ಭಾನುವಾರ, ಸೆಪ್ಟೆಂಬರ್ 6, 2026

ಹಲೋ ಟೀಚರ್ (ಪುಸ್ತಕ ಯಾನ - 486)


ಪುಸ್ತಕದ ಶೀರ್ಷಿಕೆ : ಹಲೋ ಟೀಚರ್

ಲೇಖಕರು : ಅನುಸೂಯ ಯತೀಶ್ 

ಪ್ರಕಾಶಕರು : ಅವ್ವ ಪುಸ್ತಕಾಲಯ 

ಪ್ರಥಮ ಮುದ್ರಣ : 2025 ಜನವರಿ

ದ್ವಿತೀಯ ಮುದ್ರಣ : 2025 ಫೆಬ್ರವರಿ (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 164

ಬೆಲೆ : 200 ರೂ. 


ಅನಸೂಯ ಯತೀಶ್ ಅವರು ಮಮತಾಮಯಿ ಶಿಕ್ಷಕಿ ಹಾಗೂ ಬಹುಮುಖ ಪ್ರತಿಭೆ. ಕಥೆ, ಕವನ, ಪ್ರಬಂಧ, ಲೇಖನ, ಹೈಕು ಹೀಗೆ ಹಲವಾರು ವಿಭಿನ್ನ ಪ್ರಕಾರದಲ್ಲಿ ಬರೆಯುತ್ತಾರೆ. ವಿಮರ್ಶೆ ಇವರ ಆದ್ಯತೆಯ ಪ್ರಕಾರ. ಹಾಗೆಂದು, ಈ ಪುಸ್ತಕದಲ್ಲಿನ ಅನುಭವ ಕಥನದಲ್ಲಿ ಯಾರನ್ನೂ ಒರೆಗೆ ಹಚ್ಚಿ ನೋಡದೆ.. ತಾಯಿಯಂತೆ, ಶಿಕ್ಷಕಿ-ಮಕ್ಕಳ ಒಡನಾಟದ ಬುತ್ತಿಯನ್ನು ಹಂಚಿಕೊಂಡಿದ್ದಾರೆ. 


25 ವರ್ಷಗಳ ಶಿಕ್ಷಣ ಇಲಾಖೆಯಲ್ಲಿನ ವೃತ್ತಿ ಬದುಕನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಲೇಖನಗಳು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿಯೂ ಪ್ರಕಟವಾಗಿವೆ.


ಶಿಕ್ಷಕರೆಂದರೆ ಕೇವಲ ಶಿಕ್ಷೆ ಕೊಡುವವರಲ್ಲ ಅಥವಾ ಕೇವಲ ಕಲಿಸುವವರೂ ಅಲ್ಲ. ಅವರ ವಿಭಿನ್ನ ವ್ಯಕ್ತಿತ್ವ, ಮಕ್ಕಳೊಡನೆಯ ಒಡನಾಟ, ಅವರೊಡನೆ ತೋರುವ ಪ್ರೀತಿ, ಕಾಳಜಿ ಅವರನ್ನು ರೂಪಿಸುವಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಸರ್ಕಾರ ಇದಕ್ಕಾಗಿ ಹಲವಾರು ತರಬೇತಿಗಳನ್ನು ನೀಡಿದರೂ.. ಅದನ್ನು ಕಲಿಸುವಲ್ಲಿ ಅಳವಡಿಸಿಕೊಳ್ಳುವ ಪರಿ ಶಿಕ್ಷಕರ ಮೇಲೆ ಅವಲಂಬಿತ. ತಾವು ಕಲಿತು, ಮಕ್ಕಳಿಗೂ ಹೊಂದಿಸುವ ಪರಿ ಅನುಸೂಯಾ ಮಿಸ್ ಅವರಿಂದಲೇ ಕಲಿಯಬೇಕು.


