ಶುಕ್ರವಾರ, ಜುಲೈ 19, 2019

ತ್ರಿಶಂಕು ಸ್ವರ್ಗ

ಆಳವಾಗಿ ಬೇರು ಬಿಟ್ಟು ನಿಂತವಳ
ಅಸ್ತಿತ್ವವನ್ನೇ ಬದಲಾಯಿಸುವೆವೆನ್ನುತ್ತಾ
ಬೇರನ್ನೇ ಕಿತ್ತು ನೆಡಲು ಹೊರಡುತ್ತೀರಿ
ಬೇರು ಕಿತ್ತ ಗಿಡ ಬಲವಾಗಿ ನಿಲ್ಲಲುಂಟೇ?
ಅವಳು ಅಲ್ಲಿಯೂ ಸಲ್ಲದೆಯೇ..
ಇತ್ತ ಇಲ್ಲಿಯೂ ಸರಿಯಾಗಿ ನಿಲ್ಲದೆಯೇ
ಅಂಡಲೆಯುತ್ತಾ ಮುಕ್ತಿಗಾಗಿ ಬೇಡುತ್ತಾಳೆ
ಮುಕ್ತಿಯೂ ನೀಡದಷ್ಟು ಕಟುಕರಾಗುತ್ತಾ
ನನ್ನ ಜವಾಬ್ದಾರಿಯಲ್ಲವೆಂದು ಕಳಚಿಕೊಳ್ಳುತ್ತೀರಿ
ಮಾರಿದವರು ಈಗ ಮನೆಮಗಳಲ್ಲವೆಂದಳು
ಕೊಂಡವರು ಇಂಚಿಂಚೇ ಕೊರೆಯುತ್ತಾ
ಮತ್ತೊಂದು ವಿಷಬೀಜಕ್ಕಾಗಿ ತಿವಿಯುತ್ತಾರೆ
ಬೇರೇ ಬಿಡದೆ ವಂಶವೃಕ್ಷವೆಲ್ಲಿಂದ..?
ಬಂಜೆಯೆಂದು ಜರಿಯುತ್ತಾ ಹಿಂಸಿಸುವಾಗ
ಅವಳು ಪಟ್ಟ ಪಾಡು ಅವಳಿಗೇ ಪ್ರೀತಿ..
ಬದುಕಿದರೆ ಇತ್ತ ನಿಲ್ಲಲೂ ನೆಲೆ ಸಿಗದೆ
ಸತ್ತರೆ ಅತ್ತ ಎಲ್ಲಿಯೂ ಮುಕ್ತಿ ಸಿಗದೆ
ತ್ರಿಶಂಕು ಸ್ವರ್ಗದಲ್ಲಿಯೇ ನೆಲೆಯೂರುತ್ತಾಳೆ
ಎಂದಿನಂತೆಯೇ...

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