ಭಾನುವಾರ, ಮೇ 10, 2026

ಶಾಂತಿ ನಿಲಯ (ಬೆಳಕಿಂಡಿಯ ಕತೆಗಳು - 15)


"ಹೊಸ ಮನೆ ಕಟ್ಟಿಸುತ್ತಿದ್ದೇವಲ್ಲಾ..ಆ ಮನೆ ಕಟ್ಟಿಸಿದ ನಂತರ ಆ ಮನೆಗೊಂದು ಸುಂದರವಾದ ಹೆಸರಿಡಬೇಕು. ಶಾಂತಿ ನಿಲಯ ಎಂದು ಇಟ್ಟರೆ ಹೇಗೆ..??" ಎಂಬ ಪ್ರಶ್ನೆಗೆ ಇಡೀ ಮನೆಯಲ್ಲಿ ಗುಸು ಗುಸು ಆರಂಭವಾಗಿ ನಕಾರಾತ್ಮಕ ಉತ್ತರವೇ ದೊರೆತದ್ದು. ಅಪ್ಪನಿಗೆ ಬೇಸರವಾಗುತ್ತದೆ ಎಂಬ ಕಾರಣ ನೀಡಿದ್ದರು.


ಮನೆಯ ಹಿರಿ ಮಗಳ ಹೆಸರು ಅದು. ಅವಳು ಓಡಿ ಹೋಗಿ ಮದುವೆಯಾಗಿ ವರ್ಷಗಳೇ ಕಳೆದಿವೆ. ಆದರೂ, ಯಾರಿಗೂ ಅವಳ ಮೇಲೆ ಕೋಪ ತಣಿದಿಲ್ಲ. ಅಂತಹದರಲ್ಲಿ ಈ ಪ್ರಸ್ತಾಪ ಯಾರಿಗೂ ಸುತಾರಾಂ ಇಷ್ಟವಾಗಲಿಲ್ಲ. ಕೊನೆಗೆ, ಅಪ್ಪನ ಮಾತು ಎಲ್ಲರಿಗೂ ಒಪ್ಪಿಗೆಯಾಯಿತು. "ತಪ್ಪು ಮಾಡಿದವಳಿಗೆ ನಾನು ಶಿಕ್ಷೆ ಕೊಡುತ್ತಿದ್ದೇನೆ ಎಂದುಕೊಂಡು ನಾವೆಲ್ಲರೂ ಶಿಕ್ಷೆ ಅನುಭವಿಸಿದ್ದು ಸಾಕು. ಈ ಮನೆಯಲ್ಲಿ ಶಾಂತಿ ನೆಲಸಲಿ. ಮನೆಗೆ ಶಾಂತಿ ನಿಲಯ ಎಂದೇ ಹೆಸರಿಟ್ಟು ಅವಳನ್ನು ವಾಪಾಸ್ ಕರೆದುಕೊಂಡು ಬರೋಣ" ಎಂದಾಗ ತುಂಬು ಕುಟುಂಬದಲ್ಲಿ ಕಳೆದುಹೋಗಿದ್ದ ಪ್ರಶಾಂತತೆ ವಾಪಾಸ್ ದೊರೆತಿತ್ತು. ಮನೆ ಎಂದರೆ ಜನಗಳ ಒಗ್ಗೂಡುವಿಕೆ ಮಾತ್ರವಲ್ಲ.. ಮನಗಳ ಒಗ್ಗೂಡುವಿಕೆಯೂ..


~ ವಿಭಾ ವಿಶ್ವನಾಥ್

ತಪೋಭಂಗ (ಬೆಳಕಿಂಡಿಯ ಕತೆಗಳು - 14)


"ಓದು ಅಥವಾ ಬರವಣಿಗೆ ತಪಸ್ಸಿನಂತೆ.. ಏಕಾಂತದಲ್ಲಿ ಕುಳಿತು ಬರೆಯಲು ಶುರು ಮಾಡಬೇಕು" ಎಂದುಕೊಂಡು ಬರೆಯಲು ಕುಳಿತಾಗಲೆಲ್ಲಾ ವಿಷಯವೇ ಹೊಳೆಯದೇ ಎದ್ದದ್ದಿದೆ. ಆದರೆ , ಈ ಬಾರಿ ತಲೆಯಲ್ಲಿ ವಿಷಯದ ಹೊಳೆಯೇ ಪ್ರವಾಹದಂತೆ ಮುನ್ನುಗ್ಗಿ ಬರುತ್ತಿತ್ತು. ಸರಿ, ಎಲ್ಲರೂ ಅವರವರ ಪಾಡಿಗೆ ಎಲ್ಲೆಲ್ಲೋ ಹೋಗಿದ್ದಾರೆ ಇದೇ ಸರಿಯಾದ ಸಮಯ.. ಬರೆಯೋಣ, ಎಂದು ತಪಸ್ಸಿಗೆ ಕುಳಿತವಳ ಹಾಗೆ ಬರೆಯಲು ಕುಳಿತರೆ ಒಮ್ಮೆ ಕಸದ ಆಟೋ ಸದ್ದು, ಮತ್ತೊಮ್ಮೆ ಡೋರ್ ಬೆಲ್ ಸದ್ದು, ಮತ್ತೊಮ್ಮೆ ಫೋನ್ ರಿಂಗ್ ಆಗುತ್ತಿತ್ತು ಹೋಗಿ ನೋಡಿದರೆ ಮೊಬೈಲ್ ಕಂಪೆನಿಯವರ ಕರೆ. ಈ ಕರೆಕರೆಗಳಿಂದೆಲ್ಲಾ ತಪ್ಪಿಸಿಕೊಂಡು ಮನೆಗೆಲಸ ಮುಗಿಸಿ ಬರೆಯಲು ಕುಳಿತರೆ ಈ ಬಾರಿ ದೊಡ್ಡ ಕಿಡಿಗೇಡಿ ಇದನ್ನು ತಪ್ಪಿಸಲೆಂದೇ ಬಂದಂತಿತ್ತು.


