ಇಂದು ಎಲ್ಲವೂ ಡಿಜಿಟಲ್ ಯುಗ. ಈ ಎಲೆಕ್ಟ್ರಾನಿಕ್ ಯುಗದಲ್ಲಿ ನಮ್ಮನ್ನೇ ನಾವು ಕಳೆದುಕೊಂಡು ಬಿಟ್ಟಿದ್ದೇವೆ. ಅಂತಹದ್ದರಲ್ಲಿ ಓದು ಕೂಡಾ. ಇಂದು ಓದು ಕೂಡಾ ಡಿಜಿಟಲ್ ಆಗಿ ಮಾರ್ಪಟ್ಟಿದೆ. ಎಲ್ಲಿ ಓದಿದರೂ, ಹೇಗೆ ಓದಿದರೂ ಓದು ಓದೇ ಅಲ್ಲವಾ..?
ಎಷ್ಟೋ ಸಮಯವಿದ್ದರೂ ಸೋಶಿಯಲ್ ಮೀಡಿಯಾಗಳಲ್ಲಿ ಮುಳುಗಿ ಸಮಯವಿಲ್ಲ ಎಂದು ಇದ್ದು ಬಿಡುತ್ತೇವೆ. ಬಸ್ಸಲ್ಲಿ, ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ಕೂಡಾ ಓದು ಸಂಗಾತಿಯಾಗಬಲ್ಲದು.
ಏನನ್ನು ಓದಬೇಕು ? ಎಂಬುದು ಮತ್ತೊಂದು ಪ್ರಶ್ನೆ. ಅದು ಅವರವರ ಭಾವ ಮತ್ತು ಆಸಕ್ತಿಗೆ ಸಂಬಂಧಪಟ್ಟದ್ದು. ಆದರೆ, ಮನಸ್ಸಿದ್ದಲ್ಲಿ ಪ್ರತಿಯೊಂದರಲ್ಲಿಯೂ ಏನಾದರೊಂದು ಒಳ್ಳೆಯದ್ದು, ಗೊತ್ತಿಲ್ಲದಿರುವುದು ಅಥವಾ ತಿಳಿದುಕೊಳ್ಳುವುದು, ಇಷ್ಟವಾಗುವುದು ಹೀಗೇ ಏನಾದರೊಂದು ಇದ್ದೇ ಇರುತ್ತದೆ. ಅದನ್ನು ಕಣ್ಣು ಬಿಟ್ಟು ಹಾಗೂ ಮನಸ್ಸು ತೆರೆದು ನೋಡುವುದು, ಸ್ವೀಕರಿಸುವುದರಲ್ಲಿರುತ್ತದೆ.
ಇದಕ್ಕೆ ತಕ್ಕಂತೆ ನಾನು ಕೇಳಿರುವ ಒಂದು ದೃಷ್ಟಾಂತವನ್ನು ಇಲ್ಲಿ ಉಲ್ಲೇಖಿಸುತ್ತೇನೆ.
ಮಹಾತ್ಮ ಗಾಂಧಿಯವರಿಗೆ ಅಂಚೆಯಲ್ಲಿ ಒಂದು ಪತ್ರ ಬರುತ್ತದೆ. ಅದು ಸುಮಾರು ಇಪ್ಪತ್ತು ಪುಟಗಳನ್ನು ಒಳಗೊಂಡಿದ್ದ ಪತ್ರ. ಆಶ್ರಮದಲ್ಲಿದ್ದ ಒಬ್ಬರು ಅದನ್ನು ಅವರಿಗೆ ತಂದು ಕೊಟ್ಟು " ಇದು ನಿಮ್ಮನ್ನು ದೂಷಿಸಿ, ಬೈದು ಬರೆದಿರುವ ಪತ್ರ. ಇದು ಯಾರಿಗೂ ಉಪಯೋಗಕ್ಕೆ ಬಾರದಿರುವ ಪತ್ರ." ಎಂದರು. " ಆಗಲಿ, ಪರವಾಗಿಲ್ಲ" ಎನ್ನುತ್ತಾ ಪತ್ರವನ್ನು ತೆಗೆದುಕೊಂಡು ಅದನ್ನು ಸಮಾಧಾನದಿಂದ ಓದಿದರು. ನಂತರ ಅದರಲ್ಲಿದ್ದ ಗುಂಡು ಸೂಜಿಯನ್ನು ಮಾತ್ರ ತೆಗೆದುಕೊಂಡು ಆ ಪತ್ರವನ್ನು ಕಸದ ಬುಟ್ಟಿಗೆ ಎಸೆದು ಹೇಳಿದರಂತೆ.. ಅದರಲ್ಲಿಯೂ ಉಪಯೋಗವಾಗುವುದು ಇದ್ದೇ ಇದೆ.
