ಭಾನುವಾರ, ಏಪ್ರಿಲ್ 5, 2026

E- ಹೊತ್ತಲ್ಲಿ ಈ ಹೊತ್ತಿಗೆ

 


ಇಂದು ಎಲ್ಲವೂ ಡಿಜಿಟಲ್ ಯುಗ. ಈ ಎಲೆಕ್ಟ್ರಾನಿಕ್ ಯುಗದಲ್ಲಿ ನಮ್ಮನ್ನೇ ನಾವು ಕಳೆದುಕೊಂಡು ಬಿಟ್ಟಿದ್ದೇವೆ. ಅಂತಹದ್ದರಲ್ಲಿ ಓದು ಕೂಡಾ. ಇಂದು ಓದು ಕೂಡಾ ಡಿಜಿಟಲ್ ಆಗಿ ಮಾರ್ಪಟ್ಟಿದೆ. ಎಲ್ಲಿ ಓದಿದರೂ, ಹೇಗೆ ಓದಿದರೂ ಓದು ಓದೇ ಅಲ್ಲವಾ..?


ಎಷ್ಟೋ ಸಮಯವಿದ್ದರೂ ಸೋಶಿಯಲ್ ಮೀಡಿಯಾಗಳಲ್ಲಿ ಮುಳುಗಿ ಸಮಯವಿಲ್ಲ ಎಂದು ಇದ್ದು ಬಿಡುತ್ತೇವೆ. ಬಸ್ಸಲ್ಲಿ, ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ಕೂಡಾ ಓದು ಸಂಗಾತಿಯಾಗಬಲ್ಲದು.

ಏನನ್ನು ಓದಬೇಕು ? ಎಂಬುದು ಮತ್ತೊಂದು ಪ್ರಶ್ನೆ. ಅದು ಅವರವರ ಭಾವ ಮತ್ತು ಆಸಕ್ತಿಗೆ ಸಂಬಂಧಪಟ್ಟದ್ದು. ಆದರೆ, ಮನಸ್ಸಿದ್ದಲ್ಲಿ ಪ್ರತಿಯೊಂದರಲ್ಲಿಯೂ ಏನಾದರೊಂದು ಒಳ್ಳೆಯದ್ದು, ಗೊತ್ತಿಲ್ಲದಿರುವುದು ಅಥವಾ ತಿಳಿದುಕೊಳ್ಳುವುದು, ಇಷ್ಟವಾಗುವುದು ಹೀಗೇ ಏನಾದರೊಂದು ಇದ್ದೇ ಇರುತ್ತದೆ. ಅದನ್ನು ಕಣ್ಣು ಬಿಟ್ಟು ಹಾಗೂ ಮನಸ್ಸು ತೆರೆದು ನೋಡುವುದು, ಸ್ವೀಕರಿಸುವುದರಲ್ಲಿರುತ್ತದೆ.

ಇದಕ್ಕೆ ತಕ್ಕಂತೆ ನಾನು ಕೇಳಿರುವ ಒಂದು ದೃಷ್ಟಾಂತವನ್ನು ಇಲ್ಲಿ ಉಲ್ಲೇಖಿಸುತ್ತೇನೆ.

ಮಹಾತ್ಮ ಗಾಂಧಿಯವರಿಗೆ ಅಂಚೆಯಲ್ಲಿ ಒಂದು ಪತ್ರ ಬರುತ್ತದೆ. ಅದು ಸುಮಾರು ಇಪ್ಪತ್ತು ಪುಟಗಳನ್ನು ಒಳಗೊಂಡಿದ್ದ ಪತ್ರ. ಆಶ್ರಮದಲ್ಲಿದ್ದ ಒಬ್ಬರು ಅದನ್ನು ಅವರಿಗೆ ತಂದು ಕೊಟ್ಟು " ಇದು ನಿಮ್ಮನ್ನು ದೂಷಿಸಿ, ಬೈದು ಬರೆದಿರುವ ಪತ್ರ. ಇದು ಯಾರಿಗೂ ಉಪಯೋಗಕ್ಕೆ ಬಾರದಿರುವ ಪತ್ರ." ಎಂದರು. " ಆಗಲಿ, ಪರವಾಗಿಲ್ಲ" ಎನ್ನುತ್ತಾ ಪತ್ರವನ್ನು ತೆಗೆದುಕೊಂಡು ಅದನ್ನು ಸಮಾಧಾನದಿಂದ ಓದಿದರು. ನಂತರ ಅದರಲ್ಲಿದ್ದ ಗುಂಡು ಸೂಜಿಯನ್ನು ಮಾತ್ರ ತೆಗೆದುಕೊಂಡು ಆ ಪತ್ರವನ್ನು ಕಸದ ಬುಟ್ಟಿಗೆ ಎಸೆದು ಹೇಳಿದರಂತೆ.. ಅದರಲ್ಲಿಯೂ ಉಪಯೋಗವಾಗುವುದು ಇದ್ದೇ ಇದೆ.

ನಾವು ಏನೇ ಓದಿದರೂ ನಮಗೆ ಅದರಲ್ಲಿ ಒಂದಾದರೂ ಪಾಸಿಟಿವ್ ಅಂಶ ಇದ್ದೇ ಇರುತ್ತದೆ. ನಮ್ಮ ಓದಿನ ವೇಗ ಹೆಚ್ಚಿಸುತ್ತದೆ. ನಮ್ಮ ತಾಳ್ಮೆಯನ್ನು ಹೆಚ್ಚಿಸುತ್ತದೆ. ನಮ್ಮ ಯೋಚನಾ ಲಹರಿಯನ್ನು ಬದಲಾಯಿಸುತ್ತದೆ. ಬರಹಗಾರರಾಗಿದ್ದರಂತೂ ಅವರ ಬರಹಕ್ಕೆ ಮತ್ತಷ್ಟು ಹೆಚ್ಚಿನ ಪರಿಧಿ ನೀಡುತ್ತದೆ. ವಾಗ್ಮಿಗಳು ಅಥವಾ ಲೀಡರ್ ಗಳಿಗೆ ಅವರ ಮಾತು ಮತ್ತು ಸ್ವಭಾವವನ್ನು ಬದಲಾಯಿಸಿಕೊಳ್ಳಲು ಅನುಕೂಲಕರವಾಗಿರುತ್ತದೆ.

ಬರೆದುದೆಲ್ಲವನ್ನೂ ಎಲ್ಲರೂ ಒಪ್ಪಲಾರರು. ಅಥವಾ ಎಲ್ಲರಿಗೂ ಮೆಚ್ಚಿಸಲು ಬರಹಗಾರ ಬರೆಯಲಾರ. ಅದು ಅವರವರ ಆಲೋಚನಾ ಪರಿಧಿಗೆ ಬಿಟ್ಟದ್ದು.

ನಾನು ಓದಿದ ಪುಸ್ತಕಗಳ ಕೆಲ ವಿಚಾರಗಳನ್ನು, ನನಗಿಷ್ಟವಾದ ವಿಷಯಗಳನ್ನು ನಾನು ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇನ್ನು ಮುಂದೆ ನೀವು ಈ ಬರಹಗಳನ್ನು ಓದಬಹುದು. ಇದು ವಿಮರ್ಶೆಯಲ್ಲ, ವಿಮರ್ಶೆ ಮಾಡುವಷ್ಟು ದೊಡ್ಡವಳು ನಾನಲ್ಲ. ನನ್ನ ಕೆಲ ಮಾತುಗಳು ಹಾಗೂ ಪುಸ್ತಕದ ವಿಚಾರಗಳು.

E- ಹೊತ್ತಲ್ಲಿ ನಾನು ಓದಿದ ಹಾಗೂ ಓದುತ್ತಿರುವ ವಿಚಾರ ವಿನಮಯ ಇದು ಅಷ್ಟೇ.

ಈ ಸರಣಿ ಬರಹಕ್ಕೆ ನಾನು ನಿಮ್ಮೆಲ್ಲರ ಸಹಕಾರ ಬಯಸುತ್ತೇನೆ. ಓದಿದ ಎಲ್ಲರಿಗೂ ಧನ್ಯವಾದಗಳು.

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 20, 2020

ಬಚ್ಚಿಟ್ಟ ಭಾವಗಳ ಬಿಚ್ಚಿಟ್ಟ ಪುಟಗಳು

 


ಮನಸ್ಸಿನ ಭಾವನೆಗಳನ್ನು ನಿರುಮ್ಮಳವಾಗಿ ಬಿಚ್ಚಿಡಲಾಗುವುದು ಇಲ್ಲಿಯೇ ಅಲ್ಲವಾ ? ಒಲವೆಂದರೆ ಒಮ್ಮುಖ ಭಾವವಲ್ಲ, ಬಲವಂತದ ಹೇರಿಕೆಯಿಂದ ಬರುವುದು ಸಹಾ ಅಲ್ಲ. ಅದೇಕೋ ನನಗನ್ನಿಸುತ್ತಿರುವುದು ಇಷ್ಟೇ. ನಾನು ಅವನಿಗೆ ಒಳ್ಳೆಯ ಗೆಳೆತಿಯಾಗಿ ಮಾತ್ರ ಇರಬಲ್ಲೆ. ಒಳ್ಳೆಯ ಪತ್ನಿಯಾಗಲಾರೆನೇನೋ.. ಒಲುಮೆ ಎಂಬುದು ಮನಸ್ಸಿನಿಂದ ಬರಬೇಕು. ಮಾಂಗಲ್ಯ ಬಂಧನದಿಂದ ಜೋಡಿಸುತ್ತಾರೆ. ಆದರೆ, ಮನಸ್ಸುಗಳ ಬೆಸುಗೆಯಾಗಬೇಕು ಅಲ್ಲವೇ.. ? ರಾಶಿ, ನಕ್ಷತ್ರ, ಜಾತಕ, ಗಣಕೂಟ ಎಲ್ಲವೂ ಹೊಂದಾಣಿಕೆಯಾದರೆ ಕೊಡು-ಕೊಳ್ಳುವಿಕೆಯು ಸಹಾ ಹೊಂದಾಣಿಕೆಯಾಗಬೇಕು. ಪರಿಸ್ಥಿತಿಗೆ ರಾಜಿಯಾಗಿ ಮದುವೆ ಸಹಾ ನಡೆದು ಹೋಯಿತು. ನಾವು ಎಂದಿಗೂ ಮನ ಬಿಚ್ಚಿ ಮಾತನಾಡಲಿಲ್ಲ. ಇಷ್ಟಾನಿಷ್ಟಗಳ, ಹೊಂದಿಕೆಯ ಕುರಿತು ಚರ್ಚಿಸಲಿಲ್ಲ. ಹಿರಿಯರ ಮಾತಿಗೆ ಕಟ್ಟು ಬಿದ್ದು, ಪರಿಸ್ಥಿತಿಯ ಕೈ ಗೊಂಬೆಗಳಾಗಿ ವಿವಾಹ ಬಂಧನಕ್ಕೆ ಸಿಲುಕಿದೆವು. ಮುಂದೆ ಇದೇ ರೀತಿಯ ಒತ್ತಾಯಕ್ಕೋ, ಗೃಹಸ್ಥ ಧರ್ಮ ಎನ್ನುತ್ತಲೋ ಜೊತೆಗೇ ಬದುಕು ನಡೆಸುತ್ತೇವೆ. ಹಾಸಿಗೆಯ ಸುಖಕ್ಕೆ ಪ್ರೀತಿ ಬೇಕಿಲ್ಲವಲ್ಲ. ಅವನ ಕಾಮದಾಹಕ್ಕೆ ಒಂದು ಹೆಣ್ಣು ಜೀವವಾಗಿ ನಾನಿರುತ್ತೇನೆ. ಅದನ್ನೂ ಕರ್ತವ್ಯ ಎಂಬಂತೆ ನಿಭಾಯಿಸಬೇಕಾಗುತ್ತದೆ. ಅದು ಎಲ್ಲರ ಒಪ್ಪಿಗೆಯ ಮುದ್ರೆ ಬಿದ್ದ ವ್ಯಭಿಚಾರ, ಅದಕ್ಕೆ ಹೆಸರು ಮಾತ್ರ ವಿವಾಹ ಬಂಧನ. ಈ ಭಾವಗಳು ಈಗಿನ ಕಾಲಕ್ಕೆ ಕೊಂಚ ಔಟ್ ಡೇಟೆಡ್ ಅಲ್ಲವಾ..? ನಾನು ಈ ಕಾಲಕ್ಕೆ ಹೊಂದಿಕೆಯಾಗಬಲ್ಲೆನಾ ಎಂಬ ಪ್ರಶ್ನೆ ಸದಾ ನನ್ನಲ್ಲಿ ಕಾಡುತ್ತಲೇ ಇರುತ್ತದೆ 


