ಭಾನುವಾರ, ಸೆಪ್ಟೆಂಬರ್ 20, 2020

ಬಚ್ಚಿಟ್ಟ ಭಾವಗಳ ಬಿಚ್ಚಿಟ್ಟ ಪುಟಗಳು

 


ಮನಸ್ಸಿನ ಭಾವನೆಗಳನ್ನು ನಿರುಮ್ಮಳವಾಗಿ ಬಿಚ್ಚಿಡಲಾಗುವುದು ಇಲ್ಲಿಯೇ ಅಲ್ಲವಾ ? ಒಲವೆಂದರೆ ಒಮ್ಮುಖ ಭಾವವಲ್ಲ, ಬಲವಂತದ ಹೇರಿಕೆಯಿಂದ ಬರುವುದು ಸಹಾ ಅಲ್ಲ. ಅದೇಕೋ ನನಗನ್ನಿಸುತ್ತಿರುವುದು ಇಷ್ಟೇ. ನಾನು ಅವನಿಗೆ ಒಳ್ಳೆಯ ಗೆಳೆತಿಯಾಗಿ ಮಾತ್ರ ಇರಬಲ್ಲೆ. ಒಳ್ಳೆಯ ಪತ್ನಿಯಾಗಲಾರೆನೇನೋ.. ಒಲುಮೆ ಎಂಬುದು ಮನಸ್ಸಿನಿಂದ ಬರಬೇಕು. ಮಾಂಗಲ್ಯ ಬಂಧನದಿಂದ ಜೋಡಿಸುತ್ತಾರೆ. ಆದರೆ, ಮನಸ್ಸುಗಳ ಬೆಸುಗೆಯಾಗಬೇಕು ಅಲ್ಲವೇ.. ? ರಾಶಿ, ನಕ್ಷತ್ರ, ಜಾತಕ, ಗಣಕೂಟ ಎಲ್ಲವೂ ಹೊಂದಾಣಿಕೆಯಾದರೆ ಕೊಡು-ಕೊಳ್ಳುವಿಕೆಯು ಸಹಾ ಹೊಂದಾಣಿಕೆಯಾಗಬೇಕು. ಪರಿಸ್ಥಿತಿಗೆ ರಾಜಿಯಾಗಿ ಮದುವೆ ಸಹಾ ನಡೆದು ಹೋಯಿತು. ನಾವು ಎಂದಿಗೂ ಮನ ಬಿಚ್ಚಿ ಮಾತನಾಡಲಿಲ್ಲ. ಇಷ್ಟಾನಿಷ್ಟಗಳ, ಹೊಂದಿಕೆಯ ಕುರಿತು ಚರ್ಚಿಸಲಿಲ್ಲ. ಹಿರಿಯರ ಮಾತಿಗೆ ಕಟ್ಟು ಬಿದ್ದು, ಪರಿಸ್ಥಿತಿಯ ಕೈ ಗೊಂಬೆಗಳಾಗಿ ವಿವಾಹ ಬಂಧನಕ್ಕೆ ಸಿಲುಕಿದೆವು. ಮುಂದೆ ಇದೇ ರೀತಿಯ ಒತ್ತಾಯಕ್ಕೋ, ಗೃಹಸ್ಥ ಧರ್ಮ ಎನ್ನುತ್ತಲೋ ಜೊತೆಗೇ ಬದುಕು ನಡೆಸುತ್ತೇವೆ. ಹಾಸಿಗೆಯ ಸುಖಕ್ಕೆ ಪ್ರೀತಿ ಬೇಕಿಲ್ಲವಲ್ಲ. ಅವನ ಕಾಮದಾಹಕ್ಕೆ ಒಂದು ಹೆಣ್ಣು ಜೀವವಾಗಿ ನಾನಿರುತ್ತೇನೆ. ಅದನ್ನೂ ಕರ್ತವ್ಯ ಎಂಬಂತೆ ನಿಭಾಯಿಸಬೇಕಾಗುತ್ತದೆ. ಅದು ಎಲ್ಲರ ಒಪ್ಪಿಗೆಯ ಮುದ್ರೆ ಬಿದ್ದ ವ್ಯಭಿಚಾರ, ಅದಕ್ಕೆ ಹೆಸರು ಮಾತ್ರ ವಿವಾಹ ಬಂಧನ. ಈ ಭಾವಗಳು ಈಗಿನ ಕಾಲಕ್ಕೆ ಕೊಂಚ ಔಟ್ ಡೇಟೆಡ್ ಅಲ್ಲವಾ..? ನಾನು ಈ ಕಾಲಕ್ಕೆ ಹೊಂದಿಕೆಯಾಗಬಲ್ಲೆನಾ ಎಂಬ ಪ್ರಶ್ನೆ ಸದಾ ನನ್ನಲ್ಲಿ ಕಾಡುತ್ತಲೇ ಇರುತ್ತದೆ 


ನಾನು ಮಾತ್ರ ಹೀಗೆಯಾ ? ಯಾವಾಗಲೂ ನನಗನ್ನಿಸುತ್ತಿರುತ್ತದೆ, ನನ್ನಲ್ಲಿ ಭಾವಗಳೇ ಉದಿಸುವುದಿಲ್ಲವಾ ? ಅಥವಾ ಅದರಲ್ಲಿ ಪ್ರೀತಿ ಎಂಬುದು ಮಾತ್ರ ಕಾಣೆಯಾಗಿರುತ್ತದೆಯಾ ? ಭಾವಗಳೇ ಇಲ್ಲದ ನಾನು ಲೋಕದ ಕಣ್ಣಿಗೆ ಭಾವಪೂರ್ಣ ಲೇಖಕಿ. ಅಷ್ಟಕ್ಕೂ ಅವನಿಗೆ ಇದರ ಕುರಿತು ಸಣ್ಣ ಅರಿವಾದರೂ ಇರಬಹುದಾ ? ನಾನು ನನ್ನ ಬರಹವನ್ನು ಮುಂದುವರಿಸುತ್ತೇನೆಂದರೆ ಅವನು ಒಪ್ಪಬಹುದಾ ? ಅವನ ಮನೆಯವರದ್ದಾರದ್ದೂ ಆಕ್ಷೇಪ ಇರಲಾರದಾ ? ಅಥವಾ ನನ್ನ ಮನೆಯಂತೆ ಇಲ್ಲಿಯೂ ನಿರ್ಲಕ್ಷ್ಯ ತೋರಬಹುದಾ ? ಮೆಚ್ಚುಗೆಯ ಮಾತುಗಳು ಸಿಗದಿದ್ದರೂ ಚುಚ್ಚು ಮಾತುಗಳಂತೂ ಸಿಗಲಾರವೇನೋ? ನೋವು ನೀಡುವುದು ಮತ್ತೊಬ್ಬರ ಪದಗಳಲ್ಲ, ನಮ್ಮದೇ ಭಾವಗಳು, ನಮ್ಮದೇ ನಿರೀಕ್ಷೆಗಳು. ಬಹುಶಃ ನಾನೇ ಮತ್ತೊಬ್ಬರ ಕಾಳಜಿ, ಪ್ರೀತಿಯನ್ನು ನಿರೀಕ್ಷಿಸುವೆನಾ ? ನಾನು ತೋರುವ ಕಾಳಜಿ ಮತ್ತು ಪ್ರೀತಿಯನ್ನು ಸಹಾ ನಾನು ನಿರೀಕ್ಷಿಸುವುದು ತಪ್ಪಾಗುತ್ತದೆಯಾ ? ಇಷ್ಟು ದಿನದ ಹೊಂದಾಣಿಕೆ ಎಂಬ ಮುಖವಾಡದ ಬದುಕನ್ನು ಇಲ್ಲಿಯೂ ಮುಂದುವರಿಸಬೇಕಾ ? ಕೃಷ್ಣ ಎಲ್ಲವೂ ನಿನಗೇ ಅರ್ಪಿತ. ನನ್ನ ಬದುಕಿನ ಇಬ್ಬರು ಗೆಳೆಯರು ನೀವುಗಳೇ.. ಒಂದು ಡೈರಿ ಮತ್ತೊಬ್ಬ ಆರಾಧ್ಯ ದೈವ ಶ್ರೀ ಕೃಷ್ಣ. ಹೇಳಿದ ಎಲ್ಲಾ ಸತ್ಯವನ್ನು ಮತ್ತೊಬ್ಬರಿಗೆ ತಾನಾಗಿಯೇ ಬಿಚ್ಚಿಡದ ಡೈರಿ. ತಾನು ಹೇಳಿದ್ದಕ್ಕೆಲ್ಲಾ ಮುಗುಳ್ನಗೆಯಿಂದಲೇ ಉತ್ತರಿಸಿಯೂ, ಉತ್ತರಿಸದ ಶ್ರೀ ಕೃಷ್ಣ.
ಕೃಷ್ಣಾರ್ಪಣ ಮಸ್ತು ಎಂದು ಡೈರಿಯನ್ನು ಬರೆದು ಮುಚ್ಚಿಟ್ಟು ಮಲಗಿದಳು ಪರಿಣಿಕಾ

ಮದುವೆಯಂತೂ ಆಯಿತು. ಇಷ್ಟಾಕಷ್ಟಗಳ ಕುರಿತ ಚರ್ಚೆ ನಾವು ಮಾಡಲಿಲ್ಲ. ಅವರುಗಳು ಅವಕಾಶ ನೀಡಿದರು ಆದರೆ ನಾವುಗಳೇ ನಮ್ಮ ಸಂಕೋಚದ ತೆರೆ ಕಳಚಲಿಲ್ಲ. ಕೊಂಚವಾದರೂ ಮುಂದುವರಿದು ನಾನೇ ಅವಳನ್ನು ಮಾತನಾಡಿಸಬೇಕಿತ್ತೋ ಏನೋ.. ಅವಳ ಗಾಂಭೀರ್ಯತೆ ನನ್ನಲ್ಲಿ ಗೌರವ ಮೂಡಿಸುತ್ತದೆ. ಎಲ್ಲರ ಎದುರಿಗೂ ಹೆಚ್ಚು ಮಾತನಾಡುವವನು ನಾನು. ಯಾಕೋ ಅವಳ ಕಣ್ಣ ಕಾಂತಿಗೆ, ಸ್ವಚ್ಛ ನಿಷ್ಕಲ್ಮಶ ನಗುವಿಗೆ ಸೋತು ಬಿಡುತ್ತೇನೆ. ಅವಳ ಕನಸುಗಳಿಗೆ ನಾನು ರೆಕ್ಕೆ ಕಟ್ಟಬೇಕು. ವಿವಾಹ ಬಂಧನವಾಗಬಾರದು ಅವಳ ಸ್ವಾತಂತ್ರ್ಯ ಅವಳಿಗೇ ಬಿಡಬೇಕು. ನಮ್ಮತನವನ್ನು ಕೊಂದುಕೊಂಡು ಹೊಂದಿಕೊಂಡು ಬದುಕಬಾರದು, ಒಬ್ಬರನ್ನೊಬ್ಬರು ಅರಿತು ಒಂದಾಗಿ ಬಾಳಬೇಕು. ಇಷ್ಟು ದಿನ ಅವಳು ಎಲ್ಲರ ಜೊತೆಗೆ ಹೊಂದಿಕೊಂಡೇ ಬದುಕಿರುತ್ತಾಳೆ. ಅವಳ ಮೃದು ಮಾತನ್ನು ಕೇಳಿದರೆ ಹಾಗನ್ನಿಸುತ್ತದೆ. ನಾನು ನನ್ನೆಲ್ಲಾ ಮನಸ್ಸಿನ ಮಾತನ್ನು ಬಿಚ್ಚಿಡಬೇಕು. ಹಾಡು ಹಾಡಲು ಬರುವುದೇ ಅವಳಿಗೆ ? ಅವಳ ಜೇನು ದನಿಯ ಮಾತು ಕೇಳಿದರೆ ಯಾವುದೋ ವೀಣೆಯ ಸ್ವರ ಮೀಟಿದಂತಿರುತ್ತದೆ. ಪತಿ-ಪತ್ನಿಯರಾಗಿ ಬಾಳುವ ಮೊದಲು ಒಳ್ಳೆಯ ಸ್ನೇಹಿತರಾಗಬೇಕು. ಪ್ರೀತಿಯಿಂದ ಒಂದಾಗಬೇಕೇ ಹೊರತು ಕಾಮದಿಂದಲ್ಲ. ಕಾಯುವಿಕೆಗೆ ದಕ್ಕದ, ಒಲಿಯದ ಪ್ರೀತಿ ಜಗತ್ತಿನಲ್ಲಿ ಇಲ್ಲವೇ ಇಲ್ಲ

ಕಾಯುವಿಕೆಯ ಅರ್ಥ ಕಲಿಸಿದವಳು ರಾಧೆಯಾದರೆ, ಪ್ರೀತಿಯ ಸಾರ್ಥಕತೆ ಮೂಡಿಸಿದವನು ಕೃಷ್ಣ. ಕೃಷ್ಣನ ಪರಮ ಭಕ್ತನಿಗೆ ಪ್ರೀತಿಯ ಪಾಠ ಮಾಡಲು ಹೇಳಿಕೊಡಬೇಕೆ? ಅಂತರ್ಮುಖ ಭಾವನೆಗಳನ್ನು ಡೈರಿಯಲ್ಲಿ ಬರೆಯುತ್ತಿದ್ದೆ. ಡೈರಿ ನನ್ನನ್ನು ಹಂಗಿಸಲಾರದು ಎಂಬ ಧೈರ್ಯದಿಂದ. ಇನ್ನು ಮುಂದೆ ನನ್ನವಳೊಡನೆ ನಾನು ಎಲ್ಲವನ್ನು ಹಂಚಿಕೊಳ್ಳಬೇಕು. ಈ ಡೈರಿಯಲ್ಲಿ ಬಿಚ್ಚಿಟ್ಟ ಭಾವಗಳು ಪದಗಳಾಗುವುದು ಕಷ್ಟ. ಈ ಡೈರಿಯನ್ನು ಅವಳಿಗೆ ನೀಡಿ ಬಿಡುತ್ತೇನೆ. ಸಂಗಾತಿಗಳಲ್ಲಿ ಮುಚ್ಚು ಮರೆ ಇರಬಾರದಲ್ಲ.
ಎಲ್ಲಕ್ಕೂ ಮುಖ್ಯವಾಗಿ ನಾನು ಇದನ್ನು ಕಂಡುಕೊಂಡ ಬಗೆಯನ್ನು ಹೇಳುವೆ. ಗಂಡಸಿಗೆ ಹೆಣ್ಣಿನ ಮನಸ್ಸು ಅರ್ಥವಾಗದು. ಭಾವಗಳಿಗೆ ಸ್ಪಂದಿಸುವ ಬಗೆ ಅಷ್ಟು ತಿಳಿಯದು. ನಾನೊಬ್ಬ ಒಳ್ಳೆಯ ಓದುಗ. ನಾನು ಹೆಚ್ಚು ಓದುವ ಬರಹಗಳು "ಸಖಿ"ಯವರದ್ದು.  ನಿಮಗೆ ಅವರ ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನಲ್ಲಿ ಈ ರೀತಿಯ ಆಲೋಚನೆ ಬರಲು ಕಾರಣ ಅವರು. ಬದುಕಲ್ಲಿ ಒಮ್ಮೆ ಅವರನ್ನು ಇಬ್ಬರೂ ಸೇರಿ ಭೇಟಿಯಾಗೋಣ. ಅವರ ಭಾವಚಿತ್ರ ಎಲ್ಲಿಯೂ ಇಲ್ಲ, ಹೇಗಿದ್ದಾರೋ ಗೊತ್ತಿಲ್ಲ. ಆದರೆ, ಅವರ ಬರಹಗಳು ಪ್ರಭಾವಿಸಿವೆ. ಹಸಿಬಿಸಿ ಪ್ರೇಮದ ಕುರಿತು ನನಗೆ ನಂಬಿಕೆಯಿಲ್ಲ, ಅವರ ನಿರ್ಮಲ ಪ್ರೇಮದ ಪರಿಕಲ್ಪನೆ ಮಾತ್ರ ನನ್ನನ್ನು ಅಗಾಧವಾಗಿ ಪ್ರಭಾವಿಸಿದೆ. ಇದೆಲ್ಲವನ್ನೂ ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಬರೆದು ಡೈರಿಯನ್ನು ಪಕ್ಕಕ್ಕೆ ಎತ್ತಿಟ್ಟು ಮಲಗಿದ ಅಭಿನವ್.

ಎರಡೂ ಪುಟದ ಡೈರಿಯ ಭಾವಗಳೂ ಒಂದಾಗಲಿದ್ದವು. 

ಮರುದಿನ ಕಾಫಿ ಜೊತೆಗೆ ಡೈರಿಯನ್ನು ಕೊಟ್ಟ ಅಭಿನವ್, ಕಾಫಿ ಹೇಗಿದೆ ಗೊತ್ತಿಲ್ಲ, ಇಷ್ಟವಾಗದಿದ್ದಲ್ಲಿ ಹೇಳಿ.. ಬಲವಂತದ ಹೊಂದಾಣಿಕೆ ಬೇಡ. ಈ ಡೈರಿಯನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಡೈರಿಯನ್ನು ಅವಳ ಕೈಯ್ಯಲ್ಲಿಟ್ಟು ನಡೆದ ಅಭಿನವ್. ಪರಿಣಿಕಾಳದ್ದು ಮುಗುಳ್ನಗೆ ಅಷ್ಟೇ ಉತ್ತರ.


ಕಾಫಿ ಜೊತೆಗೆ ಅಭಿನವ್ ನಡವಳಿಕೆ ಅದೇಕೋ ಇಷ್ಟವಾಗಿತ್ತು ಪರಿಣಿಕಾಳಿಗೆ. ಡೈರಿಯ ಪುಟಗಳಲ್ಲಿ ಬಿಚ್ಚಿಟ್ಟಿದ್ದ ಭಾವ ತಾನು ಬಯಸಿದ್ದೇ ಆಗಿದ್ದಿತ್ತು. ತನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆತಿತ್ತು. ತಾನೇ ಮುಂದಾಗಿ ತನ್ನ ಡೈರಿಯನ್ನು ಅವನಿಗೆ ನೀಡಿದಳು. ಮೊದಲ ಪುಟ ತೆರೆದವನಿಗೆ "ಸಖಿ" ಎಂದು ಅವಳು ಬರೆದದ್ದು ಕಾಣಿಸಿತು. ಪ್ರಶ್ನಾರ್ಥಕ ದೃಷ್ಟಿಯಿಂದ ನೋಡಿದರೆ ಅವಳ ಮುಗುಳ್ನಗು ಎಲ್ಲಕ್ಕೂ ಉತ್ತರ ಹೇಳಿತ್ತು. 

ರಾತ್ರಿ ಹುಣ್ಣಿಮೆಯ ಬೆಳದಿಂಗಳಲ್ಲಿ ಪರಿಣಿಕಾ ಹಾಡುತ್ತಿದ್ದಳು. ಕೇಳುತ್ತಾ ಮಂತ್ರಮುಗ್ದರಂತೆ ಕುಳಿತಿದ್ದರು ಅಭಿನವ್ ಮತ್ತು ಅವನ ತಂದೆ-ತಾಯಿ.. ನಂತರ ಅಭಿನವ್ ತೋಳುಗಳಲ್ಲಿ ಸೇರಿ ಹೋಗಿದ್ದಳು ಅವನ "ಸಖಿ"

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 13, 2020

ನೋಡಿ ಸ್ವಾಮಿ ನಮ್ ಇಂಜಿನಿಯರ್ಸ್ ಕತೆ


ಇಂಜಿನಿಯರಿಂಗ್ ಅನ್ನೋ ಕೋರ್ಸ್ ಗೆ ಮೊದಲಿದ್ದ ಬೆಲೆ ಈಗಿಲ್ಲ. ಪಿ.ಯು.ಸಿ ಸೈನ್ಸ್ ತೆಗೆದುಕೊಂಡ ನಂತರ ಅವರ ಮುಂದೆ ಇರುವುದು ಎರಡೇ ಚಾಯ್ಸ್ ಅನ್ನೋ ತರಹಾ ಬಿಂಬಿಸಿ ಬಿಟ್ಟಿರುತ್ತಾರೆ. ಒಂದೋ ಮೆಡಿಕಲ್, ಇಲ್ಲವೇ ಇಂಜಿನಿಯರಿಂಗ್. ಒಂದು ಕಾಲದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ ಅಂದರೆ ಬೆಲೆ ಇತ್ತು ಆದರೆ ಈಗ ಮನೆಯಲ್ಲಿ ಇಬ್ಬರು-ಮೂವರು ಇಂಜಿನಿಯರ್ ಗಳು. ಯಾಕೆ ಗೊತ್ತಾ ? 


"ಹುಡುಗಿ ಕುಳ್ಳಿ, ನೋಡೋಕೂ ಸುಮಾರು. ಇಂಜಿನಿಯರಿಂಗ್ ಮಾಡಿದ್ದಾಳೆ ಅಂದ್ರೆ ಮದುವೆ ಮಾಡೋಕು ಸುಲಭ ಆಗುತ್ತೆ" ಇದು ಹೆಚ್ಚಿನ ಹೆಣ್ಣು ಮಕ್ಕಳ ಮನೆಯಲ್ಲಿ ನಡೆಯುವ ಮಾತುಕತೆ. "ಕೆಲಸಕ್ಕೇನೂ ಕಳಿಸುವುದಿಲ್ಲ, ಆದ್ರೂ ಬಿ.ಇ ಮಾಡಲಿ" ಅನ್ನೋ ವಿಚಿತ್ರ ಮನೋಭಾವದವರು. "ಮೆಡಿಕಲ್ ಸೀಟ್ ಅಂತೂ ಸಿಗಲಿಲ್ಲ, ಕೊನೆಪಕ್ಷ ಇಂಜಿನಿಯರಿಂಗ್ ಗೆ ಆದ್ರೂ ಸೇರಿಕೊಂಡು ಮರ್ಯಾದೆ ಉಳಿಸು ಮಾರಾಯ" ಹೀಗೇ ಹೇಳುತ್ತಾ ಹೋದ್ರೆ ಪಟ್ಟಿ ಮುಗಿಯುವುದೇ ಇಲ್ಲ. 

ಬೇಕಾದ್ರೆ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಯಾವುದೇ ಬ್ರಾಂಚ್ ಗೆ ಹೋಗಿ ಕೇಳಿದರೆ ಅಲ್ಲಿ 75% ಜನ ಮತ್ತೊಬ್ಬರ ಒತ್ತಾಯಕ್ಕೋ, ಮತ್ತಾರ ಮಾತು ಕೇಳಿಯೋ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿಯೋ ಬಂದಿರುವುದು. ಮನೆಯಲ್ಲಿ ಮೊದಲನೇ ಮಗು ಇಂಜಿನಿಯರಿಂಗ್ ಮಾಡಿದ್ದರೆ ಎರಡನೇ ಮಗುವಿಗೂ ಇಂಜಿನಿಯರಿಂಗ್ ಫಿಕ್ಸ್. ಇವತ್ತು ಇಂಜಿನಿಯರಿಂಗ್ ಬರೀ ಡಿಗ್ರಿಯ ಹೆಸರಾಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿಕೊಳ್ಳಲು ಮಾತ್ರ ಮೀಸಲಾದಂತಿದೆ. ಇಲ್ಲವೇ, ಗ್ರಾಜುಯೇಷನ್ ಡೇ ಅಲ್ಲಿಯ ಒಂದು ಫೋಟೋಗೆ ಮೀಸಲು.

ಇಂಜಿನಿಯರಿಂಗ್ ಓದಿದರೂ ಕೆಲಸ ಇಲ್ಲ, ಹತ್ತು ಸಾವಿರ ಸಂಬಳಕ್ಕೆ ಯಾವುದೋ Call Center ಗಳಲ್ಲಿ ಕೆಲಸ. ಮೇಲಿಂದ ಮೇಲೆ ಒತ್ತಡಕ್ಕೆ ಸಿಕ್ಕ ಸಿಕ್ಕ ಯಾವುದೋ ಕೆಲಸಕ್ಕೆ ಸೇರಿ ಅದನ್ನು ಬಿಡಲೂ ಆಗದೆ, ಉತ್ತಮ ಕೆಲಸಕ್ಕೆ ಸ್ಕಿಲ್ ಇಲ್ಲದೆ ಒದ್ದಾಡುವ ಪರಿ ನೋಡಿದರೆ ಅರ್ಥವಾಗುತ್ತದೆ. ಅಷ್ಟಕ್ಕೂ, ಈ ಕೆಲಸದ ಹಿಂದೆ ಇಂಜಿನಿಯರಿಂಗ್ ಕಾಲೇಜುಗಳ placement ವಿಭಾಗದವರ ಕೈವಾಡವಿದೆ. ಸತ್ಯ ಕತೆ ಏನು ಗೊತ್ತಾ.. ?

