ಭಾನುವಾರ, ಸೆಪ್ಟೆಂಬರ್ 13, 2026

ರಾಜ ಕಲಾವಿದ ರವಿವರ್ಮ (ಪುಸ್ತಕ ಯಾನ - 487)


ಪುಸ್ತಕದ ಶೀರ್ಷಿಕೆ : ರಾಜ ಕಲಾವಿದ ರವಿವರ್ಮ

ಲೇಖಕರು : ಡಾ. ಗೀತಾ ಸೀತಾರಾಮ್

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಷನ್ಸ್

ಪ್ರಥಮ ಮುದ್ರಣ : 2022

ಪುಟಗಳು : 152

ಬೆಲೆ : 200 ರೂ.


ರಾಜಾ ರವಿವರ್ಮರ ಚಿತ್ರವೆಂದು ತಿಳುವಳಿಕೆಯಿಲ್ಲದ ಹಲವಾರು ಜನ ಅವರ ಕಲೆಯನ್ನು ಮೆಚ್ಚಿ ಆರಾಧಿಸುತ್ತಿದ್ದಾರೆ. ಮೈಸೂರು ಅರಸರ ಆಶ್ರಯದಲ್ಲಿಯೂ ಇವರ ಕಲೆ ಪ್ರವರ್ಧಮಾನಕ್ಕೆ ಬಂದದ್ದನ್ನು ನೋಡಬಹುದು. ಇವರ ಚಿತ್ರಗಳು ಮೈಸೂರಿನ ಅರಮನೆಯಲ್ಲಿ ಹಾಗೂ ಜಗನ್ಮೋಹನ ಆರ್ಟ್ ಗ್ಯಾಲರಿಯಲ್ಲಿವೆ. ಈ ಕಾದಂಬರಿಯ ಕೊನೆಯಲ್ಲಿ 40 ವರ್ಣ ಚಿತ್ರಗಳು ಮನಸೆಳೆಯುವಂತಿವೆ. ಈ ಕಾದಂಬರಿ ಸುಧಾದಲ್ಲಿ ಪ್ರಕಟವಾಗಿತ್ತು.


ಚಿತ್ರಕಲೆಯನ್ನೇ ತನ್ನ ಉಸಿರಾಗಿಸಿಕೊಂಡ ರವಿವರ್ಮರು ಕೇರಳ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬದುಕಿದರೂ.. ಹುಟ್ಟಿದ್ದು ಕೇರಳದ ಕಿಳಿಮಾನೂರಿನಲ್ಲಿ. ಒಡೆಯರಾದ ರಾಜರಾಜವರ್ಮರಿಗೆ ಮನೆಯಾಳು ಪಾಚನ್ ಹೆದರುತ್ತಲೇ ಮನೆತನದ ಗುಡಿಯ ಗೋಡೆಗಳು, ಮನೆಯೊಳಗಿನ ಬಿಳಿ ಗೋಡೆಗಳ ಮೇಲೆ ಬರೆಯಲಾಗಿದ್ದ ಇದ್ದಲಿನ ಚಿತ್ರಗಳನ್ನು ತೋರಿಸುವುದರಿಂದ ಕಾದಂಬರಿ ಆರಂಭವಾಗುತ್ತದೆ. 


ಆ ಘಟನೆ ನಡೆದಾಗ ರವಿಗಿನ್ನೂ ಏಳು ವರ್ಷ. ಅವರ ಸೋದರಮಾವ ರಾಜರಾಜವರ್ಮರು ಅಳಗಿರಿ ನಾಯ್ಡು ಆಸ್ಥಾನದಲ್ಲಿ ನೀರಿನ ಬಣ್ಣಗಳ ಚಿತ್ರಕಲೆಯನ್ನು ಅಭ್ಯಸಿಸಿದ್ದರು. ವಂಶಪಾರಂಪರ್ಯವಾಗಿ ಅದು ರವಿಗೂ ಬಂದಿರಬಹುದು. ರವಿಯ ತಾಯಿ ಉಮಾಂಬ ನೃತ್ಯ ಹಾಗೂ ಚಿತ್ರ ಕಲಾವಿದೆ, ತಂದೆ ಏಳುಮಾವಿಲ್ ಸಂಸ್ಕೃತ ಪಂಡಿತರು.


