ಭಾನುವಾರ, ಫೆಬ್ರವರಿ 10, 2019

ಆತ್ಮಸಖ

"ಕೆಲವರು ದೂರದಲ್ಲಿದ್ದರೂ, ಮನಸ್ಸು ಅವರನ್ನು ಮಾತನಾಡಿಸಲೇಬೇಕು ಅಂತಾ ಬಯಸುತ್ತೆ. ಇನ್ನು ಹಲವರು ಮುಂದೆಯೇ ಇದ್ದರೂ ಮಾತನಾಡಬೇಕು ಅಂತಾ ಅನಿಸುವುದೇ ಇಲ್ಲ, ಅಂದ ಹಾಗೆ ಈ ಕೆಲವರು ಅಪರಿಚಿತರೇನೂ ಅಲ್ಲಾ ದೂರವಿದ್ದರೂ ಹತ್ತಿರವೇ ಇದ್ದಾರೆಂದೆನಿಸುವ ಪರಿಚಿತರೇ, ನನಗೆ ಹಾಗನ್ನಿಸುವುದು ಶಿವುವಿನ ಬಗ್ಗೆ ಮಾತ್ರ" ಎಂದು ತನ್ನ ಆಪ್ತ ಗೆಳತಿ ವಸುಧಾಳ ಬಳಿ ಹೇಳಿಕೊಳ್ಳುತ್ತಿದ್ದಾಳೆ ಅಪರ್ಣ, ಮತ್ತೆ ಹೋಗಿ ಮಾತಾಡೋದಲ್ವಾ ಎಂದು ಕೇಳಿದ ವಸುಧಾಳಿಗೆ "ನನಗೆ, ಅವರ ಜೊತೆ ನೃತ್ಯದ ಬಗ್ಗೆ ಬಿಟ್ಟು ಬೇರೇನನ್ನೂ ಮಾತನಾಡಲೂ ಸಾಧ್ಯವಾಗುತ್ತಿಲ್ಲ, ಪರಿಚಯವಾಗಿ ಒಂದು ವರ್ಷ ಕಳೆಯುತ್ತಾ ಬಂದರೂ ಸಹಾ ಅವರ ಊರು,ಗೆಳೆಯರು,ತಂದೆ-ತಾಯಿ ಯಾರ ಬಗ್ಗೆಯೂ ಗೊತ್ತಿಲ್ಲ, ಇವೆಲ್ಲದರ ಬಗ್ಗೆ ಕೇಳಬೇಕೆನಿಸಿದರೂ, ಕೇಳಿದರೆ ಹೇಗೆ ಪ್ರತಿಕ್ರಿಯೆ ನೀಡುತ್ತಾನೋ ಅಂತಾ ಹೆದರಿ ನನಗೆ ಕೇಳೋಕೆ ಭಯ ಆಗುತ್ತೆ. ಹಾಗಂತ ಗಂಟು ಮುಖ ಹಾಕಿಕೊಂಡು ಸಿಡಿಮಿಡಿ ಅಂತ ಆನ್ನೋದಿಲ್ಲ, ಕೋಪ ಮಾಡಿಕೊಳ್ಳುವುದಿಲ್ಲ ತುಂಬಾ ತಾಳ್ಮೆ ಇದೆ ಆದರೆ ಕೆಲವೊಮ್ಮೆ ಕ್ಷುಲ್ಲಕವೆನಿಸುವ ವಿಷಯಕ್ಕೂ ಕೂಗಾಡಿಬಿಡುತ್ತಾರೆ, ನಾನು ಕೊಟ್ಟ ಸಲಹೆಗಳನ್ನು ತೆಗೆದುಹಾಕುವುದಿಲ್ಲ, ತುಂಬಾ ಚರ್ಚೆ ಮಾಡಿದರೂ ವೈಯಕ್ತಿಕ ವಿಚಾರಗಳನ್ನು ಮಾತಡುವಷ್ಟು ಸಲುಗೆಯಿಲ್ಲ,ಏಕೋ ನಾವು ಹತ್ತಿರದಲ್ಲಿದ್ದರೂ ಅಂತರಂಗಗಳು ದೂರದಲ್ಲೇ ಉಳಿದವು." ಎಂದು ನಿಡುಸುಯ್ದು ಸುಮ್ಮನಾದಳು.

ವಸುಧಾ ಎಂದೂ ಶಿವುವನ್ನು ನೇರವಾಗಿ ಭೇಟಿಯಾಗಿರಲಿಲ್ಲ, ಅವರಿಬ್ಬರ ನೃತ್ಯದ ಫೋಟೋ ನೋಡಿದ್ದಳು ಅಷ್ಟೇ.ಅಪರ್ಣ ಹೇಳುವುದನ್ನು ಕೇಳಿ ಅವನ ವ್ಯಕ್ತಿಚಿತ್ರವನ್ನು ರೂಪಿಸಿಕೊಂಡಿದ್ದಳು. ಶಿವುನ ಪೂರ್ತಿ ಹೆಸರು ಶಿವರಾಜ್, ನೋಡಲಿಕ್ಕೆ ಮನ್ಮಥನ ಹಾಗಿಲ್ಲದಿದ್ದರೂ, ಹೆಸರಿಗೆ ತಕ್ಕಂತೆ ಶಿವನ ರೀತಿ ಇದ್ದಾನೆ.ಶಾಂತ ಮುಖಭಾವ, ನೋಡಲು ತುಸು ಕಪ್ಪಾದರೂ, ಲಕ್ಷಣವಾಗಿದ್ದಾನೆ. ಅಂತಹಾ ಒಳ್ಳೆಯ ಭಾಷಣಕಾರನಲ್ಲದಿದ್ದರೂ , ಮುಗ್ಧ ಮಾತುಗಳಿಂದ ಎಲ್ಲರನ್ನೂ ಮೋಡಿ ಮಾಡುತ್ತಾನೆ ಎಂದಿದ್ದಳು ಅಪರ್ಣ.

ಅಪರ್ಣ ತುಂಬಾ ಸುಂದರಿಯಲ್ಲದಿದ್ದರೂ, ನೋಡಲು ಲಕ್ಷಣವಾಗಿದ್ದಾಳೆ. ಮುಗುಳ್ನಗೆಯೇ ಅವಳಿಗೊಂದು ಮೆರುಗು ನೀಡಿದೆ. ಭರತನಾಟ್ಯ ಅವಳ ಜೀವ, ಅದರಲ್ಲಿ ತುಸು ಹೊಸತನವನ್ನು ಬೆರೆಸುವ ಪ್ರಯೋಗಶೀಲೆ,ಅದರೊಂದಿಗೆ ಕೈಯಲ್ಲೊಂದು ಪುಸ್ತಕ ಹಿಡಿದು ಕೂತರೆ ಥೇಟ್ ತಪಸ್ಸಿಗೆ ಕೂತಂತೆಯೇ . ಊಟ,ನಿದ್ದೆ ಎಲ್ಲವನ್ನೂ ತೊರೆದು ಕೈಯಲ್ಲಿರುವ ಪುಸ್ತಕ ಮುಗಿಸುತ್ತಾಳೆ. ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಭಾವುಕಳು, ಹೆಚ್ಚಿನ ಸ್ನೇಹಿತರಿಲ್ಲ ಆದರೆ ಇರುವ ಕೆಲವರೇ ಇವಳ ಜೀವ. ತಂದೆ-ತಾಯಿಯರ ಮಾತಿಗೆ ಎದುರು ಮಾತಾಡುವವಳಲ್ಲ, ಅದಕ್ಕೋಸ್ಕರವಾಗಿ ತನಗಿಷ್ಟವಿಲ್ಲದಿದ್ದರೂ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದಳು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಾಸವಾಗಿದ್ದ ಇವಳಿಗೆ ತನ್ನ ಭರತನಾಟ್ಯ ಪ್ರದರ್ಶನಕ್ಕೆ ಒಂದು ಸದವಕಾಶ ಒದಗಿ ಬಂದಿತ್ತು. ದಸರಾ ಪ್ರಯುಕ್ತ ಯುವಜನತೆಗೆಂದೇ ಆಯೋಜಿತವಾಗಿದ್ದ ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಈಕೆ, ಅಂತಿಮ ಹಂತಕ್ಕೂ ಆಯ್ಕೆಯಾಗಿ ಜುಗಲ್ ಬಂಧಿ ಸುತ್ತಿನಲ್ಲಿ ಶಿವರಾಜ್ ನೊಂದಿಗೆ ಮುಖಾಮುಖಿಯಾದಳು. ಇಬ್ಬರೂ ಒಬ್ಬರಿಗೊಬ್ಬರು ಸೋಲದೆ, ಇಬ್ಬರೂ ಪ್ರಥಮ ಸ್ಥಾನವನ್ನು ಹಂಚಿಕೊಂಡರು. ಆಗ ಶಿವರಾಜ್ ನ ಮನಸ್ಸಿನಲ್ಲಿ ಈಕೆಯೂ ನನ್ನೊಡನೆ ಕಲಾಸೇವೆಯಲ್ಲಿ ಪಾಲ್ಗೊಂಡರೆ ನನ್ನ ನೃತ್ಯ ಪ್ರದರ್ಶನ ಮತ್ತು " ಕಲಾ ಶಾಲೆ"ಗೆ ಅರ್ಥ ಬರುವುದು ಎಂದುಕೊಂಡ. ಆದರೆ ಈ ಕಾಲದಲ್ಲಿ ಇದಕ್ಕೆಲ್ಲಾ ಬೆಲೆಕೊಟ್ಟು ನನ್ನೊಡನೆ ಆಕೆ ಸೇರುತ್ತಾಳಾ? ಎಂದೆಲ್ಲಾ ಆಲೋಚಿಸಿದರೂ,ಕೊನೆಗೆ ಆಕೆಯನ್ನು ಕೇಳಿದಾಗ ಅಪರ್ಣ ಸಂತೋಷದಿಂದ ತನಗೆ ಸಿಕ್ಕಿದ್ದ ಸಾಫ್ಟ್ ವೇರ್ ಕೆಲಸವನ್ನು ಬಿಟ್ಟು ಇದಕ್ಕೆ ಒಪ್ಪುತ್ತಾಳೆ.ಮನೆಯಲ್ಲಿ ಮೊದಲಿಗೆ ವಿರೋಧ ವ್ಯಕ್ತವಾದರೂ ನಂತರ ಮಗಳ ಸಂತೋಷಕ್ಕಾಗಿ ಅವಳ ತಾಯ್ತಂದೆಯರು ಇದಕ್ಕೆ ಒಪ್ಪಿ ಸುಮ್ಮನಾಗುತ್ತಾರೆ.

