ಶನಿವಾರ, ಮೇ 16, 2026

ಗೆಲುವಿನ ಮುನ್ನಡೆ (ಬೆಳಕಿಂಡಿಯ ಕತೆಗಳು - 20)


"ಕಂದಾ, ನೀನು ಆಡುವಾಗ ನಿನ್ನ ಆಟದ ಮೇಲೆ ಮಾತ್ರ ಗಮನ ಹರಿಸು. ಆಗಷ್ಟೇ ನೀನು ಗೆಲುವಿನ ಹಾದಿಯತ್ತ ಸಾಗಬಹುದು. " ಎಂದು ಹೇಳಿದ್ದ ತಾಯಿಯ ಮಾತು ನವೋದಯ ಬಾಲ್ ಬ್ಯಾಡ್ಮಿಂಟನ್ ತಾರೆ ಶಿಖಾಳಿಗೆ ನೆನಪಾಗತೊಡಗಿತು. 


ಆದರೂ, ಅವಳ ಮುಂದಿದ್ದದ್ದು ಈಗಾಗಲೇ ಗೆಲುವು ಸಾಧಿಸಿ ಗೆಲುವಿನ ಉತ್ತುಂಗದಲ್ಲಿ ತೇಲುತ್ತಿದ್ದ ಬ್ಯಾಡ್ಮಿಂಟನ್ ತಾರೆ ದಿಯಾ. ಇಬ್ಬರ ಆಟವೂ ಶುರುವಾಯಿತು. ಶಿಖಾ ಮೊದಲು ನರ್ವಸ್ ಆದುದರಿಂದ ದಿಯಾ ಆ ಸೆಟ್ ನಲ್ಲಿ ಮುನ್ನಡೆದಳು. ದಿಯಾಳಿಗೆ ಆ ಸೆಟ್ ಸರಾಗವಾದರೂ ಮುಂದಿನ ಸೆಟ್ ನಲ್ಲಿ ಗೆದ್ದದ್ದು ಶಿಖಾ. 3-7 ರಿಂದ ಮುನ್ನಡೆ ಸಾಧಿಸಿದ್ದಳು. ಕಡೆಯ ಸೆಟ್ ನಲ್ಲಿಯೂ ಕೂದಲೆಳೆಯ ಅಂತರದಲ್ಲಿ 5-6 ರಿಂದ ಗೆಲುವು ಸಾಧಿಸಿ ಗೆದ್ದಿದ್ದಳು ಶಿಖಾ.


ಅವಳ ಈ ಗೆಲುವಿನ ಗುಟ್ಟಿನ ಕುರಿತು ಎಲ್ಲರಿಗೂ ಹೇಳುವಾಗ ಹೇಳಿದ್ದು "ಎದುರಾಳಿಯ ಕುರಿತು ಗಮನ ನೀಡುವುದಕ್ಕಿಂತ ನಮ್ಮ ಕುರಿತು ಗಮನ ನೀಡಿದರೆ ಗೆಲುವಿನತ್ತ ಮುನ್ನಡೆಯಬಹುದು. ಆಟದಲ್ಲಿಯೂ.. ಬದುಕಲ್ಲಿಯೂ" ಎಂದಾಗ ಸಿಕ್ಕ ಚಪ್ಪಾಳೆ ಮುಗಿಲು ಮುಟ್ಟಿತ್ತು.


~ವಿಭಾ ವಿಶ್ವನಾಥ್

ಹೊಸ ಪ್ರಪಂಚ (ಬೆಳಕಿಂಡಿಯ ಕತೆಗಳು - 19)


ಶಾಲೆ ಎಂಬುದು ವಿದ್ಯಾಲಯವಾದರೂ ಸರಸ್ವತಿ ಕೊಠಡಿಗಳಲ್ಲಿ ಮಾತ್ರ ನೆಲೆಸಿರುವುದಿಲ್ಲ. ವಿದ್ಯೆ ಕೂಡಾ ಬರೀ ನಾಲ್ಕು ಕೊಠಡಿಗಳ ಮಧ್ಯದಲ್ಲಿ ಮಾತ್ರ ದೊರೆಯುವುದಿಲ್ಲ ಎಂಬುದು ಅರಿವಾಗಲು ಆ ದಿನವೇ ಬರಬೇಕಾಯ್ತು.


ಅವತ್ತು ಬಂಗಾರಿ ಶಾಲೆಗೆ ಹೊರಟ ಮೊದಲ ದಿನ. ಆಕೆಯನ್ನು ಬಿಡಲು ಹೊರಡುವ ಹಿಂದಿನ ದಿನದಿಂದಲೇ ತಳಮಳ. ಹೇಗೋ ಏನೋ ಎಂಬ ಅಳುಕು.. ಹೊಂದಿಕೊಳ್ಳುವಳೋ ಇಲ್ಲವೋ ಎಂಬ ಆತಂಕ. ಅದನ್ನೆಲ್ಲಾ ಸುಳ್ಳು ಮಾಡುವ ಹಾಗೆ ಅವಳು ಶಾಲೆಗೆ ಹೋಗತೊಡಗಿದಳು. ಒಂದೆರಡು ದಿನ ಮೊದಮೊದಲಿಗೆ ಅತ್ತರೂ ನಂತರದಲ್ಲಿ ಇಷ್ಟಪಟ್ಟೆ ಹೋಗತೊಡಗಿದಳು.


ನಾನೇ ಪ್ರಪಂಚವಾಗಿದ್ದ ಅವಳಿಗೆ ಹೊಸ ಪ್ರಪಂಚ ದೊರೆತಿತ್ತು. ನನ್ನ ಕೈ ಬಿಡಿಸಿಕೊಂಡು ಸ್ನೇಹಿತರೊಡನೆ ಸೇರಲು ತವಕದಿಂದ ತಿರುಗಿಯೂ ನೋಡದೆ ಆಕೆ ಅತ್ತ ಹೋಗುತ್ತಿದ್ದರೆ ನನಗೆ ಜ್ಞಾನೋದಯವಾಗತೊಡಗಿತ್ತು. ಮಕ್ಕಳಿಗೆ ಪೋಷಕರೇ ಪ್ರಪಂಚವಲ್ಲ.. ಹೊಸ ಪ್ರಪಂಚವೇ ಅವರಿಗಾಗಿ ಕಾಯುತ್ತಿದೆ. ಅವರೂ ಅದನ್ನು ಸೃಷ್ಟಿಸಿಕೊಳ್ಳಲು ಕಾತುರರಾಗಿದ್ದಾರೆ ಎಂದು.


~ವಿಭಾ ವಿಶ್ವನಾಥ್

ಆತ್ಮಹತ್ಯೆ ಅನಿವಾರ್ಯವಾಗಬಾರದು (ಬೆಳಕಿಂಡಿಯ ಕತೆಗಳು - 18)


ಆ ದಾರಿಯಲ್ಲೆಲ್ಲಾ ನಾನು ಓಡಾಡುವಾಗ ಅದ್ಯಾಕೋ ಅಪ್ರಯತ್ನವಾಗಿ ಕಣ್ಣು ಆ ಕಡೆ ಸೆಳೆದುಬಿಡುತ್ತದೆ. ಅದು ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳ. ಅದೇ ಸೇತುವೆಯ ಮೇಲೆ ನಿಂತಿದ್ದನ್ನು ಕಂಡಿದ್ದವರು ಯಾರೋ ಹೇಳಿದ್ದರು.. ಮಾಣಿ ಅಲ್ಲಿ ನಿಂತಿದ್ದ ಎಂದು. ಸಾಕ್ಷಿಗಾಗಿ ಅವನ ಚಪ್ಪಲಿ, ಮೊಬೈಲ್ , ಪತ್ರ ಎಲ್ಲವೂ ಸಿಕ್ಕಿದ್ದವು. 


ಅವನ ಬಿಸಿನೆಸ್ ಅವನ ಕೈ ಹಿಡಿಯದೆ ನಷ್ಟವಾಗಿತ್ತಂತೆ. ಸಾಲ ಕೂಡಾ ಮಾಡಿದ್ದ. ಅಪ್ಪನೂ ಬದಲಿ ಹೇಳದೆ ಧೈರ್ಯ ತುಂಬಿದ್ದರು. ಎಲ್ಲರಿಗೂ ಕಾಲ ಬರುತ್ತದೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಎಂದಿದ್ದರು. ಇದ್ದಕ್ಕಿದ್ದ ಹಾಗೆ ಆ ವಾರದ ಕೊನೆಯಲ್ಲಿ ಬಂದು ಎಲ್ಲರೊಡನೆ ಖುಷಿಯಾಗಿದ್ದವನನ್ನು ಕಂಡು ಎಲ್ಲವೂ ಸರಿಯಾಯಿತೆಂದುಕೊಳ್ಳುವಷ್ಟರಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ.


ಪ್ರತಿ ಸೋಲಿಗೂ ಉತ್ತರವಾಗಿ ಗೆಲ್ಲುವ ಛಲ ಅನಿವಾರ್ಯವಾಗಬೇಕೋ ಬದಲಿಗೆ ಹೇಡಿತನವಲ್ಲ. ಬದುಕಿಗೆ ಸವಾಲಾಗಿ ನಿಲ್ಲುವುದು ಅನಿವಾರ್ಯವಾಗಬೇಕೋ ಹೊರತು ಬೆನ್ನು ತೋರಿಸಿ ಓಡುವುದಲ್ಲ. ಸಾಧನೆ ಅನಿವಾರ್ಯವಾಗಬೇಕೋ ಹೊರತು ಆತ್ಮಹತ್ಯೆಯಲ್ಲ. ಇದನ್ನು ಪ್ರತಿ ಬಾರಿ ನಿಂತು ಸಾರಿ ಸಾರಿ ಹೇಳಬೇಕೆನ್ನಿಸುತ್ತದೆ.


~ವಿಭಾ ವಿಶ್ವನಾಥ್

ಕತ್ತಲಲ್ಲಿ ಕಂಡ ಮಿಂಚು (ಪುಸ್ತಕ ಯಾನ - 447)


ಪುಸ್ತಕದ ಶೀರ್ಷಿಕೆ : ಕತ್ತಲಲ್ಲಿ ಕಂಡ ಮಿಂಚು 

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 1978

ಮರು ಮುದ್ರಣ : 2024


ಕತ್ತಲಲ್ಲಿ ಕಂಡ ಮಿಂಚು ಕಾದಂಬರಿಯಲ್ಲಿ ಅಂಗವಿಕಲೆಯಾದ ಹುಡುಗಿಯೊಬ್ಬಳು ತನ್ನ ಮನೆಯವರಿಂದಲೇ ತಾತ್ಸಾರಕ್ಕೊಳಗಾದರೂ.. ಆಕೆ ಅಂಗವಿಕಲೆ ಎಂಬ ಕಾರಣಕ್ಕೆ ಸರಿಯಾದ ಪ್ರೀತಿ ಪಡೆಯದಿದ್ದರೂ.. ತನ್ನವರನ್ನು ಕಡೆಗಣಿಸದೆ, ತಾನೂ ಸೋಲದೆ, ಅವರನ್ನು ಗೆಲ್ಲಿಸಿ ಬದುಕಿನಲ್ಲಿ ಹೀಗಿರಬೇಕು ಎಂದು ಮಾದರಿಯಾದ ಕಾದಂಬರಿಯ ಕಥಾವಸ್ತು ಇಷ್ಟವಾಯಿತು. 


ಸುಭದ್ರಮ್ಮ ಹಾಗೂ ಸುಬ್ಬರಾಯರ ನಾಲ್ವರು ಮಕ್ಕಳಲ್ಲಿ ಹೇಮ ಹಿರಿಯವಳು. ಎರಡನೆಯವಳು ಸೀಮ. ಇನ್ನಿಬ್ಬರು ತಮ್ಮಂದಿರು ಉಮೇಶ ಹಾಗೂ ರಮೇಶ. ಹೇಮ ಕಾಲು ಎಳೆದು ಹಾಕುತ್ತಿದ್ದ ಕುಂಟೆಯಾದರೂ.. ಯಾರಿಗೂ ಹೊರೆಯಾಗದೆ, ಫ್ಯಾಕ್ಟರಿಗೆ ಸೇರಿ ಐದು ವರ್ಷದಿಂದ ದುಡಿಯುತ್ತಾ.. ಅಲ್ಲಿನ ಪರೀಕ್ಷೆಗಳನ್ನು ಪಾಸು ಮಾಡಿಕೊಂಡು ಮುಂದಿನ ಸ್ಥಾನಕ್ಕೇರುತ್ತಾ ತಂದೆಯಷ್ಟೇ ಮನೆಯ ಖರ್ಚನ್ನು ತಾನೂ ಮನೆಗೆ ನೀಡುತ್ತಾ.. ಆರು ಜನರ ಸಂಸಾರವನ್ನು ನಿಭಾಯಿಸುವ ಜವಾಬ್ದಾರಿ ಹೊತ್ತಿದ್ದರೂ ಮನೆಯಲ್ಲಿ ಎಲ್ಲರಿಗೂ ಆಕೆ ಎಂದರೆ ತಾತ್ಸಾರ. 


ಕೆಲವೊಮ್ಮೆ ಮನೆಯವರೇ ತಾತ್ಸಾರ ಮಾಡಿದರೂ ದೇವರಂತಹ ನೆರೆಹೊರೆಯವರು ಸಮಯಕ್ಕೊದಗುತ್ತಾರೆ. ಹೀಗೆ ಪಕ್ಕದ ಮನೆಯ ಕಾಮಾಕ್ಷಿಗೆ ಹೇಮಳೆಂದರೆ ಅಪರಿಮಿತ ವಾತ್ಸಲ್ಯ. ಆರು ಮಕ್ಕಳ ತಾಯಿಯಾದರೂ ಈಕೆಯನ್ನು ಮಗಳಂತೆಯೇ ಭಾವಿಸಿದ್ದರು. ಹಣವಿಲ್ಲದೆ ಟೈಲರಿಂಗ್ ಕಲಿಸಿ, ಟೈಪರೇಟಿಂಗ್ ಗೂ ಸೇರಿಸಿ, ತಾವು ಮನೆ ಬದಲಿಸುವಾಗ ತಮ್ಮ ಬಳಿಯಿದ್ದ ಒಂದು ಹೊಲಿಗೆಯ ಮಷೀನ್ ಅನ್ನು ಸಹ ಕೊಟ್ಟು ಹೋಗಿದ್ದರು. ಹೇಮ ಕೂಡ ಅವರಿಗೆ ಅಷ್ಟೇ ಸಹಕಾರ ನೀಡುತ್ತ ಅವರ ಕೆಲಸದಲ್ಲಿ ಸಹಾಯಕಳಾಗಿದ್ದಳು. ಕಾಮಾಕ್ಷಿಯ ಮನೆಕೆಲಸಕ್ಕೂ ಸಹಕಾರ ನೀಡುತ್ತಾ.. ಆಕೆಯ ಬಲಗೈಯಂತಿದ್ದಳು. ಕಾಮಾಕ್ಷಿಯ ಗಂಡನ ದೆಸೆಯಿಂದಲೇ ಅವರ ಫ್ಯಾಕ್ಟರಿಯಲ್ಲಿಯೇ ಟೈಪರೈಟಿಂಗ್ ಕಲಿತಿದ್ದವಳು ಕೆಲಸಕ್ಕೆ ಸೇರಿ ಮುಂದುವರೆದದ್ದು. ಕಾಮಾಕ್ಷಿಯ ಸಹಾಯವನ್ನು ಹೇಮ ಎಂದಿಗೂ ಮರೆಯುವಂತಿರಲಿಲ್ಲ. 


ಹೇಮಳಿಗೆ ವಿವಾಹ ಕೂಡಿಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಾಲ್ಕು ವರ್ಷದಲ್ಲಿ ನೂರಾದರೂ ವರ ಪರೀಕ್ಷೆ ಎದುರಿಸಿದ್ದಳು. ದಲ್ಲಾಳಿ ಶಾಮಾ ಜೋಯಿಸರಿಗೆ ತಾನೇ ಹಣ ಕೊಟ್ಟು ವಧು ಪರೀಕ್ಷೆ ಎದುರಿಸುತ್ತಿದ್ದಳಾದರೂ .. ಮುಕ್ಕಾಲುವಾಸಿ ನಿರಾಸೆ ತರುವಂತಹ ವರಗಳೇ.. ಇನ್ನುಳಿದವರು ಅವಳನ್ನು ತಿರಸ್ಕರಿಸುತ್ತಿದ್ದವರು. 


ಹೇಮಳ ವಿವಾಹವಾಗದೆ ಸೀಮಳ ವಿವಾಹವಾಗುವಂತಿರಲಿಲ್ಲ. ಹೀಗಾಗಿ ಅವಳಿಗೆ ಅಸಹನೆ. ಮನೆಯ ಎಲ್ಲಾ ಕೆಲಸವನ್ನು ಹೇಮಳೇ ಮಾಡುತ್ತಿದ್ದರೂ ಸೀಮ ರಾಣಿಯಂತೆ ಸುಮ್ಮನಿರುತ್ತಿದ್ದಳು. ಅವಳ ಸೌಂದರ್ಯ ಹಾಗೂ ತಾಯಿಯ ಮುದ್ದು, ಅಹಂಕಾರ ಅವಳನ್ನು ಹಾಗೆ ನಡೆದುಕೊಳ್ಳುವಂತೆ ಮಾಡುತ್ತಿತ್ತು.


ಹೀಗಿದ್ದ ಹೇಮಳ ಬದುಕಲ್ಲಿಯು ಒಂದು ತಿರುವು ಬರುತ್ತವೆ. ಹೇಮ ತನ್ನ ಮನೆ ಬಿಟ್ಟು ತನ್ನ ಸಹೋದ್ಯೋಗಿ ಹಾಗೂ ಆಪ್ತ ಗೆಳತಿಯಾಗಿದ್ದ ಸುಶೀಲಳ ಮನೆಯ ಬಾಡಿಗೆ ಕೋಣೆ ಹಿಡಿಯುತ್ತಾಳೆ. ಸುಶೀಲ ಹಾಗೂ ಚಂದ್ರು ದಂಪತಿಗಳು ಆಕೆಯನ್ನು ಬೇರೆಯವರಂತೆ ಭಾವಿಸದೆ, ಸ್ವಂತ ತಂಗಿಯಂತೆಯೇ ನೋಡಿಕೊಳ್ಳುತ್ತಾರೆ. ಸುಶೀಲಳ ಅಡುಗೆ ಕೆಲಸ ಹಾಗೂ ಮಗುವಿನ ಪೋಷಣೆಯಲ್ಲಿಯೂ ಸಹಾಯ ಮಾಡುತ್ತಾಳೆ ಹೇಮ. ಅಷ್ಟಕ್ಕೂ ಆಕೆ ಮನೆ ಬಿಟ್ಟು ಹೋಗುವಂತಹ ಪ್ರಸಂಗ ಏನಾಗಿತ್ತು..? ಮನಸ್ಸು ಕಹಿಯಾಗಿ ಅಷ್ಟು ಕಠಿಣ ನಿರ್ಧಾರ ತೆಗೆದುಕೊಂಡ ಹೇಮಳ ನಿರ್ಧಾರ ಸರಿಯೇ..? ಓದಿ ನೋಡಿ.


ಚಂದ್ರುವಿನ ಮನೆಗೆ ಬಂದ ರಾಜೇಶ ಹೇಮಳಿಗೆ ಪರಿಚಯವಾದ ಸಂದರ್ಭ ಯಾವುದು..? ಹೇಮ ಕುಂಟಿ ಎಂದು ತಿಳಿಯದೆ.. ಆಕೆಯ ಕೈ ರುಚಿ, ಜೊತೆಗೆ ಕಪ್ಪಿದ್ದರೂ ಲಕ್ಷಣವಾದ ರೂಪಕ್ಕೆ ಮನಸೋತದ್ದು ಮಾತ್ರವಲ್ಲದೆ ಆಕೆಯ ಮನಸ್ಸಿನಲ್ಲಿಯೂ ತನ್ನ ಕುರಿತಾಗಿ ಒಳ್ಳೆಯ ಭಾವನೆ ಬರುವಂತೆ ಮಾಡುವುದರ ಜೊತೆಗೆ ಪ್ರೇಮವನ್ನು ಹುಟ್ಟು ಹಾಕುವುದರಲ್ಲಿಯೂ ಸಫಲವಾದವನು ಅಷ್ಟೇ ಬೇಗ ಅವಳಿಂದ ದೂರವೂ ಆಗುತ್ತಾನೆ. ಆದರೆ, ಈ ಕಥೆ ಅಷ್ಟಕ್ಕೆ ಮುಗಿಯುವುದಿಲ್ಲ. ಮುಂದೊಂದು ದಿನ ಇದೇ ರಾಜೇಶ ಸೀಮಳನ್ನು ಪ್ರೇಮಿಸಿ ಅವರ ಮನೆಗೆ ಬಂದು ಹೇಮಳ ಎದುರಿಗೆ ನಿಂತಾಗ ಹೇಮಳ ಪ್ರತಿಕ್ರಿಯೆ ಏನಿತ್ತು..? ಓದಿ ನೋಡಿ. 


ಎಲ್ಲರೂ ರಾಜೇಶನಂತಿರುವುದಿಲ್ಲ. ಅಂತೆಯೇ ಎಲ್ಲರೂ ಕಾಮಾಕ್ಷಿ ಹಾಗೂ ಸುಶೀಲ ದಂಪತಿಗಳಂತೆಯೂ ಇರುವುದಿಲ್ಲ. ಬದುಕಿನಲ್ಲಿ ಎರಡೂ ರೀತಿಯ ಜನರನ್ನು ನೋಡುವ ಸಂದರ್ಭ ಬರುತ್ತದೆ. 


ಹೇಮಳಿಗೆ ಚಂದ್ರುವಿನ ಬಾಲ್ಯದ ಗೆಳೆಯ ಮಂಜುನಾಥನ ಮುಖಾಮುಖಿಯಾದದ್ದು ಚಂದ್ರು ಹಾಗೂ ಸುಶೀಲ ಮನೆಯಲ್ಲಿ ಇಲ್ಲದಿದ್ದಾಗ. ಅವರಿಬ್ಬರ ಮೊದಲ ಭೇಟಿ ಹಾಗೂ ಮೊದಲ ನೋಟ ಯಾವ ರೀತಿ ಇತ್ತು..?


ಪ್ರೇಮವೆಂದರೆ ಅದು ತಪ್ಪಾಗಬಹುದು. ಏಕೆಂದರೆ, ಅಲ್ಲಿದ್ದದ್ದು ಸರಳತೆ ಹಾಗೂ ಪ್ರಾಮಾಣಿಕತೆ. ಮಂಜುನಾಥನೂ ನೊಂದ ಜೀವ. ತಾನು ಕೆಲಸಕ್ಕಿಂತ ಹೋಟೆಲ್ ಹಾಗೂ ಸ್ವಂತ ತಂದೆಯಿಂದಲೇ ಮೋಸಕ್ಕೊಳಗಾಗಿ ಊರು ಬಿಟ್ಟು ಬಂದಿದ್ದವನು. ಸುಬ್ರಾಯ ಅಡಿಗರ ಎಂಟು ಜನ ಮಕ್ಕಳಲ್ಲಿ ಮೊದಲಿಗನಾಗಿ ಬಡ ಕುಟುಂಬವನ್ನು ತಹಬದಿಗೆ ತಂದವನು, ಓದಿನಲ್ಲಿ ಚಾಣಾಕ್ಷನಾಗಿದ್ದರೂ.. ಮುಂದೆ ಓದಿಸಿರಲಿಲ್ಲ. ಸರ್ಕಾರಿ ಕೆಲಸ ಸಿಗುವಂತಿರಲಿಲ್ಲ. ಹೋಟೆಲ್ ನಲ್ಲಿ ಅಡುಗೆ ಕೆಲಸಕ್ಕೆ ಇದ್ದವನು. ಈಗ ಅಲ್ಲಿಯೂ ಕೆಲಸ ಕಳೆದುಕೊಂಡಿದ್ದ. ಅಷ್ಟಕ್ಕೂ ಅಲ್ಲಿಂದ ಹೊರಟು ಬಂದದ್ದು ಏಕೆ..? 


ಹತ್ತು ಸಾವಿರ ಸಿಕ್ಕರೆ ಇಪ್ಪತ್ತು ಸಾವಿರ ಮಾಡುವ ಚಾಣಾಕ್ಷತನ, ಆತ್ಮವಿಶ್ವಾಸವಿದ್ದರೂ ಹಣ ಆತನ ಬಳಿ ಇರಲಿಲ್ಲ. ಆದರೆ, ಸುಶೀಲ ಇಟ್ಟ ಒಂದು ಪ್ರಸ್ತಾಪಕ್ಕೆ ಆತ ಒಪ್ಪುತ್ತಾನೆ. ಆದರೆ, ಸಂಪೂರ್ಣವಾಗಿ ಅಲ್ಲ. 

ಹೇಮಾಳಿಂದ 10,000 ಹಣ ಪಡೆಯುತ್ತಾನೆ. ಆದರೆ, ನಾಲ್ಕು ವರ್ಷದ ನಂತರ ವಿವಾಹವಾಗುತ್ತೇನೆ ಎಂದು ಹೇಳುತ್ತಾನೆ. ಅದೇಕೆ..?


ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ದ ಹೇಮಾಳಿಗೆ ಇದು ಆಶಾಕಿರಣದಂತೆ ತೋರಿದರೂ ಯಾರನ್ನು ಅಷ್ಟು ಸುಲಭವಾಗಿ ನಂಬಲಾಗುವುದಿಲ್ಲ. ಮಂಜುನಾಥ ಆಕೆ ಕುಂಟಿ ಎಂದು ತಿಳಿದೂ ಮದುವೆಗೆ ಒಪ್ಪಿದರೂ.. ಮುಂದೇನಾಗುತ್ತದೆ..?


ಹೇಮ ಮತ್ತೆ ತನ್ನ ತಾಯಿ, ಸುಭದ್ರಮ್ಮ ಬಂದು ಕರೆದಾಗ ತನ್ನ ಮನೆಗೆ ಹೋಗುತ್ತಾಳಾದರೂ ಆಕೆಗೆ ಮೊದಲಿದ್ದ ಕಷ್ಟ ಇರುವುದಿಲ್ಲ. ಹಾಗೆಂದು ದಬ್ಬಾಳಿಕೆಯೂ ಮುಗಿದಿರುವುದಿಲ್ಲ.


ರೂಪಕ್ಕೆ ಮರುಳಾದ ರಾಜೇಶ ಹಾಗೂ ಸೀಮರ ಬದುಕು ಸಹ ಒಂದು ತಿರುವಿಗೆ ಬಂದು ನಿಲ್ಲುತ್ತದೆ. ಇಬ್ಬರ ಬದುಕನ್ನು ಬದಲಿಸಿದ ಆ ತಿರುವು ಏನು..?


ಹೇಮಳಿಗೆ ಯಾರ ಜೊತೆ ವಿವಾಹವಾಗುತ್ತದೆ..? ಅವಳ ಮುಂದಿನ ಬದುಕು ಹೇಗಿರುತ್ತದೆ..? ಮಂಜುನಾಥ ಪ್ರಾಮಾಣಿಕನೇ..? ಎಲ್ಲದಕ್ಕೂ ಉತ್ತರ ತಿಳಿಯಲು ಕಾದಂಬರಿ ಓದಿ ನೋಡಿ.


ರಾಧಾದೇವಿಯವರ ಹೆಚ್ಚಿನ ಕಾದಂಬರಿಗಳು ಸುಖಾಂತ್ಯ ಕಾಣುತ್ತವೆ. ಈ ಕಾದಂಬರಿಯೂ ಸುಖಾಂತ್ಯದ ಕಾದಂಬರಿ ಎಂದು ಹೇಳಬಹುದಾಗಿದ್ದರೂ ಎಲ್ಲರ ಬದುಕು ತಾವು ಬಯಸಿದ ಸುಖ ಕಾಣುತ್ತದಾ ಓದಿ ನೋಡಿ. 


"ಒಳಿತಿಗೆ ಜಯ" ಎಂಬ ತತ್ವ ಇಲ್ಲಿ ಗೋಚರಿಸುತ್ತದೆ. ಮಾಡಿದುಣ್ಣೋ ಮಹಾರಾಯ ಎಂಬಂತೆ ಎಲ್ಲರೂ ತಮ್ಮ ಕರ್ಮದ ಫಲವನ್ನು ಉಣ್ಣುವುದೂ ಕಾಣುತ್ತದೆ.


ಹೇಮಳ ಬದುಕು ಮೊದಲು ಕಷ್ಟದಿಂದಲೇ ಕೂಡಿದ್ದರೂ.. ಅವಳ ಬದುಕಿನಲ್ಲಿ ಬರುವ ಕಾಮಾಕ್ಷಿ ದಂಪತಿಗಳು, ಸುಶೀಲಾ ದಂಪತಿಗಳು ಹಾಗೂ ಆಕೆಯ ಪತಿಯಂತಹವರು ಎಲ್ಲರಿಗೂ ಸಿಗುವುದು ಕಷ್ಟ. ಆದರೆ, ಅಂತಹ ನಿಷ್ಕಲ್ಮಶ ಪ್ರೀತಿ ಸಿಕ್ಕರೆ ಬದುಕಿನಲ್ಲಿ ಮತ್ತೇನೂ ಬೇಡ ಎನಿಸುವುದಂತೂ ಹೌದು. ರಕ್ತ ಸಂಬಂಧಕ್ಕಿಂತಲೂ ಹೆಚ್ಚು ಆಪ್ತವಾಗುವ ಇಂತಹ ಸಂಬಂಧಗಳೇ ಸಮಾಜದಲ್ಲಿ ಇನ್ನೂ ಒಳ್ಳೆಯದಿದೆ ಎಂಬ ಭರವಸೆಯನ್ನು ಇಟ್ಟುಕೊಳ್ಳುವಂತೆ ಮಾಡುವಂತಹವು. ಅಸೂಯೆ, ದ್ವೇಷ ಕೆಲವೊಮ್ಮೆ ರಕ್ತಸಂಬಂಧಗಳಲ್ಲಿ ಕಂಡರೂ.. ಸ್ನೇಹದಲ್ಲಿ ಇಂತಹವು ಕಾಣುವುದು ವಿರಳ ಎಂಬ ಸಂದರ್ಭಗಳನ್ನು ಕಾಣಬಹುದು. 


ಹಣಕ್ಕಿಂತ ಗುಣ ಮುಖ್ಯ ಜೊತೆಗೆ ಯಾರ ಅಂಗವಿಕಲತೆಯೂ ನಿಜವಾದ ಅಂಗವಿಕಲತೆಯಲ್ಲ ಬದಲಿಗೆ ಮಾನಸಿಕವಾಗಿ ಹಾಗೆ ಯೋಚಿಸುವವರು, ದ್ವೇಷಿಸುವವರು ಹಾಗೂ ತಾತ್ಸಾರದಿಂದ ನೋಡುವವರ ಮನಸ್ಸು ಎಷ್ಟು ಕುರೂಪ ಎಂಬುದನ್ನು ಇಲ್ಲಿ ಕಾಣಬಹುದು. 


ಇನ್ನು ಹಲವಾರು ಪಾತ್ರಗಳ ಹಾಗೂ ಇಷ್ಟವಾಗಬಹುದಾದ ಸಂದರ್ಭಗಳ ಚಿತ್ರಣವೂ ಇಲ್ಲಿದೆ. ಈ ಕಾದಂಬರಿ ಇದೀಗ ಮರು ಮುದ್ರಣವಾಗಿ ಓದುಗರಿಗೆ ಲಭ್ಯವಿದೆ. ಫೀಲ್ ಗುಡ್ ಎನಿಸುವಂತಹ ಈ ಕಾದಂಬರಿ ಸುಲಲಿತವಾಗಿ ಓದಿಸಿಕೊಂಡು ಹೋಯಿತು ಹಾಗೂ ಇಷ್ಟವಾಯಿತು. 


~ ವಿಭಾ ವಿಶ್ವನಾಥ್

ಪ್ರೀತಿಯಿಂದ ಗೆದ್ದ ಕತೆಗಳು (ಪುಸ್ತಕ ಯಾನ - 446)

ಪುಸ್ತಕದ ಶೀರ್ಷಿಕೆ : ಪ್ರೀತಿಯಿಂದ ಗೆದ್ದ ಕತೆಗಳು

ಲೇಖಕರು : ವಿವಿಧ ಲೇಖಕರು

ಪ್ರಕಾಶಕರು : ಸಸಿ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 172

ಬೆಲೆ : 160 ರೂ. 


ಪ್ರಜ್ಞಾ ಬುಕ್ ಗ್ಯಾಲರಿ ಮತ್ತು ಸಸಿ ಪ್ರಕಾಶನ ಸಹಯೋಗದಲ್ಲಿ ನಡೆದ ಪ್ರಜ್ಞಾ ಕಥಾ ಸ್ಪರ್ಧೆ 2025ರಲ್ಲಿ ಗೆದ್ದ ಟಾಪ್ 10 ಕಥೆಗಳನ್ನು ನಾವು ಈ ಕಥಾ ಸಂಕಲನದಲ್ಲಿ ಓದಬಹುದು.


ದೇವ(ರ) ದಾಸಿ - ಕಬ್ಬಾಳಪ್ಪ ಮರೂರು : 

ಗಾಳೆಮ್ಮನಿಗೆ ತನ್ನ ಮಗಳು ಮೈ ನೆರೆದದ್ದು ಬಹಳ ಸಂತಸಪಡುವ ವಿಚಾರವಾದದ್ದಕ್ಕೆ ಕಾರಣ ಆಕೆ ದೇವದಾಸಿ. ಮಗಳು ರೋಜಾ ಸ್ಪುರದ್ರೂಪಿ ಹುಡುಗಿ. ಗಾಳೆಮ್ಮನ ಮನೆಗೆ ಬರುತ್ತಿದ್ದ ಎಷ್ಟೋ ಜನರು ಅವಳ ಬಗ್ಗೆ ಕುತೂಹಲದಿಂದ ಕೇಳಿದ್ದುಂಟು. ಅದನ್ನು ಗಮನಿಸುತ್ತಿದ್ದವಳು ಆಕೆ ಮೈ ನೆರೆದರೆ ಮುಂದಿನ ತನ್ನ ಬದುಕು, ಸಂತಸದಿಂದ ಕೂಡಿರುತ್ತದೆ ಎನ್ನುವ ಜೊತೆಗೆ ಅವಳನ್ನು ಕೊಂಚ ಓದಿಸಿದರೆ ದೊಡ್ಡ-ದೊಡ್ಡವರನ್ನು ಅವಳ ಕಾಲಡಿಯಲ್ಲಿ ಬಂದು ಬೀಳುವಂತೆ ಮಾಡಬಹುದು ಎಂಬ ಸಂಚನ್ನೂ ಮಾಡಿದ್ದಳು. ತಾಯಿಯ ಉಪಚಾರ, ಶಾಸ್ತ್ರ-ಸಂಪ್ರದಾಯ ಉಸಿರು ಕಟ್ಟಿಸುವುದರ ಜೊತೆಗೆ ಆಕೆಯ ಉದ್ದೇಶದ ಕುರಿತು ಅನುಮಾನವನ್ನು ಮೂಡಿಸಿತ್ತು. ರೋಜಾಳ ಮುಂದಿನ ಬದುಕು ಹೇಗಿತ್ತು..? ಶಿಕ್ಷಣದ ಮಹತ್ವವೇನು ಹಾಗೂ ದೇವದಾಸಿಯರ ಬದುಕಿನ ಚಿತ್ರಣ ಹೇಗಿರುತ್ತದೆ ಎಲ್ಲವನ್ನು ತೋರುವ ಕಥೆ ಇದು.


ಮುನಾವರ್ ಚಾಯ್ ಸ್ಟಾಲ್ - ವಿನಾಯಕ ಅರಳಸುರಳಿ : 

ಮೃಗಶಿರನ ಚಾಯ್ ಸ್ಟಾಲ್ ಎಷ್ಟು ಫೇಮಸ್ ಆಗಿತ್ತು ಹಾಗೂ ಎಂತಹ ಗ್ರಾಹಕರಿದ್ದರು ಎಂಬುದರಿಂದ ಶುರುವಾಗುವ ಈ ಕಥೆಯಲ್ಲಿ ಆತನ ಬದುಕಿನ ಕಷ್ಟದ ಅಧ್ಯಾಯ ಹಾಗೂ ಆತನ ಮನೆಯಲ್ಲಿ ಆತನಿಗೆ ಸಿಗುತ್ತಿದ್ದ ಗೌರವವೇನು ಎಂಬುದೂ ತೆರೆದುಕೊಳ್ಳುತ್ತಾ ಸಾಗುತ್ತದೆ. ಆದರೆ ಮೃಗಶಿರನಿಗೆ ಹೆಚ್ಚು ಬಾಧಿಸುತ್ತಿದ್ದು ಅವನಲ್ಲಿಯೇ ಹುಟ್ಟುತ್ತಿದ್ದ ಪಶ್ಚಾತ್ತಾಪ. ಹೀಗಿದ್ದ ಮೃಗಶಿರನಿಗೆ ವ್ಯವಹಾರದ ಸ್ಥಳದಲ್ಲಿ ತಾತ ಎಂದು ಕರೆದ ಮುನಾವರ ಪರಿಚಯವಾಗುತ್ತಾನೆ. ಮೃಗಶಿರನ ಚಾಯ್ ಸ್ವಾಲ್ ಮುನಾವರನದ್ದೇ ಎಂಬಂತೆ ನಡೆಯುವವನು, ಆತನ ಬದುಕಲ್ಲಿಯೂ ಆವರಿಸಿಕೊಳ್ಳುವ ಪರಿಯ ಮುನಾವರ್, ಮೃಗಶಿರ ಹಾಗೂ ಚಾಯ್ ಸ್ಟಾಲ್ ಕಥೆ ಓದಿ ನೋಡಿ. ಈ ಕಥೆ ನನಗೆ ಬಹಳ ಇಷ್ಟವಾಯಿತು.


ತಿಕ್ಕಲು ಬುಡ್ಡಿ - ಸುಮಾ ರಮೇಶ್ : 

ಮಾಜಿ ಸಚಿವರಾದ ಶ್ರೀ ಗುರುಸಿದ್ದಪ್ಪನವರ ಮಗ ಸಚಿನ್ ನ ತಲೆಯ ಮೇಲೆ ಆಕ್ರಮಣ ಮಾಡಿದ ಇಳಿ ವಯಸ್ಸಿನ ಮಾನಸಿಕ ಅಸ್ವಸ್ಥೆಯನ್ನು ಪೊಲೀಸರು ಬಂಧಿಸಿ ಕರೆದೊಯ್ಯುವ ಹಾಗೂ ಆಗ ಏನಾಯಿತು ಎಂದು ಬಿತ್ತರಿಸುತ್ತಿದ್ದ ಸುದ್ದಿ ಕೇಳಿದ ವಿಭಾಳಿಗೆ ಆಘಾತ, ನೋವು, ಹತಾಷೆ ಎಲ್ಲವೂ ಹುಟ್ಟಿತ್ತು.

