ಶನಿವಾರ, ಅಕ್ಟೋಬರ್ 3, 2020

ಸಿರಿಗೌರಿಯ ಸದಾಶಿವ - ೬

 

ಅಪಘಾತ, ಆಘಾತಗಳು ನಮ್ಮ ಮನಸ್ಸಿಗೆ, ನಮಗೆ ಹತ್ತಿರದವರಿಗೆ ಆದಾಗ ಮಾತ್ರ ಅಲ್ಲವೇ ಅದರ ಬಿಸಿ ತಟ್ಟುವುದು, ಕೋಟಿ ಇದ್ದರೂ ಜೀವ ಉಳಿಸಲು ವೈದ್ಯರು, ಸಮಯ, ಪುಣ್ಯಫಲ ಎಲ್ಲದರ ಬಲವೂ ಇರಬೇಕು. ನಿರ್ಲಕ್ಷ್ಯವೋ, ಪೂರ್ವ ನಿಯೋಜಿತವೋ ಅಂತೂ ಅಪಘಾತ ಆಗಿ ಹೋಗಿತ್ತು. ವಿಧಿಲಿಖಿತ ಹಾಗೆಯೇ ಇದ್ದರೆ ಬದಲಾಯಿಸಲು ಯಾರಿಗೆ ಸಾಧ್ಯ. 


ಇತ್ತ ಅಪರ್ಣಾಳಿಗೆ ಚಡಪಡಿಕೆ ಶುರುವಾಗಿತ್ತು. ಮನಸ್ಸಿನಲ್ಲಿ ಏನೋ ತಳಮಳ. ಹತ್ತಿರದವರಿಗೆ ಯಾರಿಗಾದರೂ ಏನಾದರೂ ಅಪಾಯವಾಗುವ ಸಂಭವವಿದ್ದರೆ ಮನಸ್ಸಿನಲ್ಲಿ ಉಂಟಾಗುವ ತಳಮಳ ಅದು. ನಂದನ್ ಅದೇ ಸಮಯಕ್ಕೆ ತಂದ ಸುದ್ದಿ ಅವಳ ಜಂಘಾಬಲವನ್ನೇ ಉಡುಗಿಸಿಬಿಟ್ಟಿತು. ಅಶುತೋಷ್ ಅನ್ನು ನೋಡಲು ಬರುವಷ್ಟರಲ್ಲಿ ಅವನನ್ನು ಐ.ಸಿ.ಯು ಒಳಗೆ ಸೇರಿಸಿ ಆಗಿತ್ತು. ಅಲ್ಲೇ ಕುಸಿದು ಕುಳಿತಳು.

"ಅಶು, ನಾನು ನಿನ್ನಿಂದ ದೂರ ಇರಲು ಬಯಸಿದ್ದೇ ಇಷ್ಟೆಲ್ಲಾ ಅನರ್ಥಕ್ಕೆ ಕಾರಣವಾಗಿ ಹೋಯಿತೇ..? ಇಷ್ಟು ದಿನದ ನನ್ನ ಸಹನೆಯ ಕಟ್ಟೆ ಒಡೆದು ಹೋದದ್ದೇಕೆ? ನೀನಿರದೆ ನಾನು ಬದುಕುವುದು ಸಾಧ್ಯವೇ..? ನಮ್ಮನ್ನು ನಾವು ಎಷ್ಟೇ ಅರಿತುಕೊಂಡು ಒಂದಾಗಿದ್ದೇವೆ ಎಂದುಕೊಂಡರೂ ಸಹಾ ನಮ್ಮ ನಡುವೆ ಅಂತರದ ಒಂದು ಎಳೆ ಉಳಿದೇ ಹೋಯಿತಲ್ಲ. 