ಇಂದಿಗೂ ನಾವು ಹಲವಾರು ಶಿಕ್ಷಕರ ಮೂಲಕ ಶಿಕ್ಷಣವನ್ನು ಪಡೆದಿದ್ದರೂ.. ವಿದ್ಯೆ ಕಲಿತಿದ್ದರೂ.. ಬೆರಳೆಣಿಕೆಯಷ್ಟು ಶಿಕ್ಷಕರನ್ನು ಮಾತ್ರವೇ ನೆನಪಿಟ್ಟುಕೊಂಡಿದ್ದೇವೆ ಹಾಗೂ ಸ್ಮರಿಸುತ್ತೇವೆ. ಅನುಸೂಯ ಟೀಚರ್ ಅವರ ವಿದ್ಯಾರ್ಥಿಗಳು ಅವರನ್ನು ಎಷ್ಟೆಲ್ಲಾ ನೆನಪಿಸಿಕೊಂಡಿರಬಹುದು ಎಂದು ವಿಸ್ಮಯವಾಗುತ್ತದೆ. ಅಲ್ಲದೆ, ಅವರ ವೃತ್ತಿ ಬದುಕಿನಲ್ಲಿ ಹಲವಾರು ವಿದ್ಯಾರ್ಥಿಗಳನ್ನು ನೋಡಿದ್ದರೂ.. ಸ್ಪೆಷಲ್ ಎನ್ನಿಸುವಂತಹ ಕೆಲ ವಿದ್ಯಾರ್ಥಿಗಳನ್ನು ನಮಗೂ ಪರಿಚಯಿಸುತ್ತಾರೆ. ಇಲ್ಲಿನ 20 ಅನುಭವದ ಬುತ್ತಿಗಳು ಅಪ್ಯಾಯಮಾನವಾಗಿಸುತ್ತದೆ. 


ಕಾಲೇಜ್ ಸೇರಿದಾಗ ಅವರ ಗುರುಗಳಾದ ಶ್ರೀ ಮಾಗಡಿ ರಂಗಯ್ಯನವರು ನೀನು ಶಿಕ್ಷಕ ವೃತ್ತಿಗೆ ಹೇಳಿ ಮಾಡಿಸಿದಂತಿರುವೆ ಎಂದು ಹೇಳಿದ್ದೇಕೆ..? 

ಅವರ ನೋಟ ನೂರಕ್ಕೆ ನೂರು ಸರಿಯಾಗಿತ್ತು ಎಂದು ಮುಂದೆ ನಮಗೆ ಅರಿವಾಗುತ್ತಾ ಹೋಗುತ್ತದೆ. ವೃತ್ತಿ ಬದುಕಿನ ಮೊದಲ ದಿನ ಹಾಗೂ ಮುಗ್ಧ ಜೀವಗಳನ್ನು ಪರಿಚಯಿಸುತ್ತಲೇ ಲಕ್ಷಕ್ಕೆ ಎಷ್ಟು ಸೊನ್ನೆ ಬರೆಯಬೇಕು ಎನ್ನುವುದೇ ಗೊತ್ತಿಲ್ಲದ ಹುಡುಗಿಯೊಬ್ಬಳ ಉತ್ಸಾಹಕ್ಕೆ ಭಂಗವಾಗದಂತೆ ಹ್ಯಾಂಡಲ್ ಮಾಡಿದ ರೀತಿ ಇಷ್ಟವಾಗುತ್ತದೆ. 


ವಿಶೇಷ ಚೇತನ ಮಗು ಮಂಜನ ಮಂಜಿನಂತಹ ಪ್ರೀತಿಗೆ ಕರಗಿ ಹೋಗುವ ಅವರು ಇತರ ಮಕ್ಕಳನ್ನು ಹಾಗೂ ಸುತ್ತಲಿನ ಪರಿಸರವನ್ನು ತಿದ್ದುವ ರೀತಿಗೆ, ವಿಶೇಷ ವಿದ್ಯಾರ್ಥಿಗಳನ್ನು ವಿಶೇಷವಾಗಿ ಕಾಣುವ ಬಗೆಗೂ ಗೌರವ ಮೂಡುತ್ತದೆ.


ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸದಲ್ಲಿ ಮಕ್ಕಳ ಉತ್ಸಾಹದ ಜೊತೆಗೆ ಶಿಕ್ಷಕರ ಜವಾಬ್ದಾರಿ ಎಷ್ಟಿರುತ್ತದೆ ಎಂಬುದನ್ನು ಹಾಗೂ ಪೋಷಕರು ಅವರಿಗೆ ನೀಡಿರುವ ಜವಾಬ್ದಾರಿಯ ಜೊತೆಗೆ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ನಿರ್ಧಾರ, ಅಲ್ಲಿ ಮಕ್ಕಳನ್ನು ಜಾಗೃತೆಯಿಂದ ಹಾಗೂ ಸೂಕ್ಷ್ಮವಾಗಿ ಪೋಷಿಸುವ ಬಗ್ಗೆ ಇಲ್ಲಿದೆ. ಶೈಕ್ಷಣಿಕ ಪ್ರವಾಸ ಹೋಗಿದ್ದಾಗ ಬೇಸ್ತು ಬಿದ್ದ ಬಗೆ, ಅದು ಗೊತ್ತಾದಾಗ ಪ್ರತಿಕ್ರಿಯಿಸಿದ ರೀತಿ, ತಮ್ಮದಲ್ಲದ ತಪ್ಪಿಗೆ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾದ ಬಗೆಯನ್ನೂ ಇಲ್ಲಿ ಹೇಳಿದ್ದಾರೆ. 


