ಭಾನುವಾರ, ಜೂನ್ 28, 2026

ಯೋಧ ಮತ್ತು ಹೆಂಗಸು


ಕವಿತೆಯ ಶೀರ್ಷಿಕೆ : ಯೋಧ ಮತ್ತು ಹೆಂಗಸು

ರಚನೆ : ಸು. ರಂ. ಎಕ್ಕುಂಡಿ


ಈ ಕವಿತೆಯನ್ನು ನಾನು ಎಚ್. ಎಸ್ ವೆಂಕಟೇಶಮೂರ್ತಿ ಅವರ ಸಂಪಾದಕತ್ವದ ಶತಮಾನದ ಕಾವ್ಯ ಕವನ ಸಂಕಲನದಿಂದ ಆಯ್ದುಕೊಂಡಿದ್ದೇನೆ.


ಉರಿಬಿಸಿಲು ಕೆಂಪುಹುಡಿ, ಮೈತುಂಬ ಧೂಳಿಡಿಗಿ ಕುದುರೆಯಿಳಿದನು ಯೋಧ ಜನರ ಕಂಡು 

"ನೀರು ಹಣಿಸುವಿರ ತುಸು" ಅಂದಿರಲು ಹೆಂಗಸು 

ಬೇಗ ಬಂದಳು ಮಡಕೆ ತುಂಬಿಕೊಂಡು


"ಬಳಲಿದಿರಿ, ಪಾಪ, ಬನ್ನಿರಿ ಒಳಗೆ ವಿಶ್ರಮಿಸಿ."

ಚಾಪೆಯನು ಹಾಸಿದಳು ಕೂತುಕೊಳಲು 

"ಇರಲಿ ಬಿಡಿ. ಈ ಮರದ ನೆರಳಲ್ಲೆ ಕೂಡುವೆನು 

ತಂಪಾಗಿ ತಬ್ಬಿರುವವಿದರ ಹೆಳಲು”


"ಬಟ್ಟಲಿನ ತುಂಬ ಇದೆ ಜೇನು, ಈ ಚೊಂಬಿನಲಿ

ತಣ್ಣಗಿನ ನೀರು ಇದೆ, ತೆಗೆದುಕೊಳ್ಳಿ 

ಇಲ್ಲಿಹುದು ಬೀಸಣಿಕೆ, ಬಹಳ ಸೆಕೆ ಅಲ್ಲವೆ? 

ಇದರಿಂದ ಗಾಳಿಯನು ಬೀಸಿಕೊಳ್ಳಿ


ಆಗ ಒಮ್ಮೆಲೆ ಬೀಸಿ ಬಂತು ತೆಂಕಣ ಗಾಳಿ 

ದೂರವೆಲ್ಲೊ ಕೇಳಿಬಂತು ಹಾಡು 

ಮಾವಿನೆಳಚಿಗುರಿನಲಿ ಚಿಮ್ಮಿ, ಪಯಣಿಗನೆಂದ 

"ಇದಕೆ ಜೋಳದ ಪಾಳಿಯಿಲ್ಲ ನೋಡು" 


ಜೇನು ಸವಿದನು ನೀರು ಕುಡಿದು ಮೈಯೊಡ್ಡಿದನು. 

ತುಸು ಹೊತ್ತು ತಂಬೆಲರ ನೆರಳಿಗೆಂದು

ಎದ್ದು ಕುದುರೆಗೆ ಥಡಿಯ ಹಾಕಿ ಅಣಿಗೊಳಿಸಿದನು 

ಮತ್ತೆ ದೂರದ ತನ್ನ ಪಯಣಕೆಂದು


"ಹೋಗಿ ಬರುವೆನು ತಾಯಿ" ಎಂದು ಕವಚವ ತೊಟ್ಟು ಖಡ್ಗವನು ಬಿಗಿದಿಟ್ಟ ಟೊಂಕದಲ್ಲಿ

ಹೆಂಗಸೆಂದಳು, "ಆಯ್ತು ಹೋಗಿ ಬನ್ನಿರಿ ಮತ್ತೆ

ಬಂದಾಗ ಬರಬೇಕು ನೀವು ಇಲ್ಲಿ"


“ಮರೆತುಬಿಟ್ಟೆನು ನಿಮ್ಮ ಹೆಸರು ಕೇಳಲು, ನೀವು 

ನಡೆದ ದಾರಿಗೆ ಇರಲಿ ಶುಭದ ನೆರಳು 

ಬಿರಿದ ಮಲ್ಲಿಗೆ ಕಂಡು, ಕೋಗಿಲೆಯ ದನಿ ಕೇಳಿ ತುಂಬಿಬಂದಿತ್ತೇಕೆ ಕಣ್ಣು, ಕೊರಳು ?"


ಯೋಧ ನುಡಿದನು "ತಾಯಿ ಮತ್ತೆ ನೆನಪಿಗೆ ಬಂತು 

ನನ್ನೂರು ಬನವಾಸಿ ನನಗೆ ಇಂದು

ಯೋಧ ನಡೆಯುವ ದಾರಿ ಕವಿಯ ದಾರಿಯು ಕೂಡ. 

ನನ್ನನ್ನು ಕರೆಯುವರು ಪಂಪನೆಂದು”


ಇಲ್ಲಿ ಕವಿ ಹಿಂದಿನ ಕಾಲದಲ್ಲಿ ಜನರಿಗೆ ಯೋಧರ ಬಗೆಗಿದ್ದ ಗೌರವಗಳು ಹಾಗೂ ಅವರಿಗೆ ನೀಡುತ್ತಿದ್ದ ಆತಿಥ್ಯದ ಕುರಿತು ಬೆಳಕು ಚೆಲ್ಲಿದ್ದಾರೆ. ಇದು ಕೇವಲ ಯೋಧರಿಗೆ ಸಿಗುತ್ತಿದ್ದ ಗೌರವ ಮಾತ್ರವಲ್ಲ. ಯಾರೇ ಅಪರಿಚಿತರು ಬಂದರೂ ಅವರನ್ನು ಅತಿಥಿಗಳಾಗಿ ಕಾಣುವ ಬಗೆ ಹೀಗಿತ್ತು. ಆದರೆ, ಯೋಧರಿಗೆ ಈ ಆತಿಥ್ಯ ತುಸು ಹೆಚ್ಚೇ ಇತ್ತು ಎಂಬುದನ್ನು ಅರಿಯಬಹುದು. 


ಉರಿ ಬಿಸಿಲಿನಲ್ಲಿ, ಧೂಳಿನ ದಾರಿಯಲ್ಲಿ ಬಾಯಾರಿಕೆಯಿಂದ ಬಳಲಿದ್ದ ಯೋಧ ಜನರಿದ್ದುದನ್ನು ಕಂಡು ತನ್ನ ಬಾಯಾರಿಕೆ ತಣಿಸಿಕೊಳ್ಳಲು ಬಂದಾಗ ಹೆಣ್ಣು ಮಗಳು ನೀರು ಕೊಟ್ಟದ್ದು ಮಾತ್ರವಲ್ಲದೆ.. ವಿಶ್ರಮಿಸಲು ಚಾಪೆ ಹಾಸುತ್ತಾಳೆ. ಆದರೆ, ಮರದ ನೆರಳಿನ ನೈಸರ್ಗಿಕ ತಂಗಾಳಿಯನ್ನು ಸವಿಯವ ನೆಪ ಹೇಳಿ ಆತ ಮರವನ್ನು ಬಣ್ಣಿಸುವ ಪರಿ ಯೋಧನ ಕವಿ ಮನವನ್ನು ತೋರುತ್ತದೆ.


ನೀರು, ವಿಶ್ರಾಂತಿಯ ಜೊತೆಗೆ ಸೆಕೆಗಾಲಕ್ಕೆ ಬೀಸಣಿಗೆ ಹಾಗೂ ಜೇನನ್ನು ಸವಿಯಲು ಅತಿಥಿಗೆ ಹೇಳುವ ಹೆಣ್ಣು ಮಗಳನ್ನು ಕಾಣಬಹುದು. ಆಗ ಯೋಧ ದೂರದಿಂದ ಕೇಳಿ ಬಂದ ಹಾಡು ಹಾಗೂ ತೆಂಕಣ ದಿಕ್ಕಿನಿಂದ ಬೀಸಿ ಬಂದ ಗಾಳಿಯನ್ನು ಆಸ್ವಾದಿಸುತ್ತಾ.. "ಇದಕ್ಕೆ ಜೋಳದ ಪಾಳಿ ಇಲ್ಲ ನೋಡು" ಎನ್ನುತ್ತಾರೆ. ಸಾಮಾನ್ಯವಾಗಿ ಜೋಳಗಳನ್ನು ಬೆಳೆಯುವ ಹೊಲಗಳ ಸಾಲುಗಳು ಮಾನವ ನಿರ್ಮಿತವಾಗಿರುತ್ತವೆ. ಆದರೆ, ಇಲ್ಲಿ ಅಂತಹ ಸುಖವು ನೈಸರ್ಗಿಕವಾಗಿಯೇ ರೂಪುಗೊಂಡಿದೆ ಎಂಬರ್ಥ. 


ನೆರಳಲ್ಲಿ ಕ್ಷಣ ಕಾಲ ವಿಶ್ರಮಿಸಿ, ಜೇನು ಸವಿದು, ನೀರು ಕುಡಿದು, ಕುದುರೆಗೆ ಜೀನು ಹಾಕಿ ತನ್ನ ದೂರದ ಪ್ರಯಾಣಕ್ಕೆ ತಯಾರು ಮಾಡಿ.. ಕವಚ ತೊಟ್ಟು, ಸೊಂಟಕ್ಕೆ ಖಡ್ಗ ಬಿಗಿದು "ಹೋಗಿ ಬರುವೆನು ತಾಯಿ" ಎಂದು ಆಕೆಗೆ ಗೌರವದಿಂದ ಹೇಳುತ್ತಾನೆ. 


"ಹೋಗಿ ಬನ್ನಿ" ಎಂದು ಹಾರೈಸುತ್ತಲೇ "ಮತ್ತೆ ಬಂದಾಗ ಬನ್ನಿ" ಎಂಬ ಆತ್ಮೀಯ ಕರೆಯೋಲೆಯನ್ನು ನೀಡುತ್ತಾಳೆ. ಅದರ ಜೊತೆಗೆ ಸೌಜನ್ಯದಿಂದ ನಿಮ್ಮ ಹೆಸರು ಕೇಳಲು ಮರೆತೆನೆಂದೂ ಜೊತೆಗೆ ನಿಮ್ಮ ಹಾದಿಯಲ್ಲಿ ಶುಭದ ನೆರಳಿರಲಿ ಎಂದು ಹಾರೈಸುತ್ತಾಳೆ.

ಹಾಗೂ ಅರಳಿರುವ ಮಲ್ಲಿಗೆ ಹಾಗೂ ಕೋಗಿಲೆಯ ದನಿ ಕೇಳಿ ಭಾವುಕನಾಗಿದ್ದನು ಗಮನಿಸಿದ ಹೆಣ್ಣು ಮಗಳು ಅದೇಕೆ ಎಂದು ಕೇಳುತ್ತಾಳೆ. ಹೆಣ್ಣು ಮಗಳ ಗಮನಿಸುವಿಕೆ ಎಷ್ಟು ಸೂಕ್ಷ್ಮ ಎಂಬುದನ್ನು ಇಲ್ಲಿ ಕಾಣಬಹುದು. 


ಕೊನೆಯ ನಾಲ್ಕು ಸಾಲುಗಳಲ್ಲಿ ಎಲ್ಲದಕ್ಕೂ ಉತ್ತರ ಕಾಣುತ್ತದೆ. ಆ ಯೋಧ ಮತ್ತಾರೂ ಅಲ್ಲ.. ಕವಿ ಪಂಪ. ಆತ ಕೇವಲ ಕವಿಯಲ್ಲ. ಯೋಧನೂ ಆಗಿದ್ದವನು. ರಾಜ್ಯದ ರಾಜಕೀಯದಲ್ಲಿ, ಯುದ್ಧ ತಂತ್ರದಲ್ಲಿ ಪರಿಣಿತಿ ಹೊಂದಿದ್ದವನು. 

"ಯೋಧ ನಡೆಯುವ ದಾರಿ ಕವಿಯ ದಾರಿಯೂ ಕೂಡ"

ಎಂಬ ಮಾತು ಅದೆಷ್ಟೋ ಹಿರಿದರ್ಥವನ್ನು ಮೂಡಿಸಿದೆ. 

ಕವಿ ಮನದಿಂದ ಅದೆಲ್ಲವನ್ನು ನೋಡಿದ್ದು ಮಾತ್ರವಲ್ಲದೆ ತನ್ನ ಹುಟ್ಟೂರು ಬನವಾಸಿಯನ್ನು ನೆನೆದು ಭಾವುಕನಾಗಿದ್ದನ್ನು ಹಂಚಿಕೊಳ್ಳುತ್ತಾನೆ. "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂಬ ಪಂಪನ ಸಾಲು ಅಕಾರಣವಾಗಿ ನೆನಪಾಯಿತು ನನಗೆ. 


ಮನುಷ್ಯನ ಸೂಕ್ಷ್ಮ ದೃಷ್ಟಿ, ಪ್ರಕೃತಿಯ ವರ್ಣನೆ, ಕವಿ ಮನ, ಹೆಣ್ಣು ಮಗಳ ಆತಿಥ್ಯ, ಸೌಜನ್ಯ, ಕಾಳಜಿ ಹಾಗೂ ಮಾನವೀಯ ದೃಷ್ಟಿ, ಪಂಪನ ಹಿರಿಮೆ ಎಲ್ಲವನ್ನು ಬಹಳ ಸೊಗಸಾಗಿ ಈ ಕವಿತೆಯಲ್ಲಿ ಸು. ರಂ ಎಕ್ಕುಂಡಿಯವರು ಕಟ್ಟಿಕೊಟ್ಟಿದ್ದಾರೆ. 


~ ವಿಭಾ ವಿಶ್ವನಾಥ್

ಬೇಲಿಯ ಮೇಲಿನ ನೀಲಿಯ ಹೂಗಳು



ಕವಿತೆಯ ಶೀರ್ಷಿಕೆ : ಬೇಲಿಯ ಮೇಲಿನ ನೀಲಿಯ ಹೂಗಳು

ರಚನೆ : ಚೆನ್ನವೀರ ಕಣವಿ

ಈ ಕವಿತೆಯನ್ನು ನಾನು ಎಚ್. ಎಸ್ ವೆಂಕಟೇಶಮೂರ್ತಿ ಅವರ ಸಂಪಾದಕತ್ವದ ಶತಮಾನದ ಕಾವ್ಯ ಕವನ ಸಂಕಲನದಿಂದ ಆಯ್ದುಕೊಂಡಿದ್ದೇನೆ.


ಸಾಲಾಗಿ ನವಿಲು ಗರಿಗೆದರಿ ನರ್ತಿಸಿದಂತೆ 

ಮುಂಜಾವದಲಿ ಬೇಲಿ ತುಂಬ ನೀಲಿಯ ಹೂ 

ಜೀವನೋತ್ಸಾಹದಲ್ಲಿ ಎದೆ ತುಂಬಿಸುವ ರೂಹೂ!

ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ

ಎಲ್ಲಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿ

ತೆರೆದಿಹುದು ನೂರು ಸಾವಿರ ನೀಲ ಬಗೆಗಣ್ಣು!

(ನೇಸರನಿಗೂ ಜಗಕೂ ಇನ್ನೂ ನಿದ್ದೆಗಣ್ಣು)

ಎಲ್ಲ ಒಂದೇ ಅದಕೆ - ತೋಟ ಬೇಲಿಯಕಳ್ಳಿ

ಬಿಸಿಲು ಬಲಿಯುವ ಮುನ್ನ ಬಗೆಗೊಂಡ ಸೌಜನ್ಯ

ಮುಖವ ಸಣ್ಣದು ಮಾಡಿ ಮುದುಡಿಕೊಂಡಿರೆ ಜೀವ

ಬರಿಯ ನೆನಪಿಗೆ ಉಳಿದ ದೇಟಿಗಂಟಿದ ಹೂವ

ಬದಿಬದಿಗೆ ನಾಳೆಯರಳುವ ಮೊಗ್ಗೆ ಮೂರ್ಧನ್ಯ!

ವಿಮಲ ಕೋಮಲ ಕಾಂತಿಯೊಗುಮಿಗುವ ಚೈತ್ಯಾಕ್ಷಿ

ಅದೊ ಅಲ್ಲಿ, ಇದೊ ಇಲ್ಲಿ ಪ್ರತ್ಯಕ್ಷ ಸುಮ ಸಾಕ್ಷಿ!


ಇಲ್ಲಿ ಬೇಲಿಯ ಮೇಲಿನ ನೀಲಿ ಹೂಗಳ ಸೌಂದರ್ಯದ ಸೊಗಸನ್ನು ಮೊದಲಿಗೆ ಸವಿಯೋಣ.


ಮುಂಜಾನೆಯೇ ಅರಳುವ ಹೂವುಗಳು ಮನಕ್ಕೆ ಮುದ ನೀಡುತ್ತವೆ. ಅದರಲ್ಲಿಯೂ ಬೇಲಿಯ ತುಂಬಾ ಹಬ್ಬಿರುವ ನೀಲಿಯ ಹೂಗಳಂತೂ ಜೀವನೋತ್ಸಾಹದಲ್ಲಿ ಮನದುಂಬುವ (ರೂಹು)ಆತ್ಮದಂತೆ ಎನ್ನುತ್ತಾರೆ. ಜೊತೆಗೆ ಸಾಲಾಗಿ ನವಿಲುಗಳು ಗರಿಗಿದರೆ ನರ್ತಿಸಿದಾಗ ನೋಡಲು ಕಣ್ಣಿಗೆ ಎಷ್ಟು ಹಬ್ಬವೋ ಇವೂ ಅಂತೆಯೇ ಕಣ್ಣಿಗೆ ಹಬ್ಬ. ಬಣ್ಣದಲ್ಲಿ ಮಾತ್ರವಲ್ಲದೇ ಅರಳಿ ನಿಂತ ದಳಗಳ ಸೌಂದರ್ಯವೂ ನವಿಲನ್ನೇ ನೆನಪಿಸುತ್ತದೆ.


ಬೇಲಿಯ ಮೇಲಿನ ಹೂಗಳನ್ನು ಯಾರೂ ಬೆಳೆದಿಲ್ಲ. ಭೂಮಿಯೇ ಭಾವ ತುಂಬಿ ತನ್ನ ಚೈತನ್ಯವನ್ನೆಲ್ಲ ಹೊರ ಹಾಕಿದಂತೆ ಮನಸೋ ಇಚ್ಛೆ ಬೆಳೆದ ಬಳ್ಳಿಗಳು.. ಅದರಲ್ಲಿ ಹರಡಿರುವ ಈ ಹೂವುಗಳು ನೂರು ಸಾವಿರ ನೀಲಿಯ ಕಣ್ಣುಗಳಂತೆ ಎಂದು ಹೂಗಳನ್ನು ಹರಡಿ ನಿಂತಿರುವ ಪರಿಯನ್ನು ಹೇಳುತ್ತಾರೆ.


ಸೂರ್ಯನಿಗೂ.. ಜಗತ್ತಿಗೂ ಇನ್ನೂ ನಿದ್ದೆಗಣ್ಣಿರುವಾಗಲೇ ಅರಳುವ ಹೂವುಗಳು ಬಿಸಿಲು ಬಲಿಯುತ್ತಾ ಹೋದಂತೆ ತಮ್ಮ ಮೃದುತ್ವವನ್ನು ಕಡಿಮೆ ಮಾಡಿಕೊಳ್ಳುತ್ತಾ.. ಮುಖ ಸಣ್ಣದು ಮಾಡಿ, ಮುದುಡಿಕೊಳ್ಳುತ್ತಾ ಹೋಗುತ್ತವೆ. ಬಿಸಿಲು ಮೇಲೇರಿದಂತೆ ದಂಟಿಗೆ ಅಂಟಿದ ಹೂಗಳ ಕುರುಹುಗಳನ್ನಷ್ಟೇ ನಾವು ಕಾಣಬಹುದು. ಆದರೆ, ಇಲ್ಲಿಗೆ ಆ ಸೌಂದರ್ಯ ಮುಗಿಯುವುದಿಲ್ಲ. ಏಕೆಂದರೆ, ಅವುಗಳ ಪಕ್ಕದಲ್ಲಿ ನಾಳೆ ಅರಳುವ ಮೊಗ್ಗುಗಳು ಅದಾಗಲೇ ಜೀವ ತಳೆದಿರುತ್ತವೆ. ಕೋಮಲತೆ, ಕಾಂತಿ ಚೈತನ್ಯದ ಕಣ್ಣುಗಳಂತೆ ಎನ್ನುತ್ತಾರೆ.


ಈ ಬೇಲಿ ಮೇಲಿನ ನೀಲಿಯ ಹೂಗಳು ನಮಗೆ ಕೇವಲ ಸೌಂದರ್ಯವನ್ನು ಮಾತ್ರ ತೋರದೆ.. ಬದುಕಿನ ಪಾಠವನ್ನು ತೋರುತ್ತವೆ. ಕೆಲವೇ ಕಾಲ ಬದುಕಿದ್ದರೂ ವೈಭವದಿಂದ ಬದುಕುತ್ತವೆ. ಅಷ್ಟೇ ಅಲ್ಲದೆ.. ನೋಡುಗರ ಕಣ್ಣಿಗೆ, ಮನಸ್ಸಿಗೆ ಚೈತನ್ಯವನ್ನು ತುಂಬುತ್ತವೆ. ಅವುಗಳ ಜೀವಿತಾವಧಿ ಹೆಚ್ಚಲ್ಲವಾದರೂ ತಾವು ಅರಳಿರುವ ಸಂದರ್ಭದಲ್ಲಿ ತೋರುವ ಸೌಂದರ್ಯ ಹಾಗೂ ಉತ್ಸಾಹ ಶಾಶ್ವತವಾದದ್ದು. ಆ ಹೂಗಳು ತಮ್ಮ ಬದುಕನ್ನು ಮುಗಿಸುತ್ತವಾದರೂ ಹಾಗೂ ಹೇಳುವ ಪಾಠ ಅಲ್ಲಿಗೆ ನಿಲ್ಲುವುದಿಲ್ಲ. ಏಕೆಂದರೆ, ಮೊಗ್ಗುಗಳು ಮರುದಿನಕ್ಕೆ ನಮಗೆ ಮತ್ತಷ್ಟು ಚೈತನ್ಯವನ್ನು ಹಾಗೂ ಮತ್ತದೇ ಸೌಂದರ್ಯವನ್ನು ತೋರುತ್ತವೆ. ಪ್ರಕೃತಿ ಕಲಿಸುವ ಪಾಠವೆಷ್ಟು ಸುಂದರ ಅಲ್ಲವೇ..?! 


ದೃಶ್ಯ ವೈಭವವನ್ನು ಕವಿತೆಯ ಶುರುವಿನಲ್ಲಿ ತೋರುವ ಕವಿ ಬದುಕಿನ ಬಹು ದೊಡ್ಡ ಪಾಠವನ್ನು ತಾವಾಗಿಯೇ ಬೆಳೆಸದ.. ಆದರೆ ನೈಸರ್ಗಿಕವಾಗಿ ಅರಳುವ ಹೂಗಳ ಮೂಲಕ ತೋರಿದ್ದಾರೆ. ಯಾರು ಗುರುತಿಸಲಿ, ಬಿಡಲಿ ತಮ್ಮ ಬದುಕನ್ನು ಸಾರ್ಥಕವಾಗಿಯೇ ಬದುಕಿಯೇ ಹೋಗುವ ಈ ಹೂಗಳು ಶಾಶ್ವತವಾಗಿ ಕವಿತೆಯ ಮೂಲಕ ಚೈತನ್ಯದಾಯಕವಾಗಿವೆ. 


ಚೆನ್ನವೀರ ಕಣವಿ ಅವರ ಈ ಕವಿತೆ ನನಗೆ ಚೈತನ್ಯದಾಯಕವಾಗಿಯೂ, ಪದಲಾಲಿತ್ಯದಿಂದಲೂ ಸೆಳೆಯಿತು. 


~ವಿಭಾ ವಿಶ್ವನಾಥ್

ಬಾಳು ಬೆಳಕಾಯಿತು


"ಆ ಬನ್ನಿ ಮರ ಹೋಗಿದ್ದೇ ಹೋಗಿದ್ದು, ನನ್ನ ದೃಷ್ಟಿ ಕೂಡಾ ಹಿಂಗಿ ಹೋಯಿತು. ಹೇಳಿದೆ ನಿಮಗೆ ಆ ಬನ್ನಿ ಮರ ಕಡಿಸಿದರೆ ಒಳ್ಳೆಯದಾಗಲ್ಲಾ ಅಂತಾ. ನೀವು ನನ್ನ ಮಾತನ್ನು ಕೇಳಲೇ ಇಲ್ಲ. ಈಗ, ನಮ್ಮ ಪಾಪದ ಫಲ ನಾವು ಅನುಭವಿಸಬೇಕಾಗಿದೆ. " ಎನ್ನುತ್ತಾ ಗತವನ್ನು ನೆನಪಿಸಿಕೊಂಡರು ತಾರಿಣಿ.


" ಎಲ್ಲಿಂದ ಎಲ್ಲಿಗೋ ವಿಷಯ ತೆಗೆದುಕೊಂಡು ಹೋಗಬೇಡ ಕಣೇ. ಅವತ್ತು ಅಪಘಾತದಲ್ಲಿ ನಿನ್ನ ಕಣ್ಣು ಹೋಯ್ತು.. ಅದಕ್ಕೆ, ಬನ್ನಿ ಮರ ಕಡಿದದ್ದನ್ನು ನೆಪ ಮಾಡಿಕೊಂಡು ದೂರಬೇಡ.


ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸಮನಾಯ್ತು. ಅಂತಾರಲ್ಲಾ.. ಹಾಗಾಯ್ತು ಇದು. ಅದಕ್ಕೂ, ಇದಕ್ಕೂ ಸಂಬಂಧವೇನು ಹೇಳು" ಎಂದರು ಪ್ರಕಾಶ್.


"ಅದು ದೇವರ ಮರ ಕಣ್ರೀ, ಅದನ್ನು ಕಡಿದದ್ದು ಅಪಶಕುನ. ಅದರ ಪಾಪದ ಫಲ ಇವತ್ತು ನಾವು ಅನುಭವಿಸುತ್ತಾ ಇಲ್ಲವಾ..?? " ಎಂದರು ತಾರಿಣಿ.


"ಸದ್ಯಕ್ಕೆ ನಿನಗೀಗ ಕಣ್ಣು ಕಾಣೋದಿಲ್ಲ. ಹಾಗಂತ ಕಣ್ಣು ಬರೋದೇ ಇಲ್ಲ ಅಂತಲೂ ಇಲ್ಲವಲ್ಲ. ಸರಿಯಾದ ದಾನಿಗಳು ಸಿಗಬೇಕಷ್ಟೇ.. ಕಣ್ಣು ಹೋದ ಅತ್ತೆಯನ್ನು ನೋಡಿಕೊಳ್ಳುವ ಇಚ್ಛೆಯಿಲ್ಲದ ಸೊಸೆ ಮದುವೆಯಾಗುವುದಕ್ಕೂ ಮುನ್ನವೇ ದೂರವಾಗಿದ್ದು ಒಳ್ಳೆಯದೇ ಆಯ್ತು. 

 ನಿನ್ನ ಸಹಾಯಕ್ಕೆ ಅಂತಾನೇ ಈ ಹಳ್ಳಿ ಮನೆಯಲ್ಲಿಯೂ ನನ್ನ ತಂಗಿ ನೆಲೆಯಾದಳು. ಕಣ್ಣು ಚೆನ್ನಾಗೇ ಇದ್ದಿದ್ರೆ ಕತ್ತೆ ಚಾಕರಿ ಮಾಡಿ ನಿನ್ನ ಸೊಂಟ ಬಿದ್ದು ಹೋಗ್ತಾ ಇತ್ತು ಅಷ್ಟೇ.. ಈಗ , ಇನ್ನೂ ಸುಖವಾಗೇ ಇದ್ದೀಯ ಅಂದುಕೋ. ಯಾವತ್ತೂ ನಾವಂದುಕೊಂಡದ್ದೇ ಸುಖ. ಪ್ರತಿ ಕಷ್ಟದಲ್ಲಿಯೂ ಸಕಾರಾತ್ಮಕತೆ ಕಾಣಬೇಕು. ಒಳ್ಳೆಯದನ್ನೇ ಆಲೋಚಿಸಬೇಕು. ತಿಳಿಯಿತಾ..?" ಎಂದು ಹೇಳಿದರು ಪ್ರಕಾಶ್.


"ಈ ಹಾಳಾದ ಕಣ್ಣಿನ ಬದಲಿಗೆ ಜೀವ ಹೋಗಿದ್ರೆ ಎಷ್ಟೋ ಚೆನ್ನಾಗಿರುತ್ತಿತ್ತು. ಇನ್ನೊಬ್ಬರು ನನ್ನ ಸಹಾಯ ಮಾಡುತ್ತಾ ಇದ್ದರೆ, ಅವರು ಸ್ನಾನ ಮಾಡಿಸಿ ಬಟ್ಟೆ ಹಾಕುವಾಗೆಲ್ಲಾ ಜೀವ ಹಿಡಿಯಷ್ಟಾಗುತ್ತೆ. ಮಗಳಾದರೂ ಇರಬಾರದಿತ್ತಾ ಅನ್ನಿಸುತ್ತೆ. ಈ ಸೂಕ್ಷ್ಮಗಳು ಇವರಿಗೆಲ್ಲಿ ಅರ್ಥವಾಗುತ್ತೆ..?" ಎನ್ನುತ್ತಾ ತಮ್ಮಷ್ಟಕ್ಕೆ ತಾವು ಮಾತನಾಡಿಕೊಳ್ಳುವಾಗ ಅವಳ ಸಹಾಯಕ್ಕಿದ್ದ ನಾದಿನಿ "ಹಾಗ್ಯಾಕೆ ಮಾತಾಡ್ತೀರಿ ಅತ್ತಿಗೆ. ನಾನೇನೂ ಬೇರೆಯವಳಾ ಹೇಳಿ. ಈ ಮನೆ ಮಹಾಲಕ್ಷ್ಮಿ ನೀವು. ನಿಮಗೆ ಮತ್ತೆ ಕಣ್ಣು ಬಂದೇ ಬರುತ್ತೆ. ನೀವು ಮನೆ ತುಂಬಾ ಗಲಗಲ ಅಂತಾ ಓಡಾಡುತ್ತೀರಿ. ನೋಡ್ತಿರಿ" ಎಂದಳು.


ನಾಲಿಗೆ ಕಚ್ಚಿ, ಪೇಲವ ನಗು ನಕ್ಕು "ಕನಸು ಚೆನ್ನಾಗೇ ಕಾಣುತ್ತೀಯ ಬಿಡೇ ಸುಧಾ. ನನಗೆ ಕಣ್ಣು ಬರಬೇಕು ಅಂದರೆ ನನಗೆ ಹೊಂದಿಕೆಯಾಗುವ ಕಣ್ಣು ಸಿಗಬೇಕು. 


ಕಣ್ಣು ಸಿಗೋ ವಿಷಯ ಹಾಗಿರಲಿ. ಕರ್ಮ ಕಳಿಬೇಕು ಕಣೇ, ಈ ಜನ್ಮಕ್ಕೆ ಅಂಟಿರುವ ಕರ್ಮ ಕಳೆಯಬೇಕು. ಎಲ್ಲಾ ಬನ್ನಿ ಮರ ಕಡಿದಿದ್ದರ ಫಲ ಕಣೇ" ಎಂದಳು ತಾರಿಣಿ.


"ಸುಮಾರು ಸಾರಿ ನೀವು ಈ ಬನ್ನಿ ಮರದ ಬಗ್ಗೆ ಹೇಳ್ತಾ ಇರುತ್ತೀರಿ.. ಕೇಳಿದ್ರೂ ಪೂರ್ತಿ ನೆನಪಿಲ್ಲ." ಎಂದವಳಿಗೆ ನೆನಪಿದ್ದರೂ.. ಅತ್ತಿಗೆಯ ಮನಸ್ಸನ್ನು ಮಾತಿನತ್ತ ತಿರುಗಿಸಲೆತ್ನಿಸಿದಳು.


"ನೀನು ಎಷ್ಟು ಸಾರಿ ಕೇಳಿದ್ರೂ ಹೇಳೋಕೆ ನನಗೆ ಬೇಸರ ಇಲ್ಲ ಬಿಡು. ಏನೂ ನೋಡೋಕಾಗದೆ ಸುಮ್ಮನೆ ಕತ್ತಲೆಯಲ್ಲೇ   ಕೂರುವುದರ ಬದಲಿಗೆ ಅದನ್ನಾದರೂ ಹೇಳುತ್ತೇನೆ." ಎನ್ನುತ್ತಾ ಅಂದಿನ ಘಟನೆಯನ್ನು ನೆನಪಿಸಿಕೊಂಡು ಹೇಳಿದ್ದಿಷ್ಟು.


"ಯಾವಾಗಲೋ.. ಯಾರದ್ದೋ ಸಾಲಕ್ಕೆ ಶ್ಯೂರಿಟಿ ಕೊಟ್ಟು ನಂಬಿಕೆಯೇ ಉರುಳಾಗಿ, ಅನಿವಾರ್ಯವಾಗಿ ಊರಾಚೆಯಿದ್ದ ಹಳೆಯ ತೋಟದ ಮನೆ, ತೋಟ ಮತ್ತು ಹೊಲ ಮಾರಿಯಾಗಿತ್ತು. ಆದರೆ, ಅಲ್ಲಿದ್ದ ಸಮಾಧಿ ಮತ್ತು ಹಳೆಯ ಬನ್ನಿ ಮರವನ್ನು ಮುಟ್ಟುವ ಧೈರ್ಯ ತೆಗೆದುಕೊಂಡವರಿಗೆ ಇರಲಿಲ್ಲ. ತೋಟದಲ್ಲಿದ್ದ ಮರಗಳನ್ನೆಲ್ಲಾ ಕಡಿಸಿ ಅದಾಗಲೇ ಅಲ್ಲಿ ಫ್ಯಾಕ್ಟರಿ ಕಟ್ಟುವುದಕ್ಕೆ ಅಡಿಪಾಯ ಹಾಕಿದ್ದರು. ಆದರೆ, ಅಲ್ಲಿದ್ದ ಸಮಾಧಿ ಹಾಗೂ ಬನ್ನಿ ಮರವನ್ನು ಕಡಿದರೆ ಏನಾದರೂ ಅಪಾಯ ಆಗುತ್ತೆ ಅಂತಾ ಯಾರೋ ಹೇಳಿದ್ದರು ಅಂತಾ ಆ ಕುಟುಂಬದವರನ್ನೇ ಕರೆಸಿ ಶಾಂತಿ ಪೂಜೆ ಮಾಡಿಸಿ ತೆಗೆದುಬಿಡಿ ಎಂದಿದ್ದಕ್ಕೆ ಇವರು ನನ್ನನ್ನು, ಇರುವ ಒಬ್ಬ ಮಗ ಉದಯ್ ನನ್ನು ಕರೆದುಕೊಂಡು ಹೊರಟಿದ್ದರು. 


