ಸೋಮವಾರ, ಜನವರಿ 21, 2019

ನಮ್ಮ ಶಿಕ್ಷಣದ ಕಥೆ ನಿಮ್ಮ ಜೊತೆ..

ರೂಪಕವನ್ನು ವೀಕ್ಷಿಸಲು ಈ ಲಿಂಕ್ ಗೆ ಭೇಟಿ ನೀಡಿ. ಮಕ್ಕಳ ಅಭಿನಯವನ್ನು ಆನಂದಿಸಿ.

ಪಾತ್ರಗಳು:
1. ಕಿಟ್ಟಿ
2. ಕಿಟ್ಟಿಯ ತಾಯಿ
3. ರಾಜು
4. ರಾಜುವಿನ ತಾಯಿ
5. ರಾಜುವಿನ ತಂದೆ
6. ಹೂ ಮಾರುವ ಅಜ್ಜಿ

ದೃಶ್ಯ-01
-----------
(ಕಿಟ್ಟಿಯ ತಾಯಿ, ಕಿಟ್ಟಿ)

ಕಿಟ್ಟಿಯ ಅಮ್ಮ: ಕಿಟ್ಟಿ, ಏನ್ ಮಾಡ್ತಾ ಇದ್ದೀಯೋ ?

ಕಿಟ್ಟಿ: ಚಿತ್ರ ಬಿಡಿಸ್ತಾ ಇದ್ದೀನಿ ಕಣಮ್ಮಾ..

ಕಿಟ್ಟಿಯ ಅಮ್ಮ: ಯಾವಾಗ ನೋಡಿದ್ರೂ ಈ ಹಾಳಾದ ಚಿತ್ರ ಬಿಡಿಸ್ತಾನೇ ಕೂತಿರ್ತೀಯಾ. ಅದ್ಯಾವಾಗ ಓದಿಕೋತಿಯೋ..? ಗೊತ್ತಿಲ್ಲ..!
ಚಿತ್ರ ಬರಿಯೋದು ಬಿಟ್ರೆ ಕಥೆ ಪುಸ್ತಕ ಇಲ್ಲಾ ಅಂದ್ರೆ ಆಟ. ಇದೇ ಆಗೋಯ್ತು ಮೂರೊತ್ತು..
ಮುಂದಗಡೆ ಮನೆ ರಾಜೂನಾ ನೋಡಿ ಕಲಿತುಕೊಳ್ಳೋ, ಯಾವಾಗ್ಲೂ ಓದ್ತಾ ಇರ್ತಾನೆ. ನೀನೂ ಇದ್ದೀಯಾ ಬರೀ ದಂಡಕ್ಕೆ..

ಕಿಟ್ಟಿ: ಹೋಗಿ ಹೋಗಿ ಆ ಸೋಡಾಬುಡ್ಡಿ ತರಾ ಆಗು ಅಂತಾ ಹೇಳ್ತಾ ಇದ್ದೀಯಲ್ಲಮ್ಮ. ನಿಂಗೇನು ಬುದ್ದಿ ಇಲ್ವಾ..?

ಕಿಟ್ಟಿಯ ಅಮ್ಮ: ಬುದ್ದಿ ಇರೋದಕ್ಕೆ ಕಣೋ, ಹಂಗೆ ಹೇಳ್ತಾ ಇರೋದು. ಅವ್ನು ಯಾವಾಗ್ಲೂ ಫಸ್ಟ್ ರ್ಯಾಂಕ್. ನೀನೂ ಇದ್ದೀಯಾ..

ಕಿಟ್ಟಿ: ನಾನೂ ಫಸ್ಟ್ ಬರ್ತೀನಲ್ಲಮ್ಮಾ. ಅದ್ಯಾಕೆ ನಿನ್ನ ಕಣ್ಣಿಗೆ ಕಾಣಿಸೋಲ್ಲ..?

ಕಿಟ್ಟಿಯ ಅಮ್ಮ: (ವ್ಯಂಗ್ಯವಾಗಿ) ನೀನೂ ಫಸ್ಟ್ ಬರ್ತೀಯಾಪ್ಪಾ, ಆದರೆ ಫಸ್ಟ್ ಇಂದ ಅಲ್ಲ ಲಾಸ್ಟ್ ಇಂದ ಅಲ್ವಾ..?

ಕಿಟ್ಟಿ: ಬರೀ ಓದೋ ವಿಷಯಾನೇ ಹೇಳ್ತೀಯಲ್ಲಮ್ಮಾ.. ನಾನು ಎಲ್ಲಾ ಗೇಮ್ಸ್ ಅಲ್ಲೂ ಫಸ್ಟ್, ಡ್ರಾಯಿಂಗ್ ಅಲ್ಲೂ ಫಸ್ಟ್, ಜನರಲ್ ನಾಲೆಡ್ಜ್ ಅಲ್ಲೂ ಫಸ್ಟ್

ಕಿಟ್ಟಿಯ ಅಮ್ಮ: ಆದ್ರೇನಪ್ಪಾ ಬಂತು ಪ್ರಯೋಜನ? ನಿಂಗೆ ಮಾರ್ಕ್ಸ್ ಏ ಬರಲ್ವಲ್ಲೋ.. ನಮ್ಮ ಕಾಲದಲ್ಲಿ ನಿಮ್ಮಷ್ಟು ಓದ್ಸಿದ್ರೆ ನಾವು ಎಲ್ಲೋ ಇರ್ತಿದ್ವಿ.

ಕಿಟ್ಟಿ: (ವ್ಯಂಗ್ಯವಾಗಿ) ಅದ್ಕೆ ಓದ್ಸಿಲ್ಲ ಬಿಡು
(ಗಂಭೀರವಾಗಿ) ಅಮ್ಮಾ ಯಾವಾಗ್ಲೂ ಯಾಕೆ ಕಂಪೇರ್ ಮಾಡ್ಕೋತೀಯಾ? ಅವರಿಗೆ ಎಷ್ಟು ಸಾಧ್ಯಾನೋ ಅಷ್ಟು ಓದ್ಸಿದ್ದಾರೆ.
ಸರಿ,ಸರಿ ನಂಗೆ ಆಟ ಆಡೋಕೆ ಟೈಮ್ ಆಯ್ತು. ನಾನು ಆಟಕ್ಕೆ ಹೋಗ್ತೀನಿ. ಬಾಯ್
[ಕಿಟ್ಟಿ ಓಡುವನು, ಅಮ್ಮನೂ ಇತ್ತ ಬರುವಳು]

ದೃಶ್ಯ -2 
-------------
[ರಾಜುವಿನ ಅಪ್ಪ, ರಾಜುವಿನ ಅಮ್ಮ, ರಾಜು]
(ರಾಜುವಿನ ಮನೆ)

ರಾಜುವಿನ ಅಮ್ಮ: ರಾಜು,ರಾಜು. ಏನ್ ಮಾಡ್ತಾ ಇದ್ದೀಯೋ?

ರಾಜುವಿನ ಅಪ್ಪ: ಏನೇ ನಿಂದು..? ಅವ್ನು ಓದಿಕೊಳ್ತಾ ಇದ್ದಾನೆ.  ಏನಾಗ್ಬೇಕು ನಿಂಗೆ?

ರಾಜುವಿನ ಅಮ್ಮ: ಅಯ್ಯೋ, ಮಾರ್ಕೆಟ್ ಗೆ ಹೋಗಬೇಕಿತ್ತು ಕಣ್ರೀ. ಅದಕ್ಕೇ ಕೂಗಿದೆ. ಪೂಜೆಗೆ ಹೂವು ಹಣ್ಣು ಎಲ್ಲಾ ತರಬೇಕಿತ್ತು.

ರಾಜುವಿನ ಅಪ್ಪ: ಓದೋ ಹುಡುಗನಿಗ್ಯಾಕೆ ಹೇಳ್ತಿಯಾ ಅದನ್ನೆಲ್ಲಾ. ಅವನು 5 ನೇ ಕ್ಲಾಸು. ಅವ್ನಿಗೆಲ್ಲಿದೆಯೋ ಟೈಮು?
ಬೆಳಿಗ್ಗೆ ಎದ್ದ್ರೆ ಯೋಗಾಸನ, ಆಮೇಲೆ ಮ್ಯಾಥ್ಸ್ ಟ್ಯೂಷನ್, ಆಮೇಲೆ ಸ್ಕೂಲು, ಸಂಜೆ ಸ್ವಿಮ್ಮಿಂಗು ಆಮೇಲೆ ಅಬ್ಯಾಕಸ್  ಕ್ಲಾಸ್ ಕೊನೆಗೆ ಸೈನ್ಸ್ ಟ್ಯೂಷನ್.. ಅವ್ನು ಓದ್ಕೊಳ್ಳಿ ಬಿಡು. ನಾನೇ ತರ್ತೀನಿ ಬ್ಯಾಸ್ಕೆಟ್ ಕೊಡು.

