ಭಾನುವಾರ, ನವೆಂಬರ್ 24, 2019

ಹಾಸ್ಟೆಲ್ ನ ಭೀತಿ ಕತೆ

ವಾರ್ಡನ್ ಪಕ್ಕದ ರೂಮ್ ಆದುದರಿಂದ ಅಕಸ್ಮಾತ್ ಹೆಚ್ಚಿನ ವಿದ್ಯಾರ್ಥಿಗಳು ಮನೆಗೆ ಹೋದಾಗಲೂ ಭಯ ಎಂದೇನೂ ಅನ್ನಿಸುತ್ತಿರಲಿಲ್ಲ. ಅಷ್ಟಕ್ಕೂ ಭಯ ಪಡಲು ಅಲ್ಲೇನೂ ಇರಲಿಲ್ಲ ಆದರೆ ಭಯ ಹುಟ್ಟಿಸುವಂತಹಾ ಕೆಲ ಕಟ್ಟು ಕತೆಗಳು ಬಾಯಿಂದ ಬಾಯಿಗೆ ಹಬ್ಬುತ್ತಾ ಭಯಂಕರವಾಗಿ ಕಾಣುತ್ತಿದ್ದವು. ಕೆಲವರ ಕಣ್ಣಿಗೆ ಹಾಸ್ಟೆಲ್ ಎಂದರೆ ಪಾಳು ಬಿದ್ದ ದೆವ್ವದ ಕಟ್ಟಡದಂತೆ ಕಾಣುತ್ತಿದ್ದುದರಲ್ಲಿ ಆಶ್ಚರ್ಯ ಎಂದೇನೂ ಅನ್ನಿಸುತ್ತಿರಲಿಲ್ಲ. ಹುಡುಗಿಯರ ಹಾಸ್ಟೆಲ್ ಗಳಲ್ಲಿ ವರ್ಷಕ್ಕೆ ಒಂದೆರಡು ಆತ್ಮಹತ್ಯಾ ಪ್ರಸಂಗಗಳು ಸಾಮಾನ್ಯವೇ.. ಇಲ್ಲವೇ ಕೈ ಕುಯ್ದುಕೊಂಡೋ ಇಲ್ಲವೇ ಮತ್ಯಾವುದೋ ರೀತಿಯಲ್ಲೋ ಆತ್ಮಹತ್ಯೆಗೆ ಪ್ರಯತ್ನಿಸುವುದೋ ನಡೆದೇ ಇರುತ್ತಿತ್ತು. ಮತ್ಯಾವುದೋ ಸಾಹಸವನ್ನು ಪ್ರಯತ್ನಿಸ ಹೊರಟು ಚೀಮಾರಿ ಹಾಕಿಸಿಕೊಳ್ಳುವುದು ಮಾಮೂಲಿಯೇ.. ಇಂತಹಾ ಕೆಲ ಪ್ರಯತ್ನಗಳು ಆಗಾಗ ಆಗಿ ಹಾಸ್ಟೆಲ್ ಗೆ ಸಿ.ಸಿ ಕ್ಯಾಮೆರಾ ಕೂಡಾ ಬಂದು ಆಗಿತ್ತು.

