ಭಾನುವಾರ, ಡಿಸೆಂಬರ್ 23, 2018

ಕಥೆಯುಳ್ಳ ಹಾಡಿನ ಕಥೆ


ತಂಬೂರಿ ಮೀಟಿಕೊಂಡು ಹಾಡುವವರನ್ನು ಕಂಡು, ಆ ಹಾಡುಗಳನ್ನು ಕೇಳಿ ಎಷ್ಟೋ ವರ್ಷಗಳೇ ಕಳೆದು ಹೋಗಿದ್ದವು. ನಾನು ಚಿಕ್ಕಂದಿನಲ್ಲಿದ್ದಾಗ ಹಳ್ಳಿಹಳ್ಳಿಗಳ ಮೇಲೆ ಹೋಗುತ್ತಿದ್ದವರು ಹೇಳುತ್ತಿದ್ದ ಹಾಡುಗಳನ್ನು ಕೇಳುತ್ತಿದ್ದದ್ದು ರೂಡಿ, ಹೆಚ್ಚಿನಂಶ ಅವರುಗಳು ಬರುತ್ತಿದ್ದದ್ದು ಬೆಳಗಿನ ವೇಳೆ ತಂಬೂರಿ ಮೀಟುತ್ತಾ ಹಾಡು ಹಾಡಿ ತಿಂಡಿ ತಿಂದು ಅಕ್ಕಿಯನ್ನೋ ಕಾಯನ್ನೋ ಪಡೆದುಕೊಂಡು ಹೊರಡುತ್ತಿದ್ದರು, ಅವರ ಪ್ರತಿಭೆಗೆ ಗೌರವಾರ್ಥವಾಗಿ ಹಳ್ಳಿಗಳಲ್ಲಿ ಅಕ್ಕಿ ಅಥವಾ ತೆಂಗಿನಕಾಯಿಯನ್ನೋ ಕೊಟ್ಟು ಸ್ವಲ್ಪ ಸಮಯ ಆ ಹಾಡಿನ ಕುರಿತೋ ಅಥವಾ ಹಳ್ಳಿಗಳ ಕುರಿತೋ ಮಾತನಾಡಿ ಕಳುಹಿಸಿ ಕೊಡುತ್ತಿದ್ದರು ನಂತರದ ದಿನಗಳಲ್ಲಿ ಬದಲಾದ ತಂತ್ರಜ್ಞಾನ ಯುಗದಲ್ಲಿ ಮರೆಯಾಗಿಯೇ ಬಿಟ್ಟಿದ್ದರು. ತೀರಾ ಚಿಕ್ಕ ವಯಸ್ಸಿನಲ್ಲಿ ಆ ಹಾಡುಗಳು ಅರ್ಥವಾಗುತ್ತಿರಲಿಲ್ಲ ನಂತರದ ದಿನಗಳಲ್ಲಿ ಕಥೆಗಳನ್ನು ಹೇಳುತ್ತಿದ್ದ ಆ ಹಾಡುಗಳು ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿತ್ತು, ಆನಂತರ ಕೇಳಬೇಕೆಂದರೂ ಆ ಅವಕಾಶ ದೊರೆತಿರಲಿಲ್ಲ. ಅಚಾನಕ್ಕಾಗಿ ಈ ಅವಕಾಶ ದೊರೆತದ್ದು ಅದೃಷ್ಟ ಅಂದರೂ ತಪ್ಪಾಗಲಾರದು.

ಅಂದ ಹಾಗೆ ಇದು ಕೇಳಿದ್ದು ಹಳ್ಳಿಯಲ್ಲಲ್ಲ. ನಾನವರನ್ನು ನೋಡಲೂ ಇಲ್ಲ. ಬೆಳಿಗ್ಗೆ ನಾನು ನನ್ನ ಚಿಕ್ಕಿ(ಚಿಕ್ಕಮ್ಮ) ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಾ ಇರುವಾಗ ಯಾರೋ ಹಾಡು ಹೇಳುತ್ತಿದ್ದದ್ದು ಕೇಳಿಸ್ತು. ಆಗ ಕೇಳಿದ್ದಕ್ಕೆ ಒಬ್ಬರು ಅಜ್ಜಿ ಇಲ್ಲೇ  ಹಾಡ್ತಾ ಇದ್ದಾರೆ ಅಂದ್ರು. ಜೊತೆಗೆ ನನ್ನ ಹುಚ್ಚು ಗೊತ್ತಿದ್ದ ಅವರೂ ತಾಳು ಇಲ್ಲೇ ಕರೀತೀನಿ ಅಂದ್ರು, ನಂಗಂತೂ ತುಂಬಾ ಖುಷಿ ಆಯ್ತು. ಸರಿ, ಲೌಡ್ ಸ್ಪೀಕರ್ ಆನ್ ಮಾಡಿ ಹಾಗೇ ರೆಕಾರ್ಡ್ ಮಾಡಿಕೊಳ್ತೀನಿ ಅಂದೆ, ಸರಿ ಅಜ್ಜಿನೂ ಬಂದ್ರು ವಾಡಿಕೆಯಂತೆ ಉಭಯ ಕುಶಲೋಪರಿ ಕೂಡಾ ಆಯ್ತು, ನಂತರ ಒಂದು ಜಾನಪದ ಹಾಡನ್ನು ಶುರು ಮಾಡಿದರು.

ಶಿವ ಮತ್ತು ಗೌರಿ(ಪಾರ್ವತಿ)ಯರ ಕಲ್ಯಾಣದ ಕಥೆಯನ್ನು ಕಥಾವಸ್ತುವನ್ನಾಗಿ ಉಳ್ಳಂತಹಾ ಹಾಡು. ದೇವರು ಶಾಪಗ್ರಸ್ಥವಾಗೇ ಭೂಮಿಯಲ್ಲಿ ಹುಟ್ಟಬೇಕಾಗಿಲ್ಲ ಎಂಬುದು ಯಾಕೋ ಅಪ್ರಯತ್ನವಾಗೇ ಮನಸ್ಸಿಗೆ ಹೊಳೆಯಿತು. ನಾವು ಗೌರಿ ಹಬ್ಬವನ್ನು ಆಚರಿಸುವ ಹಿಂದಿನ ಪರಿಕಲ್ಪನೆಯೂ ಬಹುಶಃ ಈ ಪರಿಕಲ್ಪನೆಯಿಂದಲೇ ಹುಟ್ಟಿರಬಹುದೇನೋ.. ಭೂಲೋಕದ ತನ್ನ ತಾಯಿ(ತವರು) ಮನೆಗೆ ಬರುವಂತಹಾ ಸಂಧರ್ಭ..

ಶಿವ ಮತ್ತು ಪಾರ್ವತಿ ಇಬ್ಬರೂ ಸಹಾ ಭೂಲೋಕದಲ್ಲಿ ಹುಟ್ಟಿದ್ದಾರೆ ಆದರೆ ಪರಸ್ಪರರ ಪರಿಚಯವಿಲ್ಲ. ಇತ್ತ ಗೌರಿ ಹನ್ನೆರಡು ವರ್ಷಕ್ಕೆ ಮೈನೆರೆಯುತ್ತಾಳೆ, ಆಗಿನ ಸಂಪ್ರದಾಯದಂತೆ ಆಕೆಗೆ ವಿವಾಹಯೋಗ್ಯ ವಯಸ್ಸು.. ಹಾಗಾಗಿ ಮನೆಯಲ್ಲಿ ವರನನ್ನು ಹುಡುಕಲು ಶುರು ಮಾಡುತ್ತಾರೆ, ಆದರೆ ಗೌರಿಗೆ ಕೇಳುತ್ತಾರೆ ಈ ವರ ಆಗಬಹುದೇ ಎಂಬ ಪ್ರಶ್ನೆಯನ್ನು ಅವಳ ಒಪ್ಪಿಗೆಗಾಗಿ ಕೇಳುತ್ತಾರೆ, ಇದು ಆಗಿನ ಕಾಲದಲ್ಲಿದ್ದ ಸ್ವಯಂವರ ಪದ್ದತಿಯನ್ನು ನೆನಪಿಸುತ್ತದೆ, ಜೊತೆಗೆ ಸ್ತ್ರೀಯರಿಗೆ ಕೊಡುತ್ತಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೆನಪು ಮಾಡಿಕೊಡುತ್ತದೆ. ಜೊತೆಗೆ ಯಾರನ್ನೂ ಜರಿಯಬೇಡವೆಂಬ ಕಿವಿಮಾತು ಕೂಡಾ ಕೇಳಿಬರುತ್ತದೆ, ಅವರವರಿಗೆ ಅವರದ್ದೇ ಆದಂತಹಾ ವ್ಯಕ್ತಿತ್ವಗಳಿರುತ್ತವೆ, ಅವರದ್ದೇ ಆದ ಗೌರವವಿರುತ್ತದೆ ಅದು ನಮಗೆ ಸರಿ ಬರದಿದ್ದರೆ ಅದು ನಮ್ಮ ಆಲೋಚನೆಗೆ ಸಂಬಂಧಪಟ್ಟಿರುವುದಷ್ಟೇ.. ಇದು ಇಂದಿನ ದಿನಗಳಲ್ಲೂ ಎಲ್ಲರಿಗೂ ಅನ್ವಯಿಸುವಂತಹಾ ಮಾತು ಎಂದರೂ ತಪ್ಪಾಗಲಾರದು. ಈ ಎಲ್ಲಾ ಮಾತುಗಳೂ ನಡೆದು ಗೌರಿ ತಿಳಿಸಿದಂತಹಾ ವರ ಶಿವನೇ ಆಗಿ ಅವರಿಬ್ಬರ ಕಲ್ಯಾಣವಾಗುತ್ತದೆ. ರಸವತ್ತಾದ ಸಂಭಾಷಣೆಗಳಿರುವ ಈ ಹಾಡು ನಿಜಕ್ಕೂ ಆ ಪಾತ್ರಗಳನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತದೆ.

ನಾನು ಈ ಹಾಡಿನಲ್ಲಿ ರೆಕಾರ್ಡ್ ಮಾಡಿ ಹಾಕಿರುವುದು ಕೆಲವೇ ನಿಮಿಷಗಳು. ಬಹುಷಃ ನಮ್ಮ ಮುಂದಿನ ಜನರೇಷನ್ಗಳಿಗೆ ಹೋಲಿಸಿಕೊಂಡರೆ ನಾವೇ ಲಕ್ಕಿ ಎನ್ನಿಸುತ್ತದೆ, ನಮ್ಮ ಮುಂದಿನ ಜನರೇಷನ್ಗಳು ಇದರ ಕುರಿತು ತಿಳಿದುಕೊಂಡರೂ ನೋಡುವುದು ಅಪರೂಪವೇ ಆಗಬಹುದು. ಅಷ್ಟಕ್ಕೂ ಆ ಅಜ್ಜಿಗೆ ಓದು ಬರಹ ತಿಳಿದಿಲ್ಲ, ನೆನಪಿನಶಕ್ತಿಯಿಂದಲೇ ಇಷ್ಟು ಚೆಂದವಾಗಿ ಹಾಡಬಹುದಾದರೆ ಓದು ಬರಹ ತಿಳಿದಿದ್ದರೆ..? ಅವರ ಮುಗ್ದತೆ ಕೂಡಾ ಚೆಂದವೇ.. ಅವರು ಹಾಡಿದ ನಂತರ ಕಾಣದ ಕೇಳುಗಳಾದ ನನ್ನ ಹತ್ತಿರ ಹಾಡು ಹೇಗಿತ್ತು? ಇಷ್ಟವಾಯಿತಾ? ಎಂದು ಕೇಳಿದರು. ರೆಕಾರ್ಡ್ ಮಾಡಿದ ಧ್ವನಿಯನ್ನು ಅವರಿಗೆ ಕೇಳುವ ಆಸೆ ಕೂಡಾ ಇತ್ತು. ಕೇಳಿದರು ಕೂಡಾ.. ಟೆಕ್ನಾಲಜಿ ಕೆಲವೊಮ್ಮೆ ವರ ಕೂಡಾ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವೆ.

ಅವರು ಹಾಡಿದ ಆ ಹಾಡು, ನಾನು ರೆಕಾರ್ಡ್ ಮಾಡಿದಷ್ಟು ನಿಮ್ಮ ಮುಂದಿದೆ, ಕೇಳಿ.. ಇದೆಲ್ಲಾ ಹುಚ್ಚಾಟ ಅನ್ನಿಸಿದರೆ ಒಮ್ಮೆ ನಕ್ಕು ಸುಮ್ಮನಾಗಿ ಅಷ್ಟೇ..

~ವಿಭಾ ವಿಶ್ವನಾಥ್

ಗುರುವಾರ, ಡಿಸೆಂಬರ್ 20, 2018

ಆ ಪಾದಗಳು

ನಸುಗೆಂಪಿನ ಗುಲಾಬಿ ಪಕಳೆಗಳಂತಹಾ
ಪುಟ್ಟ ಪುಟ್ಟ ಪಾದಗಳನ್ನು ಕಂಡಾಗ
ನನ್ನ ದೃಷ್ಟಿಯೇ ತಗುಲಬಹುದೆಂಬ ಭಯದಿ
ನನ್ನ ಏಳುಸುತ್ತಿನ ಮಲ್ಲಿಗೆ ತೂಕದ
ರಾಜಕುಮಾರಿಯ ಅಂಗಾಲಿಗೆ ದೃಷ್ಟಿಬೊಟ್ಟಿಡುತ್ತೇನೆ
ಗರ್ಭದಲ್ಲಿದ್ದಾಗ ಒದ್ದ ಪಾದಗಳ
ಹಣೆಗೊತ್ತಿಕೊಂಡು ಮುದ್ದಾಡುತ್ತೇನೆ ಈಗ
ಫಕ್ಕನೆ, ಅಮ್ಮ ನೆನಪಾಗುತ್ತಾಳೆ..
ಅವಳೂ ಹೀಗೇ ಪುಳಕಿತಳಾಗಿದ್ದಳೇ..?
ಯೋಚಿಸಿದರೇ ಮೈ ನವಿರೇಳುತ್ತದೆ
ಅಮ್ಮ ಬಂದಾಕ್ಷಣ ಕೇಳಬೇಕು..!
ಎಂದುಕೊಂಡೇ ರಾಜಕುಮಾರಿಯ ಅಂಗಾಲಿನ
ಮೃದುವಿಗೆ ಮೈ ಮರೆತು ಬಿಡುತ್ತೇನೆ..
ರಾತ್ರಿ ಊಟವೆಲ್ಲಾ ಮುಗಿದು
ಅರೆಕ್ಷಣ ಕುಳಿತ ಅಮ್ಮನ ದಿಟ್ಟಿಸುತ್ತೇನೆ..
ಚಳಿಗೆ ಬಿರುಕು ಬಿಟ್ಟ ಪಾದಗಳಿಗೆ
ವ್ಯಾಸಲೀನ್ ಹಚ್ಚುವವಳ ಕಂಡು
ನಿಟ್ಟುಸಿರು ಬಿಟ್ಟು ಸುಮ್ಮನಾಗುತ್ತೇನೆ..
ನನ್ನ ಪುಟ್ಟ ರಾಜಕುಮಾರಿಯೂ ಸಹಾ
ಮುಂದೊಮ್ಮೆ ಹೀಗೇ ದಿಟ್ಟಿಸಬಹುದೇ..?
ಎಂದು ಯೋಚಿಸುತ್ತಾ ಯೋಚಿಸುತ್ತಾ
ಪುಟಾಣಿಯ ಪಾದಗಳಿಗೆ ಹೊದಿಕೆ ಹೊದಿಸುತ್ತಾ
ಅಮ್ಮನಾದ ಸಾರ್ಥಕತೆಯಲ್ಲೇ ಮಿಂದೇಳುತ್ತಾ
ಅಮ್ಮನನ್ನೇ ಮರೆತ ನಾನೂ ಸಹಾ
ಅಮ್ಮನಂತಾ ಅಮ್ಮನೇ ಆಗಿ ಬಿಡುತ್ತೇನೆ..

~ವಿಭಾ ವಿಶ್ವನಾಥ್ 

ಶುಕ್ರವಾರ, ಡಿಸೆಂಬರ್ 14, 2018

ಹಸನು

ಯಶಸ್ ತನಗೆ ಬೆಂಗಳೂರಲ್ಲಿ ಸಿಕ್ಕಿದ್ದ ಉತ್ತಮ ಸಂಬಳದ ಕೆಲಸವನ್ನು ಬಿಟ್ಟು ಮತ್ತೆ ತನ್ನ ಹಳ್ಳಿಗೆ ಬಂದಾಗ ಸುತ್ತಮುತ್ತಲಿನವರಿಂದ ಸಿಕ್ಕಿದ್ದು ಚುಚ್ಚು ಮಾತು, ವ್ಯಂಗ್ಯದ ನೋಟಗಳೇ. ಆದರೆ ಅಂದಿನ ಪರಿಸ್ಥಿತಿಗೆ ಹೆದೆಗುಂದದೆ ತನ್ನ ನಿಲುವಿಗೇ ಅಂಟಿಕೊಂಡು ಇಂದು ಯಶಸ್ಸು ಸಾಧಿಸಿದ್ದ ಯಶಸ್.

ಅದೇಕೋ ಯಶಸ್ ಗೆ ಹುಟ್ಟಿ ಬೆಳೆದ ಪರಿಸರದ ಮೇಲೆ ಅಪಾರ ವ್ಯಾಮೋಹ. "ಎಷ್ಟೇ ಓದಿದ್ದರೂ, ಹಳ್ಳಿಯಲ್ಲಿದ್ದರೆ ಹೆಣ್ಣು ಕೊಡುವುದಿಲ್ಲ ಆದರೆ ಪಟ್ಟಣದಲ್ಲಿ ಸಣ್ಣ ಕೆಲಸದಲ್ಲಿದ್ದರೂ ಹೆಣ್ಣು ಕೊಡಲು ನಾ ಮುಂದು, ತಾ ಮುಂದು" ಎಂದು ಬರುವ ಕನ್ಯಾಪಿತೃಗಳ ಮನಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡ ಯಶಸ್ ನ ತಂದೆ-ತಾಯಿ ಅವನನ್ನು ಇಂಜಿನಿಯರಿಂಗ್ ಗೆ ಸೇರಿಸಿದರು. ಯಶಸ್ ಮನೆಯಿಂದಲೇ ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದುದರಿಂದ ಅವನಿಗೆ ಆಗ ಸಮಸ್ಯೆ ಎನ್ನಿಸಿರಲಿಲ್ಲ. ಅದೂ ಅಲ್ಲದೆ ಅವನಿಗೆ ಇಂಜಿನಿಯರಿಂಗ್ ಗಿಂತಲೂ ಹೊಲ-ಗದ್ದೆ, ತೋಟ, ತೊರೆಗಳ ಮೇಲೆಯೇ ಅವನಿಗೆ ಹೆಚ್ಚು ಪ್ರೀತಿ. ಹಾಗೆಂದು ಓದಿನಲ್ಲೇನೂ ಹಿಂದುಳಿಯಲಿಲ್ಲ ಅವನು.

ನಾಲ್ಕು ವರ್ಷದ ಇಂಜಿನಿಯರಿಂಗ್ ನ ನಂತರ ಕೆಲಸ ಸಿಕ್ಕಿದ್ದು ದೂರದ ಬೆಂಗಳೂರಿನಲ್ಲಿ. ಅದೂ ಅಲ್ಲದೆ ಅಲ್ಲಿನ ಯಾಂತ್ರಿಕ ಜೀವನ ಮೂರೇ ದಿನದಲ್ಲಿ ಬೇಸರ ತರಿಸಿತ್ತು. ಅಷ್ಟೇ ಅಲ್ಲದೆ ಅವನಿಗೆ ಆಶ್ಚರ್ಯ ತರಿಸಿದ್ದು ಅಲ್ಲಿನ ವಿರೋಧಾಭಾಸಗಳ ಸಂಗತಿ. ಹಳ್ಳಿಯಲ್ಲಿರುವವರು ಕೆಲಸಕ್ಕೆಂದು ದೂರದ ಪಟ್ಟಣಗಳತ್ತ ಮುಖ ಮಾಡಿದ್ದರೆ, ಅಲ್ಲಿರುವವರು ಕಲುಷಿತ ವಾತಾವರಣಕ್ಕೆ ಬೇಸತ್ತು ಹಳ್ಳಿಯ ಸ್ವಚ್ಚಂದವಾದ ಹಳ್ಳಿಯ ಪರಿಸರಕ್ಕೆ ಮುಖ ಮಾಡಿದ್ದರು. ಇದೆಲ್ಲವನ್ನು ಕಂಡು ತಾನೂ ಧೃಡ ನಿರ್ಧಾರ ಮಾಡಿ ಭೂ ತಾಯಿಯ ಸೇವೆ ಮಾಡಲು ಹಳ್ಳಿಗೆ ಮರಳಿದ್ದ.

ಇಷ್ಟಲ್ಲದೆ ಕೃಷಿ ಅಲ್ಲಿ ವ್ಯಾಪಾರೀಕರಣದ ಭಾಗವೇ ಆದಂತೆ ಭಾಸವಾಗುತ್ತಿತ್ತು. ಆರ್ಗಾನಿಕ್ ಫಾರ್ಮಿಂಗ್ ಇದಕ್ಕೊಂದು ಉದಾಹರಣೆ. ಆರ್ಗಾನಿಕ್ ಫಾರ್ಮಿಂಗ್ ನಲ್ಲಿ ಒಂದಿಷ್ಟು ಜಾಗವನ್ನು ಇಂತಿಷ್ಟು ಹಣ ಎಂದು ನೀಡಿ ಇಂತಿಷ್ಟು ದಿನಕ್ಕೆ ಎಂದು ಕೊಂಡುಕೊಂಡು ಅದರಲ್ಲಿ ನಮ್ಮಿಷ್ಟದ ತರಕಾರಿ, ಸೊಪ್ಪುಗಳನ್ನು ರಾಸಾಯನಿಕಗಳನ್ನು ಬಳಸದೆ ಬೆಳೆಯಬೇಕಿತ್ತು. ಈ ಪದ್ದತಿಯಿಂದ ಹೆಚ್ಚು ಖುಷಿ ಪಟ್ಟವರು ಮಕ್ಕಳು. ಮಕ್ಕಳು ಇದರಿಂದ ಪುಳಕಿತರಾಗಿ ಕೃಷಿಯತ್ತ ಒಲವು ತೋರುತ್ತಿದ್ದರು. ಕೃಷಿ ಹೊಸ ರೀತಿಯ ಪ್ರಯೋಗದಿಂದ ಮತ್ತೆ ಬೆಳಕಿಗೆ ಬರುತ್ತಿದ್ದುದು ಖುಷಿಯ ವಿಚಾರವಾದರೆ, ವ್ಯಾಪಾರೀಕರಣವಾಗುತ್ತಿರುವುದು ವಿಪರ್ಯಾಸ.

ಇಂತಹ ಸಂದರ್ಭದಲ್ಲಿ ಕವಿತಾ ಮಿಶ್ರ ಎಂಬ ಮಹಿಳೆಯ ಸಾಧನೆ ಯಶಸ್ ಅನ್ನು ಅಚ್ಚರಿಗೊಳಿಸಿತ್ತು. ಸೈಕಾಲಜಿ, ಕಂಪ್ಯೂಟರ್ ಸೈನ್ಸ್ ಓದಿದ್ದರೂ ಕೃಷಿಯ ಕಡೆ ಮುಖ ಮಾಡಿದ್ದ ಮಹಿಳೆ ಕವಿತಾ. ರಾಯಚೂರಿನಂತಹಾ ಬರಡು ಭೂಮಿಯಲ್ಲಿ ಬಂಗಾರದಂತಹಾ ಬೆಳೆ ತೆಗೆದವರು ಆಕೆ. ಆಕೆ ಬಳಸಿದ್ದ ಹನಿ ನೀರಾವರಿ ಮತ್ತು ಸಾವಯವ ಕೃಷಿ ಪದ್ದತಿ ಯಶಸ್ ನ ಮನಸೆಳೆಯಿತು. ಇದಿಷ್ಟೇ ಅಲ್ಲದೆ ಕಡಿಮೆ ಜಾಗದಲ್ಲಿ ಹೆಚ್ಚಿನ ಬೆಳೆ ಬೆಳೆಯಬಹುದಾದ ವರ್ಟಿಕಲ್ ಗಾರ್ಡನಿಂಗ್, ಅತಿ ಕಡಿಮೆ ನೀರು ಬಳಸಿ ಬೆಳೆಯುವ ಹೈಡ್ರೋಫೋನಿಕ್ ಕೃಷಿ ವಿಧಾನ ಇವುಗಳನ್ನು ಅರಿತು ಅಳವಡಿಸಿಕೊಂಡ ಯಶಸ್.

ಕಷ್ಟ ಪಟ್ಟವರಿಗೆ ಫಲ ಸಿಕ್ಕೇ ಸಿಗುತ್ತದೆ, ಆದರೆ ತುಸು ಕಾಯಬೇಕಾಗುತ್ತದೆ. ಯಶಸ್ ನ ವಿಷಯದಲ್ಲೂ ಹೀಗೇ ಆಯಿತು. ಮೊದಲೆರಡು ವರ್ಷ ಮಳೆಯ ಅಭಾವ, ಅತಿ ಮಳೆ ಬಂದು ಹಾಳು ಮಾಡಿದರೆ ನಂತರದಲ್ಲಿ ಕಾಡು ಪ್ರಾಣಿಗಳ ಕಾಟ, ಕಲಬೆರಕೆ ಗೊಬ್ಬರ, ಮಧ್ಯವರ್ತಿಗಳಿಂದ ಬೆಳೆಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸಬೇಕಾಯಿತು.

ನಂತರ ತಾನು ಕಲಿತ ಇಂಜಿನಿಯರಿಂಗ್ ಅನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಕೃಷಿ ಇಳುವರಿಯನ್ನು ಅತ್ಯುತ್ತಮಗೊಳಿಸಿದ, ಕಾಡು ಪ್ರಾಣಿಗಳ ಕಾಟದಿಂದ ಮುಕ್ತನಾದ. ಕಲಬೆರಕೆ ಗೊಬ್ಬರದ ಬದಲಿಗೆ ಸಗಣಿಯನ್ನು ಉಪಯೋಗಿಸಿ ತಯಾರಿಸಿದ ಸಾವಯವ ಗೊಬ್ಬರವನ್ನು ಬಳಸಿದ. ಮಳೆನೀರಿಗಾಗಿ ಇಂಗು ಗುಂಡಿಗಳನ್ನು ತೆಗೆಸಿದ. ಹೈನುಗಾರಿಕೆಯ ಜೊತೆ ಮೀನು ಸಾಕಾಣಿಕೆಯನ್ನೂ ಶುರು ಮಾಡಿದ. ಇದರ ಜೊತೆಗೆ ವಿವಿಧ ಹಣ್ಣಿನ ಮರಗಳು, ತೇಗ, ಗಂಧ, ಹೊನ್ನೆಯಂತಹ ಮರಗಳನ್ನು ನೆಟ್ಟ. ಇವುಗಳ ಜೊತೆಗೆ ತನ್ನೂರಿನಲ್ಲಿ ಸಿಗುವ ವಿಶಿಷ್ಟ ಹೂ ಮತ್ತು ಹಣ್ಣಿನ ಗಿಡಗಳನ್ನು ಬೋನ್ಸಾಯ್ ಪದ್ದತಿಗೆ ಅಳವಡಿಸಿದ.

