ಸೋಮವಾರ, ಏಪ್ರಿಲ್ 6, 2026

ಪೆರಿನಿ ತಾಂಡವ ( ಪುಸ್ತಕ ಯಾನ - 42)


 ಪುಸ್ತಕದ ಶೀರ್ಷಿಕೆ : ಪೆರಿನಿ ತಾಂಡವ

ಲೇಖಕರು : ಡಾ. ಕೆ. ಎನ್. ಗಣೇಶಯ್ಯ

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2016

ತೃತೀಯ ಮುದ್ರಣ : 2020 ( ನಾನು ಓದಿದ್ದು )

ಬೆಲೆ : 130 ರೂ.

ಪುಟಗಳು : 144


ಇದು 3 ಕತೆಗಳುಳ್ಳ ಕಥಾ ಸಂಕಲನ. ಭೋಗ ನಿರ್ಭಾಗ್ಯ, ಗೌರವರಾಧನೆ ಹಾಗೂ ತಾಂಡವ ಶಿಲ್ಪ.


ಮೊದಲಿಗೆ ಈ ಕಥಾ ಸಂಕಲನದ ಶೀರ್ಷಿಕೆಯ ಕುರಿತು ಹೇಳುತ್ತೇನೆ. ಮೂರನೆಯ ಕತೆ ತಾಂಡವ ಶಿಲ್ಪದಲ್ಲಿ ಬಹು ಮುಖ್ಯ ಪಾತ್ರ ವಹಿಸುವುದು ಪೆರಿನಿ ಎಂಬ ಶಾಸ್ತ್ರೀಯ ನೃತ್ಯ ರೂಪ. ಉಳಿದೆರಡು ಕಥೆಗಳಲ್ಲಿ ಬದುಕಿನ ಸುಂದರ ನಡೆಗಳು ಹೇಗೆ ತಾಂಡವ ರೂಪ ಪಡೆಯುತ್ತವೆ ಎನ್ನುವುದಕ್ಕೆ ಉಪಮೇಯವಾಗಬಹುದು ಎಂದು ' ಪೆರಿನಿ ತಾಂಡವ ' ಎನ್ನುವುದು ಇದರ ಶೀರ್ಷಿಕೆಯಾಗಿದೆ.


"ಭೋಗ ನಿರ್ಭಾಗ್ಯ" ಕಥೆಯು ವಿವಾದಿತ ಕಥೆಯೊಂದು ಪತ್ರಿಕೆಯಲ್ಲಿ ಪ್ರಕಟವಾಗುವ ಸಂದರ್ಭದಲ್ಲಿ ಅದರ ಹಿಂದಿನ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬೇರೆಯದ್ದೇ ಆಯಾಮವೊಂದು ತೆರೆದುಕೊಳ್ಳುತ್ತದೆ. ಕಥೆಯೂ ಹಾಗೂ ಕಥೆ ಬರೆದವರ ಬದುಕು ತೀರಾ ವಿಭಿನ್ನವಾಗಿಲ್ಲದೆ ಕಥೆಯ ಮೂಲಕ ನೇರಾನೇರವಾಗಿ ತಮ್ಮ ವಿಷಯವನ್ನು ತೆರೆದಿಡುತ್ತಾರೆ. ಪ್ರಾಣಿ ಪ್ರಪಂಚಕ್ಕೂ ಹಾಗೂ ಮಾನವ ಸಂಕುಲಕ್ಕೂ ವಿಭಿನ್ನ ಎನಿಸುವ ಬಹು ಪತ್ನಿತ್ವ ಹಾಗೂ ಏಕ ಪತ್ನಿತ್ವದ ಕುರಿತ ಕಥೆ ಎನ್ನಿಸಿದರೂ ಕಥೆಯ ಆಳಕ್ಕಿಳಿದರೆ ವಿಭಿನ್ನ ವಿಚಾರಗಳನ್ನು ಒರೆಗೆ ಹಚ್ಚುವಂತೆ ಮಾಡುತ್ತದೆ. ಸೂಕ್ಷ್ಮ ವಿಚಾರದ ವಾಸ್ತವದ ನೆಲೆಗಟ್ಟಿನ ಧಾರ್ಮಿಕ ಹಾಗೂ ವೈಚಾರಿಕ ನೆಲೆಗಟ್ಟಿನ ಕಥೆ ಇದು.


" ಗೌರವಾರಾಧನೆ " ಕಥೆಯಲ್ಲಿ ಗೌರವ, ಆರಾಧನೆ, ಪ್ರೀತಿ, ಪ್ರೇಮಗಳ ಚೌಕಟ್ಟನ್ನು ಒಂದು ಗಡಿಯಲ್ಲಿ ನಿಲ್ಲಿಸಿದರೆ ಅಥವಾ ನಿಲ್ಲಿಸದಿದ್ದರೆ ಉಗ್ರ ರೂಪ ತಳೆಯುವ ಸಾಧ್ಯತೆಯ ಕುರಿತ ಕಥೆ ಇದು. ಮನೋ ವೈಜ್ಞಾನಿಕ ವಿಶ್ಲೇಷಣೆಯಲ್ಲಿ ಸ್ನೇಹ, ಬದ್ಧತೆ, ವ್ಯಾಮೋಹ, ಅನುರಾಗ, ಅನ್ಯೋನ್ಯತೆ, ಪ್ರೇಮ ಸಾಕ್ಷಾತ್ಕಾರಗಳ ಪರಿಧಿಗಳಲ್ಲಿ ಶೂನ್ಯ ಪ್ರೇಮ, ರೋಮಾಂಚಕ ಪ್ರೇಮ, ಸಂಗಾತಿ ಪ್ರೀತಿ, ಬೆಪ್ಪು/ ಮೊದ್ದು ಪ್ರೀತಿಗಳು ವಿಭಿನ್ನವೇ.. ಒಬ್ಬರು ಪ್ರಾಧ್ಯಾಪಕರ ಕುರಿತು ಒಬ್ಬಳು ವಿದ್ಯಾರ್ಥಿನಿ ಹುಟ್ಟಿಸಿಕೊಂಡ ಭಾವನೆಗಳನ್ನು ಅರ್ಥೈಸಿಕೊಳ್ಳುವಿಕೆಯಲ್ಲಿ ವಿಫಲವಾದಾಗ ಉಂಟಾಗುವ ಪರಿಣಾಮಗಳ ಸೂಚಕವಾಗಿ ಬಿಂಬಿತವಾಗಿದೆ ಈ ಕಥೆ.


" ತಾಂಡವ ಶಿಲ್ಪ " ಇತಿಹಾಸದ ನೆಲೆಗಟ್ಟಿನಲ್ಲಿ ಬರೆದಿರುವ ಕಥೆ. ಪೆರಿನಿ ಎನ್ನುವುದು ಕ್ರಿ.ಶ. ಹನ್ನೆರಡನೆಯ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದ್ದ ಒಂದು ಶಾಸ್ತ್ರೀಯ ನೃತ್ಯರೂಪ. ಪುರುಷ- ಪೌರುಷವನ್ನು ಸೌಂದರ್ಯದಲ್ಲಿ ಸೆರೆ ಹಿಡಿಯುವುದು ಈ ನೃತ್ಯದ ವಿಶೇಷತೆ. ಕಾಕತೀಯರ ಕಾಲದಲ್ಲಿ ನಡೆದ ವಾರಂಗಲ್ ನಿಂದ 77 ಕಿ.ಮೀ ದೂರದಲ್ಲಿರುವ ಪಾಲಂಪೇಟೆ ಎಂಬಲ್ಲಿ ಕ್ರಿ.ಶ. 1231 ರಲ್ಲಿ ನಿರ್ಮಿಸಲಾದ ಶಿವ ದೇವಾಲಯದ ಸುತ್ತ ಭಿತ್ತಿಯಲ್ಲಿ, ಶಿಲ್ಪ ರೂಪದಲ್ಲಿ ಬಿಡಿಸಲಾಗಿರುವ ಈ ನೃತ್ಯದ ಭಂಗಿಗಳ ಹಿಂದೆ ಒಂದು ಲೋಕಕ್ಕೆ ಮರೆಯಾಗಿರುವ ಕಥೆ ಇದೆ. ಈ ದೇವಾಲಯದ ನಿರ್ಮಾಣಕ್ಕೆ ತನ್ನ ಬದುಕಿನ ಹತ್ತು ವರ್ಷಗಳನ್ನು ವ್ಯಯ ಮಾಡಿದ ಶಿಲ್ಪಿಯೊಬ್ಬ ಅದರ ಹಿಂದಿನ ಸತ್ಯಗಳನ್ನು ತಿಳಿದುಕೊಳ್ಳದೆ ತನ್ನ ಬದುಕನ್ನು ದಾರುಣವಾಗಿ ಅಂತ್ಯ ಮಾಡಿಕೊಂಡ ಕಥೆಯನ್ನು ಓದಿಯೇ ತಿಳಿಯಬೇಕು.


~ ವಿಭಾ ವಿಶ್ವನಾಥ್

ಎಂದೋ ಕಟ್ಟಿದ ಪುಷ್ಪಮಾಲೆ (ಪುಸ್ತಕ ಯಾನ - 41)


ಪುಸ್ತಕದ ಶೀರ್ಷಿಕೆ : ಎಂದೋ ಕಟ್ಟಿದ ಪುಷ್ಪಮಾಲೆ

ಲೇಖಕಿ : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಮೊದಲನೆಯ ಮುದ್ರಣ : 1995

ಎರಡನೆಯ ಮುದ್ರಣ : 2016 ( ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 188

ಬೆಲೆ : 125 ರೂ.


ನಾನು ಓದಿದ ಪುಸ್ತಕಗಳಲ್ಲಿ ವಿಭಿನ್ನವಾದ ಆರಂಭದೊಂದಿಗೆ ಮನಸೆಳೆದು ಸರಾಗವಾದ ಓದಿಗೆ ದಕ್ಕಿದ ಕಾದಂಬರಿ ಹೆಚ್. ಜಿ. ರಾಧಾದೇವಿಯವರ 'ಎಂದೋ ಕಟ್ಟಿದ ಪುಷ್ಪಮಾಲೆ'. ಕೌಟುಂಬಿಕ ಹಾಗೂ ಪ್ರೇಮ ಮಿಶ್ರಿತವಾದ ಈ ಕಾದಂಬರಿ ಕುಟುಂಬದ ಸಹಕಾರದೊಂದಿಗೆ, ಆ ಮನುಷ್ಯನಿಗೆ ದಕ್ಕುವ ಪ್ರೇಮದ ಸ್ಥೈರ್ಯವೂ ಸಿಕ್ಕಿದರೆ ಆತನ ಸಂತೋಷಕ್ಕೆ ಮಿಗಿಲೇ ಇಲ್ಲ. ಆದರೆ, ಆ ಕೌಟುಂಬಿಕ ಸಂತಸ ಹಾಗೂ ಪ್ರೇಮಗಳೆರಡೂ ಮಿಳಿತಗೊಂಡು ನಂತರ ಅದು ಕನಸೋ ಎಂಬಂತೆ ವಿರುದ್ಧ ದಿಕ್ಕಿನಲ್ಲಿ ಸಾಗಿ ಹೋದರೆ.. 'ಎಂದೋ ಕಟ್ಟಿದ ಪುಷ್ಪಮಾಲೆ' ಅರ್ಪಿತವಾಗಲೇ ಬೇಕು. ಆದರೆ, ಅರ್ಪಿಸಿದ ನಂತರ.. ಮುಗಿದ ನಂತರವೂ ಕಾಡಿದ ಕತೆ ಇದು.


ಕಾದಂಬರಿಯ ಆರಂಭದಲ್ಲಿ ಒಂದು ವಿವಾಹದ ಸಂಧರ್ಭದಲ್ಲಿ ಶುರುವಾಗುವ ರಂಜನೀಯ ಕಾರ್ಯಕ್ರಮಗಳಲ್ಲಿ ಬೀಗರು ಹಾಗೂ ಬೀಗರ ನಡುವೆ ನಡೆಯುವ ವಿನೋದಮಯ ಕಾರ್ಯಕ್ರಮದಲ್ಲಿ ಅದರಲ್ಲೂ ನಕಲಿ ಉಡುಗೊರೆಯ ಉಪಚಾರದಲ್ಲಿ ಎಲ್ಲರ ಮನಸೆಳೆದದ್ದು ರೇಷ್ಮೆ ಗೂಡಿನಿಂದ ಮಾಡಿದ ದುಂಡು ಮಲ್ಲಿಗೆಯ ಹಾರ. ಅದನ್ನು ಮಾಡಿದ್ದು ಅನುರಾಧಾ. ಆಕೆ ಹೆಣ್ಣಿನ ಕಡೆಯವಳು. ವಧುವಿನ ಸೋದರ ಸಂಬಂಧಿಯ ಗೆಳತಿ. ಆಕೆ ಕುಶಲ ಕಲೆಯಲ್ಲಿ ಮಾತ್ರವಲ್ಲದೇ ಓದಿನಲ್ಲಿಯೂ ಮುಂದು. 


ವಿನೋದಮಯವಾಗಿ ಶುರುವಾಗುವ ಈ ಕಾದಂಬರಿಯ ಆರಂಭದಲ್ಲಿ ನನ್ನ ಮನಸೆಳೆದದ್ದು ಇದರ ನಂತರದಲ್ಲಿ ನಡೆಯುವ ಮತ್ತೆರಡು ಕಾರ್ಯಕ್ರಮಗಳು. ಅಂತ್ಯಾಕ್ಷರಿ ಸ್ಪರ್ಧೆ. ಆದರೆ, ಈ ಅಂತ್ಯಾಕ್ಷರಿ ಸ್ಪರ್ಧೆ ಕೇವಲ ದೇವರನಾಮಗಳನ್ನು ಒಳಗೊಂಡದ್ದು. ಅದೆಷ್ಟು ವಿಭಿನ್ನ ಹಾಗೂ ಕ್ರಿಯಾತ್ಮಕ ಆಲೋಚನೆ ಎಂದೆನಿಸಿತು. ನಂತರ ಪ್ರತಿಯೊಂದು ಅಕ್ಷರಗಳಿಂದ ಶಬ್ಧಾವಳಿಯಿಂದ ದೇವರನ್ನು ಹೊಗಳುವ ಸ್ಪರ್ಧೆ, ದಾಸ ಸಾಹಿತ್ಯದ ಕುರಿತು ಪ್ರಶ್ನಾವಳಿಗಳು.. ಅಬ್ಬಾ..! ವಿನೋದದ ಹೆಸರಲ್ಲಿ ಬುದ್ಧಿಗೆ ಕಸರತ್ತು ನೀಡುವ ಸ್ಪರ್ಧಾ ಮಾಲಿಕೆಗಳು ನನಗೆ ಬಹಳಷ್ಟು ಇಷ್ಟವಾದವು.


ಹೀಗೆ ವಧುವಿನ ಕಡೆಯಿಂದ ಎಲ್ಲದರಲ್ಲೂ ಹೈಲೈಟ್ ಆದದ್ದು ಅನುರಾಧಾ ಆದರೆ ಗಂಡಿನ ಕಡೆಯಲ್ಲಿ ಹೈಲೈಟ್ ಆದದ್ದು ಮನಮೋಹನ.


ವಾರುಣಿಯ ಕಡೆಯಿಂದ ಹರಿಣಿಯ ಮದುವೆಗೆ ಹೋಗಿ ಬಂದ ಸರಳ ವ್ಯಕ್ತಿತ್ವದ ಅನುರಾಧಾ ಥೇಟ್ ಅವಳ ತಂದೆಯ ಹಾಗೆಯೇ.. ಆಕೆಯ ತಂದೆ ರಾಜಾರಾಯರು ಹಳ್ಳಿಯಲ್ಲಿ ಶ್ರೀಮಂತರು. ಆದರೂ, ಇಬ್ಬರಿಗೂ ಶ್ರೀಮಂತಿಕೆಯ ಮಾಡವಿಲ್ಲ.. ತೋರ್ಪಡಿಸುವಿಕೆಯ ಅಹಂಕಾರವಿಲ್ಲ. ಆದರೆ, ಆಕೆಯ ತಾಯಿ ಜಯಮ್ಮ ಅದಕ್ಕೆಲ್ಲಾ ತದ್ವಿರುದ್ಧ. ಆಕೆ ರಾಜಾರಾಯರ ಎರಡನೇ ಹೆಂಡತಿ. ಮೊದಲ ಹೆಂಡತಿ ಮಕ್ಕಳಿಲ್ಲದೇ ತೀರಿ ಹೋದಾಗ ಜಯಮ್ಮನ ತಾಯಿ ಸುಂದರಮ್ಮ ರಾಯರನ್ನು ಹೇಗೇಗೋ ಮಾಡಿ ಒಪ್ಪಿಸಿ ತನ್ನ ಮಗಳನ್ನು ಗಂಟು ಹಾಕಿದ್ದರು. ಅನುರಾಧಾಳಿಗೆ ಒಬ್ಬ ತಮ್ಮ ರಾಜಗೋಪಾಲ. ಆತ ಸಹಾ ತಂದೆ ಹಾಗೂ ಅಕ್ಕನ ಪಾರ್ಟಿಯೇ. ಜಯಮ್ಮನ ತಾಯಿ ಸುಂದರಮ್ಮನ ಜಬರ್ದಸ್ತು ಹಾಗೂ ಜಯಮ್ಮನ ಕಾರುಬಾರಿನಿಂದ ತನ್ನ ತವರು ಮನೆಯ ಪಾರುಪತ್ಯ ನೋಡುತ್ತಾ ನಾಲ್ಕು ಸೋದರಿಯರ ಜೊತೆ ತಮ್ಮ ಶಶಿಧರನನ್ನು ಎಂ.ಬಿ.ಬಿ.ಎಸ್ ಮಾಡಿಸುತ್ತಿದ್ದುದಲ್ಲದೇ ಮಗಳಿಗೇ ಆತನನ್ನೇ ವಿವಾಹ ಮಾಡಿಸುವ ಇಚ್ಛೆ ಜಯಮ್ಮನವರದ್ದು.