ಹಾಸ್ಟೆಲ್ ಅನ್ನು ಕಾಯುವ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಬೇಕಿದ್ದ ವಾಚ್ ಮ್ಯಾನ್ "ಆ ಮೇಲ್ಗಡೆ ಫ್ಲೋರ್ ಅಲ್ಲಿ ದೆವ್ವದ ಕಾಟ ಅಂತೆ" ಎನ್ನುವಾಗ ಇದ್ದಬದ್ದ ಸಿಟ್ಟೆಲ್ಲಾ ನೆಟ್ಟಿಗೇರಿ ವಾಚಾಮಗೋಚರವಾಗಿ ಬೈಯಬೇಕು ಅಂತಾ ಅನ್ನಿಸಿದರೂ ಬೈಯ್ಯಲು ಸಾಧ್ಯವಾಗದೇ "ಆ ದೆವ್ವ ಇದ್ದಿದ್ದರೂ ನಿನ್ನಷ್ಟು ಕಾಟ ಕೊಡ್ತಾ ಇರಲಿಲ್ಲ, ನೀನೇ ಒಂದು ದೊಡ್ಡ ದೆವ್ವ" ಅಂತಾ ಹೇಳಬೇಕೆಂದರೂ ಹೇಳಲು ಸಾಧ್ಯವಾಗದೇ "ಆಗೇನೂ ಇಲ್ಲ ಅಣ್ಣ, ನನಗೇನೂ ಆಗನ್ನಿಸ್ತಾ ಇಲ್ಲ" ಎಂದಾಗ ಇರೋ 32 ಹಲ್ಲುಗಳನ್ನು ತೋರಿಸ್ತಾ "ನೀನು ಕೆಳಗಡೆ ಪ್ಲೋರಲ್ಲಿ ಅಲ್ವಾ ಇರೋದು, ಅದಕ್ಕೇ ಗೊತ್ತಾಗಿಲ್ಲ ಬಿಡು" ಅಂತಾ ತನ್ನ ಜ್ಞಾನವನ್ನು ತೋರಿಸುತ್ತಾ ನನ್ನ ಹಾಸ್ಟೆಲ್ ಕುರಿತ ಅಜ್ಞಾನವನ್ನು ಎತ್ತಿ ಆಡುವಂತೆ ಮಾತನಾಡುತ್ತಿದ್ದ. ನಮ್ಮ ಊರಿನವನು ಎಂಬ ದಾಕ್ಷಿಣ್ಯ ಕೂಡಾ ಸೇರಿ ಮತ್ತೇನೂ ಮಾತನಾಡಲೂ ತೋಚದೆ ಅಲ್ಲಿಂದ ಹೊರಟು ಬಂದುಬಿಡುತ್ತಿದ್ದೆ. ಆ ದೆವ್ವ ಅವನ ಫ್ರೆಂಡ್ ಏನೋ ಅನ್ನುವಂತೆ ಮಾತನಾಡುತ್ತಿದ್ದ ಅವನ ಆತ್ಮವಿಶ್ವಾಸ ನೋಡಬೇಕು, ದೆವ್ವವೇ ಎದುರು ನಿಂತು ನಾನು ದೆವ್ವ ಅಂತಾ ಹೇಳಿಕೊಳ್ಳುವಾಗಲೂ ಅದಕ್ಕೆ ಅಷ್ಟು ಆತ್ಮವಿಶ್ವಾಸ ಇರಲಿಕ್ಕಿಲ್ಲ. ಆತ ದೆವ್ವವನ್ನು ತನ್ನ ಕಲ್ಪನೆಯಲ್ಲಿ ಮತ್ತೊಬ್ಬರ ಮನಸ್ಸಿನಲ್ಲಿ ಚಿತ್ರಿಸುತ್ತಲೇ ಹೋಗುತ್ತಿದ್ದ.

