"ಅಮ್ಮ, ಈ ಬೋರ್ಡ್ ನೋಡಿಲ್ಲಿ.. ಈ ದಾರಿಯಿಂದ ಹೋದರೆ ಊರಿಗೆ ಬೇಗ ಹೋಗಬಹುದಲ್ಲ, ಇಲ್ಲಿಂದ 4 ಕಿಲೋಮೀಟರ್ ಆದರೆ ಮುಖ್ಯ ರಸ್ತೆಯಲ್ಲಿ ಹೋದರೆ 8 ಕಿಲೋಮೀಟರ್ ಆಗುತ್ತದೆ. ಇಲ್ಲಿಂದಲೇ ಹೋಗೋಣ " ಎಂದ ಬೈಕ್ ಓಡಿಸುವ ಮಗನ ಮಾತಿಗೆ ಮೊದಲು ನಕಾರ ಸೂಚಿಸಿದಾಗ "ನಿನಗೇನು ಗೊತ್ತಾಗುತ್ತೆ ಸುಮ್ಮನಿರಮ್ಮ" ಎಂದು ಗದರಿದಾಗ ಬದಲಿ ಹೇಳದೆ "ಸರಿ ನಿನ್ನಷ್ಟ" ಎಂದಳು ಸುಜಾತ.
ಆದರೆ, ಕಲ್ಲು ಮಣ್ಣುಗಳಿಂದ ಕೂಡಿದ್ದ ಅಡ್ಡದಾರಿಯಲ್ಲಿ ಅರ್ಧ-ಮುಕ್ಕಾಲು ಗಂಟೆಯ ನಂತರ ಹೇಗೋ ಊರು ತಲುಪಿದಾಗ "ನಿನ್ನ ಮಾತು ಕೇಳಬೇಕಿತ್ತಮ್ಮ" ಎಂದವನ ಮಾತಿಗೆ ಸುಜಾತ "ಬದುಕಲ್ಲಿಯೂ ಹೀಗೇ ಗುರಿ ಬೇಗ ತಲುಪಲು ಸನ್ಮಾರ್ಗ ಬಿಟ್ಟು ದುರ್ಮಾರ್ಗ ಹಿಡಿದು ಬಿಡುತ್ತೇವೆ. ಇನ್ನು ಮುಂದೆ ಎಚ್ಚರಿಕೆಯಿಂದ ದಾರಿ ಆಯ್ದುಕೋ" ಎಂದಾಗ " ನಿನ್ನಂತಹಾ ಮಾರ್ಗದರ್ಶಿಯ ಮಾತು ಕೇಳಿ ಇನ್ನು ಸನ್ಮಾರ್ಗದಲ್ಲಿ ನಡೆಯುವೆ" ಎಂದವನಿಗೆ ತಡವಾದರೂ ಜ್ಞಾನೋದಯವಾಗಿತ್ತು.
~ವಿಭಾ ವಿಶ್ವನಾಥ್