ಭಾನುವಾರ, ಮೇ 3, 2026

ಮಾರ್ಗದರ್ಶಿ (ಬೆಳಕಿಂಡಿಯ ಕತೆಗಳು - 10)


"ಅಮ್ಮ, ಈ ಬೋರ್ಡ್ ನೋಡಿಲ್ಲಿ.. ಈ ದಾರಿಯಿಂದ ಹೋದರೆ ಊರಿಗೆ ಬೇಗ ಹೋಗಬಹುದಲ್ಲ, ಇಲ್ಲಿಂದ 4 ಕಿಲೋಮೀಟರ್ ಆದರೆ ಮುಖ್ಯ ರಸ್ತೆಯಲ್ಲಿ ಹೋದರೆ 8 ಕಿಲೋಮೀಟರ್ ಆಗುತ್ತದೆ. ಇಲ್ಲಿಂದಲೇ ಹೋಗೋಣ " ಎಂದ ಬೈಕ್ ಓಡಿಸುವ ಮಗನ ಮಾತಿಗೆ ಮೊದಲು ನಕಾರ ಸೂಚಿಸಿದಾಗ "ನಿನಗೇನು ಗೊತ್ತಾಗುತ್ತೆ ಸುಮ್ಮನಿರಮ್ಮ" ಎಂದು ಗದರಿದಾಗ ಬದಲಿ ಹೇಳದೆ "ಸರಿ ನಿನ್ನಷ್ಟ" ಎಂದಳು ಸುಜಾತ.


ಆದರೆ, ಕಲ್ಲು ಮಣ್ಣುಗಳಿಂದ ಕೂಡಿದ್ದ ಅಡ್ಡದಾರಿಯಲ್ಲಿ ಅರ್ಧ-ಮುಕ್ಕಾಲು ಗಂಟೆಯ ನಂತರ ಹೇಗೋ ಊರು ತಲುಪಿದಾಗ "ನಿನ್ನ ಮಾತು ಕೇಳಬೇಕಿತ್ತಮ್ಮ" ಎಂದವನ ಮಾತಿಗೆ ಸುಜಾತ "ಬದುಕಲ್ಲಿಯೂ ಹೀಗೇ ಗುರಿ ಬೇಗ ತಲುಪಲು ಸನ್ಮಾರ್ಗ ಬಿಟ್ಟು ದುರ್ಮಾರ್ಗ ಹಿಡಿದು ಬಿಡುತ್ತೇವೆ. ಇನ್ನು ಮುಂದೆ ಎಚ್ಚರಿಕೆಯಿಂದ ದಾರಿ ಆಯ್ದುಕೋ" ಎಂದಾಗ " ನಿನ್ನಂತಹಾ ಮಾರ್ಗದರ್ಶಿಯ ಮಾತು ಕೇಳಿ ಇನ್ನು ಸನ್ಮಾರ್ಗದಲ್ಲಿ ನಡೆಯುವೆ" ಎಂದವನಿಗೆ ತಡವಾದರೂ ಜ್ಞಾನೋದಯವಾಗಿತ್ತು.


~ವಿಭಾ ವಿಶ್ವನಾಥ್

ಕದಡದ ಬಿಂಬ (ಬೆಳಕಿಂಡಿಯ ಕತೆಗಳು - 9)


"ಅತ್ತು ಬಿಡೆ ಉಮಾ ಒಮ್ಮೆ.. ಈಗಲಾದರೂ ಅತ್ತು ಬಿಡೆ. 

ಎಷ್ಟು ಅಂತಾ ದುಃಖವನ್ನು ತಡೆ ಹಿಡಿಯುತ್ತೀಯ ಹೇಳು.. ಹಾಗೆಲ್ಲಾ ಇರಬಾರದಮ್ಮಾ

ಒಳಗಡೆ ಹೆಪ್ಪುಗಟ್ಟಿಕೊಂಡ ನೋವೆಲ್ಲಾ ಒಮ್ಮೆ ಕಣ್ಣೀರಿನ ಹೊರಬಂದು ಬಿಡಲಿ. ಮನಸ್ಸು ಸಹಾ ಹಗುರವಾಗುತ್ತೆ. " ಎಂದು ಹೇಳುತ್ತಿದ್ದರೂ ಉಮಾ ಕಲ್ಲಿನಂತೆಯೇ ಕುಳಿತಿದ್ದಳು.


