ಗುರುವಾರ, ಆಗಸ್ಟ್ 22, 2019

ಗಾಜಿನ ಗೊಂಬೆ

"ಪುಟಾಣಿ ಎಲ್ಲಿದ್ದೀಯಾ..?" ಎಂದು ಕೂಗುತ್ತಲೇ ಬಂದರು ವೆಂಕಟರಾಯರು. ಪುಟಾಣಿ ಎಂದ ಮಾತ್ರಕ್ಕೆ ಅವಳು ಪುಟ್ಟ ಹುಡುಗಿಯಲ್ಲ. ಅವಳು ವೆಂಕಟರಾಯರ ಏಕಮಾತ್ರ ಪುತ್ರಿ ಶ್ರೀಮತಿ ಸುಜಲಾ ಸುಂದರ್. ಹೌದು, ಆಕೆಗೆ ವಿವಾಹಗಿದೆ. ವಿವಾಹವಾಗಿದ್ದರೂ, ಮಕ್ಕಳಾಗಿದ್ದರೂ ತಂದೆ-ತಾಯಿಗೆ ಮಕ್ಕಳು ಎಂದಿಗೂ ಚಿಕ್ಕವರೇ ಅಲ್ಲವೇ? ವೆಂಕಟರಾಯರು ಚಿಕ್ಕಂದಿನಲ್ಲಿ ತೋರುತ್ತಿದ್ದ ಪ್ರೀತಿ ಆಕೆ ಮದುವೆಯಾದರೂ ಮುಂದುವರಿದಿತ್ತು. ಹಾಗಾಗಿಯೇ ಆಕೆ, ಆಕೆಯ ಅಪ್ಪನಿಗಿನ್ನೂ ಪುಟಾಣಿಯೇ. 'ಪುಟಾಣಿ' ಎಂದು ಕೂಗುತ್ತಾ ಬಂದ ರಾಯರು ಗರಬಡಿದವಳಂತೆ ಕುಳಿತಿದ್ದನ್ನು ಕಂಡು ಸುಮ್ಮನೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಾಸ್ ಹೊರಟರು.

ಸುಜಲಾ.. ವೆಂಕಟರಾಯರು ಮತ್ತು ಸುಂದರಲಕ್ಷ್ಮಿ ದಂಪತಿಗಳ ಒಬ್ಬಳೇ ಮಗಳು. ಸುಜಲಾ ಹುಟ್ಟಿದಾಗಲೇ ಅವಳ ತಾಯಿ ಕಾಲವಾಗಿದ್ದರು. ಹೆಂಡತಿ ಮೇಲಿನ ಗೌರವ ಮತ್ತು ಪ್ರೀತಿ ಅವರನ್ನು ಮತ್ತೊಂದು ಮದುವೆಯ ಯೋಚನೆಯಿಂದ ವಿಮುಖರನ್ನಾಗಿಸಿತ್ತು. ಮಗಳನ್ನು ಮುಚ್ಚಟೆಯಿಂದಲೇ ಬೆಳೆಸಿದ್ದರು. ಆಗರ್ಭ ಶ್ರೀಮಂತ ವೆಂಕಟರಾಯರ ಒಬ್ಬಳೇ ಮಗಳಾದರೂ ಶ್ರೀಮಂತಿಕೆಯ ದರ್ಪ ಬಾರದಂತೆ, ಒಳ್ಳೆಯ ಸಂಸ್ಕಾರಗಳನ್ನು ನೀಡಿ ಬೆಳೆಸಿದ್ದರು. ಸುಜಲಾಳೂ ಸ್ಫಟಿಕಮಣಿಯಂತೆ. ಅವಳ ಗೆಳೆಯ, ಗೆಳತಿಯರೂ ಅವಳಿಂದ ಸ್ಫೂರ್ತಿ ಹೊಂದುತ್ತಿದ್ದರು. ಅಹಂಕಾರವಿಲ್ಲದ, ಊನವಿಲ್ಲದ ಆಕೆಯಲ್ಲಿ ಒಂದು ಊನವಿತ್ತು. ದೈಹಿಕ ಊನ, ಕಾಲಿನ ಪೂರ್ಣವಾಗದ ಬೆಳವಣಿಗೆ ಅವಳ ಎಲ್ಲಾ ಒಳ್ಳೆಯ ಗುಣಗಳಿಂದ ಮುಚ್ಚಿ ಹೋಗುತ್ತಿತ್ತು. ಅವಳು ಚಿಕ್ಕಂದಿನಿಂದಲೂ ತನ್ನ ದೈಹಿಕ ಊನವನ್ನು ಸಮಸ್ಯೆ ಎಂದು ತಿಳಿಯದಂತೆಯೇ ಬೆಳೆಸಲಾಗಿತ್ತು. ಆದರೆ, ಆಕೆಯನ್ನು ಸಮಸ್ಯೆ ಎಂದು ಪರಿಗಣಿಸುವಂತೆ ಮಾಡಿದ್ದು ಆಕೆಯ ಮದುವೆ.