ನಾನು ಮಾತ್ರ ಹೀಗೆಯಾ ? ಯಾವಾಗಲೂ ನನಗನ್ನಿಸುತ್ತಿರುತ್ತದೆ, ನನ್ನಲ್ಲಿ ಭಾವಗಳೇ ಉದಿಸುವುದಿಲ್ಲವಾ ? ಅಥವಾ ಅದರಲ್ಲಿ ಪ್ರೀತಿ ಎಂಬುದು ಮಾತ್ರ ಕಾಣೆಯಾಗಿರುತ್ತದೆಯಾ ? ಭಾವಗಳೇ ಇಲ್ಲದ ನಾನು ಲೋಕದ ಕಣ್ಣಿಗೆ ಭಾವಪೂರ್ಣ ಲೇಖಕಿ. ಅಷ್ಟಕ್ಕೂ ಅವನಿಗೆ ಇದರ ಕುರಿತು ಸಣ್ಣ ಅರಿವಾದರೂ ಇರಬಹುದಾ ? ನಾನು ನನ್ನ ಬರಹವನ್ನು ಮುಂದುವರಿಸುತ್ತೇನೆಂದರೆ ಅವನು ಒಪ್ಪಬಹುದಾ ? ಅವನ ಮನೆಯವರದ್ದಾರದ್ದೂ ಆಕ್ಷೇಪ ಇರಲಾರದಾ ? ಅಥವಾ ನನ್ನ ಮನೆಯಂತೆ ಇಲ್ಲಿಯೂ ನಿರ್ಲಕ್ಷ್ಯ ತೋರಬಹುದಾ ? ಮೆಚ್ಚುಗೆಯ ಮಾತುಗಳು ಸಿಗದಿದ್ದರೂ ಚುಚ್ಚು ಮಾತುಗಳಂತೂ ಸಿಗಲಾರವೇನೋ? ನೋವು ನೀಡುವುದು ಮತ್ತೊಬ್ಬರ ಪದಗಳಲ್ಲ, ನಮ್ಮದೇ ಭಾವಗಳು, ನಮ್ಮದೇ ನಿರೀಕ್ಷೆಗಳು. ಬಹುಶಃ ನಾನೇ ಮತ್ತೊಬ್ಬರ ಕಾಳಜಿ, ಪ್ರೀತಿಯನ್ನು ನಿರೀಕ್ಷಿಸುವೆನಾ ? ನಾನು ತೋರುವ ಕಾಳಜಿ ಮತ್ತು ಪ್ರೀತಿಯನ್ನು ಸಹಾ ನಾನು ನಿರೀಕ್ಷಿಸುವುದು ತಪ್ಪಾಗುತ್ತದೆಯಾ ? ಇಷ್ಟು ದಿನದ ಹೊಂದಾಣಿಕೆ ಎಂಬ ಮುಖವಾಡದ ಬದುಕನ್ನು ಇಲ್ಲಿಯೂ ಮುಂದುವರಿಸಬೇಕಾ ? ಕೃಷ್ಣ ಎಲ್ಲವೂ ನಿನಗೇ ಅರ್ಪಿತ. ನನ್ನ ಬದುಕಿನ ಇಬ್ಬರು ಗೆಳೆಯರು ನೀವುಗಳೇ.. ಒಂದು ಡೈರಿ ಮತ್ತೊಬ್ಬ ಆರಾಧ್ಯ ದೈವ ಶ್ರೀ ಕೃಷ್ಣ. ಹೇಳಿದ ಎಲ್ಲಾ ಸತ್ಯವನ್ನು ಮತ್ತೊಬ್ಬರಿಗೆ ತಾನಾಗಿಯೇ ಬಿಚ್ಚಿಡದ ಡೈರಿ. ತಾನು ಹೇಳಿದ್ದಕ್ಕೆಲ್ಲಾ ಮುಗುಳ್ನಗೆಯಿಂದಲೇ ಉತ್ತರಿಸಿಯೂ, ಉತ್ತರಿಸದ ಶ್ರೀ ಕೃಷ್ಣ.
ಕೃಷ್ಣಾರ್ಪಣ ಮಸ್ತು ಎಂದು ಡೈರಿಯನ್ನು ಬರೆದು ಮುಚ್ಚಿಟ್ಟು ಮಲಗಿದಳು ಪರಿಣಿಕಾ

ಮದುವೆಯಂತೂ ಆಯಿತು. ಇಷ್ಟಾಕಷ್ಟಗಳ ಕುರಿತ ಚರ್ಚೆ ನಾವು ಮಾಡಲಿಲ್ಲ. ಅವರುಗಳು ಅವಕಾಶ ನೀಡಿದರು ಆದರೆ ನಾವುಗಳೇ ನಮ್ಮ ಸಂಕೋಚದ ತೆರೆ ಕಳಚಲಿಲ್ಲ. ಕೊಂಚವಾದರೂ ಮುಂದುವರಿದು ನಾನೇ ಅವಳನ್ನು ಮಾತನಾಡಿಸಬೇಕಿತ್ತೋ ಏನೋ.. ಅವಳ ಗಾಂಭೀರ್ಯತೆ ನನ್ನಲ್ಲಿ ಗೌರವ ಮೂಡಿಸುತ್ತದೆ. ಎಲ್ಲರ ಎದುರಿಗೂ ಹೆಚ್ಚು ಮಾತನಾಡುವವನು ನಾನು. ಯಾಕೋ ಅವಳ ಕಣ್ಣ ಕಾಂತಿಗೆ, ಸ್ವಚ್ಛ ನಿಷ್ಕಲ್ಮಶ ನಗುವಿಗೆ ಸೋತು ಬಿಡುತ್ತೇನೆ. ಅವಳ ಕನಸುಗಳಿಗೆ ನಾನು ರೆಕ್ಕೆ ಕಟ್ಟಬೇಕು. ವಿವಾಹ ಬಂಧನವಾಗಬಾರದು ಅವಳ ಸ್ವಾತಂತ್ರ್ಯ ಅವಳಿಗೇ ಬಿಡಬೇಕು. ನಮ್ಮತನವನ್ನು ಕೊಂದುಕೊಂಡು ಹೊಂದಿಕೊಂಡು ಬದುಕಬಾರದು, ಒಬ್ಬರನ್ನೊಬ್ಬರು ಅರಿತು ಒಂದಾಗಿ ಬಾಳಬೇಕು. ಇಷ್ಟು ದಿನ ಅವಳು ಎಲ್ಲರ ಜೊತೆಗೆ ಹೊಂದಿಕೊಂಡೇ ಬದುಕಿರುತ್ತಾಳೆ. ಅವಳ ಮೃದು ಮಾತನ್ನು ಕೇಳಿದರೆ ಹಾಗನ್ನಿಸುತ್ತದೆ. ನಾನು ನನ್ನೆಲ್ಲಾ ಮನಸ್ಸಿನ ಮಾತನ್ನು ಬಿಚ್ಚಿಡಬೇಕು. ಹಾಡು ಹಾಡಲು ಬರುವುದೇ ಅವಳಿಗೆ ? ಅವಳ ಜೇನು ದನಿಯ ಮಾತು ಕೇಳಿದರೆ ಯಾವುದೋ ವೀಣೆಯ ಸ್ವರ ಮೀಟಿದಂತಿರುತ್ತದೆ. ಪತಿ-ಪತ್ನಿಯರಾಗಿ ಬಾಳುವ ಮೊದಲು ಒಳ್ಳೆಯ ಸ್ನೇಹಿತರಾಗಬೇಕು. ಪ್ರೀತಿಯಿಂದ ಒಂದಾಗಬೇಕೇ ಹೊರತು ಕಾಮದಿಂದಲ್ಲ. ಕಾಯುವಿಕೆಗೆ ದಕ್ಕದ, ಒಲಿಯದ ಪ್ರೀತಿ ಜಗತ್ತಿನಲ್ಲಿ ಇಲ್ಲವೇ ಇಲ್ಲ

ಕಾಯುವಿಕೆಯ ಅರ್ಥ ಕಲಿಸಿದವಳು ರಾಧೆಯಾದರೆ, ಪ್ರೀತಿಯ ಸಾರ್ಥಕತೆ ಮೂಡಿಸಿದವನು ಕೃಷ್ಣ. ಕೃಷ್ಣನ ಪರಮ ಭಕ್ತನಿಗೆ ಪ್ರೀತಿಯ ಪಾಠ ಮಾಡಲು ಹೇಳಿಕೊಡಬೇಕೆ? ಅಂತರ್ಮುಖ ಭಾವನೆಗಳನ್ನು ಡೈರಿಯಲ್ಲಿ ಬರೆಯುತ್ತಿದ್ದೆ. ಡೈರಿ ನನ್ನನ್ನು ಹಂಗಿಸಲಾರದು ಎಂಬ ಧೈರ್ಯದಿಂದ. ಇನ್ನು ಮುಂದೆ ನನ್ನವಳೊಡನೆ ನಾನು ಎಲ್ಲವನ್ನು ಹಂಚಿಕೊಳ್ಳಬೇಕು. ಈ ಡೈರಿಯಲ್ಲಿ ಬಿಚ್ಚಿಟ್ಟ ಭಾವಗಳು ಪದಗಳಾಗುವುದು ಕಷ್ಟ. ಈ ಡೈರಿಯನ್ನು ಅವಳಿಗೆ ನೀಡಿ ಬಿಡುತ್ತೇನೆ. ಸಂಗಾತಿಗಳಲ್ಲಿ ಮುಚ್ಚು ಮರೆ ಇರಬಾರದಲ್ಲ.
ಎಲ್ಲಕ್ಕೂ ಮುಖ್ಯವಾಗಿ ನಾನು ಇದನ್ನು ಕಂಡುಕೊಂಡ ಬಗೆಯನ್ನು ಹೇಳುವೆ. ಗಂಡಸಿಗೆ ಹೆಣ್ಣಿನ ಮನಸ್ಸು ಅರ್ಥವಾಗದು. ಭಾವಗಳಿಗೆ ಸ್ಪಂದಿಸುವ ಬಗೆ ಅಷ್ಟು ತಿಳಿಯದು. ನಾನೊಬ್ಬ ಒಳ್ಳೆಯ ಓದುಗ. ನಾನು ಹೆಚ್ಚು ಓದುವ ಬರಹಗಳು "ಸಖಿ"ಯವರದ್ದು.  ನಿಮಗೆ ಅವರ ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನಲ್ಲಿ ಈ ರೀತಿಯ ಆಲೋಚನೆ ಬರಲು ಕಾರಣ ಅವರು. ಬದುಕಲ್ಲಿ ಒಮ್ಮೆ ಅವರನ್ನು ಇಬ್ಬರೂ ಸೇರಿ ಭೇಟಿಯಾಗೋಣ. ಅವರ ಭಾವಚಿತ್ರ ಎಲ್ಲಿಯೂ ಇಲ್ಲ, ಹೇಗಿದ್ದಾರೋ ಗೊತ್ತಿಲ್ಲ. ಆದರೆ, ಅವರ ಬರಹಗಳು ಪ್ರಭಾವಿಸಿವೆ. ಹಸಿಬಿಸಿ ಪ್ರೇಮದ ಕುರಿತು ನನಗೆ ನಂಬಿಕೆಯಿಲ್ಲ, ಅವರ ನಿರ್ಮಲ ಪ್ರೇಮದ ಪರಿಕಲ್ಪನೆ ಮಾತ್ರ ನನ್ನನ್ನು ಅಗಾಧವಾಗಿ ಪ್ರಭಾವಿಸಿದೆ. ಇದೆಲ್ಲವನ್ನೂ ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಬರೆದು ಡೈರಿಯನ್ನು ಪಕ್ಕಕ್ಕೆ ಎತ್ತಿಟ್ಟು ಮಲಗಿದ ಅಭಿನವ್.

ಎರಡೂ ಪುಟದ ಡೈರಿಯ ಭಾವಗಳೂ ಒಂದಾಗಲಿದ್ದವು. 

ಮರುದಿನ ಕಾಫಿ ಜೊತೆಗೆ ಡೈರಿಯನ್ನು ಕೊಟ್ಟ ಅಭಿನವ್, ಕಾಫಿ ಹೇಗಿದೆ ಗೊತ್ತಿಲ್ಲ, ಇಷ್ಟವಾಗದಿದ್ದಲ್ಲಿ ಹೇಳಿ.. ಬಲವಂತದ ಹೊಂದಾಣಿಕೆ ಬೇಡ. ಈ ಡೈರಿಯನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಡೈರಿಯನ್ನು ಅವಳ ಕೈಯ್ಯಲ್ಲಿಟ್ಟು ನಡೆದ ಅಭಿನವ್. ಪರಿಣಿಕಾಳದ್ದು ಮುಗುಳ್ನಗೆ ಅಷ್ಟೇ ಉತ್ತರ.


ಕಾಫಿ ಜೊತೆಗೆ ಅಭಿನವ್ ನಡವಳಿಕೆ ಅದೇಕೋ ಇಷ್ಟವಾಗಿತ್ತು ಪರಿಣಿಕಾಳಿಗೆ. ಡೈರಿಯ ಪುಟಗಳಲ್ಲಿ ಬಿಚ್ಚಿಟ್ಟಿದ್ದ ಭಾವ ತಾನು ಬಯಸಿದ್ದೇ ಆಗಿದ್ದಿತ್ತು. ತನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆತಿತ್ತು. ತಾನೇ ಮುಂದಾಗಿ ತನ್ನ ಡೈರಿಯನ್ನು ಅವನಿಗೆ ನೀಡಿದಳು. ಮೊದಲ ಪುಟ ತೆರೆದವನಿಗೆ "ಸಖಿ" ಎಂದು ಅವಳು ಬರೆದದ್ದು ಕಾಣಿಸಿತು. ಪ್ರಶ್ನಾರ್ಥಕ ದೃಷ್ಟಿಯಿಂದ ನೋಡಿದರೆ ಅವಳ ಮುಗುಳ್ನಗು ಎಲ್ಲಕ್ಕೂ ಉತ್ತರ ಹೇಳಿತ್ತು. 

