ಭಾನುವಾರ, ಜನವರಿ 5, 2020

ಬೀರ ಮತ್ತು ಆ ರಾತ್ರಿ...

ಆ ದಿನ ಮಡಿಕೇರಿಯಲ್ಲಿ ಅಜ್ಜಿ ಮನೆಯಲ್ಲಿ ಬಹಳ ದಿನಗಳ ನಂತರ ನಮ್ಮ ಸಂಬಂಧಿಕರ ಮಕ್ಕಳೆಲ್ಲ ಒಟ್ಟಾಗಿ ಸೇರಿಕೊಂಡಿದ್ದೆವು. ನಮ್ಮಜ್ಜಿ ಕಥೆ ಹೇಳುವುದರಲ್ಲಿ ಎತ್ತಿದ ಕೈ. ಅಲ್ಲದೆ ಕರೆಂಟ್ ಕೂಡ ಕೈಕೊಟ್ಟಿದ್ದರಿಂದ ಅಜ್ಜಿಯನ್ನು ಕಥೆ ಹೇಳಲು ಪೀಡಿಸುತ್ತಾ ಇದ್ದೆವು.
ಆಗ ಅಜ್ಜಿ "ಇಷ್ಟು ದಿನ ಆದ ಮೇಲೆ ಬಂದಿದ್ದೀರ, ಅಲ್ಲದೆ ಇಷ್ಟೊಂದು ಕೇಳಿಕೊಳ್ಳುತ್ತಾ ಇದ್ದೀರ ಅಂದ ಮೇಲೆ ಹೇಳದೆ ಇರುವುದಕ್ಕೆ ಆಗುತ್ತಾ? ಯಾವ ಕಥೆ ಬೇಕು?" ಅಂತಾ ಕೇಳಿದ್ರು. ಎಲ್ಲರೂ ಒಟ್ಟಿಗೆ ದೆವ್ವದಕಥೆ ಬೇಕು ಅಂತಾ ಕಿರುಚಿಕೊಂಡ್ವಿ. ಅದಕ್ಕೆ ಅಜ್ಜಿ, ಕಥೆ ಅಲ್ಲ ಆದರೆ ನಿಜವಾಗಿ ನಡೆದ ಒಂದು ಘಟನೆಯನ್ನೇ ಹೇಳ್ತಿನಿ ಕೇಳಿ ಅಂತಾ ಶುರು ಮಾಡಿದ್ರು.
ಅವತ್ತು ಈಗಿನ ಹಾಗೇ ಒಂದು ಮಳೆಗಾಲ. ಆಗ ನಿಮ್ಮ ತಾತ ಮತ್ತು ಅವರ ಅಣ್ಣ ರಾತ್ರಿ ಮೀನು ಹಿಡಿಯುವುದಕ್ಕೆ ಹೋಗೋಣ ಅಂತಾ ಮಾತಾಡಿಕೊಳ್ತಾ ಇದ್ರು. ಅಷ್ಟರಲ್ಲೇ ನಾವೆಲ್ಲಾ ಇವತ್ತು ಅಮವಾಸ್ಯೆ, ಇವತ್ತು ಬೇಡ, ಇವಾಗ ಬೀರನ ಕಾಟ ಬೇರೆ ಜಾಸ್ತಿ ಆಗ್ತಾ ಇದೆ ಅಂತಾ ಹೇಳಿದ್ವಿ. 'ಗಂಡಸರು ಯಾವಾಗಾದ್ರೂ ನಮ್ಮ ಮಾತು ಕೇಳಿದಾರಾ?' ಬೇಡ ಅಂತಾ ಎಷ್ಟು ಹೇಳಿದ್ರೂ ಕೇಳದೆ ಹೊರಡೋ ತೀರ್ಮಾನಮಾಡಿಯೇ ಬಿಟ್ರು.
ಅಷ್ಟರಲ್ಲಿ ನಾನು "ಬೀರ ಅಂದ್ರೆ ಯಾರು ಅಜ್ಜಿ ?" ಅಂತಾ ಕೇಳಿದೆ.
ಅದಕ್ಕೆ ಅಜ್ಜಿ "ಅದು ಒಂದು ಬೇಕಾದ ಹಾಗೆ ವೇಷ ಧರಿಸುವ ದೆವ್ವ. ಮತ್ತು ಕಚಗುಳಿ ಇಟ್ಟು ಮನುಷ್ಯರನ್ನು ಸಾಯಿಸುತ್ತದೆ, ಅದಕ್ಕೆ ದೇವರು ಮತ್ತು ಕುಂಕುಮ ಅಂದ್ರೆ ಆಗುವುದಿಲ್ಲ." ಅಂತಾ ಹೇಳಿದ್ರು.