ಈಗ ಯಶಸ್ ಜಿಲ್ಲೆಯ ಮಾದರಿ ರೈತ ಎನ್ನಿಸಿಕೊಂಡಿದ್ದಾನೆ. ಈ ಕುರಿತಂತೆ ತನ್ನ ಅಭಿಪ್ರಾಯ ಕೇಳಿದ ವರದಿಗಾರನಿಗೆ ಯಶಸ್ ಹೇಳಿದ್ದಿಷ್ಟು, "ಭೂಮಿಯಲ್ಲಿ ಉತ್ತಮವಾಗಿ ಬಿತ್ತನೆ ಮಾಡಿದ್ದರೂ, ಕಲುಷಿತ ವಾತಾವರಣವಿದ್ದರೆ ಬೆಳೆ ಸರಿಯಾಗಿ ಬಾರದು., ಹಾಗೆಯೇ ಭೂಮಿಯೇ ಕಲುಷಿತವಾದರೆ ಅಥವಾ ಬಿತ್ತನೆಯ ಬೀಜದ ಗುಣಮಟ್ಟ ಸರಿಯಾಗಿರದಿದ್ದರೆ, ವಾತಾವರಣ ಚೆನ್ನಾಗಿದ್ದರೂ ಫಲ ಸರಿಯಾಗಿ ಬಾರದು. ಜೀವನವೂ ಹಾಗೆಯೇ.. ನಾವು ಹದಗೊಳಿಸಿಕೊಂಡಂತೆ ಜೀವನ, ಹಸನುಗೊಳಿಸಿಕೊಂಡಂತೆ ಬದುಕು. ರೈತನ ಜಾಣ್ಮೆ,ಶ್ರಮ, ಭೂಮಿಯ ಫಲವತ್ತತೆ, ಉತ್ತಮ ವಾತಾವರಣ ಇಳುವರಿಯ ಮೇಲೆ ಪ್ರಭಾವ ಬೀರಿದಂತೆ.. ಒಂದು ಸರಿಯಾದ ನಿರ್ಧಾರ, ಸಹಕಾರ ತುಂಬಿದ ವಾತಾವರಣ, ಅಚಲ ನಂಬಿಕೆ, ಪರಿಶ್ರಮಗಳು ಬದುಕನ್ನು ಹಸನು ಮಾಡುತ್ತವೆ."

~ವಿಭಾ ವಿಶ್ವನಾಥ್

ಬುಧವಾರ, ಡಿಸೆಂಬರ್ 5, 2018

'ನಾನು' ಸತ್ತರೆ..

ಸುನಿಧಿಯ ಆಲೋಚನೆ ಹಿಂದಕ್ಕೋಡಿತ್ತು. ಅದರ ಹಿಂದಿನ ಪ್ರಶ್ನೆ ಇದ್ದದ್ದು.. "'ನಾನು' ಸತ್ತರೆ..?

ತಾನು ಬಂದದ್ದು ತುಂಬಿದ ಸಂಸಾರದ ಸೊಸೆಯಾಗಿಯೇ.. ಹಿಂದೆಂದೂ ಇಲ್ಲದ ಹೊಸ ರೀತಿಯ ಭಾವನೆಗಳು, ಈ ಕುಟುಂಬವನ್ನು ನೋಡಿದೊಡನೆ ಉಂಟಾಯಿತು. ಬಹುಶಃ ನನ್ನಮ್ಮ ನೋಡಿ ಮಾಡಿದ ಮದುವೆಯೇ ಆಗಿದ್ದಿದ್ದರೆ ಅಮ್ಮ ಹೇಳುವ ಹಾಗೆಯೇ  ಹೈ ಸೊಸೈಟಿ ಫ್ಯಾಮಿಲಿಯ, ಯಾವುದೋ ಸಾಫ್ಟ್ವೇರ್ ಗಂಡ ಸಿಕ್ಕಿರುತ್ತಿದ್ದ. ಆದರೆ ಇದು ನಾನೇ ಬೇಕೆಂದು ಆರಿಸಿಕೊಂಡ ಸಂಬಂಧವಲ್ಲವೇ..?

ಬೇಕೆಂದಾಗ ಹೊಕ್ಕು, ಬೇಡವೆನ್ನಲು ಇದು ಬಿಟ್ಟು ಹೊರಡುವ ಸಂಬಂಧವಲ್ಲವಲ್ಲಾ..!? ಸಾತ್ವಿಕ್ ನನ್ನು ಮದುವೆಯಾಗುವಾಗ ಅವನು ತಿಳಿಸಿದ್ದ "ನೀನು ಮದುವೆಯಾಗುವುದು ನನ್ನನ್ನು ಮಾತ್ರವಲ್ಲ.. ನನ್ನ ಕುಟುಂಬವನ್ನು" ಎಂದು. ಹದಿಹರೆಯದ ಪ್ರೀತಿ, ಬಿಸಿ ರಕ್ತ ಎಲ್ಲವನ್ನೂ ಎಲ್ಲರನ್ನೂ ಒಪ್ಪಿಕೊಳ್ಳುವಂತೆ ಮಾಡಿತ್ತು. ನಾನು ನೋಡಿದ ದಾಂಪತ್ಯಗೀತೆಗಳೂ ಹಾಗೆಯೇ ಇದ್ದವಲ್ಲಾ.. ಮೊದಮೊದಲಿಗೆ ಮನೆಯವರೆಲ್ಲಾ ಸರ್ವಸ್ವ, ಮನೆಯವರು ಹೇಳಿದಂತೆಯೇ.., ಆದರೆ ನಂತರ ನನ್ನ ಮನೆದೇವರು ಹೇಳಿದಂತೆಯೇ.. ನನ್ನ ಮನೆಯಾಕೆಯೇ ನನ್ನ ಸರ್ವಸ್ವ.

ಆದರೆ ನಾನು ನೋಡಿದ ಹೆಚ್ಚಿನ ದಾಂಪತ್ಯಗಳೆಲ್ಲಾ ವಿಷಮಗೀತೆಗಳೇ.. ದಾಂಪತ್ಯ ಇನ್ನೂ ಚೆನ್ನಾಗಿ ಹೊಂದಿಕೊಂಡಿದೆಯೆಂದರೆ ಅದಕ್ಕೆ ಕಾರಣ ಒಡೆದ ಮನೆಗಳು ಅರ್ಥಾತ್ ಅವಿಭಕ್ತ ಕುಟುಂಬಗಳು. ಅತ್ತೆ-ಸೊಸೆ ಬೇರೆ ಬೇರೆ ಇರುವುದು ಆಷಾಡದಲ್ಲಿ ಮಾತ್ರವಲ್ಲ.. ಯಾವಾಗಲೂ..!

ಅಜ್ಜಿ ಅತ್ತೆಯರ ಸಂಬಂಧವೂ ಹಾಗೇ ಇದ್ದಿತ್ತು. ಒಂದೇ ನಾಣ್ಯದ ಎರಡು ಮುಖಗಳಂತೆಯೇ..? ಅಜ್ಜಿಯದ್ದು ಮಾತು ಜಾಸ್ತಿ ಆದರೂ ಮಾತುಗಳಲ್ಲಿ ಕೊಂಕು ಇರುತ್ತಿರಲಿಲ್ಲ.ಅತ್ತೆಯೂ ಅನುಸರಿಸಿಕೊಂಡು ಹೋಗದವರೇನೂ ಅಲ್ಲ. ಆದರೆ ಅವರ ಹೊಂದಾಣಿಕೆ ಮನೆಯವರೊಂದಿಗೆ ಮಾತ್ರ ಅಲ್ಲ ಎಂಬುದು ವಿಪರ್ಯಾಸ. ಅಮ್ಮ ಕೂಡಾ ಬಾಳಿದ್ದು ಕೂಡು ಕುಟುಂಬದಲ್ಲೇನೂ ಅಲ್ಲ. ಅಲ್ಲದೆ ಅತ್ತೆ ಮನೆಯಲ್ಲಿ ಹೀಗೇ ಇರಬೇಕೆಂದೂ ಅಮ್ಮ ಹೇಳಿಕೊಡಲಿಲ್ಲ. ಹೀಗೇ ಇರಬೇಕೆಂಬುದನ್ನು ಹೇಳಿಕೊಡಲು ಅಮ್ಮನಿಗೆ ಸಮಯವಾದರೂ ಎಲ್ಲಿತ್ತು..?  ಲೇಟ್ ನೈಟ್ ಪಾರ್ಟಿಗಳು, ಸೊಸೈಟಿ, ಕ್ಲಬ್ ಗಳ ಮೀಟಿಂಗ್ ಗಳು ಇದೆಲ್ಲದರ ನಡುವೆಯೇ ಅಮ್ಮ ಅಲ್ಲಲ್ಲ ಮಮ್ಮಿ ಕಳೆದುಹೋಗಿದ್ದಳು.

ಆದರೆ ನಾನು ಹೀಗಿರಲು ಕೊಂಚ ಮಟ್ಟಿಗೆ ಕಾರಣ ಅಪ್ಪನೇ.. ಸಾತ್ವಿಕ್ ನ ಸಂಬಂಧವನ್ನೂ ಯಾವ ತಕರಾರೂ ಇಲ್ಲದೆ ಒಪ್ಪಿಕೊಂಡಿದ್ದರು. ಅಲ್ಲದೆ ನನ್ನನ್ನು ಬೆಂಬಲಿಸಿದ್ದರು. ಅಲ್ಲದೆ ಹೊರಡುವ ಮುನ್ನ ಕೂಡ ಒಂದು ಕಿವಿಮಾತನ್ನೂ ಹೇಳಿದ್ದರು. "ಮನಸ್ಸೆಂಬುದು ನೀನು ಹರಿಯಬಿಟ್ಟಂತೆ, ಲಂಗು ಲಗಾಮು ನಿನ್ನೆಡೆಯೇ ಇರಲಿ".

ಆದರೆ ಈ ಮಾತನ್ನು ಮೀರುವ ಅಥವಾ ಮತ್ತೆ ನೆನಪಿಸಿಕೊಳ್ಳುವ ಸಂದರ್ಭ ಇದುವರೆಗೂ ಬಂದಿರಲಿಲ್ಲ. ಆದರೆ ಅಮ್ಮ ಇತ್ತೀಚೆಗೆ ಹೇಳಿದ ಮಾತು ತುಲನೆ ಮಾಡುವಂತೆ ಮಾಡಿತು ಅಷ್ಟೇ.  ಅಮ್ಮ ಅಲ್ಲಲ್ಲಾ ಮಮ್ಮಿ ಹೇಳಿದ್ದು, "ಆದಷ್ಟು ಬೇಗ ಆ ಜಾತ್ರೆಯಿಂದ ಹೊರಗಡೆ ಬಾ."

ಆದರೆ ನನಗೆಂದೂ ಇಲ್ಲಿ ಜಾತ್ರೆ ಅಥವಾ ಇಕ್ಕಟ್ಟಿನ ಅಥವಾ ಮತ್ತಾವುದೇ ಇರುಸುಮುರುಸಿನ ಅನುಭವವಾಗಿರಲಿಲ್ಲ. ಯಾವ ಕೆಲಸವೂ ಬರದ ನನಗೆ ಅತ್ತೆ ಅಮ್ಮನಾಗಿ.. ಓರಗಿತ್ತಿಯರು ಗೆಳತಿಯರಾಗಿ ಸಹಕರಿಸಿದರು. ಮೈದುನ, ಭಾವ, ಮಾವ ಎಲ್ಲರೂ ಒಳ್ಳೆಯವರೇ..

ಎಲ್ಲವನ್ನೂ ತಿದ್ದುತ್ತಿದ್ದ ಎಲ್ಲರೂ ಇಂದು ಅಷ್ಟು ಕಠೋರವಾಗಿ ನಡೆದುಕೊಂಡದ್ದಾದರೂ ಏಕೆ..?

ಕೆಲಸದವರನ್ನು ನಮ್ಮ ಮನೆಯಲ್ಲಿ ನಡೆಸಿಕೊಳ್ಳುತ್ತಿದ್ದದ್ದೇ ಹಾಗೆ..!

ಕೆಲಸದವನಾಗಿ ನನಗೇ ಏಕವಚನದಿಂದ ಮಾತನಾಡಿಸಿದ್ದೇ ಅಲ್ಲದೆ ನನ್ನ ಚಪ್ಪಲಿ ಹೊಲಿಸಿಕೊಂಡು ಬಾ ಎಂದದ್ದಕ್ಕೆ "ಆಗುವುದಿಲ್ಲ, ನಮಗೂ ಆತ್ಮಗೌರವವಿದೆ, ಹಿರಿಯರಿಗೆ ಗೌರವ ಕೊಡುವುದನ್ನು ಕಲಿ, ಅವರು ಕೆಲಸದವರಾದರೂ ಸರಿಯೇ" ಎಂದರು. ಕೋಪ ಬಂದು ಹೊಡೆದದ್ದೇ ತಪ್ಪಾ?

ಮನೆಯಲ್ಲಿ ಎಲ್ಲರೂ ಅಂದು ಕೋಪ ಮಾಡಿಕೊಂಡು ನನ್ನನ್ನೇ ದೂಷಿಸಿದರು. ನನ್ನ ಕೋಪವೂ ಮೇರೆ ಮೀರಿ ಮಾತಿಗೆ ಮಾತು ಬೆಳೆಯಿತು. ಒಳ್ಳೆಯತನದ ಮತ್ತೊಂದು ಮುಖದ ಪರಿಚಯವಾಗಿತ್ತು.

ಸೋಲಲು ನನಗಿಷ್ಟವಿಲ್ಲ ಆದರೆ ಸೋಲದೆ ವಿಧಿಯಿಲ್ಲ. ಸೋಲದೆ ಸಂಬಂಧದಲ್ಲಿ ಗೆಲ್ಲಲ್ಲೂ ಸಾಧ್ಯವಿಲ್ಲ. ಹಾಗೆಂದು ಮನೆಯವರೆಲ್ಲರನ್ನೂ ಎದುರುಹಾಕಿಕೊಂಡು ಬದುಕಲು ಸಾಧ್ಯವೇ..?

ಇದಕ್ಕೆಲ್ಲಾ ಒಂದೇ ಪರಿಹಾರ 'ನಾನು' ಸಾಯಬೇಕು. ಹೌದು ಇದಕ್ಕೆ ಇದನ್ನು ಬಿಟ್ಟು ಬೇರೆ ಪರಿಹಾರವಿಲ್ಲ.

ಇದೆಲ್ಲದಕ್ಕೂ ಪರಿಹಾರ ಸಿಕ್ಕಿತ್ತು. ಅಪ್ಪನನ್ನು ಸಲಹೆ ಕೇಳಿದಾಗ 'ವಸುದೈವ ಕುಟುಂಬಕಂ' ಎಂದರಷ್ಟೇ.

'ನಾನು' ಸತ್ತಾಗಿತ್ತು. ಸುನಿಧಿ ಸಾಯಲಿಲ್ಲ, ಸುನಿಧಿಯೊಳಗಿನ 'ನಾನು' ಎಂಬ ಅಹಂಕಾರ ಸತ್ತಿತ್ತು. ಮನೆಯೊಳಗೆ ಪಂಕ್ತಿ ಭೋಜನ ಸುನಿಧಿಯ ಮುಂದಾಳತ್ವದಲ್ಲಿ ನಡೆದಿತ್ತು.

~ವಿಭಾ ವಿಶ್ವನಾಥ್

ಶುಕ್ರವಾರ, ನವೆಂಬರ್ 16, 2018

ನಿಮಗೋಸ್ಕರ...


ಪ್ರೀತಿಯ ಕಂದ,

ಪರೀಕ್ಷೆಗಳು ಹತ್ತಿರ ಬರ್ತಾ ಇವೆ ಓದ್ಕೋ, ಹೆಚ್ಚು ಅಂಕ ತೆಗೆದು ಒಳ್ಳೆ ಕಾಲೇಜಿನಲ್ಲಿ ಸೀಟು ತೆಗೆದುಕೊಳ್ಳಬೇಕು ಅಂದಾಗಲೆಲ್ಲಾ ನೀನು ಮುಖ ಪೆಚ್ಚು ಮಾಡ್ಕೊಂಡು ಓದೋದಕ್ಕೆ ಕೂತ್ಕೊಳ್ಳೋದನ್ನು ನೋಡಿದ್ರೆ, ನಮಗೂ ಮನಸ್ಸಿಗೆ ಒಂಥರಾ ಆಗುತ್ತೆ. ಆದ್ರೆ ಏನ್ಮಾಡ್ಲಿ? ನಿನಗೆ ಇವಾಗ ಹೇಳದೆ ಮತ್ತಿನ್ಯಾವಾಗ ಹೇಳೋಕಾಗುತ್ತೆ ಓದ್ಕೋ ಅಂತಾ? ನಮ್ಮಪ್ಪ-ಅಮ್ಮನೂ ಹೀಗೇ ಹೇಳಿ ಓದ್ಸಿದ್ದಿದ್ರೆ ನಾವೂ ಇನ್ನೂ ಒಳ್ಳೆ ಸ್ಥಿತಿಯಲ್ಲಿರ್ತಾ ಇದ್ವು.ನಮ್ ಹಾಗೇ ನೀನೂ ನಾಳೆ ನಮ್ಮನ್ನು ದೂಷಿಸಬಾರದು ಅಂತಾ ನಿನಗೆ ಇದನ್ನ ಹೇಳೋದು. 

ಒಳ್ಳೆ ಕಡೆ ಟ್ಯೂಷನ್ ಗೂ ಸೇರ್ಸಿದ್ದೀವಿ. ಈ ಸಿಟಿಲಿರೋ ಒಳ್ಳೆ ಕಾನ್ವೆಂಟ್ ಗೇ ಸೇರ್ಸಿದ್ದೀವಿ. ಮನೆಯಲ್ಲಿ ಟಿ.ವಿ ಸೌಂಡ್ ಕೂಡಾ ಇಲ್ಲ, ಬೇರೆ ಮಕ್ಕಳಿಂದ ನಿನಗೆ ಓದೋದಕ್ಕೆ ಕಷ್ಟ ಆಗುತ್ತೆ ಅಂತಾ ನಮ್ಮ ಆಫೀಸ್ ಗೆ ದೂರ ಆದ್ರೂ ಈ ಪ್ರಶಾಂತವಾದ ಜಾಗದಲ್ಲಿ ಮನೆ ಮಾಡಿದ್ದೇನೆ. ಆದ್ರೂ ನೀನ್ಯಾಕೆ ಚಿತ್ರ ಬಿಡಿಸ್ತಿನಿ, ಬಣ್ಣ ಹಚ್ತೀನಿ ಅಂತಾ ಏನೇನೋ ಮಾಡೋದಕ್ಕೆ ಹೊರಡ್ತೀಯಾ, ಅದೇ ಸಮಯಾನ ಓದೋದಕ್ಕೆ ಉಪಯೋಗಿಸಿದ್ರೆ ಎಷ್ಟು ಒಳ್ಳೆ ಅಂಕ ಬರುತ್ತೆ ಅಲ್ವಾ?
ಓದ್ಕೋ ಪುಟ್ಟ, ಬೇರೆ  ವೇಳೆಲಿ ಚಿತ್ರ ಬಿಡಿಸಿ, ಬಣ್ಣ ತುಂಬಬಹುದು

-ಇಂತಿ
ನಿನ್ನ ಹಿತಚಿಂತಕರು
**********************************************

ಮುದ್ದಿನ ಅಪ್ಪ,ಅಮ್ಮ

ನೀವಂದ್ರೆ ನನಗೆ ತುಂಬಾ ಇಷ್ಟ. ಆದ್ರೆ, ನೀವು ಯಾವಾಗಲೂ ಓದ್ಕೋ, ಓದ್ಕೋ ಅಂದ್ರೆ ನನಗೂ ಕಿರಿಕಿರಿಯಾಗಲ್ವಾ? ನಂಗೆ ಚಿತ್ರ ಬಿಡಿಸೋದು ಅಂದ್ರೆ ತುಂಬಾ ಇಷ್ಟ. ಹಾಗಂತ ನಾನೇನೂ ದಿನಪೂರ್ತಿ ಅದನ್ನೇ ಮಾಡಲ್ಲ ತಾನೇ? ಇಂಟರ್ ಸ್ಕೂಲ್ ಕಾಂಪಿಟೇಷನ್ ಲ್ಲೂ ನಾನೇ ಫಸ್ಟ್,ಆದ್ರೆ ನೀವು ಯಾವತ್ತಾದ್ರೂ ನಾನು ಬಿಡಿಸಿರೋ ಚಿತ್ರದ ಬಗ್ಗೆ ಒಂದಾದ್ರೂ ಒಳ್ಳೆ ಮಾತಾಡಿದ್ರಾ? ನಾನೇ ನನ್ನ ಚಿತ್ರಗಳನ್ನು ಮುಂದೆ ತಂದಿಟ್ಟರೂ ನೀವು ಅದನ್ನು ಆಮೇಲೆ ನೋಡ್ತೀನಿ ಅಂತಾ ಆ ಕಡೆ ಇಟ್ಟು ಬಿಡ್ತೀರಿ.ಯಾಕೆ?

"ಮೀನು ಮರ ಹತ್ತೋಕಾಗಲ್ಲ,ಹಕ್ಕಿ ಈಜೋಕಾಗಲ್ಲ", ಹಾಗೇ ನಾವೂ ಯಾವುದನ್ನು ಇಷ್ಟ ಪಡ್ತೀವೋ ಅದನ್ನೇ ಮಾಡೋದಕ್ಕೆ ನಮಗೆ ಅವಕಾಶ ಕೊಡಿ."ನಾವು ಒಳ್ಳೆ ಹವ್ಯಾಸ ಬೆಳೆಸಿಕೊಂಡರೆ,ಅದು ನಮ್ಮನ್ನು ಬೆಳೆಸುತ್ತೆ" ಎನ್ನುವುದು ನಿಮಗೆ ಗೊತ್ತಿಲ್ಲದೇ ಇರುತ್ತಾ?ಪರೀಕ್ಷೆಗಳು ನಮ್ಮನ್ನು ಅಳೆಯೋ ಮಾಪಕಗಳಲ್ಲ, ಜೀವನದ ಪರೀಕ್ಷೆಗಳು  ನಮ್ಮನ್ನು ಅಳೆಯುವ ಮಾಪಕಗಳು.

ನಿಮ್ಮ ಹಾಗೆ ನಾನು ಹಿಂದಿನದ್ದಕ್ಕೆ ಕೊರಗುತ್ತಾ ಕುಳಿತುಕೊಳ್ಳುವುದಿಲ್ಲ. ನಿಮ್ಮಪ್ಪ-ಅಮ್ಮ ಅವರ ಶಕ್ತ್ಯಾನುಸಾರ ನಿಮ್ಮನ್ನು ಈ ಹಂತಕ್ಕೆ ದಾಟಿಸಿದ್ದಾರೆ, ಅದಕ್ಕೆ ನಿಮಗೆ ಅವರ ಬಗ್ಗೆ ಅಭಿಮಾನ ಇರಬೇಕಾಗಿತ್ತು. ಆದರೆ, ನನ್ನ ಮಗು ಈಗ  ಎಸ್.ಎಸ್.ಎಲ್.ಸಿ. ಅವನಿಗೆ ತೊಂದರೆಯಾಗೋದು ಬೇಡ ಅಂತಾ ಹಳ್ಳಿಯಲ್ಲೇ ಬಿಟ್ಟು ಬಂದ್ರಿ. ಮುಂದೆ ನಾನೂ ನಿಮಗೆ ಹಾಗೇ ಮಾಡಿದ್ರೆ..?

ಗಿಳಿಯನ್ನು ಚಿನ್ನದ ಪಂಜರದಲ್ಲಿ ಕೂಡಿ ಹಾಕಿ, ರಾಶಿ ಕಾಳು ಸುರಿದ್ರೂ ನೀವು ಅದಕ್ಕೆ ಅದರ ಸ್ವಾತಂತ್ರ್ಯದ ಸಂತೋಷ ಕೊಡುವುದಕ್ಕೆ ಆಗುತ್ತಾ? ನನ್ನ ಪಾಡು ಕೂಡಾ ಈಗ ಅದೇ ಆಗಿದೆ,ಜೊತೆಯಲ್ಲಿ ಆಟ ಆಡುವುದಕ್ಕೆ ಸ್ನೇಹಿತರಿಲ್ಲ,ಸ್ವಲ್ಪ ಹೊತ್ತು ಕಾಲ ಕಳೆಯುವುದಕ್ಕೆ ಟಿ.ವಿ ನೋಡೋಣಾ ಅಂದ್ರೂ ನೋಡುವುದಕ್ಕೆ ಆಗುವುದಿಲ್ಲ. ಸ್ವಲ್ಪ ಹೊತ್ತು ನಿಮ್ಮ ಜೊತೆ ಕೂತು ಮಾತಾಡೋಣಾ ಅಂದ್ರೂ ನೀವು ನಿಮ್ಮ ಆಫೀಸ್ ಕೆಲಸದ ಒಳಗೇ ಮುಳುಗಿ ಹೋಗಿರ್ತೀರ, ಕೇಳಿದ್ರೆ ಇದೆಲ್ಲಾ ನಿನಗೋಸ್ಕರಾನೇ ಅಂತೀರಾ..

ಆದರೂ ನನ್ನ ಕೈಲಾದಷ್ಟು ಪ್ರಯತ್ನ ಮಾಡಿ, ಒಳ್ಳೇ ಅಂಕಗಳನ್ನೇ ತೆಗಿತೀನಿ. ನನಗೋಸ್ಕರ ಅಲ್ಲದಿದ್ರೂ, ನಿಮಗೋಸ್ಕರ...

ಚಿತ್ರಕಲೆಯನ್ನು ಯಾವಾಗ ಬೇಕಾದ್ರೂ ಮಾಡಬಹುದು. ಅಲ್ವಾ?

-ಇಂತಿ
ನಿಮ್ಮ ಪ್ರೀತಿಯ ಕಂದ..
****************************************
~ವಿಭಾ ವಿಶ್ವನಾಥ್  

ಮಂಗಳವಾರ, ನವೆಂಬರ್ 13, 2018

ಸೋತು ಗೆದ್ದವಳು

ಗೆದ್ದವನು ನೀನೆಂಬ ಹಮ್ಮಿನಲಿ
ಬೀಗುತಲಿ ಎಷ್ಟು ದಿನ ಇರುವೆ..?

ಅಹಂಭಾವ ನಿನ್ನ ಮನಸಲ್ಲಿತ್ತು
ಅಹಂಕಾರದಿ ನಿನ್ನ ಕಣ್ಣು ಮಂಜಾಗಿತ್ತು
ಸಂಬಂಧವು ಬಿರುಕು ಬಿಟ್ಟಿತ್ತು
ಮನವು ಛಿದ್ರ-ವಿಛಿದ್ರವಾಗಿತ್ತು

ಮತ್ತೊಬ್ಬರ ಮನಸ್ಸು ಮುರಿದು
ಗೆದ್ದ ಗೆಲುವು ಉಳಿಯುವುದಾದರೂ ಹೇಗೆ?
ಇನ್ನೊಬ್ಬರ ಮನವ ಗೆದ್ದು ನೋಡು
ಅದುವೆ ನಿಜವಾದ ಗೆಲುವು

ಮಾತಿನಲ್ಲೇ ಮತ್ತೊಬ್ಬರ ಕೊಂದವ ನೀನು
ನನ್ನ ಮೌನದಲ್ಲಿ ನೀ ಸತ್ತು ಹೋಗಿದ್ದೆ
ನೀ ಸೋತದ್ದು ,ನಾ ಗೆದ್ದದ್ದು ಇಲ್ಲಿಯೇ..
ನೀ ಗೆದ್ದು ಸೋತಿದ್ದೆ, ನಾ ಸೋತು ಗೆದ್ದಿದ್ದೆ..!

