ಭಾನುವಾರ, ಜುಲೈ 5, 2026

ಹೆಚ್ಚಿನ ಅಂಕ (ಬೆಳಕಿಂಡಿಯ ಕತೆಗಳು - 48)

 


ಮೌಖಿಕ ಪರೀಕ್ಷೆಯಲ್ಲಿ ಗೊತ್ತಿಲ್ಲದ ಉತ್ತರಕ್ಕೆ ಗೊತ್ತಿಲ್ಲವೆಂದೇ ನೇರವಾಗಿ ಹೇಳಿದ ವಿದ್ಯಾರ್ಥಿಯನ್ನು ಕಂಡ ಶಿಕ್ಷಕಿಗೆ ಮೊದಲು ಸಿಟ್ಟು ಬಂತಾದರೂ.. "ಪ್ರಯತ್ನವಾದರೂ ಮಾಡಬಾರದೇ..? ಅದನ್ನು ಬಿಟ್ಟು ಏಕಾಏಕಿ ಗೊತ್ತಿಲ್ಲ ಎಂದು ಹೇಳುವುದೇಕೆ..?" ಎಂದು ಪ್ರಶ್ನಿಸಿದರು.

"ಸುಳ್ಳು ಹೇಳಬಾರದು. ಗೊತ್ತಿಲ್ಲದಿದ್ದರೆ ನೇರವಾಗಿ ಹೇಳಬೇಕು. ಮತ್ತೊಬ್ಬರ ಸಮಯ ವ್ಯರ್ಥ ಮಾಡಬಾರದು." ಎಂದು ಮತ್ತೊಬ್ಬರು ಟೀಚರ್ ಹೇಳಿದ್ದ ಮಾತನ್ನೇ ಪುನರುಚ್ಚರಿಸಿದ ಮಗುವನ್ನು ಕಂಡು..

 ತಡಬಡಾಯಿಸುತ್ತಾ ತನಗೆ ಗೊತ್ತಿದೆ. ಆದರೆ, ಮರೆತಿದ್ದೇನೆ ಎಂಬ ಭಾವ ಮೂಡಿಸುವ ವಿದ್ಯಾರ್ಥಿಗಳಿಗಿಂತ ಈ ಮಗು ಉತ್ತಮವೆನ್ನಿಸಿ ಉಳಿದವರಿಗಿಂತ ಒಂದು ಅಂಕ ಹೆಚ್ಚೇ ನೀಡಿದರು. ಅದು ಪ್ರಾಮಾಣಿಕತೆಗೆ ದೊರೆತ ಅಂಕವಾಗಿತ್ತು.

~ವಿಭಾ ವಿಶ್ವನಾಥ್

ಹೀಗೂ ಒಂದ್ ಕಥೆ (ಬೆಳಕಿಂಡಿಯ ಕತೆಗಳು - 47)


"ಒಂದ್ ಕಥೆ ಹೇಳಿ ಅಪ್ಪ" ಎಂದು ಪೀಡಿಸುತ್ತಿದ್ದ ಮಗಳಿಗೆ ತುಂಬಾ ಓದಿಕೊಂಡಿದ್ದ ಅಪ್ಪ ಯಾವ ಕಥೆ ಹೇಳಲಿ ಎಂದು ಬಹಳಷ್ಟು ಯೋಚಿಸಿ ನಿರ್ಧರಿಸುವಷ್ಟರಲ್ಲಿ ಮಗಳು ಮೊಬೈಲ್ ಹಿಡಿದಾಗಿತ್ತು. 


~ವಿಭಾ ವಿಶ್ವನಾಥ್

ಏನಾಗಲಿ ಮುಂದೆ ಸಾಗು ನೀ


"ನನ್ನಷ್ಟು ಕಷ್ಟ ಯಾರಿಗೂ ಇಲ್ಲ..."," ನನಗಿರುವ ಹಾಗೆ ತೊಂದರೆಗಳು ಬಂದಿದ್ದರೆ...","ನಾನು ಅನುಭವಿಸಿದ ನೋವನ್ನು ನೀವು ಅನುಭವಿಸಿದ್ದರೆ ನೀವು ಹೀಗಿರಲು ಸಾಧ್ಯವೇ ಇರುತ್ತಿರಲಿಲ್ಲ." ಎನ್ನುವವರೆಲ್ಲ ಗಮನಿಸಲೇಬೇಕಾದ ಅಂಶವೆಂದರೆ ನಿಮಗಿಂತ ಕಷ್ಟ ಪಟ್ಟವರು, ನಿಮಗಿಂತ ಕಷ್ಟಪಡುತ್ತಿರುವವರು ಇದ್ದೇ ಇರುತ್ತಾರೆ. ಆದರೆ ಕಷ್ಟಕ್ಕೆದರಿ ಪಲಾಯನ ಮಾಡಿದ್ದರೆ ಅಥವಾ ಕಷ್ಟ ಬಂದಿತೆಂದು ಹಾಗೆಯೇ ಇದ್ದುಬಿಟ್ಟಿದ್ದರೆ ಇಂದಿನ ಮುಕ್ಕಾಲು ಪಾಲು ಸಾಧಕರು ತಮ್ಮ ಗಮ್ಯವನ್ನು ಸಾಧಿಸುತ್ತಲೇ ಇರಲಿಲ್ಲ.


"ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು

ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು"

ಹೌದು, ಬದುಕಿನಲ್ಲಿ ನೋವು-ಕಷ್ಟಗಳಿಲ್ಲದೇ ಇರುವವರು ಯಾರು? ನಾವು ಮೊದಲು ಭೂಮಿಗೆ ಕಾಲಿಡುವುಡುವಾಗ ಅಮ್ಮ ಅನುಭವಿಸಿದ್ದೂ ನೋವೇ. ನೋವು-ಕಷ್ಟ ಎಂದುಕೊಂಡು ಅಮ್ಮಂದಿರು ಭಾವಿಸಿ ಹೆರಿಗೆ ನೋವನ್ನು ಅನುಭವಿಸದೇ ಇದ್ದಿದ್ದರೆ ಇಂದು ನಮಗೆ ಅಸ್ತಿತ್ವವೇ ಇರುತ್ತಿರಲಿಲ್ಲವೇನೋ?ಆಟ ಆಡುವಾಗ ಬಿದ್ದು ನೋವಾಯಿತು ಎಂಬ ಕಾರಣಕ್ಕೆ ಹೆದರಿ ಮಕ್ಕಳು ಅಳುತ್ತಾ ಕುಳಿತು ಆಟವನ್ನೇ ಆಡದಿದ್ದಿದ್ದರೆ ಮಕ್ಕಳ ಬೆಳವಣಿಗೆ ಆರೋಗ್ಯವಾಗಿರುತ್ತಿತ್ತೇ?ಕಷ್ಟಪಟ್ಟು ಓದುವುದೇತಕೆ?ಎಂದು ಸುಮ್ಮನೆ ಕುಳಿತಿದ್ದರೆ ವಿದ್ಯಾವಂತರೆನಿಸಿಕೊಳ್ಳಲಾಗುತ್ತಿತ್ತೇ?ಸಾಮಾಜಿಕ ಬದಲಾವಣೆಗಳಾಗುತ್ತಿದ್ದವೇ?


ಆದರೆ ಈ ಸಂದರ್ಭಗಳಲೆಲ್ಲ ಅಷ್ಟಾಗಿ ಕಾಡದ ಕಷ್ಟ ಎನ್ನುವ ಪದ ಕಾಡಲು ಶುರುವಾಗುವುದು ಉದ್ಯೋಗ ಅರಸಿಕೊಂಡು ಹೋಗಿ ಉದ್ಯೋಗ ದೊರಕದಿದ್ದಾಗ ಅಥವಾ ಸಣ್ಣ ಸಂಬಳದ ಉದ್ಯೋಗ ದೊರೆತಾಗ. "ನನಗೇ ಈ ಕಷ್ಟ ಏತಕೆ..?" ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ.


ಎಷ್ಟೋ ಜನರಿಗೆ ಉದ್ಯೋಗವೇ ಇರುವದಿಲ್ಲ ಅಥವಾ ದೇಹದ ಯಾವುದೋ ಭಾಗ ನ್ಯೂನತೆಯಿಂದ ಕೂಡಿರುತ್ತದೆ. ಅವರಿಗೆ ಹೋಲಿಸಿದರೆ ನಮ್ಮ ಪರಿಸ್ಥಿತಿ ಉತ್ತಮವೇ ಆಗಿರುತ್ತದೆ.ಆದರೆ ನಾವು ಅದನ್ನು ಗಮನಿಸುವ ಅಥವಾ ಯೋಚಿಸುವ ಮನಸ್ಥಿತಿಯಲ್ಲಿರುವುದಿಲ್ಲ ಅಷ್ಟೇ. ವ್ಯರ್ಥವಾಗಿ ಚಿಂತಿಸಿ ಸಿಕ್ಕ ಚಿಕ್ಕ ಖುಷಿಯನ್ನೂ ಕಳೆದುಕೊಂಡು ನಮ್ಮ ಬಾಳಲ್ಲಿ ಕಷ್ಟವೇ ತುಂಬಿದೆ ಎಂದು ವ್ಯಥೆಪಡುತ್ತೇವೆ.


ಹಾಗೆಂದು ಎಲ್ಲರ ಕಷ್ಟಗಳು ಚಿಕ್ಕವು ಅಂತಲೋ ಅಥವಾ ಏನೇನೂ ಇಲ್ಲ ಎಂದಲ್ಲ."ಆನೆಯ ಕಷ್ಟ ಆನೆಗಾದರೆ, ಇರುವೆಯ ಕಷ್ಟ ಇರುವೆಗೆ". ಅವರವರ ನೋವು-ಕಷ್ಟಗಳು ಅವರವರಿಗೆ ಹೆಚ್ಚು. ಆದರೆ ಕಷ್ಟ ಎಂದು ಕೊರಗಿದರೆ, ನೋವು ಎಂದು ಮರುಗಿದರೆ ಅವೆಲ್ಲಾ ಬಗೆಹರಿದುಬಿಡುತ್ತವೆಯೇ? ಸುಖ ಈ ಘಳಿಗೆಯೇ ಬರಬೇಕೆಂದುಕೊಂಡರೆ ಮಾತ್ರ ಸಾಧ್ಯವೇ?


"ಯಾವುದೂ ಕೂಡಾ ಸುಲಭವಾಗಿ ಅಥವಾ ಉಚಿತವಾಗಿ ದೊರೆಯುವುದಿಲ್ಲ. ಹಾಗೆ ದೊರೆತರೂ ಅದು ಶಾಶ್ವತವಾಗಿ ಇರುವುದೂ ಇಲ್ಲ" ಎಂಬ ಮಾತುಗಳನ್ನು ಆಗಾಗ ಓದುತ್ತಲೋ ಅಥವಾ ಕೇಳುತ್ತಲೋ ಇರುತ್ತವೆ. ಆದರೂ ಈ ಕ್ಷಣ ನನ್ನ ಕಷ್ಟಗಳೆಲ್ಲಾ ದೂರವಾಗಬೇಕು ಎನ್ನುತ್ತಾ ಅದನ್ನು ಒಪ್ಪಲು ತಯಾರಿರುವುದಿಲ್ಲ. ಒಟ್ಟಾರೆ ಗಿಣಿಪಾಠದಂತೆ ಅದನ್ನು ಜಪಿಸುತ್ತೇವೆ ಅಷ್ಟೇ.


ಕಷ್ಟಗಳನ್ನು ಸಹಿಸುವ ಸಾಮರ್ಥ್ಯ ಉಳ್ಳವರಿಗೆ ಮಾತ್ರ ಕಷ್ಟಗಳು ಬರುತ್ತವೆ. ಜೊತೆಗೆ ಅವು ನಮ್ಮ ಬಾಳಿನಲ್ಲಿ ಹೊಸ ಪಾಠವೊಂದನ್ನು ಕಲಿಸಿ ಹೋಗುತ್ತವೆ. ಕಷ್ಟದಲ್ಲಿ ಜೊತೆಯಲ್ಲಿ ನಿಲ್ಲುವವರಾರು, ನಮ್ಮ ಹಿತಚಿಂತಕರು ಮತ್ತು ಹಿತಶತ್ರುಗಳು ಯಾರು ಎಂಬುದರಿಂದ ಹಿಡಿದು ಕಷ್ಟವನ್ನು ಸಹಿಸಿ ನಿಲ್ಲುವ ಸೈರಣೆಯನ್ನೂ ಅದು ತಿಳಿಸಿಕೊಡುತ್ತೇವೆ. ಯಾವುದೇ ಕಷ್ಟ,ಯಾವುದೇ ನೋವು ಬಂದರೂ ಅದನ್ನು ಮೆಟ್ಟಿ ನಿಲ್ಲುತ್ತೇವೆ ಎಂಬುದು ನಿಜವಾದ ಶಕ್ತಿ.ಆ ಸಮಯದಲ್ಲಿ ಮುಖದಲ್ಲಿ ಮುಗುಳ್ನಗು, ಶಾಂತತೆಯ ಜೊತೆಗೆ ಸರಿಯಾದ ನಿರ್ಧಾರ ನಮ್ಮನ್ನು ಕಷ್ಟದಿಂದ ಬಿಡಿಸಲು ಸಹಾಯಕ. ಅಕಸ್ಮಾತ್ ಈ ಪರಿಸ್ಥಿತಿಯಲ್ಲಿ ನಾವಿಲ್ಲದೇ ಇದ್ದರೂ, ನಮ್ಮ ಹತ್ತಿರದವರು ಅಥವಾ ಪರಿಚಿತರು ಆ ಪರಿಸ್ಥಿತಿಯಲ್ಲಿದ್ದರೆ ಅವರಿಗೆ ಸಾಂತ್ವನ, ಧೈರ್ಯ ತುಂಬುವ ಆತ್ಮವಿಶ್ವಾಸದಾಯಕ ಮಾತುಗಳನ್ನಾಡೋಣ. ಇದು ಸಾಧ್ಯವಾಗದಿದ್ದಲ್ಲಿ ಕುಗ್ಗಿಸುವ ಮಾತುಗಳಂತೂ ಬೇಡ.


