ಶುಕ್ರವಾರ, ಏಪ್ರಿಲ್ 17, 2026

ನಿನ್ನ ಕಣ್ಣೀರು ನನ್ನೆದೆಯ ನೆತ್ತರು (ಪುಸ್ತಕ ಯಾನ - 230)


ಪುಸ್ತಕದ ಶೀರ್ಷಿಕೆ : ನಿನ್ನ ಕಣ್ಣೀರು ನನ್ನೆದೆಯ ನೆತ್ತರು

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 1994

ಪರಿಷ್ಕೃತ ಮರು ಮುದ್ರಣ : 2024


"ನಿನ್ನ ಕಣ್ಣೀರು ನನ್ನೆದೆಯ ನೆತ್ತರು" ಎನ್ನುವ ಶೀರ್ಷಿಕೆಯೇ ವಿಭಿನ್ನವಾಗಿ ಸೆಳೆಯುತ್ತದೆ. ಈ ಶೀರ್ಷಿಕೆಯ ಕುರಿತು ಚಿತ್ರಲೇಖ ಮೇಡಂ ಹೇಳಿರುವ ಮಾತುಗಳು ಸೆಳೆದವು. ಅವರಿಗೆ ಸುಬ್ರಮಣ್ಯ ಭಾರತಿಯವರ ಹಾಡುಗಳೆಂದರೆ ಬಹಳ ಆಪ್ತ. ಅವರ ಒಂದು ಹಾಡಿನ ಸಾಲಿನಲ್ಲಿ 'ನಿನ್ನ ಕಣ್ಣಲ್ಲಿ ನೀರು ಹರಿದರೆ ನನ್ನ ಹೃದಯದಲ್ಲಿ ರುಧಿರ ಹರಿಯುವುದು' ಎನ್ನುವ ಅರ್ಥವಿತ್ತು. ಅದರ ಭಾವಾರ್ಥದಂತಹಾ ಶೀರ್ಷಿಕೆಯನ್ನು ಬರೆದುಕೊಂಡಿದ್ದು.. ಆ ಶೀರ್ಷಿಕೆಗೆ ತಕ್ಕ ಕಥೆಯೊಂದನ್ನು ರಚಿಸಲು ಕಾಯುತ್ತಿದ್ದರು. ಅವರ ಬೀದಿಯ ಒಂದು ವಠಾರದಲ್ಲಿ ನಡೆದ ಕಹಿಘಟನೆಯ ಪ್ರೇರಣೆ ಈ ಕಾದಂಬರಿಯ ಪೂರ್ವಾರ್ಧ. ಆದರೆ, ಅಂತ್ಯಭಾಗ ಲೇಖಕಿಯ ಕಲ್ಪನೆಯಂತೆ ರಚಿಸಿದ್ದು.


ಸಾಧಾರಣ ಗುಮಾಸ್ತನಾಗಿದ್ದ ಗಜೇಂದ್ರನಾಥ ಅವರು ಹಿರಿಯ ಮಗನಾಗಿ ತಮ್ಮ ಜವಾಬ್ದಾರಿಯನ್ನೆಲ್ಲಾ ಕಳೆಯುವ ಹೊತ್ತಿಗೆ ಸುಮಾರು ವಯಸ್ಸು ಕಳೆದಿತ್ತು. ಭವಾನಿ ಅವರ ಕೈ ಹಿಡಿದಾಗ ಅವರಿಗೆ 35 ವರ್ಷ. ಬಡವರ ಮನೆಯ ಹುಡುಗಿಯನ್ನು ಮದುವೆಯಾಗಿದ್ದರು. ಆಕೆಗೂ ಆಸ್ತಿಪಾಸ್ತಿ ಇರಲಿಲ್ಲ. ಅಂತೆಯೇ ದುರಾಸೆಯೂ ಇರಲಿಲ್ಲ. ಸಾಮರಸ್ಯದಿಂದ ಇದ್ದುದರಲ್ಲಿಯೇ ಸಂಸಾರ ಚೆಂದವಾಗಿ ಕಳೆಯುತ್ತಿತ್ತು. ಆದರೆ, ತಮ್ಮ ಮಕ್ಕಳು ತಮ್ಮಂತೆ ಬಡತನದಲ್ಲಿ, ಜವಾಬ್ದಾರಿಯಲ್ಲಿ ನಲುಗಬಾರದು ಎನ್ನುವ ಮುಂದಾಲೋಚನೆಯಿಂದ ಅವರು ತಮಗೆ ಒಂದೇ ಮಗು ಸಾಕು ಎನ್ನುವ ನಿರ್ಧಾರ ಮಾಡಿದರು. ಅವರ ಉದಾತ್ತ ಆಲೋಚನೆಯ ಫಲವೇ ಮುದ್ದಾದ ಮಗಳು ಬಿಂದು.


ಹೆಣ್ಣು ಮಗುವಾದ್ದರಿಂದ ಅವಳ ವಿವಾಹ, ಅವಳ ಭವಿಷ್ಯವೇ ಅವರ ತಲೆಯಲ್ಲಿ ಕೊರೆಯುತ್ತಿದುದರಿಂದ.. ಎಷ್ಟು ಕಷ್ಟವಾದರೂ ಸರಿ ಆಕೆಗೊಂದು ಮದುವೆ ಮಾಡಿಬಿಡಬೇಕು ಎನ್ನುವ ಆಲೋಚನೆಯಲ್ಲಿದ್ದರು. ಆಕೆಗೆ ಓದಲು ಬಹಳ ಆಸೆ ಇದ್ದರೂ.. ಮದುವೆಯಾದ ನಂತರ ನಿನ್ನ ಗಂಡನ ಹಾಗೂ ಆತನ ಮನೆಯವರ ತೀರ್ಮಾನದಂತೆ ನೀನು ಏನನ್ನಾದರೂ ಮಾಡಬಹುದು ಎಂದು ಹೇಳಿದ್ದರು ಮನೆಯಲ್ಲಿ. ಆಕೆಯೂ ಹೆಚ್ಚು ವಾದಿಸದೆ ತಂದೆ-ತಾಯಿಯರ ಮಾತಿಗೆ ಒಪ್ಪಿಗೆ ನೀಡಿದ್ದಳು.


ಈ ಮಧ್ಯೆ ಆಕೆಯ ಮದುವೆಗೆಂದು ಇಟ್ಟಿದ್ದ ಹಣದಲ್ಲಿ ಸುಮಾರು ಭಾಗ ಭವಾನಿಯವರ ಹೊಟ್ಟೆಯಲ್ಲಿ ಗೆಡ್ಡೆಯಿದ್ದುದರಿಂದ ಅದನ್ನು ಆಪರೇಷನ್ ಮಾಡಿ ತೆಗೆಯುವ ಸಲುವಾಗಿ ಖರ್ಚಾಗಿತ್ತು.


ಭವಾನಿ ಚೇತರಿಸಿಕೊಂಡು ಮೊದಲಿನಂತೆ ಓಡಾಡಿ ಕೆಲಸ ಮಾಡತೊಡಗಿದಾಗ ಬಿಂದುವಿಗೊಂದು ವರ ಬಂದಿತ್ತು. ಸೀತಮ್ಮ ಹಾಗೂ ರಾಮಚಂದ್ರಯ್ಯನವರ ಮಗನೇ ದೀಪಕ್. ಇಬ್ಬರು ಹೆಣ್ಣುಮಕ್ಕಳಿಗೆ ಈಗಾಗಲೇ ಮದುವೆ ಮಾಡಿದ್ದರು. ದೀಪಕ್ ನ ವಿವಾಹ ಮಾಡುವುದು ಬಾಕಿಯಿತ್ತು. ಸ್ಥಿತಿವಂತರಾಗಿದ್ದರೂ.. ಬರುವ ಸೊಸೆಯ ಮನೆಯಿಂದ ತಮ್ಮ ಹೆಣ್ಣುಮಕ್ಕಳಿಗೆ ಖರ್ಚು ಮಾಡಿದ ಹಣವನ್ನು ವಸೂಲಿ ಮಾಡಲು ತುದಿಗಾಲಿನಲ್ಲಿ ಕಾದಿದ್ದರು. ಸೀತಮ್ಮ ಗಯ್ಯಾಳಿಯಾದರೆ, ರಾಮಚಂದ್ರಯ್ಯ ಪರಮಲೋಭಿ. ಹೆಣ್ಣುಮಕ್ಕಳು ಸಹಾ ತಂದೆ-ತಾಯಿಯ ಸ್ವಭಾವದವರಂತೆಯೇ.. ದೀಪಕ್ ಬಿ.ಕಾಂ ಓದಿ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಅಕೌಂಟೆಂಟ್ ಆಗಿದದ್ದರೂ.. ಆತ ತಂದೆ-ತಾಯಿಯ ಬಿಗಿಮುಷ್ಟಿಯೊಳಗಿದ್ದ. ಅದೆಲ್ಲವನ್ನೂ ಎದುರಿಸಿ ನಿಲ್ಲುವಷ್ಟು ಬುದ್ಧಿವಂತನೂ ಅಲ್ಲ, ಧೈರ್ಯವಂತನೂ ಅಲ್ಲ. ಹೆತ್ತವರು ಆಡಿಸಿದಂತೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ. ಇದಾವುದರ ಅರಿವಿಲ್ಲದೆ ಬಿಂದುವಿನ ವಿವಾಹ ಆತನೊಡನೆ ನಿಶ್ಚಯವಾಯಿತು. 


ಒಂದಕ್ಕೆರಡು ಖರ್ಚು ಬೆಳೆದು, ಗಜೇಂದ್ರನಾಥರು ಸ್ವಯಂ ನಿವೃತ್ತಿ ಪಡೆಯುವಂತಾಯ್ತು. ಇರುವ ಮನೆಯನ್ನು ಖಾಲಿ ಮಾಡಿ ಯಾವುದೋ ವಠಾರದ ಪುಟ್ಟ ಮನೆಯೊಂದರಲ್ಲಿ ವಾಸ ಮಾಡಲು ಶುರು ಮಾಡಿದರು. ಅತ್ತ ಗಂಡನ ಮನೆ ಸೇರಿದ ಬಿಂದುವಾದರೂ ನೆಮ್ಮದಿಯಾಗಿದ್ದಳೇ..? ಖಂಡಿತವಾಗಿಯೂ ಇಲ್ಲ..!


ಹೆಣ್ಣುಮಕ್ಕಳ ಮದುವೆಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿ ಅವರು ಸುಖವಾಗಿರಲೆಂದು ಆಶಿಸುವ ತಂದೆ-ತಾಯಿಯರ ಪ್ರತಿ ರೂಪದಂತೆ ಕಾಣುತ್ತಾರೆ ಗಜೇಂದ್ರನಾಥ ಹಾಗೂ ಭವಾನಿಯವರು.


ಗಿಣಿಯನ್ನು ಸಾಕಿ ಗಿಡುಗನ ಕೈಲಿ ಕೊಟ್ಟಾಯ್ತು ಎಂದುಕೊಂಡರು. ಬಿಂದು ಅದೆಲ್ಲವನ್ನು ಧಿಕ್ಕರಿಸಿ ತವರಿನಲ್ಲಿಯೇ ಬಂದು ಉಳಿಯಲು ಧೈರ್ಯ ಮಾಡಲಿಲ್ಲ. ಅಷ್ಟು ಧೈರ್ಯ ಇವರಿಗೂ ಇರಲಿಲ್ಲ. ಕಾರಣ ಬಡತನ. ಆಕೆಗೆ ಓದಿಸಿದ್ದರಾದರೂ ಆಕೆಯ ಮುಂದಿನ ಭವಿಷ್ಯ ಸುಖಮಯವಾಗಿರುತ್ತಿತ್ತೇನೋ.. ಆದರೆ, ಇಲ್ಲಿ ಹಾಗಾಗಲಿಲ್ಲ. ಮಗಳ ಕಣ್ಣಲ್ಲಿ ಬಂದ ನೀರು ತಂದೆಯ ಹೃದಯದಲ್ಲಿ ರಕ್ತವನ್ನೇ ಹರಿಸುವ ಎಷ್ಟೋ ಸಂದರ್ಭಗಳನ್ನು ಓದುವಾಗ ವಿಚಲಿತಗೊಳಿಸಿಬಿಡುತ್ತವೆ. ಭಾವುಕರನ್ನಾಗಿಸುತ್ತವೆ.


ದೀಪಕ್ ನಿಂದ ಬೇರೇನೂ ಸಿಗದಿದ್ದರೂ.. ದೈಹಿಕ ಪ್ರೀತಿ ಸಿಕ್ಕು ಬಿಂದು ಗರ್ಭಿಣಿಯಾದಳು. ಆ ಸಮಯದಲ್ಲಿಯೂ ಸರಿಯಾದ ವಿಶ್ರಾಂತಿ, ಆರೈಕೆ ಸಿಗದೇ ಗರ್ಭಪಾತವಾಗಿತ್ತು. ಅದಾದ ನಂತರವೂ ಆಕೆಯ ಸ್ಥಿತಿ ಗಂಭೀರವಾಗುತ್ತಾ, ಮತ್ತೆ ಚೇತರಿಸಕೊಳ್ಳಲಿಲ್ಲ. ಬದಲಾಗಿ, ಅವಳು ಶಕ್ತಿಹೀನಳಾಗುತ್ತಾ ಅತ್ತೆ-ಮಾವನ ಕಪಿಮುಷ್ಠಿಯಲ್ಲಿ ನಲುಗುತ್ತಲೇ ಹೋದಳು. ಗಾಣದತ್ತಿನಂತೆ ದುಡಿಯುತ್ತಾ, ಜೀವವನ್ನು ಸವೆಸುತ್ತಾ ಇದ್ದವಳು ಮಗುವೊಂದಕ್ಕೆ ಜನ್ಮ ಕೊಟ್ಟು ತನ್ನ ಜೀವವನ್ನೇ ತ್ಯಜಿಸಿದಳು.


ಮಗಳೆಡೆಗಿನ ತಮ್ಮ ಪ್ರೀತಿ ಅವಳಿಗೆ ಮುಳುವಾಗಬಹುದೆಂದು ತಾವು ದೂರವೇ ಇದ್ದ ಗಜೇಂದ್ರನಾಥ್ ಅವರು ಅದೆಲ್ಲವನ್ನೂ ಕಂಡು ಕುಸಿದು ಹೋಗಿದ್ದರು. ಬಡವರಾದ ಅವರ ಬಳಿ ಏನೂ ಇರಲಿಲ್ಲ. ಮಗಳ ಹೆಣವನ್ನು ಆಸ್ಪತ್ರೆಯಿಂದ ಗಂಡನ ಮನೆಗೆ ಬಿಟ್ಟು, ಕಟುಹೃದಯದ ತಂದೆಯಾಗಿ ಗಜೇಂದ್ರನಾಥರವರು ಹೊರಡುವಾಗ ಅವರ ನೋವು ನಮ್ಮನ್ನೂ ಕಾಡುತ್ತದೆ. ಅದೇ ಕೊರಗಿನಲ್ಲಿ ಭವಾನಿಯವರು ಸಾವನ್ನಪ್ಪುತ್ತಾರೆ. ಮುಂದೆ..?


ಸ್ವಾಭಿಮಾನಿಯಾದ ಗಜೇಂದ್ರನಾಥ್ ರವರು ತಮ್ಮ ಮನೆಯಲ್ಲಿದ್ದ ಸಾಮಾನುಗಳನ್ನು ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದೆಂದೂ.. ಅದಕ್ಕೆ ತಕ್ಕ ಹಣವನ್ನು ಕೊಟ್ಟರೆ ಸಾಕೆಂದು ಹೇಳುತ್ತಾ.. ಪತ್ನಿಯ ಸಾವಿನಲ್ಲಿಯೂ ತಮ್ಮ ಸ್ವಾಭಿಮಾನ ಬಿಡದೆ ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸಿ ದಿಕ್ಕೆಟ್ಟವರಂತೆ ಹೊರಟದ್ದು ಎಲ್ಲಿಗೆ..?


ಬಿಂದುವಿನ ಮಗು ಮುಂದೆ ಬೆಳೆದದ್ದು ಹೇಗೆ..? ದೀಪಕ್ ನ ತಂದೆ-ತಾಯಿ ಇದಕ್ಕೆ ಪ್ರತಿಕ್ರಿಯಿಸಿದ್ದು ಹೇಗೆ..? ದೀಪಕ್ ಈ ಎಲ್ಲಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದ..?


ತನ್ನ ಮಗಳ ನೋವಿನಿಂದ ಹೃದಯದಲ್ಲಿ ನೆತ್ತರನ್ನೇ ಕಕ್ಕಿದ ತಂದೆಯ ನೋವನ್ನು ಮುಂದೆಂದಾದರೂ ದೀಪಕ್ ಅನುಭವಿಸುತ್ತಾನಾ..?


ಒಬ್ಬ ತಂದೆಯ ನೋವು ಮತ್ತೊಬ್ಬ ತಂದೆಗೆ ಮಾತ್ರ ಅರಿವಾಗಲು ಸಾಧ್ಯವೆನ್ನುವ ಮಾತು ಇಲ್ಲಿ ನಿಜವಾಗುತ್ತದಾ..?


ಇಲ್ಲಿ ಭವಾನಿಯವರ ಮರಣದವರೆಗೂ ಕಾದಂಬರಿಯ ಪೂರ್ವಾರ್ಧವಷ್ಟೇ.. ಕಾದಂಬರಿಯ ಉತ್ತರಾರ್ಧವನ್ನು ಓದಿದರೆ ಇದೆಲ್ಲದಕ್ಕೂ ಉತ್ತರ ದೊರಕುತ್ತದೆ. ಈ ಕಾದಂಬರಿ ಮನಕಲಕಿದರೂ.. ಅಂತ್ಯ ಸ್ವಲ್ಪ ಮಟ್ಟಿಗೆ ನೆಮ್ಮದಿ ತರುತ್ತದೆ. ಈ ಕಾದಂಬರಿಯಲ್ಲಿ ನನಗೆ ಹೆಚ್ಚು ಕಾಡಿದ್ದು ಗಜೇಂದ್ರನಾಥ ಅವರು. ತನ್ನ ಮಗುವಿನ ಉಳಿವಿಗಾಗಿ ತಂದೆ ಏನೆಲ್ಲವನ್ನು ಮಾಡಬಲ್ಲನು ಎಂದು ತೋರಿಸಿಕೊಟ್ಟರೂ.. ಕೆಲವೊಮ್ಮೆ ಅವರ ವ್ಯತಿರಿಕ್ತವಾದ ಪ್ರತಿಕ್ರಿಯೆ ಅವರ ನೋವಿನ ಮತ್ತೊಂದು ಮುಖವಾಗಿ ಕಾಣುತ್ತದೆ. ಕಾದಂಬರಿ ಓದಿ ಮುಗಿದ ನಂತರವೂ ಎಷ್ಟೋ ಹೊತ್ತು ಈ ತಂದೆ ಕಾಡಿದರು. ಉತ್ತರಾರ್ಧ ಆಶಾದಾಯಕವಾಗಿದ್ದರೂ.. ಪೂರ್ವಾರ್ಧದ ಅವರ ಆಘಾತ, ಮನಸ್ಸಿನ ನೋವೇ ಹೆಚ್ಚು ಮನಸ್ಸಿನಲ್ಲುಳಿಯಿತು. ಇದು ಲೇಖಕಿಯ ಗೆಲುವು ಎಂದರೆ ತಪ್ಪಾಗಲಾರದು. ಸೊಗಸಾದ ಕಾದಂಬರಿಯ ಚೆಂದದ ಓದು.

~ವಿಭಾ ವಿಶ್ವನಾಥ್

ಮೋಡದ ತೆರೆ (ಪುಸ್ತಕ ಯಾನ - 229)


ಪುಸ್ತಕದ ಶೀರ್ಷಿಕೆ : ಮೋಡದ ತೆರೆ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಲಲಿತಾ ಪ್ರಕಾಶನ

ಮರು ಮುದ್ರಣ : 2022


ಚಿತ್ರಲೇಖ ಮೇಡಂ ಅವರ ಕಾದಂಬರಿಗಳ ನನ್ನ ಇತ್ತೀಚಿನ ಓದಿನಲ್ಲಿ ನನಾಗಿಷ್ಟವಾದದ್ದು ಅವರ ಮನೋವೈಜ್ಞಾನಿಕ ಕಾದಂಬರಿ ಮೋಡದ ತೆರೆ. ಮೊದಲಿಗೆ ಇದೊಂದು ಕೌಟುಂಬಿಕ ಕಾದಂಬರಿಯಂತೆ ಭಾಸವಾದರೂ.. ನಂತರ ಇದರಲ್ಲಿ ಕಾಣಸಿಗುವ ಮನೋರೋಗಕ್ಕೆ ಮದ್ದಾಗುವ ಹಾಗೂ ಚಿಕಿತ್ಸೆ ನೀಡುವ ಪರಿ ಅದ್ಭುತ. ಕಾದಂಬರಿಯ ಪೂರ್ವಾರ್ಧದಲ್ಲಿ.. ಇದ್ದರೆ ಇಂತಹಾ ಕುಟುಂಬ, ಇಷ್ಟು ಚಂದದ ಸಂಸಾರವಿರಬೇಕು ಎಂದೆನಿಸುವಂತೆ ಮಾಡಿದರೆ, ಕಾದಂಬರಿಯ ಉತ್ತರಾರ್ಧದಲ್ಲಿ ಹೆಣ್ಣನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಆಕೆ ಎಷ್ಟು ಚಂದದ ಸಂಸಾರ ಕಟ್ಟಿ ಕೊಡಬಲ್ಲಳೋ.. ಅಕಸ್ಮಾತ್, ಆಕೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಮನೆಯಲ್ಲಿ ಹಾಗೂ ಆಕೆಗೆ ಎಷ್ಟೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. 


ನರಸಿಂಹಾಚಾರ್ಯರು ಹಾಗೂ ಸಿಂಗಾರಮ್ಮನ ಏಕೈಕ ಮುದ್ದಿನ ಪುತ್ರನೇ ರಾಜೀವ್. ನರಸಿಂಗಾಚಾರ್ಯರಿಗೆ ಅಪಾರ ಆಸ್ತಿ ಇಲ್ಲದಿದ್ದರೂ.. ಇರುವ ಆಸ್ತಿಗೆ ಅವನು ಏಕೈಕ ವಾರಸುದಾರ. ಮೊದಲೆರಡು ಹೆಣ್ಣುಮಕ್ಕಳು ಹುಟ್ಟಿ ನಾಲ್ಕಾರು ತಿಂಗಳಲ್ಲಿಯೇ ಕಾರಣಾಂತರದಿಂದ ಮರಣ ಹೊಂದಿದ ನಂತರ ಸಿಂಗಾರಮ್ಮನವರು ಜಪ-ತಪ, ವ್ರತ, ನೇಮಗಳನ್ನು ಮಾಡಿ ಅದರ ಫಲದಿಂದ ಹುಟ್ಟಿದ ರಾಜೀವನನ್ನು ಬಹಳ ಜೋಪಾನವಾಗಿ ನೋಡಿಕೊಂಡರು. ಅಲ್ಲದೇ, ರಾಜೀವನಿಗೆ ಎರಡು ವರ್ಷವಿದ್ದಾಗ ಸಿಂಗಾರಮ್ಮನಿಗೆ ಹೊಟ್ಟೆಯಲ್ಲಿ ಗಡ್ಡೆಯಾಗಿ ಗರ್ಭಕೋಶವನ್ನು ತೆಗೆಯಬೇಕಾಗಿ ಬಂದಿತ್ತು. ಇದ್ದ ಏಕೈಕ ಮಗನಿಗೆ ತಮ್ಮೆಲ್ಲ ಪ್ರೀತಿ, ಕಾಳಜಿಯನ್ನು ಧಾರೆಯೆರೆದು ಬೆಳೆಸುತ್ತಿದ್ದರು. 


