ಭಾನುವಾರ, ಅಕ್ಟೋಬರ್ 27, 2019

ಮಾತು ಗಟ್ಟಿಯಾಗಿತ್ತಷ್ಟೇ, ಮನಸಲ್ಲ

ಅವತ್ತು ಮಧ್ಯಾಹ್ನದ ಬ್ರೇಕ್ ವೇಳೆಯಷ್ಟರಲ್ಲಿ ಹಾಸ್ಟೆಲ್ ನಲ್ಲೆಲ್ಲಾ ಕೋಲಾಹಲವೋ ಕೋಲಾಹಲ.ಅದು ಲೇಡೀಸ್ ಹಾಸ್ಟೆಲ್, ವಾಚ್ ಮನ್ ಬಿಟ್ಟು ಉಳಿದವರಿಗಾರಿಗೂ ಪ್ರವೇಶವೇ ಇಲ್ಲದ ಆ ಹಾಸ್ಟೆಲ್ ಗೆ ಅಂದು ಅಡ್ಮಿನಿಸ್ಟ್ರೇಷನ್ ನ ಮೇಲಿನ ಹಂತದ ಅಧಿಕಾರಿಗಳಿಂದ ಹಿಡಿದು ಕೆಳಗಿನ ಹಂತದ ಅಧಿಕಾರಿಗಳೆಲ್ಲರೂ ಬಂದಿದ್ದರು. ಹಾಸ್ಟೆಲ್ ಮುಂಭಾಗದಲ್ಲೂ ತಕ್ಕ ಮಟ್ಟಿಗೆ ಜನ ನೆರೆದಿದ್ದರು.ಅಲ್ಲಿದ್ದವರೆಲ್ಲರನ್ನೂ ಕಂಡು ಯಾರಿಗೆ ಏನಾಗಿರಬಹುದು ಎಂಬ ಪ್ರಶ್ನೆ ಮೂಡಿದ್ದಂತೂ ಸುಳ್ಳಲ್ಲ.

ಟಾಪ್ ಪ್ಲೋರ್ ನಲ್ಲಿ ನಡೆದಿದ್ದ ಆ ಘಟನೆಗೆ ಸಾಕ್ಷಿಯಾಗಲೋ, ಕುತೂಹಲದಿಂದಲೋ ಬಂದ ಜನರಿಂದ ತುಂಬಿ ತುಳುಕುತ್ತಿದ್ದ ಹಾಸ್ಟೆಲ್ ನಲ್ಲಿ ಮೇಲಿನ ಪ್ಲೋರ್ ಗೆ ಹೋಗಲೂ ಸ್ಥಳಾವಕಾಶ ಇರಲಿಲ್ಲ. ಆದದ್ದಿಷ್ಟು ಡಿಪ್ಲೊಮಾ ಓದುತ್ತಿದ್ದ ಆ ಹುಡುಗಿ ಉರುಳು ಹಾಕಿಕೊಂಡಿದ್ದಳು. ಆದರೆ ಆ ಹುಡುಗಿ ಯಾರು? ಕಾರಣ ಏನು ಎಂಬುದು ತಿಳಿಯಲಿಲ್ಲ. ಆದರೆ ತಿಳಿದಾಗ ಬಹಳವೇ ಆಶ್ಚರ್ಯವಾಯಿತು.

ಗಲಗಲ  ಮಾತನಾಡಿಕೊಂಡು ಎಲ್ಲರನ್ನೂ ಮಾತನಾಡಿಸುತ್ತಾ, ನಗೆ ಚಟಾಕಿ ಹಾರಿಸುತ್ತಾ, ರೇಗಿಸಿದವರಿಗೆ ಪ್ರತ್ಯುತ್ತರ ಕೊಡುತ್ತಾ ಜೀವನಪ್ರೀತಿಯಿಂದ ಬದುಕುತ್ತಿದ್ದ ಹುಡುಗಿ ಅವಳು. ಅವಳೇ ಸುಫಲಾ. ಕೊನೆಯ ವರ್ಷದ ಪರೀಕ್ಷೆ ಬರೆದು, ಉನ್ನತ ವಿದ್ಯಾಭ್ಯಾಸಕ್ಕಾಗಿ ಕನಸು ಕಟ್ಟಿಕೊಂಡು ಬದುಕುತ್ತಿದ್ದ ಅವಳು ಹಾಗೆ ಮಾಡಿಕೊಂಡದ್ದು ಬಹಳ ಅಚ್ಚರಿಯೇ. ಪರೀಕ್ಷೆಯ ಅನುತ್ತೀರ್ಣದ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡದ್ದೇನಲ್ಲ ಅವಳು. ಏಕೆಂದರೆ, ಅವಳಿನ್ನೂ ಪರೀಕ್ಷೆಯನ್ನೇ ಬರೆದಿರಲಿಲ್ಲ, ಅಲ್ಲದೇ ಹಿಂದಿನ ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿಯೂ, ಯಾವ ವಿಷಯದಲ್ಲಿಯೂ ಅನುತ್ತೀರ್ಣಳಾಗಿರಲಿಲ್ಲ.