ಮಗುವಿನ ಬಾಲಲೀಲೆಯನ್ನು ಬದಿಗಿರಿಸಿ ಬರೆಯುವುದಾದರೂ ಹೇಗೆ..?? ಅದರ ನಗುವೇ ಒಂದು ಮಹಾಕಾವ್ಯವಲ್ಲವೇ..


~ ವಿಭಾ ವಿಶ್ವನಾಥ್

ಸಮಯ ನಮ್ಮದು.. (ಬೆಳಕಿಂಡಿಯ ಕತೆಗಳು - 13)


"ಬರವಣಿಗೆ ಇತ್ತೀಚೆಗೆ ಕುಂಟುತ್ತಾ ಸಾಗುತ್ತಿದೆ. ಕೆಲವೊಮ್ಮೆ ಬರೆಯಲು ಸಾಧ್ಯವೇ ಆಗುವುದಿಲ್ಲ" ಎನ್ನುತ್ತಾ ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದಾಗ ಅಮ್ಮ " ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ.. ನಿನ್ನ ಸಮಯವನ್ನು ನೀನೇ ಹೊಂದಿಸಿಕೊಳ್ಳಬೇಕು ಬದಲಾಗಿ ಅದನ್ನು ಮತ್ತಾರೋ ನಿನಗಾಗಿ ಹೊಂದಿಸಿಕೊಡಲು ಸಾಧ್ಯವಿಲ್ಲ.


ಸದಾ ಕೂತೇ ಇರುವವರಿಗೂ, ದುಡಿಮೆ ಮಾಡುವವರಿಗೂ ದಿನದಲ್ಲಿ ಇರುವುದು 24 ಗಂಟೆಯೇ.. ಸಮಯ ಎಲ್ಲರಿಗೂ ಒಂದೇ. ಅದನ್ನು ಹೊಂದಿಸಿಕೊಳ್ಳಬೇಕಾಗಿರುವುದು ನಾವು. ಏಕೆಂದರೆ, ಆ ಸಮಯ ನಮ್ಮದು, ಕೇವಲ ನಮ್ಮದಷ್ಟೇ. ಅದನ್ನು ಜತನವಾಗಿ ಕಾಯ್ದುಕೊಂಡು ಜಾಣ್ಮೆಯಿಂದ ಉಪಯೋಗಿಸಿಕೊಳ್ಳುವುದು ಅಥವಾ ಪೋಲು ಮಾಡುವುದರ ಆಯ್ಕೆ ನಮ್ಮದು" ಎಂದಾಗ ಅಮ್ಮನ ಮಾತನ್ನು ಅಕ್ಷರಕ್ಕಿಳಿಸಲು ನಿರ್ಧರಿಸಿ ವಾಪಾಸ್ ಹೋಗುವಾಗ ಬಸ್ಸಿನಲ್ಲಿ ಟೈಪಿಸುತ್ತಾ ಮತ್ತೊಬ್ಬರಿಗೂ ತಲುಪಿಸಿದಳು.


~ ವಿಭಾ ವಿಶ್ವನಾಥ್

ಪ್ರತಿಭೆಯ ಅನಾವರಣ (ಬೆಳಕಿಂಡಿಯ ಕತೆಗಳು - 12)


" ಇಲ್ಲ ಅಮ್ಮ, ನನ್ನಲ್ಲಿ ಅಷ್ಟು ಧೈರ್ಯವಿಲ್ಲ. ಅದರಲ್ಲೂ ವೇದಿಕೆಯಲ್ಲಿ ಎಲ್ಲರ ಎದುರಿನಲ್ಲಿಯೂ ನಿಂತು ಹಾಡುವಷ್ಟು.. ಪ್ಲೀಸ್ ಅಮ್ಮ ಇದಕ್ಕೆಲ್ಲಾ ಒಪ್ಪಿಕೊಳ್ಳಬೇಡ. ನಾನಂತೂ ಹಾಡುವುದಿಲ್ಲ " ಎಂದು ಗೋಗರೆಯುತ್ತಾ ಹೇಳಿ ಹೇಳಿ ಸಾಕಾಗಿತ್ತು ಶ್ರಾವಣಿಗೆ. ಅಮ್ಮ ದೀಪ್ತಿಯಂತೂ ಅವಳ ಮಾತಿಗೆ ಸೊಪ್ಪು ಹಾಕದೆ "ನೀನು ಹಾಡಲೇ ಬೇಕು, ಹಾಡುತ್ತೀಯ ಅಷ್ಟೇ.. " ಎಂದು ಖಡಾಖಂಡಿತವಾಗಿ ಹೇಳಿದ್ದರು.


"ನೋಡು ಪುಟ್ಟಿ, ಎಷ್ಟೋ ಜನರಿಗೆ ಪ್ರತಿಭೆ ಇರುತ್ತದೆ. ಆದರೆ, ಅನಾವರಣಗೊಳ್ಳಲು ವೇದಿಕೆಯ ಕೊರತೆ. ಮತ್ತೆ ಹಲವರಿಗೆ ವೇದಿಕೆ ಸಿಕ್ಕರೆ ಪ್ರತಿಭೆಯ ಕೊರತೆ. ನಿನಗೆ ಒಳ್ಳೆಯ ವೇದಿಕೆ ಸಿಕ್ಕಿದೆ, ಅದೂ ನಿನ್ನ ಪ್ರತಿಭೆಯ ಫಲವಾಗಿ. ಭಯಪಡದೆ ಅದನ್ನು ಉಪಯೋಗಿಸಿಕೊಂಡು ಬೆಳೆ. ಮೊದಲಿಗೆ ಕಣ್ಮುಚ್ಚಿ ತನ್ಮಯತೆಯಿಂದ ಹಾಡು ನಂತರ ಅದೇ ಅಭ್ಯಾಸವಾಗುತ್ತದೆ. ಕೃಷ್ಣನ ಮುಂದೆ ತನ್ಮಯತೆಯಿಂದ ಹಾಡುವವಳಿಗೆ ಇದು ಲೆಕ್ಕವೇ" ಎಂದು ಧೈರ್ಯ ಹೇಳಿದ ಫಲವಾಗಿ ಉತ್ತಮ ಗಾಯನ ಪ್ರತಿಭೆಯಾಗಿ ಅನಾವರಣವಾಗಿದ್ದಾಳೆ ಶ್ರಾವಣಿ.


