"ಏನೋ ಈಗ ನಿನ್ನ ಯೂಟ್ಯೂಬ್ ಚಾನೆಲ್ ತುಂಬಾ ಫೇಮಸ್ ಆಗಿ ಬಿಟ್ಟಿದೆಯಂತೆ" ಎಂದ ಗೆಳೆಯನ ಮಾತಿಗೆ "ಹೌದು ಕಣೋ ಮಚ್ಚಾ.. ಸ್ವಲ್ಪ ಫೇಮಸ್ ಆಗುವವರೆಗೂ ಅಷ್ಟೇ ಇವೆಲ್ಲಾ.. ನೋಡ್ತಾ ಇರು ಇನ್ನೂ ಹೇಗೆಲ್ಲಾ ಫೇಮಸ್ ಆಗುತ್ತೇನೆ ಅಂತಾ.. " ಎಂದನು ಮುರುಳಿ.
ಅಲ್ಲಿಯೇ ಇದ್ದ ಶಶಿಧರ "ಫೇಮಸ್ ಏನೋ ಆಗ್ತಿಯಪ್ಪ. ಆದರೆ, ಒಳ್ಳೆಯ ರೀತಿಯಲ್ಲಿ ಫೇಮಸ್ ಆಗೋ. ಈ ಟ್ರೋಲ್ ಮಾಡಿಸಿಕೊಂಡು ಫೇಮಸ್ ಆಗೋ ತರಹದಲ್ಲೆಲ್ಲಾ ಫೇಮಸ್ ಆಗಬೇಡ. ಸತ್ಯವಾದ ಹಾದಿಯಲ್ಲಿ ನಡೆಯೋ.. ಸತ್ಯವನ್ನು ಮಾತ್ರ ಹೇಳೋ. ಹೆಡ್ಡಿಂಗ್ ಒಂದು ಹಾಕಿರುತ್ತೀಯ. ಒಳಗಡೆ ಕಂಟೆಂಟ್ ಇನ್ನೊಂದು ಇಟ್ಟಿರುತ್ತೀಯ. ಹೀಗಾದ್ರೆ ಕಷ್ಟ ಕಣೋ.. ಇಂತದ್ದೆಲ್ಲಾ ಸ್ವಲ್ಪ ದಿನ ಅಷ್ಟೇ ವರ್ಕ್ ಆಗೋದು. ಇಂತಹಾ ಗಿಮಿಕ್ ಗಳಿಗೆಲ್ಲಾ ಹೆಚ್ಚು ಆಯುಷ್ಯ ಇರಲ್ಲಮ್ಮ. " ಎಂದಾಗ ಮುರಳಿ ರೇಗಿದನು.
"ನಾನು ಫೇಮಸ್ ಆಗುವುದನ್ನು ಸಹಿಸುವುದಿಲ್ಲ ನೀನು. ಅದಕ್ಕೇ ಹೀಗೆಲ್ಲಾ ಮಾತನಾಡುತ್ತಾ ಇದ್ದೀಯ. " ಎಂದವನಿಗೆ "ಬೈಯ್ಯುವವರೇ ಕಣೋ ಬದುಕುವುದಕ್ಕೆ ಹೇಳುವುದು. ಸುಮ್ಮನೆ ಎಲ್ಲರೂ ಹೊಗಳಿದ ಹಾಗೆ ನಾನೂ ಹೊಗಳಿಬಿಟ್ಟರೆ ನೀನು ಹೋಗುತ್ತಿರುವ ಹಾದಿಯೇ ಸರಿ ಅನ್ನೋ ಭ್ರಮಗೆ ಬಿದ್ದು ಬಿಡುತ್ತೀಯ. ಒಬ್ಬ ಒಳ್ಳೆಯ ಸ್ನೇಹಿತನಾಗಿ ನಿನಗೆ ಇದನ್ನ ಹೇಳಬಹುದು ನೋಡಪ್ಪ. " ಎಂದವನೇ ಅಲ್ಲಿಂದ ಹೊರಟನು ಶಶಿಧರ.
ಅಲ್ಲೇ ಇದ್ದ ಮತ್ತೊಬ್ಬ ಗೆಳೆಯ ಮುರಳಿಗೆ "ಇನ್ನೂ ಅವನು ಸತ್ಯ, ನ್ಯಾಯ, ಪ್ರಾಮಾಣಿಕತೆ ಅಂತಾ ಕೂತಿರುವುದಕ್ಕೆ ಅವನಿಗೆ ಟ್ಯಾಲೆಂಟ್ ಇದ್ದರೂ ಅವನು ಫೇಮಸ್ ಆಗದೇ ಇರುವುದು. ಈಗಿನ ಕಾಲಕ್ಕೆ ಯಾವುದು ಸರಿಯೋ ಹಾಗೆಯೇ ಇರಬೇಕು. ಅದು ಬಿಟ್ಟು ಸತ್ಯವನ್ನು ನೇರವಾಗಿಯೇ ಹೇಳ್ತೀನಿ. ನಾನು ನಿಷ್ಠುರವಾಗಿಯೇ ಇರುತ್ತೇನೆ ಅಂತಾ ಅಂದರೆ ಯಾರು ಕೇಳುತ್ತಾರೋ..
ಈಗಿನ ಕಾಲದಲ್ಲಿ ಅರ್ಧ ಸತ್ಯ ಹೇಳಿದರೂ ಅದನ್ನು ಸುಳ್ಳು ಅಂತಾ ಹೇಳುವುದಿಲ್ಲ. ಅದನ್ನೂ ಸತ್ಯ ಅಂತಲೇ ಪರಿಗಣಿಸುವುದು. ಅವನ ಮಾತನ್ನೆಲ್ಲಾ ನೀನು ಸೀರಿಯಸ್ ಆಗಿ ತೆಗೆದುಕೊಳ್ಳುವುದಕ್ಕೆ ಹೋಗಬೇಡ. ನಿನ್ನ ಪಾಡಿಗೆ ನೀನು ಹೇಗೆ ವಿಡಿಯೋ ಹಾಕ್ತಾ ಇದ್ದಿಯೋ ಹಾಗೇ ಹಾಕು. " ಎನ್ನುವ ಬಿಟ್ಟಿ ಸಲಹೆ ಕೊಟ್ಟನು.
ಅದಕ್ಕೆ ಮುರಳಿ " ನೋಡೋಣ ಬಿಡೋ.. ಏನೇನು ಆಗುತ್ತೋ ಏನೋ.. ಯಾಕೋ ಮನಸ್ಸು ಸರಿ ಇಲ್ಲ. ಮನೆಗೆ ಹೋಗುತ್ತೇನೆ" ಎಂದು ಮನೆಗೆ ಹೊರಟನು.
ಅಷ್ಟರಲ್ಲಿ ಅವನ ಮೊಬೈಲಿಗೆ ಅವನ ತಂಗಿಯ ಮೊಬೈಲ್ ನಿಂದ ಒಂದು ಮೆಸೇಜ್ ಬಂತು. "ಅಣ್ಣ, ಅಪ್ಪನಿಗೆ ಆಕ್ಸಿಡೆಂಟ್ ಆಗಿದೆ ಕಣೋ.. " ಎಂದು.
'ಯಾವ ಹಾಸ್ಪಿಟಲ್, ಹೇಗೆ, ಯಾವಾಗ , ಏನಾಗಿದೆ, ಎಲ್ಲಿದ್ದೀರ' ಎಂದೆಲ್ಲಾ ಒಂದರ ಮೇಲೆ ಒಂದು ಮೆಸೇಜ್ ಕಳುಹಿಸಿದನು. ಒಂದಕ್ಕೂ ರಿಪ್ಲೈ ಇಲ್ಲ. ಅವಳ ಮೊಬೈಲ್ ಗೆ ಕರೆ ಮಾಡಿದರೆ ಅದು ಸ್ವಿಚ್ಡ್ ಆಫ್. ಅಪ್ಪ ಹಾಗೂ ಅಮ್ಮನ ಮೊಬೈಲ್ ಕೂಡಾ ಕನೆಕ್ಟ್ ಆಗದಿದ್ದಾಗ ಗಾಬರಿಯಿಂದ ಹುಚ್ಚನಂತೆ ಮನೆಗೆ ಓಡಿದ ಮುರುಳಿ.
