ಭಾನುವಾರ, ಏಪ್ರಿಲ್ 26, 2026

ಚಾಂದಬೀ ಸರಕಾರ (ಪುಸ್ತಕ ಯಾನ - 408)


ಪುಸ್ತಕದ ಶೀರ್ಷಿಕೆ : ಚಾಂದಬೀ ಸರಕಾರ

ಲೇಖಕರು : ಚಂದ್ರಶೇಖರ ಕಂಬಾರ 

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2021

ಪುಟಗಳು : 124

ಬೆಲೆ : 150 ರೂ.


ಕವಿ ಹೃದಯದ ಕಂಬಾರರು ಕಥಾನಕವನ್ನು ನಿರೂಪಿಸುವಾಗ ಕಥಾವಸ್ತುವಿನ ಜೊತೆಗೆ ಕಥೆಯ ರಸಾನುಭವಕ್ಕೆ ಚೆಂದದ ಭಾಷೆಯನ್ನು ಬಳಸಿದ್ದಾರೆ. ಸಾಮಾಜಿಕ ಸಮಸ್ಯೆಯೊಂದರ ಕಾಲಘಟ್ಟ ಜೊತೆಗೆ ದುಷ್ಟ ಶಕ್ತಿಯನ್ನು ಮೀರಿ ನಿಲ್ಲಲು ಶಿಷ್ಟಶಕ್ತಿಗಳ ಒಂದಾಗುವಿಕೆ, ಇದೆಲ್ಲದರ ಜೊತೆಗೆ ಹಳ್ಳಿಯ ಹಾಗೂ ಜಾನಪದ ನಂಬಿಕೆಯನ್ನು ಮಿಸಳಿತಗೊಳಿಸಿ ಕಟ್ಟಿಕೊಟ್ಟಿರುವ ಕಾದಂಬರಿ ಇದು. 


ದೇವರಾಜ ಅರಸು ಅವರು ಜಾರಿಗೆ ತಂದ ಕರ್ನಾಟಕ ಭೂಮಸೂದೆಯ ಕಾಲಘಟ್ಟದ ಕಥೆ ಇಲ್ಲಿದೆ. ಇದರ ಜೊತೆಗೆ ಬಯಲಾಟ ಹಾಗೂ ಆಟ ಪ್ರಯೋಗಿಸುತ್ತಲೇ ಕಥೆಯಾದ ಚಾಂದಬೀ ಕುರಿತು ಹೇಳುತ್ತಾರೆ.


ಬಯಲಾಟಗಳಲ್ಲಿ ಕಂಪನಿ ನಾಟಕಗಳಿಗೆ ಸರಿಸಮವಾಗಿ ವ್ಯಾವಹಾರಿಕವಾಗಿ ಯಶಸ್ವಿಯಾದ ಬಯಲಾಟವೆಂದರೆ ಶ್ರೀ ಕೃಷ್ಣ ಪಾರಿಜಾತವೊಂದೇ. ಶ್ರೀಕೃಷ್ಣ ಪಾರಿಜಾತ ಪ್ರದರ್ಶನಕ್ಕೆ ಎರಡು ಮೂರು ತಂಡಗಳಿದ್ದವು ಅಷ್ಟೇ. ಇದು ಹವ್ಯಾಸಿ ಕಲಾವಿದರಿಂದ ಆಗುವ ಕೆಲಸವಲ್ಲ. ಬದಲಾಗಿ ಪೂರ್ವ ತಯಾರಿ, ನುರಿತ ಕಲಾವಿದರು, ಮಹಾಭಾರತ ಮತ್ತು ಭಗವದ್ಗೀತೆಗಳ ದಟ್ಟ ಪರಿಚಯದೊಂದಿಗೆ ಶಾಸ್ತ್ರೀಯ ಸಂಗೀತದ ಜ್ಞಾನವಿರುವ ತಂಡ ಇಲ್ಲವೇ ಕನಿಷ್ಠ ಉಸ್ತಾದ ನಿಗಾದರೂ ಇದೆಲ್ಲದರ ಪರಿಚಯವಿರಬೇಕು. ಇಂತಹ ತಂಡದಲ್ಲಿ ಕಲಾವಿದೆಯಾಗಿದ್ದ.. ದೇವದಾಸಿಯಾಗಿ ಹುಟ್ಟಿ, ರಾಣಿಯಾದಾಗ ತನ್ನ ಪರಿಸರವನ್ನು ಸಂಸ್ಕರಿಸಿದ ಚಾಂದಬೀ ಸಂಕ್ರಮಣವನ್ನು ಸೂಚಿಸುತ್ತಾಳೆ. ಚಾಂದಬೀಯನ್ನು ಪ್ರತ್ಯಕ್ಷವಾಗಿ ಕಂಡಿದ್ದವರು ಲೇಖಕರು. ತಿಳಿದಷ್ಟು ಕಥೆಯ ಜೊತೆ ಚಾಂದಬೀಯನ್ನು ಕಟ್ಟಿಕೊಡುವ ಬಹಳ ವರ್ಷಗಳ ಕನಸೊಂದು ಅವರ ಈ ಕಾದಂಬರಿಯ ಮೂಲಕ ನನಸಾಗಿದೆ.


ಶಿವಾಪುರದ ಬಲದೇವ ನಾಯಕ ಹಿರಿಯರಿಂದ ಬಂದ ಜಮೀನು ಪದ್ಧತಿಯ ಒಡೆಯನಾಗಿದ್ದವನು. ಒಡೆಯನಾದರೂ ಕುಳಿತುಕೊಳ್ಳದೆ.. ಎಲ್ಲರಂತೆ ಅಥವಾ ಎಲ್ಲರಿಗಿಂತಲೂ ಹೆಚ್ಚಾಗಿ ಕೆಲಸ ಮಾಡುತ್ತಿದ್ದವನು. ಬೆಳಿಗ್ಗೆ ಎದ್ದರೆ ರಾತ್ರಿ ಮಲಗುವ ತನಕ ಆತನಿಗೆ ಕೆಲಸಗಳು ಕಾಣುತ್ತಿದ್ದವು. ಅಷ್ಟೇ ಕಟ್ಟುನಿಟ್ಟಾಗಿ ಕೆಲಸ ಮಾಡಿಸುತ್ತಲೇ ಗೇಣಿಯನ್ನು ಬಿಡದಂತೆ ವಸೂಲಿ ಮಾಡುತ್ತಿದ್ದ.


ಒಮ್ಮೆ ಸಮೃದ್ಧವಾಗಿ ಬೆಳೆದಿದ್ದ ಅವನ ಮೆಣಸಿನ ಹೊಲದಿಂದ ಹೇಳದೆ, ಕೇಳದೆ ಮೆಣಸಿನಕಾಯಿ ಕೊಯ್ದುಕೊಂಡು ಉ ಡಿ ತುಂಬಿಕೊಂಡ ಕೂಲಿ ಹೆಣ್ಣನ್ನು ಕಂಡು.. ಕಳ್ಳತನವನ್ನು ಕ್ಷಮಿಸದೆ, ಕಸಿದು ಕಳುಹಿಸುವಾಗ ಆಕೆ ಹೇಳಿದ ಮಾತೊಂದು ಆತನ ಮನದಲ್ಲಿ ಗಟ್ಟಿಯಾಗಿ ನಿಂತಿತ್ತು. 


ಆಕೆ ಹೇಳಿದಂತಹ ಶಾಪದಂತಹ ಮಾತು ನಿಜವೇ ಅನ್ನಿಸಿತ್ತು ಅವನಿಗೆ. ಅದಾದ ನಂತರ.. ಆತ ಮದುವೆಯಾಗಬೇಕೆಂದು ಮನಸ್ಸು ಮಾಡಿ ತನಗೆ ತಕ್ಕಂತಹ ಹೆಣ್ಣನ್ನು ಹುಡುಕಲು ಶುರು ಮಾಡಿದ. ಅಷ್ಟಕ್ಕೂ.. ಕೂಲಿ ಆಳು ಆಡಿದ, ಹಸಿಗೋಡೆಯಲ್ಲಿ ಹರಳು ನೆಟ್ಟಂತಹ ಮಾತಾದರೂ ಏನು..?


ಮನೋಳಿಯ ಅಯ್ಯಾ ಸರಕಾರನ ಮಗಳು ಕಾವೇರಮ್ಮ ಆತನ ಮನಸ್ಸು ಜೊತೆಗೆ ಮನೆಯನ್ನು ತುಂಬಿದಳು. ಆದರೆ, ಕಾವೇರಮ್ಮನಿಗೆ ರಾಜಮನೆತನದ ಧಿಮಾಕು ಜೊತೆಗೆ ಪ್ರದರ್ಶಕ ಬುದ್ಧಿಯ ಕನಸಿತ್ತು. ಹಾಗಿದ್ದ ಆಕೆಗೆ ಶಿವಪುರದ ವಾಡೆ ಚಿಕ್ಕದಾಗಿ ಕಂಡಿತ್ತು. ಸಿರಿವಂತಿಕೆಯಲ್ಲಿ ಮೆರೆಯಬೇಕೆನ್ನುವ ಗತ್ತು ತೋರಿಸಬೇಕೆನ್ನುವ ಪತ್ನಿ ಹಾಗೂ ಮೈಮುರಿದು ದುಡಿಯುತ್ತಾ ಕಷ್ಟಜೀವಿಯಾಗಿದ್ದ ಗಂಡ ಇವರ ದಾಂಪತ್ಯ ಜೀವನ ಚೆನ್ನಾಗಿಯೇ ಸಾಗಿತ್ತು. ಮಗಳಿಗೆ ಕಷ್ಟವಾಗಬಾರದೆಂದು ತಂದೆಯೇ ಆಕೆಗೆ ಬೇಕಾದ ಅನುಕೂಲ ಮಾಡಿಸಿಕೊಟ್ಟಿದ್ದರು. ಬಲದೇವ ನಾಯಕ ತೋಟದಲ್ಲಿ ಕಟ್ಟಿಸಿದ 'ವಿಲಾಸ್ ಖಾನಾ'ವನ್ನು ಆಕೆ ನೋಡಲೇ ಇಲ್ಲ. 


ಐದು ವರ್ಷದ ದಾಂಪತ್ಯ ಜೀವನದಲ್ಲಿ ಆಕೆ ಗರ್ಭಿಣಿಯಾದಳೆಂದು ಸಂತೋಷಪಡುವಷ್ಟರಲ್ಲಿಯೇ ಹಿಂದೆಯೇ ಗರ್ಭಪಾತ. ಹೀಗೆ ಮೂರು ಗರ್ಭಪಾತವಾದಾಗ ಭವಿಷ್ಯವಾಣಿ, ಜ್ಯೋತಿಷ್ಯ, ಮಂತ್ರ-ಮಾಟ, ಯಜ್ಞ-ಯಾಗ ಎಲ್ಲವೂ ಕಾವೇರಮ್ಮನಿಂದ ನಡೆದು ಹೋಗಿದ್ದವು. ದಾಂಪತ್ಯದಲ್ಲಿ ವಿರಸ ಶುರುವಾಗಿತ್ತು. ತನಗಂಟಿದ ಅನಿಷ್ಟಕ್ಕೆ ಗಂಡನ ದುರ್ದೈವವೇ ಕಾರಣವೆಂದು ಆಲೋಚಿಸುತ್ತಿದ್ದವಳಿಗೆ ಕೊರವಂಜಿಯ ನುಡಿಯೊಂದು ಆಕೆ ತವರಿಗೆ ಹೋಗುವಂತೆ ಮಾಡಿತು. ಕೊರವಂಜಿಯ ಮಾತಿನಂತೆ ಮಗು ಉಳಿಯಿತು. ಆದರೆ, ಮಗುವನ್ನು ತಂದೆ ಮುಟ್ಟುವಂತಿರಲಿಲ್ಲ. ಕೊರವಂಜಿಯ ನುಡಿಯಾದರೂ ಏನಿತ್ತು..?


ಕೃಷ್ಣಾ ಹುಟ್ಟಿದ ಎರಡು ತಿಂಗಳ ಹೊತ್ತಿಗೆ ಕಾವೇರಮ್ಮ ತೀರಿ ಹೋದಳು. ಆಕೆಯ ತಂಗಿ ಸೀತಾ ಲಕ್ಷ್ಮಿ ಮಗುವನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳಾದರೂ ಬಲದೇವ ನಾಯಕ ಅವಳನ್ನು ಮದುವೆಯಾಗಲು ಒಪ್ಪಲಿಲ್ಲ. ಇತ್ತ ಮನೆ ತುಂಬಾ ಜನ ಇದ್ದರೂ ಕೃಷ್ಣಾ ಒಂಟಿಯಾದಂತೆ.. ಅಲ್ಲಿ ಜೊತೆಯಿಲ್ಲದ ಬಲದೇವ ನಾಯಕ ಒಂಟಿಯಾದ. 


ಈ ಸಂದರ್ಭದಲ್ಲಿಯೇ ಕೃಷ್ಣಪಾರಿಜಾತವನ್ನು ನೋಡಿದ ಬಲದೇವನಾಯಕನ ಮನಸ್ಸು ತುಂಬಿದ್ದು ಚಾಂದಬೀ. ಚಾಂದಬೀಯ ಹಿನ್ನೆಲೆ, ಆಕೆಯ ವೈವಾಹಿಕ ಜೀವನವಿದ್ದರೂ ಅದು ಸಫಲವಾಗಿರಲಿಲ್ಲ. ಅಲ್ಲದೆ, ಅವಳ ಸಂತಾನವೂ ಉಳಿಯಲಿಲ್ಲ. ಆಕೆಯ ಬದುಕಿನ ಸೂಕ್ಷ್ಮ ವಿಚಾರಗಳು ತಿಳಿದಿದ್ದರೂ ಬಲದೇವ ನಾಯಕ ಆಕೆಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ. ಚಾಂದಬೀಯ ಹಿನ್ನೆಲೆ ಹಾಗೂ ಆಕೆಯ ಬಯಲಾಟದ ವೈಖರಿಯನ್ನು ಓದಿ ನೋಡಿ. 


ಇತ್ತ ಎರಡನೆಯ ಮದುವೆಯ ಸಮಾರಂಭವನ್ನು ಬಲದೇವ ನಾಯಕ ಅದ್ದೂರಿಯಲ್ಲಿ ಆಚರಿಸಿದರೆ, ಮನೋಳಿಯ ವಾಡೆಯಲ್ಲಿ ಅದನ್ನು ಕರಾಳ ದಿನವೆಂದೇ ಆಚರಿಸಿದರು. ವಾಡೆಗೆ ಬೀಗ ಬಿದ್ದಿತ್ತು. ತಲೆಕೆಡಿಸಿಕೊಳ್ಳದ ನಾಯಕ ಹಾಗೂ ಚಾಂದಬೀ ಇಬ್ಬರೂ ವಿಲಾಸ ಖಾನಾದಲ್ಲಿ ವಾಸ್ತವ್ಯ ಹೂಡಿದರು. ಆಕೆಯ ಜೊತೆಗಾತಿಯಾಗಿ ಜೊತೆಯಾದದ್ದು ಗಜಲಿಂಗವ್ವ. ಬಲದೇವ ನಾಯಕನ ಮಗನ ಹೆಸರು ಕೃಷ್ಣಾ ಎಂದು ತಿಳಿದಾಗ ಚಾಂದಬೀ ಕನಸಿಗೆ ರೆಕ್ಕೆಗಳು ಮೂಡಿದ್ದವು. ಅದರ ಹಿನ್ನೆಲೆಯಲ್ಲಿ ಆಕೆಯ ಮಾತೃತ್ವದ ಹಂಬಲ ಎಷ್ಟೆಂಬುದು ಅರಿವಾಗುತ್ತದೆ. 


ವಿಲಾಸ ಖಾನಾದಲ್ಲಿ ಬೇಕಾದಷ್ಟು ಆಳುಗಳಿದ್ದರು ಅವರೆಲ್ಲರೂ ಆಕೆಯನ್ನು ಚಾಂದಬೀ ಸರಕಾರ ಎಂದೇ ಕರೆಯತೊಡಗಿದರು. ಇವರೆಲ್ಲ ತನಗೆ ಚೇಷ್ಟೆ ಮಾಡುತ್ತಿರಬಹುದು ಎಂದು ಆಕೆ ತನ್ನ ಗಂಡನ ಬಳಿ ಹೇಳಿದಾಗ ಈ ಮನೆತನದ ಸೊಸೆಯಂದಿರೆಲ್ಲ ಸರಕಾರಗಳೇ ಎಂದನು. ತನಗೆ ಹಾಗೆ ಕರೆಯಬಾರದೆಂದು ಹೇಳಿದಾಗ ಬಂದ ಪ್ರತಿಕ್ರಿಯೆಯೇನು..? 


ಆ ಹೆಸರಿನ ಘನತೆಗೆ ತಕ್ಕಂತೆ ಆಕೆ ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳು ಹಾಗೂ ಹೊಣೆಗಳನ್ನು ಕಂಡಾಗ ಆಕೆಗೆ ಆ ಪದ ಎಷ್ಟು ಒಪ್ಪುತ್ತದೆಂದು ಅರಿವಾಗುತ್ತದೆ.


ಶಿವಾಪುರದ ಹೊರಗಿನ ಪ್ರದೇಶಗಳಲ್ಲಿ ಕಳ್ಳ ಭಟ್ಟಿಯ ಹಾವಳಿಯಿಂದ ಉಂಟಾದ ಉಪದ್ವಾಪಗಳು ಏನಿದ್ದವು..? ಇದರಲ್ಲಿ ಅಯ್ಯಾ ಸರಕಾರ ಹಾಗೂ ಬಡ್ಡಿ ಬಂಗಾರಮ್ಮನ ಪಾತ್ರಗಳು ಏನಿದ್ದವು..?


ಚಾಂದಬೀ ಕಾಡಿನ ದೃಶ್ಯ ನೋಡುವಾಗ ಅಲ್ಲಿದ್ದ ಸಂಪಿಗೆ ಮರ ಆಕೆಯನ್ನು ಸೆಳೆದಿತ್ತು. ಸೊಗಸಾಗಿ ಆಕ್ರಮಿಸಿಕೊಂಡ ಸಂಪಿಗೆ ಮರಕ್ಕೆ ಬಹಳ ದೊಡ್ಡ ಇತಿಹಾಸವೇ ಇತ್ತು. ಅಲ್ಲದೇ ಗೌರವವೂ ಇತ್ತು. ಮನೆತನದ ಪದ್ಧತಿಯಂತೆ ಅದಕ್ಕೆ ಪೂಜೆಯೂ ಸಲ್ಲಬೇಕಿತ್ತು. ಅಂತಹ ಒಂದು ಶುಭ ಸಂದರ್ಭದಲ್ಲಿ ಚಾಂದ ಬೀಗೆ ಊರಿನಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಯೊಂದನ್ನು ತೆರೆಯುವ ಕನಸು ಸಿಕ್ಕಿದ್ದು. 


ಕಾವೇರವ್ವ ಕನ್ನಡ ಹೆಣ್ಣು ಮಕ್ಕಳ ಶಾಲೆ ಎಂದು ಹೆಸರಿಡಬೇಕೆಂದು, ಅದರ ಉದ್ಘಾಟನೆಗೆ ಮನೋಳಿಯ ಅಯ್ಯಾ ಸರಕಾರನನ್ನು ಆಮಂತ್ರಿಸಬೇಕೆಂದು.. ಈ ವಿಷಯದಲ್ಲಿ ಬೆಳಗಾವಿಯ ಡಿ.ಸಿ ಸಾಹೇಬರು ಮುಂದೆ ನಿಂತು ಎಲ್ಲದಕ್ಕೂ ಸರಿಯಾದ ಮಾರ್ಗದರ್ಶನ ನೀಡಬೇಕೆಂಬ ದಂಪತಿಗಳ ಕನಸು ಏನಾಯಿತು..?


ಮನೋಳಿಯ ವಾಡೆಯಲ್ಲಿ ಚಾಂದಬೀಯನ್ನು ಕಾಣುತ್ತಿದ್ದ ಬಗೆ ಹೇಗಿತ್ತು..? ಈ ಪ್ರಸ್ತಾಪವನ್ನು ಹೊತ್ತು ಹೋದ ಬಲದೇವ ನಾಯಕನಿಗೆ ಸಂದ ಮರ್ಯಾದೆ ಏನು..? ಸೀತಾಲಕ್ಷ್ಮಿಯ ವಿವಾಹದ ಸಂದರ್ಭ ನಡೆದ ಘಟನೆ ಮನೋಳಿಯ ವಾಡೆಯಲ್ಲಿ ಪ್ರತಿಬಿಂಬಿತವಾಗಿದ್ದು ಹೇಗೆ..?


ಬಡ್ಡಿ ಬಂಗಾರಮ್ಮನ ವೈವಾಹಿಕ ಬದುಕು ಹೇಗಿತ್ತು..? ಆಕೆಯ ಮಗಳು ಚಾಂದಬೀಯನ್ನು ಆಶ್ರಯಿಸಿ ಬಂದಾದರೂ ಏಕೆ..? ಅಯ್ಯಾ ಸರ್ಕಾರನ ಬಲಗೈಯಂತಿದ್ದ ಬಡ್ಡಿ ಬಂಗಾರಮ್ಮನ ಅವಸಾನ ಹೇಗಾಯಿತು?


ಇಲ್ಲಿ ಕೃಷ್ಣಾನ ವ್ಯಕ್ತಿತ್ವ ಬಹಳ ಇಷ್ಟವಾಗುತ್ತದೆ. ಮಗನಂತೆಯೇ ಕಂಡ ತಾಯಿಗೆ ಅಷ್ಟೇ ಗೌರವ, ಆದರವನ್ನು ನೀಡುವ ಕೃಷ್ಣ ಸೇವಾ ಮನೋಭಾವವನ್ನು ಬೆಳೆಸಿಕೊಂಡದ್ದು ಹೇಗೆ..? ಆತ ಬೆಳೆದ ಪರಿಸರ ಹೇಗಿತ್ತು..? ಆತ ತನ್ನ ತಂದೆ ಹಾಗೂ ಶಿವಾಪುರವನ್ನು ಬಂದು ಸೇರಿದ್ದು ಹೇಗೆ..? ಕೃಷ್ಣಾ ಶಿವಾಪುರದ ಮುಂದಿನ ಪೀಳಿಗೆಯ ನಾಯಕನಾಗುವ ಎಲ್ಲಾ ಯೋಗ್ಯತೆಯನ್ನು ಹೊಂದಿದ್ದಾನೆ ಎನ್ನಿಸಿತು.


ದೇವದಾಸಿ ಕುಲದ ಹೆಣ್ಣುಗಳು ಊರ ಸಮುದಾಯವನ್ನೇ ಅಭಿವೃದ್ಧಿಯ ಹಾದಿಯಲ್ಲಿ ನಡೆಸಲು ಹೊರಟಾಗ ಆ ಹಾದಿಯಲ್ಲಿ ಕಲ್ಲು-ಮುಳ್ಳಿನಂತೆ ಕ್ರೌರ್ಯ, ಕುತಂತ್ರಗಳು ಇದ್ದಂತೆಯೇ.. ಆ ಕೆಲಸಕ್ಕೆ ಅಡಿಪಾಯವಾಗಿ ನಿಲ್ಲುವ ಮಕ್ಕಳೂ ಇದ್ದರು. ಹಳ್ಳಿಯ ತಾಯಿಯಾಗುವ ಚಾಂದಬೀ ಸರಕಾರ ಇಲ್ಲಿ ಹೊರಗಿನ ದುಷ್ಟ ಶಕ್ತಿಗಳೊಂದಿಗೆ ಹೋರಾಡಿದ್ದು ಹೇಗೆ..? ಅಂತ್ಯ ಕೊಂಚ ಸಿನಿಮೀಯವೆನ್ನಿಸಿತು ನನಗೆ. 


ಇಲ್ಲಿ ಶಿವಾಪುರದ ಬೃಹತ್ ಹಳೆಯ ಸಂಪಿಗೆ ಮರ, ಗಜಲಿಂಗವ್ವ, ಜೋಗತಿಯರು, ಮರದವ್ವನ ಜಾನಪದದ ದೃಶ್ಯಗಳು ಕಣ್ಣಿಗೆ ಕಟ್ಟುವಂತಿವೆ.


ಭೂತಕಾಲದ ನೆರಳು ಭವಿಷ್ಯದ ಹಾದಿಯ ಮೇಲೆ ಬೀಳಬಾರದೆಂದರೆ ಅದಕ್ಕೆ ಮನುಷ್ಯನಲ್ಲಿನ ಪ್ರಜ್ಞೆ ಗಟ್ಟಿ ಇರಬೇಕು. ನಿಲುವು ಸ್ವಸ್ಥವಾಗಿರಬೇಕು. ಎಲ್ಲವನ್ನೂ ಎದುರಿಸಿ ನಿಲ್ಲುವ ತಾಕತ್ತಿರಬೇಕು. ಹೆಣ್ಣು ಮನಸ್ಸು ಮಾಡಿದರೆ ಎಷ್ಟು ಅಭಿವೃದ್ಧಿ ಮಾಡಬಲ್ಲಳು ಎನ್ನುವುದನ್ನು ಸಮರ್ಥವಾಗಿ ಕಟ್ಟಿಕೊಡುವ ಕಾದಂಬರಿಯಿದು. 