ರಾತ್ರಿ ಹುಣ್ಣಿಮೆಯ ಬೆಳದಿಂಗಳಲ್ಲಿ ಪರಿಣಿಕಾ ಹಾಡುತ್ತಿದ್ದಳು. ಕೇಳುತ್ತಾ ಮಂತ್ರಮುಗ್ದರಂತೆ ಕುಳಿತಿದ್ದರು ಅಭಿನವ್ ಮತ್ತು ಅವನ ತಂದೆ-ತಾಯಿ.. ನಂತರ ಅಭಿನವ್ ತೋಳುಗಳಲ್ಲಿ ಸೇರಿ ಹೋಗಿದ್ದಳು ಅವನ "ಸಖಿ"

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 13, 2020

ನೋಡಿ ಸ್ವಾಮಿ ನಮ್ ಇಂಜಿನಿಯರ್ಸ್ ಕತೆ


ಇಂಜಿನಿಯರಿಂಗ್ ಅನ್ನೋ ಕೋರ್ಸ್ ಗೆ ಮೊದಲಿದ್ದ ಬೆಲೆ ಈಗಿಲ್ಲ. ಪಿ.ಯು.ಸಿ ಸೈನ್ಸ್ ತೆಗೆದುಕೊಂಡ ನಂತರ ಅವರ ಮುಂದೆ ಇರುವುದು ಎರಡೇ ಚಾಯ್ಸ್ ಅನ್ನೋ ತರಹಾ ಬಿಂಬಿಸಿ ಬಿಟ್ಟಿರುತ್ತಾರೆ. ಒಂದೋ ಮೆಡಿಕಲ್, ಇಲ್ಲವೇ ಇಂಜಿನಿಯರಿಂಗ್. ಒಂದು ಕಾಲದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ ಅಂದರೆ ಬೆಲೆ ಇತ್ತು ಆದರೆ ಈಗ ಮನೆಯಲ್ಲಿ ಇಬ್ಬರು-ಮೂವರು ಇಂಜಿನಿಯರ್ ಗಳು. ಯಾಕೆ ಗೊತ್ತಾ ? 


"ಹುಡುಗಿ ಕುಳ್ಳಿ, ನೋಡೋಕೂ ಸುಮಾರು. ಇಂಜಿನಿಯರಿಂಗ್ ಮಾಡಿದ್ದಾಳೆ ಅಂದ್ರೆ ಮದುವೆ ಮಾಡೋಕು ಸುಲಭ ಆಗುತ್ತೆ" ಇದು ಹೆಚ್ಚಿನ ಹೆಣ್ಣು ಮಕ್ಕಳ ಮನೆಯಲ್ಲಿ ನಡೆಯುವ ಮಾತುಕತೆ. "ಕೆಲಸಕ್ಕೇನೂ ಕಳಿಸುವುದಿಲ್ಲ, ಆದ್ರೂ ಬಿ.ಇ ಮಾಡಲಿ" ಅನ್ನೋ ವಿಚಿತ್ರ ಮನೋಭಾವದವರು. "ಮೆಡಿಕಲ್ ಸೀಟ್ ಅಂತೂ ಸಿಗಲಿಲ್ಲ, ಕೊನೆಪಕ್ಷ ಇಂಜಿನಿಯರಿಂಗ್ ಗೆ ಆದ್ರೂ ಸೇರಿಕೊಂಡು ಮರ್ಯಾದೆ ಉಳಿಸು ಮಾರಾಯ" ಹೀಗೇ ಹೇಳುತ್ತಾ ಹೋದ್ರೆ ಪಟ್ಟಿ ಮುಗಿಯುವುದೇ ಇಲ್ಲ. 

ಬೇಕಾದ್ರೆ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಯಾವುದೇ ಬ್ರಾಂಚ್ ಗೆ ಹೋಗಿ ಕೇಳಿದರೆ ಅಲ್ಲಿ 75% ಜನ ಮತ್ತೊಬ್ಬರ ಒತ್ತಾಯಕ್ಕೋ, ಮತ್ತಾರ ಮಾತು ಕೇಳಿಯೋ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿಯೋ ಬಂದಿರುವುದು. ಮನೆಯಲ್ಲಿ ಮೊದಲನೇ ಮಗು ಇಂಜಿನಿಯರಿಂಗ್ ಮಾಡಿದ್ದರೆ ಎರಡನೇ ಮಗುವಿಗೂ ಇಂಜಿನಿಯರಿಂಗ್ ಫಿಕ್ಸ್. ಇವತ್ತು ಇಂಜಿನಿಯರಿಂಗ್ ಬರೀ ಡಿಗ್ರಿಯ ಹೆಸರಾಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿಕೊಳ್ಳಲು ಮಾತ್ರ ಮೀಸಲಾದಂತಿದೆ. ಇಲ್ಲವೇ, ಗ್ರಾಜುಯೇಷನ್ ಡೇ ಅಲ್ಲಿಯ ಒಂದು ಫೋಟೋಗೆ ಮೀಸಲು.

ಇಂಜಿನಿಯರಿಂಗ್ ಓದಿದರೂ ಕೆಲಸ ಇಲ್ಲ, ಹತ್ತು ಸಾವಿರ ಸಂಬಳಕ್ಕೆ ಯಾವುದೋ Call Center ಗಳಲ್ಲಿ ಕೆಲಸ. ಮೇಲಿಂದ ಮೇಲೆ ಒತ್ತಡಕ್ಕೆ ಸಿಕ್ಕ ಸಿಕ್ಕ ಯಾವುದೋ ಕೆಲಸಕ್ಕೆ ಸೇರಿ ಅದನ್ನು ಬಿಡಲೂ ಆಗದೆ, ಉತ್ತಮ ಕೆಲಸಕ್ಕೆ ಸ್ಕಿಲ್ ಇಲ್ಲದೆ ಒದ್ದಾಡುವ ಪರಿ ನೋಡಿದರೆ ಅರ್ಥವಾಗುತ್ತದೆ. ಅಷ್ಟಕ್ಕೂ, ಈ ಕೆಲಸದ ಹಿಂದೆ ಇಂಜಿನಿಯರಿಂಗ್ ಕಾಲೇಜುಗಳ placement ವಿಭಾಗದವರ ಕೈವಾಡವಿದೆ. ಸತ್ಯ ಕತೆ ಏನು ಗೊತ್ತಾ.. ?

Placement ಆಗಿದೆ ಎಂದು ತೋರಿಸುವ ಬ್ಯಾನರ್ ನಲ್ಲಿ 200 ರಿಂದ 300 ಜನರ ಫೋಟೋ ಇರುತ್ತದೆ.100% placement ಎಂಬ ಒಕ್ಕಣೆ ಬೇರೆ.. ಆದರೆ, ಅಸಲಿಯತ್ತು ಏನೆಂದರೆ ಹೀಗೆ ಆ ಕಂಪನಿ 10 ರಿಂದ 15 ಕಾಲೇಜುಗಳಲ್ಲಿ ಆಷ್ಟಷ್ಟು ಜನರನ್ನು ಆಯ್ಕೆ ಮಾಡಿರುತ್ತದೆ. ಕಾಲೇಜು ಮುಗಿದು, ರಿಸಲ್ಟ್ ಪಡೆದ ನಂತರ ಅಲ್ಲಿಗೆ ಹೋದರೆ ಮತ್ತಷ್ಟು ರೌಂಡ್ ಗಳ ಇಂಟರ್ ವ್ಯೂ ಅವರಿಗಾಗಿ ಕಾದು ಕೂತಿರುತ್ತದೆ. ಇಂಟರ್ ವ್ಯೂ ಅಲ್ಲಿ ಪಾಸಾದರೂ ಯಾರದ್ದಾದರೂ ರೆಫರೆನ್ಸ್ ಅತೀ ಅಗತ್ಯ. ಈ ಕುರಿತು ಕಾಲೇಜಿನಲ್ಲಿ ವಿಚಾರಿಸಿದರೆ, ನಮ್ಮ ಕಾಲೇಜ್ ಕಡೆಯಿಂದ placement ಆಗಿದೆ. ಉಳಿದದ್ದು ನಿಮಗೆ ಬಿಟ್ಟದ್ದು, ಇದಕ್ಕೆ ನಾವು ಜವಾಬ್ದಾರಿಯಲ್ಲ ಎಂಬ ನಿರ್ಲಕ್ಷ್ಯದ ಉತ್ತರ. ಅಷ್ಟಕ್ಕೂ ಈ ಎಲ್ಲಾ ಘಟನೆಗಳು ನಡೆದಿರುವುದು ಸಾಫ್ಟ್ವೇರ್ ಅಥವಾ ಅವರ ಬ್ರಾಂಚ್ ಗೆ ಸಂಬಂಧಪಟ್ಟ ಕೆಲಸಕ್ಕಲ್ಲ, call center ನ, ಇಂಜಿನಿಯರಿಂಗ್ ಸಬ್ಜೆಕ್ಟ್ ಅವಶ್ಯಕತೆಯೇ ಇಲ್ಲದ ಕೆಲಸಕ್ಕೆ.

ಅಷ್ಟಕ್ಕೂ ಈ ಕೆಲಸಕ್ಕೆ ಇಷ್ಟು ಪೈಪೋಟಿ ಯಾಕೆ ಅಂತಾ ಕೇಳ್ತೀರಾ ?

ಯಾಕೆಂದರೆ, ಇಂದಿನ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸ್ಕಿಲ್ ಗಳು ಇರುವ ಸಿಲೆಬಸ್ ಅನ್ನು ಕಲಿಸಲಾಗುತ್ತಿಲ್ಲ. Cloud computing, Artificial intelligence, machine learning ಎಲ್ಲವೂ ಮುಂಚೂಣಿಯಲ್ಲಿದ್ದರೂ ಭೋಧಿಸಲಾಗುತ್ತಿರುವುದು ಹಳೆ ಕಾಲದ ಔಟ್ ಡೇಟೆಡ್ ಸಿಲೆಬಸ್. ಹೋಗಲಿ, ಅದನ್ನಾದರೂ ಹೇಗೆ ಕಲಿಸುತ್ತಾರೆ ಗೊತ್ತಾ..? "ನಮಗೂ ಇದರ ಬಗ್ಗೆ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ, ನೋಟ್ಸ್ ಕೊಡ್ತೀವಿ ಓದಿಕೊಳ್ಳಿ ಎನ್ನುತ್ತಾ ಇಂಟರ್ನಲ್ಸ್ ಪ್ರಶ್ನೆಗಳನ್ನು ಕೊಟ್ಟು ಬಿಡುತ್ತಾರೆ." ಅರ್ಧ ಕ್ಲಾಸ್ ಆಗಲೇ ಬಂಕ್ ಮಾಡಿ ಸುತ್ತುತ್ತಿರುತ್ತಾರೆ. ಇನ್ನರ್ಧ ಕ್ಲಾಸ್ ಹೀಗೆ ಹಾಳಾಗುತ್ತಿರುತ್ತದೆ. ಇಂತಹವರ ಮಧ್ಯೆ ಅಪರೂಪಕ್ಕೆ ಕೆಲವು ಲೆಕ್ಚರರ್ ಗಳು ನಿಷ್ಠೆಯಿಂದ ಕಾನ್ಸೆಪ್ಟ್ ಅರ್ಥ ಮಾಡಿಸುತ್ತಾ ಇರುತ್ತಾರೆ. ವಿಪರ್ಯಾಸ ಏನು ಅಂದರೆ ಇಂತಹಾ ಲೆಕ್ಚರರ್ ಗಳ ಸಬ್ಜೆಕ್ಟ್ ಗಳಲ್ಲಿ ರಿಸಲ್ಟ್ ಕಡಿಮೆ, ಆದರೆ ಓತ್ಲಾ ಹೊಡೆಯುತ್ತಾ ಇಂಟರ್ನಲ್ಸ್ ಮಾರ್ಕ್ಸ್ ಕೊಟ್ಟ, ಪಾಠವೇ ಮಾಡದೆ ಪ್ರಶ್ನೆ ಕೊಟ್ಟು ಬರೆಯುವಂತೆ ಮಾಡುವ ಲೆಕ್ಚರರ್ ಸಬ್ಜೆಕ್ಟ್ ಅಲ್ಲಿ 100 % ರಿಸಲ್ಟ್.


