ಸೋಮವಾರ, ಏಪ್ರಿಲ್ 23, 2018

ದೇವರಿಗೆ..

ದೇವಸ್ಥಾನದ ಘಂಟೆ ಸದ್ದಲಿ
ಕಿವುಡಾಗಿರುವ ದೇವರಿಗೆ
ದುಷ್ಟರಿಗೆ ಸಿಕ್ಕಿ ನಲುಗುತ್ತಿರುವ
ಹೂವಿನ ಅಳಲು ಕೇಳಲೇ ಇಲ್ಲ

ಗಂಧ-ಅಕ್ಷತೆಗಳಿಂದ ತುಂಬಿ
ಧೂಪದ ವಾಸನೆಯೊಳಿರುವ ದೇವರಿಗೆ
ಅತ್ಯಾಚಾರದ ಕೊಳಚೆ ವಾಸನೆ
ಮೂಗಿಗೆ ರಾಚಲೇ ಇಲ್ಲ..

ಜರಿ-ರೇಷ್ಮೆ ವಸ್ತ್ರಾಲಂಕೃತರಾಗಿ
ಬಿಮ್ಮನೆ ಕುಳಿತ ದೇವರಿಗೆ
ಅಟ್ಟಹಾಸಕ್ಕೆ ಸಿಕ್ಕು ಹರಿದ
ಬಟ್ಟೆ-ಬಾಳುಗಳೆರಡೂ ಕಾಣಲೇ ಇಲ್ಲ

ಮಂತ್ರ-ಘೋಷ, ಜಲದಿಂದ
ಮಡಿಯಾದ ದೇವರಿಗೆ..
ಮೈಲಿಗೆಯಾದವರ ಕೂಗು ಸಹಾ
ಮೈಲಿಗೆಯಾಗುಳಿದು ತಲುಪಲೇ ಇಲ್ಲ

ಕಲ್ಲಿನಿಂದಲೇ ರೂಪಿತವಾಗಿ
ಕಲ್ಲಾಗಿಯೇ ಉಳಿದ ದೇವರಿಗೆ
ಜೀವಂತ ಮಗುವಿನಳಲು
ಕಿವಿಗೆ ತಲುಪಲೇ ಇಲ್ಲ

-ವಿಭಾ ವಿಶ್ವನಾಥ್

2 ಕಾಮೆಂಟ್‌ಗಳು: