ಮಂಗಳವಾರ, ಏಪ್ರಿಲ್ 14, 2026

ಅನಾಥ ಹಕ್ಕಿಯ ಕೂಗು (ಪುಸ್ತಕ ಯಾನ - 170)


ಪುಸ್ತಕದ ಶೀರ್ಷಿಕೆ : ಅನಾಥ ಹಕ್ಕಿಯ ಕೂಗು

ಲೇಖಕರು : ಗಿರಿಮನೆ ಶ್ಯಾಮರಾವ್ 

ಪ್ರಕಾಶಕರು : ಗಿರಿಮನೆ ಪ್ರಕಾಶನ

ಪ್ರಥಮ ಮುದ್ರಣ : 2017

ಪುಟಗಳು : 152

ಬೆಲೆ : 130 ರೂ.


ಗಿರಿಮನೆ ಶ್ಯಾಮರಾವ್ ಅವರ 'ಅನಾಥ ಹಕ್ಕಿಯ ಕೂಗು' ಮಂಗಳವಾರ ಪತ್ರಿಕೆಯಲ್ಲಿ ಜನಪ್ರಿಯ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. 


ಮನೋವೈಜ್ಞಾನಿಕ ಕಾದಂಬರಿ ಎಂದಾಕ್ಷಣ ಹೆಣ್ಣುಮಕ್ಕಳ ಕುರಿತಾದ ಕಾದಂಬರಿಗಳನ್ನು ಓದಿದ್ದೇ ಹೆಚ್ಚು. ಬಹುಶಃ, ಹೆಣ್ಣುಮಕ್ಕಳ ಮನಸ್ಸಿನಾಳ ತಿಳಿದವರಿಲ್ಲ ಎಂಬ ಕಾರಣಕ್ಕೂ ಇರಬಹುದು. ಆದರೆ, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು.. ಮಕ್ಕಳ ದೃಷ್ಟಿಕೋನದಲ್ಲಿ ರಚಿತವಾದ ಮನೋವೈಜ್ಞಾನಿಕ ಕಾದಂಬರಿಯನ್ನು ನಾನು ಓದಿದ್ದು ಇದೇ ಮೊದಲು. 


ಮಕ್ಕಳು ತುಂಬಾ ಚಿಕ್ಕವರಾಗಿರುವಾಗ ಅವರಿಗೆ ಮಾತನಾಡಲು ಬರುವುದಿಲ್ಲ. ಹಾಗಾಗಿ, ಅವರ ಸಮಸ್ಯೆಗಳು ನಮಗೆ ಅರ್ಥವಾಗುವುದಿಲ್ಲ. ಆದರೆ, ದೊಡ್ಡವರಾಗುತ್ತಾ ಹೋದಂತೆ ಅವರಿಗೆ ಮಾತನಾಡಲು ಅವಕಾಶ ದೊರೆಯದಾದಾಗ ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗುವ ಮಕ್ಕಳು ಸಮಸ್ಯೆಗಳನ್ನು ಅನುಭವಿಸಿ ಅಂತರ್ಮುಖಿಗಳಾಗಬಹುದು. ಅದಕ್ಕೆ ಕಾರಣಗಳು ಹಲವಾರಿರಬಹುದು. ಪೋಷಕರು ಮಕ್ಕಳಿಗೆ ಕೊಡಬೇಕಾದ ಸ್ವಾತಂತ್ರ್ಯವನ್ನು ಕೊಟ್ಟರೂ.. ಮನೆಯಲ್ಲಿನ ಗಂಭೀರ ವಾತಾವರಣದಿಂದಾಗಿ ಮಕ್ಕಳು ತಮ್ಮ ಮನಸ್ಸಿನ ಮಾತುಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗದಂತಾಗಬಹುದು. 


ಇಲ್ಲಿ ಮಗುವಿನ ಮನೋವಿಶ್ಲೇಷಣೆಯ ಜೊತೆಗೆ ಪೋಷಕರ ಸಮಸ್ಯೆಗೂ.. ಅವರು ತೆಗೆದುಕೊಳ್ಳಬೇಕಾದ ತೀರ್ಮಾನ ಹಾಗೂ ನಡೆಗೂ ಇರಬೇಕಾದ ಪ್ರಬುದ್ಧತೆ ಹಾಗೂ ಮುಂದಾಲೋಚನೆಯ ಎಚ್ಚರಿಕೆಯ ಕರೆಗಂಟೆಯಿದೆ.


ಇಂದಿನ ಕುಟುಂಬಗಳು ಮೊದಲಿನಂತೆ ಕೂಡು ಕುಟುಂಬಗಳಾಗಿಲ್ಲ. ಗಂಡ-ಹೆಂಡತಿ, ಮಗು/ಮಕ್ಕಳು ಇಷ್ಟೇ ಅವರ ಸಂಸಾರ ಎಂದುಕೊಂಡಿರುವವರು ಹಲವರು. ಆದರೆ, ಪೋಷಕರಿಬ್ಬರೂ ಉದ್ಯೋಗದಲ್ಲಿದ್ದರೆ ಮಕ್ಕಳು ಒಂಟಿಯಾಗಿ ಬಿಡುತ್ತಾರೆ. ಇದು ಇಲ್ಲಿ ಆರಂಭದಲ್ಲಿ ಕಂಡರೂ.. ಅದಕ್ಕಿಂತ ಹೆಚ್ಚಿನ ಸಮಸ್ಯೆ ಎದುರಾಗುತ್ತದೆ. ಮಕ್ಕಳ ಬಾಲ್ಯದ ಕೆಲವು ವರ್ಷಗಳಲ್ಲಿ ಬಹಳ ಮುದ್ದು ಮಾಡಿ ಅನ್ಯೋನ್ಯತೆಯಿಂದ ಇದ್ದ ಸಂಸಾರ ಹಂತಹಂತವಾಗಿ ಒಡೆಯುತ್ತಾ ಹೋದರೆ.. ಮಕ್ಕಳು ಮನಸ್ಸು ಸಹಾ ಹಾಗೆಯೇ ಹಂತಹಂತವಾಗಿ ಒಡೆದು ಹೋಗಬಹುದು. ಅದು ಮುಂದೆ ಗಂಭೀರ ಸಮಸ್ಯೆಯೊಂದರ ಮೂಲವೂ ಆಗಬಹುದು. 


ಆಕಾಶ್ ತನ್ನ ಬಾಲ್ಯದ ಚಿತ್ರಣವನ್ನು ತನ್ನ ಮುಗ್ಧತೆಯಿಂದಲೇ ತೆರೆದಿಡುತ್ತಾನೆ. ಅಪ್ಪ-ಅಮ್ಮ ಜೊತೆ ಒಬ್ಬನೇ ಮುದ್ದಿನ ಮಗನಾಗಿ.. ಇಬ್ಬರ ಮುದ್ದಿನ ಮಗುವೂ ಆಗಿ ಆಕಾಶ್ ಬೆಳೆಯುತ್ತಿದ್ದಂತೆ.. ಇಬ್ಬರೂ ಉದ್ಯೋಗಸ್ಥ ಪೋಷಕರಾಗಿದ್ದರಿಂದ ತನ್ನ ಮನಸ್ಸಿನ ಮಾತುಗಳನ್ನು ಬೇಕೆಂದಾಗ ಅವರೊಡನೆ ಮುಕ್ತವಾಗಿ ಹಂಚಿಕೊಳ್ಳಲಾಗುತ್ತಿರಲಿಲ್ಲ. ಅದಕ್ಕಾಗಿ ಆತನಿಗೆ ತಂದೆಯ ತಂದೆ ಬಂದಾಗಲೆಲ್ಲ ಸಂಭ್ರಮ. ಆದರೆ, ಅಜ್ಜ ಊರಿನಲ್ಲಿದ್ದುದರಿಂದ ಅವರು ಹೆಚ್ಚು ದಿನ ಇಲ್ಲಿಯೇ ಉಳಿಯುತ್ತಿರಲಿಲ್ಲ. ಆಕಾಶನ ತಾಯಿ ಸುಚಲಾಳನ್ನು ಆಕೆಯ ಗಂಡ ಕೆಲಸ ಬಿಡುವಂತೆ ಒತ್ತಾಯಿಸಿದರೂ.. ಮಗನಿಗಾಗಿ ಆಕೆ ಅದೊಂದು ತ್ಯಾಗ ಮಾಡಬಹುದಾಗಿದ್ದರೂ.. ಆಕೆಗೆ ಅವಳದ್ದೇ ದೃಷ್ಟಿಕೋನವಿತ್ತು. ಆರ್ಥಿಕ ಸ್ವಾತಂತ್ರ್ಯ ಬೇಕಿತ್ತು. ಗಂಡನಿಗೆ ಮತ್ತೊಂದು ಸಂಬಂಧವಿದೆಯೆಂಬ ಅನುಮಾನವೂ ಇತ್ತು. ಅದಕ್ಕಾಗಿ ಆಕೆ ಕೆಲಸ ತೊರೆಯಲಿಲ್ಲ. 


ಯಾರೆಷ್ಟೇ ಹೇಳಿದರೂ ಹಿರಿಯರ ಬುದ್ಧಿಮಾತಿಗೂ ಒಪ್ಪದೇ ಆಕಾಶ್ ತಂದೆ-ತಾಯಿ ಇಬ್ಬರೂ ವಿಚ್ಛೇದನ ಪಡೆಯುತ್ತಾರೆ. ಸುಚಲಾ ಬೇರೆ ಮನೆ ಮಾಡಿ ಮಗನನ್ನು ಕರೆತಂದಾಗ ಕೆಲವು ದಿನ ಆಕೆಯ ತಾಯಿ ಬಂದು ಜೊತೆಗಿದ್ದರೂ.. ನಂತರ ಅವರಿಗೂ ಇರಲಾಗುವುದಿಲ್ಲ. ಆಕಾಶ್ ನ ತಂದೆ-ತಾಯಿ ಇಬ್ಬರಿಗೂ ಹಣ ಬೇಕಾದಷ್ಟಿದ್ದರೂ.. ಮಗನ ಒಂಟಿತನಕ್ಕೆ ಮದ್ದಾಗಲು ಸಾಧ್ಯವಾಗಲಿಲ್ಲ. ಬುದ್ಧಿವಂತ ಆಕಾಶ್ ಶಾಲೆಯಲ್ಲಿಯೂ ಹಿಂದುಳಿಯುತ್ತಾ ಹೋಗುತ್ತಾನೆ. 


ಮೊದಮೊದಲಿಗೆ ಆಗಾಗ ಬಂದು ಮಗನನ್ನು ಭೇಟಿಯಾಗುತ್ತಿದ್ದ ತಂದೆ ಮತ್ತೊಂದು ವಿವಾಹವಾದ ನಂತರ ಭೇಟಿ ಅಪರೂಪವಾಗುತ್ತದೆ. ಇತ್ತ ಆಕಾಶನ ತಾಯಿಯೂ ಮತ್ತೊಂದು ಮದುವೆಯಾಗುತ್ತಾರೆ. ಅಪ್ಪನ ಕಡೆಯ ಆಂಟಿ ಹಾಗೂ ಅಮ್ಮನ ಕಡೆಯ ಅಂಕಲ್ ಇಬ್ಬರು ಆತನನ್ನು ಮಗನೆಂದು ಮುಕ್ತಮನಸ್ಸಿನಿಂದ ಸ್ವೀಕರಿಸಲು ಸಿದ್ಧವಿರಲಿಲ್ಲ .ಆಕಾಶನ ತಾಯಿಯನ್ನು ಮದುವೆಯಾಗುವ ಮುನ್ನ ಆತ ಮಗನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತೇನೆಂದರೂ ಹಾಗಾಗಲಿಲ್ಲ. ಆಕಾಶನ ತಾಯಿಯ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗುತ್ತದೆ. ತಂದೆಯಷ್ಟು ಸುಲಭವಾಗಿ ತಾಯಿ ಮಗುವನ್ನು ತೊರೆಯಲಾಗದಲ್ಲಾ..


ಆಕಾಶನ ತಂದೆ ಆತನ ಕಣ್ಣಿನಿಂದ ಮರೆಯಾಗಿದ್ದವರು. ಆದರೆ, ತಾಯಿ ಕಣ್ಮುಂದೆ ಅಂಕಲ್ ಜೊತೆಗಿರುವಾಗಲೆಲ್ಲಾ ಆಕಾಶನಿಗೆ ಬಂದ ಕೋಪ, ಪ್ರತಿಕ್ರಿಯೆ, ವರ್ತನೆಯಿಂದಾಗಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿತ್ತು. 


ಮನೆ ಹತ್ತಿರದಲ್ಲಿದ್ದರೂ.. ಆತ ಹಾಸ್ಟೆಲ್ ಸೇರಬೇಕಾಗುತ್ತದೆ. ಮುಗ್ಧ ಮಗುವಿಗೆ ಚಾಕಲೇಟ್, ಮಾತ್ರೆ ಎಂಬ ಹೆಸರಿನಲ್ಲಿ ಡ್ರಗ್ಸ್ ನೀಡುತ್ತಾ ಆತನ ಭವಿಷ್ಯವನ್ನೇ ಮಂಕಾಗಿಸುತ್ತಾನೆ ಪಕ್ಕದ ಗೂಡಂಗಡಿಯ ಅಂಕಲ್. ತನಗೆ ಅರಿವಿಲ್ಲದೆಯೇ ಡ್ರಗ್ಸ್ ಚಟವೂ ಆಗುತ್ತದೆ.


ಆಕಾಶ್ ಒಮ್ಮೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತಿದ್ದಂತೆಯೇ ನೋಡುವವರ ದೃಷ್ಟಿ ಆತನನ್ನು ಮತ್ತಷ್ಟು ಕೆಟ್ಟವನನ್ನಾಗಿಸುತ್ತಾ ಹೋಗುತ್ತದೆ. ತನ್ನ ಅಪ್ಪ ಹಾಗೂ ಆಂಟಿಯ ಮಗಳು ಶೀತಲ್, ಅಮ್ಮ ಮತ್ತು ಅಂಕಲ್ ಮಗ ನಿತೀಶ್ ಇಬ್ಬರೂ ತನ್ನ ಮುಂದೆಯೇ ಅಪ್ಪ-ಅಮ್ಮನ ಪ್ರೀತಿ ಪಡೆಯುತ್ತಿದ್ದಾಗ ಕಸಿವಿಸಿಯಾಗುತ್ತದೆ. ತನ್ನಿಂದ ಅವರನ್ನು ಕಿತ್ತುಕೊಂಡವರೆಂಬ ಭಾವ ಮೊಳೆತು ಮನಸ್ಸಿನಲ್ಲಿಯೇ ಗೊತ್ತಿಲ್ಲದ ದ್ವೇಷ ಶೀತಲ್ ಮೇಲೆ ಮೊಳಕೆಯೊಡೆಯುತ್ತದೆ. ಪರಿಣಾಮ ಮತ್ತಷ್ಟು ಘೋರವಾಗುತ್ತದೆ. 


ಶಾಲೆಯಲ್ಲಿ ಹಿಂದುಳಿಯುತ್ತಾ ಇದ್ದವನಿಗೆ ತನ್ನಂತೆ ಇದ್ದ ಗೆಳತಿಯೊಬ್ಬಳು ಸಿಗುತ್ತಾಳೆ. ತನುಶ್ರೀ ಆಕೆಯು ಮಲತಾಯಿಯ ಕಾಟದಿಂದ ಬೇಸತ್ತವಳು. ಒಬ್ಬರಿಗೊಬ್ಬರು ಸಾಂತ್ವನ ನೀಡುತ್ತಾ ಗೆಳೆತನ ಮುಂದುವರಿಯುತ್ತಿದ್ದಾಗಲೇ.. ಸ್ನೇಹದಿಂದ ದೂರಾಗುವ ಪರಿಸ್ಥಿತಿ ಬರುತ್ತದೆ.


ಶಾಲೆಯಲ್ಲಿ ದಡ್ಡನೆಂಬ ಪಟ್ಟ ಹೊತ್ತು.. ಅಪ್ಪನ ಕಡೆಯ ಆಂಟಿಯಿಂದ ದ್ವೇಷಿಸಲ್ಪಡುತ್ತಾ.. ಅಮ್ಮನ ಕಡೆಯ ಅಂಕಲ್ ನಿಂದ ಹೊಡೆಸಿಕೊಂಡು ಮತ್ತಷ್ಟು ದ್ವೇಷಕ್ಕೊಳಗಾಗುತ್ತಾ ಹಣ, ಒಡವೆ ಕದಿಯುವ ಸಂಧಿಗ್ಧಕ್ಕೆ ಸಿಲುಕಿ.. ಡ್ರಗ್ಸ್ ನ ಚಟಕ್ಕೆ ಬೀಳುವ ಆಕಾಶ್ ಬದುಕಲ್ಲಿ ಆಶಾಕಿರಣದಂತೆ ಬರುವ ವ್ಯಕ್ತಿಗಳು ತುಂಬಾ ಕಾಲ ಉಳಿಯುವುದಿಲ್ಲ. 


ತಂದೆ-ತಾಯಿ ಇಬ್ಬರೂ ಇದ್ದು ಅನಾಥ ಭಾವ ಅನುಭವಿಸುವ ಮಗುವಿನ ಪರಿಸ್ಥಿತಿ ಕಳವಳ ಹುಟ್ಟಿಸುತ್ತದೆ. ಆತನಿಗೆ ಒಳ್ಳೆಯ ಭವಿಷ್ಯ ಸಿಗಲಿ. ಯಾರಾದರೂ ಅವನನ್ನು ಪರಿವರ್ತನೆಯ ಹಾದಿಯತ್ತ ಕರೆದೊಯ್ಯಲಿ ಎಂದುಕೊಳ್ಳುತ್ತಿರುವಾಗಲೇ ಆತನ ಅಂಕಲ್ ರಿಮ್ಯಾನ್ಡ್ ಹೋಮ್ ಗೆ ಸೇರಿಸಲು ತೀರ್ಮಾನಿಸುತ್ತಾರೆ. ಮಾನಸಿಕತಜ್ಞ ಡಾಕ್ಟರ್ ವೇದವ್ಯಾಸ್ ಮಧ್ಯಸ್ಥಿಕೆಯಿಂದ ಆಕಾಶ್ ಬದುಕೇ ಬದಲಾಗುತ್ತದೆ.


ಆಕಾಶ್ ಬದುಕು ಬದಲಾದದ್ದು ಹೇಗೆ..?? ಆಕಾಶ್ ತಾಯಿಯ ಪರಿಸ್ಥಿತಿ ಹಾಗೂ ತಂದೆಯ ಪರಿಸ್ಥಿತಿ ಹೇಗಿತ್ತು..?? 

ವಿಚ್ಛೇದನವಾದ ನಂತರ ಮೊದಲ ಕುಟುಂಬದ ನೆರಳು ತಮ್ಮ ಸಂಸಾರದ ಮೇಲೆ ಬೀಳದಿರಲಿ ಎಂದೇ ಹೆಚ್ಚಿನವರು ಬಯಸುತ್ತಾರೆ. ಆಕಾಶ್ ಅಪ್ಪ-ಅಮ್ಮನ ಸಂಗಾತಿಗಳ ವರ್ತನೆ ತೀರಾ ವ್ಯತಿರಿಕ್ತವಾದದ್ದೇನಲ್ಲ. ಆದರೆ, ಎಲ್ಲವೂ ಹಳಿ ತಪ್ಪಿದ್ದೆಲ್ಲಿ..?? ಆಕಾಶ್ ನ ಡ್ರಗ್ಸ್ ಚಟ ತಪ್ಪಿದ್ದು ಹೇಗೆ..??


"ದಾಂಪತ್ಯ ಎಂದರೆ ಎರಡು ನದಿಗಳು ಒಂದಾಗಿ ಹರಿದಂತೆ. ಮತ್ತೆ ಅದನ್ನು ಬೇರ್ಪಡಿಸಲಾಗುವುದಿಲ್ಲ. ಬೇರ್ಪಡಿಸಿದರೂ ಒಂದಿಷ್ಟು ನೀರು ಮಿಶ್ರವಾಗಿಯೇ ಇರುತ್ತೆ ತಾನೇ?" ಎನ್ನುವುದನ್ನು ಓದಿದಾಗ ದಾಂಪತ್ಯ ವಿಚ್ಛೇದನದ ಮೂಲಕ ಕೊನೆಯಾಗುವುದನ್ನು ನೋಡಿದಾಗ ಸಂಬಂಧಗಳನ್ನು ಕಳೆದುಕೊಳ್ಳಲು ಇರುವ ಆತುರದಲ್ಲಿ ಹತ್ತಾಂಶ ತಾಳ್ಮೆ ಸಂಬಂಧವನ್ನು ಉಳಿಸಿಕೊಳ್ಳಲು ಇದ್ದಿದ್ದರೆ ಎಂದೂ ಎನ್ನಿಸುತ್ತದೆ. ಕಾದಂಬರಿಯ ಅಂತ್ಯ ನೆಮ್ಮದಿ ತಂದುಕೊಟ್ಟರೂ.. ಬಹಳಷ್ಟು ಪ್ರಶ್ನೆಗಳನ್ನು ಹುಟ್ಟಿಸಿದಂತೂ ಹೌದು. 


ದಾರಿ ತಪ್ಪಿರುವ ಯುವ ಜನಾಂಗವನ್ನು ನೋಡಿದಾಗ ಅವರ ಬಾಲ್ಯದ ಪರಿಸ್ಥಿತಿ ಹೇಗಿರಬಹುದು ಎಂದು ಪರಾಮರ್ಶಿಸುವಂತಾಯಿತು. ಆದರೆ, ಎಷ್ಟು ಜನಕ್ಕೆ ಆಕಾಶ್ ನಂತಹಾ ಭವಿಷ್ಯ ಸಿಗಬಹುದು..?? ಪ್ರತಿಯೊಬ್ಬರ ಮನಸ್ಸು ಹತೋಟಿಯಲ್ಲಿದ್ದರೆ ಇಂತಹ ಸಮಸ್ಯೆ ಉದ್ಭವಿಸುತ್ತಿತ್ತಾ..??? ಆಧುನಿಕ ಬದುಕು ಹಾಗೂ ದಾಂಪತ್ಯದ ನಡುವಿನ ಹೊಂದಾಣಿಕೆ ಹೇಗಿರಬೇಕು..?? ಇಂತಹಾ ಎಷ್ಟೋ ಪ್ರಶ್ನೆಗಳಿಗೆ ಇಲ್ಲಿ ಉತ್ತರ ದೊರೆಯುತ್ತಾ ಹೋಗುತ್ತದೆ.


ಮನೋವೈಜ್ಞಾನಿಕ ಕಾದಂಬರಿಯ ಈ ತರಹದ ನಿರೂಪಣಾ ಶೈಲಿ ಮನಸ್ಸಿನಲ್ಲಿ ಗಾಢವಾಗಿ ಪರಿಣಾಮ ಬೀರುತ್ತದೆ. ಒಂದು ಮಗುವಿನ ಸಮಸ್ಯೆಯನ್ನು ಆಲಿಸುವ ತಾಳ್ಮೆಯಿರುವ ದೊಡ್ಡವರ ಜಾಗದಲ್ಲಿದ್ದು ಓದುವಾಗ ತಳಮಳದ ತರಂಗವಂತೂ ಎದ್ದಿತು. 


ವಿಚ್ಛೇದಿತರ ಮಕ್ಕಳೆಲ್ಲರ ಕಥೆಯೂ ಹೀಗಿಯೇ ಇರಲಾಗದು. ಆದರೆ, ಈ ರೀತಿಯ ಎಷ್ಟೋ 'ಅನಾಥ ಹಕ್ಕಿಗಳ ಕೂಗು' ಇದ್ದೇ ಇದೆ. ಆ ಕೂಗನ್ನು ಸಮಾಧಾನದಿಂದ ಶಮನಗೊಳಿಸಬಹುದಾದ ಒಂದು ದಾರಿಯೂ ಇಲ್ಲಿ ನಿಚ್ಚಳವಾಗಿ ತೆರೆದುಕೊಳ್ಳುತ್ತಿದೆ.


~ವಿಭಾ ವಿಶ್ವನಾಥ್

ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು (ಪುಸ್ತಕ ಯಾನ - 169)


ಪುಸ್ತಕದ ಶೀರ್ಷಿಕೆ : ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು

ಲೇಖಕರು : ಶಾಂತಿ ಕೆ. ಅಪ್ಪಣ್ಣ

ಪ್ರಕಾಶಕರು : ಸಂಗಾತ ಪುಸ್ತಕ

ಪ್ರಥಮ ಮುದ್ರಣ : 2020

ಪುಟಗಳು : 178

ಬೆಲೆ : 170 ರೂ.


ಕಥೆಗಾರ್ತಿ ಶಾಂತಿ ಕೆ ಅಪ್ಪಣ್ಣ ಅವರು ಮೂಲತಃ ಕೊಡಗಿನವರು. ವೃತ್ತಿ ನಿಮಿತ್ತ ಈಗ ಚೆನ್ನೈನಲ್ಲಿ ವಾಸ. 'ಮನಸು ಅಭಿಸಾರಿಕೆ' ಹಾಗೂ 'ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು' ಇವರ ಪ್ರಕಟಿತ ಕಥಾಸಂಕಲನಗಳು. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಯುವ ಪುರಸ್ಕಾರವನ್ನು ಪಡೆದಿದ್ದಾರೆ.


ಈ ಕಥಾ ಸಂಕಲನದಲ್ಲಿ ಒಟ್ಟು 13 ಕಥೆಗಳಿವೆ.


ಈ ಕಥೆಗೆ ಹೆಸರಿಲ್ಲ :

"ಹೆಣ್ಣಿನ ತೀವ್ರತೆಯೇ ಅವಳ ಬಿಡುಗಡೆಯ ದಾರಿ. ಗಂಡಿನ ಅಸಡ್ಡಾಳತೆಯೇ ಅವನ ದುರಂತ" ಎನ್ನುತ್ತಾ ಸರಾಗವಾಗಿ ಕಥೆ ಹೇಳಿದವನು ನಿಗೂಢವಾಗಿ ನಕ್ಕು ಕಥೆಗಾರನ ಬಳಿ ಈ ಕಥೆಯಲ್ಲಿ ತನ್ನ ಪಾತ್ರವನ್ನು ತಿಳಿಯುವುದರಿಂದ ಕಥೆಯ ಆಯಾಮವೇನು? ಬದಲಾಗುವುದಿಲ್ಲವೆಂದು ಹೇಳುತ್ತಾನೆ. ತನ್ನ ಹಾಗೂ ನೀಲಿಮಾ ನಡುವೆ ನಡೆದ ಸಂವಾದದಲ್ಲಿ ಬಂದ ಈಶಾನ್ಯೆ ಈಗ ಸಮಸ್ಯೆಯೇ ಅಲ್ಲ ಎನ್ನುವಷ್ಟು ಸರಳವಾಗಿ ಸರಿದು ಹೋಗಿ ಬಿಡುವಂತನಿಸುತ್ತಾದರೂ.. ಆತ ಹಾಗೆ ಮಾಡುವುದಿಲ್ಲ. ಇಲ್ಲಿ ಕತೆಗಾರನಿಗೊಂದು ಕಥೆ ಸಿಕ್ಕಿತು. ಆದರೆ, ಆತನ ಕಥೆಗೆ ಹೆಸರಿಲ್ಲ. ಓಪನ್ ಎಂಡೆಡ್ ಕಥೆಯಂತೆನಿಸಿದರೂ ಕಥೆಯ ಅಂತ್ಯ ಎಲ್ಲವನ್ನೂ ಹೇಳದೆಯೂ ಹೇಳಿತು. 


ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು : 

ಅಭಿರಾಮಿಗೆ ಜೀವನದಲ್ಲಿ ಬಹಳ ಆಸೆಗಳಿರಲಿಲ್ಲ. ಇದ್ದದ್ದು ಸಣ್ಣಪುಟ್ಟ ಆಸೆಗಳಷ್ಟೇ.. ಆದರೆ, ಆ ಸಣ್ಣಪುಟ್ಟ ಆಸೆಗಳು ಸುಲಭವಾಗಿ ಈಡೇರುವಂತಿರಲಿಲ್ಲ. ಅವಳು ಎಲ್ಲರಂತಲ್ಲ. ರಾಸ.. ರಾಸಾತಿ ಎಂದು ಕರೆದುಕೊಳ್ಳುತ್ತಿದ್ದ ಅಷ್ಟು ಚೆಂದದ ಸಂಬಂಧವೊಂದು ಮುನ್ಸೂಚನೆಯೂ ಕೊಡದೆ ಮುಗಿದೇ ಹೋಗಿತ್ತು. ಆದರೆ,  ಪ್ರತಿ ವರ್ಷದಂತೆ ಆ ವರ್ಷವೂ ಕೂವಗಂ ಉತ್ಸವಕ್ಕೆ ಹೋಗಿದ್ದಾಗ ಅಲ್ಲಿ ನೀಲಿಮಾಳಿಂದ ಅಭಿರಾಮಿ ಇರುವೆಡೆಗೆ ಮತ್ತೆ ತಲುಪಿದ್ದ. ಅವರಿಬ್ಬರ ನಡುವೆ ಇದ್ದದ್ದು ಒಂದು ಬಾಗಿಲು ಮಾತ್ರವೇ..?? ಸರಿದು ಹೋದ ಮೂರುವರೆ ವರ್ಷಗಳ ಲೆಕ್ಕವೇನು..?? ಈ ಕಥಾ ಸಂಕಲನದಲ್ಲಿ ಬಹಳ ಕಾಡಿದ ಹಾಗೂ ಇಷ್ಟವಾದ ಕಥೆ ಇದು. ಅಭಿರಾಮಿಯಂತಹಾ ಎಷ್ಟೋ ಜನ ಇಂದಿಗೂ ತಮ್ಮ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳಲು ತೊಳಲಾಡುತ್ತಿರಬಹುದು. ಅಭಿರಾಮಿ ನಿಜಕ್ಕೂ ಒಂದು ವಿಶೇಷ ವ್ಯಕ್ತಿಯೇ.. ಓದಿ ನೋಡಿ ನಿಮಗೂ ಸಿಗಬಹುದು.


ನಮ್ಮವರು : 

ಸಫಾಯ್ ವಾಲಾ ಆಗಿ ಕೆಲಸಕ್ಕೆ ಸೇರಿದ ಬ್ರಜೇಶ್ ಪಾಠಕ್ ಚಿಕ್ಕಂದಿನ ತಮ್ಮ ಮನೆಯನ್ನು ಸ್ವಚ್ಛಗೊಳಿಸಲು ಬರುತ್ತಿದ್ದ ಪಾರೋ ಹಾಗೂ ಮೋಚಿ ಮತ್ತವರ ಮಕ್ಕಳನ್ನು ನೆನಪಿಸಿಕೊಂಡ. ಬ್ರಜೇಶ್ ನಿಗೆ ನಿಜಕ್ಕೂ ಕೋಪವಿದ್ದದ್ದು ಯಾರ ಮೇಲೆ..?? ಆತನಿಗೆ ಎಂ.ಡಿ ನಮ್ಮವರೇ ಇರಬೇಕೆಂದು ಎನಿಸಿದ್ದಾದರೂ ಏಕೆ..??


ಹೀಗೆ ಜೊತೆ ಜೊತೆಯಲಿ : "ಹೆಣ್ಣು ಸಬಲೆ! ಹೆಣ್ಣಿಗೆ ಬಿದ್ದಲ್ಲಿಂದ ಏಳಲು ಗೊತ್ತು. ಅವಳು ಅಲ್ಲಿಯೇ ಕುಡಿಯೊಡೆದು ಹೊಸ ಬದುಕನ್ನು ಕಟ್ಟಿಕೊಳ್ಳುವಷ್ಟು ಶಕ್ತೆ. ಹೆಣ್ಣಿನೊಳಗೆ ಮಾತ್ರವೇ ಆ ಚೈತನ್ಯ ಇರುವುದು. ನಿಜದಲ್ಲಿ ಅವಳಿಗೆ ಆಸರೆ ಕೊಡುವಷ್ಟು ಸಬಲನಲ್ಲ ಗಂಡಸು."

ಹೀಗೆ ಆಸರೆ ಕೊಡಬೇಕಾಗಿದ್ದ ಅವನು ರಾಜಿಯ ಪತ್ರವನ್ನು ನೋಡುತ್ತಿದ್ದ. ಆದರೆ, ಆತನಿಗೆ ಮಗ ಸಮೀರನ ನರಳಿಕೆಗೊಂದು ಮುಕ್ತಾಯವೂ ಬೇಕಿತ್ತು. ಸಾಮಾನ್ಯ ಮನುಷ್ಯನಾಗಿ ಬದುಕುತ್ತಿದ್ದ ಒಬ್ಬ ಬರಹಗಾರನಿಗೆ ಬಹು ಮಹತ್ವಾಕಾಂಕ್ಷಿಯಾದ ವಿನಿ ಜೊತೆಯಾಗಿದ್ದಳು. ಮದುವೆಯಾದ ಮೇಲೆ ಒಬ್ಬರಿಗೊಬ್ಬರು ಅರ್ಥವಾಗಿದ್ದರೆಂದುಕೊಂಡರೂ.. ಆ ಅರ್ಥಕ್ಕೆ ಇಲ್ಲಿ ಬೇರೆಯದ್ದೇ ದೃಷ್ಟಿಕೋನವಿದೆ.


ನಿರೀಕ್ಷೆ : 

ತನ್ನ ಸಂಸಾರವನ್ನು ಕಟ್ಟಿಕೊಳ್ಳದೇ.. ಸಮಾಜದ ಉದ್ಧಾರ ಮಾಡುತ್ತೇನೆಂದು ಹೊರಗೆ ಹೊರಟವನು ಅವನು. ಪುಟ್ಟಿಯ ಅಮ್ಮನ ಬದುಕು ದುಸ್ತರವಾಗಿತ್ತು. ಪುಟ್ಟಿಯ ನಿರೀಕ್ಷೆ ಫಲಿಸಿತೇ..?? ಪುಟ್ಟಿಯ ದೃಷ್ಟಿಕೋನದಲ್ಲಿ ಹೆಣೆಯಲಾಗಿರುವ ಕತೆ ಇದು.


ಹೃದಯವೆಂಬ ಮಧುಪಾತ್ರೆ : 

"ಪ್ರೇಮವೆಂಬುದು ಯಾವಾಗ ಯಾರ ಮೇಲೆ ಹುಟ್ಟುತ್ತದೆ, ಎಲ್ಲಿ ನೆಲೆಯಾಗುತ್ತದೆ ಎಂಬುದನ್ನು ಯಾರಿಂದಲೂ ನಿಖರವಾಗಿ ಹೇಳೋದಕ್ಕಾಗಲ್ಲ"

ಸಾಹಿಲ್ ಸುರಯ್ಯಾಳನ್ನು ಬೇಡ ಎಂದು ಗಂಡನಿಲ್ಲದ ಚಿನ್ನಿಮಾಳನ್ನು ಇಷ್ಟಪಟ್ಟಿದ್ದ. ಮನೆಗಳು ದೂರವಿದ್ದರೂ ಮನಸ್ಸುಗಳೆಂಬ ಮಧು ಪಾತ್ರೆಗಳ ನಿಸ್ವಾರ್ಥ ಪ್ರೇಮದ ಕಥೆ ಇಲ್ಲಿದೆ. 


ಜಯರಾಮ ಹುಚ್ಚನಾದ ಕಥೆ : 

ಜಯರಾಮನ ಕೋಪಕ್ಕೆ ರೇಣು ಮನೆ ಬಿಟ್ಟು ಹೊರಟಿದ್ದಳು. ಆದರೆ, ಆಕೆ ಹೊರಟಿದ್ದು ಆತನ ಕೋಪದ ಮಾತುಗಳಿಗಲ್ಲ. ಬದಲಾಗಿ ಆತ ತೆರೆದಿಟ್ಟ ಬಿಡಿಬೀಸಾದ ಸತ್ಯಕ್ಕೆ. ಜಯರಾಮ ಆಮೇಲಿಂದ ಯಾರ ಅಂಕೆಗೂ ಸಿಗದೇ.. ಯಾರೊಂದಿಗೂ ಮಾತಿಗೆ ನಿಲ್ಲದೆ, ಆಗಾಗ ಬೀದಿಯಲ್ಲಿ ಮಾತನಾಡುತ್ತಾ ಕಾಗೆಗಳಿಗೆ ಕಲ್ಲು ಹೊಡೆಯುತ್ತಾ ಇದ್ದದ್ದನ್ನು ಜನ ಕಂಡರು. ಜಯರಾಮ ಹುಚ್ಚನಾದದ್ದರ ಸಂಪೂರ್ಣ ಚಿತ್ರಣ ತಿಳಿಯಲು ಕತೆ ಓದಿ. 


ಹಸಿವು : 

"ಬಾಯಿ ಸುಟ್ಟುಕೊಂಡ ದಿಕ್ಕಿಗೆ ಮತ್ತೆ ಹಾಲಿಗೆ ಬಾಯಿ ಹಾಕುವಾಗಲೆಲ್ಲ ಆ ನೋವು ನೆನಪಾಗಬಹುದು. ಆದರೆ, ಹಸಿವೆಂಬುದು ನೋವಿಗಿಂತಲೂ ದೊಡ್ಡದು."

ಭರತನ ನೋವಿಗೆ ಸಿಗುತ್ತಿದ್ದ ಸಾಂತ್ವನ ಆತನ ನೋವನ್ನು ಮೀರಿ ಹಸಿವನ್ನು ಗೆಲ್ಲುತ್ತಿತ್ತಾ..??


ನಿರಾಕರಣೆ : 

ಮುಕುಂದನಿಗೆ 'ಒಕ್ಕು' ಎಂಬ ಅನ್ವರ್ಥನಾಮ ಬರುವುದರ ಜೊತೆಗೆ ಆತ ಒಬ್ಬಂಟಿಯಾದ. ಕಾಷ್ಠಮೌನಿಯಾದ ಹಾಗೂ ಅತಿ ಕಾಳಜಿಯಿಂದ ಬೆಳೆದದ್ದು ಕಾಣುತ್ತಾ ಹೋದಂತೆ.. ಆತನಿಗೊಂದು ಜೋಡಿ ಸಿಗಬಾರದಾ ಎಂದು ಹಾರೈಸುವಷ್ಟರಲ್ಲಿ ಕುಬೇರಣ್ಣ ತೋರಿದ ಹುಡುಗಿಯನ್ನು ಆತನೇ ನಿರಾಕರಿಸಿ ಬರುತ್ತಾನೆ. ಆ ನಿರಾಕರಣೆ ಬಿಡುಗಡೆಯ ಮೂಲವಾ.. ಅಷ್ಟಕ್ಕೂ ಆತ ನಿರಾಕರಿಸಿದ್ದು ಯಾರನ್ನು..? ಬದುಕನ್ನೇ..?? ಊರನ್ನೇ..?? ಅಮ್ಮಣ್ಣಿಯನ್ನೇ ಅಥವಾ ಸೊಬಗಿನ ಹುಡುಗಿಯನ್ನೇ ಅಥವಾ ಆತನನ್ನೇ..??


ಮುಟ್ಟುವಷ್ಟು ಹತ್ತಿರ ಮುಟ್ಟಲಾರದಷ್ಟು ದೂರ: 

ಆತ ಪ್ರತಿನಿತ್ಯ ಕನಸಿದ್ದ, ಬಯಸಿದ್ದ, ಪ್ರೇಮಿಸಿದ ಹುಡುಗಿ ಹಸೆಮಣೆ ಏರುವ ಹಿಂದಿನ ದಿನ ಕಾಣೆಯಾಗಿದ್ದಳು. ಈಗ ಅವಳು ಮುಟ್ಟುವಷ್ಟು ಹತ್ತಿರವಿದ್ದು, ಮುಟ್ಟಲಾರದಷ್ಟು ದೂರವಿದ್ದಾಳೆ. ಹಾಗಾಗಿದ್ದರ ಹಿನ್ನೆಲೆ ಹಾಗೂ ವಾಸ್ತವದ ಕಥೆ ಇಲ್ಲಿದೆ.

"ಬದುಕೆಂದರೆ ಇದೇ ಇರಬೇಕು.. ಮುಟ್ಟುವಷ್ಟು ಹತ್ತಿರ, ಮುಟ್ಟಲಾರದಷ್ಟು ದೂರ !"


ಕರೆ: 

ಒಂದು ಕಾಲದಲ್ಲಿ ಮನುಷ್ಯನಿಗೆ ಭವಿಷ್ಯದ ಅರಿವು, ಸಾವಿನ ಬರವು ಎಲ್ಲವೂ ಖಚಿತವಾಗಿ ತಿಳಿದಿರ್ತಾ ಇತ್ತು.ಆದರೆ, ಈಗ ಮನುಷ್ಯ ತನ್ನ ಒಳಗಣ್ಣನ್ನು ಮುಚ್ಚಿಕೊಂಡಿದ್ದಾನೆ ಮತ್ತದು ಕುರುಡಾಗಿದೆಯೆಂದು ನಂಬಿಕೊಂಡಿದ್ದಾನೆ."

ಈಗ ಕಾಲನ ಕರೆ ಕೇಳುವುದು.. ಅವರ ಕರೆ ಬಂದವರಿಗೆ ಮಾತ್ರವೇ.. ಅಸಹಾಯಕರು, ರೋಗಿಗಳು, ಕೈಲಾಗದವರು, ಸಾವು ಬಯಸುತ್ತಿರುವವರನ್ನು ಬಿಟ್ಟು ಬಯಸದವರಿಗೆ ಅನಿರೀಕ್ಷಿತವಾಗಿ ಸಾವು ಬರಬಹುದು. ಮತ್ತವರಿಗೆ ಕಾಲನ ಕರೆ ಕೇಳುತ್ತದಾ..??


ಕಾರಣ:

ಗೆಳತಿಯಾಗಿ ಬೇಕಾದವಳನ್ನು, ಜೊತೆಗಾತಿಯಾಗಿ ಆಯ್ದುಕೊಳ್ಳಲು ಆತನಿಗೆ ಮನಸ್ಸಿರಲಿಲ್ಲ. ಅದಕ್ಕೆ ಆತನದ್ದೇ ಆದ ಕಾರಣವಿತ್ತು. "ವಜ್ರದ ಮುಂದೆ ಒಂದು ಸಾಧಾರಣ ಹರಳು ಹೇಗೆ ಬೆಳಗಬೇಕು" ಎಂದು ಕೇಳಿದ್ದವನ ಪ್ರಶ್ನೆ ಹಾಗೂ ನೀಡಿದ್ದ ಕಾರಣ ಸೀತತ್ತೆಯ ಬದುಕನ್ನು ಮನಸ್ವಿನಿ ಬೇರೆಯದ್ದೇ ಆಯಾಮದಲ್ಲಿ ಕಾಣುವಂತೆ ಮಾಡಿದ್ದ. 


ಇದು ನನ್ನ ಕಥೆ ಅಥವಾ.. :

ಇದು ಯಾರ ಕಥೆ.. ಇದು ಆತನ ಕತೆಯಾ.. ಮಹ್ಮದ್ ಕುಟ್ಟಿ ಅಲಿಯಾಸ್ ಪ್ರೀತಿಯ ಗೆಳೆಯ ಬಾಪುಟ್ಟಿಯ ಕತೆಯಾ.. ಉಣ್ಣಿಯ ಕತೆಯಾ.. ಆ ಊರಿನ ಒಂದು ಕಾಲದ ಚೆಲುವೆ ಪ್ರಭಾಳ ಕತೆಯಾ.. ಅಥವಾ ಅವಳ ಅಪ್ಪ ಮಾಧವ ನಾಯರ್ ನ ಕತೆಯಾ.. ಊರಿನ ನಡುವಿನ ಮಾನವೀಯ ಸಂಬಂಧದ ಕತೆಯಾ.. ಅವ್ಯಕ್ತ ಪ್ರೀತಿಯ ಕತೆಯಾ.. ಎಲ್ಲದರ ಮಿಳಿತವಾಗಿರುವ ಕಥೆಯೊಂದು ಕಾಣುತ್ತದೆ.


ಈ ಲೇಖಕಿಯ ಒಂದೆರಡು ಬಿಡಿ ಕಥೆಗಳನ್ನು ಓದಿದ್ದೆನಾದರೂ.. ಕಥಾಸಂಕಲನವನ್ನು ಹಿಡಿದ ನಂತರ ಬೆರೆಯದ್ದೇ ಲೋಕಕ್ಕೆ ಹೋದಂತಾಯಿತು. ಇಲ್ಲಿನ ಕಥೆಗಳು ಅದೆಷ್ಟು ಆಪ್ತವಾಗಿ ಆವರಿಸಿಕೊಂಡವು.. ಇಲ್ಲಿ ಕೇವಲ ಕಥಾಹಂದರವಿಲ್ಲ ಅಥವಾ ತೀವ್ರವಾದ ಭಾವಗಳಿಲ್ಲ. ಬದಲಾಗಿ ಮಂದಗಾಮಿಯಂತೆ ಆವರಿಸಿಕೊಳ್ಳುವ ಕಾವ್ಯಾತ್ಮಕವಾಗಿಯೇ ಕಥೆಯೊಳಗೆ ನಮ್ಮನ್ನು ನಾವು ತನ್ಮಯತೆಯಿಂದ ಮುಳುಗಿಸಿಕೊಳ್ಳುವ ಗುಣ ಹೊಂದಿರುವ ಕಥೆಗಳಿವೆ. ಕಥೆಗಳು ನಮ್ಮನ್ನು ಆವರಿಸಿಕೊಳ್ಳಲು ಅವು ನಮ್ಮ ನೆಲದ ಕಥೆಗಳೇ ಆಗಿರಬೇಕಿಲ್ಲ ಅಥವಾ ನಮ್ಮ ಭಾವಗಳು ಕಥೆಯಲ್ಲಿ ಕಂಡರೆ ಮಾತ್ರವೇ ಆವರಿಸಿಕೊಳ್ಳುತ್ತವೆ ಎನ್ನುವಂತಿಲ್ಲ.ಪ್ರತೀ ಕತೆಯಲ್ಲಿನ ಪ್ರತೀ ಭಾವಗಳೂ ಅದೆಷ್ಟು ಆಪ್ತವಾಗಿ ಆವರಿಸಿಕೊಳ್ಳುತ್ತವೆಂದರೆ.. ಮತ್ತೆಮತ್ತೆ ಓದಬಹುದಾದ ಕಥಾ ಸಂಕಲನವೆಂದರೂ ತಪ್ಪಾಗಲಾರದು. ಕಥೆಗಳ ಅಂತ್ಯ ಕಾಡುವ ಅಂತ್ಯವಾಗಿ.. ಕಥೆಯನ್ನು ಮನಸ್ಸಿನಲ್ಲಿಯಲು ಮತ್ತಷ್ಟು ಸಹಾಯ ಮಾಡುತ್ತದೆ. ಪ್ರತಿಮೆಯಂತಹಾ ಉಲ್ಲೇಖಗಳು ಕೊಡುವ ಹೊಳವುಗಳೇ ಚೆಂದ. ಇಂತಹಾ ಬಹಳಷ್ಟು ಉಲ್ಲೇಖಗಳು ಸಿಗುತ್ತವೆ. ಇವರ ಮತ್ತೊಂದು ಕಥಾಸಂಕಲನವನ್ನೂ ಓದಬೇಕು. ವಿಭಿನ್ನ ರೀತಿಯಲ್ಲಿ ಬಹಳ ಆಪ್ತವಾದ ಸೊಗಸಾದ ಕಥಾಸಂಕಲನ.


~ವಿಭಾ ವಿಶ್ವನಾಥ್

ಸೋಮವಾರ, ಏಪ್ರಿಲ್ 13, 2026

ಅಮರ ಪ್ರೇಮದ ಮಧು (ಪುಸ್ತಕ ಯಾನ - 168)


ಪುಸ್ತಕದ ಶೀರ್ಷಿಕೆ : ಅಮರ ಪ್ರೇಮದ ಮಧು

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 1999

ಮೂರನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 167

ಬೆಲೆ : 100 ರೂ.


ಪ್ರೇಮ ಹಾಗೂ ತ್ಯಾಗಗಳು ಜೀವನದ ವಿಭಿನ್ನ ಮಜಲುಗಳಾದರೂ.. ಮತ್ತೊಬ್ಬರ ತ್ಯಾಗದಿಂದ ಪಡೆದ ಪ್ರೇಮ ಒಬ್ಬರ ಪಾಲಿಗೆ ಅಮರ ಪ್ರೇಮವಾದರೆ.. ಮತ್ತೊಬ್ಬರ ಪಾಲಿಗೆ ಜೀವನವಿಡೀ ನೆನಪಿನ ನೋವನ್ನು ಉಳಿಸುತ್ತದೆ. ಅಮರ ಪ್ರೇಮವೊಂದರ ಚೆಂದದ ಕತೆ ಇಲ್ಲಿದೆ. 


ತಾಯಿ 22 ವರ್ಷಗಳಿಂದ ಕಂಪನಿಯಲ್ಲಿ ಸ್ಟೆನೋಗ್ರಾಫರ್ ಆಗಿ ದುಡಿಯುತ್ತಿದ್ದರೂ.. ಹೃದಯಾಘಾತವಾಗಿದ್ದಕ್ಕೆ ಆರು ತಿಂಗಳು ಸಂಬಳರಹಿತ ರಜೆ ಹಾಕಿದ್ದಕ್ಕಾಗಿ ಕೆಲಸದಿಂದ ತೆಗೆದು ಹಾಕಿದ್ದಕ್ಕೆ.. ಕೋಪದಿಂದ ತನ್ನಮ್ಮ ವಾಸಂತಿಗೆ ನ್ಯಾಯ ಕೇಳಲು ರಾಜಸಿಂಹನ ಮನೆಗೇ ಬರುತ್ತಾಳೆ ಮಧುಮತಿ. ಆದರೆ, ರಾಜಸಿಂಹನಿಗೆ ಮೇಲ್ನೋಟಕ್ಕೆ ದೊಡ್ಡ ಅಧಿಕಾರವಿದ್ದರೂ.. ಅದನ್ನು ಚಲಾಯಿಸುವಷ್ಟು ಸ್ವತಂತ್ರನಲ್ಲ. 


ಶ್ರೀಮಂತೆಯಾದ ಜಯಶ್ರೀಯ ಸ್ನೇಹ ಪ್ರೇಮವಾಗಿ ತಿರುಗಿದಾಗ ಅದೃಷ್ಟವಂತ ಎಂದು ತಿಳಿದಿದ್ದರೂ.. ಶ್ರೀಮಂತಿಕೆಗೆ ಮರುಳಾದದ್ದಕ್ಕೆ ತನ್ನ ಕುರಿತೇ ಪಶ್ಚಾತಾಪವಾಗಿತ್ತು ಆತನಿಗೆ. ರಾಜಸಿಂಹನ ತಾಯಿ ಗಂಡನನ್ನು ಕಳೆದುಕೊಂಡ ನಂತರ.. ಆತ ನಡೆಸುತ್ತಿದ್ದ ಲೇಡೀಸ್ ಕಾರ್ನರ್ ಅನ್ನು ಮುಂದುವರಿಸಿಕೊಂಡು ಹಿಂಭಾಗಕ್ಕೆ ಮನೆಯ ಮುಂಭಾಗಕ್ಕೆ ಅಂಗಡಿಯಾಗಿ ಮಾರ್ಪಡಿಸಿ ಅದರಿಂದ ಬಂದ ಆದಾಯದಲ್ಲಿ ಮಗನನ್ನು ಓದಿಸಿದ್ದರು. ಶ್ರೀಮಂತರ ಒಬ್ಬಳೇ ಮಗಳಾಗಿದ್ದ ಜಯಶ್ರೀಯನ್ನು ವಿವಾಹವಾಗಲು ಅಡ್ಡಿಪಡಿಸಿರಲಿಲ್ಲ. 


ಬೇರೆ ಶ್ರೀಮಂತ ತಂದೆಯರಂತೆ ಮಗಳ ಪ್ರೇಮವನ್ನು ವಿರೋಧಿಸಲಿಲ್ಲ ವೆಂಕಟೇಶ್. ಅದಕ್ಕೆ ಕಾರಣ ಅವರ ಅನಾರೋಗ್ಯ. ವಿಶ್ರಾಂತಿ ಬೇಕಾಗಿತ್ತು. ಹಾಗಾಗಿ ಸಮರ್ಥನಾದ ಒಬ್ಬ ಯುವಕನನ್ನು ಹುಡುಕುತ್ತಿದ್ದಾಗ ಸಿಕ್ಕದ್ದು ರಾಜಸಿಂಹ. ವೆಂಕಟೇಶ್ ಹಾಗೂ ಸ್ವರ್ಣರ ಸಂಸಾರವೇನೂ ನೆಮ್ಮದಿಯ ಸಂಸಾರವಲ್ಲ. ಭಿನ್ನಾಭಿಪ್ರಾಯ ಹಾಗೂ ಸ್ವಾತಂತ್ರ್ಯ, ಬ್ಯುಸಿನೆಸ್ ಎಂಬ ಹೆಸರಲ್ಲಿ ಆಕೆ ತಿಂಗಳಲ್ಲಿ ಒಂದು ವಾರ ಮಾತ್ರ ಪತಿ ಹಾಗೂ ಮಗಳ ಜೊತೆಗಿರುತ್ತಿದ್ದರು. ಮಗಳ ಮದುವೆಗೂ ಆಕೆ ಬಂದಿರಲಿಲ್ಲ. ಕನ್ಯಾದಾನ ಮಾಡಿದ್ದು ವೆಂಕಟೇಶ್ ಅವರ ತಂಗಿ ಲಲಿತಮ್ಮ ಹಾಗೂ ಆಕೆಯ ಗಂಡ ಮೋಹನ್ ರಾವ್.


ಅಣ್ಣನ ಮನೆಯ ಸಕಲ ಕಾರುಬಾರು ಲಲಿತಮ್ಮನವರದ್ದೇ.. ವೆಂಕಟೇಶ್ ಅವರು ಸಹಾ ಪರೋಕ್ಷವಾಗಿ ಆ ತಂಗಿಯನ್ನು ಆ ಮನೆಯ ಯಜಮಾನಿಯಂತೆಯೇ ನಡೆಸಿಕೊಳ್ಳುತ್ತಿದ್ದರು. ಸ್ವಂತ ಮನೆ ಇದ್ದರೂ ಮೊದಲಿನಿಂದಲೂ ಅಣ್ಣನ ಮನೆಯಲ್ಲಿಯೇ ಇದ್ದರು. ತಮ್ಮ ಮೊದಲ ಮಗನನ್ನು ಮದುವೆಯಾಗಿ ಜಯಶ್ರೀ ಸೊಸೆಯಾಗುವಳು ಎಂದು ಕನಸು ಕಟ್ಟಿಕೊಂಡಿದ್ದಳು. ಆದರೆ, ಜಯಶ್ರೀ ಒಪ್ಪದೇ ಪ್ರೇಮಿಸಿ ರಾಜಸಿಂಹನನ್ನು ವಿವಾಹವಾಗಿದ್ದಳು. ಅದಾಗಿ 10 ವರ್ಷ ಕಳೆದಿತ್ತು.