ದೇವರೆನಿಸಿಕೊಂಡ ರಾಮನಿಗೇ ವನವಾಸದ ಕಷ್ಟ ತಪ್ಪಲಿಲ್ಲ, ಕೃಷ್ಣನಿಗೆ ಶ್ಯಮಂತಕ ಮಣಿಯನ್ನು ಕದ್ದ ಎಂಬ ಅಪವಾದ ಕಾಡದೇ ಬಿಡಲಿಲ್ಲ. ಆದರೆ ಅವರು ಈ ಸಂಧರ್ಭಗಳಿಗೆ ಅಂಜದೆ, ಅವುಗಳನ್ನು ಅನುಭವಿಸಿ ಮುನ್ನಡೆದರು. ಕಷ್ಟ ಕಳೆದ ಮೇಲೆ ಸುಖ ಬಂದೇ ಬರುವುದು. ಒಳ್ಳೆಯ ಕಾಲಕ್ಕಾಗಿ ಕಾಯೋಣ. ಇಂದಿನ ಕಷ್ಟದ ದಿನಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುವುದು ಎಂಬ ಭರವಸೆಯೊಂದಿಗೆ ಕಾಯೋಣ. ರಾಮ-ಕೃಷ್ಣರಷ್ಟು ಸೈರಣೆ ಇಲ್ಲದಿದ್ದರೂ, ನಮಗೆ ಸಾಧ್ಯವಾಗುವಷ್ಟು ಸಮಾಧಾನ ತಂದುಕೊಂಡು ಧೈರ್ಯವಾಗಿ ಕಷ್ಟದ ದಿನಗಳನ್ನು ಕಳೆಯೋಣ.


"ಬಾಳ ಕದನದಲ್ಲಿ ಭರವಸೆಗಳು ಬೇಕು

ನಾಳೆ ನಮ್ಮದೆನ್ನುವ ನಂಬಿಕೆಗಳು ಬೇಕು"  

ಹೌದು, ಈ ಮಾತಿನಂತೆಯೇ ಭರವಸೆಯನ್ನು ಮೂಡಿಸಿಕೊಳ್ಳುತ್ತಾ ನಂಬಿಕೆಯೊಡನೆ ಹೆಜ್ಜೆ ಹಾಕೋಣ. ನೆಮ್ಮದಿಯ ನಾಳೆಗಳಿಗಾಗಿ..

-ವಿಭಾ ವಿಶ್ವನಾಥ್

ಸ್ಟ್ರೆಸ್ ಫ್ರೂಟಿಂಗ್, ಸುಸೈಡ್ ಫ್ರೂಟಿಂಗ್ ಕೇವಲ ನೇರಳೆಯಲ್ಲಲ್ಲ...!


ಈಗ ನಾಲ್ಕಾರು ದಿನಗಳಿಂದ ನೇರಳೆ ಹಣ್ಣಿನ ಸುದ್ದಿ ಕೇಳುತ್ತಾ ಅಥವಾ ಓದುತ್ತಾ ಇದ್ದೇವೆ. ನೇರಳೆ ಹೆಚ್ಚು ಫಲವಾಗಿ, ಉದುರಿದ ವರ್ಷ ಭೀಕರ ಬರಗಾಲ ಎನ್ನುವ ಹಿರಿಯರ ಮಾತನ್ನು ನೆನಪಿಸಿಕೊಳ್ಳುತ್ತಿದ್ದೇವೆ. ವೈಜ್ಞಾನಿಕವಾಗಿ ಇದನ್ನು ಸ್ಟ್ರೆಸ್ ಫ್ರೂಟಿಂಗ್ ಎಂದು ಕರೆಯುವ ವಿಚಾರದ ಕುರಿತು ಹಾಗೂ ಇದು ಮರದ ಸುಸೈಡ್ ಫ್ರೂಟಿಂಗ್ ಅಂದರೆ ತನ್ನನ್ನು ಉಳಿಸಿಕೊಳ್ಳುವ ಸ್ವಾರ್ಥದ ಬದಲಾಗಿ.. ತನ್ನ ಸಂತತಿ ಉಳಿಯಬೇಕೆಂದು ಹೆಚ್ಚು ಫಲವನ್ನು ಕೊಡುತ್ತಾ ಹೋಗುತ್ತದೆ. ಮುಂದೆ, ಈ ಫಲದ ಬೀಜಗಳೇ ಆ ಹಣ್ಣಿನ ಸಂತತಿಯನ್ನು ಉಳಿಸಿಕೊಂಡು ಹೋಗುತ್ತವೆ. ಇದಿಷ್ಟು ಎಲ್ಲರಿಗೂ ಗೊತ್ತಿರುವ ವಿಚಾರದ ಪುಟ್ಟ ಸಾರಾಂಶ. 


ನನಗೊಂದು ಸಂದೇಹ ಬಂದಿತು. ಸ್ಟ್ರೆಸ್ ಫ್ರೂಟಿಂಗ್ ಹಾಗೂ ಸುಸೈಡ್ ಫ್ರೂಟಿಂಗ್ ನೇರಳೆ ಮರ ಮಾತ್ರವಾ..?


ಈ ಕುರಿತು ಹುಡುಕಲು ಹೊರಟ ನನಗೆ ಕೆಲ ಅಚ್ಚರಿಯ ವಿಚಾರಗಳು ತಿಳಿದವು. 


ಯಾವಾಗ ಒಂದು ಮರಕ್ಕೆ ತಾನು ಸಾಯುತ್ತಿದ್ದೇನೆ ಅಥವಾ ತೀವ್ರ ಅಪಾಯ ಎದುರಾಗಿದೆ ಎನ್ನುವ ಮುನ್ಸೂಚನೆ ಸಿಗುತ್ತದೆಯೋ.. ಆಗ ತನ್ನ ವಂಶವನ್ನು ಮುಂದಕ್ಕೆ ಕೊಂಡೊಯ್ಯಲು, ಬೀಜಗಳನ್ನು ಸೃಷ್ಟಿಸಲು ತನ್ನಲಿರುವ ಕೊನೆಯ ಹನಿ ಶಕ್ತಿಯನ್ನು ಬಳಸಿ ಅತಿಯಾಗಿ ಹೂವು, ಹಣ್ಣುಗಳನ್ನು ಬಿಡುತ್ತದೆ. ಸಾಮಾನ್ಯವಾಗಿ ಇಂತಹ ಪ್ರಕ್ರಿಯೆಯನ್ನು ದೀರ್ಘಕಾಲದ ಬಹುವಾರ್ಷಿಕ ಹಣ್ಣಿನ ಮರಗಳಲ್ಲಿ ಕಾಣಬಹುದು. ಅದರಲ್ಲಿ ನೇರಳೆಯೂ ಒಂದು. 


ಮಾವಿನ ಮರದಲ್ಲಿಯೂ ಇಂತಹ ಸ್ಟ್ರೆಸ್ ಫ್ರೂಟಿಂಗ್ ಅನ್ನು ಕಾಣಬಹುದು. ದೀರ್ಘ ಬರಗಾಲ ಬಂದಾಗ ಅಥವಾ ಮರದ ಬೇರುಗಳಿಗೆ ತೀವ್ರ ಹಾನಿಯಾದಾಗ ಮಾವಿನ ಮರ ಆ ವರ್ಷ ಅತಿ ಹೆಚ್ಚು ಹೂ ಬಿಡುತ್ತದೆ. "ಮರ ಸಾಯುತ್ತೇನೋ.. ವಿಪರೀತ ಕಾಯಿ ಕಚ್ಚಿದೆ" ಎನ್ನುವುದನ್ನು ಕೇಳಬಹುದು.


ಮೂಸಂಬಿ, ನಿಂಬೆ, ಕಿತ್ತಳೆ ಹಾಗೂ ಆ ಜಾತಿಯ ಗಿಡಗಳು ಸಹ ಇಂಥದೇ ವರ್ತನೆಯನ್ನು ತೋರುತ್ತವೆ. ದೀರ್ಘಕಾಲ ನೀರು ಸಿಗದಿದ್ದಾಗ ಅಥವಾ ಬೇರಿಗೆ ಶಿಲೀಂದ್ರ ರೋಗ ತಗುಲಿದಾಗ ಎಲೆಗಳಿಗಿಂತಲೂ ಬಿಳಿಯ ಹೂ ಹೆಚ್ಚಾಗಿ ಕಾಣಸಿಗುತ್ತವೆ. ಇದನ್ನು ತಮ್ಮ ಅನುಕೂಲಕ್ಕೆ ಬಳಸುವವರೂ ಇದ್ದಾರೆ. ಉದ್ದೇಶಪೂರ್ವಕವಾಗಿಯೇ ಇಂತಹ ಗಿಡಗಳಿಗೆ ಕೆಲವು ದಿನ ನೀರು ನಿಲ್ಲಿಸಿ, ಅಂದರೆ 'ವಾಟರ್ ಸ್ಟ್ರೆಸ್' ಕೊಟ್ಟು ಇಳುವರಿ ಪಡೆಯುವ ಪದ್ಧತಿಯೂ ರೂಢಿಯಲ್ಲಿದೆ.


ಸೀಬೆ ಮರ ಒಣಗುವ ಹಂತಕ್ಕೆ ತಲುಪಿದಾಗ ಅಥವಾ ಅದರ ಕಾಂಡಕ್ಕೆ ತೀವ್ರ ಗಾಯಗಳಾದಾಗ ಮೂರು ಪಟ್ಟು ಹೆಚ್ಚು ಕಾಯಿಗಳನ್ನು ಬಿಡುತ್ತದೆ. ತೆಂಗಿನ ಮರವೂ ಇಂತಹದ್ದೇ ವರ್ತನೆ ತೋರುತ್ತದೆ. ತೀವ್ರ ಮಿಂಚು ತಗುಲಿದಾಗ ಇನ್ನೇನು ಕೆಲವೇ ತಿಂಗಳು ಸಾಯುತ್ತದೆ ಎನ್ನುವ ಸಂದರ್ಭದಲ್ಲಿ ತನ್ನ ಜೀವಿತದ ಕೊನೆಯ ಹಂತದಲ್ಲಿ ಹೆಚ್ಚು ಹೊಂಬಾಳೆಗಳನ್ನು ಬಿಡುತ್ತದೆ.


ಸ್ಟ್ರೆಸ್ ಕೇವಲ ಮನುಷ್ಯರಿಗಲ್ಲ.. ಗಿಡಗಳಿಗೂ..!


ಕೇವಲ ಬರಗಾಲ ಅಥವಾ ನೀರು ಸಿಗದಿದ್ದಕ್ಕೆ ಮಾತ್ರ ಗಿಡಗಳಿಗೆ ಸ್ಟ್ರೆಸ್ ಉಂಟಾಗುವುದಿಲ್ಲ. ಮರಕ್ಕೆ ಆಹಾರ ಅಥವಾ ನೀರು ಸರಬರಾಜು ಮಾಡುವ ಬೇರುಗಳು ಹಾನಿಗೊಳಗಾದಾಗ ಅಥವಾ ಕೀಟಗಳು, ರೋಗಗಳಿಂದ ಬಾಧಿತವಾದಾಗಲೂ ಇಂತಹ ವರ್ತನೆ ಕಾಣಿಸುತ್ತದೆ. 


ತೀವ್ರ ಹವಾಮಾನ ವೈಪರೀತ್ಯದಿಂದ ಇಂತಹ ಸ್ಟ್ರೆಸ್ ಉಂಟಾಗುತ್ತದೆ. ಈಗ ನಾವು ನೋಡುತ್ತಿರುವ ನೇರಳೆ ಮರದ ಉದಾಹರಣೆ ಇದಕ್ಕೆ ಹೆಚ್ಚು ಸೂಕ್ತ.


ಮರದ ಕಾಂಡಕ್ಕೆ ಕೊಡಲಿಯಿಂದ ಆಳವಾಗಿ ಕತ್ತರಿಸಿದಾಗ ಸಹ ಮರಗಳು ಸ್ಟ್ರೆಸ್ ಗೆ ಒಳಗಾಗುತ್ತವೆ. ಹಳೆಯ ಕಾಲದಲ್ಲಿ ಮಾವು ಅಥವಾ ಹಲಸಿನ ಮರಗಳು ಹೆಚ್ಚು ಕಾಯಿ ಬಿಡದಿದ್ದಾಗ ಅದರ ಕಾಂಡಕ್ಕೆ ಕೊಡಲಿಯಿಂದ ಸಣ್ಣದಾಗಿ ಗಾಯಮಾಡುವ ಮೂಲಕ ಮರವನ್ನು ಹೆದರಿಸುತ್ತಿದ್ದಾರಂತೆ. ಇನ್ನು ಕೆಲವರು ಮರಕ್ಕೆ ವಾಚಾಮಗೋಚರವಾಗಿ ಬಯ್ಯುವುದನ್ನು ಮಾಡುತ್ತಿದ್ದೆವು, ಅದಾದ ಮರು ವರ್ಷಕ್ಕೆ ಹೆಚ್ಚು ಫಸಲು ಬಂದಿತು ಎನ್ನುತ್ತಾರೆ. ಮರಕ್ಕೆ ಬೈದಾಗ ಅದರಿಂದ ಹೆಚ್ಚು ಫಸಲು ಬಂತು ಎನ್ನುವುದಕ್ಕಿಂತಲೂ.. ವೈಜ್ಞಾನಿಕವಾಗಿ ಹೇಳುವುದಾದರೆ ಮರಕ್ಕೆ ಗಾಯವಾದ ತಕ್ಷಣ ತನಗೆ ಆಪತ್ತು ಬಂದಿದೆ ಎಂದು ಭಾವಿಸಿದ ಮರ ಮುಂದಿನ ಬಾರಿ ಅತಿಯಾಗಿ ಹಣ್ಣು ಬಿಡುತ್ತಿತ್ತಂತೆ. ಪ್ರಕೃತಿಯ ಸೃಷ್ಟಿ ಅದೆಷ್ಟು ಸೂಕ್ಷ್ಮ. ಅಲ್ಲವೇ..?


