ಭಾನುವಾರ, ಏಪ್ರಿಲ್ 26, 2020

ಅವಳೊಳಗಿನ ಕತೆಗಳು

"ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ" ಎಂಬ ಗಾದೆ ಮಾತು ಕೇಳಿ ಮನಸ್ಸಲ್ಲೇ ಮಂಥನ ಮಾಡಿಕೊಂಡಳು. ಕೊಟ್ಟ ಪ್ರೀತಿ ಮರಳಿ ಸಿಗಲಿಲ್ಲ, ಬಚ್ಚಿಟ್ಟ ನೋವು ಅವಳಲ್ಲೇ ಉಳಿದು ಹೋಯಿತು.
*********************************

ನಿರಾಭರಣ ಸುಂದರಿಯಾದ ಅವಳ ಸೌಂದರ್ಯದ ರಹಸ್ಯ ಅವಳ ಮುಗ್ದ ಮುಗುಳ್ನಗು
**********************************

ಎಲ್ಲರನ್ನೂ ತಿರಸ್ಕಾರದಿಂದ ಧಿಕ್ಕರಿಸುತ್ತಾ ಬದುಕುತ್ತಿರುವವಳ ಕುರಿತು ಆಡುವವರಿಗೇನು ಗೊತ್ತು ಪ್ರೀತಿಯನ್ನು ಮೊಗೆದು ಕೊಟ್ಟು ಮೋಸ ಹೋದ ದೇವತೆ ಅವಳೆಂದು..
**********************************

ಅವಳು ಸತ್ತಳೆಂದು ಎಲ್ಲರೂ ದುಃಖಿಸುತ್ತಿರುವ ಹೊತ್ತಲ್ಲಿ ಅವಳ ಆತ್ಮ ಹೇಳುತ್ತಿತ್ತು. ಅವಳ ಆಸೆಗಳನ್ನು ಕೊಂದುಕೊಂಡು ಎಲ್ಲರ ಆಸೆಯಂತೆ ಬದುಕುವ ತೀರ್ಮಾನ ಮಾಡಿದಾಗಲೇ ಅವಳು ಸತ್ತಿದ್ದಳು, ಬದುಕಿದ್ದು ಅವಳ ದೇಹ ಮಾತ್ರ.
**********************************

ಅವಳ ಹಾಜರಿಯಲ್ಲಿ ಅವಳನ್ನು ತಮ್ಮ ಬದುಕಿನ ಪುಟವೊಂದರಂತೆ ಭಾವಿಸುತ್ತಿದ್ದವರಿಗೆ ಅವಳ ಗೈರು ಹಾಜರಿಯಲ್ಲಿ ಅರಿವಾದದ್ದು ಅವಳೊಂದು ಬೃಹತ್ ಗ್ರಂಥವೆಂದು.
**********************************

ಅವಳ ಚುಚ್ಚು ಮಾತು, ಪ್ರತಿಯೊಂದಕ್ಕೂ ತಡೆಯೊಡ್ಡುವ ಹಿಂದಿನ ಪ್ರೀತಿ ಅದೇಕೋ ಅವಳ ಸುತ್ತಮುತ್ತಲಿನವರಿಗೆ ಕಾಣಲೇ ಇಲ್ಲ.
************************************

ಕತೆಗೊಂದು ಜೀವಂತಿಕೆ ಸೃಷ್ಟಿಸಿ ಮಾಯವಾದಳು, ಕತೆ ಮುಗಿದ ನಂತರವೇ ಅರಿವಾದದ್ದು ಕತೆ ಮತ್ತು ಕತೆಯ ಜೀವಾಳವೇ ಅವಳೆಂದು
************************************

ಆಟ,ಪಾಠ,ಕಲೆ ಎಲ್ಲದರಲ್ಲೂ ಗೆಲುವು ಅವಳದ್ದೇ ಆದರೆ ಪ್ರೀತಿ ಪಡೆದುಕೊಳ್ಳುವುದರಲ್ಲಿ ಏಕೋ ಸೋತಿದ್ದಳು.
*************************************

ಅವಳನ್ನು ಸೋಲಿಸಿದೆ ಎಂಬ ಅಹಂಭಾವದಲ್ಲಿ ಮೆರೆಯುತ್ತಿದ್ದವನಿಗೆ ಗೊತ್ತಿರಲಿಲ್ಲ.. ತನ್ನ ಗೆಲುವು, ಅವಳ ಸೋಲು ಎರಡೂ ಅವಳು ಬಯಸಿದ್ದು ಮತ್ತು ಅದೇ ಅವಳ ಗೆಲುವೆಂದು.
*************************************

