ಭಾನುವಾರ, ಜನವರಿ 13, 2019

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದುತ್ತಾ..

ಭಯ ಜೀವನದಲ್ಲಿ ಮುಖ್ಯವಾದ ಒಂದು ಭಾವನೆಯೇ. ಆದರೆ ಅದರ ಪ್ರಮಾಣ ಎಷ್ಟಿರಬೇಕು ಎಂಬುದು ಸಹಾ ಅಷ್ಟೇ ಮುಖ್ಯ. ಒಂದರೆಕ್ಷಣ ಅನ್ನಿಸುವುದೂ ಉಂಟು ಭಯವೇ ಇಲ್ಲದಿದ್ದರೆ..!? 

ಹಿರಿಯರ ಭಯವಿಲ್ಲದಿದ್ದರೆ ಗೌರವ ಕೊಡಬೇಕೆನ್ನುವ ಪಾಠ ತಪ್ಪಿಹೋಗುತ್ತಿತ್ತು. ಗುರುಗಳ, ತಾಯಿ-ತಂದೆಯರ ಭಯವಿರದಿದ್ದರೆ ಒಳ್ಳೆಯ ಸಂಸ್ಕಾರ ಕಲಿಯುವುದು ತಪ್ಪಿಹೋಗುತ್ತಿತ್ತು. ಪರೀಕ್ಷೆಯ ಭಯವಿಲ್ಲದಿದ್ದರೆ ಓದುವ, ಅಭ್ಯಾಸ ಮಾಡುವುದೇ ತಪ್ಪಿ ಹೋಗುತ್ತಿತ್ತು, ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಾಗಿ ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ. ದೇವರ ಮತ್ತು ಅವನು ನೀಡುವ ಶಿಕ್ಷೆಗಳ ಕುರಿತ ಭಯವಿಲ್ಲದಿದ್ದರೆ ಒಳ್ಳೆಯ ನಡತೆಗಳೇ ಕಡಿಮೆಯಾಗುತ್ತಿದ್ದವೇನೋ ಆದರೆ ಭಯ ಈ ರೀತಿಯಲ್ಲಿ ಇರುವುದು ಒಳ್ಳೆಯದು ಆದರೆ ಕೆಲವು ಅವ್ಯಕ್ತ ಭಯಗಳೂ ಇವೆ ಹೇಗೆಂದರೆ ಅವುಗಳು ಬದುಕಿನಲ್ಲಿ ಭವಿಷ್ಯಕ್ಕೇ ಮಾರಕವಾಗಿಬಿಡುತ್ತವೆ. ಆದರಿಂದ ಇಂಗ್ಲೀಷ್ ನಲ್ಲಿರುವ ಒಂದು ಮಾತು "ಲೈಫ್ ಬಿಗಿನ್ಸ್ ವ್ಹೇರ್ ಫಿಯರ್ ಎಂಡ್ಸ್" ಎಂಬ ಮಾತನ್ನು ನಂಬಲಾರದೇ ನಂಬುತ್ತೇನೆ.

ಆದರೆ ಕೆಲವೊಮ್ಮೆ ಪೋಷಕರೇ ಮಕ್ಕಳ ಧೈರ್ಯವನ್ನು ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದಿಬಿಡುತ್ತಾರೆ.

"ಆಟ ಆದುವಾಗ ಹುಷಾರು, ಬಿದ್ದು ಬಿಟ್ಟೀಯಾ" ಎನ್ನುತ್ತಾರೆ, ಬೀಳದೆ, ಏಳದೆ ಆಟ ಆಡುವುದುಂಟೇ..? ತಾಯಿಯ ಮಮತೆಯ ಮನಸ್ಸಿನಲ್ಲಿ ಅಮ್ಮನ ಪ್ರೀತಿ ತುಂಬಿಕೊಂಡೇ ಈ ಮಾತನ್ನು ಆಡಿಸಿರುತ್ತದೆ ಆದರೆ ಹುಷಾರು ಎನ್ನುವ ಆ ಪದ ಮಕ್ಕಳ ಮನದ ಮೂಲೆಯಲ್ಲಿ ಅಲ್ಲೆಲ್ಲೋ ಅವಿತು ಕುಳಿತು ಮತ್ತೆಲ್ಲೋ ಪರಿಣಾಮ ಬೀರಬಹುದು.

"ಅಮ್ಮಾ ಪರೀಕ್ಷೆಯಲ್ಲಿ ನನ್ನ ಪಕ್ಕದಲ್ಲಿದ್ದವನು ಕಾಪಿ ಚೀಟಿ ನೋಡಿಕೊಂಡು ಬರೆಯುತ್ತಿದ್ದ ಅದಕ್ಕೆ ನಾನು ಮಿಸ್ ಗೆ ಹೇಳಿದಕ್ಕೆ ಅವನನ್ನು ಹೊಡದು ನನ್ನ ಧೈರ್ಯವನ್ನು ಹೊಗಳಿದರು ಗೊತ್ತಾ?" ಎಂದು ಮನೆಯಲ್ಲಿ ಬಂದು ಹೇಳಿದ ಮರುಕ್ಷಣವೇ ಅವನ ಧೈರ್ಯದ ಬಲೂನು ಠುಸ್ ಎಂದು ಹೊಡೆದಿರುತ್ತದೆ ಕಾರಣ ಇಷ್ಟೇ.. "ಯಾಕೋ ಹಾಗೆ ಮಾಡಿದೆ? ಅವನು ಸೇಡು ಇಟ್ಟುಕೊಂಡು ನಾಳೆ ನಿನಗೆ ಏನಾದರೂ ಮಾಡಿದರೆ..? ನಿನಗೆ ಯಾಕೆ ಬೇಕಿತ್ತು ಊರಿನವರೆಲ್ಲರ ಉಸಾಬರಿ..? ಯಾರಾದರೂ ಏನಾದರೂ ಮಾಡಿಕೊಳ್ಳಲಿ ನಿನಗೇನು..? ಇನ್ನೊಂದು ಸಲ ಹಾಗೆಲ್ಲಾ ಮಾಡೋದಕ್ಕೆ ಹೋಗಬೇಡ". ಅದರಲ್ಲೂ ಹೆಣ್ಣು ಮಕ್ಕಳು ಏನಾದರೂ ಹೇಳಿದರು ಅಂದರೆ ಅವರು ಮಾಡಿ ಬಂದದ್ದು ದೊಡ್ಡ ತಪ್ಪೇನೋ ಎಂಬಂತೆ ಬಿಂಬಿಸಲಾಗಿತ್ತಿರುತ್ತದೆ. ಇದರ ಪರಿಣಾಮವೇ ಇಂದಿನ ದಿನಗಳಲ್ಲಿ ನಾವು ನಮ್ಮ ಮನೆಯಲ್ಲಿ ಏನಾದರೂ ಸಂಭವಿಸದೆ ಇದ್ದರೆ ಇತರರ ಸಮಸ್ಯೆಗಳಿಗೆ ಪ್ರತಿಕ್ರಿಯಿಸದೇ ಇರುವುದು.. ಅರ್ಥಾತ್ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಆಕ್ಸಿಡೆಂಟ್ ಇವೆಲ್ಲವುಗಳಿಗೂ ಮೂಕ ಪ್ರೇಕ್ಷಕರಾಗಿರುವುದು.

ಇದು ಮನೆಯಲ್ಲಿ ಸಂಭವಿಸುವ ಒಂದೆರಡು ಅವ್ಯಕ್ತ ಭಯಗಳಿಂದ ಉಂಟಾಗುವ ಪರಿಣಾಮವಾದರೆ ಶಾಲೆಗಳ, ಕಾಲೇಜುಗಳ ಕಥೆ ಕೇಳಿ..

ಅಂಕಗಳ ವಿಚಾರದಲ್ಲಿ ಪಕ್ಷಪಾತ ಮಾಡುವ ಶಿಕ್ಷಕರ ವಿಷಯವನ್ನು ಖಂಡಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಶಿಕ್ಷಕರ ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಒಂದಲ್ಲಾ ಒಂದು ರೀತಿಯಲ್ಲಿ ಶಿಕ್ಷೆ ಆಗಿರುತ್ತದೆ. ಮನೆಯಲ್ಲಿ ಬಂದು ಹೇಳಿದರೆ ನಮ್ಮ ಧೈರ್ಯದ ವರ್ತನೆಯೇ ಇದಕ್ಕೆಲ್ಲಾ ಕಾರಣ ಎಂಬಂತೆ ಬಿಂಬಿತವಾಗುತ್ತದೆ. ಸರಿ, ಮೇಲಿನ ಮಟ್ಟದ ಶಿಕ್ಷಕರೊಂದಿಗೆ ನಾನೇ ಮಾತನಾಡುತ್ತೇನೆ ಎಂದರೂ ಇದಕ್ಕೆಲ್ಲಾ ತಡೆಗೋಡೆ.