ಯೋಗ್ಯ ವರನ ತಲಾಶೆಯಲ್ಲಿದ್ದ ವೆಂಕಟರಾಯರಿಗೆ ಬರುಬರುತ್ತಾ ಅದರ ಕಷ್ಟ ಅರಿವಾಗಿತ್ತು. ಶ್ರೀಮಂತಿಕೆ ತುಂಬಿ ತುಳುಕುತ್ತಿದ್ದವರಿಗೆ ಅಳಿಯನ ಶ್ರೀಮಂತಿಕೆಯಿಂದೇನೂ ಆಗಬೇಕಿರಲಿಲ್ಲ. ಆದರೆ ಸುಜಲಾಳನ್ನು ಚೆನ್ನಾಗಿ ನೋಡಿಕೊಳ್ಳುವವನಾಗಿರಬೇಕಿದ್ದ ಅಷ್ಟೇ. ಸುಜಲಾ ಟೆಕ್ಸ್ ಟೈಲ್ಸ್ ನ ಒಡೆಯ ವೆಂಕಟರಾಯರಿಗೆ ಈ ವಿಚಾರದಲ್ಲಿ ದೈವ ಸಹಾಯವೆಂಬಂತೆ ಒಂದು ಸಂಬಂಧ ಒದಗಿ ಬಂದಿತ್ತು. ಅದು ಅವರ ಗೆಳೆಯ ಜಯರಾಮ್ ಅವರ ಕೃಪೆಯಿಂದ.

ವೆಂಕಟರಾಯರು ಮತ್ತು ಜಯರಾಮ್ ಇಬ್ಬರೂ ಗೆಳೆಯರು. ಅಂತಹಾ ಗಾಢ ಸ್ನೇಹವೇನೂ ಇರದಿದ್ದರೂ ಇಬ್ಬರೂ ವಾಕಿಂಗ್ ನ ಮಿತ್ರರು. ಆದರೆ ಇಬ್ಬರ ಸ್ನೇಹವೂ ಸಂಬಂಧಕ್ಕೆ ತಿರುಗುವುದರಲ್ಲಿತ್ತು. ಜಯರಾಮ್ ಅವರು ವೆಂಕಟರಾಯರ ಸ್ನೇಹ ಬೆಳೆಸುವುದಕ್ಕೆ, ಸಂಬಂಧ ಬೆಳೆಸಲು ಕಾರಣವಾಗಿದ್ದು ರಾಯರ ಶ್ರೀಮಂತಿಕೆ. ಜಯರಾಮ್ ಅವರದ್ದೂ ಫ್ಯಾಕ್ಟರಿ ಇತ್ತು, ಆದರೂ ಅವರಿಗೆ ತೀರದ ಹಣದ ದಾಹ. ಇದು ಗೊತ್ತಿಲ್ಲದ ರಾಯರು ಈ ಸಂಬಂಧವನ್ನು ಒಪ್ಪಿಕೊಂಡದ್ದೂ ಆಗಿತ್ತು. ವೆಂಕಟರಾಯರ ಏಕಮಾತ್ರ ಪುತ್ರಿಯ ವಿವಾಹ ಜಯರಾಮ್ ಅವರ ಪುತ್ರ ಸುಂದರ್ ಜೊತೆಗೆ ನಡೆದು ಹೋಗಿತ್ತು.

