ಭಾನುವಾರ, ಸೆಪ್ಟೆಂಬರ್ 8, 2019

ಹೊರಟದ್ದೇತಕೆ

ಭರವಸೆಯ ಉತ್ತುಂಗಕ್ಕೆ ತಲುಪಿಸಿ
ಮನದಿ ಆಶಾಕಿರಣವ ಮೂಡಿಸಿ
ನೀ ಇರದೆ ಹೊರಟದ್ದೇತಕೆ..?

ನೂರಾರು ಕೆಲಸಗಳ ನಡುವೆಯೂ
ಆತ್ಮವಿಶ್ವಾಸ ಮೂಡಿಸಲು ಬಂದು
ಸುಳಿವೇ ನೀಡದೆ ಹೊರಟದ್ದೇತಕೆ..?

ತನ್ನವರೇ ಎಲ್ಲರೂ ಎಂಬ ಭಾವದಲ್ಲಿದ್ದವ
ಬುದ್ದನಂತೆ ಜ್ಞಾನೋದಯ ಮಾಡಿಕೊಂಡು
ಎಲ್ಲವನೂ ಕೊಡವಿ ಹೊರಟದ್ದೇತಕೆ..?

ಇರುವಿಕೆಯಲಿ ಏನೂ ಅನ್ನಿಸದಂತಿದ್ದು
ಇಲ್ಲದಿರುವಿಕೆಯಲಿ ಶೂನ್ಯ ಭಾವ ಮೂಡಿಸಿ
ನಿಶ್ಚಿಂತೆಯಲಿ ಬಿಟ್ಟು ಹೊರಟದ್ದೇತಕೆ..?

ಕಾರಣಗಳ ನೀ ನೀಡದೆಯೇ
ನಿರ್ಧಾರವನು ಮಾತ್ರ ತಿಳಿಸಿ
ನಿರ್ಲಿಪ್ತತೆಯಲಿ ಹೊರಟದ್ದೇತಕೆ..?

ಆಸೆಯ ಚಿತ್ತಾರವ ಬಿಡಿಸುತ್ತಾ
ನೂರಾರು ಕನಸು ಕಾಣುತ್ತಿದ್ದಾಗಲೇ
ಮತ್ತೆ ಬಾರೆನೆಂದು ಹೊರಟದ್ದೇತಕೆ..?

ನಂದಾದೀಪಗಳ ನಡುವಲ್ಲಿ
ಸೂರ್ಯನಂತೆ ಬೆಳಕು ನೀಡುತ್ತಿದ್ದಾಗಲೇ
ಕತ್ತಲೆಗೆ ದೂಡಿ ಹೊರಟದ್ದೇತಕೆ..?

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