ಊರಲ್ಲಿ ಸ್ವಲ್ಪ ಹೊಲ-ಗದ್ದೆಗಳಿದ್ದರೂ.. ಖಾಸಗಿ ಬ್ಯಾಂಕ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನರಸಿಂಗಾಚಾರ್ಯರು ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡಿದ್ದರು. ರಾಜೀವ್ ಎಂ.ಇ ಓದಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಪ್ರೊಫೆಸರ್ ಆಗಿದ್ದನು. ಅಪ್ಪ-ಅಮ್ಮನಿಗೆ.. ಅದರಲ್ಲೂ ಅಮ್ಮನಿಗೆ ತನ್ನ ಮಗನಿಗೆ ಬೇಗ ವಿವಾಹ ಮಾಡಿ ಆತನ ವೈವಾಹಿಕ ಜೀವನವನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ. ಆದರೆ, ರಾಜೀವನಿಗೆ ಈಗಲೇ ಮದುವೆಯಾಗಲು ಇಷ್ಟವಿರಲಿಲ್ಲ. 


ಆತನಿಗೆ ಹೆತ್ತವರೆಂದರೆ ಬಹಳವೇ ಪ್ರೀತಿ. ನೆಮ್ಮದಿಯಾಗಿ ಅಪ್ಪ-ಅಮ್ಮನೊಡನೆ ಬಾಳುತ್ತಿರುವ ಈ ಸಂಸಾರದಲ್ಲಿ ಹೊಸಬಳಾಗಿ ಬಂದ ಹೆಣ್ಣು ಅವರೊಂದಿಗೆ ಹೊಂದಿಕೊಳ್ಳದೇ ಹೋದರೆ..!

ತಂದೆ-ತಾಯಿ ಹಾಗೂ ತನ್ನ ನಡುವೆ ಬಿರುಕು ಉಂಟಾದರೆ ಎನ್ನುವ ಭಯವಿತ್ತು ಅವನಿಗೆ. ಅಲ್ಲದೇ, ನಮ್ಮ ಮನೆಗೆ ಹೊಂದಿಕೊಳ್ಳುವ ಹೆಣ್ಣಾದರೂ.. ಆಕೆಯನ್ನು ನೋಡಿದ ಮಾತ್ರಕ್ಕೆ ಆಕೆಯ ಗುಣದ ಪರಿಚಯವಾಗುತ್ತದೆಯೇ..?! ಎನ್ನುವ ಅವನ ಭಯಕ್ಕೆ ವಧುಪರೀಕ್ಷೆಯನ್ನು ತಪ್ಪಿಸುತ್ತಿದ್ದನಾದರೂ.. ಸಿಂಗಾರಮ್ಮನ ಮಾತನ್ನು ತೆಗೆದುಹಾಕುವಂತಿರಲಿಲ್ಲ.


ಆತನ ಅಂತಹಾ ಭಯಕ್ಕೆಲ್ಲಾ ಅರ್ಥವಿಲ್ಲವೆಂದು ಆತನಿಗೆ ಅರಿವಾಗಿಸುವಂತೆ ಆತನ ಜೊತೆಯಾದವಳು ಕಲ್ಪನ. ಕಲ್ಪನ ಸುಬ್ಬರಾಯರು ಹಾಗೂ ಗಿರಿಜಮ್ಮ ದಂಪತಿಗಳ ಹಿರಿಯ ಮಗಳು. ಆಕೆಯ ತಮ್ಮ ಶೇಖರ್. ವಧುಪರೀಕ್ಷೆಯ ದಿನವೇ ಅವಳ ರೂಪ, ಗುಣವನ್ನು ಮೆಚ್ಚಿದರೂ.. ತನ್ನ ನಿರೀಕ್ಷೆಯನ್ನು ಹೇಳಿ ಒಪ್ಪಿದ ರಾಜೀವನಿಗೆ ಅನುರೂಪದ ಜೋಡಿಯಂತೆ ಹೊಂದಿಕೊಂಡು ಸಾಗುತ್ತಿದ್ದಳು ಕಲ್ಪನ. ಅವರದ್ದು ಎಷ್ಟು ಚೆಂದದ ಸಂಸಾರವೆಂದರೆ.. ಆ ಮನೆಯಲ್ಲಿ ಆಕೆ ಮಗಳೇ ಆಗಿದ್ದಳು. ಆಕೆ ತನ್ನ ತವರು ಮನೆಗೆ ಹೋಗಲು ಇಚ್ಛೆ ಪಡುತ್ತಿದ್ದದ್ದು ಕಡಿಮೆಯೇ. 


ಸೊಸೆಯರಿಗೆ ಗಂಡನ ಮನೆ ತನ್ನ ಮನೆ ಎಂದೆನಿಸುವುದು ತನ್ನಿಚ್ಛೆಯಂತೆ ಆ ಮನೆಯನ್ನು ಅಲಂಕರಿಸಿ, ಸಿಂಗರಿಸುವ ಅವಕಾಶ ಸಿಕ್ಕರೆ.. ಹಾಗೆಯೇ ಇಷ್ಟಪಟ್ಟ ಅಡುಗೆಯನ್ನು ಮಾಡುವ ಅವಕಾಶ ಸಿಕ್ಕಾಗ. ಕಲ್ಪನಳ ಯಾವ ಆಸೆಗೂ ಅಡ್ಡಿಪಡಿಸದ ಸಿಂಗಾರಮ್ಮನವರು ಆಕೆಯನ್ನು ಪ್ರೋತ್ಸಾಹಿಸುತ್ತಿದ್ದರು. ಅಷ್ಟೇ ಅಲ್ಲದೆ, ಗಂಡ-ಹೆಂಡತಿಗೆ ಏಕಾಂತ ಒದಗಿಸಲು ಹಿರಿಯ ದಂಪತಿಗಳಿಬ್ಬರೂ ಸಂಜೆ ರಾಯರ ಮಠಕ್ಕೆಂದು ಹೋಗುತ್ತಿದ್ದರು. ಮಗ-ಸೊಸೆ ಹೊಂದಿಕೊಂಡಿರುವಂತೆ ನೋಡಿಕೊಳ್ಳುತ್ತಿದ್ದರು. ಗಂಡನನ್ನು ಮೆಚ್ಚಿಸಲು ಸಾಧ್ಯವಾಗುವುದು ಅತ್ತೆ-ಮಾವನ ಸೇವೆಯಿಂದ ಎಂದರಿತ ಕಲ್ಪನ ಹಾಗೂ ಮಗನ ಪ್ರೀತಿಯನ್ನು ಹಾಗೆಯೇ ಉಳಿಸಿಕೊಳ್ಳಲು ಆತನ ಪತ್ನಿಯನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಸಿಂಗಾರಮ್ಮ ಸಂಸಾರವನ್ನು ಬಹಳ ಸುಂದರವಾಗಿ ಅರ್ಥ ಮಾಡಿಕೊಂಡಿದ್ದರು.


ಕಲ್ಪನ ಗರ್ಭಿಣಿಯಾದಾಗಲಂತೂ ಎಲ್ಲರ ಹಿಗ್ಗು ಹೇಳತೀರದ್ದು. ಆದರೆ, ಎಲ್ಲವೂ ಸಂತಸದಿಂದಲೇ ಸಾಗಿದ್ದರೆ ಬದುಕಿಗೆ ಎಲ್ಲಿಯ ಅರ್ಥ ಎಂಬಂತೆ.  ಇನ್ನೇನು ಕಲ್ಪನಳಿಗೆ ಹೆರಿಗೆಯಾಗುವ ಸಮಯದಲ್ಲಿಯೇ.. ಒಂದೆರಡು ದಿನ ಬಂದ ನಿಗದಿತ ಸಮಯದಲ್ಲಿ ಬಂದಿದ್ದ ಹೊಟ್ಟೆನೋವನ್ನು ನಿರ್ಲಕ್ಷಿಸಿದವಳು ಮೂರನೇ ದಿನಕ್ಕೆ ತನ್ನ ಮಗುವನ್ನು ಕಳೆದುಕೊಂಡಿದ್ದಳ. ನಂತರ ಸನ್ನಿ ಹಿಡಿದವಳಂತೆ ಆಡುತ್ತಿದ್ದವಳು, ಮಗುವನ್ನು ಕಳೆದುಕೊಂಡ ವಿಚಾರ ತಿಳಿದು ಆಘಾತದಿಂದ ಕಾರ್ಡಿಯಾಕ್ ಅರೆಸ್ಟ್ ಆಗಿ ಮರಣ ಹೊಂದಿದಳು. ಎಲ್ಲರ ಮನಸ್ಸಿನ ಮೇಲೂ ಶಾಶ್ವತವಾದ ನೋವು ಉಳಿದು ಹೋಯಿತು. ಕಲ್ಪನಾಳನ್ನು ಯಾರೂ ಮರೆಯುವಂತೆಯೇ ಇರಲಿಲ್ಲ. 


ಅದಾದ ಸುಮಾರು ದಿನಗಳ ಬಳಿಕ ಇವರಿನ್ನು ಜೋಡಿ ಮಾಡಿದ್ದ ಜೋಯಿಸರೇ ರಾಜೀವನ ಬಳಿ ಬಂದು.. ಒಂದು ಹುಡುಗಿಯ ಬಾಳನ್ನು ಕಾಪಾಡಬೇಕು ಎಂದು ಕೇಳಿಕೊಂಡರು. ಶ್ಯಾಮಾ ಶಾಸ್ತ್ರಿಗಳ ಮೊದಲ ಮಗಳಾದ ಶ್ವೇತಳಿಗೆ ಬಾಳು ನೀಡಬೇಕೆಂದು ಕೇಳಿಕೊಂಡರು. ಬಡತನದ ಮನೆಯಲ್ಲಿ ಕಪ್ಪು ಮೈಬಣ್ಣ ಹೊತ್ತು ಹುಟ್ಟಿದ್ದ ಶ್ವೇತಾಳಿಗೆ ವಿವಾಹವಾಗುವುದು ಅಷ್ಟು ಸುಲಭವಿರಲಿಲ್ಲ. ರಾಜೀವನ ವಿದ್ಯೆಗೆ, ಅಂತಸ್ತಿಗೆ, ರೂಪಕ್ಕೆ ತಕ್ಕ ಕನ್ಯೆ ಅಲ್ಲದಿದ್ದರೂ.. ಮನೆಯ ವಾತಾವರಣಕ್ಕೆ ಹೇಳಿ ಮಾಡಿಸಿದಂತಹ ಹೆಣ್ಣು ಎಂದು ಹೇಳಿ ಆತನ ಮನಸ್ಸು ಬದಲಾಯಿಸುವರಲ್ಲಿ ಸಫಲರಾದರು. 


ಅಚ್ಚರಿಯನ್ನುವಂತೆ ವಿವಾಹವೂ ನಡೆದು ಶ್ವೇತ ಮನೆಗೆ ಬಂದಳು. ಆದರೆ ಕಲ್ಪನಾಳ ಛಾಯೆ ಆ ಮನೆಯವರನ್ನು ಬಿಡುವಂತಿರಲಿಲ್ಲ. ಎಲ್ಲದಕ್ಕೂ ಕಲ್ಪನಾಳನ್ನೇ ಹೋಲಿಸುತ್ತಾ ಶ್ವೇತಳ ಎಲ್ಲಾ ಗುಣಗಳು ಅದರಲ್ಲಿ ಮುಚ್ಚಿ ಹೋಗುವಂತೆ ನಡೆದುಕೊಂಡರು. ಈಕೆಯನ್ನು ಸೂಕ್ಷ್ಮವಾಗಿ ಗಮನಿಸಲೇ ಇಲ್ಲ. ಕಲ್ಪನಾಳ ಮನೆಯವರ ಓಡಾಟ, ಒಡನಾಟ ಮುಂದುವರೆದಿತ್ತು. ಗಂಡ ತನ್ನನ್ನು ಮದುವೆಯಾದದ್ದು ಮಗುವಿಗೋಸ್ಕರ ಎಂದು ತಿಳಿದವಳಿಗೆ ತೀರಾ ಆಘಾತವೇನೂ ಆಗಿರಲಿಲ್ಲ. ಮಗು ರಕ್ಷಿತಾ ತನ್ನ ಬಣ್ಣದಂತಿರದೆ ರಾಜೀವನಂತೆ ಬೆಳ್ಳಗೆ ಹುಟ್ಟಿದ್ದು ಸಂತಸ ತಂದಿದ್ದಾದರೂ.. ದಿನೇದಿನೇ ತನ್ನಿಂದ ದೂರವಾಗುತ್ತಿದ್ದ ಮಗುವನ್ನು ಉಳಿಸಿಕೊಳ್ಳುವ ದಾರಿ ಕಾಣದಾದಾಗ ಆಕೆ ಕಂಗೆಟ್ಟುಬಿಟ್ಟಳು.


ಮೊದಮೊದಲಿಗೆ ತನ್ನದೇ ಬಣ್ಣದ ಲೋಕದಲ್ಲಿ ಕಳೆದು ಹೋಗುತ್ತಿದ್ದವಳು ಶಾಶ್ವತವಾಗಿ ಒಂದು ಕೋಣೆ ಸೇರಿ ಬಿಟ್ಟಳು. 


ಮನೋವೈದ್ಯಳಾದ ರಕ್ಷಿತಾಳಿಗೆ ತನ್ನಮ್ಮನೂ ಮನೋರೋಗಿಯೇ ಎಂದು ತಿಳಿದಾಗ ಅಘಾತವಾಗಿದ್ದು ಏಕೆ..?? ಅದರಲ್ಲಿ ಆಕೆಯ ಪಾಲೂ ಇದ್ದಿತೇ..??


ಶ್ವೇತ ಬರೆದಿದ್ದ ಚಿತ್ರದಲ್ಲಿ ಹಾಗೂ ಡೈರಿಯಲ್ಲಿದ್ದ ಹಂಸ ಹಾಗೂ ಕೋಗಿಲೆಯ ಚಿತ್ರದ ರೂಪಕದ ಅರ್ಥವೇನು..??


ಕಲ್ಪನಳನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ರಾಜೀವ ಹಾಗೂ ಆತನ ತಂದೆ-ತಾಯಿ ಶ್ವೇತಾಳನ್ನು ಕಡೆಗಣಿಸಿದ್ದೇಕೆ..? ಅದಕ್ಕೆ ಕಲ್ಪನಾಳ ನೆನಪು ಮಾತ್ರ ಕಾರಣವಾಗಿರಲಿಲ್ಲ.


ಮೋಡದ ತೆರೆ ಸರಿಯಿತೇ ಅಥವಾ ಇನ್ನಷ್ಟು ಮೋಡ ಮುಸುಕಿತೇ..??


ಇಲ್ಲಿ ನಿಜಕ್ಕೂ ತಪ್ಪು ಇಂತಹವರದ್ದೇ ಎಂದು ನಿಶ್ಚಯವಾಗಿ ಹೇಳಲಾಗದು. ತಪ್ಪನ್ನು ತಿದ್ದಿಕೊಳ್ಳುವುದರಲ್ಲಿ ಎಲ್ಲರೂ ಬದಲಾಗಬೇಕು, ಒಗ್ಗೂಡಬೇಕು ಎಂಬುದನ್ನು ನಿಚ್ಚಳವಾಗಿ ತೆರೆದಿಟ್ಟಿದ್ದಾರೆ ಲೇಖಕಿ. ಹೆಣ್ಣಿನ ಸೂಕ್ಷ್ಮ ಮನಸ್ಸು ಎಷ್ಟರಮಟ್ಟಿಗೆ ಘಾಸಿಗೊಳ್ಳಬಲ್ಲದು ಹಾಗೂ ಅದನ್ನು ಘಾಸಿಗೊಳಿಸುವವರು ತಮಗೆ ಅರಿವಿದ್ದೋ.. ಅರಿವಿಲ್ಲದೆಯೋ ವರ್ತಿಸುವ ಬಗೆಯನ್ನು ಸಹಾ ತೆರೆದಿಟ್ಟಿದ್ದಾರೆ. 


ಮನಸ್ಸು ಹಾಗೂ ಹೆಣ್ಣು ಎರಡೂ ಸೂಕ್ಷ್ಮ ವಿಚಾರಗಳು. ಹೆಣ್ಣಿನ ಮನಸ್ಸನ್ನು ಪದೇಪದೇ ನೋಯಿಸುತ್ತಾ ಬಂದರೆ ಆ ನೋವು ಹೇಗೆ ಪೆಡಂಭೂತವಾಗಿ ಕಾಡಬಲ್ಲದು ಎಂಬುದರ ಮನಮುಟ್ಟುವ ಚಿತ್ರಣ ಇಲ್ಲಿದೆ. ಹೆಣ್ಣೊಬ್ಬಳು ತಾಯ್ತನಕ್ಕೆ ಹಾಗೂ ಮಗುವಿಗಾಗಿ ಹಂಬಲಿಸುವ ಪರಿ ಹಾಗೂ ತಾಯ್ತನದ ಮಿಡಿತ.. ಹೆಣ್ಣಿಗೆ ತಾಯ್ತನ ಎಷ್ಟು ಮುಖ್ಯ ಹಾಗೂ ಶ್ರೇಷ್ಠವೆಂಬುದನ್ನು ಬಿಂಬಿಸುತ್ತದೆ. ಮನ ಮಿಡಿಯುವ ಕಾದಂಬರಿಯ ಓದು.

~ವಿಭಾ ವಿಶ್ವನಾಥ್

ಜೋಕಾಲಿ (ಪುಸ್ತಕ ಯಾನ - 228)


ಪುಸ್ತಕದ ಶೀರ್ಷಿಕೆ : ಜೋಕಾಲಿ

ಲೇಖಕರು : ಪ್ರೇಮಾ ಭಟ್

ಪ್ರಕಾಶಕರು : ಪ್ರೇಮಸಾಯಿ ಪ್ರಕಾಶನ

ಪ್ರಥಮ ಮುದ್ರಣ : 2012

ಪುಟಗಳು : 192

ಬೆಲೆ : 90 ರೂ.


ಸಾಹಿತ್ಯ ಕ್ಷೇತ್ರದಲ್ಲಿ ಮುಂದೆ ಬರುವಾಗ ಅದಕ್ಕೆ ಮತ್ತೊಬ್ಬರ ಮಾರ್ಗದರ್ಶನದ ಅವಶ್ಯಕತೆಯಷ್ಟೇ ಅವರ ನೈಪುಣ್ಯತೆ ಹಾಗೂ ಆಸಕ್ತಿಗಳೂ ಅತ್ಯವಶ್ಯಕ. ಆದರೆ, ಕೆಲವರಿಗೆ ತಮ್ಮ ಶಕ್ತಿಯ ಅರಿವಿರುವುದಿಲ್ಲ. ಜಾಂಬವಂತ ಹನುಮನಿಗೆ ತನ್ನ ಶಕ್ತಿಯನ್ನು ನೆನಪಿಸಿದಂತೆ ತಮ್ಮಲ್ಲಿರುವ ಶಕ್ತಿಯನ್ನು ಉದ್ದೀಪನಗೊಳಿಸಿಕೊಳ್ಳಲು ಯಾರಾದರೊಬ್ಬರ ಅವಶ್ಯಕತೆ ಇರುತ್ತದೆ. ಆ ರೀತಿ ಸ್ಪೂರ್ತಿಯಾಗುವವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮತ್ತೊಬ್ಬರ ಬದುಕಿನಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತಾರೆ. ಅಂತಹಾ ಸಂಬಂಧಗಳು ಬೆಳೆದಂತೆ ಅಷ್ಟೇ ಅಂತಃಕರಣದಿಂದ ಸ್ನೇಹ/ಗೌರವವನ್ನು ಪೋಷಿಸಿಕೊಂಡು ಹೋಗುವುದು ಇಬ್ಬರಿಗೂ ಸೇರಿದ್ದು. ಈ ಕಾದಂಬರಿ 'ಹೊಸ ದಿಗಂತ' ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಜನಪ್ರಿಯವಾಗಿತ್ತು.


ದಿವಾಕರನ ಪತ್ನಿ ಹಾಗೂ ವಿಕ್ಕಿಯ ತಾಯಿಯಾಗಿದ್ದ ಕುಸುಮಾ ಕೆಲಸಕ್ಕೆ ಹೋಗುತ್ತಾ ತನ್ನ ದುಡಿಮೆಯಿಂದ ತನ್ನ ಜೀವನವನ್ನು ಕಟ್ಟಿಕೊಂಡಿರುತ್ತಾಳೆ. ಪುಟ್ಟ ವಿಕ್ಕಿಯನ್ನು ನೋಡಿಕೊಳ್ಳಲು ಆಕೆಗೆ ಜಯಮ್ಮನ ಸಹಾಯ, ಸಹಕಾರ ಬೇಕಾಗಿತ್ತು. ಹಾಗೆಂದು, ಆಕೆ ಕೆಲಸಕ್ಕೆ ಹೋಗಲೇಬೇಕು ಎನ್ನುವ ಅನಿವಾರ್ಯತೆ ಏನಿರಲಿಲ್ಲ. 


ದಿವಾಕರನ ಕೆಲಸ ಸದಾ ಟೂರಿನಲ್ಲಿ ಇರುವಂತಹದ್ದು. ಜೊತೆಗೆ ಪತಿ-ಪತ್ನಿಯರಲ್ಲಿ ಹೇಳಿಕೊಳ್ಳುವಂತಹ ಸ್ನೇಹ ಸಾಮರಸ್ಯವಿರಲಿಲ್ಲವಾದ್ದರಿಂದ ಒಂಟಿತನಕ್ಕೆ ಮದ್ದಾಗಿ ಆಕೆ ಕೆಲಸವನ್ನು ಆಯ್ಕೆ ಮಾಡಿಕೊಂದಿದ್ದಳು. ಮಗುವಾದ ನಂತರವೂ ಆಕೆ ಕೆಲಸವನ್ನು ಬಿಡದೆ ತಾನು ಕೆಲಸಕ್ಕೆ ಹೋಗುತ್ತೇನೆಂಬ ನಿರ್ಧಾರ ಮಾಡಿದ್ದಳು. ಕಛೇರಿಯ ಕೆಲಸದಲ್ಲಿ ಆಕೆ ಭ್ರಷ್ಟಾಚಾರದ ವಿವಿಧ ಮುಖಗಳನ್ನು ನೋಡಿ ಬೇಸತ್ತಿದ್ದಳಾದರೂ.. ವಿಧಿ ಇಲ್ಲದೆ ತಾನು ತನ್ನಷ್ಟಕ್ಕೆ ಕೆಲಸ ಮುಂದುವರಿಸಿಕೊಂಡು ಹೋಗುತ್ತಿದ್ದಳು.


ಜಯಮ್ಮ ವಿಕ್ಕಿಗೆ ಇನ್ನೊಬ್ಬ ತಾಯಿಯಂತಿದ್ದಳು. ವಿಕ್ಕಿಯೂ ಕುಸುಮನಿಗಿಂತಲೂ ಹೆಚ್ಚಾಗಿ, ಯಾವಾಗಲೂ ತನ್ನೊಡನೆಯೇ ಇರುವ ಜಯಮ್ಮನನ್ನೇ ಹೆಚ್ಚು ಹಚ್ಚಿಕೊಂಡಿದ್ದ. ಜಯಮ್ಮ ಬೇರೆ ಕೆಲಸದವರಂತಲ್ಲ. ಅವರಿವರ ಮನೆ ಕತೆಯನ್ನು ತಂದು ಇಲ್ಲಿ ಬಿತ್ತರಿಸುತ್ತಿರಲಿಲ್ಲ. ಜೊತೆಗೆ ಆಕೆ ವಿದ್ಯಾವಂತೆ. ಆಗಾಗ ಪತ್ರಿಕೆಗಳಲ್ಲಿ ಬರುವ ಕಥೆಗಳನ್ನು, ವಿಚಾರಗಳನ್ನು, ವಾರ್ತೆಗಳನ್ನು ಕುಸುಮಳ ಜೊತೆಗೆ ಚರ್ಚಿಸುವುದಿತ್ತು. ಅಲ್ಲದೇ, ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯವರು ನಡೆಸುತ್ತಿದ್ದ ಹೋರಾಟಕ್ಕೆ ತಾನೂ ತನ್ನ ಕೈಲಾದಂತೆ ಬೆಂಬಲಿಸುತ್ತಿದ್ದಳು. ಕುಸುಮ ಜಯಮ್ಮನನ್ನು ಸ್ನೇಹಿತೆಯಂತೆಯೇ ಕಾಣುತ್ತಿದ್ದಳು. ಭಾನುವಾರವನ್ನು ಹೊರತುಪಡಿಸಿ ಉಳಿದೆಲ್ಲಾ ದಿನ ಕೆಲಸಕ್ಕೆ ಬರುತ್ತಿದ್ದಳು ಜಯಮ್ಮ. 