ಇದಿಷ್ಟು ಸ್ಟ್ರೆಸ್ ಫ್ರೂಟಿಂಗ್ ವಿಚಾರವಾಯಿತು. ಹೀಗೆ ಮಾಡಿದಾಗ ಮರಗಳು ಹೆಚ್ಚಿನ ಫಲ ನೀಡುತ್ತವೆ. ಹಾಗೆಂದು ಎಲ್ಲವೂ ತಮ್ಮನ್ನು ತಾವು ಕೊಂದುಕೊಳ್ಳುವುದಿಲ್ಲ. ಸುಸೈಡ್ ಫ್ರೂಟಿಂಗ್ ಕಂಡುಬರುವುದು ತೀವ್ರ ನೀರಿನ ಅಭಾವ ಹಾಗೂ ಬರಗಾಲದ ಸಮಯದಲ್ಲಿ ನ ಈಗ ನೇರಳೆ ಮರಗಳು ಸುಸೈಡ್ ಫ್ರೂಟಿಂಗ್ ಮಾಡಿಕೊಳ್ಳುತ್ತಿವೆ ಎನ್ನುತ್ತಿದ್ದಾರೆ. ಅವುಗಳ ಅಂತ್ಯವನ್ನು ಕಾಣುವ ಸಮಯ ದೂರವೇನಿಲ್ಲ.


ಆದರೆ, ತನ್ನ ಜೀವಿತಾವಧಿಯಲ್ಲಿ ಒಂದೇ ಒಂದು ಬಾರಿ ತಮ್ಮ ಕೈಲಾದಷ್ಟು ಹೆಚ್ಚಿನ ಹೂವು-ಹಣ್ಣು ಬಿಟ್ಟು.. ನಂತರ ಕಡ್ಡಾಯವಾಗಿ ಸಾಯುವ ಸಸ್ಯಗಳು ಬೇರೆಯೇ ಇವೆ. ಈಗ ಅವುಗಳ ಕುರಿತು ಹೇಳುತ್ತೇನೆ.


ಹಿಂದಿನ ಕಾಲದಲ್ಲಿ "ಬಿದಿರು ಹೂ ಬಿಟ್ಟು ಅಕ್ಕಿಯಾಯ್ತು ಅಂದರೆ ಆ ವರ್ಷ ಖಂಡಿತ ಬರಗಾಲ" ಎನ್ನುತ್ತಿದ್ದರು. ಇದನ್ನು ನೀವು ಕೇಳಿದ್ದೀರಾ ಅಥವಾ ಈ ಪ್ರಸಂಗಕ್ಕೆ ಸಾಕ್ಷಿಯಾಗಿದ್ದೀರಾ..?


ಸೂಸೈಡ್‌ ಫ್ರೂಟಿಂಗ್ ಗೆ ಅತ್ಯಂತ ಕರಾರುವಕ್ಕಾದ ಉದಾಹರಣೆ ನೀಡುಬಹುದೆಂದರೆ ಅದು ಬಿದಿರು. ಬಿದಿರಿನಲ್ಲಿ ಹಲವಾರು ತಳಿಗಳಿವೆ. ಈ ತಳಿಗಳ ಆಧಾರದ ಮೇಲೆ 30 ರಿಂದ 120 ವರ್ಷಗಳಿಗೆ ಹೂ ಬಿಟ್ಟು, ಅಕ್ಕಿ (ಬೀಜ) ಆಗುತ್ತವೆ. ಇಡೀ ಕಾಡಿನ ಬಿದಿರೆಲ್ಲ ಒಟ್ಟಿಗೆ ಹೂ ಬಿಟ್ಟು ಬೀಜ ಪ್ರಸರಣ ಮಾಡಿ ಒಣಗಿ ಸಾಯುತ್ತವೆ. 


ತಾಳೆ ಜಾತಿಯ ಕೆಲವು ಮರಗಳು ಸಹ ಇಂತಹ ಸೂಸೈಡ್ ಫ್ರೂಟಿಂಗ್ ಮಾಡಿಕೊಳ್ಳುತ್ತವೆ. ಶ್ರೀಲಂಕಾ ತಾರಿಪೆ (Talipot Palm) ಸುಮಾರು 30-80 ವರ್ಷಗಳ ಕಾಲ ಕೇವಲ ಎಲೆಯನ್ನು ಮಾತ್ರ ಬೆಳೆಸುತ್ತಾ.. ತನ್ನ ಜೀವಿತಾವಧಿಯ ಕೊನೆಯಲ್ಲಿ ಲಕ್ಷಾಂತರ ಹೂ-ಹಣ್ಣುಗಳನ್ನು ಬಿಟ್ಟು ಹಣ್ಣುಗಳು ಮಾಗುತ್ತಿದ್ದಂತೆ ಮರ ಸಾಯುತ್ತದೆ. 


ಬಾಳೆ ಗಿಡವನ್ನು ಗಮನಿಸಿದ್ದಾದರೆ.. ಒಂದು ಬಾರಿ ಗೊನೆ ಬಿಟ್ಟ ಬಾಳೆ ಅದನ್ನು ಕೊಯ್ದ ನಂತರ ಒಣಗುತ್ತದೆ. ಆದರೆ, ಅದರ ಬುಡದಿಂದ ಹೊಸ ಗಿಡಗಳು ಹುಟ್ಟಿ ಫಸಲು ಹೆಚ್ಚುತ್ತದೆ.


ಬಿದಿರು ಅಥವಾ ನೇರಳೆ ಸ್ಟ್ರೆಸ್ ಫ್ರೂಟಿಂಗ್ ಅಥವಾ ಸುಸೈಡ್ ಫ್ರೂಟಿಂಗ್ ಮಾಡಿಕೊಳ್ಳುವಾಗ.. ಒಂದು ಪ್ರದೇಶದ ಗಿಡಮರಗಳೆಲ್ಲವೂ ಒಟ್ಟಿಗೆ ಆ ಪ್ರಕ್ರಿಯೆಗೆ ಒಳಗಾಗುವುದಕ್ಕೆ ಕುತೂಹಲಕರ ಕಾರಣ ಹಾಗೆಯೇ ಚಾಣಾಕ್ಷ ನಡೆಯೂ ಇದೆ.


ಒಂದು ಪ್ರದೇಶದಲ್ಲಿ ಹೀಗಾಗುತ್ತಿದೆ ಎಂದಾಗ ಆ ಪ್ರದೇಶದ ಹವಾಮಾನದ ಪ್ರಚೋದನೆ ಹಾಗೂ ಅವುಗಳ ಜೀವಕೋಶದಲ್ಲಿರುವ ಜೆನೆಟಿಕ್ ಕ್ಲಾಕ್ ಕಾರಣವಾಗಬಹುದು. ಎಂದರೆ, ಒಂದೇ ತಾಯಿಬೇರಿನಿಂದ ಹುಟ್ಟಿ ಬೇರೆ-ಬೇರೆ ಕಡೆ ಪ್ರಸರಣವಾಗಿ ಹುಟ್ಟಿರುವ ಆ ಗಿಡಗಳು ಆಂತರಿಕವಾಗಿ ಒಂದೇ ರೀತಿ ವರ್ತಿಸುತ್ತವೆ ಎನ್ನುತ್ತಾರೆ.


ನನಗೆ ಎಲ್ಲಕ್ಕಿಂತ ಅಚ್ಚರಿಗೊಳಿಸಿದ ಕಾರಣ ಎಂದರೆ ಅವುಗಳ ಆಲೋಚನೆಯ ಪರಿ. ಒಂದೊಂದು ಗಿಡ ಒಮ್ಮೊಮ್ಮೆ ಹಣ್ಣು ಬಿಟ್ಟರೆ ಪ್ರಾಣಿ-ಪಕ್ಷಿಗಳು ಅದನ್ನು ತಿಂದು ಖಾಲಿ ಮಾಡಿಬಿಡುತ್ತವೆ. ಆದರೆ, ಎಲ್ಲ ಮರಗಳೂ ಒಟ್ಟಿಗೆ ಫಲ ಬಿಟ್ಟಾಗ ಎಷ್ಟು ತಿಂದರೂ ಅವು ಖಾಲಿಯಾಗುವುದಿಲ್ಲ. ಹೊಟ್ಟೆ ತುಂಬಿ ಸಾಕಾಗಿ ಸುಮ್ಮನಾಗಿಬಿಡುತ್ತವೆ. ಮುಂದಿನ ದಿನಗಳಿಗೆ ರಕ್ಷಿಸಿಕೊಳ್ಳುವ ಮನುಷ್ಯನನ್ನು ಹಾಗೂ ಅವನ ಅತಿಯಾಸೆಯನ್ನು ಅವು ಪರಿಗಣಿಸಿಲ್ಲವೇನೋ.. ಹೀಗೆ ಪ್ರಾಣಿಗಳು ತಿಂದು ಉಳಿಯುವ ಲಕ್ಷಾಂತರ ಬೀಜಗಳು ಮಣ್ಣು ಸೇರಿ ಮುಂದಿನ ಪೀಳಿಗೆಗೆ ಸಾಗುತ್ತವೆ.


ಗಿಡಗಳಿಗೂ ಜೀವ ಇದೆ ಎಂದಷ್ಟೇ ಓದಿದ್ದವಳಿಗೆ.. ಗಿಡಗಳ ಸ್ಟ್ರೆಸ್ ಕುರಿತು ತಿಳಿಯಿತು. ಕುತೂಹಲದಿಂದ ಅದರ ಹಿಂದೆ ಸಾಗಿದಾಗ ನಾನು ತಿಳಿದುಕೊಂಡ ಕೆಲ ಕುತೂಹಲಕರ ವಿಚಾರಗಳಿವು.

~ವಿಭಾ ವಿಶ್ವನಾಥ್

ಬ್ರಹ್ಮ ಕಮಲದ ಕಥೆಗಳು


 ಪಾರಿಜಾತದ ಕಡುಮೋಹಿಯಾದ ನಾನು ನಿನ್ನೆ ಮನೆಯಲ್ಲಿ ಅರಳಿದ ಬ್ರಹ್ಮ ಕಮಲದ ಕುರಿತು ಆಲೋಚಿಸುತ್ತಿದ್ದೆ. ಅಪರೂಪದ ವರ್ಷಕ್ಕೊಮ್ಮೆ ರಾತ್ರಿಯಲ್ಲಿ ಅರಳಿ ಸೂರ್ಯೋದಯಕ್ಕೂ ಮುನ್ನ ಬಾಡುವ ಈ ರಾತ್ರಿರಾಣಿಗೆ ಬ್ರಹ್ಮನ ಹೆಸರು ಜೋಡಣೆಯಾಗಲು ಕಾರಣವೇನಿರಬಹುದು ಎಂದುಕೊಳ್ಳುತ್ತಿದ್ದೆ. 


ಈಗ ಮೊದಲಿನಂತೆ ಪ್ರತಿಯೊಂದಕ್ಕೂ ಹೆಚ್ಚು ಹುಡುಕಾಡಬೇಕಿಲ್ಲ. ಆದರೆ, ಹುಡುಕಿದ ವಿಚಾರಗಳಲ್ಲಿ ಯಾವುದು ಎಷ್ಟು ಜೆನ್ಯೂನ್ ಎಂದು ಪರಿಶೀಲಿಸಬೇಕಾಗುತ್ತದೆ. ಮುಂದೆ ಮಗಳಿಗೆ ಹೇಳಬೇಕಾದರೆ.. ಅವಳು ಕೇಳಿ ಆಗ ಹುಡುಕಾಡುವ ಮುನ್ನ ನಾನು ತಿಳಿದುಕೊಂಡಿರಬೇಕು ಎಂಬ ಮುಂದಾಲೋಚನೆ ಈಗೀಗ ಮಾಹಿತಿಗಳನ್ನು ತಿಳಿಯಲು ಅಥವಾ ಕುತೂಹಲಗಳನ್ನು ತಣಿಸಿಕೊಳ್ಳುವಾಗ ಹೆಚ್ಚು ಪ್ರೇರೇಪಿಸುತ್ತದೆ. ಈಗ ಬ್ರಹ್ಮ ಕಮಲ ಎಂಬ ಹೆಸರು ಬರಲು ಕಾರಣವಾದ ಹಾಗೂ ವೈಶಿಷ್ಟ್ಯಗಳ ಕಥೆಗಳನಷ್ಟೇ ಪ್ರಸ್ತಾಪಿಸುವೆ. 


ಇತಿಹಾಸ ಹಾಗೂ ಧಾರ್ಮಿಕ ಕಥೆಗಳನ್ನು ಹುಡುಕಲು ಹೊರಟಾಗ ಹಲವು ಕಥೆಗಳು ಹಾಗೂ ಹಲವು ಆಯಾಮಗಳು ಕಾಣಿಸುತ್ತವೆ. ನನಗೆ ಸಿಕ್ಕವನ್ನು ನಿಮ್ಮೆದುರು ಹರವಿಡುತ್ತೇನಷ್ಟೇ..


ಈಶ್ವರನು ಗಣೇಶನ ಶಿರ ಕಡಿದು, ಪಾರ್ವತಿ ದೇವಿಯ ಬೇಡಿಕೆಯ ಮೇರೆಗೆ ಪ್ರಾಣ ನೀಡಲು ಗಜ ಶಿರವನ್ನು ಆತನಿಗೆ ಜೋಡಿಸಿ ಮರು ಜೀವ ನೀಡುವಾಗ ಬ್ರಹ್ಮದೇವ ಆನಂದಭಾಷ್ಪ ಸುರಿಸಿದಾಗ ಈ ಹೂವು ಹುಟ್ಟಿತು ಎನ್ನುವ ಐತಿಹ್ಯವಿದೆ.


ಇನ್ನೊಂದು ನಂಬಿಕೆಯ ಪ್ರಕಾರ ಶಿವನು ಆನೆಯ ತಲೆಯನ್ನ ಜೋಡಿಸಿ ಈ ಹೂವಿನ ನೀರನ್ನು ಪ್ರೋಕ್ಷಿಸಿ ಬದುಕಿಸಿದನೆಂದು ಸಹ ಹೇಳುತ್ತಾರೆ.


