ಗುರುವಾರ, ಡಿಸೆಂಬರ್ 19, 2019

ಹೋಳಿಯ ದಿನದ ಕಾಮದಹನ

ಅವತ್ತು ರಂಗುರಂಗಿನ ಓಕುಳಿಯ ಹೋಳಿ ಹಬ್ಬ. ಹೋಳಿಯ ದಿನದಂದು ಕಾಮದಹನದ ಕಥೆ ಕೇಳಿದ್ದೆ. ಆದರೆ ಅಂದೇ ಒಬ್ಬ ಕಾಮುಕನ ಕೊನೆಯಾದುದನ್ನೂ ತಿಳಿಯುವಂತಾಯಿತು. ಆತನ ಹೆಸರು ಪ್ರಣವ್. ಚಿಕ್ಕಂದಿನಲ್ಲಿ ಒಂದೇ ವಠಾರದಲ್ಲಿ ಇದ್ದವರು, ಆತ ನಮ್ಮ ಶಾಲೆಗೇ ಬರುತ್ತಿದ್ದದ್ದು..
ಚಿಕ್ಕಂದಿನ ಪರಿಚಯಗಳ ನೆನಪಿನ ಕೊಂಡಿ ಮಸುಕಾಗಿರಬಹುದು ಆದರೆ ಮರೆತಂತೂ ಹೋಗಿರುವುದಿಲ್ಲ. ನಮ್ಮ ಗೆಳೆಯರ ಗುಂಪಿನ ವಾಟ್ಸಾಪ್ ಬಳಗದಲ್ಲಿ ಬೆಳ್ಳಂಬೆಳಗ್ಗೆ ಅವನ ಫೋಟೋ ಹಾಕಿ ರೆಸ್ಟ್ ಇನ್ ಪೀಸ್ ಪ್ರಣವ್ ಎಂದು ಹಾಕಿದ್ದರು. ಕೆಲಸದ ಒತ್ತಡದಿಂದ ಅವನ ಸಾವಿನ ಕಾರಣವನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗಿರಲಿಲ್ಲ. ವೀಕೆಂಡ್ ನಲ್ಲಿ ನಮ್ಮ ಗೆಳೆಯರ ಗುಂಪು ಕೂಡಿದಾಗ ನಾವು ಚರ್ಚಿಸದ ವಿಷಯವೇ ಇರುತ್ತಿರಲಿಲ್ಲ. ಹಾಗೆಯೇ ಪ್ರಣವ್ ನ ವಿಚಾರ ಕೂಡಾ ಚರ್ಚೆಯ ಒಂದು ಭಾಗವಾಯಿತು. ಚರ್ಚೆಯಾದ ವಿಷಯದ ಸಂಕ್ಷೇಪಿಸದ ಭಾಗ ನಿಮ್ಮ ಮುಂದಿದೆ.
ಚಿಕ್ಕಂದಿನಲ್ಲಿ ಕನ್ನಡ ಶಾಲೆಯಲ್ಲೇ ಓದಿದ್ದ ಆತ ತೀರಾ ಬುದ್ದಿವಂತನೇನೂ ಅಲ್ಲದಿದ್ದರೂ ಅವನ ವರ್ತನೆ ಸರಿಯಾಗಿಯೇ ಇತ್ತು. ಆತನ ಅಕ್ಕ ಕೂಡಾ ಅದೇ ಶಾಲೆಯಲ್ಲೇ ಓದುತ್ತಿದ್ದಳು. ಆದರೆ ಆಕೆ ತುಂಬಾ ಚುರುಕು ಆದ್ದರಿಂದ ಸಹಜವಾಗಿಯೇ ಮನೆಯಿಂದ ಈತನ ಓದಿನ ಕುರಿತು ನಿರೀಕ್ಷೆ ಇತ್ತು. ಅತಿ ನಿರೀಕ್ಷೆ ಮತ್ತು ಒತ್ತಡದಿಂದ ಅಸಹಾಯಕತೆಗೋ ಏನೋ ಈತನಿಗೆ ಸುಳ್ಳಿನ ಚಟವೂ ಅಂಟಿಕೊಂಡಿತ್ತು. ಮನೆಯಿಂದ ಆಗಾಗ ಅವನ ತಂದೆ ಬಂದು ಅವನ ಶೈಕ್ಷಣಿಕ ಮಾಹಿತಿಯನ್ನೆಲ್ಲಾ ಒದಗಿಸಿ ಮತ್ತು ಪಡೆದುಕೊಂಡು ಶಿಸ್ತಿನಿಂದಲೇ ಬೆಳೆಸುತ್ತಿದ್ದರು. ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಫ್ರೌಡಶಾಲಾ ಶಿಕ್ಷಣ ಬೋರ್ಡಿಂಗ್ ನಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಮುಂದುವರಿಯಿತು. ಅಲ್ಲಿ ಇಲ್ಲಿಯ ರೀತಿ ಹೋಗಿ ಮೇಲ್ವಿಚಾರಣೆ ಮಾಡದಿದ್ದದ್ದಕ್ಕೋ ಅಥವಾ ಸಹವಾಸ ದೋಷವೋ ಗೊತ್ತಿಲ್ಲ ಒಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಕಡಿಮೆ ಅಂಕ ತೆಗೆದುಕೊಂಡ. ಪಾಸಾಗಿದ್ದ ಎನ್ನುವುದೇ ದೊಡ್ಡ ವಿಚಾರ ಅಷ್ಟೇ..

