ಪುಸ್ತಕದ ಶೀರ್ಷಿಕೆ : ಊರ್ವಶಿ
ಲೇಖಕರು : ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪ್ರಕಾಶಕರು : ಐಬಿಎಚ್ ಪ್ರಕಾಶನ
ಮರು ಮುದ್ರಣ : 2018
ಪುಟಗಳು : 280
ಬೆಲೆ : 225 ರೂ.
ಕೃತಿ ಕುರಿತು ಹೇಳುವಾಗ
"ಅಹಲ್ಯೋದ್ಧಾರದ ಕಥೆಗಿಂತ ಸೀತಾಲಕ್ಷ್ಮಿಯ ಕಥೆ ಮಹತ್ವದಲ್ಲಿ ಕಡಿಮೆಯಾದದ್ದೇನಲ್ಲ. ಅದಕ್ಕೆ ಪ್ರತಿಯಾಗಿ ಇದು ಒಂದು ಕೈ ಮಿಗಿಲಾದುದೆಂದೇ ನನ್ನ ಎಣಿಕೆ" ಎನ್ನುತ್ತಾರೆ.
ಇದಕ್ಕೆ ನಾನು ಸಹ ಸಹಮತಿ ಸೂಚಿಸುತ್ತೇನೆ.
ಊರ್ವಶಿ ಎಂಬ ಶೀರ್ಷಿಕೆಯಿದ್ದರೂ ಈ ಹೆಸರಿನ ವ್ಯಕ್ತಿ ಈ ಕಾದಂಬರಿಯಲ್ಲಿಲ್ಲ. ಬದಲಾಗಿ ಇದೊಂದು ರೂಪಕದಂತೆ ಕೊಟ್ಟಿರುವ ಹೆಸರು. ಊರ್ವಶಿಯ ಸೌಂದರ್ಯ ಹಾಗೂ ಅದಕ್ಕೆ ಆಕರ್ಷಿತರಾಗುವ ಗಂಡುಗಳ ಹೋಲಿಕೆಯನ್ನು ನೀಡಿದ್ದಾರೆ. ಇದು ಸಾಮಾಜಿಕ ಕಾದಂಬರಿ.
ಈ ಕಾದಂಬರಿಯ ಕೇಂದ್ರಬಿಂದು ಸೀತಾಲಕ್ಷ್ಮಿ. ಬಾಲ್ಯದಿಂದಲೂ ಯೌವ್ವನದವರೆಗೂ ಮೋಹಕವಾಗಿ ಬೆಳೆಯುತ್ತಿದ್ದ ಅವಳ ಚೆಲುವು, ಬೆರಗು ಹಾಗೂ ಅವಳ ಕುರಿತು ಆರಾಧನೆ ಬೆಳೆಸಿಕೊಂಡಿದ್ದವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ.
ಸೀತಾಲಕ್ಷ್ಮಿ ಮಲ್ಲಿಗೆ ಹಳ್ಳಿಯ ಶಾನುಭೋಗ ರಾಮಣ್ಣನವರ ಮೂರನೆಯ ಮತ್ತು ಕೊನೆಯ ಮಗಳು. ರಾಮಣ್ಣನವರಿಗೆ ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳು. ಸೀತಾಲಕ್ಷ್ಮಿ ಹುಟ್ಟಿದ ಎರಡು ತಿಂಗಳಿಗೆ ಅವಳ ತಾಯಿ ತೀರಿಕೊಂಡಿದ್ದರು. ರಾಮಣ್ಣನವರು ಎರಡನೇ ವಿವಾಹವಾಗುವ ಗೋಜಿಗೆ ಹೋಗಿರಲಿಲ್ಲ. ತಾಯಿ ಇಲ್ಲದ ಸೀತಾಲಕ್ಷ್ಮಿ ಬೆಳೆಯುವ ಪಾಡು ಹೇಗಿತ್ತು ಎಂದು ಲೇಖಕರು ಕರುಳು ಕರಗುವಂತೆ ವರ್ಣಿಸಿದ್ದಾರೆ.
