ಭಾನುವಾರ, ಸೆಪ್ಟೆಂಬರ್ 6, 2020

'ಅ'ಲ್ಲಿಂದ Eಲ್ಲಿಯವರೆಗೂ ('ಅ' ಯಿಂದ E-learning ವರೆಗೂ)

 

ಇಂದು ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಹಾಗೆಯೇ ಶಿಕ್ಷಕರೂ ಸಹಾ ಬದಲಾಗಿದ್ದಾರೆ. ಆದರೆ, ಗುರುಗಳು ಎಂದರೆ ಇಂದಿಗೂ ನೆನಪಾಗುವಂತೆ ಹೆಜ್ಜೆ ಮೂಡಿಸಿದ ಹಲವಾರು ಮಹಾನ್ ವ್ಯಕ್ತಿಗಳಿದ್ದಾರೆ.


ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನವೆಂದು ಆಚರಿಸುವಂತೆ ಹೇಳಿದ ರಾಧಾಕೃಷ್ಣನ್ ರವರನ್ನು ನೆನೆಯುವುದು ಅಗತ್ಯ. 

ತಮ್ಮ ಹುಟ್ಟುಹಬ್ಬವನ್ನು ವಿದ್ಯಾರ್ಥಿಗಳಿಗಾಗಿ ಮುಡಿಪಿಟ್ಟ ಅಬ್ದುಲ್ ಕಲಾಂ ಸರ್ ಮತ್ತೊಬ್ಬರು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸುತ್ತಾ ಅವರ ಕುತೂಹಲಗಳತ್ತ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ ಗುರುಗಳು ಅವರು.

ಎಷ್ಟೋ ವಿರೋಧಗಳ ನಡುವೆಯೂ ಮಹಿಳಾ ಶಿಕ್ಷಕಿಯಾಗಿ ವಿದ್ಯೆಯ ಹಣತೆ ಹಚ್ಚಿದ ಸಾವಿತ್ರಿಬಾಯಿ ಫುಲೆ ಮತ್ತೋರ್ವ ಮಹಾನ್ ಗುರು

ಗುರು ಎಂದರೆ, ನೀತಿ ಎಂದರೆ ಇತಿಹಾಸದಲ್ಲಿ ನೆನಪಾಗುವುದು ಚಾಣಕ್ಯ. ಆತನ ತಂತ್ರಗಾರಿಕೆ, ಶಿಷ್ಯನ ಸಾಮ್ರಾಜ್ಯ ನಿರ್ಮಾಣದಲ್ಲಿ ಮಾಡಿದ ಉಪದೇಶ ಇಂದಿಗೂ ಆತನನ್ನು ಎತ್ತರದ ಸ್ಥಾನದಲ್ಲಿಟ್ಟಿವೆ.

ಎಲ್ಲಾ ಯುವಕರಿಗೂ ಗುರುವಾದ ವಿವೇಕಾನಂದರು, ಮತ್ತವರ ಗುರುಗಳಾದ ರಾಮಕೃಷ್ಣ ಪರಮಹಂಸರು ಇಬ್ಬರೂ ಇಂದಿಗೂ ಲೋಕಮಾನ್ಯರು. ಪರಮಹಂಸರಂತಹಾ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವವಾಗಿ ರೂಪುಗೊಂಡದ್ದು ವಿವೇಕಾನಂದರು.

ಮಹಾಭಾರತದ ದ್ರೋಣರು ಮತ್ತೊಬ್ಬ ಮಹಾನ್ ಗುರು. ಮಗ ಮತ್ತು ಶಿಷ್ಯರ ನಡುವೆ ಭೇಧ ಮಾಡದೆ ಶಿಷ್ಯರನ್ನೂ ಮಕ್ಕಳಂತೆ ಕಂಡವರು. ದ್ರೋಣರಂತಹಾ ಗುರುಗಳಿಂದ ರೂಪುಗೊಂಡ ಅರ್ಜುನ. ದ್ರೋಣರ ಪ್ರತಿಮೆಯಿಂದಲೇ ಸ್ಫೂರ್ತಿಗೊಂಡ ಏಕಲವ್ಯ.