ಮುಂದೆ ಏನು ಅಂತಾ ಕೇಳಿದ್ವಿ ಅದಕ್ಕೆ ಅಜ್ಜಿ "ಮುಂದೆ ಊಟ" ಅಂದ್ರು. ನಾವೆಲ್ಲರೂ ಅಚ್ಚರಿಯಿಂದ "ಊಟಾನಾ...?" ಅಂತಾ ರಾಗ ಎಳೆದಿದ್ದಕ್ಕೆ ಅಜ್ಜಿ ನಗುತ್ತಾ ನಗುತ್ತಾ "ಊಟ ಮಾಡಿಕೊಂಡು ಬನ್ರೋಆಮೇಲೆ ಮುಂದಿನ ಕತೆ ಹೇಳ್ತಿನಿ ಅಂತಾ ಹೇಳಿದ್ರು. ಇಲ್ಲಾ ನೀನು ಕತೆ ತಪ್ಪಿಸುತ್ತೀಯ ಈಗಲೇ ಹೇಳು ಅಂತಾ ಗೋಗರೆದಿದ್ದಕ್ಕೆ ಕಥೆಯನ್ನು ಮುಂದುವರಿಸಿದರು.
ಅಂತೂ, ಇಂತೂ ಅವತ್ತು ಸಂಜೆ ಆಯ್ತು. ನಿಮ್ಮ ತಾತ ಮೀನು ಹಿಡಿಯುವುದಕ್ಕೆ ಬುಟ್ಟಿ, ಗಾಳ ಮತ್ತು ಕುಡುಗೋಲು ಹಿಡಿದುಕೊಂಡು ದೇವರ ಪೂಜೆ ಮಾಡಿ ಅವರ ಅಣ್ಣನಿಗೆ ಕಾಯ್ತಾ ಹೊರಟುತುದಿಗಾಲಲ್ಲಿ ನಿಂತಿದ್ರು. ಅಷ್ಟರಲ್ಲಿ ಅವರ ಅಣ್ಣನೂ ಬಂದ್ರು. ಇಬ್ಬರೂ ಹೊರಟ್ರು.ಆಮೇಲೆ ಏನಾಯ್ತು ಅಂತಾ ನಿಮ್ಮ ತಾತ ಹೇಳ್ತಾರೆ ಕೇಳಿ ಅಂದ್ರು.
ಆಮೇಲೆ ತಾತ ಆ ಘಟನೆಯನ್ನು ಹೇಳುವುದಕ್ಕೆ ಶುರು ಮಾಡಿದರು. "ಅವತ್ತು ನಮ್ಮಣ್ಣ ಬಂದು ಬಾಗಿಲಲ್ಲಿ ನಿಂತ. ಆಮೇಲೆ ಇಬ್ಬರೂ ಅಲ್ಲಿಂದ ಹೊರಟೆವು. ನಾನು ಎಷ್ಟೇ ಮಾತಾಡಿದ್ರೂ ಅವನುಮಾತಾನಾಡುತ್ತಲೇ ಇರಲಿಲ್ಲ. ಬರಿ ಹೂಂ, ಹೂಂ ಅಂತಾ ಹೂಂಗುಟ್ತಾ ಇದ್ದ. ನಂಗೆ ಅನುಮಾನ ಬಂದ್ರೂ ಮನೆಯಲ್ಲೇನೋ ಜಗಳ ಮಾಡಿಕೊಂಡು ಬಂದಿರಬೇಕೇನೋ ಅಂತಾ ಸುಮ್ಮನಾದೆ. ಅಷ್ಟರಲ್ಲಿಹೊಳೆ ಸಿಕ್ಕಿತು. ಮೀನು ಹಿಡಿಯೋದಕ್ಕೆ ಅಂತಾ ಎಲ್ಲಾ ತಯಾರಿ ಮಾಡಿಕೊಳ್ಳಬೇಕಾದರೆ ಅವನು ನನ್ನ ಮೇಲೆ ನೀರನ್ನು ಎರಚಲು ಶುರು ಮಾಡಿದ. ನಂಗೇಕೋ ಅನುಮಾನ ಬಂದು ಕುಡುಗೋಲನ್ನು ಅವನಕಡೆ ಎಸೆದು ತಿರುಗಿ ಸಹ ನೋಡದೆ ಓಡಲು ಶುರು ಮಾಡಿದೆ. ಅರ್ಧ ದಾರಿಯಲ್ಲಿ ನನ್ನನ್ನೇ ಹುಡುಕಿಕೊಂಡು ಬರುತ್ತಿದ್ದ, ಅಣ್ಣ ಮತ್ತು ನಿಮ್ಮಜ್ಜಿ ಸಿಕ್ಕಿ ನನ್ನನ್ನು ಬೀರನಿಂದ ಬಚಾವಾಗಿ ಬಂದಿರುವುದು ನಿನ್ನಪುಣ್ಯ ಬಾ ಅಂತಾ ಕರೆದುಕೊಂಡು ಬಂದರು" ಎಂದು ಹೇಳಿದರು.