ವೈಭವದಿಂದ ನಡೆದ ಮದುವೆ ಒಂದು ತಿಂಗಳಲ್ಲೇ ಮುರಿದು ಬಿದ್ದೂ ಆಗಿತ್ತು. ಆವತ್ತು ಬೆಳಿಗ್ಗೆ ಮೇಜಿನ ಮೇಲೆ ಒಂದು ಪತ್ರವಿತ್ತು ಜೊತೆಗೆ ಒಂದು ಗಿಫ್ಟ್ ಬಾಕ್ಸ್ ಇತ್ತು. ಪತ್ರದಲ್ಲಿದ್ದದ್ದು ಎರಡೇ ಸಾಲು.
"ನೀನು ನನ್ನ ಪಾಲಿಗೆ ಗಾಜಿನ ಗೊಂಬೆ. ಸರಿಯಾಗಿ ಮೂರು ತಿಂಗಳ ನಂತರ ಭೇಟಿಯಾಗೋಣ.
-ಇತಿ ಸುಂದರ್"
ಅದನ್ನು ನೋಡಿದ ಸುಜಲಾಳಿಗೆ ಗಾಬರಿಯಾಗಿತ್ತು. ಗಿಫ್ಟ್ ಬಾಕ್ಸ್ ತೆಗೆದು ನೋಡಿದರೆ ಅದರಲ್ಲಿ ಒಂದು ಗಾಜಿನ ಒಂಟಿ ರಾಜಕುಮಾರಿ ಇತ್ತು. ಅವಳಿಗೆ ಅದರ ಅರ್ಥ ತಿಳಿಯಲಿಲ್ಲ.

ಆ ಪತ್ರವನ್ನು ಹಿಡಿದುಕೊಂಡು ಜಯರಾಂ ಅವರ ಬಳಿಗೆ ಬಂದಾಗ ಅವರು ವ್ಯಾಖ್ಯಾನಿಸಿದ ಅರ್ಥವೇ ಬೇರೆ. ನನ್ನ ಮಗ ನನಗೂ ಹೇಳದೆ ಮನೆ ಬಿಟ್ಟು ಹೋಗಿದ್ದಾನೆಂದರೆ ಅದಕ್ಕೆ ನೀನೇ ಕಾರಣಕರ್ತಳು. ನಿನ್ನ ಕಾಲಿನಿಂದ ನನ್ನ ಮಗನ ಜೀವನವನ್ನೇ ಊನವಾಗಿಸಿದ್ದೀಯ. ನೀನೇ ಬೇಸರ ಮಾಡಿರುತ್ತೀಯ. ನೀನು ಎಷ್ಟೆಂದರೂ ನೋಡಲು ಚೆಂದವಿರುವ ಆದರೆ ಷೋಕೇಸ್ ನಲ್ಲಿ ಇಡಬಹುದಾದ ಗಾಜಿನ ಗೊಂಬೆ. ಗಾಜಿನ ಗೊಂಬೆಯ ಅಂದಕ್ಕೆ, ಐಶ್ವರ್ಯಕ್ಕೆ ಮರುಳಾಗಿ ನಾನು ನನ್ನ ಮಗನನ್ನು ದೂರ ಮಾಡಿಕೊಳ್ಳಬೇಕಾಯಿತು. ಮೊದಲು ನೀನು ಇಲ್ಲಿಂದ ನಡೆ ಎಂದು ಸುಜಲಾಳನ್ನು ಮನೆಯಿಂದ ಹೊರಗಟ್ಟಿದರು ಜಯರಾಂ.

