ಸೋಮವಾರ, ಮಾರ್ಚ್ 25, 2019

ಅಮ್ಮ ಹಚ್ಚಿದೊಂದು ಹಣತೆ


ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ..
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ...

ಭಾವಗೀತೆಯನ್ನು ಕೇಳುತ್ತಾ ಇದ್ದರೆ, ಸಮಯ ಕಳೆದು ಹೋಗುತ್ತಿರುವುದೇ ಗೊತ್ತಾಗುವುದಿಲ್ಲ. ಅದರಲ್ಲೂ ನಿನ್ನ ಧ್ವನಿಯಲ್ಲೇ ಮೂಡಿ ಬಂದಿರುವ ಈಹಾಡು ಕೇಳಿದಷ್ಟೂ ಕಿವಿಗೆ ಇಂಪು. ಆಳಕ್ಕಿಳಿದು ಅರ್ಥ ಮಾಡಿಕೊಂಡಷ್ಟೂ ಮನಕ್ಕೆ ತಂಪು ನೀಡುತ್ತಾ ಹೋಗುತ್ತದೆ. ಭಾವಗೀತೆ ಅದರಲ್ಲೂ,ಅಮ್ಮನ ಕುರಿತ ಭಾವಗೀತೆಯೇ ಮನಸ್ಸಿಗೆ ಹಿತ ನೀಡುತ್ತದೆ. ಅದರಲ್ಲೂ ಅಮ್ಮ ಹಾಡಿದ ಭಾವಗೀತೆ ಅಂದರೆ ಕೇಳಬೇಕಾ? ಆದರೂ ನೀನಿದ್ದಾಗ ನಿನ್ನ ಪಕ್ಕ ಕುಳಿತು ನೀನು ಹಾಡೋ ಈ ಭಾವಗೀತೆ ಕೇಳುವಾಗ ಅದರ ಆಳವೇ ಬೇರೆ, ಅರ್ಥವೇ ಬೇರೆ.

ನೀನು ಹಾಡೋ ಹಾಡು ಮನಸ್ಸಿಗೆ ಅಷ್ಟು ಹತ್ತಿರವಾಗೋದಾದ್ರೂ ಯಾಕೆ ಅಂತಾ ಯೋಚನೆ ಮಾಡುತ್ತೇನೆ... ಅಮ್ಮ ಅನ್ನುವುದೇ ಭಾವಗಳು ತುಂಬಿದ ಪದ. ಅದರಲ್ಲೂ ಅಮ್ಮ ಮತ್ತಷ್ಟು ಭಾವನೆ ಬೆರೆಸಿ ಹಾಡೋ ಹಾಡು ಇನ್ನೂ ಚೆಂದ. ಅದಕ್ಕೇ ಅನ್ಸುತ್ತೆ, ಅಮ್ಮನ ಹಾಗೆ ಅವಳ ಹಾಡು ಕೂಡಾ ಆಪ್ತ ಎನ್ನಿಸುವುದು.