ಸಾಂದೀಪನಿಯಂತಹಾ ಗುರುಗಳಿಂದ ಕಲಿತ ಶ್ರೀ ಕೃಷ್ಣ.

ಶಿಕ್ಷಕರು ವಿದ್ಯೆ ಕಲಿಸಿದಂತೆ, ಶಪಿಸಿದವರು ಸಹಾ ಇದ್ದಾರೆ.
ಹರ ಮುನಿದರೆ ಗುರು ಕಾಯ್ವನು
ಗುರು ಮುನಿದರೆ..??
ಪರಶುರಾಮ ಮತ್ತು ಕರ್ಣರ ಗುರು-ಶಿಷ್ಯರ ಸಂಬಂಧ ಇದಕ್ಕೆ ಸಾಕ್ಷಿ.

ಶಿಕ್ಷಣ ಬದಲಾಗಿದೆ. ಶಿಕ್ಷಕರು ಸಹಾ ಬದಲಾಗಿದ್ದಾರೆ. ಮೌಲ್ಯಗಳು ಸಹಾ ಬದಲಾಗುತ್ತಿವೆ. ವಿದ್ಯಾರ್ಥಿಗಳು ಬದಲಾಗಿದ್ದಾರೆ.
ಶಿಕ್ಷಣ ವ್ಯವಸ್ಥೆ ತಪ್ಪಿದ್ದೆಲ್ಲಿ ?
ಯಾವಾಗಲೂ ನನ್ನ ಪ್ರಿನ್ಸಿಪಾಲ್ ಸರ್ ಹೇಳುತ್ತಿದ್ದ ಮಾತು ನೆನಪಾಗುತ್ತಿದೆ

If Money is Lost , Nothing is Lost
If Health is Lost, Something is Lost
If Character is Lost, Everything is Lost

ಈಗ ಬದಲಾದ ದಿನಮಾನದಲ್ಲಿ ಈ ಮಾತು ಬದಲಾಗಿದೆ.

If Character is Lost , Nothing is Lost
If Health is Lost, Something is Lost
If Money is Lost, Everything is Lost

ಇದೇ ಬದಲಾವಣೆ ಯುವಜನತೆಯ ಹಾದಿ ತಪ್ಪಿಸಿ, ಮಾದಕ ವ್ಯಸನಕ್ಕೆ, ಸುಲಭ ರೀತಿಯಲ್ಲಿ ಹಣ ಸಂಪಾದಿಸಲು ಪ್ರಚೋದಿಸುತ್ತಿರುವುದು.

ಆಗ ಶಿಕ್ಷೆ ಇತ್ತು, ತಪ್ಪಿದಲ್ಲಿ ತಿದ್ದಿ ನಡೆಸುವ ಗುರುಗಳಿದ್ದರು. ಆದರೆ, ಈಗ ತಪ್ಪಿಗೆ ಶಿಕ್ಷೆ ನೀಡಲು
ವಿದ್ಯೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎನ್ನುವರು. ಆದರೆ, ಇವತ್ತು ವಿದ್ಯೆ ಕೆಲಸಕ್ಕಾಗಿ ಮಾತ್ರವೇ. ಓದಿಗೂ, ಮಾಡುವ ಕೆಲಸಕ್ಕೂ ಸಂಬಂಧವೇ ಇರದು. ಕೆಲಸಗಳು ಹಣಕ್ಕಾಗಿ ಮಾರಾಟವಾಗುತ್ತಿವೆ. ವಿದ್ಯೆಯೂ ಮಾರಾಟವಾಗುತ್ತಿದೆ.