ಅವಳದ್ದು ಎಂತಹಾ ಕಲ್ಲು ಮನಸ್ಸು ಎಂದುಕೊಂಡರೂ ಅವಳ ದೌರ್ಭಾಗ್ಯಕ್ಕೆ ಮರುಗಿದವರೇ ಎಲ್ಲರೂ.. ಮದುವೆಯಾದ ತಿಂಗಳಲ್ಲೇ ಸೌಭಾಗ್ಯವನ್ನು ಕಳೆದುಕೊಂಡಾಗ ಉಮಾ ಅಳದೆ ಇರುವುದು ಅಚ್ಚರಿ ತರಿಸಿದರೂ ಅವಳ ಉತ್ತರ ಎಲ್ಲರ ಕಣ್ಣಲ್ಲೂ ಮತ್ತಷ್ಟು ಕಣ್ಣೀರು ಮೂಡಿಸಿತ್ತು.


"ನಾನು ಅತ್ತರೆ ನನ್ನ ಕಣ್ಣಲ್ಲಿನ ಅವರ ಬಿಂಬ ಕರಗಿ ಹೋಗುತ್ತದೆ ಅಮ್ಮ. ನಾನು ಅಳಲಾರೆ. ಇಂದಲ್ಲಾ ಎಂದೆಂದಿಗೂ.. "


ಅವಳ ದಿಟ್ಟತೆ ಮಿಶ್ರಿತ ಪ್ರೀತಿಯ ಬಿಂಬ ಹಾಗೇ ಉಳಿದು ಬಿಡಲಿ.


~ ವಿಭಾ ವಿಶ್ವನಾಥ್

ಬದುಕಿನ ಪರೀಕ್ಷೆ (ಬೆಳಕಿಂಡಿಯ ಕತೆಗಳು - 8)


"ಅಂಕ" ನಮ್ಮ ಬದುಕಲ್ಲಿ ಮುಖ್ಯವೇ ಅಮ್ಮ ಎಂದು ಕೇಳಿದ ಮಗುವಿಗೆ

ಅಂಕವೇ ಬದುಕು. ಅದಕ್ಕಾಗಿಯೇ ನೀನು ಕಷ್ಟಪಡಬೇಕು ಎಂದ ಅಮ್ಮನ ಮಗ ಅಂಕಗಳು ಕಡಿಮೆಯಾದವೆನ್ನುವ ಸಣ್ಣ ನಿರಾಶೆಗೆ ಖಿನ್ನತೆಯ ಮೆಟ್ಟಿಲೇರುತ್ತಿದ್ದ.


ಅಂಕ ಬದುಕಲ್ಲಿ ಮುಖ್ಯ ಹೌದು. ಆದರೆ, ಅಂಕವೇ ಬದುಕಲ್ಲ ಎಂದಾಗ ಅಮ್ಮ ನೀಡಿದ ಧೈರ್ಯದಿಂದ ಮಗ ಸಾಧನೆಯ ಹಾದಿಯ ಮೆಟ್ಟಿಲೇರುತ್ತಿದ್ದಾನೆ.


ಅಂಕವೇ ಬದುಕಾಗಬಾರದು.. ಬದುಕಲ್ಲಿ ಮುನ್ನಡೆಯಲು ಅಂಕ ಪಡೆಯುವತ್ತ ಹೆಜ್ಜೆ ಹಾಕಿದಲ್ಲಿ ಬದುಕಿನ ಪರೀಕ್ಷೆಯಲ್ಲಿ ಉತ್ತೀರ್ಣತೆ ಕಟ್ಟಿಟ್ಟ ಬುತ್ತಿ.


~ವಿಭಾ ವಿಶ್ವನಾಥ್

ಆಸರೆ (ಬೆಳಕಿಂಡಿಯ ಕತೆಗಳು - 7)


ಸಂಜೆ ಮನೆಯ ಕಾಂಪೌಂಡ್ ನಲ್ಲಿದ್ದ ಮರದ ನೆರಳಲ್ಲಿ ಕುಳಿತವನಿಗೆ ಹಕ್ಕಿಗಳ ಚಿಲಿಪಿಲಿ ಕಲರವ ಕಂಡು ಕತ್ತೆತ್ತಿ ನೋಡಿದ. ಎಷ್ಟೋ ಹಕ್ಕಿಗಳಿಗೆ ಆಸರೆಯಾಗಿದ್ದ ಮರವನ್ನು ಕಂಡು ಕಣ್ಣಲ್ಲಿ ನೀರಾಡಿತು.