~ವಿಭಾ ವಿಶ್ವನಾಥ್

ಶನಿವಾರ, ನವೆಂಬರ್ 3, 2018

ಕಳೆದು ಹೋದವರು

ಹಣದ ದಾಹದ ಮೋಹಕೆ ಸಿಲುಕಿ ಇಂದು
ಸಂಬಂಧಗಳು ಕಳೆದು ಹೋಗಿವೆ ಹುಡುಕಲಾಗದಂತೆ
ನಮ್ಮದು, ನಮ್ಮವರೆನ್ನುವವರೆಲ್ಲರೂ ಎಲ್ಲರೂ
ಎಲ್ಲೆಲ್ಲೋ ಕಳೆದೇ ಹೋಗಿದ್ದಾರೆ..ಗೊತ್ತೇ?

ಚೆಂದದ ಕಥೆ ಹೇಳುತ್ತಿದ್ದ ಅಜ್ಜಿಯಂದಿರು
ಟಿ.ವಿ ಸೀರಿಯಲ್ ನಡುವೆ  ಕಳೆದುಹೋಗಿದ್ದಾರೆ
ಮಕ್ಕಳೊಡನೆ ಮಕ್ಕಳಂತೆ ಆಡುತ್ತಿದ್ದ ಅಜ್ಜಂದಿರು
ಅನಾರೋಗ್ಯದಿಂದ ಆಸ್ಫತ್ರೆಯಲ್ಲೇ ಕಳೆದುಹೋಗಿದ್ದಾರೆ

ಕೂಸುಮರಿಯಂತೆ ಹೊತ್ತು ಆಡಿಸುತ್ತಿದ್ದ ಮಾವ
ಹಣ,ಹೆಸರಿನ ಸಂಪಾದನೆಯಲ್ಲೇ ಕಳೆದುಹೋಗಿದ್ದಾರೆ
ಪ್ರೀತಿಯಿಂದ ಆರೈಕೆ ಮಾಡುತ್ತಿದ್ದ ಅತ್ತೆಯಂತೂ
ಹೇಳಿಕೆ ಮಾತಿಗೆ ಸಿಲುಕಿ ದ್ವೇಷದಲ್ಲೇ ಕಳೆದುಹೋಗಿದ್ದಾರೆ

ಬಾಯ್ತುಂಬ ನನ್ನೊಡನೆ ಹರಟುತ್ತಿದ್ದ ಅಮ್ಮ
ಮೊಬೈಲ್, ಪಾರ್ಟಿಗಳಲ್ಲೇ ಕಳೆದುಹೋಗಿದ್ದಾರೆ
ಪ್ರತಿ ಆಟ-ಪಾಠಗಳಿಗೂ ಕಿವಿಯಾಗುತ್ತದ್ದ ಅಪ್ಪ
ದುಡಿಮೆ, ಪ್ರಾಜೆಕ್ಟ್ ಗಳಲ್ಲೇ ಕಳೆದುಹೋಗಿದ್ದಾರೆ

ದಿನಕ್ಕೊಂದಾದರೂ ತರಲೆ ಮಾಡುತ್ತಿದ್ದ ಅಕ್ಕ,ತಂಗಿ
ಮೊಬೈಲ್ ಗೇಮ್, ಸೆಲ್ಫಿಯೊಳಗೇ ಕಳೆದುಹೋಗಿದ್ದಾರೆ
ಮಾತುಮಾತಿಗೂ ರೇಗಿಸಿ ಅಳಿಸುತ್ತಿದ್ದ ಅಣ್ಣ,ತಮ್ಮ
ಸೋಷಿಯಲ್ ಮೀಡಿಯಾದೊಳಗೇ ಕಳೆದುಹೋಗಿದ್ದಾರೆ

ಇದೆಲ್ಲದರ ನಡುವೆ ನಾನೂ ಕಳೆದುಹೋಗಿದ್ದೇನೆ
ಹಳೆಯ ಸಂಬಂಧಗಳನ್ನು ಹುಡುಕುತ್ತಾ..
ಮಾನವೀಯತೆಯ ಕೊಂಡಿಗಳನ್ನು ಪೋಣಿಸುತ್ತಾ..
ಮತ್ತೆ ಮೊದಲಿನ ದಿನಗಳನ್ನು ಬಯಸುತ್ತಾ..

ಕಳೆದು ಹೋದವರನ್ನು ಹುಡುಕಿ ಕೊಡುವಿರಾ..?
ಬಹುಶಃ ನೀವೂ ಸಹಾ ಕಳೆದು ಹೋಗಬಹುದು
ಕಳೆದು ಹೋದವರನ್ನು ನೀವೂ ಹುಡುಕುತ್ತಲೇ..
ಕಳೆದು ಹೋಗಲು ಯಾರಾದರೂ ಸಿದ್ದರಾಗಿರುವಿರಾ..?

~ವಿಭಾ ವಿಶ್ವನಾಥ್

ಶುಕ್ರವಾರ, ಅಕ್ಟೋಬರ್ 26, 2018

ಪಯಣದಲ್ಲೊಂದು ತಿರುವು..

ಬದುಕೆಂಬುದು ಹಾಗೇ, ನಿರಂತರ ಪಯಣ..ಸಾಗುತ್ತಲೇ ಇರುವಂತಹದ್ದು. ಎಷ್ಟೋ ಜನ ಪಯಣದಲ್ಲಿ ಜೊತೆಯಾಗುತ್ತಾರೆ, ಹಾಗೆಯೇ ಬಿಟ್ಟೂ ಹೋಗುತ್ತಾರೆ. ಮೊದಲಿನಿಂದಲೂ, ಕೊನೆಯವರೆಗೂ ಜೊತೆಗೇ ಬರುವವರುತುಂಬಾನೇ ಅಪರೂಪ, ವಿರಳ ಎಂದೇ ಹೇಳಬಹುದು. ಕೆಲವೊಮ್ಮೆ ನಮಗೇ ಅರಿವಿಲ್ಲದೆ ಕೆಲವರ ಪಯಣದಲ್ಲಿ ಜೊತೆಯಾಗುತ್ತಾ ಅವರ ದಾರಿಯಲ್ಲೇ ಕ್ರಮಿಸಿಬಿಡುತ್ತೇವೆ, ಕೆಲವೊಮ್ಮೆ ಸ್ಥಗಿತಗೊಳಿಸುತ್ತೇವೆ, ಕುಂಠಿತಗೊಳಿಸುತ್ತೇವೆ ಸಹಾ. ಅರಿವಿದ್ದೋ, ಅರಿವಿಲ್ಲದೆಯೋ ಇವೆಲ್ಲವೂ ನಡೆದು ಹೋಗಿರುತ್ತದೆ. 

ನಾವಿಲ್ಲದೇ ಅವರ ಪಯಣ ಸಾಗೋದಿಲ್ವಾ..? ಅಥವಾ ಅವರಿಲ್ಲದೇ ನಮ್ಮ ಪಯಣ ಸಾಗೋದಿಲ್ವಾ..? ಖಂಡಿತಾ ಪಯಣ ಮುಂದುವರಿಯುತ್ತಲೇ ಹೋಗುತ್ತದೆ., ಯಾರಿದ್ದರೂ..! ಯಾರಿಲ್ಲದಿದ್ದರೂ..! ಅವರು ಮುಂದುವರಿಯುವುದಕ್ಕೆ ನಾವೇ ಕಾರಣ ಅಂತಾ ಬೀಗುತ್ತಾ ಹೋಗುತ್ತಾ ಇರುತ್ತೇವೆ ಅಲ್ವಾ..? ಅವಾಗಲೇ ಅಚಾನಕ್ಕಾಗಿ ಎದುರಾಗುವುದು ಒಂದು ದೊಡ್ಡ ತಿರುವು, ಅದು ಎದುರಾಗುವುದು ಬೀಗುವವರನ್ನು ಬಾಗಿಸುವುದಕ್ಕೇ ಅಂತನ್ನಿಸುತ್ತೆ.

ಬೀಳ್ತೀವಾ? ಏಳ್ತೀವಾ? ಬ್ರೇಕ್ ಹಾಕಿ ನಂತರ ಮುಂದೆ ಸಾಗುತ್ತೇವಾ? ಅಥವಾ ದಿಗ್ಭ್ರಮೆಯಿಂದ ಅಲ್ಲೇ ನಿಲ್ತೀವಾ..? ಅದು ನಮ್ಮ ನಮ್ಮ ಮನಃಶಕ್ತಿಗೆ ಬಿಟ್ಟದ್ದು. ಆದರೂ ಆ ತಿರುವಿನಲ್ಲಿ ಉಂಟಾಗುತ್ತಲ್ಲಾ ಒಂದು ದಿಗ್ಭ್ರಮೆ, ಅದಕ್ಕೆ ಸರಿದೂಗಿಸುವಂತೆ ತೆಗೆದುಕೊಳ್ಳೋ ತೀರ್ಮಾನ ಅದು ಇಡೀ ಲೈಫ್ಗೇ ಯೂ ಟರ್ನ್ ಕೊಟ್ಟು ಬಿಡುತ್ತೆ. ಒಂದು ತಿರುವು ದಾಟಿ ಮುಂದೆ ಹೋದರೆ ಅಲ್ಲಿ ಮತ್ತೊಂದು, ಮತ್ತೊಂದು ಮುಂದೆ ಮಗದೊಂದು ಹೀಗೇ.. ಮುಗಿಯುವುದೇ ಇಲ್ಲ ಆ ತಿರುವುಗಳ ಲೆಕ್ಕ. ಸ್ಕಿಡ್ ಆಗಿ ಬಿದ್ದೆವೋ ನಿರಾಸೆಯ ಪ್ರಪಾತದ ಕೂಪಕ್ಕೇ ಹೋಗಿ ಬಿದ್ದು ಬಿಡುತ್ತೇವೆ. ಎದ್ದು ನಿಲ್ಲುವುದು ನಮ್ಮ ಧೀಃಶಕ್ತಿಗೇ ಬಿಟ್ಟದ್ದು..

ಓವರ್ ಸ್ಪೀಡ್ ಅಲ್ಲೂ ಹೋಗಬಾರದು ಅಂತಹಾ ತಿರುವುಗಳಲ್ಲಿ, ಆಮೇಲೆ ಲೈಫೇ ಟರ್ನ್ ಹೊಡೆದುಬಿಟ್ಟಾತು. ಮುಂದೆ ಬರುವವರಿಗೇ ಡಿಕ್ಕಿ ಹೊಡೆದುಬಿಟ್ಟರೆ..! ಅದಕ್ಕೂ ಒಂದು ಪರಿಹಾರವಿದೆ ಕಣ್ರೀ.. ಮಾತಿನ ಹಾರ್ನ್ ಜೊತೆಗೆ ಲಿಮಿಟೆಡ್ ಸ್ಪೀಡ್ ಅಲ್ಲೇ ಹೋಗಬೇಕು.   

ತಿರುವು ದಾಟಿ ದಿಗಂತದ ಕನಸಿಗೆ ಕೈ ಚಾಚುತ್ತಾ ಪಯಣದಲ್ಲಿ ಹೆಜ್ಜೆ ಹಾಕಬೇಕು. " ಹಕ್ಕಿ ಮರದ ಗಟ್ಟಿತನವನ್ನು ನೆಚ್ಚಿ ಕೊಂಬೆ ಮೇಲೆ ಕುಳಿತಿರೋದಿಲ್ವಂತೆ, ಅಕಸ್ಮಾತ್ ಈ ರೆಂಬೆ ಮುರಿದರೂ ಸಹಾ ತಾನು ಹಾರಬಲ್ಲೆ ಎಂಬ ಆತ್ಮವಿಶ್ವಾಸದಿಂದ ತನ್ನ ರೆಕ್ಕೆಗಳನ್ನು ನೆಚ್ಚಿ ಕೂತಿರುತ್ತದೆಯಂತೆ", ಅಷ್ಟು ಚೈತನ್ಯದಿಂದ ಹಕ್ಕಿಯೇ ತನ್ನ ಪಯಣವನ್ನು ಕ್ರಮಿಸುವಾಗ, ನಾವು ಬೇರೆಯವರನ್ನು ನಂಬಿ ಯಾಕೆ ನಮ್ಮ ಪಯಣ ನಡೆಸಬೇಕು..? ನಮ್ಮ ಬಲ, ಛಲದ ಮೇಲೇ ನಂಬಿಕೆ ಇಟ್ಟು ಪಯಣದ ತಿರುವುಗಳನ್ನೆಲ್ಲಾ ಬಳಸೋಣ, ದಾಟೋಣ. ಹಾಗಂತಾ ಜೊತೆಗಾರರು, ಸಹಪಯಣಿಗರನ್ನು ನಿರ್ಲಕ್ಷ್ಯ ಮಾಡೋದಲ್ಲ. ಅವರೂ ನಮ್ಮಂತೆಯೇ ಎಂಬುದನ್ನು ಅರಿತು ಹೆಜ್ಜೆ ಹಾಕೋಣ.

ಇಷ್ಟೆಲ್ಲಾ ಬರೆದು ಮುಗಿಸುವಷ್ಟೊತ್ತಿಗೆ ಕಿವಿಯಲ್ಲಿ ಹಾಡಿನ ಸಾಲೊಂದು ರಿಂಗಣಿಸುತ್ತಿದೆ.

"ನಿನ್ನ ದಾರಿ ನೀನೇ ನಡೆದು ಸೇರಬೇಕು ಗುರಿಯನು"

ಅದನ್ನು ನನಗೆ ನಾನೇ ಹೇಳಿಕೊಳ್ಳೋದಾದ್ರೆ

"ನನ್ನ ದಾರಿ ನಾನೇ ನಡೆದು ಸೇರಬೇಕು ಗುರಿಯನು"

ಅಂತಾ ಹೇಳಿಕೊಳ್ಳಬಹುದಾ?
ಖಂಡಿತಾ .. ಈ ಮಾತನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಬೇರೆಯವರಿಗೆ ಉಪದೇಶ ಮಾಡುವುದಕ್ಕಿಂತ, ನಮಗೆ ನಾವೇ ಉಪದೇಶ ಮಾಡಿಕೊಳ್ಳುವುದೇ ಒಳ್ಳೆಯದು. ಯಾಕೋ ಬಹಳ ಸಲ ಹೀಗೇ ಅನ್ನಿಸುತ್ತಾ ಇರುತ್ತೆ. ನಿಜಾನೇ ಅಲ್ವಾ?

~ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 21, 2018

ರತ್ನ

ನಿಜವಾಗಿಯೂ ದೇವರು ಪ್ರತ್ಯಕ್ಷವಾದರೆ ನಾನು ಕೇಳುವ ಮೊದಲ ಪ್ರಶ್ನೆ, "ಅಮ್ಮನಿಂದ ಮಗುವನ್ನು ಅಗಲಿಸಿ, ನೋವು ನೀಡಿ ನೀನು ಸಾಧಿಸುವುದಾದರೂ ಏನು?"

ಅಂದು ನಾನು ರತ್ನಮ್ಮನ ಮನೆಗೆ ಕಾಲಿಟ್ಟ ಕ್ಷಣ ಆಕೆ ಕೇಳಿದ ಮೊದಲ ಪ್ರಶ್ನೆ, "ನಾನು ಯಾವತ್ತಾದರೂ,ಯಾರಿಗಾದರೂ ಅನ್ಯಾಯ ಮಾಡಿದ್ದೇನಾ? ನನ್ನ ಮಗ ನನ್ನಿಂದ ಯಾಕೆ ದೂರ ಆದ? ನಾನು ಯಾವ ಪಾಪ ಮಾಡಿದ್ದೆ? ವಿದ್ಯಾರ್ಥಿಗಳಿಗೆ ಯಾವತ್ತಾದರೂ ದ್ರೋಹ ಮಾಡಿದ್ದೇನಾ? ಭೇದ-ಭಾವ ಮಾಡಿದ್ದೇನಾ? ಹೇಳು"

ಬಾಣದಂತೆ ತೂರಿ ಬಂದ ಆ ಪ್ರಶ್ನೆಗೆ ಉತ್ತರಿಸಲಾದರೂ ಸಾಧ್ಯವಿತ್ತೇ? ನನ್ನ ಕಣ್ಣೀರೇ ಅದಕ್ಕೆ ಉತ್ತರವಾಗಿತ್ತು. ಅದನ್ನು ಬಿಟ್ಟು ಆ ಕ್ಷಣದಲ್ಲಿ ನನಗೇನೂ ಮಾಡಲು ತೋಚಲಿಲ್ಲ.ನನಗೇನಾದರೂ ಅಪರೂಪದ ಶಕ್ತಿ ಬಂದರೆ, ಅಥವಾ ವರ ಸಿಕ್ಕಿದರೆ ನಾನು ಮಾಡುವ ಮೊದಲ ಕೆಲಸ ರತ್ನಮ್ಮನ ಮಗ ಹಿಮವಂತನನ್ನು ಬದುಕಿಸುವುದು.

ಆಕೆ ನನಗೆ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದ ನನ್ನ ಅಚ್ಚುಮೆಚ್ಚಿನ ಶಿಕ್ಷಕಿ. ನನ್ನ ಬರಹಗಳಿಗೆ ಶಕ್ತಿ ತುಂಬಿದ ದೇವತೆ, ನನ್ನ ಬೆಳವಣಿಗೆಯ ಎಲ್ಲಾ ಹಂತದಲ್ಲಿಯೂ ಸ್ಪೂರ್ತಿ ತುಂಬುತ್ತಿದ್ದವರು .ಎಲ್ಲರನ್ನೂ ತನ್ನ ಮಕ್ಕಳೆಂದುಕೊಂಡು ಕಾಳಜಿ ತೋರಿಸಿ ಕಲಿಸುತ್ತಿದ್ದ, ಸಲಹುತ್ತಿದ್ದ ಶಿಕ್ಷಕಿ. ಬೆತ್ತ ಬಳಸದೆಯೂ ಮಕ್ಕಳನ್ನು ತಿದ್ದಿ ಬುದ್ದಿ ಕಲಿಸುತ್ತಿದ್ದ ಮಿಸ್. ಅದೇಕೋ ರತ್ನಮ್ಮ ಮಿಸ್ ನನಗೆ ಬಹಳ ಇಷ್ಟ. ಅಪ್ಪ-ಅಮ್ಮನಿಂದಲೂ ಆಶೀರ್ವಾದ ಪಡೆಯದೆ ಹೊರಟ ನಾನು ಅಂದು ಪ್ರತಿಭಾ ಕಾರಂಜಿಗೆ ಹೋಗುವ ಮುನ್ನ ಆಕೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದೆ. ಅಂದು ಲಘು ಸಂಗೀತದಲ್ಲಿ ಪ್ರಥಮ ಬಹುಮಾನ ಪಡೆದದ್ದು ಆಕೆಯ ಆಶೀರ್ವಾದದ ಫಲದಿಂದಲೇ ಎಂಬುದು ನನ್ನ ಬಲವಾದ ನಂಬಿಕೆ.

"ತಿಳಿಮುಗಿಲ ತೊಟ್ಟಿಲಲ್ಲಿ ಮಲಗಿದ್ದ ಚಂದಿರನ, ಗಾಳಿ ಜೋಗುಳ ಹಾಡಿ ತೂಗುತ್ತಿತ್ತು" ಎಂಬ 7 ನೇ ತರಗತಿಯ ಪದ್ಯವನ್ನು ಆಕೆ ಹಾಡುತ್ತಿದ್ದ ರೀತಿ ಬಹಳವೇ ಇಷ್ಟ. ಈಗಲೂ ಆ ಹಾಡು ಕೇಳಿ ಬಂದರೆ ಆಕೆಯೇ ಕಣ್ಮುಂದೆ ಬಂದಂತಾಗುತ್ತದೆ.ಕನ್ನಡದ ಪಾಠಗಳನ್ನು ಅದರ ಪೂರಕ ವಿಷಯಗಳೊಂದಿಗೆ ಆಕೆ ಭೋದಿಸುತ್ತಿದ್ದ ರೀತಿ ಮತ್ತು ಪದ್ಯಗಳನ್ನು ಹಾಡುತ್ತಿದ್ದ ರೀತಿ ಬಹಳವೇ ಇಷ್ಟ.ಸಮಾಜ-ವಿಜ್ಞಾನವೆಂದರೇ ಅಲರ್ಜಿ ಎನ್ನುತ್ತಿದ್ದ ನನಗೆ,ಸಮಾಜ-ವಿಜ್ಞಾನದ ಕುರಿತು ಆಸಕ್ತಿ ಹುಟ್ಟಿಸಿ,ಅದ್ಭುತ ಪಾಠವೆಂದರೆ ಹೀಗೇ ಇರುತ್ತದೆ ಎಂಬುದರ ಪರಿಕಲ್ಪನೆಯನ್ನು ಬೆಳೆಸಿದವರು. ಪೂರ್ವಾಗ್ರಹಪೀಡಿತರಾಗದೆ ಎಲ್ಲರನ್ನೂ ಒಂದೇ ರೀತಿ ನೋಡಿ, ಆದರ್ಶ ಶಿಕ್ಷಕಿ ಎಂಬ ಪದಕ್ಕೆ ಒಂದು ಮೆರುಗನ್ನು ತಂದು ಕೊಟ್ಟವರು. ನನ್ನ ಮತ್ತೊಬ್ಬಳು ತಾಯಿ ಎಂದರೂ ತಪ್ಪಿಲ್ಲ.

ಇದ್ದೊಬ್ಬ ಮಗ ಹಿಮವಂತನನ್ನು ಉತ್ತಮ ಸಂಸ್ಕಾರ ನೀಡಿ ಬೆಳೆಸಿದ್ದರು. ಆತನನ್ನು ನೋಡಿದವರೆಲ್ಲಾ, ಇದ್ದರೆ ಇಂತಹಾ ಮಗ ಇರಬೇಕು ಎಂಬ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. 9 ನೇ ತರಗತಿಯ ರಜಾ ದಿನಗಳಲ್ಲಿ ಆತ ಅಜ್ಜಿಯ ಮನೆಗೆಂದು ಹೊರಟ,ಎಲ್ಲೂ ಹೋಗಲು ಕೇಳದಿದ್ದವನು ಅಂದು ಮಾವನ ಮಕ್ಕಳ ಜೊತೆಗೆ ಆಡುವ ಆಸೆಯಿಂದ ಕೇಳಿದ. ಇವರೂ ಏನೂ ಹೇಳದೆ ಕಳುಹಿಸಿಕೊಟ್ಟರು. ಇನ್ನೆರಡು ದಿನ ಕಳೆದು ನಾನು ಬರುವೆ, ಈಗ ಹೋಗಿರು ಎಂದು ಹೇಳಿ ಅವರ ಅಣ್ಣನೊಂದಿಗೆ ಕಳುಹಿಸಿಕೊಟ್ಟರು.

ಇದಾದ ಮಾರನೆಯ ದಿನ , ಮನೆಯವರೆಲ್ಲಾ ಹೊಲದ ಪೂಜೆಗೆಂಂದು ತಯಾರಿ ನಡೆಸುತ್ತಿದ್ದರೆ, ಅಕ್ಕ-ಪಕ್ಕದ ಮನೆಯ ಮಕ್ಕಳೊಂದಿಗೆ ಆಡುತ್ತಾಅ, ಮನೆಯಲ್ಲಿ ಯಾರಿಗೂ ಹೇಳದಂತೆ, ಕೆರೆಯ ಹತ್ತಿರಕ್ಕೆ ಬಂದಿದ್ದ.ಅವರೆಲ್ಲಾಅ ಈಜಲು ಹೊರಟರೆ,ಈತನಿಗೆ ಈಜು ಬರದ ಕಾರಣಕ್ಕೆ ದಡದಲ್ಲಿಯೇ ನಿಂತಿದ್ದನ್ನು ಕಂಡು ಉಳಿದವರೆಲ್ಲಾ ಛೇಡಿಸುತ್ತಾ, "ಬಾರೋ, ಈ ನೀರಿಗೆ ಹೆದರಿಕೊಳ್ಳುತ್ತೀಯಾ..?" ಎನ್ನುತ್ತಾ ಅವನನ್ನು ಮೇಲಿನಿಂದ ತಳ್ಳಿದರು. ಅದೇನೂ ತೀರಾ ಆಳದ ನೀರಲ್ಲ,ಆದರೆ ಅಲ್ಲಿ ಸ್ವಲ್ಪ ಕೆಸರಿತ್ತು. ಅಡಿಮೇಲಾಗಿ ಬಿದ್ದಿದ್ದಕ್ಕೋ, ಹೆದರಿ ಉಸಿರು ಕಟ್ಟಿದ್ದಕ್ಕೋ ಗೊತ್ತಿಲ್ಲ, ಆತ ಮುಳುಗಿದವ ಮೇಲೇಳಲೇ ಇಲ್ಲ. ಜೊತೆಗಿದ್ದವರೂ ಹೆದರಿ ಅಲ್ಲಿಂದ ಪರಾರಿಯಾದರು.

ಅಜ್ಜಿಯ ಮನೆಗೆ ರಜೆಗೆಂದು ಹೋದವನು ಮರಳಿದ್ದು ಹೆಣವಾಗಿ. ಎದೆಯೆತ್ತರಕ್ಕೆ ಬೆಳೆದ ಇದ್ದೊಬ್ಬ ಮಗನನ್ನು ಕಳೆದುಕೊಂಡ ರತ್ನಮ್ಮನ ದುಃಖ ಹೇಳತೀರದು. ನನಗೆ ವಿಷಯ ತಿಳಿದದ್ದು ತಡವಾಗಿ, ಅಲ್ಲದೇ ಮಾರನೇ ದಿನ ಪರೀಕ್ಷೆ ಇದ್ದುದ್ದರಿಂದ ಹೋಗಲಾಗಿರಲಿಲ್ಲ. 3 ದಿನ ಕಳೆದ ನಂತರ ಅವರ ಮನೆಗೆ ಹೋದಾಗ ಕೇಳಿದ ಪ್ರಶ್ನೆ ಮನಕಲಕುವಂತಿತ್ತು. ಕಲ್ಲು ಕೂಡಾ ಕರಗುವಂತೆ ಅಳುತ್ತಿದ್ದ ಅವರನ್ನು ಕಂಡು ಅಳದಿರಲು ಸಾಧ್ಯವೇ ಇರಲಿಲ್ಲ. ಸಮಾಧಾನ ಮಾಡಲು ಪದಗಳಿರಲಿಲ್ಲ.

3 ದಿನದಿಂದ ಸರಿಯಾಗಿ ಊಟ,ತಿಂಡಿ,ನಿದ್ರೆಗಳಿಲ್ಲದೆ ಸೊರಗಿದ್ದರು. ನನ್ನ ಮಡಿಲಿನಲ್ಲಿ ಮಲಗಿದ್ದ 2 ನಿಮಿಷ ಅವರ ತಲೆ ನೇವರಿಸುವುದನ್ನು ಬಿಟ್ಟು ಮತ್ತೇನೂ ತೋಚಲಿಲ್ಲ. ಸಮಾಧಾನದ ಮಾತುಗಳೆಲ್ಲಾ ನಿರರ್ಥಕ ಎನ್ನಿಸಿದವು. ನಾನು ದುಃಖವನ್ನು ಅಷ್ಟು ಹತ್ತಿರದಿಂದ ನೋಡಿದ್ದು ಮೊದಲೇನಲ್ಲ, ಆದರೆ ಹೆಸರಿಗೆ ತಕ್ಕಂತೆ 'ರತ್ನ'ದಂತೆಯೇ ಇದ್ದವರ ಬಾಳನ್ನು ಪುತ್ರಶೋಕ ಮಸುಕಾಗಿಸಿದೆ.