ಸೀತಾಲಕ್ಷ್ಮಿಯ ಮೊದಲ ಅಣ್ಣ ರಾಮ ಎರಡನೆಯವನು ಶ್ರೀನಿವಾಸ. ಮೊದಲ ಅಕ್ಕ ಲಕ್ಷ್ಮಿಗೆ ವಿವಾಹವಾಗಿತ್ತು. ಜಲಜಾಕ್ಷಿ ಹಾಗೂ ಸೀತಾಲಕ್ಷ್ಮಿಯರ ವಿವಾಹಕ್ಕೂ ಮುನ್ನವೇ ತಂದೆ ತೀರಿ ಹೋಗಿದ್ದರಿಂದ ಅಣ್ಣಂದಿರೇ ಅವರಿಬ್ಬರಿಗೂ ವಿವಾಹ ಮಾಡಬೇಕಿತ್ತು . ಆದರೆ, ಗಟ್ಟಿಯಾದ ವರೋಪಚಾರ ಹಾಗೂ ಪಟ್ಟಿ ಹಿಡಿದು ಬರುವ ವರಗಳ ಬೇಡಿಕೆಗಳನ್ನು ಈಡೇರಿಸುವುದು ಹಣದ ಅಭಾವದಿಂದ ಇಬ್ಬರಿಗೂ ಕಷ್ಟವಿತ್ತು.
ಜಲಜಾಕ್ಷಿ ಕುರೂಪಿಯಲ್ಲದಿದ್ದರೂ ಸುಂದರಿಯೂ ಅಲ್ಲ. ಅವಳನ್ನು ಮದುವೆಯಾದ ನರಸಿಂಹನ ಒರಟುತನ, ಕೊಳಕು, ನಿರ್ಲಕ್ಷ್ಯ ಇವುಗಳನ್ನು ಕಾಣಬಹುದು. ಕೆಲವೊಮ್ಮೆ ಅವನ ವರ್ತನೆಗಳು ಕೆಲವು ಪ್ರಾಣಿಗಳಿಗೂ ಹೋಲಿಕೆಯಾಗುತ್ತವೆ.
ಸುಂದರಿಯಾಗಿದ್ದ ಸೀತಾಲಕ್ಷ್ಮಿಯ ವಿವಾಹಕ್ಕೂ ಕಷ್ಟವಿತ್ತು. ಮಲ್ಲಿಗೆಹಳ್ಳಿಯ ಬಾಲಿಕಾ ಪಾಠಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ ಕಮಲಮ್ಮನಿಗೂ ಸೀತಾಲಕ್ಷ್ಮಿಗೂ ಬೆಳೆದ ಬಾಂಧವ್ಯ ಆಪ್ತವಾಗಿ.. ಅವರ ದಯೆಯಿಂದ ಹಾಗೂ ಸಂಗೀತದ ಅಭಿರುಚಿಯಿಂದ ಪಿಟೀಲು ನುಡಿಸುವುದನ್ನು ಕಲಿತ ಸೀತಾಲಕ್ಷ್ಮಿ ಮುಂದೆ ಅದರಲ್ಲಿಯೇ ಪಳಗುತ್ತಾಳೆ. ಬಾಲ ವಿಧವೆ ಕಮಲಮ್ಮನವರಿಗೆ ಮಕ್ಕಳಿರಲಿಲ್ಲ. ಬಂಧುಗಳು ಯಾರೂ ಇರಲಿಲ್ಲ. ಹೀಗಾಗಿ ಸೀತಾಲಕ್ಷ್ಮಿಯ ಆಪ್ತ ನಂಟು ಹಾಗೂ ಸಂಗೀತದ ಪ್ರೇಮವೇ ಅವರನ್ನು ಉಳಿಸಿತು ಎಂದರೂ ತಪ್ಪಾಗಲಾರದು.
