ಮಂಗಳವಾರ, ಸೆಪ್ಟೆಂಬರ್ 18, 2018

ಕನಸಿನ ಬಿಡುಗಡೆ

ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಎಂಬ ಮಾತು ಸತ್ಯ ಎಂಬುದು ಮತ್ತೆ ಅರಿವಾಗುವ ಹೊತ್ತು. ಏಕೆಂದರೆ, ಬಚ್ಚಿಟ್ಟ ಕನಸುಗಳು ಆ ಜಾಗದಿಂದ ತಪ್ಪಿಸಿಕೊಂಡು ಮತ್ತೆಲ್ಲಿಗೋ ಹೊರಟು ಹೋಗಿವೆ, ಮುಚ್ಚಿಟ್ಟ ಮಾತುಗಳು ಅಲ್ಲೇ ಮರೆಯಾಗಿವೆ.

ಕನಸುಗಳ ನೆನಪು ಮಾಡಿಕೊಳ್ಳುತ್ತಾ ಅವುಗಳನ್ನು ಬಿಚ್ಚಿಟ್ಟು ಇರುವ ಜೀವನವನ್ನು ಕಳೆದುಕೊಳ್ಳುವ ಕಾರ್ಯವನ್ನು ನಾನು ಮಾಡುವುದಿಲ್ಲ. ಆದರೆ, ನನ್ನ ಕನಸೆಲ್ಲವೂ ನಿನಗೆ ಅರ್ಥವಾಗಿ ಅದು ಮತ್ತೊಂದು ಅನರ್ಥಕ್ಕೆ ಕಾರಣವಾಗಬಾರದಲ್ಲ, ಕನಸು ಕನಸಾಗಿಯೇ ಉಳಿದು ಬಿಡಲಿ. ಆ ಕನಸು ನನ್ನ ಕಣ್ಣಿಂದ ಕನಲಿ ಹೋಗಲಿ.ಕನಸಿನ ಬದುಕು ಕನಸಾಗಿಯೇ ಉಳಿದು ಬಿಡಲಿ. ಕಾಲದ ಕಣ್ಣಿನಲ್ಲಿ ಕನಸಾಗಿಯೇ ಕಾಣುವ ಆ ಬದುಕು ಕನಸಾಗಿಯೇ ಉಳಿದು ಬಿಡಲಿ. ಇರಲಿ, ಮತ್ತೊಂದು ವಿಷಯ, ಬಚ್ಚಿಟ್ಟ ಕನಸು ತಪ್ಪಿಸಿಕೊಂಡು ಎಲ್ಲಿಗೋ ಹೋಗಲಿಲ್ಲ. ಬದಲಿಗೆ ನಾನೇ ಆ ಕನಸನ್ನು ಬಿಡುಗಡೆ ಮಾಡಿಬಿಟ್ಟೆ.

ಆ ಕನಸು ಸಹಾ ನನ್ನೊಳಗೆ ಬಹುದಿನಗಳಿಂದ ಬಂಧಿಯಾಗಿಬಿಟ್ಟಿತ್ತು. ಅಜೀವ ಕಾರಾಗೃಹ ಶಿಕ್ಷೆ ಹೊಂದಿದ ಖೈದಿಗಳೇ ಬಿಡುಗಡೆಯಾಗುತ್ತಾರೆ. ಅದೂ ಸನ್ನಡತೆ ಎಂಬ ಕಾರಣದಿಂದ ಮುಂಚಿತವಾಗಿಯೇ ಬಿಡುಗಡೆಯಾಗುತ್ತಾರೆ. ಆದರೆ, ನನ್ನ ಒಳ್ಳೆಯ ಕನಸೇಕೆ ಬಂದಿಯಾಗಿರಬೇಕು? ಕನಸಿನ ಅಳಿದುಳಿದ ಆಯುಷ್ಯವಾದರೂ ಮತ್ತೊಬ್ಬರ ಕಂಗಳಲಿ ಜೀವಿಸಲಿ.