ಅದಾಗಲೇ ನೆಲಸಮವಾಗಿದ್ದ ತೋಟ ನೋಡಿಯೇ ನನಗೆ ಕರುಳು ಕಿವುಚಿದಂತಾಗಿತ್ತು. ಅದು ಎಷ್ಟೋ ಕಾಲದ ಪೂರ್ವಿಕರ ಸಮಾಧಿ ಅದನ್ನು ಇವರು ಸ್ಥಳಾಂತರ ಮಾಡುತ್ತೇನೆ ಅಂತಾ ಒಪ್ಪಿಕೊಂಡು ಅದರ ಕಾರ್ಯವನ್ನು ಮಾಡಲು ವ್ಯವಸ್ಥೆ ಮಾಡಿದರು. ಆದರೆ, ಆ ಬನ್ನಿ ಮರದ ಬಗ್ಗೆ ಇವರಿಗೆ ಕಾಳಜಿಯೇ ಇರಲಿಲ್ಲ. ಎಲ್ಲಾ ಮರಗಳಂತೆ ಅದೂ ಒಂದು ಮರ ಅಂತಾ ಉಡಾಫೆ ಮಾಡಿ ಪೂಜೆ ಮುಗಿದ ನಂತರ, ಆ ಸಮಾಧಿ ಸ್ಥಳಾಂತರಿಸುವ ಕಡೆ ಹೊರಟರು. 


ಎಷ್ಟೋ ಜನ ಮುತ್ತೈದೆಯರು ಪೂಜೆ ಮಾಡಿದ್ದ ಮರ ಅದು. ಚಪ್ಪಲಿ ಹಾಕಿಕೊಂಡು ಹತ್ತಿರ ಹೋಗುವುದಾಗಲಿ ಮಾಡದೆ, ಮಡಿಯಲ್ಲಿಯೇ ಹತ್ತಿರಕ್ಕೆ ಹೋಗುತ್ತಿದ್ದ ಮರ ಅದು. ಅದನ್ನು ಪೂಜೆ ಮಾಡಿದ ಎಷ್ಟೋ ಮಕ್ಕಳಿಲ್ಲದ ಹೆಣ್ಣು ಮಕ್ಕಳಿಗೆ ಮಕ್ಕಳಾಗಿತ್ತು. ಎಷ್ಟೋ ಜನರ ಬೇಡಿಕೆ ನೆರವೇರಿತ್ತು ಅನ್ನುವ ಪ್ರತೀತಿ ಇತ್ತು. ಹಿಂಜರಿಯುತ್ತಾ.. ಭಯದಿಂದಲೇ ಪೂಜೆಗೆ ಮಾಡಿದ್ದೆ. ಆ ಬನ್ನಿ ಮರ ಕಡಿದರೂ ಅದರ ಬದಲಿಗೆ ಮತ್ತೆ ಐದು ಬನ್ನಿ ಮರ ನೆಡುವ ಸಂಕಲ್ಪ ಮಾಡಿದೆ. ಅವತ್ತು ವಾಪಾಸ್ ಬರುವಾಗ ನಾನು ಮತ್ತು ಉದಯ್ ಮಾತ್ರ ಇದ್ದದ್ದು. ಡ್ರೈವರ್, ಇವರು ಸಮಾಧಿ ಸ್ಥಳಾಂತರಿಸುವ ಕೆಲಸಕ್ಕೆ ಹೋಗಿದ್ದರು. ಅವತ್ತು ಪೂಜೆ ಎಲ್ಲಾ ಮುಗಿದು ನಾವು ಮನೆಗೆ ಬರುವಾಗ ಮನಸ್ಸಲ್ಲಿ ಯಾಕೋ ಆ ಪೂಜ್ಯವಾದ ಮರ ಕಡಿದದ್ದೇ ಭಯ. ಮನಸ್ಸು ಕೇಡನ್ನು ಶಂಕಿಸುತ್ತಲೇ ಇತ್ತು. ಅಪಘಾತವೂ ಆಯಿತು. ಮದುವೆ ನಿಶ್ಚಯವಾಗಿದ್ದ ಉದಯ್ ಪ್ರೀತಿಸಿದವಳು ದೂರವಾದರೆ.. ನನ್ನ ಕಣ್ಣಿನ ದೃಷ್ಟಿ ಹೋಯಿತು.


ನಾನು ಎಷ್ಟೋ ತಾಯಂದಿರ ಭಾಗ್ಯವಾದ ಬನ್ನಿ ಮರವನ್ನು ದೂರ ಮಾಡಿದ್ದರ ಪಾಪದ ಫಲ ಮಗನಿಗೆ ಕಾಡಬಾರದೆಂದು ಉದಯ್ ನನ್ನು ಕೆಲಸಕ್ಕೆ ಬೆಂಗಳೂರಿಗೆ ಕಳುಹಿಸಿದೆ. ಪ್ರೀತಿ ಕಳೆದುಕೊಂಡ ನೋವನ್ನು ಅಲ್ಲಿಯಾದರೂ ಮರೆಯಬಹುದೇನೋ ಎಂದು." ಎಂದು ನಿಟ್ಟುಸಿರಿಟ್ಟರು ತಾರಿಣಿ. ಆಗಷ್ಟೇ ಬಂದಿದ್ದ ಉದಯ್ ಗೆ ಅಮ್ಮನ ಮನದ ತುಮುಲ ಅರ್ಥವಾಗಿತ್ತು.


*******

ಪುಣ್ಯಕ್ಕೆ ಸುಧಾ ಸಮಯಕ್ಕೊದಗಿದ್ದಳು. ಇವರ ಚಿಕ್ಕಪ್ಪನ ಮಗಳೇ ಆದರೂ ಸ್ವಂತ ತಂಗಿಯಂತಿದ್ದವಳು. ಪುಟ್ಟ ಮಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು, ಗಂಡನನ್ನು ಕಳೆದುಕೊಂಡಾಗ ಮಾಡಿದ ಸಹಾಯವನ್ನು ನೆನೆಸಿಕೊಂಡು, ಊರಿನ ಗೊಡವೆಯೇ ಬೇಡವೆಂದು ಸಿಟಿಯಲ್ಲಿದ್ದವಳು ಇಲ್ಲಿ ನಿಂತಳು. ಅಷ್ಟು ಓದಿದ ಮಗಳನ್ನು ಒಪ್ಪಿಸಿ ನಮ್ಮ ಚಾಕರಿ ಮಾಡಿಕೊಂಡಿದ್ದಾಳೆ. ಇದೆಲ್ಲವೂ ದಿನವೂ ಕಾಡುತ್ತೆ. 

********


"ಅಮ್ಮ ಇನ್ನು ಗುಣವಾಗುತ್ತಾರೆ. ಅವರಿಗೆ ಬೇಕಾದ ವ್ಯವಸ್ಥೆ ನಾನು ಮಾಡಿಸುತ್ತೇನೆ" ಎಂದುಕೊಂಡ ಉದಯ್ ಸುಧಾ ಅತ್ತೆಯ ಮಗಳು ಕಿರಣಳನ್ನು ಕಾಣಬೇಕೆಂದುಕೊಂಡ.


ಉದಯ್ ಗೆ ಅಮ್ಮನ ಮಾನಸಿಕ ನೋವು ಅರಿವಾಗಿತ್ತು. ಮನೋವೈದ್ಯೆ ಕಿರಣ ತಾರಿಣಿಯವರಿಗೆ ಅರಿವಾಗದಂತೆ ಕೌನ್ಸೆಲಿಂಗ್ ಮಾಡುತ್ತಾ ಬಂದಳು. ಲೆಕ್ಚರರ್ ಉದಯ್ ಈಗ ಊರಲ್ಲೇ ನೆಲೆ ನಿಂತು, ಮನೆಯಿಂದಲೇ ಹೋಗಿ ಬರುವಂತೆ ಕೆಲಸಕ್ಕೆ ಸೇರಿಕೊಂಡು ಅಮ್ಮನ ಜೊತೆ ಹೆಚ್ಚಿನ ಸಮಯ ಕಳೆಯುತ್ತಾನಲ್ಲದೆ, ಮನೆಯ ಸುತ್ತಮುತ್ತಲೂ ಗಿಡಗಳನ್ನು ನೆಡಿಸಿ, ಹಸಿರನ್ನು ಸೃಷ್ಟಿಸಿದ. ಆಕೆ ಅಂದುಕೊಂಡಿದ್ದಂತೆಯೇ ಅವಳ ಕೈಯಿಂದ ಬನ್ನಿ ಮರಗಳನ್ನು ಸಹ ನೆಡಿಸಿದ. 


ತಾರಿಣಿ ಸಂತೃಪ್ತಿಯಿಂದ ಸುಧಾರಿಸಿಕೊಳ್ಳುತ್ತಿರುವಾಗಲೇ ಅನಿರೀಕ್ಷಿತ ಸಂಗತಿ ನಡೆಯಿತು. ತಾರಿಣಿಯವರಿಗೆ ಹೊಂದಿಕೆಯಾಗುವ ಕಣ್ಣಿನ ದಾನಿಗಳ ಹಠಾತ್ ಮರಣ ಅವಳ ದೃಷ್ಟಿಯ ಭರವಸೆ ತಂದಿತ್ತು.


ಆಪರೇಷನ್ ಯಶಸ್ವಿಯಾಗಿ ಮನೆಯ ಸುತ್ತಮುತ್ತಲಿನ ಹಸಿರನ್ನು ಮತ್ತೆ ಕಾಣುತ್ತಿದ್ದರು ತಾರಿಣಿ. ಸತ್ತರೂ ತನ್ನ ಜೀವದ ಒಂದು ಭಾಗವೇ ಆಗಿದ್ದ ಕಂಗಳನ್ನು ಜೀವಂತವಾಗಿರಿಸಿ ಸಂತೃಪ್ತಳಾಗಿದ್ದರು ಅಜ್ಞಾತ ದಾನಿ. ತಾರಿಣಿಯವರ ಮುಖ ಹಸಿರಿನ ಸೊಬಗಿನ ಮಡಿಲಲ್ಲಿ ಮತ್ತಷ್ಟು ಸಂತೃಪ್ತಿಯಿಂದ ಹೊಳೆಯುತ್ತಿದ್ದವು. ಅದಕ್ಕೆ ಕಾರಣ ಉದಯ್ ಹಾಗೂ ಕಿರಣರಲ್ಲಿ ಚಿಗುರಿದ್ದ ಪ್ರೀತಿಗೆ ಇನ್ನೇನು ವಿವಾಹದ ಮುದ್ರೆ ಬೀಳುವ ದಿನ ಹತ್ತಿರದಲ್ಲಿತ್ತು.


ಉದಯ-ಕಿರಣರ ವಿವಾಹದ ನಂತರ ಸುಧಾ ಅಲ್ಲಿಯೇ ನೆಲೆಸುವುದು ತಾರಿಣಿ-ಪ್ರಕಾಶ್ ರಿಗೆ ಹೇಳಲಾರದಷ್ಟು ಸಂಭ್ರಮ ತಂದಿತ್ತು. ಅಂದು ಮನೆಯವರೆಲ್ಲರೂ ನೇತ್ರದಾನದ ಸಂಕಲ್ಪವನ್ನು ಅಧಿಕೃತವಾಗಿ ರಿಜಿಸ್ಟರ್ ಮಾಡಿಸಿ ಮತ್ತೊಬ್ಬರ/ ಇಬ್ಬರ ಬಾಳು ಬೆಳಗುವ ಅವಕಾಶವನ್ನು ತಮ್ಮದಾಗಿಸಿಕೊಂಡರು. ವಿವಾಹದಿಂದ ಮರಳುವಾಗ ಎಲ್ಲರ ಕೈಯಲ್ಲಿಯೂ ರಿಟರ್ನ್ ಗಿಫ್ಟ್ ಆಗಿ ಗಿಡಗಳು ನಳನಳಿಸುತ್ತಿದ್ದವು.


ಕಿರಣಳ ಕೈಹಿಡಿದು, ಅಮ್ಮನ ಸಂತಸವನ್ನು ಕಣ್ತುಂಬಿಕೊಂಡ ಉದಯ್ ಕಣ್ಣುಗಳು ಮತ್ತಷ್ಟು ಸಂತೃಪ್ತವಾಗಿದ್ದವು. ಮಗಳಿಲ್ಲವೆಂಬ ಚಿಂತೆ ಈಗ ತಾರಿಣಿಯವರಿಂದ ದೂರವಾಗಿತ್ತು. ಚಿಕ್ಕಂದಿನಲ್ಲಿ ದೊರೆಯದ ಅಪ್ಪನ ಪ್ರೀತಿ ಪ್ರಕಾಶ್ ರಿಂದ ಕಿರಣಳಿಗೆ ದೊರೆತರೆ.. ಅಜ್ಜಿಯಾಗಿ ಮುಂದಿನ ಹೊಣೆ ಹೊರಲು ತಯಾರಾಗುತ್ತಿದ್ದರು ಸುಧಾ. ಎಲ್ಲರ ಬಾಳು ಬೆಳಗುವ ಮತ್ತೊಂದು ಪುಟ್ಟ ಜೀವದ ಆಗಮನದ ಮುನ್ಸೂಚನೆ ಮನೆಗೆ ಹೊಸ ಬೆಳಕನ್ನೇ ತರುತ್ತಿತ್ತು.


~ ವಿಭಾ ವಿಶ್ವನಾಥ್

ಸದ್ಯಕ್ಕೆ ಹಗುರಾಗೋಣ

 


ಜಂಜಾಟಗಳನೆಲ್ಲ ಕ್ಷಣಕಾಲ ಮರೆಯೋಣ

ನಮ್ಮಿಷ್ಟದ ಹಾಡ ಗುನುಗುತಲಿ..

ಹಿತವಾದ ಸಂಗೀತ ಕೇಳುತಲಿ..

ಯಾವುದೋ ಹೊಸ ಖಾದ್ಯದ ತಯಾರಿಯಲಿ..

ಒಂದಿಷ್ಟು ದೂರ ಸುಮ್ಮನೆ ಸಾಗುತಲಿ..

ಹಿತೈಷಿಯೊಡನೆ ತುಸು ಹರಟಿ ಹಗುರಾಗುತಲಿ..

ಮನದ ಮಾತುಗಳ ಡೈರಿಯಲಿ ಬರೆಯುತಲಿ..

ಸವಿ ನೆನಪೊಂದ ಮೆಲುಕು ಹಾಕುತಲಿ..

ಮಗುವಿನೊಡನೆ ಮಗುವಾಗಿ ಬೆರೆಯುತಲಿ..

ಸುಮ್ಮನಿರದೆ ಏನೋ ಒಂದು ಮಾಡುತಲಿ..!

ಕೊನೆಗೊಮ್ಮೆ

ಎಲ್ಲವನು ಕೊಡವಿ ಎದ್ದು ನಡೆಯುವುದು

ಇದ್ದೇ ಇರುವುದಲ್ಲ..!

ಸದ್ಯಕ್ಕೆ ಹಗುರಾಗೋಣ


~ವಿಭಾ ವಿಶ್ವನಾಥ್ 

ಎಲ್ಲಕ್ಕೂ ಸಹಮತವೇ..?! (ಬೆಳಕಿಂಡಿಯ ಕತೆಗಳು - 46)


ಪ್ರತಿ ಬಾರಿಯೂ ಮ್ಯಾನೇಜರ್ ನ ಮಾತಿಗೆ, ನಿರ್ಧಾರಕ್ಕೆ ಸಹಮತ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದವನಿಗೆ ಪ್ರಮೋಷನ್ ಸಿಗುತ್ತದೆ ಎಂದುಕೊಂಡಿದ್ದವರೆಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದಂತೆ ಮ್ಯಾನೇಜರ್ ನ ಹೆಚ್ಚಿನ ನಿರ್ಧಾರಗಳಿಗೆ ನಕಾರ ಸೂಚಿಸಿ, ವಾದ ಮಾಡಿ ಅವರ ವಿರುದ್ಧವೆಂಬಂತೆ ಕಾಣುತ್ತಿದ್ದವನಿಗೆ ಸಿಕ್ಕ ಪ್ರಮೋಷನ್ ಅಚ್ಚರಿ ತರಿಸಿತ್ತು. 

ಅದನ್ನು ಕಂಡು ಹೇಳಿದ್ದಿಷ್ಟು.. "ಪ್ರತಿ ನಿರ್ಧಾರಕ್ಕೂ ಸಹಮತ ಸೂಚಿಸಿದವರಿಗಿಂತ, ಅದನ್ನು ಒರೆ ಹಚ್ಚಿ ನೋಡಿ ಮತ್ತೊಮ್ಮೆ ಆಲೋಚಿಸುವಂತೆ ಮಾಡಿದವರಿಂದ ಹೆಚ್ಚು ಕಲಿತಿದ್ದೇನೆ. ಹಾಗಾಗಿ ಅವರ ಕೌಶಲ್ಯಕ್ಕೆ ಈ ಪ್ರಮೋಷನ್." ಎಂದಾಗ ತಾವು ಎಲ್ಲಿ ಎಷ್ಟು ಮಾತನಾಡುವುದು ಅವಶ್ಯಕವೆಂದು ಅರಿತ ಹಲವರು ಒಪ್ಪಿಗೆಯಾದುದಕ್ಕೆ ಮಾತ್ರವೇ ಸಹಮತ ಸೂಚಿಸುವುದನ್ನು, ಉಳಿದುದನ್ನು ತಮ್ಮ ರೀತಿಯಲ್ಲಿ ಪ್ರಸ್ತುತಪಡಿಸುವುದನ್ನೂ ರೂಢಿಸಿಕೊಳ್ಳುತ್ತಿದ್ದಾರೆ.

~ವಿಭಾ ವಿಶ್ವನಾಥ್ 

ಸಹಾಯ ಹಸ್ತ (ಬೆಳಕಿಂಡಿಯ ಕತೆಗಳು - 45)


 ಉಪಕಾರ ಸ್ಮರಣೆ ಮಾಡದೆ, ಅಗೌರವದಿಂದ ಬೆನ್ನ ಹಿಂದೆ ಆಡಿದ ಮಾತುಗಳು ಅವಳಿಗೆ ಬೇಸರ ತರಿಸಿದ್ದು ಮಾತ್ರವಲ್ಲದೆ ಅಪಾತ್ರ ದಾನ ಮಾಡಿದೆ ಎಂಬ ಭಾವವನ್ನೂ ಹುಟ್ಟಿಸಿತ್ತು. ಇನ್ನು ಮತ್ತಾರಿಗೂ ಉಪಕಾರವನ್ನೇ ಮಾಡಬಾರದು ಎಂದುಕೊಳ್ಳುವಷ್ಟರಲ್ಲಿ ಮತ್ತಾರೋ ಸಹಾಯ ಬಯಸಿ ಬಂದಾಗ ಇಲ್ಲವೆನ್ನಲಾರಳು. ಅಪನಂಬಿಕೆ, ಮೋಸ, ದ್ರೋಹದಾಚೆಗೂ ಇವರು ಅವರಂತಲ್ಲವೆಂಬ ನಂಬಿಕೆ ಮೂಡಿಸಿಕೊಳ್ಳುತ್ತಾಳೆ. ನಿಜವಾದ ಸಹಾಯ ಬೇಕಾದವರಿಗೆ ತನ್ನಿಂದ ತೊಂದರೆಯಾಗಬಾರದೆಂಬ ಕಾಳಜಿಯ ಮೃದು ಮನಸ್ಸು ಕರಗುತ್ತಲೇ ಇರುತ್ತದೆ.

~ವಿಭಾ ವಿಶ್ವನಾಥ್ 

ಅನಿವಾರ್ಯತೆ (ಬೆಳಕಿಂಡಿಯ ಕತೆಗಳು - 44)


 "ನಾನು ನಿನಗೆ ಅಷ್ಟೆಲ್ಲಾ ಸಹಾಯ ಮಾಡಿದ್ದೇನೆ. ಸಣ್ಣ-ಪುಟ್ಟ ಸಹಾಯ ಮಾಡಲು ನಿನಗೆ ಆಗುವುದಿಲ್ಲವಾ..?" ಎಂಬ ಮಾತು ಎಷ್ಟೇ ಮಾಡಿದರೂ ಹಂಗಿಗೆ ಬಿದ್ದವರು ಕೇಳಲೇಬೇಕಾದ ಅನಿವಾರ್ಯತೆ ಸೃಷ್ಟಿಸುತ್ತದೆ. ಸ್ವಾಭಿಮಾನವನ್ನು ಅಡವಿಡಲೇಬೇಕಾಗುತ್ತದೆ. ಜೊತೆಗೆ ಸಮಯಕ್ಕೊದಗಿದವರ 'ನಾನು' ಎಂಬ ಅಹಂ ಅನ್ನು ಮತ್ತಷ್ಟು ಬಲಿಷ್ಠವಾಗಿಸುತ್ತಲೇ ಇರುತ್ತದೆ.

~ವಿಭಾ ವಿಶ್ವನಾಥ್ 

ಗೆಲುವು ನನ್ನದಲ್ಲ (ಬೆಳಕಿಂಡಿಯ ಕತೆಗಳು - 43)


ಗುರಿ ಮಾತ್ರವೇ ಅವಳ ಕಣ್ಣಲ್ಲಿದ್ದದ್ದು. ಒಲಂಪಿಕ್ ನಲ್ಲಿ ಗೆದ್ದು ಪದಕ ಪಡೆದವಳ ಕಣ್ಣು, ಮನಸ್ಸುಗಳೆರಡೂ ತುಂಬಿ ಬಂದಿದ್ದವು. ಈ ಗೆಲುವು ಪಡೆದುಕೊಳ್ಳಲು ತಾನೆಷ್ಟು ಕಳೆದುಕೊಂಡಿದ್ದೆ ಎಂಬುದು ಗೆಲುವಿನ ಮುಂದೆ ಗೌಣವಾಗಿತ್ತು. ಅದು ಕೇವಲ  ಒಬ್ಬಳ ಗೆಲುವಾಗಿರಲಿಲ್ಲ. ಅದು ಕುಟುಂಬ, ಸ್ನೇಹಿತರು, ತರಬೇತುದಾರರ ಗೆಲುವಾಗಿತ್ತು. ಅದು ಅಷ್ಟಕ್ಕೆ ಸೀಮಿತವಾಗಲಿಲ್ಲ ಊರು, ಜಿಲ್ಲೆ, ರಾಜ್ಯದ ಗೆಲುವಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ದೇಶದ ಗೆಲುವಾಗಿತ್ತು. ಗೆಲುವಿನ ಸಂಭ್ರಮ ಎಲ್ಲರದ್ದೂ ಆದಾಗ ಗೆಲುವು ಮತ್ತಷ್ಟು ಆಪ್ತವಾಗಿತ್ತು. ಮುಂದಿನ ಗುರಿ ಅವಳ ಕಣ್ಣಲ್ಲಿ ನಿಚ್ಚಳವಾಗಿತ್ತು.


~ವಿಭಾ ವಿಶ್ವನಾಥ್

ಭಾನುವಾರ, ಜೂನ್ 21, 2026

ಪುಸ್ತಕ ಪಯಣ (ಬೆಳಕಿಂಡಿಯ ಕತೆಗಳು - 42)

 


ಸದಾ ಒಂದಿಲ್ಲೊಂದು ಕೆಲಸ ಮಾಡುತ್ತಾ ಬ್ಯುಸಿಯಾಗಿ ತಿರುಗುತ್ತಿದ್ದ ಅವಳಿಗೆ ಕಾಲಿನ ಫ್ಯಾಕ್ಚರ್ ಎಲ್ಲವನ್ನೂ ಬಿಟ್ಟು ೩ ತಿಂಗಳು ಮನೆಯಲ್ಲಿಯೇ ಕೂರುವ ಸಂಧರ್ಭ ಒದಗಿಸಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದ್ದವಳು ಮನೆಗಷ್ಟೇ ಸೀಮಿತವಾದಾಗ ಖಿನ್ನತೆಗೆ ಜಾರುವಂತಾಗಿತ್ತು. ಆದರೆ, ಅಮ್ಮ ಕೈಗಿತ್ತ ಪ್ರವಾಸ ಕಥನ ಅವಳ ಪುಸ್ತಕ ಪಯಣವನ್ನು ಶುರು ಮಾಡಿಸುತ್ತಷ್ಟೇ ಅಲ್ಲದೆ ಓದಿನ ಪಯಣಕ್ಕೆ ಮುನ್ನುಡಿಯಾಯಿತು. ಮುಂದೆ ಟ್ರಾವೆಲಿಂಗ್ ನಲ್ಲಿಯೂ ಮೊಬೈಲ್ ಬದಲಿಗೆ ಪುಸ್ತಕ ಹಿಡಿಯುವ ವಿಭಿನ್ನ ಆಲೋಚನೆಯಲ್ಲಿದ್ದಾಳೆ.

~ವಿಭಾ ವಿಶ್ವನಾಥ್ 

ಬದಲಾಯಿತೇ ನಿಯತ್ತು (ಬೆಳಕಿಂಡಿಯ ಕತೆಗಳು - 41)


ಪ್ರತಿದಿನವೂ ಬೀದಿ ನಾಯಿಯೊಂದಕ್ಕೆ ತಪ್ಪದೇ ಅನ್ನ ಹಾಕುತ್ತಿದ್ದಳು ಅವಳು. ಹಾಗೆಂದು, ನಾಯಿಯೊಂದನ್ನು ತಂದು ಸಾಕಿ ಸಲಹುವ ಆಸೆಯಿದ್ದರೂ ಅದು ಅವಳಿಗೆ ಸಾಧ್ಯವಿರಲಿಲ್ಲ. ದೂರದೂರಿನಿಂದ ಕೆಲಸಕ್ಕಾಗಿಯೇ ಬಂದು ಇಲ್ಲಿ ಉಳಿದಿದ್ದಳು. ಆ ದೊಡ್ಡ ಜವಾಬ್ದಾರಿಯ ಜೊತೆಗೆ ಇದನ್ನೂ ಅಂಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೆಂದೇ ಪ್ರೀತಿಯಿಂದ ನಾಯಿಗೆ ಊಟ ಹಾಕುತ್ತಿದ್ದಳು. ರಾತ್ರಿ ಪಾಳಿಯ ಕೆಲಸ ಮುಗಿಸಿ ಬರುವಾಗ ಪಕ್ಕದ ಮನೆಯ ಪರಿಚಿತನೇ ಆಗಿದ್ದ ಅಂಕಲ್ ಅವಳ ಮೇಲೆರಗಲು ಕಾದಿದ್ದ. ಎಲ್ಲಿಂದಲೋ ಬಂದ ನಾಯಿ ಅವಳನ್ನು ಅಪಾಯದಿಂದ ಪಾರು ಮಾಡಿತ್ತು. 

ಮನುಷ್ಯನ ನಿಯತ್ತು ಯಾವತ್ತಾದರೂ ಬದಲಾಗಬಹುದು. ಆದರೆ, ಪ್ರಾಣಿಯದ್ದಲ್ಲ ಎಂಬುದು ಅವಳಿಗೆ ಮನದಟ್ಟಾಗಿತ್ತು. ಅದಾದ ನಂತರ ಆ ನಾಯಿಯ ಜೊತೆಗೆ ಮತ್ತೊಂದಿಷ್ಟು ಮೂಕ ಪ್ರಾಣಿಗಳಿಗೆ ಅನ್ನ ಹಾಕಲು ಶುರುವಿಟ್ಟಳು ಅವಳು.


~ವಿಭಾ ವಿಶ್ವನಾಥ್

ಕಡಲ ಸಾಂತ್ವನ (ಬೆಳಕಿಂಡಿಯ ಕತೆಗಳು - 40)

 


ಕಡಲ ತೀರದಲ್ಲಿ ಬಂದು ಅವಳೊಡನೆ ಕುಳಿತಾಗಲೆಲ್ಲಾ ಅವಳು, ಹೇಳದ ದುಃಖಕ್ಕೆ ಕಡಲು ಸಾಂತ್ವನ ನೀಡುತ್ತದೆಂದು ಹೇಳುತ್ತಿದ್ದಳು. ನನಗೆ ಕಡಲು ಆಗೆಲ್ಲಾ ಗೋಳಾಡುವಂತೆ ಭಾಸವಾಗುತ್ತಿತ್ತು. ಅವಳ ಸಖ್ಯ, ಸಾಂಗತ್ಯದೆದುರು ಉಳಿದೆಲ್ಲವೂ ಸಪ್ಪೆಯಾಗಿತ್ತು. 

ಈಗ ಅವಳಿಲ್ಲ. ಅವಳಿಲ್ಲದ ಖಾಲಿತನಕ್ಕೆ ಕಡಲಿನದ್ದೇ ಸಾಂತ್ವನ. ಗಾಳಿಯ ಮೊರೆತದಲ್ಲಿ ಅವಳ ದನಿ, ಕಾಲಿಗೆ ಮುತ್ತಿಕ್ಕುವ ಅಲೆಗಳಲ್ಲಿ ಅವಳದ್ದೇ ಸ್ಪರ್ಶದ ಛಾಯೆ. ಸಾಂತ್ವನಿಸುವ ಕಡಲಿಗೆ ನಾವು ಕಿವಿಯಾಗಬೇಕಿದೆ ಅಷ್ಟೇ..

~ವಿಭಾ ವಿಶ್ವನಾಥ್ 

ಅವಳ ಪ್ರಪಂಚ (ಬೆಳಕಿಂಡಿಯ ಕತೆಗಳು - 39)


 "ಇತ್ತೀಚೆಗೆ ನಿನ್ನ ಪ್ರಪಂಚವೇ ಬದಲಾಗಿದೆ. ಮಗಳೇ ನಿನ್ನ ಪ್ರಪಂಚವಾಗಿರುವ ಹಾಗಿದೆ" ಕಿಚಾಯಿಸುವ ಧ್ವನಿಯಲ್ಲಿ ಅವರೆಂದರು. 

"ನಿದ್ದೆಗಣ್ಣಿನಲ್ಲಿಯೂ ತಡಕುತ್ತಾ, ನಾನಿರದಿದ್ದರೆ ಹುಡುಕುವ, ಹಿಂದೆ ಹಿಂದೆಯೇ ಬರುವ, ಕಣ್ಣಿನಿಂದ ಮರೆಯಾದರೆ ಅಳುವ ಪುಟ್ಟ ಮಗಳಿಗೆ ನಾನೇ ಪ್ರಪಂಚವಾಗಿರುವಾಗ.. ಅವಳಿಗೆ ಪ್ರಪಂಚದ ಅರಿವನ್ನು ಮೂಡಿಸುವ ಜವಾಬ್ದಾರಿ ಇರುವಾಗ ಸದ್ಯಕ್ಕೆ ಅವಳೇ ನನ್ನ ಪ್ರಪಂಚ. ನನ್ನ ಪುಟ್ಟ ಪ್ರಪಂಚದಲ್ಲಿ ಸದ್ಯಕ್ಕೆ ಕಳೆದು ಹೋಗಿದ್ದೇನೆ" ಎಂದಳು. 


ಈಗವರು ಅಂತಹ ಪುಟ್ಟ ಪ್ರಪಂಚದಲ್ಲಿ ಕಳೆದು ಹೋಗಿದ್ದ ತಮ್ಮ ದಿನಗಳನ್ನು ಹುಡುಕುತ್ತಿದ್ದಾರೆ.

~ವಿಭಾ ವಿಶ್ವನಾಥ್ 

ಉತ್ಸಾಹ (ಬೆಳಕಿಂಡಿಯ ಕತೆಗಳು - 38)

 


"ಅಮ್ಮ, ಸೂರ್ಯೋದಯ ನೋಡಲು ದಿನಾ ಇಷ್ಟು ಬೇಗ ಎಬ್ಬಿಸೋದ್ಯಾಕೆ..?" ಎಂಬ ಪುಟ್ಟಿಯ ಪ್ರಶ್ನೆಗೆ 

"ಸೂರ್ಯೋದಯ ಬರೀ ಬೆಳಗಲ್ಲ ಪಾಪು.. ಇಡೀ ದಿನದ ನಮ್ಮ ಉತ್ಸಾಹ" ಎಂದ ಅಮ್ಮನಿಗೆ

"ಹಾಗಾದರೆ, ಸೂರ್ಯಾಸ್ತವೆಂದರೆ ಉತ್ಸಾಹ ಮುಗಿದಂತಾ..?" ಎಂದು ಕೇಳಿದಳು ಪುಟ್ಟಿ.

"ಇಲ್ಲ ಪಾಪು, ನಾವು ಮತ್ತಷ್ಟು ಕನಸು ಕಂಡು ಉತ್ಸಾಹ ಹೆಚ್ಚಿಸಿಕೊಳ್ಳುವ ಬ್ರೇಕ್ ಅದು." ಎಂದಾಗ ಪುಟ್ಟಿಗೆ ಸೂರ್ಯೋದಯದ ಜೊತೆಗೆ ಸೂರ್ಯಾಸ್ತವನ್ನೂ ಸವಿಯುವ ಉತ್ಸಾಹ ಅಂದು ಹೆಚ್ಚೇ ಆಗಿತ್ತು.

~ವಿಭಾ ವಿಶ್ವನಾಥ್ 

ಐಶ್ವರ್ಯವಂತ (ಬೆಳಕಿಂಡಿಯ ಕತೆಗಳು - 37)


 "ನೀವು ಇಷ್ಟು ಐಶ್ವರ್ಯವಂತರಾಗಿದ್ದರೂ ನಿಮ್ಮ ಮಗನನ್ನು ಐಷಾರಾಮಿಯಾಗಿ ಬೆಳೆಯಲು ಬಿಡದೆ, ಮಿತಿಯಲ್ಲಿ ಕಟ್ಟುನಿಟ್ಟಾಗಿ ಬೆಳೆಸುತ್ತಿರುವುದಕ್ಕೆ ಎಲ್ಲರೂ ನಿಮ್ಮನ್ನು ಜಿಪುಣ ಎನ್ನುತ್ತಿದ್ದಾರೆ ಸರ್" ಎಂದು ಹೇಳಿದ ತನ್ನ ಸೆಕ್ರೆಟರಿಗೆ 

"ಹಣ, ಐಶ್ವರ್ಯ ಇಂದು ಬಂದು ನಾಳೆ ಹೋಗಬಹುದು. ಪ್ರಾಮಾಣಿಕತೆ, ನಿಷ್ಠೆ, ಬುದ್ಧಿವಂತಿಕೆ ಮಾತ್ರ ಅದನ್ನು ಉಳಿಸಿಕೊಳ್ಳುವಂತೆ ಮಾಡುತ್ತದೆ ಎನ್ನುವ ಅರಿವು ಅವನಿಗಾಗಬೇಕು. ಹಣದ ಅಹಂ ಇರದೆ ಎಲ್ಲರಲ್ಲೂ ಬೆಳೆಯುವ ಸರಳತನ, ಹೊಂದಾಣಿಕೆಯ ಮನೋಭಾವ ಬಂದರೆ ಆತ ಮುಂದೆ ತನ್ನ ಕೆಲಸಗಾರರ ಕಷ್ಟಗಳನ್ನು ಅರಿತು  ಮಾನವೀಯತೆಯಿಂದ ಸ್ಪಂದಿಸುತ್ತಾನೆ. ಆತ ಹಣದಿಂದಲ್ಲ.. ಗುಣದಿಂದ ಸಿರಿವಂತನಾಗಬೇಕು" ಎಂದ ತನ್ನ ಬಾಸ್ ನ ದೂರಾಲೋಚನೆಗೆ ತಲೆಬಾಗಿದ್ದಾನೆ ಅವನು.

