ಶನಿವಾರ, ಮೇ 16, 2026

ಗೆಲುವಿನ ಮುನ್ನಡೆ (ಬೆಳಕಿಂಡಿಯ ಕತೆಗಳು - 20)


"ಕಂದಾ, ನೀನು ಆಡುವಾಗ ನಿನ್ನ ಆಟದ ಮೇಲೆ ಮಾತ್ರ ಗಮನ ಹರಿಸು. ಆಗಷ್ಟೇ ನೀನು ಗೆಲುವಿನ ಹಾದಿಯತ್ತ ಸಾಗಬಹುದು. " ಎಂದು ಹೇಳಿದ್ದ ತಾಯಿಯ ಮಾತು ನವೋದಯ ಬಾಲ್ ಬ್ಯಾಡ್ಮಿಂಟನ್ ತಾರೆ ಶಿಖಾಳಿಗೆ ನೆನಪಾಗತೊಡಗಿತು. 


ಆದರೂ, ಅವಳ ಮುಂದಿದ್ದದ್ದು ಈಗಾಗಲೇ ಗೆಲುವು ಸಾಧಿಸಿ ಗೆಲುವಿನ ಉತ್ತುಂಗದಲ್ಲಿ ತೇಲುತ್ತಿದ್ದ ಬ್ಯಾಡ್ಮಿಂಟನ್ ತಾರೆ ದಿಯಾ. ಇಬ್ಬರ ಆಟವೂ ಶುರುವಾಯಿತು. ಶಿಖಾ ಮೊದಲು ನರ್ವಸ್ ಆದುದರಿಂದ ದಿಯಾ ಆ ಸೆಟ್ ನಲ್ಲಿ ಮುನ್ನಡೆದಳು. ದಿಯಾಳಿಗೆ ಆ ಸೆಟ್ ಸರಾಗವಾದರೂ ಮುಂದಿನ ಸೆಟ್ ನಲ್ಲಿ ಗೆದ್ದದ್ದು ಶಿಖಾ. 3-7 ರಿಂದ ಮುನ್ನಡೆ ಸಾಧಿಸಿದ್ದಳು. ಕಡೆಯ ಸೆಟ್ ನಲ್ಲಿಯೂ ಕೂದಲೆಳೆಯ ಅಂತರದಲ್ಲಿ 5-6 ರಿಂದ ಗೆಲುವು ಸಾಧಿಸಿ ಗೆದ್ದಿದ್ದಳು ಶಿಖಾ.


ಅವಳ ಈ ಗೆಲುವಿನ ಗುಟ್ಟಿನ ಕುರಿತು ಎಲ್ಲರಿಗೂ ಹೇಳುವಾಗ ಹೇಳಿದ್ದು "ಎದುರಾಳಿಯ ಕುರಿತು ಗಮನ ನೀಡುವುದಕ್ಕಿಂತ ನಮ್ಮ ಕುರಿತು ಗಮನ ನೀಡಿದರೆ ಗೆಲುವಿನತ್ತ ಮುನ್ನಡೆಯಬಹುದು. ಆಟದಲ್ಲಿಯೂ.. ಬದುಕಲ್ಲಿಯೂ" ಎಂದಾಗ ಸಿಕ್ಕ ಚಪ್ಪಾಳೆ ಮುಗಿಲು ಮುಟ್ಟಿತ್ತು.


~ವಿಭಾ ವಿಶ್ವನಾಥ್

ಹೊಸ ಪ್ರಪಂಚ (ಬೆಳಕಿಂಡಿಯ ಕತೆಗಳು - 19)


ಶಾಲೆ ಎಂಬುದು ವಿದ್ಯಾಲಯವಾದರೂ ಸರಸ್ವತಿ ಕೊಠಡಿಗಳಲ್ಲಿ ಮಾತ್ರ ನೆಲೆಸಿರುವುದಿಲ್ಲ. ವಿದ್ಯೆ ಕೂಡಾ ಬರೀ ನಾಲ್ಕು ಕೊಠಡಿಗಳ ಮಧ್ಯದಲ್ಲಿ ಮಾತ್ರ ದೊರೆಯುವುದಿಲ್ಲ ಎಂಬುದು ಅರಿವಾಗಲು ಆ ದಿನವೇ ಬರಬೇಕಾಯ್ತು.


ಅವತ್ತು ಬಂಗಾರಿ ಶಾಲೆಗೆ ಹೊರಟ ಮೊದಲ ದಿನ. ಆಕೆಯನ್ನು ಬಿಡಲು ಹೊರಡುವ ಹಿಂದಿನ ದಿನದಿಂದಲೇ ತಳಮಳ. ಹೇಗೋ ಏನೋ ಎಂಬ ಅಳುಕು.. ಹೊಂದಿಕೊಳ್ಳುವಳೋ ಇಲ್ಲವೋ ಎಂಬ ಆತಂಕ. ಅದನ್ನೆಲ್ಲಾ ಸುಳ್ಳು ಮಾಡುವ ಹಾಗೆ ಅವಳು ಶಾಲೆಗೆ ಹೋಗತೊಡಗಿದಳು. ಒಂದೆರಡು ದಿನ ಮೊದಮೊದಲಿಗೆ ಅತ್ತರೂ ನಂತರದಲ್ಲಿ ಇಷ್ಟಪಟ್ಟೆ ಹೋಗತೊಡಗಿದಳು.


ನಾನೇ ಪ್ರಪಂಚವಾಗಿದ್ದ ಅವಳಿಗೆ ಹೊಸ ಪ್ರಪಂಚ ದೊರೆತಿತ್ತು. ನನ್ನ ಕೈ ಬಿಡಿಸಿಕೊಂಡು ಸ್ನೇಹಿತರೊಡನೆ ಸೇರಲು ತವಕದಿಂದ ತಿರುಗಿಯೂ ನೋಡದೆ ಆಕೆ ಅತ್ತ ಹೋಗುತ್ತಿದ್ದರೆ ನನಗೆ ಜ್ಞಾನೋದಯವಾಗತೊಡಗಿತ್ತು. ಮಕ್ಕಳಿಗೆ ಪೋಷಕರೇ ಪ್ರಪಂಚವಲ್ಲ.. ಹೊಸ ಪ್ರಪಂಚವೇ ಅವರಿಗಾಗಿ ಕಾಯುತ್ತಿದೆ. ಅವರೂ ಅದನ್ನು ಸೃಷ್ಟಿಸಿಕೊಳ್ಳಲು ಕಾತುರರಾಗಿದ್ದಾರೆ ಎಂದು.


~ವಿಭಾ ವಿಶ್ವನಾಥ್

ಆತ್ಮಹತ್ಯೆ ಅನಿವಾರ್ಯವಾಗಬಾರದು (ಬೆಳಕಿಂಡಿಯ ಕತೆಗಳು - 18)


ಆ ದಾರಿಯಲ್ಲೆಲ್ಲಾ ನಾನು ಓಡಾಡುವಾಗ ಅದ್ಯಾಕೋ ಅಪ್ರಯತ್ನವಾಗಿ ಕಣ್ಣು ಆ ಕಡೆ ಸೆಳೆದುಬಿಡುತ್ತದೆ. ಅದು ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳ. ಅದೇ ಸೇತುವೆಯ ಮೇಲೆ ನಿಂತಿದ್ದನ್ನು ಕಂಡಿದ್ದವರು ಯಾರೋ ಹೇಳಿದ್ದರು.. ಮಾಣಿ ಅಲ್ಲಿ ನಿಂತಿದ್ದ ಎಂದು. ಸಾಕ್ಷಿಗಾಗಿ ಅವನ ಚಪ್ಪಲಿ, ಮೊಬೈಲ್ , ಪತ್ರ ಎಲ್ಲವೂ ಸಿಕ್ಕಿದ್ದವು. 


ಅವನ ಬಿಸಿನೆಸ್ ಅವನ ಕೈ ಹಿಡಿಯದೆ ನಷ್ಟವಾಗಿತ್ತಂತೆ. ಸಾಲ ಕೂಡಾ ಮಾಡಿದ್ದ. ಅಪ್ಪನೂ ಬದಲಿ ಹೇಳದೆ ಧೈರ್ಯ ತುಂಬಿದ್ದರು. ಎಲ್ಲರಿಗೂ ಕಾಲ ಬರುತ್ತದೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಎಂದಿದ್ದರು. ಇದ್ದಕ್ಕಿದ್ದ ಹಾಗೆ ಆ ವಾರದ ಕೊನೆಯಲ್ಲಿ ಬಂದು ಎಲ್ಲರೊಡನೆ ಖುಷಿಯಾಗಿದ್ದವನನ್ನು ಕಂಡು ಎಲ್ಲವೂ ಸರಿಯಾಯಿತೆಂದುಕೊಳ್ಳುವಷ್ಟರಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ.


ಪ್ರತಿ ಸೋಲಿಗೂ ಉತ್ತರವಾಗಿ ಗೆಲ್ಲುವ ಛಲ ಅನಿವಾರ್ಯವಾಗಬೇಕೋ ಬದಲಿಗೆ ಹೇಡಿತನವಲ್ಲ. ಬದುಕಿಗೆ ಸವಾಲಾಗಿ ನಿಲ್ಲುವುದು ಅನಿವಾರ್ಯವಾಗಬೇಕೋ ಹೊರತು ಬೆನ್ನು ತೋರಿಸಿ ಓಡುವುದಲ್ಲ. ಸಾಧನೆ ಅನಿವಾರ್ಯವಾಗಬೇಕೋ ಹೊರತು ಆತ್ಮಹತ್ಯೆಯಲ್ಲ. ಇದನ್ನು ಪ್ರತಿ ಬಾರಿ ನಿಂತು ಸಾರಿ ಸಾರಿ ಹೇಳಬೇಕೆನ್ನಿಸುತ್ತದೆ.


~ವಿಭಾ ವಿಶ್ವನಾಥ್

ಕತ್ತಲಲ್ಲಿ ಕಂಡ ಮಿಂಚು (ಪುಸ್ತಕ ಯಾನ - 447)


ಪುಸ್ತಕದ ಶೀರ್ಷಿಕೆ : ಕತ್ತಲಲ್ಲಿ ಕಂಡ ಮಿಂಚು 

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 1978

ಮರು ಮುದ್ರಣ : 2024


ಕತ್ತಲಲ್ಲಿ ಕಂಡ ಮಿಂಚು ಕಾದಂಬರಿಯಲ್ಲಿ ಅಂಗವಿಕಲೆಯಾದ ಹುಡುಗಿಯೊಬ್ಬಳು ತನ್ನ ಮನೆಯವರಿಂದಲೇ ತಾತ್ಸಾರಕ್ಕೊಳಗಾದರೂ.. ಆಕೆ ಅಂಗವಿಕಲೆ ಎಂಬ ಕಾರಣಕ್ಕೆ ಸರಿಯಾದ ಪ್ರೀತಿ ಪಡೆಯದಿದ್ದರೂ.. ತನ್ನವರನ್ನು ಕಡೆಗಣಿಸದೆ, ತಾನೂ ಸೋಲದೆ, ಅವರನ್ನು ಗೆಲ್ಲಿಸಿ ಬದುಕಿನಲ್ಲಿ ಹೀಗಿರಬೇಕು ಎಂದು ಮಾದರಿಯಾದ ಕಾದಂಬರಿಯ ಕಥಾವಸ್ತು ಇಷ್ಟವಾಯಿತು. 


ಸುಭದ್ರಮ್ಮ ಹಾಗೂ ಸುಬ್ಬರಾಯರ ನಾಲ್ವರು ಮಕ್ಕಳಲ್ಲಿ ಹೇಮ ಹಿರಿಯವಳು. ಎರಡನೆಯವಳು ಸೀಮ. ಇನ್ನಿಬ್ಬರು ತಮ್ಮಂದಿರು ಉಮೇಶ ಹಾಗೂ ರಮೇಶ. ಹೇಮ ಕಾಲು ಎಳೆದು ಹಾಕುತ್ತಿದ್ದ ಕುಂಟೆಯಾದರೂ.. ಯಾರಿಗೂ ಹೊರೆಯಾಗದೆ, ಫ್ಯಾಕ್ಟರಿಗೆ ಸೇರಿ ಐದು ವರ್ಷದಿಂದ ದುಡಿಯುತ್ತಾ.. ಅಲ್ಲಿನ ಪರೀಕ್ಷೆಗಳನ್ನು ಪಾಸು ಮಾಡಿಕೊಂಡು ಮುಂದಿನ ಸ್ಥಾನಕ್ಕೇರುತ್ತಾ ತಂದೆಯಷ್ಟೇ ಮನೆಯ ಖರ್ಚನ್ನು ತಾನೂ ಮನೆಗೆ ನೀಡುತ್ತಾ.. ಆರು ಜನರ ಸಂಸಾರವನ್ನು ನಿಭಾಯಿಸುವ ಜವಾಬ್ದಾರಿ ಹೊತ್ತಿದ್ದರೂ ಮನೆಯಲ್ಲಿ ಎಲ್ಲರಿಗೂ ಆಕೆ ಎಂದರೆ ತಾತ್ಸಾರ. 


ಕೆಲವೊಮ್ಮೆ ಮನೆಯವರೇ ತಾತ್ಸಾರ ಮಾಡಿದರೂ ದೇವರಂತಹ ನೆರೆಹೊರೆಯವರು ಸಮಯಕ್ಕೊದಗುತ್ತಾರೆ. ಹೀಗೆ ಪಕ್ಕದ ಮನೆಯ ಕಾಮಾಕ್ಷಿಗೆ ಹೇಮಳೆಂದರೆ ಅಪರಿಮಿತ ವಾತ್ಸಲ್ಯ. ಆರು ಮಕ್ಕಳ ತಾಯಿಯಾದರೂ ಈಕೆಯನ್ನು ಮಗಳಂತೆಯೇ ಭಾವಿಸಿದ್ದರು. ಹಣವಿಲ್ಲದೆ ಟೈಲರಿಂಗ್ ಕಲಿಸಿ, ಟೈಪರೇಟಿಂಗ್ ಗೂ ಸೇರಿಸಿ, ತಾವು ಮನೆ ಬದಲಿಸುವಾಗ ತಮ್ಮ ಬಳಿಯಿದ್ದ ಒಂದು ಹೊಲಿಗೆಯ ಮಷೀನ್ ಅನ್ನು ಸಹ ಕೊಟ್ಟು ಹೋಗಿದ್ದರು. ಹೇಮ ಕೂಡ ಅವರಿಗೆ ಅಷ್ಟೇ ಸಹಕಾರ ನೀಡುತ್ತ ಅವರ ಕೆಲಸದಲ್ಲಿ ಸಹಾಯಕಳಾಗಿದ್ದಳು. ಕಾಮಾಕ್ಷಿಯ ಮನೆಕೆಲಸಕ್ಕೂ ಸಹಕಾರ ನೀಡುತ್ತಾ.. ಆಕೆಯ ಬಲಗೈಯಂತಿದ್ದಳು. ಕಾಮಾಕ್ಷಿಯ ಗಂಡನ ದೆಸೆಯಿಂದಲೇ ಅವರ ಫ್ಯಾಕ್ಟರಿಯಲ್ಲಿಯೇ ಟೈಪರೈಟಿಂಗ್ ಕಲಿತಿದ್ದವಳು ಕೆಲಸಕ್ಕೆ ಸೇರಿ ಮುಂದುವರೆದದ್ದು. ಕಾಮಾಕ್ಷಿಯ ಸಹಾಯವನ್ನು ಹೇಮ ಎಂದಿಗೂ ಮರೆಯುವಂತಿರಲಿಲ್ಲ. 


ಹೇಮಳಿಗೆ ವಿವಾಹ ಕೂಡಿಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಾಲ್ಕು ವರ್ಷದಲ್ಲಿ ನೂರಾದರೂ ವರ ಪರೀಕ್ಷೆ ಎದುರಿಸಿದ್ದಳು. ದಲ್ಲಾಳಿ ಶಾಮಾ ಜೋಯಿಸರಿಗೆ ತಾನೇ ಹಣ ಕೊಟ್ಟು ವಧು ಪರೀಕ್ಷೆ ಎದುರಿಸುತ್ತಿದ್ದಳಾದರೂ .. ಮುಕ್ಕಾಲುವಾಸಿ ನಿರಾಸೆ ತರುವಂತಹ ವರಗಳೇ.. ಇನ್ನುಳಿದವರು ಅವಳನ್ನು ತಿರಸ್ಕರಿಸುತ್ತಿದ್ದವರು. 


ಹೇಮಳ ವಿವಾಹವಾಗದೆ ಸೀಮಳ ವಿವಾಹವಾಗುವಂತಿರಲಿಲ್ಲ. ಹೀಗಾಗಿ ಅವಳಿಗೆ ಅಸಹನೆ. ಮನೆಯ ಎಲ್ಲಾ ಕೆಲಸವನ್ನು ಹೇಮಳೇ ಮಾಡುತ್ತಿದ್ದರೂ ಸೀಮ ರಾಣಿಯಂತೆ ಸುಮ್ಮನಿರುತ್ತಿದ್ದಳು. ಅವಳ ಸೌಂದರ್ಯ ಹಾಗೂ ತಾಯಿಯ ಮುದ್ದು, ಅಹಂಕಾರ ಅವಳನ್ನು ಹಾಗೆ ನಡೆದುಕೊಳ್ಳುವಂತೆ ಮಾಡುತ್ತಿತ್ತು.


ಹೀಗಿದ್ದ ಹೇಮಳ ಬದುಕಲ್ಲಿಯು ಒಂದು ತಿರುವು ಬರುತ್ತವೆ. ಹೇಮ ತನ್ನ ಮನೆ ಬಿಟ್ಟು ತನ್ನ ಸಹೋದ್ಯೋಗಿ ಹಾಗೂ ಆಪ್ತ ಗೆಳತಿಯಾಗಿದ್ದ ಸುಶೀಲಳ ಮನೆಯ ಬಾಡಿಗೆ ಕೋಣೆ ಹಿಡಿಯುತ್ತಾಳೆ. ಸುಶೀಲ ಹಾಗೂ ಚಂದ್ರು ದಂಪತಿಗಳು ಆಕೆಯನ್ನು ಬೇರೆಯವರಂತೆ ಭಾವಿಸದೆ, ಸ್ವಂತ ತಂಗಿಯಂತೆಯೇ ನೋಡಿಕೊಳ್ಳುತ್ತಾರೆ. ಸುಶೀಲಳ ಅಡುಗೆ ಕೆಲಸ ಹಾಗೂ ಮಗುವಿನ ಪೋಷಣೆಯಲ್ಲಿಯೂ ಸಹಾಯ ಮಾಡುತ್ತಾಳೆ ಹೇಮ. ಅಷ್ಟಕ್ಕೂ ಆಕೆ ಮನೆ ಬಿಟ್ಟು ಹೋಗುವಂತಹ ಪ್ರಸಂಗ ಏನಾಗಿತ್ತು..? ಮನಸ್ಸು ಕಹಿಯಾಗಿ ಅಷ್ಟು ಕಠಿಣ ನಿರ್ಧಾರ ತೆಗೆದುಕೊಂಡ ಹೇಮಳ ನಿರ್ಧಾರ ಸರಿಯೇ..? ಓದಿ ನೋಡಿ.


ಚಂದ್ರುವಿನ ಮನೆಗೆ ಬಂದ ರಾಜೇಶ ಹೇಮಳಿಗೆ ಪರಿಚಯವಾದ ಸಂದರ್ಭ ಯಾವುದು..? ಹೇಮ ಕುಂಟಿ ಎಂದು ತಿಳಿಯದೆ.. ಆಕೆಯ ಕೈ ರುಚಿ, ಜೊತೆಗೆ ಕಪ್ಪಿದ್ದರೂ ಲಕ್ಷಣವಾದ ರೂಪಕ್ಕೆ ಮನಸೋತದ್ದು ಮಾತ್ರವಲ್ಲದೆ ಆಕೆಯ ಮನಸ್ಸಿನಲ್ಲಿಯೂ ತನ್ನ ಕುರಿತಾಗಿ ಒಳ್ಳೆಯ ಭಾವನೆ ಬರುವಂತೆ ಮಾಡುವುದರ ಜೊತೆಗೆ ಪ್ರೇಮವನ್ನು ಹುಟ್ಟು ಹಾಕುವುದರಲ್ಲಿಯೂ ಸಫಲವಾದವನು ಅಷ್ಟೇ ಬೇಗ ಅವಳಿಂದ ದೂರವೂ ಆಗುತ್ತಾನೆ. ಆದರೆ, ಈ ಕಥೆ ಅಷ್ಟಕ್ಕೆ ಮುಗಿಯುವುದಿಲ್ಲ. ಮುಂದೊಂದು ದಿನ ಇದೇ ರಾಜೇಶ ಸೀಮಳನ್ನು ಪ್ರೇಮಿಸಿ ಅವರ ಮನೆಗೆ ಬಂದು ಹೇಮಳ ಎದುರಿಗೆ ನಿಂತಾಗ ಹೇಮಳ ಪ್ರತಿಕ್ರಿಯೆ ಏನಿತ್ತು..? ಓದಿ ನೋಡಿ. 


