ಭಾನುವಾರ, ಆಗಸ್ಟ್ 2, 2026

ಒಂದೇ ನೋವಿಗೆ ಎಷ್ಟೆಂದು ಘಾಸಿಗೊಳ್ಳುವುದು..?


ನನಗಂತೂ ಆಗಾಗ ಬಹಳಷ್ಟು ಜ್ಞಾನೋದಯಗಳಾಗುತ್ತಿರುತ್ತವೆ. ಕೆಲವೊಂದು ಅಷ್ಟೇ ಬೇಗ ಅದರ ತೀವ್ರತೆಯನ್ನು ಕಳೆದುಕೊಳ್ಳಬಹುದಾದರೂ ಹೊಳೆಯುವ ಹೊಳವುಗಳು ಆ ಕ್ಷಣಕ್ಕೆ ಸಾಂತ್ವನ ನೀಡುತ್ತವೆ. ಅದರಲ್ಲೂ ಈಗೀಗ ಮಗಳ ನಡೆಗಳನ್ನೂ ಮೆಲುಕು ಹಾಕುವಾಗ, ಆಟೋಟಗಳನ್ನು ಗಮನಿಸಿ ಯಾವಾಗಲೋ ನನ್ನದೇ ಲಹರಿಯಲ್ಲಿರುವಾಗ ಯೋಚನಾಲಹರಿ ಮತ್ತೊಂದು ಕಡೆ ಹೊರಳುತ್ತದೆ. ಇದು ಹಾಗೆ ಹೊಳೆದದ್ದೇ..


ಕಳೆದ ವಾರ ಮಗಳಿಗೆ ವ್ಯಾಕ್ಸಿನ್ ಹಾಕಿಸಿದಾಗ ಆಸ್ಪತ್ರೆಯಲ್ಲಿ ನೋವಿನ ತೀವ್ರತೆಯಲ್ಲಿ ಒಂದೆರಡು ನಿಮಿಷ ಅತ್ತದಷ್ಟೇ. ಅವಳಿಗೆ ಮತ್ತೆ ಅದರ ಕಡೆ ಗಮನವಿರಲಿಲ್ಲ. ಮನೆಗೆ ಬಂದು ಆ ಬ್ಯಾಂಡೆಡ್ ನೋಡಿದಾಗ, ಎಲ್ಲಿ ಚುಚ್ಚಿ ಮಾಡಿದ್ದಾರೆ ಎಂದು ನಾವೇ ಬೇಕೆಂದು ಪ್ರಶ್ನಿಸಿದಾಗಲೆಲ್ಲಾ ಅವಳು ಅದನ್ನು ನೋಡಿಕೊಂಡಂತೆಲ್ಲಾ ಅಳು. ಅದೂ ಒಂದರ್ಧ ಗಂಟೆಯಷ್ಟೇ.. ನಂತರದ ಒಂದು ಗಂಟೆಯಲ್ಲಿ ಆಟದ ಸಂಭ್ರಮದಲ್ಲಿ ಅದನ್ನು ನೋಡಿಕೊಂಡು ಅವಳೇ ನಗುತ್ತಾ ತೋರುತ್ತಿದ್ದಳು. ನಾನು ಗಟ್ಟಿಗಿತ್ತಿ ನೋಡು ಎಂಬ ಹೆಮ್ಮೆ ಇರುವಂತೆ..! ಇನ್ನೊಂದಷ್ಟು ಕ್ಷಣಕ್ಕೆ ಹಾಗೂ ನಂತರ ಅದು ಲೆಕ್ಕವೇ ಇಲ್ಲವೆಂಬಂತೆ..!


ಇದನ್ನು ಮೆಲುಕು ಹಾಕಿದಾಗ ನನಗೆ ಹೀಗೆಲ್ಲಾ ಆಲೋಚನೆ ಮೂಡಿತು. ಯಾರಿಂದಲೋ ಯಾವುದೋ ಒಂದು ಸಂದರ್ಭದಲ್ಲಿ ನೋವಾದಾಗ, ಆಘಾತ, ದ್ರೋಹ, ವಂಚನೆ, ಅವಮಾನವಾದಾಗ.. ಹೀಗೆ ಯಾವುದೋ ಒಂದು ವಿಚಾರಕ್ಕೆ ಮನಸ್ಸು ಕೆಡಿಸಿಕೊಂಡು ಆ ಕ್ಷಣದಲ್ಲಿ ರಿಯಾಕ್ಟ್ ಮಾಡುತ್ತೇವೆ. ಹಲವಾರು ಬಾರಿ ಮತ್ತದು ನಮಗೆ ಮರೆತೇ ಹೋಗಿರುತ್ತದೆ. ಸಾಮಾನ್ಯವಾಗಿ ಕೋಪ ತೋರಿಸಿಕೊಂಡ ನಂತರ ಮತ್ತದೇ ವಿಚಾರಕ್ಕೆ ಕೋಪ ಬರುವ ಸಾಧ್ಯತೆ ತೀರಾ ಕಡಿಮೆ. 


ಆ ವ್ಯಕ್ತಿಯನ್ನೋ, ವಸ್ತುವನ್ನೋ ಅಥವಾ ಆ ಕ್ಷಣವನ್ನೋ ಯಾರೋ ನೆನಪಿಸಿದಾಗ ಅಥವಾ ಅಚಾನಕ್ಕಾಗಿ ನೆನಪಾದಾಗ ನೋವಿನ ತೀವ್ರತೆ ಹೆಚ್ಚಾಗುತ್ತದೆ. ಜೊತೆಗೆ ಮನಸ್ಸು ಘಾಸಿಯಾಗುತ್ತದೆ. ಅದನ್ನು ನೆನಪಿಸಿದವರ ಮೇಲೆಯೇ ಹರಿಹಾಯುವಂತಾಗುತ್ತದೆ. ಅವರಾದರೂ ಗೊತ್ತಿದ್ದೂ ಕೆಣಕುವುದೇಕೆ..?! ಗೊತ್ತಿದ್ದೂ.. ಬೇಡವೆಂದರೂ ಮತ್ತೊಬ್ಬರ ನೋವನ್ನು ಹೆಚ್ಚಿಸುವುದೇ ಅವರ ಗುರಿಯಿರಬಹುದೇನೋ..


ಅದೂ ಒಂದಷ್ಟು ದಿನಗಳಷ್ಟೇ.. ಮತ್ತೆ ಅವರನ್ನು ನೋಡಿದಾಗ ಬರುತ್ತಿದ್ದ ಕೋಪ-ತಾಪ, ಅಸಹನೆ ಎಲ್ಲವೂ ಮರೆತಂತೆ ಮರೆಗೆ ಸರಿಯುತ್ತದೆ. ಅದೂ ಒಂದಷ್ಟು ದಿನಗಳಷ್ಟೇ.. ಮತ್ತೆ ನಾವು ಅವರ ಇರುವಿಕೆಯನ್ನೇ ನಿರ್ಲಕ್ಷಿಸಿ ನಿರ್ಲಿಪ್ತಿಗೆ ಜಾರಿ ಬಿಡುತ್ತೇವೆ ಅಥವಾ ಅವರು ಎದುರಾದರೂ ಮತ್ತೆ ಮೊದಲಿನಷ್ಟಂತೂ ಮನಸ್ಸು ಕೆಡಿಸಿಕೊಳ್ಳುವುದಿಲ್ಲ.


ಒಂದೇ ನೋವಿಗೆ ಎಷ್ಟೆಂದು ಘಾಸಿಗೊಳ್ಳುವುದು..? 

ದೈಹಿಕ ಹಾಗೂ ಮಾನಸಿಕ ನೋವು ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗದು. ಆದರೆ, ಮನಸ್ಸಿನ ನೆಮ್ಮದಿಗೆ, ನಿರಾಳತೆಗೆ ನಿರ್ಲಕ್ಷಿಸುವುದೋ ಇಲ್ಲವೇ ಕ್ಷಮಿಸಿಬಿಡುವುದೋ ಮಾಡುತ್ತೇವೆ. ಇದೆಲ್ಲದರಾಚೆಗೆ ನಮಗೆ ನೆನಪಿರಬೇಕಾಗುವುದು ಪದೇಪದೇ ಅಂತಹ ಮೋಸ, ಘಾಸಿಗೆ ಒಳಗಾಗದಂತೆ ನಮ್ಮನ್ನು ರಕ್ಷಿಸಿಕೊಳ್ಳುವುದು. ಕೆಲವೊಮ್ಮೆ ಕ್ಷಮಿಸುವುದು ಅನಿವಾರ್ಯವಾಗುತ್ತದೆ. ಆದರೆ, ಮರೆಯುವುದಿಲ್ಲ. ಹಾಗೆಂದು ಅದನ್ನೇ ಸಾಧಿಸುವುದೂ ಅಲ್ಲ. ಮರೆಯುವಷ್ಟೇ ಮರೆಯದಿರುವುದೂ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ, ಅದೇ ಪಾಠವನ್ನು ಬದುಕು ನಾವು ಕಲಿಯುವವರೆಗೂ ಬೇರೊಂದು ರೂಪದಲ್ಲಿ ಕಲಿಸುತ್ತಲೇ ಇರುತ್ತದೆ. ಅಲ್ಲವೇ..?!


~ವಿಭಾ ವಿಶ್ವನಾಥ್ 

ಆತಂಕ ಕರಗಿ

 


ಪ್ರತಿ ಆತಂಕವೂ ಸೃಷ್ಟಿಯಾಗಿದ್ದು

ಭವಿಷ್ಯದ ಮುಂದಾಲೋಚನೆಯಲ್ಲಿ

ದೂರಾಲೋಚನೆಯಲ್ಲಿ


ಪ್ರತಿ ಆತಂಕವೂ ಕರಗಿದ್ದು

ಆ ಕ್ಷಣ ಕಳೆದಾಗ 

ವಾಸ್ತವದ ನಿಜ ಹಿತವಾದಾಗ


ನಿರಾತಂಕದ ಹಿಂದೆ

ಭವಿಷ್ಯದ ಭಯವಿರಲಿಲ್ಲ

ವಾಸ್ತವ ಹೆದರಿಸಲಿಲ್ಲ


~ವಿಭಾ ವಿಶ್ವನಾಥ್

ಬಂಧ

 


ನಿಷ್ಠುರವಾದ ನಿರಾಕರಣೆ

ವಾದ - ಪ್ರತಿವಾದಗಳು

ಒಮ್ಮೆ ಘಾಸಿಗೊಳಿಸಿದರೂ

ಒಳ್ಳೆಯದಕ್ಕೆಂದು ಅರಿವಾದಾಗ

ಬಂಧ ಗಟ್ಟಿಯಾಗಿತ್ತು


ನಾಟಕದ ಪ್ರೀತಿ ತೋರಿ

ಬೆನ್ನಿಗೆ ಇರಿದದ್ದು

ಜೀವನವಿಡೀ ನೆನಪಲ್ಲುಳಿಯಿತು

ಬಂಧ ಮಾತ್ರ ಕಳಚಲಿಲ್ಲ

ಅಳಿದದ್ದು ನಂಬಿಕೆಯೂ..!


~ವಿಭಾ ವಿಶ್ವನಾಥ್

ಮಾನದಂಡ

 


ಬುದ್ಧಿವಂತಿಕೆಯ ಮಾನದಂಡ 

ಅಂಕ, ಜ್ಞಾನಾರ್ಜನೆ ಮಾತ್ರವಲ್ಲ..!

ಓದಿದ್ದನ್ನು ಉಪಯೋಗಿಸುವುದು

ಕಲಿತಿದ್ದನ್ನು ಹಂಚಿಕೊಳ್ಳುವುದು

ಅಷ್ಟೇ ಅಲ್ಲ..!

ಕಲಿತದ್ದು ಸಾಸಿವೆಯಷ್ಟಿದ್ದರೆ

ಕಲಿಯುವುದು ಸಾಗರದಷ್ಟಿದೆ 

ಎಂಬುದ ಮರೆಯದಿರುವುದು

ಹಾಗೆಯೇ.. ಯಶಸ್ಸಿನ ಮಾನದಂಡ

ಕೇವಲ ಗೆಲುವಲ್ಲ

ಎಲ್ಲ ಸಿಕ್ಕ ನಂತರವೂ

ವಿನಯತೆಯನ್ನು ಮರೆಯದಿರುವುದು

ಮೆರೆಯದಿರುವುದು..!


~ವಿಭಾ ವಿಶ್ವನಾಥ್

ಸಣ್ಣ ತಪ್ಪಿನ ಹಿಂದೆ (ಬೆಳಕಿಂಡಿಯ ಕತೆಗಳು - 62)

 


ರಾತ್ರಿಯ ಸಣ್ಣ ಮನಸ್ತಾಪ ಅವಳು ಹಾಕುತ್ತಿದ್ದ ರಂಗೋಲಿಯನ್ನೂ ಪ್ರಭಾವಿಸಿತ್ತು. ಎಷ್ಟೇ ಕೇಂದ್ರೀಕರಿಸಿದರೂ ಸಣ್ಣ ತಪ್ಪು ಆಗುತ್ತಲೇ ಇತ್ತು. ಒಮ್ಮೆ ಚುಕ್ಕಿ ಕಡಿಮೆ, ಮತ್ತೊಂದು ಸಾಲಿನಲ್ಲಿ ಹೆಚ್ಚು. ಎಲ್ಲಿಗೋ ಎಳೆಯಬೇಕಾದ ಎಳೆ ಮತ್ತೆಲ್ಲೋ..!

ಒಳಗಿನಿಂದ ತೇಲಿ ಬಂದ ಕಾಫಿಯ ಘಮಲು ಮನಸ್ತಾಪವನ್ನು ಮಾತ್ರವಲ್ಲ ಸಣ್ಣ ತಪ್ಪುಗಳನ್ನೂ ಸರಿಪಡಿಸಿತ್ತು.