~ವಿಭಾ ವಿಶ್ವನಾಥ್

ವಿಧೇಯತೆಗೆ ಸಿಕ್ಕ ಫಲ (ಬೆಳಕಿಂಡಿಯ ಕತೆಗಳು - 11)


'ಈ ಮನೆಯ ಮುಂದಿನ ಒಂದು ಎಕರೆ ಹೊಲ ನನ್ನ ನಂತರ ರಾಮನಿಗೆ ಸೇರಬೇಕು' ಎಂದು ಅಜ್ಜ ಮಾಡಿಟ್ಟ ವಿಲ್ ನೋಡಿ ಎಲ್ಲರಿಗೂ ಕೋಪ ಬಂದಿತ್ತು ಜೊತೆಗೆ ಅಚ್ಚರಿಯಾಗಿತ್ತು. ಅದಕ್ಕಿಂತ ಅಚ್ಚರಿಯಾಗಿದ್ದು ಕೆಲಸದ ರಾಮನ ಪ್ರತಿಕ್ರಿಯೆ ಕಂಡು "ನನಗಿದು ಬ್ಯಾಡ ಅಯ್ಯಾ.. ಅಯ್ಯನವರ ಸೇವೆ ಮಾಡಿದ ಪುಣ್ಯವೇ ಸಾಕು " ಎನ್ನುತ್ತಿದ್ದವನನ್ನು ಕಂಡಾಗ ಅಜ್ಜ ಮಾಡಿದ್ದು ಸರಿಯಾಗಿಯೇ ಇದೆ ಎಂದೆನಿಸಿತು.


ಅಪ್ಪ, ದೊಡ್ಡಪ್ಪ ಎಲ್ಲರಿಗೂ ಅಜ್ಜನ ವಿಲ್ ಖುಷಿ ತಂದಿತ್ತು. ತಾವೆಲ್ಲರೂ ದೂರದ ಊರಿನಲ್ಲಿ ಇದ್ದಾಗ ತಮ್ಮ ಅಪ್ಪನ ಸೇವೆಯನ್ನು ವಿಧೇಯತೆಯಿಂದ ಮಾಡಿದವನಿಗೆ ಹಣ ಕೊಟ್ಟರೂ ಸ್ವೀಕರಿಸಿರಲಿಲ್ಲ. 

ಅಜ್ಜನಿಗೂ ಬಹುಶಃ ಗೊತ್ತಿದ್ದಿರಬೇಕು. ಅಂತೂ ತಮ್ಮ ವಿಧೇಯ ಮಗನಲ್ಲದ ಮಗನಿಗೂ ಆಸ್ತಿಯಲ್ಲಿ ಭಾಗ ಕೊಟ್ಟಿದ್ದರು.

ಪ್ರತಿಫಲ ಬಯಸದೆ ವಿಧೇಯತೆಯಿಂದ ಸೇವೆ ಮಾಡಿದ್ದಕ್ಕೆ ಅಂತೂ ಫಲ ಸಿಕ್ಕಿತ್ತು


~ವಿಭಾ ವಿಶ್ವನಾಥ್

ಮಿಲನ (ಪುಸ್ತಕ ಯಾನ - 444)


ಪುಸ್ತಕದ ಶೀರ್ಷಿಕೆ : ಮಿಲನ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್ 

ಮರು ಮುದ್ರಣ : 2025

ಪುಟಗಳು : 170

ಬೆಲೆ : 210 ರೂ.


ಎಷ್ಟೋ ಬಾರಿ ಮತ್ತೊಬ್ಬರ ಬದುಕನ್ನು ನೋಡಿ "ನಾವು ಆ ಬದುಕನ್ನು ಅನುಭವಿಸಬೇಕು." "ಆ ಬದುಕು ಎಷ್ಟು ಚಂದವಲ್ಲವೇ..?!" ಎನ್ನುವ ಭಾವನೆ ಹುಟ್ಟಿರುತ್ತದೆ. ನಾವು ಬದುಕುತ್ತಿರುವ ಬದುಕು ಸಹ ಬೇರೊಬ್ಬರ ಕನಸಾಗಿರಬಹುದು. ಮತ್ತೊಬ್ಬರ ಬದುಕು ಚೆಂದ ಎಂದುಕೊಳ್ಳುವ ನಮ್ಮ ಬದುಕು ಸಹ ಮತ್ತೊಬ್ಬರ ಕಣ್ಣಿಗೆ ಚೆಂದವೇ..!


ದುಡಿಯುವ ಹೆಣ್ಣಲ್ಲಿ.. ತಾನು ಮನೆಯಲ್ಲಿದ್ದು ಸುಂದರ ಕುಟುಂಬ, ಉತ್ತಮ ಗೃಹಿಣಿಯಾಗಿ ಬಾಳುವ ಕನಸು ಹುಟ್ಟಿಸಿದರೆ.. ಮನೆಯಲ್ಲಿರುವ ಗೃಹಿಣಿಗೆ ಮನೆಯ ಬಂಧನದಿಂದ ಹೊರಬಂದು ತನ್ನ ಖರ್ಚಿಗೆ ಬೇಕಾಗುವಷ್ಟು ಹಣವನ್ನು ತಾನೇ ದುಡಿದು, ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ತನ್ನ ಆಸೆಗಳನ್ನು ಪೂರೈಸಿಕೊಳ್ಳುವ ಬಯಕೆ. ಇಂತಹ ಇಬ್ಬರು ಹೆಣ್ಣು ಮಕ್ಕಳು ಈ ಕಾದಂಬರಿಯಲ್ಲಿ ಕಾಣುತ್ತಾರೆ. ಅವರೇ ಕ್ಷಮ ಮತ್ತು ವಿಶಾಲಿ. 


