ಭಾನುವಾರ, ಏಪ್ರಿಲ್ 21, 2019

ನೋವಿನಲೆಯ ನಡುವೆ

"ಸಂಭ್ರಮದ ಸವಿಯಲೊಂದು
ಹೊಸ ನೋವು ಗೋಚರಿಸಿತು
ಹಳೆ ಗಾಯದ ಮುಲಾಮು
ಹೊಸ ನೋವಿಗೆ ಸಾಂತ್ವನಿಸಲಿಲ್ಲ"

ಎಂದು ಆಗ ತಾನೇ ಅಪ್ಡೇಟ್ ಮಾಡಿದ ಸ್ಟೇಟಸ್ ಅನ್ನು ನೋಡಿ "ವೈ, ವಾಟ್ ಹ್ಯಾಪನ್ಡ್?", "ಕ್ಯಾನ್ ಐ ಹೆಲ್ಪ್ ಯೂ?", ಎಂಬೆಲ್ಲಾ ರಿಪ್ಲೈಗಳು ಕ್ಷಣಾರ್ಧದಲ್ಲಿ ಅದಿತಿಯ ಮೆಸೆಂಜರ್ ನಲ್ಲಿ ಬಂದು ಬಿದ್ದಿದ್ದವು.       

ತಾನು ಬರೆದವುಗಳನ್ನೆಲ್ಲಾ ಫೇಸ್ಬುಕ್ ಮತ್ತು ವಾಟ್ಸಾಪ್ ಸ್ಟೇಟಸ್ ಗಳಿಗೆ ಹಾಕುವುದು ಒಂದು ರೀತಿಯ ಗೀಳಾಗಿತ್ತು ಅದಿತಿಗೆ. ಒಂದರ್ಥದಲ್ಲಿ ವಿವಿಧ ಅರ್ಥ, ಭಾವನೆಗಳನ್ನು ಧ್ವನಿಸುವ ಸ್ಟೇಟಸ್ ಗಳು ಒಬ್ಬೊಬ್ಬರಿಗೆ ಒಂದೊಂದು ಭಾವದ ಅಲೆಗಳನ್ನು ತಲುಪಿಸುತ್ತಿದ್ದವು. ಆದರೆ, ಅದಿತಿ ಮನಬಿಚ್ಚಿ ಮಾತನಾಡುತ್ತಿದ್ದುದ್ದೇ ಅಪರೂಪ. ತನ್ನ ಮನಸ್ಸಿನ ಭಾವನೆಗಳನ್ನು ಆಕೆ ತೋಡಿಕೊಳ್ಳುತ್ತಿದ್ದದ್ದು ಹೆಚ್ಚಾಗಿ ಪುಸ್ತಕ, ಲೇಖನಿಗಳ ಜೊತೆಗೇ.. ಆಕೆಗೂ ಅರಿವಾಗಿತ್ತು ಮೋಸದ ಮಾಯಾ ಪ್ರಪಂಚದಲ್ಲಿ ತನ್ನದೆಂಬ ಭಾವನೆಗಳಿಗೆ ಸ್ಪಂದಿಸುವವರೆಲ್ಲರೂ ತನ್ನವರಲ್ಲವೆಂದು. ಹಾಗಾಗಿ ನಗುವಿನ ಮುಖವಾಡ ತೊಟ್ಟು ಹೆಚ್ಚು ಮಾತಿಲ್ಲದೆ ಕಾಲ ಕಳೆಯುತ್ತಿದ್ದದ್ದೇ ಹೆಚ್ಚು.ಸಂಗೀತ, ಪುಸ್ತಕ, ಡೈರಿ, ಕಥೆ-ಕವನಗಳು, ಅನಾಥಾಶ್ರಮದ ಮಕ್ಕಳು, ಜೊತೆಗೆ ದ್ವಂದ್ವದ ನಿಲುವಿನ ಸ್ಟೇಟಸ್ ಗಳು, ಅದನ್ನೋದುವ ಮತ್ತು ಪ್ರತಿಕ್ರಿಯಿಸುವ ಜನರ ಮನೋಭಾವ ಇವುಗಳೇ ಒಂದರ್ಥದಲ್ಲಿ ಅವಳ ನೆಚ್ಚಿನ ಸಂಗಾತಿಗಳು.