Placement ಆಗಿದೆ ಎಂದು ತೋರಿಸುವ ಬ್ಯಾನರ್ ನಲ್ಲಿ 200 ರಿಂದ 300 ಜನರ ಫೋಟೋ ಇರುತ್ತದೆ.100% placement ಎಂಬ ಒಕ್ಕಣೆ ಬೇರೆ.. ಆದರೆ, ಅಸಲಿಯತ್ತು ಏನೆಂದರೆ ಹೀಗೆ ಆ ಕಂಪನಿ 10 ರಿಂದ 15 ಕಾಲೇಜುಗಳಲ್ಲಿ ಆಷ್ಟಷ್ಟು ಜನರನ್ನು ಆಯ್ಕೆ ಮಾಡಿರುತ್ತದೆ. ಕಾಲೇಜು ಮುಗಿದು, ರಿಸಲ್ಟ್ ಪಡೆದ ನಂತರ ಅಲ್ಲಿಗೆ ಹೋದರೆ ಮತ್ತಷ್ಟು ರೌಂಡ್ ಗಳ ಇಂಟರ್ ವ್ಯೂ ಅವರಿಗಾಗಿ ಕಾದು ಕೂತಿರುತ್ತದೆ. ಇಂಟರ್ ವ್ಯೂ ಅಲ್ಲಿ ಪಾಸಾದರೂ ಯಾರದ್ದಾದರೂ ರೆಫರೆನ್ಸ್ ಅತೀ ಅಗತ್ಯ. ಈ ಕುರಿತು ಕಾಲೇಜಿನಲ್ಲಿ ವಿಚಾರಿಸಿದರೆ, ನಮ್ಮ ಕಾಲೇಜ್ ಕಡೆಯಿಂದ placement ಆಗಿದೆ. ಉಳಿದದ್ದು ನಿಮಗೆ ಬಿಟ್ಟದ್ದು, ಇದಕ್ಕೆ ನಾವು ಜವಾಬ್ದಾರಿಯಲ್ಲ ಎಂಬ ನಿರ್ಲಕ್ಷ್ಯದ ಉತ್ತರ. ಅಷ್ಟಕ್ಕೂ ಈ ಎಲ್ಲಾ ಘಟನೆಗಳು ನಡೆದಿರುವುದು ಸಾಫ್ಟ್ವೇರ್ ಅಥವಾ ಅವರ ಬ್ರಾಂಚ್ ಗೆ ಸಂಬಂಧಪಟ್ಟ ಕೆಲಸಕ್ಕಲ್ಲ, call center ನ, ಇಂಜಿನಿಯರಿಂಗ್ ಸಬ್ಜೆಕ್ಟ್ ಅವಶ್ಯಕತೆಯೇ ಇಲ್ಲದ ಕೆಲಸಕ್ಕೆ.

ಅಷ್ಟಕ್ಕೂ ಈ ಕೆಲಸಕ್ಕೆ ಇಷ್ಟು ಪೈಪೋಟಿ ಯಾಕೆ ಅಂತಾ ಕೇಳ್ತೀರಾ ?

ಯಾಕೆಂದರೆ, ಇಂದಿನ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸ್ಕಿಲ್ ಗಳು ಇರುವ ಸಿಲೆಬಸ್ ಅನ್ನು ಕಲಿಸಲಾಗುತ್ತಿಲ್ಲ. Cloud computing, Artificial intelligence, machine learning ಎಲ್ಲವೂ ಮುಂಚೂಣಿಯಲ್ಲಿದ್ದರೂ ಭೋಧಿಸಲಾಗುತ್ತಿರುವುದು ಹಳೆ ಕಾಲದ ಔಟ್ ಡೇಟೆಡ್ ಸಿಲೆಬಸ್. ಹೋಗಲಿ, ಅದನ್ನಾದರೂ ಹೇಗೆ ಕಲಿಸುತ್ತಾರೆ ಗೊತ್ತಾ..? "ನಮಗೂ ಇದರ ಬಗ್ಗೆ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ, ನೋಟ್ಸ್ ಕೊಡ್ತೀವಿ ಓದಿಕೊಳ್ಳಿ ಎನ್ನುತ್ತಾ ಇಂಟರ್ನಲ್ಸ್ ಪ್ರಶ್ನೆಗಳನ್ನು ಕೊಟ್ಟು ಬಿಡುತ್ತಾರೆ." ಅರ್ಧ ಕ್ಲಾಸ್ ಆಗಲೇ ಬಂಕ್ ಮಾಡಿ ಸುತ್ತುತ್ತಿರುತ್ತಾರೆ. ಇನ್ನರ್ಧ ಕ್ಲಾಸ್ ಹೀಗೆ ಹಾಳಾಗುತ್ತಿರುತ್ತದೆ. ಇಂತಹವರ ಮಧ್ಯೆ ಅಪರೂಪಕ್ಕೆ ಕೆಲವು ಲೆಕ್ಚರರ್ ಗಳು ನಿಷ್ಠೆಯಿಂದ ಕಾನ್ಸೆಪ್ಟ್ ಅರ್ಥ ಮಾಡಿಸುತ್ತಾ ಇರುತ್ತಾರೆ. ವಿಪರ್ಯಾಸ ಏನು ಅಂದರೆ ಇಂತಹಾ ಲೆಕ್ಚರರ್ ಗಳ ಸಬ್ಜೆಕ್ಟ್ ಗಳಲ್ಲಿ ರಿಸಲ್ಟ್ ಕಡಿಮೆ, ಆದರೆ ಓತ್ಲಾ ಹೊಡೆಯುತ್ತಾ ಇಂಟರ್ನಲ್ಸ್ ಮಾರ್ಕ್ಸ್ ಕೊಟ್ಟ, ಪಾಠವೇ ಮಾಡದೆ ಪ್ರಶ್ನೆ ಕೊಟ್ಟು ಬರೆಯುವಂತೆ ಮಾಡುವ ಲೆಕ್ಚರರ್ ಸಬ್ಜೆಕ್ಟ್ ಅಲ್ಲಿ 100 % ರಿಸಲ್ಟ್.


Skillful Engineer ಗಳ ಕೊಲೆಯಾಗುವುದು ಎಲ್ಲಿ ಗೊತ್ತಾ ? ಭಾಗಶಃ ಅವರ ಲೆಕ್ಚರರ್ ಗಳಿಂದಲೇ.. ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಬರೆಯಬೇಕಾದಲ್ಲಿ ಅವರು ಕೊಟ್ಟ Xerox ನ Xerox ಕಾಪಿಯಂತೆಯೇ ಅಚ್ಚಾಗಿರಬೇಕು. ಯಾಕೆಂದರೆ, ತಪ್ಪಾದರೆ ಅದನ್ನು ಸರಿ ಮಾಡುವ ವಿಧಾನ ಇಬ್ಬರಿಗೂ ಗೊತ್ತಿರುವುದಿಲ್ಲ

ಯಾವುದಾದರೂ ಇಂಜಿನಿಯರಿಂಗ್ ಮಾಡಿರುವವರನ್ನು ಕೇಳಿ ನೋಡಿ.
C program ಅಲ್ಲಿ
#include<stdio.h>
#include<conio.h>

ಈ ಎರಡು ಸಾಲುಗಳನ್ನು ಬಿಟ್ಟು ಮತ್ತೇನೂ ಗೊತ್ತಿರುವುದಿಲ್ಲ. ಕೇಳಿದರೆ ಲೆಕ್ಚರರ್ ಹೇಳಿ ಕೊಡಲಿಲ್ಲ. ಇಂಜಿನಿಯರಿಂಗ್ ಗೆ ಬಂದ ನಂತರವೂ ಲೆಕ್ಚರರ್ ಅನ್ನು ನೆಚ್ಚಿಕೊಂಡು, ಅವರ ಜೆರಾಕ್ಸ್ ನೋಟ್ಸ್ ಅನ್ನೇ ನೆಚ್ಚಿಕೊಂಡು ಇರುವುದು ಎಷ್ಟು ಸರಿ? ನಮ್ಮಷ್ಟಕ್ಕೆ ನಾವು ಗೂಗಲ್ ಮಾಡದೇ, ಟೆಕ್ಟ್ ಬುಕ್ ಓದದೇ ಇನ್ನೂ ಅವರ ಪಾಠವನ್ನೇ ನೆಚ್ಚಿಕೊಂಡು ಕೂರುವುದು ಎಷ್ಟು ಸರಿ ?

ಇನ್ನು ಇಂಜಿನಿಯರಿಂಗ್ ಪ್ರಾಜೆಕ್ಟ್ ವಿಚಾರಕ್ಕೆ ಬಂದರೆ, ಅಲ್ಲಿ ಪ್ರಾಜೆಕ್ಟ್ ಗಿಂತ, ಅಲ್ಲಿ ರಿಪೋರ್ಟ್ ಗೆ ಹೆಚ್ಚು ಬೆಲೆ. ಪ್ರಾಜೆಕ್ಟ್ ನಲ್ಲಿ ಏನು ಕಲಿತೆ ಎಂಬುದು ಅಲ್ಲಿ ಮುಖ್ಯವೇ ಆಗಿರುವುದಿಲ್ಲ. ರಿಪೋರ್ಟ್ ನ format ಸರಿ ಇದ್ದರೆ ಆಯಿತು. ಪೇಜ್ ತುಂಬಿಸು, ಆ ಇಮೇಜ್ ಹಾಕು, ಈ ಟೆಸ್ಟ್ ಇರಲಿ. ಪ್ರಾಕ್ಟಿಕಲ್ ಅಲ್ಲಿ ಏನೂ ಇರದಿದ್ದರೂ ರಿಪೋರ್ಟ್ ನಲ್ಲಿ ಥಿಯರಿ ತುಂಬಿಸಿಟ್ಟಿರಬೇಕು. ಇನ್ನು ಆ ಪ್ರಾಜೆಕ್ಟ್ ಅವರು ಮಾಡಿದ್ದಾ, ಯಾವುದೋ consultancy ಇಂದ ತಂದಿದ್ದಾ..? ಯಾವುದೂ ಮುಖ್ಯವಾಗುವುದಿಲ್ಲ. ಎಷ್ಟೋ ಲೆಕ್ಚರರ್ ಗಳೇ ಹೇಳುವುದೂ ಉಂಟು.. xxxx Consultancy ಗೆ ಹೋಗಿ ಎಂಬುದಾಗಿ. ಸ್ವಂತ ಕೌಶಲ್ಯದಿಂದ ಮಾಡಿದ ಪ್ರಾಜೆಕ್ಟ್ ಎಂದು ಹೇಳಿದರೆ ಅವರುಗಳು ನಂಬಲು ಸಿದ್ದವೇ ಆಗಿರುವುದಿಲ್ಲ. ಯಾಕೆಂದರೆ, ಅವರಿಗಿಲ್ಲದ ಜ್ಞಾನ ಅವರ ವಿದ್ಯಾರ್ಥಿಗಳಿಗಿದೆ ಎಂಬುದನ್ನು ಅವರು ಒಪ್ಪಲು ಸಿದ್ದವೇ ಇರುವುದಿಲ್ಲ.

ಕೆಲಸಕ್ಕೆ ಬೇಕಾದ ಪ್ರೋಗ್ರಾಮಿಂಗ್ ಕಲಿಯಲು ಯಾವುದಾದರೂ ಕೋರ್ಸ್ ಇಂದು ಅತ್ಯಗತ್ಯ. ಅದಕ್ಕೆ ಇಂಜಿನಿಯರಿಂಗ್ ಅನ್ನೇ ಮುಗಿಸಿರಬೇಕು ಎಂಬ ಅಗತ್ಯವಾದರೂ ಏನು ? ಆ ಕೋರ್ಸ್ ಮುಗಿಸಿ ಕೆಲಸಕ್ಕೆ ಬೇಕಾದ ಸ್ಕಿಲ್ ಪಡೆದುಕೊಂಡರೆ ಸಾಕಲ್ಲವಾ ??

ಎಂಜಿನಿಯರಿಂಗ್ ನ ಪಾಸಿಂಗ್ ಮಾರ್ಕ್ಸ್ 35. ಮೆಡಿಕಲ್ ನಲ್ಲಿ ಕೂಡಾ ಹೀಗೆಯಾ.. ? ಪಾಸಿಂಗ್ ಮಾರ್ಕ್ಸ್ ಮಾತ್ರ ಪಡೆದರೆ ಅಲ್ಲಿ ರೋಗಿಗಳು ಫೇಲ್ ಆಗಬೇಕಾಗುತ್ತದೆ.ಆದರೆ, ಇಂಜಿನಿಯರಿಂಗ್ ನ ವಿಶೇಷ ಅಂದರೆ 8 ವರ್ಷ ಸಮಯ ಇರುತ್ತದೆ, ಅಷ್ಟರೊಳಗೆ ಇಂಜಿನಿಯರಿಂಗ್ ಮುಗಿಸಿದಲ್ಲಿ ಆಯಿತು. ಅದೂ ಪಾಸಿಂಗ್ ಮಾರ್ಕ್ಸ್ ತೆಗೆದರೆ ಸಾಕು, ಬ್ಯಾಕ್ ಆಗಿರುವುದನ್ನು 2 ವರ್ಷದೊಳಗೆ ಪಾಸ್ ಮಾಡಿಕೊಳ್ಳುತ್ತಾ ಪಾಸ್ ಆದರೂ ಸಾಕು. ಯಾರೂ ಇಂಜಿನಿಯರಿಂಗ್ ಅನ್ನು ಎಷ್ಟು ವರ್ಷದೊಳಗೆ ಮುಗಿಸಿದೆ ಎಂದು ಕೇಳುವುದಿಲ್ಲ, ಎಷ್ಟು ಬಾರಿ ಒಂದು ಸಬ್ಜೆಕ್ಟ್ ಅನ್ನು ಬರೆದು ಪಾಸ್ ಮಾಡಿದೆ ಎಂದು ಕೇಳಲಾರರು, ಇಂಜಿನಿಯರಿಂಗ್ ಮುಗಿಸಿದರೆ ಆಯಿತು.

ಇಂಜಿನಿಯರಿಂಗ್ ಗೆ ಮೊದಲಿದ್ದ ಬೆಲೆ ಇಲ್ಲ, ಬೆಲೆ ಕಡಿಮೆ ಮಾಡಿರುವವರು ನಾವುಗಳೇ ಎಂಬುದೂ ಸುಳ್ಳಲ್ಲ. ಈಗ ಅದು ಕೂಡಾ ಹತ್ತರಲ್ಲೊಂದು ಡಿಗ್ರಿ ಎಂಬಂತಾಗಿದೆ. ವಿಶ್ವೇಶ್ವರಯ್ಯನವರಂತಹಾ ಇಂಜಿನಿಯರ್ ಗಳು ಈಗಿಲ್ಲ, ಅವರಿಗಿದ್ದಂತಹಾ ಗುರುಗಳು ಈಗ ಹುಡುಕಿದರೂ ಸಿಗಲಾರರು. ಎಲ್ಲೋ 5% ಅಂತಹವರು ಸಿಗಬಹುದಷ್ಟೇ.

ಇಂಜಿನಿಯರಿಂಗ್ ಹಿಂದಿರುವ ಕತೆಗಳನ್ನು ಯಾರೂ ಬಿಚ್ಚಿಡಲಾರರು. ಎಷ್ಟೋ ಡ್ಯಾನ್ಸರ್ಗಳನ್ನು, ಹಾಡುಗಾರರನ್ನು, ಚಿತ್ರಕಾರರನ್ನು, ಕತೆಗಾರರನ್ನು ಇಂಜಿನಿಯರಿಂಗ್ ತನ್ನೊಳಗೆ ಹುದುಗಿಸಿಕೊಂಡು ಕಾಲಚಕ್ರದೊಡನೆ ಸಾಗುತ್ತಿದೆ. ಹಣ ಇರಬಹುದು ಸಂತಸ..?
ಇದಕ್ಕೆ ಅವರವರೇ ಉತ್ತರಿಸಬೇಕು. ಇಂದು ನಾನು ಒಬ್ಬ ಇಂಜಿನಿಯರ್ ಎಂದು ಹೆಮ್ಮೆಯಿಂದ ಹೇಳುವವರು ಬಹಳ ಕಡಿಮೆ.
Happy Engineers ಗಿಂತಲೂ Frustrated Engineers ಹೆಚ್ಚಾಗುತ್ತಿದ್ದಾರೆ. 

"ನಾನು ಇಂಜಿನಿಯರ್" ಎಂದು ಹೆಮ್ಮೆಯಿಂದ ಹೇಳುವವರು ಹೆಚ್ಚಾಗಲಿ. ಇಂಜಿನಿಯರಿಂಗ್ ನಲ್ಲಿ ಕಲಿತಷ್ಟೂ ಕಲಿಯುವುದು ಇದ್ದೇ ಇದೆ. ಕಲಿಯುವ ಮನಸ್ಸು, ಉತ್ಸಾಹ ಬೇಕಷ್ಟೇ.. ಹೇಗೋ ಇಂಜಿನಿಯರಿಂಗ್ ಅನ್ನು ಸೇರಿ ಆಗಿದೆ, ಹೇಗೋ ಮುಗಿಸುವೆ ಎಂಬ ಇರಾದೆ ಬೇಡ. ಕಲಿತದ್ದನ್ನು ಬಳಸಿಕೊಂಡು ಒಳ್ಳೆಯ ಇಂಜಿನಿಯರ್ ಗಳಾಗಿ.

ಕೃಷಿ ಕ್ಷೇತ್ರಕ್ಕೆ ಅತ್ಯುತ್ತಮ ಆಟೊಮ್ಯಾಟಿಕ್ ಯಂತ್ರ ಅಳವಡಿಸಿರುವ ಇಂಜಿನಿಯರ್ ತಂದೆ ಇಂದು ಇನ್ನು ಎತ್ತನ್ನು ಉಪಯೋಗಿಸಿಕೊಂಡೇ ಉಳುಮೆ ಮಾಡುತ್ತಿರುವುದು ವಿಪರ್ಯಾಸ. 

ಯಾರು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವರೋ ಅವರೇ ನಿಜವಾದ ಇಂಜಿನಿಯರ್ ಗಳು. ಇಂಜಿನಿಯರಿಂಗ್ ಮುಗಿಸಿದರಷ್ಟೇ ಸಾಲದು, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.

Anyway, ಹ್ಯಾಪಿ ಇಂಜಿನಿಯರ್ ಗಳಿಗೂ, Frustrated ಇಂಜಿನಿಯರ್ ಗಳಿಗೂ Happy Engineers Day


~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 6, 2020

'ಅ'ಲ್ಲಿಂದ Eಲ್ಲಿಯವರೆಗೂ ('ಅ' ಯಿಂದ E-learning ವರೆಗೂ)

 

ಇಂದು ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಹಾಗೆಯೇ ಶಿಕ್ಷಕರೂ ಸಹಾ ಬದಲಾಗಿದ್ದಾರೆ. ಆದರೆ, ಗುರುಗಳು ಎಂದರೆ ಇಂದಿಗೂ ನೆನಪಾಗುವಂತೆ ಹೆಜ್ಜೆ ಮೂಡಿಸಿದ ಹಲವಾರು ಮಹಾನ್ ವ್ಯಕ್ತಿಗಳಿದ್ದಾರೆ.


ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನವೆಂದು ಆಚರಿಸುವಂತೆ ಹೇಳಿದ ರಾಧಾಕೃಷ್ಣನ್ ರವರನ್ನು ನೆನೆಯುವುದು ಅಗತ್ಯ. 

ತಮ್ಮ ಹುಟ್ಟುಹಬ್ಬವನ್ನು ವಿದ್ಯಾರ್ಥಿಗಳಿಗಾಗಿ ಮುಡಿಪಿಟ್ಟ ಅಬ್ದುಲ್ ಕಲಾಂ ಸರ್ ಮತ್ತೊಬ್ಬರು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸುತ್ತಾ ಅವರ ಕುತೂಹಲಗಳತ್ತ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ ಗುರುಗಳು ಅವರು.

ಎಷ್ಟೋ ವಿರೋಧಗಳ ನಡುವೆಯೂ ಮಹಿಳಾ ಶಿಕ್ಷಕಿಯಾಗಿ ವಿದ್ಯೆಯ ಹಣತೆ ಹಚ್ಚಿದ ಸಾವಿತ್ರಿಬಾಯಿ ಫುಲೆ ಮತ್ತೋರ್ವ ಮಹಾನ್ ಗುರು

ಗುರು ಎಂದರೆ, ನೀತಿ ಎಂದರೆ ಇತಿಹಾಸದಲ್ಲಿ ನೆನಪಾಗುವುದು ಚಾಣಕ್ಯ. ಆತನ ತಂತ್ರಗಾರಿಕೆ, ಶಿಷ್ಯನ ಸಾಮ್ರಾಜ್ಯ ನಿರ್ಮಾಣದಲ್ಲಿ ಮಾಡಿದ ಉಪದೇಶ ಇಂದಿಗೂ ಆತನನ್ನು ಎತ್ತರದ ಸ್ಥಾನದಲ್ಲಿಟ್ಟಿವೆ.

ಎಲ್ಲಾ ಯುವಕರಿಗೂ ಗುರುವಾದ ವಿವೇಕಾನಂದರು, ಮತ್ತವರ ಗುರುಗಳಾದ ರಾಮಕೃಷ್ಣ ಪರಮಹಂಸರು ಇಬ್ಬರೂ ಇಂದಿಗೂ ಲೋಕಮಾನ್ಯರು. ಪರಮಹಂಸರಂತಹಾ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವವಾಗಿ ರೂಪುಗೊಂಡದ್ದು ವಿವೇಕಾನಂದರು.

ಮಹಾಭಾರತದ ದ್ರೋಣರು ಮತ್ತೊಬ್ಬ ಮಹಾನ್ ಗುರು. ಮಗ ಮತ್ತು ಶಿಷ್ಯರ ನಡುವೆ ಭೇಧ ಮಾಡದೆ ಶಿಷ್ಯರನ್ನೂ ಮಕ್ಕಳಂತೆ ಕಂಡವರು. ದ್ರೋಣರಂತಹಾ ಗುರುಗಳಿಂದ ರೂಪುಗೊಂಡ ಅರ್ಜುನ. ದ್ರೋಣರ ಪ್ರತಿಮೆಯಿಂದಲೇ ಸ್ಫೂರ್ತಿಗೊಂಡ ಏಕಲವ್ಯ.

ಸಾಂದೀಪನಿಯಂತಹಾ ಗುರುಗಳಿಂದ ಕಲಿತ ಶ್ರೀ ಕೃಷ್ಣ.

ಶಿಕ್ಷಕರು ವಿದ್ಯೆ ಕಲಿಸಿದಂತೆ, ಶಪಿಸಿದವರು ಸಹಾ ಇದ್ದಾರೆ.
ಹರ ಮುನಿದರೆ ಗುರು ಕಾಯ್ವನು
ಗುರು ಮುನಿದರೆ..??
ಪರಶುರಾಮ ಮತ್ತು ಕರ್ಣರ ಗುರು-ಶಿಷ್ಯರ ಸಂಬಂಧ ಇದಕ್ಕೆ ಸಾಕ್ಷಿ.

ಶಿಕ್ಷಣ ಬದಲಾಗಿದೆ. ಶಿಕ್ಷಕರು ಸಹಾ ಬದಲಾಗಿದ್ದಾರೆ. ಮೌಲ್ಯಗಳು ಸಹಾ ಬದಲಾಗುತ್ತಿವೆ. ವಿದ್ಯಾರ್ಥಿಗಳು ಬದಲಾಗಿದ್ದಾರೆ.
ಶಿಕ್ಷಣ ವ್ಯವಸ್ಥೆ ತಪ್ಪಿದ್ದೆಲ್ಲಿ ?
ಯಾವಾಗಲೂ ನನ್ನ ಪ್ರಿನ್ಸಿಪಾಲ್ ಸರ್ ಹೇಳುತ್ತಿದ್ದ ಮಾತು ನೆನಪಾಗುತ್ತಿದೆ

If Money is Lost , Nothing is Lost
If Health is Lost, Something is Lost
If Character is Lost, Everything is Lost

ಈಗ ಬದಲಾದ ದಿನಮಾನದಲ್ಲಿ ಈ ಮಾತು ಬದಲಾಗಿದೆ.

If Character is Lost , Nothing is Lost
If Health is Lost, Something is Lost
If Money is Lost, Everything is Lost

ಇದೇ ಬದಲಾವಣೆ ಯುವಜನತೆಯ ಹಾದಿ ತಪ್ಪಿಸಿ, ಮಾದಕ ವ್ಯಸನಕ್ಕೆ, ಸುಲಭ ರೀತಿಯಲ್ಲಿ ಹಣ ಸಂಪಾದಿಸಲು ಪ್ರಚೋದಿಸುತ್ತಿರುವುದು.

ಆಗ ಶಿಕ್ಷೆ ಇತ್ತು, ತಪ್ಪಿದಲ್ಲಿ ತಿದ್ದಿ ನಡೆಸುವ ಗುರುಗಳಿದ್ದರು. ಆದರೆ, ಈಗ ತಪ್ಪಿಗೆ ಶಿಕ್ಷೆ ನೀಡಲು
ವಿದ್ಯೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎನ್ನುವರು. ಆದರೆ, ಇವತ್ತು ವಿದ್ಯೆ ಕೆಲಸಕ್ಕಾಗಿ ಮಾತ್ರವೇ. ಓದಿಗೂ, ಮಾಡುವ ಕೆಲಸಕ್ಕೂ ಸಂಬಂಧವೇ ಇರದು. ಕೆಲಸಗಳು ಹಣಕ್ಕಾಗಿ ಮಾರಾಟವಾಗುತ್ತಿವೆ. ವಿದ್ಯೆಯೂ ಮಾರಾಟವಾಗುತ್ತಿದೆ.