ಅಷ್ಟಕ್ಕೂ ತಿಕ್ಕಲು ಬುಡ್ಡಿ ವಿಭಾಳಿಗೆ ಯಾವ ರೀತಿಯ ಪರಿಚಯ? ತನ್ನ ರೆಸ್ಟ್ ಅನ್ನೋ ಮೀರಿ ವಿಭಾ ತಲೆಕೆಡಿಸಿಕೊಳ್ಳುವಂತಹ ವಿಚಾರವಾದರೂ ಏನಿತ್ತು..?

ಬೇರೆಯವರಿಗೆ ಮಾನಸಿಕ ಅಸ್ವಸ್ಥೆಯಂತೆ ಕಾಣುವ ತಿಕ್ಕಲು ಬುಡ್ಡಿಯ ನಿಜ ಸ್ವರೂಪವಾದರೂ ಏನು..? ಓದಿ ನೋಡಿ.


ಸುಪ್ತ ಶರಧಿಯ ಸೇರುವ ಸಮಯ - ದೇವೇಂದ್ರ ಅಬ್ಬಿಗೇರಿ :

ಮೂರು ಭಾಗದಲ್ಲಿ ಸಾಗುವ ಈ ಕಥೆಯಲ್ಲಿ ಸಿಡ್ ನ ಬದುಕು ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಸಿಡ್ ನ ವೈಯಕ್ತಿಕ ಬದುಕು ಸಾಫ್ಟ್ವೇರ್ ಇಂಜಿನಿಯರ್ ಒಬ್ಬರ ಬದುಕಿಗೆ ಸಾಕಷ್ಟು ಹೊಂದಿಕೆಯಾಗುವ ಚಿತ್ರಣಗಳನ್ನು ಹೊತ್ತುಕೊಂಡಿದೆ. ಅಷ್ಟಕ್ಕೂ ಸಿಡ್ ಈಗ ಡಾ. ಪ್ರಿಯಾ ಬಳಿ ಕೌನ್ಸಿಲಿಂಗ್ ತೆಗೆದುಕೊಳ್ಳುತ್ತಿದ್ದ. ಅಷ್ಟಕ್ಕೂ ಆತನನ್ನು ಬಾಧಿಸುತ್ತಿದ್ದ ಸಮಸ್ಯೆಯೇನು? ಹಾಗೂ ಪ್ರಿಯಾ ಆತನಿಗೆ ಕೊಟ್ಟ ಸಲಹೆ ಏನು? ಓದಿ ನೋಡಿ.


ಕಳಲೆ ಕಮಲಾಕ್ಷ - ಎಂ ಮನೋಹರ ಪೈ :

ಮಳೆಗಾಲ ಆರಂಭವಾಯಿತೆಂದರೆ ಸುತ್ತುರ್ಕಿಯ ಗಂಡಸರು ಪಚ್ಚಮಲೆಗೆ ಹೋಗಿ ಕಳಲೆ ಕತ್ತರಿಸಿ ತಂದು, ಕರಿಯೂರಿಗೆ ಹೋಗಿ ಕಳಲೆ ಮಾರಿ ಸಿಕ್ಕ ಹಣದಲ್ಲಿ ಮಳೆಗಾಲದ ಖರ್ಚು ಕಳೆಯುತ್ತಿದ್ದರು. ಹೀಗೆ ಬಿದಿರು ಬುಟ್ಟಿ ಹಿಡಿದುಕೊಂಡು ಪಚ್ಚಮಲೆಯನ್ನು ಪ್ರವೇಶಿಸುತ್ತಿದ್ದ ಗಂಡಸರಲ್ಲಿ ಕಮಲಾಕ್ಷನೂ ಒಬ್ಬ. ಎಲ್ಲರಂತೆ ಆತನು ಒಬ್ಬನಾಗಿದ್ದರೆ ಈ ಕಥೆ ಹುಟ್ಟುತ್ತಿರಲಿಲ್ಲವೇನೋ..! ಆದರೆ, ಕರಿಯೂರಿನ ಮನೆಗಳಲ್ಲಿ ಕಳಲೆ ಕಮಲಾಕ್ಷ ಎಂದೇ ಗುರುತಿಸಲ್ಪಡುತ್ತಿದ್ದ ಆತ ಆ ಹೆಸರು ಪಡೆದದ್ದಾದರೂ ಹೇಗೆ..? ಇತ್ತೀಚಿನ ದಿನಗಳಲ್ಲಿ ಪಚ್ಚಮಲೆಯ ಕಾಡಿನಿಂದ ಕಳಲೆ ತರುವುದು ಸುಲಭದ ಕೆಲಸವಾಗಿರಲಿಲ್ಲವೇಕೆ..? ಕಮಲಾಕ್ಷನ ಓದು ಹಾಗೂ ಆತನ ಯೌವ್ವನದ ದಿನಗಳು ಹೇಗಿದ್ದವು..? ಕಮಲಾಕ್ಷ ಮುಖ್ಯರಸ್ತೆಗೆ ಹೋಗದೆ ಅಡ್ಡದಾರಿ ಇಳಿದು ಪಚ್ಚಮಲೆಯತ್ತ ಹೋದ ದಿನ ಏನಾಯಿತು..? ಸಾಕಷ್ಟು ಕುತೂಹಲ ಹಾಗೂ ರೋಚಕತೆಯ ಜಾಡಿನಲ್ಲಿ ಸಾಗುವ ಈ ಕಥೆಯ ಅಂತ್ಯ ಊಹಿಸಲು ಸುಲಭವೇನಲ್ಲ. ಆಸಕ್ತಿಕರ ಕಥೆಯನ್ನು ಓದಿ ನೋಡಿ.


ಖಂಡವಿದೆಕೋ, ಮಾಂಸವಿದೆಕೋ - ಸಂತೆಬೆನ್ನೂರು ಫೈಜ್ನಟ್ರಾಜ್ :

ಅಲ್ಲಾಭಕ್ಷಿ-ದಿಲ್ಷಾದ್ ದಂಪತಿಗಳ ಒಬ್ಬಳೇ ಮಗಳು ರಜಿಯಾ 7ನೇ ತರಗತಿ ಓದುತ್ತಿದ್ದಳು. ಬಕ್ರೀದ್ ಹಬ್ಬಕ್ಕೆ ಐದಾರು ದಿನ ಉಳಿದಿರುವಾಗ ಸಣ್ಣ ಹುಡುಗಿ ಅಪ್ಪನನ್ನು ಗದರಿಸುತ್ತಿದ್ದಳು. "ಮುನ್ನಿಯನ್ನು ಮಾತ್ರ ಕೊಡುವುದಿಲ್ಲ. ನಮಗೆ ಹಬ್ಬ, ಬಟ್ಟೆ, ಮಾಂಸ ಯಾವುದೂ ಬೇಡ" ಎನ್ನುತ್ತಿದ್ದ ರಜಿಯಾ ಹಾಗೂ ಮುನ್ನಿಯ ಸಂಬಂಧ ಹೇಗಿತ್ತು..? ಪ್ರೀತಿಗೆ ಭಾಷೆ ಇಲ್ಲ ಎಂಬಂತಿದ್ದ ಮುನ್ನಿ ಹಾಗೂ ರಜಿಯಾರ ಸಂಬಂಧ ಹೇಗಿತ್ತು..? ಮುನ್ನಿಯನ್ನು ಇಲ್ಲಿ ಕೇವಲ ಹಸುವಿನಂತೆ ಮಾತ್ರ ಭಾವಿಸದ ರಜಿಯಾಯ ಮನಸಲ್ಲಿ ಪುಣ್ಯಕೋಟಿಯ ಕಥೆ ಹೇಗೆ ಕಾಣುತ್ತಿತ್ತು..? ಮಗಳ ಬೇಡಿಕೆಗೆ ಮಣಿಯದ ಅಲ್ಲಾಭಕ್ಷಿಯ ನಡೆ ಯಾವೆಲ್ಲಾ ಬದಲಾವಣೆಗೆ ಕಾರಣವಾಯಿತು..? ರಜಿಯಾ ಕಂಡದ್ದು ಕನಸೋ, ನನಸೋ, ಭ್ರಮೆಯೋ ಓದಿ ನೋಡಿ.


ಸಾಮಂತ್ರಿ - ದಿವ್ಯಶ್ರೀ ಅದರಂತೆ : 

ಸಾಮಂತ್ರಿಯ ಗಂಡ ವಿಷ ಕುಡಿದು ಸತ್ತು ಮನೆಗೆ ಮುಳುವಾಗಿದ್ದನು. ಆದರೆ, ಯಾವುದಕ್ಕೂ ಜಗ್ಗದೆ ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಳು ಸಾಮಂತ್ರಿ. ಸಾಮಂತ್ರಿ ತನ್ನ ಗಂಡ ಸತ್ತು ಒಂದು ವರ್ಷದ ನಂತರ ದೊಡ್ಡ ಮಗಳನ್ನು ಮದುವೆ ಮಾಡಿದ್ದಳು. ಜವಾಬ್ದಾರಿಯುತ ಅಳಿಯ ಸಿಕ್ಕಿದ್ದು ಅವಳಿಗೆ ಖುಷಿ. ಅತ್ತೆಯ ಮನೆಯ ಪರಿಸ್ಥಿತಿಗೆ ಹೆಗಲಾಗಿ ನಿಲ್ಲುವುದು ಆತನಿಗೆ ಅನಿವಾರ್ಯವೆಂದರೂ ತಪ್ಪಾಗಲಾರದು. ಆದರೂ.. ಬೆಸರಿಸಿಕೊಳ್ಳದೆ ಹೆಗಲಾಗುತ್ತಿದ್ದ. 

ಒಂದು ಭಾನುವಾರ ಕಾಡಿಗೆ ಹೋಗಿ ಬೆಳಿಗ್ಗೆ 9 ರಿಂದ ಸಂಜೆ 6 ರ ಒಳಗೆ ಕಟ್ಟಿಗೆ ಕಟ್ಟಿಕೊಂಡು ಕಾಡಿನಿಂದ ಹೊರ ಬರಬೇಕು. ಮನೆಗೆ ಇಬ್ಬರು ಮಾತ್ರ ಹೋಗಬೇಕು ಎಂದು ಸಾರಿದ ಮಾತಿಗೆ ಸಾಮಂತ್ರಿಯ ಅಳಿಯನನ್ನು ಜೊತೆ ಮಾಡಿಕೊಂಡು ಹೊರಟಳಾದರೂ ಅವಳಿಗೆ ಎದುರಾದ ಸವಾಲುಗಳೇನು..? ಅವೆಲ್ಲವನ್ನೂ ಯಾವ ರೀತಿ ನಿಭಾಯಿಸಿದಳು..? ಹೆಣ್ಣು ಎಂದರೆ ಕಡಿಮೆ ಎಂದು ಅಂದಾಜಿಸುವಂತೆಯೇ ಇಲ್ಲ. ಇಲ್ಲಿ ಸಾಮಂತ್ರಿಯ ಪ್ರತಿಕ್ರಿಯೆ ಹೇಗಿತ್ತು..?


ವೃತ್ತ - ಟಿ. ಎಂ. ರಮೇಶ್ :

ಒಂದು ವರ್ಷದ ಹಿಂದೆ ಟಿಪ್ ಟಾಪ್ ಆಗಿ ದೊಡ್ಡ ಕಾರೊಂದರಲ್ಲಿ ಬಂದಿಳಿದಿದ್ದ ಗೆಳೆಯ ಅದೃಷ್ಟವಂತನೂ ಆಗಿದ್ದು .. ಆತನ ಮಾತನ್ನು ನಂಬಿಕೊಂಡು ಆತ ಕೊಟ್ಟಿದ್ದ ವಿಳಾಸಕ್ಕೆ ಬಂದಿದ್ದ ಬರಮ ರಿಯಲ್ ಎಸ್ಟೇಟ್ ಮತ್ತು ಕಂಟ್ರಾಕ್ಟ್ ಬ್ಯುಸಿನೆಸ್ ಮನ್ ಆಗಿದ್ದ ಗೆಳೆಯ ಶ್ರೀಕೃಷ್ಣನನ್ನು ಭೇಟಿಯಾಗಿದ್ದ. ಗೆಳೆಯನನ್ನು ಆತ ಬರಮಾಡಿಕೊಂಡದ್ದು ಹೇಗೆ..? ತನ್ನ ಹೆಂಡತಿ ಲಚುಮಿಗೆ ಏನೆಂದು ಭರವಸೆ ಕೊಟ್ಟು ಬಂದಿದ್ದ ಬರಮ..? ಈ ಸ್ನೇಹ ಹಾಗೂ ಸಂದರ್ಭ ಹೇಗಿದ್ದವು ಓದಿ ನೋಡಿ.


ಡೆಡ್ ಲೈನ್ ಮತ್ತು ಡಿನ್ನರ್ - ಶ್ವೇತಾ ನರಗುಂದ :

ಕಾರ್ಪೊರೇಟ್ ಫೀಲ್ಡ್ ನಲ್ಲಿಯೇ ಇದ್ದ ಇಬ್ಬರು ದಂಪತಿಗಳು ಆರತಿ ಹಾಗೂ ಅಭಿಷೇಕ್. ಮೀಟಿಂಗ್, ಟಾಸ್ಕ್ ಅಪ್ಡೇಟ್, ಪರ್ಫಾರ್ಮೆನ್ಸ್, ರಿವ್ಯೂ ಎಂದೆಲ್ಲಾ ಕೆಲಸದಲ್ಲಿಯೇ ಮುಳುಗಿ ಏಳುತ್ತಿದ್ದಾಗ ತಮ್ಮಿಬ್ಬರ ನಡುವೆ ಮೂಡುತ್ತಿದ್ದ ಕಂದಕವನ್ನು ಗಮನಿಸಿದವಳು ಆರತಿ. ಶೇರ್ಡ್ ಸ್ಪೇಸ್ ವರ್ಕರ್ಸ್ ನಂತಾಗಿದ್ದೇವೆ ಎನಿಸಿದಾಗ ಅದನ್ನು ನೇರವಾಗಿಯೇ ಬಿಚ್ಚಿಟ್ಟಳಾದರೂ ಅಭಿಷೇಕ್ ಅದಕ್ಕೆ ಪ್ರತಿಕ್ರಿಸಿದ ಬಗೆಯೇ ಬೇರೆಯಿತ್ತು. ಇಬ್ಬರಲ್ಲಿ ಮೊದಲು ಎಚ್ಚೆತ್ತ ಆರತಿಗೆ ಮನಸ್ಸಿಗೆ ಬಂದ ವಿಚಾರಗಳು ಏನಿದ್ದವು..? ಅಭಿಷೇಕ್ ನನ್ನು ಕನ್ವೆನ್ಸ್ ಮಾಡುವುದರಲ್ಲಿ ಆರತಿ ಎಷ್ಟು ಸಫಲಳಾದಳು..? ಓಡುವ ಬೆಂಗಳೂರಿನ ವೇಗಕ್ಕೆ ಸಮನಾಗಿ ಓಡಲು ಪ್ರಯತ್ನಿಸುವ ಕಾರ್ಪೊರೇಟ್ ದಂಪತಿಗಳ ಕಥೆ ಇದು. ವೇಗ, ಕಾರ್ಯಕ್ಷಮತೆ, ಸಾಧನೆ, ಫಲಿತಾಂಶ ಎಂದೆಲ್ಲಾ ಓಡುವಾಗ ವೈಯಕ್ತಿಕ ಬದುಕಿಗೆ ಎಷ್ಟು ಸ್ಪೇಸ್ ಬೇಕು ಎನ್ನುವುದನ್ನು ಅರ್ಥ ಮಾಡಿಸುವ ಕಥೆ ಇಲ್ಲಿದೆ.


ಬೆಂಕಿ ಮತ್ತು ಬಾವಿ - ಡಾ. ಭದ್ರಪ್ಪ ಶಿ ಹೆನ್ಲಿ

40 ವರ್ಷಗಳ ಹಿಂದೆ ಇದ್ದ ಕಣ್ಣಾ ಪಂಡಿತರ ಮನೆಯನ್ನು ಹುಡುಕಿ ಬಂದವನಿಗೆ ಕೊನೆಗೂ ಜಾನಕಿ ಅಜ್ಜಿ ಸಿಕ್ಕಿದಳು. ಜಾನಕಿ ಅಚ್ಚಿಯಿಂದ ತಿಳಿದದ್ದು ಪಂಡಿತರು ಮೃತರಾಗಿ ಮೂರು ದಿನ ಕಳೆದಿದ್ದವು. ಕಣ್ಣಾ ಪಂಡಿತರ ಸನಾತನ ಧರ್ಮವನ್ನು ಧಿಕ್ಕರಿಸಿ ನಡೆದ ಮಗ ಏನಾದ..? ಕಾಲವೇ ಎಲ್ಲವನ್ನು ಮರೆಸಬಹುದೆಂದು ಅಜ್ಞಾತನಾದವನಿಗೆ.. ಅವರು ಆತನನ್ನು ಮರೆತಾಗ ಸನ್ನಿವೇಶಗಳು ಆತನ ಬದುಕಲ್ಲಿ ಏನೆಲ್ಲಾ ಆಟ ಆಡಿದವು..? ಕಣ್ಣಾ ಪಂಡಿತರ ಸಂಸಾರಸೌಧ ಕುಸಿದ ಬಗೆ ಹೇಗೆ..?

ಸಂಬಂಧಗಳಿಗೆ ಸಾವಿಲ್ಲವೆಂದು ಬರೆದ ತಂದೆಯ ಪತ್ರ ಮಗನಿಗೆ ಸೇರಿತೇ? ಸಾಮಾಜಿಕ ನ್ಯಾಯವೆಂದು ಅಲೆದಾಡಿದ್ದ ಮಗ ಹೇಗಿದ್ದ..? ಈ ದುರಂತಗಾಥೆ ಯಾರದ್ದಾದರೂ ಬದುಕಲ್ಲಿ ಪರಿವರ್ತನೆ ತರಬಹುದು ಓದಿ ನೋಡಿ.


ವಿವಿಧ ಲೇಖಕರ ವಿಭಿನ್ನ ಕತೆಗಳ ಚೆಂದದ ಕಥಾಲೋಕ ಇಲ್ಲಿದೆ. ಸ್ಪರ್ಧಾ ಕತೆಗಳ ಕುರಿತ ಕುತೂಹಲ ಉಳ್ಳವರು ಓದಬಹುದಾದ ಕಥಾ ಸಂಕಲನ ಇದು.


~ವಿಭಾ ವಿಶ್ವನಾಥ್

ಸೃಷ್ಟಿಕರ್ತನಷ್ಟೇ ಶಕ್ತೆ


ಮನುಜ ಕುಲದ ಉದ್ದಾರಕೆ

ತಾನು ಎಲ್ಲೆಡೆ ಇರಲಾರೆನೆಂದು

ಸಮಯಕೆ ಸಿಗಲಾರೆನೆಂದು 

ಮುಂದಾಲೋಚನೆಯಲಿ ಮೂಡಿಸಿದ

ತಾಯಿಯೆಂಬ ಸೃಷ್ಟಿಯ

ಸೃಷ್ಟಿಕರ್ತನಷ್ಟೇ ಶಕ್ತೆ ತಾನೆ ಅಮ್ಮನು


ತನ್ಮೂಲಕ ಜೀವದ ಸೃಷ್ಟಿ ಮಾಡಿ

ಕರುಳ ಕುಡಿಯ ಕರೆಗೆ ಓಗೊಟ್ಟು

ನಿಸ್ವಾರ್ಥದ ಪ್ರೀತಿ ಸವಿಯ ಹಂಚಿ

ಮಡಿಲಲಿ ಪ್ರೀತಿ ತಂಪನ್ನಿಟ್ಟು

ಮುಂದಾಲೋಚನೆಯಲಿ ಹರಸಿ

ಕಾಯುವ ದೇವತೆಯೇ ಅಮ್ಮನು


~ವಿಭಾ ವಿಶ್ವನಾಥ್

ಕಾಲದ ಮಹಿಮೆ (ಬೆಳಕಿಂಡಿಯ ಕತೆಗಳು - 17)


ಯೌವ್ವನದ ಕಾಲದಲ್ಲಿ ತಾನೇ ಸೌಂದರ್ಯವತಿ ಹಮ್ಮಿನಿಂದ ಬೀಗುತ್ತಾ ಸುತ್ತಮುತ್ತಲಿನವರನ್ನು ಮಾತನಾಡಿಸದೆ ತನ್ನದೇ ವಲಯದಲ್ಲಿ ಇದ್ದವಳಿಗೆ ಈಗ ಮುಪ್ಪಿನ ಕಾಲ ಹಾಗೂ ಕೊರೊನಾ ಕಾಲ ಚೆನ್ನಾಗಿಯೇ ಅರಿವು ಮೂಡಿಸಿದೆ. ಸಣ್ಣ-ಪುಟ್ಟ ವಿಚಾರಗಳಿಗೂ ಅಕ್ಕ-ಪಕ್ಕದವರು ಹೊಂದಿಕೊಂಡು ಬಾಳ್ವೆ ಮಾಡುವಾಗ ತಾನೆಷ್ಟು ಸಣ್ಣತನ ತೋರಿಬಿಟ್ಟೆ ಎನ್ನುವ ಅರಿವಾಗುತ್ತಲಿದೆ. 


ಅವಳು ಕಪ್ಪು, ಇವಳು ದಪ್ಪ, ಇವಳು ಹಾಗೆ, ಹೀಗೆ.. ಎನ್ನುತ್ತಾ ದೂರವಿಟ್ಟವರೇ ಇವಳ ಕಷ್ಟ ಕಾಲದಲ್ಲಿ ಆದದ್ದು.. ಅವರೂ ನನ್ನ ಹಾಗೆಯೇ ಬಿಂಕ -ಬಿನ್ನಾಣ ತೋರಿದ್ದರೆ ಎಂದು ನೆನಪಿಸಿಕೊಂಡರೇ ಅವಳಿಗೆ ಭಯವಾಗುತ್ತದೆ. ಸೌಂದರ್ಯ ನಶ್ವರ.. ಹಮ್ಮು-ಬಿಮ್ಮು ತೊರೆದು ಬಾಳ್ವೆ ನಡೆಸಿದರಷ್ಟೇ ಮತ್ತೊಬ್ಬರ ಬದುಕಲ್ಲಿ ಕೊಂಚವಾದರೂ ಸಹಕಾರಿಯಾಗಿ ನಿಂತು ನೆನಪಾಗಿರಬಹುದು ಎಂಬ ಅರಿವಾಗಿದೆ. ಕಾಲದ ಮಹಿಮೆಯೇ ಅಂತಹದ್ದು.. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಹೆಚ್ಚು ಎಂದು ಅರಿವು ಮೂಡಿಸುವಂತಹದ್ದು 


~ವಿಭಾ ವಿಶ್ವನಾಥ್

ಪುಟ್ಟ ಕಲಾವಿದೆ (ಬೆಳಕಿಂಡಿಯ ಕತೆಗಳು - 16)


"ಪುಟ್ಟಿಗೆ ಕರ್ನಾಟಕ ಜ್ಯೂನಿಯರ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಚಿಕ್ಕ ವಯಸ್ಸಿಗೆ ಈ ಪ್ರಶಸ್ತಿ ಪಡೆದ ಮೊದಲ ಮಗು ಅವಳೇ ಅಂತೆ ರೀ.. " ಎಂದ ಸೌಭಾಗ್ಯ ಮಾತಿಗೆ ಹೂಂಗುಟ್ಟಿ "ನಾನು ನಿನಗೆ ಅವತ್ತೇ ಹೇಳಲಿಲ್ವಾ.. ಮಗುವಿನ ಪ್ರತಿಭೆಯನ್ನು ಪೋಷಿಸಿದರೆ ಅವರಲ್ಲೂ ಅಡಗಿರುವ ಕಲಾವಿದರು ಹೊರ ಬರುತ್ತಾರೆ ಅಂತಾ. 


ಗೋಡೆ ಮೇಲೆ ಅವಳು ಅವತ್ತು ಬಳಿದಿದ್ದ ಕಲರ್ ನೋಡಿ ಅದೆಷ್ಟು ಕೋಪ ಮಾಡಿಕೊಂಡಿದ್ದೆ ನೀನು... ಗೋಡೆಯೆಲ್ಲಾ ಹಾಳಾಯ್ತು ಅಂತಾ ಕೂಗಾಡುತ್ತಾ ಇದ್ದೆ. ಆದರೆ, ನಾನು ಅವಳನ್ನು ಬೈಯದೆ, ಬದಲಾಗಿ ಕರೆದುಕೊಂಡು ಹೋಗಿ ಡ್ರಾಯಿಂಗ್ ಕ್ಲಾಸ್ ಗೆ ಸೇರಿಸಿ ಅವಳನ್ನು ಪ್ರೋತ್ಸಾಹಿಸಿದ್ದಕ್ಕೆ ನೋಡು ಇವತ್ತು ನಾವು ಹೆಮ್ಮೆ ಪಡುವ ಹಾಗೆ ಮಾಡಿದ್ದಾಳೆ" ಎಂದನು ಶ್ರೀಕರ.


" ಹೌದು ಶ್ರೀ, ಮಕ್ಕಳಲ್ಲಿ ಪುಟ್ಟ ಕಲಾವಿದರು ಇರುತ್ತಾರೆ. ಪೋಷಿಸಿ, ಪ್ರೋತ್ಸಾಹ ನೋಡಿದರೆ ಸರಿಯಾದ ಸಮಯದಲ್ಲಿ ಹೊರಬರುತ್ತಾರೆ. " ಎಂದರು ಸೌಭಾಗ್ಯ.


~ ವಿಭಾ ವಿಶ್ವನಾಥ್

ಭಾನುವಾರ, ಮೇ 10, 2026

ಅವಳೀಗ ಅಮ್ಮ (ಅವಳ ಕವಿತೆಗಳು - 24)


ತುಂಟಾಟದ ದಿನಗಳು ಕಳೆದವು

ಮುಖದಲಿ ಪ್ರೌಢ ಕಳೆ ಬೇಕು

ಜವಾಬ್ದಾರಿ ಹೊತ್ತು ನಡೆ ನೀನೀಗ

ನೀನೀಗ ಅಮ್ಮ - ಎಂದವರವರು


ಮುಗ್ಧೆಯಾದರೆ ಮುಳುಗಿಸುತ್ತಾರೆ 

ಜಾಣತನದಿ ತಿದ್ದಿಕೊಂಡು

ನಿನ್ನ ಆಸೆಗಳ ಗಂಟು ಕಟ್ಟಿಡಬೇಕು

ನೀನೀಗ ಅಮ್ಮ - ಎಚ್ಚರಿಸಿದರವರು


ಮಗುವಿನ ಆಟವ ಆನಂದಿಸುವ

ಸದಾ ನಗುಮುಖದಿ ಎದುರಾಗುವ

ಪ್ರೀತಿಯನ್ನೇ ಮೊಗೆದು ಕೊಡುವ

ಅವಳೀಗ ಅಮ್ಮ - ಅವಳಿಷ್ಟದಂತೆ


ಜಗದ ಸಲಹೆಗೆ ಜಾಣ ಕಿವುಡಾಗಿ

ಎಚ್ಚರಿಕೆಯಿಂದ ಆಪ್ತ ವಲಯದಲಿ

ತನ್ನಾಸೆಯ ಮಗುವಿಗೆ ಆಸರೆಯಾಗುವ

ಅವಳೀಗ ಅಮ್ಮ - ಎಚ್ಚರದಿಂದಿದ್ದಾಳೆ


ಜಗದ ಕಣ್ಣಿಗೆ ಬೇಕಾದ ಅಮ್ಮನಿಗಿಂತ

ಮಗುವಿಗೆ ಬೇಕಾದ ಅಮ್ಮನಾಗಿದ್ದಾಳೆ

ಅವಳಿಗೆ ಸಂಪೂರ್ಣ ಅರಿವಿದೆ ಹೇಗಿರಬೇಕೆಂದು

ಏಕೆಂದರೆ, ಅವಳೀಗ ಅಮ್ಮ


~ವಿಭಾ ವಿಶ್ವನಾಥ್

ಮಡಿಲು (ಪುಸ್ತಕ ಯಾನ - 445)


ಪುಸ್ತಕದ ಶೀರ್ಷಿಕೆ : ಮಡಿಲು

ಲೇಖಕರು : ನಾಗರಾಜ ವಸ್ತಾರೆ 

ಪ್ರಕಾಶಕರು : ಛಂದ ಪುಸ್ತಕ 

ಪ್ರಥಮ ಮುದ್ರಣ : 2009

ಪುಟಗಳು : 80

ಬೆಲೆ : 15 ರೂ. 


ಮಡಿಲು ಎಂದಾಕ್ಷಣ ಮೊದಲಿಗೆ ಅಮ್ಮ ನೆನಪಾಗುತ್ತಾಳೆ. ಇದು ಅಮ್ಮನ ಕಥೆಯೇ.. ಆದರೆ, ಅಮ್ಮನ ಮನಸ್ಸಿನ ತುಮುಲಗಳು ಹಾಗೂ ಹರೆಯದ ಮಗುವಿನ ಅಮ್ಮನ ಭಾವನೆಗಳನ್ನು ತೆರೆದಿಟ್ಟಿರುವ ನೀಳ್ಗತೆ ಇದು. ಮಗನ ಅಮ್ಮನಿಗೆ ಮಾತ್ರವಲ್ಲದೆ.. ಕಾಳಜಿ ಮಾಡುವ ಪ್ರತಿ ಅಮ್ಮಂದಿರಿಗೂ ಕನೆಕ್ಟ್ ಆಗುವಂತಹ ಕಥೆ ಇದು.


ನಾಗರಾಜ ವಸ್ತಾರೆ ಅವರ ಈ ಕತೆಯಲ್ಲಿ ಹೆಸರುಗಳು ಬಹಳ ಇಷ್ಟವಾದವು. ಸಾಂಜ್ಞಲಕ್ಷ್ಮಿ, ಗುಣಶೀಲ ಮತ್ತು ಮಾಕಂದ ಎನ್ನುವ ಮೂರು ಪಾತ್ರಗಳೇ ಮುಖ್ಯ ಪಾತ್ರಗಳಾಗಿ ಇಡೀ ಕತೆಯನ್ನು ಆವರಿಸಿಕೊಳ್ಳುತ್ತವೆ. 


ಈ ನೀಳ್ಗತೆಯನ್ನು ಅರ್ಪಿಸಿರುವುದು "ನಮ್ಮ ನಿಮ್ಮ ಒಳ ಮನೆಗಳ ಸಾಂಜ್ಞಲಕ್ಷ್ಮಿಯರಿಗೆ" ಎನ್ನುತ್ತಾರೆ ವಸ್ತಾರೆಯವರು. 


ಅಕ್ಟೋಬರ್ ನಲ್ಲಿ ಒಂದು ಪ್ರವಾಸವನ್ನು ಆಯೋಜಿಸಿದ್ದಳು ಸಾಂಜ್ಞಲಕ್ಷ್ಮಿ. ದಸರೆಯ ನೆವದಲ್ಲಿ ಅವಳು ಕೆಲಸ ಮಾಡುತ್ತಿದ್ದ ಮಾಂಟೆಸರಿಗೆ ರಜೆ ಇರುತ್ತದೆ ಎನ್ನುವ ಕಾರಣಕ್ಕಿಂತಲೂ ಹೆಚ್ಚಾಗಿ ಗುಣಶೀಲನ ಕೆರಿಯರ್ ನಲ್ಲಿ ಸದ್ಯಕ್ಕೆ ಟ್ರಾನ್ಸಿಟ್ ಪಿರಿಯಡ್ ನಡೆಯುತ್ತಿರುವುದು, ಜೊತೆಗೆ ಇದ್ದೊಬ್ಬ ಮಗ ಮಾಕಂದ ಕಳೆದ ಆಗಸ್ಟ್ ನಲ್ಲಿ ಇಂಜಿನಿಯರಿಂಗ್ ಓದು ಮುಗಿಸಿ ಕಾಲೇಜಿನಿಂದಲೇ ಪ್ಲೇಸ್ಮೆಂಟ್ ಆಗಿ ಇನ್ನೇನು ಕೆಲಸಕ್ಕೆ ಸೇರಲಿದ್ದ. ಮಗನ ಇಂಜಿನಿಯರಿಂಗ್ ಸೇರಿದಾಗಿನಿಂದ ಮೂವರ ಬಿಡುವುಗಳೂ ಒಂದಕ್ಕೊಂದು ಹೊಂದಿಕೊಳ್ಳದೆ ಹೊರಗೆ ಬರಲಾಗಿರಲಿಲ್ಲ ಎನ್ನುವುದು ಹೌದಾದರೂ.. ಇದೆಲ್ಲವನ್ನು ಮೀರಿದ್ದು ಸಾಂಜ್ಞಲಕ್ಷ್ಮಿಯ ಮನಸ್ಸಿನಲ್ಲಿ ಭದ್ರವಾಗಿತ್ತು. 


ನೇರವಾಗಿ ಹಂಚಿಕೊಳ್ಳಲಾಗದ ಈ ಚಿಂತಾಕ್ರಾಂತತೆಯನ್ನು ಲೇಖಕರು 'ವರಿ' ಎನ್ನುತ್ತಾರೆ. 

"ಆಧುನಿಕ ನುಡಿಗಟ್ಟಿನಲ್ಲಿ ಹಿಡಿದಿಳುವುದಾದರೆ ಅದನ್ನು ಒಂದು ವರಿ ಅನ್ನಬಹುದೇನೋ ದೇಸಿ ಚಿಂತಾ ಕ್ರಾಂತದಿಂದ ಪ್ರಬಲವಾದ ವರಿಯೇ 'ವರಿ' ಅದು! 


ಗುಣಶೀಲನಿಗೆ ಸಾಂಜ್ಞಲಕ್ಷ್ಮಿಯ ಮನಸ್ಸಿನ ತುಮುಲ ಹಾಗೂ ಚಿಂತಾಕ್ರಾಂತತೆಯ ಅರಿವಿದ್ದರೂ ಆತ ಅವಳಷ್ಟು ತಲೆಬಿಸಿ ಮಾಡಿಕೊಂಡಿರಲಿಲ್ಲ. 


ಅವರು ವಾಸವಿದ್ದ 'ಆಸರೆ'ಯಲ್ಲಿ ಅವರು ನೆಲೆಸಿದ್ದಾಗಿನಿಂದ ಸಾಂಜ್ಞಲಕ್ಷ್ಮಿಯ ದಿನಶರಿ ಬದಲಾಗದಿದ್ದರೂ ಗುಣಶೀಲನ ಕೆಲಸ ಜೊತೆಗೆ ದಿನಚರಿ ಲೈಫ್ ಸ್ಟೈಲ್ ಎಲ್ಲವೂ ಬದಲಾಗುತ್ತಿತ್ತು. ಒಂದು ರೀತಿಯಲ್ಲಿ ಮನೆಯ ಯಾವ ತಲೆಬಿಸಿಯನ್ನೂ ಹಂಚಿಕೊಳ್ಳದ ಗುಣಶೀಲನ ಮನಸ್ಥಿತಿಯೇ ಮಗನಿಗೂ ಬಂದಿತ್ತೆಂದರೂ ತಪ್ಪಾಗಲಾರದು. ಅಥವಾ ಸಾಂಜ್ಞಲಕ್ಷ್ಮಿಯ ಅತಿಯಾದ ಕಾಳಜಿ ಅಪ್ಪ-ಮಕ್ಕಳಿಬ್ಬರನ್ನು ಹಾಗೆ ಮಾಡಿಬಿಟ್ಟಿತ್ತು ಎಂದರೂ ತಪ್ಪಾಗಲಾರದು. 


ಗಂಡು ಮಕ್ಕಳ ವಿಷಯದಲ್ಲಿ ಎಲ್ಲಾ ಅಮ್ಮಂದಿರೂ ಹೀಗೆ ಯೋಚಿಸುತ್ತಾರೋ ಅಥವಾ ತಾನೊಬ್ಬಳು ಮಾತ್ರವೋ ಎಂಬ ಅನುಮಾನ ಸಾಂಜ್ಞಲಕ್ಷ್ಮಿಗೆ ಬರುತ್ತದಾದರೂ.. ಅವಳ ಜಾಗದಲ್ಲಿ ನಾವಿದ್ದರೂ ಹಾಗೆಯೇ ಯೋಚಿಸುತ್ತಿದ್ದೆವಲ್ಲವಾ ಎಂದೂ ಅನ್ನಿಸಿತು. 


ಮಾಕಂದನ ಬದುಕಿನಲ್ಲಿ ಬಂದಿದ್ದ ವಿಶಾಲ ಗೇಂದ ಸಾಂಜ್ಞಲಕ್ಷ್ಮಿಯನ್ನು ಕಾಡುತ್ತಿದ್ದ ವ್ಯಕ್ತಿಯಾಗಿದ್ದರೂ ಅವರಿಬ್ಬರ ನಡುವಿನ ಸಂಬಂಧಕ್ಕೊಂದು ಹೆಸರು ಹಚ್ಚಲು ಗುಣಶೀಲನಾಗಲಿ, ಸಾಂಜ್ಞಲಕ್ಷ್ಮಿಯಾಗಲಿ ಮಾಡಿರಲಿಲ್ಲವಾದರೂ.. ಆ ಹೆಸರು ಸಾಂಜ್ಞಲಕ್ಷ್ಮಿಯ ಮನಸ್ಸಿನಲ್ಲಿದ್ದೇ ಇತ್ತು.


ಗುಣಶೀಲನನ್ನು ಮದುವೆಯಾಗಿ ತಾನು ಈಗ ಅನುಭವಿಸುತ್ತಿರುವ ಪರಿಸ್ಥಿತಿ ಮಾಕಂದನನ್ನು ಮದುವೆಯಾಗುವ ಹುಡುಗಿಯನ್ನು ಕಾಡಿದರೆ..! ಎಂಬುದು ಅವಳ ಮನಸ್ಸನಲ್ಲಿದ್ದ ಮತ್ತೊಂದು ಆಲೋಚನೆಯೂ ಹೌದು. ಏಕೆಂದರೆ, ಅಪ್ಪ-ಮಗನ ಸ್ವಭಾವಗಳಲ್ಲಿ ಹೆಚ್ಚೇನೂ ವ್ಯತ್ಯಾಸಗಳಿರಲಿಲ್ಲ.


