ಬುಧವಾರ, ಜುಲೈ 5, 2017

ನಾಗರೀಕ ಸಮಾಜದಲ್ಲಿ ವಿಕಲಚೇತನರು ಯಾರು?

ಇಂದು ನಾವು ವಿಜ್ಞಾನ ಯುಗದಲ್ಲಿ ತಂತ್ರಜ್ಞಾನದಲ್ಲಿ ಬಹಳ ಮುಂದುವರಿದಿದ್ದೇವೆ.ಆದರೆ ನಾಗರೀಕರಾಗುತ್ತಿದ್ದೇವೆಯೇ? ಮಾನವೀಯತೆಯನ್ನೇ ಮರೆಯುತ್ತಿದ್ದೇವೆಯೇ?
           ಅದೊಂದು ವಿಕಲಚೇತನ ಮಕ್ಕಳ ಕ್ರೀಡಾಕೂಟ ಸ್ಪರ್ಧೆ. ಎಂಟು ಜನ ಸ್ಪರ್ಧಿಗಳು ತಯಾರಾಗಿ ಒಂದು ಸಂಜ್ಞೆಗಾಗಿ ಕಾಯುತ್ತಾ ನಿಂತಿದ್ದಾರೆ. ಅವರಷ್ಟೇ ಕಾತುರತೆ ಅವರ ಪೋಷಕರಿಗೂ ಇದೆ.ಕೊನೆಗೂ ಆ ಕ್ಷಣ ಬಂದೇ ಬಿಟ್ಟಿತು.ಸ್ಪರ್ಧೆ ಶುರುವಾಯಿತು. ಎಂಟು ಜನರೂ ತಮಗೆ ಸಾಧ್ಯವಾದಂತೆ ಓಡುತ್ತಿದ್ದಾರೆ.ಅಷ್ಟರಲ್ಲಿ ಕೊನೆಯಲ್ಲಿ ಓಡುತ್ತಿದ್ದ ಮಗು ಬಿದ್ದೇ ಬಿಟ್ಟಿತು. ಎಲ್ಲರು ಮುಂದೇನು ಎಂಬಂತೆ ನೋಡುತ್ತಲೇ ಇದ್ದಾರೆ.ಆಗ ಓಡುತ್ತಿದ್ದ ಎಲ್ಲಾ ಮಕ್ಕಳೂ ನಿಂತರು.ತಿರುಗಿ ನೋಡಿದರು ಹಿಂತಿರುಗಿ ಬಂದರು. ಆ ಅಳುತ್ತಿದ್ದ ಮಗುವಿದ್ದ ಜಾಗಕ್ಕೆ ಬಂದರು. ಆ ಅಳುತ್ತಿದ್ದ ಮಗುವನ್ನು ಸಮಾಧಾನ ಮಾಡಿ ನಂತರ ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ಒಟ್ಟಾಗಿ ಗುರಿ ಮುಟ್ಟಿದರು.
             ಇನ್ನೊಂದು ಪ್ರಸಂಗ, ಅದೇ ತರಹದ ಶಾಲಾ ಮಕ್ಕಳ ಸ್ಪರ್ಧೆ, ಆದರೆ ಆ ಮಕ್ಕಳು ವಿಕಲಚೇತನರಲ್ಲ. ಆದರೆ ಆ ಕ್ರೀಡಾಕೂಟದಲ್ಲಿ ಬಿದ್ಧ ಮಗುವಿನ ಮೇಲೆ ಯಾರಿಗೂ ಗಮನವಿಲ್ಲ. ಧಾವಂತದ ಓಟದಲ್ಲಿ ಅದನ್ನು ಗಮನಿಸಿಯೂ ಗಮನಿಸದಂತೆ ಓಡುತ್ತಿದ್ದಾರೆ. ಅಲ್ಲದೇ ತಮಗಿಂತ ಮುಂದಿರುವವರನ್ನು ಬೀಳಿಸಿ ಓಡುವ ರೀತಿಯೂ ಅಲ್ಲಿದೆ. ಇಲ್ಲಿ ತಪ್ಪು ಮಕ್ಕಳದಲ್ಲ, ಅವರು ಬೆಳೆಯುತ್ತಿರುವ ವಾತಾವರಣವೇ ಹಾಗಿರುವಾಗ ಅವರದ್ದೇನಿದೆ? ಬಿತ್ತಿದಂತೆ ಬೆಳೆಯಲ್ಲವೇ?
             ಇದಿಷ್ಟೂ ಮಕ್ಕಳ ಮನೋಭಾವವಾದರೆ ಮೊನ್ನೆ ನಾನು ಬಸ್ಸಿನಲ್ಲಿ ಗಮನಿಸಿದ ಮತ್ತೊಂದು ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬಸ್ಸಿನಲ್ಲಿ ದೊಡ್ಡ ಗಂಟನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿ ಕುಳಿತಿದ್ದರು. ಕಂಡಕ್ಟರ್ ಬಂದು ಲಗೇಜಿಗೆ ಪ್ರತ್ಯೇಕ ಟಿಕೆಟ್ ತೆಗೆದುಕೊಳ್ಳಲೇಬೇಕು ಎಂದು ವಾದ ಮಾಡುತ್ತಿದ್ದರು.ಆದರೆ ಆ ವ್ಯಕ್ತಿ ಇದರಲ್ಲಿ ಇರುವುದು ಸ್ಪಂಜು ಮಾತ್ರ ಇರುವುದು,ಅದಲ್ಲದೆ ಇದನ್ನು ನಾನು ನನ್ನ ಬಳಿಯೇ ಇಟ್ಟುಕೊಂಡಿದ್ದೇನೆ. ಆದಕಾರಣ ನಾನು ಲಗೇಜಿಗೆಂದು ಪ್ರತ್ಯೇಕ ಚಾರ್ಜ್  ಕೊಡುವುದಿಲ್ಲ ಅಂದರು. ಕೊನೆಗೆ ಅವರು ಕಂಡಕ್ಟರ್ ಮಾಡುತ್ತಿದ್ದ ವಾದದಿಂದ ಬೇಸತ್ತು ಇಪ್ಪತ್ತು ರೂಪಾಯಿಯನ್ನು ಹೆಚ್ಚುವರಿ ಹಣ ಕೊಟ್ಟು ಸುಮ್ಮನಾದರು. ಎಲ್ಲಾ ಕಡೆಯೂ ಲಂಚದ ಹಾವಳಿ ಹೀಗೇ ಅಲ್ಲವೇ? ಅಷ್ಟರಲ್ಲಿ ಆಗಲೇ ತುಂಬಿದ ಬಸ್ಸಿಗೆ ಮತ್ತಷ್ಟು ಜನ ಹತ್ತಿದರು. ಅದರಲ್ಲಿ ಒಬ್ಬ ಅಂಗವಿಕಲ ವ್ಯಕ್ತಿಯೂ ಇದ್ದರು. ಆದರೆ ಅವರು ಯಾರ ಬಳಿಯೂ ನನಗೆ ಕುಳಿತುಕೊಳ್ಳಲು ಜಾಗ ಕೊಡಿ ಎಂದು ಕೇಳಿಕೊಳ್ಳಲಿಲ್ಲ. ಕಾಲು ಊನವಾಗಿದ್ದರೂ ನಿಂತುಕೊಂಡೇ ಪ್ರಯಾಣ ಮಾಡುತ್ತಿದ್ದರು. ಕಂಡಕ್ಟರ್ ಕೂಡ "ಓ, ಅಂಗವಿಕಲರ ಪಾಸ್" ಎಂದು ಅಸಡ್ಡೆ ತೋರಿ ತನ್ನ ಸೀಟಿನಲ್ಲಿ ಕುಳಿತುಕೊಂಡನು. ಅಂಗವಿಕಲರಿಗೆಂದೇ ಮೀಸಲಾದ ಆಸನವನ್ನು ಬಿಡುವ ಸೌಜನ್ಯವನ್ನು ಯಾರೂ ತೋರಲಿಲ್ಲ. ಕೊನೆಗೆ ಒಬ್ಬರು ಅವರಿಗೆ ಜಾಗ ಬಿಟ್ಟು ತಾವು ನಿಂತುಕೊಂಡರು. ಮಾನವೀಯತೆಯು ಇನ್ನೂ ಸಂಪೂರ್ಣ ಸತ್ತಿಲ್ಲ ಎಂಬುದು ಸಮಾಧಾನಕರ ವಿಷಯ.
               ಕೈ-ಕಾಲು ಗಟ್ಟಿಯಿದ್ದು ದುಡಿಯದೆ ಅಡ್ಡದಾರಿಯಿಂದ ಸಂಪಾದನೆ ಮಾಡುವವರು ಅಂಗವಿಕಲರೋ? ಅಥವಾ ಅಂಗವಿಕಲತೆಯಿದ್ದರೂ  ಬೇರೆಯವರಿಗೆ ತೊಂದರೆ ಮಾಡದೆ, ಇತರರನ್ನು ಬೇಡದೆ ಸ್ವಾಭಿಮಾನಿಯಾಗಿ ಬದುಕಿರುವವರೋ? ನಿಸ್ವಾರ್ಥಿಯಾಗಿ ಬೇರೆಯವರ ನೋವಿಗೆ ಮಿಡಿಯುವ ಮಕ್ಕಳು ವಿಕಲಚೇತನರು ಹೇಗಾದಾರು? ಅಂಗವೈಕಲ್ಯ ಇರುವವರು ಸಮಾಜದ ಶಾಪವಲ್ಲ. ಮಾನಸಿಕ ಅಸ್ವಸ್ಥರು ವಿಕಲಚೇತನರಲ್ಲ ಅವರು "ವಿಶಿಷ್ಟಚೇತನರು".
                ಎಲ್ಲಾ ಸೌಕರ್ಯಗಳಿದ್ದೂ ಬೇರೆಯವರಿಗೆ ಸ್ಪಂದಿಸದೆ, ಮಾನವೀಯತೆ ಮರೆಯುತ್ತಿರುವ ನಾವು ನಿಜಕ್ಕೂ ನಾಗರೀಕ ಸಮಾಜದ ವಿಕಲಚೇತನರಾಗಿದ್ದೇವೆ. ಬರವಣಿಗೆಯಿಂದ ಯಾವುದೂ ಬದಲಾಗದು ಅಲ್ಲದೆ ಒಂದೇ ದಿನದಲ್ಲಿ ಯಾವುದೂ ಬದಲಾಗದು ಆದರೆ ನಮ್ಮಲ್ಲಿ ಮೂಡುವ ಒಂದು ಯೋಚನೆ ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಬಲ್ಲದು. ಸಮಾಜವನ್ನೇ ಬದಲಿಸಬಹುದು. ಇನ್ನಾದರೂ  ಬದಲಾಗೋಣ, ನಾಗರೀಕರಾಗೋಣ.
                                                                                                                      -vಭಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