ರಾಜುವಿನ ಅಮ್ಮ: ನೀವು ಹೀಗಂದು ಅಂದು ಅವನನ್ನು ಹಾಳು ಮಾಡಿದ್ದೀರ. ಅವನಿಗೆ ಸಕ್ಕರೆ ಯಾವುದು ಉಪ್ಪು ಯಾವುದು ಅಂತಾ ವ್ಯತ್ಯಾಸಾನೇ ಗೊತ್ತಿಲ್ಲ. ಮೊನ್ನೆ ಏನಾಯ್ತು ಗೊತ್ತಾ?

ರಾಜುವಿನ ಅಪ್ಪ: ಗೊತ್ತಿಲ್ಲ ಕಣೇ. ಹೇಳಿದ್ರೆ ತಾನೇ ಗೊತ್ತಾಗೋದು..

ರಾಜುವಿನ ಅಮ್ಮ: ಹೇಳ್ತೀನಿ ಕೇಳಿ.. ಮೊನ್ನೆ ಏನೋ ಕೆಲಸ ಮಾಡ್ತಾ ಇದ್ದೆ. ಸಾರಿಗೆ ಒಂದು ಸೌಟು ಉಪ್ಪು ಹಾಕು ಅಂದರೆ ಸಕ್ಕರೆ ಹಾಕಿ ಪಾಯಸ ಮಾಡಿ ಇಟ್ಟಿದಾನೆ.

ರಾಜುವಿನ ಅಪ್ಪ: ಹೌದೇನೋ ರಾಜು?

ರಾಜು: (ಮುಗ್ದವಾಗಿ) ಎರಡೂ ವೈಟ್ ಕಲರ್ ಇತ್ತು ಪಪ್ಪಾ, ನಂಗೆ ಗೊತ್ತಾಗಲೇ ಇಲ್ಲ. ಅಮ್ಮ ಆ ಡಬ್ಬಿಗಳ ಮೇಲೆ ಚೀಟೀನೇ ಅಂಟಿಸಿರಲಿಲ್ಲಾ

ರಾಜುವಿನ ಅಮ್ಮ:(ತಲೆ ಚಚ್ಚಿಕೊಳ್ಳುವಳು)

ರಾಜುವಿನ ಅಪ್ಪ: ಹೋಗ್ಲಿ ಬಿಡೆ ಮುಂದೆ ಸರಿಯಾಗ್ತಾನೆ

ರಾಜುವಿನ ಅಮ್ಮ: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಅಂತಾರಲ್ಲ ಹಾಗೇ. ಇವಾಗ ಕಲಿಯದೇ ಇರೋನು ಮುಂದೆ ಕಲೀತಾನಾ.. ಎಲ್ಲಾ ಈಗಿನ ಇಂಗ್ಲೀಷ್ ಸ್ಕೂಲ್ ಗಳ ಪ್ರಭಾವ.

ರಾಜುವಿನ ಅಪ್ಪ: ಇವಾಗ ಏನು ಮಾಡ್ಬೇಕು ಅಂತೀಯೇ ?

ರಾಜುವಿನ ಅಮ್ಮ: ಅವನನ್ನು ಟ್ಯೂಷನ್, ಅಬ್ಯಾಕಸ್ ಎಲ್ಲಾ ಬಿಡಿಸಿ, ಎಲ್ಲಾ ಮಕ್ಕಳ ತರ ಅವನೂ ಆಟ ಆಡಿಕೊಂಡು ಇರಲಿ.

ರಾಜುವಿನ ಅಪ್ಪ: ಅವನೂ ದಿನಾ ಆಟ ಆಡ್ತಾನಲ್ಲೇ..!?

ರಾಜುವಿನ ಅಮ್ಮ: ಯಾವಾಗ ಆಡ್ತಾನೆ? ಅವನು ರೂಂ ಬಿಟ್ಟು ಹೊರಗಡೆ ಹೋಗೋದನ್ನೇ ನಾನು ನೋಡಿಲ್ಲ.

ರಾಜು: ದಿನಾ ಕ್ರಿಕೆಟ್, ಫುಟ್ ಬಾಲ್ ಆಡ್ತೀನಲ್ಲಮ್ಮಾ..

ರಾಜುವಿನ ಅಮ್ಮ: (ಆಶ್ಚರ್ಯದಿಂದ) ಯಾವಾಗ್ಲೋ..? ಟ್ಯೂಷನ್ ಗೆ ಹೋದಾಗ ಅಲ್ಲಿ ಮಕ್ಕಳ ಜೊತೆಗೆ ಆಟ ಆಡ್ತೀಯೇನೋ? ಯಾವ,ಯಾವ ಆಟ ಆಡ್ತೀರೋ..?
ನಂಗೆ ಹೇಳ್ಲೇ ಇಲ್ವಲ್ಲೋ ಇದನ್ನ

ರಾಜು: ಅಯ್ಯೋ ಅಮ್ಮ.. ಅಲ್ಲಿ ಎಲ್ಲಿ ಆಟ ಆಡೋಕಾಗುತ್ತೆ? ದೊಡ್ಡ ದೊಡ್ಡ ಬಿಲ್ಡಿಂಗ್ ಮಾತ್ರ ಇರೋದು. ಫೀಲ್ಡ್ ಏ ಇಲ್ಲ, ರೋಡಲ್ಲಿ ಆಡ್ಬೇಕಾಗುತ್ತೆ ಅಷ್ಟೇ.

ರಾಜುವಿನ ಅಪ್ಪ: ನಾವಾದ್ರೇ ರೋಡಲ್ಲೂ ಆಡ್ತಾ ಇದ್ವಿ. ಆ ವೆಹಿಕಲ್ ಗಳ ಮಧ್ಯೆ ರೋಡಲ್ಲಿ ಆಡೋಕೂ ಆಗಲ್ಲ ಈಗ.
ಅದಿಕ್ಕೆ ಕಣೇ ಅವನು ದಿನಾ ಕ್ರಿಕೆಟ್, ಪುಟ್ ಬಾಲ್, ಚೆಸ್ ಎಲ್ಲಾನೂ ನನ್ನ ಮೊಬೈಲ್ ಅಲ್ಲೇ ಆಡ್ತಾನೆ.

ರಾಜುವಿನ ಅಮ್ಮ: ನಿಮ್ಮ ಕಥೆ ಕಟ್ಟಿಕೊಂಡು ಹೋದ್ರೆ ಆಯ್ತು.
ಏ ರಾಜು.. ಹೋಗೋ ಹೋಗಿ ಮಾರ್ಕೆಟ್ ಅಲ್ಲಿ ಹೂ,ಹಣ್ಣು, ಕಾಯಿ ತಗೊಂಡು ಬಾ
(ರಾಜು ಪೆನ್ಸಿಲ್ ನಿಂದ ಪೇಪರ್ ನಲ್ಲಿ ಹೂ,ಹಣ್ಣು, ಕಾಯಿ ಎಂದು ಬರೆದುಕೊಳ್ಳುವನು)

ರಾಜು: ಸರಿ ಅಮ್ಮ

ರಾಜುವಿನ ಅಮ್ಮ: ಹೋದ ಸಾರಿ ದುಡ್ಡು ಮರೆತು ಹೋದ್ಯಲ್ಲ ಹಾಗೆ ಹೋಗ್ಬೇಡ. ಅಲ್ಲೇ, ಅಕ್ಕಿ ಡಬ್ಬದ ಕೆಳಗಡೆ ದುಡ್ಡು ಇಟ್ಟಿದ್ದೀನಿ ತಗೊಂಡು ಹೋಗು.

ರಾಜು: ಆಯ್ತು ಅಮ್ಮ

ದೃಶ್ಯ-3 
-------------
(ಮಾರ್ಕೆಟ್ ನಲ್ಲಿ)
(ಅಜ್ಜಿ, ರಾಜು, ಕಿಟ್ಟಿ, ಕಿಟ್ಟಿಯ ಅಮ್ಮ)

ಅಜ್ಜಿ: ಏನು ಬೇಕಿತ್ತಪ್ಪಾ?

