಡಿ ಗೋಪಾಲನ ಜೊತೆಯಾದಳು. ಆದರೆ, ಆಕೆಯ ಜೀವನವೂ ನೆಮ್ಮದಿಯಾಗಿರಲಿಲ್ಲ.


ಇತ್ತ, ಚಂದ್ರಿಕಾ ಸಂಧ್ಯಾಳ ಜೊತೆಯ ಉದ್ಯಮದಲ್ಲಿ ಗೆದ್ದಿದ್ದಳಾದರೂ ಸಂಧ್ಯಾ ಅವಳ ಹಣವನ್ನು ಹಿಂದುರುಗಿಸಿ ತನ್ನದೇ ಸ್ವಂತ ಉದ್ಯೋಗ ಶುರು ಮಾಡುವ ಆಲೋಚನೆ ಮಾಡಿದ್ದಳು.


ಈಗ ಚಂದ್ರಿಕಾ ಮುಂದಿನ ಭವಿಷ್ಯ ಬದಲಿಸಿದವರು ಸಹಾ ರಮಾಬಾಯಿಯೇ.. ಅವಳ ಬಳಿಯಿದ್ದ ಹಣಕ್ಕೆ ಪಾಲುದಾರಿಕೆಯಲ್ಲಿ ತಮ್ಮ ನಂಬುಗೆಯ ಸಂಬಂಧಿ ರಮಾಕಾಂತನನ್ನು ಜೊತೆ ಮಾಡಿಸಿ.. ತಾವು ಮಾರಲಿದ್ದ ಹೋಟೆಲ್ ಅನ್ನು ಅವಳಿಗೇ ಮಾರಿದರು.


ಈ ಮಧ್ಯೆ ಶ್ರೀಮಂತೆಯಾದ ಚಂದ್ರಿಕಾಳಿಗೆ ಬಂಧುಗಳ ಕಾಟ ಶುರುವಾಗಿತ್ತು. ತನ್ನ ತಾಯಿಯ ಅಕ್ಕ ಜಲಜಮ್ಮನವರಿಂದ ಅವಳಿಗೊಂದು ವಿವಾಹದ ಪ್ರಸ್ತಾಪ ಬಂದಿತು. ಆತನೇ ಮಂಜುನಾಥ್.


 ರಮಾಕಾಂತ ಮೋಹನನ ಗೆಳೆಯ. ಮೋಹನನನ್ನು ಮತ್ತೆ ತನ್ನ ಹೋಟೆಲ್ ಗೆ ಸೇರಿಸಿಕೊಂಡ. ಸದ್ಯಕ್ಕೆ ಚಂದ್ರಿಕಾಳಿಂದ ವಿಚಾರ ಮುಚ್ಚಿಟ್ಟಿದ್ದನಾದರೂ.. ಅವರಿಬ್ಬರ ಸಂಬಂಧವನ್ನು ಒಟ್ಟುಗೂಡಿಸುವ ವಿಚಾರವೂ ಅವನಲ್ಲಿತ್ತು.


ಚಂದ್ರಿಕಾಳ ಹೃದಯ ರಥದಲ್ಲಿ ಸ್ಥಾಪನೆಯಾದವರು ಯಾರು..?? ರಾಮುವಿನ ಮುಂದಿನ ಭವಿಷ್ಯವೇನು..?? ಮೋಹನ ಹಾಗೂ ಲಲಿತಾ ಸಂಬಂಧ ಹೇಗಿತ್ತು..?? ಹೇಮಾವತಿಯ ಹಾಗೂ ಆಕೆಯ ಮಗ ಗೋಪಾಲನ ಮೋಸ ಬಯಲಾದದ್ದು ಹೇಗೆ..?? ಈರ್ವರ ತಂದೆ-ತಾಯಿಯರ ನಡೆಯೇನು..?? ಅವಿವಾಹಿತ ಅಕ್ಕ ವಸುಮತಿ ಏನಾದಳು..?? ಸಂಧ್ಯಾಳ ನಡೆಗೆ ಕಾರಣವೇನು..?? ಈ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಹೃದಯ ರಥದಲ್ಲಿ'.


ಈ ಕಾದಂಬರಿಯಲ್ಲಿ ಬಹಳಷ್ಟು ಪಾತ್ರಗಳಿವೆ ಎನ್ನಿಸಿದರೂ.. ಕಥೆಯ ಬಿಗಿ ನಿರೂಪಣೆ ಹಾಗೂ ಎಲ್ಲಿಯೂ ಗುಟ್ಟು ಬಿಟ್ಟುಕೊಡದ ಶೈಲಿಯಿಂದ ಓದಿಸಿಕೊಂಡು ಹೋಗುತ್ತದೆ. ಅಂತ್ಯವನ್ನು ಮಾತ್ರವಲ್ಲ.. ಪಾತ್ರಗಳ ಮುಂದಿನ ನಡೆಯನ್ನೂ ಊಹಿಸುವುದೂ ಇಲ್ಲಿ ಸುಲಭವಿಲ್ಲ. 


ಇಲ್ಲಿ ಚಂದ್ರಿಕಾ ತಂದೆ ಶ್ಯಾಮ ಉಡುಪರ ಪಾತ್ರ ಪರಿಸ್ಥಿತಿಯ ಕೈಗೊಂಬೆಯಂತೆನ್ನಿಸಿತು. ಚಂದ್ರಿಕಾ ಹಾಗೂ ಮೋಹನರ ತಾಯಂದಿರ ಪಾತ್ರಗಳು ಅಮ್ಮ ಎನ್ನುವ ನಿಸ್ವಾರ್ಥದ ಪರಿಧಿಯೊಳಗೆ ಕಂಡದ್ದಕ್ಕಿಂತಲೂ.. ಒಂದು ಕಣ್ಣಿಗೆ ಬೆಣ್ಣೆ ಹಾಗೂ ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯುವ ತಾಯಂದಿರ ಹಾಗೆ ಗೋಚರವಾದರು. 


ಸಂಧ್ಯಾ ಒಮ್ಮೆ ಒಳ್ಳೆಯ ಗೆಳತಿಯಂತೆ ಕಂಡರೂ ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಸ್ವಾರ್ಥದ ಹೆಣ್ಣಿನಂತೆಯೂ ಭಾಸವಾದಳು. 


ಮೊದಮೊದಲು ಈ ಕಾದಂಬರಿಯಲ್ಲಿ ಬಂದ ಮೋಹನ ಒಳ್ಳೆಯವನಂತೆಯೂ.. ಚಂದ್ರಿಕಾ ಚಾಲಾಕಿ ಹೆಣ್ಣಿನಂತೆಯೂ ಕಂಡರೆ ಹೋಗುತ್ತಾ.. ಹೋಗುತ್ತಾ.. ಪಾತ್ರಗಳ ಬದಲಾದ ನಡವಳಿಕೆಗಳು ಚಂದ್ರಿಕಾಳ ಮುಂದಾಲೋಚನೆ, ಮುನ್ನೆಚ್ಚರಿಕೆಯನ್ನು ಮೆಚ್ಚುವಂತೆ ಮಾಡಿದವು. ಹೆಣ್ಣೊಬ್ಬಳು ಇಷ್ಟು ಎಚ್ಚರಿಕೆಯಿಂದ ಆರ್ಥಿಕ ಸ್ವಾವಲಂಬಿಯಾದರೆ ಸಮಾಜದಲ್ಲಿ ಆಕೆಗೆ ದೊರೆಯುವ ಸ್ಥಾನ ಹಾಗೂ ಗೌರವದ ಚಿತ್ರಣವಿದೆ ಇಲ್ಲಿ. ದಾಂಪತ್ಯ ಎಷ್ಟು ಮುಖ್ಯವೋ.. ತನ್ನ ಕಾಲ ಮೇಲೆ ತಾನು ನಿಂತುಕೊಂಡು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವುದೂ ಅಷ್ಟೇ ಮುಖ್ಯವೆಂದು ತೋರುತ್ತದೆ. ಚಂದ್ರಿಕಾಳ ಬುದ್ಧಿವಂತಿಕೆ ಹಾಗೂ ನಡೆಗಳನ್ನು ಮೆಚ್ಚದಿರುವುದು ಸಾಧ್ಯವೇ ಇಲ್ಲ. 


ಸಮಾಜದ ಗೋಮುಖ ವ್ಯಾಘ್ರಗಳಿಂದ ತಪ್ಪಿಸಿಕೊಂಡು ಬದುಕುವ ಚಾಲಾಕಿತನ ಹಾಗೂ ಹೆಣ್ಣೊಬ್ಬಳ ದಿಟ್ಟ ನಡತೆಯಿಂದ ಪ್ರೇರಿತರಾಗುವ ಬಗೆ ಇಲ್ಲಿದೆ. ಸಣ್ಣ-ಪುಟ್ಟದಕ್ಕೂ ಹೆದರಿ ಬದುಕಿನಲ್ಲಿ ಬೇರೆಯ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವವರಿಗೆ ಮಾದರಿಯಾಗುವ ಪ್ರೇರಣಾತ್ಮಕ ಕಾದಂಬರಿ ಇದು.


