ಭಾನುವಾರ, ಆಗಸ್ಟ್ 16, 2026

ಆಕೆ ಹೇಳಿದ್ದು ಒಂದೇ ಸುಳ್ಳು

 


"ಯಾವಾಗಲೂ ನನ್ನ ಮಗಳು ಸತ್ಯವನ್ನೇ ಹೇಳುತ್ತಾಳೆ ಅಂತಾ ಅಂದುಕೊಂಡಿದ್ದೆನಲ್ಲಮ್ಮ. ಈಗ ಏನು ಆಗಿ ಹೋಗಿದೆ ನೋಡು. ಯಾವಾಗಲೂ ನಿಜ ಹೇಳುತ್ತಾ ಇದ್ದವಳು ಇದೊಂದು ಸುಳ್ಳನ್ನು ಯಾಕೆ ಹೇಳಿದೆಯಮ್ಮಾ.. ಮಾತಾಡು ತಾಯಿ ಮಾತಾಡು..." ಎನ್ನುತ್ತಾ ಸರಸ್ವತಿಯ ಅಪ್ಪ ಮಾತನಾಡಿಸುತ್ತಿದ್ದರೆ ಮಾತನಾಡದೆ ಮಲಗಿದ್ದಳು ಮಗಳು.


"ಯಾವಾಗಲೂ ಕೇಳುತ್ತಾ ಇದ್ದೆಯಲ್ಲಮ್ಮ.. ಅಪ್ಪ, ಸುಳ್ಳು ಹೇಳಿದ್ರೆ ಪಾಪ ಬರುತ್ತೆ. ಆದರೆ, ಒಳ್ಳೆಯದಕ್ಕಾಗಿ ಮತ್ತೆ ಇನ್ನೊಬ್ಬರ ಸಂತೋಷಕ್ಕಾಗಿ ನಿಜ ಹೇಳಿದರೆ ಆ ಪಾಪ ಪುಣ್ಯದ ಲೆಕ್ಕದಲ್ಲಿ ತೊಳೆದು ಹೋಗುತ್ತಂತೆ. ಹೌದಾ..?? ಅಂತಾ


ನಾನು ಹೌದು ಅನ್ನಬಾರದಿತ್ತು. ಬಹುಶಃ, ನಾನವತ್ತು ಸುಳ್ಳು ಹೇಳಿದ ಪಾಪ ಪಾಪವೇ.. ಅಂತಾ ಅಂದಿದ್ದರೆ ನೀನು ಸುಳ್ಳು ಹೇಳುವ ಧೈರ್ಯ ಮಾಡುತ್ತಾ ಇರಲಿಲ್ಲ ಅನ್ನಿಸುತ್ತೇನೋ ಅಲ್ಲವಾ ಸರಸು. ನಾನೇ ನಿನಗೆ ಸುಳ್ಳು ಹೇಳುವಂತೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿಬಿಟ್ಟೆ ಅನ್ನಿಸುತ್ತೆ. ಅಲ್ವಾ.. ಈ ಪಾಪಿ ಅಪ್ಪನಿಗಾಗಿ, ಇಂದೋ ನಾಳೆಯೋ ಬಿದ್ದು ಹೋಗುವ ಮರಕ್ಕಾಗಿ ಯಾಕಮ್ಮಾ ನಿನ್ನ ಜೀವನವನ್ನು ನೀನು ಕೈಯ್ಯಾರೆ ಹಾಳು ಮಾಡಿಕೊಂಡೆ ? ಹೇಳು ಸರಸು ಹೇಳು.." ಎನ್ನುತ್ತಿದ್ದರೆ ಅಲ್ಲಿದ್ದ ಎಂಥಹವರಿಗಾದರೂ ಕರುಳು ಕಿತ್ತು ಬರುತ್ತಿತ್ತು.


"ನೀನು ಸುಳ್ಳು ಹೇಳಿದ್ದಿಯ.. ನೀನು ನನಗೆ ಮುಖ ತೋರಿಸಬೇಡ. ಇಲ್ಲಿಂದ ಎದ್ದು ಎಲ್ಲಿಗಾದರೂ ಹೋಗು.. ಹೋಗು.. ಬೇಡ ಬಿಡು.. ನಾನೇ ಹೋಗ್ತೀನಿ." ಎಂದು ಹುಚ್ಚು ಹಿಡಿದವನಂತೆ ಮಾತನಾಡುತ್ತಿದ್ದ ಪಾಪಯ್ಯ.


ಪಾಪಯ್ಯನ ಹೆಂಡತಿ ಸರಸ್ವತಿ ಜನ್ಮ ನೀಡಿ ತೀರಿ ಹೋಗಿದ್ದಳು. ಅದಾದ ನಂತರ ಪಾಪಯ್ಯನಿಗೆ ಸರಸ್ವತಿ.. ಸರಸ್ವತಿಗೆ ಪಾಪಯ್ಯ. ಇಷ್ಟೇ ಅವರ ಲೋಕ. ಮಗಳಿಗೆ ಕಷ್ಟವಾಗಬಾರದೆಂದು ಅವಳಿಗೆ ಮಲತಾಯಿಯನ್ನು ತಾರದೆ ತಾನೇ ತಂದೆ - ತಾಯಿ ಎರಡೂ ಆಗಿ ಅವಳನ್ನು ಸಾಕುತ್ತಿದ್ದ. ಸರಸ್ವತಿಗೂ ಅಷ್ಟೇ ಅಪ್ಪನೆಂದರೆ ಎಲ್ಲಿಲ್ಲದ ಮಮತೆ. ಅಪ್ಪನೆಂದರೆ ಸಾಕು ಜೀವ ಬಿಡಲೂ ಸಿದ್ದವಿದ್ದಳು. ಹೀಗಿದ್ದ ಇಬ್ಬರ ಬಾಂಧವ್ಯ ಇಡೀ ಹಳ್ಳಿಯೇ ಕೊಂಡಾಡುವಂತಿತ್ತು.


ಎಲ್ಲಾ ಮನೆಯ ಹೆಣ್ಣು ಮಕ್ಕಳೂ ತವರಿನಿಂದ ದೂರವಾಗುವ ಸಂಧರ್ಭ ಇರುವ ಹಾಗೆ ಸರಸ್ವತಿಗೂ ಆಗಿತ್ತು. ಪಾಪಯ್ಯನೇ ಮಗಳಿಗೆ ಒದಗಿ ಬಂದ ಪಟ್ಟಣದ ಗಂಡು ಒಪ್ಪಿದ್ದ. ಒಬ್ಬನೇ ಮಗ.. ಓದಿದ್ದ, ಒಳ್ಳೆಯ ಕೆಲಸದಲ್ಲಿದ್ದ. ಪಾಪಯ್ಯ ಹಿಂದೆ ಮುಂದೆ ನೋಡದೆ ಒಪ್ಪಿ ಮಗಳನ್ನು ಕೊಟ್ಟಿದ್ದ. ಸರಸ್ವತಿಯ ರೂಪ ಹಾಗೂ ಗುಣ ನೋಡಿದ್ದ ಅವರೂ ನಿರಾಕರಿಸಲಿಲ್ಲ.


ಮನಸ್ಸಿಲ್ಲದ ಮನಸ್ಸಲ್ಲಿ ಸರಸ್ವತಿ ಮದುವೆಯಾಗಿ ಹೊರಟಳು. ಆನಂತರ ತಿಳಿದು ಬಂದಿತ್ತು ಅವರ ಯೋಗ್ಯತೆ. ಮನೆಯಲ್ಲಿ ಅವಳು ಕೆಲಸದ ಆಳಿಗಿಂತಲೂ ಕಡೆ. ಕೂರಲು, ನಿಲ್ಲಲು ಮನೆಯಲ್ಲಿ ಮತ್ತೊಬ್ಬರ ಅನುಮತಿ ಪಡೆಯಬೇಕಿತ್ತು. ಗಂಡನೋ ಅನುಮಾನದ ಪಿಶಾಚಿ.


ಅಪ್ಪನ ಕರೆ ಬಂದಾಗಲೆಲ್ಲಾ ಸರಸ್ವತಿ "ನಾನಿಲ್ಲಿ ಸುಖವಾಗಿದ್ದೇನೆ ಅಪ್ಪ. "

"ಹೋ.. ಇಲ್ಲಿ ಇವರೆಲ್ಲಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ" ಎಂದು ಹೇಳುತ್ತಿದ್ದಳು.


ಪತ್ರದಲ್ಲಿಯೂ "ನಾನಿಲ್ಲಿ ಕ್ಷೇಮ. ನೀವು.. " ಅಷ್ಟೇ..


ಅಪ್ಪನ ಮನಸ್ಸಿಗೆ ನೋವಾಗಬಾರದೆಂದು ಒಂದೇ ಸುಳ್ಳನ್ನು ವಿಧವಿಧವಾಗಿ ಆಗಾಗ ಹೇಳುತ್ತಿದ್ದಳು.


ಹಳ್ಳಿಯವರಾರೋ ಒಂದೆರಡು ಬಾರಿ ಸರಸ್ವತಿಯ ನಿಜ ಬದುಕನ್ನು ನೋಡಿ ಪಾಪಯ್ಯನಿಗೆ ಹೇಳಿದಾಗ ಅವನು ನಂಬಿರಲಿಲ್ಲ. ಅವನು ಹೋದಾಗ ಅಲ್ಲಿ ಅಂತಹದ್ದೇನೂ ಕಂಡಿರಲಿಲ್ಲ. ಸರಸ್ವತಿ ಕೂಡಾ ಅದೇ ಸುಳ್ಳನ್ನು ಚರ್ವಿತ ಚರ್ವಣದಂತೆ ಹೇಳಿದ್ದಳು. ಇಳಿದು ಹೋದ ಮಗಳನ್ನು ಕಂಡಾಗಲೂ ಅವಳು ಹೇಳಿದ್ದನ್ನು ನಂಬಿ ನನ್ನ ಮಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ ಎಂದು ಬಂದಿದ್ದನು. ಆದರೆ.. ಮಗಳು ಮನೆಗೆ ಬಂದದ್ದು ಹೆಣವಾಗಿಯೇ.. ಬೆಂಕಿ ಹಚ್ಚಿ ಕೊಂದಿದ್ದರು. ಬಹುಶಃ , ಅರೆ ಜೀವವಾಗಿದ್ದರೂ ಆಕೆ ಅಪ್ಪನ ನೆಮ್ಮದಿಗೆ ಅದೇ ಸುಳ್ಳನ್ನೇ ಹೇಳುತ್ತಿದ್ದಳೋ ಏನೋ..


"ಅವಳು ಹೇಳಿದ್ದು ಒಂದೇ ಸುಳ್ಳು. ಸಾಯುವವರೆಗೂ ಆಕೆಯಾಡಿದ್ದು ಒಂದೇ ಸುಳ್ಳು" ಎನ್ನುತ್ತಾ ಮನೆಮನೆಗೂ ಹೋಗಿ ಹೇಳುತ್ತಾ ಸರಸ್ವತಿಯನ್ನು ನೆನೆದು ಕಣ್ಣೀರು ಹಾಕಿಕೊಂಡೇ ಹುಚ್ಚನಂತೆ ತಿರುಗುತ್ತಿದ್ದಾನೆ ಪಾಪಯ್ಯ.


~ವಿಭಾ ವಿಶ್ವನಾಥ್


ಶನಿವಾರ, ಆಗಸ್ಟ್ 15, 2026

ಕಥೆ ಹೇಳುವ ಮುನ್ನ..


"ಇಲ್ಲಿ ನೆರೆದಿರುವ ಎಷ್ಟು ಜನ ಕಥೆ ಕೇಳಲು ಸಿದ್ದರಾಗಿದ್ದೀರಿ..?" ಎಂಬ ಶಾರ್ವರಿಯ ಮಾತಿಗೆ ಸಭಾಂಗಣದಲ್ಲಿದ್ದ ಎಲ್ಲರೂ ಕೈ ಎತ್ತಿದ್ದರು. ಆದರೆ, ಒಬ್ಬನ ಹೊರತಾಗಿ. "ನೀವಿನ್ನೂ ಕತೆ ಕೇಳಲು ಸಿದ್ಧವಾಗಿಲ್ಲವಾ.. ಅಥವಾ ಕತೆ ಆಸಕ್ತಿಯೇ ಇಲ್ಲದೆ ಸುಮ್ಮನೆ ಟೈಮ್ ಪಾಸ್ ಗೆ ಎಂದು ಬಂದಿದ್ದೀರಾ..??" ಎಂದು ಆಕೆ ಪ್ರಶ್ನಿಸಿದಾಗ ಎಲ್ಲರೂ ಯಾರಿಗೆ ಎಂದು ಸುತ್ತ ಮುತ್ತ ಹುಡುಕುತ್ತಿದ್ದರು.


"ರೀ, ಮಿಸ್ಟರ್ ನಿಮ್ಮನ್ನೇ.. ಕೈ ಎತ್ತದ ನಿಮ್ಮನ್ನೇ ನಾನು ಕೇಳುತ್ತಾ ಇರುವುದು" ಎಂದಾಗ ಪ್ರದ್ಯುಮ್ನ ಎದ್ದು ನಿಂತು ಖ್ಯಾತ ಕಥೆಗಾರ್ತಿ ಶಾರ್ವರಿಗೆ ಕೇಳಿದ ಮೊದಲ ಪ್ರಶ್ನೆ "ನಾನ್ಯಾಕೆ ನಿಮ್ಮ ಕಥೆ ಕೇಳಬೇಕು ? ಅಷ್ಟಕ್ಕೂ ಕಥೆ ಕೇಳಲು ಆಸಕ್ತಿ ಇದೆಯಾ ಎಂದು ಪ್ರಶ್ನಿಸುವ ಬದಲಾಗಿ, ಕಥೆ ಹೇಳುತ್ತಾ ಕೇಳುಗರಲ್ಲಿ ಆಸಕ್ತಿ ಹುಟ್ಟಿಸಬೇಕೇ ಹೊರತು ಆಸಕ್ತಿ ಇರುವವರಿಗೆ ಮಾತ್ರ ಕತೆ ಹೇಳುವುದಲ್ಲ.. ಹಾಗಾದಲ್ಲಿ ನೀವು ಹೇಳುವ ಕತೆ ಎಷ್ಟು ಜನರಿಗೆ ತಲುಪಲು ಸಾಧ್ಯ..?" ಎಂದು ಪ್ರಶ್ನೆಯ ಸರಮಾಲೆಯನ್ನೇ ಶಾರ್ವರಿಯ ಎದುರಿಗಿಟ್ಟನು. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಆತನ ತಾಯಿ ಆತನ ಕೈ ಜಗ್ಗಿಸಿ ನಿಲ್ಲಿಸು.. ನಿಲ್ಲಿಸು ಎಂಬಂತೆ ಸನ್ನೆ ಮಾಡುತ್ತಿದ್ದರೂ ಆತ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ತನ್ನ ಪ್ರಶ್ನೆಗಳನ್ನೇ ಮುಂದುವರಿಸುತ್ತಿದ್ದುದನ್ನು ಕಂಡು ಕೊನೆಗೆ ಅವರೇ ಎದ್ದು ನಿಂತು ಆತನನ್ನು ತಡೆದರು.


"ಸ್ಸಾರಿ, ಅವನು ಸ್ವಲ್ಪ ಹೀಗೆಯೇ.. ಎಲ್ಲಿ ಹೋದರೂ ಹೀಗೆಯೇ ಅಧಿಕ ಪ್ರಸಂಗ ಮಾಡಿ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಾನೆ. ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ 100 ನೇ ಪುಸ್ತಕದ ಬಿಡುಗಡೆಗೆ ನಿಮ್ಮನ್ನು ನೋಡಿ ಮಾತನಾಡಿಸಲು ಬಹಳ ಕಾತುರಳಾಗಿದ್ದೆ. ಒಬ್ಬಳನ್ನೇ ಕಳುಹಿಸಲು ಇಷ್ಟ ಪಡದ ಅವನೂ ನನ್ನೊಡನೆ ಬಂದಿದ್ದಾನೆ. ಅವನಿಗೆ ಕತೆಗಳೆಂದರೆ ಅಷ್ಟಕ್ಕಷ್ಟೇ.. " ಎಂದು ಅವನಮ್ಮ ಹೇಳಿದಾಗ ಶಾರ್ವರಿಯವರು ನಗುತ್ತಾ "ತೊಂದರೆಯಿಲ್ಲ.. ನನ್ನ ಬದುಕಿನ ಅನುಭವದಷ್ಟು ಅವನಿಗೆ ವಯಸ್ಸಾಗಿಲ್ಲ. ಆದರೆ, ಹಾಗೆಂದು ಅವನ ಪ್ರಶ್ನೆಯನ್ನು ಸುಮ್ಮನೆ ನಿರಾಕರಿಸಲು ಅಥವಾ ಪಕ್ಕಕ್ಕಿಡಲು ಸಾಧ್ಯವಿಲ್ಲ. ಅವನ ಮಾತಿನಲ್ಲಿ ತಪ್ಪು ಕಾಣುತ್ತಿಲ್ಲ. ಬದಲಾಗಿ ಅವನ ಕುತೂಹಲ ಕಾಣುತ್ತಿದೆ. ಅದಕ್ಕೆ ಉತ್ತರಿಸುವೆ" ಎನ್ನುತ್ತಾ ತಮ್ಮ ಆಲೋಚನೆ ಹಾಗೂ ವಯಸ್ಸಿನ ಪ್ರಬುದ್ಧತೆಯನ್ನು ತಮ್ಮ ಮಾತುಗಳ ಮೂಲಕ ತೋರಿದರು.




ಅದಾದ ನಂತರ ತಮ್ಮ ಮಾತುಗಳನ್ನು ಶುರು ಮಾಡಿದರು. " ಕತೆ ಬದುಕಿನಲ್ಲಿ ಯಾಕಷ್ಟು ಮುಖ್ಯವಾಗುತ್ತದೆ ಎನ್ನುವುದಕ್ಕಿಂತ ನಮಗೆ ಕತೆಗಳೆಂದರೆ ಏಕೆ ಆಸಕ್ತಿ ಗೊತ್ತೇ..??


ನಮ್ಮದೇ ಬದುಕನ್ನು ಬೇರೆಯವರ ಕನ್ನಡಕದಲ್ಲಿ ಕಂಡರೆ ಅಥವಾ ನಾವು ನಮ್ಮ ಕಣ್ಣಿನ ಮೂಲಕ ಬೇರೆಯವರ ಬದುಕನ್ನು ಕಂಡರೆ ಕೆಲವು ಬಣ್ಣ ಬಣ್ಣದ ಬದುಕುಗಳು ಕಾಣುತ್ತವೆ. ಬೇರೆಯವರ ಬದುಕುಗಳು ಕತೆಗಳಾದಾಗ ಅವು ರುಚಿಕಟ್ಟಾದ ಭೋಜನದಂತೆ ಭಾಸವಾಗುತ್ತವೆ. ದಿನಾ ಅದೇ ಅನ್ನ, ಸಾರು ತಿನ್ನುವವರಿಗೆ ಮಸಾಲೆ ದೋಸೆ ಕಂಡಾಗ ಹೇಗೆ ಮನಸ್ಸು ಅದನ್ನೇ ಬಯಸುವುದೋ.. ಹಾಗೆ ನಮ್ಮ ಬದುಕಿನಲ್ಲಿ ಇಲ್ಲದ್ದನ್ನು ಹಾಗೆಯೇ ನಾವು ಬದುಕಬೇಕು ಎನ್ನಿಸಿದ್ದನ್ನು ಕತೆಯಲ್ಲಿ ಕಂಡು ಅಲ್ಲಿ ನಮ್ಮನ್ನೇ ನಾವು ಕಲ್ಪಿಸಿಕೊಳ್ಳುತ್ತಾ ಹೋಗುತ್ತೇವೆ. ಆಗ ಕತೆಗಳು ನಮ್ಮ ಕನಸಿನ ಬದುಕಾಗುತ್ತವೆ. ವಾಸ್ತವಕ್ಕಿಂತ ಕಲ್ಪನೆಗಳು, ಕತೆಗಳು ವರ್ಣರಂಜಿತವಾಗಿ ತೋರುತ್ತವೆ. ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ. ಕೆಲವರು ತಮ್ಮ ಕಲ್ಪನೆಗಳಿಗೆ ಗರಿ ಹಚ್ಚಿ ಕತೆಗಳನ್ನು ಕಟ್ಟುತ್ತಾ.. ಹೇಳುತ್ತಾ.. ಬರೆಯುತ್ತಾ ಹೋದರೆ, ಹಲವರು ಅವುಗಳನ್ನು ಕಂಡು, ಕೇಳಿ, ಓದಿ ಕಲ್ಪನೆಗಳನ್ನು ಗರಿಗೆದರಿಸಿಕೊಳ್ಳುತ್ತಾರೆ.


ಪ್ರತಿಯೊಬ್ಬನೊಳಗೂ ಒಂದು ಕತೆ ಇರುತ್ತದೆ. ಆ ಕತೆ ಅವರಿಂದ ಬಿಡುಗಡೆ ಪಡೆಯುವುದು ಅಥವಾ ಅವಿತು ಕುಳಿತುಕೊಳ್ಳುವುದು ಎರಡಕ್ಕೂ ಅವರವರೇ ಕಾರಣ.


ಇನ್ನು ಕತೆ ಕೇಳುವ ಆಸಕ್ತರಿಗೆ ಮಾತ್ರ ಕತೆ ಹೇಳಬೇಕು ಎಂಬುದು ನನ್ನ ಉದ್ದೇಶವಷ್ಟೇ.. ಏಕೆಂದರೆ, ಆಸಕ್ತಿ ಎಂಬುದು ಇಂದಿಗೂ ಹೊರಗಿನಿಂದ ಹುಟ್ಟುವುದಲ್ಲ. ತಮ್ಮ ಮನಸ್ಸಿನಿಂದ ಮುಡಿಸಿಕೊಳ್ಳದ ಹೊರತು ಯಾವ ಆಸಕ್ತಿಯೂ ತನ್ನಿಂದ ತಾನೇ ಉದ್ಭವಿಸಲಾರದು. ನೀನು ಕತೆ ಕೇಳಲು ಆಸಕ್ತಿ ಇಲ್ಲವೆಂದು ತೋರಿಸಿಕೊಂಡರೂ ನಿನ್ನ ಸುಪ್ತ ಮನಸ್ಸಿನಲ್ಲಿ ಕತೆ ಎಂದರೆ ಹೇಗಿರಬಹುದು.. ಕತೆ ಎಂದರೆ.. ಈ ಕತೆ ಯಾರನ್ನು ನೆನಪಿಸಬಹುದು ಎಂಬುದನ್ನು ಆಲೋಚಿಸುತ್ತಲೇ ಒಲ್ಲದ ಮನಸ್ಸಿನಿಂದ ಕತೆ ಕೇಳಲು ಆರಂಭಿಸಿರುತ್ತೀಯ. ಕತೆ ಓದುವವರಿಗೆ, ಕಥೆ ಕೇಳುವುದು ರುಚಿಸದೇ ಇರಬಹುದು. ಕತೆ ಎಂಬುದು ಎಲ್ಲೆಡೆಯೂ ಇದೆ. ಅದನ್ನು ಕಾಣುವ, ಕೇಳುವ ಮನಸ್ಸಿರಬೇಕಷ್ಟೇ..


ನನ್ನ ಕತೆಗಳು ಎಷ್ಟು ಜನರಿಗೆ ತಲುಪಬಹುದು ಎಂಬುದಕ್ಕಿಂತ ನನಗೆ ಒಂದು ಕತೆ ಒಬ್ಬರ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದನ್ನು ಆಲೋಚಿಸುತ್ತೇನೆ. 100 ಜನ ಕತೆ ಕೇಳಿ, 90 ಜನ ಅದನ್ನು ಮರೆತು ಮುಂದಕ್ಕೆ ಸಾಗುವುದಕ್ಕಿಂತಲೂ.. 10 ಜನ ಕತೆ ಕೇಳಿ 10 ಜನರೂ ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಳ್ಳುವುದೋ ಅಥವಾ ಸಾರ್ಥಕವಾಗಿ ಉಪಯೋಗಿಸುವುದೋ ಮಾಡಿದಾಗ ಅದಕ್ಕೊಂದು ಸಾರ್ಥಕ ಭಾವ ಬರುತ್ತದೆ.


ಕತೆ ಹೊಡೆದಿದ್ದು ಸಾಕು ಇನ್ನು ಕತೆ ಹೇಳಿ ಎಂದು ಬಹಳ ಜನ ಬೈದುಕೊಳ್ಳುತ್ತಿರಬಹುದು. ಕತೆ ಶುರು ಮಾಡೋಣ್ವಾ..? ಎಷ್ಟು ಜನ ಕಥೆ ಕೇಳಲು ಸಿದ್ದರಾಗಿದ್ದೀರಿ..?" ಎಂದಾಗ ಎಲ್ಲರೂ ತಮ್ಮ ಕೈಯೆತ್ತಿದ್ದರು. ಪ್ರದ್ಯುಮ್ನನಂತೂ ತನ್ನ ಎರಡೂ ಕೈಗಳನ್ನು ಮೇಲೆತ್ತಿದ್ದ.


~ವಿಭಾ ವಿಶ್ವನಾಥ್


ನನ್ನ ಮೆಚ್ಚಿನ ಸಾಧಕಿ (ಬೆಳಕಿಂಡಿಯ ಕತೆಗಳು - 71)

 


ಮಹಿಳಾ ದಿನಾಚರಣೆ ಪ್ರಯುಕ್ತ 'ನಿಮ್ಮ ನೆಚ್ಚಿನ ಸಾಧಕಿ' ಯಾರು ಎಂಬ ಪ್ರಶ್ನೆಗೆ ಎಲ್ಲರೂ ಶಾಲೆಯಲ್ಲಿ ವಿವಿಧ ಹೆಸರನ್ನು ಹೇಳತೊಡಗಿದರು ಸರೋಜಿನಿ ನಾಯ್ಡು, ಮಿಶೆಲ್ ಒಬಾಮಾ, ಸೈನಾ ನೆಹ್ವಾಲ್, ಸುಧಾ ಮೂರ್ತಿ, ಹಿಮಾ ದಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಹೆಸರು ಹೇಳಿದರು.


ನನ್ನನ್ನು ಕೇಳಿದಾಗ ನಾನು ಹೇಳಿದ್ದು "ನನ್ನ ಮೆಚ್ಚಿನ ಸಾಧಕಿ ಅಮ್ಮ". ತಮ್ಮ ಮೆಚ್ಚಿನ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಸಾಧಕರು. ಆದರೆ, ಅಂತಹಾ ಸಾಧನೆ ಮಾಡಲು ಪ್ರೇರೇಪಿಸುವವಳು, ಅಂತಹಾ ಹಾದಿಯಲ್ಲಿ ಸಹಕಾರ ನೀಡಿ ಬೆನ್ನೆಲುಬಾಗುವವಳು, ತನ್ನ ಆಸೆಯನ್ನೆಲ್ಲಾ ಬದಿಗೊತ್ತಿ ತಪಸ್ಸಿನಂತೆ ಮಕ್ಕಳ ಒಳಿತಿಗಾಗಿ ಎದುರು ನೋಡುವವಳೂ ಸಾಧಕಿಯೇ.. ಮಕ್ಕಳ ಸಾಧನೆಯ ತಪಸ್ಸಿನ ಸಲುವಾಗಿ ತಾನೇ ಹವಿಸ್ಸಾಗಿ ಸಮರ್ಪಿತವಾಗುವ ಅಮ್ಮನೇ ನಿಜವಾದ ಸಾಧಕಿ. ಈಗ ತರಗತಿಯಲ್ಲಿ ಚಪ್ಪಾಳೆಯ ದನಿ ಮುಗಿಲು ಮುಟ್ಟಿತ್ತು.


~ವಿಭಾ ವಿಶ್ವನಾಥ್

ಮರಳಿ ಮಣ್ಣಿಗೆ.. (ಬೆಳಕಿಂಡಿಯ ಕತೆಗಳು - 70)

 


ಹಳ್ಳಿಯ ಈ ಜೀವನ ನಿನಗೆ ಬೇಡಪ್ಪಾ.. ನಮ್ಮ ತಲೆಮಾರಿಗೇ ಇದು ಸಾಕು ಎನ್ನುತ್ತಾ ಹಳ್ಳಿಯಿಂದ ದೂರವಿಟ್ಟು ಮಗನನ್ನು ಓದಿಸಿದ ರಾಜೀವ. ಈ ಬೆಲೆ ಇಳಿಕೆ, ಹಕ್ಕಿಗಳ ಕಾಟ, ಬೆಳೆದ ಬೆಳೆಗೆ ಸರಿಯಾಗಿ ಸಿಗದ ಮಾರ್ಕೆಟ್ ಇದೆಲ್ಲವೂ ಅವನನ್ನು ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತ್ತು. 


ಆದರೆ, ಅವನ ಮಗ ಜಗದೀಶನಿಗೆ ಯಾವಾಗಲೂ ಮಣ್ಣಿನ ಸೆಳೆತ. ಹಳ್ಳಿಯಲ್ಲಿ ನಾವು ಕಷ್ಟಪಟ್ಟು ದುಡಿದರೆ ಮಾತ್ರ ಎಲ್ಲರೂ ದಿಲ್ಲಿಯಲ್ಲಿ ದರ್ಬಾರ್ ನಡೆಸಲಿಕ್ಕಾಗುವುದು ಎನ್ನುತ್ತಾ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ತಂತ್ರಜ್ಞಾನವನ್ನು ಉಪಯೋಗಿಸಿ ಹಳ್ಳಿಯಲ್ಲಿನ ಎಲ್ಲರಿಗೂ ಕೆಲಸವನ್ನು ಸುಲಭ ಮಾಡಿ ಕೊಟ್ಟ. ಈಗ ರೈತರಿಂದ ನೇರವಾಗಿಯೇ ಬಳಕೆದಾರನಿಗೆ ದೊರೆಯುತ್ತಿದ್ದ ಫಸಲು ದಲ್ಲಾಳಿ ಹಾಗೂ ಬೆಲೆ ಇಳಿಕೆ ಸಮಸ್ಯೆಯನ್ನು ಪರಿಹರಿಸಿತ್ತು. ಸಾವಯವ ಕೃಷಿ ಕೂಡಾ ಲಾಭ ಕಾಣುವಂತೆ ಮಾಡಿತ್ತು. ಮಣ್ಣಿನಿಂದಲೇ ಎಲ್ಲರ ಬೆಳವಣಿಗೆ.. ನಾವೇನೇ ಪಡೆದರೂ ಮರಳಿ ಮಣ್ಣಿಗೇ ಅದನ್ನು ಅರ್ಪಿಸಿದರೆ ಅಭ್ಯುದಯ ಕಾಣಬಹುದು ಎಂದವನ ಮಾತು ಎಲ್ಲರ ಕಣ್ತೆರೆಸಿತ್ತು. ಅಂತೂ ಮರಳಿ ಮಣ್ಣಿಗೆ ಬಂದಿದ್ದ


~ವಿಭಾ ವಿಶ್ವನಾಥ್

ಆಕರ್ಷಕ ಬೆಳವಣಿಗೆ (ಬೆಳಕಿಂಡಿಯ ಕತೆಗಳು - 69)


 ಆಶಾ ಬೇಸಿಗೆ ರಜೆ, ದಸರಾ ರಜೆ ಸಿಕ್ಕಾಗಲೆಲ್ಲಾ ಸಿಟಿಯಲ್ಲಿ ದೊಡ್ಡಮ್ಮನ ಮನೆಗೆ ಹೋಗಿಬಿಡುತ್ತಿದ್ದಳು. ಅಲ್ಲಿನ ಸಮ್ಮರ್ ಕ್ಯಾಂಪ್ ಗೆ ಸೇರಿಕೊಂಡು ಅಲ್ಲಿನ ಮಲ್ಟಿಪ್ಲೆಕ್ಸ್, ಪಿಜ್ಜಾ, ಮಾಲ್ ಗಳಲ್ಲಿ ಸುತ್ತುತ್ತಾ ಅಲ್ಲಿನ ಜನಜೀವನಕ್ಕೆ ಹೊಂದಿಕೊಂಡು ಆಕರ್ಷಿತಳಾಗುತ್ತಿದ್ದರೆ ಆಕೆಯ ದೊಡ್ಡಮ್ಮನ ಮಗಳು ಉಷಾ ಸಿಟಿಯಿಂದ ಹಳ್ಳಿಗೆ ಬಂದು ಅಲ್ಲಿನ ಕೃಷಿ, ಹಸಿರಿನ ಪರಿಸರ, ತೊರೆಯಲ್ಲಿ ಆಟ, ಬೆಟ್ಟ-ಗುಡ್ಡ ಸುತ್ತುತ್ತಾ ರಾಗಿ ಮುದ್ದೆ, ಹಸಿಕಾಳು ಸಾರು, ನೊರೆ ಹಾಲು ಇವುಗಳಲ್ಲಿ ಆಕರ್ಷಣೆ ಕಂಡುಕೊಂಡಿದ್ದಳು.


ಇಬ್ಬರೂ ವಿರುದ್ಧ ಧೃವಗಳತ್ತ ಆಕರ್ಷಣೆ ಹೊಂದುತ್ತಾ ಆಶಾ ಹಳ್ಳಿಯಲ್ಲಿ ಸಿಟಿಯ ಬದುಕನ್ನು ಬದುಕುವ ಕೃತಕ ಪರಿಸರವನ್ನು ರೂಪಿಸಿಕೊಂಡಳು. ಆದರೆ, ಉಷಾ ಸಿಟಿಯಿಂದ ಕೊಂಚ ದೂರದಲ್ಲಿ ಆರ್ಗಾನಿಕ್ ಫಾರ್ಮಿಂಗ್ ಮಾಡುತ್ತಾ ಸಿಟಿ ಮಕ್ಕಳಿಗೆ ಹಳ್ಳಿಯ ವಾತಾವರಣದ ಆಕರ್ಷಣೆ ಮಾಡುತ್ತಾ ಅವರಿಗೆ ಕೃಷಿಯ ಅರಿವು ಮೂಡಿಸುತ್ತಿದ್ದಳು. 


~ವಿಭಾ ವಿಶ್ವನಾಥ್

ನೆಮ್ಮದಿ (ಬೆಳಕಿಂಡಿಯ ಕತೆಗಳು - 68)

 


ಭೂಮಿಕಾ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು, ಹಳ್ಳಿಯ ಪರಿಸರದ ಅರಿವೂ ಇರಲಿಲ್ಲ. ತಂದೆ-ತಾಯಿ ಕೆಲಸ, ಹಣ ಎಂದು ಹೊರಗಡೆಯೇ ಕಾಲ ಕಳೆಯುತ್ತಿರುವಾಗ ಅಜ್ಜಿ ಅವಳಿಗೆ ಅವಳಿಗೆ ಹಳ್ಳಿಯ ಪರಿಸರ ಮತ್ತು ಅನ್ಯೋನ್ಯತೆಯ ಬಗ್ಗೆ ತಿಳಿಸಿ ಅಲ್ಲಿಗೆ ಹೋಗುವ ಆಸೆ ಹುಟ್ಟಿಸಿದ್ದಳು. ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ದುಡಿಯುತ್ತಿದ್ದವಳಿಗೆ ಪ್ರಾಜೆಕ್ಟ್ ಒಂದರ ಮೇಲೆ ಹಳ್ಳಿಗೆ ಹೋಗುವ ಅವಕಾಶ ದೊರೆಯುತ್ತದೆ.

ಹಳ್ಳಿಗೆ ಹೋದವಳಿಗೆ ಅಲ್ಲಿನ ನೀರಿನ ಅಭಾವ, ಶೌಚಾಲಯದ ಕೊರತೆ, ಶಿಕ್ಷಣದ ಪರಿಸ್ಥಿತಿ ಮತ್ತು ಬಡತನದೊಂದಿಗೆ ಅವರ ಹಂಚಿ ತಿನ್ನುವ ಮತ್ತು ಹೊಂದಿ ಬಾಳುವ ಅನ್ಯೋನ್ಯತೆ ಮತ್ತು ಪ್ರೀತಿಯ ಅರಿವೂ ಆಗುತ್ತದೆ. ಪಟ್ಟಣದಲ್ಲಿ ಎಲ್ಲವೂ ಕೊರಗುವ ಮತ್ತು ಹಣದ ಹಿಂದೆ ಬಿದ್ದು ಪ್ರೀತಿಯ ಅರಿವೇ ಇಲ್ಲದ ಬಾಳುತ್ತಿರುವುದರ ಅರಿವಾಗುತ್ತದೆ. ಆದ್ದರಿಂದ ಹಳ್ಳಿಯಲ್ಲೇ ನೆಲೆಸಿ ಅವರ ಸಹಕಾರದೊಂದಿಗೆ ಮೂಲಭೂತ ಸೌಕರ್ಯಗಳನ್ನೆಲ್ಲಾ ಒದಗಿಸಿ ನೆಮ್ಮದಿಯಲ್ಲಿ ಅಲ್ಲೇ ನೆಲೆಸುತ್ತಾಳೆ. ಪಟ್ಟಣದಲ್ಲಿನ ಹಣಕ್ಕಿಂತ, ಹಳ್ಳಿಯಲ್ಲಿನ ಸಹಕಾರ, ಪ್ರೀತಿಯಲ್ಲಿ ನೆಮ್ಮದಿಯಿದೆ ಎಂಬುದನ್ನು ಅರಿಯುತ್ತಾಳೆ.