ಅವತ್ತೇ ಅಲ್ಲಿಂದ ಹೊರಟ ಸುಜಲಾ ಅಪ್ಪನ ಮುಂದೆ ಆ ಪತ್ರವಿಟ್ಟು ಆ ಗಾಜಿನ ಗೊಂಬೆಯನ್ನು ತನ್ನ ರೂಂನಲ್ಲಿಟ್ಟು ಅದನ್ನೇ ನೋಡುತ್ತಾ ಕುಳಿತುಕೊಂಡಿರುತ್ತಿದ್ದಳು. ರಾಯರಿಗೂ ಇದರ ಗೂಡಾರ್ಥದ ಅರಿವಾಗಲಿಲ್ಲ. ಸುಜಲಾಳನ್ನು ಸಮಾಧಾನಿಸಲು, ಗಾಜಿನ ಗೊಂಬೆಯ ಯೋಗ್ಯತೆ ಅರಿಯದ ಮೂರ್ಖ ಅವನು. ಅವನ ಪಾಲಿನ ಗಾಜಿನ ಗೊಂಬೆಯನ್ನು ಮಣ್ಣುಪಾಲು ಮಾಡಿಕೊಂಡ. ಗಾಜಿನ ಗೊಂಬೆಯ ಬೆಲೆ ಗೊತ್ತಿಲ್ಲದ, ಗುಣ-ಯೋಗ್ಯತೆಯ ಫಲವುಣ್ಣದ ಮೂರ್ಖ ಎಂದರು.

ಸುಜಲಾಳು ಆ ಗಾಜಿನ ಗೊಂಬೆಯನ್ನು ನೋಡುತ್ತಾ, ಈ ಗಾಜಿನಷ್ಟೇ ಪಾರದರ್ಶಕವಾದ, ನಿಷ್ಕಲ್ಮಶ ಪ್ರೀತಿ ನೀಡಿದರೂ ನನ್ನ ಪಾಲಿಗೆ ಯಾಕೋ ನನ್ನ ಸಂಸಾರವೇ ಅಪಾರದರ್ಶಕವಾದಂತಾಯಿತು. ಆದರೆ, ಮೂರು ತಿಂಗಳ ನಂತರ ಆತ ನನ್ನನ್ನು ಬಂದು ಕಾಣುವುದಾದರೂ ಏತಕೆ? ಎಂದು ಯೋಚಿಸುತ್ತಲೇ ದುಃಖದಿಂದ ಕಾಲ ಕಳೆಯುತ್ತಿದ್ದಳು.

ಕಾಲಚಕ್ರ ಓಡುತ್ತಲೇ ಇತ್ತು. ಸರಿಯುತ್ತಿರುವ ಕಾಲಕ್ಕೆ ಯಾರ ಹಂಗಿದೆ ಹೇಳಿ? ಪುಟಾಣಿಯ ಜೀವನ ಹೊಸ ತಿರುವು ಪಡೆಯುವುದರಲ್ಲಿತ್ತು.