ಎದುರು ಮನೆಗೆ ಬಂದ ಲೇಖಕ ಕೇಶವನನ್ನು ಕುಸುಮ ನೋಡಿದ್ದಳಾದರೂ.. ಆತನ ಕುರಿತು ಕುತೂಹಲವಿದ್ದರೂ ತಾನಾಗಿಯೇ ಪರಿಚಯ ಮಾಡಿಕೊಳ್ಳಲು ಹೋಗಿರಲಿಲ್ಲ. ಆತನೇ ತನ್ನ ಮಗು ಋಷಿಯನ್ನು ನೋಡಿಕೊಳ್ಳಲು ಸಂಜೆಯ ಸಮಯದಲ್ಲಿ ಜಯಮ್ಮನನ್ನು ತಮ್ಮ ಮನೆಗೆ ಕೆಲಸಕ್ಕೆ ಕಳುಹಿಸಬಹುದಾ ಎಂದು ಕೇಳಲು ಬಂದಾಗ ಪರಿಚಯವಾಗಿತ್ತು. ನಂತರ ಆತನ ಕುರಿತಾಗಿ ಹಾಗೂ ಆತನ ಕತೆಗಳ ಕುರಿತಾಗಿ ತಿಳಿದ ಕುಸುಮ ಅದನ್ನು ಓದುತ್ತಲೇ ತಾನೂ ಬರವಣಿಗೆಯತ್ತ ಆಸಕ್ತಿ ಮೂಡಿಸಿಕೊಳ್ಳುತ್ತಾಳೆ.


ಕೇಶವ ಮೂಲತಃ ಕೇರಳದವನಾದರೂ.. ಆತನ ಪತ್ನಿ ಮಗ ಋಷಿಯನ್ನು ಬಿಟ್ಟು ಹೋದ ನಂತರ ಅಲ್ಲಿರಲಾಗದೆ ಬರವಣಿಗೆಯ ಕಾರಣದಿಂದ ಇಲ್ಲಿ ಬಂದು ನೆಲೆಸಿರುತ್ತಾನೆ. 


ಬರವಣಿಗೆಗೆಂದು ಆತನ ಮಾರ್ಗದರ್ಶನ ಹಾಗೂ ಸಲಹೆಗಾಗಿ ಆಗಾಗ ಭೇಟಿ ನೀಡುತ್ತಿದ್ದ ಕುಸುಮ ಆತನ ಮನೆಯಲ್ಲಿದ್ದ ಜೋಕಾಲಿಯ ಮೇಲೆ ಕೂರುತ್ತಿದ್ದದ್ದೇ ಹೆಚ್ಚು. ಸ್ವಭಾವತಃ ಭಾವಜೀವಿಯಾಗಿದ್ದ ಕೇಶವನಿಗೂ.. ಸ್ನೇಹವನ್ನು ಬಯಸುತ್ತಿದ್ದ ಕುಸುಮಾಳಿಗೂ ಬೇಗನೆ ಹೊಂದಿಕೆಯಾಗಿ ಸ್ನೇಹ-ಸಲುಗೆಗಳು ಬೆಳೆದವು.


ಮಗು ತನಗಿಂತ ಜಯಮ್ಮನನ್ನು ಹೆಚ್ಚು ಹಚ್ಚಿಕೊಂಡಿರುವುದು ಅವಳ ಮನಸ್ಸಿಗೆ ಬಂದಾಗ ಜಯಮ್ಮನ ಕುರಿತು ಕೆಲವೊಮ್ಮೆ ಅಸಡ್ಡೆ ತೋರಿದ್ದಳು ಕುಸುಮ. ಜಯಮ್ಮನಿಗೂ ಕೇಶವ ಹಾಗೂ ಕುಸುಮ ಸಲುಗೆಯಿಂದಿರುವುದು ಕೆಲವೊಮ್ಮೆ ಸರಿಬರುತ್ತಿರುವುದಿಲ್ಲ. ಅಂತಹಾ ಸಮಯದಲ್ಲಿ ಕತೆಯೊಂದರ ಮೂಲಕ ಇಬ್ಬರ ಮನಸ್ಸನ್ನು ಬದಲಿಸುತ್ತಾನೆ ಕೇಶವ. ಸಾಹಿತ್ಯ ಓದುಗರ ಮೇಲೆ ನಿಜ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಪ್ರತ್ಯಕ್ಷ ಸಾಕ್ಷಿಯಂತಿದೆ ಈ ಪ್ರಕರಣ.


ಹಾಗೆಂದು, ಆಕೆಯ ಸ್ನೇಹವನ್ನು ದುರುಪಯೋಗ ಮಾಡಿಕೊಳ್ಳಲಿಲ್ಲ ಕೇಶವ. ಬದಲಾಗಿ, ಆಕೆಯ ಸಾಹಿತ್ಯಾಸಕ್ತಿಗೆ ಮತ್ತಷ್ಟು ಪೋಷಿಸಿ, ನೀರೆರೆದು ಬೆಳೆಸುತ್ತಾನೆ. ಮತ್ತೊಬ್ಬರ ಪ್ರೋತ್ಸಾಹದಿಂದಲೇ ಸಾಹಿತ್ಯ ಚಿಗುರುವುದಿಲ್ಲ. ಅವರ ಬರಹದಲ್ಲಿಯೂ ಅಂತಹಾ ಮೌಲ್ಯಗಳಿರಬೇಕು. ಸತ್ವಯುತವಾದ ಸಾಹಿತ್ಯವನ್ನು ಬರೆದು, ಪ್ರಶಸ್ತಿಯನ್ನು ಗೆಲ್ಲುತ್ತಾ.. ಸಾಹಿತ್ಯ ಕ್ಷೇತ್ರದ ಒಂದೊಂದೇ ಮೆಟ್ಟಿಲೇರುತ್ತಾ ಹೋದಳು ಕುಸುಮ. 


ತನ್ನ ಸಾಹಿತ್ಯ ಸೃಷ್ಟಿಗೆ ಸಮಯ ಸಾಲುತಿಲ್ಲವೆನ್ನುವ ಕಾರಣದಿಂದ ತನ್ನ ಕೆಲಸವನ್ನು ಬಿಡುತ್ತಾಳೆ ಕುಸುಮ. ಅದಕ್ಕೆ ದಿವಾಕರ ಅಡ್ಡಿಪಡಿಸುವುದಿಲ್ಲ. ಆದರೆ, ಆತನ ನಿರಾಸಕ್ತಿಯೂ ಬದಲಾಗಿರುವುದಿಲ್ಲ. 


ಎಲ್ಲವೂ ಸರಿಯಾಗಿಯೇ ಸಾಗುತ್ತಿತ್ತು ಎನ್ನುವ ಸಂದರ್ಭದಲ್ಲಿ ಜಯಮ್ಮ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯೊಂದಕ್ಕೆ ಹೋದವಳು ಅಲ್ಲಿಂದ ಮರಳಿ ಬರುವುದಿಲ್ಲ. ಜಯಮ್ಮನ ಸಾವಿಗೆ ಕಾರಣವೇನು..? 


ಋಷಿಯ ಹೊಣೆಯನ್ನು ಕೆಲವೊಮ್ಮೆ ಹೊರುವ ಕುಸುಮ ಕೇಶವನಿಗೆ ಹತ್ತಿರವಾಗುತ್ತಾ ಹೋಗುತ್ತಾಳೆ. 


ಸ್ನೇಹ ಸಲುಗೆಗಳು ಹೆಚ್ಚಾಗಿ ಇಬ್ಬರ ಮನದಲ್ಲೂ ಅನುರಾಗ ಮೊಳೆಯುತ್ತದಾದರೂ.. ಕುಸುಮಾಳಿಗೆ ಮದುವೆಯಾಗಿದ್ದು ಅದರ ಪರಿಧಿಯನ್ನು ಮೀರಿ ಆಚೆ ಬರಲು ಆಕೆ ಸಿದ್ಧಳಿರುವುದಿಲ್ಲ. ಅಕಸ್ಮಾತ್ ಹಾಗಾಗಿದ್ದರೂ ಕೇಶವನ ಪತ್ನಿಗಿಂತ ಆಕೆಯ ನಡೆ ವಿಭಿನ್ನವಾಗೇನೂ ಕಾಣುತ್ತಿರಲಿಲ್ಲ. 


ಆದರೆ, ಅವರಿಬ್ಬರ ಜೀವನದಲ್ಲಿಯೂ ಮಹತ್ತರ ಬದಲಾವಣೆಗಳಾಗುತ್ತವೆ. ಕೇಶವನ ಮೊದಲ ಪತ್ನಿಯ ದರ್ಶನವಾದ ನಂತರ ಆತ ಮೊದಲಿನಂತಿಲ್ಲದ್ದು ಏಕೆ..? ಅಣ್ಣನ ಸಾವು ಆತನ ಬದುಕಿನಲ್ಲಿ ತಂದ ಬದಲಾವಣೆಗಳೇನು..? 


ದಿವಾಕರನದ್ದು ಕುಸುಮಳೆಡೆಗೆ ನಿಜವಾಗಿಯೂ ನಿರಾಸಕ್ತಿಯಾಗಿರಲಿಲ್ಲ ಅಥವಾ ಸಾಮರಸ್ಯದ ಕೊರತೆಯೂ ಆಗಿರಲಿಲ್ಲ. ದೇವಿ ಎಂಬ ಪುಟ್ಟ ಹುಡುಗಿಯನ್ನು ಮನೆಗೆ ಕರೆ ತಂದ ದಿವಾಕರನ ನಡೆ ಮೊದಲಿಗೆ ಕುಸುಮಾಳನ್ನು ವಿಚಲಿತಗೊಳಿಸಿದರೂ ನಂತರ ಆತನ ಹೃದಯವೈಶಾಲ್ಯಕ್ಕೆ ಮನ ತುಂಬಿ ಬರುತ್ತದೆ. ದೇವಿ ಆತನ ಮಗಳೇನಲ್ಲ..! ಹಾಗಾದರೆ ದೇವಿಗೂ ದಿವಾಕರನಿಗೂ ಇದ್ದ ಸಂಬಂಧವೇನು..? ಬದಲಾದ ದಿವಾಕರ ಕೇಶವನನ್ನು ಮರೆಸುತ್ತಾನೆಯೇ..? ದಿವಾಕರನಿಗೆ ಆಕೆಯ ಹಾಗೂ ಕೇಶವನ ಸ್ನೇಹದ ಕುರಿತು ತಿಳಿದಿದ್ದರೂ ಅದುವರೆಗೂ ಚಕಾರವೆತ್ತದ್ದೇಕೆ..? ಕಾದಂಬರಿಯ ಕೊನೆಯಲ್ಲಿ ನಮ್ಮ ಕಣ್ಣಿಗೆ ಕಾಣುವ ದಿವಾಕರನ ಚಿತ್ರಣಕ್ಕೂ.. ಮೊದಲಿಗೆ ಕಾಣುವ ಚಿತ್ರಣಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಇದರ ಕಾರಣವನ್ನು ನೀವು ಓದಿಯೇ ಅರಿಯಬೇಕು. 


ಇಲ್ಲಿ ಕೆಲಸದ ಜಯಮ್ಮನ ಪಾತ್ರ ಬಹಳ ಮೌಲ್ಯಯುತವಾದದ್ದು. ಕುಸುಮಳ ಕಛೇರಿಯಲ್ಲಿನ ಚಿತ್ರಣದಲ್ಲಿ ಭ್ರಷ್ಟಾಚಾರ ಹಾಗೂ ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಆಂದೋಲನ ಚಿತ್ರಿತವಾಗಿದೆ. ಕಥಾನಾಯಕಿಯಾದ ಕುಸುಮಾಳ ಕೈಯಲ್ಲಿ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆ ಅಥವಾ ಆಂದೋಲನದ ಕುರಿತ ವಿರೋಧವನ್ನು ವ್ಯಕ್ತಪಡಿಸಬಹುದಾಗಿದ್ದರೂ.. ಅದಕ್ಕಿಂತಲೂ ಜಯಮ್ಮನ ಮೂಲಕ ಅರಿವು ಮೂಡಿಸಿದ ಚಿತ್ರಣ ಬಹಳ ಶಕ್ತವಾಗಿದೆ ಎನ್ನಿಸಿತು. ಇದು ಈ ಕಾದಂಬರಿಯಲ್ಲಿ ಬಹಳ ಸಕಾರಾತ್ಮಕ ಚಿತ್ರಣವಾಗಿ ಕಂಡಿತು. 


ಮನಸ್ಸುಗಳ ತೂಗುಯ್ಯಾಲೆಗೆ, ಕೇಶವನ ಮನೆಯಲ್ಲಿದ್ದ ಜೋಕಾಲಿ ರೂಪಕವಾಗಿ ತೋರುತ್ತದೆ. ಇಲ್ಲಿ ಜೋಕಾಲಿಯೂ ಕೂಡ ಕಥೆಯ ಪ್ರಮುಖ ಪಾತ್ರದಂತೆಯೇ ಭಾಸವಾಯಿತು. ಒಂದೊಳ್ಳೆ ಸಂದೇಶ ನೀಡುವ ಚೆಂದದ ಕಾದಂಬರಿಯ ಓದು.


~ವಿಭಾ ವಿಶ್ವನಾಥ್

ನಿರ್ಗಮನ (ಪುಸ್ತಕ ಯಾನ - 227)


ಪುಸ್ತಕದ ಶೀರ್ಷಿಕೆ : ನಿರ್ಗಮನ

ಲೇಖಕರು : ಜೋಗಿ

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2024

ಪುಟಗಳು : 160

ಬೆಲೆ : 170 ರೂ. 


ನನಗಂತೂ ಜೋಗಿ ಅವರ ಪುಸ್ತಕಗಳನ್ನು ಓದಿದಷ್ಟು ಸರಾಗವಲ್ಲ ಅವರ ಪುಸ್ತಕದ ಕುರಿತ ಚಿತ್ರಣ ಕಟ್ಟಿಕೊಡುವುದು. ಕಡಿಮೆ ಹೇಳಿದರೆ ಹೇಳಬೇಕಾದುದನ್ನು ಹೇಳಲಿಲ್ಲವೇನೋ ಎಂದೆನಿಸಿದರೆ, ಹೆಚ್ಚು ಹೇಳಿದರೆ ಎಲ್ಲಿ ಪುಸ್ತಕದ ಹೂರಣವನ್ನು ಬಿಟ್ಟುಕೊಟ್ಟೆನೋ ಎಂದೆನಿಸಿಬಿಡುತ್ತದೆ. ಇದು ಅವರ ಒಂದೆರಡು ಪುಸ್ತಕದ ಕಥೆಯಲ್ಲ ಹೆಚ್ಚಿನ ಪುಸ್ತಕಗಳದ್ದು. ಈ ನಡುವಲ್ಲಿ ಕೆಲವೊಮ್ಮೆ ಅಂಕಣ ಬರಹದಲ್ಲಿ ಓದಿದ್ದನ್ನು ಅಥವಾ ಒಂದು ಪುಸ್ತಕದಲ್ಲಿದ್ದ ಪ್ರಸಂಗವನ್ನು ಇನ್ನೊಂದು ಪುಸ್ತಕದಲ್ಲಿ ಬರೆದಾಗ ಇದು ಚರ್ವಿತಚರ್ವಣ ಎಂದೆನಿಸುತ್ತಿತ್ತು. ಆದರೆ, ಅವರ ಇತ್ತೀಚಿನ ಪುಸ್ತಕಗಳು ಆ ರೀತಿಯ ಭಾವ ಹುಟ್ಟಿಸುತ್ತಿಲ್ಲ.


ಮೊದಲಿಗೆ ಈ ಪುಸ್ತಕದ ಮುಖಪುಟವನ್ನು ನೋಡಿದಾಗ "ನೋ ಕಂಟ್ರಿ ಫಾರ್ ಓಲ್ಡ್ ಮ್ಯಾನ್" ಎನ್ನುವ ಬರಹ ಇದು ವೃದ್ಧರ ಕುರಿತಾದದ್ದಾ ಎನ್ನಿಸಿದರೂ.. ಕಥೆ ಅಂದುಕೊಂಡಷ್ಟು ಸರಳವಾಗಿ ಸಾಗುವುದಿಲ್ಲ. ಇದು ಕೇವಲ ವೃದ್ಧರ ಕಥೆ ಖಂಡಿತವಾಗಿಯೂ ಅಲ್ಲ .


ಅನಿರುದ್ಧನಿಗೆ ನ್ಯೂಸ್ ಚಾನೆಲ್ ನಲ್ಲಿ ಕೆಲಸ. ಆತ ಸಂಪಾದಕೀಯ ಮೀಟಿಂಗ್ ನಲ್ಲಿ ಭಾಗವಹಿಸುವಾಗ ಸಾಮಾನ್ಯವಾಗಿ ಅವನ ಫೋನ್ ಸೈಲೆಂಟ್ ಮೋಡಿನಲ್ಲಿರುತ್ತದೆ. ಅಂದೂ ಅದೇ ರೀತಿಯ ಮೀಟಿಂಗ್ ಗೆಂದು ಇನ್ನೇನು ಫೋನನ್ನು ಸೈಲೆಂಟ್ ಮೋಡ್ ನಲ್ಲಿ ಹಾಕಬೇಕು ಎನ್ನುವಷ್ಟರಲ್ಲಿ ಫೋನ್ ರಿಂಗ್ ಆಗಿತ್ತು. ಫೋನ್ ಮಾಡಿದ್ದು ಆತನ ಪತ್ನಿ ಮಾನಸಿ.


ಸಹಕಾರ ನಗರದಲ್ಲಿ ಅನಿರುದ್ಧನ ತಂದೆಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೀಲಾ ಮಾನಸಿಗೆ ಫೋನ್ ಮಾಡಿ ಆತನ ತಂದೆ ನಿನ್ನೆ ಬೆಳಗ್ಗೆಯಿಂದ ಕಾಣಿಸುತ್ತಿಲ್ಲವೆಂದು ಹೇಳಿದ್ದರಿಂದ ಗಾಬರಿಗೊಂಡು ಆಕೆ ಅಲ್ಲಿಗೆ ಹೋಗಿದ್ದಳು. ಆಕೆಯ ಮಾತಿನಲ್ಲಿ ಸತ್ಯಾಂಶವಿದ್ದುದರಿಂದ ಗಾಬರಿಯಾಗಿ, ಅನಿರುದ್ಧನಿಗೆ ಕರೆ ಮಾಡಿದ್ದಳು. ಆತನನ್ನು ಸಂಪರ್ಕಿಸಲು ಸಾಧ್ಯವಾಗದೆ ಮಾನಸಿ ಆಫೀಸಿಗೆ ಫೋನ್ ಮಾಡಿ ಈ ವಿಚಾರವನ್ನು ಮನೋಹರಿಯ ಬಳಿ ಹಂಚಿಕೊಂಡಿದ್ದಳು. 


ವಿಚಾರ ತಿಳಿದ ಅನಿರುದ್ಧ ಅಲ್ಲಿಂದ ಹೊರಟ. ಅಂದಿನ ಮೀಟಿಂಗ್ ಮೇಲೆ ಇದರ ಪರಿಣಾಮವೇನಾಯಿತು..??


ಸಹಕಾರನಗರ ಪಟ್ಟಣದಿಂದ ದೂರವಿದ್ದ ಬಡಾವಣೆ. ಅಲ್ಲಿದ್ದ ಮನೆ ಅನಿರುದ್ಧನ ತಂಗಿ ಮಾಲವಿಕಾಳದ್ದು. ಬಾಸ್ಟನ್ ನಲ್ಲಿ ನೆಲೆಸಿದ್ದ ಅವಳು ಆ ಮನೆಯನ್ನು ಬಾಡಿಗೆಗೆ ಕೊಡಲು ಇಷ್ಟವಿಲ್ಲದೆ ಅಣ್ಣನ ಸಂಸಾರವನ್ನೇ ಅಲ್ಲಿಗೆ ಬಂದಿರಲು ಹೇಳಿದ್ದಳು. ಆದರೆ, ಮಾನಸಿ ಆ ಪ್ರಸ್ತಾಪವನ್ನು ತಳ್ಳಿ ಹಾಕಿದ್ದಳು. ಮಗಳು ಶಾನ್ವಿಯ ಸ್ಕೂಲ್ ಬದಲಾಯಿಸುವುದು  ಕಷ್ಟ ಎಂಬ ಕಾರಣವನ್ನು ಹೇಳಿದ್ದಳು. ಕಾರಣ ಅದಾಗಿರಲಿಲ್ಲವೆಂಬುದು ಎಲ್ಲರಿಗೂ ಅರಿವಿತ್ತು.


ಅನಿರುದ್ಧನ ತಂದೆ ಶಾರದಾ ಪ್ರಸಾದ್ ಸೋವಿಯತ್ ಯೂನಿಯನ್ ಪ್ರೆಸ್ ನಲ್ಲಿ ಪ್ರೂಫ್ ರೀಡರ್ ಆಗಿದ್ದವರು. ನೂರಾರು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದವರು. ಅಲ್ಲಿ ಕೆಲಸ ಮಾಡುವಾಗ ರಷ್ಯನ್ ನಿಂದ ಇಂಗ್ಲೀಷ್ ಗೆ ಅನುವಾದವಾದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಬೇಕಿತ್ತು. ಹಾಗೆ ಕೆಲಸ ಮಾಡುತ್ತಿದ್ದವರಿಗೆ ಬಹಳ ಕಾಲದ ನಂತರ ಮತ್ತೆ ಅನುವಾದಕ್ಕೆ ಒಂದು ಪುಸ್ತಕ ಬಂದಿರುವುದರಿಂದ ಅದನ್ನು ಒಪ್ಪಿಕೊಂಡಿದ್ದೇನೆಂದು.. ತನಗೆ ಏಕಾಂತ ಬೇಕೆಂದು ಮಾಲವಿಕಳ ಮನೆಗೆ ತಾನೊಬ್ಬನೇ ಹೋಗಿ ನೆಲೆಸುವುದಾಗಿ ಹೇಳಿ ಎಲ್ಲರ ಸಮಸ್ಯೆಗೂ ತಾವೇ ಪರಿಹಾರ ಕೊಟ್ಟಿದ್ದರು. ಅಂದಿನಿಂದ ಯಾವ ಸಮಸ್ಯೆಗಳೂ ಇರಲಿಲ್ಲ. ಶಾರದಾ ಪ್ರಸಾದ್ ಕಾಣೆಯಾಗುವವರೆಗೂ..


ಹಠಾತ್ತನೆ ಕಾಣೆಯಾದ ಶಾರದಾ ಪ್ರಸಾದ್ ಅವರ ಪ್ರಸಂಗ ಈ ಆರೇಳು ವರ್ಷಗಳ ಅಂತರದಲ್ಲಿ ಏನೇನು ಆಗಿರಬಹುದು ಆಲೋಚಿಸುವಂತೆ ಮಾಡಿತ್ತು. ಮನೆ ಉಸ್ತುವಾರಿಗೆಂದು ಮಾಲವಿಕ ನೇಮಿಸಿದ್ದ ನೀಲಾಲಿಂದ ಹೌಸ್ ಕೀಪಿಂಗ್ ಕೆಲಸಗಳೆಲ್ಲವೂ ಸಾಗುತ್ತಿದ್ದವು. ಮೊದಮೊದಲು ಮಗ, ಸೊಸೆ, ಮೊಮ್ಮಗಳು ಬಂದು ಹೋಗುತ್ತಿದ್ದವರು ನಂತರ ಕ್ರಮೇಣ ಕಡಿಮೆಯಾಗಿ ಮಾನಸಿ ನೀಲಾಳ ಜೊತೆ ಸಂಪರ್ಕ ಇಟ್ಟುಕೊಂಡು ಮಾವನ ಕುರಿತು ವಿಚಾರಿಸಿಕೊಳ್ಳುತ್ತಿದ್ದಳು. 


