ಭಾನುವಾರ, ಜೂನ್ 14, 2026

ರಾಜಿ


"ಮಗುವಿನ ಭವಿಷ್ಯಕ್ಕೆ ಶಿಕ್ಷಣ ಕೊಡಿಸಬೇಕಾದ ನಾನೇ ಅವಳನ್ನು ಮನೆಗೆಲಸಕ್ಕೆ ಕಳುಹಿಸುತ್ತಿದ್ದೇನಲ್ಲ..!" ಎಂದು ಬೇಸರದಿಂದ ನುಡಿದು ಬಾರ್ ಕಡೆಗೆ ಹೊರಟ ಮುನಿಯಪ್ಪ. ಕಾಲೋನಿಯಲ್ಲಿ ಬಡಾಯಿ ಮುನಿಯಪ್ಪನೆಂದೇ ಹೆಸರು ಅವನಿಗೆ. ಬಣ್ಣಬಣ್ಣದ ಮಾತುಗಳಿಂದ ಎಲ್ಲರನ್ನೂ ಮರುಳು ಮಾಡಿ ಹಣ ಕೀಳುತ್ತಿದ್ದ. ಆದರೆ, ಆ ಹಣದಿಂದ ಕುಡಿದು ತೂರಾಡುತ್ತಿದ್ದ.


ಮುನಿಯನ ಮಾತಿಗೆ ಮರುಳಾಗಿ ಮದುವೆಯಾಗಿದ್ದ ಗಿರಿಜ ಆತನ ಬಡಾಯಿಗೆ, ಕುಡಿತಕ್ಕೆ ಬೇಸತ್ತು ತಾನೇ ಮನೆಗೆಲಸ ಮಾಡುತ್ತಾ ದುಡಿದು ಗಂಡ, ಮಗಳನ್ನು ಸಾಕುತ್ತಿದ್ದಳು. ಎಂಟು ವರ್ಷದ ರಾಜಿ ಹುಟ್ಟಿದ ನಂತರ ಮೂರು ಗರ್ಭಪಾತವಾಗಿ ಈಗ ಗರ್ಭ ನಿಂತಿತ್ತು. ಅವಳಿಗೆ ವಂಶೋದ್ಧಾರಕನ ಆಸೆ ಬೆಟ್ಟದಷ್ಟಿತ್ತು. ಈ ಬಾರಿ ಗಂಡು ಮಗುವೇ ಹುಟ್ಟುತ್ತದೆಂದು ಆಸೆಯಿಂದ ಏಳನೇ ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು  ತನ್ನ ಹಾಗೂ ಮಗುವಿನ ಯೋಗಕ್ಷೇಮ ನೋಡಿಕೊಳ್ಳಲು ನಿರ್ಧರಿಸಿದಳು. ನಾಳೆಯಿಂದ ತಾನು ಹೋಗುತ್ತಿದ್ದ ಮನೆಗೆ ಮಗಳು ರಾಜಿಯನ್ನು ಕೆಲಸಕ್ಕೆ ಕಳುಹಿಸುತ್ತೇನೆಂದು ಒಪ್ಪಿಸಿ ಬಂದಿದ್ದಳು. ಚಿಕ್ಕಂದಿನಿಂದಲೂ ಚೂಟಿಯಾಗಿದ್ದ ರಾಜಿ ಅಮ್ಮನ ಜೊತೆಗೆ ಕೆಲಸಕ್ಕೆ ಹೋಗುತ್ತಾ ತಾನೂ ಕೆಲಸ ಕಲಿತಿದ್ದಳು. ಅವಳ ವಯಸ್ಸಿಗಿಂತಲೂ ಉದ್ದ-ದಪ್ಪವಾಗಿದ್ದ ರಾಜಿ ಕೆಲಸ, ಮಾತು ಎರಡರಲ್ಲಿಯೂ ಚೂಟಿ.


ಆದರೆ, ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುವ ಅಮ್ಮನ ಮಾತಿಗೆ ಎದುರಾಡದ ಪರಿಸ್ಥಿತಿ ಇದ್ದುದರಿಂದ ಅರೆ ಮನಸ್ಸಿನಿಂದಲೇ ಒಪ್ಪಿದಳು. ಹೇಗೂ ಈಗ ಬೇಸಿಗೆ ರಜೆ. ಶಾಲೆ ಶುರುವಾಗುವಷ್ಟರಲ್ಲಿ ಏನೋ ಒಂದು ದಾರಿ ಸಿಕ್ಕರೆ ಸಾಕು ಎಂದುಕೊಂಡಿದ್ದವಳ ಶಾಲೆ ಶುರುವಾಗಿ ಒಂದು ತಿಂಗಳಾಗಿತ್ತು. ಅಷ್ಟರಲ್ಲಿ ಅವಳ ಮೆಚ್ಚಿನ ಸುಗಂಧಿ ಟೀಚರ್ ಅವಳನ್ನು ಶಾಲೆಗೆ ಕಳುಹಿಸಲು ಕೇಳಿಕೊಂಡು ಮೂರು ಬಾರಿ ಬಂದು ಹೋಗಿದ್ದರು. 


"ಇಂತಹ ಕುಡುಕ ಗಂಡನನ್ನು ನೆಚ್ಚಿ ನಾನೇನೂ ಮಾಡುವ ಹಾಗಿಲ್ಲ. ಹಾಗೆಂದು, ಮಗಳ ಮದುವೆಗೆ ಒಂದು ದಾರಿ ಮಾಡಬೇಕಾದರೆ ಅವಳನ್ನು ಶಾಲೆಗೆ ಕಳುಹಿಸುವ ಬದಲು ಮನೆಗೆಲಸಕ್ಕೆ ಕಳುಹಿಸಬೇಕು. ಇಷ್ಟರವರೆಗೆ ಓದಿದ್ದು ಸಾಕು. ಟೀಚರಮ್ಮ ಏನೂ ಹಣ ಕೊಡುತ್ತಾಳಾ..?" ಎಂದು ಗಿರಿಜ ತನ್ನಷ್ಟಕ್ಕೆ ತಾನೇ ಸಮಜಾಯಿಷಿ ಕೊಟ್ಟುಕೊಂಡು ಸಮಾಧಾನ ಮಾಡಿಕೊಂಡಳು. 


ಮೂರು ವರ್ಷಗಳಲ್ಲಿ ರಾಜಿಯ ಬದುಕಲ್ಲಿ ಸಾಕಷ್ಟು ಬದಲಾವಣೆಗಳಾದವು. ಗಿರಿಜ ಗಂಡು ಮಗುವನ್ನು ಹೆತ್ತಳಾದರೂ.. ಅದು ಬುದ್ಧಿಮಾಂದ್ಯ ಮಗು. ಮುನಿಯಪ್ಪ ಅಪಘಾತದಲ್ಲಿ ತನ್ನ ಕಾಲನ್ನು ಕಳೆದುಕೊಂಡಿದ್ದ. ಈಗ ರಾಜಿ ಮನೆ ಮನೆಗೂ ಹೋಗಿ ದುಡಿಯುತ್ತಿದ್ದಾಳಾದರೂ ಅದು ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ರಾಜಿಯನ್ನು ಒಂದು ಮನೆಯಲ್ಲಿ ಕೆಲಸಕ್ಕೆ ಬಿಡಲು ತೀರ್ಮಾನಿಸಿದರು ಗಿರಿಜ ಮತ್ತು ಮುನಿಯಪ್ಪ. ಇಷ್ಟು ದಿನ ಅಪ್ಪ-ಅಮ್ಮನಿಗಾಗಿ ಅವರ ಮುಖ ನೋಡಿಕೊಂಡು ಇದ್ದ ರಾಜಿಗೆ ಈಗ ಆ ಅವಕಾಶವು ತಪ್ಪಿ ಹೋಗುತ್ತಿತ್ತು. ಅಲ್ಲೇ ಇದ್ದ ಗೆಳತಿಯಿಂದ ಪಡೆದು ಓದುತ್ತಿದ್ದ ಪುಸ್ತಕ ಹಾಗೂ ಕಲಿಕೆಯ ಅವಕಾಶವೂ ತಪ್ಪಿ ಹೋಗುತ್ತಿತ್ತು. 


ರಾಜಿ ದೊಡ್ಡ ಮನೆಗೆ ಕೆಲಸಕ್ಕೆ ಹೋದಳಾದರೂ.. ದಿನವಿಡೀ ಕತ್ತೆಯ ದುಡಿತ ಇದ್ದೇ ಇರುತ್ತಿತ್ತು. ಕನಿಕರ, ಪ್ರೀತಿ ಎಂಬುದು ಅವಳ ಪಾಲಿಗೆ ಕೈಗೆಟುಕದು. ಇಂತಹ ಸಂದರ್ಭದಲ್ಲಿ ಸುಮ್ಮನೆ ಅತ್ತು ತನ್ನ ನೋವು ಮರೆಯುವುದರ ಜೊತೆಗೆ ಪುಟ್ಟ ಪುಸ್ತಕದಲ್ಲಿ ತನ್ನೆಲ್ಲ ಭಾವನೆಗಳನ್ನು ತೆರೆದಿಡುತ್ತಿದ್ದಳು. 


ರಾಜಿಯ ಬದುಕಲ್ಲಿಯೂ ಬದಲಾವಣೆ ಬರಲಿತ್ತು. ದೊಡ್ಡ ಮನೆಯ ಮಗಳು ಕೃಪಾ ವಿದೇಶದಿಂದ ಬಂದವಳು ಇಲ್ಲಿ ಎನ್.ಜಿ.ಓ ಸ್ಥಾಪಿಸುವ ತಯಾರಿಯಲ್ಲಿದ್ದಳು. ಅವಳ ಸಂದರ್ಶನಕ್ಕೆಂದು ಬಂದಿದ್ದ ಟಿ.ವಿ ನಿರೂಪಕಿಯೊಬ್ಬಳಿಗೆ ರಾಜಿ ಕಣ್ಣಿಗೆ ಬಿದ್ದಿದ್ದಳು. ಅನಾಥಾಶ್ರಮ ಹಾಗೂ ವೃದ್ಧಾಶ್ರಮವನ್ನು ನಡೆಸಿಕೊಂಡು ಹೋಗುವ ಮನೆಯಲ್ಲಿಯೇ ಪುಟ್ಟ ಹುಡುಗಿ ಒಬ್ಬಳು ಜೀತದಾಳಿನಂತೆ ದುಡಿಯುವುದು ಸಹನೀಯವಾಗಿರಲಿಲ್ಲ ಅದು ನ್ಯಾಯವೂ ಆಗಿರಲಿಲ್ಲ. ಇದನ್ನು ನೇರವಾಗಿ ಪ್ರಶ್ನಿಸಿ, ಸಂದರ್ಶನದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ಬೈಸಿಕೊಳ್ಳುವಂತೆ ಮಾಡಬಹುದಾಗಿದ್ದರೂ ಹಾಗೆ ಮಾಡದೆ, ಸಂದರ್ಶನ ಮುಗಿದ ನಂತರ ಈ ಕುರಿತು ಪ್ರಸ್ತಾಪಿಸಿದಳು. 