ರಾಜಸಿಂಹನ ತಾಯಿಯೂ ಆತನ ಜೊತೆಗಿರಲು ಒಪ್ಪಿದ್ದರು ವೆಂಕಟೇಶ್. ಅಂತೆಯೇ..ವನಜಮ್ಮ ತಮ್ಮನಿಗೆ ಅಂಗಡಿ ಒಪ್ಪಿಸಿ ಮಗನ ಮನೆಯಲ್ಲಿಯೇ ಬಂದು ಕೆಲವು ದಿನ ನೆಲೆಸಿದ್ದರು. ಲಲಿತಮ್ಮನಿಗೂ ಅವರಿಗೂ ಸರಿಯಾಗದೆ ಮತ್ತೆ ಹೊರಟವರು. ರಾಜಸಿಂಹನ ಮೇಲೆಯೂ ಶ್ರೀಮಂತನಲ್ಲವೆಂಬ ಕಾರಣಕ್ಕೆ ಅವರಿಗೆ ತಿರಸ್ಕಾರವಿತ್ತು.


ಮಗನ ಮನೆ ಸರಿಯಾಗದೆಂದು ತಿಳಿದಿದ್ದವರು ತಾತ್ಕಾಲಿಕವಾಗಿ ಅಲ್ಲಿಗೆ ಹೋಗಿದ್ದರು. ತಮ್ಮ ಶ್ರೀನಿವಾಸರಾಯರು ಹಾಗೂ ಅವರ ಹೆಂಡತಿ ಪದ್ಮಾವತಿ ಪಾಲಿಗೆ ವನಜಮ್ಮ ಸಾಕ್ಷಾತ್ ದೇವತೆಯಂತೆಯೇ.. ಅವರ ಮೊದಲ ಮಗಳು ವಿವಾಹವಾಗುವವರೆಗೆ ವನಜಮ್ಮನ ಬಳಿ ಇದ್ದಳು. ವನಜಮ್ಮ ಅಂಗಡಿಯಲ್ಲಿ ವ್ಯಾಪಾರಕ್ಕೆ ಗಮನ ಕೊಟ್ಟಿದ್ದಾಗ ಶ್ರೀನಿವಾಸರಾಯರು ಸಹಾಯ ಮಾಡುತ್ತಿದ್ದರು. ಪದ್ಮಾವತಿ ತಿಂಡಿಯ ವ್ಯವಸ್ಥೆ ಮಾಡುತ್ತಿದ್ದರೆ, ಊಟವನ್ನು ಅವರ ಮಕ್ಕಳು ಯಾರಾದರೂ ವ್ಯವಸ್ಥೆ ಮಾಡುತ್ತಿದ್ದರು. ಇವರ ಎಲ್ಲಾ ಮಕ್ಕಳೂ ದಡ ಸೇರಿದ್ದು ವನಜಮ್ಮನವರಿಂದಲೇ ಎಂದರೆ ತಪ್ಪಾಗಲಾರದು. ಈಗ ಅವರಿಬ್ಬರೂ ವನಜಮ್ಮನ ಮನೆ ತೊರೆದು ಮಕ್ಕಳ ಮನೆಗೆ ಹೊರಟಿದ್ದರು. 


ರಾಜಸಿಂಹ ಮಧುಮತಿಯನ್ನು ಅಮ್ಮನ ಬಳಿ ಕೆಲಸಕ್ಕೆಂದು ಕರೆತಂದ. ಅವಳ ಯೋಗ್ಯತೆಯಿಂದ ಕಡಿಮೆ ಕೆಲಸವನ್ನು ಹೇಳಿದಾಗಲೂ ಮನೆಯ ಪರಿಸ್ಥಿತಿಯಿಂದಾಗಿ ಒಪ್ಪಿಕೊಂಡಿದ್ದಳು.  ಮಧುಮತಿಯ ತಂಗಿ ಮಾಲಿನಿ ರೂಪವತಿಯಾದರೂ ವಿದ್ಯೆ ಇರಲಿಲ್ಲ. ತಮ್ಮ ಮಾಧವನಿಗೆ ರೂಪವಿರಲಿಲ್ಲ. ತಂದೆಗೂ ಸರಿಯಾದ ಕೆಲಸವಿರದಿದ್ದಾಗ ತಾಯಿಯ ಕೆಲಸವೂ ಹೋಗಿತ್ತು.ವಿದ್ಯೆಗೆ ತಕ್ಕ ಕೆಲಸವಲ್ಲದಿದ್ದರೂ.. ಅಡುಗೆಯನ್ನು, ಮನೆಯನ್ನು ನಿಭಾಯಿಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲಿ ವನಜಮ್ಮನವರಿಗೆ ಆತ್ಮೀಯಳಾದಳು.


ರಾಜಸಿಂಹನ ವಿರಸ ದಾಂಪತ್ಯದಲ್ಲಿ ತೃಪ್ತಿ ಇದ್ದದ್ದು ಮುದ್ದಿನ ಮಗಳು ಚಿನ್ನಿಯ ಬಳಿಯೇ... ಆಗಾಗ ತನ್ನಮ್ಮನ ಮನೆಗೂ ರಾಜಸಿಂಹ ಕರೆದೊಯ್ಯುತ್ತಿದ್ದ.ಆದರೆ, ಜಯಶ್ರೀ ಆಕೆಯನ್ನು ತಂದೆ ಅಷ್ಟು ಪ್ರೀತಿ ಮಾಡುವುದನ್ನು ಸಹಿಸದೆ ದೂರದ ಹಾಸ್ಟೆಲ್ ನಲ್ಲಿಟ್ಟು ತಂದೆಯಿಂದ ದೂರ ಮಾಡಿದಳು. 


ರಾಜಸಿಂಹ ತನ್ನ ಮಗ ಚಿಂಟುವಿಗೆ ಹತ್ತಿರವಾಗಲಿ ಎಂಬ ಆಸೆ ಜಯಶ್ರೀಯದ್ದು. ಬಹಳ ಉದ್ಧಟನಾದ ಆತನನ್ನು ತಿದ್ದಿ ಬುದ್ದಿ ಕಲಿಸುವಷ್ಟರಲ್ಲಿ ರಾಜಸಿಂಹನಿಗೆ ಬಹಳವೇ ತ್ರಾಸಾಗಿತ್ತು. ಅದಕ್ಕೆ ಲಲಿತಮ್ಮನವರ ಕುತಂತ್ರ ಬುದ್ಧಿ ಹಾಗೂ ಜಯಶ್ರೀಯ ಅತಿಮುದ್ದು ಕಾರಣವಾಗಿತ್ತು. ಜೊತೆಗೆ ಬಾಬ್ರಿಯ ಸ್ನೇಹವೂ.. ರಾಜಸಿಂಹನ ತಾಳ್ಮೆಯಿಂದ ಚಿಂಟು ಬಹಳ ಬೇಗ ಬದಲಾದ. ವನಜಮ್ಮನವರಿಗೆ ಚಿನ್ನಿಗಿಂತ ಚಿಂಟುವೇ ಬಹಳ ಅಚ್ಚುಮೆಚ್ಚಿದ ಮೊಮ್ಮಗವಾದ. 


ಮಗಳನ್ನು ನೋಡಲು ಬಿಡದೆ.. ಹಾಸ್ಟೆಲ್ ನಲ್ಲಿ ಇಟ್ಟಿದ್ದವಳು. ತನ್ನ ವೇಷ-ಭೂಷಣವನ್ನು ಸಂಪೂರ್ಣ ವಿದೇಶಿ ಮಾದರಿಗೆ ಬದಲಾಯಿಸಿದ್ದಳು. ಗಂಡ ತನ್ನ ಸೌಂದರ್ಯದ ಆರಾಧಕನಾಗಲಿ ಎನ್ನುವ ಹುಚ್ಚು ಆಸೆ ಅವಳದ್ದು. ಚಿನ್ನಿಯನ್ನು ನೋಡಲು ಒಮ್ಮೆ ಹಾಸ್ಟೆಲ್ ಗೆ ಕರೆದೊಯ್ದಾಗ ರಾಜಸಿಂಹನ ಎದೆಯೇ ಒಡೆದುಹೋದಂತಾಗಿತ್ತು.


ಅಪ್ಪನೆಂದರೆ ಜೀವ ಬಿಡುತ್ತಿದ್ದ ಮಗಳು ಈಗ ಆತನನ್ನು ಯಾರೋ ಅಪರಿಚಿತನಂತೆ ಕಾಣುತ್ತಿದ್ದಳು. ಮುಂಬೈಯಲ್ಲಿ ಸ್ಥಾಪಿಸಿದ್ದ ಹಾಸ್ಟೆಲ್ನಲ್ಲಿ ಅಪಾರ ಶ್ರೀಮಂತರ ಮಕ್ಕಳನ್ನು ನೋಡಿಕೊಳ್ಳಲು ನೇಮಕವಾಗಿದ್ದ ಚಿನ್ನಿಯ ಗೌವರ್ನೆಸ್ ಏಂಜಲಾಳನ್ನು ಜಯಶ್ರೀಗೆ ತಿಳಿಯದಂತೆ ಭೇಟಿಯಾದಾಗ ಆತನಿಗೆ ಅತ್ತೆ-ಮಾವನ ಹಿಂದಿನ ಗುಟ್ಟುಗಳೆಲ್ಲವೂ ಬಯಲಾಗಿತ್ತು. 


ಚಿಂಟುವನ್ನೂ ಹಾಸ್ಟೆಲ್ ಗೆ ಸೇರಿಸಲು ಹೊರಟು ಸೇರಿಸಿ ಬಂದಾಗ ಅಲ್ಲಿಂದ ಆತ ಕಾಣೆಯಾದ. ಇತ್ತ ವನಜಮ್ಮ ಮಗನ ಅತಂತ್ರ ಸಂಸಾರವನ್ನು ನೋಡಲಾಗದೆ.. ತನ್ನ ಮೊಮ್ಮಗುವನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಗುಟ್ಟಾಗಿ ಮದುವೆ ಮಾಡಲು ನೋಡುತ್ತಾಳೆ. 


ಇದಕ್ಕೆ ಮಧುಮತಿ ಒಪ್ಪಿ ರಾಜಸಿಂಹನನ್ನು ಮದುವೆಯಾಗಿ ಮೊಮ್ಮಗವನ್ನು ನೀಡಲು ಸಿದ್ದನಾಗಿ ತಿರುಪತಿಯಲ್ಲಿ ವಿವಾಹವೂ ನಡೆಯಿತು. ತನ್ನ ತಂದೆ-ತಾಯಿ, ತಂಗಿ-ತಮ್ಮಂದಿರಿಗೆಲ್ಲಾ ಒಂದು ವ್ಯವಸ್ಥೆಯನ್ನು ಮಾಡಿಕೊಟ್ಟಳು. ಆದರೆ, ಜಯಶ್ರೀಯ ಬದುಕಿನಲ್ಲಿಯೂ ಬದಲಾವಣೆಯಾಗಿತ್ತು.


ಜಯಶ್ರೀ ರಾಜಸಿಂಹನ ಪ್ರೀತಿಗೆ ಅಷ್ಟು ಹಂಬಲಿಸುತ್ತಿದ್ದದ್ದು ಏಕೆ..?? ಜಯಶ್ರೀಗಾಗಿ ಆಕೆಯ ತಂದೆ ಮಾಡಿದ್ದ ವಿಲ್ ಏನು..?? ಲಿಜಿ ಜಯಶ್ರೀಯ ಮೇಲೆ ಕಣ್ಣಿಟ್ಟದ್ದು ಏಕೆ..?? ರಾಜಸಿಂಹನಿಗೆ ಅತ್ತೆ-ಮಾವನ ಹಿನ್ನೆಲೆಯ ಕುರಿತು ತಿಳಿದ ರಹಸ್ಯವೇನು..?? ಜಯಶ್ರೀಯ ಮೇಲೆ ಅಷ್ಟು ಪ್ರೀತಿಯಿದ್ದವನು ಮಧುಮತಿಯನ್ನು ವಿವಾಹವಾದದ್ದೇಕೆ..?? ಚಿಂಟು ಮತ್ತೆ ಸಿಕ್ಕನೇ..?? ಚಿನ್ನಿ ಬದಲಾದಳೇ..?? ಜಯಶ್ರೀಯ ಬಳಿ ಅತಿ ಆಪ್ತವಾಗಿ ನಡೆದುಕೊಳ್ಳುತ್ತಿದ್ದ ಮನೋಹರ್ ನ ನಿಜಬಣ್ಣವೇನು..?? ಜಯಶ್ರೀಗೆ ತನ್ನ ತಾಯಿಯ ಬಗ್ಗೆ ತಿಳಿದಿದ್ದೇನು..?? ಮಧುಮತಿಯ ವಿವಾಹ ಮುಂದೇನಾಯಿತು..?? ಮಕ್ಕಳಿಂದ ಜಯಶ್ರೀಗೆ ಮಧುಮತಿಯ ವಿಚಾರ ತಿಳಿಯಿತೇ..? 

ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಹೆಚ್. ಜಿ. ರಾಧಾದೇವಿಯವರ 'ಅಮರ ಪ್ರೇಮದ ಮಧು' ಕಾದಂಬರಿಯನ್ನು. 


 ಹೆಚ್. ಜಿ. ರಾಧಾದೇವಿಯವರ ಕಾದಂಬರಿಯಲ್ಲಿ ಬರುವ ತಾಯಿಯ ಪಾತ್ರಗಳೆಲ್ಲವೂ ತೀರಾ ಮಮತಾಮಯಿ ಅಥವಾ ವಾತ್ಸಲ್ಯಮಯಿ ತಾಯಿಯರಲ್ಲ... ಆದರೆ, ಈ ರೀತಿಯ ತಾಯಿಯನ್ನು ಕಂಡದ್ದು ರಾಧಾದೇವಿಯವರ ಇಷ್ಟು ಕಾದಂಬರಿಗಳಲ್ಲಿ ಇದೇ ಮೊದಲು. ತನ್ನ ಭವಿಷ್ಯವನ್ನು ಹಾಳು ಮಾಡಿಕೊಂಡದ್ದು ಮಾತ್ರವಲ್ಲದೆ.. ಮಗಳ ಸಂಸಾರವನ್ನು ನೆಮ್ಮದಿಯಾಗಿರಲು ಬಿಡದೆ ಕಡೆಗೆ ಮೊಮ್ಮಗಳವರೆಗೂ ಕಣ್ಣು ಹಾಕಿದ್ದ ಪಾತ್ರ. ಸ್ತ್ರೀ ಕುಲಕ್ಕೆ ಕಳಂಕವಾದವರ ಪಾತ್ರದಂತೆನಿಸಿತು. ಮಹಿಳೆಯ ಸ್ವೇಚ್ಛಾಚಾರಕ್ಕೂ ಸ್ವಾತಂತ್ರ್ಯಕ್ಕೂ ಇರುವ ವ್ಯತ್ಯಾಸ ತಿಳಿಸುವ ಪಾತ್ರ. 


ಕ್ಷೀರದಷ್ಟು ಪವಿತ್ರವಾದ.. ಮಧುಮತಿ ಉಣಿಸಿದ ಪ್ರೇಮದ ಮಧು ಅಮರವಾದದು. ಇದು ಕಾದಂಬರಿ ಮುಗಿದ ನಂತರವೂ ಕಾಡುತ್ತದೆ 


~ವಿಭಾ ವಿಶ್ವನಾಥ್

ಸಂಜೆ ಅರಳಿದ ಹೂವು (ಪುಸ್ತಕ ಯಾನ - 167)


ಪುಸ್ತಕದ ಶೀರ್ಷಿಕೆ : ಸಂಜೆ ಅರಳಿದ ಹೂವು

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 1996

ಎರಡನೇ ಮುದ್ರಣ : 2016 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 164

ಬೆಲೆ : 110 ರೂ.


ತಂದೆ-ತಾಯಿಯ ಬಾಳ ಸಂಜೆಯಲ್ಲಿ ಅಂದರೆ ತಡವಾಗಿ ಹುಟ್ಟಿದ ಮಕ್ಕಳ ಭವಿಷ್ಯ ಬೇರೆ ರೀತಿಯಾಗಿರುತ್ತದೆ. ಒಡಹುಟ್ಟಿದವರ ಸಂಸಾರವೇ ಅವರವರಿಗಾಗಿರುವಾಗ, ತಂದೆ-ತಾಯಿಯರು ವೃದ್ಧಾಪ್ಯದ ಸ್ಥಿತಿಯಲ್ಲಿರುವಾಗ.. ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಅಥವಾ ಮತ್ತೊಬ್ಬರ ಕೈ ಕೆಳಗೆ ಹೋಗುವಂತಹಾ ಪರಿಸ್ಥಿತಿ. ಅಂತಹಾ ಪರಿಸ್ಥಿತಿಯಲ್ಲಿಯೂ.. ತಮ್ಮ ಸ್ವಾಭಿಮಾನವನ್ನು ಬಿಡದೆ,ಕೆಚ್ಚೆದೆಯಿಂದ ಬದುಕುವ ಛಲಗಾತಿಯ ಕತೆಯನ್ನು ಹೊಂದಿರುವ ಕಾದಂಬರಿ ಹೆಚ್.ಜಿ. ರಾಧಾದೇವಿಯವರ 'ಸಂಜೆ ಅರಳಿದ ಹೂವು'.


ವಿಶ್ವನಾಥ ಶಾಸ್ತ್ರಿಗಳ ಹೆಂಡತಿಯ ವೈದಿಕದಲ್ಲಿ ಮಾತ್ರವೇ ಈಗ ಮಕ್ಕಳು ತಂದೆಯನ್ನು ನೋಡಲು ಒಟ್ಟಾಗುತ್ತಿದ್ದದ್ದು. ವಿಶ್ವನಾಥ ಶಾಸ್ತ್ರಿಗಳಿಗೆ 8 ಜನ ಮಕ್ಕಳು. ಅದರಲ್ಲಿ 6 ಜನ ಬದುಕಿದ್ದರು. ಮೂವರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳು. ಬೇರೆಲ್ಲಾ ಮಕ್ಕಳ ವಿವಾಹವಾಗಿದ್ದರೂ.. ಕೊನೆಯ ಮಗಳಾದ ಲಲಿತಳ ವಿವಾಹವಿನ್ನೂ ಬಾಕಿಯಿತ್ತು. ಲಲಿತಾಳಿಗೆ 16 ವರ್ಷವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಳು. ಈಗ ಅವಳಿಗೆ 26 ವರ್ಷ. ಲಲಿತಾಳಿಗೆ ವಿವಾಹ ಮಾಡಬೇಕೆಂಬ ಶಾಸ್ತ್ರಿಗಳ ಆಸೆ ಆಸೆಯಾಗಿಯೇ ಉಳಿದಿತ್ತು. 


ಶಾಸ್ತ್ರಿಗಳು ರಂಗನಾಥರಾಯರ ಔಟ್ ಹೌಸ್ ನಲ್ಲಿ ವಾಸವಾಗಿದ್ದರು. ಅವರ ಮನೆಯ ಪೂಜೆ ಮಾಡುತ್ತಾ ಮನೆತನದ ಪುರೋಹಿತರೂ ಆಗಿದ್ದರು. ರಂಗನಾಥರಾಯರು ಮಗನ ಮನೆ ಕಾಶಿಗೆ ಹೋಗುತ್ತಿದ್ದರಿಂದ ಅಲ್ಲಿಗೂ ಶಾಸ್ತ್ರಿಗಳನ್ನು ಪೂಜೆಗೆ ಕರೆದೊಯ್ಯಲು ನಿರ್ಧರಿಸಿದ್ದರು. ಶಾಸ್ತ್ರಿಗಳೂ ಒಪ್ಪಿಗೆ ನೀಡಿದ್ದರು. 


ಆದರೆ, ಲಲಿತಳ ಮದುವೆಯ ಜವಾಬ್ದಾರಿ ಬಾಕಿಯಿತ್ತು. ಜಮೀನು ಮಾರಿ ಬಂದ 30,000ವನ್ನು ಅವಳ ಮದುವೆಗೆಂದು ತೆಗೆದಿಟ್ಟಿದ್ದರು. ಒಂದು ವರ್ಷದೊಳಗೆ ಅವಳ ಮದುವೆ ಮಾಡುವ ಮಗನಿಗೆ ಆ ಹಣ ಹಾಗೂ ಮಗಳ ಜವಾಬ್ದಾರಿಯನ್ನು ಒಪ್ಪಿಸಲು ಸಿದ್ದವಿದ್ದರು.


ಶಾಸ್ತ್ರಿಗಳೂ ಅವಳ ಮದುವೆ ಪ್ರಯತ್ನ ಮಾಡಿದ್ದರೂ.. ಅವಳಿಗೆ ಬಂದ ಗಂಡುಗಳನ್ನೆಲ್ಲಾ ನೆಪ ಹೇಳಿ ತಪ್ಪಿಸುತ್ತಿದ್ದರು ಅಚ್ಚಮ್ಮ. ಆದರೆ, ಸ್ವಲ್ಪ ದೂರದಲ್ಲಿದ್ದ ಅನ್ಯ ಜಾತಿಯವರಾಗಿದ್ದ ಹೊನ್ನಮ್ಮ ಹೃದಯವಂತರು.

ಲಲಿತಳಿಗೆ ಅವಳ ಅಣ್ಣಂದಿರು ಮದುವೆ ಮಾಡದಿದ್ದರೆ ಅವರೇ ದಿಕ್ಕು ಎಂದು ಅವರಿಗೆ ಕೊಂಚ ಒಡವೆ ಒಪ್ಪಿಸಿ ಮಗಳ ಬದುಕನ್ನು ಹಸನಾಗಿಸಿ ಎಂದಿದ್ದರು ಶಾಸ್ತ್ರಿಗಳು.

  

ಲಲಿತಳ ದೊಡ್ಡಣ್ಣ ತನ್ನ ಬಡತನವನ್ನೇ ಬಣ್ಣಿಸಿ ಗಂಟು ಕಟ್ಟಿಕೊಂಡು ಹೋಗುತ್ತಿದ್ದ. ಲಲಿತಳ ಎರಡನೇ ಅಣ್ಣ ಉಮೇಶ ಲೆಕ್ಚರರ್ ಆಗಿದ್ದವನು. ತಂದೆ-ತಂಗಿ ಯಾರನ್ನೂ ವಿಶೇಷವಾಗಿ ಹಚ್ಚಿಕೊಂಡಿರಲಿಲ್ಲ. ಅವನ ಹೆಂಡತಿ ಹಣದ ಆಸೆಗಾಗಿ ಒಪ್ಪಿದರೂ.. ಆತನೇ ನಿರಾಕರಿಸಿದ.


ಲಲಿತಳ ಮೂರನೇ ಅಣ್ಣ ಗಿರೀಶ ಅವನು ಹಾಗೂ ಆತನ ಹೆಂಡತಿ ಮೈಸೂರಿನಲ್ಲಿ ವಾಸವಾಗಿದ್ದರು. ಇದ್ದಿದರಲ್ಲಿ ಅವನೇ ಸ್ವಲ್ಪ ವಾಸಿ. ಆತನ ಮನೆಗೆ ಕರೆತಂದನಾದರೂ.. ಬ್ಯಾಂಕ್ ಉದ್ಯೋಗಸ್ಥೆಯಾಗಿದ್ದ ಅವನ ಹೆಂಡತಿ ಲಲಿತಾಳನ್ನು ಮನೆಕೆಲಸದವಳಂತೆ ಮಾಡಿಕೊಳ್ಳಲು ತೀರ್ಮಾನಿಸಿದ್ದಳು. ಆದರೆ, ಲಲಿತಾಳ ನೇರವಂತಿಕೆ, ದಿಟ್ಟತನದೆದುರು ಅವಳ ಆಟ ಸಾಗಲಿಲ್ಲ. 


ಮೊದಲಿಗೆ ತಂಗಿಯನ್ನು ಚೆನ್ನಾಗಿಯೇ ನೋಡಿಕೊಂಡ. ಹೆಂಡತಿಗೆ ಪ್ರಿಯನಾಗಲು ಹೋಗಿ ದ್ವಂದ್ವದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ. ಪಾರ್ವತಿ ಹತ್ತಿರದಲ್ಲೇ ಇದ್ದ ತಾಯಿ ಗಂಗಮ್ಮನ ಮನೆಗೆ ಆಗಾಗ ಹೋಗುತ್ತಿದ್ದಳು. ಅವಳ ತಂಗಿ ಭವಾನಿಯನ್ನು ನೋಡಲು ಗಂಡು ಬರುತ್ತಾನೆಂಬ ಕಾರಣಕ್ಕೆ ಲಲಿತಾಳನ್ನು ತಿಂಡಿ ಮಾಡಲು ಕಳುಹಿಸಲು ಹೇಳಿದರು. ಲಲಿತ ಮೊದಲಿಗೆ ಒಪ್ಪಲಿಲ್ಲ. ನಂತರ, ಅಣ್ಣನ ಒತ್ತಾಯಕ್ಕೆ ಅದೊಂದೇ ಬಾರಿ ಎಂದು ಒಪ್ಪುತ್ತಾಳೆ.


ಅಲ್ಲಿ ಹೋದಾಗ ಶ್ರೀಮಂತಿಕೆಯ ದರ್ಪ ತೋರಲು ಹೋದ ಗಂಗಮ್ಮನಿಗೂ ತಕ್ಕ ಪ್ರತ್ಯುತ್ತರ ನೀಡುತ್ತಾಳೆ. ಆಕೆಯ ಮಗ ಸೋಮನಾಥನ ಹೆಣ್ಣಿನ ಕುರಿತ ಚಪಲಕ್ಕೂ ಬಲಿಯಾಗದೇ, ಆತನನ್ನು ಅಂತರದಲ್ಲಿಯೇ ಇಡುತ್ತಾಳೆ.


ಪಕ್ಕದ ಮನೆಯ ಸಮವಯಸ್ಕಳಾದ ಲತಾ ಪರಿಚಯವೂ ಆಗುತ್ತದೆ. ಲತಾಳಿಗೆ ಮಲತಾಯಿ ಗೋದಾವರಿ ಬಾಯಿ ಶಿಕ್ಷಕಿ, ತಂದೆ ಹಾಗೂ ಇಬ್ಬರು ಮಲ ತಮ್ಮಂದಿರು. ಓದಿನಲ್ಲಿ ಆಸಕ್ತಿ ಇಲ್ಲದರಿಂದ ಓದಲಿಲ್ಲ. ರೂಪವೂ ಚೆನ್ನಾಗಿಲ್ಲದರಿಂದ.. ಮದುವೆಯೂ ಆಗಿರಲಿಲ್ಲ. ಮಲತಾಯಿಯ ನೂರೆಂಟು ಕಟ್ಟುಪಾಡುಗಳು. ಆದರೆ, ವಯಸ್ಸಿನ ಪ್ರಭಾವದಿಂದ ಪ್ರೀತಿ-ಪ್ರೇಮದ ಗೀಳಿತ್ತು. ಲಲಿತಾಳಿಗೆ ಜೊತೆಯಾದರೂ.. ಲತಾಳ ಚಿಕ್ಕಮ್ಮ ಹಾಗೂ ಲಲಿತಾಳ ಅತ್ತಿಗೆ ಮಾತನಾಡಿಕೊಂಡಂತೆ ಕಿರುಕುಳ ನೀಡತೊಡಗಿದ್ದರು.ಲಲಿತ ಬದಲಾಗಿ ಲತ ಸೋಮನಾಥನ ಬಲೆಗೆ ಬಿದ್ದಿದ್ದಳು. 