Skillful Engineer ಗಳ ಕೊಲೆಯಾಗುವುದು ಎಲ್ಲಿ ಗೊತ್ತಾ ? ಭಾಗಶಃ ಅವರ ಲೆಕ್ಚರರ್ ಗಳಿಂದಲೇ.. ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಬರೆಯಬೇಕಾದಲ್ಲಿ ಅವರು ಕೊಟ್ಟ Xerox ನ Xerox ಕಾಪಿಯಂತೆಯೇ ಅಚ್ಚಾಗಿರಬೇಕು. ಯಾಕೆಂದರೆ, ತಪ್ಪಾದರೆ ಅದನ್ನು ಸರಿ ಮಾಡುವ ವಿಧಾನ ಇಬ್ಬರಿಗೂ ಗೊತ್ತಿರುವುದಿಲ್ಲ

ಯಾವುದಾದರೂ ಇಂಜಿನಿಯರಿಂಗ್ ಮಾಡಿರುವವರನ್ನು ಕೇಳಿ ನೋಡಿ.
C program ಅಲ್ಲಿ
#include<stdio.h>
#include<conio.h>

ಈ ಎರಡು ಸಾಲುಗಳನ್ನು ಬಿಟ್ಟು ಮತ್ತೇನೂ ಗೊತ್ತಿರುವುದಿಲ್ಲ. ಕೇಳಿದರೆ ಲೆಕ್ಚರರ್ ಹೇಳಿ ಕೊಡಲಿಲ್ಲ. ಇಂಜಿನಿಯರಿಂಗ್ ಗೆ ಬಂದ ನಂತರವೂ ಲೆಕ್ಚರರ್ ಅನ್ನು ನೆಚ್ಚಿಕೊಂಡು, ಅವರ ಜೆರಾಕ್ಸ್ ನೋಟ್ಸ್ ಅನ್ನೇ ನೆಚ್ಚಿಕೊಂಡು ಇರುವುದು ಎಷ್ಟು ಸರಿ? ನಮ್ಮಷ್ಟಕ್ಕೆ ನಾವು ಗೂಗಲ್ ಮಾಡದೇ, ಟೆಕ್ಟ್ ಬುಕ್ ಓದದೇ ಇನ್ನೂ ಅವರ ಪಾಠವನ್ನೇ ನೆಚ್ಚಿಕೊಂಡು ಕೂರುವುದು ಎಷ್ಟು ಸರಿ ?

ಇನ್ನು ಇಂಜಿನಿಯರಿಂಗ್ ಪ್ರಾಜೆಕ್ಟ್ ವಿಚಾರಕ್ಕೆ ಬಂದರೆ, ಅಲ್ಲಿ ಪ್ರಾಜೆಕ್ಟ್ ಗಿಂತ, ಅಲ್ಲಿ ರಿಪೋರ್ಟ್ ಗೆ ಹೆಚ್ಚು ಬೆಲೆ. ಪ್ರಾಜೆಕ್ಟ್ ನಲ್ಲಿ ಏನು ಕಲಿತೆ ಎಂಬುದು ಅಲ್ಲಿ ಮುಖ್ಯವೇ ಆಗಿರುವುದಿಲ್ಲ. ರಿಪೋರ್ಟ್ ನ format ಸರಿ ಇದ್ದರೆ ಆಯಿತು. ಪೇಜ್ ತುಂಬಿಸು, ಆ ಇಮೇಜ್ ಹಾಕು, ಈ ಟೆಸ್ಟ್ ಇರಲಿ. ಪ್ರಾಕ್ಟಿಕಲ್ ಅಲ್ಲಿ ಏನೂ ಇರದಿದ್ದರೂ ರಿಪೋರ್ಟ್ ನಲ್ಲಿ ಥಿಯರಿ ತುಂಬಿಸಿಟ್ಟಿರಬೇಕು. ಇನ್ನು ಆ ಪ್ರಾಜೆಕ್ಟ್ ಅವರು ಮಾಡಿದ್ದಾ, ಯಾವುದೋ consultancy ಇಂದ ತಂದಿದ್ದಾ..? ಯಾವುದೂ ಮುಖ್ಯವಾಗುವುದಿಲ್ಲ. ಎಷ್ಟೋ ಲೆಕ್ಚರರ್ ಗಳೇ ಹೇಳುವುದೂ ಉಂಟು.. xxxx Consultancy ಗೆ ಹೋಗಿ ಎಂಬುದಾಗಿ. ಸ್ವಂತ ಕೌಶಲ್ಯದಿಂದ ಮಾಡಿದ ಪ್ರಾಜೆಕ್ಟ್ ಎಂದು ಹೇಳಿದರೆ ಅವರುಗಳು ನಂಬಲು ಸಿದ್ದವೇ ಆಗಿರುವುದಿಲ್ಲ. ಯಾಕೆಂದರೆ, ಅವರಿಗಿಲ್ಲದ ಜ್ಞಾನ ಅವರ ವಿದ್ಯಾರ್ಥಿಗಳಿಗಿದೆ ಎಂಬುದನ್ನು ಅವರು ಒಪ್ಪಲು ಸಿದ್ದವೇ ಇರುವುದಿಲ್ಲ.

ಕೆಲಸಕ್ಕೆ ಬೇಕಾದ ಪ್ರೋಗ್ರಾಮಿಂಗ್ ಕಲಿಯಲು ಯಾವುದಾದರೂ ಕೋರ್ಸ್ ಇಂದು ಅತ್ಯಗತ್ಯ. ಅದಕ್ಕೆ ಇಂಜಿನಿಯರಿಂಗ್ ಅನ್ನೇ ಮುಗಿಸಿರಬೇಕು ಎಂಬ ಅಗತ್ಯವಾದರೂ ಏನು ? ಆ ಕೋರ್ಸ್ ಮುಗಿಸಿ ಕೆಲಸಕ್ಕೆ ಬೇಕಾದ ಸ್ಕಿಲ್ ಪಡೆದುಕೊಂಡರೆ ಸಾಕಲ್ಲವಾ ??

ಎಂಜಿನಿಯರಿಂಗ್ ನ ಪಾಸಿಂಗ್ ಮಾರ್ಕ್ಸ್ 35. ಮೆಡಿಕಲ್ ನಲ್ಲಿ ಕೂಡಾ ಹೀಗೆಯಾ.. ? ಪಾಸಿಂಗ್ ಮಾರ್ಕ್ಸ್ ಮಾತ್ರ ಪಡೆದರೆ ಅಲ್ಲಿ ರೋಗಿಗಳು ಫೇಲ್ ಆಗಬೇಕಾಗುತ್ತದೆ.ಆದರೆ, ಇಂಜಿನಿಯರಿಂಗ್ ನ ವಿಶೇಷ ಅಂದರೆ 8 ವರ್ಷ ಸಮಯ ಇರುತ್ತದೆ, ಅಷ್ಟರೊಳಗೆ ಇಂಜಿನಿಯರಿಂಗ್ ಮುಗಿಸಿದಲ್ಲಿ ಆಯಿತು. ಅದೂ ಪಾಸಿಂಗ್ ಮಾರ್ಕ್ಸ್ ತೆಗೆದರೆ ಸಾಕು, ಬ್ಯಾಕ್ ಆಗಿರುವುದನ್ನು 2 ವರ್ಷದೊಳಗೆ ಪಾಸ್ ಮಾಡಿಕೊಳ್ಳುತ್ತಾ ಪಾಸ್ ಆದರೂ ಸಾಕು. ಯಾರೂ ಇಂಜಿನಿಯರಿಂಗ್ ಅನ್ನು ಎಷ್ಟು ವರ್ಷದೊಳಗೆ ಮುಗಿಸಿದೆ ಎಂದು ಕೇಳುವುದಿಲ್ಲ, ಎಷ್ಟು ಬಾರಿ ಒಂದು ಸಬ್ಜೆಕ್ಟ್ ಅನ್ನು ಬರೆದು ಪಾಸ್ ಮಾಡಿದೆ ಎಂದು ಕೇಳಲಾರರು, ಇಂಜಿನಿಯರಿಂಗ್ ಮುಗಿಸಿದರೆ ಆಯಿತು.

ಇಂಜಿನಿಯರಿಂಗ್ ಗೆ ಮೊದಲಿದ್ದ ಬೆಲೆ ಇಲ್ಲ, ಬೆಲೆ ಕಡಿಮೆ ಮಾಡಿರುವವರು ನಾವುಗಳೇ ಎಂಬುದೂ ಸುಳ್ಳಲ್ಲ. ಈಗ ಅದು ಕೂಡಾ ಹತ್ತರಲ್ಲೊಂದು ಡಿಗ್ರಿ ಎಂಬಂತಾಗಿದೆ. ವಿಶ್ವೇಶ್ವರಯ್ಯನವರಂತಹಾ ಇಂಜಿನಿಯರ್ ಗಳು ಈಗಿಲ್ಲ, ಅವರಿಗಿದ್ದಂತಹಾ ಗುರುಗಳು ಈಗ ಹುಡುಕಿದರೂ ಸಿಗಲಾರರು. ಎಲ್ಲೋ 5% ಅಂತಹವರು ಸಿಗಬಹುದಷ್ಟೇ.

ಇಂಜಿನಿಯರಿಂಗ್ ಹಿಂದಿರುವ ಕತೆಗಳನ್ನು ಯಾರೂ ಬಿಚ್ಚಿಡಲಾರರು. ಎಷ್ಟೋ ಡ್ಯಾನ್ಸರ್ಗಳನ್ನು, ಹಾಡುಗಾರರನ್ನು, ಚಿತ್ರಕಾರರನ್ನು, ಕತೆಗಾರರನ್ನು ಇಂಜಿನಿಯರಿಂಗ್ ತನ್ನೊಳಗೆ ಹುದುಗಿಸಿಕೊಂಡು ಕಾಲಚಕ್ರದೊಡನೆ ಸಾಗುತ್ತಿದೆ. ಹಣ ಇರಬಹುದು ಸಂತಸ..?
ಇದಕ್ಕೆ ಅವರವರೇ ಉತ್ತರಿಸಬೇಕು. ಇಂದು ನಾನು ಒಬ್ಬ ಇಂಜಿನಿಯರ್ ಎಂದು ಹೆಮ್ಮೆಯಿಂದ ಹೇಳುವವರು ಬಹಳ ಕಡಿಮೆ.
Happy Engineers ಗಿಂತಲೂ Frustrated Engineers ಹೆಚ್ಚಾಗುತ್ತಿದ್ದಾರೆ. 

"ನಾನು ಇಂಜಿನಿಯರ್" ಎಂದು ಹೆಮ್ಮೆಯಿಂದ ಹೇಳುವವರು ಹೆಚ್ಚಾಗಲಿ. ಇಂಜಿನಿಯರಿಂಗ್ ನಲ್ಲಿ ಕಲಿತಷ್ಟೂ ಕಲಿಯುವುದು ಇದ್ದೇ ಇದೆ. ಕಲಿಯುವ ಮನಸ್ಸು, ಉತ್ಸಾಹ ಬೇಕಷ್ಟೇ.. ಹೇಗೋ ಇಂಜಿನಿಯರಿಂಗ್ ಅನ್ನು ಸೇರಿ ಆಗಿದೆ, ಹೇಗೋ ಮುಗಿಸುವೆ ಎಂಬ ಇರಾದೆ ಬೇಡ. ಕಲಿತದ್ದನ್ನು ಬಳಸಿಕೊಂಡು ಒಳ್ಳೆಯ ಇಂಜಿನಿಯರ್ ಗಳಾಗಿ.

ಕೃಷಿ ಕ್ಷೇತ್ರಕ್ಕೆ ಅತ್ಯುತ್ತಮ ಆಟೊಮ್ಯಾಟಿಕ್ ಯಂತ್ರ ಅಳವಡಿಸಿರುವ ಇಂಜಿನಿಯರ್ ತಂದೆ ಇಂದು ಇನ್ನು ಎತ್ತನ್ನು ಉಪಯೋಗಿಸಿಕೊಂಡೇ ಉಳುಮೆ ಮಾಡುತ್ತಿರುವುದು ವಿಪರ್ಯಾಸ. 

ಯಾರು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವರೋ ಅವರೇ ನಿಜವಾದ ಇಂಜಿನಿಯರ್ ಗಳು. ಇಂಜಿನಿಯರಿಂಗ್ ಮುಗಿಸಿದರಷ್ಟೇ ಸಾಲದು, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.

Anyway, ಹ್ಯಾಪಿ ಇಂಜಿನಿಯರ್ ಗಳಿಗೂ, Frustrated ಇಂಜಿನಿಯರ್ ಗಳಿಗೂ Happy Engineers Day


~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 6, 2020

'ಅ'ಲ್ಲಿಂದ Eಲ್ಲಿಯವರೆಗೂ ('ಅ' ಯಿಂದ E-learning ವರೆಗೂ)

 

ಇಂದು ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಹಾಗೆಯೇ ಶಿಕ್ಷಕರೂ ಸಹಾ ಬದಲಾಗಿದ್ದಾರೆ. ಆದರೆ, ಗುರುಗಳು ಎಂದರೆ ಇಂದಿಗೂ ನೆನಪಾಗುವಂತೆ ಹೆಜ್ಜೆ ಮೂಡಿಸಿದ ಹಲವಾರು ಮಹಾನ್ ವ್ಯಕ್ತಿಗಳಿದ್ದಾರೆ.


ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನವೆಂದು ಆಚರಿಸುವಂತೆ ಹೇಳಿದ ರಾಧಾಕೃಷ್ಣನ್ ರವರನ್ನು ನೆನೆಯುವುದು ಅಗತ್ಯ. 

ತಮ್ಮ ಹುಟ್ಟುಹಬ್ಬವನ್ನು ವಿದ್ಯಾರ್ಥಿಗಳಿಗಾಗಿ ಮುಡಿಪಿಟ್ಟ ಅಬ್ದುಲ್ ಕಲಾಂ ಸರ್ ಮತ್ತೊಬ್ಬರು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸುತ್ತಾ ಅವರ ಕುತೂಹಲಗಳತ್ತ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ ಗುರುಗಳು ಅವರು.