"ಪುತ್ರ ಶೋಕಂ ನಿರಂತರಂ" ಎನ್ನುತ್ತಾರೆ. "ಎಲ್ಲವನ್ನೂ ಕಳೆದುಕೊಂಡರೂ ಅವನೊಬ್ಬನಿದ್ದರೆ ಸಾಕು, ಹೇಗಾದರೂ ಬದುಕುತ್ತಿದ್ದೆ" ಎನ್ನುತ್ತಾರೆ. ಅವನನ್ನು ಮರಳಿ ತಂದು ಕೊಡಲು ಸಾಧ್ಯವೇ? ಕೃಷ್ಣ ತನ್ನ ಗುರು ಸಾಂದೀಪನಿಯ ಸತ್ತು ಹೋಗಿದ್ದ ಮಗನನ್ನು ಮರಳಿ ಕರೆತಂದನಂತೆ, ಈಗ ಅಂತಹಾ ಪವಾಡವೇನಾದರೂ ನಡೆಯುವುದೇ?

"ರಾತ್ರಿ ಮಳೆಬಂದು ನನ್ನ ಮಗನನ್ನು ಮಲಗಿಸಿದ್ದ ಜಾಗವೆಲ್ಲಾ ನೆನೆದಿದೆ. ಪಾಪ ನನ್ನ ಕಂದಾ, ಅದೆಷ್ಟು ನಡುಗುತ್ತಿದೆಯೋ? ಒಬ್ಬನೆ ಇರಲು ಅವನು ಭಯ ಪಡುತ್ತಿದ್ದ. ಈಗ ಅದೇಗೆ ಇದ್ದಾನೋ? ಅವನು ಒಬ್ಬನನ್ನೇ ಬಿಟ್ಟ ನಾನು ಇಲ್ಲಿ ಬೆಚ್ಚಗೆ ಕುಳಿತಿದ್ದೇನೆ." ಎಂದು ಮರುಗುತ್ತಾರೆ.

"ಅವನು ನನ್ನ ಹೊಟ್ಟೆಯಲ್ಲಿದ್ದಾಗ, ಪ್ರತಿ ಇರುವನ್ನೂ, ಪ್ರತಿ ಕ್ಷಣವನ್ನೂ ನೆನೆದು ಸಂತೋಷ ಪಟ್ಟಿದ್ದೇನೆ. ಈ ಪಾಪಿಯ ಹೊಟ್ಟಯಲ್ಲಿ ಹುಟ್ಟಿದ್ದಕ್ಕೇ ಸತ್ತೆಯಾ?ನನ್ನ ಜೊತೆ ಇರಲು ಇಷ್ಟವಾಗಲಿಲ್ಲವೇ? ನನ್ನನ್ನು ಒಬ್ಬಳನ್ನೇ ಬಿಟ್ಟು ಹೊರಟೆಯಾ?" ಎಂದು ಕೇಳುತ್ತಾರೆ. ಉತ್ತರಿಸಲು ಅವನಿಲ್ಲ.

"ಎಲ್ಲಾ ವಿದ್ಯಾರ್ಥಿಗಳ ಉದಾಹರಣೆ ನೀಡಿ ಅವನನ್ನು ಬೆಳೆಸುತ್ತಿದ್ದೆ, ಅದರಲ್ಲೂ ನಿನ್ನ ಬಗ್ಗೆ ಹೆಚ್ಚು ಹೇಳುತ್ತಿದ್ದೆ. ಇನ್ನು ಯಾರ ಬಗ್ಗೆ ಹೇಳಿದರೂ ಕೇಳಲು ಅವನಿಲ್ಲ" ಎಂದು ಕೊರಗುತ್ತಾರೆ.

ಕಿಸಾಗೌತಮಿಯ ಕಥೆ ಹೇಳಿದ ಅವರೇ ಆ ಸ್ಥಿತಿಯಲ್ಲಿ ಇರುವುದನ್ನು ಕಂಡು ಸಂಕಟಪಡುತ್ತೇನೆ. ಯಾರನ್ನೂ ದೂಷಿಸದೇ ವಿಧಿಯನ್ನು ಹಳಿಯುವ ಅವರನ್ನು ಕಂಡು ಮರುಗುತ್ತೇನೆ."ಶಾಪಗ್ರಸ್ತ ದೇವತೆಗಳು ಭೂಮಿಯಲ್ಲಿ ಹುಟ್ಟಿ, ಕೆಲವು ದಿನ ಇದ್ದು ಮರೆಯಾಗುತ್ತಾರಂತೆ, ಅವನು ಶಾಪಗ್ರಸ್ತ ದೇವರು" ಎಂದು ಹೇಳಲು ಹೊರಟು ಮಾತು ಬಾರದೆ ಸುಮ್ಮನಾಗುತ್ತೇನೆ. "ವಿದ್ಯಾರ್ಥಿಗಳಲ್ಲೇ ಮತ್ತೆ ಮಕ್ಕಳನ್ನು ಕಾಣಿ" ಎಂದು ಹೇಳಬೇಕೆಂದರೂ ಸಾಧ್ಯವಾಗದೆ ಗಂಟಲುಬ್ಬಿ ಬರುತ್ತದೆ.

ಅದಾದ ಒಂದೆರಡು ಸಲ ಅವರ ಮನೆಗೆ ಹೋಗಿ ಬಂದೆ. ಯಾವ ವಿಷಯ ಮಾತನಾಡಲು ಶುರು ಮಾಡಿದರೂ ಮತ್ತೆ ಅದು ಹಿಮವಂತನ ವಿಷಯಕ್ಕೇ ಹೋಗಿ ನಿಲ್ಲುತ್ತದೆ.ಆದದನ್ನು ನೆನೆದು ಕೊರಗುತ್ತಾರೆ. ಮೊದಲಿನ ಲವಲವಿಕೆ ಇಲ್ಲದಿದ್ದರೂ, ಹೋದಾಗ ಏನಾದರೂ ತಿನ್ನಲು,ಕುಡಿಯಲು ಕೊಡಲು ತವಕಿಸುತ್ತಾರೆ. ಮತ್ತೆ ಅರೆಕ್ಷಣಕ್ಕೆ ಅದೇ ನೋವಿನಿಂದ ನರಳುತ್ತಾರೆ.

ಇದನ್ನು ಕಂಡು ನನಗನ್ನಿಸುವುದು ಹೀಗೆ, "ನಾನು ಕೂಡಾ ಒಬ್ಬಳೇ ಮಗಳು. ನಾನು ಸತ್ತರೆ,ನನ್ನಮ್ಮ ಕೂಡಾ ಹೀಗೇ ಇರುತ್ತಾರೇನೋ" ಎಂದು. ಕರುಳಬಳ್ಳಿಯ ಸಂಕಟ ಅನುಭವಿಸಿದವರಿಗೇ ಗೊತ್ತು. ಎಷ್ಟೋ ಜನರ ಭವಿಷ್ಯವನ್ನು ರೂಪಿಸಿದ ರತ್ನಮ್ಮ ಮಿಸ್ ನ ಭವಿಷ್ಯ ಅತಂತ್ರವಾಗಿದೆ. ಆದರೆ ಇದೆಲ್ಲವನ್ನೂ ಬದಿಗಿಟ್ಟು ಸಾವಿರಾರು ವಿದ್ಯಾರ್ಥಿಗಳ ಅಮ್ಮನಾಗಿ ಬಾಳುವ ಅವರ ಭವಿಷ್ಯವನ್ನು ಕಾಣಲು ನಾನು ಕಾಯುತ್ತೇನೆ. ಕಾಯುತ್ತಲೇ ಇರುತ್ತೇನೆ.

ಅಕ್ಕರೆಯಿಂದ ಕಲಿಸಿ,ತಪ್ಪನ್ನು ತಿದ್ದಿ, ಮಾತು ಕೇಳದಿದ್ದಾಗ ದಂಡಿಸಿ ಬುದ್ದಿ ಕಲಿಸಿ, ತಿದ್ದುವ ಅಮ್ಮನ ಅವಶ್ಯಕತೆಯಿರುವ ಮಕ್ಕಳು ನಿಮ್ಮನ್ನು ಕಾಯುತ್ತಿದ್ದಾರೆ. ಅವರೊಂದಿಗೆ ನಿಮ್ಮ ಮುಖದಲ್ಲಿ ಮಿನುಗುವ ನಗುವಿಗೆ, ನಿಮ್ಮ ಹಾಡಿಗೆ ನಾನೂ ಕಾಯುತ್ತಿರುತ್ತೇನೆ.

ಮಸುಕಾಗಿರುವ ರತ್ನ ಮತ್ತೆ ಹೊಳಪು ತುಂಬಿ ಹೊಳೆಯಲಿ ಎಂಬ ಆಸೆ ನನ್ನದು.

~ವಿಭಾ ವಿಶ್ವನಾಥ್

ಗುರುವಾರ, ಅಕ್ಟೋಬರ್ 18, 2018

ನವೋಲ್ಲಾಸದ ನವರಾತ್ರಿ


ನವನವೋತ್ಸಾಹದಲಿ ಆಚರಿಸುವ
ಸಂಭ್ರಮದ ನವರಾತ್ರಿಯನು..

ಗಜರಾಜನ ಮೇಲೇರಿ ಕುಳಿತು
ಚಿನ್ನದ ಅಂಬಾರಿಯಲಿರುವ
ಚಾಮುಂಡಾಂಬೆಯ ಪೂಜಿಸುತ
ಭಕ್ತಿಯಲಿ ಆಚರಿಸುವ ನವರಾತ್ರಿಯ

ನವನಾಮದಿ ನಲಿನಲಿದಾಡುವ
ಶಕ್ತಿಯ ಅಧಿದೇವತೆಯ ಅರ್ಚಿಸಿ
ಗೊಂಬೆಗಳ ಕೂರಿಸಿ ಆಚರಿಸುವ
ನಮ್ಮ ಮನೆಮನೆಯ ಹಬ್ಬ ದಸರಾವನು

ಶಕ್ತಿ ಅಭಿಮಾನಗಳಾ ಸಂಕೇತವಾಗಿ
ಆಯುಧಪೂಜೆ, ವಿಜಯದಶಮಿಗಳು
ನವರಾತ್ರಿಗೆ ಮೆರುಗು ನೀಡುತ
ತಂದಿದೆ ಹರುಷದ ಹೊನಲ ಮನಕೆ

ಬಂಧು-ಭಾಂಧವರೆಲ್ಲ ಒಂದುಗೂಡಿ
ಸಾಂಗೋಪಾಂಗವಾಗಿ ಪೂಜಿಸಿ
ಚಾಮುಂಡಾಂಬೆಯ ಆಶೀರ್ವಾದ ಬೇಡಿ
ಧನ್ಯರಾಗುವ ಆಕೆಯ ಪಾದಪದ್ಮದಲಿ

ಶಕ್ತಿ,ಯುಕ್ತಿ ಭಕ್ತಿಗಳೊಡನೆ ಮಿಳಿತವಾಗಿ
ಹರುಷದ ಹೊಳೆಯಲಿ ಮಿಂದು
ಮನೆಮನದಲಿ ನವೋಲ್ಲಾಸ ತಳೆದು
ನಡೆಸುವ ನಾಡಹಬ್ಬ ನವರಾತ್ರಿಯ

~ವಿಭಾ ವಿಶ್ವನಾಥ್

ಗುರುವಾರ, ಅಕ್ಟೋಬರ್ 11, 2018

ಬಂಧಗಳ ಬದುಕು

ಬಾಡಿಯೇ ಹೋದಂತಿದ್ದ ಸಂಬಂಧಗಳು
ಮತ್ತೆ ಚಿಗುರಲು ಹವಣಿಸುತ್ತಿರುವಾಗ
ಚಿಗುರನ್ನು ಚಿವುಟುವುದೋ..?
ಹೂವನ್ನು ಕಿತ್ತೆಸೆಯುವುದೋ..?
ಕಾಯಾಗುವ ಮುನ್ನ ಹೀಚಲ್ಲೇ ಹಿಸುಕುವುದೋ.?
ಹಣ್ಣಾಗಿ ಫಲ ಕೊಡಲೆಂದು ನಿರೀಕ್ಷಿಸುವುದೋ..?
ಮತ್ತದೇ ವಿಷ ಬೀಜ ಚಿಗುರಿದರೆ..!
ಆ ಮರವೇ ವಿಷವೃಕ್ಷವಾದರೆ..?!
ಮುಂದೊಮ್ಮೆ ಮರುಗಿ ಕೊರಗುವ ಬದಲು
ಚಿಗುರುವಾಗಲೇ ಮುರುಟಿ ಹಾಕಿದರೆ..!
ಕೆಡುಕು ಸಂಭವಿಸದೆ ಒಳಿತೇ ಆಗಲಿ ಎಂಬ
ಆಶಾಭಾವನೆಯಿಂದ ಸಂಬಂಧಗಳ ಸಾಕಿ
ಪ್ರೀತಿ,ವಾತ್ಸಲ್ಯದ ನೀರುಣಿಸಿ ಬೆಳೆಸುವ..
ತ್ಯಾಗವೆಂಬ ಪೋಷಕಾಂಶವ ನೀಡಿ
ಹಸನಾದ ಫಲ ಸಿಗಲೆಂದು ಆಶಿಸುವ..
ಆದರೆ ವಿಷವೃಕ್ಷವಾಗ ಹೊರಟರೆ
ಕೊಡಲಿ ಕಾವಿಗೆ ಕೆಲಸ ಕೊಡುವ..
ಕೈಗೆ ಕೊಡಲಿ ನೀಡುವ ಬದಲು
ನೀರುಣಿಸುವ ಕೆಲಸವೇ ಸಿಗಲಿ..
ತಾವೂ ಉತ್ತಮರಂತೆ ಬದುಕಲೆತ್ನಿಸಲಿ
ನಮ್ಮನ್ನೂ ಬದುಕಲಿ ಬಿಡಲೆಂದೇ ಹಾರೈಸುವ..

~ವಿಭಾ ವಿಶ್ವನಾಥ್

ಸೋಮವಾರ, ಅಕ್ಟೋಬರ್ 1, 2018

ಮತ್ತೇನು ಮಾಡಬಲ್ಲಳವಳು?

ಲೋಕದ ಕಣ್ಣಿಗೆಲ್ಲಾ ಬಹು ಸುಖಿಯವಳು
ಪಂಜರದ ಪಕ್ಷಿಯ ಪಾಡು ಕೇಳುವವರಾರು?
ಸುಖವೋ.. ದುಃಖವೋ.. ಹಾಡಬಲ್ಲಳಷ್ಟೇ
ಹಾಡುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಜಗದ ಕಣ್ಣಿಗೆಲ್ಲಾ ಸುಖೀ ಸಂಸಾರದ ಒಡತಿ
ಗಾಣದೆತ್ತಿನ ದುಡಿಮೆ ಅವಳ ಪಾಲಿಗೆ
ಸುಖವೋ.. ದುಃಖವೋ.. ದುಡಿಯಬಲ್ಲಳಷ್ಟೇ
ದುಡಿಯುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಜಗಕೆ ಗಳಿಸಿ ಸುಖಪಡುವ ಹೆಣ್ಣಂತೆ ಕಾಣುವಳು
ತೃಪ್ತಿಯಿಲ್ಲದೇ ದುಡಿಯುವುದೇ ಅವಳ ಪಾಡು
ಸುಖವೋ.. ದುಃಖವೋ.. ಗಳಿಸಬಲ್ಲಳಷ್ಟೇ
ಗಳಿಸುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಅವಳು ಮತ್ತೇನು ಮಾಡಬಲ್ಲಳು ಎಂದುಕೊಂಡೇ
ಮಾಡಿದ ಅಡಿಗೆಯನೆಲ್ಲಾ ಉಂಡದ್ದಾಯಿತು
ತೋರಿದ ಪ್ರೀತಿಯನೆಲ್ಲಾ ಸವಿದು ತಿರಸ್ಕರಿಸಿದ್ದಾಯಿತು..
ಸಹಿಸುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಎಷ್ಟೆಂದು ಸಹಿಸುವಳು ಅವಳು..?
ತುಟಿ ಮೀರಿ ಆಚೆ ಬಂದಿದೆ ಮರುಮಾತು..
ತೋರಬಾರದೆಂದುಕೊಂಡ ಕ್ರೋಧ ಸಹಾ
ಅದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಲೋಕದ ಪಾಲಿಗೆ ಅವಳೇನೇ ಆದರೂ..
ಅಂತರಂಗದಲಿ ಮತ್ತದೇ ಆರ್ದ್ರತೆಯ ಹೆಣ್ತನ
ಅಂದದೆಲ್ಲವ ಅಡಿಗಡಿಗೆ ನೆನಪಿಸಿಕೊಂಡು ಬಿಕ್ಕುತ್ತಾ
ಪಶ್ಚಾತ್ತಾಪ ಪಡುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಮರೆವೆಂಬ ಹಣೆಪಟ್ಟಿಯ ನಿರ್ಲಕ್ಷ್ಯ ಸಹಿಸಿಕೊಂಡು
ಇಂದಲ್ಲಾ ನಾಳೆ ಎಲ್ಲವೂ ಸರಿಯಾಗುವುದೆಂಬ ಭರವಸೆಯಲಿ
ಲೋಕದ ಕಣ್ಣಿಗೆಲ್ಲಾ ಸುಖಿಯಾಗಿಯೇ ಕಾಣುತ್ತಾ
ಮಮತಾಮಯಿಯಾಗುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

~ವಿಭಾ ವಿಶ್ವನಾಥ್




ಶುಕ್ರವಾರ, ಸೆಪ್ಟೆಂಬರ್ 28, 2018

ಆತ ಮತ್ತು ಈಕೆ

ಆಗ, ಆತ ಭಾವಗಳಲ್ಲಿ ಶಾಂತತೆಯ ಆಗರ
ಈಕೆ ಕೃತಿಯಲ್ಲಿ ಭೋರ್ಗರೆಯುವ ಕಡಲು
ಈಗ, ಆತ ಉಕ್ಕಿ ಹರಿಯುವ ಹುಚ್ಚು ಹೊಳೆ..
ಈಕೆ ಭರತವಿಳಿದ ಮಂದ್ರ ಸಾಗರದಂತಾ ನಡೆ

ಎಲ್ಲದಕ್ಕೂ ಕುತೂಹಲದ ಪ್ರಶ್ನೆ ಮಾಡುವಾಕೆಗೆ
ಎಲ್ಲದರ ಉತ್ತರ ಕೊಡುವ ಆಸಕ್ತ ಆತ
ಕೇಳುತ್ತಾ, ಈಕೆ ಮೌನಿಯಾಗುತ್ತಲೇ ಹೋದಳು
ಉತ್ತರಿಸುತ್ತಾ ಆತ ವಾಚಾಳಿಯಾಗುತ್ತಲೇ ಇದ್ದ

ಆಗ ಕೆಲವೊಂದರಲಿ ಆತ ಪೂರ್ವ,ಈಕೆ ಪಶ್ಚಿಮ
ಈಗ ಅವೆಲ್ಲದರಲ್ಲೂ ಆತ ಪಶ್ಚಿಮ,ಈಕೆ ಪೂರ್ವ
ಹೊಸದರಲಿ ಎಲ್ಲವೂ ಬೇಕೆನಿಸುವ ಆಸೆ ಆಕೆಗೆ
ಈಗೀಗ ಎಲ್ಲವನ್ನೂ ಆತನಿಗೆ ನೀಡುವುದೇ ಆಸೆ

ಇಬ್ಬರೂ ಒಬ್ಬರನೊಬ್ಬರು ಒಪ್ಪಿ ಅರಿಯುವಲ್ಲಿ
ಬದಲಾದರು ಈಕೆಯಂತೆ ಆತ,ಅವನಂತೆ ಈಕೆ
ಬದಲಾವಣೆಯ ಇಬ್ಬರ ಈ ಪರಿಭ್ರಮಣವೇ
ಆಕೆ ಮತ್ತು ಈತನ ಜೀವನದ ಮರುಸಮ್ಮಿಲನ

~ವಿಭಾ ವಿಶ್ವನಾಥ್

ಶುಕ್ರವಾರ, ಸೆಪ್ಟೆಂಬರ್ 21, 2018

ಕನಸು

ನನ್ನ ಇಡೀ ಜೀವನದುದ್ದಕ್ಕೂ
ಉಳಿಯಬೇಕಿದ್ದ ಕನಸಿನ ಮನೆ
ಒಡೆದು ಚೂರಾಯಿತೇ ಈಗಲೇ..?
ಬಾಳುವ ಮೊದಲೇ ಹಾಳಾಗಿದೆ
ಮತ್ತೆಂದೂ ಆ ಕನಸೇ ಕಾಣದಂತೆ..

ಅಂಗಾಲಿಗೆ ಹೊಕ್ಕಿ ಅಲ್ಲೇ ಉಳಿದು
ರಕ್ತವನೆಲ್ಲಾ ಬಸಿದುಕೊಂಡು
ಮತ್ತೆಂದೂ ನಡೆಯಲಾರದಂತೆ
ಚುಚ್ಚಿ ನೋಯಿಸುತ್ತಿದೆ ಕನಸಿನ ಗಾಜು
ಮತ್ತೆಂದೂ ಇತ್ತ ಕಾಲಿಡಬೇಡವೆನ್ನುತ್ತಾ..

ನೋವಿನಾಳದಲೂ ನೋವುಳಿದು
ಅಲ್ಲೇ ಬಾವಾಗಿ, ಕೀವುಳಿದು
ಕನಸು ಸತ್ತು ಕಾಲವೇ ಆಗಿದೆ
ತಾನಾಗೇ ಸತ್ತ ಕನಸಿಗೆ ಮೋಕ್ಷವಿಲ್ಲ
ಪುನರ್ಜನ್ಮಕ್ಕಾಗಿ ಮತ್ತೆ ಹುಟ್ಟುವುದಿಲ್ಲ

ಕಟ್ಟಿದ್ದ ಕನಸು ಒಡೆದಿತ್ತು
ಜೋಡಿಸಲು ಸಮಯವೇ ಸಿಗದಂತೆ
ಉದುರಿ ಬಿದ್ದು ನಲುಗಿತ್ತು
ಆಯ್ದು ಮತ್ತೆಂದೂ ಜೋಡಿಸಲಾಗದಂತೆ
ಕಾಲನ ಕೈವಶವಾಗಿ ಹೋಗಿತ್ತು

ಕನಸು ಕೂಡ ಪಾಠ ಕಲಿಸಿತ್ತು
ಕೈ ಕೊಟ್ಟು ಹೇಳದೆ ಕೇಳದೆ
ಹೊರಡುವ ಪ್ರೇಮಿಯಂತೆ..
ನಾನು ಕಟ್ಟಿದ ಬುನಾದಿ ಸರಿಯಿಲ್ಲವೇ?
ಅಥವಾ ನಾನೇ ಸರಿಯಿಲ್ಲವೇ?

ನನಸಾಗದ ಕನಸದುವೆ
ಉಳಿದು ಹೋಯಿತು ಹೆದೆಯಲಿ
ಎಂದೂ ಮಾಯದ ಗಾಯದಂತೆ..
ಇನ್ನು ಹಾಗಾಗದೆ ಹೀಗಿರಬೇಕೆನ್ನುತ್ತಾ
ಮತ್ತೊಂದು ಕನಸು ಕಟ್ಟುತ್ತಿರುವೆ

~ವಿಭಾ ವಿಶ್ವನಾಥ್

ಮಂಗಳವಾರ, ಸೆಪ್ಟೆಂಬರ್ 18, 2018

ಕನಸಿನ ಬಿಡುಗಡೆ

ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಎಂಬ ಮಾತು ಸತ್ಯ ಎಂಬುದು ಮತ್ತೆ ಅರಿವಾಗುವ ಹೊತ್ತು. ಏಕೆಂದರೆ, ಬಚ್ಚಿಟ್ಟ ಕನಸುಗಳು ಆ ಜಾಗದಿಂದ ತಪ್ಪಿಸಿಕೊಂಡು ಮತ್ತೆಲ್ಲಿಗೋ ಹೊರಟು ಹೋಗಿವೆ, ಮುಚ್ಚಿಟ್ಟ ಮಾತುಗಳು ಅಲ್ಲೇ ಮರೆಯಾಗಿವೆ.

ಕನಸುಗಳ ನೆನಪು ಮಾಡಿಕೊಳ್ಳುತ್ತಾ ಅವುಗಳನ್ನು ಬಿಚ್ಚಿಟ್ಟು ಇರುವ ಜೀವನವನ್ನು ಕಳೆದುಕೊಳ್ಳುವ ಕಾರ್ಯವನ್ನು ನಾನು ಮಾಡುವುದಿಲ್ಲ. ಆದರೆ, ನನ್ನ ಕನಸೆಲ್ಲವೂ ನಿನಗೆ ಅರ್ಥವಾಗಿ ಅದು ಮತ್ತೊಂದು ಅನರ್ಥಕ್ಕೆ ಕಾರಣವಾಗಬಾರದಲ್ಲ, ಕನಸು ಕನಸಾಗಿಯೇ ಉಳಿದು ಬಿಡಲಿ. ಆ ಕನಸು ನನ್ನ ಕಣ್ಣಿಂದ ಕನಲಿ ಹೋಗಲಿ.ಕನಸಿನ ಬದುಕು ಕನಸಾಗಿಯೇ ಉಳಿದು ಬಿಡಲಿ. ಕಾಲದ ಕಣ್ಣಿನಲ್ಲಿ ಕನಸಾಗಿಯೇ ಕಾಣುವ ಆ ಬದುಕು ಕನಸಾಗಿಯೇ ಉಳಿದು ಬಿಡಲಿ. ಇರಲಿ, ಮತ್ತೊಂದು ವಿಷಯ, ಬಚ್ಚಿಟ್ಟ ಕನಸು ತಪ್ಪಿಸಿಕೊಂಡು ಎಲ್ಲಿಗೋ ಹೋಗಲಿಲ್ಲ. ಬದಲಿಗೆ ನಾನೇ ಆ ಕನಸನ್ನು ಬಿಡುಗಡೆ ಮಾಡಿಬಿಟ್ಟೆ.

ಆ ಕನಸು ಸಹಾ ನನ್ನೊಳಗೆ ಬಹುದಿನಗಳಿಂದ ಬಂಧಿಯಾಗಿಬಿಟ್ಟಿತ್ತು. ಅಜೀವ ಕಾರಾಗೃಹ ಶಿಕ್ಷೆ ಹೊಂದಿದ ಖೈದಿಗಳೇ ಬಿಡುಗಡೆಯಾಗುತ್ತಾರೆ. ಅದೂ ಸನ್ನಡತೆ ಎಂಬ ಕಾರಣದಿಂದ ಮುಂಚಿತವಾಗಿಯೇ ಬಿಡುಗಡೆಯಾಗುತ್ತಾರೆ. ಆದರೆ, ನನ್ನ ಒಳ್ಳೆಯ ಕನಸೇಕೆ ಬಂದಿಯಾಗಿರಬೇಕು? ಕನಸಿನ ಅಳಿದುಳಿದ ಆಯುಷ್ಯವಾದರೂ ಮತ್ತೊಬ್ಬರ ಕಂಗಳಲಿ ಜೀವಿಸಲಿ.