ಎಲ್ಲರೂ ರಾಜೇಶನಂತಿರುವುದಿಲ್ಲ. ಅಂತೆಯೇ ಎಲ್ಲರೂ ಕಾಮಾಕ್ಷಿ ಹಾಗೂ ಸುಶೀಲ ದಂಪತಿಗಳಂತೆಯೂ ಇರುವುದಿಲ್ಲ. ಬದುಕಿನಲ್ಲಿ ಎರಡೂ ರೀತಿಯ ಜನರನ್ನು ನೋಡುವ ಸಂದರ್ಭ ಬರುತ್ತದೆ. 


ಹೇಮಳಿಗೆ ಚಂದ್ರುವಿನ ಬಾಲ್ಯದ ಗೆಳೆಯ ಮಂಜುನಾಥನ ಮುಖಾಮುಖಿಯಾದದ್ದು ಚಂದ್ರು ಹಾಗೂ ಸುಶೀಲ ಮನೆಯಲ್ಲಿ ಇಲ್ಲದಿದ್ದಾಗ. ಅವರಿಬ್ಬರ ಮೊದಲ ಭೇಟಿ ಹಾಗೂ ಮೊದಲ ನೋಟ ಯಾವ ರೀತಿ ಇತ್ತು..?


ಪ್ರೇಮವೆಂದರೆ ಅದು ತಪ್ಪಾಗಬಹುದು. ಏಕೆಂದರೆ, ಅಲ್ಲಿದ್ದದ್ದು ಸರಳತೆ ಹಾಗೂ ಪ್ರಾಮಾಣಿಕತೆ. ಮಂಜುನಾಥನೂ ನೊಂದ ಜೀವ. ತಾನು ಕೆಲಸಕ್ಕಿಂತ ಹೋಟೆಲ್ ಹಾಗೂ ಸ್ವಂತ ತಂದೆಯಿಂದಲೇ ಮೋಸಕ್ಕೊಳಗಾಗಿ ಊರು ಬಿಟ್ಟು ಬಂದಿದ್ದವನು. ಸುಬ್ರಾಯ ಅಡಿಗರ ಎಂಟು ಜನ ಮಕ್ಕಳಲ್ಲಿ ಮೊದಲಿಗನಾಗಿ ಬಡ ಕುಟುಂಬವನ್ನು ತಹಬದಿಗೆ ತಂದವನು, ಓದಿನಲ್ಲಿ ಚಾಣಾಕ್ಷನಾಗಿದ್ದರೂ.. ಮುಂದೆ ಓದಿಸಿರಲಿಲ್ಲ. ಸರ್ಕಾರಿ ಕೆಲಸ ಸಿಗುವಂತಿರಲಿಲ್ಲ. ಹೋಟೆಲ್ ನಲ್ಲಿ ಅಡುಗೆ ಕೆಲಸಕ್ಕೆ ಇದ್ದವನು. ಈಗ ಅಲ್ಲಿಯೂ ಕೆಲಸ ಕಳೆದುಕೊಂಡಿದ್ದ. ಅಷ್ಟಕ್ಕೂ ಅಲ್ಲಿಂದ ಹೊರಟು ಬಂದದ್ದು ಏಕೆ..? 


ಹತ್ತು ಸಾವಿರ ಸಿಕ್ಕರೆ ಇಪ್ಪತ್ತು ಸಾವಿರ ಮಾಡುವ ಚಾಣಾಕ್ಷತನ, ಆತ್ಮವಿಶ್ವಾಸವಿದ್ದರೂ ಹಣ ಆತನ ಬಳಿ ಇರಲಿಲ್ಲ. ಆದರೆ, ಸುಶೀಲ ಇಟ್ಟ ಒಂದು ಪ್ರಸ್ತಾಪಕ್ಕೆ ಆತ ಒಪ್ಪುತ್ತಾನೆ. ಆದರೆ, ಸಂಪೂರ್ಣವಾಗಿ ಅಲ್ಲ. 

ಹೇಮಾಳಿಂದ 10,000 ಹಣ ಪಡೆಯುತ್ತಾನೆ. ಆದರೆ, ನಾಲ್ಕು ವರ್ಷದ ನಂತರ ವಿವಾಹವಾಗುತ್ತೇನೆ ಎಂದು ಹೇಳುತ್ತಾನೆ. ಅದೇಕೆ..?


ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ದ ಹೇಮಾಳಿಗೆ ಇದು ಆಶಾಕಿರಣದಂತೆ ತೋರಿದರೂ ಯಾರನ್ನು ಅಷ್ಟು ಸುಲಭವಾಗಿ ನಂಬಲಾಗುವುದಿಲ್ಲ. ಮಂಜುನಾಥ ಆಕೆ ಕುಂಟಿ ಎಂದು ತಿಳಿದೂ ಮದುವೆಗೆ ಒಪ್ಪಿದರೂ.. ಮುಂದೇನಾಗುತ್ತದೆ..?


ಹೇಮ ಮತ್ತೆ ತನ್ನ ತಾಯಿ, ಸುಭದ್ರಮ್ಮ ಬಂದು ಕರೆದಾಗ ತನ್ನ ಮನೆಗೆ ಹೋಗುತ್ತಾಳಾದರೂ ಆಕೆಗೆ ಮೊದಲಿದ್ದ ಕಷ್ಟ ಇರುವುದಿಲ್ಲ. ಹಾಗೆಂದು ದಬ್ಬಾಳಿಕೆಯೂ ಮುಗಿದಿರುವುದಿಲ್ಲ.


ರೂಪಕ್ಕೆ ಮರುಳಾದ ರಾಜೇಶ ಹಾಗೂ ಸೀಮರ ಬದುಕು ಸಹ ಒಂದು ತಿರುವಿಗೆ ಬಂದು ನಿಲ್ಲುತ್ತದೆ. ಇಬ್ಬರ ಬದುಕನ್ನು ಬದಲಿಸಿದ ಆ ತಿರುವು ಏನು..?


ಹೇಮಳಿಗೆ ಯಾರ ಜೊತೆ ವಿವಾಹವಾಗುತ್ತದೆ..? ಅವಳ ಮುಂದಿನ ಬದುಕು ಹೇಗಿರುತ್ತದೆ..? ಮಂಜುನಾಥ ಪ್ರಾಮಾಣಿಕನೇ..? ಎಲ್ಲದಕ್ಕೂ ಉತ್ತರ ತಿಳಿಯಲು ಕಾದಂಬರಿ ಓದಿ ನೋಡಿ.


ರಾಧಾದೇವಿಯವರ ಹೆಚ್ಚಿನ ಕಾದಂಬರಿಗಳು ಸುಖಾಂತ್ಯ ಕಾಣುತ್ತವೆ. ಈ ಕಾದಂಬರಿಯೂ ಸುಖಾಂತ್ಯದ ಕಾದಂಬರಿ ಎಂದು ಹೇಳಬಹುದಾಗಿದ್ದರೂ ಎಲ್ಲರ ಬದುಕು ತಾವು ಬಯಸಿದ ಸುಖ ಕಾಣುತ್ತದಾ ಓದಿ ನೋಡಿ. 


"ಒಳಿತಿಗೆ ಜಯ" ಎಂಬ ತತ್ವ ಇಲ್ಲಿ ಗೋಚರಿಸುತ್ತದೆ. ಮಾಡಿದುಣ್ಣೋ ಮಹಾರಾಯ ಎಂಬಂತೆ ಎಲ್ಲರೂ ತಮ್ಮ ಕರ್ಮದ ಫಲವನ್ನು ಉಣ್ಣುವುದೂ ಕಾಣುತ್ತದೆ.


ಹೇಮಳ ಬದುಕು ಮೊದಲು ಕಷ್ಟದಿಂದಲೇ ಕೂಡಿದ್ದರೂ.. ಅವಳ ಬದುಕಿನಲ್ಲಿ ಬರುವ ಕಾಮಾಕ್ಷಿ ದಂಪತಿಗಳು, ಸುಶೀಲಾ ದಂಪತಿಗಳು ಹಾಗೂ ಆಕೆಯ ಪತಿಯಂತಹವರು ಎಲ್ಲರಿಗೂ ಸಿಗುವುದು ಕಷ್ಟ. ಆದರೆ, ಅಂತಹ ನಿಷ್ಕಲ್ಮಶ ಪ್ರೀತಿ ಸಿಕ್ಕರೆ ಬದುಕಿನಲ್ಲಿ ಮತ್ತೇನೂ ಬೇಡ ಎನಿಸುವುದಂತೂ ಹೌದು. ರಕ್ತ ಸಂಬಂಧಕ್ಕಿಂತಲೂ ಹೆಚ್ಚು ಆಪ್ತವಾಗುವ ಇಂತಹ ಸಂಬಂಧಗಳೇ ಸಮಾಜದಲ್ಲಿ ಇನ್ನೂ ಒಳ್ಳೆಯದಿದೆ ಎಂಬ ಭರವಸೆಯನ್ನು ಇಟ್ಟುಕೊಳ್ಳುವಂತೆ ಮಾಡುವಂತಹವು. ಅಸೂಯೆ, ದ್ವೇಷ ಕೆಲವೊಮ್ಮೆ ರಕ್ತಸಂಬಂಧಗಳಲ್ಲಿ ಕಂಡರೂ.. ಸ್ನೇಹದಲ್ಲಿ ಇಂತಹವು ಕಾಣುವುದು ವಿರಳ ಎಂಬ ಸಂದರ್ಭಗಳನ್ನು ಕಾಣಬಹುದು. 


ಹಣಕ್ಕಿಂತ ಗುಣ ಮುಖ್ಯ ಜೊತೆಗೆ ಯಾರ ಅಂಗವಿಕಲತೆಯೂ ನಿಜವಾದ ಅಂಗವಿಕಲತೆಯಲ್ಲ ಬದಲಿಗೆ ಮಾನಸಿಕವಾಗಿ ಹಾಗೆ ಯೋಚಿಸುವವರು, ದ್ವೇಷಿಸುವವರು ಹಾಗೂ ತಾತ್ಸಾರದಿಂದ ನೋಡುವವರ ಮನಸ್ಸು ಎಷ್ಟು ಕುರೂಪ ಎಂಬುದನ್ನು ಇಲ್ಲಿ ಕಾಣಬಹುದು. 