ಈ ಕಾದಂಬರಿಯ ಶೀರ್ಷಿಕೆಗೆ ಇದು ಪೂರಕವಾಗಿ ಸಾಗುವ ಕಥೆ. ಪ್ರಣಯ, ಪ್ರೀತಿಯ ಶೀರ್ಷಿಕೆಯನ್ನು ಹೊಂದಿರುವ ಈ ಕಥೆಯಲ್ಲಿ ಪ್ರೇಮವೂ ಇದೆ ಹಾಗೂ ಸಮಾಜದಲ್ಲಿ ಕಾಣುವ ಮುಖವಾಡದ ವಂಚಕ ಪ್ರೇಮಿಗಳ ಬದುಕು ಸಹ ಇದೆ. ಈ ಕಾದಂಬರಿ 1970-80ರ ದಶಕದಲ್ಲಿಯೇ ಎರಡು ಮುದ್ರಣವನ್ನು ಕಂಡು ಈಗ ಸಾಹಿತ್ಯಲೋಕ ಪಬ್ಲಿಕೇಷನ್ ನಿಂದ ಮರುಮುದ್ರಣಗೊಂಡಿದೆ. 


ಚಿತ್ರಲೇಖ ಮೇಡಂ ಈ ಕಥೆ ಹುಟ್ಟಿದ ಹಿನ್ನೆಲೆಯನ್ನು ಹೀಗೆ ಹೇಳುತ್ತಾರೆ. ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾಗ 23 ದಿನಗಳ ಆಸ್ಪತ್ರೆ ವಾಸದಲ್ಲಿ ರೂಪುಗೊಂಡ ಏಕೈಕ ಕಾದಂಬರಿ ಇದು. ಆಗ ಅಲ್ಲಿ ಭೇಟಿಯಾದ ತರುಣಿಯೊಬ್ಬಳು ಅಳುತ್ತಿರುವುದನ್ನು ಕಂಡಿದ್ದರು. ಕುತೂಹಲದಿಂದ ವಿಚಾರಿಸಿದಾಗ ಆ ತರುಣಿಯ ಹಿಂದಿನ ಪ್ರೇಮಿ ಅಪಘಾತಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದನು. ಹೌದು, ಹಿಂದಿನ ಪ್ರೇಮಿಯೇ.. ಈಗಾಗಲೇ ಆತನಿಗೆ ಮದುವೆಯಾಗಿತ್ತು. ಈಕೆಗೆ ಮೋಸ ಮಾಡಿ ಮದುವೆಯಾದವನನ್ನು ಕುರಿತು ಆಕೆಗೆ ಕಾಳಜಿ. ಆ ಯುವತಿಯ ಮನಸ್ಥಿತಿ ಲೇಖಕಿಯಲ್ಲಿ ಕೋಪ, ಮರುಕ ಅಸಹ್ಯದ ತಾಕಲಾಟ ಹುಟ್ಟಿಸಿತ್ತು. ಆಗ ರೂಪುಗೊಂಡು ಕಾದಂಬರಿ ಇದು ಎನ್ನುತ್ತಾರೆ.


ಮೊದಲಿಗೆ ಕ್ಷಮಳ ಆಫೀಸಿನಲ್ಲಿ ಸಾವಿತ್ರಿಯ ಸಂಸಾರದ ಚಿತ್ರಣ ಕಾಣುತ್ತದೆ. ಸಂಪಾದಿಸಿದ ಹೆಣ್ಣು ಬೇಕು ಎಂದು ಮದುವೆಯಾಗಿದ್ದ ಸಾವಿತ್ರಿಯ ಗಂಡ ಆಕೆಯ ಕಾಳಜಿ ತೆಗೆದುಕೊಳ್ಳಲು ಸಿದ್ಧವಿರಲಿಲ್ಲ. ಗರ್ಭಿಣಿಯಾಗಿದ್ದ ಅವಳ ಆರೋಗ್ಯದ ಸ್ಥಿತಿಯನ್ನು ಅವಳೇ ನೋಡಿಕೊಳ್ಳಬೇಕಿತ್ತು. ಆಗ ಕ್ಷಮಳ ಬಳಿಯಲ್ಲಿ ಹಣದ ಸಹಾಯ ತೆಗೆದುಕೊಂಡಿದ್ದಳು. ವಿಪರ್ಯಾಸವೆಂದರೆ, ಸಾವಿತ್ರಿ ಉಳಿಯಲಿಲ್ಲ. ಹಾಗೆಂದು ಕ್ಷಮಳ ಹಣವನ್ನು ಋಣವನ್ನು ಆಕೆ ಇಟ್ಟುಕೊಳ್ಳಲಿಲ್ಲ. ಆದರೆ, ಅಸಹ್ಯ ತರಿಸಿದೆಂದರೆ ಸಾವಿತ್ರಿಯ ಸಾವಿನ ಕಂಬನಿ ಆರುವ ಮುನ್ನವೇ ಆಕೆಯ ಗಂಡ ಆಕೆಯ ಇನ್ಸೂರೆನ್ಸ್ ಹಣದ ಕುರಿತಾಗಿ ವಿಚಾರಿಸಿದ್ದು. ಕ್ಷಮಳ ಮನಸ್ಸಿನಲ್ಲಿ ವಿವಾಹಿತರ ಕುರಿತು ಹಾಗೂ ಅವಿವಾಹಿತೆಯಾದ ತನ್ನ ಕುರಿತು ಹುಟ್ಟುವ ಆಲೋಚನೆಗಳ ಕುರಿತು ಓದಿ ನೋಡಿ. 