~ವಿಭಾ ವಿಶ್ವನಾಥ್ 

ಅಜ್ಜಿ ಕರೆದ ಹಾಗಾಯಿತು (ಪುಸ್ತಕ ಯಾನ - 463)


ಪುಸ್ತಕದ ಶೀರ್ಷಿಕೆ : ಅಜ್ಜಿ ಕರೆದ ಹಾಗಾಯಿತು

ಲೇಖಕರು : ಸವಿತಾ ನಾಗಭೂಷಣ

ಪ್ರಕಾಶಕರು : ಅಕ್ಷರ ಪ್ರಕಾಶನ

ಪ್ರಥಮ ಮುದ್ರಣ : 2022

ಪುಟಗಳು : 56

ಬೆಲೆ : 75 ರೂ. 


ನಾನು ಸವಿತಾ ನಾಗಭೂಷಣ ಅವರ ಕವಿತೆಗಳನ್ನು ಮಾತ್ರ ಓದಿದ್ದೆ. ಇದು ಅವರ ಮೊದಲ ಕಥಾ ಸಂಕಲನ. ಇಲ್ಲಿನ ಕೆಲವು ಕಥೆಗಳು ಪ್ರಜಾವಾಣಿ, ಮಯೂರ, ಸುಧಾ, ಉದಯವಾಣಿ, ತುಷಾರ, ಹೊಸ ಮನುಷ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದು 30 ಕಿರು ಕಥೆಗಳ ಸಂಕಲನ. ನನಗೆ ಇಷ್ಟವಾದ ಕೆಲವು ಕಥೆಗಳ ಕುರಿತು ಪ್ರಸ್ತಾಪಿಸುವೆ.


ಬರವಣಿಗೆ : ಕಥಾ ಸಂಕಲನದ ಮೊದಲ ಕಥೆ ಹಾಗೂ ಚುಟುಕಾಗಿ ಚುರುಕು ಮುಟ್ಟಿಸುವ ಕಥೆಯೂ ಹೌದು. ಗಂಗಣ್ಣ ತನ್ನ ತಂದೆ ನಿಂಗಣ್ಣನಿಗೆ ಆಚೆ ಮನೆ ಚಿಕ್ಕಣ್ಣನ ಫೋಟೋ ಪೇಪರ್ ನಲ್ಲಿ ಬಂದಿರುವುದಾಗಿ ಹೇಳುತ್ತಾ.. ಅವನ ಪರಿಚಯವನ್ನು ಮಾಡುತ್ತಾನೆ. 'ಭಾಳ ಭಾಳ ಓದಿ ಬಾಳ ಬಾಳ ಬರೆದವನಂತೆ' ಎಂದು ಇನ್ನಷ್ಟು ಅವನ ಕೀರ್ತಿಯನ್ನು ಹೇಳುತ್ತಿರುವಾಗ ನಿಂಗಣ್ಣ 'ಅದೇನು ಭಾಳಾ ಭಾಳ ಅಂದ್ರೆ ರಾಮಾಯ್ಣ ಮಹಾಭಾರತಕ್ಕಿoತ ದೊಡ್ದ್ ಬರದಾನಾ?' ಎಂದು ಬೆರಗಿನಿಂದ ಹೇಳುವ ಕಥೆಯಲ್ಲಿ ಅಹಂಕಾರವನ್ನು ಮುಕ್ಕಾಗಿಸುವುದನ್ನು ಕಾಣಬಹುದು. ಹಳ್ಳಿಯ ಆಡು ಭಾಷೆಯ ಸಂಭಾಷಣೆಗಳು ಇಲ್ಲಿವೆ.


ರಾಜ ಮತ್ತು ಮುದುಕಿ : ದಾರಿ ತಪ್ಪಿ ಬಂದ ರಾಜ ಮುದುಕಿಯ ಸಾಮ್ರಾಜ್ಯಕ್ಕೆ ಬಂದಿದ್ದ. ಹಣ್ಣಿನ ಮರಗಳು ಹರಿಯುವ ಹಳ್ಳ-ಕೊಳ್ಳ, ಸಣ್ಣ ಗುಡಿಸಲು ಇಷ್ಟರಲ್ಲೇ ಬದುಕು ಸಾಗಿಸುತ್ತಿದ್ದ ಮುದುಕಿಗೆ ರಾಜನ ಠೀವಿ ಹಾಗೂ ಅವನ ಅಗಾಧ ಸಾಮ್ರಾಜ್ಯದ ಪರಿವೆಯೇ ಇರಲಿಲ್ಲ. ಅದು ಅವಳಿಗೆ ಬೆರಗು ಜೊತೆಗೆ ನಿರ್ಲಕ್ಷ್ಯವೂ... ರಾಜನ ಪರಿವಾರ ಮತ್ತೆ ಅವನನ್ನು ಸೇರಲು ಬಂದಿತಾದರೂ ಮುದುಕಿಗೆ ಉಪಯೋಗವಾಗಬಹುದಾದ ಯಾವ ವಸ್ತುವೂ ಅವನ ಬಳಿಯಲ್ಲಿರಲಿಲ್ಲ. ಮತ್ತೆ ಬರುತ್ತೇನೆ ಎಂದ ರಾಜನಿಗೆ ಮುದುಕಿ "ದಾರಿ ತಪ್ಪಬೇಡ, ಬರುವುದೂ ಬೇಡ" ಎಂದಿದ್ದೇಕೆ ಓದಿ ನೋಡಿ.


ಅಜ್ಜಿ ಕರೆದ ಹಾಗಾಯಿತು : ಕಥಾ ಸಂಕಲನದ ಶೀರ್ಷಿಕೆಯ ಕಥೆ. ಎಂದೋ ಮಾರಿಕೊಂಡ ತಮ್ಮ ಹಿರಿಯರಿದ್ದ ಮನೆಗೆ ಮತ್ತೆ ಬಂದಿದ್ದ ತಮ್ಮಣ್ಣನವರಿಗೆ ಈಗ ಹತ್ತಿರ 70 ವರ್ಷ. ಹಳೆ ಮನೆಯ ಬಾಗಿಲನ್ನು ತಟ್ಟಿದ್ದು ಸಹ ಅಜ್ಜಿ ಅಜ್ಜಿ ಎಂದೇ. ತಮ್ಮಣ್ಣನವರನ್ನು ಆ ಮನೆಯೊಡತಿ ಹೇಗೆ ಕಂಡಳು..? ತಮ್ಮಣ್ಣನವರು ಅಲ್ಲಿಗೆ ಬಂದಿದ್ದಾದರೂ ಏಕೆ..? ಅಜ್ಜಿಯ ಬಾಂಧವ್ಯ ಹಾಗೂ ನೆನಪುಗಳ ಜೊತೆಗೆ ಮತ್ತೊಂದು ಕಥೆಯನ್ನೂ ತೋರುತ್ತದೆ ಇದು.


ಸಂಬಂಧಗಳು : ಸಂಕೀರ್ಣವಾಗುತ್ತಿರುವ ಮನಸ್ಥಿತಿಗಳು ಹಾಗೂ ಕಡಿಮೆಯಾಗುತ್ತಿರುವ ತಾಳ್ಮೆಯ ಮನಸ್ಥಿತಿಯ ಯುವಜನಾಂಗ, ಅವರನ್ನು ನಿಭಾಯಿಸಬೇಕಾದ ಹೊಣೆ ಅಲ್ಲಲ್ಲ ಅನಿವಾರ್ಯತೆ ಇರುವ ಅವರ ತಂದೆ-ತಾಯಿ. ಸತೀಶ ಮತ್ತು ಸಂಜನಾರ ವಿವಾಹ ಸಂಬಂಧ, ಮನಸ್ಥಿತಿ, ಅವರ ಪೋಷಕರ ವರ್ತನೆ ಎಲ್ಲವೂ ಇಲ್ಲಿದೆ.


ಉಸಿರಿನ ಪರಿಮಳ : ಬೇರು, ಕಾಂಡ, ಎಲೆ, ದಳ, ಕೇಸರ ಎಂದು ಹೂವಿನ ಒಂದೊಂದೇ ಭಾಗಗಳನ್ನು ಬೇರೆ-ಬೇರೆಯಾಗಿ ಇಟ್ಟು ಮಕ್ಕಳಿಗೆ ತೋರಿಸುತ್ತಿದ್ದ ಟೀಚರ್ ಅನ್ನು ಒಬ್ಬಳು ವಿದ್ಯಾರ್ಥಿನಿ ಕುತೂಹಲದಿಂದ ಪರಿಮಳ ಎಂದು ಪ್ರಶ್ನಿಸಿದ್ದಳು. ಇಡಿಯಾಗಿ ಗಿಡ, ಹೂವು ನೋಡಿದವಳು ಬಿಡಿಬಿಡಿಯಾಗಿ ಕಂಡ ಹೂವಿಗೆ ನೀಡಿದ ಪ್ರತಿಕ್ರಿಯೆ ಏನು..? ಪರಿಸರದ ಕಾಳಜಿ, ಭಾವನಾತ್ಮಕತೆ, ವಿಜ್ಞಾನ ಇಷ್ಟರಲ್ಲಿ ಅವಳ ಮೇಲೆ ಹೆಚ್ಚಿನ ಪರಿಣಾಮ ಯಾವುದರದ್ದಿತ್ತು..?


ಒಂದು ತುಂಡು ಭೂಮಿಗಾಗಿ : ಒಂದು ತುಂಡು ಭೂಮಿಗಾಗಿ ಹುಟ್ಟಿದ ಜಗಳ ಅದು. ಅಣ್ಣ-ತಮ್ಮಂದಿರ ನಡುವೆ ಮೊದಲು ಹುಟ್ಟಿದ ಜಗಳ. ತಮ್ಮ ಕೋಪಗೊಂಡದ್ದಕ್ಕೆ ಅಣ್ಣನಿಗೆ ಕೋಪ. ಅಣ್ಣ ಹೊಡೆದ ಎಂದು ತಮ್ಮನಿಗೆ ಮತ್ತಷ್ಟು ತಾಪ. ಹೀಗೆ ಶುರುವಾದ ಜಗಳ ಮುಂದೆ ಏನಾಯಿತು ..? 


ಗೀಳು : ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ರಂಗಯ್ಯನವರು ಕೆಲಸದಿಂದ ನಿವೃತ್ತರಾಗಿ ಕೆಲವೇ ತಿಂಗಳುಗಳು ಕಳೆದಿತ್ತು. ಹದಿಹರೆಯದ ಒಬ್ಬಳೇ ಮಗಳು ನೀಲಾ ಚಿಕಿತ್ಸೆ ಫಲಕಾರಿಯಾಗದೆ, ಜ್ವರದಿಂದ ತೀರಿಕೊಂಡಾಗಿನಿಂದ ಗರಬಡಿದವರಂತಾಗಿದ್ದರು. ಅಷ್ಟೇ ಅಲ್ಲದೆ.. ಅವರಿಗೊಂದು ವಿಚಿತ್ರ ಗೀಳು ಶುರುವಾಗಿತ್ತು. ಅದು ಸಾವಿನ ಸುದ್ದಿ ಓದುವುದು, ಸಾವಿನ ಸುದ್ದಿ ಕಲೆ ಹಾಕಿಕೊಳ್ಳುವುದು ಜೊತೆಗೆ ಭಯಪಡುವುದು. ಹೀಗೆ ಶುರುವಾದ ಗೀಳು ಅತಿರೇಕಕ್ಕೆ ಸಾಗುತ್ತಾ ಹೋಯಿತು. ಮುಂದೆ ಏನಾಯಿತು ..? ಓದಿ ನೋಡಿ.


ಒಂದು ಹಳೆಯ ಕೊಡ : ಮುತ್ತಜ್ಜಿಯ, ಅಜ್ಜಿಯ, ಅಮ್ಮನ ಕೈಬದಲಾಯಿಸಿ ಬಂದ ಕಬ್ಬಿಣ, ಹಿತ್ತಾಳೆ, ತಾಮ್ರದ ವಸ್ತುಗಳನ್ನೆಲ್ಲ ಗುಡ್ಡೆ ಹಾಕಿಕೊಂಡಿದ್ದವಳು ನೆನಪಿನ ತಿಜೋರಿಯಿಂದ ನೆಗ್ಗಿದ ಪುಟ್ಟ ಕೊಡದತ್ತ ಕೈದೋರಿ ಅವಳು ಆ ಕುರಿತು ನೆನಪಿಸಿಕೊಂಡಳು. ಸಾಬಣ್ಣ ಎಲ್ಲವನ್ನು ಗುಡ್ಡೆಯಾಗಿಸಿ ಬೆಲೆ ಕಟ್ಟಿದನಾದರೂ.. ಕೊಡದ ಕಥೆ ಬೇರೆಯೇ ಇತ್ತು. ತಲೆಮಾರುಗಳಿಂದ ಬಂದ ಬಾಂಧವ್ಯ, ನಂಟು ಅಷ್ಟು ಬೇಗ ಬೇರೆಯಾಗಲು ಸಾಧ್ಯವೇ..?


ಅಂತ್ಯ : ಇಡೀ ಸೀಮೆಯೇ ನೆತ್ತರಿನಿಂದ ತೊಳೆದು ಹೋಗಿದ್ದ ಸಂದರ್ಭದಲ್ಲಿ ರಾಜ ತನ್ನ ಅರಮನೆಗೆ ಬರುತ್ತಾನೆ ಅವನು ಅರಮನೆಗೆ ಬಂದದ್ದೇಗೆ ಅವನ ಕಣ್ಣಿಗೆ ಅವನ ವೈಭೋಗವಲ್ಲ ಕಂಡದ್ದೇಕೆ ಹಾಗೂ ವಾಸ್ತವದ ಪರಿಸ್ಥಿತಿ ಏನಿತ್ತು ..? ಬದುಕಿನ ನಶ್ವರತೆಯ ಕಥೆ ಇಲ್ಲಿದೆ


ಬೆವರು : ಇದು ಕರೋನಾ ಕಾಲಘಟ್ಟದ ಕಥೆ. ಈ ಕಥಾ ಸಂಕಲನದಲ್ಲಿ ಕರೋನಾ ಸಂದರ್ಭದ ಇನ್ನೂ ಕೆಲ ಕಥೆಗಳಿವೆ. ಮನೆ ಮುಂದೆ ರಸ್ತೆ ಮಾಡುವವರು ಅಗೆದು, ಲಾಕ್ಡೌನ್ ಆಗಿ ಅದನ್ನು ಮಣ್ಣು ಮುಚ್ಚದೆ, ಮಟ್ಟ ಮಾಡದೆ ಹಾಗೆಯೇ ಬಿಟ್ಟಿದ್ದರು. ಯಾರಿಗೆ ಫೋನ್ ಮಾಡಿದರೂ ಕರೋನಾ ಎಂಬ ನೆಪ ಹೇಳಿ ಬರುತ್ತಿರಲಿಲ್ಲ. ತಾವೇ ಗುಂಡಿಗೆ ಮಣ್ಣು ತುಂಬಿ ಓಡಾಡಲು ಸಣ್ಣ ದಾರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಸಿಕ್ಕ ವ್ಯಕ್ತಿ ಹಾಗೂ ಬೆವರಿನ ಕಥೆ ಇದು.


ಮಹಿಳಾ ದಿನಾಚರಣೆ ಮನೆಮನೆ ಕತೆ : ಮಹಿಳಾ ದಿನಾಚರಣೆಯಂದು ಪೇಪರ್ ಓದಲು ಹೊರಟವರಿಗೆ ಪೇಪರ್ ತುಂಬಾ ಮಹಿಳೆಯರ ವಿಶೇಷ ಹಾಗೂ ಚೆಂದ ಚೆಂದದ ಲೇಖನ. ಆದರೆ, ಒಂದೊಂದಾಗಿ ಕಣ್ಣು ಹಾಯಿಸುವಷ್ಟರಲ್ಲಿಯೇ ಯಾವ್ಯಾವ ಅಡೆತಡೆಗಳು ಹಾಗೂ ಯಾರು ಯಾರು ಭೇಟಿಯಾದರು..? ನಾವು ವಿಶೇಷ ವ್ಯಕ್ತಿಗಳನ್ನು ಎಲ್ಲೆಲ್ಲೋ ಹುಡುಕಿ ಅಭಿಮಾನ ಪಡುತ್ತೇವೆ. ಆದರೆ, ನಮ್ಮ ಸುತ್ತಮುತ್ತಲೇ ಎಷ್ಟೋ ಜನ ಸಾಧಕಿಯರು ತಣ್ಣಗೆ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಿರುತ್ತಾರಲ್ಲಾ...! ಎಂಬ ಅರಿವು ಮಾಡಿಸುವ ಕಥೆ ಇದು.


ಇಲ್ಲಿನ ಕಥೆಗಳು ಅರ್ಧ, ಒಂದು, ಎರಡು ಪುಟಗಳಲ್ಲೆಲ್ಲ ಮುಗಿದು ಹೋಗುತ್ತವೆ. ಹಿರಿದರ್ಥವಿರುವ ಈ ಕಿರು ಕಥೆಗಳು ಆಲೋಚನೆ ಮೂಡಿಸುವ ಚೆಂದದ ಕಥೆಗಳು. ನಾನು ಪರಿಚಯಿಸಿರುವುದು ಕೆಲವನ್ನಷ್ಟೇ. ಸಂಪೂರ್ಣ ಓದಿನ ಸವಿಗೆ ಪುಸ್ತಕ ಓದಿ.


~ ವಿಭಾ ವಿಶ್ವನಾಥ್

ವನಮಾಲಿ - 15


ಕವಿ ರವೀಂದ್ರನಾಥ ಠಾಕೂರರು 'ವಿಶ್ವಾತ್ಮಕತೆ'ಯನ್ನು ಪ್ರತಿಪಾದಿಸಿ ವಿಶ್ವಕವಿ ಎಂದು ಕರೆಸಿಕೊಳ್ಳುತ್ತಾರೆ. 


ನಾನು ಆಯ್ಕೆ ಮಾಡಿಕೊಂಡಿರುವ ಅವರ ಕವನ ಸಂಕಲನ ವನಮಾಲಿ. ಇದು ಸಂಭಾಷಣಾ ರೂಪದ ಕಾವ್ಯಗುಚ್ಛ. ಇಲ್ಲಿನ ಹೆಚ್ಚಿನ ಕವಿತೆಗಳಲ್ಲಿ ಸ್ವಾತಂತ್ರ್ಯವನ್ನು ಬಯಸುವ, ಸುಂದರ, ಮುಕ್ತ ಜೀವನವನ್ನು ನಡೆಸಲು ತನ್ನ ಸಂಗಾತಿಗೆ ಆಹ್ವಾನ ನೀಡುವ ವ್ಯಕ್ತಿ ಒಂದೆಡೆಯಾದರೆ.. ಹೊಸ ಜೀವನವನ್ನು ಸಂಶಯದಿಂದ ನೋಡುವ ವ್ಯಕ್ತಿ ಮತ್ತೊಂದು ಕಡೆ. 


ಮೂಲ ಪುಸ್ತಕ The Gardener ಅನ್ನು 1913 ರಲ್ಲಿ Macmillan Co, London ಅವರು ಪ್ರಕಟಿಸಿದ್ದಾರೆ. ಅದರಲ್ಲಿ ಚಿಕ್ಕದಾಗಿ ಕಂಡ 84 ಪದ್ಯಗಳನ್ನು ಆರಿಸಿಕೊಂಡು ಬಾಗೇಪಲ್ಲಿ ಕೃಷ್ಣಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲದಲ್ಲಿ ಇರುವಂತೆ ಇಲ್ಲಿಯೂ ಪ್ರತ್ಯೇಕ ಶೀರ್ಷಿಕೆಗಳಿಲ್ಲ ಬದಲಾಗಿ ವನಮಾಲಿಗೆ ಸಂಖ್ಯೆಗಳನ್ನು ಕೊಡುತ್ತಾ ಹೋಗಿದ್ದಾರೆ ಅಷ್ಟೇ. 


ನನ್ನ ಆಯ್ಕೆಯ ಕವಿತೆ : ವನಮಾಲಿ - 15


ಕಸ್ತೂರೀ ಮೃಗ ತನ್ನ ಸುಗಂಧಕೆ ತಾನೇ ಹುಚ್ಚೆದ್ದು ಓಡಿದಂತೆ

ಆ ಕಾಡ ನೆಳಲಲ್ಲಿ ಓಡಿದೆನು ನಾನು


ಆ ಇರುಳು ನಡು ಬೇಸಿಗೆಯ ಇರುಳು

ಬೀಸುತಿದ್ದ ತಂಗಾಳಿ ದಕ್ಷಿಣ ದಿಕ್ಕಿನದು


ನಾನು ದಾರಿ ತಪ್ಪಿ ಅಲೆದೆ

ಪಡೆಯಲಾಗದ್ದನ್ನು ಬಯಸಿದೆ

ಬಯಸದ್ದನ್ನು ಪಡೆದೆ


ನನ್ನ ಆಕಾಂಕ್ಷೆಗಳ ಬಿಂಬ

ನನ್ನೆದೆಯಿಂದ ಹೊರಬಂದು

ಕುಣಿಯುತ್ತದೆ

ಹೊಳೆದ ದೃಷ್ಟಿ ಅತ್ತ ಹೊರಳುತ್ತದೆ


ನಾನದನು ಬಿಗಿಯಾಗಿ ಹಿಡಿಯಲೆತ್ನಿಸುತ್ತೇನೆ

ಅದು ನನಗೆ ಅಗ್ರಾಹ್ಯವಾಗಿ

ನನಗೆ ಕಣ್ತಪ್ಪಿಸಿ ಪಕ್ಕಕೊಯ್ಯುತ್ತದೆ


ನಾನು ಪಡೆಯಲಾಗದ್ದನ್ನು ಬಯಸಿದೆ 

ಬಯಸದ್ದನು ಪಡೆದೆ


ಮನುಷ್ಯ ತನಗೆ ಬೇಕಾದ ಶಾಂತಿ, ನೆಮ್ಮದಿಗಳನ್ನು ಹೊರಗೆ ಅರಸುತ್ತಾ.. ಲೌಕಿಕ ಸುಖಗಳ ಹಿಂದೆ ಬೀಳುತ್ತಾನೆ. ಆದರೆ, ಅವು ನಿಜಕ್ಕೂ ಮನುಷ್ಯನ ದೈನಂದಿನ ಬದುಕಿನಲ್ಲಿ ಹಾಗೂ ಆತ್ಮಜ್ಞಾನದಲ್ಲಿ ಆತನಿಗೆ ಅರಿವಾಗುತ್ತದೆ. ಆದರೆ, ಅದು ಅಷ್ಟು ಸುಲಭವಲ್ಲ.


ಕಸ್ತೂರಿ ಮೃಗಕ್ಕೆ ಕಸ್ತೂರಿಯ ಸುವಾಸನೆ ತನ್ನ ನಾಭಿಯಿಂದಲೇ ಬರುತ್ತಿದೆ ಎಂಬ ಅರಿವಿಲ್ಲದೆಯೇ.. ಸುವಾಸನೆಯನ್ನು ಹುಡುಕುತ್ತಾ ಎಲ್ಲೆಡೆ ಸುತ್ತುತ್ತದೆ. ಹಾಗೆಯೇ ಮನುಷ್ಯನು ತನ್ನ ಅಂತಃಸತ್ವದ ಅರಿವಿಲ್ಲದೆಯೇ, ತನ್ನ ಶಕ್ತಿ-ಸಾಮರ್ಥ್ಯದ ಅರಿವಿಲ್ಲದೆಯೇ ಅದನ್ನು ಮತ್ತೆ ಹುಡುಕುತ್ತಾ ಅಲೆಯುತ್ತಿರುತ್ತಾನೆ.


ನಡು ಬೇಸಿಗೆಯ ಇರುಳಿಗೆ ನಿಜಕ್ಕೂ ಬೇಕಿರುವುದು ತಂಪಾದ ತಂಗಾಳಿ. ಅಂತಹ ತಂಗಾಳಿ ಸುಳಿದಾಗ ಅದರತ್ತ ಆಕರ್ಷಿತನಾಗುತ್ತಾ ನಿದ್ದೆ ಮರೆತು ತಂಗಾಳಿಯನ್ನರಸಿ ಎಲ್ಲೆಲ್ಲಿಯೋ ಅಲೆಯುವಂತೆ, ಬದುಕಿನಲ್ಲಿ ಮೂಲ ಗುರಿಯನ್ನು ಮರೆತು ಕ್ಷಣಿಕ ಸೆಳೆತಕ್ಕೆ ಮೈಮರೆತು ಅದರ ಹಿಂದೆ ಬಿದ್ದಾಗ.. ಬದುಕಿನಲ್ಲಿ ಬಯಸಿದ್ದು ಸಿಗದ ಹಾಗೂ ಬಯಸದೆಯೂ ಸಿಗುವ  ವಿಚಾರವನ್ನು ಪ್ರಸ್ತಾಪಿಸುತ್ತಾರೆ. 


ತೊಳಲಿ, ಬಳಲಿರುವ ಮನುಷ್ಯನು ತಂಪಾದ ಸುಖಕ್ಕೆ ಹಾತರೆಯುತ್ತಾ.. ಸುಖವನ್ನರಸಿ ಹೊರಡುತ್ತಾನಾದರೂ ಆತ ಬಯಸಿದ ಸುಖ ಸಿಗದೇ ಕೆಲವೊಮ್ಮೆ ಆತ ಬಯಸದೆಯೂ ಇರುವ ಜೀವನ ಪಾಠವೂ ಸಿಗಬಹುದು. ಅದು ವಿಧಿಲಿಖಿತವೂ ಹೌದಲ್ಲವೇ..!


ಮನದ ಆಸೆ, ಆಕಾಂಕ್ಷೆಗಳು ಇನ್ನೂ ತೀರದೆ ಅವುಗಳದೇ ನೆನಪಿನಲ್ಲಿರುವ ಮನುಷ್ಯನಿಗೆ ಸಾಧನೆಯ ಬೆನ್ನು ಹತ್ತಿದ ಸಮಯದಲ್ಲಿಯೇ ದೃಷ್ಟಿ ಇತ್ತ ಹೊರಳುತ್ತದೆ. ಆಸೆಗಳನ್ನು, ಸುಖವನ್ನು ಕಟ್ಟಿಡಲು ಬಯಸಿದರೂ ಅದು ಅಷ್ಟು ಸುಲಭವಲ್ಲ. ಅದಕ್ಕೆ ಸಾಧನೆ ಬೇಕು. ಅಂತಹ ಸಾಧನೆಗೆ ಬಹಳಷ್ಟು ಶ್ರಮಿಸಬೇಕು. ಅದಕ್ಕೆ ಮನುಷ್ಯನ ತಾಳ್ಮೆ, ನಿರಂತರತೆ, ಪ್ರಯತ್ನ, ಅನುಭವ ಎಲ್ಲವೂ ಜೊತೆಯಾಗಬೇಕು. 


ಪಡೆಯಲಾಗದ್ದನ್ನು ಬಯಸಿದೆ 

ಬಯಸದ್ದನು ಪಡೆದೆ

ಎಂಬ ಈ ಎರಡು ಸಾಲುಗಳು ಹಿರಿದರ್ಥವನ್ನು ಹೇಳುತ್ತವೆ. ಮನುಷ್ಯ ಬಯಸಿದ್ದೆಲ್ಲವೂ ಕೈಗೆ ಸಿಗದು. ಯಾವುದು ಸಿಗಬೇಕೆಂದಿದೆಯೋ ಅದನ್ನು ಯಾರೂ ತಪ್ಪಿಸಲಾರರು ಎನ್ನುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಎಷ್ಟೋ ಬಾರಿ ಪಡೆಯಲಾಗದನ್ನು ಬಯಸಿ ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಂಡು, ದುಃಖವನ್ನು ತಂದುಕೊಂಡಿರುತ್ತೇವೆ. ಆದರೆ ಅದು ನಮ್ಮ ಬದುಕಿಗೆ ಒಳ್ಳೆಯದೇ ಆಗಿರುತ್ತದೆ. ಅದಕ್ಕಿಂತ ಚೆಂದದ ಹಾಗೂ ಸಮರ್ಪಕವಾದ ವಿಷಯವೇ ನಮ್ಮ ಬದುಕಿನಲ್ಲಿ ನಡೆದಿರುತ್ತದೆ. ಪಡೆಯಲಾಗದ್ದನ್ನು ಬಿಟ್ಟು, ಪಡೆದಿರುವುದನ್ನು ಉಳಿಸಿಕೊಂಡು ಹೋಗುವುದು ಅವಶ್ಯಕವಾಗಿದೆ. 


ನನ್ನ ಅರಿವಿಗೆ ದಕ್ಕಿದಂತೆ ಕವಿತೆಯ ಕುರಿತು ಅರ್ಥೈಸಿದ್ದೇನೆ. ವಿಶಿಷ್ಟ ಅಭಿಯಾನದ ಮೂಲಕ ರವೀಂದ್ರರ ಕಾವ್ಯಗಳ ಓದಿಗೆ ಕಾರಣರಾದವರೆಲ್ಲರಿಗೂ ಧನ್ಯವಾದಗಳು


~ ವಿಭಾ ವಿಶ್ವನಾಥ್

ಶನಿವಾರ, ಜೂನ್ 20, 2026

ಕೂಡುಮನೆ (ಪುಸ್ತಕ ಯಾನ - 462)


ಪುಸ್ತಕದ ಶೀರ್ಷಿಕೆ : ಕೂಡುಮನೆ

ಲೇಖಕರು : ರಾಧಾಕೃಷ್ಣ ಕಲ್ಚಾರ್

ಪ್ರಕಾಶಕರು : ಗಾಯತ್ರೀ ಪ್ರಕಾಶನ

ಪ್ರಥಮ ಮುದ್ರಣ : 1994

ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 70

ಬೆಲೆ : 70 ರೂ. 


ಕೂಡುಮನೆ ಕಿರು ಕಾದಂಬರಿ ರಾಧಾಕೃಷ್ಣ ಕಲ್ಚಾರ್ ಅವರ ಪ್ರಾರಂಭಿಕ ಕೃತಿ. 28 ವರ್ಷಗಳ ಹಿಂದೆ ಅನಂತ ಪ್ರಕಾಶ ಸಂಸ್ಥೆ ರಾಜ್ಯ ಮಟ್ಟದಲ್ಲಿ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ. ಮೂರು ದಶಕಗಳ ಹಿಂದಿನ ಕಾದಂಬರಿ ಎಂಬ ವಿಚಾರವನ್ನು ಮನದಲ್ಲಿಟ್ಟುಕೊಂಡು ಓದಿದರೂ ಇಂದಿನ ಕಾಲಕ್ಕೂ ಪ್ರಸ್ತುತವಾದ ಕಾದಂಬರಿ ಇದು. ಹಣಕಾಸಿನ ವಿಚಾರಗಳಲ್ಲಿ ಮಾತ್ರ ಅಂದಿನ ದಿನಗಳಿಗೆ ಹೋಲಿಸಿಕೊಳ್ಳಬಹುದಷ್ಟೇ.!


ಕೃಷಿ ಕಾಲೇಜಿನಲ್ಲಿ ಅಭ್ಯಾಸ ಮುಗಿಸಿ ಮೂರು ವರ್ಷಗಳ ನಂತರ ಮತ್ತೆ ತನ್ನ ಅಜ್ಜನ ಮಡಿಲು ಸೇರಲು ಹೊರಟಿದ್ದ ಶ್ರೀಧರನಿಗೆ ಅವಿಭಜಿತ ಕೂಡು ಕುಟುಂಬ, ಪಿತ್ರಾರ್ಜಿತವಾಗಿ ಬಂದ ಆಸ್ತಿಯ ಜೊತೆಗೆ ಅಜ್ಜ ಬೆವರು ಸುರಿಸಿ ಮಾಡಿದ ಆಸ್ತಿಯಿತ್ತು. ಪರೋಪಕಾರಿಯಾಗಿ ಬೆಳೆದ ಅಜ್ಜನೇ ಅವನ ಸ್ಪೂರ್ತಿ. 


"ನೋಡು ಮಗು, ಪ್ರಕೃತಿ ತಾಯಿ ಎನ್ನುತ್ತಾರೆ. ಆದರೆ ಈ ತಾಯಿ ಎಲ್ಲ ತಾಯಂದಿರ ಹಾಗಲ್ಲ, ತಾಯಿ ಬಂದು ಹಾಲು ಕುಡಿಸಲಿ ಎಂದು ಕೈ ಕಾಲು ಚಾಚಿ ಮಲಗಿದ ಮಗುವನ್ನು ಅವಳು ಮೆಚ್ಚುವುದಿಲ್ಲ. ಮಗು ತಾನಾಗಿ ಏಳಬೇಕು. ಪರಿಶ್ರಮದಿಂದ ಈ ತಾಯಿ ಇದ್ದಲ್ಲಿಗೆ ಹೋಗಬೇಕು. ಆಡಿ, ಕುಣಿದು, ಹಾಡಿ ಅವಳನ್ನು ಒಲಿಸಿಕೊಳ್ಳಬೇಕು. ಆಗ ನೋಡು ಸಮೃದ್ಧ ಹಾಲು ಆ ಮಗುವಿನ ಪಾಲಿಗೆ" ಎಂದು ಶ್ರೀಧರನಿಗೆ ಅಜ್ಜ ಎಷ್ಟೋ ಬಾರಿ ಪ್ರಕೃತಿಯ ಪಾಠ ಮಾಡಿದ್ದಾರೆ.  ಆದರ್ಶವೇ ಆದ ತನ್ನ ಅಜ್ಜ ಹಾಗೂ ಕೃಷಿಯ ಆದರ್ಶ ಅವನನ್ನು ಪ್ರಬುದ್ಧ ಹಾಗೂ ಪ್ರಾಮಾಣಿಕ ಮನುಷ್ಯನನ್ನಾಗಿ ರೂಪಿಸಿತು. ಕೃಷಿ ಮಾಡಿ ಮಾದರಿಯಾಗಬೇಕು ಎನ್ನುವ ಕನಸಿತ್ತು. 


ಶ್ರೀಧರನು ಕನಸಿನಲ್ಲೂ ಯೋಚಿಸಿದ ವಿಷಯವೆಂದರೆ ಮನೆ ಪಾಲಾಗುವುದು. ಆತನ ನೆಚ್ಚಿನ ಅಧ್ಯಾಪಕರೇ ಕೃಷಿ ಇಲಾಖೆಯಲ್ಲಿಯೇ ಆಫೀಸರ್ ಪೋಸ್ಟ್ ಕೊಡಿಸುತ್ತೇನೆಂದಾಗ ನಿರಾಕರಿಸಿ ಹಳ್ಳಿಯ ಕಡೆ ಮುಖ ಮಾಡಿದ್ದ. ತಪ್ಪಿಯೂ ಪಾಲಾವವ ಸಂದರ್ಭ ಬರಲಾರದು ಎಂದು ಗಟ್ಟಿಯಾಗಿಯೇ ಹೇಳಿದ್ದೇಕೆ..?