ಸುಂದರರಾಜ ಹಾಗೂ ಸೀತಾಲಕ್ಷ್ಮಿಯರ ವಿವಾಹವಾಗುತ್ತದೆ. ಅದು ಸುಂದರರಾಜನಿಗೆ ಪ್ರೇಮ ವಿವಾಹ. ಆತ ಸೀತಾಲಕ್ಷ್ಮಿಯನ್ನು ಇಷ್ಟಪಟ್ಟದ್ದು ಯಾವ ಸಂದರ್ಭದಲ್ಲಿ ಹಾಗೂ ಹೇಗೆ ಅವರಿಬ್ಬರ ನಂಟು ಅನುರೂಪದ ಜೋಡಿ ಎನ್ನಿಸುವಂತೆ ಮಾಡುತ್ತದೆನ್ನುವ ಸುಂದರ ಕ್ಷಣಗಳನ್ನು ಓದಿಯೇ ಸವಿಯಬೇಕು. ಸೀತಾಲಕ್ಷ್ಮಿ ತನ್ನ ಚಿಕ್ಕಮ್ಮನ ಪ್ರಾಣವಾಗಿದ್ದವಳು. ಚಿಕ್ಕಮ್ಮ ಅವಳಿಗಿಂದೇ ಬಿಟ್ಟು ಹೋಗಿದ್ದ ಉಡುಗೊರೆ ಏನಿತ್ತು..?
ಸುಂದರರಾಜ ಮಲ್ಲಿಗೆಹಳ್ಳಿಯಿಂದ 15 ಮೈಲಿ ದೂರದಲ್ಲಿದ್ದ ರಂಭಾಪುರಿಯವನು. ಅವರ ತಂದೆ ಗುಂಡಣ್ಣನವರು ಬಡ ಜಮೀನುದಾರರು. ಅವರಿಗೆ ಮೊದಲನೇ ಮದುವೆಯಲ್ಲಿ ಮೂವರು ಗಂಡು ಮಕ್ಕಳಿದ್ದರು. ಮೊದಲ ಪತ್ನಿ ತೀರಿ ಹೋಗಿದ್ದರಿಂದ ಕಲ್ಯಾಣಮ್ಮನವರನ್ನು ಎರಡನೇ ಮದುವೆಯಾಗಿದ್ದರು. ಅವರಿಬ್ಬರ ಏಕೈಕ ಮಗನೇ ಸುಂದರರಾಜ. ಅವಿದ್ಯಾವಂತನಾಗಿದ್ದರೂ ಸುಸಂಸ್ಕೃತ. ಆತನ ಸಂಗೀತ ಪ್ರೇಮ ಹಾಗೂ ಸೀತಾಲಕ್ಷ್ಮಿಯನ್ನು ಆತ ಆ ದರಿಸುವ ಗೌರವಿಸುವ, ಅವಳ ಪಿಟೀಲು ವಾದನವನ್ನು ಪ್ರೋತ್ಸಾಹಿಸುವ ಪರಿ ನಿಜಕ್ಕೂ ಆತನ ಮೇಲೆ ಗೌರವ ಹೆಚ್ಚಿಸುತ್ತದೆ. ಸುಂದರರಾಜನ ಮನೆಯಲ್ಲಿ ತಂದೆ ಎರಡನೇ ವಿವಾಹವಾದುದು ಮಕ್ಕಳಿಗೆ ಸಮ್ಮತಿ ಇರಲಿಲ್ಲ. ಸುಂದರರಾಜನ ಮೇಲೆ ಯಾರಿಗೂ ಅಷ್ಟೇನೂ ಪ್ರೀತಿ ಇರಲಿಲ್ಲ.