ರಾಜು: (ಜೋರು ಧ್ವನಿಯಲ್ಲಿ) ಹೂ, ಹಣ್ಣು, ಕಾಯಿ ಎಲ್ಲಾ ಬೇಕಿತ್ತಪ್ಪಾ.
(ಸ್ವಲ್ಪ ನಿಧಾನವಾಗಿ) ಆದರೆ ಎಷ್ಟು ಬೇಕಿತ್ತು ಅಂತಾ ಅಮ್ಮ ಹೇಳ್ಲೇ ಇಲ್ಲ. ಎಲ್ಲಾನು ಒಂದು ಒಂದೇ ಅನ್ಸುತ್ತೆ, ಜಾಸ್ತಿ ಬೇಕಿದ್ರೆ ಅಮ್ಮ ಹೇಳ್ತಿದ್ರು.

ಅಜ್ಜಿ: ಎಷ್ಟೆಷ್ಟು ಬೇಕು?

ರಾಜು: ಒಂದು ಹೂ, ಆಮೇಲೆ ಒಂದು ಕಾಯಿ, ಒಂದು ಹಣ್ಣು ಕೊಡಿ.

ಅಜ್ಜಿ: (ಜೋರಾಗಿ ನಗುತ್ತಾ) ಏನು? ಒಂದು ಹೂ, ಒಂದು ಹಣ್ಣಾ..?

ರಾಜು: (ಕೋಪದಿಂದ) ಯಾಕಜ್ಜಿ ನಗ್ತಾ ಇದ್ದೀಯಾ?

ಅಜ್ಜಿ: ಇನ್ನೇನಪ್ಪಾ ಮಾಡ್ಲಿ..? ಯಾರಾದ್ರೂ ಒಂದು ಹೂವು, ಒಂದು ಹಣ್ಣು ತಗೋತಾರಾ? ಒಂದು ಮಾರು ಹೂವು, ಒಂದು ಚಿಪ್ಪು ಹಣ್ಣು ಕೊಡ್ತೀನಿ ತಗೊಂಡು ಹೋಗು.

ರಾಜು: (ತಲೆ ಕೆರೆದುಕೊಳ್ಳುತ್ತಾ) ಸರಿ ಕೊಡಿ. ಮೊದಲು ಹೂ ಕೊಡಿ ಆಮೇಲೆ ಹಣ್ಣು ಆಮೇಲೆ ಕಾಯಿ ಕೊಡಿ

ಅಜ್ಜಿ: ಯಾಕಪ್ಪಾ?

ರಾಜು: ಅಮ್ಮ ತರೋಕೆ ಹೇಳಿರೋದೇ ಹಾಗೆ..

ಅಜ್ಜಿ: ಸರಿ, ಸರಿ. ಸೇವಂತಿಗೆ ಬೇಕೋ? ಕಾಕಡ ಬೇಕೋ? ಮಲ್ಲಿಗೆ ಬೇಕೋ? ಕನಕಾಂಬರ ಬೇಕೋ?

ರಾಜು: (ಆಶ್ಚರ್ಯದಿಂದ) ಅಷ್ಟೊಂದು ತರಹದ ಹೂಗಳು ಇದಿಯಾ? ಯಾವುದೋ ಒಂದು ಕೊಡಿ.

ಅಜ್ಜಿ: ಯಾಕಪ್ಪಾ ನಿಂಗೆ ಇವೆಲ್ಲಾ ಗೊತ್ತಿಲ್ವಾ? ಇನ್ನೂ ತುಂಬಾ ತರಹದ ಹೂಗಳು ಇದ್ದಾವೆ. ಸದ್ಯಕ್ಕೆ ಇಷ್ಟೇ ನನ್ನ ಹತ್ರ ಇರೋದು..
ಸರಿ ಸರಿ, ತೊಂಬತ್ತು ರೂಪಾಯಿ ಆಯ್ತು ಕೊಡಪ್ಪಾ
(ರಾಜು ನೂರು ರೂಪಾಯಿ ಕೊಟ್ಟು ಬುಟ್ಟಿಯಲ್ಲಿ ಮೊದಲು ಹೂ ನಂತರ ಹಣ್ಣು ಆಮೇಲೆ ಕಾಯಿ ಇಟ್ಟುಕೊಂಡು ವಾಪಾಸ್ ಹೊರಡುವನು)

ಅಜ್ಜಿ: ಚಿಲ್ಲರೆ ತಗಳಪ್ಪಾ.. ದಿನಾ ನಿಮ್ಮಂತಹವರು ಸಿಕ್ಕರೆ ನಾವು ಅಂಗಡಿ ಮೇಲೆ ಅಂಗಡಿ ಕಟ್ಟಿಸಬಹುದು. 
(ರಾಜು ಚಿಲ್ಲರೆ ತೆಗೆದುಕೊಂಡು ವಾಪಾಸ್ ಹೊರಡುವಾಗ ಕಿಟ್ಟಿ ಮತ್ತು ಅವರ ಅಮ್ಮ ಎದುರಾಗುತ್ತಾರೆ.)
(ಕಿಟ್ಟಿ ಅವನ ಕೈಯ್ಯಲ್ಲಿದ್ದ ಬ್ಯಾಸ್ಕೆಟ್ ನೋಡಿ ಜೋರಾಗಿ ನಗಲು ಶುರುಮಾಡುತ್ತಾನೆ)

ಕಿಟ್ಟಿಯ ಅಮ್ಮ: (ಗದರಿಸುವ ಧ್ವನಿಯಲ್ಲಿ) ಸುಮ್ನಿರೋ ಕಿಟ್ಟಿ, ಪಾಪ ಅವ್ನಿಗೆ ಗೊತ್ತಾಗಲ್ಲ..
(ರಾಜುವಿಗೆ) ಯಾಕಪ್ಪಾ ರಾಜು? ಬುಟ್ಟಿಯಲ್ಲಿ ಈ ತರಾ ಸಾಮಾನು ಜೋಡಿಸಿಕೊಂಡಿದ್ದೀಯಾ?

ರಾಜು: (ತೊದಲಿಸುತ್ತಾ) ಅದು.. ಅದು.. ಆಂಟಿ.., ಅಮ್ಮ ಹೂವು,ಹಣ್ಣು, ಕಾಯಿ ತಗೊಂಡು ಬಾ ಅಂದ್ರು. ನಾನೂ ಹಾಗೇ ಬರೆದ್ಕೊಂಡಿದ್ದೆ. ಅದಕ್ಕೇ ಈ ತರಾ ಜೋಡಿಸಿಕೊಂಡಿದ್ದೀನಿ.

ಕಿಟ್ಟಿ: ನೋಡಮ್ಮಾ ನಿಮ್ಮ ಫಸ್ಟ್ ರ್ಯಾಂಕ್ ರಾಜು ಕಥೆನಾ..

ಕಿಟ್ಟಿಯ ಅಮ್ಮ: ಸುಮ್ನಿರೋ ಕಿಟ್ಟಿ(ಜೋರಾಗಿ ಗದರುವರು)
(ಕಿಟ್ಟಿಗೆ) ಅವರು ಹೇಳುವಾಗ ಹಾಗೆ  ಹೇಳಿರ್ತಾರೆ ಅಷ್ಟೇ. ನೀನು ಇಟ್ಟಿರೋ ತರಾ ಇಟ್ಕೊಂಡು ಹೋದ್ರೆ ಹೂ, ಹಣ್ಣು ಎಲ್ಲಾ ಹಾಳಾಗತ್ತೆ ಅಷ್ಟೇ..
ಕೆಳಗಡೆ ಕಾಯಿ ಇಟ್ಟು ಆಮೇಲೆ ಹಣ್ಣು ಆಮೇಲೆ ಹೂವು ಇಡಬೇಕು ಆಯ್ತಾ..?

ರಾಜು: ಸರಿ ಆಂಟಿ ಹಾಗೇ ಮಾಡ್ತೀನಿ
(ರಾಜು ಹೊರಡುವನು)

ಕಿಟ್ಟಿ: ನೋಡಮ್ಮಾ ನಿಮ್ಮ ಫಸ್ಟ್ ರ್ಯಾಂಕ್ ರಾಜು ಕಥೆನಾ..ನಾನೂ ರಾಜೂ ತರಹಾನೇ ಆಗ್ಬೇಕಾ? ಯಾವಾಗ್ಲೂ ರಾಜೂನಾ ನೋಡಿ ಕಲಿ ಅಂತಾ ಹೇಳ್ತಾ ಇರ್ತೀಯಲ್ಲಾ.. ನಾನೂ ಹೇಳಬಹುದು ಅಲ್ವಾ, ನೀನೂ ಅವರ ಅಮ್ಮನ ನೋಡಿ ಕಲಿ ಅಂತಾ..

