ಬುಧವಾರ, ಡಿಸೆಂಬರ್ 11, 2019

ಬದುಕಿನ ಹಣತೆ ಗಾಳಿಯಲ್ಲೂ ಉರಿದಿದೆ..!

ಪ್ರಮೀಳಾಳ ತಂದೆ ಸಣ್ಣ ಪುಟ್ಟ ಕಾಂಟ್ರ್ಯಾಕ್ಟ್ ಮಾಡಿಸುತ್ತಾ ಮಧ್ಯಮ ವರ್ಗದ ಬದುಕು ನಡೆಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು. ಅವರೇ ಪ್ರಮೀಳಾ ಮತ್ತು ಪ್ರಜ್ವಲ್. ಪ್ರಮೀಳಾ ಮೊದಲನೆಯವಳು ಜೊತೆಗೆ ಅವಳಿಗೆ ಅದೃಷ್ಟ ಲಕ್ಷ್ಮಿ ಎನ್ನುತ್ತಾ ಹೆಚ್ಚಿನ ಅಕ್ಕರೆ. ನಗರದ ಪ್ರತಿಷ್ಟಿತ ಕಾಲೇಜ್ ಒಂದರಲ್ಲಿ ಬಿ.ಬಿ.ಎಂ ವ್ಯಾಸಂಗ ಮಾಡುತ್ತಿದ್ದಳು. ಅಕಸ್ಮಾತ್, ಮನೆಯಲ್ಲಿ ಏನೇ ತೊಂದರೆ ಇದ್ದರೂ ಅವಳಿಗೆ ಅದರ ಬಿಸಿ ತಟ್ಟದಂತೆಯೇ ಬೆಳೆಸುತ್ತಿದ್ದರು. ಅಪ್ಪ ಅಮ್ಮಂದಿರೇ ಹಾಗೆ ಅಲ್ಲವಾ? ಕೇಳಿದಾಗಲೆಲ್ಲಾ ಕೇಳಿದಷ್ಟು ಹಣ ಖರ್ಚಿಗೆಂದು ಪಾಕೆಟ್ ಮನಿ ರೂಪದಲ್ಲಿ ದೊರೆಯುತ್ತಿತ್ತು. ಮಾರ್ಕೆಟ್ ಗೆ ಬಂದ ಹೊಸ ಡಿಸೈನ್ ಬಟ್ಟೆಗಳು ಇವಳ ವಾರ್ಡ್ ರೋಬ್ ಅನ್ನು ಅಲಂಕರಿಸುತ್ತಿದ್ದವು. ಹೀಗೇ ರಾಜಕುಮಾರಿಯಂತೆ ಬೆಳೆಯುತ್ತಿದ್ದ ಅವಳಿಗೆ ಪ್ರೀತಿ ಶುರುವಾಗಿತ್ತು. ಅದೂ ಅವಳ ಕಾಲೇಜಿನ ಹತ್ತಿರವಿದ್ದ ಸೈಬರ್ ನಲ್ಲಿ ಕೆಲಸ ಮಾಡುತ್ತಿದ್ದ ಓಂಕಾರ್ ಒಟ್ಟಿಗೆ. ಮನೆಯಲ್ಲಿ ಇವರಿಬ್ಬರ ಪ್ರೀತಿಯ ಸುದ್ದಿ ತಿಳಿದಾಗ ದೊಡ್ಡ ರಾದ್ದಾಂತವೇ ನಡೆಯಿತು. "ಮಗಳನ್ನು ನೀನು ಸರಿಯಾಗಿ ಬೆಳೆಸಲಿಲ್ಲ, ನೀನು ಸರಿಯಾಗಿ ಗಮನಿಸಲಿಲ್ಲ" ಎಂಬ ರಣರಂಪಗಳ ನಡುವೆಯೇ ಸಿಲುಕಿದ್ದ ಅವಳ ಪೋಷಕರಿಗೆ ಮಗಳು ಮನೆಯಲ್ಲಿಲ್ಲ ಎಂಬ ಸುದ್ದಿ ತಿಳಿದಿದ್ದು ಮಾರನೆಯ ದಿನವೇ.