ರಾಮಾಯಣದಲ್ಲಿ ಲಕ್ಷ್ಮಣನು ಪ್ರಜ್ಞಾಹೀನನಾಗಿ ಬಿದ್ದ ಸಂದರ್ಭದಲ್ಲಿ ದೇವತೆಗಳು ಸ್ವರ್ಗದಿಂದ ಸುರಿಸಿದ ಹೂವುಗಳೇ ಬ್ರಹ್ಮ ಕಮಲವೆಂದು ಹೇಳುತ್ತಾರೆ. ಇನ್ನು ಕೆಲವರು ಹನುಮಂತ ಸಂಜೀವಿನಿ ಪರ್ವತ ತಂದಾಗ ಅಲ್ಲಿದ್ದ ಬ್ರಹ್ಮ ಕಮಲದ ನೀರನ್ನು ಚಿಮುಕಿಸಿದಾಗ ಆತ ಮರುಜೀವ ಪಡೆದನೆಂದು ಹೇಳಲಾಗುತ್ತದೆ. 


ಮಹಾಭಾರತದಲ್ಲಿ ಬ್ರಹ್ಮ ಕಮಲದ ವಿಚಾರವನ್ನು ನೋಡುವುದಾದರೆ.. ಪಾಂಡವರ ವನವಾಸ ಕಾಲದಲ್ಲಿ ದ್ರೌಪದಿ ಈ ಹೂವನ್ನು ತಂದುಕೊಡಲು ಭೀಮಸೇನನಿಗೆ ಬೇಡಿಕೆ ಇಟ್ಟಿದ್ದಾಗಿಯೂ ಈ ಹೂವನ್ನು ಹುಡುಕುತ್ತಾ ಹೋದ ಭೀಮನಿಗೆ ತನ್ನ ಸಹೋದರ ಹನುಮಂತನ ದರ್ಶನವಾಗುತ್ತದೆ ಎಂಬ ಐತಿಹ್ಯವಿದೆ. ಕೆಲವರು ಅದು ಸೌಗಂಧಿಕಾ ಪುಷ್ಪವೆಂದೂ ಹೇಳುತ್ತಾರೆ.


ಬ್ರಹ್ಮದೇವನ ಕೈಯಲ್ಲಿರುವ ಶ್ವೇತ ಕಮಲವೇ ಬ್ರಹ್ಮ ಕಮಲವೆಂದು ಕೆಲವರು ಹೇಳಿದರೆ, ಬ್ರಹ್ಮದೇವ ಕುಳಿತಿರುವ ಹೂವೇ ಬ್ರಹ್ಮ ಕಮಲವೆನ್ನುತ್ತಾರೆ. ವಿಷ್ಣುವಿನ ನಾಭಿಯಲ್ಲಿ ಅರಳಿದ ಕಮಲದ ಹೂವಿನ ಮೂಲಕ ಬ್ರಹ್ಮ ಹೊರಬಂದ ಕಾರಣಕ್ಕೆ ಅದು ಬ್ರಹ್ಮ ಕಮಲವಾಯಿತು ಎಂಬ ನಂಬಿಕೆಯೂ ಇದೆ.


ಒಮ್ಮೆ ಬ್ರಹ್ಮದೇವ ನಿದ್ದೆಗೆ ಜಾರಿದಾಗ ಕಮಲದ ಹೂವಿನ ಧ್ಯಾನ ಮಾಡುತ್ತಾರಂತೆ. ನಂತರ ಎಚ್ಚರಗೊಂಡು ನೋಡಿದಾಗ ಅವರೇ ಕಮಲವಾಗಿ ರೂಪಾಂತರಗೊಂಡಿದ್ದರು. ಆಗ ಆ ಹೂವಿಗೆ ಬ್ರಹ್ಮ ಕಮಲ ಎಂಬ ಹೆಸರು ಬಂತು ಎಂಬ ಕಥೆಯೂ ಇದೆ. ಬ್ರಹ್ಮಾಂಡವನ್ನು ಸೃಷ್ಟಿಸಲು ಬ್ರಹ್ಮನು ಇದೇ ಕಮಲದ ಹೂ ಬಳಸಿದನು ಎಂದು ಹೇಳುತ್ತಾರೆ.


ಇವಿಷ್ಟು ನನಗೆ ಸಿಕ್ಕ ವಿವಿಧ ಕಥೆಗಳು. 


~ವಿಭಾ ವಿಶ್ವನಾಥ್ 

ಪ್ರತಿಯೊಬ್ಬರ ಬದುಕಿನ ಸ್ಟಾರ್ಟಿಂಗ್ ಪಾಯಿಂಟ್ ಬೇರೆಯೇ ಅಲ್ಲವಾ..?!


"ನಿನ್ನ ಜೊತೆಯವರಿಗೆಲ್ಲ ಮದುವೆಯಾಯಿತು. ಇನ್ನೂ ನಿನಗೆ ಮದುವೆ ಆಗಿಲ್ವಾ..?!"


"ನಿನ್ನ ವಯಸ್ಸಿನವರಿಗೆ ಮದುವೆಯಾಗಿ ಮಗು ಇದೆ. ನೀನು ಮದುವೆಯಾಗಿ ನಾಲ್ಕು ವರ್ಷವಾದರೂ ಇನ್ನೂ ಮಗು ಆಗಿಲ್ವಾ ಅಥವಾ ಮಾಡಿಕೊಂಡಿಲ್ವಾ..?!"


"ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ ನಿನ್ನ ಫ್ರೆಂಡ್ಸ್ ಎಲ್ಲರೂ ಎರಡು ವರ್ಷದ ಸಂಬಳ ತೆಗೆದುಕೊಂಡಿದ್ದಾರೆ, ಇನ್ನೂ ನಿನ್ನ ಕೆರಿಯರ್ ಸ್ಟಾರ್ಟ್ ಆಗಿಲ್ವಾ..?"


"ಇವಳ ಜೊತೆಗೆ ಹುಟ್ಟಿದ ಆ ಮಗು ಈಗಾಗಲೇ ಮನೆ ತುಂಬಾ ಓಡಾಡುತ್ತೆ. ಇವಳಿನ್ನೂ ತೆವಳುವುದರಲ್ಲಿಯೇ ಇದ್ದಾಳಾ..?!"


"ನಿನ್ನ ಜೊತೆ ಕೆಲಸಕ್ಕೆ ಸೇರಿದವನಿಗೆ ಈಗಾಗಲೇ ಪ್ರಮೋಷನ್ ಹಾಗೆ ಪ್ಯಾಕೇಜ್ ಕೂಡ ಜಾಸ್ತಿ ಆಯ್ತು. ಎರಡು ಕಂಪನಿ ಬದಲಾಯಿಸಿದ. ನೀನಿನ್ನೂ ಅದೇ ಕಂಪನಿಗೆ ಅಂಟಿ ಕೂತಿದ್ದೀಯಾ..?"


ಹೀಗೆ ಬರೆಯುತ್ತಾ ಹೋದರೆ ಪ್ರಶ್ನೆಗಳ ಅಲ್ಲಲ್ಲ ಕಾಳಜಿಯ ನೆಪದ ಚುಚ್ಚುಮಾತುಗಳ ಪಟ್ಟಿ ಸಾಗುತ್ತಲೇ ಹೋಗುತ್ತದೆ. ಇದೆಲ್ಲದಿದ್ದರೂ ಇಂತಹ ಯಾವುದಾದರೂ ಒಂದಲ್ಲಾ ಒಂದು ಪ್ರಶ್ನೆಗಳನ್ನು ಎದುರಿಸಿಯೇ ಇರುತ್ತೇವಲ್ಲವಾ..?!


ಒಂದೇ ದಿನ, ಒಂದೇ ಸಮಯಕ್ಕೆ ಹುಟ್ಟಿದ ಮಕ್ಕಳಲ್ಲಿಯೂ ಬೆಳವಣಿಗೆಯ ವ್ಯತ್ಯಾಸವಿರುತ್ತದೆ. ಹಾಗಿರುವಾಗ ಈ ವಯಸ್ಸಿನಲ್ಲಿ ನಿನ್ನ ಜೊತೆಯವರು ಮಾಡಿರುವ ಸಾಧನೆ ನಿನ್ನಿಂದ ಸಾಧ್ಯವಾಗಿಲ್ಲವೇಕೆ ಎಂದು ಪ್ರಶ್ನಿಸುವವರೇನು ಕಡಿಮೆ ಇಲ್ಲ. 


ಪ್ರತಿಯೊಬ್ಬರ ಬದುಕಿನ ಕಲಿಕೆ ಒಂದೇ ರೀತಿ ಇರುವುದಿಲ್ಲ. ವಯಸ್ಸು, ಅನುಭವ, ಪ್ರಯತ್ನ, ಲಕ್ ಒಬ್ಬರಂತೆ ಒಬ್ಬರಿಗಿರುವುದಿಲ್ಲ. ಅಕಸ್ಮಾತ್ ಹಾಗೆಯೇ ಇದ್ದರೂ ಬೆಳೆದ ವಾತಾವರಣ ಮನಸ್ಥಿತಿ ಬೇರೆಯೇ ಇರುತ್ತದಲ್ಲವಾ..?!

ಮೇಲಿನ ಪ್ರಶ್ನೆಗಳು ಅಥವಾ ಅಂತಹ ಸಂದರ್ಭಗಳು ಎದುರಾದಾಗ ಅಥವಾ ಪದೇ ಪದೇ ಅಂತಹ ಪ್ರಶ್ನೆಗಳೇ ಎದುರಾದಾಗ ನಾವು ಒಂದಲ್ಲಾ ಒಂದು ಬಾರಿಯಾದರೂ.. ಒಂದು ಕ್ಷಣವಾದರೂ ಅವರು ಹೇಳಿರುವ ಮತ್ತೊಬ್ಬರೊಡನೆ ಹೋಲಿಸಿಕೊಂಡಿರುತ್ತೇವೆ. ಹೌದು ತಾನೇ..?


ಇಷ್ಟಕ್ಕೂ ಇನ್ನೊಬ್ಬರೊಂದಿಗೆ ನಾವು ಯಾಕೆ ಕಾಂಪಿಟೇಶನ್ ಗಿಳಿಯಬೇಕು..? ಪ್ರತಿಯೊಬ್ಬರ ಬದುಕಿನ ಸ್ಟಾರ್ಟಿಂಗ್ ಪಾಯಿಂಟ್ ಹಾಗೂ ಎಂಡಿಂಗ್ ಪಾಯಿಂಟ್ ಎರಡೂ ಬೇರೆ ಬೇರೆ ಅಲ್ಲವಾ..! ಸಾಗುವ ಗತಿ ವಿಭಿನ್ನವೇ ಅಲ್ಲವಾ..? 


ಹಾಗೆಂದು, ಎದುರಿನವರಿಗೆ ಪ್ರತ್ಯುತ್ತರ ಕೊಡಲು ಹೋಗದೆ ಸುಮ್ಮನಾಗಿ ಬಿಟ್ಟಿರುತ್ತೇವೆ. ಏಕೆಂದರೆ, ಪ್ರತಿಯೊಬ್ಬರ ಮಾತು ಹಾಗೂ ಮೆಚ್ಯುರಿಟಿಯ ಸ್ಟಾರ್ಟಿಂಗ್ ಪಾಯಿಂಟ್ ಕೂಡಾ ಬೇರೆಯೇ. ಎಲ್ಲದಕ್ಕೂ ಉತ್ತರ ಕೊಡುತ್ತಾ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹಾಗೆಂದು ಮನಸ್ಸನ್ನು ವಿಚಲಿತಗೊಳಿಸಿಕೊಳ್ಳುವುದು ಬೇಡ. ನಮ್ಮ ಪ್ರಯತ್ನ ನಾವು ಮಾಡುತ್ತಿರೋಣ. ನಮ್ಮ ಬದುಕಿನ ಟರ್ನಿಂಗ್ ನ ಸ್ಟಾರ್ಟಿಂಗ್ ಪಾಯಿಂಟ್ ಸಿಕ್ಕಿಯೇ ಸಿಗುತ್ತದೆ. ಹಾಗೆಯೇ ಮಾತನಾಡುವವರ ಬಾಯಿಗೆ ಎಂಡಿಂಗ್ ಪಾಯಿಂಟ್ ಸಹ..!


~ ವಿಭಾ ವಿಶ್ವನಾಥ್

ನೋವಿನ ದಿನಗಳೇ..? ಅಥವಾ ನಲಿವಿನದ್ದೇ..?!


 ಎಲ್ಲ ದುಃಖಗಳನ್ನೂ ಸಾರ್ವತ್ರಿಕವಾಗಿ ಹಂಚಿಕೊಳ್ಳಲಾಗದು. ಅಂತೆಯೇ.. ಕೆಲ ಸಂತಸಗಳನ್ನೂ..!


ಹಲವಾರು ಬಾರಿ ವಾಸ್ತವಕ್ಕೆ ಬೆನ್ನು ತಿರುವಿ ನಿಲ್ಲುವುದು ಕಷ್ಟಕ್ಕೆ ಹೆದರಿಯೇ ಆಗಿರಬೇಕಿಲ್ಲ.. ಕಷ್ಟ, ನೋವು, ಅಸಹಾಯಕತೆ, ಕಣ್ಣೀರು ಇದ್ಯಾವುದೂ ಮತ್ತೊಬ್ಬರಿಗೆ ಕಾಣಬಾರದು ಅಂತಾ ಅಷ್ಟೇ..! 


ಹಂಚಿಕೊಂಡಷ್ಟು ಅಕ್ಷಯವಾಗುವ ನಲಿವು ಎದುರಿನವರದ್ದೂ ಆಗಲಿ. ನನ್ನ ನೋವುಗಳು ನನ್ನಲ್ಲಿಯೇ ಹಾಗೂ ಹಂಚಿಕೊಂಡ ತೀರಾ ಆಪ್ತರಲ್ಲಿಯೇ ಉಳಿದು ಹೋಗಲಿ. ಸಾಧ್ಯವಾದರೆ ನನ್ನ ಮಾತಿನ ಕುಟುಕು, ಬರಹದಿಂದ ಹೊಮ್ಮುವ ನೋವಿನ ತೀಕ್ಷ್ಣತೆ, ಕಕ್ಕುವ ಕಹಿ ಕಡಿಮೆಯಾಗಲಿ ಎಂದೇ ಪ್ರಾರ್ಥಿಸುವೆ. 