ಆತ ಯೋಗ್ಯನಾಗಿದ್ದರೆ ರಾಜಾರಾಯರ ಅಭ್ಯಂತರವೇನೂ ಇರುತ್ತಿರಲಿಲ್ಲ. ಆದರೆ, ಆತ ಅದಕ್ಕೆ ಅರ್ಹನಲ್ಲ. ಆತನ ಕಣ್ಣಿದದ್ದು ಅನುರಾಧಾಳಿಗೆ ಬರುವ ಎರಡು ಲಕ್ಷ ಹಾಗೂ ಅವಳ ಪಾಲಿನ ಆಸ್ತಿ.  ಅಲ್ಲದೇ, ಗುಣ, ನಡತೆ ಕೂಡಾ ಸರಿಯಿರಲಿಲ್ಲ.. ಅಲ್ಲದೆ, ಜೊತೆಯ ಡಾಕ್ಟರ್ ಚಂದ್ರಿಕಾ ಜೊತೆಗೆ ಅಗತ್ಯಕ್ಕಿಂತ ಸಲುಗೆ ಹೆಚ್ಚಿತ್ತು. 


ಈ ಮಧ್ಯೆ ವಿವಾಹದ ದೆಸೆಯಿಂದ ಬಡವನಾದರೂ ಮನಮೋಹನ ಅನುರಾಧಾಳಿಗೆ ತಕ್ಕ ವರ ಎನ್ನಿಸಿದ್ದನ್ನು ಆಕೆ ತನ್ನ ತಂದೆಗೆ ತಿಳಿಸಿದಾಗ ಅವರೂ ಪರೀಕ್ಷಿಸಿ ಒಪ್ಪಿದ್ದರು. ಬಡವನಾದರೂ ಸದ್ಗುಣವಂತ ವರನಿಗೆ ಮಗಳನ್ನು ನಿಶ್ಚಿಯಿಸಬೇಕೆಂದಾಗ ಅಡ್ಡಿಯಾಗಿದ್ದು ಅವಳ ತಾಯಿ ಜಯಮ್ಮ. ಆಕೆಯನ್ನು ನೋಡಿದರೆ ಆಕೆ ನಿಜವಾಗಲೂ ಅನುರಾಧಾಳ ತಾಯಿಯೇ..?? ಅಥವಾ ಅನುರಾಧಾ ಮೊದಲ ಹೆಂಡತಿ ಮಗಳೇನಾದರೂ ಆಗಿದ್ದಿರಬಹುದಾ ಎನ್ನುವ ಪ್ರಶ್ನೆ ಮೂಡುತ್ತದೆ. 


ಅನುರಾಧಾಳ ಹಣೆಯ ಬರಹವೇ ರಾಧೆಯಂತೆ ಇದ್ದಿರಬಹುದಾ..?? ಆಕೆಯ ಪಾಲಿಗೆ ಮನಮೋಹನನೂ ದಕ್ಕಲಿಲ್ಲ. ಇತ್ತ ಅಮ್ಮನಿಗೂ ತನ್ನ ತಮ್ಮನ ಕಲ್ಯಾಣ ಗುಣಗಳು ತಿಳಿದು ಗಿರಿಧರನನ್ನು ಸಹಾ ದೂರವಿಟ್ಟಳು. ಎಂದೋ ಕಟ್ಟಿದ ಹಾರ ಮನಮೋಹನನಿಗೆ ಎಂದಾದರೂ ದಕ್ಕಬಹುದೇ ? ಅಥವಾ ಮದುವೆಯ ವಿನೋದಾವಳಿಯಲ್ಲಿ ಆತ ಅದನ್ನು ಗೆದ್ದು ಅದು ಆತನ ಪಾಲಿಗೆ ಇಲ್ಲವಾದಂತೆ ಆಗಬಹುದೇ ? ಮನಮೋಹನ ಹಾಗೂ ಅನುರಾಧಾರ ಮುಂದಿನ ಭವಿಷ್ಯವೇನು ? ಅನುರಾಧಾಳ ಬದುಕು ರಾಧೆಯ ಹಾಗಾಯಿತಾ..?


ಇನ್ನು ಹೆಚ್ಚು ಹೇಳಿ ಪುಸ್ತಕದ ಸ್ವಾರಸ್ಯವನ್ನು ಹಾಳು ಮಾಡಲಾರೆ. ಓದಿಯೇ ಅಘ್ರಾಣಿಸಬೇಕು ಈ 'ಪುಷ್ಪಮಾಲೆ'ಯ ಸೌಗಂಧವನ್ನು.


~ವಿಭಾ ವಿಶ್ವನಾಥ್

ಕತೆಪುಸ್ತಕ ( ಪುಸ್ತಕ ಯಾನ - 40)

 

ಪುಸ್ತಕದ ಶೀರ್ಷಿಕೆ : ಕತೆಪುಸ್ತಕ

ಲೇಖಕರು : ಜೋಗಿ

ಪ್ರಕಾಶಕರು : ಅಂಕಿತ ಪುಸ್ತಕ

ಮೊದಲ ಮುದ್ರಣ : 2021

ಪುಟಗಳು : 128

ಬೆಲೆ : 130 ರೂ.


'ಜೋಗಿ' ಎಂಬ ಕಾವ್ಯನಾಮದಲ್ಲಿ ಬರೆಯುವ ಗಿರೀಶ್ ರಾವ್ ಹತ್ವಾರ್ ರವರ ಸಣ್ಣ ಕತೆಗಳು ನನಗಿಷ್ಟವಾಗುವುದು ಅವುಗಳ ಅಂತ್ಯದಿಂದ. ಅವುಗಳ ಅಂತ್ಯಗಳು ವಿಭಿನ್ನ. ಅವು ಹೀಗೆಯೇ ಅಂತ್ಯಗೊಳ್ಳುತ್ತವೆ ಎಂಬುದನ್ನು ಲೇಖಕರು ಕಟ್ಟಿ ಕೊಡುವುದಕ್ಕಿಂತ ಓದುಗರಿಗೆ ಬಿಡುವ ರೀತಿ ಇಲ್ಲವೇ ಅಲ್ಲೊಂದು ಮಾಂತ್ರಿಕತೆಯ ಸ್ಪರ್ಶದಂತಹಾ ಅಂತ್ಯ ಕತೆಗಳನ್ನು ಬೇರೆಯೇ ನಿಟ್ಟಿನಲ್ಲಿ ನೋಡುವಂತೆ ಮಾಡುತ್ತವೆ. ಈ ಕತೆಪುಸ್ತಕದಲ್ಲಿ ಇಂತಹಾ 11 ಕತೆಗಳಿವೆ.


'ಸದಾಶಿವ ಲವ್ಸ್ ನೂತನ್' ಶೀರ್ಷಿಕೆ ಕಂಡಾಕ್ಷಣ ಇದು ಪ್ರೇಮ ಕತೆಯಾಗಿರಬಹುದಾ ಎಂದು ಕುತೂಹಲ ಹುಟ್ಟಿಸಿದರೂ ಮನುಷ್ಯ ಹಾಗೂ ಬೆಕ್ಕಿನ ನಡುವಿನ ನವಿರಾದ ಬಾಂಧವ್ಯದ ಕತೆಯೊಂದು ತೆರೆದುಕೊಳ್ಳುತ್ತದೆ. ಆದರೆ, ಆ ಬಾಂಧವ್ಯ ಎಷ್ಟು ಕಾಲ ಬಾಳುತ್ತದೆ ಎನ್ನುವುದನ್ನು ಓದಿಯೇ ತಿಳಿಯಿರಿ. ಓದುತ್ತಿದ್ದ ಹಾಗೆಯೇ ಒಮ್ಮೆ 'ಚಾರ್ಲಿ' ಸಿನಿಮಾ ನೆನಪಾಯಿತು. ಬೆಕ್ಕು ಬಂದ ನಂತರ ಅವರಿಗೆ ಆ ಮನೆಯಲ್ಲಿ ತಾನೊಬ್ಬನೇ ಇಲ್ಲ ಎನ್ನುವುದು ಸುಸ್ಪಷ್ಟವಾಗಿ ಅನುಭವಕ್ಕೆ ಬಂದದ್ದು ನಮ್ಮ ಅನುಭವಕ್ಕೂ ದಕ್ಕುವಂತಿದೆ.


ಮಾಳವಿಕಾ ಕತೆ ಕೊರೋನಾ ಕಾಲದ ಕತೆಯಂತೆ ಭಾಸವಾದರೂ ಆ ಕವಿತೆಗಳು ಅವಳಲ್ಲಿ ಹುಟ್ಟಿಸುವ ಪ್ರಶ್ನೆಗಳು ಹಾಗೂ ಭಾವಗಳು ನಮಗೂ ದಾಟುತ್ತವೆ. ಅಲ್ಲದೆ, ಕತೆಯ ಶೀರ್ಷಿಕೆ "ಕೆಟ್ಟ ಕವಿತೆಯ ಕಡೆಯ ಸಾಲು" ಎಂದು ಓದಿದಾಗ ಕವಿತೆ ಬರೆಯುವವರು ತಮ್ಮ ಕವಿತೆಯನ್ನು ಕೆಟ್ಟ ಕವಿತೆ ಎಂದುಕೊಳ್ಳುತ್ತಾರಾ ? ಎಂಬ ಪ್ರಶ್ನೆಯೊಂದು ಮೂಡಿ ಮಾಯವಾಯಿತು. ಈಗ ನಾನೂ ಕವಿತೆಗಳ ಕಡೆಯ ಸಾಲುಗಳನ್ನು ಹೆಚ್ಚು ಗಮನಿಸುವಂತನಿಸುತ್ತದೆ. ಅಷ್ಟಕ್ಕೂ ಮಾಳವಿಕಾ ಸಮಸ್ಯೆ ಕೂಡಾ ಸಮಸ್ಯೆಯಾ ? ಆ ಅಪೂರ್ಣ ಕವಿತೆಗಳ ಮುಂದಿನ ಕತೆ ಏನು ? ನೀವೇ ಓದಿ. ನನಗಂತೂ ಅದು ಕೆಟ್ಟ ಕವಿತೆ ಎಂದೆನಿಸಲಿಲ್ಲ.


ಒಂದು ಕವಿತೆ, ಕಾವ್ಯ ಮತ್ತೊಬ್ಬರ ಬದುಕಲ್ಲಿ ಜೀವನ್ಮುಖಿಯಾಗಬಲ್ಲದೋ ಹೊರತು ಸಾವಿನಂಚಿಗೆ ದೂಡಲಾರದು ಎಂದುಕೊಂಡಿದ್ದೆ. "ಕವಿತೆ ಮತ್ತು ಆತ್ಮಹತ್ಯೆ" ಹೀಗೂ ಇದ್ದಿರಬಹುದಾ ಎಂದು ಯೋಚಿಸುವಂತೆ ಮಾಡಿದ ಕತೆ.


ಶ್ರೀಪತಿಯ ಊಹೆಯಲ್ಲಿದ್ದ ವೈಕುಂಠವನ್ನು ಆತ ಕಡೆಗೂ ಕಂಡಿದ್ದ. ಆದರೆ, ಆತನ ತಂದೆ ಶ್ರೇಷ್ಠಿಗಳು ಹೋಗಬೇಕೆಂದಿದ್ದ ವೈಕುಂಠ, ಅವರ ಊಹೆಯ ವೈಕುಂಠ ಅದೇ ಆಗಿತ್ತಾ..?? ನಮ್ಮ ಊಹೆಗೂ, ವಾಸ್ತವಕ್ಕೂ ಹೊಂದಿಕೆ ಇರುತ್ತದಾ..?? ಈಗೊಂದು ಹೊಳಹು ಹುಟ್ಟಿಸಿದ ಕತೆ "ಇಷ್ಟು ದಿನ ಈ ವೈಕುಂಠ".


ನಮ್ಮ ದೃಷ್ಟಿಯಲ್ಲಿ ಅತ್ಯುತ್ತಮ ಎಂದುಕೊಳ್ಳುವ ಕತೆಗಳು ಹೇಗಿರುತ್ತವೆ ? ಅಂತಹಾ ಕತೆಗಳು ಜಗತ್ತಿನ ಅತ್ಯುತ್ತಮ ಕತೆಗಳೂ ಆಗಿರುತ್ತವಾ ? ಹಾಗಿದ್ದರೆ, ಅಂತಹಾ ಕತೆಗಳನ್ನು ಆಯ್ಕೆ ಮಾಡುವವರು ಯಾರು ? ಹೀಗೆ "ಜಗತ್ತಿನ ಅತ್ಯುತ್ತಮ 60 ಕತೆಗಳು" ನಮ್ಮ ಮುಂದಿದೆ. ಆಯ್ಕೆ ಸಮಿತಿಯ ಕೇಶವಮೂರ್ತಿಯ ಗೊಂದಲಕ್ಕೆ ನೀವೂ ಉತ್ತರಿಸಬಹುದು ನೋಡಿ.


ಶಾಮಸುಂದರ ಕತೆ ಹೇಳುತ್ತಿದ್ದಾನಾ..?? ಕಥೆ ಕೇಳುತ್ತಿದ್ದಾನಾ..?? ಶಾಮಸುಂದರನ ಕತೆ ನಿಮಗೂ ತಿಳಿಯಬೇಕಾ..?? "ಅನ್ ಲೆಸ್" ಕತೆಯ ಒಳಗಿಳಿಯದೆ ನೀವು ಈಗ ಶಾಮಸುಂದರನ ಕತೆ ತಿಳಿಯಲಾರಿರಿ ಬಿಡಿ.


ನೇರಂಬಳ್ಳಿ ಲಕ್ಷ್ಮೀನಾರಾಯಣರ ಮುಸ್ಸಂಜೆಯ ಕತೆಯಾಗಬೇಕಾಗಿದ್ದ ಇದು "ವಾರುಣಿಯ ಮುಸ್ಸಂಜೆ"ಯಾದದ್ದು ಏಕೆ ? ನೇರಂಬಳ್ಳಿಯವರ ಪಾತ್ರವಿಲ್ಲದೇ ಈ ಕತೆ ಎಷ್ಟು ಅಪೂರ್ಣವೆನಿಸುತ್ತದೆಯೋ.. ವಾರುಣಿಯ ನಿರ್ಧಾರ ಕಂಡೂ ಕಾಣದಂತೆ ಕಂಡು ಬಂದರೂ ಅದೂ ಕತೆಯ ಮುಖ್ಯ ಜೀವಾಳವೇ ಆಗಿ ಹೋಗಿದೆ.


ದೇವರ ಮೂರ್ತಿಯನ್ನು ಮಾತ್ರ ಕೆತ್ತುತ್ತಿದ್ದ ಚಂದ್ರಾಚಾರಿಗೆ ಈಗ ಹೊಸ ಸಮಸ್ಯೆಯೊಂದು ಎದುರಾಗಿತ್ತು. ಸದಾ ದೇವರ ಮೂರ್ತಿಯನ್ನು ಮಾತ್ರ ಕೆತ್ತುತ್ತೇನೆ ಎಂದು ಪಣ ತೊಟ್ಟಿದ್ದವನು ಈಗ ಮುಖ್ಯಮಂತ್ರಿ ಗೋಪಾಲಕೃಷ್ಣ ನಾಯಕರ ಮೂರ್ತಿಯನ್ನು ಕೆತ್ತನೆ ಮಾಡಬೇಕಾದ ಪರಿಸ್ಥಿತಿ. ಅವನಲ್ಲದಿದ್ದರೆ, ಅವನ ಶಿಷ್ಯರಾದರೂ ಮಾಡುತ್ತಾರೆ ಎಂದರೆ ಅದಕ್ಕೂ ಈತನ ಅಡ್ಡಗಾಲು. "ನಾಯಕರ ಮೂರ್ತಿ" ಸಿದ್ಧವಾಯಿತೇ ? ಚಂದ್ರಾಚಾರಿಯ ಸಮಸ್ಯೆಗೆ ಪರಿಹಾರ ಸಿಕ್ಕಿತೇ ? ನೀವೇ ಓದಿ ತಿಳಿಯಿರಿ.