ಕೂಡುಮನೆಗೆ ಬೆಂಗಳೂರಿನಿಂದ ಹೊರಟು ಬಂದವನಿಗೆ ಅಚ್ಚರಿ ಕಾದಿತ್ತು. ಶ್ರೀಧರನ ಅಜ್ಜ ಶಂಭಟ್ಟರು. ಅವರ ಹಿಂದಿನ ತಲೆಮಾರುಗಳಲ್ಲಿ ಪಾಲು ನಡೆದು ಅಡ್ಕ, ಕುಮೇರಿ, ಪೂಂಬೆಮನೆ ಎಂದು ಹಂಚಿಹೋಗಿತ್ತು. ಈಗ ಮೂಲ ಮನೆಯಾಗಿ ಕೂಡುಮನೆ ರೂಪ ತಾಳಿತ್ತು . ಶಂಭಟ್ಟರು ಕೃಷಿಭೂಮಿಯ ವಿಸ್ತರಣೆಗೆ ಶ್ರಮಿಸಿದ ಹಾಗೂ ಅವರ ಮಣ್ಣಿನ ಕಾಯಕದ ಕುರಿತು ಓದಿನೋಡಿ.


ಶಂಭಟ್ಟರಿಗೆ ಮೂವರು ಗಂಡುಮಕ್ಕಳು 6 ಮಂದಿ ಹೆಣ್ಣು ಮಕ್ಕಳು. 

ನಾರಾಯಣ, ಶಂಕರ ಹಾಗೂ ರಾಜರಾಮ ಅವರ ಹೆಂಡತಿ ಮಕ್ಕಳೊಡನೆ ಒಟ್ಟಾಗಿ ನೆಲೆಸಿದ್ದರು. ಹೆಣ್ಣುಮಕ್ಕಳಲ್ಲಿ ಗೌರಿಗೆ ಮದುವೆಯಾಗಿ ಮಗ ರಾಮಕೃಷ್ಣ ನಾಲ್ಕು ವರ್ಷವಿದ್ದಾಗ ಪತಿ ಅಪಘಾತದಲ್ಲಿ ತೀರಿಕೊಂಡಿದ್ದರಿಂದ ಈಗ ಗೌರಿ ಕೂಡುಮನೆಯಲ್ಲಿಯೇ ಮಗನೊಂದಿಗೆ ನೆಲೆಸಿದ್ದಳು.


ಶ್ರೀಧರನ ತಂದೆ ನಾರಾಯಣ. ಶ್ರೀಧರನ ತಾಯಿ ತೀರಿ ಹೋಗಿ ತಂದೆ ಎರಡನೆಯ ವಿವಾಹವಾಗಿದ್ದರು. ಅವರಿಗೆ ಮೂವರು ಮಕ್ಕಳು. ನಾರಾಯಣನಿಗೆ ಶ್ರೀಧರ ಕೃಷಿ ಕಾಲೇಜಿಗೆ ಸೇರುವುದು ಇಷ್ಟವಿರಲಿಲ್ಲ. ಮಗ ಲೆಕ್ಚರರ್ ಆಗುವ ಆಸೆ ಇಟ್ಟುಕೊಂಡಿದ್ದರಾದರೂ ಮಗ ಅದಕ್ಕೆ ಮನ ಕೊಟ್ಟಿರಲಿಲ್ಲ. ಮತ್ತೊಬ್ಬ ಮಗ ಶ್ರೀಹರಿ ಕುರಿತು ಅವರಿಗೆ ಭರವಸೆಯಿತ್ತು. ನಾರಾಯಣರ ಎರಡನೇ ಪತ್ನಿ ಶಾರದೆಯ ಅಣ್ಣ ಈಶ್ವರ ಭಟ್ಟರ ಕುಮಕ್ಕು ನಾರಾಯಣರಿಗೆ ಹೆಚ್ಚೇ ಇತ್ತು.


ಶಂಕರನ ಪತ್ನಿ ಪಾರ್ವತಿ. ಇವರಿಗೆ ಮೂವರು ಮಕ್ಕಳು ಕಾದಂಬರಿಯಲ್ಲಿ ಇವರಿಗೆ ಹೆಚ್ಚೇನೂ ಮಹತ್ವವಿಲ್ಲ. ಕೆಲವು ಬಾರಿ ಪ್ರಸ್ತಾಪ ಬಂದು ಹೋಗುತ್ತದೆ.


ಮತ್ತೊಬ್ಬ ಮಗ ರಾಜಾರಾಮ ಹಾಗೂ ಜಾನಕಿ ಇಬ್ಬರು ಹಸುವಿನಂತಹ ಸ್ವಭಾವದವರು. ಪರೋಪಕಾರದಲ್ಲಿ ಎತ್ತಿದ ಕೈ ಎಂದರೂ ತಪ್ಪಾಗಲಾರದು. ತಾಯಿಯನ್ನು ಕಳೆದುಕೊಂಡಿದ್ದ ಶ್ರೀಧರನಿಗೆ ಜಾನಕಿ ಬಂದ ನಂತರ ತಾಯಿ ದೊರೆತಿದ್ದಳೆಂಬುದರಲ್ಲಿ ಅತಿಶಯೋಕ್ತಿಯಿಲ್ಲ. 


ಶಂಭಟ್ಟರ ಉಳಿದ ಹೆಣ್ಣು ಮಕ್ಕಳ ಪ್ರಸ್ತಾಪ ಸಾಂದರ್ಭಿಕವಾಗಿ ಆಗುತ್ತದೆಯಾದರೂ.. ಮೂರು ಗಂಡು ಮಕ್ಕಳಿಗಿಂತ ಹೆಚ್ಚೇನೂ ಮಹತ್ವ ನೀಡುವುದಿಲ್ಲ.


ಶಂಭಟ್ಟರ ಪತ್ನಿ ಲಕ್ಷ್ಮಿ ತೀರಿಕೊಂಡ ನಂತರ ಪ್ರತಿ ವರ್ಷವೂ ಅವರ ವರ್ಷದ ಕಾರ್ಯಕ್ಕೆ ಸಂಬಂಧಿಕರು ಹಾಗೂ ಮಕ್ಕಳ ಸಂಸಾರವೆಲ್ಲವೂ ಒಟ್ಟಾಗುತ್ತಿತ್ತು. ಕುಮೇರಿ ಕೃಷ್ಣಯ್ಯನವರು ಶಂಭಟ್ಟರ ಆಪ್ತರು. ಮೊಮ್ಮಕ್ಕಳ ಬಾಲ್ಯದ ಆಟಗಳನ್ನು ನೋಡುತ್ತಾ ಸಂತೃಪ್ತಿಯಿಂದ ಇದ್ದವರಿಗೆ ಹೆಚ್ಚೇನೂ ಆಸೆಗಳಿರಲಿಲ್ಲ. ಆದರೆ, ಮನಸ್ಸು ಬೇರೇನನ್ನೋ ಶಂಕಿಸುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಚಿಕ್ಕ-ಪುಟ್ಟ ಘಟನೆಗಳಿಗೆ ಅಂತಹ ಮಹತ್ವ ಕೊಡದಿದ್ದರೂ ಒಡಕು ಕಾಣುತ್ತಿತ್ತು.


ಶಂಭಟ್ಟರ ಪತ್ನಿ ಲಕ್ಷ್ಮಿಯವರ ವರ್ಷದ ಕಾರ್ಯದ ದಿನ ನಿರ್ದಾಕ್ಷಿಣ್ಯವಾಗಿ ಹಿರಿಯ ಮಗ ನಾರಾಯಣ ಹಾಗೂ ಎರಡನೇ ಮಗ ಶಂಕರ ಇಬ್ಬರೂ ಪಾಲು ಕೇಳಿದಾಗ ಇಂದಲ್ಲಾ ನಾಳೆ ಇವರು ಪಾಲಾಗುವವರೇ ಎಂದು ಗೊತ್ತಾಗಿದ್ದರಿಂದ, ಸ್ವಲ್ಪ ದಿನ ತಡೆಯುವವರೇ ಎಂದು ಕೇಳಿ ಮಳೆಗಾಲದ ಬಳಿಕ ಪಾಲಿಗೆ ಒಂದು ದಿನ ನಿಶ್ಚಯಿಸಿ, ಅಲ್ಲಿಯವರೆಗೂ ಹೇಗಾದರೂ ನಿಭಾಯಿಸಿ ಎಂದಿದ್ದರು. ಶ್ರೀಧರ ತನ್ನ ಪರೀಕ್ಷೆಯ ಕಾರಣ ಅಂದು ಅಲ್ಲಿ ಹಾಜರಿರಲಿಲ್ಲ.


ಮುಂದೆ ಗೌರಿ ಹಾಗೂ ರಾಮನ ಪರಿಸ್ಥಿತಿ ಏನು ಎಂಬುದನ್ನು ಅವರು ಮುಂದಾಲೋಚಿಸಿದ್ದರು. ರಾಜಾರಾಮ ಹಾಗೂ ಜಾನಕಿಯ ಮನಸ್ಸು ಎಷ್ಟು ನಿಷ್ಕಲ್ಮಶವೆಂದರೆ ತಮ್ಮೊಡನೆ ಅವರನ್ನು ಸಾಕಲು ತಮ್ಮಲ್ಲಿಯೇ ನಿಶ್ಚಯಿಸಿಕೊಂಡಿದ್ದರು. ಹೇಗೂ ನಾರಾಯಣ, ಶಂಕರರು ಅವರ ಕುರಿತು ಆಲೋಚಿಸಿರಲಾರರು ಎಂದುಕೊಂಡು.. 


ಕೂಡುಮನೆ ಪಾಲಾಗುವ ಗ ನಾರಾಯಣನಿಗೆ ಅವನ ಭಾವ ಈಶ್ವರ ಭಟ್ಟನ ಸಹಾಯ ಸಿಕ್ಕಿತು. ಶಂಕರ ಹಾಗೂ ನಾರಾಯಣರಿಗೆ ಅವರವರು ಬೇಕಾದದ್ದೇ ಸಿಕ್ಕಿತು. ರಾಜಾರಾಮನಿಗೆ ಇಷ್ಟವಿಲ್ಲದಿದ್ದರೂ ತನ್ನ ಪಾಲು ಪಡೆದುಕೊಳ್ಳಲೇ ಬೇಕಿತ್ತು. 


ಶ್ರೀಧರ ತನ್ನ ತಂದೆಯ ಬಳಿ ತನ್ನ ಪಾಲು ಕೇಳಿದ್ದು ನಾರಾಯಣನಿಗೆ ಸಿಟ್ಟು ತರಿಸಿತ್ತು. ತಾತನ ಜೊತೆ ಉಳಿಯುವ ನಿರ್ಧಾರ ತೆಗೆದುಕೊಂಡಾಗ.. ಆ ಆಸ್ತಿಯನ್ನು ಒಳಹಾಕಿಕೊಳ್ಳಲು ಉಳಿಯುತ್ತಿದ್ದಾನೆಂಬ ಚಿಕ್ಕಪ್ಪನ ಅನುಮಾನದ ಕಟು ಮಾತುಗಳನ್ನು ಕೇಳಬೇಕಾಯಿತು. ಕೂಡುಮನೆಯಲ್ಲಿ ಶಂಭಟ್ಟರು, ಶ್ರೀಧರ, ಗೌರಿ ಹಾಗೂ ರಾಮರು ಉಳಿದರು. ಸ್ವಯಾರ್ಜಿತ ಆಸ್ತಿ ಕೈಹಿಡಿಡಿತ್ತು.


ಮುಂದೆ ಶಂಕರ, ನಾರಾಯಣ ಹಾಗೂ ರಾಜಾರಾಮರ ಬದುಕು ಹೇಗೆ ಸಾಗಿತು..?


ಒಡೆದು ಹೋದ ಕೂಡುಮನೆಯಲ್ಲಿ ಹೆಣ್ಣುಮಕ್ಕಳು ಮುಂದೆ ಸಂಬಂಧವಿಟ್ಟುಕೊಂಡಾದರೂ ಹೇಗೆ..?


ಶಂಭಟ್ಟರು ದೀರ್ಘಕಾಲ ಉಳಿಯಲಿಲ್ಲ. ಶ್ರೀಧರನೇ ಯಜಮಾನನಾಗಿ ನಿಂತು ನಿಭಾಯಿಸುತ್ತಿದ್ದ. ಶಂಕರನಿಂದ ಆಗಾಗ ತೊಂದರೆಗಳು ಒದಗಿ ಬಂದಾಗ ಪರಿಹಾರ ಕಂಡುಕೊಂಡಿದ್ದೇಗೆ..? ಹಿತೈಷಿಯಂತೆ ಕುಮೇರಿ ಕೃಷ್ಣಪ್ಪನವರಿದ್ದರು. ಶಂಕರ ಆ ಜಾಗವನ್ನು ಮಾಡಿ ಬೇರೆಡೆಗೆ ಹೋದ ಸಂದರ್ಭದಲ್ಲಿ ಕೆದಿಲಾಯರು ಬಂದರು. ಅವರ ಒಡನಾಟ ಹೇಗಿತ್ತು..?


ಅತ್ತೆ ಹಾಗೂ ರಾಮನನ್ನು ಜೊತೆಗೆ ಅಜ್ಜನ ಕೃಷಿ ಭೂಮಿಯನ್ನು ಕಾಪಾಡುತ್ತಾ ಶ್ರೀಧರ ಬದುಕಿದ ಬದುಕು ನಿಜಕ್ಕೂ ಆದರ್ಶನೀಯ. ರಾಜಾರಾಮನಿಂದ ಸಿಗುತ್ತಿದ್ದ ಬೆಂಬಲವೂ ಇಲ್ಲಿ ನೆನಪಿರಬೇಕಾದಂತದ್ದು. ಶ್ರೀಹರಿಯ ಯಾವ ಕೆಲಸದಿಂದ ನಾರಾಯಣ ಮನಸ್ಸು ಕೆಡಿಸಿಕೊಂಡ..? ನಾರಾಯಣ ಹಾಗೂ ಶ್ರೀಧರನ ಸಂಬಂಧ ಹಲಸಲು ಶಾರದೆ ಎಷ್ಟರಮಟ್ಟಿಗೆ ಕಾರಣವಾಗುತ್ತಾಳೆ..? ಶ್ರೀಧರನ ವಿವಾಹಾನಂತರದ ಬದಲಾವಣೆಗಳು ಹೇಗಿದ್ದವು..? ಶ್ರೀಧರನ ಓದಿನ ಜ್ಞಾನ ಎಷ್ಟು ಸಹಕಾರಿಯಾಯಿತು..?


ಕಾಲ ಎಲ್ಲವನ್ನು ಬದಲಿಸುತ್ತದೆ ಅನ್ನುವ ಮಾತು ಕೆಲವು ಬಾರಿ ನಿಜವಾದರೂ.. ಒಂದು ತಲೆಮಾರಿನ ಬಳಿಕ ಮತ್ತೆ ಮನಸ್ಸುಗಳು ಕೂಡಿಕೊಂಡು ಮನೆ ಒಂದಾಗುತ್ತದೆಯೇ..? ಈ ಕಲ್ಪನೆ ಎಷ್ಟು ರಮ್ಯವಲ್ಲವೇ..!? ಅದು ನಿಜವಾಗಿಯೂ ಆದರೆ..? ಕೂಡುಮನೆ ಇಂತಹ ದಿನಗಳನ್ನು ಕಾಣುವುದರಲ್ಲಿತ್ತು. ಅದರ ಹಾದಿ ಹೇಗಿತ್ತು ಓದಿ ನೋಡಿ.


ಕಾದಂಬರಿಯ ಕೊನೆಯ ಮಾತಂತೂ ಶ್ರೀಧರ ಭವಿಷ್ಯದ ಕುರಿತು ಆಲೋಚಿಸಿರುವುದನ್ನು ಹಾಗೂ ಮನುಷ್ಯರ ಜೊತೆಗೆ ಕಾಲದ ಬದಲಾವಣೆಯನ್ನು ಸೂಚಿಸುತ್ತದೆ. ಇದು ಮತ್ತೊಂದು ಬದಲಾವಣೆಗೆ ನಾಂದಿಯೇ..? ಆ ಮಾತುಗಳೇನು ಓದಿ ನೋಡಿ.


ಆಪ್ತವಾದ ಓದು. ಒಳ್ಳೆಯ ಭರವಸೆಗಳು, ನಡೆಗಳು ಕಾದಂಬರಿಯಾಚೆಗೂ ಮನಸ್ಸಲ್ಲುಳಿಯುತ್ತವೆ. ಕಡಬ, ಪಂಜ, ಪುತ್ತೂರಿನ ಪರಿಸರ ಓದನ್ನು ಇನ್ನಷ್ಟು ಆಪ್ತವಾಗಿಸಿತು.

~ ವಿಭಾ ವಿಶ್ವನಾಥ್

ಗಾಳಿ ಗೂಡು (ಪುಸ್ತಕ ಯಾನ - 461)


ಪುಸ್ತಕದ ಶೀರ್ಷಿಕೆ : ಗಾಳಿ ಗೂಡು 

ಲೇಖಕರು : 'ಶ್ರೀ' ತಲಗೇರಿ

ಪ್ರಕಾಶಕರು : ಸಸಿ ಪ್ರಕಾಶನ 

ಪ್ರಥಮ ಮುದ್ರಣ : 2026

ಪುಟಗಳು : 80

ಬೆಲೆ : 120 ರೂ. 


'ಶ್ರೀ' ತಲಗೇರಿ ಅವರ ಮೊದಲ ಪುಸ್ತಕ ಒಂಟಿ ಟೊಂಗೆಯ ಲಾಂದ್ರ ಎಂಬ ಕವನ ಸಂಕಲನ ಇ-ಪುಸ್ತಕವಾಗಿ ಲಭ್ಯವಿದೆ. ಇದು ಅವರ ಮೊದಲ ಫಿಸಿಕಲ್ ಹೊತ್ತಿಗೆ ಹಾಗೂ ಕಥಾ ಸಂಕಲನ. ಛಾಯಾಚಿತ್ರಗಳೊಂದಿಗೆ ಚೆಂದದ ಸಾಲುಗಳೊಂದಿಗೆ ಸೆಳೆಯುತ್ತಿದ್ದ ಇವರ ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.


ನೆರಳು : ವಿಳಂಬನ ಪ್ರತಿದಿನದ ದಿನಚರಿಯ ಜೊತೆಗೆ ಅವನು ಸೂಕ್ಷ್ಮವಾಗಿ ಗಮನಿಸುತ್ತಲೇ.. ಏಕಾಂತವನ್ನು ಅನುಭವಿಸುವ, ತನ್ನೊಡನೆ ತಾನು ಕಳೆಯುವ ಕ್ಷಣಗಳನ್ನು ತೆರೆದಿಡುತ್ತಾ.. ಅವನ ಬಾಲ್ಯದ ಘಟನೆಯ ಜೊತೆಗೆ, ಈಗ ಅವನ ಕಣ್ಣಿಗೆ ಕಾಣುವ ಆದರೆ ಮಾತುಕತೆಯೇ ಇಲ್ಲದ ನೆರಳುಗಳ ಜೊತೆಗಿನ ಒಡನಾಟ ಇಲ್ಲಿದೆ. ವಿಳಂಬನ ಬದುಕಿನ ಆಸಕ್ತಿದಾಯಕ ಕಥೆಯನ್ನು ಇಲ್ಲಿ ಕಾಣಬಹುದು.


ಸೀತಾಳೆ ಹೂವು : ಅಮ್ಮನಿಗೆ ಸೀತಾಳೆ ಹೂವು ಎಂದರೆ ಭಯಂಕರ ಇಷ್ಟ ಎನ್ನುತ್ತಾ ಮಳೆಗಾಲದ ನೆನಪಿನೊಂದಿಗೆ ಪರ ಸೀತಾಳೆ ಹೂವಿನ ಪರಿಯನ್ನು ಕಟ್ಟಿಕೊಡುತ್ತಾನೆ. ಈ ಸೀತೆ ಹೂವಿನ ಜೊತೆಗೆ ಅಮ್ಮನ ಹಾಗೂ ಅಪ್ಪನ ಜೊತೆಗೆ ಅಪ್ಪನ ಮತ್ತೊಂದು ಸಂಸಾರದ ಚಿತ್ರಣ ತೆರೆದುಕೊಳ್ಳುತ್ತದೆ. ಚಿಕ್ಕಮ್ಮನ ಮಗ ಅಪರ ಅಂತ್ಯಸಂಸ್ಕಾರ ಮಾಡಿದನೋ ಅಥವಾ ಪರನೋ..? ಹೀಗೆ ಸಾಗುವ ಕಥನ ಮುಂದೆ ಪರ ಹಾಗೂ ಅಪರರಲ್ಲಿ ಅಮ್ಮ ಆಸೆಪಡುತ್ತಿದ್ದ ಸೀತಾಳೆ ಹೂವಿಗಾಗಿಯೇ ಜಗಳ ಶುರುವಾಗಿತ್ತು. ಹೀಗೆ ಶುರುವಾದ ಜಗಳ ಮತ್ತೊಂದು ಸತ್ಯವನ್ನು ಓದುಗರಿಗೆ ತೆರೆದಿಡುತ್ತದೆ


ಸತ್ತೆ : ಸಾಹಿತಿಯಾದವರು ಎಲ್ಲದಕ್ಕೂ ಅಭಿಪ್ರಾಯ ಹೇಳಲೇ ಬೇಕಾ..? ಇಂತಹದೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದ ಅಭಿಸಾರ, ಅಷ್ಟೇ ಅಲ್ಲದೆ ಪತ್ರಕರ್ತ ಗೆಳೆಯ ವಾರಂಗ ಯಾವುದಾದರೊಂದು ಸ್ಟೇಟ್ಮೆಂಟ್ ಕೊಡುವಂತೆ ಗೆಳೆಯನಿಗೆ ತಿಳಿ ಹೇಳಿ ಅವನ ಹೇಳಿಕೆಗಾಗಿ ಕಾಯುತ್ತಿದ್ದ. ಆದರೆ, ಅಭಿಸಾರನ ಗಮನವೆಲ್ಲವೂ ಇದ್ದದ್ದು ಬೇರೆಡೆಗೆ. ಸಾಮಾಜಿಕ ತಲ್ಲಣಕ್ಕೆ ಸಾಹಿತಿಗಳು ಸ್ಪಂದಿಸುವ ಬಗೆ ಹೇಗಿರುತ್ತದೆ..? ಅವರ ಬದುಕಿನ ನೈಜ ರೀತಿ ಹೇಗಿರುತ್ತದೆ ಎರಡಕ್ಕೂ ಉತ್ತರ ಇಲ್ಲಿದೆ. ಹಾಗೆಂದು ಮಾನವೀಯತೆಯನ್ನು ಬದಿಗಿಟ್ಟು ಬದುಕುವ ಮನುಷ್ಯನಲ್ಲ ಅಭಿಸಾರ, ಆತನ ಮಿಡಿತ ಯಾವ ಕಡೆಗಿತ್ತು ಓದಿ ನೋಡಿ.


ಮೀನ್ ಗೌರಿಯ ದಂಡಯಾತ್ರೆ : ದಿನಾ ಮೀನು ಮಾರುವ ಗೌರಕ್ಕ ಕಾಣೆಯಾಗಿದ್ದರ ಹಿಂದೆಯೇ ಆಕೆಯ ಕುರಿತಾಗಿ ಹಲವಾರು ಸುದ್ದಿಗಳು ಊರಿನಲ್ಲಿ ಹಬ್ಬಿದ್ದವು. ಒಂದು ವಾರ ಕಳೆದು ಒಂದು ದಿನ ಗೌರಕ್ಕ ಬಂದಾಗ ಮೀನು ಬುಟ್ಟಿ ಇರಲಿಲ್ಲ. ಬದಲಾಗಿ ಇದ್ದದ್ದು ಕೋವಿ, ಗೌಡರ ಮನೆಯ ಕಳೆದು ಹೋಗಿದ್ದ ಕೋವಿ ಗೌರಕ್ಕನ ಕೈಗೆ ಬಂದದ್ದು ಹೇಗೆ..? ಗೌರಕ್ಕನ ದಂಡೆಯಾತ್ರೆಯ ಕಥೆ ಇಲ್ಲಿದೆ. 


ಸ್ತ್ರೀ ವೇಷ : ಸ್ತ್ರೀವೇಷ ಹಾಕುತ್ತಾ ಬಂದಿದ್ದ ಜಟ್ಟನಿಗೆ ಈ ಸಲ ಸ್ತ್ರೀ ವೇಷ ಹಾಕಬೇಡ ಎಂದದ್ದು "ಅದೆಷ್ಟೋ ವರ್ಷಗಳ ನೆರಳೊಂದು ಬಿಟ್ಟು ಹೋದಂತೆ, ಅದೆಷ್ಟೋ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಕನ್ನಡಿಯೊಂದು ಫಟಾರನೆ ಒಡೆದು ಹೋದಂತೆ" ಅನಿಸಿತು. ಮಾತ್ರವಲ್ಲದೇ ಅವನು ಕಳೆದುಕೊಂಡದ್ದು ಏನೆಂದು ಅವನ ಬಾಯಿಯಲ್ಲಿಯೇ ಕೇಳಬೇಕು. ವೇಷದ ಗುಂಗು ಶುರುವಾಗುವ ಮುನ್ನ ಜಟ್ಟ ನ ಚಿತ್ರಣವನ್ನು ಬಿಚ್ಚಿಡುತ್ತಾರೆ. ಹಿರಿ ಸುಗ್ಗಿ ಹಾಗೂ ಕಿರಿ ಸುಗ್ಗಿಯ ಸಂಭ್ರಮಗಳನ್ನು ತೋರುತ್ತಾ ಕಳೆದು ಹೋದ ದೇವರ ಬದಲಿಗೆ ಪೂಜಿಸಲು ಗುಡಿಭಟ್ಟರು ಕೊಟ್ಟ ಸಲಹೆ ಏನು..? ಇದಕ್ಕೂ ಜಟ್ಟನಿಗೂ ಇರುವ ಕೊಂಡಿ ಏನು..?


ಗುಲಾಬಿ ಬೊಂಬಾಯಿ ಮಿಠಾಯಿ : ಗೋಳಿಯ ಮಗ ಬೀರ ವಾಲಿಬಾಲ್ ಆಡಿ ಹೊರಟ ನಂತರ ಗಿಬ್ಬೆಲ್ಲ ಅವನ ಜೊತೆಯಾಗಿದ್ದ. ಬೀರನಿಗಿಂತ 15-16 ವರ್ಷ ದೊಡ್ಡವನಾಗಿದ್ದವನು. ಮಕ್ಕಳ ದೃಷ್ಟಿಯಲ್ಲಿ ಒಂದು ರೀತಿಯ ಹೀರೋ ಎಂದರೂ ತಪ್ಪಾಗಲಾರದು. ಬೀರ ಗಿಬ್ಬೆಲ್ಲನ ಕುರಿತು ಹೇಳಿದ ಒಂದು ಸತ್ಯದಿಂದ ಗೋಳಿ ಮರುದಿನ ಬಂದು ಕೂಗಾಡಿದ ಪರಿಣಾಮ ಎಲ್ಲರೆದುರು ಗಿಬ್ಬೆಲ್ಲನನ್ನು ಯಾವ ರೀತಿಯಲ್ಲಿ ತೋರಿತು..? ಇದರ ಸತ್ಯಾಸತ್ಯತೆ ಏನು? ಗಿಬ್ಬೆಲ್ಲನ ಮನದ ತಳಮಳಗಳ ಜೊತೆಗೆ ವಾಸ್ತವ ಇಲ್ಲಿದೆ.


ಬನ್ನಿ : ಮರವೆಂದರೆ ಆತ್ಮಬಂಧುವಂತೆ ಅವನ ಪಾಲಿಗೆ. ಕಷ್ಟಪಟ್ಟು ಬೆಳೆಸಿದ ಆ ಮರ ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನಾದರೂ ಮಾಡದಿದ್ದರೆ ಅಲ್ಲಿರುತ್ತಿರಲಿಲ್ಲ. ತುರಿಕೆಯ ಮಸಲತ್ತಿನಿಂದ ಆ ಮರ ಕಡಿಯಲ್ಪಡುತ್ತಿತ್ತು. ಅಂಚೆ ಕಛೇರಿಗೂ ಆ ಮರಕ್ಕೂ ಅವಿನಾಭಾವ ನಂಟು ಎಂಬಂತಿದ್ದ ಆ ಮರದ ಜೊತೆಗಿನ ಒಡನಾಟ, ಇವೆಲ್ಲದರ ಜೊತೆಗೆ ಪೂರ್ವಜರು ಮರಗಳಿಗಾಗಿ ಮಾಡಿದ ತ್ಯಾಗ ಎಲ್ಲವನ್ನು ತೆರೆದಿಟ್ಟಿದ್ದಾರೆ. ಶಮಿ ವೃಕ್ಷ ಏನಾಯ್ತು ತಿಳಿಯಲು ಕಥೆ ಓದಬೇಕು.


ಮುರುಕು ಸ್ವಪ್ನ ಬಿಂಬ : ಏಕನಾಥರು ಇಲ್ಲವಾಗುವ ಸಂದರ್ಭದಲ್ಲಿ ಪತ್ನಿ ಗಾರ್ಗಿ ಹಾಗೂ ಕೆಲಸದ ಭ್ರಮರಿಗೆ ಅವರು ಹಾಗೆ ಇಲ್ಲವಾಗುತ್ತಾರೆ ಎನ್ನುವ ಸೂಚನೆಯೂ ಕೊಟ್ಟಿರಲಿಲ್ಲ. ಮಗನ ಕುರಿತ ಅವರ ಕನವರಿಕೆ ಅವರ ಕೊನೆಯ ಕ್ಷಣಗಳು ಗಾರ್ಗಿಯಲ್ಲಿಯೂ ತಲ್ಲಣ ಹುಟ್ಟಿಸಿದ್ದವು. ಆದರೆ ಮಗ..? ಅಪ್ಪನ ಹೆಣ ನೋಡಲು ಬರಲು ಸಿದ್ಧವಿಲ್ಲದ ಅವನನ್ನು ಅಕ್ಕನ ಮಾವ ಕರೆಸಿದರು ಎಂದರೆ ಎಷ್ಟು ನಿಜವಾಗಬಹುದು " ಅಥವಾ ಎಷ್ಟು ಸುಳ್ಳಾಗಬಹುದು..? ಸಿದ್ದಾರ್ಥ ಬಂದಾಗ ಯಾವ ಭಾವದಲ್ಲಿದ್ದ..? ಅಷ್ಟಕ್ಕೂ ಆತನ ನಿರಾಕರಣೆಯ ಹಿಂದಿದ್ದ ಕಾರಣ ಎಷ್ಟು ಸರಿ..? ಸಿದ್ದಾರ್ಥ ಎಂಬ ಹೆಸರೇ ಇಲ್ಲಿ ಸಾಕಷ್ಟು ಹೇಳುತ್ತದೆ. ಸಿದ್ಧಾರ್ಥನನ್ನು ಕಟ್ಟಿ ಹಾಕಲು ಯಾರು ಯಾವೆಲ್ಲ ಪ್ರಯತ್ನಗಳನ್ನು ಮಾಡಿದರು ಹಾಗೂ ಯಾರು ಸಫಲರಾದರು..?


ಒಂದು ಹೆಲ್ಮೆಟ್ಟಿನ ಕತೆ : "ಹತಾಶೆಯಲ್ಲಿ ತೊಳಸು ಹೆಲ್ಮೆಟ್ ತೆಗೆದು ಬಿಸಾಡಿದ, ಅದು ಉರುಳುರುಳಿ ಸೊಣಕಿಗಿಂತಲೂ ಮುಂದೆ ಹೋಗಿ ರಸ್ತೆಗೆ ಬಂದು ಬಿದ್ದಿತ್ತು, ಹೆಲ್ಮೆಟ್ಟಿನ ತುಂಬಾ ಗೀರುಗಳು, ಮುಂದಿನ ಗಾಜು ಒಡೆದಿತ್ತು" ಈ ಸಾಲುಗಳ ಆಚೆಗೆ ಕಥೆಗೆ ಬಹಳಷ್ಟು ವಿಸ್ತಾರವಿದೆ ಹಾಗೂ ಮತ್ತೊಂದು ಆಯಾಮವೇ ಇದೆ. ಸೂಕ್ಷ್ಮವಾಗಿ ತೆರೆದುಕೊಳ್ಳುವ ತೊಳಸು ಹಾಗೂ ಸೊಣಕಿಯರ ಸಂಬಂಧವೂ ಇಲ್ಲಿದೆ.


ನಾಯಿ ಪಾಡು : ಮನುಷ್ಯರು ನಾಯಿ ಪಾಡು ಎಂಬುದನ್ನು ಯಾವೆಲ್ಲ ರೀತಿಯಲ್ಲಿ ಬಳಸುತ್ತಾರಲ್ಲವಾ..?! ಇಲ್ಲಿ ನಾಯಿಯೇ ತನ್ನ ಪಾಡನ್ನು ತೆರೆದಿಡುತ್ತಾ ಹೋಗುತ್ತದೆ. ನಿಯತ್ತಿಗೆ ಮತ್ತೊಂದು ಹೆಸರಾದ ನಾಯಿ ಸಾಕಿದವರ ಕುರಿತಾಗಿ ಬೆಳೆಸಿಕೊಳ್ಳುವ ನಿಷ್ಠೆ, ಅನ್ನ ತಿಂದ ಮನೆಯವರ ಕಡೆಗೆ ಸಹನೆಯಿಂದ ನೋಡುವ ಪರಿ ಅದರ ಪ್ರೀತಿಯ ಆಳವನ್ನು ತೋರುತ್ತದೆ. ಕೊನೆಯ ದಿನಗಳಲ್ಲಿ ಏನೂ ಇಲ್ಲದ ಮನುಷ್ಯನ ಪಾಡು ಇದಕ್ಕಿಂತ ವಿಭಿನ್ನವಾಗಿರಲಾರದೇನೋ ಎನ್ನಿಸಿತು.


ಕಥೆಗಳಲ್ಲಿ ವಿಭಿನ್ನ ಹಾಗೂ ವಿಚಿತ್ರವೆನಿಸುವ ಹೆಸರುಗಳು ಸಿಕ್ಕವು. ವಿಳಂಬ, ತೊಳಸು, ಸುಷುಮ್ನಾ, ಪರ - ಅಪರ, ಸಗಮಾ, ತುರಿಕೆ ಇತ್ಯಾದಿ.

ಈ ಕಥಾ ಸಂಕಲನದಲ್ಲಿ ಒಂದು ಹೆಲ್ಮೆಟ್ಟಿನ ಕಥೆ ಹಾಗೂ ಗುಲಾಬಿ ಬೊಂಬಾಯಿ ಮಿಠಾಯಿಗಳಲ್ಲಿ ಸೂಕ್ಷ್ಮವಾದ ಕಥಾವಸ್ತುವನ್ನು ಸೂಕ್ಷ್ಮವಾಗಿ ತೆರೆದಿಟಿದ್ದಾರೆ. 