ಬೇಜಾರೇನಿಲ್ಲ ಅವಳಿಗೆ ಬೇರಾರ ಮೇಲೂ, ಅವಳ ಹೊರತು. ಪ್ರೀತಿ, ಕಾಳಜಿ ತೋರಿ ಮರುನಿರೀಕ್ಷಿಸುವ ತನ್ನ ಕುರಿತೇ ಅವಳಿಗೆ ಬೇಜಾರು ಅಷ್ಟೇ.
**************************************

ಹಣದಿಂದ ಪ್ರತಿಯೊಂದನ್ನೂ ಕೊಂಡುಕೊಳ್ಳಬಹುದೆಂಬ ಅಹಂನಲ್ಲಿದ್ದವನಿಗೆ ಅವಳು ಹೇಳಿದ್ದಳು. ಹಣದಿಂದ ನೀನು ಕೊಂಡುಕೊಳ್ಳಬಹುದಾದದ್ದು ನನ್ನ ದೇಹವನ್ನಷ್ಟೇ.. ಮನಸ್ಸನ್ನಲ್ಲ ಎಂದು.
***************************************

ಮಿಥ್ಯವೆಂದು ತಿಳಿದಿದ್ದರೂ ಅದನ್ನು ಮುಚ್ಚಿಟ್ಟು ಸತ್ಯವನ್ನಾಗಿಸಲು ಪಣತೊಟ್ಟು ಅವನನ್ನು ಕೆಟ್ಟತನದಿಂದ ಒಳ್ಳೆಯತನಕ್ಕೆ ಪರಿವರ್ತಿಸಿದವಳ ಹೆಸರು "ಮುಗ್ಧ ಕಿನ್ನರಿ" ಎಂದಿರಬಹುದೇ..?***************************************

ಎಲ್ಲವೂ ಬದಲಾಗಬಹುದು ಆದರೆ ಅವಳೊಳಗಿನ ತಾಯ್ತನದ ಮಿಡಿಯುವ ಮನಸ್ಸೊಂದನ್ನು ಬಿಟ್ಟು
***************************************

ಮಡಿಲಲ್ಲಿಟ್ಟು ಜಗದ ಪ್ರೀತಿಯನ್ನು ಪರಿಚಯಿಸಿದವಳಿಗೆ, ಅವಳು ಅವನ ಆಸರೆ ಬಯಸಿದ ಸಂಧರ್ಭದಲ್ಲಿ ಜಗದ ಕ್ರೌರ್ಯವನ್ನು ಪರಿಚಯಿಸಿದ.
****************************************

ಬಂಧ ಬೆಸೆದುಕೊಂಡಿತೆಂದು ಖುಷಿ ಪಟ್ಟವಳಿಗೆ ಅದು ಬಂಧನವೆಂಬ ಪರಿಚಯ ಮಾಡಿಕೊಟ್ಟ. ಬಂಧನವ ಧಿಕ್ಕರಿಸಿ ನಡೆದವಳು ಅವನ ಅಹಂ ಅನ್ನೂ ತುಳಿದು ನಡೆದಿದ್ದಳು. ಮತ್ತೆ ಸಾವರಿಸಿಕೊಳ್ಳದಂತೆ..
****************************************

ದೊಡ್ಡ ದನಿಯಲ್ಲಿ ಅವನನ್ನು ಗದರಿಸಿ, ಒಳಕೋಣೆ ಸೇರಿದವಳ ಬಿಕ್ಕು ಯಾರಿಗೂ ಕೇಳಲೇ ಇಲ್ಲ.
*****************************************

ಬದುಕಿಗೊಂದು ಗುರಿ ಇರಬೇಕು ಎಂದು ಭಾಷಣ ಮಾಡುತ್ತಿದ್ದವನ ಮಾತು ಕೇಳಿ ಹೇಳಿದಳು. ಗುರಿ ಸಾಧನೆಯಾದರೆ ಸಾಲದು ಅದನ್ನು ಸಂಭ್ರಮಿಸುವವರನ್ನೂ ಸಂಪಾದಿಸಿರಬೇಕು.
*****************************************

ಅವಳ ಮನದ ಭಾವಗಳ ಅರ್ಥೈಸುವಿಕೆ ಅದೆಷ್ಟೇ ಪುಸ್ತಕ ಓದಿದರೂ ಅರ್ಥವಾಗದ್ದು
*****************************************

ಎಲ್ಲಾ ಭರವಸೆಗಳ ತಂತು ಕಡಿದ ಮೇಲೆ ಕೊನೆಗುಳಿಯುವುದು, ಆಸರೆಯಾಗುವುದು ತಾನೇ ಧಿಕ್ಕರಿಸಿ ನಡೆದಿದ್ದ ಅವಳು, ಅವಳ ಭರವಸೆ, ಅವಳ ಮಡಿಲು, ಅವಳ ಒಲವು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