ನನಗೊಂದು ಅನುಮಾನ ಬಂತು, "ಬೀರ ನಿನ್ನ ಮೇಲೆ ನೀರು ಯಾಕೆ ಎರಚಿತು? ಮತ್ತೆ ದಾರಿಯಲ್ಲೇ ನಿನಗೆ ಕಚಗುಳಿ ಯಾಕೆ ಇಡ್ಲಿಲ್ಲ? ಅಂತಾ ಕೇಳಿಯೇ ಬಿಟ್ಟೆ. ಅದಕ್ಕೆ ತಾತ "ಸಂಜೆ ನಾನು ಇಲ್ಲಿಂದಹೊರಡುವ ಮುಂಚೆ ಪೂಜೆ ಮಾಡಿ ಕುಂಕುಮ ಇಟ್ಟುಕೊಂಡಿದ್ದೆನಲ್ಲ ಅದಕ್ಕೆ ಅದು ನನ್ನಿಂದ ದೂರದಲ್ಲಿತ್ತು ಮತ್ತು ಅದು ನನ್ನನ್ನು ಏನೂ ಮಾಡಲಿಲ್ಲ. ಹೊಳೆಯ ಹತ್ತಿರ ನೀರನ್ನು ಎರಚಿ ನನ್ನ ಕುಂಕುಮವನ್ನು ಅಳಿಸಲು ಪ್ರಯತ್ನ ಮಾಡಿತು. ದೇವರ ದಯೆಯಿಂದ ನಾನು ಬದುಕಿ ಉಳಿದಿದ್ದೇನೆ" ಎಂದರು.
ಅದಾದ ನಂತರ ನನ್ನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಿದವು. "ದೆವ್ವಗಳು ನಿಜವಾಗಿಯೂ ಇವೆಯಾ? ಹಾಗಾದರೆ ನನಗೆ ಇನ್ನೂ ಏಕೆ ಕಾಣಿಸಿಲ್ಲ? ದೆವ್ವಗಳು ನಮ್ಮ ಭ್ರಮೆ, ಕಲ್ಪನೆಯಲ್ಲಿ ಮಾತ್ರಇರುವುದೇ? ಅಂತಾ ಯೋಚನೆ ಮಾಡುತ್ತಾ ಅವತ್ತು ನಿದ್ದೆ ಮಾಡಿಬಿಟ್ಟೆ. ನನಗೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವ ಸಮಯ ದೂರ ಇರಲಿಲ್ಲ.

ಇದಾದ ಸುಮಾರು ಒಂದು ತಿಂಗಳಿಗೆ ನನ್ನ ಗೆಳೆಯನ ಮದುವೆ ಅಂತಾ ಶಿವಮೊಗ್ಗ ಹತ್ತಿರದ ಒಂದು ಹಳ್ಳಿಗೆ ಹೊರಟಿದ್ದೆ. ಆಗ ಅಮ್ಮ ಬೇಗ ಹೊರಡೋ ಕತ್ತಲಾಗೋ ಹೊತ್ತಿಗೆ ಅಲ್ಲಿಗೆ ಹೋಗು ಅಂತಾ ಹೇಳ್ತಾಇದ್ದರೂ, "ಸುಮ್ನಿರಮ್ಮ ಏನೂ ಆಗಲ್ಲ ನೀನೋ, ನಿನ್ನ ಕಲ್ಪನೆನೋ" ಅಂತ ಹೇಳಿ ಹೊರಟ್ಟಿದ್ದು ಮಧ್ಯಾಹ್ನವೇ. ಬಸ್ಸು ಸಿಕ್ಕಿ ಎಲ್ಲೋ ಮೂಲೆಯಲ್ಲಿರೋ ಆ ಊರಿನ ಹತ್ತಿರಕ್ಕೆ ತಲುಪಿದಾಗ ರಾತ್ರಿ 11.45. ಅಲ್ಲಿಂದ ಇನ್ನೂ 7-8 ಕಿ.