~ವಿಭಾ ವಿಶ್ವನಾಥ್

ಕೋಗನೂರ ಸ್ವಾತಂತ್ರ್ಯ ಯೋಧರು (ಪುಸ್ತಕ ಯಾನ - 482)


ಮೂಲ ಆಕರದ ಶೀರ್ಷಿಕೆ : ಕೋಗನೂರ ಸ್ವಾತಂತ್ರ್ಯ ಯೋಧರು

ಲೇಖಕರು (ಮೂಲ) : ನಲವಡಿ ಶ್ರೀಕಂಠಶಾಸ್ತ್ರಿಗಳು

ಸಂಪಾದಕರು : ಎಚ್. ಎಸ್. ಕೆಂಗುಡ್ಡಪ್ಪನವರ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು 


ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ದಿಸೆಯಲ್ಲಿ ಹೆಸರೇ ಕೇಳದ ಹಳ್ಳಿಗಳು, ಪುಟ್ಟ ಗ್ರಾಮಗಳ ವೀರರು ತಮ್ಮ ಕೈಲಾದಂತೆ ಸೇವೆ ಸಲ್ಲಿಸಿದ್ದಾರೆ. ದೇಶದಲ್ಲೆಡೆ ಸ್ವಾತಂತ್ರ್ಯದ ಕಿಚ್ಚು ಹರಡಿರುವ ಸಂದರ್ಭದಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೋಗನೂರು ತನ್ನದೇ ವಿಶೇಷ ಛಾಪು ಮೂಡಿಸಿತು. ಪ್ರಮುಖವಾಗಿ ಮೈಲಾರ ಮಹದೇವಪ್ಪನವರು ಹಾಗೂ ಸಹಚರರ ಸಾಹಸಗಾಥೆಯನ್ನು ಹೇಳಬಯಸುವೆ. ಮೈಲಾರ ಮಹದೇವಪ್ಪನವರ ಸಹಚರರಾಗಿ ಅವರೊಡನೆ ಹುತಾತ್ಮರಾದ ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಕೋಗನೂರಿನವರು.


ಕೋಗನೂರಿನ ಗೋಣೆಪ್ಪ ಕಮತ, ಯಲ್ಲವ್ವ ಕಮತ, ಚನ್ನಪ್ಪ ಕೊರಗುಂದ, ನಿಂಗಪ್ಪ ಕೊರಗುಂದ, ನಿಶೀಮಪ್ಪ ಚನ್ನೂರ, ವೀರಭದ್ರಪ್ಪ ಪಾಟೀಲ, ವೀರಭದ್ರಪ್ಪ ಅಂಗಡಿ, ಗುಡ್ಡಪ್ಪ ದೇವಪ್ಪನವರ, ಭಗವಂತಪ್ಪ ಬೂದನೂರ ನೇರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಮಹದೇವಪ್ಪನವರ ನಾಯಕತ್ವದಲ್ಲಿ ಕೋಗನೂರಿನ 18 ಜನರು ಭಾಗವಹಿಸಿ ದೇಶಪ್ರೇಮ ತೋರಿದ ಇತಿಹಾಸ ಸ್ಮರಣೀಯ. 


ಗೋಣೆಪ್ಪ ಕಮತ, ಯಲ್ಲವ್ವ ಕಮತ ಪತಿ-ಪತ್ನಿಯರು. ಬ್ರಿಟಿಷರು ಇವರಿಬ್ಬರನ್ನು ಜೈಲಿಗೆ ಹಾಕಿದ್ದಾಗ ಯಲ್ಲಮ್ಮ ಕಮತನವರು ಜೈಲಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದು ವೀರಯೋಧರ ದೇಶಪ್ರೇಮ ಹೇಗಿತ್ತು ಎಂಬುದರ ಸಾಕ್ಷಿಯಾಗಿದೆ. ಜೊತೆಗೆ ಹೆಣ್ಣು ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದ ಬಗೆ, ಗರ್ಭಿಣಿ ಹೆಣ್ಣು ಮಕ್ಕಳು ಹಿಂಜರಿಯದೆ ಹೋರಾಟದಲ್ಲಿ ಮುನ್ನುಗ್ಗುತ್ತಿದ್ದ ದಿನಗಳು ಭವಿಷ್ಯಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯ ಎಂಬುದರ ಪ್ರತಿಫಲನದಂತಿದೆ.


"ಭಾರತ ದೇಶದ ಬಂಧವಿಮೋಚನೆಗೆ ಭಾರೀ ಕಷ್ಟವ ಸೋಸಿದರು

ತಾರುಣ್ಯವೆಲ್ಲವ ತುರಂಗದಲ್ಲಿ ಕಳೆದು ಮಡಿದ ಮಹಾಶೂರ ಮೈಲಾರರು

ತುಂಟರ ತುಂಟನು, ಭಂಟರ ಭಂಟನು, ಸಾತ್ವಿಕರೊಳಗೆ ಸರದಾರ! 

ದಿಟ್ಟನ ಹೆಸರನ್ನು ಹುಟ್ಟಿದ ಕೂಸಿಗೆ ಇಟ್ಟರೂ ತೀರದು ಉಪಕಾರ!"



1930ರಲ್ಲಿ ನಡೆದ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ ಮೈಲಾರಪ್ಪನವರು ಎಂಬುದು ಹೆಮ್ಮೆಯ ವಿಷಯ. 


ಆಗಿನ ಅವಿಭಾಜಿತ ಧಾರವಾಡ ಜಿಲ್ಲೆ, ಈಗಿನ ಹಾವೇರಿ ಶಿರಹಟ್ಟಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಮಾರ್ತಂಡಪ್ಪ ಮತ್ತು ಬಸಮ್ಮ ದೇಶಪ್ರೇಮಿ ದಂಪತಿಗಳ ಪುತ್ರನೇ ಮಹದೇವಪ್ಪ ಮೈಲಾರ. 1920ರಲ್ಲಿ ಗಾಂಧೀಜಿಯವರು ಧಾರವಾಡಕ್ಕೆ ಆಗಮಿಸಿದಾಗ ಅವರ ಭಾಷಣ ಕೇಳಿ ಪ್ರಭಾವಿತರಾಗಿ ಅಹಿಂಸಾ ತತ್ವವನ್ನು ಅಳವಡಿಸಿಕೊಂಡು 16ನೇ ವರ್ಷದಿಂದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ನಡೆದವರು. 


ಬಿಜಾಪುರ ಜಿಲ್ಲೆಯ ಕಲಾದಗಿ ಗ್ರಾಮದ ಇದಕ್ಕೆ ಹೋಗಿ ಖಾದಿ ಬಟ್ಟೆ ತಯಾರಿಸುವುದು ಹೇಗೆಂದು ತಿಳಿದು ತಾನು ತಯಾರಿಸಿದ ಖಾದಿಯನ್ನು ಊರು ತಿರುಗಿ ಮಾರಾಟ ಮಾಡಿ ಅದರ ಪ್ರಚಾರ ಮಾಡುತ್ತಾರೆ. ಮುಂದೆ ತಮ್ಮ ಪತ್ನಿ ಸಿದ್ದಮ್ಮನವರ ಸಹಾಯದಿಂದ 1936ರಲ್ಲಿ ವರದಾ ನದಿತೀರದ ಕೊರಡೂರ ಗ್ರಾಮದಲ್ಲಿ ಸೇವಾಶ್ರಮವನ್ನು ಪ್ರಾರಂಭಿಸಿ ಅದರ ಸಂಚಾಲಕರಾಗಿ, ಪ್ರಕೃತಿ ಚಿಕಿತ್ಸೆ, ವ್ಯಾಯಾಮದ ಜೊತೆಗೆ ಖಾದಿ ತಯಾರಿಸುತ್ತಾರೆ. ಇದು 'ಮಹಾದೇವನ ಖಾದಿ' ಎಂದೇ ಪ್ರಸಿದ್ಧವಾಗುತ್ತದೆ.


ದಂಡಿ ಉಪ್ಪಿನ ಚಳುವಳಿಯಲ್ಲಿ ಸ್ವತಃ ಗಾಂಧೀಜಿಯವರೇ ನೀನಿನ್ನು ಚಿಕ್ಕವನಿದ್ದೀಯ ಜೊತೆಗೆ ಹುಷಾರಿಲ್ಲದ ಸಂದರ್ಭದಲ್ಲಿ ನಿನ್ನಿಂದ ಆಗುವುದಿಲ್ಲ ಎಂದು ಹೇಳಿ ಹಿಂದೆ ಕಳುಹಿಸಿದರೂ... ಅವರ ಮಾತು ಕೇಳದೆ ಉತ್ಸಾಹದಿಂದ ಭಾಗಿಯಾಗಿ ಗಾಂಧೀಜಿಯವರಿಗೆ ತನ್ನ ಧೈರ್ಯ, ಆತ್ಮಸ್ಥೈರ್ಯ ಎಂತಹದು ಎನ್ನುವುದನ್ನು ತೋರಿದರು. ಆಗಿನ್ನೂ ಅವರಿಗೆ 19 ವರ್ಷ.  ಈ ಸತ್ಯಾಗ್ರಹದಲ್ಲಿ ಬ್ರಿಟಿಷ್ ಅಧಿಕಾರಿಗಳು ಒಂದು ಗೆರೆ ಹಾಕಿ ಯಾರೂ ದಾಟದಂತೆ ಸೂಚನೆ ನೀಡಿದ್ದರಾದರೂ.. ಅದನ್ನು ದಾಟಿ ಅವರ ಕಟ್ಟಳೆಯನ್ನು ಮುರಿದು 6 ತಿಂಗಳ ಜೈಲುವಾಸ ಅನುಭವಿಸಿದ್ದರು.


'ಚಲೇ ಜಾವ್' ಚಳುವಳಿಯ ಅಂಗವಾಗಿ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ನಡೆದು ಚಾವಡಿ ರೈಲ್ವೇ ಸ್ಟೇಷನ್ ಸುಟ್ಟರು. ವಸೂಲಿಯಾದ ಹಫ್ತೆ ಲೂಟಿ ಮಾಡುವುದು ಮಾಡುತ್ತಾರೆ. ಇವರ ನೇತೃತ್ವದಲ್ಲಿ ಮುಂದೆ ಬ್ರಿಟಿಷರ ನೆಲೆಗಳನ್ನು ನಾಶ ಮಾಡುವುದು, ಬ್ರಿಟಿಷರಿಗೆ ಸಂಬಂಧಿಸಿದ ಟಪಾಲುಗಳನ್ನು ಬಸ್ ನಲ್ಲಿ ಸಾಗಿಸುವಾಗ ಅಪಹರಿಸುವುದು ಮಾಡಿ ಬ್ರಿಟಿಷರನ್ನು ಹೈರಾಣಾಗಿಸಿದ್ದರು. ಗಾಂಧಿ ಮಾರ್ಗದ ತಾತ್ವಿಕತೆಯನ್ನೂ.. ಯಾರಿಗೂ ತಲೆಬಾಗದ ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ ಆಜಾದರಂತಹ ದಿಟ್ಟ ಸಂಘರ್ಷದ ಹೋರಾಟವನ್ನು ಜೊತೆಜೊತೆಯಾಗಿಯೇ ನಿರ್ವಹಿಸಿದರು.


1943 ಏಪ್ರಿಲ್ 1ರಂದು ಹೊಸರಿತ್ತಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿಟ್ಟಿದ್ದ, ವಸೂಲಿಯಾದ ಹಣವನ್ನು ಅಪಹರಿಸಲು ಹೋದಾಗ ಪೊಲೀಸರ ಗುಂಡಿಗೆ, ಬ್ರಿಟಿಷರ ಗಾಳಕ್ಕೆ ಬಲಿಯಾದ ಸ್ವಾತಂತ್ರ್ಯ ಹೋರಾಟದ ಹುತಾತ್ಮರಿವರು. ಕೆಲವೆಡೆ ಬ್ರಿಟಿಷರೇ ಹಫ್ತಾ ವಸೂಲಿ ಮಾಡಿದ ಹಣವನ್ನು ಸಂಗ್ರಹಿಸಿಟ್ಟು ನಿಜವಾದ ಅಚ್ಚ ಕನ್ನಡಿಗರಾದರೆ ಆ ಹಣವನ್ನು ಅಪಹರಣ ಮಾಡಿ ಎಂದು ಸವಾಲು ಹಾಕಿದ್ದು ಎಂಬ ಉಲ್ಲೇಖಗಳೂ ಕಾಣಸಿಗುತ್ತವೆ. ಈ ಸವಾಲನ್ನು ಸ್ವೀಕರಿಸಿ ತಂಡವಾಗಿ ಕೆಲಸವನ್ನು ವಿಭಾಗಿಸಿ ತಮ್ಮಲ್ಲಿ ಯಾರು ಸತ್ತರೂ ಈ ಕಾರ್ಯ ನಿಲ್ಲುವಂತಿಲ್ಲ ಎಂದು ಹೇಳಿ ಮುನ್ನಡೆದ ವೀರ ಸೇನಾನಿ ಇವರು. 


ಸಕಾರಾತ್ಮಕ ಅಂಶವೆಂದರೆ ಈ ಮೂವರು ಹುತಾತ್ಮರಾದ ನಂತರವೂ ಹೋರಾಟ ಮುಂದುವರಿಯಿತು. ಮಹಾತ್ಮ ಗಾಂಧೀಜಿಯವರ 75ನೇ ಹುಟ್ಟು ಹಬ್ಬದ ಅಂಗವಾಗಿ 75 ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರ ತಂಡದ 75 ನೇ ಕಾರ್ಯಕ್ರಮ ಇದಾಗಿತ್ತು. 


ಕೋಗನೂರು ಸ್ವಾತಂತ್ರ್ಯ ಯೋಧರು ನಾಟಕದ ರೂಪದಲ್ಲಿದೆ. ಈ ಎಲ್ಲಾ ಅಂಶಗಳ ಜೊತೆಗೆ ಇನ್ನೂ ಹಲವು ವಿಶೇಷ ಅಂಶಗಳನ್ನು ಈ ಪುಸ್ತಕದಲ್ಲಿ ನಾವು ಕಾಣಬಹುದಾಗಿದೆ. ಇಲ್ಲಿ ಸ್ವಾತಂತ್ರ್ಯ ಪ್ರೇಮ, ಜಾತೀಯತೆ ನಿರ್ಮೂಲನೆ, ಕರ್ನಾಟಕ ಏಕೀಕರಣ ಜೊತೆಗೆ ಕೋಮು ಸಾಮರಸ್ಯವನ್ನು ಬಿಂಬಿಸಿದ್ದಾರೆ.


1954ರಲ್ಲಿ ಮೂರು ತಿಂಗಳು ನಲವಡಿ ಶ್ರೀಕಂಠಶಾಸ್ತ್ರಿಗಳು ಕೋಗನೂರಿನಲ್ಲಿ ತಂಗಿದ್ದರು. ಇದಕ್ಕೆ ಕಾರಣ ಕೋಗನೂರಿನ ಗೋಣೆಪ್ಪ ಕಮತ ಹಾಗೂ ಅವರ ಆತ್ಮೀಯರಾದ ಗುಡ್ಡೆಪ್ಪ ಡಿಳ್ಳೆಪ್ಪ. ಗೋಣೆಪ್ಪನವರು ಮಹದೇವರ ಆತ್ಮೀಯರು ಹಾಗೂ ಹೊಸರಿತ್ತಿಯ ಗೋಲಿಬಾರ್ ನಲ್ಲಿ ತಮ್ಮ ಮೂವರು ಆತ್ಮೀಯರ ಜೊತೆಗೆ ಬಲಗೈ ನಡುವಿನ ಮೂರು ಬೆರಳನ್ನು ಕಳೆದುಕೊಂಡಿದ್ದವರು. ತಮ್ಮ ಹಾಗೂ ಸಹಚರರ ಹೋರಾಟವನ್ನು ರಂಗಕ್ಕೆ ಅಳವಡಿಸುವ ಆಶಯದಿಂದ ಸ್ವಾತಂತ್ರ್ಯ ಪ್ರೇಮಿಗಳು ಹಾಗೂ ಖ್ಯಾತ ನಾಟಕಕಾರರೂ ಆಗಿದ್ದ ಶ್ರೀ ನಲವಡಿ ಶ್ರೀಕಂಠಶಾಸ್ತ್ರಿಗಳನ್ನು ಸಂಪರ್ಕಿಸಿ ಕೋಗನೂರಿನಲ್ಲಿ ತಂಗಲು ಅನುವು ಮಾಡಿಕೊಟ್ಟಿದ್ದರು. 


ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದವರ ನೈಜ ಅನುಭವಗಳು, ಸನ್ನಿವೇಶಗಳು ಎದುರಿಸಿದ್ದ ಬಿಕ್ಕಟ್ಟು, ಮಹದೇವರ ಕಾರ್ಯನಿರ್ವಹಣೆ, ಕಾರ್ಯತಂತ್ರ, ಅಪ್ರತಿಮ ದೇಶಪ್ರೇಮ, ಗಾಂಧೀಜಿಯ ಬಗೆಗಿನ ಅಭಿಮಾನ, ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಪಣತೊಟ್ಟ ಬಗ್ಗೆ, ಸಂಘಟನಾ ಶಕ್ತಿ, ಸಾಮೂಹಿಕ ಚಟುವಟಿಕೆಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದ ರೀತಿ ಎಲ್ಲವನ್ನೂ ಟಿಪ್ಪಣಿ ರೂಪದಲ್ಲಿ ಬರೆದುಕೊಂಡು ನಾಟಕ ರಚಿಸುತ್ತಾರೆ.


1980 ಏಪ್ರಿಲ್ 1ರಂದು ಕೋಗನೂರಿನಲ್ಲಿ ಕಾರಣಾಂತರದಿಂದ ಈ ನಾಟಕದ ಹಸ್ತಪ್ರತಿ ನಾಶವಾಗಿದ್ದರಿಂದ ಹೆಚ್ಚು ಕೆಂಗುಡಪ್ಪನವರು ನಾಟಕದಲ್ಲಿ ಪಾತ್ರ ಮಾಡಿದ್ದವರ ಬಾಯಿಂದ ಬಾಯಿಗೆ ಕಂಠಪಾಠವಾಗಿದ್ದ ಸಂಭಾಷಣೆಯನ್ನು ಹೇಳಿಸಿ, ಬರೆದುಕೊಂಡು, ಸಂಗ್ರಹಿಸಿರುವುದು ಈಗ ನಮಗೆ ಪುಸ್ತಕ ರೂಪದಲ್ಲಿ ಲಭ್ಯವಾಗಿದೆ. 


ಮುಂದಿನ ಪೀಳಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಪಟ್ಟ ಕಷ್ಟಗಳನ್ನು ತಿಳಿದಾಗ ಮಾತ್ರವೇ ಸ್ವಾತಂತ್ರ್ಯಎಷ್ಟೆಲ್ಲಾ ಕಷ್ಟದ ಹೋರಾಟದಿಂದ ದೊರೆತ ಫಲ, ಅದನ್ನು ಕಾಪಾಡಿಕೊಳ್ಳುವ ಹಾಗೂ ಗೌರವಿಸುವ ಕುರಿತ ಅರಿವು ಮೂಡಿಸಿಕೊಳ್ಳಲು ಸಾಧ್ಯ. 


"ನಮ್ಮ ಆಡಳಿತ ಪರಕೀಯರ ಕೈಯಲ್ಲಿದೆ ಎಂದು ಹೇಳುವುದು ಹೇಳಿತನದ ಲಕ್ಷಣವಲ್ಲವೇ..?"

"ಆಲಸ್ಯವೇ ಎಲ್ಲರನ್ನೂ ಅದೋಗತಿಗೆ ಒಯ್ಯುವ ವೈರಿ. ನಾವೀಗ ಜಾಗೃತ ಜನಾಂಗವನ್ನು ನೋಡಿ ಎಚ್ಚರಾಗಬೇಕಿದೆ."

ಇಂತಹ ಮಿಂಚಿನ ಮಾತುಗಳಿಂದ ಭಾರತ ಬಂಧನಮುಕ್ತವಾಗಬೇಕು, ದಾಸ್ಯ ಹರಿದು ಹೋಗಬೇಕು ಎನ್ನುವ ಯುವ ಉತ್ಸಾಹಿ ಮೈಲಾರ ಮಹದೇವಪ್ಪ  ತಮ್ಮ ಸ್ನೇಹಿತರನ್ನು ಸ್ವಾತಂತ್ರ್ಯಕ್ಕೆ ಹುರಿದುಂಬಿಸುವ ಬಗೆ ಇಲ್ಲಿದೆ.


ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಸಹೋದರರಿಗೆ ನೆರವಾಗಬೇಕು. ಸಂಗ್ರಾಮದ ಕರೆ ಬಂದಾಗ ಗುಂಪು ಗುಂಪಾಗಿ ಹೋರಾಡಬೇಕು. ಜೀವದಾನ ಮಾಡುವ ಪ್ರಸಂಗ ಬಂದರೂ ಸಾವಿಗಂಜದೆ ಮುನ್ನುಗ್ಗಬೇಕು ಎನ್ನುತ್ತಾ ಗತಕಾಲದ ವೀರನಾರಿಯರ ನೆನಪು ಮಾಡಿ ಹೆಣ್ಣು ಮಕ್ಕಳನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿ ಮಾಡುತ್ತಿದ್ದ ದಿನಗಳಿವೆ.


ಅಸ್ಪೃಶ್ಯ ನೀತಿಯನ್ನು ತಡೆಗಟ್ಟಿ, ಖಾದಿ ತೊಡುವ ಗಾಂಧೀಜಿಯವರ ನಿಲುವನ್ನು ಎತ್ತಿ ಹಿಡಿಯುವ ಯುವ ಜನರು ಕಾಣುತ್ತಾರೆ.


ಮೈಲಾರ ಮಹದೇವಪ್ಪನವರು ಹರ್ಡೇಕರ್ ಮಂಜಪ್ಪನವರಿಂದಲೂ ಪ್ರೇರಿತವಾಗಿದ್ದಾರೆ. ಅವರ ಕೆಲ ಮಾತುಗಳನ್ನು ತಮ್ಮ ಜೊತೆಗಾರರಿಗೆ ಹೇಳುವಾಗ ಉಲ್ಲೇಖಿಸುತ್ತಾರೆ ಸಹ.

"ಸಾವಿಗಂಚದವರು ಸತ್ಯಾಗ್ರಹಿಗಳಂತೆ. ಸತ್ಯಾಗ್ರಹದಿಂದಲೇ ಸ್ವರಾಜ್ಯ ಸಿದ್ದಿಯಂತೆ. ಸತ್ಯಾಗ್ರಹಿಗಳು ಸ್ವದೇಶಿ ವ್ರತವನ್ನು ಆಚರಿಸಬೇಕಂತೆ. ಹಿಂದೂಸ್ಥಾನದ ಬಡತನ ಕಳೆಯುವುದು ರಾಟೆ, ಖಾದಿ, ಸ್ವಉದ್ಯೋಗದಿಂದ." ಇದೇ ಮೊದಲಾಗಿ ಭಾರತವನ್ನು ಸ್ವತಂತ್ರಗೊಳಿಸುವ ಸರಳ ಮಾರ್ಗದ ಸ್ಪಷ್ಟ ನಿರೂಪಣೆಯಿದೆ.


1918ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಅನಾಚಾರವು ಜನರನ್ನು ರೊಚ್ಚಿಗೆಬ್ಬಿಸಿತ್ತು. ಇದಾದ ನಂತರ ಧಾರವಾಡದ ಬೀದಿಗಳಲ್ಲಿ ಸವಿನಯ ಕಾಯ್ದೆ ಭಂಗ, ಬ್ರಿಟಿಷ್ ಸರ್ಕಾರದಿಂದ ದೊರೆತ ವಿಧಾನ ಮಂಡಲಗಳ ಚುನಾವಣೆಗಳ ಬಹಿಷ್ಕಾರ, ಪರದೇಶಿ ಬಟ್ಟೆ, ಶಿಕ್ಷಣ ಸಂಸ್ಥೆಗಳ ಬಹಿಷ್ಕಾರ, ಶಾಸನಭಂಗಗಳು ನಡೆದವು.


ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಆತಂಕ, ನಿರ್ಬಂಧಗಳನ್ನು ಲಕ್ಷಿಸದೆ ಉಪ್ಪಿನ ಪಾರತಂತ್ರವನ್ನು ಕಿತ್ತೊಗೆದ ಮಹಾದೇವರ ಶೌರ್ಯ ನಂತರ ಜೈಲುವಾಸದ ಕುರಿತ ಚಿತ್ರಣಗಳಿವೆ.


1942ಕ್ಕೆ ಸ್ಟಾಫೋರ್ಡ್ ಕ್ರಿಪ್ಸ್ ಅವರು ರಾಜಕೀಯ ಕೊಡುಗೆ ನೀಡುವುದಾಗಿ ಭಾರತಕ್ಕೆ ಬಂದಾಗ ಅವರ ಅನಿಶ್ಚಿತ ಹೇಳಿಕೆಯನ್ನು ನಿರಾಕರಿಸಿ ಕಮಿಟಿಯಲ್ಲಾದ ತೀರ್ಮಾನ ಮುಂದಕ್ಕೆ ಕ್ವಿಟ್ ಇಂಡಿಯಾ, ಭಾರತ ಬಿಟ್ಟು ತೊಲಗಿ ಎಂದು ಮಹಾತ್ಮರು ನೀಡಿದ ಕರೆಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಕೋಗನೂರ ವೀರಯ್ಯನವರ ಸಂಘಟನೆ ಹಾಗೂ ಮೈಲಾರ ಮಹದೇವಪ್ಪನವರ ನಾಯಕತ್ವ ಶುರುವಾಗುತ್ತದೆ. ಧಾರವಾಡದಿಂದ ಬುರ್ಲಿ ಬಿಂದುಮಾಧವರಾಯರ ಪತ್ರ ತಲುಪಿ ಮುಂದೆ ಗುಂಪಿನ ಚಟುವಟಿಕೆಗಳು ನಿರ್ಧರಿಸಿದಂತೆ ಸಾಗುತ್ತವೆ. ಗುಪ್ತಚರ ಕಾರ್ಯ ಮಾಡುವವರು, ಹಳ್ಳಿ ಹಳ್ಳಿಗಳಲ್ಲಿಯೂ ತಮ್ಮ ಕೈಲಾದ ಸೇವೆ ಮಾಡುವವರು ಸ್ವಾತಂತ್ರ್ಯಕ್ಕೆ ನೆರವಾದ ಬಗೆ ಇಲ್ಲಿದೆ. 


ಮೈಲಾರ ಮಹಾದೇವರು ತಮ್ಮ ಪತ್ನಿಗೂ ಧೈರ್ಯ ತುಂಬಿ ಅವರನ್ನು ಉಳಿದ ಹೆಣ್ಣು ಮಕ್ಕಳೊಡನೆ ದೇಶ ಸೇವೆಗಾಗಿ ಬರಲು ಪ್ರೇರೇಪಿಸುತ್ತಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರಿಗೆ ಜಯ ಹಾರೈಸುವುದರ ಜೊತೆಗೆ ಅವರ ಪತ್ನಿಯ ದಿಟ್ಟತನ ಕಾಣುತ್ತದೆ. ಪೊಲೀಸರು ಅವರನ್ನು ಹಿಡಿದುಕೊಂಡು ಹೋಗಲು ವಾರೆಂಟ್ ತಂದಿರುವಾಗ ಕೊಡುವ ದಿಟ್ಟ ಉತ್ತರ ಇಲ್ಲಿ ಕಾಣುತ್ತದೆ. ಮಹದೇವಪ್ಪನವರು ಬೇರೆಲ್ಲಿಯೂ ಸಿಗದಿದ್ದಾಗ ಪ್ರತಿ ಊರಿನಲ್ಲಿಯೂ ಅವರು ಬಂದಿದ್ದಾರೆಯೇ ಎಂದು ವಿಚಾರಿಸುವ ಸಂದರ್ಭದಲ್ಲಿ ಕುರಿಗಾಹಿಗಳು ಸಹ ಅವರು ಹೋದ ಜಾಗದ ಸುಳಿವನ್ನು ನೀಡುವುದಿಲ್ಲ. 


ಬಸ್ಸಿನಲ್ಲಿದ್ದ ಟಪಾಲು ಕದಿಯುವುದಕ್ಕೆ ಡ್ರೈವರ್ ಕಂಡಕ್ಟರ್ರಿಗೆ ಬ್ಯಾಡಗಿ ಬಾಂಬ್ ಹಾಕುವ ಸಂದರ್ಭವಿದೆ. ಬ್ಯಾಡಗಿ ಬಾಂಬ್ ಎಂದರೆ ಮತ್ತೇನಲ್ಲ ಬ್ಯಾಡಗಿ ಮೆಣಸಿನಕಾಯಿ ಕಾರದಪುಡಿಯನ್ನು ಅವರ ಕಣ್ಣಿಗೆ ಎರಚುವುದು. ಬಸ್ಸಿನಲ್ಲಿರುವ ಬೇರೆ ಯಾರಿಗೂ ಯಾವುದೇ ತೊಂದರೆ ಮಾಡದೆ, ಯಾರಿಗೂ ಪ್ರಾಣ ಹಾನಿ ಮಾಡದೆ, ತಮಗೆ ಬೇಕಾದ ಟಪಾಲು ಕಸಿದುಕೊಂಡು ಹೋಗುತ್ತಾರೆ.


ಹತ್ತಿಮತ್ತೂರು ಸ್ಟೇಷನ್ ಸುಡುವ ಕಾರ್ಯಕ್ರಮವಿದ್ದಾಗ ಅಲ್ಲಿರುವ ಪೊಲೀಸರನ್ನು ದಿಕ್ಕು ತಪ್ಪಿಸಲು ಮಾರುವೇಷದಲ್ಲಿ ಕಬ್ಬು ಮಾರುವವರಂತೆ ಹೋಗಿ ಅವರಿಗೆ ಆಸೆ ತೋರಿಸಿ, ಪೊಲೀಸರ ಬಂದೂಕು ಕೆಳಗಿಡುವಂತೆ ಮಾಡಿ ಉಪಾಯದಿಂದ ಅವರನ್ನು ಕಟ್ಟಿ ಹಾಕಿ ಬಂದೂಕು ಅಪಹರಿಸಿ ಸ್ಟೇಷನ್ ಸುಡುತ್ತಾರೆ.


ಕಚವಿ ಸರ್ದಾರ ವೀರನಗೌಡರ ಪತ್ನಿ ನಾಗಮ್ಮ ಮತ್ತು ಹೊಸರಿತ್ತಿ, ಹಾಲಗಿಯ 15 ಜನ ಯುವತಿಯರು, ಕೋಗನೂರಿನ ಗೋಣೆಪ್ಪನವರ ಪತ್ನಿ ಯಲ್ಲಮ್ಮ, ಹುಬ್ಬಳ್ಳಿಯ ಹರಿಜನ ಆಶ್ರಮದಿಂದ ಯಶೋದ, ಕೃಷ್ಣೆ, ಇಂದಿರಾಬಾಯಿ, ಲಕ್ಷ್ಮಿದೇವಿ ಹೀಗೆ ಮೂರು ನಾಲ್ಕು ತಿಂಗಳಿನ ಕೂಸಿನ ತಾಯಂದಿರು ಪುಟ್ಟ ಮಕ್ಕಳಿರುವವರು ಪ್ರಭಾತ ಪೇರಿಯಲ್ಲಿ ಹಾವೇರಿಯಲ್ಲಿ ಬುಲೆಟಿನ್ ಹಂಚುವಾಗ ಹಾಗೂ ಸ್ವರಾಜ್ಯ ಸಾಧನೆಗೆ ಹೋರಾಡಿ ಎಂದು ಸಾಹೇಬರಿಗೆ ಹೇಳಿ, ಅವರಿಗೆ ಗಾಂಧಿ ಟೋಪಿ ಕೊಡುವಾಗ... ಕೋರ್ಟಿನಲ್ಲಿರುವ ಮುನಸೂಫ್ ಸಾಹೇಬರು, ಮಜೀದ, ಪೌಜದಾರರಿಗೂ, ಮಾಮಲೆದಾರರಿಗೂ ಬುದ್ಧಿ ಬರುವಂತೆ ಪತ್ರ ಓದುವಾಗ ಬಂಧಿಯಾಗಿ ಜೈಲಿಗೆ ಹೋಗುತ್ತಾರೆ


ನೆಗಳೂರ ಚಾವಡಿ, ಕೋಗನೂರ ಚಾವಡಿ, ಹೆಬ್ಬಾಳ ಚಾವಡಿ ಇಲ್ಲೆಲ್ಲ ಹಪ್ತೆ ವಸೂಲಿ ಮಾಡುವ ಒಂದೊಂದು ಸಂದರ್ಭಗಳೂ ರೋಮಾಂಚನಗೊಳಿಸುತ್ತವೆ.


ಸ್ವಾತಂತ್ರ್ಯ ಹೋರಾಟದಲ್ಲಿ ಲಾವಣಿಗಳು, ಸ್ವಾತಂತ್ರ್ಯದ ಕುರಿತ ಹಾಡುಗಳು ಇದ್ದ ಬಗೆಯನ್ನು ನಾವು ಕೇಳಿರುತ್ತೇವೆ. ಹೆಣ್ಣು ಮಕ್ಕಳ ಗುಂಪು ಪ್ರಭಾತ ಪೇರಿಯಲ್ಲಿ ಆಳುವ ಈ ಪದಗಳು ಅರ್ಥಪೂರ್ಣವಾಗಿದೆ. ಇಂತಹ ಕೆಲ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ


ಸಾಗಿರಿ ಮುಂದೆ ಸಾಗಿರಿ ಮುಂದೆ

ನಾರಿಯರೆಲ್ಲಾ ಒಂದಾಗಿ ಸಾಗಿರಿ ಮುಂದೆ

ಲಕ್ಷಿಬಾಯಿ ಚನ್ನಮ್ಮರಂತೆ

ಸುಭಾಶ್ಚಂದ್ರ ಭೋಸರಂತೆ

ವಿಜಯದ ಕಹಳೆ ಊದುತ ಮುಂದೆ

ಸಾಗಿರಿ ಮುಂದೆ ಸಾಗಿರಿ ಮುಂದೆ

ಜೈ ಹಿಂದ್‌... ಜೈ ಹಿಂದ್‌.... ಜೈ ಹಿಂದ್‌

ಸಿಂಧೂರ ಲಕ್ಷ್ಮಣ ರಾಯಣ್ಣನಂತೆ

ಸಾಗುವ ಮುಂದೆ ಸಾಗುವ ಮುಂದೆ


ಹೊಸರಿತ್ತಿಯ ಘಟನೆಯ ನಂತರವೂ ಸ್ವಾತಂತ್ರ್ಯ ಹೋರಾಟ ನಡೆಯುವ ಘಟನೆಗಳೊಂದಿಗೆ ನಾಟಕ ಮುಕ್ತಾಯವಾಗುತ್ತದೆ. 


ಮಹಾದೇವರ ತಂಡದ ಹಲವು ಸದಸ್ಯರು 'ಹೋರಾಟವೇ ಉಸಿರು' ಎಂದು ಬದುಕಿದವರು. ಚಳುವಳಿಯ ಕೆಚ್ಚು, ಪ್ರಾಮಾಣಿಕತೆ, ಬಡವರಿಗೆ ಮಿಡಿಯುವ ಹೃದಯದ ಕೆಲವರು ಭೂಮಾಲೀಕರ ಕುತಂತ್ರಕ್ಕೆ ಬಲಿಯಾದರೆ.. ಇನ್ನು ಕೆಲವರು ಸ್ವಾತಂತ್ರ್ಯ ಚಳುವಳಿಯ ಪಿಂಚಣಿಯನ್ನು ಪಡೆದು ಗೌರವಕ್ಕೂ ಪಾತ್ರರಾದರು.


2001 ಏಪ್ರಿಲ್ ಒಂದರಂದು ಕೋಗನೂರು ಗ್ರಾಮದಲ್ಲಿ ಹೊಸ ರೀತಿಯಲ್ಲಿ  ಮಾಡಿದ ಮೂವರಿಗೆ ಹುತಾತ್ಮತ್ರಯರ ಸ್ಮಾರಕ ಕಟ್ಟಿಸಿ ಅಂದೆ ಹುತಾತ್ಮರ ದಿನವನ್ನು ಆಚರಿಸುತ್ತಾರೆ. 


2015 ರ ಪರಿಷ್ಕೃತ ಮುದ್ರಣದಲ್ಲಿ 7 ನೇ ತರಗತಿಗೆ ಮೈಲಾರ ಮಹಾದೇವ ಅವರ ಕುರಿತ ಪಾಠವಿದೆ. 