"ಯಾರದೋ ಕನಸು, ಮತ್ತಾರದೋ ಕಂಗಳಲಿ
ಬದುಕಿ ಬಾಳುವ ಕನಸುಗಳಿಗೆಂದಿಗೂ ಸಾವಿಲ್ಲ"

ಭವಿಷ್ಯದ ಅಮೂರ್ತ ರೂಪವೇ ನನ್ನೊಳಗೆ ಜೀವಿಸಿತ್ತು, ನನ್ನೊಳಗೊಂದಾಗಿ ಜೀವಿಸಿತ್ತು. ಬದುಕಿನ ಅವಿನಾಭಾವ ಬಂಧ ಎಂಬಂತೆ ಬದುಕಿದ್ದ ಕನಸು ಇರದೇ ಕೂಡಾ ಬದುಕಬಹುದೆಂಬುದು ಈ ಹೊತ್ತಿನಲ್ಲಿ ಅರಿವಾಗುತ್ತಲಿದೆ. ಕನಸಿನೊಡನೆಯ ನನ್ನ ಬಂಧ ಸಧ್ಯಕ್ಕೆ ನನ್ನೊಡನೆಯೇ ಮುಗಿಯಿತು. ರಕ್ತಸಂಬಂಧವೇ ಕಡಿದು ಹೋಗುವ ಈ ಹೊತ್ತಿನಲ್ಲಿ, ಎಂದೋ, ಯಾವುದೋ ಸಂಧರ್ಭದಲ್ಲಿ ನನ್ನೊಡನೆಯೇ ಜೀವಿಸಿದ್ದ ಕನಸೊಂದು ಲೆಕ್ಕವೇ..?

ನನ್ನ ಕನಸಿನ ಬದುಕಿನಂತೆಯೇ ಎಲ್ಲವೂ ನಡೆದಿದ್ದರೆ, ಎಂಬ ಪ್ರಶ್ನೆಉದ್ಭವಿಸದೇ ಇರುವುದಿಲ್ಲ. ಅಷ್ಟಕ್ಕೂ, ಆ ಕನಸು ನಿನಗೆ ತಿಳಿಯದಿದ್ದರೇನೇ ಒಳಿತು. ಕೆಲವೊಮ್ಮೆ ಬಾನಿನ ಚಂದ್ರ, ನಕ್ಷತ್ರಗಳು ಕೈಗೆ ಸಿಕ್ಕರೆಷ್ಟು ಚೆಂದ ಎನ್ನಿಸುತ್ತದೆ. ಆದರೆ ಅವುಗಳು ಕೈಗೆ ಸಿಗುವುದುಂಟೇ..? ಸಿಕ್ಕರೂ ಆ ಕ್ಷಣಕ್ಕೆ ಮಾತ್ರ ಸಂತೋಷ.. ನಂತರ ಅವುಗಳ ರಕ್ಷಣೆಯ ಕುರಿತು ಆತಂಕ ಹೆಚ್ಚಾಗುತ್ತಲೇ ಇರುತ್ತದೆ. ಚಂದ್ರ,ತಾರೆಗಳು ಬಾನಿನಲ್ಲಿ ಹೊಳೆಯುತ್ತಿದ್ದರೇನೇ ಚೆಂದ. ಕೈಗೆ ಸಿಕ್ಕರೂ ಸಿಗದಂತಹ ಚಂದ್ರನನ್ನು ಬಯಸುತ್ತಾ ಅದೇ ಬಯಕೆಯ ಬದುಕಿಗೆ ಒಗ್ಗಿಬಿಡುತ್ತೇವೆ ಮತ್ತು ಅದರಲ್ಲೇ ಸಂತೋಷವನ್ನು ಕಾಣುತ್ತೇವೆ.

ಮುಳ್ಳು ಚುಚ್ಚಿಸಿಕೊಂಡ ಕಾಲಿನ ಹಾಗೆ, ಕಳೆದು ಹೋದ ಕನಸು ಕೂಡಾ ಕಾಡುತ್ತಲೇ ಇರುತ್ತದೆ. ಮರೆಯಲು ಸಾಧ್ಯವೇ ಇಲ್ಲದ ನನ್ನ ಜೀವಿತದ ಕನಸು ಅದು. ಕನಸನ್ನು ಕಾಣಲಾಗದೆಂಬ ಕಾರಣಕ್ಕೆ ಮನಸ್ಸು ಚಡಪಡಿಸುತ್ತಲೇ ಇರುತ್ತದೆ. ಇದ್ದಾಗ ಕನಸಿನ ಬೆಲೆ ತಿಳಿಯಲಿಲ್ಲ, ಹೊರಟ ನಂತರ ಚಡಪಡಿಸುವಿಕೆ. ಮತ್ತೊಬ್ಬರ ಕಂಗಳಲ್ಲಿ ಆ ಕನಸು ಹೊಳೆದರೆ ಖುಷಿ, ಮಸುಕಾದರೆ ಮತ್ತದೇ ಕಾಡುವಿಕೆ. ಆದರೆ ಆಗ ಅದನ್ನು ಸರಿಪಡಿಸುವ ಸ್ಥಿತಿಯಲ್ಲಿ ನಾನಿರುವುದಿಲ್ಲ ಎಂಬುದೇ ಬೇಸರ.

ಕನಸು ಕೂಡಾ ಒಂದು ರೀತಿ ಹೆಣ್ಣುಮಕ್ಕಳಂತೆಯೇ.. ಮದುವೆ ಮಾಡಿಕೊಡುವವರೆಗೆ ಒಂದು ರೀತಿ ಚಿಂತೆ. ಮದುವೆ ಮಾಡಿಕೊಂಡು ಹೊರಟಾಗ ದುಃಖ. ಮದುವೆಯ ನಂತರದ ಅವಳ ಜೀವನ ಅವಳ ಹಣೆಬರಹಕ್ಕೇ ಬಿಟ್ಟಿದ್ದಲ್ಲವೇ..? ಹಾಗೇ ನನ್ನ ಕನಸಿನ ಹಣೆಪಾಡು ಹೇಗಿದೆಯೋ ಹಾಗೇ ಆಗಲಿ. ಬಯಸುವುದಷ್ಟೇ ಉಳಿದಿದೆ ನನ್ನ ಪಾಲಿಗೆ. ಒಳಿತೇ ಆಗಲಿ ಎಂದೇ ಬಯಸುವೆ. ಮತ್ತೊಬ್ಬರ ಕಣ್ಣಲ್ಲಿ ಆ ಕನಸು ಮಿನುಗಲಿ ಎಂದಷ್ಟೇ ನಾನು ಬಯಸುವೆ.

ಎಲ್ಲರೂ ಪುಸ್ತಕ ಬಿಡುಗಡೆ ಮಾಡಿ ಸಂತೋಷ ಪಡುತ್ತಾರೆ. ಖೈದಿಗಳು ಜೈಲಿನಿಂದ ಹೊರಬಂದರೆ ಬಿಡುಗಡೆಯ ಸಂತಸವನ್ನು ಅನುಭವಿಸುತ್ತಾರೆ. ಆದರೆ ನಾನು ನನ್ನ ಕನಸನ್ನು ಬಿಡುಗಡೆಗೊಳಿಸಿರುವೆ. ಸಂತೋಷವಿದೆಯೋ, ದುಃಖವಿದೆಯೋ, ಖೇದವಿದೆಯೋ ಎಂದು ಅರಿವಾಗದ ಹೊತ್ತಲ್ಲೇ ಕನಸು ಬಿಡುಗಡೆಗೊಂಡಿದೆ. ಬಿಡುಗಡೆಗೊಂಡ ಕನಸಿಗೆ ತಾನು ನನ್ನಿಂದ ಮುಕ್ತಿ ಹೊಂದಿದ ಸುಖ. ಆದರೆ, ನನಗೆ ಏನೊಂದೂ ಹೇಳಲಾಗದ ಅಯೋಮಯ ಸ್ಥಿತಿ. ಆದರೂ.., ನನ್ನ ಕನಸಿನ ಬಿಡುಗಡೆ ಮತ್ತೊಬ್ಬರ ಕಣ್ಣಿನ, ಮತ್ತೊಂದು ಕನಸಿನ ಉದಯಕ್ಕೆ ಕಾರಣವಾಗುತ್ತದೆ ಎಂಬುದೇ ಸದ್ಯಕ್ಕೆ ಸಮಾಧಾನಕರ. ಅಂತೂ ಇಂತೂ , ಇವೆಲ್ಲದರ ನಡುವೆಯೇ ನನ್ನ ಕನಸು ಬಿಡುಗಡೆಗೊಂಡಿದೆ.

~ವಿಭಾ ವಿಶ್ವನಾಥ್

ಬುಧವಾರ, ಸೆಪ್ಟೆಂಬರ್ 5, 2018

ಗುರು ತೋರುವ ಮಾರ್ಗ


ಸರಿ ಮಾರ್ಗ ತೋರುವವನು ಗುರು. ಕೆಲವರು ಹೆಸರಿಗಷ್ಟೇ ಸೀಮಿತವಾಗಿರುತ್ತಾರೆ. ಗುರುಗಳೂ ನಮ್ಮಂತೆಯೇ ಮನುಷ್ಯರೇ.. ಅವರು ಎಲ್ಲವೂ ಆಗುವುದಕ್ಕೆ ಸಾಧ್ಯವಿಲ್ಲ ನಿಜ ಆದರೆ ಆ ರೀತಿಯ ಸಂಕೋಲೆಗಳನ್ನು ಮೀರಿ ಸರಿ ದಾರಿ ತೋರಿ ತಿದ್ದಿ  ನಡೆಸಿ ತಮ್ಮ ಮಕ್ಕಳಂತೆಯೇ ಭಾವಿಸುತ್ತಾ ಶಿಕ್ಷಿಸಿ,ಕ್ಷಮಿಸಿ ಮುನ್ನಡೆಸುವ ಶಿಕ್ಷಕರೂ ಇದ್ಡಾರೆ. ಒಂದಕ್ಷರ ಕಲಿಸಿದವರೂ ಗುರುಗಳೇ.. ಕೆಲವರು ವಿದ್ಯೆಯೇ ಕಲಿಯದೆ ಜೀವನದ ಪಾಠ ಕಲಿಸುತ್ತಾರೆ. ಅಂತಹವರೂ ಗುರುಗಳೇ. ಪರೋಕ್ಷವಾಗಿ, ಅಪರೋಕ್ಷವಾಗಿ ಪಾಠ ಕಲಿಸುವ ಎಲ್ಲರೂ ಗುರುಗಳೇ.

ಅಪ್ಪ-ಅಮ್ಮ ಮೊದಲ ಗುರುಗಳಾದರೆ, ಉಳಿದವರು ಹಂತ-ಹಂತವಾಗಿ ಜೀವನದ ಪಾಠ ಕಲಿಸುವವರು.ಒಂದರ್ಥದಲ್ಲಿ ಜೀವನವೂ ಗುರುವೇ. ಪಾಠದ ಜೊತೆಗೆ ಪೂರಕ ವಿಷಯ, ನೀತಿ ಕಥೆಗಳನ್ನು ಹೇಳುವ ಗುರುಗಳು ಇದ್ದ ಹಾಗೆಯೇ ಪಾಠಕ್ಕಷ್ಟೇ ಸೀಮಿತಗೊಳಿಸುವ ಗುರುಗಳೂ ಇದ್ದಾರೆ. ಮನೆಮಕ್ಕಳಂತೆ ಭಾವಿಸುವ ಗುರುಗಳಿದ್ದಂತೆಯೇ, ದರ್ಪ ತೋರಿ ದೂರ ಇಡುವ ಗುರುಗಳೂ ಇದ್ದಾರೆ. ಯಾವ ದುರುದ್ದೇಶ, ದುರಾಲೋಚನೆಯೇ ಇಲ್ಲದೆ ವರ್ತಿಸುವ ಗುರುಗಳಿದ್ದಂತೆಯೇ, ಪೂರ್ವಾಗ್ರಹ ಪೀಡಿತರಂತೆ ವರ್ತಿಸುವ ಗುರುಗಳೂ ಇದ್ದಾರೆ. ಪ್ರಾಜೆಕ್ಟ್ ಸಮಯದಲ್ಲಿ ತಾವೇ ಎಲ್ಲಾ ಸಹಾಯ ಮಾಡಿದರೂ ಹೆಸರೇಳಲು ಇಚ್ಚಿಸದ ಗುರುಗಳಿದ್ದಂತೆ ನಮ್ಮ ಪ್ರಾಜೆಕ್ಟ್ ಅನ್ನು ನಮಗೇ ಗೊತ್ತಿಲ್ಲದಂತೆ ಅವರ ಹೆಸರಿನಲ್ಲಿ ಪ್ರಕಟಿಸಿಕೊಂಡಿರುವ ಗುರುಗಳೂ ಇದ್ದಾರೆ. ವಿದ್ಯಾರ್ಥಿಗಳ ಜೊತೆ ಭೇದ-ಭಾವವಿಲ್ಲದೆ ಬೆರೆಯುವ ಗುರುಗಳಿದ್ದಂತೆ, ಹಣಕ್ಕೆ ಬೆಲೆ ಕೊಟ್ಟು ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುವ ಗುರುಗಳೂ ಇದ್ದಾರೆ. ತಾನು ಪ್ರಿನ್ಸಿಪಾಲ್ ಎಂಬ ದರ್ಪವನ್ನು ತೋರಿಸದೇ ನಮ್ಮೊಡನೆ ನೆಲದಲ್ಲಿ ಕುಳಿತು ಹರಟುವ, ನಮ್ಮೊಡನೆಯೇ ಊಟ ಮಾಡುವ, ಶ್ರಮದಾನದಲ್ಲಿ ಭಾಗಿಯಾಗುವ ಗುರುಗಳಿದ್ದಂತೆ ತಾನು ಪ್ರಿನ್ಸಿಪಾಲ್ ತಾನು ಬರುತ್ತಿದ್ದರೆ ದೂರ ನಿಲ್ಲಬೇಕು, ತನಗಾಗಿ ಘಂಟೆಗಟ್ಟಲೆ ಕಾಯಬೇಕು ಎಂಬಂತೆ ವರ್ತಿಸುವ ಶಿಕ್ಷಕರೂ ಇದ್ದಾರೆ.ತನ್ನ ಹೆಸರು ಸ್ಪೂರ್ತಿ ನೀಡಿದ ಪಟ್ಟಿಯಲ್ಲಿರಬೇಕು ಎಂದು ಬಯಸುವ ಗುರುಗಳಿದ್ದಂತೆಯೇ ಪ್ರತಿಫಲ ಬಯಸದ ಗುರುಗಳೂ ಇದ್ದಾರೆ.

ಇವರೆಲ್ಲ ನಾನು ನೋಡಿದ, ನಾನು ಪಾಠ ಹೇಳಿಸಿಕೊಂಡ ಗುರುಗಳೇ. ಇಬ್ಬರೂ ಗುರುಗಳೇ ಒಬ್ಬರಿಂದ ನಾವು ಹೇಗೆ ಬದುಕಬೇಕು ಎಂಬ ಪಾಠ ಕಲಿತರೆ, ಮತ್ತೊಬ್ಬರಿಂದ ನಾವು ಹೇಗೆ ಬದುಕಬಾರದು ಎಂಬ ಪಾಠ ಕಲಿಯುತ್ತೇವೆ. ವಿದ್ಯಾರ್ಥಿಗಳು ಹೇಳಿದ್ದನ್ನು ಕೇಳಿ ಕಲಿಯುವುದಕ್ಕಿಂತ, ನೋಡಿ ಕಲಿಯುವುದೇ ಹೆಚ್ಚು.ಬದಲಾದರೂ, ಬದಲಾಗದಿದ್ದರೂ ಅವರೆಲ್ಲಾ ನನ್ನ ಗುರುಗಳೇ. ಅವರಿಗೆ ಮರು ನುಡಿಯುವುದಿಲ್ಲ. ಏಕೆಂದರೆ, ವಿದ್ಯೆಯಿಂದ ವಿನಯ ಎಂಬ ಸಂಸ್ಕಾರವನ್ನು ನನ್ನ ಹಲವು ಗುರುಗಳು ಕಲಿಸಿದ್ದಾರೆ.

ಇಂದು ಶಿಕ್ಷಕರ ದಿನ. ಈ ಪಟ್ಟಿಯಲ್ಲಿದ್ದ ಹಲವು ಗುರುಗಳಿಗೆ ಇಂದು "ಶಿಕ್ಷಕರ ದಿನಾಚರಣೆ"ಯ ಶುಭಾಶಯ ಕೋರಿದಾಗ ನೀಡಿದ ಪ್ರತಿಕ್ರಿಯೆ ನಿಜಕ್ಕೂ ಖುಷಿ ತಂದಿತು. ಎಲ್ಲರೂ ಖುಷಿಯಿಂದ ಥ್ಯಾಂಕ್ಸ್ ಎಂದರು. ಕೆಲವರು ಅದರ ಜೊತೆಗೆ "ಆಲ್ ದಿ ಬೆಸ್ಟ್","ಹೋಪ್ ಯು ಆರ್ ಡೂಯಿಂಗ್ ವೆಲ್" ಎಂದರು. ಎಲ್ಲದಕ್ಕಿಂತ ವಿಶೇಷ "ಗಾಡ್ ಬ್ಲೆಸ್ ಯು" ಎಂದರು. ದೇವರು ಆಶೀರ್ವಾದ ಮಾಡಿ ಹರಸುತ್ತಾನೆಯೋ ಇಲ್ಲವೋ ಗೊತ್ತಿಲ್ಲ. ಗುರುಗಳಂತೂ ಹರಸಿದರು. ಅಷ್ಟಲ್ಲದೇ ಹೇಳಿದ್ದಾರೆಯೇ "ಹರ ಮುನಿದರೂ ಗುರು ಕಾಯುವನು" ಎಂದು. ಸರಿ ದಾರಿ ತೋರಿದ, ತೋರುತ್ತಿರುವ,ತೋರುವ ಗುರುಗಳ ಕೃಪೆ ಹೀಗೇ ಇರಲಿ.

~ವಿಭಾ ವಿಶ್ವನಾಥ್     

ಗುರು

ಗುರು ತೋರುವರು
ಸರಿ ಮಾರ್ಗವನು..
ತಿದ್ದಿ ನಡೆಸುವರು
ಪ್ರತಿ ಹೆಜ್ಜೆಯನು..

ನಾಗರೀಕರಾಗಿ ಬಾಳಲು
ಗುರು ದಾರಿದೀಪವು..
ನಮಿಸುವ ಅವರಿಗೆ
ತಪ್ಪದೆ ದಿನನಿತ್ಯವೂ..

~ವಿಭಾ ವಿಶ್ವನಾಥ್

ಸೋಮವಾರ, ಸೆಪ್ಟೆಂಬರ್ 3, 2018

ನಮಗೇನಂತೆ..?

ತೊಟ್ಟಿಯ ಪಕ್ಕದಲ್ಲೊಂದು ಹೆಣ್ಣುಹಸುಗೂಸಂತೆ
ಹಸಿವಿನಿಂದ ಅತ್ತು ಸತ್ತೇ ಹೋಯಿತಂತೆ..
ಸುಖಕ್ಕೆ, ಹಾಸಿಗೆಗೆ ಬೇಕಾಗಿತ್ತು ಹೆಣ್ಣು
ಮಗಳಾದಾಗ ಹೊರೆ ಎನ್ನಿಸಿ ಬಿಸಾಡಿದ್ದಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಅವಳ ಮೇಲೆ ಅತ್ಯಾಚಾರವೆಸಗಿದರಂತೆ
ಯಾರೋ ಪಾಪಿಗಳ ಗುಂಪು ಮಾಡಿದ್ದಂತೆ
ಮಾಂಸದ ಮುದ್ದೆಯಂತೆ ನಡುರಸ್ತೆಯಲ್ಲಿ
ನರಳಾಡುತ್ತಾ ಬಿದ್ದಿದ್ದವಳು, ಸತ್ತೇ ಹೋದಳಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಅವಳನ್ನು ಬೆಂಕಿ ಹಚ್ಚಿ ಸುಟ್ಟುಬಿಟ್ಟರಂತೆ
ಕಾರಣ ವರದಕ್ಷಿಣೆ ಕಿರುಕುಳವಂತೆ..
ಹಣ-ಆಸ್ತಿ, ಬಣ್ಣ ನೋಡಿ ಕಟ್ಟಿಕೊಂಡವನಿಗೆ
ಅವಳವಶ್ಯಕತೆ ಮುಗಿದ ಮೇಲೆ ಸಾಯಿಸಿದ್ದಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಬೀದಿಯಲ್ಲೇ ಆ ಮುದುಕಿ ಸತ್ತಳಂತೆ
ಕಡೆಗಾಲದಲ್ಲಿ ಗುಟುಕು ನೀರಿಗೂ ತತ್ವಾರವಂತೆ
ಸಾಕಲು ಆಕೆ ನನಗೆ ಹೊರೆ ಎಂದ ಮಗ
ನಡುಬೀದಿಯಲ್ಲಿ ಬಿಟ್ಟು ಹೋಗಿದ್ದನಂತೆ..
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಹಾಗ ಹಾಗೆಂದವರು, ಈಗ ಹೀಗನ್ನುತ್ತಿದ್ದಾರೆ
ಮನೆಮಗಳ ಮೇಲೆ ಅತ್ಯಾಚಾರವಾಗಿದೆ
ಮನೆಮಗಳು ಸುಟ್ಟು ಕರಕಲಾಗಿದ್ದಾಳೆ
ಆಗಲೇ ಇದಕ್ಕೆ ಅಂತ್ಯ ಹಾಡಿದ್ದಿದ್ದರೆ..!
ನಮಗೇನಂತೆ ಎಂದು ಬಿಟ್ಟದ್ದೇ ತಪ್ಪಾಯಿತು

ಮಗನ ಮದುವೆಗೆ ಹೆಣ್ಣೇ ಸಿಗುತ್ತಿಲ್ಲ
ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿದೆಯಂತೆ..
ತವರಿನಲ್ಲಿ ತಾಯಿ ಬೀದಿಗೆ ಬಿದ್ದು ಸತ್ತಳಂತೆ
ನಮಗೇನಂತೆ ಎಂದು ಬಿಟ್ಟದ್ದರ ಕರ್ಮ
ಮತ್ತೆ ನಮಗೇ ಬಂದು ಸುತ್ತಿಕೊಳ್ಳುತ್ತಲಿದೆ..!

ಅಂದಿನ ನಮಗೇನಂತೆ, ನಮಗೇಕಂತೆ
ಭೂತ ಕಾಲದ ತುಣುಕುಗಳಾಗಿ ಕಾಡುತ
ವರ್ತಮಾನದ ನಮ್ಮ ಸ್ಥಿತಿಯ ಕನ್ನಡಿಯಾಗಿ
ಪ್ರತಿಫಲಿಸುವ ಮುನ್ನವೇ ಎಚ್ಚೆತ್ತುಕೊಂಡು
ಬದಲಾವಣೆಯ ಹಾದಿಯತ್ತ ಮುನ್ನಡೆಯೋಣ.

~ವಿಭಾ ವಿಶ್ವನಾಥ್

ಸೋಮವಾರ, ಆಗಸ್ಟ್ 27, 2018

ರಕ್ಷೆಯ ಸುರಕ್ಷಾ ಬಂಧನ

ಸೋದರ-ಸೋದರಿಯರ ಬಂಧದಲ್ಲಿ ಬಂಧಿಯಾಗಲು ಒಡಹುಟ್ಟಲೇ ಬೇಕು ಎಂದೇನಿಲ್ಲ. ಕೆಲವೊಮ್ಮೆ ಯಾವುದೋ ಋಣಾನುಬಂಧ ಕೂಡಾ ಈ ನಂಟನ್ನು ಬೆಸೆಯುತ್ತದೆ. ತಮ್ಮ ಕೂಡಾ ಕೆಲವೊಮ್ಮೆ ಅಣ್ಣನೆಂಬ ಭಾವದಲ್ಲಿ ರಕ್ಷಣೆಯ ಭಾರ ಹೊರುತ್ತಾನೆ. ಕೆಲವೊಮ್ಮೆ ಅಣ್ಣ ಅವನ ದುರ್ಬಲ ಪರಿಸ್ಥಿತಿಯಲ್ಲಿ ತಂಗಿಯ ಆಸರೆ ಬಯಸುತ್ತಾನೆ.

ಅನಿವಾರ್ಯದ ಪರಿಸ್ಥಿತಿಯಲ್ಲಿ ಅಣ್ಣ ಆಸರೆಯಾಗುತ್ತಾನೆ, ಕಷ್ಟದಲ್ಲಿ ಜೊತೆ ನಿಲ್ಲುತ್ತಾನೆ. ಜೊತೆಯಲ್ಲಿ ಅಣ್ಣನಿದ್ದಾನೆ ಎಂಬ ಭಾವವೇ ಸಾಕು ಧೈರ್ಯ ತುಂಬುವುದಕ್ಕೆ. ಅಷ್ಟಲ್ಲದೆ ಜನಪದರು ಹೇಳಿದ್ದಾರೆಯೇ "ಹೆಣ್ಣಿನ ಜನುಮಕ್ಕೆ ಅಣ್ಣ-ತಮ್ಮರು ಬೇಕು, ಬೆನ್ನು ಕಟ್ಟುವರು ಸಭೆಯೊಳಗೆ". ಇಷ್ಟೇ ಅಲ್ಲದೆ ಇನ್ನೂ ಮುಂದುವರಿದು ಹಾಡುತ್ತಾರೆ "ಹೊನ್ನು ಕಟ್ಟುವರು ಉಡಿಯೊಳಗೆ". ಖಂಡಿತಾ ಆ ನಿರೀಕ್ಷೆ ಇರುವುದಿಲ್ಲ. ಉಡುಗೊರೆ ಕೊಟ್ಟರೆ, ಆಸ್ತಿಯಲ್ಲಿ ನೀಡಿದರೆ ಮಾತ್ರ ಅಣ್ಣನ ಪ್ರೀತಿ ಎಂದು ಎಂದಿಗೂ ಅಲ್ಲ. ಕೇವಲ ಅಣ್ಣನ "ನಾನು ನಿನ್ನೊಡನೆ ಇದ್ದೇನೆ" ಎಂಬ ವಚನ ಸಾಕು ಪ್ರೀತಿ ಮತ್ತು ಆಪ್ತತೆಯ ಭಾವ ಮೂಡಿಸಲು.

ಅಣ್ಣನ ಕೈಯೊಳಗೆ ಕೈ ಇಟ್ಟು ಒಂದರೆಕ್ಷಣ ಕೂತರೆ ಸಾಕು ಅದೇನೋ ಸುರಕ್ಷತೆಯ ಭಾವ. ಈ ಘಳಿಗೆ ಹೀಗೇ ಇದ್ದು ಬಿಡಬಾರದೇ ಎಂದೆನಿಸಿಬಿಡುತ್ತದೆ. ಇಷ್ಟೆಲ್ಲದರ ನಡುವೆ ಗೋಳು ಹುಯ್ದುಕೊಳ್ಳುವುದು, ಕೋಳಿ ಜಗಳ ಮಾಡುವುದು ಇದೆಲ್ಲಾ ಇದ್ದೇ ಇದೆ. ಆದರೆ ಅಷ್ಟೆಲ್ಲಾ ಮೂಡಿಸುವ ಅಣ್ಣನೂ ಒಂದೊಮ್ಮೆ ಬದಲಾದರೆ..?

ಬದಲಾದರೂ ಚಿಂತೆಯಿಲ್ಲ.ಏಕೆಂದರೆ ನಾನಂತೂ ಬದಲಾಗುವುದಿಲ್ಲ. ಪ್ರೀತಿ, ಆಪ್ತತೆ ಎಂದಿಗೂ ಕೊಟ್ಟು ತೆಗೆದುಕೊಳ್ಳುವಂತದಲ್ಲವಲ್ಲ. ಹಾಗೊಂದು ವೇಳೆ ಹಾಗೇನಾದರೂ ಕೊಟ್ಟು ಪಡೆದರೆ ಅದು ವ್ಯಾಪಾರ ಎನ್ನಿಸುತ್ತದೆ.