"ಪ್ರಶ್ನಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳುವುದಕ್ಕಿಂತಲೂ ಅವರಿಗೆ ತಪ್ಪಿನ ಅರಿವಾಗಿಸಿ, ಕಷ್ಟಪಡುತ್ತಿರುವವರಿಗೆ ಮುಕ್ತಿ ಕೊಡಿಸುವುದೇ ಉದ್ದೇಶವಾಗಿರುತ್ತದೆ. ಅಲ್ಲವೇ..? ಅದರ ಹಾದಿ ಎಂದಿಗೂ ಉಪಕಾರ ಮಾಡುವುದಾಗಿರಬೇಕೇ ಹೊರತು ಯಾರಿಗೂ ಅಪಕಾರ ಮಾಡುವುದಲ್ಲ."

  


ಎರಡು ದಿನದ ಹಿಂದಷ್ಟೇ ಬಂದಿದ್ದ ಕೃಪಾಳಿಗೆ ನಿಜಕ್ಕೂ ತನ್ನ ಮನೆಯಲ್ಲಿ ದುಡಿಯುತ್ತಿರುವ ಹುಡುಗಿಯ ಪರಿವೆ ಇರಲಿಲ್ಲ. ತನ್ನ ಮನೆಯಲ್ಲಿಯೇ ನಡೆಯುತ್ತಿದ್ದ ಈ ಶೋಷಣೆಗೆ ಅಂತ್ಯ ಹಾಡಬೇಕೆಂದು ರಾಜಿಯನ್ನು ಮತ್ತೆ ಅವಳ ಮನೆಗೆ ಕಳುಹಿಸುವ ನಿರ್ಧಾರ ಮಾಡಿದರೂ ರಾಜಿಯೇ ಹೋಗಲು ಒಪ್ಪಲಿಲ್ಲ. ಎಷ್ಟೋ ಅನಾಥ ಮಕ್ಕಳು ಹಾಗೂ ವೃದ್ಧರಿಗೆ ಆಶ್ರಯ ಕೊಡುವ ಅವಳು ರಾಜಿಯ ಬದುಕಿನ ಕುರಿತು ತಿಳಿದು ಅವಳಿಗೆ ಶಿಕ್ಷಣ ಹಾಗೂ ವಸತಿಯ ವ್ಯವಸ್ಥೆ ಮಾಡಿಕೊಟ್ಟು, ಅಕ್ಕನ ಸ್ಥಾನದಲ್ಲಿ ನಿಂತು ಪೋಷಿಸಿದಳು. ಅತ್ತ ಅವಳ ಸಂಬಳದ ಹಣ ಕಳುಹಿಸುವುದಕ್ಕೆ ಅಡ್ಡಿ ಮಾಡದೆ ಅಲ್ಲಿಗೂ ಸಹಾಯ ಮಾಡಿದಳು. 


ರಾಜಿ ತನ್ನ ವಿದ್ಯಾಭ್ಯಾಸದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದೆ ಚೆನ್ನಾಗಿ ಕಲಿತಳು. ಶಾಲೆಗೆ ಹೋಗದಿದ್ದರೂ ಅಭ್ಯಾಸವನ್ನಂತೂ ಅವಳು ಕೈಬಿಟ್ಟಿರಲಿಲ್ಲ. ಬಾಲ ಕಾರ್ಮಿಕಳಾಗಿ ಇಡೀ ಜೀವನವನ್ನು ಕೆಲಸದವಳಾಗಿ ಕಳೆಯಬೇಕಾಗಿದ್ದವಳಿಗೆ ಯಾರದ್ದೋ ಧೈರ್ಯ ಹಾಗೂ ಮತ್ತಾರದ್ದೋ ಆಶ್ರಯ ಹೊಸ ಬದುಕನ್ನೇ ತೆರೆದಿಟ್ಟಿತ್ತು. ಈಗ ರಾಜಿ ಯಾರೊಡನೆಯೂ, ಯಾವುದರೊಡನೆಯೂ ರಾಜಿ ಮಾಡಿಕೊಳ್ಳದೆ ವಿದ್ಯಾರ್ಥಿ ವೇತನದಿಂದ ತನ್ನ ಓದು ಹಾಗೂ ಬದುಕನ್ನು ಕಂಡುಕೊಳ್ಳುತ್ತಿದ್ದಾಳೆ. ಇಷ್ಟೇ ಅಲ್ಲದೆ, ಬಾಲಕಾರ್ಮಿಕರ ನಿರ್ಮೂಲನೆಗೆ ಶ್ರಮಿಸುವ ತಂಡದಲ್ಲಿ ತಾನು ಒಬ್ಬಳಾಗಿದ್ದಾಳೆ. 


~ವಿಭಾ ವಿಶ್ವನಾಥ್

ಸಂಗಮ (ಬೆಳಕಿಂಡಿಯ ಕತೆಗಳು - 36)


ಅಜ್ಜಿಯ ಹಳೆಯ ಅಚ್ಚ ಬಿಳುಪಿನ ರೇಷ್ಮೆ ಸೀರೆಯನ್ನು ಕೊಟ್ಟು ಹೊಸತು ತರುತ್ತೇನೆ ಎಂದು ಹೊರಟ ಅಮ್ಮನನ್ನು ತಡೆದು.. ಆ ಖಾಲಿ ಒಡಲಿನ ರೇಷ್ಮೆ ಸೀರೆಗೆ ಹೊಂದುವಂತೆ ನವಿಲನ್ನು ಅಚ್ಚು ಹಾಕಿಸಿ ತಂದು ಅಮ್ಮನ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಳು ಮಗಳು. ಅಮ್ಮನೇ ಅಪ್ಪಿದಂತಿದ್ದ ಆ ಪುಳಕವನ್ನು ಅನುಭವಿಸಿದವರಿಗೆ ಅದು ಅಂದಿನ ಬೆಸ್ಟ್ ಗಿಫ್ಟ್ ಆಗಿತ್ತು


ಸಂಪ್ರದಾಯ, ಅಕ್ಕರೆ ಜೊತೆಗೆ ಹೊಸತನದ ಸಂಗಮ ಎಲ್ಲರ ಮನಸೆಳೆದಿತ್ತು.

~ವಿಭಾ ವಿಶ್ವನಾಥ್ 


ಒಲವ ಕುಡಿನೋಟ (ಬೆಳಕಿಂಡಿಯ ಕತೆಗಳು - 35)


"ಆ ಕುಡಿನೋಟಕ್ಕೆ ತಾನೇ ನಾನು ಮನಸೋತು ಅವಳನ್ನು ಪ್ರೀತಿಸಿದ್ದು. ಆದರೆ, ಈಗ ಅವಳು ಅಪಘಾತದಲ್ಲಿ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ. ನಾನು ಅವಳ ಕಳ್ಳ ನೋಟದ, ತುಂಟತನದ ನಗುವನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ.. ಆದರೆ, ಅದೊಂದೇ ಕಾರಣಕ್ಕೆ ಅವಳನ್ನು ನನ್ನಿಂದ ದೂರ ಮಾಡಲಾಗುವುದೇ..?! 


ಕುಡಿ ನೋಟದಿಂದ ಹುಟ್ಟಿದ ಪ್ರೀತಿ ಚಿಗುರಿ, ಹೆಮ್ಮರವಾಗಿದೆ. ಎಷ್ಟೇ ನ್ಯೂನ್ಯತೆ ಇದ್ದರೂ ಅದೆಲ್ಲವನ್ನೂ ಕಡೆಗಣಿಸುವಷ್ಟು ನನ್ನ ಪ್ರೀತಿಯಂತೂ ಶಕ್ತವಾಗಿದೆ. ಅವಳು ಕುಡಿ ನೋಟ ಬೀರದಿದ್ದರೂ.. ನಾನು ಅವಳನ್ನು ಹಾಗೆಯೇ ಪ್ರೀತಿಸಬಹುದಲ್ಲ..! ಇನ್ನು ಅವಳನ್ನು ಮನದಣಿಯುವಷ್ಟು ನೋಟದಲ್ಲಿಯೇ ಮುದ್ದಿಸಬಹುದು."


 ಹೀಗೆಂದುಕೊಂಡು ಅವಳನ್ನು ಮದುವೆಯಾಗಿ ಹತ್ತು ವರ್ಷವೇ ಕಳೆಯಿತು. ಇಂದು ಯಾರೋ ದೃಷ್ಟಿದಾನಕ್ಕೆ ನೋಂದಾಯಿಸಿಕೊಂಡಿದ್ದ ದಾನಿಗಳು ತೀರಿ ಹೋಗಿ ನಮ್ಮ ಸರದಿ ಬಂದು ಎಲ್ಲವೂ ಹೊಂದಿಕೆಯಾಗಿ ಅವಳಿಗೆ ದೃಷ್ಟಿ ಬರುವ ಹೊತ್ತು.


ಮತ್ತೆ ಕಣ್ ಕಣ್ಣ ಸಲಿಗೆ ಎಂದು ಮೊದಲಿನಿಂದ ಪ್ರೀತಿಸುವ ಸಮಯ ಹೆಚ್ಚು ದೂರವಿಲ್ಲ ಎಂದುಕೊಂಡು ಅವಳ ಕುಡಿನೋಟಕ್ಕೆ ಕಾಯುತ್ತಿದ್ದಾನೆ.