ಎಲ್ಲರೂ ರಾಜರಾಜವರ್ಮರ ಕೋಪಕ್ಕೆ ಹೆದರಿದ್ದರು. ಆದರೆ, ವ್ಯತಿರಿಕ್ತವೆಂಬಂತೆ ಅವರು ರವಿಯ ಪ್ರತಿಭೆಯನ್ನು ಗುರುತಿಸಿ, ಪರಿಷ್ಕರಿಸಿ, ಉತ್ತೇಜಿಸಿದರು. ರವಿಗೆ ಮಾವನ ಚಿತ್ರಕಲಾ ಕೊಠಡಿಗೆ ಪ್ರವೇಶ ದೊರೆಯಿತು.


ಅಳಿಲಿನ ಬಾಲದಿಂದ ತಯಾರಿಸಿದ ಅನೇಕ ರೀತಿಯ ಕುಂಚಗಳು, ಮಣ್ಣಿನ ಕುಡಿಕೆಯಲ್ಲಿನ ಬಣ್ಣಗಳು, ಮಾವನ ಹಳೆಯ ಕ್ಯಾನ್ವಾಸ್ಗಳು ಆತನದ್ದಾಯಿತು. 

"ಪ್ರತಿಯೊಬ್ಬ ಚಿತ್ರಕಾರನು ತನ್ನದೇ ಬಣ್ಣಗಳನ್ನು ಸೃಷ್ಟಿಸಬೇಕು ಅವನಿಗೆ ಕಣ್ಣುಗಳಿದ್ದರೆ ಮಾತ್ರ ಸಾಲದು. ಅಂತರ್ ದೃಷ್ಟಿ ಇರಬೇಕು ನೋಡಿದ್ದು ಗ್ರಹಿಸುವ ಶಕ್ತಿ ಇರಬೇಕು" ಎನ್ನುವ ಮಾವನ ಮಾತಿನ ಜೊತೆಗೆ ಬಣ್ಣಗಳನ್ನು ಎಲೆ, ಹೂವು, ಬೇರು, ಮಣ್ಣು ಮತ್ತು ರಾಸಾಯನಿಕ ವಸ್ತುಗಳಿಂದ ತಯಾರಿಸುವ ಪ್ರಾಥಮಿಕ ಪಾಠದಲ್ಲಿ ನಾಲ್ಕು ವರ್ಷಗಳ ಅಭ್ಯಾಸವಾಯಿತು.


ಅಧಿಕೃತವಾಗಿ ರವಿವರ್ಮ ಚಿತ್ರಿಸಿದ ಮೊದಲ ಚಿತ್ರ ಯಾವುದು ಗೊತ್ತೇ..?!

ಕೇಸರಿ ಬಣ್ಣದ ಎಲೆ.


ಆತನ ಪ್ರತಿಭೆಗೆ ಮತ್ತಷ್ಟು ಮೆರುಗು ನೀಡಲು ಎಲ್ಲರನ್ನೊಪ್ಪಿಸಿ ರಾಜರಾಜವರ್ಮರು ತನ್ನ ಪ್ರೀತಿಯ ಕೊಚ್ಚ್(ಕಂದಾ)ನನ್ನು ತಿರುವನಂತಪುರದ ಮಹಾರಾಜ ಆಯಿಲ್ಯ ತಿರುನಾಳರ ಆಶ್ರಯಕ್ಕೆ ಬಿಡುತ್ತಾರೆ. ಇವರು ರವಿವರ್ಮರ ಚಿತ್ರಕಲಾ ಹಾಗೂ ವೈಯಕ್ತಿಕ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.


