"ನಿನ್ನ ಮನೆಯಲ್ಲಿ ಅಷ್ಟೆಲ್ಲಾ ಇದ್ದರೂ ನೀನು ನನಗಾಗಿ, ನಮ್ಮ ಪ್ರೀತಿಗಾಗಿ ಎಷ್ಟೆಲ್ಲಾ ಮಾಡಿದೆ ಹೃದಯ್. ನೀನು ನಿನ್ನ ಅಪ್ಪ - ಅಮ್ಮ, ಆಸ್ತಿ - ಪಾಸ್ತಿ ಎಲ್ಲವನ್ನೂ ಬಿಟ್ಟು ಬಂದೆಯಲ್ಲಾ.. ಯೂ ಆರ್ ಗ್ರೇಟ್. ರಿಯಲಿ ಗ್ರೇಟ್" ಎಂದವಳನ್ನು ತೋಳಲ್ಲಿ ಬಳಸುತ್ತಾ
"ಬದುಕಲ್ಲಿ ಒಂದು ಮೌಲ್ಯಯುತವಾದದ್ದನ್ನು ಪಡೆದುಕೊಳ್ಳಬೇಕಿದ್ದರೆ ಮತ್ತೊಂದನ್ನು ಕಳೆದುಕೊಳ್ಳಬೇಕಂತೆ. ನೋಡು, ಆ ಆಸ್ತಿ ನನಗೆ ಸಿಗದಿರಬಹುದು. ಅದೇನೂ ನನ್ನ ಕಷ್ಟಾರ್ಜಿತವಲ್ಲ. ನೀನು ನನ್ನ ಅಮೂಲ್ಯ ಆಸ್ತಿ ಕಣೇ ಮಾ.
ಎಷ್ಟೋ ಜನ ಹುಡುಗಿಯರು ಪ್ರೀತಿಯನ್ನು ನಿವೇದಿಸಿಕೊಂಡರು. ಆದರೆ, ಅವರೆಲ್ಲರಿಗೂ ನಾನು ನಾನಾಗಿ ಇಷ್ಟವಾಗಲಿಲ್ಲ. ಅವರು ನನ್ನನ್ನು ಪ್ರೀತಿಸಲಿಲ್ಲ. ಅವರು ಪ್ರೀತಿಸಿದ್ದು ನನ್ನ ಆಸ್ತಿಯನ್ನು ಕಂಡು. ಅವರು ನನ್ನ ಆಸ್ತಿಯನ್ನು ಪ್ರೀತಿಸಿದರು ಅಷ್ಟೇ.. ಆಸ್ತಿಯನ್ನು ಬಿಟ್ಟು ಬಂದರೆ ಓಡಿ ಹೋಗಿ ಮದುವೆಯಾಗೋಣ ಎಂದರೆ ಹೆದರಿ ಓಡುತ್ತಿದ್ದರು. ಆದರೆ, ನೀನು ನೀನಾಗಿ ಬಂದು ನನ್ನನ್ನು ಪ್ರೀತಿಸಲಿಲ್ಲ. ನಾನೇ ಬಂದು ನಿನಗೆ ಮನಸೋತ ವಿಚಾರ ತಿಳಿಸಿದಾಗ ನಮ್ಮ ಶ್ರೀಮಂತಿಕೆ ಕಂಡು ನಿರಾಕರಿಸಿದ್ದೆಯಲ್ಲ. ಆಗಲೇ ಅನ್ನಿಸಿತ್ತು ನೀನೇ ನನ್ನ ಜೋಡಿ ಎಂದು. ಆಸ್ತಿ ಇವತ್ತು ಇರುತ್ತದೆ. ನಾಳೆ ಹೋಗುತ್ತದೆ. ಆದರೆ, ಪ್ರೀತಿ ಯಾವಾಗಲೂ ಇರಬೇಕು. ಅಲ್ಲವಾ..??
ಇನ್ನೊಂದು ವಿಚಾರ ಶಿವಾನಿ.. ನೀನು ನನ್ನನ್ನು ಮದುವೆಯಾಗಿದ್ದರೆ ನೀನು ನಿನ್ನ ತಂದೆ ತಾಯಿಯನ್ನು ಬಿಟ್ಟು ನನ್ನ ಬಳಿ ಬರಬೇಕಿತ್ತು. ಅಲ್ಲವಾ..?? ಐ ಮೀನ್ ಮದುವೆಯಾದ ನಂತರ ಹೆಣ್ಣು ಮಕ್ಕಳು ತವರನ್ನು ತೊರೆದು ಗಂಡನ ಬಳಿಗೆ ಬರುತ್ತಾರೆ. ಇಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ಅಷ್ಟೇ.. ಹಿಂದೆ ದಕ್ಷಿಣ ಕನ್ನಡದಲ್ಲಿ ಅಳಿಯ ಬಂದು ಅತ್ತೆಯ ಮನೆಯಲ್ಲಿ ಇರುವ ಪರಿಸ್ಥಿತಿ ಇತ್ತಂತೆ. ಇದೂ ಹಾಗೆಯೇ ಅಂದುಕೊಂಡರೆ ಆಯ್ತು.
ಇನ್ ಫ್ಯಾಕ್ಟ್.. ನನ್ನಿಂದ ನಿನ್ನ ಕೆಲಸ ಹೋಯ್ತು. ನನ್ನನ್ನು ಮದುವೆಯಾದೆ ಅಂತಾ ನನ್ನ ತಂದೆ ಫ್ಯಾಕ್ಟರಿಯಿಂದ ನಿನ್ನನ್ನು ತೆಗೆದು ಹಾಕಿದ್ದಾರೆ. ಅಲ್ಲದೆ, ನೀನು ಮದುವೆಯಾಗಿದ್ದರೆ ಇಂದಿನ ಈ ಪರಿಸ್ಥಿತಿಯಿಂದ ಸ್ವಲ್ಪ ಸುಖವಾಗಿರುತ್ತಿದ್ದೆ. ನಿನ್ನ ತಂದೆ-ತಾಯಿಗೂ ಕಷ್ಟ ಇರುತ್ತಿರಲಿಲ್ಲ. ಅಲ್ಲವಾ ? "ಎಂದಾಗ ಶಿವಾನಿ
"ಕಷ್ಟ ಯಾರಿಗೆ ಇರುವುದಿಲ್ಲ ಹೇಳಿ. ನಿಮ್ಮ ಕಷ್ಟ, ನೋವನ್ನು ಮರೆಮಾಚಿ ನನ್ನನ್ನು ನಮ್ಮ ಮನೆಯವರನ್ನು ಇಷ್ಟು ಚೆಂದ ನೋಡಿಕೊಳ್ಳುತ್ತಿದ್ದೀರಿ.
ನೀವು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದ್ದವರು. ಈಗ ಬೀದಿ ಬದಿಯ ಅಂಗಡಿಯಲ್ಲಿ ತಟ್ಟೆ ತೊಳೆಯುತ್ತೀರಿ. ರಸ್ತೆ ಬದಿಯಲ್ಲಿ ಪೇಪರ್ ಮಾರುತ್ತೀರಿ. ದಿನಗೂಲಿಯನ್ನು ಸಹಾ ಮಾಡುತ್ತೀರಿ. ನಿಮಗೆ ಓದು, ಯೋಗ್ಯತೆ ಎಲ್ಲವೂ ಇದ್ದರೂ ನಿಮ್ಮಪ್ಪನ ಹಠ ಮತ್ತು ದ್ವೇಷದಿಂದ ನಿಮಗೊಂದು ಸರಿಯಾದ ಕೆಲಸವೂ ಇಲ್ಲ. ಜೊತೆಗೆ ನಮ್ಮನ್ನೆಲ್ಲಾ ನೋಡಿಕೊಳ್ಳಬೇಕು" ಎಂದಾಗ
"ನೋಡು ಶಿವಾನಿ..
ಶ್ರೀಮಂತ ಆಗಿದ್ದಾಗ ನನಗೊಂದು ಆಸೆ ಇತ್ತು. ಹೀಗೆ, ಬೀದಿ ಬದಿ ಹೋಟೆಲ್ ಅಲ್ಲಿ ತಿನ್ನಬೇಕು. ಚಹಾ ಕುಡಿಯಬೇಕು. ದುಡಿದು ಬಂದು ನೆಮ್ಮದಿಯ ನಿದ್ದೆ ಮಾಡಬೇಕು. ಮನೆಯಲ್ಲಿ ಕಾಯುವ ಹೆಂಡತಿಯನ್ನು ಸಾಧ್ಯವಾದಷ್ಟು ಪ್ರೀತಿ ಮಾಡಬೇಕು ಅಂತಾ.
ನಿಜಕ್ಕೂ ಮೊದಲಿದ್ದ ಜೀವನದಲ್ಲಿ ಅದು ಯಾವುದು ಸಹಾ ಸಾಧ್ಯವಾಗುತ್ತಾ ಇರಲಿಲ್ಲ. ಈಗ ನೋಡು.. ಎಲ್ಲವೂ ಸಾಧ್ಯ.
ಯಾಕೋ ಬೇಂದ್ರೆಯವರು ಹೇಳಿದ್ದು ನೆನಪಾಗುತ್ತಿದೆ ನೋಡು
ಬಡವನಾದರೆ ಏನು ಪ್ರಿಯೆ
ಕೈ ತುತ್ತು ತಿನಿಸುವೆ
ಎದೆಯ ತುಂಬಾ ಒತ್ತಿಕೊಂಡು
ಮುತ್ತು ಮಳೆಯಾ ಸುರಿಸುವೆ "
ಎನ್ನುತ್ತಾ ಹಾಡತೊಡಗಿದ್ದನು ಹೃದಯ್. ಅವನ ಅಪ್ಪುಗೆಯ ಸುಖದಲ್ಲಿ ಮೈಮರೆತು ತನ್ನನ್ನು ತಾನೇ ಕಳೆದುಕೊಂಡಿದ್ದಳು ಶಿವಾನಿ. ಬಡತನದಲ್ಲಿಯೂ ಸುಖವಿದೆ ಎಂಬುದನ್ನು ಇಬ್ಬರೂ ಒಪ್ಪಿ ಅಪ್ಪಿ ನಡೆಯುತ್ತಿದ್ದರು
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