~ವಿಭಾ ವಿಶ್ವನಾಥ್

ಸಣ್ಣ ಕತೆಗಳು ೪ (ಪುಸ್ತಕ ಯಾನ - 407)


ಪುಸ್ತಕದ ಶೀರ್ಷಿಕೆ : ಸಣ್ಣ ಕತೆಗಳು ೪

ಲೇಖಕರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ)

ಪ್ರಕಾಶಕರು : ಜೀವನ ಕಾರ್ಯಾಲಯ

ಪ್ರಥಮ ಮುದ್ರಣ : 1934

ಮೂರನೇ ಮುದ್ರಣ : 1954 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 91


ಶ್ರೀನಿವಾಸ ಎಂಬ ಅಂಕಿತನಾಮದಿಂದ ಬರೆಯುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕತೆಗಳು ಜನಪ್ರಿಯ. ಈ ಕಥಾಸಂಕಲನದಲ್ಲಿ ಆರು ಸಣ್ಣ ಕತೆಗಳಿವೆ. ಇದರಲ್ಲಿ ಜೋಗ್ಯೋರ ಅಂಜಪ್ಪನ ಕೋಳೀಕತೆ ನಮಗೆ ಪಿ.ಯು.ಸಿ ಯಲ್ಲಿ ಕನ್ನಡ ಪಠ್ಯದಲ್ಲಿತ್ತು.


ಮೇಲೂರಿನ ಲಕ್ಷ್ಮಮ್ಮ : 

ಆಕೆ ಮಾತನಾಡುವ ಶೈಲಿ ಹಾಗೂ ಜನರನ್ನು ಗಮನಿಸದೆ ಮಾತನಾಡುವ ರೀತಿಗೆ ಆಕೆ ಕುರುಡಿ ಇಲ್ಲವೇ ಹುಚ್ಚಿ ಎಂದುಕೊಂಡಿದ್ದರು. ಆದರೆ, ಆಕೆ ಬೀದಿಯ ಹುಚ್ಚಿಯಂತೆ ಕಂಡಿರಲಿಲ್ಲ. ಒಂದು ಬಟ್ಟೆಯ ಗಂಟಿತ್ತಾದರೂ.. ಆಕೆ ಎಲ್ಲೋ ತಪ್ಪಿಸಿಕೊಂಡು ಬಂದಿರುವಂತೆ ಕಾಣುತ್ತಿತ್ತು. ಆಕೆ ಕುರುಡಿ ಎನ್ನುವುದು ಹೌದು. ಮಾತನಾಡಿಸಿದಾಗ ಮಾತು ಸಮಂಜಸವಾಗಿಯೇ ಬಂದಿತ್ತು. ತನ್ನ ಮಕ್ಕಳಿಗೆ ಹರಸುವ, ಆರತಿ-ಅಕ್ಷತೆಯ ಮಾತನ್ನಾಡಲಿಲ್ಲ. ಬದಲಾಗಿ ಆಕೆಯ ಪರಿಚಯವನ್ನೇ ಅವಳು ಹೇಳಿಕೊಂಡಿದ್ದಳು. ಆಕೆಯ ಮಾತಿನ ಕುರಿತು ಕೇಳಿದಾಗಲೂ.. "ಮೊದಲ ಮೂರು ಮಾತು ವಿವೇಕದ ಮಾತು, ಕೊನೆಯ ಮೂರೂ ಯಾವುದೋ ನೆನಪಿನ ಹುಚ್ಚು ಮಾತು" ಎಂದಿದ್ದಳು. ಆಕೆ ಮೇಲೂರಿನ ಸುಬ್ಬರಾಮಯ್ಯನವರ ಮಗಳು ಲಕ್ಷ್ಮಮ್ಮ. ರೂಪವಂತೆ, ಬುದ್ಧಿಶಾಲಿ. ಆದರೆ, ಹುಟ್ಟುಗುರುಡು. ಲಕ್ಷ್ಮಮ್ಮನವರ ಬಾಲ್ಯದಿಂದ ಆಕೆಯ ಜೀವನ ಹಾಗೂ ಅಂದಿನ ಸ್ಥಿತಿಯವರೆಗೂ ಆಕೆಯ ಅಣ್ಣ ಹೇಳಿದ ಕಥೆ ಇಲ್ಲಿದೆ.. 

ಮೂರು ತಿಂಗಳ ಹಿಂದಿನ ಈ ಘಟನೆಯನ್ನು ನೆನಪಿಸಿಕೊಳ್ಳುವಾಗ ಅವರು ಬ್ರಹ್ಮ ಬರಹವನ್ನು ತಮ್ಮ ಕಿರಿಯ ಮಗ.. ಇನ್ನೂ ಅಕ್ಷರ ಬರೆಯಲು ಬರೆದ ಶಾಮುವಿನ ಬರಹಕ್ಕೆ ಹೋಲಿಸಿದ್ದೇಕೆ..? ಓದಿ ನೋಡಿ.


ಪೆನುಕೊಂಡೆಯ ಕೃಷ್ಣಮೂರ್ತಿ : 

ಇದು ಚಾರಿತ್ರಿಕ ಕಥನ. ವಿಜಯನಗರವನ್ನು ಹಾಳು ಮಾಡಿದ ಸುಲ್ತಾನರು ಪೆನುಕೊಂಡೆಯನ್ನೂ ಸುಮ್ಮನೆ ಬಿಡಲಿಲ್ಲ. ಶ್ರೀರಂಗನ ಕಾಲದಲ್ಲಿ ಎರಡು ಸಲ ಸೋತು ಬಂದಿದ್ದರಾದರೂ ಅವರ ಪ್ರಯತ್ನ ನಿಂತಿರಲಿಲ್ಲ. ರಾಜ ಶ್ರೀರಂಗನ ತಾಯಿ ದಕ್ಷ ರಾಣಿ ಲಕ್ಷುಮಾಂಬೆ. ಆಕೆ ರಾಷ್ಟ್ರಧರ್ಮಗಳನ್ನು ಪಾಲಿಸುತ್ತಾ, ಮಗನಿಗೆ ರಾಜ್ಯಭಾರದ ಹಲವು ಪಟ್ಟುಗಳನ್ನು ಕಲಿಸಿಕೊಟ್ಟವಳು. ಅರಮನೆಯ ಆವರಣದಲ್ಲಿ ದೇವಾಲಯ ಹಾಗೂ ದೇವರ ಮೂರ್ತಿಗಳನ್ನು ಕಟ್ಟಿಸುವಾಗ ಒಂದು ಕೃಷ್ಣ ವಿಗ್ರಹಕ್ಕೆ ಮನಸೋತು ಅದಕ್ಕೆ ಸಣ್ಣ ಮಂದಿರವನ್ನು ಮಾಡಿಸಿದ್ದಳು. ಅದು ಆಕೆಯ ಇಷ್ಟ ಮೂರ್ತಿ. ಅದರ ಜೊತೆಗೆ ಬಂಗಾರದ ಕೊಳಲು ಇದ್ದಿತು. ಮಗನಿಗೆ ತಕ್ಕ ವಧುವನ್ನು ನೋಡಿ ವಿವಾಹ ಮಾಡಿದ್ದಳಾದರೂ.. ವಿಲಾಸಿನಿಯೊಬ್ಬಳು ಆತನ ಮನಸ್ಸಲ್ಲಿ, ಕಕ್ಷೆಯಲ್ಲಿ ನೆಲೆಯಾದಳು. ಇದೇ ಸಂದರ್ಭದಲ್ಲಿ ಪೆನುಕೊಂಡೆಯ ಮೇಲೆ ಅಕ್ರಮಣವಾದಾಗ ಅತ್ತೆ-ಸೊಸೆಯರಿಬ್ಬರೂ ಕೃಷ್ಣನ ವಿಗ್ರಹದ ಸಮೇತ ಹೊರಟದ್ದು ಎಲ್ಲಿಗೆ..? ಅವರು ಪತ್ತೆಯಾದ ಪ್ರಸಂಗ ಹೇಗಿದೆ..? ಓದಿ ನೋಡಿ.


ವೆಂಕಟಶಾಮಿಯ ಪ್ರಣಯ : 

ಗೆಳೆಯನ ಊರಿನಲ್ಲಿ ಚೆಂದದ ತೋಪಿನ ನಡುವೆ ಗಿಡಗಳು ಪಂಚವಟಿಯನ್ನೇ ಮಾಡಿದೆ ಎಂದು ಶ್ಲಾಘಿಸುತ್ತಿರುವಾಗ ಅಲ್ಲಿ ಆ ಊರಿನ ನಾಯಿಂದನ ಮಗ ವೆಂಕಟಶಾಮಿಯ ಗೋರಿಯೂ ಇದೆಯೆಂಬ ವಿಚಾರ ತಿಳಿಯುತ್ತದೆ. ಆ ಕುರಿತು ತಿಳಿದದ್ದೆಂದರೆ.. ಅವನು ಸಾಯುವಾಗ ತನ್ನ ತಂದೆಯ ಬಳಿ ಒಂದು ಮಾತು ತೆಗೆದುಕೊಂಡಿದ್ದ. ಅವನ ಆ ಮಾತಿನಂತೆಯೇ ಅವನನ್ನು ಅಲ್ಲಿ ಸಮಾಧಿ ಮಾಡಲಾಗುತ್ತದೆ. ಅವನ ಅಕಾಲ ಮೃತ್ಯುಗೆ ಮುಂಚಿನ ಅವನ ಪ್ರೇಮ ಪ್ರಸಂಗವೊಂದು ತೆರೆದುಕೊಳ್ಳುತ್ತಾ ಹೋಗುತ್ತದೆ. ದೊಂಬರ ಹುಡುಗಿ ಹಾಗೂ ವೆಂಕಟಶಾಮಿಯ ಪ್ರೇಮಕತೆ ಮುಗಿದು ಬಹಳ ಕಾಲವಾಗಿದೆ ಎಂದು ಹೇಳಿದರೂ.. ಈ ಕಥೆ ಓದಿದಾಗ ಅವನಿಗಾಗಿಯೂ.. ಅವನನ್ನು ಕಳೆದುಕೊಂಡ ಹುಡುಗಾಗಿಯೂ ಮನಸ್ಸು ಮರುಗುತ್ತದೆ ಎಂಬ ನಂಬಿಕೆಯಲ್ಲಿಯೇ ಲೇಖಕರು ಈ ಕಥೆಯನ್ನು ಹೇಳುತ್ತಾರೆ.


ಮಲೆನಾಡಿನ ಒಂದು ಪಿಶಾಚ : 

ರಾಮರಾಯರ ಜೊತೆ ಒಮ್ಮೆ ಪ್ರಯಾಣ ಮಾಡುತ್ತಿದ್ದಾಗ ಪಿಶಾಚಿಗಳನ್ನು ಕುರಿತ ಒಂದು ಮಾತುಕತೆಯಲ್ಲಿ ಅವರ ಸ್ನೇಹಿತರು ತೀರ್ಥಹಳ್ಳಿಯ ಪ್ರಾಂತ್ಯದಲ್ಲಿ ಇದ್ದಾಗ ಕೇಳಿದ ಒಂದು ಕಥೆಯನ್ನು ಹೇಳುತ್ತಾರೆ. ಆ ಕಥೆಯನ್ನು ಇಲ್ಲಿ ಹೇಳಿದ್ದಾರೆ. ತೀರ್ಥಹಳ್ಳಿಯಾಚೆ, ಮಲೆನಾಡಿನ ಗುಡ್ಡಗಳ ಮಧ್ಯೆ, ಕಾಡುಗಳ ಮಧ್ಯದಲ್ಲಿದ್ದ ಹಳ್ಳಿಗೆ ನರಸಿಂಹನ್ ಪೋಸ್ಟ್ ಮಾಸ್ಟರ್ ಆಗಿ ನೇಮಕವಾಗುತ್ತಾರೆ. ಪೋಸ್ಟ್ ಮಾಸ್ಟರ್ ಹುದ್ದೆಗೆ ಎಂತಹ ಗತ್ತು ಇತ್ತು ಎಂಬುದನ್ನು ಕಥೆ ಓದಿಯೇ ತಿಳಿಯಿರಿ. ಆ ಸಂದರ್ಭದಲ್ಲಿ ನರಸಿಂಹನ್ ಪತ್ನಿ ಗರ್ಭಿಣಿಯಾಗಿದ್ದಳು. ಊರಿನ ಹಿರಿಯರು ಆಕೆ ಅಲ್ಲಿಗೆ ಬರುವುದು ಬೇಡ, ಮಗುವಾದ ನಂತರವೇ ಮಗುವಿನೊಡನೆ ಆಕೆ ಬಂದರೆ ಸರಿಯಾಗುತ್ತದೆ ಎಂದು ಹೇಳುತ್ತಾರೆ. ಹಾಗೆ ಹೇಳಲು ಒಂದು ಕಾರಣವಿತ್ತು. ಅದೇ ಬಾಣಂತಿ ಪಿಶಾಚ. ನರಸಿಂಹನ್ ಮೊದಲಿಗೆ ಇದನ್ನು ನಂಬದಿದ್ದರೂ.. ನಂಬಿದರೂ .. ಆಕೆಗೆ ಆರೈಕೆ ಮಾಡುವವರು ಯಾರೂ ಇಲ್ಲದ್ದರಿಂದ ಆತನಿಗೆ ಪತ್ನಿಯನ್ನು ಕರೆತರದೆ ಗತ್ಯಂತರವಿರಲಿಲ್ಲ. ಮುಂಭಾಗದಲ್ಲಿ ಪೋಸ್ಟ್ ಆಫೀಸ್, ಹಿಂಭಾಗದಲ್ಲಿ ಮನೆ ಇದ್ದುದರಿಂದ ಅವರು ಆದಷ್ಟು ಕಾಳಜಿ ಮಾಡುತ್ತಿದ್ದರು. ಜೊತೆಗೆ ಒಂದು ಹೆಂಗಸನ್ನೂ ನೇಮಿಸಿದ್ದರು. ಇದನ್ನು ದಾಟಿ ಪಿಶಾಚಿಯ ಅನುಭವವಾಯಿತೇ..? ಈ ಹಾರರ್ ಕಥೆ ಓದಿನೋಡಿ.


ಜೋಗ್ಯೋರ ಅಂಜಪ್ಪನ ಕೋಳೀಕತೆ :

ಊರಿನ ಹಳೆಯ ಮುದುಕರಲ್ಲಿ ಹಿರಿಯ ತಲೆ ಜೋಗ್ಯೋರ ಅಂಜಪ್ಪ. ಆತನ ವಿಸ್ತಾರವಾದ ಅನುಭವದ ಫಲವಾಗಿ ಅವನು ಕೊಡುವ ಬುದ್ಧಿವಾದ ಒಳ್ಳೆಯದಾಗಿಯೇ ಇರುತ್ತಿತ್ತು. "ವಯಸ್ಸಿನಲ್ಲಿ ಜಾಂಬವಂತನಾಗಿದ್ದ ಹಾಗೆ ಅಂಜಪ್ಪ ಬುದ್ಧಿಯಲ್ಲಿ ಹನುಮಂತ ". ಇಂತಹ ಅಂಜಪ್ಪ ರಂಗಪ್ಪನಿಗೆ ಬೆಂಚು ಮ್ಯಾಜಿಸ್ಟ್ರೇಟ್ ಕೆಲಸ ಸಿಕ್ಕಿದಾಗ ಹೇಳುವ ಕಿವಿಮಾತು.. 

ಜನರು ಎದುರಿಗೆ ಬಂದಾಗ ಇವರು ಸತ್ಯವಂತರು, ಇವರು ಕಳ್ಳರು ಅಂತ ಸರಿಯಾಗಿ ತಿಳಿದು ಶಿಕ್ಷೆ ಕೊಡಬೇಕು. ಪೊಲೀಸರು, ಲಾಯರುಗಳು ಹೇಳುವ ಮಾತು ಕೇಳಿಬಿಟ್ಟು ಶಿಕ್ಷೆ ಕೊಡಬಾರದೆಂದು. 

ಆ ಮಾತನಾಡಲು ಅಂಜಪ್ಪನಿಗೆ ಒಂದು ಹಿನ್ನೆಲೆಯೇ ಇತ್ತು. ಅಂಜಪ್ಪ ಕೋಳಿ ಕದ್ದನೆಂದು ಅವರು ಫಿರ್ಯಾದು ಮಾಡಿದರೆ ಕೋಳಿ ಕದಿಯಲಿಲ್ಲವೆಂದು ಈತ. ಆದರೆ, ಕೋಳಿಯಂತೂ ಅಂಜಪ್ಪನ ಜೋಳಿಗೆಯಲ್ಲಿತ್ತು. ಅದರ ಮರ್ಮವೇನು..? ಅಂಜಪ್ಪ ತಪ್ಪಿತಸ್ಥನೆಂದು ಸಾಬೀತಾದ ಬಗೆ ಹೇಗೆ ಓದಿ ನೋಡಿ. 


ಪಂಡಿತನ ಮರಣಶಾಸನ :

ಚಿಕ್ಕದೇವರಾಜ ಒಡೆಯರು ರಾಜಪದವಿಗೆ ಬಂದ ನಂತರ ವಿಶಾಲಕ್ಷ ಪಂಡಿತನು ಅವರ ಮುಖ್ಯ ಪ್ರಧಾನರಾಗುತ್ತಾರೆ. ಅವರು ಮತದಿಂದ ಜೈನ, ಜಾತಿಯಿಂದ ಬ್ರಾಹ್ಮಣ. 

ಚಿಕ್ಕಂದಿನಲ್ಲಿ ವಿಶಾಲಾಕ್ಷ ಪಂಡಿತರು ಒಡೆಯರ ಜಾತಕವನ್ನು, ಹಸ್ತರೇಖೆಗಳನ್ನು ನೋಡಿ "ನೀನು ರಾಜನಾಗುತ್ತೀಯ" ಎಂದು ಭವಿಷ್ಯ ನುಡಿದಿದ್ದರು. ದೊರೆಯಾಗಲು ಬೇಕಾದ ಸಾಧನೆ ಮಾಡುವ ಬಗ್ಗೆ ಹೇಳುತ್ತಿದ್ದರು. ಅಲ್ಲದೆ, ದೊರೆಯಾದಾಗ ನನ್ನನ್ನು ಮಂತ್ರಿಯಾಗಿಟ್ಟುಕೊಳ್ಳಬೇಕೆಂದು ಕೇಳಿದ್ದರು ಒಡೆಯರು. ಹುಡುಗುತನದಲ್ಲಿ ಒಪ್ಪಿದರು ಒಡೆಯರು. ಮುಂದೆ ಭವಿಷ್ಯ ನುಡಿದಂತೆಯೇ ಆಗಿ ಚಿಕ್ಕದೇವರಾಜ ಒಡೆಯರಾದರು. ಕೊಟ್ಟ ಮಾತಿನಂತೆಯೇ ವಿಶಾಲಾಕ್ಷ ಪಂಡಿತರು ಮುಖ್ಯ ಪ್ರಧಾನರಾದರೆ.. ತಿರುಮಲಾರ್ಯರು, ನರಸಿಂಹ ಶಾಸ್ತ್ರಿ, ಪದ್ಮರಸ ಪಂಡಿತರು ಇವರ ಜೊತೆಗೆ ಇತರ ಮಂತ್ರಿಗಳಾಗಿದ್ದರು. ಇಂತಹ ಸಂದರ್ಭದಲ್ಲಿ ನಾಲ್ವರು ವೈಷ್ಣವರು ಬಂದು ಇರುಳಾಪುರ ಗ್ರಾಮದ ವಿಚಾರವನ್ನು ತಿರುಮಲಾರ್ಯರ ಮೂಲಕ ಹೇಳಿಸುತ್ತಾರೆ. ಜೈನ ಹಾಗೂ ವೈಷ್ಣವ ದೇವಾಲಯಗಳಲ್ಲಿ ಒಂದಕ್ಕೆ ಮಾತ್ರ ಗ್ರಾಮ ನಡೆದುಕೊಳ್ಳಬೇಕಿತ್ತು. ಕ್ಲಿಷ್ಟವಾದ ಈ ಸಮಸ್ಯೆ ವಿಶಾಲಾಕ್ಷ ಪಂಡಿತರು ಹಾಗೂ ತಿರುಮಲಾರ್ಯರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸುತ್ತದೆ. ಅಂದೇ ಸಂಜೆ ಆದ ಹಲ್ಲೆಯಲ್ಲಿ ವಿಶಾಲಾಕ್ಷ ಪಂಡಿತರು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪುತ್ತಾರೆ. ಅದಕ್ಕೂ ಮುಂಚೆ ಒಡೆಯರ ಬಳಿ ಅವರು ಅರಿಕೆ ಮಾಡಿಕೊಳ್ಳುವುದೇನು..? ಮುಂದೆ, ಒಡೆಯರು ಹಾಗೆ ನಡೆದುಕೊಂಡರೆ..? ಅವರ ಮೇಲೆ ಹಲ್ಲೆ ನಡೆಸಿದವರಾರೆಂದು ಪಂಡಿತರು ಹೇಳಿದರೇ ಓದಿ ನೋಡಿ.


ಮಾಸ್ತಿಯವರ ಕೆಲವು ಕಥೆಗಳನ್ನು ಓದಿದ್ದರೂ ಅವರ ಹಾರರ್ ಕಥೆಯನ್ನು ನಾನು ಓದಿದ್ದು ಇದೇ ಮೊದಲು . ಚೆಂದದ ಕಥೆಗಳ ಓದು. 


~ವಿಭಾ ವಿಶ್ವನಾಥ್

ಸ್ವಾಮಿ ವಿವೇಕಾನಂದರ ಬದುಕು ಭಾಷಣ ಪತ್ರಗಳು ಮತ್ತು ಬರಹಗಳು

ವಿವೇಕಾನಂದರೆಂಬ ಪರುಷಮಣಿ:

ಪರುಷಮಣಿಯ ಸ್ಪರ್ಶವಾದರೆ.. ಅದಕ್ಕೆ ಸ್ಪರ್ಶಿಸುವುದೆಲ್ಲವೂ ಚಿನ್ನವಾಗುತ್ತದೆ. ಸ್ವಾಮಿ ವಿವೇಕಾನಂದರ ವಾಣಿಗಳು, ಅವರ ಭಾಷಣಗಳು ಯುವಜನತೆಗೆ ತಲುಪಿದಾಗ ಅವರಲ್ಲಿ ಮಿಂಚಿನ ಸಂಚಾರವಾಗುವುದಂತೂ ಹೌದು. ಅವರ ಜೀವನೋತ್ಸಾಹ, ಧ್ಯೇಯ, ಧೈರ್ಯ ಎಲ್ಲರಿಗೂ ಮಾದರಿ. 

"ನಿಮ್ಮ ಮೇಲೆ ನೀವು ನಂಬಿಕೆಯಿಡಿ. ಆಗ ಜಗತ್ತು ನಿಮ್ಮ ಪಾದದಡಿಯಲ್ಲಿರುತ್ತದೆ." ಎಂದು ತಮ್ಮ ಕುರಿತು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಬಗೆಯನ್ನು ಹೇಳಿದವರು.


 ಬಾಲಕನ ಸರಳತೆ, ಯುವಕನ ಉತ್ಸಾಹ, ವಾರ್ಧಕ್ಯದ ತುಂಬು ಅನುಭವ, ತಾಯಿಯ ಮೃದು ಹೃದಯ, ಯೋಧನ ಯೋಧೃತ್ವ ಒಂದುಗೂಡಿರುವ ವ್ಯಕ್ತಿ, ಶಕ್ತಿ ಅವರು.


ವಿವೇಕಾನಂದರ ಬಾಲ್ಯ, ಬೆಳೆದ ಪರಿಸರ ಎಲ್ಲವೂ ಅವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿತ್ತಾದರೂ.. ಅವರ ಮೇಲೆ ಪ್ರಮುಖವಾಗಿ ಪ್ರಭಾವ ಬೀರಿದ ವ್ಯಕ್ತಿಗಳೆಂದರೆ ಗುರು ರಾಮಕೃಷ್ಣ ಪರಮಹಂಸರು.

"ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ.. ಒಂದು ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು, ಸುಜ್ಞಾನದ ಕಡೆಗೆ ಕರೆದೊಯ್ಯುವುದೇ ಗುರು" ಎನ್ನುತ್ತಾರೆ ವಿವೇಕಾನಂದರು. 

ಹಾಗಾಗಿ, ಅವರು ದೇಶದಾದ್ಯಂತ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸುವಾಗ ಅದನ್ನು ವ್ಯಕ್ತಿಕೇಂದ್ರಿತವಾಗಿ ರೂಪಿಸುವುದಿಲ್ಲ. ಕಾರ್ಯಕೇಂದ್ರಿತವಾಗಿ ರೂಪಿಸುತ್ತಾರೆ.


ವಿವೇಕಾನಂದರು ಯಾವುದನ್ನೂ ಪರೀಕ್ಷಿಸದೆ ನಂಬಿದವರಲ್ಲ. ಪರೀಕ್ಷಿಸಿಯೇ ನಂಬುವಂತೆ ಶಿಷ್ಯರಿಗೂ ಹೇಳುತ್ತಿದ್ದರು. ಅಂತೆಯೇ.. ಗುರು ರಾಮಕೃಷ್ಣ ಪರಮಹಂಸರನ್ನು ಅವರು ಪರೀಕ್ಷಿಸಿಯೇ ನಂಬಿದವರು. ರಾಮಕೃಷ್ಣ ಪರಮಹಂಸರು ಹೊನ್ನು, ಮಣ್ಣುಗಳನ್ನು ಸಮವಾಗಿ ಭಾವಿಸಿದವರು. ಅವೆರಡನ್ನೂ ಸಮದೃಷ್ಟಿಯಿಂದ ನೋಡಿ ಹೊಳೆಯಲ್ಲಿ ಬಿಸುಟಿ ಸಾಧನೆ ಮಾಡಿದ್ದರು. ಅವುಗಳ ಸ್ಪರ್ಶದಿಂದಲೇ ಅವರ ದೇಹ ಕಂಪಿಸುತ್ತಿತ್ತು. ನರೇಂದ್ರರು ಅದನ್ನು ಅಭಿನಯವೋ..? ಸತ್ಯವೋ..? ಎಂದು ಕಂಡುಹಿಡಿಯಲು ಸಿದ್ದರಾಗಿ ಒಮ್ಮೆ ದಕ್ಷಿಣೇಶ್ವರಕ್ಕೆ ಬಂದಾಗ ಪರಮಹಂಸರು ಕೋಣೆಯಲ್ಲಿರಲಿಲ್ಲ. ಒಂದು ರೂಪಾಯಿ ತೆಗೆದು ಅವರ ಹಾಸಿಗೆಯಡಿಯಲ್ಲಿಟ್ಟಿದ್ದರು. ಗುರುಗಳು ಹಿಂತಿರುಗಿ ಬಂದು ಹಾಸಿಗೆ ಮೇಲೆ ಕುಳಿತುಕೊಳ್ಳಲು ಹೋದಾಗ ವಿದ್ಯುತ್ ಶಕ್ತಿಯನ್ನು ಸ್ಪರ್ಶಿಸಿದಾಗ ಉಂಟಾಗುವ ಕಂಪನದಂತೆ ಮಿಡುಕಿ ಹಿಂದೆ ಬಂದರು. ನಂತರ ಹುಡುಕಿ ನೋಡಿದರೆ ಅಲ್ಲಿ ನಾಣ್ಯವಿತ್ತು. ಮುಂದೆ ಪರಮಹಂಸರಿಗೆ ಈ ವಿಚಾರ ತಿಳಿದಾಗ ಶಿಷ್ಯನನ್ನು ಬಹಳವಾಗಿ ಶ್ಲಾಘಿಸಿದರು. 