ಅಷ್ಟಕ್ಕೂ ಸಾಂಜ್ಞಲಕ್ಷ್ಮಿ ಗುಣಶೀಲನ ಜೊತೆ ತನ್ನ ಹೆಚ್ಚಿನ ಭಾವನೆಗಳನ್ನು ಪೂರ್ತಿ ಚರ್ಚಿಸಿರುವುದಿಲ್ಲ. ಅವನ ಅಭಿಪ್ರಾಯ ತನ್ನ ಜೊತೆಗೆ ತಾಳೆಯಾಗುವುದಿಲ್ಲ ಎನ್ನುವುದು ಅವಳ ಪೂರ್ವಗ್ರಹಪೀಡಿತ ಮನಸ್ಥಿತಿಯೋ ಅಥವಾ ವಾಸ್ತವ ಹಾಗಿತ್ತೋ ಓದಿ ನೋಡಿ.


ಮೂವರೂ ಉದಯಪುರಕ್ಕೆ ಬರುವವರೆಗೂ ಯಾವ ವಿಚಾರವನ್ನು ಚರ್ಚಿಸಿರಲಿಲ್ಲ. 36 ತಾಸುಗಳ ರೈಲು ಮಾರ್ಗದಲ್ಲಿ ಅಪ್ಪ-ಮಗ ಮಲಗಿಕೊಂಡು ಸಮಯ ಹರಿಸಿದ್ದೇ ಹೆಚ್ಚು. ಸಾಂಜ್ಞಲಕ್ಷ್ಮಿ ಮನಸ್ಸಿನ ಅಷ್ಟೂ ಆಲೋಚನೆಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ತನ್ನದೇ ಲೋಕದಲ್ಲಿ ತಾನಿದ್ದು ಬಿಟ್ಟಿದ್ದಳು. 


ಹೋಟೆಲ್ ನ ಆ ಮಾತುಕತೆಯಲ್ಲಿ ಯಾರ ಮನಸ್ಸು ಹಗುರವಾಯಿತು ಮತ್ತು ಯಾರ ಮನಸ್ಸು ಭಾರವಾಯಿತು..?


ಅಪ್ಪಟ ಅಮ್ಮತನವನ್ನು ಮೆರೆಯುವಂತೆ ಮಾಡಿದ ಹೊತ್ತಿನಲ್ಲಿ ಮಾಕಂದ ಅಮ್ಮನ ಕಣ್ಣಿಗೆ ಕಾಣಿಸಿದ್ದು ಹೇಗೆ..?


ಇಲ್ಲಿ ಕೇವಲ ಹರೆಯದ ಮಗನ ಬದುಕಿನಲ್ಲಿ ಬರುವ ಹುಡುಗಿಯ ವಿಚಾರ ಮಾತ್ರವಲ್ಲ.. ಮಗನ ಭವಿಷ್ಯ ಹೇಗಿರಬಹುದು ಹಾಗೂ ಆ ಭವಿಷ್ಯಕ್ಕೆ ಬರುವರ ಪರಿಸ್ಥಿತಿ ತನ್ನಂತೆಯೇ ಇದ್ದರೆ..! ಎಂಬುದು ಮಾತ್ರವಲ್ಲದೆ, ಆ ಹುಡುಗಿಯ ಕುರಿತ ಆಲೋಚನೆ ಅತ್ತೆಯ ಪರಿಧಿಯಿಂದಲ್ಲದೆ ಅಮ್ಮನ ಆಲೋಚನೆಯ ಮೂಲಕ ವ್ಯಕ್ತವಾಗಿದೆ.


ಇಲ್ಲಿ ಅಮ್ಮನ ಮಡಿಲನ್ನು ಮೀರಿ ಬೆಳೆಯುವ ಮಗುವನ್ನು ಅಮ್ಮ ಕಾಣುವ ಬಗೆ, ವಯಸ್ಸಿಗೆ ತಕ್ಕ ಪ್ರೌಢತೆ, ಗಹನವಾದ ವಿಚಾರಗಳು ಎಲ್ಲವೂ ಕಾಣುತ್ತವೆ. ಅದಾಗಿಯೂ ಅಮ್ಮನ ಮಡಿಲು ಯಾಕಷ್ಟು ಮುಖ್ಯವಾಗುತ್ತದೆ ಎಂಬುದನ್ನೂ ಇಲ್ಲಿ ಕಂಡುಕೊಳ್ಳಬಹುದು. 


ಹರೆಯದ ಮಕ್ಕಳ ಅಮ್ಮಂದಿರಾಗಿದ್ದರೆ ಇವು ನಿಮ್ಮನ್ನೂ ಕಾಡಿರಬಹುದು ಅಥವಾ ಆ ಘಟ್ಟದಲ್ಲಿ ನಾವೂ ಹೀಗೆಯೇ ಆಲೋಚಿಸಬಹುದೇನೋ.. ಸಾಂಜ್ಞಲಕ್ಷ್ಮಿ ಕನ್ನಡಿಯಂತೆ ಕಾಣುತ್ತಾಳೆ. 


ನಾಗರಾಜ ವಸ್ತಾರೆ ಅವರ ಯಾವುದಾದರೂ ಪುಸ್ತಕವನ್ನು ಓದಿದ್ದರೆ ನಿಮಗೆ ಅವರ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಅರಿವಂತೂ ಇರುತ್ತದೆ. ಅಂತಹದ್ದೇ ಚೆಂದದ ಓದು ಇದು. ಅಕಸ್ಮಾತ್ ನೀವಿನ್ನೂ ಅವರ ಪುಸ್ತಕಗಳನ್ನು ಓದಿರದಿದ್ದರೆ ಅವರ ಲೇಖ-ಲೋಕಕ್ಕೆ ಕಾಲಿಡಲು ಒಳ್ಳೆಯ ಪ್ರವೇಶಿಕೆ ಇದು.


~ ವಿಭಾ ವಿಶ್ವನಾಥ್

ಶಾಂತಿ ನಿಲಯ (ಬೆಳಕಿಂಡಿಯ ಕತೆಗಳು - 15)


"ಹೊಸ ಮನೆ ಕಟ್ಟಿಸುತ್ತಿದ್ದೇವಲ್ಲಾ..ಆ ಮನೆ ಕಟ್ಟಿಸಿದ ನಂತರ ಆ ಮನೆಗೊಂದು ಸುಂದರವಾದ ಹೆಸರಿಡಬೇಕು. ಶಾಂತಿ ನಿಲಯ ಎಂದು ಇಟ್ಟರೆ ಹೇಗೆ..??" ಎಂಬ ಪ್ರಶ್ನೆಗೆ ಇಡೀ ಮನೆಯಲ್ಲಿ ಗುಸು ಗುಸು ಆರಂಭವಾಗಿ ನಕಾರಾತ್ಮಕ ಉತ್ತರವೇ ದೊರೆತದ್ದು. ಅಪ್ಪನಿಗೆ ಬೇಸರವಾಗುತ್ತದೆ ಎಂಬ ಕಾರಣ ನೀಡಿದ್ದರು.


ಮನೆಯ ಹಿರಿ ಮಗಳ ಹೆಸರು ಅದು. ಅವಳು ಓಡಿ ಹೋಗಿ ಮದುವೆಯಾಗಿ ವರ್ಷಗಳೇ ಕಳೆದಿವೆ. ಆದರೂ, ಯಾರಿಗೂ ಅವಳ ಮೇಲೆ ಕೋಪ ತಣಿದಿಲ್ಲ. ಅಂತಹದರಲ್ಲಿ ಈ ಪ್ರಸ್ತಾಪ ಯಾರಿಗೂ ಸುತಾರಾಂ ಇಷ್ಟವಾಗಲಿಲ್ಲ. ಕೊನೆಗೆ, ಅಪ್ಪನ ಮಾತು ಎಲ್ಲರಿಗೂ ಒಪ್ಪಿಗೆಯಾಯಿತು. "ತಪ್ಪು ಮಾಡಿದವಳಿಗೆ ನಾನು ಶಿಕ್ಷೆ ಕೊಡುತ್ತಿದ್ದೇನೆ ಎಂದುಕೊಂಡು ನಾವೆಲ್ಲರೂ ಶಿಕ್ಷೆ ಅನುಭವಿಸಿದ್ದು ಸಾಕು. ಈ ಮನೆಯಲ್ಲಿ ಶಾಂತಿ ನೆಲಸಲಿ. ಮನೆಗೆ ಶಾಂತಿ ನಿಲಯ ಎಂದೇ ಹೆಸರಿಟ್ಟು ಅವಳನ್ನು ವಾಪಾಸ್ ಕರೆದುಕೊಂಡು ಬರೋಣ" ಎಂದಾಗ ತುಂಬು ಕುಟುಂಬದಲ್ಲಿ ಕಳೆದುಹೋಗಿದ್ದ ಪ್ರಶಾಂತತೆ ವಾಪಾಸ್ ದೊರೆತಿತ್ತು. ಮನೆ ಎಂದರೆ ಜನಗಳ ಒಗ್ಗೂಡುವಿಕೆ ಮಾತ್ರವಲ್ಲ.. ಮನಗಳ ಒಗ್ಗೂಡುವಿಕೆಯೂ..


~ ವಿಭಾ ವಿಶ್ವನಾಥ್

ತಪೋಭಂಗ (ಬೆಳಕಿಂಡಿಯ ಕತೆಗಳು - 14)


"ಓದು ಅಥವಾ ಬರವಣಿಗೆ ತಪಸ್ಸಿನಂತೆ.. ಏಕಾಂತದಲ್ಲಿ ಕುಳಿತು ಬರೆಯಲು ಶುರು ಮಾಡಬೇಕು" ಎಂದುಕೊಂಡು ಬರೆಯಲು ಕುಳಿತಾಗಲೆಲ್ಲಾ ವಿಷಯವೇ ಹೊಳೆಯದೇ ಎದ್ದದ್ದಿದೆ. ಆದರೆ , ಈ ಬಾರಿ ತಲೆಯಲ್ಲಿ ವಿಷಯದ ಹೊಳೆಯೇ ಪ್ರವಾಹದಂತೆ ಮುನ್ನುಗ್ಗಿ ಬರುತ್ತಿತ್ತು. ಸರಿ, ಎಲ್ಲರೂ ಅವರವರ ಪಾಡಿಗೆ ಎಲ್ಲೆಲ್ಲೋ ಹೋಗಿದ್ದಾರೆ ಇದೇ ಸರಿಯಾದ ಸಮಯ.. ಬರೆಯೋಣ, ಎಂದು ತಪಸ್ಸಿಗೆ ಕುಳಿತವಳ ಹಾಗೆ ಬರೆಯಲು ಕುಳಿತರೆ ಒಮ್ಮೆ ಕಸದ ಆಟೋ ಸದ್ದು, ಮತ್ತೊಮ್ಮೆ ಡೋರ್ ಬೆಲ್ ಸದ್ದು, ಮತ್ತೊಮ್ಮೆ ಫೋನ್ ರಿಂಗ್ ಆಗುತ್ತಿತ್ತು ಹೋಗಿ ನೋಡಿದರೆ ಮೊಬೈಲ್ ಕಂಪೆನಿಯವರ ಕರೆ. ಈ ಕರೆಕರೆಗಳಿಂದೆಲ್ಲಾ ತಪ್ಪಿಸಿಕೊಂಡು ಮನೆಗೆಲಸ ಮುಗಿಸಿ ಬರೆಯಲು ಕುಳಿತರೆ ಈ ಬಾರಿ ದೊಡ್ಡ ಕಿಡಿಗೇಡಿ ಇದನ್ನು ತಪ್ಪಿಸಲೆಂದೇ ಬಂದಂತಿತ್ತು.


ಮಗುವಿನ ಬಾಲಲೀಲೆಯನ್ನು ಬದಿಗಿರಿಸಿ ಬರೆಯುವುದಾದರೂ ಹೇಗೆ..?? ಅದರ ನಗುವೇ ಒಂದು ಮಹಾಕಾವ್ಯವಲ್ಲವೇ..


~ ವಿಭಾ ವಿಶ್ವನಾಥ್

ಸಮಯ ನಮ್ಮದು.. (ಬೆಳಕಿಂಡಿಯ ಕತೆಗಳು - 13)


"ಬರವಣಿಗೆ ಇತ್ತೀಚೆಗೆ ಕುಂಟುತ್ತಾ ಸಾಗುತ್ತಿದೆ. ಕೆಲವೊಮ್ಮೆ ಬರೆಯಲು ಸಾಧ್ಯವೇ ಆಗುವುದಿಲ್ಲ" ಎನ್ನುತ್ತಾ ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದಾಗ ಅಮ್ಮ " ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ.. ನಿನ್ನ ಸಮಯವನ್ನು ನೀನೇ ಹೊಂದಿಸಿಕೊಳ್ಳಬೇಕು ಬದಲಾಗಿ ಅದನ್ನು ಮತ್ತಾರೋ ನಿನಗಾಗಿ ಹೊಂದಿಸಿಕೊಡಲು ಸಾಧ್ಯವಿಲ್ಲ.


ಸದಾ ಕೂತೇ ಇರುವವರಿಗೂ, ದುಡಿಮೆ ಮಾಡುವವರಿಗೂ ದಿನದಲ್ಲಿ ಇರುವುದು 24 ಗಂಟೆಯೇ.. ಸಮಯ ಎಲ್ಲರಿಗೂ ಒಂದೇ. ಅದನ್ನು ಹೊಂದಿಸಿಕೊಳ್ಳಬೇಕಾಗಿರುವುದು ನಾವು. ಏಕೆಂದರೆ, ಆ ಸಮಯ ನಮ್ಮದು, ಕೇವಲ ನಮ್ಮದಷ್ಟೇ. ಅದನ್ನು ಜತನವಾಗಿ ಕಾಯ್ದುಕೊಂಡು ಜಾಣ್ಮೆಯಿಂದ ಉಪಯೋಗಿಸಿಕೊಳ್ಳುವುದು ಅಥವಾ ಪೋಲು ಮಾಡುವುದರ ಆಯ್ಕೆ ನಮ್ಮದು" ಎಂದಾಗ ಅಮ್ಮನ ಮಾತನ್ನು ಅಕ್ಷರಕ್ಕಿಳಿಸಲು ನಿರ್ಧರಿಸಿ ವಾಪಾಸ್ ಹೋಗುವಾಗ ಬಸ್ಸಿನಲ್ಲಿ ಟೈಪಿಸುತ್ತಾ ಮತ್ತೊಬ್ಬರಿಗೂ ತಲುಪಿಸಿದಳು.


~ ವಿಭಾ ವಿಶ್ವನಾಥ್

ಪ್ರತಿಭೆಯ ಅನಾವರಣ (ಬೆಳಕಿಂಡಿಯ ಕತೆಗಳು - 12)


" ಇಲ್ಲ ಅಮ್ಮ, ನನ್ನಲ್ಲಿ ಅಷ್ಟು ಧೈರ್ಯವಿಲ್ಲ. ಅದರಲ್ಲೂ ವೇದಿಕೆಯಲ್ಲಿ ಎಲ್ಲರ ಎದುರಿನಲ್ಲಿಯೂ ನಿಂತು ಹಾಡುವಷ್ಟು.. ಪ್ಲೀಸ್ ಅಮ್ಮ ಇದಕ್ಕೆಲ್ಲಾ ಒಪ್ಪಿಕೊಳ್ಳಬೇಡ. ನಾನಂತೂ ಹಾಡುವುದಿಲ್ಲ " ಎಂದು ಗೋಗರೆಯುತ್ತಾ ಹೇಳಿ ಹೇಳಿ ಸಾಕಾಗಿತ್ತು ಶ್ರಾವಣಿಗೆ. ಅಮ್ಮ ದೀಪ್ತಿಯಂತೂ ಅವಳ ಮಾತಿಗೆ ಸೊಪ್ಪು ಹಾಕದೆ "ನೀನು ಹಾಡಲೇ ಬೇಕು, ಹಾಡುತ್ತೀಯ ಅಷ್ಟೇ.. " ಎಂದು ಖಡಾಖಂಡಿತವಾಗಿ ಹೇಳಿದ್ದರು.


"ನೋಡು ಪುಟ್ಟಿ, ಎಷ್ಟೋ ಜನರಿಗೆ ಪ್ರತಿಭೆ ಇರುತ್ತದೆ. ಆದರೆ, ಅನಾವರಣಗೊಳ್ಳಲು ವೇದಿಕೆಯ ಕೊರತೆ. ಮತ್ತೆ ಹಲವರಿಗೆ ವೇದಿಕೆ ಸಿಕ್ಕರೆ ಪ್ರತಿಭೆಯ ಕೊರತೆ. ನಿನಗೆ ಒಳ್ಳೆಯ ವೇದಿಕೆ ಸಿಕ್ಕಿದೆ, ಅದೂ ನಿನ್ನ ಪ್ರತಿಭೆಯ ಫಲವಾಗಿ. ಭಯಪಡದೆ ಅದನ್ನು ಉಪಯೋಗಿಸಿಕೊಂಡು ಬೆಳೆ. ಮೊದಲಿಗೆ ಕಣ್ಮುಚ್ಚಿ ತನ್ಮಯತೆಯಿಂದ ಹಾಡು ನಂತರ ಅದೇ ಅಭ್ಯಾಸವಾಗುತ್ತದೆ. ಕೃಷ್ಣನ ಮುಂದೆ ತನ್ಮಯತೆಯಿಂದ ಹಾಡುವವಳಿಗೆ ಇದು ಲೆಕ್ಕವೇ" ಎಂದು ಧೈರ್ಯ ಹೇಳಿದ ಫಲವಾಗಿ ಉತ್ತಮ ಗಾಯನ ಪ್ರತಿಭೆಯಾಗಿ ಅನಾವರಣವಾಗಿದ್ದಾಳೆ ಶ್ರಾವಣಿ.


~ವಿಭಾ ವಿಶ್ವನಾಥ್

ವಿಧೇಯತೆಗೆ ಸಿಕ್ಕ ಫಲ (ಬೆಳಕಿಂಡಿಯ ಕತೆಗಳು - 11)


'ಈ ಮನೆಯ ಮುಂದಿನ ಒಂದು ಎಕರೆ ಹೊಲ ನನ್ನ ನಂತರ ರಾಮನಿಗೆ ಸೇರಬೇಕು' ಎಂದು ಅಜ್ಜ ಮಾಡಿಟ್ಟ ವಿಲ್ ನೋಡಿ ಎಲ್ಲರಿಗೂ ಕೋಪ ಬಂದಿತ್ತು ಜೊತೆಗೆ ಅಚ್ಚರಿಯಾಗಿತ್ತು. ಅದಕ್ಕಿಂತ ಅಚ್ಚರಿಯಾಗಿದ್ದು ಕೆಲಸದ ರಾಮನ ಪ್ರತಿಕ್ರಿಯೆ ಕಂಡು "ನನಗಿದು ಬ್ಯಾಡ ಅಯ್ಯಾ.. ಅಯ್ಯನವರ ಸೇವೆ ಮಾಡಿದ ಪುಣ್ಯವೇ ಸಾಕು " ಎನ್ನುತ್ತಿದ್ದವನನ್ನು ಕಂಡಾಗ ಅಜ್ಜ ಮಾಡಿದ್ದು ಸರಿಯಾಗಿಯೇ ಇದೆ ಎಂದೆನಿಸಿತು.


ಅಪ್ಪ, ದೊಡ್ಡಪ್ಪ ಎಲ್ಲರಿಗೂ ಅಜ್ಜನ ವಿಲ್ ಖುಷಿ ತಂದಿತ್ತು. ತಾವೆಲ್ಲರೂ ದೂರದ ಊರಿನಲ್ಲಿ ಇದ್ದಾಗ ತಮ್ಮ ಅಪ್ಪನ ಸೇವೆಯನ್ನು ವಿಧೇಯತೆಯಿಂದ ಮಾಡಿದವನಿಗೆ ಹಣ ಕೊಟ್ಟರೂ ಸ್ವೀಕರಿಸಿರಲಿಲ್ಲ. 

ಅಜ್ಜನಿಗೂ ಬಹುಶಃ ಗೊತ್ತಿದ್ದಿರಬೇಕು. ಅಂತೂ ತಮ್ಮ ವಿಧೇಯ ಮಗನಲ್ಲದ ಮಗನಿಗೂ ಆಸ್ತಿಯಲ್ಲಿ ಭಾಗ ಕೊಟ್ಟಿದ್ದರು.

ಪ್ರತಿಫಲ ಬಯಸದೆ ವಿಧೇಯತೆಯಿಂದ ಸೇವೆ ಮಾಡಿದ್ದಕ್ಕೆ ಅಂತೂ ಫಲ ಸಿಕ್ಕಿತ್ತು


~ವಿಭಾ ವಿಶ್ವನಾಥ್

ಮಿಲನ (ಪುಸ್ತಕ ಯಾನ - 444)


ಪುಸ್ತಕದ ಶೀರ್ಷಿಕೆ : ಮಿಲನ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್ 

ಮರು ಮುದ್ರಣ : 2025

ಪುಟಗಳು : 170

ಬೆಲೆ : 210 ರೂ.


ಎಷ್ಟೋ ಬಾರಿ ಮತ್ತೊಬ್ಬರ ಬದುಕನ್ನು ನೋಡಿ "ನಾವು ಆ ಬದುಕನ್ನು ಅನುಭವಿಸಬೇಕು." "ಆ ಬದುಕು ಎಷ್ಟು ಚಂದವಲ್ಲವೇ..?!" ಎನ್ನುವ ಭಾವನೆ ಹುಟ್ಟಿರುತ್ತದೆ. ನಾವು ಬದುಕುತ್ತಿರುವ ಬದುಕು ಸಹ ಬೇರೊಬ್ಬರ ಕನಸಾಗಿರಬಹುದು. ಮತ್ತೊಬ್ಬರ ಬದುಕು ಚೆಂದ ಎಂದುಕೊಳ್ಳುವ ನಮ್ಮ ಬದುಕು ಸಹ ಮತ್ತೊಬ್ಬರ ಕಣ್ಣಿಗೆ ಚೆಂದವೇ..!


ದುಡಿಯುವ ಹೆಣ್ಣಲ್ಲಿ.. ತಾನು ಮನೆಯಲ್ಲಿದ್ದು ಸುಂದರ ಕುಟುಂಬ, ಉತ್ತಮ ಗೃಹಿಣಿಯಾಗಿ ಬಾಳುವ ಕನಸು ಹುಟ್ಟಿಸಿದರೆ.. ಮನೆಯಲ್ಲಿರುವ ಗೃಹಿಣಿಗೆ ಮನೆಯ ಬಂಧನದಿಂದ ಹೊರಬಂದು ತನ್ನ ಖರ್ಚಿಗೆ ಬೇಕಾಗುವಷ್ಟು ಹಣವನ್ನು ತಾನೇ ದುಡಿದು, ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ತನ್ನ ಆಸೆಗಳನ್ನು ಪೂರೈಸಿಕೊಳ್ಳುವ ಬಯಕೆ. ಇಂತಹ ಇಬ್ಬರು ಹೆಣ್ಣು ಮಕ್ಕಳು ಈ ಕಾದಂಬರಿಯಲ್ಲಿ ಕಾಣುತ್ತಾರೆ. ಅವರೇ ಕ್ಷಮ ಮತ್ತು ವಿಶಾಲಿ. 


ಈ ಕಾದಂಬರಿಯ ಶೀರ್ಷಿಕೆಗೆ ಇದು ಪೂರಕವಾಗಿ ಸಾಗುವ ಕಥೆ. ಪ್ರಣಯ, ಪ್ರೀತಿಯ ಶೀರ್ಷಿಕೆಯನ್ನು ಹೊಂದಿರುವ ಈ ಕಥೆಯಲ್ಲಿ ಪ್ರೇಮವೂ ಇದೆ ಹಾಗೂ ಸಮಾಜದಲ್ಲಿ ಕಾಣುವ ಮುಖವಾಡದ ವಂಚಕ ಪ್ರೇಮಿಗಳ ಬದುಕು ಸಹ ಇದೆ. ಈ ಕಾದಂಬರಿ 1970-80ರ ದಶಕದಲ್ಲಿಯೇ ಎರಡು ಮುದ್ರಣವನ್ನು ಕಂಡು ಈಗ ಸಾಹಿತ್ಯಲೋಕ ಪಬ್ಲಿಕೇಷನ್ ನಿಂದ ಮರುಮುದ್ರಣಗೊಂಡಿದೆ. 


ಚಿತ್ರಲೇಖ ಮೇಡಂ ಈ ಕಥೆ ಹುಟ್ಟಿದ ಹಿನ್ನೆಲೆಯನ್ನು ಹೀಗೆ ಹೇಳುತ್ತಾರೆ. ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾಗ 23 ದಿನಗಳ ಆಸ್ಪತ್ರೆ ವಾಸದಲ್ಲಿ ರೂಪುಗೊಂಡ ಏಕೈಕ ಕಾದಂಬರಿ ಇದು. ಆಗ ಅಲ್ಲಿ ಭೇಟಿಯಾದ ತರುಣಿಯೊಬ್ಬಳು ಅಳುತ್ತಿರುವುದನ್ನು ಕಂಡಿದ್ದರು. ಕುತೂಹಲದಿಂದ ವಿಚಾರಿಸಿದಾಗ ಆ ತರುಣಿಯ ಹಿಂದಿನ ಪ್ರೇಮಿ ಅಪಘಾತಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದನು. ಹೌದು, ಹಿಂದಿನ ಪ್ರೇಮಿಯೇ.. ಈಗಾಗಲೇ ಆತನಿಗೆ ಮದುವೆಯಾಗಿತ್ತು. ಈಕೆಗೆ ಮೋಸ ಮಾಡಿ ಮದುವೆಯಾದವನನ್ನು ಕುರಿತು ಆಕೆಗೆ ಕಾಳಜಿ. ಆ ಯುವತಿಯ ಮನಸ್ಥಿತಿ ಲೇಖಕಿಯಲ್ಲಿ ಕೋಪ, ಮರುಕ ಅಸಹ್ಯದ ತಾಕಲಾಟ ಹುಟ್ಟಿಸಿತ್ತು. ಆಗ ರೂಪುಗೊಂಡು ಕಾದಂಬರಿ ಇದು ಎನ್ನುತ್ತಾರೆ.


ಮೊದಲಿಗೆ ಕ್ಷಮಳ ಆಫೀಸಿನಲ್ಲಿ ಸಾವಿತ್ರಿಯ ಸಂಸಾರದ ಚಿತ್ರಣ ಕಾಣುತ್ತದೆ. ಸಂಪಾದಿಸಿದ ಹೆಣ್ಣು ಬೇಕು ಎಂದು ಮದುವೆಯಾಗಿದ್ದ ಸಾವಿತ್ರಿಯ ಗಂಡ ಆಕೆಯ ಕಾಳಜಿ ತೆಗೆದುಕೊಳ್ಳಲು ಸಿದ್ಧವಿರಲಿಲ್ಲ. ಗರ್ಭಿಣಿಯಾಗಿದ್ದ ಅವಳ ಆರೋಗ್ಯದ ಸ್ಥಿತಿಯನ್ನು ಅವಳೇ ನೋಡಿಕೊಳ್ಳಬೇಕಿತ್ತು. ಆಗ ಕ್ಷಮಳ ಬಳಿಯಲ್ಲಿ ಹಣದ ಸಹಾಯ ತೆಗೆದುಕೊಂಡಿದ್ದಳು. ವಿಪರ್ಯಾಸವೆಂದರೆ, ಸಾವಿತ್ರಿ ಉಳಿಯಲಿಲ್ಲ. ಹಾಗೆಂದು ಕ್ಷಮಳ ಹಣವನ್ನು ಋಣವನ್ನು ಆಕೆ ಇಟ್ಟುಕೊಳ್ಳಲಿಲ್ಲ. ಆದರೆ, ಅಸಹ್ಯ ತರಿಸಿದೆಂದರೆ ಸಾವಿತ್ರಿಯ ಸಾವಿನ ಕಂಬನಿ ಆರುವ ಮುನ್ನವೇ ಆಕೆಯ ಗಂಡ ಆಕೆಯ ಇನ್ಸೂರೆನ್ಸ್ ಹಣದ ಕುರಿತಾಗಿ ವಿಚಾರಿಸಿದ್ದು. ಕ್ಷಮಳ ಮನಸ್ಸಿನಲ್ಲಿ ವಿವಾಹಿತರ ಕುರಿತು ಹಾಗೂ ಅವಿವಾಹಿತೆಯಾದ ತನ್ನ ಕುರಿತು ಹುಟ್ಟುವ ಆಲೋಚನೆಗಳ ಕುರಿತು ಓದಿ ನೋಡಿ. 


ವಿಶಾಲಿಯ ವಿವಾಹವಾಗಿತ್ತು. ದೊಡ್ಡ ಮನೆ, ಸೌಕರ್ಯವಾದ ಬಾಳು. ಆದರೂ ಅವಳಿಗೆ ಬದುಕು ಶೂನ್ಯವೆನಿಸುತ್ತಿತ್ತು. ತಾನು ಬಾಡಿಗೆಗಿದ್ದ ಎದುರು ಮನೆಯಿಂದ ಕೆಲಸಕ್ಕೆ ಹೋಗುವ ಹುಡುಗಿಯನ್ನು ವೀಕ್ಷಿಸುತ್ತಿದ್ದಳು ಅವಳು. ಆ ಹುಡುಗಿಯೇ ಕ್ಷಮ. ಶೀಘ್ರ ಲಿಪಿಕಾರಳಾಗಿ ಆಫೀಸಿನಲ್ಲಿ ದುಡಿಯುತ್ತಿದ್ದ ಹೆಣ್ಣು. ತಂಗಿ ಕ್ಷೀರ, ಅಮ್ಮ ಹಾಗೂ ತಮ್ಮನನ್ನು ತನ್ನ ಹಣದಿಂದ ಸಾಕುತ್ತಿದ್ದಳು. ಪುಟ್ಟ ತಮ್ಮ ಹೊಟ್ಟೆಯಲ್ಲಿದ್ದಾಗಲೇ ತೀರಿಹೋಗಿದ್ದ ಅವಳ ಅಪ್ಪನ ಜಾಗದಲ್ಲಿ ನಿಂತು ಅವಳು ಕರ್ತವ್ಯ ನಿರ್ವಹಿಸುತ್ತಿದ್ದಳು. ಹೀಗಾಗಿ ಸೋದರತ್ತೆಯ ಮಗ ಗೋಪುವಿನ ಜೊತೆಗೆ ಆಗಬೇಕಾಗಿದ್ದ ವಿವಾಹವೂ ಆಗಲಿಲ್ಲ. ಕ್ಷಮ ತನ್ನ ಮನೆಯನ್ನು ನಡುನೀರಿನ ಪರಿಸ್ಥಿತಿಯಲ್ಲಿ ಬಿಟ್ಟು ಹೊರಡಲು ಸಿದ್ದಳಿರಲಿಲ್ಲ. ದುಡಿಯುವ ಹೆಣ್ಣು ತವರಿಗೆ ಸಹಾಯ ಮಾಡುವುದನ್ನು ಗಂಡಿನ ಮನೆಯವರು ಒಪ್ಪಲು ಸಿದ್ಧವಿರಲಿಲ್ಲ. ಇದು ಗೋಪು ಒಬ್ಬನ ಕಥೆಯಲ್ಲ. ಹೆಚ್ಚಿನವರ ಕಥೆ ಹಾಗೆಯೇ ಇತ್ತು. ಆದರೆ, ಇದಾವುದಕ್ಕೂ ಕುಗ್ಗದೆ, ಮನಸ್ಸನ್ನು ಚಿಕ್ಕದು ಮಾಡಿಕೊಳ್ಳದೆ ಕೇವಲ ಆಫೀಸಿನಲ್ಲಿ ಮಾತ್ರವಲ್ಲದೆ ಸಂಜೆ ಪಾರ್ಟ್ ಟೈಮ್ ಕೆಲಸವನ್ನೂ ಮಾಡಿ ಸಂಸಾರವನ್ನು ಪೋಷಿಸುತ್ತಿದ್ದ ದಿಟ್ಟ ಹುಡುಗಿ ಕ್ಷಮ. 


ವಿಶಾಲಿಯದ್ದು ಮತ್ತೊಂದು ತರಹದ ಕಥೆ. ವಿಶಾಲಿಯ ತಾಯಿ ಅವಳು ಚಿಕ್ಕಂದಿನಿಂದಾಗಲೇ ತೀರಿಹೋಗಿದ್ದರು. ಅವಳ ತಂದೆ ಎರಡನೇ ಮದುವೆಯಾಗಿದ್ದರು. ಹಾಗೆಂದು ಚಿಕ್ಕಮ್ಮ ಆಕೆಯನ್ನು ಕಡೆಗಣಿಸಿರಲಿಲ್ಲ. ಗಂಡು ಮಕ್ಕಳಿದ್ದ ಆಕೆಗೆ ಮಗಳಾಗಿ ವಿಶಾಲಿ ಇದ್ದಳು. ವಿಶಾಲಿಯ ಸ್ವಂತ ತಾಯಿಯ ತಮ್ಮನ ಮಗ ಭಾಸ್ಕರನಿಗೆ ವಿಶಾಲಿ ಎಂದು ಯಾವಾಗಲೋ ತೀರ್ಮಾನವಾಗಿದ್ದ ಮಾತನ್ನು ತಂಗಿ ಸತ್ತಳೆಂದು ಅವರು ಕಳೆದುಕೊಂಡಿರಲಿಲ್ಲ. ಭಾಸ್ಕರ ಹಾಗೂ ವಿಶಾಲಿಯರ ವಿವಾಹವಾಗಿತ್ತು. ಭಾಸ್ಕರ ಪೂರ್ಣಸಮ್ಮತಿಯಿಂದೇನೂ ಈ ವಿವಾಹಕ್ಕೆ ಒಪ್ಪದಿದ್ದರೂ.. ವಿವಾಹದ ನಂತರ ವಿಶಾಲಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. 


ವಿಶಾಲಿ ಹಾಗೂ ಕ್ಷಮ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಭೇಟಿಯಾಗಿರಲಿಲ್ಲ. ಆದರೂ ಪರಸ್ಪರ ರ ನೋಟ ಇಬ್ಬರಿಗೂ ಪರಿಚಯ. ಎಷ್ಟಾದರೂ ಕುತೂಹಲ ಇದ್ದೇ ಇರುತ್ತದೆ ಅಲ್ಲವೇ..? 


ಭಾಸ್ಕರನ ಕೋಪ, ಸಿಡುಕನ್ನು ಸಹಿಸಿಕೊಂಡು ವಿಶಾಲಿ ಆತನನ್ನು ದಿನೇ ದಿನೇ ಹೆಚ್ಚಾಗಿ ಪ್ರೇಮಿಸುತ್ತಲೇ ಹೋಗುತ್ತಿದ್ದಳು. ಆತನಿಗೆ ಪತ್ನಿ ತಗ್ಗಿ-ಬಗ್ಗಿ ನಡೆದಾಗ, ಸೋತಾಗ ಹೆಚ್ಚು ಖುಷಿ. ಅಂತೆಯೇ ಸಾಗುತ್ತಿದ್ದ ಬದುಕಿನಲ್ಲಿ ವಿಶಾಲಿಗೆ ತಾನು ಕಂಡ ವಿಚಾರಗಳನ್ನು ಬಣ್ಣಿಸುತ್ತಿದ್ದಳು. ಕ್ಷಮಳ ಕುರಿತು ಆತನಿಗೆ ತನ್ನ ಮನದ ಮಾತುಗಳನ್ನು ಹೇಳುತ್ತಿದ್ದಳು. 'ಹುಲ್ಲೆ ಮರಿ' ಎಂದು ಕರೆಯುತ್ತಿದ್ದ ಆತ ಕ್ಷಮಾಳ ವಿಚಾರವನ್ನು ಕೇಳಿಸಿಕೊಳ್ಳಲು ಮನಸ್ಸಿಲ್ಲವೆಂಬಂತೆ ನಟಿಸಿದರೂ.. ಆತನಿಗೂ ಅದು ಇಷ್ಟವೇ ಆಗುತ್ತಿತ್ತು. ಆದರೆ, ಹಾಗೆಂದು ಬಾಯಿಬಿಟ್ಟು ಹೇಳುತ್ತಿರಲಿಲ್ಲ. 


ಭಾಸ್ಕರ ಹಾಗೂ ವಿಶಾಲಿಯರ ಬದುಕಿನ ವಸಂತದ ಸೂಚನೆಯಲ್ಲಿಯೂ ವಿಶಾಲಿ ತವರಿಗೆ ಹೋಗುವ ತವಕ ತೋರಲಿಲ್ಲ. ಅವಳಿಗೆ ಭಾಸ್ಕರನನ್ನು ಬಿಟ್ಟು ಬೇರೆ ಪ್ರಪಂಚವೇ ಇಲ್ಲವೆಂಬಂತೆ ಅವನನ್ನು ಬಹಳವಾಗಿ ಪ್ರೀತಿಸುತ್ತಿದ್ದಳು. 


ಇತ್ತ ಕ್ಷಮ ಬದುಕಲ್ಲಿ ಗೋಪುವಿನ ಮದುವೆಯಾದ ನಂತರ ಒಂದು ರೀತಿಯಲ್ಲಿ ತನ್ನ ಮನೆಗಾಗಿಯೇ ಎಂಬಂತೆ ದುಡಿಯುತ್ತಿದ್ದಳು. ತೀರಾ ಪ್ರೀತಿ-ಪ್ರೇಮ ಎಂದು ಮನಸ್ಸಿಗೆ ಹಚ್ಚಿಕೊಳ್ಳದಿದ್ದರೂ.. ಗೋಪುವಿನ ವಿವಾಹದಲ್ಲಿ ಮನೆಯವಳಂತೆ ಓಡಾಡಿದಳು. ಗೋಪು ಹಾಗೂ ಅವಳ ಒಡನಾಟ ಹೇಗಿತ್ತು ಓದಿ ನೋಡಿ. 


ಕ್ಷಮ ಒಂದು ದಿನ ಅಪಘಾತಕ್ಕೆ ಒಳಗಾದಾಗ ಪರಿಚಯವಾದ ಮಹೇಂದ್ರ ಅವಳ ಬಾಳಲ್ಲಿ ಯಾವೆಲ್ಲ ರಾಗರಂಜಿತ ಕನಸುಗಳನ್ನು ತುಂಬುತ್ತಾನೆ..? ಕ್ಷಮಳ ಮನಸ್ಸು ಜಾರಿ ಪ್ರೀತಿಯಲ್ಲಿ ಬಿದ್ದ ದಿನಗಳು, ಅವಳ ನಡೆ, ಅಲಂಕಾರ ಎಲ್ಲವೂ ಹೇಗಿತ್ತು..? ಅನಾಥನಾಗಿದ್ದ ಮಹೇಂದ್ರ ತನ್ನ ತಾಯಿಗೆ ಕರೆತಂದು ಪರಿಚಯ ಮಾಡಿಸುವುದಕ್ಕೂ ಮುನ್ನವೇ ಕ್ಷಮ ಆತನನ್ನು ತನ್ನವನೆಂದು ಸ್ವೀಕರಿಸಿಯಾಗಿತ್ತು. ಕ್ಷಮ ಅದೊಂದು ನಡೆಯಲ್ಲಿ ಎಡವಿದಳೇ..?