ಅವತ್ತು ಬೆಳಿಗ್ಗೆ ತಿಂಡಿ ತಿಂದು ಹೊರಗೆ ಹೋಗಿ ಬರಲು ಅವಳು ರಿಜಿಸ್ಟರ್ ಬುಕ್ ನಲ್ಲಿ ಬರೆದಿದ್ದ ಚೆಕ್ ಔಟ್ ಮತ್ತು ಚೆಕ್ ಇನ್ ಸಮಯದಲ್ಲಿ ಇದ್ದ ಅಂತರ ಬರೀ 15 ನಿಮಿಷಗಳಷ್ಟೇ. ಆ ಹದಿನೈದು ನಿಮಿಷಗಳಲ್ಲಿ ಏನಾದರೂ ಆಗಿರಬಹುದಾ?

ಅಥವಾ, ಹಿಂದಿನ ದಿನ ವಾರ್ಡನ್ ಕೈಯಲ್ಲಿ ವಾಚಾಮಗೋಚರವಾಗಿ ಬೈಯ್ಯಿಸಿಕೊಂಡಿದ್ದಳು. ಅದೇನಾದರೂ ಇದಕ್ಕೆ ಕಾರಣವಾಗಿರಬಹುದಾ? ಇಲ್ಲ, ಹಾಗಿರಲಾರದು. ನಿನ್ನೆಯದ್ದನ್ನು ನಿನ್ನೆಗೇ ಬಿಟ್ಟು ಬಿಡುವ ಹುಡುಗಿ ಅವಳು. ಬೆಳಿಗ್ಗೆ ಸಹಾ ಅವರೊಂದಿಗೆ ಬೈಯ್ಯಿಸಿಕೊಂಡಿದ್ದರ ಕುರುಹೇ ಇಲ್ಲದಂತೆ ನಡೆದುಕೊಂಡಿದ್ದಳು ಆಕೆ.

ವಾರ್ಡನ್ ಕರೆದು ಬೈದ್ದದ್ದಕ್ಕೆ ಕಾರಣ ಆಕೆಯೂ, ಆಕೆಯ ಗೆಳತಿಯೂ ತೆಕ್ಕೆ ಬಿದ್ದು ಹೊಡೆದಾಡಿಕೊಂಡು ಇಡೀ ಹಾಸ್ಟೆಲ್ ಅನ್ನೇ ತಿರುಗಿ ನೋಡುವಂತೆ ಮಾಡಿದ್ದಕ್ಕೆ. ಆ ಜಗಳದ ನಂತರ ಅವರಿಬ್ಬರಿಗೂ ಮತ್ತೇನಾದರೂ ಜಗಳವಾಯಿತಾ?
ಅಷ್ಟಕ್ಕೂ ಜಗಳವಾಗುವುದಕ್ಕೆ ಆಕೆಯ ಗೆಳತಿ ಆ ರೂಂನಲ್ಲಿ ಇರಲೇ ಇಲ್ಲ. ಅನುಮಾನದಿಂದ ಎಲ್ಲರ ಕಡೆ ಬೊಟ್ಟು ಮಾಡಿ ತೋರಿಸಲು ಕಾರಣ  ಅವೆಲ್ಲಾ ಘಟನೆಗಳಿಗೆ ಕಾರಣ ಅವೆಲ್ಲಾ ಘಟನೆಗಳಿಗೂ ಸಾಕ್ಷಿಯಾಗಿದ್ದದ್ದು ಸಿ.ಸಿ.ಕ್ಯಾಮೆರಾ.