ಮೊದಲಿಗೆ ಆತನನ್ನು ಮದುವೆಯ ಪ್ರಸ್ತಾಪಕ್ಕೆಂದು ಭಾವಿಸಿದ್ದರಾದರೂ.. ಕಲೆಯ ವಿಚಾರ ತಿಳಿದು, ಅವನ ಮೂರು ವರ್ಣಚಿತ್ರಗಳನ್ನು ನೋಡಿ ಆಸ್ಥಾನ ಚಿತ್ರಕಾರರಾದ ರಾಮಸ್ವಾಮಿ ನಾಯಕರ್ ರಿಂದ ಪಾಠ ಹೇಳಿಸಲು ಒಪ್ಪುತ್ತಾರೆ. 


ರಾಮಸ್ವಾಮಿ ನಾಯಕರ್ ಪಾಠವನ್ನು ಆರಂಭಿಸಿದರಾದರೂ.. ಬಣ್ಣವನ್ನು ಕಲಸುವಾಗ ಕೋಣೆಯೊಳಗೆ ಬಿಡುತ್ತಿರಲಿಲ್ಲ. ಆದರೆ, ರವಿವರ್ಮ ತಾನೇ ಮಿಶ್ರ ಮಾಡಿದ ಬಣ್ಣಗಳನ್ನು ತೆಗೆದುಕೊಂಡು ಹೋದಾಗ ಅವರಿಗೆ ಸಿಟ್ಟು ಬಂದು ಪ್ಯಾಲೆಟ್ ಅನ್ನು ಎಸೆದು ರಾದ್ದಾಂತವಾದಾಗ.. ಅದು ಶಮನವಾದುದೇಗೆ..?


ಪಾಶ್ಚಾತ್ಯ ಕಲಾವಿದರಾದ ಬ್ರೂಕ್ಸ್ ಅವರನ್ನು ನೇಮಿಸಲು ಮಹಾರಾಜರು ಒಪ್ಪುತ್ತಾರಾದರೂ.. ಆತನೇ ಇವರಿಗೆ ಪಾಠ ಹೇಳಲು ಒಪ್ಪುವುದಿಲ್ಲ ಮದರಾಸಿನಿಂದ ತೈಲವರ್ಣಗಳನ್ನು ತರಿಸಿಕೊಡುತ್ತಾರೆ. 15-16 ವಯೋಮಾನದಲ್ಲಿದ್ದಾಗ ಬ್ರೂಕ್ಸ್ ಬಣ್ಣ ಮಿಶ್ರ ಮಾಡುವುದನ್ನು ಗಮನಿಸುತ್ತಿರುತ್ತಾರೆ. ಆತನಿಗೆ ಅದು ತಿಳಿದು ಕೋಣೆಗೆ ಅನುಮತಿಸುವುದಿಲ್ಲ. ಗ್ರಂಥಾಲಯದ ಸಹಾಯದಿಂದಲೇ ಚಿತ್ರಕಲೆ ಅಭ್ಯಾಸಿಸಿ ರಾಜಮಾತೆಯ ಚಿತ್ರವನ್ನು ಅವರದ್ದೇ ತದ್ರೂಪಿನಂತೆ ಬರೆದು ಎಲ್ಲರ ಮನ ಸೆಳೆದರು.


ಕಲೆಗೆ ಮೆಚ್ಚಿ ಮಹಾರಾಣಿಯ ತಂಗಿ ಪುರತಾರ್ಥಿಯೊಡನೆ ವಿವಾಹವಾಗುತ್ತದೆ. ಮಾತೃಪ್ರಧಾನ ಸಮಾಜದ ನಡೆಯಂತೆ ಪತ್ನಿಯ ಊರು ಮಾನೆಲ್ಲಿಕರಾಗೆ ಹೋಗಿ ನೆಲೆಸಬೇಕಾಗುತ್ತದೆ. ಪತ್ನಿಯಿಂದ ಕಲೆಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತದೆ ಹಾಗೂ ಅವರ ಸಾಂಸಾರಿಕ ಬದುಕು ಹೇಗಿತ್ತು ಓದಿ ನೋಡಿ.