ವಿಶಾಲಿಯ ವಿವಾಹವಾಗಿತ್ತು. ದೊಡ್ಡ ಮನೆ, ಸೌಕರ್ಯವಾದ ಬಾಳು. ಆದರೂ ಅವಳಿಗೆ ಬದುಕು ಶೂನ್ಯವೆನಿಸುತ್ತಿತ್ತು. ತಾನು ಬಾಡಿಗೆಗಿದ್ದ ಎದುರು ಮನೆಯಿಂದ ಕೆಲಸಕ್ಕೆ ಹೋಗುವ ಹುಡುಗಿಯನ್ನು ವೀಕ್ಷಿಸುತ್ತಿದ್ದಳು ಅವಳು. ಆ ಹುಡುಗಿಯೇ ಕ್ಷಮ. ಶೀಘ್ರ ಲಿಪಿಕಾರಳಾಗಿ ಆಫೀಸಿನಲ್ಲಿ ದುಡಿಯುತ್ತಿದ್ದ ಹೆಣ್ಣು. ತಂಗಿ ಕ್ಷೀರ, ಅಮ್ಮ ಹಾಗೂ ತಮ್ಮನನ್ನು ತನ್ನ ಹಣದಿಂದ ಸಾಕುತ್ತಿದ್ದಳು. ಪುಟ್ಟ ತಮ್ಮ ಹೊಟ್ಟೆಯಲ್ಲಿದ್ದಾಗಲೇ ತೀರಿಹೋಗಿದ್ದ ಅವಳ ಅಪ್ಪನ ಜಾಗದಲ್ಲಿ ನಿಂತು ಅವಳು ಕರ್ತವ್ಯ ನಿರ್ವಹಿಸುತ್ತಿದ್ದಳು. ಹೀಗಾಗಿ ಸೋದರತ್ತೆಯ ಮಗ ಗೋಪುವಿನ ಜೊತೆಗೆ ಆಗಬೇಕಾಗಿದ್ದ ವಿವಾಹವೂ ಆಗಲಿಲ್ಲ. ಕ್ಷಮ ತನ್ನ ಮನೆಯನ್ನು ನಡುನೀರಿನ ಪರಿಸ್ಥಿತಿಯಲ್ಲಿ ಬಿಟ್ಟು ಹೊರಡಲು ಸಿದ್ದಳಿರಲಿಲ್ಲ. ದುಡಿಯುವ ಹೆಣ್ಣು ತವರಿಗೆ ಸಹಾಯ ಮಾಡುವುದನ್ನು ಗಂಡಿನ ಮನೆಯವರು ಒಪ್ಪಲು ಸಿದ್ಧವಿರಲಿಲ್ಲ. ಇದು ಗೋಪು ಒಬ್ಬನ ಕಥೆಯಲ್ಲ. ಹೆಚ್ಚಿನವರ ಕಥೆ ಹಾಗೆಯೇ ಇತ್ತು. ಆದರೆ, ಇದಾವುದಕ್ಕೂ ಕುಗ್ಗದೆ, ಮನಸ್ಸನ್ನು ಚಿಕ್ಕದು ಮಾಡಿಕೊಳ್ಳದೆ ಕೇವಲ ಆಫೀಸಿನಲ್ಲಿ ಮಾತ್ರವಲ್ಲದೆ ಸಂಜೆ ಪಾರ್ಟ್ ಟೈಮ್ ಕೆಲಸವನ್ನೂ ಮಾಡಿ ಸಂಸಾರವನ್ನು ಪೋಷಿಸುತ್ತಿದ್ದ ದಿಟ್ಟ ಹುಡುಗಿ ಕ್ಷಮ. 


ವಿಶಾಲಿಯದ್ದು ಮತ್ತೊಂದು ತರಹದ ಕಥೆ. ವಿಶಾಲಿಯ ತಾಯಿ ಅವಳು ಚಿಕ್ಕಂದಿನಿಂದಾಗಲೇ ತೀರಿಹೋಗಿದ್ದರು. ಅವಳ ತಂದೆ ಎರಡನೇ ಮದುವೆಯಾಗಿದ್ದರು. ಹಾಗೆಂದು ಚಿಕ್ಕಮ್ಮ ಆಕೆಯನ್ನು ಕಡೆಗಣಿಸಿರಲಿಲ್ಲ. ಗಂಡು ಮಕ್ಕಳಿದ್ದ ಆಕೆಗೆ ಮಗಳಾಗಿ ವಿಶಾಲಿ ಇದ್ದಳು. ವಿಶಾಲಿಯ ಸ್ವಂತ ತಾಯಿಯ ತಮ್ಮನ ಮಗ ಭಾಸ್ಕರನಿಗೆ ವಿಶಾಲಿ ಎಂದು ಯಾವಾಗಲೋ ತೀರ್ಮಾನವಾಗಿದ್ದ ಮಾತನ್ನು ತಂಗಿ ಸತ್ತಳೆಂದು ಅವರು ಕಳೆದುಕೊಂಡಿರಲಿಲ್ಲ. ಭಾಸ್ಕರ ಹಾಗೂ ವಿಶಾಲಿಯರ ವಿವಾಹವಾಗಿತ್ತು. ಭಾಸ್ಕರ ಪೂರ್ಣಸಮ್ಮತಿಯಿಂದೇನೂ ಈ ವಿವಾಹಕ್ಕೆ ಒಪ್ಪದಿದ್ದರೂ.. ವಿವಾಹದ ನಂತರ ವಿಶಾಲಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. 


ವಿಶಾಲಿ ಹಾಗೂ ಕ್ಷಮ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಭೇಟಿಯಾಗಿರಲಿಲ್ಲ. ಆದರೂ ಪರಸ್ಪರ ರ ನೋಟ ಇಬ್ಬರಿಗೂ ಪರಿಚಯ. ಎಷ್ಟಾದರೂ ಕುತೂಹಲ ಇದ್ದೇ ಇರುತ್ತದೆ ಅಲ್ಲವೇ..? 