ಗ್ರಂಥಋಣಿ: 

ವೃತ್ತ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ಸಿರಿಗನ್ನಡ ಪಠ್ಯ, ಇಂದಿರಾ ಕೃಷ್ಣಪ್ಪನವರ ಸಂಪಾದಿತ ಕವನಗಳಲ್ಲಿ ಮೂಡಿದ ಗಾಂಧಿ, ಪ್ರೊ. ಬಿ. ಪೊಲೀಸ್ ಪಾಟೀಲ ಅವರ ನಾನೆಂಬುದು ನಾನಲ್ಲ, ಹುತಾತ್ಮ ತಿಮ್ಮನ ಗೌಡ ಪಾಟೀಲ (ಮೆಣಸಿನಹಾಳ) ಇವುಗಳಿಂದಲೂ ಆಯ್ದ ಮಾಹಿತಿಗಳನ್ನು ಉಲ್ಲೇಖಿಸಿರುವೆ. 


~ವಿಭಾ ವಿಶ್ವನಾಥ್

ಅಪ್ಪನ ಅಂಗಡಿ (ಪುಸ್ತಕ ಯಾನ - 481)


ಪುಸ್ತಕದ ಶೀರ್ಷಿಕೆ : ಅಪ್ಪನ ಅಂಗಡಿ

ಸಂಪಾದಕರು : ಮನು ಗುರುಸ್ವಾಮಿ

ಪ್ರಕಾಶಕರು : ಕ್ರಿಯೇಟಿವ್ ಪುಸ್ತಕಮನೆ

ಪ್ರಥಮ ಮುದ್ರಣ : 2026

ಪುಟಗಳು : 84

ಬೆಲೆ : 100 ರೂ. 


ಮನು ಗುರುಸ್ವಾಮಿಯವರು ಕನ್ನಡ ಆಧ್ಯಾಪಕರು ಹಾಗೂ ಬರಹಗಾರರು. ಇವರ ಬರಹ ಸೇರಿದಂತೆ ಇಲ್ಲಿ 16 ಅಪ್ಪನ ಕುರಿತ ಬರಹಗಳನ್ನು ಕಾಣಬಹುದು. ವಿವಿಧ ಊರುಗಳ, ವಿವಿಧ ಕಾಲಘಟ್ಟಗಳ, ವಿವಿಧ ಶೈಲಿಯ ಕನ್ನಡದ, ಆಡು ಭಾಷೆಯ ಲೇಖನಗಳಿವೆ. ಅಪ್ಪಂದಿರು ಬದುಕಿದ ರೀತಿ ಮಕ್ಕಳ ಕಣ್ಣಲ್ಲಿ ಕಂಡ ಬಗೆ ವಿವಿಧ ರೂಪಗಳಲ್ಲಿ ಇಲ್ಲಿದೆ. 


ಅಪ್ಪನನ್ನು ಹೀಗೆಯೇ ಎಂಬ ರೂಪದಲ್ಲಿ ಕಂಡುಕೊಳ್ಳಲಾಗದು. ಅವನ ಸ್ವರೂಪ ವಿಭಿನ್ನ. ಆತನ ವ್ಯಕ್ತಿತ್ವವಿಲ್ಲದೆ ನಾವಿಲ್ಲ. ಅಪ್ಪ ಹಾಸುಹೊಕ್ಕಾಗಿ ನಮ್ಮೊಳಗಿರುತ್ತಾನೆ. ಬಾಲ್ಯದ ನೆನಪುಗಳಿಂದ, ನಂತರ ಬದಲಾದ ಅಪ್ಪನ ರೂಪ, ನೆನಪುಗಳು ಅಪ್ಪನ ಕುರಿತ ದೃಷ್ಟಿಕೋನ ಎಲ್ಲವೂ ಇಲ್ಲಿವೆ. ಇಲ್ಲಿ ಎಲ್ಲಿಯೂ ಹೊಡೆದು ಬುದ್ದಿ ಕಲಿಸಿದ ಅಪ್ಪಂದಿರು ಕಾಣಲಿಲ್ಲ. ಹೀಗಾಗಿ ಅಪ್ಪ ಅಷ್ಟು ಆಳಕ್ಕಿಳಿದರಾ..?! ಎಲ್ಲಿಯೂ ಅತಿರಂಜಿತ ವರ್ಣನೆಗಳಿಲ್ಲ. ವಾಸ್ತವದ ದೃಷ್ಟಿಕೋನಗಳಿವೆ. ಸುಮ್ಮನೆ ಅಪ್ಪನನ್ನು ಕಣ್ತುಂಬಿಕೊಳ್ಳಬೇಕಿದೆ. ಎಲ್ಲಾ ಅಪ್ಪಂದಿರಲ್ಲಿಯೂ ಒಂದಲ್ಲಾ ಒಂದು ಬಗೆಯಲ್ಲಿ ನಾನು ನನ್ನಪ್ಪನನ್ನು ಕಂಡ ಕೌತುಕವೂ ಇದೆ.


ಅಪ್ಪನ ಅಂಗಡಿ - ಮಂಜಯ್ಯ ದೇವರಮನಿ :

ಓದಿಲ್ಲದಿದ್ದರೂ ವ್ಯವಹಾರದ ಕಲೆ ಕಲಿತಿದ್ದ ಅಪ್ಪ ವ್ಯವಹಾರದಲ್ಲಿ ಎಷ್ಟು ನಿಪುಣ ಎನ್ನುವುದಕ್ಕೆ ಸಾಕ್ಷಿಯಾಗಿ ಅಪ್ಪನ ಅಂಗಡಿಯ ಕುರಿತು ಹೇಳುತ್ತಾ ಸಾಗುತ್ತಾರೆ. ಕಡು ಬೇಸಿಗೆಯ ಬರಗಾಲದಲ್ಲಿ ಬ್ಯಾಂಕಿನಲ್ಲಿದ್ದ ತನ್ನಲ್ಲ ದುಡ್ಡನ್ನು ಬಿಡಿಸಿಕೊಂಡು ಅಂಗಡಿಗೆ ಬೇಕಾದ ಸಾಮಾನುಗಳನ್ನು ತಂದು, ಉದ್ರಿ ಕೊಟ್ಟ ಅಪ್ಪ ಬೇರೆಯವರ ಕಣ್ಣಿಗೆ ಕಂಡ ಬಗೆಗೂ ಮಗನಿಗೆ ಕಂಡದ್ದಕ್ಕೂ ವ್ಯತ್ಯಾಸವಿದೆ. ಅಪ್ಪ ಯಾವ ನಂಬಿಕೆಯ ಮೇಲೆ ಉದ್ರಿ ಕೊಟ್ಟಿದ್ದ ಎಂದು ಮನವರಿಕೆಯಾದ ಸಂದರ್ಭ ಊರವರ ಒಳ್ಳೆಯತನಕ್ಕೂ.. ಅಪ್ಪನ ಉದಾತ್ತತೆಗೂ ಸಾಕ್ಷಿಯಂತಿದೆ. ಇಡೀ ಬರಹಗಳ ಗುಚ್ಛದಲ್ಲಿ ಇದು ಬಹಳ ಆಪ್ತವಾದ ಬರಹ.


ಹೀಗೊಂದು 'ನೀಚ ಅಪ್ಪ'ನ ನೆನಪು - ಈರಪ್ಪ ಎಂ ಕಂಬಳಿ :

ನಕಾರಾತ್ಮಕ ಶೀರ್ಷಿಕೆಯಾಗಿ ಕಂಡರೂ.. ಇಲ್ಲಿ ಸಕಾರಾತ್ಮಕವಾಗಿ ಅಪ್ಪನನ್ನು ಕಾಣುವ ಬಗೆಯಿದೆ. 

"ಯಮಕಾಲನ ತೆಕ್ಕೆಯಲ್ಲಿ ಅಳಿದು ಹೋದವರು ಎಲ್ಲಿಯೂ ಹೋಗುವುದಿಲ್ಲ. ಹೀಗೆ ಜೀವಂತವಾಗಿರುತ್ತಾರೆ. ಬದುಕಿ ಇದ್ದ ನಮ್ಮ ನಿಮ್ಮಂತವರ ಮನಗಳಲ್ಲಿ. ಅವರಿಗೆ ಕಾಡುವ ಗುಣವಿದ್ದರಂತೂ ತೀರಿತು. ಅಂಥವರು ಬೆಂಬಿಡದೆ ಸತಾಯಿಸುತ್ತಿರುತ್ತಾರೆ." 

ದೊಡ್ಡಾಟದ ಹಾರ್ಮೋನಿಯಂ ಮಾಸ್ತರಾಗಿದ್ದ ಅಪ್ಪ ಹಂಪಿಯ ಸಣ್ಣ ಕಂಬಗಳಲ್ಲಿ ರಾಗಗಳನ್ನು ನುಡಿಸಿದ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ. ಅಪ್ಪ ಮಗನನ್ನು ತನ್ನಂತಾಗಿಸದೆ ಬೇರೆ ದಾರಿ ಹಿಡಿಸಿದ್ದೇಕೆ..? ಓದಿ ನೋಡಿ. 


ಅಪ್ಪ ಎಂಬ ಕಾಡುವ ಭಾವಗೀತೆ - ವಾಸುದೇವ ನಾಡಿಗ್‌ :

ಕಟು ಶತ್ರುವಾಗಿ, ಕಟು ಗುರುವಾಗಿ ಕಂಡವ ಈ ಅಪ್ಪ ಎನ್ನುತ್ತಲೇ ಶುರುವಾದ ಲೇಖನ ಅಪ್ಪನ ಹಿರಿದಾದ ಕನಸುಗಳು ನನಸಾಗದ ಸಂದರ್ಭದಲ್ಲಿ ನಡೆಸಿಕೊಳ್ಳುತ್ತಿದ್ದ ಕಟು ಸ್ವಭಾವ ಮಗನಲ್ಲಿ ಕೆಚ್ಚು ಮೂಡಿಸಿದ ಬಗೆ, ನಂತರ ಅಪ್ಪ ಕಾಡುವ ಬಗೆ ಆರ್ದ್ರವಾಗಿ ಚಿತ್ರಿತವಾಗಿದೆ.


ಅಪ್ಪಾ - ನಾನು ನಿಮ್ಮ ಮಗ ಮತ್ತು ಮಗಳು - ಸಹನಾ ರವೀಂದ್ರ : 

ಅಪ್ಪನ ಪ್ರೀತಿಯಲ್ಲಿ ಭಾವನೆಗಳ ಕಾಮನಬಿಲ್ಲಿದ್ದರೂ.. ಗಂಡು ಮಗನಾಗಲಿಲ್ಲ ಎಂಬ ಅಸಮಾಧಾನವನ್ನು ಮಗಳಾಗಿ ಹೋಗಲಾಡಿಸಿದ ಇವರ ಸೂಕ್ಷ್ಮ ಹಾಗೂ ಪ್ರೀತಿಯ ಒಡನಾಟ ಚೆಂದವಾಗಿ ಅಭಿವ್ಯಕ್ತವಾಗಿದೆ. ಅಪ್ಪನ ಮಾರಣಾಂತಿಕ ಖಾಯಿಲೆಯ ಸಂದರ್ಭದಲ್ಲಿ ಮಗ ಮಾಡುವ ಕೆಲಸಗಳನ್ನು ಮಾಡಿದರೂ.. ಸ್ವೀಕರಿಸಲು ಅಪ್ಪನಿಗಿದ್ದ ಹಿಂಜರಿಕೆ, ಮುಜುಗರ ಅಸಮಾಧಾನಗಳಾಚೆಗೂ ಅಪ್ಪ ಮಾಡುವ ಮಗಳ ರಕ್ಷಣೆ, ಅಗತ್ಯಗಳ ಪೂರೈಕೆ, ಪ್ರಶಂಸೆ ಎಲ್ಲಕ್ಕಿಂತ ಹೆಚ್ಚಾಗಿ ಉಪಸ್ಥಿತಿಯಿಂದ ಕಾಡುತ್ತಾರೆ.


ಅಪ್ಪ ನನಗೇಕೆ ನಿನ್ನ ಪ್ರೀತಿ ತಿಳಿಯುತ್ತಿಲ್ಲ? - ಎಸ್‌. ಎಮ್‌. ಪುಷ್ಕರ :

ಶಿಸ್ತಿನ ಅಪ್ಪನ ಮುಖವನ್ನು ತೆರೆದಿಡುತ್ತಲೇ.. ಅಪ್ಪನ ಇಚ್ಛೆಯಂತೆಯೇ ಓದಿ ಕೆಲಸ ಹಿಡಿದ ನಂತರ ಮನೆಗೆ ಹೋದಾನ ಕಂಡ ಅಪ್ಪನ ಕಣ್ಣುಗಳು ಅಷ್ಟು ವರ್ಷ ಹೇಳದ ಮಾತುಗಳನ್ನು, ಪ್ರೀತಿಯನ್ನು ತೋರಿದ ಬಗೆ ಸೊಗಸಾಗಿದೆ.


ಅಪ್ಪ ಅಪ್ರಯೋಜಕನಲ್ಲ - ಪುಟ್ಟಸ್ವಾಮಿ ನೇರಲೇಕೆರೆ :

ಮಾಜಿಯ ತಾತನನ್ನು ತೋರುತ್ತಲೇ ಮಾಜಿಯ ತಂದೆಯನ್ನು ಪರಿಚಯಿಸುತ್ತಾರೆ. ಕುಡುಕ, ಬೇಜವಾಬ್ದಾರಿತನ, ಅಕ್ಕ-ಪಕ್ಕದವರ ಕೋಪಕ್ಕೆ ತುತ್ತಾಗಿದ್ದವನು ಮಗನ ಬಗೆಗೆ ತೋರುತ್ತಿದ್ದ ಕಾಳಜಿ, ಮಕ್ಕಳಿಗೆ ಜಮೀನನ್ನು ಹಿಂದಿರುಗುವಂತೆ ಮಾಡಲು ಹವಣಿಸಿದ್ದು, ಮಕ್ಕಳ ಬದುಕಿನ ದಾರಿ ರೂಪಿಸಿದ್ದು ಅಪ್ಪನ ಮತ್ತೊಂದು ರೂಪವನ್ನೇ ಬಯಲು ಮಾಡುತ್ತದೆ.


ಅಪ್ಪನಿಗ್‌ ಹೇಳ್ತೀನಿ - ವಾಣಿ ಭಟ್ಟ : 

ಈ ಲೇಖನ ವಿಭಿನ್ನವೆನಿಸಿತು. ಇಲ್ಲಿ ಲೇಖಕಿ ತಂದೆ ಹಾಗೂ ತನ್ನ ಮಗುವಿನ ತಂದೆ ಎರಡು ತಂದೆಯ ರೂಪವನ್ನು ತೋರುತ್ತಾರೆ. ಅಮ್ಮನ ಜೊತೆಗಿನ ಸಲುಗೆ ಅಪ್ಪನ ಜೊತೆಗಿಲ್ಲದಿದ್ದರೂ.. ಅಪ್ಪನ ಒಂದು ಮಾತಿಗೆ ಭಯ ಬೀಳುವ ದಿನಗಳು.. 

ಮಕ್ಕಳು ಪಾಲಕರನ್ನು ನೋಡುವ ದೃಷ್ಟಿಕೋನ ರೂಪಿಸುವ ತಂದೆ-ತಾಯಿಯ ಜವಾಬ್ದಾರಿಯ ವಿಚಾರ ಹೇಳುತ್ತಾರೆ. ಬದಲಾದ ದಿನಗಳಲ್ಲಿ ಮಕ್ಕಳ ಜೊತೆಗೆ ಮಗುವಾಗಿ ಆಡುವ ಅಪ್ಪನನ್ನು ತೋರುತ್ತಾರೆ. ಇಂದಿನ ತಂದೆಯಂದಿರ ಜವಾಬ್ದಾರಿ ಹಾಗೂ ಪ್ರೀತಿಯಿಂದ ಕೈಜೋಡಿಸುವ ಗುಣಗಳ ತಂದೆಯಂದಿರ ಮೇಲೆ ಬೆಳಕು ಚೆಲ್ಲುತ್ತಾರೆ. ಹಿಂದಿಗಿಂತ ಇಂದಿನ ಸ್ಥಿತಿ ಸುಧಾರಿಸಿದೆ. ಮಗುವಿನ ದೈನಂದಿನ ಜೀವನದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವ ತಂದೆಯಂದಿರ ಸಂಖ್ಯೆ ಮತ್ತಷ್ಟು ಹೆಚ್ಚಲಿ ಎನ್ನುವ ಆಶಯ ಬಹಳ ಇಷ್ಟವಾಯಿತು.


ವಾಮಣ್ಣ-ಅಣ್ಣ ಅಲ್ಲ ಅಪ್ಪ - ಮಾಧುರಿ ಭಾವೆ : 

ತಂಗಿಯಂದಿರು ಕರೆದ ಹಾಗೆ ಮಕ್ಕಳು ತಂದೆಯನ್ನು ವಾಮಣ್ಣನೆಂದೇ ಕರೆದ ಬಗೆ.. ಬರೀ ಓದು ಎಂದು ಒತ್ತಡ ಹೇರದೆ, ಯಾವುದು ಒಳ್ಳೆಯದು-ಕೆಟ್ಟದ್ದು ಎಂಬುದನ್ನು ತಿಳಿಹೇಳಿದ, ಅಪರಿಮಿತ ವಿಶ್ವಾಸದಿಂದ ಮಗಳನ್ನು ನಂಬಿದ ತಂದೆ, ತಂದೆ-ತಾಯಿಯರ ಪ್ರೀತಿ ಅನ್ಯೋನ್ಯತೆಯ ದಾಂಪತ್ಯ ಇರುವ ಬಹಳ ಲವಲವಿಕೆಯ ಚಿತ್ರಣ ಇದು.


ಅಪ್ಪಾ ಲವ್‌ ಯೂ ಪಾ - ಗೀತಾ ನಾಗರಾಜ್‌ :

ಹಾಡನ್ನು ನೆನಪಿಸಿಕೊಳ್ಳುತ್ತಲೇ ಮಕ್ಕಳೊಡನೆ ಮಗುವಾಗಿ ನಲಿಯುತ್ತಾ.. "ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮೇಲೆ ಗುಲಗಂಜಿಗಿಂತ ರವಷ್ಟು ಹೆಚ್ಚು ಪ್ರೀತಿ ತೋರಿಸುವ", ಮುದ್ದು ಹೆಸರುಗಳಿಂದ ಕರೆದು ರೇಗಿಸುವ ಅಪ್ಪ ಕಾಣುತ್ತಾರೆ.

"ನಮ್ಮ ಬಾಲ್ಯ ಹುಡುಗಾಟಕೆಯ ದಿನಗಳು ಅಪ್ಪನ ನೆನಪುಗಳೊಂದಿಗೆ ಸಮೃದ್ಧವಾಗಿದೆ. ದಿನಗಳಂತೆ ನಮಗೆ ವಯಸ್ಸಾಗುತ್ತಾ ಹೋದಂತೆ ಅಪ್ಪ ಮತ್ತಷ್ಟು ಮಗದಷ್ಟು ನಮ್ಮೊಳಗೆ ಜೀವಂತವಾಗಿದ್ದಾರೆ" ಎನ್ನುತ್ತಾರೆ.


ತಂದೀಯ ನೆನೆದರೆ ತಂಗಳು ಬಿಸಿಯಾಯಿತು - ಯಶೋದ ಗಾಣಿಗ :

ಜನಪದದ ಚಂದದ ಸಾಲೊಂದನ್ನು ನೆನೆಯುತ್ತಾ.. ಹೆಚ್ಚು ಕಾಲ ಅಪ್ಪನೊಡನೆ ಇಲ್ಲದ, ಮಲತಾಯಿ ಬಂದ ನಂತರ ಅಪ್ಪನ ಚಿಕ್ಕಮ್ಮನ ಮನೆಯಲ್ಲಿ ಬೆಳೆದ ಮಗಳ ಕಣ್ಣಲ್ಲಿ ಅಪ್ಪ ಎತ್ತರದಲ್ಲಿರುವ ಮನ ಮಿಡಿಯುವ ಚಿತ್ರಣವಿದು.


ಅಪ್ಪ ಎಂದರೆ - ದ್ವಾರನಕುಂಟೆ ಪಿ ಚಿತ್ತಣ್ಣ :

ಅಪ್ಪ ಪಾಂಡುರಂಗಪ್ಪನ ಪ್ರಪಂಚ, ಹೊಲ-ಮನೆ, ಎತ್ತುಗಳ ಒಡನಾಟವಿದ್ದರೂ.. ಕಡುಬಡತನದಲ್ಲಿಯೂ ಮಕ್ಕಳನ್ನು ತನ್ನ ಪ್ರಪಂಚವೆಂಬಂತೆ ಸಾಕಿದ, ಅಮ್ಮನನ್ನು ಕಷ್ಟಪಟ್ಟು ಉಳಿಸಿಕೊಳ್ಳುವ ದಿನಗಳಲ್ಲಿ ಅಮ್ಮನ ಸ್ಥಾನದಲ್ಲಿ ನಿಂತು ಮುತುವರ್ಜಿವಹಿಸಿ ಕಾಳಗೆ ಮಾಡುವ ಇಂತಹ ಅಪ್ಪಂದಿರು ಬಹಳ ಅಪರೂಪ. 


ಅಪ್ಪ - ರೇಣುಕಾ ಗೌಳಿ :

ಮಹಾನ್ ದೇಶಾಭಿಮಾನಿ ಅಪ್ಪನ ಮಗಳು ಊರಿಗೆ, ಪರರಿಗೆ ಮಹೋಪಕಾರಿಯಾದ ದಿನಗಳನ್ನು ಹೇಳುತ್ತಾರೆ. ಸ್ವಾತಂತ್ರ್ಯ ಪೂರ್ವದ ದಿನಗಳ ಅಪ್ಪನ 50 ವರ್ಷದ ಬದುಕಿನ ಬಗೆ ಇಲ್ಲಿದೆ. ದೇಶಭಕ್ತಿ, ಶರಣರ ವಾಣಿ, ಧೈರ್ಯದ ಬದುಕು ಎಲ್ಲವನ್ನೂ ಕಲಿಸಿದ ಚೇತನ ಅಪ್ಪ ಕೇವಲ ಮನೆಯವರು ಮಾತ್ರವಲ್ಲ ಹೆ, ಪ್ರತಿಯೊಬ್ಬರೂ ಗೌರವಿಸುವ ವ್ಯಕ್ತಿತ್ವವಾಗಿರುವುದರ ಚಿತ್ರಣವಿಲ್ಲಿದೆ.


ನಾ ಕಂಡ ಅಪ್ಪ - ಪದ್ಮಲತಾ ಮೈಸೂರು :

ಅಪ್ಪನ ಸಕಾರಾತ್ಮಕ ನಿಲುವು, ಜ್ಞಾನ ಸಂಪಾದನೆ, ಶ್ರದ್ಧೆ, ಮಕ್ಕಳಿಗೆ ನೀಡುತ್ತಿದ್ದ ಪ್ರೋತ್ಸಾಹ ಹೀಗೆ ಸಕಾರಾತ್ಮಕವಾಗಿ ಅಪ್ಪನನ್ನು ತೆರೆದಿಟ್ಟರೂ.. ಎರಡು ನಕಾರಾತ್ಮಕ ಗುಣಗಳನ್ನು ಉಲ್ಲೇಖಿಸಿ ಅವುಗಳನ್ನು ಸುಧಾರಿಸಿಕೊಂಡ, ತಿದ್ದಿಕೊಂಡ ಹಾಗೂ ಮಾದರಿಯಾದ ಬಗೆ ಇಲ್ಲಿದೆ.


ಎಲ್ಲರಂತಲ್ಲ ನನ್ನಪ್ಪ - ಗಾಯತ್ರಿ ಅನಂತ್‌ :

ಓದು ಮಾತ್ರವಲ್ಲದೆ.. ಕಲೆ, ಸಾಹಿತ್ಯ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ನೆರವಾದ ಅಪ್ಪನಿದ್ದಿದ್ದರೆ.. ಕರಕುಶಲ ಕಲೆಗಾಗಿ ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ನ್ಯಾಷನಲ್ ರೆಕಾರ್ಡ್ ಸಿಕ್ಕಾಗ ಅದೆಷ್ಟು ಹರುಷಪಡುತ್ತಿದ್ದರು ಎನ್ನುವ ನೆನಪುಗಳ ತೆರೆದಿಡುವಿಕೆ ಇಲ್ಲಿದೆ.


ಅಪ್ಪ ಎಂದರೆ ಅಸ್ತಿತ್ವ - ಚೈತ್ರ ವಿ ಮಂಡ್ಯ :

ಅಪ್ಪ ಎಂದರೆ ನನ್ನ ಅಸ್ತಿತ್ವ ಎನ್ನುವ ಇವರ ತಂದೆ ಕೇಳುವ ಶಕ್ತಿಯನ್ನು ಒಂದು ಸಂದರ್ಭದಲ್ಲಿ ಕಳೆದುಕೊಂಡಿದ್ದರು. ಬದುಕಲು ಬೇಕಿರುವ ಅದಮ್ಯ ಚೈತನ್ಯವನ್ನು ಕಳೆದುಕೊಳ್ಳದೆ ಬದುಕಿದ ಕ್ರಿಯಾಶೀಲ ವ್ಯಕ್ತಿ. ಇವರೂ ಶ್ರವಣಶಕ್ತಿ ಕಳೆದುಕೊಂಡಾಗ ನನಗಿಂತಲೂ ಹೆಚ್ಚು ಕನಲಿ,ಬೆಂದದ್ದು ನನ್ನಪ್ಪನೇ ಎನ್ನುತ್ತಾ ಮಕ್ಕಳನ್ನೇ ಆಸ್ತಿ ಮಾಡುವ ಯೋಚನೆಯ ಅಪ್ಪ ಇಲ್ಲಿದ್ದಾರೆ. ಬರೆದಷ್ಟು ಮುಗಿಯದ ಅಕ್ಷಯ ಪಾತ್ರೆಯನ್ನು ನಮಗೆ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.


ಅಣ್ಣನಿಗೆ ನಾನಿನ್ನೂ ಪುಟ್ಟ ಮಗು - ಮನು ಗುರುಸ್ವಾಮಿ :

ಎತ್ತರದಲ್ಲಿ ಮಾತ್ರವಲ್ಲದೆ, ವ್ಯಕ್ತಿತ್ವದಲ್ಲಿಯೂ ಅಷ್ಟೇ ಎತ್ತರವಿರುವ ತಂದೆ ಗುರುಸ್ವಾಮಿಯವರ ಕುರಿತು ಹೇಳುತ್ತಲೇ ಈಗಲೂ ಪುಟ್ಟ ಮಗುವಂತೆ ಕಾಳಜಿ ಮಾಡುವ ತಂದೆಯನ್ನು ತೋರುತ್ತಾರೆ.


ಅಪ್ಪನೆಂಬ ಮುಗಿಯದ ಅದ್ಭುತಗಳ ಕಥನ ಇಲ್ಲಿದೆ. ಕೆಲ ಅಕ್ಷರ ದೋಷಗಳಿವೆ. ಆದರೆ, ಅಪ್ಪನೆಂಬ ಅದ್ಭುತ ಭಾವವಷ್ಟೇ ಮನದಲ್ಲುಳಿಯಿತು. 


~ ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 9, 2026

ಸಕ್ಕರೆ ನಿದ್ದೆಯ ದೇವರ ನಗು (ಬೆಳಕಿಂಡಿಯ ಕತೆಗಳು - 67)


 "ಅಮ್ಮನ ಅತಿ ಇಷ್ಟದ ನಗು ಯಾವುದು ಗೊತ್ತಾ..?" 

"ಯಾವುದು..?"

"ಕಂದಮ್ಮ ಸಕ್ಕರೆ ನಿದ್ದೆಯ ಸವಿಯಲ್ಲಿ ಮಂದಹಾಸ ಬೀರುವ ಅರೆ ಕ್ಷಣದ ನಗು, ದೃಷ್ಟಿಯಾಗುತ್ತದೆ ನೋಡಬೇಡ ಎಂದದ್ದನ್ನು ಬದಿಗೊತ್ತಿ ಕಾಯುತ್ತಿದ್ದ ಕಳೆದೇ ಹೋಗುವಂತೆ ಮಾಡುತ್ತಿದ್ದ ನಗು"


ಅವಳೇ ಕಟ್ಟಿ ಹಾಡುತ್ತಿದ್ದ ಲಾಲಿಯಲ್ಲಿ ಈ ಸಾಲುಗಳು ಇಂದಿಗೂ ಅತ್ಯಾಪ್ತ

ಜೋ ಜೋ ಲಾಲಿ ಕಂದಮ್ಮ..

ಅಮ್ಮನ ಕಣ್ಮಣಿ ನೀನಮ್ಮ..

ಸಕ್ಕರೆ ನಿದ್ದೆ ಮಾಡಮ್ಮಾ..

ಕನಸಿನ ಲೋಕಕೆ ಜಾರಮ್ಮಾ..


ಲಾಲಿ ಹಾಡು ಸಾಗುತ್ತಿತ್ತು..!

~ವಿಭಾ ವಿಶ್ವನಾಥ್

ಗೀಳಿಗೊಂದು ಬ್ರೇಕ್ (ಬೆಳಕಿಂಡಿಯ ಕತೆಗಳು - 66)

 


"ನಾನೂ ನಿನ್ನಂತೆ ಪುಸ್ತಕ ಓದಬೇಕು, ಏನಾದರೂ ಬರೆಯಬೇಕು. ಇದಕ್ಕೆಲ್ಲಾ ಹೇಗೆ ಸಮಯ ಹೊಂದಿಸುತ್ತೀಯ" ಎಂದು ಪ್ರಶ್ನೆ ಕೇಳಿದ ಗೆಳತಿಗೆ ಉತ್ತರ ಕೇಳುವ ಸಂಯಮವೂ ಇರದೆ ಮೊಬೈಲ್ ನಲ್ಲಿ ಸ್ಕ್ರೋಲ್ ಮಾಡುತ್ತಾ ಕಳೆದುಹೋಗಿದ್ದಳು. 

"ಮೊಬೈಲ್ ಬಿಟ್ಟರೆ ಎಲ್ಲಕ್ಕೂ ಸಮಯ ಹೊಂದಿಸಿಕೊಳ್ಳಬಹುದು" ಎಂದು ಅವಳ ಫೋನ್ ಕಿತ್ತು ತನ್ನ ಬ್ಯಾಗ್ ನಲ್ಲಿ ಹಾಕಿಕೊಂಡವಳು ಗೆಳತಿಯ ಅತಿಯಾದ ಮೊಬೈಲ್ ಗೀಳಿಗೆ ಬ್ರೇಕ್ ಹಾಕುವುದರಲಿದ್ದರೆ.. ಇನ್ನಾದರೂ ಸಂಯಮ ರೂಢಿಸಿಕೊಂಡು ಬದಲಾಗಬೇಕು ಎನ್ನುವ ಆಲೋಚನೆಯಲ್ಲಿದ್ದಳು ಗೆಳತಿ.

~ವಿಭಾ ವಿಶ್ವನಾಥ್

ಉಡುಗೊರೆಯ ಸಮಯ (ಬೆಳಕಿಂಡಿಯ ಕತೆಗಳು - 65)

 


"ನಾಳೆ ನಿನ್ನ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಬೇಕು ಕೇಳು ಕೊಡಿಸುತ್ತೇನೆ, ಅಷ್ಟು ಖರ್ಚಾದರೂ ಪರವಾಗಿಲ್ಲ" ಎಂದವನ ಮಾತು 'ಯಾವ ವರ ಕೇಳುವೆಯೋ ಕೇಳು. ತಥಾಸ್ತು' ಎಂಬಂತೆ ಭಾಸವಾಗಿತ್ತು.

ಬೆಲೆಬಾಳುವ ಉಡುಗೊರೆಗಿಂತ ಅವನ ಜೊತೆ ಸಮಯ ಕಳೆಯುವುದು ಮುಖ್ಯವಾಗಿತ್ತು ಅವಳಿಗೆ. ಆದರೆ, ಅವನ ಬ್ಯುಸಿ ಶೆಡ್ಯೂಲ್ ಅನ್ನು ಬ್ರೇಕ್ ಮಾಡುವ ಮನಸ್ಸಿರಲಿಲ್ಲ

"ಏನಿಲ್ಲ" ಎಂದು ಚುಟುಕಾಗಿ ಮಾತು ಮುಗಿಸಿದವಳಿಗೆ "ನಾಳೆ ಇಡೀ ದಿನ ನಿನ್ನದೇ" ಎಂದು ಕಣ್ಣು ಮಿಟುಕಿಸಿದವನನ್ನು ಕಂಡು ಇಚ್ಚೆಯನರಿತು ನಡೆವ ಪತಿ, ಅವನ ಜೊತೆಗಿನ ಸಮಯಕ್ಕಿಂತ ಮಿಗಿಲಾದ ಉಡುಗೊರೆ ಬೇರೇನು ಎನ್ನಿಸಿತ್ತು.

~ವಿಭಾ ವಿಶ್ವನಾಥ್


ಪ್ರಾರ್ಥನೆ (ಬೆಳಕಿಂಡಿಯ ಕತೆಗಳು - 64)

 


ಯುದ್ದದ ಹೆಸರು ಮನದಲ್ಲಿ ತಲ್ಲಣ ಮೂಡಿಸುತ್ತಿತ್ತು. ಇತ್ತೀಚಿನ ಜಾಗತಿಕ ಬೆಳವಣಿಗೆಗಳ ವಾರ್ತೆ ನಿತ್ಯವೂ ಟಿ. ವಿ, ಪೇಪರ್, ಸೋಶಿಯಲ್ ಮೀಡಿಯಾಗಳಲ್ಲಿ ಕಂಡು ಅಗತ್ಯಕ್ಕಿಂತ ಹೆಚ್ಚೇ ಕಳವಳವಾಗುತ್ತಿತ್ತು.

ಇಂದು ಮಾತ್ರವಲ್ಲ ಎಂದಿಗೂ ಯುದ್ದದ ನೆನಪೆಂದರೆ ಅವಳಿಗೆ ಸದಾ ಆತಂಕವೇ.. ರಾಮಾಯಣ, ಮಹಾಭಾರತದ ಯುದ್ಧ, ಕಾರ್ಗಿಲ್ ಯುದ್ಧ, ಹಿರೋಶಿಮಾ, ನಾಗಾಸಾಕಿಯ ದಾಳಿಗಳು ಎಲ್ಲವೂ.. 

ಅಷ್ಟಕ್ಕೂ ಅವಳಿಗೆ ಕಳೆದುಕೊಳ್ಳುವಂತಹದ್ದು ಏನೂ ಇರಲಿಲ್ಲ. ಯಾರೂ ಇರಲಿಲ್ಲ. ಗಂಡ, ಮಗ ಇಬ್ಬರನ್ನೂ ದೇಶಕ್ಕಾಗಿ ಅರ್ಪಿಸಿದವಳು "ಎಲ್ಲ ತಾಯಂದಿರ ಮಕ್ಕಳೂ ಸುಖವಾಗಿರಲಿ, ಸೌಖ್ಯದಿಂದಿರಲಿ" ಎಂದಷ್ಟೇ ಪ್ರಾರ್ಥಿಸುತ್ತಾಳೆ.

~ವಿಭಾ ವಿಶ್ವನಾಥ್

ಭರವಸೆ (ಬೆಳಕಿಂಡಿಯ ಕತೆಗಳು - 63)


 ನಮ್ಮ ಆಚಾರ-ವಿಚಾರ ತಿಳಿಯದ ಫಾರಿನ್ ಹುಡುಗಿಯನ್ನು ಮನೆ ಸೊಸೆ ಎಂದು ಒಪ್ಪುವುದಾದರೂ ಹೇಗೆ ಎಂದು ಹಿಂಜರಿಯುತ್ತಿದ್ದ ಅಪ್ಪ-ಅಮ್ಮನಿಗೆ ಅಂದು ತಮ್ಮ ಪ್ರೀತಿಯ ಆಳ ಅರ್ಥ ಮಾಡಿಸಿದ್ದ ಮಗ. ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿದ್ದವರಿಗೆ ಇಂದು ಸೊಸೆಯ ಮೌಲ್ಯ ಅರ್ಥವಾಗಿತ್ತು.

ಗೊತ್ತಿಲ್ಲದಿದ್ದರೂ ಎಲ್ಲವನ್ನೂ ಕಲಿತು ತಮ್ಮ ಆಚಾರ-ವಿಚಾರವನ್ನು ಕಲಿತು ಪ್ರೀತಿಯಿಂದ ಒಪ್ಪಿ ಅಪ್ಪಿರುವ ಸೊಸೆ ಹೆಮ್ಮೆ ಮೂಡಿಸಿದ್ದಳು. ಬದಲಾಗುತ್ತಿರುವುದು ಯುವ ಜನತೆಯ ಮತ್ತೊಂದು ಮಜಲು ಭರವಸೆ ಮೂಡಿಸಿತ್ತು.

~ವಿಭಾ ವಿಶ್ವನಾಥ್

ತಿತ್ತಿಬ್ವಾಸನ ಟೈಟಾನ್ ವಾಚು (ಪುಸ್ತಕ ಯಾನ - 480)


ಪುಸ್ತಕದ ಶೀರ್ಷಿಕೆ : ತಿತ್ತಿಬ್ವಾಸನ ಟೈಟಾನ್ ವಾಚು

ಲೇಖಕರು : ದಿಲೀಪ್ ಎನ್ಕೆ

ಪ್ರಕಾಶಕರು : ಈಶ್ವರಿ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 148

ಬೆಲೆ : 178 ರೂ.