2012-13ನೇ ಸಾಲಿನಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯದ ಅರಿವು, ಲೈಂಗಿಕ ಶೋಷಣೆ ವಿರುದ್ಧ ಜಾಗೃತಿ ಮೂಡಿಸಲು ಕಿಶೋರಿ ತರಬೇತಿಯನ್ನು ಪಡೆದು ಬಂದು ಸಂಪನ್ಮೂಲ ವ್ಯಕ್ತಿಯಾಗಿ ಹೋಗಿದ್ದಾಗ ಅವರು ತಮ್ಮ ವಿದ್ಯಾರ್ಥಿನಿಯರಿಗೆ ಹೇಳಿದ ವಿಚಾರಕ್ಕೆ ಅವರ ತಾಯಂದಿರು ಇವರ ಮೇಲೆ ಕೋಪಗೊಂಡದ್ದೇಕೆ..? ಪೋಷಕರಿಗೆ ಮನದಟ್ಟು ಮಾಡಿಕೊಡುವಾಗ ಶಿಕ್ಷಕರು ತಾಳ್ಮೆ ಕಳೆದುಕೊಳ್ಳಬಾರದು ಎಂಬ ಅಂಶವೂ ಇಲ್ಲಿದೆ.


ಸಮಾಜದಲ್ಲಿ, ಶಾಲೆಯಲ್ಲಿ ಮನೆಯಲ್ಲಿ ಹೆಣ್ಣುಮಕ್ಕಳು ಅತಿ ಹೆಚ್ಚು ಲಿಂಗ ತಾರತಮ್ಯಕ್ಕೆ ಒಳಗುತ್ತಿದ್ದಾಗ ಅದನ್ನು ತಡೆಯಲು ಹಾಗೂ ಜಾಗೃತಿ ಮೂಡಿಸಲು ಯೋಜಿಸಿದ ಯೋಜನೆ.. ಪೋಷಕರಿಗೂ, ವಿದ್ಯಾರ್ಥಿಗಳಿಗೂ ಅರ್ಥ ಮಾಡಿಸಿದ ಬಗೆ ಇಲ್ಲಿದೆ.


ವಿದ್ಯಾರ್ಥಿಗಳು ಸಹಪಾಠಿಗಳಿಗೆ ಮಾತ್ರವಲ್ಲದೆ, ಶಿಕ್ಷಕರಿಗೂ ಅಡ್ಡ ಹೆಸರಿಟ್ಟು ಕರೆದಾಗ ಆ ವಿಚಾರ ಶಿಕ್ಷಕರಿಗೆ ತಿಳಿದು ಮಕ್ಕಳಿಗೆ ಯಾವ ರೀತಿ ಪ್ರತಿಕ್ರಿಯಿಸಿದರು..? ಅಡ್ಡ ಹೆಸರಿನ ಅವಾಂತರಗಳನ್ನು ಹೇಳುತ್ತಲೇ ಯಾರನ್ನೂ ಟಾರ್ಗೆಟ್ ಮಾಡದೆ ಮಕ್ಕಳನ್ನು ತಿದ್ದಿದ ಬಗೆಯನ್ನು ಹೇಳುತ್ತಾರೆ. ಈ ಬುದ್ದಿಯನ್ನು ಮಕ್ಕಳು ಸಕಾರಾತ್ಮಕವಾಗಿ ಬಳಸಿಕೊಂಡರೆ ಎಷ್ಟು ಚೆನ್ನ ಅಲ್ಲವೇ ಎಂದು ನಮಗೂ ಅನ್ನಿಸುವಂತೆ ಮಾಡುತ್ತಾರೆ. 