ಸೀತಾಲಕ್ಷ್ಮಿಯ ವಿವಾಹ, ವಿವಾಹದ ನಂತರ ಅವರಿಬ್ಬರ ಒಡನಾಟ ಎಲ್ಲವೂ ಸುಖದಿಂದಲೇ ಕೂಡಿರುವಾಗಲೇ ಸೀತಾಲಕ್ಷ್ಮಿಯ ಅಕ್ಕ ಜಲಜಾಕ್ಷಿ ತನ್ನ ಗಂಡ ನರಸಿಂಹನಿಗೆ ಈ ಬಾಣಂತನಕ್ಕೆ ತನ್ನ ತಂಗಿಯನ್ನು ಕರೆತರಲು ಹೇಳುತ್ತಾಳೆ. ಮೊದಲನೇ ಹೆರಿಗೆ ಸುಸೂತ್ರವಾಗದೆ ಹೋಗಿದ್ದು, ಹುಟ್ಟಿದ ಮಗು ಮೂರು ತಿಂಗಳಿಗೆ ಸತ್ತು ಹೋಗಿದ್ದು ಅವಳಿಗೊಂದು ಚಿಂತೆ. ಅಲ್ಲದೆ, ಅಣ್ಣನ ಮನೆಗೆ ಬಾಣಂತನಕ್ಕೆ ಬರುವುದು ಇಷ್ಟವಿಲ್ಲದೆ ತಂಗಿಯನ್ನೇ ಅಲ್ಲಿಗೆ ಕರೆಸಿಕೊಂಡಿದ್ದಳು. ಮನಸ್ಸಿಲ್ಲದ ಮನಸ್ಸಿಲ್ಲದ ಮನಸ್ಸಿನಲ್ಲಿ ಸುಂದರರಾಜನೂ ಒಪ್ಪುತ್ತಾನೆ.
ಪಾದರಸದಂತಿದ್ದ ಸೀತಾಲಕ್ಷ್ಮಿಯ ಕಾರ್ಯ, ಅಚ್ಚುಕಟ್ಟುತನ ಪ್ರತಿಯೊಂದಲ್ಲಿಯೂ ಅವಳ ಅಸ್ಥೆ ಎಲ್ಲವೂ ಜಲಜಾಕ್ಷಿಗೂ.. ಅವಳಿಗೂ ಇರುವ ವ್ಯತ್ಯಾಸವನ್ನು ತೋರುತ್ತದೆ. ನರಸಿಂಹ ಅವಳಿಗೆ ಹೆದರಿ ಸ್ವಲ್ಪ ಬದಲಾಗುತ್ತಾನೆ. ಜಲಜಾಕ್ಷಿಯ ಹೆರಿಗೆ ಸುಸೂತ್ರವಾಗಿ ಬಾಣಂತನದ ಸಂದರ್ಭದಲ್ಲಿ, ಸ್ವಾತಿ ಮಳೆಯ ಕಾಲದ ದಿನ ನಡೆದ ದುರ್ಘಟನೆಯೊಂದು ಸೀತಾಲಕ್ಷ್ಮಿಯ ಕೈಮೀರಿದ್ದು. ಅದರಿಂದ ಅವಳು ಬದುಕಿನಲ್ಲಿ ತೆತ್ತ ಬೆಲೆ ಅಪಾರ. ಇಲ್ಲಿಂದ ಮುಂದಕ್ಕೆ ಅವಳ ದುಃಖದ ಅಧ್ಯಾಯವೇ ತುಂಬಿಹೋಗಿದೆ.
ನರಸಿಂಹನಂತಹ ಪಿಶಾಚಿಯ ದಾಳಿಯ ನಂತರವೂ ಅವಳಿಗೆ ಸುಂದರರಾಜ ದೇವರಂತೆ ಹಾಗೂ ಆತನೇ ತನ್ನ ಪ್ರೇಮ ಮೂರ್ತಿ ಎಂಬ ಭಾವ ಹೋಗಿರಲಿಲ್ಲ. ಇವಳು ತನ್ನ ಸಂಸಾರವನ್ನು ಹಾಳು ಮಾಡಿದಳೆಂದು ಜಲಜಾಕ್ಷಿಯು ದ್ವೇಷಿಸಲು, ತವರಿನವರ ಸಹಾಯವು ಸಿಗದೇ ಬಂದು ಹೋಗುವ ಸೀತಾಲಕ್ಷ್ಮಿಯ ವಿಚಾರ ಅದಾಗಲೇ ರಂಭಾಪುರಿ ಹಾಗೂ ಮಲ್ಲಿಗೆಹಳ್ಳಿಯಲ್ಲಿ ಗುಸುಗುಸು ಎಂದಿದ್ದದ್ದು ದೊಡ್ಡದೇ ಆಗಿತ್ತು.