~ವಿಭಾ ವಿಶ್ವನಾಥ್

ಜಾಗೃತಿ (ಬೆಳಕಿಂಡಿಯ ಕತೆಗಳು - 34)

 


ಪರಿಸರ ರಕ್ಷಣೆಯ ಜಾಗೃತಿಗಾಗಿ ಜಿಲ್ಲೆಯಾದ್ಯಂತ ಜಾಥಾ ಹೊರಟಿದ್ದೇನೆ ಎಂದು ಘೋಷಿಸುತ್ತಿದ್ದ ನಾಯಕರ ಹಿಂಬಾಲಕರು ಧ್ವನಿವರ್ಧಕದ ಮೂಲಕ ಶಬ್ಧ ಮಾಲಿನ್ಯವನ್ನು, ಕರಪತ್ರಗಳನ್ನು ಹಂಚಲು ಹೋಗಿ ಕಸವನ್ನು, ಪ್ರಚಾರಕ್ಕಾಗಿ ಹೆಚ್ಚಿನ ವಾಹನಗಳನ್ನು ಬಳಸಿ ವಾಯು ಮಾಲಿನ್ಯವನ್ನು, ನಾಯಕನ ಜೊತೆ ಹೊರಟವರಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಲು ಹೋಗಿ ಪ್ಲಾಸ್ಟಿಕ್ ಕಸವನ್ನು ಹೆಚ್ಚು ಮಾಡುತ್ತಲೇ ಸಾಗುತ್ತಿದ್ದರು. ತಮ್ಮ ಪ್ರಚಾರದ ಭರಾಟೆಯಲ್ಲಿ ಸೆಲ್ಪಿ, ವಿಡಿಯೋಗೆ, ಭಾಷಣಕ್ಕೆ ಸೀಮಿತವಾದ ಜಾಥಾ ಕುರಿತು, ಅವರು ಮೂಡಿಸಿದ ಜಾಗೃತಿ ಕುರಿತು ಎಲ್ಲೆಡೆಯೂ ಚರ್ಚೆಯಾಗುತ್ತಿತ್ತು.

ಇದಾವುದೂ ಅರಿವಿಲ್ಲದ ಹಳ್ಳಿಯ ರೈತನೊಬ್ಬ ರಸ್ತೆ ಬದಿಯಲ್ಲಿ ಗಿಡ ನೆಟ್ಟು, ನೀರುಣಿಸಿ, ಕಾಲ್ನಡಿಗೆ, ಸೈಕಲ್ ಸವಾರಿಯ ಮೂಲಕ ಪರಿಸರವನ್ನು ರಕ್ಷಿಸುವ ಮೌನ ಕಾಯಕ ಮಾಡುತ್ತಿದ್ದ.

~ವಿಭಾ ವಿಶ್ವನಾಥ್ 

ಸಮಾಧಾನದ ಪರಿಹಾರ (ಬೆಳಕಿಂಡಿಯ ಕತೆಗಳು - 33)


ಮಗಳ ಮಾರ್ಕ್ಸ್ ಕಾರ್ಡ್ ನೋಡಿ, ಕಡಿಮೆ ಅಂಕ ತೆಗೆದಿದ್ದಕ್ಕೆ ಇಬ್ಬರಿಗೂ ಅಸಮಾಧಾನವಾದರೂ ಮಗಳನ್ನು ಬೈಯ್ಯಲಿಲ್ಲ. ಎಂದೂ ಅಷ್ಟು ಕಡಿಮೆ ಅಂಕ ತೆಗೆಯದವಳ ಸಮಸ್ಯೆಯ ಮೂಲ ಹುಡುಕಲು ಅವಳನ್ನು ಪ್ರಶ್ನಿಸಿದರು. ಕಾಲೇಜಿನ ಪಾಠ, ಅರ್ಥೈಸಿಕೊಳ್ಳುವಿಕೆ ಯಾವುದರಲ್ಲಿಯೂ ಸಮಸ್ಯೆ ಇರಲಿಲ್ಲ. ಆದರೆ, ಪರೀಕ್ಷೆಯ ಸಮಯದಲ್ಲಿ ಮಾತ್ರ ಕಾಡುವ ತಲೆನೋವು ಅವಳ ಏಕಾಗ್ರತೆಯನ್ನು ಕುಂದಿಸಿತ್ತು.


ಮನೋವೈದ್ಯರ ಬಳಿ ಸಮಾಲೋಚನೆ ನಡೆಸಿ ಮಗಳ ಪರೀಕ್ಷಾ ಭಯಕ್ಕೆ ಪರಿಹಾರ ದೊರಕಿಸಿದ ನಂತರ ಅವಳ ಅಂಕಗಳು ಗಮನೀಯವಾಗಿ ವೃದ್ಧಿಸಿದ್ದವು.

ಕಡಿಮೆ ಅಂಕ ಬಂದರೂ ಬೈಯ್ಯದೆ, ಅಂಕ ಗಳಿಕೆಯೇ ಮುಖ್ಯ ಎನ್ನದೆ, ಕ್ಷಣಿಕ ಅಸಮಾಧಾನವಾದರೂ ತಾಳ್ಮೆಯಿಂದ ಸಮಸ್ಯೆಗೆ ಸಮಾಧಾನವಾಗಿ ಪರಿಹಾರ ಕಂಡುಕೊಟ್ಟ ಪೋಷಕರೆಂದರೆ ಅವಳಿಗೆ ಹೆಮ್ಮೆ.

~ವಿಭಾ ವಿಶ್ವನಾಥ್ 


ಶನಿವಾರ, ಜೂನ್ 13, 2026

ಒಂದೇ ಒಂದು ಕಥೆ


"ಈಗಾಗಲೇ ಸಮಯ 10 ಗಂಟೆ. ಮಲಗಲು ನಿನಗೆ ಇನ್ನೆಷ್ಟು ಹೊತ್ತು ಬೇಕು ಕಂದಾ..?" ಎಂದ ಅಪ್ಪನಿಗೆ "ಒಂದೇ ಒಂದು ಲಾಸ್ಟ್ ಕಥೆ ಹೇಳಪ್ಪಾ.." ಎಂದು ಪೀಡಿಸುತ್ತಲೇ ಇದ್ದ ಮಗುವಿಗೆ ಕತೆ ಹೇಳುತ್ತಲೇ ನಿದ್ರೆ ಹೋದ ಅಪ್ಪ, ಇನ್ನೂ ಎಚ್ಚರವಿರುವ ಮಗು ಇಬ್ಬರನ್ನೂ ನೋಡಿ ಸುಸ್ತಾಗಿದ್ದಾಳೆ ಅಮ್ಮ.

~ವಿಭಾ ವಿಶ್ವನಾಥ್ 


ಸ್ಥಾಯಿ (ಬೆಳಕಿಂಡಿಯ ಕತೆಗಳು - 32)

ಸಾಗರದ ದಡದಲ್ಲಿ ನಿಂತು ತನ್ನ ಪುಟ್ಟ ಬೆರಳುಗಳಿಂದ ತನ್ನ ಹೆಸರು ಬರೆಯುತ್ತಿದ್ದ ಅವಳ ಹೆಸರು ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗುತ್ತಿತ್ತು. ಎಷ್ಟೇ ಪ್ರಯತ್ನಿಸಿದರೂ ಸಫಲಳಾಗದೆ ಅಳಲು ಶುರುವಿಟ್ಟಳು ಎನ್ನುವಾಗ ಅಪ್ಪ ಅಪ್ಪಿ ಸಮಾಧಾನಿಸಿದ್ದರು. ತೀರಾ ಚಿಕ್ಕವಳಲ್ಲವಾದರೂ ತನ್ನ ಛಲ ಕೈಗೂಡದ ದುಃಖ ಅವಳಿಗೆ. 

"ಮರಳ ಮೇಲಿನ ಹೆಸರು ಶಾಶ್ವತವಲ್ಲ. ಸಾಗರ ಎಲ್ಲವನ್ನೂ ತನ್ನೊಡಲಿಗೆ ಸೇರಿಸಿಕೊಳ್ಳುವಂತೆ ನೀನು ಒಳ್ಳೆಯ ಗುಣಗಳನ್ನು ನಿನ್ನೊಳಗೆ ಸೇರಿಸಿಕೊಂಡು ಯಾರೂ ಅಳಿಸಲಾಗದಂತೆ ನಿನ್ನೆಸರನ್ನು ಸ್ಥಾಪಿಸಿಕೊಂಡು ಸ್ಥಾಯಿಯಾಗು" ಎಂಬ ಬುದ್ಧಿವಾದ ಅವಳನ್ನು ಇಂದು ಸಾಗರದ ಸ್ವಿಮ್ಮಿಂಗ್ ನಲ್ಲಿ ಗಿನ್ನಿಸ್ ದಾಖಲೆಯಾಗಿಸಿತ್ತು.

~ವಿಭಾ ವಿಶ್ವನಾಥ್ 

ಸುದ್ದಿ ಕಾಲ

 


ಸುದ್ದಿ ಮಾಡುವ ಹಪಾಹಪಿಗೆ

ಸುಳ್ಳು ಸುದ್ದಿಯ ಸತ್ಯದಂತೆ ಬಿಂಬಿಸಿ

ನೈಜತೆಯ ಮರೆಮಾಚಿ ನಡೆವಾಗ

ಗಾಳಿಸುದ್ದಿ ಹರಡುತ್ತಿತ್ತು

ಚಾರಿತ್ರ್ಯ ಹರಣವಾಗುತ್ತಿತ್ತು

ಸುಳ್ಳು ಮೆರವಣಿಗೆ ಬರುತಿತ್ತು

ಅರ್ಧ ಸತ್ಯವಷ್ಟೇ ತೆರೆದಿತ್ತು

ನಾಳೆಗೆ ನೇಪಥ್ಯಕ್ಕೆ ಸರಿದಿತ್ತು


ಸುದ್ದಿ ಮಾಗುವ ಕಾಲದಲ್ಲಿ

ಸುದ್ದಿ ಮಾಡಿದವರೇ ಮರೆಯಾದರು

ಶುದ್ಧಿಯಾಗಬೇಕಿದೆ ಅಂತರಂಗ

ಸತ್ಯ ಮುನ್ನೆಲೆಗೆ ಬರಬೇಕಿದೆ

ಸುಳ್ಳು ಬೆತ್ತಲಾಗಬೇಕಿದೆ

ಗಾಳಿಸುದ್ದಿ ನಿಲ್ಲಬೇಕಿದೆ

ಬ್ರೇಕಿಂಗ್ ಗೆ ಬ್ರೇಕ್ ಹಾಕಬೇಕಿದೆ

ನವ ಯುಗ ಬರಬೇಕಿದೆ


~ವಿಭಾ ವಿಶ್ವನಾಥ್

ಹಿನ್ನೀರ ದಂಡೆಯ ಸೀತಾಳೆ ದಂಡೆ (ಪುಸ್ತಕ ಯಾನ - 460)


ಪುಸ್ತಕದ ಶೀರ್ಷಿಕೆ : ಹಿನ್ನೀರ ದಂಡೆಯ ಸೀತಾಳೆ ದಂಡೆ

ಲೇಖಕರು : ಮಂಗಳ ಟಿ. ಎಸ್. ತುಮರಿ

ಪ್ರಕಾಶಕರು : ಹರಿವು ಬುಕ್ಸ್ 

ಪ್ರಥಮ ಮುದ್ರಣ : 2024

ಪುಟಗಳು : 100

ಬೆಲೆ : 130 ರೂ.