ಇನ್ನು ಹಲವಾರು ಪಾತ್ರಗಳ ಹಾಗೂ ಇಷ್ಟವಾಗಬಹುದಾದ ಸಂದರ್ಭಗಳ ಚಿತ್ರಣವೂ ಇಲ್ಲಿದೆ. ಈ ಕಾದಂಬರಿ ಇದೀಗ ಮರು ಮುದ್ರಣವಾಗಿ ಓದುಗರಿಗೆ ಲಭ್ಯವಿದೆ. ಫೀಲ್ ಗುಡ್ ಎನಿಸುವಂತಹ ಈ ಕಾದಂಬರಿ ಸುಲಲಿತವಾಗಿ ಓದಿಸಿಕೊಂಡು ಹೋಯಿತು ಹಾಗೂ ಇಷ್ಟವಾಯಿತು. 


~ ವಿಭಾ ವಿಶ್ವನಾಥ್

ಪ್ರೀತಿಯಿಂದ ಗೆದ್ದ ಕತೆಗಳು (ಪುಸ್ತಕ ಯಾನ - 446)

ಪುಸ್ತಕದ ಶೀರ್ಷಿಕೆ : ಪ್ರೀತಿಯಿಂದ ಗೆದ್ದ ಕತೆಗಳು

ಲೇಖಕರು : ವಿವಿಧ ಲೇಖಕರು

ಪ್ರಕಾಶಕರು : ಸಸಿ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 172

ಬೆಲೆ : 160 ರೂ. 


ಪ್ರಜ್ಞಾ ಬುಕ್ ಗ್ಯಾಲರಿ ಮತ್ತು ಸಸಿ ಪ್ರಕಾಶನ ಸಹಯೋಗದಲ್ಲಿ ನಡೆದ ಪ್ರಜ್ಞಾ ಕಥಾ ಸ್ಪರ್ಧೆ 2025ರಲ್ಲಿ ಗೆದ್ದ ಟಾಪ್ 10 ಕಥೆಗಳನ್ನು ನಾವು ಈ ಕಥಾ ಸಂಕಲನದಲ್ಲಿ ಓದಬಹುದು.


ದೇವ(ರ) ದಾಸಿ - ಕಬ್ಬಾಳಪ್ಪ ಮರೂರು : 

ಗಾಳೆಮ್ಮನಿಗೆ ತನ್ನ ಮಗಳು ಮೈ ನೆರೆದದ್ದು ಬಹಳ ಸಂತಸಪಡುವ ವಿಚಾರವಾದದ್ದಕ್ಕೆ ಕಾರಣ ಆಕೆ ದೇವದಾಸಿ. ಮಗಳು ರೋಜಾ ಸ್ಪುರದ್ರೂಪಿ ಹುಡುಗಿ. ಗಾಳೆಮ್ಮನ ಮನೆಗೆ ಬರುತ್ತಿದ್ದ ಎಷ್ಟೋ ಜನರು ಅವಳ ಬಗ್ಗೆ ಕುತೂಹಲದಿಂದ ಕೇಳಿದ್ದುಂಟು. ಅದನ್ನು ಗಮನಿಸುತ್ತಿದ್ದವಳು ಆಕೆ ಮೈ ನೆರೆದರೆ ಮುಂದಿನ ತನ್ನ ಬದುಕು, ಸಂತಸದಿಂದ ಕೂಡಿರುತ್ತದೆ ಎನ್ನುವ ಜೊತೆಗೆ ಅವಳನ್ನು ಕೊಂಚ ಓದಿಸಿದರೆ ದೊಡ್ಡ-ದೊಡ್ಡವರನ್ನು ಅವಳ ಕಾಲಡಿಯಲ್ಲಿ ಬಂದು ಬೀಳುವಂತೆ ಮಾಡಬಹುದು ಎಂಬ ಸಂಚನ್ನೂ ಮಾಡಿದ್ದಳು. ತಾಯಿಯ ಉಪಚಾರ, ಶಾಸ್ತ್ರ-ಸಂಪ್ರದಾಯ ಉಸಿರು ಕಟ್ಟಿಸುವುದರ ಜೊತೆಗೆ ಆಕೆಯ ಉದ್ದೇಶದ ಕುರಿತು ಅನುಮಾನವನ್ನು ಮೂಡಿಸಿತ್ತು. ರೋಜಾಳ ಮುಂದಿನ ಬದುಕು ಹೇಗಿತ್ತು..? ಶಿಕ್ಷಣದ ಮಹತ್ವವೇನು ಹಾಗೂ ದೇವದಾಸಿಯರ ಬದುಕಿನ ಚಿತ್ರಣ ಹೇಗಿರುತ್ತದೆ ಎಲ್ಲವನ್ನು ತೋರುವ ಕಥೆ ಇದು.


ಮುನಾವರ್ ಚಾಯ್ ಸ್ಟಾಲ್ - ವಿನಾಯಕ ಅರಳಸುರಳಿ : 

ಮೃಗಶಿರನ ಚಾಯ್ ಸ್ಟಾಲ್ ಎಷ್ಟು ಫೇಮಸ್ ಆಗಿತ್ತು ಹಾಗೂ ಎಂತಹ ಗ್ರಾಹಕರಿದ್ದರು ಎಂಬುದರಿಂದ ಶುರುವಾಗುವ ಈ ಕಥೆಯಲ್ಲಿ ಆತನ ಬದುಕಿನ ಕಷ್ಟದ ಅಧ್ಯಾಯ ಹಾಗೂ ಆತನ ಮನೆಯಲ್ಲಿ ಆತನಿಗೆ ಸಿಗುತ್ತಿದ್ದ ಗೌರವವೇನು ಎಂಬುದೂ ತೆರೆದುಕೊಳ್ಳುತ್ತಾ ಸಾಗುತ್ತದೆ. ಆದರೆ ಮೃಗಶಿರನಿಗೆ ಹೆಚ್ಚು ಬಾಧಿಸುತ್ತಿದ್ದು ಅವನಲ್ಲಿಯೇ ಹುಟ್ಟುತ್ತಿದ್ದ ಪಶ್ಚಾತ್ತಾಪ. ಹೀಗಿದ್ದ ಮೃಗಶಿರನಿಗೆ ವ್ಯವಹಾರದ ಸ್ಥಳದಲ್ಲಿ ತಾತ ಎಂದು ಕರೆದ ಮುನಾವರ ಪರಿಚಯವಾಗುತ್ತಾನೆ. ಮೃಗಶಿರನ ಚಾಯ್ ಸ್ವಾಲ್ ಮುನಾವರನದ್ದೇ ಎಂಬಂತೆ ನಡೆಯುವವನು, ಆತನ ಬದುಕಲ್ಲಿಯೂ ಆವರಿಸಿಕೊಳ್ಳುವ ಪರಿಯ ಮುನಾವರ್, ಮೃಗಶಿರ ಹಾಗೂ ಚಾಯ್ ಸ್ಟಾಲ್ ಕಥೆ ಓದಿ ನೋಡಿ. ಈ ಕಥೆ ನನಗೆ ಬಹಳ ಇಷ್ಟವಾಯಿತು.


ತಿಕ್ಕಲು ಬುಡ್ಡಿ - ಸುಮಾ ರಮೇಶ್ : 

ಮಾಜಿ ಸಚಿವರಾದ ಶ್ರೀ ಗುರುಸಿದ್ದಪ್ಪನವರ ಮಗ ಸಚಿನ್ ನ ತಲೆಯ ಮೇಲೆ ಆಕ್ರಮಣ ಮಾಡಿದ ಇಳಿ ವಯಸ್ಸಿನ ಮಾನಸಿಕ ಅಸ್ವಸ್ಥೆಯನ್ನು ಪೊಲೀಸರು ಬಂಧಿಸಿ ಕರೆದೊಯ್ಯುವ ಹಾಗೂ ಆಗ ಏನಾಯಿತು ಎಂದು ಬಿತ್ತರಿಸುತ್ತಿದ್ದ ಸುದ್ದಿ ಕೇಳಿದ ವಿಭಾಳಿಗೆ ಆಘಾತ, ನೋವು, ಹತಾಷೆ ಎಲ್ಲವೂ ಹುಟ್ಟಿತ್ತು.

ಅಷ್ಟಕ್ಕೂ ತಿಕ್ಕಲು ಬುಡ್ಡಿ ವಿಭಾಳಿಗೆ ಯಾವ ರೀತಿಯ ಪರಿಚಯ? ತನ್ನ ರೆಸ್ಟ್ ಅನ್ನೋ ಮೀರಿ ವಿಭಾ ತಲೆಕೆಡಿಸಿಕೊಳ್ಳುವಂತಹ ವಿಚಾರವಾದರೂ ಏನಿತ್ತು..?

ಬೇರೆಯವರಿಗೆ ಮಾನಸಿಕ ಅಸ್ವಸ್ಥೆಯಂತೆ ಕಾಣುವ ತಿಕ್ಕಲು ಬುಡ್ಡಿಯ ನಿಜ ಸ್ವರೂಪವಾದರೂ ಏನು..? ಓದಿ ನೋಡಿ.


ಸುಪ್ತ ಶರಧಿಯ ಸೇರುವ ಸಮಯ - ದೇವೇಂದ್ರ ಅಬ್ಬಿಗೇರಿ :

ಮೂರು ಭಾಗದಲ್ಲಿ ಸಾಗುವ ಈ ಕಥೆಯಲ್ಲಿ ಸಿಡ್ ನ ಬದುಕು ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಸಿಡ್ ನ ವೈಯಕ್ತಿಕ ಬದುಕು ಸಾಫ್ಟ್ವೇರ್ ಇಂಜಿನಿಯರ್ ಒಬ್ಬರ ಬದುಕಿಗೆ ಸಾಕಷ್ಟು ಹೊಂದಿಕೆಯಾಗುವ ಚಿತ್ರಣಗಳನ್ನು ಹೊತ್ತುಕೊಂಡಿದೆ. ಅಷ್ಟಕ್ಕೂ ಸಿಡ್ ಈಗ ಡಾ. ಪ್ರಿಯಾ ಬಳಿ ಕೌನ್ಸಿಲಿಂಗ್ ತೆಗೆದುಕೊಳ್ಳುತ್ತಿದ್ದ. ಅಷ್ಟಕ್ಕೂ ಆತನನ್ನು ಬಾಧಿಸುತ್ತಿದ್ದ ಸಮಸ್ಯೆಯೇನು? ಹಾಗೂ ಪ್ರಿಯಾ ಆತನಿಗೆ ಕೊಟ್ಟ ಸಲಹೆ ಏನು? ಓದಿ ನೋಡಿ.