ನಾಪತ್ತೆಯಾಗಲು ಕಾರಣವೇನಿರಬಹುದು ಎಂದು ಯೋಚಿಸುತ್ತಲೇ ವೃದ್ಧರ ಕುರಿತಾದ ಹಲವಾರು ಘಟನೆಗಳು ನೆನಪಿಗೆ ಬರುತ್ತವೆ. ಅನಿರುದ್ಧನಿಗೆ ಬಂದ ಯೋಚನೆಗಳನ್ನು ಆತ ತೋಡಿಕೊಂಡದ್ದು ಬಲದೇವನ ಜೊತೆ. ಪತ್ರಿಕೋದ್ಯಮದಲ್ಲಿ ತನಗಿದ್ದ ಲಿಂಕ್ ಗಳನ್ನು ಬಳಸಿಕೊಳ್ಳುತ್ತಿದ್ದ ಬಲದೇವ ಶಾರದಾಪ್ರಸಾದ್ ರವರ ಅನ್ವೇಷಣೆಗೆ ಅನಿರುದ್ಧನಿಗೆ ಸಹಾಯ ಮಾಡಿದ. ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿ, ರಿಪೋರ್ಟರ್ ಗಳ ಸಹಾಯ ಪಡೆದು, ಹೀಗೆ..


ಶರ್ಮಿಲಾ ಕೂಡಾ ಇದಕ್ಕೆ ಜೊತೆಯಾಗುತ್ತಾಳೆ. ಇದರಲ್ಲಿ ಶರ್ಮಿಳಾಳ ಪಾತ್ರವೇನು..?? ಇದರ ಪರಿಣಾಮವೇನು..??


ಹೊರಗೆ ವಿಚಾರಣೆ ನಡೆಯುತ್ತಿತ್ತು. ಸುಮ್ಮನಿರಲಾಗದ ಅನಿರುದ್ಧ ಮನೆಯೊಳಗೆ ಹುಡುಕುತ್ತಿದ್ದಾಗ ಆತ ಅವರ ಡೈರಿಯನ್ನು ಓದಿದ. ಅನಿರುದ್ಧನಿಗೆ ತಿಳಿಯದ ಬಹಳಷ್ಟು ವಿಚಾರಗಳು ತಿಳಿಯುತ್ತಾ ಹೋದವು. ಅಪ್ಪ ಹೇಳಬೇಕೆಂದ ಎಷ್ಟೋ ವಿಷಯಗಳನ್ನು ಅವರು ಪತ್ರದ ರೂಪದಲ್ಲಿ ಬರೆದಿಟ್ಟಿದ್ದನ್ನು ಓದುತ್ತಾ ಹೋದ. ಈ ಪತ್ರಗಳಿಂದ ಆತನಿಗೆ ಅಪ್ಪ ಸಿಕ್ಕರೇ..?? ಶಾರದಾಪ್ರಸಾದ್ ಕಣ್ಮರೆಯಾಗಿದ್ದು ಹೇಗೆ ಹಾಗೂ ಏಕೆ..??


ಪತ್ರಿಕೋದ್ಯಮದ ಕುರಿತು ಹಲವಾರು ವಿಷಯಗಳನ್ನು ಕಟ್ಟಿಕೊಡುವಾಗ ಹಾಗೂ ತಮ್ಮ ನಿಲುವನ್ನು ಅವರು ಪತ್ರಗಳ ಮೂಲಕ ತಿಳಿಸುವ ಸಂದರ್ಭದಲ್ಲಿ ಇಲ್ಲಿ ಐದು ಪತ್ರಗಳಿವೆ. ಈ ರೀತಿಯ ಪತ್ರಗಳು ಇನ್ನಷ್ಟು ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಜೋಗಿಯವರ ಬರಹದ ಸಿಗ್ನೇಚರ್ ಶೈಲಿಯಂತೆ ಕಾದಂಬರಿಯ ಕೊನೆ ತೆಗೆದುಕೊಳ್ಳುವ ತಿರುವು ಇಷ್ಟವಾಯಿತು. 


ಮೊದಲಿಗೆ ಕಾಣೆಯಾದ ಅಪ್ಪನನ್ನು ಕಳೆದುಕೊಳ್ಳುವ ಮಗ ಮಾತ್ರ ಕಾಣಿಸಿದರೆ.. ನಂತರ ಪತ್ರಿಕೋದ್ಯಮದ ಪಾಠ ಹೇಳುವ ಶಾರದಾಪ್ರಸಾದ್ ಕಾಣಿಸುತ್ತಾರೆ. ಮಾಧ್ಯಮದ ವಿಭಿನ್ನ ಮುಖಗಳು ತೆರೆದುಕೊಳ್ಳುತ್ತವೆ. ನಿರ್ಗಮನಕ್ಕೆ ತೆರೆದುಕೊಂಡ ಹಾದಿ ನಿರ್ಮಿಸಿಕೊಂಡದ್ದೇ ಅಥವಾ ತಾನಾಗಿಯೇ ತೆರೆದುಕೊಂಡದ್ದೇ ನೀವೇ ಓದಿ ನೋಡಿ. 


~ವಿಭಾ ವಿಶ್ವನಾಥ್

ದೇವರಾಣಿ (ಪುಸ್ತಕ ಯಾನ - 226)


ಪುಸ್ತಕದ ಶೀರ್ಷಿಕೆ : ದೇವರಾಣಿ

ಲೇಖಕರು : ಪ್ರೇಮಾ ಭಟ್

ಪ್ರಕಾಶಕರು : ರಾಗಿಣಿ ಶಿಕ್ಷಣ ಪ್ರತಿಷ್ಠಾನ

ಪ್ರಥಮ ಮುದ್ರಣ : 2002

ಪುಟಗಳು : 148


ಪ್ರೇಮಾ ಭಟ್ ರವರ ಐತಿಹಾಸಿಕ ಕಾದಂಬರಿ 'ದೇವರಾಣಿ' ದಾನಚಿಂತಾಮಣಿ ಎಂದೇ ಖ್ಯಾತಿ ಪಡೆದ ಅತ್ತಿಮಬ್ಬೆಯ ಬದುಕನ್ನು ಚಿತ್ರಿಸುವ ಕಾದಂಬರಿ. ಜೈನರ ಸಾಹಿತ್ಯ ಕ್ಷೇತ್ರದ, ಧಾರ್ಮಿಕ ಕ್ಷೇತ್ರದ ಅಸಾಮಾನ್ಯ ಸೇವೆಯಲ್ಲಿ ಎದ್ದು ಕಾಣುವ ಹೆಸರು ಅತ್ತಿಮಬ್ಬೆಯದ್ದು.


ಪುಂಗನೂರಿನಲ್ಲಿ ಜಿನ ಮಹಾಮುನಿಗಳ 'ಲೋಚು' ಸಮಾರಂಭ ನಡೆಯುತ್ತಿತ್ತು. ಅದರ ಮೇಲ್ವಿಚಾರಣೆಯ ಹೊತ್ತದ್ದು ಚಾಲುಕ್ಯ ಮಹಾರಾಜರ ಮಹಾಮಂತ್ರಿ ನಾಗಮಯ್ಯ ಹಾಗೂ ಮನೆತನದ ಕುಲಗುರು ಜಿನಚಂದ್ರ ಮಹಾಮುನಿಗಳು. ಈ ಸಮಾರಂಭವನ್ನು ಕಂಡು ಇನ್ನೂ ಪುಟ್ಟ ಮಕ್ಕಳಾದ ನಾಗಮಯ್ಯನ ಮೊಮ್ಮಕ್ಕಳಾದ ಅತ್ತಿಮಬ್ಬೆ ಹಾಗೂ ಗುಂಡಮಬ್ಬೆಯವರಿಗೆ ಸಡಗರ ಹಾಗೂ ಸಂಭ್ರಮ. ಅರಳು ಹುರಿದಂತೆ ಮಾತನಾಡುವ ಗುಂಡಮಬ್ಬೆ ಹಾಗೂ ಸಮಾಧಾನ ಚಿತ್ತದ ಅತ್ತಿಮಬ್ಬೆ ಇಬ್ಬರೂ ಅವಳಿ ಮಕ್ಕಳು.


ನಾಗಮಯ್ಯನಿಗೆ ಮಲ್ಲಪ ಹಾಗೂ ಪುನ್ನಮಯ್ಯ ಎನ್ನುವ ಇಬ್ಬರು ಗಂಡುಮಕ್ಕಳು. ಮಲ್ಲಪ ಸಾಹಸಕ್ಕೆ ಹೆಸರಾಗಿದ್ದರೆ ಪುನ್ನಮಯ್ಯ ಬುದ್ಧಿವಂತಿಕೆಗೆ ಹೆಸರಾಗಿದ್ದ. ಪುನ್ನಮಯ್ಯನಿಗೆ ಮಕ್ಕಳಿರಲಿಲ್ಲ. ಮಲ್ಲಪ್ಪನಿಗೆ ಅಬ್ಬಕ್ಕಬ್ಬೆಯಿಂದ ಐದು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಅವಳಿ ಜವಳಿ ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡವಳು ಅತ್ತಿಮಬ್ಬೆ ಹಾಗೂ ಎರಡನೆಯವಳು ಗುಂಡಮಬ್ಬೆ. ಇದರ ನಂತರ ಅವರಿಗೆ ಮತ್ತೊಂದು ಹೆಣ್ಣು ಮಗುವಾಗಿತ್ತು. ಆಕೆ ನಾಗಿಮಬ್ಬೆ.


ತಾತ ನಾಗಮಯ್ಯನವರ ನೇತೃತ್ವದಲ್ಲಿ ಅವರ ಬಾಲ್ಯದ ಸ್ನೇಹಿತರಾದ ಜಿನಚಂದ್ರ ಮುನಿಗಳ ಬಳಿ ವಿದ್ಯಾಭ್ಯಾಸ ಪಡೆದ ಅತ್ತಿಮಬ್ಬೆ ಹಾಗೂ ನಾಗಮಬ್ಬೆಯರು ತಮ್ಮ ಮನೆಯಲ್ಲಿಯೂ ಯೋಗ್ಯ ಶಿಕ್ಷಣವನ್ನು ಪಡೆದು ಕಲೆಗೆ ಪ್ರೋತ್ಸಾಹ ಕೊಡುತ್ತಾ ಉದಾರಿಯಾದ ತಾತನನ್ನು ನೋಡಿ ಹಾಗೂ ಮನೆಗೆ ಬರುತ್ತಿದ್ದ ಪ್ರತಿಭಾಶಾಲಿಗಳ ಸಂಪರ್ಕದಿಂದ ದಿನೇದಿನೇ ಆದರ್ಶವಾಗಿ ಬೆಳೆಯುತ್ತಿದ್ದರು. ಕಲಿಯಬೇಕಾದುದನ್ನೆಲ್ಲಾ ಕಲಿತು ಮುಗಿಸಿದ್ದ ಗುಂಡಮಬ್ಬೆ ಹಾಗೂ ಅತ್ತಿಮಬ್ಬೆರಿಬ್ಬರು ತಾತನ ಕಣ್ಮಣಿಯರು. ದೇಹಕ್ಕೆ ಮುಪ್ಪು ಆವರಿಸಿದ್ದ ಪರಿಣಾಮದಿಂದ ಜಿನಚಂದ್ರರು ಸಲ್ಲೇಖನ ವ್ರತ ತೆಗೆದುಕೊಳ್ಳಲು ತೀರ್ಮಾನಿಸಿದರು. ಬಾಲ್ಯ ಗೆಳೆಯರಾದ ನಾಗಮಯ್ಯನವರೂ ಅವರನ್ನೇ ಅನುಸರಿಸಿದರು. ಆದರೆ, ಮೊದಲಿಗೆ ಅದರ ಫಲ ದೊರೆತದ್ದು ನಾಗಮಯ್ಯನವರಿಗೆ. 


ಮಲ್ಲಪ ಪಂಪ ಮತ್ತು ಪೊನ್ನರನ್ನು ಪುಂಗನೂರಿಗೆ ಕರೆಸಿಕೊಂಡು ಜಿನಚಂದ್ರರ ಆಸೆಯಂತೆ ಶಾಂತಿಪುರಾಣ ಬರೆಯುವ ಪ್ರಸ್ತಾಪ ಮಾಡಿದರು. ಆದರೆ, ಅರಿಕೇಸರಿ ಮಹಾರಾಜರ ಮರಣದಿಂದ ಪಂಪ ಅದಾಗಲೇ ಲೇಖನಿಯನ್ನು ಕೆಳಗಿಟ್ಟಾಗಿತ್ತು. ಹಾಗಾಗಿ, ಶಾಂತಿಪುರಾಣವನ್ನು ಪೊನ್ನ ಕವಿಯೇ ಬರೆಯುವಂತೆ ಪಂಪನೂ ಒತ್ತಾಯಿಸಿದ. ನಂತರ ಪೊನ್ನ ಶಾಂತಿಪುರಾಣ ಬರೆಯಲು ಶುರುವಿಟ್ಟ. ಪಂಪನ ನಿಲುವು ಮಹಾರಾಜರ ಮೇಲಿದ್ದ ಆತನ ಅತಿಶಯವಾದ ಪ್ರೀತಿ ಗೌರವವನ್ನು ತೋರುತ್ತದೆ. 


ಅತ್ತಿಮಬ್ಬೆ ಹಾಗೂ ಗುಂಡಮಬ್ಬೆಯರ ವಿವಾಹದ ವಿಚಾರ ಎಲ್ಲರ ಮನಸ್ಸಿನಲ್ಲಿಯೂ ಇದ್ದಿತು. ಅದೇ ಸಂದರ್ಭದಲ್ಲಿ ಚಾಲುಕ್ಯರ ಮಹಾಮಂತ್ರಿ ದಲ್ಲಪ ಪುಂಗನೂರಿಗೆ ಬಂದು ತನ್ನ ಮಗ ನಾಗದೇವನಿಗೆ ಆ ಮನೆಯಿಂದ ಹೆಣ್ಣನ್ನು ಆಶಿಸಿದ. ಅದೇ ಸಮಯಕ್ಕೆ ಚಾವುಂಡರಾಯನೂ ತನ್ನ ಮನೆಗೆ ಸೊಸೆಯರನ್ನಾಗಿಸಿಕೊಳ್ಳುವ ಪ್ರಸ್ತಾಪ ತಂದ. ದಲ್ಲಪನ ಮಗ ನಾಗದೇವನಿಗೆ ಅತ್ತಿಮಬ್ಬೆಯನ್ನು ಕೊಡುವುದಾಗಿ ನಾಗಮಯ್ಯ ಮಾತು ಕೊಟ್ಟಿದ್ದರಿಂದ ಅದು ನಿಶ್ಚಯವಾದರೂ.. ಗುಂಡಮಬ್ಬೆ ಅತ್ತಿಮಬ್ಬೆಯನ್ನು ತೊರೆದು ತಾನು ಬೇರೆ ಹೋಗಲಾರೆನೆಂದು ಕಾಳಲಾದೇವಿಗೆ ಸೊಸೆಯಾಗಿ ಹೋಗಲು ಒಪ್ಪಲಿಲ್ಲ. ಇಬ್ಬರೂ ಒಬ್ಬರನ್ನೇ ವಿವಾಹವಾಗಲು ತೀರ್ಮಾನಿಸಿದ್ದರು. ಆ ಸಂದರ್ಭದಲ್ಲಿ ಪಂಪನ ಸಲಹೆಯಂತೆ ಜಿನಬಿಂಬಕ್ಕೆ ಆರತಿ ಎತ್ತಿ ಚೀಟಿ ತೆಗೆದಾಗ ಅಲ್ಲಿ ಬಂದದ್ದು ದಲ್ಲಪನ ಹೆಸರು. ಚಾವುಂಡರಾಯ ಮನಸ್ಸಿಗೆ ನೋವಾಗಿದ್ದರೂ ತೋರಿಸಿಕೊಳ್ಳಲಿಲ್ಲ. ದೈವೀ ಕೃಪೆಯಿಂದ ನಾಗದೇವನನ್ನು ಅವರಿಬ್ಬರೂ ಮದುವೆಯಾದರು. 


ಅವರ ಮದುವೆಯ ಹೊತ್ತಿಗೆ ಶಾಂತಿಪುರಾಣ ಅಚ್ಚಾಗಿತ್ತು. ಮದುವೆಯಲ್ಲಿ ಒಬ್ಬರ ಕೈಗೆ ಕೊಟ್ಟು ಇನ್ನೊಬ್ಬರ ಕೈಗೆ ಕೊಡಲಿಲ್ಲವೆಂದು ಅತ್ತಿಮಬ್ಬೆ ಬೇಸರ ವ್ಯಕ್ತಪಡಿಸಿದಾಗ, ಅದರ ಇನ್ನಷ್ಟು ಪ್ರತಿಗಳನ್ನು ಅಚ್ಚಾಗಿಸಿ ವಿವಾಹಕ್ಕೆ ಬಂದವರ ಮನೆಗೇ ತಲುಪಿಸುವ ಆಶ್ವಾಸನೆ ನೀಡಿದ ಮಲ್ಲಪ.


ಸೊಸೆಯರಿಬ್ಬರನ್ನೂ ಆತ್ಮೀಯವಾಗಿ ಸ್ವಾಗತಿಸಿದಳು ಪದ್ಮಬ್ಬೆ. ಇಬ್ಬರು ಅಕ್ಕ-ತಂಗಿಯರೂ ಹೊಂದಿ ಬಾಳುತ್ತಿದ್ದರು. ಒಮ್ಮೆ ಬಳೆಗಾರ ಬಳೆ ತೋರಿಸಲು ಬಂದ ಸಂದರ್ಭದಲ್ಲಿ ಆತನನ್ನು ರಾತ್ರಿ ಊಟಕ್ಕೆ ಆಹ್ವಾನಿಸಿದ್ದರು ಆಗ ಬಂದ ಅವನ ಮಗ ರನ್ನನ ವಿದ್ಯಾಭ್ಯಾಸದ ಹಂಬಲವನ್ನು ಕಂಡು ತಮ್ಮಲ್ಲೇ ಉಳಿಸಿಕೊಂಡು ತಾವೇ ಆತನಿಗೆ ವಿದ್ಯಾಭ್ಯಾಸ ಮಾಡಿಸುತ್ತೇವೆಂದು ಆತನ ಜವಾಬ್ದಾರಿ ತೆಗೆದುಕೊಂಡಳು ಅತ್ತಿಮಬ್ಬೆ. ಇದಕ್ಕೆ ಎಲ್ಲರ ಒಪ್ಪಿಗೆಯೂ ದೊರೆಯಿತು. ರನ್ನನ ತಂದೆ ಜಿನವಲ್ಲಬನಿಗೂ ತನ್ನ ಮಗನ ಉಜ್ವಲ ಭವಿಷ್ಯ ಕಂಡು ಸಂತಸವಾಯಿತು. ಅಜಿತಸೇನಾಚಾರ್ಯರ ಆಶ್ರಮಕ್ಕೆ ರನ್ನ ದಾಖಲಾದ. 


ಯುದ್ಧವೊಂದರಲ್ಲಿ ನಾಗದೇವ ತೀರಿಕೊಂಡಾಗ ಗುಂಡಮಬ್ಬೆ ಸಹಗಮನ ಮಾಡುತ್ತಾಳೆ. ಮಗ ಅಣ್ಣಿಗದೇವನಿಗಾಗಿ ಅತ್ತಿಮಬ್ಬೆ ಉಳಿಯುತ್ತಾಳೆ. ಅಣ್ಣಿಗದೇವನಿಗೆ ಸೂಕ್ತವಾದ ಮಾರ್ಗದರ್ಶನ ನೀಡಿ ಯೋಗ್ಯನನ್ನಾಗಿ ಬೆಳಸುತ್ತಾಳೆ ಅತ್ತಿಮಬ್ಬೆ. ಅಣ್ಣಿಗದೇವ ತಾಯಿಗೆ ಸಹಾಯಕನಾಗಿ ನಿಲ್ಲುತ್ತಿದ್ದ. ಆತ ತನ್ನ ಗರ್ಭದಲ್ಲಿರುವಾಗಿನಿಂದಲೇ ಆಕೆ ಪಟ್ಟ ಬಯಕೆ, ಆಕೆಯ ದಾನದ ಗುಣವನ್ನು ಬಿಂಬಿಸುವಂತಿದೆ. ಆಕೆಯ ದಾನದ ಗುಣ ಪ್ರತಿ ನಡೆಯಲ್ಲಿಯೂ ಬಿಂತವಾಗುತ್ತಾ ಜಿನಾಲಯ ಕಟ್ಟಿಸುವ ಕೆಲಸಗಳೂ ಸಾಗುತ್ತಿದ್ದವು.

 

ರನ್ನ ಅತ್ತಿಮಬ್ಬೆಯ ಮೇಲೆ ಅತಿಶಯವಾದ ಪ್ರೀತಿ, ಗೌರವವನ್ನು ಇಟ್ಟಿದ್ದ. ಅಣ್ಣಿಗದೇವನ ವಿವಾಹದ ಸಂದರ್ಭದಲ್ಲಿ ಅಜಿತತೀರ್ಥಂಕರ ಪುರಾಣ ರನ್ನನಿಂದ ಎಲ್ಲರಿಗೂ ಹಂಚಲ್ಪಟ್ಟಿತು.


ಅತ್ತಿಮಬ್ಬೆಯನ್ನು ತನ್ನ ಸೊಸೆಯನ್ನಾಗಿಸಿಕೊಳ್ಳಲು ಚಾವುಂಡರಾಯ ಪುಂಗನೂರಿಗೆ ಬರುವ ಮೊದಲಿನಲ್ಲೇ ಕಾಳಲಾದೇವಿಗೆ ಬಿದ್ದ ಕನಸಿನಂತೆ ಶ್ರವಣಬೆಳಗೊಳದಲ್ಲಿ ಗೊಮ್ಮಟನ ಪ್ರತಿಷ್ಠಾಪನೆಯೂ ಆಯಿತು. ಆ ಸಂದರ್ಭದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆಯ ಕುರಿತಾದ ನಂಬಿಕೆಗೆ ಪುಷ್ಟಿ ಕೊಡುವ ಘಟನೆಯೊಂದು ನಡೆದು ಆಕೆಯ ಶ್ರೇಷ್ಠತೆಯನ್ನು ಮತ್ತಷ್ಟು ಹೆಚ್ಚಿಸಿತು.


ಅತ್ತಿಮಬ್ಬೆಯ ಹಿರಿಮೆಯನ್ನು ಸಾರುವ ಆಕೆಯ ಹಲವು ನಡೆಗಳು ಹಾಗೂ ಪವಾಡದಂತೆನಿಸುವ ಘಟನೆಗಳು ಆಕೆಯ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸುತ್ತಾ ಹೋಗುತ್ತವೆ. 


ಈ ಪುಸ್ತಕದ ಬೆನ್ನುಡಿಯಲ್ಲಿ ಡಾಕ್ಟರ್ ಎಂ. ಚಿದಾನಂದಮೂರ್ತಿಯವರು "ಶಾಂತಲೆಯು ಕರ್ನಾಟಕ ಸಂಸ್ಕೃತಿಯು ಇತ್ತಿರುವ ಹೂವಾದರೆ, ಅತ್ತಿಮಬ್ಬೆಯು ಕರ್ನಾಟಕ ಸಂಸ್ಕೃತಿಯು ಇತ್ತಿರುವ ಪಕ್ವ ಫಲ" ಎಂದು ಹೇಳಿರುವ ಮಾತು ಅವರಿಬ್ಬರ ಹಿರಿಮೆಯನ್ನು ದ್ವನಿಸುತ್ತದೆ.


ಆದರ್ಶ, ಆಧ್ಯಾತ್ಮ, ಆಶಯ ಎಲ್ಲದಕ್ಕೂ ಅನ್ವರ್ಥಕದಂತಿರುವ ಸರ್ವಶ್ರೇಷ್ಠರಾದ ಅತ್ತಿಮಬ್ಬೆಯ ಕುರಿತಾಗಿ ಶ್ರೀ ಟಿ. ಕೆ ರಾವ್ ಅವರು ರಚಿಸಿರುವ ಈ ಕಾದಂಬರಿಯ ಮುಖಪುಟ ಬಹಳಷ್ಟು ಅರ್ಥಪೂರ್ಣವಾಗಿ ಮೂಡಿಬಂದಿದೆ . ಒಂದೊಳ್ಳೆ ಐತಿಹಾಸಿಕ ಕಾದಂಬರಿಯ ಓದು.