ಎಪ್ಪತ್ತೆಂಟು ವರ್ಷದ ಪರೇಶ್ ಲಾಲ್ ಜೀವನ್ ಲಾಲ್ ಮಕಮಲ್ ಜೀ ಯ ಮನೆಯ ಕತೆ ಎನ್ನಿಸಬಹುದಾದಂತಹಾ ಕಥನ ಆ ಮನೆಯ ಸೊಸೆ ಪದ್ಮಿನಿಯಿಂದಾಗಿ ಬೇರೆಯದ್ದೇ ರೀತಿ ಭಾಸವಾಗುವ ಕತೆ 'ಲಾಲ್ ಕಿತಾಬ್'.


"ಬೆನಜೀರ್ ಕೊಂಚವೇ ಕತ್ತು ಹೊರಳಿಸಿ ತಿರುಗಿ ನೋಡಿದಂತಾಯ್ತು. ನಿರಂಜನ ಆಸೆಯಿಂದ ಕಾಯುತ್ತಿದ್ದ. ಕಣ್ಣು ಕಣ್ಣು ಈಗ ಒಂದಾಗುತ್ತದೆ ಅಂತ ಕಾತರಿಸಿದ. ಬೆನಜೀರ್ ಇನ್ನೇನು ನಗುತ್ತಾಳೆ ಅಂತ ಹಾರೈಸಿದ. ಬೆನಜೀರ್ ಕತ್ತು ಹೊರಳಿಸಿದಳು. ಅವಳ ಕಣ್ಣು ನಿರಂಜನನತ್ತ ಹಾಯಲಿಲ್ಲ. ಅವಳು ಎತ್ತ ನೋಡುತ್ತಿದ್ದಾಳೆ ಅಂತ ನಿರಂಜನ ಅವಳ ಕಣ್ಣೋಟವನ್ನೇ ಹಿಂಬಾಲಿಸಿದ. ಅವಳು ನಿರಂಜನನ ಕಾರಿನ ಎದುರಿನಲ್ಲಿರುವ ಕಾರಲ್ಲಿ ಕೂತವನನ್ನೇ ನೋಡಿದಂತಿತ್ತು. " 


ಇದು 'ಬೆನಜೀರಳ ಮುಗುಳುನಗೆ' ಎಂಬ ಕತೆಯ ಒಂದು ಭಾಗವಷ್ಟೇ.. ಈ ಬೆನಜೀರ್ ಯಾರು ? ಅವಳ ಈ ನಡೆಯ ಕಾರಣವೇನು ತಿಳಿದು ನೀವೂ ಈ ಬೆನಜೀರ್ ನೋಟಕ್ಕೆ ಹಂಬಲಿಸದಿರಿ ಮತ್ತೆ.


ದೇಶಭಕ್ತ ದೇಸಾಯಿ ಸಾವಿರದ ಎಂಟು ಬಾರಿ ಭಗವದ್ಗೀತೆಯ ಹದಿನೆಂಟೂ ಅಧ್ಯಾಯಗಳನ್ನು ಬರೆದು ಮಠಕ್ಕೆ ತರುತ್ತಾರೆ. ಇದಾದ ನಂತರ ಏನಾಯಿತು ? ಭಗವದ್ಗೀತೆ ಕುರಿತು ನಮಗೆಲ್ಲಾ ಅರಿವಿದೆ. 'ದೇಸಾಯಿಯ ಭಗವದ್ಗೀತೆ' ಕುರಿತು ತಿಳಿಯಲು ಓದಿ ಈ ಕತೆ.


ಇತ್ತೀಚೆಗೆ ಜೋಗಿಯವರ ಕೆಲವು ಪುಸ್ತಕಗಳನ್ನು ಓದಿದಾಗ ಕೆಲವೊಮ್ಮೆ ಕೆಲವೊಂದು ವಿಚಾರ ಅಥವಾ ಕತೆಗಳು ಚರ್ವಿತ ಚರ್ವಣವಾಗಿರುತ್ತಿದ್ದವು ಎಂದೆನಿಸುತ್ತಿತ್ತು. ಆದರೆ, ಈ ಕತೆ ಪುಸ್ತಕ ಹಾಗೆನಿಸಲಿಲ್ಲ. ಓದಿರದ ಹೊಸ ಕತೆಗಳಿವೆ ಇಲ್ಲಿ. 'ಕತೆಪುಸ್ತಕ' ಎನ್ನುವುದಕ್ಕಿಂತ ಶೀರ್ಷಿಕೆ ಬೇರೆ ಇದ್ದಿದ್ದರೆ ಮತ್ತಷ್ಟು ಓದುಗರನ್ನು ತನ್ನತ್ತ ಸೆಳೆಯುವಂತಹಾ ಪುಸ್ತಕ. ತಾಜಾ ಕಥಾ ಸಂಕಲನ ಓದುವವರಿಗೆ ಇಲ್ಲಿದೆ ಚೆಂದದ ಕತೆಗಳ ಗುಚ್ಛ.


~ವಿಭಾ ವಿಶ್ವನಾಥ್

ಕೂರ್ಗ್ ರೆಜಿಮೆಂಟ್ (ಪುಸ್ತಕ ಯಾನ - 39)


 ಪುಸ್ತಕದ ಶೀರ್ಷಿಕೆ :  ಕೂರ್ಗ್ ರೆಜಿಮೆಂಟ್

ಲೇಖಕರು : ಮೇಜರ್ ಡಾ| ಕುಶ್ವಂತ್ ಕೋಳಿಬೈಲು

ಪ್ರಕಾಶಕರು : ಮೈತ್ರಿ ಪ್ರಕಾಶನ

ಮೊದಲ ಮುದ್ರಣ : 2020

ಬೆಲೆ : 100 ರೂ.


ಬಂದೂಕು ಹಿಡಿದವರ ನಾಡಿಮಿಡಿತ ಎನ್ನುವ ಅಡಿ ಬರಹ ಇಲ್ಲಿರುವ ಪ್ರತಿ ಕಥೆಗಳಿಗೂ ಸುಂದರವಾಗಿ ಹೊಂದಿಕೆಯಾಗುತ್ತದೆ. ಸೈನಿಕರ ಬದುಕನ್ನು ಸೈನ್ಯದಲ್ಲಿರುವಾಗ ಮತ್ತು ಹುತಾತ್ಮರಾದಾಗ ಹೆಚ್ಚು ನೆನೆಯುವ ನಾವು ಸೈನಿಕರ ನಿವೃತ್ತ ಬದುಕಿನ ಕುರಿತು ಅಷ್ಟು ತಿಳಿದಿರುವುದಿಲ್ಲ. ಇಲ್ಲಿರುವ ಕಥೆಗಳು ಕೇವಲ ಕಥೆಗಳಂತೆ ಭಾಸವಾಗುವುದಿಲ್ಲ. ಬದಲಿಗೆ, ಈ ಕಥೆಗಳು ವಾಸ್ತವದ ದೃಶ್ಯಗಳಂತೆ ಕಣ್ಣಿಗೆ ಕಟ್ಟುತ್ತವೆ. 


"ಕೂರ್ಗ್ ರೆಜಿಮೆಂಟ್" ವಂಶ ಪಾರಂಪರ್ಯವಾಗಿ ಸೈನ್ಯಕ್ಕೆ ಸೇರುವವರ ಮನೆಯವರ ಮನದಾಳವನ್ನು ತೆರೆದಿಡುತ್ತದೆ. ತನ್ನ ಹಿಂದಿನ ತಲೆಮಾರಿನವರು ಯುದ್ಧದಲ್ಲಿ ಹುತಾತ್ಮರಾಗಿದ್ದರೂ ಜಗ್ಗದೇ ಮುಂದೆ ಹೋಗುವ ಮುಂದಿನ ತಲೆಮಾರನ್ನು ಸೆಳೆಯುವ ಗುಣ ಯಾವುದು..? ಎಂಬ ಪ್ರಶ್ನೆಯೊಂದಿಗೆ ಕೂರ್ಗ್ ರೆಜಿಮೆಂಟ್ ನ ಸೆಳೆಯುವ ಕಥೆ ಸೆಳೆಯುತ್ತದೆ.


"ಬೊಳ್ಳಮ್ಮ" ಕಥೆಯು ಕೂರ್ಗ್ ರೆಜಿಮೆಂಟ್ ಪ್ರಪಂಚ ಎಂದುಕೊಂಡು ಹೊರಟ ಮುತ್ತಣ್ಣನ ಪ್ರೇಮ ಕಥೆಯಿದೆ. ಹೇಳದೆ ಉಳಿದ ಪ್ರೇಮವೊಂದು ಅವನು ಪ್ರೇಮವನ್ನು ಬಯಸುವ ಹೊತ್ತಿಗೆ ಅವನ ಕೈಗೆ ದಕ್ಕಿತೇ ಅಥವಾ ಕೈ ಜಾರಿತೇ ಎಂದು ತಿಳಿಯಲು ಈ ಕಥೆ ಓದಿ


ಭರ್ತಿ ಹದಿನೆಂಟು ವರ್ಷಗಳ ಸೇನಾ ಜೀವನದ ನಂತರ ತನ್ನ ಮೂವತ್ತೈದನೆಯ ವಯಸ್ಸಿನಲ್ಲಿ ಹೊಸ ಜೀವನ ಆರಂಭಿಸಲು ಹೊರಟ "ಗಣಿ ಬೋಪಣ್ಣ" ನಿಗೆ ಎಲ್ಲಾ ಮಾಜಿ ಸೈನಿಕರಿಗೂ ಇರುವಂತೆ ಸೆಕೆಂಡ್ ಹ್ಯಾಂಡ್ ಜೀಪಿನ ಮೇಲೆ ಎಲ್ಲಿಲ್ಲದ ಮೋಹ. ಜೀಪಿನ ವ್ಯಾಮೋಹಕ್ಕೆ ಒಳಗಾಗಿ ವಿಚಾರಣೆ ನಡೆಸದ ಫಲವಾಗಿ ಜೀಪು ಕೇಸು ಹಾಗೂ ಕುಡಿತ, ನಾಲಿಗೆಯ ಹಿಡಿತದ ತಪ್ಪಿದ ಫಲವಾಗಿ ಗಣಿ ಬೋಪಣ್ಣನ ಬದುಕೇ ಬದಲಾಯಿತು. ಬದಲಾವಣೆ ಹೀಗೂ ಇರಬಹುದಾ ಎನ್ನಿಸಿದರೂ ವಾಸ್ತವ ಹೀಗೆಯೇ ಇರುತ್ತದೆ ಎಂದೆನಿಸುವಂತೆ ಮಾಡಿದ ಕಥೆ ಇದು.


ಯಾವಾಗಲೂ "ಅವ್ವ" ಒಬ್ಬಳೇ.. ಅವಳ ಆಲೋಚನೆಗಳು ಮಕ್ಕಳನ್ನು ತಟ್ಟಲಾರವು ಎಂಬುದು ಮತ್ತೆ ಮತ್ತೆ ನಿರೂಪಿತವಾಗುವಂತಹಾ ಕಥೆ ಇದು. 

"ಅವ್ವ ಇತ್ತೀಚಿನ ಕೆಲವು ವರ್ಷಗಳಿಂದ ಹಳೆ ಸಾವಿರ ರೂಪಾಯಿ ನೋಟಿನ ತರ ಚಲಾವಣೆಯಲ್ಲಿ ಇಲ್ಲದಾಗಿದ್ದಾರೆ" ಎಂಬ ಮಾತು ಗಾಢವಾಗಿ ಆಲೋಚನೆಗೆ ಹಚ್ಚುತ್ತದೆ.


"ಒಂದು ಬೊಗಸೆ ಮಣ್ಣು" ಸೈನಿಕನ ಬದುಕಿನ ಜೊತೆಗೆ ಅವನ ಬದಲಾದ ವೈಯಕ್ತಿಕ ಹಿನ್ನೆಲೆಯನ್ನು ಸಹಾ ಬಿಂಬಿಸುತ್ತದೆ. ದೇಶದ ಒಂದು ಹಿಡಿ ಮಣ್ಣಿಗಾಗಿ ಅವನು ಅಲ್ಲಿ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿದ್ದರೆ ಇಲ್ಲಿ "ಉಳುವವನೆ ಹೊಲದೊಡೆಯ" ಎಂಬ ಕಾನೂನಿನಡಿ ತನ್ನ ವೈಯಕ್ತಿಕ ಹಿಡಿ ಮಣ್ಣನ್ನು ಕಳೆದುಕೊಂಡ ಕತೆ ಇದು.


"ಹುಲಿಮದುವೆ"ಯು ಶಿಕಾರಿಯ ಹಿಂದಿನ ದಿನಗಳ ವೈಭೋಗವನ್ನು ನೆನಪಿಸಿ ಈಗಿನ ದಿನಗಳನ್ನು ಸಹಾ ತುಲನೆ ಮಾಡುತ್ತದೆ. ಆ ಊರಿನಲ್ಲಿ ಕೊನೆಯ ಹುಲಿ ಮದುವೆ ನಡೆದದ್ದು ಸ್ವಾತಂತ್ರ್ಯ ಬರುವುದಕ್ಕೂ ಹತ್ತು ವರ್ಷ ಮೊದಲು ಎಂದು ನೆನಪಿಸಿಕೊಂಡ ಅಪ್ಪಿ ತನ್ನ ಧೈರ್ಯವನ್ನು ಪ್ರದರ್ಶಿಸಹೊರಟ. ಹುಲಿಮದುವೆಯಾದನೋ.. ಹುಲಿ ಬಾಯಿಗೆ ಸಿಕ್ಕನೋ ಅಥವಾ ಹುಲಿ ಬಾಯಿಂದ ತಪ್ಪಿಸಿಕೊಂಡನೋ ತಿಳಿಯಲು ಈ ಕಥೆ ಓದಬೇಕು.


"ಮುತ್ತಿನ ಹಾರ" ಸಿನಿಮಾ ಕಥೆಯಂತೆ ಬಾವುಕ ಕತೆಯಲ್ಲ. ಬದಲಿಗೆ ದಿಟ್ಟ ಸಂಭಾಷಣೆಗಳಿಂದ ಈ ಕತೆ ಇಷ್ಟವಾಯಿತು. ವಾಸ್ತವಕ್ಕೆ ತೀರಾ ಹತ್ತಿರವೆನಿಸಿದ ಕತೆ. ಭಾವನೆಗಳು ಅರ್ಥವಾಗಲು ಭಾಷೆ ಬೇಕಾಗಿಲ್ಲವೆಂದು ಅನ್ನಿಸುವಂತೆ ಮಾಡಿದ ಕಥೆ ಇದು.


"ಬಾಲ" ಇಂದಿನ ದಿನಗಳ ಪ್ರತಿನಿಧಿಯಂತೆ ಭಾಸವಾಗುತ್ತಾನೆ. ವಿವಿಧ ಕೆಲಸಗಳನ್ನು ಮಾಡುತ್ತಾ, ಅದರಲ್ಲಿಯೂ ಪ್ರಾಮಾಣಿಕತೆಯಿಲ್ಲದೆ ಅತಿ ಎತ್ತರಕ್ಕೆ ಏರಿದ ಅಪ್ರಾಮಾಣಿಕ ವ್ಯಕ್ತಿಯಾಗಿ ಭಾಸವಾಗುತ್ತಾನೆ. ಅನ್ಯಾಯಕ್ಕೆ ಹೆಚ್ಚಿನ ಆಯಸ್ಸು ಇರುವುದಿಲ್ಲ ಎಂಬಂತೆ ಕತೆಯ ಅಂತ್ಯವಿದೆ. 