ಶಾಲೆಯಲ್ಲಿ ಹಲವಾರು ಮಕ್ಕಳನ್ನು ನೋಡುತ್ತಾರೆ. ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿ ಬೆಳೆಸಿದ ಪೋಷಕರು ತಮ್ಮದೇ ತಪ್ಪಿಗೆ ಪರಿತಪಿಸುವ ಪ್ರಸಂಗ ಹಾಗೂ ಸವಾಲನ್ನು ಮೆಟ್ಟಿ ನಿಲ್ಲಲು ನೆರವಾದ ಘಟನೆ ಇಲ್ಲಿದೆ.


ಮಕ್ಕಳ ವಿದ್ಯಾಭ್ಯಾಸದಲ್ಲಿ ಕೇವಲ ಶಿಕ್ಷಕರ ಪಾತ್ರವಿರುವುದಿಲ್ಲ. ಅವರ ಕುಟುಂಬದ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಹಳ್ಳಿಗಳಲ್ಲಿ ಅಂದಿನ ದಿನಗಳಲ್ಲಿ ಅದನ್ನು ಅರ್ಥ ಮಾಡಿಸುವುದೇನೂ ಸುಲಭವಲ್ಲ. ಪೋಷಕರು ಜಾಗೃತಿ ವಹಿಸಬೇಕಾದ ವಿಚಾರಗಳನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ.


ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಹ ಪಠ್ಯಗಳ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದು ಮಕ್ಕಳ ವರ್ತನೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಎಷ್ಟು ದೊಡ್ಡಮಟ್ಟದ ಪಾತ್ರ ವಹಿಸುತ್ತದೆ ಎನ್ನುವುದನ್ನು ಹೇಳುತ್ತಲೇ.. ಅದಕ್ಕೆ ತಾವು ಮಾಡಿದ ಪ್ರಯೋಗಗಳು ಹಾಗೂ ಸಿ.ಸಿ.ಇ ಎನ್ನುವ ಶಿಕ್ಷಣ ಕ್ಷೇತ್ರದ ಮಹತ್ವದ ಯೋಜನೆಯ ಕುರಿತು ತಿಳಿಸುತ್ತಾರೆ. 


ಮಕ್ಕಳ ಮನಸ್ಸು ಸೂಕ್ಷ್ಮ ನ ಅವುಗಳಿಗೆ ಘಾಸಿಯಾಗದಂತೆ ಸಹವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಡೆದುಕೊಳ್ಳುವುದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧಗಳು ಹಾಗೂ ಬಾಂಧವ್ಯಕ್ಕೆ ಸಂಬಂಧಿಸಿದ ಪಾಠಗಳನ್ನು ಮಾಡುವಾಗ ಅಥವಾ ಅವರನ್ನು ತಿದ್ದುವಾಗ ಅವೆಲ್ಲವನ್ನು ಗಮನಿಸಿ ಬ್ಯಾಲೆನ್ಸ್ ಮಾಡುವ ಶಿಕ್ಷಕರ ಕುರಿತು ತಿಳಿದು ಹೆಮ್ಮೆ ಎನಿಸುತ್ತದೆ. 


ಮಕ್ಕಳಿಗೆ ಬೈದಾಗ ಆ ಕುರಿತು ಭಯ ಮೂಡುತ್ತದೆ. ಆದರೆ, ಮೆಚ್ಚುಗೆಯ ಮಾನದಂಡ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುವ ಬಗೆ ಹಾಗೂ ಅವರಿಗೆ ಆ ಕುರಿತು ಹೆಮ್ಮೆ ಮೂಡುವ ಬಗೆ ಅವರನ್ನು ಯಾವೆಲ್ಲಾ ಬಗೆಯಲ್ಲಿ ತಿದ್ದಬಲ್ಲದು ಹಾಗೂ ಬದಲಾಯಿಸಬಲ್ಲದು ಎನ್ನುವ ವಿಚಾರಗಳಿಲ್ಲಿವೆ. ಶಿಕ್ಷೆ ಇಲ್ಲದೆ ಶಿಕ್ಷಣ ಕೊಡಲು ಸರಳ ಹಾಗೂ ಜಾಣತನದ ತಂತ್ರಗಳನ್ನು ಸೊಗಸಾಗಿ ಹೇಳಿದ್ದಾರೆ. 