ಕಳಲೆ ಕಮಲಾಕ್ಷ - ಎಂ ಮನೋಹರ ಪೈ :

ಮಳೆಗಾಲ ಆರಂಭವಾಯಿತೆಂದರೆ ಸುತ್ತುರ್ಕಿಯ ಗಂಡಸರು ಪಚ್ಚಮಲೆಗೆ ಹೋಗಿ ಕಳಲೆ ಕತ್ತರಿಸಿ ತಂದು, ಕರಿಯೂರಿಗೆ ಹೋಗಿ ಕಳಲೆ ಮಾರಿ ಸಿಕ್ಕ ಹಣದಲ್ಲಿ ಮಳೆಗಾಲದ ಖರ್ಚು ಕಳೆಯುತ್ತಿದ್ದರು. ಹೀಗೆ ಬಿದಿರು ಬುಟ್ಟಿ ಹಿಡಿದುಕೊಂಡು ಪಚ್ಚಮಲೆಯನ್ನು ಪ್ರವೇಶಿಸುತ್ತಿದ್ದ ಗಂಡಸರಲ್ಲಿ ಕಮಲಾಕ್ಷನೂ ಒಬ್ಬ. ಎಲ್ಲರಂತೆ ಆತನು ಒಬ್ಬನಾಗಿದ್ದರೆ ಈ ಕಥೆ ಹುಟ್ಟುತ್ತಿರಲಿಲ್ಲವೇನೋ..! ಆದರೆ, ಕರಿಯೂರಿನ ಮನೆಗಳಲ್ಲಿ ಕಳಲೆ ಕಮಲಾಕ್ಷ ಎಂದೇ ಗುರುತಿಸಲ್ಪಡುತ್ತಿದ್ದ ಆತ ಆ ಹೆಸರು ಪಡೆದದ್ದಾದರೂ ಹೇಗೆ..? ಇತ್ತೀಚಿನ ದಿನಗಳಲ್ಲಿ ಪಚ್ಚಮಲೆಯ ಕಾಡಿನಿಂದ ಕಳಲೆ ತರುವುದು ಸುಲಭದ ಕೆಲಸವಾಗಿರಲಿಲ್ಲವೇಕೆ..? ಕಮಲಾಕ್ಷನ ಓದು ಹಾಗೂ ಆತನ ಯೌವ್ವನದ ದಿನಗಳು ಹೇಗಿದ್ದವು..? ಕಮಲಾಕ್ಷ ಮುಖ್ಯರಸ್ತೆಗೆ ಹೋಗದೆ ಅಡ್ಡದಾರಿ ಇಳಿದು ಪಚ್ಚಮಲೆಯತ್ತ ಹೋದ ದಿನ ಏನಾಯಿತು..? ಸಾಕಷ್ಟು ಕುತೂಹಲ ಹಾಗೂ ರೋಚಕತೆಯ ಜಾಡಿನಲ್ಲಿ ಸಾಗುವ ಈ ಕಥೆಯ ಅಂತ್ಯ ಊಹಿಸಲು ಸುಲಭವೇನಲ್ಲ. ಆಸಕ್ತಿಕರ ಕಥೆಯನ್ನು ಓದಿ ನೋಡಿ.


ಖಂಡವಿದೆಕೋ, ಮಾಂಸವಿದೆಕೋ - ಸಂತೆಬೆನ್ನೂರು ಫೈಜ್ನಟ್ರಾಜ್ :

ಅಲ್ಲಾಭಕ್ಷಿ-ದಿಲ್ಷಾದ್ ದಂಪತಿಗಳ ಒಬ್ಬಳೇ ಮಗಳು ರಜಿಯಾ 7ನೇ ತರಗತಿ ಓದುತ್ತಿದ್ದಳು. ಬಕ್ರೀದ್ ಹಬ್ಬಕ್ಕೆ ಐದಾರು ದಿನ ಉಳಿದಿರುವಾಗ ಸಣ್ಣ ಹುಡುಗಿ ಅಪ್ಪನನ್ನು ಗದರಿಸುತ್ತಿದ್ದಳು. "ಮುನ್ನಿಯನ್ನು ಮಾತ್ರ ಕೊಡುವುದಿಲ್ಲ. ನಮಗೆ ಹಬ್ಬ, ಬಟ್ಟೆ, ಮಾಂಸ ಯಾವುದೂ ಬೇಡ" ಎನ್ನುತ್ತಿದ್ದ ರಜಿಯಾ ಹಾಗೂ ಮುನ್ನಿಯ ಸಂಬಂಧ ಹೇಗಿತ್ತು..? ಪ್ರೀತಿಗೆ ಭಾಷೆ ಇಲ್ಲ ಎಂಬಂತಿದ್ದ ಮುನ್ನಿ ಹಾಗೂ ರಜಿಯಾರ ಸಂಬಂಧ ಹೇಗಿತ್ತು..? ಮುನ್ನಿಯನ್ನು ಇಲ್ಲಿ ಕೇವಲ ಹಸುವಿನಂತೆ ಮಾತ್ರ ಭಾವಿಸದ ರಜಿಯಾಯ ಮನಸಲ್ಲಿ ಪುಣ್ಯಕೋಟಿಯ ಕಥೆ ಹೇಗೆ ಕಾಣುತ್ತಿತ್ತು..? ಮಗಳ ಬೇಡಿಕೆಗೆ ಮಣಿಯದ ಅಲ್ಲಾಭಕ್ಷಿಯ ನಡೆ ಯಾವೆಲ್ಲಾ ಬದಲಾವಣೆಗೆ ಕಾರಣವಾಯಿತು..? ರಜಿಯಾ ಕಂಡದ್ದು ಕನಸೋ, ನನಸೋ, ಭ್ರಮೆಯೋ ಓದಿ ನೋಡಿ.


ಸಾಮಂತ್ರಿ - ದಿವ್ಯಶ್ರೀ ಅದರಂತೆ : 

ಸಾಮಂತ್ರಿಯ ಗಂಡ ವಿಷ ಕುಡಿದು ಸತ್ತು ಮನೆಗೆ ಮುಳುವಾಗಿದ್ದನು. ಆದರೆ, ಯಾವುದಕ್ಕೂ ಜಗ್ಗದೆ ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಳು ಸಾಮಂತ್ರಿ. ಸಾಮಂತ್ರಿ ತನ್ನ ಗಂಡ ಸತ್ತು ಒಂದು ವರ್ಷದ ನಂತರ ದೊಡ್ಡ ಮಗಳನ್ನು ಮದುವೆ ಮಾಡಿದ್ದಳು. ಜವಾಬ್ದಾರಿಯುತ ಅಳಿಯ ಸಿಕ್ಕಿದ್ದು ಅವಳಿಗೆ ಖುಷಿ. ಅತ್ತೆಯ ಮನೆಯ ಪರಿಸ್ಥಿತಿಗೆ ಹೆಗಲಾಗಿ ನಿಲ್ಲುವುದು ಆತನಿಗೆ ಅನಿವಾರ್ಯವೆಂದರೂ ತಪ್ಪಾಗಲಾರದು. ಆದರೂ.. ಬೆಸರಿಸಿಕೊಳ್ಳದೆ ಹೆಗಲಾಗುತ್ತಿದ್ದ. 

ಒಂದು ಭಾನುವಾರ ಕಾಡಿಗೆ ಹೋಗಿ ಬೆಳಿಗ್ಗೆ 9 ರಿಂದ ಸಂಜೆ 6 ರ ಒಳಗೆ ಕಟ್ಟಿಗೆ ಕಟ್ಟಿಕೊಂಡು ಕಾಡಿನಿಂದ ಹೊರ ಬರಬೇಕು. ಮನೆಗೆ ಇಬ್ಬರು ಮಾತ್ರ ಹೋಗಬೇಕು ಎಂದು ಸಾರಿದ ಮಾತಿಗೆ ಸಾಮಂತ್ರಿಯ ಅಳಿಯನನ್ನು ಜೊತೆ ಮಾಡಿಕೊಂಡು ಹೊರಟಳಾದರೂ ಅವಳಿಗೆ ಎದುರಾದ ಸವಾಲುಗಳೇನು..? ಅವೆಲ್ಲವನ್ನೂ ಯಾವ ರೀತಿ ನಿಭಾಯಿಸಿದಳು..? ಹೆಣ್ಣು ಎಂದರೆ ಕಡಿಮೆ ಎಂದು ಅಂದಾಜಿಸುವಂತೆಯೇ ಇಲ್ಲ. ಇಲ್ಲಿ ಸಾಮಂತ್ರಿಯ ಪ್ರತಿಕ್ರಿಯೆ ಹೇಗಿತ್ತು..?


ವೃತ್ತ - ಟಿ. ಎಂ. ರಮೇಶ್ :

ಒಂದು ವರ್ಷದ ಹಿಂದೆ ಟಿಪ್ ಟಾಪ್ ಆಗಿ ದೊಡ್ಡ ಕಾರೊಂದರಲ್ಲಿ ಬಂದಿಳಿದಿದ್ದ ಗೆಳೆಯ ಅದೃಷ್ಟವಂತನೂ ಆಗಿದ್ದು .. ಆತನ ಮಾತನ್ನು ನಂಬಿಕೊಂಡು ಆತ ಕೊಟ್ಟಿದ್ದ ವಿಳಾಸಕ್ಕೆ ಬಂದಿದ್ದ ಬರಮ ರಿಯಲ್ ಎಸ್ಟೇಟ್ ಮತ್ತು ಕಂಟ್ರಾಕ್ಟ್ ಬ್ಯುಸಿನೆಸ್ ಮನ್ ಆಗಿದ್ದ ಗೆಳೆಯ ಶ್ರೀಕೃಷ್ಣನನ್ನು ಭೇಟಿಯಾಗಿದ್ದ. ಗೆಳೆಯನನ್ನು ಆತ ಬರಮಾಡಿಕೊಂಡದ್ದು ಹೇಗೆ..? ತನ್ನ ಹೆಂಡತಿ ಲಚುಮಿಗೆ ಏನೆಂದು ಭರವಸೆ ಕೊಟ್ಟು ಬಂದಿದ್ದ ಬರಮ..? ಈ ಸ್ನೇಹ ಹಾಗೂ ಸಂದರ್ಭ ಹೇಗಿದ್ದವು ಓದಿ ನೋಡಿ.