ತಿತ್ತಿಬ್ವಾಸನ ಟೈಟಾನ್ ವಾಚು ದಿಲೀಪ್ ಎನ್ಕೆ ಅವರ ನಾಲ್ಕನೇ ಕೃತಿ ಹಾಗೂ ಎರಡನೆಯ ಕಥಾ ಸಂಕಲನ. ಇವರ ಮೊದಲ ಕಥಾ ಸಂಕಲನ ಬಲಿಷ್ಠ. ಈ ಕಥಾ ಸಂಕಲನದ ಕೆಲವು ಕಥೆಗಳು ಕೆಂಡಸಂಪಿಗೆ ಬ್ಲಾಗ್ ನಲ್ಲಿ ಹಾಗೂ ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಈ ಕಥಾ ಸಂಕಲನದಲ್ಲಿ ಒಟ್ಟು ಒಂಬತ್ತು ಕಥೆಗಳಿವೆ.


ತಿತ್ತಿಬ್ವಾಸನ ಟೈಟಾನ್ ವಾಚು : 

ಕೊಕ್ಕರಕ್ಕಿ ಹಾಗೂ ತಿತ್ತಿಬ್ವಾಸ ಎಂಬ ಎರಡು ಪಾತ್ರಗಳು ಓದುಗರನ್ನು ಕಥೆಯೊಳಗೆ ಸೆಳೆದುಕೊಂಡು ಹೋಗುತ್ತವೆ. ಇಲ್ಲಿ ಗೆಳೆಯ ಧನಂಜಯನೇ ಕೊಕ್ಕರಕ್ಕಿ. ಆತನ ಮೂಲಕವೇ ಇಲ್ಲಿ ಕಥೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಅಮ್ಮನಿಲ್ಲದೆ, ಮಲತಾಯಿ ಬಂದ ನಂತರ ತಿತ್ತಿಬ್ವಾಸನ ಬದುಕು ಹೇಗಿತ್ತು..? ತನ್ನ ಕೈಯಲ್ಲಿದ್ದ ಟೈಟಾನ್ ವಾಚು ಅಮ್ಮ ಕೊಟ್ಟಿದ್ದು ಅಮ್ಮನ ಪ್ರತಿರೂಪವೇ ಎಂದು ಭಾವಿಸುತ್ತಿದ್ದವನು ವಾಚ್ ಅನ್ನು ತೆಗೆಯುವ ಅನಿವಾರ್ಯ ಸಂದರ್ಭ ಬಂದದ್ದೇಕೆ..? ಬಳ್ಳಾರಿಯಲಿ ಪಿ.ಟಿ ಶಿಕ್ಷಕನ ಕೆಲಸ ಸಿಕ್ಕಿದರೂ ತಿತ್ತಿಬ್ವಾಸನಿಗೆ ಅಲ್ಲಿಗೆ ಹೋಗದಂತಹ ಸಂದರ್ಭ ಬಂದದ್ದಕ್ಕೆ ಕಾರಣವೇನು..? ಆತನ ಬದುಕಿನ ದಾರುಣ ಕಥೆ ಸಿಗುತ್ತದೆ. ಇಲ್ಲಿ ಕಥೆ ಹಾಗೂ ಕಾವ್ಯ ಎರಡರ ಮೂಲಕ ವಿಭಿನ್ನವಾಗಿ ಕಥೆಯನ್ನು ನಿರೂಪಿಸಿದ್ದಾರೆ.


ಸುಟ್ಟಿರದೇ ಮೂರ್ ದ್ವಾಸ : ಅಣಕಿಸುವಂತೆಯೇ ಶುರುವಾಗುವ ಹಾಡಿನಲ್ಲಿರುವ ಸಾಲಿನಂತೆ ಇಲ್ಲಿ ಬಡತನ ಕಾಣಸಿಗುತ್ತದೆ. ತಾವು ಕಷ್ಟಪಟ್ಟರೂ ಮಕ್ಕಳು ಓದಿ ಮುಂದೆ ಬರಲೆಂದು ಆಶಿಸುವ ತಂದೆ ತಾಯಿ ಇಲ್ಲಿ ಕಾಣಿಸುತ್ತಾರೆ. ಬುದ್ಧಿ ಬಲಿಯದ ವಯಸ್ಸಿನ ಉಡಾಫೆಯ ಮಗ ಸಿದ್ದನಿದ್ದಾನೆ. 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು ಸಿದ್ದನ ಕಥೆ ಹೇಳಿದ್ದೇಕೆ.. ಬದುಕಿನ ಬದಲಾವಣೆ ಎಲ್ಲಿ ಶುರುವಾಗುತ್ತದೆ ಮತ್ತು ಹೇಗೆ ಎಂಬುದರ ಚೆಂದದ ಕಥೆ.


ದೊಡ್ಡ ಸಂಪಿಗೆಯ ತಿರುವು : ಹುಚ್ಚಾಲಮ್ಮನ ಒಕ್ಕಲಿಗೆ ಸೇರಿದ ಕಾರಣಕ್ಕೆ ಹುಚ್ಚಾಲಿ ಎಂದು ಹೆಸರು ಕರೆದಿರಬೇಕು ಎಂದುಕೊಂಡರೂ ಮೂಲ ಕಥೆ ಅವಳ ಹೆಸರ ಹಿಂದಿನ ಮರ್ಮವನ್ನು ಬೇರೆಯೇ ಹೇಳುತ್ತದೆ. ಜೊತೆಗೆ ಆಕೆಯ ತಂದೆಯ ನ್ಯಾಯ ನಿಷ್ಠುರತೆಯ ಪರಿಚಯವನ್ನು ಮಾಡಿಸುತ್ತದೆ. ಹುಚ್ಚಾಲಿಯ ಸಾಂಸಾರಿಕ ಬದುಕು ಹೇಗಿತ್ತು..? ಆಕೆಯ ಗಂಡ ಕಾಣೆಯಾದದಕ್ಕೂ.. ಅವಳ ಭ್ರಮೆಗೂ ಇರುವ ಸಂಬಂಧವೇನು..? ಕಣ್ಣಿಗೆ ಕಂಡದ್ದು ಅಥವಾ ಅಂದುಕೊಂಡದ್ದೇ ನಿಜ ಎನ್ನುವ ದೃಷ್ಟಿಕೋನವನ್ನು ಬದಲಿಸುವ ಕಥೆ ಇದು.


ಕಾಕ್ಟೇಲ್ : ವೀರೇಶ್ ಮಾಡುತ್ತಿದ್ದ ಕೆಲಸದ ಪರಿಚಯವನ್ನು ಮಾಡಿಸುತ್ತಲೇ ಆತನ ಕಥೆ, ಕಾದಂಬರಿಗಳನ್ನು ಓದುವ ಗೀಳು ಹಚ್ಚಿಕೊಂಡದ್ದು ಹಾಗೂ ಓದನ್ನು ಆಸ್ವಾದಿಸುತ್ತಿದ್ದ ಬಗೆಯ ಜೊತೆಗೆ ಅಚಾನಕ್ಕಾಗಿ ಸಿಕ್ಕ ಗೆಳೆತನಗಳಲ್ಲಿ ಸಾಹಿತ್ಯಕ್ಕೆ ಕನೆಕ್ಟ್ ಆದ ಗೆಳೆತನಗಳು ಕಾಣುತ್ತವೆ. ಆ ಗೆಳೆಯರ ಗುಂಪಿನಲ್ಲಿ ಪ್ರದೀಪ್ ಬರೆದ ಕಾಗದ ಒಂದು ಆತನ ಬದುಕಿಗೆ ಸಂಬಂಧಪಟ್ಟಿದ್ದೇ ಆದರೂ.. ವೀರುವಿನ ಒಂದು ನಿರ್ಲಕ್ಷ್ಯ ಪ್ರದೀಪ್ ಹಾಗೂ ವೀರುವಿನ ಬದುಕನ್ನೇ ಬುಡಮೇಲಾಗಿಸುವ ಬಗೆ ಇಲ್ಲಿದೆ. 


ಕುಂಟು ಸೇತುವೆ : ಇದೊಂದು ಪ್ರೇಮ ಕಥೆ. ಇಲ್ಲಿ ಪ್ರೇಮ ಯಶಸ್ವಿಯಾಯಿತೋ ಅಥವಾ ವಿಫಲವಾಯಿತೋ ಎಂಬುದನ್ನು ಓದಿ ನೋಡಿ. ಆದರೆ, ಈ ಕಥೆಯ ಕೊನೆಯಲ್ಲಿ ಬರುವ ಸಾಲು ಈ ಕಥೆಯನ್ನು ಬೇರೆಯದ್ದೇ ಆಯಾಮದಲ್ಲಿ ತೋರುವ ಸಾಮರ್ಥ್ಯ ಹೊಂದಿದೆ. 

ಸಂದರ್ಭ : ಕುಂಟು ಸೇತುವೆಯ ಕೆಳಗೆ ಮೀನುಗಳಿಗೆ ಕಡಲೆಪುರಿ ಇಡುತ್ತಾ ಕುಳಿತಿದ್ದ ಆತ ಹಾಗೂ ಪಚ್ಚಿ.

"ನಾನು ನನ್ನದೇ ಆದ ರೀತಿಯಲ್ಲಿ ಹೇಳಿದ ಅವನ ಕಥೆಯನ್ನು ಕೇಳಿ ಅವನಿಗೆ ಹೇಗಾಯಿತು ಏನೋ?"

ಈ ಕಥೆಯ ಕುರಿತು ನೀವೇ ಓದಿ ನೋಡಿ.


ಅಂಬಾಸಿಡರ್ ಕಾರು : ಸುಹಾಸ್ ತಿಳಿದೋ ತಿಳಿಯದೆಯೋ ಸಣ್ಣ-ಪುಟ್ಟ ತಪ್ಪನ್ನೂ ಬೆಟ್ಟದಷ್ಟೆಂದು ಭಾವಿಸಿ ಭಯಭೀತನಾಗುತ್ತಿದ್ದ. ನಲುಗುತ್ತಿದ್ದ, ನರಳುತ್ತಿದ್ದ. ಆದರೆ, ಕ್ಷಮೆ ಕೇಳಿ ಮತ್ತೆ ಸರಿಪಡಿಸಿಕೊಂಡು ಸಂತಸವನ್ನು ಹಂಚಿಕೊಳ್ಳುವುದು ಸಹ ಅಷ್ಟೇ ಆಪ್ತವಾಗಿ ಹಾಗೂ ಗಾಢವಾಗಿ. 

ಎಳ್ಳಮಾವಾಸ್ಯೆಯ ದಿನ ನಡೆದ ಒಂದು ಘಟನೆ ಅವನಿಗೆ ಗಾಢವಾಗಿ ಬಾಧಿಸುತ್ತಿತ್ತು. ತಪ್ಪು ಇವನದ್ದೇ.. ಅಪಘಾತವೆಂದರೆ ಅದು ಒಂದು ಕ್ಷಣದ ಮೈಮರೆಯುವಿಕೆ. ಈತ ಮಾಡಿದ ಅಪಘಾತಕ್ಕೆ ಬಲಿಯಾದ ವ್ಯಕ್ತಿ ಇವನನ್ನು ಸುಮ್ಮನೆ ಬಿಟ್ಟುಬಿಟ್ಟಿದ್ದ. ಆದರೆ, ಆತನ ಮಾತಿನಿಂದ ಪಶ್ಚಾತ್ತಾಪ ಪಡುತ್ತಾ ಆ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಲು ಅಪ್ಪ, ಅತ್ತೆ ಹಾಗೂ ಪುಟ್ಟಿಯ ಜೊತೆ ಹೊರಡುತ್ತಾನೆ. ಪುಟ್ಟಿ ಎಲ್ಲರಂತಲ್ಲ. ಅಂದು ಅಲ್ಲಿಗೆ ಹೋದಾಗ ಅಂಬಾಸಿಡರ್ ಕಾರು ಕಂಡ ಪುಟ್ಟಿ ಕೆರಳಿದ್ದೇಕೆ..? 

ಕೆಲವೊಮ್ಮೆ ಸಂತ್ರಸ್ತರು ಎಂದು ಭಾವಿಸುವವರು ನಿಜಕ್ಕೂ ಸಂತ್ರಸ್ತರೇ ಆಗಿರುತ್ತಾರೆಯೇ..?


ಭೈರೂಪ : ವಂದನಾ ಹಾಗೂ ಅಭಿಯ ಮನಸ್ತಾಪ ಹಾಗೂ ಅವರಿಬ್ಬರ ಮನದ ತುಮುಲಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ವಂದನಾ ಹಾಗೂ ಅಭಿ ಒಬ್ಬರಿಗೊಬ್ಬರು ಏನಾಗಬೇಕು ಎಂಬ ಸಂಬಂಧ ತೆರೆದುಕೊಂಡಾಗ ಅವರಿಬ್ಬರ ನಡುವಿನ ಮನದ ಮಾತುಗಳು ನಿಜಕ್ಕೂ ಸರಿಯೇ ಎಂಬ ಆಲೋಚನೆ ಮೂಡುತ್ತಿರುವಾಗಲೇ ವಂದನಾ ಅಭಿ ಎಂದು ಕರೆಯುತ್ತಿದ್ದದ್ದು ಅನಿತಾಳನ್ನು ಎಂದು ತಿಳಿದುಬರುವಷ್ಟರಲ್ಲಿ ಕಥೆ ಕೊನೆಯಾಗುತ್ತದಾದರೂ.. ಕಥೆ ಮತ್ತೊಂದು ಆಯಾಮದಲ್ಲಿ ಇನ್ನೊಮ್ಮೆ ಓದಿಸಿಕೊಳ್ಳುತ್ತದೆ.


ಕ್ವಲ್ಲನಂಜಿ : ಕ್ರಿಶ್ಚಿಯನ್ನರ ಸಮಾಧಿ ಹಾಗೂ ಅವರು ಅಂತ್ಯಸಂಸ್ಕಾರ ಕಾರ್ಯವನ್ನು ಮಾಡುವ ಕ್ಷಣದಿಂದ ತೆರೆದುಕೊಳ್ಳುವ ಕಥೆ ನಂಜಿಯ ಹಾಲುತುಪ್ಪದ ದಿನ ಸಮಾಧಿಯ ಮೇಲಿಟ್ಟ ತಿಂಡಿ-ತಿನಿಸನ್ನು ಕಾಗೆ ಮುಟ್ಟದೆ ಇರುವಾಗ ಅಯ್ಯನಿಗೆ ಗೊತ್ತಾಗದಂತೆ ನಂಜೆಯ ದೊಡ್ಡ ಮಗ ಮಾಡಿದ ಕೆಲಸವೇನು..? ಎನ್ನುವುದರಿಂದ ಶುರುವಾಗಿ, ಅಯ್ಯ ಹಾಗೂ ನಂಜಿಯ ಯೌವ್ವನದ ದಿನಗಳಿಂದ ಇಂದಿನ ಆಪ್ತತೆಯವರೆಗೂ ತೆರೆದುಕೊಳ್ಳುತ್ತದೆ. ಅಯ್ಯವನ್ನು ಸಮಾಧಾನಪಡಿಸಿದವರಾರು..? ನಂಜಿಯ ಕೊನೆಯ ಆಸೆ ಏನಿತ್ತು..? 


ವಿಕಾರಿ : ಇಲ್ಲಿ ಪ್ರತಿ ಕಥೆಗೂ ಶೀರ್ಷಿಕೆ ಚಿತ್ರಗಳಿವೆ. ಆದರೆ, ಈ ಕಥೆಯ ಚಿತ್ರವಂತೂ ಅನ್ವರ್ಥದಂತಿದೆ. 

ಎಲ್ಲಾ ಪತ್ರಗಳು ಸರಿಯಾಗಿ ಹೊಂದಿ ಕೆಲಸಕ್ಕೆಂದು ಹೋದ ಮುರುಗ ಬಂದಾಗ ಮೊದಲಿನಂತಿರಲಿಲ್ಲ. ಅಮ್ಮನ ಉತ್ಸಾಹಕ್ಕೂ ಅವನ ನಿರುತ್ಸಾಹಕ್ಕೂ ಬಹಳ ವೇ ಅಂತರ. 

ಅದಕ್ಕೂ ಮೊದಲು ಆಕೆಯ ನೆನಪಿನಾಳದ ಮಾತುಗಳು ಇಂತಿವೆ.

"ಹೆಣ್ಣ ತ್ತಾಣ ನೂರ್ಮಡಿಗೊಳ್ಳುವುದಕ್ಕೆ ತಾಯ್ತನವೇ ವೇದಿಕೆ. ಹೆಣ್ಣ ಹುಟ್ಟು, ಹೆಣ್ಣ ಬದುಕು ಸಾರ್ಥಕ್ಯದ ಗುರಿ ಮುಟ್ಟಿ ತೇಲಾಡುವಂಥದ್ದು ಆಗಲೇ. ಯಾರೇ, ಏನೇ ಎದುರಾದರೂ ಈಸುವ ಛಲ ಹೆಣ್ಣಿನೊಳಗೆ ಪುಟಿದೇಳುವಂತದ್ದು ಅಲ್ಲಿಂದೀಚೆಗೇ. ಇಂತಹ ಮಧುರ ಸುಮಧುರ ಪ್ರಕೃತಿಯಲ್ಲಿ ನನ್ನೊಳಗೊಬ್ಬ ವಿಕಾರಿ ಮೈದಾಳುವುದೇ..?!"

ಪಲ್ಲಮ್ಮನ ಮನಸ್ಸಿನ ಈ ಮಾತುಗಳು ಯಾವ ನೆನಪಿನಿಂದ ವಾಸ್ತವಕ್ಕೆ ಕರೆತರುತ್ತವೆ..? ಇದರ ಹಿನ್ನೆಲೆ ಏನು..?

ಕೆಲವು ವೃತ್ತಿಗಳು ವಂಶಪಾರಂಪರ್ಯವಾಗಿ ಮುಂದುವರಿಯುವುದಿಲ್ಲ. ಅದಕ್ಕೆ ಹಲವು ಕಾರಣಗಳು. ಇಲ್ಲಿ ಅಂತಹದ್ದೇ ಒಂದು ವೃತ್ತಿ ಇದೆ. ಆ ವೃತ್ತಿ ಸಮಾಜ ಎಷ್ಟೇ ಆಧುನಿಕತೆ ಕಂಡರೂ ಬದಲಾಗದ ವಾಸ್ತವತೆಗೆ ಹಿಡಿದ ಕನ್ನಡಿಯಂತಿದೆ. 

ನನಗೇಕೋ ಈ ಕಥೆಯ ಅಂತ್ಯ ಬದಲಾವಣೆಯನ್ನು ಬಿಂಬಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿದರೂ.. ಆ ಬದಲಾವಣೆ ಅಷ್ಟು ಸುಲಭವಲ್ಲ ಎನ್ನುವ ವಾಸ್ತವತೆ ತೋರಿರುವ ಕಥೆಗಾರರೇ ಸರಿಯೇನೋ ಎಂದೂ ಅನ್ನಿಸಿತು.


ಈ ಕಥಾ ಸಂಕಲನದಲ್ಲಿ ಭಾಷೆ ಚಾಮರಾಜನಗರ, ಕೊಳ್ಳೇಗಾಲ ಭಾಗದ ಪ್ರಾಂತೀಯ ಕನ್ನಡ. ಅಲ್ಲಿನ ಆಡು ನುಡಿ, ಬೈಗುಳ ಹಾಗೂ ಮಂಟೇಸ್ವಾಮಿ ಪದಗಳು ವಿಭಿನ್ನ ಓದಿನ ಅನುಭವ ನೀಡುತ್ತವೆ. ಆಡುಭಾಷೆಯಿಂದಾಗಿ ಓದು ನಿಧಾನವಾದರೂ.. ಆಸಕ್ತಿಕರವಾಗಿ ಓದಿಸಿಕೊಂಡು ಹೋಗುವ ಕಥೆಗಳು ಇಲ್ಲಿವೆ. ಭಾಷೆ ಕಾವ್ಯಾತ್ಮಕವಾಗಿ ಹಾಗೂ ಸೆಳೆಯುವಂತಿದೆ. ಇನ್ನಷ್ಟು ವೈವಿಧ್ಯಮಯ ಬರಹಗಳು ಮೂಡಿ ಬರಲಿ ಎಂದು ಹಾರೈಸುವೆ. 


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 2, 2026

ಒಂದೇ ನೋವಿಗೆ ಎಷ್ಟೆಂದು ಘಾಸಿಗೊಳ್ಳುವುದು..?


ನನಗಂತೂ ಆಗಾಗ ಬಹಳಷ್ಟು ಜ್ಞಾನೋದಯಗಳಾಗುತ್ತಿರುತ್ತವೆ. ಕೆಲವೊಂದು ಅಷ್ಟೇ ಬೇಗ ಅದರ ತೀವ್ರತೆಯನ್ನು ಕಳೆದುಕೊಳ್ಳಬಹುದಾದರೂ ಹೊಳೆಯುವ ಹೊಳವುಗಳು ಆ ಕ್ಷಣಕ್ಕೆ ಸಾಂತ್ವನ ನೀಡುತ್ತವೆ. ಅದರಲ್ಲೂ ಈಗೀಗ ಮಗಳ ನಡೆಗಳನ್ನೂ ಮೆಲುಕು ಹಾಕುವಾಗ, ಆಟೋಟಗಳನ್ನು ಗಮನಿಸಿ ಯಾವಾಗಲೋ ನನ್ನದೇ ಲಹರಿಯಲ್ಲಿರುವಾಗ ಯೋಚನಾಲಹರಿ ಮತ್ತೊಂದು ಕಡೆ ಹೊರಳುತ್ತದೆ. ಇದು ಹಾಗೆ ಹೊಳೆದದ್ದೇ..


ಕಳೆದ ವಾರ ಮಗಳಿಗೆ ವ್ಯಾಕ್ಸಿನ್ ಹಾಕಿಸಿದಾಗ ಆಸ್ಪತ್ರೆಯಲ್ಲಿ ನೋವಿನ ತೀವ್ರತೆಯಲ್ಲಿ ಒಂದೆರಡು ನಿಮಿಷ ಅತ್ತದಷ್ಟೇ. ಅವಳಿಗೆ ಮತ್ತೆ ಅದರ ಕಡೆ ಗಮನವಿರಲಿಲ್ಲ. ಮನೆಗೆ ಬಂದು ಆ ಬ್ಯಾಂಡೆಡ್ ನೋಡಿದಾಗ, ಎಲ್ಲಿ ಚುಚ್ಚಿ ಮಾಡಿದ್ದಾರೆ ಎಂದು ನಾವೇ ಬೇಕೆಂದು ಪ್ರಶ್ನಿಸಿದಾಗಲೆಲ್ಲಾ ಅವಳು ಅದನ್ನು ನೋಡಿಕೊಂಡಂತೆಲ್ಲಾ ಅಳು. ಅದೂ ಒಂದರ್ಧ ಗಂಟೆಯಷ್ಟೇ.. ನಂತರದ ಒಂದು ಗಂಟೆಯಲ್ಲಿ ಆಟದ ಸಂಭ್ರಮದಲ್ಲಿ ಅದನ್ನು ನೋಡಿಕೊಂಡು ಅವಳೇ ನಗುತ್ತಾ ತೋರುತ್ತಿದ್ದಳು. ನಾನು ಗಟ್ಟಿಗಿತ್ತಿ ನೋಡು ಎಂಬ ಹೆಮ್ಮೆ ಇರುವಂತೆ..! ಇನ್ನೊಂದಷ್ಟು ಕ್ಷಣಕ್ಕೆ ಹಾಗೂ ನಂತರ ಅದು ಲೆಕ್ಕವೇ ಇಲ್ಲವೆಂಬಂತೆ..!


ಇದನ್ನು ಮೆಲುಕು ಹಾಕಿದಾಗ ನನಗೆ ಹೀಗೆಲ್ಲಾ ಆಲೋಚನೆ ಮೂಡಿತು. ಯಾರಿಂದಲೋ ಯಾವುದೋ ಒಂದು ಸಂದರ್ಭದಲ್ಲಿ ನೋವಾದಾಗ, ಆಘಾತ, ದ್ರೋಹ, ವಂಚನೆ, ಅವಮಾನವಾದಾಗ.. ಹೀಗೆ ಯಾವುದೋ ಒಂದು ವಿಚಾರಕ್ಕೆ ಮನಸ್ಸು ಕೆಡಿಸಿಕೊಂಡು ಆ ಕ್ಷಣದಲ್ಲಿ ರಿಯಾಕ್ಟ್ ಮಾಡುತ್ತೇವೆ. ಹಲವಾರು ಬಾರಿ ಮತ್ತದು ನಮಗೆ ಮರೆತೇ ಹೋಗಿರುತ್ತದೆ. ಸಾಮಾನ್ಯವಾಗಿ ಕೋಪ ತೋರಿಸಿಕೊಂಡ ನಂತರ ಮತ್ತದೇ ವಿಚಾರಕ್ಕೆ ಕೋಪ ಬರುವ ಸಾಧ್ಯತೆ ತೀರಾ ಕಡಿಮೆ. 


ಆ ವ್ಯಕ್ತಿಯನ್ನೋ, ವಸ್ತುವನ್ನೋ ಅಥವಾ ಆ ಕ್ಷಣವನ್ನೋ ಯಾರೋ ನೆನಪಿಸಿದಾಗ ಅಥವಾ ಅಚಾನಕ್ಕಾಗಿ ನೆನಪಾದಾಗ ನೋವಿನ ತೀವ್ರತೆ ಹೆಚ್ಚಾಗುತ್ತದೆ. ಜೊತೆಗೆ ಮನಸ್ಸು ಘಾಸಿಯಾಗುತ್ತದೆ. ಅದನ್ನು ನೆನಪಿಸಿದವರ ಮೇಲೆಯೇ ಹರಿಹಾಯುವಂತಾಗುತ್ತದೆ. ಅವರಾದರೂ ಗೊತ್ತಿದ್ದೂ ಕೆಣಕುವುದೇಕೆ..?! ಗೊತ್ತಿದ್ದೂ.. ಬೇಡವೆಂದರೂ ಮತ್ತೊಬ್ಬರ ನೋವನ್ನು ಹೆಚ್ಚಿಸುವುದೇ ಅವರ ಗುರಿಯಿರಬಹುದೇನೋ..


ಅದೂ ಒಂದಷ್ಟು ದಿನಗಳಷ್ಟೇ.. ಮತ್ತೆ ಅವರನ್ನು ನೋಡಿದಾಗ ಬರುತ್ತಿದ್ದ ಕೋಪ-ತಾಪ, ಅಸಹನೆ ಎಲ್ಲವೂ ಮರೆತಂತೆ ಮರೆಗೆ ಸರಿಯುತ್ತದೆ. ಅದೂ ಒಂದಷ್ಟು ದಿನಗಳಷ್ಟೇ.. ಮತ್ತೆ ನಾವು ಅವರ ಇರುವಿಕೆಯನ್ನೇ ನಿರ್ಲಕ್ಷಿಸಿ ನಿರ್ಲಿಪ್ತಿಗೆ ಜಾರಿ ಬಿಡುತ್ತೇವೆ ಅಥವಾ ಅವರು ಎದುರಾದರೂ ಮತ್ತೆ ಮೊದಲಿನಷ್ಟಂತೂ ಮನಸ್ಸು ಕೆಡಿಸಿಕೊಳ್ಳುವುದಿಲ್ಲ.


ಒಂದೇ ನೋವಿಗೆ ಎಷ್ಟೆಂದು ಘಾಸಿಗೊಳ್ಳುವುದು..? 

ದೈಹಿಕ ಹಾಗೂ ಮಾನಸಿಕ ನೋವು ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗದು. ಆದರೆ, ಮನಸ್ಸಿನ ನೆಮ್ಮದಿಗೆ, ನಿರಾಳತೆಗೆ ನಿರ್ಲಕ್ಷಿಸುವುದೋ ಇಲ್ಲವೇ ಕ್ಷಮಿಸಿಬಿಡುವುದೋ ಮಾಡುತ್ತೇವೆ. ಇದೆಲ್ಲದರಾಚೆಗೆ ನಮಗೆ ನೆನಪಿರಬೇಕಾಗುವುದು ಪದೇಪದೇ ಅಂತಹ ಮೋಸ, ಘಾಸಿಗೆ ಒಳಗಾಗದಂತೆ ನಮ್ಮನ್ನು ರಕ್ಷಿಸಿಕೊಳ್ಳುವುದು. ಕೆಲವೊಮ್ಮೆ ಕ್ಷಮಿಸುವುದು ಅನಿವಾರ್ಯವಾಗುತ್ತದೆ. ಆದರೆ, ಮರೆಯುವುದಿಲ್ಲ. ಹಾಗೆಂದು ಅದನ್ನೇ ಸಾಧಿಸುವುದೂ ಅಲ್ಲ. ಮರೆಯುವಷ್ಟೇ ಮರೆಯದಿರುವುದೂ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ, ಅದೇ ಪಾಠವನ್ನು ಬದುಕು ನಾವು ಕಲಿಯುವವರೆಗೂ ಬೇರೊಂದು ರೂಪದಲ್ಲಿ ಕಲಿಸುತ್ತಲೇ ಇರುತ್ತದೆ. ಅಲ್ಲವೇ..?!


~ವಿಭಾ ವಿಶ್ವನಾಥ್ 

ಆತಂಕ ಕರಗಿ

 


ಪ್ರತಿ ಆತಂಕವೂ ಸೃಷ್ಟಿಯಾಗಿದ್ದು

ಭವಿಷ್ಯದ ಮುಂದಾಲೋಚನೆಯಲ್ಲಿ

ದೂರಾಲೋಚನೆಯಲ್ಲಿ


ಪ್ರತಿ ಆತಂಕವೂ ಕರಗಿದ್ದು

ಆ ಕ್ಷಣ ಕಳೆದಾಗ 

ವಾಸ್ತವದ ನಿಜ ಹಿತವಾದಾಗ


ನಿರಾತಂಕದ ಹಿಂದೆ

ಭವಿಷ್ಯದ ಭಯವಿರಲಿಲ್ಲ

ವಾಸ್ತವ ಹೆದರಿಸಲಿಲ್ಲ


~ವಿಭಾ ವಿಶ್ವನಾಥ್

ಬಂಧ

 


ನಿಷ್ಠುರವಾದ ನಿರಾಕರಣೆ

ವಾದ - ಪ್ರತಿವಾದಗಳು

ಒಮ್ಮೆ ಘಾಸಿಗೊಳಿಸಿದರೂ

ಒಳ್ಳೆಯದಕ್ಕೆಂದು ಅರಿವಾದಾಗ

ಬಂಧ ಗಟ್ಟಿಯಾಗಿತ್ತು


ನಾಟಕದ ಪ್ರೀತಿ ತೋರಿ

ಬೆನ್ನಿಗೆ ಇರಿದದ್ದು

ಜೀವನವಿಡೀ ನೆನಪಲ್ಲುಳಿಯಿತು

ಬಂಧ ಮಾತ್ರ ಕಳಚಲಿಲ್ಲ

ಅಳಿದದ್ದು ನಂಬಿಕೆಯೂ..!


~ವಿಭಾ ವಿಶ್ವನಾಥ್

ಮಾನದಂಡ

 


ಬುದ್ಧಿವಂತಿಕೆಯ ಮಾನದಂಡ 

ಅಂಕ, ಜ್ಞಾನಾರ್ಜನೆ ಮಾತ್ರವಲ್ಲ..!

ಓದಿದ್ದನ್ನು ಉಪಯೋಗಿಸುವುದು

ಕಲಿತಿದ್ದನ್ನು ಹಂಚಿಕೊಳ್ಳುವುದು

ಅಷ್ಟೇ ಅಲ್ಲ..!

ಕಲಿತದ್ದು ಸಾಸಿವೆಯಷ್ಟಿದ್ದರೆ

ಕಲಿಯುವುದು ಸಾಗರದಷ್ಟಿದೆ 

ಎಂಬುದ ಮರೆಯದಿರುವುದು

ಹಾಗೆಯೇ.. ಯಶಸ್ಸಿನ ಮಾನದಂಡ

ಕೇವಲ ಗೆಲುವಲ್ಲ

ಎಲ್ಲ ಸಿಕ್ಕ ನಂತರವೂ

ವಿನಯತೆಯನ್ನು ಮರೆಯದಿರುವುದು

ಮೆರೆಯದಿರುವುದು..!


~ವಿಭಾ ವಿಶ್ವನಾಥ್

ಸಣ್ಣ ತಪ್ಪಿನ ಹಿಂದೆ (ಬೆಳಕಿಂಡಿಯ ಕತೆಗಳು - 62)

 


ರಾತ್ರಿಯ ಸಣ್ಣ ಮನಸ್ತಾಪ ಅವಳು ಹಾಕುತ್ತಿದ್ದ ರಂಗೋಲಿಯನ್ನೂ ಪ್ರಭಾವಿಸಿತ್ತು. ಎಷ್ಟೇ ಕೇಂದ್ರೀಕರಿಸಿದರೂ ಸಣ್ಣ ತಪ್ಪು ಆಗುತ್ತಲೇ ಇತ್ತು. ಒಮ್ಮೆ ಚುಕ್ಕಿ ಕಡಿಮೆ, ಮತ್ತೊಂದು ಸಾಲಿನಲ್ಲಿ ಹೆಚ್ಚು. ಎಲ್ಲಿಗೋ ಎಳೆಯಬೇಕಾದ ಎಳೆ ಮತ್ತೆಲ್ಲೋ..!

ಒಳಗಿನಿಂದ ತೇಲಿ ಬಂದ ಕಾಫಿಯ ಘಮಲು ಮನಸ್ತಾಪವನ್ನು ಮಾತ್ರವಲ್ಲ ಸಣ್ಣ ತಪ್ಪುಗಳನ್ನೂ ಸರಿಪಡಿಸಿತ್ತು.

~ವಿಭಾ ವಿಶ್ವನಾಥ್

ಹೊಣೆ (ಬೆಳಕಿಂಡಿಯ ಕತೆಗಳು - 61)

 


ತಮ್ಮ ಊರಿನಲ್ಲಿ ಮಾತ್ರವಲ್ಲದೆ ಅಕ್ಕ-ಪಕ್ಕದ ಹಳ್ಳಿಗಳಲ್ಲಿಯೂ ಹೂಳು ತೆಗೆದು, ಬಾವಿ ಕಟ್ಟೆ ಸರಿಪಡಿಸಿ, ಬತ್ತಿ ಹೋಗಿದ್ದ ಬೋರ್ ಗಳ ಪಕ್ಕದಲ್ಲಿ ಹಾಗೂ ಬೇರೆಡೆಗಳಲ್ಲಿ ಇಂಗು ಗುಂಡಿ ಮಾಡಿಸಿ, ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಹಾಗೂ ಇಂತಹದ್ದೇ ಯಾವುದಾದರೊಂದು ಚಟುವಟಿಕೆಯನ್ನು ವಾರಕ್ಕೊಮ್ಮೆ ತಪ್ಪದೆ ಮಾಡುವ ಕಾಲೇಜು ಡ್ರಾಪ್ ಔಟ್ ಗಳ ಗುಂಪನ್ನು ವಿಚಿತ್ರವಾಗಿ ನೋಡುತ್ತಿದ್ದರು ಜನ. 

ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡುತ್ತಾ, ಮಣ್ಣಿನ ಮಕ್ಕಳಾದವರು ಪರಿಸರ ಸಂರಕ್ಷಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿದ್ದರು. ಹೆಚ್ಚೇನಿಲ್ಲ.. ಐದು ವರ್ಷಗಳಲ್ಲಿಯೇ ಜನರಿಗೆ ಅದರ ಮಹತ್ವ ಅರಿವಾಗಿ ಅವರೊಡನೆ ಕೈಜೋಡಿಸಿದರು. "ಪ್ರಕೃತಿ ಸಂರಕ್ಷಣೆ ಎಲ್ಲರ ಹೊಣೆ" ಎಂದು ಮಕ್ಕಳಿಗೂ ಹೇಳಿಕೊಡುತ್ತಿದ್ದಾರೆ.

~ವಿಭಾ ವಿಶ್ವನಾಥ್

ಹರಸು ಬಾ ನನ್ನನು (ಪುಸ್ತಕ ಯಾನ - 479)


ಪುಸ್ತಕದ ಶೀರ್ಷಿಕೆ : ಹರಸು ಬಾ ನನ್ನನು

ಲೇಖಕರು : ಸಿ. ಎನ್. ಮುಕ್ತಾ

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2023

ಪುಟಗಳು : 328

ಬೆಲೆ : 325 ರೂ. 


ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯ ಜೊತೆ ಬೆಳೆಯದೆ, ತಾಯಿಯ ತಾಯಿ ಅಜ್ಜಿಯ ಆಶ್ರಯದಲ್ಲಿ ಬೆಳೆದು ಸಂಸ್ಕಾರ ಹಾಗೂ ವಿದ್ಯೆ ಕಲಿತ ಯುವತಿಯೊಬ್ಬಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಪರಿ ಈ ಕಾದಂಬರಿಯ ಕಥಾವಸ್ತು. ಜೊತೆಗೆ ಕೌಟುಂಬಿಕ ಮೌಲ್ಯವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.


ಕೌಶಿಕಿ ಈ ಕಥೆಯ ನಾಯಕಿ. ರಾಜಾರಾಯರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಪಾತಜ್ಜಿ ಕೌಶಿಕಿಯನ್ನು ಬೆಳೆಸಿ ದೊಡ್ಡವಳನ್ನಾಗಿಸಿದಳು. 


ಇಲ್ಲಿ ರಾಜರಾಯರ ಮನೆಯ ಪರಿಸರವನ್ನು ತಿಳಿದುಕೊಳ್ಳುವ ಅಗತ್ಯ ಕಾಣುತ್ತದೆ. ಮುಂದೆ ಕೌಶಿಕಿಗೆ ಈ ಮನೆಯ ನಂಟು ಬೆಳೆಯುವ ಬಗೆಯೂ ಈ ಕಥೆಯಲ್ಲಿದೆ. 


ರಾಜಾರಾಯರಿಗೆ ನಾಲ್ಕರ ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಪತ್ನಿ ಶಂಕರಮ್ಮ. ಮೊದಲ ಮಗ ಸುಧಾಕರ್ ಲಾಯರ್ ಆತನ ಪತ್ನಿ ಇರಲಿಲ್ಲ. ಎರಡನೆಯ ಮಗ ಪ್ರಭಾಕರ ಕಾಲೇಜು ಅಧ್ಯಾಪಕ, ಹೆಂಡತಿ ಅನುರಾಧ. ಮೂರನೆಯ ಮಗ ಸೋಮೇಶ್ವರ ಇಂಜಿನಿಯರ್ ಆಗಿದ್ದವನು. ಆತನ ಪತ್ನಿ ಸರಳ. ಕೊನೆಯ ಮಗ ದಿನಕರನಿಗಿನ್ನೂ ವಿವಾಹವಾಗಿರಲಿಲ್ಲ. ಒಬ್ಬಳೇ ಮಗಳು ಚಿನ್ಮಯಿ. ಅವಳ ಗಂಡ ಶರತ್ ಸಹ ಡಾಕ್ಟರ್. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ದಿನಕರನಿಗಿಂತ ಮೊದಲು ಹುಟ್ಟಿದವಳು ಚಿನ್ಮಯಿ. 


ಚಿನ್ಮಯಿ ಡಾಕ್ಟರ್ ಆಗಿದ್ದರೂ ತನ್ನ ನರ್ಸಿಂಗ್ ಹೋಮ್ ನಲ್ಲಿ ಹಣದಾಸೆಗೆ ಬಿದ್ದಿದ್ದಳು. ನೆಂಟರಿಗೂ ರಿಯಾಯಿತಿ ತೋರಿಸುತ್ತಿರಲಿಲ್ಲ. ಅತ್ತಿಗೆಯರ ಜೊತೆ ಆತ್ಮೀಯ ಭಾವವಿರಲಿಲ್ಲ. ಎಲ್ಲರಿಗೂ ಎಲ್ಲೆಡೆಯೂ ದರ್ಪ ತೋರುತ್ತಿದಳು. ಕೆಲಸದವರನ್ನು ಆತ್ಮೀಯವಾಗಿ ಕಂಡಿರಲಿಲ್ಲ. ಅತ್ತೆ-ಮಾವನ ಜೊತೆ ಇರಲಿಲ್ಲ. ಗಂಡ ಶರತ್ ಗೂ ನೆರವಾಗದೆ ತನ್ನ ಊಟ-ತಿಂಡಿ, ಮಕ್ಕಳ ಆರೈಕೆಗೆ ಅಮ್ಮನ ಮನೆಯನ್ನು ನೆಚ್ಚಿದ್ದವಳು.


ಕೌಶಿಕಿ ತನ್ನ ಕಂಪ್ಯೂಟರ್ ಸೈನ್ಸ್ ಬಿ .ಎಸ್ಸಿ ಮುಗಿಸಿದ ನಂತರ ಎಂ .ಎಸ್ಸಿಗೆ ಹೋಗುವ ಆಸೆ ಇದ್ದರೂ ತಾನೇ ದುಡಿದು ಓದಬೇಕೆಂದು ಕೆಲಸ ಹುಡುಕುತ್ತಿರುವಾಗ.. ರಾಜಾರಾಯರಲ್ಲಿಯೇ ಕೆಲಸ ಸಿಕ್ಕಿತ್ತು. ಬೆಳಗ್ಗೆ ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಬಿಟ್ಟು ಬಂದು, ಸಾಯಂಕಾಲ ಹೋಮ್ ವರ್ಕ್ ಮಾಡಿಸುವುದು. ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಮಕ್ಕಳ ಮನೆಗೆದ್ದಿದ್ದಳು. ಅನುರಾಧ ಹಾಗೂ ಸರಳರು ಇದರಿಂದ ತೃಪ್ತಿ ಹೊಂದಿದ್ದರು. ಆದರೆ, ಚಿನ್ಮಯಿ ಆಕೆಗೆ ಹೊಂದಿಕೊಂಡಿರಲಿಲ್ಲ. ಆಕೆಯನ್ನು ಕೆಲಸದವಳ ಹಾಗೆ ನಡೆಸಿಕೊಳ್ಳಲು ಹೋದಾಗ ಸ್ವಾಭಿಮಾನದಿಂದಲೇ ಉತ್ತರಿಸಿದ್ದಳು ಕೌಶಿಕಿ.


ಚಿನ್ಮಯಿಯ ಅಹಂಕಾರದ ಗುಣಕ್ಕೆ ಶರತ್ ಸಹ ಪಾಠ ಕಲಿಸಲು ತೀರ್ಮಾನಿಸಿದ. ಇದಕ್ಕೆ ಶಂಕರಮ್ಮನ ಸಹಕಾರವೂ ಇತ್ತು. ತಂದೆ-ತಾಯಿಯ ಅನುಪಸ್ಥಿತಿ ಮಕ್ಕಳಿಗೆ ಕಾಡಿತ್ತು. ಅದರಲ್ಲಿಯೂ ಹಿರಿಯ ಮಗಳಾದ ಚಾರುಲತಾಳಿಗೆ ಹೆಚ್ಚು. ಮುಂದೆ ಮತ್ತೊಬ್ಬ ಮಗಳು ಚಿನ್ಮಯಿಯೂ ಅದೇ ಹಾದಿ ಹಿಡಿಯುವುದೇನು ಕಷ್ಟವಿರಲಿಲ್ಲ. ಚಾರುವನ್ನು ಮನೋವೈದ್ಯರ ಬಳಿಗೆ ಕರೆದುಯ್ದ ಚಿನ್ಮಯಿ ಯಲ್ಲಿ ಕ್ರಮೇಣ ಆದ ಬದಲಾವಣೆಗಳೇನು..? ಹೆಣ್ಣುಮಕ್ಕಳ ಹೊಂದಾಣಿಕೆಯಿಂದ ಸಂಸಾರದ ಸುಖ, ಮಕ್ಕಳ ಭವಿಷ್ಯ, ನೆಮ್ಮದಿಯ ಬದುಕು ಅಡಗಿರುವುದನ್ನು ಇಲ್ಲಿ ಗಮನಿಸಬಹುದು. 


ಸುಧಾಕರನ ಮೊದಲ ಪತ್ನಿ ತೀರಿ ಹೋದದ್ದು ಹೇಗೆ..? ಸುಧಾಕರ ಅದಕ್ಕಿಂತಲೂ ಮೊದಲು ಪ್ರೀತಿಸಿದ ಶ್ಯಾಮಲಾ ಡಾಕ್ಟರ್ ಆಗಿದ್ದಳು. ಈಗಲೂ ಅವಳು ಅವಿವಾಹಿತೆಯಾಗಿಯೇ ಇದ್ದಳು. ಸುಧಾಕರನ ಜೊತೆಗೆ ಅವಳ ಮರು ವಿವಾಹವಾಗಿ ಮಕ್ಕಳು ಅವಳನ್ನು ಅಮ್ಮ ಎಂದು ಸ್ವೀಕರಿಸುವಲ್ಲಿ ಕೌಶಿಕಿ ಪಾತ್ರ ಏನಿತ್ತು..? ಶ್ಯಾಮಲಾಳ ನೇರವಂತಿಕೆಯ ಸ್ವಭಾವವನ್ನು ಇಲ್ಲಿ ಕಾಣಬಹುದಾದರೂ ಅದು ನಕಾರಾತ್ಮಕ ರೀತಿಯಲ್ಲಲ್ಲ. ಶಂಕರಮ್ಮ ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಬಾಯಮ್ಮನನ್ನು ಬಿಡಿಸುವುದಕ್ಕೂ ಶ್ಯಾಮಲಾ ಹಾಗೂ ಸುಧಾಕರನ ವಿವಾಹ ತಪ್ಪಿಸುವುದಕ್ಕೂ ನೀಡಿದ ಕಾರಣವೇನು..?


ರಾಜರಾಯರ ತಮ್ಮನ ಮಗ ಹರೀಶ ತನ್ನ ತಂಗಿ ಹರಿಣಿ ಮದುವೆಗೆ ಕರೆಯಲು ಬಂದಾಗ ಕೌಶಿಕಿಗೂ ಆತನಿಗೂ ಪರಿಚಯವಾಗಿತ್ತು. ಆತ ಮೈಸೂರಿನ ಹತ್ತಿರದ ಹಳ್ಳಿಯಲ್ಲಿದದ್ದು. ಕೌಶಿಕಿಗೆ ಆತ ಮನಸೋತ. ಬಡವರಾಗಿದ್ದರೂ.. ಗ್ರಾಜುಯೇಟ್ ಆಗಿರುವ, ಹಳ್ಳಿಯಲ್ಲಿ ಇರಲು ಒಪ್ಪುವ ಹುಡುಗಿ ಆತನ ಸಂಗಾತಿಯಾಗಿ ಬರಲು ಆತನಿಗೆ ಆಸೆ ಇತ್ತು.


ಹರಿಣಿಯ ಮದುವೆ ಹಳ್ಳಿಯಲ್ಲಿ ಆಗದೇ ಇದ್ದದ್ದು ರಾಜರಾಯರು ಹಳ್ಳಿಗೆ ಬರದೇ ಇರಲು ಶಪಥ ಮಾಡಿದ್ದು, ರಾಜರಾಯರ ತಮ್ಮ ಗಣೇಶರಾಯರ ಮೊದಲ ಪತ್ನಿ ತುಳಸಿಯ ಸಾವು, ಈಗಿನ ಪತ್ನಿ ಸುವರ್ಣಮ್ಮ ಹಾಗೂ ಅವರ ಮಗ ಹರೀಶ ಹೀಗೆ ಎಲ್ಲರ ವಿಚಾರವನ್ನು ಪಾತಜ್ಜಿ ಕೌಶಿಕಿಗೆ ತಿಳಿಸುತ್ತಾರೆ. ಸಿರಿವಂತರ ಮನೆಯ ಹಿನ್ನೆಲೆ ಬಿಚ್ಚಿಕೊಳ್ಳುತ್ತದೆ. ಹಿನ್ನೆಲೆ ಓದಿ ನೋಡಿ 


ವಠಾರದಲ್ಲಿದ್ದ ಶಾಂತಮ್ಮನವರು ಕೌಶಿಕಿಯನ್ನು ಮಗಳಂತೆಯೇ ಕಾಣುತ್ತಿದ್ದವರು. ಪಾತಜ್ಜಿಯನ್ನು ಬಹಳ ಗೌರವಿಸುತ್ತಿದ್ದವರು. ಶಾಂತಮ್ಮನವರ ಅಣ್ಣನ ಮಗಳು ಮೇಘಳ ವಿವಾಹದಲ್ಲಿ ಕೌಶಕಿಯ ಪಾತ್ರವೇನಿತ್ತು...? 


ಮೇಘಾಳ ತಂದೆ ದಯಾನಂದ ಹಾಗೂ ತಾಯಿ ಮಂದಾಕಿನಿ ಕೌಶಿಕಿಯನ್ನು ಮುಕ್ತ ಮನಸ್ಸಿನಿಂದ ಹೊಗಳಿದರು. ಅದು ಕೇವಲ ಬಾಯಿ ಮಾತಿನ ಹೊಗಳಿಕೆಯಾಗಿರಲಿಲ್ಲ. 


ಮುಂದೆ ದಯಾನಂದ ಅವರ ಸಹಾಯ ಹಾಗೂ ಶಾಂತಮ್ಮನವರ ಸಹಕಾರದಿಂದ ರಾಜರಾಯರ ಮನೆಯ ಕೆಲಸ ಬಿಟ್ಟು ಅಜ್ಜಿ ಮೊಮ್ಮಗಳಿಬ್ಬರು ಮೈಸೂರಿಗೆ ಹೋಗುವ ಕಾರಣವೇನು..? ಇದಕ್ಕೆ ಶಂಕರಮ್ಮನವರು ಒಪ್ಪಿದರೇ..?


ಕೌಶಿಕಿಯ ವಿವಾಹದ ಸಂದರ್ಭದಲ್ಲಿ ನೀಡಲು ಅವರು ಶಾಂತಮ್ಮನವರ ಬಳಿ ಕೊಟ್ಟ ಒಡವೆ ಅವರದಲ್ಲವೆಂಬ ಸುಳಿವು ಸಿಕ್ಕದ್ದು ಹೇಗೆ..?


ರಾಜರಾಯರ ಒಟ್ಟು ಮನೆ ಬೇರೆಯಾದದ್ದು ಹೇಗೆ..? ಕಾಲ ಎಲ್ಲವನ್ನು ಬದಲಿಸುತ್ತದೆ. ದಿನಕರನ ವಿವಾಹ ಶಂಕರಮ್ಮನವರು ಅಂದುಕೊಂಡಂತೆ ನಡೆಯದ್ದಕ್ಕೆ ಕಾರಣವೇನು..? ಕೌಶಿಕಿಗೂ ಇದಕ್ಕೂ ಸಂಬಂಧವಿತ್ತೆ..?


ತನ್ನದಲ್ಲದ ಕ್ಷೇತ್ರದಲ್ಲಿಯೂ ಕೌಶಿಕಿ ದುಡಿದು ದಯಾನಂದ ಅವರ ಮೇಘಾ ಗಾರ್ಮೆಂಟ್ ಫ್ಯಾಕ್ಟರಿಯನ್ನು ಬದಲಾಯಿಸಿದ್ದು ಹೇಗೆ..? ಇದಕ್ಕೆ ಮಂದಾಕಿನಿ ಅವರ ಒಪ್ಪಿಗೆ ಸಿಕ್ಕಿತೇ..?


ದಯಾನಂದರಿಗೆ ಹರೀಶ ಮೊದಲೇ ಪರಿಚಿತ. ಫ್ಯಾಕ್ಟರಿಯ ಹಗರಣವನ್ನು ಬಯಲು ಮಾಡಲು ಹರೀಶ ಯಾವ ನಾಟಕ ಮಾಡಿದ..? 


ಈಗಿನ ಕಾಲಕ್ಕೆ ತಕ್ಕಂತೆ ಬೊಟಿಕ್ ಹಾಗೂ ಶೋರೂಮ್ ನಿರ್ಮಿಸಿದ ದಯಾನಂದರ ಹೊಸ ಬ್ಯುಸಿನೆಸ್ ಹೇಗೆ ನಡೆಯಿತು..? ನಿಷ್ಠಾವಂತ ಕೆಲಸಗಾತಿ ಫಿಲೋಮಿನಾ ಕೂಡ ತ ಸೆಳೆಯುತ್ತಾರೆ. 


ಹರೀಶ ಹಾಗೂ ಕೌಶಿಕಿ ಇಬ್ಬರ ವಿವಾಹ ನಿಶ್ಚಯವಾಗುತ್ತದೆ. ಆದರೆ, ಇದು ಹೂವಿನ ಹಾಸಿಗೆಯಂತೇನಿರಲಿಲ್ಲ. ಅವರ ಕುಟುಂಬದ ಇತಿಹಾಸ ಗೊತ್ತಿದ್ದ ಪಾತಜ್ಜಿ ಇದಕ್ಕೆ ಒಪ್ಪಿದ್ದು ಹೇಗೆ..? ಶಂಕರಮ್ಮನವರಿಗೆ ಇದು ಇಷ್ಟವಾಗದೆ ಹೋದದ್ದೇಕೆ..? ಹರೀಶನೇನೋ ಆದರ್ಶ ಯುವಕ. ಆದರೆ, ಆತನ ತಂದೆ-ತಾಯಿಯೂ ಹಾಗೆಯೇ ಇದ್ದರೆ..?


ಕೌಶಿಕಿಯ ಓದುವ ಕನಸಿನ ಬದಲಾಗಿ ಅವಳು ಬೆನ್ನುತ್ತಿದ ಮತ್ತೊಂದು ಕನಸು ಯಾವುದು..? ವಿವಾಹದ ನಂತರ ಕೌಶಿಕಿ ಕುಟುಂಬವನ್ನು ಬೆಸೆಯುವ ಪರಿ ಹೇಗಿದೆ..?


ಹರಿಣಿಯ ಮಗಳಿಗೆ ಇಡುವ ಐದು ಹೆಸರುಗಳಲ್ಲಿ ಒಂದನ್ನು ಕೌಶಿಕಿ ಆರಿಸಿ ತುಳಸಿಯವರ ಹೆಸರು ಇಟ್ಟದ್ದೇಕೆ..?


ಮೊದಲಿಗೆ ಸಾಮಾಜಿಕ ಹಾಗೂ ಕೌಟುಂಬಿಕ ಕಾದಂಬರಿಯಂತೆ ಕಂಡರೂ.. ಕುತೂಹಲಕರವಾಗಿ ರೋಚಕವಾಗಿ ಸಾಗುವ ಕಥೆ ಕೊನೆಯವರೆಗೂ ಊಹಿಸಲಾಗದ ತಿರುವನ್ನು ಹೊತ್ತು ಸಾಗಿದೆ. ಈ ನಿಗೂಢತೆ ಮುಂದೇನು ಎಂದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಮನುಷ್ಯ ನೆಮ್ಮದಿಯ ಜೀವನ ನಡೆಸಲು ಅಗತ್ಯವಾದುದೇನು ಎಂಬುದನ್ನು.. ಜೊತೆಗೆ ಸ್ವಾಭಿಮಾನ, ನೇರವಂತಿಕೆ, ಬದುಕಿನಲ್ಲಿ ವ್ಯಕ್ತಿತ್ವಕ್ಕೆ ಕೊಡುವ ಮೆರುಗೇನು ಎನ್ನುವುದನ್ನು ಹಾಗೂ ಕೌಟುಂಬಿಕ ಮೌಲ್ಯಗಳನ್ನು ಕಟ್ಟಿಕೊಡುವ ಕಾದಂಬರಿ ಇದು. 


~ ವಿಭಾ ವಿಶ್ವನಾಥ್

ಮನಸಾಲಜಿ ಆಫ್ ಮಾನಿನಿ (ಪುಸ್ತಕ ಯಾನ - 478)


ಪುಸ್ತಕದ ಶೀರ್ಷಿಕೆ : ಮನಸಾಲಜಿ ಆಫ್ ಮಾನಿನಿ

ಲೇಖಕರು : ಭಾರ್ಗವಿ ಶೆಟ್ಟಿ

ಪ್ರಕಾಶಕರು : ಕದಂಬ ಪ್ರಕಾಶನ 

ಪ್ರಥಮ ಮುದ್ರಣ : 2026

ಪುಟಗಳು : 100

ಬೆಲೆ : 160 ರೂ.


ಹೆಣ್ಣೆಂದರೆ ಅವಳನ್ನು ಕಡಿಮೆ ಅಂದಾಜಿಸುವಂತೆಯೇ ಇಲ್ಲ. ಆ ಕಾಲಕ್ಕೂ.. ಈ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಆದರೆ ನಮ್ಮ ನಡುವೆಯೇ ಇರುವ ಸ್ತ್ರೀಯರನ್ನು, ಅವರ ಆತ್ಮವಿಶ್ವಾಸ, ದೈರ್ಯ, ಸ್ವಾಭಿಮಾನವನ್ನು ಗುರುತಿಸಿ ಅವರನ್ನು ಪರಿಚಯಿಸಿದ್ದಾರೆ ಲೇಖಕಿ. ಅವರ ಭಾವಚಿತ್ರಗಳು, ಸಾಧನೆಗಳ ಜೊತೆಗೆ ಮನದಾಳದ ಮಾತುಗಳು ಇಲ್ಲಿವೆ. 


ಶಿಕ್ಷಣ ಕ್ರಾಂತಿಯ ಹರಿಕಾರಿಣಿ ಜ್ಞಾನವಾಹಿನಿ ದಾಕ್ಷಾಯಿಣಿ ಎನ್ನುತ್ತಾ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶಿಕ್ಷಕಿ ದಾಕ್ಷಾಯಿಣಿ ಅವರನ್ನು ಪರಿಚಯಿಸುತ್ತಾರೆ. ಅವರ ಘೋಷವಾಕ್ಯ "ಕಷ್ಟಪಟ್ಟು ಮಾಡಬೇಡಿ, ಇಷ್ಟಪಟ್ಟು ಮಾಡಿ" ಎಂದು. ಜನ ಮೆಚ್ಚಿದ ಶಿಕ್ಷಕಿ ಶಿಕ್ಷಕ ವೃತ್ತಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಬಗೆಯನ್ನು ಕಾಣಬಹುದು.


ಕಣ್ಣಿನ ನ್ಯೂನತೆ ಇದ್ದರೂ ಅದು ಸಾಧನೆಗೆ ಅಡ್ಡಿಯಾಗಲಿಲ್ಲ ತಿಪಟೂರಿನ ಡಾ|| ಜಿ. ಎನ್. ಸಂಗೀತಾ ಅವರಿಗೆ. 28ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಇವರು ಐದು ಪುಸ್ತಕಗಳನ್ನು ರಚಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧನ ಸಿದ್ದಿಧಾತ್ರಿ ಸಂಗೀತ ಅವರ ಜೀವನಗಾಥೆ ಇಲ್ಲಿದೆ.


ಕಾಯಕಕ್ಕೆ ಕಲ್ಪತರು ಅರ್ಧನಾರೀಶ್ವರಿ ಜೋಗತಿ ಮಂಜಮ್ಮ ಎನ್ನುತ್ತಾ ದೈಹಿಕವಾಗಿ ಮಂಜುನಾಥನಿಂದ ಬದಲಾದ ಇವರ ಜಾನಪದ ಲೋಕದ ಸಾಧನೆ ಹಾಗೂ ಹವ್ಯಾಸಿ ರಂಗಭೂಮಿ, ಸಿನಿಮಾ, ಕಿರುಚಿತ್ರದಲ್ಲಿಯೂ ತೊಡಗಿಸಿಕೊಂಡು ಜೋಗತಿಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಇವರನ್ನು ಕಾಣಬಹುದು.


ಕಲಿ ಸರ್ವಸ್ವವೆಂದ ನಾಟ್ಯ ಮಯೂರಿ ವರ್ಷಿಣಿಗೆ ಅದು ಕೇವಲ ಹವ್ಯಾಸವಲ್ಲ.. ಬದುಕಿನ ಅಸ್ತಿತ್ವ. ಎಂಟು ವರ್ಷಗಳಿಂದ ಅಮೃತವರ್ಷಿಣಿ ನಾಟ್ಯದೇಗುಲವನ್ನು ಸ್ಥಾಪಿಸಿ ಈ ಕಲಾ ಕೇಂದ್ರದಲ್ಲಿ ಬಾಲಕಲಾವಿದರ ಕನಸುಗಳನ್ನು ರೂಪಿಸುತ್ತಿರುವ ಬಗೆಯನ್ನು ಕಾಣಬಹುದು.


ಬೆಳಗಾವಿಯ ಸವದತ್ತಿಯಲ್ಲಿ ಮೂರನೇ ಮಗಳಾಗಿ ಜನಿಸುವ ರೇಣುಕಾ ಪೋಲಿಯೋ ಲಸಿಕೆಯ ಬಗ್ಗೆ ಇದ್ದ ಮೂಢನಂಬಿಕೆಯಿಂದಾಗಿ ಶಾಶ್ವತವಾಗಿ ಅಂಗವಿಕಲಳಾದರೂ.. ತಂದೆಯನ್ನು ಕಳೆದುಕೊಂಡರೂ.. ಕಷ್ಟ-ಕೋಟಲೆಗಳೆಲ್ಲವನ್ನು ಮೀರಿ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ಸಾಧನೆ ಸುಲಭದಲ್ಲ. "ಹಠ ಸನ್ಮಾನಕ್ಕಾಗಿ ಅಲ್ಲ, ಸ್ವಾಭಿಮಾನಕ್ಕಾಗಿ" ಎನ್ನುತ್ತಾ ಇವರನ್ನು ನಮಗೆ ಪರಿಚಯಿಸುತ್ತಾರೆ.


"ತಾಯಿಗಿಂತ ಮಿಗಿಲಾದ ಯೋಧನಿಲ್ಲ ಜಗದಲ್ಲಿ" ಎನ್ನುತ್ತಾ ವಿಶೇಷ ಚೇತನಳಾದ ತಾಯಿ ಅಮೃತ ಕ್ರೀಡಾಲೋಕದಲ್ಲಿ ಮುನ್ನಡೆದು, ಬಾಲ್ಯ ವಿವಾಹದ ಕಷ್ಟ ಅನುಭವಿಸಿರೂ.. ಅದೆಲ್ಲವನ್ನು ಮೆಟ್ಟಿನಿಂತು ತನ್ನ ಮಗನನ್ನು ಡಾಕ್ಟರ್ ಆಗಿಸಲು ಬೆನ್ನೆಲುಬಾಗಿ ನಿಂತಿರುವ ಸ್ಪೂರ್ತಿದಾಯಕ ಗಾಥೆ ಇದು.


ಭಾರತದ ಮೊದಲ ಜಿಮ್ ತರಬೇತುದಾರರಾದ ಮಂಗಳಮುಖಿ, ಭಾರತದ ಮೊದಲ ಸಿನಿಮಾ ಲೈವ್ ಪ್ರೊಡ್ಯೂಸರ್ ಆಗಿರುವ ಮಂಗಳಮುಖಿ ಆನಿ ಪಟ್ಟ ಪಾಡುಗಳು ಒಂದೆರಡಲ್ಲ. ದೈಹಿಕ ಭಿನ್ನತೆಯಿಂದ ತಾವು ಪಟ್ಟ ಪಾಡನ್ನು ತನ್ನಂತಹವರು ಪಡಬಾರದು ಎಂಬುದಕ್ಕೆ ಅವರು ಶ್ರಮಿಸುತ್ತಿದ್ದಾರೆ. "ಸಾಧನೆ ಮಾಡಿದರೆ ಮಾತ್ರ ಅವಮಾನಗಳನ್ನು ಮೆಟ್ಟಿ ನಿಲ್ಲಬಹುದು" ಎನ್ನುವ ಅಮ್ಮನ ಮಾತು ಹೇಗೆ ಪ್ರೇರಣೆಯಾಗಿ ತೆಗೆದುಕೊಂಡರೋ ಅದಕ್ಕಿಂತ ಇವರ ಬದುಕು ಹೆಚ್ಚಿನ ಪ್ರೇರಣೆ ನೀಡುತ್ತದೆ.


ನಿಸ್ವಾರ್ಥವಾಗಿ, ಸಮಾಜದ ಏಳಿಗೆಗಾಗಿ ತನ್ನನ್ನೇ ತಾನು ಮುಡಿಪಾಗಿಸಿಕೊಂಡ ಶಕ್ತಿದೀಪವಾಗಿ ಕಾಣುವ ನಳಿನಮ್ಮ ಹಾಗೂ ಅವರ ಪತಿಯನ್ನು ನಾವಿಲ್ಲಿ ಕಾಣಬಹುದು. ಟೈಲರಿಂಗ್ ಹಾಗೂ ಯೋಗ ತರಬೇತಿಯ ಮೂಲಕ ಸಂಸ್ಕೃತಿಯ ರಾಯಭಾರಿಯಾಗಿ ಯೋಗದೀಕ್ಷಿಣಿಯಾಗಿರುವ ನಳಿನಾಕ್ಷಿಯವರ ಬದುಕು ಇಲ್ಲಿದೆ.


ಬದುಕಿನಲ್ಲಿ ಸಾಕಷ್ಟು ಇದ್ದವರೇ ದಾನ-ಧರ್ಮ ಮಾಡುವುದು ಕಷ್ಟ. ಆದರೆ, ತಮ್ಮ ಮಿತಿಯನ್ನು ಮೀರಿ ನಿಸ್ವಾರ್ಥವಾಗಿ ಬದುಕುತ್ತಿರುವ ನಂದಿನಿಯವರನ್ನು ನಾವಿಲ್ಲಿ ಕಾಣಬಹುದು. ತಮ್ಮ ಮನೆಯಲ್ಲಿ ಬೆಳಕು ವಾತ್ಸಲ್ಯಧಾಮಕ್ಕೆ ಬರೆದುಕೊಟ್ಟು ಅಸಹಾಯಕ ಜೀವಗಳಿಗೆ ಆಸರೆಯಾಗಿ ನಿಂತಿರುವ ಇವರ ನಿಸ್ವಾರ್ಥ ಬದುಕಿನ ಕಥೆ ಇಲ್ಲಿದೆ.


ತನ್ನೆಲ್ಲಾ ಕನಸುಗಳಿಗೆ ಒತ್ತಾಸೆಯಾಗಿ ನಿಂತ ಗಂಡನಿಗೆ ಬೆನ್ನೆಲುಬಾಗಿ ನಿಲ್ಲಲು ಅವರ ಊರಿನಲ್ಲೇ ನೆಲೆಸಿ ರೈತ ಮಹಿಳೆಯಾಗುವ ಕುಸುಮಾರನ್ನು ನಾವಿಲ್ಲಿ ಕಾಣಬಹುದು. ವಿವಾಹ ಹಾಗೂ ಮಗುವಾದ ನಂತರ ಬಿಎ ವ್ಯಾಸಂಗ ಮುಗಿಸಿ, ಎಂ . ಎಸ್ . ಡಬ್ಲ್ಯೂ ಪ್ರವೇಶ ಪಡೆದು ಕಾಲೇಜ್ ಟಾಪರ್ ಆಗಿ ವಿದ್ಯಾರ್ಥಿವೇತನದಿಂದಲೇ ಓದಿನಲ್ಲಿ ಮುಂದೆ ಬಂದು ವೆಲ್ ಫೇರ್ ಆಫೀಸರ್ ಆಗಿ ನೌಕರಿ ಗಿಟ್ಟಿಸಿಕೊಂಡ ನಂತರವೂ ತಮ್ಮನ್ನು ತಾವು ಕೃಷಿಗೆ ಮುಡಿಪಾಗಿಸಿಕೊಂಡ ಕುಸುಮಾರ ಜೀವನಗಾಥೆ ಇಲ್ಲಿದೆ.


ತಂದೆ-ತಾಯಿ ಇದ್ದರೂ ಹೆಣ್ಣು ಮಗುವೆಂಬ ಕಾರಣಕ್ಕೆ ಒಂಟಿಯಾಗಿ ಅಜ್ಜಿಯ ಮಡಿಲಿಗೆ ಬಿದ್ದ ಹಿರಣ್ಮಯಿಯನ್ನು ಇಂದಿಗೂ ತಂದೆ-ತಾಯಿ ನೋಡುತ್ತಿಲ್ಲ. ವಯಸ್ಸಿಗೂ ಮೀರಿದ ಪ್ರೌಢತೆಯಿಂದ ಅಜ್ಜಿಯ ಜವಾಬ್ದಾರಿ ಹೊತ್ತ ಹಿರಣ್ಮಯಿಯ ದಿಟ್ಟ ನಡೆ ಯಾವ ಸಾಧಕಿಗೂ ಕಡಿಮೆ ಏನಲ್ಲ. ಹಾಗಾದರೆ, ಹಿರಣ್ಮಯಿಯ ಮನಸ್ಸಿನ ಮಾತುಗಳೇನು ನೀವೇ ಓದಿ ನೋಡಿ.


ವರುಣ್ ಎಂಬ ವಿಕಲಚೇತನ ಮಗುವನ್ನು ದೇವರ ಮಗುವೆಂದುಕೊಂಡು ಪೋಷಿಸುತ್ತಿರುವ ತಾಯಿ ಗೌರಿಯವರ ಧೈರ್ಯ ಚಿಕ್ಕಪುಟ್ಟ ಕಷ್ಟಗಳಿಗೆ ಅಳುಕುವವರಿಗೆ ನಿಜಕ್ಕೂ ಮಾದರಿಯಂತಿದೆ.


ಹುಟ್ಟಿದಾಗಿನಿಂದಲೇ ಬಳ್ಳಿಗಳಂತೆ ನಲುಚಿಕೊಂಡಿದ್ದ ಕೈಗಳು ಜೊತೆಗೆ ಹೃದಯ ಸಂಬಂಧಿ ಕಾಯಿಲೆ. ಹೀಗಿದ್ದ ಮಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾದ ತಾಯಿಯ ಧೈರ್ಯ ಇಂದು ಕೈಗಳೇ ಇಲ್ಲದಿದ್ದರೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವ ಅರ್ಪಿತ ಎಂಬ ದಿಟ್ಟ ಯುವತಿಯನ್ನು ಪರಿಚಯಿಸುತ್ತವೆ.


"ನಾನು ಹಾದಿ ಹುಡುಕಿಲ್ಲ-ನಾನು ಹಾದಿ ನಿರ್ಮಿಸಿದ್ದೇನೆ. ನಾನು ನಿಲ್ಲಲಿಲ್ಲ-ನಾನು ಮುಂದಾಳತ್ವ ವಹಿಸಿದೆ" ಎನ್ನುವ ಆತ್ಮವಿಶ್ವಾಸದ ಮಾತುಗಳನ್ನಾಡುವ ಶಿಕ್ಷಣ ಕ್ರಾಂತಿಯ ಹರಿಕಾರಿಣಿ ಕಾಂಚನರವರು "ಶಿಕ್ಷಣ ನನ್ನ ಆಯ್ಕೆಯಲ್ಲ. ನನ್ನ ದೃಷ್ಟಿ, ಸಾಧನೆ, ನನ್ನ ಗುರಿಯಲ್ಲ, ನನ್ನ ಸ್ವಭಾವ" ಎಂದು ಸಾಧನೆಯ ಹಾದಿಯನ್ನು ಸ್ಪಷ್ಟವಾಗಿ ಹೇಳುವ ಬಗೆ ಇಲ್ಲಿದೆ.


"ನೋವು ನನ್ನನ್ನು ಮುರಿಯಲಿಲ್ಲ

ಹೋರಾಟ ನನ್ನನ್ನು ದೃಢವಾಗಿಸಿತು

ಧೈರ್ಯ ನನ್ನನ್ನು ನಾಯಕಿಯಾಗಿಸಿತು"

ಎನ್ನುವ ಅನಿತಾ ರ ಬದುಕಿನಲ್ಲಿ ಬಂದ ಕಷ್ಟಗಳು ಒಂದೆರಡಲ್ಲ. ಅವೆಲ್ಲವನ್ನು ಮೆಟ್ಟಿ, ನಾಯಕಿಯಾಗಿ ನಿಂತಿರುವ ಅವರ ಕೆಲಸ ಊರಿಗಷ್ಟೇ ಸೀಮಿತವಾಗಿಲ್ಲ. ದೇಶಗಳನ್ನು ದಾಟಿರುವ ಪರಿ ಇಲ್ಲಿದೆ.


"ಧೈರ್ಯೇ ಸಾಹಸೇ ರಾಜಲಕ್ಷ್ಮಿ" ಎನ್ನುತ್ತಾ ಪೋಲಿಯೋ ಪೀಡಿತ ರಾಜಲಕ್ಷ್ಮಿ ಅವರ ಬದುಕಿನಲ್ಲಿ ಬಂದ ಸವಾಲುಗಳು.. ಪ್ರಸ್ತುತ, 9 ಶಸ್ತ್ರಚಿಕಿತ್ಸೆಗಳಾದ ತೂ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಅವರ ಪರಿಚಯ ಇಲ್ಲಿದೆ.


ಎಂ.ಎ ಪದವೀಧರರಾದರೂ ಸರಿಯಾದ ಅವಕಾಶ ಸಿಗದೇ ಬದುಕಿನ ಹೋರಾಟದ ಹಾದಿಯಲ್ಲಿ.. ಮಹಿಳಾ ಸಬಲೀಕರಣದ ಪ್ರಾಜೆಕ್ಟ್, ಫೀಲ್ಡ್ ವರ್ಕ್ ನಂತರ ಆಯ್ದುಕೊಂಡದ್ದು ಆಕಾಶವಾಣಿಯನ್ನು. ಅನುಭವವಿಲ್ಲದ ಕ್ಷೇತ್ರದಲ್ಲಿ 2000 ಅಭ್ಯರ್ಥಿಗಳನ್ನು ಹಿಂದಿಕ್ಕಿ ಮಡಿಕೇರಿಯ ಆಕಾಶವಾಣಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಆಕಾಶವಾಣಿಯ ಸ್ಪೂರ್ತಿದನಿಯಾಗಿರುವ ಚಂದು ಅವರು ಇಲ್ಲಿದ್ದಾರೆ.


