ಭಾನುವಾರ, ಜೂನ್ 28, 2020

ಗಜಲ್-೦3

ಕತ್ತಲೆಯ ಕೂಪದಲ್ಲಿದ್ದವಳಿಗೆ ಬೆಳಕು ತೋರಿದ್ದು ನೀ
ಭರವಸೆಯ ನಂದಾದೀಪವನು ಹಚ್ಚಿಟ್ಟದ್ದು ನೀ

ನಾಳೆಯ ಕುರಿತು ಆಸ್ಥೆಯೇ ಇರದವಳಿಗೆ
ಪ್ರಪಂಚದ ವಾಸ್ತವತೆಯ ಅರಿವು ಮೂಡಿಸಿದ್ದು ನೀ

ಅಜ್ಞಾನದ ಅಂಧಕಾರದಲಿ ಮುಳುಗಿ ಹೋಗಿದ್ದವಳಿಗೆ
ಜ್ಞಾನ ಜ್ಯೋತಿಯ ಹೊತ್ತಿಸಿ ಬದುಕ ಬೆಳಗಿಸಿದ್ದು ನೀ

ಜ್ಞಾನಕ್ಕಾಗಿ ಪರಿತಪಿಸುತ್ತಾ ಎಲ್ಲೆಲ್ಲೋ ಹುಡುಕುವಾಗ
ಅಕ್ಷರ ಭಿಕ್ಷೆಯ ಹಾಕಿ ಭರವಸೆ ಬೆಳಗಿಸಿ ಚೈತನ್ಯ ನೀಡಿದ್ದು ನೀ

ಹಣದ ಮೋಹಕೆ, ನಿನ್ನನ್ನೂ ಜ್ಞಾನವನ್ನು ಮಾರಿಕೊಳ್ಳದೆ
ದಿಟ್ಟತನದಿ ನಮ್ಮ ಪೀಳಿಗೆ ಮಾರಾಟಕ್ಕಿಲ್ಲ ಎಂದದ್ದು ನೀ

ಸುಳ್ಳು-ವಂಚನೆ ಅಪ್ರಾಮಾಣಿಕತೆಗೆ ತಲೆಬಾಗದೆ
ಪ್ರಾಮಾಣಿಕತೆಯಿಂದಿರು ಎಂದು ಸ್ಥೈರ್ಯ ತುಂಬಿದ್ದು ನೀ

ವಿಭಾಳ ಪ್ರತಿ ಹೆಜ್ಜೆಗೂ ಸಾಕ್ಷಿಯಾಗಿ ನಿಂತು
ಇಂದಿಗೂ ಪ್ರತಿಯೊಂದನೂ ಪ್ರೋತ್ಸಾಹಿಸುತ್ತಿರುವುದು ನೀ

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