ಪೋಲೀಸರಿಗೆ ಸುದ್ದಿ ಕೊಟ್ಟು ಅವರಿಬ್ಬರೂ ಎಲ್ಲಿದ್ದರೂ ಎಳೆದುಕೊಂಡು ಬರುತ್ತೇನೆ ಎಂದು ಹೊರಟ ಅಪ್ಪನಿಗೆ ಮಗಳು ಬಾಗಿಲಲ್ಲಿಯೇ ಎದುರು ಸಿಕ್ಕಿದ್ದಳು. ಅದೂ ಪ್ರೀತಿಸಿದವನೊಂದಿಗೇ ಮದುವೆಯಾಗಿ..
18 ವರ್ಷ ತುಂಬಿದ ಅವಳು ಮೇಜರ್. ಅವಳ ಮದುವೆ ಕಾನೂನಿನ ದೃಷ್ಟಿಯಲ್ಲಿ ಸಿಂಧು. ಕಂಪ್ಲೇಂಟ್ ನಿಂದ ಏನೂ ಮಾಡುವಂತೆಯೇ ಇರಲಿಲ್ಲ. ಆದರೆ ದಬ್ಬಾಳಿಕೆಯೊಂದು ಇದ್ದೇ ಇರುತ್ತದಲ್ಲ. ಹಾಗಾಗಿ ಅವತ್ತೇ ಅವನನ್ನು ಅಲ್ಲಿಂದ ಓಡಿಸಿ ಅವಳನ್ನು ಮನೆಗೆ ಕರೆತಂದು ಕಣ್ಗಾವಲಿನಲ್ಲಿಟ್ಟು ಕಾಯುತ್ತಿದ್ದರು.
ಅದ್ಯಾಗೋ ಮೊಬೈಲ್ ದೊರಕಿಸಿಕೊಂಡ ಇಬ್ಬರು ಪ್ರೇಮಿಗಳು ಅಲ್ಲಲ್ಲ ದಂಪತಿಗಳು ಮನೆಯಿಂದ ಓಡಿಹೋಗುವ ವಿಚಾರವನ್ನು ಚರ್ಚಿಸಿಯಾಗಿತ್ತು. ಇದರ ಬುನಾದಿ ಶುರುವಾಗಿದ್ದು ಹೀಗೆ, "ಹೇಗೂ ಫೈನಲ್ ಈಯರ್ ಬಿ.ಬಿ.ಎಂ ಜೊತೆಗೆ ಫೈನಲ್ ಸೆಮ್ ಬೇರೆ.. ಇವಾಗ ಪರೀಕ್ಷೆ ಬರೀದೇ ಇದ್ರೆ ಮತ್ತೆ ಒಂದು ವರ್ಷ ಕಾಯಬೇಕಾಗುತ್ತೆ ಹಾಗಾಗಿ ನಾನು ಪರೀಕ್ಷೆ ಬರೆಯಲೇಬೇಕು" ಅಂತಾ ಹಟ ಹಿಡಿದು ಕೂತಿದ್ದಳು ಪ್ರಮೀಳಾ. ಅಲ್ಲದೇ ನಾನು ಮಾಡಿದ್ದು ತಪ್ಪಾಯಿತು ಅಂತಾ ಮೊಸಳೆ ಕಣ್ಣೀರು ಸುರಿಸುತ್ತಾ ಮನೆಯವರನೆಲ್ಲಾ ಒಪ್ಪಿಸಿದ್ದಳು.
ಪರೀಕ್ಷೆ ಬರೆಯಲು ಹೊರಟ ಮೊದಮೊದಲು ಅಪ್ಪ ಅಥವಾ ಅಮ್ಮ ಯಾರಾದರೊಬ್ಬರು ಕಾವಲಿದ್ದು ಕರೆದುಕೊಂಡು ಬರುತ್ತಿದ್ದರು. ಕ್ರಮೇಣ ಅವರಿಗೆ ನಂಬಿಕೆ ಬಂದಂತೆ ಅವಳೊಬ್ಬಳನ್ನೇ ಹೋಗಲು ಬಿಟ್ಟರು. ನಂತರದ ವಿಷಯಗಳ ಪರೀಕ್ಷೆಗಳನ್ನು ಮುಗಿಸಿ ಬಂದಳು. ಮಗಳು ಸರಿದಾರಿಗೆ ಬಂದಳು ಎನ್ನುವಷ್ಟರಲ್ಲೇ ಈ ಘಟನೆ ಘಟಿಸಿತ್ತು.