ಶಾಲೆಯಲ್ಲಿ ಕಲಿಸದೆ ಟ್ಯೂಷನ್ ಗೆ ಬನ್ನಿ ಇಂದು ಹೇಳುವ ನೀತಿಗೆಟ್ಟ ಶಿಕ್ಷಕರಿದ್ದಾರೆ. ಪ್ರಾಜೆಕ್ಟ್ ಫೈನಲ್ ಗೆ, Thesis submission ಗೆ, ಪ್ರತಿಯೊಂದು ಸಹಿಗೂ ಹಣ ಕೇಳುವ ಶಿಕ್ಷಕರಿದ್ದಾರೆ. ಎಂಜಲು ಕಾಸಿಗೆ ಕೈಯೊಡ್ಡುವ ಶಿಕ್ಷಕರಿಂದ ಸ್ವಾಭಿಮಾನದ ಪಾಠವನ್ನು ವಿದ್ಯಾರ್ಥಿಗಳು ಕಲಿಯುವುದಾದರೂ ಹೇಗೆ ?

ವಿದ್ಯೆ ಕಲಿಸದಾ ತಂದೆ
ಬುದ್ದಿ ಹೇಳದಾ ಗುರುವು
ಬಿದ್ದಿರಲು ಬಂದು ನೋಡದಾ ತಾಯಿ
ಶುದ್ಧ ವೈರಿಗಳು ಸರ್ವಜ್ಞ

ಎಂಬ ಸರ್ವಜ್ಞನ ವಚನವೇ ಇದೆ.

ಇನ್ನೊಂದು ಬಗೆಯ ಶಿಕ್ಷಕ ವರ್ಗವಿದೆ. ತಮ್ಮ ಕೆಲಸದ ಶುರುವಿನಲ್ಲಿ ಪ್ರಾಮಾಣಿಕರಾಗಿಯೇ ಇರುತ್ತಾರೆ. ನಂತರದ ದಿನಗಳಲ್ಲಿ ತಮ್ಮ ಸಹೋದ್ಯೋಗಿಗಳನ್ನು ನೋಡಿಯೋ ಅಥವಾ ಮೇಲಿನ ಒತ್ತಡಕ್ಕೆ ಮಣಿದು ತಮ್ಮತನವನ್ನು ಬದಲಾಯಿಸಿಕೊಂಡವರಿದ್ದಾರೆ.

ಇವೆಲ್ಲದರ ನಡುವೆ ತಮ್ಮತನವನ್ನು ಉಳಿಸಿಕೊಂಡು, ಪ್ರಾಮಾಣಿಕತೆಯ ಪಾಠ ಮಾಡುತ್ತಿರುವ ಶಿಕ್ಷಕರು ಸಹಾ ಇದ್ದಾರೆ. ಅಂತಹವರಿಗೆ ಮಾತ್ರ "ಶಿಕ್ಷಕರ ದಿನದ ಶುಭಾಶಯಗಳು".

ವಿದ್ಯೆ ಕಲಿಸಿಯೂ ಶಿಕ್ಷಕರಾಗದವರು ಹಲವರಿದ್ದಾರೆ, ಅಕ್ಷರವೇ ಗೊತ್ತಿರದ ಜೀವನದ ಪಾಠ ಕಲಿಸಿದ ಹಲವಾರು ಶಿಕ್ಷಕರ ಸ್ಥಾನದಲ್ಲಿದ್ದಾರೆ. ತಾಯಿ, ತಂದೆ, ಕಿರಿಯರಿಂದ ಹಿರಿಯರವರೆಗೂ ಗುರುಗಳಾಗುತ್ತಾರೆ. ಆದರೆ, ಈಗ ಇದೆಲ್ಲದರ ಸ್ಥಾನವನ್ನು ಗೂಗಲ್ ತುಂಬುತ್ತಿದೆ. ಗೂಗಲ್ ಜ್ಞಾನವೇ ಶ್ರೇಷ್ಠ ಎಂಬ ಅಜ್ಞಾನಿಗಳೂ ಇದ್ದಾರೆ.  

