ಭಾನುವಾರ, ಮಾರ್ಚ್ 22, 2020

ಅವನು ಬರಲೇ ಇಲ್ಲ

ಸೆರೆಯಿಂದ ಮುಕ್ತಿ ನೀಡು ಎಂದು
ಬೇಡಿಕೆಯ ತೀವ್ರತೆಯಲಿ ಬೇಡಿದರೂ
ಭಕ್ತಿಗೆ ಸರಿಯಾದ ಫಲ ದೊರೆಯಲಿಲ್ಲ
ಕಡೆಗೂ ಅವನು ಬರಲೇ ಇಲ್ಲ..

ಕಾಯುತ್ತಾ ಕುಳಿತು ಸೋತುಹೋದೆ
ನೋಡುತ್ತಾ ನಿಂತು ಸೊರಗಿಹೋದೆ
ಯಾವ ಪ್ರಾರ್ಥನೆಗಳೂ ತಲುಪಲಿಲ್ಲ
ಕಡೆಗೂ ಅವನು ಬರಲೇ ಇಲ್ಲ..

ಕನ್ಯಾಸೆರೆ ಬಿಡಿಸಲು ಬಂದವರಲ್ಲಿ
ರಾಜಕುಮಾರನೂ ಇದ್ದ, ರಾಕ್ಷಸನೂ ಇದ್ದ
ನಿರ್ಧಾರ ಮಾಡುವ ಮೊದಲು ಕಾಯುತಲಿದ್ದೆ
ಆಗಲೂ ಅವನು ಬರಲೇ ಇಲ್ಲ..

ರಾಜಕುಮಾರನದ್ದು ಹಂಗಿನ ಅರಮನೆ
ರಾಕ್ಷಸನದ್ದು ಸೊಬಗಿನ ಸೆರೆಮನೆ
ಬಯಲೊಳಗೆ ಬದುಕುವ ಆಸೆ ಸಾಯುವಾಗಲೂ
ಬದುಕಿಸಲು ಅವನು ಬರಲೇ ಇಲ್ಲ..

ಬದುಕಿನ ಭ್ರಮೆಗಳಲ್ಲೇ ತೃಪ್ತಿ ಪಡುತ್ತಾ
ಬದುಕಿನ ಕುಲುಮೆಯೊಳಗೆ ಬೇಯುತ್ತಿರುವಾಗಲೂ
ತಂಪಾದ ಮಡಿಲಿನ ಆಸೆಯಿಟ್ಟುಕೊಂಡಾಗಲೂ
ಅದೇಕೋ ಅವನು ಬರಲೇ ಇಲ್ಲ..

ಜೀವ, ಆತ್ಮಗಳ ಸೆರೆಯಿಂದ ಬಿಡಿಸಿ
ಬಯಲು-ಆಲಯಗಳ ಪರಿಚಯಿಸಿ
ಮುಕ್ತಿ ನೀಡುವನೆಂದು ಕಾಯುತಲಿದ್ದರೂ
ಜವರಾಯನೆಂಬ ಅವನು ಬರಲೇ ಇಲ್ಲ..

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