~ವಿಭಾ ವಿಶ್ವನಾಥ್

ಒಂದು ಮಗುವಿನ ಪ್ರಕರಣ (ಪುಸ್ತಕ ಯಾನ - 137)


ಪುಸ್ತಕದ ಶೀರ್ಷಿಕೆ : ಒಂದು ಮಗುವಿನ ಪ್ರಕರಣ

ಲೇಖಕರು : ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್

ಪ್ರಥಮ ಮುದ್ರಣ : 2007

ಪುಟಗಳು : 90

ಬೆಲೆ : 40 ರೂ.


ಕಾದಂಬರಿಗಾರ್ತಿ ಹಾಗೂ ಪತ್ರಕರ್ತೆ ಭಾಗ್ಯ ಕೃಷ್ಣಮೂರ್ತಿ ಅವರು 1964 ಮೇ 20 ಮೈಸೂರಿನಲ್ಲಿ ಜನಿಸಿದರು. ನಿರ್ಮಾಲ್ಯ, ಗ್ರೀಷ್ಠರಾಗ, ಶಿಶಿರದ ಹೂವು, ಕಡಲು, ದಹನ, ಮಾಂಡವಿ, ಅಭಿನೇತ್ರಿಯ ಅಂತರಂಗ, ಇರುವುದೆಲ್ಲವ ಬಿಟ್ಟು, ಮನಸುಗಳ ಮೃದಂಗ, ಒಂದು ಮಗುವಿನ ಪ್ರಕರಣ, ಶಾನುಭೋಗರ ಮಗಳು ಇತ್ಯಾದಿ 23 ಕಾದಂಬರಿಗಳನ್ನು ರಚಿಸಿದ್ದಾರೆ. ’ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ಗಳು ಲಭಿಸಿವೆ. 


ಇದು ನಾನು ಓದಿದ ಭಾಗ್ಯ ಕೃಷ್ಣಮೂರ್ತಿಯವರ ರಚನೆಯ ಮೊದಲ ಪುಸ್ತಕ. ಈ ಕಿರು ಕಾದಂಬರಿ 1989ರಲ್ಲಿ ವಾರಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದಾಗಲೇ ಚಲನಚಿತ್ರವಾಗಿತ್ತು. ಲೇಖಕಿ ಈ ಘಟನೆಯ ಕುರಿತು ಹೇಳುವಾಗ ಹೇಳುತ್ತಾರೆ. ಈ ಕಾದಂಬರಿಯನ್ನು ಚಲನಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಒಂದು ಮಾತೂ ಹೇಳದೇ 'ಅನಂತನ ಪ್ರೇಮ' ಎನ್ನುವ ಹೆಸರಿನಲ್ಲಿ ಚಲನಚಿತ್ರವಾಗಿಸಿದ್ದರು.


 ಓದುಗರು ಹೇಳಿಯೇ ಈ ಕುರಿತು ತಿಳಿಯಿತು ಎನ್ನುತ್ತಾರೆ ಲೇಖಕಿ. ಅದಕ್ಕೆ ಕೊಂಚ ಮುನ್ನ ತರಂಗದಲ್ಲಿ ಪ್ರಕಟವಾಗಿದ್ದ 'ಮಾಂಡವಿ' ಕೂಡಾ 'ಕೌಂತೇಯ' ಎಂದು ಹೆಸರು ಬದಲಾಯಿಸಿಕೊಂಡು ಕಿರುತೆರೆಗೆ ಬಂದಿತ್ತು. ನಟ ಅಶೋಕ್ ಲೇಖಕಿಗೆ ಅನ್ಯಾಯವಾಗಲು ಬಿಡದೆ ಕ್ಷಮೆ ಯಾಚಿಸಿ ಹೆಚ್ಚು ಎನ್ನಿಸಬಹುದಾದ ಹಣ ನೀಡಿದ್ದರು ಎನ್ನುತ್ತಾರೆ. ಅದರ ನಂತರ 'ಒಂದು ಮಗುವಿನ ಪ್ರಕರಣ' ಕೂಡಾ ಸಾಕಷ್ಟು ಗಲಾಟೆ ಎಬ್ಬಿಸಿತು. ಕರ್ನಾಟಕ ಫಿಲಂ ಛೇಂಬರ್ ನಲ್ಲಿ ಆಗ ಅಧಿಕಾರಿಯಾಗಿದ್ದ 'ಕರೀಂಖಾನ್' ಸಾಹೇಬರು ಈ ಚಿತ್ರದ ಸಬ್ಸಿಡಿಯನ್ನೇ ತಡೆದು "ಮೊದಲು ಲೇಖಕಿಗೆ ಹಣ ಸಂದಾಯ ಮಾಡಿ ಕ್ಷಮೆ ಕೇಳಿ" ಎಂದು ದೂರು ದಾಖಲಿಸಿದಾಗ ನಿರ್ದೇಶಕ ಹುಡುಕಿಬಂದು ಒಂದಕ್ಕೆ ಎರಡರಷ್ಟು ಹಣ ನೀಡಿ ಕ್ಷಮೆ ಕೇಳುತ್ತಾರೆ. ಈ ಅವಾಂತರಗಳ ನಂತರ ಧಾರಾವಾಹಿಯನ್ನು ಪುಸ್ತಕ ರೂಪಕ್ಕೆ ತರುವ ಆಸಕ್ತಿ ಇಲ್ಲದಿದ್ದಾಗ ಪ್ರೊ. ಚಂಪಾರವರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಈ ಕಾದಂಬರಿ ಪ್ರಕಟಣೆಯಾಯಿತೆಂದು ಲೇಖಕಿ ನೆನಪಿಸಿಕೊಳ್ಳುತ್ತಾರೆ. 


ಈ ಕಿರು ಕಾದಂಬರಿ ಓದಲು ಶುರು ಮಾಡುವ ಮುನ್ನ ಚಲನಚಿತ್ರವಾದ ಈ ಕಿರು ಕಾದಂಬರಿಯ ಕತೆಯ ಹಾಗೂ ಕತೆಯ ಹರವಿನ ಕುರಿತು ಒಂದು ವಿಧವಾದ ಕುತೂಹಲವಿತ್ತು. ಈ ಕಿರು ಕಾದಂಬರಿಯನ್ನು ಓದಿ ಮುಗಿಸಿದ ನಂತರ ಅನ್ನಿಸಿದ್ದು.. ನಿಜಕ್ಕೂ ಈ ಕತಾ ಹಂದರ ಪ್ರತಿ ಹಂತದಲ್ಲಿಯೂ ಕುತೂಹಲ ಮೂಡಿಸುತ್ತಾ.. ಬಿಗಿ ನಿರೂಪಣೆಯಿಂದ ಕೊನೆಯ ಕ್ಷಣದವರೆಗೂ ಮುಂದೇನಾಗಬಹುದು ಎಂದು ಕುತೂಹಲವನ್ನು ಉಳಿಸಿಕೊಂಡೇ ಹೋಗುತ್ತದೆ. ಸಿನಿಮಾಗೆ ಎಂದು ಬರೆದಿರದ ಕತೆಯಾದರೂ ಸಿನಿಮಾಗೆ ಹೊಂದಿಕೆಯಾಗುವ ಹಲವು ಅಂಶಗಳಿವೆ.


ರಾಯರು ತಮ್ಮ ಮಗಳು ಪುಷ್ಪ ಸುದ್ದಿಯೇ ಬರಲಿಲ್ಲವೆಂದು ಆತಂಕದಲ್ಲಿದ್ದಾಗಲೇ ಮದುವೆಯಾಗಿ ಐದಾರು ವರ್ಷದ ನಂತರ ಗಂಡು ಮಗುವಾದ ಸುದ್ದಿ ಅಂಚೆ ಮೂಲಕ ತಲುಪಿತು. ತಮ್ಮ ಹೆಂಡತಿ ಇದ್ದಿದ್ದರೆ ಮಗಳ ಚೊಚ್ಚಲ ಹೆರಿಗೆಗೆ ಇಲ್ಲೇ ವ್ಯವಸ್ಥೆ ಮಾಡಬಹುದಾಗಿತ್ತು ಎಂಬ ಅರ್ಧ ಕೊರಗು, ಅರ್ಧ ಸಂಭ್ರಮದಲ್ಲಿ ಮಗಳ ಮನೆಗೆ ಹೊರಟು ನಿಂತರು. 


