ಭಾನುವಾರ, ಸೆಪ್ಟೆಂಬರ್ 6, 2026

ನನ್ನ ಬದುಕಿನ ಗುರುಗಳು ಹಾಗೂ ಗುರು ಸಮಾನರಿವರು..


ಜೀವನದ ಹಾದಿಯಲ್ಲಿ ಪ್ರತಿಯೊಬ್ಬರಿಂದಲೂ ಕಲಿಯುವುದು ಇದ್ದೇ ಇದೆ. ಆ ನಿಟ್ಟಿನಲ್ಲಿ ಹಲವಾರು ಬಳಗಗಳು ಮಾಮ್ಸ್ಪ್ರೆಸೊ, ಸಾಹಿತ್ಯ ಸೃಷ್ಟಿ ಬಳಗ, ಎಲ್ಲಕ್ಕಿಂತ ಹೆಚ್ಚಾಗಿ ಪುಸ್ತಕ ಅವಲೋಕನ ಬಳಗದಿಂದ ಕಲಿತದ್ದು ಬಹಳವಿದೆ. ಹಾಗೆಯೇ, ಇಲ್ಲಿ ದಿನನಿತ್ಯವೂ ಕಲಿಯುವಿಕೆ ಇದ್ದೇ ಇದೆ. ಗುರು ಮುಖೇನ ಕಲಿಯುವುದು ಹೆಚ್ಚು ಪರಿಣಾಮಕಾರಿ ಎಂಬುದು ಹೌದಾದರೂ.. ಏಕಲವ್ಯನಿಗೆ ದ್ರೋಣಾಚಾರ್ಯರಿದ್ದಂತೆ, ಪರೋಕ್ಷವಾಗಿಯೂ ಗುರುವಾಗುವ ಪರಿಣಾಮಕಾರಿಯಾಗಿ ನೆನಪಿಸಿಕೊಳ್ಳುವುದು ಹಾಗೂ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವುದು ಸಹಾ ಅವರಿಗೆ ನೀಡುವ ಗೌರವವೆಂಬುದು ನನ್ನ ಅಭಿಪ್ರಾಯ.


ಹಾಗೆ ನಾನು ಇದುವರೆಗೂ ಪ್ರತ್ಯಕ್ಷವಾಗಿ ನೋಡದೆ ಬಹಳ ಗೌರವಿಸುವ  ಹಾಗೂ ಗುರು ಸಮಾನರೆಂದು ಭಾವಿಸುವುದು ವೀಣಾ ನಾಯಕ್ ಮೇಡಂ ಅವರನ್ನು. ಅವರ ಶಿಸ್ತು, ಸಮಯಪಾಲನೆ, ಸಾಹಿತ್ಯಸೇವೆ, ಕನ್ನಡದ ಕುರಿತ ಕಾಳಜಿ, ಪುಸ್ತಕದ ಓದು ಹಾಗೂ ಪುಸ್ತಕವನ್ನು ಬಹುಮಾನವಾಗಿ ಕಳುಹಿಸುವ ನಿಸ್ವಾರ್ಥತೆ ಎಲ್ಲವೂ ಆದರಣೀಯ. 'ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ' ಎಂಬಂತೆ ಅವರ ನಡೆ ಎಲ್ಲವೂ ಗೌರವಪೂರ್ಣವಾಗಿದ್ದು, ಅವರ ನಿಯಮಗಳನ್ನು ನಮಗೇ ಅರಿವಿಲ್ಲದಂತೆ ಪಾಲಿಸುವಂತೆ ಮಾಡುತ್ತದೆ. 


ನಮ್ಮ ಈ ಬಳಗದಲ್ಲಿ ಇರುವ ಹಲವರಿಂದ ಅವರ ಬರಹದಿಂದ ಬಹಳಷ್ಟು ಕಲಿಯುತ್ತಿದ್ದೇನೆ. ಈ ಸಂಧರ್ಭದಲ್ಲಿ ಅಂತಹಾ ಎಲ್ಲರನ್ನೂ ಸ್ಮರಿಸುತ್ತೇನೆ.