ನೋಡನೋಡುತ್ತಿದ್ದಂತೆಯೇ ಮೂರು ತಿಂಗಳು ಕಳೆಯಿತು. ಸುಂದರ್ ಬಂದು ಸುಜಲಾಳೆದುರು ನಿಂತ. ರಾಯರಿಗೆ "ನನ್ನ ಗಾಜಿನ ಗೊಂಬೆಯನ್ನು ಜೋಪಾನ ಮಾಡಿದಕ್ಕೆ ಧನ್ಯವಾದಗಳು" ಎಂದ. ಆಗ ರಾಯರು ಕೇಳಿದರು ಗಾಜಿನ ಗೊಂಬೆಯ ಅರ್ಥವೇನೆಂದು? ಅವನ ಉತ್ತರ ಹೀಗಿತ್ತು "ಅವಳು ನನ್ನ ಪಾಲಿಗೆ ದುಬಾರಿಯಾದ ಆದರೆ ಗಾಜಿನ ಗೊಂಬೆಯಷ್ಟೇ ನಾಜೂಕಾದ ಹೆಣ್ಣು. ಅವಳನ್ನು ಗಾಜಿನ ಗೊಂಬೆಯನ್ನು ಕಾಯ್ದುಕೊಂಡಷ್ಟೇ ಜತನದಲ್ಲಿ ಕಾಯ್ದುಕೊಳ್ಳುವೆ. ಅವಳ ಪಾರದರ್ಶಕವೆನಿಸುವ, ಮನಸೆಳೆಯುವ ಸಂಸ್ಕಾರಯುತ ಬದುಕನ್ನು ಮತ್ತಷ್ಟು ಹೊಳಪುಗೊಳಿಸುವೆ. ಕೀಳು ಯೋಚನೆಯವರು ಮುಟ್ಟಲಾಗದ, ಷೋಕೇಸಿನಲ್ಲಿಟ್ಟು ರಕ್ಷಿಸಿ ಅಲ್ಲಿಂದಲೇ ಅವರ ಕೆಟ್ಟ ಮನಸ್ಸುಗಳನ್ನು ಸರಿ ಮಾಡುವಂತೆ ಪ್ರಭಾವ ಬೀರುವ ಗಾಜಿನ ಗೊಂಬೆ. ಜೋಪಾನ ಮಾಡದಿದ್ದರೆ ಮತ್ತೆಂದೂ ಸಿಗದ ಅಮೂಲ್ಯ ರತ್ನ. ಕೆಟ್ಟತನದಿಂದ ಮುಟ್ಟಿದರೆ ಚೂಪಾಗಿ ಚುಚ್ಚುವ, ವಜ್ರದಿಂದಷ್ಟೇ ಆಕಾರ ಪಡೆಯಬಲ್ಲ ಶ್ರೇಷ್ಠ ಗಾಜಿನ ಗೊಂಬೆ ನನ್ನ ಸುಜಲಾ.

ಅಪ್ಪನ ಹಣದ ದುರಾಸೆಯ ಫಲವಾಗಿ ಸುಜಲಾಳನ್ನು ಮದುವೆಯಾದೆ. ಆದರೆ, ಅವಳ ಯೋಚನೆಗಳಿಂದ, ಅವಳ ಪ್ರಭಾವದಿಂದ ನಾನು ಬದಲಾದೆ. ಅಪ್ಪನ ಆಸೆಯ ಜಾಲದಿಂದ ಹೊರಬಂದು ಈ ಮೂರು ತಿಂಗಳಲ್ಲಿ ನನ್ನದೇ ಪ್ರಾಮಾಣಿಕ ಬದುಕು ಕಟ್ಟಿಕೊಂಡಿದ್ದೇನೆ. ನನ್ನದೇ ದಿನಸಿ ಅಂಗಡಿ ಈಗ ಲಾಭ ಗಳಿಸುತ್ತಿದೆ. ಗಾಜಿನ ಗೊಂಬೆಯನ್ನು ಜೋಪಾನ ಮಾಡುವಷ್ಟು ಬಲಿಷ್ಟವಾಗಿದ್ದೇನೆ. ನನ್ನ ಗಾಜಿನ ಗೊಂಬೆಯನ್ನು ನಾನು ಕರೆದುಕೊಂಡು ಹೋಗಲೇ?" ಎಂದನು ಸುಂದರ್.

ಅದಕ್ಕೆ ವೆಂಕಟರಾಯರೆಂದರು "ನನ್ನ ಮನೆ ಜೋಡಿ ಗಾಜಿನ ಗೊಂಬೆಗಳು ಮತ್ತು ಅವರ ಪರಿವಾರವಿರುವ ಷೋಕೇಸ್ ಆಗಲಿ." ಪುಟಾಣಿಯ ಮುಖದ ಮೇಲಿನ ಮಂದಹಾಸ ಇಡೀ ಮನೆಯನ್ನೇ ಪಸರಿಸಿತು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