ಆದರೆ ಸಿ.ಸಿ.ಕ್ಯಾಮೆರಾ ಕಣ್ಣಿಗೆ ಬೀಳದಂತೆಯೂ ಕೆಲ ಘಟನಾವಳಿಗಳು ನಡೆಯಬಹುದು ಅಲ್ಲವೇ? ಸಿ.ಸಿ ಕ್ಯಾಮೆರಾ ಕಣ್ಣಿಗೆ ಬೀಳದ್ದು ಆ ತನಿಖೆಯ ಮುಖ್ಯಾಧಿಕಾರಿಯ ಕಣ್ಣಿಗೆ ಬಿದ್ದಿತ್ತು.

ಸಾಕ್ಷಿಯಾದ ಪ್ರಮುಖ ಸಾಕ್ಷಿ ಆಕೆಯ ಮೊಬೈಲ್. ಡೆತ್ ನೋಟ್ ಅಂತಹದ್ದೇನೂ ಸಿಗದಿದ್ದರಿಂದ ಆಕೆ ಮಾಡಿದ ಕೊನೆಯ ಮೆಸೇಜ್ ಮತ್ತು ಕಾಲ್ ಗಳೇ ಪ್ರಮುಖ ಸಾಕ್ಷಿಯ ಪಾತ್ರ ವಹಿಸಿಕೊಂಡಿದ್ದವು.ಆ ನಂಬರ್ ಗಳೆಲ್ಲವೂ ಬೊಟ್ಟು ಮಾಡಿ ತೋರಿಸುತ್ತಿದ್ದದ್ದು ರವಿಯ ನಂಬರ್ ಗೆ. ರವಿ ಈಕೆಗಿಂತ 2 ವರ್ಷ ದೊಡ್ಡವನು ಅಷ್ಟೇ. ಈಕೆ ಕಾಲೇಜಿಗೆ ಸೇರಿದಾಗ ಆತ ಫೈನಲ್ ಇಯರ್ ಜೊತೆಗೆ ಆತನದ್ದೂ ಈಕೆಯ ಊರೇ. ಪರಿಚಯ, ಸ್ನೇಹಕ್ಕೆ ತಿರುಗಿ ಅಲ್ಲಿಂದ ಪ್ರೇಮಕ್ಕೆ ತಿರುಗಿತ್ತು. ಆದರೆ, ಅದು ನೈಜ ಪ್ರೇಮವೇನೂ ಆಗಿರಲಿಲ್ಲ ಎಂದು ಸುಫಲಾಳಿಗೆ ತಿಳಿಯಲು ಒಂದು ವರ್ಷವೇ ಬೇಕಾಗಿತ್ತು. ಏಕೆಂದರೆ, ಈಕೆಯ ರೂಂ ಮೇಟ್ ಆಗಿ ಬಂದ ಸೃಜನಾಳ ಜೊತೆಗೆ ರವಿಯ ಸಲುಗೆ ಹೆಚ್ಚಾಯಿತು.ಆದರೆ, ಮುಸುಕಿನ ಗುದ್ದಾಟದಂತೆಯೇ ತ್ರಿಕೋನ ಪ್ರೇಮ ಕತೆ ನಡೆದಿತ್ತು. ಸುಫಲಾ ಸಾಯುವ ಹಿಂದಿನ ದಿನ ಸೃಜನಾಳೊಂದಿಗೆ ಆಗಿದ್ದ ಜಗಳಕ್ಕೆ ಮೂಲ ಕಾರಣ ಕೂಡಾ ಇಡೇ ಆಗಿತ್ತು. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಈ ಜಗಳ ಅಶ್ಲೀಲ್ಲ ಮಾತುಗಳೊಂದಿಗೆ ಬೆಳೆದ ಜಗಳ ಇಬ್ಬರೂ ಶರಂಪರ ಕಿತ್ತಾಡಿ, ಕೂದಲು ಹಿಡಿದು ಜಗ್ಗಾಡಿ, ತೆಕ್ಕೆ ಬಿದ್ದು ಹೊಡೆದಾಡುವಷ್ಟಾಗಿತ್ತು. ಇತರರಿಗೆ ಮತ್ತು ವಾರ್ಡನ್ ಗೆ ನೈಜ ವಿಷಯದ ಅರಿವಿರಲಿಲ್ಲ, ಆದರೆ ಇಬ್ಬರ ಈ ಮಟ್ಟದ ಹೊಡೆದಾಟವನ್ನು ಇಡೀ ಹಾಸ್ಟೆಲ್ ನಿಂತು ನೋಡುತ್ತಿತ್ತು. ಎಲ್ಲರಿಗೂ ಬಿಟ್ಟಿ ಮನೋರಂಜನೆ ಸಿಗುವಾಗ ಯಾರಾದರೂ ಹೋಗಿ ಬಿಡಿಸುತ್ತಾರೇಕೆ? ಕಾಲವೇ ಹೀಗಲ್ಲವೇ..? ಕೆಲಹೊತ್ತಿನ ನಂತರ ಬಂದ ವಾರ್ಡನ್ ಇಬ್ಬರಿಗೂ ಛೀಮಾರಿ ಹಾಕಿ ಹೊರಟರು.