ಪ್ರೀತಿ ಎಂದರೆ ಒಬ್ಬರಿಲ್ಲದಿದ್ದರೂ ಮತ್ತೊಬ್ಬರು ಬದುಕುವುದು ಎಂದು ನಿನಗೆ ಧೈರ್ಯ ತುಂಬುವಾಗ ನಾನು ಹೇಳಿದ್ದೆ, ಆದರೆ ನೀನಿಲ್ಲದೆ ನಾನು ಬದುಕಲು ಸಾಧ್ಯವೇ..? ನಿನ್ನ ಮೇಲಿನ ತಾತ್ಕಾಲಿಕ ಕೋಪ ಕೂಡಾ ಕೆಲ ದಿನಗಳ ಕಾಲ ನನ್ನನ್ನು ದೂರ ಇರಿಸುವುದು ಸಾಧ್ಯವಿರಲಿಲ್ಲ. ಆ ಯೋಚನೆಯಲ್ಲಿ ನಾನೆಷ್ಟು ಬೆಂದಿದ್ದೇನೆ ಗೊತ್ತೇ..? ಮನಸ್ಸನ್ನು ಗಟ್ಟಿ ಮಾಡಿಕೊಂಡು ನಿನ್ನಿಂದ ದೂರ ಹೋಗುವ ನಿರ್ಧಾರದ ಹಿಂದೆ ನಿನ್ನ ಒಳಿತೇ ಇದ್ದಿತು, ಹೊರ ನೋಟಕ್ಕೆ ನಗು ಮುಖದ ಮುಖವಾಡ ಹಾಕಿರುವ ನಿನ್ನ ಮನಸ್ಸಿನ ಹಿಂದಿನ ದುಃಖ ಅರಿಯದಷ್ಟು ಮೂಢಳು ನಾನಲ್ಲ. ನಿನ್ನೆದೆಯ ಮಿಡಿತದ ಪ್ರತಿ ಸದ್ದನ್ನೂ ಅರಿಯಬಲ್ಲೆ ನಾನು.  ನಿನ್ನ ದುಃಖದ ಮೂಲ ಹುಡುಕಿ ಹುಡುಕಿ ಸೋತು ಹೋದೆ. ಮಾತಿಗೂ ಜಗ್ಗಲಿಲ್ಲ, ಕೋಪಕ್ಕೆ ಬಗ್ಗಲಿಲ್ಲ, ಮೌನಕ್ಕೆ ಮಣಿಯಲಿಲ್ಲ. ಮತ್ತಾವ ದಾರಿಯೂ ಕಾಣದಿದ್ದಾಗ ಅತ್ತೆಯೇ ನನಗೆ ಇದನ್ನು ಸೂಚಿಸಿದ್ದು. 


ಅವರ ಮಾತನ್ನು ಕೇಳಿ ಒಂದರೆಕ್ಷಣ ನನ್ನ ಗುಂಡಿಗೆಯೇ ನಿಂತಂತಾಗಿತ್ತು. ಪ್ರತಿಯೊಂದಕ್ಕೂ ನೀನು ನನ್ನನ್ನೇ ಅವಲಂಬಿಸಿದ್ದೆ ಎನ್ನುವುದರ ಅರಿವು ನನಗಿತ್ತು. ನೀನು ನನ್ನನ್ನು ಹೋಗಲು ಬಿಡಲಾರೆ ಎಂಬ ಹುಂಬ ಧೈರ್ಯವಿತ್ತು. ಅದಕ್ಕೆ ನಾನು ಅತ್ತೆ, ಮಾವ ಇಲ್ಲದ ಸಮಯವನ್ನೇ ಆಯ್ಕೆ ಮಾಡಿಕೊಂಡಿದ್ದೆ. ಈಗ ಅವರು ಬಂದಾಗ ನಾನು ಯಾವ ಉತ್ತರ ಕೊಡಲಿ? ನಿಮ್ಮ ಮಗನ ಈ ಸ್ಥಿತಿಗೆ ನಾನೇ ಕಾರಣ ಎಂಬ ಮಾತನ್ನು ಹೇಗೆ ಹೇಳಲಿ ?" ಹೀಗೇ ಅವಳ ಮಾತಿನ ಪ್ರವಾಹ ಸಾಗುತ್ತಿತ್ತು. ಅದಕ್ಕೆ ತಡೆಯೊಡ್ಡಿದ್ದು ಅಥರ್ವನ ಮಾತು . "ಅಮ್ಮಾ, ಅಳಬೇಡ ಅಮ್ಮ. ನಾನು ಯಾವತ್ತೂ ನಿನ್ನನ್ನು ಐಸ್ಕ್ರೀಮ್ ಬೇಕು ಎಂದು ಕೇಳುವುದಿಲ್ಲ, ಹಠ ಮಾಡುವುದಿಲ್ಲ. ಗುಡ್ ಬಾಯ್ ಆಗಿರುತ್ತೇನೆ. ನೀನು ಅತ್ತರೆ ನನಗೂ ಅಳು ಬರುತ್ತೆ, ಅಳಬೇಡ ಅಮ್ಮ" ಎಂಬ ಪುಟ್ಟ ಮಾತಿಗೆ ಮತ್ತೆ ಅವಳ ಅಳು ಹೆಚ್ಚಾಯಿತು.

ನಂತರ ತನ್ನನ್ನು ತಾನೇ ನಿಯಂತ್ರಿಸಿಕೊಂಡು "ಇಲ್ಲ ಕಂದಾ, ನಾನು ಅಳುವುದಿಲ್ಲ. ಹಸಿವಾಗುತ್ತಿದೆಯಾ..?" ಎಂದು ಕೇಳಿದಳು. "ಹೂಂ ಅಮ್ಮ. ಆದರೆ, ಅಣ್ಣ ಮತ್ತೆ ಅಕ್ಕ ಇಬ್ಬರೂ ಎದ್ದ ಮೇಲೆ ಊಟ ಮಾಡುತ್ತೇನೆ. ಪಾಪ, ಅವರಿಗೂ ಹೊಟ್ಟೆ ಹಸಿದಿರುತ್ತೆ. ಅಲ್ವಾ ಅಮ್ಮಾ ? ಪಾಪ, ಅವರ ಅಮ್ಮ ಇಲ್ಲಿಲ್ಲ. ನಾವೇ ಅವರಿಗೂ ಊಟ ತಗೊಂಡು ಹೋಗೋಣ ಅಲ್ವಾ, ಅಮ್ಮಾ?" ಎಂದು ಹೇಳಿದ. ಮುಗ್ಧ ಮಾತುಗಳಿಗೆ ಏನು ಹೇಳಲೂ ಸಹಾ ತೋಚಲಿಲ್ಲ ಅವಳಿಗೆ. ಕೆಲವೊಮ್ಮೆ ದೊಡ್ಡವರಿಗೆ ಹೊಳೆಯದ ಆಲೋಚನೆಗಳು ಮಕ್ಕಳಿಗೆ ಹೊಳೆಯುವುದು ಸಹಾ ಉಂಟು. ಈಗ ಅಪರ್ಣಾಳಿಗೆ ಕರ್ತವ್ಯದ ನೆನಪಾಯಿತು. ಅಲ್ಲಿಗೆ ಹೋಗುವುದೋ ಅಥವಾ ಇಲ್ಲೇ ಅಶುತೋಷ್ ನನ್ನು ಕಾಯುವುದೋ ಗೊಂದಲದ ನಡುವಲ್ಲಿ ಮಕ್ಕಳ ಕುರಿತು ಆಲೋಚಿಸಿದಳು.

ಆಶುತೋಷ್ ಆಪರೇಷನ್ ಮುಗಿಯಲು ಇನ್ನೂ ಸಮಯ ಬೇಕು. ಅಷ್ಟರಲ್ಲಿ ಮಕ್ಕಳನ್ನು ನೋಡಿ, ಡಾಕ್ಟರ್ ಹತ್ತಿರ ವಿಚಾರಿಸಿಕೊಂಡು ಬರುತ್ತೇನೆ ಎನ್ನುತ್ತಾ ನಂದನ್ ಹತ್ತಿರ ಹೇಳಿ ಹೊರಟಳು. ನಂದನ್ "ಬೇಡ, ನೀವು ಇಲ್ಲೇ ಇರಿ. ನಾನೇ ವಿಚಾರಿಸಿಕೊಂಡು ಅಥರ್ವನಿಗೆ ಊಟ ಮಾಡಿಸಿಕೊಂಡು, ನಿಮಗೂ ಊಟದ ವ್ಯವಸ್ಥೆ ಮಾಡುತ್ತೇನೆ" ಎಂದು ಹೇಳಿ ಅವಳ ಪ್ರತಿಕ್ರಿಯೆಗೂ ಕಾಯದೆ ಅಥರ್ವನನ್ನು ಎತ್ತಿಕೊಂಡು ಹೊರಟ. ಅಪರ್ಣಾ ತಡೆದರೆ ಎಂಬ ಆಲೋಚನೆಯಲ್ಲಿ, ಅವಳನ್ನು ಸದ್ಯಕ್ಕೆ ಆ ಕಡೆ ಹೋಗದಂತೆ ಮಾಡಲು ಅವನಿಗೆ ಇದ್ದ ದಾರಿ ಇದೊಂದೇ.. ಸತ್ಯವನ್ನು ಮುಚ್ಚಿಡಲು ಎಷ್ಟು ಕಾಲ ಸಾಧ್ಯ? ಆದರೆ, ಅಶು ಎಚ್ಚರವಾಗುವವರೆಗೆ, ಅವನೇ ಇವೆಲ್ಲವನ್ನೂ ಸರಿ ಪಡಿಸುವವರೆಗೆ ನಂದನ್ ನಿಗೆ ಏನನ್ನು ಮಾಡಲು  ಸಹಾ ಧೈರ್ಯವಿಲ್ಲ. ಎಲ್ಲವೂ ಸರಿ ಹೋಗಲು ಇನ್ನೇನು ಸಾಧ್ಯವಿತ್ತು ಎನ್ನುವಾಗ ಏನೆಲ್ಲಾ ಆಗಿ ಹೋಯಿತು ? ಎಂದು ನಿಟ್ಟುಸಿರಿಟ್ಟು ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರಟನು.

ನಂದನ್ ಹೊರಟಂತೆ ಇತ್ತ ಅಪರ್ಣಾಳಿಗೆ ಒಂಟಿತನ ಭಾಸವಾಯಿತು. ಮತ್ತದೇ ಆಲೋಚನೆಗಳು ಮುತ್ತಿಗೆ ಹಾಕಿದವು. ಒಂಟಿತನ ಬರೀ ಬಾಹ್ಯದಲ್ಲಿ ಮಾತ್ರವಲ್ಲ, ಅಂತರಂಗದಲ್ಲಿ.. ಬಾಹ್ಯದ ಒಂಟಿತನ ಛಲ ಹುಟ್ಟಿಸುತ್ತದೆ. ಆದರೆ, ಅಂತರಂಗದ ಒಂಟಿತನ ಆಲೋಚನೆಗಳಿಂದ ಕುಗ್ಗಿಸಿ ಬಿಡುತ್ತದೆ. ಯಾವಾಗಲೂ ಒಂಟಿತನವನ್ನು ಅರಸುತ್ತಿದ್ದವಳು ನಾನು. ಇದೇನಾಗಿ ಹೋಯಿತು.. ? ಇಷ್ಟು ಬದಲಾವಣೆ ಇಷ್ಟು ಕ್ಲುಪ್ತ ಸಮಯದಲ್ಲಿ.. ಬದುಕಿನ ಗತಿ ಇಷ್ಟು ಬೇಗ ಬದಲಾಗುವುದೇ.. ಕಣ್ಮುಚ್ಚಿ ಕುಳಿತವಳಿಗೆ "ಅನಿಷ್ಟ ಇವಳು, ಇವಳಿಂದಾಗಿಯೇ ಎಲ್ಲವೂ ಆದದ್ದು.. ಅನಿಷ್ಟ, ದುರಾದೃಷ್ಟ" ಈ ಮಾತುಗಳು ಕಿವಿಗೆ ಬಿದ್ದಂತಾಗಿ ಎಚ್ಚೆತ್ತಳು. ಎಷ್ಟೋ ಕಷ್ಟ ಪಟ್ಟಿದ್ದಳು ಅವೆಲ್ಲದರಿಂದ ಹೊರಬರಲು, ಆದರೆ, ಅತೀತ ಮತ್ತೆ ಕಾಡಿದಂತಾಗಿ ಬೆಚ್ಚಿದಳು. ಕಣ್ಮುಚ್ಚಿ "ವಸುಂಧರಾ ಎಸ್ಟೇಟ್" ಅನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದಳು. ಆದರೆ, ಮತ್ತದೇ ಧ್ವನಿ, ಮರೆಯಲು ಪ್ರಯತ್ನಿಸಿದಷ್ಟೂ ಧ್ವನಿ ಹೆಚ್ಚಾಗಿ ಅವಳನ್ನು ಚುಚ್ಚಿದಂತಾಗುತ್ತಿತ್ತು. "ನೋ...." ಎಂದು ಜೋರಾಗಿ ಕಿರುಚಿದ ಧ್ವನಿಗೆ ಅಲ್ಲಿದ್ದ ಎಲ್ಲರೂ ಒಮ್ಮೆ ಇವಳತ್ತ ತಿರುಗಿದರು. 

"ಅಪರ್ಣಾ, ಮರೆಯಲು ಪ್ರಯತ್ನ ಮಾಡುವುದಕ್ಕಿಂತ ನಿರ್ಲಕ್ಷಿಸಿಬಿಡು" ಎಂದು ಹೇಳಿ ಅವಳ ಕೈಯನ್ನು ತಮ್ಮ ಹಸ್ತಕ್ಕೆ ತೆಗೆದುಕೊಂಡು ಧೈರ್ಯ ತುಂಬಿದವರತ್ತ ಒಮ್ಮೆ ದಿಗ್ಭ್ರಮೆಯಿಂದ ನೋಡಿದಳು.


ಯಾರವರು ಎಂದು ಊಹಿಸಬಲ್ಲಿರಾ ?
(ಸಶೇಷ)

(ಎಂದಿನಂತೆ ಈ ಬಾರಿಯೂ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹಕ್ಕೆ ಸ್ಫೂರ್ತಿ. ಓದಿದವರು ತಪ್ಪದೇ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ)

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