ಹಾಸ್ಟೆಲ್ ಪಕ್ಕದಲ್ಲಿ ರೈಲ್ವೆ ಟ್ರ್ಯಾಕ್ ಬೇರೆ ಇತ್ತು. ಅವನ ಕಲ್ಪನೆಯೂ ನಮಗೆ ಹಾಸ್ಟೆಲ್ ನಲ್ಲಿ ಹಾಕಿದ್ದ ರೈಲ್ವೆ ಇಲಾಖೆಯ "ರೈಲ್ವೆ ಹಳಿಗಳಿಂದ ದೂರವಿರಿ" ಎಂಬ ಹೊಸ ನೋಟೀಸು ಸೇರಿ ಆ ವಾರವೆಲ್ಲ ರಾತ್ರಿ ಹಾಸ್ಟೆಲ್ ರೂಮ್ ಗಳ ಬಾಗಿಲುಗಳು ಬೇಗ ಬಂದಾಗುವಂತೆ ಮಾಡಿದ್ದವು. ಗಲಗಲ ಎನ್ನುತ್ತಿದ್ದ ಹುಡುಗಿಯರ ಹಾಸ್ಟೆಲ್ ಪೂರ್ತಿ ಶಾಂತವಾಗಿ ಬಿಡುತ್ತಿತ್ತು. ಆದದ್ದು ಇಷ್ಟು.. ಗಂಡು ಮಕ್ಕಳ ಹಾಸ್ಟೆಲ್ ನಲ್ಲಿ ಯಾರೋ ಒಬ್ಬ ಕಾಂಪೌಂಡ್ ಹಾರಲು ಹೋಗಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದಿರುತ್ತಿದ್ದ. ಇದು ವಾಚ್ ಮ್ಯಾನ್ ಬಾಯಿಯಲ್ಲಿ ಬೇರೆಯೇ ಕತೆಯಾಗಿ ಹೊರಹೊಮ್ಮಿತ್ತು. "ಆ ಹುಡುಗ ಹಾಸ್ಟೆಲ್ ಪಕ್ಕದಲ್ಲೇ ಇದ್ದ ರೈಲ್ವೆ ಟ್ರ್ಯಾಕ್ ನಲ್ಲಿ ಬರುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ." ಆತ್ಮಹತ್ಯೆಗೆ ಕಾರಣ ಬೇಕಿತ್ತಲ್ವಾ, ವಾಚ್ ಮ್ಯಾನ್ ಅದನ್ನೂ ಸೃಷ್ಟಿ ಮಾಡಿದ "ಇನ್ನೇನಿರುತ್ತೆ, ಮಾಮೂಲು ಲವ್ ಪೈಲ್ಯೂರ್" ಅಂದ. ಅಸಲಿಗೆ ಅಲ್ಲಿ ಹಾಗೇನೂ ಆಗಿಯೇ ಇರಲಿಲ್ಲ. ಆದರೆ ಬಿದ್ದ ಕಥೆಗೆ ರೆಕ್ಕೆ-ಪುಕ್ಕ ಸೇರಿ ಬಣ್ಣ ಬಳಿದುಕೊಂಡು ಆತ್ಮಹತ್ಯೆಯ ಹೊಸ ಕತೆ ಸೃಷ್ಟಿ ಆಗಿತ್ತು. ಮೊದಲೇ ರಾತ್ರಿ ರೈಲು ಹೋಗುವಾಗ ಎಚ್ಚರವಾಗುತ್ತಿದ್ದದ್ದು ಆ ಕಥೆ ಕೇಳಿ ಮತ್ತಷ್ಟು ಎಚ್ಚರದಲ್ಲೇ ನಿದ್ದೆ ಮಾಡಲು ಪ್ರಯತ್ನಿಸುತ್ತಿದ್ದೆವು. ಅದರೊಟ್ಟಿಗೆ ಯಾವತ್ತೋ ನೋಡಿದ ಹಾರರ್ ಮೂವಿ, ರೂಮ್ ಮೇಟ್ ಹಾಕಿಕೊಂಡಿರುತ್ತಿದ್ದ ಫೇಸ್ ಪ್ಯಾಕ್, ಸ್ನಾನ ಮಾಡಿ ಒಣಗಲು ಬಿಟ್ಟಿರುತ್ತಿದ್ದ ಉದ್ದ ಕೂದಲು ಇವೆಲ್ಲವೂ ಸೇರಿ ಹಾಸ್ಟೆಲ್ ನಲ್ಲಿ ದೆವ್ವದ ಛಾಯೆಯನ್ನು ಸೃಷ್ಟಿ ಮಾಡಿದ್ದವು.ಆಮೇಲೆ ಇವೆಲ್ಲವೂ ಎಷ್ಟು ಕಾಲ ಭಯ ಹುಟ್ಟಿಸಲು ಸಾಧ್ಯ..? ಆ ಹುಡುಗ ಸತ್ತಿಲ್ಲ, ಇದೆಲ್ಲಾ ಇವನ ಕಟ್ಟುಕತೆ ಎಂದು ತಿಳಿದ ಮೇಲೆ ಎಲ್ಲರೂ ಆ ವಾಚ್ ಮ್ಯಾನ್ ಮೇಲೆ ಕೊಂಚ ಕೋಪಗೊಂಡದ್ದಂತೂ ನಿಜ.