ಶಾಲೆಯಲ್ಲಿ ಕಲಿಸದೆ ಟ್ಯೂಷನ್ ಗೆ ಬನ್ನಿ ಇಂದು ಹೇಳುವ ನೀತಿಗೆಟ್ಟ ಶಿಕ್ಷಕರಿದ್ದಾರೆ. ಪ್ರಾಜೆಕ್ಟ್ ಫೈನಲ್ ಗೆ, Thesis submission ಗೆ, ಪ್ರತಿಯೊಂದು ಸಹಿಗೂ ಹಣ ಕೇಳುವ ಶಿಕ್ಷಕರಿದ್ದಾರೆ. ಎಂಜಲು ಕಾಸಿಗೆ ಕೈಯೊಡ್ಡುವ ಶಿಕ್ಷಕರಿಂದ ಸ್ವಾಭಿಮಾನದ ಪಾಠವನ್ನು ವಿದ್ಯಾರ್ಥಿಗಳು ಕಲಿಯುವುದಾದರೂ ಹೇಗೆ ?

ವಿದ್ಯೆ ಕಲಿಸದಾ ತಂದೆ
ಬುದ್ದಿ ಹೇಳದಾ ಗುರುವು
ಬಿದ್ದಿರಲು ಬಂದು ನೋಡದಾ ತಾಯಿ
ಶುದ್ಧ ವೈರಿಗಳು ಸರ್ವಜ್ಞ

ಎಂಬ ಸರ್ವಜ್ಞನ ವಚನವೇ ಇದೆ.

ಇನ್ನೊಂದು ಬಗೆಯ ಶಿಕ್ಷಕ ವರ್ಗವಿದೆ. ತಮ್ಮ ಕೆಲಸದ ಶುರುವಿನಲ್ಲಿ ಪ್ರಾಮಾಣಿಕರಾಗಿಯೇ ಇರುತ್ತಾರೆ. ನಂತರದ ದಿನಗಳಲ್ಲಿ ತಮ್ಮ ಸಹೋದ್ಯೋಗಿಗಳನ್ನು ನೋಡಿಯೋ ಅಥವಾ ಮೇಲಿನ ಒತ್ತಡಕ್ಕೆ ಮಣಿದು ತಮ್ಮತನವನ್ನು ಬದಲಾಯಿಸಿಕೊಂಡವರಿದ್ದಾರೆ.

ಇವೆಲ್ಲದರ ನಡುವೆ ತಮ್ಮತನವನ್ನು ಉಳಿಸಿಕೊಂಡು, ಪ್ರಾಮಾಣಿಕತೆಯ ಪಾಠ ಮಾಡುತ್ತಿರುವ ಶಿಕ್ಷಕರು ಸಹಾ ಇದ್ದಾರೆ. ಅಂತಹವರಿಗೆ ಮಾತ್ರ "ಶಿಕ್ಷಕರ ದಿನದ ಶುಭಾಶಯಗಳು".

ವಿದ್ಯೆ ಕಲಿಸಿಯೂ ಶಿಕ್ಷಕರಾಗದವರು ಹಲವರಿದ್ದಾರೆ, ಅಕ್ಷರವೇ ಗೊತ್ತಿರದ ಜೀವನದ ಪಾಠ ಕಲಿಸಿದ ಹಲವಾರು ಶಿಕ್ಷಕರ ಸ್ಥಾನದಲ್ಲಿದ್ದಾರೆ. ತಾಯಿ, ತಂದೆ, ಕಿರಿಯರಿಂದ ಹಿರಿಯರವರೆಗೂ ಗುರುಗಳಾಗುತ್ತಾರೆ. ಆದರೆ, ಈಗ ಇದೆಲ್ಲದರ ಸ್ಥಾನವನ್ನು ಗೂಗಲ್ ತುಂಬುತ್ತಿದೆ. ಗೂಗಲ್ ಜ್ಞಾನವೇ ಶ್ರೇಷ್ಠ ಎಂಬ ಅಜ್ಞಾನಿಗಳೂ ಇದ್ದಾರೆ.  

ಈಗ ಮನೆ ಮನೆಗೂ ಮೊಬೈಲ್ ಮೂಲಕ "E-Learning" ಕಾಲಿಟ್ಟಿದೆ. ಶಿಕ್ಷಣ ನೇರವಾಗಿ ದೊರೆಯುತ್ತಿದೆ. ಲೈಂಗಿಕ ಕಿರುಕುಳವಿಲ್ಲ, ಪ್ರತಿಯೊಂದು ಚರ್ಯೆ, ಮಾತಿಗೂ ದಾಖಲೆ ಇದ್ದೇ ಇದೆ. ಆದರೆ, ವಿದ್ಯಾರ್ಥಿಗಳ ನಿಷ್ಠೆ ಕಾಣೆಯಾಗಿದೆ. ಆನ್ಲೈನ್ ಕ್ಲಾಸ್ ಆನ್ ಮಾಡಿ ಮತ್ತೇನೋ ಮಾಡುವುದು, ಆನ್ಲೈನ್ ಟೆಸ್ಟ್ ಗಳನ್ನು ಕಾನ್ಫರೆನ್ಸ್ ಕಾಲ್ ಮಾಡಿಕೊಂಡು ಉತ್ತರಿಸುವುದು. ಹೀಗೆ..
ತಿಳುವಳಿಕೆ ಹೆಚ್ಚಿದಂತೆಲ್ಲಾ, ಧೂರ್ತ ನಡವಳಿಕೆಗಳು ಹೆಚ್ಚುತ್ತಲೇ ಇವೆ

ಇಂತಹವರು ನೋಡಿ ಕಲಿಯಬೇಕಾದದ್ದು. ಸುಧಾಮೂರ್ತಿ ಮೇಡಂ ಅವರನ್ನು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಗುರುಗಳಿಗೆ ಗೌರವ ಸಲ್ಲಿಸುವ ಗುಣ ತೊರೆದಿಲ್ಲ. ಶಿಕ್ಷಕರಾಗಿ ಮಕ್ಕಳಿಗೆ ತಿಳುವಳಿಕೆ ಹೇಳುವುದನ್ನು ಸಹಾ ಬಿಟ್ಟಿಲ್ಲ. 

ಕಲಿಯಬೇಕೆಂದರೆ ಎಲ್ಲೆಲ್ಲೂ ಒಳ್ಳೆಯ ವಿಚಾರಗಳಿವೆ. ಅರಿವಿಗಿಂತ ದೊಡ್ಡ ಗುರುವಿಲ್ಲ. ಕಲಿಯುವ ಮನಸ್ಸು ನಮ್ಮಲ್ಲಿರಬೇಕು. ಗುರುವನ್ನು ಆಯ್ದುಕೊಳ್ಳುವ ನಮ್ಮ ಆಯ್ಕೆ ಸರಿಯಿದ್ದಲ್ಲಿ ಎಲ್ಲವೂ ಸುಸೂತ್ರ.

"ಅರಿವೆಂಬ ಗುರುವಿಗೆ ನಮಿಸುತ್ತಾ" ಜೀವನದ, ಅಕ್ಷರದ ತಿಳುವಳಿಕೆಯ ಎಲ್ಲಾ ಪಾಠ ಕಲಿಸಿದ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 'ಅ'ಲ್ಲಿಂದ 'E'ಲ್ಲಿಯವರೆಗೂ ಬದುಕಿನ ಹಾದಿಯ ಜೊತೆಗಿರುವ ಎಲ್ಲ ಶಿಕ್ಷಕರ ಆಶೀರ್ವಾದಗಳು ಸದಾ ಹೀಗೆಯೇ ಇರಲಿ.

ಸಾವಿರಾರು ಮುಖದ ಚೆಲುವ
ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ
ಕನ್ನಡಿಯ ಪಾಲಿಗೇ..?

ಎಂಬ ಸಾಲುಗಳು ಶಿಕ್ಷಕರ ಬದುಕಿನಲ್ಲಿ ಹೆಚ್ಚಿನಂಶ ಅನ್ವಯವಾಗುತ್ತದೆ. ಇದು ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗಿನ ಕೆಲಸ ಮಾತ್ರವಲ್ಲ. ಸದಾ ಕಲಿಯುತ್ತಲೇ ಇರಬೇಕು, ಕಲಿಸುತ್ತಲೇ ಇರಬೇಕು. ಸ್ಫೂರ್ತಿ ತುಂಬುತ್ತಿರುವ, ಕಲಿಕೆಯ ಮನಸ್ಸಿನ ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 23, 2020

ಸಿರಿಗೌರಿಯ ಸದಾಶಿವ-೩


 ನಂದನ್ ಡೈರಿಯನ್ನು ಮುಚ್ಚಿಟ್ಟು ನಿರಾಳನಾದ. ಆದರೂ, ಏಕೋ ರೂಮ್ ನ ಒಳಗೆ ಇರಲಾಗದೆ, ರೂಮ್ ಹೊರಗೆ ಅಂಟಿಕೊಂಡಂತಿದ್ದ ಬಾಲ್ಕನಿಗೆ ಬಂದು ನಿಂತ. ಬಾಲ್ಕನಿಯಲ್ಲಿ ಪುಟ್ಟ ಪುಟ್ಟ ಹೂ ಕುಂಡದಲ್ಲಿ ಹೂಗಳು ಅರಳಿ ನಗುತ್ತಿದ್ದವು. ಅಲ್ಲಿ ಇದ್ದದ್ದು ಬೆತ್ತದ ತೂಗುಮಂಚ. ಅಪರ್ಣಾಳೆ ಅಲ್ಲಿ ಕುಳಿತಂತೆ ಭಾಸ. ಅಲ್ಲಿ ಕುಳಿತು ಪುಸ್ತಕ ಓದುವುದು ಅವಳ ಮೆಚ್ಚಿನ ಹವ್ಯಾಸದಲ್ಲಿ ಒಂದು. ಅವಳ ಬೇಜಾರನ್ನು ಹೋಗಲಾಡಿಸಿಕೊಳ್ಳುವ ಸ್ಥಳ ಕೂಡಾ ಅದೇ. ಅಲ್ಲಿಯೇ ಕುಳಿತು ಅವಳು ಅವಳ ಡೈರಿ ಬರೆಯುತ್ತಿದ್ದದ್ದು. ಒಂದು ದಿನವೂ ಅಶುತೋಷ್ ಅದನ್ನು ಓದಿರಲಿಲ್ಲ.ಅಷ್ಟಕ್ಕೂ, ಅಶುತೋಷ್ ಗೆ ಡೈರಿ ಬರೆಯುವ ಹವ್ಯಾಸವನ್ನು ರೂಢಿ ಮಾಡಿಸಿದ್ದು ಸಹಾ ಅವಳೇ. ಇಬ್ಬರೂ ಸಹಾ ಒಬ್ಬರ ಬದುಕಲ್ಲಿ ಮತ್ತೊಬ್ಬರು ಮೂಗು ತೂರಿಸುವ ರೂಢಿಯನ್ನಿಟ್ಟುಕೊಂಡಿರಲಿಲ್ಲ.


ಒಬ್ಬರ ಗುಟ್ಟುಗಳು ಮತ್ತೊಬ್ಬರಿಗೆ ಗೊತ್ತಿದ್ದರೂ ಸಹಾ ರಟ್ಟಾಗದಂತೆ ಗೌಪ್ಯ ವಹಿಸುತ್ತಾ ಕಾಪಾಡುವುದು ಡೈರಿ ಮಾತ್ರವೇ. ದಾಂಪತ್ಯದಲ್ಲಿ ಗುಟ್ಟುಗಳೇ ಇರಬಾರದೆನ್ನುತ್ತಾರೆ. ಗುಟ್ಟುಗಳೇ ಇಲ್ಲದ ಬದುಕಲ್ಲಿ ಸ್ವಾರಸ್ಯವಿರಲಾರದು. ದಾಂಪತ್ಯದಲ್ಲಿ ಗುಟ್ಟುಗಳಿದ್ದರೂ, ಅಂತರವಿರಬಾರದು. ಆಂತರ್ಯದ ಅಂತರಗಳು ಅನುರಾಗವನ್ನು ಕೊಲ್ಲುತ್ತವೆ. ಅಪರ್ಣಾ ಕೇಳಬೇಕೆಂದುಕೊಂಡ ಎಷ್ಟೋ ಪ್ರಶ್ನೆಗಳಿಗೆ ಅವಳು ಕೇಳುವ ಮೊದಲೇ ಉತ್ತರಿಸಿದ್ದೇನೆ. ನನ್ನ ಎಷ್ಟೋ ಗೊಂದಲಗಳಿಗೂ ಅವಳು ನನ್ನ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಂಡಂತೆ ಉತ್ತರಿಸಿದ್ದಾಳೆ. ಅನುರೂಪದ ದಾಂಪತ್ಯ ನಮ್ಮದು ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ಎಲ್ಲಾ ದಾಂಪತ್ಯದಲ್ಲಿಯೂ ಈ ಅನುರಾಗದ ಅಪಸ್ವರ ಮೂಡಿರಬಹುದೇ..? ಎಲ್ಲಾ ಅಪಸ್ವರವನ್ನು ಸುಸ್ವರ ಮಾಡಿಕೊಳ್ಳುವ ಕಲೆ ನಮಗೆ ತಿಳಿದಿರಬೇಕು. ಅಲ್ಲವೇ..? ಅಪರ್ಣಾಳನ್ನೇ ನೆನಪಿಸಿಕೊಂಡು ಬೆತ್ತದ ತೂಗುಯ್ಯಾಲೆಯಲ್ಲಿ ಕುಳಿತು ಮನಸ್ಸಿನಲ್ಲೇ ಮಂಥನ ಮಾಡಿಕೊಳ್ಳುತ್ತಿದ್ದ ಅಶುತೋಷ್. ಯಾವುದೋ ಆಲೋಚನೆಯಲ್ಲಿ ಪಕ್ಕದಲ್ಲೇ ಕೈಯಿಟ್ಟರೆ ಐದಾರು ಪುಸ್ತಕಗಳ ರಾಶಿ ಅಲ್ಲಿತ್ತು.

ಆ ಪುಸ್ತಕಗಳ ರಾಶಿಯಲ್ಲೇ ಬೆಚ್ಚಗೆ ಮಲಗಿತ್ತು ಅಪರ್ಣಾಳ ಡೈರಿ. ಒಮ್ಮೆ ಅಶುತೋಷ್ ಮನಸ್ಸಲ್ಲಿ ಸಂತೋಷದ ಅಲೆ ಎದ್ದಿತು. ಆದರೆ, ಮರುಕ್ಷಣವೇ ಮನಸ್ಸಿನಲ್ಲಿ ಗೊಂದಲದ ಭಾವ. ಮತ್ತೊಬ್ಬರ ಡೈರಿಯನ್ನು ಓದುವುದೋ, ಬೇಡವೋ ಎಂಬ ಸಂದಿಗ್ಧತೆ. ತನ್ನ ಕುರಿತು ಅವಳು ಏನು ಬರೆದಿರಬಹುದು ಎಂಬ ಕುತೂಹಲ. ಕುತೂಹಲ ಮತ್ತು ಸಂಧಿಗ್ಧತೆಯ ನಡುವಿನ ಯುದ್ಧದಲ್ಲಿ ಗೆದ್ದದ್ದು ಕುತೂಹಲ. ಮೊದಲ ಪುಟ ತೆರೆದ. ಮುದ್ದಾದ ಬರಹ

"ಬದುಕು ಮತ್ತು ಮನಸ್ಸಿನ ಪರಿಶುದ್ಧತೆ ಪಕ್ವವಾಗಿರುವುದು ಪರಿಸರದಲ್ಲಿ. ಪರಿಸರ ಎಂದರೆ ನನಗೆ ನೆನಪಾಗುವುದು ನನ್ನ "ವಸುಂಧರಾ ಎಸ್ಟೇಟ್". ವಸುಂಧರೆಯ ಮೋಹ ಬಿಡದೆ ಕಾಡುವುದು ಸೀತೆಯನ್ನು ಮಿಥಿಲೆಯ ಮಣ್ಣು ಕಾಡಿದಂತೆ... ಎಷ್ಟಾದರೂ ತವರು ಜಗತ್ತಿನ ಎಲ್ಲಾ ಸ್ಥಳಗಳಿಗಿಂತ ನೆಮ್ಮದಿ ನೀಡುತ್ತದೆ ಹಾಗೂ ಕಾಡುತ್ತದೆ. ಬೆಂಗಳೂರಿನ ಪರಿಸರಕ್ಕೆ ಹೊಂದಿಕೊಳ್ಳಲು ಆಗುತ್ತದೋ ಇಲ್ಲವೋ ಎಂಬ ಆಲೋಚನೆಯಲ್ಲಿಯೇ ಬಂದವಳನ್ನು ಬೆಂಗಳೂರು ತೆರೆದ ಮನಸ್ಸಿನಿಂದ ಸ್ವಾಗತಿಸಿತು. "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ಗೂ ಅಂತಹಾ ವ್ಯತ್ಯಾಸವೇನೂ ನನಗೆ ಕಾಣಲಿಲ್ಲ. ಸಾಫ್ಟ್ ವೇರ್ ಕಂಪನಿಯಲ್ಲಿ ವಸುಂಧರೆ ನಳನಳಿಸುತ್ತಿದ್ದಳು. "ಪ್ರಾಜೆಕ್ಟ್ ಗ್ರೀನ್(Project Green)" ಗಾಗಿ ನಾನು ಹಾಸನದ ಬ್ರಾಂಚ್ ನಿಂದ ಇಲ್ಲಿಗೆ ವರ್ಗಾಯಿಸಲ್ಪಟ್ಟಿದ್ದೆ. "ಪ್ರಾಜೆಕ್ಟ್ ಗ್ರೀನ್" ನನ್ನ ಕನಸಿನ ಕೂಸು. ಅದರ ಸಾಕಾರಕ್ಕೆ ಇದೇ ಸರಿಯಾದ ಸ್ಥಳ ಎಂದು ನಿರ್ಧರಿಸಿಬಿಟ್ಟೆ. ಅಲ್ಲಿ ಬಂದ ಮೊದಲ ದಿನ ನನಗೆ ಪರಿಚಯವಾದದ್ದು "ಕಾತ್ಯಾಯಿನಿ".

ಕಾತ್ಯಾಯಿನಿಯ ಹೆಸರನ್ನು ನೋಡಿದ ಮರುಕ್ಷಣವೇ ಅಶುತೋಷ್ ಗೆ ಮರೆತಂತಿದ್ದದ್ದೆಲ್ಲಾ ನೆನೆಪಾಯಿತು. ಸುಮ್ಮನೆ ಡೈರಿ ಮುಚ್ಚಿಟ್ಟು ಕುಳಿತ. ನಭದ ನಕ್ಷತ್ರವಾಗಿದ್ದ ಕಾತ್ಯಾಯಿನಿಯನ್ನು ಒಮ್ಮೆ ನಿಟ್ಟುಸಿರಿಟ್ಟು ನೆನೆದು ಆಗಸದತ್ತ ನೋಡಿದ. ಗಟ್ಟಿಯಾಗಿ ಒಮ್ಮೆ ಕಿರುಚಬೇಕೆನಿಸಿತ್ತು "ಕಾತ್ಯಾಯಿನಿ...." ಎಂದು. ಮನಸ್ಸಿನಲ್ಲಿ ಮತ್ತೆ ಮತ್ತೆ ಅವಳ ಹೆಸರನ್ನು ಕನವರಿಸಿದ. ಆಗಸದಲ್ಲಿನ ತಾರೆಯೊಂದು ಅವನ ಮನಸ್ಸಿನ ಕೂಗಿಗೆ ಸ್ಪಂದಿಸಿತೇನೋ ಎಂಬಂತೆ ಮಿನುಗಿತು. ಆಗ ಅಂದಿನ ತಾರೀಖನ್ನು ತಟ್ಟನೆ ನೆನಪಿಸಿಕೊಂಡ. "ಅಯ್ಯೋ, ಇಂದಿನ ದಿನವನ್ನು ನಾನು ಮರೆತದ್ದಾದರೂ ಹೇಗೆ..? ಅವಳು ನಮ್ಮನ್ನೆಲ್ಲಾ ಆಗಲಿ ಇಂದಿಗೆ ಐದು ವರ್ಷ. ಅಲ್ಲವೇ.. ?" ಎಂದು ಅವನ ಮೊಬೈಲ್ ಅನ್ನು ಹುಡುಕುತ್ತಾ ಒಳ ಬಂದ.

ಯಾಕೋ ಮನಸ್ಸಿನ್ನಲ್ಲಿ ದುಗುಡವನ್ನೆಲ್ಲಾ ಹೊತ್ತು ಒಳ ಬಂದವನಿಗೆ ಕಂಡದ್ದು ಗೋಡೆಯ ಮೇಲೆ ತೂಗು ಹಾಕಿದ್ದ "ಕಾತ್ಯಾಯಿನಿ"ಯ ದೊಡ್ಡ ಭಾವಚಿತ್ರ. ಅಪರ್ಣಾ ಹೋಗುವ ಮುನ್ನ ಹೊಸದೊಂದು ಹೂ ತಂದಿಟ್ಟಿದ್ದಳು. ಅಪರ್ಣಾ ಹಾಗೆಯೇ ಅಲ್ಲವೇ..? ಎಂತದ್ದೇ ಕೋಪವಿದ್ದರೂ, ಮುನಿಸಿದ್ದರೂ ತನ್ನ ಕೆಲಸವನ್ನು ಮರೆಯಲಾರಳು. ಯಾಕೋ ಕಾತ್ಯಾಯಿನಿ ಅಣಕಿಸಿ ನಕ್ಕಂತಾಯಿತು.

ಅವಳ ಭಾವಚಿತ್ರದ ಪಕ್ಕದಲ್ಲಿದ್ದ ಸಾಲುಗಳನ್ನೊಮ್ಮೆ ಓದಿದ. 
ದೇಹ ಮರೆಯಾಗಿರಬಹುದು
ಚೇತನವಿನ್ನೂ ಹಾಗೇ ಉಳಿದಿದೆ
ಭಾವಗಳ ಉಸಿರು ಅಲೆಅಲೆಯಾಗಿ
ಎದೆಯಂಗಳದ ಒಲವ ಸೇರಿದೆ
ಒಲವ ಲಾಲಿಯ ಹಾಡುತ್ತಲೇ ಇರುವೆ
ನಿನ್ನ ಎದೆಯ ಮಾತನ್ನೊಮ್ಮೆ ಆಲಿಸು
ಕಣ್ಮುಚ್ಚಿ ಮಲಗಿರಬಹುದು
ಭೂ ತಾಯಿಯ ಮಡಿಲಲ್ಲಿ
ಪ್ರತಿ ಕ್ಷಣವೂ ಜೀವದಂತಿರುವೆ
ನಿನ್ನೆದೆಯ ಒಲವಲ್ಲಿ, ಭಾವದೋಕುಳಿಯಲ್ಲಿ

ಅಪರ್ಣಾಳೇ ಬರೆದು, ಕಾತ್ಯಾಯಿನಿಯ ಭಾವಚಿತ್ರದ ಜೊತೆ ಅಚ್ಚು ಮಾಡಿಸಿದ್ದ ಸಾಲುಗಳು. ಒಬ್ಬಳು ಜೀವಂತ ಸ್ಫೂರ್ತಿ, ಮತ್ತೊಬ್ಬಳು ಒಲುಮೆಯ ಚಿಲುಮೆ. 

ಮೊಬೈಲ್ ಸದ್ದಾದಂತಾಗಿ ನೋಡಿದರೆ, 20 ಮಿಸ್ ಕಾಲ್ ಗಳಿದ್ದವು. ಮೈನಾ ಅಮ್ಮನ ಕಾಲ್ ಗಳು 19. ಮತ್ತೊಂದು ನಂದನ್ ನದ್ದು. ಮೊದಲು ಯಾರಿಗೆ ಮಾಡಲಿ ಎಂದು ಆಲೋಚಿಸುತ್ತಿರುವಾಗಲೇ ಕಾತ್ಯಾಯಿನಿಯ ನೆನಪಾಗಿ ಮೈನಾ ಅಮ್ಮನ ಮೊಬೈಲ್ಗೆ ಕರೆ ಮಾಡಲು ನಿರ್ಧರಿಸಿ ಮೈನಾವತಿಯ ಮೊಬೈಲ್ ಗೆ ಕರೆ ಮಾಡಿದ. ಐದಾರು ಬಾರಿ ರಿಂಗಣಿಸಿದರೂ ಕರೆ ಸ್ವೀಕರಿಸದಿದ್ದಕ್ಕೆ ಲ್ಯಾಂಡ್ ಲೈನ್ ಗೆ ಕರೆ ಮಾಡಿದ. ಕರೆ ಸ್ವೀಕರಿಸಿದ್ದು ಕುಡಿದ ಮತ್ತಿನಲ್ಲಿದ್ದ "ವಿರಾಜ್". ಧ್ವನಿ ಕೇಳಿಯೇ ಅಶುತೋಷ್ ಗೆ ಮೈಯೆಲ್ಲಾ ನಖಶಿಕಾಂತ ಉರಿದಂತಾಯಿತು. ಕರೆ ತುಂಡರಿಸಿದವನಿಗೆ ನೆನಪಾದದ್ದು ಅದೇ ಮನೆಯಲ್ಲಿ ವಾಚ್ ಮ್ಯಾನ್ ಆಗಿದ್ದ "ಸುಂದ್ರಪ್ಪ". ತಕ್ಷಣವೇ ಡಯಲ್ ಮಾಡಿದ. ಸುಂದ್ರಪ್ಪ ಹೇಳಿದ ಮಾತು ಕೇಳಿ ಅಶುತೋಷ್ ಗೆ ಗಾಬರಿಯಾಯಿತು. "ಅಮ್ಮಾವ್ರು ನಿಮ್ಮ ಮನೆಗೇ ಹೋಗುತ್ತೇನೆ ಎಂದು ಹೊರಟು ಒಂದು ಗಂಟೆಯಾಯಿತು. ಇನ್ನೂ ಬಂದಿಲ್ಲವಾ..? ಇನ್ನೇನು ಬರಬಹುದು" ಎಂದೇಳಿ ಕರೆ ತುಂಡರಿಸಿದ. 