ಇಲ್ಲಿ ಕ್ಷಮ ಅಥವಾ ವಿಶಾಲಿ ಇಬ್ಬರೂ ತನ್ನ ಸಂಗಾತಿ ತನ್ನನ್ನು ಮಾತ್ರ ಪ್ರೀತಿಸಬೇಕು ಜೊತೆಗೆ ಏಕಪತ್ನಿ ವ್ರತಸ್ಥನಾಗಿರಬೇಕು ಎಂಬ ಬಯಕೆಯನ್ನೇ ಇಟ್ಟುಕೊಂಡಿರುವುದು ಎಲ್ಲಾ ಹೆಣ್ಣು ಮಕ್ಕಳ ಮನಸ್ಸಿನ ಮಾತಿನಂತಿದೆ.


ಕ್ಷಮಳ ಪ್ರೀತಿಗೆ ಮಹೇಂದ್ರ ಸರಿಯಾದ ವ್ಯಕ್ತಿಯಾಗಿದ್ದ ನೇ..? ಭಾಸ್ಕರ ಯಾವೆಲ್ಲಾ ನಡೆಗಳನ್ನು ಬದಲಿಸಿಕೊಂಡಿದ್ದರೆ ವಿಶಾಲುವಿನ ಪ್ರೀತಿಗೆ ಅರ್ಹ ವ್ಯಕ್ತಿಯಾಗುತ್ತಿದ್ದ..?


ಕ್ಷಮ ಹಾಗೂ ವಿಶಾಲಿ ಇಬ್ಬರ ಬದುಕು ಒಂದು ಘಟ್ಟದಲ್ಲಿ ಮಿಳಿತವಾಗುವ ಸಂದರ್ಭ ಬರುತ್ತದೆ. ಆ ಸಂದರ್ಭ ಯಾವುದು..? ಓದಿ ನೋಡಿ. 


ಕಥೆಯ ಶೀರ್ಷಿಕೆ ಹಾಗೂ ನಿರೂಪಣೆ ಕಥೆಯನ್ನು ಎಲ್ಲಿಯೂ ಬಿಟ್ಟುಕೊಡದಂತೆ ಸಾಗುತ್ತದೆ. ಅಂತ್ಯದಲ್ಲಿ ಬರುವ ಟ್ವಿಸ್ಟ್ ವಿಶಾಲು ಹಾಗೂ ಕ್ಷಮ ಇಬ್ಬರ ಬದುಕನ್ನು ಬದಲಿಸುವ ಬಗೆ ಹೇಗೆ..? ತಿಳಿಯಲು ಓದಿ ಚಿತ್ರಲೇಖ ಮೇಡಂ ಅವರ ಕಾದಂಬರಿ ಮಿಲನ.


~ವಿಭಾ ವಿಶ್ವನಾಥ್

ಅವಳು ನಟಿಯೇನಲ್ಲ (ಅವಳ ಕವಿತೆಗಳು - 23)


ಅವಳು ನಟಿಯೇನಲ್ಲ

ಆದರೆ..

ಅಳು ನುಂಗಿ ನಗುವ ಕಲೆ

ಮೇಕಪ್ ಇಲ್ಲದೆಯೂ ನಟಿಸುವ

ನೋವನ್ನು ಮರೆಮಾಚುವ ಕಲೆ

ಎಲ್ಲವನ್ನೂ ಸಂಭಾಳಿಸುತ್ತಲೇ

ತನ್ನದೇನೂ ಇಲ್ಲವೆಂಬಂತೆ

ಮತ್ತೊಮ್ಮೆ ಎಲ್ಲವೂ ತನ್ನದೆನ್ನುವ

ಮುಖವಾಡ ಹಾಕದೆಯೇ

ಒಳ್ಳೆಯವಳಾಗಿ ಮಾತ್ರವೇ ಕಾಣುವ

ಎಲ್ಲವನ್ನೂ ನಿಭಾಯಿಸುವ

ಕಲೆ ಕರಗತ ಮಾಡಿಕೊಂಡಿರುವವಳು

ಅಲ್ಲಿ, ಇಲ್ಲಿ ಎಲ್ಲಿಯೂ ದುಡಿಯುತ್ತಾ

ಸಕಲ ಪಾತ್ರಗಳಿಗೂ ಹೊಂದುತ್ತಾಳೆ


~ವಿಭಾ ವಿಶ್ವನಾಥ್

ಭಾನುವಾರ, ಮೇ 3, 2026

ಮಾರ್ಗದರ್ಶಿ (ಬೆಳಕಿಂಡಿಯ ಕತೆಗಳು - 10)


"ಅಮ್ಮ, ಈ ಬೋರ್ಡ್ ನೋಡಿಲ್ಲಿ.. ಈ ದಾರಿಯಿಂದ ಹೋದರೆ ಊರಿಗೆ ಬೇಗ ಹೋಗಬಹುದಲ್ಲ, ಇಲ್ಲಿಂದ 4 ಕಿಲೋಮೀಟರ್ ಆದರೆ ಮುಖ್ಯ ರಸ್ತೆಯಲ್ಲಿ ಹೋದರೆ 8 ಕಿಲೋಮೀಟರ್ ಆಗುತ್ತದೆ. ಇಲ್ಲಿಂದಲೇ ಹೋಗೋಣ " ಎಂದ ಬೈಕ್ ಓಡಿಸುವ ಮಗನ ಮಾತಿಗೆ ಮೊದಲು ನಕಾರ ಸೂಚಿಸಿದಾಗ "ನಿನಗೇನು ಗೊತ್ತಾಗುತ್ತೆ ಸುಮ್ಮನಿರಮ್ಮ" ಎಂದು ಗದರಿದಾಗ ಬದಲಿ ಹೇಳದೆ "ಸರಿ ನಿನ್ನಷ್ಟ" ಎಂದಳು ಸುಜಾತ.


ಆದರೆ, ಕಲ್ಲು ಮಣ್ಣುಗಳಿಂದ ಕೂಡಿದ್ದ ಅಡ್ಡದಾರಿಯಲ್ಲಿ ಅರ್ಧ-ಮುಕ್ಕಾಲು ಗಂಟೆಯ ನಂತರ ಹೇಗೋ ಊರು ತಲುಪಿದಾಗ "ನಿನ್ನ ಮಾತು ಕೇಳಬೇಕಿತ್ತಮ್ಮ" ಎಂದವನ ಮಾತಿಗೆ ಸುಜಾತ "ಬದುಕಲ್ಲಿಯೂ ಹೀಗೇ ಗುರಿ ಬೇಗ ತಲುಪಲು ಸನ್ಮಾರ್ಗ ಬಿಟ್ಟು ದುರ್ಮಾರ್ಗ ಹಿಡಿದು ಬಿಡುತ್ತೇವೆ. ಇನ್ನು ಮುಂದೆ ಎಚ್ಚರಿಕೆಯಿಂದ ದಾರಿ ಆಯ್ದುಕೋ" ಎಂದಾಗ " ನಿನ್ನಂತಹಾ ಮಾರ್ಗದರ್ಶಿಯ ಮಾತು ಕೇಳಿ ಇನ್ನು ಸನ್ಮಾರ್ಗದಲ್ಲಿ ನಡೆಯುವೆ" ಎಂದವನಿಗೆ ತಡವಾದರೂ ಜ್ಞಾನೋದಯವಾಗಿತ್ತು.


~ವಿಭಾ ವಿಶ್ವನಾಥ್

ಕದಡದ ಬಿಂಬ (ಬೆಳಕಿಂಡಿಯ ಕತೆಗಳು - 9)


"ಅತ್ತು ಬಿಡೆ ಉಮಾ ಒಮ್ಮೆ.. ಈಗಲಾದರೂ ಅತ್ತು ಬಿಡೆ. 

ಎಷ್ಟು ಅಂತಾ ದುಃಖವನ್ನು ತಡೆ ಹಿಡಿಯುತ್ತೀಯ ಹೇಳು.. ಹಾಗೆಲ್ಲಾ ಇರಬಾರದಮ್ಮಾ

ಒಳಗಡೆ ಹೆಪ್ಪುಗಟ್ಟಿಕೊಂಡ ನೋವೆಲ್ಲಾ ಒಮ್ಮೆ ಕಣ್ಣೀರಿನ ಹೊರಬಂದು ಬಿಡಲಿ. ಮನಸ್ಸು ಸಹಾ ಹಗುರವಾಗುತ್ತೆ. " ಎಂದು ಹೇಳುತ್ತಿದ್ದರೂ ಉಮಾ ಕಲ್ಲಿನಂತೆಯೇ ಕುಳಿತಿದ್ದಳು.


ಅವಳದ್ದು ಎಂತಹಾ ಕಲ್ಲು ಮನಸ್ಸು ಎಂದುಕೊಂಡರೂ ಅವಳ ದೌರ್ಭಾಗ್ಯಕ್ಕೆ ಮರುಗಿದವರೇ ಎಲ್ಲರೂ.. ಮದುವೆಯಾದ ತಿಂಗಳಲ್ಲೇ ಸೌಭಾಗ್ಯವನ್ನು ಕಳೆದುಕೊಂಡಾಗ ಉಮಾ ಅಳದೆ ಇರುವುದು ಅಚ್ಚರಿ ತರಿಸಿದರೂ ಅವಳ ಉತ್ತರ ಎಲ್ಲರ ಕಣ್ಣಲ್ಲೂ ಮತ್ತಷ್ಟು ಕಣ್ಣೀರು ಮೂಡಿಸಿತ್ತು.


"ನಾನು ಅತ್ತರೆ ನನ್ನ ಕಣ್ಣಲ್ಲಿನ ಅವರ ಬಿಂಬ ಕರಗಿ ಹೋಗುತ್ತದೆ ಅಮ್ಮ. ನಾನು ಅಳಲಾರೆ. ಇಂದಲ್ಲಾ ಎಂದೆಂದಿಗೂ.. "


ಅವಳ ದಿಟ್ಟತೆ ಮಿಶ್ರಿತ ಪ್ರೀತಿಯ ಬಿಂಬ ಹಾಗೇ ಉಳಿದು ಬಿಡಲಿ.


~ ವಿಭಾ ವಿಶ್ವನಾಥ್

ಬದುಕಿನ ಪರೀಕ್ಷೆ (ಬೆಳಕಿಂಡಿಯ ಕತೆಗಳು - 8)


"ಅಂಕ" ನಮ್ಮ ಬದುಕಲ್ಲಿ ಮುಖ್ಯವೇ ಅಮ್ಮ ಎಂದು ಕೇಳಿದ ಮಗುವಿಗೆ

ಅಂಕವೇ ಬದುಕು. ಅದಕ್ಕಾಗಿಯೇ ನೀನು ಕಷ್ಟಪಡಬೇಕು ಎಂದ ಅಮ್ಮನ ಮಗ ಅಂಕಗಳು ಕಡಿಮೆಯಾದವೆನ್ನುವ ಸಣ್ಣ ನಿರಾಶೆಗೆ ಖಿನ್ನತೆಯ ಮೆಟ್ಟಿಲೇರುತ್ತಿದ್ದ.


ಅಂಕ ಬದುಕಲ್ಲಿ ಮುಖ್ಯ ಹೌದು. ಆದರೆ, ಅಂಕವೇ ಬದುಕಲ್ಲ ಎಂದಾಗ ಅಮ್ಮ ನೀಡಿದ ಧೈರ್ಯದಿಂದ ಮಗ ಸಾಧನೆಯ ಹಾದಿಯ ಮೆಟ್ಟಿಲೇರುತ್ತಿದ್ದಾನೆ.


ಅಂಕವೇ ಬದುಕಾಗಬಾರದು.. ಬದುಕಲ್ಲಿ ಮುನ್ನಡೆಯಲು ಅಂಕ ಪಡೆಯುವತ್ತ ಹೆಜ್ಜೆ ಹಾಕಿದಲ್ಲಿ ಬದುಕಿನ ಪರೀಕ್ಷೆಯಲ್ಲಿ ಉತ್ತೀರ್ಣತೆ ಕಟ್ಟಿಟ್ಟ ಬುತ್ತಿ.


~ವಿಭಾ ವಿಶ್ವನಾಥ್

ಆಸರೆ (ಬೆಳಕಿಂಡಿಯ ಕತೆಗಳು - 7)


ಸಂಜೆ ಮನೆಯ ಕಾಂಪೌಂಡ್ ನಲ್ಲಿದ್ದ ಮರದ ನೆರಳಲ್ಲಿ ಕುಳಿತವನಿಗೆ ಹಕ್ಕಿಗಳ ಚಿಲಿಪಿಲಿ ಕಲರವ ಕಂಡು ಕತ್ತೆತ್ತಿ ನೋಡಿದ. ಎಷ್ಟೋ ಹಕ್ಕಿಗಳಿಗೆ ಆಸರೆಯಾಗಿದ್ದ ಮರವನ್ನು ಕಂಡು ಕಣ್ಣಲ್ಲಿ ನೀರಾಡಿತು.


ಅಪ್ಪ ನೆಟ್ಟಿದ್ದ ಈ ಮರ ನಿಸ್ವಾರ್ಥದಿಂದ ಎಷ್ಟೋ ಜೀವರಾಶಿಗಳಿಗೆ ಆಸರೆಯಾಗಿದೆ. ಆದರೆ, ಮುಪ್ಪಿನಲ್ಲಿ ಅವರಿಗೆ ಆಸರೆಯಾಗದೆ ತಾನು ಸ್ವಾರ್ಥಿಯಾಗಿ ಆಲೋಚಿಸಿ ಅಪ್ಪನನ್ನು ವೃದ್ದಾಶ್ರಮಕ್ಕೆ ಬಿಟ್ಟದ್ದು ನೆನಪಾಯಿತು. ತಕ್ಷಣವೇ ಅಪ್ಪನಿಗೆ ಕರೆ ಮಾಡಿ ತಾನು ಅವರನ್ನು ಮನೆಗೆ ಕರೆದುಕೊಂಡು ಬರಲು ಬರುತ್ತಿರುವುದಾಗಿ ಹೇಳಿದ.


ಆಸರೆ ಅನಿವಾರ್ಯತೆಗಲ್ಲ, ಸ್ವಾರ್ಥಕ್ಕೂ ಅಲ್ಲ.. ನಿಸ್ವಾರ್ಥ ಪ್ರೀತಿಯಿಂದ ಆಸರೆ ನೀಡಿದರೆ ಅದರ ನೆಳಲಿನ ನೆಮ್ಮದಿಯೇ ಬೇರೆ..


~ವಿಭಾ ವಿಶ್ವನಾಥ್

ಸ್ವಾತಂತ್ರ್ಯದ ಕಾಣಿಕೆ (ಬೆಳಕಿಂಡಿಯ ಕತೆಗಳು - 6)


ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ನನ್ನ ಕಡೆಯಿಂದ ಇದೊಂದು ಪುಟ್ಟ ಕಾಣಿಕೆ. ನೋಡಿಲ್ಲಿ.. ಎನ್ನುತ್ತಾ ಅವನು ಕೊಟ್ಟ ಕಾಣಿಕೆಯನ್ನು ನೋಡಿದೆ. 

ಅರೆ..! ಲವ್ ಬರ್ಡ್ಸ್ 

ಆದರೆ, ಅವುಗಳು ಪಂಜರದ ಬಂಧಿಗಳು


ಕಾಣಿಕೆಯ ರೂಪದಲ್ಲಿ ಕೊಟ್ಟ ಅವುಗಳನ್ನು ಕಂಡ ಆ ಕ್ಷಣಕ್ಕೆ ಮನಸ್ಸು ಮುದಗೊಂಡಿತ್ತು. ಅವುಗಳಿಗೂ ಏನಾದರೂ ಕೊಡಬೇಕೆನಿಸಿತು. ಪಂಜರದ ಬಾಗಿಲು ತೆಗೆದಿಟ್ಟೆ.

ಸ್ವತಂತ್ರದ ಕಾಣಿಕೆಯನ್ನು ಮನಸಾರೆ ಅನುಭವಿಸುತ್ತಿದ್ದವು ಅವು.. ನನ್ನ ನನಸಾಗದ ಕನಸನ್ನು..


~ ವಿಭಾ ವಿಶ್ವನಾಥ್

ಅಲ್ಪಾಯುಷಿ (ಬೆಳಕಿಂಡಿಯ ಕತೆಗಳು - 5)


ಪ್ರೀತಿಯ ಉಡುಗೊರೆ ಏನು ಬೇಕೆಂದು ಕೇಳಿದ್ದೇ ತಡ ಅದಕ್ಕೇ ಕಾಯುತ್ತಿದ್ದವಳ ಹಾಗೆ ಪಾರಿಜಾತದ ಗಿಡ ಎಂದೆ.. 

ಅವನು ಆ ಆಸೆಯನ್ನು ನೆರವೇರಿಸಿದ. ನಾನು ಕೇಳಿದ್ದು ನನಗೆ ದಕ್ಕಿಯೂ ದಕ್ಕದಂತಾಯಿತು..

ಥೇಟ್ ರುಕ್ಮಿಣಿಯ ಬದುಕಿನಂತೆಯೇ ಆಯಿತಲ್ಲ. ದಕ್ಕಿದ್ದು ಗಿಡ ಮಾತ್ರವೇ.. ಹೂವೆಲ್ಲವೂ ಭಾಮೆಯಂತಹಾ ಅವಳ ಪಾಲಿಗೆ..

ಹೀಗೇಕೆಂದು ಕೇಳಿದಾಗ ನೀ ಕೇಳಿದ್ದು ನಿನಗೆ ಸಿಕ್ಕಿತ್ತಲ್ಲ ಎಂದ.. ಬರಿಯ ಪರಿಮಳ ಆಘ್ರಾಣಿಸಿ ಸುಮ್ಮನಿರಲಾಗಲಿಲ್ಲ. ನಮ್ಮ ಪ್ರೀತಿಯೂ ಪಾರಿಜಾತದಷ್ಟೇ ಅಲ್ಪಾಯುಷಿ ಎಂದೆನಿಸಿಬಿಟ್ಟಿತ್ತು.


ಪಾರಿಜಾತದ ಗಿಡವನ್ನು ಪೋಷಿಸುವ ಮನಸ್ಸಾಗಲಿಲ್ಲ.. ಪಾರಿಜಾತದ ಗಿಡ ಒಣಗಿ ಹೋಯಿತು. ಅಂತೆಯೇ, ನಮ್ಮ ನಡುವಿನ ಪ್ರೀತಿಯೂ..


~ವಿಭಾ ವಿಶ್ವನಾಥ್

ಆ ಆರೋಪದಿಂದ.. (ಬೆಳಕಿಂಡಿಯ ಕತೆಗಳು - 4)

ಎಲ್ಲಾ ಆರೋಪಗಳು ಸಹಾ ಶಾಪವೇ ಆಗಿರಬೇಕೆಂದೇನೂ ಇಲ್ಲವಲ್ಲ..  ಕೆಲವೊಮ್ಮೆ ಶಾಪಗಳೂ ಸಹಾ ವರವಾಗಬಲ್ಲವು..!


ಚಿನ್ನದಂತಹಾ ಹುಡುಗಿಯ ಮೇಲೆ ಆರೋಪ ಹೊರಿಸಿದ್ದರಿಂದಲೇ ಗೊತ್ತಾಗಿದ್ದು ಅವಳು ಕೇವಲ ಹೊಳೆಯುವ ರತ್ನದಂತಹವಳಲ್ಲ ಬದಲಿಗೆ ವಜ್ರದಂತಹಾ ನಡತೆ ಉಳ್ಳವಳೆಂದು.. 


~ ವಿಭಾ ವಿಶ್ವನಾಥ್

ಸಂತೃಪ್ತಿ (ಬೆಳಕಿಂಡಿಯ ಕತೆಗಳು - 3)


"ಪುಟ್ಟಿ ಈ ತಿಂಡಿಯನ್ನು ಮರದ ಕೆಳಗೆ ಕೂತಿರೋ ವಯಸ್ಸಾದ ಅಜ್ಜಿಗೆ ಕೊಟ್ಟು ಬಾ.." ಎಂದ ಅನುವಿಗೆ ಮಗಳು ಜಿತು 

"ಅಮ್ಮ, ಅವರು ನಿನಗೆ ಗೊತ್ತಾ..??" ಎಂದು ಕೇಳಿದಳು. 

"ಇಲ್ಲ ಪುಟ್ಟಿ" ಎಂದಾಗ " ಗೊತ್ತಿಲ್ಲದೇ ಇರುವವರಿಗೆ ತಿಂಡಿ ಕೊಟ್ಟರೆ ನಮಗೇನು ಲಾಭ " ಎಂದ ಜಿತುವಿಗೆ


"ಎಲ್ಲಾ ಕೆಲಸವನ್ನು ಲಾಭ ಇಟ್ಟುಕೊಂಡೇ ಮಾಡಲು ಆಗುವುದಿಲ್ಲಮ್ಮ. ಗಿಡದಲ್ಲಿ ಹೂ ಅರಳುವುದರಿಂದ ಅದಕ್ಕೇನೂ ಲಾಭವಿಲ್ಲ. ದಿನಾ ಬೀಸೋ ಗಾಳಿ, ಉದಯಿಸುವ ಸೂರ್ಯ, ಹರಿಯುವ ನೀರು ಇದ್ಯಾವುದೂ ತಮ್ಮ ತಮ್ಮ ಲಾಭಕ್ಕೋಸ್ಕರ ತಾವು ತಮ್ಮ ಕೆಲಸ ಮಾಡುವುದಿಲ್ಲ. ಅವುಗಳಿಂದ ನಮಗೆ ಉಪಯೋಗ ಅಷ್ಟೇ..

ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ.. ನಮ್ಮ ಕೆಲಸವನ್ನು ನಾವು ಮಾಡಬೇಕು. ಯಾವುದೇ ಲಾಭ-ನಷ್ಟದ ಆಲೋಚನೆ ಮಾಡಬಾರದು" ಎಂದಾಗ ಜಿತು ಅರ್ಥವಾದಂತೆ ಹೋಗಿ ಅಜ್ಜಿಗೆ ತಿಂಡಿ ಕೊಟ್ಟಾಗ.."ನೂರು ಕಾಲ ಸುಖವಾಗಿರಮ್ಮ" ಎಂದು ಆಶೀರ್ವಾದ ಮಾಡಿದ ಅಜ್ಜಿಯನ್ನು ಕಂಡು ಜಿತುವಿನ ಮನದಲ್ಲಿ ಸಂತೃಪ್ತಿಯ ಭಾವ.


~ವಿಭಾ ವಿಶ್ವನಾಥ್ 

ಲಾಭವಿಲ್ಲದ ಕಾಯಕ (ಬೆಳಕಿಂಡಿಯ ಕತೆಗಳು - 2)


ಎಲ್ಲಾ ಕೆಲಸಗಳನ್ನೂ ಲಾಭವಿಲ್ಲದೆ ಮಾಡುತ್ತಿದ್ದ ಅವನು ಇತ್ತೀಚೆಗೆ ಒಂದು ಕೆಲಸವನ್ನು ಪ್ರತಿಫಲ ಬಯಸದೆಯೂ ಮಾಡುತ್ತಿದ್ದಾನೆ. ಅದೇ, ಒಲವ ಹಂಚುವ, ಮಾನವೀಯತೆಯನ್ನು ಪಸರಿಸುವ ಕಾಯಕ. 


ಒಂದು ತಿಂಗಳ ಹಿಂದಷ್ಟೇ ತೀರಿ ಹೋದ ಅಮ್ಮನ ಕಾಯಕವನ್ನು ಮುಂದುವರಿಸುತ್ತಿದ್ದಾನೆ. ಅಮ್ಮ ಇದ್ದಾಗಲೆಲ್ಲಾ ಲಾಭವಿಲ್ಲದ ಈ ಕಾಯಕವನ್ನು ದೂಷಿಸುತ್ತಿದ್ದವನ ಹಠಾತ್ ಬದಲಾವಣೆಗೆ ಕಾರಣ ಅಮ್ಮನ ಡೈರಿ. ಆ ಡೈರಿ ಹೇಳಿತ್ತು ಅಮ್ಮ ಕೂಡಾ ತೊಟ್ಟಿಯಲ್ಲಿ ಬಿದ್ದಿದ್ದ ತನ್ನನ್ನು ಲಾಭವಿಲ್ಲದಿದ್ದರೂ ತಂದು ಪೋಷಿಸಿದ್ದಳೆಂದು.. 


ಈಗ ಎಲ್ಲರಿಗೂ ಹೇಳುತ್ತಿದ್ದಾನೆ. ಪ್ರೀತಿ, ಮಾನವೀಯತೆಗಳ ಪಸರಿಸುವುದು ಲಾಭವಲ್ಲದ ಕಾಯಕವಾದರೂ ಮನಸ್ಸಿಗೆ ಅನಂತ ಸಂತಸವನ್ನು ತಂದುಕೊಡುತ್ತದೆಂದು.. ಪ್ರೀತಿಯಿಂದ ಬದುಕೋಣ, ಪ್ರೀತಿ ಹಂಚುತ್ತಾ ಬದುಕೋಣ..


~ವಿಭಾ ವಿಶ್ವನಾಥ್

ಸಿಹಿ-ಕಹಿ (ಬೆಳಕಿಂಡಿಯ ಕತೆಗಳು - 1)


ಸಿಹಿ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸವಿಯಾದ ಮಾತಿನಿಂದ ತಿದ್ದಲು ಬಯಸಿದ ಸಿಹಿನುಡಿಯ ಸೊಸೆಯನ್ನು ದೂಷಿಸಿದವವರೇ ಕಹಿ ಮಾತಲ್ಲಿ ಹೇಳಿದ ಮಗಳನ್ನು ಆರೋಗ್ಯದ ಕಾಳಜಿ ಮಾಡುತ್ತಿದ್ದಾಳೆಂದು ಹೊಗಳುತ್ತಿದ್ದಾರೆ


~ ವಿಭಾ ವಿಶ್ವನಾಥ್

ಅವಳು ಪ್ರಕೃತಿ.. ಅವಳು ಹೆಣ್ಣು..! (ಅವಳ ಕವಿತೆಗಳು - 22)


ಅವನ ಸೊಕ್ಕು ಮಿತಿ ಮೀರಿದಾಗ

ಧಿಮಾಕಿಗೆ, ದುರಹಂಕಾರಕ್ಕೆ

ಮೊದಲಿಗೆ ಕನಲುತ್ತಾಳೆ

ನಂತರ ಮೈಕೊಡವಿ ನಿಲ್ಲುತ್ತಾಳೆ

ಮುಂದೆ ಎಚ್ಚರಿಸುತ್ತಾಳೆ 

ತದನಂತರ ಹೂಂಕರಿಸುತ್ತಾಳೆ

ರೌದ್ರ ರೂಪಿಯಾಗುತ್ತಾಳೆ 

ಯಾವುದಕ್ಕೂ ಬಗ್ಗದಿದ್ದಾಗ 

ಕೊನೆಯ ಹಂತ ಸರ್ವನಾಶವೇ..!

ಅವಳು ಪ್ರಕೃತಿ.. 

ಅವಳು ಹೆಣ್ಣು..!


~ವಿಭಾ ವಿಶ್ವನಾಥ್

ಅವಳು ಮತ್ತು ಕಡಲು (ಅವಳ ಕವಿತೆಗಳು - 21)


ದಡದಲ್ಲಿ ನಿಂತು ದೃಷ್ಟಿಸುತ್ತಾ

ಕಡಲನ್ನೇ ಕನ್ನಡಿಯಾಗಿಸಿಕೊಂಡು

ಭಾವಗಳಲ್ಲಿ ಮಿಂದೇಳುತ್ತಾಳೆ ಅವಳು

ಹೆಚ್ಚಿನ ವ್ಯತ್ಯಾಸವಿಲ್ಲ ಇಬ್ಬರಲ್ಲೂ


ಅವಳ ಭಾವಗಳು ಹುಚ್ಚೇರಿದಾಗ 

ಕಡಲಲ್ಲಿ ಭರತದ ಧಾವಂತ

ಅವಳು ಸಮಾಧಾನಿಸಿಕೊಳ್ಳುತ್ತಿದ್ದಂತೆ

ಕಡಲಲ್ಲಿ ಇಳಿತದ ಮಂದಗಮನ


ಅಲೆಗಳ ನಾದಕ್ಕೆ ಮರುಳಾಗುತ್ತಾಳೆ 

ತೆರೆಗಳ ಅಬ್ಬರಕ್ಕೆ ಕಿವಿಯಾಗುತ್ತಾಳೆ 

ಮೇಲೆ ಅಬ್ಬರಿಸಿದರೂ ಒಳಗೆ ಶಾಂತವಿರುವ ಕಡಲು 

ಒಳಗೆ ತುಮುಲವಿದ್ದರೂ ಹೊರಗೆ ಶಾಂತವಿರುವ ಅವಳು


~ವಿಭಾ ವಿಶ್ವನಾಥ್

ಸೋಮವಾರ, ಏಪ್ರಿಲ್ 27, 2026

ಕಲೆಯೇ ಕಾಯಕ (ಪುಸ್ತಕ ಯಾನ - 443)


ಪುಸ್ತಕದ ಶೀರ್ಷಿಕೆ : ಕಲೆಯೇ ಕಾಯಕ 

ಲೇಖಕರು : ಜಿ. ಹೆಚ್. ವೀರಣ್ಣ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು

ಮರು ಮುದ್ರಣ : 2010

ಪುಟಗಳು : 206

ಬೆಲೆ : 80 ರೂ. 


ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ವೀರಣ್ಣನವರು ನಟ, ರಂಗಕರ್ಮಿ, ನಿರ್ಮಾಪಕ, ನಿರ್ದೇಶಕ, ನಾಟಕ ಮಂಡಳಿಯ ವ್ಯವಸ್ಥಾಪಕರು. ಪ್ರಸಿದ್ಧ 'ಗುಬ್ಬಿ ಶ್ರೀ ಚನ್ನಬಸವೇಶ್ವರ ನಾಟಕ ಕಂಪನಿ'ಯನ್ನು ಕಟ್ಟಿ ಬೆಳೆಸಿ, ಕರುನಾಡ ನಾಟಕರಂಗಕ್ಕೆ ಹೊಸ ಕಳೆ ತಂದರು. ಡಾ. ರಾಜ್‌ಕುಮಾರ್, ನರಸಿಂಹರಾಜು, ಉದಯಕುಮಾರ್ ಹೀಗೆ ಹಲವಾರು ದಿಗ್ಗಜರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಬಿ. ವಿ ಕಾರಂತರು, ಗಿರೀಶ್ ಕಾರ್ನಾಡರ ಪ್ರತಿಭೆಯನ್ನು ಉಜ್ವಲಗೊಳಿಸಿದವರು. 


ಈ ಆತ್ಮಕಥೆಯಲ್ಲಿ ಚದುರಿದ ಚಿತ್ರಗಳಂತೆ ತುಂಡು ತುಂಡಾದ ಅವರ ಜೀವನ ಹಾಗೂ ಕೆಲವು ಘಟನೆಗಳು ಕಂಡುಬರುತ್ತವೆ. ಒಂದಕ್ಕೊಂದರ ಕೊಂಡಿಯನ್ನು ಹಲವಾರು ಘಟನೆಗಳು ಜೋಡಿಸುತ್ತವಾದರೂ.. ಕೆಲವನ್ನು ನಾವೇ ಊಹಿಸಿಕೊಳ್ಳಬೇಕು. ವಿಸ್ತಾರವಾದ ಇಂತಹ ದಿಗ್ಗಜರ ಜೀವನದ ಘಟನೆಗಳ ಏಳುಬೀಳಿನ ಪಯಣ ಇಲ್ಲಿದೆ. ಹುಟ್ಟು, ತಂದೆ-ತಾಯಿ, ಊರಿನ ಚಿತ್ರಣಗಳು, ಹಿನ್ನೆಲೆ ಇಲ್ಲಿಲ್ಲ. ಕಲೆಯ ಬದುಕಿಗೆ ಹೊಂದಿಕೆಯಾಗುವ ಅವರ ಕಲಾ ಪಯಣದ ಶುರುವಿನಿಂದ ನಾಟಕ ರಂಗದಿಂದ ಹಿಂದೆ ಸರಿಯುವವರೆಗೂ ವೀರಣ್ಣನವರನ್ನು ಕಾಣಬಹುದು. ಕೊನೆಯಲ್ಲಿ ಅವರ ಸಾಂಸಾರಿಕ ಜೀವನದಲ್ಲಿ ಕಂಡ ದುರಂತ ಸರಮಾಲೆಗಳಿವೆ. ಅದಕ್ಕೆ ಮುನ್ನುಡಿಯೋ ಎಂಬಂತಿದೆ ಅವರ ಬದುಕಿನ ಪಯಣ. ತಮ್ಮ ಕಷ್ಟದ ನಡುವಲ್ಲೂ ಮತ್ತೊಬ್ಬರಿಗೆ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುವ ದಿನಗಳು, ಬಂದ ಬಿರುದುಗಳು, ಏಳಿಗೆ ಅದರ ಜೊತೆಯಲ್ಲಿಯೇ ಕಷ್ಟಕ್ಕೆ ಎದೆಯೊಡ್ಡಿ ನಿಂತ ಧೀರತೆ ಎಲ್ಲವೂ ಅಚ್ಚರಿಗೊಳಿಸುತ್ತವೆ. ಕೆಲ ಭಾವಚಿತ್ರಗಳನ್ನು ಇಲ್ಲಿ ಕಾಣಬಹುದು. ಅವರ ಕಷ್ಟ-ಕೋಟಲೆಗಳು ಹಾಗೂ ನಾಟಕ ರಂಗದಿಂದ ನಿರ್ಗಮಿಸಿದ ಮನಸ್ಥಿತಿಯ ಕುರಿತು ನೀವೇ ಓದಿ ಅರಿಯಿರಿ.


1955ರ ಜೂನ್ ನಲ್ಲಿ ವೀರಣ್ಣನವರು 'ದಶಾವತಾರ' ನಾಟಕವನ್ನು ಪ್ರದರ್ಶಿಸಿದ ನಂತರ 'ಅಣ್ಣ-ತಮ್ಮ' ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿದಾಗ ಆತ್ಮಕತೆ ದಾಖಲಿಸುವ ಹಂಬಲ ಹೆಚ್ಚಾಗಿ ಇದನ್ನು ಬರೆದಿದ್ದಾರೆ. 


ಮೊದಮೊದಲು ಇವರು ಕಾಲಿಟ್ಟದ್ದು ನಟನಾಗಿ ಅಲ್ಲ. ಏನೂ ಅರಿಯದ ಹುಡುಗನೊಬ್ಬ ನಾಟಕ ಮಾಡಲು ನಾಟಕ ಶಾಲೆ ತಯಾರು ಮಾಡುವ ಕೆಲಸ, ಸೀನರಿಯ ತಯಾರಿಯಿಂದ ಹಿಡಿದು ತಮಟೆಯವನ ಜೊತೆಗೆ ಸಾರಿಸುವುದರ ಪ್ರಚಾರ ಕಾರ್ಯ, ನಂತರ ದೀಪದ ವ್ಯವಸ್ಥೆ, ಗ್ರೀನ್ ರೂಂನಲ್ಲಿ ಕಸಗುಡಿಸಿ ನಟರಿಗೆ ಮುಖಕ್ಕೆ ಬಣ್ಣ ಹಾಕುವ, ನಾಟಕದ ಡ್ರೆಸ್ ಕೀಪರ್ ಕೆಲಸ, ನಂತರ ಸ್ಟೋರ್ ಕೀಪರ್ ಕೆಲಸ, ಅಡುಗೆಯವರು ಕಾಯಿಲೆ ಬಿದ್ದಾಗ ಅಡುಗೆ ಕೆಲಸ, ಗೇಟ್ ಕೀಪರ್, ಬುಕ್ಕಿಂಗ್ ಕ್ಲರ್ಕ್, ವ್ಯವಸ್ಥಾಪಕ ಕೆಲಸಗಳನ್ನು ಸಂಧರ್ಬಾನುಸಾರ ಮಾಡಿರುವುದಲ್ಲದೆ.. ವಾದ್ಯದವರ ಗೈರು ಹಾಜರಿಯಿದ್ದಾಗ ತಬಲಾ, ಹಾರ್ಮೋನಿಯಂ, ಪಿಟೀಲುಗಳನ್ನು ನುಡಿಸಿದ್ದಾರೆ. ಮೊದಮೊದಲಿಗೆ ಯಾವ ಪಾತ್ರವಾದರೂ ಗೈರುಹಾಜರಾಗಿದ್ದಾಗ ಅಂತಹ ಪಾತ್ರವನ್ನು ಮಾಡುತ್ತಿದ್ದವರು, ಖಜಾಂಚಿ ಆಗಿದ್ದವರು.. 


ಈ ಎಲ್ಲಾ ಹಂತಗಳನ್ನು ಒಂದೊಂದಾಗಿ ಮೇಲೇರಿ ಆ ಎಲ್ಲಾ ಅನುಭವಗಳ ಮೊತ್ತದಿಂದ ಗುಬ್ಬಿ ಕಂಪನಿಯ ಮಾಲೀಕರು ಚಂದಣ್ಣ ನವರು ಹುಷಾರು ತಪ್ಪಿ ಸ್ವರ್ಗಸ್ಥರದಾಗ 'ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ'ಗೆ ಇಬ್ಬರು ಮಾಲೀಕರಲ್ಲಿ ಒಬ್ಬರಾಗುತ್ತಾರೆ. ನಂತರ ಅಲ್ಲಿಯ ಮೋಸವನ್ನು ಹಿತೈಷಿಗಳ ಸಹಾಯದಿಂದ ಗೆದ್ದು ಸಂಘದ ಒಡೆಯನಾಗುತ್ತಾರೆ. 


ಚಂದಣ್ಣನವರು ಹಾಗೂ ವಿದ್ವಾನ್ ದಾನಪ್ಪಯ್ಯನವರು ಪಿಟೀಲು ವಾದಕರಾಗಿಯೂ ಹಾಗೂ ಇವರ ಗುರುಗಳಾಗಿಯೂ ದಾರಿದೀಪವಾಗಿರುವ ಪ್ರಮುಖ ವ್ಯಕ್ತಿಗಳು.