ತಮ್ಮ ಬಳಿಯಿಂದ ಲಲಿತ ಹೋಗಬಾರದೆಂದು..ತಮ್ಮ ಮಾತನ್ನೇ ಕೇಳಬೇಕೆಂದು ಹಿಡಿತದಲ್ಲಿಡಲು ಗಿರೀಶ ಹಾಗೂ ಆತನ ಹೆಂಡತಿ ಸೇರಿ  ಆಕೆಯ 10000ವನ್ನು ದೊಡ್ಡಣ್ಣನಿಗೆ ಕೊಟ್ಟಿದ್ದರು . ಆದರೆ, ಛಲ ಬಿಡದ ಲಲಿತ ಆತನಿಂದ ಆ ಹಣವನ್ನು ವಸೂಲಿ ಮಾಡಿಯೇ ತೀರಿದಳು. ಅದಕ್ಕೆ ಸಹಕಾರ ನೀಡಿದ್ದು ಡಾ. ವಸುಂಧರ.


ಡಾ.ವಸುಂಧರ ಗಂಗಮ್ಮನ ಮನೆಯ ಪಕ್ಕದವರು. ಲಲಿತಾ ಅಣ್ಣನ ಒತ್ತಾಯಕ್ಕೆ ಗಂಗಮ್ಮನ ಮನೆಯಲ್ಲಿ ತಿಂಡಿಗಳನ್ನು ಮಾಡಿದ್ದನ್ನು ಕಂಡು ತಮ್ಮ ಮನೆಗೂ ಆಹ್ವಾನಿಸಿದ್ದರು. ಆದರೆ, ತನ್ನ ಭವಿಷ್ಯವನ್ನು ಕೇವಲ ಅಡುಗೆಯವಳಾಗಿ ರೂಪಿಸಿಕೊಳ್ಳಲು ಇಷ್ಟವಿಲ್ಲವೆಂದಾಗ ತಮ್ಮ ಚಿಕ್ಕಪ್ಪನ ಮಗ ಚಂಧ್ರಧರನನ್ನು ವಿವಾಹ ಮಾಡಲು ಇಚ್ಛಿಸಿದರು.


ಆದರೆ, ವಸುಂಧರ ಉದ್ದೇಶ ಒಳ್ಳೆಯದಿರಲಿಲ್ಲ. ಚಂದ್ರಧರ್ ಗೆ ಅದರ ಅರಿವಿತ್ತು. ಅಕ್ಕ ತೋರಿದ ಹೆಣ್ಣನ್ನು ಮದುವೆಯಾಗಿ ಆಕೆಯ ಮನೆಯ ಊಳಿಗದಲ್ಲಿಯೇ ಇರಲು ಒಪ್ಪದ ಆತ ಲಲಿತಳಿಗೆ ಇದ್ದ ವಿಷಯವನ್ನು ತಿಳಿಸಿದ್ದ. 


ಅಷ್ಟರಲ್ಲಿ, ಅಣ್ಣನಿಂದ ದುಡ್ಡು ವಸೂಲು ಮಾಡಲು ಹೋಗಿದ್ದಾಗ ಕೇಳಿದ ಮಾತುಕತೆಯಿಂದ ವಸುಂಧರಳ ನಿಜಬಣ್ಣ ಲಲಿತಳಿಗೆ ತಿಳಿದಿತ್ತು. ಹೆಣ್ಣುಮಕ್ಕಳನ್ನು ಸಬಲರನ್ನಾಗಿಸುತ್ತೇವೆ, ದೌರ್ಜನ್ಯದಿಂದ ಮುಕ್ತಿಗೊಳಿಸುತ್ತೇವೆ ಎನ್ನುವ ಡಾಕ್ಟರ್ ವಸುಂಧರಾ ನಿಜಬಣ್ಣ ಬೇರೆಯೇ ಇದ್ದಿತು. 


ಪ್ರೀತಿ-ಪ್ರೇಮದ ಹುಚ್ಚಿಗೆ ಬಿದ್ದು ಲತಾ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಡಾ. ವಸುಂಧರ ನೆರವಿನಿಂದ ಲಲಿತ ಆಕೆಯನ್ನು ಕಾಪಾಡುತ್ತಾಳೆ. ಆದರೆ, ವಸುಂಧರಾ ಮಲತಾಯಿಗಿಂತ ಹೆಚ್ಚಿನ ಕಾಟ ಕೊಡುತ್ತಾರೆ. 


ಅಣ್ಣನ ಮನೆಯ ಋಣ ಹರಿದು ಲಲಿತ ಮನೆ ಬಿಟ್ಟು ಹೊರಟ ನಂತರ ಆತನಿಗೆ ತನ್ನ ತಪ್ಪಿನ ಅರಿವು ಚೆನ್ನಾಗಿಯೇ ಆಗಿತ್ತು. ಲಲಿತ ಹೊರಟದ್ದು  ಹೊನ್ನಮ್ಮನ ಆಶ್ರಯಕ್ಕೆ. ಲಲಿತಾಳ ತಂದೆ ಕೊಟ್ಟಿದ್ದ ಚಿನ್ನವನ್ನು ಅವಳ ಒಪ್ಪಿಗೆ ಪಡೆಸು ಅಡವಿಟ್ಟು ಅದರ ಬಂಡವಾಳದಿಂದ ಅವಳ ಪಾಲುದಾರಳನ್ನಾಗಿಸಿ ಅಂಗಡಿ ತೆರೆದಿದ್ದರು. 


ಅವರ ಪಕ್ಕದ ಮನೆಯಲ್ಲಿಯೇ ಸರೋಜಾಳ ಜೊತೆಗೆ ಇರಲು ಲಲಿತಾಳಿಗೆ ವ್ಯವಸ್ಥೆ ಮಾಡಿದ್ದರು. ಸರೋಜಾ ಕೂಡಾ 'ಸಂಜೆ ಅರಳಿದ ಹೂವು'. ಮನೆಯಲ್ಲಿನ ಕಿರುಕುಳದಿಂದ ಬೇಸತ್ತು.. ದಾಸ್ತಾನಿನ ಮಳಿಗೆಯಲ್ಲಿ ಚೀಲಕ್ಕೆ ಧಾನ್ಯ ತುಂಬುವುದು, ಬಾಯಿ ಹೊಲೆಯುವ ಕೆಲಸ ಮಾಡುತ್ತಿದ್ದಳು. ಆದರೆ, ಎಷ್ಟೋ ಜನ ಈಕೆಯನ್ನು ಶಿಕ್ಷಕಿಯೆಂದು ಭಾವಿಸಿದ್ದರು. ರೂಪ ಅಷ್ಟೇನೂ ಚೆನ್ನಾಗಿರಲಿಲ್ಲ, ಕಾಲು ಸ್ವಲ್ಪ ಕುಂಟು. ಆದರೆ, ಜೀವನದಲ್ಲಿ ಬಹಳ ಕಷ್ಟ ಕಂಡವಳು.ಸರೋಜಾಳ ಪ್ರಯಾಣದಲ್ಲಿ ಜೊತೆಯಾಗಿ.. ಲಲಿತಾ ಹಾಗೂ ಸರೋಜಾ ಜೊತೆಗೆ ಜಯಲಕ್ಷ್ಮಿಯೂ ರೂಮ್ ಮೇಟ್ ಆದಳು. 


ಹೊಲಿಗೆ ಹಾಗೂ ಅಂಗಡಿಯ ಬಾಡಿಗೆಯಿಂದ ಜೀವನ ಸರಾಗವಾಗಿ ಸಾಗುತ್ತಿತ್ತು. ಆಗ ತುಂಗಮ್ಮನ ಮಗ ಶ್ರೀಹರಿಗೆ ಆಕೆಯನ್ನು ವಿವಾಹ ಮಾಡಿಕೊಳ್ಳುವ ಪ್ರಸ್ತಾಪ ಬಂದಿತು. ಆದರೆ, ಅದು ಅವಳ ಹಣ ನೋಡಿ.


ಹಾಗೆಯೇ.. ಮತ್ತೊಂದು ಪ್ರಸ್ತಾಪ ಬಂದದ್ದು ವಿಜಯಮ್ಮನಿಂದ ತನ್ನ ಕುಂಟ ಮಗ ವೇಣುವಿಗೆ. 


ಇಬ್ಬರನ್ನೂ ಒಪ್ಪದ ಲಲಿತ ಅವರ ಬಾಳನ್ನೂ ಹಸನಾಗಿದ್ದು ಹೇಗೆ..?? 

ಸರೋಜಳ ಕಂಕಣ ಕೂಡಿ ಬರಲು ಅವಳೇ ಕಾರಣವಾಗುತ್ತಾಳೆ. ಅದು ಹೇಗೆ..?? ತುಂಗಮ್ಮ ಹಾಗೂ ವಿಜಯಮ್ಮನಿಗೆ ಬುದ್ದಿ ಕಲಿಸಿದ್ದು ಹೇಗೆ..?? ಜಯಲಕ್ಷ್ಮೀಯ ದುರಾಲೋಚನೆಯನ್ನು ಲಲಿತ ಮಟ್ಟ ಹಾಕಿದ್ದು ಹೇಗೆ..?? ಲತಾಳಿಗೆ ಬದುಕು ಕಟ್ಟಿಕೊಡಬೇಕೆನ್ನುವ ಅವಳ ಆಲೋಚನೆ ಕಾರ್ಯರೂಪಕ್ಕೆ ಬಂದದ್ದು ಹೇಗೆ..?? ಲಲಿತಾಳ ವಿವಾಹ ಏನಾಯಿತು..?? ಕೇಶವನ ಕೆಟ್ಟ ಆಲೋಚನೆಗೆ ತಡೆ ಹಾಕಿದ್ದು ಹೇಗೆ..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಸಂಜೆ ಅರಳಿದ ಹೂವು' ಕಾದಂಬರಿಯನ್ನು.


ಮುಳ್ಳುಗಳು ಹೂವುಗಳ ರಕ್ಷಣೆಗಾಗಿಯೇ ರೂಪಿತವಾಗಿರುವಂತಹವು. ಅಂತಹಾ ಮುಳ್ಳುಗಳು ಬೇರೆಯವರ ಪಾಲಿಗೆ ಮುಳ್ಳುಗಳಾದರೂ.. ಹೂವಿನ ಪಾಲಿಗೆ ಸುರಕ್ಷಾ ಕವಚವೇ. ಹೆಣ್ಣಿನ ಪಾಲಿಗೆ ಮದುವೆಯಾಗುವವರೆಗೂ ಅಂತಹ ಸುರಕ್ಷೆ ಸಿಗುವುದು ಅಪ್ಪ ಹಾಗೂ ಅಣ್ಣಂದಿರಿಂದ. ಆದರೆ, ಅದಾವುದೂ ಸಿಗದೇ ಬದುಕಿನಲ್ಲಿ ಒಂಟಿ ಹೋರಾಟ ಮಾಡಿದ ದಿಟ್ಟೆ ಲಲಿತಾಳ ಪಾತ್ರ ಬಹಳವಾಗಿ ಇಷ್ಟವಾಯಿತು. ಸ್ನೇಹಕ್ಕೆ ಬೆಲೆ ಕೊಟ್ಟು.. ತನ್ನ ಕುರಿತು ಮಾತ್ರ ಆಲೋಚಿಸಿ ಸುಮ್ಮನಾಗದೆ, ತನ್ನ ಭವಿಷ್ಯವನ್ನು ಮಾತ್ರ ರೂಪಿಸಿಕೊಳ್ಳದೆ, ತನ್ನಂತೆಯೇ 'ಸಂಜೆ ಅರಳಿದ ಹೂವು'ಗಳನ್ನು ಸುರಕ್ಷಿತವಾಗಿರಿಸಿದವಳು. 


ದುಷ್ಟಬುದ್ಧಿಯವರಿಂದ ಪಾರಾಗಿ ಬದುಕಲು ಕೇವಲ ಜಾಣ್ಮೆಯಲ್ಲದೆ, ಧೈರ್ಯವೂ ಬೇಕು. ಅದನ್ನು ನಾವಾಗಿಯೇ ಬೆಳೆಸಿಕೊಳ್ಳಬೇಕು. ತನ್ನ ವ್ಯಕ್ತಿತ್ವದ ಜೊತೆಗೆ ಇತರರ ವ್ಯಕ್ತಿತ್ವಕ್ಕೂ ಹೊಳಪು ನೀಡಿದ ಮಾದರಿ ಕಾದಂಬರಿ ಇದು.


~ವಿಭಾ ವಿಶ್ವನಾಥ್

ಈಗಲ್ ಲೈನ್ಸ್ (ಪುಸ್ತಕ ಯಾನ - 166)

ಪುಸ್ತಕದ ಶೀರ್ಷಿಕೆ :ಈಗಲ್ ಲೈನ್ಸ್

ಲೇಖಕರು : ರಾಜೇಶ್ ಕುಮಾರ್ ಕಲ್ಯಾ 

ಪ್ರಕಾಶಕರು : ವೀರಲೋಕ ಬುಕ್ಸ್

ಪ್ರಥಮ ಮುದ್ರಣ : 2023

ಪುಟಗಳು : 184

ಬೆಲೆ : 220 ರೂ.


ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಬರಹಗಳೆಂದರೆ ಎಂದೂ ಮುಗಿಯದ ಹುಚ್ಚು ಪ್ರೀತಿ ಎಂದು ಹೇಳಿಕೊಂಡಿರುವ ಲೇಖಕ ರಾಜೇಶ್ ಕಲ್ಯಾ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಎಂಬ ಊರಿನವರು. ಪರಿಸರದ ಕುರಿತು ಮುಗಿಯದ ಅಧ್ಯಯನದ ಆಸಕ್ತಿ. ಇಂಜಿನಿಯರ್ ಆದ ಇವರು ವೃತ್ತಿಯ ಜೊತೆಗೆ ಓದು-ಬರಹದ ಸಾಂಗತ್ಯವನ್ನು ಅಂಟಿಸಿಕೊಂಡವರು 


ಲೇಖಕರು ಬೆಳೆದ ಪರಿಸರ ಹಾಗೂ ಅವರ ಹವ್ಯಾಸಗಳು ಬರವಣಿಗೆಯಲ್ಲಿ ಮೂಡಿ ಅದರದ್ದೇ ಆದ ಛಾಪು ಮೂಡಿಸುತ್ತವೆ. ರಾಜೇಶ್ ರವರ ಈ ಕಾದಂಬರಿಯಲ್ಲಿ ನನಗೆ ಕಂಡದ್ದು ಅದೇ.. ತೇಜಸ್ವಿಯವರು ಕರೆದೊಯ್ಯುವಂತೆ.. ಪರಿಸರದ ನಡುವಿನಲ್ಲಿ ವಿಹರಿಸುತ್ತಾ ಹೋದಂತಾಯಿತು. ಇಲ್ಲಿ ನಮಗೆ ಕೇವಲ ಮನೋರಂಜನೆ ಮಾತ್ರವಲ್ಲದೇ.. ಪರಿಸರದ ಕುರಿತಾದ ಮಾಹಿತಿಗಳು ದಂಡಿಯಾಗಿ ದೊರಕುತ್ತಾ ಹೋಗುತ್ತವೆ. ಕೆಲವೊಮ್ಮೆ ತೇಜಸ್ವಿಯವರ ಪುಸ್ತಕವನ್ನೇನಾದರೂ ಓದುತ್ತಿದ್ದೇವಾ ಎಂಬ ಅನುಮಾನ ಸುಳಿಯದೇ ಇರದು. ಕಾದಂಬರಿ ಎಂದಾಕ್ಷಣ ನಮಗೆ ಬೇರೆಯದ್ದೆ ನಿರೀಕ್ಷೆ ಇರಬಹುದು. ಆದರೆ, ಪರಿಸರದ ಕುರಿತಾಗಿ ಯಾನ ಹೊರಡಿಸುವ ಈ ಕಾದಂಬರಿಯ ಶೀರ್ಷಿಕೆ 'ಈಗಲ್ ಲೈನ್ಸ್' ತನ್ನ ಗುಟ್ಟು ಬಿಟ್ಟುಕೊಡದಂತೆ ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ. 


ತನ್ನ ಹಿರಿಯರು ಅದರಲ್ಲೂ.. ತನ್ನಮ್ಮನ ತವರಿನ ಹಿರಿಯರು ಬಾಳಿ ಬದುಕಿದ ಊರಿಗೆ ತನ್ನ ಡಾಕ್ಟರೇಟ್ ಅಧ್ಯಯನದ ನೆಪದಲ್ಲಿ ಮಾಹಿತಿ ಸಂಗ್ರಹಕ್ಕೆಂದು ಬರುವ ನಾಯಕನ ಎದುರಿಗೆ ತೆರೆದುಕೊಳ್ಳುವ ಲೋಕವೇ ಬೇರೆ. ಅಲ್ಲೊಂದು ಮುಗ್ಧತೆಯಿದೆ. ಹಾಗೆಂದು ಅದು ಕೇವಲ ಮುಗ್ಧತೆಯನ್ನು ಮಾತ್ರ ಪರಿಚಯಿಸದೆ.. ಮುಗ್ಧ ಮನುಷ್ಯರ ಆಲೋಚನಾ ಲಹರಿ, ಊರಿನವರು ಅದನ್ನು ಬಳಸಿಕೊಳ್ಳುವ ರೀತಿ, ಅವರ ನಂಬಿಕೆಗಳು ಹಾಗೂ ಅದಕ್ಕೂ ನಾಯಕನ ಆಲೋಚನಾ ಲಹರಿಯಿಂದ ಎತ್ತಿ ತೋರುವ ವಿಭಿನ್ನತೆಗೂ ತಲೆಮಾರುಗಳ ನಡುವಿನ ಆಲೋಚನೆಯ ಅಂತರವೂ ಕಾಣುತ್ತದೆ. ನಾಯಕನಿಗಿಂತಲೂ ನನಗೆ ಮೊರೋಣಿ ಹಾಗೂ ಮಾಣಿಗನಂತೂ ಬಹಳವೇ ಹಿಡಿಸಿದರು. 


ನಾಯಕ ಮಾಳ ಎಂಬ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಕ್ಕೆ ಕಾಲಿಟ್ಟಾಗ ಅಕ್ಟೋಬರ್ ತಿಂಗಳು. ಆಗ ಅಲ್ಲಿನ ವಾತಾವರಣಕ್ಕೂ.. ನಾಯಕ ಬೆಳೆದ ಬೆಂಗಳೂರಿಗೆ ಬೇರೆಯದ್ದೇ ತೆರನಾದ ಪರಿಸರವಿರುತ್ತದೆ. ಮನೆಯ ಮುಂಭಾಗಕ್ಕೆ ರಿಕ್ಷಾದಲ್ಲಿ ಇಳಿದ ತಕ್ಷಣವೇ ಸಿಕ್ಕ ಇಬ್ಬರೂ ಯುವಕರು ಊರಿನ ಪರಿಸರಕ್ಕೆ ನಾಯಕನನ್ನು ಪರಿಚಯಿಸುವ ಕೊಂಡಿಯಾಗಿ ಮಾತ್ರ ಕಾಣದೆ ನಮಗೂ ಆಸಕ್ತಿ ಮೂಡಿಸುತ್ತಾರೆ. 


ಡಾಕ್ಟರೇಟ್ ಎಂದರೆ ತಿಳಿದರದ ಅವರು ಡಾಕ್ಟರ್ ಕಲಿಯುವಿಕೆಗೆ ಬಂದವರು ಎಂದು ತಿಳಿದುಕೊಂಡು 'ಪಂಡಿತರಾಗಲು ಬಂದಿದ್ದೀರಾ..?' ಎಂದು ಕೇಳುವ ಮುಗ್ಧತೆಯಿಂದ.. ಅಲ್ಲಿನ ಊರಿನಲ್ಲಿ ಕೆಲವು ಮನೆಗಳಲ್ಲಿ ವಿದ್ಯುತ್ ಇನ್ನೂ ಕಾಲಿಟ್ಟಿರದೆ, ಸಂಜೆಗೆ ಊಟ ಮುಗಿಸುವ ಪರಿಸ್ಥಿತಿಯನ್ನೂ ತೋರಿಸುತ್ತಾರೆ.


ಓಡಾಟಕ್ಕೆ ಅಲ್ಲೇ ಪಿಟ್ಟಿಯ ಗ್ಯಾರೇಜಿನಲ್ಲಿ ಮುಂಭಾಗ ಕೊಂಚ ನುಜುಗುಜ್ಜಾಗಿದ್ದ ಸ್ಕೂಟರ್ ಸಿಗುತ್ತದೆ. ಅಲ್ಲಿಂದ ಶುರುವಾಗುತ್ತದೆ ಮೊರೋಣಿ ಹಾಗೂ ಆತನ ಅಣ್ಣ ಮಾಣಿಗನ ಜೊತೆಗಿನ ಒಡನಾಟ. 


ಪಿಲಿಪಂಜರ ತೋಕೆ ಎಂದರೆ... ಅಜ್ಜನ ಕಾಲದಲ್ಲಿ ಹುಲಿ ಹಿಡಿಯಲು ಮಾಡಿದ ಕಲ್ಲಿನ ಗೂಡಿನಿಂದ ಶುರುವಾಗುವ ಅವರ ಜೊತೆಯ ಪ್ರಯಾಣ, ನಂತರ ಹಲವಾರು ಸಸ್ಯಗಳನ್ನು ಸಂಗ್ರಹ ಮಾಡುವಲ್ಲಿ ಓಡಾಡುತ್ತಾ, ಅವುಗಳ ಹೆಸರನ್ನು ಹೇಳುತ್ತಿದ್ದ ಮೊರೋಣಿಯನ್ನು ಹೆಚ್ಚು ನಂಬದ ನಾಯಕ.. ಮಾಣಿಗನನ್ನು ಒಮ್ಮೆ ಕೇಳಿ ತನ್ನ ಅನುಮಾನವನ್ನು ಬಗೆಹರಿಸಿಕೊಳ್ಳುತ್ತಾನೆ. ಆದರೆ, ಮಾಣಿಗನಿಗೂ ಸಸ್ಯಗಳ ಕುರಿತ ಜ್ಞಾನ ಚೆನ್ನಾಗಿಯೇ ಇತ್ತು. ತನ್ನ ಡಾಕ್ಟರೇಟ್ ಅಧ್ಯಯನಕ್ಕೆ ಬೇಕಾಗಿರುವ ಸೊಪ್ಪುಗಳನ್ನು ಸಂಗ್ರಹಿಸಿ, ಒಣಗಿಸಿ ಬೆಂಗಳೂರಿಗೆ ಕಳಿಸಬೇಕಾಗಿತ್ತು. ಅದಕ್ಕೆ ಸಹಾಯವಾಗಿ ಸಿಕ್ಕಿದವನೇ ಮಾಣಿಗ. 


ಮಾಣಿಗನಂತೂ ಅವನ ಬಹುಮುಖ ಪ್ರತಿಭೆಯಿಂದ ಮುಂದೆ ಪ್ರತಿ ಬಾರಿಯೂ ಕೇವಲ ನಾಯಕನನ್ನಷ್ಟೇ ಅಲ್ಲದೆ ನಮ್ಮನ್ನೂ ಸೆಳೆಯುತ್ತಾ ಹೋಗುತ್ತಾನೆ. ಹಳ್ಳಿಯಲ್ಲಿರುವ ಇಂತಹಾ ಬಹುಮುಖ ಪ್ರತಿಭೆಗಳು ಎಷ್ಟೋ ಬಾರಿ ದೊಡ್ಡವರು ಹಾಗೂ ತಮ್ಮ ನಡುವೆ ಇರುವ ಅಂತರದಿಂದ ಕೊಂಚ ದೂರವೇ ಉಳಿಯುತ್ತಾರೆ. 


ಬೇಟೆಗೆ ಹೋಗುವ ಅನುಭವಗಳು, ಮೀನು ಹಿಡಿಯುವ ಅನುಭವ, ನಾಯಕನಿಗೆ ಮುಳ್ಳು ತಾಗಿದಾಗ ಅದಕ್ಕೆ ಅಲ್ಲೇ ಇದ್ದ ಸೊಪ್ಪಿನಿಂದ ರಸ ತೆಗೆದು ಮಾಡುವ ಚಿಕಿತ್ಸೆ, ಚೇಳು ಕಚ್ಚಿದ ಜಾಗಕ್ಕೆ ಮಾಡುವ ಚಿಕಿತ್ಸೆ ಇವೆಲ್ಲದರಿಂದ ಮತ್ತಷ್ಟು ಹತ್ತಿರವಾಗತ್ತಾ ಹೋಗುತ್ತಾನೆ. 


ಹಕ್ಕಿಗಳ ಗೂಡು, ಅವುಗಳ ಬೇಟೆ, ಕಾಗೆಗಳ ಉಪದ್ರವ, ಹೆಜ್ಜೇನಿನ ಸವಿ, ಎಳನೀರು, ಉರುಳು ಹಾಕುವುದು, ಮೀನು ಹಿಡಿಯುವುದು, ಪ್ರಾಣಿಗಳ ಉಪಟಳ ತಡೆಯುವುದರ ಜೊತೆಗೆ ಬೇಟೆಗೂ ದಾರಿ ಮಾಡಿಕೊಳ್ಳುತ್ತಾ ಪರಿಸರದ ಜೊತೆಗೆ ಬದುಕುತ್ತಿರುವ ಅವರ ಕೆಲವು ಕ್ರಮಗಳಿಂದ ಪ್ರಾಣಿಗಳಿಗೆ ಉಂಟಾಗಬಹುದಾದ ಹಾಗೂ ಆರೋಗ್ಯದ ಮೇಲು ಉಂಟಾದ ಅಡ್ಡ ಪರಿಣಾಮಗಳನ್ನು ಹೇಳುತ್ತಾ ಹೋಗುತ್ತಾರೆ. ಆದರೆ, ಮೊದಲಿನಿಂದ ರೂಢಿಸಿಕೊಂಡು ಬಂದ ಅಭ್ಯಾಸ, ಹವ್ಯಾಸಗಳನ್ನು ತೊರೆಯುವುದು ಅಷ್ಟು ಸುಲಭವಾ..??