ಎಲ್ಲರೂ ಹೇಳ್ತಾ ಇರ್ತಾರೆ ಅಮ್ಮನ ತರಹಾನೇ ಹಾಡ್ತೀಯಾ ಅಂತಾ, ಕೆಲವೊಮ್ಮೆ  ಕೆಲವರಂತೂ ಇನ್ನೂ ಮುಂದೆ ಹೋಗಿ ನಿಮ್ಮ ಅಮ್ಮನಿಗಿಂತಲೂ ಚೆನ್ನಾಗಿ ಹಾಡ್ತೀರ ಅಂತಾ ಹೇಳ್ತಾರೆ. ಆಗೆಲ್ಲಾ ಏನೋ ಉತ್ಸಾಹ, ಸ್ವರ್ಗಕ್ಕೆ ಮೂರೇ ಗೇಣು ಅಂತಾ ಅನ್ನಿಸೋ ಕ್ಷಣಗಳು. ನನಗೆ ಅಮ್ಮನ ಮಗಳು ಅಂತಾ ಅನ್ನಿಸಿಕೊಳ್ಳುವುದಕ್ಕಿಂತಾ, ನೀನು ಇಂತಹವಳ ಅಮ್ಮ ಅಂತಾ ಅನ್ನಿಸಿಕೊಳ್ಳಬೇಕಿತ್ತು ಅಂತಾ ಬಹಳಾ ಆಸೆ ಇತ್ತು. ಆದರೆ,ನೀನು ಅಲ್ಲಿಯವರೆಗೂ ಇರದೆ ಹೊರಟೇ ಬಿಟ್ಟೆಯಲ್ಲಾ..ಯಾಕೆ?ನೀನು ಮೊದಲಿನಿಂದಲೂ ಸ್ವಾಭಿಮಾನಿ ಅಂತಾ ಗೊತ್ತಿತ್ತು.ಆದರೆ ನಿನ್ನ ಸ್ವಾಭಿಮಾನ ಈ ಮಟ್ಟಕ್ಕಿದೆ ಅಂತಾ ಗೊತ್ತಿರಲಿಲ್ಲ.ಆದ್ರೂ ನಿನ್ನ ಹಾಡುಗಳನ್ನು ಕೇಳ್ತಾ ಇದ್ದರೆ, ನೀನು ಅವುಗಳ ಮೂಲಕ ಏನೋ ಹೇಳುವ ಪ್ರಯತ್ನದಲ್ಲಿದ್ದೀಯ ಅನ್ಸುತ್ತೆ. ನಿನ್ನಷ್ಟು ಇಂಪಾಗಿ ಹಾಡುವುದಕ್ಕೆ ಸಾಧ್ಯವೇ ಇಲ್ಲ ಅಂತಾ ಅನ್ನಿಸಿಬಿಡುತ್ತೆ. ಇದು ಸತ್ಯ ಕೂಡಾ..

ಯಾವಾಗ್ಲೂ ನೀನು ಹೇಳ್ತಾ ಇದ್ದೆಯಲ್ಲ,ಬೇರೆಯವರಿಗೋಸ್ಕರ ಹಾಡುವುದಕ್ಕಿಂತ ನಮಗೋಸ್ಕರ, ನಮ್ಮ ಆತ್ಮತೃಪ್ತಿಗೋಸ್ಕರ, ಪ್ರತಿಫಲವೇ ಬಯಸದೇ ನಿಸ್ವಾರ್ಥತೆಯಿಂದ ಹಾಡಿದಾಗ ನಾದದ ಇಂಪು ಜಾಸ್ತಿ ಅಂತಾ. ಅದು ನಿಜ, ತುಂಬಾನೇ ನಿಜ.ಆದರೆ, ಒಂದು ಪತ್ರ ಬಂದಿದ್ದೇ ನೆಪವಾಗಿ ಹೃದಯಾಘಾತದಿಂದ ಕುಸಿದವಳು  ಮತ್ತೆ ಮೇಲೆ ಏಳಲೇ ಇಲ್ಲ, ಯಾಕಮ್ಮಾ? ನಿನಗೆ ನನ್ನ ಮೇಲೆ ನಂಬಿಕೆ ಇರಲಿಲ್ಲವಾ? ಅಥವಾ ನಾನು ನಿನ್ನನ್ನು ಬಿಟ್ಟು ಹೊರಡುವೆನೆಂದುಕೊಂಡೆಯಾ?

ನಿನ್ನ ಎಲ್ಲಾ ಕಾರ್ಯಗಳೂ ಮುಗಿದ ನಂತರ ಆ ಪತ್ರವನ್ನು ತೆರೆದೆ. ಅದರಲಿದ್ದದ್ದು ಹೀಗೇ, "ಗಂಡಿನ ಅಧೀನದಲ್ಲಿ ಬದುಕದ ಹೆಣ್ಣು ಅದೆಷ್ಟೇ ಪ್ರತಿಭಾವಂತೆಯಾದರೂ, ಅವಳ ಪೂರ್ಣತೆ ಗಂಡಿನಿಂದಲೇ.. ಅಂದು ನೀನು ನನ್ನನ್ನು ಧಿಕ್ಕರಿಸಿ ಬಂದು ನೆಲೆ ನಿಂತದ್ದು, ಈ ಹುಡುಗಿಗೇ ಆದರೆ, ಕೇಳು... ಆಕೆಯ ಹಾಡುಗಾರಿಕೆ ಅದೆಷ್ಟೇ ಮಧುರವಾಗಿದ್ದರೂ, ಆಕೆ ನಿನ್ನಂತೆ ಹಾಡಲಾರಳು. ಆಕೆಯ ಬದುಕು ಕೂಡಾ ನಿನ್ನಂತೆಯೇ ಅತಂತ್ರವಾಗಿಬಿಡುತ್ತದೆ. ಯಾಕೆಂದರೆ, ಅಪ್ಪನ ಅಥವಾ ಗಂಡನ ಬಲವಿಲ್ಲದೆ ಬದುಕಲು ಹೊರಟವಳ ನಿನ್ನ ನೆರಳಿನ ಪ್ರಭಾವವಲ್ಲದೇ ಮತ್ತೇನು ದೊರೆತಿರಲು ಸಾಧ್ಯ?"