ಇತ್ತ ನಂದನ್ ನ ಕರೆ ಸತತವಾಗಿ ಬರುತ್ತಲೇ ಇತ್ತು. ತಕ್ಷಣವೇ ಸ್ವೀಕರಿಸಿದ. "ಹಲೋ ಅಶು, ಇಲ್ಲಿ accident.." ಎಂದು ಮಾತನಾಡುತ್ತಿರುವಾಗಲೇ ಕಾಲ್ ಕಟ್ ಆಗಿತ್ತು. ಅಶುತೋಷ್ ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಗಾಬರಿಯಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೊರಟ. ಅಪರ್ಣಾಳ ಮೇಲೆ ಅವನು ಎಷ್ಟು ಅವಲಂಬಿತನಾಗಿದ್ದ ಎಂದು ಅವನಿಗೆ ಅರಿವಾಗುತ್ತಲಿತ್ತು. ಅವಳಿದ್ದಾಗ ಮೊಬೈಲ್ ಚಾರ್ಜ್ ಹಾಕಲು ಕೂಡಾ ಅವಳೇ ನೆನಪಿಸುತ್ತಿದ್ದಳು. ಆದರೆ, ಈಗ...?

ಅಪ್ಪ, ಅಮ್ಮ ಮನೆಗೆ ಬಂದಿಲ್ಲ, ಅಪರ್ಣಾ, ಅಥರ್ವನಿಗೇನಾದರೂ ಆಯಿತೇ..? ಮೈನಾ ಅಮ್ಮ ಕೂಡಾ ಇನ್ನೂ ತಲುಪಿಲ್ಲ. ವಾಸ್ತವದ ಬಿಸಿ, ಕೆಟ್ಟ ಆಲೋಚನೆಗಳ ಮಧ್ಯೆ ಬಂಧಿಯಾಗಿದ್ದ ಅಶುತೋಷ್

*********

ಇತ್ತ ಮನೆಗೆ ಬಂದಾಗಲೇ ಹೊರ ಹೊರಟಿದ್ದ ಮೈನಾವತಿ, ಅಪರ್ಣಾಳ ಆಳೆತ್ತರದ ಫೋಟೋ, ಕೆಲಸದವರ ಅಸಡ್ಡೆ ಎಲ್ಲವೂ ವಿರಾಜ್ ನ ಕೋಪವನ್ನು ತಾರಕಕ್ಕೇರಿಸಿತ್ತು. ಮೊದಲೇ ಕುಡಿದಿದ್ದ, ಈಗ ಮತ್ತಷ್ಟು ವ್ಯಗ್ರನಾಗಿ ಕುಡಿಯಲು ಕುಳಿತಿದ್ದ. ಬಂದ ಫೋನ್ ಕಾಲ್ ನಲ್ಲಿಯೂ ಯಾರೂ ಮಾತನಾಡದಿರುವುದು ಮತ್ತಷ್ಟು ಸಿಟ್ಟು ತರಿಸಿ ರಂಪ ಮಾಡಲು ಆರಂಭಿಸಿದ್ದ. 

ಆಗಲೇ, ಅವನ ಮೊಬೈಲ್ ಗೆ ಬಂದ ಕರೆಯನ್ನು ಸ್ವೀಕರಿಸಿದವನಿಗೆ ಹೇಳಿದ ವಿಷಯ ಕೇಳಿ ಕುಡಿದ ಮತ್ತೆಲ್ಲಾ ಒಮ್ಮೆಲೇ ಇಳಿದಿತ್ತು.

(ಸಶೇಷ)

(ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಗಳನ್ನು ತಿಳಿಸಿ.ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹದ ಸ್ಫೂರ್ತಿ)


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 16, 2020

ಸಿರಿಗೌರಿಯ ಸದಾಶಿವ (ಅಧ್ಯಾಯ-೨)

 


ಬಂದ ಕರೆಯನ್ನು ಸ್ವೀಕರಿಸುವ ಮನಸ್ಸಿಲ್ಲದಿದ್ದರೂ ಸ್ವೀಕರಿಸಲೇಬೇಕಿತ್ತು. ಇದು ಅಪರ್ಣಾಳಿಂದ ಕಲಿತ ಪಾಠ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಚರ್ಯೆಗೂ ಕೆಲಸದ ಸಮಯವೆಂದೇ ಮೀಸಲಾಗಿ ಇಡಲಾಗದು. ಹಾಗೆಂದು, ನಮ್ಮ ವೈಯಕ್ತಿಕ ಬದುಕನ್ನು ಬಿಟ್ಟು ಕೆಲಸವೇ ಮುಖ್ಯ ಎಂದು ಕುಳಿತುಕೊಳ್ಳಲು ಸಹಾ ಆಗದು. ವೈಯಕ್ತಿಕ ಬದುಕು ಮತ್ತು ಕೆಲಸ ಎರಡನ್ನೂ ಸಮತೋಲನಗೊಳಿಸಲು ಕಲಿಯಬೇಕು. ಆಗಷ್ಟೇ, ಯಾವುದೂ ಹೊರೆ ಎನಿಸದು. ಅಕಸ್ಮಾತ್, ಆ ಕ್ಷಣಕ್ಕೆ ನಮಗೆ ಆ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಕರೆ ಸ್ವೀಕರಿಸಿ ಹೇಳಿದರೆ ಮತ್ತೊಬ್ಬರಿಗೂ ಅದರಿಂದ ತೊಂದರೆಯಾಗದು. ಇಲ್ಲವಾದಲ್ಲಿ ನಮ್ಮ ತೀರ್ಮಾನವನ್ನು ಕಾಯುತ್ತಾ ಕುಳಿತೋ ಅಥವಾ ಅವರದ್ದೇ ಸ್ವಂತ ನಿರ್ಧಾರವನ್ನು ತೆಗೆದುಕೊಂಡೋ ಕೆಲಸವನ್ನು ಎಡವಟ್ಟು ಮಾಡಿ ಬಿಡಬಹುದು.


ಒಂದೊಂದು ಕೆಲಸದ ಹಿಂದೆಯೂ ಅಶುತೋಷ್ ಗೆ ಅಪರ್ಣಾ ನೆನಪಾಗುತ್ತಿದ್ದಳು. ಕರೆ ಸ್ವೀಕರಿಸಿದ ಅಶುತೋಷ್. "ಸರ್, ಅಪರ್ಣಾ ಮೇಡಂ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ನಿಮಗಾಗಿ ಕಾಯುತ್ತಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಏನು ಮಾಡುವುದು?" ಕೇಳಿದರು ನಂದನ್. 

ನಂದನ್ ವರ್ಮಾ "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್. ಅಶುತೋಷ್ ಮುಖರ್ಜಿಯ ನಂತರದ ಸ್ಥಾನದಲ್ಲಿದ್ದದ್ದು ನಂದನ್ ವರ್ಮಾ. ನಂದನ್ ಬರೀ ಕಂಪನಿಯಲ್ಲಿ ಮಾತ್ರವಲ್ಲ ಅಶುತೋಷ್ ನ ಬದುಕಿನ ಬಹು ಮುಖ್ಯ ಸ್ನೇಹಿತ. ಅಪರ್ಣಾ ಅಶುತೋಷ್ ನ ಬದುಕಿನಲ್ಲಿ ಬಂದಾಗ ಎಲ್ಲರಿಗಿಂತ ಹೆಚ್ಚು ಸಂತಸಪಟ್ಟದ್ದು ನಂದನ್. 

"ನಂದಿ, ನನ್ನ ಮೇಲೆ ಕೋಪ ಬಂದಿರುವ ಹಾಗಿದೆ ನಿನಗೆ" ಎಂದು ಕೇಳಿದ ಅಶುತೋಷ್. "ಅಯ್ಯೋ ಸರ್, ನಿಮ್ಮ ಮೇಲೆ ಕೋಪ ಮಾಡಿಕೊಳ್ಳಲು ನಾನು ಯಾರು? ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಒಬ್ಬ ಸಾಮಾನ್ಯ ನೌಕರ ನಾನು. ಅದನ್ನೆಲ್ಲಾ ಬಿಡಿ ಸರ್. ಈಗ, ರಾಜೀನಾಮೆ ಪತ್ರವನ್ನು ಏನು ಮಾಡುವುದು ಹೇಳಿ" ಎಂದನು ನಂದನ್. "ಎಲ್ಲರೂ ಯಾಕೆ ಹೀಗೆ ಮಾತಲ್ಲೇ ನನ್ನನ್ನು ಕೊಲ್ಲುತ್ತಿದ್ದೀರಾ? ಇದಕ್ಕಿಂತ ಒಮ್ಮೆಲೆ ನಮ್ಮನ್ನು ಕೊಂದುಬಿಡಿ. ಅದೇ ಕ್ಷೇಮ" ಎಂದನು ಅಶುತೋಷ್. ನಂದನ್ ಅಶುತೋಷ್ ಮಾತಿಗೆ ಬೇಸರ ಪಟ್ಟುಕೊಂಡರೂ ತೋರ್ಪಡಿಸಿಕೊಳ್ಳದೆ, "ಸರ್,  ಆ ವಿಚಾರವಾಗಿ ಆಮೇಲೆ ಚರ್ಚೆ ಮಾಡಬಹುದು. ಹೆಣ್ಣು ಮಕ್ಕಳನ್ನು ಹೆಚ್ಚು ಹೊತ್ತು ಕಾಯಿಸುವುದು ಸರಿ ಇರುವುದಿಲ್ಲ. ಈಗ ನಾನು ಅವರಿಗೆ ಏನೆಂದು ಉತ್ತರಿಸಲಿ ? ಅದನ್ನು ಹೇಳಿ" ಎಂದನು ನಂದನ್.

ಕ್ಷಣ ಕಾಲ ಯೋಚಿಸಿದ ಅಶುತೋಷ್ " ಅವರ ರಾಜೀನಾಮೆಯನ್ನು ಸ್ವೀಕರಿಸಬೇಕಾದವನು ನಾನು ಮಾತ್ರ. ಅವರು ಕೆಲಸಕ್ಕೆ ಸೇರುವಾಗ ಬರೆದುಕೊಟ್ಟಿರುವ ಪತ್ರದಲ್ಲಿ ಸಹಾ ಹಾಗೆಯೇ ನಮೂದಿಸಲಾಗಿದೆ. ಅವರಿಗೆ ತಿಳಿಸಿ ನಾಳೆ ನಾನು ಬಂದಾಗ ನನ್ನ ಬಳಿಯೇ ಬಂದು ಅವರ ರಾಜೀನಾಮೆಯನ್ನು ಸಲ್ಲಿಸಲು. ಹಾಗೆಯೇ, ಮತ್ತೊಂದು ವಿಷಯವನ್ನು ಸಹಾ ಸ್ಪಷ್ಟ ಪಡಿಸಿಬಿಡಿ ಅವರ ನೋಟಿಸ್ ಪಿರಿಯೆಡ್ ಮೂರು ತಿಂಗಳ ಕಾಲ. ಅದೂ ಸಹಾ ಆ ಪತ್ರದಲ್ಲಿಯೇ ಸ್ಪಷ್ಟವಾಗಿ ನಮೂದಾಗಿದೆ. ಆವರು ಕೆಲಸವನ್ನು ಸ್ವ ಇಚ್ಛೆಯಿಂದ ಬಿಡುವ ಹಾಗಿದ್ದರೆ ಮೂರು ತಿಂಗಳ ಮೊದಲೇ ತಿಳಿಸಿ ತಮ್ಮ ಎಲ್ಲಾ ಕೆಲಸವನ್ನೂ ಆ ಸಮಯದಲ್ಲಿ ಪೂರೈಸಬೇಕು. ಅದು, ಸಾಧ್ಯವಾಗದಿದ್ದಲ್ಲಿ 25 ಲಕ್ಷ ಹಣವನ್ನು ಪಾವತಿಸಿ ಆ ಕ್ಷಣವೇ ಕೆಲಸವನ್ನು ಬಿಡಬಹುದು." ಅಶುತೋಷ್ ನ ಮನದಲ್ಲಿ ಸ್ಪಷ್ಟ ತೀರ್ಮಾನವೊಂದು ರೂಪುಗೊಂಡಿತ್ತು. 


ನಂದನ್ ಗೆ ಅಶುತೋಷ್ ನ ನಿರ್ಧಾರ ಕೇಳಿ ಅವನ ಉಪಾಯದ ಸುಳಿವು ಹತ್ತಿತ್ತು. ಮುಖದಲ್ಲಿ ಕಿರುನಗೆಯೊಂದು ಮೂಡಿ ನೆಮ್ಮದಿಯ ಭಾವ ನೆಲೆಸಿತು. "ಹಾಗೇ ಹೇಳುವೆ ಸರ್, ನನ್ನ ಕೆಲಸವನ್ನೆಲ್ಲಾ ಮುಗಿಸಿ ನಂತರ ಕರೆ ಮಾಡುವೆ ಸರ್" ಎಂದ. "ಈಡಿಯೆಟ್, ಇನ್ನೂ ಕೋಪ ಹೋಗಿಲ್ವಾ? ಸರ್ ಅಂತಾನೇ ಕರೆಯುತ್ತಿದ್ದೀಯಲ್ಲಾ?" ಎಂಬ ಪ್ರಶ್ನೆಗೆ "ಅಪರ್ಣಾ ಮೇಡಂ ಇಲ್ಲೇ ಕುಳಿತ್ತಿದ್ದಾರೆ ಸರ್, ಅವರನ್ನು ಹೆಚ್ಚು ಕಾಯಿಸುವುದಿಲ್ಲ. ನೀವು ಹೇಳಿದ ಹಾಗೆಯೇ ಮಾಡುವೆ " ಎಂದು ಗಂಭೀರವಾಗಿ ಮಾತನಾಡುತ್ತಿದ್ದ ನಂದನ್ ನನ್ನು ನೋಡಿದ ಅಪರ್ಣಾ ನಿಟ್ಟುಸಿರಿಟ್ಟಳು.

"ಅಶು, ನಿನಗಾಗಿ ನಾನು ಬಹಳಷ್ಟು ಬದಲಾದೆ. ಆದರೆ, ನೀನು..? ಬದಲಾಗಿದ್ದೆ ಎಂದುಕೊಂದಿದ್ದೆ. ಇಲ್ಲ, ನಿನ್ನ ಬದುಕಿನಲ್ಲಿ ನಾನಿಲ್ಲ. ನಿನ್ನ ಬದುಕಿನ ಒಂದು ಭಾಗವಷ್ಟೇ ನಾನು. ನಾನಿಲ್ಲದೆಯೂ ನೀನು ಬದುಕಬಲ್ಲೆ. ಇಲ್ಲವಾದಲ್ಲಿ ನನ್ನನ್ನು ಇಷ್ಟು ಸುಲಭವಾಗಿ ಹೋಗಲು ಬಿಡುತ್ತಿದ್ದೆಯಾ ? ಹಿಮದಬಂಡೆ ಕರಗಿ ನೀರಾದರೆ ಕಲ್ಲು ಕರಗಿತು ಎಂಬ ಭ್ರಮೆಗೆ ಬಿದ್ದು ಬಿಡುತ್ತೇವೆ. ಆದರೆ, ವಾಸ್ತವವಾಗಿ ಕೂಡಾ ಯೋಚಿಸಬೇಕಲ್ಲವೇ..? ಕರಗಿದ ನೀರಿನ ಪ್ರತಿ ಬಿಂದುವು ಸಹಾ ಮತ್ತೆ ಹಿಮದ ಗಡ್ಡೆಯಾಗಿ ಮತ್ತಷ್ಟು ಕಾಠಿಣ್ಯವನ್ನೇ ನೆನಪಿಸುತ್ತದೆ. ಬದುಕಿನ ಯಾವುದಾದರೂ ಭಾಗಕ್ಕೆ ಹಾನಿಯಾದರೆ ಅದನ್ನು ಕತ್ತರಿಸಿ ಎಸೆದು ಬಿಡುತ್ತಾರೆ. ಅದಕ್ಕೆ ಪರ್ಯಾಯವಾಗಿ ಮತ್ತೊಂದು ಭಾಗವನ್ನು ಜೋಡಿಸುತ್ತಾರೆ. ಆದರೆ, ಉಸಿರಿಗೆ ಧಕ್ಕೆಯಾದರೆ..? ನನ್ನ ಉಸಿರು ನೀನು. ನಿನ್ನ ಸಂತೋಷ ನೆಮ್ಮದಿಗೆ ನಾನು ಏನನ್ನಾದರೂ ಮಾಡಬಲ್ಲೆ. ಈಗ ನನ್ನೊಡನೆ ಅಥರ್ವ ಇದ್ದಾನೆ. ಹೆರಲಿಲ್ಲ, ಹೊರಲಿಲ್ಲ ಆದರೂ ಅವನು ನನ್ನ ಮಗ, ನಾನು ಅವನಮ್ಮ. ಈ ಸತ್ಯ ಎಂದಿಗೂ ಬದಲಾಗದು. ಅವನಲ್ಲಿಯೇ ನಿನ್ನನ್ನು ಕಾಣುವೆ. ಅವನು ನಿನ್ನ ಮಗನೂ ಅಲ್ಲ, ಅವನು ನಿನ್ನ ಮಗನಾಗಿದ್ದರೆ ಇಷ್ಟು ಸುಲಭವಾಗಿ ನೀನು ಅವನನ್ನು ಬಿಟ್ಟು ಬಿಡುತ್ತಿದ್ದೆಯಾ ?" ಅಪರ್ಣಾಳ ಮನಸ್ಸಿನಲ್ಲಿ ಎಷ್ಟೋ ಪ್ರಶ್ನೆಗಳು ಮೂಡುತ್ತಿದ್ದವು. ಆದರೆ, ಅವಳ ಎಷ್ಟೋ ತಿಳುವಳಿಕೆಗಳು ತಪ್ಪಾಗಿದ್ದವು. ಕೆಲವೊಮ್ಮೆ ನಾವು ನಮ್ಮದೇ ಮೂಗಿನ ನೇರಕ್ಕೆ ಯೋಚಿಸುತ್ತೇವೆ. ಮತ್ತೊಬ್ಬರ ಸ್ಥಾನದಲ್ಲಿ ನಿಂತು ಒಂದು ಕ್ಷಣ ಯೋಚಿಸಿದ್ದರೂ ಎಷ್ಟೋ ತಪ್ಪು ತಿಳುವಳಿಕೆಗಳು ದೂರವಾಗುತ್ತವೆ. ಅಪರ್ಣಾಳ ಯೋಚನೆಯ ತಂತುವನ್ನು ಕಡಿದ್ದದ್ದು ನಂದನ್ ನ ಧ್ವನಿ.

"ಮೇಡಂ, ದಯವಿಟ್ಟು ಕ್ಷಮಿಸಿ. ಈ ರಾಜೀನಾಮೆ ಪತ್ರವನ್ನು ಸ್ವೀಕರಿಸುವ ಅಧಿಕಾರ ನನಗಿಲ್ಲ. ಅಶುತೋಷ್ ಸರ್ ಅಥವಾ ಮಹಾಂತೇಶ್ ಸರ್ ಗೆ ಮಾತ್ರ ಈ ಅಧಿಕಾರ ಇರುವುದು. ನಾಳೆ ಆಫೀಸ್ ಸಮಯದಲ್ಲಿ ಬಂದರೆ ಯಾರಾದರೂ ಒಬ್ಬರಿಗೆ ನಿಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು. ಈ ನಿಯಮಗಳು ನೀವು ಕೆಲಸಕ್ಕೆ ಸೇರಿದಾಗಿನ ಕರಾರು ಪತ್ರದಲ್ಲಿ ನಮುದಾಗಿವೆ" ಎಂದು ಹೇಳಿದ. ಬೇಕೆಂದೇ ನೋಟಿಸ್ ಪಿರಿಯೆಡ್ ವಿಚಾರವನ್ನು ತಿಳಿಸಲಿಲ್ಲ. ಅಪರ್ಣಾಳಿಗೆ ಮಿಶ್ರ ಭಾವ. "ಸರಿ ಸರ್, ಹಾಗಾದರೆ ನಾಳೆ ಬಂದು ಭೇಟಿಯಾಗುವೆ" ಎಂದು ಹೊರಟಳು. ನಂದನ್ ಗೆ ಅವಳ ಗಾಂಭೀರ್ಯ ಎಂದರೆ ಗೌರವ. ವೈಯಕ್ತಿಕ ವಿಚಾರವನ್ನು ಕೇಳುವ ಧೈರ್ಯವಾಗಲಿಲ್ಲ. "ಮೇಡಂ, ಮನೆಗೆ ಹೋಗುವ ವ್ಯವಸ್ಥೆ ಮಾಡಿಸಲೇ..? ಈಗಾಗಲೇ ಕತ್ತಲಾಗಿದೆ" ಎಂದು ಕೇಳಿದ್ದಕ್ಕೆ "ಬದುಕೇ ಕತ್ತಲಲ್ಲಿದ್ದೆ. ಅದರ ಎದುರು ಇದು ಏನೇನೂ ಅಲ್ಲ. ನಿಮ್ಮ ಕಾಳಜಿಗೆ ಥ್ಯಾಂಕ್ಯೂ ಸರ್" ಎಂದು ಹೇಳಿ ಅಲ್ಲಿಂದ ಹೊರಹೋದಳು ಅಪರ್ಣಾ.

ನಂದನ್ ನ ಕರೆ ಬಂದ ನಂತರ ಕೊಂಚ ನಿರಾಳನಾಗಿದ್ದ ಅಶುತೋಷ್. ಮತ್ತೆ ಡೈರಿಯನ್ನು ಬರೆಯಲು ಮುಂದುವರಿಸಿದ.
"ಮರಳಿ ಬಂದುಬಿಡೆ ನನ್ನ ಸಿರಿಗೌರಿ
ಎನ್ನ ಎದೆಯಂಗಳದ ದೇವಿ ನೀನು
ಮೌನದ ಕಿಡಿ ಹೊತ್ತಿಸದೆ
ಮಾತಿನ ಸಿಡಿಗುಂಡ ಸಿಡಿಸದೆ
ನನ್ನ ಅರ್ಧವನ್ನೇ ನೀಡಿಬಿಡುವೆ"
ಡೈರಿಯಲ್ಲಿ ಈ ಸಾಲುಗಳನ್ನು ಬರೆದು ಮುಚ್ಚಿಟ್ಟು ಬಿಟ್ಟ. ಕನಸಿನಂಗಳಕ್ಕೆ ಜಾರಿಹೋದ. ಮುಂಬರುವ ಅಪಾಯದ ಸೂಚನೆ ಅವನಿಗೆ ಕೊಂಚವಾದರೂ ಇದ್ದಿದ್ದರೆ ಅವನು ನೆಮ್ಮದಿಯಿಂದಿರಲು ಸಾಧ್ಯವೇ ಇರುತ್ತಿರಲಿಲ್ಲ

****************

"ವಸುಂಧರಾ ನಿವಾಸದಲ್ಲಿ" ಮೈನಾವತಿ ಶತಪಥ ಹೆಜ್ಜೆ ಹಾಕುತ್ತಾ ತಿರುಗುತ್ತಿದ್ದರು. ಯಾಕೋ ಎದೆಯಲ್ಲಿ ಹೇಳಲಾರದ ತಳಮಳ. ನಾಳೆಗೆ ಅವಳು ನನ್ನಿಂದ ದೂರವಾಗಿ ಐದು ವರ್ಷ. ಯಾಕೋ ಆ ದಿನ ತಳಮಳವಾಗುತ್ತಿದ್ದಂತೆ ಈ ದಿನವೂ ನನ್ನೆದೆಯಲ್ಲಿ ತಳಮಳ. ಅವನೊಡನೆ ಮಾತನಾಡಿದರೆ ಕೊಂಚವಾದರೂ ನನ್ನ ತಳಮಳ ಕಡಿಮೆಯಾಗಬಹುದು ಎಂದು ಅವನಿಗೆ ಕರೆ ಮಾಡಿದರು. ಫೋನ್ ನ ಪ್ರತಿಯೊಂದು ರಿಂಗ್ ಗೂ ತಳಮಳ ಹೆಚ್ಚಾಗುತ್ತಿತ್ತು. ಸೆಕೆಂಡ್ ಗಳು   ಗಂಟೆಗಳಂತೆ ಭಾಸವಾಗತೊಡಗಿದವು.