"ಡಾ ಮುತ್ತಮ್ಮ" ವೈದ್ಯಳಾಗಿ ಹಗಲು ರಾತ್ರಿಯ ಓಡಾಟದಲ್ಲಿ ಉರಿದು ಹೋಗುತ್ತಿರುವ ತನ್ನ ಈ ವ್ಯಸ್ತ ಜೀವನಕ್ಕೆ ಒಂದು ಹೊಸ ಕಾಯಕಲ್ಪ ಕೊಡಲು ಬಯಸುತ್ತಾಳೆ. ಎಲ್ಲರಂತೆ ತಾನೂ ಸಹಾ ದಿನಕ್ಕೆ ಎಂಟು ಗಂಟೆಗಳ ಕಾಲ ಕೆಲಸ ಮಾಡಿ ಬಾಕಿ ಸಮಯವನ್ನು ತನಗಾಗಿ ಮೀಸಲಾಗಿಟ್ಟುಕೊಳ್ಳಬೇಕು ಎಂಬ ನಿರ್ಧಾರ ಮಾಡುವ ಹೊತ್ತಲ್ಲಿ ನಡೆಯುವ ಸಣ್ಣ ಘಟನೆ ಅವಳ ಆಲೋಚನೆಯ ಬುಡವನ್ನೇ ಅಲುಗಾಡಿಸುತ್ತದೆ. ಅವಳು ಅವಳ ಶೋಷಿತ ಪ್ರಜ್ಞೆಯಲ್ಲಿಯೇ ಮುಂದುವರಿಯುತ್ತಾಳಾ ಅಥವಾ ಅದನ್ನು ತೊರೆಯುವಳಾ..?? ಎಂಬುದು ಕತೆಯ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಂಡು ಹೋಗುತ್ತದೆ.


ಬೆಳ್ಳಿಯಪ್ಪನ ಮನೆಯ "ಬೊಳ್ಳು" ಇತರ ನಾಯಿಗಳಿಗಿಂತ ಭಿನ್ನವಾಗಿ ಹೇಗೆ ಎಲ್ಲರ ಮನಗೆದ್ದಿತ್ತು ಎಂಬುದು ಹಾಗೂ ಬೊಳ್ಳುವಿನ ಪ್ರತಿ ಚರ್ಯೆ ಕೂಡಾ ದಾಖಲಾದಂತಿದೆ. ಬೊಳ್ಳು -೧ ಹಾಗೂ ಬೊಳ್ಳು -೨ ಎರಡು ಕಥೆಗಳು ಇಲ್ಲಿ ಅದರ ಪ್ರಾಮುಖ್ಯತೆಯನ್ನು ತೆರೆದಿಡುತ್ತವೆ. 


"ಸ್ವರ್ಗಕ್ಕೆ ಏಣಿ" ಕಥೆಯ ವಿಷಯ ಆಲೋಚನೆಗೆ ಹಚ್ಚಿತು. ಕಾಶ್ಮೀರದ ಗಡಿ ಕಾದು ಬಂದವನ ಆಸ್ತಿಯನ್ನು ಊರಿನಲ್ಲಿ ಕಾಯುವವರಿಲ್ಲದ ಕಾರಣ ಅನೇಕ ಬಾರಿ ಅದು ಅಕ್ರಮ ಒತ್ತುವರಿಗೆ ಈಡಾಗುತ್ತದೆ. ಹಾಗೂ, ಸೇನೆಯಿಂದ ಬಂದ ನಂತರ ಉಳಿತಾಯದ ಕೊರತೆಗೋ ಅಥವಾ ಸಂಸಾರವನ್ನು ಸಾಗಿಸಲು ಅವಶ್ಯವಾದಷ್ಟು ಹಣ ಇಲ್ಲದ್ದಕ್ಕೋ ಕೃಷಿ ಅನಿವಾರ್ಯವಾಗುತ್ತದೆ.  ಇಂತಹದ್ದೇ ಅಕ್ಕಪಕ್ಕದ ಜಮೀನಿನ ಕುಟುಂಬಗಳ ಒಳ ಜಗಳದ ಅನಾವರಣವಾಗಲು ಒಂದು ಕ್ಷುಲ್ಲಕ ಕಾರಣ ಸಾಕಾಗುತ್ತದೆ. ಇಂತಹ ಜಗಳವನ್ನು ಮುಗಿಸಿದ ಸ್ವರ್ಗಕ್ಕೆ ಏಣಿ ಹಾಕಿಕೊಟ್ಟ ಒಂದು ಏಣಿಯ ಕಥೆ ಇದೆ ಇಲ್ಲಿ.


ರೆಜಿಮೆಂಟ್ ನ ಗೇಟು ಕಾಯುವುದರಿಂದ ಶುರು ಮಾಡಿ, ಹಂತ ಹಂತವಾಗಿ ಮೇಲೇರಿ ಕಮಾಂಡಿಗ್ ಆಫಿಸರ್ ಪಕ್ಕದಲ್ಲಿ ನಿಲ್ಲುವ ಸುಬೇದಾರ್ ಮೇಜರ್ ಪ್ರತಿ ರೆಜಿಮೆಂಟಿನ ಅಂತರಾತ್ಮ. ಅಂತಹಾ ಸುಬೇದಾರ್ ಮೇಜರ್ ಕುಶಾಲಪ್ಪನ ನಿವೃತ್ತಿಯ ಸೇವೆಯ ಕೊನೆಯ ದಿನದ ಕಥೆ " ಸರ್ವರತ ಈಝತ್ ಓ ಇಕ್ಬಾಲ್ " .


~ ವಿಭಾ ವಿಶ್ವನಾಥ್

ಕೆಂದಾವರೆಯ ಮಾಲೆ (ಪುಸ್ತಕ ಯಾನ - 38)


ಪುಸ್ತಕದ ಶೀರ್ಷಿಕೆ : ಕೆಂದಾವರೆಯ ಮಾಲೆ

ಕನ್ನಡಕ್ಕೆ : ಯತಿರಾಜ ವೀರಾಂಬುಧಿ

ತೆಲುಗಿನ ಲೇಖಕರು : ಡಾ. ಯಂಡಮೂರಿ ವೀರೇಂದ್ರನಾಥ್

ಪ್ರಕಾಶಕರು : ಸಾಹಿತ್ಯ ಪ್ರಕಾಶನ

ಪುಟಗಳು : 136

ಬೆಲೆ : 170 ರೂ.

ಮೊದಲ ಮುದ್ರಣ : 2022


ಈ ಕಾದಂಬರಿ ಈಗ ಕನ್ನಡದಲ್ಲಿ ಓದಲು ಸಿಕ್ಕರೂ ಇದು ಯಂಡಮೂರಿಯವರು 35 ವರ್ಷ ಹಿಂದೆಯೇ ಬರೆದ ಕಾದಂಬರಿ. ಕಥಾ ವಸ್ತು ಹಳೆಯದು ಎಂದೆನಿಸಿದರೂ ಈ ಕಾಲಕ್ಕೂ ಸಲ್ಲುವಂತಹದ್ದು. ಇದರ ಕನ್ನಡ ಅನುವಾದವನ್ನು ಬಹಳ ಸುಂದರವಾಗಿ ಹಾಗೂ ಶಕ್ತಿಯುತವಾಗಿ ಅನುವಾದ ಮಾಡಿದ್ದಾರೆ ಯತಿರಾಜ್ ಸರ್.


ಕೆಲವು ವ್ಯಕ್ತಿಗಳು ಮೇಲೆ ಮೆದುವಾಗಿ ಕಂಡರೂ ಆತ್ಮಶಕ್ತಿ ಬಹಳ ಬಲಿಷ್ಠವಾಗಿರುತ್ತದೆ. ಮೃದುವಾಗಿ ಕಂಡವರೆಲ್ಲರೂ ದಡ್ಡರಲ್ಲ.. ಅಕಸ್ಮಾತ್ ಅವರನ್ನು ದಡ್ಡರು ಎಂದು ಭಾವಿಸಿಕೊಂಡರೂ ಅದು ಹಾಗೆ ಭಾವಿಸಿಕೊಂಡವರ ದಡ್ಡತನವಾದೀತು ಅಷ್ಟೇ.. ಕೆಲವೊಮ್ಮೆ ಅವರು ಮಾಗಬೇಕಿರುತ್ತದೆ. ಪರಿಪಕ್ವವಾಗಬೇಕಿರುತ್ತದೆ. ಎಷ್ಟೇ ಬುದ್ಧಿವಂತರಿದ್ದರೂ ಕೆಲವೊಮ್ಮೆ ಕಾಲದ ಎದುರಿಗೆ ಅವರ ಬುದ್ಧಿವಂತಿಕೆ ತಲೆಬಾಗಬೇಕಿರುತ್ತದೆ. ಅಂತಹದ್ದರಲ್ಲಿ ಇನ್ನೂ ಯುವಕನಾಗಿದ್ದ ಕೃಷ್ಣ ಮೋಸದ ಜಾಲಕ್ಕೆ ಸಿಲುಕಿ ಹಾಕಿಕೊಂಡಿದ್ದರಲ್ಲಿ ಅತಿಶಯೋಕ್ತಿ ಕಾಣದಿದ್ದರೂ ಹತ್ತಿರದವರು, ತನ್ನವರು ಎಂದು ನಂಬಿದ್ದವರಿಂದಲೇ ಆತ ಮೋಸ ಹೋಗಿ ಬಿಟ್ಟ.


ಇದಕ್ಕೆ ಕಾರಣ ಪ್ರೀತಿ ಎಂದು ಹೇಳಬಹುದಾದರೂ.. ಮೇಲ್ನೋಟಕ್ಕೆ ಆದಷ್ಟೇ ಕಂಡರೂ ಅದಕ್ಕೆ ವಿಧಿಯ ಕಾರಣಗಳೂ ಇಲ್ಲದಿಲ್ಲ. ಏಕೆಂದರೆ, ಆತ ಬೆಳೆದದ್ದು ತನ್ನ ಸಾಕು ತಾಯಿಯ ಬಳಿ. ಆಕೆ ಹಳ್ಳಿಯೊಂದರ ಮುಗ್ಧ ಹೆಂಗಸು. ಒಬ್ಬಂಟಿಯಾಗಿಯೇ ತನ್ನ ಮಗನನ್ನು ಸಾಕಿದವಳು. ಒಮ್ಮೆ ರಾಜ ಪರಿವಾರವೊಂದು ಆ ಹಳ್ಳಿಯ ಸಮೀಪ ಡಕಾಯಿತರ ದಾಳಿಗೆ ಸಿಕ್ಕಾಗ ಅಲ್ಲಿ ಸಿಕ್ಕ ಮಗುವೇ ಈತ. ಆತನನ್ನು ಸಾಕಿ ದೊಡ್ಡವನನ್ನಾಗಿ ಮಾಡಿದ್ದರೂ ಆಕೆ ಎಂದೂ ಆ ಸತ್ಯವನ್ನು ಮರೆ ಮಾಚಿರಲಿಲ್ಲ. ಹಾಗೆಂದು, ಆತ ರಾಜ ಪರಿವಾರಕ್ಕೆ ಸೇರಿದವನೆಂಬ ಸತ್ಯ ಆಕೆಗೆ ತಿಳಿದಿರಲೂ ಇಲ್ಲ. ಕಾಡಿನಲ್ಲಿ ಸಿಕ್ಕ ಮಗು ಆತ ಎಂಬುದಷ್ಟೇ ಆಕೆಯ, ಆತನ ಅರಿವಿನಲ್ಲಿದ್ದ ವಿಷಯ.


ಈ ಎಲ್ಲದರ ಅರಿವಿದ್ದೂ ಆತನನ್ನು ಬಹಳವಾಗಿ ಪ್ರೀತಿಸಿದವಳು "ಪಾರ್ವತಿ". ಪಾರ್ವತಿ ಆತನನ್ನು ಪ್ರೀತಿಸಿದಷ್ಟೇ ಆತನ ತಾಯಿಯನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಕೃಷ್ಣನ ಮನೆಯಿಂದ ಈ ಮದುವೆಗೆ ಏನೂ ತಕರಾರಿರಲಿಲ್ಲ. ಇದರ ನಡುವೆ ಪಾರ್ವತಿಯ ಸೌಂದರ್ಯ ಕೂಡಾ ಆತನ ಪಾಲಿಗೆ ಆತನಿಗೆ ಅರಿವಿರದೇ ಉಂಟಾದ ಸಮಸ್ಯೆ. 


ಈ ಸಮಸ್ಯೆಯ ಮೂಲ ಯಾರು ? ಸಮಸ್ಯೆ ಉಂಟಾದದ್ದು ಯಾರಿಂದ ? ಆತನಿಗೆ ಮೋಸ ಮಾಡಿದ್ದು ಯಾರು ? ಅದು ಪಾರ್ವತಿಯ ಅರಿವಿರದೇ ಆಗಿದ್ದಾ ಅಥವಾ ಅವಳೂ ಇದರಲ್ಲಿ ಭಾಗಿಯಾಗಿದ್ದಳಾ..?? ಈ ಸಮಸ್ಯೆಯಿಂದ ಕೃಷ್ಣನ ಬದುಕಲ್ಲಿ ಮಾತ್ರವಲ್ಲ ಆತನ ತಾಯಿ ಹಾಗೂ ಪಾರ್ವತಿಯ ಬದುಕಲ್ಲಿಯೂ ಬಹಳ ಬದಲಾವಣೆಗಳು ಉಂಟಾದವು. ಕೃಷ್ಣನೇನೋ ಜೈಲಿಗೆ ಹೋದ. ಸಾಕ್ಷಿಗಳು ಪ್ರತಿಕೂಲವಾಗಿದ್ದುದರಿಂದ ಆತನಿಗೆ 12 ವರ್ಷಗಳ ಜೈಲು ಶಿಕ್ಷೆಯೂ ಆಯಿತು. ಉಳಿದವರ ಗತಿ ಏನಾಯಿತು..??


ಜೈಲಿಗೆ ಹೋದ ಕೃಷ್ಣನ ಬಾಳಿನಲ್ಲಿ ಬಂದದ್ದು ಠಾಕೂರ್. ತಾತ - ಮೊಮ್ಮಗನ ಸಂಬಂಧದ ಹಾಗೆ ಕಂಡರೂ ಗುರುವಿನ ಕೈ ಕೆಳಗೆ ಉತ್ತಮವಾಗಿ ಪಳಗಿದ ಶಿಷ್ಯನಾದ ಆತ. ಜೈಲು ಕೂಡಾ ಗುರುಕುಲದಂತಿತ್ತು. ಕಠಿಣ ಶ್ರಮ, ಶಿಕ್ಷೆಯ ಮೂಲಕ ಕೃಷ್ಣನನ್ನು ತಿದ್ದಿ ತೀಡಿ ಒಂದು ರೂಪು ಕೊಟ್ಟಿದ್ದೇ ಠಾಕೂರ್. 


ಕೃಷ್ಣ 12 ವರ್ಷದ ಶಿಕ್ಷೆ ಮುಗಿಸಿಕೊಂಡು ಜೈಲಿನಿಂದ ಹೊರ ಬಂದ ನಂತರ ಏನಾಯಿತು ? ಕೃಷ್ಣ ಠಾಕೂರ್ ನ ಪಾಠದಿಂದ ಕಲಿತದ್ದೇನು ? ಆತನ ಬದುಕು ದ್ವೇಷವನ್ನೇ ಮುಂದುವರಿಸಿತೇ ಅಥವಾ ಎಲ್ಲವನ್ನೂ ಮರೆತು, ಕ್ಷಮಿಸಿ ಹೊಸ ಬದುಕನ್ನು ಪ್ರಾರಂಭ ಮಾಡಿದನೇ ? ಠಾಕೂರ್ ಏನಾದ ? ಪಾರ್ವತಿ ಎಲ್ಲಿದ್ದಳು ? ಆತನ ತಾಯಿ ಏನಾದಳು ? ಆತನ ಜನ್ಮ ರಹಸ್ಯ ಬಯಲಾದದ್ದು ಹೇಗೆ ? ಆತನನ್ನು ಜೈಲಿಗೆ ಕಳುಹಿಸಿದರು ಏನಾದರು ?


ಈ ಎಲ್ಲಾ ರಹಸ್ಯಗಳನ್ನೂ ಬಿಡಿಸಲು ಓದಿ "ಕೆಂದಾವರೆ ಮಾಲೆ". ಅಂದ ಹಾಗೆ, ಈ ಪುಸ್ತಕದ ಶೀರ್ಷಿಕೆ "ಕೆಂದಾವರೆ ಮಾಲೆ" ಎಂದೇ ಏಕಿದೆ ಎಂಬುದನ್ನು ನೀವು ಪುಸ್ತಕ ಓದಿಯೇ ಅರಿಯಬೇಕು.


ನನಗನ್ನಿಸಿದ ಮತ್ತೊಂದು ವಿಚಾರವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ಠಾಕೂರ್ ಕೃಷ್ಣನಿಗೆ ಶಿಕ್ಷಣ ನೀಡುವಾಗ ಆತನಿಗೆ.. ಠಾಕೂರ್ ಎಲ್ಲೋ ಒಂದು ಕಡೆ ಬಯಾಸ್ಡ್ ಎನ್ನಿಸುತ್ತಾರೆ. ಅಲ್ಲದೆ, ಆತನ ಮೇಲೆ ತನ್ನ ನಿರ್ಧಾರಗಳನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎನ್ನಿಸುತ್ತದೆ. ಆದರೆ, ಕೊನೆಗೆ ಆತ ಠಾಕೂರ್ ಮಾರ್ಗವನ್ನೇ ಅನುಸರಿಸಲು ಬಯಸುತ್ತಾನೆ. ಅಂತಹಾ ಬದಲಾವಣೆಯ ಕಾರಣವನ್ನೂ ತಿಳಿಯಲು ನೀವೇ ಈ ಪುಸ್ತಕ ಓದಿ ನೋಡಿ. ಹೆಚ್ಚಿನ ಆಡಂಬರವಿಲ್ಲದೆ ಸಾಗುವ ಈ ಪುಸ್ತಕ ರೋಚಕತೆಗೇನೂ ಕೊರತೆ ಮಾಡುವುದಿಲ್ಲ.


