ಸೋಮವಾರ, ಏಪ್ರಿಲ್ 30, 2018

ಬುದ್ದನಾಗಲು..

ಭೋದಿ ವೃಕ್ಷದಡಿ ಕುಳಿತುಕೊಂಡ ಮಾತ್ರಕೆ
ಜ್ಞಾನೋದಯವಾಗಿ ಬುದ್ದನಾಗಲು ಸಾಧ್ಯವೇ?
ಇಂತಾದರೆ ಮರದಡಿ ಕುಳಿತವರೆಲ್ಲಾ ಬುದ್ದರೇ..!?
ತನ್ನಂತರಂಗದ ಅರಿವಾಗಬೇಕು ಬುದ್ದನಾಗಲು..

ಅಪರಾತ್ರಿಯಲಿ ಮನೆ-ಮಾರನ್ನೆಲ್ಲಾ ತೊರೆದು
ಹೊರ ನಡೆದೊಡನೆ ಬುದ್ದನಾಗಲು ಸಾಧ್ಯವೇ?
ಇಷ್ಟು ಮಾಡಿದರೆ ತೊರೆದವರೆಲ್ಲಾ ಬುದ್ದರೇ..!?
ಮೋಹವನು ಮೀರಿ ನಿಲ್ಲಬೇಕು ಬುದ್ದನಾಗಲು..

ಆಸೆಯೇ ದುಃಖಕ್ಕೆ ಮೂಲ ಕಾರಣವೆಂದು
ಭೋದಿಸಿದೊಡನೆ ಬುದ್ದನಾಗಲು ಸಾಧ್ಯವೇ?
ಹಾಗಾದರೆ ಭೋದಿಸಿದವರೆಲ್ಲಾ ಬುದ್ದರೇ..!?
ನುಡಿದಂತೆ ನಡೆಯಲೂಬೇಕು ಬುದ್ದನಾಗಲು..

ಅರ್ಧ ನಿಮೀಲಿತ ನೇತ್ರನಾಗಿ ಧ್ಯಾನಕ್ಕೆ ಕೂತು
ಮುಗುಳ್ನಕ್ಕೊಡನೆ ಬುದ್ದನಾಗಲು ಸಾಧ್ಯವೇ?
ಹೀಗಾದರೆ ಧ್ಯಾನಿಸುವವರೆಲ್ಲರೂ ಬುದ್ದರೇ..!?
ತನ್ಮಯತೆ, ನಿರ್ಲಿಪ್ತತೆಯಿಂದಿರಬೇಕು ಬುದ್ದನಾಗಲು..

ಯಾರು ಏನಂದರೂ ಕೋಪ ಮಾಡಿಕೊಳ್ಳದೆ 
ಸುಮ್ಮನಿದ್ದೊಡನೆ ಬುದ್ದನಾಗಲು ಸಾಧ್ಯವೇ?
ಇಷ್ಟಾದರೆ ವಾದಿಸದಿರುವವರೆಲ್ಲರೂ ಬುದ್ದರೇ..!?
ಶಾಂತತೆಯ ಜೊತೆ ಸ್ಥಿಗ್ದತೆ ಇರಬೇಕು ಬುದ್ದನಾಗಲು..

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