ಹಾಗಾದರೆ, ಈಗ ನಿನ್ನದು ನೋವಿನ ದಿನಗಳೇ..? ಅಥವಾ ನಲಿವಿನದ್ದೇ..?!


ಸದ್ಯಕ್ಕೆ, ನೆಮ್ಮದಿಯನ್ನು ಕಂಡುಕೊಳ್ಳುತ್ತಿರುವುದು ಎನ್ನುತಾಳವಳು.


~ವಿಭಾ ವಿಶ್ವನಾಥ್

ಶನಿವಾರ, ಜುಲೈ 4, 2026

ಊರ್ವಶಿ (ಪುಸ್ತಕ ಯಾನ - 464)


ಪುಸ್ತಕದ ಶೀರ್ಷಿಕೆ : ಊರ್ವಶಿ

ಲೇಖಕರು : ಗೊರೂರು ರಾಮಸ್ವಾಮಿ ಅಯ್ಯಂಗಾರ್ 

ಪ್ರಕಾಶಕರು : ಐಬಿಎಚ್ ಪ್ರಕಾಶನ

ಮರು ಮುದ್ರಣ : 2018

ಪುಟಗಳು : 280

ಬೆಲೆ : 225 ರೂ.


ಕೃತಿ ಕುರಿತು ಹೇಳುವಾಗ 

"ಅಹಲ್ಯೋದ್ಧಾರದ ಕಥೆಗಿಂತ ಸೀತಾಲಕ್ಷ್ಮಿಯ ಕಥೆ ಮಹತ್ವದಲ್ಲಿ ಕಡಿಮೆಯಾದದ್ದೇನಲ್ಲ. ಅದಕ್ಕೆ ಪ್ರತಿಯಾಗಿ ಇದು ಒಂದು ಕೈ ಮಿಗಿಲಾದುದೆಂದೇ ನನ್ನ ಎಣಿಕೆ" ಎನ್ನುತ್ತಾರೆ. 

ಇದಕ್ಕೆ ನಾನು ಸಹ ಸಹಮತಿ ಸೂಚಿಸುತ್ತೇನೆ. 


ಊರ್ವಶಿ ಎಂಬ ಶೀರ್ಷಿಕೆಯಿದ್ದರೂ ಈ ಹೆಸರಿನ ವ್ಯಕ್ತಿ ಈ ಕಾದಂಬರಿಯಲ್ಲಿಲ್ಲ. ಬದಲಾಗಿ ಇದೊಂದು ರೂಪಕದಂತೆ ಕೊಟ್ಟಿರುವ ಹೆಸರು. ಊರ್ವಶಿಯ ಸೌಂದರ್ಯ ಹಾಗೂ ಅದಕ್ಕೆ ಆಕರ್ಷಿತರಾಗುವ ಗಂಡುಗಳ ಹೋಲಿಕೆಯನ್ನು ನೀಡಿದ್ದಾರೆ. ಇದು ಸಾಮಾಜಿಕ ಕಾದಂಬರಿ.


ಈ ಕಾದಂಬರಿಯ ಕೇಂದ್ರಬಿಂದು ಸೀತಾಲಕ್ಷ್ಮಿ. ಬಾಲ್ಯದಿಂದಲೂ ಯೌವ್ವನದವರೆಗೂ ಮೋಹಕವಾಗಿ ಬೆಳೆಯುತ್ತಿದ್ದ ಅವಳ ಚೆಲುವು, ಬೆರಗು ಹಾಗೂ ಅವಳ ಕುರಿತು ಆರಾಧನೆ ಬೆಳೆಸಿಕೊಂಡಿದ್ದವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. 


ಸೀತಾಲಕ್ಷ್ಮಿ ಮಲ್ಲಿಗೆ ಹಳ್ಳಿಯ ಶಾನುಭೋಗ ರಾಮಣ್ಣನವರ ಮೂರನೆಯ ಮತ್ತು ಕೊನೆಯ ಮಗಳು. ರಾಮಣ್ಣನವರಿಗೆ ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳು. ಸೀತಾಲಕ್ಷ್ಮಿ ಹುಟ್ಟಿದ ಎರಡು ತಿಂಗಳಿಗೆ ಅವಳ ತಾಯಿ ತೀರಿಕೊಂಡಿದ್ದರು. ರಾಮಣ್ಣನವರು ಎರಡನೇ ವಿವಾಹವಾಗುವ ಗೋಜಿಗೆ ಹೋಗಿರಲಿಲ್ಲ. ತಾಯಿ ಇಲ್ಲದ ಸೀತಾಲಕ್ಷ್ಮಿ ಬೆಳೆಯುವ ಪಾಡು ಹೇಗಿತ್ತು ಎಂದು ಲೇಖಕರು ಕರುಳು ಕರಗುವಂತೆ ವರ್ಣಿಸಿದ್ದಾರೆ. 


ಸೀತಾಲಕ್ಷ್ಮಿಯ ಮೊದಲ ಅಣ್ಣ ರಾಮ ಎರಡನೆಯವನು ಶ್ರೀನಿವಾಸ. ಮೊದಲ ಅಕ್ಕ ಲಕ್ಷ್ಮಿಗೆ ವಿವಾಹವಾಗಿತ್ತು. ಜಲಜಾಕ್ಷಿ ಹಾಗೂ ಸೀತಾಲಕ್ಷ್ಮಿಯರ ವಿವಾಹಕ್ಕೂ ಮುನ್ನವೇ ತಂದೆ ತೀರಿ ಹೋಗಿದ್ದರಿಂದ ಅಣ್ಣಂದಿರೇ ಅವರಿಬ್ಬರಿಗೂ ವಿವಾಹ ಮಾಡಬೇಕಿತ್ತು . ಆದರೆ, ಗಟ್ಟಿಯಾದ ವರೋಪಚಾರ ಹಾಗೂ ಪಟ್ಟಿ ಹಿಡಿದು ಬರುವ ವರಗಳ ಬೇಡಿಕೆಗಳನ್ನು ಈಡೇರಿಸುವುದು ಹಣದ ಅಭಾವದಿಂದ ಇಬ್ಬರಿಗೂ ಕಷ್ಟವಿತ್ತು. 


ಜಲಜಾಕ್ಷಿ ಕುರೂಪಿಯಲ್ಲದಿದ್ದರೂ ಸುಂದರಿಯೂ ಅಲ್ಲ. ಅವಳನ್ನು ಮದುವೆಯಾದ ನರಸಿಂಹನ ಒರಟುತನ, ಕೊಳಕು, ನಿರ್ಲಕ್ಷ್ಯ ಇವುಗಳನ್ನು ಕಾಣಬಹುದು. ಕೆಲವೊಮ್ಮೆ ಅವನ ವರ್ತನೆಗಳು ಕೆಲವು ಪ್ರಾಣಿಗಳಿಗೂ ಹೋಲಿಕೆಯಾಗುತ್ತವೆ. 


ಸುಂದರಿಯಾಗಿದ್ದ ಸೀತಾಲಕ್ಷ್ಮಿಯ ವಿವಾಹಕ್ಕೂ ಕಷ್ಟವಿತ್ತು. ಮಲ್ಲಿಗೆಹಳ್ಳಿಯ ಬಾಲಿಕಾ ಪಾಠಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ ಕಮಲಮ್ಮನಿಗೂ ಸೀತಾಲಕ್ಷ್ಮಿಗೂ ಬೆಳೆದ ಬಾಂಧವ್ಯ ಆಪ್ತವಾಗಿ.. ಅವರ ದಯೆಯಿಂದ ಹಾಗೂ ಸಂಗೀತದ ಅಭಿರುಚಿಯಿಂದ ಪಿಟೀಲು ನುಡಿಸುವುದನ್ನು ಕಲಿತ ಸೀತಾಲಕ್ಷ್ಮಿ ಮುಂದೆ ಅದರಲ್ಲಿಯೇ ಪಳಗುತ್ತಾಳೆ. ಬಾಲ ವಿಧವೆ ಕಮಲಮ್ಮನವರಿಗೆ ಮಕ್ಕಳಿರಲಿಲ್ಲ. ಬಂಧುಗಳು ಯಾರೂ ಇರಲಿಲ್ಲ. ಹೀಗಾಗಿ ಸೀತಾಲಕ್ಷ್ಮಿಯ ಆಪ್ತ ನಂಟು ಹಾಗೂ ಸಂಗೀತದ ಪ್ರೇಮವೇ ಅವರನ್ನು ಉಳಿಸಿತು ಎಂದರೂ ತಪ್ಪಾಗಲಾರದು.


ಸುಂದರರಾಜ ಹಾಗೂ ಸೀತಾಲಕ್ಷ್ಮಿಯರ ವಿವಾಹವಾಗುತ್ತದೆ. ಅದು ಸುಂದರರಾಜನಿಗೆ ಪ್ರೇಮ ವಿವಾಹ. ಆತ ಸೀತಾಲಕ್ಷ್ಮಿಯನ್ನು ಇಷ್ಟಪಟ್ಟದ್ದು ಯಾವ ಸಂದರ್ಭದಲ್ಲಿ ಹಾಗೂ ಹೇಗೆ ಅವರಿಬ್ಬರ ನಂಟು ಅನುರೂಪದ ಜೋಡಿ ಎನ್ನಿಸುವಂತೆ ಮಾಡುತ್ತದೆನ್ನುವ ಸುಂದರ ಕ್ಷಣಗಳನ್ನು ಓದಿಯೇ ಸವಿಯಬೇಕು. ಸೀತಾಲಕ್ಷ್ಮಿ ತನ್ನ ಚಿಕ್ಕಮ್ಮನ ಪ್ರಾಣವಾಗಿದ್ದವಳು. ಚಿಕ್ಕಮ್ಮ ಅವಳಿಗಿಂದೇ ಬಿಟ್ಟು ಹೋಗಿದ್ದ ಉಡುಗೊರೆ ಏನಿತ್ತು..?


ಸುಂದರರಾಜ ಮಲ್ಲಿಗೆಹಳ್ಳಿಯಿಂದ 15 ಮೈಲಿ ದೂರದಲ್ಲಿದ್ದ ರಂಭಾಪುರಿಯವನು. ಅವರ ತಂದೆ ಗುಂಡಣ್ಣನವರು ಬಡ ಜಮೀನುದಾರರು. ಅವರಿಗೆ ಮೊದಲನೇ ಮದುವೆಯಲ್ಲಿ ಮೂವರು ಗಂಡು ಮಕ್ಕಳಿದ್ದರು. ಮೊದಲ ಪತ್ನಿ ತೀರಿ ಹೋಗಿದ್ದರಿಂದ ಕಲ್ಯಾಣಮ್ಮನವರನ್ನು ಎರಡನೇ ಮದುವೆಯಾಗಿದ್ದರು. ಅವರಿಬ್ಬರ ಏಕೈಕ ಮಗನೇ ಸುಂದರರಾಜ. ಅವಿದ್ಯಾವಂತನಾಗಿದ್ದರೂ ಸುಸಂಸ್ಕೃತ. ಆತನ ಸಂಗೀತ ಪ್ರೇಮ ಹಾಗೂ ಸೀತಾಲಕ್ಷ್ಮಿಯನ್ನು ಆತ ಆ ದರಿಸುವ ಗೌರವಿಸುವ, ಅವಳ ಪಿಟೀಲು ವಾದನವನ್ನು ಪ್ರೋತ್ಸಾಹಿಸುವ ಪರಿ ನಿಜಕ್ಕೂ ಆತನ ಮೇಲೆ ಗೌರವ ಹೆಚ್ಚಿಸುತ್ತದೆ. ಸುಂದರರಾಜನ ಮನೆಯಲ್ಲಿ ತಂದೆ ಎರಡನೇ ವಿವಾಹವಾದುದು ಮಕ್ಕಳಿಗೆ ಸಮ್ಮತಿ ಇರಲಿಲ್ಲ. ಸುಂದರರಾಜನ ಮೇಲೆ ಯಾರಿಗೂ ಅಷ್ಟೇನೂ ಪ್ರೀತಿ ಇರಲಿಲ್ಲ.


ಸೀತಾಲಕ್ಷ್ಮಿಯ ವಿವಾಹ, ವಿವಾಹದ ನಂತರ ಅವರಿಬ್ಬರ ಒಡನಾಟ ಎಲ್ಲವೂ ಸುಖದಿಂದಲೇ ಕೂಡಿರುವಾಗಲೇ ಸೀತಾಲಕ್ಷ್ಮಿಯ ಅಕ್ಕ ಜಲಜಾಕ್ಷಿ ತನ್ನ ಗಂಡ ನರಸಿಂಹನಿಗೆ ಈ ಬಾಣಂತನಕ್ಕೆ ತನ್ನ ತಂಗಿಯನ್ನು ಕರೆತರಲು ಹೇಳುತ್ತಾಳೆ. ಮೊದಲನೇ ಹೆರಿಗೆ ಸುಸೂತ್ರವಾಗದೆ ಹೋಗಿದ್ದು, ಹುಟ್ಟಿದ ಮಗು ಮೂರು ತಿಂಗಳಿಗೆ ಸತ್ತು ಹೋಗಿದ್ದು ಅವಳಿಗೊಂದು ಚಿಂತೆ. ಅಲ್ಲದೆ, ಅಣ್ಣನ ಮನೆಗೆ ಬಾಣಂತನಕ್ಕೆ ಬರುವುದು ಇಷ್ಟವಿಲ್ಲದೆ ತಂಗಿಯನ್ನೇ ಅಲ್ಲಿಗೆ ಕರೆಸಿಕೊಂಡಿದ್ದಳು. ಮನಸ್ಸಿಲ್ಲದ ಮನಸ್ಸಿಲ್ಲದ ಮನಸ್ಸಿನಲ್ಲಿ ಸುಂದರರಾಜನೂ ಒಪ್ಪುತ್ತಾನೆ. 