ಮಂಗಳ ಟಿ. ಎಸ್. ತುಮರಿ ಅವರ ಮೊದಲ ಕೃತಿ ಆರೋಹಿ ಎಂಬ ನಾಟಕ. ಇದು ಅವರ ಎರಡನೇ ಕೃತಿ ಹಾಗೂ ಮೊದಲ ಕಥಾ ಸಂಕಲನ.


ಶರಾವತಿ ಹಿನ್ನೀರ ದಂಡೆಯ ಲೇಖಕಿಯ ಸೀತಾಳೆ ಹೂವಿನಂತಹ ಈ ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. 


ಹಸಿರು ಕೆರೆ : ಕಾಂತಿ ಕೆಲಸಕ್ಕೆ ಸೇರಿದ ಏಳು ವರ್ಷಗಳಲ್ಲಿ ನಾಲ್ಕು ಬಾರಿಯಾದರೂ ಪತ್ರಿಕೆ ಗುಣಶೇಖರರ ಸಂದರ್ಶನವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನಡೆಸಿತ್ತಾದರೂ.. ಎಷ್ಟೇ ಬೇಡಿದರೂ ಅವರ ಸಂದರ್ಶನ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಆ ಮನುಷ್ಯ ಸತ್ತ ನಂತರ ಆತನ ಪತ್ನಿಯ ಸಂದರ್ಶನಕ್ಕೆ ಸಿಕ್ಕ ಅವಕಾಶ ಅವಳನ್ನು ಸಕಲೇಶಪುರದತ್ತ ಕೊಂಡೊಯ್ಯಿತು. ಕಾಂತಿಯ ವೈಯಕ್ತಿಕ ಬದುಕಿನ ಸಂಘರ್ಷಗಳ ಜೊತೆಗೆ ಸಾಗುವ ಪಯಣ ಗುಣಶೇಖರನ ಪತ್ನಿ ಮೈಥಿಲಿಯ ಜೊತೆಗಿನ ಮಾತುಕತೆ, ವ್ಯಾವಹಾರಿಕ ಅಥವಾ ನಾಮಕಾವಸ್ಥೆ ಎಂಬಂತೆ ಆಗಬಹುದಾಗಿದ್ದ ಸಂದರ್ಶನ ಒಂದು ಸಂದರ್ಶನಕ್ಕಿಂತ ಹೆಚ್ಚಾಗಿ ಬಾಂಧವ್ಯ ಬೆಳಸಿತ್ತು. ಅಲ್ಲಿಂದ ಹೊರಟ ಕಾಂತಿಯ ಮನಸ್ಸಿನಲ್ಲೊಂದು ಸ್ಪಷ್ಟತೆ ಮೂಡಿದ್ದಕ್ಕೆ ಕಾರಣವೇನು..? ಮೈಥಿಲಿ ಹಸಿರು ಕೆರೆಗೆ ಕೊಟ್ಟ ವ್ಯಾಖ್ಯಾನ, ಕಾಂತಿ ಕಂಡುಕೊಂಡ ಬಗೆ ಇಲ್ಲಿದೆ. ವ್ಯಕ್ತಿತ್ವವನ್ನು ಹಲವು ಆಯಾಮಗಳಿಂದ ಕಾಣುವ ಇಬ್ಬರ ಕತೆ ಇಲ್ಲಿದೆ. 


ಬೇಲಿ : ಎಷ್ಟೋ ಬಾರಿ ಅಪ್ಪ ಅರ್ಥವಾಗುವುದು ಆತನ ಸಾವಿನ ನಂತರವೇ... ಶರವಿಂದುವಿಗೆ ತನ್ನ ತಂದೆ ಬದುಕಿದ್ದಾಗ ಒಂದು ರೀತಿಯಲ್ಲಿ ಕಂಡರೆ, ಸಾವಿನಾಚೆಗೆ ಬೇರೆಯದ್ದೆ ರೀತಿ ಕಾಣುತ್ತಾರೆ. ಅಪ್ಪ ಆಸ್ಪತ್ರೆಗೆ ಸೇರಲು ಮುಖ್ಯ ಕಾರಣವೇ ತೋಟ ಹಾಗೂ ಬೇಲಿಯ ಕೆಲಸ ಎಂಬಂತೆ ಶರವಿಂದು ತನ್ನ ಅಪ್ಪನ ಮಧ್ಯೆ ಎಳೆದುಕೊಂಡಿದ್ದ ಬೇಲಿ ಏನಾಯ್ತು..?


ತಪ್ಪೊಪ್ಪು : ರೇವಣಸಿದ್ಧ ಎನ್ನುವ ಹೆಸರು ಕಮಲಾಕರ ಮೇಷ್ಟ್ರ ನೆನಪಿನಲ್ಲಿ ಅಚ್ಚಳಿಯದಂತೆ ಕುಳಿತು ಹೋಗಿದ್ದಕ್ಕೆ ಕಾರಣ ಕೇವಲ ಆತನ ಬಾಲ್ಯ ಹಾಗೂ ಶಾಲೆಯ ದಿನಗಳಲ್ಲ.. ಅದರಾಚೆಗೂ ಬೆಸೆದುಕೊಂಡಿದ್ದ ಇವರ ಬಾಂಧವ್ಯ. ಅವನ ತಾಯಿ ಮೇಷ್ಟ್ರ ಬಳಿ ಬಂದು ಭಿನ್ನವಿಸಿದ್ದ ಒಂದು ವಿಚಾರಕ್ಕೆ ಆತನ ಓದು ಮುಂದುವರೆದಿದ್ದು ಈಗ ಇತಿಹಾಸವಾದರೂ.. ಅದೇ ವಿಚಾರ ಮತ್ತೆ ಮುತ್ತನೆ ಎದುರಿಗೆ ನಿಂತ ಸಂದರ್ಭದಲ್ಲಿ ಮೇಷ್ಟ್ರು ಯಾವ ನಿರ್ಧಾರ ತಳೆದರು..?


ಗುಲಾಬಿ ಫ್ರಾಕು : ಬಡತನದ ಮನೆಗಳಲ್ಲಿ ಬಟ್ಟೆ ಹೊಂದಿಸುವುದೇ ಕಷ್ಟ. ಹಿರಿಯ ಮಕ್ಕಳು ಹಾಕಿ ಬಿಟ್ಟ ಲಂಗ ಕಿರಿಯವರಿಗೆ ದಾಟಿಕೊಳ್ಳುತ್ತಾ ಸಾಗುತ್ತವೆ. ಐದು ಹೆಣ್ಣು ಮಕ್ಕಳ ಮನೆಯಲ್ಲಿ ಮಧ್ಯದವರಾಗಿದ್ದ ಇವರಿಗೆ ಗುಲಾಬಿ ಫ್ರಾಕ್ ನ ಆಸೆಯನ್ನು ಅಮ್ಮ ಹೇಗೆ ತೀರಿಸುತ್ತಾರೆ. ಡಾಲಿ ಪಾರ್ಟನ್ ಅವರ ಕೋರ್ಟ್ ಆಫ್ ಮೆನಿ ಕಲರ್ಸ್ ಕವಿತೆಯ ಸಾಲುಗಳೊಂದಿಗೆ ಅರ್ಥವಾಗದ ವಯಸ್ಸಿನ ನೆನಪು, ಕುಹಕಗಳು, ಅವಮಾನಗಳು ಎಲ್ಲದರಾಚೆಗೆ ಇನ್ನೂ ಗುಲಾಬಿ ಫ್ರಾಕಿನ ಮೋಹ, ಅವರ ಆಸೆಯನ್ನು ಯಾವೆಲ್ಲ ರೀತಿಯಲ್ಲಿ ತೀರಿಸಿಕೊಳ್ಳಲು ಬಯಸುತ್ತಾರೆ ಓದಿ ನೋಡಿ.


ಸುಕ್ರಿ : ಮೀನು ಮಾರಾಟ ಮಾಡುತ್ತಿದ್ದ ವಯಸ್ಸಾದ ಸುಕ್ರಿ ಇತ್ತೀಚೆಗೆ ಸುಳಿದು ನಾಲ್ಕು ವಾರಗಳೇ ಕಳೆದಿತ್ತು. ಆತಂಕ, ಚಡಪಡಿಕೆಯ ಜೊತೆಗೆ ಸುಕ್ರಿಯ ನೆನಪು ಸಾಗುತ್ತಾದೆ. ಯಾರೋ ಮಾತನಾಡುತ್ತಿದ್ದ ತಲ್ಲಣ ಹುಟ್ಟಿಸುವ ಮಾತುಕತೆಗಳು ಅದು ಸುಕ್ರಿ ಆಗದಿರಲಿ ಎಂದು ಪ್ರಾರ್ಥಿಸುವ ಕಥೆ ಇಲ್ಲಿದೆ. ಸುಕ್ರಿಯ ಬದುಕು ಹೀಗಿತ್ತು ಓದಿ ನೋಡಿ.