ಕಪ್ಪು ಕಡಲಿನಲ್ಲಿ ದೋಣಿ
ದಿಕ್ಕು ತಪ್ಪಲು..
ದೂರದಲ್ಲಿ ತೀರವಿದೆ
ಎಂದು ತೋರಲು..

ಆ ಸಾಮಾನುಗಳ ಮಧ್ಯದಲ್ಲಿ ಒಂದು ಡೈರಿ ಸಿಕ್ಕಿತು.ಆ ಡೈರಿಯನ್ನು ಓದುತ್ತಾಹೋದಂತೆ ನಿನ್ನ ವ್ಯಕ್ತಿತ್ವದ ಪರಿಚಯವಾಗುತ್ತಾ ಹೋಯಿತು.

ಸಂಗೀತ, ಸಂಪ್ರದಾಯಗಳನ್ನೇ ಉಸಿರಾಗಿಸಿಕೊಂಡಿದ್ದ ಕುಟುಂಬದಲ್ಲಿ ಬೆಳೆದು ಸಂಗೀತಕಾರ್ತಿಯೇ ಆಗಿದ್ದ ನೀನು ಸೇರಿದ್ದೂ ಅಂತಹಾ ಕುಟುಂಬವನ್ನೇ ಆದರೂ, ನಿನ್ನ ಖ್ಯಾತಿ ನಿನ್ನ ಗಂಡನಿಗೆ ನುಂಗಲಾರದ ತುತ್ತಾಯಿತು.ದಿನೇ-ದಿನೇ ಗಂಡಸಿನ ಅಹಂಕಾರ ಮೊಳೆಯುತ್ತಾ ಹೋಯಿತು, ಈರ್ಷೆ ಚಿಗುರಲಾರಂಭಿಸಿತು.ಅದೇ ಸಮಯದಲ್ಲಿ ನಿನ್ನ ಬಸಿರು ನಿಂತಿತು, ಮಗು ಹೆಣ್ಣು ಎಂಬ ಕಾರಣಕ್ಕೆ ಅದನ್ನು ತೆಗೆಸಲು ನೋಡಿದರು. ಗಟ್ಟಿ ನಿರ್ಧಾರ ಮಾಡಿ ಮಗುವಿನ ಕಾರಣ ಹೇಳಿ, ಈ ಮಗುವನ್ನು ಉಳಿಸಿಕೊಟ್ಟರೆ ನಾನು ಹಾಡುವುದಿಲ್ಲ ಎಂದು ಹೇಳಿ ಹಾಡುವುದರಿಂದ ಹಿಂದೆ ಸರಿದೆ.ಈರ್ಷೆ ಕಡಿಮೆಯಾದರೂ ನಿನ್ನನ್ನು ಪ್ರೀತಿಯಿಂದೇನೂ ಕಾಣಲಿಲ್ಲ ಆತ. ಮಗುವಿನ ಭವಿಷ್ಯಕ್ಕಾಗಿ ದಿಟ್ಟ ನಿರ್ಧಾರ ತೆಗೆದುಕೊಂಡು ಆ ಸಾರ್ವಭೌಮತ್ವದ ಪಾಶದಿಂದ ಹೊರನಡೆದೆ.