ಬೀಗರಾದ ಶ್ರೀಕಂಠಯ್ಯ ಹಾಗೂ ಲಲಿತಮ್ಮನವರು ರಾಯರನ್ನು ಸಂಭ್ರಮದಿಂದಲೇ ಸ್ವಾಗತಿಸಿದರು. ಮೊಮ್ಮಗುವನ್ನು ನೋಡಿಕೊಂಡು ಹೊರಟ ನಂತರ ಶಾಸ್ತ್ರಿಗಳು ಬಂದಾಗ ಶ್ರೀಕಂಠಯ್ಯ ಹಾಗೂ ಮನೆಯವರಿಗೆ ಒಂದು ಆಘಾತ ಕಾದಿತ್ತು. ಅದೇನೆಂದರೆ, ಮಗು ಮೂಲಾ ನಕ್ಷತ್ರದಲ್ಲಿ ಜನಿಸಿತ್ತು. ಶಾಸ್ತ್ರಿಗಳು ಅದಕ್ಕೆ ಶಾಂತಿ ಮಾಡಿದರೆ ಸಾಕು ಎಂದಿದ್ದರೂ ರಂಗಮ್ಮನ ತಲೆಗೆ ಕೆಟ್ಟ ಯೋಚನೆಗಳ ಭೂತ ಹೊಕ್ಕಿತ್ತು. ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದ ಮಗುವಿನ ತಂದೆಯ ಪ್ರಾಣಕ್ಕೆ ಸಂಚಕಾರ ಎಂಬ ನಂಬಿಕೆಯಿತ್ತು.


ರಂಗಮ್ಮ ಪ್ರೇಮ್ ನನ್ನು ಚಿಕ್ಕಂದಿನಿಂದ ತನ್ನ ಸ್ವಂತ ಮಗನಂತೆಯೇ ಸಾಕಿದ್ದಳು. ಶ್ರೀಕಂಠಯ್ಯ ಹಾಗೂ ಲಲಿತಮ್ಮ ಕೂಡಾ ಇದಕ್ಕೆ ಎಂದಿಗೂ ಅಡ್ಡಿ ಮಾಡಿದ್ದವರಲ್ಲ. ಪ್ರೇಮ್ ಕೂಡಾ ಅಷ್ಟೇ ಪ್ರೀತಿ ತೋರುತ್ತಿದ್ದನು. ಅವನನ್ನು ಮದುವೆಯಾಗಿ ಬಂದ ಪುಷ್ಪ ಕೂಡಾ ಅದೇ ಭಾವನೆಯಲ್ಲಿಯೇ ಪ್ರೇಮ್ ನನ್ನು ನೋಡುತ್ತಿದ್ದಳು. ಅಷ್ಟು ಪ್ರೀತಿಸುತ್ತಿದ್ದ ಪ್ರೇಮ್ ಗೆ ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಗುವಿನಿಂದ ತೊಂದರೆಯಾಗಬಹುದೆಂಬ ದೂರಾಲೋಚನೆ ಆಕೆಯನ್ನು ಮಗುವನ್ನು ಆ ಮನೆಯಿಂದ ದೂರ ಮಾಡುವ ಕಾರ್ಯವನ್ನು ಕೈಗೊಳ್ಳುವಂತೆ ಮಾಡಿತ್ತು.


ಮನೆಯವರೆಲ್ಲರೂ ಮಲಗಿದ್ದಾಗ ಯಾರಿಗೂ ತಿಳಿಯದಂತೆ ಮಗುವನ್ನು ಒಂದು ಬಸ್ಸಿನಲ್ಲಿ ಬಿಟ್ಟು ಬಂದಳು. ಅದೇ ಬಸ್ಸಿಗೆ ಹತ್ತಿದ ತರುಣಿ ಸ್ವಪ್ನಾ ಆ ಮಗುವನ್ನು ಪ್ರೀತಿಯಿಂದ ಆಡಿಸಲು ಯತ್ನಿಸಿದಳು. ಆಕೆ ಕೆಲಸದ ಇಂಟರ್ ವ್ಯೂಗೆ ಹೊರಟಿದ್ದವಳು. ಎಲ್ಲರೂ ಹದಿಹರೆಯದ ಆಕೆಯನ್ನೇ ಮಗುವಿನ ತಾಯಿ ಎಂದುಕೊಂಡಿದ್ದರು. ಆಕೆ ಮಗುವನ್ನು ಬಿಟ್ಟು ಇಳಿದು ಹೋಗುವಾಗ ಜೋರು ಮಾಡಿ, ಪೋಲೀಸರಿಗೆ ತಿಳಿಸುತ್ತೇವೆಂದು ಮಗುವನ್ನು ಅವಳ ಜೊತೆಗೆ ಕಳುಹಿಸಿದರು. 


ಒಂದು ತಿಂಗಳ ಮಗುವನ್ನು ಸಂಭಾಳಿಸಿಕೊಂಡೇ ಸಂದರ್ಶನ ನಡೆಯುವ ಜಾಗಕ್ಕೆ ಹೋದಳು. ಅಲ್ಲಿಯೂ ತಪ್ಪಾಗಿ ತಿಳಿದು.. ಈಕೆ ಇಷ್ಟು ಪುಟ್ಟ ಮಗುವನ್ನೆತ್ತಿಕೊಂಡು ಸಂದರ್ಶನಕ್ಕೆ ಬಂದಿರುವುದರಿಂದ ಈಕೆಗೆ ಈ ಕೆಲಸ ಅತ್ಯಾವಶ್ಯಕ ಎನ್ನುತ್ತಾ ಕೆಲಸ ನೀಡಿದರು.


ಆಕೆ ಸಂದರ್ಶನ ಎದುರಿಸಬೇಕಾದ ಸಂದರ್ಭದಲ್ಲಿ ಅಲ್ಲೇ ಕೆಲಸ ಮಾಡುತ್ತಿದ್ದ ಮೋಹನ್ ತಾನು ಆ ಮಗುವನ್ನು ಕೊಂಚ ಹೊತ್ತು ಸಂಭಾಳಿಸಲು ಒಪ್ಪಿಕೊಳ್ಳುತ್ತಾನೆ. ಆದರೆ, ಅದೇ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ಕೊಟ್ಟ ಆತನ ಪ್ರೇಯಸಿ ಶೋಭಾ ತಪ್ಪಾಗಿ ತಿಳಿದುಕೊಂಡು ಆತನಿಂದ ದೂರವಾಗುತ್ತಾಳೆ.


ಮುಂದೆ, ಸ್ವಪ್ನಾ ಕೂಡಾ ಮಗುವಿನ ವಿಚಾರದಿಂದ ತಾನು ಪ್ರೀತಿಸಿದ್ದ ವಿಶ್ವನಿಂದ ದೂರಾಗಬೇಕಾಗಿ ಬರುತ್ತದೆ.


ಏನೂ ಅರಿಯದ ಮಗುವೊಂದರ ಜನ್ಮನಕ್ಷತ್ರದಿಂದ ತಂದೆ-ತಾಯಿಯಿಂದ ದೂರಾಗಿರುತ್ತದೆ. ಅಪರೂಪಕ್ಕೆ ಹುಟ್ಟಿದ ಮಗುವನ್ನು ಕಳೆದುಕೊಂಡ ತಂದೆ-ತಾಯಿಯರ ಪರಿಸ್ಥಿತಿ ಹೇಗಿತ್ತು..?? ಸ್ವಪ್ನಾ - ಮೋಹನ್ ರ ಮುಂದಿನ ನಡೆ ಏನಿತ್ತು..?? ಸ್ವಪ್ನಾ ಪರಿಸ್ಥಿತಿಯ ಕೈಗೊಂಬೆಯಾಗಿದ್ದೇಗೆ..?? ರಂಗಮ್ಮ ಮಾಡಿದ್ದು ಸರಿಯೇ..?? ಮಗುವಿನ ಭವಿಷ್ಯದ ಗತಿಯೇನು..??


ಈ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಭಾಗ್ಯ ಕೃಷ್ಣಮೂರ್ತಿಯವರ ಕಿರು ಕಾದಂಬರಿ "ಒಂದು ಮಗುವಿನ ಪ್ರಕರಣ".


ತೀರಾ ವಾಸ್ತವಕ್ಕೆ ಈ ಘಟನೆಯನ್ನು ಸಂಪೂರ್ಣವಾಗಿ ಹೋಲಿಸಲು ಸಾಧ್ಯವಿಲ್ಲ. ಸಿನಿಮೀಯ ಅಂಶಗಳಿಂದ ಹಾಗೂ ಮನೋರಂಜನಾತ್ಮಕ ದೃಷ್ಟಿಯಿಂದ ನೋಡಿದಾಗ ಕತೆ ಗೆಲ್ಲುತ್ತದೆ ಎನ್ನಿಸಿತು. ನಾನು ಸಿನಿಮಾ ನೋಡಿಲ್ಲ. ಈ ಅಭಿಪ್ರಾಯ ಕೇವಲ ಈ ಕಾದಂಬರಿ ಕುರಿತಾದದ್ದು.


~ವಿಭಾ ವಿಶ್ವನಾಥ್

ಕಾಗೆಯ ಕಾಯಕ (ಪುಸ್ತಕ ಯಾನ - 136)


ಪುಸ್ತಕದ ಶೀರ್ಷಿಕೆ : ಕಾಗೆಯ ಕಾಯಕ

ಲೇಖಕರು : ಡಾ|| ಕೃಷ್ಣಾನಂದ ಕಾಮತ್

ಪ್ರಕಾಶಕರು : ಪ್ರಿಸಮ್ ಬುಕ್ಸ್

ಪ್ರಥಮ ಮುದ್ರಣ : 2000

ಪುಟಗಳು : 80

ಬೆಲೆ : 35 ರೂ.


ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಡಾ|| ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿದರು. ಕೃಷ್ಣಾನಂದ ಕಾಮತರು ಪ್ರವಾಸಕಥನ, ವಿಜ್ಞಾನ, ಜನಾಂಗೀಯ ಅಧ್ಯಯನ, ಕಲೆ, ಪರಿಸರ ಮೊದಲಾದ ವಿಷಯಗಳ ಬಗ್ಗೆ ಪುಸ್ತಕಗಳನ್ನೂ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಕೃಷ್ಣಾನಂದ ಕಾಮತರ ಪತ್ನಿ ಶ್ರೀಮತಿ ಜ್ಯೋತ್ಸ್ನಾ ಕಾಮತ್ ಅವರು ಸಹ ಸಂಶೋಧಕಿ ಹಾಗೂ ಲೇಖಕಿ. 


ಕೃಷ್ಣಾನಂದ ಕಾಮತ್ ಅವರ ಕೃತಿಗಳು- ವಂಗದರ್ಶನ (ಬಂಗಾಲದ ಕುರಿತು), ಪ್ರೇಯಸಿಗೆ ಪತ್ರಗಳು, ಮರುಪಯಣ, ಪತ್ರ-ಪರಾಚಿ, ಭಗ್ನಸ್ವಪ್ನ (ಕಾದಂಬರಿ), ನಾ ರಾಜಸ್ಥಾನದಲ್ಲಿ, ಕಲೆ-ಕಾವಿಕಲೆ, ಅಕ್ಷತ, ಇರುವೆಯ ಇರುವು, The Timeless Theater, ಕಾಗೆಯ ಕಾಯಕ, ಪ್ರವಾಸಿಯ ಪ್ರಬಂಧಗಳು, ಕೊಂಕಣ್ಯಾಲಿ ಕಾವಿಕಲಾ (ಕೊಂಕಣಿ ಭಾಷೆ), ಕಾಲರಂಗ, ಬಸ್ತರ ಪ್ರವಾಸ (ಗಿರಿಜನರ ಪರಿಚಯ), ಮಧ್ಯಪ್ರದೇಶದ ಮಡಿಲಲ್ಲಿ ಮುಂತಾದವು.

 

ಕಾಗೆಯ ಕುರಿತು ಬರೆದಿರುವ ಇಲ್ಲಿನ ಲೇಖನಗಳಲ್ಲಿ ಮಾಮೂಲಿನಂತೆ ವಿಜ್ಞಾನದ ಥಿಯರಿ ಇರಬಹುದಾ ಎಂದುಕೊಂಡೇ ಶುರು ಮಾಡಿದೆ. ಆದರೆ, ಲೇಖಕರ ಬರಹದ ಶೈಲಿ ವಿಭಿನ್ನವಾಗಿದ್ದು ಅವರು ಕಾಗೆಯ ಜೀವನಶೈಲಿಯನ್ನು ಹತ್ತಿರದಿಂದ ನೋಡಿದ್ದನ್ನು ವಿನೋದಾತ್ಮಕವಾಗಿಯೂ ಹಾಗೂ ಆಸಕ್ತಿ ಮುಡಿಸುವಂತೆಯೂ ಹೇಳುತ್ತಾರೆ. ಈ ಲೇಖನಗಳನ್ನು ಓದಿದ ಹಲವರು ಲೇಖಕರನ್ನು 'ಕಾಗೆ ಕಾಮತ್' ಎಂದು ಕರೆದದ್ದನ್ನು ನೆನಪಿಸಿಕೊಳ್ಳುತ್ತಾರೆ.


ಸಾಮಾನ್ಯವಾಗಿ ನಮ್ಮ ನೆಚ್ಚಿನ ಹಕ್ಕಿಯ ಹೆಸರು ಹೇಳುವಾಗ 'ಕಾಗೆ' ಎಂದು ಹೇಳುವವರು ಎಷ್ಟು ಜನ ಇದ್ದಾರು..?? ಕಡುಗಪ್ಪು ಬಣ್ಣ ಹಾಗೂ ಅವರ ಧ್ವನಿಯಿಂದ, ವ್ಯಾಪಕವಾಗಿರುವ ಮೂಢನಂಬಿಕೆಗಳಿಂದ ಕಾಗೆಯನ್ನು ಇನ್ನಿತರ ಪಕ್ಷಿಗಳಂತೆ ನೋಡುವುದೇ ಇಲ್ಲ. ಕಾಗೆಯನ್ನು ತುಚ್ಛ ಪಕ್ಷಿಯಂತೆ ಕಂಡವರೇ ಅದನ್ನು ಕಾಯುವ (ತಿಥಿಗಳಲ್ಲಿ) ಸಂಧರ್ಭವೂ ಇಲ್ಲದಿಲ್ಲ.


ಕಾಗೆ ಕೂಗುವ ಧ್ವನಿಯನ್ನು ಅವಲೋಕಿಸಿ ಹಳ್ಳಿಯ ಕಡೆಗಳಲ್ಲಿ ಅಂದು ನೆಂಟರು ಬರುವರೆಂದೂ.. ಇಲ್ಲವೇ.. ಯಾರಾದರೂ ತೀರಿ ಹೋಗುವರೆಂದೂ ಹೇಳುವ ಶಕುನವಿದೆ. ಆದರೆ, ಕಾಗೆಯ ಧ್ವನಿಯನ್ನೇ ಅವಲೋಕಿಸಿ ಅದರ ವಯಸ್ಸು, ಮನಸ್ಥಿತಿ, ಲಿಂಗ, ಕಾಡು/ನಾಡು ಕಾಗೆ ಎಂಬುದನ್ನು ಹೇಳುವ ನಿಖರತೆಯ ಕುರಿತು ಉಲ್ಲೇಖಿಸಿದ್ದನ್ನು ಓದಿ ಅಚ್ಚರಿಯಾಯಿತು.


ಕಾಗೆಯನ್ನು ಮನೆಯ ಹತ್ತಿರಕ್ಕೆ ಬಂದಾಗ ಓಡಿಸುವುದನ್ನು ನಾವು ನೋಡಿದ್ದೇವೆ ಹಾಗೂ ರೂಢಿಸಿಕೊಂಡಿದ್ದೇವೆ. ಅದಕ್ಕೆ ಕಾರಣಗಳು ಹಲವಾರು. ಮಕ್ಕಳ ತಿಂಡಿ ಕಿತ್ತುಕೊಳ್ಳುತ್ತದೆ, ಒಣಗಲು ಹಾಕಿರುವುದನ್ನು ಎತ್ತಿಕೊಂಡು ಹೋಗುತ್ತದೆ, ಕಾಗೆ ಮನೆ ಹೊಕ್ಕಬಾರದು, ಮುಟ್ಟಬಾರದು ಎನ್ನುವ ಹಲವು ಆಲೋಚನೆಗಳು. ಆದರೆ, ಇದಕ್ಕೆ ತದ್ವಿರುದ್ಧವಾದ ಘಟನೆಯೊಂದನ್ನು ನಾನು ನೋಡುತ್ತಿದ್ದೆ. ಚೆನ್ನೈನಲ್ಲಿ ನಾನಿದ್ದ ಮನೆಯ ಪಕ್ಕದಲ್ಲಿದ್ದ ಕೇರಳದ ವೃದ್ಧ ದಂಪತಿಗಳು ಮಧ್ಯಾಹ್ನ ಸರಿಯಾಗಿ 1.30 ಕ್ಕೆ ತಮ್ಮ ಮನೆಯ ಹೊರಭಾಗದಲ್ಲಿ ಕಾಗೆಗೆಂದೇ ಊಟ (ಅನ್ನ) ಹಾಕುತ್ತಿದ್ದರು. ಅವರಿಗಾಗಿ ಅಲ್ಲದಿದ್ದರೂ ಆ ಕಾಗೆಗಾಗಿ ಊಟ ಹಾಕಲು ಬೇಗ ಅಡುಗೆ ಮಾಡುತ್ತಿದ್ದರು. ನಾನು ಕುತೂಹಲದಿಂದ ಈ ಕುರಿತು ಕೇಳಿದಾಗ ಅದನ್ನು ತಾವು ಹಿರಿಯರ ರೂಪದಲ್ಲಿ ಕಾಣುವ ನಂಬಿಕೆಯ ಕುರಿತು ಹೇಳಿದರು. 