ನೀ ಬದಲಾದರೂ, ಬದಲಾಗದಿದ್ದರೂ ಅದೇ ಭಾವ, ಅದೇ ಆಪ್ತತೆ, ಅದೇ ಪ್ರೀತಿಯಿಂದ ನೀನು ಎಲ್ಲಿದರೂ, ಹೇಗಿದ್ದರೂ ನೀನು ಚೆನ್ನಾಗಿರಲೆಂದು ಸದಾ ಬೇಡುತ್ತಾ ರಕ್ಷೆಯ ಅಗೋಚರ ಸುರಕ್ಷಾ ಬಂಧನದಿಂದ ನಿನ್ನನ್ನು ಬಂಧಿಸುವೆ. ಕಾಲವೂ ಈ ಬಂಧನದ ಬೇಡಿಯನ್ನು ಗಟ್ಟಿಗೊಳಿಸಲಿ.
(ವಿಶೇಷ ಸೂಚನೆ: ಅಣ್ಣ ಎಂಬಲ್ಲಿ ತಮ್ಮ ಎಂದೂ ಸಹಾ ಓದಿಕೊಳ್ಳಬಹುದು)

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 26, 2018

ಗೂಗಲ್ ಗಂಗಾ

ಹೇಳುವುದು ಒಂದು
ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೇ
ಸುಮಿತ್ರಾಪತಿ ಶ್ರೀಪತಿ...

ಅಂತಾ ಎಲ್ಲರೂ ಅಂತ್ಯಾಕ್ಷರಿ ಹಾಡ್ತಾ ಶ್ರೀಪತಿ ಅಲಿಯಾಸ್ ಸುಮಿತ್ರಾಪತಿಯನ್ನ ರೇಗಿಸ್ತಾ ಇದ್ವಿ.
"ಯಾವ್ದಾದ್ರೂ ಲಾಂಗ್ ಟ್ರಿಪ್ ಹೋಗೋಣಾ ಕಣ್ರೋ, ನಂಗಂತೂ ಈ ಗಿಜಿ ಗಿಜಿ ಟ್ರಾಫಿಕ್ಕೂ,ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಆ ಸಿಡುಕು ಮೂತಿ ಸಿದ್ದಮ್ಮ,ಅದೇ ಕಂಪ್ಯೂಟರ್ ಸಿಸ್ಟಮ್ ನ ನೋಡೀ,ನೋಡೀ ತಲೆ ಕೆಟ್ಟು ಹೋಗಿಬಿಟ್ಟಿದೆ. ವೀಕೆಂಡ್ ಯಾವಾಗ ಬರುತ್ತೆ ಅಂತಾ ಕಾಯ್ತಾ ಇದ್ದೀನಿ..ಬೆಳಿಗ್ಗೆ ಆಫೀಸ್ ಗೆ ಹೋಗೋ ಅಷ್ಟೊತ್ತಿಗೇ ಮೂಡ್ ಕೆಟ್ಟು ಕೆರ ಹಿಡಿದಿರುತ್ತೆ ಅಂತಾದ್ರಲ್ಲಿ, ಅವಳು ಬೇರೆ ಅದು ಸರಿ ಇಲ್ಲ, ಕೆಲಸ ಮಾಡೋಕೆ ಇಷ್ಟ ಇಲ್ಲ ಅನ್ನುವವರು ಯಾಕ್ರೀ ಇಲ್ಲಿ ಬರ್ತಿರಾ ನಮ್ಮ ತಲೆ ತಿನ್ನೋಕೆ  ಅಂತಾ  ಕೇಳಿ ನನ್ನಕೆಲಸದ ಬಗ್ಗೆ ನನಗೇ ರೇಜಿಗೆ ಹುಟ್ಟೋ ಹಾಗೆ ಮಾಡ್ತಾಳೆ. ಬೆಳಿಗ್ಗೆ-ಬೆಳಿಗ್ಗೆನೇ ಮೂಡ್ ಆಗಿರುತ್ತೆ.. ಅಂತಾದ್ರಲ್ಲೂ 5 ದಿನ ವರ್ಕ್ ಮಾಡ್ತಿನಿ.. ನಮ್ಮ ಊರಲ್ಲಿ ಆಗಿದ್ರೆ ಟ್ರಕ್ಕಿಂಗ್ ಆದ್ರೂ ಹೋಗಿ ಕಾಲ ಕಳೀಬಹುದು. ಕಡೇಪಕ್ಷ ಪಿಕ್ ನಿಕ್ ಗಾದ್ರೂ ಹೋಗೋಣ ಅಂತಾ ಹೇಳೋ ಈ ಭೂಪನ್ನ ವೀಕೆಂಡ್ ಅಲ್ಲಿ ಎಲ್ಲಿಗಾದ್ರೂ ಕರಿಯೋಣಾ ಅಂದ್ರೆ ಅವನ ಗರ್ಲ್ ಫ್ರೆಂಡ್ ಸುಮಿತ್ರಾ ಅಲಿಯಾಸ್ ಸುಮಿ ಅಲಿಯಾಸ್ ಸಿಡುಕು ಮೂತಿ ಸಿದ್ದಮ್ಮನ ಜೊತೆ ಕಾಫಿ ಡೇ ಕೂತು "ನಾನು ತುಂಬಾ ಇಂಪಾರ್ಟೆಂಟ್ ಕೆಲಸದಲ್ಲಿ ಇದ್ದೀನಿ. ನೀವು ಹೋಗಿ ಬನ್ನಿ" ಅಂತಾ ಸಾಗ ಹಾಕಿಬಿಡುತ್ತಾನೆ.

ಅದಕ್ಕೆ ಎಲ್ಲರೂ ಅವನ ಬೆನ್ನು ಬಿದ್ದು ಪೀಡಿಸಿ ಅವನ ಊರಿಗೆ ಹೊರಟಿದ್ದೀವಿ. ನಮ್ಮ ಕಾಲ ಕಳಿಯೋಕೆ ಅವನ ಕಾಲು ಎಳೆದು ಹೀಗೆ ಕಾಟ ಕೊಡ್ತಾ ಇದ್ದೀವಿ ಅಷ್ಟೇ..

"ಇನ್ನೂ ನನ್ನ ರೇಗಿಸ್ತಾ ಇರ್ತಿರೋ ಅಥ್ವಾ ಮನೆ ಒಳಗೆ ಬರ್ತೀರೋ, ಬೆಳಿಗ್ಗೆ ಬೇಗ ಎದ್ದು ಹೊರಡಬೇಕು. ಟ್ರಕ್ಕಿಂಗ್ ಗೆ ಬರ್ತೀರೋ ಅಥ್ವಾ ಹೀಗೇ ಮಾತಾಡ್ತಾ ಬೆಳಿಗ್ಗೆ ಮಾಡ್ತೀರೋ" ಅಂದಾಗ ಸಮಯ ನೋಡಿದ್ರೆ 12 ಘಂಟೆ.

"ದೆವ್ವಗಳು ಓಡಾಡೋ ಹೊತ್ತಲ್ಲಿ, ಹೀಗೆ ಕೂತಿದಿರಲ್ಲ ಒಳಗಡೆ ಹೋಗಿ" ಅಂದ್ರು ಅಜ್ಜಯ್ಯ.. ನಿಮಗಿಂತಾ ಕಾಟ ಕೊಡೋ ದೆವ್ವ ಇನ್ನೆಲ್ಲಿರೋಕೆ ಸಾಧ್ಯ ಅಂತಾ ಅಂದುಕೊಂಡು ಎಲ್ಲರೂ ಒಲ್ಲದ ಮನಸ್ಸಿಂದ ಒಳಗಡೆ ಹೋದ್ವಿ.
ಬೆಳಿಗ್ಗೆ 5 ಘಂಟೆಗೇ ಹೊರಡಬೇಕಾಗಿದ್ದವರು ಹೊರಟಾಗ 8 ಘಂಟೆ. ಶ್ರೀಪತಿ ಅವರ ಅಮ್ಮ "ಕಾಫಿ ಕುಡ್ದು, ತಿಂಡಿ ತಿಂದುಕೊಂಡು ಹೋಗ್ರೋ.. ಇನ್ನೊಂದು ಅರ್ಧ ಘಂಟೆ" ಅಂದಾಗ, ನಾವೇನು ನೆಂಟರ ಮನೆಗೆ ಹೋಗ್ತಾ ಇಲ್ಲ, ಹೋಗ್ತಾ ಇರೋದು ಟ್ರಕ್ಕಿಂಗ್ ಗೆ ಅಂತಾ ಬಿಲ್ಡಪ್ ತಗೊಂಡು ಮನೆಲಿದ್ದಿದ್ದ ಕುರುಕು ತಿಂಡಿಗಳನ್ನೆಲ್ಲಾ ಬ್ಯಾಗಿಗೆ ತುಂಬಿಕೊಂಡು, ಹಿಮಾಲಯ ಹತ್ತೋಕೆ ಹೋಗುವವರ ತರ ಫೋಸು ಕೊಡ್ತಾ ಹೊರಟ್ವಿ. ಜೀಪ್ ಹತ್ತಿ ಕೂತುಕೊಂಡು ಇನ್ನೇನು ಹೊರಡುವಾಗ ಒಂದು ಬೆಕ್ಕು ಅಡ್ಡ ಬಂತು. ಅದಕ್ಕೆ ಸುಬ್ಬ ಅಲಿಯಾಸ್ ಸುಬ್ರಹ್ಮಣ್ಯ ಶಾಸ್ತ್ರಿ "ಒಳ್ಳೆ ಕೆಲಸಕ್ಕೆ ಹೊರಡುವಾಗ ಈ ಬೆಕ್ಕನ್ನು ದಾಟಿಕೊಂಡು ಹೋಗ್ತಾ ಇದ್ದೀನಿ, ಏನಾಗುತ್ತೋ" ಅಂದಾಗ , ನಾವೆಲ್ಲ "ಬೆಕ್ಕು ನಿನ್ನನ್ನು ದಾಟಿಕೊಂಡು ಹೋಗ್ತಾ ಇದೆ, ಅದಕ್ಕೇನು ಆಗುತ್ತೋ" ಅಂತಾ ಅಂದ್ವಿ.

ಅವನು ಅಂದಿದ್ದಕ್ಕೆ ಸರಿಯಾಗಿ ಆ ಡಕೋಟಾ ಜೀಪ್ ಅರ್ಧ ದಾರೀಲೇ ಕೆಟ್ಟು ನಿಂತುಕೊಳ್ತು. ಹಿಂದಕ್ಕೂ ಹೋಗೋ ಆಗಿಲ್ಲ, ಮುಂದಕ್ಕೂ ಬರೋ ಹಾಗಿಲ್ಲ, ಅಷ್ಟೊತ್ತಿಗೆ ಬಸ್ಯಾ ಅಲಿಯಾಸ್ ಬುಲೆಟ್ ಬಸ್ಯಾ ಇದ್ದವನು "ನಾನು ಹೇಳಿದೆ ಬುಲೆಟ್ ಅಲ್ಲಿ ಹೋಗೋಣಾ ಅಂತಾ,ನೀವೇ ಜೀಪ್ ಅಲ್ಲಿ ಹೋದ್ರೇ ಮಜಾ ಇರುತ್ತೆ ಅಂದಿದ್ದು, ಮಜಾ ಅಲ್ಲ ಇದು ಸಜಾ" ಅಂದ.

"ಹೇ ಸುಮ್ನಿರೋ,ಇವನೊಬ್ಬ .. ಕಟ್ಕೊಂಡ ಹೆಂಡತೀನೂ ಹಿಂಗೇ ನೋಡ್ಕೋತೀಯೋ ಇಲ್ವೋ, ಬುಲೆಟ್ ನ ಮಾತ್ರ ಬಿಡಲ್ಲ.. ಸೀಮೆಗಿಲ್ಲದೆ ಇರೋ ಬುಲೆಟ್ ಇವನದ್ದು" ಅಂತಾ ಸಿಡುಕಿದ್ಲು ಸಿಡುಕು ಮೂತಿ ಸಿದ್ದಮ್ಮ ಅಲಿಯಾಸ್ ಸುಮಿ.

ಕೊನೆಗೆ ಹರಸಾಹಸ ಮಾಡಿ ಇವರಿಬ್ಬರನ್ನು ಸಮಾಧಾನ ಮಾಡಿ ಮೆಕ್ಯಾನಿಕ್ ನ ಕರೆದುಕೊಂಡು ಬರೋ ಹೊತ್ತಿಗೆ ಸೂರ್ಯ ನಡು ನೆತ್ತಿಗೆ ಬಂದಿದ್ದ. ಅವನು ಇದನ್ನ ರೆಡಿ ಮಾಡೋಕೆ 1 ರಿಂದ 2 ಘಂಟೆ ಆಗುತ್ತೆ ಅಂದ. ಟ್ರಕ್ಕಿಂಗ್ ಪ್ಲಾನ್ ಕ್ಯಾನ್ಸಲ್ ಅಂದಾಗ ಆ ಕಡೆಯಿಂದ ಒಂದು ಐಡಿಯಾ ಬಂತು. ಅದನ್ನು ಕೊಟ್ಟಿದ್ದು ಗಂಗಾ ಅಲಿಯಾಸ್ ಗೂಗಲ್ ಗಂಗಾ.
ಇಲ್ಲೇ ಪಕ್ಕದಲ್ಲೇ ಒಂದು ಫಾಲ್ಸ್ ಇದೆ, ನಾನು ಗೂಗಲ್ ಅಲ್ಲಿ ನೋಡಿದೆ. ಬೇಕಾದ್ರೆ ಚೆಕ್ ಮಾಡಿ ,ಬರಿ ಎರಡು ಕಿಲೋಮೀಟರ್ ಅಷ್ಟೇ ಇರೋದು ಅಂತಾ ಹೇಳಿದ್ಲು. ಅಂದ ಹಾಗೆ ಈ ಗೂಗಲ್ ಗಂಗಾ ಏನು ಹೇಳಿದ್ರೂ ಅವಳು ಗೂಗಲ್ ಅಲ್ಲಿ ಅದನ್ನು ಚೆಕ್ ಮಾಡಿನೇ ಹೇಳೋದು.

ಅವಳೇ ನಮ್ಮ ಗ್ಯಾಂಗ್ ನ ಲೀಡರ್ ಆಗಿದ್ದರಿಂದ ಅವಳ ಮಾತನ್ನು ಮೀರದೆ ಗೂಗಲ್ ಗಂಗಾಳ ಮಾತು ಕೇಳಿ "ಗಂಗಾ ಮಾತೆ"ಯನ್ನು ಅರಸಿಕೊಂಡು ಹೊರಟೆವು. ಹೊರಡುವುದಕ್ಕಿಂತ ಮುಂಚೆ ಅಲ್ಲೇ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಆ ಫಾಲ್ಸ್ ಬಗ್ಗೆ ವಿಚಾರಿಸಿದೆವು. ಅವರು ಹೇಳಿದ ಪ್ರಕಾರ ಅಲ್ಲಿ ಸುತ್ತಮುತ್ತಲಿನ ಎರಡು ಕಿಲೋಮೀಟರ್ ಅಲ್ಲಿ ಫಾಲ್ಸ್ ಯಾವುದೂ ಇಲ್ಲ. ನಿಮಗ್ಯಾರೋ 'ಫಾಲ್ಸ್'(ತಪ್ಪು) ಆಗಿ ಹೇಳಿರಬೇಕು ಅಂತಾ ಹೇಳಿ ಗಹಗಹಿಸಿ ನಕ್ಕರು.

ಅವರ ಆ ಕಂಗ್ಲೀಷು,ಕೆಂಪು ಹಲ್ಲು, ಬಾಯಲ್ಲಿದ್ದ ಎಲೆ-ಅಡಿಕೆ,ತಲೆಗೆ ಮೆತ್ತಿದ್ದ ಎಣ್ಣೆ ಎಲ್ಲವನ್ನೂ ನೋಡಿದ ಗಂಗಾ ಥೇಟ್ ಆಪ್ತಮಿತ್ರದ "ಗಂಗಾ"ಳಂತೆಯೇ ಭುಸುಗುಡುತ್ತಾ "ಬನ್ರೋ, ಆ ಗೂಗಲ್ ಗಿಂತಾ ಗೊತ್ತಾ ಇವ್ನಿಗೆ" ಅಂತಾ ದಂಡಿನ ಸಮೇತ ಹೊರಟೇ ಬಿಟ್ಳು.

ಆ ಕಾಡಿನ ಮದ್ಯೆ ಕಿಲೋಮೀಟರ್ ಗೋ, ಎರಡು ಕಿಲೋ ಮೀಟರ್ ಗೋ ಒಂದು ಮನೆ. ಅದರಲ್ಲಿ ಅಪರೂಪವಾಗಿ ಕಾಣಿಸೋ ಜನಗಳು ಅಂತಾದ್ರಲ್ಲಿ ಸಿಕ್ಕಿದ ಆ ಟೀ ಅಂಗಡಿಯವನನ್ನೂ ಬೈಕೊಂಡು ದಾರಿ ಕೇಳದೆ ಬಂದೆವಲ್ಲಾ, ನಮ್ಮ ಆಪ್ತರಕ್ಷಕ ಯಾರಪ್ಪಾ? ಅಂತಾ ಪೇಚಾಡ್ತಾ ಇರುವಾಗ, ಗಂಗಾ ಗೂಗಲ್ ಗುರುವಿನ ಬ್ರಹ್ಮಾಂಡ ರೂಪದ ಮತ್ತೊಂದು ಸ್ವರೂಪ 'ಗೂಗಲ್ ಮ್ಯಾಪ್' ನ ದರ್ಶನ ಮಾಡಿಸಿದಳು. ಪುಣ್ಯಕ್ಕೆ ಇಂಟರ್ನೆಟ್ ಇತ್ತು. ಸುತ್ತ-ಮುತ್ತಲಿನ ಕಾಡು, ಆ ಮರಗಳನ್ನು ನೋಡಿದ್ರೆ '6-5=2' ನೆನಪಾಗ್ತಾ ಇತ್ತು. ಬಂದಿದ್ದ ಆ ಜೀಪ್ ಕೂಡಾ ಇಂಥಾ ರಾಜರಸ್ತೆಯಲ್ಲಿ ನನಗೆ ಬರೋದಕ್ಕೆ ಯೋಗ ಇಲ್ಲ, ಅಲ್ಲಿ ರಾಜರ ಹಾಗೆ ಒಬ್ಬೊಬ್ಬರೇ ನಡ್ಕೊಂಡು ಹೋಗಿ ಅಂತಾ ಹೇಳಿ ಕಳುಹಿಸಿ ಬಿಟ್ಟಿತ್ತು.

ಟ್ರಕ್ಕಿಂಗ್ ಗೆ ಅಂತಾನೇ ಬಂದದ್ದಲ್ವಾ,ನಡೆಯೋದ್ರಲ್ಲಿ ಏನಿದೆ ಅಂತಾ ನಡ್ಕೊಂಡು ಹೊರಟ್ವಿ.ಹಾಗೆ ನಡೀತಾ,ನಡೀತಾ ಬ್ಯಾಗ್ ನಲ್ಲಿದ್ದ ಚಕ್ಕುಲಿ,ಕೋಡುಬಳೆ,ರವೆ ಉಂಡೆ ಇವುಗಳ ಜೊತೆಗೆ ಕಸಿನ್ಸ್ ಲೇಸ್, ಕುರ್-ಕುರೆ, ಚಿಪ್ಸ್ ಎಲ್ಲಾ ಜೊತೆಯಾದ್ದರಿಂದ ಕೈ-ಕಾಲಿಗಿಂತ ಬಾಯಿ-ಹೊಟ್ಟೆಗೇ ಕೆಲಸ ಹೆಚ್ಚಾಗಿತ್ತು.

ಅಷ್ಟರಲ್ಲೇ ರಮೇಶ ಕಿರುಚಿಕೊಂಡ, "ನೋವು-ನೋವು ನಂಗೆ ನಡೆಯೋದಕ್ಕೆ ಆಗ್ತಾ ಇಲ್ಲ" ಅಂತಾ, ಇಷ್ಟೊತ್ತು ಚೆನ್ನಾಗಿದ್ದ ಇವಾಗ ಏನಾಯ್ತಪ್ಪ ಅಂತಾ ನೋಡಿದ್ರೆ, ಜಿಗಣೆ ಆರಾಮಾಗಿ ಅವನ ಕಾಲಿಂದ ರಕ್ತ ಹೀರುತ್ತಾ ಇತ್ತು. ಇವನು ನೋವು-ನೋವು ಅಂತಾ ನಮ್ಮ ಜೀವ ಹೀರುತ್ತಾ ಇದ್ದ.ಪ್ಯಾಂಟ್ ಹಾಕೋ ಅಂದ್ರೇ ಪ್ಯಾಷನ್ ಅಂತಾ ಚಡ್ಡಿ ಹಾಕ್ಕೊಂಡು ಬಂದ್ಯಲ್ಲಾ ನಿಂಗೆ ಹಿಂಗೇ ಆಗಬೇಕು ಅಂತಾ ಮನಸಲ್ಲೇ ಅಂದ್ಕೊಂಡು  "ಇಷ್ಟಕ್ಕೇ ಹಿಂಗಾಡ್ತಾರೇನೋ, ಬಾರೋ" ಅಂತಾ ಆ ಜಿಗಣೆಯನ್ನ ಅಲ್ಲೆ ಬಿಟ್ಟು ಇವನನ್ನು ಎಳ್ಕೊಂಡು ಹೊರಟ್ವಿ.
"ಲಾಸ್ಟ್ ಟರ್ನ್,ಟೇಕ್ ಲೆಫ್ಟ್" ಅಂತಾ ಇತ್ತು. ಅಲ್ಲಿ ಹೋಗಿ ನೋಡ್ತೀವಿ..
ಅಬ್ಬಬ್ಬಾ! ಎಂತಾ ನೀರು ಅಂತೀರಾ..? ಜೀವಮಾನದಲ್ಲೇ ಇನ್ಯಾವತ್ತೂ ಅಂಥಾ ಫಾಲ್ಸ್ ನೋಡೋಕೆ ಸಾಧ್ಯಾನೇ ಇಲ್ಲ. ಎಲ್ಲಾ ಗೂಗಲ್ ಮಹಾತ್ಮೆ..

ಆ ಫಾಲ್ಸ್ ಹೇಗಿತ್ತು ಅಂದ್ರೆ 5 ಅಡಿ ಆಳದ ಚಿಕ್ಕ ಗುಂಡೀಲಿ 2 ಅಡಿ ನೀರಿತ್ತು, ನಕ್ಕು-ನಕ್ಕು ನಮ್ಮ ಕಣ್ಣಲ್ಲೂ ನೀರಿತ್ತು. ನಾವೇ ಅದಕ್ಕೊಂದು ಹೊಸ ನಾಮಕರಣ ಮಾಡಿದ್ವಿ 'ಗೂಗಲ್ ಗಂಗಾ' ಅಂತಾ. ವಾಪಸ್ ಬರ್ತಾ ಒಂದಷ್ಟು ಸೆಲ್ಫಿ ತೆಕ್ಕೊಂಡು, ತುಂಬಾ ಅದ್ಭುತ ಪ್ರಯಾಣ, ದಾರಿ ಸುಗಮವಾಗಿದೆ ಅಂತಾ ಗೂಗಲ್ ಮ್ಯಾಪ್ ಅಲ್ಲಿ ರಿವ್ಯೂ ಮಾಡಿ,ನಮ್ಮಂತೆ ಇನ್ನೊಂದಷ್ಟು ಜನ 'ಗೂಗಲ್ ಗಂಗಾ'ನ ದರ್ಶನ ಮಾಡಿ ಪಾವನವಾಗಲಿ ಅಂದ್ಕೊಂಡು ಬಂದ ದಾರಿಗೆ ಸುಂಕ ಇಲ್ಲ ಅನ್ನೋ ಹಾಗೆ 'ಗೂಗಲ್ ಗಂಗಾ'ನ ಹಿಂಬಾಲಿಸಿದ್ವಿ..

~ವಿಭಾ ವಿಶ್ವನಾಥ್

ನಿನ್ನೊಡನೆ ನಾ..

ನಿನ್ನಯ ನೂರಾರು ಮಾತುಗಳಿಗೆ
ನಾ ಸಾಂದ್ರಗೊಂಡಿರುವೆ..
ನೀ ಹೇಳುವ ಪ್ರತಿ ಉಕ್ತಿಗೂ
ನಾ ಲಯಗೊಂಡಿರುವೆ..

ನೀನಾಡಿದ ಎಲ್ಲಾ ನುಡಿಗಳಿಗೂ
ನಾ ಕಿವಿಗೊಟ್ಟಿರುವೆ..
ನೀ ಮಾಡಿದ ಕರೆಗಳಿಗೆಲ್ಲಾ
ನಾ ತಡಮಾಡದೆ ಓಗೊಟ್ಟಿರುವೆ..

ನಿನ್ನ ಪ್ರೀತಿ-ಪ್ರೇಮದ ಭಾಷ್ಯಗಳಿಗೆಲ್ಲಾ
ನಾ ಮನ ಮಿಡಿದಿರುವೆ..
ನಿನ್ನ ದುಃಖ-ದುಮ್ಮಾನಗಳಿಗೆಲ್ಲಾ
ನಾ ಕಂಬನಿಯಾಗಿರುವೆ..

ಲಯ ತಪ್ಪಿದ ನಿನ್ನ ಬಡಿತಕೆ
ನಾ ಉಸಿರ ಬೆಸೆದಿರುವೆ..
ಇಷ್ಟೆಲ್ಲಾ ಮಾಡಿದ ಬಳಿಕವೂ
ನಾ ನನ್ನತನವ ಬಿಡದಾಗಿರುವೆ..

ಅದೇಕೋ ನಿನ್ನ ಚುಚ್ಚುಮಾತಿಗೆ
ನಾ ಮನಪೂರ್ತಿ ಅತ್ತಿರುವೆ..
ನಿನ್ನ ಜರ್ಜರಿತಗೊಳಿಸುವ ವಾಕ್ಯಗಳಿಗೆಲ್ಲಾ
ನಾ ಇಂಚಿಂಚೂ ಸೊರಗುತ್ತಿರುವೆ..

ಬಿಟ್ಟೂ ಬಿಡದೆ ಕಾಡುತಿರುವ ಗೊಂದಲಕ್ಕೆಲ್ಲಾ
ನಾ ಅಕಾರಣವಾಗಿ ಭಯ ಪಡುತ್ತಿರುವೆ..
ನಿನ್ನ ಬಿಟ್ಟು ಹೊರಡಬೇಕೆಂಬ ಆಲೋಚನೆಗೇ
ನಾ ದಿನಪೂರ್ತಿ ದಿಗಿಲಾಗಿರುವೆ..

ಎಷ್ಟಾದರೂ ನೀ ಲೇಖನಿ
ನಾ ಕಾಗದ ಅಲ್ಲವೇ..?
ನೀ ಅಕ್ಷರಗಳ ಸೃಷ್ಠಿಕರ್ತನಾದರೆ
ನಾನು ನಿಮಿತ್ತ ಮಾತ್ರ ಅಲ್ಲವೇ..?

~ವಿಭಾ ವಿಶ್ವನಾಥ್

ಮಂಗಳವಾರ, ಆಗಸ್ಟ್ 21, 2018

ಎಲ್ಲಾ ಇದ್ದರೂ ಏನೋ ಇಲ್ಲದಂತೆ..