ಪಾದರಸದಂತಿದ್ದ ಸೀತಾಲಕ್ಷ್ಮಿಯ ಕಾರ್ಯ, ಅಚ್ಚುಕಟ್ಟುತನ ಪ್ರತಿಯೊಂದಲ್ಲಿಯೂ ಅವಳ ಅಸ್ಥೆ ಎಲ್ಲವೂ ಜಲಜಾಕ್ಷಿಗೂ.. ಅವಳಿಗೂ ಇರುವ ವ್ಯತ್ಯಾಸವನ್ನು ತೋರುತ್ತದೆ. ನರಸಿಂಹ ಅವಳಿಗೆ ಹೆದರಿ ಸ್ವಲ್ಪ ಬದಲಾಗುತ್ತಾನೆ. ಜಲಜಾಕ್ಷಿಯ ಹೆರಿಗೆ ಸುಸೂತ್ರವಾಗಿ ಬಾಣಂತನದ ಸಂದರ್ಭದಲ್ಲಿ, ಸ್ವಾತಿ ಮಳೆಯ ಕಾಲದ ದಿನ ನಡೆದ ದುರ್ಘಟನೆಯೊಂದು ಸೀತಾಲಕ್ಷ್ಮಿಯ ಕೈಮೀರಿದ್ದು. ಅದರಿಂದ ಅವಳು ಬದುಕಿನಲ್ಲಿ ತೆತ್ತ ಬೆಲೆ ಅಪಾರ. ಇಲ್ಲಿಂದ ಮುಂದಕ್ಕೆ ಅವಳ ದುಃಖದ ಅಧ್ಯಾಯವೇ ತುಂಬಿಹೋಗಿದೆ.


ನರಸಿಂಹನಂತಹ ಪಿಶಾಚಿಯ ದಾಳಿಯ ನಂತರವೂ ಅವಳಿಗೆ ಸುಂದರರಾಜ ದೇವರಂತೆ ಹಾಗೂ ಆತನೇ ತನ್ನ ಪ್ರೇಮ ಮೂರ್ತಿ ಎಂಬ ಭಾವ ಹೋಗಿರಲಿಲ್ಲ. ಇವಳು ತನ್ನ ಸಂಸಾರವನ್ನು ಹಾಳು ಮಾಡಿದಳೆಂದು ಜಲಜಾಕ್ಷಿಯು ದ್ವೇಷಿಸಲು, ತವರಿನವರ ಸಹಾಯವು ಸಿಗದೇ ಬಂದು ಹೋಗುವ ಸೀತಾಲಕ್ಷ್ಮಿಯ ವಿಚಾರ ಅದಾಗಲೇ ರಂಭಾಪುರಿ ಹಾಗೂ ಮಲ್ಲಿಗೆಹಳ್ಳಿಯಲ್ಲಿ ಗುಸುಗುಸು ಎಂದಿದ್ದದ್ದು ದೊಡ್ಡದೇ ಆಗಿತ್ತು. 


ಸೀತಾಲಕ್ಷ್ಮಿ ಆಸ್ಪತ್ರೆ ಸೇರಿದ ನಂತರ ಅವಳು ಉಳಿದದ್ದೇ ತಪ್ಪಾಯಿತೇನೋ ಎಂಬಂತೆ ನರಕ ಅನುಭವಿಸುತ್ತಾಳೆ . ರಾಮನಿಗಿಂತ ಧೈರ್ಯಸ್ಥನಾದ ಹಾಗೂ ಅಂತಃಕರಣದ ಅಣ್ಣ ಶ್ರೀನಿವಾಸನ ಉಡಿಗೆ ಬೀಳುತ್ತಾಳೆ ಸೀತಾಲಕ್ಷ್ಮಿ. ಇದಾದ ನಂತರ ಅವಳ ಚಾರಿತ್ರ್ಯದ ಕುರಿತ ಒಡಕು ಮಾತುಗಳು ನೇರಾನೇರವಾಗಿಯೇ ತಾಕುತ್ತವೆ. ಅಷ್ಟೇ ಅಲ್ಲದೆ ಹಳ್ಳಿಯಲ್ಲಿ ಎಲ್ಲಿ ಹೋದರು ಇದೇ ವಿಚಾರವೇ.. ಹಳ್ಳಿಯ ಜೀವನ ಹಾಗೂ ಅವಳಿಗಾಗಿ ಹಂಬಲಿಸಿರುವ ಗಂಡುಗಳು ಎಲ್ಲರಿಂದ ಪಾರಾಗಿ ಸುಂದರರಾಜನನ್ನು ನೆನೆಸುತ್ತಾಳಾದರೂ ಆತ ಅವಳ ಪಾಲಿಗೆ ಸಿಗುವಂತಿರಲಿಲ್ಲ. 


ಸೀತಾಲಕ್ಷ್ಮಿಯ ಪಿಟೀಲು ವಾದನ, ಅವಳೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು.. ನಂತರ ರಾಮ, ಶ್ರೀನಿವಾಸರು ಬೇರೆಯಾದದ್ದು ಇವೆಲ್ಲದರ ಚಿತ್ರಣವಿದೆ.


ಮತ್ತೊಮ್ಮೆ ನರಸಿಂಹ ತನ್ನ ಪತ್ನಿಯ ಜೊತೆ ಊರ ಹಬ್ಬಕ್ಕೆ ಬಂದಾಗ ಯಾರೂ ಆತನ ಕುರಿತು ಚಕಾರವೆತ್ತದೆ, ಮೊದಲಿನಂತೆಯೇ ಗೌರವದಿಂದ ಕಂಡದ್ದು.. ಅದಕ್ಕೆ ಪರಿಹಾರವೆನ್ನುವ ರೀತಿಯಲ್ಲಿ ಸೀತಾಲಕ್ಷ್ಮಿಯನ್ನು ಅವನೊಡನೆ ಕಳಿಸುವ ವಿಚಾರ ಮಾಡಿದ್ದು ಈಗಿನ ಕಾಲಕ್ಕೆ ಸರಿ ಹೋಗುವುದಿಲ್ಲವಾದರೂ.. ಆ ಕಾಲಘಟ್ಟದ ಪರಿಸ್ಥಿತಿಯನ್ನು ತೋರುತ್ತವೆ. ಆದರೆ ಸೀತಾಲಕ್ಷ್ಮಿ ಅದಕ್ಕೆ ಒಪ್ಪುವುದಿಲ್ಲ.


ಒಂದು ಪ್ರಯತ್ನವೆಂಬಂತೆ ಸೀತಾ ನಲಕ್ಷ್ಮಿಯ ಮನಸ್ಸಿನಲ್ಲಿರುವುದು ಅದೇ ಆದರೆ ಅದು ಆಗಿ ಹೋಗಲಿ ಎಂದು ಮತ್ತೆ ಅವಳನ್ನು ರಂಭಾಪುರಿಗೆ ಕಳುಹಿಸಲು ಹೊರಟ ಶ್ರೀನಿವಾಸ ಅಲ್ಲಿ ಯಾವ ಸ್ವಾಗತವನ್ನು ಕಂಡ..?


ಅಲ್ಲಿ ಸೀತಾಲಕ್ಷ್ಮಿಗೆ ಸಿಕ್ಕಿದ್ದು ನಿತ್ಯ ನರಕ. ಬಡತನದ ಬದುಕು, ಜೊತೆಗೆ ಮನಸ್ಸು ಕೆಡಿಸಿಕೊಂಡು ಸಾಲ ಮಾಡಿಕೊಂಡು ಅಲ್ಲಿಯಲ್ಲಿ ಅಲೆಯುತ್ತಿದ್ದ ಸುಂದರರಾಜ. ಶಾಮ, ಕೃಷ್ಣ ಹಾಗೂ ರಂಗಸ್ವಾಮಿಯ ಹೆಂಡತಿಯರು ಈಕೆಯನ್ನು ಒಪ್ಪಲು ಸಿದ್ಧವಿರಲಿಲ್ಲ. ಜೊತೆಗೆ ಗುಂಡಣ್ಣನವರ ಶ್ರೀರಂಗಮ್ಮನವರ ಆರ್ಭಟವೇ ಮನೆಯಲ್ಲಿ ಹೆಚ್ಚಾಗಿತ್ತು. ಮಡಿ-ಮೈಲಿಗೆಯ ಹೆಸರಿನಲ್ಲಿ ಬೇಕಾಬಿಟ್ಟಿ ನಡೆಸಿಕೊಂಡ ಜನರಲ್ಲಿ ಕಲ್ಯಾಣಮ್ಮನವರು ಪಾಪದವರು. ಆದರೆ, ಅವರ ಮಾತು ಮನೆಯಲ್ಲಿ ನಡೆಯುವಂತಿರಲಿಲ್ಲ. ಗುಂಡಣ್ಣನವರು ಮನೆಯ ಯಜಮಾನರಾಗಿದ್ದರೂ ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿದ್ದರು. ಊರಿನವರನ್ನು ಎದುರಿ ಹಾಕಿಕೊಂಡು ಅವಳನ್ನು ಸೊಸೆ ಎಂದು ಒಪ್ಪಲು ಸಿದ್ಧವಿರಲಿಲ್ಲ. ಎಲ್ಲದಕ್ಕೂ ಉತ್ತರ ಕೊಡಬೇಕಾಗಿದ್ದ ಸುಂದರರಾಜ ಬೆಂಗಳೂರು ಬಿದ್ದಿದ್ದ. ಇದಲ್ಲದರ ಜೊತೆಗೆ ಕೃಷ್ಣನ ಕೆಟ್ಟದೃಷ್ಟಿ ಹಾಗೂ ಅವನ ಚಿತಾವಣೆಯಿಂದ ಸಂಕಷ್ಟಕ್ಕೆ ಸಿಲುಕುತ್ತಾಳೆ. ಎಷ್ಟೇ ಹೇಳಿದರೂ ಯಾರೂ ಒಪ್ಪದೆ, ಕೃಷ್ಣನ ಪತ್ನಿ ಮಹಾಲಕ್ಷ್ಮಿಯ ಒಡವೆ ಕಳುವಾಗಿದ್ದಕ್ಕೆ ಸೀತಾಲಕ್ಷ್ಮಿಯೇ ಕಾರಣ ಎಂದು ಮನೆಯಿಂದ ಹೊರ ಹಾಕುತ್ತಾರೆ, ನಿರ್ದೋಷಿಯಾಗಿದ್ದವಳು ಕಳ್ಳತನದ ಆಪಾದನೆಯ ಹೊತ್ತು, ಸಾಕಷ್ಟು ಅವಮಾನಗಳನ್ನು ಅನುಭವಿಸಿ ಮತ್ತೆ ಅಣ್ಣನ ಮನೆ ಸೇರುತ್ತಾಳೆ. ಮುಂದೆ ಕೃಷ್ಣನ ಕಳ್ಳತನ ಸಾಬೀತಾದದ್ದು ಹೇಗೆ..? ರಂಭಾಪುರಿಯ ನರಕದ ದಿನಗಳು ಹೇಗಿದ್ದವೆಂದನ್ನು ಓದುವಾಗ ಹೇವರಿಕೆ ಹುಟ್ಟಿಸುತ್ತದೆ.


ಇತ್ತ ಸುಂದರರಾಜನು ಅವಳನ್ನು ನೆನೆಸಿದ ರೂ ಹೋಗುವ ಧೈರ್ಯ ಮಾಡದೆ.. ಅವನ ಮನಸ್ಸಿನ ತುಮುಲಗಳಿಂದ ಅನುಭವಿಸಿದ ನೋವುಗಳು.. ಅವನು ಸಾಲ ಮಾಡಿ ಸಿಕ್ಕಿಕೊಂಡಾಗ ಕಮಲಮ್ಮನ ಸಹಾಯದಿಂದ ಸೀತಾಲಕ್ಷ್ಮಿ ಮಾಡಿದ ಸಹಾಯವೊಂದು ಆತನನ್ನು ಕಾಪಾಡಿದರೂ ಶ್ರೀನಿವಾಸನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅದಕ್ಕೆ ಕಾರಣ ಅವನ ಮಾತು ಮೀರಿ ನಡೆದಳು ಎಂಬುದು ಮಾತ್ರವಲ್ಲ.. ಬೇರೊಂದು ದೂರದಾಸೆಯೂ.... ಅದೇನು ಓದಿ ನೋಡಿ.


ಸೀತಾಲಕ್ಷ್ಮಿಯ ಸೋದರಮಾವ ಆಯುರ್ವೇದ ಆಚಾರ್ಯ ಪ್ರಾಣಾಚಾರ್ಯ ಪಂಡಿತರು ಮಲ್ಲಿಗೆಹಳ್ಳಿಗೆ ಬರುವುದು ಅವಳ ಜೀವನದ ಬಹುದೊಡ್ಡ ತಿರುವು. ಅವರು ಸುಧಾರಕರೂ ಹೌದು. ಸಮಾಜದ ಉದ್ದಾರಕ್ಕೆ, ಅವರ ಕಾರ್ಯಕ್ಕೆ ಸೀತಾಲಕ್ಷ್ಮಿ ನೆರವಾದ ಹಾಗೂ ಸೀತಾಲಕ್ಷ್ಮಿಯ ಬದುಕಿಗೆ ಅವರು ಬೆಳಕಾದ ದಿನಗಳು ಹೇಗಿದ್ದವು..? ಅಷ್ಟಕ್ಕೂ ಸೀತಾಲಕ್ಷ್ಮಿಯ ಕಷ್ಟಗಳ ಬದುಕು ಅವರಿಗೆ ತಿಳಿದದ್ದು ಅಲ್ಲಿಗೆ ಬಂದ ನಂತರವೇ.. ಆದರೆ, ತಮಗೆ ಬೇಕಾದ ಸಹಾಯಕ್ಕೆ ಸೀತಾಲಕ್ಷ್ಮಿಯನ್ನು ಕೇಳಿಕೊಳ್ಳಲು ಬಂದಿದ್ದ ಪ್ರಾಣಾಚಾರ್ಯರ ಬೇಡಿಕೆ ಏನಿತ್ತು..? ಅದು ನೆರವೇರಿತೇ..? 