ಎಷ್ಟೋ ವಿರೋಧಗಳ ನಡುವೆಯೂ ಮಹಿಳಾ ಶಿಕ್ಷಕಿಯಾಗಿ ವಿದ್ಯೆಯ ಹಣತೆ ಹಚ್ಚಿದ ಸಾವಿತ್ರಿಬಾಯಿ ಫುಲೆ ಮತ್ತೋರ್ವ ಮಹಾನ್ ಗುರು

ಗುರು ಎಂದರೆ, ನೀತಿ ಎಂದರೆ ಇತಿಹಾಸದಲ್ಲಿ ನೆನಪಾಗುವುದು ಚಾಣಕ್ಯ. ಆತನ ತಂತ್ರಗಾರಿಕೆ, ಶಿಷ್ಯನ ಸಾಮ್ರಾಜ್ಯ ನಿರ್ಮಾಣದಲ್ಲಿ ಮಾಡಿದ ಉಪದೇಶ ಇಂದಿಗೂ ಆತನನ್ನು ಎತ್ತರದ ಸ್ಥಾನದಲ್ಲಿಟ್ಟಿವೆ.

ಎಲ್ಲಾ ಯುವಕರಿಗೂ ಗುರುವಾದ ವಿವೇಕಾನಂದರು, ಮತ್ತವರ ಗುರುಗಳಾದ ರಾಮಕೃಷ್ಣ ಪರಮಹಂಸರು ಇಬ್ಬರೂ ಇಂದಿಗೂ ಲೋಕಮಾನ್ಯರು. ಪರಮಹಂಸರಂತಹಾ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವವಾಗಿ ರೂಪುಗೊಂಡದ್ದು ವಿವೇಕಾನಂದರು.

ಮಹಾಭಾರತದ ದ್ರೋಣರು ಮತ್ತೊಬ್ಬ ಮಹಾನ್ ಗುರು. ಮಗ ಮತ್ತು ಶಿಷ್ಯರ ನಡುವೆ ಭೇಧ ಮಾಡದೆ ಶಿಷ್ಯರನ್ನೂ ಮಕ್ಕಳಂತೆ ಕಂಡವರು. ದ್ರೋಣರಂತಹಾ ಗುರುಗಳಿಂದ ರೂಪುಗೊಂಡ ಅರ್ಜುನ. ದ್ರೋಣರ ಪ್ರತಿಮೆಯಿಂದಲೇ ಸ್ಫೂರ್ತಿಗೊಂಡ ಏಕಲವ್ಯ.

ಸಾಂದೀಪನಿಯಂತಹಾ ಗುರುಗಳಿಂದ ಕಲಿತ ಶ್ರೀ ಕೃಷ್ಣ.

ಶಿಕ್ಷಕರು ವಿದ್ಯೆ ಕಲಿಸಿದಂತೆ, ಶಪಿಸಿದವರು ಸಹಾ ಇದ್ದಾರೆ.
ಹರ ಮುನಿದರೆ ಗುರು ಕಾಯ್ವನು
ಗುರು ಮುನಿದರೆ..??
ಪರಶುರಾಮ ಮತ್ತು ಕರ್ಣರ ಗುರು-ಶಿಷ್ಯರ ಸಂಬಂಧ ಇದಕ್ಕೆ ಸಾಕ್ಷಿ.

ಶಿಕ್ಷಣ ಬದಲಾಗಿದೆ. ಶಿಕ್ಷಕರು ಸಹಾ ಬದಲಾಗಿದ್ದಾರೆ. ಮೌಲ್ಯಗಳು ಸಹಾ ಬದಲಾಗುತ್ತಿವೆ. ವಿದ್ಯಾರ್ಥಿಗಳು ಬದಲಾಗಿದ್ದಾರೆ.
ಶಿಕ್ಷಣ ವ್ಯವಸ್ಥೆ ತಪ್ಪಿದ್ದೆಲ್ಲಿ ?
ಯಾವಾಗಲೂ ನನ್ನ ಪ್ರಿನ್ಸಿಪಾಲ್ ಸರ್ ಹೇಳುತ್ತಿದ್ದ ಮಾತು ನೆನಪಾಗುತ್ತಿದೆ

If Money is Lost , Nothing is Lost
If Health is Lost, Something is Lost
If Character is Lost, Everything is Lost

ಈಗ ಬದಲಾದ ದಿನಮಾನದಲ್ಲಿ ಈ ಮಾತು ಬದಲಾಗಿದೆ.

If Character is Lost , Nothing is Lost
If Health is Lost, Something is Lost
If Money is Lost, Everything is Lost

ಇದೇ ಬದಲಾವಣೆ ಯುವಜನತೆಯ ಹಾದಿ ತಪ್ಪಿಸಿ, ಮಾದಕ ವ್ಯಸನಕ್ಕೆ, ಸುಲಭ ರೀತಿಯಲ್ಲಿ ಹಣ ಸಂಪಾದಿಸಲು ಪ್ರಚೋದಿಸುತ್ತಿರುವುದು.

ಆಗ ಶಿಕ್ಷೆ ಇತ್ತು, ತಪ್ಪಿದಲ್ಲಿ ತಿದ್ದಿ ನಡೆಸುವ ಗುರುಗಳಿದ್ದರು. ಆದರೆ, ಈಗ ತಪ್ಪಿಗೆ ಶಿಕ್ಷೆ ನೀಡಲು
ವಿದ್ಯೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎನ್ನುವರು. ಆದರೆ, ಇವತ್ತು ವಿದ್ಯೆ ಕೆಲಸಕ್ಕಾಗಿ ಮಾತ್ರವೇ. ಓದಿಗೂ, ಮಾಡುವ ಕೆಲಸಕ್ಕೂ ಸಂಬಂಧವೇ ಇರದು. ಕೆಲಸಗಳು ಹಣಕ್ಕಾಗಿ ಮಾರಾಟವಾಗುತ್ತಿವೆ. ವಿದ್ಯೆಯೂ ಮಾರಾಟವಾಗುತ್ತಿದೆ.

ಶಾಲೆಯಲ್ಲಿ ಕಲಿಸದೆ ಟ್ಯೂಷನ್ ಗೆ ಬನ್ನಿ ಇಂದು ಹೇಳುವ ನೀತಿಗೆಟ್ಟ ಶಿಕ್ಷಕರಿದ್ದಾರೆ. ಪ್ರಾಜೆಕ್ಟ್ ಫೈನಲ್ ಗೆ, Thesis submission ಗೆ, ಪ್ರತಿಯೊಂದು ಸಹಿಗೂ ಹಣ ಕೇಳುವ ಶಿಕ್ಷಕರಿದ್ದಾರೆ. ಎಂಜಲು ಕಾಸಿಗೆ ಕೈಯೊಡ್ಡುವ ಶಿಕ್ಷಕರಿಂದ ಸ್ವಾಭಿಮಾನದ ಪಾಠವನ್ನು ವಿದ್ಯಾರ್ಥಿಗಳು ಕಲಿಯುವುದಾದರೂ ಹೇಗೆ ?

ವಿದ್ಯೆ ಕಲಿಸದಾ ತಂದೆ
ಬುದ್ದಿ ಹೇಳದಾ ಗುರುವು
ಬಿದ್ದಿರಲು ಬಂದು ನೋಡದಾ ತಾಯಿ
ಶುದ್ಧ ವೈರಿಗಳು ಸರ್ವಜ್ಞ

ಎಂಬ ಸರ್ವಜ್ಞನ ವಚನವೇ ಇದೆ.

ಇನ್ನೊಂದು ಬಗೆಯ ಶಿಕ್ಷಕ ವರ್ಗವಿದೆ. ತಮ್ಮ ಕೆಲಸದ ಶುರುವಿನಲ್ಲಿ ಪ್ರಾಮಾಣಿಕರಾಗಿಯೇ ಇರುತ್ತಾರೆ. ನಂತರದ ದಿನಗಳಲ್ಲಿ ತಮ್ಮ ಸಹೋದ್ಯೋಗಿಗಳನ್ನು ನೋಡಿಯೋ ಅಥವಾ ಮೇಲಿನ ಒತ್ತಡಕ್ಕೆ ಮಣಿದು ತಮ್ಮತನವನ್ನು ಬದಲಾಯಿಸಿಕೊಂಡವರಿದ್ದಾರೆ.

ಇವೆಲ್ಲದರ ನಡುವೆ ತಮ್ಮತನವನ್ನು ಉಳಿಸಿಕೊಂಡು, ಪ್ರಾಮಾಣಿಕತೆಯ ಪಾಠ ಮಾಡುತ್ತಿರುವ ಶಿಕ್ಷಕರು ಸಹಾ ಇದ್ದಾರೆ. ಅಂತಹವರಿಗೆ ಮಾತ್ರ "ಶಿಕ್ಷಕರ ದಿನದ ಶುಭಾಶಯಗಳು".

ವಿದ್ಯೆ ಕಲಿಸಿಯೂ ಶಿಕ್ಷಕರಾಗದವರು ಹಲವರಿದ್ದಾರೆ, ಅಕ್ಷರವೇ ಗೊತ್ತಿರದ ಜೀವನದ ಪಾಠ ಕಲಿಸಿದ ಹಲವಾರು ಶಿಕ್ಷಕರ ಸ್ಥಾನದಲ್ಲಿದ್ದಾರೆ. ತಾಯಿ, ತಂದೆ, ಕಿರಿಯರಿಂದ ಹಿರಿಯರವರೆಗೂ ಗುರುಗಳಾಗುತ್ತಾರೆ. ಆದರೆ, ಈಗ ಇದೆಲ್ಲದರ ಸ್ಥಾನವನ್ನು ಗೂಗಲ್ ತುಂಬುತ್ತಿದೆ. ಗೂಗಲ್ ಜ್ಞಾನವೇ ಶ್ರೇಷ್ಠ ಎಂಬ ಅಜ್ಞಾನಿಗಳೂ ಇದ್ದಾರೆ.  

ಈಗ ಮನೆ ಮನೆಗೂ ಮೊಬೈಲ್ ಮೂಲಕ "E-Learning" ಕಾಲಿಟ್ಟಿದೆ. ಶಿಕ್ಷಣ ನೇರವಾಗಿ ದೊರೆಯುತ್ತಿದೆ. ಲೈಂಗಿಕ ಕಿರುಕುಳವಿಲ್ಲ, ಪ್ರತಿಯೊಂದು ಚರ್ಯೆ, ಮಾತಿಗೂ ದಾಖಲೆ ಇದ್ದೇ ಇದೆ. ಆದರೆ, ವಿದ್ಯಾರ್ಥಿಗಳ ನಿಷ್ಠೆ ಕಾಣೆಯಾಗಿದೆ. ಆನ್ಲೈನ್ ಕ್ಲಾಸ್ ಆನ್ ಮಾಡಿ ಮತ್ತೇನೋ ಮಾಡುವುದು, ಆನ್ಲೈನ್ ಟೆಸ್ಟ್ ಗಳನ್ನು ಕಾನ್ಫರೆನ್ಸ್ ಕಾಲ್ ಮಾಡಿಕೊಂಡು ಉತ್ತರಿಸುವುದು. ಹೀಗೆ..
ತಿಳುವಳಿಕೆ ಹೆಚ್ಚಿದಂತೆಲ್ಲಾ, ಧೂರ್ತ ನಡವಳಿಕೆಗಳು ಹೆಚ್ಚುತ್ತಲೇ ಇವೆ

ಇಂತಹವರು ನೋಡಿ ಕಲಿಯಬೇಕಾದದ್ದು. ಸುಧಾಮೂರ್ತಿ ಮೇಡಂ ಅವರನ್ನು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಗುರುಗಳಿಗೆ ಗೌರವ ಸಲ್ಲಿಸುವ ಗುಣ ತೊರೆದಿಲ್ಲ. ಶಿಕ್ಷಕರಾಗಿ ಮಕ್ಕಳಿಗೆ ತಿಳುವಳಿಕೆ ಹೇಳುವುದನ್ನು ಸಹಾ ಬಿಟ್ಟಿಲ್ಲ. 

ಕಲಿಯಬೇಕೆಂದರೆ ಎಲ್ಲೆಲ್ಲೂ ಒಳ್ಳೆಯ ವಿಚಾರಗಳಿವೆ. ಅರಿವಿಗಿಂತ ದೊಡ್ಡ ಗುರುವಿಲ್ಲ. ಕಲಿಯುವ ಮನಸ್ಸು ನಮ್ಮಲ್ಲಿರಬೇಕು. ಗುರುವನ್ನು ಆಯ್ದುಕೊಳ್ಳುವ ನಮ್ಮ ಆಯ್ಕೆ ಸರಿಯಿದ್ದಲ್ಲಿ ಎಲ್ಲವೂ ಸುಸೂತ್ರ.

"ಅರಿವೆಂಬ ಗುರುವಿಗೆ ನಮಿಸುತ್ತಾ" ಜೀವನದ, ಅಕ್ಷರದ ತಿಳುವಳಿಕೆಯ ಎಲ್ಲಾ ಪಾಠ ಕಲಿಸಿದ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 'ಅ'ಲ್ಲಿಂದ 'E'ಲ್ಲಿಯವರೆಗೂ ಬದುಕಿನ ಹಾದಿಯ ಜೊತೆಗಿರುವ ಎಲ್ಲ ಶಿಕ್ಷಕರ ಆಶೀರ್ವಾದಗಳು ಸದಾ ಹೀಗೆಯೇ ಇರಲಿ.