~ವಿಭಾ ವಿಶ್ವನಾಥ್

ಬೆಂಗಳೂರು Y2K50 - Y2K64 (ಪುಸ್ತಕ ಯಾನ - 37)


ಪುಸ್ತಕದ ಶೀರ್ಷಿಕೆ : ಬೆಂಗಳೂರು Y2K50 - Y2K64

ಲೇಖಕರು : ಡಾ. ಎಂ. ವೆಂಕಟಸ್ವಾಮಿ

ಪ್ರಕಾಶಕರು : ಜಾಗೃತಿ ಪ್ರಿಂಟರ್ಸ್

ಮೊದಲನೇ ಮುದ್ರಣ : 2009

ಪುಟಗಳು : 148

ಬೆಲೆ : 90 ರೂ.


ಈ ವೈಜ್ಞಾನಿಕ ಕಾದಂಬರಿ ಮುದ್ರಣಕ್ಕೂ ಐದು ವರ್ಷ ಮುಂಚೆಯೇ ಕನ್ನಡ ಪ್ರಭ ಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿದೆ. ಭೂ ವಿಜ್ಞಾನಿ ಹಾಗೂ ಲೇಖಕರಾಗಿ ಹೆಸರಾಗಿರುವ ಡಾ. ಎಂ. ವೆಂಕಟಸ್ವಾಮಿಯವರು ಕೋಲಾರ ಜಿಲ್ಲೆಯ ಬಂಗಾರಪೇಟೆಯ ಬ್ಯಾಟರಾಯನಹಳ್ಳಿಯವರು. ಇವರು ಕತೆ, ಕವನ, ಕಾದಂಬರಿ, ವಿಮರ್ಶೆ, ಪ್ರವಾಸ ಕಥನ, ವೈಚಾರಿಕ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಬರಹದ ಛಾಪು ಮೂಡಿಸಿದ್ದಾರೆ. ಎಲ್ಲವೂ ಸೇರಿ 20 ಕೃತಿಗಳನ್ನು ಪ್ರಕಟಿಸಿದ್ದಾರೆ. 


ಈ ಕಾದಂಬರಿಯ ಹೆಸರು ವಿಭಿನ್ನವಾಗಿದೆಯಲ್ಲಾ ಎಂದುಕೊಂಡು ಪುಸ್ತಕ ಕೈಯ್ಯಲ್ಲಿ ಹಿಡಿದಾಗ ಇದನ್ನು ಡಿ- ಕೋಡ್ ಮಾಡಬಹುದಾ ಎಂದು ಆಲೋಚಿಸಿದೆ. ಅದು ಸರಿಯಾಗಿತ್ತು ಸಹಾ. Y ಎಂಬುದು ಇಯರ್ (ವರ್ಷ) ಅನ್ನು ಸೂಚಿಸುತ್ತಿದ್ದರೆ 2K ಎಂದರೆ 2000 ಎಂದು. 2050 ರಿಂದ 2064 ರ ವರೆಗೆ ಏನೆಲ್ಲಾ ಬದಲಾವಣೆಯಾಗಬಹುದು ಎಂಬುದನ್ನು ವೈಜ್ಞಾನಿಕವಾಗಿ ಕಟ್ಟಿಕೊಟ್ಟಿರುವ ಕಾದಂಬರಿ ಇದು. ಹಾಗೆ ನೋಡಿದರೆ ಈ ಕಾದಂಬರಿ ಇಡೀ ದೇಶದಲ್ಲಿಯೇ ಆಗುವ ಬದಲಾವಣೆಗಳನ್ನು ಕಟ್ಟಿ ಕೊಟ್ಟರೂ ನಮಗೆ ಹತ್ತಿರವಾದ ಎಂದರೆ ಕನ್ನಡಿಗರಿಗೆ 'ಸಿಲಿಕಾನ್ ಸಿಟಿ' ಎನ್ನಿಸಿಕೊಳ್ಳುವ ಬೆಂಗಳೂರು ಮನಸ್ಸಿಗೆ ಹತ್ತಿರವಾಗಬಹುದು ಎಂಬ ಉದ್ದೇಶ ಇರಬಹುದು ಎಂಬುದು ನನ್ನ ಅನಿಸಿಕೆ.


ಒಬ್ಬ ಮನುಷ್ಯನ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಅದೆಷ್ಟು ಬದಲಾವಣೆಗಳಾಗುತ್ತವೆ ಎಂಬುದು ನಮ್ಮ ತಂದೆ- ತಾಯಿ ಹಾಗೂ ನಮ್ಮ ಮಕ್ಕಳನ್ನು ನಮ್ಮ ಜೊತೆ ಇಟ್ಟು ನೋಡಿದರೆ ಆ ಬದಲಾವಣೆ ಸುಲಭವಾಗಿ ಗೋಚರವಾಗುತ್ತದೆ. ಅಂತಹದ್ದರಲ್ಲಿ ಒಂದು ಪ್ರದೇಶವನ್ನು ಹಾಗೂ ದೇಶವನ್ನು ಮುಂದುವರಿದ ದಿನಗಳಲ್ಲಿ ಹೀಗಿರಬಹುದು ಎಂದು ಕಟ್ಟಿ ಕೊಡುವುದು ಸುಲಭದ ಮಾತಲ್ಲ.


ಕಥೆಯ ಮೊದಲಿಗೆ ಸ್ಥಳ : ಬೆನ್ ನಗರ ಎಂದಿದೆ. ಬೆನ್, ಡೆಲ್ ಎಂಬ ನಗರಗಳು ಎಂದಾಗ ಯಾವುದೋ ವಿದೇಶದ ಕಲ್ಪನೆ ಬಂದಿತ್ತು. ಆದರೆ, ಬೆಂಗಳೂರು, ದೆಹಲಿ ಎಂಬ ಪದಗಳ ಮೊದಲ ಮೂರು ಅಕ್ಷರಗಳ ರೂಪವೇ ಜನರ ಬಾಯಿಯಲ್ಲಿ ಆ ರೂಪ ತಳೆದಿದೆ ಎಂದು ತಿಳಿದಾಗ ಲೇಖಕರ ಸೃಜನಶೀಲತೆ ಕಂಡು ಬಂದಿತು.


ಐಯಾನ್ ಹಾಗೂ ಅಶ್ವಿನಿ ದಂಪತಿಗಳ ಮಗು ಪುಟ್ಟ ಕಾಸ್ಮೋರಾ.  ಮೊದಲಿಗೆ 2050 ರಿಂದ ಆರಂಭವಾಗುವ ಕಥೆಯಲ್ಲಿ ಮನೆಯಲ್ಲಿ ಕೆಲಸಗಾರರ ಬದಲಾಗಿ ರೋಬೋಟ್ ಗಳು ಕಾರ್ಯ ನಿರ್ವಹಿಸುವುದು ಹಾಗೂ ಮನೆಗಳು ಇರುವ ಪ್ರದೇಶಗಳ ಕುರಿತು ಹೇಳುತ್ತಾರೆ. ಮನೆಗಳು ವಲಯಗಳಾಗಿ ವಿಭಜಿತವಾಗಿರುತ್ತವೆ. ಆಯಾ ವಲಯಗಳು ವಿಭಜಿತವಾಗಿರುವುದು ಆಯಾ ವ್ಯಕ್ತಿಗಳ ಆದಾಯಗಳ ಆಧಾರದ ಮೇಲೆ. ಎ, ಬಿ , ಸಿ , ಡಿ ವಲಯಗಳು. ಇಲ್ಲಿನ ಕಾದಂಬರಿಯಲ್ಲಿ ಹೆಚ್ಚಿನ ಚಿತ್ರಣ ಸಿಗುವುದು ವಲಯ ಎ ಕುರಿತು. ಹೆಚ್ಚಿನ ಟೆಕ್ನಾಲಜಿ ಹಾಗೂ ವಿಜ್ಞಾನದ ಆವಿಷ್ಕಾರಗಳು ಬಳಕೆಯಾಗುವುದು ಇಲ್ಲಿಯೇ. ಹಾಗೆಂದು, ಎಲ್ಲಾ ಆವಿಷ್ಕಾರಗಳೂ ಪರಿಪೂರ್ಣವೇನಲ್ಲ. ಇಲ್ಲಿ ಆಗುವ ತೊಂದರೆಗಳು ಆಗಲೂ ಹೊಸದು. ವಿಜ್ಞಾನ ಎಷ್ಟೇ ಮುಂದುವರಿದರೂ ಹೊಸ ಹೊಸ ಸವಾಲುಗಳು ಇದ್ದೇ ಇರುತ್ತವೆ. ಮತ್ತು, ವಿಜ್ಞಾನಿಗಳು ಹಾಗೂ ತಂತ್ರಜ್ಞಾನ ಗೊತ್ತಿರುವವರು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಲೇ ಇರುತ್ತಾರೆ ಎಂಬುದು ಸಾಬೀತಾಗುತ್ತದೆ.


ಇದರೊಟ್ಟಿಗೆ ಬೆಸೆದುಕೊಳ್ಳುವ ಮತ್ತೊಂದು ಕುಟುಂಬ ಶಮಿ ಹಾಗೂ ತೇಜಸ್ ರದ್ದು. ಈ ಕುಟುಂಬಗಳು ಹೀಗೆಯೇ ಇರುತ್ತವಾ ಎಂಬುದಕ್ಕಿಂತ ಮುಂದುವರಿದ ವಿಜ್ಞಾನ ಯುಗದಲ್ಲಿ ಕುಟುಂಬದ ಪರಿಕಲ್ಪನೆ ಹಾಗೆಯೇ ಇರುತ್ತದಾ ಎನ್ನುವುದು ಕೂಡಾ ಮುಖ್ಯವೇ.. ಏಕೆಂದರೆ, ರೋಬೋಟ್ ಗಳು ಸಂಗಾತಿಯಾಗಿ ಇರಬಹುದಾದಂತಹಾ ಕಾಲದಲ್ಲಿ ಮನುಷ್ಯರ ನಡುವಿನ ಬಾಂಧವ್ಯ ಹೇಗಿರಲಿದೆ ? ಅವರ ಮಕ್ಕಳು, ಅವರ ಬೆಳವಣಿಗೆ ಹಾಗೂ ನಡವಳಿಕೆಗಳ ಹೇಗಿರಬಹುದು ? ವಲಯಗಳು ಇದ್ದ ಹಾಗೆ ಹಳ್ಳಿಗಳೂ ಉಳಿದು ಇದ್ದವು. ಅವು ಹಾಗೆಯೇ ಉಳಿದು ಹೋಗಿದ್ದಕ್ಕೆ ಕಾರಣವೇನು ? 


ಇಲ್ಲಿನ ಸಾರಿಗೆ ವ್ಯವಸ್ಥೆಯ ಬದಲಾವಣೆ, ಇಂಧನದ ಬದಲಾಗಿ ಬಳಸುವ ಪರ್ಯಾಯ ವ್ಯವಸ್ಥೆ, ಇಲ್ಲಿ ಬಳಸಲಾಗುವ ವೈದ್ಯಕೀಯ ವ್ಯವಸ್ಥೆಯಲ್ಲಿ ಮೊದಲಿನಂತೆ ಚಿಕಿತ್ಸೆಗೆ ಹೆಚ್ಚಿನ ದಿನಗಳು ಬೇಕಿಲ್ಲ. ಮುಪ್ಪನ್ನು ಮುಂದೂಡಬಹುದು. ಆದರೆ, ಆರೋಗ್ಯವನ್ನು ವೃದ್ಧಿಸುವುದು ಸಾಧ್ಯವೇ ? ಮುಪ್ಪನ್ನು ತಡೆದರೂ ಎಷ್ಟು ಕಾಲ ? ಸಾವನ್ನು ಸಹಾ ತಡೆಯಬಹುದೇ ? ಅದೆಲ್ಲವೂ ಹೇಗೆ ಸಾಧ್ಯ ? ಈಗಾಗಲೇ ಕಸಿ ತಂತ್ರಜ್ಞಾನದಿಂದ ತದ್ರೂಪಿಯನ್ನು ಸೃಷ್ಟಿಸಬಹುದು. ಅದನ್ನು ಅವರು ಹೇಗೆ ಉಪಯೋಗಿಸಿಕೊಂಡರು ?


ಪ್ರತಿಯೊಬ್ಬ ವ್ಯಕ್ತಿಯ ಚರ್ಯೆ, ಡಿ.ಎನ್.ಎ, ವೈಯಕ್ತಿಕ ಮಾಹಿತಿಗಳೆಲ್ಲವೂ ಸಿಗುವಾಗ ಭದ್ರತೆ ಉನ್ನತ ಮಟ್ಟದಲ್ಲಿ ಇದ್ದಾಗ ಅಲ್ಲಿನ ಜನಗಳ ಪ್ರೈವೇಸಿ ಹೇಗಿತ್ತು..?? ನ್ಯಾಯ ವ್ಯವಸ್ಥೆ ಹಾಗೂ ಪೊಲೀಸ್ ಹೇಗಿದ್ದರು ? ಭಯೋತ್ಪಾದನೆ ಇತ್ತೇ ? 


ಸ್ಪೇಸ್ ಸೆಂಟರ್ ಈಗ ಮೊದಲಿನಷ್ಟು ಕ್ಲಿಷ್ಟಕರವಲ್ಲದಿದ್ದರೂ ಅದು ಹೇಗಿತ್ತು ? ಅಲ್ಲಿಗೆ ಯಾರು ಯಾರು ಹೋಗಬಹುದಾಗಿತ್ತು ? ಸ್ಪೇಸ್ ಸೆಂಟರ್ ಮಹತ್ವವೇನು ? 


ಭೂಮಿಗೆ ಅಂತ್ಯವಿದೆಯಾ..?? ಹಾಗಾದರೆ, ಅದು ಯಾವ ರೂಪದಲ್ಲಿ ಆಗಬಹುದು ? ಇಲ್ಲಿ ಕಾದಂಬರಿ 2064 ರಲ್ಲೇ ಕೊನೆಯಾಗಿದ್ದು ಏಕೆ ? ಇವೆಲ್ಲಕ್ಕೂ ಉತ್ತರ ಕಾದಂಬರಿಯಲ್ಲಿದೆ.


ಇಲ್ಲಿ ವಿಜ್ಞಾನ ಮುಂದುವರಿದಂತೆ ಕಾಮ, ಸ್ವೇಚ್ಛೆ, ಸ್ವಾತಂತ್ರ್ಯದ ಪರಿಕಲ್ಪನೆಗಳು ಭಿನ್ನವಾಗಿ ಮೂಡಿಬಂದಿದ್ದರೂ ಅವು ಈಗಿನ ವಾಸ್ತವಕ್ಕಿಂತ ಬೇರೆ ಏನಿಲ್ಲ ಎನ್ನಿಸಿತು. ಇಂದು ಹಾರುವ ವಾಹನಗಳು, ಸೋಲಾರ್ ಕಲ್ಪನೆಗಳು ಕಲ್ಪನೆಗಳಾಗಿ ಮಾತ್ರ ಉಳಿದಿಲ್ಲ. ಇಂದು ನಾವು ಹೆಸರಿಟ್ಟಿರುವ ರೋಬೋಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಗಳು ಕಾದಂಬರಿಯಲ್ಲಿ ಮೂಡಿ ಬಂದರೂ.. ಈ ಹೆಸರುಗಳಿಂದ ಉಲ್ಲೇಖವಾಗಿಲ್ಲ. ಲೇಖಕರು ಕಾದಂಬರಿ ಬರೆಯುವಾಗ ಈ ಟೆಕ್ನಾಲಜಿಗಳು ಇನ್ನೂ ಅಷ್ಟು ಪರಿಚಿತವಾಗಿರಲಿಲ್ಲ. ಇದನ್ನು ಅವರು ಕಾಲ್ಪನಿಕವಾಗಿ ಕಟ್ಟಿ ಕೊಟ್ಟಿದ್ದರೂ ಸಹಾ ಈಗ ಈ ಕಾದಂಬರಿಯನ್ನು ಓದಿ ನನಗನ್ನಿಸಿದ್ದು ಈ ಕಾದಂಬರಿಯ ಕಲ್ಪನೆಗಳು ನಿಜವಾಗುತ್ತಿವೆ. 2050 ರಿಂದ ಅಲ್ಲ.. ಇನ್ನೂ ಮುಂಚೆಯೇ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಈ ರೀತಿ ಬದಲಾಗಬಹುದೇನೋ ಎನ್ನಿಸಿತು.