ಯಾರದ್ದೋ ಮನೆಯಲ್ಲಿ ಹಾವು ಹಿಡಿಯಲು ಕರೆದಾಗ ಅಲ್ಲಿ ಹೋಗಿ ಹಾವು ಹಿಡಿದು ದೂರಕ್ಕೆ ಬಿಟ್ಟರೂ.. ಆ ಮನೆಯವರು ಅದನ್ನು ಒಂದು ಉಪಕಾರವೆಂದು ಸ್ಮರಿಸದೆ ಇರುವುದು, ಜಾತಿಯಲ್ಲಿ ಕೆಳಗಿದ್ದವರು ಎಂಬ ಕಾರಣಕ್ಕಾಗಿ ಬೇರೆ ಮನೆಗಳಲ್ಲಿ ಮೊರೋಣಿ ಹಾಗೂ ಮಾಣಿಗನಿಗೆ ಸಿಗುವ ಉಪಚಾ,ರ ಗರ್ಭಿಣಿಯ ಸೀಮಂತದಲ್ಲಿ ದೃಷ್ಟಿ ತೆಗೆಯಲು ಮಾಣಿಗ ಹಾಗೂ ಆತನ ಪತ್ನಿ ಪಿಂಪೀರಿಯನ್ನು  ಬಳಸಿಕೊಳ್ಳುವ ಪರಿ, ಕಂಬಳದ ಓಟಕ್ಕೆ ಇವರ ಸಹಕಾರ, ದೈವ ದರ್ಶನ, ಕೋಲಕ್ಕೆ.. ಹೀಗೆ ಊರಿನವರೆಲ್ಲರಿಗೂ ಉಪಕಾರ ಮಾಡುತ್ತಲೇ.. ಅಂತಹಾ ದೊಡ್ಡ ಉಪಕಾರವನ್ನು ತಾವೇನೂ ಮಾಡಿಲ್ಲವೆನ್ನುತ್ತಾ ದೂರ ನಿಲ್ಲುವ ಪರಿ, ಅಂತರ ಕಾಯ್ದುಕೊಳ್ಳುವ ಪರಿಯನ್ನು ಬೇರಾರು ಸ್ಮರಿಸದಿದ್ದರೂ.. ಇಂತಹಾ ಹೀರೋಗಳ ಕುರಿತು ನಾಯಕನ ದೃಷ್ಟಿಕೋನವನ್ನು ಕಂಡು ಹೆಮ್ಮೆಯಾಗುತ್ತದೆ.


ನಾಟಿ ವೈದ್ಯದ ಚಿಕಿತ್ಸೆಯನ್ನು ಮಾಡಿದರೂ ಅದನ್ನ ಗುಟ್ಟು ಬಿಟ್ಟುಕೊಡಲು ಒಪ್ಪದಿದ್ದ ಮಾಣಿಗ ನಶೆ ಏರಿದಾಗಲಾದರೂ ಹೇಳುತ್ತಾನೇನೋ ಎಂದುಕೊಂಡರೆ ಗುಟ್ಟು ಬಿಟ್ಟು ಕೊಡದೆ, ಅದನ್ನು ಜತನದಿಂದ ಕಾಯ್ದುಕೊಂಡ ಪರಿ.. ಆತನ ಪ್ರತಿಭೆಗೆ ಹಾಗೂ ಎಚ್ಚರದ ಸ್ಥಿತಿಗೆ ಹಿಡಿಯುವ ಕೈಗನ್ನಡಿಯಾಗುತ್ತದೆ.


ಗಂಧದ ತುಂಡು ಕೊಯ್ದು ಮಾರುವ ಪ್ರಸಂಗ ಹಾಗೂ ಹಾವಿನ ಚರ್ಮವನ್ನು ಮಾರಾಟ ಮಾಡುವ ವ್ಯಕ್ತಿ, ದೈವದ ಕಲ್ಲು ನಾಪತ್ತೆಯಾದಾಗ ಇಂತಹಾ ಪ್ರಸಂಗಗಳಲ್ಲಿ ತಿಪ್ಪೇಸ್ವಾಮಿ 'ಟೈಗರ್ ಜಯಕರ'ನಾಗಿ ನಮ್ಮನ್ನು ಎದುರುಗೊಳ್ಳುತ್ತಾನೆ.


ಹಳ್ಳಿಯಲ್ಲಿ ತನಗೆ ಅಷ್ಟೊಂದು ಸಹಕಾರ ನೀಡಿದವರಿಗೆ ಇದ್ದ ಆಸೆ ಎಂದರೆ.. ಬೆಂಗಳೂರು ನೋಡುವುದು. ಅದನ್ನು ಮುಂದೆಂದಾದರೂ ಈಡೇರಿಸುತ್ತೇನೆಂದುಕೊಳ್ಳುತ್ತಾರೆ. ಮತ್ತೊಂದು ಆಸೆಯೆಂದರೆ.. ಮಾಣಿಗನಿಗೆ ಇಷ್ಟವಾದ ಚಿನ್ನದ ಜರಿ ಹೊಂದಿರುವ ಬಿಳಿ ಪಂಚೆ, ಶರ್ಟು, ಶಲ್ಯವನ್ನು ಖರೀದಿಸಿ ಅಣ್ಣ-ತಮ್ಮಂದಿರಿಬ್ಬರಿಗೂ ಉಡುಗೊರೆಯಾಗಿ ನೀಡುವ ಸಂಧರ್ಭ ಆಪ್ತವಾಯಿತು.


"ಇಷ್ಟು ವರ್ಷಗಳ ಶ್ರಮಕ್ಕೆ ಸಿಕ್ಕಿದ್ದು ಒಂದು ಜುಜುಬಿ ಡಾಕ್ಟರೇಟ್. ನಾಲೇಜು ಬೇಕಿದ್ದಲ್ಲಿ ಮಾಣಿಗನ ಜೊತೆ ಕಾಡು ಅಲೆದಿದ್ದರೆ ಸಾಕು.. ಬದುಕಿನ ಪಿ.ಹೆಚ್.ಡಿ ಒಂದೇ ವರ್ಷಕ್ಕೆ ಸಿಗುತ್ತಿತ್ತು." ಎನ್ನುವ ಮಾತಿನಲ್ಲಿ ಎಷ್ಟೆಲ್ಲಾ ಅಡಗಿದೆ.


ಅಪ್ಪನಿಗೆ ಮಗನನ್ನು ಡಾಕ್ಟರೇಟ್ ಮಾಡಿಸಲೇಬೇಕೆಂದದ್ದು ಏಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತದೆ. ಮಾಣಿಗ ನೀಡಿದ ಕೊಳಲು ನೀಡುವ ಮುದ.. ಅದೇ ಕೊಳಲಿನಲ್ಲಿ ನುಡಿಸುವುದನ್ನು ಕಲಿತು ಮತ್ತೆ ಮಾಳದತ್ತ ಹೊರಟರೆ ಅಲ್ಲಿ ಕಂಡದ್ದೇನು..?? ಇದೆಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಈಗಲ್ ಲೈನ್ಸ್'.


ಕರಾವಳಿಯ ಪರಿಸರದವರು ನೀವಾಗಿದ್ದರಂತೆ.. ಈ ಕಾದಂಬರಿ ಮತ್ತಷ್ಟು ಹತ್ತಿರವಾಗುತ್ತದೆ. ಪರಿಸರಪ್ರಿಯರಾಗಿದ್ದರೆ ವಿಭಿನ್ನ ಓದು ಸಿಗುತ್ತದೆ. ಕಾದಂಬರಿಯಲ್ಲಿ ಹೆಚ್ಚಿನ ಸ್ವಾರಸ್ಯಕರ ಮಾಹಿತಿಗಳು ಹಾಗೂ ಅನುಭವಗಳು ದೊರೆಯುತ್ತಾ.. ಗೊತ್ತಿಲ್ಲದ ಎಷ್ಟೋ ಸಂಗತಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. 


ನಾನು ಹೇಳಿರುವುದಕ್ಕಿಂತ ಹೆಚ್ಚಿನ ಚೆಂದದ ಕಾದಂಬರಿಯ ಓದಂತೂ ನಿಮ್ಮದಾಗಲಿದೆ. ಕಾದಂಬರಿಯಲ್ಲಿ ಕಥಾಹಂದರಕ್ಕಿಂತ ಕೊಂಚ ಮಾಹಿತಿ ಹೆಚ್ಚಾಯಿತೇನೋ ಎನ್ನಿಸಿದರೂ ಇದು ಕಾದಂಬರಿಯ ಪಾಸಿಟಿವ್ ಪಾಯಿಂಟ್ ಕೂಡ ಆಗಬಹುದು ಎನ್ನಿಸಿತು. ಪರಿಸರದ ಸೋಜಿಗ ತೆರೆದುಕೊಳ್ಳಬಹುದಾದ ಪರಿ ಆವರಿಸುತ್ತದೆ. ಲೇಖಕರ ಸಾಹಿತ್ಯ ಕೃಷಿಗೆ ಶುಭವಾಗಲಿ. ಇನ್ನಷ್ಟು ಚೆಂದದ ಕೃತಿಗಳು ಓದುಗರ ಕೈ ಸೇರಲಿ ಎಂದು ಶುಭ ಹಾರೈಕೆ ನನ್ನದು.


~ವಿಭಾ ವಿಶ್ವನಾಥ್

ಅಪೂರ್ವ ಬಳುವಳಿ (ಪುಸ್ತಕ ಯಾನ - 165)


ಪುಸ್ತಕದ ಶೀರ್ಷಿಕೆ : ಅಪೂರ್ವ ಬಳುವಳಿ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2023


ತನಗೆ ಕೆಡುಕು ಮಾಡಿದವರಿಗೆ ಒಳ್ಳೆಯದನ್ನೇ ಬಯಸಿದವರಿಗೆ ಬದುಕಿನಲ್ಲಿ ಅಪೂರ್ವ ಬಳುವಳಿಯೇ ಸಿಗುತ್ತದೆ ಎಂಬ ಆಶಯ ಹೊತ್ತ ಚೆಂದದ ಕಾದಂಬರಿ ಹೆಚ್‍. ಜಿ. ರಾಧಾದೇವಿಯವರ 'ಅಪೂರ್ವ ಬಳುವಳಿ'. 


ಶಾರದಮ್ಮ ಹಾಗೂ ಶಾಮಣ್ಣನಿಗೆ ಮೂವರು ಹೆಣ್ಣುಮಕ್ಕಳು, ಶಾಂತ ಶರ್ಮಿಲಾ ಹಾಗೂ ಶಮಂತ. ಮನೆಯಲ್ಲಿ ಅಕ್ಕ-ತಂಗಿಯರ ಮಧ್ಯೆ ಜಗಳವಾದಾಗ ತಾಯಿ ಶಾರದಮ್ಮ ಯಾರ ಪರವನ್ನೂ ವಹಿಸುತ್ತಿರಲಿಲ್ಲ. ಶಾಂತಳಿಗೆ ಅಷ್ಟು ವಿದ್ಯೆ, ರೂಪು ಇರಲಿಲ್ಲ. ಹಾಗಾಗಿ, ಶರ್ಮಿಲಾ ಮೇಲೆ ಕೊಂಚ ಹೆಚ್ಚು ರೇಗುತಿದ್ದಳು ಹಾಗೂ ಜಗಳವಾಡುತ್ತಿದ್ದಳು. ಮೂವರಲ್ಲಿ ಚೆನ್ನಾಗಿ ಓದುತ್ತಿದ್ದದ್ದು ಶರ್ಮಿಲಾ. 


ಗೆಳತಿ ತಾರಾಳ ಮಾವನ ದೆಸೆಯಿಂದ ಆಕೆಗೆ 'ಶಾರದಾ ವಿದ್ಯಾ ಸಂಸ್ಥೆ'ಯ ಮಿಡಲ್ ಸ್ಕೂಲ್ ನಲ್ಲಿ ಶಿಕ್ಷಕಿಯ ಕೆಲಸ ಸಿಕ್ಕಿತ್ತು. ಶಿಕ್ಷಕಿಯ ಕೆಲಸ ದೊರೆತ ತಕ್ಷಣ ಆ ಮನೆಯಿಂದ ಹೊರಟು ಸೇರಿದ್ದು ಅಮ್ಮನ ತಂಗಿ ಸಾವಿತ್ರಮ್ಮ ಹಾಗೂ ಆಕೆಯ ಗಂಡ ಸೋಮಪ್ಪನ ಮನೆಗೆ. ಶರ್ಮಿಲಾಳಿಗೆ ಕೆಲಸ ಸಿಕ್ಕಿದ್ದ ಆ ಶಾಲೆಯಲ್ಲಿಯೇ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಇವರಿಗೂ ಮೂವರು ಹೆಣ್ಣುಮಕ್ಕಳು. ಆದರೆ, ಅವರ್ಯಾರೂ ಶರ್ಮಿಲಾಳಷ್ಟು ರೂಪವಂತೆಯರೂ ಅಲ್ಲ.. ವಿದ್ಯಾವಂತೆಯರೂ ಅಲ್ಲ. 


'ಬೆಂಕಿಯಿಂದ ಹಾರಿ ಬಾಣಲೆಗೆ ಬಿದ್ದಂತೆ' ಆಗಿತ್ತು ಅವಳ ಸ್ಥಿತಿ. ಮೊದಮೊದಲಿಗೆ ಚಿಕ್ಕಮ್ಮ ಚೆನ್ನಾಗಿಯೇ ನೋಡಿಕೊಂಡರೂ ತಾರತಮ್ಯವಂತೂ ಬಹಳವಿತ್ತು. ಅಲ್ಲದೆ, ಅವರ ಮನೆಯ ಆಗಾಗ ಹೆಚ್ಚಿನ ಹಣ ವಸೂಲಿ ಮಾಡಿಕೊಂಡು.. ಈಕೆಗೆ ಬರುತ್ತಿದ್ದ ಟ್ಯೂಷನ್ ಮಕ್ಕಳಿಗೆ ತಮ್ಮ ಮಕ್ಕಳೂ ಟ್ಯೂಷನ್ ಮಾಡುತ್ತಾರೆಂದು ಹೇಳಿ ಕಳಪೆಯಾಗಿ ಹೇಳಿಕೊಟ್ಟಿದ್ದರಿಂದ ಮಕ್ಕಳೂ ತಪ್ಪಿಹೋಗಿದ್ದರು. ಅರೆಹೊಟ್ಟೆ ಊಟ, ಅರ್ಧ ನೆಮ್ಮದಿಯಿಂದ ಇದ್ದವಳಿಗೆ ಬೇರೆಲ್ಲೂ ಉಳಿಯಲು ಸಾಧ್ಯವಾಗದೆ, ಅಲ್ಲೇ ಇರುವ ಅನಿವಾರ್ಯತೆಯಿತ್ತು. ಅತ್ತೆಯ ಮನೆ ಎಂದರೆ ತಂದೆಯ ತಂಗಿಯ ಮನೆಯೂ ಅದೇ ಊರಿನಲ್ಲಿದ್ದರೂ.. ಅವರ ಸಿರಿವಂತಿಕೆ ಹಾಗೂ ಅವರ ಮನೆಯಲ್ಲಿದ್ದ ಮೂರು ಗಂಡುಮಕ್ಕಳ ಕಾರಣ ಇವಳನ್ನು ಮನೆಯಲ್ಲಿಟ್ಟುಕೊಳ್ಳಲು ಒಪ್ಪಿರಲಿಲ್ಲ. 


10 ತಿಂಗಳ ನಂತರ ಪಕ್ಕದ ಮನೆ ಪದ್ದಮ್ಮನ ದೆಸೆಯಿಂದ ಅಲ್ಲಿಂದ ಬಿಡುಗಡೆ ಸಿಕ್ಕಿತ್ತು. ತನ್ನ ವಿದ್ಯಾರ್ಥಿನಿಯಾದ ಚಂದ್ರಮಣಿಯ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದಳು. ಆ ದಂಪತಿಗಳ ಹೆಸರು ಸಹಾ ಶಾರದಮ್ಮ ಹಾಗೂ ಶಾಮಣ್ಣ. ಆದರೆ, ಸಾವಿತ್ರಮ್ಮ ಅಲ್ಲಿಗೂ ಬಂದು ಗಲಾಟೆ ಮಾಡಿದ್ದರಿಂದ ಒಂದು ತಿಂಗಳ ನಂತರ ಮನೆ ಖಾಲಿ ಮಾಡಬೇಕೆಂದರು. 


ಪ್ರಿನ್ಸಿಪಾಲ್ ಮೇಡಂ ಬಳಿ ಮೊದಲೇ ಹೋಗಿ ಆಕೆಗೆ ತನ್ನ ಕಷ್ಟವನಲ್ಲ ಹೇಳಿಕೊಂಡು.. ಸೋಮಪ್ಪ ಚಾಡಿ ಹೇಳಿ ತನ್ನ ಕೆಲಸವನ್ನು ಕಳೆಯಬಹುದು. ಆದರೆ, ಅದಕ್ಕೆ ಅವಕಾಶ ಕೊಡಬಾರದೆಂದೂ ಪ್ರಾರ್ಥಿಸಿದ್ದಳು. ಅದೆಲ್ಲವನ್ನೂ ಕೇಳಿದವರು ಸದ್ಯಕ್ಕೆ ಒಪ್ಪಿದ್ದರು. ತಮ್ಮ ದತ್ತು ಪುತ್ರನಂತಿದ್ದ ರಾಬರ್ಟ್ ನನ್ನು ವಿವಾಹವಾಗಲು ಸೂಚಿಸಿದರು. ಆದರೆ, ಅಂತರ್ಜಾತೀಯ ವಿವಾಹದಲ್ಲಿ ಅವಳಿಗೆ ಆಸಕ್ತಿ ಇರಲಿಲ್ಲ.  


ಎದುರು ಮನೆ ಇಂದಿರಮ್ಮ ತಮ್ಮ ಮಗ ವಿಶ್ವನಾಥನಿಗೆ ತಂದುಕೊಳ್ಳಲು ಯೋಚಿಸಿದಾಗ.. ಚಿಕ್ಕಮ್ಮ ಶಾಂತಾ ಜೊತೆ ಸೇರಿ ಬೇರೆ ರೀತಿಯ ಪತ್ರ ಬರೆದು ಚಾರಿತ್ರ್ಯಹರಣ ಮಾಡಿ ಅದನ್ನು ತಪ್ಪಿಸಿದ್ದಳು. ಇಂದಿರಮ್ಮನ ಮಗಳು ಹಾಗೂ ಶರ್ಮಿಲಾಳ ವಿದ್ಯಾರ್ಥಿನಿಯಾಗಿದ್ದ ಪದ್ಮಿನಿ ಹೇಳಿದಾಗಲೇ ಅವಳಿಗೆ ಅದರ ಅರಿವಾಗಿದ್ದು.


ಚಂದ್ರಮಣಿಯ ಅಕ್ಕ ಕಾಂತಾಮಣಿಗೆ ಒಂದು ವರವನ್ನು ಸೂಚಿಸಿದ್ದರು ಪರಿಚಿತರು. ಆದರೆ, ಆತನನ್ನು ಮದುವೆಯಾದರೆ ಬೇರೆಯವರ ಮನೆಗೆ ಅಡುಗೆ ಕೆಲಸಕ್ಕೆ ಹೋಗಬೇಕಾಗಿಬರುತ್ತದೆಂದು ಆಕೆ ಅದನ್ನು ನಿರಾಕರಿಸಿದ್ದಳು. ತನ್ನ ಅಕ್ಕ ಶಾಂತಳಿಗೆ ಈ ವರ ಸರಿ ಹೋಗಬಹುದೆಂದು ಪ್ರಯತ್ನಿಸಿದಳು ಶರ್ಮಿಲಾ. ಲಾಯರ್ ಶ್ರೀನಿವಾಸ್ ರಾವ್ ಅವರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ರಾಜಮ್ಮ ಹಾಗೂ ಆಕೆಯ ಮಗ ರಂಗಣ್ಣನನ್ನು ವಿಚಾರಿಸಿದ್ದಳು. ತನಗೆ ಕೆಟ್ಟದ್ದನ್ನು ಬಯಸಿದ್ದ ಅಕ್ಕನಿಗೆ ತಾನೇ ಒಳ್ಳೆ ವರನನ್ನು ಗೊತ್ತು ಮಾಡಿ ಮದುವೆಯಾಗುವಂತೆ ಮಾಡಿದಳು. ತಂದೆ-ತಾಯಿಯನ್ನು, ತಂಗಿಯನ್ನೂ ಅಲ್ಲಿಗೆ ಕರೆಸಿಕೊಂಡು ರಂಗಣ್ಣನ ಜೊತೆಗೆ ಸೇರಿ ಹಾಸ್ಟೆಲ್ ನ ಅಡುಗೆ ಕೆಲಸವನ್ನು ನೋಡಿಕೊಳ್ಳುವಂತೆ ಜೀವನಕ್ಕೊಂದು ದಾರಿ ಮಾಡಿಕೊಟ್ಟಳು.


ಇತ್ತ ಸಾವಿತ್ರಮ್ಮ ಹಾಗೂ ಆಕೆಯ ಮಕ್ಕಳಾದ ಸುಧಾ, ಸುಜಾತ ಎಲ್ಲರೂ ಆಕೆ ತಿರುಗಿ ಬರುತ್ತಾಳೆಂದು ಕಾಯುತ್ತಿದ್ದರೆ, ತಂದೆ-ತಾಯಿಯ ಜೊತೆಗೆ ಶಾಂತವಾಗಿ ಜೀವನ ನಡೆಸುತ್ತಿದ್ದಳು ಶರ್ಮಿಲಾ.


ಇತ್ತ ಶಮಂತಳ ಜೀವನದಲ್ಲಿಯೂ ಪ್ರೇಮ ಪ್ರಕರಣ ನಡೆಯಿತು. ತರಕಾರಿ ತರಲು ತನ್ನ ಗೆಳೆಯನ ಮನೆಯನ್ನು ಶಮಂತಳಿಗೆ ಗೊತ್ತು ಮಾಡಿ ಕೊಟ್ಟಿದ್ದ ರಂಗಣ್ಣ. ಗೋವಿಂದ ಸಾಹುಕಾರರ ಮನೆಯ ತೋಟದ ಉಸ್ತುವಾರಿ ನೋಡಿಕೊಂಡು ತರಕಾರಿ ಮಾರುತ್ತಿದ್ದ. ಒಳ್ಳೆಯ ಕೆಲಸಗಾರನಾದರೂ.. ನೋಡಲು ಕಪ್ಪು. ತಕ್ಕಮಟ್ಟಿಗೆ ಸುಂದರಿಯಾದ ಶಮಂತ ಆತನ ಮನೆಗೆ ಹೋದಾಗ ಆತನ ತಾಯಿ ಬಕುಳಮ್ಮನ ಆತ್ಮೀಯಳಾದಳು. ಹಿಂದೆ 'ರತ್ನ' ಎಂಬ ಹುಡುಗಿಯೂ ಹೀಗಿಯೇ ಆತ್ಮೀಯವಾಗಿದ್ದರೂ.. ಬೇರೆಯವರನ್ನು ಮದುವೆಯಾಗಿದ್ದಳಾದ್ದರಿಂದ ಗೋವಿಂದ ಶಮಂತ ಕುರಿತು ತೀರಾ ಆಸೆಯಿಟ್ಟುಕೊಂಡಿರಲಿಲ್ಲ. ಆದರೆ, ಶಮಂತ ರೂಪಕ್ಕಿಂತ ಗುಣ ಮುಖ್ಯ ಎಂದು ಹೇಳಿ ಆತನನ್ನೇ ವಿವಾಹವಾಗಲು ನಿಶ್ಚಯಿಸಿದ್ದಳು. ಅವರ ವಿವಾಹವೂ ಆಯಿತು. 


ಶಮಂತಳ ವಿವಾಹವಾಗಿ ಹೋದ ಮೇಲೆ ಋಣಾನುಬಂಧದಿಂದ ಅವಳ ಕೆಲಸಕ್ಕೆ ಬಂದಿದ್ದು ಲಲಿತಮ್ಮ. ಗೋವಿಂದನ ತಂದೆಯೂ ಆಕೆಯ ತಂದೆಯು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು. ಆಕೆ ಸೋದರಮಾವನನ್ನೇ ಮದುವೆಯಾಗಿ ಬದುಕಿನಲ್ಲಿನ ಕಹಿಯಿಂದ ತಾಯಿಯ ಮನೆಯಲ್ಲಿಯೇ ಇದ್ದಳು. ತಮ್ಮ ವಿಜಯ್. ಆಕೆಗೆ ಸಿಕ್ಕ ಶಿಕ್ಷಕಿಯ ಹುದ್ದೆಗೆ ಅವನೂ ಹಂಬಲಿಸಿದ್ದ. ಆದರೆ, ಅದು ಸಿಕ್ಕಿರಲಿಲ್ಲ.


ಶರ್ಮಿಲಾ ಹೈಸ್ಕೂಲ್ ಟೀಚರ್ ಆಗಿ ಭಡ್ತಿ ಹೊಂದಿದಳು. ಒಂದು ದಿನ ಚಿಕ್ಕಮ್ಮ ತಾನೇ ಖುದ್ದಾಗಿ ಬಂದು ಹೈಸ್ಕೂಲ್ ಮಾಸ್ಟರ್ ವರನೊಬ್ಬನನ್ನು ಸೂಚಿಸಿದ್ದರು. ಶರ್ಮಿಲಾ ತೀರಾ ಆಸಕ್ತಿ ತೋರಿಸದಿದ್ದರೂ.. ಅರವಿಂದ್ ತಾನಾಗಿಯೇ ಬಂದು ಪರಿಚಯಿಸಿಕೊಂಡು ಆಕೆಯ ಕುರಿತು ಆಸಕ್ತಿ ತೋರಿದ್ದ.


ಇತ್ತ ಪ್ರಿನ್ಸಿಪಾಲ್ ಮೇಡಂ ತನ್ನ ದತ್ತುಪುತ್ರನಂತಿದ್ದ ವೈಸ್ ಪ್ರಿನ್ಸಿಪಲ್ ಮೋಹನ್ ರಾವ್ ನನ್ನು ಮದುವೆಯಾಗಲು ಪರೋಕ್ಷವಾಗಿ ಒತ್ತಡ ಹೇರುತ್ತಿದ್ದರು. ಹಾಗಾಗದಿದ್ದರೆ ಆಕೆಯನ್ನು ಕೆಲಸದಿಂದ ತೆಗೆದು, ತಂದೆ-ತಾಯಿಗೆ ಕೊಟ್ಟ ಕೆಲಸವನ್ನೂ ಕಿತ್ತುಕೊಳ್ಳಲು ನೋಡುತ್ತಿದ್ದರು.


ಶರ್ಮಿಲಾ ಈ ಉಭಯ ಸಂಕಟದಿಂದ ಪಾರಾದದ್ದು ಹೇಗೆ..?? ಚಿಕ್ಕಮ್ಮ ತಾನಾಗಿಯೇ ತೋರಿಸಿದ ವರ ಅರವಿಂದ್ ಸ್ವಭಾವ ಹೇಗಿತ್ತು..?? ಚಿಕ್ಕಮ್ಮ ಸಾವಿತ್ರಮ್ಮ ಬದಲಾಗಿದ್ದಳೇ..?? ಶರ್ಮಿಲಾ ಬದುಕಿನಲ್ಲಿ ಅಪೂರ್ವ ಬಳುವಳಿ ದೊರೆತದ್ದು ಹೇಗೆ..?? ಶಾಂತ ಹಾಗೂ ಶಮಂತರ ಬದುಕು ಶರ್ಮಿಲಾ ಮೇಲೆ ಪ್ರಭಾವವೇನಾದರೂ ಬೀರಿತೇ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಅಪೂರ್ವ ಬಳುವಳಿ' ಕಾದಂಬರಿಯನ್ನು. 


ಸಾವಿತ್ರಮ್ಮ ಹಾಗೂ ಸೋಮಪ್ಪನಂತೆ ತಮ್ಮ ಸಂಬಂಧಿಕರ ಮಕ್ಕಳನ್ನು ಕೀಳಾಗಿ ಕಾಣುತ್ತಾ.. ತಮಗೆ ಮಾತ್ರ ಒಳ್ಳೆಯದಾಗುವಂತೆ ನೋಡಿಕೊಳ್ಳುತ್ತಾ.. ಅವರಿಗೆ ಕೆಟ್ಟದ್ದನ್ನು ಮಾಡಲು ಹೊರಟವರ ಮಕ್ಕಳ ಬದುಕು ಏನಾಗುತ್ತದೆ ಎಂಬುದರ ನಿದರ್ಶನ ಇಲ್ಲಿದೆ. 