ಒಂಟಿತನ, ಅನಾಥ ಭಾವದ ಕಥೆಗಳನ್ನು ಅಷ್ಟೇ ವಿವರವಾಗಿ ಅಂತೆಯೇ ತೀರಾ ನೇರಾನೇರವಲ್ಲದ ರೀತಿಯಲ್ಲಿ ಹೇಳುತ್ತಲೇ ನಮ್ಮೊಳಗೆ ಆ ಭಾವಗಳನ್ನು ಕಟ್ಟಿಕೊಡುತ್ತಾರೆ. ಸ್ತ್ರೀವೇಷ, ನೆರಳು, ಮುರುಕು ಸ್ವಪ್ನ ಬಿಂಬ, ಸೀತಾಳೆ ಹಾವು, ನಾಯಿ ಪಾಡು ಈ ಕಥೆಗಳಲ್ಲಿ ಈ ಭಾವಗಳನ್ನು ಕಾಣಬಹುದು. 

ಸತ್ತೆ, ಬನ್ನಿ, ಮೀನ್ ಗೌರಿಯ ದಂಡಯಾತ್ರೆ ಕಥೆಗಳಲ್ಲಿ ಅಭಿವ್ಯಕ್ತಿಯ ಜೊತೆಗೆ ಸೂಕ್ಷ್ಮ ಸಂದೇಶಗಳನ್ನು ಕಟ್ಟಿಕೊಟ್ಟಿದ್ದಾರೆ.

ಕಾವ್ಯಾತ್ಮಕ ಭಾಷೆಯ ಈ ಕಥೆಗಳು ಸೆಳೆಯುತ್ತವೆ. ಜೊತೆಗೆ ಇಷ್ಟು ಬೇಗ ಮುಗಿದು ಹೋದವಾ ಎನ್ನಿಸುತ್ತವೆ. ಸೊಗಸಾದ ಕತೆಗಳ ಚೆಂದದ ಓದು. 


~ವಿಭಾ ವಿಶ್ವನಾಥ್

ಭಾನುವಾರ, ಜೂನ್ 14, 2026

ರಾಜಿ


"ಮಗುವಿನ ಭವಿಷ್ಯಕ್ಕೆ ಶಿಕ್ಷಣ ಕೊಡಿಸಬೇಕಾದ ನಾನೇ ಅವಳನ್ನು ಮನೆಗೆಲಸಕ್ಕೆ ಕಳುಹಿಸುತ್ತಿದ್ದೇನಲ್ಲ..!" ಎಂದು ಬೇಸರದಿಂದ ನುಡಿದು ಬಾರ್ ಕಡೆಗೆ ಹೊರಟ ಮುನಿಯಪ್ಪ. ಕಾಲೋನಿಯಲ್ಲಿ ಬಡಾಯಿ ಮುನಿಯಪ್ಪನೆಂದೇ ಹೆಸರು ಅವನಿಗೆ. ಬಣ್ಣಬಣ್ಣದ ಮಾತುಗಳಿಂದ ಎಲ್ಲರನ್ನೂ ಮರುಳು ಮಾಡಿ ಹಣ ಕೀಳುತ್ತಿದ್ದ. ಆದರೆ, ಆ ಹಣದಿಂದ ಕುಡಿದು ತೂರಾಡುತ್ತಿದ್ದ.


ಮುನಿಯನ ಮಾತಿಗೆ ಮರುಳಾಗಿ ಮದುವೆಯಾಗಿದ್ದ ಗಿರಿಜ ಆತನ ಬಡಾಯಿಗೆ, ಕುಡಿತಕ್ಕೆ ಬೇಸತ್ತು ತಾನೇ ಮನೆಗೆಲಸ ಮಾಡುತ್ತಾ ದುಡಿದು ಗಂಡ, ಮಗಳನ್ನು ಸಾಕುತ್ತಿದ್ದಳು. ಎಂಟು ವರ್ಷದ ರಾಜಿ ಹುಟ್ಟಿದ ನಂತರ ಮೂರು ಗರ್ಭಪಾತವಾಗಿ ಈಗ ಗರ್ಭ ನಿಂತಿತ್ತು. ಅವಳಿಗೆ ವಂಶೋದ್ಧಾರಕನ ಆಸೆ ಬೆಟ್ಟದಷ್ಟಿತ್ತು. ಈ ಬಾರಿ ಗಂಡು ಮಗುವೇ ಹುಟ್ಟುತ್ತದೆಂದು ಆಸೆಯಿಂದ ಏಳನೇ ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು  ತನ್ನ ಹಾಗೂ ಮಗುವಿನ ಯೋಗಕ್ಷೇಮ ನೋಡಿಕೊಳ್ಳಲು ನಿರ್ಧರಿಸಿದಳು. ನಾಳೆಯಿಂದ ತಾನು ಹೋಗುತ್ತಿದ್ದ ಮನೆಗೆ ಮಗಳು ರಾಜಿಯನ್ನು ಕೆಲಸಕ್ಕೆ ಕಳುಹಿಸುತ್ತೇನೆಂದು ಒಪ್ಪಿಸಿ ಬಂದಿದ್ದಳು. ಚಿಕ್ಕಂದಿನಿಂದಲೂ ಚೂಟಿಯಾಗಿದ್ದ ರಾಜಿ ಅಮ್ಮನ ಜೊತೆಗೆ ಕೆಲಸಕ್ಕೆ ಹೋಗುತ್ತಾ ತಾನೂ ಕೆಲಸ ಕಲಿತಿದ್ದಳು. ಅವಳ ವಯಸ್ಸಿಗಿಂತಲೂ ಉದ್ದ-ದಪ್ಪವಾಗಿದ್ದ ರಾಜಿ ಕೆಲಸ, ಮಾತು ಎರಡರಲ್ಲಿಯೂ ಚೂಟಿ.


ಆದರೆ, ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುವ ಅಮ್ಮನ ಮಾತಿಗೆ ಎದುರಾಡದ ಪರಿಸ್ಥಿತಿ ಇದ್ದುದರಿಂದ ಅರೆ ಮನಸ್ಸಿನಿಂದಲೇ ಒಪ್ಪಿದಳು. ಹೇಗೂ ಈಗ ಬೇಸಿಗೆ ರಜೆ. ಶಾಲೆ ಶುರುವಾಗುವಷ್ಟರಲ್ಲಿ ಏನೋ ಒಂದು ದಾರಿ ಸಿಕ್ಕರೆ ಸಾಕು ಎಂದುಕೊಂಡಿದ್ದವಳ ಶಾಲೆ ಶುರುವಾಗಿ ಒಂದು ತಿಂಗಳಾಗಿತ್ತು. ಅಷ್ಟರಲ್ಲಿ ಅವಳ ಮೆಚ್ಚಿನ ಸುಗಂಧಿ ಟೀಚರ್ ಅವಳನ್ನು ಶಾಲೆಗೆ ಕಳುಹಿಸಲು ಕೇಳಿಕೊಂಡು ಮೂರು ಬಾರಿ ಬಂದು ಹೋಗಿದ್ದರು. 


"ಇಂತಹ ಕುಡುಕ ಗಂಡನನ್ನು ನೆಚ್ಚಿ ನಾನೇನೂ ಮಾಡುವ ಹಾಗಿಲ್ಲ. ಹಾಗೆಂದು, ಮಗಳ ಮದುವೆಗೆ ಒಂದು ದಾರಿ ಮಾಡಬೇಕಾದರೆ ಅವಳನ್ನು ಶಾಲೆಗೆ ಕಳುಹಿಸುವ ಬದಲು ಮನೆಗೆಲಸಕ್ಕೆ ಕಳುಹಿಸಬೇಕು. ಇಷ್ಟರವರೆಗೆ ಓದಿದ್ದು ಸಾಕು. ಟೀಚರಮ್ಮ ಏನೂ ಹಣ ಕೊಡುತ್ತಾಳಾ..?" ಎಂದು ಗಿರಿಜ ತನ್ನಷ್ಟಕ್ಕೆ ತಾನೇ ಸಮಜಾಯಿಷಿ ಕೊಟ್ಟುಕೊಂಡು ಸಮಾಧಾನ ಮಾಡಿಕೊಂಡಳು. 


ಮೂರು ವರ್ಷಗಳಲ್ಲಿ ರಾಜಿಯ ಬದುಕಲ್ಲಿ ಸಾಕಷ್ಟು ಬದಲಾವಣೆಗಳಾದವು. ಗಿರಿಜ ಗಂಡು ಮಗುವನ್ನು ಹೆತ್ತಳಾದರೂ.. ಅದು ಬುದ್ಧಿಮಾಂದ್ಯ ಮಗು. ಮುನಿಯಪ್ಪ ಅಪಘಾತದಲ್ಲಿ ತನ್ನ ಕಾಲನ್ನು ಕಳೆದುಕೊಂಡಿದ್ದ. ಈಗ ರಾಜಿ ಮನೆ ಮನೆಗೂ ಹೋಗಿ ದುಡಿಯುತ್ತಿದ್ದಾಳಾದರೂ ಅದು ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ರಾಜಿಯನ್ನು ಒಂದು ಮನೆಯಲ್ಲಿ ಕೆಲಸಕ್ಕೆ ಬಿಡಲು ತೀರ್ಮಾನಿಸಿದರು ಗಿರಿಜ ಮತ್ತು ಮುನಿಯಪ್ಪ. ಇಷ್ಟು ದಿನ ಅಪ್ಪ-ಅಮ್ಮನಿಗಾಗಿ ಅವರ ಮುಖ ನೋಡಿಕೊಂಡು ಇದ್ದ ರಾಜಿಗೆ ಈಗ ಆ ಅವಕಾಶವು ತಪ್ಪಿ ಹೋಗುತ್ತಿತ್ತು. ಅಲ್ಲೇ ಇದ್ದ ಗೆಳತಿಯಿಂದ ಪಡೆದು ಓದುತ್ತಿದ್ದ ಪುಸ್ತಕ ಹಾಗೂ ಕಲಿಕೆಯ ಅವಕಾಶವೂ ತಪ್ಪಿ ಹೋಗುತ್ತಿತ್ತು. 


ರಾಜಿ ದೊಡ್ಡ ಮನೆಗೆ ಕೆಲಸಕ್ಕೆ ಹೋದಳಾದರೂ.. ದಿನವಿಡೀ ಕತ್ತೆಯ ದುಡಿತ ಇದ್ದೇ ಇರುತ್ತಿತ್ತು. ಕನಿಕರ, ಪ್ರೀತಿ ಎಂಬುದು ಅವಳ ಪಾಲಿಗೆ ಕೈಗೆಟುಕದು. ಇಂತಹ ಸಂದರ್ಭದಲ್ಲಿ ಸುಮ್ಮನೆ ಅತ್ತು ತನ್ನ ನೋವು ಮರೆಯುವುದರ ಜೊತೆಗೆ ಪುಟ್ಟ ಪುಸ್ತಕದಲ್ಲಿ ತನ್ನೆಲ್ಲ ಭಾವನೆಗಳನ್ನು ತೆರೆದಿಡುತ್ತಿದ್ದಳು. 


ರಾಜಿಯ ಬದುಕಲ್ಲಿಯೂ ಬದಲಾವಣೆ ಬರಲಿತ್ತು. ದೊಡ್ಡ ಮನೆಯ ಮಗಳು ಕೃಪಾ ವಿದೇಶದಿಂದ ಬಂದವಳು ಇಲ್ಲಿ ಎನ್.ಜಿ.ಓ ಸ್ಥಾಪಿಸುವ ತಯಾರಿಯಲ್ಲಿದ್ದಳು. ಅವಳ ಸಂದರ್ಶನಕ್ಕೆಂದು ಬಂದಿದ್ದ ಟಿ.ವಿ ನಿರೂಪಕಿಯೊಬ್ಬಳಿಗೆ ರಾಜಿ ಕಣ್ಣಿಗೆ ಬಿದ್ದಿದ್ದಳು. ಅನಾಥಾಶ್ರಮ ಹಾಗೂ ವೃದ್ಧಾಶ್ರಮವನ್ನು ನಡೆಸಿಕೊಂಡು ಹೋಗುವ ಮನೆಯಲ್ಲಿಯೇ ಪುಟ್ಟ ಹುಡುಗಿ ಒಬ್ಬಳು ಜೀತದಾಳಿನಂತೆ ದುಡಿಯುವುದು ಸಹನೀಯವಾಗಿರಲಿಲ್ಲ ಅದು ನ್ಯಾಯವೂ ಆಗಿರಲಿಲ್ಲ. ಇದನ್ನು ನೇರವಾಗಿ ಪ್ರಶ್ನಿಸಿ, ಸಂದರ್ಶನದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ಬೈಸಿಕೊಳ್ಳುವಂತೆ ಮಾಡಬಹುದಾಗಿದ್ದರೂ ಹಾಗೆ ಮಾಡದೆ, ಸಂದರ್ಶನ ಮುಗಿದ ನಂತರ ಈ ಕುರಿತು ಪ್ರಸ್ತಾಪಿಸಿದಳು. 


"ಪ್ರಶ್ನಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳುವುದಕ್ಕಿಂತಲೂ ಅವರಿಗೆ ತಪ್ಪಿನ ಅರಿವಾಗಿಸಿ, ಕಷ್ಟಪಡುತ್ತಿರುವವರಿಗೆ ಮುಕ್ತಿ ಕೊಡಿಸುವುದೇ ಉದ್ದೇಶವಾಗಿರುತ್ತದೆ. ಅಲ್ಲವೇ..? ಅದರ ಹಾದಿ ಎಂದಿಗೂ ಉಪಕಾರ ಮಾಡುವುದಾಗಿರಬೇಕೇ ಹೊರತು ಯಾರಿಗೂ ಅಪಕಾರ ಮಾಡುವುದಲ್ಲ."

  


ಎರಡು ದಿನದ ಹಿಂದಷ್ಟೇ ಬಂದಿದ್ದ ಕೃಪಾಳಿಗೆ ನಿಜಕ್ಕೂ ತನ್ನ ಮನೆಯಲ್ಲಿ ದುಡಿಯುತ್ತಿರುವ ಹುಡುಗಿಯ ಪರಿವೆ ಇರಲಿಲ್ಲ. ತನ್ನ ಮನೆಯಲ್ಲಿಯೇ ನಡೆಯುತ್ತಿದ್ದ ಈ ಶೋಷಣೆಗೆ ಅಂತ್ಯ ಹಾಡಬೇಕೆಂದು ರಾಜಿಯನ್ನು ಮತ್ತೆ ಅವಳ ಮನೆಗೆ ಕಳುಹಿಸುವ ನಿರ್ಧಾರ ಮಾಡಿದರೂ ರಾಜಿಯೇ ಹೋಗಲು ಒಪ್ಪಲಿಲ್ಲ. ಎಷ್ಟೋ ಅನಾಥ ಮಕ್ಕಳು ಹಾಗೂ ವೃದ್ಧರಿಗೆ ಆಶ್ರಯ ಕೊಡುವ ಅವಳು ರಾಜಿಯ ಬದುಕಿನ ಕುರಿತು ತಿಳಿದು ಅವಳಿಗೆ ಶಿಕ್ಷಣ ಹಾಗೂ ವಸತಿಯ ವ್ಯವಸ್ಥೆ ಮಾಡಿಕೊಟ್ಟು, ಅಕ್ಕನ ಸ್ಥಾನದಲ್ಲಿ ನಿಂತು ಪೋಷಿಸಿದಳು. ಅತ್ತ ಅವಳ ಸಂಬಳದ ಹಣ ಕಳುಹಿಸುವುದಕ್ಕೆ ಅಡ್ಡಿ ಮಾಡದೆ ಅಲ್ಲಿಗೂ ಸಹಾಯ ಮಾಡಿದಳು. 


ರಾಜಿ ತನ್ನ ವಿದ್ಯಾಭ್ಯಾಸದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದೆ ಚೆನ್ನಾಗಿ ಕಲಿತಳು. ಶಾಲೆಗೆ ಹೋಗದಿದ್ದರೂ ಅಭ್ಯಾಸವನ್ನಂತೂ ಅವಳು ಕೈಬಿಟ್ಟಿರಲಿಲ್ಲ. ಬಾಲ ಕಾರ್ಮಿಕಳಾಗಿ ಇಡೀ ಜೀವನವನ್ನು ಕೆಲಸದವಳಾಗಿ ಕಳೆಯಬೇಕಾಗಿದ್ದವಳಿಗೆ ಯಾರದ್ದೋ ಧೈರ್ಯ ಹಾಗೂ ಮತ್ತಾರದ್ದೋ ಆಶ್ರಯ ಹೊಸ ಬದುಕನ್ನೇ ತೆರೆದಿಟ್ಟಿತ್ತು. ಈಗ ರಾಜಿ ಯಾರೊಡನೆಯೂ, ಯಾವುದರೊಡನೆಯೂ ರಾಜಿ ಮಾಡಿಕೊಳ್ಳದೆ ವಿದ್ಯಾರ್ಥಿ ವೇತನದಿಂದ ತನ್ನ ಓದು ಹಾಗೂ ಬದುಕನ್ನು ಕಂಡುಕೊಳ್ಳುತ್ತಿದ್ದಾಳೆ. ಇಷ್ಟೇ ಅಲ್ಲದೆ, ಬಾಲಕಾರ್ಮಿಕರ ನಿರ್ಮೂಲನೆಗೆ ಶ್ರಮಿಸುವ ತಂಡದಲ್ಲಿ ತಾನು ಒಬ್ಬಳಾಗಿದ್ದಾಳೆ. 


~ವಿಭಾ ವಿಶ್ವನಾಥ್

ಸಂಗಮ (ಬೆಳಕಿಂಡಿಯ ಕತೆಗಳು - 36)


ಅಜ್ಜಿಯ ಹಳೆಯ ಅಚ್ಚ ಬಿಳುಪಿನ ರೇಷ್ಮೆ ಸೀರೆಯನ್ನು ಕೊಟ್ಟು ಹೊಸತು ತರುತ್ತೇನೆ ಎಂದು ಹೊರಟ ಅಮ್ಮನನ್ನು ತಡೆದು.. ಆ ಖಾಲಿ ಒಡಲಿನ ರೇಷ್ಮೆ ಸೀರೆಗೆ ಹೊಂದುವಂತೆ ನವಿಲನ್ನು ಅಚ್ಚು ಹಾಕಿಸಿ ತಂದು ಅಮ್ಮನ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಳು ಮಗಳು. ಅಮ್ಮನೇ ಅಪ್ಪಿದಂತಿದ್ದ ಆ ಪುಳಕವನ್ನು ಅನುಭವಿಸಿದವರಿಗೆ ಅದು ಅಂದಿನ ಬೆಸ್ಟ್ ಗಿಫ್ಟ್ ಆಗಿತ್ತು


ಸಂಪ್ರದಾಯ, ಅಕ್ಕರೆ ಜೊತೆಗೆ ಹೊಸತನದ ಸಂಗಮ ಎಲ್ಲರ ಮನಸೆಳೆದಿತ್ತು.

~ವಿಭಾ ವಿಶ್ವನಾಥ್ 


ಒಲವ ಕುಡಿನೋಟ (ಬೆಳಕಿಂಡಿಯ ಕತೆಗಳು - 35)


"ಆ ಕುಡಿನೋಟಕ್ಕೆ ತಾನೇ ನಾನು ಮನಸೋತು ಅವಳನ್ನು ಪ್ರೀತಿಸಿದ್ದು. ಆದರೆ, ಈಗ ಅವಳು ಅಪಘಾತದಲ್ಲಿ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ. ನಾನು ಅವಳ ಕಳ್ಳ ನೋಟದ, ತುಂಟತನದ ನಗುವನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ.. ಆದರೆ, ಅದೊಂದೇ ಕಾರಣಕ್ಕೆ ಅವಳನ್ನು ನನ್ನಿಂದ ದೂರ ಮಾಡಲಾಗುವುದೇ..?! 


ಕುಡಿ ನೋಟದಿಂದ ಹುಟ್ಟಿದ ಪ್ರೀತಿ ಚಿಗುರಿ, ಹೆಮ್ಮರವಾಗಿದೆ. ಎಷ್ಟೇ ನ್ಯೂನ್ಯತೆ ಇದ್ದರೂ ಅದೆಲ್ಲವನ್ನೂ ಕಡೆಗಣಿಸುವಷ್ಟು ನನ್ನ ಪ್ರೀತಿಯಂತೂ ಶಕ್ತವಾಗಿದೆ. ಅವಳು ಕುಡಿ ನೋಟ ಬೀರದಿದ್ದರೂ.. ನಾನು ಅವಳನ್ನು ಹಾಗೆಯೇ ಪ್ರೀತಿಸಬಹುದಲ್ಲ..! ಇನ್ನು ಅವಳನ್ನು ಮನದಣಿಯುವಷ್ಟು ನೋಟದಲ್ಲಿಯೇ ಮುದ್ದಿಸಬಹುದು."


 ಹೀಗೆಂದುಕೊಂಡು ಅವಳನ್ನು ಮದುವೆಯಾಗಿ ಹತ್ತು ವರ್ಷವೇ ಕಳೆಯಿತು. ಇಂದು ಯಾರೋ ದೃಷ್ಟಿದಾನಕ್ಕೆ ನೋಂದಾಯಿಸಿಕೊಂಡಿದ್ದ ದಾನಿಗಳು ತೀರಿ ಹೋಗಿ ನಮ್ಮ ಸರದಿ ಬಂದು ಎಲ್ಲವೂ ಹೊಂದಿಕೆಯಾಗಿ ಅವಳಿಗೆ ದೃಷ್ಟಿ ಬರುವ ಹೊತ್ತು.


ಮತ್ತೆ ಕಣ್ ಕಣ್ಣ ಸಲಿಗೆ ಎಂದು ಮೊದಲಿನಿಂದ ಪ್ರೀತಿಸುವ ಸಮಯ ಹೆಚ್ಚು ದೂರವಿಲ್ಲ ಎಂದುಕೊಂಡು ಅವಳ ಕುಡಿನೋಟಕ್ಕೆ ಕಾಯುತ್ತಿದ್ದಾನೆ.


~ವಿಭಾ ವಿಶ್ವನಾಥ್

ಜಾಗೃತಿ (ಬೆಳಕಿಂಡಿಯ ಕತೆಗಳು - 34)

 


ಪರಿಸರ ರಕ್ಷಣೆಯ ಜಾಗೃತಿಗಾಗಿ ಜಿಲ್ಲೆಯಾದ್ಯಂತ ಜಾಥಾ ಹೊರಟಿದ್ದೇನೆ ಎಂದು ಘೋಷಿಸುತ್ತಿದ್ದ ನಾಯಕರ ಹಿಂಬಾಲಕರು ಧ್ವನಿವರ್ಧಕದ ಮೂಲಕ ಶಬ್ಧ ಮಾಲಿನ್ಯವನ್ನು, ಕರಪತ್ರಗಳನ್ನು ಹಂಚಲು ಹೋಗಿ ಕಸವನ್ನು, ಪ್ರಚಾರಕ್ಕಾಗಿ ಹೆಚ್ಚಿನ ವಾಹನಗಳನ್ನು ಬಳಸಿ ವಾಯು ಮಾಲಿನ್ಯವನ್ನು, ನಾಯಕನ ಜೊತೆ ಹೊರಟವರಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಲು ಹೋಗಿ ಪ್ಲಾಸ್ಟಿಕ್ ಕಸವನ್ನು ಹೆಚ್ಚು ಮಾಡುತ್ತಲೇ ಸಾಗುತ್ತಿದ್ದರು. ತಮ್ಮ ಪ್ರಚಾರದ ಭರಾಟೆಯಲ್ಲಿ ಸೆಲ್ಪಿ, ವಿಡಿಯೋಗೆ, ಭಾಷಣಕ್ಕೆ ಸೀಮಿತವಾದ ಜಾಥಾ ಕುರಿತು, ಅವರು ಮೂಡಿಸಿದ ಜಾಗೃತಿ ಕುರಿತು ಎಲ್ಲೆಡೆಯೂ ಚರ್ಚೆಯಾಗುತ್ತಿತ್ತು.

ಇದಾವುದೂ ಅರಿವಿಲ್ಲದ ಹಳ್ಳಿಯ ರೈತನೊಬ್ಬ ರಸ್ತೆ ಬದಿಯಲ್ಲಿ ಗಿಡ ನೆಟ್ಟು, ನೀರುಣಿಸಿ, ಕಾಲ್ನಡಿಗೆ, ಸೈಕಲ್ ಸವಾರಿಯ ಮೂಲಕ ಪರಿಸರವನ್ನು ರಕ್ಷಿಸುವ ಮೌನ ಕಾಯಕ ಮಾಡುತ್ತಿದ್ದ.

~ವಿಭಾ ವಿಶ್ವನಾಥ್ 

ಸಮಾಧಾನದ ಪರಿಹಾರ (ಬೆಳಕಿಂಡಿಯ ಕತೆಗಳು - 33)


ಮಗಳ ಮಾರ್ಕ್ಸ್ ಕಾರ್ಡ್ ನೋಡಿ, ಕಡಿಮೆ ಅಂಕ ತೆಗೆದಿದ್ದಕ್ಕೆ ಇಬ್ಬರಿಗೂ ಅಸಮಾಧಾನವಾದರೂ ಮಗಳನ್ನು ಬೈಯ್ಯಲಿಲ್ಲ. ಎಂದೂ ಅಷ್ಟು ಕಡಿಮೆ ಅಂಕ ತೆಗೆಯದವಳ ಸಮಸ್ಯೆಯ ಮೂಲ ಹುಡುಕಲು ಅವಳನ್ನು ಪ್ರಶ್ನಿಸಿದರು. ಕಾಲೇಜಿನ ಪಾಠ, ಅರ್ಥೈಸಿಕೊಳ್ಳುವಿಕೆ ಯಾವುದರಲ್ಲಿಯೂ ಸಮಸ್ಯೆ ಇರಲಿಲ್ಲ. ಆದರೆ, ಪರೀಕ್ಷೆಯ ಸಮಯದಲ್ಲಿ ಮಾತ್ರ ಕಾಡುವ ತಲೆನೋವು ಅವಳ ಏಕಾಗ್ರತೆಯನ್ನು ಕುಂದಿಸಿತ್ತು.


ಮನೋವೈದ್ಯರ ಬಳಿ ಸಮಾಲೋಚನೆ ನಡೆಸಿ ಮಗಳ ಪರೀಕ್ಷಾ ಭಯಕ್ಕೆ ಪರಿಹಾರ ದೊರಕಿಸಿದ ನಂತರ ಅವಳ ಅಂಕಗಳು ಗಮನೀಯವಾಗಿ ವೃದ್ಧಿಸಿದ್ದವು.

ಕಡಿಮೆ ಅಂಕ ಬಂದರೂ ಬೈಯ್ಯದೆ, ಅಂಕ ಗಳಿಕೆಯೇ ಮುಖ್ಯ ಎನ್ನದೆ, ಕ್ಷಣಿಕ ಅಸಮಾಧಾನವಾದರೂ ತಾಳ್ಮೆಯಿಂದ ಸಮಸ್ಯೆಗೆ ಸಮಾಧಾನವಾಗಿ ಪರಿಹಾರ ಕಂಡುಕೊಟ್ಟ ಪೋಷಕರೆಂದರೆ ಅವಳಿಗೆ ಹೆಮ್ಮೆ.

~ವಿಭಾ ವಿಶ್ವನಾಥ್ 


ಶನಿವಾರ, ಜೂನ್ 13, 2026

ಒಂದೇ ಒಂದು ಕಥೆ


"ಈಗಾಗಲೇ ಸಮಯ 10 ಗಂಟೆ. ಮಲಗಲು ನಿನಗೆ ಇನ್ನೆಷ್ಟು ಹೊತ್ತು ಬೇಕು ಕಂದಾ..?" ಎಂದ ಅಪ್ಪನಿಗೆ "ಒಂದೇ ಒಂದು ಲಾಸ್ಟ್ ಕಥೆ ಹೇಳಪ್ಪಾ.." ಎಂದು ಪೀಡಿಸುತ್ತಲೇ ಇದ್ದ ಮಗುವಿಗೆ ಕತೆ ಹೇಳುತ್ತಲೇ ನಿದ್ರೆ ಹೋದ ಅಪ್ಪ, ಇನ್ನೂ ಎಚ್ಚರವಿರುವ ಮಗು ಇಬ್ಬರನ್ನೂ ನೋಡಿ ಸುಸ್ತಾಗಿದ್ದಾಳೆ ಅಮ್ಮ.

~ವಿಭಾ ವಿಶ್ವನಾಥ್ 


ಸ್ಥಾಯಿ (ಬೆಳಕಿಂಡಿಯ ಕತೆಗಳು - 32)

ಸಾಗರದ ದಡದಲ್ಲಿ ನಿಂತು ತನ್ನ ಪುಟ್ಟ ಬೆರಳುಗಳಿಂದ ತನ್ನ ಹೆಸರು ಬರೆಯುತ್ತಿದ್ದ ಅವಳ ಹೆಸರು ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗುತ್ತಿತ್ತು. ಎಷ್ಟೇ ಪ್ರಯತ್ನಿಸಿದರೂ ಸಫಲಳಾಗದೆ ಅಳಲು ಶುರುವಿಟ್ಟಳು ಎನ್ನುವಾಗ ಅಪ್ಪ ಅಪ್ಪಿ ಸಮಾಧಾನಿಸಿದ್ದರು. ತೀರಾ ಚಿಕ್ಕವಳಲ್ಲವಾದರೂ ತನ್ನ ಛಲ ಕೈಗೂಡದ ದುಃಖ ಅವಳಿಗೆ. 

"ಮರಳ ಮೇಲಿನ ಹೆಸರು ಶಾಶ್ವತವಲ್ಲ. ಸಾಗರ ಎಲ್ಲವನ್ನೂ ತನ್ನೊಡಲಿಗೆ ಸೇರಿಸಿಕೊಳ್ಳುವಂತೆ ನೀನು ಒಳ್ಳೆಯ ಗುಣಗಳನ್ನು ನಿನ್ನೊಳಗೆ ಸೇರಿಸಿಕೊಂಡು ಯಾರೂ ಅಳಿಸಲಾಗದಂತೆ ನಿನ್ನೆಸರನ್ನು ಸ್ಥಾಪಿಸಿಕೊಂಡು ಸ್ಥಾಯಿಯಾಗು" ಎಂಬ ಬುದ್ಧಿವಾದ ಅವಳನ್ನು ಇಂದು ಸಾಗರದ ಸ್ವಿಮ್ಮಿಂಗ್ ನಲ್ಲಿ ಗಿನ್ನಿಸ್ ದಾಖಲೆಯಾಗಿಸಿತ್ತು.

~ವಿಭಾ ವಿಶ್ವನಾಥ್ 

ಸುದ್ದಿ ಕಾಲ

 


ಸುದ್ದಿ ಮಾಡುವ ಹಪಾಹಪಿಗೆ

ಸುಳ್ಳು ಸುದ್ದಿಯ ಸತ್ಯದಂತೆ ಬಿಂಬಿಸಿ

ನೈಜತೆಯ ಮರೆಮಾಚಿ ನಡೆವಾಗ

ಗಾಳಿಸುದ್ದಿ ಹರಡುತ್ತಿತ್ತು

ಚಾರಿತ್ರ್ಯ ಹರಣವಾಗುತ್ತಿತ್ತು

ಸುಳ್ಳು ಮೆರವಣಿಗೆ ಬರುತಿತ್ತು

ಅರ್ಧ ಸತ್ಯವಷ್ಟೇ ತೆರೆದಿತ್ತು

ನಾಳೆಗೆ ನೇಪಥ್ಯಕ್ಕೆ ಸರಿದಿತ್ತು


ಸುದ್ದಿ ಮಾಗುವ ಕಾಲದಲ್ಲಿ

ಸುದ್ದಿ ಮಾಡಿದವರೇ ಮರೆಯಾದರು

ಶುದ್ಧಿಯಾಗಬೇಕಿದೆ ಅಂತರಂಗ

ಸತ್ಯ ಮುನ್ನೆಲೆಗೆ ಬರಬೇಕಿದೆ

ಸುಳ್ಳು ಬೆತ್ತಲಾಗಬೇಕಿದೆ

ಗಾಳಿಸುದ್ದಿ ನಿಲ್ಲಬೇಕಿದೆ

ಬ್ರೇಕಿಂಗ್ ಗೆ ಬ್ರೇಕ್ ಹಾಕಬೇಕಿದೆ

ನವ ಯುಗ ಬರಬೇಕಿದೆ


~ವಿಭಾ ವಿಶ್ವನಾಥ್

ಹಿನ್ನೀರ ದಂಡೆಯ ಸೀತಾಳೆ ದಂಡೆ (ಪುಸ್ತಕ ಯಾನ - 460)


ಪುಸ್ತಕದ ಶೀರ್ಷಿಕೆ : ಹಿನ್ನೀರ ದಂಡೆಯ ಸೀತಾಳೆ ದಂಡೆ

ಲೇಖಕರು : ಮಂಗಳ ಟಿ. ಎಸ್. ತುಮರಿ

ಪ್ರಕಾಶಕರು : ಹರಿವು ಬುಕ್ಸ್ 

ಪ್ರಥಮ ಮುದ್ರಣ : 2024

ಪುಟಗಳು : 100

ಬೆಲೆ : 130 ರೂ.


ಮಂಗಳ ಟಿ. ಎಸ್. ತುಮರಿ ಅವರ ಮೊದಲ ಕೃತಿ ಆರೋಹಿ ಎಂಬ ನಾಟಕ. ಇದು ಅವರ ಎರಡನೇ ಕೃತಿ ಹಾಗೂ ಮೊದಲ ಕಥಾ ಸಂಕಲನ.


ಶರಾವತಿ ಹಿನ್ನೀರ ದಂಡೆಯ ಲೇಖಕಿಯ ಸೀತಾಳೆ ಹೂವಿನಂತಹ ಈ ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. 


