ಭಾನುವಾರ, ಡಿಸೆಂಬರ್ 23, 2018

ಕಥೆಯುಳ್ಳ ಹಾಡಿನ ಕಥೆ


ತಂಬೂರಿ ಮೀಟಿಕೊಂಡು ಹಾಡುವವರನ್ನು ಕಂಡು, ಆ ಹಾಡುಗಳನ್ನು ಕೇಳಿ ಎಷ್ಟೋ ವರ್ಷಗಳೇ ಕಳೆದು ಹೋಗಿದ್ದವು. ನಾನು ಚಿಕ್ಕಂದಿನಲ್ಲಿದ್ದಾಗ ಹಳ್ಳಿಹಳ್ಳಿಗಳ ಮೇಲೆ ಹೋಗುತ್ತಿದ್ದವರು ಹೇಳುತ್ತಿದ್ದ ಹಾಡುಗಳನ್ನು ಕೇಳುತ್ತಿದ್ದದ್ದು ರೂಡಿ, ಹೆಚ್ಚಿನಂಶ ಅವರುಗಳು ಬರುತ್ತಿದ್ದದ್ದು ಬೆಳಗಿನ ವೇಳೆ ತಂಬೂರಿ ಮೀಟುತ್ತಾ ಹಾಡು ಹಾಡಿ ತಿಂಡಿ ತಿಂದು ಅಕ್ಕಿಯನ್ನೋ ಕಾಯನ್ನೋ ಪಡೆದುಕೊಂಡು ಹೊರಡುತ್ತಿದ್ದರು, ಅವರ ಪ್ರತಿಭೆಗೆ ಗೌರವಾರ್ಥವಾಗಿ ಹಳ್ಳಿಗಳಲ್ಲಿ ಅಕ್ಕಿ ಅಥವಾ ತೆಂಗಿನಕಾಯಿಯನ್ನೋ ಕೊಟ್ಟು ಸ್ವಲ್ಪ ಸಮಯ ಆ ಹಾಡಿನ ಕುರಿತೋ ಅಥವಾ ಹಳ್ಳಿಗಳ ಕುರಿತೋ ಮಾತನಾಡಿ ಕಳುಹಿಸಿ ಕೊಡುತ್ತಿದ್ದರು ನಂತರದ ದಿನಗಳಲ್ಲಿ ಬದಲಾದ ತಂತ್ರಜ್ಞಾನ ಯುಗದಲ್ಲಿ ಮರೆಯಾಗಿಯೇ ಬಿಟ್ಟಿದ್ದರು. ತೀರಾ ಚಿಕ್ಕ ವಯಸ್ಸಿನಲ್ಲಿ ಆ ಹಾಡುಗಳು ಅರ್ಥವಾಗುತ್ತಿರಲಿಲ್ಲ ನಂತರದ ದಿನಗಳಲ್ಲಿ ಕಥೆಗಳನ್ನು ಹೇಳುತ್ತಿದ್ದ ಆ ಹಾಡುಗಳು ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿತ್ತು, ಆನಂತರ ಕೇಳಬೇಕೆಂದರೂ ಆ ಅವಕಾಶ ದೊರೆತಿರಲಿಲ್ಲ. ಅಚಾನಕ್ಕಾಗಿ ಈ ಅವಕಾಶ ದೊರೆತದ್ದು ಅದೃಷ್ಟ ಅಂದರೂ ತಪ್ಪಾಗಲಾರದು.