~ವಿಭಾ ವಿಶ್ವನಾಥ್

ಹೊಣೆ (ಬೆಳಕಿಂಡಿಯ ಕತೆಗಳು - 61)

 


ತಮ್ಮ ಊರಿನಲ್ಲಿ ಮಾತ್ರವಲ್ಲದೆ ಅಕ್ಕ-ಪಕ್ಕದ ಹಳ್ಳಿಗಳಲ್ಲಿಯೂ ಹೂಳು ತೆಗೆದು, ಬಾವಿ ಕಟ್ಟೆ ಸರಿಪಡಿಸಿ, ಬತ್ತಿ ಹೋಗಿದ್ದ ಬೋರ್ ಗಳ ಪಕ್ಕದಲ್ಲಿ ಹಾಗೂ ಬೇರೆಡೆಗಳಲ್ಲಿ ಇಂಗು ಗುಂಡಿ ಮಾಡಿಸಿ, ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಹಾಗೂ ಇಂತಹದ್ದೇ ಯಾವುದಾದರೊಂದು ಚಟುವಟಿಕೆಯನ್ನು ವಾರಕ್ಕೊಮ್ಮೆ ತಪ್ಪದೆ ಮಾಡುವ ಕಾಲೇಜು ಡ್ರಾಪ್ ಔಟ್ ಗಳ ಗುಂಪನ್ನು ವಿಚಿತ್ರವಾಗಿ ನೋಡುತ್ತಿದ್ದರು ಜನ. 

ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡುತ್ತಾ, ಮಣ್ಣಿನ ಮಕ್ಕಳಾದವರು ಪರಿಸರ ಸಂರಕ್ಷಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿದ್ದರು. ಹೆಚ್ಚೇನಿಲ್ಲ.. ಐದು ವರ್ಷಗಳಲ್ಲಿಯೇ ಜನರಿಗೆ ಅದರ ಮಹತ್ವ ಅರಿವಾಗಿ ಅವರೊಡನೆ ಕೈಜೋಡಿಸಿದರು. "ಪ್ರಕೃತಿ ಸಂರಕ್ಷಣೆ ಎಲ್ಲರ ಹೊಣೆ" ಎಂದು ಮಕ್ಕಳಿಗೂ ಹೇಳಿಕೊಡುತ್ತಿದ್ದಾರೆ.

~ವಿಭಾ ವಿಶ್ವನಾಥ್

ಹರಸು ಬಾ ನನ್ನನು (ಪುಸ್ತಕ ಯಾನ - 479)


ಪುಸ್ತಕದ ಶೀರ್ಷಿಕೆ : ಹರಸು ಬಾ ನನ್ನನು

ಲೇಖಕರು : ಸಿ. ಎನ್. ಮುಕ್ತಾ

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2023

ಪುಟಗಳು : 328

ಬೆಲೆ : 325 ರೂ. 


ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯ ಜೊತೆ ಬೆಳೆಯದೆ, ತಾಯಿಯ ತಾಯಿ ಅಜ್ಜಿಯ ಆಶ್ರಯದಲ್ಲಿ ಬೆಳೆದು ಸಂಸ್ಕಾರ ಹಾಗೂ ವಿದ್ಯೆ ಕಲಿತ ಯುವತಿಯೊಬ್ಬಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಪರಿ ಈ ಕಾದಂಬರಿಯ ಕಥಾವಸ್ತು. ಜೊತೆಗೆ ಕೌಟುಂಬಿಕ ಮೌಲ್ಯವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.


ಕೌಶಿಕಿ ಈ ಕಥೆಯ ನಾಯಕಿ. ರಾಜಾರಾಯರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಪಾತಜ್ಜಿ ಕೌಶಿಕಿಯನ್ನು ಬೆಳೆಸಿ ದೊಡ್ಡವಳನ್ನಾಗಿಸಿದಳು. 


ಇಲ್ಲಿ ರಾಜರಾಯರ ಮನೆಯ ಪರಿಸರವನ್ನು ತಿಳಿದುಕೊಳ್ಳುವ ಅಗತ್ಯ ಕಾಣುತ್ತದೆ. ಮುಂದೆ ಕೌಶಿಕಿಗೆ ಈ ಮನೆಯ ನಂಟು ಬೆಳೆಯುವ ಬಗೆಯೂ ಈ ಕಥೆಯಲ್ಲಿದೆ. 


ರಾಜಾರಾಯರಿಗೆ ನಾಲ್ಕರ ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಪತ್ನಿ ಶಂಕರಮ್ಮ. ಮೊದಲ ಮಗ ಸುಧಾಕರ್ ಲಾಯರ್ ಆತನ ಪತ್ನಿ ಇರಲಿಲ್ಲ. ಎರಡನೆಯ ಮಗ ಪ್ರಭಾಕರ ಕಾಲೇಜು ಅಧ್ಯಾಪಕ, ಹೆಂಡತಿ ಅನುರಾಧ. ಮೂರನೆಯ ಮಗ ಸೋಮೇಶ್ವರ ಇಂಜಿನಿಯರ್ ಆಗಿದ್ದವನು. ಆತನ ಪತ್ನಿ ಸರಳ. ಕೊನೆಯ ಮಗ ದಿನಕರನಿಗಿನ್ನೂ ವಿವಾಹವಾಗಿರಲಿಲ್ಲ. ಒಬ್ಬಳೇ ಮಗಳು ಚಿನ್ಮಯಿ. ಅವಳ ಗಂಡ ಶರತ್ ಸಹ ಡಾಕ್ಟರ್. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ದಿನಕರನಿಗಿಂತ ಮೊದಲು ಹುಟ್ಟಿದವಳು ಚಿನ್ಮಯಿ. 


ಚಿನ್ಮಯಿ ಡಾಕ್ಟರ್ ಆಗಿದ್ದರೂ ತನ್ನ ನರ್ಸಿಂಗ್ ಹೋಮ್ ನಲ್ಲಿ ಹಣದಾಸೆಗೆ ಬಿದ್ದಿದ್ದಳು. ನೆಂಟರಿಗೂ ರಿಯಾಯಿತಿ ತೋರಿಸುತ್ತಿರಲಿಲ್ಲ. ಅತ್ತಿಗೆಯರ ಜೊತೆ ಆತ್ಮೀಯ ಭಾವವಿರಲಿಲ್ಲ. ಎಲ್ಲರಿಗೂ ಎಲ್ಲೆಡೆಯೂ ದರ್ಪ ತೋರುತ್ತಿದಳು. ಕೆಲಸದವರನ್ನು ಆತ್ಮೀಯವಾಗಿ ಕಂಡಿರಲಿಲ್ಲ. ಅತ್ತೆ-ಮಾವನ ಜೊತೆ ಇರಲಿಲ್ಲ. ಗಂಡ ಶರತ್ ಗೂ ನೆರವಾಗದೆ ತನ್ನ ಊಟ-ತಿಂಡಿ, ಮಕ್ಕಳ ಆರೈಕೆಗೆ ಅಮ್ಮನ ಮನೆಯನ್ನು ನೆಚ್ಚಿದ್ದವಳು.


ಕೌಶಿಕಿ ತನ್ನ ಕಂಪ್ಯೂಟರ್ ಸೈನ್ಸ್ ಬಿ .ಎಸ್ಸಿ ಮುಗಿಸಿದ ನಂತರ ಎಂ .ಎಸ್ಸಿಗೆ ಹೋಗುವ ಆಸೆ ಇದ್ದರೂ ತಾನೇ ದುಡಿದು ಓದಬೇಕೆಂದು ಕೆಲಸ ಹುಡುಕುತ್ತಿರುವಾಗ.. ರಾಜಾರಾಯರಲ್ಲಿಯೇ ಕೆಲಸ ಸಿಕ್ಕಿತ್ತು. ಬೆಳಗ್ಗೆ ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಬಿಟ್ಟು ಬಂದು, ಸಾಯಂಕಾಲ ಹೋಮ್ ವರ್ಕ್ ಮಾಡಿಸುವುದು. ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಮಕ್ಕಳ ಮನೆಗೆದ್ದಿದ್ದಳು. ಅನುರಾಧ ಹಾಗೂ ಸರಳರು ಇದರಿಂದ ತೃಪ್ತಿ ಹೊಂದಿದ್ದರು. ಆದರೆ, ಚಿನ್ಮಯಿ ಆಕೆಗೆ ಹೊಂದಿಕೊಂಡಿರಲಿಲ್ಲ. ಆಕೆಯನ್ನು ಕೆಲಸದವಳ ಹಾಗೆ ನಡೆಸಿಕೊಳ್ಳಲು ಹೋದಾಗ ಸ್ವಾಭಿಮಾನದಿಂದಲೇ ಉತ್ತರಿಸಿದ್ದಳು ಕೌಶಿಕಿ.


ಚಿನ್ಮಯಿಯ ಅಹಂಕಾರದ ಗುಣಕ್ಕೆ ಶರತ್ ಸಹ ಪಾಠ ಕಲಿಸಲು ತೀರ್ಮಾನಿಸಿದ. ಇದಕ್ಕೆ ಶಂಕರಮ್ಮನ ಸಹಕಾರವೂ ಇತ್ತು. ತಂದೆ-ತಾಯಿಯ ಅನುಪಸ್ಥಿತಿ ಮಕ್ಕಳಿಗೆ ಕಾಡಿತ್ತು. ಅದರಲ್ಲಿಯೂ ಹಿರಿಯ ಮಗಳಾದ ಚಾರುಲತಾಳಿಗೆ ಹೆಚ್ಚು. ಮುಂದೆ ಮತ್ತೊಬ್ಬ ಮಗಳು ಚಿನ್ಮಯಿಯೂ ಅದೇ ಹಾದಿ ಹಿಡಿಯುವುದೇನು ಕಷ್ಟವಿರಲಿಲ್ಲ. ಚಾರುವನ್ನು ಮನೋವೈದ್ಯರ ಬಳಿಗೆ ಕರೆದುಯ್ದ ಚಿನ್ಮಯಿ ಯಲ್ಲಿ ಕ್ರಮೇಣ ಆದ ಬದಲಾವಣೆಗಳೇನು..? ಹೆಣ್ಣುಮಕ್ಕಳ ಹೊಂದಾಣಿಕೆಯಿಂದ ಸಂಸಾರದ ಸುಖ, ಮಕ್ಕಳ ಭವಿಷ್ಯ, ನೆಮ್ಮದಿಯ ಬದುಕು ಅಡಗಿರುವುದನ್ನು ಇಲ್ಲಿ ಗಮನಿಸಬಹುದು. 


ಸುಧಾಕರನ ಮೊದಲ ಪತ್ನಿ ತೀರಿ ಹೋದದ್ದು ಹೇಗೆ..? ಸುಧಾಕರ ಅದಕ್ಕಿಂತಲೂ ಮೊದಲು ಪ್ರೀತಿಸಿದ ಶ್ಯಾಮಲಾ ಡಾಕ್ಟರ್ ಆಗಿದ್ದಳು. ಈಗಲೂ ಅವಳು ಅವಿವಾಹಿತೆಯಾಗಿಯೇ ಇದ್ದಳು. ಸುಧಾಕರನ ಜೊತೆಗೆ ಅವಳ ಮರು ವಿವಾಹವಾಗಿ ಮಕ್ಕಳು ಅವಳನ್ನು ಅಮ್ಮ ಎಂದು ಸ್ವೀಕರಿಸುವಲ್ಲಿ ಕೌಶಿಕಿ ಪಾತ್ರ ಏನಿತ್ತು..? ಶ್ಯಾಮಲಾಳ ನೇರವಂತಿಕೆಯ ಸ್ವಭಾವವನ್ನು ಇಲ್ಲಿ ಕಾಣಬಹುದಾದರೂ ಅದು ನಕಾರಾತ್ಮಕ ರೀತಿಯಲ್ಲಲ್ಲ. ಶಂಕರಮ್ಮ ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಬಾಯಮ್ಮನನ್ನು ಬಿಡಿಸುವುದಕ್ಕೂ ಶ್ಯಾಮಲಾ ಹಾಗೂ ಸುಧಾಕರನ ವಿವಾಹ ತಪ್ಪಿಸುವುದಕ್ಕೂ ನೀಡಿದ ಕಾರಣವೇನು..?


ರಾಜರಾಯರ ತಮ್ಮನ ಮಗ ಹರೀಶ ತನ್ನ ತಂಗಿ ಹರಿಣಿ ಮದುವೆಗೆ ಕರೆಯಲು ಬಂದಾಗ ಕೌಶಿಕಿಗೂ ಆತನಿಗೂ ಪರಿಚಯವಾಗಿತ್ತು. ಆತ ಮೈಸೂರಿನ ಹತ್ತಿರದ ಹಳ್ಳಿಯಲ್ಲಿದದ್ದು. ಕೌಶಿಕಿಗೆ ಆತ ಮನಸೋತ. ಬಡವರಾಗಿದ್ದರೂ.. ಗ್ರಾಜುಯೇಟ್ ಆಗಿರುವ, ಹಳ್ಳಿಯಲ್ಲಿ ಇರಲು ಒಪ್ಪುವ ಹುಡುಗಿ ಆತನ ಸಂಗಾತಿಯಾಗಿ ಬರಲು ಆತನಿಗೆ ಆಸೆ ಇತ್ತು.