ಅಪ್ಪ ನೆಟ್ಟಿದ್ದ ಈ ಮರ ನಿಸ್ವಾರ್ಥದಿಂದ ಎಷ್ಟೋ ಜೀವರಾಶಿಗಳಿಗೆ ಆಸರೆಯಾಗಿದೆ. ಆದರೆ, ಮುಪ್ಪಿನಲ್ಲಿ ಅವರಿಗೆ ಆಸರೆಯಾಗದೆ ತಾನು ಸ್ವಾರ್ಥಿಯಾಗಿ ಆಲೋಚಿಸಿ ಅಪ್ಪನನ್ನು ವೃದ್ದಾಶ್ರಮಕ್ಕೆ ಬಿಟ್ಟದ್ದು ನೆನಪಾಯಿತು. ತಕ್ಷಣವೇ ಅಪ್ಪನಿಗೆ ಕರೆ ಮಾಡಿ ತಾನು ಅವರನ್ನು ಮನೆಗೆ ಕರೆದುಕೊಂಡು ಬರಲು ಬರುತ್ತಿರುವುದಾಗಿ ಹೇಳಿದ.


ಆಸರೆ ಅನಿವಾರ್ಯತೆಗಲ್ಲ, ಸ್ವಾರ್ಥಕ್ಕೂ ಅಲ್ಲ.. ನಿಸ್ವಾರ್ಥ ಪ್ರೀತಿಯಿಂದ ಆಸರೆ ನೀಡಿದರೆ ಅದರ ನೆಳಲಿನ ನೆಮ್ಮದಿಯೇ ಬೇರೆ..


~ವಿಭಾ ವಿಶ್ವನಾಥ್

ಸ್ವಾತಂತ್ರ್ಯದ ಕಾಣಿಕೆ (ಬೆಳಕಿಂಡಿಯ ಕತೆಗಳು - 6)


ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ನನ್ನ ಕಡೆಯಿಂದ ಇದೊಂದು ಪುಟ್ಟ ಕಾಣಿಕೆ. ನೋಡಿಲ್ಲಿ.. ಎನ್ನುತ್ತಾ ಅವನು ಕೊಟ್ಟ ಕಾಣಿಕೆಯನ್ನು ನೋಡಿದೆ. 

ಅರೆ..! ಲವ್ ಬರ್ಡ್ಸ್ 

ಆದರೆ, ಅವುಗಳು ಪಂಜರದ ಬಂಧಿಗಳು


ಕಾಣಿಕೆಯ ರೂಪದಲ್ಲಿ ಕೊಟ್ಟ ಅವುಗಳನ್ನು ಕಂಡ ಆ ಕ್ಷಣಕ್ಕೆ ಮನಸ್ಸು ಮುದಗೊಂಡಿತ್ತು. ಅವುಗಳಿಗೂ ಏನಾದರೂ ಕೊಡಬೇಕೆನಿಸಿತು. ಪಂಜರದ ಬಾಗಿಲು ತೆಗೆದಿಟ್ಟೆ.

ಸ್ವತಂತ್ರದ ಕಾಣಿಕೆಯನ್ನು ಮನಸಾರೆ ಅನುಭವಿಸುತ್ತಿದ್ದವು ಅವು.. ನನ್ನ ನನಸಾಗದ ಕನಸನ್ನು..


~ ವಿಭಾ ವಿಶ್ವನಾಥ್

ಅಲ್ಪಾಯುಷಿ (ಬೆಳಕಿಂಡಿಯ ಕತೆಗಳು - 5)


ಪ್ರೀತಿಯ ಉಡುಗೊರೆ ಏನು ಬೇಕೆಂದು ಕೇಳಿದ್ದೇ ತಡ ಅದಕ್ಕೇ ಕಾಯುತ್ತಿದ್ದವಳ ಹಾಗೆ ಪಾರಿಜಾತದ ಗಿಡ ಎಂದೆ.. 