ರವಿವರ್ಮ ನಾಯರ್ ಸ್ತ್ರೀ ಕಾಮಿನಿ ಅನ್ನು ರೂಪದರ್ಶಿಯನ್ನಾಗಿಸಿಕೊಂಡು ಬರೆದ ಚಿತ್ರ ಸಾಕಷ್ಟು ಪ್ರಶಂಸೆ, ಬಹುಮಾನಗಳಿಗೆ ಪಾತ್ರವಾಗುತ್ತದಾದರೂ.. ತನ್ನವರಿಂದ ದೂರಾಗಿಸುತ್ತದೇಕೆ..?


ರವಿವರ್ಮನಷ್ಟೇ ಅವರ ತಂಗಿ ಮಂಗಳ ಸಹ ಪ್ರತಿಭಾವಂತ ಳು. ನೈಜವೆಂಬಂತ ಸುಂದರ ಪುಷ್ಪವೊಂದನ್ನು ರವಿವರ್ಮ ಚಿತ್ರಿಸಿರುತ್ತಾರೆ. ಊಟಕ್ಕೆ ಕರೆಯಲು ಬಂದ ಮಂಗಳ ಅದನ್ನು ನೋಡಿ ತನ್ಮಯಳಾಗುತ್ತಾಳೆ. ಊಟ ಮುಗಿಸಿ ಬರುವಷ್ಟರಲ್ಲಿ ಚಿತ್ರದ ಮೇಲಿದ್ದ ದುಂಬಿಯನ್ನು ಓಡಿಸಲು ಹೋದವರು ಬೇಸ್ತು ಬೀಳುತ್ತಾರೆ. ಏಕೆಂದರೆ, ಅದು ಮಂಗಳ ಚಿತ್ರಿಸಿದ್ದು. ಇದು ಇಬ್ಬರ ಕಲಾ ಪ್ರತಿಭೆಗೂ ಸಾಕ್ಷಿಯಾಗಿದೆ.


"ರಾಜಕುಮಾರ ರಾಜ ಮನೆತನದಲ್ಲಿ ಹುಟ್ಟುವುದರಿಂದ ರಾಜನಾಗಬಲ್ಲ. ಆದರೆ, ಜನರ ಮನಸ್ಸನ್ನು ಗೆದ್ದು ರಾಜಕಲಾವಿದನಾಗುವುದು ಸಣ್ಣ ಮಾತಲ್ಲ." ಎನ್ನುವ ಮಾವನ ಮಾತು ರವಿವರ್ಮನ ಮನಸ್ಸಿನಲ್ಲಿ ಅಚ್ಚಳಿಯದಂತಿತ್ತು. ಮುಂದೆ ಆಯಿಲ್ಯ ತಿರುನಾಳರಿಂದ 'ರಾಜ ರವಿವರ್ಮ' ಎಂಬ ಬಿರುದು ದೊರೆಯುತ್ತದೆ. ಗೌರವ ಬಿರುದು ದಯಪಾಲಿಸಲೆಂದೇ ದರ್ಬಾರ್ ಏರ್ಪಡಿಸಲಾಗಿರುತ್ತದೆ. 

ಮುಂದೆ ಅವರ ತಮ್ಮ ವಿಶಾಖಂ ತಿರುನಾಳ್ ರಾಜರಾದಾಗ ಬಿರುದನ್ನು ಹಿಂಪಡೆಯಲಾಗುತ್ತದೆ. ಮತ್ತೆ ಮುಂದಿನ ರಾಜರಾದ ಗುಲಂತಿರುನಾಳ್ ರು ಗೌರವದಿಂದ ಅದೇ ಬಿರುದನ್ನು ಹಿಂತಿರುಗಿಸುತ್ತಾರೆ.


"ಬಣ್ಣಗಳನ್ನು, ಕುಂಚಗಳನ್ನು ಹಿಡಿದು ಬಿಟ್ಟರೆ ಶ್ರೇಷ್ಠ ಕಲಾವಿದನಾಗುವುದಿಲ್ಲ. ಭಗವಂತನೆಂಬ ದೊಡ್ಡ ಚಿತ್ರ ಕಲಾವಿದ ಪ್ರತಿ ಹೃದಯದಲ್ಲಿಯೂ ದೈವತ್ವವನ್ನು ತುಂಬುತ್ತಾನೆ. ಅದನ್ನು ಕೆಲವರು ಮಾತ್ರ ಕಂಡುಕೊಳ್ಳುತ್ತಾರೆ." ಎನ್ನುವ ಮಾವನ ಮಾತು ಸತ್ಯ. ಅದರಲ್ಲಿ ರವಿವರ್ಮ ಮುಂಚೂಣಿಯಲ್ಲಿದ್ದರು.