ಶಾಪ : ಶಾಪಗಳೆಲ್ಲ ಫಲಿಸುತ್ತವೆಯಾ ..? ಮುಗ್ಧ ಮನಸ್ಸಿನಿಂದ ಬೇಡಿಕೊಂಡ ಬೇಡಿಕೆಗಳು ಈಡೇರುವುದಾದರೆ ಇದೂ ಯಾಕಾಗಬಾರದು..?

ಊರಿನಲ್ಲಿ ಒಳ್ಳೆಯ ಕಾಲೇಜುಗಳಿಲ್ಲ ಎಂಬ ಕಾರಣಕ್ಕೆ ಊರಿನವರೆಲ್ಲರ ವಿರೋಧದ ನಡುವೆಯೂ ಅಪ್ಪ-ಅಮ್ಮನ ಬೆಂಬಲದೊಂದಿಗೆ ಹಾಸ್ಟೆಲ್ ಸೇರುವ ಹುಡುಗಿಯ ಓದಿನ ಎರಡನೇ ವರ್ಷದಲ್ಲಿ ಹಿಂದೆ ಬಿದ್ದಿದ್ದ ಹುಡುಗ ಅವಳನ್ನು ಕಾಡಿದ ಬಗೆ ಹೇಗೆ..? ಇಲ್ಲಿ ಶಾಪ ಯಾರದ್ದು..? ಶಾಪ ತಟ್ಟಿತೇ..? ಹಾಗಿದ್ದಲ್ಲಿ ಯಾರಿಗೆ..? ಹೊಸತನದ ಕಥೆಯಂತೆ ಭಾಸವಾಯಿತು.


ಸ್ವಪ್ನ ಸೌಧ : "ನನ್ನ ಕನಸುಗಳೆಲ್ಲ ಕಾಸು ಕೊಟ್ಟು ಕಿತ್ಕೊಂಡ್ರೋ ಕಿತ್ಕೊಂಡ್ರು! ಉಳ್ಳೋರು ಸಿವಾಲಯ ಮಾಡ್ತಾರೆ ನಾನೇನ್ ಮಾಡ್ಲಿ ಬಡಪಾಯಿ" ಏಕೆ ಅಳಲಿಡುತ್ತಿರುವ ಧ್ವನಿ ಚಿರಪರಿಚಿತವಾಗಿದ್ದರೂ.. ಗದ್ದಲದ ನಡುವೆ ನೆನಪಾಗಿರಲಿಲ್ಲ. ಆದರೆ ಮನೆಗೆ ತಲುಪಿದ ಮೇಲೆ ಎದುರು ಬೀದಿಯ ದೇವಮ್ಮನ ಧ್ವನಿ ಅದೆಂದು ತಿಳಿದು.. ಅವಳ ಬದುಕಿನ ಸ್ವಪ್ನ ಸೌಧ ಕಳಚಿದ ಕರುಣಾಜನಕ ಕಥೆ ತಿಳಿಯಿತು. ಕಷ್ಟಜೀವಿ ಹಾಗೂ ಹೋರಾಟದ ಸಾಕಾರ ರೂಪದಂತಿದ್ದು ಅವಳ ಬದುಕು ಹಾಗಾಗಿದ್ದು ವಿಪರ್ಯಾಸವಾದರೂ ದೇವಮ್ಮನ ಹೋರಾಟವೇನೂ ಕಡಿಮೆಯಿರಲಿಲ್ಲ. ದೇವಮ್ಮ ಗೆಲ್ಲಬೇಕಿತ್ತು ಎನಿಸಿದರೂ.. ಆಕೆಗೆ ಸಹಕಾರ ಸಿಗದಿದ್ದೇಕೆ ಎಂದು ಪುನರಾವಲೋಕಿಸಬೇಕಾಗುತ್ತದೆ. 


ಕಲ್ಲು ದೇವರನೆಲ್ಲ... : ಆಸ್ತಿಕ ಪತ್ನಿ ಹಾಗೂ ನಾಸ್ತಿಕ ಗಂಡ ಇಬ್ಬರ ನಡುವೆಯೂ ಪೂಜೆ, ಹೋಮ ದೇವಾಲಯದ ವಿಚಾರಕ್ಕೆ ಆಗಾಗ ಸಣ್ಣ ಮುನಿಸುಗಳು ಇದ್ದಿದ್ದೇ. ಆತನ ತಾಯಿಯದ್ದೂ ಇದೇ ವಿಚಾರಕ್ಕೆ ಸಿಡಿಮಿಡಿ. ಮನುಷ್ಯ ದೇವರನ್ನು ನಂಬದಿದ್ದರೂ ಆತನೇ ಮತ್ತೊಬ್ಬರ ಪಾಲಿಗೆ ದೇವರಾಗುವ, ಮಾನವೀಯತೆಯನ್ನು ಇಟ್ಟುಕೊಂಡಿದ್ದರೆ..? ಹೂವಮ್ಮನ ಪಾಲಿಗೆ ಸಹಾಯಕ್ಕೊದಗಿದ ದೇವರಂತ ಮನಸ್ಸಿನ ಮನುಷ್ಯನ ಕಥೆ ಇದು.


ಅವನಿ : ಮಲೆನಾಡಿನ ಊರಿಗೆ ಬ್ಯಾಂಕ್ ಕೆಲಸಕ್ಕೆ ಹೊಸದರಲ್ಲಿ ಬಂದಾಗ ಯಾಕಾದರೂ ಇಲ್ಲಿಗೆ ಬಂದೆ ಎಂದುಕೊಂಡಿದ್ದ ವಾಸುದೇವ ಶರ್ಮರಿಗೆ ಈಗ ಗೋವೆಗೆ ಟ್ರಾನ್ಸ್ಫರ್ ಆರ್ಡರ್ ಸಿಕ್ಕರೂ ಊರು ಬಿಟ್ಟು ಹೊರಡಲು ಸಂಕಟ ಹಾಗೂ ಆ ಊರಿನ ನೆನಪುಗಳು ಅವರನ್ನು ಬಾಧಿಸುತ್ತಿರುತ್ತವೆ. ಅವರ ಮನಸ್ಸಿನಲ್ಲಿ ಹಾಗೆ ಅಚ್ಚಳಿಯದೆ ಉಳಿಯಲಿದ್ದ ಅವನಿ ಯಾರು..?

ಈ ಕಥೆಯಲ್ಲಿ ಕಾಡಿದ ಸಾಲುಗಳಿವು

"ಅಬ್ಬಾ! ಹೆಣ್ಣು ಮಕ್ಕಳ ಜಗತ್ತೇ! ನಿಮ್ಮ ತಾಕತ್ತೇ! ಏನೇನು ಭಾರವನ್ನು ಇಟ್ಟುಕೊಂಡು ಹೀಗೆಲ್ಲ ಹಾಡುತ್ತೀರಿ! ಒಮ್ಮೆ ಲಾಲಿ. ಇನ್ನೊಮ್ಮೆ ಸ್ನೇಹಗೀತೆ, ಇನ್ನೊಮ್ಮೆ ಒಲವ ಗುನುಗು... ಎಷ್ಟೆಲ್ಲಾ... ಜಗದ ತೇರು ಎಳೆಯುವುದಕ್ಕೆ!"


ಕನ್ನಡಿಯ ಜಗತ್ತು : ಹಲವಾರು ಜನಗಳನ್ನು ನೋಡುವಂತಹ ಅವಕಾಶ ಆ ಕನ್ನಡಿಗಿತ್ತು. ಕನ್ನಡಿಯಿದ್ದ ರೂಮಿಗೆ ಬಂದು ಹೋಗುತ್ತಿದ್ದವರು ಹಲವರು. ಅವರನ್ನು ಹೊರಜಗತ್ತು ನೋಡಿ ಅಳೆದು ಮಾತನಾಡುವುದಕ್ಕೂ ಒಳಜಗತ್ತಿನಲ್ಲಿ ಅವರಿರುವ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿತ್ತು ಅಂತಹ ಹಲವಾರು ಘಟನೆಗಳನ್ನು ಕನ್ನಡಿಯ ಕಣ್ಣಲ್ಲಿ ಕಾಣಬಹುದು.


ಮುಂಬೈ ದರ್ಶನ : ಮುಂಬೈ ದರ್ಶನ ಮಾಡಿಸಲು ಸಿಕ್ಕ ಗೈಡ್ ಸಮೀರ, ಪತಿ-ಪತ್ನಿಯರಿಬ್ಬರ ಆಸಕ್ತಿಗಳು ಬೇರೆ-ಬೇರೆ ಇದ್ದುದರಿಂದ ಅವರಲ್ಲುಂಟಾದ ಮನಸ್ತಾಪಕ್ಕೆ ತೆರೆ ಎಳೆಯುವಲ್ಲಿ ಸಮೀರನ ಪಾತ್ರ ಹಿರಿದಾದುದು. ಸಮೀರನ ಜೀವನಾನುಭವ ವಿಸ್ತಾರವಾಗಿದ್ದು, ತನ್ನ ಪತ್ನಿಯ ಮನಸು ಗೆಲ್ಲುವುದಕ್ಕೆ ಸಮೀರನನ್ನು ಹತ್ತಿರವಾಗಿಸಿಕೊಂಡಿದ್ದವರು ಅವನದ್ದೇ ಕಾರಣದಿಂದಾಗಿ ಪೊಲೀಸ್ ಸ್ಟೇಷನ್ ನ ಸರಳಿನ ಹಿಂದೆ ಹೋಗಬೇಕಾಗಿ ಬಂದದ್ದೇಕೆ..? ಈ ಕಥೆಯ ಅಂತ್ಯ ಊಹಿಸಲು ಕಷ್ಟವಿತ್ತು.


