ಭಾನುವಾರ, ನವೆಂಬರ್ 3, 2019

ವಿಷಮುಕ್ತವಲ್ಲ ವಿಷಯುಕ್ತ


ಪಟಾಕಿಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಪಟಾಕಿ ಸಿಡಿಸಬೇಡಿ ಅಂತಾ ಯಾರೋ ಹೇಳಿದ್ದಕ್ಕೆ ಮತ್ಯಾರೋ ಕ್ರಿಸ್ ಮಸ್ ಬರುತ್ತಾ ಇದೆ, ಕ್ಯಾಂಡಲ್ ಹಚ್ಚಬೇಡಿ ಅದೂ ಸಹಾ ವಾಯುಮಾಲಿನ್ಯ ಮಾಡುತ್ತದೆ ಅಂತಾ ಒಬ್ಬರನೊಬ್ಬರು ಗುರಿ ಮಾಡಿಕೊಂಡು ಜಾತಿ, ಧರ್ಮ, ರಾಜಕೀಯವಾಗಿ ಕಿತ್ತಾಡುವುದು ಸಾಮಾನ್ಯವಾಗಿ ಹೋಗಿದೆ. ಪರಿಸರವನ್ನು ಇವತ್ತು ಮಲಿನ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ ಮನುಷ್ಯನ ಯೋಚನಾಲಹರಿ, ಬದಲಾಯಿಸಿಕೊಳ್ಳಲಾಗದಿರುವ ನಡವಳಿಕೆ ಮತ್ತು ಅಹಂ ಅಷ್ಟೇ.

ಕಳೆದ ಮೂರು ದಿನದಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಇವತ್ತು ಎಷ್ಟು ಜನಕ್ಕಿದೆ? ಯಾವುದೋ ಕೆಲಸಕ್ಕೆ ಬಾರದ ಮಾಹಿತಿಗಳನ್ನು ದಿನವಿಡೀ ತೋರಿಸುವ ನ್ಯೂಸ್ ಚಾನೆಲ್ ಗಳು ಇದನ್ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ? ಈ ಸಮಸ್ಯೆಯ ಮೂಲ ಏನು? ಸಮಸ್ಯೆ ಎಷ್ಟು ತೀವ್ರವಾಗಿದೆ? ಇದರ ಮುಂದಿನ ಪರಿಣಾಮಗಳೇನು? ಈ ಸಮಸ್ಯೆಯ ಪರಿಹಾರ ಹೇಗೆ? ನನಗೆ ದಕ್ಕಿದ ಮಟ್ಟಿಗೆ ನನ್ನ ವಿಶ್ಲೇಷಣೆ ಹೀಗಿದೆ ನೋಡಿ.
ದೆಹಲಿಯ ಶಾಲೆಗಳಿಗೆ ನವೆಂಬರ್ 5 ರ ವರೆಗೆ ರಜೆ ಘೋಷಿಸಲಾಗಿದೆ. ಇದು ಸಂತಸದ ಸಂಭ್ರಮಾಚರಣೆಗಲ್ಲ, ಕಳವಳಕಾರಿ ಬೆಳವಣಿಗೆಯೊಂದರ ಭಾಗವಾಗಿ.. ದೆಹಲಿಯಲ್ಲಿ ಮಾಲಿನ್ಯದ ಮಟ್ಟ 450ನ್ನೂ ದಾಟಿದೆ. ಸಾಮಾನ್ಯವಾಗಿ ಇರಬೇಕಾದುದಕ್ಕಿಂತ 4-5 ಪಟ್ಟು ಹೆಚ್ಚಾಗಿದೆ. ಇಂದು ಬೆಳಿಗ್ಗೆ ಮಳೆಯಾದ ನಂತರವಂತೂ ಅಲ್ಲಿನ ಪರಿಸ್ಥಿತಿ ಇನ್ನೂ ಕೆಟ್ಟಿದೆ. ಗಾಜಿಯಾಬಾದ್ ನಲ್ಲಿ 496, ನೋಯ್ಡಾದಲ್ಲಿ 499 ಮುಟ್ಟಿದೆ. ಈ ಮಾಲಿನ್ಯದ ಮಟ್ಟ ಅಳೆಯುವುದಾದರೂ ಹೇಗೆ ಗೊತ್ತಾ?