ಇಲ್ಲಿನ ಲೇಖನದಲ್ಲಿ ಕಾಗೆಗಳ ಅನ್ನಾಹಾರದ ಕುರಿತು, ಮತ್ಸ್ಯ ಭೋಜನದ ಕುರಿತು ಬಹಳ ಚೆಂದದ ಘಟನೆಗಳನ್ನು ಉಲ್ಲೇಖಿಸಿದ್ದಾರೆ. 


ಕಾಗೆ ಎಲ್ಲವೂ ಒಂದೇ ರೀತಿ ಕಾಣುತ್ತವಲ್ಲಾ.. ಕಾಗೆಗಳಲ್ಲಿ ವಿವಿಧ ಕಾಗೆಗಳನ್ನು ಗುರುತಿಸುವುದಾದರೂ ಹೇಗೆ ಎನ್ನುವ ಸಂದೇಹವೂ ಮೂಡಿತ್ತು. ಬೇರೆ ಪ್ರಾಣಿ/ಪಕ್ಷಿಗಳಾದರೆ ಬಣ್ಣ, ಪಟ್ಟೆ, ಚುಕ್ಕಿ ಹೀಗೆ ಏನಾದರೊಂದು ವೈವಿಧ್ಯ ಕಾಣಬಹುದು. ಲೇಖಕರು ಈ ಸಂದೇಹಕ್ಕೂ ಚೆಂದದ ಉತ್ತರವನ್ನು ನೀಡುತ್ತಾರೆ.


ಕಾಗೆ ತನ್ನ ಜೊತೆಗಾರರನ್ನು ಹುಡುಕಿಕೊಳ್ಳುವ ಪರಿ, ಗೂಡು ಕಟ್ಟುವ ಹುಷಾರು, ಅದಕ್ಕಾಗಿ ಆರಿಸುವ ಸ್ಥಳ, ತನ್ನ ಸಂಗಾತಿ ಮೊಟ್ಟೆ ಇಡುವಾಗ ಜೋಪಾನ ಮಾಡುವ ಪರಿ, ಸಂತಾನೋತ್ಪತ್ತಿಯ ಕುರಿತು ತಿಳಿಸುತ್ತಾರೆ. ಕಾಗೆಗಳು ವರ್ಷದಲ್ಲಿ 3-4 ಬಾರಿ ಮೊಟ್ಟೆ ಇಟ್ಟು ಮರಿ ಮಾಡಿದರೂ ಆ ಮರಿಗಳಿಗೆ ಒದಗುವ ಅಪಾಯ.. ಅವುಗಳಿಂದ ಪಾರಾಗಿ ಉಳಿದ ಕೆಲವೇ ಸಂತತಿಗಳ ಕುರಿತು ಹೇಳುತ್ತಾರೆ. ಹಾಗಿಲ್ಲವಾದರೆ, ಭೂಮಿಯೇ ಕಾಗೆಮಯವಾಗುತ್ತಿತ್ತೇನೋ ಎನ್ನುವ ಭವಿಷ್ಯವನ್ನೂ ಹೇಳುತ್ತಾರೆ. 


ಕಾಗೆಗಳಿಗೆ ಮನುಷ್ಯರಿಗಿಂತ ಹಾಗೂ ಪರಿಸರದ ಕೆಲ ಅಂಶಗಳಿಗಿಂತ ಅಪಾಯಕಾರಿ ವೈರಿ ಹದ್ದು. ಹದ್ದಿನಿಂದ ಅದು ತನ್ನನ್ನು ರಕ್ಷಿಸಿಕೊಳ್ಳುವ ಬಗೆ ಹಾಗೂ ಮರುದಾಳಿ ಮಾಡುವುದರ ಕುರಿತು ಸಹಾ ಹೇಳುತ್ತಾರೆ. 'ಕಲಹಪ್ರಿಯ' ಕಾಗೆಯ ಕುರಿತು ಹೇಳುತ್ತಲೇ.. ಅವುಗಳ ಒಗ್ಗಟ್ಟಿನ ದರ್ಶನವೂ ಆಗುತ್ತದೆ. ಮನುಷ್ಯನ ಮೇಲೆ ಆಕ್ರಮಣ ಮಾಡಲು ಹೊರಟ ಒಂದೆರಡು ಪ್ರಸಂಗಗಳ ಹಿಂದಿನ ಕಾರಣವನ್ನೂ ಬಿಚ್ಚಿಡುತ್ತಾರೆ.


ಮನುಷ್ಯನ ಸಾಮಾಜಿಕ ಸಂಘಜೀವನದಂತೆಯೇ ಕಾಗೆಯದ್ದನ್ನು ಸಮೀಕರಿಸುತ್ತಾ ಅಂಗವಿಕಲ ಕಾಗೆ.. ಕಾಗೆ ಪಂಚಾಯಿತಿ ಹಾಗೂ ಕಾಗೆಯ ಶಿಕ್ಷೆಗಳ ಕುರಿತು ಸಹಾ ಹೇಳುತ್ತಾರೆ.


ಇದಿಷ್ಟೂ ವೈಜ್ಞಾನಿಕ ದೃಷ್ಟಿಯಿಂದ ನೋಡಿದ್ದಾದರೆ.. ನಾನು ಗಮನಿಸಿರುವ ಒಂದು ಅಂಶವನ್ನು ಹಾಗೂ ಅಲ್ಲಿನ ಸ್ಥಳ ಪುರಾಣದ ಕುರಿತು ಕೇಳಿದ ಘಟನೆಯನ್ನೂ ಹೇಳಲು ಇಚ್ಛಿಸುತ್ತೇನೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಹಿಮವತ್ ಗೋಪಾಲ ಸ್ವಾಮಿ ಬೆಟ್ಟದ ದೇವಾಲಯದ ಸುತ್ತಲೂ ಕಾಗೆಗಳೇ ಕಂಡುಬರುವುದಿಲ್ಲ. ಸ್ಥಳಪುರಾಣವನ್ನು ಕೇಳಿದಾಗ ತಿಳಿದು ಬಂದದ್ದೆಂದರೆ.. ಅಲ್ಲಿನ ಒಂದು ಸರೋವರವನ್ನು ಹಂಸ ತೀರ್ಥ (ಹಂಸ ಸರೋವರ) ಎಂದು ಕರೆಯಲಾಗುತ್ತದೆ. ಈ ಕೆರೆಯ ಕುರಿತು ಒಂದು ಕಥೆಯಿದೆ. ಹಿಂದೊಮ್ಮೆ ಕಾಗೆಯೊಂದು ಈ ಸರೋವರದಲ್ಲಿ ಸ್ನಾನ ಮಾಡಿ ಹಂಸವಾಯಿತು ಎಂದು ಹೇಳಲಾಗುತ್ತದೆ. ಅದೇ ಕಾರಣಕ್ಕೆ ಈ ಸರೋವರಕ್ಕೆ ಹಂಸ ಸರೋವರ ಎನ್ನುವ ಹೆಸರಿದೆ. ಕುತೂಹಲಕಾರಿ ಅಂಶವೆಂದರೆ, ಈ ಸ್ಥಳದ ಸುತ್ತಲೂ ಯಾವುದೇ ಕಾಗೆಗಳು ಕಾಣಿಸಿಕೊಳ್ಳುವುದಿಲ್ಲ ಕೂಡ. ವರವೋ.. ಶಾಪವೋ.. ಪರಿಸರದ ಅಥವಾ ವೈಜ್ಞಾನಿಕ ಕಾರಣವೋ ತಿಳಿದಲ್ಲ. ಒಮ್ಮೆ ಭೇಟಿ ನೀಡಿದ ಸ್ಥಳದ ಕುರಿತು ಈ ಪುಸ್ತಕ ಓದಿದಾಗ ಆ ವೈಚಿತ್ರ್ಯದ ನೆನಪಾಯಿತು. (ಕೆದಕಿದರೂ.. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಅಲ್ಲಿ ಬೇರಾರೂ ಹೇಳಲಿಲ್ಲ.)


ಬಹುಶಃ ಕೆಲವು ವೈಚಿತ್ರ್ಯಗಳಿಗೆ ಉತ್ತರ ದೊರೆಯಲಾರದೇನೋ.. ಕಾಗೆಯ ಗೂಡಿಗೆ ಕೋಗಿಲೆ ತನ್ನ ಮೊಟ್ಟೆ ಸೇರಿಸುವ ಬಗೆಗೂ ಇಲ್ಲಿ ಹೇಗೆ ಎಂದು ತಿಳಿದಿಲ್ಲವೆನ್ನುತ್ತಾರೆ ಲೇಖಕರು.