"ಹೇಗೂ ಕೊನೆ ದಿನದ ಪರೀಕ್ಷೆ ಮತ್ತು ನಾಳೆ ಹೊಸವರ್ಷ ಅಲ್ವಾ ಅದಕ್ಕೆ ಫ್ರೆಂಡ್ಸ್ ಎಲ್ಲಾ ಸೇರಿ ಪಾರ್ಟಿ ಮಾಡುತ್ತೇವೆ ಹಾಗಾಗಿ ನಾನು ಇವತ್ತು ನನ್ನ ಫ್ರೆಂಡ್ ಮನೆಯಲ್ಲೇ ಉಳಿದುಕೊಳ್ಳುತ್ತೇನೆ" ಎಂದಿದ್ದಳು ಪ್ರಮೀಳಾ. ಮನೆಯಲ್ಲಿಯೂ ಅರೆಮನಸ್ಸಿನಿಂದಲೇ ಇದಕ್ಕೆ ಒಪ್ಪಿಗೆ ನೀಡಿದ್ದರು. ಅವಳು ಅಂದದ್ದೇ ಒಂದು ಆದರೆ ಮಾಡಿದ್ದೇ ಇನ್ನೊಂದು
ಅವರಿಬ್ಬರಿಗಾದರೂ ಎಲ್ಲಿ ಗೊತ್ತಿತ್ತು ಹೀಗೆಲ್ಲಾ ಆಗಬಹುದೆಂದು? ಇತ್ತ ಓಂಕಾರ್ ಅವಳನ್ನು ಕರೆದುಕೊಂಡು ಮಡಿಕೇರಿಗೆ ಹೊರಟ. ಬೊಸ್ಸ್ ವರ್ಷದ ಪಾರ್ಟಿ ಮುಗಿಸಿ ನಂತರ ಎಲ್ಲಿರುವುದು ಎಂದು ಯೋಚಿಸೋಣ ಎಂದು ತೀರ್ಮಾನಿಸಿ ಹೊರಟ ಇಬ್ಬರಿಗೂ ದಾರಿಯಲ್ಲೊಂದು ತೊಂದರೆ ಎದುರಾಗಿತ್ತು. ಆಗ ಸಂಜೆ ಸುಮಾರು 7 ಘಂಟೆಯ ಸಮಯ, ಕಗ್ಗತ್ತಲು. ಆಗಲೇ ಬೈಕ್ ಕೆಟ್ಟು ನಡುರಸ್ತೆಯಲ್ಲಿ ನಿಂತಿತ್ತು. ಹೋಗಲಿ ಯಾರನ್ನಾದರೂ ಡ್ರಾಪ್ ಕೇಳೋಣ ಎಂದುಕೊಂಡು ಅಲ್ಲೇ ನಿಂತವರಿಗೆ ಒಂದು ಜೀಪ್ ಎದುರಾಗಿತ್ತು. 4 ಜನ ಇದ್ದ ಜೀಪ್ ಗೆ ಇವರೂ ಹತ್ತಿದರು.
ಜೀಪ್ ಹೊರಟ ಕೆಲ ನಿಮಿಷಗಳಲ್ಲೇ ದಾರಿ ಬದಲಾಗಿತ್ತು. ಜೋಡಿಹಕ್ಕಿಗಳಿಗೆ ಅದರ ಪರಿವೆಯೇ ಇರಲಿಲ್ಲ. ಜೀಪ್ ನಿಂತಾಗಲೇ ಅದರ ಅರಿವಾಗಿದ್ದು. ಅವರ ದಾಳಿಗೆ ಸಿಲುಕಿ ಓಂಕಾರ್ ನ ಜೀವ ಹೋಗಿತ್ತು. ಪ್ರಮೀಳಾಳ ಮೇಲೆ ಸತತವಾಗಿ ಸಾಮೂಹಿಕ ಅತ್ಯಾಚಾರವಾಗಿತ್ತು. ಆದರೂ ಅದೃಷ್ಟವೋ, ದುರಾದೃಷ್ಟವೋ ಗೊತ್ತಿಲ್ಲ ಅವಳು ಬದುಕಿದ್ದಳು.
ಮರುದಿನ ಆಸ್ಫತ್ರೆ ಸೇರಿದ್ದಳು. ತಂದೆ-ತಾಯಿಯರಿಗೆ ಮೋಸ ಮಾಡಿ ಬಂದವಳಿಗೆ ಮುಂದೆ ಏನು ಮಾಡಬೇಕೆನ್ನುವುದೂ ತೋಚಿರಲಿಲ್ಲ. ಕೊನೆಗೆ ಪೋಲೀಸರಿಂದ ವಿಷಯ ತಿಳಿದ ಪೋಷಕರು ಆಕೆಯನ್ನು ಮನೆಗೆ ಕರೆದುಕೊಂಡು ಬಂದರು. ಎಷ್ಟಾದರೂ ಹೆತ್ತವರಲ್ಲವೇ? ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಂದೆ ತಾಯಿ ಇರಲಾರರು. ಅವಳಲ್ಲಿ ಆತ್ಮಸ್ಥೈರ್ಯ ತುಂಬಿ ಅವಳನ್ನು ಮೊದಲಿನಂತೆಯೇ ಮಾಡಿದರು.
ಆಕೆಯೂ ಮೊದಲಿನಂತೆಯೇ ಆದಳು. ಓದನ್ನು ಮುಂದುವರಿಸಲು ಎಂ.ಬಿ.ಎ ಗೆ ಸೇರಿಕೊಂಡಳು. ಇಷ್ಟೆಲ್ಲಾ ಆದ ನಂತರ ಅವಳನ್ನು ಎಲ್ಲರೂ ನೋಡುವ ರೀತಿಯೇ ಬದಲಾಗಿತ್ತು. ಆದರೆ, ವಿಭಿನ್ನವಾಗಿ ವರ್ತಿಸುವ ಸಂಕೇತ್ ಅವಳನ್ನು ಸೆಳೆದಿದ್ದ. ಸಂಕೇತ್ ನದ್ದು ಬಣ್ಣ ಬದಲಾಯಿಸುವ ಊಸರವಳ್ಳಿಯಂತಹಾ ಗುಣ. ಹುಡುಗಿಯರನ್ನು ಬಟ್ಟೆ ಬದಲಿಸುವಷ್ಟು ಸುಲಭವಾಗಿ ಬದಲಿಸುತ್ತಿದ್ದ. ಇಷ್ಟೆಲ್ಲಾ ಗೊತ್ತಿದ್ದೂ ಪ್ರಮೀಳಾ ಅವನೊಂದಿಗೆ ಸ್ವಚ್ಛಂದ ಹಾರಾಟ ನಡೆಸಿದ್ದಳು. kಕಾರಣ ಅವಳಿಗೆ ಮಾತ್ರ ಅರಿವಿತ್ತು.
ಇದಾದ ಒಂದು ತಿಂಗಳಿಗೆಲ್ಲಾ ಅವನ ಸಾವು ಸಂಭವಿಸಿತ್ತು, ಕಾರಣದ ಅರಿವಿರದಿದ್ದರೂ ಎಲ್ಲರೂ ತಲೆಗೊಂದರಂತೆ ಮಾತನಾಡಿದರು. ಅವಳ ಡೈರಿ ಮಾತ್ರ ನಿಜವನ್ನು ತಿಳಿದಿತ್ತು."ಇಂದಿಗೆ ಕೀಚಕನ ಕತೆ ಮುಗಿಯಿತು, ಇನ್ನೂ ಇಂತಹವರ ಕತೆ ಮುಗಿಸಲಿಕ್ಕಿದೆ" ಎಂಬ ವಾಕ್ಯ ಮತ್ತಾರ ಕಣ್ಣಿಗೂ ಬೀಳಲಿಲ್ಲ. ಆರದೆ ಉರಿಯುತ್ತಿರುವ ದೀಪಕ್ಕೆ ಸಾರ್ಥಕತೆ ಅಥವಾ ಮುಕ್ತಿ ಎಂಬುದರ ತೀರ್ಮಾನಕ್ಕೆ ಅವಳು ಬಂದಿದ್ದಳು.

ಇತಿಹಾಸ ಮರುಕಳಿಸಬಾರದೆಂದೇನೂ ಇಲ್ಲವಲ್ಲ.. ಹಾಗಾಗದಿರಲಿ ಎಂದೇ ಬಯಸೋಣ. ಹಿಂದಿನ ತಪ್ಪಿನಿಂದಲೂ ಪಾಠ ಕಲಿಯದಿದ್ದರೆ ಅದು ಅವರ ಮೂರ್ಖತನಕ್ಕೆ ಹಿಡಿದ ಕನ್ನಡಿ ಅಷ್ಟೇ.. ಗಾಳಿಯಲ್ಲಿ ಉರಿಯುತ್ತಿರುವ ದೀಪ ಆರದಿರಲಿ ಎಂದೇ ಪ್ರಾರ್ಥಿಸೋಣ.
~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