ಹರಿಣಿಯ ಮದುವೆ ಹಳ್ಳಿಯಲ್ಲಿ ಆಗದೇ ಇದ್ದದ್ದು ರಾಜರಾಯರು ಹಳ್ಳಿಗೆ ಬರದೇ ಇರಲು ಶಪಥ ಮಾಡಿದ್ದು, ರಾಜರಾಯರ ತಮ್ಮ ಗಣೇಶರಾಯರ ಮೊದಲ ಪತ್ನಿ ತುಳಸಿಯ ಸಾವು, ಈಗಿನ ಪತ್ನಿ ಸುವರ್ಣಮ್ಮ ಹಾಗೂ ಅವರ ಮಗ ಹರೀಶ ಹೀಗೆ ಎಲ್ಲರ ವಿಚಾರವನ್ನು ಪಾತಜ್ಜಿ ಕೌಶಿಕಿಗೆ ತಿಳಿಸುತ್ತಾರೆ. ಸಿರಿವಂತರ ಮನೆಯ ಹಿನ್ನೆಲೆ ಬಿಚ್ಚಿಕೊಳ್ಳುತ್ತದೆ. ಹಿನ್ನೆಲೆ ಓದಿ ನೋಡಿ 


ವಠಾರದಲ್ಲಿದ್ದ ಶಾಂತಮ್ಮನವರು ಕೌಶಿಕಿಯನ್ನು ಮಗಳಂತೆಯೇ ಕಾಣುತ್ತಿದ್ದವರು. ಪಾತಜ್ಜಿಯನ್ನು ಬಹಳ ಗೌರವಿಸುತ್ತಿದ್ದವರು. ಶಾಂತಮ್ಮನವರ ಅಣ್ಣನ ಮಗಳು ಮೇಘಳ ವಿವಾಹದಲ್ಲಿ ಕೌಶಕಿಯ ಪಾತ್ರವೇನಿತ್ತು...? 


ಮೇಘಾಳ ತಂದೆ ದಯಾನಂದ ಹಾಗೂ ತಾಯಿ ಮಂದಾಕಿನಿ ಕೌಶಿಕಿಯನ್ನು ಮುಕ್ತ ಮನಸ್ಸಿನಿಂದ ಹೊಗಳಿದರು. ಅದು ಕೇವಲ ಬಾಯಿ ಮಾತಿನ ಹೊಗಳಿಕೆಯಾಗಿರಲಿಲ್ಲ. 


ಮುಂದೆ ದಯಾನಂದ ಅವರ ಸಹಾಯ ಹಾಗೂ ಶಾಂತಮ್ಮನವರ ಸಹಕಾರದಿಂದ ರಾಜರಾಯರ ಮನೆಯ ಕೆಲಸ ಬಿಟ್ಟು ಅಜ್ಜಿ ಮೊಮ್ಮಗಳಿಬ್ಬರು ಮೈಸೂರಿಗೆ ಹೋಗುವ ಕಾರಣವೇನು..? ಇದಕ್ಕೆ ಶಂಕರಮ್ಮನವರು ಒಪ್ಪಿದರೇ..?


ಕೌಶಿಕಿಯ ವಿವಾಹದ ಸಂದರ್ಭದಲ್ಲಿ ನೀಡಲು ಅವರು ಶಾಂತಮ್ಮನವರ ಬಳಿ ಕೊಟ್ಟ ಒಡವೆ ಅವರದಲ್ಲವೆಂಬ ಸುಳಿವು ಸಿಕ್ಕದ್ದು ಹೇಗೆ..?


ರಾಜರಾಯರ ಒಟ್ಟು ಮನೆ ಬೇರೆಯಾದದ್ದು ಹೇಗೆ..? ಕಾಲ ಎಲ್ಲವನ್ನು ಬದಲಿಸುತ್ತದೆ. ದಿನಕರನ ವಿವಾಹ ಶಂಕರಮ್ಮನವರು ಅಂದುಕೊಂಡಂತೆ ನಡೆಯದ್ದಕ್ಕೆ ಕಾರಣವೇನು..? ಕೌಶಿಕಿಗೂ ಇದಕ್ಕೂ ಸಂಬಂಧವಿತ್ತೆ..?


ತನ್ನದಲ್ಲದ ಕ್ಷೇತ್ರದಲ್ಲಿಯೂ ಕೌಶಿಕಿ ದುಡಿದು ದಯಾನಂದ ಅವರ ಮೇಘಾ ಗಾರ್ಮೆಂಟ್ ಫ್ಯಾಕ್ಟರಿಯನ್ನು ಬದಲಾಯಿಸಿದ್ದು ಹೇಗೆ..? ಇದಕ್ಕೆ ಮಂದಾಕಿನಿ ಅವರ ಒಪ್ಪಿಗೆ ಸಿಕ್ಕಿತೇ..?


ದಯಾನಂದರಿಗೆ ಹರೀಶ ಮೊದಲೇ ಪರಿಚಿತ. ಫ್ಯಾಕ್ಟರಿಯ ಹಗರಣವನ್ನು ಬಯಲು ಮಾಡಲು ಹರೀಶ ಯಾವ ನಾಟಕ ಮಾಡಿದ..? 


ಈಗಿನ ಕಾಲಕ್ಕೆ ತಕ್ಕಂತೆ ಬೊಟಿಕ್ ಹಾಗೂ ಶೋರೂಮ್ ನಿರ್ಮಿಸಿದ ದಯಾನಂದರ ಹೊಸ ಬ್ಯುಸಿನೆಸ್ ಹೇಗೆ ನಡೆಯಿತು..? ನಿಷ್ಠಾವಂತ ಕೆಲಸಗಾತಿ ಫಿಲೋಮಿನಾ ಕೂಡ ತ ಸೆಳೆಯುತ್ತಾರೆ. 


ಹರೀಶ ಹಾಗೂ ಕೌಶಿಕಿ ಇಬ್ಬರ ವಿವಾಹ ನಿಶ್ಚಯವಾಗುತ್ತದೆ. ಆದರೆ, ಇದು ಹೂವಿನ ಹಾಸಿಗೆಯಂತೇನಿರಲಿಲ್ಲ. ಅವರ ಕುಟುಂಬದ ಇತಿಹಾಸ ಗೊತ್ತಿದ್ದ ಪಾತಜ್ಜಿ ಇದಕ್ಕೆ ಒಪ್ಪಿದ್ದು ಹೇಗೆ..? ಶಂಕರಮ್ಮನವರಿಗೆ ಇದು ಇಷ್ಟವಾಗದೆ ಹೋದದ್ದೇಕೆ..? ಹರೀಶನೇನೋ ಆದರ್ಶ ಯುವಕ. ಆದರೆ, ಆತನ ತಂದೆ-ತಾಯಿಯೂ ಹಾಗೆಯೇ ಇದ್ದರೆ..?


ಕೌಶಿಕಿಯ ಓದುವ ಕನಸಿನ ಬದಲಾಗಿ ಅವಳು ಬೆನ್ನುತ್ತಿದ ಮತ್ತೊಂದು ಕನಸು ಯಾವುದು..? ವಿವಾಹದ ನಂತರ ಕೌಶಿಕಿ ಕುಟುಂಬವನ್ನು ಬೆಸೆಯುವ ಪರಿ ಹೇಗಿದೆ..?


ಹರಿಣಿಯ ಮಗಳಿಗೆ ಇಡುವ ಐದು ಹೆಸರುಗಳಲ್ಲಿ ಒಂದನ್ನು ಕೌಶಿಕಿ ಆರಿಸಿ ತುಳಸಿಯವರ ಹೆಸರು ಇಟ್ಟದ್ದೇಕೆ..?


ಮೊದಲಿಗೆ ಸಾಮಾಜಿಕ ಹಾಗೂ ಕೌಟುಂಬಿಕ ಕಾದಂಬರಿಯಂತೆ ಕಂಡರೂ.. ಕುತೂಹಲಕರವಾಗಿ ರೋಚಕವಾಗಿ ಸಾಗುವ ಕಥೆ ಕೊನೆಯವರೆಗೂ ಊಹಿಸಲಾಗದ ತಿರುವನ್ನು ಹೊತ್ತು ಸಾಗಿದೆ. ಈ ನಿಗೂಢತೆ ಮುಂದೇನು ಎಂದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಮನುಷ್ಯ ನೆಮ್ಮದಿಯ ಜೀವನ ನಡೆಸಲು ಅಗತ್ಯವಾದುದೇನು ಎಂಬುದನ್ನು.. ಜೊತೆಗೆ ಸ್ವಾಭಿಮಾನ, ನೇರವಂತಿಕೆ, ಬದುಕಿನಲ್ಲಿ ವ್ಯಕ್ತಿತ್ವಕ್ಕೆ ಕೊಡುವ ಮೆರುಗೇನು ಎನ್ನುವುದನ್ನು ಹಾಗೂ ಕೌಟುಂಬಿಕ ಮೌಲ್ಯಗಳನ್ನು ಕಟ್ಟಿಕೊಡುವ ಕಾದಂಬರಿ ಇದು. 


~ ವಿಭಾ ವಿಶ್ವನಾಥ್

ಮನಸಾಲಜಿ ಆಫ್ ಮಾನಿನಿ (ಪುಸ್ತಕ ಯಾನ - 478)


ಪುಸ್ತಕದ ಶೀರ್ಷಿಕೆ : ಮನಸಾಲಜಿ ಆಫ್ ಮಾನಿನಿ

ಲೇಖಕರು : ಭಾರ್ಗವಿ ಶೆಟ್ಟಿ

ಪ್ರಕಾಶಕರು : ಕದಂಬ ಪ್ರಕಾಶನ 

ಪ್ರಥಮ ಮುದ್ರಣ : 2026

ಪುಟಗಳು : 100

ಬೆಲೆ : 160 ರೂ.


ಹೆಣ್ಣೆಂದರೆ ಅವಳನ್ನು ಕಡಿಮೆ ಅಂದಾಜಿಸುವಂತೆಯೇ ಇಲ್ಲ. ಆ ಕಾಲಕ್ಕೂ.. ಈ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಆದರೆ ನಮ್ಮ ನಡುವೆಯೇ ಇರುವ ಸ್ತ್ರೀಯರನ್ನು, ಅವರ ಆತ್ಮವಿಶ್ವಾಸ, ದೈರ್ಯ, ಸ್ವಾಭಿಮಾನವನ್ನು ಗುರುತಿಸಿ ಅವರನ್ನು ಪರಿಚಯಿಸಿದ್ದಾರೆ ಲೇಖಕಿ. ಅವರ ಭಾವಚಿತ್ರಗಳು, ಸಾಧನೆಗಳ ಜೊತೆಗೆ ಮನದಾಳದ ಮಾತುಗಳು ಇಲ್ಲಿವೆ. 


ಶಿಕ್ಷಣ ಕ್ರಾಂತಿಯ ಹರಿಕಾರಿಣಿ ಜ್ಞಾನವಾಹಿನಿ ದಾಕ್ಷಾಯಿಣಿ ಎನ್ನುತ್ತಾ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶಿಕ್ಷಕಿ ದಾಕ್ಷಾಯಿಣಿ ಅವರನ್ನು ಪರಿಚಯಿಸುತ್ತಾರೆ. ಅವರ ಘೋಷವಾಕ್ಯ "ಕಷ್ಟಪಟ್ಟು ಮಾಡಬೇಡಿ, ಇಷ್ಟಪಟ್ಟು ಮಾಡಿ" ಎಂದು. ಜನ ಮೆಚ್ಚಿದ ಶಿಕ್ಷಕಿ ಶಿಕ್ಷಕ ವೃತ್ತಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಬಗೆಯನ್ನು ಕಾಣಬಹುದು.


ಕಣ್ಣಿನ ನ್ಯೂನತೆ ಇದ್ದರೂ ಅದು ಸಾಧನೆಗೆ ಅಡ್ಡಿಯಾಗಲಿಲ್ಲ ತಿಪಟೂರಿನ ಡಾ|| ಜಿ. ಎನ್. ಸಂಗೀತಾ ಅವರಿಗೆ. 28ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಇವರು ಐದು ಪುಸ್ತಕಗಳನ್ನು ರಚಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧನ ಸಿದ್ದಿಧಾತ್ರಿ ಸಂಗೀತ ಅವರ ಜೀವನಗಾಥೆ ಇಲ್ಲಿದೆ.


ಕಾಯಕಕ್ಕೆ ಕಲ್ಪತರು ಅರ್ಧನಾರೀಶ್ವರಿ ಜೋಗತಿ ಮಂಜಮ್ಮ ಎನ್ನುತ್ತಾ ದೈಹಿಕವಾಗಿ ಮಂಜುನಾಥನಿಂದ ಬದಲಾದ ಇವರ ಜಾನಪದ ಲೋಕದ ಸಾಧನೆ ಹಾಗೂ ಹವ್ಯಾಸಿ ರಂಗಭೂಮಿ, ಸಿನಿಮಾ, ಕಿರುಚಿತ್ರದಲ್ಲಿಯೂ ತೊಡಗಿಸಿಕೊಂಡು ಜೋಗತಿಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಇವರನ್ನು ಕಾಣಬಹುದು.


ಕಲಿ ಸರ್ವಸ್ವವೆಂದ ನಾಟ್ಯ ಮಯೂರಿ ವರ್ಷಿಣಿಗೆ ಅದು ಕೇವಲ ಹವ್ಯಾಸವಲ್ಲ.. ಬದುಕಿನ ಅಸ್ತಿತ್ವ. ಎಂಟು ವರ್ಷಗಳಿಂದ ಅಮೃತವರ್ಷಿಣಿ ನಾಟ್ಯದೇಗುಲವನ್ನು ಸ್ಥಾಪಿಸಿ ಈ ಕಲಾ ಕೇಂದ್ರದಲ್ಲಿ ಬಾಲಕಲಾವಿದರ ಕನಸುಗಳನ್ನು ರೂಪಿಸುತ್ತಿರುವ ಬಗೆಯನ್ನು ಕಾಣಬಹುದು.


