ಗುರುವಾರ, ನವೆಂಬರ್ 14, 2019

ಮಾಸದ ದಾಸಸಾಹಿತ್ಯ


ಸುಮಾರು 12 ರಿಂದ 15 ನೆ ಶತಮಾನದಲ್ಲಿ, ನಡುಗನ್ನಡದಲ್ಲಿ ಪ್ರಸಾರವಾದ ಸಾಹಿತ್ಯಗಳು ವಚನ ಸಾಹಿತ್ಯ ಮತ್ತು ದಾಸಸಾಹಿತ್ಯ. ದಾಸಸಾಹಿತ್ಯವು ಭಕ್ತಿಯನ್ನು ಮೂಲವಾಗಿ ಧ್ವನಿಸುತ್ತಾ, ವೇದಗಳ ಮುಂದುವರಿದ ಭಾಗಗಳಂತೆ ಭಾಸವಾಗುತ್ತಾ ಜನಸಾಮಾನ್ಯರಿಗೂ ತಲುಪುತ್ತಿವೆ.

ಹರಿದಾಸರು, ಕನಕದಾಸರು, ಪುರಂದರದಾಸರು, ವಿಜಯದಾಸರು, ಗೋಪಾಲದಾಸರು, ಪ್ರಾಣೇಶರು ಮುಂತಾದವರಿಂದ ದಾಸಸಾಹಿತ್ಯ ರೂಪುಗೊಂಡಿಡ್ಡರೂ ಪುರಂದರದಾಸರು ಮತ್ತು ಕನಕದಾಸರು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದಾಸ ಸಾಹಿತ್ಯವು  ಸಾಂಗವಾಗಿ ಹಾಡುವಂತೆ ರೂಪಿತವಾಗಿರುವುದರಿಂದ ಜನಸಾಮಾನ್ಯರ ಬಾಯಲ್ಲಿ ಕೀರ್ತನೆಗಳ ರೂಪದಲ್ಲಿ ಇವು ಇಂದಿಗೂ ಪ್ರಸ್ತುತವಾಗಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ಇವುಗಳಿಗೆ ವಿಶಿಷ್ಟ ಸ್ಥಾನವಿದೆ. ಪುರಂದರದಾಸರು ಕರ್ನಾಟಕದ ಮೂಲಪುರುಷರೂ ಹೌದು. ಜೀವನದಿಂದ ತ್ಯಾಗದ ಪಾಠ ಕಲಿತ ಪುರಂದರದಾಸರು, ಅಹಿಂಸೆಯ ಪಾಠ ಕಲಿತ ಕನಕದಾಸರು ಇಬ್ಬರೂ ಜನರಿಗೆ ಮುಕ್ತಿ ಮಾರ್ಗವನ್ನು ಭೋಧಿಸುವ ಉತ್ತಮ ಸಾಹಿತ್ಯ ಮತ್ತು ಸಂಗೀತದ ಸಾಂಗತ್ಯವನ್ನು ನೀಡಿದ್ದಾರೆ.

ಆಧ್ಯಾತ್ಮ, ತತ್ವ, ನೀತಿಗಳನ್ನು ಕ್ಲಿಷ್ಟವಿಲ್ಲದ ಪದಗಳಲ್ಲಿ ಹೇಳುತ್ತಾರೆ. ಅದರಲ್ಲಿ ಕೆಲವು ಪದ್ಯಗಳನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸಿದ್ದೇನೆ.

"ಅಡಿಗೆಯನ್ನು ಮಾಡಬೇಕಣ್ಣ, ನಾನೀಗ ಜ್ಙಾನದ ಅಡುಗೆಯನ್ನು ಮಾಡಬೇಕಣ್ಣ" ಎನ್ನುತ್ತಾ ಹಸಿವು, ಅಡುಗೆಯನ್ನು ಜ್ಙಾನಕ್ಕೆ ಹೋಲಿಸುತ್ತಾರೆ ಕನಕದಾಸರು. "ಹೃದಯ ಹೊಲವನು ಮಾಡಿ, ತನುವ ನೇಗಿಲ ಮಾಡಿ, ನಾಲಗೆಯ ಕೂರಿಗೆ ಮಾಡಿ ಬಿತ್ತಿರಯ್ಯ" ಎನ್ನುತ್ತಾ ಬದುಕನ್ನು ಕೃಷಿಗೆ ಹೋಲಿಸುತ್ತಾ ಸಂಬಂಧಗಳನ್ನುಉ ಒಗ್ಗೂಡಿಸ ಹೊರಡುತ್ತಾರೆ. "ಕುಲ ಕುಲ ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?" ಎಂದು ಪ್ರಶ್ನಿಸುತ್ತಾ ಧರ್ಮ, ಜಾತಿ, ಕುಲಗಳ ಪರಿಕಲ್ಪನೆಯನ್ನು ಅಲ್ಲಗಳೆಯುತ್ತಾ "ಆತ್ಮಕ್ಕೆ ಕುಲವಿಲ್ಲ" ಎಂದೆನ್ನುತ್ತಾರೆ. "ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ?" ಎನ್ನುತ್ತಾ ಆತ್ಮವಿಮರ್ಶೆ ಹಚ್ಚುತ್ತಾರೆ.