ಕಿಟ್ಟಿಯ ಅಮ್ಮ: ಬಿಡೋ ಹೋಗ್ಲಿ, ಇನ್ಮೇಲೆ ನಿನ್ನನ್ನ ಬೇರೆಯವರಿಗೆ ಕಂಪೇರ್ ಮಾಡಲ್ಲ ಆಯ್ತಾ..?
(ಎಲ್ಲರೂ ನಿರ್ಗಮಿಸುವರು)

ದೃಶ್ಯ-4
-----------
(ರಾಜುವಿನ ಅಮ್ಮ, ಕಿಟ್ಟಿಯ ಅಮ್ಮ)

ಕಿಟ್ಟಿಯ ಅಮ್ಮ: ಆಯ್ತೇನ್ರೀ ಎಲ್ಲಾ ಕೆಲಸ? ನಿಮ್ಮದೇ ಒಂತರಾ ಸುಖ ಬಿಡ್ರೀ.. ಫಸ್ಟ್ ರ್ಯಾಂಕ್ ಬರೋ ಮಗ, ನನ್ಮಗಾನು ಇದ್ದಾನೆ.. ದಂಡಕ್ಕೆ..

ರಾಜುವಿನ ಅಮ್ಮ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತಾರೆ, ಏನು ಸುಖಾನೋ ಏನೋ .. ನಿಮ್ಮದೇ ಪುಣ್ಯ ಬಿಡ್ರಿ, ನಿಮ್ಮ ಮಗ ನಿಮಗೆ ಎಲ್ಲಾದ್ರಲ್ಲೂ ಸಹಾಯ ಮಾಡ್ತಾನೆ. ಆಟ ಆಡೋದ್ರಲ್ಲಿ ಚಾಂಪಿಯನ್, ವ್ಯವಹಾರ ಜ್ಞಾನಾನೂ ತುಂಬಾ ಚೆನ್ನಾಗಿದೆ. ತುಂಬಾ ಬುದ್ದಿವಂತ.

ಕಿಟ್ಟಿಯ ಅಮ್ಮ: ಏನು ಬುದ್ದಿವಂತ ಆದ್ರೆ ಏನ್ರೀ..? ಮಾರ್ಕ್ಸ್ ಏ ಬರಲ್ಲ.. ಮುಂದೆ ಹೇಗೋ ಏನೋ ಅಂತಾ ಚಿಂತೆಯಾಗೋಗಿದೆ, ಇವನು ಓದಲಿ ಅಂತಾ ಕೇಬಲ್ ಕನೆಕ್ಷನ್ ತೆಗೆಸಿದ್ವಿ, ನಮ್ಮನೆಯವ್ರ ಆಫೀಸ್ ಗೆ ದೂರ ಆದ್ರೂ ಇಲ್ಲಿ ಮನೆ ಮಾಡಿದ್ವಿ, ಆದ್ರೆ ಇವನು ಹೀಗಾದ.. 
   
ರಾಜುವಿನ ಅಮ್ಮ: ಎಲ್ಲರೂ ವಿಶ್ವೇಶ್ವರಯ್ಯ ಆಗೋಕಾಗಲ್ಲ
ಐದು ಬೆರಳೂ ಒಂದೇ ಸಮ ಇರಲ್ಲ ನೊಡ್ಡಿ.ಓದು, ಮಾರ್ಕ್ಸ್ ಬೇಕು ಆದರೆ ಆರೋಗ್ಯ, ಚಟುವಟಿಕೆ,ವ್ಯವಹಾರ ಜ್ಞಾನ ತುಂಬಾನೇ ಮುಖ್ಯ.
ಮೀನು ಮರ ಹತ್ತೋಕಾಗಲ್ಲಾ, ಹಕ್ಕಿ ಈಜೋಕಾಗಲ್ಲ, ಅವರವರ ರೀತಿ ಅವರವರಿಗೆ ಕಣ್ರೀ.. ಇತ್ತೀಚಿನ ಎಜುಕೇಶನ್ ಸಿಸ್ಟಂ ಹೀಗಾಗೋಗಿದೆ, ಆದ್ರೆ ಇದಕೆಲ್ಲಾ ಅಪವಾದ ಅನ್ನೋ ಹಾಗೇ ಒಂದು ಸ್ಕೂಲ್ ಇದೆ ಕಣ್ರೀ..

ಕಿಟ್ಟಿಯ ಅಮ್ಮ: ಹೌದಾ? ಯಾವುದ್ರೀ ಅದು?

ರಾಜುವಿನ ಅಮ್ಮ: ಮೈತ್ರಿ ಕಾನ್ವೆಂಟ್ ಅಂತಾ ಕಣ್ರೀ, ಅಲ್ಲಿ ಓದೋದರ ಜೊತೆಜೊತೆಗೆ ಆಟಕ್ಕೂ ಪ್ರಾಮುಖ್ಯತೆ ಇದೆ. ಸ್ಮಾರ್ಟ್ ಕ್ಲಾಸ್, ಯೋಗ, ಕರಾಟೆ, ಸಂಗೀತ, ಡ್ರಾಯಿಂಗ್ ಎಲ್ಲಾ ಇದೆ, ಜೊತೆಗೆ ಥಿಯೇಟರ್ ಎಜುಕೇಶನ್ ಅಂದರೆ ರಂಗ ಶಿಕ್ಷಣದ ಅನುಕೂಲ ಸಹಾ ಇದೆ.
ಮಕ್ಕಳಿಗೆ ವ್ಯವಹಾರ ಜ್ಞಾನ ಕಲಿಸೋದಕ್ಕೆ ಕ್ಯಾಂಟೀನ್ ಡೇ ಮಾಡ್ತಾರೆ.ಅಲ್ಲಿ ಮಕ್ಕಳ ಮೊದಲ ಅಭ್ಯಾಸವನ್ನು ಅಕ್ಕಿ ಮೇಲೆ ಅಕ್ಷರ ಬರೆಸೋದ್ರಿಂದ ಅವರ ಅಪ್ಪ-ಅಮ್ಮನೇ ಶುರು ಮಾಡ್ತಾರೆ. ತಂದೆ-ತಾಯಿ ಪಾದ ಪೂಜೆ ಮಾಡಿಸ್ತಾರೆ. ಗ್ರಾಮೀಣ ಕ್ರೀಡೆಗಳು, ಸಂಸ್ಕೃತಿಯ ಮೌಲ್ಯ ಎಲ್ಲವನ್ನೂ ಅಲ್ಲಿ ಕಲಿಸಿಕೊಡುತ್ತಾರೆ.

ಕಿಟ್ಟಿಯ ಅಮ್ಮ: ಹೌದೇನ್ರೀ ಗೊತ್ತೇ ಇರ್ಲಿಲ್ಲ. ಎಲ್ಲಿದೆ ಅದು? ಯಾರು ಅದನ್ನು ನಡೆಸುತ್ತಾ ಇರೋದು?

ರಾಜುವಿನ ಅಮ್ಮ: ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ಮೈತ್ರಿ ಕಾನ್ವೆಂಟ್ ಇರೋದು. ಎಲೆಮರೆ ಕಾಯಿಯ ತರ ಆ ಶಿಕ್ಷಣ ಸಂಸ್ಥೆ ಕಾರ್ಯ ನಿರ್ವಹಿಸುತ್ತಾ ಇದೆ. ಧರ್ಮರಾಜ್ ಕಡಗ ಸರ್ ಆ ಶಿಕ್ಷಣ ಸಂಸ್ಥೆಯನ್ನು ಶುರು ಮಾಡಿದವರು ಹಾಗು ನಡೆಸುತ್ತಾ ಇರುವವರು
ನಾನೂ ಈ ಸಾರಿ ರಾಜೂನಾ ಅಲ್ಲಿಗೇ ಸೇರಿಸ್ತಾ ಇದ್ದೀನಿ.

ಕಿಟ್ಟಿಯ ಅಮ್ಮ: ನನಗೂ ನೀವೇಳಿದ  ಮೇಲೆ ಜ್ಞಾನೋದಯ ಆಯ್ತು. ನಾನೂ ಕಿಟ್ಟೀನಾ ಅಲ್ಲಿಗೇ ಸೇರಿಸ್ತೀನಿ.
[ಇಬ್ಬರೂ ಒಟ್ಟಿಗೆ]
ನಾವಂತೂ ಮೈತ್ರಿ ಕಾನ್ವೆಂಟ್ ಜೊತೆ ಕೈ ಜೋಡಿಸಿದ್ದೇವೆ. ನೀವೂ ನಮ್ಮೊಟ್ಟಿಗೆ ಕೈ ಜೋಡಿಸಿ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಾಕ್ಷಿಯಾಗಿ.