ಸೀತಾಲಕ್ಷ್ಮಿ ಆಸ್ಪತ್ರೆ ಸೇರಿದ ನಂತರ ಅವಳು ಉಳಿದದ್ದೇ ತಪ್ಪಾಯಿತೇನೋ ಎಂಬಂತೆ ನರಕ ಅನುಭವಿಸುತ್ತಾಳೆ . ರಾಮನಿಗಿಂತ ಧೈರ್ಯಸ್ಥನಾದ ಹಾಗೂ ಅಂತಃಕರಣದ ಅಣ್ಣ ಶ್ರೀನಿವಾಸನ ಉಡಿಗೆ ಬೀಳುತ್ತಾಳೆ ಸೀತಾಲಕ್ಷ್ಮಿ. ಇದಾದ ನಂತರ ಅವಳ ಚಾರಿತ್ರ್ಯದ ಕುರಿತ ಒಡಕು ಮಾತುಗಳು ನೇರಾನೇರವಾಗಿಯೇ ತಾಕುತ್ತವೆ. ಅಷ್ಟೇ ಅಲ್ಲದೆ ಹಳ್ಳಿಯಲ್ಲಿ ಎಲ್ಲಿ ಹೋದರು ಇದೇ ವಿಚಾರವೇ.. ಹಳ್ಳಿಯ ಜೀವನ ಹಾಗೂ ಅವಳಿಗಾಗಿ ಹಂಬಲಿಸಿರುವ ಗಂಡುಗಳು ಎಲ್ಲರಿಂದ ಪಾರಾಗಿ ಸುಂದರರಾಜನನ್ನು ನೆನೆಸುತ್ತಾಳಾದರೂ ಆತ ಅವಳ ಪಾಲಿಗೆ ಸಿಗುವಂತಿರಲಿಲ್ಲ.
ಸೀತಾಲಕ್ಷ್ಮಿಯ ಪಿಟೀಲು ವಾದನ, ಅವಳೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು.. ನಂತರ ರಾಮ, ಶ್ರೀನಿವಾಸರು ಬೇರೆಯಾದದ್ದು ಇವೆಲ್ಲದರ ಚಿತ್ರಣವಿದೆ.
ಮತ್ತೊಮ್ಮೆ ನರಸಿಂಹ ತನ್ನ ಪತ್ನಿಯ ಜೊತೆ ಊರ ಹಬ್ಬಕ್ಕೆ ಬಂದಾಗ ಯಾರೂ ಆತನ ಕುರಿತು ಚಕಾರವೆತ್ತದೆ, ಮೊದಲಿನಂತೆಯೇ ಗೌರವದಿಂದ ಕಂಡದ್ದು.. ಅದಕ್ಕೆ ಪರಿಹಾರವೆನ್ನುವ ರೀತಿಯಲ್ಲಿ ಸೀತಾಲಕ್ಷ್ಮಿಯನ್ನು ಅವನೊಡನೆ ಕಳಿಸುವ ವಿಚಾರ ಮಾಡಿದ್ದು ಈಗಿನ ಕಾಲಕ್ಕೆ ಸರಿ ಹೋಗುವುದಿಲ್ಲವಾದರೂ.. ಆ ಕಾಲಘಟ್ಟದ ಪರಿಸ್ಥಿತಿಯನ್ನು ತೋರುತ್ತವೆ. ಆದರೆ ಸೀತಾಲಕ್ಷ್ಮಿ ಅದಕ್ಕೆ ಒಪ್ಪುವುದಿಲ್ಲ.