ನಿನ್ನ ಜೀವನದ ಎರಡನೇ ಮಜಲಿನ ಆರಂಭ ಇಲ್ಲಿಂದಲೇ ಅಲ್ಲವೇ? ಯಾರೊಡನೆಯೋ ಓಡಿ ಹೋದಳೆಂಬ ಪಟ್ಟ ಕಟ್ಟಿ, ತವರಿನವರನ್ನೂ ದೂರ ಮಾಡಿದ. ಅದಕ್ಕೆಲ್ಲಾ ಎದೆಗುಂದದೆ, ಮಗಳನ್ನು ಗಾಯಕಿಯನ್ನಾಗಿಸಲು ಹೊರಟಾಗ ಎದುರಾದ ಸವಾಲು ನಿನ್ನ ಅಸ್ತಿತ್ವವನ್ನೇ ಅಲುಗಾಡಿಸಿತು ಅಲ್ಲವೇ..?

5 ವರ್ಷದ ಪುಟ್ಟ ಕಂದನಿಗೆ ಜ್ವರರ ಬಂದುದೇ ನೆಪವಾಗಿ ಆಕೆ ನಿನ್ನನ್ನು ಅಗಲಿದಳು. ನಂತರ ನೋವು ಮರೆಯಲು ಅನಾಥಾಶ್ರಮಕ್ಕೆ ಬಂದ ನೀನು ನಿನ್ನ ಸಂಗೀತ ಪಾಠವನ್ನು ಆರಂಭಿಸಿದೆ.ನಂತರ ನಮ್ಮಿಬ್ಬರ ನಡುವೆ ಬೆಳೆದ ಸಲುಗೆಯಿಂದ ನನ್ನನ್ನು ದತ್ತು ತೆಗೆದುಕೊಂಡು ಸಂಗೀತಯಾನದ ಪಯಣ ಆರಂಭಿಸಿದೆ.

ಅಂದು ನಾನು ಅದನ್ನು ಓದಿದ ನಂತರ ನನ್ನ ಜನ್ಮ ರಹಸ್ಯಕ್ಕಿಂತ ಹೆಚ್ಚು ಕಾಡಿದ್ದು ನಿನ್ನ ಬದುಕಿನ ಬವಣೆ. ಆ ಪತ್ರ ಬರೆದವರಿಗೆ ಸರಿಯಾದ ಉತ್ತರ ನೀಡಬೇಕೆಂದು ಅಚಲತೆಯಿಂದ ಸಂಗೀತ ಅಭ್ಯಾಸ ನಡೆಸಿ ನಿನ್ನ ಕನಸನ್ನು ನನಸಾಗಿಸಿದ್ದೇನೆ. ಅಲ್ಲದೇ ಇಂದು ಅದೇ ವ್ಯಕ್ತಿಯ ಕೈಯಿಂದ ನನಗೆ ಸನ್ಮಾನ ಮತ್ತು ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸ್ವೀಕಾರ. ಗಂಡಿನ ನೆರಳಿಲ್ಲದ್ಯೂ ಹೆಣ್ಣು ಬದುಕಬಲ್ಲಳು. ಅತಂತ್ರಳಾಗಿ ಅಲ್ಲ ಸ್ವತಂತ್ರಳಾಗಿ ಎಂದು ಹೇಳಿ ನಿನ್ನ ಬದುಕಿನ ಪುಟವನ್ನು ಇಂದು ಎಲ್ಲರೆದುರು ಅನಾವರಣಗೊಳಿಸುತ್ತೇನೆ. ಒಂದು ಪುಟದ ಹೊರತುಪಡಿಸಿ.. ಏಕೆಂದರೆ ನೀನೇ ನನ್ನ ಅಮ್ಮ. ಜನ್ಮ ನೀಡಿಯೇ ಅಮ್ಮನಾಗಬೇಕಿಲ್ಲ, ಜೀವನ ಕೊಟ್ಟವಳೂ ಅಮ್ಮನೇ. ನಾನೆಂದಿದ್ದರೂ ನಿನ್ನ ಮಗಳೇ..

ಕೃತಕದೀಪ ಕತ್ತಲಲ್ಲಿ
ಕಳೆದು ಹೋಗದಂತೆ..
ಸೂರ್ಯ,ಚಂದ್ರ ತಾರೆಯಾಗಿ
ಹೊಳೆದು ಬಾಳುವಂತೆ..