ಮೊದಮೊದಲು ಪಿಟೀಲು, ತಬಲಾ ಮಾತ್ರ ಇದ್ದದ್ದು ನಂತರ ಶ್ರುತಿಗೋಸ್ಕರ ಸೋಟಾ ಎಂಬ ತಂಬೂರಿಯ ತರಹದ ವಾದ್ಯನ ತಯಾರಿಕೆಯ ಕುರಿತ ವಿಚಾರವೂ ಇಲ್ಲಿದೆ.


ನಾಟಕದಲ್ಲಿ ಆಗ ಹೆಣ್ಣು ಪಾತ್ರಗಳನ್ನು ಗಂಡಸರೇ ಹಾಕುತ್ತಿದ್ದರು. ತಲೆಗೆ ಟೋಫನ್ ಹಾಕಿಕೊಂಡು ಪಾತ್ರಕ್ಕೆ ತಕ್ಕ ಬಟ್ಟೆ ಹಾಕಿಕೊಳ್ಳುತ್ತಿದ್ದರು. ಲ್ಯಾಂಪಿನ ಬೆಳಕಿಗೆ ಪತಂಗದ ಹುಳುಗಳು ಸ್ವಾಭಾವಿಕವಾಗಿ ಮುತ್ತಿ ಅವರನ್ನು ತೊಂದರೆಗೊಳಪಡಿಸಿದ ಸಂದರ್ಭದಲ್ಲಿ ಪಾತ್ರಧಾರಿಯ ಮುಖದ ಅಭಿನಯ, ಜನರ ನಗುವಿಗೆ ಕಾರಣವಾದ ಸಂದರ್ಭಗಳನ್ನು ಹೇಳುತ್ತಾರೆ. 


ಅಷ್ಟಾಗಿ ಆಭರಣಗಳಿಲ್ಲದ ಸಂದರ್ಭದಲ್ಲಿ ನಾಟಕ ನೋಡಲು ಬಂದಿದ್ದ ಹೆಣ್ಣುಮಕ್ಕಳಿಂದ ಆಭರಣಗಳನ್ನು ಎರವಲು ಪಡೆದು ಹಾಕಿಕೊಂಡದ್ದು.. ನಂತರ ಅದನ್ನು ಆ ಹೆಣ್ಣು ಮಕ್ಕಳು ಹೆಮ್ಮೆಯಿಂದ ಹಂಚಿಕೊಳ್ಳುತ್ತಿದ್ದನ್ನು ಹೇಳುತ್ತಾರೆ.


ಗುಬ್ಬಿ ಕಂಪನಿಯಲ್ಲಿ 'ಸದಾರಮೆ' ನಾಟಕವೇ ಅತ್ಯುತ್ತಮ ನಾಟಕ ಎಂದು ಪಡೆದ ಪ್ರಸಿದ್ಧಿ ಹಾಗೂ ಅದರಲ್ಲಿ ಇವರು ವಹಿಸುತ್ತಿದ್ದ ಕಳ್ಳನ ಪಾತ್ರದ ಪ್ರಖ್ಯಾತಿ ಇವರನ್ನು ಮತ್ತಷ್ಟು ಜನರಿಗೆ ಹತ್ತಿರವಾಗಿಸುತ್ತಾ ಹೋಗಿಸುತ್ತದೆ. ಈ ನಾಟಕದಲ್ಲಿ ಆದಿಮೂರ್ತಿ, ಸಾಬಿ ಮತ್ತು ಕಳ್ಳ ಈ ಮೂರು ಪಾತ್ರಗಳನ್ನು ಇವರೇ ನಿರ್ವಹಿಸುತ್ತಿದ್ದರು. ಜಯಮ್ಮನವರು ಹಾಗೂ ವೀರಣ್ಣನವರ ಗುಲೇಬಕಾವಲಿ ನಾಟಕದ ಪಾತ್ರವೂ ಬಹಳ ಪ್ರಸಿದ್ಧಿ ಪಡೆದಿತ್ತು. ಎಷ್ಟೋ ನಾಟಕಗಳಲ್ಲಿ ಒಬ್ಬರೇ ಮೂರು ನಾಲ್ಕು ಪಾತ್ರಗಳನ್ನು ನಿರ್ವಹಿಸುತ್ತಿದ್ದರು.


ತಮಿಳುನಾಡಿಗೆ ಹೋದ ಸಂದರ್ಭದಲ್ಲಿ ಅಲ್ಲಿನವರಿಗೆ ಕನ್ನಡ ಅರ್ಥವಾಗದಿದ್ದರೂ.. ಮೊದಲು ಸೀನರಿಗಳಿಗಾಗಿ ನಾಟಕ ನೋಡಲು ಬರುತ್ತಿದ್ದ ಪ್ರಸಂಗಗಳು, ಜೊತೆಗೆ ಅಲ್ಲಿನ ನಾಟಕ ಕಂಪನಿಯೊಂದು ಸದಾರಮೆ ನಾಟಕದಲ್ಲಿ ಹೇಳುತ್ತಿದ್ದ ಅಶ್ಲೀಲ ಸಂಭಾಷಣೆಗಳಿಂದ ಮೊದಮೊದಲಿಗೆ ಈ ನಾಟಕವನ್ನು ನೋಡದೆ ವಿರೋಧಿಸಿದರೂ ಎರಡರ ವ್ಯತ್ಯಾಸ ತಿಳಿದು ಇವರಿಗೆ ಪ್ರೋತ್ಸಾಹಿಸಿದ ರೀತಿಯೂ ಇಲ್ಲಿದೆ. 


ಪ್ರತಿಭಾ ಪ್ರದರ್ಶನಕ್ಕೆ ಎಲ್ಲಾ ವೇದಿಕೆಗಳೂ ಒಂದೇ ರೀತಿ ಇರುತ್ತಿರಲಿಲ್ಲ. ಕಲ್ಲು ತೂರಾಟವನ್ನು ನಿರ್ವಹಿಸಿದ ಪ್ರಸಂಗಗಳೂ ಇವೆ. ಮಾಲೀಕರ ನಡತೆ, ಊಟದ ಭೇದ-ಭಾವ, ತಮ್ಮದಲ್ಲದ ಸಂಭಾಷಣೆಯನ್ನು ಪ್ರಸ್ತುತಪಡಿಸಿದಾಗ ಬಂದ ವಿರೋಧಗಳು ಎಲ್ಲವನ್ನೂ ಕಟ್ಟಿಕೊಟ್ಟಿದ್ದಾರೆ.


ನಾಟಕಗಳಲ್ಲಿ ನಟರ ಆಯ್ಕೆ ಬಹಳ ಕಷ್ಟ. ನಾಟಕವೆಂದರೆ ಜನರು ಬಹಳ ಹೀನವಾಗಿ ಕಾಣುತ್ತಿದ್ದ ಸಂದರ್ಭದಲ್ಲಿ ಮದಿರಾಪಾನ ಮಾಡುವವರನ್ನು, ವಿಷಯಾಸಕ್ತ ಜನರನ್ನು ದುರ್ಗುಣಿಗಳನ್ನು ಸಾಧ್ಯವಾದಷ್ಟು ದೂರವಿಡುತ್ತಿದ್ದರು. ಅಕಸ್ಮಾತ್ ಅವರು ಅತ್ಯುತ್ತಮ ನಟರಾಗಿದ್ದರೆ ಕೆಲವೊಮ್ಮೆ ಅನುಸರಿಸಿಕೊಂಡು ಹೋಗುತ್ತಿದ್ದದ್ದೂ ಇದೆ. ತಮ್ಮದೇ ಆದ ನಟ ವರ್ಗವನ್ನು ಸೇರಿಸಿಕೊಳ್ಳುತ್ತಾ ಬಂದರು ವೀರಣ್ಣನವರು.


1917ರಿಂದ 1924 ರ ಒಳಗೆ ಮದರಾಸು, ಮಹಾರಾಷ್ಟ್ರಗಳಲ್ಲಿ ಮೂರು ಬಾರಿ ಸಂಚಾರ ಮಾಡಿ ನಾಟಕವಾಡಿದ್ದಾರೆ. ಇದಷ್ಟೇ ಅಲ್ಲದೆ ಆಂಧ್ರಪ್ರದೇಶದಲ್ಲಿಯೂ ನಾಟಕ ಪ್ರದರ್ಶಿಸಿದ್ದಾರೆ. ಬೊಂಬಾಯಿ, ಹೈದ್ರಾಬಾದ್ ಗಳಲ್ಲಿಯೂ ನಾಟಕ ಪ್ರದರ್ಶಿಸಿದ್ದಾರೆ. ಕಲ್ಕತ್ತೆಯೊಂದು ಬಾಕಿ ಇತ್ತೆಂದು ಹೇಳಿದ್ದಾರೆ. 'ಧರ್ಮವೀರ' ಮತ್ತು 'ಕರ್ನಾಟಕಾಂಧ್ರ ನಾಟಕ ಸಾರ್ವಭೌಮ' ಎಂಬ ಬಿರುದುಗಳು ಸಿಕ್ಕಿವೆ.


ಗುಂಟೂರಿನಲ್ಲಿ ಸದಾರಮೆ ನಾಟಕ ಆಡಬಾರದೆಂದು ವೈಶ್ಯ ಮಹಾಜನರು ಒತ್ತಡ ತಂದದ್ದೇಕೆ..? ಅದೇ ನಾಟಕವನ್ನು ಆಡಲಿ ಎಂದು ಜಿಲ್ಲಾಧಿಕಾರಿಗಳು ಬಲವಾದ ಕಾವಲು ಏರ್ಪಡಿಸಿ ಆ ನಾಟಕ ಪ್ರದರ್ಶನವನ್ನು ನೋಡಲು ಹಾತೊರದದ್ದೇಕೆ..? ಓದಿ ನೋಡಿ.


1923 ರಿಂದ 1943ರ ವರೆಗೆ ನಾಟಕ ಸಂಘದ ಸುವರ್ಣ ಯುಗ ಎಂದು ಉಲ್ಲೇಖಿಸುತ್ತಾರೆ. ಮೈಸೂರಿನ ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್ ಅವರ ಅರಮನೆಯಲ್ಲಿ ಅನೇಕ ನಾಟಕಗಳನ್ನ ಆಡಿಸಿ 'ವರ್ಸಟೈಲ್ ಕಾಮೆಡಿಯನ್' ಎಂಬ ಬಿರುದನ್ನು ಬಂಗಾರದ ಪದಕದೊಂದಿಗೆ ಪಡೆದಿದ್ದಾರೆ.  ಮಹಾರಾಜರಿಗೆ ಇವರ ನಾಟಕ ಎಷ್ಟು ಇಷ್ಟವಾಯಿತೆಂದರೆ ಚೌ-ಚೌ ನಾಟಕ ಎಂದು ಹಲವು ನಾಟಕಗಳ ಮಿಶ್ರ ಸೀನ್ ಗಳೊಂದಿಗೆ ಪ್ರತಿ ಸೀನ್ ನಲ್ಲಿಯೂ ಇವರ ಅಭಿನಯವಿರಬೇಕೆಂಬ ಬೇಡಿಕೆ ಇಟ್ಟಿದ್ದರು. 

ಶ್ರೀ ಜಯಚಾಮರಾಜ ಒಡೆಯರ್ ಅವರು ರತ್ನ ಖಚಿತ ತೋಡಾದೊಂದಿಗೆ ನಾಟಕ ರತ್ನಂ ಎಂಬ ಬಿರುದು ಕೊಟ್ಟಿದ್ದಾರೆ. ಮೈಸೂರಿನಲ್ಲಿಯೇ ಇದ್ದು ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿದರೂ.. ಸಂಬಳ ಕೊಡುತ್ತೇವೆಂದರೂ ಇವರು ಖಾಯಂ ಆಗಿ ಮೈಸೂರಿನಲ್ಲಿ ನೆಲೆಸಲು ಒಪ್ಪುವುದಿಲ್ಲ. ಇದಕ್ಕೆ ಕಾರಣವೇನು ಓದಿ ನೋಡಿ.


ಸ್ವಂತಕ್ಕೆ ಜಟಕಾ ಗಾಡಿ ಬೇಕೆಂದು ಕೊಂಡಾಗ ಆಗಿನ ವಿಶೇಷ ಗಾಡಿ ಎಂದು 'ಗವರ್ನರ್ ಕಾರ್ಟ್' ಗಾಡಿಯನ್ನು ಸಾಹುಕಾರರೊಬ್ಬರು ಬಹುಮಾನವಾಗಿ ಕೊಟ್ಟಿದ್ದರು.


ಹತ್ತು-ಹದಿನೈದು ವರ್ಷದ ಕಿಶೋರ ನಾಟಕ ಸಂಘ ಸ್ಥಾಪಿಸಲು 1925ರಲ್ಲಿ 'ಬಾಲಕಲಾವಿವರ್ಧಿನಿ' ಎಂಬ ಹೆಸರಿನಲ್ಲಿ ದೊಡ್ಡ ಕಂಪನಿಯಂತೆಯೇ ಅದ್ದೂರಿಯಿಂದ ನಾಟಕ ಸಂಘವನ್ನು ಕಟ್ಟಿ ನಡೆಸಿದ್ದಾರೆ.


ನಾಟಕರಂಗ ಮಾತ್ರವಲ್ಲದೆ ಮೂಕಿ ಚಿತ್ರರಂಗಕ್ಕೆ ಕಾಲಿಟ್ಟು ಫಿಲಂ ಸ್ಟುಡಿಯೋ ಮಾಡ ಬಯಸಿ 'ಹಿಸ್ ಲವ್ ಅಫೇರ್' ಮತ್ತು 'ಹರಿಮಾಯಾ' ಎಂಬ ಮೂಕ ಚಿತ್ರಗಳನ್ನು ತೆಗೆದಿದ್ದಾರೆ. ಈ ಮೂಕ ಚಿತ್ರ ಪ್ರಪಂಚದಲ್ಲಿ ಇವರಿಗೆ ಆಗಿರುವುದು ಕಹಿ ಅನುಭವಗಳೇ ಹೆಚ್ಚು. ಅದರಲ್ಲಿಯೂ ಒಳಿತನ್ನು ಎತ್ತಿ ಹೇಳಿದ್ದಾರೆ.


ಬಿ . ಪುಟ್ಟಸ್ವಾಮಿಯವರಿಂದ ಬರೆಸಿಕೊಂಡ ನಾಟಕ, ಕುರುಕ್ಷೇತ್ರ ನಾಟಕ, ಲವ-ಕುಶ, ದಶಾವತಾರ ಹೀಗೆ ಹಲವಾರು ನಾಟಕಗಳು ಅದರ ಹಿನ್ನೆಲೆಗಳು, ನಟ ವರ್ಗದ ಆಯ್ಕೆ ಅಲ್ಲೆಲ್ಲಾ ಅನುಭವಿಸಿದ ಚಾಲೆಂಜ್ ಗಳು ಮತ್ತು ಅದನ್ನು ಮೀರಿ ನಿಂತ ಬಗೆ ಎಲ್ಲವನ್ನೂ ಹೇಳಿದ್ದಾರೆ.


ತಮ್ಮ ವಿವಾಹಗಳ ಕುರಿತು ಹೇಳಿಕೊಳ್ಳುವ ಸಂದರ್ಭದಲ್ಲಿ ತಮ್ಮ ಇಬ್ಬರು ಉಪಪಪತ್ನಿಯರು ಜಿ. ಸುಂದರಮ್ಮ ಮತ್ತು ಬಿ. ಜಯಮ್ಮ ಇವರುಗಳ ಕುರಿತು ಹಾಗೂ ಇವರುಗಳ ಮಕ್ಕಳಾದ ಸ್ವರ್ಣಮ್ಮ, ಮಾಲತಮ್ಮನವರ ಬಗೆಗೂ ಪ್ರೀತ್ಯಾದರಗಳಿಂದ ಹೇಳಿಕೊಳ್ಳುತ್ತಾರೆ. ಮಾಲತಮ್ಮನವರ ಮಗಳೇ ಬಿ. ಜಯಶ್ರೀ. ಗುಬ್ಬಿ ವೀರಣ್ಣನವರ ಮೂರನೇ ತಲೆಮಾರು. ಇವರ ಪ್ರತಿಭೆಯ ಕುರಿತೂ ಉಲ್ಲೇಖವಿದೆ.


ಒಂದು ರೂಪಾಯಿಯ ಕಾಲದಿಂದ ಹಾಗೂ ಗ್ಯಾಸ್ ಲೈಟ್ ದೊಂದಿಗಳಲ್ಲಿ ನಾಟಕ ಪ್ರದರ್ಶಿಸುತ್ತಿದ್ದ ಕಾಲದಿಂದ ಲಕ್ಷಾಂತರ ರೂಪಾಯಿ ಆದಾಯ ಹಾಗೂ ಅಷ್ಟೇ ಮಟ್ಟದ ಖರ್ಚಿನ ಬದುಕಿನ ಪಯಣವನ್ನು ಇಲ್ಲಿ ಹೇಳಿದ್ದಾರೆ. ಬಂದ ಬಿರುದುಗಳು, ಬಂಗಾರ, ಮಾಡಿದ ದಾನ ಧರ್ಮಗಳು, ಅದರ ಸಂದರ್ಭಗಳು ನಾಟಕ ಮಂದಿರ ಹಾಗೂ ಥಿಯೇಟರ್ ಗಳನ್ನು ಕಟ್ಟಿಸಲು ಹೊರಟದ್ದು ಹಾಗೂ ಹಲವಾರು ಬಾರಿ ಅದನ್ನು ಮತ್ತೊಬ್ಬರ ಸುಪರ್ದಿಗೆ ಒಪ್ಪಿಸಬೇಕಾಗಿ ಬಂದ ಸಂದರ್ಭ, ಅದರಿಂದ ಉಂಟಾದ ಪರಿಣಾಮಗಳು ಎಲ್ಲವೂ ಇಲ್ಲಿವೆ.


ಒಬ್ಬ ವ್ಯಕ್ತಿ ತನ್ನ ಹೆಂಡತಿ-ಮಕ್ಕಳು, ತಂದೆ-ತಾಯಿಯ ಪುಟ್ಟ ಸಂಸಾರವನ್ನೇ ಸರಿದೂಗಿಸಲು ತಿಣುಕಾಡುವಾಗ.. ಎಷ್ಟೋ ಪ್ರತಿಭೆಗಳ ದಾರಿದೀಪವಾಗಿ, ಅಸಮಾಧಾನ ಪಟ್ಟುಕೊಂಡು ಹೋದವರು ಮರಳಿ ಬಂದಾಗ.. ಮೋಸ ಮಾಡಿದವರು ಮತ್ತೆ ಬಂದಾಗ ಅದೇ ಅಕ್ಕರೆಯಿಂದ ಸ್ವಾಗತಿಸಿ ಅವರನ್ನು ತಮ್ಮೊಳಗೆ ಒಂದಾಗಿಸಿಕೊಂಡ ಪರಿಯೂ ಇಲ್ಲಿದೆ.


ತಪ್ಪುಗಳು ಹಾಗೂ ತಮ್ಮ ಬದುಕನ್ನು ತಿರುಗಿ ನೋಡಿದಾಗ ತಮ್ಮನ್ನು ತಾವು ವಿಮರ್ಶಿಸಿಕೊಂಡ ಬಗೆಯನ್ನೂ ಕಾಣಬಹುದು. ಕಲಾ ಜೀವನದ ಹಲವಾರು ಅಂಶಗಳನ್ನು ಕಟ್ಟಿಕೊಟ್ಟಿದ್ದಾರೆ. ವೈಯಕ್ತಿಕ ಬದುಕಿನ ಕುತೂಹಲಕ್ಕಿಂತ ಕಲೆಯ ಕುರಿತ ಕುತೂಹಲವನ್ನು ಮಾತ್ರವೇ ಉಳಿಸಿಕೊಂಡು ಇವರ ಬದುಕನ್ನು ಕಲಾವಿದನಾಗಿ ಮಾತ್ರ ಕಂಡರೆ ನಮಗೆ 'ನಾಟಕರಂಗದ ಭೀಷ್ಮ' ನಿಚ್ಚಳವಾಗಿ ಕಾಣಿಸಿಗುತ್ತಾರೆ.


~ವಿಭಾ ವಿಶ್ವನಾಥ್

ಬದಲಾದರೆ ಯೋಚನೆ ನಿಮ್ಮದೇ ಗೆಲುವು (ಪುಸ್ತಕ ಯಾನ - 442)


ಪುಸ್ತಕದ ಶೀರ್ಷಿಕೆ : ಬದಲಾದರೆ ಯೋಚನೆ ನಿಮ್ಮದೇ ಗೆಲುವು

ಲೇಖಕರು : ಡಾ. ನಾಗ ಎಚ್. ಹುಬ್ಳಿ 

ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2021

ಪುಟಗಳು : 146

ಬೆಲೆ : 150 ರೂ.


ಈ ಕೃತಿಯಲ್ಲಿನ ಹೆಚ್ಚಿನ ಬರಹಗಳು ಮಂಗಳ ವಾರಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿವೆ. ವ್ಯಕ್ತಿತ್ವ ವಿಕಸನದ ಕುರಿತಾಗಿ ಹಲವು ಪುಸ್ತಕಗಳಿದ್ದರೂ.. ಎಷ್ಟೆಲ್ಲಾ ವಿಚಾರಗಳು ಪ್ರಸ್ತಾಪವಾಗಿದ್ದರೂ.. ಪ್ರಸ್ತಾಪವಾಗುವ ವಿಚಾರಗಳು ಇನ್ನೂ ಹಲವಾರು ಇರುತ್ತವೆ. ಹಾಗೆಯೇ ಅದನ್ನು ದಾಟಿಸುವ ಶೈಲಿಯೂ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಹೀಗೆ ವ್ಯಕ್ತಿತ್ವ ವಿಕಸನಕ್ಕೆ ಸ್ಪೂರ್ತಿದಾಯಕವಾಗಿರುವ ಕಥೆಗಳನ್ನು ಇಲ್ಲಿ ಓದಬಹುದು. ಈ ಕೃತಿಯಲ್ಲಿ ಇಂತಹ 47 ಸ್ಪೂರ್ತಿದಾಯಕ ಕಥೆಗಳನ್ನು ಕಾಣಬಹುದು. ನನಗೆ ಇಷ್ಟವಾದ, ವಿಶೇಷವೆನಿಸಿದ ಕೆಲವು ವಿಚಾರಗಳ ಮೇಲೆ ಬೆಳಕು ಚೆಲುವ ಪ್ರಯತ್ನ ಮಾಡುವೆ.


"ಗೆಲುವು ಇರುವುದು ಕೇವಲ ನಮ್ಮ ನಡೆಯಲ್ಲಿ ಅಲ್ಲ; ಬದಲಿಗೆ ನಮ್ಮ ಯೋಚನಾ ವಿಧಾನದಲ್ಲಿ ಎನ್ನುವುದನ್ನು ನಾವು ಅರಿತುಕೊಳ್ಳಲೇಬೇಕು. ಹಾಗಿದ್ದಾಗ ಮಾತ್ರ ಗೆಲುವು ನಮ್ಮದಾಗಬಹುದು." ಎನ್ನುತ್ತಾರೆ ಲೇಖಕರು.


* "ಯಾವುದೇ ಘಟನೆ ಅಥವಾ ಅದರ ಪರಿಣಾಮ ನಮ್ಮ ಕೈನಲ್ಲಿ ಇಲ್ಲ; ಆದರೆ, ಅದನ್ನು ಯಾವ ರೀತಿಯಲ್ಲಿ ನಿಭಾಯಿಸಬಹುದು ಎನ್ನುವುದು ನಮ್ಮ ಕೈನಲ್ಲಿ ಇರುತ್ತದೆ" ಎಂದು ಹೇಳುತ್ತಾ 'ಚಿಂತೆ ಮತ್ತು ಒತ್ತಡಕ್ಕೆ ಮನಸ್ಸಿನಲ್ಲಿ ಜಾಗ ನೀಡಬೇಡಿ' ಎನ್ನುತ್ತಾರೆ.  

ಮನೋವೈಜ್ಞಾನಿಕ ವಿಷಯದ ಪ್ರಾಧ್ಯಾಪಕರು ಮಾನಸಿಕ ಒತ್ತಡವನ್ನು ನಿಭಾಯಿಸುವ ಉಪಾಯಗಳನ್ನು ಬೋಧಿಸುವಾಗ ಒಂದು ಗ್ಲಾಸ್ ನಲ್ಲಿರುವ ನೀರನ್ನು ಇದು ಎಷ್ಟು ಭಾರವಾಗಿರಬಹುದು ಎಂದು ವಿದ್ಯಾರ್ಥಿಗಳನ್ನು ಕೇಳುತ್ತಾರೆ. ಅದಕ್ಕೆ ಬಂದ ವಿವಿಧ ಉತ್ತರಗಳು ಹಾಗೂ ನಮ್ಮ ಜೀವನದ ಚಿಂತೆ ಮತ್ತು ಒತ್ತಡಗಳನ್ನು ನೀರಿನ ಗ್ಲಾಸಿಗೆ ಹೋಲಿಸುತ್ತಾ.. ಸ್ವಲ್ಪ ಸಮಯದವರೆಗೆ ಮನಸ್ಸಿನಲ್ಲಿಟ್ಟುಕೊಂಡ ವಿಚಾರಗಳು ಹಗುರವೆನಿಸುತ್ತವೆ. ಅದೇ ಅವುಗಳನ್ನು ಹೆಚ್ಚು ಕಾಲ ಮನಸ್ಸಿಗೆ ತೆಗೆದುಕೊಂಡರೆ ನಿಭಾಯಿಸುವುದು ಯಾವ ರೀತಿಯಲ್ಲಿ ಕಷ್ಟ ಎಂಬುದನ್ನೂ ಹೇಳುತ್ತಾರೆ.


* ಉತ್ತಮ ಕಾರ್ಯಕ್ಕೆ ಪ್ರೋತ್ಸಾಹವೇ ಪ್ರೇರಣೆ :

19ನೇ ಶತಮಾನದ ಖ್ಯಾತ ಚಿತ್ರ ಕಲಾವಿದ ಗ್ಯಾಬ್ರಿಯಲ್ ರೊಜೆಟಿಯವರ ಉದಾಹರಣೆಯನ್ನು ನೀಡುತ್ತಾರೆ. ಒಬ್ಬ ವ್ಯಕ್ತಿ ಬಂದು ಕೆಲವು ಚಿತ್ರಗಳನ್ನು ತೋರಿಸಿದಾಗ ಅವುಗಳನ್ನು ದಿಟ್ಟಿಸಿ, ಗಮನವಿಟ್ಟು ನೋಡಿದವರು ಅವುಗಳನ್ನು ಬಿಡಿಸಿದವನಲ್ಲಿ ಯಾವುದೇ ಪ್ರತಿಭೆ ಇಲ್ಲ ಎಂಬ ನಿಲುವಿಗೆ ಬರುತ್ತಾರೆ. ಹಾಗೆಂದು, ಆ ವ್ಯಕ್ತಿಯ ಮನಸ್ಸಿಗೆ ನೋವನ್ನುಂಟು ಮಾಡಲು ಇಷ್ಟವಿರಲಿಲ್ಲ ಅಥವಾ ಸುಳ್ಳು ಹೇಳಲು ಇಷ್ಟವಿರಲಿಲ್ಲ. ಕೊನೆಗೆ ಈ ಚಿತ್ರಗಳಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನೂ ಕಾಣಿಸುವುದಿಲ್ಲ ಎನ್ನುತ್ತಾರೆ.  ಆ ವ್ಯಕ್ತಿ ಅದನ್ನು ನಿರೀಕ್ಷಿಸಿದವಂತೆ ಮತ್ತಷ್ಟು ಬೇರೆ ಚಿತ್ರಗಳನ್ನು ಕೊಟ್ಟು ಯುವ ಕಲಾವಿದ ಬಿಡಿಸಿದ ಹಳೆಯ ಚಿತ್ರಗಳು. ಇವು ಹೇಗಿವೆ..? ಎನ್ನುತ್ತಾರೆ. . ಅವುಗಳನ್ನು ಗಮನಿಸಿ ಇದು ಬಹಳ ಪ್ರತಿಭಾವಂತನ ಚಿತ್ರಗಳು ಆತ ಇನ್ನಷ್ಟು ಶ್ರಮ ವಹಿಸಿದರೆ ಹಾಗೂ ನೀವು ಪ್ರೋತ್ಸಾಹಿಸಿದರೆ ಮಹಾನ್ ಕಲಾವಿದನಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ. ವಿಪರ್ಯಾಸವೆಂದರೆ, ಆತನೇ 30 ವರ್ಷಗಳ ಹಿಂದೆ ಬಿಡಿಸಿದ್ದ ಚಿತ್ರಗಳು ಆ ಸಮಯದಲ್ಲಿ ರೊಜೆಟಿಯವರು ಪ್ರೋತ್ಸಾಹದ ಮಾತುಗಳನ್ನಾಡದೆ ಅವಹೇಳನ ಮಾಡಿ ತಿರಸ್ಕರಿಸಿದ್ದರು. ಈ ವಿಚಾರ ತಿಳಿದಾಗ ಅನ್ಯಾಯವಾಗಿ ಒಬ್ಬ ಕಲಾವಿದನ ಭವಿಷ್ಯವನ್ನು ಹಾಳು ಮಾಡಿದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಒಂದು ಪ್ರೋತ್ಸಾಹ ಮತ್ತೊಬ್ಬರ ಭವಿಷ್ಯದ ಮೇಲೆ ಅದೆಷ್ಟು ಪರಿಣಾಮ ಬೀರುತ್ತದೆ ಅಲ್ಲವಾ..?


* 'ಇನ್ನೊಬ್ಬರ ಕೆಲಸದಲ್ಲಿನ ಕೊರತೆಯನ್ನು ಹುಡುಕುವುದು ಅಥವಾ ಅದನ್ನು ನಿಂದಿಸುವುದು ಬಹಳ ಸುಲಭ ಆದರೆ ಆ ಕೊರತೆಯನ್ನು ಸ್ವತಃ ದೂರ ಮಾಡುವುದು ಬಹಳ ಕಠಿಣ.' ಇಂತಹ ವಿಚಾರಗಳಲ್ಲಿ 'ಯೋಗ್ಯ ವ್ಯಕ್ತಿಯ ಸಲಹೆಯಿಂದ ಮಾತ್ರ ಸಮಸ್ಯೆಗೆ ಪರಿಹಾರ' ದೊರೆಯುತ್ತದೆ.

ಹೆಸರಾಂತ ಕಲಾವಿದ ತನ್ನ ಸುಂದರ ಕಲಾಕೃತಿಯನ್ನು ಮಾರ್ಗದ ಪಕ್ಕದಲ್ಲಿಟ್ಟು ಈ ಚಿತ್ರದಲ್ಲಿ ಯಾವುದಾದರೂ ಲೋಪ ಕಂಡು ಬಂದರೆ ಅಲ್ಲಿ ಸಣ್ಣ ಗುರುತನ್ನು ಮಾಡಿ ಎಂದು ವಿನಂತಿಸಿಕೊಳ್ಳುತ್ತಾನೆ. ತನ್ನ ಚಿತ್ರಗಳಲ್ಲಿರುವ ಕೊರತೆಗಳನ್ನು ತಿಳಿದುಕೊಂಡು ಇನ್ನಷ್ಟು ಉತ್ತಮ ಕಲಾಕೃತಿಯನ್ನು ರೂಪಿಸಬಹುದು ಎನ್ನುವುದು ಆತನ ದೂರಲೋಚನೆ. ಆದರೆ, ಆ ಕಲಾಕೃತಿ ಅದರ ಮೇಲೆ ಹಾಕಿದ ಅನೇಕ ಗುರುತುಗಳಿಂದ ಸೌಂದರ್ಯವನ್ನೇ ಕಳೆದುಕೊಂಡಿರುತ್ತದೆ. ಆತ ದುಃಖಿತನಾದ ಸಂದರ್ಭದಲ್ಲಿ ಗೆಳೆಯ ಮತ್ತೊಂದು ಸಲಹೆ ಸೂಚಿಸುತ್ತಾನೆ. ಆ ಸೂಚನೆ ಏನು ಹಾಗೂ ಅದರಿಂದ ಈ ಸಮಸ್ಯೆ ಬಗೆಹರಿದದ್ದು ಹೇಗೆ? ಓದಿ ನೋಡಿ ಇಂತಹ ಅತ್ಯಮೂಲ್ಯವಾದ ಸಲಹೆಗಳು ಯೋಗ್ಯ ವ್ಯಕ್ತಿಯಿಂದ ಮಾತ್ರ ಸಿಗುತ್ತದೆ. 


* "ಒಂದು ವೇಳೆ ನಾವು ಸೂಕ್ತ ಸಮಯದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳದೇ ಹೋದರೆ, ವಿವಿಧ ವಿಷಮ ಪರಿಸ್ಥಿತಿಗಳಿಂದ ಹಾಗೂ ಜನರಿಂದ ಆರ್ಥಿಕ, ಶಾರೀರಿಕ ಅಥವಾ ಭಾವನಾತ್ಮಕ ಬಿಕ್ಕಟ್ಟುಗಳನ್ನು ಎದುರಿಸ ಬೇಕಾಗಬಹುದು..."

ಇದಕ್ಕೆ ಒಂದು ಕಪ್ಪೆಯನ್ನು ನೀರಿನ ಒಳಗೆ ಹಾಕಿ ಅದನ್ನು ಕುದಿಸುತ್ತಾ ಹೋದಾಗ ಅದರ ಪರಿಣಾಮವೇನು..? ಕಪ್ಪೆ ಏನು ಮಾಡುತ್ತದೆ..? ಎನ್ನುವ ನಿದರ್ಶನವನ್ನು ನೀಡುತ್ತಾ 'ನಮ್ಮೊಳಗೇ ಅಡಗಿದೆ ಪರಿಸ್ಥಿತಿಗಳನ್ನು ಬದಲಿಸುವ ಸಾಮರ್ಥ್ಯ' ಎಂದು ಹೇಳುತ್ತಾರೆ.


* "ನಮ್ಮ ಜೀವನದಲ್ಲಿ ಹಲವಾರು ಬಾರಿ ಬೀಳುತ್ತೇವೆ, ಸೋಲುತ್ತೇವೆ. ಆದರೆ ಒಂದು ವಿಷಯವನ್ನು ನೆನಪಿಡಿ, ನಮ್ಮ ಜೀವನದಲ್ಲಿ ಏನೇ ನಡೆದಿರಲಿ ಅಥವಾ ಭವಿಷ್ಯದಲ್ಲಿ ಏನೇ ನಡೆಯುವುದಿರಲಿ, ನಮ್ಮ ಮೌಲ್ಯವು ಎಂದಿಗೂ ಕಡಿಮೆಯಾಗುವುದಿಲ್ಲ..." ಎಂದು ಹೇಳುತ್ತಾ

"ಕಳೆದು ಹೋದ ನಿನ್ನೆಯ ನಿರಾಸೆಗಳು, ಮುಂಬರುವ ನಾಳೆಯ ಸ್ವಪ್ನಗಳನ್ನು ನಾಶ ಮಾಡುವುದಕ್ಕೆ ಎಂದಿಗೂ ಬಿಡಬಾರದು. ಯಾವತ್ತೂ ನಾವು ನೆನಪಿನಲ್ಲಿ ಇಡಬೇಕಾದ ವಿಷಯವೇನೆಂದರೆ, ನಮ್ಮ ಜೀವನ ಹಾಗೂ ನಮ್ಮಲ್ಲಿ ಅಡಗಿರುವ ಪ್ರತಿಭೆಗಳೇ ಈ ಜಗತ್ತಿನಲ್ಲಿ ಅತ್ಯಂತ ಮೌಲ್ಯಯುತ ವಸ್ತುಗಳಾಗಿರುತ್ತವೆ." ಅದರ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾ ಪ್ರತಿಭೆಯ ಮೌಲ್ಯವನ್ನು ನೋಟಿನ ಮೌಲ್ಯದ ನಿದರ್ಶನದೊಂದಿಗೆ ತೋರಿಸುತ್ತಾರೆ. 


* ಒಬ್ಬ ಮಹಿಳೆಯು ಪ್ರತಿದಿನ ಕೆರೆಯೊಂದರ ದಡದಲ್ಲಿ ಕುಳಿತು ಆಮೆಯ ಬೆನ್ನನ್ನು ಸ್ವಚ್ಛಗೊಳಿಸುತ್ತಿರುತ್ತಾಳೆ. ಒಬ್ಬ ಹುಡುಗ ಅವಳನ್ನು ಪ್ರತಿದಿನವೂ ಗಮನಿಸುತ್ತಾ ಅವಳ ಈ ಕಾರ್ಯಕ್ಕೆ ಕಾರಣವನ್ನು ಕೇಳಿದಾಗ ಅಚ್ಚರಿಗೊಳ್ಳುತ್ತಾನೆ. ನೀವು ಮಾಡುತ್ತಿರುವ ಕೆಲಸದಿಂದ ಕಡಿಮೆ ಆಮೆಗಳು ಈ ಸೌಲಭ್ಯ ಪಡೆದುಕೊಳ್ಳುತ್ತವೆ. ಆದರೆ, ಹೆಚ್ಚಿನ ಆಮೆಗಳ ಗತಿಯೇನು..? ಎಂದು ಕೇಳಿದಾಗ.. ಅವಳು "ನನ್ನ ಈ ಸಣ್ಣದಾದ ಕಾರ್ಯದಿಂದ ದೊಡ್ಡ ಬದಲಾವಣೆಯೇನೂ ಆಗುವುದಿಲ್ಲ ನಿಜ. ಆದರೆ, ಈ ಆಮೆಯ ಜೀವನವಂತೂ ಬದಲಾಗುತ್ತದೆಯಲ್ಲವೇ? ಸಣ್ಣ ಬದಲಾವಣೆಗಾಗಿಯೇ ನಾವೇಕೆ ಕೆಲಸವನ್ನು ಆರಂಭಿಸಬಾರದು? ಎಂದು ಹೇಳಿದಾಗ ಮನ ಪರಿವರ್ತನೆಯಾದ ಆ ಹುಡುಗನೂ ಅವಳ ಕಾರ್ಯಕ್ಕೆ ಕೈಜೋಡಿಸುತ್ತಾನೆ. 'ಸದುದ್ದೇಶದ ಯಾವ ಕಾರ್ಯವೂ ವ್ಯರ್ಥವಾಗುವುದಿಲ್ಲ' ಎನ್ನುವ ಸಂದೇಶ ನೀಡುವ ಕಥೆ.


* "ನಾವು ಯೋಚಿಸುವ ವಿಧಾನದ ಮೂಲಕವೇ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ನಮ್ಮ ಯೋಚನೆ ಬದಲಾದರೆ ಮಾತ್ರ ನಮ್ಮ ಜಗತ್ತು ಬದಲಾಗುತ್ತದೆ. ಆದ್ದರಿಂದ ನಾವು ಸದಾ ಸಕಾರಾತ್ಮಕವಾಗಿಯೇ ಯೋಚಿಸಬೇಕು.." ಎಂದು ಹೇಳುತ್ತಾ ಇಬ್ಬರು ಸಾಧುಗಳ ಉದಾಹರಣೆಯನ್ನು ಕೊಡುತ್ತಾರೆ ಒಬ್ಬ ಸಾಧು ನಕಾರಾತ್ಮಕ ಆಲೋಚನೆಯಿಂದ ಕೂಡಿದ್ದರೆ, ಇನ್ನೊಬ್ಬ ಸಾಧು ಸಕಾರಾತ್ಮಕ ಆಲೋಚನೆಯಿಂದ ಕೂಡಿರುತ್ತಾನೆ. ಇಬ್ಬರಲ್ಲಿ ಯಾರ ಆಲೋಚನೆ ಬದಲಾಯಿತು ಮತ್ತು ಅವರ ಮೇಲೆ ಯಾವ ಪರಿಣಾಮವಾಯಿತು ಓದಿ ನೋಡಿ.


" 'ಕಠಿಣ ದುಡಿಮೆಗಿಂತ ಕೌಶಲ್ಯಪೂರ್ಣ ದುಡಿಮೆ ಹೆಚ್ಚು ಮಹತ್ವಪೂರ್ಣ' ಎನ್ನುವುದಕ್ಕೆ ಉದಾಹರಣೆಯಾಗಿ ಒಬ್ಬ ಮರ ಕಡಿಯುವ ಕೆಲಸವನ್ನು ಶುರು ಮಾಡಿದವನು ಅತಿ ಹುರುಪಿನಿಂದ ಕೆಲಸ ಮಾಡಿದರೂ ದಿನೇ ದಿನೇ ಕಡಿಯುವ ಮರಗಳು ಕಡಿಮೆಯಾಗುತ್ತಿರುತ್ತವೆ. ಅದಕ್ಕೆ ಕಾರಣ ಕೊಡಲಿಯನ್ನು ಹರಿತಗೊಳಿಸಿಕೊಳ್ಳದೆ ಇರುವುದು. ನಂತರ ಅವನಿಗೆ ತನ್ನ ತಪ್ಪಿನ ಅರಿವಾಗಿ ಅದನ್ನು ತಿದ್ದಿಕೊಳ್ಳುತ್ತಾನೆ. ಹೀಗೆ "ಯಾವುದೇ ಕೆಲಸದಲ್ಲಿ ಯಾದರೂ ಸತತವಾದ ಪರಿಶ್ರಮ ಬೇಕೇಬೇಕು. ಆದರೆ ಅದರ ಜೊತೆಯಲ್ಲಿಯೇ ಕೌಶಲ್ಯ ಪ್ರದರ್ಶನಕ್ಕೂ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಗಾಣದ ಎತ್ತಿನ ದುಡಿಮೆಯಾಗುತ್ತದೆ" ಎನ್ನುವ ಸಂದೇಶವೂ ಇಲ್ಲಿದೆ.


ಈ ಪುಸ್ತಕದಲ್ಲಿ ಇಂತಹ ಹಲವಾರು ವ್ಯಕ್ತಿತ್ವ ವಿಕಸನದ ಪಾಠಗಳು ಬದುಕಿನ ರೀತಿಯನ್ನು ಬದಲಿಸಿಕೊಳ್ಳುವ ಆಲೋಚನೆಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ ಲೇಖಕರು. ಇವುಗಳನ್ನು ಅರಿತು ತಿದ್ದಿಕೊಳ್ಳುವ ವಿಚಾರವನ್ನು ತಿದ್ದಿಕೊಂಡರೆ ಬದುಕು ಮತ್ತಷ್ಟು ಸಹನೀಯವಾಗುತ್ತದೆ. ಅಲ್ಲದೆ, ನಮ್ಮ ವ್ಯಕ್ತಿತ್ವ ಮತ್ತಷ್ಟು ಚಂದವಾಗಿ ರೂಪಗೊಳ್ಳುತ್ತವೆ. ನಕಾರಾತ್ಮಕ ಆಲೋಚನೆಗಳು ಬಂದಾಗಲೂ ಮತ್ತೆ ಮತ್ತೆ ಓದಬಹುದಾದಂತಹ ಪುಸ್ತಕ. 


~ ವಿಭಾ ವಿಶ್ವನಾಥ್

ಲಂಚ್ ಬಾಕ್ಸ್ (ಪುಸ್ತಕ ಯಾನ - 441)


ಪುಸ್ತಕದ ಶೀರ್ಷಿಕೆ : ಲಂಚ್ ಬಾಕ್ಸ್

ಲೇಖಕರು : ರಾಜು ಪುಸ್ತಕಗ್ರಾಮ್ 

ಪ್ರಕಾಶಕರು : ಅವ್ವ ಪುಸ್ತಕಾಲಯ 

ಪ್ರಥಮ ಮುದ್ರಣ : ಜನವರಿ 2026

ಪುಟಗಳು : 136

ಬೆಲೆ : 150 ರೂ. 


ಓದಿನ ಹವ್ಯಾಸಿಯಾಗಿರುವ ಇವರು ಇನ್ಸ್ಟಾಗ್ರಾಮ್ ನಲ್ಲಿ ಪುಸ್ತಕಗ್ರಾಮ್ ಎನ್ನುವ ಪುಟವನ್ನ ನಿರ್ವಹಿಸುತ್ತಿದ್ದಾರೆ. ಪುಸ್ತಕಗಳ ಓದಿನ ರುಚಿಯೇ ಇವರನ್ನು ಬರಹಕ್ಕೂ ಹಚ್ಚಿರುವುದು ನಿಜಕ್ಕೂ ಖುಷಿಯ ಸಂಗತಿ. ಇವರ ಸಾಹಿತ್ಯ ಕೃತಿಯನ್ನು ಗುರುತಿಸಿ ಹರಿವು ಪ್ರಕಾಶನದವರು ನೀಡಿರುವ 'ಗಳಗನಾಥ ' ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಂಗಭೂಮಿಯ ಚಟುವಟಿಕೆ, ಚಿತ್ರಕಲೆ, ಫೋಟೋಗ್ರಫಿಯನ್ನು ಹವ್ಯಾಸ ಮಾಡಿಕೊಂಡಿರುವವರು ರಂಗವರ್ಸ್ ಎಂಬ ಇನ್ಸ್ಟಾಗ್ರಾಮ್ ಪೇಜ್ ಅನ್ನೂ ನಿರ್ವಹಿಸುತ್ತಿದ್ದಾರೆ. 'ಲಂಚ್ ಬಾಕ್ಸ್' ಇವರ ಚೊಚ್ಚಲ ಕೃತಿ. 


ಈ ಕಥಾಸಂಕಲನದಲ್ಲಿ 7 ಕಥೆಗಳಿವೆ. 


ಲಂಚ್ ಬಾಕ್ಸ್ : ಅಮ್ಮನ ಕೈ ರುಚಿ ಹಾಗೂ ಲಂಚ್ ಬಾಕ್ಸ್ ಜೊತೆಗೆ ತೆರೆದುಕೊಳ್ಳುವ ಈ ಕಥೆ ಅಪಾರ್ಟ್ಮೆಂಟ್ ಪಕ್ಕದ ಅಣತಿ ದೂರದ ಮೋರಿಯ ಪಕ್ಕದಲ್ಲಿದ್ದ ಸ್ಲಮ್ಮಿನ ಬದುಕನ್ನು ಸಹ ತೋರಿಸುತ್ತದೆ. ಜೊತೆಗೆ ಮನೆಯಲ್ಲಿ ಕಷ್ಟಪಟ್ಟು ತಯಾರು ಮಾಡಿರುವ ಲಂಚ್ ಬಾಕ್ಸ್ ಅನ್ನು ಇಟ್ಟುಕೊಂಡು ಉದಾಸೀನದಿಂದ ಇರುವಂತೆ ಕಾಣುವ ಬೈಕ್ ಓಡಿಸುವವನ ಮನಸ್ಥಿತಿ ಅವರ ಪ್ರೊಫೆಷನಲ್ ಸಮಸ್ಯೆಗಳ ಜೊತೆಗೆ ಕೊರೊನಾ ದಿನಗಳ ದರ್ಶನವನ್ನು ಮಾಡಿಸುತ್ತದೆ. ಸ್ಲಂನಲ್ಲಿರುವ ನಿರ್ಗತಿಕರಿಗೆ ಅನ್ನದ ಪೊಟ್ಟಣಗಳನ್ನು ಹಂಚುವ ಕೆಲಸಕ್ಕೆ ಇಳಿದಿದ್ದ ಸಿದ್ದು ವಿಗೆ ಆಪ್ತ ಬಂಧವೊಂದು ಸಿಕ್ಕಿತ್ತು. ಅದೇ ಮುಖದಲ್ಲಿ ಮುಗ್ಧತೆ ತುಂಬಿಕೊಂಡಿದ್ದ ಆ ಮಗು. ಕೋವಿಡ್ ದಿನಗಳ ಲಂಚ್ ಬಾಕ್ಸ್ ಹಾಗೂ ಆ ಮಗುವಿನ ಹಸಿವು ಎರಡನ್ನೂ ತೆರೆದಿಟ್ಟಿರುವ ಕರುಣಾಚಲಕ ಕಥೆ ಇಲ್ಲಿದೆ. ಅನ್ನದ ಮಹತ್ವವನ್ನು ಹೀಗೆ ತೆರೆದಿಟ್ಟಿದ್ದಾರೆ.


ಮೃತ್ಯುಂಜಯ : ಸಾವನ್ನು ಗೆದ್ದವನು ಎಂಬರ್ಥದ ಹೆಸರು ಇದು. ಅಪ್ಪ, ಅಮ್ಮ, ತಂಗಿ ಮೂವರೂ ತಿರುಪತಿಗೆ ಹೊರಟ ಸಂದರ್ಭದಲ್ಲಿ ಅವರೊಡನೆ ಹೋಗದೆ ಉಳಿದುಕೊಂಡಿದ್ದವನು ತಾನೇ ಸಾವನ್ನು ಆಹ್ವಾನಿಸುವ ಹುಚ್ಚು ಧೈರ್ಯ ಮಾಡುತ್ತಾನೆ. ಅಷ್ಟಕ್ಕೂ ಆತನಿಗಿದ್ದ ಸಮಸ್ಯೆ ಏನು? ಹದಿಹರೆಯದ ವಯಸ್ಸಿನವರು ಇಂತಹ ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆಯ ಮೊರೆ ಹೊಕ್ಕರೆ ಹೇಗಿರುತ್ತದೆ..? ಸೋಲುಗಳನ್ನು ಸಹಿಸಿಕೊಳ್ಳುವ ಮನೋಭಾವ ಹಾಗೂ ಸಹನೆಯ ಪಾಠ ಹದಿಹರೆಯದವರಿಗೆ ಬಹಳ ಅವಶ್ಯಕ. ಇಲ್ಲಿ ನಮ್ಮ ಕಥೆಯ ನಾಯಕ ಸಾವನ್ನು ಗೆದ್ದು ಬರುತ್ತಾನಾ ಓದಿ ನೋಡಿ.


ಅಪ್ಪನ ನೆರಳು :

"ಮನಸಲ್ಲಿ ನಡೆಯೋ ಸಮರಕ್ಕೂ ಹೊರವಲಯದ ಮೌನಕ್ಕೂ ಅದೆಷ್ಟು ಅಂತರ."

ಕೌಟುಂಬಿಕ ವಾತಾವರಣ ಹಾಗೂ ಮನಸ್ಸಿನ ಸಂಘರ್ಷಗಳ ಚಿತ್ರಣವನ್ನು ಇಲ್ಲಿ ಕಾಣಬಹುದು. ಇದು ಸಹ ಕೊರೊನಾ ಕಾಲಘಟ್ಟದ ಕಥೆ. ಊರಿನ ಪದ್ಧತಿಯಂತೆ ಒಂದೇ ಚಪ್ಪರದಲ್ಲಿ, ಒಂದೇ ವೇದಿಕೆಯಲ್ಲಿ ಅಣ್ಣ ತಮ್ಮನ ಮದುವೆ ಮಾಡಿಬಿಡುತ್ತಿದ್ದರು. ಅಣ್ಣನ ಮದುವೆಯ ಸಂದರ್ಭದಲ್ಲಿ ತನಗಿನ್ನೂ ಮದುವೆಯ ಯೋಚನೆ ಇಲ್ಲ ಎಂದು ಹೇಳಿಬಿಟ್ಟಿದ್ದವನು ಪ್ರೀತಿಸಿದ ಹುಡುಗಿಯನ್ನು ಮುಂದಿನ ದಿನಗಳಲ್ಲಿ ಪರಿಚಯಿಸಿದ. ಮೊದಮೊದಲು ಮನೆಯಲ್ಲಿ ವಿರೋಧ ವ್ಯಕ್ತವಾದರೂ ನಂತರ ಮದುವೆ ನಿಶ್ಚಯವಾಗಿತ್ತು. ಹೀಗೆ ನಿಶ್ಚಯವಾದ ನಿರಂಜನ ಹಾಗೂ ಜಾನಕಿಯ ಮದುವೆಯ ಸಂದರ್ಭದಲ್ಲಿಯೇ ಅಪ್ಪನ ಆರೋಗ್ಯ ಹದಗೆಟ್ಟಿತ್ತು. ನಿರಂಜನನ ಮನಸ್ಸಿನ ತುಡಿತ ಯಾವ ಕಡೆಗಿತ್ತು..? ಈ ವಿವಾಹದ ತೀರ್ಮಾನ ಅವನ ಬದುಕಿನ ಯಾವೆಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು..? 'ಅಪ್ಪನ ನೆರಳು' ನಿರಂಜನನ ಭವಿಷ್ಯದಲ್ಲಿ ಯಾವ ರೂಪ ಪಡೆಯುತ್ತದೆ ಓದಿ ನೋಡಿ.


ಮರೆಯಲಾಗದ ಮದುವೆ : ತಮ್ಮ ಆಫೀಸಿನ ಸಹೋದ್ಯೋಗಿಯಾಗಿದ್ದ ಸುರೇಶ ನ ಮದುವೆ ರಾಯಚೂರಿನ ಒಂದು ಹಳ್ಳಿಯಲ್ಲಿತ್ತು. ಇದ್ದ 8-10 ಉದ್ಯೋಗಿಗಳಲ್ಲಿ ಐವರು ತಮ್ಮ ಬಾಸ್ ಕೊಟ್ಟ ಕಾರಿನಲ್ಲಿ ಹೊರಟಿದ್ದರು. ಇಲ್ಲಿಂದ ಹೊರಡುವಾಗ ಮದುವೆಯಲ್ಲಿ ಹೇಗೆಲ್ಲಾ ಮಜಾ ಮಾಡಬಹುದು ಎಂದು ಮದುವೆ ಮನೆಗೆ ತಲುಪುವ ಮುನ್ನವೇ ಪ್ಲಾನ್ ಮಾಡಿಕೊಂಡಿದ್ದರು. ಅತ್ತ ಸುರೇಶನೂ ಇವರ ಬರುವಿಕೆಗಾಗಿ ಕಾಯುತ್ತಿದ್ದ. ಆದರೆ, ದಾರಿಯಲ್ಲಿ ಆದ ಎಡವಟ್ಟೊಂದು ಇವರ ಬದುಕಿನಲ್ಲಿ ಸುರೇಶನ ಮದುವೆಯನ್ನು ಮರೆಯಲಾಗದ ಮದುವೆಯನ್ನಾಗಿಸಿತು. ಸಂಭಾಷಣೆಗಳು ನೈಜವಾಗಿ ಮೂಡಿಬಂದಿವೆ. 


ಕನಸಿನಾಳ : ಕನಸಿನ ಕಲ್ಪನೆಗೂ ವಾಸ್ತವದ ನಿರಸನಕ್ಕೂ ಮಧ್ಯದಲ್ಲೊಂದು ಸಣ್ಣ ಎಳೆಯಿದೆ. ಎಳೆಯನ್ನು ದಾಟಿ ಮತ್ಯಾವುದೋ ಆಯಾಮದಲ್ಲಿ ನಾನೀಗ ನಿಂತಿರಬಹುದು ಎಂಬ ಸಣ್ಣ ಅನುಮಾನದಿಂದ ಎಂದು ಹೇಳುತ್ತಲೇ ಕಥೆಯ ಪ್ರವೇಶಿಕೆಗೆ ಅಡಿ ಇಟ್ಟರೂ ಕಥೆ ವಿಭಿನ್ನವಾಗಿ ಸಾಗುತ್ತದೆ. ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿದ್ದ 366 ಜನರಲ್ಲಿ 364 ಜನರ ಆಯ್ಕೆ ಪ್ರಕ್ರಿಯೆ ಮುಗಿದಿತ್ತು. ಉಳಿದಿರುವುದು ಇಬ್ಬರೇ. ಆ ಎರಡು ಜಾಗ ಯಾರದ್ದಿರಬಹುದು ಎಂಬ ಕುತೂಹಲದಿಂದಲೇ ಮೊದಲಿಡುವ ರೈಲಿನ ಪ್ರಯಾಣ ಎಲ್ಲರಿಗೂ ಮುಖ್ಯವಾಗಿತ್ತು. ಅದೇನೆಂದರೆ ಆ ರೈಲು ಪ್ರಪಂಚ ಪರ್ಯಟನೆಗೆಂದೇ ನಿಂತಿತ್ತು. ರೈಲಿನ ಪ್ರಪಂಚ ಪರ್ಯಟನೆ, ನವಿಲುಗರಿ ಟೋಪಿಯವನು, ರೈಲಿನ ಒಳ ಹೊಕ್ಕ ನಂತರ ಬದಲಾಗುವ ಪರಿಸ್ಥಿತಿ ಹೀಗೆ ಹಲವಾರು ಕಲ್ಪನೆಗಳಿಂದ ಕಟ್ಟಿಕೊಟ್ಟಿರುವ ಕಥೆ ಇದು. ಈ ಕಥಾ ಸಂಕಲನದಲ್ಲಿ ನನಗೆ ಇಷ್ಟವಾದ ಹಾಗೂ ವಿಭಿನ್ನವಾದ ಕಥೆ.


ರಾಜಾಯಣ : ಪ್ರೀತಿಯಲ್ಲಿ ಯಾವುದು ಬಹು ಮುಖ್ಯಪಾತ್ರ ವಹಿಸುತ್ತದೆ ಎನ್ನುವುದಕ್ಕೆ ಉತ್ತರ ಬಹಳ ಕಷ್ಟ. ಅದು ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರದ ಮೇಲೆ ಅವಲಂಬಿತ. ಏಳು ವರ್ಷಗಳಿಂದ ತಿಳಿದಿದ್ದ, ಸ್ನೇಹದಿಂದ ಪ್ರೀತಿಗೆ ತಿರುಗಿತ್ತ ಪ್ರೇಮವೊಂದು ಧ್ವನಿಯ ಕಾರಣಕ್ಕಾಗಿ ಕಳಚಿ ಬಿಡಬಹುದಾ..? ಹಾಗಾದಾಗ ಮೂಡುವ ಅಭದ್ರತೆಯ ಭಾವ, ಕಡಿಮೆಯಾಗುವ ಆತ್ಮವಿಶ್ವಾಸ ಬದುಕನ್ನು ಬೇರೆಯದ್ದೇ ದಿಕ್ಕಿಗೆ ಕೊಂಡೊಯ್ಯಬಹುದು . ಪ್ರಪಂಚ ಯಾವುದನ್ನು ದೋಷವೆಂದು ಹೀಯಾಳಿಸಿತ್ತೋ ಅಂತಹ ದೋಷವೇ ಮತ್ತೊಬ್ಬರಿಗೆ ಇಷ್ಟವಾಗಿ ಪ್ರೀತಿಯಾದರೆ..?! ಇಲ್ಲಿ ಮತ್ತೆ ಪ್ರೀತಿಯಾಗಿದ್ದು ಯಾರಿಗೆ ಓದಿ ನೋಡಿ.


ಫಲ್ಗುಣಿ :  "ಈ ಜಗತ್ತಿನಲ್ಲಿ ಯಾರ ಜೀವನವು ಒಂದೇ ರೀತಿ ಸಮತೋಲನದಿಂದಿರಲು ಸಾಧ್ಯವಿಲ್ಲ ಅಂತಯೇ ಮನಸ್ಥಿತಿ ಕೂಡ ಎಲ್ಲರ ಜೀವನದಲ್ಲೂ ಎಲ್ಲದರಲ್ಲೂ ಏರಿಳಿತಗಳು ಇರುತ್ತವೆ." ಅಂತಹ ಏರಿಳಿತಗಳಿದ್ದಾಗ ಮನುಷ್ಯನ ವರ್ತನೆಯು ಬದಲಾಗುತ್ತದೆ. ಇಲ್ಲಿ ಫಲ್ಗುಣಿಯ ಬದುಕು ಸಹ ಅಂತೆಯೇ ಇತ್ತು. ಮುಂದೇನು ಮಾಡಬೇಕು ಎಂದು ಬುದ್ಧಿಯ ಮಾತು ಕೇಳುವುದೋ ಅಥವಾ ಮನಸ್ಸಿನ ಮಾತು ಕೇಳುವುದೋ ಎಂಬುದು ಆಯಾ ವ್ಯಕ್ತಿಯ ಮೇಲೆ ಹಾಗೂ ಪರಿಸ್ಥಿತಿಯ ಮೇಲೆ ಅವಲಂಬಿತ. ಕೊನೆಯ ಕ್ಷಣದಲ್ಲಿ ಅಣ್ಣನಿಗೆ ತಾನು ಮಾತ್ರೆಗಳನ್ನು ತೆಗೆದುಕೊಂಡ ವಿಚಾರ ತಿಳಿಸಿದ ಫಲ್ಗುಣಿಯ ನಿರ್ಧಾರ ಏನಿತ್ತು..? ಫಲ್ಗುಣಿ ತೆಗೆದುಕೊಂಡ ಆ ನಿರ್ಧಾರಕ್ಕೆ ಕಾರಣವೇನಿತ್ತು..? ಮುಂದೇನಾಗುತ್ತದೆ ಎಂದು ಕಾತುರದಿಂದಲೇ ಓದುವಂತೆ ಕಟ್ಟಿಕೊಟ್ಟಿರುವ ಕಥೆ ಇದು. 


ಪ್ರತಿ ಕತೆಗೂ ಮುನ್ನ ಇರುವ ಕತೆಗೆ ಸಂಬಂಧಿಸಿದ ಚಿತ್ರಗಳು ಅರ್ಥಪೂರ್ಣವಾಗಿವೆ. 

ಈ ಕಥಾಸಂಕಲನದಲ್ಲಿ ಹೆಚ್ಚು ಇಷ್ಟವಾಗಿದ್ದು ಸಂಭಾಷಣೆಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿರುವ ಪರಿ. ಲೇಖಕರ ಮುಂದಿನ ಸಾಹಿತ್ಯ ಕೃಷಿಗೆ ಶುಭವಾಗಲಿ ಎಂದು ಹಾರೈಸುವೆ. 


~ವಿಭಾ ವಿಶ್ವನಾಥ್

ಕೀಮೋ (ಪುಸ್ತಕ ಯಾನ - 440)


ಪುಸ್ತಕದ ಶೀರ್ಷಿಕೆ : ಕೀಮೋ 

ಲೇಖಕರು : ಫಾತಿಮಾ ರಲಿಯಾ

ಪ್ರಕಾಶಕರು : ಜೀರುಂಡೆ ಪುಸ್ತಕ 

ಪ್ರಥಮ ಮುದ್ರಣ : 2025

ಪುಟಗಳು : 120

ಬೆಲೆ : 160 ರೂ. 


ಕಡಲು ನೋಡಲು ಹೋದವಳು (ಲಲಿತ ಪ್ರಬಂಧ ಸಂಕಲನ), ಒಡೆಯಲಾರದ ಒಡಪು (ಕಥಾ ಸಂಕಲನ), ಅವಳ ಕಾಲು ಸೋಲದಿರಲಿ (ಕವನ ಸಂಕಲನ) ಇದುವರೆಗೆ ಫಾತಿಮಾ ರಲಿಯಾ ಅವರ ಪ್ರಕಟಿತ ಕೃತಿಗಳು. ಅನುಭವ ಕಥನ ಕೀಮೋ ಇವರ ನಾಲ್ಕನೆಯ ಕೃತಿ. 


"ಆತಂಕ ಮತ್ತು ಅಳು ಎನ್ನುವುದು ಮನುಷ್ಯ ಬದುಕಿನ ದೌರ್ಬಲ್ಯವಲ್ಲ, ಅವನ್ನು ಜೊತೆಗಿಟ್ಟುಕೊಂಡೇ ಧೈರ್ಯದಿಂದ ಮುನ್ನಡೆಯುವುದು ಮತ್ತು ಬದುಕಿನ ಸೌಂದರ್ಯ ಇರುವುದೇ, ಅದು ಬಂದಂತೆ ಎದುರಿಸುವುದರಲ್ಲಿ ಅನ್ನುವ ಸತ್ಯ"ವನ್ನು ಲೇಖಕಿಗೆ ಮನಗಾಣಿಸಿದ ಆಸ್ಪತ್ರೆಯ ವಾಸ ಹಾಗೂ ಅವರನ್ನು ಕಾಡಿದ ಹಲವಾರು ಘಟನೆಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.


 ಅಮ್ಮನಿಗೆ ಕ್ಯಾನ್ಸರ್ ಬಂದಾಗ ರಲಿಯಾಗೆ 16ನೇ ವರ್ಷ. ಆ ದಿನದ ತಲ್ಲಣ-ತಳಮಳಗಳು, ಅದನ್ನು ಎದುರಿಸಿದ ಬಗೆ ಎಲ್ಲವನ್ನೂ ಹಲವಾರು ವರ್ಷಗಳ ನಂತರ ತೆರೆದಿಟ್ಟಿದ್ದಾರೆ.


 ಕ್ಯಾನ್ಸರ್ ರೋಗಿಗಳನ್ನು ದೈಹಿಕವಾಗಿ ಕಂಗೆಡಿಸಿದರೆ ಅವರ ಹತ್ತಿರದವರನ್ನು ಮಾನಸಿಕವಾಗಿಯೂ ಕಂಗಡಿಸುತ್ತದೆ. ರೋಗಿಯ ಮುಂದೆ ತನ್ನ ಮನವನ್ನು ಅಷ್ಟು ಸುಲಭವಾಗಿ ತೆರೆದಿಡುವುದು ಸಾಧ್ಯವಿಲ್ಲ. ಅಲ್ಲದೇ 16ನೇ ವರ್ಷದಲ್ಲಿ ಈ ಸಂದರ್ಭವನ್ನು ನಿಭಾಯಿಸುವುದು ಸುಲಭವೂ ಅಲ್ಲ. ಎಷ್ಟೋ ಜನಕ್ಕೆ ಈ ಅನುಭವ ಸ್ಪೂರ್ತಿಯಾಗುವುದೂ ಹೌದು. ಅದೇ ಕಾರಣಕ್ಕೆ ಲೇಖಕಿ ಸಾಧ್ಯವಾದಷ್ಟನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.


ಪಿ.ಯು.ಸಿಯ ಮೊದಮೊದಲ ದಿನಗಳ ಓದಿನ ಸಂದರ್ಭದಲ್ಲಿಯೇ ಅಮ್ಮ ಅನುಮಾನದೊಂದಿಗೆ ಮಗಳ ಬಳಿ ಬಂದಿದ್ದರು. ಜೀವಕೋಶಗಳ ಪಾಠ ಕೇಳಿ ಬಂದಿದ್ದರೂ.. ಇದು ಕ್ಯಾನ್ಸರ್ ಇರಬಹುದಾ? ಎಂದು ಸಣ್ಣ ಅನುಮಾನ ಮೂಡಿದ್ದರೂ ಅಮ್ಮನಂತಹ ಒಳ್ಳೆಯವರಿಗೆ ಇಷ್ಟು ದೊಡ್ಡ ರೋಗ ಬರಲಿಕ್ಕಿಲ್ಲ ಎನ್ನುವ ವಿಚಿತ್ರ ಲಾಜಿಕ್. ಆದರೆ, ಅಮ್ಮ ಮಗಳ ಅಮಾಯಕ ನಂಬಿಕೆಯಾಚೆಗೂ ವೈದ್ಯರನ್ನು ಭೇಟಿಯಾಗುತ್ತಾರೆ. ಸ್ತ್ರೀರೋಗ ತಜ್ಞೆಯನ್ನು ಭೇಟಿಯಾದವರಿಗೆ ರೋಗ ಪತ್ತೆಯಾಗುವುದಿಲ್ಲ. ಆದರೆ, ಫ್ಯಾಮಿಲಿ ಡಾಕ್ಟರ್ ಬಯಾಪ್ಸಿ ಮಾಡಿಸಿದ ನಂತರ ಪತ್ತೆಯಾದದ್ದು ಸ್ತನ ಕ್ಯಾನ್ಸರ್. ಅಮ್ಮನ ಆಪರೇಷನ್ ಸಂದರ್ಭದಲ್ಲಿ ಎಲ್ಲರಿಗೂ ರಲಿಯಾ ಅಮ್ಮನ ಜವಾಬ್ದಾರಿಯನ್ನು ನಿಭಾಯಿಸಬಲ್ಲಳಾ ಎಂಬ ಅನುಮಾನ.. "ಅವಳು ನಿಭಾಯಿಸುತ್ತಾಳೆ. ನಿಭಾಯಿಸಲು ಬಾರದಿದ್ದರೆ ಕಲಿತುಕೊಳ್ಳುತ್ತಾಳೆ." ಎಂದ ಅಮ್ಮನ ಸ್ಪಷ್ಟ ನಿರ್ಧಾರ ಮಗಳನ್ನು ಮುನ್ನಡೆಸಿತು. 


ಕುಟುಂಬದ ಹಿರಿಯ ಮಹಿಳೆಯೊಬ್ಬರು ಕಾಳಜಿಯ ನೆಪದಲ್ಲಿ ಆಡಿದ ಅಸೂಕ್ಷ್ಮ ಮಾತುಗಳನ್ನು ಅಮ್ಮ ತೆಗೆದುಕೊಂಡ ಬಗೆ ಜೊತೆಗೆ "ಬದುಕಲ್ಲಿ ಕೆಲವೊಂದನ್ನು ನಿರ್ಲಕ್ಷಿಸಿ ಮುಂದೆ ಹೋಗೋದನ್ನು ಇನ್ನು ಮುಂದಾದರೂ ನೀನು ಕಲೀಲೇಬೇಕು" ಎಂದ ಸಂದರ್ಭವಿದೆ. 


"ಜೀವನ್ಮರಣದ ಹೋರಾಟದಲ್ಲೂ ಬದುಕಿನಡೆಗೆ ಒಂದು ಹೆಜ್ಜೆ ಮುಂದಿಟ್ಟ ಅಮ್ಮ ಆಸ್ಪತ್ರೆಯ ಬೆಡ್ ಮೇಲೆ ನೋವು ತಿನ್ನುತ್ತಾ ಮಲಗಿರಬೇಕಾದರೆ, ಆ ಮಹಿಳೆಗೆ ಅಪ್ಪನ ಬಯಕೆಗಳ ಬಗ್ಗೆ ಚಿಂತೆ ಮಾಡಲಾದರು ಹೇಗೆ ಸಾಧ್ಯ ?" ಎನ್ನುವ ಲೇಖಕಿ ಸೂಕ್ಷ್ಮವಾದ ನಡವಳಿಕೆಗಳು ಹೇಗಿರಬೇಕು ಎನ್ನುವುದನ್ನು ರೋಗಿಗಳನ್ನು ನೋಡಲು ಹೋಗುವವರಿಗೆ ಅರಿವಿರಲೇಬೇಕು ಎನ್ನುವ ಹಲವಾರು ಸಂದರ್ಭಗಳನ್ನು ಹೇಳುತ್ತಾರೆ. ಸಾಂತ್ವನ ನೀಡುವುದು ಮೊದಲ ಆದ್ಯತೆ. ಆದರೆ, ಸಾಂತ್ವನದ ನೆಪದಲ್ಲಿ ಭಯ ಅಥವಾ ಆತಂಕ ಸೃಷ್ಟಿಸುವ ಪ್ರಯತ್ನವನ್ನು ಮಾಡಲೇಬಾರದೆಂಬುದು ಗೊತ್ತಿರಲೇಬೇಕು. ಅಲ್ಲವೇ..?!


ಶಸ್ತ್ರಚಿಕಿತ್ಸೆಯ ನಂತರ ಡ್ರೈನ್ ಕ್ಯಾನ್ ಬಳಸಿ ದ್ರವವನ್ನು ಹೊರತೆಗೆಯುವಾಗ ಇರುತ್ತಿದ್ದ ಸಂಕಟ, ಅಮ್ಮನ ಕೈ ಸರಿಯಾಗಿ ಕೆಲಸ ಮಾಡಬೇಕೆಂದರೆ ವ್ಯಾಯಾಮ ಮಾಡಬೇಕಿದ್ದದ್ದು, ನೋವು ನಿವಾರಕ ಇಂಜೆಕ್ಷನ್ ಗಳಿಲ್ಲದೆ ನೋವಿನ ತೀವ್ರತೆಯನ್ನು ಸಹಿಸುತ್ತಾ ಅಮ್ಮ ಬದುಕುತ್ತಿದ್ದರೆ . . ಸಂಕಟಕ್ಕೆ ಮಡಿಲಾಗಬೇಕಿದ್ದ ಅಮ್ಮನ ಜಾಗವನ್ನು ತುಂಬುವವರು ಯಾರಿದ್ದರು..?


ರಲಿಯಾರಿಗಿದ್ದ ಅರಿವಿನ ಮಿತಿಯಲ್ಲಿ ಕೆಟ್ಟ ಅಮ್ಮನು ಇರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಅಂತಹ ಒಂದು ಜಗತ್ತು ಅಲ್ಲಿನ ಒಬ್ಬರಿಂದ ತೆರೆದುಕೊಂಡಿತ್ತು. ಅವರ ಜೀವನಗಾಥೆ ಏನಿತ್ತು..?


ಸರ್ಜರಿ ವಾರ್ಡಿನ ರೋಗಿಗಳ ಡ್ರೆಸ್ಸಿಂಗ್ ಮಾಡುವ ಮಿನಿ ಆಪರೇಷನ್ ಥಿಯೇಟರ್ ನಲ್ಲಿ ದಾದಿಯರು, ಜೂನಿಯರ್ ವೈದ್ಯರ ನಡುವೆ ಇವರಿಗೆ ಬೆಳೆದ ಸ್ನೇಹ, ಕಮ್ಯುನಿಕೇಷನ್ ಜೊತೆಗೆ ವೈದ್ಯರ ಕಾಳಜಿ ಎಲ್ಲವೂ ಇಲ್ಲಿದೆ. ಸ್ಟಾಫ್ ಮಾತುಗಳು, ಡಾಕ್ಟರ್ ನ ನಡೆ ಮತ್ತು ಅಮ್ಮನ ಸೂಕ್ಷ್ಮ ಗಮನಿಸುವಿಕೆ, ಎಲ್ಲವನ್ನೂ ಅಮ್ಮ ಗಮನಿಸಿದ್ದರೂ ಮೌನವಾಗಿದ್ದ ಕ್ಷಣಗಳು ನಂತರ ತೆರೆದುಕೊಂಡದ್ದು ಹೇಗೆ..?


ಕಣ್ಣೆದುರಿಗಿದ್ದ ಹದಿನಾರರ ಮಗಳ ಕಣ್ಣಲ್ಲಿನ ಕನಸು ಮತ್ತು ಅವಳಾಡುತ್ತಿದ್ದ ಅತಿ ಮೆಚ್ಯೂರ್ಡ್ ಮಾತುಗಳು ಅಮ್ಮನಿಗೆ ಹೇಗನಿಸುತ್ತಿತ್ತು..? ಅಮ್ಮ ನಿರ್ಲಿಪ್ತತೆ ನಟಿಸದೆ ಇದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು..?


ಸರ್ಜರಿಯ ನಂತರ ಆರು ತಿಂಗಳುಗಳಲ್ಲಿ ಆರು ಸೈಕಲ್ ನಂತೆ ಕೀಮೋ ಕೊಡಿಸಬೇಕಿತ್ತು. ಕೊನೆಯ ಕೀಮೋ ಆದ ಆರು ತಿಂಗಳ ಬಳಿಕ ಮತ್ತೆ ಕ್ಯಾನ್ಸರ್ ಸೆಲ್ ಹುಟ್ಟಿವೆಯ ಎಂದು ಚೆಕಪ್ ಮಾಡಿಸಿಕೊಳ್ಳಬೇಕಿರುತ್ತದೆ.


ಆಪರೇಷನ್ ಆದಮೇಲೆ ಗೆಲುವಾಗಿಯೇ ಇದ್ದ, ನೋವಲ್ಲಿಯೂ ಗಟ್ಟಿಯಾಗಿದ್ದ ಅಮ್ಮ ಕೀಮೋ ಥೆರಪಿಯಲ್ಲಿ ಇಳಿದು ಹೋಗಿದ್ದರು. ಈ ಕೀಮೋ ಥೆರಪಿಯ ಅನುಭವಗಳ ಜೊತೆ ನಾವೂ ಸಾಗುವಾಗ ಸಂಕಟ ಎದೆಯಾಳದಿಂದ ಉದ್ಭವಿಸುತ್ತದೆ.


ಕುಟುಂಬದವರೇ ಸೂಕ್ಷ್ಮವಿಲ್ಲದೆ ನಡೆದುಕೊಳ್ಳುತ್ತಿದ್ದರೆ, ಪರಸ್ಪರರನ್ನು ಸಂತೈಸುತ್ತಿದ್ದದ್ದು ಧೈರ್ಯ ತುಂಬುತ್ತಿದ್ದದ್ದು ಭರವಸೆ ತೋರುತ್ತಿದ್ದದ್ದು ಆಸ್ಪತ್ರೆಯಲ್ಲಿನ ಮಾನವೀಯ ಸಂಬಂಧಗಳೇ.. ಅವುಗಳೇ ಬದುಕನ್ನು ಸಹ್ಯವಾಗಿಸುವುದೇನೋ..?


ಕೀಮೋಥೆರಪಿ, ರೇಡಿಯೋಥೆರಪಿ ಯಾವುದೂ ಕೂಡ ಅವರ ಕ್ಯಾನ್ಸರ್ ಅನ್ನು ಗುಣಪಡಿಸಲಾಗದು ಎಂದು ಅರಿವಾದ ನಂತರ "ನಿಮ್ಮ ರೋಗ ಗುಣವಾಗಿದೆ" ಎಂದು ಹೇಳಿ ಆಸ್ಪತ್ರೆಯವರು ಧೈರ್ಯ ತುಂಬಿ ಡಿಸ್ಚಾರ್ಜ್ ಮಾಡಿದ ಸೋಜಿಯವರ ತಾಯಿ, ಗೀತಕ್ಕನ ವಿಭಿನ್ನ ಕಥೆ, ವಿಷಾದ ಗೀತೆಯಂತೆ ಕಂಡುಬಂದ ಚಾಂದಜ್ಜಿ ಇಲ್ಲಿ ಸಿಗುತ್ತಾರೆ.


ಅಮ್ಮ ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಅವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಹಾಗೂ ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಸಂದರ್ಭದಲ್ಲಿ ನೆರವಾದ ಅಣ್ಣ ಹಾಗೂ ಅಂದಿನ ಸಂದರ್ಭಗಳು ಹೇಗಿದ್ದವು..?


ಕೆಲವೊಂದು ಕನಸುಗಳನ್ನು ಕೈ ಬಿಡಬೇಕಾದ ಅನಿವಾರ್ಯತೆ, ಈಗಿನಂತೆ ಮಾಹಿತಿಯ ಮಹಾಪೂರ ಸಿಕ್ಕಿದ್ದರೆ ಕನಸಿನ ಪಕ್ಷಿ ಹೇಗೆ ಹಾರಬಹುದಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.


ಕೀಮೋನಿಂದ ಸುಸ್ತಾಗುತ್ತಿದ್ದ ಅಮ್ಮನನ್ನು ಅದರ ವಿರುದ್ಧ ಹೋರಾಡಿಸುವಂತೆ ಪಣತೊಟ್ಟು ಕೀಮೋವನ್ನೇ ಎದುರಿಸಲು ಅಮ್ಮನಿಗೆ ಮಾಡುತ್ತಿದ್ದ ಕಾಳಜಿ ಅವರನ್ನು ಸುಸ್ತು ಮಾಡಿದ ಪರಿ ಅಂದು ಅರ್ಥವಾಗದ ಸಂದರ್ಭ, ಅಸಹಾಯಕತೆ, ಸುಮ್ಮನಿರುವುದೇ ಏಕೈಕ ಆಯ್ಕೆ ಎಂದು ಅರಿವಾದ ಕ್ಷಣಗಳು, "ಹಠ ತೊಟ್ಟರೆ ಏನನ್ನೂ ಸಾಧಿಸಿಬಹುದು, ಏನನ್ನೂ ದಕ್ಕಿಸಿಕೊಳ್ಳಬಹುದು ಎನ್ನುವ ಭ್ರಮೆ ಹರಿದು ಹೋದ ಕ್ಷಣಗಳು" ಇಲ್ಲಿವೆ.


ರಲಿಯಾನ ಅಮ್ಮನಿಗೆ ಕ್ಯಾನ್ಸರ್ ಎಂದು ಗೊತ್ತಾದಾಗ ಗೆಳತಿಯರು ಪ್ರತಿಕ್ರಿಯಿಸಿದ ಬಗೆ ಹೇಗಿತ್ತು.?


ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದುಕೊಂಡು ಅಮ್ಮನಿಗೆ 17 ವರ್ಷಗಳೇ ಕಳೆದರೂ.. ಪ್ರತಿ ವರ್ಷದ ಪರೀಕ್ಷೆಯಲ್ಲಿಯೂ ಅಮ್ಮ ಕ್ಯಾನ್ಸರ್ ಕಣಗಳಿಲ್ಲ ಎಂಬ ಫಲಿತಾಂಶಕ್ಕಾಗಿ ಕಾಯುವ ಕ್ಷಣಗಳು, ಅದರ ಹಿಂದಿನ ಆತಂಕಗಳು, ಮುಂದೆ ಧೈರ್ಯವಾಗಿದ್ದರೂ ಹಿಂದೆ ಪರಸ್ಪರರಿಗೆ ಇರುವ ಭಾವಗಳು ಇಲ್ಲಿವೆ.


17 ವರ್ಷಗಳ ನಂತರ ಮತ್ತೆ ಆ ದಿನಗಳನ್ನು, ಕ್ಷಣಗಳನ್ನು, ಅದುವರಿಗಿನ ಬದುಕಲ್ಲಿನ ಸೂಕ್ಷ್ಮ ವಿಚಾರಗಳನ್ನು ಬಹಳಷ್ಟು ಪ್ರಸ್ತಾಪಿಸಿದ್ದಾರೆ. "ಜೀವನ್ಮರಣದ ಹೋರಾಟದಿಂದ ಎದ್ದು ಬಂದವರಿಗೆ ನಾವು ಮಾಡಬೇಕಾದ ದೊಡ್ಡ ಉಪಕಾರವೆಂದರೆ ಹಿತವಾದ ಮೌನ ಹಾಗೂ ಅವರ ಖಾಸಗಿ ಕ್ಷಣಗಳಿಗೆ ಧಕ್ಕೆಯಾಗದಂತಹ ಒಂದು ಸಣ್ಣ ಸ್ಪೇಸ್ ಉಳಿಸಿಕೊಳ್ಳುವುದು" ಎನ್ನುತ್ತಾರೆ.


"ಕಣ್ಣಿಗೆ ಕಾಣಸಿದ ಕ್ಯಾನ್ಸರ್ ಕಣಗಳೊಂದಿಗೆ ಅಷ್ಟು ಬಡಿದಾಡಿದವರಿಗೆ ಉಳಿದಿರುವ ಬದುಕನ್ನು ಕಟ್ಟಿಕೊಳ್ಳುವುದೇನೂ ದೊಡ್ಡ ಸಂಗತಿಯಲ್ಲ. ಹಾಗೆ ಕಟ್ಟಿಕೊಳ್ಳಲು ಅನುವು ಮಾಡಿಕೊಡುವ ಕನಿಷ್ಠ ಮನುಷ್ಯತ್ವವನ್ನು ನಾವು ಉಳಿಸಿಕೊಳ್ಳಬೇಕು ಅಷ್ಟೇ." ಎನ್ನುವ ಅವರ ಮಾತು ಎಷ್ಟು ನಿಜವಲ್ಲವಾ ಎನ್ನಿಸಿತು.


ಕ್ಯಾನ್ಸರ್ ಪೀಡಿತರನ್ನು ನೋಡಲು ಹೋದಾಗ ಸಾಂತ್ವನವನ್ನು ಹೇಳೋಣ. ಅದಾಗದಿದ್ದರೆ ಅಧೈರ್ಯವನ್ನು ಮೂಡಿಸದಿರೋಣ. ಜೊತೆಗೆ ಅಸೂಕ್ಷ್ಮತೆಯಿಂದ ನಡೆದುಕೊಳ್ಳುವುದಂತೂ ಬಿಲ್ಕುಲ್ ಬೇಡವೇ ಬೇಡ. ಇಷ್ಟನ್ನು ಪಾಲಿಸಿದರಾದರೂ ಎಷ್ಟೋ ಮನಗಳಿಗೆ ನೆಮ್ಮದಿ.


ಈ ಅನುಭವ ಕಥನ ಕ್ಯಾನ್ಸರ್ ಜೊತೆಜೊತೆಗೆ ಸಾವಿನ ಸಮ್ಮುಖದಲ್ಲಿ ಕಲಿತ ಹುಡುಗಿಯೊಬ್ಬಳ ಜೀವನಪಾಠವನ್ನು ತೆರೆದಿಡುತ್ತಾ ಸಾಗುತ್ತದೆ. ಅವರು ಅನುಭವಿಸಿದ ತಲ್ಲಣ, ಸಂಕಟಗಳನ್ನು ಓದುವಾಗ ನಾವೂ ಸಂಕಟಪಡುವಂತಾಗುತ್ತದೆ. ಆದರೆ, ಪ್ರಮುಖವಾಗಿ ಪಾಸಿಟಿವಿಟಿಯನ್ನು ಹಾಗೂ ಧೈರ್ಯವನ್ನಂತೂ ಕಂಡುಕೊಳ್ಳುತ್ತೇವೆ. ಪ್ರತಿಯೊಬ್ಬರ ಅನುಭವ ಬೇರೆಯೇ ಆಗಬಹುದಾದರೂ.. ಸೂಕ್ಷ್ಮತೆಯ ಪಾಠವನ್ನುಂಟು ಕಲಿತುಕೊಳ್ಳಲೇಬೇಕು. ಓದಿ ಮುಗಿದ ನಂತರವೂ ಆವರಿಸಿಕೊಳ್ಳುವ ಓದು ಇದು.

~ವಿಭಾ ವಿಶ್ವನಾಥ್

ಕ್ಯಾಡ್ಬರೀಸ್ ನ ಕ್ಯಾಬ್ - ಡೈರೀಸ್ (ಪುಸ್ತಕ ಯಾನ - 439)


ಪುಸ್ತಕದ ಶೀರ್ಷಿಕೆ : ಕ್ಯಾಡ್ಬರೀಸ್ ನ ಕ್ಯಾಬ್ - ಡೈರೀಸ್

ಲೇಖಕರು : ಪೂರ್ಣೇಶ್

ಪ್ರಕಾಶಕರು : ಪೂರ್ಣೇಶ್

ಪ್ರಥಮ ಮುದ್ರಣ : 2025

ಪುಟಗಳು : 94

ಬೆಲೆ : 120 ರೂ.


ಈ ಕಿರು ಕಾದಂಬರಿಯನ್ನು 

"ಕನಸುಗಳ ಒತ್ತೆ ಇಟ್ಟು ಬೆವರು ಸುರಿಸದಿದ್ದರೂ ಕಣ್ಣೀರು ಒರೆಸಿಕೊಂಡು ದುಡಿಯುವ ಎಲ್ಲಾ ಮಗುಮನಸ್ಸಿನ ಶ್ರಮಿಕರಿಗೆ, ಮತ್ತು ನಗರದ ಕ್ಯಾಬ್ ಚಾಲಕರಿಗೆ" ಅರ್ಪಿಸಿದ್ದಾರೆ. 


ಪೂರ್ವಕತೆಯಲ್ಲಿ ಕ್ಯಾಡ್ಬರೀಸ್ ಚಾಕ್ಲೇಟ್ ತಿನ್ನುವ ಪುಟ್ಟ ಹುಡುಗ ತನ್ನ ಕನಸಿನೊಂದಿಗೆ ನಮಗೆ ಪರಿಚಯವಾಗುತ್ತಾನೆ. ಅದರ ಜೊತೆಗೆ ಅಣ್ಣಾವ್ರ ಅಭಿಮಾನವೂ ಪರಿಚಯವಾಗುತ್ತದೆ. ವಾಸ್ತವದ ಅರಿವು ಮೂಡಿಸುವ ಅಣ್ಣಾವ್ರ ಹಾಡುಗಳು ಮತ್ತು ಪಾತ್ರಗಳು ಕನಸಿನ ಬೆನ್ನೇರಿ ಹೋಗುವಂತೆ ಮಾಡುವ ಪರಿಯನ್ನು ವಿವರಿಸುವ ಸಾಲುಗಳು ಚೆನ್ನಾಗಿವೆ. 


ಪ್ರತಿಯೊಬ್ಬ ಮಗುವಿಗೂ ತಾನು ಮುಂದೇನಾಗಬೇಕು ಎನ್ನುವ ಕನಸಿರುತ್ತದೆ. ತನ್ನ ಭವಿಷ್ಯದ ಕನಸೊಂದನ್ನು ಮಗು ಹೇಳಿದಾಗ ಅಪ್ಪನ ಕಣ್ಣು ಕೆಂಪಾಗುತ್ತಿದ್ದರೆ, ಅಮ್ಮನ ಬೆಂಬಲ ಜೊತೆಗೆ ನಿನಗಿಷ್ಟವಾಗಿರುವುದನ್ನು ಆಯ್ಕೆ ಮಾಡಿಕೋ ಎಂಬ ಹುರಿದುಂಬಿಸುವಿಕೆ ಮಗುವಿಗೆ ಹುಮ್ಮಸ್ಸು ತುಂಬುವುದನ್ನು ಕಾಣಬಹುದು. ಮಗುವಿನ ಆ ಕನಸಿಗೆ ಕಾರಣ ಡ್ರೈವರ್ ಆಗಿದ್ದ ತಂದೆಯೇ.. ಈ ಮಗುವೇ ಪ್ರಶಾಂತ. ಮುಂದೆ ಪ್ರಶಾಂತನ ಜೀವನಗಾಥೆ ನಮ್ಮ ಕಣ್ಮುಂದೆ ಬರುತ್ತಾ ಹೋಗುತ್ತದೆ. 


ಮೇಲಿನ ಈ ಪ್ರಸಂಗ ಓದಿದಾಗ ವಿವೇಕಾನಂದರ ಬಾಲ್ಯದ ಘಟನೆಯೊಂದು ನೆನಪಾಯಿತು. ಸಾರೋಟಿನ ಸಾರಥಿಯಾಗುವುದೇ ತನ್ನ ಗುರಿ ಎಂದು ಹೇಳುವ ಬಾಲಕ ನರೇಂದ್ರನಿಗೆ ತಂದೆ ಹೊಡೆದಾಗ, ತಾಯಿ ಅರ್ಜುನನ ರಥದ ಸಾರಥಿ ಶ್ರೀ ಕೃಷ್ಣನನ್ನು ತೋರಿಸಿ ಹುರಿದುಂಬಿಸುವ ಪರಿ ನೆನಪಾಯಿತು. ಮುಂದೆ ನರೇಂದ್ರ ಯುವಶಕ್ತಿಯನ್ನು ಮುನ್ನಡೆಸುವ ಸಾರಥಿಯಾದ ವಿವೇಕಾನಂದರಾದದ್ದು ತಿಳಿದೇ ಇದೆ. 


ಕೆಲವೊಮ್ಮೆ ನಾವು ಕಂಡ ಕನಸುಗಳನ್ನು ಬೆನ್ನಟ್ಟಿ ಹೋಗದೆ ಬೇರೆ ಕನಸಿನ ಹಿಂದೆ ಹೋಗುವುದೇ ಬದುಕಿನ ದೊಡ್ಡ ತಿರುವಾಗಿರುತ್ತದೆ. ಪ್ರಶಾಂತನ ಜೀವನದಲ್ಲಿಯೂ ಅಂತಹ ತಿರುವು ಬಂದಿತ್ತು. ಆತ ಡ್ರೈವರ್ ಆಗುವ ಕನಸನ್ನು ಬಿಟ್ಟು ಯಾವ ಕನಸಿನ ಬೆನ್ನು ಬಿದ್ದಿದ್ದ..?


ಪ್ರಶಾಂತನ ಬಾಲ್ಯದಿಂದ ಅವನ ಗೆಳೆಯ ಆತಂಕ ಕೆಲಸದ ಜಾಗದಲ್ಲಿಯೂ ಸಹೋದ್ಯೋಗಿ. ಇವರಿಬ್ಬರ ಸಂಭಾಷಣೆ ಚೇತೋಹಾರಿಯಾಗಿ ಸಾಗುತ್ತದೆ. 


ಇಲ್ಲಿ ನರೇಶನ ಪಾತ್ರದ ಮೂಲಕ ಲೇಖಕರು "ಎಲ್ಲಾ ಕನಸಿನ ಹಿಂದೆ ಹೋದರೆ ಕೊನೆಗೆ ನಾವು ಬರೀ ಕೈಯಲ್ಲಿ ಬರಬೇಕಾಗುತ್ತೆ. ಅದೇ ಕಾಡೋ ಕನಸಿನ ಹಿಂದೆ ಹೋದರೆ ನೂರಾರು ಜನಕ್ಕೆ ಅನ್ನ ಹಾಕೋ ಧಣಿ ಆಗ್ತೀಯ. ನಿನ್ನ ಕೈ ಫಸಲಾಗುತ್ತೆ. ಆಗ ನಿನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬಹುದು" ಎಂದು ಹೇಳಿಸುತ್ತಾರೆ. 

ಅಂದ ಹಾಗೆ ಇಲ್ಲಿ ನರೇಶನಿಗೆ ವೆಬ್ ಡೆವಲಪರ್ ಆಗುವ ಕನಸಿತ್ತು. ಆದರೆ, ಪರಿಸ್ಥಿತಿಯೊಂದು ಡ್ರೈವಿಂಗ್ ಕ್ಲಾಸ್ ನಡೆಸುವ ಕನಸನ್ನು ಕೊಟ್ಟಿತು. ಈತ ಹೋದದ್ದು ಯಾವ ಕನಸಿನ ಹಿಂದೆ..? ಓದಿ ನೋಡಿ. ಪ್ರಶಾಂತನಿಗೆ ನರೇಶ ಭೇಟಿಯಾಗುವುದು ಹೇಗೆ..?


ಸಾಮಾನ್ಯವಾಗಿ ಜನರು ಡ್ರೈವಿಂಗ್ ಮಾಡುವಾಗ ಮಾಡುವ ತಪ್ಪುಗಳು ಬೇರೆಯವರ ಜೀವನವನ್ನೇ ಬಲಿ ಪಡೆಯಬಹುದು. ಅಂತಹ ತಪ್ಪುಗಳ ಕುರಿತಾಗಿ ಎಷ್ಟು ಎಚ್ಚರಿಕೆ ವಹಿಸಬೇಕು ಎನ್ನುವುದನ್ನು ಬೆಳಕು ಚೆಲ್ಲಿದ್ದಾರೆ. ಡ್ರೈವಿಂಗ್ ಮಾಡುವವರಿಗೆ ಪರಾನುಭೂತಿ ಎಷ್ಟು ಮುಖ್ಯ ಎಂಬುದನ್ನು ಹಾಗೂ ಅದು ಜವಾಬ್ದಾರಿಯಾದಾಗ ಯಾವೆಲ್ಲಾ ಅವಘಡಗಳನ್ನು ತಪ್ಪಿಸಬಹುದು ಎನ್ನುವುದನ್ನು ಹೇಳುತ್ತಾರೆ. 


ಪ್ರಶಾಂತ ಚಿಕ್ಕಂದಿನಲ್ಲಿ ಬಹಳ ಇಷ್ಟಪಟ್ಟಿದ್ದ ಕನಸು ಆತನ ಕ್ಲಾಸ್ ನಲ್ಲಿಯೇ ಓದುತ್ತಿದ್ದ ಸೇಠು ಮಗ, ದೊಡ್ಡ ಬಿಲ್ಡಿಂಗನ ಮನೆಯ ಶೇಖರ ಹೇಳಿದ್ದ ಕನಸು. ದೊಡ್ಡವನಾದ ಮೇಲೆ ಅವನು ಪ್ರಪಂಚ ಟೂರು ಹೊಡೆಯಬೇಕೆಂದು. ಚಿಕ್ಕಂದಿನಲ್ಲಿ ದೂರಾಗಿದ್ದ ಗೆಳೆಯರಿಬ್ಬರು ಮತ್ತೆ ಭೇಟಿಯಾದಾಗ ಶೇಖರ ಯಾವ ಕನಸಿನ ಹಿಂದೆ ಬಿದ್ದಿದ್ದ..? ತನ್ನ ಕನಸಿನ ಬೆನ್ನತ್ತಿದವನಿಗೆ ಯಾವ ಅನುಭವವಾಗಿತ್ತು..?


ಎಲ್ಲರೂ ಕನಸುಗಳು ಒಳ್ಳೆಯದು ಎನ್ನುವಾಗ "ಈ ಕನಸುಗಳು ತುಂಬಾ ಕೆಟ್ಟದು ಪ್ರಶಾಂತ" ಎಂದ ರಾಜಶೇಖರನ ಮಾತಿನ ಮರ್ಮವೆನಿತ್ತು..?


ಡ್ರೈವಿಂಗ್ ಕಲಿಯುವ ಕನಸಿರುವವರು, ಡ್ರೈವಿಂಗ್ ಕಲಿತಿರುವವರು ಹಾಗೂ ಡ್ರೈವಿಂಗ್ ಕಲಿಯದವರು ಹೀಗೆ ಎಲ್ಲರಿಗೂ ಕನೆಕ್ಟ್ ಆಗುವಂತಹ ಕಾದಂಬರಿ ಇದು. ಇಲ್ಲಿ ಕನಸಿನೊಳಗೆ ಕಥೆ ಇದೆಯೋ ಅಥವಾ ಕಥೆಯೊಳಗೆ ಕನಸಿದೆಯೋ ನೀವೇ ಓದಬೇಕು.


ಈ ಕಿರು ಕಾದಂಬರಿಯಲ್ಲಿ ಮನುಷ್ಯನ ಜೀವನ ಪ್ರೀತಿ, ಕನಸಿನ ಹಿಂದೆ ಹೋಗುವ ಆತ್ಮವಿಶ್ವಾಸ, ಬದುಕು ತೋರುವ ಭಯ, ಇದೆಲ್ಲದರ ಜೊತೆಗೆ ಆತ್ಮೀಯವಾದ ಸ್ನೇಹ, ಪ್ರೀತಿ, ವಿರಹ, ಅಮ್ಮನ ಕನೆಕ್ಟಿವಿಟಿ ಎಲ್ಲವೂ ಕಾಣಸಿಗುತ್ತದೆ. ಸಮಾಜಕ್ಕೊಂದು ಸಂದೇಶವೂ ಇದೆ. ಚೇತೋಹರಿ ಸಂಭಾಷಣೆಗಳಿಂದ ನನಗೆ ಈ ಕಿರು ಕಾದಂಬರಿ ತುಂಬಾ ಇಷ್ಟವಾಯಿತು. ಆಡು ಮಾತಿನಂತಹ ಸಂಭಾಷಣೆಗಳನ್ನು ತುಟಿಯಲ್ಲಿ ಮುಗುಳ್ನಗೆ ಇಟ್ಟುಕೊಂಡೇ ಓದಬಹುದಾಗಿದೆ. ಇಲ್ಲಿ ಪ್ರಶಾಂತನ ಜೊತೆಗೆ ನಾವು ಟ್ರಾವೆಲ್ ಮಾಡುತ್ತಾ ಸಾಗುತ್ತೇವೆ. 


"ಕಾಡುತ್ತೆ, ಆದರೆ ಹಿಂಸೆ ಕೊಡಲ್ಲ,

ಕೊಲ್ಲುತ್ತೆ, ಆದರೆ ಉಸಿರು ನಿಲ್ಸಲ್ಲ,

ಕಣ್ಣಿದುರೆ ಇರುವಂತಾಗುತ್ತೆ, ಆದರೆ ನೆನಪಿಗೆ ಬರಲ್ಲ, 

ಅದು ಗೆದ್ದಾಗ ಅಳು ಬರುತ್ತೆ, 

ಕೆಲವೊಮ್ಮೆ ಆನಂದದಿಂದ, 

ಕೆಲವೊಮ್ಮೆ ದುಃಖದಿಂದ,

ಅದು ಏನು?"


ಬೆನ್ನುಡಿಯಲ್ಲಿ ಲೇಖಕರು ಈ ಒಗಟನ್ನು ಪ್ರಸ್ತಾಪಿಸಿದ್ದಾರೆ ಈ ಒಗಟಿಗೆ ಉತ್ತರ ಕಥೆಯಲ್ಲಿದೆ. ಬಹುಶಃ ಈ ಒಗಟಿಗೆ ಉತ್ತರ ತಿಳಿದರೂ.. ಸರಿಯೋ ತಪ್ಪೋ ಎಂದು ಪರಿಶೀಲಿಸುವುದಕ್ಕಾದರೂ ಈ ಕಿರು ಕಾದಂಬರಿಯನ್ನು ಓದಬೇಕು.


ಝೋನ್ ಔಟ್ ಆಗಿರುವ ನಮ್ಮ ಓದನ್ನು ಮತ್ತೆ ಹಳಿಗೆ ತರಬಹುದಾದಂತಹ ಪುಟ್ಟ ಚಂದದ ಹಾಗೂ ರಿಫ್ರೆಶಿಂಗ್ ಓದಿನ ಕಿರು ಕಾದಂಬರಿ ಬಹಳ ಇಷ್ಟವಾಯಿತು. ಬರವಣಿಗೆಯ ಶೈಲಿಯಿಂದಾದ ಉದಯೋನ್ಮುಖ ಬರಹಗಾರರಲ್ಲಿ ಭರವಸೆಯ ಬರಹಗಾರ ಎನ್ನಿಸಿದರು ಇವರು. ಪೂರ್ಣೇಶ್ ಅವರ ಮುಂದಿನ ಸಾಹಿತ್ಯ ಪಯಣಕ್ಕೆ ಶುಭವಾಗಲಿ.


~ ವಿಭಾ ವಿಶ್ವನಾಥ್

ನನ್ನದಲ್ಲದ್ದು (ಪುಸ್ತಕ ಯಾನ - 438)


ಪುಸ್ತಕದ ಶೀರ್ಷಿಕೆ : ನನ್ನದಲ್ಲದ್ದು 

ಲೇಖಕರು : ಡಾ|| ನಾ. ಮೊಗಸಾಲೆ

ಪ್ರಕಾಶಕರು : ಸಾಹಿತ್ಯ ಪ್ರಕಾಶನ

ಪ್ರಥಮ ಮುದ್ರಣ :1977

ಮರು ಮುದ್ರಣ : 2023

ಪುಟಗಳು : 128

ಬೆಲೆ : 150 ರೂ. 


 ಸಾಮಾನ್ಯವಾಗಿ ಕಾದಂಬರಿಗಳಲ್ಲಿ ಹೆಣ್ಣಿನ ಭಾವಗಳನ್ನು ಹೆಚ್ಚಾಗಿ ಓದುತ್ತೇವೆ. ಗಂಡಿನ ಬದುಕನ್ನು ಹಾಗೂ ಭಾವಗಳನ್ನು ಬಿಚ್ಚಿಡುವ ಕಾದಂಬರಿಗಳನ್ನು ನೋಡುವುದು ತೀರಾ ಕಡಿಮೆ. ಇಲ್ಲಿ ಅಪರೂಪದ ಕಥಾ ವಸ್ತುವನ್ನು ಕಾಣಬಹುದು ಜೊತೆಗೆ ಕಾದಂಬರಿಯ ನಿರೂಪಣೆ ವಿಭಿನ್ನವಾಗಿದೆ. 


ಈ ಕಾದಂಬರಿಯಲ್ಲಿ ಭೈರಪ್ಪನವರ 'ಜಲಪಾತ' ಕಾದಂಬರಿಯ ಪ್ರಸ್ತಾಪವಿದೆ. ಲೇಖಕರು ಈ ಕಾದಂಬರಿ ಕರ್ಮವೀರದಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಸಂದರ್ಭದಲ್ಲಿ ಪ್ರಭಾವಿತರಾಗಿದ್ದನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಕಾರಂತರ 'ಅಳಿದ ಮೇಲೆ' ಕಾದಂಬರಿಯ ಪ್ರಭಾವವೂ ಅವರ ಮೇಲಾಗಿದೆ. ಆದರೆ, ಕಥಾವಸ್ತು ಅವೆರಡಕ್ಕಿಂತಲೂ ಭಿನ್ನ. 


ಈ ಕಾದಂಬರಿಗೆ 1977ರ ಶ್ರೇಷ್ಠ ಕಾದಂಬರಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಬಂದಿದೆ. 


ಕಾದಂಬರಿ ಶೇಖರ ಹಾಗೂ ಗೀತಾರ ದಾಂಪತ್ಯದ ಬದುಕು ಹಾಗೂ ಅವರ ಮಾತುಕತೆ, ಅರ್ಥೈಸುವಿಕೆಯಿಂದ ಶುರುವಾಗುತ್ತದಾದರೂ.. ಇಲ್ಲಿ ಶ್ರೀನಿವಾಸರ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಶ್ರೀನಿವಾಸರ ಆತ್ಮಹತ್ಯೆಯ ನಂತರ ಶೇಖರ ಅವರ ಡೈರಿ, ಅವರೊಂದಿಗಿದ್ದ ಆತನ ಒಡನಾಟ ಜೊತೆಗೆ ವಾಮನ ಕಾಮತರ ಮೂಲಕ ಅವರನ್ನು ನೋಡಿ ಚದುರಿದ ಚಿತ್ರಗಳನ್ನು ಜೋಡಿಸುತ್ತಾ ಸಾಗುವ ಚಿತ್ರಣ ಇಲ್ಲಿದೆ.


ಶ್ರೀನಿವಾಸರು ಶೇಖರನ ಜೊತೆಗಿನ ಕೊನೆಯ ಭೇಟಿಯಲ್ಲಿಯೂ ತಮ್ಮ ಮನದ ಮಾತುಗಳನ್ನು ನೇರವಾಗಿ ತೆರೆದಿಟ್ಟಿರಲಿಲ್ಲ. ಇಬ್ಬರಲ್ಲಿಯೂ ಒಂದು ರೀತಿಯ ನಿಗೂಢತೆ, ಕಂದಕ ದೊಡ್ಡದಾಗುತ್ತಿರುವಂತಹ ಸಂದರ್ಭವೇ ಅಲ್ಲಿತ್ತು. ಆದರೆ, ಶೇಖರನಿಗೆ ಬಂದ ಪತ್ರ ಶ್ರೀನಿವಾಸರ ಕೊನೆಯ ದಿನಗಳ ಮನಸ್ಥಿತಿಯನ್ನು ತೆರೆದಿಡುತ್ತಿತ್ತಾದರೂ.. ಅವರ ಪೂರ್ಣ ವಿವರಗಳು ಬೇಕಾದರೆ ಅವರೇ ಸೂಚಿಸಿದಂತೆ ಹಾಗೂ ಅವರು ಅನುಮತಿಸಿದ್ದಂತೆ ಅವರ ಡೈರಿಗಳು, ಅವರ ಪತ್ನಿ, ಶ್ರೀಮತಿ ಶಾಂತ ಎಸ್. ವಡ್ಕೆ, ಶ್ರೀಮತಿ ಡಾ|| ಸೂಕ್ಷ್ಮ ಆರ್. ಮಿಶ್ರ ಹಾಗೂ ವಾಮನ ಕಾಮತ್ ಅವರನ್ನು ಭೇಟಿಯಾಗಿ ಅವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿತ್ತು.


ತಮ್ಮ ಕಾದಂಬರಿ ಬಿಡುಗಡೆ ಸಮಾರಂಭಕ್ಕೆ ಬೆಂಗಳೂರಿಗೆ ಹೋಗಿ ವಾಪಸ್ಸು ಮಂಗಳೂರಿಗೆ ಬರುತ್ತಿರುವಾಗ ಆದ ಅಪಘಾತ ಆರ್ಥೋಪೆಡಿಕ್ ಪ್ರೊಫೆಸರ್ ಆಗಿದ್ದ ಡಾಕ್ಟರ್ ಶ್ರೀನಿವಾಸರನ್ನು ಹಾಗೂ ಪತ್ರಿಕೋದ್ಯಮಿ, ಬರಹಗಾರನಾಗಿದ್ದ ಶೇಖರ್ ಇಬ್ಬರನ್ನೂ ಹತ್ತಿರಕ್ಕೆ ತಂದಿತ್ತು. ಮಾನವೀಯ ದೃಷ್ಟಿಯಿಂದ ಶ್ರೀನಿವಾಸರು ಸಹಾಯ ಮಾಡಿ, ಚಿಕಿತ್ಸೆ ಮಾಡಿದರಾದರೂ.. ಮುಂದೆ ಇಬ್ಬರ ಸಾಹಿತ್ಯಪ್ರೇಮ, ಯೋಚನಾಲಹರಿ, ದೃಷ್ಟಿಕೋನಗಳು ಕಲೆತು ಸ್ನೇಹಕ್ಕೆ ತಿರುಗಿತು. 


ಅಚ್ಚುಕಟ್ಟು, ಶಿಸ್ತು, ಸಂಯಮದ ಶ್ರೀನಿವಾಸರನ್ನು ಶೇಖರ್ ಗಮನಿಸಿದ ಪರಿ, ಅವರ ಓದಿನ ವೇಗ, ವಿಮರ್ಶೆ, ವಾಡ ಮಂಡಿಸುವಿಕೆ ಹೀಗೆ ಹಲವಾರು ವಿಷಯಗಳನ್ನು ಕಾಣಬಹುದು.


ಶ್ರೀನಿವಾಸರಂತೆ ಅವರ ಶ್ರೀಮತಿ ವತ್ಸಲ ಕೂಡ ಸ್ನೇಹಮಯಿ. ಮುಂದೆ ಶೇಖರ್ ಆ ಮನೆಗೆ ಹೋಗಿ ಬರುತ್ತಿದ್ದಾಗ ಗಮನಿಸಿದಂತೆ.. ಶ್ರೀನಿವಾಸರಿಗೂ ಅವರ ಪತ್ನಿಗೂ ನಡುವೆ ಇರುವ ಬಿರುಕು ಹಾಗೂ ಅದು ಕಂದಕವಾಗುತ್ತಾ ಹೋಗುತ್ತಿದ್ದ ನಡೆಗಳನ್ನು ಗಮನಿಸುತ್ತಾರೆ. ಶ್ರೀನಿವಾಸ್ ದಂಪತಿಗಳಿಗೆ ಮಕ್ಕಳಿಲ್ಲದಿರುವುದೇ ಇದಕ್ಕೆ ಕಾರಣರಾಗಿರಬಹುದು ಎಂದು ಶೇಖರ್ ಪತ್ನಿ ಗೀತಾ ಕೂಡ ಅಭಿಪ್ರಾಯಪಟ್ಟಾಗ ಶ್ರೀನಿವಾಸ್ ಅವರ ಬಳಿ ಈ ವಿಚಾರ ಮಾತನಾಡಬೇಕೇ ಬೇಡವೇ ಎಂದೇ ಯೋಚಿಸಿ ಪ್ರಸ್ತಾಪಿಸಿದರಾದರೂ.. ಶ್ರೀನಿವಾಸ್ ಸ್ನೇಹಮಯಿಯಾಗಿ ಅವರು ತಮ್ಮ ವೈಯಕ್ತಿಕ ಬದುಕನ್ನು ತೆರೆದಿರುತ್ತಾರೆ.


ಮಕ್ಕಳಿಲ್ಲದಕ್ಕೆ ಕಾರಣ ಸ್ವತಃ ತಾನೇ ಎಂದೂ.. ಅವರು ವ್ಯಾಸೆಕ್ಟಮಿ ಮಾಡಿಸಿಕೊಂಡಿರುವ ವಿಚಾರವನ್ನು ತೆರೆದಿಟ್ಟಾಗ ಆಘಾತವಾಗುತ್ತದೆ. ಶ್ರೀನಿವಾಸರ ತಂದೆ-ತಾಯಿಯ ದಾಂಪತ್ಯ, ಅವರ ಬದುಕು, ಚಿಕ್ಕಪ್ಪನ ಸಾವು.. ಅದೇ ಅವರನ್ನು ಆರ್ಥೋಪೆಡಿಕ್ ಡಾಕ್ಟರ್ ಆಗುವಂತೆ ಪ್ರೇರೇಪಿಸಿತು. ಅದಕ್ಕೆ ವಾಮನ ಕಾಮತರ ಸಹಕಾರ ಎಲ್ಲವೂ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.


ಚಿಕ್ಕಪ್ಪನ ಸಾವು ಅವರನ್ನು ಡಾಕ್ಟರ್ ಆಗುವಂತೆ ಪ್ರೇರೇಪಿಸಿದರೂ.. ವೈದ್ಯ ಶಿಕ್ಷಣದ ಓದು ಮುಗಿಸಿ ಬಂದವರಿಗೆ ತಮ್ಮ ತಂದೆಯನ್ನು ಉಳಿಸಿಕೊಳ್ಳಲಾಗದ್ದು ಮತ್ತಷ್ಟು ಪ್ರಭಾವಿಸುತ್ತದೆ. 


ಮಕ್ಕಳಾಗಡ್ದರಲ್ಲಿ ತಮ್ಮ ಮನದ ಮಾತು, ಜೊತೆಗೆ ತಾವು ಕೈಗೊಂಡ ನಿರ್ಧಾರವನ್ನು ತೆರೆದಿಟ್ಟಾಗ ವತ್ಸಲಾ ಮನಸ್ಸಿಗೆ ಆಗುವ ಆಘಾತಕ್ಕಿಂತಲೂ ದೊಡ್ಡ ಆಘಾತವಾಗುವುದು ಅವಳು ಕೃತಕದ ಗರ್ಭದಾನ ಮಾಡಿಸಿಕೊಂಡು ತಾಯಿಯಾಗಬಹುದು ಎಂದು ಹೇಳಿದಾಗ. ಅವಳು ವಿಜ್ಞಾನದ ವಿದ್ಯಾರ್ಥಿನಿಯೇ ಆಗಿದ್ದರೂ ಆ ಕಾಲಘಟ್ಟದಲ್ಲಿ ಅದನ್ನು ಒಪ್ಪುವುದು ಹಾಗೂ ಒಪ್ಪಿಸುವುದು ಒಂದು ರೀತಿಯ ಕ್ರಾಂತಿಕಾರಿ ಹೆಜ್ಜೆಯೇ..


ಇದಾದ ನಂತರವೂ ಅವರ ದಾಂಪತ್ಯ ಸಾಗುತ್ತಿದ್ದರೂ ಮೊದಲಿನ ಅರ್ಥೈಸಿಕೊಳ್ಳುವಿಕೆ ಇರುವುದಿಲ್ಲ. ಇಬ್ಬರ ನಡುವಿನ ಕಂದಕ ಹೆಚ್ಚಾಗುತ್ತಲೇ ಹೋಗುತ್ತದೆ.


ವತ್ಸಲಾರನ್ನು ಭೇಟಿಯಾಗಿ ಶ್ರೀನಿವಾಸರ ಡೈರಿ ಪಡೆಯಬೇಕೆಂದುಕೊಂಡು ಹೋದರೂ ಮತ್ತೊಬ್ಬರ ಡೈರಿ ಪಡೆಯುವುದು ಓದುವುದು ಸರಿಯೋ..?ತಪ್ಪೋ? ಅವರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೋ ಎನ್ನುವ ಆಲೋಚನೆಯಲ್ಲಿದ್ದವರಿಗೆ ವತ್ಸಲಾಳಿಗೆ ಬರೆದ ಪತ್ರದಲ್ಲಿ ಅವರು ಶೇಖರರಿಗೆ ಏನು ಕೇಳಿದರೂ ಕೊಡಬೇಕೆಂಬ ಆದೇಶವಿತ್ತು. 


ಮುಂದೆ ಡೈರಿ ಸಾಗುತ್ತಾ ಹೋಗುತ್ತದೆ. ಇಲ್ಲಿ ಡೈರಿಯ ಬರವಣಿಗೆಯಲ್ಲಿ ಕೆಲವು ಸಂಕೇತಗಳು, ಚಿತ್ರಣಗಳನ್ನು ಅರ್ಥೈಸಿರುವ ರೀತಿ ಹಾಗೂ ವಿಭಿನ್ನತೆ ಸೂಕ್ಷ್ಮವಾಗಿ ಚಿತ್ರಿತವಾಗಿದೆ.