ತಮ್ಮ ಚಿತ್ರಕಲೆಯ ಸ್ಪೂರ್ತಿಗಾಗಿ ದೇವಾಲಯದ ಶಿಲ್ಪ ಸೌಂದರ್ಯ, ನೈಜ ಸೌಂದರ್ಯವನ್ನು ಅರಸುತ್ತಾ ನೃತ್ಯ ಹಾಗೂ ಸಂಗೀತ ಕಚೇರಿಗೆ ಹೋಗುವುದನ್ನು ಇಲ್ಲಿ ಗಮನಿಸಬಹುದು.


ಮದರಾಸಿನಲ್ಲಿ ದಿವಾನ್ ರಘುರಾಯರಿಂದ ಏರ್ಪಾಡಾದ ಚಿತ್ರ ಪ್ರದರ್ಶನಕ್ಕೆ ಹೋದಾಗ ಪಾಶ್ಚಾತ್ಯರ ಬಣ್ಣದ ಛಾಯೆಗಳನ್ನು ಗಮನಿಸುವುದನ್ನು ಇಲ್ಲಿ ಹೇಳಿದ್ದಾರೆ.

ಕಂದು ಬಣ್ಣವೆಂದರೆ ಬ್ರೌನ್, ಟೊಬಾಕೊ ಬ್ರೌನ್, ಮಮ್ಮಿ ಬ್ರೌನ್ ಹೀಗೆ.. ಬಣ್ಣದ ಹಲವಾರು ಶೇಡ್ ಗಳ ಕುರಿತು ತಿಳಿಯುತ್ತಾರೆ. ಅಲ್ಲಿ ಹೆಚ್ಚು ಕಲಿಯುವ ಸಲುವಾಗಿ ಪ್ರವಾಸಕ್ಕೂ ಹೋಗುವುದಿಲ್ಲ. ಹಲವಾರು ಪಾಶ್ಚಾತ್ಯ ಕಲಾವಿದರನ್ನು ಭೇಟಿಯಾದರೂ ಇವರ ಚಿತ್ರವನ್ನು ಹೊಗಳಿದರೇ ವಿನಃ ಅವರ ಚಿತ್ರಕಲೆಯ ಗುಟ್ಟು ಬಿಟ್ಟುಕೊಡುವುದಿಲ್ಲ.


ಶಕುಂತಲೆಯ ಪತ್ರಲೇಖನ ಚಿತ್ರಕ್ಕೆ ಮದರಾಸಿನ ಮತ್ತೊಂದು ಪ್ರದರ್ಶನದಲ್ಲಿ ಪದಕವು ದೊರೆಯುತ್ತದೆ. ಅದಕ್ಕೆ ಅಗತ್ಯವಾಗಿದ್ದ ರೂಪದರ್ಶಿಗಳನ್ನು ಆಯಿಲ್ಯಂ ತಿರುನಾಳರೇ ಒದಗಿಸುತ್ತಿದ್ದರು. 


ರವಿವರ್ಮನ ಚಿತ್ರಕಲೆಯಲ್ಲಿ ಅವರ ತಮ್ಮ ರಾಜವರ್ಮನದ್ದೂ ಪಾಲಿತ್ತು. ಆತನು ಒಳ್ಳೆಯ ಚಿತ್ರಕಾರ. ಹೆಚ್ಚಿನ ಚಿತ್ರಗಳನ್ನು ಎರಡು ಕಾಪಿ ಮಾಡುತ್ತಿದ್ದರು. ರಾಜಕುಟುಂಬದವರ ವರ್ಣಚಿತ್ರಗಳಲ್ಲಿ ಮುಖ್ಯವ್ಯಕ್ತಿಯ ಚಿತ್ರವನ್ನು ರವಿವರ್ಮ ರಚಿಸಿದರೆ ಹಿನ್ನೆಲೆಯ ಬಣ್ಣವನ್ನು ರಾಜವರ್ಮ ತುಂಬುತ್ತಿದ್ದ ಉಲ್ಲೇಖವಿದೆ.


ರವಿವರ್ಮರ ಹೆಚ್ಚಿನ ಚಿತ್ರಗಳಿಗೆ ರೂಪದರ್ಶಿಯಾದ ಸುಗಂಧಳ ಅಧ್ಯಾಯ ಶುರುವಾದದ್ದು ಹೇಗೆ..? 

ಉಷಾಳ ಸ್ವಪ್ನದಲ್ಲಿ ಅನಿರುದ್ಧ ಬರುವ ಚಿತ್ರವನ್ನು ಬರೆಯುವ ಸಂದರ್ಭದಲ್ಲಿ ಹಾಡು ಕೇಳಿ ಸ್ಪೂರ್ತಿಗೊಳ್ಳಲು ತಮ್ಮ ಗೋದವರ್ಮರನ್ನು ವೀಣೆಯೊಂದಿಗೆ ಬರಲು ಹೇಳುತ್ತಾರೆ.


ಬರೋಡಾದ ರಾಜಮನೆತನದ, ಭಾವನಗರ್ ಸಂಸ್ಥಾನದ ರಾಜ ಕುಟುಂಬದ ತೈಲಚಿತ್ರಗಳನ್ನು ರಚಿಸುತ್ತಾರೆ. ಹಲವಾರು ಪುರಾಣ ಪ್ರಸಂಗಗಳ ಪ್ರಸಿದ್ಧ ಚಿತ್ರಣಗಳನ್ನು ರಚಿಸುತ್ತಾರೆ. ಅದಕ್ಕೆ ಸುಗಂಧ ಹಾಗೂ ಆಕೆಯ ತಂಗಿ ಕಮಲ ರೂಪದರ್ಶಿಗಳು.


ಪುರೂರವ ಹಾಗೂ ಊರ್ವಶಿಯರ ಚಿತ್ರಕ್ಕೆ.. ಅರೆನಗ್ನ ಚಿತ್ರದ ರೂಪದರ್ಶಿಯಾಗಿದ್ದು ಸುಗಂಧ.

"ರವಿವರ್ಮರ ಪಾಲಿಗೆ ಜಡವಸ್ತುವಾಗಿದ್ದ ಸುಗಂಧ..!

ಬರಿಯ ಭಾವನೆಗಳಿಲ್ಲದ ರೂಪದರ್ಶಿಯಂತೆ.. ಒಂದು ಹೂವನ್ನು, ಹಣ್ಣನ್ನು ಚಿತ್ರಿಸುವಂತೆ ನನ್ನನ್ನು ಚಿತ್ರಿಸಿದ" ಎನ್ನುವ ಆತನ ನಿರ್ಲಿಪ್ತ ಮನಸ್ಥಿತಿಯನ್ನು ಕಲಾಲೋಕದ ಔನ್ನತ್ಯಕ್ಕೆ ಸಾಕ್ಷಿಯಂತೆ ಕಾಣಬಹುದು.


ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಆಹ್ವಾನದ ಮೇಲೆ ರಾಜಮನೆತನದವರ ಚಿತ್ರಗಳನ್ನು ಬಿಡಿಸುತ್ತಾರೆ.


"ನಿನ್ನ ಬಣ್ಣದ ತಟ್ಟೆಯ ತುಂಬಾ ಅನೇಕ ಬಣ್ಣಗಳಿವೆ. ಅವೆಲ್ಲ ನೀನೇ ಸೃಷ್ಟಿಸಿರುವ ಬಣ್ಣಗಳು. ಒಬ್ಬ ಕಲಾಕಾರನಿಗೆ ಯಾವ ಬಣ್ಣಗಳನ್ನು ಉಪಯೋಗಿಸಬಾರದು ಎಂದು ತಿಳಿದಿರಬೇಕು. 

ಚಿತ್ರದ ಕಣ್ಗಳಲ್ಲಿ ಜೀವಕಳೆ ಮೂಡಿಸುವುದು ತುಂಬಾ ಕ್ಲಿಷ್ಟ. ಅದರಲ್ಲಿ ನೀನು ಪರಿಣಿತ. ಕಲೆಯನ್ನು ಹಣಕ್ಕಾಗಿ ಮಾರಬೇಡ" ಎಂಬ ಕಿವಿಮಾತನ್ನು ಮಾವ ಹೇಳುತ್ತಾರೆ.


ಮಹಾರಾಜ ಸಯ್ಯಾಜಿ ರಾವ್ ಅವರ ಲಕ್ಷ್ಮಿವಿಲಾಸ ಅರಮನೆಗೆ ಸಂಸ್ಕೃತಿ, ಪುರಾಣ, ಇತಿಹಾಸಗಳ ಕಥೆಯನ್ನು ಬಣ್ಣಿಸುವ ಚಿತ್ರಗಳು ಬೇಕಾದಾಗ ಅವರ ಏಕೈಕ ಹಾಗೂ ಉತ್ಕೃಷ್ಟ ಆಯ್ಕೆಯಾಗಿದ್ದು ರವಿವರ್ಮರೇ. ಇದಕ್ಕಾಗಿ ಅವರು ಉತ್ತರ ಭಾರತದ ಪ್ರವಾಸವನ್ನು ಮಾಡಿ ಬರುತ್ತಾರೆ.


ರವಿವರ್ಮರ ಚಿತ್ರಕಲೆಯ ಹಿರಿಮೆಯ ಕುರಿತು ಹೇಳುತ್ತಾ ಸಾಗಿದಷ್ಟೂ ಇದೆ.


ಮುಂದೆ ಚಿತ್ರಗಳನ್ನು ಮುದ್ರಿಸಲು ನಿರ್ಧರಿಸಿ ಜರ್ಮನಿಯಿಂದ ಮುದ್ರಣ ಯಂತ್ರಗಳನ್ನು ತರಿಸಿ ಕ್ಯಾಲೆಂಡರ್ ಆರ್ಟ್ ಶುರು ಮಾಡುತ್ತಾರೆ. ಆದರೆ ಅಲ್ಲಿಂದ ಬಂದ ಯಂತ್ರಜ್ಞರು ಚಿತ್ರಗಳನ್ನು ಪ್ರಶಂಸಿಸುತ್ತಾರಾದರೂ.. ಮುದ್ರಣದ ದೃಷ್ಟಿಯಿಂದ ಕಡಿಮೆ ಬಣ್ಣಗಳನ್ನು ಉಪಯೋಗಿಸಿ ರಚಿಸುವ ಸಲಹೆ ನೀಡುತ್ತಾರೆ. ಲಿತೋಗ್ರಾಫ್ ತಟ್ಟೆಗಳ ಮೇಲೆ ಅಂತಹ ಚಿತ್ರವನ್ನು ರಚಿಸಿಯೇ ಬಿಡುತ್ತಾರೆ ರವಿವರ್ಮ. ಹಾಗೆ ರಚಿಸಿದ ಮೊದಲ ಚಿತ್ರ ಶಕುಂತಲೆಯ ಜನನ.


ಹಿಂದೂ ದೇವಕೆಗಳ ಚಿತ್ರಗಳನ್ನು ಮನೆಮನೆಗಳಲ್ಲೂ, ಬೀದಿಬೀದಿಗಳಲ್ಲೂ ಹರಡಿ ಪವಿತ್ರತೆಗೆ ಕುಂದು ತಂದಿರುವ ಕುರಿತಾಗಿಯೂ ಹಾಗೂ ಅವರನ್ನು ಅರೆನನ್ನವಾಗಿ ಚಿತ್ರಿಸಿ ಆಗೌರವಿಸಿರುವ ಕುರಿತಾಗಿಯೂ ಕೋರ್ಟ್ ನಿಂದ ಸಮನ್ಸ್ ಬರುತ್ತದೆ. ಅಲ್ಲಿ ವಾದ ಮಾಡಿ ಎಲ್ಲರಿಗೂ ಸ್ಪಷ್ಟನೆ ನೀಡಿ ಮನಸ್ಸು ಹಾಗೂ ಕೇಸ್ ಎರಡನ್ನೂ ಗೆಲ್ಲುವ ರವಿವರ್ಮರ ವಾದದ ವೈಖರಿ ಓದಿಯೇ ತಿಳಿಯಬೇಕು.


ಚಿತ್ರಕಲೆ ಹಾಗೂ ಸಂಗೀತ ಎರಡರಲ್ಲೂ ಸಾಮ್ಯತೆಯಂತೆ ಉದಾಹರಿಸುತ್ತಾರೆ. ಒಂದು ರಾಗದ ಸಂಪೂರ್ಣ ಸ್ವರೂಪಕ್ಕೆ ಆರೋಹಣ ಹಾಗೂ ಅವರೋಹಣ ಮುಖ್ಯವಿರುವಂತೆ.. ಪೂರ್ಣ ಸ್ವರೂಪದ ಚಿತ್ರವನ್ನರಿಯಲು ಒಳಗಣ್ಣು ತೆರೆಯುವ ಪರಿಯನ್ನು ಉದಾಹರಿಸುತ್ತಾರೆ.


ಅಂಜನೀಬಾಯಿ ಎಂಬ ರೂಪದರ್ಶಿಯ ಕುರಿತು ಪ್ರಸ್ತಾಪವಿದೆ.


ಪ್ರಖ್ಯಾತರೊಬ್ಬರು ಇವರಿಗೆ ಹೀಗನ್ನುತ್ತಾರೆ. 

"ಮನುಷ್ಯನಿಗೆ ಸಾವು ಬಂದಂತೆ ನಿನಗೂ ಬಂದು ನೀನು ಸ್ವರ್ಗಕ್ಕೆ ಹೋದರೆ ಅಲ್ಲಿ ರಂಬೆ, ಊರ್ವಶಿ, ಮೇನಕೆ, ತಿಲೋತ್ತಮಯರನ್ನು ನೋಡಿ ನಿನಗೆ ನಿರಾಸೆಯಾಗುವುದು ಖಂಡಿತ. ಏಕೆಂದರೆ, ನೀನು ರಚಿಸಿರುವ ಸ್ತ್ರೀಯರಷ್ಟು ಸುಂದರಿಯಾಗಿರಲು ಸಾಧ್ಯವಿಲ್ಲ"ವೆನ್ನುತ್ತಾರೆ.

ರವಿವರ್ಮರ ಕಲ್ಪನೆ ಹಾಗೂ ಕಲಾ ಸೃಷ್ಟಿಗೆ ಕನ್ನಡಿ ಹಿಡಿದ ಪ್ರಖ್ಯಾತರಾರು ಓದಿ ನೋಡಿ.


ರವಿವರ್ಮರು ತಾವು ಚಿತ್ರರಚನೆ ನಿಲ್ಲಿಸಬೇಕೆಂದು ಸೂಚನೆ ಬಂದಿತು ಎಂದು ಹೇಳುವ ಪ್ರಸಂಗ ಯಾವುದು..? ಅವರ ಮುಂದಿನ ಪೀಳಿಗೆ, ಅವರ ಬದುಕಿನಲ್ಲಿನ ಏಳು-ಬೀಳುಗಳು, ಸಾಂಸಾರಿಕ ಚಿತ್ರಣ, ಕೌಟುಂಬಿಕ ಚಿತ್ರಣ ಎಲ್ಲದರ ಕುರಿತು ನೀವೇ ಓದಿ.


ಕಲೆಯ, ಕಲಾವಿದನ ಅದರಲ್ಲಿಯೂ ಚಿತ್ರಕಲಾಕಾರನ ಸಮಗ್ರ ಬದುಕಿನ ಚಿತ್ರಣವಿದು. ಬಹಳಷ್ಟು ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಪುಸ್ತಕವನ್ನು ಒಮ್ಮೆಯಾದರೂ ಓದಲೇಬೇಕು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