ಮೀ ದೂರದಲ್ಲಿರೋ ಹಳ್ಳಿಗೆ ಹೋಗಬೇಕಿತ್ತು. ನನ್ನ ಇನ್ನೊಬ್ಬ ಗೆಳೆಯ ಬೇರೆ ಯಾವುದೂ ಗಾಡಿ ಸಿಗದೆ ಲಗೇಜ್ ಆಟೋ ತೆಗೆದುಕೊಂಡು ಬಂದಿದ್ದ. ಹಾಗೆ ಅಜ್ಜಿ ಹೇಳಿದ ಬೀರನ ಕಥೆಯನ್ನು ಅವನಿಗೆ ಹೇಳಿದ್ದಕ್ಕೆ ನಕ್ಕು ದೆವ್ವ, ಭೂತ ಅಂತಾ ಈ ಕಾಲದಲ್ಲೂ ನಂಬುತ್ತೀಯಾ? ಅಂತ ಗೇಲಿ ಮಾಡಿದ. ಹಾಗೆ ಕೆರೆ ಏರಿ ಮೇಲೆ ಹೋಗ್ತಾ ಇರುವಾಗ ಆಟೋ ಯಾಕೋ ಜಗ್ಗಿದ ಹಾಗೆ ಆಯ್ತು. ತಿರುಗಿ ನೋಡಿದರೆ ಬಿಳಿ ಸೀರೆ ಉಟ್ಟು ಕೂದಲು ಬಿಟ್ಟಿರೋ ಆಕೃತಿ ಉಲ್ಟಾ ತಿರುಗಿ ಕೂತಿದೆ. ನನ್ನ ಗೆಳೆಯನಿಗೆ ಆಗ ಭಯ ಶುರು ಆಯ್ತು. ಇಬ್ಬರಿಗೂ ಏನು ಮಾಡಬೇಕೋ ತೋಚಲಿಲ್ಲ. ಆಗಿದ್ದು ಆಗಲಿ ಅಂತಾ ಅವನು ಆಟೋನಾ ಜೋರಾಗಿ ಓಡಿಸಿದ. ಅಷ್ಟರಲ್ಲಿ ಒಂದು ದಿಬ್ಬ ಸಿಕ್ಕಿತು ಅಂತಾ ಸಡನ್ ಆಗಿ ಬ್ರೇಕ್ ಹಾಕಿದ. ಆಮೇಲೆ ತಿರುಗಿ ನೋಡಿದ್ರೇ ಆ ದೆವ್ವ ಕಾಣಿಸಲೇ ಇಲ್ಲ. ಇಬ್ಬರೂ ಮರುಮಾತನಾಡದೆ "ಬದುಕಿದೆಯಾ ಬಡ ಜೀವವೇ" ಅಂದುಕೊಂಡು ಮನೆ ಸೇರಿದೆವು.

ಮಾರನೇ ದಿನ ನಾವು ಅದರ ಬಗ್ಗೆ ವಿಚಾರಿಸಿದ್ದಕ್ಕೆ ಆ ದೆವ್ವ ಅಲ್ಲಿ ಸುಮಾರು ಜನಕ್ಕೆ ಕಾಣಿಸಿಕೊಂಡಿದೆ, ಆದರೆ ಯಾರಿಗೂ ಏನೂ ತೊಂದರೆ ನೀಡಿಲ್ಲ ಎಂದು ತಿಳಿಯಿತು. ನನ್ನ ಗೆಳೆಯನಂತೂ ಜ್ವರ ಬಂದುಒಂದು ವಾರ ಮೇಲೇಳಲಿಲ್ಲ. ನಾನಂತೂ ದೆವ್ವಗಳು ಕಥೆ,ಕಲ್ಪನೆಗೆ ಮಾತ್ರ ಸೀಮಿತ ಎಂದುಕೊಂಡಿದ್ದವ, ಈ ಘಟನೆಯ ನಂತರ ದೇವರ ಅಸ್ಥಿತ್ವದಂತೆ, ದೆವ್ವದ ಅಸ್ಥಿತ್ವವನ್ನೂ ಸಹ ನಂಬಿದ್ದೇನೆ. ಕೆಲವು ಪೂರ್ವಾಗ್ರಹಪೀಡಿತ ದೆವ್ವಗಳ ಹೊರತು ಒಳ್ಳೆಯ ದೆವ್ವಗಳೂ ಇವೆಯೆಂದು ಭಾವಿಸೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