ಜಾಣ ಕಾಗೆ ಎನ್ನುತ್ತಾ ಕಾಗೆಯ ಚಾಣಾಕ್ಷತೆಯನ್ನು ನೆನಪಿಸುತ್ತಾ ಒಂದೆರಡು ಕತೆಗಳನ್ನೂ ನೆನಪು ಮಾಡುತ್ತಾರೆ. ನೀರು ಎಟುಕದಾದಾಗ ನೀರಿನ ಹೂಜಿಗೆ ಕಲ್ಲು ಹಾಕಿದ ಕಾಗೆ (ಕೇವಲ ಕಾಲ್ಪನಿಕ ಕತೆಯಲ್ಲದೇ.. ಇತ್ತೀಚೆಗೆ ವೀಡಿಯೋ ಕೂಡಾ ವೈರಲ್ ಆಗಿದ್ದು ನೆನಪಾಯಿತು) , ಕಾಗೆ ಮಾಂಸದ ತುಣುಕೊಂದನ್ನು ಬಾಯಲ್ಲಿ ಕಚ್ಚಿಕೊಂಡು ಬಂದಾಗ ಅದನ್ನು ಪಡೆಯಲು ನರಿ ತೋರಿದ ಬುದ್ಧಿವಂತಿಕೆಗಿಂತ ಚಾಣಾಕ್ಷತೆಯನ್ನು ತೋರಿದ ಕಾಗೆಯನ್ನು ನೆನಪಿಸುತ್ತಾರೆ. ಕಾಗೆಯ ಕತೆಗಳನ್ನು ಮಾತ್ರವಲ್ಲದೇ ಅವುಗಳನ್ನು ಗಮನಿಸಿ ಅವು ತೋರುವ ಚಾಣಾಕ್ಷತೆಯನ್ನೂ ಉಲ್ಲೇಖಿಸಿದ್ದಾರೆ.


ಇಷ್ಟೇ ಅಲ್ಲದೇ.. ಅವರ ಮನೆಯ ಹತ್ತಿರ ಕಾಗೆ ಗೂಡು ಕಟ್ಟಿ ಅಲ್ಲಿ ಮರಿ  ಮಾಡಿದಾಗ.. ಕಾಗೆಗಳು ಇಲ್ಲದ ಸಂಧರ್ಭದಲ್ಲಿ ಮರಿಕಾಗೆ ಕೆಳಗೆ ಬಿದ್ದಾಗ.. ಬಹುದಿನದ ಆಸೆಯಂತೆ ಕಾಗೆ ಸಾಕುವ ಆಸೆಯನ್ನು ಪೂರೈಸಿಕೊಳ್ಳಲು ಆ ಕಾಗೆಮರಿಯನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ.. ಮುಂದೆ..??

ಏನಾಯಿತೆಂದು ತಿಳಿಯಲು ಈ ಪುಸ್ತಕ ಓದಿ.


ಇಂತಹಾ ಹಲವಾರು ಮೋಜಿನ, ಪೇಚಿನ, ಆಕ್ರಮಣ, ಚಾಣಾಕ್ಷತೆಯ ಕಾಗೆಯ ಜೀವನವನ್ನು ಪರಿಚಯಿಸುತ್ತಾ ಕಾಗೆ ಎಂಬ ಆಸಕ್ತಿಕರ ಪಕ್ಷಿಯ ಕುರಿತು ಚಮತ್ಕಾರಿಕ ಘಟನೆಗಳನ್ನು ಹೇಳುತ್ತಾರೆ. ಹೇಳಿದ ಶೈಲಿ ಬಹಳ ಇಷ್ಟವಾಯಿತು. ಗಹನವಾದ ಇಂತಹಾ ವಿಜ್ಞಾನ ವಿಚಾರಗಳನ್ನು ಇವರಂತೆ ಹೇಳಹೊರಟರೆ ವಿಜ್ಞಾನ, ಪ್ರಾಣಿಪ್ರಪಂಚದ ಕುರಿತು ಅರಿಯುವುದು ಎಷ್ಟು ಸುಲಭವಲ್ಲವಾ ಎನ್ನಿಸಿತು. ಇಂತಹಾ ಮತ್ತಷ್ಟು ಪುಸ್ತಕಗಳನ್ನು ಓದುವ ಆಸಕ್ತಿ ಮೂಡಿದ್ದರ ಜೊತೆಗೆ ಸುತ್ತಮುತ್ತ ಇದ್ದರೂ ನಿರ್ಲಕ್ಷ್ಯಕ್ಕೊಳಗಾಗಿರುವ ಕಾಗೆಯ ಚಲನವಲನಗಳನ್ನು ಗಮನಿಸುವ ಆಸಕ್ತಿ ಬಂದಿದೆ.


~ವಿಭಾ ವಿಶ್ವನಾಥ್

ಛಿದ್ರ (ಪುಸ್ತಕ ಯಾನ - 135)


ಪುಸ್ತಕದ ಶೀರ್ಷಿಕೆ : ಛಿದ್ರ

ಲೇಖಕರು : ನಾಗತಿಹಳ್ಳಿ ಚಂದ್ರಶೇಖರ

ಪ್ರಕಾಶಕರು : ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ

ಪ್ರಥಮ ಮುದ್ರಣ : 2003

ನಾಲ್ಕನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 80

ಬೆಲೆ : 100 ರೂ.


ಛಿದ್ರ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥಾ ಸಂಕಲನ. ಇದರಲ್ಲಿ ಏಳು ಕಥೆಗಳಿದ್ದು.. 'ಯಾತ್ರೆ', 'ಸನ್ಯಾಸ', 'ನಾಯಿಪಾಡು' ಎಂಬ ಕಥೆಗಳು ಲಂಕೇಶ್ ಪತ್ರಿಕೆಯಲ್ಲೂ.. 'ಛಿದ್ರ', 'ಪೂರ್ವಿ' ಪ್ರಜಾವಾಣಿಯಲ್ಲೂ.. 'ನಾಟ್ಯರಾಣಿ ಶಾಂತಲೆ' ತುಷಾರದಲ್ಲೂ ಹಾಗೂ 'ಗಾಯ' ಕರ್ಮವೀರದಲ್ಲೂ ಪ್ರಕಟವಾಗಿದ್ದ ಕಥೆಗಳು. ಈ ಕಥೆಗಳ ಕುರಿತು ಬರೆಯುವಾಗ.. ಲೇಖಕರು "ಇವು ಬರೆದ ಕಥೆಗಳಲ್ಲ ಅವೇ ಬರೆಸಿಕೊಂಡದ್ದು" ಎಂಬ ಮಾತನ್ನು ಹೇಳುತ್ತಾರೆ.


ಇಲ್ಲಿ ಹಳ್ಳಿಯ ಕಥಾನಕಗಳು ಸಿಕ್ಕುವಂತೆ, ಪಶ್ಚಿಮ ದೇಶಗಳ ಕಥೆಗಳೂ ದೊರೆಯುತ್ತವೆ. ಹಾಗೆ ದೊರೆಯುವ ಕಥಾನಕಗಳಲ್ಲಿ ಅಲ್ಲಿಯ ಪರಿಸರದ ಹಾಗೂ ಜೀವನದ ಪರಿಚಯ ಮಾಡಿಸುತ್ತಾ.. ಅಲ್ಲಿಗೇ ಪ್ರವಾಸ ಹೋದ ಅನುಭವದಂತಾಗುತ್ತದೆ. ಸಿನಿಮಾಗಳಲ್ಲಿ ಕಾಣುವ ದೃಶ್ಯಕಾವ್ಯಗಳಂತೆ ಇಲ್ಲಿಯ ಕಥೆಗಳನ್ನು ಕಾಣಬಹುದು. ಇಲ್ಲಿನ ಕಥೆಗಳಲ್ಲಿ ಅಷ್ಟರಮಟ್ಟಿನ ಡೀಟೈಲಿಂಗ್ ಸಿಗುತ್ತದೆ. 


ಯಾತ್ರೆ : 

'ಡೆಲ್ಟಾ ವಿಮಾನ ಪ್ರವೇಶಿಸಿದರೆ, ಬಾಗಿಲಲ್ಲಿ ನಿಂತ ಮೇಕಪ್ ಮಾಡಿಕೊಂಡ ಮುಗುಳ್ನಗೆಯ ಗಗನಸಖಿಯರು !'

ಇದು ಕಥೆಯ ಕೊನೆಯ ಸಾಲು. ಈ ಸಾಲಿನ ಅರ್ಥ ಕತೆಯನ್ನು ಓದಿದವರಿಗೆ ಒಂದು ರೀತಿ ಅರ್ಥವಾಗುತ್ತದೆ. ಕತೆಯನ್ನು ಓದದೇ ಈ ಸಾಲುಗಳನ್ನು ಓದಿದರೆ ಬೇರೆಯ ಅರ್ಥ ನೀಡುತ್ತದೆ. 

ವಿಭಿನ್ನ ಅರ್ಥ ನೀಡುವ ಸಾಲುಗಳೇ ನಾಗತಿಹಳ್ಳಿಯವರ ಕಥೆಗಳ ಸಿಗ್ನೇಚರ್ ಶೈಲಿ ಎಂದರೂ ತಪ್ಪಾಗಲಾರದೇನೋ.. 