ಸೀತಾಲಕ್ಷ್ಮಿಯ ಪಿಟೀಲು ವಾದನ, ಸಂಗೀತ ಸಾಧನೆ ಅವಳ ಪ್ರತಿಭೆ ನಮ್ಮನ್ನು ಆವರಿಸುತ್ತದೆ. ಮುಂದೆ ಸೀತಾಲಕ್ಷ್ಮಿ ಆಯುರ್ವೇದ ಕಲಿತು, ಅದರಲ್ಲಿ ಪರಿಣಿತಿ ಹೊಂದಿ ಹಳ್ಳಿಯ ಜನರ ಪಾಲಿಗೆ ಬೆಳಕಾಗಿ ಸೇವಾಕಾರ್ಯಕ್ಕೆ ನಿಲ್ಲುತ್ತಾಳೆ. 


ಅವಳ ಸೇವಾ ಜೀವನದ ಅಡ್ಡಿ-ಆತಂಕಗಳು, ಅದನ್ನು ನಿವಾರಿಸಿಕೊಂಡ ಬಗೆ.. ಸುಂದರರಾಜ ಮತ್ತು ಆಕೆಯ ಬದುಕು ಎಲ್ಲಿಂದ ಶುರುವಾಗಿ ಯಾವೆಲ್ಲ ತಿರುವು ಪಡೆದು ಹೇಗೆ ಸಾಗುತ್ತದೆ ಓದಿ ನೋಡಿ. 


ಕಾದಂಬರಿಯ ಕೊನೆಯ ಭಾಗ ಸಮಾಜ ಸುಧಾರಣೆಯ ಅಂಶದಿಂದಲೂ.. ಹೆಣ್ಣು ಮಕ್ಕಳ ಬದುಕು ಬದಲಾಗಬಹುದಾದ ಬಗೆಯಿಂದಲೂ.. ಸೀತಾಲಕ್ಷ್ಮಿಯ ಗಟ್ಟಿತನ, ಸೇವಾ ಮನೋಭಾವ, ಅತಿಶಯ ಪ್ರೇಮ ಎಲ್ಲದರಿಂದಲೂ ಇಷ್ಟವಾಯಿತು. ಕಾದಂಬರಿಯ ಅಂತ್ಯವಂತೂ ಊಹಿಸಲು ಸಾಧ್ಯವಾಗಲಿಲ್ಲ. 


ಮನಸ್ಸನ್ನು ಹದವಾಗಿಟ್ಟುಕೊಳ್ಳಲು ಸಂಗೀತ ಎಷ್ಟು ಸಹಕಾರಿ ಹಾಗೂ ಪರಿಣಾಮಕಾರಿ ಎಂಬುದನ್ನು ಚಿತ್ರಿಸಿದ್ದಾರೆ. ಸಂಗೀತದ ರಸಘಳಿಗೆಗಳು ಆವರಿಸಿಕೊಳ್ಳುತ್ತವೆ. 


ಅಂದಿನ ಕಾಲಘಟ್ಟದ ಹಳ್ಳಿ, ಮೂಢನಂಬಿಕೆ, ಸಂಕುಚಿತ ಮನೋಭಾವಗಳು, ಸುಧಾರಣೆಯ ಸೋಗು, ಬೆರಳೆಣಿಕೆಯಷ್ಟು ನೈಜ ಮನುಷತ್ವ ಹೊಂದಿದ ಜನರು, ಬಡತನ ಹೀಗೆ ಪ್ರತಿಯೊಂದು ಅಂಶವೂ ಸೊಗಸಾಗಿ ಚಿತ್ರಿತವಾಗಿದೆ. ಇದು ಅಂದಿನ ಕಾಲಘಟ್ಟವನ್ನು ಮನಸ್ಸಿನಲ್ಲಿಟ್ಟುಕೊಂಡು ಓದಬೇಕಾದ ಓದು. ಕಾಡುವ ಓದು. 

~ವಿಭಾ ವಿಶ್ವನಾಥ್ 

ಭಾನುವಾರ, ಜೂನ್ 28, 2026

ಯೋಧ ಮತ್ತು ಹೆಂಗಸು


ಕವಿತೆಯ ಶೀರ್ಷಿಕೆ : ಯೋಧ ಮತ್ತು ಹೆಂಗಸು

ರಚನೆ : ಸು. ರಂ. ಎಕ್ಕುಂಡಿ


ಈ ಕವಿತೆಯನ್ನು ನಾನು ಎಚ್. ಎಸ್ ವೆಂಕಟೇಶಮೂರ್ತಿ ಅವರ ಸಂಪಾದಕತ್ವದ ಶತಮಾನದ ಕಾವ್ಯ ಕವನ ಸಂಕಲನದಿಂದ ಆಯ್ದುಕೊಂಡಿದ್ದೇನೆ.


ಉರಿಬಿಸಿಲು ಕೆಂಪುಹುಡಿ, ಮೈತುಂಬ ಧೂಳಿಡಿಗಿ ಕುದುರೆಯಿಳಿದನು ಯೋಧ ಜನರ ಕಂಡು 

"ನೀರು ಹಣಿಸುವಿರ ತುಸು" ಅಂದಿರಲು ಹೆಂಗಸು 

ಬೇಗ ಬಂದಳು ಮಡಕೆ ತುಂಬಿಕೊಂಡು


"ಬಳಲಿದಿರಿ, ಪಾಪ, ಬನ್ನಿರಿ ಒಳಗೆ ವಿಶ್ರಮಿಸಿ."

ಚಾಪೆಯನು ಹಾಸಿದಳು ಕೂತುಕೊಳಲು 

"ಇರಲಿ ಬಿಡಿ. ಈ ಮರದ ನೆರಳಲ್ಲೆ ಕೂಡುವೆನು 

ತಂಪಾಗಿ ತಬ್ಬಿರುವವಿದರ ಹೆಳಲು”


"ಬಟ್ಟಲಿನ ತುಂಬ ಇದೆ ಜೇನು, ಈ ಚೊಂಬಿನಲಿ

ತಣ್ಣಗಿನ ನೀರು ಇದೆ, ತೆಗೆದುಕೊಳ್ಳಿ 

ಇಲ್ಲಿಹುದು ಬೀಸಣಿಕೆ, ಬಹಳ ಸೆಕೆ ಅಲ್ಲವೆ? 

ಇದರಿಂದ ಗಾಳಿಯನು ಬೀಸಿಕೊಳ್ಳಿ


ಆಗ ಒಮ್ಮೆಲೆ ಬೀಸಿ ಬಂತು ತೆಂಕಣ ಗಾಳಿ 

ದೂರವೆಲ್ಲೊ ಕೇಳಿಬಂತು ಹಾಡು 

ಮಾವಿನೆಳಚಿಗುರಿನಲಿ ಚಿಮ್ಮಿ, ಪಯಣಿಗನೆಂದ 

"ಇದಕೆ ಜೋಳದ ಪಾಳಿಯಿಲ್ಲ ನೋಡು" 


ಜೇನು ಸವಿದನು ನೀರು ಕುಡಿದು ಮೈಯೊಡ್ಡಿದನು. 

ತುಸು ಹೊತ್ತು ತಂಬೆಲರ ನೆರಳಿಗೆಂದು

ಎದ್ದು ಕುದುರೆಗೆ ಥಡಿಯ ಹಾಕಿ ಅಣಿಗೊಳಿಸಿದನು 

ಮತ್ತೆ ದೂರದ ತನ್ನ ಪಯಣಕೆಂದು


"ಹೋಗಿ ಬರುವೆನು ತಾಯಿ" ಎಂದು ಕವಚವ ತೊಟ್ಟು ಖಡ್ಗವನು ಬಿಗಿದಿಟ್ಟ ಟೊಂಕದಲ್ಲಿ

ಹೆಂಗಸೆಂದಳು, "ಆಯ್ತು ಹೋಗಿ ಬನ್ನಿರಿ ಮತ್ತೆ

ಬಂದಾಗ ಬರಬೇಕು ನೀವು ಇಲ್ಲಿ"


“ಮರೆತುಬಿಟ್ಟೆನು ನಿಮ್ಮ ಹೆಸರು ಕೇಳಲು, ನೀವು 

ನಡೆದ ದಾರಿಗೆ ಇರಲಿ ಶುಭದ ನೆರಳು 

ಬಿರಿದ ಮಲ್ಲಿಗೆ ಕಂಡು, ಕೋಗಿಲೆಯ ದನಿ ಕೇಳಿ ತುಂಬಿಬಂದಿತ್ತೇಕೆ ಕಣ್ಣು, ಕೊರಳು ?"


ಯೋಧ ನುಡಿದನು "ತಾಯಿ ಮತ್ತೆ ನೆನಪಿಗೆ ಬಂತು 

ನನ್ನೂರು ಬನವಾಸಿ ನನಗೆ ಇಂದು

ಯೋಧ ನಡೆಯುವ ದಾರಿ ಕವಿಯ ದಾರಿಯು ಕೂಡ. 

ನನ್ನನ್ನು ಕರೆಯುವರು ಪಂಪನೆಂದು”


ಇಲ್ಲಿ ಕವಿ ಹಿಂದಿನ ಕಾಲದಲ್ಲಿ ಜನರಿಗೆ ಯೋಧರ ಬಗೆಗಿದ್ದ ಗೌರವಗಳು ಹಾಗೂ ಅವರಿಗೆ ನೀಡುತ್ತಿದ್ದ ಆತಿಥ್ಯದ ಕುರಿತು ಬೆಳಕು ಚೆಲ್ಲಿದ್ದಾರೆ. ಇದು ಕೇವಲ ಯೋಧರಿಗೆ ಸಿಗುತ್ತಿದ್ದ ಗೌರವ ಮಾತ್ರವಲ್ಲ. ಯಾರೇ ಅಪರಿಚಿತರು ಬಂದರೂ ಅವರನ್ನು ಅತಿಥಿಗಳಾಗಿ ಕಾಣುವ ಬಗೆ ಹೀಗಿತ್ತು. ಆದರೆ, ಯೋಧರಿಗೆ ಈ ಆತಿಥ್ಯ ತುಸು ಹೆಚ್ಚೇ ಇತ್ತು ಎಂಬುದನ್ನು ಅರಿಯಬಹುದು. 


ಉರಿ ಬಿಸಿಲಿನಲ್ಲಿ, ಧೂಳಿನ ದಾರಿಯಲ್ಲಿ ಬಾಯಾರಿಕೆಯಿಂದ ಬಳಲಿದ್ದ ಯೋಧ ಜನರಿದ್ದುದನ್ನು ಕಂಡು ತನ್ನ ಬಾಯಾರಿಕೆ ತಣಿಸಿಕೊಳ್ಳಲು ಬಂದಾಗ ಹೆಣ್ಣು ಮಗಳು ನೀರು ಕೊಟ್ಟದ್ದು ಮಾತ್ರವಲ್ಲದೆ.. ವಿಶ್ರಮಿಸಲು ಚಾಪೆ ಹಾಸುತ್ತಾಳೆ. ಆದರೆ, ಮರದ ನೆರಳಿನ ನೈಸರ್ಗಿಕ ತಂಗಾಳಿಯನ್ನು ಸವಿಯವ ನೆಪ ಹೇಳಿ ಆತ ಮರವನ್ನು ಬಣ್ಣಿಸುವ ಪರಿ ಯೋಧನ ಕವಿ ಮನವನ್ನು ತೋರುತ್ತದೆ.


ನೀರು, ವಿಶ್ರಾಂತಿಯ ಜೊತೆಗೆ ಸೆಕೆಗಾಲಕ್ಕೆ ಬೀಸಣಿಗೆ ಹಾಗೂ ಜೇನನ್ನು ಸವಿಯಲು ಅತಿಥಿಗೆ ಹೇಳುವ ಹೆಣ್ಣು ಮಗಳನ್ನು ಕಾಣಬಹುದು. ಆಗ ಯೋಧ ದೂರದಿಂದ ಕೇಳಿ ಬಂದ ಹಾಡು ಹಾಗೂ ತೆಂಕಣ ದಿಕ್ಕಿನಿಂದ ಬೀಸಿ ಬಂದ ಗಾಳಿಯನ್ನು ಆಸ್ವಾದಿಸುತ್ತಾ.. "ಇದಕ್ಕೆ ಜೋಳದ ಪಾಳಿ ಇಲ್ಲ ನೋಡು" ಎನ್ನುತ್ತಾರೆ. ಸಾಮಾನ್ಯವಾಗಿ ಜೋಳಗಳನ್ನು ಬೆಳೆಯುವ ಹೊಲಗಳ ಸಾಲುಗಳು ಮಾನವ ನಿರ್ಮಿತವಾಗಿರುತ್ತವೆ. ಆದರೆ, ಇಲ್ಲಿ ಅಂತಹ ಸುಖವು ನೈಸರ್ಗಿಕವಾಗಿಯೇ ರೂಪುಗೊಂಡಿದೆ ಎಂಬರ್ಥ. 


ನೆರಳಲ್ಲಿ ಕ್ಷಣ ಕಾಲ ವಿಶ್ರಮಿಸಿ, ಜೇನು ಸವಿದು, ನೀರು ಕುಡಿದು, ಕುದುರೆಗೆ ಜೀನು ಹಾಕಿ ತನ್ನ ದೂರದ ಪ್ರಯಾಣಕ್ಕೆ ತಯಾರು ಮಾಡಿ.. ಕವಚ ತೊಟ್ಟು, ಸೊಂಟಕ್ಕೆ ಖಡ್ಗ ಬಿಗಿದು "ಹೋಗಿ ಬರುವೆನು ತಾಯಿ" ಎಂದು ಆಕೆಗೆ ಗೌರವದಿಂದ ಹೇಳುತ್ತಾನೆ. 


"ಹೋಗಿ ಬನ್ನಿ" ಎಂದು ಹಾರೈಸುತ್ತಲೇ "ಮತ್ತೆ ಬಂದಾಗ ಬನ್ನಿ" ಎಂಬ ಆತ್ಮೀಯ ಕರೆಯೋಲೆಯನ್ನು ನೀಡುತ್ತಾಳೆ. ಅದರ ಜೊತೆಗೆ ಸೌಜನ್ಯದಿಂದ ನಿಮ್ಮ ಹೆಸರು ಕೇಳಲು ಮರೆತೆನೆಂದೂ ಜೊತೆಗೆ ನಿಮ್ಮ ಹಾದಿಯಲ್ಲಿ ಶುಭದ ನೆರಳಿರಲಿ ಎಂದು ಹಾರೈಸುತ್ತಾಳೆ.