ಸಾಕ್ಷಿ : ರಚನೆಗೆ ಅಮ್ಮನ ಅಕ್ಕ-ತಂಗಿಯರಲ್ಲಿ ಅಚ್ಚುಮೆಚ್ಚಿನವಳೆಂದರೆ ರಜನಿ ಚಿಕ್ಕಿ. ರಜನಿ ಚಿಕ್ಕಿಯ ಸಾವಿನ ಸುದ್ದಿ ಅಮ್ಮ ಹೇಳಿದಾಗ ಆಘಾತ ತಂದಿತ್ತಾದರೂ ವಾಣಿ ಚಿಕ್ಕಿಗೆ ಕ್ಯಾನ್ಸರ್ ಆಗಿದ್ದು, ಟ್ರೀಟ್ಮೆಂಟ್ ಆಗುತ್ತಿರುವುದು ಹಾಗೂ ಅವಳ ನೋವುಗಳೆಲ್ಲವೂ ನೆನಪಾಗಿತ್ತು. ವಿಪರ್ಯಾಸವೆಂದರೆ ಗಟ್ಟಿ ಹೆಂಗಸಾಗಿದ್ದ ಅವಳು ಕ್ಯಾನ್ಸರ್ ನಿಂದಲೂ ಚೇತರಿಸಿಕೊಂಡು ಚೈತನ್ಯದ ಮಾತುಗಳನ್ನಾಡುತ್ತಿದ್ದಳು. ಅವಳ ಛಲವೇ ಅವಳನ್ನು ಗೆಲ್ಲಿಸುತ್ತದೆ ಎಂದುಕೊಳ್ಳುವಷ್ಟರಲ್ಲಿ ಅವಳ ಸಾವು ಸಂಭವಿಸಿತ್ತು. ರಚನೆಗೆ ತಿಳಿದ ಆಘಾತಕಾರಿ ಸುದ್ದಿ ಎಂದರೆ ಚಿಕ್ಕಿ ಸತ್ತದ್ದು ಕ್ಯಾನ್ಸರ್ ನಿಂದಲ್ಲ. ಬದಲಾಗಿ ..? 

ಒಂದು ಸಾವು ಮನೆಯ ಸಂಬಂಧಗಳ ಸತ್ಯವನ್ನು ಹೊರ ಹಾಕುವ ಬಗೆ ಹೇಗಿರುತ್ತದೆ ಓದಿ ನೋಡಿ.


ಇಲ್ಲಿನ ಕಥೆಗಳಲ್ಲಿ ಸಣ್ಣ-ಸಣ್ಣ ಸಂಗತಿಗಳನ್ನು ಭಾವನಾತ್ಮಕವಾಗಿ ತೆರೆದಿಟ್ಟಿದ್ದಾರೆ. ಚಂದದ ಬದುಕನ್ನು ಕಟ್ಟಿಕೊಳ್ಳಲು ಹಂಬಲಿಸುವ ಹೆಣ್ಣು ಮಕ್ಕಳಲ್ಲಿ ಛಲ, ಧೈರ್ಯ, ಆತ್ಮವಿಶ್ವಾಸ ಹೀಗೆ ಪ್ರತಿಯೊಂದರಲ್ಲಿಯೂ ಪಾಸಿಟಿವಿಟಿಯನ್ನೇ ಕಾಣಬಹುದು. ಹಾಗೆಂದು ಹೆಣ್ಣಿನ ಒಳತೋಟಿಗಳು ಅನಾವರಣವಾಗಿಲ್ಲವೆಂದಲ್ಲ .ಅದರಾಚೆಗೆ ವಾಸ್ತವವನ್ನು ಸ್ವೀಕರಿಸುವ ಗಟ್ಟಿ ಪಾತ್ರಗಳು ಇಲ್ಲಿವೆ. ನೊಂದ ಜೀವಗಳು ಇಲ್ಲಿ ಹಂಚುವುದು ನೋವನ್ನಲ್ಲ, ಬದಲಾಗಿ ತಮ್ಮ ಜೀವನಾನುಭವವನ್ನು ಜೊತೆಗೆ ಪಾಸಿಟಿವಿಟಿಯನ್ನು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸುವ ದಾರಿಯಂತೂ ಇದ್ದೇ ಇದೆ. ಆ ಹಾದಿಯ ಮೂಲಕ ಸಾಗಬೇಕಷ್ಟೆ ಎಂದು ನೀಡುವ ಸಂದೇಶಗಳು ವಾಸ್ತವತೆಯನ್ನು ತೋರುವ ಕಥಾ ಹೂರಣವನ್ನು ತೋರುತ್ತವೆ. ಚೆಂದದ ನಿರೂಪಣೆಯ ಚೆಂದದ ಓದು.


~ ವಿಭಾ ವಿಶ್ವನಾಥ್

ಶೌರ್ಯಮಲೆ - ಅಯ್ಯಪ್ಪನ ಪೂಂಗಾವನ (ಪುಸ್ತಕ ಯಾನ - 459)


ಪುಸ್ತಕದ ಶೀರ್ಷಿಕೆ : ಶೌರ್ಯಮಲೆ - ಅಯ್ಯಪ್ಪನ ಪೂಂಗಾವನ 

ಲೇಖಕರು : ರಮೇಶ್ ಶೆಟ್ಟಿಗಾರ್ ಮಂಜೇಶ್ವರ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2025

ಪುಟಗಳು : 224

ಬೆಲೆ : 280 ರೂ.


ಅಯ್ಯಪ್ಪನ ದರ್ಶನಕ್ಕಾಗಿ ಕಠಿಣ ವ್ರತಗಳನ್ನು ಮಾಡಿ ಪಂಪಾ ನದಿಯಲ್ಲಿ ಮಿಂದು, ಭಕ್ತಿ ಪೂರ್ವಕವಾಗಿ ಇರುಮುಡಿ ಹೊತ್ತು ಹೋಗುವವರ ಭಕ್ತಿ, ಚಲನಚಿತ್ರ ಹಾಗೂ ಪ್ರಾಥಮಿಕ ಕತೆಯಾಗಿ ಮಣಿಕಂಠ ಹುಲಿಯ ಹಾಲನ್ನು ತರಲು ಹೋಗಿ ಮಹಿಷಿಯ ವಧೆ ಮಾಡಿ ಹುಲಿಯ ಮೇಲೆ ಸವಾರಿ ಮಾಡುತ್ತಾ ಬಂದು.. ಬಿಲ್ಲಿನಿಂದ ಬಾಣ ಹೂಡಿ ತನ್ನ ಸ್ಥಳವನ್ನು ತಾನೇ ಗುರುತಿಸಿ ಕೊಟ್ಟು ಅಯ್ಯಪ್ಪನಾಗುವ ಕಥೆಯ ಅರಿವಿತ್ತು. 18 ಮೆಟ್ಟಿಲುಗಳ ದಿವ್ಯತೆ ಹಾಗೂ ಅಪಾರವಾದ ಭಕ್ತಿಯಷ್ಟೇ ನನಗೆ ಅರಿವಿದ್ದದ್ದು . ಇದರ ಆಚೆಗೆ ಮಕರ ಜ್ಯೋತಿಯ ಕುರಿತು ಹಾಗೂ ಹತ್ತರಿಂದ 50 ವಯಸ್ಸಿನ ಒಳಗಿನ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವ ಚರ್ಚೆಗಳನ್ನು ಕೇಳಿದ್ದೆ. ಆದರೆ ಎಲ್ಲದರಾಚೆಗೆ ಭಕ್ತಿ ಮಾತ್ರವೇ ಮನದಲ್ಲುಳಿದಿತ್ತು.


ಹಲವಾರು ರೋಚಕ ಕಥೆಗಳು ಘಟನೆಗಳು, ಸಂದರ್ಭಗಳು, ಪೌರಾಣಿಕ ವಿಚಾರಗಳು, ಚಾರಿತ್ರಿಕ ಘಟನೆಗಳು ಎಲ್ಲವನ್ನೂ ಪೂರಕವಾಗಿ ಒಂದಕ್ಕೊಂದು ಹೆಣೆದು.. ತಮಗೆ ಸಿಕ್ಕ ಮಾಹಿತಿಗಳ ಮೂಲವನ್ನು ಉಲ್ಲೇಖಿಸಿ ಮಣಿಕಂಠನೇ ಉತ್ತಮ ಪುರುಷದಲ್ಲಿ ತನ್ನ ಗಾಥೆಯನ್ನು ವಿವರಿಸಿರುವಂತೆ ಕಟ್ಟಿಕೊಟ್ಟಿರುವ ಕಥಾನಕ ಹಾಗೂ ತರ್ಕಬದ್ಧವಾದ ವಿಚಾರಗಳು ಓದಿನ ಸಂಪೂರ್ಣ ತೃಪ್ತಿ ನೀಡಿತು. ಶಬರಿಮಲೆಯ ದಿವ್ಯತೆ ಮನಕ್ಕೆ ಮತ್ತಷ್ಟು ಆವರಿಸಿತು. 


ತನ್ನ ನೆಚ್ಚಿನ ಸಲಗ ಬಲಭದ್ರನ ಬೆನ್ನೇರಿ ಪಂಪಾ ನದಿಯ ಬದಿಯಲ್ಲಿ ಸಂಚರಿಸುತ್ತಾ.. ಚೆಂಗನ್ನೂರು ಮಹಾದೇವ ಕ್ಷೇತ್ರ ದರ್ಶನಕ್ಕೆ ಹೊರಟಿದ್ದಾಗ ಮಣಿಕಂಠನಿಗೆ ಪಂದಳದ ಡಂಗುರ ಕೇಳಿದ್ದು ಹೀಗೆ. ಹುಲಿಯ ಹಾಲನ್ನು ತಂದವರಿಗೆ ಒಂದು ಗ್ರಾಮ ಎಂದರೂ ಬಳುವಳಿಯ ಆಮಿಷಕ್ಕೆ ಯಾರು ತಮ್ಮ ಪ್ರಾಣವನ್ನು ಪಣಕ್ಕಿಡದೆ ಉಳಿದದ್ ಜೊತೆಗೆ ಮನುಷ್ಯರಿಗೆ ಹುಲಿಯ ಹಾಲಿನ ಸೇವನೆ ವರ್ಜ್ಯ ಎಂಬ ವಿಚಾರ ಮನಸ್ಸಿಗೆ ಬಂದದ್ದು ಎಲ್ಲವೂ ಸೇರಿ ಗೊಂದಲ ಮೂಡಿಸುತ್ತದೆ. 