~ವಿಭಾ ವಿಶ್ವನಾಥ್

ಬೆಸೆಯದ ಬಂಧ (ಪುಸ್ತಕ ಯಾನ - 225)


ಪುಸ್ತಕದ ಶೀರ್ಷಿಕೆ : ಬೆಸೆಯದ ಬಂಧ

ಲೇಖಕರು : ಇಂದಿರಾ ನಾಡಿಗ್

ಪ್ರಕಾಶಕರು : ಚಾರುಮತಿ ಪ್ರಕಾಶನ

ಪ್ರಥಮ ಮುದ್ರಣ : 2023

ಪುಟಗಳು : 163

ಬೆಲೆ : 170 ರೂ.


'ಬಲವಂತದ ಕರ್ಮ' ಎಂಬ ಕಾದಂಬರಿಯನ್ನು ಬರೆದಿರುವ ಶ್ರೀಮತಿ ಇಂದಿರಾ ನಾಡಿಗ್ ಅವರ ಎರಡನೇ ಕಾದಂಬರಿ ಇದು.


ಹೆಣ್ಣುಮಕ್ಕಳು ತಮ್ಮದೇ ಮಗುವಿಗೆ, ತಾಯ್ತನಕ್ಕೆ ಹಂಬಲಿಸಿ ಅದು ಸಾಧ್ಯವೇ ಆಗದಿದ್ದಾಗ ಮಗುವನ್ನು ದತ್ತು ಪಡೆಯುವುದಿದೆ. ಹಾಗೆಂದು ದತ್ತು ಪಡೆಯುವ ಪ್ರಕ್ರಿಯೆ ಸುಲಭವಾದದ್ದಲ್ಲ. ಕೆಲವರಿಗೆ ಬಡತನವಿದ್ದರೂ ಮನೆಯಲ್ಲಿ ಹೆಚ್ಚಿನ ಮಕ್ಕಳಿರುತ್ತಾರೆ. ಹಾಗೆಂದು, ತಮ್ಮ ಮಕ್ಕಳನ್ನು ಬೇರೆಯವರಿಗೆ ದತ್ತು ಕೊಡಲು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಏಕೆಂದರೆ, ಬಳ್ಳಿಗೆ ಕಾಯಿ ಭಾರವಲ್ಲ.. ತಾಯಿಗೆ ಮಗು ಭಾರವಲ್ಲ. ಹಾಗೆಂದು, ತಾಯ್ತನದ ಹಂಬಲದಿಂದ ಹಂಬಲಿಸಿ ಹಂಬಲಿಸಿ ಪಡೆದ ಮಗುವನ್ನು ತೀರಾ ಮುಚ್ಚಟ್ಟೆಯಲ್ಲಿ, ಅತಿ ಪ್ರೀತಿಯಲ್ಲಿ ಬೆಳೆಸುವುದು ಸಹಾ ಅವರ ಮೊಂಡುತನಕ್ಕೆ ಕಾರಣವಾಗಬಹುದು ಅಥವಾ ಅವರನ್ನು ತೀರಾ ದಂಡಿಸಿದರೆ ಅದು ಮಗುವಿನ ಮನಸ್ಸಿನ ಮೇಲೆ ಬೇರೆಯ ರೀತಿಯ ಪರಿಣಾಮ ಬೀರಬಹುದು.


ತಾನು ಅವರ ಸ್ವಂತ ಮಗುವಲ್ಲವೆಂಬ ಕಾರಣಕ್ಕೆ ಅವರು ಹೀಗೆ ವರ್ತಿಸುತ್ತಿದ್ದಾರೇನೊಬ್ಬಎಂಬ ಕಹಿ ಆ ಮಗುವಿನ ಮನಸ್ಸಿನಲ್ಲಿ ಹುಟ್ಟಿ ಬಿಟ್ಟರಂತೂ ಅದನ್ನು ನಿವಾರಿಸುವುದು ಬಹಳವೇ ಕಷ್ಟ. ದತ್ತು ಮಗುವನ್ನು ತಮ್ಮ ಸ್ವಂತ ಮಗುವೇ ಎಂದು ಸತ್ಯವನ್ನು ಮುಚ್ಚಿಟ್ಟು ಬೆಳೆಸುವುದು ಸಹಾ ಕಷ್ಟವೇ.. ಮುಂದೆಂದಾದರೂ ಬೇರೆ ಯಾರಿಂದಲಾದರೂ ಆ ಸತ್ಯ ತಿಳಿದರೆ ಆ ಮಗುವಿಗೆ ಆಗುವ ಆಘಾತ ಬೇರೆಯ ರೀತಿಯದ್ದು. ಕೆಲವು ದತ್ತು ಮಕ್ಕಳು ತಮ್ಮ ಹಿನ್ನೆಲೆಯನ್ನು, ನಿಜವಾದ ತಾಯಿ-ತಂದೆಯರನ್ನು ಹುಡುಕಿಕೊಂಡು ಹೋಗಿರುವ ಪ್ರಸಂಗಗಳನ್ನೂ ಕಥೆ ಕಾದಂಬರಿಯಾಗಿ ಓದಿದ್ದೇನೆ. ಒಟ್ಟಿನಲ್ಲಿ ದತ್ತು ಪಡೆದ ಮಗುವನ್ನು ಯಾವ ರೀತಿ ಸೂಕ್ಷ್ಮವಾಗಿ ಬೆಳೆಸಬೇಕೆಂಬುದರ ಅರಿವು ಪೋಷಕರಿಗಿರಬೇಕು ಎಂಬುದು ಹೌದಾದರೂ.. ಕೆಲವೊಮ್ಮೆ ಪರಿಸ್ಥಿತಿ, ಮನಸ್ಥಿತಿಗಳು ಸಹಾ ಅದಕ್ಕೆ ಅನುಕೂಲಕರವಾಗಿರಬೇಕು. ಈ ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಲೇಖಕಿ ಬಹಳ ಸೊಗಸಾದ ಕಾದಂಬರಿಯನ್ನು ಹೆಣೆದಿದ್ದಾರೆ.


9 ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಬೆಳೆಸುವ ಅಮ್ಮಂದಿರ ಜೊತೆಗೆ ಅದು ಕರುಳು ಸಂಬಂಧವಾಗಿ ಅವರ ಪ್ರತಿ ಮಿಡಿತಕ್ಕೂ ಮಿಡಿಯುವ ಮಗುವಾಗಿ ಬೆಳೆಯುತ್ತದೆ. ಇಂದಿನ ದಿನಗಳಲ್ಲಿ ತಾಯಿ-ತಂದೆಯರನ್ನು ವೃದ್ಧಾಶ್ರಮಕ್ಕೆ ದೂಡುವವರನ್ನು ಹೊರತುಪಡಿಸಿದ ಸಂದರ್ಭವನ್ನು ಉಲ್ಲೇಖಿಸಿದ್ದೇನೆ. ಆದರೆ, ದತ್ತು ಮಗುವಿಗೆ ನಾವಾಗಿಯೇ ಎಲ್ಲವನ್ನೂ ಅರ್ಥ ಮಾಡಿಸಬೇಕು.


ವಿಜಯಮ್ಮನ ಅಕ್ಕಂದಿರ ವಿವಾಹದ ವಯಸ್ಸು ಮೀರಿದರೂ.. ವಿವಾಹಕ್ಕೆ ಮನಸ್ಸು ಮಾಡಲಿಲ್ಲ. ಅವರಿಗೆ ಆ ವಯಸ್ಸಿಗೆ ಚಿನ್ಮಯಾನಂದ ಆಶ್ರಮದ ಸೆಳೆತವಿತ್ತು. ಆಧ್ಯಾತ್ಮದ ಕಡೆ ಒಲವಿತ್ತು. ಅವರ ತಂದೆ ಆ ಇಬ್ಬರ ಮಕ್ಕಳು ಮನಸ್ಸನ್ನು ಅರಿತು ಅವರ ಮದುವೆ ವಿಚಾರ ಬಿಟ್ಟು ವಿವಾಹ ಮಾಡಬಹುದಾಗಿದ್ದರೂ.. ವಿಜಯಮ್ಮನ ವಿವಾಹಕ್ಕೆ ತಡ ಮಾಡಿದರು. ವಿಜಯಮ್ಮನವರಿಗೆ ಶ್ಯಾಮ್ ಜೊತೆಗೆ ಸ್ನೇಹವಿತ್ತು. ಆ ಸ್ನೇಹ ಮದುವೆಯವರೆಗೂ ಹೋಗಿದ್ದರೂ ಎಂದಿಗೂ ಸಂಯಮ ಮೀರಿ ನಡೆದುಕೊಂಡಿರಲಿಲ್ಲ. ವಯಸ್ಸಿಗೆ ಸರಿಯಾಗಿ ವಿವಾಹವಾಗಿದ್ದರೆ ಎಲ್ಲವೂ ಸರಿಯಾಗಿರುತ್ತಿತ್ತೇನೋ.. ಆದರೆ, ಹಾಗಾಗವಷ್ಟರಲ್ಲಿ ಶ್ಯಾಮ್ ಬೇರೊಬ್ಬರನ್ನು ವಿವಾಹವಾಗಿಯಾಗಿತ್ತು. ಕುಟುಂಬದ ಹೊಣೆಯಿಂದ ವಿವಾಹವಾಗದೆ ಉಳಿದಿದ್ದ ರೈಲ್ವೆ ಡಿಪಾರ್ಟ್ಮೆಂಟ್ ನ ಉದ್ಯೋಗಿ ತಾರಾನಾಥ್ ರವರ ವಯಸ್ಸು ಮೀರಿತ್ತು. ಅವರಿಬ್ಬರೂ ಜೋಡಿಯಾದರೂ.. ತಡವಾಗಿ ಮದುವೆಯಾಗಿದ್ದರಿಂದ ಮಕ್ಕಳಾಗಿರಲಿಲ್ಲ. ಮಕ್ಕಳಿಗಾಗಿ ಹಂಬಲಿಸಿದ ವಿಜಯಮ್ಮ, ಎಲ್ಲದರ ನಂತರ ದತ್ತು ಮಗುವಿಗಾಗಿ ಹಂಬಲಿಸುತ್ತಿದ್ದರು. 


ಸಹೋದ್ಯೋಗಿ ಪದ್ಮರನ್ನು ನೀವು ಇನ್ನೊಂದು ಮಗು ಮಾಡಿಕೊಂಡರೆ ನನಗೆ ದತ್ತು ಕೊಟ್ಟುಬಿಡಿ ಎಂದು ಆಗಾಗ ಹೇಳುತ್ತಿದ್ದದ್ದೂ ಇತ್ತು. ಕೊಂಚ ದೊಡ್ಡ ಹುಡುಗಿಯೊಬ್ಬಳನ್ನು ದತ್ತು ತೆಗೆದುಕೊಂಡು ಅವಳಿಂದ ಪಾಡು ಪಟ್ಟ ನಂತರ ಚಿಕ್ಕ ಮಗುವಿಗಾಗಿ ಹಂಬಲಿಸುತ್ತಿದ್ದರು. ವಿಜಯಮ್ಮ ಅದಕ್ಕಾಗಿ ಆಸ್ಪತ್ರೆ, ಆಶ್ರಮ ಎಲ್ಲಾ ಕಡೆ ಅನಾಥ ಮಗುವಿಗಾಗಿ ಸುತ್ತುತ್ತಿದ್ದರು. ಯಾರೂ ಇಲ್ಲದ ಮಗುವಾಗಬೇಕು, ಕುಟುಂಬದ ಹಿನ್ನೆಲೆ ಚೆನ್ನಾಗಿರಬೇಕು. ಆಚಾರ-ವಿಚಾರ ತಿಳಿದ ಸುಸಂಸ್ಕೃತ ಕುಟುಂಬದ ಮಗುವೇ ಸಿಗಲಿ ಎಂದು ಹಂಬಲಿಸುತ್ತಿದ್ದರು.


ಕೊನೆಗೂ ಅವರಂದುಕೊಂಡಂತೆ ಅವರ ಕಚೇರಿಯ ಸಮೀಪದಲ್ಲಿಯೇ ಇದ್ದ, ಯಾವಾಗಲೂ ಕುಡಿಯುವ ನೀರು ಪಡೆಯಲು ಹೋಗುತ್ತಿದ್ದ ಮನೆಯಲ್ಲಿ ಗಂಡನಿಲ್ಲದ ಶಾಂತ ಅನಾಥ ಮಗುವೊಂದನ್ನು ತಾನೇ ಸಾಕುತ್ತೇನೆ ಎಂದು ಮುಂದಾದದ್ದು.. ಆಕೆಯ ಅಣ್ಣ-ಅತ್ತಿಗೆ ಅದಕ್ಕೆ ಒಪ್ಪದೇ ಇದ್ದದ್ದು ತಿಳಿದು ಅಲ್ಲಿಗೆ ಹೋಗಿ ವಿಚಾರಿಸಿದಾಗ ತಿಳಿದದ್ದು.. ಹೆರಿಗೆ ಸಮಯದಲ್ಲಿ ಅಮ್ಮನನ್ನು ಕಳೆದುಕೊಂಡ ಮಗುವಿನ ಅಪ್ಪ ಮೊದಲೇ ತೀರಿಕೊಂಡಿದ್ದ. ಎಲ್ಲಾ ನಂಟುಗಳು ಕಡಿದುಕೊಂಡಿದ್ದ ಮಗುವನ್ನು ಹುಟ್ಟಿದ ಸಮಯ, ನಕ್ಷತ್ರ, ರಾಶಿ ಎಲ್ಲಾ ತಿಳಿದು ಜಾತಕ ಬರೆಸಿ ನೋಡಿ ದತ್ತು ತೆಗೆದುಕೊಂಡಿದ್ದರು. 


ತಾರಾನಾಥ್ ಅವರಿಗೆ ಕೆಲವೊಮ್ಮೆ ಪತ್ನಿಯ ಕಿರಿಕಿರಿಯಿಂದ ಬೇಸರವಾಗುತ್ತಿದ್ದರೂ.. ತನ್ನ ಪತ್ನಿ ಮಗುವಿಗಾಗಿ ಹಂಬಲಿಸುತ್ತಿದ್ದ ವಿಚಾರ ಅವರ ಮನಸ್ಸಿನಲ್ಲಿಯೂ ಕೊರೆಯುತ್ತಿತ್ತು. ಉದ್ಯೋಗಸ್ಥ ಮಹಿಳೆಯಾಗಿ ಮಗುವನ್ನು ಬೆಳೆಸಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೆಲಸಕ್ಕೆ ಬರುತ್ತಿದ್ದ ಮಂಜುಳ ಸ್ನೇಹಮಯಿ. ಅಲ್ಲದೇ ಆತ್ಮೀಯ ಸಹಾಯಕಳಾಗಿದ್ದಳು. ಆದರೆ, ಮಗುವಾಗಿದ್ದ ವಾಗೀಶ ಬೆಳೆಯುತ್ತಾ ಹೋದಂತೆ ಆತನಿಂದ ರಗಳೆಗಳು, ತೊಂದರೆಗಳು ಹೆಚ್ಚುತ್ತಲೇ ಹೋಗುತ್ತಿದ್ದವು.


ವಾಗೀಶ ಹಠ, ಮೊಂಡುತನ, ಚೇಷ್ಟೆ ಮಾಡುತ್ತಾ ಸುತ್ತಮುತ್ತಲಿನವರಿಗೆ, ತರಗತಿಯಲ್ಲಿ ಎಲ್ಲರಿಗೂ ತಲೆ ನೋವಾಗಿದ್ದ. ದಿನಕ್ಕೊಂದಾದರೂ ದೂರು ಆತನಿಂದಾಗಿ ಕಾದಿರುತ್ತಿತ್ತು. ಮೊದಲೇ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ, ಜೊತೆಗೆ ಬಸ್ಸಿನ ಪ್ರಯಾಣದಿಂದ ಹಣ್ಣಾಗುತ್ತಿದ್ದ ವಿಜಯಮ್ಮನವರಿಗೆ ಇದು ಮತ್ತಷ್ಟು ರೇಜಿಗೆ ಹುಟ್ಟಿಸುತ್ತಿತ್ತು. ಅದೇ ಸಮಯಕ್ಕೆ ತಾವು ಕಟ್ಟಿಸಬೇಕೆಂದುಕೊಂಡಿದ್ದ ಮನೆ ಅರ್ಧಕ್ಕೆ ನಿಂತು ಹೋಗಿತ್ತು. ಕಟ್ಟಬೇಕಾದ ಮೇಸ್ತ್ರಿ ಹಣ ಪಡೆದು ತಲೆತಪ್ಪಿಸಿಕೊಂಡಿದ್ದ. 


ಅಚಾನಕ್ಕಾಗಿ ಯಾವ ಸುಳಿವೂ ಕೊಡದೆ ವಿಜಯಮ್ಮನವರ ಪತಿ ತಾರಾನಾಥ್ ರವರು ತೀರಿಕೊಂಡಾಗಲಂತೂ ಅವರ ಪಾಡು ಕೇಳುವಷ್ಟಿಲ್ಲ. ಆ ಸಮಯಕ್ಕೆ ವಿಜಯಮ್ಮನವರ ನಿಸ್ವಾರ್ಥ ತಂಗಿ ಶಾರದಾ ಅವರಿಗೆ ಬೆಂಬಲವಾಗಿ ನಿಂತಳು. ಆಕೆ ಲೆಕ್ಚರರ್ ಆಗಿದ್ದವಳು. ಅಲ್ಲದೆ, ಮೈಸೂರಿನಲ್ಲಿ ನೆಲೆಸಿದ್ದರಿಂದ ಹೆಚ್ಚಿನ ದಿನ ಇಲ್ಲಿರುವಂತಿರಲಿಲ್ಲ. ಆದರೂ ಅಕ್ಕನ ಕಷ್ಟಕ್ಕೆ ಮಿಡಿದ ಹೃದಯಿ. ಕಷ್ಟಕ್ಕೆ ಸಮಯಕ್ಕಾಗುವನು ಎಂದುಕೊಂಡಿದ್ದ ಮಗನಿಂದ ಏನೂ ನಿರೀಕ್ಷಿಸುವಂತಿರಲಿಲ್ಲ.


35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವಿಜಯಮ್ಮನವರ ಬೀಳ್ಕೊಡುಗೆ ಸಮಾರಂಭದ ದಿನವಂತೂ ಬಾಗೀಶ ಮಾಡಿದ್ದ ಕೆಲಸದಿಂದ ಎಲ್ಲರಿಗೂ ಹೃದಯವೇ ಬಾಯಿಗೆ ಬಂದಂತಾಗಿತ್ತು. ವಿಜಯಮ್ಮನವರು ಸಾಯುವವರೆಗೂ ವಾಗೀಶ ಬದಲಾಗಲಿಲ್ಲ. ಬದಲಾಗಿ, ವಿಜಯಮ್ಮನವರಿಗೆ ಮತ್ತಷ್ಟು ಕೊರಗು ಹಚ್ಚಿತು. ತಮ್ಮೆಲ್ಲಾ ಆಸ್ತಿಗೂ ವಾಗೀಶನೇ ಹಕ್ಕುದಾರನಾದರೂ.. ಅವನ ಮೇಲಿನ ಅಪನಂಬಿಕೆಯಿಂದ.. ಬೇಡವೆಂದರೂ ಶಾರದಾಳಿಗೆ ಉಸ್ತುವಾರಿ ನೋಡಿಕೊಳ್ಳುವಂತೆ ವಿಲ್ ಮಾಡಿದ್ದರು ವಿಜಯಮ್ಮನವರು.


'ಬೆಸೆಯದ ಬಂಧ' ಎಂಬ ಶೀರ್ಷಿಕೆ ನೋಡಿ ಕಥೆಯನ್ನು ಓದುತ್ತಾ ಇದು ತಾಯಿ ಮಗನ ನಡುವಿನ ಬೆಸೆಯದ ಬಂಧವೆಂದು ಊಹಿಸಿದ್ದೆ. ಹೊಂದಾಣಿಕೆಯಾಗದ ಸಂಬಂಧದ ಕುರಿತಾಗಿಯೇ ಇರಬಹುದು ಎನ್ನುವ ನನ್ನ ಕಲ್ಪನೆಯನ್ನು ಸುಳ್ಳು ಮಾಡಿದ್ದು ಕಾದಂಬರಿಯ ಮುಂದಿನ ಭಾಗ. ಕೆಲಸಕ್ಕೆ ಬರುತ್ತಿದ್ದ ಮಂಜುಳಾ ಕೂಡ ಕ್ರಮೇಣ ಬರುವುದನ್ನು ನಿಲ್ಲಿಸಿದಳು. ಶಾರದಾಳ ಉಸ್ತುವಾರಿ ವಾಗೀಶನಿಗೆ ಹಿಡಿಸಲಿಲ್ಲ. ಓದಿನಲ್ಲೂ ಆಸಕ್ತಿ ತೋರದೆ ಓದನ್ನು ನಿಲ್ಲಿಸಿದ್ದ ವಾಗೀಶನ ಮುಂದಿನ ಭವಿಷ್ಯ ಏನಾಯ್ತು..?? ಆಸ್ತಿ ಇದ್ದರೂ ಅದನ್ನು ಅನುಭವಿಸುವ ಮನಸ್ಥಿತಿಯಲ್ಲಿದ್ದನೇ ಅಥವಾ ದುಂದುವೆಚ್ಚ ಮಾಡಿ ಕರಗಿಸಿದನೇ ಅಥವಾ ಆತ ಬದಲಾದನೇ..??


ಇದಕ್ಕೆ ಉತ್ತರ ನೀವೇ ಓದಿ ತಿಳಿಯಿರಿ. 


ಉದ್ಯೋಗಸ್ಥ ಮಹಿಳೆಯಾಗಿ ಹಾಗೂ ಅಮ್ಮನಾಗಿ ಮಹಿಳೆ ಅನುಭವಿಸುವ ಭಾವನೆಯನ್ನು ಕಣ್ಣಿಗೆ ಕಟ್ಟಿಕೊಡುವಂತೆ ಚಿತ್ರಿಸಿದ್ದಾರೆ ಲೇಖಕಿ. ಮಕ್ಕಳಿದ್ದವರಿಗೆ ನೂರೆಂಟು ಸಮಸ್ಯೆ, ಇಲ್ಲದವರಿಗೆ ಒಂದೇ ಚಿಂತೆ ಎನ್ನುವ ಮಾತು ಇದೆಲ್ಲವನ್ನೂ ಓದುವಾಗ ನೆನಪಾಯಿತು. ವಾರ್ತಾ ಇಲಾಖೆಯಲ್ಲಿ ವರದಿಗಾರ್ತಿಯಾಗಿ ಕಾರ್ಯ ನಿರ್ವಹಿಸಿರುವ ಲೇಖಕಿಯ ಅನುಭವ ಇಲ್ಲಿ ಕಚೇರಿಯ ಚಿತ್ರಣವನ್ನು ಕಟ್ಟಿಕೊಡುವಾಗ ಸಮರ್ಥವಾಗಿ ಚಿತ್ರಿತವಾಗಿದೆ. ಆಫೀಸಿನ ವಾತಾವರಣದಲ್ಲಿನ ಹಠ, ಚಾಡಿ, ಕುಹಕ, ಕೋಲ್ಡ್ ವಾರ್, ಸಹೋದ್ಯೋಗಿಗಳ ಅಸೂಯೆ ಇದೆಲ್ಲವನ್ನೂ ಮೀರಿ ಗೆಳತಿಯರಾಗಿ ಉಳಿಯುವ, ಯೋಗಕ್ಷೇಮ ವಿಚಾರಿಸುವ ಆತ್ಮೀಯರು ಕಷ್ಟಕ್ಕಾಗುವ ಪರಿಯನ್ನು ಚಿತ್ರಿಸಿರುವ ರೀತಿ ಇಷ್ಟವಾಯಿತು.

~ವಿಭಾ ವಿಶ್ವನಾಥ್

ತಾರಾಬಲ (ಪುಸ್ತಕ ಯಾನ - 224)


ಪುಸ್ತಕದ ಶೀರ್ಷಿಕೆ : ತಾರಾಬಲ

ಲೇಖಕರು : ಪ್ರೇಮಾ ಭಟ್

ಪ್ರಕಾಶಕರು : ಶ್ರೀ ಪ್ರೇಮಸಾಯಿ ಪ್ರಕಾಶನ

ಪ್ರಥಮ ಮುದ್ರಣ : 1978

ಪುಟಗಳು : 154


ಕೆಲವರು ಮೊದಮೊದಲಿಗೆ ಜ್ಯೋತಿಷ್ಯ, ಜಾತಕ ಹಾಗೂ ತಾರಾಬಲವನ್ನು ನಂಬದೇ.. ನಂತರ ಯಾವುದಾದರೂ ಒಂದು ಪ್ರಸಂಗ ಅವರ ಜೀವನದಲ್ಲಿ ಹೊಸ ಹೊಳವು ತಂದಾಗ ಅಥವಾ ಸಕಾರಾತ್ಮಕವಾಗಿಯೋ.. ನಕಾರಾತ್ಮಕವಾಗಿಯೋ ಪರಿಣಾಮ ಬೀರಿದಾಗ ಅದು ತಾಳೆಯಾಗಿ ನಂಬಲು ತೊಡಗುತ್ತಾರೆ. ನಂಬಿಕೆ ಹಾಗೂ ವಾಸ್ತವದ ನಡುವೆ ಅವರವರ ಬದುಕು ಸಾಗುತ್ತಾ ಹೋಗುವ ಕಥೆಯನ್ನು ಲೇಖಕಿ ಪ್ರೇಮಾ ಭಟ್ ಅವರು ಸೊಗಸಾಗಿ ಹೆಣೆದಿದ್ದಾರೆ. 


ಮೊದಮೊದಲಿಗೆ ಜ್ಯೋತಿಷ್ಯ ಜಾತಕ, ತಾರಾಬಲವನ್ನು ಅಷ್ಟು ನಂಬದ ಕೃಷ್ಣಮೂರ್ತಿ ತನ್ನ ಮೊದಲ ಮಗಳು ಪಂಕಜಾಕ್ಷಿಗೆ ಯಾವುದನ್ನೂ ಪರಿಶೀಲಿಸದೆ ಅನಂತಮೂರ್ತಿಯೊಡನೆ ಮದುವೆ ಮಾಡಿಕೊಡುತ್ತಾನೆ. ನಂತರ ಯಾವುದೋ ಒಂದು ಘಟನೆ ಅವನ ಜೀವನದಲ್ಲಿ ತಾರಾಬಲ ಹಾಗೂ ಜ್ಯೋತಿಷ್ಯವನ್ನು ನಂಬುವಂತೆ ಮಾಡುತ್ತದೆ. ಅದಾದ ನಂತರ ಯಾರಾದರೂ ಮನೆಗೆ ಬಂದ ಸಂದರ್ಭ ಅಥವಾ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಒಳ್ಳೆಯ ಘಳಿಗೆ ನೋಡಿ, ನಂಬಿಯೇ ಕೆಲಸ ಮಾಡುವುದು ಹಾಗೂ ಬಂದವರ ಸಂಬಂಧವನ್ನು ಒಪ್ಪಿಕೊಳ್ಳುವುದು ಮಾಡುವಷ್ಟು ಕೃಷ್ಣಮೂರ್ತಿ ಬದಲಾಗುತ್ತಾನೆ. 


ಪಂಕಜಾಕ್ಷಿ ರೋಗಿಷ್ಟ ಗಂಡನೊಂದಿಗೆ ನರಳಾಡುವುದನ್ನು ಕಂಡು ಪತ್ನಿ ನಳಿನಾಕ್ಷಿಯಲ್ಲಿ ಪೇಚಾಡುತ್ತಿದ್ದ. ಆಕೆಗೆ ಮದುವೆ ಮಾಡಿಕೊಟ್ಟಾಗ ತಮ್ಮ ಮನೆಯಲ್ಲಿದ್ದ ಬಡತನದಿಂದ ಅವಳ ಬದುಕಲ್ಲಿ ಮತ್ತೇನೂ ಸಹಾಯ ಮಾಡಲಾಗದ ಪರಿಸ್ಥಿತಿಯಿತ್ತು.


ಆದರೆ, ಎರಡನೆಯ ಮಗಳು ಪದ್ಮಿನಿಯನ್ನು ಶ್ರೀಪತಿಗೆ ಹಾಗೂ ಮತ್ತೊಬ್ಬ ಮಗಳು ಕೃಷ್ಣವೇಣಿಯನ್ನು ಶೇಷಗಿರಿಗೂ ಮದುವೆ ಮಾಡಿಕೊಡುವಾಗ ತಾರಾಬಲವನ್ನು ನೋಡಿಯೇ ಮದುವೆ ಮಾಡಿಕೊಟ್ಟಿದ್ದ. ಅವರಿಬ್ಬರೂ ಸುಖವಾಗಿದ್ದರು. ಮಗ ಶಿವರಾಮ ಓದದಿದ್ದರೂ ಚುರುಕಾಗಿದ್ದ ಹಾಗೂ ಗುಣವಂತ. ಆತ ಬಟ್ಟೆ ಅಂಗಡಿಯ ವ್ಯಾಪಾರವನ್ನು ಶುರು ಮಾಡಿದ್ದ. ಆತ ಬಟ್ಟೆ ಅಂಗಡಿಯ ವ್ಯಾಪಾರದಲ್ಲಿ ತೊಡಗಿದರೆ ಆತನಿಗೆ ಕೈ ಹತ್ತುವುದಿಲ್ಲವೆಂದು ಹೇಳಿದ್ದರೂ.. ಆತ ಅದಾವುದನ್ನು ಲೆಕ್ಕಿಸದೆ ಕೇವಲ ತನ್ನ ಶಕ್ತಿಯನ್ನು ನಂಬಿ ವ್ಯಾಪಾರ ಶುರು ಮಾಡಿದ್ದ. ಅಂಗಡಿ ಲಾಭ ಗಳಿಸುತ್ತಾ ಮನೆಯನ್ನೂ ಆರ್ಥಿಕವಾಗಿ ಸಬಲವಾಗುವಂತೆ ಮಾಡಿತ್ತು ಕೃಷ್ಣಮೂರ್ತಿಗೆ ಮನಸ್ಸಿನಲ್ಲಿ ಅಳುಕು ಇದ್ದೇ ಇತ್ತು. ಎಷ್ಟೇ ಹೇಳಿದರು ಮಗ ಶಾಂತಿ ಮಾಡಿಸಲು ಒಪ್ಪಲಾರ ಎಂದು ಸುಮ್ಮನಾಗಿದ್ದ. 


ತವರಿನ ಆರ್ಥಿಕ ಪರಿಸ್ಥಿತಿ ಬದಲಾಯಿಸಿದ ಮೇಲೆ ಹೆರಿಗೆಂದು ಬಂದ ಪಂಕಜಾಕ್ಷಿಯನ್ನು ಕಂಡು ಮನೆಯವರು ಆಕೆಗೊಂದು ನೆಲೆ ಮಾಡಿ ಕೊಡಬೇಕೆಂದು ತೀರ್ಮಾನಿಸಿ ಪಂಕಜಾಕ್ಷಿಯ ಗಂಡ ಅನಂತಮೂರ್ತಿಯ ರೋಗವನ್ನು ಸರಿ ಮಾಡಿದ್ದರು. ಅಷ್ಟು ಮಾಡುವಷ್ಟರೊಳಗೆ ಮನೆಯವರೆಲ್ಲರೂ ಹೈರಾಣಾಗಿದ್ದರು. ಅದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ದರ್ಪದಿಂದ ವರ್ತಿಸಿ ಹೆಂಡತಿ, ಮಕ್ಕಳನ್ನು ತೊರೆದು ನಡೆದಿದ್ದ ಅನಂತಮೂರ್ತಿ. ಶಿವರಾಮನೇ ಅಕ್ಕ ಹಾಗೂ ಮಕ್ಕಳ ಜವಾಬ್ದಾರಿ ತೆಗೆದುಕೊಂಡಿದ್ದ. ಆಕೆಗೆ ಪ್ರಹ್ಲಾದ ಹುಟ್ಟಿದ ಸಂಧರ್ಭದಲ್ಲಿಯೇ ಕೃಷ್ಣವೇಣಿಗೂ ಮೂರನೆಯ ಹೆರಿಗೆ. ಕೃಷ್ಣವೇಣಿಗೆ ಅದಾಗಲೇ ಇಬ್ಬರು ಗಂಡುಮಕ್ಕಳಿದ್ದರು. ಹೆಣ್ಣುಮಗುವಿಗಾಗಿ ಆಸೆ ಪಡುತ್ತಿದ್ದಳು.


ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಿಮಾಳನ್ನು ಇಷ್ಟಪಟ್ಟಿದ್ದ ಶಿವರಾಮ. ಪಂಕಜಾಕ್ಷಿ ನಳಿನಾಕ್ಷಿಯರಿಗೂ ಆಕೆ ಇಷ್ಟವಾಗಿದ್ದಳು. 


ಕೃಷ್ಣವೇಣಿ ತವರಿಗೆ ಬಂದ ಸಂದರ್ಭದಲ್ಲಿ ಆಕೆ ಬಂದ ಸಮಯ ಸರಿಯಾಗಿಲ್ಲವೆಂದು, ಮಗು ಹುಟ್ಟಿದ ಸಮಯವೂ ಸರಿಯಿಲ್ಲವೆಂದು ಹೇಳಿದ್ದ ಕೃಷ್ಣಮೂರ್ತಿಯ ಮಾತನ್ನು ಯಾರು ಲೆಕ್ಕಿಸಿರಲಿಲ್ಲವಾದರೂ.. ಕೃಷ್ಣವೇಣಿ ಸತ್ತಿದ್ದಳು. ಪುಟ್ಟ ಮಗು 'ನಂದಾ' ಪಂಕಜಾಕ್ಷಿಯ ಪುಟ್ಟ ಮಗಳು ಶ್ರೀಮತಿಗಂತೂ ಬಹಳ ಅಚ್ಚುಮೆಚ್ಚು. ಹೆಂಡತಿ ಸತ್ತ ನಂತರ ಮಗುವನ್ನು ನಿರ್ಲಕ್ಷಿಸಿದ್ದ ಶೇಷಗಿರಿ ಮುಂದೊಂದು ದಿನ ತಾಯಿಯ ಆಸೆಯಂತೆ ಮಗುವನ್ನು ಕರೆದುಕೊಂಡು ಹೊರಟಾಗ, ಮಗುವನ್ನು ತೀರಾ ಹಚ್ಚಿಕೊಂಡಿದ್ದ ಶ್ರೀಮತಿಗೆ ವಿಪರೀತ ಜ್ವರ ಬಂದಿತ್ತು. ಇದು ಕಡಿಮೆಯಾಗುತ್ತದೆಂದು ಮನೆಯವರೆಲ್ಲರೂ ಭಾವಿಸಿದರು. ಕಳುಹಿಸಿದ ನಂದಾಳನ್ನು ಕರೆತಂದರೆ ಆ ಮಗು ಇಲ್ಲೇ ಉಳಿದರೆ ಎಂಬ ಆಲೋಚನೆಯಲ್ಲಿ ಒಂದೆರಡು ದಿನ ಕಳೆಯುವಷ್ಟರಲ್ಲಿಯೇ ಶ್ರೀಮತಿ ಸಾವನ್ನಪ್ಪಿದ್ದಳು. 


ಶಿವರಾಮನಿಗೆ ಅಂಗಡಿಯ ವಿಚಾರದಲ್ಲಿ ಅಷ್ಟು ಬಲವಿಲ್ಲವೆಂದಿದ್ದ ಅಪ್ಪನ ಜ್ಯೋತಿಷ್ಯದ ಮಾತನ್ನು ಲೆಕ್ಕಿಸದೇ ಅಂಗಡಿ ಮಾಡಿದ್ದವನು ಮನೆಯಲ್ಲಿನ ದುಃಖದ ಸಂದರ್ಭದಲ್ಲಿ ಅತ್ತ ನಿರ್ಲಕ್ಷಿಸಿದ್ದ. ಇತ್ತ ಗಮನ ಹರಿಸಿದಾಗ ಅಂಗಡಿಗೆ ನಷ್ಟವಾಗಿತ್ತು. ಪೂರ್ಣಿಮಾಳ ಅರಿವಿಗೂ ಬಾರದಂತೆ ಉಳಿದ ಕೆಲಸದವರು ತಮ್ಮ ಸ್ವಾರ್ಥವನ್ನು ನೋಡಿಕೊಂಡು ಅಂಗಡಿಗೆ ನಷ್ಟ ಉಂಟು ಮಾಡಿಬಿಟ್ಟಿದ್ದರು. 


ಪೂರ್ಣಿಮಾಳಿಗೆ ತಾಯಿ ಕಮಲ ಇದ್ದರೂ.. ತಂದೆ ಚಿಕ್ಕವಯಸ್ಸಿನಲ್ಲಿಯೇ ತೀರಿ ಹೋಗಿದ್ದರು. ಆಕೆಯ ಸೋದರಮಾವ ಹಾಗೂ ಸೋದರತ್ತೆ ಸ್ವಂತ ಮಗಳಂತೆ ಬೆಳೆಸುತ್ತಿದ್ದರು. ಆಕೆ ತನ್ನ ಸೋದರಮಾವನ ಕಷ್ಟ ನೋಡಲಾಗದೆ, ಮನೆಗೆ ಸಹಾಯವಾಗಲೆಂದೇ ದುಡಿಯಲು ಬರುತ್ತಿದ್ದದ್ದು. ಆಕೆಯ ತಾಯಿ ಕಮಲ ಈಗ ತನ್ನ ಪತಿಯ ಸ್ನೇಹಿತ ಅನಂತಮೂರ್ತಿಯ ಜೊತೆ ಹೆಚ್ಚು ಸಲುಗೆಯಿಂದಿರುವುದು ಪೂರ್ಣಿಮಾಳಿಗೆ ಹಿಡಿಸುತ್ತಿರಲಿಲ್ಲ. ಮಗಳ ವಿವಾಹ ನಿಶ್ಚಯಿಸಲು ಸಹಾಯಕನಾಗಿದ್ದಾನೆಂದೇ ಆತನೊಂದಿಗೆ ಆತ್ಮೀಯವಾಗಿರುವುದು ಎನ್ನುವುದನ್ನು ಆಕೆ ನಂಬಲು ಸಿದ್ಧವಿರಲಿಲ್ಲ. 


ಅದೇ ಸಮಯಕ್ಕೆ ಶಿವರಾಮನ ಮನೆಯವರು ಆಕೆಯ ಸೋದರಮಾವನನ್ನು ಮಾತುಕತೆಗೆ ಆಹ್ವಾನಿಸಿದಾಗ ಅವರು ಬಿಡುವಿನ ದಿನದಲ್ಲಿ ಅವರ ಮನೆಗೆ ಭೇಟಿ ನೀಡಿದರು ಬಂದ ದಿನ,ಸಮಯ ಸರಿಯಿಲ್ಲವೆಂದು ಆ ಸಂಬಂಧ ಕೂಡಿ ಬರದು ಎಂದಿದ್ದರು ಕೃಷ್ಣಮೂರ್ತಿಯವರು. ಕೃಷ್ಣಮೂರ್ತಿಯವರ ಮನಸ್ಸನ್ನು, ನಂಬಿಕೆಯನ್ನು ಅರಿತಿದ್ದ ಶಿವರಾಮ ಮತ್ತೆ ತನ್ನ ತಂದೆಗೆ ಘಾಸಿಯಾಗಬಾರದು ಸುಮ್ಮನಾಗಿದ್ದ. ಅವಿವಾಹಿತನಾಗಿಯೇ ಉಳಿದಿದ್ದ ಆತನ ಮನಸ್ಸಿನ ತುಂಬಾ ಪೂರ್ಣಿಮಾಳೇ ತುಂಬಿಕೊಂಡಿದ್ದಳು. ಬೇರಾವ ಹುಡುಗಿಗೂ ಅಲ್ಲಿ ಜಾಗವಿರಲಿಲ್ಲ. 


ಬಹಳ ಒಳ್ಳೆಯ ಜಾತಕವೆಂದು ಮದುವೆ ಮಾಡಿಕೊಟ್ಟಿದ್ದ ಮಗಳು ಮೀನಾಕ್ಷಿಯನ್ನು ಹೆಚ್ಚು ವಿಚಾರಿಸದೆ ವಿವಾಹ ಮಾಡಿಕೊಟ್ಟಿದ್ದರು ಕೃಷ್ಣಮೂರ್ತಿಯವರು. ಆದರೆ, ಆತನಿಗೆ ಎಲ್ಲ ರೀತಿಯ ದುಶ್ಚಟಗಳು ಇದ್ದವು. ಅದನ್ನು ತಿಳಿದ ಪೂರ್ಣಿಮಾ ತನ್ನ ಬದುಕಿನ ದೊಡ್ಡ ನಿರ್ಧಾರ ಮಾಡಿದ್ದಳು. ಹಾಗೆಂದು ಆಕೆ ಅಕ್ಕನಂತೆ ಮತ್ತೆ ತವರಿಗೆ ಬಂದು ಅಲ್ಲಿ ಉಳಿಯಲಿಲ್ಲ. ಬದಲಾಗಿ ಆಕೆ ತೆಗೆದುಕೊಂಡ ನಿರ್ಧಾರವೇನು..??


ಪೂರ್ಣಿಮಾಳ ತಾಯಿ ಸಲುಗೆಯಿಂದಿದ್ದ ಅನಂತಮೂರ್ತಿ ಹಾಗೂ ಪಂಕಜಳ ಗಂಡ ಅನಂತಮೂರ್ತಿ ಇಬ್ಬರೂ ಒಂದೇ ವ್ಯಕ್ತಿಯಾ ಅಥವಾ ಇಬ್ಬರು ಬೇರೆ ಬೇರೆಯಾ...?


ಪೂರ್ಣಿಮಾಳ ವಿವಾಹ ಯಾರೊಂದಿಗಾಯಿತು.. ಶಿವರಾಮನ ಮುಂದಿನ ಬದುಕು ಹೇಗಿತ್ತು..??


ಪೂರ್ಣಿಮಾಳ ತಾಯಿ ತನ್ನ ಬದುಕಿನ ಸತ್ಯವೊಂದನ್ನು ತಿಳಿಸಿದಾಗ ಪೂರ್ಣಿಮಾ ಆಘಾತಗೊಂಡದ್ದೇಕೆ..?? ತನ್ನ ಮಗು ಸತ್ತಾಗಲೂ ಬಾರದ ಅನಂತಮೂರ್ತಿ, ಮತ್ತೆ ತನ್ನ ಬಳಿ ಬಂದಾಗ ಪಂಕಜಾಕ್ಷಿಯ ಪ್ರತಿಕ್ರಿಯೆಯೇನು ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ತಾರಾಬಲ' ಕಾದಂಬರಿಯನ್ನು. 


ತಾರಾಬಲ ಹಾಗೂ ಜ್ಯೋತಿಷ್ಯಶಾಸ್ತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದ ತಂದೆ ಹಾಗೂ ಸ್ವಂತ ಪರಿಶ್ರಮ, ಶಕ್ತಿ, ಪ್ರೀತಿಯಿಂದ ಬದುಕನ್ನು ಕಟ್ಟಿಕೊಳ್ಳಬಯಸಿದ್ದ ಮಗ ಇವರಿಬ್ಬರ ನಂಬಿಕೆಗಳ ಜೊತೆಗೆ ಕುಟುಂಬದಲ್ಲಿ ನಡೆದ ಘಟನೆಗಳ ಚಿತ್ರಣವಿರುವ ಕಾದಂಬರಿ ಇದು. ನಂಬಿಕೆ, ಅಪನಂಬಿಕೆ ಎರಡೂ ಅತಿಯಾದರೆ ಏನಾಗುತ್ತದೆಂಬ ಸ್ಪಷ್ಟ ಚಿತ್ರಣವಿರುವ ಸರಾಗ ಓದಿನ ಕಾದಂಬರಿ.


~ವಿಭಾ ವಿಶ್ವನಾಥ್

ಹೃದಯ ಹಾಡಿದ ರಾಗ (ಪುಸ್ತಕ ಯಾನ - 223)


ಪುಸ್ತಕದ ಶೀರ್ಷಿಕೆ : ಹೃದಯ ಹಾಡಿದ ರಾಗ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)


ಹೃದಯ ಹಾಡಿದ ರಾಗ ಕಾದಂಬರಿಯನ್ನು ಓದಿದಾಗ ಇಷ್ಟು ದಿನ ಓದಿದ ಹೆಚ್.ಜಿ. ರಾಧಾದೇವಿಯವರ ಕಾದಂಬರಿಗಳಿಗಿಂತ ವಿಭಿನ್ನವಾದ ಕಥಾ ಪರಿಸರವಿತ್ತು. ಇಲ್ಲಿ ಸಂಪೂರ್ಣವಾಗಿ ಕ್ರೈಸ್ತ ಪರಿವಾರದ, ಆಚರಣೆಯ ಹಾಗೂ ಅಲ್ಲಿನ ಒಂದು ಸುಂದರ ಪ್ರೇಮ ಕಥೆಯೊಂದನ್ನು ಹೇಳುತ್ತಾರೆ. ಇದುವರೆಗೂ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಸಂಸ್ಕೃತಿಯ ಕುರಿತಾದ ಕಥಾ ಪರಿಸರ ಹಾಗೂ ಅಲ್ಲಿನ ತಿನಿಸುಗಳು, ಆಹಾರಗಳನ್ನು ವರ್ಣಿಸುತ್ತಿದ್ದ ಲೇಖಕಿ ಆಸ್ಥೆಯಿಂದ ಇಲ್ಲಿಯೂ ಅಲ್ಲಿನ ಕಥಾ ಪರಿಸರವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. 


ಚಾರ್ಲಿಯ ಪೂರ್ತಿ ಹೆಸರು ಚಾರ್ಲೆಸ್ ಜಾನ್ ವೆಸ್ಲಿ. ಚಾರ್ಲಿಯ ತಂದೆ ಜಾನ್ ವೆಸ್ಲಿ. ಚಾರ್ಲಿ ನೆಲೆಸಿದ್ದು ಮುಂಬೈನಲ್ಲಾದರೂ.. ಆತ ಬೆಳೆದಿದ್ದು ರಾಬರ್ಟ್ ಅವರ ತಂದೆ-ತಾಯಿ ಕ್ರಿಸ್ಟೋಫರ್ ಹಾಗೂ ಶ್ರೀಮತಿ ವೈಲೆಟ್ ಕ್ರಿಸ್ಟೋಫರ್ ಅವರ ಮಡಿಲಿನಲ್ಲಿ. ಚಾರ್ಲಿಯ ತಂದೆ ಕ್ರೈಸ್ತರಾದರೂ.. ತಾಯಿ ವಿಶಾಲು ಬ್ರಾಹ್ಮಣರ ಹುಡುಗಿ. ಅವರಿಬ್ಬರ ಪರಿಚಯವಾಗಿ ವಿವಾಹವಾದದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ.


ಚಿಕ್ಕವಯಸ್ಸಿಗೆ ತಂದೆಯನ್ನು ಕಳೆದುಕೊಂಡ ವಿಶಾಲುವಿಗೆ ತಾಯಿ ಲಕ್ಷ್ಮಮ್ಮನೇ ಸರ್ವಸ್ವ. ಲಕ್ಷ್ಮಮ್ಮ ಮನೆಯ ಮುಂದೆ ಅಂಗಡಿ ಇಟ್ಟುಕೊಂಡು ತಿಂಡಿಗಳು ಹಾಗೂ ಇಡ್ಲಿ ಮಾಡಿ ಮನೆ ಮನೆಗೆ ಹೋಗಿ ಮಾರುತ್ತಿದ್ದಳು. ಇದು ಆದಾಯಕ್ಕೆ ಅನುಕೂಲವಾದರೂ.. ಮಗಳ ಮದುವೆಗೆ ತೊಡಕಾಗಿತ್ತು. ಬೋಂಡಾ, ಚಕ್ಲಿ, ಮನೆ ಮನೆಗೆ ಇಡ್ಲಿ ಮಾರುವಾಕೆಯ ಮಗಳನ್ನು ಯಾರು ಮದುವೆಯಾಗುತ್ತಾರೆಂದು ಮೂಗುಮುರಿದವರೇ ಹೆಚ್ಚು. ಎರಡನೇ ವರ, ಅಂಗವಿಕಲ, ಕಳಪೆ ವರಗಳನ್ನು ಲಕ್ಷ್ಮಮ್ಮನವರು ಒಪ್ಪಲಿಲ್ಲ. ಕೊನೆಗೆ ವಿಶಾಲುವೇ ಧೈರ್ಯ ಮಾಡಿ ಮುಂದಕ್ಕೆ ಓದಿ ಗ್ರಾಜುಯೇಟ್ ಆಗುತ್ತೇನೆಂದಳು. ಅದಾದ ನಂತರ ಅವಳ ಓದಿಗೆ ತಕ್ಕ ಕೆಲಸ ಸಿಗಲಿಲ್ಲ. 