ಗೆಳತಿ ಮೃದುಲಾಳನ್ನು ಭೇಟಿಯಾಗಲು ಹೊರಟು, ಅಲ್ಲಿನ ಜರ್ಮನಿಯ ದಿನಗಳನ್ನು ಕಳೆದು ಬಂದವನಿಗೆ ಆಕೆಯ ಒಂಟಿತನ ಅರ್ಥವಾದರೂ.. ಅವರು ಆಕೆಗೆ ಕೊಡುವ ಸಲಹೆ ಯಾಕೋ 'ಅಮೆರಿಕಾ ಅಮೆರಿಕಾ' ಚಿತ್ರದ ಅಂತ್ಯವನ್ನು ನೆನಪಿಸಿತು. ಅಷ್ಟಕ್ಕೂ ಮೃದುಲ ಜರ್ಮನಿಯಲ್ಲಿ ಹೇಗಿದ್ದಳು..? ಆಕೆ ಇಲ್ಲಿದ್ದಾಗಲೇ ವಿಭಿನ್ನವಾಗಿ ವಿವಾಹವಾಗಿ ಹೋಗಿದ್ದ ಪೀಟರ್ ಕೋಲ್ಮನ್ ನ ಜೊತೆ ತಪ್ಪಿ ಹೋಗಿದ್ದೇಕೆ..?? ಮಗಳು ವಿಂಧ್ಯಾ ಹೇಗಿದ್ದಳು..?? ಹೆಣ್ಮನದ ಭಾವನೆಗಳೇ ವಿಭಿನ್ನ. ಹೆಣ್ಣಿನ ಮನಸ್ಸನ್ನು ಅರಿಯಲು ಅಸಾಧ್ಯವೆನ್ನುವ ಮಾತು ಆಕೆಯ ಬದಲಾದ ಆಲೋಚನಾ ಲಹರಿಯಿಂದಾಗಿ ನೆನಪಾಯಿತು.


ಇಂತಹ ಮತ್ತೋರ್ವ ಹೆಣ್ಣೊಬ್ಬಳ ಪಾತ್ರ ಕಂಡದ್ದು 'ಪೂರ್ವಿ' ಕತೆಯಲ್ಲಿ.

ಪೂರ್ವಿ : 

ಅಪ್ಪನ ನಿಧಾನಗತಿಯನ್ನು, ಅವರು ಮೆಚ್ಚುವ ಹಿಂದೂಸ್ಥಾನಿ ಸಂಗೀತವನ್ನೂ.. ಪ್ರತಿಯೊಂದರಲ್ಲೂ ಅಪ್ಪನ ಆಲೋಚನಾ ಲಹರಿಯನ್ನು ವಿರೋಧಿಸುತ್ತಾ ನಡೆಯುತ್ತಿದ್ದ ಆಕೆಗೆ ಅವರನ್ನು ಸಂಪೂರ್ಣವಾಗಿ ಸೋಲಿಸುವ ಅವಕಾಶವೊಂದು ಸಿಕ್ಕಿತು. ಅಪ್ಪನೇ ಆರಿಸಿದ್ದ ಮಾಧವನನ್ನು ಮದುವೆಯಾಗುವ ಸಂದರ್ಭವನ್ನು ತೊರೆದು ಡೆನ್ಮಾರ್ಕಿನ ರೋರ್ ವಿಗ್ ನ ಎನ್ಸ್ ಕೆಲ್ಲರ್ ಜೊತೆಗೆ ಜೊತೆಯಾಗಲು ಹೊರಟಳು. ಆದರೆ, ಅವಳ ಬದುಕಿನಲ್ಲಿ ಬಂದ ಸಂದರ್ಭವೊಂದು ಮತ್ತೆ ತನ್ನ ಬೇರನ್ನು ಅರಸಿ ಬರುವಂತೆ ಮಾಡಿತು. ಆಕೆ ಅಲ್ಲಿಗೆ ಬಂದಾಗ ಕಂಡ ಚಿತ್ರಣಗಳೇನು..?? ಅಷ್ಟಕ್ಕೂ ಆಕೆ ಅಲ್ಲಿಂದ ವಾಪಸ್ ಆದದ್ದೇಕೆ..??


ಹೆಣ್ಣುಗಳ ವಯಸ್ಸು ಹಾಗೂ ಮನಸ್ಸಿನ ಜೊತೆಗೆ ಭಾವನೆಗಳು ಕೂಡಾ ಬದಲಾಗುತ್ತವೆ. ಅಷ್ಟೇ ಅಲ್ಲದೆ.. ಇಲ್ಲಿ ಧಿಕ್ಕರಿಸಿ ನಡೆದ ಹೆಣ್ಣುಗಳು ಸೋತುಬಿಟ್ಟರಾ...? ಎಂಬ ಭಾವವೂ ಕಾಡಿತು. ಎಲ್ಲರನ್ನೂ ಎದುರು ಹಾಕಿಕೊಂಡರೂ ಪರವಾಗಿಲ್ಲ ಎನ್ನುವವರು ಮತ್ತೆ ತಾವು ಧಿಕ್ಕರಿಸಿದಲ್ಲಿಗೇ ಮರಳಿ ಬಂದದ್ದು, ಮರಳಿ ಬರುವ ಆಸೆ ತೋರಿದ್ದು ಅವರ ಅಂತರಂಗಗಳ ಹೆಣ್ತನದ ಮಿಡಿತವಾ..?? ಹಾಗೆ ಸೋತರೂ ಗೆದ್ದರು ಎಂದು ತೋರಿಸಿಕೊಳ್ಳುವ ಹೆಣ್ಣು ಪಾತ್ರಗಳೊಳಗಿನ ಅಂತರಂಗದ ಮಿಡಿತವಾ..?? ಈ ಪಾತ್ರಗಳು ವಿಭಿನ್ನವಾಗಿ ಇದ್ದಿದ್ದರೆ ಬಂಡಾಯವೆದ್ದು ಗೆಲ್ಲುವ ಹೆಣ್ಣುಮಕ್ಕಳಿಗೆ ಇವರು ಉದಾಹರಣೆಯಾಗಿ ನಿಲ್ಲುತ್ತಿದ್ದರೇನೋ ಎಂಬ ಎರಡು ಭಾವಗಳನ್ನು ಹುಟ್ಟಿಸಿದ ಕಥಾಪಾತ್ರಗಳಿವು.


ಸನ್ಯಾಸ :

ಎಲ್ಲವೂ ದಂಡಿಯಾಗಿದ್ದ ಸಿರಿವಂತನಾಗಿದ್ದವನೊಬ್ಬ ಸನ್ಯಾಸತ್ವಕ್ಕಾಗಿ ಮಿಡಿಯುತ್ತಿದ್ದದ್ದು, ಸನ್ಯಾಸಿ ಆಗಲು ಹೊರಟ ಆತ ಏನೇನು ಮಾಡಿದ..?? ಆತನ ಕುಟುಂಬ ಸುತ್ತಲಿನವರು ಆತನ ನಿರ್ಧಾರಗಳನ್ನು ಹಾಗೂ ಆತನ ನಡೆಗಳನ್ನು ಕಂಡು ಪ್ರತಿಕ್ರಿಸಿದ ಬಗೆ ಹೇಗೆ..? ಎಂಬ ಒಂದು ವಿಡಂಬನಾತ್ಮಕ ಕಥೆ ಇದು. 


ಯು.ಆರ್ ಅನಂತಮೂರ್ತಿಯವರು ಈ ಕಥಾಸಂಕಲನಕ್ಕೆ ಮುನ್ನುಡಿ ಬರೆಯುವಾಗ ಒಂದು ಮಾತನ್ನು ಉಲ್ಲೇಖಿಸುತ್ತಾರೆ. 'ನಾಗತಿಹಳ್ಳಿ ನನ್ನ ಸಮಕಾಲೀನರಿಂದ ಕಲಿತವರಾಗಿದ್ದೂ ನವ್ಯವನ್ನು ದಾಟಿದವರು; ಬಂಡಾಯ ಚಳುವಳಿಯಿಂದ ಪ್ರಭಾವಿತರಾಗಿದ್ದೂ ಅದನ್ನು ಮೀರಿದವರು' ಎಂದು.

ಈ ಸಾಲು ನನಗೆ ಉತ್ಕಟವಾಗಿ ಕಂಡದ್ದು 'ಗಾಯ' ಕತೆಯಲ್ಲಿ.