ಮಹಾರಾಣಿಗೆ ಬಂದಿರುವ ಅಪರೂಪದ ವ್ಯಾಘ್ರವ್ಯಾಧಿಗೆ ನಾಡಿನ ಖ್ಯಾತ ವೈದ್ಯರಾದ ಕೇಳು ಪಂಡಿತರು ಸೂಚಿಸಿದ್ದ ಔಷಧಿ ಅದೆಂದು ತಿಳಿಯಿತು. ಅಮ್ಮನನ್ನು ನೋಡಲು ಹೋದಾಗ ತಾನು ಮಗನಾಗಿ ಕರ್ತವ್ಯ ನಿರ್ವಹಿಸಲು ಔಷಧಿಯನ್ನು ತಂದೇ ತರುತ್ತೇನೆಂದವನ ಮಾತಿಗೆ "ನೀನು ನನ್ನ ಮಗನಲ್ಲವಲ್ಲ" ಎಂಬ ಮಾತು ನೋಯಿಸಿದ್ದು ಮಾತ್ರವಲ್ಲದೆ, ಅನಾಥ ಭಾವವನ್ನು ಮೂಡಿಸಿ ತಾನು ಸಿಕ್ಕ ಹಿನ್ನೆಲೆಯನ್ನು ಅವರಿಂದಲೇ ಕೇಳಿದ್ದ ನೆನಪಾಯಿತು.


ವಾವರನನ್ನು ಶರಣಾಗಿಸಿಕೊಂಡು, ಶತ್ರು ಕಾಟವನ್ನು ನಿವಾರಿಸಿ ಆತನನ್ನು ಪಂದಳದ ಮಿತ್ರರನ್ನಾಗಿ ಮಾಡಿಕೊಂಡು ಬಂದಿದ್ದವನು ಮತ್ತೊಂದು ದೊಡ್ಡ ಕಾರ್ಯವನ್ನು ಹೆಗಲೇರಿಸಿಕೊಂಡು ಹೊರಟಿದ್ದ. 12ರ ಪ್ರಾಯದ ಬಾಲಕನನ್ನು ಕಾಡಿಗೆ ಕಳುಹಿಸಲು ತಂದೆಗೆ ಕೊಂಚವೂ ಇಷ್ಟವಿರಲಿಲ್ಲ. 


ಪಂದಳ ನಾಡಿನ ಅರಸು ರಾಜಶೇಖರ ವರ್ಮ ತಂಬುರಾನ್ ಅವರು ಮಂತ್ರಿ ಸುಶೀಲನ್ ಜೊತೆಗೆ ಕಾಡಿಗೆ ಹೋಗಿದ್ದಾಗ ಮಣಿಕಂಠ ಕಾಡಿನಲ್ಲಿ ಸಿಕ್ಕಿ 12 ವರ್ಷಗಳು. ಪೆರುಮಾದೇವಿಗೆ ಮಕ್ಕಳಾಗಲಿಲ್ಲವೆಂದು ಬಹು ಪತ್ನಿತ್ವವನ್ನು ಅನುಸರಿಸಲು ಹೊರಟವರಲ್ಲ. ಮಣಿಕಂಠನ ಕಾಲುಣವೇನೋ ಎಂಬಂತೆ ರಾಜರಾಜ (ಕೇತಕೀ ವರ್ಮ) ಜನಿಸಿದ್ದ. ಸ್ವಂತ ಅಣ್ಣ-ತಮ್ಮಂದಿರಂತೆ ಬೆರೆತಿದ್ದರು. ಮುಂದಿನ ರಾಜನಾಗಿ ಪಂದಳವನ್ನು ಆಳುವವನು ಎಂದೇ ತಂಬುರಾನ್ ಆತನಿಗೆ ಪಟ್ಟ ಕಟ್ಟುವ ಸಿದ್ಧತೆಯನ್ನು ಮಾಡಿಕೊಂಡಿದ್ದರು. ರಾಜರಾಜನು ಅಣ್ಣನ ನೆರಳಿನಂತೆ ಇರುತ್ತಿದ್ದ. ಹೀಗಿರುವಾಗ ಇನ್ನು ಬಾಲಕ ಮಣಿಕಂಠನನ್ನು ಕಾಡುಗೆ ಕಳುಹಿಸಲು ಒಪ್ಪದವರನ್ನು ಒಪ್ಪಿಸಿದ್ದು ಸಿದ್ಧಪುರುಷರು. ಜೊತೆಗೆ ಮಣಿಕಂಠ ಸಿಕ್ಕಾಗ ಆತನ ಶೌರ್ಯದ ಕುರಿತಾಗಿ ಒಂದು ಪ್ರಮುಖ ಹೇಳಿಕೆಯ ಕುರಿತ ಉಲ್ಲೇಖವಿದೆ. ಅದೇನು ಓದಿ ಅರಿಯಿರಿ. 


ತನ್ನ ಕುದುರೆ ರೇವಂತನನ್ನು ಏರಿ ಮಲೆಗೆ ಹೊರಟವನಿಗೆ ಮಾಯಾವಿ ಎಮ್ಮೆಗಳ ಕಾಟ ಬಂದಾಗ ರಕ್ಷಿಸುವುದು ವಾಪುರನ್ ಮತ್ತು ಸಹಚರರು. ತನ್ನ ಉದ್ದೇಶವನ್ನು ತಿಳಿಸಿದಾಗ ಪುಲಿಮೇಡಿನ ದೂರದ ಪ್ರಯಾಣಕ್ಕೆ ದಾರಿದೀಪವಾಗುತ್ತಾರೆ. 


ಮಣಿಕಂಠ ನೀನು ದೈವಾಂಶ ಸಂಭೂತ ಎಂದು ಹೇಳಿದ ಗುರುಗಳ ಮಾತು, ಗುರುಪುತ್ರನ ಬದುಕಲ್ಲಿ ಆದ ಪವಾಡ.. ಗುರುಕುಲದಿಂದ ಅರಮನೆಗೆ ಹೊರಡಿಸುವ ಸಮಯದಲ್ಲಿಯೂ ಗುರುದಕ್ಷಿಣೆಯನ್ನು ಬಯಸದವರು, ತನಗೆ ವಿಶೇಷವಾಗಿ ಸನ್ಮಾನಿಸಿ ಸ್ವರ್ಣದ ಚೂರಿಯನ್ನು ಬಹುಮಾನವಾಗಿತ್ತ ಪ್ರಸಂಗ, ಗುರುಗಳು ಅವನಿಗೆ ಹೇಳದ ರಹಸ್ಯಮಯ ಹಿನ್ನೆಲೆ, ಮಣಿಕಂಠನ ವಿಶೇಷ ತೇಜಸ್ಸು, ಅತಿಮಾನುಷವಾದ ಕಾರ್ಯಗಳು ಎಲ್ಲಕ್ಕೂ ಇಲ್ಲಿನ ಘಟನೆಗಳು ಸಾಕ್ಷಿಯಾಗಿವೆ. 


ಚೀರಪ್ಪನ್ ಪಣಿಕ್ಕರ್ ಗುರುಕುಲದಲ್ಲಿ ಕಳರಿಪಯಟ್ಟು ವನ್ನು ಕಲಿಯಲು ಹೋದಾಗ ಆ ವಿದ್ಯೆಯ ಹಿನ್ನೆಲೆ, ಆಶ್ರಮದಲ್ಲಿ ಸಿಕ್ಕ ವಿರೋಧಗಳು, ಅದರಾಚೆಗೆ ಎಲ್ಲರೂ ಮಣಿಯುವಂತೆ ಮಾಡಿದ ಶೌರ್ಯ ಹಾಗೂ ಸಾಹಸಗಾಥೆಯನ್ನು ಕಾಣಬಹುದು. ಗುರುಪುತ್ರಿ ಲಲಿತಾಂಬಿಕೆ ಮಾಡಿಕೊಟ್ಟ ಕಪ್ಪು ಬಣ್ಣದ ಪಾಯಸ ಋಧುಮತಿ ಗಂಜಿ, ಹೊಸಬಗೆಯ ಅರವಣ ಪಾಯಸದ ಉಲ್ಲೇಖ ವಿಶೇಷವಾಗಿದೆ. 

ಲಲಿತಾಂಬಿಕೆಯ ಬಳಿ ತಾನು "ನೈಷ್ಠಿಕ ಬ್ರಹ್ಮಚಾರಿ, ಪಟ್ಟವನ್ನು ಏರುವುದಿಲ್ಲ, ಮದುವೆಯನ್ನೂ ಆಗುವುದಿಲ್ಲ, ವಂಶವನ್ನು ಬೆಳೆಸುವುದಿಲ್ಲ" ಎಂದು ತನ್ನ ದೃಢ ನಿರ್ಧಾರವನ್ನು ತಿಳಿಸಿದ್ದೇಕೆ..? ನಂತರ ವಾವರನ ಪ್ರಸಂಗವನ್ನು ಕಾಣಬಹುದು. 


ಅಚ್ಚನ್ ಕೋವಿಲ್ ಶ್ರೀಧರ್ಮಶಾಸ್ತನೇ ಮಹಾವೈದ್ಯನಾಗಿ ಪ್ರಕಟವಾದ ಪ್ರಸಂಗ, ಮೇಲ್ಸ್ಯಾಂತಿಯವರ ಅಚ್ಚರಿಯ ಪ್ರಸಂಗವೂ ಇಲ್ಲಿದೆ.


ನಾರದರು ಮಣಿಕಂಠನನ್ನು ಭೇಟಿಯಾಗುವ ಮುನ್ನ ಮಣಿಕಂಠನಿಗೆ ತನ್ನ ಸಂಪೂರ್ಣ ಜನ್ಮ ರಹಸ್ಯ ಅರಿವಾದ ಬಗೆ ಹೇಗಿತ್ತು..?

ಮಹಿಷಿಯ ವಧೆಯ ಏಕೈಕ ಉದ್ದೇಶದಿಂದ ಮಣಿಕಂಠನ ಜನ್ಮವಾಗಿತ್ತೇ..? 

ಧರ್ಮಶಾಸ್ತ ಹಾಗೂ ಮಣಿಕಂಠ ಇಬ್ಬರಲ್ಲ, ಬೇರೆಯಲ್ಲ ಎಂಬ ತತ್ತ್ವಮಸಿ ಅನುಭಾವ ಉಂಟಾದ ಕ್ಷಣಗಳ ಹಿನ್ನೆಲೆ ಏನು..?