ಅವ್ಯಕ್ತ ಭಯವನ್ನು ನಮ್ಮಲ್ಲಿ ತುಂಬುವ ಕೆಲಸ ಎಲ್ಲೆಡೆಯಿಂದಲೂ ಸಾಗುತ್ತಲೇ ಇರುತ್ತದೆ. ಈ ರೀತಿಯ ಭಯದ ಮೂಸೆಯಲ್ಲಿ ನಮ್ಮನ್ನು ಅದ್ದದ್ದಿದ್ದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಲು ಅಷ್ಟು ವರ್ಷ ಬೇಕಾಗುತ್ತಿರಲಿಲ್ಲ. ಅಲ್ಲದೇ ಗರ್ಭದಲ್ಲಿರುವಾಗ ಮಗುವಿಗೆ ಧೈರ್ಯ ತುಂಬಲು ಗರ್ಭಿಣಿಯರಿಗೆ ಅಭಿಮನ್ಯುವಿನ ಪೌರುಷದ ಕಥೆ ಹೇಳುತ್ತಾರೆಯೇ ಹೊರತು ಉತ್ತರಕುಮಾರ ಹೆದರಿ ಯುದ್ದರಂಗದಿಂದ ಓಡಿದ ಕಥೆಯನ್ನು ಹೇಳುವುದಿಲ್ಲ. ಆದರೆ ಬೆಳೆಯುತ್ತಾ ಎಲ್ಲರೂ ಅವ್ಯಕ್ತ ಭಯವನ್ನು ಬಿತ್ತಿ ಬೆಳೆಸಿಬಿಡುತ್ತಾರೆ. "ಭಗತ್ ಸಿಂಗ್ ಅಂತಹವರು ಇರಬೇಕು ಆದರೆ ನಮ್ಮ ಮನೆಯಲ್ಲಲ್ಲ ಪಕ್ಕದ ಮನೆಯಲ್ಲಿ" ಎನ್ನುವ ಮನಸ್ಥಿತಿಯನ್ನು ತಲುಪಿರುವುದು ವಿಪರ್ಯಾಸ.

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದಿದರೂ ಆ ಭಾವನೆಯನ್ನು ಹೀರದೆ ಬದುಕಬಹುದು. ಅಂಟಿಯೂ ಅಂಟದಂತಹಾ ಭಯವನ್ನು ಮನಸ್ಸಿನಲ್ಲಿಟ್ಟುಕೊಂಡು ಬದುಕುವ, ಇದರಿಂದ ಬೇರೆಯವರೂ ಹೀಗೆ ಬದಲಾಗಬಹುದೇನೋ..
ಬರಹದಿಂದ ಬದುಕು ಬದಲಾಗುತ್ತದಾ? ಗೊತ್ತಿಲ್ಲ..??! ಆದರೆ ಪ್ರೇರಣೆಯಾಗಬಹುದು ಎಂಬ ನಂಬುಗೆಯಂತೂ ಇದೆ. ಅದೇ ಧೈರ್ಯದಿಂದ ಬರೆದಿದ್ದೇನೆ. ನೀನೇನು ಬರೀತೀಯಾ? ನಿಜವಾಗಲೂ ಇದನ್ನು ಓದ್ತಾರಾ? ಎಂಬೆಲ್ಲಾ ಅವ್ಯಕ್ತ ಭಯ ಬಿತ್ತಲು ಹವಣಿಸಿದ ಪ್ರಶ್ನೆಗಳನ್ನು ಒತ್ತರಿಸಿ ಬರೆದಿದ್ದೇನೆ.
ಓದಿ ಸಾಧ್ಯವಾದರೆ ಮರುತ್ತರ ನೀಡಿ ಪ್ರತಿಕ್ರಿಯಿಸಿ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