ಡೆಡ್ ಲೈನ್ ಮತ್ತು ಡಿನ್ನರ್ - ಶ್ವೇತಾ ನರಗುಂದ :

ಕಾರ್ಪೊರೇಟ್ ಫೀಲ್ಡ್ ನಲ್ಲಿಯೇ ಇದ್ದ ಇಬ್ಬರು ದಂಪತಿಗಳು ಆರತಿ ಹಾಗೂ ಅಭಿಷೇಕ್. ಮೀಟಿಂಗ್, ಟಾಸ್ಕ್ ಅಪ್ಡೇಟ್, ಪರ್ಫಾರ್ಮೆನ್ಸ್, ರಿವ್ಯೂ ಎಂದೆಲ್ಲಾ ಕೆಲಸದಲ್ಲಿಯೇ ಮುಳುಗಿ ಏಳುತ್ತಿದ್ದಾಗ ತಮ್ಮಿಬ್ಬರ ನಡುವೆ ಮೂಡುತ್ತಿದ್ದ ಕಂದಕವನ್ನು ಗಮನಿಸಿದವಳು ಆರತಿ. ಶೇರ್ಡ್ ಸ್ಪೇಸ್ ವರ್ಕರ್ಸ್ ನಂತಾಗಿದ್ದೇವೆ ಎನಿಸಿದಾಗ ಅದನ್ನು ನೇರವಾಗಿಯೇ ಬಿಚ್ಚಿಟ್ಟಳಾದರೂ ಅಭಿಷೇಕ್ ಅದಕ್ಕೆ ಪ್ರತಿಕ್ರಿಸಿದ ಬಗೆಯೇ ಬೇರೆಯಿತ್ತು. ಇಬ್ಬರಲ್ಲಿ ಮೊದಲು ಎಚ್ಚೆತ್ತ ಆರತಿಗೆ ಮನಸ್ಸಿಗೆ ಬಂದ ವಿಚಾರಗಳು ಏನಿದ್ದವು..? ಅಭಿಷೇಕ್ ನನ್ನು ಕನ್ವೆನ್ಸ್ ಮಾಡುವುದರಲ್ಲಿ ಆರತಿ ಎಷ್ಟು ಸಫಲಳಾದಳು..? ಓಡುವ ಬೆಂಗಳೂರಿನ ವೇಗಕ್ಕೆ ಸಮನಾಗಿ ಓಡಲು ಪ್ರಯತ್ನಿಸುವ ಕಾರ್ಪೊರೇಟ್ ದಂಪತಿಗಳ ಕಥೆ ಇದು. ವೇಗ, ಕಾರ್ಯಕ್ಷಮತೆ, ಸಾಧನೆ, ಫಲಿತಾಂಶ ಎಂದೆಲ್ಲಾ ಓಡುವಾಗ ವೈಯಕ್ತಿಕ ಬದುಕಿಗೆ ಎಷ್ಟು ಸ್ಪೇಸ್ ಬೇಕು ಎನ್ನುವುದನ್ನು ಅರ್ಥ ಮಾಡಿಸುವ ಕಥೆ ಇಲ್ಲಿದೆ.


ಬೆಂಕಿ ಮತ್ತು ಬಾವಿ - ಡಾ. ಭದ್ರಪ್ಪ ಶಿ ಹೆನ್ಲಿ

40 ವರ್ಷಗಳ ಹಿಂದೆ ಇದ್ದ ಕಣ್ಣಾ ಪಂಡಿತರ ಮನೆಯನ್ನು ಹುಡುಕಿ ಬಂದವನಿಗೆ ಕೊನೆಗೂ ಜಾನಕಿ ಅಜ್ಜಿ ಸಿಕ್ಕಿದಳು. ಜಾನಕಿ ಅಚ್ಚಿಯಿಂದ ತಿಳಿದದ್ದು ಪಂಡಿತರು ಮೃತರಾಗಿ ಮೂರು ದಿನ ಕಳೆದಿದ್ದವು. ಕಣ್ಣಾ ಪಂಡಿತರ ಸನಾತನ ಧರ್ಮವನ್ನು ಧಿಕ್ಕರಿಸಿ ನಡೆದ ಮಗ ಏನಾದ..? ಕಾಲವೇ ಎಲ್ಲವನ್ನು ಮರೆಸಬಹುದೆಂದು ಅಜ್ಞಾತನಾದವನಿಗೆ.. ಅವರು ಆತನನ್ನು ಮರೆತಾಗ ಸನ್ನಿವೇಶಗಳು ಆತನ ಬದುಕಲ್ಲಿ ಏನೆಲ್ಲಾ ಆಟ ಆಡಿದವು..? ಕಣ್ಣಾ ಪಂಡಿತರ ಸಂಸಾರಸೌಧ ಕುಸಿದ ಬಗೆ ಹೇಗೆ..?

ಸಂಬಂಧಗಳಿಗೆ ಸಾವಿಲ್ಲವೆಂದು ಬರೆದ ತಂದೆಯ ಪತ್ರ ಮಗನಿಗೆ ಸೇರಿತೇ? ಸಾಮಾಜಿಕ ನ್ಯಾಯವೆಂದು ಅಲೆದಾಡಿದ್ದ ಮಗ ಹೇಗಿದ್ದ..? ಈ ದುರಂತಗಾಥೆ ಯಾರದ್ದಾದರೂ ಬದುಕಲ್ಲಿ ಪರಿವರ್ತನೆ ತರಬಹುದು ಓದಿ ನೋಡಿ.


ವಿವಿಧ ಲೇಖಕರ ವಿಭಿನ್ನ ಕತೆಗಳ ಚೆಂದದ ಕಥಾಲೋಕ ಇಲ್ಲಿದೆ. ಸ್ಪರ್ಧಾ ಕತೆಗಳ ಕುರಿತ ಕುತೂಹಲ ಉಳ್ಳವರು ಓದಬಹುದಾದ ಕಥಾ ಸಂಕಲನ ಇದು.


~ವಿಭಾ ವಿಶ್ವನಾಥ್

ಸೃಷ್ಟಿಕರ್ತನಷ್ಟೇ ಶಕ್ತೆ


ಮನುಜ ಕುಲದ ಉದ್ದಾರಕೆ

ತಾನು ಎಲ್ಲೆಡೆ ಇರಲಾರೆನೆಂದು

ಸಮಯಕೆ ಸಿಗಲಾರೆನೆಂದು 

ಮುಂದಾಲೋಚನೆಯಲಿ ಮೂಡಿಸಿದ

ತಾಯಿಯೆಂಬ ಸೃಷ್ಟಿಯ

ಸೃಷ್ಟಿಕರ್ತನಷ್ಟೇ ಶಕ್ತೆ ತಾನೆ ಅಮ್ಮನು


ತನ್ಮೂಲಕ ಜೀವದ ಸೃಷ್ಟಿ ಮಾಡಿ

ಕರುಳ ಕುಡಿಯ ಕರೆಗೆ ಓಗೊಟ್ಟು

ನಿಸ್ವಾರ್ಥದ ಪ್ರೀತಿ ಸವಿಯ ಹಂಚಿ

ಮಡಿಲಲಿ ಪ್ರೀತಿ ತಂಪನ್ನಿಟ್ಟು

ಮುಂದಾಲೋಚನೆಯಲಿ ಹರಸಿ

ಕಾಯುವ ದೇವತೆಯೇ ಅಮ್ಮನು


~ವಿಭಾ ವಿಶ್ವನಾಥ್

ಕಾಲದ ಮಹಿಮೆ (ಬೆಳಕಿಂಡಿಯ ಕತೆಗಳು - 17)


ಯೌವ್ವನದ ಕಾಲದಲ್ಲಿ ತಾನೇ ಸೌಂದರ್ಯವತಿ ಹಮ್ಮಿನಿಂದ ಬೀಗುತ್ತಾ ಸುತ್ತಮುತ್ತಲಿನವರನ್ನು ಮಾತನಾಡಿಸದೆ ತನ್ನದೇ ವಲಯದಲ್ಲಿ ಇದ್ದವಳಿಗೆ ಈಗ ಮುಪ್ಪಿನ ಕಾಲ ಹಾಗೂ ಕೊರೊನಾ ಕಾಲ ಚೆನ್ನಾಗಿಯೇ ಅರಿವು ಮೂಡಿಸಿದೆ. ಸಣ್ಣ-ಪುಟ್ಟ ವಿಚಾರಗಳಿಗೂ ಅಕ್ಕ-ಪಕ್ಕದವರು ಹೊಂದಿಕೊಂಡು ಬಾಳ್ವೆ ಮಾಡುವಾಗ ತಾನೆಷ್ಟು ಸಣ್ಣತನ ತೋರಿಬಿಟ್ಟೆ ಎನ್ನುವ ಅರಿವಾಗುತ್ತಲಿದೆ. 


ಅವಳು ಕಪ್ಪು, ಇವಳು ದಪ್ಪ, ಇವಳು ಹಾಗೆ, ಹೀಗೆ.. ಎನ್ನುತ್ತಾ ದೂರವಿಟ್ಟವರೇ ಇವಳ ಕಷ್ಟ ಕಾಲದಲ್ಲಿ ಆದದ್ದು.. ಅವರೂ ನನ್ನ ಹಾಗೆಯೇ ಬಿಂಕ -ಬಿನ್ನಾಣ ತೋರಿದ್ದರೆ ಎಂದು ನೆನಪಿಸಿಕೊಂಡರೇ ಅವಳಿಗೆ ಭಯವಾಗುತ್ತದೆ. ಸೌಂದರ್ಯ ನಶ್ವರ.. ಹಮ್ಮು-ಬಿಮ್ಮು ತೊರೆದು ಬಾಳ್ವೆ ನಡೆಸಿದರಷ್ಟೇ ಮತ್ತೊಬ್ಬರ ಬದುಕಲ್ಲಿ ಕೊಂಚವಾದರೂ ಸಹಕಾರಿಯಾಗಿ ನಿಂತು ನೆನಪಾಗಿರಬಹುದು ಎಂಬ ಅರಿವಾಗಿದೆ. ಕಾಲದ ಮಹಿಮೆಯೇ ಅಂತಹದ್ದು.. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಹೆಚ್ಚು ಎಂದು ಅರಿವು ಮೂಡಿಸುವಂತಹದ್ದು 


~ವಿಭಾ ವಿಶ್ವನಾಥ್

ಪುಟ್ಟ ಕಲಾವಿದೆ (ಬೆಳಕಿಂಡಿಯ ಕತೆಗಳು - 16)


"ಪುಟ್ಟಿಗೆ ಕರ್ನಾಟಕ ಜ್ಯೂನಿಯರ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಚಿಕ್ಕ ವಯಸ್ಸಿಗೆ ಈ ಪ್ರಶಸ್ತಿ ಪಡೆದ ಮೊದಲ ಮಗು ಅವಳೇ ಅಂತೆ ರೀ.. " ಎಂದ ಸೌಭಾಗ್ಯ ಮಾತಿಗೆ ಹೂಂಗುಟ್ಟಿ "ನಾನು ನಿನಗೆ ಅವತ್ತೇ ಹೇಳಲಿಲ್ವಾ.. ಮಗುವಿನ ಪ್ರತಿಭೆಯನ್ನು ಪೋಷಿಸಿದರೆ ಅವರಲ್ಲೂ ಅಡಗಿರುವ ಕಲಾವಿದರು ಹೊರ ಬರುತ್ತಾರೆ ಅಂತಾ. 