(ಸಶೇಷ)

(ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪ್ರತಿಕ್ರಿಯೆಗಳೇ ಸ್ಫೂರ್ತಿ)

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 9, 2020

ಸಿರಿಗೌರಿಯ ಸದಾಶಿವ (ಅಧ್ಯಾಯ-೧)

"ಒಲುಮೆಯನ್ನು ಬೆಳೆಸುವುದರಲ್ಲಿ ಅಥವಾ ಕತ್ತರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುವುದು ಮೌನ. ಮಾತು ಆಡಿ ಮನಸ್ಸನ್ನು ಛಿದ್ರ-ಛಿದ್ರ ಮಾಡಿದರೆ, ಮೌನ ಏನನ್ನೂ ಮಾಡದೆ ಮನಷ್ಯನ ಮನಸ್ಸನ್ನೇ ಕೊಂದು ಬಿಡುತ್ತದೆ. ನನ್ನ ಮೇಲೆ ನಿಮಗೆ ಯಾಕೆ ಈ ಉಪೇಕ್ಷೆ ? ನಿಮ್ಮ ಸಿಟ್ಟಿನಿಂದ ಮನಸ್ಸು ಘಾಸಿಯಾಗಿಲ್ಲ, ನಿರ್ಲಕ್ಷ್ಯ, ಮೌನ ನನ್ನನ್ನು ಇಂಚು ಇಂಚಾಗಿ ಕೊಲ್ಲುತ್ತಿದೆ. ಒಮ್ಮೆಯಾದರೂ ನನ್ನ ಈ ಒಂದು ಪ್ರಶ್ನೆಗೆ ಉತ್ತರ ನೀಡಿ. "
ಅಶುತೋಷ್ ನನ್ನು ಎಲ್ಲಾ ರೀತಿಯಲ್ಲಿಯೂ ಕಾಡಿ ಬೇಡಿದರೂ ಅವನು ಅಪರ್ಣಾಳ ಆ ಒಂದು ಪ್ರಶ್ನೆಗೆ ಉತ್ತರ ನೀಡಲೊಲ್ಲ.

"ನನ್ನನ್ನು ನೋಯಿಸುವುದೇ ನಿಮ್ಮ ಉದ್ದೇಶವೇ ? ನನ್ನ ಬದುಕನ್ನೇ ನಿಮಗಾಗಿ ಮೀಸಲಿಟ್ಟಿದ್ದೇನೆ. ನನ್ನ ಮೇಲೆ ಇನ್ನೂ ಕರುಣೆ ಬಾರದೇ..?  ನಿಮ್ಮ ಉದ್ದೇಶ ಏನು ಎಂಬುದನ್ನು ಬಾಯಿ ಬಿಟ್ಟು ತಿಳಿಸಿಬಿಡಿ. ಆಗಲಾದರು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಸಿದರೆಯಾದರೂ ಮುಂದೆ ಎಂದೂ ನಿಮ್ಮನ್ನು ಪ್ರಶ್ನಿಸಲಾರೆ. ನನ್ನ ಎಷ್ಟೋ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರೆತಿಲ್ಲ, ಈ ಪ್ರಶ್ನೆಯೂ ಅದೇ ಪಟ್ಟಿಗೆ ಸೇರಿ ಬಿಡಲಿ." 
ಅಪರ್ಣಾಳ ಪ್ರತಿ ಮಾತೂ ಸಿಡಿಗುಂಡಿನಂತೆ ಅವನ ಎದೆ ಸೀಳುತ್ತಿದ್ದರೂ ಅವನು ಅವನ ನಿರ್ಧಾರದಲ್ಲಿ ಅಚಲ. ಕಲ್ಲು ಕೂಡಾ ಕರಾಗಿಬಿಡುತ್ತಿತ್ತೇನೋ ಅಪರ್ಣಾಳ ಕಣ್ಣೀರಿಗೆ, ಅವಳ ಮನದ ನೋವಿಗೆ.. ಆದರೆ, ಹಿಮದ ಬಂಡೆಯಂತೆ ತಣ್ಣಗೆ ನಿಂತಿದ್ದ ಅಶುತೋಷ್ ಮುಖರ್ಜಿ. 

ಆಚಲತೆ ಮುಖದಲ್ಲಿ ಮನೆ ಮಾಡಿತ್ತು, ಕರಗದಂತಹಾ ಕಲ್ಲೆದೆಯ ಹಿಂದೆ ಮನಸ್ಸು ಮಮ್ಮಲ ಮರುಗುತ್ತಿತ್ತು, "ಇದೊಂದು ವಾರ ಸುಮ್ಮನಿದ್ದರೆ ಎಲ್ಲವನ್ನೂ ಸರಿ ಮಾಡಿಬಿಡುವೆ, ಕ್ಷಮಿಸಿಬಿಡು ಅಪ್ಪು" ಎಂದು ಮನಸ್ಸಿನಲ್ಲಿಯೇ ಅವಳ ಕ್ಷಮೆ ಕೇಳಿ ತಿರುಗಿಯೂ ನೋಡದಂತೆ ಮನೆಯಿಂದ ಹೊರ ನಡೆದುಬಿಟ್ಟ.

ಸಣ್ಣ ಉಪೇಕ್ಷೆ ಕೂಡಾ ಕೆಲವೊಮ್ಮೆ ಬದುಕಿನ ದೊಡ್ಡ ದುರಂತಗಳಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಆದರೆ, ಅದು ಆ ಕ್ಷಣಕ್ಕೆ ಅರಿವಿಗೆ ಬರುವುದಿಲ್ಲ ಅಷ್ಟೇ. 

ಅಶುತೋಷ್ ಮತ್ತೆ ತಿರುಗಿ ಮನೆಗೆ ಬಂದಾಗ ನಿತ್ಯದಂತೆ ಸ್ವಾಗತಿಸಲು, ಸಂತೈಸಲು ಅವಳು ಬರಲಿಲ್ಲ. ಅವನ ಮನಸ್ಸಿನಲ್ಲಿ ಕಸಿವಿಸಿ ಮೂಡುತ್ತಿತ್ತು. ಅಷ್ಟು ದೊಡ್ಡ ಮನೆಯಲ್ಲಿ ತಾನು ಒಂಟಿ ಎಂಬ ಭಾವನೆ ಬಹಳಷ್ಟು ವರ್ಷಗಳ ನಂತರ ಮೂಡಿತು. 

ಆಮೆ ತನ್ನ ಚಿಪ್ಪಿನಲ್ಲಿ ಹುದುಗುವಂತೆ ತನ್ನ ಕೆಲಸ, ಗಾಂಭೀರ್ಯ, ಸಿಟ್ಟಿನಿಂದ ತನ್ನನ್ನು ತನ್ನೊಳಗೇ ಬಚ್ಚಿಟ್ಟುಕೊಂಡಿದ್ದರ ಫಲ ಎದ್ದು ಕಾಣುತ್ತಿತ್ತು. ಅಪರ್ಣಾ ತನ್ನ ಜೊತೆಯಿರುವಾಗ ಎಲ್ಲರೂ, ಎಲ್ಲವೂ ಸಹಜವಾಗಿಯೇ ಕಾಣುತ್ತಿತ್ತು ಆದರೆ ಈಗ ಅವಳ ಅನುಪಸ್ಥಿತಿಯಲ್ಲಿ ಎಲ್ಲವೂ ಶೂನ್ಯವಾಗಿಯೇ ಕಾಣುತ್ತಲಿದೆ. ಸುಮ್ಮನೆ ತನ್ನಷ್ಟಕ್ಕೆ ನಡೆದು ರೂಮಿನ ಒಳ ಸೇರಿ ಬಿಟ್ಟ ಅಶುತೋಷ್. ಮತ್ತೆ, ಕೆಲಕ್ಷಣದಲ್ಲಿಯೇ ಅವನ ಎದೆ ನಡುಗಿಸುವ ಸತ್ಯ ಅವನಿಗೆ ತಿಳಿಯಲಿತ್ತು. 

ಯಾರ ಮೇಲೆ ಎಷ್ಟೇ ಕೋಪವಿದ್ದರೂ, ತಾನೆಷ್ಟೇ ಕೂಗಾಟ, ಹಾರಾಟ ನಡೆಸಿದ್ದರೂ ಮತ್ತೆ ಅವರ ಕ್ಷಮೆ ಕೇಳಲು ಅವರ ಮುಂದೆ ತನ್ನೆಲ್ಲಾ ದೊಡ್ಡಸ್ತಿಕೆಯನ್ನೂ ಮೂಟೆಕಟ್ಟಿ ಪಕ್ಕಕ್ಕಿಟ್ಟು ಸಣ್ಣ ಮಗುವಿನಂತಾಗಿ ಬಿಡುತ್ತಿದ್ದ. ಅವನ ಈ ಗುಣವೇ ಅಪರ್ಣಾಳಿಗೆ ಅಚ್ಚುಮೆಚ್ಚು. ಆದರೆ, ಅವಳ ವಿಚಾರದಲ್ಲಿ ಮಾತ್ರ ಅಶುತೋಷ್ ಕಲ್ಲಿನಂತಾಗಿದ್ದ. 

ಸಣ್ಣ-ಪುಟ್ಟ ಖುಷಿಯ ವಿಚಾರಗಳನ್ನು ಹಂಚಿಕೊಂಡಾಗ ಖುಷಿಪಡುವವರಿರಬೇಕು. ಸೋಲಿನಿಂದ ಮೇಲೆತ್ತಲು, ಆತ್ಮಸ್ಥೈರ್ಯ ತುಂಬಲು ನಮ್ಮವರೆನಿಸಿಕೊಂಡವರಿರಬೇಕು. ಸಣ್ಣ ಗೆಲುವನ್ನೂ ಸಂಭ್ರಮಿಸಲು ಹೇಳಿಕೊಟ್ಟ ನಿನಗೇ ಮೊದಲು ನಾನು ಈ ನನ್ನ ದೊಡ್ಡ ಗೆಲುವಿನ ವಿಚಾರವನ್ನು ತಿಳಿಸಬೇಕು, ಅದಕ್ಕೂ ಮೊದಲು ನಾನು ನಿನ್ನ ಕ್ಷಮೆ ಕೇಳಬೇಕು, ಇದೊಂದು ವಾರ ಸುಮ್ಮನಿರಲು ಹೇಳಬೇಕು ಎಂದು ಮನಸ್ಸಿನಲ್ಲಿಯೇ ತಿಳಿಸಬೇಕು ಎಂದು ಅಪರ್ಣಾಳನ್ನು ಹುಡುಕಿ ಮತ್ತೆ ರೂಮಿನಿಂದ ಹೊರ ನಡೆದ.

ಅವಳ ಮೆಚ್ಚಿನ ಸ್ಥಳ, ಮನೆಯ ಪುಟ್ಟ ಲೈಬ್ರರಿಯಲ್ಲಿ ಅವಳು ಕಾಣಲಿಲ್ಲ, ಬಾಲ್ಕನಿಯ ಪುಟ್ಟ ತೂಗುಮಂಚದಲ್ಲಿಯೂ ಅವಳ ಅನುಪಸ್ಥಿತಿ. ಅಪ್ಪ-ಅಮ್ಮನ ಕೋಣೆಯಲ್ಲಿರಬಹುದು ಎಂದುಕೊಂಡು ನಡೆದರೆ ಅಲ್ಲಿಯೂ ಶೂನ್ಯ. ಅವಳಿಗೆ ನನ್ನ ಮೇಲೆ ಅದೆಷ್ಟೇ ಕೋಪವಿದ್ದರೂ ನನ್ನ ಊಟ-ತಿಂಡಿಯ ವ್ಯವಸ್ಥೆಯನ್ನು ತಪ್ಪಿಸಲಾರಳು, ಅಡುಗೆ ಕೋಣೆಯಲ್ಲಿ ಇರಬಹುದು ಎಂದುಕೊಂಡರೆ ಅಲ್ಲಿಯೂ ಅವಳಿಲ್ಲ, ಅಥರ್ವನ ರೂಮ್ ಅನ್ನು ಹೇಗೆ ಮರೆತೆ? ಎಂದುಕೊಂಡು ಅವನ ರೂಮ್ ತೆರೆದರೆ ಅಲ್ಲಿಯೂ ಅವಳಿಲ್ಲ, ಅವಳು ಮಾತ್ರವಲ್ಲ ಅಥರ್ವ ಕೂಡಾ ಇಲ್ಲ. 
ಬೇಸರ ಕಳೆಯಲು ಇಬ್ಬರೂ ಎಲ್ಲಿಗೋ ಹೊರಗೆ ಹೋಗಿರಬಹುದು ಎಂದುಕೊಂಡು ತನ್ನಗೆ ತಾನೇ ಸಮಜಾಯಿಷಿ ಕೊಟ್ಟುಕೊಂಡು ಸುಮ್ಮನಾದ. 

ಅವನು ಶತಪತ ತಿರುಗುವುದನ್ನು ನೋಡಲೂ ಆಗದೆ, ಸುಮ್ಮನಿರಲೂ ಆಗದೆ, ಏನು ಮಾಡಬೇಕೆಂದು ತಿಳಿಯದೆ ಸುಮ್ಮನಿದ್ದ ಗಿರಿಜಮ್ಮ ಈಗ ಬಾಯ್ಬಿಟ್ಟರು. "ಅಮ್ಮವ್ರು ಮತ್ತೆ ಅಥರ್ವ ಬ್ಯಾಗ್ ತಗೊಂಡು ಎಲ್ಲೋ ಹೋದ್ರು. ಅವರು ನಿಮ್ಮ ಜೊತೆಗೇ ಎಲ್ಲೋ ಹೊರಟಿರಬೇಕು ಅಂತಾ ಸುಮ್ಮನಾದೆ." ಎಂದು ಹೇಳಿ ಸುಮ್ಮನೆ ಒಳ ಹೋದರು ಗಿರಿಜಮ್ಮ.

ಅಶುತೋಷ್ ನಿಗೆ ಏನು ಮಾಡಬೇಕು, ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ಸುಮ್ಮನೆ ಕುಸಿದು ಕುಳಿತ. ಮನಸ್ಸಿನಲ್ಲಿ ಏನೇನೋ ಬೇಡದ ಆಲೋಚನೆಗಳು ಸುಳಿದು ಮರೆಯಾಗುತ್ತಿದ್ದವು. ಹಾಗೆಲ್ಲಾ ಏನೂ ಆಗಿರಲಾರದು ಎಂಬ ಸಣ್ಣ ಭರವಸೆಯ ಕಿಡಿ ಹೊತ್ತಿಸಿಕೊಂಡು ಡೈರಿ ತೆರೆದು ಕುಳಿತ.

ಮನಸ್ಸಿನ ಆಲೋಚನೆಗಳು ಮಾತಾಗುತ್ತಿದ್ದದ್ದು ಡೈರಿಯ ಪುಟಗಳಲ್ಲಿ. ಅವನ ಬದುಕಿನ ಮಹಾರಹಸ್ಯಗಳು, ಅಳು-ನಗು, ಸೋಲು-ಗೆಲುವು, ಕಷ್ಟ-ಸುಖ ಎಲ್ಲದಕ್ಕೂ ಸಾಕ್ಷಿಯಾಗಿದ್ದು, ಅವನ ಮೆಚ್ಚಿನ ಗೆಳೆಯ ಅವನ ಡೈರಿ. 

"ಮಹಾ ಕೋಪದ ಉರಿಯನ್ನು
ತಡೆದುಕೊಂಡವಳಿಗೆ 
ಶೀತಲತೆ ಕಷ್ಟವಾಯಿತೇ..?
ಬಂದುಬಿಡೆ ಸಿರಿಗೌರಿ
ನನ್ನ ಬದುಕಿನ 
ಪ್ರತಿ ಉಸಿರಿನ ಸ್ವರವಾಗಿ
ಸಿರಿಗೌರಿಯಿಲ್ಲದ ಶಿವ
ಆತ್ಮವಿಲ್ಲದ ಪ್ರಾಣದಂತೆ"

ಏನಾದರೂ ಕಳೆದು ಹೋದರೆ ಅದರ ಹಿಂದೆ ಒಂದು ಮಹತ್ತರ ಕಾರಣ ಇರುವುದಂತೆ ಅಥವಾ ಅದಕ್ಕಿಂತ ಬೆಲೆ ಬಾಳುವುದು ನಮಗಾಗಿ ಕಾಯುತ್ತಿರುವುದಂತೆ. ನನ್ನನ್ನು ಹುರಿದುಂಬಿಸಲು ನೀನು ನನಗೆ ಆಗಾಗ ಹೇಳುತ್ತಿದ್ದ ಮಾತು ಇದು. ಆದರೆ, ನಾವಾಗಿಯೇ ಕಳೆದುಕೊಂಡರೆ.. ? ಕೈಯಲ್ಲಿ ರತ್ನವಿದ್ದಾಗ ಅದರ ಬೆಲೆ ತಿಳಿಯದೆ ಹಲವರು ನಂತರ ಅದನ್ನು ಕಳೆದುಕೊಂಡ ಮೇಲೆ ಹುಡುಕುತ್ತಾರೆ. ನನಗೆ ನಿನ್ನ ಬೆಲೆ ತಿಳಿದಿತ್ತು, ಉಳಿಸಿಕೊಳ್ಳಲಾಗದ ಅನಿವಾರ್ಯತೆ ನನ್ನನ್ನು ಕಾಡುತ್ತಿತ್ತು. ನನ್ನ ಮನದ ಮಾತುಗಳನ್ನು ಹೇಳದೆಯೇ ಅರ್ಥೈಸಿಕೊಳ್ಳುತ್ತಿದ್ದೆ, ನನ್ನ ಆಲೋಚನಾ ಲಹರಿಯಲ್ಲಿಯೇ ನಿನ್ನ ಆಲೋಚನಾ ಲಹರಿ ಸಾಗುತ್ತಲಿತ್ತು, ನನ್ನ ಬಲಗೈ, ಬಲ ಮೆದುಳು, ನನ್ನ ಬದುಕಿನರ್ಧವೇ ನೀನಾಗಿದ್ದೆ. ಇದೊಂದು ವಿಚಾರದಲ್ಲಿ ಯಾಕೆ ನನ್ನ ಮನದ ಮಾತನ್ನು ಕೇಳಿಸಿಕೊಳ್ಳದೆ ಹೋದೆ ? 

ಒಮ್ಮೆ ಅನುಭವಿಸಿದ ನೋವನ್ನು ನಾನು ಮತ್ತೊಮ್ಮೆ ಅನುಭವಿಸಲು ಸಿದ್ಧನಿಲ್ಲ, ಯಾಕೆಂದರೆ, ಆಗ ನೋವಿನಿಂದ ಹೊರಬರಲು ನನ್ನೊಡನೆ ನೀನಿದ್ದೆ. ಆದರೆ ಈಗ..?

ನನ್ನ ಗತದ ಅರಿವಿದ್ದೂ ನೀನು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದೆ. ಆದರೆ, ನೀನು ನನ್ನನ್ನು ಅರ್ಥವೇ ಮಾಡಿಕೊಳ್ಳಲಿಲ್ಲವೇ..?

ಅಶುತೋಷ್ ನ ಬರಹ ಹೀಗೇ ಮುಂದುವರಿಯುತ್ತಿತ್ತು. ಅವನ ಬರಹಕ್ಕೆ, ಭಾವದ ಅಣೆಕಟ್ಟಿಗೆ, ಆಲೋಚನಾ ಲಹರಿಗೆ ತಡೆಯೊಡ್ಡಿದ್ದು ಆ ಫೋನ್ ಕಾಲ್.

(ಸಶೇಷ)

(ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪತಿಕ್ರಿಯೆಗಳೇ ಸ್ಫೂರ್ತಿ)

~ವಿಭಾ ವಿಶ್ವನಾಥ್


 

ಭಾನುವಾರ, ಆಗಸ್ಟ್ 2, 2020

ಸಖಿ- ಪರಿಚಯ

 


ಎಷ್ಟೇ ಆಪ್ತರಿದ್ದರೂ ಹೇಳಿಕೊಳ್ಳದ್ದು ಏನೋ ಒಂದು ಉಳಿದೇ ಇರುತ್ತದೆ. ನಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರೊಡನೆ ಹಂಚಿಕೊಳ್ಳಲು ಅಥವಾ ಅವರಿಂದ ಸಲಹೆ ಪಡೆದುಕೊಳ್ಳಲು ಕಾತುರದಿಂದ ಕಾಯುತ್ತೇವೆ. ಪರಿಚಿತರೊಡನೆ ಹಂಚಿಕೊಂಡಷ್ಟೂ ಅದು ಮತ್ತೆಲ್ಲೋ, ಮತ್ತಾರಿಗೋ, ಮತ್ತೆ ಎಂದಾದರೂ ಯಾವುದೋ ರೂಪದಲ್ಲಿ ತೊಡಕಾದರೆ ಎಂಬ ಅಳುಕು ಮನಸ್ಸಲ್ಲಿ ಇದ್ದೇ ಇರುತ್ತದೆ. ಹಲವು ವಿಚಾರಗಳನ್ನು ಹೇಳಿಕೊಳ್ಳದಿದ್ದಾಗಲೂ ಮತ್ತೆ ಯಾರದ್ದೋ ಸಮಸ್ಯೆಯೋ, ಮತ್ತೆ ಯಾರಿಗೋ ನೀಡಿದ ಸಲಹೆಯೋ ನಮ್ಮಲ್ಲಿ ಭರವಸೆ ಹೊತ್ತಿಸುತ್ತದೆ.


ಬರಹದ ಗೆಳತಿ 'ಸಖಿ' ನಿಮ್ಮೆಲ್ಲಾ ಸಂಧರ್ಭದಲ್ಲಿ ಆಸರೆಯಾಗುತ್ತಾಳೆ. ಹೇಳಿಕೊಳ್ಳದ ನಿಮ್ಮ ಎಷ್ಟೋ ಭಾವನೆಗಳಿಗೆ ಕಿವಿಯಾಗುತ್ತಾಳೆ. ನಿಮ್ಮ ಅಮ್ಮನ, ಮಗಳ, ಗೆಳತಿಯ, ಸೋದರಿಯ, ಪ್ರೇಯಸಿಯ, ಹೆಂಡತಿಯ ಹೀಗೆ ಹಲವಾರು ಮನಸ್ಸಿನ ಮಾತನ್ನು ತೆರೆದಿಡುತ್ತಾಳೆ. ಭರವಸೆ ತುಂಬುತ್ತಾಳೆ. ಮನಸ್ಸಿನ ಭಾರವನ್ನು ಕಡಿಮೆ ಮಾಡುತ್ತಾಳೆ. ಸಲಹೆ ನೀಡುತ್ತಾಳೆ. ಇದು ಯಾರೋ ಒಬ್ಬರ ಮನದ ಭಾವವಲ್ಲ, ಇದೇ ಭಾವಗಳು ರಂಗನ್ನು ಹೊತ್ತು ಹಲವಾರು ವಿಧದಲ್ಲಿ ಸುಳಿದಾಡುತ್ತಿರುತ್ತವೆ. ಆದರೆ, ನಾವು ಅದಕ್ಕೆ ಹೆಚ್ಚಿನ ಗಮನ ನೀಡಿರುವುದಿಲ್ಲ. ಆದರೆ, ಸಮಸ್ಯೆ ನಮಗೆ ಬಂದಾಗ .. ? 

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತದೆ. ಮತ್ತೊಬ್ಬರ ಸಮಸ್ಯೆಯೂ ಚಿಕ್ಕದಾಗಿಯೇ ಕಾಣುವುದಲ್ಲವೇ.. ? ಮತ್ತೊಬ್ಬರಿಗೆ ಪ್ರೇರಣೆ ನೀಡುವುದು ಬಹು ಸುಲಭ. ಆದರೆ, ನಮಗೆ ನಾವೇ ಪ್ರೇರಣೆಯಾಗಬೇಕು. ಆ ನಿಟ್ಟಿನಲ್ಲಿ ಸಖಿ ನಿಮ್ಮ ಜೊತೆ ನಿಲ್ಲುತ್ತಾಳೆ. ನಗುವಾಗ ಊರೆಲ್ಲಾ ನೆಂಟರು, ಸಮಸ್ಯೆ ಬಂದಾಗಲೇ ಅಲ್ಲವೇ ನಮ್ಮವರು ಯಾರು ಎಂಬ ಅರಿವಾಗುವುದು.

ಸಖಿಯ ಮಾತುಗಳು ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ ಎಂದೆ. ಅದನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡು ಹೋಗುವುದು ನಿಮಗೆ ಬಿಟ್ಟದ್ದು.

ನಿಮಗೊಂದು ಪುಟ್ಟ ಕಥೆ ಹೇಳುವೆ. ಕೇಳಿ..