ಬೆಳಗಾವಿಯ ಸವದತ್ತಿಯಲ್ಲಿ ಮೂರನೇ ಮಗಳಾಗಿ ಜನಿಸುವ ರೇಣುಕಾ ಪೋಲಿಯೋ ಲಸಿಕೆಯ ಬಗ್ಗೆ ಇದ್ದ ಮೂಢನಂಬಿಕೆಯಿಂದಾಗಿ ಶಾಶ್ವತವಾಗಿ ಅಂಗವಿಕಲಳಾದರೂ.. ತಂದೆಯನ್ನು ಕಳೆದುಕೊಂಡರೂ.. ಕಷ್ಟ-ಕೋಟಲೆಗಳೆಲ್ಲವನ್ನು ಮೀರಿ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ಸಾಧನೆ ಸುಲಭದಲ್ಲ. "ಹಠ ಸನ್ಮಾನಕ್ಕಾಗಿ ಅಲ್ಲ, ಸ್ವಾಭಿಮಾನಕ್ಕಾಗಿ" ಎನ್ನುತ್ತಾ ಇವರನ್ನು ನಮಗೆ ಪರಿಚಯಿಸುತ್ತಾರೆ.


"ತಾಯಿಗಿಂತ ಮಿಗಿಲಾದ ಯೋಧನಿಲ್ಲ ಜಗದಲ್ಲಿ" ಎನ್ನುತ್ತಾ ವಿಶೇಷ ಚೇತನಳಾದ ತಾಯಿ ಅಮೃತ ಕ್ರೀಡಾಲೋಕದಲ್ಲಿ ಮುನ್ನಡೆದು, ಬಾಲ್ಯ ವಿವಾಹದ ಕಷ್ಟ ಅನುಭವಿಸಿರೂ.. ಅದೆಲ್ಲವನ್ನು ಮೆಟ್ಟಿನಿಂತು ತನ್ನ ಮಗನನ್ನು ಡಾಕ್ಟರ್ ಆಗಿಸಲು ಬೆನ್ನೆಲುಬಾಗಿ ನಿಂತಿರುವ ಸ್ಪೂರ್ತಿದಾಯಕ ಗಾಥೆ ಇದು.


ಭಾರತದ ಮೊದಲ ಜಿಮ್ ತರಬೇತುದಾರರಾದ ಮಂಗಳಮುಖಿ, ಭಾರತದ ಮೊದಲ ಸಿನಿಮಾ ಲೈವ್ ಪ್ರೊಡ್ಯೂಸರ್ ಆಗಿರುವ ಮಂಗಳಮುಖಿ ಆನಿ ಪಟ್ಟ ಪಾಡುಗಳು ಒಂದೆರಡಲ್ಲ. ದೈಹಿಕ ಭಿನ್ನತೆಯಿಂದ ತಾವು ಪಟ್ಟ ಪಾಡನ್ನು ತನ್ನಂತಹವರು ಪಡಬಾರದು ಎಂಬುದಕ್ಕೆ ಅವರು ಶ್ರಮಿಸುತ್ತಿದ್ದಾರೆ. "ಸಾಧನೆ ಮಾಡಿದರೆ ಮಾತ್ರ ಅವಮಾನಗಳನ್ನು ಮೆಟ್ಟಿ ನಿಲ್ಲಬಹುದು" ಎನ್ನುವ ಅಮ್ಮನ ಮಾತು ಹೇಗೆ ಪ್ರೇರಣೆಯಾಗಿ ತೆಗೆದುಕೊಂಡರೋ ಅದಕ್ಕಿಂತ ಇವರ ಬದುಕು ಹೆಚ್ಚಿನ ಪ್ರೇರಣೆ ನೀಡುತ್ತದೆ.


ನಿಸ್ವಾರ್ಥವಾಗಿ, ಸಮಾಜದ ಏಳಿಗೆಗಾಗಿ ತನ್ನನ್ನೇ ತಾನು ಮುಡಿಪಾಗಿಸಿಕೊಂಡ ಶಕ್ತಿದೀಪವಾಗಿ ಕಾಣುವ ನಳಿನಮ್ಮ ಹಾಗೂ ಅವರ ಪತಿಯನ್ನು ನಾವಿಲ್ಲಿ ಕಾಣಬಹುದು. ಟೈಲರಿಂಗ್ ಹಾಗೂ ಯೋಗ ತರಬೇತಿಯ ಮೂಲಕ ಸಂಸ್ಕೃತಿಯ ರಾಯಭಾರಿಯಾಗಿ ಯೋಗದೀಕ್ಷಿಣಿಯಾಗಿರುವ ನಳಿನಾಕ್ಷಿಯವರ ಬದುಕು ಇಲ್ಲಿದೆ.


ಬದುಕಿನಲ್ಲಿ ಸಾಕಷ್ಟು ಇದ್ದವರೇ ದಾನ-ಧರ್ಮ ಮಾಡುವುದು ಕಷ್ಟ. ಆದರೆ, ತಮ್ಮ ಮಿತಿಯನ್ನು ಮೀರಿ ನಿಸ್ವಾರ್ಥವಾಗಿ ಬದುಕುತ್ತಿರುವ ನಂದಿನಿಯವರನ್ನು ನಾವಿಲ್ಲಿ ಕಾಣಬಹುದು. ತಮ್ಮ ಮನೆಯಲ್ಲಿ ಬೆಳಕು ವಾತ್ಸಲ್ಯಧಾಮಕ್ಕೆ ಬರೆದುಕೊಟ್ಟು ಅಸಹಾಯಕ ಜೀವಗಳಿಗೆ ಆಸರೆಯಾಗಿ ನಿಂತಿರುವ ಇವರ ನಿಸ್ವಾರ್ಥ ಬದುಕಿನ ಕಥೆ ಇಲ್ಲಿದೆ.


ತನ್ನೆಲ್ಲಾ ಕನಸುಗಳಿಗೆ ಒತ್ತಾಸೆಯಾಗಿ ನಿಂತ ಗಂಡನಿಗೆ ಬೆನ್ನೆಲುಬಾಗಿ ನಿಲ್ಲಲು ಅವರ ಊರಿನಲ್ಲೇ ನೆಲೆಸಿ ರೈತ ಮಹಿಳೆಯಾಗುವ ಕುಸುಮಾರನ್ನು ನಾವಿಲ್ಲಿ ಕಾಣಬಹುದು. ವಿವಾಹ ಹಾಗೂ ಮಗುವಾದ ನಂತರ ಬಿಎ ವ್ಯಾಸಂಗ ಮುಗಿಸಿ, ಎಂ . ಎಸ್ . ಡಬ್ಲ್ಯೂ ಪ್ರವೇಶ ಪಡೆದು ಕಾಲೇಜ್ ಟಾಪರ್ ಆಗಿ ವಿದ್ಯಾರ್ಥಿವೇತನದಿಂದಲೇ ಓದಿನಲ್ಲಿ ಮುಂದೆ ಬಂದು ವೆಲ್ ಫೇರ್ ಆಫೀಸರ್ ಆಗಿ ನೌಕರಿ ಗಿಟ್ಟಿಸಿಕೊಂಡ ನಂತರವೂ ತಮ್ಮನ್ನು ತಾವು ಕೃಷಿಗೆ ಮುಡಿಪಾಗಿಸಿಕೊಂಡ ಕುಸುಮಾರ ಜೀವನಗಾಥೆ ಇಲ್ಲಿದೆ.


ತಂದೆ-ತಾಯಿ ಇದ್ದರೂ ಹೆಣ್ಣು ಮಗುವೆಂಬ ಕಾರಣಕ್ಕೆ ಒಂಟಿಯಾಗಿ ಅಜ್ಜಿಯ ಮಡಿಲಿಗೆ ಬಿದ್ದ ಹಿರಣ್ಮಯಿಯನ್ನು ಇಂದಿಗೂ ತಂದೆ-ತಾಯಿ ನೋಡುತ್ತಿಲ್ಲ. ವಯಸ್ಸಿಗೂ ಮೀರಿದ ಪ್ರೌಢತೆಯಿಂದ ಅಜ್ಜಿಯ ಜವಾಬ್ದಾರಿ ಹೊತ್ತ ಹಿರಣ್ಮಯಿಯ ದಿಟ್ಟ ನಡೆ ಯಾವ ಸಾಧಕಿಗೂ ಕಡಿಮೆ ಏನಲ್ಲ. ಹಾಗಾದರೆ, ಹಿರಣ್ಮಯಿಯ ಮನಸ್ಸಿನ ಮಾತುಗಳೇನು ನೀವೇ ಓದಿ ನೋಡಿ.


ವರುಣ್ ಎಂಬ ವಿಕಲಚೇತನ ಮಗುವನ್ನು ದೇವರ ಮಗುವೆಂದುಕೊಂಡು ಪೋಷಿಸುತ್ತಿರುವ ತಾಯಿ ಗೌರಿಯವರ ಧೈರ್ಯ ಚಿಕ್ಕಪುಟ್ಟ ಕಷ್ಟಗಳಿಗೆ ಅಳುಕುವವರಿಗೆ ನಿಜಕ್ಕೂ ಮಾದರಿಯಂತಿದೆ.


ಹುಟ್ಟಿದಾಗಿನಿಂದಲೇ ಬಳ್ಳಿಗಳಂತೆ ನಲುಚಿಕೊಂಡಿದ್ದ ಕೈಗಳು ಜೊತೆಗೆ ಹೃದಯ ಸಂಬಂಧಿ ಕಾಯಿಲೆ. ಹೀಗಿದ್ದ ಮಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾದ ತಾಯಿಯ ಧೈರ್ಯ ಇಂದು ಕೈಗಳೇ ಇಲ್ಲದಿದ್ದರೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವ ಅರ್ಪಿತ ಎಂಬ ದಿಟ್ಟ ಯುವತಿಯನ್ನು ಪರಿಚಯಿಸುತ್ತವೆ.


"ನಾನು ಹಾದಿ ಹುಡುಕಿಲ್ಲ-ನಾನು ಹಾದಿ ನಿರ್ಮಿಸಿದ್ದೇನೆ. ನಾನು ನಿಲ್ಲಲಿಲ್ಲ-ನಾನು ಮುಂದಾಳತ್ವ ವಹಿಸಿದೆ" ಎನ್ನುವ ಆತ್ಮವಿಶ್ವಾಸದ ಮಾತುಗಳನ್ನಾಡುವ ಶಿಕ್ಷಣ ಕ್ರಾಂತಿಯ ಹರಿಕಾರಿಣಿ ಕಾಂಚನರವರು "ಶಿಕ್ಷಣ ನನ್ನ ಆಯ್ಕೆಯಲ್ಲ. ನನ್ನ ದೃಷ್ಟಿ, ಸಾಧನೆ, ನನ್ನ ಗುರಿಯಲ್ಲ, ನನ್ನ ಸ್ವಭಾವ" ಎಂದು ಸಾಧನೆಯ ಹಾದಿಯನ್ನು ಸ್ಪಷ್ಟವಾಗಿ ಹೇಳುವ ಬಗೆ ಇಲ್ಲಿದೆ.


"ನೋವು ನನ್ನನ್ನು ಮುರಿಯಲಿಲ್ಲ

ಹೋರಾಟ ನನ್ನನ್ನು ದೃಢವಾಗಿಸಿತು

ಧೈರ್ಯ ನನ್ನನ್ನು ನಾಯಕಿಯಾಗಿಸಿತು"

ಎನ್ನುವ ಅನಿತಾ ರ ಬದುಕಿನಲ್ಲಿ ಬಂದ ಕಷ್ಟಗಳು ಒಂದೆರಡಲ್ಲ. ಅವೆಲ್ಲವನ್ನು ಮೆಟ್ಟಿ, ನಾಯಕಿಯಾಗಿ ನಿಂತಿರುವ ಅವರ ಕೆಲಸ ಊರಿಗಷ್ಟೇ ಸೀಮಿತವಾಗಿಲ್ಲ. ದೇಶಗಳನ್ನು ದಾಟಿರುವ ಪರಿ ಇಲ್ಲಿದೆ.


"ಧೈರ್ಯೇ ಸಾಹಸೇ ರಾಜಲಕ್ಷ್ಮಿ" ಎನ್ನುತ್ತಾ ಪೋಲಿಯೋ ಪೀಡಿತ ರಾಜಲಕ್ಷ್ಮಿ ಅವರ ಬದುಕಿನಲ್ಲಿ ಬಂದ ಸವಾಲುಗಳು.. ಪ್ರಸ್ತುತ, 9 ಶಸ್ತ್ರಚಿಕಿತ್ಸೆಗಳಾದ ತೂ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಅವರ ಪರಿಚಯ ಇಲ್ಲಿದೆ.


ಎಂ.ಎ ಪದವೀಧರರಾದರೂ ಸರಿಯಾದ ಅವಕಾಶ ಸಿಗದೇ ಬದುಕಿನ ಹೋರಾಟದ ಹಾದಿಯಲ್ಲಿ.. ಮಹಿಳಾ ಸಬಲೀಕರಣದ ಪ್ರಾಜೆಕ್ಟ್, ಫೀಲ್ಡ್ ವರ್ಕ್ ನಂತರ ಆಯ್ದುಕೊಂಡದ್ದು ಆಕಾಶವಾಣಿಯನ್ನು. ಅನುಭವವಿಲ್ಲದ ಕ್ಷೇತ್ರದಲ್ಲಿ 2000 ಅಭ್ಯರ್ಥಿಗಳನ್ನು ಹಿಂದಿಕ್ಕಿ ಮಡಿಕೇರಿಯ ಆಕಾಶವಾಣಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಆಕಾಶವಾಣಿಯ ಸ್ಪೂರ್ತಿದನಿಯಾಗಿರುವ ಚಂದು ಅವರು ಇಲ್ಲಿದ್ದಾರೆ.


