ಗುರುವಾರ, ನವೆಂಬರ್ 28, 2019

ಆ ಕರೆ..

ಮೂರು ದಿನಗಳಿಂದ ಬರುತ್ತಲಿತ್ತು ಆ ಸಂದೇಶ. ರಾತ್ರಿ 10 ರ ಸುಮಾರಿಗೆ ಬರುತ್ತಲಿತ್ತು. ಆ ನಂಬರ್ ಗೆ ಇತ್ತ ಕಡೆಯಿಂದ ಕರೆ ಮಾಡಿದರೆ "ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೋರಾಗಿದ್ದಾರೆ" ಎಂಬ ಉಲಿತ. ಮೊದಲ ದಿನ ಯಾವುದೋ ಸಂದೇಶ ಮಿಸ್ ಆಗಿ ಬಂದಿರಬೇಕು ಎಂದುಕೊಂಡಿದ್ದೆ. ಆದರೆ ಎರಡನೆಯ ದಿನವೂ ಮತ್ತದೇ ಸಂದೇಶ ಬಂದಾಗ "ಯಾರು ನೀವು" ಎಂದು ಮರು ಸಂದೇಶ ಕಳಿಸಿದ್ದೆ. ಆದರೆ ಅದಕ್ಕೆ ಅತ್ತಲಿಂದ ಯಾವುದೇ ಉತ್ತರ ಇರಲಿಲ್ಲ. ಇಂದು ಬೆಳಿಗ್ಗೆ ಇಂದ ಕರೆ ಮಾಡಿದ್ದರೂ ಆ ನಂಬರ್ ಕನೆಕ್ಟ್ ಆಗಿರಲಿಲ್ಲ. 10 ಗಂಟೆಗೆ ಸಂದೇಶ ಬಂದ ತಕ್ಷಣ ಕರೆ ಮಾಡಿದಾಗಲೂ ಮತ್ತದೇ ಉಲಿತ.

"ರೂಮ್ ನಂಬರ್ 13
ಸಾಗರ ತರಂಗಿಣಿ ಹೋಟೆಲ್
ಸಾಗರಪುರ"
ಸರಿಯಾಗಿ ರಾತ್ರಿ 11 ಗಂಟೆಗೆ ಭೇಟಿಯಾಗೋಣ

~ಇಂತಿ
ನಿಮ್ಮ ನೆನಪಿನಾಳದಲ್ಲಿ ಮುಚ್ಚಿ ಹೋದವಳು

ಸಾಗರ್ ಈ ಸಂದೇಶವನ್ನು ಸ್ವಲ್ಪ ಸೀರಿಯಸ್ ಆಗಿಯೇ ತೆಗೆದುಕೊಂಡಿದ್ದ. ಮೊದಲೆರಡು ದಿನ ಉಪೇಕ್ಷಿಸಿದವನಿಗೆ 3 ನೇ ದಿನದಿಂದ ಈ ತಲೇಬೇನೆ ಶುರುವಾಗಿತ್ತು. ಇದನ್ನು ಪರೀಕ್ಷಿಸಲೆಂದೇ ಬೆಂಗಳೂರಿನಿಂದ ಸಾಗರಪುರಕ್ಕೆ ಹೊರಟ. ಬೆಂಗಳೂರಿನಿಂದ ಸಾಗರಪುರಕ್ಕೆ ಹೆಚ್ಚು ಕಡಿಮೆ 13 ತಾಸುಗಳ ಪ್ರಯಾಣ. ಶನಿವಾರ ಬೆಳಿಗ್ಗೆಯೇ ಹೊರಟವನು ಶನಿವಾರ ರಾತ್ರಿ ಅಲ್ಲಿಗೆ ತಲುಪಿದ. 

"ಸಾಗರ ತರಂಗಿಣಿ"ಯ ಎದುರು ನಿಲ್ಲಿಸಿ ಒಳಹೊಕ್ಕವನಿಗೆ ಆಶ್ಚರ್ಯ ಎಂಬಂತೆ ರೂಮ್ ನಂಬರ್ 13 ರ ಕೀ ಕೊಟ್ಟರು. ಆಶ್ಚರ್ಯದಿಂದ ಒಳ ಹೊಕ್ಕವನಿಗೆ ಕಂಡದ್ದು 13 ವರ್ಷದ ಹಿಂದೆ ತಾನು ತೊರೆದು ಹೋದ ತನ್ನ ಸತಿ ತರಂಗಿಣಿ. ಅಲ್ಲಲ್ಲ ತನ್ನನ್ನು ತೊರೆದು ಹೋದ ತರಂಗಿಣಿ.