ಅಂದ ಹಾಗೆ ಇದು ಕೇಳಿದ್ದು ಹಳ್ಳಿಯಲ್ಲಲ್ಲ. ನಾನವರನ್ನು ನೋಡಲೂ ಇಲ್ಲ. ಬೆಳಿಗ್ಗೆ ನಾನು ನನ್ನ ಚಿಕ್ಕಿ(ಚಿಕ್ಕಮ್ಮ) ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಾ ಇರುವಾಗ ಯಾರೋ ಹಾಡು ಹೇಳುತ್ತಿದ್ದದ್ದು ಕೇಳಿಸ್ತು. ಆಗ ಕೇಳಿದ್ದಕ್ಕೆ ಒಬ್ಬರು ಅಜ್ಜಿ ಇಲ್ಲೇ  ಹಾಡ್ತಾ ಇದ್ದಾರೆ ಅಂದ್ರು. ಜೊತೆಗೆ ನನ್ನ ಹುಚ್ಚು ಗೊತ್ತಿದ್ದ ಅವರೂ ತಾಳು ಇಲ್ಲೇ ಕರೀತೀನಿ ಅಂದ್ರು, ನಂಗಂತೂ ತುಂಬಾ ಖುಷಿ ಆಯ್ತು. ಸರಿ, ಲೌಡ್ ಸ್ಪೀಕರ್ ಆನ್ ಮಾಡಿ ಹಾಗೇ ರೆಕಾರ್ಡ್ ಮಾಡಿಕೊಳ್ತೀನಿ ಅಂದೆ, ಸರಿ ಅಜ್ಜಿನೂ ಬಂದ್ರು ವಾಡಿಕೆಯಂತೆ ಉಭಯ ಕುಶಲೋಪರಿ ಕೂಡಾ ಆಯ್ತು, ನಂತರ ಒಂದು ಜಾನಪದ ಹಾಡನ್ನು ಶುರು ಮಾಡಿದರು.

ಶಿವ ಮತ್ತು ಗೌರಿ(ಪಾರ್ವತಿ)ಯರ ಕಲ್ಯಾಣದ ಕಥೆಯನ್ನು ಕಥಾವಸ್ತುವನ್ನಾಗಿ ಉಳ್ಳಂತಹಾ ಹಾಡು. ದೇವರು ಶಾಪಗ್ರಸ್ಥವಾಗೇ ಭೂಮಿಯಲ್ಲಿ ಹುಟ್ಟಬೇಕಾಗಿಲ್ಲ ಎಂಬುದು ಯಾಕೋ ಅಪ್ರಯತ್ನವಾಗೇ ಮನಸ್ಸಿಗೆ ಹೊಳೆಯಿತು. ನಾವು ಗೌರಿ ಹಬ್ಬವನ್ನು ಆಚರಿಸುವ ಹಿಂದಿನ ಪರಿಕಲ್ಪನೆಯೂ ಬಹುಶಃ ಈ ಪರಿಕಲ್ಪನೆಯಿಂದಲೇ ಹುಟ್ಟಿರಬಹುದೇನೋ.. ಭೂಲೋಕದ ತನ್ನ ತಾಯಿ(ತವರು) ಮನೆಗೆ ಬರುವಂತಹಾ ಸಂಧರ್ಭ..

ಶಿವ ಮತ್ತು ಪಾರ್ವತಿ ಇಬ್ಬರೂ ಸಹಾ ಭೂಲೋಕದಲ್ಲಿ ಹುಟ್ಟಿದ್ದಾರೆ ಆದರೆ ಪರಸ್ಪರರ ಪರಿಚಯವಿಲ್ಲ. ಇತ್ತ ಗೌರಿ ಹನ್ನೆರಡು ವರ್ಷಕ್ಕೆ ಮೈನೆರೆಯುತ್ತಾಳೆ, ಆಗಿನ ಸಂಪ್ರದಾಯದಂತೆ ಆಕೆಗೆ ವಿವಾಹಯೋಗ್ಯ ವಯಸ್ಸು.. ಹಾಗಾಗಿ ಮನೆಯಲ್ಲಿ ವರನನ್ನು ಹುಡುಕಲು ಶುರು ಮಾಡುತ್ತಾರೆ, ಆದರೆ ಗೌರಿಗೆ ಕೇಳುತ್ತಾರೆ ಈ ವರ ಆಗಬಹುದೇ ಎಂಬ ಪ್ರಶ್ನೆಯನ್ನು ಅವಳ ಒಪ್ಪಿಗೆಗಾಗಿ ಕೇಳುತ್ತಾರೆ, ಇದು ಆಗಿನ ಕಾಲದಲ್ಲಿದ್ದ ಸ್ವಯಂವರ ಪದ್ದತಿಯನ್ನು ನೆನಪಿಸುತ್ತದೆ, ಜೊತೆಗೆ ಸ್ತ್ರೀಯರಿಗೆ ಕೊಡುತ್ತಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೆನಪು ಮಾಡಿಕೊಡುತ್ತದೆ. ಜೊತೆಗೆ ಯಾರನ್ನೂ ಜರಿಯಬೇಡವೆಂಬ ಕಿವಿಮಾತು ಕೂಡಾ ಕೇಳಿಬರುತ್ತದೆ, ಅವರವರಿಗೆ ಅವರದ್ದೇ ಆದಂತಹಾ ವ್ಯಕ್ತಿತ್ವಗಳಿರುತ್ತವೆ, ಅವರದ್ದೇ ಆದ ಗೌರವವಿರುತ್ತದೆ ಅದು ನಮಗೆ ಸರಿ ಬರದಿದ್ದರೆ ಅದು ನಮ್ಮ ಆಲೋಚನೆಗೆ ಸಂಬಂಧಪಟ್ಟಿರುವುದಷ್ಟೇ.. ಇದು ಇಂದಿನ ದಿನಗಳಲ್ಲೂ ಎಲ್ಲರಿಗೂ ಅನ್ವಯಿಸುವಂತಹಾ ಮಾತು ಎಂದರೂ ತಪ್ಪಾಗಲಾರದು. ಈ ಎಲ್ಲಾ ಮಾತುಗಳೂ ನಡೆದು ಗೌರಿ ತಿಳಿಸಿದಂತಹಾ ವರ ಶಿವನೇ ಆಗಿ ಅವರಿಬ್ಬರ ಕಲ್ಯಾಣವಾಗುತ್ತದೆ. ರಸವತ್ತಾದ ಸಂಭಾಷಣೆಗಳಿರುವ ಈ ಹಾಡು ನಿಜಕ್ಕೂ ಆ ಪಾತ್ರಗಳನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತದೆ.