ಅದಿತಿಯ ಬಾಳ ಸಂವತ್ಸರದಲ್ಲಿ ಈಗ 24 ವಸಂತಗಳು ಕಳೆದಿವೆ. ಎಂ.ಎನ್.ಸಿ ಕಂಪೆನಿಯಲ್ಲಿ ಕೈ ತುಂಬಾ ಸಂಬಳದ ಕೆಲಸ, ಆಗಾಗ ಫಾರಿನ್ ಟ್ರಿಪ್ ಗಳು, ವಾಸಿಸಲು ಒಳ್ಳೆಯ ಫ್ಲಾಟ್, ಮನೆಕೆಲಸಕ್ಕೆ ಕೆಲಸದವರು ಹೀಗೇ ಮಧ್ಯಮ ವರ್ಗದವರಿಗೆ ದುಬಾರಿ ಎನ್ನಿಸುವಂತಹ ಆದರೆ ಎಲ್ಲರೂ ಬದುಕಲಿಚ್ಚಿಸುವಂತಹಾ ಸುಭದ್ರ ಜೀವನ. ಆದರೆ ಅವಳದ್ದು ಸುಖೀ ಕುಟುಂಬವಾ? ಸುಖೀ ಬದುಕಾ? ಎಂಬ ಪ್ರಶ್ನೆಗೆ ಅವಳಲ್ಲೇ ಉತ್ತರವಿರಲಿಲ್ಲ.

ಪ್ರತೀಕ್ ಅದಿತಿಯ ಬದುಕಲ್ಲಿ ಬಂದು ಹೋದ ಬಳಿಕ ಅವಳಿಗೇ ಅರಿವಾಗದಂತೆ ಅವಳು ಪ್ರಬುದ್ದಳಾಗಿದ್ದಳು. ಮುಗ್ದತೆ ಇದ್ಡೆಡೆ ಈಗ ಆತ್ಮಸ್ಥೈರ್ಯವಿದೆ ಆದರೆ ಈಗ ಅವಳ ಬಾಳಲ್ಲಿ ಪ್ರತೀಕ್ ಮಾತ್ರ ಇಲ್ಲ.ಪ್ರತೀಕ್ ಇದ್ದಿದ್ದರೆ ಇಷ್ಟು ಸುಖವಾಗಿರುತ್ತಿದ್ದೆನಾ ಎಂಬ ಪ್ರಶ್ನೆ ಅವಳಲ್ಲಿ ಮೂಡದೆಯಂತೂ ಇಲ್ಲ.

ಇಂಜಿನಿಯರಿಂಗ್ ಮುಗಿದು ಕೆಲಸ ಸಿಕ್ಕಾಗ ಬೋನಸ್ ಎಂಬಂತೆ ಮನೆಯಲ್ಲಿ ನೋಡಿದ ಹುಡುಗ ಪ್ರತೀಕ್ ನೊಂದಿಗೆ ಅದಿತಿಯ ಮದುವೆಯೂ ಆಗಿತ್ತು. ವಿವಾಹದ ಮುಂಚೆಯೂ ಅಷ್ಟೇನು ಸಲಿಗೆಯಿಂದಿಲ್ಲದ ಹುಡುಗನ ವರ್ತನೆ ವಿವಾಹದ ನಂತರ ಸ್ವಲ್ಪ ಬದಲಾಗಿತ್ತು. ಅದು ಬದಲಾದ ವರ್ತನೆಯಲ್ಲ, ಅತಿರೇಕದ ವರ್ತನೆ ಎಂದು ಅವಳಿಗೆ ಅರಿವಾಗಲು ಕೆಲಕಾಲ ಬೇಕಾಯಿತು. ತನ್ನ ವ್ಯಕ್ತಿಸ್ವಾತಂತ್ರ್ಯದ ಪ್ರತಿಯೊಂದು ಹಂತದಲ್ಲೂ ಅಡ್ಡಗಾಲು ಹಾಕುತ್ತಿದ್ದುದ್ದು ಬಹಳ ಹಿಂಸೆಯೆನಿಸುತ್ತಿತ್ತು. ನೋಡುವವರ ಕಣ್ಣಿಗದು ಸುಖದ ಸಂಸಾರ. ಹುಡುಗನಿಗೆ ಕುಡಿತದ ಚಟವಿಲ್ಲ, ಬೀಡಿ-ಸಿಗರೇಟ್ ಗಳ ಚಟವೂ ಇಲ್ಲ. ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ ಒಂದರಲ್ಲಿ ಲೆಕ್ಚರರ್, ಒಳ್ಳೆಯ ಸಂಬಳ, ಐಷಾರಾಮಿ ಜೀವನ, ಅತ್ತೆ-ಮಾವನವರಿಲ್ಲದ, ಅತ್ತಿಗೆ,ನಾದಿನಿ,ಮೈದುನನಂದಿರಿಲ್ಲದ ಮನೆ. ಇನ್ನೇನು ಬೇಕಿತ್ತು ಒಳ್ಳೆಯ ಸಂಸಾರಕ್ಕೆ..?