ಅವನು ಆ ಆಸೆಯನ್ನು ನೆರವೇರಿಸಿದ. ನಾನು ಕೇಳಿದ್ದು ನನಗೆ ದಕ್ಕಿಯೂ ದಕ್ಕದಂತಾಯಿತು..

ಥೇಟ್ ರುಕ್ಮಿಣಿಯ ಬದುಕಿನಂತೆಯೇ ಆಯಿತಲ್ಲ. ದಕ್ಕಿದ್ದು ಗಿಡ ಮಾತ್ರವೇ.. ಹೂವೆಲ್ಲವೂ ಭಾಮೆಯಂತಹಾ ಅವಳ ಪಾಲಿಗೆ..

ಹೀಗೇಕೆಂದು ಕೇಳಿದಾಗ ನೀ ಕೇಳಿದ್ದು ನಿನಗೆ ಸಿಕ್ಕಿತ್ತಲ್ಲ ಎಂದ.. ಬರಿಯ ಪರಿಮಳ ಆಘ್ರಾಣಿಸಿ ಸುಮ್ಮನಿರಲಾಗಲಿಲ್ಲ. ನಮ್ಮ ಪ್ರೀತಿಯೂ ಪಾರಿಜಾತದಷ್ಟೇ ಅಲ್ಪಾಯುಷಿ ಎಂದೆನಿಸಿಬಿಟ್ಟಿತ್ತು.


ಪಾರಿಜಾತದ ಗಿಡವನ್ನು ಪೋಷಿಸುವ ಮನಸ್ಸಾಗಲಿಲ್ಲ.. ಪಾರಿಜಾತದ ಗಿಡ ಒಣಗಿ ಹೋಯಿತು. ಅಂತೆಯೇ, ನಮ್ಮ ನಡುವಿನ ಪ್ರೀತಿಯೂ..


~ವಿಭಾ ವಿಶ್ವನಾಥ್

ಆ ಆರೋಪದಿಂದ.. (ಬೆಳಕಿಂಡಿಯ ಕತೆಗಳು - 4)

ಎಲ್ಲಾ ಆರೋಪಗಳು ಸಹಾ ಶಾಪವೇ ಆಗಿರಬೇಕೆಂದೇನೂ ಇಲ್ಲವಲ್ಲ..  ಕೆಲವೊಮ್ಮೆ ಶಾಪಗಳೂ ಸಹಾ ವರವಾಗಬಲ್ಲವು..!


ಚಿನ್ನದಂತಹಾ ಹುಡುಗಿಯ ಮೇಲೆ ಆರೋಪ ಹೊರಿಸಿದ್ದರಿಂದಲೇ ಗೊತ್ತಾಗಿದ್ದು ಅವಳು ಕೇವಲ ಹೊಳೆಯುವ ರತ್ನದಂತಹವಳಲ್ಲ ಬದಲಿಗೆ ವಜ್ರದಂತಹಾ ನಡತೆ ಉಳ್ಳವಳೆಂದು.. 


~ ವಿಭಾ ವಿಶ್ವನಾಥ್

ಸಂತೃಪ್ತಿ (ಬೆಳಕಿಂಡಿಯ ಕತೆಗಳು - 3)


"ಪುಟ್ಟಿ ಈ ತಿಂಡಿಯನ್ನು ಮರದ ಕೆಳಗೆ ಕೂತಿರೋ ವಯಸ್ಸಾದ ಅಜ್ಜಿಗೆ ಕೊಟ್ಟು ಬಾ.." ಎಂದ ಅನುವಿಗೆ ಮಗಳು ಜಿತು 

"ಅಮ್ಮ, ಅವರು ನಿನಗೆ ಗೊತ್ತಾ..??" ಎಂದು ಕೇಳಿದಳು. 