ಗೋಡೆ ಮೇಲೆ ಅವಳು ಅವತ್ತು ಬಳಿದಿದ್ದ ಕಲರ್ ನೋಡಿ ಅದೆಷ್ಟು ಕೋಪ ಮಾಡಿಕೊಂಡಿದ್ದೆ ನೀನು... ಗೋಡೆಯೆಲ್ಲಾ ಹಾಳಾಯ್ತು ಅಂತಾ ಕೂಗಾಡುತ್ತಾ ಇದ್ದೆ. ಆದರೆ, ನಾನು ಅವಳನ್ನು ಬೈಯದೆ, ಬದಲಾಗಿ ಕರೆದುಕೊಂಡು ಹೋಗಿ ಡ್ರಾಯಿಂಗ್ ಕ್ಲಾಸ್ ಗೆ ಸೇರಿಸಿ ಅವಳನ್ನು ಪ್ರೋತ್ಸಾಹಿಸಿದ್ದಕ್ಕೆ ನೋಡು ಇವತ್ತು ನಾವು ಹೆಮ್ಮೆ ಪಡುವ ಹಾಗೆ ಮಾಡಿದ್ದಾಳೆ" ಎಂದನು ಶ್ರೀಕರ.


" ಹೌದು ಶ್ರೀ, ಮಕ್ಕಳಲ್ಲಿ ಪುಟ್ಟ ಕಲಾವಿದರು ಇರುತ್ತಾರೆ. ಪೋಷಿಸಿ, ಪ್ರೋತ್ಸಾಹ ನೋಡಿದರೆ ಸರಿಯಾದ ಸಮಯದಲ್ಲಿ ಹೊರಬರುತ್ತಾರೆ. " ಎಂದರು ಸೌಭಾಗ್ಯ.


~ ವಿಭಾ ವಿಶ್ವನಾಥ್

ಭಾನುವಾರ, ಮೇ 10, 2026

ಅವಳೀಗ ಅಮ್ಮ (ಅವಳ ಕವಿತೆಗಳು - 24)


ತುಂಟಾಟದ ದಿನಗಳು ಕಳೆದವು

ಮುಖದಲಿ ಪ್ರೌಢ ಕಳೆ ಬೇಕು

ಜವಾಬ್ದಾರಿ ಹೊತ್ತು ನಡೆ ನೀನೀಗ

ನೀನೀಗ ಅಮ್ಮ - ಎಂದವರವರು


ಮುಗ್ಧೆಯಾದರೆ ಮುಳುಗಿಸುತ್ತಾರೆ 

ಜಾಣತನದಿ ತಿದ್ದಿಕೊಂಡು

ನಿನ್ನ ಆಸೆಗಳ ಗಂಟು ಕಟ್ಟಿಡಬೇಕು

ನೀನೀಗ ಅಮ್ಮ - ಎಚ್ಚರಿಸಿದರವರು


ಮಗುವಿನ ಆಟವ ಆನಂದಿಸುವ

ಸದಾ ನಗುಮುಖದಿ ಎದುರಾಗುವ

ಪ್ರೀತಿಯನ್ನೇ ಮೊಗೆದು ಕೊಡುವ

ಅವಳೀಗ ಅಮ್ಮ - ಅವಳಿಷ್ಟದಂತೆ


ಜಗದ ಸಲಹೆಗೆ ಜಾಣ ಕಿವುಡಾಗಿ

ಎಚ್ಚರಿಕೆಯಿಂದ ಆಪ್ತ ವಲಯದಲಿ

ತನ್ನಾಸೆಯ ಮಗುವಿಗೆ ಆಸರೆಯಾಗುವ

ಅವಳೀಗ ಅಮ್ಮ - ಎಚ್ಚರದಿಂದಿದ್ದಾಳೆ


ಜಗದ ಕಣ್ಣಿಗೆ ಬೇಕಾದ ಅಮ್ಮನಿಗಿಂತ

ಮಗುವಿಗೆ ಬೇಕಾದ ಅಮ್ಮನಾಗಿದ್ದಾಳೆ

ಅವಳಿಗೆ ಸಂಪೂರ್ಣ ಅರಿವಿದೆ ಹೇಗಿರಬೇಕೆಂದು

ಏಕೆಂದರೆ, ಅವಳೀಗ ಅಮ್ಮ


~ವಿಭಾ ವಿಶ್ವನಾಥ್

ಮಡಿಲು (ಪುಸ್ತಕ ಯಾನ - 445)


ಪುಸ್ತಕದ ಶೀರ್ಷಿಕೆ : ಮಡಿಲು

ಲೇಖಕರು : ನಾಗರಾಜ ವಸ್ತಾರೆ 

ಪ್ರಕಾಶಕರು : ಛಂದ ಪುಸ್ತಕ 

ಪ್ರಥಮ ಮುದ್ರಣ : 2009

ಪುಟಗಳು : 80

ಬೆಲೆ : 15 ರೂ. 


ಮಡಿಲು ಎಂದಾಕ್ಷಣ ಮೊದಲಿಗೆ ಅಮ್ಮ ನೆನಪಾಗುತ್ತಾಳೆ. ಇದು ಅಮ್ಮನ ಕಥೆಯೇ.. ಆದರೆ, ಅಮ್ಮನ ಮನಸ್ಸಿನ ತುಮುಲಗಳು ಹಾಗೂ ಹರೆಯದ ಮಗುವಿನ ಅಮ್ಮನ ಭಾವನೆಗಳನ್ನು ತೆರೆದಿಟ್ಟಿರುವ ನೀಳ್ಗತೆ ಇದು. ಮಗನ ಅಮ್ಮನಿಗೆ ಮಾತ್ರವಲ್ಲದೆ.. ಕಾಳಜಿ ಮಾಡುವ ಪ್ರತಿ ಅಮ್ಮಂದಿರಿಗೂ ಕನೆಕ್ಟ್ ಆಗುವಂತಹ ಕಥೆ ಇದು.


ನಾಗರಾಜ ವಸ್ತಾರೆ ಅವರ ಈ ಕತೆಯಲ್ಲಿ ಹೆಸರುಗಳು ಬಹಳ ಇಷ್ಟವಾದವು. ಸಾಂಜ್ಞಲಕ್ಷ್ಮಿ, ಗುಣಶೀಲ ಮತ್ತು ಮಾಕಂದ ಎನ್ನುವ ಮೂರು ಪಾತ್ರಗಳೇ ಮುಖ್ಯ ಪಾತ್ರಗಳಾಗಿ ಇಡೀ ಕತೆಯನ್ನು ಆವರಿಸಿಕೊಳ್ಳುತ್ತವೆ. 


ಈ ನೀಳ್ಗತೆಯನ್ನು ಅರ್ಪಿಸಿರುವುದು "ನಮ್ಮ ನಿಮ್ಮ ಒಳ ಮನೆಗಳ ಸಾಂಜ್ಞಲಕ್ಷ್ಮಿಯರಿಗೆ" ಎನ್ನುತ್ತಾರೆ ವಸ್ತಾರೆಯವರು. 


ಅಕ್ಟೋಬರ್ ನಲ್ಲಿ ಒಂದು ಪ್ರವಾಸವನ್ನು ಆಯೋಜಿಸಿದ್ದಳು ಸಾಂಜ್ಞಲಕ್ಷ್ಮಿ. ದಸರೆಯ ನೆವದಲ್ಲಿ ಅವಳು ಕೆಲಸ ಮಾಡುತ್ತಿದ್ದ ಮಾಂಟೆಸರಿಗೆ ರಜೆ ಇರುತ್ತದೆ ಎನ್ನುವ ಕಾರಣಕ್ಕಿಂತಲೂ ಹೆಚ್ಚಾಗಿ ಗುಣಶೀಲನ ಕೆರಿಯರ್ ನಲ್ಲಿ ಸದ್ಯಕ್ಕೆ ಟ್ರಾನ್ಸಿಟ್ ಪಿರಿಯಡ್ ನಡೆಯುತ್ತಿರುವುದು, ಜೊತೆಗೆ ಇದ್ದೊಬ್ಬ ಮಗ ಮಾಕಂದ ಕಳೆದ ಆಗಸ್ಟ್ ನಲ್ಲಿ ಇಂಜಿನಿಯರಿಂಗ್ ಓದು ಮುಗಿಸಿ ಕಾಲೇಜಿನಿಂದಲೇ ಪ್ಲೇಸ್ಮೆಂಟ್ ಆಗಿ ಇನ್ನೇನು ಕೆಲಸಕ್ಕೆ ಸೇರಲಿದ್ದ. ಮಗನ ಇಂಜಿನಿಯರಿಂಗ್ ಸೇರಿದಾಗಿನಿಂದ ಮೂವರ ಬಿಡುವುಗಳೂ ಒಂದಕ್ಕೊಂದು ಹೊಂದಿಕೊಳ್ಳದೆ ಹೊರಗೆ ಬರಲಾಗಿರಲಿಲ್ಲ ಎನ್ನುವುದು ಹೌದಾದರೂ.. ಇದೆಲ್ಲವನ್ನು ಮೀರಿದ್ದು ಸಾಂಜ್ಞಲಕ್ಷ್ಮಿಯ ಮನಸ್ಸಿನಲ್ಲಿ ಭದ್ರವಾಗಿತ್ತು. 


ನೇರವಾಗಿ ಹಂಚಿಕೊಳ್ಳಲಾಗದ ಈ ಚಿಂತಾಕ್ರಾಂತತೆಯನ್ನು ಲೇಖಕರು 'ವರಿ' ಎನ್ನುತ್ತಾರೆ. 

"ಆಧುನಿಕ ನುಡಿಗಟ್ಟಿನಲ್ಲಿ ಹಿಡಿದಿಳುವುದಾದರೆ ಅದನ್ನು ಒಂದು ವರಿ ಅನ್ನಬಹುದೇನೋ ದೇಸಿ ಚಿಂತಾ ಕ್ರಾಂತದಿಂದ ಪ್ರಬಲವಾದ ವರಿಯೇ 'ವರಿ' ಅದು! 


ಗುಣಶೀಲನಿಗೆ ಸಾಂಜ್ಞಲಕ್ಷ್ಮಿಯ ಮನಸ್ಸಿನ ತುಮುಲ ಹಾಗೂ ಚಿಂತಾಕ್ರಾಂತತೆಯ ಅರಿವಿದ್ದರೂ ಆತ ಅವಳಷ್ಟು ತಲೆಬಿಸಿ ಮಾಡಿಕೊಂಡಿರಲಿಲ್ಲ. 


ಅವರು ವಾಸವಿದ್ದ 'ಆಸರೆ'ಯಲ್ಲಿ ಅವರು ನೆಲೆಸಿದ್ದಾಗಿನಿಂದ ಸಾಂಜ್ಞಲಕ್ಷ್ಮಿಯ ದಿನಶರಿ ಬದಲಾಗದಿದ್ದರೂ ಗುಣಶೀಲನ ಕೆಲಸ ಜೊತೆಗೆ ದಿನಚರಿ ಲೈಫ್ ಸ್ಟೈಲ್ ಎಲ್ಲವೂ ಬದಲಾಗುತ್ತಿತ್ತು. ಒಂದು ರೀತಿಯಲ್ಲಿ ಮನೆಯ ಯಾವ ತಲೆಬಿಸಿಯನ್ನೂ ಹಂಚಿಕೊಳ್ಳದ ಗುಣಶೀಲನ ಮನಸ್ಥಿತಿಯೇ ಮಗನಿಗೂ ಬಂದಿತ್ತೆಂದರೂ ತಪ್ಪಾಗಲಾರದು. ಅಥವಾ ಸಾಂಜ್ಞಲಕ್ಷ್ಮಿಯ ಅತಿಯಾದ ಕಾಳಜಿ ಅಪ್ಪ-ಮಕ್ಕಳಿಬ್ಬರನ್ನು ಹಾಗೆ ಮಾಡಿಬಿಟ್ಟಿತ್ತು ಎಂದರೂ ತಪ್ಪಾಗಲಾರದು. 


ಗಂಡು ಮಕ್ಕಳ ವಿಷಯದಲ್ಲಿ ಎಲ್ಲಾ ಅಮ್ಮಂದಿರೂ ಹೀಗೆ ಯೋಚಿಸುತ್ತಾರೋ ಅಥವಾ ತಾನೊಬ್ಬಳು ಮಾತ್ರವೋ ಎಂಬ ಅನುಮಾನ ಸಾಂಜ್ಞಲಕ್ಷ್ಮಿಗೆ ಬರುತ್ತದಾದರೂ.. ಅವಳ ಜಾಗದಲ್ಲಿ ನಾವಿದ್ದರೂ ಹಾಗೆಯೇ ಯೋಚಿಸುತ್ತಿದ್ದೆವಲ್ಲವಾ ಎಂದೂ ಅನ್ನಿಸಿತು. 


ಮಾಕಂದನ ಬದುಕಿನಲ್ಲಿ ಬಂದಿದ್ದ ವಿಶಾಲ ಗೇಂದ ಸಾಂಜ್ಞಲಕ್ಷ್ಮಿಯನ್ನು ಕಾಡುತ್ತಿದ್ದ ವ್ಯಕ್ತಿಯಾಗಿದ್ದರೂ ಅವರಿಬ್ಬರ ನಡುವಿನ ಸಂಬಂಧಕ್ಕೊಂದು ಹೆಸರು ಹಚ್ಚಲು ಗುಣಶೀಲನಾಗಲಿ, ಸಾಂಜ್ಞಲಕ್ಷ್ಮಿಯಾಗಲಿ ಮಾಡಿರಲಿಲ್ಲವಾದರೂ.. ಆ ಹೆಸರು ಸಾಂಜ್ಞಲಕ್ಷ್ಮಿಯ ಮನಸ್ಸಿನಲ್ಲಿದ್ದೇ ಇತ್ತು.


ಗುಣಶೀಲನನ್ನು ಮದುವೆಯಾಗಿ ತಾನು ಈಗ ಅನುಭವಿಸುತ್ತಿರುವ ಪರಿಸ್ಥಿತಿ ಮಾಕಂದನನ್ನು ಮದುವೆಯಾಗುವ ಹುಡುಗಿಯನ್ನು ಕಾಡಿದರೆ..! ಎಂಬುದು ಅವಳ ಮನಸ್ಸನಲ್ಲಿದ್ದ ಮತ್ತೊಂದು ಆಲೋಚನೆಯೂ ಹೌದು. ಏಕೆಂದರೆ, ಅಪ್ಪ-ಮಗನ ಸ್ವಭಾವಗಳಲ್ಲಿ ಹೆಚ್ಚೇನೂ ವ್ಯತ್ಯಾಸಗಳಿರಲಿಲ್ಲ.


ಅಷ್ಟಕ್ಕೂ ಸಾಂಜ್ಞಲಕ್ಷ್ಮಿ ಗುಣಶೀಲನ ಜೊತೆ ತನ್ನ ಹೆಚ್ಚಿನ ಭಾವನೆಗಳನ್ನು ಪೂರ್ತಿ ಚರ್ಚಿಸಿರುವುದಿಲ್ಲ. ಅವನ ಅಭಿಪ್ರಾಯ ತನ್ನ ಜೊತೆಗೆ ತಾಳೆಯಾಗುವುದಿಲ್ಲ ಎನ್ನುವುದು ಅವಳ ಪೂರ್ವಗ್ರಹಪೀಡಿತ ಮನಸ್ಥಿತಿಯೋ ಅಥವಾ ವಾಸ್ತವ ಹಾಗಿತ್ತೋ ಓದಿ ನೋಡಿ.


ಮೂವರೂ ಉದಯಪುರಕ್ಕೆ ಬರುವವರೆಗೂ ಯಾವ ವಿಚಾರವನ್ನು ಚರ್ಚಿಸಿರಲಿಲ್ಲ. 36 ತಾಸುಗಳ ರೈಲು ಮಾರ್ಗದಲ್ಲಿ ಅಪ್ಪ-ಮಗ ಮಲಗಿಕೊಂಡು ಸಮಯ ಹರಿಸಿದ್ದೇ ಹೆಚ್ಚು. ಸಾಂಜ್ಞಲಕ್ಷ್ಮಿ ಮನಸ್ಸಿನ ಅಷ್ಟೂ ಆಲೋಚನೆಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ತನ್ನದೇ ಲೋಕದಲ್ಲಿ ತಾನಿದ್ದು ಬಿಟ್ಟಿದ್ದಳು. 


ಹೋಟೆಲ್ ನ ಆ ಮಾತುಕತೆಯಲ್ಲಿ ಯಾರ ಮನಸ್ಸು ಹಗುರವಾಯಿತು ಮತ್ತು ಯಾರ ಮನಸ್ಸು ಭಾರವಾಯಿತು..?


ಅಪ್ಪಟ ಅಮ್ಮತನವನ್ನು ಮೆರೆಯುವಂತೆ ಮಾಡಿದ ಹೊತ್ತಿನಲ್ಲಿ ಮಾಕಂದ ಅಮ್ಮನ ಕಣ್ಣಿಗೆ ಕಾಣಿಸಿದ್ದು ಹೇಗೆ..?


ಇಲ್ಲಿ ಕೇವಲ ಹರೆಯದ ಮಗನ ಬದುಕಿನಲ್ಲಿ ಬರುವ ಹುಡುಗಿಯ ವಿಚಾರ ಮಾತ್ರವಲ್ಲ.. ಮಗನ ಭವಿಷ್ಯ ಹೇಗಿರಬಹುದು ಹಾಗೂ ಆ ಭವಿಷ್ಯಕ್ಕೆ ಬರುವರ ಪರಿಸ್ಥಿತಿ ತನ್ನಂತೆಯೇ ಇದ್ದರೆ..! ಎಂಬುದು ಮಾತ್ರವಲ್ಲದೆ, ಆ ಹುಡುಗಿಯ ಕುರಿತ ಆಲೋಚನೆ ಅತ್ತೆಯ ಪರಿಧಿಯಿಂದಲ್ಲದೆ ಅಮ್ಮನ ಆಲೋಚನೆಯ ಮೂಲಕ ವ್ಯಕ್ತವಾಗಿದೆ.


ಇಲ್ಲಿ ಅಮ್ಮನ ಮಡಿಲನ್ನು ಮೀರಿ ಬೆಳೆಯುವ ಮಗುವನ್ನು ಅಮ್ಮ ಕಾಣುವ ಬಗೆ, ವಯಸ್ಸಿಗೆ ತಕ್ಕ ಪ್ರೌಢತೆ, ಗಹನವಾದ ವಿಚಾರಗಳು ಎಲ್ಲವೂ ಕಾಣುತ್ತವೆ. ಅದಾಗಿಯೂ ಅಮ್ಮನ ಮಡಿಲು ಯಾಕಷ್ಟು ಮುಖ್ಯವಾಗುತ್ತದೆ ಎಂಬುದನ್ನೂ ಇಲ್ಲಿ ಕಂಡುಕೊಳ್ಳಬಹುದು. 


ಹರೆಯದ ಮಕ್ಕಳ ಅಮ್ಮಂದಿರಾಗಿದ್ದರೆ ಇವು ನಿಮ್ಮನ್ನೂ ಕಾಡಿರಬಹುದು ಅಥವಾ ಆ ಘಟ್ಟದಲ್ಲಿ ನಾವೂ ಹೀಗೆಯೇ ಆಲೋಚಿಸಬಹುದೇನೋ.. ಸಾಂಜ್ಞಲಕ್ಷ್ಮಿ ಕನ್ನಡಿಯಂತೆ ಕಾಣುತ್ತಾಳೆ. 


ನಾಗರಾಜ ವಸ್ತಾರೆ ಅವರ ಯಾವುದಾದರೂ ಪುಸ್ತಕವನ್ನು ಓದಿದ್ದರೆ ನಿಮಗೆ ಅವರ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಅರಿವಂತೂ ಇರುತ್ತದೆ. ಅಂತಹದ್ದೇ ಚೆಂದದ ಓದು ಇದು. ಅಕಸ್ಮಾತ್ ನೀವಿನ್ನೂ ಅವರ ಪುಸ್ತಕಗಳನ್ನು ಓದಿರದಿದ್ದರೆ ಅವರ ಲೇಖ-ಲೋಕಕ್ಕೆ ಕಾಲಿಡಲು ಒಳ್ಳೆಯ ಪ್ರವೇಶಿಕೆ ಇದು.


~ ವಿಭಾ ವಿಶ್ವನಾಥ್