ಸಾವಿರಾರು ಮುಖದ ಚೆಲುವ
ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ
ಕನ್ನಡಿಯ ಪಾಲಿಗೇ..?

ಎಂಬ ಸಾಲುಗಳು ಶಿಕ್ಷಕರ ಬದುಕಿನಲ್ಲಿ ಹೆಚ್ಚಿನಂಶ ಅನ್ವಯವಾಗುತ್ತದೆ. ಇದು ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗಿನ ಕೆಲಸ ಮಾತ್ರವಲ್ಲ. ಸದಾ ಕಲಿಯುತ್ತಲೇ ಇರಬೇಕು, ಕಲಿಸುತ್ತಲೇ ಇರಬೇಕು. ಸ್ಫೂರ್ತಿ ತುಂಬುತ್ತಿರುವ, ಕಲಿಕೆಯ ಮನಸ್ಸಿನ ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 2, 2020

ಸಖಿ- ಪರಿಚಯ

 


ಎಷ್ಟೇ ಆಪ್ತರಿದ್ದರೂ ಹೇಳಿಕೊಳ್ಳದ್ದು ಏನೋ ಒಂದು ಉಳಿದೇ ಇರುತ್ತದೆ. ನಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರೊಡನೆ ಹಂಚಿಕೊಳ್ಳಲು ಅಥವಾ ಅವರಿಂದ ಸಲಹೆ ಪಡೆದುಕೊಳ್ಳಲು ಕಾತುರದಿಂದ ಕಾಯುತ್ತೇವೆ. ಪರಿಚಿತರೊಡನೆ ಹಂಚಿಕೊಂಡಷ್ಟೂ ಅದು ಮತ್ತೆಲ್ಲೋ, ಮತ್ತಾರಿಗೋ, ಮತ್ತೆ ಎಂದಾದರೂ ಯಾವುದೋ ರೂಪದಲ್ಲಿ ತೊಡಕಾದರೆ ಎಂಬ ಅಳುಕು ಮನಸ್ಸಲ್ಲಿ ಇದ್ದೇ ಇರುತ್ತದೆ. ಹಲವು ವಿಚಾರಗಳನ್ನು ಹೇಳಿಕೊಳ್ಳದಿದ್ದಾಗಲೂ ಮತ್ತೆ ಯಾರದ್ದೋ ಸಮಸ್ಯೆಯೋ, ಮತ್ತೆ ಯಾರಿಗೋ ನೀಡಿದ ಸಲಹೆಯೋ ನಮ್ಮಲ್ಲಿ ಭರವಸೆ ಹೊತ್ತಿಸುತ್ತದೆ.


ಬರಹದ ಗೆಳತಿ 'ಸಖಿ' ನಿಮ್ಮೆಲ್ಲಾ ಸಂಧರ್ಭದಲ್ಲಿ ಆಸರೆಯಾಗುತ್ತಾಳೆ. ಹೇಳಿಕೊಳ್ಳದ ನಿಮ್ಮ ಎಷ್ಟೋ ಭಾವನೆಗಳಿಗೆ ಕಿವಿಯಾಗುತ್ತಾಳೆ. ನಿಮ್ಮ ಅಮ್ಮನ, ಮಗಳ, ಗೆಳತಿಯ, ಸೋದರಿಯ, ಪ್ರೇಯಸಿಯ, ಹೆಂಡತಿಯ ಹೀಗೆ ಹಲವಾರು ಮನಸ್ಸಿನ ಮಾತನ್ನು ತೆರೆದಿಡುತ್ತಾಳೆ. ಭರವಸೆ ತುಂಬುತ್ತಾಳೆ. ಮನಸ್ಸಿನ ಭಾರವನ್ನು ಕಡಿಮೆ ಮಾಡುತ್ತಾಳೆ. ಸಲಹೆ ನೀಡುತ್ತಾಳೆ. ಇದು ಯಾರೋ ಒಬ್ಬರ ಮನದ ಭಾವವಲ್ಲ, ಇದೇ ಭಾವಗಳು ರಂಗನ್ನು ಹೊತ್ತು ಹಲವಾರು ವಿಧದಲ್ಲಿ ಸುಳಿದಾಡುತ್ತಿರುತ್ತವೆ. ಆದರೆ, ನಾವು ಅದಕ್ಕೆ ಹೆಚ್ಚಿನ ಗಮನ ನೀಡಿರುವುದಿಲ್ಲ. ಆದರೆ, ಸಮಸ್ಯೆ ನಮಗೆ ಬಂದಾಗ .. ? 

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತದೆ. ಮತ್ತೊಬ್ಬರ ಸಮಸ್ಯೆಯೂ ಚಿಕ್ಕದಾಗಿಯೇ ಕಾಣುವುದಲ್ಲವೇ.. ? ಮತ್ತೊಬ್ಬರಿಗೆ ಪ್ರೇರಣೆ ನೀಡುವುದು ಬಹು ಸುಲಭ. ಆದರೆ, ನಮಗೆ ನಾವೇ ಪ್ರೇರಣೆಯಾಗಬೇಕು. ಆ ನಿಟ್ಟಿನಲ್ಲಿ ಸಖಿ ನಿಮ್ಮ ಜೊತೆ ನಿಲ್ಲುತ್ತಾಳೆ. ನಗುವಾಗ ಊರೆಲ್ಲಾ ನೆಂಟರು, ಸಮಸ್ಯೆ ಬಂದಾಗಲೇ ಅಲ್ಲವೇ ನಮ್ಮವರು ಯಾರು ಎಂಬ ಅರಿವಾಗುವುದು.

ಸಖಿಯ ಮಾತುಗಳು ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ ಎಂದೆ. ಅದನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡು ಹೋಗುವುದು ನಿಮಗೆ ಬಿಟ್ಟದ್ದು.

ನಿಮಗೊಂದು ಪುಟ್ಟ ಕಥೆ ಹೇಳುವೆ. ಕೇಳಿ..

ಪುಟ್ಟದೊಂದು ತೋಟದ ಮನೆಯಲ್ಲಿ ನೆಮ್ಮದಿಯಿಂದ ರೈತಪ್ಪ, ರೈತಮ್ಮ ವಾಸವಾಗಿರುತ್ತಾರೆ. ನೆಮ್ಮದಿಯಾಗಿರುವಾಗ ನೆಮ್ಮದಿ ಕೆಡಿಸಲು ಯಾರೋ ಒಬ್ಬರು ಇದ್ದೇ ಇರುತ್ತಾರೆ. ಅಲ್ಲವೇ..? ಎಲ್ಲವೂ ಸರಿಯಿದ್ದರೆ ಕಥೆಗೆ ಬೆಲೆಯೆಲ್ಲಿ ? ಇಲ್ಲಿ ಇವರ ನೆಮ್ಮದಿ ಕೆಡಿಸಿದ್ದು ಒಂದು ಸುಂಡಿಲಿ. ಈ ಇಲಿ ಕಾಟ ತಡೆಯುವುದಕ್ಕಾಗದೆ ರೈತಪ್ಪ, ರೈತಮ್ಮ ಎಷ್ಟೋ ಉಪಾಯ ಮಾಡಿದರೂ ಇಲಿ ಸಿಗದೆ ನುಣಿಚಿಕೊಂಡು ಹೋಗುತ್ತಲೇ ಇತ್ತು.. ಕಡೆಗೆ ರೈತಮ್ಮನ ತಲೆಗೊಂದು ಉಪಾಯ ಹೊಳೆದೇ ಬಿಟ್ಟಿತು. ಅದನ್ನು ರೈತಪ್ಪನಿಗೆ ಹೇಳುವಾಗ ಈ ಇಲಿ ಕೂಡಾ ಅದನ್ನು ಕೇಳಿಸಿಕೊಂಡಿತು. ಈ ಇಲಿಗೆ ಆಹಾರದಲ್ಲಿ ವಿಷ ಬೆರೆಸಿ ಇಟ್ಟು ಅದನ್ನು ಸಾಯಿಸಿ ಬಿಡೋಣ ಎಂದು.

ಈ ಉಪಾಯ ಕೇಳಿಸಿಕೊಂಡ ಇಲಿಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಪ್ರಾಣಭಯ ಎಲ್ಲರಿಗೂ ಇರುವುದೇ ಅಲ್ಲವಾ? ಅದು ಇಲಿಯಾದರೂ ಅಷ್ಟೇ, ಹುಲಿಯಾದರೂ ಅಷ್ಟೇ.. ಬೆಳಿಗ್ಗೆಯಾಗುತ್ತಿದ್ದಂತೆ ಕೋಳಿ ಕೂಗುವ ಧ್ವನಿ ಕೇಳಿಸಿತು. ಕೋಳಿ ಹತ್ತಿರ ಕೇಳಿದರೆ ಇದಕ್ಕೇನಾದರೂ ಸಲಹೆ ದೊರೆಯಬಹುದು ಎಂದು ಕೋಳಿಯ ಬಳಿ ಕೇಳಿದರೆ "ನಿನಗೆ ತೊಂದರೆ ಬಂದರೆ ನಾನ್ಯಾಕೆ ಉಪಾಯ ಯೋಚಿಸಬೇಕು? ನನಗಂತೂ ಏನೂ ತೊಂದರೆ ಇಲ್ಲಪ್ಪಾ" ಎನ್ನುತ್ತಾ ಇಲಿಯನ್ನು ನಿರ್ಲಕ್ಷಿಸಿ ಆಹಾರ ಹುಡುಕುತ್ತಾ ಹೊರಟಿತು. 

ಇಲಿಗೆ ಬೇಜಾರಾಗಿ ಅದು ಹಾಗೇ ಮುಂದುವರಿಯುತ್ತಿರುವಾಗ ಕುರಿ ಕಾಣಿಸಿತು. "ಕುರಿಯಣ್ಣಾ, ನನ್ನನ್ನು ಕಾಪಾಡು. ನನ್ನ ತೊಂದರೆಗೆ ಸಲಹೆ ನೀಡು" ಎನ್ನುತ್ತಾ ತನ್ನ ತೊಂದರೆಯನ್ನು ವಿವರವಾಗಿ ಹೇಳಿದರೆ, ದಿವ್ಯ ನಿರ್ಲಕ್ಷ್ಯದಿಂದ ಕುರಿ "ನಿನ್ನ ತೊಂದರೆ ನಿನ್ನದು, ನಾನಂತೂ ಆರಾಮವಾಗಿ ಇದ್ದೇನೆ. ರೈತಪ್ಪ ನನ್ನನ್ನಂತೂ ಏನೂ ಮಾಡಲ್ಲ, ನನಗಷ್ಟು ಸಾಕು" ಎನ್ನುತ್ತಾ ಮೇವು ಮೆಲುಕು ಹಾಕುವ ಕಾರ್ಯವನ್ನು ಮುಂದುವರಿಸಿತು.

ಇಲಿಗೆ ಆ ತೋಟದ ಮನೆಯಲ್ಲಿ ಇದ್ದದ್ದು ಮೂರೇ ಗೆಳೆಯರು. ಇಬ್ಬರಂತೂ ಆಗಲೇ ಕೈ ಕೊಟ್ಟು ಆಗಿತ್ತು. ಉಳಿದದ್ದು ಹಂದಿರಾಯ ಮಾತ್ರ. ಕೊನೆಯ ಭರವಸೆಯ ಆಶಾ ಕಿರಣದೊಂದಿಗೆ ಅಲ್ಲಿಗೆ ಹೋದರೆ ಹಂದಿರಾಯ ಕೂಡಾ ಏನೂ ಸಹಾಯ ಮಾಡದೆ. ತೊಂದರೆ ನನಗಲ್ಲ ಎಂದು ಕಳುಹಿಸಿ ಬಿಟ್ಟ.

ಎಲ್ಲರೂ ಕೈ ಚೆಲ್ಲಿ ಕುಳಿತಾಗ ಇಲಿ ತನ್ನ ಹುಷಾರಲ್ಲಿ ತಾನಿರಬೇಕು ಎಂದು ತೀರ್ಮಾನ ಮಾಡಿಕೊಂಡು ರೈತಮ್ಮ ಇಟ್ಟ ಊಟವನ್ನು ಮಾಡದೆ ಸುಮ್ಮನಿರಬೇಕೆಂದು ತೀರ್ಮಾನಿಸಿತು. ಇತ್ತ ರೈತಮ್ಮ ಇಲಿಗೆ ವಿಷ ಹಾಕಿ ಕೈಯನ್ನು ಸರಿಯಾಗಿ ತೊಳೆದುಕೊಳ್ಳದೆ ಊಟ ಮಾಡಿದ್ದರಿಂದ ವಿಷ ಅವಳ ಹೊಟ್ಟೆ ಸೇರಿತು. ರೈತಪ್ಪ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಅವಳಿಗೆ ಚಿಕಿತ್ಸೆ ನೀಡಿಸಿ ಮನೆಗೆ ಕರೆದುಕೊಂಡು ಬಂದ.