"ಏನು ಬೇಡಲೋ ದೇವ ನಿನ್ನ" ಎನ್ನುವ ವ್ಯಾಸರಾಯರು ಕೊಡುವವನೂ ನೀನೇ, ನಿನ್ನ ಹತ್ತಿರ ಬೇಡುವುದೇನಿದೆ ಎಂದು ಪ್ರಶ್ನಿಸುತ್ತಾರೆ. ಇವರ ಪುರಂದರದಾಸರು ಸಮಾಜದ ಓರೆಕೋರೆಗಳನ್ನು ತಿದ್ದುತ್ತಾ, ಎಲ್ಲರೊಳಗೊಂದಾಗಿ ಬದುಕುತ್ತಾ, ಜನಸಾಮಾನ್ಯರ ನಡುವೆಯೇ ಬದುಕಿದವರು. ಸುಳಾದಿ, ಉಗಾಭೋಗ,ಕೀರ್ತನೆಗಳ ಮೂಲಕ ತಮ್ಮ ಭೋಧನೆಯನ್ನು ಪಸರಿಸುತ್ತಾ ಜನಮಾನಸದಲ್ಲಿ ಶಾಶ್ವತವಾಗಿರುವವರು.

"ಈಸಬೇಕು ಇದ್ದು ಜೈಸಬೇಕು ಹೇಸಿಗೆ ಸಂಸಾರದಲ್ಲಿ, ಆಸೆ ಲೇಶ ಇಡದಾಂಗೆ ತಾಮರಸಜಲದಂತೆ" ಎನ್ನುತ್ತಾ ನೀರಿನ ಮೇಲೆ ಪದ್ಮಪತ್ರೆಯಂತೆ ಬದುಕು ಎನ್ನುತ್ತಾರೆ. "ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ" ಎನ್ನುತ್ತಾ ಮಾತು ಹೇಗಿರಬೇಕೆಂಬ ಸ್ಥೂಲ ಪರಿಚಯ ಮಾಡಿಕೊಡುತ್ತಾರೆ. "ಎಲ್ಲಾನು ಬಲ್ಲೆನೆಂಬುವಿರಲ್ಲ, ಅವಗುಣ ಬಿಡಲಿಲ್ಲ" ಎಂದೆನ್ನುತ್ತಾ ತಾವೇ ಮೇಧಾವಿಗಳೆಂದು ಮೆರೆಯುತ್ತಿರುವವರಿಗೆ ಚಾಟಿ ಏಟು ನೀಡುತ್ತಾರೆ. "ನಿಂದಕರಿರಬೇಕು.. ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಂಗೆ" ಎನ್ನುತ್ತಾ ಕೆಟ್ಟತನದಲ್ಲೂ ಒಳ್ಳೆಯತನವನ್ನು ಹುಡುಕಲು ಹೇಳಿಕೊಡುತ್ತಾರೆ. "ಬೇವು ಬೆಲ್ಲದೊಳಿಡಲೇನು ಫಲ, ಹಾವಿಗೆ ಹಾಲೆರೆದೇನು ಫಲ" ಎನ್ನುತ್ತಾ ಮೂಲಗುಣ ಸುಟ್ಟರೂ ಹೋಗದು, ಅಂತಹಾ ಬದಲಾವಣೆಗಳು ನಿರರ್ಥಕ ಎನ್ನುತ್ತಾರೆ. "ನೋಡದಿರು, ಪರಸ್ತ್ರೀಯರ ನೋಡಿದರೆ ಕೇಡಹುದು ತಪ್ಪದಿದಕೋ" ಎನ್ನುತ್ತಾ ಪುರಾಣ್ದ ವಾಲಿ, ರಾವಣ, ಇಂದ್ರರ ಜೀವನವನ್ನು ನೆನಪಿಸುತ್ತಾ ಬುದ್ದಿ ಹೇಳುತ್ತಾರೆ. ಪರ ಧನ ಮತ್ತು ಲೋಭಿಗಳಿಗೆ "ದುಗ್ಗಾಣಿ ಎಂಬುದು ಬಲು ಕೆಟ್ಟದಣ್ಣ" ಎನ್ನುತ್ತಾ ಹಣದ ವರ್ಜನೆಗೆ ಬುದ್ದಿ ಮಾತು ಹೇಳುತ್ತಾರೆ. "ಜಪವ ಮಾಡಿದರೇನು, ತಪವ ಮಾಡಿದರೇನು, ಕಪಟಗುಣ ವಿಪರೀತಕಲುಷವಿದ್ದವರು" ಎನ್ನುತ್ತಾ ಮೇಲಿನ ತೋರಿಕೆಯ ಶುದ್ದತೆಗಿಂತ, ಅಂತರಂಗದ ಶುದ್ದತೆ ಮುಖ್ಯ ಎನ್ನುತ್ತಾರೆ. "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ" ಎಂಬ ಜೀವನದ ಪರಮ ಸತ್ಯವನ್ನು ಬಿಚ್ಚಿಡುತ್ತಾರೆ.