ಈಗ ಮನೆ ಮನೆಗೂ ಮೊಬೈಲ್ ಮೂಲಕ "E-Learning" ಕಾಲಿಟ್ಟಿದೆ. ಶಿಕ್ಷಣ ನೇರವಾಗಿ ದೊರೆಯುತ್ತಿದೆ. ಲೈಂಗಿಕ ಕಿರುಕುಳವಿಲ್ಲ, ಪ್ರತಿಯೊಂದು ಚರ್ಯೆ, ಮಾತಿಗೂ ದಾಖಲೆ ಇದ್ದೇ ಇದೆ. ಆದರೆ, ವಿದ್ಯಾರ್ಥಿಗಳ ನಿಷ್ಠೆ ಕಾಣೆಯಾಗಿದೆ. ಆನ್ಲೈನ್ ಕ್ಲಾಸ್ ಆನ್ ಮಾಡಿ ಮತ್ತೇನೋ ಮಾಡುವುದು, ಆನ್ಲೈನ್ ಟೆಸ್ಟ್ ಗಳನ್ನು ಕಾನ್ಫರೆನ್ಸ್ ಕಾಲ್ ಮಾಡಿಕೊಂಡು ಉತ್ತರಿಸುವುದು. ಹೀಗೆ..
ತಿಳುವಳಿಕೆ ಹೆಚ್ಚಿದಂತೆಲ್ಲಾ, ಧೂರ್ತ ನಡವಳಿಕೆಗಳು ಹೆಚ್ಚುತ್ತಲೇ ಇವೆ

ಇಂತಹವರು ನೋಡಿ ಕಲಿಯಬೇಕಾದದ್ದು. ಸುಧಾಮೂರ್ತಿ ಮೇಡಂ ಅವರನ್ನು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಗುರುಗಳಿಗೆ ಗೌರವ ಸಲ್ಲಿಸುವ ಗುಣ ತೊರೆದಿಲ್ಲ. ಶಿಕ್ಷಕರಾಗಿ ಮಕ್ಕಳಿಗೆ ತಿಳುವಳಿಕೆ ಹೇಳುವುದನ್ನು ಸಹಾ ಬಿಟ್ಟಿಲ್ಲ. 

ಕಲಿಯಬೇಕೆಂದರೆ ಎಲ್ಲೆಲ್ಲೂ ಒಳ್ಳೆಯ ವಿಚಾರಗಳಿವೆ. ಅರಿವಿಗಿಂತ ದೊಡ್ಡ ಗುರುವಿಲ್ಲ. ಕಲಿಯುವ ಮನಸ್ಸು ನಮ್ಮಲ್ಲಿರಬೇಕು. ಗುರುವನ್ನು ಆಯ್ದುಕೊಳ್ಳುವ ನಮ್ಮ ಆಯ್ಕೆ ಸರಿಯಿದ್ದಲ್ಲಿ ಎಲ್ಲವೂ ಸುಸೂತ್ರ.

"ಅರಿವೆಂಬ ಗುರುವಿಗೆ ನಮಿಸುತ್ತಾ" ಜೀವನದ, ಅಕ್ಷರದ ತಿಳುವಳಿಕೆಯ ಎಲ್ಲಾ ಪಾಠ ಕಲಿಸಿದ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 'ಅ'ಲ್ಲಿಂದ 'E'ಲ್ಲಿಯವರೆಗೂ ಬದುಕಿನ ಹಾದಿಯ ಜೊತೆಗಿರುವ ಎಲ್ಲ ಶಿಕ್ಷಕರ ಆಶೀರ್ವಾದಗಳು ಸದಾ ಹೀಗೆಯೇ ಇರಲಿ.

ಸಾವಿರಾರು ಮುಖದ ಚೆಲುವ
ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ
ಕನ್ನಡಿಯ ಪಾಲಿಗೇ..?

ಎಂಬ ಸಾಲುಗಳು ಶಿಕ್ಷಕರ ಬದುಕಿನಲ್ಲಿ ಹೆಚ್ಚಿನಂಶ ಅನ್ವಯವಾಗುತ್ತದೆ. ಇದು ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗಿನ ಕೆಲಸ ಮಾತ್ರವಲ್ಲ. ಸದಾ ಕಲಿಯುತ್ತಲೇ ಇರಬೇಕು, ಕಲಿಸುತ್ತಲೇ ಇರಬೇಕು. ಸ್ಫೂರ್ತಿ ತುಂಬುತ್ತಿರುವ, ಕಲಿಕೆಯ ಮನಸ್ಸಿನ ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