ನಾವು ಏನೇ ಓದಿದರೂ ನಮಗೆ ಅದರಲ್ಲಿ ಒಂದಾದರೂ ಪಾಸಿಟಿವ್ ಅಂಶ ಇದ್ದೇ ಇರುತ್ತದೆ. ನಮ್ಮ ಓದಿನ ವೇಗ ಹೆಚ್ಚಿಸುತ್ತದೆ. ನಮ್ಮ ತಾಳ್ಮೆಯನ್ನು ಹೆಚ್ಚಿಸುತ್ತದೆ. ನಮ್ಮ ಯೋಚನಾ ಲಹರಿಯನ್ನು ಬದಲಾಯಿಸುತ್ತದೆ. ಬರಹಗಾರರಾಗಿದ್ದರಂತೂ ಅವರ ಬರಹಕ್ಕೆ ಮತ್ತಷ್ಟು ಹೆಚ್ಚಿನ ಪರಿಧಿ ನೀಡುತ್ತದೆ. ವಾಗ್ಮಿಗಳು ಅಥವಾ ಲೀಡರ್ ಗಳಿಗೆ ಅವರ ಮಾತು ಮತ್ತು ಸ್ವಭಾವವನ್ನು ಬದಲಾಯಿಸಿಕೊಳ್ಳಲು ಅನುಕೂಲಕರವಾಗಿರುತ್ತದೆ.
ಬರೆದುದೆಲ್ಲವನ್ನೂ ಎಲ್ಲರೂ ಒಪ್ಪಲಾರರು. ಅಥವಾ ಎಲ್ಲರಿಗೂ ಮೆಚ್ಚಿಸಲು ಬರಹಗಾರ ಬರೆಯಲಾರ. ಅದು ಅವರವರ ಆಲೋಚನಾ ಪರಿಧಿಗೆ ಬಿಟ್ಟದ್ದು.
ನಾನು ಓದಿದ ಪುಸ್ತಕಗಳ ಕೆಲ ವಿಚಾರಗಳನ್ನು, ನನಗಿಷ್ಟವಾದ ವಿಷಯಗಳನ್ನು ನಾನು ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇನ್ನು ಮುಂದೆ ನೀವು ಈ ಬರಹಗಳನ್ನು ಓದಬಹುದು. ಇದು ವಿಮರ್ಶೆಯಲ್ಲ, ವಿಮರ್ಶೆ ಮಾಡುವಷ್ಟು ದೊಡ್ಡವಳು ನಾನಲ್ಲ. ನನ್ನ ಕೆಲ ಮಾತುಗಳು ಹಾಗೂ ಪುಸ್ತಕದ ವಿಚಾರಗಳು.
E- ಹೊತ್ತಲ್ಲಿ ನಾನು ಓದಿದ ಹಾಗೂ ಓದುತ್ತಿರುವ ವಿಚಾರ ವಿನಮಯ ಇದು ಅಷ್ಟೇ.
ಈ ಸರಣಿ ಬರಹಕ್ಕೆ ನಾನು ನಿಮ್ಮೆಲ್ಲರ ಸಹಕಾರ ಬಯಸುತ್ತೇನೆ. ಓದಿದ ಎಲ್ಲರಿಗೂ ಧನ್ಯವಾದಗಳು.
~ವಿಭಾ ವಿಶ್ವನಾಥ್