SAFAR[system of Air Quality and Weather Forecasting and Research] ಇದು ಎಲ್ಲಾ ನಗರಗಳ ಮಾಲಿನ್ಯದ ಮಟ್ಟವನ್ನೂ, ಗಾಳಿಯ ಗುಣಮಟ್ಟವನ್ನೂ ಅಳೆಯುವ ಸರ್ಕಾರದ ಸಂಸ್ಥೆ. ಪ್ರತಿ ಗಂಟೆಗೊಮ್ಮೆ ನಗರಗಳ ವಿವಿಧ ಭಾಗಗಳಲ್ಲಿ ಅಂದರೆ ಇಂಡಸ್ಟ್ರಿಯಲ್ ಏರಿಯಾ, ರಸ್ತೆಯ ಬದಿ, ಟ್ರಾಫಿಕ್ ಸಿಗ್ನಲ್, ಕೃಷಿ ಜಾಗ, ರೆಸಿಡೆನ್ಸಿಯಲ್ ಏರಿಯಾ ಹೀಗೇ ವಿವಿಧ ಪರಿಸರಗಳಿಂದ ಹವಾಮಾನವನ್ನು ಆಧರಿಸಿ ಮಾಲಿನ್ಯದ ಮಟ್ಟವನ್ನು ಪತ್ತೆ ಮಾಡುತ್ತದೆ. ಆ ಸಂಖ್ಯೆಯೇ AQI[Air Quality Index]. AQI ಮಟ್ಟ ಮತ್ತು ಪರಿಣಾಮ ಹೀಗಿದೆ.

0-50 ಇದ್ದರೆ Good
51-100 ಇದ್ದರೆ Satisfactory
101-200 ಇದ್ದರೆ Moderate
201-300 ಇದ್ದರೆ Poor
301-400 ಇದ್ದರೆ Very Poor
401-500 ಇದ್ದರೆ Severe plus / Emergency

ಈಗ ದೆಹಲಿಯಲ್ಲಿ ಅಥವಾ ಪರಿಸ್ಥಿತಿ ಜಾರಿಯಲ್ಲಿದೆ. ಇದಕ್ಕೆ ಕಾರಣ ಏನು ಗೊತ್ತಾ? ದೀಪಾವಳಿಯ ಪಟಾಕಿಗಳಲ್ಲ, ವಾಹನಗಳ ಅತಿ ಮಾಲಿನ್ಯವೂ ಅಲ್ಲ. ಅಸಲಿಗೆ ಇದರ ಕಾರಣ ಇರುವುದು ಪಕ್ಕದ ರಾಜ್ಯಗಳಲ್ಲಿ 50% ಕಾರಣೀಕರ್ತರು ಇವರುಗಳೇ.

ಪಂಜಾಬ್ ಮತ್ತು ಹರಿಯಾಣಗಳು ಪರೋಕ್ಷವಾಗಿ ದೆಹಲಿಯ ವಾಯುಮಾಲಿನ್ಯಕ್ಕೆ ಕಾರಣೀಕರ್ತರು. ಗಾಳಿ ಬೀಸುವ ದಿಕ್ಕು ಅಲ್ಲಿಂದ ಇಲ್ಲಿಗೆ ಮಾಲಿನ್ಯವನ್ನು ಇಲ್ಲಿಗೆ ಹೊತ್ತು ಹಾಕಿದೆ. ಕಾರಣ ಹೀಗಿದೆ ಕೇಳಿ.
ಕೃಷಿಯ ಕೊಯ್ಲಿನ ನಂತರ ಉಳಿಯುವ ಕಡ್ಡಿ ಅದರಲ್ಲೂ ಮುಖ್ಯವಾಗಿ ಭತ್ತ, ಗೋಧಿಯಂತಹಾ ಬೆಳೆಗಳ ಕಟಾವಿನ ನಂತರ ಕೂಳೆಯನ್ನು ಇಲ್ಲಿ ಸುಡುತ್ತಾರೆ. ಪ್ರತಿ ವರ್ಷ ಸೆಪ್ಟಂಬರ್ ಮತ್ತು ಅಕ್ಟೋಬರ್ ನಲ್ಲಿ ಈ ಭತ್ತದ ತ್ಯಾಜ್ಯ[Stubble] ವನ್ನು ಹೊಲದಿಂದ ತೆಗೆದು ಹಾಕುವುದಕ್ಕೆ ಇವರು ಬಳಸುವ ಮಾರ್ಗ ತಮ್ಮ ಹೊಲದಲ್ಲಿ ಬೆಂಕಿ ಹಾಕುವುದು. ಅವರ ದೃಷ್ಟಿಯಲ್ಲಿ ಇದು ಕಡಿಮೆ ಖರ್ಚಿನಲ್ಲಿ ಆಗುವ ವಿಧಾನ. ಜೊತೆಗೆ ಚಳಿಗಾಲದ ಕೊಯ್ಲಿಗೆ ತಮ್ಮ ಹೊಲಗಳನ್ನು ಮರು ಅಣಿಗೊಳಿಸುವ ವಿಧಾನ. ಆದರೆ ಇದರ ಅಡ್ಡ ಪರಿಣಾಮದಿಂದಾಗಿ "ವಿಷಯುಕ್ತ ಮೋಡ" ನಿರ್ಮಾಣವಾಗುತ್ತಿದೆ. ಗಾಳಿಗೆ ವಿಷ ಸೇರ್ಪಡೆಯಾಗುತ್ತಿದೆ. ಇದೆಲ್ಲದರ ಪರಿಣಾಮವೇ ಇಂದಿನ ದೆಹಲಿಯ ಪರಿಸ್ಥಿತಿ.