ಮಕ್ಕಳು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅದರಲ್ಲಿಯೂ ಶಿಕ್ಷಕರನ್ನು ಹೆಚ್ಚು ಗಮನಿಸುತ್ತಿರುತ್ತಾರೆ. ಕಾರಣಾಂತರದಿಂದ ತಡವಾಗಿ ಶಾಲೆಗೆ ಬಂದ ಸಂದರ್ಭದಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಗಮನಿಸುವಾಗ ಮಕ್ಕಳೇ ಶಿಕ್ಷಕರಾದ ಸುಸಂದರ್ಭ ಅವರಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ಹೆಮ್ಮೆ ಮೂಡಿಸುತ್ತದೆ. 


ಬಯ್ಯದೆ, ಹೊಡೆಯದೆಯೇ ನಸುನಗುತ್ತ ತಾಳ್ಮೆಯಿಂದ ತಿದ್ದಿದ ಅನುಸೂಯ ಟೀಚರ್ ಅವರ ಅನುಭವದ ಜೊತೆಗೆ ಶಿಕ್ಷೆ ರಹಿತ ಶಿಕ್ಷಣವನ್ನು ಬೆಂಬಲಿಸುವ ಅವರ ನಿಲುವು ನನಗಂತೂ ಇಷ್ಟವಾಯಿತು. 


ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವಾಗ ಶಿಕ್ಷಕರಿಗೆ ಅದೇ ಊರಿನ ವಿದ್ಯಾರ್ಥಿಗಳಿಂದ ಅವರ ಪೋಷಕರಿಂದ ಸವಾಲುಗಳು ಎದುರಾಗಬಹುದು. ಮಕ್ಕಳೊಡನೆ ಸಾಕುಪ್ರಾಣಿಗಳು ಶಾಲೆಗೆ ಬಂದರೆ..?! ಆ ಸಂದರ್ಭ ನಿಭಾಯಿಸಿದ ಜಾಣತನದ ಪ್ರಸಂಗ ಇಲ್ಲಿದೆ. 


ತಮ್ಮ ಪ್ರೀತಿಯ ಶಿಕ್ಷಕರನ್ನು ಬೆಂಬಲಿಸುವ ಹೊಗಳುವ ಹಾಗೂ ಓಲೈಸುವ ಪ್ರೀತಿಯ ವಿದ್ಯಾರ್ಥಿಗಳನ್ನು ನಾವಿಲ್ಲಿ ಕಾಣಬಹುದು. ಅದೆಲ್ಲವೂ ಆಯಾ ಟೀಚರ್ ಗಳ ಗುಣ-ಸ್ವಭಾವಗಳಿಂದ ಪ್ರೇರಿತವಾಗುತ್ತದೆ ಎಂಬುದಂತೂ ಅಕ್ಷರಶಃ ಸತ್ಯ. 


ಶಿಕ್ಷಣವೆಂದರೆ ಕೇವಲ ಪಠ್ಯದಲ್ಲಿನ ಪಾಠವಲ್ಲ. ನಡೆ-ನುಡಿಗಳನ್ನು ತಿದ್ದುವ ಹಾಗೂ ಬದಲಾಯಿಸುವ, ಮಾನವೀಯತೆಯನ್ನು ಮೂಡಿಸುವ ನಡೆ.. ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ ಎಷ್ಟು ಎಂಬುದರ ಅರಿವಾಗುತ್ತದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಇದು ಅತ್ಯವಶ್ಯಕವೂ ಹೌದು. 


ಸಮುದಾಯದತ್ತ ಶಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಶೈಕ್ಷಣಿಕ ಸಾಧನೆಗಳನ್ನು ಶಿಕ್ಷಕರ ಬಾಯಿಂದಲೇ ಕೇಳಿ ತಿಳಿಯುವ ಉತ್ಸಾಹ, ಖುಷಿ. ಇದರ ಜೊತೆಗೆ ಬೇರೆ ಮಕ್ಕಳ ಅಂಕಗಳ ಕುರಿತು ಕೇಳುವ ಕುತೂಹಲವೂ.. ಮಕ್ಕಳ ಬುದ್ಧಿಮತ್ತೆಗನುಗುಣವಾಗಿ ಅವರು ಓದುತ್ತಾರೆ ಎಂಬ ಅರಿವು ಪೋಷಕರಿಗಿರುವುದು ಅತ್ಯಗತ್ಯ ಎಂಬ ಕಿವಿಮಾತನ್ನು ಹೇಳುತ್ತಲೇ ಮಕ್ಕಳಲ್ಲಿ ಪ್ರಾಮಾಣಿಕತೆಯನ್ನು ಉದ್ದೀಪಿಸುವ ಇವರ ಅನುಭವಗಳೂ ಇಲ್ಲಿವೆ.