~ವಿಭಾ ವಿಶ್ವನಾಥ್ 

ಭಾನುವಾರ, ಜನವರಿ 13, 2019

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದುತ್ತಾ..

ಭಯ ಜೀವನದಲ್ಲಿ ಮುಖ್ಯವಾದ ಒಂದು ಭಾವನೆಯೇ. ಆದರೆ ಅದರ ಪ್ರಮಾಣ ಎಷ್ಟಿರಬೇಕು ಎಂಬುದು ಸಹಾ ಅಷ್ಟೇ ಮುಖ್ಯ. ಒಂದರೆಕ್ಷಣ ಅನ್ನಿಸುವುದೂ ಉಂಟು ಭಯವೇ ಇಲ್ಲದಿದ್ದರೆ..!? 

ಹಿರಿಯರ ಭಯವಿಲ್ಲದಿದ್ದರೆ ಗೌರವ ಕೊಡಬೇಕೆನ್ನುವ ಪಾಠ ತಪ್ಪಿಹೋಗುತ್ತಿತ್ತು. ಗುರುಗಳ, ತಾಯಿ-ತಂದೆಯರ ಭಯವಿರದಿದ್ದರೆ ಒಳ್ಳೆಯ ಸಂಸ್ಕಾರ ಕಲಿಯುವುದು ತಪ್ಪಿಹೋಗುತ್ತಿತ್ತು. ಪರೀಕ್ಷೆಯ ಭಯವಿಲ್ಲದಿದ್ದರೆ ಓದುವ, ಅಭ್ಯಾಸ ಮಾಡುವುದೇ ತಪ್ಪಿ ಹೋಗುತ್ತಿತ್ತು, ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಾಗಿ ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ. ದೇವರ ಮತ್ತು ಅವನು ನೀಡುವ ಶಿಕ್ಷೆಗಳ ಕುರಿತ ಭಯವಿಲ್ಲದಿದ್ದರೆ ಒಳ್ಳೆಯ ನಡತೆಗಳೇ ಕಡಿಮೆಯಾಗುತ್ತಿದ್ದವೇನೋ ಆದರೆ ಭಯ ಈ ರೀತಿಯಲ್ಲಿ ಇರುವುದು ಒಳ್ಳೆಯದು ಆದರೆ ಕೆಲವು ಅವ್ಯಕ್ತ ಭಯಗಳೂ ಇವೆ ಹೇಗೆಂದರೆ ಅವುಗಳು ಬದುಕಿನಲ್ಲಿ ಭವಿಷ್ಯಕ್ಕೇ ಮಾರಕವಾಗಿಬಿಡುತ್ತವೆ. ಆದರಿಂದ ಇಂಗ್ಲೀಷ್ ನಲ್ಲಿರುವ ಒಂದು ಮಾತು "ಲೈಫ್ ಬಿಗಿನ್ಸ್ ವ್ಹೇರ್ ಫಿಯರ್ ಎಂಡ್ಸ್" ಎಂಬ ಮಾತನ್ನು ನಂಬಲಾರದೇ ನಂಬುತ್ತೇನೆ.

ಆದರೆ ಕೆಲವೊಮ್ಮೆ ಪೋಷಕರೇ ಮಕ್ಕಳ ಧೈರ್ಯವನ್ನು ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದಿಬಿಡುತ್ತಾರೆ.

"ಆಟ ಆದುವಾಗ ಹುಷಾರು, ಬಿದ್ದು ಬಿಟ್ಟೀಯಾ" ಎನ್ನುತ್ತಾರೆ, ಬೀಳದೆ, ಏಳದೆ ಆಟ ಆಡುವುದುಂಟೇ..? ತಾಯಿಯ ಮಮತೆಯ ಮನಸ್ಸಿನಲ್ಲಿ ಅಮ್ಮನ ಪ್ರೀತಿ ತುಂಬಿಕೊಂಡೇ ಈ ಮಾತನ್ನು ಆಡಿಸಿರುತ್ತದೆ ಆದರೆ ಹುಷಾರು ಎನ್ನುವ ಆ ಪದ ಮಕ್ಕಳ ಮನದ ಮೂಲೆಯಲ್ಲಿ ಅಲ್ಲೆಲ್ಲೋ ಅವಿತು ಕುಳಿತು ಮತ್ತೆಲ್ಲೋ ಪರಿಣಾಮ ಬೀರಬಹುದು.

"ಅಮ್ಮಾ ಪರೀಕ್ಷೆಯಲ್ಲಿ ನನ್ನ ಪಕ್ಕದಲ್ಲಿದ್ದವನು ಕಾಪಿ ಚೀಟಿ ನೋಡಿಕೊಂಡು ಬರೆಯುತ್ತಿದ್ದ ಅದಕ್ಕೆ ನಾನು ಮಿಸ್ ಗೆ ಹೇಳಿದಕ್ಕೆ ಅವನನ್ನು ಹೊಡದು ನನ್ನ ಧೈರ್ಯವನ್ನು ಹೊಗಳಿದರು ಗೊತ್ತಾ?" ಎಂದು ಮನೆಯಲ್ಲಿ ಬಂದು ಹೇಳಿದ ಮರುಕ್ಷಣವೇ ಅವನ ಧೈರ್ಯದ ಬಲೂನು ಠುಸ್ ಎಂದು ಹೊಡೆದಿರುತ್ತದೆ ಕಾರಣ ಇಷ್ಟೇ.. "ಯಾಕೋ ಹಾಗೆ ಮಾಡಿದೆ? ಅವನು ಸೇಡು ಇಟ್ಟುಕೊಂಡು ನಾಳೆ ನಿನಗೆ ಏನಾದರೂ ಮಾಡಿದರೆ..? ನಿನಗೆ ಯಾಕೆ ಬೇಕಿತ್ತು ಊರಿನವರೆಲ್ಲರ ಉಸಾಬರಿ..? ಯಾರಾದರೂ ಏನಾದರೂ ಮಾಡಿಕೊಳ್ಳಲಿ ನಿನಗೇನು..? ಇನ್ನೊಂದು ಸಲ ಹಾಗೆಲ್ಲಾ ಮಾಡೋದಕ್ಕೆ ಹೋಗಬೇಡ". ಅದರಲ್ಲೂ ಹೆಣ್ಣು ಮಕ್ಕಳು ಏನಾದರೂ ಹೇಳಿದರು ಅಂದರೆ ಅವರು ಮಾಡಿ ಬಂದದ್ದು ದೊಡ್ಡ ತಪ್ಪೇನೋ ಎಂಬಂತೆ ಬಿಂಬಿಸಲಾಗಿತ್ತಿರುತ್ತದೆ. ಇದರ ಪರಿಣಾಮವೇ ಇಂದಿನ ದಿನಗಳಲ್ಲಿ ನಾವು ನಮ್ಮ ಮನೆಯಲ್ಲಿ ಏನಾದರೂ ಸಂಭವಿಸದೆ ಇದ್ದರೆ ಇತರರ ಸಮಸ್ಯೆಗಳಿಗೆ ಪ್ರತಿಕ್ರಿಯಿಸದೇ ಇರುವುದು.. ಅರ್ಥಾತ್ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಆಕ್ಸಿಡೆಂಟ್ ಇವೆಲ್ಲವುಗಳಿಗೂ ಮೂಕ ಪ್ರೇಕ್ಷಕರಾಗಿರುವುದು.

ಇದು ಮನೆಯಲ್ಲಿ ಸಂಭವಿಸುವ ಒಂದೆರಡು ಅವ್ಯಕ್ತ ಭಯಗಳಿಂದ ಉಂಟಾಗುವ ಪರಿಣಾಮವಾದರೆ ಶಾಲೆಗಳ, ಕಾಲೇಜುಗಳ ಕಥೆ ಕೇಳಿ..

ಅಂಕಗಳ ವಿಚಾರದಲ್ಲಿ ಪಕ್ಷಪಾತ ಮಾಡುವ ಶಿಕ್ಷಕರ ವಿಷಯವನ್ನು ಖಂಡಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಶಿಕ್ಷಕರ ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಒಂದಲ್ಲಾ ಒಂದು ರೀತಿಯಲ್ಲಿ ಶಿಕ್ಷೆ ಆಗಿರುತ್ತದೆ. ಮನೆಯಲ್ಲಿ ಬಂದು ಹೇಳಿದರೆ ನಮ್ಮ ಧೈರ್ಯದ ವರ್ತನೆಯೇ ಇದಕ್ಕೆಲ್ಲಾ ಕಾರಣ ಎಂಬಂತೆ ಬಿಂಬಿತವಾಗುತ್ತದೆ. ಸರಿ, ಮೇಲಿನ ಮಟ್ಟದ ಶಿಕ್ಷಕರೊಂದಿಗೆ ನಾನೇ ಮಾತನಾಡುತ್ತೇನೆ ಎಂದರೂ ಇದಕ್ಕೆಲ್ಲಾ ತಡೆಗೋಡೆ.