ಗಾಳಿ ಜೀವನದ ಜೀವನಾಡಿ, ಉಸಿರಾಟಕ್ಕೆ ತೊಂದರೆಯಾದರೆ ಬದುಕುವುದಾದರೂ ಹೇಗೆ? ಕಣ್ಣು, ಶ್ವಾಸಕೋಶ ಮತ್ತು ಚರ್ಮ ಸಂಬಂಧಿ ರೋಗಗಳು ಹೆಚ್ಚಾಗಿವೆ. ಅಸ್ತಮಾ, ಕೆಮ್ಮು ಮರುಕಳಿಸುತ್ತಲಿವೆ. ಶ್ವಾಸಕೋಶ ಮತ್ತು ಲುಕೇಮಿಯಾದಂತಹಾ ಖಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಿವೆ. ಗರ್ಭಿಣಿಯರಿಗೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಲಿದೆ. ಅವಧಿಪೂರ್ವ ಪ್ರಸವಗಳು ಹೆಚ್ಚಾಗಲಿವೆ. ಇನ್ನೂ ಕಣ್ಣೇ ಬಿಡದ ಹಸುಗೂಸುಗಳೂ ಸಹಾ ಇದರಿಂದಾಗಿ ನರಳಲಿವೆ. 

ಇಂದು ಇದು ದೆಹಲಿಗೆ ಹರಡಿದೆ. ನಾಳೆ ಎಲ್ಲೆಡೆಯೂ ಪಸರಿಸಬಹುದು. ಇದೊಂದೇ ಕಾರಣವಲ್ಲ. ಇದು ನಾಳಿನ ಕರಾಳ ಭವಿಷ್ಯದ ನಿಮಿತ್ತ ಮತ್ತು ಉದಾಹರಣೆಯಷ್ಟೇ. ಈಗಾಗಲೇ ಕೃಷಿಗೆ ಉಪಯೋಗಿಸುತ್ತಿರುವ ರಾಸಾಯನಿಕಗಳು ಗಾಳಿಯಲ್ಲಿ ಮತ್ತು ಆಹಾರದಲ್ಲಿ ಸೇರಿ ಕ್ಯಾನ್ಸರ್ ಮತ್ತು ವಿವಿಧ ಅಡ್ಡ ಪರಿಣಾಮಗಳುಂಟಾಗುತ್ತಿವೆ. ಯಾರೋ ಸೇದಿದ ಸಿಗರೇಟ್ ನಿಂದಾಗಿ ಮತ್ತಾರೋ ಪ್ಯಾಸೀವ್ ಸ್ಮೋಕರ್ ಎಫೆಕ್ಟ್ ಗೆ ಒಳಗಾಗಿ ಕ್ಯಾನ್ಸರ್ ಗೆ ಒಳಗಾಗುತ್ತಿದ್ದಾರೆ. ಇನ್ನಾದರೂ ಇದೆಲ್ಲದರಿಂದ ಎಚ್ಚೆತ್ತುಕೊಳ್ಳಬೇಕಿದೆ.

ಇವತ್ತು ಟೆಕ್ನಾಲಜಿಯಲ್ಲಿ ಅಷ್ಟೂ ಮುಂದಿದ್ದೇವೆ,ಇಂಟರ್ ನೆಟ್ ಆಫ್ ಥಿಂಗ್ಸ್[IoT]ನಿಂದಾಗಿ ಕುಳಿತಲ್ಲೇ ಡಿವೈಸ್ ಗಳನ್ನು ಕಂಟ್ರೋಲ್ ಮಾಡುತ್ತೇವೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್[AI]ನಿಂದ ಮಶೀನ್ ಲರ್ನಿಂಗ್[ML]ನಿಂದ ಬೇಕಾದ್ದನ್ನು ಬೇಕಾದ್ದನ್ನು ಬೇಕಾದಂತೆ ಸೃಷ್ಟಿಸ ಹೊರಡುತ್ತೇವೆ. ಆದರೆ, ಮನುಷ್ಯನ ಜೀವವನ್ನು, ಪರಿಸರವನ್ನೂ, ಇರುವುದನ್ನೇ ಉಳಿಸಿಕೊಳ್ಳದೇ ಹೋದರೆ ಇದೆಲ್ಲದರ ಫಲವೇನು? ಮಾನವೀಯತೆಯನ್ನು ಸಾಯಿಸಿಕೊಂಡು ಮತ್ತೊಬ್ಬರಿಗೆ ಹಾನಿ ಮಾಡುತ್ತಾ ಜಾತಿ, ಧರ್ಮ, ರಾಜಕೀಯ ದೃಷ್ಟಿಯಲ್ಲಿ ಯೋಚಿಸಿದರೆ ಫಲವಾದರೂ ಏನು? ಇನ್ನಾದರೂ ವಿಷಮುಕ್ತವಾಗಲು ಹೆಜ್ಜೆ ಹಾಕೋಣ. ಪರಿಸರದಲ್ಲಿಯೂ ಹಾಗೂ ದೃಷ್ಟಿಕೋನದಲ್ಲಿಯೂ..

~ವಿಭಾ ವಿಶ್ವನಾಥ್

1 ಕಾಮೆಂಟ್‌: