ಭಾನುವಾರ, ಸೆಪ್ಟೆಂಬರ್ 13, 2026

ಎಲ್ಲಾ ಅಂತ್ಯವೂ ಅಂದುಕೊಂಡಂತೆಯೇ ಇರಬೇಕಿಲ್ಲ

 


"ತಗೊಳ್ಳಿ ನಿಮ್ಮ ಬ್ಯಾಗ್. ನೀವು ನಿಮ್ಮ ಅಪ್ಪ - ಅಮ್ಮ ಇಬ್ಬರನ್ನೂ ಕರೆದುಕೊಂಡು ಮನೆ ಬಿಟ್ಟು ಹೋಗಬಹುದು. ನಿಮಗೆ ಹೋಗುವುದಕ್ಕೆ ಇಷ್ಟ ಇಲ್ಲ ಅಂತಾ ಇದ್ದರೆ ನೀವು ಬೇಕಾದರೆ ಇಲ್ಲಿಯೇ ಉಳಿದುಕೊಳ್ಳಬಹುದು." ಎಂದು ಕಲ್ಲು ಮನಸ್ಸಿನಿಂದ ಹೇಳಿ ಅಲ್ಲೇ ಇದ್ದ ಸೋಫಾದ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕುಳಿತಳು ಸೀತಾ.


"ಏನೋ ರಾಮ್ ಇದು..

ಇವಳು ಹೀಗೆಲ್ಲಾ ಹೀನಾಯವಾಗಿ ನಮ್ಮನ್ನು ಮನೆಯಿಂದ ಹೊರಗಡೆ ಹಾಕಲು ನೋಡಿದರೂ ನೋಡಿಕೊಂಡು ಸುಮ್ಮನೆ ಇದ್ದೀಯಲ್ಲ. ನಾವೇನೂ ಏನೂ ಇಲ್ಲದವರಲ್ಲ. ಕೋಟಿ ರೂಪಾಯಿ ಆಸ್ತಿ ಇದೆ. ಗೊತ್ತಲ್ವಾ ಅವಳಿಗೆ.

ಅದೆಲ್ಲಾ ಸರಿ. ಇದು ನಿನ್ನ ಮನೆ ತಾನೇ ? ಅವಳು ಯಾಕೆ ನಿನ್ನನ್ನು, ನಮ್ಮನ್ನು ಎಲ್ಲರನ್ನೂ ಹೊರಗಡೆ ಹಾಕಬೇಕು ಅಂತಾ ಹೇಳುತ್ತಾ ಇದ್ದಾಳೆ ? " ಎಂದಾಗ ರಾಮ್


"ಅಪ್ಪಾ, ನೀವು ತಪ್ಪು ತಿಳಿದುಕೊಂಡಿದ್ದೀರಿ. ಇದು ನನ್ನ ಮನೆಯಲ್ಲ. ಅವಳ ಮನೆ. ಮನೆ ಇರುವುದು ಅವಳ ಹೆಸರಲ್ಲೇ.. ನನ್ನ ಸಂಬಳದ ಹಣ ಈ ಮನೆ ಲೋನ್ ಗೆ ಹೋಗುತ್ತಾ ಇದೆ. ಮನೆ ನಡೆಯುತ್ತಾ ಇರುವುದು ಅವಳ ಸಂಬಳದಲ್ಲೇ. ಒಂದು ವಾರದಿಂದ ನೀವು ಜೀವನ ಮಾಡುತ್ತಾ ಇದ್ದದ್ದು.. ನಾನು ಆವತ್ತಿನಿಂದ ಬದುಕುತ್ತಿರುವುದು ಅವಳ ಸಂಬಳದಲ್ಲೇ.. " ಎಂದನು ರಾಮ್.


"ಅಯ್ಯೋ.. ಅಯ್ಯೋ.. ಮನೆಹಾಳಿ.

ನನ್ನ ಮಗನ ಹತ್ತಿರ ಎಲ್ಲವನ್ನೂ ಕಿತ್ತುಕೊಂಡು ಅವನನ್ನೇ ಹೊರಗಡೆ ಹಾಕುವುದಕ್ಕೆ ನೋಡುತ್ತಿದ್ದೀಯಲ್ಲ. ನಿನಗೆ ಮನಸ್ಸಾದರೂ ಹೇಗೆ ಬಂತು ? " ಎಂದ ಅತ್ತೆಯ ಮಾತಿಗೆ ಸೀತಾ


"ಅತ್ತೆ, ಆ ಮಾತನ್ನು ನಿಮಗೆ ನೀವೇ ಕೇಳಿಕೊಳ್ಳಿ. ಬಹುಶಃ ಉತ್ತರ ಸಿಗಬಹುದು. ಇಲ್ಲಾ ಅಂದರೆ ಮನೆಹಾಳಿ ಯಾರು ಅಂತಲಾದರು ಗೊತ್ತಾಗಬಹುದು. " ಎಂದು ತಣ್ಣಗೆ ನುಡಿದಾಗ ಅವಳ ಅತ್ತೆಯ ಮೈ ಮೇಲೆ ಕಾದ ಬಿಸಿ ನೀರು ಹೊಯ್ದ ಹಾಗಾಯಿತು.


ಸೀತಾ ಮಾತು ಶುರು ಮಾಡಿದ್ದಳು. "ಅತ್ತೆ, ಮಾವ ಮತ್ತೆ ನೀವು ಎಲ್ಲರೂ ಸರಿಯಾಗಿ ಕೇಳಿಸಿಕೊಳ್ಳಿ. ಮನೆಹಾಳಿ ಅಂತಾ ಅಂದಿರಲ್ಲ.. ನನ್ನ ನೆಮ್ಮದಿ ಹಾಗೂ ನನ್ನ ಗಂಡನ ಒಳಿತಿಗಾಗಿ ನಾನು ಹಾಗೆಯೇ ಇರುವುದು.


ನಿಮ್ಮ ಕೋಟಿ ರೂಪಾಯಿ ಆಸ್ತಿ ಇದ್ದರೆ ಹೋಗಿ ಅಲ್ಲಿ ಮಾತನಾಡಿ. ಇದು ನನ್ನ ನೆಲ , ನನ್ನ ಮನೆ. ಇಲ್ಲಿ ನಾನು ಹೇಳಿದ ಹಾಗೆಯೇ ಕೇಳಬೇಕು. ನನ್ನ ಗಂಡನ ಸಂಬಳದ ಹಣವನ್ನೆಲ್ಲಾ ನಿಮ್ಮ ಆಸ್ತಿ ವೃದ್ಧಿಸಿಕೊಳ್ಳುವುದಕ್ಕೆ , ನಿಮ್ಮ ಮತ್ತೊಬ್ಬ ಮಗನ ಸಂಸಾರ ನೆಟ್ಟಗೆ ಮಾಡುವುದಕ್ಕೆ ಬಳಸಿ ಬಿಡಿಗಾಸು ಸಹಾ ಇಲ್ಲದಂತೆ ಕಿತ್ತುಕೊಂಡು ನಾಯಿ ಸಾಕಿದ ಹಾಗೆ.. ಬೇಕಾದಷ್ಟೇ ಊಟ ಕೊಡುತ್ತಾ ಇದ್ದಾಗ ಅದು ನಿಮಗೆ ಅನ್ಯಾಯ ಅಂತಾ ಅನ್ನಿಸಲಿಲ್ಲವಾ..


ಕೊನೆಗೆ ಇವರು ನನ್ನನ್ನು ಮದುವೆ ಮಾಡಿಕೊಂಡು ಬಂದಾಗ ಮನೆಗೂ ಸೇರಿಸದೆ ಉಟ್ಟ ಬಟ್ಟೆಯಲ್ಲೇ, ನಿಂತ ನೆಲೆಯಿಲ್ಲದ ಹಾಕಿ ಬೀದಿಗೆ ತಳ್ಳಿದ್ದಿರಿ. ಅಲ್ಲವಾ..?? ಆಗ ಅದು ನಿಮಗೆ ಅನ್ಯಾಯ ಅನ್ನಿಸಿರಲಿಲ್ಲ.


ಈಗ ಮತ್ತೊಬ್ಬ ಮಗ ನಿಮ್ಮ ಹತ್ತಿರ ಎಲ್ಲವನ್ನೂ ಕಿತ್ತುಕೊಂಡು ಕಳುಹಿಸಿರುವಾಗ ನಾವು ಕರೆದುಕೊಂಡು ಬಂದು ಆಶ್ರಯ ಕೊಟ್ಟೆವು. ಆದರೆ, ನೀವು ಮಾಡಿದ್ದೇನು ? ಈಗಲಾದರೂ ನನ್ನನ್ನು ಮತ್ತು ಇವರನ್ನು ಕಾಡಿಸಿದ್ದೇ ಆಯಿತು. ನಾನು ಹೊರಗಡೆ ಹೋಗಿ ಅಷ್ಟೆಲ್ಲಾ ದುಡಿದುಕೊಂಡು ಬಂದರೂ ಮನೆಯಲ್ಲಿ ಕೂತು ತಿಂದಿರಿ. ಕೇಳಿ ಕೇಳಿದ್ದನ್ನು ಮಾಡಿ ಹಾಕಿದೆ. ಮರ್ಯಾದೆ ನೀಡಿದೆ. ಆದರೆ, ನೀವುಗಳು ಹಂಗಿಸುವುದನ್ನು ಹಾಗೂ ಬೈಯ್ಯುವುದನ್ನು ಬಿಡಲೇ ಇಲ್ಲವಲ್ಲ. ನೆನ್ನೆಯಂತೂ ಅದು ಇನ್ನೂ ವಿಪರೀತಕ್ಕೆ ಹೋಯಿತಲ್ಲ. ಊಟಕ್ಕೆ ಉಪ್ಪು ಕಡಿಮೆ ಇತ್ತು. ಉಪ್ಪು ಹಾಕಿಕೊಂಡು ಊಟ ಮಾಡಬಹುದಾಗಿತ್ತು. ಅಲ್ಲವಾ..??


ನೀವು ಮಾಡಿದ್ದೇನು ? ನನ್ನ ವಂಶಾವಳಿಯನ್ನೇ ಜಾಲಾಡಿದಿರಿ. ನಾನು ಮನಸ್ಸು ಮಾಡಿದ್ದರೆ ನೆನ್ನೆಯೇ ರಾತ್ರಿಯೇ ಮನೆಯಿಂದ ಹೊರಗೆ ಓಡಿಸುತ್ತಿದ್ದೆ. ಬೆಳಗಿನವರೆಗೂ ಇರಲಿ.. ವಯಸ್ಸಾದವರು ಎಂದು ಬಿಟ್ಟಿದ್ದೆ. ಅಷ್ಟೇ..


ಈಗಲೂ ನಿಮಗೆ ಈ ಮನೆ ಅಧಿಕಾರ, ಮಗನ ಹಣ, ಸೊಸೆಯ ಬಾಗುವಿಕೆ ಅಷ್ಟೇ ಬೇಕಾಗಿರುವುದು. ಅಲ್ಲವಾ..?? ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ.


ಇಲ್ಲೇ ಹತ್ತಿರದಲ್ಲಿ ಒಂದು ಮನೆ ಮಾಡಿದ್ದೇನೆ. ನೀವಿಬ್ಬರೂ ಅಲ್ಲೇ ಇರಿ. ಇವರ ಅಪ್ಪ- ಅಮ್ಮ ಅನ್ನುವ ಒಂದೇ ಕಾರಣಕ್ಕೆ ಬಾಡಿಗೆ ಕಟ್ಟಿ, ಸಾಮಾನು ತಂದು ಹಾಕುತ್ತೇನೆ. ಇವರು ಆಗಾಗ ಬಂದು ವಿಚಾರಿಸುತ್ತಾರೆ. ಅದಕ್ಕಿಂತ ಹೆಚ್ಚಿನ ಹಣ ಬೇಕಾದಲ್ಲಿ ನಿಮ್ಮ ಕೋಟ್ಯಾಂತರ ರೂಪಾಯಿ ಆಸ್ತಿಯಿಂದ ನೀವೇ ಉಪಯೋಗಿಸಿಕೊಳ್ಳಿ.


ಒಂದು ವಿಷಯ ನೆನಪಿಟ್ಟುಕೊಳ್ಳಿ. ಆಗ ರಾಮ ವಿಧೇಯನಾಗಿದ್ದ. ಸೀತೆ ಮುಗ್ಧೆಯಾಗಿದ್ದಳು.


ಆದರೆ, ಈಗ ರಾಮ ವಿಧೇಯ. ಆದರೆ, ಈ ಸೀತಾ ದಡ್ಡಿಯಲ್ಲ. ಕಣ್ಣು ಮುಚ್ಚಿ ಎಲ್ಲರನ್ನು ನಂಬುವುದೂ ಇಲ್ಲ. ಅಹಂಕಾರ, ಅಧಿಕಾರಕ್ಕೆ ಬಾಗುವುದೂ ಇಲ್ಲ. " ಎಂದು ನುಡಿದು ಒಳ ಹೋದಳು.


ಸೊಸೆಯನ್ನು ಮನೆಯ ಅಡಿಯಾಳಾಗಿರಿಸಿ ವೈಭವದಿಂದ ಮೆರೆಯಲು ಹವಣಿಸಿದ್ದ ಅತ್ತೆ - ಮಾವ ಈಗ ಇಂಗು ತಿಂದ ಮಂಗನಂತಾಗಿದ್ದರು.


ರಾಮ್ ಅಷ್ಟರವರೆಗೂ ಸುಮ್ಮನಿದ್ದವನು ಈಗ ಮಾತನಾಡಿದ್ದ. "ಎಲ್ಲಾ ಅಂತ್ಯವೂ ನೀವೆಂದುಕೊಂಡ ಹಾಗೆಯೇ ಇರುವುದಿಲ್ಲ. ಅಂತ್ಯಗಳು ಬದಲಾಗುತ್ತವೆ. ನಿಮಗಿಂತ ಬುದ್ಧಿವಂತರು ಕೊಡುವ ಅಂತ್ಯ ಬುದ್ಧಿವಂತಿಕೆಯಿಂದಲೇ ಇರಬೇಕಲ್ಲವಾ.." ಎಂದವನೇ ಒಳ ನಡೆದ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