ಅದಾದ ನಂತರ ಸೃಜನಾ ಆ ರೂಂಗೆ ಕಾಲಿಡಲಿಲ್ಲ. ಮಾರನೇ ದಿನ ಬೆಳಿಗ್ಗೆ ರವಿ ವೀಡಿಯೋ ಕಾಲ್ ಮಾಡಿ ಸುಫಲಾಳಿಗೆ ಬುದ್ದಿ ಹೇಳಿ, ತಾನು ಮತ್ತು ಸೃಜನಾ ಇಬ್ಬರೂ ಪ್ರೀತಿಸುತ್ತಿದ್ದೇವೆ ಅಲ್ಲದೆ ಮದುವೆಯೂ ಆಗುತ್ತೇವೆ ಆದ್ದರಿಂದ ತಮ್ಮನ್ನು ಬಿಟ್ಟು ನಿನ್ನ ಜೀವನವನ್ನು ನೋಡಿಕೋ ಎಂದು ಹೇಳಿದ್ದ.

ಇದೆಲ್ಲದರಿಂದ ಒತ್ತಡಕ್ಕೊಳಗಾದ ಸುಫಲಾ, ಸೃಜನಾಳನ್ನು ಹುಡುಕಿಕೊಂಡು ಹೋಗಿದ್ದಳು.ಆದರೆ, ಸೃಜನಾ ಸ್ಟಡೀ ಹಾಲಿಡೇಸ್ ಆದ್ದರಿಂದ ಅಂದು ಬೆಳಿಗ್ಗೆಯೇ ಊರಿಗೆ ಹೋಗಿದ್ದಳು. ಇದು ಗೊತ್ತಿಲ್ಲದ ಸುಫಲಾ ಅವಳನ್ನು ಕ್ಯಾಂಪಸ್ ನಲ್ಲೆಲ್ಲಾ ಹುಡುಕಿ ಸುಸ್ತಾಗಿ ಬಂದಳು. ಅದಕ್ಕಾಗಿಯೇ ಅವಳ 15 ನಿಮಿಷ ವ್ಯಯವಾಗಿದ್ದು.

ಬಂದವಳು ಬಾಗಿಲನ್ನು ಬೋಲ್ಟ್ ಮಾಡದೆ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಳು. ಆಕೆಯನ್ನು ಮೊದಲು ನೋಡಿದ್ದ ಕೆಲಸದವಳು ತಾನೂ ಗೊಂದಲಗೊಂಡು ಎಲ್ಲರನ್ನೂ ಕೊಲೆಯೋ? ಆತ್ಮಹತ್ಯೆಯೋ ? ಎಂಬ ಅನುಮಾನ ಮೂಡುವಂತೆ ಮಾಡಿದ್ದಳು.ಅಂದು ಸೃಜನ ಸಿಕ್ಕಿದ್ದರೆ ಅವಳೊಡನೆ ಮಾತನಾಡಿಯಾದರೂ ಇವಳ ನೋವು ಹಗುರಾಗುತ್ತಿತ್ತೇನೋ..? ಗಟ್ಟಿ ಮಾತಿನ ಹುಡುಗಿ ಗಟ್ಟಿ ನಿರ್ಧಾರ ತಳೆಯಬಹುದಾಗಿತ್ತು. ಆತ್ಮವಿಶ್ವಾಸವಿದ್ದರೂ, ಒಂದು ಕ್ಷಣದ ದುರ್ಬಲ ಮನಸ್ಸಿನ ಮೆದು ನಿರ್ಧಾರ ಅವಳಿಗೇ ಉರುಳಾಗಿತ್ತು. ಬದಲಾಯಿಸಬಹುದಾಗಿದ್ದ ಭವಿಷ್ಯ, ಬದಲಾಯಿಸಲಾಗದ ಭೂತವಾಗಿತ್ತು ಅಷ್ಟೇ.

~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