ಹೀಗೆ ಶಿವರಾಜ್ ನ "ಕಲಾ ಶಾಲೆ" ಯಲ್ಲಿ ಪ್ರಾರಂಭವಾದ ನೃತ್ಯ ಸೇವೆ ಮತ್ತು ಇವರಿಬ್ಬರ "ಅರ್ಧನಾರೀಶ್ವರ" ನೃತ್ಯ ಈಗ ಎಲ್ಲೆಡೆ ಸುಪ್ರಸಿದ್ದವಾಗಿದೆ. ಜೊತೆಗೆ ಕಲಾಶಾಲೆಯ ವಿದ್ಯಾರ್ಥಿಗಳ ಕಣ್ಮಣಿಗಳಾಗಿ ಇಬ್ಬರೂ ಆ ಶಾಲೆಯ ಎರಡು ಕಣ್ಣುಗಳಂತಾಗಿದ್ದಾರೆ.

ಇಷ್ಟಾದರೂ, ಇಬ್ಬರಿಗೂ ನನ್ನಿಂದಲೇ ಇಷ್ಟೆಲ್ಲಾ ಆಗಿರುವುದು ಎಂಬ ಹಮ್ಮು-ಬಿಮ್ಮುಗಳಿಲ್ಲ. ಅವರು ಒಬ್ಬರನ್ನೊಬ್ಬರು ಆದರಿಸಿ, ಅಭಿಮಾನಿಸುತ್ತಾರಲ್ಲದೇ ಪರಸ್ಪರ ಗೌರವಿಸುತ್ತಾರೆ.ಅಪರ್ಣ ವಸುಧಾಳ ಜೊತೆ ಬಿಟ್ಟರೆ ಇನ್ನೆಲ್ಲೂ ಅವನನ್ನು "ಶಿವು" ಎಂದು ಕರೆಯದೆ, ಶಿವರಾಜ್ ಎಂದೇ ಸಂಭೋದಿಸುತ್ತಾಳೆ. "ಆತ್ಮಸಖ"ನ ಪರಿಕಲ್ಪನೆಯಲ್ಲಿ ಮುಳುಗಿರುವ ಅವಳು ಆತನನ್ನೇ ತನ್ನ "ಆತ್ಮಸಖ"ನೆಂದು ಭಾವಿಸುತ್ತಾಳೆ. ಆದರೆ ಪ್ರೀತಿಯೋ, ಆರಾಧನೆಯೋ ತಿಳಿಯದೇ ಹೋಗಿದ್ದಾಳೆ.ಇಬ್ಬರೂ ಏಕಾಂತದಿಂದ ಇರುವ ಸಮಯ ಬಹಳಷ್ಟಿದ್ದರೂ, ಎಂದಿಗೂ ಅನುಚಿತವಾಗಿ ವರ್ತಿಸಿಲ್ಲ,ಮಾತುಕತೆಗಳು ನೃತ್ಯದ, ಓದಿನ ವಿಷಯಗಳನ್ನು ಬಿಟ್ಟು ಆಚೀಚೆ ಹೊರಳಿಲ್ಲ. ಆದರೆ ನೋಡುಗರ ಕಣ್ಣಿಗೆ ಇದಾವುದೂ ಗೋಚರವಾಗುವುದಿಲ್ಲ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿಯೇ ಎಂದಾದಾಗ, ಅಪರ್ಣಳ ತಂದೆ-ತಾಯಿಅವಳಿಗೆ ಯೋಗ್ಯ ವರನನ್ನು ಹುಡುಕಲು ಶುರುವಿಟ್ಟಿದ್ದಾರೆ. ಆಕೆ ಈಗ "ಕಲಾ ಶಾಲೆ"ಗೆ ಹೋಗದೆ ತಿಂಗಳಾಗುತ್ತಾ ಬಂದಿದೆ. ವಸುಧಾ ಮಾತಿಗೆ ಸಿಕ್ಕಾಗಲೆಲ್ಲಾ ಈ ವಿಷಯವನ್ನೇ ಹೇಳುತ್ತಾ ಹಲುಬುತ್ತಾಳೆ ಅಷ್ಟೆ.

ಅತ್ತ ಶಿವರಾಜ್ ಕೂಡಾ ಮೊದಲಿನ ಉತ್ಸಾಹದಲಿಲ್ಲ. ಈ ಹಾಡಿನ ಸಾಲುಗಳನ್ನು ಇತ್ತ ಶಿವರಾಜ್, ಅತ್ತ ಅಪರ್ಣ ಗುನುಗುತ್ತಿದ್ದಾರೆ.

"ಪಾರ್ವತಿ ಸ್ಪಂದನ, ಪರಶಿವ ನರ್ತನ

ಪರಶಿವ ಸನ್ನಿಧಿ, ಪಾರ್ವತಿ ಚೇತನ"

ಸುಪ್ತವಾಗಿ ಹುಟ್ಟಿದ ಈ ಪ್ರೀತಿ,ದೂರದಲ್ಲಿದ್ದಾಗ ಹೆಚ್ಚೆಚ್ಚು ಅರಿವಾಗುತ್ತಿದೆ ಶಿವರಾಜ್ ನಿಗೆ. ಆತ ಕೆಲವೊಮ್ಮೆ ಅಪರ್ಣಳೊಂದಿಗೆ ಇದರ ಕುರಿತು ಚರ್ಚಿಸಬೇಕೆಂದುಕೊಂಡಾಗ ಅವಳ ಗಂಭೀರತೆ, ಸಂಕೋಚದ ಸ್ವಭಾವ ಕಂಡು ಮತ್ತು ಆಕೆ ತಪ್ಪು ತಿಳಿದು ನನ್ನಿಂದ ದೂರಾದರೆ ಎಂದು ಸುಮ್ಮನಾಗಿದ್ದ. ಕಳೆದುಕೊಂಡ ಮೇಲೆಯೇ ಅದರ ಬೆಲೆ ಅರಿವಾಗುವುದು ಎಂಬಂತೆ ಆಕೆಯ ಅನುಪಸ್ಥಿತಿ ಈಗೀಗ ಅವನನ್ನು ಹೆಚ್ಚು ಕಾಡಲಾರಂಭಿಸಿದೆ. ಆಕೆಯ ಗೆಜ್ಜೆಯ ದನಿಯಿಲ್ಲದೆ ಕಿವಿಗೆ ಇಂಪೆನಿಸುತ್ತಿಲ್ಲ, ಆಕೆಯಿಲ್ಲದೆ ಗೆಜ್ಜೆ ಕಟ್ಟಲು ಮನಸಿಲ್ಲ. ಪ್ರೀತಿಯೆಂದರೆ ಇದೇನಾ ಎಂಬ ಪ್ರಶ್ನೆ ಅವನನ್ನು ಕಾಡುತ್ತಿದೆ.