ಒಂದು ಪ್ರಯತ್ನವೆಂಬಂತೆ ಸೀತಾ ನಲಕ್ಷ್ಮಿಯ ಮನಸ್ಸಿನಲ್ಲಿರುವುದು ಅದೇ ಆದರೆ ಅದು ಆಗಿ ಹೋಗಲಿ ಎಂದು ಮತ್ತೆ ಅವಳನ್ನು ರಂಭಾಪುರಿಗೆ ಕಳುಹಿಸಲು ಹೊರಟ ಶ್ರೀನಿವಾಸ ಅಲ್ಲಿ ಯಾವ ಸ್ವಾಗತವನ್ನು ಕಂಡ..?
ಅಲ್ಲಿ ಸೀತಾಲಕ್ಷ್ಮಿಗೆ ಸಿಕ್ಕಿದ್ದು ನಿತ್ಯ ನರಕ. ಬಡತನದ ಬದುಕು, ಜೊತೆಗೆ ಮನಸ್ಸು ಕೆಡಿಸಿಕೊಂಡು ಸಾಲ ಮಾಡಿಕೊಂಡು ಅಲ್ಲಿಯಲ್ಲಿ ಅಲೆಯುತ್ತಿದ್ದ ಸುಂದರರಾಜ. ಶಾಮ, ಕೃಷ್ಣ ಹಾಗೂ ರಂಗಸ್ವಾಮಿಯ ಹೆಂಡತಿಯರು ಈಕೆಯನ್ನು ಒಪ್ಪಲು ಸಿದ್ಧವಿರಲಿಲ್ಲ. ಜೊತೆಗೆ ಗುಂಡಣ್ಣನವರ ಶ್ರೀರಂಗಮ್ಮನವರ ಆರ್ಭಟವೇ ಮನೆಯಲ್ಲಿ ಹೆಚ್ಚಾಗಿತ್ತು. ಮಡಿ-ಮೈಲಿಗೆಯ ಹೆಸರಿನಲ್ಲಿ ಬೇಕಾಬಿಟ್ಟಿ ನಡೆಸಿಕೊಂಡ ಜನರಲ್ಲಿ ಕಲ್ಯಾಣಮ್ಮನವರು ಪಾಪದವರು. ಆದರೆ, ಅವರ ಮಾತು ಮನೆಯಲ್ಲಿ ನಡೆಯುವಂತಿರಲಿಲ್ಲ. ಗುಂಡಣ್ಣನವರು ಮನೆಯ ಯಜಮಾನರಾಗಿದ್ದರೂ ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿದ್ದರು. ಊರಿನವರನ್ನು ಎದುರಿ ಹಾಕಿಕೊಂಡು ಅವಳನ್ನು ಸೊಸೆ ಎಂದು ಒಪ್ಪಲು ಸಿದ್ಧವಿರಲಿಲ್ಲ. ಎಲ್ಲದಕ್ಕೂ ಉತ್ತರ ಕೊಡಬೇಕಾಗಿದ್ದ ಸುಂದರರಾಜ ಬೆಂಗಳೂರು ಬಿದ್ದಿದ್ದ. ಇದಲ್ಲದರ ಜೊತೆಗೆ ಕೃಷ್ಣನ ಕೆಟ್ಟದೃಷ್ಟಿ ಹಾಗೂ ಅವನ ಚಿತಾವಣೆಯಿಂದ ಸಂಕಷ್ಟಕ್ಕೆ ಸಿಲುಕುತ್ತಾಳೆ. ಎಷ್ಟೇ ಹೇಳಿದರೂ ಯಾರೂ ಒಪ್ಪದೆ, ಕೃಷ್ಣನ ಪತ್ನಿ ಮಹಾಲಕ್ಷ್ಮಿಯ ಒಡವೆ ಕಳುವಾಗಿದ್ದಕ್ಕೆ ಸೀತಾಲಕ್ಷ್ಮಿಯೇ ಕಾರಣ ಎಂದು ಮನೆಯಿಂದ ಹೊರ ಹಾಕುತ್ತಾರೆ, ನಿರ್ದೋಷಿಯಾಗಿದ್ದವಳು ಕಳ್ಳತನದ ಆಪಾದನೆಯ ಹೊತ್ತು, ಸಾಕಷ್ಟು ಅವಮಾನಗಳನ್ನು ಅನುಭವಿಸಿ ಮತ್ತೆ ಅಣ್ಣನ ಮನೆ ಸೇರುತ್ತಾಳೆ. ಮುಂದೆ ಕೃಷ್ಣನ ಕಳ್ಳತನ ಸಾಬೀತಾದದ್ದು ಹೇಗೆ..? ರಂಭಾಪುರಿಯ ನರಕದ ದಿನಗಳು ಹೇಗಿದ್ದವೆಂದನ್ನು ಓದುವಾಗ ಹೇವರಿಕೆ ಹುಟ್ಟಿಸುತ್ತದೆ.
ಇತ್ತ ಸುಂದರರಾಜನು ಅವಳನ್ನು ನೆನೆಸಿದ ರೂ ಹೋಗುವ ಧೈರ್ಯ ಮಾಡದೆ.. ಅವನ ಮನಸ್ಸಿನ ತುಮುಲಗಳಿಂದ ಅನುಭವಿಸಿದ ನೋವುಗಳು.. ಅವನು ಸಾಲ ಮಾಡಿ ಸಿಕ್ಕಿಕೊಂಡಾಗ ಕಮಲಮ್ಮನ ಸಹಾಯದಿಂದ ಸೀತಾಲಕ್ಷ್ಮಿ ಮಾಡಿದ ಸಹಾಯವೊಂದು ಆತನನ್ನು ಕಾಪಾಡಿದರೂ ಶ್ರೀನಿವಾಸನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅದಕ್ಕೆ ಕಾರಣ ಅವನ ಮಾತು ಮೀರಿ ನಡೆದಳು ಎಂಬುದು ಮಾತ್ರವಲ್ಲ.. ಬೇರೊಂದು ದೂರದಾಸೆಯೂ.... ಅದೇನು ಓದಿ ನೋಡಿ.
ಸೀತಾಲಕ್ಷ್ಮಿಯ ಸೋದರಮಾವ ಆಯುರ್ವೇದ ಆಚಾರ್ಯ ಪ್ರಾಣಾಚಾರ್ಯ ಪಂಡಿತರು ಮಲ್ಲಿಗೆಹಳ್ಳಿಗೆ ಬರುವುದು ಅವಳ ಜೀವನದ ಬಹುದೊಡ್ಡ ತಿರುವು. ಅವರು ಸುಧಾರಕರೂ ಹೌದು. ಸಮಾಜದ ಉದ್ದಾರಕ್ಕೆ, ಅವರ ಕಾರ್ಯಕ್ಕೆ ಸೀತಾಲಕ್ಷ್ಮಿ ನೆರವಾದ ಹಾಗೂ ಸೀತಾಲಕ್ಷ್ಮಿಯ ಬದುಕಿಗೆ ಅವರು ಬೆಳಕಾದ ದಿನಗಳು ಹೇಗಿದ್ದವು..? ಅಷ್ಟಕ್ಕೂ ಸೀತಾಲಕ್ಷ್ಮಿಯ ಕಷ್ಟಗಳ ಬದುಕು ಅವರಿಗೆ ತಿಳಿದದ್ದು ಅಲ್ಲಿಗೆ ಬಂದ ನಂತರವೇ.. ಆದರೆ, ತಮಗೆ ಬೇಕಾದ ಸಹಾಯಕ್ಕೆ ಸೀತಾಲಕ್ಷ್ಮಿಯನ್ನು ಕೇಳಿಕೊಳ್ಳಲು ಬಂದಿದ್ದ ಪ್ರಾಣಾಚಾರ್ಯರ ಬೇಡಿಕೆ ಏನಿತ್ತು..? ಅದು ನೆರವೇರಿತೇ..?