ಪ್ರತಿಫಲ ಬಯಸದೇ ಇನ್ನು ಮುಂದೆ ನಾನು ಅನಾಥಾಶ್ರಮದ ಮಕ್ಕಳಿಗೆ ಪಾಠ ಹೇಳಿ ಬದುಕುತ್ತೇನೆ ಅಮ್ಮ. ಎಲ್ಲರಿಗೂ ನಿನ್ನಂಥಾ ಅಮ್ಮ ಬೇಕು. ಯಾಕೆಂದರೆ ಅಮ್ಮ ಹಚ್ಚಿದ ಹಣತೆಯೇ ಮಕ್ಕಳ ಬದುಕಿನ ದಾರಿದೀಪ..
ಎಂದು ಅಮ್ಮನ ಭಾವಚಿತ್ರದ ಮುಂದೆ ಮಾತನಾಡಿ, ಆಶೀರ್ವಾದ ಪಡೆದು ಹೊರಟಳು ಗಾಯಕಿ. 

ಅಂತರಂಗದಲ್ಲಿ ನೂರು
ಕಗ್ಗತ್ತಲ ಕೋಣೆ
ನಾದ ಬೆಳಕ ಹೊಮ್ಮಲು
ಮಿಡಿದ ಹಾಗೆ ವೀಣೆ

ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ..

-ವಿಭಾ ವಿಶ್ವನಾಥ್

ಶುಕ್ರವಾರ, ಮಾರ್ಚ್ 8, 2019

'ಅವಳ' ಕಥೆಗಳು

1. ಬಿದ್ದು ಎದ್ದವಳು
-------------------------
ಅವಳು ಎಡವಿ ಬಿದ್ದಿದ್ದಳು ರಸ್ತೆಯಲ್ಲಿ ಮಾತ್ರವಲ್ಲ, ಬದುಕಿನಲ್ಲಿಯೂ. ಅಷ್ಟೇ ವೇಗವಾಗಿ ಮೇಲೂ ಎದ್ದಿದ್ದಳು ಅಷ್ಟೇ ಸಶಕ್ತಳಾಗಿ.ಎಷ್ಟೆಂದರೆ ಮತ್ತೊಬ್ಬರನ್ನು ಕೈ ಹಿಡಿದು ಎತ್ತುವಷ್ಟು. ರಸ್ತೆಯಲ್ಲಿ ಬಿದ್ದಿದ್ದವರನ್ನು ಮಾತ್ರವಲ್ಲ, ಬದುಕಿನಲ್ಲಿ ಬಿದ್ದಿದ್ದವರನ್ನೂ ಸಹಾ.

2. ಬಾಡಿದ ಬದುಕು
--------------------------
ಹೂ ಬಾಡುತ್ತದೆ ಎಂದು ನೀರು ಚಿಮುಕಿಸುತ್ತಿದ್ದ ಬಾಲೆಯ ಬದುಕು ಶಿಕ್ಷಣವಿಲ್ಲದೆ ಮುದುಡಿ ಹೋಗುತ್ತಿತ್ತು.

3.ಕಳಂಕಿನಿ
---------------
ಬದುಕಿನ ಅನಿವಾರ್ಯತೆಗಾಗಿ ನಿತ್ಯವೂ ಹಗಲು ಇರುಳು ಎನ್ನದೆ ಪುರುಷರ ಸಂಗದಲ್ಲಿ ಸತ್ತು ಹುಟ್ಟುತ್ತಿದ್ದಳು. ಮನದ ಅಪವಿತ್ರತೆಯನ್ನು ತೊರೆದು, ಹೊಸ ಬದುಕನ್ನು ಕಟ್ಟಿಕೊಂಡ ನಂತರವೂ ಆಕೆ ಜನರ ಮನಃಪಟಲದಲ್ಲಿ ಕಳಂಕಿನಿಯಾಗಿಯೇ ಉಳಿದಳು.

4. ಮುಖವಾಡ
---------------------
ತನ್ನ ನೋವನ್ನೆಲ್ಲಾ ಮರೆತು ಮುಖದ ಮೇಲೆ ನಗು ತಂದುಕೊಂಡು ಸವಿ ಮಾತನಾಡುತ್ತಿದ್ದವಳಿಗೆ ಸಿಕ್ಕ ಬಿರುದು "ಮುಖವಾಡ ತೊಟ್ಟವಳು".