ಭಾಸ್ಕರನ ಕೋಪ, ಸಿಡುಕನ್ನು ಸಹಿಸಿಕೊಂಡು ವಿಶಾಲಿ ಆತನನ್ನು ದಿನೇ ದಿನೇ ಹೆಚ್ಚಾಗಿ ಪ್ರೇಮಿಸುತ್ತಲೇ ಹೋಗುತ್ತಿದ್ದಳು. ಆತನಿಗೆ ಪತ್ನಿ ತಗ್ಗಿ-ಬಗ್ಗಿ ನಡೆದಾಗ, ಸೋತಾಗ ಹೆಚ್ಚು ಖುಷಿ. ಅಂತೆಯೇ ಸಾಗುತ್ತಿದ್ದ ಬದುಕಿನಲ್ಲಿ ವಿಶಾಲಿಗೆ ತಾನು ಕಂಡ ವಿಚಾರಗಳನ್ನು ಬಣ್ಣಿಸುತ್ತಿದ್ದಳು. ಕ್ಷಮಳ ಕುರಿತು ಆತನಿಗೆ ತನ್ನ ಮನದ ಮಾತುಗಳನ್ನು ಹೇಳುತ್ತಿದ್ದಳು. 'ಹುಲ್ಲೆ ಮರಿ' ಎಂದು ಕರೆಯುತ್ತಿದ್ದ ಆತ ಕ್ಷಮಾಳ ವಿಚಾರವನ್ನು ಕೇಳಿಸಿಕೊಳ್ಳಲು ಮನಸ್ಸಿಲ್ಲವೆಂಬಂತೆ ನಟಿಸಿದರೂ.. ಆತನಿಗೂ ಅದು ಇಷ್ಟವೇ ಆಗುತ್ತಿತ್ತು. ಆದರೆ, ಹಾಗೆಂದು ಬಾಯಿಬಿಟ್ಟು ಹೇಳುತ್ತಿರಲಿಲ್ಲ. 


ಭಾಸ್ಕರ ಹಾಗೂ ವಿಶಾಲಿಯರ ಬದುಕಿನ ವಸಂತದ ಸೂಚನೆಯಲ್ಲಿಯೂ ವಿಶಾಲಿ ತವರಿಗೆ ಹೋಗುವ ತವಕ ತೋರಲಿಲ್ಲ. ಅವಳಿಗೆ ಭಾಸ್ಕರನನ್ನು ಬಿಟ್ಟು ಬೇರೆ ಪ್ರಪಂಚವೇ ಇಲ್ಲವೆಂಬಂತೆ ಅವನನ್ನು ಬಹಳವಾಗಿ ಪ್ರೀತಿಸುತ್ತಿದ್ದಳು. 


ಇತ್ತ ಕ್ಷಮ ಬದುಕಲ್ಲಿ ಗೋಪುವಿನ ಮದುವೆಯಾದ ನಂತರ ಒಂದು ರೀತಿಯಲ್ಲಿ ತನ್ನ ಮನೆಗಾಗಿಯೇ ಎಂಬಂತೆ ದುಡಿಯುತ್ತಿದ್ದಳು. ತೀರಾ ಪ್ರೀತಿ-ಪ್ರೇಮ ಎಂದು ಮನಸ್ಸಿಗೆ ಹಚ್ಚಿಕೊಳ್ಳದಿದ್ದರೂ.. ಗೋಪುವಿನ ವಿವಾಹದಲ್ಲಿ ಮನೆಯವಳಂತೆ ಓಡಾಡಿದಳು. ಗೋಪು ಹಾಗೂ ಅವಳ ಒಡನಾಟ ಹೇಗಿತ್ತು ಓದಿ ನೋಡಿ. 


ಕ್ಷಮ ಒಂದು ದಿನ ಅಪಘಾತಕ್ಕೆ ಒಳಗಾದಾಗ ಪರಿಚಯವಾದ ಮಹೇಂದ್ರ ಅವಳ ಬಾಳಲ್ಲಿ ಯಾವೆಲ್ಲ ರಾಗರಂಜಿತ ಕನಸುಗಳನ್ನು ತುಂಬುತ್ತಾನೆ..? ಕ್ಷಮಳ ಮನಸ್ಸು ಜಾರಿ ಪ್ರೀತಿಯಲ್ಲಿ ಬಿದ್ದ ದಿನಗಳು, ಅವಳ ನಡೆ, ಅಲಂಕಾರ ಎಲ್ಲವೂ ಹೇಗಿತ್ತು..? ಅನಾಥನಾಗಿದ್ದ ಮಹೇಂದ್ರ ತನ್ನ ತಾಯಿಗೆ ಕರೆತಂದು ಪರಿಚಯ ಮಾಡಿಸುವುದಕ್ಕೂ ಮುನ್ನವೇ ಕ್ಷಮ ಆತನನ್ನು ತನ್ನವನೆಂದು ಸ್ವೀಕರಿಸಿಯಾಗಿತ್ತು. ಕ್ಷಮ ಅದೊಂದು ನಡೆಯಲ್ಲಿ ಎಡವಿದಳೇ..?


ಇಲ್ಲಿ ಕ್ಷಮ ಅಥವಾ ವಿಶಾಲಿ ಇಬ್ಬರೂ ತನ್ನ ಸಂಗಾತಿ ತನ್ನನ್ನು ಮಾತ್ರ ಪ್ರೀತಿಸಬೇಕು ಜೊತೆಗೆ ಏಕಪತ್ನಿ ವ್ರತಸ್ಥನಾಗಿರಬೇಕು ಎಂಬ ಬಯಕೆಯನ್ನೇ ಇಟ್ಟುಕೊಂಡಿರುವುದು ಎಲ್ಲಾ ಹೆಣ್ಣು ಮಕ್ಕಳ ಮನಸ್ಸಿನ ಮಾತಿನಂತಿದೆ.