"ನನ್ನ ದೃಷ್ಟಿಯಲ್ಲಿ ಶಿಕ್ಷಣದ ಸಾರವೇ ಮನಸ್ಸಿನ ಏಕಾಗ್ರತೆ. ಬರಿಯ ವಿಷಯ ಸಂಗ್ರಹವಲ್ಲ, ನಾನು ಇನ್ನೊಮ್ಮೆ ವಿದ್ಯಾಭ್ಯಾಸವನ್ನು ಪ್ರಾರಂಭಿಸಬೇಕಾಗಿ ಬಂದರೆ ನಾನು ಮೊದಲು ಏಕಾಗ್ರತೆ ಮತ್ತು ಅನಾಸಕ್ತಿಯ ಶಕ್ತಿಯನ್ನು ಗಳಿಸಿ ಆನಂತರ ನನ್ನ ಇಚ್ಛೆಯಂತೆ ವಿಷಯಗಳನ್ನು ಸಂಗ್ರಹಿಸುತ್ತೇನೆ" ಎನ್ನುತ್ತಾರೆ. 

ಕಳ್ಳನಿಗೂ ಕದಿಯುವ ವಿಚಾರದಲ್ಲಿ ಏಕಾಗ್ರತೆ ಇರಬೇಕು. ಶಬ್ಧಗಳನ್ನು ಆಲಿಸುವ, ಸುತ್ತಮುತ್ತಲಿನದ್ದನ್ನು ಗಮನಿಸುವ, ಗ್ರಹಿಸುವ ಏಕಾಗ್ರತೆ ಎನ್ನುತ್ತಾರೆ. 


ಚಿಕ್ಕಂದಿನಲ್ಲಿ ಅವರು ಧ್ಯಾನದಲ್ಲಿ ನಿರತರಾಗಿರುವಾಗ ಹಾವು ಬಂತೆಂದು ಸುತ್ತಮುತ್ತಲಿನ ಮಕ್ಕಳೆಲ್ಲರೂ ಹೆದರಿ ಓಡಿರುವಾಗ ಅವರಿಗೆ ಅದರ ಅರಿವೇ ಇರುವುದಿಲ್ಲ. ಹೀಗಿತ್ತು ನರೇಂದ್ರನ / ವಿವೇಕಾನಂದರ ಏಕಾಗ್ರತೆ. ಇನ್ನು ಏಕಸಂಧಿಗ್ರಾಹಿ ಎನ್ನುವಂತಹ ನೆನಪಿನ ಶಕ್ತಿ ಅವರದ್ದು.. ತಾವು ಓದಿದ ವಿಚಾರಗಳನ್ನು ಪುಟ ಸಂಖ್ಯೆ ಹಾಗೂ ಸಾಲುಗಳ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವಂತಹ ಜ್ಞಾಪಕ ಶಕ್ತಿ. ಗ್ರಂಥಾಲಯದಿಂದ ಪ್ರತಿದಿನವೂ ದಪ್ಪ-ದಪ್ಪದ, ಬೇರೆ-ಬೇರೆ ಪುಸ್ತಕಗಳನ್ನು ಕೊಂಡೊಯ್ದು ಮರುದಿನ ವಾಪಾಸ್ ಮಾಡುತ್ತಿದ್ದಾಗ ಗ್ರಂಥಪಾಲಕರು ಪರೀಕ್ಷಿಸಿದ ಪರೀಕ್ಷೆಯಲ್ಲಿ ಅವರು ಕೇಳಿದ ಪ್ರಶ್ನೆಗೆ ಪುಟ ಹಾಗೂ ಸಾಲಿನ ಜೊತೆಗೆ ಉತ್ತರಿಸಿ ತಮ್ಮ ಚಾತುರ್ಯವನ್ನು ತೋರಿದ್ದವರವರು. ಇವು ಕೆಲವು ನಿದರ್ಶನ ಗಳಷ್ಟೇ..


1893ನೇ ಸೆಪ್ಟೆಂಬರ್ 11ರಂದು ನಡೆದ ಚಿಕಾಗೋ ವಿಶ್ವಧರ್ಮ ಸಮ್ಮೇಳನದ ವಿವೇಕಾನಂದರ ಮಾತುಗಳು 125 ವರ್ಷಗಳು ಕಳೆದರೂ 'ಪ್ರಭಾವಿ ಭಾಷಣ' ವೆಂದು ಪರಿಗಣಿಸಲ್ಪಟ್ಟಿದೆ. ವಿವೇಕಾನಂದರ ವಿಷಯ ಮಂಡನೆಯ ಜೊತೆಗೆ ಅವರ ವಾಗ್ಝರಿ, ಪಾಂಡಿತ್ಯ, ತೇಜಸ್ಸು ಎಲ್ಲವೂ ಸೆಳೆಯುತ್ತವೆ. 

ಶ್ರೀಮತಿ ಆ್ಯನಿ ಬೆಸೆಂಟ್ ಅವರನ್ನು ಸನ್ಯಾಸಿ ಎನ್ನುವುದಕ್ಕಿಂತ ಯೋಧ ಎನ್ನುವುದೇ ಯೋಗ್ಯ ಎನ್ನುತ್ತಾರೆ. ಅವರನ್ನು 'ಯೋಧ ಸನ್ಯಾಸಿ' ಎಂದು ಕರೆದರು. 


ಮೊದಲ ನೋಟವೇ ವ್ಯಕ್ತಿಯನ್ನು ಸೆಳೆಯುವಂತೆ, ಕೇವಲ ತಮ್ಮ ಮೊದಲ ಮಾತಿನಿಂದಲೇ ಇಡೀ ಸಭಾಂಗಣವನ್ನು ತಮ್ಮ ಮಾತಿನೆಡೆಗೆ ಸೆಳೆದವರು. 

"ಅಮೆರಿಕಾದ ಸೋದರಿಯರೇ ಮತ್ತು ಸೋದರರೇ"

ಈ ವಿಭಿನ್ನ ಸಂಭೋಧನೆಯೇ ಅವರ ವೈಶಿಷ್ಟವನ್ನು ತಿಳಿಸಲು ಸಾಕಲ್ಲವೇ..? ಅಷ್ಟೇ ಅಲ್ಲದೆ, ಅಲ್ಲಿ ಬೇರಾರೂ ಸರ್ವಧರ್ಮ ಸಮನ್ವಯದ ಪ್ರಸ್ತಾಪವನ್ನೇ ಎತ್ತಿರಲಿಲ್ಲ. ಅದರ ಕುರಿತಾಗಿ ಮಾತನಾಡುತ್ತಾರೆ. ಸೆಪ್ಟೆಂಬರ್ 19ರಂದು ವಿವೇಕಾನಂದರು ಹಿಂದೂಧರ್ಮದ ಕುರಿತ ಭಾಷಣವನ್ನು ಮಾಡುತ್ತಾರೆ. 


ಸರ್ವಧರ್ಮ ಸಮನ್ವಯವನ್ನು ಸಾರಿ ಮಾಡಿದ ಭಾಷಣದಲ್ಲಿ ಪ್ರಮುಖವಾಗಿ ಎರಡು ಶ್ಲೋಕಗಳನ್ನು ಉದ್ಧರಿಸಿ ಅವುಗಳ ಭಾವಾರ್ಥವನ್ನು ಸುಲಲಿತವಾಗಿ ತಿಳಿಸುತ್ತಾರೆ. ಅವು ಇಂತಿವೆ.


ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣಮತಿ|

ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||

ರುಚೀನಾಂ ವೈಚಿತ್ರ್ಯಾತ್ ಋಜ್ ಕುಟಿಲ ನಾನಾ ಪಥ ಜುಷಾಂ|

ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ||


ಭಾವಾರ್ಥ : "ಭಿನ್ನ-ಭಿನ್ನ ಸ್ಥಾನಗಳಿಂದ ಉಗಮವಾದ ನದಿಗಳೆಲ್ಲವೂ ಹರಿದು ಕೊನೆಯಲ್ಲಿ ಸಾಗರವನ್ನು ಸೇರುವಂತೆ, ಮಾನವರು ತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ ಭಗವಂತ”


ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|

ಮಮ ವರ್ತ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||

ಭಾವಾರ್ಥ : "ಯಾರು ಯಾರು ನನ್ನಲ್ಲಿಗೆ ಯಾವ ಯಾವ ಮಾರ್ಗದಿಂದ ಬರುತ್ತಾರೋ.. ಅವರವರನ್ನು ನಾನು ಅದದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ"


ಸ್ವಾಮಿ ವಿವೇಕಾನಂದರು ಸಾಧಾರಣವಾಗಿ ತಮ್ಮ ಭಾಷಣಗಳನ್ನು ಬರೆದು ಅಥವಾ ಕಂಠಪಾಠ ಮಾಡಿ ಸಭೆಗಳಲ್ಲಿ ಒಪ್ಪಿಸುತ್ತಿರಲಿಲ್ಲ. ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣವೂ ಪೂರ್ವತಯಾರಿ ಮಾಡಿಕೊಂಡದ್ದಲ್ಲ. ನಿರರ್ಗಳವಾದ ಅವರ ಮಾತುಗಳು ಹೃದಯದಿಂದ ಹೊಮ್ಮುತ್ತಿದ್ದವು. ಅದರ ಅಮೂಲ್ಯವಾದ ಉಪದೇಶಗಳನ್ನು ಮುದ್ರಿಸಿ ಲೋಕಕ್ಕೆ ಬೆಳಕು ದೊರಕುವಂತೆ ಮಾಡಲು ಶಿಷ್ಯರು ಯೋಚಿಸಿ ಸ್ವಾಮಿಗಳ ಆಶುಭಾಷಣವನ್ನು ಬರೆದುಕೊಳ್ಳಲು ಕ್ಷಿಪ್ರ ಲಿಪಿಕಾರನನ್ನು ಗೊತ್ತು ಮಾಡಿದರಾದರೂ... ಅವರ ವಾಕ್ಪ್ರವಾಹದ ವೇಗವನ್ನು ಹಿಂಬಾಲಿಸಲಾಗಲಿಲ್ಲ. ಅಲ್ಲದೇ.. ಅಭಿಪ್ರಾಯಗಳು ಗಹನವಾಗಿಯೂ ಇದ್ದುದರಿಂದ ಆತ ಸೋತನು. ಇಬ್ಬರು ಕ್ಷೇತ್ರ ಲಿಪಿಕಾರರ ಪರಿಸ್ಥಿತಿ ಹೀಗೆಯೇ ಆಯಿತು. 


ಇಂಗ್ಲೆಂಡಿನಿಂದ ನ್ಯೂಯಾರ್ಕ್ ಗೆ ಬಂದಿದ್ದ ಜೆ. ಜೆ ಗುಡ್ವಿನ್ ಈ ಕೆಲಸದಲ್ಲಿ ಸಮರ್ಥನಾದನು. ಅಷ್ಟೇ ಅಲ್ಲದೆ.. ವಿವೇಕಾನಂದರ ಪ್ರಿಯ ಶಿಷ್ಯನೂ ಆದನು. ಅವರ ಕೃತಿಗಳ ಮುಕ್ಕಾಲು ಪಾಲು ಗುಡ್ವಿನ್ ಕ್ಷಿಪ್ರಲಿಪಿಯಿಂದ ಸಂಗ್ರಹಿಸಲ್ಪಟ್ಟಿದ್ದು. ಆತ ಇಂಗ್ಲೆಂಡಿನಿಂದ ಭಾರತಕ್ಕೆ ಬಂದಾಗ ಮರಣ ಹೊಂದುತ್ತಾನೆ. ಆಗ ವಿವೇಕಾನಂದರು "ಇಂದು ನನ್ನ ಬಲಗೈ ಮುರಿದು ಹೋಯಿತು. ನನಗಾದ ನಷ್ಟ ಅಷ್ಟಿಷ್ಟೆಂದು ಹೇಳಲಾಗದು." ಎಂದು ಉದ್ಗರಿಸುತ್ತಾರೆ. 


ವಿವೇಕಾನಂದರು ಎಲ್ಲೆಡೆ ಉಪನ್ಯಾಸಗಳನ್ನು ನೀಡಿದ್ದಾರೆ. ಇವು ಮೂರು ಗ್ರಂಥಗಳಾಗಿ ಅಚ್ಚಾಗಿವೆ ರಾಜಯೋಗ, ಭಕ್ತಿಯೋಗ ಹಾಗೂ ಕರ್ಮಯೋಗ. 


ವಿವೇಕಾನಂದರು ಕಲ್ಕತ್ತಾದಲ್ಲಿ ಇದ್ದ ಸಮಯದಲ್ಲಿ ಕೆಲವು ಜನ ತರುಣರಿಗೆ ಬ್ರಹ್ಮಚರ್ಯ ಸನ್ಯಾಸ ದೀಕ್ಷೆ ಕೊಡಬೇಕೆಂದು ನಿರ್ಣಯಿಸಿದಾಗ ಕೆಲವು ಸೋದರ ಸನ್ಯಾಸಿಗಳು ಸಮ್ಮತಿಸುವುದಿಲ್ಲ. ಆಗ ವಿವೇಕಾನಂದರು ಹೇಳುವ ಮಾತು ಇದು. "ಪಾಪಿಗಳನ್ನು ಉದ್ದರಿಸಲು ನಾವೇ ಅಳುಕಿದರೆ ಮತ್ತಾರು ಅವರನ್ನು ಮೇಲೆತ್ತಬೇಕು..? ಅಲ್ಲದೆ, ಯಾವನು ತನ್ನ ಹೀನ ಜೀವನವನ್ನು ಬಿಟ್ಟು ಉನ್ನತ ಜೀವನವನ್ನು ಹಿಡಿಯಲು ಯತ್ನಿಸುತ್ತಾನೋ.. ಅಂತವರಿಗೆ ನಾವು ನೆರವಾಗಲೇಬೇಕು. ಒಬ್ಬನು ಪಾಪಿಯಾಗಿದ್ದರೂ.. ನೀವು ಆತನನ್ನು ತಿದ್ದಲಾರದೆ ಹೋದರೆ ನಿಮಗೆ ಕಾಷಾಯವಸ್ತ್ರವೇಕೆ..? ನಿಮಗೆ ಆಚಾರ್ಯರ ವೇಷವೇಕೆ..?"

ನಂತಸೋದರ ಸನ್ಯಾಸಿಗಳ ಮನ ಪರಿವರ್ತನೆಯಾಗಿ ಅವರೆಲ್ಲರಿಗೂ ಸನ್ಯಾಸದೀಕ್ಷೆ ಕೊಡಲು ಒಪ್ಪುತ್ತಾರೆ.  


"ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸನ್ಯಾಸಿಯ ಜನ್ಮ. ನೆರವಾಗುವ ಬಾಳನ್ನು ಬಾಳಬೇಕು. ನರಳುವ ಲಕ್ಷಾಂತರ ದುಃಖಗಳನ್ನು ಸಂತೈಸಬೇಕು. ನೀವು ಎಚ್ಚರಗೊಳ್ಳಿ. ಇತರರನ್ನು ಎಚ್ಚರಗೊಳಿಸಿ. ಏಳಿ! ಮೇಲೇಳಿ! ಗುರಿ ದೊರಕುವವರೆಗೂ ನಿಲ್ಲಬೇಡಿ! ಮುಂದೆ ನುಗ್ಗಿ! ಉತ್ತಿಷ್ಠತ, ಜಾಗೃತ, ಪ್ರಾಪ್ಯ, ವರಾನ್ ನಿಭೋಧತ! " ಎಂಬ ಮಾತನ್ನು ಉಪದೇಶಿಸುತ್ತಾರೆ.


ಸ್ವಾಮಿ ವಿವೇಕಾನಂದರು ಹೊಸ ತತ್ವವನ್ನು ಜಾರಿಗೆ ತಂದವರಲ್ಲ. ಹೊಸ ಧರ್ಮವನ್ನು ಸ್ಥಾಪನೆ ಮಾಡಿದವರಲ್ಲ. ಬದಲಾಗಿ ನಮ್ಮ ಗೀತೆ, ಉಪನಿಷತ್ತುಗಳ ಸಂದೇಶದಂತೆ ಜೀವನವನ್ನು ತಿದ್ದಿದವರು. ತಮ್ಮ ಸಿಂಹವಾಣಿಯಲ್ಲಿ ಜಗತ್ತಿಗೆ ಬೋಧಿಸಿದವರು. ಜೀವನವನ್ನು ಹಳಿಯದೆ, ಜೀವನೋತ್ಸಾಹವನ್ನು ತುಂಬುವುದೇ ಇವರ ಸಂದೇಶ. ನಿರಾಸೆಯ ಕತ್ತಲೆಯಲ್ಲಿಯೂ.. ಆಸೆಯ ಹಣತೆಯನ್ನೇ ಹಚ್ಚುವುದು ಇವರ ವಾಣಿ.


"ಆಶಾವಾದಿ ಎಲ್ಲಾ ಅನಾಹುತದಲ್ಲಿಯೂ ಒಂದು ಸದವಕಾಶವನ್ನು ನೋಡುತ್ತಾನೆ, ನಿರಾಶವಾದಿ ಎಲ್ಲಾ ಅವಕಾಶದಲ್ಲಿಯೂ ಒಂದು ಅನಾಹುತವನ್ನು ನೋಡುತ್ತಾನೆ." ಎನ್ನುವ ಉಕ್ತಿ ಆಶಾವಾದಿಗಳಾಗಿ ಬದುಕು ಸಾಗಿಸಲು ಜೊತೆಗೆ ಅನುಭವಾತ್ಮಕ ವಿವೇಕವೂ ಬೆರೆತು, ವಾಸ್ತವತೆಯಿಂದ ಬದುಕಲು ಹೇಳುತ್ತದೆ. 


****************


ವಿವೇಕಾನಂದರು ಮಗನನ್ನು ಕಳೆದುಕೊಂಡ ಡಾಕ್ಟರ್ ತಂದೆಯೊಬ್ಬರಿಗೆ ಪತ್ರದಲ್ಲಿ ಬರೆದ ಮಾತುಗಳಿವು. 


"ದೇವರು ಕೊಟ್ಟ, ದೇವರು ಕಿತ್ತುಕೊಂಡ. ಆತನ 

ನಾಮವೇ ಧನ್ಯವಾಗಲಿ.'' ಯಾವುದೂ ನಾಶವಾಗುವುದಿಲ್ಲವೆಂಬುದು 

ಮಾತ್ರ ನಮಗೆ ಗೊತ್ತು. ಬಂದುದಕ್ಕೆ ಪೂರ್ಣಶಾಂತಿಯಿಂದ ತಲೆ ಬಾಗುವುದೇ ನಮ್ಮ ಕೆಲಸ. ಗುಂಡಿನ ಬಾಯಿಯ ಎದುರಿಗೆ ಹೋಗೆಂದು ಸಿಪಾಯಿಗೆ ಆಜ್ಞಾಪಿಸಿದ ದಂಡನಾಯಕನನ್ನು ದೂರುವ ಹಕ್ಕು 

ಸಿಪಾಯಿಗೆಲ್ಲಿಯದು? ಮಗನನ್ನು ಕಳೆದುಕೊಂಡವನನ್ನು ಆ ಸರ್ವೇಶನು ಸಂತವಿಸಲಿ. ಈ ವಿಪತ್ತು ಆತನನ್ನು ಕೃಪಾಮಯಿಯಾದ ಆ ಜಗನ್ಮಾತೆಯ ಹತ್ತಿರಕ್ಕೆ ಒಯ್ಯಲಿ,


****************


ವಿವೇಕಾನಂದರು ತಮ್ಮ ಶಿಷ್ಯರಿಗೆ ಪತ್ರದಲ್ಲಿ ಉಲ್ಲೇಖಿಸಿದ ಮಾತುಗಳು ಇವು :


ಎನ್ನ ಕೆಚ್ಚೆದೆಯ ಮಕ್ಕಳಿರಾ ! ನಿಮ್ಮಿಂದ ನನಗೆ ಹೆಮ್ಮೆ............. ಆಶೆಯಿಡಿರಿ. ನಿರಾಶರಾಗದಿರಿ, ಪ್ರಾರಂಭವು  ಇಂತಹದಾಗಿರಲು, ನೀನು ನಿರಾಶನಾಗುವೆಯಾದರೆ ನೀನು ಹುಚ್ಚ.


****************


ಪರಮಹಂಸಾಚಲದ

ಶಿವಗಂಗೆಯನು ತಂದು

ಜಗಕೆಲ್ಲ ಹರಿಸಿರುವ ಯೋಗಪುರುಷ

ಮುಟ್ಟಿದ್ದು ಹೊನ್ನಾಯ್ತು ದಿವ್ಯಪುರುಷ 

( ಜಿ. ಎಸ್. ಎಸ್ ಅವರ ವಿವೇಕಾನಂದ ಕವಿತೆಯ ಸಾಲುಗಳು)


"ನಾನೊಂದು ರೂಪರಹಿತ ಧ್ವನಿ" ಎಂದು ವಿವೇಕಾನಂದರು ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ದ್ವನಿಸಿರುವ ವಾಣಿಗಳನ್ನು ಮನದಲ್ಲಿ ಸ್ಮರಿಸಿದರೆ ಸಾಕು. ಸಕಾರಾತ್ಮಕ ಭಾವ ಮೂಡುವುದಕ್ಕೆ.. 


ಆಕರಗಳು :

1. ಸ್ವಾಮಿ ವಿವೇಕಾನಂದ - ಕುವೆಂಪು


2. ಪರಿಪೂರ್ಣ ವ್ಯಕ್ತಿತ್ವ - ಸ್ವಾಮಿ ನಿತ್ಯಸ್ಥಾನಂದ


3. ಸ್ವಾಮಿ ವಿವೇಕಾನಂದರವರ ಪತ್ರಗಳ ಕನ್ನಡದ ಅನುವಾದ (ಪ್ರಥಮ ಭಾಗ) ನಂಗಪುರಂ ವೆಂಕಟೇಶಯ್ಯಂಗಾರ್


4. ಸ್ವಾಮಿ ವಿವೇಕಾನಂದ (ಸಂಕ್ಷಿಪ್ತ ಜೀವನ) - ಸ್ವಾಮಿ ಶಾಂಭವಾನಂದ


5. ಬದುಕಿದರೆ ಹೀಗೇ ಬದುಕಬೇಕು (ವಿವೇಕಾನಂದರ ಜೀವನ ಚರಿತ್ರೆ ) - ಡಾ. ಗುರುರಾಜ ಕರ್ಜಗಿಯವರ ಯೂಟ್ಯೂಬ್ ವಿಡಿಯೋ

6. ಚೆನ್ನೈನ ವಿವೇಕಾನಂದ ಹೌಸ್ ನಲ್ಲಿ ನೋಡಿದ ಭಾಷಣ ಮತ್ತು ಅವರ ಜೀವನದ ಕುರಿತ 3ಡಿ ಮತ್ತು ವರ್ಚುಯಲ್ ರಿಯಾಲಿಟಿ ಶೋಗಳು 



~ವಿಭಾ ವಿಶ್ವನಾಥ್

ಚಂದ್ರಿಕಾ (ಪುಸ್ತಕ ಯಾನ - 406)


ಪುಸ್ತಕದ ಶೀರ್ಷಿಕೆ : ಚಂದ್ರಿಕಾ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಲಲಿತ ಪ್ರಕಾಶನ

ಮರು ಮುದ್ರಣ : 2022

ಪುಟಗಳು : 260

ಬೆಲೆ : 250 ರೂ. 


ಚಿತ್ರಲೇಖ ಮೇಡಂ ಅವರ ಎರಡನೆಯ ಕಾದಂಬರಿ ಚಂದ್ರಿಕಾ. ಮುದುಡಿದ ತಾವರೆ ಅರಳಿತು ಅಪಾರ ಅಭಿಮಾನಿಗಳ ಮನ್ನಣೆ ಗಳಿಸಿದಂತೆ ಈ ಕೃತಿಯು ಇಷ್ಟವಾಗುತ್ತದೆ. ಹಿರಿಯ ಲೇಖಕಿ ಎಂ. ಕೆ. ಇಂದಿರಾರವರು ಈ ಕಾದಂಬರಿಯನ್ನು ಮೆಚ್ಚಿ ಮೂರು ಬಾರಿ ಓದಿದ್ದು ಹಾಗೂ ಚಿತ್ರಲೇಖ ಮೇಡಂ ಅವರನ್ನು ಪ್ರಶಂಸಿಸಿದ ವಿಚಾರಗಳನ್ನು ಹಂಚಿಕೊಂಡಿರುವುದು ಖುಷಿ ತಂದಿದೆ. ಲಲಿತ ಪ್ರಕಾಶನದಿಂದ ಮರು ಮುದ್ರಣ ಕಂಡಿರುವ ಈ ಕಾದಂಬರಿಗೆ ನಮ್ಮ ಪುಸ್ತಕ ಅವಲೋಕನ ಬಳಗದ ಅಡ್ಮಿನ್ ಆದ ವೀಣಾ ನಾಯಕ್ ಮೇಡಂ ಅವರ ಹಿತನುಡಿ ಇದೆ.