ಹಾಗೂ ಅರಳಿರುವ ಮಲ್ಲಿಗೆ ಹಾಗೂ ಕೋಗಿಲೆಯ ದನಿ ಕೇಳಿ ಭಾವುಕನಾಗಿದ್ದನು ಗಮನಿಸಿದ ಹೆಣ್ಣು ಮಗಳು ಅದೇಕೆ ಎಂದು ಕೇಳುತ್ತಾಳೆ. ಹೆಣ್ಣು ಮಗಳ ಗಮನಿಸುವಿಕೆ ಎಷ್ಟು ಸೂಕ್ಷ್ಮ ಎಂಬುದನ್ನು ಇಲ್ಲಿ ಕಾಣಬಹುದು. 


ಕೊನೆಯ ನಾಲ್ಕು ಸಾಲುಗಳಲ್ಲಿ ಎಲ್ಲದಕ್ಕೂ ಉತ್ತರ ಕಾಣುತ್ತದೆ. ಆ ಯೋಧ ಮತ್ತಾರೂ ಅಲ್ಲ.. ಕವಿ ಪಂಪ. ಆತ ಕೇವಲ ಕವಿಯಲ್ಲ. ಯೋಧನೂ ಆಗಿದ್ದವನು. ರಾಜ್ಯದ ರಾಜಕೀಯದಲ್ಲಿ, ಯುದ್ಧ ತಂತ್ರದಲ್ಲಿ ಪರಿಣಿತಿ ಹೊಂದಿದ್ದವನು. 

"ಯೋಧ ನಡೆಯುವ ದಾರಿ ಕವಿಯ ದಾರಿಯೂ ಕೂಡ"

ಎಂಬ ಮಾತು ಅದೆಷ್ಟೋ ಹಿರಿದರ್ಥವನ್ನು ಮೂಡಿಸಿದೆ. 

ಕವಿ ಮನದಿಂದ ಅದೆಲ್ಲವನ್ನು ನೋಡಿದ್ದು ಮಾತ್ರವಲ್ಲದೆ ತನ್ನ ಹುಟ್ಟೂರು ಬನವಾಸಿಯನ್ನು ನೆನೆದು ಭಾವುಕನಾಗಿದ್ದನ್ನು ಹಂಚಿಕೊಳ್ಳುತ್ತಾನೆ. "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂಬ ಪಂಪನ ಸಾಲು ಅಕಾರಣವಾಗಿ ನೆನಪಾಯಿತು ನನಗೆ. 


ಮನುಷ್ಯನ ಸೂಕ್ಷ್ಮ ದೃಷ್ಟಿ, ಪ್ರಕೃತಿಯ ವರ್ಣನೆ, ಕವಿ ಮನ, ಹೆಣ್ಣು ಮಗಳ ಆತಿಥ್ಯ, ಸೌಜನ್ಯ, ಕಾಳಜಿ ಹಾಗೂ ಮಾನವೀಯ ದೃಷ್ಟಿ, ಪಂಪನ ಹಿರಿಮೆ ಎಲ್ಲವನ್ನು ಬಹಳ ಸೊಗಸಾಗಿ ಈ ಕವಿತೆಯಲ್ಲಿ ಸು. ರಂ ಎಕ್ಕುಂಡಿಯವರು ಕಟ್ಟಿಕೊಟ್ಟಿದ್ದಾರೆ. 


~ ವಿಭಾ ವಿಶ್ವನಾಥ್

ಬೇಲಿಯ ಮೇಲಿನ ನೀಲಿಯ ಹೂಗಳು



ಕವಿತೆಯ ಶೀರ್ಷಿಕೆ : ಬೇಲಿಯ ಮೇಲಿನ ನೀಲಿಯ ಹೂಗಳು

ರಚನೆ : ಚೆನ್ನವೀರ ಕಣವಿ

ಈ ಕವಿತೆಯನ್ನು ನಾನು ಎಚ್. ಎಸ್ ವೆಂಕಟೇಶಮೂರ್ತಿ ಅವರ ಸಂಪಾದಕತ್ವದ ಶತಮಾನದ ಕಾವ್ಯ ಕವನ ಸಂಕಲನದಿಂದ ಆಯ್ದುಕೊಂಡಿದ್ದೇನೆ.


ಸಾಲಾಗಿ ನವಿಲು ಗರಿಗೆದರಿ ನರ್ತಿಸಿದಂತೆ 

ಮುಂಜಾವದಲಿ ಬೇಲಿ ತುಂಬ ನೀಲಿಯ ಹೂ 

ಜೀವನೋತ್ಸಾಹದಲ್ಲಿ ಎದೆ ತುಂಬಿಸುವ ರೂಹೂ!

ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ

ಎಲ್ಲಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿ

ತೆರೆದಿಹುದು ನೂರು ಸಾವಿರ ನೀಲ ಬಗೆಗಣ್ಣು!

(ನೇಸರನಿಗೂ ಜಗಕೂ ಇನ್ನೂ ನಿದ್ದೆಗಣ್ಣು)

ಎಲ್ಲ ಒಂದೇ ಅದಕೆ - ತೋಟ ಬೇಲಿಯಕಳ್ಳಿ

ಬಿಸಿಲು ಬಲಿಯುವ ಮುನ್ನ ಬಗೆಗೊಂಡ ಸೌಜನ್ಯ

ಮುಖವ ಸಣ್ಣದು ಮಾಡಿ ಮುದುಡಿಕೊಂಡಿರೆ ಜೀವ

ಬರಿಯ ನೆನಪಿಗೆ ಉಳಿದ ದೇಟಿಗಂಟಿದ ಹೂವ

ಬದಿಬದಿಗೆ ನಾಳೆಯರಳುವ ಮೊಗ್ಗೆ ಮೂರ್ಧನ್ಯ!

ವಿಮಲ ಕೋಮಲ ಕಾಂತಿಯೊಗುಮಿಗುವ ಚೈತ್ಯಾಕ್ಷಿ

ಅದೊ ಅಲ್ಲಿ, ಇದೊ ಇಲ್ಲಿ ಪ್ರತ್ಯಕ್ಷ ಸುಮ ಸಾಕ್ಷಿ!


ಇಲ್ಲಿ ಬೇಲಿಯ ಮೇಲಿನ ನೀಲಿ ಹೂಗಳ ಸೌಂದರ್ಯದ ಸೊಗಸನ್ನು ಮೊದಲಿಗೆ ಸವಿಯೋಣ.


ಮುಂಜಾನೆಯೇ ಅರಳುವ ಹೂವುಗಳು ಮನಕ್ಕೆ ಮುದ ನೀಡುತ್ತವೆ. ಅದರಲ್ಲಿಯೂ ಬೇಲಿಯ ತುಂಬಾ ಹಬ್ಬಿರುವ ನೀಲಿಯ ಹೂಗಳಂತೂ ಜೀವನೋತ್ಸಾಹದಲ್ಲಿ ಮನದುಂಬುವ (ರೂಹು)ಆತ್ಮದಂತೆ ಎನ್ನುತ್ತಾರೆ. ಜೊತೆಗೆ ಸಾಲಾಗಿ ನವಿಲುಗಳು ಗರಿಗಿದರೆ ನರ್ತಿಸಿದಾಗ ನೋಡಲು ಕಣ್ಣಿಗೆ ಎಷ್ಟು ಹಬ್ಬವೋ ಇವೂ ಅಂತೆಯೇ ಕಣ್ಣಿಗೆ ಹಬ್ಬ. ಬಣ್ಣದಲ್ಲಿ ಮಾತ್ರವಲ್ಲದೇ ಅರಳಿ ನಿಂತ ದಳಗಳ ಸೌಂದರ್ಯವೂ ನವಿಲನ್ನೇ ನೆನಪಿಸುತ್ತದೆ.


ಬೇಲಿಯ ಮೇಲಿನ ಹೂಗಳನ್ನು ಯಾರೂ ಬೆಳೆದಿಲ್ಲ. ಭೂಮಿಯೇ ಭಾವ ತುಂಬಿ ತನ್ನ ಚೈತನ್ಯವನ್ನೆಲ್ಲ ಹೊರ ಹಾಕಿದಂತೆ ಮನಸೋ ಇಚ್ಛೆ ಬೆಳೆದ ಬಳ್ಳಿಗಳು.. ಅದರಲ್ಲಿ ಹರಡಿರುವ ಈ ಹೂವುಗಳು ನೂರು ಸಾವಿರ ನೀಲಿಯ ಕಣ್ಣುಗಳಂತೆ ಎಂದು ಹೂಗಳನ್ನು ಹರಡಿ ನಿಂತಿರುವ ಪರಿಯನ್ನು ಹೇಳುತ್ತಾರೆ.


ಸೂರ್ಯನಿಗೂ.. ಜಗತ್ತಿಗೂ ಇನ್ನೂ ನಿದ್ದೆಗಣ್ಣಿರುವಾಗಲೇ ಅರಳುವ ಹೂವುಗಳು ಬಿಸಿಲು ಬಲಿಯುತ್ತಾ ಹೋದಂತೆ ತಮ್ಮ ಮೃದುತ್ವವನ್ನು ಕಡಿಮೆ ಮಾಡಿಕೊಳ್ಳುತ್ತಾ.. ಮುಖ ಸಣ್ಣದು ಮಾಡಿ, ಮುದುಡಿಕೊಳ್ಳುತ್ತಾ ಹೋಗುತ್ತವೆ. ಬಿಸಿಲು ಮೇಲೇರಿದಂತೆ ದಂಟಿಗೆ ಅಂಟಿದ ಹೂಗಳ ಕುರುಹುಗಳನ್ನಷ್ಟೇ ನಾವು ಕಾಣಬಹುದು. ಆದರೆ, ಇಲ್ಲಿಗೆ ಆ ಸೌಂದರ್ಯ ಮುಗಿಯುವುದಿಲ್ಲ. ಏಕೆಂದರೆ, ಅವುಗಳ ಪಕ್ಕದಲ್ಲಿ ನಾಳೆ ಅರಳುವ ಮೊಗ್ಗುಗಳು ಅದಾಗಲೇ ಜೀವ ತಳೆದಿರುತ್ತವೆ. ಕೋಮಲತೆ, ಕಾಂತಿ ಚೈತನ್ಯದ ಕಣ್ಣುಗಳಂತೆ ಎನ್ನುತ್ತಾರೆ.


ಈ ಬೇಲಿ ಮೇಲಿನ ನೀಲಿಯ ಹೂಗಳು ನಮಗೆ ಕೇವಲ ಸೌಂದರ್ಯವನ್ನು ಮಾತ್ರ ತೋರದೆ.. ಬದುಕಿನ ಪಾಠವನ್ನು ತೋರುತ್ತವೆ. ಕೆಲವೇ ಕಾಲ ಬದುಕಿದ್ದರೂ ವೈಭವದಿಂದ ಬದುಕುತ್ತವೆ. ಅಷ್ಟೇ ಅಲ್ಲದೆ.. ನೋಡುಗರ ಕಣ್ಣಿಗೆ, ಮನಸ್ಸಿಗೆ ಚೈತನ್ಯವನ್ನು ತುಂಬುತ್ತವೆ. ಅವುಗಳ ಜೀವಿತಾವಧಿ ಹೆಚ್ಚಲ್ಲವಾದರೂ ತಾವು ಅರಳಿರುವ ಸಂದರ್ಭದಲ್ಲಿ ತೋರುವ ಸೌಂದರ್ಯ ಹಾಗೂ ಉತ್ಸಾಹ ಶಾಶ್ವತವಾದದ್ದು. ಆ ಹೂಗಳು ತಮ್ಮ ಬದುಕನ್ನು ಮುಗಿಸುತ್ತವಾದರೂ ಹಾಗೂ ಹೇಳುವ ಪಾಠ ಅಲ್ಲಿಗೆ ನಿಲ್ಲುವುದಿಲ್ಲ. ಏಕೆಂದರೆ, ಮೊಗ್ಗುಗಳು ಮರುದಿನಕ್ಕೆ ನಮಗೆ ಮತ್ತಷ್ಟು ಚೈತನ್ಯವನ್ನು ಹಾಗೂ ಮತ್ತದೇ ಸೌಂದರ್ಯವನ್ನು ತೋರುತ್ತವೆ. ಪ್ರಕೃತಿ ಕಲಿಸುವ ಪಾಠವೆಷ್ಟು ಸುಂದರ ಅಲ್ಲವೇ..?! 


ದೃಶ್ಯ ವೈಭವವನ್ನು ಕವಿತೆಯ ಶುರುವಿನಲ್ಲಿ ತೋರುವ ಕವಿ ಬದುಕಿನ ಬಹು ದೊಡ್ಡ ಪಾಠವನ್ನು ತಾವಾಗಿಯೇ ಬೆಳೆಸದ.. ಆದರೆ ನೈಸರ್ಗಿಕವಾಗಿ ಅರಳುವ ಹೂಗಳ ಮೂಲಕ ತೋರಿದ್ದಾರೆ. ಯಾರು ಗುರುತಿಸಲಿ, ಬಿಡಲಿ ತಮ್ಮ ಬದುಕನ್ನು ಸಾರ್ಥಕವಾಗಿಯೇ ಬದುಕಿಯೇ ಹೋಗುವ ಈ ಹೂಗಳು ಶಾಶ್ವತವಾಗಿ ಕವಿತೆಯ ಮೂಲಕ ಚೈತನ್ಯದಾಯಕವಾಗಿವೆ. 


ಚೆನ್ನವೀರ ಕಣವಿ ಅವರ ಈ ಕವಿತೆ ನನಗೆ ಚೈತನ್ಯದಾಯಕವಾಗಿಯೂ, ಪದಲಾಲಿತ್ಯದಿಂದಲೂ ಸೆಳೆಯಿತು. 


~ವಿಭಾ ವಿಶ್ವನಾಥ್