ಸೀತಾಲಕ್ಷ್ಮಿಯ ಪಿಟೀಲು ವಾದನ, ಸಂಗೀತ ಸಾಧನೆ ಅವಳ ಪ್ರತಿಭೆ ನಮ್ಮನ್ನು ಆವರಿಸುತ್ತದೆ. ಮುಂದೆ ಸೀತಾಲಕ್ಷ್ಮಿ ಆಯುರ್ವೇದ ಕಲಿತು, ಅದರಲ್ಲಿ ಪರಿಣಿತಿ ಹೊಂದಿ ಹಳ್ಳಿಯ ಜನರ ಪಾಲಿಗೆ ಬೆಳಕಾಗಿ ಸೇವಾಕಾರ್ಯಕ್ಕೆ ನಿಲ್ಲುತ್ತಾಳೆ.
ಅವಳ ಸೇವಾ ಜೀವನದ ಅಡ್ಡಿ-ಆತಂಕಗಳು, ಅದನ್ನು ನಿವಾರಿಸಿಕೊಂಡ ಬಗೆ.. ಸುಂದರರಾಜ ಮತ್ತು ಆಕೆಯ ಬದುಕು ಎಲ್ಲಿಂದ ಶುರುವಾಗಿ ಯಾವೆಲ್ಲ ತಿರುವು ಪಡೆದು ಹೇಗೆ ಸಾಗುತ್ತದೆ ಓದಿ ನೋಡಿ.
ಕಾದಂಬರಿಯ ಕೊನೆಯ ಭಾಗ ಸಮಾಜ ಸುಧಾರಣೆಯ ಅಂಶದಿಂದಲೂ.. ಹೆಣ್ಣು ಮಕ್ಕಳ ಬದುಕು ಬದಲಾಗಬಹುದಾದ ಬಗೆಯಿಂದಲೂ.. ಸೀತಾಲಕ್ಷ್ಮಿಯ ಗಟ್ಟಿತನ, ಸೇವಾ ಮನೋಭಾವ, ಅತಿಶಯ ಪ್ರೇಮ ಎಲ್ಲದರಿಂದಲೂ ಇಷ್ಟವಾಯಿತು. ಕಾದಂಬರಿಯ ಅಂತ್ಯವಂತೂ ಊಹಿಸಲು ಸಾಧ್ಯವಾಗಲಿಲ್ಲ.
ಮನಸ್ಸನ್ನು ಹದವಾಗಿಟ್ಟುಕೊಳ್ಳಲು ಸಂಗೀತ ಎಷ್ಟು ಸಹಕಾರಿ ಹಾಗೂ ಪರಿಣಾಮಕಾರಿ ಎಂಬುದನ್ನು ಚಿತ್ರಿಸಿದ್ದಾರೆ. ಸಂಗೀತದ ರಸಘಳಿಗೆಗಳು ಆವರಿಸಿಕೊಳ್ಳುತ್ತವೆ.
ಅಂದಿನ ಕಾಲಘಟ್ಟದ ಹಳ್ಳಿ, ಮೂಢನಂಬಿಕೆ, ಸಂಕುಚಿತ ಮನೋಭಾವಗಳು, ಸುಧಾರಣೆಯ ಸೋಗು, ಬೆರಳೆಣಿಕೆಯಷ್ಟು ನೈಜ ಮನುಷತ್ವ ಹೊಂದಿದ ಜನರು, ಬಡತನ ಹೀಗೆ ಪ್ರತಿಯೊಂದು ಅಂಶವೂ ಸೊಗಸಾಗಿ ಚಿತ್ರಿತವಾಗಿದೆ. ಇದು ಅಂದಿನ ಕಾಲಘಟ್ಟವನ್ನು ಮನಸ್ಸಿನಲ್ಲಿಟ್ಟುಕೊಂಡು ಓದಬೇಕಾದ ಓದು. ಕಾಡುವ ಓದು.
~ವಿಭಾ ವಿಶ್ವನಾಥ್