ಆದರೆ, ಹೇಳಿದರೆ ಅವಳ ಮಾತನ್ನು ಯಾರೂ ನಂಬುವವರಿರಲಿಲ್ಲ. ಅದಿತಿ ಅವನ ವರ್ತನೆಯಿಂದ ಕಂಗೆಟ್ಟು ಹೋಗಿದ್ದಳು. ಪ್ರತೀಕ್ ಅವಳ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದ. ಉಗುಳುವಂತೆಯೂ ಇಲ್ಲ, ನುಂಗುವಂತೆಯೂ ಇಲ್ಲ..! ಪ್ರತಿಯೊಂದಕ್ಕೂ ಪ್ರಶ್ನೆ, ಪ್ರತಿದಿನವೂ ಬಂದ ತಕ್ಷಣ ಅವಳ ಮೊಬೈಲ್ ಕರೆಗಳು ಮತ್ತು ಮೆಸೇಜ್ ಚೆಕ್ ಮಾಡುತ್ತಿದ್ದದ್ದು ಇವೆಲ್ಲವೂ ಕಿರಿಕಿರಿ ಉಂಟು ಮಾಡುತ್ತಿದ್ದವು. "ಅಲ್ಯಾಕೆ ಹೋಗಿದ್ದೆ?"," ಇವರ ಜೊತೆ ಮಾತನಾಡಬೇಡ", "ಇವತ್ಯಾಕೆ ಲೇಟು?","ಫೇಸ್ಬುಕ್ ಗೆ ಫೋಟೋ ಅಪ್ಡೇಟ್ ಮಾಡಬೇಡ" ಇಂತಹವೇ ನಿರ್ಬಂಧಗಳು.. ಪ್ರತೀಕ್ ಕಾಲೇಜ್ ನಲ್ಲಿ ಅಷ್ಟೇ ಲೆಕ್ಚರರ್ ಆಗಿರಲಿಲ್ಲ. ಮನೆಯಲ್ಲೂ ಅದೇ ರೀತಿ ಬಿಹೇವ್ ಮಾಡುವುದಕ್ಕೆ ಶುರು ಮಾಡಿದ್ದ. ಸಹಿಸಿಕೊಂಡರೆ ಸರಿ ಎದುರು ವಾದಿಸಿದರೆ ಅತಿಯಾದ ಅತಿರೇಕದ ಪ್ರಶ್ನೆಗಳು, ಅತಿ ಎನ್ನಿಸುವಷ್ಟು ನಿರ್ಬಂಧ, ಜೋರು ಮಾತು, ಅಪ್ಪಣೆ, ತಾನೇ ಸರ್ವಾಧಿಕಾರಿ ಎಂಬಂತಹಾ ಧೋರಣೆ. ಇಷ್ಟೇ ಆಗಿದ್ದರೆ ಪರವಾಗಿರುತ್ತಿರಲಿಲ್ಲವೇನೋ.. ಅದಿತಿಯ ಕವಿತೆಗಳ, ಕಥೆಗಳ ಭಾವನೆಗಳ ಕೆದಕುವಿಕೆಗೂ ಶುರು ಮಾಡಿದ್ದ.