ಪ್ರಿನ್ಸಿಪಾಲ್ ಮೇಡಂ ನಂತಹಾ ಗೋಮುಖ ವ್ಯಾಘ್ರದಂತಹವರ ಚಿತ್ರಣವೂ ಸಿಗುತ್ತದೆ. ಶಿಕ್ಷಕಿಯೊಬ್ಬಳು ಹೀಗೂ ಇರುತ್ತಾಳಾ ಎಂದೆನಿಸುತ್ತದೆ. ಇಲ್ಲಿನ ಬೋರ್ಡಿಂಗ್ ನಲ್ಲಿ ಬೆಳೆಯುವ ದತ್ತು ಮಕ್ಕಳ ಸ್ಥಿತಿಯನ್ನು ಕೂಡ ತೆರೆದಿಟ್ಟಿದ್ದಾರೆ ಲೇಖಕಿ. 


ಕೆಟ್ಟದ್ದನ್ನು ಬಯಸಿದವರಿಗೆ ಅವರ ಕರ್ಮಫಲ ದೊರೆತು.. ಒಳ್ಳೆಯದನ್ನು ಬಯಸಿದವರಿಗೆ ಒಳಿತೇ ಆಗುವ ಸಂದೇಶ ನೀಡುವ ಚಿಕ್ಕ-ಚೊಕ್ಕ ಕಾದಂಬರಿ ಇಷ್ಟವಾಯಿತು.


~ವಿಭಾ ವಿಶ್ವನಾಥ್

ಪದರುಗಳು (ಪುಸ್ತಕ ಯಾನ - 164)


ಪುಸ್ತಕದ ಶೀರ್ಷಿಕೆ : ಪದರುಗಳು

ಲೇಖಕರು : ವಿವೇಕಾನಂದ ಕಾಮತ್ 

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2023

ಪುಟಗಳು : 144

ಬೆಲೆ : 150 ರೂ.


ಮನಸ್ಸಿನ ಪದರುಗಳು ಬಹಳ ಸೂಕ್ಷ್ಮವಾದಂತಹವು. ಅವುಗಳನ್ನು ಬಿಡಿಸಿಡಲು ಅಷ್ಟೇ ಸೂಕ್ಷ್ಮವಾದ ಬರವಣಿಗೆಯು ಬೇಕಾಗುತ್ತದೆ ಹಾಗೂ ಅರ್ಥ ಮಾಡಿಸುವ ರೀತಿಯೂ ನವಿರಾದ್ದಾಗ ಅದು ತಲುಪಿಸುವ ಪರಿಣಾಮವೇ ವಿಭಿನ್ನ. 


ಮನುಷ್ಯನ ಆರೋಗ್ಯವೆಂದಾಗ ಕೇವಲ ದೈಹಿಕ ಆರೋಗ್ಯ ಎಂದು ಭಾವಿಸಲು ಸಾಧ್ಯವಾಗದು. ಜೊತೆಗೆ, ಮಾನಸಿಕ ಆರೋಗ್ಯವೂ..  ಮನಸ್ಸಿಗೂ ಅನಾರೋಗ್ಯ ಕಾಡಿದಾಗ ಅದನ್ನೂ ಸೂಕ್ಷ್ಮವಾದ ಸ್ಥಿತಿ ಎಂದೇ ಪರಿಗಣಿಸಿ, ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದಾಗ ಮಾತ್ರವೇ ಮನುಷ್ಯ ಆರೋಗ್ಯವಂತನಾಗಿರಬಲ್ಲ. ಇಂದು ಹೆಚ್ಚಿನವರು ಖಿನ್ನತೆಯಿಂದಾಗಿ ಬಳಲುತ್ತಿದ್ದಾರೆ. ಅದರಲ್ಲೂ ಯುವ ಜನಾಂಗವೇ ಹೆಚ್ಚು. ಅದಕ್ಕೆ ಕಾರಣ ಓದಿನ ಕುರಿತಾದ ಒತ್ತಡ, ಕೆಲಸದ ಒತ್ತಡ ಕಾರಣವಾಗಿರಬಹುದು ಅಥವಾ ಕುಟುಂಬದಲ್ಲಿ ಅವರು ತೆರೆದುಕೊಳ್ಳುವ ರೀತಿ ಹಾಗೂ ಅವರಿಗೆ ಸಿಗುವ ಪ್ರೀತಿ ಎಲ್ಲದರ ಮೇಲೂ ಇದು ಅವಲಂಬಿತವಾಗಿರುತ್ತದೆ. ಓದು/ ಕೆಲಸದ ಒತ್ತಡ ಹಾಗೂ ಮನೆಯಲ್ಲಿನ ಒತ್ತಡ ಎರಡೂ ಸೇರಿದರೆ ಮನುಷ್ಯನ ಸ್ಥಿತಿ ನಿಜಕ್ಕೂ ಗಂಭೀರ ಹಾಗೂ ಆತಂಕಕಾರಿ. 


ಮನಸ್ಸಿನ ಮಾತುಗಳನ್ನು ಮುಕ್ತವಾಗಿ ಹೊರ ಹಾಕುವವರಲ್ಲಿ ಹೆಚ್ಚಿನವರು ಹೆಂಗಸರು ಅಥವಾ ಗಂಡಸರು ಎಂದು ಹೇಳಲಾಗದು. ಬದಲಾಗಿ, ಸಮರ್ಥ ವ್ಯಕ್ತಿ, ಸರಿಯಾದ ವಾತಾವರಣ ಸಿಕ್ಕರೆ ಮಾತ್ರವೇ ಗಂಡಾಗಲಿ.. ಹೆಣ್ಣಾಗಲಿ.. ತಮ್ಮ ಮನಸ್ಸನ್ನು ತೆರೆದುಕೊಳ್ಳಬಲ್ಲರು. ಇಲ್ಲವಾದಲ್ಲಿ ಅದು ಅಸಾಧ್ಯ. ತೀರಾ ಹತ್ತಿರದವರಿಗೂ ಹೇಳಿಕೊಳ್ಳಲಾಗದ ಸತ್ಯಗಳು ಬಹಳಷ್ಟಿರಬಹುದು. ಅಂತಹಾ ಸತ್ಯಗಳು ಮನಸ್ಸಿನ ಮೂಲೆಯಲ್ಲಿ ಕುಳಿತು ಆ ವ್ಯಕ್ತಿಯನ್ನು ಭವಿಷ್ಯದಲ್ಲಿ ಯಾವುದೋ ಬಗೆಯಲ್ಲಿ ಹೆದರಿಸಬಹುದು. ಭವಿಷ್ಯದಲ್ಲಿ ದೈತ್ಯಾಕಾರವಾಗಿ ಬೆಳೆಯುವ ಸಮಸ್ಯೆಗೆ ಇಂದಿನ ಯಾವುದೋ ಚಿಕ್ಕ ಘಟನೆಯೂ ಕಾರಣವಾಗಿರಬಹುದು. ಮನಸ್ಸನ್ನು ಹಾಗೂ ಮಾನಸಿಕ ಆರೋಗ್ಯವನ್ನು ಬಹಳ ವಿಸ್ತಾರವಾದ ನೆಲೆಗಟ್ಟಿನಲ್ಲಿ ನೋಡಿದರೂ ಕಾಣದ್ದೇ ಹೆಚ್ಚಿರಬಹುದು. ಆದರೂ ಮನಸ್ಸಿನ ಮೂಲೆಯಲ್ಲೆಲ್ಲೋ.. ಕೆಲವು ಪರಿಣಾಮಕಾರಿ ವಿಚಾರಗಳು ಉಳಿದು ಹೋಗಿರಬಹುದು. ಇಂತಹಾ ಮಾನಸಿಕ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿರುವ ಮನೋವೈಜ್ಞಾನಿಕ ಕಾದಂಬರಿ 'ಪದರುಗಳು'.


ಮಗಳು ಪ್ರತಿ ಬಾರಿ ಬಂದಾಗಲೂ.. ಇದುವರೆಗೂ ಒಂದೇ ಒಂದು ಬಾರಿಯೂ ತಮ್ಮ ಸಂಸಾರದಲ್ಲಿ ಅಪಸ್ವರವಿದೆ ಎಂಬ ಮಾತನ್ನಾಡಿರುವುದನ್ನು ಆಕೆಯ ತಂದೆ-ತಾಯಿ ಕೇಳಿರಲಿಲ್ಲ. ನಿವೇದಿತಾ ಎಂದಿಗೂ ತನ್ನ ಗಂಡನ ಕುರಿತು ಒಂದೇ ಒಂದು ಕಹಿಯನ್ನೂ ಉಳಿಸಿಕೊಂಡಂತಿರಲಿಲ್ಲ. ಆದರೆ, ಆಕೆಯ ಗಂಡ ಪ್ರದೀಪನ ನಡೆ ನಿವೇದಿತಾಳ ತಂದೆ-ತಾಯಿ ಕೇಶವ ಹಾಗೂ ವೀಣಾರನ್ನು ಆತಂಕಕ್ಕೆ ದೂಡಿತ್ತು.


ಪ್ರದೀಪನ ವರ್ತನೆ ಬದಲಾಗಿತ್ತು. ಆತ ತನ್ನ ಮಗಳು ನಿಧಿಯನ್ನು ಬಹಳ ಜೋಪಾನ ಮಾಡುತ್ತಿದ್ದ. ನಿವೇದಿತಾ ತನ್ನ ಮಗು ನಿಧಿಯನ್ನು ಕೊಲ್ಲಲು ನೋಡಿದಳು ಎಂಬ ಆಘಾತಕಾರಿ ಸತ್ಯವನ್ನು ಆಕೆಯ ತಂದೆ-ತಾಯಿಯ ಎದುರಿಗಿಟ್ಟಾಗ ಅವರು ಮೊದಲಿಗೆ ಅನುಮಾನಿಸಿದ್ದು ಅಳಿಯನನ್ನೇ.. ಎಂದಿಗಾದರೂ ತಾಯಿ ತನ್ನ ಮಗುವನ್ನು ತಾನೇ ಕೊಲ್ಲಲು ಸಾಧ್ಯವೇ..??


ಆಕೆಗೆ ಗಂಡು ಮಗು ಇಷ್ಟವಿದ್ದಿರಬೇಕು ಇಲ್ಲವೇ ಮಗುವೇ ಇಷ್ಟವಿರಲಿಲ್ಲವೇನೋ... ಎಂಬ ಅಳಿಯನ ತರ್ಕ ಅರ್ಥವಿಲ್ಲದ್ದು ಎಂದರು ಆ ದಂಪತಿಗಳು. ತಬ್ಬಲಿಯಾಗಿದ್ದ ಪ್ರದೀಪ ಇಷ್ಟಪಟ್ಟು ನಿವೇದಿತಾಳನ್ನು ಮದುವೆಯಾಗಿದ್ದ. ಅವರಿಬ್ಬರ ಆಸೆಯಂತೆಯೇ ಹೆಣ್ಣು ಮಗಳೇ ಹುಟ್ಟಿದ್ದಳು. ಅದಕ್ಕೆ ನಿಧಿ ಎಂದು ಹೆಸರಿಟ್ಟಿದ್ದರು. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಎನ್ನುವಷ್ಟರಲ್ಲಿ ಈ ಆಘಾತ ಕಾದಿತ್ತು. ಆದರೆ, ವೀಣಾ ಹಾಗೂ ಕೇಶವರು ನಿಧಿ, ನಿವೇದಿತಾಳನ್ನು ಕೆಲ ದಿನಗಳ ಕಾಲ ತಮ್ಮ ಮನೆಗೆ ಕರೆತಂದರು. ಮಗಳಿಗೆ ಅಳಿಯನ ಮನಸ್ಸಿನ ಮಾತುಗಳನ್ನು ಹೇಳಲಿಲ್ಲ. 


ಪ್ರದೀಪನ ಕುರಿತು ಈಗ ನಿವೇದಿತಾ ಕೂಡ ತಕರಾರು ತೆಗೆದಿದ್ದಳು. ಆತನ ಆಫೀಸಿನಲ್ಲಿದ್ದ ಅಂಕಿತಾಳ ಮೇಲೆ ಆಕೆಗೆ ಅನುಮಾನವಿತ್ತು. ಅಲ್ಲದೆ, ಆತನ ಬಿಸಿನೆಸ್ ನಲ್ಲಿಯೂ ನಷ್ಟವಾಗಿರಬಹುದು ಎನ್ನುವ ಸಂದೇಹವನ್ನು ಮುಂದಿಟ್ಟಿದ್ದಳು.


ಪಕ್ಕದ ಮನೆಯ ದಿವಾಕರ ಬಂದು ಮಗುವನ್ನು ಎತ್ತಿಕೊಂಡಾಗಲೂ ನಿವೇದಿತಾ ಸಹಿಸಲಿಲ್ಲ. ವೀಣಾರ ದೊಡ್ಡಪ್ಪನ ಮಗ ಅರವಿಂದ ಅವರ ಪತ್ನಿ ಜಯಲಕ್ಷ್ಮಿ ಹಾಗೂ ವಿದೇಶದಲ್ಲಿ ನೆಲೆಸಿದ್ದ ನಿವೇದಿತಾಳ ವಯಸ್ಸಿನವಳೇ ಆದ ಅವರ ಮಗಳು ಕೃತಿಕಾ ಅವಳ ಮಕ್ಕಳ ಜೊತೆಗೆ ತನ್ನ ಮನೆಗೆ ಬಂದಾಗಲೂ ನಿವೇದಿತಾ ಅದನ್ನು ಸಹಿಸಲಿಲ್ಲ. ಅಂದು ಒಂದು ಆತಂಕಕಾರಿ ಘಟನೆಯೂ ನಡೆದಿತ್ತು. ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಮಗು ಬಟ್ಟೆಯ ಬುಟ್ಟಿಯೊಳಗೆ ಸಿಕ್ಕಿತ್ತು. ಅದರ ಮೇಲೆ ಬಟ್ಟೆಯನ್ನು ಹೇರಿದ್ದರಿಂದ ಮಗುವಿನ ಪ್ರಾಣಕ್ಕೆ ಕುತ್ತು ಬರುವಂತಹಾ ಸಂದರ್ಭ ಬಂದಿತ್ತು.


ಪ್ರದೀಪ ಆಕೆಯನ್ನು ಮನೆಗೆ ವಾಪಸ್ ಕರೆದುಕೊಂಡು ಹೋದರೂ ಸಿ.ಸಿ ಟಿವಿಯ ಕಣ್ಗಾವಲಿನಲ್ಲಿತ್ತಿದ್ದ. ಮನೆಗೆ ಪ್ರಭಾವತಿ ಎಂಬ ಸಹಾಯಕಿಯನ್ನೂ ಕರೆತಂದಿದ್ದ. ನಿವೇದಿತಾಳಿಗೆ ಇದು ಸುತಾರಾಂ ಇಷ್ಟವಿರಲಿಲ್ಲ.


ಇಷ್ಟವಿದ್ದೋ.. ಇಲ್ಲದೆಯೋ.. ಇಬ್ಬರ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಮನೋವೈದ್ಯರಾದ ಡಾಕ್ಟರ್ ರೂಪ ಅವರ ಬಳಿ ಬಂದಿದ್ದರು. 


ಈ ಕಾದಂಬರಿ ಕೇವಲ ಕೌಟುಂಬಿಕ ಸಮಸ್ಯೆ ಹಾಗೂ ಅದರ ಪರಿಹಾರದಂತೆ ಕಂಡು ಬರಲಿಲ್ಲ.. ಬದಲಾಗಿ ಮಾನಸಿಕ ಸಮಸ್ಯೆಗೆ ಉತ್ತರ ದೊರಕಿಸಿಕೊಳ್ಳಲು ಹೊರಟವರ ಮಾನಸಿಕ ತುಮಲಗಳು ಹಾಗೂ ಸಮಸ್ಯೆಯ ಮೂಲವನ್ನು ಪದರು ಪದರಾಗಿ ಬಿಡಿಸಿಟ್ಟಿರುವಂತಿದೆ. 


ಮೊದಲಿಗೆ ಇದು ಪ್ರಸವಾ ನಂತರದ ಖಿನ್ನತೆಯ ಕಾರಣವಾಗಿರಬಹುದು ಎಂಬ ಆಲೋಚನೆಯಲ್ಲಿ ಓದುತ್ತಾ ಹೋದೆ. ನಂತರ ಬೈ ಪೋಲಾರ್ ಡಿಸೀಸ್ ಇರಬಹುದಾ ಎನ್ನಿಸಿತು. ಆದರೆ, ಅದೆರಡಕ್ಕೂ ವಿಭಿನ್ನವಾದ ಮಾನಸಿಕ ಸಮಸ್ಯೆಯೊಂದರ ಅನಾವರಣ ಇಲ್ಲಿದೆ. 


ಬಹಳ ಅಧ್ಯಯನ ಹಾಗೂ ಮಾನಸಿಕ ತಜ್ಞರ ಮಾಹಿತಿಗಳನ್ನಾಧರಿಸಿ ರಚಿಸಿರುವ ಮನೋವೈಜ್ಞಾನಿಕ ಕಾದಂಬರಿ ಎಲ್ಲಿಯೂ ಗುಟ್ಟು ಬಿಟ್ಟುಕೊಡದೆ.. ಕೊನೆಯವರೆಗೂ ರೋಚಕವಾಗಿ ಓದಿಸಿಕೊಂಡು ಹೋಗುತ್ತದೆ. ಮನಸ್ಸಿಗೆ ಅಲ್ಲಿ ಬಚ್ಚಿಟ್ಟ ವಿಷಯ ಹೇಳಲು ಇಷ್ಟವಿಲ್ಲದಿರುವಾಗ ಸುಪ್ತಮನಸ್ಸು ಸಹಾ ಆ ಸತ್ಯವನ್ನು ಅಷ್ಟು ಸುಲಭವಾಗಿ ಹೊರಗೆಡವುವುದಿಲ್ಲ. ಅಂತಹದರಲ್ಲಿ ಇಷ್ಟು ಚಂದದ ಕಾದಂಬರಿಯ ಕಥಾಹಂದರವನ್ನು ನಾನು ಹೇಗೆ ಸಂಪೂರ್ಣ ಬಿಚ್ಚಿಡಲಿ..!


ನಿವೇದಿತಾ ಹಾಗೂ ಪ್ರದೀಪ್ ಸಮಸ್ಯೆಗೆ ಕಾರಣವೇನು..?? ಪ್ರದೀಪನ ತಪ್ಪಿತ್ತೇ ಅಥವಾ ಆತ ನಿವೇದಿತಾ ಕುರಿತು ತಪ್ಪಾಗಿ ತಿಳಿದಿದ್ದನೇ..?? ದಿವಾಕರ್  ಹಾಗೂ ಅನಂತ್ ಅವರ ಕುಟುಂಬದ ಜೊತೆಗೆ ನಿವೇದಿತಾ ಅನುಚಿತವಾಗಿ ನಡೆದುಕೊಂಡದ್ದೇಕೆ..??  ನಿಧಿಯ ಭವಿಷ್ಯ ಮುಂದೇನಾಯಿತು..?? ಸಮಸ್ಯೆಗೆ ತಕ್ಕ ಪರಿಹಾರ ಸಿಕ್ಕಿದ್ದು ಯಾರಿಂದ..?? ಎಲ್ಲದಕ್ಕೂ ಉತ್ತರ ತಿಳಿಯಲು ಈ ಕಾದಂಬರಿ ಓದಿ. 


ಕಾಲ ಬದಲಾದರೂ.. ಕೆಲವು ಸಮಸ್ಯೆಗಳು ಬದಲಾಗವೇನೋ.. ಸಮಸ್ಯೆಯ ಸ್ವರೂಪಗಳು ವಿಭಿನ್ನ. ಆ ರೀತಿಯ ವಿಭಿನ್ನ ಮಾನಸಿಕ ತುಮುಲಗಳಿಗೆ ಕೌಟುಂಬಿಕ ರೂಪ ನೀಡಿರುವ ಕಾದಂಬರಿ ಸುಲಲಿತವಾಗಿ ಹಾಗೂ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅರ್ಥಪೂರ್ಣವಾದ ಮುಖಪುಟ.. ಕಾದಂಬರಿ ಓದಿದ ನಂತರ ಮುಖಪುಟದ ಸ್ಪಷ್ಟ ಚಿತ್ರಣದ ಅರ್ಥವಾಗುತ್ತದೆ.  

~ವಿಭಾ ವಿಶ್ವನಾಥ್

ಸುವರ್ಣ ಸೇತುವೆ (ಪುಸ್ತಕ ಯಾನ - 163)


ಪುಸ್ತಕದ ಶೀರ್ಷಿಕೆ : ಸುವರ್ಣ ಸೇತುವೆ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು :ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 148

ಬೆಲೆ : 110 ರೂ.


1975 ರಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಲೇಖಕಿಯೊಬ್ಬರ ಹುಟ್ಟಿಗೆ ಕಾರಣವಾದ ಕಾದಂಬರಿಗೆ 'ಸುವರ್ಣ ಸೇತುವೆ'. ಎಚ್‍. ಜಿ. ರಾಧಾದೇವಿಯವರ ಹಾಗೂ ಓದುಗರ ನಡುವೆ ಬೆಸುಗೆಯಾದ ಸುವರ್ಣ ಸೇತುವೆಯೂ ಹೌದು ಎಂದರೆ ತಪ್ಪಾಗಲಾರದು. ಮೊದಲ ಅಭಿಮಾನಿಯ ಜೊತೆಗೆ ಶುರುವಾದ ಪತ್ರಮೈತ್ರಿ ಸ್ನೇಹವಾಗಿ, ಪ್ರೇಮವಾಗಿ, ವಿವಾಹದ ಮೂಲಕ ಜೊತೆಯಾದರು. ಆಗ ಪ್ರಜಾಮತ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗುತ್ತಿದ್ದ ಕಾದಂಬರಿ ವಿಷ್ಣುವರ್ಧನ್ ಹಾಗೂ ಆರತಿ ಅಭಿನಯದ ಚಲನಚಿತ್ರವೂ ಆಗಿ ಸಾಕಷ್ಟು ಜನಪ್ರಿಯವಾಗಿದೆ. ಎಂಟು ವಾರಗಳ ಧಾರಾವಾಹಿ ಪ್ರಕಟವಾಗುವಷ್ಟರಲ್ಲಿ ಸಿನಿಮಾ ನಿರ್ಮಾಪಕರು ಹುಡುಕಿಕೊಂಡು ಬಂದದ್ದು ಸಹಾ ವಿಶೇಷವೇ..


ಮಾಧ್ಯಮಿಕ ಶಾಲಾ ಅಧ್ಯಾಪಕಿಯಾಗಿದ್ದ ಸರೋಜಿನಿ ಹಾಗೂ ರಾಜಗೋಪಾಲರ ಮೊದಲ ಭೇಟಿ ಅಷ್ಟೇನೂ ಆತ್ಮೀಯವಾಗಿರಲಿಲ್ಲ, ಹಾರ್ದಿಕವೂ ಆಗಿರಲಿಲ್ಲ. ಆ ಊರಿನಲ್ಲಿಯೇ ಶ್ರೀಮಂತರಾಗಿದ್ದ.. ನಾಲ್ಕು ಊದುಬತ್ತಿ ಕಾರ್ಖಾನೆಗಳು ಇದ್ದ ಜಯರಾಯರ ಮಗನಾಗಿದ್ದ ಆತ ದೇಶ-ವಿದೇಶಗಳಲ್ಲಿ ಡಿಗ್ರಿಗಳನ್ನು ತೆಗೆದುಕೊಂಡು ಎಂ.ಎ, ಎಂ.ಕಾಂ ಮಾಡಿಕೊಂಡು ಬಂದಿದ್ದರೂ ಸಹಾ ಅಧ್ಯಾಪಕಿಯೊಬ್ಬರ ಮನೆಗೆ ತಾನಾಗಿಯೇ ಬಂದದ್ದಕ್ಕೂ ಒಂದು ಕಾರಣವಿತ್ತು. ಅದಕ್ಕೆಲ್ಲಾ ಕಾರಣ ಆತನ ಮುದ್ದಿನ ತಂಗಿ ಚಂಪಾರಾಣಿ. 


ಅಷ್ಟೆಲ್ಲ ಗತ್ತು-ಗೈರತ್ತನ್ನು ಬಿಟ್ಟು ಆತ ಚಂಪಾಳ ಬಗೆಗೆ ಮಾತನಾಡಲು ಬಂದಿದ್ದ. ಚಂಪಾಳ ವರ್ತನೆ ಎಲ್ಲಾ ಹುಡುಗಿಯರಂತಿರಲಿಲ್ಲ. ಶ್ರೀಮಂತಿಕೆಯ ಗತ್ತು ಅವಳಿಗೆ ರತ್ತಗತವಾಗಿಯೇ ಬಂದಿತ್ತು. ಮನೆಯಲ್ಲಿನ ಅತಿಮುದ್ದು ಶಾಲೆಯಲ್ಲಿ ಅವಳ ಉದ್ದಟನಗಳಿಗೆ ಕಾರಣವಾಗಿತ್ತು. ಹಾಗಾಗಿ ಬಹಳ ಸಾರಿ ಸರೋಜಿನಿ ಆಕೆಯ ಮನೆಯಿಂದ ಯಾರಾದರೂ ಬರಬೇಕೆಂದು ಕರೆ ಕಳುಹಿಸಿದ್ದರು. 


ರಾಜಗೋಪಾಲ್ ಬಂದದ್ದು ಆಕೆ ತಪ್ಪು ಮಾಡುವುದಿಲ್ಲ ಎಂದು ಹೇಳುವುದಕ್ಕಲ್ಲ. ಬದಲಾಗಿ, ಚಂಪಾಳನ್ನು ಎಲ್ಲಾ ಮಕ್ಕಳಂತೆಯೇ ಕಾಣದೆ, ಆಕೆಯನ್ನು ವಿಶೇಷವಾಗಿ ಕಾಣುವುದಕ್ಕಾಗಿ ಹೇಳಲು. ಶ್ರೀಮಂತಿಕೆಯ ಪರದೆ ಕಳಚಿ ಕೆಳಗಿಳಿಯಲು ಆತ ಒಪ್ಪಿರಲಿಲ್ಲ. ಈಕೆಯು ತನ್ನ ಸ್ವಾಭಿಮಾನವನ್ನು ಬಿಟ್ಟು ಕೆಳಗಿಳಿಯಲು ಸಿದ್ಧಳಿರಲಿಲ್ಲ. 


ಶ್ರೀಮಂತರ ಅದರಲ್ಲೂ.. ಮನುಷ್ಯನ ಸ್ವಾರ್ಥ ಎಷ್ಟು ಕೀಳು ಮಟ್ಟಕ್ಕಿಳಿಯಬಹುದೇ..?? ಮಗುವನ್ನು ಮುದ್ದು ಮಾಡುವುದಕ್ಕಾದರೂ ಒಂದು ಇತಿಮಿತಿ ಬೇಡವೇ ಎಂದು ಯೋಚಿಸುತ್ತಿದ್ದಳು. ರಾಜಗೋಪಾಲ್ ವರ್ತನೆಯಿಂದ ಆಕೆ ವಿಚಲಿತಳಾಗಿದ್ದಳು. ಆತನಿಗೆ ಒಂದು ರೀತಿಯಲ್ಲಿ ಅವಮಾನವಾಗಿತ್ತು. ಮನಸ್ಸು ಇದರಿಂದ ಉಂಟಾಗುವ ಮುಂದಿನ ಪರಿಣಾಮಗಳನ್ನು ನೆನಪಿಸಿಕೊಳ್ಳುತ್ತಿತ್ತು. 