ಅಂತರಪಟ ಹಾಗೂ ಆತ್ಮಾನುಸಂಧಾನ ಕಾದಂಬರಿಗಳನ್ನು ಬರೆದಿರುವ ಲೇಖಕಿ ಉಷಾ ರವಿ ಅವರು ಕನ್ನಡಕ್ಕೆ ಜ್ಞಾನಪೀಠ ಹೆಬ್ಬಯಕೆಯನ್ನು ಹೊಂದಿದ್ದಾರೆ. ಅವರ ಬದುಕು ಹಾಗೂ ಮನದಾಳದ ಮಾತುಗಳು ಇಲ್ಲಿವೆ.


ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಎಂಬ ವಿಭಿನ್ನ ಮೂಳೆಯ ಅನುವಂಶಿಕ ಅಸ್ವಸ್ಥತೆಯನ್ನು ಹೊಂದಿರುವ ಅರ್ಚನಾ ರವಿಯವರು ಬಾಲ್ಯವನ್ನು ಕಳೆದದ್ದು ಎಲ್ಲರಂತಲ್ಲ. ಬಹಳ ಎಚ್ಚರಿಕೆಯಿಂದ ಬೆಳೆದವರು ಈಗ ಭಾರತೀಯ ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. "ದುರ್ಬಲತೆ ಮೂಳೆಗಳಿಗಷ್ಟೇ, ಆತ್ಮವಿಶ್ವಾಸ ಬಂಡೆಯಷ್ಟಿದೆ" ಎನ್ನುವ ಇವರ ಬದುಕಿನ ಕಥೆ ಇಲ್ಲಿದೆ.


ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು ತನ್ನ ಮಗನ ಭವಿಷ್ಯಕ್ಕಾಗಿ ಕ್ಷಮಿಸುತ್ತಿರುವ ತಾಯಿ ರಂಜಿತಾರನ್ನು ಇಲ್ಲಿ ಕಾಣಬಹುದು.


"ಹೊರ ಜಗತ್ತಿನಿಂದ ಜಾರಿಗೊಳ್ಳುವ ಸ್ಪೂರ್ತಿ ಅಲ್ಪಾವಧಿಯದ್ದು. ಅಂತರಂಗದಾಳದಿಂದ ಹೊರಹೊಮ್ಮುವ ಸ್ಫೂರ್ತಿ ನಿಚ್ಚಳವಾದದ್ದು" ಎನ್ನುತ್ತಾ ಪ್ರತಿ ಸ್ತ್ರೀಯಲ್ಲಿರುವ ಶಕ್ತಿ ಸ್ವರೂಪಿಣಿಯನ್ನು ಉದ್ದೀಪಿಸುತ್ತಾರೆ. ಇದರ ಜೊತೆಗೆ ಭಾರ್ಗವಿ ಶೆಟ್ಟಿಯವರು ಬರೆದಿರುವ ಕವಿತೆಗಳನ್ನು ನಾವಿಲ್ಲಿ ಕಾಣಬಹುದು. ಚಿಕ್ಕ-ಪುಟ್ಟ ಕಷ್ಟಗಳಿಗೂ ಅಂಜುವವರು ನಮ್ಮ ಜೊತೆಗಿರುವ ಇಂತಹ ಶಕ್ತಿಸ್ವರೂಪಿಣಿಯರನ್ನು ಕಂಡು ಸ್ಪೂರ್ತಿ ಪಡೆಯಬಹುದು. ಸ್ಪೂರ್ತಿದಾಯಕ ಓದು.

~ ವಿಭಾ ವಿಶ್ವನಾಥ್

ಅದು ನಿಜವಲ್ಲ..! (ಪುಸ್ತಕ ಯಾನ - 477)


ಪುಸ್ತಕದ ಶೀರ್ಷಿಕೆ : ಅದು ನಿಜವಲ್ಲ..!

ಲೇಖಕರು : ಕೌಂಡಿನ್ಯ 

ಪ್ರಕಾಶಕರು : ಕಲ್ಪವೃಕ್ಷ ಪ್ರಕಾಶನ

ಪ್ರಥಮ ಮುದ್ರಣ : 2020

ಪುಟಗಳು : 352

ಬೆಲೆ : 350 ರೂ. 


ಅದು ನಿಜವಲ್ಲ..! ಕಾದಂಬರಿ ಸಾಮಾಜಿಕ ಕಾದಂಬರಿಯಾಗಿದ್ದರೂ.. ಸಾಕಷ್ಟು ನಿಗೂಢ, ಪತ್ತೇದಾರಿ ಹಾಗೂ ಹಾರರ್ ಅಂಶಗಳನ್ನು ಒಳಗೊಂಡು ರೋಚಕವಾಗಿ ಸಾಗುತ್ತದೆ. 


"ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು" ಎಂದು ಹೇಳಿರುವ ಹಿರಿಯರ ಅನುಭವದ ಮಾತು ಎಷ್ಟು ಸತ್ಯವಲ್ಲವೇ..!? ನಾವು ಕಂಡದ್ದೇ ನಿಜ ಎಂಬ ತೀರ್ಮಾನಕ್ಕೆ ಬರುವ ಮುಂಚೆ ಅದನ್ನು ಮತ್ತೆ ಪರಿಶೀಲಿಸಬೇಕು. ಈ ಅಂಶ ಕಾದಂಬರಿಯ ಪ್ರತಿ ಘಟ್ಟದಲ್ಲಿಯೂ ನೆನಪಾಗುತ್ತದೆ. ಇಲ್ಲಿನ ಪ್ರತಿ ನಿಗೂಢದ ಹಿಂದೆಯೂ ಒಂದು ಉದ್ದೇಶವಿದೆ. ಅದೇನು ಎಂಬುದನ್ನು ನೀವೇ ಅರಿಯಬೇಕು. ವಿಶಿಷ್ಟ ಕಥಾಹಂದರ ಹೊಂದಿರುವ ಈ ಕಾದಂಬರಿ 'ಮಂಗಳ' ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿತ್ತು. 


ಈ ಕಾದಂಬರಿಯ ಬಹುಭಾಗ ನಡೆಯುವುದು ಸೋನಾಪುರ ಎನ್ನುವ ಕುಗ್ರಾಮದಲ್ಲಿ. ಪ್ರಕೃತಿ ಸೌಂದರ್ಯ, ಪ್ರಪಾತ, ಗುಡ್ಡ, ಗುಹೆ, ರಾಜರ ಕಾಲದ ಕೋಟೆ, ಅರಮನೆಯ ಅವಶೇಷ ಇವೆಲ್ಲವೂ ಇದ್ದರೂ ಪ್ರವಾಸಿಗರ ಆಕರ್ಷಕ ತಾಣವೇನೂ ಆಗಿರಲಿಲ್ಲ. ಆದರೆ, ಇತಿಹಾಸ ಗೊತ್ತಿದ್ದವರಿಗೆ ಸೋನಾಪುರ ವೈಶಿಷ್ಟ್ಯವೇ..!


ಅರಣ್ಯದ ಮಧ್ಯೆ ಇರುವ ಊರು ಇದಾದರೂ.. ಸೇತುವೆ ಶಿಥಿಲಾವಸ್ಥೆಯಲ್ಲಿತ್ತು. ಮಳೆಗಾಲದಲ್ಲಿ ನದಿ ಪ್ರವಾಹ ಬಂದರೆ ಸೇತುವೆ ಮುಳುಗಿ ಗ್ರಾಮ ದ್ವೀಪವೇ ಆಗಿಬಿಡುತ್ತಿತ್ತು. 300 ಮನೆಗಳ ಈ ಊರಿನಲ್ಲಿ ದಾನ-ಧರ್ಮ, ಪರೋಪಕಾರ, ದೈವಭಕ್ತಿ ಎಲ್ಲದಕ್ಕೂ ಹೆಸರುವಾಸಿಯಾಗಿದ್ದವರು ಶಿವಹೋತ್ರಿ ಮನೆತನದವರು. ಊರಿನ ಹೊರಭಾಗದಲ್ಲಿ ನಿರ್ಜನ ಪ್ರದೇಶ, ಪ್ರಕೃತಿ ಸೌಂದರ್ಯದ ನಡುವೆ ಇವರ ಪ್ರಾಚೀನ ಕಾಲದ ಮನೆಯಿತ್ತು. ಇದನ್ನು ಅರಮನೆ ಮನೆ ಎಂದೇ ಕರೆಯುತ್ತಿದ್ದರು. ಕಾಲಕ್ಕೆ ತಕ್ಕಂತೆ ಬದಲಾದ ಕಲಾತ್ಮಕ ಹಾಗೂ ಆಧುನಿಕ ರೂಪವೂ ಇತ್ತು. ಈ ಮನೆಯ ಹೆಸರು ಶಿವನಿಲಯ. ಇದರ ಯಜಮಾನರು ಶಿವರಾಜೇಂದ್ರಬಾಬು. 


ಆದರೆ ಈಗ ಬಂಗಲೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಅಂದಾನಪ್ಪ ಬ್ಯಾಡಗಿ. ಬಂಗಲೆಯ ಪ್ರತಿ ಕೋಣೆಯನ್ನು ತೊಳೆದು, ಒರೆಸಿ ಶುಚಿ ಮಾಡಿ ಗಿಡಗಳ ಆರೈಕೆ ಮಾಡಿ ಮನೆ ತನ್ನದೇ ಎನ್ನುವಂತೆ ನಿಷ್ಠೆಯಿಂದ ಕೆಲಸ ಮಾಡಿ ಸಂಜೆಗೆ ಮನೆಗೆ ಹೊರಡುತ್ತಿದ್ದ. ಅದೂ ಬಂಗಲೆಯ ಬೀಗ ಹಾಕಿಕೊಂಡು. 


ದಾರಿ ತಪ್ಪಿ ಬಂದವರು ಅಥವಾ ಕಷ್ಟದಲ್ಲಿರುವವರಿಗೆ ಈ ಮನೆಯಲ್ಲಿ ಜಾಗ ಸಿಗುತ್ತಿತ್ತು. ಅದೆಲ್ಲವೂ ಬಂದವರಿಗೆ ಪವಾಡದಂತೆ ಕಾಣುತ್ತಿತ್ತು. ಅಂತಹ ಹಲವಾರು ನಿದರ್ಶನಗಳಿವೆ ಇಲ್ಲಿ. ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಿ, ಅವರನ್ನು ರಕ್ಷಿಸಿ ಅವರ ಬದುಕನ್ನು ನೆನಪಿಟ್ಟುಕೊಳ್ಳುವಂತೆ ಮಾಡುತ್ತಿದ್ದ ಆ ನಿಗೂಢ ವ್ಯಕ್ತಿ ಯಾರು..? ಬಂದವರೆಲ್ಲರಿಗೂ ಆ ನಿರ್ಜನ ಮನೆಯಲ್ಲಿ ಶಿವ ಸ್ತುತಿ ಕೇಳಿ ಬರುತ್ತಲೇ ಇತ್ತು. ಹಾಗಾಗಿ ದೈವಭಕ್ತಿಯೂ ಭಯ ಹುಟ್ಟಿಸುತ್ತಿತ್ತು.


ಆ ಊರಿನ ಪೊಲೀಸ್ ಸ್ಟೇಷನ್ ನ ಸಬ್ ಇನ್ಸ್ಪೆಕ್ಟರ್ ಮಾರ್ತಾಂಡ ಕಲ್ಲಂಗಡಿ. ಆತನಿಗೆ ಅಂದಾನಪ್ಪನ ಮೇಲೆ ಬಹಳ ಅನುಮಾನ. ಏಕೆಂದರೆ, ಕುಟುಂಬದ ಯಜಮಾನರು ಸತ್ತು ಆರು ತಿಂಗಳಾಗಿತ್ತು. ಆದರೂ.. ಅವನ ರಹಸ್ಯ ಕಾರ್ಯಾಚರಣೆ ನಡೆಯುತ್ತಲೇ ಇತ್ತು. ಶಿವರಾಜೇಂದ್ರ ಬಾಬು ಅವರ ಹೆಂಡತಿ, ಇಬ್ಬರು ಮಕ್ಕಳು ಅಸಹಜ ರೀತಿಯಲ್ಲಿ ಸತ್ತಿದ್ದರು. ಇನ್ನೂ ತನಿಖೆ ನಡೆಯುತ್ತಲೇ ಇತ್ತು. ಅವರ ಉಳಿದಿದ್ದ ಮಗ ವಿದೇಶದಿಂದ ಬಂದಿರಲಿಲ್ಲ. ಅಂದನಪ್ಪ ನೇ ಈಗ ಸತ್ಯದ ಮನೆಯ ಉಸ್ತುವಾರಿ. ಹಾಗಾಗಿ ಅವನ ಮೇಲೆ ಅನುಮಾನ. ಅವನ ಸಂಬಳ ಜಮಾ ಆಗುತ್ತಿದ್ದದ್ದು ಹೇಗೆ..?


ಮಹೇಂದ್ರ ಬಾಬು ಹಾಗೂ ಪದ್ಮಿನಿ ದಂಪತಿಗಳಿಗೆ ಮದುವೆಯಾಗಿ 10 ವರ್ಷವಾದರೂ ಮಕ್ಕಳಿರಲಿಲ್ಲ. ಮಹೇಂದ್ರ ಬಾಬು ಅವರ ತಮ್ಮ ಜೀವನ್ ಅವರ ಜೊತೆಯಲ್ಲಿಯೇ ಇದ್ದ.  ಅವನ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದ್ದರು. ಪದ್ಮಿನಿಯ ತಂಗಿ ಚೈತ್ರಳಿಗೆ ಜೀವನ್ ಮೇಲೆ ಪ್ರೇಮವಿತ್ತು.


ಆದಿತ್ಯ ತಡಕಲ್ ಇತಿಹಾಸ ಉಪನ್ಯಾಸಕರಾಗಿದ್ದವರು ಅವರ ಪತ್ನಿ ಕಾವ್ಯ. ಇಬ್ಬರಿಗೂ ವಯಸ್ಸಿನ ಅಂತರ ಬಹಳವಿತ್ತು. ಸಮಾನಾಸಕ್ತರೂ ಆಗಿರಲಿಲ್ಲ.


ಪ್ರಭುಶಂಕರ್ ಇತಿಹಾಸ ವಿಷಯದ ಅತಿಥಿ ಉಪನ್ಯಾಸಕ. ಅವನ ಕೆಲಸ ಖಾಯಂ ಆಗಿರಲಿಲ್ಲ. ಆತನ ತಂದೆ, ತಾತನ ಆಸ್ತಿ ಯಥೇಚ್ಛವಾಗಿತ್ತು. ಬೇರೆ ಮೂಲಗಳಿಂದ ಆದಾಯವೂ ಇತ್ತು. ಕೆಲಸ ಕೇವಲ ಆತ್ಮತೃಪ್ತಿಗಾಗಿ ಮಾತ್ರವಾಗಿತ್ತು. ವೃತ್ತಿಯ ಜೊತೆಗೆ ಕರಾಟೆ, ಸಾಹಸದ ಪ್ರವೃತ್ತಿಯೂ ಇತ್ತು.


ಮೈತ್ರಿ ತಂದೆ-ತಾಯಿ ಪದ್ಮಿನಿ ಕುಟುಂಬಕ್ಕೆ ಆತ್ಮೀಯರು. ಪದ್ಮಿನಿಯನ್ನು ಅಕ್ಕ ಎಂದು ಸಂಭೋಧಿಸುತ್ತಿದ್ದಳು. ಜೀವನ್ ಹಾಗೂ ಪ್ರಭುಶಂಕರ್ ಇಬ್ಬರೂ ಪದ್ಮಿನಿಯ ಮೇಲೆ ಕಣ್ಣಿಟ್ಟಿದ್ದರು. ನಿಜಕ್ಕೂ ಮೈತ್ರಿಗೆ ಯಾರ ಮೇಲೆ ಪ್ರೀತಿ ಇತ್ತು..? 


ಇವರಿಷ್ಟು ಜನರು ಎಲ್ಲಿಗಾದರೂ ಪ್ರವಾಸ ಹೋಗಬೇಕು ಎಂದಾಗ ಪ್ರಭುಶಂಕರ್ ಸೋನಾಪುರವನ್ನು ಸೂಚಿಸಿದ. ಅಲ್ಲಿನ ವಿಶೇಷತೆಗಳ ಬಗ್ಗೆ ತಿಳಿಸಿದ್ದ. ಆದರೆ ಉಳಿಯುವ ವ್ಯವಸ್ಥೆ ಸರಿಯಾಗಿಲ್ಲವೆಂದು ಹೇಳಿದರೂ ನಗರದ ಜಂಜಾಟದಿಂದ ದೂರವಾಗಿ ಪ್ರಕೃತಿ ಸೌಂದರ್ಯದಲ್ಲಿ ಮೈಮರೆಯಲು ಎಲ್ಲರೂ ಅಲ್ಲಿಗೆ ಹೊರಟರು. ಹತ್ತಿರದಲ್ಲಿಯೇ ಇದ್ದ ಮೈಲಾರಿಪುರದಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಂಡರು


ಇವರೆಲ್ಲರ ಜೊತೆ ಅಡುಗೆಗೆಂದು ಪಾಂಡು ಹಾಗೂ ಆತನ ಪತ್ನಿ ಸೇರಿಕೊಂಡರು. 


ಇವರೆಲ್ಲರೂ ಊಹಿಸಿರದ ಘಟನೆಯೊಂದು ನಡೆಯಿತು. ವಿಪರೀತ ಮಳೆಯ ಕಾರಣ ಹೋಗುತ್ತಿದ್ದ ವಾಹನ ಕೆಟ್ಟು ಅವರೆಲ್ಲರೂ ಸೋನಾಪುರದ ಶಿವ ನಿಲಯದಲ್ಲಿ ಉಳಿಯುವಂತಾಯಿತು. ಇದಕ್ಕೆ ಕಾರಣ ನಿಗೂಢ ಮುದುಕ.


ಇದುವರೆಗೂ ಯಾವುದೇ ಸಾಕ್ಷಿ ಸಿಕ್ಕಿರದ ಮಾರ್ತಾಂಡ ನಿಗೆ ಇದರ ಇರುವಿಕೆ ಪುಷ್ಟಿ ನೀಡಿತು. ಮಳೆಯ ಕಾರಣದಿಂದ ಸೇತುವೆಗಳ ಸಂಪರ್ಕ ಕಡಿದು ಹೋಗಿ ಮತ್ತಷ್ಟು ಕಾಲ ಅಲ್ಲಿಯೇ ನಿಲ್ಲುವಂತಾದಾಗ ಹಲವಾರು ವಿಶೇಷ, ನಿಗೂಢ ಸಂಗತಿಗಳು ಜರುಗುತ್ತಾ ಸಾಗುತ್ತವೆ. 


ಶಿವನಿಲಯದಲ್ಲಿ ಸದಾ ಬರುತ್ತಿದ್ದ ಶಿವಸ್ತುತಿ ನಿಂತು ಹೋಗಿದ್ದಕ್ಕೆ ಕಾರಣವೇನು..? ಪ್ರಭುಶಂಕರ ರಹಸ್ಯ ಕಂಡುಹಿಡಿದದ್ದು ಹೇಗೆ..?


ಇದಲ್ಲದರ ನಡುವೆ ಪದ್ಮಿನಿ ನಿಗೂಢವಾಗಿ ಕಾಣೆಯಾಗುತ್ತಾಳೆ. ಅದಕ್ಕೆ ಕಾರಣ ಅವರಷ್ಟೂ ಜನರಲ್ಲಿಯೇ ಒಬ್ಬರು. ಏಕೆಂದರೆ, ಹೊರಗಿನಿಂದ ಬೇರೆ ಯಾರೂ ಅಲ್ಲಿಗೆ ಬರಲು ಸಾಧ್ಯವಿರಲಿಲ್ಲ. ಮಾರ್ತಾಂಡನಿಗೆ ಈ ಅವಕಾಶ ಮತ್ತೊಂದು ವಿಚಾರ ತಿಳಿಯಲು ದಾರಿ ಮಾಡಿಕೊಡುತ್ತದೆ. ಆತ ಕಾವ್ಯಳ ಬೆನ್ನು ಬೀಳಲು ಕಾರಣವೇನು..? ಪದ್ಮಿನಿ ಸಿಕ್ಕಳೇ..?


ಶಿವರಾಜೇಂದ್ರ ಬಾಬು ಅವರ ಹಾಗೂ ಕುಟುಂಬದವರ ಅಂತ್ಯ ಹೇಗಾಗಿತ್ತು..? 


ಆದಿತ್ಯ ತಡಕಲ್ ಹಾಗೂ ಕಾವ್ಯ ಅವರ ದಾಂಪತ್ಯದ ಮೇಲೆ ಈ ಪ್ರವಾಸ ಹೇಗೆ ಪರಿಣಾಮ ಬೀರಿತು..?


ಮಹೇಂದ್ರ ಬಾಬು ಯಾವುದಾದರೂ ಮಗುವನ್ನು ದತ್ತು ತೆಗೆದುಕೊಳ್ಳಲು ಅಥವಾ ಜೀವನ್ ನನ್ನೇ ತಮ್ಮ ವಾರಸುದಾರ ಎಂದು ಘೋಷಿಸಲು ಹೊರಟಾಗ ಪದ್ಮಿನಿ ಒಪ್ಪದೇ ತೀವ್ರವಾಗಿ ವಿರೋಧಿಸಿದ್ದೇಕೆ..? ಈ ಪ್ರವಾಸ ಮುಗಿಯುವಷ್ಟರಲ್ಲಿ ಯಾರ ನಿರ್ಧಾರ ಬದಲಾಯಿತು..?


ಚೈತ್ರ, ಜೀವನ್ ಅನ್ನು ಪ್ರೀತಿಸುತ್ತಿದ್ದರೆ ಜೀವನ ಮೈತ್ರಿಯ ಬೆನ್ನು ಬಿದ್ದಿದ್ದ. ಮೈತ್ರಿ ಪ್ರಭುಶಂಕರನಿಗೆ ಮನಸೋತಿರುತ್ತಾಳೆ. ಯಾರು ಯಾರಿಗೆ ಜೋಡಿಯಾಗುತ್ತಾರೆ..?


ಶಿವರಾಜೇಂದ್ರ ಬಾಬು ಅವರು ತಮ್ಮ ಗುರಿ ಸಾಧಿಸಲು ಪ್ರಭುಶಂಕರನನ್ನೆ ಆಯ್ಕೆ ಮಾಡಿಕೊಂಡದ್ದು ಹೇಗೆ..? ಏಕೆ..?


ಪೊಲೀಸ್ ಆದರೂ ಮಾರ್ತಂಡ ಕಲ್ಲಂಗಡಿಯ ವ್ಯಕ್ತಿತ್ವ ಅದಕ್ಕೆ ತಕ್ಕನಾದುದಲ್ಲ. ಆತನ ಕರಾಳ ಮುಖ ಹೇಗಿತ್ತು ಅದಕ್ಕೆ ಸಹಕಾರ ನೀಡಿದವರು ಯಾರು.?


ಹಲವಾರು ರೋಚಕ, ನಿಗೂಢ ವಿಚಾರಗಳಿಂದ ಕಾದಂಬರಿ ಆಸಕ್ತಿಕರವಾಗಿ ಓದಿಸಿಕೊಂಡು ಹೋಗುತ್ತದೆ.


ಈ ಕಾದಂಬರಿ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುದರಿಂದ ಓದುಗರಿಗೆ ನೆನಪಿಸಲೇನೋ ಎಂಬಂತೆ ಹಲವಾರು ವಿಚಾರಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ ಹಾಗೂ ನೆನಪಿಸುತ್ತಾರೆ. ಕಾದಂಬರಿಯ ಓದಿನ ವೇಗಕ್ಕೆ ಇದು ಕೆಲವೊಮ್ಮೆ ತಡೆಯೊಡ್ಡುತ್ತದೆ. ಒಂದೇ ಬಾರಿಗೆ ಇದನ್ನು ಓದಲು ಹೊರಟವರಿಗೆ ಈ ಮಾಹಿತಿಗಳು ಅನವಶ್ಯಕ ಎಂದೆನಿಸಬಹುದು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಓದುವುದು ಒಳ್ಳೆಯದು. 


ನಿಗೂಢ ನಡೆಯಲ್ಲಿ ಯಾವುದು ಸತ್ಯ ಹಾಗೂ ಯಾವುದು ಸುಳ್ಳು..? ಅದನ್ನು ಕಂಡುಹಿಡಿಯುವುದು ಯಾರು, ಹೇಗೆ ಎಂಬುದು ಹಂತಹಂತವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ.


ಇಡೀ ಕಾದಂಬರಿಯ ಕುರಿತು ಹೇಳಿದರೂ ಮುಖ್ಯವಾದದನ್ನು ಉಲ್ಲೇಖಿಸಲೇಬೇಕು. ಅದೆಂದರೆ ದೇಶಭಕ್ತಿ. ಯಾರ ದೇಶಭಕ್ತಿ ಯಾವ ರೀತಿಯಲ್ಲಿತ್ತು ಎಂಬುದನ್ನು ನೀವೇ ಓದಿ ಅರಿಯಿರಿ. 

~ವಿಭಾ ವಿಶ್ವನಾಥ್

ನಾಲ್ಕನೇ ಆಯಾಮ ಎಲ್ಲಿದೆ? (ಪುಸ್ತಕ ಯಾನ - 476)


ಪುಸ್ತಕದ ಶೀರ್ಷಿಕೆ : ನಾಲ್ಕನೇ ಆಯಾಮ ಎಲ್ಲಿದೆ?

ಲೇಖಕರು : ರೋಹಿತ್ ಚಕ್ರತೀರ್ಥ 

ಪ್ರಕಾಶಕರು : ವಿಕ್ರಮ್ ಪ್ರಕಾಶನ

ಪ್ರಥಮ ಮುದ್ರಣ : 2015

ಪುಟಗಳು : 160

ಬೆಲೆ : 110 ರೂ.


ಈ ಪುಸ್ತಕದಲ್ಲಿ ಇರುವ ಗಣಿತದ ಕುರಿತ ಲೇಖನಗಳು ಹೊಸದಿಗಂತ, ವಿಜಯವಾಣಿ, ಕನ್ನಡಪ್ರಭ, ಕರ್ಮವೀರ, ಬಾಲವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಗಣಿತವನ್ನು ಇಷ್ಟು ಆಸಕ್ತಿಕರವಾಗಿ ಉದಾಹರಣೆಯೊಂದಿಗೆ ಬೋಧಿಸಿದರೆ ಎಷ್ಟು ಚೆಂದವಲ್ಲವೇ ಎನ್ನಿಸಿತು. ಪ್ರೈಮರಿ, ಹೈಸ್ಕೂಲು ಹಾಗೂ ಕಾಲೇಜುಳಲ್ಲಿ ಕಲಿತ ಎಷ್ಟೋ ಗಣಿತದ ವಿಚಾರಗಳು, ಪ್ರಮೇಯಗಳು ನಿಜ ಜೀವನದಲ್ಲಿ ಯಾವ ರೀತಿ ಅಳವಡಿಕೆಯಾಗುತ್ತವೆ ಎನ್ನುವುದರ ವಾಸ್ತವಿಕ ಚಿತ್ರಣದ ಜೊತೆಗೆ ಆಸಕ್ತಿಕರ ಮಾಹಿತಿಗಳು ಇಲ್ಲಿವೆ. ಈ ಪುಸ್ತಕದಲ್ಲಿ 18 ಚಂದದ ಗಣಿತದ ಕುರಿತ ಲೇಖನಗಳಿವೆ. 


ಪೈಥಾಗೊರಸ್ ಪ್ರಮೇಯಕ್ಕೆ ಪದವಿಲ್ಲದ ಸಾಧನೆ : ಅಂಕಗಣಿತದ ಮೂಲ ಪ್ರಮೇಯವನ್ನು ಬಿಟ್ಟರೆ ಪೈಥಾಗೊರಸ್ ಪ್ರಮೇಯ ಅತಿ ಹೆಚ್ಚು ಬರೆಯಲ್ಪಟ್ಟಿದೆ. ಪೈಥಾಗೊರಸ್ ಗಿಂತ 500 ವರ್ಷಗಳ ಹಿಂದೆ ಬೋಧಾಯನ ಎಂಬ ಮುನಿ ರಜ್ಜುಶಾಸ್ತ್ರದಲ್ಲಿ ಈ ಪ್ರಮೇಯವನ್ನು ಹೇಳುತ್ತಾನೆ ಎಂದು ಹೇಳುತ್ತಲೇ.. ಬೋ-ಪೈ ಪ್ರಮೇಯವನ್ನು ಸಾಧಿಸುತ್ತಲೇ ಜೇಮ್ಸ್ ಗಾರ್ಫೀಲ್ಡ್ ಎರಡೂವರೆ ಸಾವಿರ ವರ್ಷಗಳ ನಂತರ ಮತ್ತೆ ಹೊಸ ಸಾಧನೆಯೊಂದನ್ನು ಕಂಡುಹಿಡಿದ. ಇದನ್ನು ಆತ ಕಂಡುಹಿಡಿದದ್ದು ಸಂಸತ್ತಿನಲ್ಲಿ. ಏಕೆಂದರೆ, ಆತ ಅಮೆರಿಕದ ಇಪ್ಪತ್ತನೇ ಅಧ್ಯಕ್ಷನಾಗಿದ್ದವನು. 


ಮರಣವಿಲ್ಲದ ಸರಣಿಗಳು : ಫಿಬೊನಾಚಿ ಸೀರೀಸ್ ಎಂದು ಕರೆಯುವ ಈ ಸರಣಿಗಳ ಹೆಸರೇ ತಪ್ಪು ಎನ್ನುತ್ತಾರೆ. ಫಿಬೊನಾಚಿ ಎಂದರೆ ಲ್ಯಾಟಿನ್ ನಲ್ಲಿ ಬೊನಾಚಿಯೋ ಎನ್ನುವವನ ಮಗ. ಅಲ್ಲದೆ, ಇದು ಸೀರೀಸ್ ಅಲ್ಲ ಸೀಕ್ವೆನ್ಸ್ ಎಂದು ಮರಿಸರಣಿಗಳನ್ನು ಉದಾಹರಿಸಿದ್ದಾರೆ. 


ಗುಣಿಸಲು ಬೇಗ, ಹೊಡೆಯಿರಿ ಲಾಗ : ಜಗತ್ತಿನ ಎಲ್ಲರೂ ಮರಳು ಸುರಿದುಕೊಳ್ಳುವ ಆಟವಾಡಲು ಶುರು ಮಾಡಿದರೆ..! ಒಬ್ಬರು ಮೂವರಿಗೆ ಸವಾಲು ಹಾಕಿದರೆ, ಆ ಮೂವರು ತಲಾ ಮೂವರಿಗೆ ಸವಾಲು ಹಾಕಿದರೆ.. ಜಗತ್ತಿನಲ್ಲಿ 700 ಕೋಟಿ ಜನ ಈ ಸವಾಲನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವೆಷ್ಟು ಎನ್ನುವ ಪ್ರಶ್ನೆ ಹಾಕುತ್ತಲೇ ಕಂಪ್ಯೂಟರಿಗೂ ಕಷ್ಟವಾದ ಈ ಲೆಕ್ಕವನ್ನು ಲಾಗರಿದಂ ಬಳಸಿ ಬಿಡಿಸುವ ಗುಟ್ಟನ್ನು ಹೇಳುತ್ತಾರೆ. ಜಾನ್ ನೇಪಿಯರ್  ಬಳಸಿದ ಲಘು ಗಣಕದ ಕಚ್ಚಾ ವಿಧಾನವನ್ನು ಮುಂದೆ ಯಾರೆಲ್ಲಾ ಅಭಿವೃದ್ಧಿ ಪಡಿಸಿದರು ಓದಿ ಅರಿಯಿರಿ.


ಕಲಾಗ್ಯಾಲರಿಯ ಸಮಸ್ಯೆಗೊಂದು ವರ್ಣಮಯ ಪರಿಹಾರ : ಕಲಾ ಗ್ಯಾಲರಿಗಳಲ್ಲಿ ಎಲ್ಲಾ ಮೂಲೆಗಳು ಒಮ್ಮೆಗೆ ಕಾಣುವಂತಿರದೆ, ಬಹುಭುಜ ಜೊತೆಗೆ ಗೋಡೆಗಳು ಒಳ-ಹೊರಗೆ ಚಾಚಿಕೊಂಡಿದ್ದಾಗ ಗಾರ್ಡನ್ನು ನಿಯಮಿಸುವುದಾದರೆ..? ಗಾರ್ಡ್ ಓಡಾಡಲು ಇಷ್ಟಪಡುವವನಲ್ಲ. ಹಾಗೆಂದು ಹೆಚ್ಚು ಹೊಸ ಗಾರ್ಡ್ ಳನ್ನು ನೀಡಲಾಗದು. ಈ ಕ್ಲಿಷ್ಟ ಸಮಸ್ಯೆಗೆ ಪರಿಹಾರ ನೀಡಿದ್ದು ವಿಕ್ಟರ್ ಕ್ಲೀ ಎಂಬ ಗಣಿತಜ್ಞ.1973 ರಲ್ಲಿ.. ಅದೂ ವರ್ಣಮಯವಾಗಿ.! ವಿವರ ಓದಿ ನೋಡಿ.


ಅಡುಗೆ ಮನೆಯಲ್ಲಿ ಬಿಡಿಸಿದ ಒಗಟು :  ಬಜೆಟ್, ದಶಮಾಂಶಗಳಿಂದ ಶುರುವಾಗುವ ಅಂಕಿ ಅಂಶಗಳು ಭಿನ್ನರಾಶಿಯ ಒಳಹೊರಗನ್ನು ಬಿಚ್ಚಿಡುತ್ತಾ ಸಾಗುತ್ತದೆ. ಭಿನ್ನರಾಶಿಯನ್ನು ಬಿಡಿಸುವ ಈ ಸೂತ್ರದ ಹಿಂದೆ ಹೊರಟಾಗ ಸಿಕ್ಕಿದ್ದು ಇಂಡಿಯನ್ ಸ್ಟ್ರಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಅನ್ನು ಹುಟ್ಟು ಹಾಕಿದ ಮೇಧಾವಿ ಪಿ.ಸಿ.ಮಹಲನೊಬಿಸ್ ಮತ್ತು ರಾಮಾನುಜನ್. ಪಾಕ ಪ್ರವೀಣ ರಾಮಾನುಜನ್ ಅಡುಗೆ ಮನೆಯಿಂದಲೇ ಅಂಶ-ಛೇದಗಳ ಉತ್ತರ ಕೊಟ್ಟ ಬಗೆ ಹುಬ್ಬೇರಿಸುವಂತಿದೆ.


ಮಡಚಿದ ಕಾಗದದಲ್ಲಿ ಕಣ್ತೆರೆಸುವ ಕಲೆ : ಶೀರ್ಷಿಕೆ ಓದಿದಾಗ ನನಗೆ ನೆನಪಾಗಿದ್ದು ಒರಿಗಾಮಿ ಎನ್ನುವ ಜಪಾನೀಯರ ಕಲೆ. 1890ರ ಬ್ರಿಟಿಷರ ಕಾಲದಲ್ಲಿ ತಂದಲಂ ಸುಂದರರಾವ್ ಅವರನ್ನು ಆಕರ್ಷಿಸಿದ ಈ ಒರಿಗಾಮಿ ಮುಂದೆ ಅವರಿಗೆ ಪ್ರತಿ ಸೃಷ್ಟಿಯಲ್ಲಿಯೂ ಗಣಿತ ಪ್ರಮೇಯವನ್ನು ತೋರಿಸಿದಾಗ ಮೂಡಿದ ಪ್ರತಿಭಾ ಪ್ರದರ್ಶನ ಅವರಿಂದ ಹೊಸ ಪುಸ್ತಕವೊಂದನ್ನು ಬರೆಸಿತು. ಗಣಿತಾಸಕ್ತರು ಅದನ್ನು ಜರ್ಮನ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ್ದಾಗ 47 ಮುದ್ರಣಗಳನ್ನು ಕಂಡಿತು. ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿಯವರು 70 ವರ್ಷಗಳಿಂದ ಪ್ರಕಟ ಮಾಡುತ್ತಲೇ ಇರುವ ಪುಸ್ತಕದ ಮುದ್ರಣಗಳ ಸಂಖ್ಯೆ 50 ದಾಟಿದೆ. ಈ ಪುಸ್ತಕ ಯಾವುದೆಂದು ಹಾಗೂ ಅದರ ಹೂರಣದ ಕುರಿತು ನೀವೇ ಓದಿ ನೋಡಿ.


ನಾಲ್ಕನೇ ಆಯಾಮ ಎಲ್ಲಿದೆ : ಉದ್ದ-ಅಗಲಗಳಿರುವ ರಸ್ತೆಯನ್ನು ಎರಡು ಆಯಾಮಗಳೆಂದು ತೆಗೆದುಕೊಂಡರೆ ಕಟ್ಟಡವನ್ನೇರಲು ಬಳಸುವ ಲಿಫ್ಟ್ ನೋಡಿದಾಗ ಎತ್ತರ ನೆನಪಾಗುತ್ತದೆ. ಈಗ ಮೂರು ಆಯಾಮಗಳಾಯಿತು. ಹಾಗಾದರೆ ನಾಲ್ಕನೆಯದು ಕಾಲವೇ..? ಇಲ್ಲಿ ಐದನೆಯ ಆಯಾಮವೂ ಸಿಗುತ್ತದೆಯೇ..?