"ಇಲ್ಲ ಪುಟ್ಟಿ" ಎಂದಾಗ " ಗೊತ್ತಿಲ್ಲದೇ ಇರುವವರಿಗೆ ತಿಂಡಿ ಕೊಟ್ಟರೆ ನಮಗೇನು ಲಾಭ " ಎಂದ ಜಿತುವಿಗೆ


"ಎಲ್ಲಾ ಕೆಲಸವನ್ನು ಲಾಭ ಇಟ್ಟುಕೊಂಡೇ ಮಾಡಲು ಆಗುವುದಿಲ್ಲಮ್ಮ. ಗಿಡದಲ್ಲಿ ಹೂ ಅರಳುವುದರಿಂದ ಅದಕ್ಕೇನೂ ಲಾಭವಿಲ್ಲ. ದಿನಾ ಬೀಸೋ ಗಾಳಿ, ಉದಯಿಸುವ ಸೂರ್ಯ, ಹರಿಯುವ ನೀರು ಇದ್ಯಾವುದೂ ತಮ್ಮ ತಮ್ಮ ಲಾಭಕ್ಕೋಸ್ಕರ ತಾವು ತಮ್ಮ ಕೆಲಸ ಮಾಡುವುದಿಲ್ಲ. ಅವುಗಳಿಂದ ನಮಗೆ ಉಪಯೋಗ ಅಷ್ಟೇ..

ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ.. ನಮ್ಮ ಕೆಲಸವನ್ನು ನಾವು ಮಾಡಬೇಕು. ಯಾವುದೇ ಲಾಭ-ನಷ್ಟದ ಆಲೋಚನೆ ಮಾಡಬಾರದು" ಎಂದಾಗ ಜಿತು ಅರ್ಥವಾದಂತೆ ಹೋಗಿ ಅಜ್ಜಿಗೆ ತಿಂಡಿ ಕೊಟ್ಟಾಗ.."ನೂರು ಕಾಲ ಸುಖವಾಗಿರಮ್ಮ" ಎಂದು ಆಶೀರ್ವಾದ ಮಾಡಿದ ಅಜ್ಜಿಯನ್ನು ಕಂಡು ಜಿತುವಿನ ಮನದಲ್ಲಿ ಸಂತೃಪ್ತಿಯ ಭಾವ.


~ವಿಭಾ ವಿಶ್ವನಾಥ್ 

ಲಾಭವಿಲ್ಲದ ಕಾಯಕ (ಬೆಳಕಿಂಡಿಯ ಕತೆಗಳು - 2)


ಎಲ್ಲಾ ಕೆಲಸಗಳನ್ನೂ ಲಾಭವಿಲ್ಲದೆ ಮಾಡುತ್ತಿದ್ದ ಅವನು ಇತ್ತೀಚೆಗೆ ಒಂದು ಕೆಲಸವನ್ನು ಪ್ರತಿಫಲ ಬಯಸದೆಯೂ ಮಾಡುತ್ತಿದ್ದಾನೆ. ಅದೇ, ಒಲವ ಹಂಚುವ, ಮಾನವೀಯತೆಯನ್ನು ಪಸರಿಸುವ ಕಾಯಕ. 


ಒಂದು ತಿಂಗಳ ಹಿಂದಷ್ಟೇ ತೀರಿ ಹೋದ ಅಮ್ಮನ ಕಾಯಕವನ್ನು ಮುಂದುವರಿಸುತ್ತಿದ್ದಾನೆ. ಅಮ್ಮ ಇದ್ದಾಗಲೆಲ್ಲಾ ಲಾಭವಿಲ್ಲದ ಈ ಕಾಯಕವನ್ನು ದೂಷಿಸುತ್ತಿದ್ದವನ ಹಠಾತ್ ಬದಲಾವಣೆಗೆ ಕಾರಣ ಅಮ್ಮನ ಡೈರಿ. ಆ ಡೈರಿ ಹೇಳಿತ್ತು ಅಮ್ಮ ಕೂಡಾ ತೊಟ್ಟಿಯಲ್ಲಿ ಬಿದ್ದಿದ್ದ ತನ್ನನ್ನು ಲಾಭವಿಲ್ಲದಿದ್ದರೂ ತಂದು ಪೋಷಿಸಿದ್ದಳೆಂದು.. 


ಈಗ ಎಲ್ಲರಿಗೂ ಹೇಳುತ್ತಿದ್ದಾನೆ. ಪ್ರೀತಿ, ಮಾನವೀಯತೆಗಳ ಪಸರಿಸುವುದು ಲಾಭವಲ್ಲದ ಕಾಯಕವಾದರೂ ಮನಸ್ಸಿಗೆ ಅನಂತ ಸಂತಸವನ್ನು ತಂದುಕೊಡುತ್ತದೆಂದು.. ಪ್ರೀತಿಯಿಂದ ಬದುಕೋಣ, ಪ್ರೀತಿ ಹಂಚುತ್ತಾ ಬದುಕೋಣ..


~ವಿಭಾ ವಿಶ್ವನಾಥ್

ಸಿಹಿ-ಕಹಿ (ಬೆಳಕಿಂಡಿಯ ಕತೆಗಳು - 1)


ಸಿಹಿ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸವಿಯಾದ ಮಾತಿನಿಂದ ತಿದ್ದಲು ಬಯಸಿದ ಸಿಹಿನುಡಿಯ ಸೊಸೆಯನ್ನು ದೂಷಿಸಿದವವರೇ ಕಹಿ ಮಾತಲ್ಲಿ ಹೇಳಿದ ಮಗಳನ್ನು ಆರೋಗ್ಯದ ಕಾಳಜಿ ಮಾಡುತ್ತಿದ್ದಾಳೆಂದು ಹೊಗಳುತ್ತಿದ್ದಾರೆ


~ ವಿಭಾ ವಿಶ್ವನಾಥ್

ಅವಳು ಪ್ರಕೃತಿ.. ಅವಳು ಹೆಣ್ಣು..! (ಅವಳ ಕವಿತೆಗಳು - 22)


ಅವನ ಸೊಕ್ಕು ಮಿತಿ ಮೀರಿದಾಗ

ಧಿಮಾಕಿಗೆ, ದುರಹಂಕಾರಕ್ಕೆ

ಮೊದಲಿಗೆ ಕನಲುತ್ತಾಳೆ

ನಂತರ ಮೈಕೊಡವಿ ನಿಲ್ಲುತ್ತಾಳೆ

ಮುಂದೆ ಎಚ್ಚರಿಸುತ್ತಾಳೆ 

ತದನಂತರ ಹೂಂಕರಿಸುತ್ತಾಳೆ

ರೌದ್ರ ರೂಪಿಯಾಗುತ್ತಾಳೆ 

ಯಾವುದಕ್ಕೂ ಬಗ್ಗದಿದ್ದಾಗ 

ಕೊನೆಯ ಹಂತ ಸರ್ವನಾಶವೇ..!

ಅವಳು ಪ್ರಕೃತಿ.. 

ಅವಳು ಹೆಣ್ಣು..!


~ವಿಭಾ ವಿಶ್ವನಾಥ್

ಅವಳು ಮತ್ತು ಕಡಲು (ಅವಳ ಕವಿತೆಗಳು - 21)


ದಡದಲ್ಲಿ ನಿಂತು ದೃಷ್ಟಿಸುತ್ತಾ

ಕಡಲನ್ನೇ ಕನ್ನಡಿಯಾಗಿಸಿಕೊಂಡು

ಭಾವಗಳಲ್ಲಿ ಮಿಂದೇಳುತ್ತಾಳೆ ಅವಳು

ಹೆಚ್ಚಿನ ವ್ಯತ್ಯಾಸವಿಲ್ಲ ಇಬ್ಬರಲ್ಲೂ


ಅವಳ ಭಾವಗಳು ಹುಚ್ಚೇರಿದಾಗ 

ಕಡಲಲ್ಲಿ ಭರತದ ಧಾವಂತ

ಅವಳು ಸಮಾಧಾನಿಸಿಕೊಳ್ಳುತ್ತಿದ್ದಂತೆ

ಕಡಲಲ್ಲಿ ಇಳಿತದ ಮಂದಗಮನ


ಅಲೆಗಳ ನಾದಕ್ಕೆ ಮರುಳಾಗುತ್ತಾಳೆ 

ತೆರೆಗಳ ಅಬ್ಬರಕ್ಕೆ ಕಿವಿಯಾಗುತ್ತಾಳೆ 

ಮೇಲೆ ಅಬ್ಬರಿಸಿದರೂ ಒಳಗೆ ಶಾಂತವಿರುವ ಕಡಲು 

ಒಳಗೆ ತುಮುಲವಿದ್ದರೂ ಹೊರಗೆ ಶಾಂತವಿರುವ ಅವಳು


~ವಿಭಾ ವಿಶ್ವನಾಥ್