"ಯಾರದೋ ಕನಸು, ಮತ್ತಾರದೋ ಕಂಗಳಲಿ
ಬದುಕಿ ಬಾಳುವ ಕನಸುಗಳಿಗೆಂದಿಗೂ ಸಾವಿಲ್ಲ"

ಭವಿಷ್ಯದ ಅಮೂರ್ತ ರೂಪವೇ ನನ್ನೊಳಗೆ ಜೀವಿಸಿತ್ತು, ನನ್ನೊಳಗೊಂದಾಗಿ ಜೀವಿಸಿತ್ತು. ಬದುಕಿನ ಅವಿನಾಭಾವ ಬಂಧ ಎಂಬಂತೆ ಬದುಕಿದ್ದ ಕನಸು ಇರದೇ ಕೂಡಾ ಬದುಕಬಹುದೆಂಬುದು ಈ ಹೊತ್ತಿನಲ್ಲಿ ಅರಿವಾಗುತ್ತಲಿದೆ. ಕನಸಿನೊಡನೆಯ ನನ್ನ ಬಂಧ ಸಧ್ಯಕ್ಕೆ ನನ್ನೊಡನೆಯೇ ಮುಗಿಯಿತು. ರಕ್ತಸಂಬಂಧವೇ ಕಡಿದು ಹೋಗುವ ಈ ಹೊತ್ತಿನಲ್ಲಿ, ಎಂದೋ, ಯಾವುದೋ ಸಂಧರ್ಭದಲ್ಲಿ ನನ್ನೊಡನೆಯೇ ಜೀವಿಸಿದ್ದ ಕನಸೊಂದು ಲೆಕ್ಕವೇ..?

ನನ್ನ ಕನಸಿನ ಬದುಕಿನಂತೆಯೇ ಎಲ್ಲವೂ ನಡೆದಿದ್ದರೆ, ಎಂಬ ಪ್ರಶ್ನೆಉದ್ಭವಿಸದೇ ಇರುವುದಿಲ್ಲ. ಅಷ್ಟಕ್ಕೂ, ಆ ಕನಸು ನಿನಗೆ ತಿಳಿಯದಿದ್ದರೇನೇ ಒಳಿತು. ಕೆಲವೊಮ್ಮೆ ಬಾನಿನ ಚಂದ್ರ, ನಕ್ಷತ್ರಗಳು ಕೈಗೆ ಸಿಕ್ಕರೆಷ್ಟು ಚೆಂದ ಎನ್ನಿಸುತ್ತದೆ. ಆದರೆ ಅವುಗಳು ಕೈಗೆ ಸಿಗುವುದುಂಟೇ..? ಸಿಕ್ಕರೂ ಆ ಕ್ಷಣಕ್ಕೆ ಮಾತ್ರ ಸಂತೋಷ.. ನಂತರ ಅವುಗಳ ರಕ್ಷಣೆಯ ಕುರಿತು ಆತಂಕ ಹೆಚ್ಚಾಗುತ್ತಲೇ ಇರುತ್ತದೆ. ಚಂದ್ರ,ತಾರೆಗಳು ಬಾನಿನಲ್ಲಿ ಹೊಳೆಯುತ್ತಿದ್ದರೇನೇ ಚೆಂದ. ಕೈಗೆ ಸಿಕ್ಕರೂ ಸಿಗದಂತಹ ಚಂದ್ರನನ್ನು ಬಯಸುತ್ತಾ ಅದೇ ಬಯಕೆಯ ಬದುಕಿಗೆ ಒಗ್ಗಿಬಿಡುತ್ತೇವೆ ಮತ್ತು ಅದರಲ್ಲೇ ಸಂತೋಷವನ್ನು ಕಾಣುತ್ತೇವೆ.

ಮುಳ್ಳು ಚುಚ್ಚಿಸಿಕೊಂಡ ಕಾಲಿನ ಹಾಗೆ, ಕಳೆದು ಹೋದ ಕನಸು ಕೂಡಾ ಕಾಡುತ್ತಲೇ ಇರುತ್ತದೆ. ಮರೆಯಲು ಸಾಧ್ಯವೇ ಇಲ್ಲದ ನನ್ನ ಜೀವಿತದ ಕನಸು ಅದು. ಕನಸನ್ನು ಕಾಣಲಾಗದೆಂಬ ಕಾರಣಕ್ಕೆ ಮನಸ್ಸು ಚಡಪಡಿಸುತ್ತಲೇ ಇರುತ್ತದೆ. ಇದ್ದಾಗ ಕನಸಿನ ಬೆಲೆ ತಿಳಿಯಲಿಲ್ಲ, ಹೊರಟ ನಂತರ ಚಡಪಡಿಸುವಿಕೆ. ಮತ್ತೊಬ್ಬರ ಕಂಗಳಲ್ಲಿ ಆ ಕನಸು ಹೊಳೆದರೆ ಖುಷಿ, ಮಸುಕಾದರೆ ಮತ್ತದೇ ಕಾಡುವಿಕೆ. ಆದರೆ ಆಗ ಅದನ್ನು ಸರಿಪಡಿಸುವ ಸ್ಥಿತಿಯಲ್ಲಿ ನಾನಿರುವುದಿಲ್ಲ ಎಂಬುದೇ ಬೇಸರ.