ಶ್ಯಾಮಲಮ್ಮ ತನ್ನ ಮಗ ರಾಜನ ಬರವಿಕೆಗೆ ಕಾಯುತ್ತಿದ್ದರು. ಆದರೆ, ಅಂದು ಆತ ಬಂದದ್ದು ಒಂದು ಮಗುವಿನ ಸಮೇತ. ಮೂರು ತಿಂಗಳ ಪುಟ್ಟ ಮಗು, ಆಕರ್ಷಕವಾಗಿದ್ದ ಜಯಂತಿ ಅವರನ್ನು ಸೆಳೆದರೂ ಅವರ ಮನಸ್ಸಿನಲ್ಲಿ ಬಹಳ ಪ್ರಶ್ನೆಗಳಿದ್ದವು. 


ಜಯಂತಿ ಇನ್ನೂ ಮುಂದೆ ತಮ್ಮ ಮನೆಯ ಮಗುವಂತೆಯೇ ಬೆಳೆಯಬೇಕು ಎಂಬ ವಿಚಾರವನ್ನು ರಾಜ ತೆರೆದಿಟ್ಟನು. ಮಗುವಿನ ಹಿನ್ನೆಲೆಯನ್ನು ಕುರಿತು ಪ್ರಶ್ನಿಸಿದಾಗ ರಾಜ ಹೇಳಿದ್ದು.. ತನ್ನ ಒಬ್ಬ ಆಪ್ತ ಗೆಳೆಯನಾದ ಮುರುಳಿ ಹಾಗೂ ರಾಜೇಶ್ವರಿಯ ಮಗುವದು. ಇಬ್ಬರು ತೀರಿಕೊಂಡಿರುವುದರಿಂದ ಹಾಗೂ ಆ ಮಗುವಿಗೆ ಬೇರೆ ಯಾರೂ ಇಲ್ಲದ್ದರಿಂದ ಆ ಮಗುವನ್ನು ತಾನು ಕರೆತಂದೆ ಎಂಬ ವಿಚಾರವನ್ನು ಹೇಳುತ್ತಾನೆ. 


ಸಂಪ್ರದಾಯದ ಮನೋಭಾವನೆ ಶಾಮಲಮ್ಮನವರಿಗಿದ್ದರೂ.. ಮಗುವಿನ ಮುಖ ನೋಡಿ ಹಾಗೂ ಮಾನವೀಯತೆಯ ದೃಷ್ಟಿಯಿಂದ ಜೊತೆಗೆ ಪ್ರೀತಿಯಿಂದಲೂ ಒಪ್ಪುತ್ತಾರೆ. ಮಗನ ಮೇಲಿನ ಮಮತೆ ಎಲ್ಲವನ್ನು ಮೀರಿ ಗೆಲ್ಲುತ್ತದೆ. ಹಾಗಾಗಿ ಸಂಪ್ರದಾಯಕ್ಕಿಂತ ಹೆಚ್ಚಾಗಿ ಮಗುವಿನ ವಾತ್ಸಲ್ಯವೇ ಗೆದ್ದು ಅವರ ಏಕಾಂತ ಜೀವನಕ್ಕೆ ಜಯಂತಿ ಆಸರೆಯಾಗುತ್ತಾಳೆ. 


ಶ್ಯಾಮಲಮ್ಮ ಹಾಗೂ ಜಯರಾಮರಾಯರದ್ದು ಸಿರಿವಂತ ಕುಟುಂಬ. ಸ್ವಪ್ನ ಗೀತೆ ಬಂಗಲೆಯಲ್ಲಿ ನೆಲೆಸಿದ್ದ ಇವರಿಗೆ ಮೂವರು ಮಕ್ಕಳು. ಗಿರಿಜಾ, ವನಜ ಹಾಗೂ ರಾಜ. ಈಗಾಗಲೇ ಇಬ್ಬರು ಹೆಣ್ಣುಮಕ್ಕಳ ವಿವಾಹವಾಗಿದ್ದು, ರಾಜ ಲೆಕ್ಚರರ್ ಆಗಿದ್ದವನು. ರೂಪ, ಜಾಣ್ಮೆ ಸಿರಿವಂತಿಕೆ ಎಲ್ಲವೂ ಇದ್ದರೂ ಆತ ವಿವಾಹಕ್ಕೆ ಇನ್ನೂ ಹಿಂದೇಟು ಹಾಕುತ್ತಿದ್ದ. 


ಜಯಂತಿ ಬೆಳೆಯುತ್ತಿದ್ದಂತೆ ರಾಜನನ್ನೇ ಅಪ್ಪ ಎಂದು ಸಂಬೋಧಿಸುತ್ತಿದ್ದಳು. ಮೊದಮೊದಲಿಗೆ ಶ್ಯಾಮಲಮ್ಮನವರು ಇದಕ್ಕೆ ಏನೂ ಅನ್ನದಿದ್ದರೂ.. ರಾಜನ ವಿವಾಹದ ವಿಚಾರಕ್ಕೆ ಇದು ಅಡ್ಡಿಯುಂಟು ಮಾಡಬಹುದು ಎಂದು ಆ ಸಂಭೋದನೆಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಜಯಂತಿ ಆತನನ್ನು ಅಪ್ಪನೆಂದೇ ಕರೆಯುತ್ತಿದ್ದಳು. ಜಯಂತಿಗೆ ತಾಯಿಯಾಗುವ ವಧುವನ್ನು ಮಾತ್ರವೇ ತಾನು ವಿವಾಹವಾಗುವೆ ಎನ್ನುತ್ತಿದ್ದನು ರಾಜ.


ರಾಮಸ್ವಾಮಿ ಹಾಗೂ ಸರಸ್ವತಮ್ಮನವರ ಮಗಳು ಕಾಮಿನಿಯನ್ನು ನೋಡಲೆಂದು ಹೊರಟ ರಾಜ ಮತ್ತವರ ಕುಟುಂಬಕ್ಕೆ ಆ ಕುಟುಂಬದ ಪರಿಚಯವಾಗಿತ್ತು. ಜಯಂತಿಯನ್ನು ಕಾರಣಾಂತರದಿಂದ ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ರಾಜನಿಗೆ ಕಾಮಿನಿಗಿಂತಲೂ ಆ ಮನೆಯಲ್ಲಿ ಕೊನೆಯ ಮಗಳಾಗಿದ್ದ ಕಾಂಚನಾಳೇ ಹೆಚ್ಚು ಹಿಡಿಸಿದಳು. ಅದಕ್ಕೆ ರೂಪ ಮಾತ್ರ ಕಾರಣವಾಗಿರಲಿಲ್ಲ, ಬದಲಾಗಿ ನಡೆಯೂ.. ಕಾಮಿನಿಯ ದರ್ಪವನ್ನು ಆತ ಕಂಡಾಗಿತ್ತು. ಕಾಂಚನ ಹಾಗೂ ರಾಜನ ವಯಸ್ಸಿನ ಅಂತರ ಹೆಚ್ಚಿದ್ದರೂ ಮುಂದೆ ಇವರ ಖರ್ಚಿನಲ್ಲಿಯೇ ಆ ವಿವಾಹ ನೆರವೇರುತ್ತದೆ. 


ರಾಮಸ್ವಾಮಿಯವರ ತಂಗಿಯ ಮಗನಾದ ನಾಗರಾಜನಿಗೆ ಕಾಂಚನಳ ಮೇಲೆ ಪ್ರೀತಿ ಇದ್ದರೂ ತನಗಿಂತಲೂ ಸಿರಿವಂತನಾದ ರಾಜನ ಜೊತೆ ವಿವಾಹವೆಂದಾದಾಗ, ಇಷ್ಟು ದಿನ ಕಷ್ಟ ಅನುಭವಿಸಿದ್ದ ಕಾಂಚನಾಳಿಗೆ ಉತ್ತಮ ಸಂಬಂಧ ದೊರೆತಾಗ.. ತಾನು ಅಡ್ಡಿಯಾಗದೆ, ಹಿರಿಯಣ್ಣನಂತೆಯೇ ನಿಂತು, ರಾಜನನ್ನು ಸ್ನೇಹಿತನಂತೆ ಕಂಡು ಆ ವಿವಾಹಕ್ಕೆ ನೆರವಾಗುತ್ತಾನೆ. 


ಆ ಮನೆಯಲ್ಲಿ ಅಸಡ್ಡೆಯಾಗಿಯೇ ಕಾಣುತ್ತಿದ್ದ ಕಾಂಚನಳ ವಿವಾಹದಿಂದ ಹೆಚ್ಚು ಮುಖಭಂಗವಾಗಿದ್ದು ಕಾಮಿನಿಗೆ ಮಾತ್ರವೇ. ಇದೆಲ್ಲವನ್ನೂ ಕಂಡ ರಾಜ ಆಕೆಯನ್ನು ನೀನು ಆ ಮನೆಯ ಮಗಳಲ್ಲವೇ ಅವರ ಸ್ವಂತ ಮಗಳಲ್ಲವೇ ಎಂದು ಕೇಳಿದ್ದೂ ಇದೆ. 


ಇದ್ದಿದರಲ್ಲಿ ಆ ಮನೆಯಲ್ಲಿ ಕಾಂಚನಳಿಗೆ ಪ್ರೀತಿ ತೋರಿಸುತ್ತಿದ್ದದ್ದು ಅಕ್ಕ ಭಾಮಿನಿ ಹಾಗೂ ಆಕೆಯ ಪತಿ ರಾಮು.ಅವರೇ ಮುಂದೆ ನಿಂತು ಈ ವಿವಾಹವನ್ನು ಪ್ರೀತಿಯಿಂದ ನೆರವೇರಿಸಿದರು. 


ರಾಜ ಕಾಂಚಳನ್ನು ವಿವಾಹವಾದರೂ.. ಕಾಂಚನಳಿಗೆ ಅದು ಮನಸ್ಪೂರ್ತಿಯ ಒಪ್ಪಿಗೆ ಎಂದೆನಿಸುವುದಿಲ್ಲ. ತನ್ನ ಅಕ್ಕ ಭಾಮಿನಿಯಂತೆಯೇ ಇಲ್ಲಿ ವನಜನ ಸ್ನೇಹವಾಗಿತ್ತು. ಸ್ನೇಹಮಹಿ ವನಜಳೊಂದಿಗೆ ಕಾಂಚನ ಹೆಚ್ಚು ಹೊಂದಿಕೊಂಡಿದ್ದಳು. ವಿವಾಹದ ಸಂಭ್ರಮ ಮುಗಿದು ಎಲ್ಲರೂ ನಿರ್ಗಮಿಸಿದ ನಂತರ ಆಕೆಗೆ ಇಲ್ಲಿ ಹೊಂದಿಕೊಳ್ಳಬೇಕಾದ ಪರಿಸ್ಥಿತಿಯಿತ್ತು. ಅಲ್ಲಿ ಇಡೀ ದಿನ ಕೆಲಸ ಮಾಡಿಕೊಂಡಿದ್ದವಳಿಗೆ ಎಲ್ಲದಕ್ಕೂ ಆಳುಕಾಳಿದ್ದರು. ಮನೆಯಲ್ಲಿ ಕೆಲಸವಿರಲಿಲ್ಲ. ಓದು ಮುಂದುವರಿಸಲು ಆಕೆಗೆ ಅಂತಹ ಆಸಕ್ತಿ ಇರಲಿಲ್ಲ. ಜಯಂತಿ ಜೊತೆಗೆ ಆಕೆ ಸುಲಭವಾಗಿ ಹೊಂದಿಕೊಂಡಳು. ಜಯಂತಿಯ ಆಕೆಯನ್ನು ಅಮ್ಮನೆಂದು ಕರೆಯುತ್ತಾ ಹೊಂದಿಕೊಳ್ಳುತ್ತಾ ಹೋದಾಗ ರಾಜನಿಗೆ ಹಿತವೆನ್ನಿಸಿತ್ತು. ಆದರೂ.. ಆತನ ಮನಸ್ಸಿನಲ್ಲಿ ಏನೋ ಒಂದು ಕೊರಗು.


ಕಾದಂಬರಿ ಕೊನೆಯ ಹಂತದ ವರೆಗೆ ಬರುವಾಗಲೂ ಕಾದಂಬರಿ ಶೀರ್ಷಿಕೆ ಚಂದ್ರಿಕಾ ಎಂದಿರುವುದಕ್ಕೂ ಕಥಾಹಂದರಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಮೂಡಿಸಿಕೊಂಡು ಕುತೂಹಲದಿಂದಲೇ ಓದುತ್ತಾ ಹೋಗುತ್ತೇವೆ. ಚಂದ್ರಿಕಾ ಎಂಬ ಪಾತ್ರವಿರಬಹುದೇ ಅಥವಾ ಇಲ್ಲಿ ಚಂದ್ರಿಕಾ ಎಂಬುದಕ್ಕೆ ಬೇರೆಯ ಅರ್ಥವಿದೆಯೇ..? ನೀವೇ ಕಾದಂಬರಿ ಓದಿ ಅರಿಯಬೇಕು. 


ಕಾದಂಬರಿಯ ಕೊನೆಯಲ್ಲಿ ಎಲ್ಲಾ ಕುತೂಹಲಗಳಿಗೆ ತೆರೆ ಬೀಳುವ ಸಮಯ. ಜಯಂತಿಯ ಬದುಕಿನ ಜೊತೆಗೆ ರಾಜ ಮುಚ್ಚಿಟ್ಟಿದ್ದ ಒಂದು ಸತ್ಯ, ಅಷ್ಟೇ ಅಲ್ಲದೆ ಅವನ ಮದುವೆಗೆ ಒಪ್ಪದ್ದಕ್ಕೆ ಕಾರಣವಾದ ವಿಚಾರವನ್ನು ಅಮ್ಮ ಹಾಗೂ ಪತ್ನಿಯ ಎದುರಿಗೆ ತೆರೆದಿಡುತ್ತಾನೆ. ಭಾಮಿನಿ ಕಾಂಚನಾಳಿಗೆ ತಿಳಿಸಿದ ಆಕೆಯ ಹುಟ್ಟಿನ ರಹಸ್ಯವನ್ನು ಆಕೆ ರಾಜನೊಡನೆ ಹಂಚಿಕೊಂಡಿರುತ್ತಾಳಾದರೂ.. ಆತ ಅದನ್ನು ತನ್ನ ತಾಯಿಯ ಜೊತೆಗೆ ಹಂಚಿಕೊಳ್ಳುವುದಕ್ಕೆ ಸಮಯ ಬೇಕೆಂದು ಕೇಳಿರುತ್ತಾನೆ. 


ಈಗ ಕಾಂಚನಾ ಗರ್ಭಿಣಿಯಾಗಿದ್ದ ಸಮಯದಲ್ಲಿ ಆಕೆಯ ಮನೋವೇದನೆಯನ್ನು ನೋಡಲಾಗದೆ ಆ ವಿಚಾರವನ್ನೂ ತೆರೆದಿಡುತ್ತಾನೆ. ಎಲ್ಲಿ ಎಲ್ಲಾ ಕೊಂಡಿಗಳು ಒಂದಕ್ಕೊಂದು ಬೆಸೆದುಕೊಂಡಿದೆ. ವಿಧಿಯಾಟದ ಗೊಂಬೆಗಳಾಗಿ ಪಾತ್ರ ವಹಿಸುವ ರಾಜ, ಕಾಂಚನ, ಜಯಂತಿಯರ ಬದುಕನ್ನು ಇಲ್ಲಿ ಓದಿ ನೋಡಿ. 


ಸಮಯ ಹಾಗೂ ವಿಧಿ  ಬದುಕಿನಲ್ಲಿ ಆಡುವ ಆಟಗಳನ್ನು ಕಂಡು ಮನುಷ್ಯನ ಬದುಕು ಆತನ ಕೈಮೀರಿದ್ದು ಎಂದೆನಿಸಿದರೂ ಮತ್ತೆ ಒಂದುಗೂಡಿಸುವ ವಿಧಿಯ ಆಟವೇ ದೊಡ್ಡದು. ಮನುಷ್ಯ ಎಲ್ಲರ ಮುಂದೆ ಸಮಯದ ಕೈಗೊಂಬೆ ಎಂಬುದನ್ನು ತೋರುವ ಕಥಾಹಂದರ. ಜೊತೆಗೆ ಸಂಪ್ರದಾಯ, ಜಾತಿಗಳಿಗಿಂತ ದೊಡ್ಡದಾದ ಮಾನವೀಯತೆ ಹಾಗೂ ವಾತ್ಸಲ್ಯಕ್ಕೆ ಕೊಟ್ಟಿರುವ ಮನ್ನಣೆ ಈ ಕಾದಂಬರಿಯನ್ನು ಆಪ್ತವಾಗುವಂತೆ ಮಾಡುತ್ತದೆ. 

~ವಿಭಾ ವಿಶ್ವನಾಥ್

ಹೂಮಂಚ (ಪುಸ್ತಕ ಯಾನ - 405)


ಪುಸ್ತಕದ ಶೀರ್ಷಿಕೆ : ಹೂಮಂಚ 

ಲೇಖಕರು : ಚಿತ್ರಲೇಖ 

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 1983

ಎರಡನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 160

ಬೆಲೆ : 175 ರೂ. 


ಹೂಮಂಚ ಕಾದಂಬರಿಯಲ್ಲಿ ಹಲವಾರು ಇಷ್ಟವಾಗುವ ಅಂಶಗಳಿವೆ. ಮೊದಲನೆಯದೆಂದರೆ ಇಲ್ಲಿ ಶೃಂಗಾರ ರಸ ಇದ್ದರೂ ಎಲ್ಲಿಯೂ ಅತಿಯಾಗದೆ ಅಥವಾ ಮುಜುಗರ ತರಿಸದೆ ಮಿತಿಯಲ್ಲಿಯೇ ಅದನ್ನು ಕಟ್ಟಿಕೊಟ್ಟಿರುವ ಬಗೆ.. 

ಲಘುವಾದ ಹಾಸ್ಯ, ಮಾತಿನಲ್ಲಿಯೇ ಕಾಲೆಳೆಯುವಂತಹ ಹಾಗೂ ಸ್ನೇಹಮಯವಾದ ಹಾಸ್ಯವಿದು. ಪರಸ್ಪರ ಛೇಡಿಸುವಿಕೆ, ಯಾರ ಮನಸ್ಸಿಗೂ ನೋವುಂಟು ಮಾಡಿದಂತಹ ಲಘು ಹಾಸ್ಯದ ಸಂಭಾಷಣೆ ಇಷ್ಟವಾಯಿತು. 


ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಾಳ್ಮೆ ಹೆಚ್ಚು ಎಂದೇ ಕಟ್ಟಿಕೊಟ್ಟಿರುವ ಕಾದಂಬರಿಗಳನ್ನು ಓದಿರುತ್ತೇವೆ. ಗಂಡಿನಲ್ಲಿಯೂ ಇರುವ ತಾಳ್ಮೆ ಹಾಗೂ ಮುಂದಾಲೋಚನೆಯನ್ನು ಕಟ್ಟಿಕೊಡುವ ಕಾದಂಬರಿಗಳು ಬೆರಳಣಿಕೆಯಷ್ಟನ್ನೇ ನಾನು ಓದಿರುವುದು. ಆ ಗುಂಪಿಗೆ ಇದನ್ನು ಸೇರಿಸಬಹುದು. ಉನ್ನತವಾದ ಓದು, ರೂಪ ಹಾಗೂ ಹಣ ಏನೇ ಇದ್ದರೂ ಇರಬೇಕಾದ ವಿನಯ ಎದ್ದು ಕಾಣುತ್ತದೆ. 


ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತೆಂಬಂತಿರುವ ದಾಂಪತ್ಯಗಳ ನಡುವಲ್ಲಿ, ಹಾಗೂ ಒಬ್ಬರ ದಬ್ಬಾಳಿಕೆಯನ್ನು ಸಹಿಸಿಕೊಂಡು ಇನ್ನೊಬ್ಬರು ಬದುಕಬೇಕೆಂದಿರುವ ಇನ್ನೊಂದು ರೀತಿಯ ಉಸಿರು ಕಟ್ಟಿಸುವ ದಾಂಪತ್ಯಗಳ ಹೊರತಾಗಿಯೂ ಇರುವ ಮತ್ತೊಂದು ದಾಂಪತ್ಯದ ಮುಖವನ್ನು ಇಲ್ಲಿ ತೋರಿಸುತ್ತಾರೆ. ಅದೂ ನೂತನ ದಾಂಪತ್ಯದ ಹೊಸ್ತಿಲಲ್ಲಿನ ಪ್ರಬುದ್ಧತೆ ಇಷ್ಟವಾಗುತ್ತದೆ. 


ಗೋಪಾಲಸ್ವಾಮಿ ಹಾಗೂ ನಳಿನಾಕ್ಷಮ್ಮನವರ ಏಕಮಾತ್ರ ಪುತ್ರ ವರುಣ್ ಆರ್ಥಿಕ ಸ್ಥಿತಿ ತೃಪ್ತಿಕರವಾಗಿದ್ದು, ಜಂಜಾಟವಿಲ್ಲದ ಕುಟುಂಬದ ಇಂಜಿನಿಯರ್ ವರ. ಆದರೆ, ತನಗೆ ತಕ್ಕನಾದ ಸಂಗಾತಿಯ ಆಯ್ಕೆಯಲ್ಲಿ ವರುಣ್ ಗೆ ತನ್ನದೇ ಆದ ಕೆಲ ಅಭಿಪ್ರಾಯಗಳಿದ್ದವು. ಮನಸ್ಸಿಗೆ ಬಾರದ ಕನ್ಯೆಯನ್ನು ಕರುಣೆಗಾಗಿ ವರಿಸಿ ನೆಮ್ಮದಿರಹಿತ ದಾಂಪತ್ಯವನ್ನು ಗಂಟು ಹಾಕಿಕೊಳ್ಳಲು ಆತ ಸಿದ್ಧವಿರಲಿಲ್ಲ. ಆದರೆ, ರತಿಯನ್ನು ಕಂಡಾಕ್ಷಣ ಈಕೆಯೇ ತನ್ನ ಪತ್ನಿ ಎಂದು ನಿರ್ಧರಿಸಿದ್ದನು. ಅದರಂತೆಯೇ ಎಲ್ಲವೂ ಸುಗಮವಾಗಿ ವಿವಾಹದಿಂದ ಹೂಮಂಚದವರೆಗೂ ಬಂದು ನಿಂತಿತ್ತು. 


ಆಧುನಿಕ ಯುಗದಲ್ಲಿ ಒಳ್ಳೆಯ ಕುಟುಂಬವೊಂದು ತನ್ನ ವಿದ್ಯಾವಂತ ಕನ್ಯೆಯ ಸಮ್ಮತಿಯೊಂದಿಗೆ ವಿವಾಹ ಕಾರ್ಯಕ್ಕೆ ತೊಡಗುವುದು ಎಂಬ ನಂಬಿಕೆಯಲ್ಲಿದ್ದವನು ಅವನು. 


ಹಿರಿಯರು ನಿಶ್ಚಯಿಸಿದ ವಿವಾಹದಿಂದ ಸಮಸ್ಯೆಗಳಿರುವುದಿಲ್ಲ ಎಂಬ ನಿರ್ಧಾರವನ್ನು ಬಾಳಲ್ಲಿ ಅಳವಡಿಸಿಕೊಂಡಿದ್ದವನು. ಆತನಿಗೆ ತಕ್ಕದಾದ ರತಿ ಕೂಡ ಪ್ರೇಮವೆಂದು ಯಾರ ಹಿಂದೆಯೂ ಹೋದವಳಲ್ಲ. ಆದರೆ, ಇಂದು ಆಕೆ ಗಂಡಸರನ್ನು ದ್ವೇಷಿಸುತ್ತೇನೆ ಎಂದು ಹೇಳಿದ ಮಾತಿಗೆ ವರುಣ್ ಬೆಚ್ಚುವಂತಾಗಿತ್ತು. 


ಟ್ಯಾಕ್ಸ್ ಆಫೀಸರ್ ಆಗಿದ್ದ ಕೇಶವರಾಯರ ಪತ್ನಿ ಸುಗುಣಮ್ಮ ಹಾಗೂ ತಾಯಿ ಮಂಗಳಮ್ಮ. ಮೂವರು ಹೆಣ್ಣು ಮಕ್ಕಳು. ತೊಟ್ಟಿಲ ಹೆಸರು ಆರತಿಯಾದರೂ ಮುಂದೆ ಶಾಲೆಗೆ ಸೇರುವಷ್ಟರಲ್ಲಿ ರತಿ ಎಂದು ಕರೆಯುತ್ತಿದ್ದರು. ರತಿಯೇ ಹಿರಿಯ ಮಗಳು. ನಂತರ ಹುಟ್ಟಿದವರು ವಸುಮತಿ ಹಾಗೂ ಕೃತ್ತಿಕಾ. ರತಿ, ಮತಿ, ಕೃತಿಯರು ಹತ್ತಿರವಾಗಿ ಕಣ್ಮಣಿಗಳಂತೆ ಬೆಳೆದರು. 