"ಓ, ಇವತ್ತೇನು ಪ್ರೇಮ ಕವಿತೆ ಬರೆದಿದ್ದೀಯಾ.. ಯಾರನ್ನು ನೋಡಿ ಬರೆದಿದ್ದೀಯಾ..?", "ವಿರಹದ ಕಥೆಗಳೂ ಇವೆ. ಹಾಗಾದರೆ ಬ್ರೇಕ್ ಅಪ್ ಸ್ಟೋರಿ ಕೂಡಾ ಇರಲೇ  ಬೇಕು. ಯಾರದು..?" ಎಂಬ ಕುಹಕದ ಮಾತುಗಳು. "ನಿಮ್ಮಂತಹಾ ನೂರಾರು ಇಂಜಿನಿಯರಿಂಗ್ ಸ್ಟೂಡೆಂಟ್ ಗಳಿಗೆ ಪಾಠ ಮಾಡುವವನು ನಾನು, ನಿಮ್ಮ ಕಥೆಗಳೆಲ್ಲಾ ಗೊತ್ತಿಲ್ಲದಂತಹವುಗಳಾ, ಹೇಳು..?" ಇದೇ ರೀತಿಯ ಸಂದೇಹ. ಎದುರುತ್ತರ ನೀಡಿದರೆ, ವಾದಿಸಿದರೆ ಬೈಗುಳಗಳ ಪ್ರವಾಹ. ಯಾವತ್ತೂ ದೈಹಿಕವಾಗಿ ಹಿಂಸಿಸಿದವನೇ ಅಲ್ಲದ ಪ್ರತೀಕ್, ಮಾನಸಿಕವಾಗಿ ಅದಿತಿಯನ್ನು ಬಹಳವೇ ಹಿಂಸಿಸುತ್ತಿದ್ದ.
   
ಆದರೆ ಅವತ್ತು ಬೆಳಿಗ್ಗೆ ಅದಿತಿ ಬರೆಯುತ್ತಿದ್ದ 'ನೋವಿನಲೆಯ ನಡುವೆ' ಕಾದಂಬರಿಯ ಹಸ್ತಪ್ರತಿಯನ್ನು ಕಂಡವನೇ ವಿನಾಕಾರಣ ಜಗಳ ಮಾಡಿದ್ದ.  ಅದಿತಿಗೂ ಸಿಟ್ಟು ಹೆಚ್ಚಾಗಿ ಜಗಳ ತಾರಕ್ಕೇರಿತ್ತು. ಹೀಗೆ ಸಿಟ್ಟಲ್ಲೇ ಮನೆಯಿಂದ ಹೊರಬಿದ್ದವ ಯಾವುದೋ  ಆಕ್ಸಿಡೆಂಟ್ ಮಾಡಿಕೊಂಡು ಶವವಾಗಿದ್ದ. ಮದುವೆಯಾಗಿ ವರ್ಷ ತುಂಬುವ ಮೊದಲೇ ಅದಿತಿಯ ಸೌಭಾಗ್ಯ ಮುಗಿದಿತ್ತು. ಎಲ್ಲರೂ ಅದಿತಿಯ ಕಾಲ್ಗುಣವನ್ನೇ ದೂಷಿಸಿದ್ದರು.

ನಂತರ, ಒಂಟಿ ಹೆಣ್ಣು ಎಂದು ಸಂತಾಪ ಸೂಚಿಸಿ ಸ್ವಂತಕ್ಕೆ ಬಳಸಿಕೊಳ್ಳಲು ನೋಡಿದವರೇ ಹೆಚ್ಚು. ಅದಿತಿಗೆ ಪ್ರತೀಕ್ ಸಾವಿನಿಂದ ದುಃಖವೂ ಆಗಲಿಲ್ಲ, ಸಂತಸವೂ ಆಗಲಿಲ್ಲ, ಅಂದಿನಿಂದ ಒಂದು ರೀತಿಯ ನಿರ್ಲಿಪ್ತತೆ ಆವರಿಸಿತ್ತು.  ಇವೆಲ್ಲಾ ಬವಣೆಗಳಿಂದ ಪಾರಾಗಲು ಕೆಲಸದ,ಬರಹದ ಕಡೆ ಹೆಚ್ಚಿನ ಗಮನ ನೀಡಿದಳು. ಒಂಟಿ ಬದುಕು ಒಂದು ರೀತಿ ಅಪ್ಯಾಯಮಾನವೇ ಆಗಿತ್ತು ಅವಳಿಗೆ. ಇಲ್ಲಿಯವರೆಗೂ...!