ತಿಂಗಳಲ್ಲಿ ಕರಗಿದ ಬರ್ಫ : ಚದುರಂಗದಾಟದ ಪಟ್ಟುಗಳ ಮೂಲಕ ರಾಜನ ಆಸಕ್ತಿಯನ್ನು ಕೆರಳಿಸುವವನು ಹಾಗೂ ಅವನು ಕೇಳುವ ಅಕ್ಕಿಯ ಬಹುಮಾನ ಜೊತೆಗೆ ಇಂತಹ ಸಮಸ್ಯೆಗಳನ್ನು ಬಿಡಿಸಲು ಬಳಸುವ ಗುಣೋತ್ತರ ಶ್ರೇಡಿ ಇಲ್ಲಿ ಕಾಣಸಿಗುತ್ತದೆ. ಒಮ್ಮೆ ಜಗತ್ತಿನ ಜನರಿಗೆ ಬಕೆಟ್ ಹಿಡಿಸಿದ ಚಾಲೆಂಜ್ ಒಂದೇ ತಿಂಗಳಲ್ಲಿ ಐಸ್ ನಂತೆ ತಣ್ಣಗಾಗಿ ಹೋದ ಕಾರಣ ಇಲ್ಲಿ ಸಿಗುತ್ತದೆ.


ಜಂಗಮರಾಟಕ್ಕೆ ಸ್ಥಾವರಸೂತ್ರ : ಸ್ಟೀಫನ್ ಹಾಕಿಂಗ್ ಫುಟ್ಪಾಲ್ ಗೆಲುವು ಕಂಡುಹಿಡಿಯಲು ಸೂತ್ರ ಬರೆಯುತ್ತಾರೆ. ಅದಕ್ಕೆ ಕಾರಣ ಪ್ಯಾಡಿ ಪವರ್ ಎನ್ನುವ ಗುಪ್ತ ನಾಮಾಂಕಿತ ವ್ಯಕ್ತಿ. ಎತ್ತಿಂದೆತ್ತಣ ಸಂಬಂಧವೆನ್ನುತ್ತೀರಾ..!? ಹಾಗಾದರೆ ನಿಮಗೆ ಥಿಯರಿ ಆಫ್ ಪ್ರಬಾಬಿಲಿಟಿ ತಿಳಿದಿದೆಯೇ.?


ಕಿಂಚಿತ್ ಉಳಿಯದಂತೆ ಹಂಚುವುದು ಹೇಗೆ : ತಂದೆ ಮಾಡಿದ ಆಸ್ತಿಯನ್ನು ಮೂವರು ಮಕ್ಕಳಿಗೆ ಹಂಚಲು ವಿಲ್ ಮಾಡಿದ ಸಮಸ್ಯೆಯನ್ನಿಟ್ಟುಕೊಂಡು ಅದನ್ನು ಹಂಚುವುದು... ಕಿಂಚಿತ್ತೂ ಉಳಿಯದಂತೆ ಹಂಚುವುದು ಹೇಗೆ ಎನ್ನುವುದನ್ನು ಅನುಪಾತ ಹೇಗೆ ಬಿಡಿಸಬಲ್ಲದು ಎಂದು ಹೇಳುತ್ತಾರೆ.


ಎರಡು ದಡಗಳ ನಡುವೆ : ಮಕ್ಕಳ ಜಾಣ್ಮೆ ಪರೀಕ್ಷಿಸಲು ಕೇಳುತ್ತಿದ್ದ ತೋಳ-ಕುರಿ, ಹುಲ್ಲಿನ ಹೊರೆಯನ್ನು ದಾಟಿಸುವುದು, ನಾಲ್ಕು ಜನರಿಗೆ ವಿವಿಧ ಸಮಯಗಳನ್ನು ಕೊಟ್ಟು ಆಚೆ ದಡಕ್ಕೆ ದಾಟಿಸುವುದಕ್ಕೆ ತಗಲುವ ಸಮಯ.. ಇದನ್ನು ದೊಡ್ಡ ಕಂಪನಿಗಳ ನೇಮಕಾತಿ ಪರೀಕ್ಷೆಯಲ್ಲಿ ಕೇಳುತ್ತಾರೆ. ಇಂತಹ ಹೆಚ್ಚುವರಿ ವಿಶೇಷಗಳ ಸಮಸ್ಯೆಯನ್ನು ಪ್ರಸ್ತಾಪಿಸುತ್ತಾ.. ಇಂತಹ ಸಮಸ್ಯೆಯನ್ನು ನೇಮಕಾತಿ ಪರೀಕ್ಷೆಯಲ್ಲಿ ಕೇಳಿದ್ದರ ಹಿಂದಿನ ಒಳಗುಟ್ಟನ್ನು ಬಿಚ್ಚಿಡುತ್ತಾರೆ.


ಚೆಂಡಿನಲ್ಲಿದೆ ಚಂಡಮಾರುತದ ಹುಟ್ಟಿನ ಗುಟ್ಟು! : ಖ್ಯಾತ ಗಣಿತಜ್ಞನಾಗಿದ್ದ ಹೆನ್ರಿ ಪಾಂಕ್ವಾರೆ 19ನೇ ಶತಮಾನದಲ್ಲಿ ಚಂಡಮಾರುತಗಳನ್ನು ವಿವರಿಸಲು ಟೋಪಾಲಜಿಯನ್ನು ಬಳಸಬಹುದು ಎನ್ನುತ್ತಾ ಅದರ ಅನ್ವಯದಲ್ಲಿ ವಿವರಿಸುತ್ತಾನಾದರೂ.. ಅದನ್ನು 1912ರಲ್ಲಿ ಪ್ರಮೇಯವಾಗಿ ಸಾಧಿಸಿ ತೋರಿಸಿದ್ದು ಬ್ರೌವರ್ ಎಂಬ ಗಣಿತಜ್ಞ. ಸಕೇಶಿ ಚೆಂಡಿಗೆ ಶಿಖೆ ಮೂಡಿಸಿ ಚಂಡಮಾರುತದ ಹುಟ್ಟಿನ ಗುಟ್ಟನ್ನು ಬಿಚ್ಚಿಡುತ್ತಾರೆ.


ಗಣಕಯಂತ್ರಕ್ಕೆ ಮಾನವಯಂತ್ರದ ತಿರುಮಂತ್ರ : ಕ್ಯಾಪ್ಚ ಕೋಡ್ ಗಳನ್ನು ನಾವು ಆನ್ಲೈನ್ ನಲ್ಲಿ ಹಲವಾರು ಸಂದರ್ಭಗಳಲ್ಲಿ ಕಂಡು ಬಿಡಿಸಿರುತ್ತೇವೆ. ನೀವು ಮಾನವರಾಗಿದ್ದರೆ ಇದಕ್ಕೆ ಉತ್ತರಿಸಿ ಎನ್ನುವ ಪ್ರಶ್ನೆಗಳನ್ನು ಕಾಣುವಾಗ ಇದು ನಿಜಕ್ಕೂ ಮನುಷ್ಯನನ್ನು ಗುರುತಿಸಬಲ್ಲದಾ..? ಅದು ಹೇಗೆ ಎಂಬ ಅನುಮಾನವಿದ್ದಲ್ಲಿ ಆ ಅನುಮಾನವನ್ನು ಹೇಳ ಹೆಸರಿಲ್ಲದಂತೆ ದೂರ ಮಾಡುವ ಲೇಖನ ಇಲ್ಲಿದೆ.


ಕಾಮಿಡಿಯ ಜೋಡಿ ಗಣಿತದ ಮೋಡಿ : ಫರ್ಮನ ಕೊನೆಯ ಪ್ರಮೇಯ ಹೇಳುವುದು "ಒಂದು ವರ್ಗವನ್ನು ಎರಡು ವರ್ಗಗಳ ಮೊತ್ತವಾಗಿ ಬರೆಯಬಹುದು. ಆದರೆ, ಒಂದು ಘನವನ್ನು ಎರಡು ಘನಗಳ ಮೊತ್ತವಾಗಿ ಅಥವಾ ಅದಕ್ಕಿಂತ ಹೆಚ್ಚಿನ ಘಾತವನ್ನು ಬರೆಯಲು ಸಾಧ್ಯವಿಲ್ಲ" ಎಂಬುದಾಗಿ. ಆದರೆ, ಸಿಂಪ್ಸನ್ಸ್ ಎನ್ನುವ ಕಾಮಿಡಿ ಶೋ ಈ ಸಮೀಕರಣ ಸತ್ಯವೆಂದು ಫರ್ಮಾ ಕಟ್ಟಿದ್ದ ಸಾಮ್ರಾಜ್ಯವನ್ನು ಹೊಡೆದುರುಳಿಸಿತ್ತು. ಸಿಂಪ್ಸನ್ಸ್ ಶೋನಲ್ಲಿ ಗಣಿತ ತಲೆ ಹಾಕುತ್ತಿದ್ದು ಅದೇ ಮೊದಲೇನಲ್ಲ. ಗಣಿತದಲ್ಲಿ ಹಾಸ್ಯವೇ ಇಲ್ಲ ಎನ್ನುವುದಕ್ಕೆ ಅಪವಾದವೆನ್ನುವಂತೆ ಒಂದು ಕಾಮಿಡಿ ಶೋ ನಡೆಸಲು ಸ್ಕ್ರಿಪ್ ಬರೆಯುತ್ತಿದ್ದ ಹತ್ತೂ ಜನರೂ ಗಣಿತಜ್ಞರಾಗಿದ್ದರು. ಅದಕ್ಕೂ ಗೂಗಲ್ ಗೂ ಸಂಬಂಧ ಒಂದಿದೆ. ಸಿಂಪ್ಸನ್ಸ್ ಗಣಿತ ಪಂಡಿತರನ್ನು ಬೇಸ್ತು ಬೀಳಿಸಿದವರಾರು ಓದಿ ನೋಡಿ.


ಅದೂ ಸರಿ, ಇದು ಸರಿ ಅನ್ನುತ್ತಲ್ಲ ಸರಾಸರಿ! : ಸರಾಸರಿ ಅಥವಾ ಆವರೇಜ್ ಕಂಡು ಹಿಡಿಯುವುದಕ್ಕೆ 3 ದಾರಿಗಳಿವೆ. ಆದರೆ, ಈ ಸರಾಸರಿ ಆವಾಂತರಗಳು ಒಂದೆರಡಲ್ಲ. ಯಾವ ಸರಾಸರಿಯ ಲೆಕ್ಕವನ್ನು ಯಾವಾಗ ಬಳಸಬೇಕು ಹಾಗೂ ಅದು ಹೇಗೆ ಸರಿಯಾಗುತ್ತದೆ ಎನ್ನುತ್ತಾ ಗಣಿತದ ಆಟವನ್ನೇ ಆಡಬಹುದಾದ ಅದೂ ಸರಿ, ಇದೂ ಸರಿ ಎನ್ನುವ ಸರಾಸರಿ ಇಲ್ಲಿದೆ.


1+2+3+4+5+...= -1/12! : ಸ್ವಾಭಾವಿಕ ಸಂಖ್ಯೆಗಳನ್ನು ಕೂಡುತ್ತಾ ಹೋದಾಗ ಮೊತ್ತವು ಬೆಳೆಯುತ್ತದೆ. ಹಾಗೆ ಅದಕ್ಕೊಂದು ಶ್ರೇಡಿಯ ಸೂತ್ರ ಕಂಡುಹಿಡಿದು 17ನೇ ಶತಮಾನದಲ್ಲಿಯೇ ಗೈಡೋಗ್ರಾಂಡಿ ರೂಪಿಸಿದ ಸೂತ್ರ ಹೇಗಿತ್ತು..? ಇದೇನು ಅಷ್ಟು ಸುಲಭವಾಗಿ ಒಪ್ಪಿಕೊಂಡದ್ದಲ್ಲ. ಈ ಸಿದ್ಧಾಂತ ಬಳಕೆಗೆ ಬಂದದ್ದೇಗೆ? 21ನೇ ಶತಮಾನದ ಕ್ವಾಂಟಮ್ ಭೌತಶಾಸ್ತ್ರಕ್ಕೆ, ಸ್ಪ್ರಿಂಗ್ ಸಿದ್ಧಾಂತಕ್ಕೆ ಪ್ರವೇಶ ಪಡೆದ ಈ ಸೂತ್ರದ ಕುರಿತು ಓದಿ.


ದಾರಿ ಯಾವುದಯ್ಯಾ ಮನೆ ಸೇರಲು? : ಇರುವೆಯ ಮಸ್ತಿಷ್ಕಕ್ಕೂ.. ಮನುಷ್ಯನದಕ್ಕೂ ಇರುವ ವ್ಯತ್ಯಾಸ, ಲೆಕ್ಕಾಚಾರ, ಅದು ಓಡಾಡುವ ದಾರಿ ಹೀಗೆ ಎಲ್ಲವನ್ನು ವೆಕ್ಟರ್ಸ್ ನಲ್ಲಿ ಅಳೆಯಬಹುದಾ..? ಇರುವೆಗೆ ಈ ಗಣಿತದ ಲೆಕ್ಕಾಚಾರ ಗೊತ್ತೇನು..?


ಬೆಟ್ಟದ ಮೇಲೆ ನಾ ಗಿಡಕ್ಕೆ ನೀರೆರೆದವರು ಯಾರು : ಹೆಚ್ಚು ಮಗ್ಗಿ ಗೊತ್ತಿಲ್ಲದವರು ಕ್ಯಾಲ್ಕುಲೇಟರ್ ಬಳಸದೆ ಥಟ್ ಎಂದು ಉತ್ತರಿಸುವ ಸಂದರ್ಭಗಳನ್ನು ಯಾವುದಾದರೂ ದಿನಸಿ ಅಂಗಡಿ, ಎಳನೀರು ವ್ಯಾಪಾರದಲ್ಲಿ ನೋಡಿರಬಹುದು. ಹಾಲಿಗೆ ನೀರು ಬೆರೆಸಿ ಎಷ್ಟು ಸಮ ಮಾಡಬೇಕು ಎನ್ನುವ ಅನುಪಾತದ ಲೆಕ್ಕವನ್ನು ಅದು ಗೊತ್ತಿಲ್ಲದೆಯೇ ಬಳಸುವ ಗೌಳಿಗನನ್ನು, ಬಡ್ಡಿ ವ್ಯವಹಾರದಲ್ಲಿ ಸಮಯ, ಬಡ್ಡಿ, ಹಣ ಥಟ್ಟೆಂದು ಹೇಳುವ ಸೂತ್ರ ಗೊತ್ತಿಲ್ಲದ ವ್ಯಕ್ತಿಗಳನ್ನು ಕಾಣಬಹುದು. ಅವರನ್ನು ಕೇಳಿದರೆ "ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಎತ್ಕೊಂಡಂಗಾಯ್ತು" ಎಂದು ಹೇಳಬಹುದು. ಹೀಗೆ ಅವರ ಶುದ್ಧಗಣಿತ ಹೇಗಿದೆ ಎನ್ನುವುದನ್ನು ತೋರಿಸುತ್ತಾರೆ.


ಗಣಿತದಲ್ಲಿ ಹಲವಾರು ಕ್ಲಿಷ್ಟಕರ, ಸಂಕೀರ್ಣ ಆಯಾಮಗಳಿವೆ. ಅದು ಗೊತ್ತಿಲ್ಲದೆಯೇ ಸರಳವಾಗಿ ವ್ಯವಹರಿಸುವವರೂ ಇದ್ದಾರೆ. ಗಣಿತ ಗೊತ್ತಿದೆ ಎಂದು ಹೆಮ್ಮೆಪಡುತ್ತಿರುವವರಿಗೆ ಸರಳ ಜೀವನದಲ್ಲಿ ಅನ್ವಯಿಸಿಕೊಳ್ಳುವ ಮಾರ್ಗ ತಿಳಿದಿರುವುದಿಲ್ಲ. ಹಾಗೆಂದು, ರೂಪಿಸಿದ ಪ್ರಮೇಯಗಳಾವುವೂ ತಕ್ಷಣ ಒಪ್ಪಿತವಾದವಲ್ಲ. ಎಲ್ಲದಕ್ಕೂ ತಿಣುಕಾಡುವ ನಾವು ಈ ಗಣಿತದ ಲೇಖನಗಳನ್ನು ಓದಿ ಅರ್ಥೈಸಿಕೊಂಡರೆ ಗಣಿತ ಹೀಗೂ ಇದೆಯಾ ಎನ್ನುವ ಚೆಂದದ ಆಯಾಮವೊಂದು ನಮಗೆ ಸಿಗುತ್ತದೆ. ಇದು ಸಮಯ ತೆಗೆದುಕೊಂಡು, ಸವಿಯುತ್ತಾ, ಲೆಕ್ಕಾಚಾರ ಹಾಕಿ ಓದುವ ಓದು. 


~ವಿಭಾ ವಿಶ್ವನಾಥ್

ಭಾನುವಾರ, ಜುಲೈ 26, 2026

ಕೇವಲ ನನಗಾಗಿ


ಸಾಕಷ್ಟು ಹಂಚಿಕೊಳ್ಳಲಿಕ್ಕಿತ್ತು

ಬೇಕಾದಷ್ಟು ಚರ್ಚಿಸಲಿಕ್ಕಿತ್ತು

ಮತ್ತಾರ ಬಳಿಯೂ ನಿರೀಕ್ಷಿಸಿಲಾಗದ

ಮಮತೆಯನ್ನು ಸವಿಯಬೇಕಿತ್ತು

ನಾಳೆ ಕರೆ ಮಾಡುವೆನೆಂದ 

ಕರೆಗೆ ನಿರೀಕ್ಷಿಸುತ್ತಲೇ ಇದ್ದೇನೆ

ಅದು ಬಾರದೆನ್ನುವ ಸತ್ಯದ ಅರಿವಿದ್ದರೂ..

ಪಪ್ಪ ನಿಮ್ಮ ಅಗತ್ಯವಿದದ್ದು ನನಗಾಗಿ

ಕೇವಲ ನನಗಾಗಿ

ನಾನು ನಾನೇ ಆಗಿರುವುದಕ್ಕಾಗಿ


~ವಿಭಾ ವಿಶ್ವನಾಥ್ 

ಪಪ್ಪನ ಹೆಗಲು


ನನ್ನ ವಿಶ್ವವೇ ಆಗಿದ್ದ ನನ್ನಪ್ಪ ಭೌತಿಕವಾಗಿ ನನ್ನೊಡನಿಲ್ಲದೆ ಎರಡೂವರೆ ವರ್ಷ. ಹಠಾತ್ ಹೃದಯಾಘಾತದಿಂದ ನಿಧನರಾದವರ ನೆನಪು ಪ್ರತಿಕ್ಷಣವೂ ನನ್ನೊಡನಿದೆ. ಪ್ರತಿನಿತ್ಯ ಎದ್ದು ನನ್ನ ಕೆಲಸದಲ್ಲಿ ತೊಡಗಿಸಿಕೊಂಡರೂ ಬೆಳಗಿನ ಅವರ ಕರೆ ಬರದೆ ಉಲ್ಲಾಸ ಮೂಡುತ್ತಿರಲಿಲ್ಲ. ದಿನ ಸಂತೃಪ್ತಿಯೆಂದೆನಿಸುತ್ತಿದದ್ದು ಅವರ ಮತ್ತೊಂದು ಕರೆಯೊಂದಿಗೆ. ಹಾಗೆಂದು, 24*7 ವರದಿ ಅಲ್ಲಿರುತ್ತಿರಲಿಲ್ಲ. ಅವರ ಆಪ್ತತೆಯ ಒಂದೆರಡು ಮಾತು, ಕಾಳಜಿ ನನ್ನ ಧೈರ್ಯ. ಸೋತಾಗ ಹುರಿದುಂಬಿಸಿ, ನನ್ನ ಸಣ್ಣ-ಪುಟ್ಟ ಗೆಲುವಿಗೂ ಸಂಭ್ರಮಿಸುತಿದ್ದ ಪಪ್ಪನಿಗೇ ನನ್ನ ಸೋಲು-ಗೆಲುವು, ಪ್ರಯತ್ನ ಎಲ್ಲವನ್ನೂ ಮೊದಲು ಹಂಚಿಕೊಳ್ಳುತ್ತಿದ್ದದ್ದು.


ಒಬ್ಬಳೇ ಮಗಳನ್ನು ರಾಜಕುಮಾರಿಯಂತೆ ನೋಡಿಕೊಂಡರೂ.. ಸಾಕಷ್ಟು ಧೈರ್ಯದಿಂದ ಒಬ್ಬಳೇ ಎಲ್ಲವನ್ನೂ ನಿಭಾಯಿಸುವ ಶಕ್ತಿಯನ್ನೂ ತುಂಬಿದವರು. ತಾನು ಬೇರೆಯವರ ಮನೆಯಲ್ಲಿದ್ದು ಕಷ್ಟಪಟ್ಟಂತೆ ಮಗಳು ಆಗಬಾರದೆಂದು ಹಾಸ್ಟೆಲ್ ಗೆ ಸೇರಿಸಲು ಹಿಂದೆ-ಮುಂದೆ ನೋಡಿದರೂ.. ಪರಿಸ್ಥಿತಿಯ ಪ್ರಭಾವ, ವಿದ್ಯೆಯ ಮಹತ್ವದಿಂದ ಮನಸ್ಸಿಲ್ಲದ ಮನಸಲ್ಲಿ ಕಳುಹಿಸಿದವರು. ಚಿಕ್ಕಮ್ಮ, ಮಾಮನ ಮಕ್ಕಳಷ್ಟೇ ಅಲ್ಲದೆ ಸುತ್ತಮುತ್ತಲಿನ ಮನೆಯ ಮಕ್ಕಳಿಗೆ ನಿಸ್ವಾರ್ಥದಿಂದ ಓದಿಸಿ, ಶಾಲೆಗೆ ಕರೆದು ಕಳುಹಿಸುವ ಜವಾಬ್ದಾರಿಯನ್ನು ತಾವಾಗಿಯೇ ತಮ್ಮ ಹೆಗಲ ಮೇಲೆ ಹೊತ್ತು ತನ್ನ ಮಕ್ಕಳಂತೆಯೇ ಜೋಪಾನ ಮಾಡಿದವರು. ಎಂದಿಗೂ ತಮ್ಮ ಕಷ್ಟದ ದಿನಗಳನ್ನು ನೆನೆದು ಕೊರಗಿದವರಲ್ಲ. ಬದಲಾಗಿ, ಮುಂದಿನ ಹಾದಿಯ ಆಲೋಚನೆ ಮಾಡುತ್ತಿದ್ದವರು.


ಫಾರ್ಮಸಿ ಅಧಿಕಾರಿಗಳಾಗಿದ್ದವರು ನಿವೃತ್ತಿ ನಂತರವೂ ಕೋವಿಡ್ ವಾರಿಯರ್ ಆಗಿ ದುಡಿದವರು. ದುಡ್ಡಿಲ್ಲ, ಕಷ್ಟ ಎಂದು ಬಂದವರನ್ನು ಬರಿಗೈಯಲ್ಲಿ ಕಳುಹಿಸಲಿಲ್ಲ. ರಕ್ತ ಸಂಬಂಧಕ್ಕಿಂತಲೂ ಹೆಚ್ಚಿನ ಬಾಂಧವ್ಯ ಬೆಳೆಸಿಕೊಂಡಿದ್ದರು ಎಷ್ಟೋ ಜನರು. 


"ತಾಯಿ, ನಿಮ್ಮಪ್ಪ ಅವತ್ತು ನನ್ನ ಆಸ್ಪತ್ರೆಗೆ ಸೇರಿಸಿ ಕಾಲು ಸರಿ ಮಾಡಿಸಿ ಇನ್ನೊಂದು ಜೀವ ಕೊಟ್ಟ ಪುಣ್ಯಾತ್ಮ" ಅನ್ನೋ ಅಜ್ಜನನ್ನು ತಂದೆಯ ಸ್ಥಾನದಲ್ಲಿಟ್ಟು, ಜಾತಿಬೇಧವಿಲ್ಲದೆ ಸಹಾಯ ಮಾಡಿದ್ದರು. ಇದು ಒಂದು ಉದಾಹರಣೆಯಷ್ಟೇ.. "ಶರಣರ ಸಾವನ್ನು ಮರಣದಲ್ಲಿ ನೋಡು" ಎಂಬಂತೆ ಅಂದು ಹರಿದು ಬಂದ ಜನಸಾಗರ ಅವರನ್ನು ನೆನಪಿಸಿಕೊಂಡ ರೀತಿ ಸಂಬಂಧಿಕರಿಗೆ.. ಮೌನಿಯಾಗಿಯೇ ಕಾಣುತ್ತಿದ್ದ ಗಟ್ಟಿ ವ್ಯಕ್ತಿತ್ವದ ನನ್ನಪ್ಪನ ಪರೋಪಕಾರಿ ಮುಖವನ್ನು ತೆರೆದಿಟ್ಟಿತ್ತು. 


"Empty mind is devil's workshop, ಸೋಮಾರಿಯಾಗಬಾರದು" ಎಂಬುದನ್ನು ಹೇಳಿಕೊಟ್ಟ ಪಪ್ಪ ಅಂತೆಯೇ ಬದುಕಿದವರು. ಕ್ರಿಕೆಟ್, ನ್ಯೂಸ್ ಪೇಪರ್, ರೇಡಿಯೋ ಇವುಗಳ ಜೊತೆಗೆ ಕಾಯಕಯೋಗಿಯಾಗಿದ್ದ ಪಪ್ಪ ನನ್ನ ಸದಾಕಾಲದ ದಾರಿದೀಪ. ಓದುವ, ಹಾಡುವ ಹವ್ಯಾಸವನ್ನು ಅಭ್ಯಾಸವಾಗಿಸಿದ್ದು.. "ಏನಾದರೂ ಮಾಡು, ನಿನ್ನ ಜೊತೆ ನಾನಿರುತ್ತೇನೆ", "Go and explore" ಎಂದದ್ದು ಈಗಲೂ ಕಿವಿಯಲ್ಲಿದೆ. ಸ್ವಾಭಿಮಾನ, ಸಹಾಯದ ಗುಣವನ್ನು ಬಿಡದೆ ಬೆಳೆಸಿದ ಅಪ್ಪನ ವ್ಯಕ್ತಿತ್ವವನ್ನು ಬಣ್ಣಿಸಹೊರಟರೆ ಕುರುಡ ಆನೆಯನ್ನು ಮುಟ್ಟಿದಂತಾಗಬಹುದು. ಅಪ್ಪನ ಹೆಗಲು ಕೊಟ್ಟಷ್ಟು ಧೈರ್ಯ, ವಿಸ್ತಾರತೆಯ ನೋಟ ಮತ್ತಾವುದೂ ಕೊಟ್ಟಿಲ್ಲ. ಬಹುಶಃ, ಪಪ್ಪ ನನ್ನೊಡನಿದ್ದು ಕಲಿಸುವ ಪಾಠಗಳು ಮುಗಿದಿದ್ದವೇನೋ..! ಜೊತೆಗಿಲ್ಲದೆ ಕಲಿಸುತ್ತಿದ್ದಾರಷ್ಟೇ...!


~ವಿಭಾ ವಿಶ್ವನಾಥ್

ತಿರುಗುಬಾಣ (ಬೆಳಕಿಂಡಿಯ ಕತೆಗಳು - 60)

 


ಪ್ರೀತಿಯ ನಾಟಕವಾಡಿ ಒಬ್ಬಳೇ ಮಗಳಾದ ಅವಳನ್ನು ಸೊಸೆಯಾಗಿಸಿಕೊಂಡು, ಮರುಳು ಮಾಡಿಕೊಂಡು ಅವಳ ಆಸ್ತಿಯನ್ನು ಉಪಾಯವಾಗಿ ತಮ್ಮ ಕೈವಶ ಮಾಡಿಕೊಳ್ಳಲು ಹೊರಟಿದ್ದರು ಅವರು.

ಅವಳು ಮುಗ್ಧಳಾಗಿದ್ದಳು. ಆದರೆ, ದಡ್ಡಿಯಾಗಿರಲಿಲ್ಲ. ನಂಬಿದವರೇ ಬೆನ್ನಿಗೆ ಚೂರಿ ಹಾಕುವ ಉಪಾಯ ತಿಳಿದವಳ ಚಾಲಾಕಿತನ ಈಗ ಅವರ ಉಪಾಯವನ್ನು ಅವರಿಗೇ ತಿರುಗುಬಾಣವಾಗಿಸಿತ್ತು.

ಸತ್ಯ ಅರಿತ ಮಗನ ತಿರಸ್ಕಾರ ಆಸ್ತಿಗಿಂತಲೂ ಮಿಗಿಲಾದ ಸಂಬಂಧದ ಬೆಲೆಯನ್ನು ಅರಿವಾಗಿಸಿತ್ತು.

~ವಿಭಾ ವಿಶ್ವನಾಥ್

ಪುಟ್ಟಿಯ ಕಥೆಗಾರಿಕೆ (ಬೆಳಕಿಂಡಿಯ ಕತೆಗಳು - 59)

 


"ಕಥೆ ಹೇಳುವೆ. ಕೇಳಮ್ಮ" ಎಂದು ಹೋದ ಪುಟ್ಟಿಗೆ "ಆಮೇಲೆ ಹೇಳುವೆಯಂತೆ ಕಂದಾ.. ಅಮ್ಮ ಆಫೀಸಿನಿಂದ ಈಗಷ್ಟೇ ಬಂದಿದ್ದಲ್ವಾ.. ಅಡುಗೆ ಮುಗಿಸಿ ಬರ್ತೀನಿ. ಅಷ್ಟೊತ್ತಿಗೆ ಅಪ್ಪನಿಗೆ ಕಥೆ ಹೇಳು" ಎಂದು ಸಾಗ ಹಾಕಿದಳು.

"ನನಗೀಗ ಮೀಟಿಂಗ್ ಇದೆ ಪುಟ್ಟಿ. ಹೋಗಿ ಅಣ್ಣನ ಹತ್ತಿರ ಹೇಳು" ಅಲ್ಲಿಂದ ಸಾಗ ಹಾಕಿದರು ಅಪ್ಪ

"ರಾಶಿ ಹೋಂವರ್ಕ್ ಇದೆ ನನಗೆ. ತಲೆ ತಿನ್ನಬೇಡ ಹೋಗು" ಎಂದು ಬೈದ ಅಣ್ಣನೂ...

ನಿನ್ನೆ ಕಥೆ ಹೇಳುವೆನೆಂದು ಬಂದ ಪುಟ್ಟಿಯ ಕಥೆ ಕೇಳದವರು ಇಂದು ಪುಟ್ಟಿಯ ಕಥೆ ಕೇಳಲು ಕಾಯುತ್ತಿದ್ದಾರೆ. ಆಕಾಶವಾಣಿಯ ಚಿಣ್ಣರ ಚಿಲಿಪಿಲಿಯಲ್ಲಿ ಪುಟ್ಟಿಯ ಕಥೆಗಳ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ಶಾಲೆಯಲ್ಲಿ ಟೀಚರ್ ಅವಳ ವಿಶೇಷ ಪ್ರತಿಭೆ ಗಮನಿಸಿ ಕಾರ್ಯಕ್ರಮ ಕೊಡಿಸಿದ್ದರು. ಈಗ ಪುಟ್ಟಿಯ ಕಥೆಗಾರಿಕೆಗೆ ಹೆಚ್ಚಿನ ಮೌಲ್ಯ ಸಿಕ್ಕಿತ್ತು.

~ವಿಭಾ ವಿಶ್ವನಾಥ್

ಅರ್ಧ ಸತ್ಯ (ಪುಸ್ತಕ ಯಾನ - 475)


ಪುಸ್ತಕದ ಶೀರ್ಷಿಕೆ : ಅರ್ಧ ಸತ್ಯ

ಲೇಖಕರು : ಮಾಕೋನಹಳ್ಳಿ ವಿನಯ್ ಮಾಧವ್

ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್ 

ಪ್ರಥಮ ಮುದ್ರಣ : ನವೆಂಬರ್ 2021

ಪುಟಗಳು : 156

ಬೆಲೆ : 150 ರೂ. 


ಇಲ್ಲಿವೆ ಕ್ರೈಮ್ ರಿಪೋರ್ಟರ್ ಮಾಕೋನಹಳ್ಳಿ ವಿನಯ್ ಮಾಧವ್ ಅವರು ಬರೆದ ಆರು ಪ್ರಸಂಗಗಳು. ಆದರೆ, ಇದು ಸತ್ಯ ಘಟನೆಗಳು ಹಾಗೂ ಕಥೆಗಳು ಎರಡರ ಮಿಶ್ರಣದಂತೆ ಕಾಣಿಸುತ್ತದೆ. ಇವರ ಈ ಶೈಲಿ ನನಗೆ ಹೊಸದು ಹಾಗೂ ವಿಭಿನ್ನ ಓದಿನ ಅನುಭವ ಕೊಟ್ಟಿತು. 


ತಾನು ಮಾಡಿದ ಕ್ರೈಂ ರಿಪೋರ್ಟ್ ಗಳು ಹಾಗೂ ಸಂದರ್ಭ/ ಸುದ್ದಿಯ/ ವ್ಯಕ್ತಿಯ ವಿರುದ್ಧ ಪುಟಗಟ್ಟಲೆ ಬರೆದಿದ್ದವರೊಡನೆಯೇ ಪರೋಕ್ಷವಾಗಿ ಭಾಗಿಯಾಗಬೇಕಾದಾಗ... ತನಗೆ ಸುದ್ದಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಕೆಲವು ಅಧಿಕಾರಿಗಳನ್ನು ಒಳ್ಳೆಯವರಂತೆ ಬಿಂಬಿಸಿ ಕೊನೆಗೆ ಸತ್ಯ ತಿಳಿದಾಗ..? ನೊಂದವರಿಗೆ ಸಾಂತ್ವನ ಹೇಳಲು ಆಗದಿದ್ದಾಗ..? ಇಡೀ ವ್ಯವಸ್ಥೆಯಲ್ಲಿ ತಾನು ಹೀರೋ ಎಂದು ಕಾಣಿಸಿಕೊಳ್ಳುತ್ತಿರುವಾಗಲೇ ತಮಗೆ ಬೇಕಾದಂತಹ ಕಥೆಗಳನ್ನು ಬರೆಸಲು ಬಳಸಿಕೊಂಡ ಸಂದರ್ಭ ತಿಳಿದಾಗ..? 

"ಆಗ ಸಾಮಾನ್ಯ ಮನುಷ್ಯನಂತೆ ಯೋಚಿಸಲು ಆರಂಭಿಸುತ್ತೇನೆ" ಎನ್ನುತ್ತಾರೆ ಲೇಖಕರು. ಆದರೂ, ಪ್ರಪಂಚದ ಮಟ್ಟಿಗೆ ನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್... ಈ ಸಾಲು ಎಷ್ಟೆಲ್ಲ ದ್ವನಿಸುತ್ತದೆಯಲ್ಲವಾ..?


"ಇನ್ನುಳಿದಂತೆ ನನ್ನ ಮೂರ್ಖತನದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಅವೆಲ್ಲ ಬಹಳಷ್ಟು ಪಾಠ ಕಲಿಸಿದ ಗುರುಗಳು" ಎನ್ನುತ್ತಾರೆ. ಅರ್ಧಸತ್ಯ ಹಾಗೂ ಪ್ರಮೋಶನ್ ಪ್ರಸಂಗಗಳನ್ನು ಓದಿದಾಗ ನನಗೆ ಲೇಖಕರು ಹೀಗೆ ಯಾಕೆ ಉಲ್ಲೇಖಿಸಿದ್ದಾರೆ ಎಂಬುದು ಅರಿವಾಯಿತು.


ಪಾತ್ರಗಳು, ಕಥಾಹಂದರ ಕಾಲ್ಪನಿಕ ಎಂದು ಹೇಳಬಲ್ಲೆ. ಹೋಲಿಕೆ ಇದ್ದರೆ ಅದು ಕಾಕತಾಳೀಯ ಎಂದಿದ್ದಾರೆ.


ಈ ಆರು ಪ್ರಸಂಗಗಳ ಕುರಿತು ನೋಡುವುದಾದರೆ..


ಅರ್ಧ ಸತ್ಯ: ಗುರೂಜಿ ಹಾಗೂ ಸಿನಿಮಾ ಹೀರೋಯಿನ್ ಇಬ್ಬರ ಖಾಸಗಿ ವಿಡಿಯೋ ಸಿಕ್ಕು ಅದು ನ್ಯೂಸ್ ಚಾನೆಲ್ ಗಳನ್ನು ಆವರಿಸಿದ್ದಾಗಲೇ.. ಈ ಸಂಬಂಧದ ಸುದ್ದಿ ಇಷ್ಟಕ್ಕೆ ಮುಗಿಯದೆ ವಿಷಯ ಸೀರಿಯಸ್ ಆಗುತ್ತದೆ ಎಂದು ಗೊತ್ತಿದ್ದ ಇಂಗ್ಲಿಷ್ ನ್ಯೂಸ್ ಪೇಪರ್ ರಿಪೋರ್ಟರ್ ವಿಜಿತ್ ಆಶ್ರಮದ ಹತ್ತಿರ ಹೋಗುವುದರೊಳಗಾಗಿ ಅಲ್ಲಿ ಆಗಲೇ ನ್ಯೂಸ್ ಚಾನೆಲ್ ನವರು, ಪೊಲೀಸ್, ಒಂದಿಷ್ಟು ಜನರು ಸೇರಿದ್ದರು. ಆಶ್ರಮದ ಒಳಗುಟ್ಟುಗಳನ್ನು ಬಿಚ್ಚಿಡುತ್ತಲೇ.. ಈ ಸುದ್ದಿಯ ಮೂಲಗಳು ಹಲವಾರು ಕಡೆಗಳಿಂದ ತಿಳಿಯುತ್ತಾ ಸಾಗುತ್ತವೆ. ಎಕ್ಸ್ಕ್ಲೂಸಿವ್ ಸುದ್ದಿ, ತನ್ನಲ್ಲೇ ಮೊದಲು ಎಂಬ ಹಪಾಹಪಿಗೆ ಬಿದ್ದವರು ತಿಳಿದ ಸತ್ಯ ಎಷ್ಟಿತ್ತು..? 