ಹೌದು, ಅಲ್ಲಿನ ಪರಿಸ್ಥಿತಿಯೇ ಹಾಗಿತ್ತು. ಅಲ್ಲಿ ಸುಖ ಮತ್ತು ಆರೋಗ್ಯಕರ ಜೀವನಕ್ಕೆ ಬೇಕಾದ ಎಲ್ಲಾ ಪರಿಸ್ಥಿತಿಯೂ ಇತ್ತು. ಆದರೂ ಏನೋ ಒಂದು ರೀತಿಯ ಕೊರತೆ, ಆ ಕೊರತೆಯೇ ಪ್ರೀತಿ.

ಅದೊಂದು ವೃದ್ದಾಶ್ರಮ, ಗಲಾಟೆ-ಗದ್ಧಲಗಳಿಲ್ಲದ ಸ್ಥಳದಲ್ಲಿದೆ. ಸುತ್ತ-ಮುತ್ತಲೆಲ್ಲಾ ವಿಶಾಲವಾದ ಹಸಿರು ಪ್ರದೇಶ, ಗೋಶಾಲೆ ಕೂಡಾ ಇದೆ ಜೊತೆಗೆ ದೇವಾಲಯವೂ ಇದೆ. ಆದರೆ ಅದರ ಸುತ್ತ ಎತ್ತರದ ಕಾಂಪೌಂಡ್ ಕೂಡಾ ಇದೆ. ಗೇಟಿಗೆ ಸದಾ ಬೀಗ ಜೊತೆಗೊಬ್ಬ ಕಾವಲುಗಾರ. ಅಲ್ಲಿಂದ ಹೊರ ಹೋಗಲು ಮತ್ತು ಒಳಬರಲು ಅಲ್ಲಿನವರ ಅನುಮತಿ ಪಡೆದು ಅದನ್ನು ಪುಸ್ತಕದಲ್ಲಿ ನಮೂದಿಸಿಯೇ ಹೋಗಬೇಕು.ಅದೊಂದು ಚಿನ್ನದ ಪಂಜರದ ತರಹ..

ಒಳ ಹೊಕ್ಕರೆ ಆ ಚಿನ್ನದ ಪಂಜರದಲ್ಲಿ ಮತ್ತೆರಡು ವಿಭಾಗ. ಬಡ ಮತ್ತು ಮಧ್ಯಮ ವರ್ಗದವರಿಗೆ ಒಂದು ರೀತಿಯ ವಸತಿ ಸೌಲಭ್ಯವಾದರೆ, ಶ್ರೀಮಂತ ವರ್ಗದವರಿಗೇ ಮತ್ತೊಂದು ರೀತಿಯ ವಸತಿ ಸೌಲಭ್ಯ. ಆದರೆ ಊಟ-ತಿಂಡಿಯ ವ್ಯವಸ್ಥೆ ಎಲ್ಲರಿಗೂ ಒಂದೇ. ಆದರೆ ವಸತಿ ವ್ಯವಸ್ಥೆಯಿಂದ ಅಗೋಚರ ಹೆರೆ ಎಳೆದಂತೆ ಭಾಸವಾಗುವ ವೃದ್ಧಾಶ್ರಮ. ಅವರು ಇವರ ಜೊತೆ ಬೆರೆಯರು, ಇವರು ಅವರ ಜೊತೆ ಬೆರೆಯರು..

ತಮ್ಮಷ್ಟಕ್ಕೆ ಸುಮ್ಮನೆ ಕುಳಿತವರು ಕೆಲವರಾದರೆ, ಮತ್ತೆ ಕೆಲವರು ದೇವಾಲಯದಲ್ಲಿ, ಮತ್ತಷ್ಟು ಮಂದಿ ಆಕಾಶ ನೋಡುತ್ತಾ, ಇನ್ನು ಕೆಲವರು ಕಸೂತಿ ಹಾಕುತ್ತಾ, ಮತ್ತಷ್ಟು ಜನ ಟಿ.ವಿ ಯ ಮುಂದೆ, ಮತ್ತೆ ಕೆಲವರು ಮಾತನಾಡುತ್ತಾ ಕೂತಿದ್ದರೆ, ಮತ್ತೆ ಕೆಲವರು ಬಟ್ಟೆ ಒಗೆಯುತ್ತಾ, ಮತ್ತೆ ಕೆಲವರದು ನಿದ್ರೆ. ಹೀಗೇ ಅವರವರ ಲೋಕಕ್ಕೆ ಅವರವರು ಹೊಂದಿಕೊಂಡು ಬಿಟ್ಟಿದ್ದರು. ಕೆಲವರಿಗೆ ಮಾತನಾಡುವ ಅಸ್ಥೆಯಿದ್ದರೆ ಮತ್ತೆ ಕೆಲವರಿಗೆ ಸಂಕೋಚ.

ಕೆಲವರು ವೃದ್ಧಾಶ್ರಮ ಶುರುವಾದಾಗಿನಿಂದ ಅಲ್ಲಿಯೇ ಇದ್ದರೆ ಮತ್ತೆ ಹಲವರು ಇತ್ತೀಚೆಗೆ ಬಂದವರು. ಹೀಗೇ ಒಬ್ಬರು ಅಜ್ಜಿಯನ್ನು ಮಾತನಾಡಿಸಿದಾಗ "ಇಲ್ಲಿಗೆ ಹೊಂದಾಣಿಕೆ ಆಗಿದ್ದೀರಾ..?" ಎಂದೆ. ಅದಕ್ಕೆ ಅವರು ಕಣ್ಣು ತುಂಬಾ ನೀರು ತುಂಬಿಕೊಂಡು "ವಿಧಿ ಇಲ್ಲವಲ್ಲಾ, ಮತ್ತೇನು ಮಾಡುವುದು ? ಮಗ ತಂದು ಸೇರಿಸಿ ಹೋಗಿದ್ದಾನೆ" ಎಂದರು. ಕೆಲವರು ಇಷ್ಟಪಟ್ಟು ಅಲ್ಲಿದ್ದರೆ ಕೆಲವರದು ಅನಿವಾರ್ಯತೆ.

ಅಲ್ಲಿನ ಆಡಳಿತ ವರ್ಗದವರು ಎಲ್ಲಾ ಸೌಕರ್ಯಗಳನ್ನೂ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲಿ ಮೇಲ್ನೋಟಕ್ಕೆ ಎಲ್ಲವೂ ಇದೆ ಎಂದೆನಿಸಿದರೂ, ಪ್ರೀತಿಯ ಕೊರತೆ ಇದೆ ಎಂದು ನನಗನ್ನಿಸಿತು. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಅಲ್ಲಿ ಅನಾಥ ಮಕ್ಕಳು ಸಹಾ ಕೆಲವರಿದ್ದಾರೆ. ಆದರೆ ಈ ವೃದ್ಧರು ಯಾರೂ ಅಲ್ಲಿಗೆ ಸುಳಿಯುವುದಿಲ್ಲ. ಅದು ಅಲ್ಲಿನ ರೀತಿ-ನೀತಿಯೋ ಅಥವಾ ತಮ್ಮ ಪ್ರೀತಿಯನ್ನು ಹಂಚಲು ಅವರಿಗೆ ಇಷ್ಟವಿಲ್ಲವೋ ಗೊತ್ತಿಲ್ಲ.

ಗೇಟಿಗೆ ಹಾಕಿದ ಬೀಗದ ಕುರಿತು ಕೇಳಿದಾಗ ತಿಳಿದು ಬಂದದ್ದಿಷ್ಟು. ಇಲ್ಲಿನ ಕೆಲವರು ತಪ್ಪಿಸಿಕೊಂಡು ಹೋಗುತ್ತಾರೆ, ಹಾಗಾಗಿ ಈ ಬೀಗ ಎಂದರು. ಸ್ವಚ್ಛಂದ ಪರಿಸರದಲ್ಲಿ ಬೆಳೆದಿದ್ದವರನ್ನು ತಂದು ಬಂಧಿಸಿದ ಪರಿಸ್ಥಿತಿಯಲ್ಲಿ ಅವರಾದರೂ ಏನು ಮಾಡಲು ಸಾಧ್ಯ? ಮತ್ತೆ ಕೆಲವರು ಮನೆಯಲ್ಲಿ ಜಗಳವಾಡಿಕೊಂಡು ಇಲ್ಲಿಗೆ ಬಂದು ಬಿಡುತ್ತಾರೆ. ಹಾಗಾಗಿ ಇಲ್ಲಿಗೆ ಸೇರಲು ಮಕ್ಕಳ ಅಥವಾ ಸಂಬಂಧಿಕರ ಒಪ್ಪಿಗೆಯೂ ಬೇಕು. ಮನೆಯಲ್ಲಿ ಬೈಗುಳ ಕೇಳಿಕೊಂಡು, ಸರಿಯಾಗಿ ಊಟ-ತಿಂಡಿ ಇಲ್ಲದೆ ಬದುಕುವುದಕ್ಕಿಂತ ಇದು ಲೇಸು ಎನ್ನುವವರೂ ಇದ್ದರು. 

ಹುಷಾರಿಲ್ಲದಿರುವಾಗ ಅಥವಾ ವೃದ್ಧರು ತೀರಿಕೊಂಡಾಗ ಹೇಳಿದರೂ ಬಾರದ ಮಕ್ಕಳು ಹಣ, ಒಡವೆಗಳಿಗಾಗಿ ಆನಂತರ ಬಂದದ್ದೂ ಇದೆ ಎಂದಾಗ ನಿಜಕ್ಕೂ ಆಶ್ಚರ್ಯವಾಯಿತು. ಯಾವುದೋ ಸಿನಿಮಾದಲ್ಲಿ ನೋಡಿದ್ದ ಸ್ಥಳ ಭೇಟಿ ನೀಡಿದಾಗ ಬೇರೆಯದೇ ಅನುಭವ ನೀಡಿತು. ಎಲ್ಲಾ ವೃದ್ಧಾಶ್ರಮಗಳೂ 'ರಾಜಕುಮಾರ'ದ 'ಕಸ್ತೂರಿ ನಿವಾಸ'ಗಳಾಗಲು ಸಾಧ್ಯವಿಲ್ಲವಲ್ಲಾ.

ವೃದ್ಧಾಶ್ರಮಗಳು ಅನಿವಾರ್ಯವಲ್ಲ, ಬದುಕಿನ ಅವಶ್ಯಕತೆಗೆ ಪ್ರೀತಿ, ಅನುಬಂಧಗಳು ಮುಖ್ಯ.ಮಕ್ಕಳು ತಮ್ಮ ತಂದೆ-ತಾಯಂದಿರನ್ನು ವೃದ್ಧಾಶ್ರಮಗಳಿಗೆ ಸೇರಿಸದಿದ್ದರೇ ಒಳಿತು. ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಇಂದಿನ ಚಿಗುರೆಲೆಗಳೇ ನಾಳಿನ ಹಣ್ಣೆಲೆಗಳು. ಅಲ್ಲವೇ? ಮಕ್ಕಳ ಹಟ, ಕೋಪ, ತುಂಟಾಟಗಳನ್ನೆಲ್ಲಾ ಸಹಿಸಿಕೊಂಡು ತಿದ್ದಿ-ತೀಡಿ ಬುದ್ದಿ ಹೇಳಿ ಕಾಡುಕಲ್ಲನ್ನು ಮೂರ್ತಿಗಳನ್ನಾಗಿಸಿದ ಶಿಲ್ಪಿಗಳನ್ನು ಸ್ವಲ್ಪ ಸಹಿಸಿಕೊಳ್ಳಬಹುದಲ್ಲವೇ? ಕಳೆದು ಹೋದ ಕಾಲವಂತೂ ಮತ್ತೆ ಬಾರದು. ಇನ್ನಾದರೂ ಎಲ್ಲರೂ ಎಚ್ಚೆತ್ತು ವೃದ್ಧಾಶ್ರಮಗಳ ಸಂಖ್ಯೆಯನ್ನು ಇಳಿಮುಖಗೊಳಿಸಿದರೆ ಒಳಿತು.

~ವಿಭಾ ವಿಶ್ವನಾಥ್

ಶನಿವಾರ, ಜುಲೈ 14, 2018

ಪೌರ್ಣಮಿ

ಕತ್ತಲ ಕಾಲಗರ್ಭದೊಳಗೆ
ಚಂದ್ರ ವಿಲೀನವಾದ..
ಸಮುದ್ರದ ಉಬ್ಬರವಿಳಿತಗಳಿಗೆ
ಸ್ಪಂದಿಸದೆ ಮರೆಯಾಗಿ ಹೋದ..
ದಿನದಿನವೂ ಕೊಂಚ-ಕೊಂಚವೇ ಮಂಕಾಗಿ
ಕರಗುತಾ ತೀರಿಯೇ ಹೋದ..
ನಕ್ಷತ್ರಗಳೊಡನೆ ಚಕ್ಕಂದವಾಡದೆ ದೂರಾಗಿ
ತನ್ನ ಮುಸುಕಿನೊಳಗೇ ಹುದುಗಿ ಹೋದ..
ಮನದಾಳದಿ ಮಾಸಿಯೇ ಹೋದಂತಿದ್ದ
ನೆನಪುಗಳ ನೆನೆದು ಬಿಕ್ಕುತ್ತಾ ಕೂತ
ಭಗ್ನ ಪ್ರೇಮಿಗಳಿಗೂ ನಿಲುಕದೆ,
ತನ್ನ ಬಿಂಬದಲ್ಲೇ ಹೊಸ ಪ್ರೀತಿಯ ಕಾಣುವ
ಹೊಸ ಪ್ರೇಮಿಗಳಿಗೂ ಎಟುಕದೆ,
ತನ್ನೊಳಗೇ ಅವಿತ ಹೊತ್ತಲಿ..
ಮರೆಯಾದ ಚಂದಿರನ ನೆನೆದು
ಊಳಿಡುವ ನಾಯಿಯೂ ಮೌನವಾಗಿ
ಚಂದಿರನ ನೆನಪೇ ಮಾಸಿಹೋಗುವಂತಾದಾಗ
ತನ್ನ ನೆನೆಯುವವರಾರಿಲ್ಲವೆಂದು ಕೊರಗುತ್ತಾ,
ಹೀಗೆಯೇ ಕರಾಳ ರಾತ್ರಿಯ
ಮಡಿಲಲ್ಲೇ ಕಾಲವಾಗಬೇಕೆಂದುಕೊಂಡವ!
ಊಟ ಮಾಡದೆ, ತನ್ನ ಕಾಣಬಯಸುವ
ಪುಟ್ಟ ಕಂದನ ಅಳುವಿಗೆ,ಹಸಿವಿಗೆ ಕರಗಿ..
ಬಾಲಭಾಷೆಯ ಕರೆಗೆ ಓಗೊಟ್ಟು..
ಮೋಡದ ಮರೆಯಿಂದ ಇಷ್ಟಿಷ್ಟೇ ಇಣುಕಿ.!
ಪ್ರಪುಲ್ಲತೆಯಿಂದ ಪ್ರಕಾಶಿಸುವುದ ಕಂಡು
ಅಮ್ಮನೆಂದಳು ಇಂದು "ಪೌರ್ಣಮಿ"

~ವಿಭಾ ವಿಶ್ವನಾಥ್

ಶನಿವಾರ, ಜೂನ್ 23, 2018

ಅಂತರಗಳ ಅಂತರಂಗ

ಹಸಿರು ಸಿರಿ, ಹೊಲ-ಗದ್ದೆಗಳ ಸಾಲು, ಶುದ್ಧವಾದ ಗಾಳಿ, ರೈತನೆಂಬ ಅನ್ನದಾತ, ತುಂಬಿದ ಕೆರೆ-ಕಟ್ಟೆಗಳು, ಸ್ವಚ್ಛಂದವಾಗಿ ಆಡುತ್ತಿರುವ ಪುಟಾಣಿಗಳು ಇದು ಹಳ್ಳಿ. ಬೆಂಕಿಪೊಟ್ಟಣದಂತೆ ಒಂದಕ್ಕೊಂದು ಅಂಟಿಕೊಂಡಿರುವ ಕಾಂಕ್ರೀಟ್ ಕಟ್ಟಡಗಳು, ಒಂದು ಅಂತಸ್ತಿನ ಮೇಲೆ ಮತ್ತೊಂದು ಅಂತಸ್ತಿನಂತೆ ಪೇರಿಸಿಟ್ಟ ಬಹುಮಹಡಿ ಮನೆಗಳು, ಟ್ರಾಫಿಕ್ ನಲ್ಲಿ ಗಿಜಿಗುಡುವ ವಾಹನಗಳು ಇದು ಪಟ್ಟಣವೆಂದು ನಾವೇ ಊಹಿಸಿಕೊಂಡುಬಿಡುವ ದೃಶ್ಯಗಳು.
    ಆದರೆ ಗ್ರಾಮೀಣ ಮತ್ತು ಪಟ್ಟಣಗಳ ಜೀವನದ ಆಂತರ್ಯ ಈಗೀಗ ಬದಲಾಗುತ್ತಿದೆ. ಒಬ್ಬರಿಗೊಬ್ಬರು ನೆರವಾಗುತ್ತಾ, ಕಷ್ಟ-ಸುಖಗಳಲ್ಲಿ ಹಳ್ಳಿ ಜನರು ನೆರವಾಗುತ್ತಿದ್ದರೆ, ಈಗೀಗ ಪಟ್ಟಣಗಳಲ್ಲೂ ಈ ಸಂಸ್ಕೃತಿ ಮತ್ತೆ ನೆಲೆಸುತ್ತಿದೆ.
        ದೂರದರ್ಶನ ಮತ್ತು ಮುಂದುವರಿದ ಆಲೋಚನೆಗಳಿಂದ ಹಳ್ಳಿಯ ಜನರು ಪಟ್ಟಣಗಳತ್ತ, ಆಢಂಬರದ ಜೀವನಕ್ಕೆಂದು ಮುಖ ಮಾಡುತ್ತಿದ್ದರೆ, ಪಟ್ಟಣದ ಜನರು ಕಲುಷಿತ ವಾತಾವರಣ ಮತ್ತು ಒತ್ತಡಗಳಿಂದ ಬೇಸತ್ತು ಹಳ್ಳಿಯ ಜೀವನದತ್ತ ಮುಖ ಮಾಡುತ್ತಿದ್ದಾರೆ.
     ಅತಿವೃಷ್ಠಿ-ಅನಾವೃಷ್ಠಿ, ಬೆಲೆಕುಸಿತ ಮುಂತಾದ ಕಾರಣಗಳಿಂದ ಬೇಸತ್ತ ರೈತನೆಂಬ ಕೃಷಿ ಬಿಡುವ ನಿರ್ಧಾರ ಮಾಡುತ್ತಿದ್ದರೆ, ರಾಸಾಯನಿಕ ತರಕಾರಿ ಮತ್ತು ಜಂಕ್ ಫುಡ್ ಗಳಿಂದ ಬೇಸತ್ತ ಪಟ್ಟಣದ ಮಂದಿ ಸಾವಯವ ಕೃಷಿಯ ಬಗ್ಗೆ ಒಲವು ತೋರುತ್ತಿದ್ದಾರೆ.
     ಗ್ರಾಮೀಣ ಮತ್ತು ಪಟ್ಟಣದ ಜೀವನಗಳ ಅಂತರಗಳು ಸೃಷ್ಠಿಯಾದಂತೆ ಜನರ ಆಂತರ್ಯಗಳು ವಿರುದ್ಧ ಧ್ರುವಗಳತ್ತ ಆಕರ್ಷಿತವಾಗುತ್ತಿವೆ.

~ವಿಭಾ ವಿಶ್ವನಾಥ್

ಸೋಮವಾರ, ಜೂನ್ 11, 2018

ಮಳೆರಾಯನ ಜೊತೆ...

ಬೆಳಿಗ್ಗೆಯಿಂದ ಒಂದೇ ಸಮ ಸುರಿಯುತ್ತಿರುವ ಮಳೆಯನ್ನು ನೋಡಿದರೆ ಇದು ಮಲೆನಾಡೇನೋ ಎಂಬ ಸಂದೇಹ ಬಂದದ್ದಂತೂ ಸುಳ್ಳಲ್ಲ. ಆದರೆ ವ್ಯಾವಹಾರಿಕ ಪ್ರಪಂಚದಲ್ಲಿಯೇ ಮುಳುಗಿ ಹೋಗಿರುವ ನಮ್ಮಂತಹವರಿಗೆ ಇತ್ತೀಚಿನ ವರ್ಷಗಳಲ್ಲಿ ಮಳೆ ಬಂದರೆ ಕಿರಿಕಿರಿ. ಅನಗತ್ಯವಾಗಿ ಯೋಚಿಸಿಕೊಂಡು "ಛತ್ರಿ ತಗೊಂಡೇ ಹೋಗ್ಬೇಕಾ?", "ರೇನ್ ಕೋಟ್ ಬೇರೆ ಜೊತೆ ಮಾಡಿಕೊಂಡು ಹೋಗ್ಬೇಕಾ?", "ಬೆಂಗಳೂರಿನ ಟ್ರಾಫಿಕ್ ಅಲ್ಲಿ ಈ ಮಳೆ ಬೇರೆ" ಎಂಬಂಥಹಾ ರೇಜಿಗೆ ಹುಟ್ಟಿಸುವ ಮಾತುಗಳ ದಿನಚರಿಯಲ್ಲಿ ಮಳೆಯನ್ನು ಸವಿಯುವ ನೆನಪುಗಳೇ ಮರೆವಾಗಿಬಿಟ್ಟಿವೆ. ರೈತಾಪಿ ವರ್ಗದ ಜನರಿಗೆ ಈ ಮಳೆ ಬೇಕಿತ್ತು ಅನ್ನಿಸಿದರೂ, ಕಾರ್ಪೊರೇಟ್ ವರ್ಗದ ಜನರಿಗೆ ವೀಕೆಂಡ್ ಅಲ್ಲೂ ಎಲ್ಲಿಗೂ ಹೋಗಲಾರದಂತೆ ಮಾಡಿ ಧೋ ಎನ್ನುತ್ತಾ ಸುರಿಯುತ್ತಾ ಇರೋ ಈ ಮಳೆ ಬೇಕಿತ್ತಾ? ಅನ್ನಿಸಿಬಿಟ್ಟಿದೆ.

ಈಗ ಎಲ್ಲಾ ಕಡೆ ಕಾಂಕ್ರೀಟ್, ಟಾರು ರೋಡುಗಳ ಭರಾಟೆ. ಆದರೆ ಆಗ ಸುತ್ತಮುತ್ತಲೂ ಮಣ್ಣಿನದ್ದೇ ಪಾರುಪತ್ಯ. ಅಂತಹಾ ಸಮಯದಲ್ಲಿ ಮಣ್ಣಿಗೆ ಮೊದಲು ಬಿದ್ದ ಹನಿ ತನ್ನ ಸುಮಧುರ ಸುವಾಸನೆಯನ್ನು ಎಲ್ಲಾ ಕಡೆ ಪಸರಿಸುತ್ತಾ , ಈಗಿನ ಪರ್ಫೂಮ್ ಗಳಿಗಿಂತಾ ಚೆಂದದ ಸುಗಂಧ ಬೀರುತ್ತಾ ಮನಸನ್ನೆಲ್ಲಾ ಆವರಿಸುತ್ತಾ ಇತ್ತು. ಅದರ ಜೊತೆಗೆ ಮೆಲ್ಲಗೆ ಬರೋ ತಂಗಾಳಿಯಲ್ಲಿ ಬಡಿದ "ಇರುಚಲು" ಮನೆಯನ್ನಷ್ಟೇ ಅಲ್ಲ, ಮನೆ ಮುಂದೆ ಮಳೆ ನೋಡ್ತಾ ಸುಮ್ಮನೆ ನಿಂತಿರುತ್ತಾ ಇದ್ದ ನಮ್ಮನ್ನೂ ನೆನೆಸಿಬಿಟ್ಟಿರುತ್ತಿತ್ತು. ಜೋರು ಮಳೆ ಬಂದು ಆಲಿಕಲ್ಲು ಬೀಳ್ತಾ ಇದ್ರೆ, ದೊಡ್ಡ ಛತ್ರಿಯನ್ನು ಉಲ್ಟಾ ಮಾಡಿ ಅದರಲ್ಲಿ ಆಲಿಕಲ್ಲನ್ನು ಹಿಡಿದು ತಿಂತಾ ಇದ್ದ ಮಜವೇ ಬೇರೆ.

ತುಂತುರು ಮಳೆ, ಸೋನೆ ಮಳೆ, ಜೋರು ಮಳೆ ಹೀಗೆ ಮಕ್ಕಳು ಮಳೆಯನ್ನು ಅಳತೆ ಮಾಡುತ್ತಾ ಇದ್ದರೆ, ದೊಡ್ಡವರದ್ದು ಮಳೆನಕ್ಷತ್ರಗಳ ಲೆಕ್ಕ, ಸ್ವಾತಿ ಮಳೆ, ಭರಣಿ ಮಳೆ ಅಂತೆಲ್ಲಾ.. ಈಗ ಇದೆಲ್ಲಾ ಇದೆಲ್ಲಾ ಮಾಯವಾಗಿ ಗೂಗಲ್ ಮುಖೇನ ಎಲ್ಲಿ, ಎಷ್ಟು ಸೆಂಟಿಮೀಟರ್ ಮಳೆಯಾಗಿದೆ ಅಂತಾ ತಿಳಿದುಕೊಳ್ಳುವ ಹಾಗಾಗಿದೆ.

ಮಳೆಯಲ್ಲಿ ನೆನೆದು ಅಮ್ಮನಿಂದ ಬೈಸಿಕೊಂಡು ಬಿಸಿನೀರಲ್ಲಿ ಸ್ನಾನ ಮಾಡಿ ಒಲೆ ಮುಂದೆ ಕೂತು ಕಾಲ ಕಳೆಯುತ್ತಾ ಇದ್ದದ್ದೆಲ್ಲಾ ಹೋಗಿ , "ಅಯ್ಯೋ, ಈ ಹಾಳಾದ ಮಳೆ ಈಗಲೇ ಬರಬೇಕಿತ್ತಾ?" ಅಂತಾ ಯಾವುದಾದರೂ ಅಂಗಡಿ ಮುಂಭಾಗದಲ್ಲೋ, ಬಸ್ ಸ್ಟ್ಯಾಂಡ್ ಅಲ್ಲೋ ನಿಂತು ಈ ಮಳೆ ಯಾವಾಗ ಬಿಡುತ್ತೆ ಅಂತಾ ಕಾಯೋ ಕಾಲ.

ಆದರೆ ಮಳೆಗಾಲದ ಬಗ್ಗೆ ಪುಳಕ ಮೂಡಿಸೋ ಸಿನೆಮಾಗಳು ಬಂದ ಮೇಲೆ ಯುವಜನತೆ ಮಳೆಯಲ್ಲಿ ನೆನೆಯೋ ಟ್ರೆಂಡ್ ಶುರು ಮಾಡಿದ್ರು. ಆದರೆ ಅದು ಮಳೆಯ ಪುಳಕವನ್ನು ಅನುಭವಿಸುವುದಕ್ಕಿಂತ ವಾಟ್ಸಾಪ್ ಸ್ಟೇಟಸ್, ಫೇಸ್ ಬುಕ್, ಇನ್ಸ್ಟಾಗ್ರಾಂಗೆ ಅಪ್ ಲೋಡ್ ಮಾಡುವುದಕ್ಕೇ ಅನ್ನೋದು ಸುಳ್ಳಲ್ಲ.