ಈ ತತ್ವದ ನುಡಿಗಳು ಸಾರ್ವಕಾಲಿಕ ನುಡಿಗಳಂತೆ ಧ್ವನಿಸುತ್ತವೆ, ಇವುಗಳ ಮೂಲಕ ಅವರು ಜೀವನ ಮೌಲ್ಯವನ್ನು ತಿಳಿಸುತ್ತಾ, ಎಲ್ಲರಲ್ಲೂ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತಾರೆ. ಸಂಸಾರದ ವೈಯಕ್ತಿಕ ಬಂಧನವನ್ನು ತೊರೆದು, ಜಪ-ತಪಗಳಿಂದ ಮುಕ್ತಿ ಎನ್ನುತ್ತಾ ತಮ್ಮ ವೈಯಕ್ತಿಕ ಜೀವನಕ್ಕಷ್ಟೇ ಬದುಕನ್ನು ಮುಡಿಪಾಗಿರಿಸದೆ, ಸಮಾಜದ ಸಮಸ್ಯೆಗಳನ್ನು, ಮೂಡನಂಬಿಕೆಗಳನ್ನು ಹೊಡೆದೋಡಿಸುತ್ತಾ ಜೀವಂತ ಉದಾಹರಣೆಯಾದರು. ಆತ್ಮ ಶುದ್ದಿಗೆ ಮಾರ್ಗ ತೋರುತ್ತಾ ಸಮಾಜವನ್ನು ಸುಧಾರಿಸಿದರು.

ದಾಸಸಾಹಿತ್ಯದ ದಾಸರ ಪದಗಳು ದೇವರನಾಮಗಳೆಂದೂ ಪ್ರತೀತಿಯಾಗಿವೆ. ಈ ದಾಸರ ಪದಗಳನ್ನು ಇಂದಿಗೂ ತಮಿಳು ನಾಡಿನಲ್ಲಿ ಸಂಗೀತ ಕಛೇರಿಯ ಕೊನೆಯಲ್ಲಿ ಹಾಡಿಯೇ ಹಾಡುತ್ತಾರೆ. ಬರೀ ತತ್ವವಷ್ಟೇ ಅಲ್ಲ, ಸವಿನುಡಿಯಂತೆ ಭಾಸವಾಗುವ ಇವು ಕೆಲವೊಮ್ಮೆ ಛಾಟಿ ಏಟುಗಳಂತೆಯೂ ಅನ್ನಿಸುತ್ತವೆ. ಇನ್ನು ಕೆಲವು ಒಗಟಿನಂತೆ ಒಳಾರ್ಥವನ್ನು ಹೊಂದಿವೆ. ಪ್ರಸ್ತುತ ದಿನಗಳ ಸಾಮಾಜಿಕ ಪರಿಸ್ತಿತಿಗೂ ಇವು ಹೊಂದಿಕೆಯಾಗುವಂತಿವೆ. ಈಗಿನ ಪರಿಸ್ಥಿತಿ ಅಂದಿಗಿಂತ ಕೊಂಚ ಭಿನ್ನವಾಗಿರಬಹುದಷ್ಟೇ.. ಆದರೆ ಮೌಡ್ಯ, ಪರ ಸ್ತ್ರೀ ಮತ್ತು ಹೊನ್ನು-ಕಾಸಿಗೆ ಆಶಿಸುವುದು ಇನ್ನೂ ಕಡಿಮೆಯಾಗಿಲ್ಲ. ಕೇಳುವವರು ಇದನ್ನು ಅರಿತು ಆಚರಿಸಿದರೆ ಅವರ ಸಾಮಾಜಿಕ ಕಳಕಳಿಗೆ ಉತ್ತಮ ಪ್ರತಿಫಲ ಸಿಕ್ಕಂತಾಗುತ್ತದೆ. ಮತ್ತು ದಾಸಸಾಹಿತ್ಯ ಮತ್ತು ಅದರ ಹರಿಕಾರರು ಬದುಕಿನಲ್ಲಿ ಮಾಸದೆ ಉಳಿದುದರಲ್ಲಿ ಸಂಶಯವೇ ಇಲ್ಲ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