5. ಅನ್ನಪೂರ್ಣೇಶ್ವರಿ
---------------------------
'ಅನ್ನಪೂರ್ಣೇಶ್ವರಿ'ಯಾಗಿ ಎಲ್ಲರಿಗೂ ನಿತ್ಯವೂ ಅನ್ನದಾನ ಮಾಡುತ್ತಿದ್ದವಳಿಗೆ ಮಾತ್ರ ಗೊತ್ತಿತ್ತು ತನ್ನ ಬಾಲ್ಯದಲ್ಲಿ ಆನ್ನವಿಲ್ಲದೆ ಪರದಾಡುತ್ತಾ ಬರೀ ಗಂಜಿಯಲ್ಲೇ ಅರೆಹೊಟ್ಟೆಯಲ್ಲೇ ಜೀವನ ಸಾಗಿಸಿದ್ದರ ಕಷ್ಟ.

6. ಪ್ರೀತಿಯನ್ನಪ್ಪಿ
-----------------------
ಹದಿಹರೆಯದ ಕಾಮನೆಗಳಿಗೆ ಮನಸೋತು ಪ್ರೀತಿಯನ್ನಪ್ಪಿ ಹೊರಟವಳಿಗೆ ತಂದೆ-ತಾಯಿಯರ ಪ್ರೀತಿಯಪ್ಪುಗೆಯ ವಿದಾಯ ಸಲ್ಲಲೇ ಇಲ್ಲ.

7. ಭಿಕ್ಷುಕಿ
-------------
ಹೊಸದಾದ ಹವಾನಿಯಂತ್ರಿತ ಕಾರಿನಲ್ಲಿ ಕುಳಿತಿದ್ದವಳಿಗೆ ಮಗುವಿಗೆಂದು ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿ ಕಾಣಿಸಿದ್ದಳು. ಆ ಕ್ಷಣದಲ್ಲೇ ಅವಳಿಗೊಂದು ಪ್ರಶ್ನೆ ಕಾಡುತ್ತಿತ್ತು. ಪ್ರೀತಿಯ ಮಗುವಿಗಾಗಿ ಹಣವಿಲ್ಲದೆ ಭಿಕ್ಷೆ ಬೇಡುತ್ತಿರುವ ಅವಳು ಭಿಕ್ಷುಕಿಯೋ ಇಲ್ಲ ಹಣವಿದ್ದರೂ ಹಿಡಿ ಪ್ರೀತಿಗೆ, ಮಗುವಿಗೆ ಗಂಡನನ್ನು ಬೇಡುವ ತಾನು ಭಿಕ್ಷುಕಿಯೋ?

8. ಸ್ವಾತಂತ್ರ್ಯ
-----------------
ಮಹಿಳಾ ಸ್ವಾತಂತ್ರ್ಯದ ಕುರಿತು ಕವನ ವಾಚನ ಮಾಡುತ್ತಿದ್ದವಳಿಗೆ ಹಠಾತ್ತನೆ ಗಂಡನ ಮಾತು ನೆನಪಾಗಿತ್ತು. ಎಲ್ಲಾ ಕೆಲಸ ಮುಗಿಸಿ ಹೊರಡು ಆದರೆ ಸಂಜೆ 6 ಘಂಟೆಯ ಮೊದಲು ಮನೆಯಲ್ಲಿರಬೇಕು.

9.ಬಿರುದು
--------------
ಒಂದೂ ಮಕ್ಕಳಿಲ್ಲವೆಂಬ ಕಾರಣಕ್ಕೆ ಬಂಜೆಯೆಂಬ ಬಿರುದು ಇದ್ದವಳಿಗೆ ಅನಾಥಾಶ್ರಮದ ನೂರಾರು ಮಕ್ಕಳು "ಅಮ್ಮ" ಎಂಬ ಬಿರುದು ನೀಡಿದ್ದಾರೆ.