ಪುಟ್ಟದೊಂದು ತೋಟದ ಮನೆಯಲ್ಲಿ ನೆಮ್ಮದಿಯಿಂದ ರೈತಪ್ಪ, ರೈತಮ್ಮ ವಾಸವಾಗಿರುತ್ತಾರೆ. ನೆಮ್ಮದಿಯಾಗಿರುವಾಗ ನೆಮ್ಮದಿ ಕೆಡಿಸಲು ಯಾರೋ ಒಬ್ಬರು ಇದ್ದೇ ಇರುತ್ತಾರೆ. ಅಲ್ಲವೇ..? ಎಲ್ಲವೂ ಸರಿಯಿದ್ದರೆ ಕಥೆಗೆ ಬೆಲೆಯೆಲ್ಲಿ ? ಇಲ್ಲಿ ಇವರ ನೆಮ್ಮದಿ ಕೆಡಿಸಿದ್ದು ಒಂದು ಸುಂಡಿಲಿ. ಈ ಇಲಿ ಕಾಟ ತಡೆಯುವುದಕ್ಕಾಗದೆ ರೈತಪ್ಪ, ರೈತಮ್ಮ ಎಷ್ಟೋ ಉಪಾಯ ಮಾಡಿದರೂ ಇಲಿ ಸಿಗದೆ ನುಣಿಚಿಕೊಂಡು ಹೋಗುತ್ತಲೇ ಇತ್ತು.. ಕಡೆಗೆ ರೈತಮ್ಮನ ತಲೆಗೊಂದು ಉಪಾಯ ಹೊಳೆದೇ ಬಿಟ್ಟಿತು. ಅದನ್ನು ರೈತಪ್ಪನಿಗೆ ಹೇಳುವಾಗ ಈ ಇಲಿ ಕೂಡಾ ಅದನ್ನು ಕೇಳಿಸಿಕೊಂಡಿತು. ಈ ಇಲಿಗೆ ಆಹಾರದಲ್ಲಿ ವಿಷ ಬೆರೆಸಿ ಇಟ್ಟು ಅದನ್ನು ಸಾಯಿಸಿ ಬಿಡೋಣ ಎಂದು.

ಈ ಉಪಾಯ ಕೇಳಿಸಿಕೊಂಡ ಇಲಿಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಪ್ರಾಣಭಯ ಎಲ್ಲರಿಗೂ ಇರುವುದೇ ಅಲ್ಲವಾ? ಅದು ಇಲಿಯಾದರೂ ಅಷ್ಟೇ, ಹುಲಿಯಾದರೂ ಅಷ್ಟೇ.. ಬೆಳಿಗ್ಗೆಯಾಗುತ್ತಿದ್ದಂತೆ ಕೋಳಿ ಕೂಗುವ ಧ್ವನಿ ಕೇಳಿಸಿತು. ಕೋಳಿ ಹತ್ತಿರ ಕೇಳಿದರೆ ಇದಕ್ಕೇನಾದರೂ ಸಲಹೆ ದೊರೆಯಬಹುದು ಎಂದು ಕೋಳಿಯ ಬಳಿ ಕೇಳಿದರೆ "ನಿನಗೆ ತೊಂದರೆ ಬಂದರೆ ನಾನ್ಯಾಕೆ ಉಪಾಯ ಯೋಚಿಸಬೇಕು? ನನಗಂತೂ ಏನೂ ತೊಂದರೆ ಇಲ್ಲಪ್ಪಾ" ಎನ್ನುತ್ತಾ ಇಲಿಯನ್ನು ನಿರ್ಲಕ್ಷಿಸಿ ಆಹಾರ ಹುಡುಕುತ್ತಾ ಹೊರಟಿತು. 

ಇಲಿಗೆ ಬೇಜಾರಾಗಿ ಅದು ಹಾಗೇ ಮುಂದುವರಿಯುತ್ತಿರುವಾಗ ಕುರಿ ಕಾಣಿಸಿತು. "ಕುರಿಯಣ್ಣಾ, ನನ್ನನ್ನು ಕಾಪಾಡು. ನನ್ನ ತೊಂದರೆಗೆ ಸಲಹೆ ನೀಡು" ಎನ್ನುತ್ತಾ ತನ್ನ ತೊಂದರೆಯನ್ನು ವಿವರವಾಗಿ ಹೇಳಿದರೆ, ದಿವ್ಯ ನಿರ್ಲಕ್ಷ್ಯದಿಂದ ಕುರಿ "ನಿನ್ನ ತೊಂದರೆ ನಿನ್ನದು, ನಾನಂತೂ ಆರಾಮವಾಗಿ ಇದ್ದೇನೆ. ರೈತಪ್ಪ ನನ್ನನ್ನಂತೂ ಏನೂ ಮಾಡಲ್ಲ, ನನಗಷ್ಟು ಸಾಕು" ಎನ್ನುತ್ತಾ ಮೇವು ಮೆಲುಕು ಹಾಕುವ ಕಾರ್ಯವನ್ನು ಮುಂದುವರಿಸಿತು.

ಇಲಿಗೆ ಆ ತೋಟದ ಮನೆಯಲ್ಲಿ ಇದ್ದದ್ದು ಮೂರೇ ಗೆಳೆಯರು. ಇಬ್ಬರಂತೂ ಆಗಲೇ ಕೈ ಕೊಟ್ಟು ಆಗಿತ್ತು. ಉಳಿದದ್ದು ಹಂದಿರಾಯ ಮಾತ್ರ. ಕೊನೆಯ ಭರವಸೆಯ ಆಶಾ ಕಿರಣದೊಂದಿಗೆ ಅಲ್ಲಿಗೆ ಹೋದರೆ ಹಂದಿರಾಯ ಕೂಡಾ ಏನೂ ಸಹಾಯ ಮಾಡದೆ. ತೊಂದರೆ ನನಗಲ್ಲ ಎಂದು ಕಳುಹಿಸಿ ಬಿಟ್ಟ.

ಎಲ್ಲರೂ ಕೈ ಚೆಲ್ಲಿ ಕುಳಿತಾಗ ಇಲಿ ತನ್ನ ಹುಷಾರಲ್ಲಿ ತಾನಿರಬೇಕು ಎಂದು ತೀರ್ಮಾನ ಮಾಡಿಕೊಂಡು ರೈತಮ್ಮ ಇಟ್ಟ ಊಟವನ್ನು ಮಾಡದೆ ಸುಮ್ಮನಿರಬೇಕೆಂದು ತೀರ್ಮಾನಿಸಿತು. ಇತ್ತ ರೈತಮ್ಮ ಇಲಿಗೆ ವಿಷ ಹಾಕಿ ಕೈಯನ್ನು ಸರಿಯಾಗಿ ತೊಳೆದುಕೊಳ್ಳದೆ ಊಟ ಮಾಡಿದ್ದರಿಂದ ವಿಷ ಅವಳ ಹೊಟ್ಟೆ ಸೇರಿತು. ರೈತಪ್ಪ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಅವಳಿಗೆ ಚಿಕಿತ್ಸೆ ನೀಡಿಸಿ ಮನೆಗೆ ಕರೆದುಕೊಂಡು ಬಂದ.

ಅವಳು ಮನೆಗೆ ಬಂದ ಮೇಲೆ ಅವಳನ್ನು ನೋಡಲು ಅವಳ ತಂದೆ-ತಾಯಿ ಬರದಿದ್ದರೆ ಹೇಗೆ? ಅವರು ಬಂದ ಮೇಲೆ ಕೋಳಿ ಕೊಯ್ದು ಔತಣ ನೀಡದಿದ್ದರೆ ಹೇಗೆ ? ಹಾಗಾಗಿ ಮನೆಯಲ್ಲಿದ್ದ ಕೋಳಿ ಬಲಿಯಾಯ್ತು.

ಆನಂತರ ಬಹಳ ಹತ್ತಿರದ ಸಂಬಂಧಿಕರು ಬಂದರು ಅವರ ಊಟಕ್ಕೆ ಕುರಿ ಬಲಿಯಾಯ್ತು. ಬಾಯಿಂದ ಬಾಯಿಗೆ ರೈತಮ್ಮನ ಕತೆ ಹಬ್ಬಿ ಉರವರೆಲ್ಲಾ ನೋಡಲು ಬಂದರು. ಅವರ ಊಟಕ್ಕೆ ಹಂದಿಯೂ ಬಲಿಯಾಯ್ತು.

ಇಷ್ಟೆಲ್ಲಕ್ಕೂ ಕಾರಣವಾದ ಇಲಿ ಇದನ್ನೆಲ್ಲಾ ನೋಡುತ್ತಾ ನಿಟ್ಟುಸಿರು ಬಿಟ್ಟು ಸುಮ್ಮನಾಯಿತು.

ಸಮಸ್ಯೆ ನಮ್ಮದಲ್ಲಾ ಎಂದುಕೊಂಡವರೆಲ್ಲಾ ಸಮಸ್ಯೆಗೆ ಬಲಿಯಾದರು. ಸಮಸ್ಯೆ ಬಂದಾಗ ಕೊಂಚ ಜಾಗರೂಕತೆಯಿಂದ ನಡೆದುಕೊಂಡವರು ಬಚಾವಾದರು.

ಎಲ್ಲವೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. 

ಸಖಿಯ ಮೂಲಕ ಇನ್ನು ಮುಂದೆ ಈ ರೀತಿಯ ಬರಹಗಳನ್ನು ನಿರೀಕ್ಷಿಸಬಹುದು. 
(ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ.)

~ವಿಭಾ ವಿಶ್ವನಾಥ್

ಭಾನುವಾರ, ಜುಲೈ 26, 2020

ಚಲಿಸುತ್ತಿರಬೇಕು ಚಿತ್ರಗಳು

 

(ಚಿತ್ರ: ವ್ಯಾನ್ ಗೋ ಅವರ ಪ್ರಸಿದ್ಧ painting)

ಚಲಿಸುತ್ತಿರಬೇಕು ಚಿತ್ರಗಳು
ಯಾವ ಚೌಕಟ್ಟಿಗೂ ಸಿಗದಂತೆ

ಸೆಲ್ಫಿ, ಫೋಟೋಗಳ ಮಾಯೆಗೆ ಸಿಲುಕಿ
ನೆನಪಾಗಿ ಕೊಳೆಯುವುದಕ್ಕಿಂತ
ಸ್ವಚ್ಛಂದವಾಗಿ ಹಾರಿಕೊಂಡಿರಬೇಕು

ಕಾಲನ ಜೊತೆ ಜೊತೆಗೇ ಹೆಜ್ಜೆ ಹಾಕುತ್ತಾ
ಯಾವ ಸೆಳೆತಕ್ಕೂ ಒಳಗಾಗದಂತೆ
ಜಾತಿ-ಮತದ ಭೇಧವಿಲ್ಲದೆ ಚಲಿಸುತ್ತಿರಬೇಕು

ಮಮಕಾರದ ಮಾಯೆಯ ತೊರೆದು
ಕಾಲನ ಘಳಿಗೆಯ ಪಾಶಕ್ಕೆ ಸಿಗದೆ
ಅಲೆಯುತ್ತಾ ನೆಲೆಯಾಗದಂತೆ ಹಾರಾಡಿಕೊಂಡಿರಬೇಕು

ಚಲನೆಯೇ ಬದುಕಿನ ನಿರಂತರತೆ
ಅವಿಶ್ರಾಂತಿಯೇ ಶ್ರಮಜೀವಿಯ ವಿಶ್ರಾಂತಿ
ಹೀಗೆ ಸಾರಲು ಚಲಿಸುತ್ತಿರಬೇಕು ಚಿತ್ರಗಳು

ಕಣ್ಣಳತೆಗೆ ಆಗಾಗ ಕಾಣುತ್ತಾ
ಗುರಿಯೆಡೆಗೆ ಛಲ  ಹುಟ್ಟಿಸಲು
ಚಲಿಸುತ್ತಲೇ ಇರಬೇಕು ಬದುಕೆಂಬ ಮಾಯಾಚಿತ್ರ

~ವಿಭಾ ವಿಶ್ವನಾಥ್

ಭಾನುವಾರ, ಜುಲೈ 19, 2020

ನೀ ಬರೆದ ಸಾಲುಗಳು..

 

ಬದುಕು ಬರೆದ ಸಾಲುಗಳ ನೀನು ಒಪ್ಪಬೇಕಿತ್ತು. ನಿನ್ನದೇ ಹೊಸ ವ್ಯಾಖ್ಯಾನ ಬರೆಯಲು ಹೊರಟೆ ನೀನು. ಬದುಕು ಮಾತ್ರವಲ್ಲ, ಸಾವೂ ಸಹಾ ನಿನ್ನನ್ನು ಸ್ವೀಕರಿಸಿಲ್ಲ.

ಆ ಸಾಲುಗಳನ್ನು ನೀನು ಬರೆಯಲೇ ಬಾರದಿತ್ತು. ಬರೆದರೂ ಸಾರ್ವತ್ರಿಕವಾಗಿ ಪ್ರಕಟಿಸಬಾರದಿತ್ತು. ಸತ್ಯವನ್ನು ಬಿಚ್ಚಿಡಲು ಮಾತ್ರವಲ್ಲ ಹುಡುಗಿ ಸತ್ಯವನ್ನು ಒಪ್ಪಿಕೊಳ್ಳಲು ಸಹಾ ಧೈರ್ಯ ಬೇಕಿತ್ತು. ನಿನಗಿದ್ದ ಧೈರ್ಯ ಈ ಸಮಾಜಕ್ಕಿಲ್ಲ. ಅದರ ಅರಿವಿದ್ದರೂ ನೀನು ಆ ಸಾಲುಗಳನ್ನು ಬರೆದೆ.

ಅತ್ಯಾಚಾರವಾದರೆ ಅತ್ಯಾಚಾರಿಗೆ ಶಿಕ್ಷೆ ಕೊಡುವುದರ ಬದಲಾಗಿ ಅವನ ಜೊತೆಗೆ ದಾಂಪತ್ಯ ಮಾಡು ಎಂದು ಸಂತ್ರಸ್ತೆಗೆ ತೀರ್ಪು ಕೊಡುವಾಗ, ಅವಳಿಗೆ ಬೇರೆ ಆಯ್ಕೆಗಳೇ ಇರುವುದಿಲ್ಲ. ಯಾಕೆಂದರೆ, ತಪ್ಪುಗಳನ್ನೂ ಸರಿ ಮಾಡುತ್ತೇವೆ ಎನ್ನುತ್ತಾ ಸಧೃಡ ಸಮಾಜವನ್ನು ಕಟ್ಟುತ್ತೇವೆ ಎಂದು ಹೊರಡುವ ಜನರು ತಪ್ಪುಗಳನ್ನು ತಾವೇ ಬೆಳೆಸುತ್ತಾರೆ. ಅತ್ಯಾಚಾರ ಮಾಡಿದವ ಸಮಾಜದ ದೃಷ್ಟಿಯಲ್ಲಿ ಸದ್ಗೃಹಸ್ಥ. ಹಾಗೇ, ಸಭ್ಯರು ಎನ್ನಿಸಿಕೊಂಡವರನ್ನು ಸಹಾ ಸಮಾಜ ಬೆಳೆಸಿದ್ದು ಹೀಗೆಯೇ.. ಸಭ್ಯರ ಸೋಗಿನಲ್ಲಿ ತಮ್ಮ ಅಕ್ರಮಗಳಿಗೂ ಸಭ್ಯತೆಯ ಹಣೆಪಟ್ಟಿ ಹಚ್ಚಿ ಬಿಡುತ್ತಾರೆ. 

ನೀನು ಧೈರ್ಯವಂತೆ. ಧೈರ್ಯ ಸತ್ಯವನ್ನು ತೆರೆದಿಡಲು ನಿನ್ನ ಧೈರ್ಯ ಮಾತ್ರ ಸಾಲದಾಗಿತ್ತು. ಸುತ್ತಮುತ್ತಲಿನವರ, ನಮ್ಮವರೆನಿಸಿಕೊಂಡವರ ಸಹಕಾರ ದೂರದರ್ಶಿತ್ವ ಕೊಂಚ ಬೇಕಿತ್ತು. ಹೆಣ್ಣು ಎಂಬ ಪದ ಸಾಕು ಸುತ್ತಮುತ್ತಲಿನವರ ಧೈರ್ಯವನ್ನು ದುರ್ಬಲಗೊಳಿಸಲು. ಎಲ್ಲರೂ ವೀರ ವನಿತೆಯರ ಕತೆಯನ್ನು ಹೇಳಲು, ಕೇಳಲು ಮಾತ್ರ ಸಿದ್ಧರಿರುತ್ತಾರೆ, ನಮ್ಮದೇ ಮನೆಯ ಹೆಣ್ಣು ಕೂಸು ಆ ಸ್ಥಾನದಲ್ಲಿರಲು ಕಲ್ಪನೆ ಕೂಡಾ ಮಾಡಿಕೊಳ್ಳಲಾರರು.

ಕೆಲವೊಮ್ಮೆ ಅತಿ ಸ್ವಾತಂತ್ರ್ಯ, ಕೆಲವೊಮ್ಮೆ ಅತಿ ಮಡಿವಂತಿಕೆ ಕೂಡಾ ಸಿಡಿದು ನಿಂತು ವಿರುದ್ಧವಾದ ನಡವಳಿಕೆಯಾಗಿ ನಡೆದುಕೊಳ್ಳಲು ಕಾರಣವಾಗುತ್ತದೆ. ಆದರೆ, ನಿನ್ನ ಬದುಕು ಇವೆರಡಕ್ಕೂ ಸೇರಿಲ್ಲ. ನಿನ್ನ ಬದುಕಲ್ಲಿ ಆದರ್ಶವಿತ್ತು. ಹುಚ್ಚು ಆದರ್ಶಗಳೆಂದು ಹಂಗಿಸುವ ಈ ಕಾಲಘಟ್ಟದಲ್ಲಿ ಆದರ್ಶಗಳನ್ನೇ ಉಸಿರೆನಿಸಿಕೊಂಡಿದ್ದ ನಿನಗೆ ಅದೇ ಮುಳುವಾಯಿತೇ. ಬೆಳೆದದ್ದು ಅನಾಥಾಶ್ರಮದಲ್ಲಿ.. ಅಲ್ಲಿನ ಗುರುಗಳು ಹಾಕಿಕೊಟ್ಟಿದ್ದ ಉತ್ತಮ ಹಾದಿಯಲ್ಲಿ ಬೆಳೆದಿದ್ದೆ. 

ಸತ್ಯದ ಬೆಳಕನ್ನು ಚೆಲ್ಲುವ ಆಶಯದಲ್ಲಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುವ ಆಶಯ ನಿನ್ನದಾಗಿದ್ದರೆ, ವೈದ್ಯಕೀಯ ನನ್ನ ಆಯ್ಕೆಯಾಗಿತ್ತು. ನಮ್ಮಿಬ್ಬರ ಹಾದಿ ಬೇರೆಯೇ ಆಗಿ ಹೋಗಿತ್ತು. ವಿಧಿ ಲಿಖಿತದ ಎದುರು ನಿಲ್ಲುವರಾರು ?

ನಿನ್ನ ಬರವಣಿಗೆಯ ಮೊನಚನ್ನು ತಾಳಿಕೊಳ್ಳುವ ಶಕ್ತಿ ಸಭ್ಯತೆಯ ಸೋಗಿನಲ್ಲಿರುವವರಿಗೆ ಇಲ್ಲ ಕಣೆ ಹುಡುಗಿ.. ರಾಜಕೀಯ ವ್ಯಕ್ತಿಯ ಅಕ್ರಮ ವಿಚಾರಗಳನ್ನು ಬಯಲಿಗೆಳೆಯತೊಡಗಿದ್ದೆಯಲ್ಲಾ, ಅದೂ ರಾಜ್ಯದ ಪ್ರಮುಖ ರಾಜಕೀಯ ಮುತ್ಸದಿ ಎಂದೆನಿಸಿಕೊಂಡಿದ್ದವರು. ಯಾವ ಕೆಚ್ಚೆದೆಯ ಗಂಡೂ ಮಾಡದ ಧೈರ್ಯ ನೀನು ಮಾಡಿದ್ದೆ. ಕಾರಣ, ನಿನ್ನ ಜನ್ಮದ ನಂಟು ಕೂಡಾ ಅವನಿಂದಲೇ ಬೆಸೆದಿತ್ತು. ಅಪ್ಪ-ಮಕ್ಕಳ ಬಂಧದಲ್ಲಿ ಬಂಧಿಯಾಗಬೇಕಿದ್ದವರು ರಾಜಕೀಯ- ಪತ್ರಿಕೋದ್ಯಮದ ರಣಭೂಮಿಯಲ್ಲಿ ಕಾದಾಡುತ್ತಿದ್ದಿರಿ. 

ನಿನ್ನ ಜನ್ಮ ರಹಸ್ಯ ಅವನಿಗೆ ತಿಳಿದದ್ದು ತಡವಾಗಿ.. ಅಷ್ಟರಲ್ಲಾಗಲೇ ನಿನ್ನ ಮೇಲೆ ಅವನ ಕಡೆಯವರಿಂದಲೇ ಅತ್ಯಾಚಾರವಾಗಿತ್ತು. ಇತ್ತ ನೀನು ಸಾವು-ಬದುಕಿನ ನಡುವಿನಲ್ಲಿ ಹೋರಾಡುತ್ತಿರುವಾಗಲೇ ಅವನಿಗೆ ಸತ್ಯ ತಿಳಿದಿತ್ತು. ಕಾಲ ಮಿಂಚಿತ್ತು. ಕಾಲವನ್ನು ತಿರುಗಿಸಲಾಗದು, ನಿಲ್ಲಿಸಲಾಗದು. ನಿನ್ನನ್ನು ಬದುಕಿಸಿಕೊಳ್ಳಬೇಕೆಂಬ ಅವನ ಪ್ರಯತ್ನ ನಿನ್ನನ್ನು ಸಾಯಲೂ ಬಿಡದೆ, ಬದುಕಿಸಲೂ ಆಗದೇ ನಿನ್ನ ಜೀವವನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ.

ಮಗಳೆಂಬ ಮಮಕಾರ, ತನ್ನ ತಪ್ಪಿನ ಪ್ರಾಯಶ್ಚಿತ್ತ ಎಲ್ಲವೂ ಅವನನ್ನು ಕೊಂದುಹಾಕುತ್ತವೆ. ರಣ ಭೀಕರ ಅತ್ಯಾಚಾರ ಮಾಡಿಸಿದ ಪಾಪ ಅವನನ್ನು ಕಿಂಚಿತ್ತು ಬಿಡದೆ ಕಾಡುತ್ತವೆ. ನೀನು ಬರೆದ ಸಾಲುಗಳು, ಅವನ ಪ್ರತೀಕಾರ ಅವನನ್ನು ಇತ್ತ ಬದುಕಲೂ ಬಿಡದೆ, ಸಾಯಲೂ ಬಿಡದೆ ನರಳಿಸುತ್ತವೆ. ಅದಕ್ಕಿಂತಾ ದೊಡ್ಡ ಶಿಕ್ಷೆ ಅವನಿಗೆ ಬೇರಾವುದು ಸಹಾ ಸಿಗಲಾರದು. ನರಕ ಕೂಡಾ ಇದಕ್ಕಿಂತ ಎಷ್ಟೋ ಮೇಲೆನಿಸಿಬಿಡುತ್ತದೆ ಅವನಿಗೆ. ಪ್ರಾಯಶ್ಚಿತ್ತಕ್ಕೂ ಆಯ್ಕೆ ಸಿಗದು ಅವನಿಗೆ. ಆತ್ಮಸಾಕ್ಷಿ ಎಂಬುದು ಅವನಲ್ಲಿ ಇನ್ನೂ ಜೀವಂತವಾಗಿದ್ದರೆ ಅವನು ಬದುಕಿನ ಪ್ರತಿ ನಿಮಿಷದಲ್ಲಿಯೂ ನರಕ ಕಾಣುತ್ತಾನೆ. ನೀ ಅಂದು ಬರೆದಿದ್ದ ಸಾಲುಗಳು ಹುಸಿಯಾಗಲಿಲ್ಲ.

ನೀನು ಮಾತ್ರ ಜೀವಚ್ಛವವಾಗಿ ನರಳುವುದನ್ನು ನಾನು ನೋಡಲಾರೆ. ಜೊತೆಯಲ್ಲಿ ಆಡಿದ ಇದೇ ಕೈಗಳು ನಿನಗಿಂದು ಮುಕ್ತಿ ನೀಡಲಿವೆ. ಮತ್ತೊಬ್ಬ "ಅರುಣಾ ಶಾನುಭೋಗ" ಆಗಿ ನಿನ್ನನ್ನು ನಾನು ನೋಡಲಾರೆ. ದಯಾಮರಣದ ಆಯ್ಕೆ ನೀಡಲಾರೆ. ಬದುಕಿದರೂ ಮೊದಲಿನ ಸ್ಥಿತಿಯಲ್ಲಿ ನೀನಿರಲಾರೆ ಹುಡುಗಿ. ನನ್ನ ಕಾರ್ಯ ತಪ್ಪಾಗಿರಬಹುದು, ನೀ ಬರೆಯದ ಸಾಲುಗಳನ್ನು ನಾನು ಬರೆಯಲಿರುವೆ.

ಆದರೂ, ವಿಧಿ ಬರೆದ ಸಾಲುಗಳ ಬದಲಿಸಿ ನೀನು ನಿನ್ನ ಸಾಲುಗಳ ಬರೆಯಬಾರದಿತ್ತು. ಕಡೆಗೂ, ನಿನ್ನ ಬರಹವೇ ನಿನ್ನ ಮುಕ್ತಿಯಾಯಿತೇ..
ಆದರೂ, ನೀ ಬರೆದ ಸಾಲುಗಳು ಎಂದೆಂದಿಗೂ ಅಜರಾಮರ. ನಿನಗೆ ಮತ್ತೊಂದು ಜನ್ಮವಿದ್ದರೆ ನನ್ನ ಮಗಳಾಗಿ ಜನಿಸು. ಕೆಚ್ಚೆದೆಯ ಕಿಚ್ಚಿನ ಹೆಮ್ಮೆಯ ಮಗಳಾಗಿ ಹುಟ್ಟಿ ಬಾ.
ನೀ ಬರೆದ ಸಾಲುಗಳ ಮರೆಸಲಾರದಂತೆ ಮಾಡಲು, ನಿನ್ನನ್ನು ಬೆಚ್ಚಗೆ ಕಾಪಿಡಲು ನಾನು ಸಿದ್ಧಳಿದ್ದೇನೆ.