ನಾನು ಈ ಹಾಡಿನಲ್ಲಿ ರೆಕಾರ್ಡ್ ಮಾಡಿ ಹಾಕಿರುವುದು ಕೆಲವೇ ನಿಮಿಷಗಳು. ಬಹುಷಃ ನಮ್ಮ ಮುಂದಿನ ಜನರೇಷನ್ಗಳಿಗೆ ಹೋಲಿಸಿಕೊಂಡರೆ ನಾವೇ ಲಕ್ಕಿ ಎನ್ನಿಸುತ್ತದೆ, ನಮ್ಮ ಮುಂದಿನ ಜನರೇಷನ್ಗಳು ಇದರ ಕುರಿತು ತಿಳಿದುಕೊಂಡರೂ ನೋಡುವುದು ಅಪರೂಪವೇ ಆಗಬಹುದು. ಅಷ್ಟಕ್ಕೂ ಆ ಅಜ್ಜಿಗೆ ಓದು ಬರಹ ತಿಳಿದಿಲ್ಲ, ನೆನಪಿನಶಕ್ತಿಯಿಂದಲೇ ಇಷ್ಟು ಚೆಂದವಾಗಿ ಹಾಡಬಹುದಾದರೆ ಓದು ಬರಹ ತಿಳಿದಿದ್ದರೆ..? ಅವರ ಮುಗ್ದತೆ ಕೂಡಾ ಚೆಂದವೇ.. ಅವರು ಹಾಡಿದ ನಂತರ ಕಾಣದ ಕೇಳುಗಳಾದ ನನ್ನ ಹತ್ತಿರ ಹಾಡು ಹೇಗಿತ್ತು? ಇಷ್ಟವಾಯಿತಾ? ಎಂದು ಕೇಳಿದರು. ರೆಕಾರ್ಡ್ ಮಾಡಿದ ಧ್ವನಿಯನ್ನು ಅವರಿಗೆ ಕೇಳುವ ಆಸೆ ಕೂಡಾ ಇತ್ತು. ಕೇಳಿದರು ಕೂಡಾ.. ಟೆಕ್ನಾಲಜಿ ಕೆಲವೊಮ್ಮೆ ವರ ಕೂಡಾ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವೆ.

ಅವರು ಹಾಡಿದ ಆ ಹಾಡು, ನಾನು ರೆಕಾರ್ಡ್ ಮಾಡಿದಷ್ಟು ನಿಮ್ಮ ಮುಂದಿದೆ, ಕೇಳಿ.. ಇದೆಲ್ಲಾ ಹುಚ್ಚಾಟ ಅನ್ನಿಸಿದರೆ ಒಮ್ಮೆ ನಕ್ಕು ಸುಮ್ಮನಾಗಿ ಅಷ್ಟೇ..

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