ಒಂದೊಳ್ಳೆ ವೈಜ್ಞಾನಿಕ ಕಾದಂಬರಿ ಈಗಿನ ವಾಸ್ತವಕ್ಕೆ ಕಲ್ಪನೆಯನ್ನು ಮಿಶ್ರ ಮಾಡಿದಂತೆ ಭಾಸವಾಯಿತು. 


~ವಿಭಾ ವಿಶ್ವನಾಥ್

ಸ್ವ್ಯಾಪಿಂಗ್ (ಪುಸ್ತಕ ಯಾನ - 36)


ಪುಸ್ತಕದ ಶೀರ್ಷಿಕೆ : ಸ್ವ್ಯಾಪಿಂಗ್

ಲೇಖಕರು : ಸುಪ್ರೀತ್ ಕೆ. ಎನ್

ಪ್ರಕಾಶಕರು : ಕಾದಂಬರಿ ಮೀಡಿಯಾ ಪಬ್ಲಿಕೇಶನ್ಸ್

ಮೊದಲ ಮುದ್ರಣ : 2013

ದ್ವಿತೀಯ ಮುದ್ರಣ : 2015 ( ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 138

ಬೆಲೆ : 120 ರೂ.


ಸುಪ್ರೀತ್ ರವರ "ಉತ್ತರಾ" ಕಾದಂಬರಿಯನ್ನು ಆತ್ಮೀಯರೊಬ್ಬರು ಸಜೆಸ್ಟ್ ಮಾಡಿದಾಗ ಅದನ್ನು ಓದುವ ಮೊದಲ ಅವರ ಬೇರೆ ಪುಸ್ತಕವನ್ನೊಮ್ಮೆ ಟ್ರೈ ಮಾಡೋಣ ಎಂದು ಈ ಪುಸ್ತಕವನ್ನು ತರಿಸಿಕೊಂಡದ್ದು. ಅಲ್ಲಿಯವರೆಗೂ ನನಗೆ ಗೊತ್ತಿದ್ದ ಸ್ವ್ಯಾಪಿಂಗ್ ಎಂಬ ಪದದ ಅರ್ಥ ಅದಲು - ಬದಲು ಎಂದಷ್ಟೇ. ನಮ್ಮ ಇಂಜಿನಿಯರಿಂಗ್ ನಲ್ಲಿ ಅದರಲ್ಲೂ ಸಿ ಪ್ರೋಗ್ರಾಮಿಂಗ್ ನಲ್ಲಿ ಸ್ವ್ಯಾಪಿಂಗ್ ಪ್ರೋಗ್ರಾಮ್ ಎಂದು ಹೇಳಿ ಹೇಳಿ ಸ್ವ್ಯಾಪಿಂಗ್ ಎಂದರೆ ಅದನ್ನಷ್ಟೇ ಯೋಚಿಸುತ್ತಿತ್ತು ಮನಸ್ಸು. ಪುಸ್ತಕ ಬಂದಾಗ ಬೆನ್ನುಡಿಯ ಈ ಸಾಲುಗಳು ಕಂಡವು.


"ಕಾಮ ಕೂಡಾ ಅಗ್ನಿಯಂತೆ. ಅಗ್ನಿಗೆ ಬೆಳಗುವ ಶಕ್ತಿಯೂ ಇದೆ. ಸುಡುವ ಶಕ್ತಿಯೂ ಇದೆ. ಕಾಮವೆಂಬ ಅಗ್ನಿಗೆ ಬೆಳಗುವಷ್ಟು ಸಲುಗೆಯನ್ನು ಮಾತ್ರ ಕೊಡಬೇಕು, ಸುಡುವಷ್ಟು ಕೊಡಬಾರದು !"


ಈ ಸಾಲುಗಳು ಕಣ್ಣಿಗೆ ಬಿದ್ದ ನಂತರ ಮುನ್ನುಡಿ ಓದಿದಾಗ ಅರಿವಾಗಿದ್ದು ಇದು "ವೈಫ್ ಸ್ವ್ಯಾಪಿಂಗ್" ವಿಷಯದ ಕುರಿತ ಪುಸ್ತಕ ಎಂಬುದಾಗಿ. ಮೊದಲಿಗೆ ಈ ಟಾಪಿಕ್ ಆರಿಸಿಕೊಂಡ ಲೇಖಕರ ಕುರಿತು ಅಚ್ಚರಿ ಎನ್ನಿಸಿತು. ಕಾರಣವೆಂದರೆ, ಲೇಖಕರು ಈ ಪುಸ್ತಕವನ್ನು ಬರೆದದ್ದು 2013 ರಲ್ಲಿ. ಆಗ ಈ ಕುರಿತು ಕೇಳಿ ಬರುತ್ತಿದ್ದದ್ದೇ ಕಡಿಮೆ. ಅಥವಾ ನಾನು ಕೇಳಿದಂತೆ ಭಾರತದಲ್ಲಿ ಈ ವಿಚಾರ ಅಪರೂಪದಲ್ಲಿ ಅಪರೂಪ. ಇಂತಹಾ ಕ್ಲಿಷ್ಟ ವಿಷಯವನ್ನು ಆಯ್ದುಕೊಳ್ಳಲು ಗಟ್ಟಿತನ ಬೇಕು. ಭವಿಷ್ಯದ ದಿನಗಳ ಕುರಿತು ಬರೆಯಲು ಅನುಭವವಿರಬೇಕು. ಪುಸ್ತಕ ಓದಿ ಮುಗಿಸಿದ ನಂತರ ನನಗನ್ನಿಸಿದ್ದು ಲೇಖಕರ ಬರಹದಲ್ಲಿ ಗಟ್ಟಿತನವಿದೆ. ಭವಿಷ್ಯದ ವಾಸ್ತವತೆಯನ್ನು ಕಟ್ಟಿಕೊಡುವ ಶಕ್ತಿಯಿದೆ. ಅನುಭವಕ್ಕೆ ವಯಸ್ಸು ಬೇಕಿಲ್ಲ ಎಂಬುದು. ಯುವ ಬರಹಗಾರರು ಆಯ್ದುಕೊಳ್ಳುವ ವಿಷಯಕ್ಕಿಂತ ವಿಭಿನ್ನ ಎಂದು ಹೇಗನ್ನಿಸಿತೋ ಹಾಗೆಯೇ ಅಶ್ಲೀಲತೆಯನ್ನು ಇನ್ನೂ ಕಡಿಮೆ ಮಾಡಬಹುದಾಗಿತ್ತು ಎಂಬುದಾಗಿ. 


ಲೇಖಕರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಬರೆಯುವಾಗ ಅದು ಅವಶ್ಯಕವಾಗಿತ್ತು ಎಂಬುದಾಗಿ. ಲೇಖಕರ ದೃಷ್ಟಿಯಿಂದ ಅದು ಸರಿ ಎಂದೆನಿಸಿದರೂ.. ಈ ವಿಚಾರವನ್ನು ಒಬ್ಬಳು ಓದುಗಳಾಗಿ ಅರಗಿಸಿಕೊಳ್ಳಲು ಕಷ್ಟವೇ. ಕಾಮದ ಕುರಿತು ಗಟ್ಟಿ ದನಿಯಲ್ಲೇ ಮಾತನಾಡಲು ಹಿಂಜರಿಯುವ ಮನಸ್ಥಿತಿಯಲ್ಲಿ ಇರುವಾಗ ಈ ಬರಹ ಬಹಳ ಬೋಲ್ಡ್ ಎನ್ನಿಸಿತು.


ದಾಂಪತ್ಯ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ಬಹಳ ಶ್ರೇಷ್ಠವಾದದ್ದು. ತಾನು ಪ್ರೀತಿಸುತ್ತಿರುವ ಹುಡುಗಿ ಮತ್ತೊಬ್ಬರೊಡನೆ ಹೆಚ್ಚು ಸಲುಗೆಯಿಂದ ಮಾತನಾಡುವುದನ್ನೇ ಅರಗಿಸಿಕೊಳ್ಳಲು ಕಷ್ಟವಾಗುವಾಗ ತನ್ನ ಹೆಂಡತಿ/ ಗಂಡ ಮತ್ತೊಬ್ಬರ ಜೊತೆಗೆ ಸುಖಿಸುವುದನ್ನು ಕಲ್ಪಿಸಿಕೊಳ್ಳಲೂ ಕಷ್ಟವೇ.. ಹೀಗಿರುವ ಪರಿಸ್ಥಿತಿಯಲ್ಲಿ ಇಂದಿನ ಜನಾಂಗ ಮಾಡರ್ನ್ ಎಂದೋ.. ಕಾರ್ಪೊರೇಟ್ ಕಲ್ಚರ್ ನಲ್ಲಿ ಕಾಮನ್ ಎಂದೋ ಸಮರ್ಥನೆ ಮಾಡಿಕೊಳ್ಳುವುದು ಅಸಹ್ಯತನದ ಪರಮಾವಧಿ ಎನ್ನಿಸುತ್ತದೆ. ಈ ಕಾದಂಬರಿಯಲ್ಲಿ ಕಿಶೋರ್ ಹಾಗೂ ಸೋನು ಎಂಬ ದಂಪತಿಗಳು ಇದೇ ಸಾಲಿನಲ್ಲಿ ಬರುವವರು.


ಒಬ್ಬಳೇ ಮಗಳಾದ ರಶ್ಮಿ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದು ತನ್ನ ತಂದೆ - ತಾಯಿಯ ಆಸೆಯಂತೆ ತಂದೆಯ ಆಸೆಯಂತೆ ತಂದೆಯ ಗೆಳೆಯರ ಮಗನಾದ ಪ್ರಶಾಂತ್ ಜೊತೆಗೆ ವಿವಾಹವಾಗುತ್ತಾಳೆ. ಅವಳಿಗೆ ಮಾತ್ರವಲ್ಲ, ಅವಳ ತಂದೆ - ತಾಯಿ , ಪ್ರಶಾಂತ್ ತಂದೆ - ತಾಯಿಯರಿಗೂ ಆತನ ನಿಜ ಸ್ವರೂಪ ಗೊತ್ತಿರುವುದಿಲ್ಲ. ಎಷ್ಟೋ ಜನರ ನಿಜ ಸ್ವರೂಪ ಹಾಗೆಯೇ ಇರುತ್ತದಲ್ಲಾ.. ನೋಡಲು ಮಾತ್ರ ಸುಭಗರಂತೆ. ಆದರೆ, ಮನಸ್ಸು, ಹಿಂದಿನ ಜೀವನವೆಲ್ಲಾ ಅಸಹ್ಯತನದ ಪರಮಾವಧಿ. ಆತನ ಕುರಿತು ಎಲ್ಲವೂ ಗೊತ್ತಿದ್ದದ್ದು ಆತನ ಸತ್ತು ಹೋಗಿದ್ದ ಅಣ್ಣನ ಗೆಳೆಯ ಚೇತನ್ ಗೆ ಮಾತ್ರವೇ.. ಚೇತನ್ ನ ಮೌನ ಕೂಡಾ ಇದರಲ್ಲಿ ಅಪರಾಧಿಯಂತೆ ಗೋಚರವಾಯಿತು.


ಇದನ್ನು ಬಿಟ್ಟರೆ ಈತನ ಕೆಲವು ಸತ್ಯಗಳ ಅರಿವಿದ್ದದ್ದು ಈತನ ಮಾಜಿ ಪ್ರೇಯಸಿ ಸ್ವಾತಿಗೆ. ಸ್ವಾತಿ ಬೇರಾರೂ ಅಲ್ಲದೆ ರಶ್ಮಿಯ ದೊಡ್ಡಮ್ಮನ ಮಗಳೇ. ಈತನ ಬದುಕಿನ ಕೆಲವು ಸತ್ಯಗಳ ಅರಿವಾಗಿದ್ದು ಅನುರಾಧಾಳಿಗೆ. ಅದೂ ಚೇತನ್ ಮೂಲಕ. 


ಸ್ವಾತಿ ರಶ್ಮಿಯ ಮದುವೆಯನ್ನು ತಡೆಯದ್ದು ಏಕೆ ? ಎಲ್ಲಾ ಗೊತ್ತಿದ್ದ ಚೇತನ್ ಮೌನವಾಗಿದ್ದು ಯಾಕೆ ? ಸ್ವ್ಯಾಪಿಂಗ್ ಆದದ್ದಾದರೂ ಏಕೆ ? ಇದಕ್ಕೆ ರಶ್ಮಿಯ ಒಪ್ಪಿಗೆ ಇತ್ತೇ ? ಮೋಸದ ಜಾಲದಲ್ಲಿ ಸಿಲುಕಿದ್ದು ಪ್ರಶಾಂತ್ ನಾ ಅಥವಾ ರಶ್ಮಿಯಾ ? ಎಲ್ಲದಕ್ಕೂ ಉತ್ತರ ತಿಳಿಯಲು ಕಾದಂಬರಿ ಓದಿ.


ಅನುರಾಧಾ, ಸ್ವಾತಿ , ರಶ್ಮಿ ಮೂವರೂ ಮೂರು ಬೇರೆಯದ್ದೇ ಆಲೋಚನೆಯ ಪಾತ್ರಗಳು. ಅನುರಾಧಾ ವಾಸ್ತವಕ್ಕೆ ಹೊಂದಿಕೊಂಡಳು ಎಂಬುದಕ್ಕಿಂತ ವಾಸ್ತವ ಅವಳನ್ನು ಒಗ್ಗಿಕೊಳ್ಳುವಂತೆ ಮಾಡಿದರೆ. ಸ್ವಾತಿ ಒಂದು ಭರವಸೆಯಂತೆ ಕಂಡಳು. ರಶ್ಮಿಯ ಸೂಕ್ಷ್ಮ ಆಲೋಚನೆ ಅವಳನ್ನು ಅಂಧಕಾರದಲ್ಲಿ ಮುಳುಗಿಸಿತೇ ಎಂದುಕೊಂಡರೂ ಅದಕ್ಕಿಂತಲೂ ವಿಭಿನ್ನವಾಗಿ ಬದುಕಿದ್ದರೆ ಆಕೆಯೇ ಈ ಕಥೆಯ ನಾಯಕಿಯಾಗುತ್ತಿದ್ದಳು ಎನ್ನಿಸುತ್ತಿದೆ. ಇನ್ನು ಸೋನು ಭಂಡ ಬದುಕಿನ, ಸ್ವೇಚ್ಛೆಯ ಹೆಣ್ಣಾಗಿ ಒಂದು ರೀತಿಯ ಅಸಹ್ಯ ಮೂಡಿಸಿದಳು. ಇಲ್ಲಿ ಯಾರೂ ನಾಯಕರೆಂಬಂತೆ ಕಂಡು ಬರಲಿಲ್ಲ. 


ಇಲ್ಲಿ ವೈಫ್ ಸ್ವ್ಯಾಪಿಂಗ್ ಜೊತೆಗೆ ಇನ್ನೊಂದು ಕರಾಳ ಪದ್ದತಿ "ಸೆಕ್ಸ್  ಟೂರಿಸಮ್" ಕುರಿತು ಸಹಾ ಬರೆದಿದ್ದಾರೆ. ಹೀಗೆಂದರೆ ವಿದೇಶಿಯರು ತಾತ್ಕಾಲಿಕವಾಗಿ ಭಾರತಕ್ಕೆ ಪ್ರವಾಸಕ್ಕೆ ಬಂದಾಗ ಅಷ್ಟು ದಿನಗಳಿಗೆ ತಾತ್ಕಾಲಿಕ ಸಂಗಾತಿಯನ್ನು ತನ್ನ ಸುಖಕ್ಕಾಗಿ ಬಳಸಿಕೊಳ್ಳುವುದು. ಅದು ತಾತ್ಕಾಲಿಕ ವಿವಾಹ ಎಂಬ ಹೆಸರಿನಲ್ಲಿ ಇಲ್ಲವೇ ಏನೂ ಹಣೆ ಪಟ್ಟಿ ಇಲ್ಲದೆಯೂ.. ಇದರ ಕುರಿತು ಹೆಚ್ಚು ಇರದಿದ್ದರೂ ಇದೇ ಒಂದು ರೀತಿಯ ಅಸಹ್ಯ ಭಾವ ಮೂಡಿಸಿತು.  ಏನೆಲ್ಲಾ ಇರಬಹುದು ಎಂದು ವಿಷಾಧವೂ ಮೂಡಿತು.