ಅವಳು ಮನೆಗೆ ಬಂದ ಮೇಲೆ ಅವಳನ್ನು ನೋಡಲು ಅವಳ ತಂದೆ-ತಾಯಿ ಬರದಿದ್ದರೆ ಹೇಗೆ? ಅವರು ಬಂದ ಮೇಲೆ ಕೋಳಿ ಕೊಯ್ದು ಔತಣ ನೀಡದಿದ್ದರೆ ಹೇಗೆ ? ಹಾಗಾಗಿ ಮನೆಯಲ್ಲಿದ್ದ ಕೋಳಿ ಬಲಿಯಾಯ್ತು.

ಆನಂತರ ಬಹಳ ಹತ್ತಿರದ ಸಂಬಂಧಿಕರು ಬಂದರು ಅವರ ಊಟಕ್ಕೆ ಕುರಿ ಬಲಿಯಾಯ್ತು. ಬಾಯಿಂದ ಬಾಯಿಗೆ ರೈತಮ್ಮನ ಕತೆ ಹಬ್ಬಿ ಉರವರೆಲ್ಲಾ ನೋಡಲು ಬಂದರು. ಅವರ ಊಟಕ್ಕೆ ಹಂದಿಯೂ ಬಲಿಯಾಯ್ತು.

ಇಷ್ಟೆಲ್ಲಕ್ಕೂ ಕಾರಣವಾದ ಇಲಿ ಇದನ್ನೆಲ್ಲಾ ನೋಡುತ್ತಾ ನಿಟ್ಟುಸಿರು ಬಿಟ್ಟು ಸುಮ್ಮನಾಯಿತು.

ಸಮಸ್ಯೆ ನಮ್ಮದಲ್ಲಾ ಎಂದುಕೊಂಡವರೆಲ್ಲಾ ಸಮಸ್ಯೆಗೆ ಬಲಿಯಾದರು. ಸಮಸ್ಯೆ ಬಂದಾಗ ಕೊಂಚ ಜಾಗರೂಕತೆಯಿಂದ ನಡೆದುಕೊಂಡವರು ಬಚಾವಾದರು.

ಎಲ್ಲವೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. 

ಸಖಿಯ ಮೂಲಕ ಇನ್ನು ಮುಂದೆ ಈ ರೀತಿಯ ಬರಹಗಳನ್ನು ನಿರೀಕ್ಷಿಸಬಹುದು. 
(ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ.)

~ವಿಭಾ ವಿಶ್ವನಾಥ್

ಭಾನುವಾರ, ಜುಲೈ 26, 2020

ಚಲಿಸುತ್ತಿರಬೇಕು ಚಿತ್ರಗಳು

 

(ಚಿತ್ರ: ವ್ಯಾನ್ ಗೋ ಅವರ ಪ್ರಸಿದ್ಧ painting)

ಚಲಿಸುತ್ತಿರಬೇಕು ಚಿತ್ರಗಳು
ಯಾವ ಚೌಕಟ್ಟಿಗೂ ಸಿಗದಂತೆ

ಸೆಲ್ಫಿ, ಫೋಟೋಗಳ ಮಾಯೆಗೆ ಸಿಲುಕಿ
ನೆನಪಾಗಿ ಕೊಳೆಯುವುದಕ್ಕಿಂತ
ಸ್ವಚ್ಛಂದವಾಗಿ ಹಾರಿಕೊಂಡಿರಬೇಕು

ಕಾಲನ ಜೊತೆ ಜೊತೆಗೇ ಹೆಜ್ಜೆ ಹಾಕುತ್ತಾ
ಯಾವ ಸೆಳೆತಕ್ಕೂ ಒಳಗಾಗದಂತೆ
ಜಾತಿ-ಮತದ ಭೇಧವಿಲ್ಲದೆ ಚಲಿಸುತ್ತಿರಬೇಕು

ಮಮಕಾರದ ಮಾಯೆಯ ತೊರೆದು
ಕಾಲನ ಘಳಿಗೆಯ ಪಾಶಕ್ಕೆ ಸಿಗದೆ
ಅಲೆಯುತ್ತಾ ನೆಲೆಯಾಗದಂತೆ ಹಾರಾಡಿಕೊಂಡಿರಬೇಕು

ಚಲನೆಯೇ ಬದುಕಿನ ನಿರಂತರತೆ
ಅವಿಶ್ರಾಂತಿಯೇ ಶ್ರಮಜೀವಿಯ ವಿಶ್ರಾಂತಿ
ಹೀಗೆ ಸಾರಲು ಚಲಿಸುತ್ತಿರಬೇಕು ಚಿತ್ರಗಳು

ಕಣ್ಣಳತೆಗೆ ಆಗಾಗ ಕಾಣುತ್ತಾ
ಗುರಿಯೆಡೆಗೆ ಛಲ  ಹುಟ್ಟಿಸಲು
ಚಲಿಸುತ್ತಲೇ ಇರಬೇಕು ಬದುಕೆಂಬ ಮಾಯಾಚಿತ್ರ

~ವಿಭಾ ವಿಶ್ವನಾಥ್

ಭಾನುವಾರ, ಜುಲೈ 19, 2020

ನೀ ಬರೆದ ಸಾಲುಗಳು..

 

ಬದುಕು ಬರೆದ ಸಾಲುಗಳ ನೀನು ಒಪ್ಪಬೇಕಿತ್ತು. ನಿನ್ನದೇ ಹೊಸ ವ್ಯಾಖ್ಯಾನ ಬರೆಯಲು ಹೊರಟೆ ನೀನು. ಬದುಕು ಮಾತ್ರವಲ್ಲ, ಸಾವೂ ಸಹಾ ನಿನ್ನನ್ನು ಸ್ವೀಕರಿಸಿಲ್ಲ.

ಆ ಸಾಲುಗಳನ್ನು ನೀನು ಬರೆಯಲೇ ಬಾರದಿತ್ತು. ಬರೆದರೂ ಸಾರ್ವತ್ರಿಕವಾಗಿ ಪ್ರಕಟಿಸಬಾರದಿತ್ತು. ಸತ್ಯವನ್ನು ಬಿಚ್ಚಿಡಲು ಮಾತ್ರವಲ್ಲ ಹುಡುಗಿ ಸತ್ಯವನ್ನು ಒಪ್ಪಿಕೊಳ್ಳಲು ಸಹಾ ಧೈರ್ಯ ಬೇಕಿತ್ತು. ನಿನಗಿದ್ದ ಧೈರ್ಯ ಈ ಸಮಾಜಕ್ಕಿಲ್ಲ. ಅದರ ಅರಿವಿದ್ದರೂ ನೀನು ಆ ಸಾಲುಗಳನ್ನು ಬರೆದೆ.

ಅತ್ಯಾಚಾರವಾದರೆ ಅತ್ಯಾಚಾರಿಗೆ ಶಿಕ್ಷೆ ಕೊಡುವುದರ ಬದಲಾಗಿ ಅವನ ಜೊತೆಗೆ ದಾಂಪತ್ಯ ಮಾಡು ಎಂದು ಸಂತ್ರಸ್ತೆಗೆ ತೀರ್ಪು ಕೊಡುವಾಗ, ಅವಳಿಗೆ ಬೇರೆ ಆಯ್ಕೆಗಳೇ ಇರುವುದಿಲ್ಲ. ಯಾಕೆಂದರೆ, ತಪ್ಪುಗಳನ್ನೂ ಸರಿ ಮಾಡುತ್ತೇವೆ ಎನ್ನುತ್ತಾ ಸಧೃಡ ಸಮಾಜವನ್ನು ಕಟ್ಟುತ್ತೇವೆ ಎಂದು ಹೊರಡುವ ಜನರು ತಪ್ಪುಗಳನ್ನು ತಾವೇ ಬೆಳೆಸುತ್ತಾರೆ. ಅತ್ಯಾಚಾರ ಮಾಡಿದವ ಸಮಾಜದ ದೃಷ್ಟಿಯಲ್ಲಿ ಸದ್ಗೃಹಸ್ಥ. ಹಾಗೇ, ಸಭ್ಯರು ಎನ್ನಿಸಿಕೊಂಡವರನ್ನು ಸಹಾ ಸಮಾಜ ಬೆಳೆಸಿದ್ದು ಹೀಗೆಯೇ.. ಸಭ್ಯರ ಸೋಗಿನಲ್ಲಿ ತಮ್ಮ ಅಕ್ರಮಗಳಿಗೂ ಸಭ್ಯತೆಯ ಹಣೆಪಟ್ಟಿ ಹಚ್ಚಿ ಬಿಡುತ್ತಾರೆ. 

ನೀನು ಧೈರ್ಯವಂತೆ. ಧೈರ್ಯ ಸತ್ಯವನ್ನು ತೆರೆದಿಡಲು ನಿನ್ನ ಧೈರ್ಯ ಮಾತ್ರ ಸಾಲದಾಗಿತ್ತು. ಸುತ್ತಮುತ್ತಲಿನವರ, ನಮ್ಮವರೆನಿಸಿಕೊಂಡವರ ಸಹಕಾರ ದೂರದರ್ಶಿತ್ವ ಕೊಂಚ ಬೇಕಿತ್ತು. ಹೆಣ್ಣು ಎಂಬ ಪದ ಸಾಕು ಸುತ್ತಮುತ್ತಲಿನವರ ಧೈರ್ಯವನ್ನು ದುರ್ಬಲಗೊಳಿಸಲು. ಎಲ್ಲರೂ ವೀರ ವನಿತೆಯರ ಕತೆಯನ್ನು ಹೇಳಲು, ಕೇಳಲು ಮಾತ್ರ ಸಿದ್ಧರಿರುತ್ತಾರೆ, ನಮ್ಮದೇ ಮನೆಯ ಹೆಣ್ಣು ಕೂಸು ಆ ಸ್ಥಾನದಲ್ಲಿರಲು ಕಲ್ಪನೆ ಕೂಡಾ ಮಾಡಿಕೊಳ್ಳಲಾರರು.

ಕೆಲವೊಮ್ಮೆ ಅತಿ ಸ್ವಾತಂತ್ರ್ಯ, ಕೆಲವೊಮ್ಮೆ ಅತಿ ಮಡಿವಂತಿಕೆ ಕೂಡಾ ಸಿಡಿದು ನಿಂತು ವಿರುದ್ಧವಾದ ನಡವಳಿಕೆಯಾಗಿ ನಡೆದುಕೊಳ್ಳಲು ಕಾರಣವಾಗುತ್ತದೆ. ಆದರೆ, ನಿನ್ನ ಬದುಕು ಇವೆರಡಕ್ಕೂ ಸೇರಿಲ್ಲ. ನಿನ್ನ ಬದುಕಲ್ಲಿ ಆದರ್ಶವಿತ್ತು. ಹುಚ್ಚು ಆದರ್ಶಗಳೆಂದು ಹಂಗಿಸುವ ಈ ಕಾಲಘಟ್ಟದಲ್ಲಿ ಆದರ್ಶಗಳನ್ನೇ ಉಸಿರೆನಿಸಿಕೊಂಡಿದ್ದ ನಿನಗೆ ಅದೇ ಮುಳುವಾಯಿತೇ. ಬೆಳೆದದ್ದು ಅನಾಥಾಶ್ರಮದಲ್ಲಿ.. ಅಲ್ಲಿನ ಗುರುಗಳು ಹಾಕಿಕೊಟ್ಟಿದ್ದ ಉತ್ತಮ ಹಾದಿಯಲ್ಲಿ ಬೆಳೆದಿದ್ದೆ. 

ಸತ್ಯದ ಬೆಳಕನ್ನು ಚೆಲ್ಲುವ ಆಶಯದಲ್ಲಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುವ ಆಶಯ ನಿನ್ನದಾಗಿದ್ದರೆ, ವೈದ್ಯಕೀಯ ನನ್ನ ಆಯ್ಕೆಯಾಗಿತ್ತು. ನಮ್ಮಿಬ್ಬರ ಹಾದಿ ಬೇರೆಯೇ ಆಗಿ ಹೋಗಿತ್ತು. ವಿಧಿ ಲಿಖಿತದ ಎದುರು ನಿಲ್ಲುವರಾರು ?

ನಿನ್ನ ಬರವಣಿಗೆಯ ಮೊನಚನ್ನು ತಾಳಿಕೊಳ್ಳುವ ಶಕ್ತಿ ಸಭ್ಯತೆಯ ಸೋಗಿನಲ್ಲಿರುವವರಿಗೆ ಇಲ್ಲ ಕಣೆ ಹುಡುಗಿ.. ರಾಜಕೀಯ ವ್ಯಕ್ತಿಯ ಅಕ್ರಮ ವಿಚಾರಗಳನ್ನು ಬಯಲಿಗೆಳೆಯತೊಡಗಿದ್ದೆಯಲ್ಲಾ, ಅದೂ ರಾಜ್ಯದ ಪ್ರಮುಖ ರಾಜಕೀಯ ಮುತ್ಸದಿ ಎಂದೆನಿಸಿಕೊಂಡಿದ್ದವರು. ಯಾವ ಕೆಚ್ಚೆದೆಯ ಗಂಡೂ ಮಾಡದ ಧೈರ್ಯ ನೀನು ಮಾಡಿದ್ದೆ. ಕಾರಣ, ನಿನ್ನ ಜನ್ಮದ ನಂಟು ಕೂಡಾ ಅವನಿಂದಲೇ ಬೆಸೆದಿತ್ತು. ಅಪ್ಪ-ಮಕ್ಕಳ ಬಂಧದಲ್ಲಿ ಬಂಧಿಯಾಗಬೇಕಿದ್ದವರು ರಾಜಕೀಯ- ಪತ್ರಿಕೋದ್ಯಮದ ರಣಭೂಮಿಯಲ್ಲಿ ಕಾದಾಡುತ್ತಿದ್ದಿರಿ. 