ಇದೇ ಕೊರಗನ್ನು ಮನಸ್ಸಿಗೆ ಹಚ್ಚಿಕೊಂಡು ಲಕ್ಷ್ಮಮ್ಮ ಕಾಯಿಲೆ ಬಿದ್ದು ಆಸ್ಪತ್ರೆ ಸೇರಿದರು. ಸರ್ಕಾರಿ ಆಸ್ಪತ್ರೆಯಲ್ಲಿ ವಾಸಿಯಾಗದೆ ಇದ್ದುದರಿಂದ ಮೆಥೆಡಿಸ್ಟ್ ಮಷೀನರಿ ಆಸ್ಪತ್ರೆಗೆ ತಾಯಿಯನ್ನು ಸೇರಿಸಿದಳು. ಅಲ್ಲಿ ನರ್ಸ್ ಆಗಿದ್ದ ವೈಲೆಟ್ ವಿಶಾಲುವಿನ ಆಪ್ತ ಗೆಳತಿಯಾದಳು. ಈಕೆಯ ಸಮಸ್ಯೆಗೆ ಪರಿಹಾರದಂತೆ ಅದೇ ಆಸ್ಪತ್ರೆಯಲ್ಲಿ ಖಾಲಿ ಇದ್ದ ರಿಸೆಪ್ಷನಿಸ್ಟ್ ಹುದ್ದೆಗೆ ಸೇರುವಂತೆ ಸೂಚಿಸಿದಳು. ಆಕೆಯ ಗಂಡ ಕ್ರಿಸ್ಟೋಫರ್ ಅದೇ ಆಸ್ಪತ್ರೆಯಲ್ಲಿ ಸೂಪರಿಡೆಂಟ್ ಆಗಿದ್ದವರು. ಆ ದಂಪತಿಗಳ ದೆಸೆಯಿಂದ ವಿಶಾಲುವಿಗೆ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು. 


ಆಗಾಗ ಆಸ್ಪತ್ರೆಗೆ ಆ ಸಂಸ್ಥೆಯ ಡೈರೆಕ್ಟರ್ ಆಗಿದ್ದ ಜಾನ್ ವೆಸ್ಲಿ ಭೇಟಿ ನೀಡುತ್ತಿದ್ದರು  ಆ ಸಂಧರ್ಭದಲ್ಲಿ ವಿಶಾಲು ಅವರ ಸಹಾಯಕ್ಕೆ ಹೋಗಬೇಕಾದ ಸಂದರ್ಭ ಬರುತ್ತಿತ್ತು. ಅವರಿಗೆ ವಿಶಾಲುವಿನ ರೂಪ, ವಿನಯ, ಕೆಲಸದ ಅಚ್ಚುಕಟ್ಟು, ಜಾಣ್ಮೆ ಎಲ್ಲವೂ ಹಿಡಿಸಿತು. ನಂತರ ಪರಿಚಯ ಸ್ನೇಹಕ್ಕೆ ತಿರುಗಿ ಅವರು ತಮ್ಮ ವೈಯಕ್ತಿಕ ವಿಚಾರವನ್ನು ಬಿಚ್ಚಿಟ್ಟರು. ತನ್ನ ಮೊದಲ ಪತ್ನಿ ಆಗಿದ್ದ ನೋರಾ ತಾನಿಲ್ಲದ ಸಂದರ್ಭದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದದ್ದು ಗೊತ್ತಾಗಿ ಮನಶ್ಶಾಂತಿ ಬೇಕೆಂದು ಆಕೆಗೆ ವಿಚ್ಛೇದನ ನೀಡಿ ಭಾರತದಲ್ಲಿಯೇ ನೆಲೆಸಿದ್ದರು. ಅದಾಗಿ 16 ವರ್ಷಗಳೇ ಕಳೆದಿದ್ದವು. ಈಗ ವಿಶಾಲುವಿನ ಮೇಲೆ ಮನಸ್ಸಾಗಿತ್ತು. ಲಕ್ಷ್ಮಮ್ಮನವರು ಜಾತಿ-ಮತವನ್ನು ಗಣನೆಗೆ ತೆಗೆದುಕೊಳ್ಳದೆ, ಈ ಮದುವೆಗೆ ಒಪ್ಪಿಗೆಯಿತ್ತರು. ವಿವಾಹದ ನಂತರ ವಿಶಾಲು ಕೆಲಸ ಬಿಟ್ಟು ಅವರ ಜೊತೆ ಬೊಂಬಾಯಿಗೆ ಹೊರಟಳು. ಸೊಗಸಾದ ಬಂಗಲೆ, ಕೈಗೊಬ್ಬ-ಕಾಲಿಗೊಬ್ಬ ಆಳು, ಮನೆಯ ತುಂಬಾ ಸುಖ ಸಾಧನಗಳಿದ್ದರೂ ಆಕೆಗೆ ಆ ವಾತಾವರಣ ಹಿಡಿಸಲಿಲ್ಲ. ಕುರಿಯನ್ ಮಾಡಿದ ವೆಜಿಟೇರಿಯನ್ ಅಡುಗೆಯನ್ನೂ ತಿನ್ನುತ್ತಿರಲಿಲ್ಲ. ದಿನವೂ ಮಧುಪಾನ, ಪಾರ್ಟಿಗಳಿಂದ ಮತ್ತರಾಗುತ್ತಿದ್ದ ಜಾನ್ ವೆಸ್ಲಿ ತಾನು ನೋಡಿದ ವ್ಯಕ್ತಿಯಲ್ಲವೆಂದು ದಿನೇದಿನೇ ಕೊರಗುತ್ತಾ ಕೃಶಳಾದಳು. ಗರ್ಭಿಣಿಯಾಗಿದ್ದವಳು ತನ್ನೂರಿಗೆ ಬಂದು ವೈಲೆಟ್ ರವರ ಮನೆಯಲ್ಲಿಯೇ ಇದ್ದು, ಚಾರ್ಲಿಗೆ ಜನ್ಮ ನೀಡಿ ತೀರಿಕೊಂಡಳು. ಎಳೆಯ ಮಗುವನ್ನು ಸಾಕಲಾಗದ ಜಾನ್ ವೆಸ್ಲಿ ಅವರು ಈ ದಂಪತಿಗಳ ಮನೆಯಲ್ಲಿಯೇ ತಮ್ಮ ಮಗನನ್ನು 16 ವರ್ಷಗಳವರೆಗೂ ಬಿಟ್ಟರು.


ಅದಾದ ನಂತರ ತಮ್ಮ ಮಗ ಮತ್ತೆ ಅವರತ್ತ ಆಕರ್ಷಿತನಾಗಬಾರದೆಂದು ಈ ದಂಪತಿಗಳಿಗೂ ಚಾರ್ಲಿಗೂ ನಡುವಿದ್ದ ಕೊಂಡಿಯನ್ನು ಇಬ್ಬರಿಗೂ ಅರಿವಿಲ್ಲದಂತೆ ಕಳಚಿದರು ವೆಸ್ಲಿ. ಸತತ ಮೂರು ವರ್ಷದಿಂದ ಒತ್ತಾಯಿಸುತ್ತಿದ್ದ ರಾಬರ್ಟ್ ನ  ಪ್ರೀತಿಯ ಕರೆಗೆ ಓಗೊಟ್ಟು ಈಗ ಚಾರ್ಲಿ ಮತ್ತೆ ಭಾರತಕ್ಕೆ ಬಂದಿದ್ದ. ಆಗಿನ ಚಾರ್ಲಿಗೂ.. ಈಗಿನ ಚಾರ್ಲಿಗೂ ಬಹಳ ವ್ಯತ್ಯಾಸವಿತ್ತು. ದೊಡ್ಡ ಮನೆ, ಸೊಗಸಾದ ತೋಟ, ಮನೆ ತುಂಬಾ ಆಳುಗಳು, ಜೊತೆಗೆ ಚಾರ್ಲಿಗೆ ಖಾಸಗಿ ಆಳು ಪೀಟರ್, ದೇಶ-ವಿದೇಶಗಳಲ್ಲಿ ಕಲಿತು ಬಂದ ಪದವೀಧರ ಕೋಟ್ಯಾಧೀಶನಾಗಿದ್ದ ಚಾರ್ಲಿ ಬದಲಾಯಿಸಿದ. ಒಂದು ಬಗೆಯ ದರ್ಪ, ಅಹಂಕಾರದಲ್ಲಿಯೇ ಸಭ್ಯತೆಗಾಗಿ ಹಾಗೂ ಶ್ರೀಮಂತ ಪ್ರದರ್ಶನಕ್ಕಾಗಿ ಅತಿಥಿಸತ್ಕಾರ ನಡೆಸಿದ್ದ. ಕ್ರಿಸ್ಟೋಫರ್ ದಂಪತಿಗಳ ಮೇಲೆ ಹಿಂದಿನ ಆತ್ಮೀಯತೆ ಇರಲಿಲ್ಲ. 


ಮೂರು ವರ್ಷಗಳ ನಂತರ ಚಾರ್ಲಿ ಸರಿಯಾಗಿ ಕ್ರಿಸ್ಮಸ್ ರ‌್ಯಾಲಿ ಬಂದಿದ್ದ. ರಾಬರ್ಟ್ ನನ್ನು ಮದುವೆಯಾಗುವ ಹುಡುಗಿ ಮರ್ಸಿಯ ಕುರಿತು ಕೂಡ ತಿಳಿಯಿತು. ಆಕೆಯೂ ರಾಬರ್ಟ್ ಗೆ ಬೆನ್ನೆಲುಬಾಗಿ ನಿಂತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತಿದ್ದಳು.


ಚಾರ್ಲಿಗೆ ಸಹಾಯಕನಾಗಿ ಪೀಟರ್ ಇದ್ದನಾದರೂ.. ಅಂಥೋನಿ ಬೇರೆ ಕೆಲಸಕ್ಕೆ ಹಾಗೂ ಥಾಮಸ್ ಅಡುಗೆಗೆ ನೇಮಕವಾಗಿದ್ದ. ಈ ಸಮಯದಲ್ಲಿ ಆತನ ಕುರಿತು ತಿಳಿದಿದ್ದ ಇತರ ಶ್ರೀಮಂತ ಕುಟುಂಬದ ಕನ್ಯಾಪಿತೃಗಳು ಆತನನ್ನು ಭೇಟಿಯಾಗಲು ಕಾಯುತ್ತಿದ್ದರು.


ಬಂಗಾಳದ ಪ್ರಸಿದ್ಧ ಶ್ರೀಮಂತರು ಆಗಿದ್ದ ಪ್ರೊಫೆಸರ್ ಸ್ವೀಫನ್ ಹೆನ್ರಿ ಹಾಗೂ ಶ್ರೀಮತಿ ಹೆನ್ರಿ ಹಾಗೂ ಅವರ ಮಗಳು ಸ್ಟೆಲ್ಲಾ ಪರಿಚಿತವಾದರು. ಆಕೆ ಚಾರ್ಲಿಯ ಕೂಗಿಗೆ ಸ್ಯಾಲಿ ಆದಳು. 


ಪಂಜಾಬಿನ ಹೆನ್ರಿಕ್ ವ್ಯಾನ್ ರಿಜಿನ್ ಸ್ಯಾಂಸನ್ ಹಾಗೂ ಅವರ ಪತ್ನಿ ಶ್ರೀಮತಿ ಸ್ಯಾಂ ಅವರು ಪರಿಚಿತವಾದರು ಪಂಜಾಬಿನಲ್ಲಿ ಅವರದ್ದೇ ಆದ ಎಜುಕೇಶನ್ ಸಂಸ್ಥೆಯೂ ಇತ್ತು. ಎಂ.ಬಿ.ಬಿ.ಎಸ್ ಓದುತ್ತಿದ್ದ ತನ್ನ ಮಗಳು ವಿಲ್ಮಾಳನ್ನು ಕೂಡಾ ಪರಿಚಯ ಮಾಡಿಸಿದರು. ಆಕೆ ಚಾರ್ಲಿಗೆ ವಿನ್ನಿ ಆದಳು. ಅವರ ಕಲಾಸಕ್ತಿ ಚಾರ್ಲಿಯ ಮನಸ್ಸೆಳೆಯಿತು.


ಆದರೆ, ಆ ಇಬ್ಬರು ಶ್ರೀಮಂತ ಕನ್ಯೆಯರಿಗಿಂತ ಆತನ ಮನಸೆಳೆದಿದ್ದು ಜೂಲಿ. ಮೊದಲಿಗೆ ಮುಖವೇ ನೋಡದೆ, ಇಂಪಾದ ಕಂಠದ ಗಾಯನಕ್ಕೆ ಆಕರ್ಷಿತನಾಗಿದ್ದ. ನಂತರ, ಆಕೆ ನಟಿಸಿದ ನಾಟಕದಲ್ಲಿ ದೇವತೆಯ ವೇಷದಲ್ಲಿ ಮನಸ್ಸಿಗಿಳಿದಿದ್ದಳು. ಅಂಥೋನಿಯ ಪರಿಚಯದ ಕುಟುಂಬದ ಹೆಣ್ಣು ಮಗಳು. ಮರ್ಸಿಯ ವಿದ್ಯಾರ್ಥಿನಿ. ಸ್ವಾಭಿಮಾನವುಳ್ಳ ಹೆಣ್ಣು ಜೂಲಿ ಚಾರ್ಲಿಯ ಶ್ರೀಮಂತಿಕೆಗೆ ಮರುಳಾಗಲಿಲ್ಲ. ಆದರೆ, ಸಂದರ್ಭಗಳು ಆಕೆ ಆತನಿಂದ ಎಷ್ಟೇ ದೂರ ಉಳಿಯಬೇಕೆಂದರೂ ಅದಕ್ಕೆ ಅವಕಾಶ ನೀಡಲಿಲ್ಲ. ಕ್ರಿಸ್ಮಸ್ ಕಾರ್ಯಕ್ರಮದ ಕೊನೆಯ ದಿನ ಸಿಂಡ್ರೆಲಾಳ ಕಥೆಯ ನಾಟಕದಲ್ಲಿ ರಾಜಕುಮಾರನಾಗಿ ಚಾರ್ಲಿ ಅಭಿನಯಿಸಿದರೆ, ಜೂಲಿ ಸಿಂಡ್ರೆಲಾ ಆದಳು. ಇದು ನಾಟಕಕ್ಕಷ್ಟೇ ಸೀಮಿತವಾಯಿತೇ..??


ಜೂಲಿಯ ತಾಯಿ ಚಾರ್ಲಿಯ ಜೊತೆ ನಾಟಕದಲ್ಲಿ ಅವಳನ್ನು ನೋಡಿದಾಗ ಆಕೆಯನ್ನು ದಂಡಿಸಿದ್ದೇಕೆ..?? ಸಂತೋಷಮ್ಮನ ಆ ಪ್ರತಿಕ್ರಿಯೆಗೆ ಕಾರಣವೇನು..?? ಚಾರ್ಲಿಯ ಶ್ರೀಮಂತಿಕೆಗೆ ಜೊತೆಯಾದವರು ಯಾರು..?? ಆತನ ಮನಸ್ಸಿನಲ್ಲಿಳಿಯಲು ಸ್ಯಾಲಿ ಹಾಗೂ ವಿನ್ನಿಯ ನಡೆಗಳೇನು..?? ಹೃದಯ ಹಾಡಿದ ರಾಗಕ್ಕೆ ಮೇಳವಾದವರು ಯಾರು.. ಎಲ್ಲವನ್ನೂ ತಿಳಿಯಲು ಓದಿ 'ಹೃದಯ ಹಾಡಿದ ರಾಗ'.


ಇದರಲ್ಲಿ ಹೆಚ್ಚು ಸೆಳೆದದ್ದು ಜೂಲಿಯ ಸ್ವಾಭಿಮಾನ ಹಾಗೂ ಹೃದಯಗಳ ನಡುವೆ ಬೆಳೆದ ನಿಷ್ಕಲ್ಮಶವಾದ ಪ್ರೇಮ. ಕ್ರಿಸ್ಟೋಫರ್ ಹಾಗೂ ವೈಲೆಟ್ ಚಾರ್ಲಿಯನ್ನು ಸ್ವಂತ ಮಗನಂತೆಯೇ ಸಾಕಿದ ಅಪ್ರತಿಮ ವಾತ್ಸಲ್ಯ. ವಿಭಿನ್ನ ಕಥಾವಸ್ತುವಿನ ಓದು.


~ವಿಭಾ ವಿಶ್ವನಾಥ್

ಪ್ರದೋಷ (ಪುಸ್ತಕ ಯಾನ - 222)


ಪುಸ್ತಕದ ಶೀರ್ಷಿಕೆ : ಪ್ರದೋಷ

ಲೇಖಕರು : ರವಿ ಬೆಳಗೆರೆ

ಪ್ರಕಾಶಕರು : ಭಾವನ ಪ್ರಕಾಶನ

ಪ್ರಥಮ ಮುದ್ರಣ : 2021

ಪುಟಗಳು : 120

ಬೆಲೆ : 140 ರೂ.


ರವಿ ಬೆಳಗೆರೆಯವರು ಅರ್ಧ ಬರೆದಿಟ್ಟು ಹೋದ ಪುಸ್ತಕಗಳಲ್ಲಿ 'ಪ್ರದೋಷ' ಧಾರಾವಾಹಿಯೂ ಒಂದು. ಇದು 'ಹಾಯ್ ಬೆಂಗಳೂರ್' ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಅಪೂರ್ಣ ಕಾದಂಬರಿ ಎಂದು ಹೊರ ಪುಟದಲ್ಲಿಯೂ ಮುದ್ರಿಸಿದ್ದರೆ ಒಳ್ಳೆಯದಿತ್ತು ಎನ್ನಿಸಿತು.


ಮುಂದೊಂದು ದಿನ ಈ ಪುಸ್ತಕವನ್ನು ಪೂರ್ಣಗೊಳಿಸುವ ಇಚ್ಛೆ ಇದೆ ಎಂದು ಇದನ್ನು ಪ್ರಕಟಿಸುವ ಭಾವನಾ ಬೆಳಗೆರೆಯವರ ಮಾತು ಆಲೋಚನೆಗೆ ಹಚ್ಚಿತು. ಒಬ್ಬರು ಲೇಖಕರ ಕಾದಂಬರಿಯ ಎಳೆ ಹಿಡಿದು ಬರೆಯಬಹುದಾದರೂ.. ಅವರ ಬರವಣಿಗೆಯ ಶೈಲಿ ಮತ್ತು ಆಲೋಚನೆಗೆ ಹೊಂದಬಲ್ಲದಾ ಎಂಬ ಪ್ರಶ್ನೆ ಮೂಡಿತಾದರೂ.. ಅದೊಂದು ಹೊಸ ಪ್ರಯತ್ನವೂ ಆಗಬಲ್ಲದು ಎನ್ನಿಸಿತು. ಈಗಾಗಲೇ ಈ ರೀತಿಯ ಪ್ರಯತ್ನ ಆಗಿದೆ. ( ತ್ರಿವೇಣಿಯವರ 'ಅವಳ ಮಗಳು' ಅಪೂರ್ಣ ಕಾದಂಬರಿಯನ್ನು ಶ್ರೀಮತಿ ಎಮ್.ಸಿ.ಪದ್ಮಾರವರು ಪೂರ್ಣಗೊಳಿಸಿದ್ದಾರೆ )


'ಮಾಟಗಾತಿ' ಮತ್ತು 'ಸರ್ಪ ಸಂಬಂಧ' ಓದಿದ್ದೆ. ಆ ಎರಡೂ ಪರಸ್ಪರ ಕೊಂಡಿ ಇರುವ ಪುಸ್ತಕಗಳು. 'ಪ್ರದೋಷ'ದಲ್ಲಿ ಅಲ್ಲಿನ ಪಾತ್ರಗಳಿದ್ದರೂ ನಿರೀಕ್ಷೆಗೆ ತಕ್ಕಂತೆನ್ನಿಸಲಿಲ್ಲ. ಮಾಟಗಾತಿ ಹಾಗೂ ಸರ್ಪ ಸಂಬಂಧಗಳು ಪರಸ್ಪರ ಒಂದು ಎಳೆಯಿಂದ ಜೋಡಿಸಲ್ಪಟ್ಟಿದ್ದವು. ಪ್ರದೋಷ ಆ ಕ್ಯಾಟಗಾರಿಗೆ ಸೇರಿದರೂ ಅವುಗಳ ಎಳೆಯಿಲ್ಲದೆ ಸ್ವತಂತ್ರವಾಗಿದೇ ಎನ್ನಿಸಿತು. ಅಘೋರಿಗಳ ಕುರಿತ ಕತೆಯಿದೆ. ಸಂಪೂರ್ಣವಾಗಿದ್ದರೆ ಅದರ ರೋಚಕತೆಯೂ ಇರುತ್ತಿತ್ತೇನೋ.. 


ಇದೆಲ್ಲವನ್ನು ಹೊರತುಪಡಿಸಿ ಬರೆದಷ್ಟು ಕತೆಯ ವಿಚಾರಕ್ಕೆ ಬರುವುದಾದರೆ.. 

ಪ್ರದೋಷ ಎಂಬ ಶೀರ್ಷಿಕೆ ಮನಸೆಳೆದದ್ದು ಸುಳ್ಳಲ್ಲ. ಪ್ರದೋಷ ಎಂದರೆ ಇಳಿ ಸಂಜೆ.. ಹಗಲು ಮುಗಿದು ರಾತ್ರಿ ಆರಂಭವಾಗುವ ಕಾಲ. ಆ ಸಮಯದಲ್ಲಿ ಹುಟ್ಟಿದ ಮಗುವಿಗೆ ಆತನ ತಾತ ಇಟ್ಟಿದ್ದ ಹೆಸರು 'ಪ್ರದೋಷ್'.


ರಾಮಾಯಣದಲ್ಲಿಯೂ ಈ ರೀತಿ ಪ್ರದೋಷ ಕಾಲದಲ್ಲಿ ಕೂಡಿದಾಗ ಹುಟ್ಟಿದ ಮಗುವಿನ ಉಲ್ಲೇಖವಿದೆ. ಆತನೇ ರಾವಣ. 


ಪ್ರದೋಷ ಕಾಲದಲ್ಲಿಯೇ ಕತೆ ಶುರುವಾಗುವುದು. ಆಂಧ್ರ, ಕರ್ನಾಟಕ ಹಾಗೂ ಆಫ್ರಿಕಾದ ಗಮಲಿನ ಕತೆ. ಮಸಾಯ್ ಮಾರಾ ಕಾಡು, ಅಮಾವಾಸ್ಯೆ , ಪಾಡ್ಯದ ಸೂರ್ಯ, ಟಿಂಬಾ ಮತ್ತು ಪ್ರದೋಷ ಕಾಲದ ಸನ್ನಿವೇಶಗಳ ನಂತರ ಏಳು ವರ್ಷಗಳ ಕತೆ ಎಳೆಎಳೆಯಾಗಿ ಬಿಚ್ಚಿಟ್ಟುಕೊಳ್ಳುತ್ತಾ ಹೋಗುತ್ತದೆ.