ಸಾರಥಿ ಸಿನಿಮಾದ ಹಾಡನ್ನು ಜೋರಾಗಿ ಹಾಕಿಕೊಂಡು ಕೋಟೆ ಕಾಯುವವನ ರೀತಿ ತಾನೇ ಇಡೀ ಊರನ್ನು ಕಾಯುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಇದ್ದವನನ್ನು ಹೇಗಾದರೂ ಮಾಡಿ ಹೆದರಿಸಬೇಕು ಅಂತಾ ಹುಡುಗಿಯರೆಲ್ಲಾ ಪ್ಲಾನ್ ಮಾಡಿಕೊಂಡರು. ಹೊರಗಡೆ ಗೇಟ್ ಬೀಗ ಹಾಕಿದ ನಂತರವಂತೂ ಅದನ್ನು ದಾಟಿ ಬರಲು ಸಾಧ್ಯವಿರಲಿಲ್ಲ. ಹಾಗಾಗಿ ಮೊಬೈಲ್ ಅಲ್ಲಿ ಹಾಡು ಹಾಕಿ ವಿಚಿತ್ರ ಸದ್ದು ಮಾಡಿ ಹೆದರಿಸೋಣ ಎಂದುಕೊಂಡು ಮಧ್ಯರಾತ್ರಿಯಲ್ಲಿ ವಿಚಿತ್ರ ಸದ್ದು ಮಾಡುತ್ತಾ, ಹಾಡು ಹಾಕಿದಾಗ ವಾರ್ಡನ್ ಎಚ್ಚರಗೊಂದು ಬೈದರೇ ಹೊರತು ವಾಚ್ ಮ್ಯಾನ್ ಗೆ ಇದು ಯಾವುದರ ಪರಿವೆಯೂ ಇಲ್ಲ. ಬೆಳಿಗ್ಗೆ ಯಾರೋ ಆತನಿಗೆ "ಅಣ್ಣಾ, ರಾತ್ರಿ ನಿಮಗೇನಾದರೂ ಶಬ್ಧ ಕೇಳಿತಾ..?" ಎಂದು ಕೇಳಿದ್ದಕ್ಕೆ " ನಾನು ಹೇಳಿರಲಿಲ್ಲವಾ, ದೆವ್ವ ಇದೆ ಅಂತಾ ಅದರದ್ದೇ ಕೆಲಸ.. " ಅಂತಾ ಮತ್ತೊಂದು ದೆವ್ವದ ಕತೆ ಸೃಷ್ಟಿಸುತ್ತಾ ಕುಳಿತ. "ರಾತ್ರಿ ಅಷ್ಟೆಲ್ಲಾ ಸದ್ದು ಮಾಡಿದರೂ ಎಚ್ಚರವಾಗದೆ ದೆವ್ವದಂತೆ ಬಿದ್ದುಕೊಂಡಿದ್ದ, ಸಿ.ಸಿ ಕ್ಯಾಮೆರಾ ಬಂದ ಮೇಲಂತೂ ಇದ್ದದ್ದೂ ಹೆಚ್ಚು ನಿದ್ದೆ ಮಾಡುತ್ತಾ ದೆವ್ವದ ಕುರಿತು ಹೆಚ್ಚೇ ಕತೆ ಹೇಳುತ್ತಾನೆ" ಎಂದು ಬೈಯ್ಯಲು ಬಾಯಿಗೆ ಬಂದರೂ ಬೈಯ್ಯದೆ ಅವನ ಹೊಸ ದೆವ್ವದ ಕತೆ ಕೇಳುತ್ತಾ ಕುಳಿತೆ. 

ಆ ದೆವ್ವದ ಕತೆಯನ್ನು ನಿಮಗೂ ಮುಂದೊಂದು ದಿನ ನಿಮಗೂ ಹೇಳುವೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