ಅಂತರಪಟ ಹಾಗೂ ಆತ್ಮಾನುಸಂಧಾನ ಕಾದಂಬರಿಗಳನ್ನು ಬರೆದಿರುವ ಲೇಖಕಿ ಉಷಾ ರವಿ ಅವರು ಕನ್ನಡಕ್ಕೆ ಜ್ಞಾನಪೀಠ ಹೆಬ್ಬಯಕೆಯನ್ನು ಹೊಂದಿದ್ದಾರೆ. ಅವರ ಬದುಕು ಹಾಗೂ ಮನದಾಳದ ಮಾತುಗಳು ಇಲ್ಲಿವೆ.


ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಎಂಬ ವಿಭಿನ್ನ ಮೂಳೆಯ ಅನುವಂಶಿಕ ಅಸ್ವಸ್ಥತೆಯನ್ನು ಹೊಂದಿರುವ ಅರ್ಚನಾ ರವಿಯವರು ಬಾಲ್ಯವನ್ನು ಕಳೆದದ್ದು ಎಲ್ಲರಂತಲ್ಲ. ಬಹಳ ಎಚ್ಚರಿಕೆಯಿಂದ ಬೆಳೆದವರು ಈಗ ಭಾರತೀಯ ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. "ದುರ್ಬಲತೆ ಮೂಳೆಗಳಿಗಷ್ಟೇ, ಆತ್ಮವಿಶ್ವಾಸ ಬಂಡೆಯಷ್ಟಿದೆ" ಎನ್ನುವ ಇವರ ಬದುಕಿನ ಕಥೆ ಇಲ್ಲಿದೆ.


ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು ತನ್ನ ಮಗನ ಭವಿಷ್ಯಕ್ಕಾಗಿ ಕ್ಷಮಿಸುತ್ತಿರುವ ತಾಯಿ ರಂಜಿತಾರನ್ನು ಇಲ್ಲಿ ಕಾಣಬಹುದು.


"ಹೊರ ಜಗತ್ತಿನಿಂದ ಜಾರಿಗೊಳ್ಳುವ ಸ್ಪೂರ್ತಿ ಅಲ್ಪಾವಧಿಯದ್ದು. ಅಂತರಂಗದಾಳದಿಂದ ಹೊರಹೊಮ್ಮುವ ಸ್ಫೂರ್ತಿ ನಿಚ್ಚಳವಾದದ್ದು" ಎನ್ನುತ್ತಾ ಪ್ರತಿ ಸ್ತ್ರೀಯಲ್ಲಿರುವ ಶಕ್ತಿ ಸ್ವರೂಪಿಣಿಯನ್ನು ಉದ್ದೀಪಿಸುತ್ತಾರೆ. ಇದರ ಜೊತೆಗೆ ಭಾರ್ಗವಿ ಶೆಟ್ಟಿಯವರು ಬರೆದಿರುವ ಕವಿತೆಗಳನ್ನು ನಾವಿಲ್ಲಿ ಕಾಣಬಹುದು. ಚಿಕ್ಕ-ಪುಟ್ಟ ಕಷ್ಟಗಳಿಗೂ ಅಂಜುವವರು ನಮ್ಮ ಜೊತೆಗಿರುವ ಇಂತಹ ಶಕ್ತಿಸ್ವರೂಪಿಣಿಯರನ್ನು ಕಂಡು ಸ್ಪೂರ್ತಿ ಪಡೆಯಬಹುದು. ಸ್ಪೂರ್ತಿದಾಯಕ ಓದು.

~ ವಿಭಾ ವಿಶ್ವನಾಥ್

ಅದು ನಿಜವಲ್ಲ..! (ಪುಸ್ತಕ ಯಾನ - 477)


ಪುಸ್ತಕದ ಶೀರ್ಷಿಕೆ : ಅದು ನಿಜವಲ್ಲ..!

ಲೇಖಕರು : ಕೌಂಡಿನ್ಯ 

ಪ್ರಕಾಶಕರು : ಕಲ್ಪವೃಕ್ಷ ಪ್ರಕಾಶನ

ಪ್ರಥಮ ಮುದ್ರಣ : 2020

ಪುಟಗಳು : 352

ಬೆಲೆ : 350 ರೂ. 


ಅದು ನಿಜವಲ್ಲ..! ಕಾದಂಬರಿ ಸಾಮಾಜಿಕ ಕಾದಂಬರಿಯಾಗಿದ್ದರೂ.. ಸಾಕಷ್ಟು ನಿಗೂಢ, ಪತ್ತೇದಾರಿ ಹಾಗೂ ಹಾರರ್ ಅಂಶಗಳನ್ನು ಒಳಗೊಂಡು ರೋಚಕವಾಗಿ ಸಾಗುತ್ತದೆ. 


"ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು" ಎಂದು ಹೇಳಿರುವ ಹಿರಿಯರ ಅನುಭವದ ಮಾತು ಎಷ್ಟು ಸತ್ಯವಲ್ಲವೇ..!? ನಾವು ಕಂಡದ್ದೇ ನಿಜ ಎಂಬ ತೀರ್ಮಾನಕ್ಕೆ ಬರುವ ಮುಂಚೆ ಅದನ್ನು ಮತ್ತೆ ಪರಿಶೀಲಿಸಬೇಕು. ಈ ಅಂಶ ಕಾದಂಬರಿಯ ಪ್ರತಿ ಘಟ್ಟದಲ್ಲಿಯೂ ನೆನಪಾಗುತ್ತದೆ. ಇಲ್ಲಿನ ಪ್ರತಿ ನಿಗೂಢದ ಹಿಂದೆಯೂ ಒಂದು ಉದ್ದೇಶವಿದೆ. ಅದೇನು ಎಂಬುದನ್ನು ನೀವೇ ಅರಿಯಬೇಕು. ವಿಶಿಷ್ಟ ಕಥಾಹಂದರ ಹೊಂದಿರುವ ಈ ಕಾದಂಬರಿ 'ಮಂಗಳ' ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿತ್ತು. 


ಈ ಕಾದಂಬರಿಯ ಬಹುಭಾಗ ನಡೆಯುವುದು ಸೋನಾಪುರ ಎನ್ನುವ ಕುಗ್ರಾಮದಲ್ಲಿ. ಪ್ರಕೃತಿ ಸೌಂದರ್ಯ, ಪ್ರಪಾತ, ಗುಡ್ಡ, ಗುಹೆ, ರಾಜರ ಕಾಲದ ಕೋಟೆ, ಅರಮನೆಯ ಅವಶೇಷ ಇವೆಲ್ಲವೂ ಇದ್ದರೂ ಪ್ರವಾಸಿಗರ ಆಕರ್ಷಕ ತಾಣವೇನೂ ಆಗಿರಲಿಲ್ಲ. ಆದರೆ, ಇತಿಹಾಸ ಗೊತ್ತಿದ್ದವರಿಗೆ ಸೋನಾಪುರ ವೈಶಿಷ್ಟ್ಯವೇ..!


ಅರಣ್ಯದ ಮಧ್ಯೆ ಇರುವ ಊರು ಇದಾದರೂ.. ಸೇತುವೆ ಶಿಥಿಲಾವಸ್ಥೆಯಲ್ಲಿತ್ತು. ಮಳೆಗಾಲದಲ್ಲಿ ನದಿ ಪ್ರವಾಹ ಬಂದರೆ ಸೇತುವೆ ಮುಳುಗಿ ಗ್ರಾಮ ದ್ವೀಪವೇ ಆಗಿಬಿಡುತ್ತಿತ್ತು. 300 ಮನೆಗಳ ಈ ಊರಿನಲ್ಲಿ ದಾನ-ಧರ್ಮ, ಪರೋಪಕಾರ, ದೈವಭಕ್ತಿ ಎಲ್ಲದಕ್ಕೂ ಹೆಸರುವಾಸಿಯಾಗಿದ್ದವರು ಶಿವಹೋತ್ರಿ ಮನೆತನದವರು. ಊರಿನ ಹೊರಭಾಗದಲ್ಲಿ ನಿರ್ಜನ ಪ್ರದೇಶ, ಪ್ರಕೃತಿ ಸೌಂದರ್ಯದ ನಡುವೆ ಇವರ ಪ್ರಾಚೀನ ಕಾಲದ ಮನೆಯಿತ್ತು. ಇದನ್ನು ಅರಮನೆ ಮನೆ ಎಂದೇ ಕರೆಯುತ್ತಿದ್ದರು. ಕಾಲಕ್ಕೆ ತಕ್ಕಂತೆ ಬದಲಾದ ಕಲಾತ್ಮಕ ಹಾಗೂ ಆಧುನಿಕ ರೂಪವೂ ಇತ್ತು. ಈ ಮನೆಯ ಹೆಸರು ಶಿವನಿಲಯ. ಇದರ ಯಜಮಾನರು ಶಿವರಾಜೇಂದ್ರಬಾಬು. 


ಆದರೆ ಈಗ ಬಂಗಲೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಅಂದಾನಪ್ಪ ಬ್ಯಾಡಗಿ. ಬಂಗಲೆಯ ಪ್ರತಿ ಕೋಣೆಯನ್ನು ತೊಳೆದು, ಒರೆಸಿ ಶುಚಿ ಮಾಡಿ ಗಿಡಗಳ ಆರೈಕೆ ಮಾಡಿ ಮನೆ ತನ್ನದೇ ಎನ್ನುವಂತೆ ನಿಷ್ಠೆಯಿಂದ ಕೆಲಸ ಮಾಡಿ ಸಂಜೆಗೆ ಮನೆಗೆ ಹೊರಡುತ್ತಿದ್ದ. ಅದೂ ಬಂಗಲೆಯ ಬೀಗ ಹಾಕಿಕೊಂಡು. 


ದಾರಿ ತಪ್ಪಿ ಬಂದವರು ಅಥವಾ ಕಷ್ಟದಲ್ಲಿರುವವರಿಗೆ ಈ ಮನೆಯಲ್ಲಿ ಜಾಗ ಸಿಗುತ್ತಿತ್ತು. ಅದೆಲ್ಲವೂ ಬಂದವರಿಗೆ ಪವಾಡದಂತೆ ಕಾಣುತ್ತಿತ್ತು. ಅಂತಹ ಹಲವಾರು ನಿದರ್ಶನಗಳಿವೆ ಇಲ್ಲಿ. ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಿ, ಅವರನ್ನು ರಕ್ಷಿಸಿ ಅವರ ಬದುಕನ್ನು ನೆನಪಿಟ್ಟುಕೊಳ್ಳುವಂತೆ ಮಾಡುತ್ತಿದ್ದ ಆ ನಿಗೂಢ ವ್ಯಕ್ತಿ ಯಾರು..? ಬಂದವರೆಲ್ಲರಿಗೂ ಆ ನಿರ್ಜನ ಮನೆಯಲ್ಲಿ ಶಿವ ಸ್ತುತಿ ಕೇಳಿ ಬರುತ್ತಲೇ ಇತ್ತು. ಹಾಗಾಗಿ ದೈವಭಕ್ತಿಯೂ ಭಯ ಹುಟ್ಟಿಸುತ್ತಿತ್ತು.


ಆ ಊರಿನ ಪೊಲೀಸ್ ಸ್ಟೇಷನ್ ನ ಸಬ್ ಇನ್ಸ್ಪೆಕ್ಟರ್ ಮಾರ್ತಾಂಡ ಕಲ್ಲಂಗಡಿ. ಆತನಿಗೆ ಅಂದಾನಪ್ಪನ ಮೇಲೆ ಬಹಳ ಅನುಮಾನ. ಏಕೆಂದರೆ, ಕುಟುಂಬದ ಯಜಮಾನರು ಸತ್ತು ಆರು ತಿಂಗಳಾಗಿತ್ತು. ಆದರೂ.. ಅವನ ರಹಸ್ಯ ಕಾರ್ಯಾಚರಣೆ ನಡೆಯುತ್ತಲೇ ಇತ್ತು. ಶಿವರಾಜೇಂದ್ರ ಬಾಬು ಅವರ ಹೆಂಡತಿ, ಇಬ್ಬರು ಮಕ್ಕಳು ಅಸಹಜ ರೀತಿಯಲ್ಲಿ ಸತ್ತಿದ್ದರು. ಇನ್ನೂ ತನಿಖೆ ನಡೆಯುತ್ತಲೇ ಇತ್ತು. ಅವರ ಉಳಿದಿದ್ದ ಮಗ ವಿದೇಶದಿಂದ ಬಂದಿರಲಿಲ್ಲ. ಅಂದನಪ್ಪ ನೇ ಈಗ ಸತ್ಯದ ಮನೆಯ ಉಸ್ತುವಾರಿ. ಹಾಗಾಗಿ ಅವನ ಮೇಲೆ ಅನುಮಾನ. ಅವನ ಸಂಬಳ ಜಮಾ ಆಗುತ್ತಿದ್ದದ್ದು ಹೇಗೆ..?


ಮಹೇಂದ್ರ ಬಾಬು ಹಾಗೂ ಪದ್ಮಿನಿ ದಂಪತಿಗಳಿಗೆ ಮದುವೆಯಾಗಿ 10 ವರ್ಷವಾದರೂ ಮಕ್ಕಳಿರಲಿಲ್ಲ. ಮಹೇಂದ್ರ ಬಾಬು ಅವರ ತಮ್ಮ ಜೀವನ್ ಅವರ ಜೊತೆಯಲ್ಲಿಯೇ ಇದ್ದ.  ಅವನ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದ್ದರು. ಪದ್ಮಿನಿಯ ತಂಗಿ ಚೈತ್ರಳಿಗೆ ಜೀವನ್ ಮೇಲೆ ಪ್ರೇಮವಿತ್ತು.