ಗೆಳತಿಯ ಮದುವೆಗೆಂದು  ಬಂದವಳಿಗೆ ಹೊಸ ರೀತಿಯ ಭಾವನೆಗಳು, ತನ್ನ ಜೀವನದಲ್ಲಿಲ್ಲದ ಭಾಂದವ್ಯಗಳು ಗೋಚರಿಸತೊಡಗಿದವು. ಅದೇ ಸಮಯಕ್ಕೆ ಮನೆಯಲ್ಲೂ ಮರುಮದುವೆಯ ಪ್ರಸ್ತಾಪ ನಡೆದಿತ್ತು.

ಬಂದವರೆಲ್ಲರಿಗೂ ಅದಿತಿಯ ಆಸ್ತಿ, ಹಣ, ರೂಪದ ಮೇಲೆಯೇ ಕಣ್ಣು. ಅದೇಕೋ ಅದಿತಿಗೆ ಬಂದವರೆಲ್ಲರೂ ಪ್ರತೀಕ್ ನ ಪ್ರತಿರೂಪದಂತೆಯೇ ಭಾಸವಾಗುತ್ತಿದ್ದಾರೆ. ಬರುವ ಮುಂದಿನ ಜೀವನದ ಪ್ರತೀಕ್ಷೆಯಲ್ಲೇ ಕಾಲ ಕಳೆಯಬೇಕೇ ಎಂದುಕೊಂಡವಳಿಗೆ ಪ್ರತೀಕ್ ನ ರೂಪ ಬಿಟ್ಟು ಬೇರೆ ರೂಪ ಗೋಚರಿಸುವುದೇ..?
 
ಇವೆಲ್ಲಾ ಗೋಜಲುಗಳ ನಡುವಲ್ಲೇ ಹಾಕಿದ ಸ್ಟೇಟಸ್ ಗೆ ಪ್ರತ್ಯುತ್ತರವಾಗಿ ಕಂಡದ್ದು ಇನ್ನೊಂದು ಕವನದ ಸ್ಟೇಟಸ್.

"ನೋವಿನಲೆಯ ನಡುವಲ್ಲಿಯೂ ನಿಲ್ಲದೆಯೇ
ತೇಲಿ ಬರುವುದು ಸಂತಸದ ಸಾಂತ್ವನದ ಹಾಯಿದೋಣಿ"

ಯಾಕೋ ಅದಿತಿ ಈ ಸಾಲುಗಳ ಮೂಲ ಹುಡುಕಿಕೊಂಡು ಹೊರಟಾಗ ಸಿಕ್ಕಿದ್ದು ಸಾಧನಾ. ಸಾಧನಾಳ ಕಥೆಯೂ ಬಹುಪಾಲು ಅದಿತಿಯಂತೆಯೇ.. ಆದರೆ ಸಾಧನಾ ಈಗ 'ಸಾಂತ್ವನ' ಎಂಬ ಸಂಸ್ಥೆಯ ಸ್ಥಾಪಕಿ ಮತ್ತು ಸಂಚಾಲಕಿ. ಬದುಕಿನಲ್ಲಿ ನೊಂದವರಿಗೆ ಸಾಂತ್ವನ ತುಂಬುವ ಮಮತಾಮಯಿ, ಅನಾಥ ಮಕ್ಕಳ ಮೆಚ್ಚಿನ ಅಮ್ಮ. ಅದಿತಿಗೆ ಇದೆಲ್ಲವನ್ನೂ ಕಂಡು ಆಶ್ಚರ್ಯದ ಜೊತೆಗೆ ಹೊಸ ಬೆಳಕೂ ಗೋಚರಿಸಿತು. ಈಗ ಅದಿತಿಯೂ 'ಸಾಂತ್ವನ'ದ ಮತ್ತೊಬ್ಬಳು ಸಕ್ರಿಯ ಸಂಚಾಲಕಿ. ಅಲ್ಲದೇ ಇಂದು ಅವಳು ತನ್ನ ಚೊಚ್ಚಲ ಕಾದಂಬರಿ 'ನೋವಿನಲೆಯ ನಡುವೆ' ಯನ್ನು 'ಸಾಂತ್ವನ'ದ ಸದಸ್ಯರ ಜೊತೆಯಲ್ಲೇ ಬಿಡುಗಡೆ ಮಾಡುತ್ತಿದ್ದಾಳೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