ಹಸಿರು ಕೆರೆ : ಕಾಂತಿ ಕೆಲಸಕ್ಕೆ ಸೇರಿದ ಏಳು ವರ್ಷಗಳಲ್ಲಿ ನಾಲ್ಕು ಬಾರಿಯಾದರೂ ಪತ್ರಿಕೆ ಗುಣಶೇಖರರ ಸಂದರ್ಶನವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನಡೆಸಿತ್ತಾದರೂ.. ಎಷ್ಟೇ ಬೇಡಿದರೂ ಅವರ ಸಂದರ್ಶನ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಆ ಮನುಷ್ಯ ಸತ್ತ ನಂತರ ಆತನ ಪತ್ನಿಯ ಸಂದರ್ಶನಕ್ಕೆ ಸಿಕ್ಕ ಅವಕಾಶ ಅವಳನ್ನು ಸಕಲೇಶಪುರದತ್ತ ಕೊಂಡೊಯ್ಯಿತು. ಕಾಂತಿಯ ವೈಯಕ್ತಿಕ ಬದುಕಿನ ಸಂಘರ್ಷಗಳ ಜೊತೆಗೆ ಸಾಗುವ ಪಯಣ ಗುಣಶೇಖರನ ಪತ್ನಿ ಮೈಥಿಲಿಯ ಜೊತೆಗಿನ ಮಾತುಕತೆ, ವ್ಯಾವಹಾರಿಕ ಅಥವಾ ನಾಮಕಾವಸ್ಥೆ ಎಂಬಂತೆ ಆಗಬಹುದಾಗಿದ್ದ ಸಂದರ್ಶನ ಒಂದು ಸಂದರ್ಶನಕ್ಕಿಂತ ಹೆಚ್ಚಾಗಿ ಬಾಂಧವ್ಯ ಬೆಳಸಿತ್ತು. ಅಲ್ಲಿಂದ ಹೊರಟ ಕಾಂತಿಯ ಮನಸ್ಸಿನಲ್ಲೊಂದು ಸ್ಪಷ್ಟತೆ ಮೂಡಿದ್ದಕ್ಕೆ ಕಾರಣವೇನು..? ಮೈಥಿಲಿ ಹಸಿರು ಕೆರೆಗೆ ಕೊಟ್ಟ ವ್ಯಾಖ್ಯಾನ, ಕಾಂತಿ ಕಂಡುಕೊಂಡ ಬಗೆ ಇಲ್ಲಿದೆ. ವ್ಯಕ್ತಿತ್ವವನ್ನು ಹಲವು ಆಯಾಮಗಳಿಂದ ಕಾಣುವ ಇಬ್ಬರ ಕತೆ ಇಲ್ಲಿದೆ. 


ಬೇಲಿ : ಎಷ್ಟೋ ಬಾರಿ ಅಪ್ಪ ಅರ್ಥವಾಗುವುದು ಆತನ ಸಾವಿನ ನಂತರವೇ... ಶರವಿಂದುವಿಗೆ ತನ್ನ ತಂದೆ ಬದುಕಿದ್ದಾಗ ಒಂದು ರೀತಿಯಲ್ಲಿ ಕಂಡರೆ, ಸಾವಿನಾಚೆಗೆ ಬೇರೆಯದ್ದೆ ರೀತಿ ಕಾಣುತ್ತಾರೆ. ಅಪ್ಪ ಆಸ್ಪತ್ರೆಗೆ ಸೇರಲು ಮುಖ್ಯ ಕಾರಣವೇ ತೋಟ ಹಾಗೂ ಬೇಲಿಯ ಕೆಲಸ ಎಂಬಂತೆ ಶರವಿಂದು ತನ್ನ ಅಪ್ಪನ ಮಧ್ಯೆ ಎಳೆದುಕೊಂಡಿದ್ದ ಬೇಲಿ ಏನಾಯ್ತು..?


ತಪ್ಪೊಪ್ಪು : ರೇವಣಸಿದ್ಧ ಎನ್ನುವ ಹೆಸರು ಕಮಲಾಕರ ಮೇಷ್ಟ್ರ ನೆನಪಿನಲ್ಲಿ ಅಚ್ಚಳಿಯದಂತೆ ಕುಳಿತು ಹೋಗಿದ್ದಕ್ಕೆ ಕಾರಣ ಕೇವಲ ಆತನ ಬಾಲ್ಯ ಹಾಗೂ ಶಾಲೆಯ ದಿನಗಳಲ್ಲ.. ಅದರಾಚೆಗೂ ಬೆಸೆದುಕೊಂಡಿದ್ದ ಇವರ ಬಾಂಧವ್ಯ. ಅವನ ತಾಯಿ ಮೇಷ್ಟ್ರ ಬಳಿ ಬಂದು ಭಿನ್ನವಿಸಿದ್ದ ಒಂದು ವಿಚಾರಕ್ಕೆ ಆತನ ಓದು ಮುಂದುವರೆದಿದ್ದು ಈಗ ಇತಿಹಾಸವಾದರೂ.. ಅದೇ ವಿಚಾರ ಮತ್ತೆ ಮುತ್ತನೆ ಎದುರಿಗೆ ನಿಂತ ಸಂದರ್ಭದಲ್ಲಿ ಮೇಷ್ಟ್ರು ಯಾವ ನಿರ್ಧಾರ ತಳೆದರು..?


ಗುಲಾಬಿ ಫ್ರಾಕು : ಬಡತನದ ಮನೆಗಳಲ್ಲಿ ಬಟ್ಟೆ ಹೊಂದಿಸುವುದೇ ಕಷ್ಟ. ಹಿರಿಯ ಮಕ್ಕಳು ಹಾಕಿ ಬಿಟ್ಟ ಲಂಗ ಕಿರಿಯವರಿಗೆ ದಾಟಿಕೊಳ್ಳುತ್ತಾ ಸಾಗುತ್ತವೆ. ಐದು ಹೆಣ್ಣು ಮಕ್ಕಳ ಮನೆಯಲ್ಲಿ ಮಧ್ಯದವರಾಗಿದ್ದ ಇವರಿಗೆ ಗುಲಾಬಿ ಫ್ರಾಕ್ ನ ಆಸೆಯನ್ನು ಅಮ್ಮ ಹೇಗೆ ತೀರಿಸುತ್ತಾರೆ. ಡಾಲಿ ಪಾರ್ಟನ್ ಅವರ ಕೋರ್ಟ್ ಆಫ್ ಮೆನಿ ಕಲರ್ಸ್ ಕವಿತೆಯ ಸಾಲುಗಳೊಂದಿಗೆ ಅರ್ಥವಾಗದ ವಯಸ್ಸಿನ ನೆನಪು, ಕುಹಕಗಳು, ಅವಮಾನಗಳು ಎಲ್ಲದರಾಚೆಗೆ ಇನ್ನೂ ಗುಲಾಬಿ ಫ್ರಾಕಿನ ಮೋಹ, ಅವರ ಆಸೆಯನ್ನು ಯಾವೆಲ್ಲ ರೀತಿಯಲ್ಲಿ ತೀರಿಸಿಕೊಳ್ಳಲು ಬಯಸುತ್ತಾರೆ ಓದಿ ನೋಡಿ.


ಸುಕ್ರಿ : ಮೀನು ಮಾರಾಟ ಮಾಡುತ್ತಿದ್ದ ವಯಸ್ಸಾದ ಸುಕ್ರಿ ಇತ್ತೀಚೆಗೆ ಸುಳಿದು ನಾಲ್ಕು ವಾರಗಳೇ ಕಳೆದಿತ್ತು. ಆತಂಕ, ಚಡಪಡಿಕೆಯ ಜೊತೆಗೆ ಸುಕ್ರಿಯ ನೆನಪು ಸಾಗುತ್ತಾದೆ. ಯಾರೋ ಮಾತನಾಡುತ್ತಿದ್ದ ತಲ್ಲಣ ಹುಟ್ಟಿಸುವ ಮಾತುಕತೆಗಳು ಅದು ಸುಕ್ರಿ ಆಗದಿರಲಿ ಎಂದು ಪ್ರಾರ್ಥಿಸುವ ಕಥೆ ಇಲ್ಲಿದೆ. ಸುಕ್ರಿಯ ಬದುಕು ಹೀಗಿತ್ತು ಓದಿ ನೋಡಿ.


ಶಾಪ : ಶಾಪಗಳೆಲ್ಲ ಫಲಿಸುತ್ತವೆಯಾ ..? ಮುಗ್ಧ ಮನಸ್ಸಿನಿಂದ ಬೇಡಿಕೊಂಡ ಬೇಡಿಕೆಗಳು ಈಡೇರುವುದಾದರೆ ಇದೂ ಯಾಕಾಗಬಾರದು..?

ಊರಿನಲ್ಲಿ ಒಳ್ಳೆಯ ಕಾಲೇಜುಗಳಿಲ್ಲ ಎಂಬ ಕಾರಣಕ್ಕೆ ಊರಿನವರೆಲ್ಲರ ವಿರೋಧದ ನಡುವೆಯೂ ಅಪ್ಪ-ಅಮ್ಮನ ಬೆಂಬಲದೊಂದಿಗೆ ಹಾಸ್ಟೆಲ್ ಸೇರುವ ಹುಡುಗಿಯ ಓದಿನ ಎರಡನೇ ವರ್ಷದಲ್ಲಿ ಹಿಂದೆ ಬಿದ್ದಿದ್ದ ಹುಡುಗ ಅವಳನ್ನು ಕಾಡಿದ ಬಗೆ ಹೇಗೆ..? ಇಲ್ಲಿ ಶಾಪ ಯಾರದ್ದು..? ಶಾಪ ತಟ್ಟಿತೇ..? ಹಾಗಿದ್ದಲ್ಲಿ ಯಾರಿಗೆ..? ಹೊಸತನದ ಕಥೆಯಂತೆ ಭಾಸವಾಯಿತು.


ಸ್ವಪ್ನ ಸೌಧ : "ನನ್ನ ಕನಸುಗಳೆಲ್ಲ ಕಾಸು ಕೊಟ್ಟು ಕಿತ್ಕೊಂಡ್ರೋ ಕಿತ್ಕೊಂಡ್ರು! ಉಳ್ಳೋರು ಸಿವಾಲಯ ಮಾಡ್ತಾರೆ ನಾನೇನ್ ಮಾಡ್ಲಿ ಬಡಪಾಯಿ" ಏಕೆ ಅಳಲಿಡುತ್ತಿರುವ ಧ್ವನಿ ಚಿರಪರಿಚಿತವಾಗಿದ್ದರೂ.. ಗದ್ದಲದ ನಡುವೆ ನೆನಪಾಗಿರಲಿಲ್ಲ. ಆದರೆ ಮನೆಗೆ ತಲುಪಿದ ಮೇಲೆ ಎದುರು ಬೀದಿಯ ದೇವಮ್ಮನ ಧ್ವನಿ ಅದೆಂದು ತಿಳಿದು.. ಅವಳ ಬದುಕಿನ ಸ್ವಪ್ನ ಸೌಧ ಕಳಚಿದ ಕರುಣಾಜನಕ ಕಥೆ ತಿಳಿಯಿತು. ಕಷ್ಟಜೀವಿ ಹಾಗೂ ಹೋರಾಟದ ಸಾಕಾರ ರೂಪದಂತಿದ್ದು ಅವಳ ಬದುಕು ಹಾಗಾಗಿದ್ದು ವಿಪರ್ಯಾಸವಾದರೂ ದೇವಮ್ಮನ ಹೋರಾಟವೇನೂ ಕಡಿಮೆಯಿರಲಿಲ್ಲ. ದೇವಮ್ಮ ಗೆಲ್ಲಬೇಕಿತ್ತು ಎನಿಸಿದರೂ.. ಆಕೆಗೆ ಸಹಕಾರ ಸಿಗದಿದ್ದೇಕೆ ಎಂದು ಪುನರಾವಲೋಕಿಸಬೇಕಾಗುತ್ತದೆ. 


ಕಲ್ಲು ದೇವರನೆಲ್ಲ... : ಆಸ್ತಿಕ ಪತ್ನಿ ಹಾಗೂ ನಾಸ್ತಿಕ ಗಂಡ ಇಬ್ಬರ ನಡುವೆಯೂ ಪೂಜೆ, ಹೋಮ ದೇವಾಲಯದ ವಿಚಾರಕ್ಕೆ ಆಗಾಗ ಸಣ್ಣ ಮುನಿಸುಗಳು ಇದ್ದಿದ್ದೇ. ಆತನ ತಾಯಿಯದ್ದೂ ಇದೇ ವಿಚಾರಕ್ಕೆ ಸಿಡಿಮಿಡಿ. ಮನುಷ್ಯ ದೇವರನ್ನು ನಂಬದಿದ್ದರೂ ಆತನೇ ಮತ್ತೊಬ್ಬರ ಪಾಲಿಗೆ ದೇವರಾಗುವ, ಮಾನವೀಯತೆಯನ್ನು ಇಟ್ಟುಕೊಂಡಿದ್ದರೆ..? ಹೂವಮ್ಮನ ಪಾಲಿಗೆ ಸಹಾಯಕ್ಕೊದಗಿದ ದೇವರಂತ ಮನಸ್ಸಿನ ಮನುಷ್ಯನ ಕಥೆ ಇದು.


ಅವನಿ : ಮಲೆನಾಡಿನ ಊರಿಗೆ ಬ್ಯಾಂಕ್ ಕೆಲಸಕ್ಕೆ ಹೊಸದರಲ್ಲಿ ಬಂದಾಗ ಯಾಕಾದರೂ ಇಲ್ಲಿಗೆ ಬಂದೆ ಎಂದುಕೊಂಡಿದ್ದ ವಾಸುದೇವ ಶರ್ಮರಿಗೆ ಈಗ ಗೋವೆಗೆ ಟ್ರಾನ್ಸ್ಫರ್ ಆರ್ಡರ್ ಸಿಕ್ಕರೂ ಊರು ಬಿಟ್ಟು ಹೊರಡಲು ಸಂಕಟ ಹಾಗೂ ಆ ಊರಿನ ನೆನಪುಗಳು ಅವರನ್ನು ಬಾಧಿಸುತ್ತಿರುತ್ತವೆ. ಅವರ ಮನಸ್ಸಿನಲ್ಲಿ ಹಾಗೆ ಅಚ್ಚಳಿಯದೆ ಉಳಿಯಲಿದ್ದ ಅವನಿ ಯಾರು..?

ಈ ಕಥೆಯಲ್ಲಿ ಕಾಡಿದ ಸಾಲುಗಳಿವು

"ಅಬ್ಬಾ! ಹೆಣ್ಣು ಮಕ್ಕಳ ಜಗತ್ತೇ! ನಿಮ್ಮ ತಾಕತ್ತೇ! ಏನೇನು ಭಾರವನ್ನು ಇಟ್ಟುಕೊಂಡು ಹೀಗೆಲ್ಲ ಹಾಡುತ್ತೀರಿ! ಒಮ್ಮೆ ಲಾಲಿ. ಇನ್ನೊಮ್ಮೆ ಸ್ನೇಹಗೀತೆ, ಇನ್ನೊಮ್ಮೆ ಒಲವ ಗುನುಗು... ಎಷ್ಟೆಲ್ಲಾ... ಜಗದ ತೇರು ಎಳೆಯುವುದಕ್ಕೆ!"


ಕನ್ನಡಿಯ ಜಗತ್ತು : ಹಲವಾರು ಜನಗಳನ್ನು ನೋಡುವಂತಹ ಅವಕಾಶ ಆ ಕನ್ನಡಿಗಿತ್ತು. ಕನ್ನಡಿಯಿದ್ದ ರೂಮಿಗೆ ಬಂದು ಹೋಗುತ್ತಿದ್ದವರು ಹಲವರು. ಅವರನ್ನು ಹೊರಜಗತ್ತು ನೋಡಿ ಅಳೆದು ಮಾತನಾಡುವುದಕ್ಕೂ ಒಳಜಗತ್ತಿನಲ್ಲಿ ಅವರಿರುವ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿತ್ತು ಅಂತಹ ಹಲವಾರು ಘಟನೆಗಳನ್ನು ಕನ್ನಡಿಯ ಕಣ್ಣಲ್ಲಿ ಕಾಣಬಹುದು.


ಮುಂಬೈ ದರ್ಶನ : ಮುಂಬೈ ದರ್ಶನ ಮಾಡಿಸಲು ಸಿಕ್ಕ ಗೈಡ್ ಸಮೀರ, ಪತಿ-ಪತ್ನಿಯರಿಬ್ಬರ ಆಸಕ್ತಿಗಳು ಬೇರೆ-ಬೇರೆ ಇದ್ದುದರಿಂದ ಅವರಲ್ಲುಂಟಾದ ಮನಸ್ತಾಪಕ್ಕೆ ತೆರೆ ಎಳೆಯುವಲ್ಲಿ ಸಮೀರನ ಪಾತ್ರ ಹಿರಿದಾದುದು. ಸಮೀರನ ಜೀವನಾನುಭವ ವಿಸ್ತಾರವಾಗಿದ್ದು, ತನ್ನ ಪತ್ನಿಯ ಮನಸು ಗೆಲ್ಲುವುದಕ್ಕೆ ಸಮೀರನನ್ನು ಹತ್ತಿರವಾಗಿಸಿಕೊಂಡಿದ್ದವರು ಅವನದ್ದೇ ಕಾರಣದಿಂದಾಗಿ ಪೊಲೀಸ್ ಸ್ಟೇಷನ್ ನ ಸರಳಿನ ಹಿಂದೆ ಹೋಗಬೇಕಾಗಿ ಬಂದದ್ದೇಕೆ..? ಈ ಕಥೆಯ ಅಂತ್ಯ ಊಹಿಸಲು ಕಷ್ಟವಿತ್ತು.


ಸಾಕ್ಷಿ : ರಚನೆಗೆ ಅಮ್ಮನ ಅಕ್ಕ-ತಂಗಿಯರಲ್ಲಿ ಅಚ್ಚುಮೆಚ್ಚಿನವಳೆಂದರೆ ರಜನಿ ಚಿಕ್ಕಿ. ರಜನಿ ಚಿಕ್ಕಿಯ ಸಾವಿನ ಸುದ್ದಿ ಅಮ್ಮ ಹೇಳಿದಾಗ ಆಘಾತ ತಂದಿತ್ತಾದರೂ ವಾಣಿ ಚಿಕ್ಕಿಗೆ ಕ್ಯಾನ್ಸರ್ ಆಗಿದ್ದು, ಟ್ರೀಟ್ಮೆಂಟ್ ಆಗುತ್ತಿರುವುದು ಹಾಗೂ ಅವಳ ನೋವುಗಳೆಲ್ಲವೂ ನೆನಪಾಗಿತ್ತು. ವಿಪರ್ಯಾಸವೆಂದರೆ ಗಟ್ಟಿ ಹೆಂಗಸಾಗಿದ್ದ ಅವಳು ಕ್ಯಾನ್ಸರ್ ನಿಂದಲೂ ಚೇತರಿಸಿಕೊಂಡು ಚೈತನ್ಯದ ಮಾತುಗಳನ್ನಾಡುತ್ತಿದ್ದಳು. ಅವಳ ಛಲವೇ ಅವಳನ್ನು ಗೆಲ್ಲಿಸುತ್ತದೆ ಎಂದುಕೊಳ್ಳುವಷ್ಟರಲ್ಲಿ ಅವಳ ಸಾವು ಸಂಭವಿಸಿತ್ತು. ರಚನೆಗೆ ತಿಳಿದ ಆಘಾತಕಾರಿ ಸುದ್ದಿ ಎಂದರೆ ಚಿಕ್ಕಿ ಸತ್ತದ್ದು ಕ್ಯಾನ್ಸರ್ ನಿಂದಲ್ಲ. ಬದಲಾಗಿ ..? 

ಒಂದು ಸಾವು ಮನೆಯ ಸಂಬಂಧಗಳ ಸತ್ಯವನ್ನು ಹೊರ ಹಾಕುವ ಬಗೆ ಹೇಗಿರುತ್ತದೆ ಓದಿ ನೋಡಿ.


ಇಲ್ಲಿನ ಕಥೆಗಳಲ್ಲಿ ಸಣ್ಣ-ಸಣ್ಣ ಸಂಗತಿಗಳನ್ನು ಭಾವನಾತ್ಮಕವಾಗಿ ತೆರೆದಿಟ್ಟಿದ್ದಾರೆ. ಚಂದದ ಬದುಕನ್ನು ಕಟ್ಟಿಕೊಳ್ಳಲು ಹಂಬಲಿಸುವ ಹೆಣ್ಣು ಮಕ್ಕಳಲ್ಲಿ ಛಲ, ಧೈರ್ಯ, ಆತ್ಮವಿಶ್ವಾಸ ಹೀಗೆ ಪ್ರತಿಯೊಂದರಲ್ಲಿಯೂ ಪಾಸಿಟಿವಿಟಿಯನ್ನೇ ಕಾಣಬಹುದು. ಹಾಗೆಂದು ಹೆಣ್ಣಿನ ಒಳತೋಟಿಗಳು ಅನಾವರಣವಾಗಿಲ್ಲವೆಂದಲ್ಲ .ಅದರಾಚೆಗೆ ವಾಸ್ತವವನ್ನು ಸ್ವೀಕರಿಸುವ ಗಟ್ಟಿ ಪಾತ್ರಗಳು ಇಲ್ಲಿವೆ. ನೊಂದ ಜೀವಗಳು ಇಲ್ಲಿ ಹಂಚುವುದು ನೋವನ್ನಲ್ಲ, ಬದಲಾಗಿ ತಮ್ಮ ಜೀವನಾನುಭವವನ್ನು ಜೊತೆಗೆ ಪಾಸಿಟಿವಿಟಿಯನ್ನು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸುವ ದಾರಿಯಂತೂ ಇದ್ದೇ ಇದೆ. ಆ ಹಾದಿಯ ಮೂಲಕ ಸಾಗಬೇಕಷ್ಟೆ ಎಂದು ನೀಡುವ ಸಂದೇಶಗಳು ವಾಸ್ತವತೆಯನ್ನು ತೋರುವ ಕಥಾ ಹೂರಣವನ್ನು ತೋರುತ್ತವೆ. ಚೆಂದದ ನಿರೂಪಣೆಯ ಚೆಂದದ ಓದು.


~ ವಿಭಾ ವಿಶ್ವನಾಥ್

ಶೌರ್ಯಮಲೆ - ಅಯ್ಯಪ್ಪನ ಪೂಂಗಾವನ (ಪುಸ್ತಕ ಯಾನ - 459)


ಪುಸ್ತಕದ ಶೀರ್ಷಿಕೆ : ಶೌರ್ಯಮಲೆ - ಅಯ್ಯಪ್ಪನ ಪೂಂಗಾವನ 

ಲೇಖಕರು : ರಮೇಶ್ ಶೆಟ್ಟಿಗಾರ್ ಮಂಜೇಶ್ವರ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2025

ಪುಟಗಳು : 224

ಬೆಲೆ : 280 ರೂ.


ಅಯ್ಯಪ್ಪನ ದರ್ಶನಕ್ಕಾಗಿ ಕಠಿಣ ವ್ರತಗಳನ್ನು ಮಾಡಿ ಪಂಪಾ ನದಿಯಲ್ಲಿ ಮಿಂದು, ಭಕ್ತಿ ಪೂರ್ವಕವಾಗಿ ಇರುಮುಡಿ ಹೊತ್ತು ಹೋಗುವವರ ಭಕ್ತಿ, ಚಲನಚಿತ್ರ ಹಾಗೂ ಪ್ರಾಥಮಿಕ ಕತೆಯಾಗಿ ಮಣಿಕಂಠ ಹುಲಿಯ ಹಾಲನ್ನು ತರಲು ಹೋಗಿ ಮಹಿಷಿಯ ವಧೆ ಮಾಡಿ ಹುಲಿಯ ಮೇಲೆ ಸವಾರಿ ಮಾಡುತ್ತಾ ಬಂದು.. ಬಿಲ್ಲಿನಿಂದ ಬಾಣ ಹೂಡಿ ತನ್ನ ಸ್ಥಳವನ್ನು ತಾನೇ ಗುರುತಿಸಿ ಕೊಟ್ಟು ಅಯ್ಯಪ್ಪನಾಗುವ ಕಥೆಯ ಅರಿವಿತ್ತು. 18 ಮೆಟ್ಟಿಲುಗಳ ದಿವ್ಯತೆ ಹಾಗೂ ಅಪಾರವಾದ ಭಕ್ತಿಯಷ್ಟೇ ನನಗೆ ಅರಿವಿದ್ದದ್ದು . ಇದರ ಆಚೆಗೆ ಮಕರ ಜ್ಯೋತಿಯ ಕುರಿತು ಹಾಗೂ ಹತ್ತರಿಂದ 50 ವಯಸ್ಸಿನ ಒಳಗಿನ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವ ಚರ್ಚೆಗಳನ್ನು ಕೇಳಿದ್ದೆ. ಆದರೆ ಎಲ್ಲದರಾಚೆಗೆ ಭಕ್ತಿ ಮಾತ್ರವೇ ಮನದಲ್ಲುಳಿದಿತ್ತು.


ಹಲವಾರು ರೋಚಕ ಕಥೆಗಳು ಘಟನೆಗಳು, ಸಂದರ್ಭಗಳು, ಪೌರಾಣಿಕ ವಿಚಾರಗಳು, ಚಾರಿತ್ರಿಕ ಘಟನೆಗಳು ಎಲ್ಲವನ್ನೂ ಪೂರಕವಾಗಿ ಒಂದಕ್ಕೊಂದು ಹೆಣೆದು.. ತಮಗೆ ಸಿಕ್ಕ ಮಾಹಿತಿಗಳ ಮೂಲವನ್ನು ಉಲ್ಲೇಖಿಸಿ ಮಣಿಕಂಠನೇ ಉತ್ತಮ ಪುರುಷದಲ್ಲಿ ತನ್ನ ಗಾಥೆಯನ್ನು ವಿವರಿಸಿರುವಂತೆ ಕಟ್ಟಿಕೊಟ್ಟಿರುವ ಕಥಾನಕ ಹಾಗೂ ತರ್ಕಬದ್ಧವಾದ ವಿಚಾರಗಳು ಓದಿನ ಸಂಪೂರ್ಣ ತೃಪ್ತಿ ನೀಡಿತು. ಶಬರಿಮಲೆಯ ದಿವ್ಯತೆ ಮನಕ್ಕೆ ಮತ್ತಷ್ಟು ಆವರಿಸಿತು. 


ತನ್ನ ನೆಚ್ಚಿನ ಸಲಗ ಬಲಭದ್ರನ ಬೆನ್ನೇರಿ ಪಂಪಾ ನದಿಯ ಬದಿಯಲ್ಲಿ ಸಂಚರಿಸುತ್ತಾ.. ಚೆಂಗನ್ನೂರು ಮಹಾದೇವ ಕ್ಷೇತ್ರ ದರ್ಶನಕ್ಕೆ ಹೊರಟಿದ್ದಾಗ ಮಣಿಕಂಠನಿಗೆ ಪಂದಳದ ಡಂಗುರ ಕೇಳಿದ್ದು ಹೀಗೆ. ಹುಲಿಯ ಹಾಲನ್ನು ತಂದವರಿಗೆ ಒಂದು ಗ್ರಾಮ ಎಂದರೂ ಬಳುವಳಿಯ ಆಮಿಷಕ್ಕೆ ಯಾರು ತಮ್ಮ ಪ್ರಾಣವನ್ನು ಪಣಕ್ಕಿಡದೆ ಉಳಿದದ್ ಜೊತೆಗೆ ಮನುಷ್ಯರಿಗೆ ಹುಲಿಯ ಹಾಲಿನ ಸೇವನೆ ವರ್ಜ್ಯ ಎಂಬ ವಿಚಾರ ಮನಸ್ಸಿಗೆ ಬಂದದ್ದು ಎಲ್ಲವೂ ಸೇರಿ ಗೊಂದಲ ಮೂಡಿಸುತ್ತದೆ. 


ಮಹಾರಾಣಿಗೆ ಬಂದಿರುವ ಅಪರೂಪದ ವ್ಯಾಘ್ರವ್ಯಾಧಿಗೆ ನಾಡಿನ ಖ್ಯಾತ ವೈದ್ಯರಾದ ಕೇಳು ಪಂಡಿತರು ಸೂಚಿಸಿದ್ದ ಔಷಧಿ ಅದೆಂದು ತಿಳಿಯಿತು. ಅಮ್ಮನನ್ನು ನೋಡಲು ಹೋದಾಗ ತಾನು ಮಗನಾಗಿ ಕರ್ತವ್ಯ ನಿರ್ವಹಿಸಲು ಔಷಧಿಯನ್ನು ತಂದೇ ತರುತ್ತೇನೆಂದವನ ಮಾತಿಗೆ "ನೀನು ನನ್ನ ಮಗನಲ್ಲವಲ್ಲ" ಎಂಬ ಮಾತು ನೋಯಿಸಿದ್ದು ಮಾತ್ರವಲ್ಲದೆ, ಅನಾಥ ಭಾವವನ್ನು ಮೂಡಿಸಿ ತಾನು ಸಿಕ್ಕ ಹಿನ್ನೆಲೆಯನ್ನು ಅವರಿಂದಲೇ ಕೇಳಿದ್ದ ನೆನಪಾಯಿತು.


ವಾವರನನ್ನು ಶರಣಾಗಿಸಿಕೊಂಡು, ಶತ್ರು ಕಾಟವನ್ನು ನಿವಾರಿಸಿ ಆತನನ್ನು ಪಂದಳದ ಮಿತ್ರರನ್ನಾಗಿ ಮಾಡಿಕೊಂಡು ಬಂದಿದ್ದವನು ಮತ್ತೊಂದು ದೊಡ್ಡ ಕಾರ್ಯವನ್ನು ಹೆಗಲೇರಿಸಿಕೊಂಡು ಹೊರಟಿದ್ದ. 12ರ ಪ್ರಾಯದ ಬಾಲಕನನ್ನು ಕಾಡಿಗೆ ಕಳುಹಿಸಲು ತಂದೆಗೆ ಕೊಂಚವೂ ಇಷ್ಟವಿರಲಿಲ್ಲ. 


ಪಂದಳ ನಾಡಿನ ಅರಸು ರಾಜಶೇಖರ ವರ್ಮ ತಂಬುರಾನ್ ಅವರು ಮಂತ್ರಿ ಸುಶೀಲನ್ ಜೊತೆಗೆ ಕಾಡಿಗೆ ಹೋಗಿದ್ದಾಗ ಮಣಿಕಂಠ ಕಾಡಿನಲ್ಲಿ ಸಿಕ್ಕಿ 12 ವರ್ಷಗಳು. ಪೆರುಮಾದೇವಿಗೆ ಮಕ್ಕಳಾಗಲಿಲ್ಲವೆಂದು ಬಹು ಪತ್ನಿತ್ವವನ್ನು ಅನುಸರಿಸಲು ಹೊರಟವರಲ್ಲ. ಮಣಿಕಂಠನ ಕಾಲುಣವೇನೋ ಎಂಬಂತೆ ರಾಜರಾಜ (ಕೇತಕೀ ವರ್ಮ) ಜನಿಸಿದ್ದ. ಸ್ವಂತ ಅಣ್ಣ-ತಮ್ಮಂದಿರಂತೆ ಬೆರೆತಿದ್ದರು. ಮುಂದಿನ ರಾಜನಾಗಿ ಪಂದಳವನ್ನು ಆಳುವವನು ಎಂದೇ ತಂಬುರಾನ್ ಆತನಿಗೆ ಪಟ್ಟ ಕಟ್ಟುವ ಸಿದ್ಧತೆಯನ್ನು ಮಾಡಿಕೊಂಡಿದ್ದರು. ರಾಜರಾಜನು ಅಣ್ಣನ ನೆರಳಿನಂತೆ ಇರುತ್ತಿದ್ದ. ಹೀಗಿರುವಾಗ ಇನ್ನು ಬಾಲಕ ಮಣಿಕಂಠನನ್ನು ಕಾಡುಗೆ ಕಳುಹಿಸಲು ಒಪ್ಪದವರನ್ನು ಒಪ್ಪಿಸಿದ್ದು ಸಿದ್ಧಪುರುಷರು. ಜೊತೆಗೆ ಮಣಿಕಂಠ ಸಿಕ್ಕಾಗ ಆತನ ಶೌರ್ಯದ ಕುರಿತಾಗಿ ಒಂದು ಪ್ರಮುಖ ಹೇಳಿಕೆಯ ಕುರಿತ ಉಲ್ಲೇಖವಿದೆ. ಅದೇನು ಓದಿ ಅರಿಯಿರಿ. 


ತನ್ನ ಕುದುರೆ ರೇವಂತನನ್ನು ಏರಿ ಮಲೆಗೆ ಹೊರಟವನಿಗೆ ಮಾಯಾವಿ ಎಮ್ಮೆಗಳ ಕಾಟ ಬಂದಾಗ ರಕ್ಷಿಸುವುದು ವಾಪುರನ್ ಮತ್ತು ಸಹಚರರು. ತನ್ನ ಉದ್ದೇಶವನ್ನು ತಿಳಿಸಿದಾಗ ಪುಲಿಮೇಡಿನ ದೂರದ ಪ್ರಯಾಣಕ್ಕೆ ದಾರಿದೀಪವಾಗುತ್ತಾರೆ. 


ಮಣಿಕಂಠ ನೀನು ದೈವಾಂಶ ಸಂಭೂತ ಎಂದು ಹೇಳಿದ ಗುರುಗಳ ಮಾತು, ಗುರುಪುತ್ರನ ಬದುಕಲ್ಲಿ ಆದ ಪವಾಡ.. ಗುರುಕುಲದಿಂದ ಅರಮನೆಗೆ ಹೊರಡಿಸುವ ಸಮಯದಲ್ಲಿಯೂ ಗುರುದಕ್ಷಿಣೆಯನ್ನು ಬಯಸದವರು, ತನಗೆ ವಿಶೇಷವಾಗಿ ಸನ್ಮಾನಿಸಿ ಸ್ವರ್ಣದ ಚೂರಿಯನ್ನು ಬಹುಮಾನವಾಗಿತ್ತ ಪ್ರಸಂಗ, ಗುರುಗಳು ಅವನಿಗೆ ಹೇಳದ ರಹಸ್ಯಮಯ ಹಿನ್ನೆಲೆ, ಮಣಿಕಂಠನ ವಿಶೇಷ ತೇಜಸ್ಸು, ಅತಿಮಾನುಷವಾದ ಕಾರ್ಯಗಳು ಎಲ್ಲಕ್ಕೂ ಇಲ್ಲಿನ ಘಟನೆಗಳು ಸಾಕ್ಷಿಯಾಗಿವೆ. 


ಚೀರಪ್ಪನ್ ಪಣಿಕ್ಕರ್ ಗುರುಕುಲದಲ್ಲಿ ಕಳರಿಪಯಟ್ಟು ವನ್ನು ಕಲಿಯಲು ಹೋದಾಗ ಆ ವಿದ್ಯೆಯ ಹಿನ್ನೆಲೆ, ಆಶ್ರಮದಲ್ಲಿ ಸಿಕ್ಕ ವಿರೋಧಗಳು, ಅದರಾಚೆಗೆ ಎಲ್ಲರೂ ಮಣಿಯುವಂತೆ ಮಾಡಿದ ಶೌರ್ಯ ಹಾಗೂ ಸಾಹಸಗಾಥೆಯನ್ನು ಕಾಣಬಹುದು. ಗುರುಪುತ್ರಿ ಲಲಿತಾಂಬಿಕೆ ಮಾಡಿಕೊಟ್ಟ ಕಪ್ಪು ಬಣ್ಣದ ಪಾಯಸ ಋಧುಮತಿ ಗಂಜಿ, ಹೊಸಬಗೆಯ ಅರವಣ ಪಾಯಸದ ಉಲ್ಲೇಖ ವಿಶೇಷವಾಗಿದೆ. 