ನಿನ್ನ ಜನ್ಮ ರಹಸ್ಯ ಅವನಿಗೆ ತಿಳಿದದ್ದು ತಡವಾಗಿ.. ಅಷ್ಟರಲ್ಲಾಗಲೇ ನಿನ್ನ ಮೇಲೆ ಅವನ ಕಡೆಯವರಿಂದಲೇ ಅತ್ಯಾಚಾರವಾಗಿತ್ತು. ಇತ್ತ ನೀನು ಸಾವು-ಬದುಕಿನ ನಡುವಿನಲ್ಲಿ ಹೋರಾಡುತ್ತಿರುವಾಗಲೇ ಅವನಿಗೆ ಸತ್ಯ ತಿಳಿದಿತ್ತು. ಕಾಲ ಮಿಂಚಿತ್ತು. ಕಾಲವನ್ನು ತಿರುಗಿಸಲಾಗದು, ನಿಲ್ಲಿಸಲಾಗದು. ನಿನ್ನನ್ನು ಬದುಕಿಸಿಕೊಳ್ಳಬೇಕೆಂಬ ಅವನ ಪ್ರಯತ್ನ ನಿನ್ನನ್ನು ಸಾಯಲೂ ಬಿಡದೆ, ಬದುಕಿಸಲೂ ಆಗದೇ ನಿನ್ನ ಜೀವವನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ.

ಮಗಳೆಂಬ ಮಮಕಾರ, ತನ್ನ ತಪ್ಪಿನ ಪ್ರಾಯಶ್ಚಿತ್ತ ಎಲ್ಲವೂ ಅವನನ್ನು ಕೊಂದುಹಾಕುತ್ತವೆ. ರಣ ಭೀಕರ ಅತ್ಯಾಚಾರ ಮಾಡಿಸಿದ ಪಾಪ ಅವನನ್ನು ಕಿಂಚಿತ್ತು ಬಿಡದೆ ಕಾಡುತ್ತವೆ. ನೀನು ಬರೆದ ಸಾಲುಗಳು, ಅವನ ಪ್ರತೀಕಾರ ಅವನನ್ನು ಇತ್ತ ಬದುಕಲೂ ಬಿಡದೆ, ಸಾಯಲೂ ಬಿಡದೆ ನರಳಿಸುತ್ತವೆ. ಅದಕ್ಕಿಂತಾ ದೊಡ್ಡ ಶಿಕ್ಷೆ ಅವನಿಗೆ ಬೇರಾವುದು ಸಹಾ ಸಿಗಲಾರದು. ನರಕ ಕೂಡಾ ಇದಕ್ಕಿಂತ ಎಷ್ಟೋ ಮೇಲೆನಿಸಿಬಿಡುತ್ತದೆ ಅವನಿಗೆ. ಪ್ರಾಯಶ್ಚಿತ್ತಕ್ಕೂ ಆಯ್ಕೆ ಸಿಗದು ಅವನಿಗೆ. ಆತ್ಮಸಾಕ್ಷಿ ಎಂಬುದು ಅವನಲ್ಲಿ ಇನ್ನೂ ಜೀವಂತವಾಗಿದ್ದರೆ ಅವನು ಬದುಕಿನ ಪ್ರತಿ ನಿಮಿಷದಲ್ಲಿಯೂ ನರಕ ಕಾಣುತ್ತಾನೆ. ನೀ ಅಂದು ಬರೆದಿದ್ದ ಸಾಲುಗಳು ಹುಸಿಯಾಗಲಿಲ್ಲ.

ನೀನು ಮಾತ್ರ ಜೀವಚ್ಛವವಾಗಿ ನರಳುವುದನ್ನು ನಾನು ನೋಡಲಾರೆ. ಜೊತೆಯಲ್ಲಿ ಆಡಿದ ಇದೇ ಕೈಗಳು ನಿನಗಿಂದು ಮುಕ್ತಿ ನೀಡಲಿವೆ. ಮತ್ತೊಬ್ಬ "ಅರುಣಾ ಶಾನುಭೋಗ" ಆಗಿ ನಿನ್ನನ್ನು ನಾನು ನೋಡಲಾರೆ. ದಯಾಮರಣದ ಆಯ್ಕೆ ನೀಡಲಾರೆ. ಬದುಕಿದರೂ ಮೊದಲಿನ ಸ್ಥಿತಿಯಲ್ಲಿ ನೀನಿರಲಾರೆ ಹುಡುಗಿ. ನನ್ನ ಕಾರ್ಯ ತಪ್ಪಾಗಿರಬಹುದು, ನೀ ಬರೆಯದ ಸಾಲುಗಳನ್ನು ನಾನು ಬರೆಯಲಿರುವೆ.

ಆದರೂ, ವಿಧಿ ಬರೆದ ಸಾಲುಗಳ ಬದಲಿಸಿ ನೀನು ನಿನ್ನ ಸಾಲುಗಳ ಬರೆಯಬಾರದಿತ್ತು. ಕಡೆಗೂ, ನಿನ್ನ ಬರಹವೇ ನಿನ್ನ ಮುಕ್ತಿಯಾಯಿತೇ..
ಆದರೂ, ನೀ ಬರೆದ ಸಾಲುಗಳು ಎಂದೆಂದಿಗೂ ಅಜರಾಮರ. ನಿನಗೆ ಮತ್ತೊಂದು ಜನ್ಮವಿದ್ದರೆ ನನ್ನ ಮಗಳಾಗಿ ಜನಿಸು. ಕೆಚ್ಚೆದೆಯ ಕಿಚ್ಚಿನ ಹೆಮ್ಮೆಯ ಮಗಳಾಗಿ ಹುಟ್ಟಿ ಬಾ.
ನೀ ಬರೆದ ಸಾಲುಗಳ ಮರೆಸಲಾರದಂತೆ ಮಾಡಲು, ನಿನ್ನನ್ನು ಬೆಚ್ಚಗೆ ಕಾಪಿಡಲು ನಾನು ಸಿದ್ಧಳಿದ್ದೇನೆ.

~ವಿಭಾ ವಿಶ್ವನಾಥ್

ಸೋಮವಾರ, ಜುಲೈ 13, 2020

ಚಹಾ-ಕಾಫಿ ಚೂರುಗಳು

1.ಸಕ್ಕರೆ ಖಾಲಿಯಾದಾಗ ಚಹಾಕ್ಕೆ
ಬೆಲ್ಲ, ಕಲ್ಲುಸಕ್ಕರೆಗಳೂ ಆಗಬಹುದು
ರುಚಿ ಬದಲಾಗಬಹುದು ಅಷ್ಟೇ..
ಹೊಂದಾಣಿಕೆ ಎಂದರೆ ಇದೆಯಾ..?

2. ಮೂಲೆಯ ಕಾಫಿ ಟೇಬಲ್ ಖಾಲಿಯಿಲ್ಲದಿದ್ದರೆ
ಮೊದಲು ಮೊದಲೆಲ್ಲಾ ಕಿರಿಕಿರಿಯೆನಿಸುತ್ತಿತ್ತು
ಈಗ ಯಾವುದೂ ಆಗುತ್ತದೆ.. ಕಾಫಿಯೊಂದಿದ್ದರೆ ಸಾಕು
ಅನಿವಾರ್ಯತೆ ಎಲ್ಲವನ್ನೂ ಕಲಿಸಿಬಿಡುತ್ತದೆ

3. ದಿನಾಲೂ ಕಾಫಿ ಇದ್ದರೂ ಆದೀತು
ಅಥವಾ ಚಹಾ ಕುಡಿದರೂ ಆದೀತು
ಅಥವಾ ಬಿಸಿನೀರು ಸಹಾ ಆದೀತು
ಬದಲಾವಣೆಗೆ ಒಗ್ಗಿಸಿಕೊಳ್ಳಲು ಕಲಿತಿರುವೆ

4. ಕಾಫಿ ಚೆನ್ನಾಗಿದೆಯೋ ಇಲ್ಲವೋ
ರುಚಿಯ ನಿರ್ಧಾರ ಕುಡಿಯುವವರದ್ದಲ್ಲವೇ..?
ಕೆಲವೊಮ್ಮೆ, ಮಾಡುವವರ ಮಾತಿಗೆ ಮರುಳಾಗಿ
ಸ್ವಂತ ನಿರ್ಧಾರವನ್ನೇ ಬದಲಿಸಿಕೊಂಡು ಬಿಡುತ್ತೇವೆ

5.ಪರಿಮಾಣ ಬದಲಾದಂತೆಲ್ಲಾ ರುಚಿ ಬದಲು
ಕಲಿತಷ್ಟೂ ಕಲಿಯುವುದು ಇದ್ದೇ ಇದೆ
ದಿನದಿನವೂ ಹೊಸ ರುಚಿ, ಹೊಸ ಪಾಠ
ನಾನಿನ್ನೂ ಬದುಕೆಂಬ ಪಾಕಶಾಲೆಯ ವಿದ್ಯಾರ್ಥಿ

6. ಸಿಹಿ ಕಾಫಿ ಏಕೋ ಸರಿಯಾಗುತ್ತಿಲ್ಲ
ನಾಲಿಗೆಗೆ ಹಿತವಾದರೂ ಏಕೋ ಕಸಿವಿಸಿ
ನಿತ್ಯದ ಕಹಿ ಕಾಫಿಯನ್ನೇ ಮನ ಬಯಸುತ್ತಿದೆ
ಹಠಾತ್ ಬದಲಾವಣೆಗೆ ಒಗ್ಗಿಕೊಳ್ಳುವುದೂ ಕಷ್ಟವೇ..

7. ನೋಡಲು ಚೆನ್ನಾಗಿಯೇ ಇದ್ದ ಕಾಫಿ
ಗುಟುಕರಿಸಿದ ನಂತರ ಕಹಿ ಕಹಿ
ಆಗೆಲ್ಲಾ ನನಗೆ ನೆನಪಾಗುವುದು
ಗೋಮುಖ ವ್ಯಾಘ್ರದಂತಹಾ ಹಿತಶತ್ರುಗಳೇ..

~ವಿಭಾ ವಿಶ್ವನಾಥ್

ಗುರುವಾರ, ಜುಲೈ 9, 2020

ಯಾವುದೊ ಭಾವ, ಯಾವುದೋ ಜೀವ


ಯಾವುದೊ ಭಾವ, ಯಾವುದೋ ಜೀವ
ಅರಿತು ಬೆರೆತು ಬಾಳುವುದಯ್ಯ

ಎಲೆಯ ಮರೆಯ ಪ್ರತಿಭೆಯು ಇಂದು 
ಕಾಣದೆ ಎಲ್ಲೋ ಅಡಗಿವುದಯ್ಯ

ನಗುವು,ಅಳುವು ಒಟ್ಟಿಗೆ ಬೆರೆತು
ಬಾಳನು ರಂಗು ಮಾಡಿವೆಯಯ್ಯ

ಬದುಕಿನ ಭಾವದ ತಂತಿಯ ಮೀಟಿ
ಒಳಗಿನ ತಿಳಿಯನು ಕಲಕುವೆವಯ್ಯ

ರಾಗ-ದ್ವೇಷದ ಭಾವದ ಪಥವ
ತೊರೆದು ಬಂದು ನಿಂತಿವೆಯಯ್ಯ

ಯಾರದೊ ಬದುಕು, ನನ್ನಯ ಹಾಡು
ಮರೆತೂ ಮರೆಯದಂತಾಗಿದೆಯಯ್ಯ

~ವಿಭಾ ವಿಶ್ವನಾಥ್

ಭಾನುವಾರ, ಜುಲೈ 5, 2020

ನನ್ನದಲ್ಲದ ಹಾಡು

ನನ್ನದಲ್ಲದ ಹಾಡ

ಹಾಡಬಲ್ಲೆನೆ ನಾನು?
ನನ್ನದಾಗದ ಬದುಕ
ಬದುಕಬಲ್ಲೆನೇ ನಾನು?

ಎದೆಯುಸಿರ ಸ್ವರ ಮೀಟಿ
ಭಾವವನೇ ಬಸಿದು
ನಾನಾಗದ ನನ್ನನ್ನು
ನಾನೇ ನಾನಾಗಿಸಿಕೊಂಡು

ಬದುಕಲಾಗದ ಬದುಕ
ಕನಸಿನಲಿ ಬದುಕುತಾ
ನನಸಾಗದ ಕನಸ
ಕನಸೇ ಬದುಕೆನ್ನುತಾ

ನನ್ನದಲ್ಲದ ಬದುಕು
ನನ್ನದಲ್ಲದ ಭಾವ
ಹೇಗೋ ಒಂದಾಗಿಸುತ
ನನ್ನದೇ ಎಂದೆನುತ

ಬದುಕ ಹಾಡಾಗಿಸುತ
ಹಾಡ ಬದುಕಿಸುತ
ಬದುಕಬಲ್ಲೆನು ನಾನು
ಹಾಡಬಲ್ಲೆನು ನಾನು

~ವಿಭಾ ವಿಶ್ವನಾಥ್