ಆದಿತ್ಯ ತಡಕಲ್ ಇತಿಹಾಸ ಉಪನ್ಯಾಸಕರಾಗಿದ್ದವರು ಅವರ ಪತ್ನಿ ಕಾವ್ಯ. ಇಬ್ಬರಿಗೂ ವಯಸ್ಸಿನ ಅಂತರ ಬಹಳವಿತ್ತು. ಸಮಾನಾಸಕ್ತರೂ ಆಗಿರಲಿಲ್ಲ.


ಪ್ರಭುಶಂಕರ್ ಇತಿಹಾಸ ವಿಷಯದ ಅತಿಥಿ ಉಪನ್ಯಾಸಕ. ಅವನ ಕೆಲಸ ಖಾಯಂ ಆಗಿರಲಿಲ್ಲ. ಆತನ ತಂದೆ, ತಾತನ ಆಸ್ತಿ ಯಥೇಚ್ಛವಾಗಿತ್ತು. ಬೇರೆ ಮೂಲಗಳಿಂದ ಆದಾಯವೂ ಇತ್ತು. ಕೆಲಸ ಕೇವಲ ಆತ್ಮತೃಪ್ತಿಗಾಗಿ ಮಾತ್ರವಾಗಿತ್ತು. ವೃತ್ತಿಯ ಜೊತೆಗೆ ಕರಾಟೆ, ಸಾಹಸದ ಪ್ರವೃತ್ತಿಯೂ ಇತ್ತು.


ಮೈತ್ರಿ ತಂದೆ-ತಾಯಿ ಪದ್ಮಿನಿ ಕುಟುಂಬಕ್ಕೆ ಆತ್ಮೀಯರು. ಪದ್ಮಿನಿಯನ್ನು ಅಕ್ಕ ಎಂದು ಸಂಭೋಧಿಸುತ್ತಿದ್ದಳು. ಜೀವನ್ ಹಾಗೂ ಪ್ರಭುಶಂಕರ್ ಇಬ್ಬರೂ ಪದ್ಮಿನಿಯ ಮೇಲೆ ಕಣ್ಣಿಟ್ಟಿದ್ದರು. ನಿಜಕ್ಕೂ ಮೈತ್ರಿಗೆ ಯಾರ ಮೇಲೆ ಪ್ರೀತಿ ಇತ್ತು..? 


ಇವರಿಷ್ಟು ಜನರು ಎಲ್ಲಿಗಾದರೂ ಪ್ರವಾಸ ಹೋಗಬೇಕು ಎಂದಾಗ ಪ್ರಭುಶಂಕರ್ ಸೋನಾಪುರವನ್ನು ಸೂಚಿಸಿದ. ಅಲ್ಲಿನ ವಿಶೇಷತೆಗಳ ಬಗ್ಗೆ ತಿಳಿಸಿದ್ದ. ಆದರೆ ಉಳಿಯುವ ವ್ಯವಸ್ಥೆ ಸರಿಯಾಗಿಲ್ಲವೆಂದು ಹೇಳಿದರೂ ನಗರದ ಜಂಜಾಟದಿಂದ ದೂರವಾಗಿ ಪ್ರಕೃತಿ ಸೌಂದರ್ಯದಲ್ಲಿ ಮೈಮರೆಯಲು ಎಲ್ಲರೂ ಅಲ್ಲಿಗೆ ಹೊರಟರು. ಹತ್ತಿರದಲ್ಲಿಯೇ ಇದ್ದ ಮೈಲಾರಿಪುರದಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಂಡರು


ಇವರೆಲ್ಲರ ಜೊತೆ ಅಡುಗೆಗೆಂದು ಪಾಂಡು ಹಾಗೂ ಆತನ ಪತ್ನಿ ಸೇರಿಕೊಂಡರು. 


ಇವರೆಲ್ಲರೂ ಊಹಿಸಿರದ ಘಟನೆಯೊಂದು ನಡೆಯಿತು. ವಿಪರೀತ ಮಳೆಯ ಕಾರಣ ಹೋಗುತ್ತಿದ್ದ ವಾಹನ ಕೆಟ್ಟು ಅವರೆಲ್ಲರೂ ಸೋನಾಪುರದ ಶಿವ ನಿಲಯದಲ್ಲಿ ಉಳಿಯುವಂತಾಯಿತು. ಇದಕ್ಕೆ ಕಾರಣ ನಿಗೂಢ ಮುದುಕ.


ಇದುವರೆಗೂ ಯಾವುದೇ ಸಾಕ್ಷಿ ಸಿಕ್ಕಿರದ ಮಾರ್ತಾಂಡ ನಿಗೆ ಇದರ ಇರುವಿಕೆ ಪುಷ್ಟಿ ನೀಡಿತು. ಮಳೆಯ ಕಾರಣದಿಂದ ಸೇತುವೆಗಳ ಸಂಪರ್ಕ ಕಡಿದು ಹೋಗಿ ಮತ್ತಷ್ಟು ಕಾಲ ಅಲ್ಲಿಯೇ ನಿಲ್ಲುವಂತಾದಾಗ ಹಲವಾರು ವಿಶೇಷ, ನಿಗೂಢ ಸಂಗತಿಗಳು ಜರುಗುತ್ತಾ ಸಾಗುತ್ತವೆ. 


ಶಿವನಿಲಯದಲ್ಲಿ ಸದಾ ಬರುತ್ತಿದ್ದ ಶಿವಸ್ತುತಿ ನಿಂತು ಹೋಗಿದ್ದಕ್ಕೆ ಕಾರಣವೇನು..? ಪ್ರಭುಶಂಕರ ರಹಸ್ಯ ಕಂಡುಹಿಡಿದದ್ದು ಹೇಗೆ..?


ಇದಲ್ಲದರ ನಡುವೆ ಪದ್ಮಿನಿ ನಿಗೂಢವಾಗಿ ಕಾಣೆಯಾಗುತ್ತಾಳೆ. ಅದಕ್ಕೆ ಕಾರಣ ಅವರಷ್ಟೂ ಜನರಲ್ಲಿಯೇ ಒಬ್ಬರು. ಏಕೆಂದರೆ, ಹೊರಗಿನಿಂದ ಬೇರೆ ಯಾರೂ ಅಲ್ಲಿಗೆ ಬರಲು ಸಾಧ್ಯವಿರಲಿಲ್ಲ. ಮಾರ್ತಾಂಡನಿಗೆ ಈ ಅವಕಾಶ ಮತ್ತೊಂದು ವಿಚಾರ ತಿಳಿಯಲು ದಾರಿ ಮಾಡಿಕೊಡುತ್ತದೆ. ಆತ ಕಾವ್ಯಳ ಬೆನ್ನು ಬೀಳಲು ಕಾರಣವೇನು..? ಪದ್ಮಿನಿ ಸಿಕ್ಕಳೇ..?


ಶಿವರಾಜೇಂದ್ರ ಬಾಬು ಅವರ ಹಾಗೂ ಕುಟುಂಬದವರ ಅಂತ್ಯ ಹೇಗಾಗಿತ್ತು..? 


ಆದಿತ್ಯ ತಡಕಲ್ ಹಾಗೂ ಕಾವ್ಯ ಅವರ ದಾಂಪತ್ಯದ ಮೇಲೆ ಈ ಪ್ರವಾಸ ಹೇಗೆ ಪರಿಣಾಮ ಬೀರಿತು..?


ಮಹೇಂದ್ರ ಬಾಬು ಯಾವುದಾದರೂ ಮಗುವನ್ನು ದತ್ತು ತೆಗೆದುಕೊಳ್ಳಲು ಅಥವಾ ಜೀವನ್ ನನ್ನೇ ತಮ್ಮ ವಾರಸುದಾರ ಎಂದು ಘೋಷಿಸಲು ಹೊರಟಾಗ ಪದ್ಮಿನಿ ಒಪ್ಪದೇ ತೀವ್ರವಾಗಿ ವಿರೋಧಿಸಿದ್ದೇಕೆ..? ಈ ಪ್ರವಾಸ ಮುಗಿಯುವಷ್ಟರಲ್ಲಿ ಯಾರ ನಿರ್ಧಾರ ಬದಲಾಯಿತು..?


ಚೈತ್ರ, ಜೀವನ್ ಅನ್ನು ಪ್ರೀತಿಸುತ್ತಿದ್ದರೆ ಜೀವನ ಮೈತ್ರಿಯ ಬೆನ್ನು ಬಿದ್ದಿದ್ದ. ಮೈತ್ರಿ ಪ್ರಭುಶಂಕರನಿಗೆ ಮನಸೋತಿರುತ್ತಾಳೆ. ಯಾರು ಯಾರಿಗೆ ಜೋಡಿಯಾಗುತ್ತಾರೆ..?


ಶಿವರಾಜೇಂದ್ರ ಬಾಬು ಅವರು ತಮ್ಮ ಗುರಿ ಸಾಧಿಸಲು ಪ್ರಭುಶಂಕರನನ್ನೆ ಆಯ್ಕೆ ಮಾಡಿಕೊಂಡದ್ದು ಹೇಗೆ..? ಏಕೆ..?


ಪೊಲೀಸ್ ಆದರೂ ಮಾರ್ತಂಡ ಕಲ್ಲಂಗಡಿಯ ವ್ಯಕ್ತಿತ್ವ ಅದಕ್ಕೆ ತಕ್ಕನಾದುದಲ್ಲ. ಆತನ ಕರಾಳ ಮುಖ ಹೇಗಿತ್ತು ಅದಕ್ಕೆ ಸಹಕಾರ ನೀಡಿದವರು ಯಾರು.?


ಹಲವಾರು ರೋಚಕ, ನಿಗೂಢ ವಿಚಾರಗಳಿಂದ ಕಾದಂಬರಿ ಆಸಕ್ತಿಕರವಾಗಿ ಓದಿಸಿಕೊಂಡು ಹೋಗುತ್ತದೆ.


ಈ ಕಾದಂಬರಿ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುದರಿಂದ ಓದುಗರಿಗೆ ನೆನಪಿಸಲೇನೋ ಎಂಬಂತೆ ಹಲವಾರು ವಿಚಾರಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ ಹಾಗೂ ನೆನಪಿಸುತ್ತಾರೆ. ಕಾದಂಬರಿಯ ಓದಿನ ವೇಗಕ್ಕೆ ಇದು ಕೆಲವೊಮ್ಮೆ ತಡೆಯೊಡ್ಡುತ್ತದೆ. ಒಂದೇ ಬಾರಿಗೆ ಇದನ್ನು ಓದಲು ಹೊರಟವರಿಗೆ ಈ ಮಾಹಿತಿಗಳು ಅನವಶ್ಯಕ ಎಂದೆನಿಸಬಹುದು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಓದುವುದು ಒಳ್ಳೆಯದು. 


ನಿಗೂಢ ನಡೆಯಲ್ಲಿ ಯಾವುದು ಸತ್ಯ ಹಾಗೂ ಯಾವುದು ಸುಳ್ಳು..? ಅದನ್ನು ಕಂಡುಹಿಡಿಯುವುದು ಯಾರು, ಹೇಗೆ ಎಂಬುದು ಹಂತಹಂತವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ.


ಇಡೀ ಕಾದಂಬರಿಯ ಕುರಿತು ಹೇಳಿದರೂ ಮುಖ್ಯವಾದದನ್ನು ಉಲ್ಲೇಖಿಸಲೇಬೇಕು. ಅದೆಂದರೆ ದೇಶಭಕ್ತಿ. ಯಾರ ದೇಶಭಕ್ತಿ ಯಾವ ರೀತಿಯಲ್ಲಿತ್ತು ಎಂಬುದನ್ನು ನೀವೇ ಓದಿ ಅರಿಯಿರಿ. 

~ವಿಭಾ ವಿಶ್ವನಾಥ್

ನಾಲ್ಕನೇ ಆಯಾಮ ಎಲ್ಲಿದೆ? (ಪುಸ್ತಕ ಯಾನ - 476)


ಪುಸ್ತಕದ ಶೀರ್ಷಿಕೆ : ನಾಲ್ಕನೇ ಆಯಾಮ ಎಲ್ಲಿದೆ?

ಲೇಖಕರು : ರೋಹಿತ್ ಚಕ್ರತೀರ್ಥ 

ಪ್ರಕಾಶಕರು : ವಿಕ್ರಮ್ ಪ್ರಕಾಶನ

ಪ್ರಥಮ ಮುದ್ರಣ : 2015

ಪುಟಗಳು : 160

ಬೆಲೆ : 110 ರೂ.


ಈ ಪುಸ್ತಕದಲ್ಲಿ ಇರುವ ಗಣಿತದ ಕುರಿತ ಲೇಖನಗಳು ಹೊಸದಿಗಂತ, ವಿಜಯವಾಣಿ, ಕನ್ನಡಪ್ರಭ, ಕರ್ಮವೀರ, ಬಾಲವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಗಣಿತವನ್ನು ಇಷ್ಟು ಆಸಕ್ತಿಕರವಾಗಿ ಉದಾಹರಣೆಯೊಂದಿಗೆ ಬೋಧಿಸಿದರೆ ಎಷ್ಟು ಚೆಂದವಲ್ಲವೇ ಎನ್ನಿಸಿತು. ಪ್ರೈಮರಿ, ಹೈಸ್ಕೂಲು ಹಾಗೂ ಕಾಲೇಜುಳಲ್ಲಿ ಕಲಿತ ಎಷ್ಟೋ ಗಣಿತದ ವಿಚಾರಗಳು, ಪ್ರಮೇಯಗಳು ನಿಜ ಜೀವನದಲ್ಲಿ ಯಾವ ರೀತಿ ಅಳವಡಿಕೆಯಾಗುತ್ತವೆ ಎನ್ನುವುದರ ವಾಸ್ತವಿಕ ಚಿತ್ರಣದ ಜೊತೆಗೆ ಆಸಕ್ತಿಕರ ಮಾಹಿತಿಗಳು ಇಲ್ಲಿವೆ. ಈ ಪುಸ್ತಕದಲ್ಲಿ 18 ಚಂದದ ಗಣಿತದ ಕುರಿತ ಲೇಖನಗಳಿವೆ. 