ಲಲಿತಾಂಬಿಕೆಯ ಬಳಿ ತಾನು "ನೈಷ್ಠಿಕ ಬ್ರಹ್ಮಚಾರಿ, ಪಟ್ಟವನ್ನು ಏರುವುದಿಲ್ಲ, ಮದುವೆಯನ್ನೂ ಆಗುವುದಿಲ್ಲ, ವಂಶವನ್ನು ಬೆಳೆಸುವುದಿಲ್ಲ" ಎಂದು ತನ್ನ ದೃಢ ನಿರ್ಧಾರವನ್ನು ತಿಳಿಸಿದ್ದೇಕೆ..? ನಂತರ ವಾವರನ ಪ್ರಸಂಗವನ್ನು ಕಾಣಬಹುದು. 


ಅಚ್ಚನ್ ಕೋವಿಲ್ ಶ್ರೀಧರ್ಮಶಾಸ್ತನೇ ಮಹಾವೈದ್ಯನಾಗಿ ಪ್ರಕಟವಾದ ಪ್ರಸಂಗ, ಮೇಲ್ಸ್ಯಾಂತಿಯವರ ಅಚ್ಚರಿಯ ಪ್ರಸಂಗವೂ ಇಲ್ಲಿದೆ.


ನಾರದರು ಮಣಿಕಂಠನನ್ನು ಭೇಟಿಯಾಗುವ ಮುನ್ನ ಮಣಿಕಂಠನಿಗೆ ತನ್ನ ಸಂಪೂರ್ಣ ಜನ್ಮ ರಹಸ್ಯ ಅರಿವಾದ ಬಗೆ ಹೇಗಿತ್ತು..?

ಮಹಿಷಿಯ ವಧೆಯ ಏಕೈಕ ಉದ್ದೇಶದಿಂದ ಮಣಿಕಂಠನ ಜನ್ಮವಾಗಿತ್ತೇ..? 

ಧರ್ಮಶಾಸ್ತ ಹಾಗೂ ಮಣಿಕಂಠ ಇಬ್ಬರಲ್ಲ, ಬೇರೆಯಲ್ಲ ಎಂಬ ತತ್ತ್ವಮಸಿ ಅನುಭಾವ ಉಂಟಾದ ಕ್ಷಣಗಳ ಹಿನ್ನೆಲೆ ಏನು..?


"ಸಾವು ಅವರವರ ಕರ್ಮ ಸಿದ್ದಾಂತದ ಪ್ರಕಾರವೇ ಆಗುತ್ತದೆ." ತನ್ನ ಅಂತ್ಯವೂ ಹರಿಹರಸುತನಿಂದಲೇ ಆಗಬೇಕು ಎಂದು ವಿಧಿಯಲ್ಲಿ ವರ ಕೇಳಿ ಪಡೆದಿದ್ದ ಮಹಿಷಿಯ ಜನ್ಮದ ಹಿಂದೆಯೂ ಒಂದು ಹಿನ್ನೆಲೆ ಇದೆ. ಪೂಂಗಾವನದಲ್ಲಿ ನೆಲೆಸಿದ್ದ ಮಹಿಷಿ ಮಣಿಕಂಠನೆದುರಲ್ಲಿ ಯಾವ ರೀತಿಯಲ್ಲಿ ನಡೆದುಕೊಂಡಳು..? ಯಾರ ಶಾಪ ವಿಮೋಚನೆಯಾಯಿತು.?


ಮಣಿಕಂಠನಾಗಿ ತನ್ನ ಪ್ರೀತಿಪಾತ್ರರ ಮನಸ್ಸಿನಲ್ಲಿ ಏನಿದೆ ಎಂದು ನಿಜಾಂಶವನ್ನು ಅರಿಯುವ ಸಂದರ್ಭದಲ್ಲಿ ಸತ್ತ್ವ ಪರೀಕ್ಷೆಗಾಗಿ ದೇವೇಂದ್ರ ವಾಯು, ವರುಣ, ಅಗ್ನಿ, ಕುಬೇರರು ಯಾವ ರೀತಿಯಲ್ಲಿ ಸಹಾಯ ಮಾಡಿದರು..? ಅರಮನೆಯಲ್ಲಿ ಮಣಿಕಂಠನಿಗೆ ಅರಿವಾದ ಸತ್ಯ ಆತನನ್ನು ಯಾವ ಹಾದಿಯಲ್ಲಿ ಕೊಂಡೊಯ್ಯಿತು..? ಇಲ್ಲಿ ತಂಬುರಾನ್ ರಿಗೆ ಆದ ಆಘಾತ ಜೀರ್ಣಿಸಿಕೊಳ್ಳಲು ಕಷ್ಟವಾಗುವಂತಹದು. ತಾನು ಅರಮನೆಗೆ ಕರೆ ತಂದ ಶಿಶುವನ್ನು ಮಗನಂತೆ ಭಾವಿಸಿದ್ದ ಅವರ ಅನನ್ಯ ಪ್ರೇಮಕ್ಕೆ ಘಾಸಿಗೊಳಿಸಿದ್ದು ಅವರ ಅತ್ಯಾಪ್ತರೇ ಆದದ್ದು ವಿಪರ್ಯಾಸ. ಮಣಿಕಂಠನನ್ನು ಮಣಿಸುವ ಅವರ ಯೋಚನೆ ವಿಫಲವಾಯಿತಾದರೂ.. ರಾಜರಾಜನನ್ನು ರಾಜನಾಗಿಸುವ ಅವರ ಯೋಚನೆ ಗೆದ್ದರೂ.. ಆ ಗೆಲುವು ತೃಪ್ತಿಕರ ಗೆಲುವಾಗದ್ದು ಏಕೆ..? ಮಣಿಕಂಠನ ಮಾತಿಗೆ ತಂಬುರಾನ್ ಒಪ್ಪದೇ ದಾರಿಯೇ ಇರಲಿಲ್ಲ. ಮಣಿಕಂಠನ ಮಾತಿನಂತೆಯೇ ನಡೆದ ತಂಬುರಾನ್ ಧರ್ಮಶಾಸ್ತನ ಕ್ಷೇತ್ರವನ್ನು ಪುನರ್ ನಿರ್ಮಿಸುವಲ್ಲಿ ಏನೆಲ್ಲಾ ಮಾಡಿದರು..? 


ಶಬರ ಪಡೆಯ ಮುಖಂಡ ಕೊಚ್ಚು ವೇಲನ್ ನಂಬಿಕೆಯಿಂದ ಕಾಯುತ್ತಿದ್ದ ಚಾತ್ತನ್ ದೇವ ಶ್ರೀ ಭೂತನಾಥನಾದ ಧರ್ಮಶಾಸ್ತ. ಅವರೆಲ್ಲರೂ ಮಣಿಕಂಠನನ್ನು ಕಾಯುತ್ತಿದ್ದುದ್ದೇಕೆ..? ಅವರಿಟ್ಟ ಬೇಡಿಕೆ ಏನಿತ್ತು ..?


ಅಗಸ್ತ್ಯ ಮಹರ್ಷಿಗಳ ಸಹಾಯ ಹಾಗೂ ಪುಲಿಪಾಣಿ ಸಿದ್ದರು ಸೇರಿ ನಿರ್ಮಿಸಿದ ನವಪಾಷಣ ವಿಗ್ರಹ ಈಗ ಎಲ್ಲಿತ್ತು ಹಾಗೂ ಅದರ ದಿವ್ಯತೆ ಏನು..? ಇದರಲ್ಲಿ ಪರಶುರಾಮರ ಪಾತ್ರವೇನು ಎಲ್ಲದರ ಕುರಿತು ಓದಿ ನೋಡಿ.


ಶಾಸ್ತಮಲೆಯನ್ನು ಶೌರ್ಯಮಲೆ ಎಂದು ಕರೆದದ್ದೇಕೆ..? ಕಡು ಪಾಪಿಷ್ಟ ಉದಯನನ್ ನಡೆಸಿದ ಪಾಪ ಕಾರ್ಯಗಳೆಲ್ಲವೂ ಈಗ ಮಣಿಕಂಠನ ಎದುರಿಗೆ ತೆರೆದುಕೊಂಡ ನಂತರ ಆತ ದುಷ್ಟ ನಿಗ್ರಹಕ್ಕೆ ತೆಗೆದುಕೊಂಡ ಕ್ರಮವೇನು..? 


ವಾವರನನ್ನು ಮಣಿಸಿದ ರೀತಿಗೂ ಹಾಗೂ ಉದಯನನ್ನು ಮಣಿಸಿದ ರೀತಿಗೂ ಬಹಳ ವ್ಯತ್ಯಾಸ ಕಾಣುತ್ತದೆ. ದುಷ್ಟ ನಿಗ್ರಹ ಮಾತ್ರವಲ್ಲದೆ ಮನಸ್ಸನ್ನು ನಿಯಂತ್ರಿಸಿಕೊಳ್ಳಲು ಪ್ರಜೆಗಳಿಗೆ ದಾರಿ ತೋರಿದ ಮಣಿಕಂಠನನ್ನು ಇಲ್ಲಿ ಕಾಣಬಹುದು. 41 ದಿನದ ಮಂಡಲ ಹಾಗೂ ಮಲೆ ಏರಿ ಬರುವರು ಆಚರಿಸುವ ವಿಧಿ ವಿಧಾನದ ಹಿಂದಿನ ಅರ್ಥವೂ ಇಲ್ಲಿದೆ. ಮಣಿ ಮಂಟಪದ ಪಕ್ಕದಲ್ಲಿರುವ ಶಕ್ತಿಸ್ಥಾನ ಯಾರದ್ದಾಯಿತು..? ವಾಪುರನ್ ನ ಪ್ರಾಮುಖ್ಯತೆ, ಶೌರ್ಯವನ್ನು ಇಲ್ಲಿ ಕಾಣಬಹುದು. 


ಶಬರಿಮಲೆ ಎಂಬ ಹೆಸರು ಬರಲು ಕಾರಣವಾದ ಶಬರಿ ತ್ರೇತಾಯುಗದ ಶಬರಿಯೇ ಓದಿ ನೋಡಿ.


ಅಯ್ಯಪ್ಪನ ಮಾಲೆ ಹಾಕಿದವರೆಲ್ಲರೂ ತಮ್ಮ ನಿಜ ನಾಮಧೇಯದ ಬದಲು ಅಯ್ಯಪ್ಪ ಎಂದೇ ಕರೆಯಲ್ಪಡುವುದೇಕೆ..? ಮಕರ ಜ್ಯೋತಿ ಹಾಗೂ ಮಕರ ಬೆಳಕಿನ ವೈಶಿಷ್ಟ್ಯವೂ ಇಲ್ಲಿದೆ. 


ಇಲ್ಲಿ ನಾನು ಪ್ರಸ್ತಾಪಿಸಿದ್ದಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯ ಹಾಗೂ ವಿಚಾರಗಳನ್ನು ನೀವು ಓದಬಹುದು. ಇಲ್ಲಿ 18 ರ ಪ್ರಾಮುಖ್ಯತೆಯನ್ನು ಕಾಣಬಹುದು. ಮಣಿಕಂಠ ಅಯ್ಯಪ್ಪನಾಗಿ ಪ್ರತಿಷ್ಠಾಪಿತನಾದ ಸಂದರ್ಭದಲ್ಲಿ ಇನ್ನುಳಿದ ದೈವಗಳು ಪ್ರತಿಷ್ಠಾಪಿತರಾದ ದೈವತ್ವವೂ ಇಲ್ಲಿದೆ.


ಭಕ್ತಿಪೂರ್ವಕ ಓದಿನ ಅನುಭವದಲ್ಲಿ ನಾವು ಕಾಣದ ಶಬರಿಮಲೆಯ ದರ್ಶನ ಮಾತ್ರವಲ್ಲದೆ, ಇನ್ನುಳಿದ ದೈವೀ ದರ್ಶನವನ್ನು ನಮಗೆ ಮಾಡಿಸುತ್ತಾರೆ ಪೂಂಗಾವನ ಆವರಿಸುವಂತೆ ಮಾಡುತ್ತಾರೆ. ಮೊದಲ ಓದು ಮಾತ್ರವಲ್ಲದೆ, ಮರುಓದಿನಲ್ಲಿಯೂ ಮತ್ತಷ್ಟು ಆಪ್ತ ಓದು ನಮ್ಮದಾಗುತ್ತದೆ. 


~ವಿಭಾ ವಿಶ್ವನಾಥ್

ಹುಲಿ ವೇಷ (ಪುಸ್ತಕ ಯಾನ - 458)


ಪುಸ್ತಕದ ಶೀರ್ಷಿಕೆ : ಹುಲಿ ವೇಷ

ಲೇಖಕರು : ವಿಠಲ್ ಶೆಣೈ 

ಪ್ರಕಾಶಕರು : ಟೋಟಲ್ ಕನ್ನಡ 

ಪ್ರಥಮ ಮುದ್ರಣ : 2019

ಮೂರನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 206

ಬೆಲೆ : 160 ರೂ.


ಈ ಕಥಾ ಸಂಕಲನದ ಶೀರ್ಷಿಕೆಯಾಗಿರುವ 'ಹುಲಿ ವೇಷ' ಒಂದು ನೀಳ್ಗತೆ. ಲೇಖಕರು ಈ ಕಥೆ ಹುಟ್ಟಿದ ರೀತಿಯನ್ನು ಹೇಳುತ್ತಾರೆ. ಮಂಗಳೂರಿನಲ್ಲಿ 70-80ರ ದಶಕದಲ್ಲಿ ಹುಟ್ಟಿ ಬೆಳೆದ ಹುಡುಗರಿಗೆ ಹುಲಿ ವೇಷ ಎಂದರೆ ಇರುವ ಆಪ್ತ ಭಾವ ಹಾಗೂ ನವರಾತ್ರಿಯ ಕೊನೆಯ ನಾಲ್ಕೈದು ದಿನಗಳ ಹುಲಿ ವೇಷದ ನೃತ್ಯ ಜೊತೆಗೆ ಶಾರದಾ ಮಾತೆಯ ಶೋಭಾಯಾತ್ರೆಯ ಜೊತೆ ಕೊನೆಗೊಳ್ಳುವ ಹುಲಿ ವೇಷದ ಬಣ್ಣ ಹೀಗೆ ಈ ಎಲ್ಲಾ ಅನುಭವಗಳ ಜೊತೆಗೆ ಹುಲಿ ವೇಷದ ದಂಡನ್ನೇ ಆಧಾರವಾಗಿಟ್ಟು ಬರೆದ ಕಥೆ ಇದು. ತೀರಾ ಸಣ್ಣ ಕಥೆಯೂ ಆಗದೆ, ಕಾದಂಬರಿಯಷ್ಟು ದೊಡ್ಡದಾಗದೆ ನೀಳ್ಗತೆ ರೂಪ ತಳೆದಿದೆ ಎನ್ನುತ್ತಾರೆ. ಇದರ ಜೊತೆಗೆ ಇನ್ನು ಆರು ಕಥೆಗಳು ಈ ಕಥಾ ಸಂಕಲನದಲ್ಲಿದೆ. ಕೆಲ ಕಥೆಗಳು ಪ್ರತಿಲಿಪಿ ಆನ್ಲೈನ್ ನಲ್ಲಿ ಪ್ರಕಟವಾಗಿವೆ.


ಈ ಕಥಾ ಸಂಕಲನದಲ್ಲಿ ಒಟ್ಟು ಏಳು ಕಥೆಗಳಿವೆ. 7 ಕಥೆಗಳ ಕಥಾವಸ್ತುವೂ ವಿಭಿನ್ನವಾಗಿ ಸೆಳೆಯುತ್ತವೆ. ಬೆನ್ನುಡಿ ಹಾಗೂ ಕಥೆಗಳ ಪರಿಚಯದಲ್ಲಿ ಸಂಕ್ಷಿಪ್ತವಾಗಿ ಕಥೆಯ ಕುತೂಹಲವನ್ನು ಕಟ್ಟಿಕೊಟ್ಟು ಓದಲು ಪ್ರೇರೇಪಿಸಿದ್ದಾರೆ.


ಅದೇ ಧ್ವನಿ : "ಕರ್ನಾಟಕದ ಹೊಸ ಧ್ವನಿಗಳು" ಎಂಬ ಟಿ.ವಿ ಕಾರ್ಯಕ್ರಮದ ಕೊನೆಯ ಹಂತದ ಸ್ಪರ್ಧೆಯ ವಿಜೇತನಾಗಿ ಹೊರಹೊಮ್ಮಿದ ಮನೋಜ್ ಕುಮಾರ್ ನಿಗೆ ದೈವದತ್ತವಾದ ಕಂಠ ಒಲಿದಿತ್ತು ಜೊತೆಗೆ ಮುಖದಲ್ಲಿ ಆತ್ಮವಿಶ್ವಾಸವಿತ್ತು. ಅವನ ಸುಮಧುರ ಗಾಯನದಿಂದ ಆತ ಎಲ್ಲರನ್ನೂ ಸೆಳೆದಿದ್ದ. ಮನೋಜ್ ತಾಯಿ ಮುಕ್ತ ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡು, ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾ ಮಗನನ್ನು ಸಾಕಿದ್ದರು. ಓದಿನಿಂತ ಪಠ್ಯೇತರ ಚಟುವಟಿಕೆಗಳಲ್ಲಿಯೇ ಅವನ ಒಲವು ಹೆಚ್ಚಾಗಿತ್ತು. ಅವನ ಸುಶ್ರಾವ್ಯ ಕಂಠದ ಅರಿವಾಗಿ ಜೊತೆಗೆ ವಠಾರದ ಸರೋಜಮ್ಮನ ಮೆಚ್ಚುಗೆಯೂ ಸೇರಿ ಸಂಗೀತ ತರಬೇತಿ ಕೊಡಿಸಿದರು. ಅವರ ಶ್ರಮಕ್ಕೆಲ್ಲ ಪ್ರತಿಫಲ ಸಿಕ್ಕ ಸಮಯವಿದು. ವಿಜಯದ ಪ್ರತಿಫಲವಾಗಿ ಅಮರ್ - ಕುಶಲ್ ಜೋಡಿಯ ಸಂಗೀತ ನಿರ್ದೇಶನದ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಿ ಕಲಿಯುತ್ತಾ ಅವರ ಗರಡಿಯಲ್ಲಿಯೇ ಕಲಿಯುತ್ತಾ ಸಾಗಿದ. ಮೂವರ ನಡುವೆಯೂ ಹೇಳದೆಯೇ ಆಪ್ತತೆ ಜೊತೆಗೆ ಕನೆಕ್ಟಿವಿಟಿ ಬೆಳೆದಿದ್ದು, ಮನೋಜನ ಪ್ರತಿಭೆ, ಯಶಸ್ಸು, ಕೀರ್ತಿ ಎಲ್ಲವೂ ಬೆಳೆದು ಎಲ್ಲವೂ ಸುಸೂತ್ರವಾಯಿತು ಎಂಬ ಸಂದರ್ಭದಲ್ಲಿ ಗಂಟಲು ನೋವಿನಿಂದ ಹಾಡು ಅಪಸ್ವರವಾಯಿತು. ಅಪಸ್ವರದ ಕಾರಣವನ್ನು ಡಾಕ್ಟರ್ ಏನೆಂದರು..? ಅವನ ಚಿಕಿತ್ಸೆ ನಡೆಯಿತು. ಅವನ ಕಮಿಟ್ಮೆಂಟ್ ಹಾಗೂ ಆತನ ಮುಂದಿನ ಬದುಕು ಹೇಗಿತ್ತು..? ಗಾಯಕನಿಗೆ ಧ್ವನಿ ಎಷ್ಟು ಮುಖ್ಯ ಹಾಗೂ ಎಲೆಮರೆ ಕಾಯಿಯಂತಹ ಪ್ರತಿಭೆಗಳ ಪಾಡು ಹೇಗಿರುತ್ತದೆ ಎಂಬುದನ್ನು ಹೇಳುವ ಕಥೆ. ತಾಯಿಯ ಮಮತೆಯ ಮತ್ತೊಂದು ಸ್ವರೂಪವನ್ನೂ ಹೇಳುತ್ತದೆ.


ಹುಲಿ ವೇಷ : ಮಂಗಳೂರಿನ ದಸರಾದ ಸಂಭ್ರಮದ ಭಾಗವಾಗುತ್ತಿದ್ದ ಹುಲಿವೇಷದ ದಂಡಿನಲ್ಲಿ ಭಾನು ಶೆಟ್ಟಿ ಫ್ರೆಂಡ್ಸ್ ಸರ್ಕಲ್ ಹುಲಿಗಳ ತಂಡಕ್ಕೆ 75ನೇ ವರ್ಷದ ಸಂಭ್ರಮ. ತಾತ ಕಟ್ಟಿ ಬೆಳೆಸಿದ್ದ ತಂಡವನ್ನು ಈಗ ತಾನು ವೇಷ ಹಾಕಿ ಭಾನು ಶೆಟ್ಟಿ ಮುನ್ನಡೆಸುತ್ತಿದ್ದ. ಆದರೆ, 30 ವರ್ಷಗಳ ಹಿಂದೆ ತನ್ನ ತಂದೆ ಭೈರವ ಶೆಟ್ಟಿಯನ್ನು ನಿರ್ದಯವಾಗಿಯೇ ಕಣ್ಣಮುಂದೆಯೇ ಕೊಂದದ್ದು ಭಾನು ಶೆಟ್ಟಿಯ ಮನಸ್ಸಿನಲ್ಲಿ ಇನ್ನು ಹಸಿಯಾಗಿಯೇ ಉಳಿದಿತ್ತು. ಇದರ ಹಿನ್ನೆಲೆ ಮತ್ತು ಕಾರಣವೇನು..?

ಹುಲಿ ವೇಷದ ಜೊತೆ ಜೊತೆಗೆ ಚುನಾವಣೆಯ ಹಾಗೂ ರಾಜಕೀಯದ ವಿಚಾರವೂ ತೆರೆದುಕೊಳ್ಳುತ್ತದೆ. ಬಹುಜನ ಪಕ್ಷ ಪ್ರಜಾರಾಜ್ಯ ಪಕ್ಷ ಹಾಗೂ ರೈತ ಬಂಧು ಪಕ್ಷದ ಚುನಾವಣಾ ಫಲಿತಾಂಶ ಹೊರ ಬಿದ್ದು ರೆಸಾರ್ಟ್ ರಾಜಕೀಯ ನಡೆಯುತ್ತಿರುವ ಸಂದರ್ಭದಲ್ಲಿಯೇ ಇತ್ತ ಹುಲಿವೇಷವೂ ನಡೆಯುತ್ತಿರುತ್ತದೆ.

ರೋಚಕವಾಗಿ ಕಥೆಯನ್ನು ಹೇಳುತ್ತಾ ಸಾಗುವಾಗ ರಾಜಕೀಯದ ಆಸಕ್ತರಲ್ಲದವರು ಮುಂದೇನಾಗಬಹುದು ಎಂದು ಕುತೂಹಲದಿಂದ ಕಾಯುವಂತಾಗುತ್ತದೆ.

ಬಿಜಾಪುರದಿಂದ ಬಂದಿದ್ದ ನಾಲ್ವರಲ್ಲಿ ಮಂಜುನಾಥ ನ ಪತ್ನಿಯ ಆಪರೇಷನ್ ಗೆ ದುಡ್ಡು ಕೂಡಿಸಲು, ದುಡ್ಡು ಸಂಪಾದಿಸಲು ವೇಷ ಹಾಕಲು ಬಂದೆವೆಂದು ಹೊಸಬರಿಗೆ ಅವಕಾಶ ಕೊಡುತ್ತಿದ್ದ ಭಾನುಶೆಟ್ಟಿ ಗ್ರೂಪ್ ನಲ್ಲಿ ಸೇರಿದಾಗ ಅವರಿಗೆ ಪೇಂಟಿಂಗ್ ಮಾಡುವುದು, ಹುಲಿ ನೃತ್ಯದ ಸ್ಟೆಪ್ ಗಳನ್ನು ಹೇಳಿಕೊಡುವುದು ಇದೆಲ್ಲದ ಜೊತೆಗೆ ಹುಲಿ ವೇಷದ ವೈಶಿಷ್ಟ್ಯಗಳನ್ನು ತೆರೆದಿರುತ್ತಾರೆ. ಭಾನು ಶೆಟ್ಟಿ ಆಶಿಸುತ್ತಿದ್ದಂತೆಯೇ ಅವರ ಟ್ಯಾಬ್ಲೋಗೆ ದೇವಿಯ ಹತ್ತಿರದ ಸ್ಥಾನವನ್ನು ದೇವಸ್ಥಾನದವರೇ ಕೊಟ್ಟಿದ್ದರ ಅಚ್ಚರಿಯ ಜೊತೆಗೆ ಮತ್ತೊಂದು ಅಚ್ಚರಿಯೂ ಕಾದಿರುತ್ತದೆ.

ಹುಲಿವೇಷ ಹಾಗೂ ರಾಜಕೀಯ ಎರಡು ಮಿಳಿತವಾಗಿರುವ ಈ ಕಥೆ ಇಷ್ಟವಾಯಿತು. ಕಿರುಚಿತ್ರ ನಿರ್ಮಿಸಲು ಚೆಂದದ ಕಥಾನಕ ಇಲ್ಲಿದೆ. 


ತಕ್ಷಕನ ದೋಷ : ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆಫ್ ಕ್ಲೌಡ್ ಟೆಕ್ನಾಲಜಿಸ್ ಸಮ್ಮೇಳನಕ್ಕೆ ಹೋಗಬೇಕಾಗಿದ್ದ, ಅದರಲ್ಲಿಯೂ ತಾನು ಪೀಡಿಸಿ ಪಡೆದುಕೊಂಡಿದ್ದಅವಕಾಶವನ್ನು ಧನುಷ್ ಕಳೆದುಕೊಳ್ಳುವ ಸಂದರ್ಭ ಉಂಟಾಗಿದ್ದು ಹಾವಿನಿಂದ. ಏರ್ಪೋರ್ಟ್ಗೆ ಹೊರಡೋದು ಇನ್ನೇನು ಕೆಲವೇ ನಿಮಿಷಗಳು ಎನ್ನುವಾಗ ಆ ಮಧ್ಯರಾತ್ರಿಯಲ್ಲಿ ಅನಪೇಕ್ಷಿತವಾಗಿ ಕಂಡ ದೃಶ್ಯ ಮನೆಯಲ್ಲಿ ಹೆಡೆ ಬಿಚ್ಚಿ ಕುಳಿತಿದ್ದ ನಾಗರಹಾವು. ಆತನ ಪತ್ನಿಯ ಹೆದರಿಕೆ, ಆಸ್ತಿಕ ಕುಟುಂಬದಲ್ಲಿ ಹುಟ್ಟಿ ನಂಬಿಕೆ ಇಟ್ಟುಕೊಂಡಿದ್ದ ಧನುಷ್ ಬದಲಾದ ಪರಿ ಹಾಗೂ ದೈವ ಭಕ್ತಿ ಮತ್ತು ಆಸ್ತಿಕ ಮನೋಭಾವದ ಪತ್ನಿ ಸಂಧ್ಯಾ ಇವರಿಬ್ಬರ ನಡುವಿನ ಮಾತುಕತೆಗಳು, ವಾದಗಳು ಜೊತೆಗೆ ಹಾವನ್ನು ಓಡಿಸಲು ಮಾಡುವ ಪರದಾಟ ಎಲ್ಲವೂ ಇಲ್ಲಿದೆ. ಇದಕ್ಕೆ ಸರ್ಪ ದೋಷ ಎಷ್ಟರಮಟ್ಟಿಗೆ ಕಾರಣ..? ಓದಿ ನೋಡಿ.


ಅವಳು ಅವನು ಮತ್ತು ಕೋಣೆ : ವಿಚಿತ್ರವಾದ ಕತ್ತಲ ಕೋಣೆಯಲ್ಲಿ ಬಂದಿಗಳಾದ ಇಬ್ಬರು ಬಂಧಿಗಳು ಅವನು ಮತ್ತು ಅವಳು. ಅವರಿಬ್ಬರೂ ಬಂಧಿಯಾದ ಪರಿ, ಅವರಿಬ್ಬರು ಹೊರ ಹೋಗಲು ಪ್ರಯತ್ನಿಸಿ ವಿಫಲರಾಗುವ ಬಗೆ, ಅವರಿಬ್ಬರ ನಡುವಿನ ಮಾತುಕತೆಗಳು, ಸಂಧಾನ ಎಲ್ಲವೂ ಇಲ್ಲಿದೆ. ಹೆಚ್ಚು ಹೇಳಿ ಈ ಕಥೆಯ ಸ್ವಾರಸ್ಯವನ್ನು ಹಾಳು ಮಾಡಲಾರೆ.


ಬಂಗಾರದ ಬಳೆ : ಎಷ್ಟೋ ಬಾರಿ ಪ್ರಾಮಾಣಿಕತೆಯಿಂದ ಇದ್ದವರು ಮನಸ್ಸು ಜಾರಿದ ಕ್ಷಣದಲ್ಲಿ ಅತಿಯಾಸೆಯಿಂದಲೋ ಅಥವಾ ಇದು ಒಂದು ಚಿಕ್ಕ ಅವಕಾಶ ಬಳಸಿಕೊಂಡರೆ ಬೇರೆಯವರಿಗೆ ಹಾನಿಯಾಗಲಾರದು ಎಂತಲೋ ಮನಸ್ಸು ಹೇಳಿದಂತೆ ಕೇಳಲು ಹೋದ ಕ್ಷಣಗಳಲ್ಲಿಯೇ ಸಿಕ್ಕಿಹಾಕಿಕೊಳ್ಳುವುದು ಹೆಚ್ಚು. ಕಳ್ಳರಿಗಿಂತಲೂ ಹೆಚ್ಚು ಪಾಪಪ್ರಜ್ಞೆ ಕಾಡುವುದು ಇಂತಹ ಕ್ಯಾಟಗರಿಗೆ ಸೇರಿದವರಿಗೆ. 

ಬದಲಾದ ದಿನಗಳಲ್ಲಿ ರಿಕ್ಷಾಗಿಂತಲೂ ಕ್ಯಾಬ್ ಭರಾಟೆ ಹೆಚ್ಚಾದಾಗ ನವೀನ್ ರಿಕ್ಷಾ ಬಿಟ್ಟು ಲೋನ್ ಪಡೆದು ಕ್ಯಾಬ್ ಓಡಿಸಲು ಶುರುವಿಟ್ಟ. ಪತ್ನಿ ಸುಜಾತಳಿಗೆ ಅತ್ಯಮೂಲ್ಯವಾದ ಉಡುಗೊರೆಯನ್ನು ಕೊಡುವ ಆಸೆ ಅವನಿಗೆ. ಅವಳ ಮನಸ್ಸಿನಲ್ಲಿದ್ದದ್ದು ಬಂಗಾರದ ಬಳೆ. ಹಗಲು-ರಾತ್ರಿ ಕಷ್ಟಪಟ್ಟರೆ ಉಳಿಸಲಾಗುವ ಪುಟ್ಟ ಮೊತ್ತ ಅದಕ್ಕೆ ಸಾಲುವಂತಿರಲಿಲ್ಲ. ಆದರೆ, ಅಚಾನಕ್ ಸಿಕ್ಕಿದ ಅವಕಾಶದಿಂದ ಸುಜಾತಾಳಿಗೆ ಬಂಗಾರದ ಬಳೆಯನ್ನು ಕೊಡಿಸುವ ಸಮಯ ಕೂಡಿ ಬಂದಿತ್ತು ಎಂದುಕೊಂಡು ಹೋದರೆ ಮನಸ್ಸಿನ ಕಲ್ಪನೆಗಳಿಗಿಂತಲೂ.. ಅಲ್ಲಿ ನಡೆದ ವಿದ್ಯಮಾನ ಇಬ್ಬರಿಗೂ ದೊಡ್ಡ ಪಾಠವನ್ನೇ ಕಲಿಸಿದ ಕಥೆ ಇಲ್ಲಿದೆ. 


ನೀ. ಹೀ. ಸಂ : ನಿದ್ದೆ ಬರದೆ ಏನೇನೋ ಸರ್ಕಸ್ ಮಾಡುತ್ತಿದ್ದ ಸುಮಂತ್ ಗೆ ತನ್ನಂತೆಯೇ ಇದ್ದ ಆಲ್ಬರ್ಟ್ ಅಂಕಲ್ ಜೊತೆಯಾದಾಗ ರಾತ್ರಿಯ ವಾಕಿಂಗ್ ಶುರುವಾಗಿತ್ತು. ಮುಂದೆ ರಾಮನಾಥ್ ಜೊತೆಯಾದರು. ಹೀಗೆ ಇವರ ಚಟುವಟಿಕೆಗಳು ಜೋರಾಗಿ ಮುಂದೆ ನಿದ್ರಾಹೀನರದ್ದೇ ಒಂದು ಸಂಘ ಸ್ಥಾಪಿತವಾಗುತ್ತದೆ. ಆದರೆ, ಎಲ್ಲರನ್ನೂ ನಿಯಂತ್ರಿಸುವುದು ಸುಲಭವಲ್ಲ. ಹಾಗೆಂದು ಆ ಸಂಘ ಸರಿಯೇ..? ನಿದ್ರಾಹೀನತೆಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು ತಮ್ಮಂಥವರೆಲ್ಲರನ್ನು ಸೇರಿಸಿಕೊಂಡ ಸಂಘದ ಪರಿಸ್ಥಿತಿ ಏನಾಯಿತು ಓದಿ ನೋಡಿ.


ಕೀರ್ತಿ ಟ್ರಾವೆಲ್ಸ್ : ಕೀರ್ತಿ ಟ್ರಾವೆಲ್ಸ್ ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ರಚಿತ್ ಹಾಗೂ ಕೀರ್ತಿ ಇಬ್ಬರ ಪರಿಚಯವಾಗಿ ಆಗುವ ಮಾತುಕತೆಯಲ್ಲಿ ಇಬ್ಬರೂ ಮರುದಿನ ಮನೆಯಲ್ಲಿ ನೋಡಿದ ತಮ್ಮ ಭಾವಿ ಸಂಗಾತಿಗಳನ್ನು ನೋಡಲು ಹೊರಟಿರುವ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಹಾಗೆಂದು ಕೀರ್ತಿಕೆ ರಚಿತ್ ಹಾಗೂ ರಚಿತ್ ಗೆ ಕೀರ್ತಿ ನೋಡಲು ಹೊರಟಿರುವ ಹುಡುಗ-ಹುಡುಗಿಯಲ್ಲ ಇಬ್ಬರ ಬದುಕಿನಲ್ಲಿ ನಡೆಯುವ ಘಟನೆ ಕಾಕತಾಳೀಯ. ಕಥೆಯ ಮೊದಲರ್ಧ ಓದುವಾಗ ನಾನು ಇದು ಕಾಕತಾಳೀಯ ಘಟನೆ ಎಂದೇ ಅಂದುಕೊಂಡೆ. ಆದರೆ, ಯಾವ ಘಟನೆಯೂ ಸುಖಾಸುಮ್ಮನೆ ಘಟಿಸುವುದಿಲ್ಲ. ನಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯೂ ಸುಮ್ಮನೆ ನಮ್ಮ ಬದುಕಲ್ಲಿ ಬಂದಿರುವುದಿಲ್ಲ ಎನ್ನುವ ಉಕ್ತಿಯೊಂದನ್ನು ಓದಿದ್ದೆ. ಅಂತೆಯೇ ಪರಸ್ಪರರು ನೋಡದಿದ್ದರೂ.. ಇಬ್ಬರ ಜೀವನದಲ್ಲಿಯೂ ಬರುವ ವ್ಯಕ್ತಿಗಳ ನಡುವೆ ಕನೆಕ್ಟಿವಿಟಿಯಂತೂ ಇದ್ದೇ ಇದೆ. ಹಾಗೆಂದು ಇದು ಪ್ರೇಮ ಕಥೆಯಾ..? ಹೌದೆನ್ನಲೇ..? ಇಲ್ಲವೆನ್ನಲೇ..? ಎರಡನ್ನೂ ಪೂರ್ತಿಯಾಗಿ ಹೇಳುವುದು ಕಷ್ಟ ಓದಿ ನೋಡಿ.


ವಿಭಿನ್ನ ಕಥೆಗಳ ಓದು ಇಷ್ಟವಾಯಿತು.


~ ವಿಭಾ ವಿಶ್ವನಾಥ್

ಭಾನುವಾರ, ಜೂನ್ 7, 2026

ಅಭಯ (ಬೆಳಕಿಂಡಿಯ ಕತೆಗಳು - 31)

ಎಷ್ಟು ಕರೆ ಮಾಡಿದರೂ ತಲುಪದ ಕರೆ, ಜೊತೆಗೆ ಮಗನಿದ್ದ ಪ್ರದೇಶದಲ್ಲಿ ಯುದ್ಧದ ತೀವ್ರತೆ ಕಂಡು ಅವಳಿಗೆ ಭಯವಾಗುತ್ತಿದ್ದುದರ ಜೊತೆಗೆ.. ತನ್ನ ಗಂಡ ತನ್ನಿಂದ ಏನೋ ಮುಚ್ಚಿಡುತ್ತಿದ್ದಾರೆ ಎಂಬ ಗುಮಾನಿಯೂ ಸೇರಿ ಅವಳನ್ನು ತೀವ್ರ ಆತಂಕಕ್ಕೆ ತಳ್ಳಿತ್ತು. ದೇವರ ಮನೆಯಲ್ಲಿ ಕುಳಿತವಳಿಗೆ ಅಭಯ ಸಿಕ್ಕಂತಾಗಿ ಎದ್ದು ಹೊರಬಂದರೆ ಮಗ ಅಮ್ಮನಿಗೆ ಸರ್ಪ್ರೈಸ್ ಕೊಡಲು ತಂದೆಯ ಜೊತೆ ಪ್ಲಾನ್ ಮಾಡಿ ಹೊರಟು ಬಂದಿದ್ದ. ಅದಾದ ನಂತರ ಅಲ್ಲಿ ಯುದ್ಧ ಶುರುವಾಗಿತ್ತು. ಅಂತೂ ಅಮ್ಮನ ಆತಂಕ ಕಳೆದು, ನೆಮ್ಮದಿ ಮೂಡಿತ್ತು.

~ವಿಭಾ ವಿಶ್ವನಾಥ್


ಸಮಯ ಸಾಧಕರಿಗೆ ಸರಿಯುತ್ತರ (ಬೆಳಕಿಂಡಿಯ ಕತೆಗಳು - 30)


ಅವಳ ಬಳಿ ಬಂದು, ಮನಸ್ತಾಪ ಮಾಡಿಕೊಂಡಿದ್ದ ವ್ಯಕ್ತಿಯ ಬಗ್ಗೆ ಸಮಯಸಾಧಕರು ಹಗೆ ತುಂಬಲು ಯತ್ನಿಸಿದಾಗ ಅವಳು ಕಿವಿಗೊಡಲಿಲ್ಲ. ಮಾತ್ರವಲ್ಲ.. ಇನ್ನೊಬ್ಬರ ಕುರಿತು ಅವರ ಅನುಪಸ್ಥಿತಿಯಲ್ಲಿ ಚರ್ಚಿಸಲೂ ಇಚ್ಚಿಸಲಿಲ್ಲ. ಅವಳೂ ಹಿತ್ತಾಳೆ ಕಿವಿಯವಳಾಗಿ, ಸಂಚಿಗೆ ಬಲಿಯಾಗುವ ಬಲಿಪಶುವಾಗಲಿಲ್ಲ. ಅವಳದ್ದು ಎಂದಿಗೂ ನೇರಾನೇರ ಮಾತು.


ಅವಳು ಗಂಧದ ಜೊತೆ ಗುದ್ದಾಡುವವಳೇ ಹೊರತು, ಸಗಣಿಯ ಜೊತೆ ಸರಸವಾಡುವವಳಲ್ಲ ಎಂಬುದನ್ನು ಮನದಟ್ಟು ಮಾಡಿಸಿದ್ದಳು. ಇಲ್ಲಿ ಸಮಯಸಾಧಕರು ಮುಖಭಂಗ ಅನುಭವಿಸಿದ್ದರು.. ಅಲ್ಲಿ ಬಾಕಿ ಉಳಿದಿತ್ತು.

~ವಿಭಾ ವಿಶ್ವನಾಥ್

ಚೈತನ್ಯ (ಬೆಳಕಿಂಡಿಯ ಕತೆಗಳು - 29)

ಪುಟ್ಟ ಮಕ್ಕಳನ್ನು ಮೊದಲ ದಿನದ ಶಾಲೆಗೆ ಸ್ವಾಗತಿಸಿ, ಸಂತೈಸಿ, ಸಂಭಾಳಿಸಿ ಅರ್ಧ ದಿನ ಅವರೊಡನೆ ಕಳೆದು, ಆಯಾಸದಿಂದ ಬಂದು ಸ್ಟಾಫ್ ರೂಂನಲ್ಲಿ ಕುಳಿತರೆ.. ಮೊದಲ ಮಳೆಯ ಮಣ್ಣ ಕಂಪು ಆವರಿಸಿ ಮನಕ್ಕೆ ಚೈತನ್ಯ ತುಂಬಿತು. 


ಚಿಗುರಿಗೆ ಜೀವಜಲವಾದ ಮಳೆಗೂ.. ಪುಟ್ಟ ಮಕ್ಕಳಿಗೆ ಜೀವನೋತ್ಸಾಹಕ್ಕೆ ದಾರಿದೀಪವಾಗುತ್ತಿರುವ ತನ್ನ ಕಾಯಕಕ್ಕೂ ಸಾಮ್ಯತೆ ಕಂಡು ಹೆಮ್ಮೆಯೆನಿಸಿತು. ಮತ್ತರ್ಧ ದಿನದ ಕೆಲಸಕ್ಕೆ ಹುರುಪು ತಂದುಕೊಂಡು ಖುಷಿಯಿಂದ ಕ್ಲಾಸ್ ರೂಂ ಕಡೆಗೆ ಹೆಜ್ಜೆ ಹಾಕಿದಳು.

~ವಿಭಾ ವಿಶ್ವನಾಥ್

ಮುಗಿಲೆತ್ತರ... (ಬೆಳಕಿಂಡಿಯ ಕತೆಗಳು - 28)


 "ಮುಗಿಲಿಗೆ ಏಣಿ ಹಾಕುವ ಬದಲು ನೆಲದ ಮೇಲೆ ನಡೆಯುವುದನ್ನು ಕಲಿ" ಎಂದ ಅವರಿವರ ಮಾತಿಗೆ ಬದಲು ನುಡಿಯಲಿಲ್ಲ ಅವಳು.

"ಮುಗಿಲೆತ್ತರದ ಕನಸು ಕಂಡರೆ ಕೈಗೆಟುಕುವ ಕನಸುಗಳನ್ನು ಸಾಧಿಸುವುದು ಕಷ್ಟವಾಗದು" ಎಂಬ ಅಪ್ಪನ ಮಾತು ಸದಾ ಅವಳ ಕಿವಿಯಲ್ಲಿ ಗುನುಗುಣಿಸುತ್ತಿರುತ್ತದೆ. ಈಗ ಅವಳ ಚಿಕ್ಕ-ಪುಟ್ಟ ಸಾಧನೆಗಳು ಅವಳಿಗೆ ಅಹಂ ತರುವುದಿಲ್ಲ. ಕನಸು ಮುಗಿಲೆತ್ತರಕ್ಕೂ.. ಅಹಂ ಪಾತಾಳದಲ್ಲೂ ಇರಬೇಕೆಂದು ತನ್ನ ಮಗಳಿಗೆ ಹೇಳಿಕೊಡುತ್ತಿದ್ದಾಳೆ.

~ವಿಭಾ ವಿಶ್ವನಾಥ್


ಮನೋಗಮ (ಪುಸ್ತಕ ಯಾನ - 457)


ಪುಸ್ತಕದ ಶೀರ್ಷಿಕೆ : ಮನೋಗಮ

ಲೇಖಕರು : ಡಾ. ಕೆ. ಎನ್. ಗಣೇಶಯ್ಯ

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2025

ಪುಟಗಳು : 88

ಬೆಲೆ : 120 ರೂ. 


ಎಂದೋ ಓದಿದ ಅಥವಾ ಕೇಳಿದ ವಿಚಾರಗಳು ಅಥವಾ ಕಥೆಯ ಎಳೆಗಳು ಮತ್ತೆ ನನ್ನು ಯೋಚಿಸಲು ಪ್ರೇರೇಪಿಸುತ್ತವೆ. ಕೆ. ಎನ್. ಗಣೇಶಯ್ಯನವರಿಗೆ ಅವರು 'ಇಮ್ಮಡಿ ಮಡಿಲು' ಎಂಬ ಕಥಾಸಂಕಲನದಲ್ಲಿ ಬರೆದಿದ್ದ ಕಥೆ ಪರ್ಯಾಯದಲ್ಲಿ ಇಂದಿನ ಕಾಲದ ಹೆಣ್ಣುಗಳು ಅಕ್ಕಮಹಾದೇವಿ ಅನುಭವಿಸಿದ ಮಾನಸಿಕ ತಲ್ಲಣಕ್ಕೆ ತುತ್ತಾದರೆ ಆಕೆಯ ಸ್ಪಂದನೆ ಹೇಗಿರುತ್ತದೆ ಎಂದು ಬರೆಯುವಾಗ ಮನುಷ್ಯನ ಮನಸ್ಸಿನ ಬಗೆಯ ಚಿತ್ರಣವನ್ನು ಕಥೆಯ ಕೊನೆಯಲ್ಲಿ ಬರೆಯುತ್ತಾರೆ. ಅದಾದ ನಂತರ ಆ ಕಥೆ ಲೇಖನಗಳಿಗೆ ನಾಂದಿ ಹಾಡಿತು ಎನ್ನುತ್ತಾರೆ. ವಿಜಯ ಕರ್ನಾಟಕದಲ್ಲಿ 'ಮನೋಗಮ' ಶೀರ್ಷಿಕೆಯ ಅಡಿಯಲ್ಲಿ 20 ಲೇಖನಗಳು ಪ್ರಕಟಗೊಂಡಿತ್ತವೆ. ಅವುಗಳನ್ನು ಕೊಂಚ ಪರಿಷ್ಕರಿಸಿ, ನಂತರ ಬರೆದ ಕೆಲವು ಲೇಖನಗಳನ್ನು ಸೇರಿಸಿ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ 15 ವಿಚಾರ ಪ್ರಚೋದಕ ಲೇಖನಗಳಿವೆ. 


ಬೆಂಕಿಯಲ್ಲಿ ಅರಳಿದ ಮೆದುಳು... : ಮಾನವನ ಮೆದುಳು ಚಿಂಪಾಂಜಿಗಿಂತ ಐದು ಪಟ್ಟು ಹೆಚ್ಚು ಗಾತ್ರಕ್ಕೆ ಬೆಳೆದಿದ್ದಕ್ಕೆ ಕಾರಣ ಬೆಂಕಿ ಎಂದು ಹೇಳುತ್ತಾರೆ. ಮಾನವನ ಮೆದುಳಿನ ಗಾತ್ರ ಹೆಚ್ಚಾಗಿದ್ದರ ಕಾರಣವನ್ನು ಹುಡುಕಿ ಹೊರಟ ವಿಜ್ಞಾನಿಗಳೆಲ್ಲರೂ ಸಾಮಾನ್ಯವಾಗಿ ಒಪ್ಪುವ ವಿದ್ಯಮಾನ ಎಂದರೆ ಅದೇ ಕಾಲಘಟ್ಟದಲ್ಲಿ ಮಾನವನ ಬೆಂಕಿಯನ್ನು ಪಳಗಿಸತೊಡಗಿದ ಎನ್ನುವುದು. ಅದಕ್ಕೂ ಮೊದಲೇ ಬೆಂಕಿಯ ಉಪಯೋಗಗಳನ್ನು ಗಮನಿಸಿರಲೂ ಸಾಧ್ಯ. ಈ  ಸಾಧ್ಯಸಾಧ್ಯತೆಗಳನ್ನಿಟ್ಟುಕೊಂಡು ಬೆಂಕಿ ಹಾಗೂ ಮೆದುಳನ್ನು ಕನೆಕ್ಟ್ ಮಾಡಿರುವ ಈ 'ಪ್ರಜ್ಞಾಕೋಶ'ದ ಕುರಿತು ಓದಿನೋಡಿ.


ಹಿಗ್ಗಿದ ಮೆದುಳು ಕುಗ್ಗಿದ್ದೇಕೆ? : ಹಿಂದಿನ ಲೇಖನದಲ್ಲಿ ಚಿಂಪಾಂಜಿ ಎಂತಹ ಪ್ರಭೇದದಿಂದ ವಿಕಾಸಗೊಂಡ ಮಾನವನ ಮೆದುಳು ಗಾತ್ರದಲ್ಲಿ 5 ಪಟ್ಟು ದೊಡ್ಡದಾದ ಕುರಿತಾಗಿ ಹೇಳಿದರಾದರೂ ಅದಾದ 3000 ವರ್ಷಗಳಲ್ಲಿ ಮೆದುಳಿನ ಗಾತ್ರ ಗಣನೀಯವಾಗಿ ಕುಗ್ಗಿದೆ ಎನ್ನುವುದಕ್ಕೆ ವಿಕಾಸಗೊಳ್ಳುವ ಹಾದಿಯಲ್ಲಿ ಮತ್ತೆ ಹಿಂದಕ್ಕೆ ಬಂದಂತೆ ಅಂದರೆ ಅವಿಕಾಸವಾಗುವ ವಿಚಾರವನ್ನೂ ತೆರೆದಿಡುತ್ತಾರೆ. ಮಂಗನಿಂದ ವಿಕಾಸಗೊಂಡ ನಾವು ಬಾಲ ಕಳೆದುಕೊಂಡಿದ್ದೇವೆ. ಹಾಗಾದರೆ ನಾವು ಮತ್ತೆ ಬಾಲ ಉಳಿಸಿಕೊಳ್ಳುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೂ ಉತ್ತರ ಇಲ್ಲಿದೆ ಓದಿ ನೋಡಿ.


ವಂಚನೆಯ ವಿಕಾಸ ಏಕೆ ಮತ್ತು ಹೇಗೆ? : ಕವಲುತೋಕೆ ಹಕ್ಕಿಯ ಗುಂಪಿಗೆ ಸೇರಿದ ಕೆಲವು ಪಕ್ಷಿಗಳು ಹಿಂಡುಹಿಂಡಾಗಿ ಗೂಡು ಕಟ್ಟಿಕೊಂಡು ಜೀವಿಸುತ್ತವೆ. ಒಂದು ಪಕ್ಷಿ ಯಾವುದಾದರೂ ಒಂದು ಆಹಾರದ ಜಾಡು ಹಿಡಿದು ಅಲ್ಲಿಂದ ಆಹಾರ ತರುತ್ತಿದ್ದರೆ.. ಇತರ ಪಕ್ಷಿಗಳು ಅದನ್ನು ಅನುಸರಿಸಿ ಹೋಗುತ್ತವೆ. ಈ ವಿಚಾರವನ್ನು ತೆರೆದಿಟ್ಟಾಗ ಬಂದ ಸಂದೇಹವೆಂದರೆ, ಮೊದಲು ಆಹಾರವನ್ನು ಕಂಡು ಹಿಡಿದ ಪಕ್ಷಿಗೆ ಇದರಿಂದ ಅತೀವ ಸ್ಪರ್ಧೆ ಉಂಟಾಗುತ್ತದೆ. ಅದು ಅದಕ್ಕೆ ನಷ್ಟವಲ್ಲವೇ..? ಆ ಹಕ್ಕಿ ವಂಚನೆಯ ಹಾದಿ ಹಿಡಿದರೆ..?! ವಂಚನೆಯ ವರ್ತನೆ ಈ ಪಕ್ಷಿಗಳಲಿಲ್ಲ. ಆದರೆ, ಮಾನವನಲ್ಲಿ ಹೆಚ್ಚಾಗಿರುವ ವಂಚನೆ ಮತ್ತು ಸುಳ್ಳು ಹೇಗೆ ವಿಕಾಸಗೊಂಡಿದೆ ಎನ್ನುವುದರ ಜೊತೆಗೆ ಪ್ರಾಣಿ ಪ್ರಪಂಚದಲ್ಲಿ ಕಟ್ಲರ್ ಫಿಶ್ ಗಂಡು ಮತ್ತು ಹೆಣ್ಣು ಮೀನುಗಳನ್ನು ಮೋಸಗೊಳಿಸುವ ಬಗೆಯನ್ನು ಹೇಳುತ್ತಾರೆ. ಆದರೆ ಊಸರವಳ್ಳಿಯ ಬಣ್ಣ ಬದಲಾವಣೆ ವಂಚನೆಯಲ್ಲ ಎನ್ನುವ ತರ್ಕವನ್ನು ಹೇಳುತ್ತಾರೆ. ಹಾಗಾದರೆ ಇನ್ನು ಯಾವ ಪ್ರಾಣಿಯಲ್ಲಿ ಇಂತಹ ವಿಚಿತ್ರವನ್ನು ಕಾಣಬಹುದು ಓದಿ ತಿಳಿಯಿರಿ. 


ನಾವೇಕೆ ದ್ವೇಷಿಸುತ್ತೇವೆ? : ಪ್ರೀತಿ-ಪ್ರೇಮಗಳಂತೆ ದ್ವೇಷವು ಕೂಡ ಮನುಷ್ಯನ ಉಳಿವಿಗೆ ಅವಶ್ಯಕ ಎನ್ನುತ್ತದೆ ವಿಜ್ಞಾನ. ಅಸೂಯೆ ಮತ್ತು ದ್ವೇಷ ನಮ್ಮನ್ನು ನಾವು ಹೋಲಿಸಿಕೊಳ್ಳಬಹುದಾದ ಸಮಾಜ ಅಥವಾ ಪ್ರಪಂಚಕ್ಕೆ ಮಾತ್ರವೇ ಸೀಮಿತವೇ..? ದ್ವೇಷ ಹರಡುವ ಬಗೆಯ ಜೊತೆಗೆ ದ್ವೇಷವು ಪ್ರೀತಿಯ ಇನ್ನೊಂದು ಮುಖವಾಗಿ ವಿಕಾಸಗೊಂಡಿರುವ ಪರಿಯನ್ನು ನಾವಿಲ್ಲಿ ಕಾಣಬಹುದು. ಪ್ರೀತಿಯೇ ದ್ವೇಷವಾಗಿ ವಿಕಾಸಗೊಂಡದ್ದು ಹೇಗೆ..? ಇದು ತಲೆಮಾರುಗಳಿಂದ ತಲೆಮಾರುಗಳಿಗೆ ಧಾತುಗಳ ಮೂಲಕ ಸಾಗುತ್ತದಾ..? ಅಚ್ಚರಿ ಹಾಗೂ ವಿಸ್ಮಿತಗೊಳಿಸುವ ವಿಶ್ಲೇಷಣೆ ಇಲ್ಲಿದೆ.


ಎಲ್ಲ ಮರೆತಿರುವಾಗ... ಮತ್ತೆ ಮರಳುವ ನೆನಪು : ನಮ್ಮ ಆತ್ಮೀಯರ ಸಾವು ನಮ್ಮನ್ನು ಕಾಡುತ್ತದೆ. ಆದರೆ, ಅವರ ನೆನಪು ಬೇಕು ಅವರಿಲ್ಲ ಎಂಬ ನೋವು ಬೇಡ ಎಂದು ನೆನಪುಗಳನ್ನು ಶೋಧಿಸಲು ಮನಸ್ಸಿಗೆ ಸಾಧ್ಯವಾಗದು. ನೋವು ಕೊಡುವ ನೆನಪುಗಳು ನಮಗೆ ಹಾಗೂ ನಮ್ಮ ಉಳಿವಿಗೆ ಬೇಕೇ..? ನೆನಪುಗಳು ವಿಕಾಸಗೊಂಡಿರುವುದು ನಮ್ಮ ಉಳಿವಿಗೆ ಹಾಗೂ ಕ್ಷೇಮಕ್ಕೆ ಎಂಬುದು ಎಷ್ಟು ಸರಿ. ನೆನಪು ಹಾಗೂ ಕಾಲದ ಊಹೆಯ ಪ್ರಯೋಗವನ್ನು ನಾಲ್ಕು ಗುಂಪಿನ ಮೂಲಕ ಮಾಡಿರುವ ಪ್ರಯೋಗವನ್ನು ಸಹ ಇಲ್ಲಿ ಕಾಣಬಹುದು.


ಪ್ರಜ್ಞೆ 'ನಿನ್ನ ಸೊತ್ತಲ್ಲ' ಎಂದ ಇರುವೆಗಳು : ಇಡೀ ಜೀವ ಜಗತ್ತಿನಲ್ಲಿ ಬುದ್ಧಿವಂತ ಪ್ರಜ್ಞಾವಂತ ಎನಿಸಿಕೊಂಡ ಮನುಷ್ಯ ಚಿಟ್ಟೆ, ದುಂಬಿ, ಇರುವೆ ಮುಂತಾದ ಕ್ಷುದ್ರ ಪ್ರಾಣಿಗಳನ್ನು ಅರಿವು ಮೂಡಲಾರದ ಜೀವಿಗಳಂತೆ ಕಂಡ. ಆದರೆ, ಆ ಪ್ರಾಣಿಪ್ರಜ್ಞೆ ಹೇಗಿರುತ್ತದೆ ಎನ್ನುವುದನ್ನು ನಾವಿಲ್ಲಿ ಇರುವೆಗಳು, ಅವುಗಳ ವಾಸನಾ ಗ್ರಹಿಕೆಯ ಹಾಗೂ ಸಂದೇಶ ತಿಳಿಸುವ ನಡೆಯ ಮೂಲಕ ಕಾಣಬಹುದು.


ಅರಮನೆಯೇ ಸೆರೆಮನೆಯಾಗುವ ಪರಿ : ನಮ್ಮ ಹವ್ಯಾಸ ಅಥವಾ ಆಸಕ್ತಿಯ ಕ್ಷೇತ್ರ ಅಥವಾ ಅದಮ್ಯ ಗುರಿಯ ಕಡೆಗೆ ನಡೆಯುತ್ತಾ.. ನಮ್ಮಗರಿವಿಲ್ಲದಂತೆಯೇ ನಾವೆಲ್ಲರೂ ನಮ್ಮದೇ ಅದೃಶ್ಯ ಸೆರೆಮನೆಗಳನ್ನು ಕಟ್ಟಿಕೊಂಡು ಹೊರ ಜಗತ್ತಿಗೆ ತೆರೆದುಕೊಳ್ಳದೆಯೇ ಮರೆಯಾಗಿ ಬಿಡುತ್ತೇವೆ ಎಂಬುದು ಲೇಖಕರ ವಾದ. ಅದನ್ನು ಸೆರೆಮನೆ ಎಂದು ಹೇಳುವ ಬದಲು ಧ್ಯೇಯದತ್ತ ಸಾಗುವ ಸಾಧಕ ಪಯಣ ಎಂದೇಕೆ ಪರಿಗಣಿಸಬಾರದು ಎನ್ನುವ ಅವರ ಮಗಳ ಪ್ರಶ್ನೆ ಚರ್ಚಾ ರೂಪದಲ್ಲಿ ಸಾಗುವ ಪರಿ ಇಲ್ಲಿದೆ.


ಹಸಿರು, ಮನೆ, ಮನ : ನಾವು ಪ್ರಕೃತಿಯ ಸಾಂಗತ್ಯದಿಂದ ದೂರವಾದಂತೆ ನಮಗರಿವಿಲ್ಲದೆಯೇ ಹಲವು ರೀತಿಯ ಅನಾರೋಗ್ಯಗಳಿಗೆ ತುತ್ತಾಗುವುದರ ಜೊತೆಗೆ ನೆಮ್ಮದಿಯನ್ನು ಕಳೆದುಕೊಳ್ಳುವ ಸಂಭವದ ಕುರಿತು ಎಚ್ಚರಿಸುತ್ತಿದ್ದಾರೆ. ಹಸಿರು ನಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿಯ ಪರಿಣಾಮವನ್ನುಂಟು ಮಾಡುತ್ತದೆ, ಆರೋಗ್ಯ, ಮನ-ಮನೆಗಳ ಕೊಂಡಿಯ ಜೊತೆಗೆ ಕುವೆಂಪು ಅವರ ರಾಮಾಯಣ ದರ್ಶನಂ ಹಾಗೂ ರಾಮಾಯಣ ಕಾಲದ ಉದಾಹರಣೆಗಳನ್ನು ಇಲ್ಲಿ ಕಾಣಬಹುದು.


ನಮ್ಮ ಬದುಕಿಗೆ ಕೃತಕತೆ ತಂದ ಸಮಾಜ 'ಪ್ರಜ್ಞೆ' : ಪ್ರಾಣಿಗಳಿಗೇಕೆ ಪ್ರತ್ಯೇಕವಾದ ಸ್ನಾನದ ಮನೆಗಳಿಲ್ಲ..? ಪ್ರಾಣಿಗಳಿಗೆ ಮೈ ಮುಚ್ಚಿಕೊಳ್ಳುವುದಿಲ್ಲ ಎಂಬ ಪ್ರಶ್ನೆಗಳು ನಮ್ಮಲ್ಲೂ ಒಂದು ಬಾರಿ ಮೂಡಿವೆಯಲ್ಲವೇ..?! ಇಂತಹ ಪ್ರಶ್ನೆಗಳ ಪಟ್ಟಿಯೇ ಮೂಡಿರಬಹುದು. ಮನುಷ್ಯ ವಿಕಾಸವಾಗುತ್ತಾ ಹೋದಂತೆ ನಗು, ಭಾವ ಪ್ರದರ್ಶನ, ನಾಚಿಕೆ, ಮರ್ಯಾದೆ ಹೀಗೆ ಒಂದೊಂದಾಗಿ ಜೊತೆಯಾಗುತ್ತಾ ಹೋದವು. ಇದು ಸಮಾಜಕಷ್ಟೇ ಸೀಮಿತವೇ..? ನಾವು ಒಬ್ಬರೇ ಇರುವಾಗಿನ ನಿರಾಳ ಸ್ಥಿತಿ, ಸಮಾಜ ಹಾಗೂ ಜನರೊಡನೆ ಬೆರೆಯುವಾಗ ಇರುವ ನಡೆಗೂ ವ್ಯತ್ಯಾಸವಿರುತ್ತದೆಯಲ್ಲವೇ..? ಇದರ ಆಧಾರಿತ ಲೇಖನವಿದು.


'ಜೀವ'ಕ್ಕೇಕೆ ಈ ಸ್ಪಂದನ : ನಾವು ಮಾನವ ಜೀವಕ್ಕೆ ಮರುಗುವಷ್ಟು ತೀಕ್ಷ್ಣವಾಗಿ ಇತರೆ ಪ್ರಾಣಿಗಳ ಜೀವಗಳಿಗೆ ಮರುಗುವುದಿಲ್ಲವೇಕೆ..? ಬೇರೆ ಪ್ರಾಣಿಗಳಿಗೂ ಇದೇ ಭಾವವಿದೆಯಾ..? ಹಲವು ಆಯಾಮಗಳಿಂದ ಚರ್ಚಿತವಾಗಿದೆ.


ನಮ್ಮ ನಿಮ್ಮೊಳಗಿನ ರಾವಣ : ರಾಮಾಯಣ ದರ್ಶನಂನಲ್ಲಿ ರಾವಣನ ಆತ್ಮ ಶ್ರೀರಾಮನ ಆತ್ಮದೊಳಗೆ ಮೋಕ್ಷ ಪಡೆಯುವ ಪ್ರಸಂಗವನ್ನು ಹೇಳುತ್ತಾ.. ಸಂಶೋಧನಾ ಪ್ರಬಂಧವೊಂದರ ತಿರುಳನ್ನು ಹೇಳುತ್ತಾರೆ. ಲಕ್ಷಾಂತರ ವರ್ಷಗಳಿಂದ ಮಾನವನನ್ನು ರಾವಣನಂತೆ ಕಾಡಿದ ಸಾವಿರಾರು ವೈರಾಣುಗಳ ಪ್ರಮುಖ ಧಾತುಗಳು ವಿಕಾಸದ ಹಾದಿಯಲ್ಲಿ ನಮ್ಮದೇ ಧಾತುಗಳೊಂದಿಗೆ ಲೀನವಾಗಿ ನಮ್ಮೊಂದಿಗೆ ಬದುಕಿ ಬಾಳುತ್ತಿವೆ ಎಂಬ ಸತ್ಯವನ್ನು ತೆರೆದಿಡುತ್ತಾರೆ. ಸಂಶೋಧನೆಯ ಆಂತರ್ಯವನ್ನು ಕೋವಿಡ್ ಹಾಗೂ ಇತರ ವೈರಸ್ ಗಳ ಮೂಲಕ ಪ್ರಸ್ತುತಪಡಿಸಿದ್ದಾರೆ.


ಸುಖದ ಬೇಟೆ ಕೊಡುವ ದುಃಖ : ಸುಖ ಹುಡುಕುವುದರಲ್ಲಿ ಯಾವ ತಪ್ಪೂ ಇಲ್ಲ. ಒಂದೇ ತೊಂದರೆ. ಅದು ಸಿಕ್ಕಿದಾಗ ನಮ್ಮ ಗಮನಕ್ಕೆ ಬರುವುದಿಲ್ಲ. ಇದಕ್ಕೆ ಪರಿಹಾರವೇನು..? ಅದನ್ನು ಹೇಗೆ ತಿಳಿದುಕೊಳ್ಳಬಹುದು..? ಮಾನವನ ಮನಸ್ಸಿನ ಚಂಚಲತೆ ಹಾಗೂ ಸುಖದ ಸ್ಥಿತಿಯ ನಡುವಿನ ಸಂಬಂಧದ ಅಧ್ಯಯನವೂ ಇಲ್ಲಿದೆ.


ಡಾರ್ವಿನ್ ವಾದಕ್ಕೆ ಸವಾಲಾದ ಸಮ್ಮೋಹನ : ಯಾವುದೇ ವರ್ತನೆ ಪುನರಾಭಿವೃದ್ಧಿಗೆ ಸಹಕಾರಿಯಾಗಿದ್ದರೆ ಮಾತ್ರವೇ ವಿಕಾಸಗೊಳ್ಳುತ್ತದೆ ಎನ್ನುವುದು ಡಾರ್ವಿನ್ ಸಿದ್ದಾಂತದ ಪ್ರತಿಪಾದನೆ. ಸಲಿಂಗ ಕಾಮ ಸ್ವಾಭಾವಿಕವೇ..? ತಮ್ಮ ಪುನರಾಭಿವೃದ್ಧಿಯನ್ನೇ ತ್ಯಾಗ ಮಾಡಿ ಸೋದರಿಯನ್ನು ಸಾಕುವ ಬಂಜೆ ಜೇನುನೊಣಗಳಂತೆ ಸಲಿಂಗ ಕಾಮ ಸಮಾಜದ ಒಳಿತಿಗಾಗಿಯೇ ವಿಕಾಸಗೊಂಡಿರುವ ತ್ಯಾಗ ವರ್ತನೆ ಎನ್ನುವ ವಾದ ಎಷ್ಟು ಸಮಂಜಸ. ಈ ಕುರಿತ ವಾದ-ಪ್ರತಿವಾದಗಳು ಇಲ್ಲಿವೆ.


ನಾನು ಎಂಬ ನಂಬಿಕೆ : ನಾನು ಎಂಬುದಕ್ಕೆ ಅದೆಷ್ಟು ರೂಪಗಳು..! ಕೆಲವರಿಗೆ ಭಾವಚಿತ್ರ, ಕೆಲವರಿಗೆ ಬೆರಳಚ್ಚು, ಕೆಲವೊಮ್ಮೆ ನಮ್ಮ ಯೋಚನೆಗಳು. ಹಾಗಾದರೆ ನಾನು ಎಂಬ ಭಾವ ನಿಜಕ್ಕೂ ನಂಬಿಕೆ ಮಾತ್ರವಾ..? ಹಲವು ಆಯಾಮಗಳ ನೋಟ ಇಲ್ಲಿದೆ.


ರಣಮೇಘದ ಕಣ್ಣೀರು : ಇರಾನಿನ ಪರ್ವತ ಪ್ರದೇಶದ ಅಂತರಾಳದಲ್ಲಿ ಹುದುಗಿದ್ದ ಅಣುಸ್ಥಾವರಗಳ ಮೇಲೆ ನಡೆಯುತ್ತಿದ್ದ ಬಾಂಬ್ ದಾಳಿ ಇರಾನಿನಿಂದ ಸುಮಾರು 3000 ಕಿಲೋಮೀಟರ್ ದೂರದಲ್ಲಿರುವ ಜರ್ಮನಿಯ ಒಂದು ಸಣ್ಣ ಪಟ್ಟಣದ ವಿಜ್ಞಾನ ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿಯನ್ನು ಹೊಕ್ಕ.. ಆಲೋಚನೆಗೆ ಹಚ್ಚುವ ಪ್ರಸಂಗ ಇಲ್ಲಿದೆ. ಈ ಪ್ರಸಂಗದ ಕುರಿತು ಹೆಚ್ಚು ತೆರೆಡಿಡಲಾರೆ. ಲೇಖಕರಿಗೆ ಪಾಪಪ್ರಜ್ಞೆ ಕಾಡಿದ ಗಾಢವಾದ ಕ್ಷಣಗಳು ಇಲ್ಲಿವೆ. 


ಕಡಿವಾಣವಿಲ್ಲದ ಕುದುರೆಯಂತಹ ಮನಸ್ಸು ಹಾಗೂ ಅದರ ಆಲೋಚನೆಗಳು ವಿಸ್ತಾರ ಹಾಗೂ ವಿಭಿನ್ನ. ಇದನ್ನು ಜೀವ ವಿಕಾಸದ ಹಿನ್ನೆಲೆಯಲ್ಲಿ, ಸಂಶೋಧನೆಗಳು ಹಾಗೂ ತರ್ಕಗಳ ಮೂಲಕ ಕಟ್ಟಿಕೊಟ್ಟಿರುವ ಸತ್ವಯುತ ಲೇಖನಗಳ ಸಂಗ್ರಹ ಇಲ್ಲಿದೆ. ವಿಜ್ಞಾನ ಮತ್ತು ಮನೋವೈಜ್ಞಾನಿಕ ವಿಷಯದ ಆಸಕ್ತರು ತಪ್ಪದೇ ಓದಿ ನೋಡಿ.


~ ವಿಭಾ ವಿಶ್ವನಾಥ್