ಸ್ವ್ಯಾಪಿಂಗ್ ಕುರಿತು ಸಮರ್ಥನೆ ಮಾಡಿಕೊಳ್ಳುವವರಿಗೆ ಸರಿಯಾದ ಉತ್ತರವಿದೆ ಇಲ್ಲಿ. ಅಂತ್ಯ ವಿಷಾಧ ತರುತ್ತದೆ ಎಂಬುದು ಹೌದಾದರೂ ಇಡೀ ಕಾದಂಬರಿಯನ್ನು ಅವಲೋಕಿಸಿದಾಗ ಕಥಾ ವಸ್ತುವೇ ಜಿಗುಪ್ಸೆ ತಂದು ಬಿಡುತ್ತದೆ. ನೈತಿಕ ಮೌಲ್ಯಗಳು ಕುಸಿಯುತ್ತಿರುವಾಗ ಎಲ್ಲಿಗೆ ಬಂದು ನಿಂತಿದ್ದೇವೆ ನಾವು ಎಂಬ ಪ್ರಶ್ನೆ ಮೂಡಿದೆ. ಇನ್ನು ಮುಂದಿನ ಪೀಳಿಗೆಗಳು ಇದೇ ಹಾದಿ ಹಿಡಿದರೆ ಗತಿಯೇನು ಎಂಬ ಆತಂಕ ಕಾಡುತ್ತಿದೆ. 


ಮಡಿವಂತಿಕೆ ಇರುವ ಮನಸ್ಥಿತಿಯವರಿಗೆ ನಾನು ಈ ಪುಸ್ತಕವನ್ನು ಸಜೆಸ್ಟ್ ಮಾಡುವುದಿಲ್ಲ. ಓದು ಮುಗಿದ ನಂತರ ಅಸಹ್ಯ, ಜಿಗುಪ್ಸೆ ಮೂಡಿದರೂ ಅದು ಕಥಾ ವಸ್ತುವಿನ ಕಾರಣದಿಂದ ಹೊರತು ನಿರೂಪಣೆಯಿಂದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಈಗಿನ ವಾಸ್ತವವೂ ಹೀಗೆಯೇ ಇರುವಾಗ ಅಂತಹಾ ಬದುಕು ಕಂಡರೆ ಇನ್ನೆಷ್ಟು ಅಸಹ್ಯ ಮೂಡಬಲ್ಲದು ? 


~ವಿಭಾ ವಿಶ್ವನಾಥ್

ಕ್ಷಯ (ಪುಸ್ತಕ ಯಾನ - 35)

 

ಪುಸ್ತಕದ ಶೀರ್ಷಿಕೆ : ಕ್ಷಯ

ಲೇಖಕರು : ಡಾ. ವಾಸುದೇವ ಶೆಟ್ಟಿ

ಪ್ರಕಾಶಕರು : ವೀರಲೋಕ ಬುಕ್ಸ್

ಮೊದಲ ಮುದ್ರಣ : 2022

ಪುಟಗಳು : 104

ಬೆಲೆ : 120 ರೂ.


'ಕ್ಷಯ' ನಾನು ಓದಿದ ವಾಸುದೇವ ಶೆಟ್ಟಿಯವರ ಮೊದಲ ಪುಸ್ತಕ. ಈ ಕಾದಂಬರಿ ಹಿಡಿಯುವ ಮುನ್ನ 'ಕ್ಷಯ' ಎಂಬ ಪದ ಖಾಯಿಲೆಯಾಗಿ ಮಾತ್ರ ಗೋಚರಿಸುತ್ತಿತ್ತು. ಆದರೆ, ಇದನ್ನು ಓದಿದ ನಂತರ ಕ್ಷಯ ಎಂಬುದು ಖಾಯಿಲೆಯ ಜೊತೆಗೆ ಕ್ಷೀಣವಾಗುತ್ತಿರುವುದು ಎಂಬುದನ್ನೂ ಸೂಚಿಸುವಂತೆ ಮನಸ್ಸಿಗೆ ತೋರಿತು.


ಲೇಖಕರು ಈ ಪುಸ್ತಕವನ್ನು ಪ್ರಕಟಿಸಿರುವುದು 2022 ರಲ್ಲಿ ಆದರೂ ಈ ಕಾದಂಬರಿ ರೂಪುಗೊಂಡಿರುವುದು 1988-89 ರ ಆಸುಪಾಸಿನಲ್ಲಿ ಎನ್ನುತ್ತಾರೆ. ಬಹುಶಃ, ಇಂದಿಗೂ ಇದು ಈ ಕಾಲದ ಘಟನೆಯೇ ಎಂಬಂತೆ ಭಾಸವಾಗುತ್ತದೆ. ಪುಸ್ತಕದ ಪುಟಗಳು ಕಡಿಮೆ ಎಂದು ಓದಲು ಹಿಡಿದು ಇದರ ಒಳ ಹೊಕ್ಕು ನೋಡಿದರೆ ಇಲ್ಲಿನ ಹರಹು ದೊಡ್ಡದು. ಊರೊಂದರ ಕಥೆ ಹೇಳುವುದು ಸುಲಭವಲ್ಲ. ಇದು ಕೇವಲ ಊರಿನ ಕತೆ ಮಾತ್ರವಲ್ಲ. ಜನರ ನೈತಿಕ ಅಧಃ ಪತನ, ವಿನಾಶ, ಸಂಘರ್ಷಗಳ ಕಥೆ ಕೂಡಾ. ಇದನ್ನು ಹಲವಾರು ರೀತಿಯಲ್ಲಿ ನೋಡಬಹುದಾದರೂ.. ಅವರವರ ದೃಷ್ಟಿಯಿಂದಲೂ.. ಉಳಿದವರ ದೃಷ್ಟಿಯಿಂದಲೂ ಎಲ್ಲವೂ ಬಿಂಬಿತವಾಗಿದೆ. ಹಾಗೆಂದು, ತಪ್ಪುಗಳ ಸಮರ್ಥನೆ ಇಲ್ಲಿಲ್ಲ. ತಪ್ಪನ್ನು ತಪ್ಪು ಎಂದು ಹೇಳುವ ಪಾತ್ರಗಳ ದಿಟ್ಟತನವೂ ಕಡಿಮೆಯಾದರೂ ಓದುಗನ ಮನಸ್ಸಲ್ಲಿ ತಪ್ಪನ್ನು ತಪ್ಪು ಎಂದು ಅಲ್ಲಗಳೆಯುವ ಗಟ್ಟಿತನ ಮೂಡುವಂತೆ ಮಾಡುತ್ತದೆ. ತಪ್ಪು - ಸರಿ ಎಂಬ ನಿರ್ಧಾರವನ್ನು ಹೇಳದೆಯೂ ಹೇಳುವ ಈ ಕಾದಂಬರಿ ನಮ್ಮಲ್ಲಿಯೂ 'ಕ್ಷಯ'ವಾಗುತ್ತಿರುವ ಧ್ವನಿಯನ್ನು ನೆನಪಿಸುತ್ತದೆ.


ಕರಾವಳಿ ಭಾಗದ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ಕಂಡರೂ ಒಂದನ್ನೊಂದು ಬೆಸೆದುಕೊಳ್ಳುವ ಪರಿ ಕಥೆಯನ್ನು ಮತ್ತಷ್ಟು ಆಸಕ್ತಿದಾಯಕವನ್ನಾಗಿಸಿದೆ. ಮೂಲತಃ ಶ್ರೀನಿವಾಸ ನಾಯ್ಕ ಆ ಹಳ್ಳಿಯವನಾಗದಿದ್ದರೂ... ಮುತ್ತಜ್ಜನ ಕಾಲದಿಂದ ಬಂದು ಒಕ್ಕಲು ನಿಂತರೂ.. ಮೊದಮೊದಲು ಸುತ್ತಮುತ್ತಲಿನ ಜನರು ವಿರೋಧಿಸಿದರೂ ನಂತರ ಅದೇ ಹಳ್ಳಿಯವನಾಗಿ ನೆಲೆ ನಿಲ್ಲುತ್ತಾರೆ. ಶ್ರೀನಿವಾಸ ನಾಯ್ಕನ ಕೆಮ್ಮಿನ ಮೂಲಕ ತೆರೆದುಕೊಳ್ಳುವ ಕಥೆ ಕೆಮ್ಮಿನ ಜೊತೆ ಜೊತೆಗೆ ರಕ್ತವೂ ಹೋಗುತ್ತಿರಬಹುದೇ ಎಂಬ ಅನುಮಾನದಲ್ಲಿಯೇ ಇದ್ದಾಗ ಅದಕ್ಕೆ ಪಕ್ಕದ ಮನೆಯ ಆತ್ಮೀಯ ತನ್ನ ಹಿರಿಯರಿಂದ ಕೇಳಿ ನೆನಪಿಟ್ಟುಕೊಂಡಿದ್ದ ಔಷಧಿ ಅಂದರೆ ಒಂದು ರೀತಿಯ ಕಷಾಯವನ್ನು ತಯಾರಿಸುವ ವಿಧಾನವನ್ನು ಹೇಳಿದ್ದ. ಅದರ ಹುಡುಕಾಟ, ತಯಾರಿಯ ಜೊತೆಗೆ ಜೊತೆಗೆ ಮುಂದಿನ ಕಥೆ ಬೆಳೆಯುತ್ತಾ ಹೋಗುತ್ತದೆ. ಒಂದಕ್ಕೊಂದು ರೀತಿಯ ವಿಭಿನ್ನ ಸಂಬಂಧ ಬೆಸೆದುಕೊಂಡಂತೆ ಭಾಸವಾಗುತ್ತದೆ. 


ಹೊಸಬಯ್ಯ ನಾಯ್ಕನ ಮೂರನೇ ಮಗಳು ಹೆಣವಾಗಿದ್ದು.. ಅದನ್ನು ಪೋಲೀಸರಿಗೆ ಗೊತ್ತಾಗದಂತೆ ಸುಟ್ಟು ಹಾಕಿದ್ದು ನಡೆದ ನಂತರದ ಘಟನೆಗಳು ಹಳ್ಳಿಯ ಸ್ವಾಸ್ಥ್ಯ ಕದಡಿದ್ದನ್ನು, ಹಾಗೆ ಕದಡುತ್ತಿರುವುದು ಗೊತ್ತೇ ಆಗದಂತೆ ನಡೆದದ್ದೂ ಆಯಿತು. 


ವಾಮನ ಎಂಬ ವ್ಯಕ್ತಿ ಮಾತ್ರ ಇದರ ಅರ್ಧದಿಂದ ಬಂದರೂ.. ಇಡೀ ಕಥೆಯನ್ನು ಅವನೇ ಆವರಿಸಿಕೊಂಡನೇನೋ ಎನ್ನಿಸಿತು. ಗಾತ್ರದಿಂದ ಚಿಕ್ಕದಾದರೂ.. ನಂತರ ಬೆಳೆದು ನಿಂತ ವಾಮನನಂತೆ ಅವನ ಬದಲಾವಣೆ, ನಡವಳಿಕೆ ಎಲ್ಲವೂ ಇದೆ. ವಾಮನನ ಚಿತಾವಣೆಯಂತೆ ಎಲ್ಲವೂ ನಡೆಯಿತೋ ಅಥವಾ ಅವನು ಹಚ್ಚಿದ ಒಂದು ಕಿಡಿ ಎಲ್ಲವನ್ನೂ ಆವರಿಸಿಕೊಂಡ ಹಾಗೆ ಭಾಸವಾಯಿತೋ ನೀವೇ ಓದಿ ನೋಡಿ.


ಒಂದು ಅನೈತಿಕ ಸಂಬಂಧ, ಹಾದರ ಏನೆಲ್ಲವನ್ನು ಹಾನಿ ಮಾಡಬಹುದು ಎಂದುಕೊಂಡರೂ ಅಳ್ಳಂಕಿಯ ಪಾತ್ರ ಕೊನೆಯಲ್ಲಿ ವಿಭಿನ್ನವಾಗಿ ಕಂಡಿತು. ಸುರೇಶನ ಮನಸ್ಥಿತಿ ಮಾನಸಿಕ ಅಸ್ವಸ್ಥತೆಯಿಂದ ಗುಣವಾಗುತ್ತಿದೆ ಎನ್ನುವಾಗಲೇ ಬಂದ ತಿರುವು, ಮಂತ್ರವಾದಿಗಳ ತಂತ್ರ, ಕುತಂತ್ರ, ಹಳ್ಳಿಯ ಜನರ ಮನಸ್ಥಿತಿ ಎಲ್ಲವೂ ಯಾರದ್ದೋ ಸ್ವಾರ್ಥ, 'ಕ್ಷಯ'ವಾಗುತ್ತಿರುವ ಬದುಕಿನ ಮೌಲ್ಯಗಳನ್ನು ತೋರಿಸಿತು. ಇದು ಕೊಳೆತು ಇಡೀ ಹಳ್ಳಿಯೇ ನಾಶವಾಗುವುದಾ ಅಥವಾ ಗುಣವಾಗುವುದಾ ಎಂಬುದಕ್ಕಿಂತ ಇದರ ಮೂಲವನ್ನೇ ನಿವಾರಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ಹುಟ್ಟಿದರೂ ಆದಷ್ಟು ಸುಲಭವಾ..? ಎಂದೂ ಅನ್ನಿಸಿತು. 


ಈ ಪುಸ್ತಕದ ಕಥೆ ಪ್ರಾದೇಶಿಕ ಭಾಷೆಯಾಗಿದ್ದು.. ಲೇಖಕರ ಊರಿನ ಅಂದರೆ ಉತ್ತರ ಕರ್ನಾಟಕದ ಹೊನ್ನಾವರದ ಕಡೆಯ ಭಾಷೆಯಾಗಿದೆ. ಆ ಭಾಗದ ಜನರಿಗೆ ಇದು ಮತ್ತಷ್ಟು ಆಪ್ತವಾಗುತ್ತದೆ. ನನಗೆ ಗೊತ್ತಿಲ್ಲದ ಎಷ್ಟೋ ಹೊಸ ಪದಗಳನ್ನು ಇದರಿಂದ ತಿಳಿದೆ. ಅಲ್ಲಲ್ಲಿ ಸಿಕ್ಕ ಈ ಪದಗಳು ಓದಿನ ಓಘಕ್ಕೆ ಅಡ್ಡಿಯಾಗಲಾರವು. ಕಾದಂಬರಿಯ ಕೊನೆಯಲ್ಲಿ ಈ ಪದಗಳ ಅರ್ಥ ಸಹಾ ಸಿಗುತ್ತದೆ. 


ಕೆಲವು ಪುಸ್ತಕಗಳು ಗಾತ್ರದಲ್ಲಿ ಹಿರಿಯವಾದರೆ, ಇನ್ನು ಕೆಲವು ಸತ್ವದಲ್ಲಿ. ಹಲವಾರು ಪಾತ್ರಗಳಿಂದ ಕೂಡಿದ್ದರೂ ಅಚ್ಚುಕಟ್ಟಾಗಿ, ಹೇಳ ಬೇಕಾದುದನ್ನಷ್ಟೇ ತಲುಪಿಸುವಷ್ಟು ಸತ್ವಯುತವಾಗಿ ಮೂಡಿ ಬಂದಿರುವ ಕಾದಂಬರಿ ಎಷ್ಟು ಬೇಗ ಮುಗಿಯಿತಾ ಎಂದೆನ್ನಿಸಿತು.