ಇದೇ ಸಮಯಕ್ಕೆ ಆತನ ತಂದೆ-ತಾಯಿಗಳು ಇದಾವುದರ ಅರಿವಿಲ್ಲದೆ ವಧುವಿನ ಅನ್ವೇಷಣೆಯಲ್ಲಿದ್ದಾರೆ. ಈತನೂ ಏನೂ ಮಾಡಲು ತೋಚದೆ, ಅವರ ಜೊತೆಗೆ ಕನ್ಯಾ ಪರೀಕ್ಷೆಗೆ ಹೊರಟಿದ್ದಾನೆ.


*****

ಇಂದು ವಸುಧಾ ಶಿವರಾಜ್-ಅಪರ್ಣರ ಮದುವೆಯಲ್ಲಿ ಸಡಗರ-ಸಂಭ್ರಮದಿಂದ ಓಡಾಡುತ್ತಿದ್ದಾಳೆ.

ಅಂದು ನಡೆದದ್ದಿಷ್ಟು....

ಶಿವರಾಜ್ ಅಂದು ನೋಡಲು ಹೋಗಿದ್ದ ಹುಡುಗಿ ವಸುಧಾ, ಆದರೆ ಆತ ಅಪರ್ಣಳ ಶಿವು ಎಂದು ಗೊತ್ತಾದ ತಕ್ಷಣವೇ ಅವನನ್ನು ನಿರಾಕರಿಸಿ ಇಬ್ಬರ ಮನೆಯವರಿಗೂ ವಿಷಯ ತಿಳಿಸಿದಳು.ಇಬ್ಬರ ಮನೆಯಲ್ಲೂ ಇವರ ಮುಗ್ಧ ಪ್ರೇಮಕ್ಕೆ ಮತ್ತು ತಮ್ಮ ತಮ್ಮ ಸಂತೋಷವನ್ನು ಬದಿಗಿರಿಸಿ ತಮ್ಮ ಮಾತಿಗೆ ಬೆಲೆ ನೀಡಿದಕ್ಕೆ ಹರ್ಷಿಸಿ, ಶಿವ-ಪಾರ್ವತಿಯರ ಮಿಲನಕ್ಕೆ ದೈವಿಕ ಪ್ರೇರಣೆಯೆಂಬಂತೆ ಅಂತರಂಗಗಳ ಪ್ರೀತಿ ಒಂದಾಗಲು ಎಲ್ಲರೂ ಒಮ್ಮನಸಿನಿಂದ ಒಪ್ಪಿದರು.

ಅಪರ್ಣಳಿಗಂತೂ ವಸುಧಾಳನ್ನು ಎಷ್ಟು ಕೊಂಡಾಡಿದರೂ ಸಾಲದು. ಆದರೆ ವಸುಧಾ ಅದಕ್ಕೊಪ್ಪದೆ ನಾನು ನಿಮಿತ್ತ ಮಾತ್ರ. ಕಾಲವೇ ನಿಮ್ಮ ನಿಷ್ಕಲ್ಮಶ ಪ್ರೀತಿಯನ್ನು ಒಂದಾಗಿಸಿದೆ.ಅರ್ಧನಾರೀಶ್ವರರನ್ನು ಯಾರಿಂದಲೂ ದೂರ ಮಾಡಲಾಗದು.

"ಆತ್ಮದೊಲುಮೆಗೆ ಕಾಲವೇ ಸಹಕಾರಿ
ಆತ್ಮಸಖನ ಕೂಡಿದಳು ಪ್ರೇಮದರಸಿ"

ಎಂದು ನಗುತ್ತಾ ಇಬ್ಬರಿಗೂ ಶುಭ ಕೋರಿದಳು ವಸುಧಾ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