ಆವಾಗೆಲ್ಲಾ ಶಾಲೆ ಬಿಡೋ ಟೈಮ್ ಗೆ ಬರುತ್ತಾ ಇದ್ದ ಮಳೆ, ಈಗ ಆಫೀಸ್ ಬಿಡೋ ಟೈಮ್ ಗೆ ಬರುತ್ತಾ ಇದೆ. ಆಗೆಲ್ಲಾ ಅಮ್ಮ ಮಾಡಿಕೊಡುತ್ತಾ ಇದ್ದ ಬಿಸಿ ಬಿಸಿ ಕಾಫಿ ಜೊತೆ ಬಿಸಿ ಬಿಸಿ ತಿಂಡಿ ಸವಿಯುತ್ತಾ ಇದ್ದ ನಾವು ಇವತ್ತು ಬೇರೆಯವರಿಗಾಗಿ ಕಾಫಿ, ತಿಂಡಿ ಮಾಡ್ತಾ ಇದ್ದೀವಿ ಅಷ್ಟೇ. ಮಳೆರಾಯ ಆವತ್ತೂ ಬದಲಾಗಿಲ್ಲ, ಇವತ್ತೂ  ಬದಲಾಗಿಲ್ಲ.... ಆದರೆ ನಾವು ಯಾಕೆ ಬದಲಾಗ್ತಾ ಇದ್ದೀವಿ...? 

ಇನ್ನಾದರೂ ತೆಗೆದು ಒಮ್ಮೆ ಆ ತಂಗಾಳಿಯ ಜೊತೆ ಮಳೆಯ ಹನಿಯನ್ನೂ ಆಸ್ವಾದಿಸೋಣ. ಮಳೆ ನಿಂತ ಮೇಲೆ ಬೀಳೋ ಆ ಹನಿಯ ಪ್ರತಿ ಶಬ್ಧವನ್ನೂ ಕೇಳೋಣ... ಬಹುಷಃ ಮಾತುಗಳೆಲ್ಲಾ ಮುಗಿದರೂ ಕಾಡುವ ಧ್ವನಿಯ ಹಾಗೆ, ಮಳೆನಿಂತ ಮೇಲೂ ಆ ಹನಿ ಕಾಡಬಹುದು... ತೆರೆದ ಕಿಟಕಿಯಿಂದ ಬೀಸುವ ತಂಗಾಳಿಗೆ ಮುಂಗುರುಳು ಹಾರಿ ಮುತ್ತಿಕ್ಕುವುದನ್ನು ಅನುಭವಿಸೋಣ... ಸಾಧ್ಯವಾದರೆ ಬಿಸಿ ಕಾಫಿಯೊಂದಿಗೆ ಮಳೆರಾಯನೊಡನೆ ಕಾಲ ಕಳೆಯೋಣ..

ಇಷ್ಟೇನಾ ಅನ್ನೋವ್ರು, ಮಳೆಯಲ್ಲಿ ಹೋಗಿ ಒಂದು ಸಾರಿ ನೆನೆದು ಬನ್ನಿ. ಅದರ ಮಜಾ ಇನ್ನೂ ಹೆಚ್ಚು.
ಆಂ! ಶೀತ ಆಗಿ ಜ್ವರ ಬಂದರೆ ಮತ್ತೆ ನನ್ನನ್ನ ಹೊಣೆ ಮಾಡ್ಬೇಡಿ. ಆಯ್ತಾ..?

ಮತ್ತೆ ಸಿಗೋಣ...ಮಳೆರಾಯನ ಜೊತೆ ನನಗೂ ತುಂಬಾ ಮಾತಾಡೋದಕ್ಕಿದೆ. ಮುಗಿಯದ ಮಾತುಗಳ ಮೂಟೆಯಿಂದ ಒಂದಿಷ್ಟನ್ನು ಮೊಗೆದು ಅವನಿಗೂ ಕೊಡಬೇಕಾಗಿದೆ.ಅದೆಲ್ಲಾ ಮುಗಿಸಿ ಬರ್ತೀನಿ.. ಅವನ ಜೊತೆಗೆ ಕಳೆಯೋ ಕ್ಷಣಗಳನ್ನು ಮಿಸ್ ಮಾಡ್ಕೊಳ್ಳೋಕೆ ನನಗೂ ಇಷ್ಟ ಇಲ್ಲ. ನಿಮಗೆ ಮತ್ತೊಮ್ಮೆ ಸಿಕ್ತೀನಿ. ಅಲ್ಲೀವರೆಗೂ ಬಾಯ್..!

-ವಿಭಾ ವಿಶ್ವನಾಥ್   

ಗುರುವಾರ, ಮೇ 31, 2018

ಯಾರಿಗಿಲ್ಲ ಕಷ್ಟ-ನೋವುಗಳು..?

"ನನ್ನಷ್ಟು ಕಷ್ಟ ಯಾರಿಗೂ ಇಲ್ಲ..."," ನನಗಿರುವ ಹಾಗೆ ತೊಂದರೆಗಳು ಬಂದಿದ್ದರೆ...","ನಾನು ಅನುಭವಿಸಿದ ನೋವನ್ನು ನೀವು ಅನುಭವಿಸಿದ್ದರೆ ನೀವು ಹೀಗಿರಲು ಸಾಧ್ಯವೇ ಇರುತ್ತಿರಲಿಲ್ಲ." ಎನ್ನುವವರೆಲ್ಲ ಗಮನಿಸಲೇಬೇಕಾದ ಅಂಶವೆಂದರೆ ನಿಮಗಿಂತ ಕಷ್ಟ ಪಟ್ಟವರು, ನಿಮಗಿಂತ ಕಷ್ಟಪಡುತ್ತಿರುವವರು ಇದ್ದೇ ಇರುತ್ತಾರೆ. ಆದರೆ ಕಷ್ಟಕ್ಕೆದರಿ ಪಲಾಯನ ಮಾಡಿದ್ದರೆ ಅಥವಾ ಕಷ್ಟ ಬಂದಿತೆಂದು ಹಾಗೆಯೇ ಇದ್ದುಬಿಟ್ಟಿದ್ದರೆ ಇಂದಿನ ಮುಕ್ಕಾಲು ಪಾಲು ಸಾಧಕರು ತಮ್ಮ ಗಮ್ಯವನ್ನು ಸಾಧಿಸುತ್ತಲೇ ಇರಲಿಲ್ಲ.

"ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು"

ಹೌದು, ಬದುಕಿನಲ್ಲಿ ನೋವು-ಕಷ್ಟಗಳಿಲ್ಲದೇ ಇರುವವರು ಯಾರು? ನಾವು ಮೊದಲು ಭೂಮಿಗೆ ಕಾಲಿಡುವುಡುವಾಗ ಅಮ್ಮ ಅನುಭವಿಸಿದ್ದೂ ನೋವೇ. ನೋವು-ಕಷ್ಟ ಎಂದುಕೊಂಡು ಅಮ್ಮಂದಿರು ಭಾವಿಸಿ ಹೆರಿಗೆ ನೋವನ್ನು ಅನುಭವಿಸದೇ ಇದ್ದಿದ್ದರೆ ಇಂದು ನಮಗೆ ಅಸ್ತಿತ್ವವೇ ಇರುತ್ತಿರಲಿಲ್ಲವೇನೋ?ಆಟ ಆಡುವಾಗ ಬಿದ್ದು ನೋವಾಯಿತು ಎಂಬ ಕಾರಣಕ್ಕೆ ಹೆದರಿ ಮಕ್ಕಳು ಅಳುತ್ತಾ ಕುಳಿತು ಆಟವನ್ನೇ ಆಡದಿದ್ದಿದ್ದರೆ ಮಕ್ಕಳ ಬೆಳವಣಿಗೆ ಆರೋಗ್ಯವಾಗಿರುತ್ತಿತ್ತೇ?ಕಷ್ಟಪಟ್ಟು ಓದುವುದೇತಕೆ?ಎಂದು ಸುಮ್ಮನೆ ಕುಳಿತಿದ್ದರೆ ವಿದ್ಯಾವಂತರೆನಿಸಿಕೊಳ್ಳಲಾಗುತ್ತಿತ್ತೇ?ಸಾಮಾಜಿಕ ಬದಲಾವಣೆಗಳಾಗುತ್ತಿದ್ದವೇ?

ಆದರೆ ಈ ಸಂದರ್ಭಗಳಲೆಲ್ಲ ಅಷ್ಟಾಗಿ ಕಾಡದ ಕಷ್ಟ ಎನ್ನುವ ಪದ ಕಾಡಲು ಶುರುವಾಗುವುದು ಉದ್ಯೋಗ ಅರಸಿಕೊಂಡು ಹೋಗಿ ಉದ್ಯೋಗ ದೊರಕದಿದ್ದಾಗ ಅಥವಾ ಸಣ್ಣ ಸಂಬಳದ ಉದ್ಯೋಗ ದೊರೆತಾಗ. "ನನಗೇ ಈ ಕಷ್ಟ ಏತಕೆ..?" ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ.

ಎಷ್ಟೋ ಜನರಿಗೆ ಉದ್ಯೋಗವೇ ಇರುವದಿಲ್ಲ ಅಥವಾ ದೇಹದ ಯಾವುದೋ ಭಾಗ ನ್ಯೂನತೆಯಿಂದ ಕೂಡಿರುತ್ತದೆ. ಅವರಿಗೆ ಹೋಲಿಸಿದರೆ ನಮ್ಮ ಪರಿಸ್ಥಿತಿ ಉತ್ತಮವೇ ಆಗಿರುತ್ತದೆ.ಆದರೆ ನಾವು ಅದನ್ನು ಗಮನಿಸುವ ಅಥವಾ ಯೋಚಿಸುವ ಮನಸ್ಥಿತಿಯಲ್ಲಿರುವುದಿಲ್ಲ ಅಷ್ಟೇ. ವ್ಯರ್ಥವಾಗಿ ಚಿಂತಿಸಿ ಸಿಕ್ಕ ಚಿಕ್ಕ ಖುಷಿಯನ್ನೂ ಕಳೆದುಕೊಂಡು ನಮ್ಮ ಬಾಳಲ್ಲಿ ಕಷ್ಟವೇ ತುಂಬಿದೆ ಎಂದು ವ್ಯಥೆಪಡುತ್ತೇವೆ.

ಹಾಗೆಂದು ಎಲ್ಲರ ಕಷ್ಟಗಳು ಚಿಕ್ಕವು ಅಂತಲೋ ಅಥವಾ ಏನೇನೂ ಇಲ್ಲ ಎಂದಲ್ಲ."ಆನೆಯ ಕಷ್ಟ ಆನೆಗಾದರೆ, ಇರುವೆಯ ಕಷ್ಟ ಇರುವೆಗೆ". ಅವರವರ ನೋವು-ಕಷ್ಟಗಳು ಅವರವರಿಗೆ ಹೆಚ್ಚು. ಆದರೆ ಕಷ್ಟ ಎಂದು ಕೊರಗಿದರೆ, ನೋವು ಎಂದು ಮರುಗಿದರೆ ಅವೆಲ್ಲಾ ಬಗೆಹರಿದುಬಿಡುತ್ತವೆಯೇ? ಸುಖ ಈ ಘಳಿಗೆಯೇ ಬರಬೇಕೆಂದುಕೊಂಡರೆ ಮಾತ್ರ ಸಾಧ್ಯವೇ?

"ಯಾವುದೂ ಕೂಡಾ ಸುಲಭವಾಗಿ ಅಥವಾ ಉಚಿತವಾಗಿ ದೊರೆಯುವುದಿಲ್ಲ. ಹಾಗೆ ದೊರೆತರೂ ಅದು ಶಾಶ್ವತವಾಗಿ ಇರುವುದೂ ಇಲ್ಲ" ಎಂಬ ಮಾತುಗಳನ್ನು ಆಗಾಗ ಓದುತ್ತಲೋ ಅಥವಾ ಕೇಳುತ್ತಲೋ ಇರುತ್ತವೆ. ಆದರೂ ಈ ಕ್ಷಣ ನನ್ನ ಕಷ್ಟಗಳೆಲ್ಲಾ ದೂರವಾಗಬೇಕು ಎನ್ನುತ್ತಾ ಅದನ್ನು ಒಪ್ಪಲು ತಯಾರಿರುವುದಿಲ್ಲ. ಒಟ್ಟಾರೆ ಗಿಣಿಪಾಠದಂತೆ ಅದನ್ನು ಜಪಿಸುತ್ತೇವೆ ಅಷ್ಟೇ.

ಕಷ್ಟಗಳನ್ನು ಸಹಿಸುವ ಸಾಮರ್ಥ್ಯ ಉಳ್ಳವರಿಗೆ ಮಾತ್ರ ಕಷ್ಟಗಳು ಬರುತ್ತವೆ. ಜೊತೆಗೆ ಅವು ನಮ್ಮ ಬಾಳಿನಲ್ಲಿ ಹೊಸ ಪಾಠವೊಂದನ್ನು ಕಲಿಸಿ ಹೋಗುತ್ತವೆ. ಕಷ್ಟದಲ್ಲಿ ಜೊತೆಯಲ್ಲಿ ನಿಲ್ಲುವವರಾರು, ನಮ್ಮ ಹಿತಚಿಂತಕರು ಮತ್ತು ಹಿತಶತ್ರುಗಳು ಯಾರು ಎಂಬುದರಿಂದ ಹಿಡಿದು ಕಷ್ಟವನ್ನು ಸಹಿಸಿ ನಿಲ್ಲುವ ಸೈರಣೆಯನ್ನೂ ಅದು ತಿಳಿಸಿಕೊಡುತ್ತೇವೆ. ಯಾವುದೇ ಕಷ್ಟ,ಯಾವುದೇ ನೋವು ಬಂದರೂ ಅದನ್ನು ಮೆಟ್ಟಿ ನಿಲ್ಲುತ್ತೇವೆ ಎಂಬುದು ನಿಜವಾದ ಶಕ್ತಿ.ಆ ಸಮಯದಲ್ಲಿ ಮುಖದಲ್ಲಿ ಮುಗುಳ್ನಗು, ಶಾಂತತೆಯ ಜೊತೆಗೆ ಸರಿಯಾದ ನಿರ್ಧಾರ ನಮ್ಮನ್ನು ಕಷ್ಟದಿಂದ ಬಿಡಿಸಲು ಸಹಾಯಕ. ಅಕಸ್ಮಾತ್ ಈ ಪರಿಸ್ಥಿತಿಯಲ್ಲಿ ನಾವಿಲ್ಲದೇ ಇದ್ದರೂ, ನಮ್ಮ ಹತ್ತಿರದವರು ಅಥವಾ ಪರಿಚಿತರು ಆ ಪರಿಸ್ಥಿತಿಯಲ್ಲಿದ್ದರೆ ಅವರಿಗೆ ಸಾಂತ್ವನ, ಧೈರ್ಯ ತುಂಬುವ ಆತ್ಮವಿಶ್ವಾಸದಾಯಕ ಮಾತುಗಳನ್ನಾಡೋಣ. ಇದು ಸಾಧ್ಯವಾಗದಿದ್ದಲ್ಲಿ ಕುಗ್ಗಿಸುವ ಮಾತುಗಳಂತೂ ಬೇಡ.

ದೇವರೆನಿಸಿಕೊಂಡ ರಾಮನಿಗೇ ವನವಾಸದ ಕಷ್ಟ ತಪ್ಪಲಿಲ್ಲ, ಕೃಷ್ಣನಿಗೆ ಶ್ಯಮಂತಕ ಮಣಿಯನ್ನು ಕದ್ದ ಎಂಬ ಅಪವಾದ ಕಾಡದೇ ಬಿಡಲಿಲ್ಲ. ಆದರೆ ಅವರು ಈ ಸಂಧರ್ಭಗಳಿಗೆ ಅಂಜದೆ, ಅವುಗಳನ್ನು ಅನುಭವಿಸಿ ಮುನ್ನಡೆದರು. ಕಷ್ಟ ಕಳೆದ ಮೇಲೆ ಸುಖ ಬಂದೇ ಬರುವುದು. ಒಳ್ಳೆಯ ಕಾಲಕ್ಕಾಗಿ ಕಾಯೋಣ. ಇಂದಿನ ಕಷ್ಟದ ದಿನಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುವುದು ಎಂಬ ಭರವಸೆಯೊಂದಿಗೆ ಕಾಯೋಣ. ರಾಮ-ಕೃಷ್ಣರಷ್ಟು ಸೈರಣೆ ಇಲ್ಲದಿದ್ದರೂ, ನಮಗೆ ಸಾಧ್ಯವಾಗುವಷ್ಟು ಸಮಾಧಾನ ತಂದುಕೊಂಡು ಧೈರ್ಯವಾಗಿ ಕಷ್ಟದ ದಿನಗಳನ್ನು ಕಳೆಯೋಣ.

"ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನಮ್ಮದೆನ್ನುವ ನಂಬಿಕೆಗಳು ಬೇಕು"  
ಹೌದು, ಈ ಮಾತಿನಂತೆಯೇ ಭರವಸೆಯನ್ನು ಮೂಡಿಸಿಕೊಳ್ಳುತ್ತಾ ನಂಬಿಕೆಯೊಡನೆ ಹೆಜ್ಜೆ ಹಾಕೋಣ. ನೆಮ್ಮದಿಯ ನಾಳೆಗಳಿಗಾಗಿ..

-ವಿಭಾ ವಿಶ್ವನಾಥ್

ಭಾನುವಾರ, ಮೇ 27, 2018

ಮಾರಿಯೇ..? ಮಹಾಲಕ್ಷ್ಮಿಯೇ..?

ಪರಿಮಳ ಅವಳ ದೊಡ್ಡಮ್ಮನ ಜೊತೆ ಮಾತನಾಡುತ್ತಿರುವಾಗ, ಅಣ್ಣನ ಮದುವೆಯ ವಿಚಾರ ಬಂದಿತು. "ಅತ್ತಿಗೆಯನ್ನು ಮನೆಗೆ ಕರೆದುಕೊಂಡು ಬರುವುದು ಯಾವಾಗ?, ಅಣ್ಣನ ಮದುವೆಗೆ ನಾನು ಆ ಸೀರೆಗೆ ಬ್ಲೌಸ್ ಹೊಲೆಸಿಕೊಳ್ಳಬೇಕು.. ಅವನಿಗೆ ಬೇಗ ಮದುವೆ ಮಾಡಿ" ಎಂದು ಹೇಳುತ್ತಿರುವಾಗ ಅಣ್ಣ ಮಧ್ಯದಲ್ಲಿ ಬಂದು "ಮೊದಲು ನಿನ್ನ ಮದುವೆ,ಆಮೇಲೆ ನನ್ನದು" ಎಂದ. "ಯಾಕೆ? ಎಲ್ಲದಕ್ಕೂ ನಾನೇ ಮೊದಲು ಅಂತಾ ಹೇಳ್ತಾ ಇರುತ್ತೀಯಾ, ಮೊದಲು ನೀನೇ ಮದುವೆ ಆಗು" ಎಂದ ಕನಕಳಿಗೆ ಪ್ರತ್ಯುತ್ತರವಾಗಿ ದೊಡ್ಡಮ್ಮ "ಮಾರಿಯನ್ನು ಕಳುಹಿಸಿ, ಮಹಾಲಕ್ಷ್ಮಿಯನ್ನು ಮನೆಗೆ ಕರೆದುಕೊಂಡು ಬಾ" ಎನ್ನುವ ಗಾದೆಯನ್ನು ಕೇಳಿಲ್ಲವೇ?" ಎಂದರು.

ಅದಕ್ಕೆ ಹುಸಿಕೋಪವನ್ನು ನಟಿಸುತ್ತಾ ಪರಿಮಳ "ಹಾಗಾದರೆ, ನಾವುಗಳು ಅಂದರೆ ಹೆಣ್ಣುಮಕ್ಕಳು ಅಂದರೆ ನಾವುಗಳು ಮಾರಿ ಎಂದು ತಾನೇ ನೀವು ಹೇಳುತ್ತಿರುವುದು" ಎಂದಾಗ ಅದು "ಆ ಅರ್ಥದಲ್ಲಲ್ಲಾ ನಾನು ಹೇಳಿದ್ದು." ಎಂದರು.
"ಈ ಮನೆಗೆ ನಾವು ಮಾರಿಯರಾದರೂ, ಇನ್ನೊಂದು ಮನೆಗೆ ನಾವು ಮಹಾಲಕ್ಷ್ಮಿಯರೇ ತಾನೇ?" ಎಂದು ಹೇಳಿ ಆ ಸಂಧರ್ಭವನ್ನು ತಿಳಿಗೊಳಿಸಿದಳು ಪರಿಮಳ.

"ಮಾರಿ ಎಂದರೆ ಮಾರಾಟ ಎಂದೂ ಅರ್ಥ ಬರುತ್ತದೆ, ಅಂದರೆ ಬರಿಗೈಯಲ್ಲಿ ಕಳುಹಿಸದೇ ನಿಮ್ಮನ್ನು ಕೈತುಂಬಾ ಜೀವನಕ್ಕಾಗುವಂತೆ ವರದಕ್ಷಿಣೆಯನ್ನೂ ಕೊಟ್ಟು ಕಳುಹಿಸುತ್ತೇವಲ್ಲಾ" ಎಂದರು ದೊಡ್ಡಮ್ಮ.
"ಅದನ್ನೆಲ್ಲಾ ನಮಗೆ ಕೊಡಿ ಎಂದವರು ಯಾರು?" ಎಂದದ್ದಕ್ಕೆ ಪ್ರತ್ಯುತ್ತರವಾಗಿ ದೊಡ್ಡಮ್ಮ "ಕೊಡದಿದ್ದರೆ ಸುಮ್ಮನೆ ಬಿಡುತ್ತೀರಾ ನೀವು? ನೀವು ಬಿಟ್ಟರೂ ಉಳಿದವರು ಸುಮ್ಮನಿರುತ್ತಾರಾ?"  ಎಂದರು.

"ನೀವು ಕೇಳಿದಂತೆಯೇ ಅಲ್ಲವೇ? ಅವರೂ ಕೇಳುವುದು..
ನೀವು ಅಪೇಕ್ಷಿಸಿದಂತೆಯೇ ಅಲ್ಲವೇ? ಅವರೂ ಅಪೇಕ್ಷಿಸುವುದು..
ನೀವು ಯೋಚಿಸಿದಂತೆಯೇ ಅಲ್ಲವೇ? ಅವರೂ ಯೋಚಿಸುವುದು..
ಮನೆಗೆ ಬರುವ ಸೊಸೆಯಿಂದ ಏನನ್ನೂ ಅಪೇಕ್ಷಿಸಬೇಡಿ, ಮಗಳಿಗೂ ಏನನ್ನೂ ಕೊಟ್ಟು ಕಳುಹಿಸಬೇಡಿ" ಎಂದಳು ಪರಿಮಳ.
"ಸರಿ ಆಯ್ತಮ್ಮಾ, ಹಾಗೇ ಮಾಡುತ್ತೇವೆ." ಎಂದು ಆ ಸಂಧರ್ಭಕ್ಕೆ ತೆರೆ ಎಳೆದರು ದೊಡ್ಡಮ್ಮ.

ಇದು ಬರೀ ಪರಿಮಳ ಮತ್ತು ದೊಡ್ಡಮ್ಮನ ನಡುವೆ ನಡೆಯುವ ಮಾತು-ಕಥೆಯಲ್ಲ. ಪ್ರತಿ ಮನೆಯಲ್ಲೂ ಇಂತಹದ್ದೊಂದು ಸಂಭಾಷಣೆ ಯಾರ ನಡುವೆಯಾದರೂ ನಡೆದೇ ಇರುತ್ತದೆ.

ವೇದ ಸುಳ್ಳಾದರೂ, ಗಾದೆ ಸುಳ್ಳಾಗದು ಎಂಬ ಒಂದು ಮಾತಿದೆ. ಆದರೆ ಈ ಸಂಧರ್ಭಕ್ಕೆ ಅದನ್ನು ಹೇಗೆ ಬಳಸಿಕೊಳ್ಳಬೇಕೋ ಗೊತ್ತಿಲ್ಲ. ಬಹುಶಃ ಮನೆಯಲ್ಲಿದ್ದ ಹಠಮಾರಿ ಮಗಳು , ಇನ್ನೊಂದು ಮನೆಯಲ್ಲಿ ಸೌಮ್ಯರೂಪಿಯಾದ ದೇವತೆ ಮಹಾಲಕ್ಷ್ಮಿಯಂತೆ ಬಾಳಬಹುದು ಎಂಬ ಅರ್ಥ ಬರಬಹುದೇನೋ?

ಹೆಣ್ಣುಮಕ್ಕಳು ಅಣ್ಣ-ತಮ್ಮಂದಿರ ಕಾಟ ಕೊಟ್ಟಿರಬಹುದೇನೋ, ಆದರೆ ಮಾರಿಯಷ್ಟು ಹಟಮಾರಿ, ಉಗ್ರರೂಪಿ ಖಂಡಿತಾ ಆಗಿರುವುದಿಲ್ಲ. ಮಾರಿಯೇ ಆದರೆ, ಹಾಗೇ ಅನ್ನಿಸಿದರೂ ಅವಳೂ ದೇವತೆಯೇ ಅಲ್ಲವೇ? ಅಕಸ್ಮಾತ್ ಮನೆಮಗಳು ಅಷ್ಟು ಕಾಟ ಕೊಟ್ಟರೂ ಅವಳನ್ನು ಕಳುಹಿಸುವಾಗ ಎಲ್ಲರ ಕಣ್ಣಲ್ಲೂ ನೀರು ತುಂಬಿ ಬೇಸರವಾಗುವುದೇಕೆ?

ಇನ್ನು ಕೊಡು-ಕೊಳ್ಳುವಿಕೆಯ ವಿಷಯದಲ್ಲಿ ವರದಕ್ಷಿಣೆ ಎಂಬ ಪದ ನೇಪಥ್ಯಕ್ಕೆ ಸರಿಯುತ್ತಿದ್ದರೂ ಮಗಳು ಸುಖವಾಗಿರಲೆಂಬ ಕಾರಣಕ್ಕೆ ಹೆತ್ತವರು ಉಡುಗೊರೆ ನೀಡಿ ಕಳುಹಿಸುತ್ತಾರೆ. ಅದನ್ನುತಮ್ಮ ಮಗನ ಜೀವನದಲ್ಲಿಯೂ ಅಪೇಕ್ಷಿಸುತ್ತಾರೆ ಸಹಾ... ಇದು ಬದಲಾಗದೇ?

ಹೆಣ್ಣು ಮಕ್ಕಳಿಗೆ ಇಂದು ವಿದ್ಯೆ ನೀಡಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿ ಸ್ವಾತಂತ್ರ್ಯ, ಸ್ವಾಭಿಮಾನದ ಉಡುಗೊರೆಯನ್ನು ಉಡಿ ತುಂಬಿಸಿದ ಮೇಲೆ ಅವರು ಖಂಡಿತಾ ಮತ್ತೇನನ್ನೂ ಅಪೇಕ್ಷಿಸುವುದಿಲ್ಲ, ಹೆತ್ತವರ ಮತ್ತು ಒಡಹುಟ್ಟಿದವರ ಪ್ರೀತಿಯ ಹೊರತು.

ಮಾರಿಯನ್ನು ಕಳುಹಿಸಿ,ಮಹಾಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳುತ್ತಿದ್ದೇವೆ ಎನ್ನುವುದಕ್ಕಿಂತ ಮಹಾಲಕ್ಷ್ಮಿಯನ್ನು ಕಳುಹಿಸಿ,ಮಹಾಲಕ್ಷ್ಮಿಯನ್ನೇ ಮನೆತುಂಬಿಸಿಕೊಳ್ಳುತ್ತಿದ್ದೇವೆ ಎನ್ನಬಾರದೇಕೆ?

-ವಿಭಾ ವಿಶ್ವನಾಥ್