ಶಾಂತ, ಸೂಕ್ಷ್ಮ ಹಾಗೂ ವಾಮನ ಕಾಮತ್ ಇವರು ಮೂವರೂ ಶ್ರೀನಿವಾಸರ ಬದುಕಿನಲ್ಲಿ ಯಾವ ಪಾತ್ರ ವಹಿಸಿದ್ದರು ಇವರ ವೈಶಿಷ್ಟ್ಯವೇನು ? ಇವರನ್ನು ಶೇಖರ್ ಮುಖಾಮುಖಿಯಾದರೆ..?


ವೈದ್ಯರಾಗುವಾಗ ತಂದೆ-ತಾಯಿಯನ್ನು ಒಪ್ಪಿಸಿ ಓದಲು ಕಳುಹಿಸಿದ ವಾಮನ ಕಾಮತರ ಕುರಿತು ಗೊತ್ತಿತ್ತಾದರೂ ಶಾಂತ ಹಾಗೂ ಸೂಕ್ಷ್ಮ ಇವರ ಕುರಿತಾಗಿ ಒಮ್ಮೆಯೂ ಶೇಖರ್ ಅವರ ಬಳಿ ಹೇಳದೆ ಇರಲು ಕಾರಣವೇನಿತ್ತು..?


ಒಬ್ಬ ವ್ಯಕ್ತಿ ಸಾರ್ವಜನಿಕವಾಗಿ ಹೇಗಿದ್ದನೋ ಅಂತರಂಗದಲ್ಲಿಯೂ ಹಾಗೆಯೇ ಇದ್ದ ನೇ..? ಅಷ್ಟೂ ದಿನ ಇಟ್ಟುಕೊಂಡಿದ್ದ ಗೌರವಕ್ಕೆ ಮುಕ್ಕಾಗುವಂತಹ ಏನಾದರೂ ವಿಚಾರವಿದ್ದರೆ ಶೇಖರ್ ಅದನ್ನು ಹೇಗೆ ತೆಗೆದುಕೊಳ್ಳಬಹುದು ಎನ್ನುವ ಕುತೂಹಲದಲ್ಲಿಯೇ ಕಾದಂಬರಿ ಸಾಗುತ್ತದೆ.


ವ್ಯಾಸೆಕ್ಟಮಿ ಮಾಡಿಕೊಂಡ ವಿಷಯವನ್ನು ಶ್ರೀನಿವಾಸರು ತಮ್ಮ ಪತ್ನಿ ವತ್ಸಲ ಳ ಬಳಿ ಹಂಚಿಕೊಳ್ಳದೆ ತಮಗೆ ಮಕ್ಕಳಾಗದಕ್ಕೆ ಬೇರೆಯ ಕಾರಣವನ್ನು ನೀಡಿದ್ದರೆ..!?

ಶೇಖರ್ ಕೂಡ ಇದನ್ನೇ ಸೂಚಿಸುತ್ತಾ ರಾದರೂ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳಲು ಇಚ್ಛಿಸದ ಶ್ರೀನಿವಾಸರ ನಡೆ ಅಲ್ಲಿ ಒಪ್ಪಬಹುದಾದರೂ .. ಮುಂದೆ ತಮ್ಮ ಬದುಕನ್ನು ಅ-ಸಹ್ಯವಾಗಿಸಿಕೊಳ್ಳುವ ಪರಿ ಮನುಷ್ಯನ ಬದುಕಿನಲ್ಲಿ ಕಾಮ ಹಾಗೂ ದಾಂಪತ್ಯ ಜೀವನದ ಹಲವು ಮುಖಗಳನ್ನು ತೆರೆದಿಡುತ್ತದೆ. 


ಶ್ರೀನಿವಾಸರು ತಮ್ಮ ಪತ್ನಿ ಕೃತಕ ಗರ್ಭಧಾರಣೆಗೆ ಒಪ್ಪಿದರೆ ಯಾರನ್ನು ವೀರ್ಯದಾನಕ್ಕೆ ಆಯುತ್ತಿದ್ದರು ಎಂಬುದನ್ನು ಹೇಳಿದಾಗ ಅಚ್ಚರಿಯ ಜೊತೆಗೆ ಹೀಗೂ ಯೋಚಿಸುತ್ತಾರಾ ಎನ್ನಿಸುತ್ತದೆ.


ವತ್ಸಲಾರ ತಂದೆಗೆ ಈ ವಿಚಾರ ಗೊತ್ತಾದಾಗ ಅವರು ಪ್ರತಿಕ್ರಿಸುವ ಪರಿ, ತಾಳ್ಮೆ ಹಾಗೂ ವ್ಯವಧಾನದಿಂದ ಉತ್ತರಿಸುವ ರೀತಿ ಒಂದು ಸಂಸಾರವನ್ನು ಒಡೆಯಬಾರದು ಎನ್ನುವ ಅವರ ದೂರಾಲೋಚನೆಗೆ ಕನ್ನಡಿ ಹಿಡಿದಂತಿದೆ.


ಬಾಲವಿಧವೆಯಾದವರು, ಕಿರಿಯ ವಯಸ್ಸಿನಲ್ಲಿಯೇ ವಿಧವೆಯಾದವರೆಲ್ಲರೂ ಕೊನೆಯ ತನಕ ತಾ ಪರಪುರುಷ ಸಂಘ ಬಯಸದೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವುದರ ವಿಚಾರ ಹಾಗೂ ಶ್ರೀನಿವಾಸರಲ್ಲಿ ಕಾಣುವ ಬಯೋಲಾಜಿಕಲ್ ನೆಸಿಸಿಟಿಯಾದ ಕಾಮ ಇವೆರಡನ್ನು ಕಂಡಾಗ ಮನಸ್ಸು ಎಷ್ಟು ಸೂಕ್ಷ್ಮ ಮತ್ತು ಎಷ್ಟು ಬಲಿಷ್ಠ ಎಂಬುದರ ಅರಿವಾಗುತ್ತದೆ.


ಈ ಕಾದಂಬರಿಯಲ್ಲಿ 

ಖಾಲಿ...

ಎನ್ನುವುದಕ್ಕೆ ಬಹಳಷ್ಟು ಅರ್ಥ ಕಾಣುತ್ತದೆ. 


ವಾಮನ ಕಾಮತರ ಜೊತೆಗೆ ಮಾತನಾಡಿದ ಶ್ರೀನಿವಾಸ್ ಅವರಿಗೆ ಹೊಳೆದ ಸೂಕ್ಷ್ಮ ಏನಿತ್ತು ? ಶ್ರೀನಿವಾಸರ ಚರಾಸ್ತಿ ವಾಮನ ಕಾಮತರ ಹೆಸರಿಗೆ ಬರೆದಿದ್ದರಾದರೂ.. ಅದು 'ನನ್ನದಲ್ಲದು' ಎನ್ನುವ ಭಾವದಲ್ಲಿ ಅದನ್ನು ಏನು ಮಾಡಲು ಯೋಚಿಸಿದರು..?


ಎಷ್ಟೋ ಬಾರಿ ನಮ್ಮದಲ್ಲದ ಯೋಚನೆಗಳನ್ನು ನಮ್ಮ ಬದುಕಲ್ಲಿ ಅಂಟಿಸಿಕೊಂಡು, ನಮ್ಮದೇ ಎಂಬಂತೆ ಬದುಕುತ್ತಾ.. ಇಲ್ಲದ ಸಮಸ್ಯೆಗಳನ್ನು ಪರಿಹಾರವೆಂಬಂತೆ ಮನಸ್ಸಿಗೆ ತೆಗೆದುಕೊಳ್ಳುತ್ತೇವೆ. ಅದರ ಸರಿ-ತಪ್ಪುಗಳ ದಾರಿ ನಮ್ಮನ್ನು ಬೇರೆಯದ್ದೇ ಬದುಕಿಗೆ ಕೊಂಡೊಯ್ಯುತ್ತದೆ. ಶ್ರೀನಿವಾಸರ ಮೂಲಕ ವ್ಯಕ್ತಿಯೊಬ್ಬನ ಜೀವನದ ಹಲವು ಆಯಾಮಗಳನ್ನು ತೆರೆದಿಟ್ಟಿದ್ದಾರೆ. 


ಇಂದಿನ ದಿನಗಳಲ್ಲಿ ಕೌನ್ಸಲಿಂಗ್, ಮಾನಸಿಕ ಚಿಕಿತ್ಸೆ ಜೊತೆಗೆ ಮಕ್ಕಳ ವಿಚಾರಕ್ಕೆ ಹಲವಾರು ದಾರಿಗಳು ದಕ್ಕುತ್ತವೆ. ಈ ಕಾದಂಬರಿಯನ್ನು ಇಂದಿನ ದಿನಮಾನಕ್ಕೆ ಹೋಲಿಸಿ ನೋಡುವುದಕ್ಕಿಂತ ಲೇಖಕರು ಬರೆದಿರುವ 1974-75ರ ಕಾಲಘಟ್ಟದಲ್ಲಿಯೇ ನಿಂತು ನೋಡುವುದು ಸೂಕ್ತ. 


ಘನವಾದ ಕಥಾವಸ್ತು ಹಾಗೂ ವಿಭಿನ್ನ ನಿರೂಪಣೆಯ ಕಾದಂಬರಿ. 

~ವಿಭಾ ವಿಶ್ವನಾಥ್

ಹ್ಯಾಷ್ ಟ್ಯಾಗ್ codeಗನ ಸೈನ್ಸ್ ಫಿಕ್ಷನ್ (ಪುಸ್ತಕ ಯಾನ - 437)


ಪುಸ್ತಕದ ಶೀರ್ಷಿಕೆ : ಹ್ಯಾಷ್ ಟ್ಯಾಗ್ codeಗನ ಸೈನ್ಸ್ ಫಿಕ್ಷನ್

ಲೇಖಕರು : ಗುರುರಾಜ ಕುಲಕರ್ಣಿ 

ಪ್ರಕಾಶಕರು : ಛಂದ ಪುಸ್ತಕ

ಪ್ರಥಮ ಮುದ್ರಣ : 2025

ಪುಟಗಳು : 116

ಬೆಲೆ : 135 ರೂ. 


ಇತ್ತೀಚಿನ ಓದಿನಲ್ಲಿ ನನಗೆ ಇಷ್ಟವಾದ ಕಥಾಸಂಕಲನ ಇದು. ಗುರುರಾಜ ಕುಲಕರ್ಣಿಯವರು ಹಳೆಯ ಧಾರವಾಡ ಜಿಲ್ಲೆಯ, ಈಗಿನ ಗದಗ ಜಿಲ್ಲೆಗೆ ಸೇರಿದ ನರಗುಂದ ತಾಲೂಕಿನ ಶಿರೋಳದಲ್ಲಿ ಜನಿಸಿದವರು. ಇವರ ಕೆಲವು ಲಲಿತ ಪ್ರಬಂಧಗಳು ಹಾಗೂ ಸಣ್ಣ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಊರು-ನಾಡುಗಳ ಇತಿಹಾಸವನ್ನು ತಿಳಿಸುವ ' ದನಿಪಯಣ ' ಎನ್ನುವ ಪಾಡ್ಕಾಸ್ಟ್ ನಡೆಸುತ್ತಿದ್ದಾರೆ. 


ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಥಾ ಸಂಕಲನಗಳಿದ್ದರೂ ಬೆರಣಿಕೆಯಷ್ಟು ಮಾತ್ರವೇ ನನ್ನ ಓದಿಗೆ ಸಿಕ್ಕಿರುವುದು. ಹೊಸ ತಂತ್ರಜ್ಞಾನಗಳ ಕುರಿತು ಸರಳವಾಗಿ ತಿಳಿಯುವಂತೆ, ಎಲ್ಲಿಯೂ ಬೋರಾಗದಂತೆ ಸರಾಗವಾಗಿ ಕಥೆಗಳನ್ನು ಹೆಣೆದಿದ್ದಾರೆ. 


2025ರ ಛಂದ ಪುಸ್ತಕ ಬಹುಮಾನ ಪಡೆದ ಕೃತಿ ಇದು. ಕಥಾಸಂಕಲನದ, ಕಥೆಗಳ ಶೀರ್ಷಿಕೆಯಂತೆಯೇ ನಿಧಿ ಬಿ. ಆರ್ ರಚನೆಯ ಮುಖಪುಟವೂ ವಿಭಿನ್ನವಾಗಿ ಸೆಳೆಯಿತು. ಕಂಪ್ಯೂಟರ್ ಗೆ ಅರ್ಥವಾಗುವ ಭಾಷೆ 0 ಮತ್ತು 1. 0 ಮತ್ತು 1 ಬಳಸಿಯೇ codeಗ ಅಲ್ಲಲ್ಲ 'ಕೋಡಗ'ನ ಮುಖ, ಶೀರ್ಷಿಕೆ, ಲೇಖಕರ ಹೆಸರು ಹೀಗೆ ಮುಖಪುಟದ ಅಕ್ಷರಗಳು LCD ಡಿಸ್ಪ್ಲೇನಂತೆ ಚಿತ್ರಿತವಾಗಿವೆ. 


ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ.


ಪ್ರಾಜೆಕ್ಟ್ ನೆನಪಿಕೆ :  ನ್ಯೂಯಾರ್ಕ್ ನಲ್ಲಿದ್ದ ಕ್ಷಿತಿಜ್ ಈಗ ತನ್ನ ಪ್ರೊಫೆಸರ್ ಪೋಲಸ್ಕಿ ಅವರೊಂದಿಗೆ ಚರ್ಚಿಸಿ ತಾನು ದಾಸ್ತಾನು ಡಾಟ್ ಕಾಂ ಗೆ ಸೇರಿಕೊಳ್ಳುವುದೋ ಬೇಡವೋ ಎಂದು ನಿರ್ಧರಿಸಬೇಕಿತ್ತು. ಹಾಗೆ ನೋಡಿದರೆ 'ದಾಸ್ತಾನು' ಕ್ಷಿತಿಜನದ್ದೇ ಕನಸಿನ ಕೂಸು. ನ್ಯೂಯಾರ್ಕ್ ಗೆ ಬಂದ ಹೊಸತರಲ್ಲಿ ವಾರಾಂತ್ಯದಲ್ಲಿ ಹೈಕಿಂಗ್ ಗೆಂದು ಗಗನನ ಜೊತೆ ಹೊರಟಾಗ ಆತ ತನ್ನ ಹೈಕಿಂಗ್ ಸಾಮಾಗ್ರಿಗಳನ್ನು ಸೇಫ್ ಸ್ಟೋರೇಜ್ ನಿಂದ ಕೊಂಡೊಯ್ಯುವುದನ್ನು ಕಂಡು ಅದರ ಮೇಲೆ ಆಸಕ್ತಿ ಹುಟ್ಟಿತ್ತು. ಇಂತಹದ್ದೇ ಸ್ಟೋರೇಜ್ ಉದ್ಯಮಕ್ಕೆ ಭಾರತದಲ್ಲಿಯೂ ಭವಿಷ್ಯವಿದೆ ಎಂದು ಕ್ಷಿತಿಜ ಲೆಕ್ಕಾಚಾರ ಹಾಕಿದ್ದ. ಈಗ ಇದು ಸ್ಟಾರ್ಟಪ್ ಹಂತದಲ್ಲಿತ್ತು.

ಪೋಲಸ್ಕಿ ಅವರೊಡನೆ ಮಾತನಾಡಲು ಹೋದಾಗ ಕೆಲ ಪುಸ್ತಕಗಳನ್ನು ಸೇಫ್ ಸ್ಟೋರೇಜ್ ನಿಂದ ತಂದುದನ್ನು ಕಂಡು ಮನೆಯಲ್ಲಿ ಎಷ್ಟೊಂದು ಜಾಗವಿದ್ದರೂ ಪುಸ್ತಕಗಳನ್ನು ದುಡ್ಡು ಕೊಟ್ಟು ಸೇಫ್ ಸ್ಟೋರೇಜ್ ನಲ್ಲಿಟ್ಟದ್ದೇತಕೆ ಎಂದು ಕೇಳಿದಾಗ 

"ಮೈ ಯಂಗ್ ಫ್ರೆಂಡ್, ಏನನ್ನಾದರೂ ಇಟ್ಟುಕೊಳ್ಳಲು ಮನೆಯಲ್ಲಿ ಜಾಗವಷ್ಟೇ ಅಲ್ಲ, ಮನಸ್ಸಿನಲ್ಲಿ ಜಾಗವೂ ಬೇಕಾಗುತ್ತದೆ ಎನ್ನುತ್ತಾರೆ."

ಹೀಗೆ ಚರ್ಚೆ ಎರಡೂ ದಿಕ್ಕಿನಿಂದಲೂ ಸಾಗುತ್ತಾ ಹೋಗುತ್ತದೆ. ಭಾರತದ ಮಾರುಕಟ್ಟೆ, ಗ್ರಾಹಕರು, ತಂತ್ರಜ್ಞಾನವನ್ನು ಬಿಟ್ಟು ಸ್ಟೋರೇಜ್ ಕಡೆಗೆ ಮುಖ ಮಾಡಿದ ಕ್ಷಿತಿಜನ ಪ್ರತಿಭೆ ಎಲ್ಲದರ ಸಕಾರಾತ್ಮಕ-ನಕಾರಾತ್ಮಕ ಸಾಧ್ಯತೆಗಳನ್ನು ಚರ್ಚಿಸುತ್ತಾರೆ. ಇದಾದ ನಂತರ ಪ್ರೊಫೆಸರ್ ಪ್ರಾಜೆಕ್ಟ್ ನೆನಪಿಕೆಯನ್ನು ನಿಲ್ಲಿಸಲು ಹೊರಡುತ್ತಾರೆ. ಫಂಡಿಂಗ್ ತೊಂದರೆ ಇಲ್ಲದೆ, ಪ್ರಾಯೋಜಕರ ಕಿರಿಕಿರಿ ಇಲ್ಲದೆ, ಪೇಟೆಂಟ್ ಗಲಾಟೆಯೂ ಇಲ್ಲದೆ ಪ್ರೊಫೆಸರ್ ಅದನ್ನು ನಿಲ್ಲಿಸಲು ಹೊರಟದ್ದೇಕೆ..? ಅಷ್ಟಕ್ಕೂ ಪ್ರಾಜೆಕ್ಟ್ ನೆನಪಿಕೆ ಏನಿತ್ತು ..? ಪ್ರೊಫೆಸರ್ರ ವೈಯಕ್ತಿಕ ಬದುಕಿಗೂ ಇದಕ್ಕೂ ಇರುವ ನಂಟೇನು..?


ಕಬ್ಬಿಗ. ai : ದೊಡ್ಡ ಕಂಪನಿಯಲ್ಲಿ ಸಣ್ಣ ಇಂಜಿನಿಯರಿಂಗ್ ಮ್ಯಾನೇಜರ್ ಆಗಿರುವ ಕುಲಕರ್ಣಿ ಹಾಗೂ ನಿವೃತ್ತ ಕನ್ನಡ ಮೇಷ್ಟ್ರು ಪುಟ್ಟಲಿಂಗಯ್ಯನವರು ಇಬ್ಬರ ಸ್ನೇಹದ ಸಾಂಗತ್ಯ ಎಲ್ಲಿಂದಲ್ಲಿಯ ಸ್ನೇಹ ಎನಿಸಿದರೂ ಬೆಳೆಯುತ್ತಾ ಹೋದ ಸ್ನೇಹದಲ್ಲಿ ತಂತ್ರಾಂಶದ ಕುರಿತು ಗುರುಗಳು ತಿಳಿದುಕೊಳ್ಳತೊಡಗಿದ್ದರೆ, ಕೃತಕ ಬುದ್ಧಿಮತ್ತೆ (ಕೃಬು)/ ಯಂತ್ರ ಜಾಣ್ಮೆ (ಯಂಜಾ) ಉಪಯೋಗಿಸಿ ಕುಲಕರ್ಣಿ ಅವರು ಕಬ್ಬಿಗ. ai  ತಂತ್ರಾಂಶವನ್ನು ಗುರುಗಳ ಜ್ಞಾನ ಹಾಗೂ ತಮ್ಮ ತಂತ್ರಜ್ಞಾನದ ಜ್ಞಾನದಿಂದ ಬೆಳೆಸುತ್ತಾ ಹೋದರು. ಈ ತಂತ್ರಜ್ಞಾನದ ಉದ್ದೇಶ ಏನಿತ್ತು..? ಮುಂದೆ ಪುಟ್ಟಲಿಂಗಯ್ಯನವರು ಯಂಜಾಚಾರ್ಯರ ಕಾವ್ಯದ ಕುರಿತು ಹೇಳಿದ ಮಾತುಗಳಲ್ಲಿ ಎಷ್ಟು ನಿಜವಿತ್ತು..? ಕುಲಕರ್ಣಿಯವರು ನಿಜ ತೆರೆದಿಡಲು ಹಿಂತೆಗೆದದ್ದೇಕೆ..? ತಂತ್ರಜ್ಞಾನದ ಜೊತೆಗೆ ಸಾಹಿತ್ಯವನ್ನು ಮಿಳಿತಗೊಳಿಸಿರುವ ಕತೆ. 


ಕೋವಿಡ್ ಹಬ್ಬ : 'ಸೆನ್ಸೋ ಸ್ಟಾರ್' ಎನ್ನುವ ಚಿಕ್ಕ ಸ್ಟಾರ್ಟಪ್ ಹುಬ್ಬಳ್ಳಿಯಲ್ಲಿತ್ತು. ಕಾಲೇಜಿನ ಜೂನಿಯರ್ ಆಗಿದ್ದ ಬಸವರಾಜ ಸಂಗೊಳ್ಳಿ ಅದರ ಸ್ಥಾಪಕ-ಮುಖ್ಯಸ್ಥ. ಒಂದು ಸಂದರ್ಭದಲ್ಲಿ ಅದೇ ಕಂಪನಿಯಲ್ಲಿ ಕೆಲಸಕ್ಕೆ ಅವಕಾಶ ಸಿಕ್ಕು ಸೆನ್ಸಾರ್ ಗಳ ಹಾಗೂ ಇಂಟರ್ನೆಟ್ ಆಫ್ ಥಿಂಗ್ಸ್ ಗಳ ಕುರಿತು ಕೆಲಸ ಮಾಡುತ್ತಿರುವಾಗ, ಕಂಪನಿಯ ಆರ್ಥಿಕ ಸ್ಥಿತಿಯೂ ಚೆನ್ನಾಗಿಯೇ ಇದ್ದಿರುವಾಗ 21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿದರು. ಎಲ್ಲ ಕಂಪನಿಗಳಂತೆ ವರ್ಕ್ ಫ್ರಮ್ ಶುರುವಾಯಿತು ಎಂದುಕೊಂಡರೆ.. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಬಸವರಾಜ ಹೊಸ ಅವಕಾಶವನ್ನು ಕಂಡುಕೊಂಡಿದ್ದ. ಆ ಅವಕಾಶವೇನು ಹಾಗೂ ಅದರ ಪರಿಣಾಮ ಏನಾಯ್ತು..? ತಂತ್ರಜ್ಞಾನದ ಜೊತೆಗೆ ರಾಜಕೀಯವೂ ಬೆರೆತಿರುವ ಕತೆ. 


ಹೊಲವೇ ಜೀವನ ಸಾಕ್ಷಾತ್ಕಾರ... : ದೇಶದ ಖ್ಯಾತ ಪತ್ರಿಕೆಯ ವರದಿಗಾರ್ತಿಯಾಗಿ ಹೆಸರು ಮಾಡಿದ್ದವಳಿಗೆ 25 ವರ್ಷಗಳ ಹಿಂದೆ ತೀರಿ ಹೋಗಿದ್ದ ಅಜ್ಜಿ ಕನಸಿನಲ್ಲಿ ಬಂದು "ಹೊಲ ತಗೋ" ಎಂದು ಗಂಟು ಬಿದ್ದಿದ್ದರು. ಭಾರತೀ ಅಕ್ಕೋರು ಎಂದೇ ಖ್ಯಾತರಾಗಿದ್ದ ಅಜ್ಜಿಯ ಕಷ್ಟಗಳು, ಅಪ್ಪನನ್ನು ಬೆಳೆಸಿದ ಕಷ್ಟ, ಅಕ್ಷರವನ್ನು ಕಲಿಸಿದ್ದು, ವಿನೋಭಾ ಭಾವೆಯವರ ಭೂದಾನ ಚಳುವಳಿಯ ಮಹಿಳಾ ಕಾರ್ಯಕರ್ತೆಯಾಗಿ ಭಾಗವಹಿಸಿದ್ದು, ಅಜ್ಜಿಯ ಬದುಕಿನಲ್ಲಿ ಬಂದ ಹಠಾತ್ ತಿರುವು, ಮಾಯಿ ಸ್ಥಾಪಿಸಿದ ವನಿತಾ ಸೇವಾ ಸಮಾಜ ಇದೆಲ್ಲದರ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅಜ್ಜಿ ಹೊಲ ತೆಗೆದುಕೊಳ್ಳಲು ಗಂಟು ಬಿದ್ದದ್ದೇಕೆ..? ಅಜ್ಜಿ ಹೇಳಿದ ವಿಚಾರಗಳು ಎಷ್ಟರಮಟ್ಟಿಗೆ ಆಲೋಚನೆಗೆ ಹಚ್ಚಿದವು..? ಇದೆಲ್ಲವನ್ನೂ ತಾನು ಮದುವೆಯಾಗುವ ಹುಡುಗ ಸಂದೀಪನೊಡನೆ ಹೇಳಿಕೊಂಡಾಗ ಆತ ಕೊಟ್ಟ ತಾರ್ಕಿಕ ಉತ್ತರವೇನು..? 


ಮರಕೋತಿ ಭಾರತಿ : ಮಕ್ಕಳು ಆಟವೆಂದರೆ ಪಬ್ಜಿ ಎಂಬ ಕಂಪ್ಯೂಟರ್ ಗೇಮು ಎಂದುಕೊಳ್ಳುತ್ತಿರುವ ಸಂದರ್ಭದಲ್ಲಿಯೇ.. ಅಖಿಲ ಭಾರತ ಮರಕೋತಿ ಉತ್ಸವ ನಡೆಯುತ್ತಿರುವುದು ಹಾಗೂ ಅದಕ್ಕೆ ಭಾಗವಹಿಸಲು ದೇಶದ ವಿವಿದೆಡೆಯಿಂದ ಮರಕೋತಿ ಪ್ರಚಾರಕರು, ಅಭಿಮಾನಿಗಳು ಬರುತ್ತಿದ್ದಾರೆಂದು ತಿಳಿದು ಬಂದಿತ್ತು. ಮರಕೋತಿ ಜ್ಯೋತಿ ಎಂಬ ಮೊಬೈಲ್ ಅಪ್ಲಿಕೇಶನ್ ಕೂಡಾ ಸಿಕ್ಕಿತು. ಇದೆಲ್ಲವನ್ನೂ ನಡೆಸುತ್ತಿರುವ ಸಂಸ್ಥೆ ಮರಕೋತಿ ಭಾರತಿ. ಆ ಸಂಸ್ಥೆಯ ಯಶೋಗಾಥೆಯ ಹಿಂದಿನ ಕಥೆ ಮಾತ್ರವಲ್ಲದೆ, ಆ ಸಂಸ್ಥೆಯ ಮೂರ್ಖತನದ ಪರಿಣಾಮ ವೈಯಕ್ತಿಕವಾಗಿ ತಟ್ಟಿದ ಕಥೆಯೂ ಇಲ್ಲಿದೆ. 


ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು! : ಈ ಕಥೆಯ ಶೀರ್ಷಿಕೆಯ ಸಾಲು ಕೋಡಿಕೊಪ್ಪದ ಹುಚ್ಚೀರಪಜ್ಜ ಎಂಬ ಸಂತನ 'ಜಗತ್ ಮಿಥ್ಯ' ಅರ್ಥದ ಖ್ಯಾತ ನುಡಿಯೆಂಬ ಉಲ್ಲೇಖವಿದೆ. ತನ್ನ ಬಾಸ್ ಸತೀಶನ ಜೊತೆ ಬೆಂಗಳೂರಿನ ಹೊರವಲಯದ ಸರ್ಜಾಪುರ ರಸ್ತೆಯ ಜಮೀನಿನ ಬಳಿ ಬಂದದ್ದಕ್ಕೆ ಕಾರಣ ಅಲ್ಲಿ ಕಟ್ಟುತ್ತಿರುವ ದೊಡ್ಡ ಟೆಕ್ ಪಾರ್ಕ್. ಅಲ್ಲಿ ಅವರ ಕಂಪನಿಗೂ ಜಾಗ ನೋಡಿಕೊಂಡು ಅದು ಸರಿ ಎನ್ನಿಸಿದರೆ, ಬಾಡಿಗೆ ಕಮ್ಮಿ ಇದ್ದರೆ, ಹೆಡ್ ಆಫೀಸ್ ಗೆ ತಿಳಿಸುವ ಉದ್ದೇಶದಿಂದ. ಈಗಿದ್ದ ಆಫೀಸನ್ನು ಹೊರವಲಯಕ್ಕೆ ಸ್ಥಳಾಂತರ ಮಾಡಲು ಹೊರಟಿದ್ದೇಕೆ..? ಗೋಲ್ಡನ್ ಟೆಕ್ ಪಾರ್ಕ್ ನೋಡಿದ ಮೇಲೆ ಆ ಜಾಗವನ್ನೇ ಶಿಫಾರಸ್ಸು ಮಾಡಿದ ಭಾವಜೀವಿ ಸತೀಶನ ನಿರ್ಧಾರದ ಹಿಂದೆ ಯಾವ ಭಾವ ವಿತ್ತು..? ವರ್ಚುಯಲ್ ರಿಯಾಲಿಟಿ ಕನ್ನಡಕ ಹಾಕಿಕೊಂಡು ಹಲವಾರು ಸೌಲಭ್ಯಗಳನ್ನು ಕೂಡಾ ಕಂಡಿದ್ದರು. ಆಫೀಸ್ ಸ್ಥಳಾಂತರವಾದ ನಂತರ ವಿಕ್ಷಿಪ್ತ ರೀತಿಯಲ್ಲಿ ಸತೀಶ ರಾಜೀನಾಮೆ ಕೊಟ್ಟು ಹೋದ ಸಂದರ್ಭಕ್ಕೆ ಕಾರಣವೇನು..?


ಮೊಲೆವಾಲು ನಂಜಾಗಿ ಕೊಲುವಡೆ... : ಸಂತೋಷ ಮಹತ್ವಾಕಾಂಕ್ಷಿ. ಕೆಲವೊಮ್ಮೆ ಅವನದ್ದು ದುಡುಕು ಸ್ವಭಾವ, ಚಂಚಲ ಸ್ವಭಾವ ಎನ್ನಿಸಿದರೂ ಇದರ ವಿರುದ್ಧವಾದ ಅಭಿಪ್ರಾಯ ಸಂತೋಷನಿಗೆ ಈತನ ಕುರಿತು ಇತ್ತು. ಅಮೆರಿಕಾದಿಂದ ಮಗಳು ಭಾರತೀಯ ಸಂಸ್ಕೃತಿ ಕಲಿಯಲಿ ಎಂದು ಬಂದು ಇಂಟರ್ನ್ಯಾಷನಲ್ ಸ್ಕೂಲ್ ಗೆ ಸೇರಿಸಿದ್ದಾಗಿತ್ತು. ಆದರೆ, ಶಾಲೆಯಲ್ಲಿ ಆದ ಒಂದು ಅವಗಢ ಪೋಷಕರ ಮನಸ್ಸನ್ನೇ ತಳಮಳಗೊಳಿಸುವಂತಹದ್ದು. ಆ ಘಟನೆ ಏನು ಓದಿ ನೋಡಿ.


ನಿಶಾಚರ ಸಾಫ್ಟ್ವೇರ್ ಡಾಟ್ ಕಾಂ : ಕ್ರೈಮ್ಸ್ ಆಫ್ ಇಂಡಿಯಾ ಪತ್ರಿಕೆಗಾಗಿ ನಿಶಾಚರ ಸಾಫ್ಟ್ವೇರ್ ಡಾಟ್ ಕಾಂ ಕಂಪೆನಿಯ ಮುಖ್ಯಾಧಿಕಾರಿಯನ್ನು ಅವರದ್ದೇ ಆಹ್ವಾನದ ಮೇಲೆ ಸಂದರ್ಶನ ಮಾಡಲು ಹೋಗಿದ್ದು ರಾತ್ರಿ 11:50ಕ್ಕೆ. ರಾತ್ರಿಯ ಅಪವೇಳೆಯಲ್ಲಿ ಸಂದರ್ಶನಕ್ಕೆ ಬಾ ಎಂದದ್ದು ಬೇಜಾರು ತಂದಿತ್ತಾದರೂ ಚಾನ್ ಬಂದ ಮೇಲೆ ಸಂದರ್ಶನವನ್ನು ಶುರು ಮಾಡಿ ಆಗಿತ್ತು. ಹೀಗೆ ಆಸಕ್ತಿಕರವಾಗಿಯೇ ಸಾಗುತ್ತಿದ್ದ ಕಥೆ ಹಾರರ್ ರೂಪ ತಳೆಯುವುದನ್ನು ಓದಿ ನೋಡಿ.


ಅಳಗಪ್ಪನ ಅಲ್ಗಾರಿದಮ್ : ಕಂಪನಿಯಲ್ಲಿ ಕೆಲಸ ಮಾಡುವ ಅಳಗಪ್ಪನ ಪೂರ್ತಿ ಹೆಸರು ಅಳಗಪ್ಪನ್ ಪಳನಿಯಪ್ಪನ್. ಜಾಣನಾಗಿದ್ದಾತ ಕಷ್ಟಪಟ್ಟು ದುಡಿಯುತ್ತಿದ್ದ. ಒಂದೇ ತರಹದ ಕೆಲಸಗಳನ್ನು ಎರಡು ಸಲ ಮಾಡಿದ್ದೇ ಇಲ್ಲ. ಮೊದಲನೇ ಸಲ ಕೆಲಸ ಮಾಡಿ ಅದನ್ನು ಇನ್ನೊಮ್ಮೆ ಮಾಡಬೇಕಾಗಿ ಬಂದರೆ ಎಂದು ಮುಂದಾಲೋಚನೆಯಿಂದ ಕಂಪ್ಯೂಟರ್ ಪ್ರೋಗ್ರಾಮ್ ಬರೆದು ಅದೇ ತರಹದ ಸಮಸ್ಯೆಗೆ ಕಂಪ್ಯೂಟರ್ ನಿಂದ ಕೆಲಸ ಮಾಡಿಸಲು ಪ್ರಯತ್ನಿಸುತ್ತಿದ್ದ. ಹೀಗೆ ಆಟೋಮೇ ಶನ್ ಮಾಡುತ್ತಾ ಇದ್ದವನ ಪ್ರತಿಭೆಗೆ ಇದ್ದ ಒಂದೇ ಸಮಸ್ಯೆ ಎಂದರೆ 'ಹತಗೊಂಡು ಹಲೇ' ಸಿಂಡ್ರೋಮ್. ಮುಂದೆ ಶೇರ್ ಟ್ರೇಡಿಂಗ್ ಅನ್ನು ಮಾಡಲು ಅಲ್ಗೊರಿದಮ್ ಅನ್ನು ಬಳಸಲು ಹೋದ ಅಳಗಪ್ಪನ ಕಥೆ ಏನಾಯ್ತು ಓದಿ ನೋಡಿ.


ಮಲ್ಲೇಶಿಯ ಮೈನೆ ಪ್ಯಾರ್ ಕಿಯಾ ಕಥಾನಕವು : ತನ್ನೂರಿನಲ್ಲಿಯೇ ಬಿ.ಎಸ್ಸಿ ಮುಗಿಸಿದ್ದ ಮಲ್ಲೇಶಿ. ಅವನಿಗೆ ಪ್ರೀತಿ, ಪ್ರೇಮ ಇತ್ಯಾದಿ ಶಬ್ದಗಳೆಲ್ಲ ಫ್ರೆಂಚ್, ಗ್ರೀಕ್ ಭಾಷೆಯಂತಿದ್ದವು. ಹೀಗಿದ್ದವನು ಬೆಂಗಳೂರಿಗೆ ಹೊರಟದ್ದೇ ವಿಭಿನ್ನ ಕಥೆ. ಸಣ್ಣ ಕಂಪನಿಯಲ್ಲಿಯೂ ಕೆಲಸ ಗಿಟ್ಟಿಸಲು ಕಷ್ಟವಾಗಿತ್ತು. ರೆಸ್ಯೂಮ್ ಹಿಡಿದುಕೊಂಡು ಚಪ್ಪಲಿ ಸವೆಸುತ್ತಿದವನಿಗೆ ಒಮ್ಮೆ ಸೆಕ್ಯೂರಿಟಿ ಆಫೀಸರ್ ಇಂಟರ್ ವ್ಯೂ ತೆಗೆದುಕೊಂಡ. ಅಲ್ಲಿಯೂ ಫೇಲ್ ಆಗಿ ಮುಂದೆ ಕಾಲ್ ಸೆಂಟರ್ ನಲ್ಲಿಯೂ ಪ್ರಯತ್ನಿಸಿಯಾಯಿತು. ಆದರೆ, ಎಲ್ಲೋ ಒಂದು ಕಡೆ ಕೆಲಸ ಸಿಗುತ್ತದೆ ಎಂಬಂತೆ.. ಮಲ್ಲೇಶನಿಗೂ ಕೆಲಸ ಸಿಕ್ಕಿತು. ಅವನ ಮೈನೆ ಪ್ಯಾರ್ ಕಿಯಾ ಕಥನ ಏನು? ಊಹೆಗೆ ಸಿಗದ ಕಥೆ ಓದಿ ನೋಡಿ. 


ಎಂದಿನಂತೆ ಛಂದ ಪುಸ್ತಕದ ಚಂದದ ವಿಭಿನ್ನ ಕಥೆಗಳ ಕಥಾಗುಚ್ಛವಿದು. ಲಘು ಹಾಸ್ಯ, ವಿಡಂಬನೆ ಭಾವಪೂರ್ಣತೆ, ಸಾಹಿತ್ಯ, ಹಾರರ್, ಟೆಕ್ನಾಲಜಿ ಹೀಗೆ ತರಹೇವಾರಿ ಕಥೆಗಳನ್ನು ತಂತ್ರಜ್ಞಾನದ ಹೆಚ್ಚಿನ ಅರಿವಿಲ್ಲದವರೂ ಓದಬಹುದು. 


~ ವಿಭಾ ವಿಶ್ವನಾಥ್