ಎಲ್ಲವೂ ಸರಿಯಾಗಿದ್ದರೆ ರತಿ ತನ್ನ ವೈವಾಹಿಕ ಬದುಕನ್ನು ಖುಷಿಯಿಂದಲೇ ಅನುಭವಿಸುತ್ತಿದ್ದಳು. ಆದರೆ, ಒಂದು ತಿಂಗಳ ಹಿಂದೆ ನಡೆದ ಒಂದು ಘಟನೆ ಆಕೆಯನ್ನು ತಲ್ಲಣಿಸುವಂತೆ ಮಾಡಿತು. ಆಕೆಯ ತಪ್ಪಿರಲಿಲ್ಲವಾದರೂ ತನ್ನನ್ನು ತಾನು ಅಪವಿತ್ರ ಎಂದು ಭಾವಿಸಿದ್ದಳು. ಆಕೆಯ ಮೇಲೆ ನಡೆದ ಅತ್ಯಾಚಾರ ಆಕೆಯ ಮನಸ್ಸಿನ ಮೇಲೆ ಬಲವಾದ ಪರಿಣಾಮ ಬೀರಿತು. ಇದು ಪೊಲೀಸ್ ಕೇಸ್ ಎಂದು ಹೋದರೆ ತನ್ನ ಮಗಳ ಬದುಕೇ ಹಾಳಾಗುತ್ತದೆಂದು ತಂದೆ ತಡೆಹಿಡಿದರು. ಉಳಿದ ಇಬ್ಬರು ಹೆಣ್ಣುಮಕ್ಕಳ ಭವಿಷ್ಯವೂ ಮುಖ್ಯವಾಗಿತ್ತವರಿಗೆ. ಅಲ್ಲದೆ, ಮಂಗಳಮ್ಮನವರಿಗೆ ಉಂಟಾದ ಅನಾರೋಗ್ಯವೂ ಸೇರಿ ಎಲ್ಲರಿಗೂ ಒಪ್ಪಿಗೆಯಾದ ವರುಣ್ ನೊಂದಿಗೆ ರತಿಯ ವಿವಾಹ ನೆರವೇರಿತು. ವರುಣ್ ಗೆ ಯಾವುದನ್ನೂ ಹೇಳಬಾರದೆಂದು ಹೇಳಿದ್ದರು. ಆದರೆ, ಈಗ ರತಿ ಪ್ರಾಮಾಣಿಕವಾಗಿ ಆತನೊಡನೆ ಎಲ್ಲವೂ ಬಿಚ್ಚಿಟ್ಟಿದ್ದಳು. 


ವರುಣ್ ಆಕೆಯನ್ನು ತಿರಸ್ಕರಿಸುತ್ತಾನೆ ಎಂದೇ ಭಾವಿಸಿದ್ದಳು. ಆದರೆ, ಆಕೆಯ ನಂಬಿಕೆ ತಪ್ಪು ಎನ್ನುವಂತೆ ವರುಣ್ ಸುಮ್ಮನಿದ್ದು ಬಿಟ್ಟಿದ್ದನು. ಅಲ್ಲದೆ, ಆತನ ಮನಸ್ಸಿನಲ್ಲಿಯೂ ಅಲ್ಲೋಲಕಲ್ಲೋಲವೇ ಆಗುತ್ತಿತ್ತು. ಅಂತಹ ಘಟನೆಗೆ ದೂಷಿಸುವುದಾದರೂ ಯಾರನ್ನು ಎಂಬುದೇ ಆತನಿಗೆ ಅರಿಯದಾಗಿತ್ತು. ರತಿಯನ್ನು ಮೀರಿ ನಡೆದ ಘಟನೆಯಲ್ಲಿ, ಮಗಳ ಬದುಕೇ ಮುಖ್ಯವೆಂದು ಯೋಚಿಸುವ ತಂದೆ ಎಲ್ಲರ ದೃಷ್ಟಿಯಲ್ಲಿ ನಿಂತು ನೋಡಿದರೂ ಇಂತಹವರನ್ನು ತಪ್ಪಿತಸ್ಥರೆಂದು ಹೇಳಲಾಗಲಿಲ್ಲ ಅವನಿಗೆ. ಅಲ್ಲದೆ, ಆತ ಒಬ್ಬನೇ ಮಗನಾಗಿದ್ದರಿಂದ ತನ್ನ ತಂದೆ-ತಾಯಿಯರಿಗೆ ಈ ವಿಚಾರದಲ್ಲಿ ನೋವುಂಟು ಮಾಡಬಾರದೆಂದು ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿರುವಂತೆ ವರ್ತಿಸುತ್ತಿದ್ದರು ವರುಣ್ ಹಾಗೂ ರತಿ.


ಮುಂದೆ ಮಂಗಳಮ್ಮನವರ ಸಾವುಂಟಾದಾಗ ವರುಣ್ ಮನೆಯ ಮಗನಂತೆ ನಿಂತು ಎಲ್ಲ ಕಾರ್ಯಗಳಲ್ಲಿಯೂ ಸಹಕಾರ ನೀಡುತ್ತಾನೆ. ಬಂದತಿಗೆ ಆತನ ವರ್ತನೆ ಒಂದು ಬಿಡಿಸಲಾರದ ಒಗಟಿನಂತಾಗುತ್ತದೆ. ವರುಗ ಆಕೆಯನ್ನು ಪ್ರೇಮಿಸಿ, ಆರಾಧಿಸುತ್ತಿದ್ದರೂ ಅದನ್ನು ಗುರುತಿಸದ ರತಿ ತನ್ನ ಸಮಸ್ಯೆಯೇ ದೊಡ್ಡದೆಂದು ಅದರಲ್ಲಿಯೇ ಮುಳುಗಿ ಹೋಗಿರುತ್ತಾಳೆ. ಅಷ್ಟಕ್ಕೂ ಆಕೆಯ ಮನಸ್ಸಿನ ಮೇಲೆ ಬಿದ್ದಿದ್ದೇನೂ, ಚಿಕ್ಕಪುಟ್ಟ ಬರೆ ಅಲ್ಲವಲ್ಲ. 


ಏಕಾಂತದಲ್ಲಿ ಹಾಗೂ ವರುಣ್ ಜೊತೆ ಇರುವಾಗಲೆಲ್ಲ ಇರುಸು-ಮುರಿಸಿನ ಭಾವನೆಯನ್ನು ಅನುಭವಿಸುತ್ತಿದ್ದ ರತಿ ಅತ್ತೆ-ಮಾವನ ತಂಪಾದ ಆರೈಕೆಯಲ್ಲಿ ಹಾಗೂ ವಾರಾಂತ್ಯಗಳಲ್ಲಿ ಬರುತ್ತಿದ್ದ ತಂಗಿಯರ ಜೊತೆಯಲ್ಲಿ ಹೊಂದಿಕೊಳ್ಳುತ್ತಿದ್ದವರನ್ನು ನೋಡಿ ಖುಷಿಪಡುತ್ತಿರುತ್ತಾಳೆ. ಮನಸ್ಸಿನಲ್ಲಿ ಆರಾಧಿಸುತ್ತಿರುತ್ತಾಳಾದರೂ ತನ್ನ ಭಾವನೆಗಳನ್ನು ಬಿಚ್ಚಿಟ್ಟು, ಹಂಚಿಕೊಳ್ಳಲು ಸಿದ್ದಲಿರುವುದಿಲ್ಲ.


ವರ್ಷವೊಂದು ಕಳೆದರೂ ತಮ್ಮ ದಾಂಪತ್ಯದ ಗುಟ್ಟನ್ನು ಇಬ್ಬರೂ ಬಿಚ್ಚಿಟ್ಟಿರುವುದಿಲ್ಲ. ವರುಣ್ ನ ಸಹೋದ್ಯೋಗಿಯ ಮಗು ವನೀತಾಳ ಹುಟ್ಟುಹಬ್ಬಕ್ಕೆ ಹೋಗಿ ಬಂದಾಗ ರತಿಯ ಮನಸ್ಸು ಬದಲಾಗಿರುತ್ತದೆ. 


ಮತಿಯ ವಿವಾಹ ಡಾಕ್ಟರ್ ವರನಾದ ಮಾಧವನೊಂದಿಗೆ ನಿಶ್ಚಯವಾಗಿ, ವಿವಾಹವಾಗಿ ಮುಂಬೈಗೆ ಹೋಗುತ್ತಾಳೆ. ನಾಲ್ಕು ತಿಂಗಳಲ್ಲಿ ಆಕೆ ತಾಯಿಯಾಗುವ ವಿಚಾರಗಳು ಈಕೆಗೆ ಪತ್ರ ಮುಖೇನ ತಲುಪುತ್ತದೆ. 


ಕೃತಿ ಹಾಗೂ ವರುಣ್ ಒಡನಾಟವನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಬದತಿಯ ಮನಸ್ಸಿನಲ್ಲಿ ಮೂಡುವ ಭಾವಗಳೇನು..? ಕೃತಿಯ ಮನೋಭಾವ ಹಾಗೂ ರತಿಯ ಮನೋಭಾವವನ್ನು ಹಿರಿಯರು ಕಂಡದ್ದೇಗೆ..? ಲವಲವಿಕೆಯ ಕೃತಿ ಎಲ್ಲರಿಗೂ ಮೆಚ್ಚುಗೆಯಾದಾಗ, ರತಿಯ ಮನಸ್ಸು ಏನೆಲ್ಲವನ್ನು ಯೋಚಿಸುತ್ತದೆ..?


ಮನಸ್ಸಿನ ಗಾಯಕ್ಕೆ ಕಾಲವೇ ಮದ್ದು ಎನ್ನುವುದು ಹೌದಾದರೂ.. ಆ ಮನಸ್ಸಿನ ಗಾಯ ಮಾಯಿಸಲು ಪ್ರೀತಿಯ ಮದ್ದು ಅಷ್ಟೇ ಅವಶ್ಯಕತೆ ಇದೆ. ರತಿಯ ಪ್ರೀತಿ ಉಳಿಯಿತೇ ಅಥವಾ ಗಗಮ ಕುಸುಮವಾಯಿತೇ..? ರತಿಯ ಮದುವೆಯ ಹೂಮಂಚದಿಂದ ಹಿಡಿದು ಕೃತಿಯ ಮದುವೆಯ ಹೂಮಂಚದವರೆಗಿನ ಕಥೆಯನ್ನು ನೀವೇ ಓದಿ ನೋಡಿ. 


ಬಹುಶಃ ರತಿಯನ್ನು ಮನೋವೈದ್ಯರ ಬಳಿ ಆಕೆಯ ತಂದೆ ಆ ಸಮಯದಲ್ಲಿಯೇ ಕರೆದೊಯ್ದಿದ್ದರೆ ಹೀಗಾಗುತ್ತಿತ್ತೇ ಎಂಬ ಪ್ರಶ್ನೆ ಇದ್ದರೂ ನಿಷ್ಕಲ್ಮಶ ಪ್ರೀತಿ ಅದಕ್ಕಿಂತ ಹೆಚ್ಚಿನ ಮುಲಾಮಾಗಬಹುದು ಎಂಬುದನ್ನು ಇಲ್ಲಿ ಕಾಣಬಹುದಾಗಿದೆ. ಸೂಕ್ಷ್ಮ ಮನಸ್ಸಿನ ಹೆಣ್ಣು ರತಿ, ಲವಲವಿಕೆಯ ಕೃತಿ ಮತ್ತು ಜೆಂಟಲ್ ಮನ್ ವರುಣ್ ಆಪ್ತವಾಗುತ್ತಾರೆ.

~ವಿಭಾ ವಿಶ್ವನಾಥ್

ಕೆಂಪಾದ ದೀಪ (ಪುಸ್ತಕ ಯಾನ - 404)


ಪುಸ್ತಕದ ಶೀರ್ಷಿಕೆ : ಕೆಂಪಾದ ದೀಪ 

ಲೇಖಕರು : ಚಿತ್ರಲೇಖ 

ಪ್ರಕಾಶಕರು : ಶ್ರೀ ಸಾಹಿತ್ಯ ಮಾಲೆ

ಪ್ರಥಮ ಮುದ್ರಣ : 2023

ಪುಟಗಳು : 154

ಬೆಲೆ : 150 ರೂ. 


ವನಿತಾ ಪತ್ರಿಕೆಯಲ್ಲಿ ಓದುಗರ ಅಪಾರ ಮನ್ನಣೆ ಪಡೆದಿರುವ ಈ ಕಾದಂಬರಿಯನ್ನು ಶ್ರೀಮತಿ ಶಾರದಾ ಎಂಬುವವರು ತೆಲುಗು ಭಾಷೆಗೆ ಅನುವಾದ ಮಾಡಿದ್ದಾರೆ. 


ಚಿತ್ರಲೇಖ ಮೇಡಂ ಅವರು ಈ ಕಾದಂಬರಿ ಹುಟ್ಟಿದ ಬಗೆಯನ್ನು ಲೇಖಕಿಯ ನುಡಿಯಲ್ಲಿ ಹೀಗೆ ಹೇಳುತ್ತಾರೆ. 80ರ ದಶಕದಲ್ಲಿ ವನಿತಾ ಪತ್ರಿಕೆಯ ಸಂಪಾದಕರು ಅವರಿಂದ ಒಂದು ಕಾದಂಬರಿಯನ್ನು ಅಪೇಕ್ಷಿಸಿದಾಗ ಕಥಾವಸ್ತು ಏನಿರಬೇಕೆಂದು ಯೋಚಿಸುತ್ತಿದ್ದಾಗ.. ಆ ಸಮಯದಲ್ಲಿ ಸವದತ್ತಿ ಯಲ್ಲಮ್ಮನ ಗುಡಿ ದೇವದಾಸಿಯರ ಬದುಕಿಗೊಂದು ನೆಲೆ ಕಲ್ಪಿಸಲು ಹಾಗೂ ಅನಿಷ್ಟ ಪದ್ದತಿಯನ್ನು ತೊಲಗಿಸಲು ಹೋರಾಟ ನಡೆಯುತ್ತಿತ್ತು. ಅದೇ ಹೊತ್ತಿಗೆ ಇವರು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ದೈಹಿಕ ಶಿಕ್ಷಣ ಅಧ್ಯಾಪಕರಾಗಿದ್ದವರು ವಯಸ್ಕ ವಿದ್ಯಾರ್ಥಿನಿಯರ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಮೂರು ತಿಂಗಳ ಕಾಲ ಎಲ್ಲರೂ ಹೋರಾಡಿ ಆತನನ್ನು ಹೊರಗಟ್ಟಲು ಪಟ್ಟ ಶ್ರಮ ಬರೆಯಲಸಾಧ್ಯ ಎನ್ನುತ್ತಾ.. ಈ ಎರಡರ ಮಿಳಿತವಾಗಿ ವಿಭಿನ್ನ ಕಥಾವಸ್ತುವೊಂದನ್ನು ರೂಪಿಸುತ್ತಾರೆ. ಅದೇ ಕೆಂಪಾದ ದೀಪ ಎಂಬ ಕಾದಂಬರಿ.


ಕೆಂಪಾದ ದೀಪ ಕಾದಂಬರಿ ಹೆಣ್ಣುಮಕ್ಕಳು ಬೇಕೆಂದು ಹೋಗದ ವೇಶ್ಯಾವಾಟಿಕೆಯ ಜಾಲದ ಕುರಿತಾಗಿ ಹಾಗೂ ಹೆಣ್ಣು ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಎದುರಿಸುವ ಸವಾಲು ಹಾಗೂ ಸಮಸ್ಯೆಯ ಕುರಿತಾಗಿ ಬರೆಯುತ್ತಾ ಸಮಾಜದ ಹುಳುಕುಗಳಿಗೆ ಕನ್ನಡಿ ಹಿಡಿಯುತ್ತಾರೆ.


ಈ ಕಾದಂಬರಿಯಲ್ಲಿ ಡಾಕ್ಟರ್ ಅರ್ಜುನ್ ನ ಪಾತ್ರ ಉದಾತ್ತವಾದುದು. ಡಾಕ್ಟರ್ ಅರ್ಜುನ್ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಕಷ್ಟದಿಂದ ಓದಿ ಮುಂದೆ ಬಂದ ತರುಣ. ಚಿಕ್ಕಂದಿನಿಂದಲೂ ಓದಿನೆಡೆಗೆ ಆತನ ಆಸಕ್ತಿ. ಅಣ್ಣಂದಿರಂತೆ ವ್ಯವಸಾಯದಲ್ಲಿ ಆಸಕ್ತಿ ಇಲ್ಲದ ಆತ ಮುಂದೆ ಕಷ್ಟಪಟ್ಟು ಓದಿ ಹೊಸ ಊರು, ಹೊಸ ಜನ, ಹೊಸ ಭಾಷೆಗೆ ತನ್ನನ್ನು ತಾನು ಸಮರ್ಪಿಸಿಕೊಂಡು ವಿದ್ಯಾರ್ಥಿ ವೇತನ ಹಾಗೂ ಸೌಲಭ್ಯಗಳನ್ನು ಪಡೆದು ಅಧ್ಯಾಪಕರ ಮೆಚ್ಚಿನ ವಿದ್ಯಾರ್ಥಿಯಾಗಿ ನಂತರ ಡಾಕ್ಟರ್ ಸಹ ಆಗುತ್ತಾನೆ. ಹಣದ ದುರಾಸೆ ತೋರಿಸದ, ಹಾಗೆಯೇ ಕೆಳ ಮತ್ತು ಮಧ್ಯಮ ವರ್ಗಕ್ಕೆ ಹತ್ತಿರವಾದ ಡಾಕ್ಟರ್. ಆತನ ಕೈಗುಣವೂ ಚೆನ್ನಾಗಿತ್ತು. ಬಂದ ಹಣದಲ್ಲಿ ಅರ್ಧವನ್ನು ಮನೆಗೆ ಕಳುಹಿಸಿ, ಉಳಿದ ಹಣದಲ್ಲಿ ಬಾಡಿಗೆ ಮನೆ ಪಡೆದು ಅಲ್ಲಿಯೇ ಕ್ಲಿನಿಕ್ ಅನ್ನು ಮಾಡಿಕೊಂಡಿದ್ದ. ಕ್ಲಿನಿಕ್ ಹಾಗೂ ಮನೆ ಕೆಲಸದ ಸಹಾಯಕ್ಕಾಗಿ ಸುಬ್ಬು ಇದ್ದನು. 


ತನ್ನ ಆಪ್ತಮಿತ್ರ ವಾಸುದೇವನ ವಿವಾಹದ ಕರೆಯೋಲೆಗೆ ಓಗೊಟ್ಟು ಹೋಗಿದ್ದ ಅರ್ಜುನ್ ಬರುವಾಗ ದಾರಿ ಮಧ್ಯದಲ್ಲಿ ಪ್ರಜ್ಞೆ ತಪ್ಪೆ ಬಿದ್ದಿದ್ದ ಹೆಣ್ಣು ಕಾಣುತ್ತಾಳೆ. ಅವನಿಗಿಂತ ಮುಂದೆ ಹೋದ ಲಾರಿಯವನು ಅಪಘಾತ ಮಾಡಿರಬಹುದು ಅಥವಾ ಆಕೆ ಅದರಿಂದ ಹಾಕಿರಬಹುದು ಎಂದು ಏನೆಲ್ಲಾ ಯೋಚಿಸಿದರೂ ಆತನಿಗೆ ಉತ್ತರ ದೊರಕುವುದಿಲ್ಲ. ನಂತರ ಪ್ರಜ್ಞೆ ತಪ್ಪಿದ್ದ ಆಕೆಯನ್ನು ತನ್ನ ಕಾರಿಯಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುತ್ತಾನೆ. ಆಕೆಯನ್ನು ರೋಗಿಯಾಗಿ ಮಾತ್ರವೇ ನೋಡುವ ಅವನು ಮೊದಲು ಚಿಕಿತ್ಸೆ ಶುರು ಮಾಡುತ್ತಾನೆ. ಆಕೆಯ ಕಾಲಿಗೆ ಹೆಚ್ಚು ಪೆಟ್ಟಾಗಿರುತ್ತದೆ. ಮರುದಿನ ಆಕೆಗೆ ಜ್ವರವು ಬರುತ್ತದೆ. ಅಲ್ಲಿಯೇ ಉಳಿಯುವ ಸಂದರ್ಭ. ಆಕೆಗೆ ಸಂಕೋಚವಾದರೂ.. ಅಲ್ಲಿಂದ ಹೋಗಬೇಕೆಂದು ಹೊರಟರೂ ಆಕೆ ಹೋಗುವಂತಿರಲಿಲ್ಲ. ಸದ್ಯಕ್ಕೆ ದಮಯಂತಿ ಕ್ಲಿನಿಕ್ಕಿನಲ್ಲಿಯೇ ಆಕೆಯ ವಾಸ. 


ಆಕೆಯ ಕುರಿತ ಯಾವುದೇ ಪ್ರಶ್ನೆಗೂ ಅವಳು ಉತ್ತರಿಸುವುದಿಲ್ಲ. ಪೊಲೀಸರಿಗೆ ಹೇಳುತ್ತೇನೆ ಎಂದರೆ ಅದಕ್ಕೂ ಒಪ್ಪುವುದಿಲ್ಲ. ಕೊನೆಗೆ ಅಗತ್ಯಕ್ಕೆ ಮಾತ್ರ ಬೇಕಿದ್ದ ನನ್ನ ಹೆಸರನ್ನು ಹೇಳಿದಳು. ಆಕೆಯೇ ದೀಪ. ಮುಂದೆ ನೆರೆಹೊರೆಯವರು ಆ ತರುಣಿಯ ಕುರಿತಾಗಿ ಕುತೂಹಲ ತೋರುತ್ತಾರೆ. ಆಕೆ ಮನೆಯಲ್ಲಿ ಕಾಣದಾದಾಗ ಆಕೆಯನ್ನು ಹುಡುಕಿಕೊಂಡು ರೌಡಿಗಳು ಸಹ ಬರುತ್ತಾರೆ. ಆದರೆ, ಚಂಪಾ ಎಲ್ಲಿ ಎಂದೇ ಕೇಳುವುದು. ಅವರು ಹೋದ ನಂತರ ದೀಪಾ ವಾಪಾಸು ಬರುತ್ತಾಳೆ.


ಚಂಪಾ ತನ್ನ ವೈಯಕ್ತಿಕ ಮಾಹಿತಿ, ವಿಳಾಸವನ್ನು ಹಂಚಿಕೊಳ್ಳದಿದ್ದರೂ ಆಕೆ ತಾನು ಮನೆಯಿಂದ ಹೊರಡುವಾಗ ಡಾಕ್ಟರಿಗೆ ಹೇಳಿ ಹೊರಡದಿದ್ದರೂ.. ೫೦೦ ಫೀಸು ಜೊತೆಗೆ ಅವಳ ಬದುಕಿನ ಕಥೆಯನ್ನು ಹಾಳೆಯಲ್ಲಿ ಬರೆದಿಟ್ಟು ಹೊರಟಿರುತ್ತಾಳೆ. 


ಅರ್ಜುನ್ ಆಕೆಯ ಬದುಕಿನ ಕಥೆಯನ್ನು ಓದುತ್ತಾ ಸಾಗುತ್ತಾನೆ.


 ಮಧ್ಯಮ ವರ್ಗದ ಕುಟುಂಬದಲ್ಲಿ ನಾಗರತ್ನ ಹಾಗೂ ನಾಗರಾಜ ದಂಪತಿಗಳ ಮಗಳಾಗಿ ಜನಿಸಿದ್ದ ದೀಪ ಮುಂದೆ ಪ್ರೌಢಾವಸ್ಥೆಗೆ ಬಂದಾಗ.. ಪಕ್ಕದ ಮನೆಯ ಜಾನಿ ಮಾಮನಿಂದ ಆಕೆಯ ಮುಗ್ಧತೆಯನ್ನು ಹಾಗೂ ಸೌಂದರ್ಯವನ್ನು ಕಂಡು ಮಾಡಿದ ವರ್ತನೆಗೆ ದೀಪಾ ವಿಪರೀತಾರ್ಥ ಕಲ್ಪಿಸಿ ಉಂಟಾದ ಘಟನೆ, ಶಾಲೆಯಲ್ಲಿ ವ್ಯಾಯಾಮದ ಅಧ್ಯಾಪಕ ಸಣ್ಣಪ್ಪನಿಂದ ನಡೆದ ಕಿರುಕುಳ ಎಲ್ಲವೂ ಸೇರಿ ಆಕೆಯನ್ನು ಕುಗ್ಗಿಸುತ್ತಾ ಹೋಗುತ್ತದೆ. ತನ್ನದೇ ಓದು ಹಾಗೂ ಕಥಾ ಬದುಕನ್ನು ಮಾತ್ರ ಓದಿಕೊಂಡಿದ್ದ ಅವಳಿಗೆ ತಾನು ಮಲಿನವಾದೆ ಎಂಬ ವಿಚಾರ ತಲೆಯಲ್ಲಿ ಕೂತಿರುತ್ತದೆ. ಅದನ್ನು ಯಾರೊಡನೆಯೂ ಹಂಚಿಕೊಳ್ಳಲಿಲ್ಲ ಅವಳು.


ದೈಹಿಕ ಶಿಕ್ಷಕ ಸಣ್ಣಪ್ಪನ ಕಿರುಕುಳ ದೂರವಾದದ್ದು ಹೇಗೆ ಓದಿ ನೋಡಿ. ಅದು ದೀಪಾಳ ಕಾರಣದಿಂದಲ್ಲವಾದರೂ ವಿದ್ಯಾರ್ಥಿಯೊಬ್ಬಳ ಧೈರ್ಯವೇ ಅದಕ್ಕೆ ಕಾರಣವಾದ ಘಟನೆ ಇಲ್ಲಿದೆ. 