ಅವ್ಯಕ್ತ ಭಯವನ್ನು ನಮ್ಮಲ್ಲಿ ತುಂಬುವ ಕೆಲಸ ಎಲ್ಲೆಡೆಯಿಂದಲೂ ಸಾಗುತ್ತಲೇ ಇರುತ್ತದೆ. ಈ ರೀತಿಯ ಭಯದ ಮೂಸೆಯಲ್ಲಿ ನಮ್ಮನ್ನು ಅದ್ದದ್ದಿದ್ದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಲು ಅಷ್ಟು ವರ್ಷ ಬೇಕಾಗುತ್ತಿರಲಿಲ್ಲ. ಅಲ್ಲದೇ ಗರ್ಭದಲ್ಲಿರುವಾಗ ಮಗುವಿಗೆ ಧೈರ್ಯ ತುಂಬಲು ಗರ್ಭಿಣಿಯರಿಗೆ ಅಭಿಮನ್ಯುವಿನ ಪೌರುಷದ ಕಥೆ ಹೇಳುತ್ತಾರೆಯೇ ಹೊರತು ಉತ್ತರಕುಮಾರ ಹೆದರಿ ಯುದ್ದರಂಗದಿಂದ ಓಡಿದ ಕಥೆಯನ್ನು ಹೇಳುವುದಿಲ್ಲ. ಆದರೆ ಬೆಳೆಯುತ್ತಾ ಎಲ್ಲರೂ ಅವ್ಯಕ್ತ ಭಯವನ್ನು ಬಿತ್ತಿ ಬೆಳೆಸಿಬಿಡುತ್ತಾರೆ. "ಭಗತ್ ಸಿಂಗ್ ಅಂತಹವರು ಇರಬೇಕು ಆದರೆ ನಮ್ಮ ಮನೆಯಲ್ಲಲ್ಲ ಪಕ್ಕದ ಮನೆಯಲ್ಲಿ" ಎನ್ನುವ ಮನಸ್ಥಿತಿಯನ್ನು ತಲುಪಿರುವುದು ವಿಪರ್ಯಾಸ.

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದಿದರೂ ಆ ಭಾವನೆಯನ್ನು ಹೀರದೆ ಬದುಕಬಹುದು. ಅಂಟಿಯೂ ಅಂಟದಂತಹಾ ಭಯವನ್ನು ಮನಸ್ಸಿನಲ್ಲಿಟ್ಟುಕೊಂಡು ಬದುಕುವ, ಇದರಿಂದ ಬೇರೆಯವರೂ ಹೀಗೆ ಬದಲಾಗಬಹುದೇನೋ..
ಬರಹದಿಂದ ಬದುಕು ಬದಲಾಗುತ್ತದಾ? ಗೊತ್ತಿಲ್ಲ..??! ಆದರೆ ಪ್ರೇರಣೆಯಾಗಬಹುದು ಎಂಬ ನಂಬುಗೆಯಂತೂ ಇದೆ. ಅದೇ ಧೈರ್ಯದಿಂದ ಬರೆದಿದ್ದೇನೆ. ನೀನೇನು ಬರೀತೀಯಾ? ನಿಜವಾಗಲೂ ಇದನ್ನು ಓದ್ತಾರಾ? ಎಂಬೆಲ್ಲಾ ಅವ್ಯಕ್ತ ಭಯ ಬಿತ್ತಲು ಹವಣಿಸಿದ ಪ್ರಶ್ನೆಗಳನ್ನು ಒತ್ತರಿಸಿ ಬರೆದಿದ್ದೇನೆ.
ಓದಿ ಸಾಧ್ಯವಾದರೆ ಮರುತ್ತರ ನೀಡಿ ಪ್ರತಿಕ್ರಿಯಿಸಿ.

~ವಿಭಾ ವಿಶ್ವನಾಥ್

ಗುರುವಾರ, ಜನವರಿ 10, 2019

ಪರಿಭ್ರಮಣ

ಸಂಜಯ್ ಕಣ್ಮುಚ್ಚಿ ಎಲ್ಲವನ್ನೂ ಒಮ್ಮೆ ನೆನಪಿಸಿಕೊಳ್ಳುತ್ತಿದ್ದ.

ತಾನು ಕೇಳುವ ಮುಂಚೆಯೇ ಎಲ್ಲವೂ ಕಣ್ಮುಂದೆ ಇರುವಂತೆ ನೋಡಿಕೊಳ್ಳುತ್ತಿದ್ದ ಅಪ್ಪ-ಅಮ್ಮ, ತನ್ನ ಸೇವೆಗೆಂದೇ ಇದ್ದ ಆಳು-ಕಾಳುಗಳು, ಹಸಿವೆಂಬುದರ ಅರ್ಥವೇ ಗೊತ್ತಿಲ್ಲದಂತೆ ಹೊತ್ತೊತ್ತಿಗೆ ಸರಿಯಾಗಿ ಹಾಲು-ಹಣ್ಣು, ಊಟ-ತಿಂಡಿ ತಿನ್ನಿಸುತ್ತಿದ್ದ ಅಮ್ಮ, ಇಂದು ನಾನು ಯಾವ ಬಟ್ಟೆ ಹಾಕಿಕೊಳ್ಳಲಿ ಎಂದು ಯೋಚಿಸುವಷ್ಟಿದ್ದ ಬಟ್ಟೆ-ಬರೆ, ಚಳಿಗೆ ಬೆಚ್ಚನೆಯ ರಗ್ಗು, ಬೇಸಿಗೆಯ ಧಗೆಗೆ ಎ.ಸಿ, ಮಳೆಗೆ ನೆನೆಯದಂತೆ ರೇನ್ ಕೋಟ್. ಓಡಾಡಲು ತರಾವರಿ ಕಾರು,ಬೈಕು, ಬೇಜಾರಾದರೆ ಟಿ.ವಿ ಅಥವಾ ಮೊಬೈಲು ಮುಂದಿನ ಬದುಕಿನ ಬಗ್ಗೆ ಯೋಚನೆಯೇ ಇಲ್ಲದಂತೆ ಯಾವುದರಲ್ಲೂ ಕೊರತೆ ಇಲ್ಲದಂತೆ ಜೀವನ ಸಾಗುತ್ತಿತ್ತು.

ಆದರೆ ಅಂದು ಕೆಲವೇ ಘಂಟೆಗಳ ಅಂತರದಲ್ಲಿ ಏನೆಲ್ಲಾ ಆಗಿ ಹೋಗಿತ್ತು. ಮಳೆಗೆ ನದಿ ನೀರಿನ ಏರುವಿಕೆಯ ಜೊತೆಗೆ ಒಡೆದುಕೊಂಡ ಅಣೆಕಟ್ಟು ನೋಡ ನೋಡುತ್ತಿರುವಂತೆಯೇ ಮನೆಯನ್ನೆಲ್ಲಾ ಕೊಚ್ಚಿ ಕೊಂಡೊಯ್ದುಬಿಟ್ಟಿತ್ತು. ಅಲ್ಲಿ ಒಂದು ಮನೆ ಇತ್ತು ಎಂಬುದಕ್ಕೆ ಕುರುಹೇ ಇಲ್ಲವೇನೋ ಎಂಬಂತೆ..! ಅಪ್ಪ-ಅಮ್ಮ ಮನೆಯೊಳಗೆ ಇದ್ದರೋ ಇಲ್ಲವೋ ಎಂಬುದೂ ತಿಳಿಯಲಿಲ್ಲ. ಒಂದರೆಕ್ಷಣ ಜಗತ್ತಿನಲ್ಲಿ ನಾನೊಬ್ಬನೇ, ನನ್ನವರು-ನನ್ನದು ಎಂಬುದು ಇಲ್ಲವೇನೋ ಎಂಬ ಭಾವ ಆವರಿಸಿತ್ತು. ಒಂದು ಸುತ್ತು ತೋಟದಲ್ಲಿ ತಿರುಗಾಡಿ ಬರುವಷ್ಟರಲ್ಲಿ ಏನೆಲ್ಲಾ ಆಗಿ ಹೋಗಿತ್ತು. ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇತ್ತು. ತಿಮ್ಮ ಬಂದು ಎಳೆದೊಯ್ಯದಿದ್ದಿದ್ದರೆ ನಾನೂ ಅದರೊಟ್ಟಿಗೇ ಕೊಚ್ಚಿ ಹೋಗುತ್ತಿದ್ದೆನೇನೋ..

ಎಂದೂ ಮತ್ತೊಬ್ಬರ ಮನೆಯ ಬಾಗಿಲಿಗೆ ಹೋಗದ ನಾನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದವರ ಮನೆಯ ಬಾಗಿಲಲ್ಲಿ ಆಶ್ರಯ ಪಡೆದಿದ್ದೆ. ಅಲ್ಲಾದರೂ ಎಷ್ಟು ಹೊತ್ತು..? ಕ್ರಮೇಣ ಹೆಚ್ಚಾಗುತ್ತಲೇ ಇದ್ದ ನೀರಿನ ಆವೇಗಕ್ಕೆ ಹೆದರಿ ಅವರೊಡನೆ ಗಂಜೀ ಕೇಂದ್ರಕ್ಕೆ ಪಯಣ. ಆ ಅಮ್ಮಂದಿರು ಆ ಕಷ್ಟದಲ್ಲಿಯೂ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ನನ್ನನ್ನು ನೋಡಿಕೊಂಡರು. ನಾನು ಸಿರಿವಂತನಾಗಿದ್ದಾಗ ನೋಡಿಕೊಂಡಷ್ಟೇ ಅಸ್ಥೆಯಿಂದ ಆಗಲೂ ಅವರು ನನ್ನನ್ನು ನೋಡಿಕೊಂಡರು. ಹಣಕ್ಕಿಂತ ಹೃದಯ ಶ್ರೀಮಂತಿಕೆಗೇ ಹೆಚ್ಚಿನ ಬೆಲೆ ಇತ್ತು ಅಲ್ಲಿ. ಆತ್ಮೀಯತೆಯ ಬೆಲೆ ಆಗ ಅರಿವಾಗತೊಡಗಿತ್ತು. ಬೆಚ್ಚನೆಯ ರಗ್ಗುಗಳಿರಲಿಲ್ಲ ಆದರೆ ಬೆಚ್ಚನೆಯ ಬಂಧವಿತ್ತು. ರಕ್ತ ಸಂಬಂಧಕ್ಕಿಂತ ಋಣಾನುಬಂಧದ ಅನುಬಂಧವಿತ್ತು. ಹಳೆ ಬಾಳು ಸತ್ತು ಹೊಸ ಬಾಳಿನ ಉದಯವಾಗುತಲಿತ್ತು. ನೀರಿನ ಹಠಾತ್ ಹರಿವಿನಂತೆಯೇ, ಬಾಳಿನಲ್ಲಿಯೂ ಹಠಾತ್ ತಿರುವು ಸಿಕ್ಕಿತ್ತು.

ನಂತರ ಗಂಜೀ ಕೇಂದ್ರದಲ್ಲಿ ಒಬ್ಬ ಸ್ವಯಂ ಸೇವಕನಾದೆ. ಜೀವನದ ಹೊಸ ಮಗ್ಗುಲಿನ ಪರಿಚಯ ಮಾಡಿಕೊಂಡೆ. ನೆರೆ ಇಳಿದ ನಂತರ ಹೊಸ ಬದುಕು ಕಟ್ಟಿಕೊಳ್ಳುವವರಿಗೆ ನೆರವಾದೆ. ಅಷ್ಟೊತ್ತಿಗೆ ಐಷಾರಾಮದ ಬದುಕು ನಡೆಸುತ್ತಿದ್ದ ನನ್ನೊಳಗಿನ ಸಂಜಯ್ ಸತ್ತಾಗಿತ್ತು. ಅಷ್ಟರಲ್ಲಿ ಅಪ್ಪ-ಅಮ್ಮ ಇನ್ನಿಲ್ಲವೆಂಬ ಸತ್ಯವನ್ನೂ ಅರಗಿಸಿಕೊಂಡಾಗಿತ್ತು. ಬದುಕಿನಲ್ಲಿ ಸ್ಪಷ್ಟ ಗುರಿಯೇ ಇಲ್ಲ ಎಂಬಂತಿದ್ದವನಿಗೆ ಯಾವುದನ್ನೂ ಲಕ್ಷಿಸದೆ, ಜೀವದ ಹಂಗು ತೊರೆದು ಅಲ್ಲಿ ಸೇವೆ ಮಾಡುತ್ತಿದ್ದ ಸೈನಿಕರನ್ನು ನೋಡಿ ನಾನೂ ಸೈನ್ಯಕ್ಕೆ ಸೇರಿ ಸೇವೆ ಸಲ್ಲಿಸುವ ಆಸೆ ಬಂದಿತ್ತು. ಆ ಆಸೆಯನ್ನು ನೆರವೇರಿಸಿಕೊಂಡೆ ಸಹಾ.

ಆದರೆ, ಇಪ್ಪತ್ತು ವರ್ಷದ ನಂತರ ಕಾಲ ಮತ್ತೆ ಅದೇ ಸ್ಥಳ, ಅದೇ ಪರಿಸ್ಥಿತಿಯನ್ನು ನೋಡು ಎಂಬಂತೆ ಮತ್ತೆ ಇಲ್ಲಿಗೇ ಕರೆತಂದು ನಿಲ್ಲಿಸಿದೆ. ಆದರೆ ಅಲ್ಪ ಬದಲಾವಣೆಯೊಂದಿಗೆ.. ಈಗ ನನಗೆ ನನ್ನ ಕರ್ತವ್ಯದ ಅರಿವಿದೆ, ಹೊಣೆ ಇದೆ. ಮತ್ತಷ್ಟು ಸಂಜಯರನ್ನು ಕಾಣುವ, ರೂಪಿಸುವ ಅವಕಾಶ ದೊರೆತಿದೆ.

ಅಷ್ಟರಲ್ಲಿ ಕೇಳಿ ಬಂದ ಹಾರ್ನ್ ಶಬ್ಧ ಅವನ ಯೋಚನಾ ಲಹರಿಯನ್ನು ತುಂಡರಿಸಿತ್ತು. ಸುತ್ತುವ ಕಾಲದೊಂದಿಗೆ ಹಿಂದಕ್ಕೆ ಹೋಗಿಬಂದಿದ್ದ ಸಂಜಯ್ ಈಗ ಹೊಸದಾಗಿ ಶಿಬಿರಕ್ಕೆ ಬಂದ ನಿರಾಶ್ರಿತರಿಗೆ ನೆಲೆ ಕಲ್ಪಿಸಿಕೊಡುವತ್ತ ಹೆಜ್ಜೆ ಹಾಕಿದ.     

~ವಿಭಾ ವಿಶ್ವನಾಥ್

ಮಂಗಳವಾರ, ಜನವರಿ 1, 2019

ಹಳತ ನೋಡಿ ತಾ ಕಿಲಕಿಲ ನಗುತಲಿ..

ಘಳಿಗೆ, ಘಳಿಗೆಗೂ ಹೊಸಹೊಸ ರೀತಿಗೆ
ಈ ಜಗ ಓಡುತಿದೆ
ಹಳತ ನೋಡಿ ತಾ ಕಿಲಕಿಲ ನಗುತಲಿ
ಈ ಜಗ ಓಡುತಿದೆ

ಇದು ಪು.ತಿ.ನ ಭಾವಗೀತೆಯೊಂದರ ಪಲ್ಲವಿ. ಹೊಸ ವರ್ಷದಲ್ಲಿ ಪಾಲ್ಗೊಳ್ಳುವ ಖುಷಿಯ ನಡುವಲ್ಲಿ ಇದು ಏಕೋ ನೆನಪಾಯಿತು ಅಷ್ಟೇ.

ಭಾವಗೀತೆಗಳು ನೆನಪನ್ನು ಹೊತ್ತು ತರುವುದರ ಜೊತೆಜೊತೆಗೆ ಕಾಡುತ್ತವೆ. ಒಂದೊಂದು ಸಾಲಿನಲ್ಲೂ ನೂರಾರು ಅರ್ಥಗಳು, ಬಣ್ಣಿಸಲಾಗದಷ್ಟು ಭಾವಗಳು. 2018 ನ್ನು ದಾಟಿ 2019ಕ್ಕೆ ಕಾಲಿಡುವ ನಾವು ಕೂಡಾ ಹಳತನ್ನು ನೋಡಿ ಹೀಗೇ ಭಾವಿಸಬಹುದೇ..? ಕೆಲವೊಂದು ವಿಷಯಗಳಿಗೆ ಹೌದು, ಕೆಲವೊಂದು ವಿಚಾರಗಳಿಗೆ ಇಲ್ಲ.. ಇದು ಬರೀ ಹಳೆ ಹೊಸ ವರ್ಷಗಳ ವಿಚಾರ ಮಾತ್ರವಲ್ಲ, ನಮ್ಮ ದಿನನಿತ್ಯದ ಬದುಕಿನಲ್ಲಿಯೂ ಹೀಗೇ ಅಲ್ಲವೇ..?