ಪೈಥಾಗೊರಸ್ ಪ್ರಮೇಯಕ್ಕೆ ಪದವಿಲ್ಲದ ಸಾಧನೆ : ಅಂಕಗಣಿತದ ಮೂಲ ಪ್ರಮೇಯವನ್ನು ಬಿಟ್ಟರೆ ಪೈಥಾಗೊರಸ್ ಪ್ರಮೇಯ ಅತಿ ಹೆಚ್ಚು ಬರೆಯಲ್ಪಟ್ಟಿದೆ. ಪೈಥಾಗೊರಸ್ ಗಿಂತ 500 ವರ್ಷಗಳ ಹಿಂದೆ ಬೋಧಾಯನ ಎಂಬ ಮುನಿ ರಜ್ಜುಶಾಸ್ತ್ರದಲ್ಲಿ ಈ ಪ್ರಮೇಯವನ್ನು ಹೇಳುತ್ತಾನೆ ಎಂದು ಹೇಳುತ್ತಲೇ.. ಬೋ-ಪೈ ಪ್ರಮೇಯವನ್ನು ಸಾಧಿಸುತ್ತಲೇ ಜೇಮ್ಸ್ ಗಾರ್ಫೀಲ್ಡ್ ಎರಡೂವರೆ ಸಾವಿರ ವರ್ಷಗಳ ನಂತರ ಮತ್ತೆ ಹೊಸ ಸಾಧನೆಯೊಂದನ್ನು ಕಂಡುಹಿಡಿದ. ಇದನ್ನು ಆತ ಕಂಡುಹಿಡಿದದ್ದು ಸಂಸತ್ತಿನಲ್ಲಿ. ಏಕೆಂದರೆ, ಆತ ಅಮೆರಿಕದ ಇಪ್ಪತ್ತನೇ ಅಧ್ಯಕ್ಷನಾಗಿದ್ದವನು. 


ಮರಣವಿಲ್ಲದ ಸರಣಿಗಳು : ಫಿಬೊನಾಚಿ ಸೀರೀಸ್ ಎಂದು ಕರೆಯುವ ಈ ಸರಣಿಗಳ ಹೆಸರೇ ತಪ್ಪು ಎನ್ನುತ್ತಾರೆ. ಫಿಬೊನಾಚಿ ಎಂದರೆ ಲ್ಯಾಟಿನ್ ನಲ್ಲಿ ಬೊನಾಚಿಯೋ ಎನ್ನುವವನ ಮಗ. ಅಲ್ಲದೆ, ಇದು ಸೀರೀಸ್ ಅಲ್ಲ ಸೀಕ್ವೆನ್ಸ್ ಎಂದು ಮರಿಸರಣಿಗಳನ್ನು ಉದಾಹರಿಸಿದ್ದಾರೆ. 


ಗುಣಿಸಲು ಬೇಗ, ಹೊಡೆಯಿರಿ ಲಾಗ : ಜಗತ್ತಿನ ಎಲ್ಲರೂ ಮರಳು ಸುರಿದುಕೊಳ್ಳುವ ಆಟವಾಡಲು ಶುರು ಮಾಡಿದರೆ..! ಒಬ್ಬರು ಮೂವರಿಗೆ ಸವಾಲು ಹಾಕಿದರೆ, ಆ ಮೂವರು ತಲಾ ಮೂವರಿಗೆ ಸವಾಲು ಹಾಕಿದರೆ.. ಜಗತ್ತಿನಲ್ಲಿ 700 ಕೋಟಿ ಜನ ಈ ಸವಾಲನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವೆಷ್ಟು ಎನ್ನುವ ಪ್ರಶ್ನೆ ಹಾಕುತ್ತಲೇ ಕಂಪ್ಯೂಟರಿಗೂ ಕಷ್ಟವಾದ ಈ ಲೆಕ್ಕವನ್ನು ಲಾಗರಿದಂ ಬಳಸಿ ಬಿಡಿಸುವ ಗುಟ್ಟನ್ನು ಹೇಳುತ್ತಾರೆ. ಜಾನ್ ನೇಪಿಯರ್  ಬಳಸಿದ ಲಘು ಗಣಕದ ಕಚ್ಚಾ ವಿಧಾನವನ್ನು ಮುಂದೆ ಯಾರೆಲ್ಲಾ ಅಭಿವೃದ್ಧಿ ಪಡಿಸಿದರು ಓದಿ ಅರಿಯಿರಿ.


ಕಲಾಗ್ಯಾಲರಿಯ ಸಮಸ್ಯೆಗೊಂದು ವರ್ಣಮಯ ಪರಿಹಾರ : ಕಲಾ ಗ್ಯಾಲರಿಗಳಲ್ಲಿ ಎಲ್ಲಾ ಮೂಲೆಗಳು ಒಮ್ಮೆಗೆ ಕಾಣುವಂತಿರದೆ, ಬಹುಭುಜ ಜೊತೆಗೆ ಗೋಡೆಗಳು ಒಳ-ಹೊರಗೆ ಚಾಚಿಕೊಂಡಿದ್ದಾಗ ಗಾರ್ಡನ್ನು ನಿಯಮಿಸುವುದಾದರೆ..? ಗಾರ್ಡ್ ಓಡಾಡಲು ಇಷ್ಟಪಡುವವನಲ್ಲ. ಹಾಗೆಂದು ಹೆಚ್ಚು ಹೊಸ ಗಾರ್ಡ್ ಳನ್ನು ನೀಡಲಾಗದು. ಈ ಕ್ಲಿಷ್ಟ ಸಮಸ್ಯೆಗೆ ಪರಿಹಾರ ನೀಡಿದ್ದು ವಿಕ್ಟರ್ ಕ್ಲೀ ಎಂಬ ಗಣಿತಜ್ಞ.1973 ರಲ್ಲಿ.. ಅದೂ ವರ್ಣಮಯವಾಗಿ.! ವಿವರ ಓದಿ ನೋಡಿ.


ಅಡುಗೆ ಮನೆಯಲ್ಲಿ ಬಿಡಿಸಿದ ಒಗಟು :  ಬಜೆಟ್, ದಶಮಾಂಶಗಳಿಂದ ಶುರುವಾಗುವ ಅಂಕಿ ಅಂಶಗಳು ಭಿನ್ನರಾಶಿಯ ಒಳಹೊರಗನ್ನು ಬಿಚ್ಚಿಡುತ್ತಾ ಸಾಗುತ್ತದೆ. ಭಿನ್ನರಾಶಿಯನ್ನು ಬಿಡಿಸುವ ಈ ಸೂತ್ರದ ಹಿಂದೆ ಹೊರಟಾಗ ಸಿಕ್ಕಿದ್ದು ಇಂಡಿಯನ್ ಸ್ಟ್ರಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಅನ್ನು ಹುಟ್ಟು ಹಾಕಿದ ಮೇಧಾವಿ ಪಿ.ಸಿ.ಮಹಲನೊಬಿಸ್ ಮತ್ತು ರಾಮಾನುಜನ್. ಪಾಕ ಪ್ರವೀಣ ರಾಮಾನುಜನ್ ಅಡುಗೆ ಮನೆಯಿಂದಲೇ ಅಂಶ-ಛೇದಗಳ ಉತ್ತರ ಕೊಟ್ಟ ಬಗೆ ಹುಬ್ಬೇರಿಸುವಂತಿದೆ.


ಮಡಚಿದ ಕಾಗದದಲ್ಲಿ ಕಣ್ತೆರೆಸುವ ಕಲೆ : ಶೀರ್ಷಿಕೆ ಓದಿದಾಗ ನನಗೆ ನೆನಪಾಗಿದ್ದು ಒರಿಗಾಮಿ ಎನ್ನುವ ಜಪಾನೀಯರ ಕಲೆ. 1890ರ ಬ್ರಿಟಿಷರ ಕಾಲದಲ್ಲಿ ತಂದಲಂ ಸುಂದರರಾವ್ ಅವರನ್ನು ಆಕರ್ಷಿಸಿದ ಈ ಒರಿಗಾಮಿ ಮುಂದೆ ಅವರಿಗೆ ಪ್ರತಿ ಸೃಷ್ಟಿಯಲ್ಲಿಯೂ ಗಣಿತ ಪ್ರಮೇಯವನ್ನು ತೋರಿಸಿದಾಗ ಮೂಡಿದ ಪ್ರತಿಭಾ ಪ್ರದರ್ಶನ ಅವರಿಂದ ಹೊಸ ಪುಸ್ತಕವೊಂದನ್ನು ಬರೆಸಿತು. ಗಣಿತಾಸಕ್ತರು ಅದನ್ನು ಜರ್ಮನ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ್ದಾಗ 47 ಮುದ್ರಣಗಳನ್ನು ಕಂಡಿತು. ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿಯವರು 70 ವರ್ಷಗಳಿಂದ ಪ್ರಕಟ ಮಾಡುತ್ತಲೇ ಇರುವ ಪುಸ್ತಕದ ಮುದ್ರಣಗಳ ಸಂಖ್ಯೆ 50 ದಾಟಿದೆ. ಈ ಪುಸ್ತಕ ಯಾವುದೆಂದು ಹಾಗೂ ಅದರ ಹೂರಣದ ಕುರಿತು ನೀವೇ ಓದಿ ನೋಡಿ.


ನಾಲ್ಕನೇ ಆಯಾಮ ಎಲ್ಲಿದೆ : ಉದ್ದ-ಅಗಲಗಳಿರುವ ರಸ್ತೆಯನ್ನು ಎರಡು ಆಯಾಮಗಳೆಂದು ತೆಗೆದುಕೊಂಡರೆ ಕಟ್ಟಡವನ್ನೇರಲು ಬಳಸುವ ಲಿಫ್ಟ್ ನೋಡಿದಾಗ ಎತ್ತರ ನೆನಪಾಗುತ್ತದೆ. ಈಗ ಮೂರು ಆಯಾಮಗಳಾಯಿತು. ಹಾಗಾದರೆ ನಾಲ್ಕನೆಯದು ಕಾಲವೇ..? ಇಲ್ಲಿ ಐದನೆಯ ಆಯಾಮವೂ ಸಿಗುತ್ತದೆಯೇ..?


ತಿಂಗಳಲ್ಲಿ ಕರಗಿದ ಬರ್ಫ : ಚದುರಂಗದಾಟದ ಪಟ್ಟುಗಳ ಮೂಲಕ ರಾಜನ ಆಸಕ್ತಿಯನ್ನು ಕೆರಳಿಸುವವನು ಹಾಗೂ ಅವನು ಕೇಳುವ ಅಕ್ಕಿಯ ಬಹುಮಾನ ಜೊತೆಗೆ ಇಂತಹ ಸಮಸ್ಯೆಗಳನ್ನು ಬಿಡಿಸಲು ಬಳಸುವ ಗುಣೋತ್ತರ ಶ್ರೇಡಿ ಇಲ್ಲಿ ಕಾಣಸಿಗುತ್ತದೆ. ಒಮ್ಮೆ ಜಗತ್ತಿನ ಜನರಿಗೆ ಬಕೆಟ್ ಹಿಡಿಸಿದ ಚಾಲೆಂಜ್ ಒಂದೇ ತಿಂಗಳಲ್ಲಿ ಐಸ್ ನಂತೆ ತಣ್ಣಗಾಗಿ ಹೋದ ಕಾರಣ ಇಲ್ಲಿ ಸಿಗುತ್ತದೆ.


ಜಂಗಮರಾಟಕ್ಕೆ ಸ್ಥಾವರಸೂತ್ರ : ಸ್ಟೀಫನ್ ಹಾಕಿಂಗ್ ಫುಟ್ಪಾಲ್ ಗೆಲುವು ಕಂಡುಹಿಡಿಯಲು ಸೂತ್ರ ಬರೆಯುತ್ತಾರೆ. ಅದಕ್ಕೆ ಕಾರಣ ಪ್ಯಾಡಿ ಪವರ್ ಎನ್ನುವ ಗುಪ್ತ ನಾಮಾಂಕಿತ ವ್ಯಕ್ತಿ. ಎತ್ತಿಂದೆತ್ತಣ ಸಂಬಂಧವೆನ್ನುತ್ತೀರಾ..!? ಹಾಗಾದರೆ ನಿಮಗೆ ಥಿಯರಿ ಆಫ್ ಪ್ರಬಾಬಿಲಿಟಿ ತಿಳಿದಿದೆಯೇ.?


ಕಿಂಚಿತ್ ಉಳಿಯದಂತೆ ಹಂಚುವುದು ಹೇಗೆ : ತಂದೆ ಮಾಡಿದ ಆಸ್ತಿಯನ್ನು ಮೂವರು ಮಕ್ಕಳಿಗೆ ಹಂಚಲು ವಿಲ್ ಮಾಡಿದ ಸಮಸ್ಯೆಯನ್ನಿಟ್ಟುಕೊಂಡು ಅದನ್ನು ಹಂಚುವುದು... ಕಿಂಚಿತ್ತೂ ಉಳಿಯದಂತೆ ಹಂಚುವುದು ಹೇಗೆ ಎನ್ನುವುದನ್ನು ಅನುಪಾತ ಹೇಗೆ ಬಿಡಿಸಬಲ್ಲದು ಎಂದು ಹೇಳುತ್ತಾರೆ.


ಎರಡು ದಡಗಳ ನಡುವೆ : ಮಕ್ಕಳ ಜಾಣ್ಮೆ ಪರೀಕ್ಷಿಸಲು ಕೇಳುತ್ತಿದ್ದ ತೋಳ-ಕುರಿ, ಹುಲ್ಲಿನ ಹೊರೆಯನ್ನು ದಾಟಿಸುವುದು, ನಾಲ್ಕು ಜನರಿಗೆ ವಿವಿಧ ಸಮಯಗಳನ್ನು ಕೊಟ್ಟು ಆಚೆ ದಡಕ್ಕೆ ದಾಟಿಸುವುದಕ್ಕೆ ತಗಲುವ ಸಮಯ.. ಇದನ್ನು ದೊಡ್ಡ ಕಂಪನಿಗಳ ನೇಮಕಾತಿ ಪರೀಕ್ಷೆಯಲ್ಲಿ ಕೇಳುತ್ತಾರೆ. ಇಂತಹ ಹೆಚ್ಚುವರಿ ವಿಶೇಷಗಳ ಸಮಸ್ಯೆಯನ್ನು ಪ್ರಸ್ತಾಪಿಸುತ್ತಾ.. ಇಂತಹ ಸಮಸ್ಯೆಯನ್ನು ನೇಮಕಾತಿ ಪರೀಕ್ಷೆಯಲ್ಲಿ ಕೇಳಿದ್ದರ ಹಿಂದಿನ ಒಳಗುಟ್ಟನ್ನು ಬಿಚ್ಚಿಡುತ್ತಾರೆ.


ಚೆಂಡಿನಲ್ಲಿದೆ ಚಂಡಮಾರುತದ ಹುಟ್ಟಿನ ಗುಟ್ಟು! : ಖ್ಯಾತ ಗಣಿತಜ್ಞನಾಗಿದ್ದ ಹೆನ್ರಿ ಪಾಂಕ್ವಾರೆ 19ನೇ ಶತಮಾನದಲ್ಲಿ ಚಂಡಮಾರುತಗಳನ್ನು ವಿವರಿಸಲು ಟೋಪಾಲಜಿಯನ್ನು ಬಳಸಬಹುದು ಎನ್ನುತ್ತಾ ಅದರ ಅನ್ವಯದಲ್ಲಿ ವಿವರಿಸುತ್ತಾನಾದರೂ.. ಅದನ್ನು 1912ರಲ್ಲಿ ಪ್ರಮೇಯವಾಗಿ ಸಾಧಿಸಿ ತೋರಿಸಿದ್ದು ಬ್ರೌವರ್ ಎಂಬ ಗಣಿತಜ್ಞ. ಸಕೇಶಿ ಚೆಂಡಿಗೆ ಶಿಖೆ ಮೂಡಿಸಿ ಚಂಡಮಾರುತದ ಹುಟ್ಟಿನ ಗುಟ್ಟನ್ನು ಬಿಚ್ಚಿಡುತ್ತಾರೆ.


ಗಣಕಯಂತ್ರಕ್ಕೆ ಮಾನವಯಂತ್ರದ ತಿರುಮಂತ್ರ : ಕ್ಯಾಪ್ಚ ಕೋಡ್ ಗಳನ್ನು ನಾವು ಆನ್ಲೈನ್ ನಲ್ಲಿ ಹಲವಾರು ಸಂದರ್ಭಗಳಲ್ಲಿ ಕಂಡು ಬಿಡಿಸಿರುತ್ತೇವೆ. ನೀವು ಮಾನವರಾಗಿದ್ದರೆ ಇದಕ್ಕೆ ಉತ್ತರಿಸಿ ಎನ್ನುವ ಪ್ರಶ್ನೆಗಳನ್ನು ಕಾಣುವಾಗ ಇದು ನಿಜಕ್ಕೂ ಮನುಷ್ಯನನ್ನು ಗುರುತಿಸಬಲ್ಲದಾ..? ಅದು ಹೇಗೆ ಎಂಬ ಅನುಮಾನವಿದ್ದಲ್ಲಿ ಆ ಅನುಮಾನವನ್ನು ಹೇಳ ಹೆಸರಿಲ್ಲದಂತೆ ದೂರ ಮಾಡುವ ಲೇಖನ ಇಲ್ಲಿದೆ.


ಕಾಮಿಡಿಯ ಜೋಡಿ ಗಣಿತದ ಮೋಡಿ : ಫರ್ಮನ ಕೊನೆಯ ಪ್ರಮೇಯ ಹೇಳುವುದು "ಒಂದು ವರ್ಗವನ್ನು ಎರಡು ವರ್ಗಗಳ ಮೊತ್ತವಾಗಿ ಬರೆಯಬಹುದು. ಆದರೆ, ಒಂದು ಘನವನ್ನು ಎರಡು ಘನಗಳ ಮೊತ್ತವಾಗಿ ಅಥವಾ ಅದಕ್ಕಿಂತ ಹೆಚ್ಚಿನ ಘಾತವನ್ನು ಬರೆಯಲು ಸಾಧ್ಯವಿಲ್ಲ" ಎಂಬುದಾಗಿ. ಆದರೆ, ಸಿಂಪ್ಸನ್ಸ್ ಎನ್ನುವ ಕಾಮಿಡಿ ಶೋ ಈ ಸಮೀಕರಣ ಸತ್ಯವೆಂದು ಫರ್ಮಾ ಕಟ್ಟಿದ್ದ ಸಾಮ್ರಾಜ್ಯವನ್ನು ಹೊಡೆದುರುಳಿಸಿತ್ತು. ಸಿಂಪ್ಸನ್ಸ್ ಶೋನಲ್ಲಿ ಗಣಿತ ತಲೆ ಹಾಕುತ್ತಿದ್ದು ಅದೇ ಮೊದಲೇನಲ್ಲ. ಗಣಿತದಲ್ಲಿ ಹಾಸ್ಯವೇ ಇಲ್ಲ ಎನ್ನುವುದಕ್ಕೆ ಅಪವಾದವೆನ್ನುವಂತೆ ಒಂದು ಕಾಮಿಡಿ ಶೋ ನಡೆಸಲು ಸ್ಕ್ರಿಪ್ ಬರೆಯುತ್ತಿದ್ದ ಹತ್ತೂ ಜನರೂ ಗಣಿತಜ್ಞರಾಗಿದ್ದರು. ಅದಕ್ಕೂ ಗೂಗಲ್ ಗೂ ಸಂಬಂಧ ಒಂದಿದೆ. ಸಿಂಪ್ಸನ್ಸ್ ಗಣಿತ ಪಂಡಿತರನ್ನು ಬೇಸ್ತು ಬೀಳಿಸಿದವರಾರು ಓದಿ ನೋಡಿ.


ಅದೂ ಸರಿ, ಇದು ಸರಿ ಅನ್ನುತ್ತಲ್ಲ ಸರಾಸರಿ! : ಸರಾಸರಿ ಅಥವಾ ಆವರೇಜ್ ಕಂಡು ಹಿಡಿಯುವುದಕ್ಕೆ 3 ದಾರಿಗಳಿವೆ. ಆದರೆ, ಈ ಸರಾಸರಿ ಆವಾಂತರಗಳು ಒಂದೆರಡಲ್ಲ. ಯಾವ ಸರಾಸರಿಯ ಲೆಕ್ಕವನ್ನು ಯಾವಾಗ ಬಳಸಬೇಕು ಹಾಗೂ ಅದು ಹೇಗೆ ಸರಿಯಾಗುತ್ತದೆ ಎನ್ನುತ್ತಾ ಗಣಿತದ ಆಟವನ್ನೇ ಆಡಬಹುದಾದ ಅದೂ ಸರಿ, ಇದೂ ಸರಿ ಎನ್ನುವ ಸರಾಸರಿ ಇಲ್ಲಿದೆ.


1+2+3+4+5+...= -1/12! : ಸ್ವಾಭಾವಿಕ ಸಂಖ್ಯೆಗಳನ್ನು ಕೂಡುತ್ತಾ ಹೋದಾಗ ಮೊತ್ತವು ಬೆಳೆಯುತ್ತದೆ. ಹಾಗೆ ಅದಕ್ಕೊಂದು ಶ್ರೇಡಿಯ ಸೂತ್ರ ಕಂಡುಹಿಡಿದು 17ನೇ ಶತಮಾನದಲ್ಲಿಯೇ ಗೈಡೋಗ್ರಾಂಡಿ ರೂಪಿಸಿದ ಸೂತ್ರ ಹೇಗಿತ್ತು..? ಇದೇನು ಅಷ್ಟು ಸುಲಭವಾಗಿ ಒಪ್ಪಿಕೊಂಡದ್ದಲ್ಲ. ಈ ಸಿದ್ಧಾಂತ ಬಳಕೆಗೆ ಬಂದದ್ದೇಗೆ? 21ನೇ ಶತಮಾನದ ಕ್ವಾಂಟಮ್ ಭೌತಶಾಸ್ತ್ರಕ್ಕೆ, ಸ್ಪ್ರಿಂಗ್ ಸಿದ್ಧಾಂತಕ್ಕೆ ಪ್ರವೇಶ ಪಡೆದ ಈ ಸೂತ್ರದ ಕುರಿತು ಓದಿ.


ದಾರಿ ಯಾವುದಯ್ಯಾ ಮನೆ ಸೇರಲು? : ಇರುವೆಯ ಮಸ್ತಿಷ್ಕಕ್ಕೂ.. ಮನುಷ್ಯನದಕ್ಕೂ ಇರುವ ವ್ಯತ್ಯಾಸ, ಲೆಕ್ಕಾಚಾರ, ಅದು ಓಡಾಡುವ ದಾರಿ ಹೀಗೆ ಎಲ್ಲವನ್ನು ವೆಕ್ಟರ್ಸ್ ನಲ್ಲಿ ಅಳೆಯಬಹುದಾ..? ಇರುವೆಗೆ ಈ ಗಣಿತದ ಲೆಕ್ಕಾಚಾರ ಗೊತ್ತೇನು..?


ಬೆಟ್ಟದ ಮೇಲೆ ನಾ ಗಿಡಕ್ಕೆ ನೀರೆರೆದವರು ಯಾರು : ಹೆಚ್ಚು ಮಗ್ಗಿ ಗೊತ್ತಿಲ್ಲದವರು ಕ್ಯಾಲ್ಕುಲೇಟರ್ ಬಳಸದೆ ಥಟ್ ಎಂದು ಉತ್ತರಿಸುವ ಸಂದರ್ಭಗಳನ್ನು ಯಾವುದಾದರೂ ದಿನಸಿ ಅಂಗಡಿ, ಎಳನೀರು ವ್ಯಾಪಾರದಲ್ಲಿ ನೋಡಿರಬಹುದು. ಹಾಲಿಗೆ ನೀರು ಬೆರೆಸಿ ಎಷ್ಟು ಸಮ ಮಾಡಬೇಕು ಎನ್ನುವ ಅನುಪಾತದ ಲೆಕ್ಕವನ್ನು ಅದು ಗೊತ್ತಿಲ್ಲದೆಯೇ ಬಳಸುವ ಗೌಳಿಗನನ್ನು, ಬಡ್ಡಿ ವ್ಯವಹಾರದಲ್ಲಿ ಸಮಯ, ಬಡ್ಡಿ, ಹಣ ಥಟ್ಟೆಂದು ಹೇಳುವ ಸೂತ್ರ ಗೊತ್ತಿಲ್ಲದ ವ್ಯಕ್ತಿಗಳನ್ನು ಕಾಣಬಹುದು. ಅವರನ್ನು ಕೇಳಿದರೆ "ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಎತ್ಕೊಂಡಂಗಾಯ್ತು" ಎಂದು ಹೇಳಬಹುದು. ಹೀಗೆ ಅವರ ಶುದ್ಧಗಣಿತ ಹೇಗಿದೆ ಎನ್ನುವುದನ್ನು ತೋರಿಸುತ್ತಾರೆ.


ಗಣಿತದಲ್ಲಿ ಹಲವಾರು ಕ್ಲಿಷ್ಟಕರ, ಸಂಕೀರ್ಣ ಆಯಾಮಗಳಿವೆ. ಅದು ಗೊತ್ತಿಲ್ಲದೆಯೇ ಸರಳವಾಗಿ ವ್ಯವಹರಿಸುವವರೂ ಇದ್ದಾರೆ. ಗಣಿತ ಗೊತ್ತಿದೆ ಎಂದು ಹೆಮ್ಮೆಪಡುತ್ತಿರುವವರಿಗೆ ಸರಳ ಜೀವನದಲ್ಲಿ ಅನ್ವಯಿಸಿಕೊಳ್ಳುವ ಮಾರ್ಗ ತಿಳಿದಿರುವುದಿಲ್ಲ. ಹಾಗೆಂದು, ರೂಪಿಸಿದ ಪ್ರಮೇಯಗಳಾವುವೂ ತಕ್ಷಣ ಒಪ್ಪಿತವಾದವಲ್ಲ. ಎಲ್ಲದಕ್ಕೂ ತಿಣುಕಾಡುವ ನಾವು ಈ ಗಣಿತದ ಲೇಖನಗಳನ್ನು ಓದಿ ಅರ್ಥೈಸಿಕೊಂಡರೆ ಗಣಿತ ಹೀಗೂ ಇದೆಯಾ ಎನ್ನುವ ಚೆಂದದ ಆಯಾಮವೊಂದು ನಮಗೆ ಸಿಗುತ್ತದೆ. ಇದು ಸಮಯ ತೆಗೆದುಕೊಂಡು, ಸವಿಯುತ್ತಾ, ಲೆಕ್ಕಾಚಾರ ಹಾಕಿ ಓದುವ ಓದು. 


~ವಿಭಾ ವಿಶ್ವನಾಥ್