ಹೋಂವರ್ಕ್ ಎನ್ನುವ ಮಕ್ಕಳ ಕಲಿಕಾ ಅಂಗಳಕ್ಕೆ ಪೋಷಕರು ಹಾಗೂ ಶಿಕ್ಷಕರು ಇಬ್ಬರ ಪ್ರತಿಕ್ರಿಯೆ ಹಾಗೂ ಬದಲಾದ ದಿನಗಳಲ್ಲಿ.. ಈಗ ಶನಿವಾರದಂದು ಪುಸ್ತಕದ ಹೊರೆ ಇರದ 'ಬ್ಯಾಗ್ ಲೆಸ್ ಡೇ' ದಿನಗಳು ಇಲ್ಲಿವೆ.


ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ ಮಾಡುವುದರ ಹಿಂದಿನ ಉದ್ದೇಶ ಜೊತೆಗೆ ಮಕ್ಕಳಲ್ಲಿ ಉತ್ತಮ ನಾಯಕತ್ವದ ಗುಣಗಳನ್ನು ಮೂಡಿಸುತ್ತ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾ.. ಸವಾಲುಗಳನ್ನು ನಿಭಾಯಿಸುವುದನ್ನು ಕಲಿಯುವುದು, ಧೈರ್ಯ, ಸಾಹಸ ಹೆಚ್ಚಿಸುವ ಸಲುವಾಗಿ ಮಾಡಿರುವ ಈ ಜವಾಬ್ದಾರಿಯ ಕುರಿತು ಮಾತನಾಡಿದ್ದಾರೆ.


ಅತಿ ಹೆಚ್ಚಿನ ಬುದ್ಧಿಮತ್ತೆ ಇರುವ ಮಕ್ಕಳ ಜೊತೆಜೊತೆಗೆ ಹಿಂದುಳಿದ ಮಕ್ಕಳನ್ನು ಕರೆದುಕೊಂಡು ಸಾಗುವ ಶಿಕ್ಷಕರಿಗೆ ಬುದ್ದಿವಂತ ಮಕ್ಕಳಿಂದ ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ಭಾವನೆಯನ್ನು ತೆಗೆದು ಹಾಕುವ ಜವಾಬ್ದಾರಿಯೂ ಇರುತ್ತದೆ. ಯಾವುದೂ ಅಥವಾ ಯಾರು ಮೇಲಲ್ಲ, ಕೀಳಲ್ಲ ಎನ್ನುವುದನ್ನು ಅರಿವಾಗಿಸಿರುವ ಶಿಕ್ಷಕಿಯ ಪ್ರಯತ್ನ ಇಲ್ಲಿ ಸಮರ್ಥವಾಗಿ ಕಾಣುತ್ತದೆ.


ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಮಕ್ಕಳ ಮನಸನ್ನು ಅರ್ಥ ಮಾಡಿಕೊಂಡು ದಿನದಿನದ ಹೊಸಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲವ ಇಂತಹ ಶಿಕ್ಷಕರು ನಿಜಕ್ಕೂ ಆದರ್ಶ.


ಹೊಸದಾಗಿ ಶಿಕ್ಷಕ ವೃತ್ತಿಗೆ ಸೇರಿದವರು, ಶಿಕ್ಷಕರ ಅನುಭವದ ಬುತ್ತಿಯನ್ನು ಸವಿಯಲಿಚ್ಚಿಸುವವರು, ಎಲ್ಲಾ ವಯೋಮಾನದ ಮಕ್ಕಳ ಪೋಷಕರು, ಅದರಲ್ಲಿಯೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಎಲ್ಲರೂ ಓದಲೇಬೇಕಾದ ಪುಸ್ತಕ ಎಂದೇ ಹೇಳುವೆ. ಈ ವರ್ಷದ ಓದಿನಲ್ಲಿ ಖಂಡಿತವಾಗಿಯೂ ಮನದಲ್ಲಿ ನಿಲ್ಲುವ ಪುಸ್ತಕ ಇದು. ಒಂದೊಳ್ಳೆ ಓದಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