ಕ್ಷಮಳ ಪ್ರೀತಿಗೆ ಮಹೇಂದ್ರ ಸರಿಯಾದ ವ್ಯಕ್ತಿಯಾಗಿದ್ದ ನೇ..? ಭಾಸ್ಕರ ಯಾವೆಲ್ಲಾ ನಡೆಗಳನ್ನು ಬದಲಿಸಿಕೊಂಡಿದ್ದರೆ ವಿಶಾಲುವಿನ ಪ್ರೀತಿಗೆ ಅರ್ಹ ವ್ಯಕ್ತಿಯಾಗುತ್ತಿದ್ದ..?


ಕ್ಷಮ ಹಾಗೂ ವಿಶಾಲಿ ಇಬ್ಬರ ಬದುಕು ಒಂದು ಘಟ್ಟದಲ್ಲಿ ಮಿಳಿತವಾಗುವ ಸಂದರ್ಭ ಬರುತ್ತದೆ. ಆ ಸಂದರ್ಭ ಯಾವುದು..? ಓದಿ ನೋಡಿ. 


ಕಥೆಯ ಶೀರ್ಷಿಕೆ ಹಾಗೂ ನಿರೂಪಣೆ ಕಥೆಯನ್ನು ಎಲ್ಲಿಯೂ ಬಿಟ್ಟುಕೊಡದಂತೆ ಸಾಗುತ್ತದೆ. ಅಂತ್ಯದಲ್ಲಿ ಬರುವ ಟ್ವಿಸ್ಟ್ ವಿಶಾಲು ಹಾಗೂ ಕ್ಷಮ ಇಬ್ಬರ ಬದುಕನ್ನು ಬದಲಿಸುವ ಬಗೆ ಹೇಗೆ..? ತಿಳಿಯಲು ಓದಿ ಚಿತ್ರಲೇಖ ಮೇಡಂ ಅವರ ಕಾದಂಬರಿ ಮಿಲನ.


~ವಿಭಾ ವಿಶ್ವನಾಥ್

ಅವಳು ನಟಿಯೇನಲ್ಲ (ಅವಳ ಕವಿತೆಗಳು - 23)


ಅವಳು ನಟಿಯೇನಲ್ಲ

ಆದರೆ..

ಅಳು ನುಂಗಿ ನಗುವ ಕಲೆ

ಮೇಕಪ್ ಇಲ್ಲದೆಯೂ ನಟಿಸುವ

ನೋವನ್ನು ಮರೆಮಾಚುವ ಕಲೆ

ಎಲ್ಲವನ್ನೂ ಸಂಭಾಳಿಸುತ್ತಲೇ

ತನ್ನದೇನೂ ಇಲ್ಲವೆಂಬಂತೆ

ಮತ್ತೊಮ್ಮೆ ಎಲ್ಲವೂ ತನ್ನದೆನ್ನುವ

ಮುಖವಾಡ ಹಾಕದೆಯೇ

ಒಳ್ಳೆಯವಳಾಗಿ ಮಾತ್ರವೇ ಕಾಣುವ

ಎಲ್ಲವನ್ನೂ ನಿಭಾಯಿಸುವ

ಕಲೆ ಕರಗತ ಮಾಡಿಕೊಂಡಿರುವವಳು

ಅಲ್ಲಿ, ಇಲ್ಲಿ ಎಲ್ಲಿಯೂ ದುಡಿಯುತ್ತಾ

ಸಕಲ ಪಾತ್ರಗಳಿಗೂ ಹೊಂದುತ್ತಾಳೆ


~ವಿಭಾ ವಿಶ್ವನಾಥ್

ಭಾನುವಾರ, ಮೇ 3, 2026

ಮಾರ್ಗದರ್ಶಿ (ಬೆಳಕಿಂಡಿಯ ಕತೆಗಳು - 10)


"ಅಮ್ಮ, ಈ ಬೋರ್ಡ್ ನೋಡಿಲ್ಲಿ.. ಈ ದಾರಿಯಿಂದ ಹೋದರೆ ಊರಿಗೆ ಬೇಗ ಹೋಗಬಹುದಲ್ಲ, ಇಲ್ಲಿಂದ 4 ಕಿಲೋಮೀಟರ್ ಆದರೆ ಮುಖ್ಯ ರಸ್ತೆಯಲ್ಲಿ ಹೋದರೆ 8 ಕಿಲೋಮೀಟರ್ ಆಗುತ್ತದೆ. ಇಲ್ಲಿಂದಲೇ ಹೋಗೋಣ " ಎಂದ ಬೈಕ್ ಓಡಿಸುವ ಮಗನ ಮಾತಿಗೆ ಮೊದಲು ನಕಾರ ಸೂಚಿಸಿದಾಗ "ನಿನಗೇನು ಗೊತ್ತಾಗುತ್ತೆ ಸುಮ್ಮನಿರಮ್ಮ" ಎಂದು ಗದರಿದಾಗ ಬದಲಿ ಹೇಳದೆ "ಸರಿ ನಿನ್ನಷ್ಟ" ಎಂದಳು ಸುಜಾತ.