ಅಲ್ಲಿ ನೋಡಿದರೆ ಮನೆಯಲ್ಲಿ ಎಲ್ಲರೂ ಸಂತೋಷದಿಂದ ಹರಟೆ ಹೊಡೆಯುತ್ತಾ ಕೂತಿದ್ದರು. ಬಂದವನೇ ತಂಗಿಯ ಕೆನ್ನೆಗೆ ಬಾರಿಸಿ "ಇನ್ನೊಂದು ಸಾರಿ ಸುಳ್ಳು ಹೇಳಿದ್ರೆ ಸರಿ ಇರುವುದಿಲ್ಲ ನೋಡು.." ಎಂದು ವಾರ್ನಿಂಗ್ ಕೊಟ್ಟನು.
"ನಾನೆಲ್ಲಿ ಸುಳ್ಳು ಹೇಳಿದೆ. ಕಳೆದ ವರ್ಷ ಅಪ್ಪನಿಗೆ ಆಕ್ಸಿಡೆಂಟ್ ಆಗಿತ್ತು ತಾನೇ ? " ಎಂದಳು.
"ಅದು ಕಳೆದ ವರ್ಷ ತಾನೇ..?? ಈಗ ಯಾಕೆ ಹೇಳಿದೆ ? ಈಗ ಏನೂ ಆಗಿರಲಿಲ್ಲ ತಾನೇ.. ಪೂರ್ತಿ ಮಾಹಿತಿ ಹೇಳದೆ ಫೋನ್ ಬೇರೆ ಆಫ್ ಮಾಡಿದ್ದೀಯ" ಎಂದ ಮುರಳಿಗೆ
"ನೀನು ನಿನ್ನ ಯೂಟ್ಯೂಬ್ ಗಳಲ್ಲಿ ಈ ರೀತಿ ಯಾವತ್ತೋ ಆಗಿದ್ದಕ್ಕೆ ಬಣ್ಣ ಹಚ್ಚಿ, ಅರ್ಧಂಬರ್ಧ ಮಾಹಿತಿ ನೀಡಿದರೆ ತಪ್ಪಲ್ಲ. ಅದು ಸುಳ್ಳು ಸಹಾ ಅಲ್ಲ. ಆದರೆ , ನಿನ್ನ ತಂಗಿ ಮಾಡಿದ್ದು ತಪ್ಪು ಅಲ್ವಾ..
ಅವರ ಮನೆಯವರಿಗೂ ಹೀಗೆಯೇ ಆಗಿರುತ್ತೆ ಅಲ್ವಾ.. ಎಲ್ಲರ ಬುಡಕ್ಕೆ ಬೆಂಕಿ ಬಿದ್ದಾಗಲೇ ಅವರಿಗೂ ಅರ್ಥ ಆಗುವುದು" ಎಂದ ಶಶಿಧರನನ್ನು ಕಂಡಾಗ ಅದು ಅವನ ಉಪಾಯವೆಂಬುದು ಅರಿವಾಗಿತ್ತು. ಅಲ್ಲದೇ.. ಅವನು ಹೇಳಿದ್ದು ಸಹಾ ಸರಿಯಾಗಿ ಅರ್ಥವಾಗಿ ಜ್ಞಾನೋದಯವಾಗಿತ್ತು.
"ಖ್ಯಾತಿ ನಿಧಾನಕ್ಕೇ ಬರಲಿ ಬಿಡೋ.. ತೊಂದರೆಯಿಲ್ಲ. ಆದರೆ, ಕುಖ್ಯಾತಿ ಅಂತೂ ಬೇಡ. ಇನ್ನು ಮುಂದೆ ಡೈರೆಕ್ಟ್ ಆಗಿರುವ ಹೆಡ್ಡಿಂಗ್ ಹಾಕಿ ಪೂರ್ಣ ಸತ್ಯವನ್ನು ಮಾತ್ರ ತಲುಪಿಸುತ್ತೇನೆ" ಎಂದ ಮುರಳಿಯ ಮಾತು ಕೇಳಿ ಎಲ್ಲರಿಗೂ ಸಂತಸವಾಗಿತ್ತು.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