~ವಿಭಾ ವಿಶ್ವನಾಥ್

ಸೋಮವಾರ, ಜುಲೈ 13, 2020

ಚಹಾ-ಕಾಫಿ ಚೂರುಗಳು

1.ಸಕ್ಕರೆ ಖಾಲಿಯಾದಾಗ ಚಹಾಕ್ಕೆ
ಬೆಲ್ಲ, ಕಲ್ಲುಸಕ್ಕರೆಗಳೂ ಆಗಬಹುದು
ರುಚಿ ಬದಲಾಗಬಹುದು ಅಷ್ಟೇ..
ಹೊಂದಾಣಿಕೆ ಎಂದರೆ ಇದೆಯಾ..?

2. ಮೂಲೆಯ ಕಾಫಿ ಟೇಬಲ್ ಖಾಲಿಯಿಲ್ಲದಿದ್ದರೆ
ಮೊದಲು ಮೊದಲೆಲ್ಲಾ ಕಿರಿಕಿರಿಯೆನಿಸುತ್ತಿತ್ತು
ಈಗ ಯಾವುದೂ ಆಗುತ್ತದೆ.. ಕಾಫಿಯೊಂದಿದ್ದರೆ ಸಾಕು
ಅನಿವಾರ್ಯತೆ ಎಲ್ಲವನ್ನೂ ಕಲಿಸಿಬಿಡುತ್ತದೆ

3. ದಿನಾಲೂ ಕಾಫಿ ಇದ್ದರೂ ಆದೀತು
ಅಥವಾ ಚಹಾ ಕುಡಿದರೂ ಆದೀತು
ಅಥವಾ ಬಿಸಿನೀರು ಸಹಾ ಆದೀತು
ಬದಲಾವಣೆಗೆ ಒಗ್ಗಿಸಿಕೊಳ್ಳಲು ಕಲಿತಿರುವೆ

4. ಕಾಫಿ ಚೆನ್ನಾಗಿದೆಯೋ ಇಲ್ಲವೋ
ರುಚಿಯ ನಿರ್ಧಾರ ಕುಡಿಯುವವರದ್ದಲ್ಲವೇ..?
ಕೆಲವೊಮ್ಮೆ, ಮಾಡುವವರ ಮಾತಿಗೆ ಮರುಳಾಗಿ
ಸ್ವಂತ ನಿರ್ಧಾರವನ್ನೇ ಬದಲಿಸಿಕೊಂಡು ಬಿಡುತ್ತೇವೆ

5.ಪರಿಮಾಣ ಬದಲಾದಂತೆಲ್ಲಾ ರುಚಿ ಬದಲು
ಕಲಿತಷ್ಟೂ ಕಲಿಯುವುದು ಇದ್ದೇ ಇದೆ
ದಿನದಿನವೂ ಹೊಸ ರುಚಿ, ಹೊಸ ಪಾಠ
ನಾನಿನ್ನೂ ಬದುಕೆಂಬ ಪಾಕಶಾಲೆಯ ವಿದ್ಯಾರ್ಥಿ

6. ಸಿಹಿ ಕಾಫಿ ಏಕೋ ಸರಿಯಾಗುತ್ತಿಲ್ಲ
ನಾಲಿಗೆಗೆ ಹಿತವಾದರೂ ಏಕೋ ಕಸಿವಿಸಿ
ನಿತ್ಯದ ಕಹಿ ಕಾಫಿಯನ್ನೇ ಮನ ಬಯಸುತ್ತಿದೆ
ಹಠಾತ್ ಬದಲಾವಣೆಗೆ ಒಗ್ಗಿಕೊಳ್ಳುವುದೂ ಕಷ್ಟವೇ..

7. ನೋಡಲು ಚೆನ್ನಾಗಿಯೇ ಇದ್ದ ಕಾಫಿ
ಗುಟುಕರಿಸಿದ ನಂತರ ಕಹಿ ಕಹಿ
ಆಗೆಲ್ಲಾ ನನಗೆ ನೆನಪಾಗುವುದು
ಗೋಮುಖ ವ್ಯಾಘ್ರದಂತಹಾ ಹಿತಶತ್ರುಗಳೇ..

~ವಿಭಾ ವಿಶ್ವನಾಥ್

ಗುರುವಾರ, ಜುಲೈ 9, 2020

ಯಾವುದೊ ಭಾವ, ಯಾವುದೋ ಜೀವ


ಯಾವುದೊ ಭಾವ, ಯಾವುದೋ ಜೀವ
ಅರಿತು ಬೆರೆತು ಬಾಳುವುದಯ್ಯ

ಎಲೆಯ ಮರೆಯ ಪ್ರತಿಭೆಯು ಇಂದು 
ಕಾಣದೆ ಎಲ್ಲೋ ಅಡಗಿವುದಯ್ಯ

ನಗುವು,ಅಳುವು ಒಟ್ಟಿಗೆ ಬೆರೆತು
ಬಾಳನು ರಂಗು ಮಾಡಿವೆಯಯ್ಯ

ಬದುಕಿನ ಭಾವದ ತಂತಿಯ ಮೀಟಿ
ಒಳಗಿನ ತಿಳಿಯನು ಕಲಕುವೆವಯ್ಯ

ರಾಗ-ದ್ವೇಷದ ಭಾವದ ಪಥವ
ತೊರೆದು ಬಂದು ನಿಂತಿವೆಯಯ್ಯ

ಯಾರದೊ ಬದುಕು, ನನ್ನಯ ಹಾಡು
ಮರೆತೂ ಮರೆಯದಂತಾಗಿದೆಯಯ್ಯ

~ವಿಭಾ ವಿಶ್ವನಾಥ್

ಭಾನುವಾರ, ಜುಲೈ 5, 2020

ನನ್ನದಲ್ಲದ ಹಾಡು

ನನ್ನದಲ್ಲದ ಹಾಡ

ಹಾಡಬಲ್ಲೆನೆ ನಾನು?
ನನ್ನದಾಗದ ಬದುಕ
ಬದುಕಬಲ್ಲೆನೇ ನಾನು?

ಎದೆಯುಸಿರ ಸ್ವರ ಮೀಟಿ
ಭಾವವನೇ ಬಸಿದು
ನಾನಾಗದ ನನ್ನನ್ನು
ನಾನೇ ನಾನಾಗಿಸಿಕೊಂಡು

ಬದುಕಲಾಗದ ಬದುಕ
ಕನಸಿನಲಿ ಬದುಕುತಾ
ನನಸಾಗದ ಕನಸ
ಕನಸೇ ಬದುಕೆನ್ನುತಾ

ನನ್ನದಲ್ಲದ ಬದುಕು
ನನ್ನದಲ್ಲದ ಭಾವ
ಹೇಗೋ ಒಂದಾಗಿಸುತ
ನನ್ನದೇ ಎಂದೆನುತ

ಬದುಕ ಹಾಡಾಗಿಸುತ
ಹಾಡ ಬದುಕಿಸುತ
ಬದುಕಬಲ್ಲೆನು ನಾನು
ಹಾಡಬಲ್ಲೆನು ನಾನು

~ವಿಭಾ ವಿಶ್ವನಾಥ್

ಗುರುವಾರ, ಜುಲೈ 2, 2020

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ


ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಯಾರೊಬ್ಬರೂ ಇಲ್ಲದಿದ್ದಾಗಲೂ ಭರವಸೆ ನೀಡಿ ಬೆನ್ನಿಗೆ ನಿಲ್ಲುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಸೋತಾಗ ಹೆಗಲು ಕೊಡಲು ಯಾವಾಗಲೂ ಅವನಿರುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ನನ್ನ ನೆಚ್ಚಿನ ಹಾಡಿನ ಸಾಲುಗಳನ್ನು ಗುನುಗಲು ನೆನಪಿಸುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ತಪ್ಪಾದಾಗಲೆಲ್ಲಾ ತಿದ್ದಿ ನಡೆಸಲು ಅವನಿದ್ದಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಜಗತ್ತೇ ನನ್ನ ತಿರಸ್ಕರಿಸಿದರೂ, ತಿರಸ್ಕಾರ ತೋರದವನು ಅವನು

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ನೀನೇ ಉತ್ತಮವೆನ್ನುತ್ತಾನೆ, ನಾನು ಉತ್ತಮವೆಂಬ ಮಾತು ನಿಜವಲ್ಲದಿದ್ದರೂ

ನಿರಾಶೆಯ ಕತ್ತಲೆಯ ಕೂಪದಲ್ಲಿರುವಾಗಲೂ
ಭರವಸೆಯ ಬೆಳಕು ತೋರಿ ಜೀವಂತವಾಗಿರಿಸುತ್ತಾನೆ

ಅಣ್ಣ, ಅವ ಮತ್ತೊಬ್ಬ ತಾಯಿಯ ಮಗ
ಬರೀ ಅಣ್ಣ ಎಂಬ ಪದಕ್ಕಿಂತ ಮಿಗಿಲಾದವನು

~Azubougu Chinwendu chukwudi
(ಭಾವಾನುವಾದ: ವಿಭಾ ವಿಶ್ವನಾಥ್)

ಮೂಲ ಕವಿತೆ:
A brother from another mother
-----------------------------------------------------
A brother from another mother
He got your back always when no one else did

A brother from another mother
He always there even when you are defeated

A brother from another mother
He reminded you of the lyrics to you favorite songs

A brother from another mother
He corrects you when you are wrong

A brother from another mother
He always there even when the world rejects you

A brother from another mother
Tells you that you are the best even when you are not

Even when you are in the mood of despondency
He gives u reason to keep your hopes alive

A brother from another mother
He is more than just a brother

~Azubuogu Chinwendu chukwudi

ಭಾನುವಾರ, ಜೂನ್ 28, 2020

ಗಜಲ್-೦3

ಕತ್ತಲೆಯ ಕೂಪದಲ್ಲಿದ್ದವಳಿಗೆ ಬೆಳಕು ತೋರಿದ್ದು ನೀ
ಭರವಸೆಯ ನಂದಾದೀಪವನು ಹಚ್ಚಿಟ್ಟದ್ದು ನೀ

ನಾಳೆಯ ಕುರಿತು ಆಸ್ಥೆಯೇ ಇರದವಳಿಗೆ
ಪ್ರಪಂಚದ ವಾಸ್ತವತೆಯ ಅರಿವು ಮೂಡಿಸಿದ್ದು ನೀ

ಅಜ್ಞಾನದ ಅಂಧಕಾರದಲಿ ಮುಳುಗಿ ಹೋಗಿದ್ದವಳಿಗೆ
ಜ್ಞಾನ ಜ್ಯೋತಿಯ ಹೊತ್ತಿಸಿ ಬದುಕ ಬೆಳಗಿಸಿದ್ದು ನೀ

ಜ್ಞಾನಕ್ಕಾಗಿ ಪರಿತಪಿಸುತ್ತಾ ಎಲ್ಲೆಲ್ಲೋ ಹುಡುಕುವಾಗ
ಅಕ್ಷರ ಭಿಕ್ಷೆಯ ಹಾಕಿ ಭರವಸೆ ಬೆಳಗಿಸಿ ಚೈತನ್ಯ ನೀಡಿದ್ದು ನೀ

ಹಣದ ಮೋಹಕೆ, ನಿನ್ನನ್ನೂ ಜ್ಞಾನವನ್ನು ಮಾರಿಕೊಳ್ಳದೆ
ದಿಟ್ಟತನದಿ ನಮ್ಮ ಪೀಳಿಗೆ ಮಾರಾಟಕ್ಕಿಲ್ಲ ಎಂದದ್ದು ನೀ

ಸುಳ್ಳು-ವಂಚನೆ ಅಪ್ರಾಮಾಣಿಕತೆಗೆ ತಲೆಬಾಗದೆ
ಪ್ರಾಮಾಣಿಕತೆಯಿಂದಿರು ಎಂದು ಸ್ಥೈರ್ಯ ತುಂಬಿದ್ದು ನೀ

ವಿಭಾಳ ಪ್ರತಿ ಹೆಜ್ಜೆಗೂ ಸಾಕ್ಷಿಯಾಗಿ ನಿಂತು
ಇಂದಿಗೂ ಪ್ರತಿಯೊಂದನೂ ಪ್ರೋತ್ಸಾಹಿಸುತ್ತಿರುವುದು ನೀ

~ವಿಭಾ ವಿಶ್ವನಾಥ್

ಭಾನುವಾರ, ಜೂನ್ 21, 2020

ಭಾವಯಾನ

ಭಾವಜೀವಿಯಾದ ಮನುಷ್ಯ ಇತ್ತೀಚೆಗೆ ಭಾವನೆಗಳನ್ನು ಮರೆತಂತೆ ಬದುಕುತ್ತಿದ್ದಾನೆ. ಭಾವನೆಗಳು, ಬಂಧಗಳು ಬೆಳೆಸಿಕೊಂಡಂತೆಲ್ಲಾ ಬೆಳೆಯುತ್ತಾ ಹೋಗುತ್ತವೆ. ಆದರೆ, ಭಾವನಾತ್ಮಕ ಸೆಳೆತಗಳು ಹೆಚ್ಚಿದಂತೆಲ್ಲಾ ಮತ್ತೆ ಮತ್ತೆ ದುಃಖವೂ ಹೆಚ್ಚುತ್ತಾ ಹೋಗುತ್ತದೆ. ಭಾವಗಳೇ ಇಲ್ಲದ ಮನುಷ್ಯ ಇದ್ದಾನೆಯೇ..? ಯಾರಾದರೂ ಭಾವನೆಯೇ ಇಲ್ಲದೆ ಬದುಕಬಲ್ಲರೇ..? 


ಭಾವನೆಗಳಿದ್ದರೂ ತೋರ್ಪಡಿಸಿಕೊಳ್ಳದ ಹಲವು ಜನರಿದ್ದಾರೆ, ಆದರೆ ಭಾವನೆಗಳೇ ಇಲ್ಲದೆ ಇರುವ ಜೀವಂತ ವ್ಯಕ್ತಿ ಹುಡುಕಿದರೂ ಸಿಗಲಾರ. ನಾವು ಬೆಳೆದ ಪರಿಸರ, ನಮ್ಮ ದೇಹದಲ್ಲಿನ ಹಾರ್ಮೋನ್ ಗಳ ಪ್ರಭಾವ ಭಾವಾಭಿವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸೆರಟೋನಿನ್, ಎಂಡೋರ್ಪಿನ್, ಆಕ್ಸಿಟೋಸಿನ್, ಡೋಪಮೈನ್ ಮುಂತಾದ ಹಾರ್ಮೋನ್ ಗಳ ಪ್ರಭಾವ ಭಾವನೆಗಳ ಮೇಲೆ ಪರಿಣಾಮ ಬೀರಿ ಮನುಷ್ಯನ ಬದುಕಿನಲ್ಲಿ ಆಶಾಕಿರಣವಾಗಿವೆ.

ಅಕಸ್ಮಾತ್ ದುಃಖ ಎಂಬುದೇ ಇಲ್ಲವೆಂದಿದ್ದರೆ... ಯಾವುದೇ ಭಾವನೆಗಳು ಇರದಾದರೆ ಅದು ಒಂದು ಲೋಪವೇ ಅಲ್ಲವೇ..?

ಚಿರಂಜೀವಿತ್ವ ಕೂಡಾ ಶಾಪವಾಗಬಲ್ಲದು. ಮರಣ ಕೂಡಾ ವರವಾಗಬಲ್ಲದು. ಆಲೋಚನೆಯ ಮೇಲೆ ಬದುಕಿನ ಬಂಡಿ ನಿಂತಿದೆ. ಸಿಹಿಯನ್ನು ಮಾತ್ರ ತಿನ್ನುವ ಮನುಷ್ಯ ಯಾರೂ ಇರಲಾರ. ಅತಿಯಾದ ಸಿಹಿ ವಾಕರಿಕೆ ತರಿಸುತ್ತದೆ. ಅಂತೆಯೇ ಅತಿಯಾದ ಅಮೃತ ಕೂಡಾ ವಿಷವಾಗಿ ಪರಿಣಮಿಸಬಲ್ಲದು. ಭಾವಗಳ ಲೋಪ ಕೂಡಾ ಬದುಕಿನ ಒಂದು ಕಪ್ಪು ಚುಕ್ಕಿಯೇ.

ವಿಜ್ಞಾನ ಮತ್ತು ಸಾಹಿತ್ಯದ ಮೂಲ ಎರಡರ ಕೇಂದ್ರಬಿಂದುವಾಗಬಲ್ಲವು ಈ ಭಾವನೆಗಳು. ಸಾಹಿತ್ಯ ಸೃಷ್ಟಿಗೆ ಸೃಜನಶೀಲತೆ ಮುಖ್ಯವಾದರೂ ಭಾವಗಳಿಲ್ಲದೆ ಬರಹ ಹುಟ್ಟಲಾರದು. ಭಾವನೆಗಳು ನಮ್ಮವೇ ಆಗಬೇಕೆಂದಿಲ್ಲ. ಯಾವುದಾದರೂ ಕತೆ, ಕಾದಂಬರಿ ಓದಿದಾಗ ಮೂಡುವ ಭಾವಗಳು, ಸಿನಿಮಾ ನೋಡಿದಾಗ ಹುಟ್ಟುವ ಭಾವನೆಗಳು, ಯಾರದ್ದೋ ಜೀವನದ ಘಟನೆಗಳನ್ನು ಕೇಳಿದಾಗ ಹುಟ್ಟುವ ಭಾವಗಳು ಹೀಗೆ ಭಾವಗಳ ಮೂಲ ಅನೇಕ. ಈ ಭಾವನೆಗಳನ್ನು ಭಾವಜೀವಿ ಬಂಧಿಸಿ ಅಕ್ಷರ ರೂಪ ನೀಡುತ್ತಾನೆ ಕೆಲವರು ಅನುಭವಿಸಿ ಸುಮ್ಮನಾಗುತ್ತಾರೆ, ಇನ್ನು ಕೆಲವರು ಅಲ್ಲಿಯೇ ಮರೆಯುತ್ತಾರೆ. 

ಲೇಖಕರ ಭಾವನೆಗಳ ಲೇಖನ ಅಥವಾ ಕತೆಗಳನ್ನು ಓದಿದ ಕೆಲವರು ಅವು ಅವರ ಭಾವನೆಗಳೇ ಏನೋ ಎಂದು ಭಾವಿಸಿಬಿಡುತ್ತಾರೆ. ಪತ್ತೇದಾರಿ ಕತೆ ಬರೆಯಲು ಅವನು ಪತ್ತೆದಾರಿಯೇ ಆಗಿರಬೇಕಿಲ್ಲ, ಪ್ರೀತಿ ಅಥವಾ ಬ್ರೇಕಪ್ ವಿಚಾರಗಳನ್ನು ಬರೆಯಲು ಅವರ ಬದುಕಿನಲ್ಲಿ ಅವು ಸಂಭವಿಸಿರಸಬೇಕೆಂಬ ನಿಯಮವೇನೂ ಇಲ್ಲ. ಹಾಗಾದರೆ, ದೆವ್ವ-ಭೂತಗಳ ಕತೆ ಬರೆಯುವ ಲೇಖಕರಿಗೆ ಅದೆಷ್ಟು ದೆವ್ವ-ಭೂತಗಳ ಅನುಭವವಾಗಿರುತ್ತದೆ? ಅನುಭವ ಮಾತ್ರವಲ್ಲ ಕಲ್ಪನೆ ಕೂಡಾ ಭಾವಗಳ ಹರಿಕಾರ. 

ಭಾವಗಳು ಕೂಡಾ ಬದುಕಿನ ಎಷ್ಟೋ ಬಂಧಗಳನ್ನು ಬೆಸೆಯುತ್ತವೆ. ರಕ್ತ ಸಂಬಂಧಗಳು ಮಾತ್ರ ಬದುಕಿನ ಬಂಧಗಳನ್ನು ಬೆಸೆಯುವುದಿಲ್ಲ ಭಾವಗಳು ಸಹಾ ಬದುಕಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಸ್ನೇಹಿತರು ಕೆಲವೊಮ್ಮೆ ಒಡ ಹುಟ್ಟಿದವರಿಗಿಂತ ಹೆಚ್ಚಾಗಬಲ್ಲರು. ಅದೇ ಬಂಧಗಳು ಬೇರಾದರೆ ಅವು ಕೊಡುವ ಯಾತನೆ ದೈಹಿಕ ನೋವಿಗಿಂತಲೂ ಹೆಚ್ಚು.

ನೋವು, ನಲಿವು, ಸುಖ, ದುಃಖ, ನಗು, ಅಳು ಹೀಗೇ ಪ್ರತಿಯೊಂದು ಭಾವಗಳೂ ವಿಭಿನ್ನ. ಎಲ್ಲವನ್ನೂ ಅನುಭವಿಸುದಾಗಲಷ್ಟೇ ಬದುಕಿನ ಭಾವಯಾನದ ಅನುಭವವಾಗಲು ಸಾಧ್ಯ. ಎಲ್ಲವೂ ಸುಗಮವಾಗಿ ಸಾಗಲು ಪ್ರಮುಖವಾದ ಭಾವಗಳ ಹತೋಟಿ ನಮ್ಮ ಬಳಿ ಇದ್ದರಷ್ಟೇ ಭಾವಯಾನ ಸುಸೂತ್ರವಾಗಿ ಸಾಗಲು ಸಾಧ್ಯ.

~ವಿಭಾ ವಿಶ್ವನಾಥ್

ಭಾನುವಾರ, ಜೂನ್ 14, 2020

ತಿರುತಿರುಗಿ....

ಬದುಕು ತಿರುತಿರುಗಿ ಮತ್ತೆ ಅದೇ ಪರಿಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸುತ್ತದೆ ಅಲ್ಲವೇ. ಮಾಡಿದ ಪಾಪ ಮತ್ತಾವುದೋ ಜನ್ಮದಲ್ಲಿ ಕಾಡದು. ಈ ಜನ್ಮದ ಋಣ ಈ ಜನ್ಮದಲ್ಲಿಯೇ ತೀರಬೇಕು. ಇಲ್ಲೇ ಡ್ರಾ ಇಲ್ಲೇ ಬಹುಮಾನ ಎನ್ನುವುದು ಈ ಕಲಿಗಾಲದ ತೀರ್ಪು. ಪಾಪ-ಪುಣ್ಯಗಳು ನರಕ, ಸ್ವರ್ಗದಲ್ಲಿಲ್ಲ. ಬದುಕಿನ ಎಲ್ಲಾ ಪಾಪಗಳಿಗೂ ಇಲ್ಲೇ ಬೆಲೆ ತೆರಬೇಕು. ಪುಣ್ಯ ಎಂಬುದಿದ್ದರೆ ಕೆಲಕಾಲ ನಿಮ್ಮದಿ ಇಂದ ಇರಬಹುದು ಅಥವಾ ಆ ಭ್ರಮೆಯಲ್ಲಿ ಬದುಕಬಹುದು. ತೀರದ ದಾಹಗಳಿಗೆ ಒಳಗಾಗಿ ಭ್ರಮೆಯಲ್ಲಿ ಏನನ್ನೋ ಮಾಡುತ್ತಿದ್ದೇವೆನ್ನುತ್ತಾ ಬದುಕುವ ಎಲ್ಲರಿಗೂ ನನ್ನ ಬದುಕು ಒಂದು ಪಾಠವಾಗಬಹುದು. ಅಥವಾ ಇದೂ ನನ್ನ ಭ್ರಮೆಯೇ..? ಅರಿವಿಲ್ಲ. ಹಾಗೆ ಪಾಠ ಕಲಿಯುವುದಿದ್ದರೆ ಎಷ್ಟು ಜನರ ಬದುಕಿನಿಂದ ನಾನು ಪಾಠ ಕಲಿಯಬಹುದಿತ್ತು.. ಬಹುಶಃ ಜೀವನದ ಪಾಠಕ್ಕೆ ಅನುಭವವೇ ಗುರು ಇರಬಹುದೇನೋ..


ಪ್ರಾಯಶ್ಚಿತ್ತವೇ ಮಾಡಿದ ಪಾಪಗಳಿಗೆ ತಕ್ಕ ಶಾಸ್ತಿ ಎನ್ನುತ್ತಾರೆ. ಹಾಗಿದ್ದಲ್ಲಿ ನನ್ನ ಪ್ರಾಯಶ್ಚಿತ್ತ ನನ್ನ ಮಗಳ ಬದುಕನ್ನು ಸರಿ ಮಾಡಬಲ್ಲದೇ..? ಅವಳ ಬದುಕು ಸರಿಯಾಗುತ್ತದೆ ಎಂದರೆ ನನ್ನ ಪ್ರಾಣ ಕೊಡಲು ಸಹಾ ನಾನು ಸಿದ್ಧನಿದ್ದೇನೆ. ಆದರೆ, ಅವಳ ಬದುಕು ಮತ್ತಾವುದಾದರೂ ಬಗೆಯಿಂದ ಸರಿಯಾಗಲಿ ಎಂಬ ಆಸೆಯಿಂದ ಇನ್ನೂ ಜೀವ ಬಿಗಿ ಹಿಡಿದು ಕಾದಿದ್ದೇನೆ. ಆದರೆ, ಅವಳು ಮತ್ತೆ ನನ್ನನ್ನು "ಅಪ್ಪಾ" ಎಂದು ಕರೆಯಬಲ್ಲಳೆ? ಈ ಪಾಪಿಯ ಬದುಕಿನಲ್ಲಿ ಅಷ್ಟಾದರೂ ಆಶಾಭಾವನೆ ಉಳಿಯಬಹುದೇ..? ಕಾಲವೇ ಇದಕ್ಕೆಲ್ಲಾ ಉತ್ತರ ನೀಡಬೇಕಷ್ಟೇ..

ನಾನು ಗೋಪಾಲ. ಬಡತನದ ಕುಟುಂಬದಿಂದ ಸಿರಿವಂತಿಕೆಯ ಒಂದೊಂದೇ ಮೆಟ್ಟಿಲೇರಿದೆ. ಬಡತನದ ಹೀನಾಯ ಸ್ಥಿತಿಯಲ್ಲಿ ನಮ್ಮನ್ನು ಭಿಕಾರಿಗಳಂತೆ ಕಾಣುತ್ತಿದ್ದವರೆಲ್ಲಾ ಸಿರಿವಂತಿಕೆ ಬರುತ್ತಿದ್ದ ಹಾಗೆ ನಮ್ಮ ಸುತ್ತ ನೆರೆಯಲು ಶುರು ಮಾಡಿದರು. ಹಣವಿದ್ದರೆ ಬಳಗ ಎಂದು ತಿಳಿದು ಸರ್ಕಾರಿ ಕೆಲಸದ ಜೊತೆ ಹೊಸ ಸಂಪಾದನೆಯ ಮಾರ್ಗವನ್ನು ಹಿಡಿದೆ. ಅದು ಯಾರೂ ಮಾಡಬಾರದ ಕೆಲಸವೇನಲ್ಲ. ಇಂದಿಗೂ ಅದು ಪುಣ್ಯ ಕಾರ್ಯ ಎಂದೇ ಭಾವಿಸಲಾಗುವ ಮದುವೆಯ ದಲ್ಲಾಳಿಯ ಕೆಲಸ. ಮನೆಯಲ್ಲಿ ಇದಕ್ಕೆ ಯಾರ ವಿರೋಧವೂ ನೇರವಾಗಿ ವ್ಯಕ್ತವಾಗಲಿಲ್ಲ. ವ್ಯಕ್ತವಾಗಿದ್ದರೂ ಅದನ್ನು ಗಮನಿಸುವ ಸ್ಥಿತಿಯಲ್ಲಿಯೂ ನಾನಿರಲಿಲ್ಲ. ಕಾಲಕ್ರಮೇಣ ಈ ಕೆಲಸದಿಂದ ಸಿಗುವ ಸಂಪಾದನೆ ಹೆಚ್ಚಾಗಿ ಸರ್ಕಾರಿ ಕೆಲಸವನ್ನು ಕಡೆಗಣಿಸಿ ಕೆಲಸ ಬಿಟ್ಟೆ. 


ಕನ್ಯಾದಾನದ ಪುಣ್ಯದ ಕುರಿತು ಮಾತನಾಡುತ್ತಿದ್ದ ನನಗೆ ಅದರ ಹಿಂದಿನ ಕಾರ್ಯಗಳ ಕುರಿತು ಸಹಾ ಆರಿವಿದ್ದಿತು. ಎಲ್ಲಾ ಪುಣ್ಯ ಕಾರ್ಯಗಳ ಹಿಂದೆಯೂ ಪಾಪ-ಕಾರ್ಯಗಳ ಲವಲೇಶ ಇಲ್ಲದ್ದಿಲ್ಲ. ಅರಿತೋ ಅರಿಯದೆಯೋ ಪಾಪಕಾರ್ಯ ನಡೆದೇ ಇರುತ್ತದೆ. ಬರುಬರುತ್ತಾ ಈ ಕೆಲಸದಲ್ಲಿ ಎಷ್ಟು ತೊಡಗಿಸಿಕೊಂಡೆನೆಂದರೆ ವಧು-ವರರನ್ನು ಹೊಂದಿಸುವುದು ನೀರು ಕುಡಿದಷ್ಟೇ ಸುಲಭವಾಗಿದ್ದಿತು ನನಗೆ. ಆನ್ಲೈನ್ ವಧು-ವರರ ಸೈಟ್ ಗಳು ತೀರಾ ಇತ್ತೀಚೆಗೆ ಬಂದರೂ ಈ ಗೋಪಾಲಯ್ಯನ ಕೆಲಸಕ್ಕೆ ಕಿಂಚಿತ್ತೂ ಸಹಾ ತೊಂದರೆಯಾಗಿರಲಿಲ್ಲ ಅದರಿಂದ. 

ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು ಎಂಬ ಮಾತು ನನ್ನ ಪಾಲಿನ ರಹಸ್ಯ ಮಂತ್ರವಾಗಿತ್ತು. ಬಡವರ, ಸಿರಿವಂತರ ಇಬ್ಬರ ಮನಸ್ಥಿತಿಯ ಅರಿವಿತ್ತು. ಕೆಲವರ ಹಣದ ಆಸೆಗೆ, ವರದಕ್ಷಿಣೆಯ ಆಸೆಗೆ ಎಷ್ಟೋ ಹೆಣ್ಣುಗಳ ಬಲಿಯಾಗಿದ್ದಿದೆ. ಕೆಲವು ಹೆಣ್ಣುಗಳ ಮತ್ತೊಂದು ಸಂಬಂಧಕ್ಕೆ ಗಂಡಿನ ಜೀವನ, ಜೀವ ಬಲಿಯಾಗಿದ್ದಿದೆ. ಈ ಎಷ್ಟೋ ಸಂಬಂಧಗಳ ಸೂತ್ರಧಾರಿಯಾಗಿ, ಅದರ ಹಿಂದಿನ ಸಂಬಂಧಗಳ ಮುಚ್ಚಿಟ್ಟ ಸುಳ್ಳಿನ ಹಿಂದೆ ನನ್ನ ಪಾಲು ಅತಿ ಹೆಚ್ಚಿತ್ತು.

ಸುಚಿತ್ರಾ ಮದುವೆಯಾಗುವ ಗಂಡಿಗೆ ಯಾವುದೇ ಕೆಟ್ಟ ಚಟ ಇಲ್ಲ ಎಂದು ನಂಬಿಸಿದ್ದೆ. ಅವನ ಅತಿಯಾದ ಕುಡಿತದಿಂದ ಮದುವೆಯಾದ ಮೂರು ತಿಂಗಳೊಳಗೆ ಅವನು ಸತ್ತ. ಅದರ ಫಲ ಸುಚಿತ್ರಾ ವಿಧವೆಯಾದಳು. ಹೆಚ್ಚಿನ ಓದಿಲ್ಲ, ಮಾಡಲು ಕೆಲಸವಿಲ್ಲ. ಗಂಡನ ಮನೆಯಲ್ಲಿ ಅನಿಷ್ಟ ಎಂಬ ಹಣೆಪಟ್ಟಿ, ಬಡತನದ ಹೆಣ್ಣು ಮಕ್ಕಳೇ ತುಂಬಿದ ಅವಳ ತವರುಮನೆ ಅವಳ ಪಾಲಿಗೆ ಮರೀಚಿಕೆ.

ಭಾಗ್ಯಳ ಹಿಂದಿನ ಬದುಕಿನಲ್ಲಿ ಯಾವುದೇ ಪ್ರೇಮ ಪ್ರಕರಣ ಇಲ್ಲವೆಂದು ಹೇಳಿ ಅವಳನ್ನು ಮದುವೆ ಮಾಡಿಸಿದೆ. ಆಸ್ತಿಯ ಆಸೆಗೋ ಏನೋ ಅವಳೂ ಸಹಾ ಒಪ್ಪಿದ್ದಳು. ಮದುವೆಯಾದ ಆರು ತಿಂಗಳಲ್ಲೇ ಗಂಡನಿಗೆ ಮೋಸ ಮಾಡಿ ಪ್ರಿಯಕರನೊಟ್ಟಿಗೆ ಪರಾರಿಯಾದಳು. ಅವಳನ್ನೇ ನಂಬಿಕೊಂಡಿದ್ದ ಅವಳ ಗಂಡ ಅವಳ ನಂಬಿಕೆ ದ್ರೋಹದಿಂದ ಇಂದು ಜನರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾನೆ. 

ಆಗಲೋ, ಈಗಲೋ ಸಾಯುವ ಮುದುಕನಿಗೆ ಹದಿಹರೆಯದ ಹೆಣ್ಣಿನೊಟ್ಟಿಗೆ ಮದುವೆ.. ಈಗೇ.. ನಾನು ಮಾಡಿದ ಕೆಲಸದಲ್ಲಿ ಪಾಪ-ಪುಣ್ಯದ ಲೆಕ್ಕ ನಾನಿಡಲಿಲ್ಲ. ನಾನಿಟ್ಟದ್ದು ಹಣದ ಲೆಕ್ಕ ಮಾತ್ರ. ಕನ್ಯಾದಾನದಿಂದ ಪುಣ್ಯ ಬರುವುದೇ ಸತ್ಯವಾದರೆ ಅವರ ಮುಂದಿನ ಬಾಳು ಹಸನಾಗದಿದ್ದಲ್ಲಿ ಪಾಪ ಬರುವುದು ಸಹಾ ಸತ್ಯವಾಗಬೇಕಲ್ಲವೇ..?  ಮದುವೆಯವರೆಗೆ ಮಾತ್ರ ಎಲ್ಲರೂ ವಿವಾಹದ ಕುರಿತು ಗಮನ ಹರಿಸುತ್ತಾರೆ. ಅದರ ಮುಂದಿನ ಬದುಕು ಯಾರಿಗೂ ಬೇಡದ ವಿಷಯ. ಸಂಬಂಧಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಹಾ ಕಾಲ್ಗುಣ, ನಕ್ಷತ್ರ, ಕುಟುಂಬಗಳ ಪ್ರವರಗಳತ್ತ ಮಾತು ಹೊರಳುತ್ತದೆ. ನನ್ನ ಹೆಸರು ಮತ್ತು ಹಾಜರಿ ಅಲ್ಲಿ ಅಪ್ರಸ್ತುತ. 

ಅವರ ಕಣ್ಣೀರಿನ, ಶಾಪಗಳ ಪ್ರತಿಫಲ ಇಂದು ನನ್ನ ಬಾಳಲ್ಲಿ ನನ್ನ ಮಗಳ ಬದುಕಿಗೆ ತಟ್ಟಿದೆ ಎನ್ನಿಸುತ್ತದೆ. ಬದುಕು ಬಹಳ ಚಿಕ್ಕದು ತಿರುತಿರುಗಿ ಮತ್ತದೇ ಬಿಂದುವಿಗೆ ಬಂದು ನಿಲ್ಲುತ್ತದೆ. ಕಾಲಚಕ್ರ ಉರುಳುತಲಿತ್ತು. ನನಗೂ ಒಂದು ಕುಟುಂಬವಿದೆ ಎಂಬುದು ಹಣ ಸಂಪಾದನೆಯ ಹಾದಿಯಲ್ಲಿ ಮರೆತೇ ಹೋಗಿತ್ತು. ಇದ್ದ ಒಬ್ಬಳೇ ಮಗಳು ವಿವಾಹದ ವಯಸ್ಸಿನಲ್ಲಿದ್ದಳು. ಅವಳಿಗೆ ನನ್ನ ಈ ಕೆಲಸ ಇಷ್ಟವಿರಲಿಲ್ಲ, ಹಾಗೆಂದೂ ಯಾವತ್ತೂ ಬಾಯಿಬಿಟ್ಟು ಹೇಳಿರಲೂ ಇಲ್ಲ. ಮೊದಲಿಂದಲೂ ಅವಳಿಗೆ ನಾನು ಆಯ್ಕೆಯ ಸ್ವಾತಂತ್ರ್ಯ ನೀಡಿದವನೇ ಅಲ್ಲ. ಅದು ಅವಳ ಮೇಲಿನ ಅಪನಂಬಿಕೆಯಿಂದ ಅಲ್ಲ. 

ಪೋಷಕರು ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ನೀಡದಿರುವುದು ಅವರ ಮೇಲಿನ ಅಪನಂಬಿಕೆಯಿಂದ ಅಥವಾ ದ್ವೇಷದಿಂದಲೋ ಅಲ್ಲ.. ಅತಿಯಾದ ಮಮತೆಯಿಂದ, ಅವರ ಮೇಲಿನ ಅತಿಯಾದ ಕಾಳಜಿಯಿಂದ. ಮಕ್ಕಳ ಆಯ್ಕೆ ತಪ್ಪಾದಲ್ಲಿ ಎಂಬ ಭಯದಿಂದ ಅಷ್ಟೇ.. ಕೆಲವೊಮ್ಮೆ ಮಕ್ಕಳು ಇದನ್ನು ಧಿಕ್ಕರಿಸಿ ನಿಲ್ಲುತ್ತಾರೆ. ಆದರೆ, ನನ್ನ ಮಗಳ ವಿಷಯದಲ್ಲಿ ನಾನು ಅದೃಷ್ಟ ಮಾಡಿದ್ದೆ. ನನ್ನ ಆಯ್ಕೆಯನ್ನು ಅವಳು ಎಂದಿಗೂ ಧಿಕ್ಕರಿಸಿರಲಿಲ್ಲ. ಅವಳು ನನ್ನ ಆಯ್ಕೆಯನ್ನು ಧಿಕ್ಕರಿಸಿದ್ದಾರೆ ಇಂದು ಅವಳ ಬಾಳು ಹಸನಾಗುತ್ತಿತ್ತೋ ಏನೋ.. ವಿಧಿಯ ಆಯ್ಕೆ ಬೇರೆಯೇ ಇದ್ದರೆ ಅದನ್ನು ಬದಲಾಯಿಸಲು ಹುಲುಮಾನವರಾದ ನಮಗೆ ತಾನೇ ಹೇಗೆ ಸಾಧ್ಯ..?

ಅವಳ ಬದುಕಿನ ಆಯ್ಕೆಯನ್ನು ನಾನೇ ಮಾಡಿದ್ದೆ, ಆತ ಪ್ರತಿಷ್ಠಿತ ಮನೆತನದ ವರ. ದೊಡ್ಡ ಕಾಲೇಜಿನಲ್ಲಿ ಲೆಕ್ಚರರ್. ನಾನು ಲೆಕ್ಕ ತಪ್ಪಿದ್ದೆಲ್ಲಿ ನನಗೇ ತಿಳಿಯಲಿಲ್ಲ. ಅವರ ಐಶ್ವರ್ಯ ನನ್ನ ಕಣ್ಣನ್ನು ಕುರುಡಾಯಿಸಿತೇ? ಮಗಳ ಬಾಳನ್ನು ಹಸನುಗೊಳಿಸುವ ಆತುರ ನನ್ನನ್ನು ದಾರಿ ತಪ್ಪಿಸಿತೇ..? ನನಗೆ ತಿಳಿದವರು, ಹತ್ತಿರದವವರೆಲ್ಲರಿಗೂ ಐಶ್ವರ್ಯದ ಹಿಂದಿನ ಅಸಲಿಯತ್ತು ತಿಳಿದಿತ್ತು . ಆದರೆ, ಯಾರೂ ತಡೆಯಲಿಲ್ಲ. ಮುಖವಾಡವನ್ನು ಯಾರೂ ಕಳಚಲಿಲ್ಲ. ಸಾವಿರ ಸುಳ್ಳನಾದರೂ ಹೇಳಿ ಮದುವೆ ಮಾಡು ಎಂಬ ಮಂತ್ರವನ್ನು ಅವರೂ ನಂಬಿಕೊಂಡಿದ್ದರೋ ಏನೋ.. ಅಥವಾ ಅವರ ಮಕ್ಕಳ ಬಾಳಿನ ದುಸ್ಥಿತಿಗೆ ಕಾರಣನಾದ ನನ್ನ ಮೇಲಿನ ಕೋಪವೋ.. ಯಾರನ್ನು ದೂಷಿಸಿ ಏನು ಫಲ..?

ಮದುವೆಯಾದ ನಂತರ ಅಲ್ಲಿಂದ ಯಾವ ಸುದ್ದಿಯೂ ಬರುತ್ತಿರಲಿಲ್ಲ. ಅವರ ಬದುಕು ಅವರವರಿಗೆ ಬಿಟ್ಟದ್ದು ಎನ್ನುತ್ತಾ ನವದಂಪತಿಗಳು ಅವರ ಲೋಕದಲ್ಲಿ ಮುಲುಗಿದ್ದಾರೆ ಎಂದೇ ಸುಮ್ಮನಾಗಿದ್ದೆ. 20 ದಿನಗಳ ನಂತರ ಬಂದದ್ದು ಕರಾಳ ಸುದ್ದಿ. ನನ್ನ ಮಗಳು ಅವಳ ಗಂಡನನ್ನು ಸಾಯಿಸಿದ್ದಳು ಎಂಬ ಆಘಾತಕಾರಿ ಸುದ್ದಿ. ತಕ್ಷಣವೇ ಅಲ್ಲಿ ಹೋಗಿ ನೋಡಿದರೆ ನನ್ನ ಮಗಳೆಂಬಂತೆಯೇ ಅವಳಿರಲಿಲ್ಲ. ಸೊರಗಿದ ದೇಹ, ಗುಳಿಬಿದ್ದ ಕಣ್ಣು, ಅತ್ತು ಅತ್ತು ಅಳಲು ಸಾಧ್ಯವೇ ಇಲ್ಲವೇನೋ ಎಂಬಂತಾಗಿದ್ದ ಅವಳ ಕಂಗಳನ್ನು ದಿಟ್ಟಿಸಿದರೆ ರೋಷವನ್ನು ತಣಿಸಿಕೊಂಡ ತೃಪ್ತಿ ಇತ್ತು.

ಅವನಿಗೆ ಅದಾಗಲೇ ಎಷ್ಟೋ ಹೆಣ್ಣುಗಳ ಹುಚ್ಚಿತ್ತಂತೆ, ಇವಳು ಬರೀ ಹೆಸರಿಗೆ, ಅಂತಸ್ತಿನ ತೋರಿಕೆಗೆ ಲೋಕದ ಕಣ್ಣಿಗಷ್ಟೇ ಹೆಂಡತಿ. ದಿನಾ ರಾತ್ರಿ ರೌರವ ನರಕ ದರ್ಶನ ಮಾಡಿಸುತ್ತಿದ್ದ ಅವಳಿಗೆ. ಮೈಯಲ್ಲೆಲ್ಲಾ ಸುಟ್ಟ ಗಾಯಗಳ ಗುರುತು, ಸುಖಾಸುಮ್ಮನೆ ಅನುಮಾನ. ಅವಳು ಸಹಿಸಿ ದೇವಿಯಾದಷ್ಟೂ ಇವನು ರಕ್ಕಸನಾಗುತ್ತಿದ್ದ, ಕೊನೆಗೆ ಅವಳೇ ದುರ್ಗೆಯಾಗಿ ಇವನ ಅಂತ್ಯ ಮಾಡಿದಳು. ಅವಳ ಕೋಪದ ತಾಪ ಎಷ್ಟಿತ್ತೆಂದರೆ ಅವನ ಮೈಯಲ್ಲಿ ಬಿದ್ದಿದ್ದ ಚಾಕುವಿನ ಏಟುಗಳು ಎಣಿಸಲಾರದಷ್ಟು.. ಸತ್ತ ನಂತರವೂ ಅದೆಷ್ಟೋ ಹೊತ್ತು ಚುಚ್ಚುತ್ತಲೇ ಇದ್ದಳಂತೆ. ಕುಡಿದು ತುರಾಡುತ್ತಾ ಬಂದವನಿಗೆ ನಿಲ್ಲಲೂ ತ್ರಾಣವಿರಲಿಲ್ಲ, ಇನ್ನು ಇವಳನ್ನು ಹೇಗೆ ತಡೆದಾನು? ಗೋಮುಖ ವ್ಯಾಘ್ರನ ಹತ್ಯೆಯಾಗಿತ್ತು.

ನನ್ನ ಮಗಳ ಕುರಿತು ನನಗೆ ಕೋಪವಿರಲಿಲ್ಲ. ವಿಚಾರಿಸದೆ ವಿವಾಹ ಮಾಡಿಕೊಟ್ಟದಕ್ಕೆ ನನ್ನ ಬಗ್ಗೆಯೇ ನನಗೆ ಅಸಹ್ಯವಿತ್ತು. ಅವಳನ್ನು ಬಿಡಿಸಲು ಮಾಡುತ್ತಿದ್ದ ಎಲ್ಲಾ ಪ್ರಯತ್ನಗಳನ್ನೂ ಅವಳು ತಿರಸ್ಕರಿಸುತ್ತಲೇ ಇದ್ದಾಳೆ. ನನ್ನನ್ನು ಅಪರಿಚಿತನಂತೆ ದೂರವಿರಿಸಿದ್ದಾಳೆ. ನನ್ನನ್ನು "ಅಪ್ಪಾ" ಎಂದು ಕರೆಯಲು ಸಹಾ ಅವಳಿಗೆ ಅಸಹ್ಯವಂತೆ. ನನ್ನ ಪಾಪ-ಕರ್ಮಗಳನ್ನು ತಡೆಯದೆ ಸುಮ್ಮನಿದ್ದುದಕ್ಕೆ ಅವಳಿಗೆ ದೇವರು ಕೊಟ್ಟ ಶಿಕ್ಷೆಯಂತೆ ಇದು. ಮಗಳನ್ನು ಆ ಸ್ಥಿತಿಯಲ್ಲಿ ನೋಡಿದ ಅವಳ ತಾಯಿ ಮಾನಸಿಕ ಅಸ್ವಸ್ಥೆಯಾಗಿ ಇಂದು ಆಸ್ಪತ್ರೆಯಲ್ಲಿದ್ದಾಳೆ. ಇದೆಲ್ಲವನ್ನು ನೋಡಲು ನಾನು ಮಾತ್ರ ಇನ್ನೂ ಜೀವಂತವಾಗಿದ್ದೇನೆ.

ಮಕ್ಕಳ ಬಾಳು ಹಾಳಾದಾಗ ತಂದೆ-ತಾಯಿ ಅನುಭವಿಸುವ ಶಿಕ್ಷೆ ನನಗಾಗಿದೆ. ನನ್ನ ಈ ಪರಿಸ್ಥಿಗೆ ಮುಕ್ತಿ ಇಲ್ಲವೇ..? ಪ್ರತಿ ದಿನ ಜೈಲಿನ ಬಳಿ ಹೋದಾಗಲೂ ನನ್ನ ಮುಖ ನೋಡದೆಯೇ ನನ್ನ ಮಗಳು ನನ್ನನ್ನು ನಿರಾಕರಿಸುತ್ತಾಳೆ. ಅವಳ ಮುಂದಿನ ಭವಿಷ್ಯದ ಗತಿ..? ನಾನಿಲ್ಲದೆಯೇ ಎಲ್ಲರೂ, ಎಲ್ಲವೂ ಸಾಂಗವಾಗಿ ಸಾಗುತ್ತದೆ. 

ಭಗವಂತ ಗಂಡಿಗೊಂದು ಹೆಣ್ಣು, ಹೆಣ್ಣಿಗೊಂದು ಗಂಡು ಸೃಷ್ಟಿ ಮಾಡಿರುತ್ತಾನೆ. ಅದನ್ನು ಗಂಟು ಹಾಕುತ್ತಿದ್ದೇವೆ ಎಂಬ ಭ್ರಮೆಯಲ್ಲಿ ನಾವು ಎಲ್ಲರ ಭವಿಷ್ಯವನ್ನೂ ಗೋಜಲಾಗಿಸಿ ಬಿಡುತ್ತೇವೆ. ಇಷ್ಟೆಲ್ಲಾ ಪತ್ರದಲ್ಲಿ ಬರೆದ ನಾನು ನನ್ನ ಬದುಕನ್ನು ಕೊನೆಗಾಣಿಸಿಕೊಳ್ಳುತ್ತಿದ್ದೇನೆ. ಬದುಕಿನ ಗೋಜಲಾದ ಗಂಟುಗಳನ್ನು ಬಿಡಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ, ಯಾವುದೋ ಗಂಟನ್ನು ಕಡಿದು ಹೊರಡುತ್ತಿದ್ದೇನೆ.
------------------------------------
(ತಿರುತಿರುಗಿ ತಿರುಗುತ್ತೆ ಬುಗುರಿ
ತಾನೇ ಸೋತು|
ತಿರೇಗುರುಳುವುದು ತನ್ನ ಬಲವ
ತಾಂ ಕಳೆದು||
ನರನುಮಂತೆಯೇ ಸುತ್ತಿ ಕಡೆಗೊಂದು ದಿನ
ತೆರುವನಸ್ಥಿಯ ಧರೆಗೆ-ಮಂಕುತಿಮ್ಮ

ಡಿ.ವಿ.ಜಿ ಯವರ ಈ ಮಂಕುತಿಮ್ಮನ ಕಗ್ಗದ ಸಾಲುಗಲನ್ನು ಓದಿದ ನಂತರ ಆಲೋಚನೆಗೆ ಬಂದ ಕತೆ)

ನಿಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ತಿಳಿಸುವಿರಿ ಎಂಬ ನಂಬಿಕೆಯೊಂದಿಗೆ

~ವಿಭಾ ವಿಶ್ವನಾಥ್