ಆದರೆ, ಕಲ್ಲು ಮಣ್ಣುಗಳಿಂದ ಕೂಡಿದ್ದ ಅಡ್ಡದಾರಿಯಲ್ಲಿ ಅರ್ಧ-ಮುಕ್ಕಾಲು ಗಂಟೆಯ ನಂತರ ಹೇಗೋ ಊರು ತಲುಪಿದಾಗ "ನಿನ್ನ ಮಾತು ಕೇಳಬೇಕಿತ್ತಮ್ಮ" ಎಂದವನ ಮಾತಿಗೆ ಸುಜಾತ "ಬದುಕಲ್ಲಿಯೂ ಹೀಗೇ ಗುರಿ ಬೇಗ ತಲುಪಲು ಸನ್ಮಾರ್ಗ ಬಿಟ್ಟು ದುರ್ಮಾರ್ಗ ಹಿಡಿದು ಬಿಡುತ್ತೇವೆ. ಇನ್ನು ಮುಂದೆ ಎಚ್ಚರಿಕೆಯಿಂದ ದಾರಿ ಆಯ್ದುಕೋ" ಎಂದಾಗ " ನಿನ್ನಂತಹಾ ಮಾರ್ಗದರ್ಶಿಯ ಮಾತು ಕೇಳಿ ಇನ್ನು ಸನ್ಮಾರ್ಗದಲ್ಲಿ ನಡೆಯುವೆ" ಎಂದವನಿಗೆ ತಡವಾದರೂ ಜ್ಞಾನೋದಯವಾಗಿತ್ತು.


~ವಿಭಾ ವಿಶ್ವನಾಥ್

ಕದಡದ ಬಿಂಬ (ಬೆಳಕಿಂಡಿಯ ಕತೆಗಳು - 9)


"ಅತ್ತು ಬಿಡೆ ಉಮಾ ಒಮ್ಮೆ.. ಈಗಲಾದರೂ ಅತ್ತು ಬಿಡೆ. 

ಎಷ್ಟು ಅಂತಾ ದುಃಖವನ್ನು ತಡೆ ಹಿಡಿಯುತ್ತೀಯ ಹೇಳು.. ಹಾಗೆಲ್ಲಾ ಇರಬಾರದಮ್ಮಾ

ಒಳಗಡೆ ಹೆಪ್ಪುಗಟ್ಟಿಕೊಂಡ ನೋವೆಲ್ಲಾ ಒಮ್ಮೆ ಕಣ್ಣೀರಿನ ಹೊರಬಂದು ಬಿಡಲಿ. ಮನಸ್ಸು ಸಹಾ ಹಗುರವಾಗುತ್ತೆ. " ಎಂದು ಹೇಳುತ್ತಿದ್ದರೂ ಉಮಾ ಕಲ್ಲಿನಂತೆಯೇ ಕುಳಿತಿದ್ದಳು.


ಅವಳದ್ದು ಎಂತಹಾ ಕಲ್ಲು ಮನಸ್ಸು ಎಂದುಕೊಂಡರೂ ಅವಳ ದೌರ್ಭಾಗ್ಯಕ್ಕೆ ಮರುಗಿದವರೇ ಎಲ್ಲರೂ.. ಮದುವೆಯಾದ ತಿಂಗಳಲ್ಲೇ ಸೌಭಾಗ್ಯವನ್ನು ಕಳೆದುಕೊಂಡಾಗ ಉಮಾ ಅಳದೆ ಇರುವುದು ಅಚ್ಚರಿ ತರಿಸಿದರೂ ಅವಳ ಉತ್ತರ ಎಲ್ಲರ ಕಣ್ಣಲ್ಲೂ ಮತ್ತಷ್ಟು ಕಣ್ಣೀರು ಮೂಡಿಸಿತ್ತು.


"ನಾನು ಅತ್ತರೆ ನನ್ನ ಕಣ್ಣಲ್ಲಿನ ಅವರ ಬಿಂಬ ಕರಗಿ ಹೋಗುತ್ತದೆ ಅಮ್ಮ. ನಾನು ಅಳಲಾರೆ. ಇಂದಲ್ಲಾ ಎಂದೆಂದಿಗೂ.. "


ಅವಳ ದಿಟ್ಟತೆ ಮಿಶ್ರಿತ ಪ್ರೀತಿಯ ಬಿಂಬ ಹಾಗೇ ಉಳಿದು ಬಿಡಲಿ.


~ ವಿಭಾ ವಿಶ್ವನಾಥ್

ಬದುಕಿನ ಪರೀಕ್ಷೆ (ಬೆಳಕಿಂಡಿಯ ಕತೆಗಳು - 8)


"ಅಂಕ" ನಮ್ಮ ಬದುಕಲ್ಲಿ ಮುಖ್ಯವೇ ಅಮ್ಮ ಎಂದು ಕೇಳಿದ ಮಗುವಿಗೆ

ಅಂಕವೇ ಬದುಕು. ಅದಕ್ಕಾಗಿಯೇ ನೀನು ಕಷ್ಟಪಡಬೇಕು ಎಂದ ಅಮ್ಮನ ಮಗ ಅಂಕಗಳು ಕಡಿಮೆಯಾದವೆನ್ನುವ ಸಣ್ಣ ನಿರಾಶೆಗೆ ಖಿನ್ನತೆಯ ಮೆಟ್ಟಿಲೇರುತ್ತಿದ್ದ.


ಅಂಕ ಬದುಕಲ್ಲಿ ಮುಖ್ಯ ಹೌದು. ಆದರೆ, ಅಂಕವೇ ಬದುಕಲ್ಲ ಎಂದಾಗ ಅಮ್ಮ ನೀಡಿದ ಧೈರ್ಯದಿಂದ ಮಗ ಸಾಧನೆಯ ಹಾದಿಯ ಮೆಟ್ಟಿಲೇರುತ್ತಿದ್ದಾನೆ.


ಅಂಕವೇ ಬದುಕಾಗಬಾರದು.. ಬದುಕಲ್ಲಿ ಮುನ್ನಡೆಯಲು ಅಂಕ ಪಡೆಯುವತ್ತ ಹೆಜ್ಜೆ ಹಾಕಿದಲ್ಲಿ ಬದುಕಿನ ಪರೀಕ್ಷೆಯಲ್ಲಿ ಉತ್ತೀರ್ಣತೆ ಕಟ್ಟಿಟ್ಟ ಬುತ್ತಿ.


~ವಿಭಾ ವಿಶ್ವನಾಥ್