ಮನೆಯಲ್ಲಿ ಅಷ್ಟು ಹೊತ್ತಿಗೆ ಇವನ ಹಣೆಬರಹವೇ ಇಷ್ಟು ಎಂದು ನಿರ್ಲಿಪ್ತವಾಗಿ ಅವನ ಅಂಕಗಳ, ಬುದ್ದಿವಂತಿಕೆಯ ಕುರಿತು ಆಕ್ಷೇಪವಿರದಿದ್ದರೂ ಸಿಕ್ಕಸಿಕ್ಕಂತೆ ಹಣ ಖರ್ಚು ಮಾಡುವುದಕ್ಕೆ ಕಡಿವಾಣ ಹಾಕಬೇಕಿತ್ತು. ಹಾಗೆಂದು ಅವನ ಖರ್ಚಿಗೆ ಕಡಿಮೆ ಮಾಡದಿದ್ದರೂ ಅವನಿಗೆ ಕಟುವಾದ ಎಚ್ಚರಿಕೆ ನೀಡಿ ಡಿಪ್ಲೊಮಾಗೆ ಸೇರಿಸಿದರು. 3 ವರ್ಷದ ಡಿಪ್ಲೊಮಾವನ್ನು ಹಾಗೋ ಹೀಗೋ ಮಾಡಿ ಅಂತೂ 3 ವರ್ಷದಲ್ಲಿಯೇ ಮುಗಿಸಿದ. ನಂತರ ಕೆಲಸಕ್ಕೆ ಸೇರಬೇಕಲ್ಲವೇ? ಅಂತೂ, ಅವನ ಉದ್ಯೋಗಪರ್ವ ಆರಂಭವಾಯಿತು.

ಉದ್ಯೋಗ ಸಿಗಬೇಕೆಂದರೆ ಬುದ್ದಿವಂತಿಕೆಯ ಜೊತೆಗೆ ವಶೀಲಿಯ ಅವಶ್ಯಕತೆಯೂ ಇರುತ್ತದೆ. ಮೊದಲನೇ ಉದ್ಯೋಗ ಸಿಕ್ಕಿತು. ಅಷ್ಟೊತ್ತಿಗೆ ಕೋರ್ಸುಗಳನ್ನು ಮಾಡಿಕೊಂಡು ಕೆಲಸಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಂಡ. ಆ ಉದ್ಯೋಗ ತನ್ನ ಯೋಗ್ಯತೆಗೆ ಸರಿ ಇಲ್ಲ ಎಂದು ಅದನ್ನೂ ಬಿಟ್ಟ. ಹೀಗೇ ಮೂರ್ನಾಲ್ಕು ಉದ್ಯೋಗಗಳ ಕಥೆಯೂ ಮುಗಿಯಿತು. ಕಡೆಗೆ ತನ್ನದೇ ಒಂದು ಸೈಬರ್ ಕೆಫೆ ತೆಗೆಯುತ್ತೇನೆಂದು ಹೇಳಿ ಅದನ್ನು ಶುರುಮಾಡಿದ. ಮನೆಯಲ್ಲಿ ದುಡ್ಡಿಗೆ ಕೊರತೆ ಇರಲಿಲ್ಲ, ಮಗ ಹೇಗೋ ನೆಲೆ ನಿಂತರೆ ಸಾಕೆಂದು ಅವನ ತಂದೆಯೂ ಇದಕ್ಕೆ ಒಪ್ಪಿಕೊಂಡರು.
ಉದ್ಯೋಗ ಶುರುವಾದಂತೆಯೇ ಅವನ ಚಪಲ ಚೆನ್ನಿಗರಾಯನ ಬುದ್ದಿಯೂ ಬೆಳೆಯ ಹತ್ತಿತ್ತು. ಕಂಡಕಂಡ ಹುಡುಗಿಯರಿಗೆಲ್ಲಾ "ಐ ಲವ್ ಯೂ" ಎಂದೇಳುವುದು ಮಾಮೂಲಾಗಿತ್ತು. ಇದ್ದನ್ನೇ ನಂಬಿ ಪ್ರೀತಿಯ ಬಲೆಯಲ್ಲಿ ಬಿದ್ದ ಮುಗ್ಧ ಹುಡುಗಿಯರೊಡನೆ ಸುತ್ತಾಟ, ಹಣ ಕಳಿಸುವುದು, ಅಶ್ಲೀಲ ಚಾಟ್ ಗಳು ಹೀಗೇ ನವರಂಗಿ ಆಟಗಳು ನಡೆದಿದ್ದವು. ಆತನ ಕೆಲ ಗೆಳೆಯರಿಗಷ್ಟೇ ಇವನ ಈ ಬುದ್ಧಿ ಗೊತ್ತಿದ್ದದ್ದು. ಹೀಗೆಲ್ಲಾ ಮಾಡಬೇಡ ಎಂದು ಬುದ್ಧಿ ಹೇಳಿದವರ ಜೊತೆಗೆಲ್ಲಾ ಜಗಳ ಮಾಡಿಕೊಂಡು ಎಲ್ಲರಿಂದಲೂ ದೂರವಾಗಿದ್ದ.

ಹೀಗಿರುವಾಗಲೇ ಅದೇಕೋ ಮತ್ತೆ ವರಾತ ತೆಗೆದು ಬೆಂಗಳೂರಿಗೆ ಹೋಗಿ ಕೆಲಸಕ್ಕೆ ಸೇರುತ್ತೇನೆ ಎಂದು ಹೊರಟ. ಆದಾದ ಒಂದೆರಡು ತಿಂಗಳಿನ ನಂತರ ಅಂದರೆ ಹೋಳಿಯ ಹಿಂದಿನ ದಿನ ಮನೆಗೆ ಬಂದಿದ್ದ. ಹೋಳಿಯ ದಿನ ಆತನ ಸಾವು ಸಂಭವಿಸಿತ್ತು.

"ಪ್ರಣವ್ ವಿಷ ಕುಡಿದು ಸತ್ತಿದ್ದಾನೆ" ಎಂದು ಅವತ್ತು ಬೆಳಿಗ್ಗೆ 8.00 ಘಂಟೆಗೇ ವಾಟ್ಸಾಪ್ ಗ್ರೂಪ್ ನಲ್ಲಿ ಸುದ್ದಿ ಬಂದಿತ್ತು. ಸರಿಯಾದ ಕಾರಣ ಯಾರಿಗೂ ತಿಳಿದಿರಲಿಲ್ಲ. ಆಶ್ಚರ್ಯ ಎಂದರೆ ಯಾವುದೇ ಡೆತ್ ನೋಟ್ ಸಹಾ ಇರಲಿಲ್ಲ. ಉಳಿದವರ ಬಾಯಲೆಲ್ಲಾ "ಪಾಪ, ಚಿನ್ನದಂತಹಾ ಹುಡುಗ ಸತ್ತ", "ಅವನ ಆತ್ಮಕ್ಕೆ ಶಾಂತಿ ಸಿಗಲಿ", "ಪಾಪ, ಮನೆಯಲ್ಲಿ ದುಡ್ಡು ಕೊಡಲಿಲ್ಲ ಅಂತಾ ಸತ್ತನಂತೆ" ಎಂಬೆಲ್ಲಾ ಪುಕಾರುಗಳು ಹೊರಟಿದ್ದವು. ಯಾರೇನೇ ಅಂದರೂ, ಯಾರು ಏನೇ ತಿಳಿದುಕೊಂಡರೂ ಸತ್ತವನು ಎದ್ದು ಬಂದು ಸಾವಿನ ಕಾರಣ ತಿಳಿಸುವುದಿಲ್ಲವಲ್ಲ. ಮೋಸ ಹೋದ, ಕಿರುಕುಳ ಅನುಭವಿಸಿದ್ದ, ಎಮೋಷನಲ್ ಬ್ಲಾಕ್ ಮೇಲ್ ಗೆ ಒಳಗಾಗಿದ್ದ ಹುಡುಗಿಯರು ಅಂದದ್ದು ಹೀಗೆ, "ಸತ್ತದ್ದು ಒಳ್ಳೆಯದೇ ಆಯಿತು", "ಪೀಡೆ ತೊಲಗಿತು", "ಬೀದಿ ಕಾಮಣ್ಣನ ಅಂತ್ಯ ಇನ್ನೂ ಕೆಟ್ಟದಾಗಿಯೇ ಆಗಬೇಕಿತ್ತು", "ಕಡೆಗೂ, ಹೋಳಿಯಂದೇ ಕಾಮದಹನವಾಯಿತು".

ಅವನ ಸಾವಿನ ರಹಸ್ಯ ಕೆದಕುತ್ತಾ ಹೋದಾಗ ತಿಳಿದದ್ದು "ಅವನು ಹಣ ಸಾಲದೆ ಅವನ ಲ್ಯಾಪ್ ಟಾಪ್, ವಾಚ್, ಟ್ಯಾಬ್ ಎಲ್ಲವನ್ನೂ ಮಾರಿದ್ದ". ಅಲ್ಲದೇ ಅವನ ಮೊಬೈಲ್ ನಿಂದ ಕೊನೆಯ ಕಾಲ್ ಹೋಗಿದ್ದು ಆ ಹುಡುಗಿಯ ನಂಬರ್ ಗೆ. ಅಲ್ಲದೇ ಅವನ ಪ್ಯಾಂಟ್ ಜೇಬಿನಲ್ಲಿ ಅವಳ ಊರಿಗೆ ಹೋಗಿಬಂದ ಟಿಕೆಟ್ ಕೂಡಾ ಇತ್ತು. ಆ ಹುಡುಗಿಯ ನಂಬರ್ ಗೆ ಕರೆ ಮಾಡಿ ವಿಚಾರಿಸಿದಾಗ ಅವಳಂದದ್ದು ಹೀಗೆ "ನಾನು ಅವನನ್ನು ಪ್ರೀತಿಸುತ್ತಿಲ್ಲ ಎಂದು ಮೊದಲೇ ಹೇಳಿದ್ದರೂ ಸುಮ್ಮನೆ ನನ್ನ ಹಿಂದೆ ಬಿದ್ದಿದ್ದ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು..
ಮಧ್ಯೆ ಏನಾಗಿತ್ತೋ, ಎಂತಾಗಿತ್ತೋ ಆದರೆ ಎದೆಯುದ್ದಕ್ಕೂ ಬೆಳೆದಿದ್ದ ಮಗನ ಸಾವು ಆತನ ತಂದೆ-ತಾಯಿಯರನ್ನು ಜರ್ಜರಿತಗೊಳಿಸಿತ್ತು. ರಹಸ್ಯ ಹಾಗೆಯೇ ಉಳಿದಿತ್ತು. ಮರ್ಯಾದೆ ಎಂಬ ಕವಚ ಹೊತ್ತು ಅದು ಸುದ್ದಿಯೇ ಆಗದೆ ತಣ್ಣಗಾಗಿತ್ತು. ಅಥವಾ ಅವನ ಈ ಎಲ್ಲಾ ಕುಕೃತ್ಯದ ಸುಳಿವಿದ್ದ ಆತನ ತಂದೆಯೇ ರೋಸಿ ಹೋಗಿ ಇದಕ್ಕೊಂದು ಅಂತ್ಯ ಹಾಡಿದ್ದಾ? ಇದಕ್ಕೆಲ್ಲಾ ಉತ್ತರವಿಲ್ಲ. ಎಲ್ಲವೂ ಊಹೆಯಾಗಬಹುದು ಅಷ್ಟೇ..

ಒಂದಷ್ಟು ಕೆಟ್ಟ ಹಟ, ಒಂದಿಷ್ಟು ನಿರ್ಲಕ್ಷ್ಯ, ಹದಿಹರೆಯದ ಕಾಮನೆ ಎಲ್ಲವೂ ತಿಳಿಯದ ರಹಸ್ಯವನ್ನು ಸೃಷ್ಟಿಸಿ ಕಾಮದಹನದೊಂದಿಗೆ ಅವನ ಸಾವಿನ ದಹನವನ್ನೂ ಮುಗಿಸಿದ್ದವು.
ಹಾಗೇ ಮಾತನಾಡಿಷ್ಟೂ ಮುಗಿಯದ ಸುದ್ದಿ, ಗೊಂದಲಗಳಿದ್ದರೂ ಸಹಾ ಎಷ್ಟು ಮಾತನಾಡಿದರೂ ಸತ್ತವರು ಎದ್ದು ಬರಲಾರರು ಎಂಬ ನಿಲುವಿಗೆ ಬಂದು ಚರ್ಚೆಗೆ ಅಂತ್ಯ ಹಾಡಿದ್ದೆವು
~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