ತನ್ನ ತಂದೆಯ ಕಾಲದಿಂದ ನಡೆಸಿಕೊಂಡು ಬಂದಿದ್ದ ಹೋಟೆಲ್ ಒಂದಿತ್ತು. ಸಾಗರ್ ಆ ಹೋಟೆಲ್ ಅನ್ನು ನಡೆಸಿಕೊಂಡು ಹೋಗಬೇಕೆಂಬುದು ತಂದೆಯ ಆಸೆ. ಅದಕ್ಕಾಗಿಯೇ ತನ್ನ ತಂಗಿಯ ಮಗಳು ತರಂಗಿಣಿಯನ್ನೇ ಸಾಗರನಿಗೆ ವಿವಾಹ ಮಾಡಬೇಕೆಂದುಕೊಂಡಿದ್ದರು. ಆದರೆ, ಸಾಗರನಿಗೆ ಆ ವಿವಾಹದಲ್ಲಿ ಆಸಕ್ತಿ ಇರಲಿಲ್ಲ. ಅವನಿಗೆ ಆಸ್ತಿಯಲ್ಲಿ ಪಾಲು ಪಡೆದು ತಾನು ಪ್ರೀತಿಸಿದ ಹುಡುಗಿಯೊಡನೆ ವಿದೇಶದಲ್ಲಿ ನೆಲೆಸುವಾಸೆ. ಆದರೆ, ತಂದೆಯ ಅಚಾನಕ್ ಮರಣ ಮತ್ತು ಅವರು ಮಾಡಿದ್ದ ವಿಲ್ ಅವನ ಆಸೆಗೆ ತಣ್ಣೀರೆರೆಚಿತು. ತರಂಗಿಣಿಯನ್ನು ಮದುವೆಯಾಗಬೇಕು ಮತ್ತು ಅವಳ ಸಹಿಯಿಲ್ಲದೇ ಆಸ್ತಿಯಲ್ಲಿ ಒಂದು ಪೈಸೆಯೂ ಸಹಾ ಸಾಗರನಿಗೆ ಸೇರುವಂತಿರಲಿಲ್ಲ.

ಇದಕ್ಕಾಗಿಯೇ ಸಾಗರ ಮತ್ತು ತರಂಗಿಣಿಯರ ವಿವಾಹ ನೆರವೇರಿತು. 'ಸಾಗರ ತರಂಗಿಣಿ'ಯ ರೂಮ್ ನಂಬರ್ 13 ರಲ್ಲಿ ಅವರ ಮೊದಲ ರಾತ್ರಿಯ ಏರ್ಪಾಡಾಗಿತ್ತು. ಆದರೆ ಅಂದು ನಡೆದದ್ದೇ ಬೇರೆ.. ತರಂಗಿಣಿಯನ್ನು ಸಾಗರ ಸವಿ ಮಾತನಾಡುತ್ತಾ ಆಸ್ತಿ ಪತ್ರಗಳಿಗೆಲ್ಲಾ ಸಹಿ ಹಾಕಿಸಿಕೊಂಡು ತಣ್ಣನೆ ಕ್ರೌರ್ಯದಿಂದ ಕೊಂದಿದ್ದ. ನಂತರ ತಾನು ಅಲ್ಲಿ ಇರಲೇ ಇಲ್ಲ ಎಂದು ಬಿಂಬಿಸಿ ತಪ್ಪಿಸಿಕೊಂಡಿದ್ದ. ಆ ನಂತರ ಆ ರೂಮ್ ಹಾಗೂ ಹೋಟೆಲ್ ಮುಚ್ಚಿ ಹೋಗಿತ್ತು.

ಇದೆಲ್ಲವನ್ನೂ ನೆನೆಸಿಕೊಳ್ಳುವಷ್ಟರೊಳಗೆ ತರಂಗಿಣಿಯ ಆತ್ಮ ಸಾಗರನನ್ನು ಬಲಿ ಪಡೆದಿತ್ತು. ಮಾರನೇ ದಿನ ಪಾಳು ಬಿದ್ದ ಬಂಗಲೆಯ ಹೊರಗಿದ್ದ ಕಾರನ್ನು ಕಂಡ ಮಾದ ಎದ್ದು ಬಿದ್ದು, ಸುದ್ದಿ ತಿಳಿಸಲು ಊರೊಳಗೆ ಓಡಿದ. 13 ನೇ ವರ್ಷ 13 ನೇ ನಂಬರ್ ರೂಮ್ ನಲ್ಲಿ ವರ್ಷ ವರ್ಷದಂತೆ ಮತ್ತೊಂದು ಹೆಣ ಸಿಕ್ಕಿತ್ತು.

ಮತ್ತೆಷ್ಟು ವರ್ಷ ಈ ಗ್ರಹಚಾರ ಎಂದುಕೊಂಡವರಿಗೆ ತರಂಗಿಣಿ ಸಂತೃಪ್ತಿಯಿಂದ "ಇಲ್ಲಿಗೆ ನನ್ನ ಕರೆ ಮುಗಿಯಿತು. ಕಾಲನ ಕರೆಗಾಗಿ ನಾನು ಕಾಯುತ್ತಿದ್ದೇನೆ" ಎಂದು ಹೇಳಿದ್ದು ಕೇಳಲೇ ಇಲ್ಲ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