ದೀಪ ಮನಸ್ಸಿನ ಮೇಲೆ ಇದೆಲ್ಲವೂ ಪರಿಣಾಮ ಬೀರಿ ಆಕೆ ಓದಿನಲ್ಲಿ ಹಿಂದುಳಿದಾಗ.. ಜಾನಿಯ ಮನೆಗೆ ಬಂದ ದಂಪತಿಗಳು ಸೀತಾರಾಮ ಹಾಗೂ ರಾಧಮ್ಮ ನ ಮೈದುನ ನಂದಕುಮಾರ್ ಬಳಿ ಆಕೆಗೆ ಟ್ಯೂಷನ್ ಹೇಳಿಸುವ ವ್ಯವಸ್ಥೆಯಾಗುತ್ತದೆ. ಮುಂದೆ ಆತ ಆಕೆಯ ಕುರಿತು ಆಸ್ಥೆ ತೋರಿಸಿ ಅವಳ ಮಂಕಾಗುವಿಕೆಯನ್ನು ಒಡೆದೋಡಿಸಲು ಮನ ಬಿಚ್ಚಿ ಮಾತನಾಡಿದಾಗ.. ಆತನ ಬಳಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾಳೆ. ಆಕೆಯ ಮನದ ಭವಣೆಯನ್ನು ನಿವಾರಿಸುತ್ತನಾದರೂ.. ನಂದಕುಮಾರ್ ಹಾಗೂ ದೀಪ ಪ್ರೇಮಿಗಳಂತೆ ಪ್ರೇಮಿಸಲು ಶುರು ಮಾಡುತ್ತಾರೆ. ದೀಪಾಳ ಎಸ್ ಎಸ್ ಎಲ್ ಸಿ ಮುಗಿಯುತ್ತದೆ. ಆ ಸಂದರ್ಭದಲ್ಲಿ ನಡೆದ ಒಂದು ಘಟನೆ ಅವಳ ತಂದೆಯ ಕಣ್ಣಲ್ಲಿ ಅವಳು ಹಾಗೂ ನಂದಕುಮಾರ್ ನನ್ನು ಅಪರಾಧಿಯನ್ನಾಗಿಸುತ್ತದೆ. ಆ ವಿಚಾರ ದೊಡ್ಡದಾಗಿ ಎಲ್ಲರೂ ದೀಪಳನ್ನು ನೋಡುವ ರೀತಿಯೇ ಬದಲಾಗುತ್ತದೆ. ಮುಂದೆ ದೀಪಾಳಿಗೆ ವಿವಾಹ ಮಾಡಲು ಹೋದರೂ.. ಈ ವಿಚಾರ ತಿಳಿದು ವಿವಾಹವೂ ಆಗುವುದಿಲ್ಲ. 


ಉಳಿದ ಮಕ್ಕಳ ಬದುಕಿಗೆ ಆಕೆ ಕಪ್ಪು ಚುಕ್ಕಿ ಆಗಬಾರದೆಂದುಕೊಂಡು ಆಕೆಯನ್ನು ಕಾಲೇಜಿಗೆ ಕಳಿಸಲು ಶುರು ಮಾಡುತ್ತಾರೆ. ಯಾಂತ್ರಿಕವಾಗಿ ಕಾಲೇಜಿಗೆ ಹೋಗುತ್ತಾಳಾದರೂ ಓದಿನಲ್ಲಿ ಆಸಕ್ತಿ ಇರುವುದಿಲ್ಲ. ಆಗ ತನಗಿಂತಲೂ ವಯಸ್ಸಿನಲ್ಲಿ ದೊಡ್ಡವಳಂತಿರುವ ಶ್ರೀಮಂತೆಯಂತೆ ಕಾಣುವ ಸರಿತಾಳ ಪರಿಚಯವಾಗುತ್ತದೆ. 


ಸರಿತಾಳ ಪರಿಚಯವೇ ಮುಂದೆ ದೀಪಾ ಬದುಕಿನಲ್ಲಿ ದೊಡ್ಡ ತಿರುವಿಗೆ ಕಾರಣವಾಗುತ್ತದೆ. ಮನೆಯಲ್ಲಿ ತಂದೆ-ತಾಯಿಯರ ಪ್ರೀತಿ ಸಿಗದ ದೀಪಾಳ ಮನಸ್ಸನ್ನು ಉಪಯೋಗಿಸಿಕೊಂಡು ಆಟವಾಡುವ ಸರಿತಾ ಹಾಗೂ ಪುಷ್ಪವನ ಆಕೆಗೆ ಒಳ್ಳೆಯವರಂತೆ ಕಾಣುತ್ತಾರೆ. ಮುಂದೆ ಪುಷ್ಪವನಳ ಹಿಡಿತಕ್ಕೆ ಸಿಗುವ ದೀಪ ಚಂಪಾ ಆಗುತ್ತಾಳೆ.


ಈಗ ಅದೇ ಚಂಪಾ ಅರ್ಜುನನ ಮುಂದೆ ತನ್ನ ಬದುಕನ್ನು ಬಿಚ್ಚಿಟ್ಟಿರುವುದು ಆತನ ನಿಸ್ವಾರ್ಥ ಸೇವೆ, ಒಳ್ಳೆಯ ಮನಸ್ಸನ್ನು ಕಂಡು ಹಾಗೂ ತಾನು ಹಾಗೂ ಆತ ಇನ್ನೆಂದೂ ಭೇಟಿಯಾಗಲಾರೆವು ಎಂದು. ಆದರೆ, ವಿಧಿಲಿಖಿತ ಹಾಗಿರುವುದಿಲ್ಲ. ಮತ್ತೆ ಅರ್ಜುನ್ ಹಾಗೂ ಚಂಪಾ ಭೇಟಿಯಾಗುವ ಸಂದರ್ಭ ಯಾವುದು..? ಆಕೆಯ ಬದುಕಿನ ಕಥೆಯನ್ನು ಓದಿದ ಅರ್ಜುನ್ ಯಾವ ರೀತಿ ಆಲೋಚಿಸುತ್ತಾನೆ? ಪುಷ್ಪವನಳ ಪರಿಸ್ಥಿತಿ ಹೇಗಿರುತ್ತದೆ ಹಾಗೂ ಇಂತಹ ಹೆಣ್ಣು ಮಕ್ಕಳ ಬದುಕು ಯಾವ ರೀತಿ ಇರುತ್ತದೆ..? ದೀಪ ಅಂದು ಅರ್ಜುನ್ ಗೆ ಸಿಕ್ಕ ಪರಿಸ್ಥಿತಿಯ ಮುಂಚೆ ನಡೆದಿದ್ದ ಘಟನೆ ಏನು..? 


ಕೆಂಪು ದೀಪದ ಬೆಳಕಿನಲ್ಲಿರುವ ದೀಪಾಳ ಬದುಕಿನ ಕಥೆ ಇಲ್ಲಿದೆ. ಆದರೆ, ಎಲ್ಲರಿಗೂ ಇಂತಹ ಅದೃಷ್ಟ ಸಿಗಲಾರದು. ಕರುಣಾಕನಕ ಹಾಗೂ ಮಾನವೀಯತೆಯ ಕಥೆ. ಜೊತೆಗೆ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಹಾಗೂ ಭವಿಷ್ಯವನ್ನು ರೂಪಿಸುವ ತಂದೆ-ತಾಯಿಯರ ನಡೆ ಹೇಗಿರಬಾರದು ಎಂಬುದನ್ನು ಹೇಳುವ ಕಾದಂಬರಿ ಇದು. 

~ವಿಭಾ ವಿಶ್ವನಾಥ್

ಆನಂದ ಭೈರವಿ (ಪುಸ್ತಕ ಯಾನ - 403)


ಪುಸ್ತಕದ ಶೀರ್ಷಿಕೆ : ಆನಂದ ಭೈರವಿ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಲಲಿತಾ ಪ್ರಕಾಶನ

ಮರು ಮುದ್ರಣ : 2022


ಲಲಿತಮ್ಮನವರ ತಂದೆ  ಮೇಷ್ಟ್ರು . ಅವರ ಮಕ್ಕಳಲ್ಲಿ ಲಲಿತಮ್ಮನವರು ಸಂಗೀತವನ್ನು ಆರಾಧಿಸಿದರು. ಆದರೆ ಕೈ ಹಿಡಿದದ್ದು ಮಾತ್ರ ಅದರ ಗಂಧವನ್ನೇ ಅರಿಯದ ಸಾಮಾನ್ಯ ಹಾಗೂ ಲೆಕ್ಕಾಚಾರದ ಮನುಷ್ಯ ಚಲಪತಿಯ ಜೊತೆ. ಮಕ್ಕಳು ಏನಾಗಬೇಕು ಎಂಬ ಆಯ್ಕೆ ಮಾಡುವ ಅವಕಾಶ ಲಲಿತಮ್ಮನವರಿಗಿಲ್ಲದಿದ್ದರೂ ಅವರ ಹೆಸರಿಡುವ ಅವಕಾಶ ಅವರಿಗೆ ಸಿಕ್ಕಿದ್ದೇ ಅವರ ಖುಷಿ. ಮೊದಲಿಗೆ ಕಲ್ಯಾಣಿ ನಂತರ ಒಂದರ ಹಿಂದೆ ರಾಗಗಳಂತೆ ರಂಜನಿ, ವಸಂತ, ನೀಲಾಂಬರಿ, ಮೋಹನ, ಭೈರವಿ ಕೊನೆಗೆ ಅವಳಿ-ಜವಳಿ ಕಮಲ-ಮನೋಹರಿಯರು. 


ಮಕ್ಕಳನ್ನು ದೊಡ್ಡವರನ್ನಾಗಿಸುವಾಗ ಅವರಿಗೆ ವಿದ್ಯೆ ನೀಡುವುದು ಪೋಷಕರ ಬಹು ಮುಖ್ಯವಾದ ಕರ್ತವ್ಯ. ಹೆಣ್ಣುಮಕ್ಕಳೇ ಆಗಿದ್ದರಿಂದ ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಿಸಿಕೊಟ್ಟರೆ ಮುಂದೆ ಅವರ ಕಾಲ ಮೇಲೆ ಅವರೇ ನಿಂತು ದುಡಿದು ಮದುವೆಗೆಂದು ಕೂಡಿಸುತ್ತಾರೆ. ಅಲ್ಲದೆ, ಮನೆಯ ಹೊಣೆಯನ್ನು ಹೊರುತ್ತಾರೆ ಎಂದು ದೂರದ ಆಸೆಯಲ್ಲಿದ್ದರು ಚಲಪತಿ. ಹೆಣ್ಣುಮಕ್ಕಳಲ್ಲೆಲ್ಲಾ ರೂಪ ಹಾಗೂ ವಿದ್ಯೆಯಲ್ಲಿ ಮೇಲುಗೈ ಭೈರವಿಯದ್ದು. ಅವಳನ್ನು ಡಾಕ್ಟರ್ ನ್ನಾಗಿ ಮಾಡಬೇಕು ಎಂಬುದು ಅವಳ ತಂದೆಯ ಆಸೆ. ಪುಟ್ಟ ಭೈರವಿಗೆ ತಂದೆ-ತಾಯಿ ವಿಶೇಷ ಅಕ್ಕರೆ ನೀಡುವುದು ಅರಿವಾಗುತ್ತಿದ್ದರೂ ಎಲ್ಲರಿಗಿಂತ ತಾನೇ ಹೆಚ್ಚು ಎಂಬ ಧೋರಣೆಯೂ ಬೆಳೆಯುತ್ತಿತ್ತು. ಎಲ್ಲೆಡೆಯಲ್ಲಿಯೂ ಅವಳು ಇದನ್ನೇ ನಿರೀಕ್ಷಿಸತೊಡಗಿದಳು. ಸೋಲನ್ನು ತಡೆದುಕೊಳ್ಳಲಾರದ, ಅಪಮಾನದಿಂದ ಸೇಡು ತೀರಿಸಿಕೊಳ್ಳುವ ಮನೋಭಾವ ಅವಳಲ್ಲಿ ಬೇರು ಬಿಡತೊಡಗಿತ್ತು. ತಂದೆ-ತಾಯಿಯರು ಇಂತಹ ದುರ್ಬಲ ವಿಷ ಬೀಜವನ್ನು ಅಲಕ್ಷಿಸಿದರು. 


ಶಾಲೆಯಲ್ಲಿಯೂ ಅವಳು ಮಾನಿಟರ್. ಅಲ್ಲದೆ, ಓದಿನಲ್ಲಿಯೂ ಮುಂದು. ಶ್ರೀಮಂತ ಮನೆತನದ ಹುಡುಗಿ ಭವಾನಿ ಶಾಲೆಗೆ ಬಂದಾಗ ಮೊದಲು ಇವಳಿಗೆ ಇರುಸು-ಮುರುಸಾದರೂ.. ನಂತರ ಭವಾನಿ ಹೆಚ್ಚು ಬಿನ್ನಾಣ ತೋರದೆ ಬುದ್ಧಿವಂತೆಯಾದ ಭೈರವಿಯೊಂದಿಗೆ ಸ್ನೇಹ ಬೆಳೆಸಿದರೆ, ಭೈರವಿಯೂ ಹೊಂದಿಕೊಂಡು ಸ್ನೇಹಿತೆಯಾಗಿರಲು ಶುರು ಮಾಡಿದ ನಂತರ ಇಬ್ಬರಲ್ಲಿ ಆಪ್ತತೆ ಬೆಳೆಯಿತು. ಆದರೂ ಭೈರವಿಗೆ ಅವರಲ್ಲಿಯ ಸಿರಿತನ ತನ್ನಲಿಲ್ಲವೆಂಬುದು ತಿಳಿದಿದ್ದರೂ ಸ್ವಾಭಿಮಾನ ಹೆಚ್ಚೇ ಇದ್ದಿತು. ಆದರೂ.. ಭೈರವಿಗೆ ವಾಸ್ತವತೆ ದುಃಖ ಕೊಟ್ಟಿದ್ದವು. ಆಸೆಗಳು ಅವಳಿಗೆ ದುಃಖ ಕೊಟ್ಟವು. ಕಣ್ಣೀರ ರೂಪದಲ್ಲಿ ಹೊರಬೀಳದ ಅವು ದ್ವೇಷಗಳಾಗಿ ಹೆಪ್ಪುಗಟ್ಟಿದವು. ಅದಕ್ಕೆ ಕಾರಣ ತನ್ನ ತಂದೆ-ತಾಯಿಯರು ಎಂದುಕೊಂಡವಳ ಮನಸ್ಸನ್ನು ಬದಲಿಸುವುದಂತು ಸಾಧ್ಯವಿರಲಿಲ್ಲ.


ಮುಂದೆ ಕಾಲೇಜಿಗೆ ಸೇರಿದಾಗ ಭವಾನಿಗೆ ಅಮೆರಿಕದಲ್ಲಿದ್ದ ತನ್ನ ಸೋದರ ಮಾವನ ಮಗನ ಜೊತೆ ವಿವಾಹ ನಡೆಯುತ್ತದೆ. ಆಕೆಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿಯೇನೂ ಇರಲಿಲ್ಲ. ಅವನ ಓದು ಅಲ್ಲಿಗೆ ಮೊಟಕಾಗುತ್ತದೆ. ಅವಳ ವಿವಾಹದ ಸಂದರ್ಭದಲ್ಲಿ ಅವಳ ಇದ್ದೂಬ್ಬ ಅಣ್ಣ ಆನಂದನ ಪರಿಚಯ ಭೈರವಿಗಾಗುತ್ತದೆ. ಭೈರವಿ ಆತನ ಚೆಲುವಿಗೆ ಮನಸೋಲುತ್ತಾಳಾದರೂ ತೋರಿಸಿಕೊಳ್ಳುವುದಿಲ್ಲ. 


ಎಷ್ಟೇ ಆಪ್ತತೆ ಇದ್ದರೂ ಸ್ನೇಹ ಒಂದು ಘಟ್ಟದಲ್ಲಿ ಕಡಿದು ಹೋಗುತ್ತದೆ. ಅಂತಹ ಪರಿಸ್ಥಿತಿ ಭವಾನಿ ಹಾಗೂ ಭೈರವಿಯರ ನಡುವೆ ಉಂಟಾಯಿತು. ಭೈರವಿ ತನ್ನ ಪಾಡಿಗೆ ತಾನು ಓದಿನಲ್ಲಿ ವ್ಯಸ್ತವಾಗಿರುವಾಗ ಅವಳ ಬದುಕಿನಲ್ಲಿ ನಿರೀಕ್ಷಿಸದಂತೆ ಆನಂದನ ಆಗಮನವಾಗುತ್ತದೆ. ಆನಂದ ತಾನು ಆಕೆಯನ್ನು ವಿವಾಹವಾಗುತ್ತೇನೆಂದು ನಂಬಿಸಿ, ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಳ್ಳುತ್ತಾಳೆ. ಭೈರವಿಗೆ ತಾನು ಬಯಸಿದಂತೆಯೇ ಸಿರಿವಂತಿಕೆ ಸಿಗುವಾಗ ಓದಿನ ಮಹತ್ತಿನನ ಅರಿವು ತಕ್ಷಣಕ್ಕೆ ಉಂಟಾಗುವುದಿಲ್ಲ. ಅದರ ಬದಲಾಗಿ ತಾನು ಹೇಗೂ ಸಿರಿವಂತೆಯಾಗುತ್ತೇನೆ ಎಂಬ ಆಲೋಚನೆಯಿಂದ ಆನಂದನ ಪ್ರೀತಿಗೆ ಹೂಂಗುಡುತ್ತಾಳೆ. ತನ್ನ ತಂದೆ-ತಾಯಿಯರು ತನ್ನನ್ನು ಏಣಿಯನ್ನಾಗಿ ಉಪಯೋಗಿಸಿಕೊಂಡು ಉಳಿದವರ ಭವಿಷ್ಯವನ್ನು ರೂಪಿಸುತ್ತಾರೆ ಎನ್ನುವ ಆಲೋಚನೆ ಅವಳಲ್ಲಿ ಇರುಸು-ಮುರಿಸು ಉಂಟಾಗಿಸಿ, ಆನಂದನನ್ನೇ ವಿವಾಹವಾಗುವ ಕನಸನ್ನು ಕಾಣುತ್ತಿರುವಾಗ ಆಕೆಗೆ ಪಾತಾಳಕ್ಕೆ ನೂಕಿದಂತಹ ಸ್ಥಿತಿ ಉಂಟಾಗುತ್ತದೆ.. 


ಭೈರವಿಗೆ ತಾನು ಗರ್ಭಿಣಿ ಎಂಬ ವಿಚಾರ ತಿಳಿದ ಹೊತ್ತಿನಲ್ಲಿಯೇ ಭವಾನಿಯೂ ಗರ್ಭಿಣಿ. ಭವಾನಿ ಆಕೆಯ ಮನೆಗೆ ಬಂದಾಗ ಘೋರ ಸತ್ಯವೊಂದು ಅರಿವಾಗುತ್ತದೆ. ಅದು ರೋಷಕ್ಕೆ ತಿರುಗಿ, ಪರಿಸ್ಥಿತಿಯ ಬಿಸಿಯಲ್ಲಿ ಆಕೆಯೇ ಆನಂದನ ಕೊಲೆಯನ್ನು ಮಾಡಿಬಿಡುತ್ತಾಳೆ. 


ಕೊಲೆ ಮಾಡಿದ ನಂತರ ಆಕೆ ತನ್ನ ಶಾಲೆಯಲ್ಲಿದ್ದ ಮದರ್ ಮೇರಿಯ ಆಶ್ರಯಕ್ಕೆ ಹೋಗುತ್ತಾಳೆ. ಹಾಗೆಂದು ಆಕೆಗೆ ಪೋಲೀಸರಿಂದ ತಪ್ಪಿಸಿಕೊಳ್ಳುವ ಮನಸ್ಸಿರಲಿಲ್ಲ. ಬದಲಾಗಿ ಮಗುವನ್ನು ರಕ್ಷಿಸಿಕೊಳ್ಳಬೇಕಾಗಿತ್ತು. ಮಗುವನ್ನು ಹೆತ್ತ ನಂತರ ಆಕೆಯೇ ಹೋಗಿ ತಾನೇ ಆನಂದನ ಕೊಲೆಗಾತಿ ಎಂಬುದನ್ನು ಒಪ್ಪಿ, ತನಗೆ ನೀಡಲಾದ 25 ವರ್ಷಗಳ ಶಿಕ್ಷೆ ಮುಗಿಸಿ ಹೊರಬರುತ್ತಾಳೆ. 


ಜೈಲಿನಿಂದ ಹೊರ ಬಂದಾಗ ಪರಿಸ್ಥಿತಿ, ಕಾಲ ಎರಡೂ ಬದಲಾಗಿರುತ್ತದೆ. ಮುಂದೆ ಭೈರವಿಯ ಬದುಕು ಹೇಗಿರುತ್ತದೆ..?


ಬಿಡುಗಡೆಯಾದ ನಂತರ ಭೈರವಿ ತಾನು ಆಮ್ಮಣ್ಣಿ ಎಂಬ ಹೆಸರಿನಲ್ಲಿ ಪುನೀತಳ ಮನೆ ಸೇರುತ್ತಾಳೆ. ಪುನೀತ, ಆಕೆಯ ಪತಿ ಗೌತಮ್ ಹಾಗೂ ಇಬ್ಬರು ಮಕ್ಕಳ ಜವಾಬ್ದಾರಿ ಹೊರುತ್ತಾಳೆ. ಆದರೆ, ಗೌತಮ್ ನ ಚಿಕ್ಕಪ್ಪ ರಿಟೈರ್ ಪೋಲೀಸ್ ಸೂಪರಿಡೆಂಟ್ ಮಿಸ್ಟರ್ ಅರುಣ್ ಕುಮಾರ್ ಬಂದಾಗ ಆಕೆಯ ಹಿಂದಿನ ಬದುಕು ಹಾಗೂ ಆಕೆ ಮಾಡಿದ ಕೊಲೆ ಅನಾವರಣವಾಗುತ್ತದೆ. 


ನಾನು ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಿದ ಮೇಲೂ ಆಕೆ ಮತ್ತೆ ಶಿಕ್ಷೆ ಅನುಭವಿಸುತ್ತಾಳಾ..?


ಭೈರವಿ ಅಮ್ಮಣ್ಣಿಯಾಗಿ ಬದಲಾದದ್ದೇಕೆ..? ಪುನೀತ ಆಕೆಯನ್ನು ಅವಮಾನಿಸಿದಷ್ಟೂ ಗೌತಮ್ ಆಕೆಯನ್ನು ಸಮರ್ಥಿಸಿಕೊಂಡು ಗೌರವ ಕೊಡುತ್ತಿದ್ದ ನಡೆಗೆ ಏನಾದರೂ ಕಾರಣವಿತ್ತೇ..? ಚಿಕ್ಕಪ್ಪ ನಿಜ ಅನಾವರಣ ಮಾಡಿದ ನಂತರ ಆತನ ಮುಂದಿನ ನಡೆ ಏನು..?


ಭೈರವಿ ಹೆತ್ತ ಮಗು ಏನಾಯ್ತು..? ಅವಳ ಭವಿಷ್ಯ ಹೇಗಿತ್ತು..?


ಭೈರವಿ ತಾನು ಆನಂದನನ್ನು ಕೊಲೆ ಮಾಡಿದಳಾದರೂ ಆಕೆಗೆ ಆತನನ್ನು ದ್ವೇಷಿಸಲು ಸಾಧ್ಯವಾಗಲಿಲ್ಲವೇಕೆ..? ಈ ಕಾದಂಬರಿಯ ಶೀರ್ಷಿಕೆ ಆನಂದ ಭೈರವಿ ಎಂದು ಇರುವ ಕಾರಣವೇನು..? ಈ ಕಥೆಯನ್ನು ನೀವೇ ಓದಿ ನೋಡಿ. 


ಇಲ್ಲಿ ಭೈರವಿ ರುದ್ರ ಭೈರವಿಯಾಗಿಯೂ ಹಾಗೂ ಆನಂದಭೈರವಿಯಾಗಿಯೂ ನಂತರ ಬದಲಾದಾಗ ಸಾಧ್ಯವಾದಷ್ಟು ಸಮಾಧಾನ, ತಾಳ್ಮೆಯಿಂದ ಇರುವ ಭೈರವಿಯಾಗಿಯೂ ಕಾಣಸಿಗುತ್ತಾಳೆ ಒಂದು ಹೆಣ್ಣಿನ ಮನಸ್ಥಿತಿ, ಪರಿಸ್ಥಿತಿ ಹಾಗೂ ಆಕೆಯ ಬದಲಾವಣೆಯ ಚಿತ್ರಣ ಇಲ್ಲಿದೆ.


ಡಾ. ರಾಜಕುಮಾರ್ ಅವರು ಆನಂದ ಭೈರವಿ ಕಾದಂಬರಿಯನ್ನು ಓದಿ ಅಪಾರಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಎಂಬ ಖುಷಿಯ ಸಂಗತಿಯನ್ನು ಚಿತ್ರಲೇಖ ಮೇಡಂ ಈ ಕಾದಂಬರಿಯ ಮುನ್ನುಡಿಯಲ್ಲಿ ಹಂಚಿಕೊಂಡಿದ್ದಾರೆ. ಸೊಗಸಾದ ಕಾದಂಬರಿಯ ಸುಲಲಿತ ಓದು.

~ವಿಭಾ ವಿಶ್ವನಾಥ್

ಕರುಣಾ ಹತ್ಯೆ (ಪುಸ್ತಕ ಯಾನ - 402)


ಪುಸ್ತಕದ ಶೀರ್ಷಿಕೆ : ಕರುಣಾ ಹತ್ಯೆ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸುಧಾ ಶಿಶುಸಾಹಿತ್ಯ ಮಾಲೆ

ಪ್ರಥಮ ಮುದ್ರಣ : 1988

ದ್ವಿತೀಯ ಮುದ್ರಣ : 2009 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 208

ಬೆಲೆ : 75 ರೂ. 


ಕರುಣಾ ಹತ್ಯೆ ಕಾದಂಬರಿ ತಮಿಳಿನ ಖ್ಯಾತ ಸಾಹಿತಿಯಲ್ಲೊಬ್ಬರಾದ ಶ್ರೀಮತಿ ಶಿವಶಂಕರಿ ಅವರ ಮೂಲಕೃತಿ. ಚಿತ್ರಲೇಖ ಮೇಡಂ ಅವರ ಭಾಷಾಂತರ ಹೇಗಿದೆ ಎಂದರೆ ಎಲ್ಲಿಯೂ ಇದು ಅನುವಾದ ಎಂದೇ ಅನ್ನಿಸದ ಕಾದಂಬರಿ. ತಮಿಳುನಾಡಿನ ಸ್ಥಳಗಳ ಹೆಸರುಗಳನ್ನು ಹೊರತುಪಡಿಸಿದರೆ ನಮ್ಮ ಕನ್ನಡದ್ದೇ ಕೃತಿ ಎಂಬಂತೆ ಭಾಸವಾಗುತ್ತದೆ. 


ಕರುಣ ಹತ್ಯೆ, ಮರ್ಸಿ ಕಿಲ್ಲಿಂಗ್, ದಯಾ ಮರಣ ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಈ ವಿಷಯ ಇಂದಿಗೂ ಕ್ಲಿಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳುವಂತೆ ವಿಚಾರ. ಇಂದಿಗೂ ಬಹುಚರ್ಚಿತ ವಿಷಯ. 


ಜನನಿ ಹಾಗೂ ಸತ್ಯರದ್ದು ಅನುರೂಪವಾದ ದಾಂಪತ್ಯ. ಇಬ್ಬರಲ್ಲಿಯೂ ಎಷ್ಟು ಅನ್ಯೋನ್ಯತೆ ಇತ್ತೋ.. ಅಷ್ಟೇ ಮನಸ್ಸನ್ನು ಬಿಚ್ಚಿ ಮಾತನಾಡಿಕೊಳ್ಳುವ ಪರಿಪಾಠವೂ ಇತ್ತು. ದಾಂಪತ್ಯವೆಂದರೆ ಹೀಗಿರಬೇಕು ಎಂದೆನಿಸುವಂತೆ ಮಾಡುವ ಇವರ ದಾಂಪತ್ಯದ ಚಿತ್ರಣ ಇಲ್ಲಿದೆ. 


ಜನನಿ ಭರತನಾಟ್ಯ ಕಲಾವಿದೆಯಾದರೆ.. ಸತ್ಯ 'ಮಿತ್ರಾ' ಪತ್ರಿಕೆಯಲ್ಲಿ ಸಂಪಾದಕನಾಗಿ ಕೆಲಸ ಮಾಡುತ್ತಿದ್ದ. ಸತ್ಯನಲ್ಲಿ ಕೆಲಸದ ಕುರಿತ ನಿಷ್ಠೆ, ನಿಲುವುಗಳು ಹೇಗಿದ್ದವೋ.. ಜನನಿಯಲ್ಲಿ ನೃತ್ಯ, ಕೆಲಸದ ಕುರಿತ ಆಸಕ್ತಿ, ಎಲ್ಲವನ್ನೂ ತಿಳಿದುಕೊಳ್ಳುವ ಉತ್ಸಾಹ ಅಂತೆಯೇ ಇದ್ದವು. ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೇಮಕ್ಕೆ ನಂತರ ದಾಂಪತ್ಯಕ್ಕೆ ಮುನ್ನುಡಿ ಬರೆದ ಸುಂದರ ಕಥಾಹಂದರವನ್ನು ನೀವೇ ಓದಿ ನೋಡಿ.


ಇವರ ಅನುರೂಪದ ದಾಂಪತ್ಯದ ನಡುವೆ ಅವರು ಕಂಡ, ಭೇಟಿ ನೀಡಿದ ಪ್ರಸಂಗಗಳನ್ನು ಇಬ್ಬರು ಚರ್ಚಿಸುವಾಗ ಇಬ್ಬರ ನಿಲುವುಗಳೂ ಕೆಲವೊಮ್ಮೆ ಭಿನ್ನಾಭಿಪ್ರಾಯವಾಗಿದ್ದರೆ.. ಕೆಲವೊಮ್ಮೆ ಒಂದೇ ತೆರನಾದದ್ದು. ಹಾಗೆ ಕೊಂಡಿಯಾದ ಎಷ್ಟು ವಿಚಾರಗಳನ್ನು ಕಾದಂಬರಿಯಲ್ಲಿ ಕನೆಕ್ಟ್ ಮಾಡಿರುವ ಬಗೆ ಇಷ್ಟವಾಗುತ್ತದೆ. 


ಜನನಿ ತನ್ನ ನೃತ್ಯ ಕಾರ್ಯಕ್ರಮವೆಂದು ಹೋಗಿದ್ದಾಗ ವರ್ಣವನ್ನು ಮುಗಿಸಿ ಸಭೆಗೆ ವಂದನೆ ಸಲ್ಲಿಸಿ ಗ್ರೀನ್ ರೂಂಗೆ ಹೋಗುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀಲಿ ಪರದೆಯನ್ನು ಕಟ್ಟಿದ ಹಗ್ಗ ಕಿತ್ತು ಹೋಗಿ, ಪರದೆಯೊಂದಿಗೆ ಇದ್ದ ದಪ್ಪವಾದ ಕಂಬ ಬಹಳ ಎತ್ತರದಿಂದ ಬಿದ್ದಾಗ ಜನನಿ ಅದರಡಿಯಲ್ಲಿ ಸಿಲುಕಿದಳು. ಆಗ ಹೋದ ಪ್ರಜ್ಞೆ ಇನ್ನೂ ಬಂದಿರಲಿಲ್ಲ. ನಾಮಗಿರಿಯಮ್ಮನಿಂದ ವಿಷಯ ತಿಳಿದ ಸತ್ಯ ಅಲ್ಲಿಗೆ ಬರುವಷ್ಟರಲ್ಲಿ ಜನನಿಗೆ ಚಿಕಿತ್ಸೆ ಶುರುವಾಗಿತ್ತು. ನಂತರ ಆಕೆಯನ್ನು ಮತ್ತೆ ಜತನದಿಂದ ಮದ್ರಾಸಿಗೆ ಕರೆತಂದು ಖ್ಯಾತ ನ್ಯೂರೋ ಸರ್ಜನ್ ಬಳಿಯಲ್ಲಿ ಚಿಕಿತ್ಸೆ ಕೊಡಿಸುವ ಸಂದರ್ಭದಲ್ಲಿ ತಿಳಿಯುವ ವಿಚಾರವೆಂದರೆ.. ಮೆದುಳಿನಲ್ಲಿ ಅಲ್ಲಲ್ಲೇ ರಕ್ತನಾಳಗಳು ಛೇದಗೊಂಡು, ಸಣ್ಣಸಣ್ಣ ಹೆಪ್ಪುಗಟ್ಟಿದ ರಕ್ತದ ಉಂಡೆಗಳಾಗಿವೆ. ಅವು ಮದುಳಿನ ಮೇಲಿನ ಭಾಗದಲ್ಲಿರದೆ, ಆಳದಲ್ಲಿರುವುದರಿಂದ ಬ್ರೈನ್ ಸೆಲ್ ಗಳನ್ನು ಬಿಡಿಸಿ ಶಸ್ತ್ರಚಿಕಿತ್ಸೆ ನಡೆಸುವುದು ಅಪಾಯಕಾರಿಯಾಗಿತ್ತು. 


ಇದಕ್ಕಿರುವ ಉಪಾಯವೆಂದರೆ ಸೂಕ್ತ ಔಷಧಿಗಳನ್ನು ನೀಡುತ್ತಾ ರಕ್ತದ ಉಂಡೆಗಳು ಹೆಪ್ಪುಗಟ್ಟಿರುವುದು ಕರಗುವವರೆಗೂ ಕಾಯುವುದಷ್ಟೇ.. ಅಂದರೆ, ಅಲ್ಲಿಯವರೆಗೂ ಜನನಿ ಕೋಮಾದಲ್ಲಿಯೇ ಇರಬೇಕಾದ ಪರಿಸ್ಥಿತಿ. ಈ ಪರಿಸ್ಥಿತಿಯಲ್ಲಿ ಆಕೆಯನ್ನು ಕಟ್ಟೆಚ್ಚರದಿಂದ ನೋಡಿಕೊಳ್ಳಬೇಕಿತ್ತು. ಅದಕ್ಕೆ ಮನೆಯಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿ ನರ್ಸ್ ಅನ್ನು ಇಟ್ಟಿದ್ದರು. ಸತ್ಯ ಖುದ್ದಾಗಿ ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದ. ಆಕೆಗೆ ಇಷ್ಟವಾದ ಹಾಡುಗಳನ್ನು ಪ್ಲೇ ಮಾಡುವುದು, ಕಾಲಿಗೆ ಗೆಜ್ಜೆ ಕಟ್ಟುವುದು ನೃತ್ಯ ವೇದಿಕೆಯಂತಹ ಪರಿಸರವನ್ನು ಸೃಷ್ಟಿಸುವುದು, ಕಣ್ಣಿಗೆ  ವೇದಿಕೆಯ ಮೇಲೆ ಇರುವಂತಹ ಬೆಳಕು ಬೀಳಿಸುವುದು ಹೀಗೆ..


ಸತ್ಯನ ತಾಯಿ ಲಕ್ಷ್ಮಿ ಅವರು ತನ್ನ ಪ್ರೀತಿಯ ಸೊಸೆ ಹುಷಾರಾಗಲು ತುಂಬು ಮನಸ್ಸಿನಿಂದ ದೇವರ ಸೇವೆಯನ್ನೆಲ್ಲಾ  ಮಾಡುತ್ತಿದ್ದರು. ತನ್ನ ಮಗನ ಸ್ಥಿತಿಗೆ ಮರುಗುತ್ತಿದ್ದರು. ಆದರೆ, ಎಂದಿಗೂ ಋಣಾತ್ಮಕ ಮಾತುಗಳನ್ನು ಆಡಿದವರಲ್ಲ. 


ಹೀಗೆ ನಿರಂತರವಾಗಿ 10 ತಿಂಗಳು ಜನನಿ ಕೋಮಾ ಸ್ಥಿತಿಯಲ್ಲಿದ್ದಳು.


ಹಿಂದೆ ಜನನಿ ಹಾಗೂ ಸತ್ಯ ಇಬ್ಬರು ಸುಂದರ್ ಲಾಲನ ನಾಯಿ ದೀನ ಪರಿಸ್ಥಿತಿಯಲ್ಲಿ ಇರುವಾಗ ಡಾಕ್ಟರ್ ಹೇಳಿದ ಮರ್ಸಿ ಕಿಲ್ಲಿಂಗ್ ಅಂದರೆ ಕರುಣಾ ಹತ್ಯೆ ಎಷ್ಟು ಸರಿ ಎಂಬ ವಾದ ಮಾಡಿದ ಮಾತುಗಳೆಲ್ಲವೂ ಸತ್ಯನಿಗೆ ನೆನಪಾಗುತ್ತದೆ. ಇಷ್ಟಕ್ಕೂ.. ನಿರಂತರ 9 ತಿಂಗಳು ಆಕೆಯನ್ನು ಮಗುವಿನಂತೆ ಜೋಪಾನ ಮಾಡುತ್ತಿದ್ದವನಿಗೆ ಇಂತಹ ಮನಸ್ಥಿತಿಯಲ್ಲಿ ಆ ಮಾತುಗಳು ನೆನಪಾದ ಪ್ರಸಂಗವಾದರೂ ಏನಿತ್ತು ಓದಿ ನೋಡಿ. 


ಬಬಲ್ ಬಾಯ್ ನಂತಹ ಮಗು ನನಗೆ ಏನಾದರೂ ಹುಟ್ಟಿದರೆ ಈ ಪ್ರಪಂಚವೇ ಒಂದಾಗಿ ನಿಂತು ವಿರೋಧವನ್ನು ತೋರಿದರೂ.. ಅವನು ಈ ರೀತಿ 50 ವರ್ಷ ಬದುಕುವುದಕ್ಕಿಂತಲೂ, ಎರಡು ದಿನಗಳು ಸಂತೋಷವಾಗಿದ್ದು ಸ್ವತಂತ್ರವಾಗಿ ಸಾಯಲಿ. ಎಂದು ಹೇಳಿದ ಜನನಿಯ ಮಾತುಗಳು 


ಬ್ಯಾತ ನಟಿ ಸಾವಿತ್ರಿಯ ಕುರಿತು ಲೇಖನ ಪ್ರಕಟವಾದಾಗ ನಡೆದ ಸಂಭಾಷಣೆಯಲ್ಲಿ ಜನನಿ 

"ವಿಚಾರ ಮಾಡಿ ನೋಡಿದರೆ ಹೀಗೆ ಪ್ರಜ್ಞೆ ಇಲ್ಲದ 'ವೆಜಿಟೇಬಲ್' ನ ಹಾಗೆ ಬಿದ್ದಿರುವುದು ಬಹಳ ಕ್ರೂರವಾದ ವಿಷಯವೆನಿಸುತ್ತದೆ. ಕೋಮಾದಲ್ಲಿ ಬಿದ್ದು 60 ವರ್ಷ ಕಾಲ ಬದುಕಿದ್ದು ತಾನು ಹಿಂಸೆಗೆ ಒಳಗಾಗಿ, ಪರರನ್ನು ಹಿಂಸೆ ಒಳಗಾಗುವಂತೆ ಮಾಡುವುದರ ಬದಲು ಕೈ ಕಾಲು ಗಟ್ಟಿಯಾಗಿದ್ದು, ಬುದ್ಧಿ ನೆಟ್ಟಗಿರುವಾಗಲೇ 40 ವರ್ಷಗಳಾದರೂ ಸಾಕು, ತಟ್ಟನೆ ಹೋಗಿಬಿಡಬೇಕು. ಅದಕ್ಕೆ ನಾನು ರೆಡಿ.," ಎಂದು ಉದ್ವಿಗ್ನಳಾಗಿ ಮಾತನಾಡಿದ್ದ ಮಾತುಗಳು 


ಇವೆಲ್ಲವೂ ಸತ್ಯವನ್ನು ಪ್ರೇರೇಪಿಸಿ.. ಜನನಿಯ ಕರಣಾ ಹತ್ಯೆಯನ್ನು ಮಾಡಲು ಪ್ರೇರೇಪಿಸಿದ ವೇ..? 


ಸತ್ಯ ಜನನಿಯನ್ನು ಕರುಣಾ ಹತ್ಯೆಗೈಯ್ಯಲು ಸಿದ್ದನಾಗಿದ್ದು ಹೌದು. ಆದರೆ, ಆತ ಬಹಳಷ್ಟು ತಳಮಳಗೊಂಡಿದ್ದ. ಅದಕ್ಕೆಂದು ಮೀಸಲಾಗಿಟ್ಟಿದ್ದ ದಿನ ಮಧುರಾಂತಕ ರಾಮನ ಪವಾಡವೋ ಅಥವಾ ವಿಧಿ ಲಿಖಿತವೋ ಎಂಬಂತೆ ಅದು ಮುಂದೂಡುತ್ತಲೇ ಹೋಗಿ.. ಮನೆ ಸೇರುವಷ್ಟರಲ್ಲಿ ಮನೆಯ ಮುಂದೆ ಬಹಳಷ್ಟು ಜನರು ಸೇರಿದ್ದರು. ತಾನಂದುಕೊಂಡ ದಿನವೇ ಜನನಿಯೇ ತನ್ನ ಮನಸ್ಸನ್ನು ಅರಿತಂತೆ ಜೀವ ಬಿಟ್ಟಳೇ ಎಂದುಕೊಳ್ಳುವಷ್ಟರಲ್ಲಿಯೇ.. ಅಲ್ಲಿ ನಡೆದಿದ್ದ ಘಟನೆ ಸತ್ಯನನ್ನು ಬಹಳವಾಗಿ ಅಲುಗಿಸಿಬಿಡುತ್ತದೆ.


ಜನನಿ ಚೇತರಿಸಿಕೊಳ್ಳುತ್ತಾಳೆ, ಅದರ ನಂತರ ಜನನಿ ಸಂಪೂರ್ಣವಾಗಿ ಗುಣಮುಖವಾಗುತ್ತಾಳೆ. ಆದರೆ, ಸತ್ಯ ದಿನೇ ದಿನೇ ನಶಿಸುತ್ತಲೇ ತನ್ನ ಕೆಲಸದ ಮೇಲಿನ ಹಾಗೂ ಜೀವನದ ಮೇಲಿನ ಆಸಕ್ತಿಯನ್ನೇ ತೊರೆದವನಂತೆ ಬೇರಾವುದೋ ರೀತಿಯಲ್ಲಿ ಎಲ್ಲದರಿಂದ ದೂರವಾಗುತ್ತಲೇ ಸಾಗುತ್ತಾನೆ.


ಇದೆಲ್ಲದಕ್ಕೂ ಪರಿಹಾರ ಏನಿತ್ತು..? ಜನನಿ ಬದುಕಿದ್ದೇ ಸತ್ಯನ ಪಾಲಿಗೆ ಮುಳುವಾಯಿತೇ ಅಥವಾ ಬೇರೇನಾದರೂ ಕಾರಣವಿತ್ತೇ..?


ಜನನಿ ಸತ್ಯನ ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಳೇ ಅಥವಾ 10 ತಿಂಗಳ ಅಂತರ ಅವರಿಬ್ಬರನ್ನು ಮತ್ತಷ್ಟು ದೂರವಾಗಿಸಿತೇ ಓದಿ ನೋಡಿ. 


ಮರು ಓದಿನಲ್ಲಿಯೂ ನನಗೆ ಬಹಳವಾಗಿ ಕಾಡಿದ ಕಾದಂಬರಿ ಇದು. ಹಲವಾರು ಮನೋವೈಜ್ಞಾನಿಕ ವಿಚಾರಗಳನ್ನು, ವೈದ್ಯಕೀಯ ಭಾಷೆಯನ್ನು ಕ್ಲಿಷ್ಟವಾಗದಂತೆ, ಜೊತೆಗೆ ಭಾವನೆಗಳಲ್ಲಿಯೂ ಕಾಡುವಂತೆ ಮಾಡಿದ ಕಾದಂಬರಿ ಇದು.

~ವಿಭಾ ವಿಶ್ವನಾಥ್

ಗಗನ ಕುಸುಮವ ಅರಸಿ (ಪುಸ್ತಕ ಯಾನ - 401)


ಪುಸ್ತಕದ ಶೀರ್ಷಿಕೆ : ಗಗನ ಕುಸುಮವ ಅರಸಿ

ಲೇಖಕರು : ಡಾ|| ಕೆ. ವಿ. ರಾಜೇಶ್ವರಿ

ಪ್ರಕಾಶಕರು : ಸಪ್ನ ಬುಕ್ ಹೌಸ್

ಪ್ರಥಮ ಮುದ್ರಣ : 2022 ನವೆಂಬರ್

ಪುಟಗಳು : 235

ಬೆಲೆ : 180 ರೂ.


'ಗಗನ ಕುಸುಮವ ಅರಸಿ' ಕಾದಂಬರಿಯಲ್ಲಿ ಪಿತೃವಾಕ್ಯ ಪರಿಪಾಲಕನಾದ ರಾಮನಂತಹ ಮಗ ಕಲಿಯುಗದಲ್ಲಿಯೂ ಕಾಣಸಿಗುತ್ತಾನೆ. ಅವನೇ ರಾಜೇಶ್. 


ರಾಜೇಶ್ ಹಾಗೂ ರಶ್ಮಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ರಾಜೇಶ್ ತನ್ನ ತಂದೆಗೆ ಹೇಳಬೇಕಿತ್ತು, ರಶ್ಮಿಯ ಮನೆಯಲ್ಲಿ ಅದಾಗಲೇ ಈ ವಿಚಾರ ತಿಳಿದಿತ್ತು. ರಾಜೇಶ್ ತಂದೆಗೆ ತಮ್ಮ ಪ್ರೀತಿಯ ವಿಚಾರವನ್ನು ಹೇಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ. ಆ ಸಮಯವು ಇನ್ನೇನು ಹತ್ತಿರದಲ್ಲಿಯೇ ಇತ್ತು. ರಾಜೇಶನ ತಂದೆ ರಾಮಮೂರ್ತಿ ತಮ್ಮ ಗೆಳೆಯನ ಮಗಳ ವಿವಾಹಕ್ಕೆ ಬರುವವರಿದ್ದರು. 


ಸದಾಶಿವ ಹಾಗೂ ಸರಸ್ವತಿ ದಂಪತಿಗಳಿಗೆ ನಾಲ್ವರು ಹೆಣ್ಣು ಮಕ್ಕಳು. ಹಿರಿಯವಳು ವನಜಾ. ಈಗ ಅವಳ ಮದುವೆಯೇ ನಿಶ್ಚಯವಾಗಿದ್ದದ್ದು. ಎಲ್ಲ ರೀತಿಯಲ್ಲಿಯೂ ವರಸ್ವಾಮ್ಯ ಕೂಡಿ ಬಂದು.. ಒಪ್ಪಿಗೆಯ ಜೊತೆಗೆ ವಿವಾಹ ನಿಶ್ಚಯವಾಗುವ ಸಂದರ್ಭದಲ್ಲಿ ವರ ಶ್ರೀಕಾಂತನ ತಂದೆಯಿಂದ ಇದ್ದದ್ದು ಏಕೈಕ ಕಂಡೀಶನ್. ವನಜಾ ಕೆಲಸಕ್ಕೆ ಹೋಗುವ ಹೆಣ್ಣುಮಗಳಲ್ಲವಾದ್ದರಿಂದ ಮನೆಗೆ ಸಂಪಾದನೆಯಾ ಆಗುವುದಿಲ್ಲ ಎಂಬ ವಾದವಿಟ್ಟು ಅವರು ಒಂದು ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದರು. ಸದಾಶಿವ ಅವರು ತನ್ನ ಗೆಳೆಯ ರಾಮಮೂರ್ತಿ ತನಗೆ ಕೊಡಬೇಕಾದ ಒಂದು ಲಕ್ಷ ರೂಪಾಯಿಯನ್ನು ಕೊಟ್ಟರಾಯಿತು ಎಂದುಕೊಂಡು ಅದಕ್ಕೆ ಒಪ್ಪಿಗೆ ಕೊಟ್ಟಿದ್ದರು. ಆದರೆ, ಹೆಣ್ಣುಮಕ್ಕಳ ಮನಸ್ಸಿನಲ್ಲಿ ಸಂಪೂರ್ಣವಾಗಿ ಈ ವಿಚಾರಕ್ಕೆ ಸಮ್ಮತಿ ಇರಲಿಲ್ಲ. ಅವರೆಲ್ಲರೂ ವರದಕ್ಷಿಣೆಯ ವಿರೋಧವಾಗಿಯೇ ಇದ್ದರು. 


ವರದಕ್ಷಿಣೆ ಕೇಳುವುದು ಹಾಗೂ ಕೊಡಲು ಒಪ್ಪುವುದು ಎರಡೂ ತಪ್ಪು ಎಂಬ ಅಭಿಪ್ರಾಯದ ಜೊತೆಗೆ ಸಾಕಷ್ಟು ಚರ್ಚೆಗಳಾಗುತ್ತವೆ. ಮಧ್ಯಮ ವರ್ಗದ ಕುಟುಂಬ, ಜೊತೆಗೆ ನಾಲ್ಕರ ಹೆಣ್ಣುಮಕ್ಕಳ ಮದುವೆಯನ್ನು ದೃಷ್ಠಿಯಲ್ಲಿಟ್ಟುಕೊಂಡ ತಂದೆ-ತಾಯಿ ಒಪ್ಪಿರುತ್ತಾರೆ. 


ರಾಮಮೂರ್ತಿ ತನ್ನ ಪತ್ನಿಯ ತೀವ್ರ ಅನಾರೋಗ್ಯದ ಕಾರಣಕ್ಕಾಗಿ ಬಹಳ ಹಿಂದೆಯೇ ಸದಾಶಿವ ಅವರಿಂದ ಹಣವನ್ನು ಸಾಲವಾಗಿ ಪಡೆದಿರುತ್ತಾರೆ. ಬಡ್ಡಿ ಇಲ್ಲದೆ ತೆಗೆದುಕೊಂಡಿದ್ದ ಹಣ. ಅವರಿಗೆ ವಾಪಸು ಕೊಡಬೇಕೆಂದುಕೊಂಡಾಗಲೆಲ್ಲಾ ಒಂದಲ್ಲಾ ಒಂದು ತಾಪತ್ರಯಗಳು ಅಥವಾ ಅವಶ್ಯಕತೆಗಳು ಬಂದು ಹಣ ನೀಡಲು ಆಗಿರುವುದಿಲ್ಲ. ಈಗ ಮತ್ತೊಬ್ಬರಿಂದ ಪಡೆದಾದರೂ ಆ ಹಣ ಕೊಡುತ್ತೇನೆಂದು ನಿಶ್ಚಯಿಸಿ, ಹಣವನ್ನು ಹೊಂದಿಸಿಕೊಂಡು ಹೊರಟರು. ರಾಮಮೂರ್ತಿಯವರು ಮದುವೆಗೆ ಹೊರಟದ್ದು ಮದುವೆಯ ಹಿಂದಿನ ದಿನದಂದು, ಸದಾಶಿವ ಅವರು ಅವರ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಕಾಯುತ್ತಾರಾದರೂ ರಾಮಮೂರ್ತಿಯವರು ಹಣದೊಂದಿಗೆ ಮದುವೆ ಮಂಟಪವನ್ನು ತಲುಪುವುದೇ ಇಲ್ಲ. 


ವರಪೂಜೆಯ ಹೊತ್ತಿಗೆ ಹಣ ಕೊಡುತ್ತೇನೆಂದು ಒಪ್ಪಿದ್ದರಾದರೂ... ರಾಮುಮೂರ್ತಿಯವರ ಮೇಲೆ ನಂಬಿಕೆ ಇಟ್ಟು ಎಲ್ಲಿಯೂ ಹಣ ಹೊಂದಿಸಲು ಹೋಗಿರಲಿಲ್ಲ. ಈಗ ಆ ಹಣವು ಕೈ ಸೇರದೆ ದಿಕ್ಕೇ ತೋಚದಂತಾಗಿದ್ದರು. ವರನ ತಂದೆ ನಿಷ್ಕರುಣಿಯಂತೆ ವಿವಾಹವನ್ನು ಮುರಿದು ನಡೆದಿದ್ದರು. ಶ್ರೀಕಾಂತನಿಗೆ ವನಜಾಳ ಮೇಲೆ ಮನಸ್ಸಿದ್ದರೂ ತಂದೆಯ ಮಾತು ಮೀರುವಂತಿರಲಿಲ್ಲ. 


ಈ ಸಂದರ್ಭದಲ್ಲಿ ಹೃದಯಾಘಾತವಾಗಿ ಸದಾಶಿವ ಅವರು ತೀರಿಹೋಗುತ್ತಾರೆ. ಕಾರಣಾಂತರದಿಂದ ರಾಜೇಶ್ ವಿವಾಹ ಮಂಟಪಕ್ಕೆ ಬಂದಿರುವುದಿಲ್ಲ. ತಂದೆ ಬರಲಿಲ್ಲವೆಂದು ತಿಳಿದು ಹುಡುಕಿಕೊಂಡು ಹೊರಟವನಿಗೆ ರಾಮಮೂರ್ತಿ ಅವರು ಸಿಕ್ಕಿದಾಗ ಅವರ ಪರಿಸ್ಥಿತಿ ಏನಿತ್ತು..? ಆ ಸಂದರ್ಭಕ್ಕೆ ಕಾರಣವೇನು..?


ತನ್ನಿಂದಲೇ ತನ್ನ ಗೆಳೆಯನ ಸಾವು ಸಂಭವಿಸಿ, ಆತನ ಮಗಳ ವಿವಾಹವು ಮುರಿದದ್ದು ತಿಳಿದು ಬಹಳವೇ ನೊಂದಿದ್ದರು. ಮಗನಿಂದ ಒಂದು ಭಾಷೆಯನ್ನು ಪಡೆದರು. ರಾಜೇಶ ಅವಳನ್ನೇ ವಿವಾಹವಾಗಲು ಹೇಳುತ್ತಾರೆ ಎಂದುಕೊಂಡರೆ.. ಅದು ತಪ್ಪು.. ಬದಲಾಗಿ, ನಾಲ್ವರು ಹೆಣ್ಣುಮಕ್ಕಳ ವಿವಾಹವಾಗಿ ಅವರು ಬದುಕು ದಡ ಮುಟ್ಟುವವರೆಗೂ ಆ ಮನೆಗೆ ಸಹಾಯಕನಾಗಿ ಇರಬೇಕೆಂದು. 


ಈ ಎಲ್ಲಾ ವಿಚಾರವನ್ನು ರಾಜೇಶ ಸರಸ್ವತಿ ಅವರ ಬಳಿ ಹೇಳಿದಾಗ ಅವರಿಂದ ಬಂದ ಪ್ರತಿಕ್ರಿಯೆ ಏನು..? ತನ್ನ ಗಂಡನ ಸಾವಿಗೆ ಕಾರಣರಾದವರ ಮಗನನ್ನು ಆಕೆ ಯಾವ ದೃಷ್ಟಿಯಿಂದ ನೋಡಿದರು..? ನಾಲ್ವರು ಹೆಣ್ಣು ಮಕ್ಕಳು ಆ ಪರಿಸ್ಥಿತಿಯಲ್ಲಿ ರಾಜೇಶನನ್ನು ಹೇಗೆ ಭಾವಿಸಿದರು..?


ಸದಾಶಿವ ಅವರ ಸಾವಿನ ನಂತರ ಆತನ ಕಡೆಯ ಬಂಧುಗಳಾಗಲಿ ಅಥವಾ ಸರಸ್ವತಿ ಅವರ ಕಡೆಯ ಬಂಧುಗಳಾಗಲಿ ಯಾರೂ ಇವರ ನೆರವಿಗೆ ನಿಂತಿರಲಿಲ್ಲ. ಬದಲಾಗಿ ' ಆ ಹೆಣ್ಣುಮಕ್ಕಳು ವೃದ್ಧ ಕನ್ಯೆಯರಾಗಿಯೇ ಸಾಯುತ್ತಾರೆ' ಎಂಬ ಕುಹಕದ ನುಡಿಗಳನ್ನು ಆಡಿದ್ದರು. ಅದು ಸರಸ್ವತಿಯವರು ಹಾಗೂ ಮಕ್ಕಳ ಮೇಲೆ ಪರಿಣಾಮ ಬೀರಿದ್ದು ಹೇಗೆ..?


ರಾಜೇಶ ಹಾಗೂ ರಶ್ಮಿಯ ನಡುವೆ ಇದೇ ವಿಚಾರಕ್ಕೆ ಭಿನ್ನಾಭಿಪ್ರಾಯ ಬಂದು ಅವರಿಬ್ಬರ ಪ್ರೇಮ ಮುರಿಯುತ್ತದೆ. ಇದಕ್ಕೆ ರಾಜೇಶನೇ ಕಾರಣ ಎಂದುಕೊಂಡರೆ ಅದು ತಪ್ಪಾಗುತ್ತದೆ. ಬದಲಾಗಿ, ರಶ್ಮಿಯ ತಂದೆ-ತಾಯಿಯ ಚಿತಾವಣೆ ಬೇರೆಯೇ ಇತ್ತು. ಇಲ್ಲಿ ರಶ್ಮಿಯನ್ನು ಮುಗ್ದೆ ಎನ್ನಬೇಕೇ ಅಥವಾ ಮೋಸಗಾತಿ ಎನ್ನಬೇಕೇ ಅಥವಾ ಸಮಯ ಸಾಧಕಿ ಎನ್ನಬೇಕೇ ನೀವೇ ಓದಿ ನೋಡಿ.


ಹೆಣ್ಣುಮಕ್ಕಳೇ ಗಂಡು ಮಕ್ಕಳಂತೆ ದುಡಿಯಲು ನಿಂತರೂ.. ಕೆಲವೊಂದು ವಿಚಾರಗಳಿಗೆ ರಾಜೇಶನ ನೆರವು ಬೇಕೆಂಬ ಸಂದರ್ಭಗಳು ಒದಗಿದವು. ಅಂತಹ ಸಮಯದಲ್ಲಿ ರಾಜೇಶನ ನಡೆ ಹೇಗಿತ್ತು..?


ತಂದೆಗೆ ಕೊಟ್ಟ ಮಾತಿನಂತೆ ನಡೆಯುವ ಅನಿವಾರ್ಯತೆ ಇಲ್ಲದಿದ್ದರೂ.. ರಾಜೇಶ ಬದುಕಿಲ್ಲದ ತನ್ನ ತಂದೆಯನ್ನು ತಾನು ಕೊಟ್ಟ ವಚನವನ್ನು ಪೂರ್ಣಗೊಳಿಸುವ ಮೂಲಕ ಬದುಕಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಬಹುಶಃ ಆತ ರಾಮಮೂರ್ತಿಯವರ ಮಾತನ್ನು ಪಾಲಿಸದೆ ಇದ್ದಿದ್ದರೆ ಏನಾಗುತ್ತಿತ್ತು..? ಇದಕ್ಕೆ ರಾಮಮೂರ್ತಿಯವರ ಇಬ್ಬರು ಹೆಣ್ಣು ಮಕ್ಕಳ ಪ್ರತಿಕ್ರಿಯೆ ಏನಿತ್ತು..?


ಇಲ್ಲಿ ರಾಜೇಶ್ ನಿಗೆ ರಶ್ಮಿ ಮಾತ್ರ ಗಗನ ಕುಸುಮವಾದಳೇ ? ಮತ್ತಾವ ಪ್ರಸಂಗ ಆತನನ್ನು ಹಾಗೆ ಯೋಚಿಸುವಂತೆ ಮಾಡುತ್ತದೆ..?


ಈ ಕಾದಂಬರಿಯ ಅಂತ್ಯ ಸುಖಾಂತ್ಯವೇ ಅಥವಾ ದುಃಖಾಂತ್ಯವೇ ಅಥವಾ ಎರಡನ್ನು ಮೀರಿದ ವಿಭಿನ್ನ ಅಂತ್ಯವೇ ನೀವೇ ಓದಿ ನೋಡಿ. 


ಈ ಕಾದಂಬರಿಯಲ್ಲಿ ತಂದೆ ಮಕ್ಕಳ ಬಾಂಧವ್ಯ, ತಾಯಿ ಮಕ್ಕಳ ಅನುಬಂಧ, ಹೆಣ್ಣುಮಕ್ಕಳ ಧೈರ್ಯ,ಸ್ಥೈರ್ಯ, ಯಾವುದಕ್ಕೂ ಜಗ್ಗದೆ, ಸಮಾಜದ ಕುಹಕಗಳಿಗೆ ತಲೆಕೆಡಿಸಿಕೊಳ್ಳದೆ, ಗಟ್ಟಿಯಾಗಿ ನಿಲ್ಲುವ ಹೆಣ್ಣುಮಕ್ಕಳ ಗಟ್ಟಿತನ ಇಷ್ಟವಾಗುತ್ತದೆ.


~ವಿಭಾ ವಿಶ್ವನಾಥ್

ಗಗನವೂ ಎಲ್ಲೊ ಭೂಮಿಯೂ ಎಲ್ಲೊ (ಪುಸ್ತಕ ಯಾನ - 400)


ಪುಸ್ತಕದ ಶೀರ್ಷಿಕೆ : ಗಗನವೂ ಎಲ್ಲೊ ಭೂಮಿಯೂ ಎಲ್ಲೊ

ಲೇಖಕರು : ಕೆ. ವಿ ರಾಜೇಶ್ವರಿ

ಪುಟಗಳು : 138

(ಉಳಿದ ವಿವರಗಳು ಲಭ್ಯವಿಲ್ಲ)


ಆಫೀಸಿನಲ್ಲಿ ರಜನಿ ಇಲ್ಲದೆ ಕರುಣಾ ಒಬ್ಬಂಟಿಯಾಗಿದ್ದಳು. ರಜನಿ ತನ್ನ ತಂಗಿಯ ಬಾಣಂತನ ಎಂದು ಮೂರು ತಿಂಗಳು ರಜೆ ಪಡೆದು ಅವಳ ಬದಲಿಗೆ ತಾತ್ಕಾಲಿಕವಾಗಿ ಮತ್ತೊಬ್ಬರನ್ನು ನೇಮಿಸಿ ಹೊರಟಿದ್ದಳು. ಅವಳು ಬರುವಷ್ಟರಲ್ಲಿ ಆಫೀಸಿನಲ್ಲಿ ಒಂದು ದೊಡ್ಡ ಬದಲಾವಣೆಯಾಗಿತ್ತು. 


ಮೊದಲಿದ್ದ ಡೈರೆಕ್ಟರ್ ಗೆ ಟ್ರಾನ್ಸ್ಫರ್ ಆಗಿ ಹೊಸ ಡೈರೆಕ್ಟರ್ ಬಂದಿದ್ದರು. ಅಷ್ಟೇ ಆಗಿದ್ದರೆ ಅದರಲ್ಲಿ ಏನೂ ಸ್ವಾರಸ್ಯವಿರುತ್ತಿರಲಿಲ್ಲ. ಆದರೆ, ಈಗ ಬಂದಿದ್ದವರು ತುಂಬಾ ಕಟ್ಟುನಿಟ್ಟಿನ ಮನುಷ್ಯ ಎಂಬ ವದಂತಿ ಹಬ್ಬಿತ್ತು. 


ಹೊಸದಾಗಿ ಬಂದಿದ್ದವರು ನಾಗರಾಜ್. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಅನ್ಯಾಯ, ಅಕ್ರಮ, ಮೈಗಳ್ಳತನಗಳನ್ನು ಸಹಿಸುತ್ತಿದ್ದವರಲ್ಲ. ವಯಸ್ಸಿನಲ್ಲಿ ಚಿಕ್ಕವರಾದರೂ.. ಕೆಲಸದಲ್ಲಿ ದಕ್ಷರಾಗಿದ್ದವರು. ಹೆಚ್ಚು ಮಾತನಾಡುವವರಲ್ಲ. ಮಾತಿಗಿಂತ ಕೃತಿಯ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದವರು. ಅಷ್ಟೇ ಅಲ್ಲದೆ.. ಕಷ್ಟದ ದುಡಿಮೆಯಿಂದ ಮಾತ್ರವೇ ಎಲ್ಲವನ್ನು ಸಾಧಿಸಬಹುದು ಎನ್ನುವ ವಿಶ್ವಾಸವಿಟ್ಟಿದ್ದ ಮನುಷ್ಯ. 


ಆದರೆ, ಹೊಸಬರು ಬಂದಾಗ.. ಹಳೆಯವರು ಹಾಗೂ ಹೊಸಬರ ನಡುವೆ ತುಲನೆ ಮಾಡುವುದು ಎಲ್ಲರಿಗೂ ಸರ್ವೇಸಾಮಾನ್ಯ. ಹಳೇ ಡೈರೆಕ್ಟರ್ ಆಗಿದ್ದವರು ಅಡ್ವಾನ್ಸ್ ಅಥವಾ ಪೇಮೆಂಟ್ ಗೆ ಯಾವತ್ತು ತಕರಾರು ಮಾಡಿದವರಲ್ಲ. ಅಹಂಕಾರವಿರಲಿಲ್ಲ. ಯಾರಿಗೂ ಬೈದವರಲ್ಲ, ತೊಂದರೆ ಮಾಡಿದವರೂ ಅಲ್ಲ. ರಜೆ ಕೇಳಿದರೆ ಸುಲಭವಾಗಿ ಮಂಜೂರಾಗುತ್ತಿತ್ತು. ದಿನದ ಹಾಜರಾತಿಯಲ್ಲಿ 15 ನಿಮಿಷ ರಿಯಾಯಿತಿ ಕೊಡುತ್ತಿದ್ದರು. ಹೀಗೆ ಹಳೆಯ ಹಾಗೂ ಹೊಸ ಡೈರೆಕ್ಟರ್ ರವರ ಗುಣಗಾನವಾಗುತ್ತಿತ್ತು. ಸುಮಾರು ಹತ್ತು ವರ್ಷದಿಂದ ಅವರೇ ಡೈರಕ್ಟರ್ ಆಗಿದ್ದರಿಂದ ಕೆಲಸಗಳು ಅಡೆತಡೆಯಿಲ್ಲದೆ ನಡೆಯುತ್ತಿದ್ದವು. 


ನಾಗರಾಜ್ ಪ್ರತಿಯೊಂದು ಸೆಕ್ಷನ್ನಿನ ಕೆಲಸದ ಬಗ್ಗೆ ತಿಳಿದುಕೊಂಡು, ಸಂಶಯಗಳನ್ನು ನಿವಾರಿಸಿಕೊಂಡು ನಂತರ ಸಮಸ್ಯೆಗಳಿಗೂ ಪರಿಹಾರವನ್ನು ಕೊಟ್ಟಾಗ ಎಲ್ಲರಿಗೂ ಖಾತ್ರಿಯಾಗಿತ್ತು. ಈತ ವಯಸ್ಸಿನಲ್ಲಿ ಚಿಕ್ಕವರಾದರೂ ಜ್ಞಾನದಲ್ಲಿ ಹಿರಿಯ ಎಂದು. ನಿಯಮಾವಳಿಗಳನ್ನು ನೋಡಿ ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದರು. 


ಲೋನ್ ಮತ್ತು ಫಂಡ್ ಸೆಕ್ಷನ್ನಿನ ಕೆಲಸದ ಬಗ್ಗೆ ತಪಾಸಣೆ ಆರಂಭಿಸಿದಾಗ ಅಲ್ಲಿನ ಗುಮಾಸ್ತೆ ನೀತಾ ವೈಯಕ್ತಿಕ ಜಗಳದಿಂದ ಒಬ್ಬರ ಅರ್ಜಿಯನ್ನು ಹರಿದು ಹಾಕಿದ್ದರು. ಅದರ ಕುರಿತು ತಿಳಿದಾಗ ತೆಗೆದುಕೊಂಡ ಕಟ್ಟನಿಟ್ಟಿನ ಕ್ರಮ ಕೈಗೊಂಡದ್ದು ಇವರ ಬಗ್ಗೆ ಮತ್ತಷ್ಟು ಭಯ ಮೂಡಿಸಿತ್ತು. ನೀತಾಳಂತೆ ಮೂರ್ನಾಲ್ಕು ಜನರಿಗೆ ಅಂತಹ ದೇಶ ಸಿಕ್ಕಾಗ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಅಚ್ಚುಕಟ್ಟಾಗಿ ತೊಡಗಿಸಿಕೊಂಡರು. ಲಂಚ ಕೇಳುವವರೆಗೂ ಇವರೆಂದರೆ ಸಿಂಹ ಸ್ವಪ್ನ ಎಂಬಂತಾಯಿತು. 


ಆದರೆ, ತಮ್ಮ ಕೆಲಸಕ್ಕೆ ಬರುವಾಗ ಹತ್ತು- ಹದಿನೈದು ನಿಮಿಷಗಳ ರಿಯಾಯಿತಿಯನ್ನೂ ಒಪ್ಪುತ್ತಿರಲಿಲ್ಲ. ಸಮಯಕ್ಕಿಂತ ಐದು ನಿಮಿಷ ಮುಂಚೆಯೂ ಬಿಡುವಂತಿರಲಿಲ್ಲ. ಕಟು ಮಾತುಗಳಿಂದಲೇ ತಪ್ಪನ್ನು ತೋರಿಸುತ್ತಿದ್ದರು. ಇವರ ಮೇಲಿನ ಭಯವೇ ಎಷ್ಟೋ ಬಾರಿ ಕೆಲಸಗಾರರು ತಪ್ಪುವಂತೆ ಮಾಡುತ್ತಿತ್ತು. ಸಿಕ್ ಲೀವ್ ಗಳನ್ನು ಪರಿಶೀಲನೆ ಮಾಡಿಯೇ ಕೊಡುತ್ತಿದ್ದದ್ದು. ರಜೆ ಅಷ್ಟು ಸುಲಭವಾಗಿ ಮಂಜೂರಾಗುತ್ತಿರಲಿಲ್ಲ. 


ಮೊದಲು ಅವರ ಪ್ರಾಮಾಣಿಕ ಕೆಲಸವನ್ನು ಮೆಚ್ಚಿಕೊಂಡವರೇ ಈಗ ಅವರ ಕಟ್ಟುನಿಟ್ಟಿನ ಕ್ರಮದಿಂದ ಆತನನ್ನು 'ಹಿಟ್ಲರ್' ಎಂದು ಕರೆಯುತ್ತಾ ದ್ವೇಷಿಸತೊಡಗಿದರು. 


ರಜನಿ ಆಫೀಸಿಗೆ ಬರುವಷ್ಟರಲ್ಲಿ ಇಷ್ಟು ಬದಲಾವಣೆಗಳಾಗಿದ್ದವು. ರಜನಿ ವಿಧವೆ, ಅಲ್ಲದೆ ಒಂದು ಮಗುವಿನ ತಾಯಿ. ವಯಸ್ಸಾದ ತಾಯಿಯನ್ನು ನೋಡಿಕೊಂಡು ಒಬ್ಬಂಟಿಯಾಗಿ ಎಲ್ಲವನ್ನೂ ಸರಿಪಡಿಸಿ ಆಕೆ ಬರುವಷ್ಟರಲ್ಲಿ ತಡವಾಗುತ್ತಿತ್ತು. ಅಲ್ಲದೆ, ಆಕೆಯೇ ನಾಗರಾಜ್ ಹೇಳಿದ ಡಿಕ್ಟೇಷನ್ ಗಳನ್ನು ಟೈಪ್ ಮಾಡಬೇಕಿದ್ದರಿಂದ ತಪ್ಪು ನುಸುಳಿಯೇ ಬಿಡುತ್ತಿದ್ದವು. ಕಟುಮಾತುಗಳನ್ನು ಕೇಳಬೇಕಾಗಿಯೇ ಬರುತ್ತಿತ್ತು. ತನ್ನ ತಾಯಿಗೆ ಸೀರಿಯಸ್ ಎಂದಾಗಲೂ ಬೇಗ ಕಳುಹಿಸಲು ಪರ್ಮಿಷನ್ ಕೊಡಲಿಲ್ಲ  ಅಲ್ಲದೆ, ಅವರು ತೀರಿಕೊಂಡಾಗ ದುಃಖದಲ್ಲಿ ರಜಾ ಅರ್ಜಿಯನ್ನು ಕೊಡಲು ಮರೆತು ಹೋದಾಗ ಆಕೆಗೆ ಬಂದದ್ದು ಸಸ್ಪೆನ್ಷನ್ ಆರ್ಡರ್. 


ಡೈರೆಕ್ಟರ್ ನ ಈ ನೀತಿಯನ್ನು ಖಂಡಿಸಿ ಯೂನಿಯನ್ ಲೀಡರ್ ಗಳು ಹಾಗೂ ಕಾರ್ಮಿಕರೆಲ್ಲರೂ ಸೇರಿ ವಿಭಿನ್ನವಾಗಿ ವಿರೋಧಿಸಲು ಶುರು ಮಾಡಿದರು. ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಆ ವಿಭಿನ್ನವಾದ ಪ್ರತಿಭಟನೆ ಹೇಗಿತ್ತು..? ಇದಕ್ಕೆಲ್ಲಾ ರಜನಿ ಕಾರಣಳೇ..? 


ಆ ಪ್ರತಿಭಟನೆಯ ಕಾರಣವನ್ನು ಕೇಳಿದ ನಾಗರಾಜನಿಗೆ ಹೇಳಬೇಕಿದ್ದ ಮಾತುಗಳನ್ನು ಹೇಳಲು ಸಾಧ್ಯವಾಗದೆ ಹೋದದೇಕೆ..? ನಾಗರಾಜನ ಮನಸ್ಥಿತಿ ಏನಿತ್ತು..?


ಪ್ರತಿಭಟನೆ ನಡೆದ ಮರುದಿನವೇ ನಾಗರಾಜ್ ತನ್ನ ತಾಯಿ ಕೊಟ್ಟ ಟೆಲಿಗ್ರಾಂನಿಂದ ಊರಿಗೆ ಹೋಗಬೇಕಾಗಿ ಬರುತ್ತದೆ. ಅವರ ಮನೆಯ ಪರಿಸ್ಥಿತಿ ಹೇಗಿತ್ತು..?


ಆಫೀಸ್ ನಲ್ಲಿ ಮಾತ್ರವಲ್ಲದೆ,ಮನೆಯಲ್ಲಿಯೂ ತನ್ನ ತಂಗಿ ಜಲಜಾಳಿಂದ ಆತ ಕಟು ಮನಸ್ಥಿತಿಯವನು ಎಂಬ ಮಾತು ಕೇಳಲು ಕಾರಣವೇನು..? 


ಆಫೀಸು ಹಾಗೂ ಮನೆಯ ಪರಿಸ್ಥಿತಿ ಎರಡು ಸೇರಿ ನಾಗರಾಜನನ್ನು ಜರ್ಜರಿತವಾಗಿಸಿದಾಗ ಸಹಾಯಕ್ಕೆ ನಿಂತವರಾರು..?


ಮುಂದಿನ ದಿನಗಳಲ್ಲಿ ಆತನ ಕಟು ವರ್ತನೆ ಬದಲಾಯಿತೇ ಅಥವಾ ಇದು ಮತ್ತಷ್ಟು ಕಠಿಣವಾಯಿತೇ..?


ಕೆಲಸದ ಕಟ್ಟುನಿಟ್ಟು, ಪ್ರಾಮಾಣಿಕತೆ ಜೊತೆಗೆ ಮಾನವೀಯತೆ ಎಷ್ಟಿರಬೇಕು ಎಂದು ಹೇಳುವ ಕಾದಂಬರಿ ಇದು. ಈ ಕಾದಂಬರಿಯ ಶೀರ್ಷಿಕೆ ಮತ್ತೊಂದು ಕಥೆಯನ್ನೇ ಹೇಳುತ್ತದೆ. ಇಲ್ಲಿ ಗಗನ ಹಾಗೂ ಭೂಮಿಯಂತಿದ್ದವರು ಯಾರು..? ಅಂತಹ ಎರಡು ಮನಸ್ಥಿತಿಗಳು ಒಂದಾಗಲು ಸಾಧ್ಯವೇ..? ಓದಿ ನೋಡಿ.


ಮನುಷ್ಯನ ಮನಸ್ಥಿತಿ, ಪರಿಸ್ಥಿತಿ, ಆತ ಬೆಳೆದು ಬಂದ ವಾತಾವರಣ, ವೈಯಕ್ತಿಕ ಸ್ಥಿತಿಗತಿಗಳು ಎಲ್ಲವೂ ಮನುಷ್ಯನನ್ನು ರೂಪಿಸುತ್ತವೆ. ಕಷ್ಟಗಳು ಅವರನ್ನು ಮೆದುವಾಗಿಸಬಹುದು ಅಥವಾ ಮತ್ತಷ್ಟು ಕಠಿಣವಾಗಿಸಲುಬಹುದು. ಅದು ಆಯಾ ಮನುಷ್ಯನ ಮೇಲೆ ಅವಲಂಬಿತ. ಆದರೆ, ತಿದ್ದಿಕೊಳ್ಳುವ ಮನಸ್ಥಿತಿ ಇದ್ದವರು ಮಾತ್ರ ಬದಲಾಗಬಲ್ಲರು. ಅಂತಹ ಬದಲಾವಣೆ ಅಷ್ಟು ಸುಲಭವಲ್ಲ. ಸಮಾಜದ ನಾನಾ ಮುಖಗಳ ಚಿತ್ರಣವನ್ನು ತೋರಿಸುವ ಕಾದಂಬರಿ ಇದು.

~ವಿಭಾ ವಿಶ್ವನಾಥ್