ಗಾಯ :

ಒಂದು ಊರಿನ ಒಳ ರಾಜಕೀಯ, ಜಾತಿ ರಾಜಕೀಯಗಳಿಂದ ಆ ಹಳ್ಳಿ ನರಳುವ ಬಗೆಯನ್ನು.. ಅದನ್ನು ತಡೆಯಲು ಉಳಿದವರು ಪಡುವ ಪಾಡನ್ನು ಹಾಗೂ ಅವರ ಪ್ರಯತ್ನಕ್ಕೆ ಸಿಗುವ ಪ್ರತಿಕ್ರಿಯೆಯನ್ನು ತಣ್ಣಗೆ ಹೇಳುತ್ತಲೇ.. ತಲೆಮಾರುಗಳ ನಡುವಿನ ಯೋಚನೆಗಳ ಅಂತರವನ್ನೂ ತಿಳಿಸುತ್ತಾರೆ. ರಾಜಕೀಯ, ಜಾತಿ ವೈಷಮ್ಯದಿಂದ ಉಂಟಾಗುವ ಗಾಯವನ್ನು ಮಾಯಿಸುವುದು ಅಷ್ಟು ಸುಲಭವೇ..?? ಹಾಗೆ ಗಾಯ ಮಾಯ್ದರೂ ಉಳಿದ ಕಲೆಯ ಪರಿಣಾಮವೇನು..?? ಇಂದಿಗೂ ಹೆಚ್ಛೆಚ್ಚು ಪ್ರಸ್ತುತವೆನಿಸುವ ಹಳ್ಳಿಗಳ ಕಥೆ ಇದು. 


ಛಿದ್ರ :

ಪುಸ್ತಕದ ಶೀರ್ಷಿಕೆಯೂ ಆಗಿರುವ ಕಥೆ 'ಛಿದ್ರ'. ಕುಳ್ಳುಬಟ್ಟರು ಒಂದು ಸೈಟು ತೆಗೆದುಕೊಂಡಾಗಿನಿಂದ ತಮ್ಮ ಕಷ್ಟಾಜಿತವನ್ನು ಅಲ್ಲಿ ಸುರಿದು ಮನೆ ಕಟ್ಟಿ, ತಮ್ಮ ದೊಡ್ಡ ಕುಟುಂಬವನ್ನು ಅಲ್ಲಿಗೆ ಸ್ಥಳಾಂತರಗೊಳಿಸಿ, ಇನ್ನೇನು ನೆಮ್ಮದಿಯ ಜೀವನ ನಡೆಸಬೇಕು ಎನ್ನುವಷ್ಟರಲ್ಲಿ ಶುರುವಾಗುವ ತಲ್ಲಣಗಳ ಕಥೆ. ಇದರ ಜೊತೆಗೆ ನಾಯಿಯ ನಿಯತ್ತು ಹಾಗೂ ಮನುಷ್ಯರ ಬದಲಾಗುವ ವರ್ತನೆಗಳ ಚಿತ್ರಣವೂ ಇದೆ.

'ನಿತ್ಯವೂ ಸೂರ್ಯನು ಹುಟ್ಟುವನು ; ಕುಳ್ಳುಬಟ್ಟರಿಗೆ ಸಮಾಧಾನ ತರುವನು. ನಿತ್ಯವೂ ಸೂರ್ಯನು ಮುಳುಗುವನು; ಕುಳ್ಳುಬಟ್ಟರಿಗೆ ಚಿಂತೆಗಳನ್ನು ತರುವನು.' ಎನ್ನುವ ಸರಳ ವಾಕ್ಯಗಳಲ್ಲಿ ಇಡೀ ಕಥೆಯ ಅಂತರ್ಯವೇ ಅಡಗಿದೆಯೇನೋ ಎನ್ನಿಸುವಂತಿದೆ.


ನಾಯಿಪಾಡು :

ಮನುಷ್ಯನು ಅಲ್ಲಿ-ಇಲ್ಲಿ ಅಲೆಯುವಾಗ, ಆತನದನ್ನೇ ನಾಯಿಪಾಡು ಎಂದು ಕರೆಯುವ ನಾವು.. ನಾಯಿಯ ಜೀವನದ ಘಟ್ಟಗಳಲ್ಲಿ ಅದು ಅಲೆದಾಡುವ, ಪ್ರತಿಕ್ರಿಯೆ ನೀಡುವ ಬಗೆಯನ್ನು ಕಂಡಾಗ ಏನೆನ್ನಬಹುದು..?? ಅದರಲ್ಲೂ.. ಹೆಣ್ಣುನಾಯಿಯೊಂದರ ಕೆಲದಿನಗಳ ವರ್ತನೆ ಹಾಗೂ ಅದರ ಹೋರಾಟವನ್ನು ಗಮನಿಸಿ ಬರೆದಿರುವ ಕಥೆಯನ್ನು ಆಗಾಗ ತಮ್ಮ ಸಹೋದ್ಯೋಗಿಗಳಿಗೂ ಹೋಲಿಸುವಾಗ ನಾಯಿಪಾಡಿನ ಸ್ಥಿತಿ ಹೆಚ್ಚು ಅರ್ಥವಾಗುತ್ತದೆ.


ನಾಟ್ಯರಾಣಿ ಶಾಂತಲೆ :

ಮುಂಜಾನೆ ಹಳ್ಳಿ ಹಾಗೂ ಅಸ್ತಮಾನಪುರವೆಂಬ ಊರುಗಳ ನಡುವಿನ ಪ್ರಯಾಣದ ಕಥೆಯಲ್ಲಿ ಬರುತ್ತಾಳೆ ನಮ್ಮ ಕಥಾ ನಾಯಕಿ ಶಾಂತಲೆ. ಈ ಕಥೆಯಲ್ಲಿ ಹೆಚ್ಚಿನ ರೂಪಕಗಳಿದ್ದು ಕಥೆ ಕಟ್ಟುವಿಕೆಯ ಶೈಲಿ ಕಾವ್ಯಾತ್ಮಕವಾಗಿಯೂ ಕೂಡಿದೆ. ಇದು ನಿಜವಾಗಿಯೂ ನಾಟ್ಯರಾಣಿಯೇ ಶಾಂತಲೆಯ ಕಥೆಯಾ..?? ನಿಗೂಢವಾಗಿರುವ ಈ ಕಥೆಯ ಕುರಿತು ಹೆಚ್ಚು ಬಿಚ್ಚಿಡಲಾರೆ. ಆದರೆ ಈ ವಿಭಿನ್ನ ಕಥೆಯ ಅಂತ್ಯ ಬಹಳ ಕಾಡುವ ಅಂತ್ಯ.


ನಾನು ನಾಗತಿಹಳ್ಳಿ ಚಂದ್ರಶೇಖರ್ ಅವರ ರೆಕ್ಕೆ-ಬೇರು ಅಂಕಣಗಳನ್ನು ಓದಿದ್ದೆ ಹಾಗೂ ಸಿನಿಮಾಗಳನ್ನು ನೋಡಿದ್ದನಾದರೂ.. ನಾನು ಓದಿದ ಮೊದಲ ಪುಸ್ತಕ, ಈ ಕಥಾಸಂಕಲನ 'ಛಿದ್ರ'. ಕಥೆ ಕಟ್ಟಿರುವ ಶೈಲಿ, ಕಟ್ಟಿಕೊಡುವ ರೂಪಕಗಳು, ಕಾವ್ಯಾತ್ಮಕತೆ, ಪಶ್ಚಿಮ ದೇಶಗಳ ಸಂದರ್ಭಗಳು, ಸರಳ ವಾಕ್ಯಗಳಲ್ಲಿ ನಿಗೂಢವಾಗಿ ಇಡೀ ಕಥೆಯ ಆಂತರ್ಯವನ್ನು ಬಚ್ಚಿಟ್ಟು ಅದರಲ್ಲಿ ಎರಡು ಅರ್ಥವನ್ನು ಹೊಳೆಸಿ.. ಸಾಮಾನ್ಯಕ್ಕೆ ಅರ್ಥವಾಗುವ ಕಥೆಗೂ.. ಕಥೆಯಲ್ಲಿರುವ ವಾಕ್ಯಗಳ ಜೊತೆಗೂ ಇರುವ ಸಂಬಂಧವನ್ನೂ, ಸಂಬಂಧವನ್ನು ಬಚ್ಚಿಟ್ಟ/ಬಿಚ್ಚಿಟ್ಟ ರೀತಿ ಇಷ್ಟವಾಯಿತು. ಕತೆಯ ಶೀರ್ಷಿಕೆಗಳೂ ಅರ್ಥಪೂರ್ಣವಾಗಿ, ಚಿಕ್ಕದಾಗಿ, ಚೊಕ್ಕವಾಗಿ ಕಥೆಯ ಗುಟ್ಟನ್ನು ಬಿಟ್ಟು ಕೊಡದೆ ಸೆಳೆಯುತ್ತವೆ. ಒಂದು ಚಂದದ ಕಥಾಸಂಕಲನದ ಓದು ತನ್ನ ಕಥೆಗಳೊಳಗಿನ ತಲ್ಲಣಗಳಿಂದ ಕಾಡುತ್ತದೆ.


~ವಿಭಾ ವಿಶ್ವನಾಥ್