ನಾಸ್ತಿಕ ಕವಿತಾ, ನಂಬಿಕೆಯಿದ್ದರೆ ಇದೆ ಇಲ್ಲದಿದ್ದರೆ ಇಲ್ಲವೆಂಬಂತೆ ಬದುಕುವ ಹರಿಬಾಬುವಿನ ಮಗನೇ ಪ್ರದೋಷ್. ಸಾಮಾನ್ಯರ ಜೀವನದಂತೆ ಕಂಡರೂ ನಿಗೂಢವಾಗುತ್ತಿರುವ ಬದುಕಿನ ಜೊತೆಜೊತೆಗೆ ನಿಗೂಢ ಗತದ ಸೀತಮ್ಮ ಮತ್ತು ರಘುರಾಮಯ್ಯ


ಬ್ರಹ್ಮ ತೇಜಸ್ಸಿನ ಅಹೋಬಲ ನಾರಾಯಣ ಶಾಸ್ತ್ರಿಗಳು, ಬಾಲಾಂಜನೇಯ ಸ್ವಾಮಿ,  ಸಾಂದೀಪನಿ ಮುಂತಾದ ಸಾತ್ವಿಕ ಶಕ್ತಿಗಳು ಜೊತೆಗೆ ಶ್ರೀ ಚಕ್ರ.


ಜೋಗೇಶ್ವರಿ, ವಲ್ಲಭಪಂಥರು, ಪ್ರಣವ ಶಿಷ್ಯ,  ಲಾಲಿಬಾಬಾ, ವಜ್ರೋಲಿ ವಿದ್ಯೆಯ ವಾಮ ಪಂಥದ ಕೆಲವರು.


ಸಾತ್ವಿಕ ಹಾಗೂ ವಾಮ ಶಕ್ತಿಯ ಜೊತೆಗೆ ನಿಗೂಢ, ರೋಚಕವಾಗಿ ಕೂಡಿದ್ದರೂ ಅಪೂರ್ಣತೆಯ ಕಪ್ಪು ಚುಕ್ಕಿಯನ್ನು ದೊಡ್ಡದಾಗಿ ಕಾಣುವಂತೆ ಮಾಡುವ ಪುಸ್ತಕ.


ರೋಚಕತೆ ಇದ್ದರೂ ಎಲ್ಲವೂ ಅರ್ಧಂಬರ್ಧ ಎನ್ನಿಸುವುದರಿಂದ ಕೊಂಡ ನಂತರ ಹಣ ಹೋಯಿತು ಎಂದು ಕೊರಗುವುದರ ಬದಲು ಇಷ್ಟು ಓದಿದೆ ಎಂಬ ಸಂತೃಪ್ತಿ ಇರಲಿ. 


~ವಿಭಾ ವಿಶ್ವನಾಥ್

ನೀಲ ಮಲಯ್ ಜಲಯಾನ (ಪುಸ್ತಕ ಯಾನ - 221)


ಪುಸ್ತಕದ ಶೀರ್ಷಿಕೆ : ನೀಲ ಮಲಯ್ ಜಲಯಾನ

ಲೇಖಕರು : ವಾಣಿ ರಾವ್

ಪ್ರಕಾಶಕರು : ವಿಜಯ ಸಾಹಿತ್ಯ ಪ್ರಕಾಶನ

ಪ್ರಥಮ ಮುದ್ರಣ : 2005

ಪುಟಗಳು : 152

ಬೆಲೆ : 90 ರೂ.


ಸಂಗೀತ, ಸಾಹಿತ್ಯ, ವೈದ್ಯಕೀಯ ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಶ್ರೀಮತಿ ವಾಣಿ ರಾವ್ ಅವರು ಹೋಮಿಯೋಪತಿಯಲ್ಲಿ ಪಿ.ಎಚ್.ಡಿ ಯಲ್ಲಿ ಪದವೀಧರರು. ಹಲವು ರಾಜ್ಯಗಳಲ್ಲಿ ಸಂಚರಿಸಿ, ಹಲವು ಕಡೆ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ವಾಯುಪಡೆಯಲ್ಲಿ ಕೆಲಸ ಮಾಡಿರುವ ಇವರ ಪತಿಯೊಂದಿಗೆ ಭಾರತದ ಹಲವು ಕಡೆ ಸಂಚರಿಸಿ ಭಾರತ-ಪಾಕಿಸ್ತಾನದ ಮೂರು ಯುದ್ಧಗಳನ್ನು ಕಣ್ಣಾರೆ ನೋಡಿದ್ದಾರೆ. ವಾಯುಪಡೆಯ ಮಹಿಳಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.


ವಾಣಿ ಅವರು ರಚಿಸಿದ ಪ್ರಮುಖ ಕೃತಿಗಳು : ಸುಪ್ತಚೇತನ, ದರ್ಪಣ, ಆಕಾಶದೀಪ, ಹೇಮಶೃಂಗ (ಕಾದಂಬರಿ); ವನಸುಮ, ನೀಲಕೊಳ, ಗಣೇಶ ಎಲ್ಲಿ, ಮಾಯಾವಿ (ಮಕ್ಕಳ ಕತೆ); ಸಿಂಧು-ಬಿಂದು (ಭಾಷಾಂತರ); ಚಿನ್ನಯ ರಾಮಾಯಣ, ಮಗು, ಸ್ವಾಮಿ ಪ್ರಣವಾನಂದಜೀ (ವೈದ್ಯಕೀಯ); ಹೋಮಿಯೋಪತಿ, ಮೆಟೀರಿಯಾ ಮೆಡಿಕಾ ಸೂತ್ರಗಳು (ಕವನ ಸಂಕಲನ); ಸರ್ವಜಿತು, ಸರ್ವಧಾರಿ, ಕಲೇಸಂ ಪ್ರಕಟಣೆ ಎಪ್ಪತ್ತರ ವಯಸು (ಸಂಪಾದಿತ) ಮುಂತಾದವು. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವು  ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.  ಇವರ ಹಲವು ಬರಹಗಳು ರೇಡಿಯೋ ದೂರದರ್ಶನಗಳಲ್ಲಿ ಪ್ರಸಾರವಾಗಿವೆ. ಇವರ 'ಗಗನಕುಸುಮ' ಕಥಾಸಂಕಲನಕ್ಕೆ ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ, 'ಚಂದ್ರಕಾಂತ ಶಿಲೆಯ ಚಂಡಮಾರುತ' ಪುಸ್ತಕಕ್ಕೆ ಮಲ್ಲಿಕಾ ಪ್ರಶಸ್ತಿಯೂ ಲಭಿಸಿದೆ 


ಲೇಖಕಿ ಹಾಗೂ ಅವರ ತಂಗಿ ಇಬ್ಬರೇ ಸಿಂಗಾಪುರಕ್ಕೆ ಹೋಗಿದ್ದಾಗ.. ಕ್ರೂಸಿಂಗ್ ಗೆ ಹೋಗಿದ್ದು.. ಅನಿರೀಕ್ಷಿತ ಪ್ರಸಂಗವೊಂದರಿಂದ ಐದು ದಿನಗಳ ಕಾಲ ಕ್ರೂಸಿಂಗ್ ಅನ್ನು ಮುಂದೂಡಬೇಕಾಗಿ ಬಂದು, ಕಡಲ ಮೇಲೆ ಐದು ದಿನಗಳನ್ನು ಹೆಚ್ಚಾಗಿ ಕಳೆಯಬೇಕಾಗಿ ಬಂದಾಗ ಪ್ರವಾಸಿಗರಿಗೆ ಯಾವ ಆತಂಕವೂ ಆಗದೆ, ಭೂಮಿಯ ಮೇಲೆ ಅನಾಹುತ, ಅಪಘಾತಗಳು ಸಂಭವಿಸುತ್ತಿದ್ದರೂ ನೀರ ಮೇಲಿದ್ದವರು ಜಲಯಾನದಲ್ಲಿ ಯಾವ ಬದಲಾವಣೆಯೂ ಇಲ್ಲದೇ ಸುಖ-ಸಂತೋಷದಲ್ಲಿಯೇ ಮುಳುಗಿದ್ದರು. ಆದರೆ, ಅಲ್ಲಿನವರಿಗೆ ಯಾವುದರಲ್ಲಿಯೂ ಹೆಚ್ಚು-ಕಡಿಮೆಯಾಗದಂತೆ ನೋಡಿಕೊಂಡ ಆ ಸಿಬ್ಬಂದಿಯನ್ನು ಕಂಡು ಸಿಬ್ಬಂದಿಯವರ, ಪ್ರವಾಸಿಗರ ಓಳ-ಹೊರಗಿನ ಜೀವನದ ಅನುಭವವಾಗಿ ಅಷ್ಟು ದೊಡ್ಡ ಹಡಗುಗಳನ್ನು ನಡೆಸುವವರು ಯಾವ ನೆಲೆಯೂ ಇಲ್ಲದೆ, ಆ ಮಟ್ಟಕ್ಕೇರಿದ ಕಥೆಗಳನ್ನು ಕೇಳಿ ಆಶ್ಚರ್ಯವಾದದ್ದು.. ತಾವು ಮಾತ್ರ ಶ್ರೀಮಂತರಾಗಿ ಕೂರದೆ, ಅನೇಕ ಕಷ್ಟ ಪಡುವವರನ್ನು ಮೇಲೆ ತಂದವರು.. ಅವಕಾಶಗಳನ್ನು ಕಲ್ಪಿಸಿ ಕೊಟ್ಟವರ ಕಥೆಗಳನ್ನು ಕೇಳುತ್ತಾ ಅದರ ಆಧಾರದ ಮೇಲೆ ರಚಿಸಿರುವ ಕಾದಂಬರಿಯೇ ನೀಲ ಮಲಯ್ ಜಲಯಾನ.


ನೀಲ ಮೊದಮೊದಲು ಹಡಗಿನ ಡೆಕ್ ಮೇಲೆ ನಿಂತು ಸಮುದ್ರಯಾನವನ್ನು ಆನಂದಿಸುತ್ತಿದ್ದಳಾದರೂ.. ಬಂದ ಕೋಲ್ಮಿಂಚು ಹಾಗೂ ಅದರ ಶಬ್ದ, ಜೊತೆಗೆ ಬಂದ ವಿನ್ನಿ ಆಕೆಯನ್ನು ಎಚ್ಚರಿಸಿ ಒಳಗೆ ಕರೆದ. ಹೊರಗೆ ಪ್ರಕೃತಿಯ ಆಟ ಎಷ್ಟೆಲ್ಲಾ ಇದ್ದರೂ.. ಹಡಗಿನೊಳಗಿದ್ದ 8000 ಜನಕ್ಕೆ ಇದಾವುದರ ಪರಿವೆಯೂ ಇಲ್ಲದೆ ತಮ್ಮ ಚಟುವಟಿಕೆಯಲ್ಲಿ ಮುಳುಗಿ ಹೋಗಿದ್ದರು. ಹಡಗಿನಲ್ಲಿದ್ದ ಕೆಲವರು ನೀಲಾಳಿಗೆ ಪರಿಚಿತರು. ವಿನ್ನಿ ಆಕೆಯ ತಮ್ಮನಂತಿದ್ದ. ಈಕೆ ವಿದೇಶಿ ಪ್ರವಾಸಿಗರಿಗೆ ಗೈಡ್ ಆಗಿದ್ದಳು. ಭಾರತೀಯಳಾಗಿದ್ದವಳು ಮಲೇಶಿಯಾ ಭಾಷೆ ಕಲಿತು ಭಾಷಾಂತರ ಮಾಡುತ್ತಿದ್ದಳು. 


ಆಕೆಗೆ ಪರಿಚಿತನಾಗಿದ್ದ ಪಾಲ್ ಕೂಡ ಭಾರತೀಯನೇ.. ಅವನ ಹೆಂಡತಿ ಇಂಡೋನೇಷಿಯನ್. ಈತ ಸಿಂಗಾಪುರದಲ್ಲಿ ವ್ಯಾಪಾರಸ್ಥ. ಐದು ವರ್ಷಗಳ ಮುಂಚೆ ಸಣ್ಣ ವ್ಯಾಪಾರಿಯಾಗಿದ್ದವನು ಈಗ ಕ್ರೂಸರ್ ನಲ್ಲಿ ಹಾಲಿಡೇ ಮಾಡುವಷ್ಟು ಶ್ರೀಮಂತ. 


ನೀಲಾ ಮೂವರು ಯಾತ್ರಿಕರಿಗೆ ಗೈಡ್ ಆಗಿ ಬಂದಿದ್ದವಳು. ಈಗ ಆ ಮೂವರೂ ಮಲೇಶಿಯಾದ ಕಾಡಿನಲ್ಲಿ ಟ್ರಕ್ಕಿಂಗ್ ಎಂದು ಹೋಗಿದ್ದವರು ಅಲ್ಲಿಯೇ ಉಳಿದರು. ಅವರು ಬರುವವರೆಗೂ ಹೋಟೆಲ್ ನಲ್ಲಿಯೇ ಉಳಿದುಕೊಳ್ಳಲು ಇಷ್ಟಪಡದೆ, ಕ್ರೂಸರ್ ನಲ್ಲಿ ಹೊರಟಿದ್ದಳು. ಅದು ಅತ್ಯಂತ ದೊಡ್ಡ ಏಷ್ಯಾ-ಪೆಸಿಫಿಕ್ ಕ್ರೂಸಿಂಗ್. ನಾಳೆಗೆ ಅದು ಮಲೇಶಿಯಾ ತಲುಪಲಿತ್ತು. ಸೂಪರ್ ಸ್ಟಾರ್ ವಿರ್ಗೋ ಅಲ್ಲಿ ಲಂಗರು ಹಾಕಲಿತ್ತು. ಹಾಗಾಗಿ ರಾತ್ರಿಯಿಡೀ ಸೆಂಡ್ ಆಫ್ ಪಾರ್ಟಿಯ ಸಂಭ್ರಮದಲ್ಲಿದ್ದವರಿಗೆ ಮರುದಿನ ರೇಡಿಯೋದಲ್ಲಿ ಬಂದ ಸುದ್ದಿಯೊಂದು ಕಂಗಡಿಸಿತ್ತು. ದೊಡ್ಡ ಭೂಕಂಪ ಹಾಗೂ ಬಿರುಗಾಳಿಯಿಂದ ಮಲೇಷಿಯಾದಲ್ಲಿ ಬಹಳ ಹಾನಿಯಾಗುತ್ತಿತ್ತು. ಹಡಗು ಲ್ಯಾಂಡ್ ಆಗುವುದು ಸಾಧ್ಯವಿರಲಿಲ್ಲ. ಅಲ್ಲದೇ ಮಲಯ್ ತೀರವೆಲ್ಲಾ ಹೊಡೆದು ಹೋಗಿತ್ತು. ಸಮುದ್ರದ ಮಧ್ಯದಲ್ಲಿರುವದರಿಂದ ಇವರಿಗೆ ಯಾವುದೇ ತೊಂದರೆ ಇರಲಿಲ್ಲ. 


ಚಿಕ್ಕಮಗಳೂರಿನ, ಕನ್ನಡದವರೇ ಆದ ನಾಗರಾಜ್ ಹಾಗೂ ಮಂಜುಳಾ ದಂಪತಿಗಳ ಪರಿಚಯವಾಗಿತ್ತು. ಅವರ ಮಗಳು ಮಲ್ಲಿಕಾ ಹಾಗೂ ನಾಗರಾಜ್ ಅವರ ತಾಯಿ ಅಂಬಮ್ಮ ಹಾಗೂ ಅವರ ಊರಿನ ಸೀತಾ ಮತ್ತು ಜಾನಕಿಯರ ಪರಿಚಯವಾಗಿತ್ತು. ಸುನಾಮಿಯ ಕುರಿತು ಕೇಳಿದ ಅವರಿಗೆ ಭಯವಾಗಿತ್ತು. ಅವರಿಗೆಲ್ಲರಿಗೂ ಧೈರ್ಯ ತುಂಬುವಲ್ಲಿ ನೆರವಾದಳು ನೀಲ. 


ಸಮಯ ಕಳೆಯುತ್ತಿದ್ದಂತೆ ಮೊಬೈಲ್ ನೆಟ್ವರ್ಕ್ ಸಿಗುತ್ತಲೇ ಇರಲಿಲ್ಲ. ಕೆಲವು ಟೂರಿಸ್ಟ್ ಹಡಗುಗಳಲ್ಲಿದ್ದವರಿಗೆ ಇದೇ ಹಡಗಿನಲ್ಲಿ ಆಶ್ರಯ ನೀಡುತ್ತಾ ಅವರಿಗೆ ನೆರವಾದರು. ಅಪಾಯದಲ್ಲಿದ್ದ ಕೆಲವು ದೋಣಿಯಲ್ಲಿರುವವರನ್ನೂ ರೆಸ್ಕ್ಯೂ ಮಾಡುತ್ತಿದ್ದರು. ಜೊತೆಗೆ ನೀಲಳ ದಯದಿಂದ ಅವರಿಗೆ ಆಗಾಗ ಭೂಮಿಯ ಮೇಲಿನ ವಿಷಯವೂ ತಿಳಿಯುತ್ತಿತ್ತು. ಹಾಗೆ ಅಡಗಿಗೆ ಬಂದ ಒಬ್ಬರು ವ್ಯಕ್ತಿಯನ್ನು ಅಂಬಮ್ಮ ಗುರುತಿಸಿದರು. ಅವರು ಆಕೆಯ ಬಾಲ್ಯದ ಗೆಳತಿ ಭೂಮಾದೇವಿ.


ಅವರು ಭೂಮಾದೇವಿ ಹೌದಾ.. ಅಲ್ಲವಾ.. ಎನ್ನುವ ಅನುಮಾನ ಬಂದರೂ ತನ್ನ ಅನುಮಾನವನ್ನು ನಿವಾರಿಸಿಕೊಂಡು ಖುಷಿಪಟ್ಟರು ಅಂಬಮ್ಮ. ಆಕೆ ನಿಜವಾಗಿಯೂ ಅವರ ಬಾಲ್ಯದ ಗೆಳತಿ ಭೂಮಾದೇವಿಯೇ.. ಅವರನ್ನು ಭೇಟಿ ಮಾಡಿ ಸಂತೋಷದಿಂದ, ಉಳಿದ ವ್ಯಥೆಗಳನ್ನು ತೊರೆದು ಇರುವಾಗಲೇ.. ನೀಲಾಳಿಗೆ ಅವರನ್ನು ಕಂಡು ಅಚ್ಚರಿಯಾಗಿತ್ತು. ಏಕೆಂದರೆ, ಆಕೆ ಅವರ ದೊಡ್ಡಮ್ಮ. ಎಷ್ಟೋ ವರ್ಷಗಳ ಹಿಂದೆ ಇಬ್ಬರೂ ಬೇರೆಬೇರೆಯಾಗಿದ್ದರು.ಅದೂ ಈ ಸಂದರ್ಭದಲ್ಲಿ ಈ ರೀತಿ ಸಿಗುತ್ತವೆಂದು ಅವರಿಬ್ಬರೂ ಕನಸಿನಲ್ಲಿಯೂ ನೆನೆಸಿರಲಿಲ್ಲ. ಒಟ್ಟಾಗಿ ಎಲ್ಲರ ಸಮಾಗಮವಾಗಿತ್ತು.


ಭೂಮಾದೇವಿ ತಮ್ಮ ಹಿಂದಿನ ಕಥೆಯನ್ನೆಲ್ಲಾ ಹೇಳತೊಡಗಿದರು. ಅವರ ಶ್ರೀಮಂತಿಕೆಯ ಜೀವನದಿಂದ ಬಡತನದ ಬದುಕಿನತ್ತ ಸಾಗಿದ್ದು ಹೇಗೆ..?? ಆಕೆ ನೀಲಾಳ ತಾಯಿಯ ಅಕ್ಕನಲ್ಲ. ಭೂಮಾ ಹಾಗೂ ನೀಲಾ ಜೊತೆಯಾದದ್ದು ಹೇಗೆ ಹಾಗೂ ಅವರಿಬ್ಬರೂ ಪರಸ್ಪರ ಬೇರೆಯಾಗಿದ್ದೇಕೆ..?? ಮೊದಲಿಗೆ ನೀಲ ತನ್ನ ಪರಿಚಯವನ್ನು ಎಲ್ಲರ ಜೊತೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದಳಾದರೂ.. ಭೂಮಾದೇವಿ ಸಿಕ್ಕ ನಂತರ, ಅವಳ ಹಿಂದಿನ ಕತೆಯನ್ನೆಲ್ಲಾ ತಿಳಿದ ಅಂಬಮ್ಮನಿಗೂ ಅಚ್ಚರಿಯಾಗಿತ್ತು. ಅದಕ್ಕೆ ಕಾರಣವೇನು..?? ಶ್ರೀಮಂತೆಯಾದ ಭೂಮಾದೇವಿಯ ದಯೆಯಿಂದ ನೀಲಾಳ ಬದುಕು ಬದಲಾಯಿತೇ..?? ಅಥವಾ ಆಕೆ ಈಗಿನಂತೆಯೇ ಟೂರಿಸ್ಟ್ ಗೈಡ್ ಆಗಿಯೇ ಉಳಿದಳೇ..??


ನಾಗರಾಜು ಹಾಗೂ ಪಾಲ್ ಇಬ್ಬರೂ ಭೂಮಾಗೆ ಹೇಗೆ ಪರಿಚಯ..?? ಹಡಗಿನಲ್ಲಿ ನಡೆಯುವ ವ್ಯಾಪಾರ, ಒಪ್ಪಂದಗಳು ಹಾಗೂ ಅವರ ಸ್ಥಿತಿಗಳು ಹೇಗಿದ್ದವು..?? ವಿನ್ನಿಯ ಪ್ರಭಾವದಿಂದ ಹಡಗಿನಲ್ಲಿ ಪ್ರಭಾವಿಯಾಗಿದ್ದ ನೀಲ ಹಾಗೂ ವಿನ್ನಿಯ ಪರಿಚಯ ಹೇಗಾಗಿತ್ತು..?? ಅಪರಿಚಿತರಾಗಿದ್ದ ಅವರು ಅಕ್ಕ-ತಮ್ಮನಂತೆ ಬೆಸೆದುಕೊಂಡದ್ದು ಹೇಗೆ..?? ಹಡಗು ಸುರಕ್ಷಿತವಾಗಿ ತೀರ ತಲುಪಿತೇ..??


ಕಾದಂಬರಿಯ ಮೊದಮೊದಲಲ್ಲಿ ಹಡಗಿನ ಹಾಗೂ ಅವಘಡದ ಕುರಿತು ಓದುವಾಗ ಟೈಟಾನಿಕ್ ನೆನಪಾಗಿತ್ತು. ನೀಲ ಕೂಡ ಟೈಟಾನಿಕ್ ನ ಲೈಫ್ ಬೋಟುಗಳ ಹಾಗೂ ತಮ್ಮ ಹಡಗಿನ ಲೈಫ್ ಬೋಟ್ ಗಳ ಲೆಕ್ಕಾಚಾರ ಹಾಕುತ್ತಿದ್ದಳು. ಈ ಕಾದಂಬರಿ ಓದುವಾಗ ಮೊದಲಿನಿಂದಲೂ ಟೈಟಾನಿಕ್ ರೀತಿಯ ಸನ್ನಿವೇಶವೆನಾದರೂ ಇರಬಹುದಾ ಎಂಬ ಕುತೂಹಲ ಹುಟ್ಟಿಸಿತ್ತು. 


ಒಂದು ರೀತಿ ಉಸಿರು ಬಿಗಿ ಹಿಡಿದು ಮುಂದೇನಾಗುತ್ತದೆ ಎಂಬಂತೆ ಕಾಯುತ್ತಾ.. ಓದಿಸಿಕೊಂಡು ಹೋಗುವಂತಹಾ ನಿರೂಪಣೆ. ಸುನಾಮಿ, ಸಮುದ್ರಯಾನ, ಹಡಗು, ಪ್ರಯಾಣಿಕರ ಮನಸ್ಥಿತಿಗಳು, ಭೂಮಿಯ ಮೇಲಿನ ಪರಿಸ್ಥಿತಿ, ವಿದೇಶಿಯರ ಹಾಗೂ ವಿದೇಶೀ ಸ್ಥಳಗಳ ಕುರಿತಾದ ಪರಿಚಯ ಹಾಗೂ ವಿವರಣೆ,ಆಯಾ ಭಾಷೆಗಳ ಹಾಡುಗಳ ಪ್ರಸ್ತಾಪ. ಹೀಗೆ ಎಲ್ಲದರ ಕುರಿತು ಹೆಣೆದಿರುವ ಕುತೂಹಲ ಹುಟ್ಟಿಸಿ ಓದಿಸಿಕೊಂಡು ಹೋಗುವಂತಹಾ ಒಂದೊಳ್ಳೆ ಕಾದಂಬರಿ.


~ವಿಭಾ ವಿಶ್ವನಾಥ್