ಕನಸು ಕೂಡಾ ಒಂದು ರೀತಿ ಹೆಣ್ಣುಮಕ್ಕಳಂತೆಯೇ.. ಮದುವೆ ಮಾಡಿಕೊಡುವವರೆಗೆ ಒಂದು ರೀತಿ ಚಿಂತೆ. ಮದುವೆ ಮಾಡಿಕೊಂಡು ಹೊರಟಾಗ ದುಃಖ. ಮದುವೆಯ ನಂತರದ ಅವಳ ಜೀವನ ಅವಳ ಹಣೆಬರಹಕ್ಕೇ ಬಿಟ್ಟಿದ್ದಲ್ಲವೇ..? ಹಾಗೇ ನನ್ನ ಕನಸಿನ ಹಣೆಪಾಡು ಹೇಗಿದೆಯೋ ಹಾಗೇ ಆಗಲಿ. ಬಯಸುವುದಷ್ಟೇ ಉಳಿದಿದೆ ನನ್ನ ಪಾಲಿಗೆ. ಒಳಿತೇ ಆಗಲಿ ಎಂದೇ ಬಯಸುವೆ. ಮತ್ತೊಬ್ಬರ ಕಣ್ಣಲ್ಲಿ ಆ ಕನಸು ಮಿನುಗಲಿ ಎಂದಷ್ಟೇ ನಾನು ಬಯಸುವೆ.

ಎಲ್ಲರೂ ಪುಸ್ತಕ ಬಿಡುಗಡೆ ಮಾಡಿ ಸಂತೋಷ ಪಡುತ್ತಾರೆ. ಖೈದಿಗಳು ಜೈಲಿನಿಂದ ಹೊರಬಂದರೆ ಬಿಡುಗಡೆಯ ಸಂತಸವನ್ನು ಅನುಭವಿಸುತ್ತಾರೆ. ಆದರೆ ನಾನು ನನ್ನ ಕನಸನ್ನು ಬಿಡುಗಡೆಗೊಳಿಸಿರುವೆ. ಸಂತೋಷವಿದೆಯೋ, ದುಃಖವಿದೆಯೋ, ಖೇದವಿದೆಯೋ ಎಂದು ಅರಿವಾಗದ ಹೊತ್ತಲ್ಲೇ ಕನಸು ಬಿಡುಗಡೆಗೊಂಡಿದೆ. ಬಿಡುಗಡೆಗೊಂಡ ಕನಸಿಗೆ ತಾನು ನನ್ನಿಂದ ಮುಕ್ತಿ ಹೊಂದಿದ ಸುಖ. ಆದರೆ, ನನಗೆ ಏನೊಂದೂ ಹೇಳಲಾಗದ ಅಯೋಮಯ ಸ್ಥಿತಿ. ಆದರೂ.., ನನ್ನ ಕನಸಿನ ಬಿಡುಗಡೆ ಮತ್ತೊಬ್ಬರ ಕಣ್ಣಿನ, ಮತ್ತೊಂದು ಕನಸಿನ ಉದಯಕ್ಕೆ ಕಾರಣವಾಗುತ್ತದೆ ಎಂಬುದೇ ಸದ್ಯಕ್ಕೆ ಸಮಾಧಾನಕರ. ಅಂತೂ ಇಂತೂ , ಇವೆಲ್ಲದರ ನಡುವೆಯೇ ನನ್ನ ಕನಸು ಬಿಡುಗಡೆಗೊಂಡಿದೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