"ಸಾವು ಅವರವರ ಕರ್ಮ ಸಿದ್ದಾಂತದ ಪ್ರಕಾರವೇ ಆಗುತ್ತದೆ." ತನ್ನ ಅಂತ್ಯವೂ ಹರಿಹರಸುತನಿಂದಲೇ ಆಗಬೇಕು ಎಂದು ವಿಧಿಯಲ್ಲಿ ವರ ಕೇಳಿ ಪಡೆದಿದ್ದ ಮಹಿಷಿಯ ಜನ್ಮದ ಹಿಂದೆಯೂ ಒಂದು ಹಿನ್ನೆಲೆ ಇದೆ. ಪೂಂಗಾವನದಲ್ಲಿ ನೆಲೆಸಿದ್ದ ಮಹಿಷಿ ಮಣಿಕಂಠನೆದುರಲ್ಲಿ ಯಾವ ರೀತಿಯಲ್ಲಿ ನಡೆದುಕೊಂಡಳು..? ಯಾರ ಶಾಪ ವಿಮೋಚನೆಯಾಯಿತು.?


ಮಣಿಕಂಠನಾಗಿ ತನ್ನ ಪ್ರೀತಿಪಾತ್ರರ ಮನಸ್ಸಿನಲ್ಲಿ ಏನಿದೆ ಎಂದು ನಿಜಾಂಶವನ್ನು ಅರಿಯುವ ಸಂದರ್ಭದಲ್ಲಿ ಸತ್ತ್ವ ಪರೀಕ್ಷೆಗಾಗಿ ದೇವೇಂದ್ರ ವಾಯು, ವರುಣ, ಅಗ್ನಿ, ಕುಬೇರರು ಯಾವ ರೀತಿಯಲ್ಲಿ ಸಹಾಯ ಮಾಡಿದರು..? ಅರಮನೆಯಲ್ಲಿ ಮಣಿಕಂಠನಿಗೆ ಅರಿವಾದ ಸತ್ಯ ಆತನನ್ನು ಯಾವ ಹಾದಿಯಲ್ಲಿ ಕೊಂಡೊಯ್ಯಿತು..? ಇಲ್ಲಿ ತಂಬುರಾನ್ ರಿಗೆ ಆದ ಆಘಾತ ಜೀರ್ಣಿಸಿಕೊಳ್ಳಲು ಕಷ್ಟವಾಗುವಂತಹದು. ತಾನು ಅರಮನೆಗೆ ಕರೆ ತಂದ ಶಿಶುವನ್ನು ಮಗನಂತೆ ಭಾವಿಸಿದ್ದ ಅವರ ಅನನ್ಯ ಪ್ರೇಮಕ್ಕೆ ಘಾಸಿಗೊಳಿಸಿದ್ದು ಅವರ ಅತ್ಯಾಪ್ತರೇ ಆದದ್ದು ವಿಪರ್ಯಾಸ. ಮಣಿಕಂಠನನ್ನು ಮಣಿಸುವ ಅವರ ಯೋಚನೆ ವಿಫಲವಾಯಿತಾದರೂ.. ರಾಜರಾಜನನ್ನು ರಾಜನಾಗಿಸುವ ಅವರ ಯೋಚನೆ ಗೆದ್ದರೂ.. ಆ ಗೆಲುವು ತೃಪ್ತಿಕರ ಗೆಲುವಾಗದ್ದು ಏಕೆ..? ಮಣಿಕಂಠನ ಮಾತಿಗೆ ತಂಬುರಾನ್ ಒಪ್ಪದೇ ದಾರಿಯೇ ಇರಲಿಲ್ಲ. ಮಣಿಕಂಠನ ಮಾತಿನಂತೆಯೇ ನಡೆದ ತಂಬುರಾನ್ ಧರ್ಮಶಾಸ್ತನ ಕ್ಷೇತ್ರವನ್ನು ಪುನರ್ ನಿರ್ಮಿಸುವಲ್ಲಿ ಏನೆಲ್ಲಾ ಮಾಡಿದರು..? 


ಶಬರ ಪಡೆಯ ಮುಖಂಡ ಕೊಚ್ಚು ವೇಲನ್ ನಂಬಿಕೆಯಿಂದ ಕಾಯುತ್ತಿದ್ದ ಚಾತ್ತನ್ ದೇವ ಶ್ರೀ ಭೂತನಾಥನಾದ ಧರ್ಮಶಾಸ್ತ. ಅವರೆಲ್ಲರೂ ಮಣಿಕಂಠನನ್ನು ಕಾಯುತ್ತಿದ್ದುದ್ದೇಕೆ..? ಅವರಿಟ್ಟ ಬೇಡಿಕೆ ಏನಿತ್ತು ..?


ಅಗಸ್ತ್ಯ ಮಹರ್ಷಿಗಳ ಸಹಾಯ ಹಾಗೂ ಪುಲಿಪಾಣಿ ಸಿದ್ದರು ಸೇರಿ ನಿರ್ಮಿಸಿದ ನವಪಾಷಣ ವಿಗ್ರಹ ಈಗ ಎಲ್ಲಿತ್ತು ಹಾಗೂ ಅದರ ದಿವ್ಯತೆ ಏನು..? ಇದರಲ್ಲಿ ಪರಶುರಾಮರ ಪಾತ್ರವೇನು ಎಲ್ಲದರ ಕುರಿತು ಓದಿ ನೋಡಿ.


ಶಾಸ್ತಮಲೆಯನ್ನು ಶೌರ್ಯಮಲೆ ಎಂದು ಕರೆದದ್ದೇಕೆ..? ಕಡು ಪಾಪಿಷ್ಟ ಉದಯನನ್ ನಡೆಸಿದ ಪಾಪ ಕಾರ್ಯಗಳೆಲ್ಲವೂ ಈಗ ಮಣಿಕಂಠನ ಎದುರಿಗೆ ತೆರೆದುಕೊಂಡ ನಂತರ ಆತ ದುಷ್ಟ ನಿಗ್ರಹಕ್ಕೆ ತೆಗೆದುಕೊಂಡ ಕ್ರಮವೇನು..? 


ವಾವರನನ್ನು ಮಣಿಸಿದ ರೀತಿಗೂ ಹಾಗೂ ಉದಯನನ್ನು ಮಣಿಸಿದ ರೀತಿಗೂ ಬಹಳ ವ್ಯತ್ಯಾಸ ಕಾಣುತ್ತದೆ. ದುಷ್ಟ ನಿಗ್ರಹ ಮಾತ್ರವಲ್ಲದೆ ಮನಸ್ಸನ್ನು ನಿಯಂತ್ರಿಸಿಕೊಳ್ಳಲು ಪ್ರಜೆಗಳಿಗೆ ದಾರಿ ತೋರಿದ ಮಣಿಕಂಠನನ್ನು ಇಲ್ಲಿ ಕಾಣಬಹುದು. 41 ದಿನದ ಮಂಡಲ ಹಾಗೂ ಮಲೆ ಏರಿ ಬರುವರು ಆಚರಿಸುವ ವಿಧಿ ವಿಧಾನದ ಹಿಂದಿನ ಅರ್ಥವೂ ಇಲ್ಲಿದೆ. ಮಣಿ ಮಂಟಪದ ಪಕ್ಕದಲ್ಲಿರುವ ಶಕ್ತಿಸ್ಥಾನ ಯಾರದ್ದಾಯಿತು..? ವಾಪುರನ್ ನ ಪ್ರಾಮುಖ್ಯತೆ, ಶೌರ್ಯವನ್ನು ಇಲ್ಲಿ ಕಾಣಬಹುದು. 


ಶಬರಿಮಲೆ ಎಂಬ ಹೆಸರು ಬರಲು ಕಾರಣವಾದ ಶಬರಿ ತ್ರೇತಾಯುಗದ ಶಬರಿಯೇ ಓದಿ ನೋಡಿ.


ಅಯ್ಯಪ್ಪನ ಮಾಲೆ ಹಾಕಿದವರೆಲ್ಲರೂ ತಮ್ಮ ನಿಜ ನಾಮಧೇಯದ ಬದಲು ಅಯ್ಯಪ್ಪ ಎಂದೇ ಕರೆಯಲ್ಪಡುವುದೇಕೆ..? ಮಕರ ಜ್ಯೋತಿ ಹಾಗೂ ಮಕರ ಬೆಳಕಿನ ವೈಶಿಷ್ಟ್ಯವೂ ಇಲ್ಲಿದೆ. 


ಇಲ್ಲಿ ನಾನು ಪ್ರಸ್ತಾಪಿಸಿದ್ದಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯ ಹಾಗೂ ವಿಚಾರಗಳನ್ನು ನೀವು ಓದಬಹುದು. ಇಲ್ಲಿ 18 ರ ಪ್ರಾಮುಖ್ಯತೆಯನ್ನು ಕಾಣಬಹುದು. ಮಣಿಕಂಠ ಅಯ್ಯಪ್ಪನಾಗಿ ಪ್ರತಿಷ್ಠಾಪಿತನಾದ ಸಂದರ್ಭದಲ್ಲಿ ಇನ್ನುಳಿದ ದೈವಗಳು ಪ್ರತಿಷ್ಠಾಪಿತರಾದ ದೈವತ್ವವೂ ಇಲ್ಲಿದೆ.


ಭಕ್ತಿಪೂರ್ವಕ ಓದಿನ ಅನುಭವದಲ್ಲಿ ನಾವು ಕಾಣದ ಶಬರಿಮಲೆಯ ದರ್ಶನ ಮಾತ್ರವಲ್ಲದೆ, ಇನ್ನುಳಿದ ದೈವೀ ದರ್ಶನವನ್ನು ನಮಗೆ ಮಾಡಿಸುತ್ತಾರೆ ಪೂಂಗಾವನ ಆವರಿಸುವಂತೆ ಮಾಡುತ್ತಾರೆ. ಮೊದಲ ಓದು ಮಾತ್ರವಲ್ಲದೆ, ಮರುಓದಿನಲ್ಲಿಯೂ ಮತ್ತಷ್ಟು ಆಪ್ತ ಓದು ನಮ್ಮದಾಗುತ್ತದೆ. 


~ವಿಭಾ ವಿಶ್ವನಾಥ್