ತಾನು ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಿದವರು ವಿಜಿತ್ ಗೆ ಗೊತ್ತಾಗದಂತೆ ನಿಭಾಯಿಸಿದ ರೀತಿ, ನಂತರ ತಿಳಿದ ಸತ್ಯ ಯಾವುದು..? ವ್ಯವಸ್ಥೆಯ ವ್ಯವಸ್ಥಿತ ಸಂಚಿನ ರಾಜಕೀಯ, ಆಧ್ಯಾತ್ಮದ ಮುಖವಾಡದ ಕೇಸ್ ಇಲ್ಲಿದೆ.


ಪ್ರಮೋಶನ್: ಎರಡನೇ ಶನಿವಾರ ಮತ್ತು ಭಾನುವಾರ ಕ್ರೈಂ ರಿಪೋರ್ಟರ್ ಗಳ ಸುದ್ದಿಯೇ ಮುಖ್ಯ ಜೀವಾಳವಾಗಿರುವ ಸಮಯದಲ್ಲಿ ಮನೀಶ್ ತೆಗೆದುಕೊಂಡು ಹೋದ ಸುದ್ದಿಯೇ ಮುಖ್ಯ ಸುದ್ದಿಯಾಗಿತ್ತು. ಅದು ಪ್ರಮೋಷನ್ ನ ವಿಚಾರ. ಆದರೆ, ಅರ್ಧ ಸತ್ಯ ಮಾತ್ರ ತಿಳಿದ ಮನೀಶ್ ಇಲ್ಲಿ ಅವಸರಿಸಿದನೇ..? ಸುದ್ದಿಲೋಕದಲ್ಲಿ ಟೆಕ್ನಿಕಲಿ ಪರ್ಫೆಕ್ಟ್ ಆಗಿರುವ ಸುದ್ದಿ ಬರೆದಿರುವಷ್ಟು ಸರಳವಾಗಿರುವುದಿಲ್ಲ. 

ರೌಡಿಯ ತಮ್ಮ ಪೊಲೀಸ್ ಆಗಬಾರದಾ..?

"ಎಲ್ಲರಿಗೂ ನ್ಯಾಯವಾಗಿ ಬದುಕೋಕೆ ಒಂದು ಚಾನ್ಸ್ ಕೊಡಬೇಕು. ಇಲ್ಲದೆ ಹೋದರೆ ನಾವು ಮನುಷ್ಯತ್ವದ ಬಗ್ಗೆ ಮಾತನಾಡಬಾರದು" ಎಂಬ ಸಾಲು ಅರ್ಥಪೂರ್ಣವೆನ್ನಿಸಿತು.


ಪರೀಕ್ಷೆ : ಇಂಜಿನಿಯರಿಂಗ್ನಲ್ಲಿ ಪ್ರತಿ ವರ್ಷ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗುತ್ತಿದ್ದ ಹುಡುಗ ಕೊನೆಯ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಎಲ್ಲದರಲ್ಲಿಯೂ ಸೊನ್ನೆ ಬಂದದ್ದು. ಹಾಗೆಂದು, ಅದು ಗೊತ್ತಿಲ್ಲದೆ ಆದ ಎಡವಟ್ಟಲ್ಲ. ವ್ಯವಸ್ಥಿತ ಸಂಚು. ಮಗನ ಕೇಸ್ ಏನಾಯಿತು ಎಂದು ತಿಳಿಯಲು ಅಲೆದಾಡುತ್ತಿದ್ದ ತಂದೆಯನ್ನು ನಾವಿಲ್ಲಿ ಕಾಣಬಹುದು.

ಕೇವಲ ನೊಂದವರಿಗೆ ಸಾಂತ್ವನ ಹೇಳಿದರೆ ಸಾಕೇ..?

ವ್ಯವಸ್ಥೆಯ ವಿರುದ್ಧ ಹೋಗಲಾಗದೆ ಸತ್ಯ ಗೊತ್ತಿದ್ದರೂ ಸುಮ್ಮನೆ ಇರಬೇಕಾದ ಪ್ರಸಂಗ. ಇಂತಹ ಪ್ರಸಂಗಗಳು ಎಷ್ಟು ಸರಿದು ಹೋಗಿರಬಹುದು..!


ಕನಿಷ್ಠ ಬಿಲ್ಲೆ : "ಮಗು ಹೆಣದ ಮೇಲೆ ನಿಂತು ಪ್ರಮೋಷನ್ ಅವಾರ್ಡ್ ತಗೊಳ್ಳೋದು ಯಾರಿಗೆ ಬೇಕು ಸರ್" ಎನ್ನುವ ಅವನ ಮಾತಂತೂ ಇಂದಿನ ಮಾಧ್ಯಮಗಳು ಕಲಿಯಬೇಕಾದದಡಮ್ಮಿ ಸ್ಪಷ್ಟವಾಗಿಸಿದೆ. ಇಲಾಖೆಯಲ್ಲಿ ಕನಿಷ್ಠ ಬಿಲ್ಲೆಯಾದರೂ ವ್ಯಕ್ತಿತ್ವದಿಂದ ಎತ್ತರಕ್ಕೇರಿದ ಮಾದೇಶ ಮಾಡಿದ ಸಾಹಸವೇನಿತ್ತು..? ಓದಿ ನೋಡಿ.


ಅತ್ಯಾಚಾರದ ಸುಳಿ : ಅತ್ಯಾಚಾರವಾದ ಹುಡುಗಿ ದೂರು ನೀಡಿದರೆ ವ್ಯವಸ್ಥೆಯೇ ಅವಳ ಪರ ನಿಲ್ಲುತ್ತದೆ ಅದರಲ್ಲಿಯೂ ದೆಹಲಿಯ ಅತ್ಯಾಚಾರದ ಪ್ರಸಂಗವಾದ ನಂತರದ ತೀರ್ಪು ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. 

ಆದರೆ, ಇದನ್ನು ದುರುಪಯೋಗಪಡಿಸಿಕೊಂಡಾಗ..? 

ಅತ್ಯಾಚಾರ ಮಾಡಿಲ್ಲದಿದ್ದರೂ ಅದರ ಸುಳಿಯಲ್ಲಿ ಸಿಲುಕಿಕೊಂಡವನಿಗೆ ಸಿಕ್ಕ ತೀರ್ಪು ಏನಿತ್ತು ..? ಅಷ್ಟಕ್ಕೂ ಆತ ಈ ಸುಳಿಯೊಳಗೆ ಸಿಲುಕಿದ್ದು ಹೇಗೆ..? 


ನಕ್ಷತ್ರಗಳು : ಗೋವಾದ ಪ್ರಪಂಚ ಹಾಗೂ ಅಲ್ಲಿನ ರಾತ್ರಿಯ ಪ್ರಪಂಚ ಜೊತೆಗೆ ಅದರೊಳಗೆ ಸಿಲುಕಿಕೊಳ್ಳುವರ ಹಾಗೂ ಸಿಲುಕಿಸುವವರ ಜಾಲದ ನೋಟ ಇಲ್ಲಿದೆ.


ಇಲ್ಲಿನ ಪ್ರಸಂಗಗಳ ಕುರಿತು ಹೆಚ್ಚು ತೆರೆದಿಡಲಾಗದು. ಅಪರಾಧದ ಹಿಂದಿನ ನಗ್ನ ಸತ್ಯ ಓದುಗರಿಗೆ ಅರಿವಾಗುತ್ತದೆ. ಆಂತೆಯೇ ವ್ಯವಸ್ಥೆಯ ಒಳಗಿರುವವರಿಗೂ ಅದರ ಅರಿವಿರುತ್ತದೆ. ಆದರೆ, ಅದನ್ನು ತೆರೆದಿಡಲಾಗದ ಅಸಹಾಯಕತೆಯೂ ಇರುತ್ತದೆ. ಹಾಗಾಗಿ ಜಗತ್ತಿನ ಕಣ್ಣಿಗೆ ಅರ್ಧ ಸತ್ಯ ಮಾತ್ರ ಕಾಣುತ್ತದೆ.


ಈ ಪುಸ್ತಕ ಓದಿದ ನಂತರ ನನಗನಿಸಿದ್ದು


ಮಾಧ್ಯಮಗಳಲ್ಲಿ ಅದು ಪ್ರಿಂಟ್ ಮೀಡಿಯಾ ಆಗಿರಲಿ ಅಥವಾ ಟಿ.ವಿ ಮಾಧ್ಯಮವೇ ಆಗಿರಲಿ ಬರುವ ಸುದ್ದಿಗಳಲ್ಲಿ ಎಷ್ಟು ಸಂಪೂರ್ಣ ಸತ್ಯ..? 

ಯಾರೋ ಹರಡುವ ಅರ್ಧ ಸತ್ಯವನ್ನು ನಂಬಿಕೊಂಡು, ಒಬ್ಬ ವ್ಯಕ್ತಿಯ ಬದುಕನ್ನೇ ನಾಶಗೊಳಿಸುವ ಹುನ್ನಾರವೂ ಇರುತ್ತದಲ್ಲವಾ..?


ಒಂದೋ ಸತ್ಯ, ಇಲ್ಲವೇ ಸುಳ್ಳು.. ಎಂದು ನಂಬಿಕೊಂಡಿರುವವರಿಗೆ ಹೀಗೂ ಒಂದಿರುತ್ತದೆ ಎಂಬ ವಿಭಿನ್ನ ಲೋಕವನ್ನು ಅರಿವಾಗಿಸುವ ಪ್ರಸಂಗಗಳು ಇಲ್ಲಿವೆ.


ಯಾರೋ ಹರಡುವ ಜಾಲದಲ್ಲಿ ನಮಗೇ ಅರಿವಿರದಂತೆ ನಾವು ಸಿಲುಕಿಕೊಂಡಾಗ ಅದರಿಂದ ಹೊರಬರುವ ಮಾರ್ಗವನ್ನಷ್ಟೇ ಕಾಣುತ್ತೇವೆ. ಅಂತಹ ಎಷ್ಟು ಜೀವಗಳು ಅಲ್ಲಿರುತ್ತವಲ್ಲವಾ..? 

ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರೂ.. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವ ಧ್ಯೇಯ ವಾಕ್ಯ ಎಷ್ಟು ಸಂದರ್ಭಗಳಲ್ಲಿ ಹೊಂದುತ್ತದೆ..?


ಕ್ರೈಂ ರಿಪೋರ್ಟಿಂಗ್ ಮಾಡುವವರು ಎಲ್ಲವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲಾಗದು. ಅಂತೆಯೇ ನಿರ್ಲಿಪ್ತವಾಗಿಯೂ ತೆಗೆದುಕೊಳ್ಳಲಾಗದಲ್ಲ.


ಒಬ್ಬ ವ್ಯಕ್ತಿಯ ನಂಬಿಕೆಯನ್ನು ಆತನ ಚಾಣಾಕ್ಷತೆಯನ್ನು ತಮಗೆ ಬೇಕಾದಂತೆ ತಿರುಗಿಸಿಕೊಳ್ಳುವಷ್ಟು ಚಾಕಚಕ್ಯತೆ ಹೊಂದಿದವರು ಇರುವಾಗ ನೈಜ ಸುದ್ದಿಗಳು ಅರ್ಧ ಸತ್ಯವಾಗಿ ತಲುಪಿದರೆ..?


ಬಹುಶಃ ಸುಳ್ಳಾದರೂ ಒಂದು ದಿನ ಸಾಬೀತಾಗಬಹುದು. ಆದರೆ, ಅರ್ಧ ಸತ್ಯ ಬಹಳಷ್ಟು ಅಪಾಯಕಾರಿ. ಸತ್ಯ ಗೊತ್ತಿರುತ್ತದೆ. ಆದರೆ, ನಿರೂಪಿಸಲು ಸಾಧ್ಯವಾಗದವರಿಗೆ ತಲುಪಿರುತ್ತದೆ. ಪ್ರಯೋಜನವಾಗದಂತೆ...

ವಿಪರ್ಯಾಸವೆಂದರೆ ಇದೇ ಅಲ್ಲವೇ..?


ಇಲ್ಲಿ ಪ್ರತಿಯೊಂದು ಘಟನೆಗಳಿಗೂ ಪ್ರವೇಶಿಕೆ ಅಥವಾ ಇಂಟ್ರೋ ಇಲ್ಲ . ಬದಲಾಗಿ ಸಂಭಾಷಣೆಗಳೇ ಎಲ್ಲವನ್ನು ಬಿಚ್ಚಿಡುತ್ತವೆ. ಮೊದಲಾರ್ಧ ಅಥವಾ ಒಂದು ಪುಟವನ್ನು ನಾವು ಅರ್ಥೈಸಿಕೊಂಡರೆ, ಹೊಂದಿಕೊಂಡರೆ ವಿಭಿನ್ನವಾದ ಓದು ನಮ್ಮದಾಗುತ್ತದೆ. ಸಂಭಾಷಣೆಗಳು ತೀರಾ ನಯ- ನಾಜೂಕಿನಿಂದೇನೂ ಸಾಗುವುದಿಲ್ಲವಾದರೂ.. ಅಶ್ಲೀಲ್ಲತೆಯೂ ಇಲ್ಲಿಲ್ಲ. ಕ್ರೈಂ ಹಾಗೂ ರಿಪೋರ್ಟಿಂಗ್ ಲೋಕದ ಸಂಭಾಷಣೆಗಳು ಕಾಣಸಿಗುತ್ತವೆ.

~ವಿಭಾ ವಿಶ್ವನಾಥ್

ಬದುಕ ಭಿತ್ತಿಯ ಚಿತ್ರಗಳು (ಪುಸ್ತಕ ಯಾನ - 474)


ಪುಸ್ತಕದ ಶೀರ್ಷಿಕೆ : ಬದುಕ ಭಿತ್ತಿಯ ಚಿತ್ರಗಳು

ಲೇಖಕರು : ಶೈಲಜಾ ಸುರೇಶ್

ಪ್ರಕಾಶಕರು : ಗೀತಾಂಜಲಿ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2019

ಪುಟಗಳು : 148

ಬೆಲೆ : 150 ರೂ.


ಈ ಕಥಾ ಸಂಕಲನದಲ್ಲಿ 2 ಪುರಾಣದ ಕಥೆಗಳು, ಸಾಮಾಜಿಕ ಕಥೆಗಳು ಒಂದು ವೈಜ್ಞಾನಿಕ ಕಥೆ ಹೀಗೆ ಎಲ್ಲವನ್ನೂ ಸುಂದರವಾಗಿ ಸಣ್ಣ ಕಥೆಗಳ ಚೌಕಟ್ಟಿನಲ್ಲಿ ಹೆಣೆಯಲಾಗಿದೆ. ಸ್ಪರ್ಧಾ ವಿಜೇತ ಹಾಗೂ ವಿವಿಧ ಮಾಸಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳನ್ನು ನಾವಿಲ್ಲಿ ಓದಬಹುದು. ಈ ಕಥಾ ಸಂಕಲನದಲ್ಲಿ 14 ವೈವಿಧ್ಯಮಯ ಕಥೆಗಳಿವೆ. 


ಮೌಲ್ಯ : ಹಣಕ್ಕೆ ಸರ್ಕಾರದವರು ಕಾಗದದಲ್ಲಿ ಮುದ್ರಿಸಿದ ಬೆಲೆ ಮೌಲ್ಯವಾಗುತ್ತದೆ. ಇಲ್ಲವಾದಲ್ಲಿ ಅದು ಬರಿಯ ಕಾಗದವಾಗುತ್ತದೆ. ಮನುಷ್ಯನ ಜೀವನವೂ ಅಂತೆಯೇ .. ಉಸಿರು ನಿಂತ ನಂತರ ಆ ಶರೀರ ಹೆಣ ಎನಿಸಿಕೊಳ್ಳುತ್ತದೆ. ಇಂತಹ ಆಲೋಚನೆ ಹುಟ್ಟಿಸಿದ ಈ ಕಥೆಯಲ್ಲಿ ಅಪ್ಪನ ಆಪರೇಷನ್ ಗೆ ಎಂದು ಹಣ ಹೊಂದಿಸಿದ ಮಗ ಹಾಗೂ ಪತ್ನಿ, ಇನ್ಸುರೆನ್ಸ್ ಕ್ಲೈಮ್ ಗಾಗಿ ಕಾಯುತ್ತಿರುವ ಸಂದರ್ಭದಲ್ಲಿಯೇ ನೋಟಿನ ಅಮಾನ್ಯತೆ ಹಾಗೂ ಅದಲು-ಬದಲಿನ ಕಾರ್ಯ ನಡೆಯುತ್ತಿರುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಿದ್ದು ಹೇಗೆ..? ಮನುಷ್ಯ ಹಾಗೂ ಹಣ ಎರಡರ ಮೌಲ್ಯವೂ ಇಲ್ಲಿದೆ.ಇದು ಕರ್ನಾಟಕ ಲೇಖಕಿಯರ ಸಂಘದ 2017ರ ನಿರೂಪಮಾ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ.


ಬದುಕ ಭಿತ್ತಿಯ ಚಿತ್ರಗಳು : ಲಾಯರ್ ಊರ್ಮಿಳಾ ಕುಲಕರ್ಣಿಯವರ ಬಳಿ ಬಂದ ಕರುಣಾ ಹಾಗೂ ವನಿತಾ ಇಬ್ಬರ ಮಾತುಕತೆಯ ಅವರಿಬ್ಬರ ಸಾಂಸಾರಿಕ ಬದುಕನ್ನು ಬಿಚ್ಚಿಡುತ್ತದೆ. ಕೆರಿಯರ್ ಮುಖ್ಯವಾಗಿ ಎರಡು ವರ್ಷದ ಮಗುವನ್ನು ಬಿಟ್ಟು ವಿದೇಶಕ್ಕೆ ಹಾರಿದ ತಾಯಿ ಮತ್ತೊಂದು ಬದುಕು ಕಟ್ಟಿಕೊಂಡು.. ಈಗ ಮಗಳಿಗಾಗಿ ಹಂಬಲಿಸುತ್ತಾ ಇದ್ದ ವನಿತಾ ಕೇಸು ಗೆದ್ದಳೆ? ಅವಳ ಬದುಕಿನ ಘಟನೆ ಕರುಣಾಳಲ್ಲಿ ಮೂಡಿಸಿದ ಭಾವವೇನು..? ಈ ಕಥೆ ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ.


ಶಿಕ್ಷೆ : 19ರ ಪ್ರಾಯದ ಎಳೆಯ ತರುಣಿಯ ಮೇಲೆ ದಾರುಣವಾಗಿ ಅತ್ಯಾಚಾರವಾಗಿತ್ತು. ಆದರೆ ಅಸಹಾಯಕ ಸ್ಥಿತಿಯಲ್ಲಿದ್ದ ಎಸ್.ಐಗೆ ಅವರು ಯಾರೆಂದು ತಿಳಿದಿದ್ದರೂ ಶಿಕ್ಷೆ ಕೊಡಿಸುವ ಭರವಸೆ ಇರಲಿಲ್ಲ. ಪ್ರಭಾವಿಗಳಾಗಿದ್ದವರ ಮಗನೇ ಸ್ವತಃ ತಪ್ಪೊಪ್ಪಿಗೆ ಪಡೆಯುವಂತೆ ಮಾಡಿದ ಡಾಕ್ಟರ್ ಸಮರ್ಥ ಅವರ ಸಮರ್ಥತೆ ಇಲ್ಲಿ ಕಾಣುತ್ತದೆ. ಅವರು ಹಾಗೆ ಮಾಡಿದ್ದಾದರೂ ಹೇಗೆ..? ಓದಿ ನೋಡಿ. ಮಂಗಳದಲ್ಲಿ ಪ್ರಕಟಿತ ಕಥೆ ಇದು.


ತೀರ್ಪು : ಬದುಕ ಭಿತ್ತಿಯ ಚಿತ್ರ ಕತೆಯ ಛಾಯೆ ಇಲ್ಲಿ ಕಾಣುತ್ತದಾದರೂ.. ಇಲ್ಲಿ ಮಗಳು ತಾಯಿ ಎದುರಾಗುತ್ತಾರೆ. ಮಗಳ ಭಾವಗಳು ತಾಯಿಗೆ ತಿಳಿಯುತ್ತದಾದರೂ.. ತಾಯಿಯ ಭಾವಗಳು ಮಗಳಿಗೆ ದಕ್ಕುವುದಿಲ್ಲ. ಕೋರ್ಟಿನಲ್ಲಿ ಬಂದ ತೀರ್ಪು, ತಾಯಿ ನೀಡುವ ತೀರ್ಪು ಎರಡರಲ್ಲಿ ಯಾವುದು ಸರಿ ನೀವೇ ನಿರ್ಧರಿಸಿ. ಮಯೂರದಲ್ಲಿ ಪ್ರಕಟಿತ ಕಥೆ.


ಜಾನಕಿ : ಇದು ರಾಮಾಯಣದ ಕಥೆಯೇ.. ಲಕ್ಷ್ಮಣ ಜಾನಕಿಯನ್ನು ದಟ್ಟಡವಿಯಲ್ಲಿ ಬಿಡಲು ಬಂದಾಗ ಅವರಿಬ್ಬರ ನಡುವಿನ ಮಾತುಕತೆ ಜಾನಕಿ ತಾನೇ ಮುಂದಾಗಿ ಋಷ್ಯಾಶ್ರಮದಲ್ಲಿ ಅಪರಿಚಿತ, ಪರಿತ್ಯಕ್ತೆಯಾಗಿರಲು ನಿರ್ಧರಿಸಿದ ಕುರಿತು ಹೇಳುತ್ತಾಳೆ. ಕೊಂಚ ವಿಭಿನ್ನ ನಿರೂಪಣೆಯಿಂದ ಕಾಡುವ ಕಥೆ. ಜಾನಕಿ ಹಾಗೆ ನಿರ್ಧರಿಸಿದ್ದಾದರೂ ಏಕೆ..? 


ಮಾಧವಿ : ಅನುಪಮಾ ನಿರಂಜನ ಅವರ ಮಾಧವಿಗಿಂತಲೂ ಕೊಂಚ ವಿಭಿನ್ನವಾದ ಮಾಧವಿ ಇಲ್ಲಿ ಕಾಣಿಸುತ್ತಾಳೆ. ಗಾಲವನ ಮೇಲೆ ಪ್ರೇಮ ಹೊಂದಿದ ಮಾಧವಿ ಆತನಿಗಾಗಿ ಕಾಯುತ್ತಾ ಇದ್ದಾಗ ಕೊನೆಗೂಮತ್ತೆ ಬರುತ್ತಾನೆ ಗಾಲವ. ಅರಮನೆಯ ಅಂತಃಪುರಗಳ ಬಂಗಾರದ ಪಂಜರದಿಂದ ಬಿಡಿಸಿಕೊಂಡು ಹೋದ ಅವನು ತನ್ನನ್ನು ಗುರುದಕ್ಷಿಣೆ ನೀಡಲು ಬಳಸಿಕೊಂಡರೂ ಆತನ ಮೇಲೆ ಬದಲಾಗದ ನಿರ್ಮಲ ಪ್ರೀತಿ, ಆತ ನಿರಾಕರಿಸಿದ ಮಾಧವಿ ಏನಾಗುತ್ತಾಳೆ..? ಕನ್ಯಾವಲ್ಲರಿ ಆಕೆಯ ಪಾಲಿಗೆ ಶಾಪವಾದ ಕಥೆ ಇಲ್ಲಿದೆ. ಮಯೂರದಲ್ಲಿ ಪ್ರಕಟಿತ ಕಥೆ ಇದು.


ವಿಪರ್ಯಾಸ : ನರರೂಪ ರಾಕ್ಷಸನಂತಹ ಗಂಡನ ಜೊತೆ ಅಷ್ಟು ದಿನವೂ ಬದುಕಿದ ಅವಳ ಮಗ ಅದರ ವಿರುದ್ಧವಾಗಿ ಬೆಳೆಯುತ್ತಾನೆ. ಇನ್ನೇನು ಅವಳ ಎಲ್ಲಾ ಕಷ್ಟಗಳಿಗೆ ಮುಕ್ತಿ ಎಂದುಕೊಂಡು ಮಗನ ಜೊತೆ ಆತನ ಪುಟ್ಟ ಗೂಡಿಗೆ ಹೊರಡುವ ಸಂದರ್ಭದಲ್ಲಿ ಬಂದ ಕರೆಯೊಂದು ತನ್ನದಲ್ಲದ ಮತ್ತೊಂದು ನಿರ್ಧಾರಕ್ಕೆ ಕಾರಣವಾಯಿತೇ..? ತುಷಾರದಲ್ಲಿ ಪ್ರಕಟಿತ ಕಥೆ ಇದು.


ಆಂಟೀ : ಅಮ್ಮನ ತಂಗಿಯಾಗಿದ್ದ ಆಂಟಿಯನ್ನು ವಿನಾಯಕ ಹಾಗೂ ಜಯ ಪ್ರೀತಿಯಿಂದಲೇ ಸ್ವಾಗತಿಸುತ್ತಾರೆ. ಅಕ್ಕನ ಶ್ರಾದ್ಧ ಕಾರ್ಯವನ್ನು ಯಾವ ಅಡಚಣೆಯೂ ಇಲ್ಲದೆ ಮಾಡಬೇಕೆಂಬ ಅವಳ ಆಸೆ ಹಾಗೂ ಅಕ್ಕನ ಮೇಲಿನ ಅಪರಿಮಿತ ಪ್ರೀತಿಯ ಜೊತೆಗೆ ನಂಟಿನ ನೆನಪು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಅವಳ ಏಕೈಕ ಮಗ ಪ್ರಹ್ಲಾದನಂತಾಗಬೇಕು ತನ್ನ ಮಗ ಎನ್ನುವ ಜಯಳ ಆಸೆಗೆ ಆಂಟಿ ಬೇಡವೆಂದಿದ್ದೇಕೆ..? "ಇವತ್ತಿನ ಸುಖವನ್ನು ಇವತ್ತಿನ ನೆಮ್ಮದಿಯನ್ನು ಅನುಭವಿಸು. ನಾಳೆ ಏನಾಗುತ್ತೋ ಯಾರಿಗೆ ಗೊತ್ತು" ಎನ್ನುತ್ತಲೇ ಅವರ ವರ್ತಮಾನವನ್ನು ತೆರೆದಿಡುವ ಕಥೆ ಇಲ್ಲಿದೆ.


ತಾಯಮ್ಮ : ಕೆಲಸಕ್ಕೆ ಬರುತ್ತಿದ್ದ ತಾಯವ್ವನ ಸ್ವಾಭಿಮಾನ, ನಿಷ್ಠೆ ಸಮಯ ಪಾಲನೆ, ಒಬ್ಬರ ಮನೆಯ ಕುರಿತು ಮತ್ತೊಬ್ಬರ ಮನೆಯಲ್ಲಿ ಮಾತಾಡಿ ಎಂದಿಗೂ ಹರಡದ ಗಾಳಿ ಸುದ್ದಿ ಹೀಗೆ ತಾಯವ್ವನ ಕುರಿತು ಮೆಚ್ಚುಗೆಯನ್ನು ಹೇಳುತ್ತಾ ಪರಿಚಯಿಸುತ್ತಲೇ.. ನಾಲ್ಕು ವರ್ಷದ ನಂತರ ತಾಯಿ ಕರೆದರೆಂದು ತನ್ನ ತವರಿಗೆ ಹೋಗಿ ಬರುವೆನೆಂದು ಹೊರಟವಳು ಒಂದೇ ದಿನಕ್ಕೆ ವಾಪಾಸ್ ಬಂದವಳ ಮಾತುಗಳನ್ನು ಕೇಳಿ ಅವಳೊಬ್ಬ ನಿರಕ್ಷರಕುಕ್ಷಿ ಅವಳಿಗೇನು ತಿಳಿಯುತ್ತೆ ಎಂದುಕೊಂಡಿದ್ದ ತಾತ್ಸಾರ ಕರಗಿದ ಕಥೆ ನಮ್ಮನ್ನೂ ಕರಗಿಸುತ್ತದೆ. ಈ ಕಥೆ ಮಯೂರದಲ್ಲಿ ಪ್ರಕಟಿತ.


ಬಿಸಿಲುಗುದುರೆ :ಬಿಸಿಲುಗುದುರೆಯ ಬೆಂಬತ್ತಿದ್ದ, ಅದರ ಮೇಲೆಯೇ ಆಕರ್ಷಕ ಸವಾರಿ ಮಾಡುತ್ತಿದ್ದ ಲಕ್ಷ್ಮಿ ದೇಸಾಯಿಯನ್ನು ಮತ್ತೆ ಸಂಸಾರಕ್ಕೆ ಎಳೆದು ತರಲು ಪ್ರಯತ್ನಿಸುತ್ತಿದ್ದ ಕಾಂತರಾಜ ದೇಸಾಯಿ ಮಾಡದ ಪ್ರಯತ್ನಗಳಿಲ್ಲ. ಪ್ರತಿಯೊಬ್ಬರಿಂದಲೂ ಕರೆ ಮಾಡಿಸಿ, ಆಕೆಯನ್ನು ಮತ್ತೆ ಕರೆತರಲು ಪ್ರಯತ್ನಿಸುತ್ತಿದ್ದರು. ಆದರೆ, ಅವರ ಬದುಕನ್ನು ಅವರೇ ಕಟ್ಟಿಕೊಳ್ಳುವ ಬೇರೆ ಪ್ರಯತ್ನ ಮಾಡುವ ಸಲಹೆ ಬಂದಿದ್ದೇಕೆ..? ಸ್ವಚ್ಛಂದವಾಗಿ ಹಾರುವ ಲಕ್ಷ್ಮಿಯ ಬದುಕು ಇಲ್ಲಿ ಎಷ್ಟು ಸೂಕ್ತ..? ಪಂಜರದ ಪಕ್ಷಿಯಾಗಲು ಒಪ್ಪದ ಲಕ್ಷ್ಮಿ ತನ್ನ ಬದುಕನ್ನು ತೆರೆದಿಟ್ಟಿದ್ದೇಗೆ..? 


ಮನೆ : ತಾನು ಮನೆ ಕಟ್ಟಿಸಲು ಕಡಿಮೆ ಬಿದ್ದ ಹಣಕ್ಕಾಗಿ ತನ್ನ ತಂದೆ ಕಟ್ಟಿಸಿದ ಮನೆಯನ್ನು ಮಾರಲು ಸಿದ್ದನಾದ ಅಣ್ಣನಿಗೆ ತಂಗಿ ಮಾಡಿಸಿದ ಜ್ಞಾನೋದಯವೇನು..? ಅಣ್ಣ-ತಂಗಿಯರ ಬಾಂಧವ್ಯ ಹೀಗಿದ್ದರೆ ಎಷ್ಟು ಚಂದವಲ್ಲವೇ ಎನ್ನಿಸಿತು.


ಚಿಂಟೂ : ಇದು ವೈಜ್ಞಾನಿಕ ಕಥೆ. ಸುಕನ್ಯಾ ಮತ್ತು ಶಿವಾನಂದರ ಅನ್ಯೋನ್ಯ ದಾಂಪತ್ಯಕ್ಕೆ ಪುಟ್ಟಿ ಇದ್ದರೂ... ಅನಾಥನಾಗಿದ್ದ ಚಿಂಟುವೇ ತನ್ನ ಮಗನೆಂಬಷ್ಟು ಪ್ರೀತಿ ತೋರಿಸಿದಳು ಸುಕನ್ಯ. ಆದರೆ ಬದಲಾದ ಚಿಂಟುವಿನ ನಡೆ-ನುಡಿ, ಸಿಡಿಮಿಡಿಯನ್ನು ಎಷ್ಟು ಸಹನೆಯಿಂದ ತಿದ್ದಲು ಹೋದರೂ ಆಗುತ್ತಿರಲಿಲ್ಲ. ಪ್ರೊಫೆಸರ್ ಶಿವಾನಂದ್ ಹಾಗೂ ಚಿಂಟು ಇಬ್ಬರೂ ಸರಿ ರಾತ್ರಿಯಲ್ಲಿ ನಡೆಸುತ್ತಿದ್ದ ಮಾತುಕತೆಯನ್ನು, ಕೆಲಸವನ್ನು ತಿಳಿಯಲು ಹೊರಟವಳು ಸಿಕ್ಕಿಬಿದ್ದದ್ದೆಲ್ಲಿ.? ರಾಜಶೇಖರ ಭೂಸನೂರು ಮಠ ಅವರ ವೈಜ್ಞಾನಿಕ ಕಥಾ ಶಿಬಿರದಲ್ಲಿ ಬರೆದ ಕಥೆ ಇದು.


ನಿರಂತರ...!? : ಹೆಣ್ಣಿನ ಮೇಲೆ ಶೋಷಣೆ ನಿರಂತರವಾಗಿ ನಡೆಯುತ್ತಲೇ ಬರುತ್ತಿರುತ್ತದೆ. ಕೆಲವರು ಸಿಡಿದು ನಿಂತರೆ ಕೆಲವರು ಅದನ್ನು ಸಹಿಸಿಕೊಂಡು ಸಾಗುತ್ತಾರೆ. ತಿದ್ದುವ ಪ್ರಯತ್ನ ಮಾಡುವವರು ಕೆಲವರು. ಮೀರಾ ಇಲ್ಲಿ ಅಂತಹ ಗುಂಪಿಗೆ ಸೇರುತ್ತಾಳೆ. ಗಂಡು ಎಂದು ಆತ ಏನೇ ಮಾಡಿದರು ಸರಿ ಎಂದು ಪರವಹಿಸುತ್ತಿದ್ದ ಅತ್ತೆ ಹಾಗೂ ಸೋಮಾರಿಯಾಗಿ ಹೆಂಡತಿಯ ದುಡಿಮೆಯ ಜೊತೆಗೆ ಸರ್ವಾಧಿಕಾರ ತೋರುತ್ತಿದ್ದ ಮುಕುಂದನನ್ನು ಆಕೆ ಯಾವ ರೀತಿ ಸರಿ ದಾರಿಗೆ ತರುತ್ತಾಳೆ..? ಇದೆಲ್ಲದರ ಜೊತೆಗೆ ಹಲವಾರು ಹೆಣ್ಣುಮಕ್ಕಳ ವಿವಿಧ ಅನುಭವಗಳನ್ನು ಕಾಣಬಹುದಾಗಿದೆ.


ಸಾಕ್ಷಿಯಾದವರು... : ಸುಬ್ರಾಯರ ಕಾದಂಬರಿ ಓದಿ, ಬದಲಾಗಿ ಅವರ ಬಹುದೊಡ್ಡ ಅಭಿಮಾನಿಗಳಾಗಿದ್ದ ಮಂಗಳ ಹಾಗೂ ರಾಧಾರನ್ನು ಗೆಳತಿ ವಿಜಯ ಮನೆಯ ತನ್ನ ಮನೆಯ ಗೃಹಪ್ರವೇಶದಲ್ಲಿ ಅವರಿಗೆ ಪರಿಚಯಿಸಿದ್ದಳು. ಅವರ ನಿಜ ಜೀವನಕ್ಕೂ ಬರಹಕ್ಕೂ ಬಹಳಷ್ಟು ವ್ಯತ್ಯಾಸ ಕಂಡು ಬಂದಿತ್ತು, ಅದರ ಬದುಕಿನ ಕಥೆ ಸುಖಾಂತ್ಯವಾದದಕ್ಕೆ ಸಾಕ್ಷಿಯಾದವರ ನೋಟವನ್ನು ನಾವಿಲ್ಲಿ ಕಾಣಬಹುದು.


ಬದುಕ ಭಿತ್ತಿಯ ಚಿತ್ರ ಕಥಾ ಸಂಕಲನದಲ್ಲಿ ಹಲವಾರು ರೀತಿಯ ಬದುಕುಗಳು ಕಾಣಸಿಗುತ್ತವೆ. ಹೆಣ್ಣು ಮಕ್ಕಳ ಬದಲಾದ ದಿನಗಳು, ಬದಲಾದ ಆಲೋಚನೆ, ನಡೆಗಳು ಅವರ ದಿಟ್ಟ ನಿಲುವುಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಬಹುದು. ಹಾಗೆಂದು.. ಎಲ್ಲಾ ನಡೆಗಳನ್ನೂ ಸಮರ್ಥಿಸುವುದಿಲ್ಲ. ಹಲವಾರು ಬದುಕಿನ ಹಲವಾರು ಮಗ್ಗುಲುಗಳು ತೆರೆದುಕೊಂಡಿವೆ ಇಲ್ಲಿ. 

~ ವಿಭಾ ವಿಶ್ವನಾಥ್