ಕಾಲ ಓಡುತ್ತಲೇ ಇರುತ್ತದೆ, ಕಾಲಾಯ ತಸ್ಮೈ ನಮಃ ಎನ್ನುತ್ತಾ ಓಡುವ ಕಾಲದ ಜೊತೆಗೆ ನಾವು ಓಡುತ್ತಲೇ ಇರುತ್ತೇವೆ ಕೆಲವೊಮ್ಮೆ ನಮ್ಮ ನಿರ್ಧಾರದ ಅನುಗುಣವಾಗಿ ಆದರೆ ಕೆಲವೊಮ್ಮೆ ಇತರರಿಗಾಗಿ. ಬಂದ ಬದಲಾವಣೆಗೆಲ್ಲಾ ನಾವು ಹೊಂದಿಕೊಳ್ಳುವ ಕಾರಣ ಕೊಡಲು ಒಪಯೋಗಿಸುವುದು ಕಾಲಾಯ ತಸ್ಮೈ ನಮಃ ಎಂದು ಮಾತ್ರ. ಹೊಸತನಕ್ಕೆ ಹೊಂದಿಕೊಳ್ಳುವ ಭರದಲ್ಲಿ ಏಕೋ ಹಳೆಯದೆಲ್ಲವನ್ನು ಮೂಲೆಗುಂಪು ಮಾಡುತ್ತಿದ್ದೇವೆ.

ಹೊಸ ನೀರು ಬಂದ ಮೇಲೆ ಹಳೆಯ ನೀರಿನ ಅವಶ್ಯಕತೆ ಮುಗಿದಂತೆ ಎಂದೇ ಭಾವಿಸುತ್ತೇವೆ ಆದರೆ ಇಷ್ಟು ಬದುಕಲು ಅವಶ್ಯಕತೆಯಾಗಿ ಜೀವದಾಯಿನಿಯಾಗಿದ್ದುದು ಆ ಹಳೆಯ ನೀರೇ ಎಂಬುದನ್ನು ಮಾತ್ರ ಮರೆತುಬಿಡುತ್ತೇವೆ. ತಾತ್ಸಾರದಲ್ಲಿ ಹಳೆಯದ್ದು ಮೂಲೆಗುಂಪಾಗಿಬಿಡುತ್ತದೆ. ಎಲ್ಲೋ ಯಾವಾಗಲೋ ಓದಿದ ಕಥೆಯೊಂದು ನೆನಪಾಗುತ್ತಿದೆ ಅದು ಹೀಗಿದೆ.

ಒಬ್ಬ ಶ್ರೀಮಂತ ತನ್ನ ಮನೆಯ ಹಿಂದಿರುವ ಒಂದು ಮರವನ್ನು ಕಡಿಸಲು ಆಲೋಚಿಸಿ ಒಬ್ಬ ಮರಕಡಿಯುವವನನ್ನು ಅರಸುವಾಗ ಅಲ್ಲಿಗೆ ಒಬ್ಬ ಮರಕಡಿಯುವವನು ಬರುತ್ತಾನೆ.  ಮರಕಡಿಯುವವನು ಆ ಮರಕ್ಕೆ  ನೂರು ಕೊಡಲಿ ಪೆಟ್ಟು ಕೊಟ್ಟರೂ ಆ ಮರ ತುಂಡಾಗುವುದಿಲ್ಲ ಆಗದು ಎಂದು ಕೈ ಚೆಲ್ಲಿ ಕುಳಿತಿದಿದ್ದಾಗ ಮತ್ತೊಬ್ಬ ಬಂದು ನಾನು ಈ ಮರವನ್ನು ಕಡಿಯುತ್ತೇನೆ ಎಂದು ಹೇಳಿ ಮರ ಕಡಿಯಲು ಶುರು ಮಾಡುತ್ತಾನೆ. ಅವನ ಹತ್ತನೇ ಕೊಡಲಿ ಪೆಟ್ಟಿಗೆ ಮರ ತುಂಡಾಗಿ ಬೀಳುತ್ತದೆ. ಆಗ ಅವನು ಗರ್ವದಿಂದ "ನೋಡಿ ನನ್ನ ತಾಕತ್ತು, ನನ್ನ ಹತ್ತೇ ಹತ್ತು ಪೆಟ್ಟಿಗೆ ಹೇಗೆ ಮರ ಉರುಳಿ ಬಿತ್ತು" ಎನ್ನುವಾಗ ಧನಿಕ ಹೇಳುತ್ತಾನೆ ಆ ಮರ ಉರುಳಿ ಬಿದ್ದದ್ದು ಬರೀ ಹತ್ತು ಪೆಟ್ಟಿಗಲ್ಲ, ಅದರ ಹಿಂದೆ ನೂರು ಕೊಡಲಿ ಪೆಟ್ಟುಗಳ ಶ್ರಮವಿದೆ ಎಂದು.

ನನ್ನಿಂದಲೇ ಆದದ್ದು, ನಾನಿಲ್ಲದೆ ಏನೂ ಇಲ್ಲ ಎಂದು ಹೇಳುವವರಿಗೂ ಮತ್ತು ಹಳತನ್ನು ಮರೆತು ಹೊಸತನಕ್ಕೆ ಬೆಲೆಕೊಡುವ ಎಲ್ಲರಿಗೂ ಇದು ಒಳ್ಳೆಯ ನೀತಿಯನ್ನೇ ಸಾರುತ್ತದೆ.

ಹಣ್ಣೆಲೆಯನ್ನು ನೋಡಿ ನಕ್ಕ ಚಿಗುರೆಲೆಗೆ ಹಣ್ಣೆಲೆ ಹೇಳಿತಂತೆ "ನನ್ನಂತೆ ನಾಳೆ ನೀನೂ ಉದುರುವುದೇ ಅಲ್ಲವೇ?" ಎಂದು. ಇಂದು ಹೊಸದಾಗಿರುವುದು ನಾಳೆ ಹಳತಾಗಲೇ ಬೇಕಲ್ಲವೇ..? ಇಂದಿನ ಹಳೆವರ್ಷ ಹಿಂದಿನ ಹೊಸವರ್ಷವೇ ಆಗಿತ್ತಲ್ಲವೇ? ನಾವು ಸಂಭ್ರಮಿಸುವುದು ಹೊಸತನವನ್ನು ಸ್ವಾಗತಿಸಲೋ ಅಥವಾ ಹಳೆಯದೆಲ್ಲಾ ಮುಗಿಯಿತಲ್ಲಾ ಎಂಬ ಸಂತಸಕ್ಕೋ ಗೊತ್ತಿಲ್ಲ ಆದರೆ ನಮ್ಮ ಸಡಗರ, ಸಂಭ್ರಮ ಹಳೆಯದನ್ನು ನೋಡಿ ಮಾಡುವ ವ್ಯಂಗ್ಯವಾಗಬಾರದು ಮತ್ತು ಮತ್ತೊಬ್ಬರ ನೋವಿಗೂ ಕಾರಣವಾಗಬಾರದು. ಅದು ಹೊಸ ವರ್ಷಕ್ಕೂ ಅನ್ವಯ, ಕಾಲದೊಂದಿಗೆ ಓಡುವ ಹೊಸ ಬದುಕಿಗೂ ಅನ್ವಯ. ಸಂಭ್ರಮಿಸುವುದಕ್ಕೆ ಅಡ್ಡಿಯಿಲ್ಲ. ಸಣ್ಣ ಸಣ್ಣ ಖುಷಿಗಳ ಮೂಲ ಸಂಭ್ರಮವೇ ಅಲ್ಲವೇ? ಆದರೆ ಅರ್ಥಪೂರ್ಣವಾದ ಆಚರಣೆ ಈ ಸಂಭ್ರಮಗಳ ಸಾರ್ಥಕತೆಗೆ ಕಾರಣವಾಗುತ್ತದಲ್ಲವೇ? ನನ್ನ ಉತ್ತರವಂತೂ ಹೌದು ಎಂಬುದಾಗಿಯೇ.. ನಿಮ್ಮದು..?

~ವಿಭಾ ವಿಶ್ವನಾಥ್