10. ಅರಿವು
-----------------
ರೂಪವಿದೆ ಎಂದು ಮೆರೆಯುತ್ತಾ, ಬೇರೆಯವರನ್ನು ಜರಿಯುತ್ತಿದ್ದವಳಿಗೆ ರೂಪ ನಶ್ವರ ಎಂಬುದು ಅರಿವಾಗಲು ಹೆಚ್ಚು ಸಮಯವೇನೂ ಬೇಕಿರಲಿಲ್ಲ, ಕಾಲವೇ ಅವಳಿಗೆ ಅರಿವು ಮೂಡಿಸಿತ್ತು.

11. ವಾಸ್ತವ
------------------
ಬರಹದಲ್ಲಿ ಪ್ರೀತಿಯ ಪರಿಯನ್ನು, ಪ್ರೇಮಿಗಳನ್ನು, ಸಂಬಂಧಗಳನ್ನು ಚೆನ್ನಾಗಿ ಕಟ್ಟಿಕೊಡುತ್ತಿದ್ದವಳ ಬದುಕಲ್ಲಿ ವಾಸ್ತವದಲ್ಲಿ ಪ್ರೀತಿಸಲು ಯಾರೂ ಇರಲಿಲ್ಲ. ಆಕೆ ಅನಾಥೆ ಎಂಬ ಸತ್ಯ ಓದುಗರಿಗೆ ತಿಳಿಯಲೇ ಇಲ್ಲ.

12. ಅನಕ್ಷರಸ್ಥೆ
--------------------
ಡಿಗ್ರಿಯಲ್ಲಿ ಓದಿನಲ್ಲಿ ಚಿನ್ನದ ಪದಕ ಗಳಿಸಿದ್ದ ಆಕೆ ಆಗ ತಾನೇ ಶುರು ಮಾಡಿದ್ದ ನೂತನ ಸಂಸಾರದಲ್ಲಿ ಬಂಧಗಳ ಸೆಳಕೂ ಗೊತ್ತಿಲ್ಲದ ಅನಕ್ಷರಸ್ಥೆ.

13. ನಪಾಸು
-----------------
ಎಲ್ಲಾ ಪರೀಕ್ಷೆಯಲ್ಲೂ ಉತ್ತಮ ಶ್ರೇಣಿಯಲ್ಲಿಯೇ ಉತ್ತೀರ್ಣಳಾಗುತ್ತಿದ್ದ ಅವಳು ವಧುಪರೀಕ್ಷೆಯಲ್ಲಿ ಪ್ರತಿಬಾರಿಯೂ ನಪಾಸು. ಕಾರಣ ಇಷ್ಟೇ, ತಳುಕು ಬಳುಕಿಗೆ ಒಗ್ಗದ ಆಕೆಯ ತತ್ವ, ಪ್ರಾಮಾಣಿಕತೆ ಮತ್ತು ಅದರ ದೆಸೆಯಿಂದ ಬಂದೊದಗದ ಆಕೆಯ ಆಸ್ತಿ.

14. ಕೃಷ್ಣ ಸುಂದರಿ
------------------------
ಸೃಷ್ಟಿಯಲ್ಲಿ ಕಪ್ಪು ಶ್ರೇಷ್ಠ ಎಂದೆಲ್ಲಾ ಭಾಷಣ ಮಾಡುತ್ತಿದ್ದ, ಕಪ್ಪು ಬಣ್ಣ ಇಷ್ಟವೆಂದು ಬೊಗಳೆ ಬಿಡುತ್ತಿದ್ದ ಮಹಾಶಯ ಮಗಳನ್ನು ದ್ವೇಷಿಸಲು ಕಾರಣ ಇಷ್ಟೇ.. ಮಗಳು ಕೃಷ್ಣ ಸುಂದರಿ.

15. ಪಾಠ
--------------
ಪ್ರೀತಿಯ ಮಾಯೆಯಲ್ಲಿ ಬೀಳಬೇಡ ಎಂದು ಮಗಳಿಗೆ ಕಿವಿಮಾತು ಹೇಳುತ್ತಿದ್ದ ಅಮ್ಮನಿಗೆ ಆಕೆಯ ವಿಫಲ ಪ್ರೇಮ ಚೆನ್ನಾಗಿಯೇ ಪಾಠ ಕಲಿಸಿತ್ತು.

~ವಿಭಾ ವಿಶ್ವನಾಥ್