~ವಿಭಾ ವಿಶ್ವನಾಥ್

ಬೆಳ್ಳಿ ಮೋಡ (ಪುಸ್ತಕ ಯಾನ -34)


ಪುಸ್ತಕದ ಶೀರ್ಷಿಕೆ : ಬೆಳ್ಳಿ ಮೋಡ

ಲೇಖಕಿ : ತ್ರಿವೇಣಿ

ಎರಡನೇ ಮುದ್ರಣ : 1987 (ನನ್ನ ಓದಿಗೆ ಸಿಕ್ಕಿದ್ದು)


'ಬೆಳ್ಳಿ ಮೋಡ' ಮತ್ತು 'ಮಿನುಗು ತಾರೆ' ಎಂಬ ಹೆಸರನ್ನು ಕಂಡಾಗ ಮೊದಲಿಗೆ ಮನಸ್ಸಿಗೆ ಹೊಳೆಯುವುದು ಕಲ್ಪನಾರವರು. ಆದರೆ, ತ್ರಿವೇಣಿಯವರ ಈ ಕಾದಂಬರಿ 'ಬೆಳ್ಳಿ ಮೋಡ' ಎಂದಾಗ ನೆನಪಾಗುವುದು ಕಥಾ ನಾಯಕಿ ಇಂದಿರಳ ಸುಪರ್ದಿಯಲ್ಲಿ ನಳನಳಿಸುತ್ತಿರುವ ಎಸ್ಟೇಟ್ ಹಾಗೂ ಆಕೆ ವಾಸಿಸುತ್ತಿದ್ದ ಮನೆ 'ಮಿನುಗು ತಾರೆ'. ಇದಕ್ಕೆಲ್ಲಾ ಕಲಶವಿಟ್ಟಂತೆ ಕಾಣುವುದು ಇಂದಿರಾಳ ವ್ಯಕ್ತಿತ್ವ. ಆಡಂಬರವಿಲ್ಲದೆ ತನ್ನ ಸರಳತೆಯಲ್ಲಿಯೇ.. ರೂಪದಿಂದಲ್ಲ, ಗುಣದಿಂದ ಮನಸೆಳೆಯುವ ನಾಯಕಿ. ನಾಯಕಿ ಎಂಬುದು ಕಥಾ ನಾಯಕಿ ಎಂಬರ್ಥ ಮಾತ್ರವಲ್ಲ. ಎಸ್ಟೇಟ್ , ಕಾಫಿ ಗಿಡಗಳ ಮೇಲ್ವಿಚಾರಣೆ ನಡೆಸುತ್ತಾ ಕೈಯ್ಯಲ್ಲೊಂದು ಕತ್ತಿ ಹಿಡಿದು ತೋಟಕ್ಕೆ ಹೊಕ್ಕಳು ಎಂದರೆ ಕೆಲಸಗಾರರಂತೆ ತಾನೂ ಕೆಲಸ ಮಾಡುತ್ತಾ.. ಜೊತೆ ಜೊತೆಗೆ ಕೆಲಸಗಾರರಿಗೂ ಮಾರ್ಗದರ್ಶನ ಮಾಡಿ ಮೇಲ್ವಿಚಾರಣೆ ಮಾಡುವ ನಾಯಕಿ. ಈಗಿನ ಟೀಮ್ ಲೀಡ್ ಮಾಡುವ ಗುಣ ಈಗಿರಬೇಕು ಎಂದು ಹೇಳುತ್ತೇವಲ್ಲಾ ಅಂತಹದ್ದೇ ಗುಣ. ತಾನು ಬರೀ ಆಜ್ಞೆ ಮಾಡದೆ.. ತಾನೂ ಕೆಲಸ ಮಾಡುತ್ತಾ ಕೆಲಸ ಮಾಡಿಸುವಂತಹದ್ದು.


ಸದಾಶಿವರಾಯರು ಹಾಗೂ ಲಲಿತಮ್ಮನವರ ಏಕಮಾತ್ರ ಪುತ್ರಿಯಾಗಿದ್ದರೂ ಇಂದಿರಳಲ್ಲಿ ಆಡಂಬರವಿರಲಿಲ್ಲ. ಅಪ್ಪನಂತೆಯೇ ಗಟ್ಟಿಗಿತ್ತಿ ಹಾಗೂ ಆರೋಗ್ಯವಂತೆ. ಲಲಿತಮ್ಮನವರಿಗೆ ಮಗಳು ಸರಳವಾಗಿರುವುದು, ಸೀದಾ ಸಾದಾ ಇರುವುದರಲ್ಲಿ ಕೊಂಚ ಆಕ್ಷೇಪ.


ಮೊದಲಿಗೆ ಮೋಹನ ಸಹಾಯವನ್ನು ಯಾಚಿಸಿ ಸದಾಶಿವರಾಯರನ್ನು ಹುಡುಕಿಕೊಂಡು 'ಬೆಳ್ಳಿಮೋಡ'ಕ್ಕೆ ಬಂದಾಗ ಇಂದಿರ ಮಾತ್ರ ಸಿಗುವುದು. ಅದೂ ತೋಟದಲ್ಲಿ.. ಅತಿಥಿ ಸತ್ಕಾರದಲ್ಲಿ ಪುಟ್ಟಯ್ಯನೂ ಮುಂದೆಯೇ.. ಪುಟ್ಟಯ್ಯನ ನೇತೃತ್ವದಲ್ಲಿ ಮೋಹನನಿಗೆ ಅಲ್ಲಿನ ಪರಿಚಯವಾದರೂ ಇಂದಿರಳ ಸಾಮಾನ್ಯ ರೂಪು ಮೊದಮೊದಲು ನಿರಾಸಕ್ತಿ ಉಂಟು ಮಾಡುತ್ತದೆ. ಜೊತೆಗೆ ಅವಳ ಗಾಂಭೀರ್ಯ, ಕ್ಲುಪ್ತ ಮಾತುಗಳೂ ಅಷ್ಟು ಸಲುಗೆ ಮೂಡಿಸುವುದಿಲ್ಲ. ಅವನ ಅಮೆರಿಕಾದ ಓದಿಗೆ ಬೇಕಾದ ಸಹಾಯ ದಕ್ಕುವುದು ಬೇರೆ ರೀತಿಯಲ್ಲಿ.


ಲಲಿತಮ್ಮನವರ ಆಸೆ, ಕನಸುಗಳು ಸುತ್ತುತ್ತಿದ್ದದ್ದು ಇಂದಿರ ಮದುವೆ ಕುರಿತು. ಮೋಹನನನ್ನು ಕಂಡು ಅದಕ್ಕೆ ಸ್ಪಷ್ಟ ರೂಪು ಬಂದಿತ್ತು. ಸದಾಶಿವರಾಯರ ಅನುಭವದ ನೋಟವೋ ಅಥವಾ ಅವರ ಮನಸ್ಸಿನ ಯಾವುದೋ ಮೂಲೆಯಲ್ಲಿ ಮುಂಬರುವ ನೋಟವಿತ್ತೋ ಗೊತ್ತಿಲ್ಲ.. ಆದರೆ, ಮೋಹನ ತಮ್ಮ ಮುದ್ದಿನ ಮಗಳು ಇಂದಿರೆಗೆ ಸರಿಯಾದ ವರನಲ್ಲ ಎಂದು ಭಾವಿಸಿದ್ದರೂ ಇಂದಿರ ಒಪ್ಪಿದಾಗ ಮಗಳ ಸಂತೋಷಕ್ಕೆ ಅವರೂ ಒಪ್ಪುತ್ತಾರೆ.


ಆತ ಅಮೇರಿಕಾಕ್ಕೆ ಹೋಗಿ ಬಂದ ನಂತರ ಮದುವೆ ಎಂಬ ತೀರ್ಮಾನವಾದರೂ.. ಎರಡು ವರ್ಷ ಎನ್ನುವುದು ಅದೆಷ್ಟು ಬದಲಾವಣೆಗಳನ್ನು ತರಬಲ್ಲದಾಗಿತ್ತು.. 


ಮಗಳ ಮದುವೆ ಮಾಡುವ ಕಾಲದಲ್ಲಿ ಲಲಿತಮ್ಮ ಬಹಳ ವರ್ಷಗಳ ನಂತರ ಲಲಿತಮ್ಮ ಗರ್ಭಿಣಿಯಾಗಿ ಆರೋಗ್ಯದ ಸಮಸ್ಯೆಯಿಂದ ತೀರಿ ಹೋಗುವುದು , ಇಂದಿರ ತನ್ನ ತಾಯಿಗೆ ತಾಯಿಯಾಗಿ ನೋಡಿಕೊಳ್ಳುವುದು, ಮಗು 'ಗಿರಿರಾಜ'ನ ಹೊಣೆ ಹೊತ್ತು ತಾಯಿಗಿಂತ ಮಿಗಿಲಾಗಿ ಪೋಷಿಸುವುದು, ಮೋಹನನ ಬದಲಾದ ಭಾವನೆಗಳನ್ನು ಗುರುತಿಸುವುದು.. 


ಹೆಣ್ಣು ಪ್ರೌಢಾವಸ್ಥೆ ತಲುಪುದಕ್ಕೆ ಹೆಚ್ಚು ಕಾಲವೇ ಬೇಕಿಲ್ಲವೇನೋ ಎನ್ನಿಸಿತು. ಹೆಣ್ಣನ್ನು ಪ್ರೌಡೆಯನ್ನಾಗಿ ಮಾಡುವುದು ವಯಸ್ಸಲ್ಲ.. ಬದುಕು, ಕಾಲ ಅಷ್ಟೇ. ಇಂದಿರಳ ಎಷ್ಟೋ ನಡತೆಗಳಲ್ಲಿ ಇದು ಕಂಡಿತು. ತನ್ನ ತಮ್ಮನನ್ನು ತನ್ನ ಪೈಪೋಟಿ ಎಂದು ತಿಳಿದುಕೊಳ್ಳದೆ, ಅಪ್ಪ-ಅಮ್ಮನ ಕುರಿತು ತಪ್ಪು ಭಾವಿಸದೆ ಅಮ್ಮನನ್ನು ಅಮ್ಮನಾಗಿ ಪೋಷಿಸುವ ದೊಡ್ಡ ಗುಣ ಕಂಡಿತು. 


ಮೋಹನ ಇಂದಿರೆಯಿಂದ ತನಗೆ ಬಿಡುಗಡೆ ಬೇಕೆಂದಾಗ ಅದಕ್ಕೆ ಆಕೆ ಪ್ರತಿಕ್ರಿಯೆ ನೀಡಿದ ರೀತಿಯೂ ತಣ್ಣಗಿನ ಪ್ರತಿಕ್ರಿಯೆಯೇ.. ಎರಡು ವರ್ಷ ಅದೆಷ್ಟು ಅನುಭವ ನೀಡಿತ್ತೆಂದರೆ ಆಕೆ ಕೋಪಿಸಿಕೊಂಡು, ಅತ್ತು ಗೋಗರೆದು.. ಬೇಡಬಹುದಾಗಿತ್ತು. ಆದರೆ, ಮತ್ತೊಬ್ಬರ ಸುಖವನ್ನು ಬಯಸುವ ತಾಯಿಯಾಗಿ ನಿಂತಳು. ವಯಸ್ಸಿನಲ್ಲಿ ಅಂತರವಿದ್ದರೂ ನೀವು ಹಾಗೂ ಗಿರಿಯನ್ನು ಒಂದೇ ರೀತಿ ಭಾವಿಸುತ್ತೇನೆ ಎಂದು ಅವಳಾಡಿದ ಮಾತೇ ಅದಕ್ಕೆ ಸಾಕು. ಆತನನ್ನು ಆರಿಸಿದ್ದು ಹುಡುಗತನದ ಕನಸು ಎಂದುಕೊಂಡಳು.


ಸ್ವಾಭಿಮಾನದ ಸಂಕೇತವಾಗಿ ಕೊನೆಗೆ ಆತ ಒಲಿದರೂ, ಬದಲಾದರೂ ಒಪ್ಪಿಕೊಳ್ಳದ ದಿಟ್ಟೆಯಂತೆ ಕಂಡಳು. ಅಲ್ಲಿ ಕಂಡದ್ದು ಹಠಮಾರಿತನವಲ್ಲ.. ಬದಲಾಗಿ ಆಕೆಯ ಗಟ್ಟಿತನ, ಬದುಕನ್ನು ನೋಡುವ ದೃಷ್ಟಿಕೋನ. ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎನ್ನುವ ಮಾತು ಹೇಗೋ ಪ್ರತಿ ದಿಟ್ಟ ಮಗಳ ಹಿಂದೆ ಆಕೆಗೆ ಬೆಂಬಲವಾಗಿ ನಿಲ್ಲುವ ತಂದೆ ಇರುತ್ತಾರೆ ಎನ್ನುವ ಮಾತನ್ನು ಇಲ್ಲಿ ಹೇಳಬಹುದು.


ಮುದುಕಿಯ ಪಾಲಿಗೆ ಯೌವ್ವನ ಇನ್ನು ಕನಸು ಮಾತ್ರ ಎಂದು ಹೇಳುವುದು ಹಾಗೂ ಬೆಳ್ಳಿ ಕರಗಿ ಹೋಯಿತು.. ಇನ್ನು ನನಗುಳಿದಿರುವುದು ಮೋಡ ಮಾತ್ರ ಎಂದು ಹೇಳುವುದು ನೆಗೆಟಿವ್ ಆಲೋಚನೆ ಇರಬಹುದಾ ಎನ್ನಿಸಿದರೂ ಅಷ್ಟು ಭಾವುಕತೆ , ವಿಷಾದವೂ ಇರಬಾರದೇ ಎಂಬ ಪ್ರಶ್ನೆಯೂ ಮೂಡಿತು. ಅಲ್ಲದೆ.. ಗಿರಿ ಅವಳ ಬಾಳಿನ ಆಶಾ ಕಿರಣದಂತೆ ಕಂಡನು.


~ವಿಭಾ ವಿಶ್ವನಾಥ್

ನನ್ನ ಗೋಪಾಲ (ಪುಸ್ತಕ ಯಾನ - 33)


ಪುಸ್ತಕದ ಹೆಸರು : ನನ್ನ ಗೋಪಾಲ

ಲೇಖಕರು : ಕುವೆಂಪು

ಪ್ರಕಾಶಕರು : ಉದಯರವಿ ಪ್ರಕಾಶನ

ಮೊದಲ ಮುದ್ರಣ : 1930

ಎಂಟನೇ ಮುದ್ರಣ (ನನ್ನ ಓದಿಗೆ ಸಿಕ್ಕಿದ್ದು) : 2015

ಪುಟಗಳು : 33

ಬೆಲೆ : 35 ರೂಪಾಯಿಗಳು


'ಮಲೆಗಳಲ್ಲಿ ಮದುಮಗಳು' ಹಾಗೂ 'ಕಾನೂರು ಹೆಗ್ಗಡತಿ'ಯಂತಹಾ ಮಹಾನ್ ಕಾದಂಬರಿಗಳನ್ನು ಬರೆದ , 'ಶ್ರೀ ರಾಮಾಯಣ ದರ್ಶನಂ' ಎಂಬ ಜ್ಞಾನಪೀಠ ಪುರಸ್ಕೃತ ಗ್ರಂಥ ಬರೆದ ಕುವೆಂಪುರವರ ಕೃತಿಗಳನ್ನು ಓದಿದ ಮೇಲೆ ಮಕ್ಕಳ ನಾಟಕವನ್ನು ಓದಿದರೆ ಆಯಾ ವಯೋಮಾನದವರಿಗೆ ಅರ್ಥವಾಗುವಂತಿರುವ ಈ ಪುಸ್ತಕದ ಜೊತೆಗೆ ಕುವೆಂಪುರವರ ಬರಹದ ಶೈಲಿಯೂ ಒಂದು ಬೆರಗಿನಂತೆ ಉಳಿದು ಬಿಡುತ್ತದೆ. 


ಮಕ್ಕಳೇ ರಂಗ ಪ್ರಯೋಗ ಮಾಡಲು ಅನುವಾಗುವಂತೆ.. ದೊಡ್ಡವರಿಗೂ ಓದಿನ ಹಾಗೂ ನಾಟಕದ ಹಾಗೂ ಶಿಶು ಸಾಹಿತ್ಯದ ಕುರಿತ ಆಸಕ್ತಿ ಮೂಡಿಸುವಂತಿದೆ. ಚಿಕ್ಕ ಪುಸ್ತಕವಾದರೂ ಸೊಗಸಾದ ಛಾಪು ಮೂಡಿಸುವಂತಿದೆ. ಮಕ್ಕಳು ಮುಗ್ಧತೆಯ ಪ್ರತಿರೂಪ. ನಂಬಿಕೆಗೆ ಒಲಿಯದ ದೇವರಿರುವನೇ ಎಂಬಂತೆ ಗೋಪಾಲ ಹಾಗೂ ಬನದ ಗೋಪಾಲನ ಚಿತ್ರಣವಿದೆ. 


ಮುಗ್ಧ ಭಕ್ತಿಯ ಜೊತೆಗೆ, ಭಗವದ್ಗೀತೆಯ ಶ್ಲೋಕಗಳೂ ಸೇರಿ ಭಕ್ತಿ- ಭಾವವನ್ನೂ ತುಂಬಿವೆ. ಅತಿರೇಖದ ಚಿತ್ರಣಗಳಿಲ್ಲದೇ ಸಹಜ ಸುಂದರವೆಂಬಂತೆ ಮೂಡಿ ಬಂದಿರುವ 'ನನ್ನ ಗೋಪಾಲ' ನಾಟಕವನ್ನು ಒಮ್ಮೆ ಶಾಲಾ ಮಕ್ಕಳ ಅಭಿನಯದಲ್ಲಿ ನೋಡಿದ್ದೆ. ಅದಕ್ಕೂ ಮೀರಿದ ಭಾವ ಈ ಅಕ್ಷರಗಳ ಚಿತ್ರಣದಲ್ಲಿ ದೊರೆಯಿತು.


ಓದಿರದಿದ್ದಲ್ಲಿ ಓದಿ ಎಂದಷ್ಟೇ ಹೇಳಬಲ್ಲೆ. ಕುವೆಂಪುರವರ ಪುಸ್ತಕ ವಿಮರ್ಶಿಸುವಷ್ಟು ದೊಡ್ಡವಳಲ್ಲ.. ಅವರ ಜನ್ಮ ದಿನದಂದು ಓದಿದ ಪುಸ್ತಕದ ಪುಟ್ಟ ಮಾಹಿತಿಯಷ್ಟೇ..


~ವಿಭಾ ವಿಶ್ವನಾಥ್