ಸರೋಜಿನಿಗೆ ತಾಯಿ ಇರಲಿಲ್ಲ. ತಂಗಿ ವಿಜಯ, ಇಬ್ಬರು ತಮ್ಮಂದಿರು ಭರತ-ಶತ್ರುಜ್ಞ. ತಂದೆಯದ್ದು ಖಾಸಗಿ ಎಲೆಕ್ಟ್ರಿಕ್ ವರ್ಕ್ ಶಾಪಿನಲ್ಲಿ ದುಡಿಮೆ. ಈಕೆಯ ದುಡಿಮೆ ಮನೆಗೆ ಬಹಳ ಅಗತ್ಯವಾಗಿತ್ತು. ಮದುವೆಯ ವಯಸ್ಸಾಗಿದ್ದರೂ.. ಆಕೆಗೆ ಈಗಲೇ ವಿವಾಹವಾಗಲು ಮನಸ್ಸಿರಲಿಲ್ಲ. ತಂಗಿ ಹಾಗೂ ತಮ್ಮಂದಿರ ಭವಿಷ್ಯ ರೂಪಿಸಲು ಪಣತೊಟ್ಟಿದ್ದವಳಂತಿದ್ದಳು. ಹಾಗೆಂದು, ವಿರಾಗಿಣಿಯಂತಿರಲಿಲ್ಲ. ರಾಜಗೋಪಾಲ್ ಜೊತೆಗೆ ನಡೆದ ತಿಕ್ಕಾಟದಿಂದ ಅವಳ ಹುದ್ದೆಗೂ ಕುತ್ತು ಬರಬಹುದಿತ್ತು. ಆದರೆ, ಹಾಗಾಗದೇ.. ಚಂಪಾಳ ತರಗತಿಯ ಶಿಕ್ಷಕಿಯಾಗಿದ್ದ ಇವಳ ಸ್ಥಾನ ಬದಲಾಗಿತ್ತು. 


ಚಂಪಾಳ ಶಿಕ್ಷಕಿಯಾಗಿ ಬಂದದ್ದು ಶಾಂತಲಾ. ನಂತರ ಚಂಪಾ ಹಾಗೂ ಸರೋಜಿನಿಗೆ ನೇರ ಮುಖಾಮುಖಿಯೇನೂ ಆಗಲಿಲ್ಲ. ಒಮ್ಮೆ ಚಂಪಾಳ ಹುಟ್ಟುಹಬ್ಬಕ್ಕಾಗಿ ಅವಳ ಮನೆಗೆ ಹೋಗಬೇಕಾಗಿ ಬಂದಾಗ ಅಲ್ಲಿ ಎದುರಾದದ್ದು ರಾಜಗೋಪಾಲ್. ಚಂಪಾಳ ತಂದೆ ಜಯರಾಯರು ಬಂದು ಆತ್ಮೀಯವಾಗಿ ಕರೆದಿದ್ದರಿಂದ ಹಾಗೂ ಹೆಡ್ ಮೇಡಂ ಹೇಳಿದ್ದನ್ನು ನಿರಾಕರಿಸಲಾಗದೇ ಸರೋಜಿನಿ ಅಲ್ಲಿಗೆ ಹೋಗಿದ್ದರು. ಆತ ಅಂದಿನ ಘಟನೆಯನ್ನೇ ಮುಂದಿಟ್ಟುಕೊಂಡು ಸರೋಜಿನಿಯನ್ನು ಕಟಕಿಯಾಡುತ್ತಿದ್ದ. 


ಶಾಂತಲಾ ಚಂಪಾಳ ಮನೆಯ ಆಳು ಎಂಬಂತೆ ನಡೆದುಕೊಳ್ಳುತ್ತಿದ್ದದ್ದು ಸರೋಜಿನಿಗೆ ಅಸಮಾಧಾನವಾಗಿತ್ತು. ಆದರೆ ತಾನು ಆ ಕೆಲಸ ಮಾಡಲಿಲ್ಲ ಎಂಬ ಸಮಾಧಾನ ಅವಳಲ್ಲಿತ್ತು. ಅಲ್ಲದೆ, ತಾನು ಆ ಸ್ಥಾನದಲ್ಲಿ ಇದ್ದಿದ್ದರೆ..! ಎಂದೂ ಆಲೋಚಿಸಿ ಸುಮ್ಮನಾಗಿದ್ದಳು.


ಜಯರಾಯರು ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಲು ಶಾಲೆಯ ಕಡೆಯಿಂದ ನಡೆದ ಸಮಾರಂಭದಲ್ಲಿ ಸರೋಜಿನಿಯ ನಟನೆ, ಗಾಯನ ಹಾಗೂ ವೀಣಾವಾದನದ ಪ್ರತಿಭೆ ರಾಜಗೋಪಾಲನಿಗೆ ಪರಿಚಯವಾಗಿತ್ತು. ಅದಾದ ನಂತರ ಸರಸಿ ಸುಗಂಧಿ ಊದುಬತ್ತಿ ಕಾರ್ಖಾನೆಯ ರಜತೋತ್ಸವದ ಪ್ರಯುಕ್ತ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಆ ಸ್ಪರ್ಧೆಯಲ್ಲಿ ಭಾಗವಹಿಸಿ ಲೇಖನ ಹಾಗೂ ಚಿತ್ರಕಲೆಯಲ್ಲಿಯೂ ಸರೋಜಾದೇವಿ ಎಂಬ ಹೆಸರಿನಿಂದ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದಳು. 


ಆದರೆ, ಆಕೆಯ ವೈಯಕ್ತಿಕ ಬದುಕು ಅಷ್ಟು ಸುಲಭವಾಗಿರಲಿಲ್ಲ. ಸರೋಜಿನಿ ಮದುವೆಯಾಗಲು ಒಪ್ಪದ ಕಾರಣಕ್ಕಾಗಿ ಆಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿ ಒಪ್ಪಿಸುವ ತಂತ್ರಕ್ಕಾಗಿ ಆಕೆಯ ತಂದೆ ಬೆಂಗಳೂರಿಗೆ ಹೊರಟರು. ಸುರಕ್ಷತೆಯ ದೃಷ್ಟಿಯಿಂದ ವಟಾರದ ಮನೆಗಳ ನಡುವೆ ಉಳಿದರೆ ಕ್ಷೇಮವೆಂದು ತನ್ನ ತಂಗಿ-ತಮ್ಮಂದಿರೊಡನೆ ಅಲ್ಲಿ ಉಳಿದಳು ಸರೋಜಿನಿ. ಆದರೆ, ಅಲ್ಲಿ ಲಕ್ಷ್ಮಮ್ಮನಂತಹಾ ಜೋರು ಬಾಯಿಯ ಹೆಂಗಸು ಆಕೆಯ ಮನೆಯಲ್ಲಿನ ಕುಂದು-ಕೊರತೆಗಳನ್ನು ಬಿಟ್ಟು ಬೇರೆಯವರ ಮನೆಯ ವಿಚಾರಗಳನ್ನು ಆಡಿಕೊಳ್ಳುವಂತೆ ಸರೋಜಿನಿಯ ವಿಚಾರಕ್ಕೂ ಬಂದಾಗ ಆಕೆ ಮಾತಿನಿಂದಲೇ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಳು. ಆದರೆ, ಅಲ್ಲಿ ಆಕೆಯ ಪಾಲಿಗೆ ಮುಳ್ಳಾದದ್ದು ಸೋಮನಾಥ. ಈಕೆಯ ಸ್ವತಂತ್ರ ಪ್ರವೃತ್ತಿಯನ್ನು ತಪ್ಪಾಗಿ ತಿಳಿದು ಸಹಾಯ ಮಾಡುವ ನೆಪದಲ್ಲಿ ಸಲುಗೆ ತೋರಲು ಹೋಗಿ.. ತನ್ನ ಹೆಂಡತಿ ಊರಿಗೆ ಹೋಗಿದ್ದ ದಿನಗಳ ಒಂಟಿತನವನ್ನು ಕಳೆಯಲು ಸರೋಜಿನಿಯನ್ನು ಬೇರೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಯತ್ನಿಸಿದ. ಆದರೆ, ಆತನಿಗೆ ತಕ್ಕ ಪಾಠವನ್ನು ಕಲಿಸಿದ್ದಳು ಸರೋಜಿನಿ.


ವಠಾರದಿಂದ ಮತ್ತೆ ಮನೆಗೆ ವಾಪಸ್ ಆಗಿದ್ದರು ಎಲ್ಲರೂ. ಆದರೆ, ಆಕೆಯ ತಂಗಿ ವಿಜಯಳ ಮನಸ್ಥಿತಿ, ನಡವಳಿಕೆ ಬದಲಾಗಿತ್ತು. ಅಕ್ಕನ ಜೊತೆಗೂ ಅವಳು ನಡೆದುಕೊಳ್ಳುತ್ತಿದ್ದ ರೀತಿ ಬೇರೆಯದ್ದೇ ಆಗಿತ್ತು.


ಶಾಲೆಯಿಂದ ಶೈಕ್ಷಣಿಕ ಪ್ರವಾಸ ಹೊರಟಾಗ ಸರೋಜಿನಿಯೂ ಹೊರಟಿದ್ದಳು. ಚಂಪಾ ತಾನು ಹೋಗಬೇಕೆಂದು ಹಠ ಹಿಡಿದಿದ್ದರಿಂದ ಆಕೆಯನ್ನು ನೋಡಿಕೊಳ್ಳಲು ನೇಮಿಸಿದ್ದ ಮಾದಮ್ಮನೊಂದಿಗೆ ಹಲವು ರೀತಿಯ ನಿಯಮಗಳನ್ನು ಅವಳಿಗಾಗಿ ಸಡಿಲಗೊಳಿಸಿ.. ಶ್ರೀಮಂತಿಕೆಯ ವಾತಾವರಣದಲ್ಲಿ ಕರೆದುಕೊಂಡು ಹೊರಟಿದ್ದರು. ಆದರೆ, ಅಂದು ನಡೆದ ಅವಘಡ ಚಂಪಾಳ ಬದುಕನ್ನು ಬದಲಿಸುವುದರ ಜೊತೆಗೆ ಸರೋಜಿನಿಯ ಬದುಕನ್ನೂ ಬದಲಿಸಿತು.


ಮಾದಮ್ಮನೂ ಹಿಂಜರಿದಾಗ ಅಪಘಾತವಾಗಿದ ಚಂಪಾಳಿಗೆ ರಕ್ತ ನೀಡಿದ್ದು ಕಾಪಾಡಿದ್ದು ಸರೋಜಿನಿ. ಅವಳ ಪ್ರಾಣ ಉಳಿಸಿದ್ದು ಅಲ್ಲಿಯ ಹಳ್ಳಿಯಲ್ಲಿದ್ದ ಡಾಕ್ಟರ್ ಜಗದೀಶ್. ಅಗತ್ಯಕ್ಕಿಂತ ಹೆಚ್ಚಿನ ರಕ್ತದಾನವನ್ನೇ ಮಾಡಿದ್ದಳು ಸರೋಜಿನಿ. ತುರ್ತು ಪರಿಸ್ಥಿತಿಯೇ ಹಾಗಿತ್ತು. 


ಧ್ಯೇಯಗಳನ್ನು ಇಟ್ಟುಕೊಂಡು ಜನ ಸೇವೆ ಮಾಡುತ್ತಿದ್ದ ಡಾಕ್ಟರ್ ಜಗದೀಶ್ ಸರೋಜಿನಿಯ ಆರೋಗ್ಯವನ್ನು ವಿಚಾರಿಸಲು ಬರುತ್ತಿದ್ದರು. ಒಳ್ಳೆಯ ಸ್ನೇಹಿತರೂ ಆದರು. ಆಕೆಯ ಮುಂದೆ ವಿವಾಹದ ನಿವೇದನೆಯನ್ನು ಮಾಡಿದರಾದರೂ.. ಸರೋಜಿನಿ ಅದಕ್ಕೆ ಒಪ್ಪಲಿಲ್ಲ. ವಿಜಯಳ ಮನಸ್ಸು ತಿಳಿದ ಸರೋಜಿನಿ ವಿಚಲಿತಳಾಗಿದ್ದಳು. 


ಡಾಕ್ಟರ್ ಜಗದೀಶ್ ಅವರನ್ನು ಸರೋಜಿನಿ ಒಪ್ಪದಿರಲು ಕಾರಣವೇನು..?? ತನ್ನ ತಂಗಿ ವಿಜಯಳ ನಡವಳಿಕೆಯ ಕುರಿತು ಸರೋಜಿನಿಗೆ ತಿಳಿದುಬಂದ ಕಾರಣವೇನು..?? ಸರೋಜಿನಿಯ ಹದಗೆಟ್ಟ ಆರೋಗ್ಯ ಸ್ಥಿತಿ ಆಕೆಯ ಮೇಲೆ ಮಾಡಿದ ಪರಿಣಾಮಗಳೇನು..?? ಚಂಪಾಳ ಪರಿಸ್ಥಿತಿ ಏನಾಯಿತು..?? ಸರೋಜಿನಿಯ ತ್ಯಾಗ ಹಾಗೂ ಸಹಾಯ ಮನೋಭಾವಕ್ಕೆ ರಾಜಗೋಪಾಲನ ಮನಸ್ಸು ಬದಲಾಯಿತೇ..?? ಆತ ಇದಕ್ಕೆ ಸ್ಪಂದಿಸಿದ ಪರಿ ಹೇಗೆ..?? ಜಗದೀಶ್ ರವರು ಈ ಮನೆಗೆ ಸಂಬಂಧವೇ ಆದರು. ಅದು ಯಾವ ರೀತಿಯಲ್ಲಿ..?? ಸರೋಜಿನಿಯ ಬದುಕಿಗೆ ಚಂಪಾ ಸುವರ್ಣ ಸೇತುವೆಯಾದದ್ದು ಹೇಗೆ..?? ತಿಳಿಯಲು ಓದಿ ಹೆಚ್.ಜಿ ರಾಧಾದೇವಿಯವರ 'ಸುವರ್ಣ ಸೇತುವೆ' ಕಾದಂಬರಿಯನ್ನು.


ಕೆಲವರನ್ನು ಕೆಲ ಸಂದರ್ಭದಲ್ಲಿ ನೋಡಿ ಇವರು ಒಳ್ಳೆಯವರು ಅಥವಾ ಕೆಟ್ಟವರು ಎಂದು ನಿರ್ಧರಿಸುವುದು ತಪ್ಪಾಗುತ್ತದೆ. ಆಯಾ ವ್ಯಕ್ತಿಗಳ ವರ್ತನೆ ಅಲ್ಲಿಯ ಸಂದರ್ಭಕ್ಕೆ ತಕ್ಕಂತೆ ಇರುತ್ತದೆ. ಮೊದಲ ಬಾರಿ ನೋಡಿದಾಗ ಅವರ ಮೇಲೆ ನೆಗೆಟಿವ್ ಆದ ಅಭಿಪ್ರಾಯ ಮೂಡಿದರೆ.. ಅದರಿಂದ ಮುಂಬರುವ ಭೇಟಿಗಳೆಲ್ಲವೂ ಅದೆಷ್ಟು ಪರಿಣಾಮ ಬೀರುತ್ತದೆ ಎನ್ನುವುದು ಅರಿವಾಗುತ್ತದೆ. 


ತನ್ನತನವನ್ನು ಬಿಟ್ಟುಕೊಡದ ಸರೋಜಿನಿ ಬದುಕಿನಲ್ಲಿ ಸೋತೆ ಹೋದಳೇನೋ ಎನ್ನುವಷ್ಟರಲ್ಲಿ ಆಕೆಯ ಪಾಲಿಗೆ ಒದಗಿದವರು ಆಕೆಗೆ ಕೊಡುವ ಗೌರವ ಇಷ್ಟವಾಯಿತು. 


ತಾನು, ತನ್ನವರು ಎಂದು ಒಂದು ಕಡೆಯಿಂದ ಮಾತ್ರವೇ ಪ್ರೀತಿ ಹುಟ್ಟಿದರೆ ಸಾಲದು. ಆ ಪ್ರೀತಿ-ಕಾಳಜಿ ಎರಡೂ ಕಡೆಯಿಂದ ಬಂದಾಗ ಮಾತ್ರವೇ ಆ ಸಂಬಂಧಕ್ಕೊಂದು ಬೆಲೆ. 


ಮಧ್ಯಮ ವರ್ಗದ ಬದುಕಿನಲ್ಲಿ ಸ್ವಾಭಿಮಾನಿ ಅವಿವಾಹಿತ ಹೆಣ್ಣಿನ ಪರಿಸ್ಥಿತಿಯನ್ನು ಇದು ತೋರಿಸಿದರೂ.. ಶಿಕ್ಷಕಿಯಾಗಿ ಆಕೆ ತೋರುವ ಸಂಯಮ, ಪರಿಸ್ಥಿತಿಯನ್ನು ಅರಿತು ನಡೆಯುವ ಜಾಣ್ಮೆ, ಸಾಧ್ಯವಾದಷ್ಟು ಪರಿಸ್ಥಿತಿಯನ್ನು ತಿಳಿಯಾಗಿಸಲು ಪ್ರಯತ್ನಿಸಿದರೂ ಸಾಧ್ಯವಾಗದಾಗ.. ಸತ್ಯವನ್ನು ಇದ್ದಂತೆಯೇ ರಾಚುವ ಹಾಗೂ ಧೈರ್ಯವಾಗಿ ಮುನ್ನುಗ್ಗುವ ಗುಣ ಪ್ರೇರೇಪಿಸುವಂತಿದೆ. ಬಹಳ ಚೆಂದದ ಕಾದಂಬರಿಯ ಓದು. 


~ವಿಭಾ ವಿಶ್ವನಾಥ್

ಆರೋಹಣ ( ಪುಸ್ತಕ ಯಾನ - 162)


ಪುಸ್ತಕದ ಶೀರ್ಷಿಕೆ : ಆರೋಹಣ

ಲೇಖಕರು : ವಿವೇಕಾನಂದ ಕಾಮತ್ 

ಪ್ರಕಾಶಕರು : ವೀರಲೋಕ ಬುಕ್ಸ್ 

ಪ್ರಥಮ ಮುದ್ರಣ : 2023

ಪುಟಗಳು : 156

ಬೆಲೆ : 190 ರೂ.


ಮನುಷ್ಯನ ಬದುಕಿನಲ್ಲಿ ಮಹತ್ವಾಕಾಂಕ್ಷೆಗಳು ಬೇಕು. ಆದರೆ, ಅದರ ಬರದಲ್ಲಿ ತಾನು ಕಲಿತ ವಿದ್ಯೆ, ಸಂಸ್ಕಾರಗಳನ್ನು ಮರೆಯದಿರುವುದು ಅಷ್ಟೇ ಅವಶ್ಯಕತೆಯಾಗಿರುತ್ತದೆ. ವಿದ್ಯೆ ವಿನಯವನ್ನು ಕಲಿಸುತ್ತದೆ ಎನ್ನುತ್ತಾರೆ. ಆದರೆ ವಿದ್ಯೆ ಕಲಿತ ನಂತರವೂ ಆ ವಿನಯವನ್ನು ಮೈಗೂಡಿಸಿಕೊಳ್ಳದೇ ಹೋದರೆ ಅಂತಹಾ ವಿದ್ಯೆ ಕಲಿತದ್ದು ಸಹಾ ವ್ಯರ್ಥವೇ ಆಗುತ್ತದೆ. ಅದರಲ್ಲಿಯೂ.. ಆದರ್ಶ ಶಿಕ್ಷಕನೊಬ್ಬನ ಮಗ ಅಧಃಪತನದ ದಾರಿಗಿಳಿದರೆ..?? ಮೊದಲಿಗೆ ತಪ್ಪಾಗಿದ್ದೆಲ್ಲಿ ಎನ್ನುವ ಪ್ರಶ್ನೆ ಮೂಡುತ್ತದೆ. ಎಷ್ಟೋ ವಿದ್ಯಾರ್ಥಿಗಳ ಜೀವನ ರೂಪಿಸಿದ ಗುರು ತಾನು ತಂದೆಯಾಗಿ ಪಾಲಿಸಬೇಕಾದ ಕರ್ತವ್ಯವನ್ನು ಮರೆತನೇ ಅಥವಾ ನಿರ್ಲಕ್ಷಿಸಿ ಬಿಟ್ಟನೇ..?? ಎಂದು ಮೊದಲ ಸಂಶಯ ಮೂಡುತ್ತದೆ. ಹೀಗೆ ಮೂಡುವ ಸಂಶಯಕ್ಕೆ ಕಾರಣವೂ ಇಲ್ಲದಿಲ್ಲ. ದಾರಿ ತಪ್ಪುವ ಮಕ್ಕಳಿಗೆ ಸರಿ ದಾರಿ ತೋರಬೇಕಾದದ್ದು ಹಿರಿಯರಾಗಿ, ತಂದೆಯಾಗಿ, ಗುರುವಾಗಿ ಅವರ ಕರ್ತವ್ಯವೂ ಆಗಿರುತ್ತದೆ. ಇಲ್ಲಿ ಅದೆಲ್ಲವೂ ಆಗಿದ್ದು ರಾಘವೇಂದ್ರರಾಯರು.


ಹಾಗೆಂದು, ತಂದೆಯ ಕಣ್ಣಿಗೆ ಕಾಣುವ ಮಗ ಸಮಾಜದ ಕಣ್ಣಿಗೆ ಕಾಣುವುದಿಲ್ಲ. ಅದಕ್ಕೆ ಸಮಾಜದ ಸಮಕಾಲೀನ ನೋಟಗಳೂ ಆಗಿರಬಹುದಾ..?? ಎಂದು ಯೋಚಿಸಿದರೆ ನಾವೂ ಇಂತಹಾ ಶಿಕ್ಷಣದ ಭಾಗವೇ ಆಗಿ ಹೋಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ ಹಾಗೂ ಅರಿವಾಗುತ್ತದೆ. ಈ ಕಾದಂಬರಿ ಶುರುವಾಗುವುದು ಕೌಟುಂಬಿಕ ವಾತಾವರಣದಲ್ಲಿಯಾದರೂ.. ಇದು ಕೇವಲ ಕೌಟುಂಬಿಕ ಕಾದಂಬರಿಯಲ್ಲ. ಶೈಕ್ಷಣಿಕ ಕ್ಷೇತ್ರದ ಗಂಭೀರ ಸ್ವರೂಪದ ವಾಸ್ತವವನ್ನು ತೆರೆದಿಟ್ಟಿದೆ. 


ತಂದೆ-ತಾಯಿ ಇಬ್ಬರೂ ಇದ್ದಾಗ ಮಕ್ಕಳ ಭವಿಷ್ಯದೆಡೆ ಗಮನ ಹರಿಸುವುದು ಸುಲಭ. ಆದರೆ, ತಾಯಿಯ ಅನುಪಸ್ಥಿತಿ ಮಕ್ಕಳ ಭವಿಷ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆಂದೂ ಕಾಣುತ್ತದೆ.


ಮೌಲ್ಯಗಳನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದ ಸಣ್ಣ ಶಾಲೆಯ ಮೇಷ್ಟರೊಬ್ಬರ ಮಗ ಈಗ ಬದುಕಿನಲ್ಲಿ ಎತ್ತರಕ್ಕೆ ಸಾಗಿ ಮಕ್ಕಳ ಶಿಕ್ಷಣಕ್ಕೆ 'ಆದರ್ಶ ಅಕಾಡೆಮಿ'ಯನ್ನು ಸ್ಥಾಪಿಸಿದ್ದ. ಆತನೇ ವಾಸು. ಅದರಲ್ಲಿ ತನ್ನ ಮಗ ಓದಬೇಕೆಂದು ಆಸೆ ಪಟ್ಟಿದ್ದರೂ.. ಹಣದ ಅಡಚಣೆಯಿಂದ ಮೇಷ್ಟ್ರರನ್ನು ಸಹಾಯ ಯಾಚಿಸಿ ಬಂದಿದ್ದವನು ಅವರ ಶಿಷ್ಯನೇ ಆಗಿದ್ದ, ವಾಸುವಿನ ಸಹಪಾಠಿಯೂ ಆಗಿದ್ದ ಧನಪಾಲ.  


ಧನಪಾಲನ ಮಗ ಇಚ್ಛಿಸುವ, ಅಲ್ಲಿ ಕಲಿಯಲು ಕನಸು ಕಾಣುವ ಆದರ್ಶ ಅಕಾಡೆಮಿಯಿಂದ ದೂರ ಉಳಿದರೆ ಸಾಕೆಂದು ಬಯಸುತ್ತಿದ್ದವನು ವಾಸುವಿನ ಒಬ್ಬನೇ ಮಗ ಆದರ್ಶ. ತನ್ನ ನಂತರ ತನ್ನ ಮಗನೇ ಆ ಅಕಾಡೆಮಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಆಸೆ ಇಟ್ಟುಕೊಂಡು ತನ್ನ ಮಗನಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಒತ್ತಾಯಪಡಿಸುತ್ತಿದ್ದ ವಾಸು. ವಾಸುವಿನ ಹೆಂಡತಿ ಎಲ್ಲದಕ್ಕೂ ಮೂಕ ಪ್ರೇಕ್ಷಕಳಂತೆ. 


ಧನಪಾಲನ ಮಗ ಮಾತ್ರವಲ್ಲ ತನ್ನ ಮಗನೂ ಅಲ್ಲಿ ಪ್ರವೇಶ ಪಡೆಯಬೇಕೆಂದರೆ ಅಲ್ಲಿನ ನಿಯಮದಂತೆ ಹಣ ಕಟ್ಟಲೇಬೇಕೆಂದು ಪಟ್ಟು ಹಿಡಿದವನು ವಾಸು. ಹಾಗೆಂದು ಅದು ಶಿಸ್ತಿನ ಪಾಲನೆಯಲ್ಲ. ಬದಲಾಗಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿದ್ದರ ಪರಿಣಾಮ. ಧನಪಾಲನ ಮಗ ಆದರ್ಶ ಅಕಾಡೆಮಿಯನ್ನು ಸೇರಿದ. ಅದು ಹೇಗೆ..??


ಆದರ್ಶನ ಇಷ್ಟವನ್ನೂ ಮೀರಿ ಆತನನ್ನು ವಾಸು ಅದೇ ಅಕಾಡೆಮಿಗೆ ಸೇರಿಸಿದ. ಆದರ್ಶ ಅದಕ್ಕೆ ಮನಸ್ಫೂರ್ತಿ ಒಪ್ಪಲಿಲ್ಲ. ಅವನ ನಡೆಗಳಿಗೆ 

ರಾಯರು ಕೊಡುತ್ತಿದ್ದ ಮಾರ್ಗದರ್ಶನ, ಅವರು ಆಗಾಗ ತಿಳಿ ಹೇಳುತ್ತಿದ್ದ ರೀತಿ ಹಾಗೂ ಒತ್ತಡದ ದಿನಗಳಿಂದ ವಿದ್ಯಾರ್ಥಿಗಳು ಆತ್ಮಹತ್ಯೆಯತ್ತ ಮುಖ ಮಾಡಿದ್ದನ್ನು ಕಂಡು ಆತಂಕ ಗೊಳ್ಳುವ ಪರಿ ಇಂದಿನ ವಿದ್ಯಾರ್ಥಿಗಳ ಜೀವನವನ್ನು ನೆನಪಿಸುತ್ತದೆ. ತಾನು ಆತ್ಮಹತ್ಯೆ ಮಾಡಿಕೊಳ್ಳುವ ಪೈಕಿಯಲ್ಲವೆಂದ ಆದರ್ಶನ ಲೆಕ್ಕಾಚಾರ ಬೇರೆ ಇತ್ತಾ..?? ಒತ್ತಡದ ಶಿಕ್ಷಣದಿಂದ ಆತ ಪಾರಾದನೇ..??


 ಇಂದಿನ ಶಿಕ್ಷಣಕ್ಕೆ ಅಷ್ಟು ಒತ್ತಡ ಅನಿವಾರ್ಯವೇ ಎಂಬುದು ನಾವು ನಮಗೆ ಕೇಳಿಕೊಳ್ಳಬೇಕಾದ ಪ್ರಶ್ನೆ. ಇಂದು ವಿದ್ಯೆ ವಿದ್ಯಾರ್ಥಿಗಳ ಆಸಕ್ತಿಯ ಮೇಲೆ ಮಾತ್ರವಲ್ಲದೇ.. ಓಡುತ್ತಿರುವ ಕಾಲಮಾನ ಹಾಗೂ ನಿರೀಕ್ಷಗಳ ಮೇಲೆ ನಿಂತಿದೆಯೇನೋ ಎಂಬಂತೆ.. ಅದಕ್ಕೆ ಹೊಂದಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ. ಅವರ ದೃಷ್ಟಿಯಿಂದ ನೋಡುವುದಾದರೆ ಇಂದಿನ ದಿನಗಳಿಗೆ ಹೊಂದಿಕೊಳ್ಳುವುದಕ್ಕೆ ಆ ಮಟ್ಟದ ಶಿಕ್ಷಣ ಬೇಕೆಂಬುದು ಹೌದಾದರೂ.. ಆ ಕಠಿಣ ಶಿಕ್ಷಣ ಜೀವನಕ್ಕೆ ಬೇಕಾದ ಎಲ್ಲವನ್ನು ಕೊಡುತ್ತದಾ..?? ಅಂತಹಾ ಶಿಕ್ಷಣ ವಿದ್ಯಾರ್ಥಿಗಳನ್ನು ಆತ್ಮಹತ್ಯೆಂತಹಾ ಯೋಚನೆಯಿಂದ ಪಾರು ಮಾಡದಿರುವುದಾದರೂ ಹೇಗೆ..?? ವಿದ್ಯಾರ್ಥಿಗಳು ಅಷ್ಟು ಖಿನ್ನತೆಗೆ ಒಳಗಾಗಲು ಕಾರಣವೇನು..??


ವಿದ್ಯಾರ್ಥಿಗಳನ್ನು ಅವರ ಇಷ್ಟದಂತೆ ಬಿಟ್ಟು ತಿದ್ದದೆ ಸುಮ್ಮನಿರಲಾದರೂ ಸಾಧ್ಯವೇ..?? ಇದೆಲ್ಲದಕ್ಕೂ ಬೇರೆ-ಬೇರೆ ಮಾರ್ಗಗಳು ಇವೆಯಾದರೂ.. ಆದರ್ಶ ಅಕಾಡೆಮಿಯಲ್ಲಿ ವಿದ್ಯಾರ್ಥಿಯ ಆತ್ಮಹತ್ಯೆಯ ಘಟನೆಯೊಂದು ಹಿಂದಿನ ವರ್ಷ ಜರಗಿದ್ದು ಮಾತ್ರವಲ್ಲದೆ.. ಆ ವರ್ಷವೂ ಜರುಗಿತ್ತು. ಇದರಿಂದ ಯಾರ ಮೇಲೆ ಯಾವ-ಯಾವ ರೀತಿಯ ಪರಿಣಾಮಗಳು ಉಂಟಾದವು..?? ವಿದ್ಯಾರ್ಥಿಯ ಮನೆಯವರ ಪ್ರತಿಕ್ರಿಯೆ ಹೇಗಿತ್ತು..?? ರಾಯರು ಹಾಗೂ ವಾಸು ವಿದ್ಯಾರ್ಥಿಯ ಮನೆಯವರನ್ನು ಸಾಂತ್ವನಗೊಳಿಸಲು ಹೋದರೂ ಅಲ್ಲಿನ ಪರಿಸ್ಥಿತಿ ಹಾಗೂ ಪ್ರತಿಕ್ರಿಯೆಗಳು ರಾಯರ ಮನಸ್ಸಿನ ಮೇಲೆ ಮೂಡಿಸಿದ ಪರಿಣಾಮಗಳೇನು..?


ಕೆಲವು ಪ್ರಶಸ್ತಿಗಳು ಮನುಷ್ಯನನ್ನು ಬಹಳ ಎತ್ತರಕ್ಕೆ ಏರಿಸಿದರೆ.. ಅದನ್ನು ಪಡೆದುಕೊಳ್ಳಲು ಹೋಗುವ ಮಾರ್ಗ ತಿಳಿದರೆ ಮನುಷ್ಯ ಬಹಳ ಕೆಳಗಿಳಿದುಬಿಡುತ್ತಾನೆ. ಇದೆಲ್ಲದರ ನಡುವೆ ರಾಯರಿಗೆ ರಾಜ್ಯೋತ್ಸವ ಅವಾರ್ಡ್ ಸಹಾ ಬಂದಿತ್ತು. ಅದರ ಹಿಂದೆ ಯಾವುದಾದರೂ ವಶೀಲಿ ಇತ್ತೇ..?? ಅಥವಾ ಸ್ವಾರ್ಥವಿತ್ತೇ..?? ಅಥವಾ ರಾಯರ ನಿಸ್ವಾರ್ಥ ಸೇವೆಗೆ ತಡವಾಗಿ ಸಂದ ಫಲವೇ..??


ರಾಜ್ಯೋತ್ಸವ ಅವಾರ್ಡ್ ಬಂದ ನಂತರ ಆದರ್ಶ ಅಕಾಡೆಮಿಯಲ್ಲೊಂದು ಸಮಾರೋಪ ಸಮಾರಂಭ ಜರುಗಿತ್ತು. ಅಂತೆಯೇ ರಾಯರು ತಾವು ಬೋಧಿಸಿ ನಿವೃತ್ತಿಯಾಗಿದ್ದ ಶಾಲೆಯಿಂದಲೂ ಕಾರ್ಯಕ್ರಮದ ಆಹ್ವಾನ ಬಂದಿತ್ತು. ವಿಶಿಷ್ಟ ಕಾರ್ಯಕ್ರಮದಿಂದ ಹಳೆ ವಿದ್ಯಾರ್ಥಿಗಳ ಸಮ್ಮಿಲನವಾಯಿತು. ಆ ಶಾಲೆಯ ದಿಕ್ಕು ಕೂಡ ಬದಲಾಗಿತ್ತು. ಅಂತಹ ಬದಲಾವಣೆಗೆ ಕಾರಣರು ಯಾರು..?? ವಾಸು ಆ ಕಾರ್ಯಕ್ರಮಗಳಲ್ಲಿ ಭಾಗವಹಿಸದ್ದು ಏಕೆ..?? ಸರ್ಕಾರಿ ಶಾಲೆಗಳ ಪರಿಸ್ಥಿತಿಗೂ ಖಾಸಗಿ ಶಾಲೆಗಳಿಗೂ ಇರುವ ಅಜಗಜಾಂತರ ವ್ಯತ್ಯಾಸಗಳಿಗೆ ಕಾರಣರು ಯಾರು..??


 ವಾಸು ತನ್ನ ಜೀವನದಲ್ಲಿ ಮುಚ್ಚಿಟ್ಟ ಸಂಗತಿಗಳೆಲ್ಲವೂ ರಾಯರ ಎದುರಿಗೆ ಬಟಾಬಯಲಾಗಿ ನಿಂತಾಗ ವಾಸು ಹಾಗೂ ರಾಯರ ಮನಸ್ಸಿನ ತುಮುಲಗಳು ಸಮರ್ಪಕವಾಗಿ ಚಿತ್ರಿತವಾಗಿವೆ. ಕಾದಂಬರಿಯ ಅಂತ್ಯ ಸಣ್ಣ ಮಟ್ಟದ ಕ್ರಾಂತಿ ಎಂದರೂ ತಪ್ಪಾಗಲಾರದು. ಆದರೆ, ಅದಕ್ಕಾಗಿ ಬದಲಾದದ್ದೆಷ್ಟು..?? ಪಡೆದದ್ದೆಷ್ಟು..?? ಕಳೆದುಕೊಂಡದ್ದೆಷ್ಟು..??


ಗುರು ಹಾಗೂ ತಂದೆಯ ನಡುವೆ ವ್ಯತ್ಯಾಸವನ್ನು ದ್ರೋಣಾಚಾರ್ಯರು ಅರ್ಜುನ ಹಾಗೂ ಅಶ್ವತ್ಥಾಮನ ಉಲ್ಲೇಖಿಸಿರುವ ಮೂಲಕ ನಿರೂಪಿಸಿರುವ ಪರಿ ಇಷ್ಟವಾಯಿತು. 


ಇದು ಮುಖ್ಯವಾಗಿ ಶಿಕ್ಷಣದ ಹಾಗೂ ಮೂರು ತಲೆಮಾರುಗಳ ಮನಸ್ಥಿತಿಯ ಕಥೆಯಾದರೂ ಇಲ್ಲಿ ಬಹಳ ಕಡಿಮೆಯಿದ್ದರೂ ಹೆಚ್ಚು ಸೆಳೆದ ಪಾತ್ರ ರಾಯರ ಸೊಸೆ ಮೀರಾಳದ್ದು. ಬಹಳ ಪ್ರಬುದ್ಧವಾದ ಆಲೋಚನೆಯ, ತಾಳ್ಮೆಯ ಪಾತ್ರದ ಆಕೆಯ ನಿರ್ಧಾರಗಳು ಆದರಣೀಯ. ಮನೆಯಲ್ಲಿ ಹೆಣ್ಣುಮಕ್ಕಳ ಬದಲಾವಣೆಯ ಪಾತ್ರ ಎಷ್ಟು ಮಹತ್ವದ್ದು ಹಾಗೂ ಆ ಬದಲಾವಣೆ ಎಲ್ಲಿಂದ ಶುರುವಾಗಬೇಕು ಹಾಗೂ ಆ ಬದಲಾವಣೆ ಎಷ್ಟು ಸೂಕ್ತ ಎಂಬುದರ ಅರಿವಾಗಿಸುವ ಪಾತ್ರವಿದು. 


ಶಿಕ್ಷಣದ ವ್ಯವಸ್ಥೆ ಸಾಗುತ್ತಿರುವ ಹಾದಿಗೆ ಕನ್ನಡಿ ಹಿಡಿದಂತೆಲ್ಲಾ ಇಂದಿನ ವಾಸ್ತವದ ಅರಿವಾಗುತ್ತದೆ. ಸುಲಭವಾಗಿ ನಿರೂಪಿಸಲು ಸಾಧ್ಯವಲ್ಲದ ಹಾಗೂ ಯೋಚಿಸಲೇಬೇಕಾದ ವಿಷಯದ ಕುರಿತ ಕಾದಂಬರಿ ಬಹಳಷ್ಟು ಆಲೋಚನೆಗೊಳಪಡಿಸಿದ್ದೂ ಹೌದು. ನಮ್ಮ ಮುಂದಿನ ಜನರೇಶನ್ ಆದರ್ಶನಂತಾಗಬಹುದಾ ಎನ್ನುವುದರ ಜೊತೆಗೆ ನಾವು ವಾಸುವಿನಂತಾಗಿ ಬಿಟ್ಟಿದ್ದೇವಾ ಎಂಬ ಆಲೋಚನೆಯೂ ಓದುಗರಲ್ಲಿ ಸುಳಿಯದೇ ಇರದು. ಆದರೆ, "ಗುರು ಲಘುವಾಗಲಾರ" ಎಂಬ ನಂಬಿಕೆಯನ್ನು ಉಳಿಸಿಕೊಟ್ಟ ಕಾದಂಬರಿ. ಮುಂದಿನ ಜನರೇಶನ್ ಅನ್ನು ನಾವು ರೂಪಿಸಬೇಕಾದ ಬಗೆಯನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. "ಮನುಷ್ಯ ಮನುಷ್ಯನಾಗುವುದಕ್ಕಿಂತ ದೊಡ್ಡವನಾಗಬೇಕಾಗಿಲ್ಲ" ಎನ್ನುವ ಮಾತಂತೂ ಎಷ್ಟು ಸತ್ಯ. ಆಳವಾದ ಯೋಚನಾಲಹರಿಯನ್ನು ಹಾಗೂ ಇಂದಿನ ವಾಸ್ತವ ಮತ್ತು ಭವಿಷ್ಯದ ಶಿಕ್ಷಣ ವ್ಯವಸ್ಥೆಯ ಜೊತೆಗೆ ಬದಲಾಗುವ ಮನಸ್ಥಿತಿಗಳ ಕಟ್ಟಿಕೊಟ್ಟ ಕಾದಂಬರಿ ಬಹಳ ಇಷ್ಟವಾಯಿತು. ಬದುಕಿನ ಆರೋಹಣದ ಸ್ಪಷ್ಟತೆಯನ್ನು ಹೇಳುವ ಕಾಡುವ ಕಾದಂಬರಿ ಇದು. 


~ವಿಭಾ ವಿಶ್ವನಾಥ್

ಫಣಿಯಮ್ಮ (ಪುಸ್ತಕ ಯಾನ - 161)


ಪುಸ್ತಕದ ಶೀರ್ಷಿಕೆ : ಫಣಿಯಮ್ಮ

ಲೇಖಕರು : ಎಂ.ಕೆ. ಇಂದಿರಾ

ಪ್ರಕಾಶಕರು : ಇಂದಿರಾ ಪ್ರಕಾಶನ

ಏಳನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 88

ಬೆಲೆ : 80 ರೂ. 


ಎಂ. ಕೆ. ಇಂದಿರಾ ಅವರ ಫಣಿಯಮ್ಮ ಕಾದಂಬರಿಯ ಹೆಸರನ್ನು ಕೇಳದಿರುವವರಾರು..?! ಇದಕ್ಕೂ ಮುಂಚೆ ಈ ಕಾದಂಬರಿಗೆ 'ಕೂಪ' ಎಂಬ ಹೆಸರಿನಿಂದ ಕರೆದಿದ್ದರಂತೆ ಲೇಖಕಿ. ಇದು ಕಾಲ್ಪನಿಕ ಕಾದಂಬರಿಯಲ್ಲ. ಹಾಗಾದರೆ, ಇದು ವಾಸ್ತವದ ಘಟನೆಯನ್ನು ಚಿತ್ರಿಸಿರುವುದಾ..?? ಎಂದರೆ ಅರ್ಧ ಹೌದು, ಅರ್ಧ ಇಲ್ಲ ಎಂಬ ಉತ್ತರ ಬರುತ್ತದೆ ಲೇಖಕಿಯಿಂದ. ಲೇಖಕಿಯಾದ ಎಂ.ಕೆ. ಇಂದಿರಾ ಅವರ ಅಜ್ಜನ ತಂಗಿ ಫಣಿಯಮ್ಮನವರು ಬದುಕಿದ್ದು 112 ವರ್ಷ. ಅಂತಹಾ ದೀರ್ಘ ಜೀವನದ ಪುಣ್ಯಜೀವಿಯ ಕಥನವನ್ನು ನಮ್ಮೆಲ್ಲರಿಗೂ ಪರಿಚಯಿಸಿರುವ ನಿಟ್ಟಿನಲ್ಲಿ ಕಾದಂಬರಿಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕಿ. 1976-77 ರ ಉತ್ತಮ ಕೃತಿ ಎಂದು ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಪಡೆದ ಈ ಕಾದಂಬರಿ ಚಲನಚಿತ್ರವೂ ಆಗಿದೆ.


1844 ರಲ್ಲಿ ಜನಿಸಿ, 1952 ರಲ್ಲಿ ತೀರಿಕೊಂಡ ಅಂಚೆ-ಅತ್ತೆಯ ಇತಿಹಾಸ ಆಗಿನವರಿಗೆ ತೀರ ವಿಶೇಷವೆನ್ನಿಸದಿರಬಹುದು. ಆದರೆ, ಹೆಚ್ಚುಕಡಿಮೆ ಮೂರು ತಲೆಮಾರುಗಳ ಹಿಂದಿನ ಕಥೆಯನ್ನು ಓದುವ ನಮಗೆ ಇದು ಅಚ್ಚರಿಯಂತೆಯೂ.. ಫಣಿಯಮ್ಮ ಒಂದು ವಿಶಿಷ್ಟ ವ್ಯಕ್ತಿತ್ವದಂತೆಯೂ ಕಾಣಸಿಗುತ್ತಾರೆ.


ಅಂಚೆ-ಅತ್ತೆ ಎಂದೆ ಖ್ಯಾತರಾಗಿದ್ದ ಫಣಿಯಮ್ಮ ಹುಟ್ಟಿದ್ದು 1940 ರಲ್ಲಿ. ಅಂಚೆ ತಮ್ಮಯ್ಯನವರ ಮನೆಯಲ್ಲಿ. ಅಂಚೆ ಮನೆತನದವರಿಗಿದ್ದ ಸಕಲ ಸೌಕರ್ಯಗಳು ಹಾಗೂ ಶಾಸ್ತ್ರ, ಸಂಪ್ರದಾಯ, ಮಡಿವಂತಿಕೆ ಕಟ್ಟುನಿಟ್ಟಿನಿಂದ ಅವರು ಆ ಕಾಲದಲ್ಲಿ ಬಹಳ ಹೆಸರುವಾಸಿ. ಆಗ ಹಳ್ಳಿಹಳ್ಳಿಗೂ.. ಮನೆಮನೆಗೂ.. ಅಂಚೆ ತಲುಪಿಸುವ ಏರ್ಪಾಡೇನೂ ಸುಲಭದ್ದಲ್ಲ. ಆಗಿನಿಂದ ಈಗ ಮಾರ್ಪಾಟಾಗಿರುವ ಈ ವ್ಯವಸ್ಥೆ ಎಷ್ಟು ಬದಲಾಗಿದೆ ಎನ್ನಿಸದಿರದು. ಆಗಿನ ಕಾಲದಲ್ಲಿ ಅದನ್ನು ನಿರ್ವಹಿಸುತ್ತಿದ್ದವರ ಶ್ರಮ ಕೂಡ ಕಣ್ಣಿಗೆ ಕಟ್ಟುವಂತಿದೆ. 


ಅಂಚೆ ಮನೆತನದ ಹಿರಿಮೆ ಹೇಳುತ್ತಲೇ.. ಅವರ ಕುಟುಂಬದ ಪರಿಚಯವನ್ನು ಮಾಡಿಕೊಡುತ್ತಾ, ಅಲ್ಲಿ ನೂರಾರು ಜನರ ನಡುವೆ ಸಂಪ್ರದಾಯದ ಜೀವನದಲ್ಲಿ ಶಾಂತವಾಗಿ ಬೆಳೆದ ಫಣಿಯಮ್ಮನ ಪರಿಚಯವನ್ನು ಮಾಡಿಕೊಡುತ್ತಾರೆ. ಆಗಿನಿಂದಲೂ ಅವರ ಶಾಂತ ಸ್ವಭಾವ, ಮೆಲು ಮಾತು, ಮೃದುತ್ವವನ್ನು ಹೇಳುತ್ತಾ ಇರುವಾಗ ಬಾಲ್ಯದಲ್ಲಿಯೇ ಹದವಾದ ವ್ಯಕ್ತಿತ್ವ ಸೆಳೆಯುತ್ತದೆ.  


ಆಗಿನ ಕಾಲಕ್ಕೆ ಹೆಣ್ಣು ಮಕ್ಕಳಿಗೆ ಏಳರಿಂದ ಒಂಬತ್ತು ವರ್ಷದೊಳಗೆ ಮದುವೆ ಮಾಡಿಸುವ ರೂಢಿ. ಫಣಿಯಮ್ಮನಿಗೂ ಅಂತಹದ್ದೇ ವಯಸ್ಸಿನಲ್ಲಿ ಮದುವೆಯಾಗಿತ್ತು. ನೀಲಕಂಠ ಭಟ್ಟರ ಮಗ 15 ವರ್ಷದ ನಂಜುಂಡನ ಜಾತಕಕ್ಕೆ ಸರಿಯಾಗಿ ಹೊಂದಿಕೆಯಾದ ಫಣಿಯಮ್ಮನ ಜಾತಕದಿಂದ ಹೆಬ್ಬಲಿಗೆಯ ಮನೆಯಲ್ಲಿ ವಿವಾಹವು ವಿಜೃಂಭಣೆಯಿಂದಲೇ ನಡೆದಿತ್ತು. 


ಹುಡುಗನ ಪೂರ್ಣಾಯಸ್ಸು, ಹುಡುಗಿಯ ಅಖಂಡ ಸೌಭಾಗ್ಯ ಎಲ್ಲವೂ ಆಕೆ ಮೈ ನೆರೆಯುವುದರೊಳಗೆ ಕಳಚಿ ಬಿದ್ದಾಗಿತ್ತು. ಎಳ್ಳಮಾವಾಸ್ಯೆಯಲ್ಲಿ ನಡೆದ ಘಟನೆ ಅವಳ ನೆನಪಿನಲ್ಲಿ ಕಪ್ಪು ಚುಕ್ಕಿಯಾಗಿ ಉಳಿದುಬಿಟ್ಟಿತು. ಬಾಲ ವಿಧವೆಯಾದ ಫಣಿಯಮ್ಮನ ಬದುಕು ತಂದೆಯ ಮನೆಯಲ್ಲಿಯೇ ಶುರುವಾಗಿತ್ತು.


ಯೌವ್ವನದ ಆ ದಿನಗಳನ್ನು ಫಣಿಯಮ್ಮ ಕಳೆದದ್ದು ಹೇಗೆ..?? ಹಾಗೆಂದು, ಹೆಣ್ಣಿಗೆ ಆ ದಿನಗಳು ತೀರಾ ಸುಲಭವೇನೂ ಆಗಿರಲಿಲ್ಲ. ಆದರೆ, ತೀರಾ ಹಾಲು ಹಸುಳೆಯಂತೆ ಸಂಸಾರದ ಜ್ಞಾನವೇ ಇರದಿದ್ದ ಫಣಿಯಮ್ಮನಿಗೆ ಅದರ ಕುರಿತು ತಿಳಿದಾಗ ಆಕೆಗೆ ವೈರಾಗ್ಯ ಮೂಡಿದ್ದು ಸುಳ್ಳಲ್ಲ. ಅವಳಿಗೆ ಸಂಸಾರದ ಕುರಿತ ಗುಟ್ಟು ತಿಳಿದದ್ದು ಹೇಗೆ..??


ಬಾಲ ವಿಧವೆಯೊಬ್ಬಳು ಬಸುರಾದರೆ ಅವರಿಗೆ ನೀಡುತ್ತಿದ್ದ ಶಿಕ್ಷೆ ಕಡಿಮೆಯದ್ದೇನಲ್ಲ. ಕಟ್ಟುನಿಟ್ಟಾದ ಆ ಬಹಿಷ್ಕಾರ ಮುಂತಾದ ಶಿಕ್ಷೆಯ ಕ್ರಮವಿತ್ತು. 


ಫಣಿಯಮ್ಮ ದಿನವಿಡೀ ದಣಿವಿಲ್ಲದ ದುಡಿತದಂತೆ ತನ್ನ ಚಾಕರಿಯನ್ನು ಮಾಡುತ್ತಿದ್ದಳು. ಅವಳ ನಿರ್ಲಿಪ್ತವಾದ ಸನ್ಯಾಸಿನಿಯಂತಹಾ ಬದುಕು ಅದೆಲ್ಲದಿಂದ ದೂರ ಉಳಿದಿತ್ತು. ಆಕೆಯ ಆ ನಿರ್ಲಿಪ್ತ ಧ್ಯಾನಸ್ಥ ಮನಸ್ಥಿತಿ ಕಡೆಕಡೆಗೆ ಒಪ್ಪತ್ತು ಊಟವನ್ನು ಬಿಟ್ಟದ್ದು ಹೀಗೆ..?? ಹಣ್ಣಾಗುತ್ತಾ.. ಮಾಗುತ್ತಾ ಹೋಗುವ ಫಣಿಯಮ್ಮ ಎಲ್ಲರಿಗೂ ಬೇಕಾದವರಾಗಿ ಹೋಗುತ್ತಾರೆ. ಆದರೆ ಅವರ ಅಂತರಂಗದ ತುಮುಲಗಳು ಏನಿದ್ದವು..??


ಫಣಿಯಮ್ಮ ಅಂಚೆ-ಅತ್ತೆ ಎಂದು ಪ್ರಸಿದ್ಧಿ ಪಡೆದದ್ದು ಹೇಗೆ..?? ಫಣಿಯಮ್ಮನ ಕಾಶಿಯಾತ್ರೆ, ಆಕೆ ಎಲ್ಲರಿಗೂ ಬೇಕಾದ ಬಗೆ.. ಅವರಂತೆಯೇ ಚಿಕ್ಕ ವಯಸ್ಸಿನಲ್ಲಿಯೇ ಬಾಲವಿಧವೆಯಾದ ದಾಕ್ಷಾಯಿಣಿಯ ದಿಟ್ಟ ನಡೆ, ಪ್ರೇಮಾಬಾಯಿಯ ವಿಭಿನ್ನ ಜೀವನ ಎಲ್ಲವೂ ಕಂಡು ಬರುತ್ತದೆ.


ಅನಕ್ಷರಸ್ಥೆಯಾದ ಫಣಿಯಮ್ಮನ ಲೋಕಜ್ಞಾನ, ತಿಳುವಳಿಕೆ, ಬುದ್ಧಿ ಹೇಳುವ ಪರಿ ಎಲ್ಲವೂ ಮೆಚ್ಚಾಗುತ್ತದೆ. ಫಣಿಯಮ್ಮನ ಅಂತ್ಯ ಹೇಗಾಯಿತು..?? ಎಲ್ಲಿ ಆಯಿತು..?? ಫಣಿಯಮ್ಮನ ಈ ಇತಿಹಾಸ, ಮಾಗಿದ ಅಂತರಂಗ ಲೇಖಕಿಗೆ ತಿಳಿದ ಬಗೆ ಹೇಗೆ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಾದಂಬರಿಯನ್ನು. 


ಈ ಕಾದಂಬರಿಯಲ್ಲಿ ಶಾನುಭೋಗ ಕಿಟ್ಟಪ್ಪನವರು ಹೇಳುತ್ತಿದ್ದ ಮಾತೊಂದಿದೆ. "ನಮ್ಮ ಫಣಿ ಅಂತ ಹೆಂಗ್ಸು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟೊಲ್ಲ" ಎಂದು. ಆ ಮಾತು ಅತಿಶಯೋಕ್ತಿ ಎಂದೆನಿಸದು ಸಹಾ. ಮಲೆನಾಡಿನ ಜನರ ಸ್ಥಿತಿಗತಿಗಳನ್ನು, ಆಗಿನ ಪರಿಸರವನ್ನು, ಆ ದಿನಗಳ ಸಂಪ್ರದಾಯಗಳನ್ನು, ಅಂದಿನ ಫಣಿಯಮ್ಮನಂತಹಾ ಮಡಿ ಹೆಂಗಸರ ಜೀವನಸ್ಥಿತಿಯನ್ನು ಕಣ್ಮುಂದೆ ಕಟ್ಟಿಕೊಡುವ ಕಾದಂಬರಿ ಇದು.


~ವಿಭಾ ವಿಶ್ವನಾಥ್