ನಾನು ಕನ್ನಡದ ಕುರಿತು, ಸಾಹಿತ್ಯದ ಕುರಿತು, ಓದಿನ ಕುರಿತು ಇಷ್ಟು ಆಸಕ್ತಿ ಬೆಳೆಸಿಕೊಂಡಿರುವುದಕ್ಕೆ ಮುಖ್ಯವಾಗಿ ನನ್ನ ಇಬ್ಬರು ಕನ್ನಡ ಗುರುಗಳು ಕಾರಣ. 


ಪ್ರಾಥಮಿಕ ಶಾಲೆಯಲ್ಲಿ ನಾಗರತ್ನ ಮಿಸ್ ರಾಗವಾಗಿ ಹಾಡುತ್ತಿದ್ದ ಕನ್ನಡದ ಪದ್ಯಗಳು ಹಾಗೂ ಹೇಳಿಕೊಟ್ಟ ವ್ಯಾಕರಣ, ಕೊಡುತ್ತಿದ್ದ ಉಕ್ತಲೇಖನ ಜೊತೆಗೆ ಮಾತಿನಲ್ಲಿಯೇ ನಯವಾಗಿ ತಿದ್ದುತ್ತಿದ್ದ ಪರಿ, ಹೇಳಿಕೊಟ್ಟ ಪಾಠ ಎಲ್ಲವೂ ಮರೆಯಲಾಗದಂತಹದ್ದು. ಇವರು ಸಮಾಜ ವಿಜ್ಞಾನದ ಶಿಕ್ಷಕರೂ ಹೌದು. ಅವರ ಇತಿಹಾಸ, ಭೂಗೋಳವನ್ನು ಭೋಧಿಸುತ್ತಿದ್ದ ಪರಿ ಅಚ್ಚಳಿಯದೇ ನೆನಪಿನಲ್ಲಿರುವಂತಹದ್ದು. ಬಹುಶಃ, ಇದ್ದ ಒಬ್ಬನೇ ಮಗನನ್ನು ದುರಂತದಲ್ಲಿ ಕಳೆದುಕೊಳ್ಳದೇ ಇದ್ದಿದ್ದರೆ ನನ್ನಂತಹಾ ಎಷ್ಟೋ ವಿದ್ಯಾರ್ಥಿಗಳು ಅವರ ಗರಡಿಯಲ್ಲಿ ಪಳಗುತ್ತಿದ್ದರು. ಆದರೆ, ಬಂದದ್ದನ್ನು ಸ್ವೀಕರಿಸಿ ಬದುಕನ್ನು ಸ್ವೀಕರಿಸಿದ ಪರಿಯೂ ಅಚ್ಚರಿಯೇ.. ನಾನು ಅಪ್ಪನನ್ನು ಕಳೆದುಕೊಂಡ ದಿನ ಬೆಂಬಲಕ್ಕೆ ನಿಂತು ಸಾಂತ್ವನಿಸಿದ ಪರಿ, ಇಂದಿಗೂ ನನ್ನನ್ನು ತಮ್ಮ ಮಗಳಂತೆಯೇ ಭಾವಿಸುವ, ಮಾರ್ಗದರ್ಶನ ನೀಡುವ ಅವರ ಪ್ರೀತಿಗೆ ನಾನು ಆಭಾರಿ.


ಮತ್ತೊಬ್ಬರು ಧರ್ಮೇಂದ್ರ ಕುದ್ರೋಳಿ ಸರ್. ಪಿ. ಯು. ಸಿ ಯಲ್ಲಿ ಎರಡು ವರ್ಷ ಕನ್ನಡವನ್ನು ಭೋಧಿಸಿದವರು. ಮುಖ್ಯವಾಗಿ ಕಾವ್ಯದ ಕುರಿತು ಪ್ರೀತಿ ಹುಟ್ಟಿಸಿದವರು. ಅವರ ಕವಿತಾ ವಾಚನ ಹಾಗೂ ಪದ್ಯಗಳನ್ನು ಬಿಡಿಸಿ ಹೇಳಿಕೊಡುತ್ತಿದ್ದ ಪರಿ, ಪಠ್ಯದ ಜೊತೆಗೆ ಪೂರಕ ಸಾಹಿತ್ಯವನ್ನು ತಿಳಿಸಿ ಹೇಳಿಕೊಡುತ್ತಿದ್ದ ರೀತಿ, ಪೌರಾಣಿಕ ಭಾಗಗಳನ್ನು ರಸವತ್ತಾಗಿ ಹೇಳುತ್ತಿದ್ದ ರೀತಿ, ಆಗಾಗ ಆರೋಗ್ಯಕರ ಹಾಸ್ಯ ಎಂಥಹವರಲ್ಲಿಯೂ ಕನ್ನಡ ಪಾಠವನ್ನು ಕೇಳುವ ಆಸಕ್ತಿ ಮೂಡಿಸುತ್ತಿತ್ತು. ಇಷ್ಟೆಲ್ಲಾ ಕನ್ನಡ ಪ್ರೀತಿಯ ಅವರ ಮನೆಭಾಷೆ ಮಲೆಯಾಳಂ ಎಂದರೆ ನೀವು ನಂಬಲಾರಿರಿ. ಅವರ ಮಗಳು ರಚನಾ ಹಾಗೂ ನಾನೂ ಒಂದೇ ತರಗತಿ. ಆದರೆ, ತರಗತಿಯಲ್ಲಿ ಎಂದಿಗೂ ಭೇಧ-ಭಾವ ಮಾಡಿದವರಲ್ಲ. ಪಿ.ಯು.ಸಿ ಯಲ್ಲಿ ನಾನಿದ್ದದ್ದು ಹಾಸ್ಟೆಲ್ ನಲ್ಲಿ. ಆ ಸಂಧರ್ಭದಲ್ಲಿ ಮನೆಗೆ ವಾರಕ್ಕೆರಡು ಬಾರಿಯಷ್ಟೇ ಕರೆ ಮಾಡಲು ಅವಕಾಶ. ಆದರೆ, ಪರೀಕ್ಷೆ ಸಮಯದಲ್ಲಿ ನನ್ನ ಆತಂಕವನ್ನು ಕಡಿಮೆ ಮಾಡಲು ಅಪ್ಪನ ಜೊತೆಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿದ್ದವರು. ಅಪ್ಪನ ಸಾವಿನ ವಿಚಾರ ತಿಳಿದು ನಾನು ನನ್ನ ಸಹೋದರನನ್ನೇ ಕಳೆದುಕೊಂಡೆ ಎಂದು ಬೇಸರಿಸಿಕೊಂಡು ಸಮಾಧಾನಪಡಿಸಿದವರು. ಬಹುಶಃ, ಗುರುವಾದವರು ಮನೆಯವರಂತೆ ಭಾಸವಾಗುವುದು ಬಹಳ ಕಡಿಮೆ. ಮೇಲೆ ಉಲ್ಲೇಖಿಸಿರುವುದು ಒಂದೆರಡು ಸಂಧರ್ಭಗಳಷ್ಟೇ.. ಆದರೆ, ಈ ಅಪರೂಪದ ಗುರುವನ್ನು ನಾನೆಂದಿಗೂ ಮರೆಯಲಾರೆ.


ಈ ಸಂಧರ್ಭದಲ್ಲಿ ನಾನು ನೆನಪಿಸಿಕೊಳ್ಳಲು ಇಚ್ಛಿಸುವ ಮತ್ತೊಬ್ಬರು ಗುರುಗಳು ಕವಿತಾ ಮೇಡಂ. ಬಯಾಲಜಿ ಲೆಕ್ಚರರ್. ಶಿಕ್ಷಕರು ಸ್ಟ್ರಿಕ್ಟ್ ಆಗಿದ್ದಷ್ಟು ವಿದ್ಯಾರ್ಥಿಗಳಿಗೆ ಕನೆಕ್ಟ್ ಆಗುವುದು ಕಡಿಮೆಯೇ ಎಂಬುದು ನನ್ನ ಭಾವನೆ. ಆದರೆ, ಇದನ್ನು ಸುಳ್ಳಾಗಿಸಿದವರು ನನ್ನ ಕವಿತಾ ಮೇಡಂ. ಚುರುಕು ಮಾತು, ಬೇಕಾದಷ್ಟನ್ನು ಕರಾರುವಕ್ಕಾಗಿ ಹೇಳುವವರು. ಪಾಠಕ್ಕೂ.. ಜೀವನಪಾಠಕ್ಕೂ.. 


ಸರಳತೆ, ಸೌಜನ್ಯತೆಯ ಪಾಠವನ್ನು ಕೃತಿಯ ಮೂಲಕ ತೋರಿಸಿಕೊಟ್ಟದ್ದು ನನ್ನ ಪಿ.ಯು.ಸಿ ಪ್ರಿನ್ಸಿಪಾಲ್ ಆಗಿದ್ದ ಸದಾನಂದ ರೈ ಕೂವೆಂಜ ಸರ್. ಇಂಗ್ಲೀಷ್ ಲೆಕ್ಚರರ್ ಸಹಾ ಆಗಿದ್ದವರು. ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ಹಾಗೆ ಕಾಳಜಿ ಮಾಡುತ್ತಿದ್ದವರು. ಶ್ರಮದಾನಗಳಲ್ಲಿ ನಮ್ಮೊಡನೆ ಭಾಗಿಯಾಗಿ ನಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರು. ಅದೂ ಕೇವಲ ಸ್ವಲ್ಪ ಸಮಯವಲ್ಲ.. ವಿದ್ಯಾರ್ಥಿಗಳು ಶ್ರಮದಾನ ಮಾಡುತ್ತಿದ್ದ ಅಷ್ಟೂ ಹೊತ್ತು. ಅದನ್ನು ನೋಡಿ ಬೇರೆ ಲೆಕ್ಚರರ್ ಗಳು ಬರುವುದಿತ್ತು. ಪ್ರತಿದಿನವೂ ಅವರು ಬರುತ್ತಿದ್ದದ್ದು ಬಸ್ ನಲ್ಲಿಯೇ.. ಆದರೆ, ಸಮಯಪಾಲನೆಯನ್ನು ಅವರನ್ನು ನೋಡಿ ಕಲಿಯಬೇಕಿತ್ತು. ಹಾಸ್ಟೆಲ್ ಗೆ ಪಾರ್ಥನೆಯ ಸಮಯದಲ್ಲಿ ಬಂದಾಗ ಚಕ್ಕಳಮಕ್ಕಳ ಹಾಕಿ ನಮ್ಮೊಡನೆ ಕುಳಿತು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಹೋಗುತ್ತಿದ್ದರು. ನಾನಂತೂ ಇಂತಹಾ ಅಪರೂಪದ ವ್ಯಕ್ತಿತ್ವವನ್ನು ಮತ್ತೆಲ್ಲೂ ಕಾಣಲಿಲ್ಲ. ಅವರ ಪುಸ್ತಕ ಸಂಗ್ರಹದ ಓದಿನ ಪ್ರೀತಿಯನ್ನು ಕಂಡಿದ್ದೇನಾದರೂ.. ಅವರ ಬಳಿ ಕೇಳುವ ಪುಸ್ತಕ ಧೈರ್ಯ ಮಾಡಿರಲಿಲ್ಲ. ಎಷ್ಟು ಸರಳ ಹಾಗೂ ಸ್ನೇಹಮಯಿಯೋ.. ಅಷ್ಟೇ ಶಿಸ್ತಿನ ಪರಿಪಾಲಕರು. ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ತಿದ್ದುವ ಪರಿ, ಅಗತ್ಯಬಿದ್ದಲ್ಲಿ ಮಾತ್ರ ಶಿಕ್ಷೆ. ಓದಿನ ಜೊತೆಗೆ ದೈಹಿಕ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡುತ್ತಿದ್ದವರು.


ಹೇಳಲು ಹೊರಟರೆ ಹಲವಾರು ಗುರುಗಳು, ಗುರು ಸಮಾನರು ಸಿಗುತ್ತಾರೆ. ಗಣಿತದ ಕುರಿತು ಆಸಕ್ತಿ ಮೂಡಿಸಿದ ಶೋಭಾ ಮಿಸ್, ಅದನ್ನು ದಿನನಿತ್ಯದ ಬದುಕಲ್ಲಿ ಅಳವಡಿಸಿಕೊಳ್ಳಲು ಹೇಳಿಕೊಟ್ಟ ಮಾರುತಿ ಸರ್, ಪ್ರತಿಯೊಂದು ವಿಚಾರಕ್ಕೂ ಪ್ರೋತ್ಸಾಹ ನೀಡುತ್ತಿದ್ದ ಕೃಷ್ಣಮೂರ್ತಿ ಸರ್, ಧರ್ಮರಾಜ್ ಸರ್ ಹಾಗೂ ಸೀತಾ ಮಿಸ್ ದಂಪತಿಗಳು, ಹಿಂದಿಯ ಪಠ್ಯದ ಜೊತೆಗೆ ಅಚ್ಚರಿಯ ಹಲವು ವಿಚಾರಗಳನ್ನು ಹೇಳುತ್ತಾ ಕುತೂಹಲ ಮೂಡಿಸುತ್ತಿದ್ದ ಸುಧಾ ಮಿಸ್, ಇಂಜಿನಿಯರಿಂಗ್ ನಲ್ಲಿ ಸರಳವಾಗಿ ವಿಚಾರಗಳನ್ನು ಕಲಿಸಿಕೊಟ್ಟ ಹಾಗೂ ಆಸಕ್ತಿಕರವಾದ ಸಂಗತಿಗಳನ್ನು ಹೇಳಿಕೊಡುತ್ತಿದ್ದ ಭರತ್ ಸರ್, ಪ್ರೋಗ್ರಾಮಿಂಗ್ ಬರೆಯಲು ಆಸಕ್ತಿ ಮೂಡಿಸಿದ ಸತೀಶ್ ಸರ್, ಪ್ರಾಜೆಕ್ಟ್ ಗೈಡೆನ್ಸ್ ಮಾಡಿದ, ಸಾಫ್ಟ್ವೇರ್ ಕಂಪೆನಿ ಸ್ಥಾಪಿಸಿ ಮಾದರಿಯಾದ, ಬೋಧಿಸಲು ಅವಕಾಶ ಕೊಟ್ಟ ನನ್ನ ಸೀನಿಯರ್ ಗಳಾದ ತೇಜೇಜ್ ಹಾಗೂ ಫಣೀಷ್ ರವರು, ಕಾಂಪಿಟೇಟಿವ್ ಎಕ್ಸಾಮ್ ಗಳಿಗೆ ಗೈಡ್ ಆಗಿದ್ದ ನರೇಶ್ ಸರ್ ಹಾಗೂ ಸ್ನೇಹಿತೆ ಪ್ರೀತಿಯ ಧನಲಕ್ಷ್ಮಿ, ನನ್ನ ಬರಹಗಳ ಮೊದಲ ಓದುಗಳಾಗಿ ತಿದ್ದುವ ಗೆಳತಿ ರಂಜಿತ, ತಮಿಳು ಕಲಿಯಲು ಮಾರ್ಗದರ್ಶನ ನೀಡಿದ ವಸಂತಕುಮಾರಿ ಅಜ್ಜಿ, ಗೋವಿಂದನ್ ಕುಟ್ಟಿ ತಾತ.... ಹೀಗೆ ಪಟ್ಟಿ ಸಾಗುತ್ತಾ ಹೋಗುತ್ತದೆ. ಸದ್ಯಕ್ಕೆ ತಾಜಾ ನೆನಪಿನಲ್ಲಿ, ಈ ಕ್ಷಣದ ನೆನಪಿಗೆ ಸಿಕ್ಕಿದವರಿವರು.


ಇದಿಷ್ಟೂ ಹೊರಗಿನವರಾದರೆ.. ನನಗೆ ಮನೆಯೇ ಮೊದಲ ಪಾಠಶಾಲೆ. ಕೂಡು ಕುಟುಂಬದಲ್ಲಿ ಬೆಳೆದವಳು ನಾನು. ಆದರೆ, ಕ್ರಮೇಣ ಅದು ಕರಗಿದೆ. ನನ್ನ ಕುಟುಂಬದಿಂದ ನಾನು ಕಲಿತ ಪಾಠವೆಂದರೆ.. "ಕಷ್ಟದ ದಿನಗಳಲ್ಲಿ ಏನೇ ಪರಿಸ್ಥಿತಿ ಇದ್ದರೂ ಮರೆತು ಒಂದಾಗುವುದು." ಕೆಲವೊಮ್ಮೆ ಚೆನ್ನಾಗಿದ್ದಾಗ ಮುನಿಸಿದ್ದರೂ.. ಯಾರಿಗಾದರೂ ನೋವು, ದುಃಖ ಎಂದಾಗ ಕಷ್ಟ ಎಂದಾಗ ಬಂದು ನಿಲ್ಲುವ ನಡೆಯೇ ನಾನು ಕಲಿತ ಅತಿ ದೊಡ್ಡ ಪಾಠ. ಅದರಲ್ಲೂ ನನ್ನ ಅಣ್ಣಂದಿರ ಶ್ರೀರಕ್ಷೆ, ಮಾರ್ಗದರ್ಶನ ಮರೆಯಲಾಗದ್ದು.


ಈ ಕುಟುಂಬ ನನ್ನದಾಗಲು ಕಾರಣ ಪಪ್ಪ-ಅಮ್ಮ. ಸರಳತೆ, ಶಿಸ್ತು ಪಪ್ಪ ಕಲಿಸಿಕೊಟ್ಟರೆ, ಅಮ್ಮ ಗೆಳತಿಯಂತೆ ಎಲ್ಲದಕ್ಕೂ ಮಾರ್ಗದರ್ಶಿಯಾಗಿದ್ದಾರೆ. ಅಮ್ಮ, ಚಿಕ್ಕಮ್ಮನ ಮಾರ್ಗದರ್ಶನವಿಲ್ಲದೇ ಕೆಲವು ನಡೆಗಳು ಬಹಳವೇ ಕಷ್ಟ.


ನನ್ನ ಬದುಕಿನಲ್ಲಿ ಬಂದ ಸಾವಿರಾರು ಜನದಲ್ಲಿ ಇಂದಿಗೂ ಅಥವಾ ಆಗಾಗ ನೆನಪಿಸಿಕೊಳ್ಳುವುದು ಕೆಲವರನ್ನು ಮಾತ್ರವೇ.. ಇದ್ದರೆ ಹೀಗೆ ಮತ್ತೊಬ್ಬರ ಬದುಕಲ್ಲಿ ನಾವೂ ಇಂತಹಾ ನೆನಪೇ ಆಗಬೇಕು. ಪಾಸಿಟಿವ್ ಎನರ್ಜಿ ತುಂಬಿಕೊಳ್ಳುವ ಕ್ಷಣಗಳು, ಕಲಿತ ಪಾಠಗಳನ್ನು ಮೆಲುಕು ಹಾಕಿಕೊಳ್ಳುವ ಪರಿಯನ್ನು ಸಾಧ್ಯವಾಗಿಸಿದ ಎಲ್ಲಾ ಗುರುಗಳಿಗೂ.. ಗುರು ಸಮಾನರಿಗೂ ಹೃತ್ಪೂರ್ವಕ ನಮನಗಳು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